Friday, July 20, 2012

ಸ್ವಾಮಿ ವಿವೇಕಾನಂದರು ಹೇಳಿದ ಕಥೆ - ಪ್ರಾಣಾಯಾಮದ ಬಗ್ಗೆ

ಯಾವದೋ ಒಂದು ರಾಜ್ಯ. ಅದಕ್ಕೊಬ್ಬ ತಿಕ್ಕಲೇಶ್ವರ ದೊರೆ. ಅವನಿಗೊಬ್ಬ ಸಿಕ್ಕಾಪಟ್ಟೆ ಬುದ್ಧಿಶಾಲಿ ಮಂತ್ರಿ.

ಒಂದು ದಿನ ಮಂತ್ರಿ ತನಗೆ ತಿಳಿದ ಮಟ್ಟಿಗೆ ಯಾವದೋ ಒಂದು ವಿಷಯದ ಮೇಲೆ ರಾಜನಿಗೆ ಏನೋ ಸಲಹೆ ಕೊಟ್ಟ. ರಾಜ ಮಹಾ ತಿಕ್ಕಲ ಅಂದೆನಲ್ಲ. ಸಿಟ್ಟಿಗೆದ್ದು ಬಿಟ್ಟ. ಅಷ್ಟೇ ಅಲ್ಲ. ಸಿಕ್ಕಾಪಟ್ಟೆ ರೈಸ್ ಆಗಿ, ಆಪ್ತ ಮಂತ್ರಿ ಎಂಬುದನ್ನೂ ಮರೆತು ಮಂತ್ರಿಯನ್ನ ಬಂಧಿಸಿ ಸೆರೆಮನೆಗೆ ಕಳಿಸಿಬಿಟ್ಟ.

ಸೆರೆಮನೆಯಲ್ಲಿ ಮಂತ್ರಿಯನ್ನು ಒಂದು ಅತೀ ಎತ್ತರದ ಗೋಪುರದಂತಹ ಕಟ್ಟಡದಲ್ಲಿ ಮೇಲಿನ ಕೋಣೆಯಲ್ಲಿ ಇಡಲಾಗಿತ್ತು. ಅದಕ್ಕೆ ಒಂದು ಕಿಟಕಿ ಮಾತ್ರ ಇತ್ತು. ಬಾಕಿ ಎಲ್ಲ ಬಂದ್. ಕಿಟಕಿ ಹಾರಿದರೆ ಮುಗೀತು ಕಥೆ. ಹರೋಹರ. ತಪ್ಪಿಸಿಕೊಳ್ಳಲು ದಾರಿಯೇ ಇಲ್ಲ.

ಒಂದು ದಿನ ರಾತ್ರಿ ಮಂತ್ರಿಯ ಹೆಂಡತಿ ಬಂದು ಮಂತ್ರಿಗೆ ಕೇಳುವಂತೆ ಬೊಬ್ಬೆ ಹೊಡೆದಳು. ಅದು ಹ್ಯಾಂಗೆ ಅಷ್ಟು ಮೇಲಿನ ಕೋಣೆಯಿಂದ ಅವಳ ಜೊತೆ ಮಾತಾಡಿದನೋ ಗೊತ್ತಿಲ್ಲ. (ಕಥೆ. ಮುಂದೆ ಓದಿ.)

ಮಂತ್ರಿ ಆಕೆಗೆ ಕೆಲವು ವಸ್ತುಗಳನ್ನು ತೆಗೆದುಕೊಂಡು ಬರುವಂತೆ ಹೇಳಿದ.

