Thursday, March 13, 2014

ಶಿಕಾರಿ ಖುದ್ ಯಹಾ ಶಿಕಾರ್ ಹೋಗಯಾ! The hunters became the hunted!

ಮಂಗೇಶ, ಸುದ್ದಿ ಓದಿದಿ ಏನೋ? ಅಂತ ಕೇಳಿದರು ರೂಪಾ ವೈನಿ.

ಏ....ಎಲ್ಲಿ ಸುದ್ದಿರೀ? ಸುದ್ದಿ ಗಿದ್ದಿ ಎಲ್ಲಾ ಓದೋದು ಬಿಟ್ಟು ಬರೆ ನಿದ್ದಿ ಮಾಡೋದೇ ನಮ್ಮ ಕೆಲಸ. ಎಲ್ಲೋ ನಿದ್ದಿಯಿಂದ ಎಚ್ಚರಾದಾಗ ರೂಪಾ ವೈನಿ ಅನ್ನೋ ಮಹಾನುಭಾವಳ ಜೋಡಿ ಏನೋ ಮಾತು ಕಥಿ. ಅಷ್ಟೇ ನೋಡ್ರೀ, ಅಂದೆ.

ಕುಟಕಲಿಕ್ಕೆ ಹೋದವರೇ ಕುಟುಕಿಸಿಕೊಂಡು ಬಂದ್ರಲ್ಲಂತೋ? ಅಂತ ಹೇಳಿ ರೂಪಾ ವೈನಿ ಏನೋ ಫಿಟ್ಟಿಂಗ್ ಇಟ್ಟರು.

ಹಾಂ!!! ಏನು ಯಾರಿಗೆ ಕುಟುಕಿತು? ಚೇಳಾ? ಅಥವಾ ಹಾವಾ? ಅಥವಾ ಹಾವರಾಣಿನಾ? ಅಥವಾ ದೊಡ್ಡ ನಾಗರಾಣಿನಾ? ಏನು ಯಾರಿಗೆ ಕುಟುಕಿತು? ಹೇಳ್ರೀ, ಅಂತ ಜೋರಾಗಿ ವದರಿ ಕೇಳಿದೆ.

ಯಾರಿಗೆ ಏನು ಕುಟುಕಿ, ಏನು ಕಚ್ಚಿ ಏನು ಘಾತ ಆತೋ ಏನೋ?

ಅಯ್ಯೋ!! ಕುಟುಕು ಕಾರ್ಯಾಚರಣೆ ಮಾಡಲಿಕ್ಕೆ ಹೋದವರೇ ಕುಟುಕಿಸಿಕೊಂಡು ಬಂದಾರಂತ. ಅದನ್ನ ಹೇಳಿದರ, ಚೇಳು, ಹಾವು, ಹಾವರಾಣಿ, ನಾಗರಾಣಿ ಅಂತಿಯಲ್ಲೋ ಖಬರಗೇಡಿ! ಅಂತ ರೂಪಾ ವೈನಿ ಬೈದರು.

ಏನ್ರೀ ಹಾಂಗಂದ್ರ? ಅಂತ ಕೇಳಿದೆ.

ಅಯ್ಯೋ!!!!! ಏನು ಧಡ್ಡ ತಲಿ ಅದಪಾ ನಿಂದು. ನಿನಗ ತಿಳಿಯೋಹಾಂಗ ಹ್ಯಾಂಗ ಹೇಳೋದು? ಅಂತ ವೈನಿ ತಲಿ ತಲಿ ಚಚ್ಚಿಕೋತ್ತ ಡೀಪ್ ಥಿಂಕಿಂಗ್ ಮೋಡಿಗೆ ಹೋದರು.

ಕುಟುಕು ಕಾರ್ಯಾಚರಣೆ ಅಂದ್ರ ಸ್ಟಿಂಗ್ ಆಪರೇಷನ್ (sting operation). ಈಗರೆ ತಿಳೀತ? ಹಾಂ? ಅಂತ ಕೇಳಿದರು.

ಇಲ್ಲ ಬಿಡ್ರೀ. ನಮಗ ಸಂಜಯ್ ಗಾಂಧಿಯ ಫೇಮಸ್ 'ನರಹರಿ' ಆಪರೇಷನ್ ಒಂದು ಬಿಟ್ಟು ಬ್ಯಾರೆ ಯಾವದೇ ಆಪರೇಷನ್ ಬಗ್ಗೆ ಗೊತ್ತಿಲ್ಲ ಬಿಡ್ರೀ. ಅದೂ ಕೇಳಿದ್ದು ಅಷ್ಟೇ. ಅದೇನೋ ಹಿಂದ ೧೯೭೬ ಟೈಮ್ ಒಳಗ ಎಮರ್ಜೆನ್ಸಿ ಇದ್ದಾಗ ಸಂಜಯ್ ಗಾಂಧಿ ಸಿಕ್ಕಾಪಟ್ಟೆ ನರಹರಿ ಆಪರೇಷನ್ ಮಾಡಸ್ತಿದ್ದ ಅಂತ. ಅವಾ ಕಳಿಸಿದ ಡಾಕ್ಟರ ಊರಿಗೆ ಬಂದ್ರು ಅಂದ್ರ ಪ್ರಾಯದ ಗಂಡಸೂರು, ಹೆಂಗಸೂರು ಎಲ್ಲಾರೂ ಓಡಿ ಹೋಗ್ತಿದ್ದರಂತ ನೋಡ್ರೀ. ಆ ಆಪರೇಷನ್ ಒಂದರ ಬಗ್ಗೆ ಕೇಳಿ ಗೊತ್ತು. ಅಷ್ಟೇ ನೋಡ್ರೀ, ಅಂತ ಹೇಳಿದೆ.

ಅದೇನೋ ಮಾರಾಯಾ ಸಂಜಯ್ ಗಾಂಧಿ ಮಾಡಸ್ತಿದ್ದ 'ನರಹರಿ' ಆಪರೇಷನ್!? ಹಾಂ!? ಆ ಆಪರೇಷನ್ ಮಾಡೋ ಡಾಕ್ಟರ ಹೆಸರು ನರಹರಿ ಅಂತಿತ್ತೇನು? ಹಾಂ? ಅಂತ ಕೇಳಿದರು.

ಅಯ್ಯೋ!!! ಅಲ್ಲರೀ. ಈ ನರಹರಿ ಆಪರೇಷನ್ ಅಂದ್ರ ಬ್ಯಾರೆನೇ. ನಿಮಗ ಗೊತ್ತಿಲ್ಲರೀ? ಅಂತ ಕೇಳಿದೆ.

ಸೀದಾ ಯಾಕ ಹೇಳಬೇಕು? ಏನರೆ ಉಲ್ಟಾ ಸೀದಾ ಹೇಳಿ ಮಜಾ ತೊಗೊಂಡ್ರ ಆತು ಅಂತ ನಮ್ಮ ಅಭಿಪ್ರಾಯ.

ಗೊತ್ತಿಲ್ಲೋ ನಮ್ಮಪ್ಪಾ. ಅದು ಏನು ನರಹರಿ ಆಪರೇಷನ್ ಅನ್ನೋದನ್ನ ಹೇಳಿ ಬಡಿ ಅತ್ಲಾಗ, ಅಂದ್ರು ವೈನಿ.

ಈಗ ನೋಡ್ರೀ ನರಮಾನವ/ನರಮಾನವಿ  ಇದ್ದವರನ್ನ ಬರೇ ಮಾನವ/ಮಾನವಿ ಮಾಡಬೇಕು ಅಂದ್ರ ಹ್ಯಾಂಗ ಮಾಡೋದು? ಹೇಳ್ರೀ ನೋಡೋಣ? ಅಂತ ಕೇಳಿದೆ.

ಏನು? ನರಮಾವನ್ನ ಮಾವನ್ನ ಮಾಡಬೇಕಾ? ಏನು ಹಾಂಗಂದ್ರ? ಹುಚ್ಚುಚ್ಚರೆ ಮಾತಾಡಿಕೋತ್ತ. ಹಾಂ!? ಅಂತ ವೈನಿ ಬೈದ್ರು.

ಅಯ್ಯೋ ನರಮಾವನ ಅಲ್ಲರೀ. ನರಮಾನವ. ನರಮಾನವನನ್ನ ಹ್ಯಾಂಗ ಮಾನವ ಮಾಡೋದು? ಅದನ್ನ ಹೇಳ್ರೀ, ಅಂತ ಮತ್ತ ವಿವರಣೆ ಕೊಟ್ಟೆ.

ನರಮಾನವ ಅಂದ್ಯಾ? ನನಗ ನಮ್ಮ ಸ್ವರ್ಗವಾಸಿ ಮಾವನವರದ್ದೇ ನೆನಪು. ಅದಕ್ಕೆ ಇದ್ಯಾವ ಹೊಸಾ ಮಾವಾ, ನರಮಾವಾ? ಅಂತ ವಿಚಾರ ಮಾಡ್ಲಿಕತ್ತುಬಿಟ್ಟಿದ್ದೆ. ಸೂಡ್ಲಿ! ಅಂದ ವೈನಿ ನನ್ನ ಪ್ರಶ್ನೆ ಈಗ ಅರ್ಥ ಮಾಡಿಕೊಂಡರು.

ಏನು ಹುಚ್ಚರೆ ಗತೆ ಕೇಳ್ತೀ? ನರಮಾನವ, ಮಾನವ ನಡುವ ಏನು ವ್ಯತ್ಯಾಸ ಅದ? ಹಾಂ? ನರಮಾನವ ಅನ್ನೋದ್ರಾಗಿನ ನರ ತೆಗೆದು ಒಗೆದು ಬಿಟ್ಟರ ಬರೇ ಮಾನವ ಆಗ್ತದ, ಅಂದೇ ಬಿಟ್ಟರು ವೈನಿ.

ಬಿಂಗೊ!! ಬರೋಬ್ಬರೀ ಹೇಳಿದಿರಿ ನೋಡ್ರೀ. ನರ ಹರಿದು ತೆಗೆದು ಒಗೆಯುವ ಆಪರೇಷನ್ ನರಹರಿ ಆಪರೇಷನ್ ಅಲ್ಲೇನ್ರೀ ವೈನಿ? ಹಾಂ? ಹಾ!!! ಹಾ!!! ಅಂತ ದೊಡ್ಡ ಜೋಕ್ ಹೊಡದೆ.

ಥೂ!!!ಹೇಶಿ ಮುಂಡೆ ಗಂಡನ್ನ ತಂದು. ಫ್ಯಾಮಿಲಿ ಪ್ಲಾನಿಂಗ್ ಆಪರೇಷನ್ ಗೆ ನರಹರಿ ಆಪರೇಷನ್ ಅಂತಾರೇನು? ಏನು ಶಬ್ದ ಭಂಡಾರ ಮಾರಾಯ ನಿಂದು? ಆ ಹಳ್ಳಿ ಮಂದಿ ನರಾ ಕಟ್ ಮಾಡೋದು ಅಂತಾರ ಅಂತ ಹೇಳಿ ನೀನೂ ಅದಕ್ಕ ಹಾಂಗೇ ಅನ್ನೋದ? ನರಹರಿ ಆಪರೇಷನ್ ಅಂತ! ಒಂದು ಏಟಾ ಹಾಕಬೇಕು ನಿನಗ, ಅಂತ ವೈನಿ ಹುಸಿ ಮುನಿಸು ತೋರಿಸಿದರು.

ಹುಚ್ಚ ಇದ್ದೀ ನೋಡು. ಕುಟುಕು ಕಾರ್ಯಾಚರಣೆ ಅಂದೆ ನಿನ್ನ ಧಡ್ಡ ತಲಿಗೆ ತಿಳಿಲಿಲ್ಲ. ಸ್ಟಿಂಗ್ ಆಪರೇಷನ್ ಅಂದ್ರ ಸಂಜಯ್ ಗಾಂಧೀ ಮಾಡಸ್ತಿದ್ದ ನರಾ ಕತ್ತರಿಸೋ ಆಪರೇಷನ್ ಏನು ಅಂತ ಹುಚ್ಚರ ಗತೆ ಕೇಳ್ತೀ. ನಿನಗ ಹ್ಯಾಂಗ ಮಾಡಿ ಹೇಳಲಿ? ಹಾಂ? ಅಂತ ವೈನಿ ತಲಿ ಮ್ಯಾಲೆ ಕೈಯೆತ್ತಿ ಕೂತರು.

ಏನೋ ಒಂದು ದೊಡ್ಡ ಘಟನೆ ಆಗಿ, ಭಾಳ ದೊಡ್ಡ ಸುದ್ದಿ ಆಗಿ ಬಿಟ್ಟದ. ಅದರ ಸುದ್ದಿ ವೈನಿಗೆ ಗೊತ್ತಾಗಿ ಬಿಟ್ಟದ. ಅದನ್ನ ನನಗ ಹೇಳಬೇಕು ಅಂತ ಅವರಿಗೆ ದೊಡ್ಡ ಆಶಾ. ನನಗೋ, ಏನೂ ತಿಳಿವಲ್ಲತು. ಅದಕ್ಕ ವೈನೀ ಹೈರಾಣ.

ನೋಡು....ಚಡ್ಡಿ ಕಳಿಲಿಕ್ಕೆ ಹೋದವರ ಚಡ್ಡಿನೇ ಕಳಿದು ಕಳಿಸಿಬಿಟ್ಟರೆ ಹ್ಯಾಂಗ? ಅಂತ ವೈನಿ ಒಂದು ದೊಡ್ಡ ಕ್ವೆಶ್ಚನ್ ಮಾರ್ಕ್ ಇಟ್ಟರು.

ಹೋಗ್ಗೋ!!! ವೈನಿ!!! ಏನ್ರೀ ಇದು ಮಾತು? ಯಾರು ಯಾರ ಚಡ್ಡಿ ಕಳಿಲಿಕ್ಕೆ ಹೋಗಿದ್ದರು? ಏನು ಕಥಿ? ಹಾಂ? ಯಾವದಾರ ಹುಡುಗ ಒದ್ದಿ ಚಡ್ಡಿ ಹಾಕ್ಕೊಂಡು ಸಾಲಿಗೆ ಹೊಂಟಿತ್ತು ಏನು? ಚಳಿಗಾಲ ನೋಡ್ರೀ. ಅದೂ ಹೊತ್ತಿಲ್ಲದ ಹೊತ್ತಿನ್ಯಾಗ ಮಳಿ ಬಂದು, ಹೊರಗ ಒಣಾ ಹಾಕಿದ ಅರಿವೆಲ್ಲ ಮತ್ತ ತೋಯ್ದು ಹೋಗಿ, ಒದ್ದಿ ಆಗಿ, ಯುನಿಫಾರ್ಮ್ ಹಾಕ್ಕೊಂಡು ಹೋಗಲಿಲ್ಲ ಅಂದ್ರ ಮಾಸ್ತರ್ ಒದಿತಾರ ಅಂತ ಹೆದರಿ, ಹಸಿ ಚಡ್ಡಿನೇ ಹಾಕ್ಕೊಂಡು ಹೊಂಟ ಹುಡುಗನ ಚಡ್ಡಿ ಕಳದ್ರಾ? ಯಾರು? ಹಾಂಗ ಮಾಡಲಿಕ್ಕೆ ಹೋದಾಗ ಅವರ ಚಡ್ಡಿನೇ ಕಳಿದು ಹೋತಾ? ಹಾಂ? ಲಾಡಿ ಘಟ್ಟೆ ಕಟ್ಟಿಕೋಬೇಕು ಅಂತ ಹೇಳೋದು ಅದಕ್ಕೇ. ಎಲ್ಲೋ ತಮ್ಮ ಚಡ್ಡಿ ಲಾಡಿ ಡೀಲಾ ಕಟ್ಟಿಕೊಂಡು ಮಂದಿ ಚಡ್ಡಿ ಕಳಿಲಿಕ್ಕೆ ಹೋಗಿರಬೇಕು. ಹುಡಗ ಆಕಡೆ ಈಕಡೆ ಮಾಡಿ ಇವರೂ ಆಕಡೆ ಈಕಡೆ ಮಾಡೋದ್ರಾಗ ಇವರ ಚಡ್ಡಿನೇ ಕಳಚಿ ಬಿದ್ದಿರಬೇಕು. ಅಲ್ಲರೀ? ಅಂತ ಉದ್ದ ಕೇಳಿದೆ.

ಏನು ತಲಿ ಇಟ್ಟೀಪಾ!? ಸುಮ್ಮ ಕೂಡೋ! ಅಂತ ವೈನೀ ರಪ್ಪ್ ಅಂತ ಬೈದ್ರು.

ಮತ್ತೇನ್ರೀ? ಅಂತ ಕೇಳಿದೆ.

ಯಾರೋ ಇಬ್ಬರು ಟೀವಿ ಪತ್ರಕರ್ತರು ಒಬ್ಬ ಮಿನಿಸ್ಟರ್ ಚಡ್ಡಿ ಕಳಿಲಿಕ್ಕೆ ಹೋಗಿದ್ದರಂತ, ಅಂತ ಅಂದು ಬಿಟ್ಟರು ವೈನೀ.

ಹೋಗ್ಗೋ!!!!

ಟೀವಿ ಮಂದಿಗೆ ಬ್ಯಾರೆ ಉದ್ಯೋಗ ಇಲ್ಲೇನ್ರೀ? ಹೋಗಿ ಹೋಗಿ ಮಿನಿಸ್ಟರ್ ಚಡ್ಡಿ ಯಾಕ ಕಳಿಲಿಕ್ಕೆ ಹೋಗಿದ್ದರು? ಮಿನಿಸ್ಟರ್ ಚಡ್ಡಿ ಕಳಿಲಿಕ್ಕೆ ಇವರು ಯಾಕ ಹೋಗಬೇಕು ಅಂತ? ಮಿನಿಸ್ಟರ್ ಮಂದಿ ಏನೋ ಉದ್ಘಾಟನೆ ಮಾಡಲಿಕ್ಕೆ ಹೋದಾಗ ರಿಬ್ಬನ್ ಕಟ್ ಮಾಡಿ, ಕಟ್ ಮಾಡಿದ ರಿಬ್ಬನ್ ಅಲ್ಲೇ ಯಾವದರ ಚಂದ ಹುಡುಗಿ ಕೂದಲಕ್ಕ ಕಟ್ಟಿ, ಅಕಿ ಕುಂಡಿ ತಟ್ಟಿ, ಅಕಿ ಕೈ ಒತ್ತಿ ಒತ್ತಿ ಶೇಕ್ ಹ್ಯಾಂಡ್ ಮಾಡಿ, ಅಕಿ ಶಟಗೊಂಡ ಮ್ಯಾಲೆ ನಮಸ್ಕಾರ ಮಾಡಿ, ಹೇ ಹೇ ಅಂತ ನಕ್ಕಿದ್ದನ್ನೂ ಸಹ ಈಗಿತ್ತಲಾಗ ಟೀವಿ ಮ್ಯಾಲೆ ತೋರಿಸಿ ಬಿಡ್ತಾರ. ಅಸಹ್ಯ! ಅದು ಸಾಲದು ಅಂತ ಹೇಳಿ, ಮಿನಿಸ್ಟರ್ ಯಾವಾಗ ಚಡ್ಡಿ ಕಳದ್ರು, ಯಾರದ್ದು ಕಳದ್ರು, ಹ್ಯಾಂಗ ಕಳದರು, ಮೊದಲು ಮುಂದ ಇಳಿಸಿದರೋ ಅಥವಾ ಹಿಂದ ಇಳಿಸಿದರೋ, ತಮದೇ ಕಳಕೊಂಡ್ರೋ ಅಥವಾ ಮಂದಿದು ಕಳದ್ರೋ, ಯಾವ ಬ್ರಾಂಡಿನ ಚಡ್ಡಿ ಹಾಕ್ಕೊಂಡಿದ್ದರು, ಪಟ್ಟಾ ಪಟ್ಟಿನೋ ಅಥವಾ ಇಂಪೋರ್ಟೆಡ್ ಚಡ್ಡಿನೋ? ಅದರ ಹಿಂದ ಏನರೆ ಕಾರಸ್ತಾನ ಅದನೋ? ಪಾಕಿಸ್ತಾನದ ಸಾದಿಶ್ ಅದ ಏನು? ಅದು ಇದು ಅಂತ ಎಲ್ಲಾ ತೋರ್ಸವರು ಇದ್ದರೇನು? ಹಾಂ? ಹಾಂ? ಏನು ಟೀವಿ ಮಂದಿರೀ? ಮೊದಲು ಇದೆಲ್ಲ ತೋರಸ್ತಾರ. ಆಮೇಲೆ ಒಂದು ಹತ್ತು ತಲೆ ಮಾಸಿದ ಮಂದಿ ಕರ್ಕೊಂಡು ಬಂದು ಅದರ ಮ್ಯಾಲೆ ಡಿಬೇಟ ಮಾಡ್ತಾರ. ಇಷ್ಟೆಲ್ಲ ಒಬ್ಬ ಮಿನಿಸ್ಟರ್ ಚಡ್ಡಿಯ ಬಗ್ಗೆ. ಅಂತಾ ಟೀವಿ ಪ್ರೋಗ್ರಾಂ ಮಂದಿ ನೋಡ್ತಾರ. ದೇವರೇ ಕಾಪಾಡಬೇಕು, ಅಂತ ಎರಡೂ ಕೈಯೆತ್ತಿ ನಮಸ್ಕಾರ ಮಾಡಿದೆ.

ಅಯ್ಯೋ! ಚಡ್ಡಿ ಕಳಿಲಿಕ್ಕೆ ಹೋಗಿದ್ದರು ಅಂದ್ರ ಖರೆ ಚಡ್ಡಿ ಕಳಿಲಿಕ್ಕೆ ಅಲ್ಲೋ! ಅಂತ ವೈನಿ ಶಂಖಾ ಹೊಡೆದರು.

ಮತ್ತ!? ಚಡ್ಡಿಯೊಳಗೂ ಖರೆ ಚಡ್ಡಿ ಸುಳ್ಳು ಚಡ್ಡಿ ಅಂತ ಇರ್ತಾವ ಏನ್ರೀ? ಹಾಂ? ಅಂತ ಕೇಳಿದೆ.

ಅಯ್ಯೋ! ಹುಚ್ಚ ಮಂಗೇಶ! ಈಗ ನಾವು ಸಹಜ ಮಾತಾಡೋವಾಗ 'ಗೂಟಾ ಬಡಿದರು' ಅಂದ್ರ ಖರೆ ಗೂಟಾ ಬಡಿದರು ಅಂತ ಅರ್ಥ ಏನು? ಹಾಂ? ಯಾರಿಗೋ ಗೂಟಾ ಬಡಿದರು ಅಥವಾ ಯಾರೋ ಗೂಟಾ ಬಡಿಸಿಕೊಂಡರು ಅಂದ್ರ ಅವರ ಹಿಂದ ಹೋಗಿ ಗೂಟ ಕಾಣ್ತದೋ ಅಂತ ನೋಡ್ತೀ ಏನೋ ಹುಚ್ಚ ಮಂಗೇಶ? ಕಾಮನ್ ಸೆನ್ಸ್ ಒಂದು ಬಿಟ್ಟು ಎಲ್ಲಾ ಅದ ನೋಡು ನಿನಗ, ಅಂತ ವೈನಿ ಏನೋ explain ಮಾಡಿದರು.

ಏನೋ? ಎಂತೋ? ಯಾರಿಗೆ ಗೊತ್ತು?

ಈಗ ಮಿನಿಸ್ಟರ್ ಚಡ್ಡಿ ಕಳಿಲಿಕ್ಕೆ ಹೋಗಿದ್ದರು ಅಂದ್ರ, ಅಂದ್ರ, ಅಂದ್ರ.......ಹ್ಯಾಂಗ ತಿಳಿಸಿ ಹೇಳಲಿ ನಿನಗ? ಹಾಂ! ಮಿನಿಸ್ಟರ್ 'ಪರ್ಧಾ ಪಾಶ್' ಅಂದ್ರ ಅವರ ಮುಖವಾಡ ಬಿಚ್ಚಿ ಒಗೆದು, ಮಂದಿಗೆ ಟೀವಿ ಮ್ಯಾಲೆ ತೋರಿಸಲಿಕ್ಕೆ ಹೋಗಿದ್ದರು ಅಂತ. ತಿಳೀತ? ಅಂತ ಕೇಳಿದರು ರೂಪಾ ವೈನಿ.

ನೋಡ್ರೀ ವೈನಿ. ಒಂದು ಮಾತು ನೀವು ಕ್ಲಿಯರ್ ಮಾಡ್ರೀ. ಮೊದಲು ಮಿನಿಸ್ಟರ್ ಚಡ್ಡಿ ಕಳಿಲಿಕ್ಕೆ ಹೋದರು ಅಂದ್ರೀ. ಈಗ ಮುಖವಾಡ ಬಿಚ್ಚಿ ಒಗೆದರು ಅಂತೀರಿ. ಏನು ಕಳದು, ಏನು ಬಿಚ್ಚಿ, ಏನು ಉಚ್ಚಿ ಒಗೆದರು? ಅದನ್ನ ನೀವು ಸರಿ ಮಾಡಿ ಹೇಳ್ರೀ. ಚಡ್ಡಿನೋ, ಮುಖವಾಡನೋ, ಲಂಗೋಟಿನೋ? ಮಿನಿಸ್ಟರ್ ಅವರನ್ನು ಏನು ದ್ರೌಪದಿ ಸೀರಿ ಕಳದಂಗ ವಸ್ತ್ರ ಕಳೆದು ಮಾನಭಂಗ ಮಾಡಲಿಕ್ಕೆ ಹೋಗಿದ್ದರು ಏನು? ಹಾಂ? ಅಂತ ಕೇಳಿದೆ.

ಏನೇನೋ ಹೇಳಿ ಬರೇ confuse ಮಾಡ್ಲೀಕತ್ತಾರ. ಆ....ಇವರಾ.....ಒಳ್ಳೆ ಹಾಪ್ ವೈನೀ.

ಪರ್ಧಾ ಪಾಶ್ ಅನ್ನೋದನ್ನ ಬಿಟ್ಟು ಬರೇ ಮುಖವಾಡ ಬಿಚ್ಚಿದರು ಅನ್ನೋದನ್ನು ಮಾತ್ರ ಕೇಳಿಸಿಕೊಂಡು ಏನೇನೋ ಕೇಳ್ತಿಯಲ್ಲೋ ಖೋಡೀ, ಅಂತ ಬೈದರು ರೂಪಾ ವೈನಿ.

ಆವಾ ಯಾರೋ ಶಿವಕುಮಾರ್ ಅಂತ ಮಿನಿಸ್ಟರ್ ಇದ್ದಾನಂತ ನೋಡು. ಆವಾ ರೊಕ್ಕಾ ತಿಂತಾನ ಅಂತ ಟೀವಿ ಮಂದಿಗೆ ಸುದ್ದಿ ಬಂದಿತ್ತು ಅಂತ ಆತು. ತಡಿ ಇವನನ್ನ ಸಿಗಿಸೋಣ ಅಂತ ಹೇಳಿ ಯಾವದೋ ಟೀವಿ ಚಾನೆಲ್ ಇಬ್ಬರು ರಿಪೋರ್ಟರ್, ಒಂದು ಹುಡುಗ ಒಂದು ಹುಡುಗಿ, ಅದೇನೋ ಸಣ್ಣ, ಯಾರಿಗೂ ಕಾಣದಂತ ಕ್ಯಾಮೆರಾ ತೊಗೊಂಡು ಹೋಗಿದ್ದರಂತ. ಅವಂಗ ರೊಕ್ಕಾ ಕೊಟ್ಟು, ಅವಾ ರೊಕ್ಕಾ ತೊಗೊಳ್ಳೋವಾಗ ಅದನ್ನ ಅಡಗಿಸಿ ಇಟ್ಟುಕೊಂಡಿದ್ದ ಸಣ್ಣ ಕ್ಯಾಮೆರಾ ಒಳಗ ಎಲ್ಲಾ ರೆಕಾರ್ಡಿಂಗ್ ಮಾಡಿಕೊಂಡು ಬಂದು, ಟೀವಿ ಮ್ಯಾಲೆ ತೋರ್ಸೀ, ಅವನ ಮಾನಾ ಹರಾಜ್ ಹಾಕಬೇಕು ಅಂತ ಪ್ಲಾನ್ ಇತ್ತಂತ, ಅಂತ ಹೇಳಿ ವೈನಿ ಒಂದು ಸಣ್ಣ ಬ್ರೇಕ್ ತೊಗೊಂಡ್ರು.

ಮುಂದ? ಅಂತ ಕೇಳಿದೆ.

ಆ ಮಿನಿಸ್ಟರ್ ಭಾಳ ಶಾಣ್ಯಾ ಇದ್ದನೋ ಅಥವಾ ಇವರ ಬ್ಯಾಡ್ ಲಕ್ ಖರಾಬ್ ಇತ್ತೋ ಗೊತ್ತಿಲ್ಲ. ಆ ಮಿನಿಸ್ಟರಗ ಏನೋ ಸಂಶಯ ಬಂದದ. ಈಗ ಬರ್ರಿ, ಆಮ್ಯಾಲೆ ಬರ್ರಿ ಅಂತ ಓಡ್ಯಾಡಿಸಿ ಆಮೇಲೆ ಕರೆಸಿಕೊಂಡ ಅಂತ ಆತು. ಇವರು ಲಂಚಾ ಕೊಡಲಿಕ್ಕೆ ಅಂತ ರೊಕ್ಕಾ ತೆಗೆದ ಕೂಡಲೇ, ಮಫ್ತಿ ಒಳಗ ಇದ್ದ ಪೊಲೀಸರಿಗೆ ಹಿಡದು ಕೊಟ್ಟನಂತ. ಈಗ ಆ ಇಬ್ಬರೂ ಟೀವಿ ವರದಿಗಾರರು ಪೋಲೀಸ್ ಸ್ಟೇಷನ್ ಒಳಗ ಹೋಗಿ ಕೂತಾರ. ಮಿನಿಸ್ಟರನ ಕಡೆ ಮಂದಿ ಸಹಿತ ನಾಕು ಬಾರಿಸಿ ಬಿಟ್ಟಾರಂತ, ಹೇಳಿದರು ರೂಪಾ ವೈನಿ

ಹೋಗ್ಗೋ!!!! ಘಾತಾ ಮಾಡಿಕೊಂಡರಲ್ಲರೀ ವೈನಿ? ಬೇಟೆ ಆಡಲಿಕ್ಕೆ ಹೋದವರೇ ಬೇಟೆಯಾಗಿ ಬಿಟ್ಟರು ಅಂತ ಆತು. ಶಿಕಾರಿ ಖುದ್ ಯಹಾ ಶಿಕಾರ್ ಹೋಗಯಾ! ಅಂದಂಗ ಆತು. ಅಲ್ಲರೀ? ಅಂತ ಕೇಳಿದೆ.

ಹಾಂ!! ಬರೋಬ್ಬರಿ ಹೇಳಿದಿ ನೋಡು. ಶಿಕಾರಿ ಖುದ್ ಯಹಾ ಶಿಕಾರ್ ಹೋಗಯಾ! ಇದು ಮಸ್ತ ಅದ. ಸ್ಟಿಂಗ್ ಆಪರೇಷನ್ ಮಾಡಲಿಕ್ಕೆ ಹೋದವರಿಗೆ ಅವರ ಸ್ಟಿಂಗ್ ರಿವರ್ಸ್ ಸ್ಟಿಂಗ್ ಆತು ನೋಡು, ಅಂತ ಹೇಳಿದರು.

ಮೊದಲೇ ಇಷ್ಟ ಹೇಳಲಿಕ್ಕೆ ಏನು ಧಾಡಿ ಆಗಿತ್ತು ನಿಮಗ? ಬಂದು ಕೂತಾಗಿಂದ ಸ್ಟಿಂಗ್ ಆಪರೇಷನ್, ಕುಟುಕು ಕಾರ್ಯಾಚರಣೆ,
ಚಡ್ಡಿ ಕಳಿಲಿಕ್ಕೆ ಹೋದವರು, ಮುಖವಾಡ ತೆಗಿಲಿಕ್ಕೆ ಹೋದವರು, ಲಂಗೋಟಿ ಬಿಚ್ಚಲಿಕ್ಕೆ ಹೋದವರು ಅಂತ ಏನೇನೋ ಹೇಳಿ, ನನ್ನ ಫುಲ್ confuse ಮಾಡಿ ಈಗ ಪಾಯಿಂಟ್ ಗೆ ಬರ್ತೀರಿ. ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂಗ. ಮೊದಲೇ ಇಷ್ಟು ಹೇಳಿದ್ದರ? ಹಾಂ? ಅಂತ ವೈನಿಗೆ ಮೈಲ್ಡ್ ಆಗಿ ಬೆಂಡ್ ಎತ್ತಿದೆ. ಸುಮ್ಮನೆ ಚ್ಯಾಸ್ಟಿ.

ಹೂಂ ಮಾರಾಯಾ ಹೂಂ! ನೀನೇ ದೊಡ್ಡ ಪಂಡಿತ. ನಮಗೆಲ್ಲಾ ಏನೂ ಗೊತ್ತೇ ಇಲ್ಲ. ಇಷ್ಟೆಲ್ಲ ಗೊತ್ತಿದ್ದವಗ ಈ ಸುದ್ದಿ ಹ್ಯಾಂಗ ಗೊತ್ತಿರಲಿಲ್ಲ? ಹಾಂ? ಅಂತ ಕೇಳಿದರು ರೂಪಾ ವೈನಿ.

ಹೇಳಿದ್ನಲ್ಲರೀ. ಸುದ್ದಿ ಗಿದ್ದಿ ಓದಂಗಿಲ್ಲ, ಟೀವಿ ಗೀವಿ ನೋಡಂಗಿಲ್ಲ, ಅಂತ ಹೇಳಿದೆ.

ಮತ್ತೇನು ಮಾಡ್ತೀ? ಇಡೀ ದಿವಸ ಗೂಟಾ ಹೊಡಕೊಂಡು ಕೂತಿರ್ತೀ ಅಲ್ಲಾ? ಹಾಂ? ಅಂತ ಕೇಳಿದರು ವೈನಿ.

ಓದ್ತೇನ್ರೀ. ಅದೂ ಪುಸ್ತಕ. ಒಳ್ಳೊಳ್ಳೆ ಪುಸ್ತಕ. ಈ ಹಾಳು ಮೂಳು ಪೇಪರ್ ಒಳಗ ಬರೇ ಇಂತಾವ ಸುದ್ದಿ ಇರ್ತಾವ. ಟೀವಿ ಮ್ಯಾಲೆ ಅಂತೂ ಬಿಡ್ರೀ. ಸುಮ್ಮನೆ ಟೈಮ್ ವೇಸ್ಟ್ ನೋಡ್ರೀ. ಯಾರ್ಯಾರ ಮ್ಯಾಲೋ ಏನೇನೋ ಸ್ಟಿಂಗ್ ಆಪರೇಷನ್ ಅಂತ ಮಾಡೋದು, ನಂತರ ಅದನ್ನೇ ಇಟಕೊಂಡು ಅವರನ್ನ ಬ್ಲಾಕ್ ಮೇಲ್ ಮಾಡಿ ರೊಕ್ಕಾ ಹೊಡಿಯೋದು. ಅಕಸ್ಮಾತ ರೊಕ್ಕಾ ಕೊಡಲಿಲ್ಲ ಅಂದ್ರ ತಾವೇನೋ ದೊಡ್ಡ ಸುಬಗರು, ತಮ್ಮ ಚಾನೆಲ್ ಸತ್ಯ ಹರಿಶ್ಚಂದ್ರನ ಚಾನೆಲ್ ಅಂತ ಬೊಂಬಡಾ ಹೊಡಕೋತ್ತ ಆ ಸ್ಟಿಂಗ್ ಆಪರೇಷನ್ ರೆಕಾರ್ಡಿಂಗ್ ಹಿಡದು ಬಿಡದೇ ಇಪ್ಪತ್ನಾಕೂ ತಾಸು ತೋರಿಸಿ ತಲಿ ತಿನ್ನೋದು. ಎಲ್ಲಾ ಬಿಸಿನೆಸ್ ಡೀಲಿಂಗ್ ಇದ್ದಂಗ ನೋಡ್ರೀ. ಅದಕ್ಕ 'ಪರ್ಧಾ ಪಾಶ್', ಸ್ಟಿಂಗ್ ಆಪರೇಷನ್, ಅದು ಇದು ಅಂತ ಹೆಸರು. ಎಲ್ಲೋ ಒಂದು ಎರಡು ಕೇಸ್ ಇರಬಹುದು ಪ್ರಾಮಾಣಿಕತೆಯಿಂದ ಸ್ಟಿಂಗ್ ಆಪರೇಷನ್ ಮಾಡಿದ್ದು. ಉಳಿದದ್ದೆಲ್ಲ ಬರೇ ಬ್ಲಾಕ್ ಮೇಲ್ ಮಾಡಲಿಕ್ಕೆ ಅಂತ ಮಾಡಿದ್ದೇ ನೋಡ್ರೀ. ಇವರ ಕಡೆ ಸ್ಟಿಂಗ್ ಆಪರೇಷನ್ ಮಾಡಿಸಿಕೊಂಡವರೂ ಸಹಿತ ಅಂತವರೇ ಇರ್ತಾರ. ತಮ್ಮ ಖರಾಬಿ ಮುಚ್ಚಿಟ್ಟುಕೊಳ್ಳಲಿಕ್ಕೆ ಅಂತ ಹೇಳಿ ರೊಕ್ಕಾ ಕೊಟ್ಟು ಸುಮ್ಮನಾಗ್ತಾರ. ಇಬ್ಬರಿಗೂ ಲಾಭ. ಯಾವಾಗರೆ ಡೀಲಿಂಗ್ ವರ್ಕ್ ಔಟ್ ಆಗಲಿಲ್ಲ ಅಂದ್ರ ಆವಾಗ ಸ್ಟಿಂಗ್ ಆಪರೇಷನ್ ಸುದ್ದಿ ಹೊರಗ ಬರ್ತದ ನೋಡ್ರೀ, ಅಂತ ಹೇಳಿ ಮೆಜಾರಿಟಿ ಸ್ಟಿಂಗ್ ಆಪರೇಷನ್ ಬಗ್ಗೆ ವಾಸ್ತವಿಕತೆಯನ್ನ ರೂಪಾ ವೈನಿಗೆ ಮನವರಿಕೆ ಮಾಡಿಕೊಟ್ಟೆ.

ಹೀಂಗೇನು ಹಕಿಕತ್ತು? ನನಗ ಗೊತ್ತೇ ಇರಲಿಲ್ಲ ಬಿಡು. ಚೊಲೋ ಆತು ನೀ ಹೇಳಿದ್ದು. ಇನ್ನು ಮುಂದ ಎಲ್ಲಾ ಸ್ಟಿಂಗ್ ಆಪರೇಷನ್ ನಾ ಏನೂ ನಂಬಂಗಿಲ್ಲ ತೊಗೋ, ಅಂತ ಜ್ಞಾನೋದಯ ಆದವರಂಗ ವೈನಿ ಹೇಳಿದರು.

ಬರೇ ಅವಿಷ್ಟೇ ಅಲ್ಲ. ಆ ಹಾಳುವರಿ ಟ್ಯಾಬ್ಲಾಯ್ಡ್ ಪತ್ರಿಕೆ ಸಹಿತ ಓದೋದು ಕಮ್ಮಿ ಮಾಡ್ರೀ. ಅವರೂ ಎಲ್ಲಾ ಹಾಂಗೆ. ಸತ್ಯ ಬರಿಯವರು ಭಾಳ ಕಮ್ಮಿ. ಸುಮ್ಮನ ಯಾರದ್ದೋ ಚಡ್ಡಿ ಕಳದು, ಅವರು ರೊಕ್ಕಾ ಮಾಡಿಕೊಂಡು, ತಮಗ ತಮ್ಮ ಮನಿ ಮಂದಿಗೆಲ್ಲ ಚಡ್ಡಿ ಹಾಕಿಸಲಿಕ್ಕೆ ಬರಿಯೋವಂತಾ ಪೇಪರ್ ನಾವ್ಯಾಕ ರೊಕ್ಕಾ ಕೊಟ್ಟು ತೊಗೊಬೇಕ್ರೀ ವೈನಿ? ಹಾಂ? ಅಂತ ಕೇಳಿದೆ.

ಹೌದು, ಹೌದು, ಬರೋಬ್ಬರಿ ಅದ, ಅಂತ ಹೇಳಿಕೋತ್ತ ವೈನಿ ಚಹಾ ಮಾಡಲಿಕ್ಕೆ ಅಡಿಗಿ ಮನಿ ಕಡೆ ಹೋದರು.

ಲೇ ಚೀಪ್ಯಾ! ಅಂದೆ.

ಏನಲೇ? ಅಂತ 'ಸಂಯುಕ್ತ ಕರ್ನಾಟಕ' ಪೇಪರ್ ಒಳಗಿಂದ ಮಾರಿ ತೆಗೆದ.

ಲೇ, ನಿನಗೂ ಯಾರರ ಸ್ಟಿಂಗ್ ಆಪರೇಷನ್ ಮಾಡೇವಿ, ಅದು ಇದು ಅಂತ ಹೇಳಿ ಧಮಿಕಿ ಹಾಕಿ ರೊಕ್ಕಾ ಗಿಕ್ಕಾ ಕೇಳ್ಯಾರು. ಜ್ವಾಕಿಲೇ ಮಗನೇ! ಕಾಲ ಭಾಳ ಕೆಟ್ಟದ, ಅಂತ ಅಡ್ವಾನ್ಸ್ ವಾರ್ನಿಂಗ್ ಕೊಟ್ಟೆ.

ನನ್ನ ಮ್ಯಾಲೆ ಏನು ಸ್ಟಿಂಗ್ ಆಪರೇಷನ್ ಮಾರಾಯಾ? ಮತ್ತ ಮಾಡಿ ರೊಕ್ಕಾ ಕೇಳಿದರ ನನ್ನ ಕಡೆ ಎಲ್ಲೆ ಅವರಿಗೆ ರೊಕ್ಕ ಸಿಗಬೇಕು? ಹಾಂ? ಅಂದ ಚೀಪ್ಯಾ.

ಬ್ಲಾಕ್ ಮೇಲ್ ಮಾಡೋ ಮಂದಿಗೆ ಅಷ್ಟು ಇಷ್ಟು ಅಂತ ಇಲ್ಲ ನೋಡಪಾ. ಎಲ್ಲೋ ಬರೇ ಒಂದು ಐದ್ನೂರು ಸಾವಿರ ಸಿಕ್ಕರೂ ಸಾಕು ಅವರಿಗೆ. ಮಂದಿ ಸೈಜ್ ನೋಡಿ ಅವರು ಡೀಲಿಂಗ್ ಮಾಡ್ತಾರ ನೋಡು, ಅಂತ ಹೇಳಿದೆ.

ಯಾಕ ಹೇಳಿದೆ ಅಂದ್ರ ನೀನು ಪ್ರಾಯದವ ಇದ್ದಾಗ ಬ್ಲೂ ಫಿಲಂ ನೋಡಲಿಕ್ಕೆ ಹೋದಾಗ, ಪೋಲೀಸ್ ರೈಡ್ ಆದಾಗ ಪೋಲೀಸರ ಕಡೆ ಕಡತಾ ತಿಂದು ಬಂದಿದ್ದಿ ನೋಡು. ಅದರ ಹಳೇ ಕೇಸ್ ಇರ್ತದ ನೋಡು. ಅದನ್ನೇ ಹಿಡಕೊಂಡು, ಶ್ರೀಪಾದ ರಾವ್ ಅವರೇ, ನಿಮ್ಮ ಮ್ಯಾಲೆ ಆಗಿನ ಕಾಲದ ಸುದ್ದಿ ತೆಗೆದು ಈಗ ಬರೆದು ನಿಮ್ಮ ಮಾನಾ ಹರಾಜ್ ಹಾಕವ ಇದ್ದೇನಿ, ಇಷ್ಟು ರೊಕ್ಕಾ ಕೊಟ್ಟರ ಪೇಪರ್ ಒಳಗ ಛಾಪಿಸೋದಿಲ್ಲ, ಅಂತ ಯಾರರ ಹೇಳಿಕೋತ್ತ ಬಂದಾರು. ಜ್ವಾಕಿ ಮಾರಾಯಾ! ಜ್ವಾಕಿ! ನಿನ್ನ ಹುಡುಗ್ಯಾರು ಕುಂತಿ, ನಿಂತಿ ಲಗ್ನಕ್ಕ ಅಂತ ಕೂಡಿಟ್ಟ ರೊಕ್ಕ ಎಲ್ಲಾ ಬ್ಲಾಕ್ ಮೇಲ್ ಮಾಡವರಿಗೆ ಹೋದೀತು, ಅಂತ ಹೇಳಿದೆ.

ಏ! ಹಾಂಗೇನು ಆಗಂಗಿಲ್ಲ ಬಿಡು. ಅದಕ್ಕ ಎಲ್ಲಾ ವ್ಯವಸ್ಥಾ ಮಾಡಿ ಇಟ್ಟೇನಿ ತೊಗೋ, ಅಂದ ಚೀಪ್ಯಾ.

ಏನು ವ್ಯವಸ್ಥಾ ಮಾಡೀಪಾ? ಕೇಸ್ ಪೇಪರ್ ಎಲ್ಲಾ ಗಾಯಬ್ ಮಾಡಿಸಿಬಿಟ್ಟಿ ಏನು? ಹಾಂ? ಅಂತ ಕೇಳಿದೆ.

ಮತ್ತ? ಬಿಡತೇನಿ ಏನು? ಅದೂ ಆದ ಮರುದಿವಸವೇ ನಮ್ಮ ಬಳಗದ ವಕೀಲರನ್ನ ಒಬ್ಬರನ್ನ ಹಿಡಿದು ಕೇಸ್ ರಿಜಿಸ್ಟರ್ ಆಗದಂಗ ನೋಡಿಕೊಂಡುಬಿಟ್ಟೆ. ಇನ್ನೆಲ್ಲಿ ಬ್ಲಾಕ್ ಮೇಲ್? ಅಂತ ತನ್ನ ಮೀಸಿ ಮ್ಯಾಲೆ ಕೈಯಾಡಿಸಿದ ಚೀಪ್ಯಾ.

ಭಲೇ! ಭಾರಿ ಒಳ್ಳೆ ಕೆಲಸ ಮಾಡಿಬಿಟ್ಟಿ. ಇಂತಾ ಸಾಲಿಡ್ ಐಡಿಯಾ ನಿಂದಂತೂ ಇರಲಿಕ್ಕೆ ಇಲ್ಲ. ಯಾರು ಕೊಟ್ಟರು? ಹಾಂ? ಅಂತ ಕೇಳಿದೆ.

ನೀನೆ ಕೊಟ್ಟಿದ್ದಿ ಅಲ್ಲೋ. ನಿನ್ನ ಮಾತು ಕೇಳಿ ಸುಮ್ಮನ ಯಾರದ್ದಾರ ಮನಿಗೆ ಟೀವಿ, VCR ಭಾಡಿಗಿ ತಂದು KF ಕುಡಕೋತ್ತ BF ನೋಡಿದ್ದರ ಮುಗಿದು ಹೋಗ್ತಿತ್ತು. ಅದನ್ನ ಬಿಟ್ಟು ರಾಮನಗರದ ಆ ಆಂಟಿ ಮನಿಯಾಗ ಹೋಗಿ ಕೂತೆ. ರೈಡ್ ಬಿತ್ತು. ಪೋಲೀಸಾ ಹಾಕ್ಕೊಂಡು ಕುಂಡಿ ಶಟದು ಹೋಗೋ ಹಾಂಗ ನಾಕು ಕೊಟ್ಟ. ಮರುದಿವಸ ಪೋಲೀಸ್ ಸ್ಟೇಷನ್ ಗೆ ಬಂದು ಭೆಟ್ಟಿ ಆಗು ಅಂದಿದ್ದ. ಅದಕ್ಕ ಮೊದಲು ಬಂದು ನಿನ್ನ ಕಡೆ ಕೇಳಿದೆ. ನೀನೇ ವಕೀಲರ ಐಡಿಯಾ ಕೊಟ್ಟಿ. ಹಾಂಗ ಮಾಡಿದ್ದೆ ನೋಡಪಾ. ಭಾಳ ಥ್ಯಾಂಕ್ಸ್, ಅಂತ ಚೀಪ್ಯಾ ಎಂದೋ ಕೊಟ್ಟಿದ್ದ ಐಡಿಯಾಕ್ಕ ಥ್ಯಾಂಕ್ಸ್ ಹೇಳಿದ.

ನಾ ಐಡಿಯಾ ಕೊಟ್ಟಿದ್ನಾ? ನೆನಪೇ ಇರಲಿಲ್ಲ ನೋಡು. ಆಮ್ಯಾಲೆ ನಿನಗ ಫುಲ್ ಸೇಫ್ಟಿ ಒಳಗ BF ತೋರಿಸಿದ್ದು ಮಾತ್ರ ನೆನಪ ಅದ. ಯಾರ ತೊಂದ್ರೀ ತಾಪತ್ರಯ ಇಲ್ಲದ. ಅಲ್ಲಾ? ಎಲ್ಲಾ ಹಳೆ ಕಾಲ ಮಾರಾಯ, ಅಂತ ಹೇಳಿ ಫ್ಲಾಶ್ ಬ್ಯಾಕಿಗೆ ಹೋದೆ.

ಅಷ್ಟರಾಗ ಚಹಾ, ಫಳಾರ ತೊಗೊಂಡು ನಮ್ಮ ಅನ್ನಪೂರ್ಣೇಶ್ವರಿ ರೂಪಾ ವೈನಿ ಹಾಜರಾದರು.

** ನಿಮಗೂ ಸಹ ಸುದ್ದಿ ಗೊತ್ತಿರದಿದ್ದರೆ ಇಲ್ಲಿ ಓದಿ.


1 comment:

Vimarshak Jaaldimmi said...


Interesting!

The adage "Rokka kottu mi..i koyskondange" has to be customised here as "Rokka kodlikk hogi mi..i
koyskondru!!"