Monday, June 02, 2014

ದಲಾಯಿ ಲಾಮಾ, ಕಲಾಯಿ ರಾಮಾ, ಕೆಲಶಿ ರಾಮಾ - ಮುಂಡಗೋಡಲ್ಲಿ ಮಳ್ಳ ಹಲ್ಬಾಟ

[ಹವ್ಯಕ ಕನ್ನಡ ಭಾಷೆಯಲ್ಲೊಂದು ಮಳ್ಳ ಹಲಬ ಪ್ರಹಸನ]

ಸಿರ್ಸೆ ಬದಿಂದ ಒಂದು ಅಮ್ಮಾ (ಅಂದ್ರೆ ಅಜ್ಜಿ),  ಒಬ್ಬವ ತಮ್ಮಾ (ಅಂದ್ರೆ ಅದರ ಮಮ್ಮಗ) ಧಾರವಾಡಕ್ಕೆ ಹೊಂಟಿದಿದ ಹೇಳ್ಯಾತು. ಅರ್ಧ ದಾರಿಯಲ್ಲಿ ಮುಂಡಗೋಡು ಬಂತು. "ಹತ್ತ ನಿಮಿಷ ನಿಲ್ತದೆ. ಎಂತಾರು ನಿಮ್ಮ 'ಕೆಲಸ' ಇದ್ದರೆ ಬೆಗ್ಗನೆ ಮಾಡಿಕ್ಯಳಿ. ತಿಳೀತು? ಹಾಂ?" ಹೇಳಿ ನಾಯ್ಕರ ಪೈಕಿ ಕಂಡಕ್ಟರ ಹೇಳ್ಜಾ ಹೇಳ್ಯಾತು.

ಕೆಳಗಿಳದು ಹನಿ ಹಗುರಪ್ಪನ ಹೇಳಿ ಎಲ್ಲರೂ ಇಳ್ದ. ತಮ್ಮಾ ಅಲ್ಲೇ ಹೋಗಿ, ಗಂಡಸರ ಸಂಗ್ತಿಗೆ ತಾನು ನಿತಗಂಡು, 'ಕೆಲಸಾ' ಮುಗ್ಸಿಕ್ಕೆ, ಚಡ್ಡಿಗೆ ಕೈ ವರ್ಸಿಕೆತ್ತ ಬಂದಾ ಹೇಳ್ಯಾತು.

"ಥೋ! ಹೋಗಿ ಹೋಗಿ ಪ್ಯಾಟೆ ನಡೂ ಮಧ್ಯಾ ತಂದು ನಿಲ್ಸಿ ಹಾಕ್ಬಿಡವ ಇವು. ಯಂಗ ಹೆಂಗಸ್ರು ಎಲ್ಲೋಗವು?" ಹೇಳಿ ಬೈಕೆತ್ತ  ಅಮ್ಮ ಮಮ್ಮಗ ಉರ್ಫ್ ತಮ್ಮ ಬಪ್ಪದನ್ನೇ ಕಾಯ್ತಾ ಇತ್ತು ಹೇಳ್ಯಾತು.

ಅದು ಮುಂಡಗೋಡು. ಅಲ್ಲಿ ಟಿಬೇಟಿ ಜನರ ಕ್ಯಾಂಪಿದ್ದು. ರಾಶಿ ಟಿಬೇಟಿ ಜನಾ ಅಲ್ಲಿ ಸದಾ ಕಾಣ್ತ. ಅವತ್ತೂ ಸಹಿತ ಅಲ್ಲೇ ಬಸ್ಟ್ಯಾಂಡಲ್ಲಿ ಒಬ್ಬ ಬೋಳ ತಲೆ ಬೌದ್ಧ ಭಿಕ್ಷು ಕಂಡ ಹೇಳ್ಯಾತು.  ಸಿರ್ಸೆ ಬದಿ ಅಮ್ಮ ಅದರ ಜೀವನದಲ್ಲಿ ಆ ನಮ್ಮನಿ ಬೋಳ ತಲೆ 'ಗಂಡ ಮಾಣಿ' ನೋಡಿದ್ದು ಅದೇ ಮೊದಲೇ ಸಲ ಹೇಳಿ ಕಾಣ್ತು. ಭಯಂಕರ ಆಶ್ಚರ್ಯ ಅಮ್ಮಂಗೆ.

ದಲಾಯಿ ಲಾಮಾ, ಕಲಾಯಿ ರಾಮಾ (ಸ್ಯಾಂಪಲ್ ಅಷ್ಟೇ)

ಅಮ್ಮ: ತಮೋ! ಅದ್ಯಾರೋ ಆ 'ಧಾರವಾಡ ಪೋಲೀಸಾ'? 'ಅದು' ಮಾಣಿಯಲ್ದನಾ? ಇದೆಂತಾ ವೇಷ್ವಾ?

ತಮ್ಮಾ ಶಾಲೆಯ ಯಾವದೋ ಪುಸ್ತಕದಲ್ಲಿ ದಲಾಯಿ ಲಾಮನ ಬಗ್ಗೆ ಹನಿ ಓದಿದಿದಾ ಕಾಣ್ತು. ಅವಂಗೆ ಬೋಳ ತಲೆ ಮಾಡಿಕೆಂಡು, ಕೆಂಪ ಮುಂಡು, ಕೆಂಪ ಅಂಗಿ ಹಾಕ್ಯಂಡ ಬೌದ್ಧ ಭಿಕ್ಷುಗಳೆಲ್ಲ ದಲಾಯಿ ಲಾಮನಾಂಗೆ ಕಾಣ್ತಿದ್ದ ಕಾಣ್ತು. ನಮ್ಮ ಕಾಲದಲ್ಲಿ ಯಾವದೇ ಸರ್ದಾರ್ಜೀ ಕಂಡರೂ ಯಂಗಯೆಲ್ಲಾ "ಹೇ!ಝೇಲ್ ಸಿಂಗ್ ನೋಡು", ಹೇಳಿ ಮಳ್ಳರಂಗೆ ಕೂಗ್ಜಂಗೆ, ಇವನೂ ಆ  ಬೌದ್ಧ ಭಿಕ್ಷು ಸಹಿತ 'ದಲಾಯಿ ಲಾಮಾ' ಹೇಳಿ ತೆಳಕಂಡ. ಎಂತೂ ತೆಳಿಯದ ಅಮ್ಮಂಗೆ ಒಂದಿಷ್ಟು ತಿಳ್ಸಿ ಹೇಳನ ಹೇಳಿ ಮಾಡ್ಜಾ.

ತಮ್ಮ: ಥೋ! ಅಮ್ಮಾ! ಎಂತಾ ಹೇಳಿ ಹೇಳ್ತ್ಯೆ? ಅವಾ 'ಧಾರವಾಡ ಪೋಲೀಸ್' ಅಲ್ಲದೇ  ಮಾರಾಯ್ತೀ. ಅವಾ 'ದಲಾಯಿ ಲಾಮಾ' ಹೇಳಿ.

ಅಮ್ಮ: ಎಂತದು!? ಅತೋ! ಕಲಾಯಿ ರಾಮಾ? ದಳ್ಳಿಗೆ, ಪಾತ್ರಿಗೆ  ಕಲಾಯಿ ಹಾಕ್ತ್ನ? ಹಾಂ?

ತಮ್ಮ: ಥೋ! ನಿನ್ನ ಕಿಮಿ ಎಂತ ಪೂರ್ತಿ ಶೆಡ್ಡಾಗೋಜನೇ ಅಮ್ಮಾ? ದಲಾಯಿ ಲಾಮಾ, ದಲಾಯಿ ಲಾಮಾ.

ಅಮ್ಮ ಇನ್ನೂ ಅದರ 'ಕಲಾಯಿ ರಾಮನ' ಗುಂಗಿಂದ ಹೆರಗೆ ಬಂಜೇ ಇಲ್ಲೆ ಕಾಣ್ತು. ಮತ್ತೆ ಅದೇ ಧಾಟಿಯಲ್ಲೇ ಹಲ್ಬದನ್ನ ಮುಂದು ವರ್ಸ್ತು .

ಅಮ್ಮ: ಅಲ್ಲದಾ ತಮಾ. ಕಲಾಯಿ ಹಾಕಲ ಬಪ್ಪ ತಾಮ್ರಗಾರ ಜನಾ ಎಲ್ಲ ಸಾಬ್ರರಲ್ಲದನಾ? ಈ ತಾಮ್ರಗಾರ ಸಾಬಾ ಎಂತಕ್ಕೆ  ರಾಮಾ ಹೇಳಿ ಹೆಸರಿಟ್ಟಗಂಡಿಗಿದಾ? ಹಾಂ?

ತಮ್ಮ: 'ದಲಾಯಿ ಲಾಮಾ' ಹೇಳಿರೆ 'ಕಲಾಯಿ ರಾಮಾ' ಅಂಬು. ಮಳ್ಳ ಅಮ್ಮನೇಯಾ!

ಕಲಾಯಿ ಹಾಕವು ಅಂದ್ರೆ ತಾಮ್ರಗಾರ ಸಾಬಂದಿಕ್ಕ. ತಾಮ್ರಗಾರ ಸಾಬಂದಿಕ್ಕ ಮಾತ್ರ ಕಲಾಯಿ ಹಾಕ್ತ. ಇದು ಅಮ್ಮನ ಅಚಲ ನಂಬಿಕೆ. ಹಾಂಗಾಗಿ ಅದಕ್ಕೆ ಕಲಾಯಿ ಹಾಕ ಸಾಬಾ ರಾಮಾ ಹೇಳಿ ಹ್ಯಾಂಗೆ ಹೆಸರಿಟ್ಕಂಡಿಗಿದ ಹೇಳಿ ತೆಳಿತಿಲ್ಲೆ.

ಅಮ್ಮ: ಅಂದ್ರೆ ಇವಾ ಕಲಾಯಿ ಹಾಕ ತಾಮ್ರಗಾರ ಸಾಬ್ರ ಪೈಕಿ ಅಲ್ಲದಾ?

ತಮ್ಮ: ಅಲ್ಲದೇ! ಹೇಳ್ಜ್ನಲೇ. ನೆಡಿ ಯಂಗೆ ಗೋಲಿ ಸ್ವಾಡಾ ಕೊಡ್ಸು. ಆಸ್ರಾಗೋಜು.

ಅಮ್ಮ ಮಮ್ಮಗನಿಗೆ ಗೋಲಿ ಸೋಡಾ ಕೊಡಸಲ್ಲೆ ಕರ್ಕಂಡು ಹೋಗಿ ಕೊಡಿಸಿಕ್ಕೆ, "ಕುಡಿ ಮಾರಾಯಾ. ಕಡಿಗೆ ಕರ್ಕರೆ ಮಾಡಡಾ. ಧಾರವಾಡ ಹೋಗಿ ಮುಟ್ಟವರಿಗೆ ಎಂತೂ ಕೇಳಲಿಲ್ಲೇ. ಅಕಾ?" ಹೇಳಿ ವಾರ್ನಿಂಗ್ ಬ್ಯಾರೆ ಕೊಡ್ಚು.

ಆ ದಲಾಯಿ ಲಾಮಾ, ಕಲಾಯಿ ರಾಮಾ ಮಾತ್ರ ಅಮ್ಮನ ತಲಿಂದ ಹೋಜ್ಞೆಯಿಲ್ಲೆ. ಯಂತಕ್ಕೆ ಅಂದ್ರೆ ಕಣ್ಣ ಮುಂದೆ ಕುನ್ನಿ ಹಾಂಗೆ ಸುಳಿ ಮಿಳಿ ಮಾಡ್ತಾ ಇದ್ದಾ ಅಲ್ಲಿ ಮುಂಡಗೋಡ ಬಸ್ಟ್ಯಾಂಡಲ್ಲಿ. ಬೋಳ ತಲೆ ಮ್ಯಾಲೆ ಕೈಆಡಿಸ್ಕೆತ್ತ, ಮಳ್ಳ ಹರಕತ್ತ, ಬಸ್ಟ್ಯಾಂಡ್ ಪೂರ್ತಿ ತಿರಗ್ತಾ ಇದ್ದ. ಮಳ್ಳನೆಯಾ! ಹೇಳಿ ಅಂದ್ಕಂಡ್ಚು ಅಮ್ಮ.

ಅಮ್ಮ: ಅಲ್ದಾ ತಮಾ ಮತ್ತೆ ದಳ್ಳಿಗೆ, ಹಂಡಿಗೆ ಕಲಾಯಿ ಹಾಕ ಸಾಬ್ರ ಪೈಕಿ ಅಲ್ಲಾ ಅಂದ್ರೆ ಅಂವಾ ಯಂತಕ್ಕೆ 'ದಳ್ಳಾಯಿ ರಾಮಾ' ಹೇಳಿ ಹೆಸರಿಟ್ಟಗಂಜಾ? ಹೆಸರಲ್ಲೇ ದಳ್ಳೆ ಹೇಳಿ ಇದ್ದಲಾ. ಇಡ್ಲಿಗೆ ಮಾಡ ದಳ್ಳಿಗೆ ಹೋದ್ವಾರ ಮಾತ್ರ ಕಲಾಯಿ ಹಾಕ್ಕೊಟ್ಟಿಕ್ಕೆ ಹೋಜಾ. ಅದಕೇ ಕೇಳ್ಜೀ ಬಿಲಾ.

ತಮ್ಮ: ಥೋ ಮಾರಾಯ್ತೀ! ದಳ್ಳಾಯಿ ಅಲ್ಲದೇ. ದಲಾಯಿ, ದಲಾಯಿ ಅಂದ್ರೆ ಜ್ಞಾನದ ಸಾಗರ ಹೇಳಿ. ತೆಳತ್ತಾ?

ಅಮ್ಮನ ತಲೆಯಲ್ಲಿ 'ಸಾಗರ' ಹೇಳದೊಂದೇ ಉಳತ್ತು. ಬಾಕಿ ಎಂತೂ ಉಳದ್ದೇ ಇಲ್ಲೆ.

ಅಮ್ಮ: ಸಾಗ್ರ ಬದಿಯವನ? ಹೋಗಕ್ಕು ಬರಕ್ಕು ಹೇಳಿಕೆತ್ತ, ಕಾಪಿ ಕುಡಿಯವ್ನಾ? ಮುಂಡಗೋಡಲ್ಲಿ ಎಂತಾ ಮಾಡ್ತಾ? ಎಂತನಾ? ತಿರುಗಾಟದ ಮ್ಯಾಲೆ ಬಂದಿಕ್ಕು. ಇರ್ಲಿ ಬಿಡು.

ಸೋಡಾ ಕುಡಿದು ಮುಗಿಸಿದ್ದ ತಮ್ಮ ಡರ್ರ ಹೇಳಿ ಒಂದು ತೇಗು ಕೊಟ್ಟು, 'ಇದು ಸುದಾರ್ಸ ಪೈಕಿ ತಲೆಬೊಂಡ ಅಲ್ಲಾ' ಹೇಳಿ, ಅಮ್ಮನ ಒಂದು ಸಲಿ ನೋಡಿ, ಎಂತೂ ಹೇಳದ್ದೆ ಸುಮ್ಮನೆ ಉಳ್ದಾ ಹೇಳಿ ಆತು.

ಅಮ್ಮ ಹೇಳಿ ಕೇಳಿ ಕಿಲಾಡಿ ಹೆಂಗಸು. ಎಂತೋ ನೆನಪ ಮಾಡಿಕೆಂಡು ಕಿಸಿ ಕಿಸಿ ನೆಗ್ಯಾಡ್ಚು. ತಮ್ಮಂಗೆ ಇರಿಟೇಟ್ ಆತು.

ತಮ್ಮ: ಎಂತದೆ ಮಳ್ಳರಾಂಗೆ ನೆಗ್ಯಾಡ್ತೇ? ಹಾಂ? ಎಂತಾ ನೆನಪಾತು?

ಅಮ್ಮ: ಆ ದಳ್ಳಾಯಿಯ, ಕಲಾಯಿಯ ರಾಮನ ಬೋಳು ನೋಡಿರೆ ಸಾಕು. ಯಂಗಳೂರ ಕೆಲಶಿ  ರಾಮಾ ಹೆರದಾಂಗೆ ಕಾಣ್ತಪಾ. ಕಲಾಯಿ ರಾಮನ ತಲೆ ಹೆರೆಯಲ್ಲೆ ಕೆಲಶಿ ರಾಮಾ. ಸರೀ ಆತು. ಅವನೂ ರಾಮಾ ಇವನೂ ರಾಮನಾ ಲಾಮನಾ. ಎಂತೋ ಒಂದು. ಹೀ!! ಹೀ!!

ತಮ್ಮ: ಮಳ್ಳ ಹರಿಯಲ್ಲೇನೂ ಕಮ್ಮಿ ಇಲ್ಲೆ. ಅವಂಗೆ ಯಂತಾ ಉದ್ಯೋಗ ಇಲ್ಲ್ಯ? ಮುಂಡಗೋಡಿಂದ ಸಿರ್ಸಿ ತುದಿವರಿಗೆ ಬಂದು, ನಮ್ಮೂರ ಕೆಲಶಿ ರಾಮನ ಹತ್ತರವೇ ತಲೆ ಹೊಡಿಸ್ಕೆಂಡು ಹೊಪಲೇ? ಧಾರವಾಡದ ಮಗಳ ಮನಿಗೆ ಹೊಂಟಿದ್ದಿ ಹೇಳಿ ಖುಷಿ ತಡಿಯಲ್ಲಾಗದ್ದೆ ನಿನಗೆ ಮಳ್ಳು ಹಿಡದೋಜಕು.

ಮಮ್ಮಗ ಉರಕಂಡಾ ಹೇಳಿ ಅಜ್ಜಿಗೆ ಮತ್ತೂ ಹುರುಪು. ಮತ್ತೂ ನೆಗ್ಯಾಡಕತ್ತೆ ಹೇಳ್ಚು.

ಅಮ್ಮ: ಯಂತಕಂದಿ ಗೊತ್ತಿದ್ದಾ? ನಮ್ಮೂರ ಕೆಲಶಿ ರಾಮಾ ಒಂದೊಂದು ಸಲಿ ಗಡ್ಬಿಡ್ಯಲ್ಲಿ, ಹೆಂಡಾ ಕುಡಿಯ ತಲುಬೆದ್ದು ತಡ್ಕಳಲ್ಲೆ ಆಗದಿದ್ದಾಗ, ಸರಿ ಮಾಡಿ ಕೂಪು ಮಸ್ಕಳದ್ದೆ, ತಲೆ ಬೊಂಡಕ್ಕೆ ಒಂದಿಷ್ಟು ನೀರು ಸಹಾ ಹೊಡ್ಕಳದ್ದೇ, ಹಾಂಗಾಂಗೆ ಬಡ್ಡ ಕೂಪಲ್ಲೇ, ಒಣಾ ಒಣಾ ಆಗ್ಯೇ ಬೋಳ ಕೆತ್ತಿಕ್ಕೆ ನೆಡಿತಾ ಹೇಳಿ. ಮರ್ದಿನಾ ಬೋಳಿಗೆ ತೆಂಗ್ನೆಣ್ಣೆ ಸವ್ರ್ಕೆತ್ತ ಇದ್ದರಾತು. ಆ ಕಲಾಯಿ ರಾಮನ ಬೋಳು ನೋಡಿರೆ ಹಾಂಗೆ ಕಾಣ್ತಪಾ. ಚುಪುರು ಚುಪುರು ಕೂದಲು ಬಂದ್ಕ ಇದ್ದು. ಅದ್ಕೆ ಎಲ್ಲಿ ನಮ್ಮೂರ ಕೆಲಶಿ ರಾಮನ ಹತ್ತರನೇ ತಲೆ ಹೊಡಿಶ್ಕೆಂಡಿಗಿದ್ನಾ ಹೇಳಿ ಯನಗೆ ಸಂಶಯ ನೋಡು. ಹೀ!!!ಹೀ!!!

ತಮ್ಮ: ಮಳ್ಳ ಹರಿಯೇ ನೀನು. ಬೇಕಾದಷ್ಟು ಮಳ್ಳ ಹರಿಯೇ. ಅತ್ತೆ ಮನಿಗೆ ಹೋಗಿ ಹೇಳಿಕೊಡ್ತಿ. ಮಗಳ ಹತ್ರ ಸರಿ ಮಾಡಿ ಬೈಸ್ಕೆಂಡ ಮ್ಯಾಲೆ ನಿಂಗೆ ಬುದ್ಧಿ ಬಪ್ಪದು.

ಅಷ್ಟರಲ್ಲಿ ಚಾ ಮತ್ತೊಂದು ಕುಡ್ಕಂಡು, ಬಾಯಲ್ಲಿ ಒಂದಿಷ್ಟು ಫೈರ್ ಗುಟ್ಕಾ ಹಾಕ್ಯತ್ತ ಕಂಡಟ್ಟರ ಬಂದವನೇ, 'ರೈಟ್!ರೈಟ್!' ಹೇಳ ಪುರಸತ್ತಿಲ್ಲದೇ ಡ್ರೈವರ್ ಒಂದ್ ಸಲಿ ದೊಡ್ಡಕೆ ಪೊಂ! ಹೇಳಿ ಹಾರ್ನ್ ಮಾಡಿದವನೇ ಬಸ್ ಬಿಡ್ ನಮ್ನಿ ಮಾಡ್ಬುಟಾ. ಎಲ್ಲಿ ಬಿಟ್ಟಿಕ್ಕೆ ನೆಡಿತ್ವನ ಹೇಳಿ ಅಮ್ಮಾ, ಮಮ್ಮಗಾ ಬೆಗ್ಬೆಗ್ನೆ ಬಸ್ ಹತ್ತಿಕೆಂಡ ಹೇಳ್ಯಾತು.

ನೋಡಿರೆ ಆ ದಲಾಯಿ ಲಾಮಾ, ಕಲಾಯಿ ರಾಮಾ ಹೇಳ ಕೆಲಶಿ ರಾಮನ ಹತ್ತಿರ ಬೋಳು ಕೆತ್ತಿಸಿಕೆಂಡ 'ಗಂಡ ಧಾರವಾಡ ಪೋಲೀಸ್' ಸಹಿತ ಅದೇ ಬಸ್ ಹತ್ತಬುಡವಾ! ಥೋ! ಹತ್ತದೊಂದೇ ಅಲ್ಲಾ. ಅಮ್ಮಾ, ಮಮ್ಮಗಾ ಕುತಗಂಡ ಸೀಟಿನ ಬದಿ ಸೀಟಿಗೆ ಬಂದು ಕುತಗಂಡೂ ಬಿಡವಾ!

ಅಮ್ಮಂಗೇನು ಕೌತುಕವೋ ಕೌತುಕಾ! ಸಾಗ್ರ ಬದಿ ಕಲಾಯಿ ಸಾಬಲ್ಲದ ಕಲಾಯಿ ರಾಮಾ ಇಲ್ಲೇ ಬಂದು ಕುಂತಿಗಿದಾ ಹೇಳಿ. ಇನ್ನು ಮಾತಾಡಿಸದೇ ಇದ್ದರೆ ಹ್ಯಾಂಗೆ? ಮಾತಾಡ್ಸಿ ಆಸ್ರಿಗೆ ಕೇಳವು ಅಂದ್ರೆ ಮನೆ ಅಲ್ಲಾ. ಬಸ್ಸು. ಮಾತಾಡಿಸಿಯೇ ಬಿಡಣ ಹೇಳಿ ಮಾಡ್ಚು ಅಮ್ಮ

ಅಮ್ಮ: ಹ್ವಾಯ್! ನಿಂಗೆ ಎಲ್ಲಾತು?

ತಮ್ಮ: ಥೋ! ಸುಮ್ಮಂಗೆ ಕುತ್ಗಳೇ ಮಾರಾಯ್ತೀ. ಅವಂಗೆ ನಮ್ಮ ಭಾಷೆ ಬಪ್ಪದು ಸುಳ್ಳು. ಬಂದರೂ ಅವನ ಸಂಗ್ತಿಯೆಂತ ಮಾತು? ಹಾಂ?

ಅಮ್ಮಂಗೆ ಧಾರವಾಡ ಮುಟ್ಟಲ್ಲಿವರಿಗೆ ಹೊತ್ತ ಹೋಗವಾ!? ಅದಕ್ಕಾರೂ ಮಾತಾಡ್ಸನ ಹೇಳಿ ಬಿಟ್ಟಿದ್ದಿಲ್ಲೆ.

ಮತ್ತ ಕೇಳ್ಚು.

ಅಮ್ಮ: ನಿನ್ನೇ ಕೇಳ್ಜೆ ಬಿಲಾ. ಎಲ್ಲಾಯ್ತು ನಿಂಗೆ ಅಂತ? ಸಾಗ್ರಾಯಿತಾ?

ಈ ಅಮ್ಮ ಬಿಡ ಪೈಕಿ ಅಲ್ಲ ಹೇಳಿ, ಅಲ್ಲಿವರಿಗೆ ಸುಮ್ಮನೆ ಕುಂತಿದ್ದ ಬೌದ್ಧ ಭಿಕ್ಷು ಓಂ ಹೇಳಿ ಬಾಯಿ ಬಿಟ್ಟ ಹೇಳಾತು. ಅದೇ ಹೊತ್ತಿಗೆ ಆ ಕುಮಟಾ - ಬೆಳಗಾಂ ಬಸ್ಸಲಿದ್ದ ಶೆಟ್ಲಿ (ಒಣಗಿಸಿದ ಮೀನು) ಬುಟ್ಟಿಯೊಂದು ಹನಿ ಸರ್ದು, ಉಳ್ಳಿ, ಬುಟ್ಟಿ ಬಾಯಿ ಕಳ್ದಿದ್ದು ಅಮ್ಮಂಗೆ ಕಂಡಿದ್ದೇ ಇಲ್ಲೆ.

ದಲಾಯಿ ಲಾಮಾ "ಏನು?" ಹೇಳವರ ಹಾಂಗೆ ಓಂ ಹೇಳಿ ಬಾಯಿಬಿಡದಕ್ಕೂ, ಶೆಟ್ಲಿ ಬುಟ್ಟಿಯ ಬಾಯಿ ಬಿಡದಕ್ಕೂ ಸಿಕ್ಕಾಪಟ್ಟೆ ಟೈಮಿಂಗ್ ಮ್ಯಾಚ್ ಆಗಿ ಒಟ್ಟಿನಲ್ಲಿ ಒಣ ಮೀನದ ಶೆಟ್ಲಿ ಕೆಟ್ಟ ಕಂಪು ಇಡೀ ಬಸ್ಸಲ್ಲಿ ಹರಡ್ಚು ಹೇಳ್ಯಾತು.

ಅಮ್ಮ: ಥೂ!ಕೊಳಕ್ ರಂಡೆ ಗಂಡ! ಹೊಳೆ ಬಾಳೆಕಾಯಿ ಪೋಳ್ಜಾ  ಉಂಡ್ಕ ಬಂದಿದೀಯಾ? ಮ್ಯಾಲಿಂದ ಒಂದು ಕವಳಾನಾದ್ರೂ ಹಾಕ್ಬೇಕ ಬ್ಯಾಡ್ವಾ? ಬಾಯಿಬಿಟ್ಟರೆ ಕೆಟ್ಟ ಮೀನದ ಕಂಪು. ಹೋಗಿ ಹೋಗಿ ನಿನ್ನತ್ರ ಮಾತಾಡೂಕೆ ಬಂದ ನನ್ನ ಮಂಡ್ಯಲ್ಲಿ ಬುದ್ಧಿ ಇಲ್ಲ. ಎಂತೂ ಇಲ್ಲ. ನೀ ಸುಮ್ಮನೆ ಕೂತ್ಗ ಮಾರಾಯಾ. ಬಾಯ್ ಮಾತ್ರ ಕಳಿಯೂಕಿಲ್ಲ. ತಿಳೀತು? ಹಾಂ!?

ತಮ್ಮ ಅಷ್ಟರಲ್ಲೇ ಉಸ್ಸ್ ಹೇಳಿ ನಿಟ್ಟುಸಿರು ಬಿಟ್ಟಾ ಹೇಳ್ಯಾತು. ಇಲ್ಲದಿದ್ದರೆ ಧಾರವಾಡ ಮುಟ್ಟಲ್ಲಿವರಿಗೆ ಈ ಅಮ್ಮಾ, ಆ ದಲಾಯಿ ಲಾಮಾ ಎಂತೆಂತಾ ಹೇಳಿ ಕೊರ್ಕತ್ತಾ ತಲೆ ತಿಂಬವಾಗಿದ್ದವನಾ ಹೇಳಿ ಅವಂಗೆ ಟೆನ್ಶನ್ ಆಗೋಗಿತ್ತು. ಶೆಟ್ಲಿ ಬುಟ್ಟಿಯಾ ಸರಿಯಾದ ಟೈಮಿಗೆ ಉರುಳಿಸಿ, ಮೀನದ 'ಘಮ' ಹರಡಿಸಿದ ಕುಲದೇವರಾದ ಶೀಗೆಹಳ್ಳಿ ಕೇಶವಂಗೆ ಮನಸಲ್ಲೇ ನಮಸ್ಕಾರ ಹೇಳಿಕೆಂಡು ಕುತ್ಗಂಡ.

ಇನ್ನಾರು ಈ ಅಮ್ಮನ ಕರ್ಕರೆ ಇಲ್ಲದೇ ಆರಾಮ ಕಿಡಿಕಿ ಸೀಟ್ ಸಿಕ್ಕಿದ್ದು, ರಸ್ತೆ ನೋಡಿಕೆತ್ತ, ನಿಲ್ಲಿಸಿ ಹೇಳಿ ಕೈ ಮಾಡಿದ ಜನರಿಗೆ, 'ಇದು ನಾನ್ ಸ್ಟಾಪ್ ಬಸ್ಸು. ನಿಲ್ಲೂದಿಲ್ಲಾ' ಹೇಳ ನಮ್ನಿ "ಟೊಮ್ಮೆ" ಹಾಕಿ ಮಜಾ ತಗತ್ತಾ, ಧಾರವಾಡ ಮುಟ್ಟನ ಹೇಳಿ ಮಾಡಿರೆ ಅಮ್ಮನ ಲಾಸ್ಟ್ ಬಾಂಬು ಇನ್ನೂ ಬಾಕಿ ಇದ್ದಿತ್ತು.

ಅಮ್ಮ: ತಮೋsssssssssssssssssssssssssssssssssssss

ಆ ನಮ್ನೀ ಉದ್ದಕೆ ಕರಿಯದ ನೋಡಿಯೇ ಗೊತ್ತಾತು ಎಂತೋ ಆತು ಹೇಳಿ.

ತಮ್ಮ: ಈಗ ಎಂತದೆ? ನಾ ಏನೂ ಆ ದಲಾಯಿ ಲಾಮನ ಹತ್ರಾ ಮಾತಾಡಿ, ನಿಂಗೆ ಗುರ್ತು ಪರಿಚಯ ಮಾಡಿಸಿ ಕೊಡವಾ ಅಲ್ಲಾ. ಈಗೇ ಹೇಳಿಗಿದಿ ಮತ್ತೆ.

ಅಮ್ಮ: ಥೋ! ಅದಲ್ಲದಾ! ಹನಿ ಇತ್ಲಾಗ ಬತ್ಯಾ ಹ್ಯಾಂಗೆ? ಬಾರಾ ಅಪೀ. ಕಿಡಕಿ ಸೀಟ್ ಬಿಟ್ಟಿಕ್ಕೆ ಯನ್ನ್ ಸೀಟಲ್ಲಿ ಬಂದ್ ಕೂತ್ಗಳಾ.

ಯಂತಕ್ಕೆ ಈ ಅಮ್ಮ ಈಗ  ಸ್ಥಾನಪಲ್ಲಟ ಮಾಡಲ್ಲೆ ಹೇಳ್ತು ಹೇಳಿ ಗೊತ್ತಾಜಿಲ್ಲೆ ಮಾಣಿಗೆ.

ತಮ್ಮ: ಯಂತಕ್ಕೆ? ಆನು ಕಿಡಕಿ ಸೀಟ್ ಬಿಟ್ಟಕೊಡವಾ ಅಲ್ಲಾ! ಹರ್ಗೀಸ್ ಬಿಟ್ಟಕೊಡ್ತನಿಲ್ಲೆ.

ಅಮ್ಮ: ಆ ಕೊಳಕ್ ರಂಡೆ ಗಂಡ ಕಲಾಯಿ ರಾಮನ ಮಾತಾಡ್ಸಲ್ಲ ಹೋಗಿ, ಹೊಲಿ ಮೀನದ ಜಂಬು ಬಂದು, ಮೂಗಿನ ರೊಣೆಯೆಲ್ಲಾ ಉದ್ರೋಗಿ, ಯಂಗೆ ಹನಿ ಹೊಟ್ಟೆ ತೊಳ್ಸ್ದಾಂಗ್ ಆಗಿ, ಬಾಯಲ್ಲಿ ಚೌಳ್ ನೀರು ಬಂದಂಗ ಆತು ತಮಾ. ಲಿಂಬೆಹುಳಿ ಪೇಪಿ ಚೀಪಿಕೆತ್ತ ಕುತ್ಗತ್ತಿ. ವಾಂತಿ ಬಪ್ಪದು ಸುಳ್ಳು. ಆದ್ರೂವಾ ಹೇಳಲ್ಬತ್ತಿಲ್ಲೆ ನೋಡು. ಅದಕೇ ನೀ ಇತ್ಲಾಗೆ ಬಂದು ಕುತ್ಗ ಹೇಳಿ.

ತಮ್ಮ: ಥೋ! ಇದೊಳ್ಳೆ ಕಥೆ! ಹೂಂ! ಬಂದು ಕುಕ್ಕರಿಸು.

ಹೇಳಿಕ್ಕೆ ಕಿಡಕಿ ಸೀಟು ಬಿಟ್ಟಿಕ್ಕೆ ತಮ್ಮ ಬದಿ ಸೀಟಿಗೆ ಬಂದು ಕುತಗಂಡ ಹೇಳಿ ಆತು.

ಅಮ್ಮ: ಗನಾ ಮಾಣಿ. ಅಮ್ಮ ಹೇಳಿದ್ದೆಲ್ಲ ಕೇಳ್ತಾ. ಧಾರವಾಡದಲ್ಲಿ ನಿಂಗೆ ಎಂತಾರೂ ತೆಗ್ಸಿ ಕೊಡ್ತಿ ಅಕಾ? ಈಗಾ ಸದ್ಯಕ್ಕೆ ನಿಂಗೆ ನಿಂಬೆಹುಳಿ ಪೇಪಿ ಬೇಕಾ?

ತಮ್ಮ: ಸುಮ್ಮಂಗಿರೆ ಮಾರಾಯ್ತೀ! ನಿಂಬೆಹುಳಿಯೂ ಬ್ಯಾಡಾ, ಹುಂಸೆಹುಳಿಯೂ ಬ್ಯಾಡಾ. ಎಂತೂ ಬ್ಯಾಡಾ. ಇದೇ ಕೊನೆ ಸರಿ ನಿನ್ನ ಸಂಗತಿಗೆ ಎಲ್ಲಾರು ಬಪ್ಪದು ಆನು. ಬರಿ ಕರ್ಕರೆ ಮಾಡ್ತೆ.

ತಮ್ಮ ಬಂದು ಈಬದಿ ಸೀಟಲ್ಲಿ ಕುಂತಿದ್ದೆ ಕುಂತಿದ್ದು, ಆಬದಿ ಸೀಟಲ್ಲಿ ಕುಂತಿದ್ದ ದಲಾಯಿ ಲಾಮಂಗೆ ಈಗ ಮಾತಾಡ ಮೂಡು ಎದ್ದೋತು ಕಾಣ್ತು. ಶುದ್ಧ ಕನ್ನಡದಲ್ಲಿ ಕೇಳ್ಬುಟಾ!

ದಲಾಯಿ ಲಾಮಾ: ಎಲ್ಲೆ ಧಾರವಾಡಕ್ಕ ಹೊಂಟೀರಿ?

ಮಾಣಿ ವಿಚಾರಾ ಮಾಡ್ಜಾ. ಅಮ್ಮನ ಕರ್ಕರೆ ಮುಗತ್ತು ಹೇಳಿ ಮಾಡಿರೆ ಈಗ ಇವನ ಕರ್ಕರೆ. ಸುಮ್ಮನೆ ಇಪ್ಪದು ಬೆಟರು ಹೇಳಿ, ಎಂತೂ ಮಾತಾಡದ್ದೆ ಸುಮ್ಮನೆ ಪಿಕಿ ಪಿಕಿ ನೋಡಿಕೆತ್ತ ಕುಂತಾ, ಮಾತು ಬರ್ದೇ ಇಪ್ಪವರಾಂಗೆ.

ಓಹೋ! ಇದು ಯಾವದೋ ಮಾತ ಬರದ ಮನ್ನನ ಕೇಸ್ ಹೇಳಿ ತೆಳಕಂಡು ದಲಾಯಿ ಲಾಮಾ ತನ್ನ ಜಪಸ್ಸರದ ಮಣಿ ತಿರುಗಿಸಲ್ಲೆ ಶುರು ಮಾಡ್ಜಾ. ಜಪಾ ಮಾಡಲ್ಲೆ.

ಅಷ್ಟರಲ್ಲಿ ಯಾರೋ ವಯ್ಕ್ ಹೇಳಿ ವಾಂತಿ ಮಾಡಿದ ಸೌಂಡ್ ಬಂತು. ಎಲ್ಲಿ ಅಮ್ಮನೇ ಮಾಡ್ಚ ನೋಡಲ್ಲಿವರಿಗೆ ಅಮ್ಮನೇ ಸುದ್ದಿ ಬಿತ್ತರಣೆ ಮಾಡ್ಚು.

ಅಮ್ಮ: ಆನಲ್ಲದೋ! ಯಂಗೆ ಹೊಟ್ಟೆ ತೊಳ್ಸದು ಕಮ್ಮಿ ಆತು. ಅದು. ಓ ಆ ಶೀಟಲ್ಲಿ ಕುತ್ಗಂಡ ಬಡವೆ. ರೇಷ್ಮೆ ಸೀರೆ ಬ್ಯಾರೆ ಉಟ್ಗ ಬಂಜು. ಥೋ!

ತಮ್ಮಂಗೆ ಪೂರ್ತಿ ತಲೆ ಕೆಟ್ಟು ಹೋತು. ಲಾಸ್ಟ್ ಒಂದು ಮಾತು ಹೇಳಿಕ್ಕೆ ವರಗಲ್ಲೆ ಹೊಂಟಾ.

ತಮ್ಮ: ಅಮ್ಮಾ ಯಂಗೆ ವರ್ಕ ಬತ್ತಾ ಇದ್ದೆ. ಧಾರವಾಡ ಬಂದ ಕೂಡಲೇ ಎಬ್ಬಸು ಅಕಾ?

ಇಷ್ಟೆಲ್ಲ ಅಪ್ಪಲ್ಲಿವರಿಗೆ ತಡಸ್ ಕ್ರಾಸ್ ಬಂದು, ಹೈವೇ ಸಿಕ್ಕು, ಬಾರಕೋಲಲ್ಲಿ ಚಟೀರನೇ ಒಂದು ಕೊಡಿಸ್ಕೆಂಡ ಖಡ್ಡ ಹಿಡಿದ ಎತ್ತು ಖಡ್ಡತನ ಬಿಟ್ಟು, ಚುರ್ಕಾಗಿ ಸ್ಪೀಡ್ ಪಿಕಪ್ ಮಾಡಿಕೆಂಡು ಓಡಿದಾಂಗೆ ಬಸ್ ಸ್ಪೀಡ್ ಪಿಕಪ್ ಮಾಡಿಕೆಂಡು ಜೋರ್ ಹೊಂಟ್ಬುಡ್ಚು.

10 comments:

Unknown said...

Super

Mahesh Hegade said...

ರಾಶಿ ಥ್ಯಾಂಕ್ಸ್ ರೋ!

Vimarshak Jaaldimmi said...


Hilarious!

Include how Tibeti sweater chowkashi is done in Dwd street markets!

Also, how ajji verbally took care of kalai dalai when he started putting kalai on people's head instead of vessels!

Finally, "kelshi ka paani" song video clip is needed!!

Anonymous said...

ಅವ್ನೌನ್ ಮಸ್ತ್ ಐತ್ ಬಿಡ್ರಿಪಾ!!!

Mahesh Hegade said...

ಧನ್ಯವಾದ ಬಡಿಗೇರ್ ಅವರಿಗೆ!

Vimarshak Jaaldimmi said...


Ajji also would have told kalai rama: ಸಾಗ್ರ ಸೀಮೆ ಕೂಸ್ಗ ಅಷ್ಟೇ ಬೆಂಗಳೂರಿನಲ್ಲಿದ್ದ ನಮ್ಮ ಬದಿ ಸಾಫ್ಟೆರ್ ಹುಡ್ರಿಗೆ ಟೊಪ್ಪಿ ಹಾಕದ ಕೇಳಿದಿದೆ; ಈಗ ನಿಂಗ ಅಪ್ಪೆಮಿಡಿ ಮಾಣ್ಯಕ್ಕನೂ ತಯಾರಾಜಿ ಹೇಳಾತು!

ಚಿನ್ಮಯ ಭಟ್ said...

ಲೈಕ್ ಇದ್ರೋ,,,

Mahesh Hegade said...

ಧನ್ಯವಾದ, ಚಿನ್ಮಯ್ ಭಟ್ :)

ಕೆನೆ Coffee said...

Innu negyadale appade alla!! Blog post ella odale enta ille andru innondu vaara beku :D

Mahesh Hegade said...

ಧನ್ಯವಾದ, ಕೆನೆ Coffee.