ಸ್ವಲ್ಪ ಜೇನುತುಪ್ಪ, ಒಂದು ಜೀರುಂಡೆ ಹುಳ (ಬೋರಂಗಿ, ದುಂಬಿಯ ಜಾತಿಯ ಹುಳ. beetle), ಅತ್ಯಂತ ತೆಳ್ಳನೆಯ ರೇಷ್ಮೆ ದಾರದ ಒಂದು ದೊಡ್ಡ ಉಂಡೆ, ಬಟ್ಟೆ ಹೊಲಿಯುವ ದಪ್ಪನೆಯ ದಾರದ ಉಂಡೆ (twine), ಒಂದಿಷ್ಟು ಹುರಿ ಹಗ್ಗ (ಸಣಬಿನ ಹುರಿ), ಆಮೇಲೆ ದಪ್ಪನೆಯ ಹಗ್ಗ (ಭಾವಿ ಹಗ್ಗ) - ಇದಿಷ್ಟು ತೆಗೆದುಕೊಂಡು ಮತ್ತೆ ಕಾರಾಗ್ರಹದ ಕಿಡಕಿ ಕೆಳಗೆ ರಾತ್ರಿ ಬಾ ಅಂದಿದ್ದ ಹೆಂಡತಿಗೆ ಮಂತ್ರಿ.

ಮರುದಿವಸ ರಾತ್ರಿ. ಅಮಾವಾಸ್ಯೆ. ಕಗ್ಗತ್ತಲು. ಕಾವಲಿನವರೂ - ಹ್ಯಾಂಗೆ ಮಾಡಿದರೂ ತಪ್ಪಿಸಿಕೊಳ್ಳಲಾರ ಮಂತ್ರಿ  - ಅಂತ ನಿರ್ಲಕ್ಷಿಸಿದ್ದರು.

ಇದೆಲ್ಲ ಸಾಮಾನು ಹೊಂದಿಸಿಕೊಂಡ ಬಂದ ಹೆಂಡತಿಗೆ ಮಂತ್ರಿ ಮೇಲಿಂದ ಕ್ರಮಬದ್ಧವಾಗಿ ಸೂಚನೆ ಕೊಡುತ್ತ ಹೋದ. ಆಕೆ ಅದನ್ನ ಪಾಲಿಸುತ್ತಾ ಹೋದಳು.

ಜೀರುಂಡೆಯ ಕಾಲಿಗೆ ತೆಳ್ಳನೆಯ ರೇಷ್ಮೆ ದಾರ ಕಟ್ಟು. ಆ  ಜೀರುಂಡೆಯ ತಲೆ ಮೇಲೆ, ಬಾಯಿಯ ಮುಂದೆ ಒಂದು ಹನಿ ಜೇನುತುಪ್ಪ ಬಿಡು. ನಂತರ ಜೀರುಂಡೆಯನ್ನು ಕಿಡಕಿಯ ಕೆಳಗೆ ನೇರವಾಗಿ ಗೋಡೆಯ ಮೇಲೆ ಬಿಡು.

ಗಾಣದೆತ್ತಿಗೆ ತಲೆ ಮುಂದೆ ಒಂದು  ಕೋಲಿಗೆ ಹಿಡಿ ಹುಲ್ಲು ಕಟ್ಟಿದರೆ, ಮುಂದೆ ಹೋದರೆ ಹುಲ್ಲು ಸಿಕ್ಕೀತು, ಇನ್ನೂ ಸ್ವಲ್ಪ ಮುಂದೆ ಹೋದರೆ ಹುಲ್ಲು ಸಿಕ್ಕೀತು ಅಂತ ಭ್ರಮೆಯಲ್ಲಿ ಎತ್ತು ಮುಂದೆ ಹೋಗಿ ಹೋಗಿ ಗಾಣ ತನ್ನ ಪಾಡಿಗೆ ತಿರುಗಿ ತಿರುಗಿ ಎಣ್ಣೆ ತೆಗೆಯುವ ಕೆಲಸ ಆಗೋದಿಲ್ಲವೇ ಹಾಗೆ. ಅದೇ ಲಾಜಿಕ್.

ಜೀರುಂಡೆಗೆ ಮುಂದೆ ಜೇನುತುಪ್ಪದ ಹನಿ ಕಾಣುತ್ತದೆ. ಆದ್ರೆ ಸಿಗ್ತಿಲ್ಲ. ಸ್ವಲ್ಪ ಮುಂದೆ ಹೋದರೆ ಸಿಕ್ಕೀತೋ ಅಂತ ಆಸೆ. ಅದೇ ಆಸೆಯಲ್ಲಿ ಮುಂದೆ ಹೊಯಿತು. ಮುಂದೆ ಮುಂದೆ ಹೋಗುತ್ತಾ ಹೋಗುತ್ತಾ ಗೋಡೆ ಏರಿ ಏರಿ, ಸುಮಾರು ಹೊತ್ತಿನ ನಂತರ ಮಂತ್ರಿ ಬಂಧಿಯಾಗಿದ್ದ ಕಿಡಕಿ ಹತ್ರ ಬಂತು.

ಮಂತ್ರಿ ಜೀರುಂಡೆಯ ಕಾಲಿಗೆ ಕಟ್ಟಿದ್ದ ತೆಳ್ಳನೆಯ ರೇಷ್ಮೆ ದಾರವನ್ನ ಜತನದಿಂದ ಬಿಡಿಸಿಕೊಂಡ ಮತ್ತು ಗಟ್ಟಿಯಾಗಿ ಹಿಡಿದುಕೊಂಡ.

ಕೆಳಗಿದ್ದ ಹೆಂಡತಿಗೆ ಮುಂದಿನ ಸೂಚನೆ ಕೊಟ್ಟ. ರೇಷ್ಮೇದಾರದ ಕೆಳತುದಿಗೆ ಈಗ ಬಟ್ಟೆ ಹೊಲಿಯುವ ದಪ್ಪನೆಯ ದಾರ ಕಟ್ಟು ಅಂದ. ಕಟ್ಟಿದಳು. ಮಂತ್ರಿ ನಿಧಾನವಾಗಿ ರೇಷ್ಮೆ ದಾರ ಮೇಲೆ ಎಳೆದುಕೊಂಡ. ಈಗ ಮೇಲೆ ಬಂತು ಸ್ವಲ್ಪ ದಪ್ಪನೆಯ ಬಟ್ಟೆ ಹೊಲಿಯುವ ದಾರ.

ರೇಷ್ಮೆ ದಾರ ತೆಗೆದ. ಬಟ್ಟೆ ಹೊಲಿಯುವ ದಪ್ಪನೆಯ ದಾರ ಹಿಡಿದುಕೊಂಡ. ಕೆಳಗಿರುವ ಹೆಂಡತಿಗೆ ಹೇಳಿದ. ಆ ದಾರದ ಕೊನೆಗೆ ಈಗ ಸೆಣಬಿನ ಹುರಿ ಹಗ್ಗ ಕಟ್ಟು ಅಂದ. ಕಟ್ಟಿದಳು. ಮೊದಲಿನ ಹಾಗೆ ಮೇಲೆ ಎಳೆದುಕೊಂಡ. ಈಗ ಸೆಣಬಿನ ಹುರಿ ಹಗ್ಗ ಬಂತು.

ಸೆಣಬಿನ ಹುರಿ ಹಗ್ಗ ಹಿಡಿದುಕೊಂಡ ಮಂತ್ರಿ ಅದರ ಕೆಳತುದಿಗೆ ಈಗ ದಪ್ಪನೆಯ ಭಾವಿ ಹಗ್ಗ ಕಟ್ಟಲು ಹೇಳಿದ. ಕಟ್ಟಿದಳು. ಸಣಬಿನ ಹುರಿ ಮೇಲೆ ಎಳೆದುಕೊಂಡ. ಈಗ ಬಂತು ಬೇಕಾಗಿದ್ದ ಭಾವಿ ಹಗ್ಗ.

ಸಿಕ್ಕಿತಲ್ಲ ಎಸ್ಕೇಪ್ ಆಗೋಕೆ ಬೇಕಾಗಿದ್ದ ಹಗ್ಗ. ಹಗ್ಗ ಕಿಡಕಿಗೆ ಕಟ್ಟಿದವನೇ ಸೊಯ್ಯ ಅಂತ ಕೆಳಗೆ ಇಳಿದು ಬಂದವನೇ ಹೆಂಡತಿ ಕರೆದುಕೊಂಡ ರಾಜ್ಯ ಬಿಟ್ಟು ಓಡಿ ಹೋಗೇ ಬಿಟ್ಟ.

ಸ್ವಾಮಿ ವಿವೇಕಾನಂದರು ತಮ್ಮ 'The Complete Works of Swami Vivekananda: vol. 1' ಪುಸ್ತಕದಲ್ಲಿ ಈ ಕಥೆಯನ್ನು ಪ್ರಾಣಾಯಾಮ ಎಂಬ ಯೋಗ ಪ್ರಕ್ರಿಯೆ ಹೇಗೆ ಕೆಲಸಮಾಡುತ್ತದೆ ಎಂಬುದನ್ನ ವಿವರಿಸಲು ಹೇಳುತ್ತಾರೆ.

ನಮ್ಮ ಉಸಿರಾಟ ರೇಷ್ಮೆ ದಾರವಿದ್ದಂತೆ. ಉಸಿರಾಟದ ಸರಿಯಾದ ನಿಯಂತ್ರಣದಿಂದ ನರಮಂಡಲದ (nervous currents in particular) ಮೇಲೆ ಹತೋಟಿ ಬರುತ್ತದೆ. ಅಂದ್ರೆ ಅದು ಬಟ್ಟೆ ಹೊಲಿಯುವ ದಾರದಂತಹದು. ಅದರಿಂದ ನಾವು ಮನಸ್ಸಿನ ಮೇಲೆ ಹತೋಟಿ ಸಾಧಿಸುತ್ತೇವೆ. ಮನಸ್ಸು ಅಂದರೆ ಸಣಬಿನ ಹುರಿ. ಒಮ್ಮೆ ಮನಸ್ಸು, ಬುದ್ಧಿಯ ಮೇಲೆ ಹತೋಟಿ ಬಂತೋ, ಮುಂದೆ ದಪ್ಪ ಭಾವಿ ಹಗ್ಗವಾದ ಪ್ರಾಣಶಕ್ತಿ, ಕುಂಡಲಿನಿ ಶಕ್ತಿ ಮೇಲೆ ಹಿಡಿತ ಸಿಕ್ಕ ಹಾಗೆ. ಅದನ್ನು ಹಿಡಿದುಕೊಂಡು ಮುಕ್ತಿಯತ್ತ (ಪರಮ ಸ್ವಾತಂತ್ರದತ್ತ) ಎಸ್ಕೇಪ್ ಆಗಬಹುದು. ಒಟ್ಟಿನಲ್ಲಿ ಇನ್ಕ್ರಿಮೆಂಟಲ್ ಪ್ರೋಗ್ರೆಸ್ಸ್ ಅಂಡ್ ಕಂಟ್ರೋಲ್.

ಸರಿಯಾದ ಉಸಿರಾಟದಿಂದ ನರಮಂಡಲದ ಹತೋಟಿ.
ನರಮಂಡಲದ ಮೇಲಿನ ಹತೋಟಿಯಿಂದ ಮನಸ್ಸಿನ ಮೇಲೆ, ಯೋಚಿಸುವ ರೀತಿ ಮತ್ತು ವಿಚಾರಗಳ ಮೇಲೆ ಹತೋಟಿ.
ಮನಸ್ಸು ಮತ್ತು ವಿಚಾರಗಳ  ಮೇಲಿನ ಹತೋಟಿಯಿಂದ ಪ್ರಾಣ ಶಕ್ತಿಯ ಮೇಲೆ ಹಿಡಿತ.
ಪ್ರಾಣಶಕ್ತಿಯ ಮೇಲಿನ ಹಿಡಿತದಿಂದ "ನಮ್ಮ" ಮೇಲೆಯೇ ನಮಗೆ ವಿಜಯ. ಮುಕ್ತಿ ಪ್ರಾಪ್ತಿ.

ಇದು ಪ್ರಾಣಾಯಾಮದ ಬೇಸಿಕ್ ವರ್ಕಿಂಗ್ ಪ್ರಿನ್ಸಿಪಲ್ ಅಂತ ವಿವೇಕಾನಂದರು ಹೇಳುತ್ತಾರೆ.

ಹಲವಾರು ತರಹದ ಪ್ರಾಣಾಯಾಮಗಳು ಇವೆ. ಆದರೆ ಮೂಲಭೂತ ಪ್ರಿನ್ಸಿಪಲ್ ಮಾತ್ರ ಇದೇ.

ಪ್ರಾಣಾಯಾಮ  ಪತಂಜಲಿಯ ಅಷ್ಟಾಂಗ ಯೋಗದ ಒಂದು ಭಾಗ. ಆಸಕ್ತಿ ಇರುವವರು ಸ್ವಾಮಿ ಪ್ರಭವಾನಂದರು ಪತಂಜಲಿ ಯೋಗ ಸೂತ್ರದ ಮೇಲೆ ಬರೆದ ಪುಸ್ತಕ ಓದಬಹುದು. ಲಿಂಕ್ ಇಲ್ಲಿದೆ. ಅತ್ಯುತ್ತಮ ಪುಸ್ತಕ.

ಆದರೆ ಪ್ರಾಣಾಯಾಮ ಮಾತ್ರ ಸರಿಯಾಗಿ ಕಲಿತು ಮಾಡಬೇಕು. ಅದರಲ್ಲೂ ಕೆಲವೊಂದು ಕಠಿಣ, ಕ್ಲಿಷ್ಟಕರ ಮತ್ತು ತಾಂತ್ರಿಕ್ ಸಿಸ್ಟಮ್ ಗೆ ಸೇರಿದ ಪ್ರಾಣಾಯಾಮ ಮುಂತಾದ ತಾಂತ್ರಿಕ ಕ್ರಿಯೆಗಳ ಬಗ್ಗೆ ಸಾಕಷ್ಟು ಪುಸ್ತಕ ಮಾಹಿತಿ ಲಭ್ಯವಿದ್ದರೂ ಸರಿಯಾದ ಗುರುವಿನ ಮಾರ್ಗದರ್ಶನವಿಲ್ಲದೆ ಎಂದೂ  ಮಾಡಬಾರದು.

ಕೆಲವು ತಿಳಿದವರು ಹೇಳುವ ಪ್ರಕಾರ ನಮ್ಮ ಆಧುನಿಕ ಜೀವನ ಶೈಲಿ ಎಷ್ಟು ಅಸಹಜ ಮತ್ತು ಕೃತಕ  ಆಗಿದೆ ಅಂದರೆ ಕೆಲವೊಂದು ಸರಳ ಪ್ರಾಣಾಯಾಮದ ವಿಧಾನಗಳನ್ನು ಬಿಟ್ಟರೆ ಉಳಿದವುಗಳಿಂದ ನರಮಂಡಲ ಪೂರ್ತಿ ಹದಗೆಟ್ಟು ಹೋಗುವ ಸಾಧ್ಯತೆಗಳೇ ಹೆಚ್ಚು ಅಂತ ವಾರ್ನಿಂಗ್ ಸಹಿತ ಕೊಟ್ಟಿದ್ದಾರೆ. ಅವೆಲ್ಲಾ ಹಿಮಾಲಯದಲ್ಲಿ ಗುಹೆಯಲ್ಲಿ ಶುದ್ಧ ಗಾಳಿ, ನೀರು, ಆಹಾರ ಸಿಕ್ಕು ಅತಿ ಶಿಸ್ತಿನ ಜೀವನಶೈಲಿ ರೂಢಿಸಿಕೊಂಡವರಿಗೆ, ದೊಡ್ಡ ಮಟ್ಟದ ಸಾಧಕರಿಗೆ ಮಾತ್ರ.

ಸರಿಯಾಗಿ ಕಲಿತು ಮಾಡದೆ ಅಥವಾ ಶುರುವಿನಲ್ಲಿ  ಹಿತವೆನ್ನಿಸುತ್ತದೆ ಅಂತ ಲಿಮಿಟ್ ಮೀರಿ ಪ್ರಾಣಾಯಾಮ ಮಾಡಿದವರಿಗೆ ಏನೇನು ವ್ಯತಿರಿಕ್ತ ಪರಿಣಾಮ ಆಗಬಹುದು ಎಂಬುದನ್ನು ಹಲವಾರು ಯೋಗಿಗಳು ತಿಳಿಸಿ ಹೇಳಿದ್ದಾರೆ. ಅದರ ಬಗ್ಗೆ ಮತ್ತೊಮ್ಮೆ.

ಆದರೆ ಸರಳ ಪ್ರಾಣಾಯಾಮ ಮಾಡಿದರೂ ಸಾಕು. ನಿಯಮಿತವಾಗಿ ಮಾಡಿ ನೋಡಿ. 2-3 ತಿಂಗಳಲ್ಲೇ ಸಾಕಷ್ಟು ಒಳ್ಳೆ ಬದಲಾವಣೆಗಳನ್ನು ನೀವೇ ಕಾಣುತ್ತೀರಿ.

ಸರಳವಾಗಿ ಮತ್ತು ಸೇಫ್ ಆಗಿ ಮಾಡಬಹುದಾದ ಪ್ರಾಣಾಯಾಮ ಅಂದರೆ ಅನುಲೋಮ ವಿಲೋಮ ಪ್ರಾಣಾಯಾಮ. ಸ್ವಾಮಿ ವಿವೇಕಾನಂದರು, ಸ್ವಾಮಿ ಪ್ರಭವಾನಂದರು ಇಬ್ಬರೂ ಇದನ್ನು ಎಲ್ಲರಿಗೂ ಓಕೆ ಅಂದಿದ್ದಾರೆ. ಆದರೆ ಇತಿಮಿತಿಯಲ್ಲಿ ಮಾತ್ರ. ಒಂದು ಸಲಕ್ಕೆ 5 ಸರಿ. ದಿನಕ್ಕೆ ಮೂರು ಸಲ ಓಕೆ. ಜಾಸ್ತಿ ಬೇಡ. ಗೂಗಲ್ ಮಾಡಿ ಬೇಕಾದಷ್ಟು ಮಾಹಿತಿ, ಮಾಡೋ ಕ್ರಮದ ಬಗ್ಗೆ ಮಾಹಿತಿ, ವೀಡಿಯೊ ಎಲ್ಲ ಸಿಗುತ್ತದೆ.

ಧ್ಯಾನದ ಮೊದಲು ನಾಡಿ ಶುದ್ಧ ಮಾಡುವ spinal breathing (or kundalini cleansing) ಪ್ರಾಣಾಯಾಮ ಸುಮಾರು 5 ನಿಮಿಷ ಮಾಡಬಹುದು.

ಸ್ವಾಮಿ ವಿವೇಕಾನಂದರ ಪುಸ್ತಕದಿಂದ ಒರಿಜಿನಲ್ ಇಂಗ್ಲಿಷ್ ಟೆಕ್ಸ್ಟ್ ಇಲ್ಲಿ ಕಾಪಿ ಮಾಡಿದ್ದು ಇದೆ ನೋಡಿ.

No comments: