Saturday, July 14, 2012

ಕಗ್ಗಲ್ಲಿನಲ್ಲಿಯೇ ಇರುವದು ಮೂರ್ತಿ

ಒಂದೂರು. ಯಾವದೋ ಕಾಲ. ಅಲ್ಲೊಬ್ಬ ಮಹಾನ್ ಶಿಲ್ಪಿ. ಅವನು ಕಡೆದ ಮೂರ್ತಿಗಳು ಜೀವವಿದೆಯೇನೋ ಎಂಬಷ್ಟು ಸಹಜ ಮತ್ತು ಸುಂದರ.

ಯಾರೋ ಅವನಿಗೆ ಕೇಳಿದರಂತೆ - ಶಿಲ್ಪಿಗಳೇ, ಇಷ್ಟು ಚೆಂದಾಗಿ ಹೇಗೆ ಮೂರ್ತಿ ಕೆತ್ತುತ್ತೀರಿ? ಅದೂ ಜೀವತಳೆದ ಹಾಗಿರುವ ಮೂರ್ತಿಗಳನ್ನು. - ಅಂತ.

ಶಿಲ್ಪಿ ಹೇಳಿದ್ದು ಬಹಳ ಗಹನ ವಿಚಾರವಾಗಿತ್ತು.

ನೋಡಿ....ಯಾವದೋ ನದಿಯಲ್ಲಿ ಬಿದ್ದಿರೋ ಒಂದು ಒಳ್ಳೆ ಕಗ್ಗಲ್ಲನ್ನು ತರುತ್ತೇನೆ. ನಂತರ ಯಾವ ವಿಗ್ರಹವನ್ನು ಕೆತ್ತಬೇಕೋ ಅದರ ಕಲ್ಪನೆಯನ್ನು ಮನಸ್ಸಿನಲ್ಲಿ ಮಾಡಿಕೊಳ್ಳುತ್ತೇನೆ. ನಂತರ ಕಲ್ಲಿನಲ್ಲಿ ಯಾವದು ಯಾವದು ವಿಗ್ರಹವಲ್ಲವೋ ಅವೆಲ್ಲವನ್ನೂ ಸಣ್ಣ ಹಿಡದು ಕೆತ್ತಿ ತೆಗೆದು ಬಿಡುತ್ತೇನೆ. ಅಷ್ಟು ತೆಗೆದ ಮೇಲೆ ಉಳಿಯುವದೇ ವಿಗ್ರಹ.

ತಾತ್ಪರ್ಯ ಅಂದರೆ - ಕಡಿಯಬೇಕಾದ ಮೂರ್ತಿ ಕಲ್ಲಿನಲ್ಲಿಯೇ ಹುದುಗಿತ್ತು. ಅದರ ಜೊತೆ ಮೂರ್ತಿಗೆ ಸಂಬಂಧವಿಲ್ಲದವೂ ಇದ್ದವು. ಅವೆಲ್ಲವನ್ನು ತೆಗೆದು ಬಿಟ್ಟರೆ ಉಳಿದದ್ದು ಮೂರ್ತಿ. ಕಲ್ಲಿನಿಂದ ಮೂರ್ತಿ ಮಾಡೋದು ಅಂದ್ರೆ ಮೂರ್ತಿ ಅಲ್ಲದ್ದನ್ನು ತೆಗೆಯೋದು ಅಂದಷ್ಟೇ ಅರ್ಥ.

ನಾವೂ ಹಾಗೆ. ಪರಿಪೂರ್ಣರೇ. ಆದ್ರೆ ಕಗ್ಗಲ್ಲಿನ ಹಾಗೆ ಇದ್ದೇವೆ. ದೈವಸ್ವರೂಪ ಆಗಬೇಕೆಂದರೆ ನಮ್ಮಲ್ಲಿ ಇರುವ ದೈವಿಕ ಅಲ್ಲದೆಲ್ಲವನ್ನೂ ತೆಗೆದು ಬಿಟ್ಟರೆ ಉಳಿಯುವದು ಕೇವಲ ದೈವಿಕ ಮಾತ್ರ.

ಶಾಂತಿವಂತರಾಗಬೇಕೆ? ಅಶಾಂತಿಯನ್ನು ಚಾಣದಿಂದ ಹೊಡೆದು ತೆಗೆದುಬಿಡಿ. ಉಳಿಯುವದು ಶಾಂತಿ ಮಾತ್ರ.

ಪ್ರೀತಿ ಬೇಕೆ? ದ್ವೇಷ ಬಿಟ್ಟು ಬಿಡಿ. ಉಳಿದಿದ್ದು ಕೇವಲ ಪ್ರೀತಿ ಮಾತ್ರ.

ಕ್ಷಮಾಶೀಲರಾಗಬೇಕೆ? ನೋವನ್ನೆಲ್ಲಾ ಮರೆತು ಎಲ್ಲವನ್ನೂ, ಎಲ್ಲರನ್ನೂ ಕ್ಷಮಿಸಿಬಿಡಿ.

ಶ್ರದ್ಧೆ ಬೇಕೆ? ಸಂಶಯ ಬಿಟ್ಟು ಬಿಡಿ. ಉಳಿಯುವದು ಶ್ರದ್ಧೆ ಮಾತ್ರ.

ಆಶಾವಾದಿ ಆಗಬೇಕೆ? ನಿರಾಸೆಗಳನ್ನ ಓಡಿಸಿ.

ಬೆಳಕು ಬೇಕೆ? ಕತ್ತಲಿಂದ ಹೊರಗೆ ಬನ್ನಿ.

ಸಂತೋಷ ಬೇಕೆ? ದುಃಖ ಕಡಿಮೆ ಮಾಡಿಕೊಳ್ಳಿ.

ಸಹನಶೀಲರಾಗಬೇಕೆ? ಅಸಹನೆಯನ್ನ ಬಿಟ್ಟರೆ ಸಹನೆಯೋ ಸಹನೆ.

ಹೀಗೆ ನಮ್ಮಲ್ಲೇ ಎಲ್ಲವೂ ಇದೆ. ದೈವಿಕ ಅಲ್ಲದ್ದನ್ನು ಚಾಣ ಸುತ್ತಿಗೆಯಿಂದ ಹೊಡೆದು ತೆಗೆಯಬೇಕು ಅಷ್ಟೆ.

ಇನ್ನೂ ಒಂದು ಪಾಯಿಂಟ್ ಇದೆ. ಕಲ್ಲಿನಿಂದ ಮೂರ್ತಿ ಮಾಡೋದ್ರಲ್ಲಿ ಬೇರೆ ಬೇರೆ ಫೇಸ್ ಇವೆ.

ಮೊದಲನೇಯದು ದೊಡ್ಡ ಹೊಡೆತ ಕೊಟ್ಟು ಒಂದು ಹಂತಕ್ಕೆ ತಂದು ಕೊಳ್ಳುವದು. ಆನೆ ಮೂರ್ತಿ ಮಾಡಬೇಕು ಅಂದ್ರೆ ಶಿಲ್ಪಿ ಎಂಟು ಹತ್ತು ದೊಡ್ಡ ಮಟ್ಟಿನ ಹೊಡೆತ ಹಾಕಿ ಒಂದು ರಫ್ ಮೂರ್ತಿ ಮಾಡಿಕೊಂಡ ಹಾಗೆ. ನಾಲ್ಕು ಕಾಲು, ಸೊಂಡಿಲು, ಒಂದು ದೊಡ್ಡ ತಲೆ - ಸುಮಾರ್ ಶೇಪ್ ಬಂದ್ರೆ ಸಾಕು.

ನಮ್ಮ ಪರಿವರ್ತನೆಯೂ ಹಾಗೆ. ಒಮ್ಮೆ ಬದಲಾಗಬೇಕು ಅಂತ ನಿರ್ಧಾರ ಮಾಡಿದವರಿಗೆ ಒಂದು ರಫ್ ಲೆವೆಲ್ ಗೆ ಪರಿವರ್ತನೆ ಮಾಡಿಕೊಳ್ಳುವದು ಸಹಜ ಮತ್ತು ಸುಲಭ. ಆದರೆ ಮುಂದಿನ ಹಾದಿ ಇದೆಯೆಲ್ಲ ಅದು ಮಾತ್ರ ತುಂಬಾ ಸಹನೆ ಮತ್ತು ಪರಿಶ್ರಮ ಕೇಳುತ್ತದೆ.

ಶಿಲ್ಪಿಯ ಕೆಲಸವೂ ಹಾಗೆಯೇ. ಒಂದು ರಫ್ ಶೇಪ್ ಬಂದ ಮೇಲೆ ಸಣ್ಣ ಹಿಡದು ಅತ್ಯಂತ ಪರಿಶ್ರಮ ಮತ್ತು ಕಲಾಕುಸುರಿಯಿಂದ ಮೂರ್ತಿಯನ್ನು ಕೆತ್ತಬೇಕಾಗುತ್ತದೆ. ಉದಾಹರಣೆಗೆ - ಆನೆಯ ಕಣ್ಣುಗಳು. ಚರ್ಮದ ಫೀಲಿಂಗ್ ಕೊಡುವಂತೆ ಇರುವ ಒಂದು ತರಹದ ಪೂರ್ತಿ ನುಣಪೂ ಅಲ್ಲದ ಪೂರ್ತಿ ರಫ್ ಅಲ್ಲದ ರೀತಿ.

ರಫ್ ಶೇಪ್ ಒಂದು ವಾರದಲ್ಲಿ ಬಂದರೆ ಸಣ್ಣ ಹಿಡಿದು ಕಲಾ ಕುಸರಿ ಮಾಡಲು ಹತ್ತಾರು ತಿಂಗಳು ಹಿಡದೀತು.

ನಮ್ಮ ಪರಿವರ್ತೆನೆಯೂ ಅಷ್ಟೇ. ದೊಡ್ಡ ಪ್ರಮಾಣದ ಅಶಾಂತಿ, ದ್ವೇಷ, ಸಿಟ್ಟು, ಅಸಹನೆ,  ಇತ್ಯಾದಿ ನೀವು ಅಧ್ಯಾತ್ಮಿಕ ಪ್ರಕ್ರಿಯೆ ಶುರು ಮಾಡಿದ ಕೆಲವೇ ವರ್ಷಗಳಲ್ಲಿ ಮಾಯವಾಗಿ ಬಿಡುತ್ತವೆ. ಆದ್ರೆ ಬಾಕಿ ಉಳಿದವನ್ನು ಕೆತ್ತಿ ಒಗೆಯುವದು ಇದೆಯೆಲ್ಲ, ಅದಕ್ಕೆ ಬೇಕು ಸಿಕ್ಕಾಪಟ್ಟೆ ಟೈಮ್ ಮತ್ತು ಪರಿಶ್ರಮ. but well worth the time and effort.

ಕೆಲವರು ಪರಿವರ್ತನೆಯ ಪ್ರಕ್ರಿಯೆಯನ್ನು ಆರಂಭ ಮಾಡಿ ನಂತರ ಬಿಟ್ಟು ಬಿಡುತ್ತಾರೆ. ಮೊದಲು ಕಂಡ ಗಮನೀಯ ಬದಲಾವಣೆಗಳು ಆಮೇಲೆ ಅಷ್ಟು ಬೇಗ ಬೇಗ ಕಂಡು ಬರುವದಿಲ್ಲ. ಹಾಗಂತ ಬದಲಾವಣೆಯೇ ಆಗುತ್ತಿಲ್ಲ ಅನ್ನುವದು ತಪ್ಪು. ಕುಸುರಿ ಕೆಲಸ ಮಾಡುವಾಗ ಶಿಲ್ಪಿ ಅತಿ ಚಿಕ್ಕ ಚಾಣದ  ಜೊತೆಗೆ ಸಣ್ಣ ಸುತ್ತಿಗೆಯಿಂದ ಮೃದುವಾಗಿ ಹೊಡೆದು ಹೊಡೆದು ಕೆತ್ತುತ್ತಿರುತ್ತಾನೆ. ಆದರೆ ಕಾಣಿಸಬಹುದಾದಂತಹ ದೊಡ್ಡ ಮಟ್ಟದ ಬದಲಾವಣೆ ಪ್ರತೀ ಸುತ್ತಿಗೆ ಹೊಡೆತದ ನಂತರ ಕಂಡು ಬರುವದಿಲ್ಲ್ಲ. ಅಲ್ಲವೇ? ಹಾಗೆ ನಮ್ಮಲ್ಲೂ ಕೂಡ. ಮೊದಲ ಒಂದೆರಡು ವರ್ಷದ ದೊಡ್ಡ ಮಟ್ಟದ ಬದಲಾವಣೆಗಳ ನಂತರ ಮುಂದಿನದೆಲ್ಲ ಚಿಕ್ಕ ಚಿಕ್ಕ ಇನ್ಕ್ರಿಮೆಂಟ ನಲ್ಲಿ.

ಇದಕ್ಕೆ ಇನ್ನೊಂದು ಉದಾಹರಣೆ ಅಂದ್ರೆ ಎತ್ತರದ ಪ್ರದೇಶದಲ್ಲಿರುವ ಊರಿಗೆ ಬಸ್ಸಲ್ಲಿ ಹೋಗೋವಾಗ ಆಗುವ ಅನುಭವ. ಬಸ್ಸು ಪರ್ವತವನ್ನು ಸುತ್ತಿ ಸುತ್ತಿ ಮೇಲೆ ಹೋಗುತ್ತೆ. ಪ್ರತೀ ಸುತ್ತಿನ ನಂತರ ಮೇಲೆ ಬಂದಿದ್ದೇವೆ ಅಂತ ಅನ್ನಿಸುವದಿಲ್ಲ. ಆದರೆ ಕೆಲವಾದರೂ ಅಡಿ ಮೇಲೆ ಬಂದಿರುತ್ತೇವೆ. ಕೆಲವೊಂದು ಸಲ ಪರ್ವತದ ಸುತ್ತ ಪರೀಧಿ ಜಾಸ್ತಿ ಇದ್ದರೆ ರೌಂಡ್ ಹೊಡೀತ ಇರುವಾಗ ಎಲ್ಲೋ ಸಮತಟ್ಟಾದ ಜಾಗದ ಮೇಲೆ ಹೋಗುತ್ತಿದ್ದು ಮೇಲಕ್ಕೆ ಏರುತ್ತಿದ್ದೇವೆಯೋ ಇಲ್ಲವೋ ಅಂತ ಡೌಟ್ ಬರುತ್ತದೆ. ಅಧ್ಯಾತ್ಮಿಕ ಸಾಧನೆಗಳಲ್ಲೂ ಅಷ್ಟೇ. ಅದಕ್ಕೇ ಅಂತ ಒಂದು ಟರ್ಮ್ ಇದೆ - spiritual plateau.

ಆದ್ರೆ ಎಲ್ಲಿವರಗೆ ನಮ್ಮ ಸಾಧನೆ ನಾವು ಮಾಡುತ್ತಾ ಹೋಗುತ್ತೇವೆಯೋ ಅದರ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳುವ  ಅವಶ್ಯಕತೆ ಇಲ್ಲ. ಒಂದು ಹತ್ತು ರೌಂಡ್ ಸುತ್ತು ಹಾಕಿದ ಮೇಲೆ ಹವಾಮಾನ ತಂಪಾಗಿ - ಓಹೋ, ಸುಮಾರು ಮೇಲೆ ಬಂದು ಬಿಟ್ಟಿವಿ - ಅನ್ನಿಸುವ ಹಾಗೆ, ನಮ್ಮಲ್ಲೂ ಏನೋ ಒಂದು ಬೇಡವಾಗಿದ್ದು ಬಿದ್ದು ಹೋಗಿ ಪರಿಪೂರ್ಣತೆ ಹತ್ತಿರ ಬಂದ ಫೀಲಿಂಗ್ ಆಗಾಗ ಎಲ್ಲ ಸಾಧಕರಿಗೂ ಬಂದು ಸಾಧನೆಯಲ್ಲಿ ಮತ್ತೆ ಹುರುಪು ಬರುತ್ತದೆ.

ಕೆತ್ತಲಾಗದು ಕಗ್ಗಲ್ಲೆಂದು ಕೈ ಬಿಟ್ಟಿದ್ದರೆ ಶಿಲ್ಪಿ, ಆಗುತ್ತಿತ್ತೆ ಕಲೆಗಳ ಬೀಡು ಬೇಲೂರು ಹಳೇಬೀಡು - ಈ ಹಾಡಿನ ರೀತಿಯಲ್ಲಿ
ನಮ್ಮಿಂದ ನಾವು ನಮ್ಮದಲ್ಲದ್ದನ್ನು, ಅಂದರೆ ನಮ್ಮಲ್ಲಿ ದೈವಿಕ ಅಲ್ಲದ್ದನ್ನು, ಕೆತ್ತಿ ಕೆತ್ತಿ ಹೊರಗೆ ಒಗೆಯುತ್ತಲೇ ಇರಬೇಕು. ಅದರಲ್ಲೇ ಇರುವದು ಸಾರ್ಥಕತೆ.

** ಶ್ರೀ ಏಕನಾಥ್ ಈಶ್ವರನ್ ಅವರ ಬರಹ, ಪ್ರವಚನಗಳಿಂದ ಪ್ರಭಾವಿತ ಲೇಖನ.

No comments: