Sunday, August 05, 2012

ಅಳಿಯ ಮನೆ ತೊಳಿಯ...ದೇಶವನ್ನೂ ತೊಳಿಯ

ಅಳಿಯ ಮನೆ ತೊಳಿಯ.....ಅಂತ ಒಂದು ಮಾತಿದೆ.

ಈ ಅಳಿಯ ಬರೇ ಮನೆಯನ್ನಷ್ಟೇ ಅಲ್ಲ ದೇಶವನ್ನೇ ತೊಳೆದನೆ? ತೊಳೆಯುತ್ತ ತೊಳೆಯುತ್ತ ತಾನೇ ತೊಳೆದುಕೊಂಡು ಕೊಚ್ಚಿಕೊಂಡು ಹೋಗಿಬಿಟ್ಟನೆ?

ಹಾಗಂತ ಅನ್ನಿಸುವದು ಒಬ್ಬ ಇಜಿಪ್ಟಿನ ಅಳಿಯನ ಬಗ್ಗೆ ಯೋಚಿಸಿದಾಗ.

ಅವನೇ ಅಶ್ರಾಫ್ ಮಾರ್ವಾನ್.  ಗತಕಾಲದ ಅಳಿಯ.  ಅಂದರೆ  ಸುಮಾರು 1960 ಟೈಮ್ ನಲ್ಲಿ ಇಜಿಪ್ಟ್ ಅಧ್ಯಕ್ಷರಾಗಿದ್ದ ನಾಸಿರ್ ಅವರ ಅಳಿಯ. ಅವರ ಪುತ್ರಿ ಮೋನಾ ಅವರ ಪತಿ.

ನಾಸಿರ್ ಗೆ ಈ ಅಳಿಯ ಮನಸ್ಸಿರಲಿಲ್ಲ. ಆದ್ರೆ ಏನು ಮಾಡುವದು? ಪುತ್ರಿ - ಪ್ಯಾರ್ ಗೆ ಆಗಿ ಬಿಟೈತೆ - ಅಂತ ಕೂತು ಬಿಟ್ಟಿದ್ದಾಳೆ. ಆ ಕಾಲದಲ್ಲೇ ಕೆಮಿಸ್ಟ್ರಿಯಲ್ಲಿ ಏನೇನೋ ಓದಿಕೊಂಡವ ಇಜಿಪ್ಟನಲ್ಲಿ ಅವ ಒಬ್ಬನೇ ಇರಬೇಕು. ನೋಡಲು ಬೇರೆ ಸುರಸುಂದಾರಾಂಗ. ಹಾಗಿದ್ದಾಗ ಮೋನಾ ಡಾರ್ಲಿಂಗ ಇವನಿಗೆ ಬಿದ್ದಿದ್ದರಲ್ಲಿ ಏನು ದೊಡ್ಡ ಮಾತು?

ಮನಸ್ಸಿಲ್ಲದ ಮನಸ್ಸಿನಿಂದ ಮದುವೆ ಮಾಡಿ ಕೊಟ್ಟರು ಅಧ್ಯಕ್ಷ ನಾಸಿರ್.  ಆಗ ಮಾತ್ರ 6-ದಿವಸದ ಯುದ್ಧದಲ್ಲಿ ಇಜಿಪ್ಟ್ ಇಸ್ರೇಲ್ ಕಡೆಯಿಂದ ಬಡಿಸಿಕೊಳ್ಳಬಾರದ ರೀತಿ ಬಡಿಸಿಕೊಂಡು ಅಮ್ಮಾ....ಅಪ್ಪಾ....ಅತ್ತೆ... ಮಾಮಾ..ಅದು ಇದು ಅಂತ ಮುಲುಗುತ್ತಿತ್ತು. ಒಟ್ಟಿನಲ್ಲಿ ನವದಂಪತಿಗಳಿಗೆ ಮಸ್ತ ಮಜಾ ಮಾಡೋವಂತಹ ವಾತಾವರಣ ಇಜಿಪ್ಟ್ನಲ್ಲಿ ಖರೇ ಇರಲಿಲ್ಲ. ಅದಕ್ಕೆ ಮಾರ್ವಾನ್ ಮೋನಾ ಜೋಡಿ ಲಂಡನ್ ಗೆ ಹಾರಿತು. ಕಾಸಿದ್ದವನೇ ಬಾಸು ನೋಡಿ.

ಅಲ್ಲಿ  ಜೋಡಿ ಸೆಟಲ್ ಆಯಿತು. ಮಾರ್ವಾನ್ ಗೆ ಏನು ತಲೆ ಬಂತೋ.....ಏಕ್ದಂ ಅರ್ಥಶಾಸ್ತ್ರದಲ್ಲಿ ಸ್ಟಡೀಸ್ ಶುರು ಮಾಡಿಬಿಟ್ಟ.....ಒಟ್ಟಿನಲ್ಲಿ ಏನೋ ಒಂದು. ಮಾವ ಇಜಿಪ್ಟನಿಂದ ಕಾಸು ಕಳಿಸುತ್ತಾನೆ, ಬಾಜೂ ಮೇ ಮೋನಾ...ಸಾಕಿತ್ತು ಅವನಿಗೆ. ಆದ್ರೆ ಮಾವ ನಾಸಿರ್ ಮಾಡಿದ್ದ ಅವಮಾನದ ಗಾಯ ಇತ್ತು ನೋಡಿ. ಅದು ಇನ್ನೂ ಮಾದಿರಲಿಲ್ಲ. ಮಾಯೋದು ದೂರ ಉಳಿತು. ಮೋನಾ ಜೊತೆ ಸೋನಾ ಮಾಡುವಾಗೆಲ್ಲ ಆ ಅವಮಾನದ ಗಾಯವನ್ನು ಪರಾ ಪರಾ ಅಂತ ಉಗುರಿನಿಂದ ಕೆರದು ಕೆರದು ನಂಜೇರಿಸಿಕೊಳ್ಳುತ್ತಿದ್ದ ಮಾರ್ವಾನ್.

ಲಂಡನ್ ನಲ್ಲಿ ಲೈಫ್ ಏನೋ ಒಂದು ತರಹ ನಡೆದಿತ್ತು. ಆದ್ರೆ ಅಂತರ್ಯದ ತೆವಲುಗಳೇ ಬೇರೆ ನೋಡಿ. ನಾಸಿರ್ ಹೋಗಿದ್ದ. ಇಜಿಪ್ಟ್ ನ ಅಧ್ಯಕ್ಷನಾಗಿ ಅನ್ವರ ಸದಾತ್ ಬಂದಿದ್ದ. ತನ್ನ ಗುರುವಿನ ಅಳಿಯ ಅಂತ ಮಾರ್ವಾನ್ ನನ್ನು ತನ್ನ ಒಳವಲಯದಲ್ಲಿ ಯಾವದೂ  ಅಡೆತಡೆಗಳು ಇಲ್ಲದ ಹಾಗೆ ಅಡ್ಯಾಡಲು ಬಿಟ್ಟಿದ್ದ. ಆವಾಗಲೇ ನೋಡಿ ಅಳಿಯ ಬರೇ ಮನೆಯಷ್ಟೇ ಅಲ್ಲ ಇಡೀ ದೇಶವನ್ನೇ ತೊಳಿಯುವ ಐಡಿಯಾ ಹಾಕಿ ಬಿಟ್ಟ. 

ಒಂದು  ದಿನ ಏಕಾಏಕ್ ಇಜಿಪ್ಟ್ ನ ಪರಮ ಶತ್ರು ಇಸ್ರೇಲಿ ರಾಯಭಾರ ಕಚೇರಿಗೆ ಫೋನ್ ಮಾಡಿದ ಮಾರ್ವಾನ್ ಗೂಢಚಾರಿಗಳೊಂದಿಗೆ ಕನೆಕ್ಟ್ ಮಾಡಲು ಹೇಳಿದ. ಇಸ್ರೇಲಿಗಳಿಗೆ ಇದು ಕಾಮನ್. ಅವರು ಕೊಡುವ ಕಾಸಿಗೆ ಬಂದು ಮಾಹಿತಿ ಕೊಡುವ ಸಾವಿರ ಜನ ಇರುತ್ತಾರೆ. ಆದರೆ ಮಾರ್ವಾನ್ ಮಾತ್ರ ತನ್ನ ಪೂರ ಕುಲಗೋತ್ರ ಎಲ್ಲ ಹೇಳಿ ಇಸ್ರೆಲಿಗಳಿಗೆ ಒಂದು ತರಹದ ಕ್ಯೂರಿಯೋಸಿಟಿ ಹಚ್ಚಿ ಬಿಟ್ಟಿದ್ದ.

ಆಗಲೇ ಅವನನ್ನು ಭೆಟ್ಟಿ ಮಾಡಲಾಯಿತು. ಅವರಾಗಿಯೇ ಬಂದ ಮಾಹಿತಿದಾರರ ಬಗ್ಗೆ ಸಂಶಯ ಇರುವದು ಸಹಜ ನೋಡಿ. ಇವರು ಖರೇ ಮಾಹಿತಿದಾರರೋ ಅಥವಾ ವೈರಿ ದೇಶ ಕಳಿಸಿದ ಡಬಲ್ ಏಜೆಂಟ್ ಅಂತ ಸಂಶಯ ಇಸ್ರೆಲಿಗಳಿಗೆ. ಏನೇ ಆಗಲಿ ನೋಡೋಣ ಅಂತ ಮಾರ್ವಾನನ್ನು ಏಜೆಂಟ್ ಮಾಡಿಕೊಂಡಿತು ಇಸ್ರೇಲ್.

ಅವನು  ಕೊಟ್ಟ ಮಾಹಿತಿಗಳೋ.....ಮೊಸ್ಸಾದ್....ಆರ್ಮಿ ಇಂಟೆಲಿಜೆನ್ಸ್ ಅಮಾನ್ ಎಲ್ಲ ತತ್ತರಿಸಿಹೋದವು. ಆ ಪರಿ ಮಾಹಿತಿ ಕೊಡುತ್ತಿದ್ದ ಇಜಿಪ್ಟಿನ ಅಳಿಯ. ಅಲ್ಲಿ ಅಳಿಯ ಮನೆ ತೊಳಿಯುತ್ತಿದ್ದರೆ, ಇಸ್ರೇಲಿಗಳು ಆ ಮಾಹಿತಿಯನ್ನು ಸರಿಯಾಗಿ ಉಪಯೋಗಿಸಿಕೊಂಡು ಇಜಿಪ್ಟಿನ ಬುಡಕ್ಕೆ ಸರಿಯಾಗಿ ಬತ್ತಿ ಇಟ್ಟು ಅನ್ವಾರ್ ಸದಾತ್ ಎಂಬ ಹಾಪನಿಗೆ ಟೊಪ್ಪಿ ಹಾಕುತ್ತಿದ್ದರು.

ಆದ್ರೆ ಒಂದು ತಪ್ಪು ಕೆಲಸ ಇಸ್ರೇಲಿಗಳು ಮಾಡಿಕೊಂಡರು. 1973 ನಲ್ಲಿ ಯೊಂ-ಕಿಪೂರ್ ಯುದ್ಧ ಎಂದೇ ಪ್ರಸಿದ್ಧವಾದ ಯುದ್ಧದ ಬಗ್ಗೆ ಕರಾರುವಾಕ್ ಮಾಹಿತಿ ಕೊಟ್ಟಿದ್ದ ಇಜಿಪ್ಟ್ ಅಳಿಯ ಮಾರ್ವಾನ್. ಇಜಿಪ್ಟ ಮತ್ತು ಸಿರಿಯಾ ಕೂಡಿ ಯಹೂದಿಗಳ ಹಬ್ಬವಾದ ಯೊಂ-ಕಿಪೂರ್ ದಿನದಂದು ಒಂದೇ ಸಲಕ್ಕೆ ಆಕ್ರಮಣ ಮಾಡಲಿವೆ. ಹುಷಾರ್ - ಅಂತ.

ಇಸ್ರೆಲಿಗಳಿಗೆ 1967 ರ 6-ದಿನದ ಯುದ್ಧ ಗೆದ್ದ ಅಮಲು ಇನ್ನೂ ಇಳಿದಿರಲಿಲ್ಲ ನೋಡಿ. ಎಲ್ಲವನ್ನೂ ಇಗ್ನೋರ್ ಮಾಡಿದರು. ಅರಬರು ತಮಗೆ ಸಮಾನರೇ ಅಲ್ಲ ಅಂದುಬಿಟ್ಟು ತಮ್ಮ ಹಬ್ಬದ ಆಚರಣೆಯಲ್ಲಿ ಮುಳುಗಿದ್ದರು. ಆಗಲೇ ನೋಡಿ ಸಿರಿಯಾ ಮತ್ತು ಇಜಿಪ್ಟ ಕೂಡಿ ಇಸ್ರೇಲ್ ಮೇಲೆ ಆಕ್ರಮಣ ಮಾಡಿದವು. ಮತ್ತೊಂದು ಯಹೂದಿ ಹತ್ಯಾಕಾಂಡ ಆಗಿಯೇ ಹೋಗುತ್ತಿತ್ತು. ಏನೋ......ಇಸ್ರೇಲಿಗಳ ದಿಲ್ ದೇಕೆ ದೇಶ್ ಬಚಾನಾ ಎಂಬ ಮಂತ್ರ. ಪ್ರಾಣ ಕೊಟ್ಟು ಸಿರಿಯಾ ಮತ್ತು ಇಜಿಪ್ಟ್ ಒದ್ದು ಓಡಿಸಿದರು. ಸುಮಾರು 3,000 ಜನ ಸೈನಿಕರು ಸತ್ತರು. ಇಸ್ರೇಲ್ ಮಟ್ಟಿಗೆ ಅದು ದೊಡ್ಡ ಪ್ರಾಣಹಾನಿ.

ಈಗ  ಪಾಲಿಟಿಕ್ಸ್ ಶುರು ಆಯಿತು. ಮಾರ್ವಾನ್ ಎಂಬ ಇಜಿಪ್ಟ ಅಳಿಯ ಮಾಹಿತಿ ಕೊಟ್ಟಿದ್ದು ಮೊಸ್ಸಾದ್ ಗೆ. ಮೊಸ್ಸಾದ್ ಬೇಹುಗಾರಿಕೆ ಸಂಸ್ಥೆ. ಅದು ಸೈನ್ಯಕ್ಕೆ ಮಾಹಿತಿ ತಲುಪಿಸಿತ್ತು. ಸೈನ್ಯ ಅದನ್ನ ಅಂಡಿನ ಕೆಳಗೆ ಇಟ್ಟುಗೊಂಡು ಕೂತರೆ ಕೊಟ್ಟ ಮಾಹಿತಿ ತಪ್ಪೇ? ಸೈನ್ಯದ ಪ್ರಕಾರ ಹೆಚ್ಚಾಗಿ ಮಾರ್ವಾನ್ ಇಜಿಪ್ಟ ಮಂದಿ ಕಳಿಸಿದ ಡಬಲ್ ಏಜೆಂಟ್ ಇರಬಹುದು. ಯಾವ ಟೈಮ್ ಗೆ ದಾಳಿಯಾಗುತ್ತದೆ ಅಂತ ಸರಿ ಮಾಹಿತಿ ಕೊಡಲಿಲ್ಲ. ಅದಕ್ಕೆ ಅವನನ್ನು ಹಿಡಿದು ಸರಿಯಾಗಿ ವಿಚಾರಣೆ ಮಾಡಬೇಕು.

ಒಟ್ಟಿನಲ್ಲಿ ಯೊಂ-ಕಿಪೂರ್ ಯುದ್ಧದಲ್ಲಿ ಇಸ್ರೇಲ್ ಬಾಲ್-ಬಾಲ್-ಬಚೆ ಅನ್ನೋ ತರಹ ಸಿಕ್ಕಾಪಟ್ಟೆ ಖರ್ಚು ಮಾಡಿ ಹೇಗೋ ಸಿರಿಯಾ ಮತ್ತು ಇಜಿಪ್ಟ್ ಒದ್ದು ಓಡಿಸಿ ಬಚಾವ್ ಆಯಿತು. ಸುಮಾರು ಮಂದಿ ನೌಕರಿ ಹೋಯಿತು. ಸೈನ್ಯದ ಗೂಢಚಾರಿ ವ್ಯವಸ್ಥೆಯ ಹಿರಿತಲೆಯೂ ಹೋಯಿತು. ಅದಕ್ಕೆ ಈ ಇಜಿಪ್ಟ ಅಳಿಯನ ಮೇಲೆಯೇ ಸಿಟ್ಟು.  ಯಾಕಂದರೆ ಅವರ ನೌಕರಿ ಕಳಿಯುವಾಗ ಹೇಳಿದ್ದು ಒಂದೇ ಅಂದರೆ - ನಿಮಗೆ ಮಾಹಿತಿ ಸಿಕ್ಕಿತ್ತು. ನೀವು ಟೈಮ್ ಗೆ ಸರಿ ಕೆಲಸ ಮಾಡದೇ ಸೈನ್ಯ ಆಲ್ಮೋಸ್ಟ್ ಯಕ್ಕುಟ್ಟಿ ಹೋಯಿತು. ಮನೆಗೆ ನಡೆಯಿರಿ ಇನ್ನು.

ಮುಂದೆ ಸುಮಾರು ವರ್ಷಗಳ ನಂತರ ಆ ಸೈನ್ಯದ ಗೂಢಚಾರಿ ಸಂಸ್ಥೆಯ ಮುಖ್ಯಸ್ಥರು ಅಶ್ರಾಫ್ ಮಾರ್ವಾನ್ ಹೆಸರನ್ನು ಮಾಧ್ಯಮಗಳಿಗೆ ತೇಲಿ ಬಿಟ್ಟರು. ಅಷ್ಟು ಕಹಿ ಅವರಲ್ಲಿ ತುಂಬಿತ್ತು ಅಂತ ಕಾಣುತ್ತದೆ. ಇಲ್ಲ ಅಂದರೆ ಯಾವದೇ ರಹಸ್ಯ ಏಜೆಂಟ್ ಹೆಸರು ಎಂದಿಗೂ ಹೊರ ಬರುವದಿಲ್ಲ. ಅಷ್ಟೇ ಸಾಕಾಯಿತು ಆ ಅಳಿಯನ ದಿನ ತುಂಬಿ ಬರುವದಕ್ಕೆ.

2007 ರ ಒಂದು ದಿವಸ. ಲಂಡನ್ ನಲ್ಲಿ ಅಶ್ರಾಫ್ ಮರ್ವಾನ್ ಎಂಬ 63 ವರ್ಷದ ವ್ಯಕ್ತಿಯೊಬ್ಬ ತನ್ನ ಮನೆಯ ಮೂರನೆಯ ಮಹಡಿಯಿಂದ ಬಿದ್ದು "ಆತ್ಮಹತ್ಯೆ" ಮಾಡಿಕೊಂಡ ಅಂತ ಸುದ್ದಿ ಆಯಿತು. ಅವನೇ ಬಿದ್ದನಾ ಅಥವಾ ದೂಕಲಾಯಿತಾ? ಅಂತ ದೊಡ್ಡ ಮಟ್ಟದ ಪ್ರಶ್ನೆಗಳು ಎದ್ದಿದ್ದು ಸಹಜ.

ಅವನಿಗೆ  ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವದೇ ಕಾರಣ ಇರಲಿಲ್ಲ. ಆರಾಮಾಗಿದ್ದ ಅವನು. ಹಾಗಾದರೆ ಯಾರು ಕೊಂದರು ಇಜಿಪ್ಟಿನ ಆ ಅಳಿಯನನ್ನು?

ಇಜಿಪ್ಟನ ಗೂಢಚಾರರೇ ಕೊಂದರು. ತಮ್ಮ ದೇಶದ ಅಳಿಯ ಎಂದುಕೊಂಡ ವ್ಯಕ್ತಿ ತಮ್ಮ ಪರಮ ಶತ್ರು ಇಸ್ರೇಲ್ ಗೆ ಮಾಹಿತಿ ಕೊಟ್ಟು ಗದ್ದಾರ್ ಕೆಲಸ ಮಾಡಿದ್ದ. ಅವನಿಗೆ ತಕ್ಕ ಶಾಸ್ತಿ ಮಾಡಲೇ ಬೇಕಿತ್ತು. ಅದಕ್ಕೆ ಕೊಂದೇ ಬಿಟ್ಟರು.

ಇನ್ನು ನೆಕ್ಸ್ಟ್ ಅಂದರೆ ಇಸ್ರೇಲಿಗಳು. ಒಳ್ಳೆಯ ಏಜೆಂಟ್ ಆಗಿದ್ದ. ಆದ್ರೆ ನಮ್ಮ ಜನರ ಮೂರ್ಖತಂದಿಂದಲೇ ಇವನ ಮುಖವಾಡ ಕಳಚಿ ಬಿದ್ದಿದೆ. ಇವ ಇನ್ನೂ ಹೆಚ್ಚು ದಿನ ಜೀವಂತವಿದ್ದರೆ ಇಜಿಪ್ಟ್ ಹಾಕುವ ಒತ್ತಡ ತಾಳಲಾರದೆ ನಮ್ಮ ಎಲ್ಲ ರಹಸ್ಯ ಹೊರಗೆ ಹಾಕಿಯಾನು. ಏನು ಮಾಡುವದು? ಕೊಲ್ಲಲು ಮನಸ್ಸಿಲ್ಲ. ಆದರೂ ಇಸ್ರೇಲ್ ಸಲುವಾಗಿ ಕೊಲ್ಲಲೇ ಬೇಕು ಅಂತ ಕೊಂದವರು ಇಸ್ರೇಲಿಗಳು ಅಂತ.

ಇನ್ನೊಂದು ಅಂದ್ರೆ ಟೋಟಲೀ ಆಶ್ಚರ್ಯ ಅನ್ನುವಂತಹ ಕೋನ ಅಂದರೆ ಮಹಮದ್ ಗಡಾಫಿ, ಲಿಬ್ಯಾವಾಲೆ. ಈ ಮಾರ್ವಾನ್ ಅಶ್ರಫ್ ಅನ್ನುವ ಇಜಿಪ್ಟ್ ನ ಅಳಿಯ ಶಸ್ತ್ರಾಸ್ತ್ರ ಖರೀದಿ ಮತ್ತೊಂದರಲ್ಲಿ ಲಿಬ್ಯಾದ ಸರ್ವಾಧಿಕಾರಿ ಗಡಾಫಿ ಅವರಿಗೆ ಸಕತ್ತಾಗಿ ನಾಮ ಹಾಕಿದ್ದನಂತೆ. ಅದಕ್ಕೆ ಸಿಟ್ಟಿಗೆದ್ದ ಅವರು ಅವನನ್ನು ತೆಗೆಸಿ ಬಿಟ್ಟರಂತೆ.

ಆದ್ರೆ  ಅಳಿಯನಿಗೆ ಮಾವನ ಮನೆಯಲ್ಲಿಯೇ ಅಂತಿಮಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಸಿಕ್ಕಿತು. ಒಳಗೆ ಏನೇ ಇರಲಿ, ಇಜಿಪ್ಟಿನ ಸರಕಾರ ಅವನು ತಮ್ಮವನೇ, ತಮ್ಮ ಪರವಾಗಿಯೇ ಇಸ್ರೇಲಿಗೆ ತಪ್ಪು ತಪ್ಪು ಮಾಹಿತಿ ಕೊಟ್ಟು ಹಾದಿ ತಪ್ಪಿಸುತ್ತಿದ್ದ ಅಂತ ಎಲ್ಲ ಕಡೆ ಹೇಳಿಕೊಂಡರು. ಇಸ್ರೇಲಿಗಳು - ಅಯ್ಯೋ....ಹೋಗ್ಲಿ ಬಿಡ್ರಿ....ನಿಮಗೆ ಹಾಗಂದುಕೊಂಡು ಇರೊ ಬರೊ ಮರ್ಯಾದೆ ಉಳಿಸಿಕೊಳ್ಳಬಹುದು ಅಂತ ಅನ್ನಿಸಿದ್ದರೆ, ನಮದೇನೂ ಅಭ್ಯಂತರವಿಲ್ಲ - ಅಂತ ಒಳಒಳಗೆ ನಕ್ಕು ಸುಮ್ಮನಾದರು.

ಒಟ್ಟಿನಲ್ಲಿ ಇಜಿಪ್ಟ್ನ ರಾಷ್ಟ್ರೀಯ ಅಳಿಯನೊಬ್ಬ ಸತ್ತು ಹೋಗಿದ್ದ.

No comments: