Tuesday, June 24, 2014

ಉದ್ದುದ್ದ ಅತ್ತಿ, ಅಡ್ಡಡ್ಡ ಸೊಸಿ : ಅತ್ತಿ ಸೊಸಿ ಅಡ್ನಾಡಿ ಕಥಿ

"ಗೋಮತೀ, ಏ ಗೋಮತೀ, ಒಂಚೂರು ಬಾರವಾ ಇಲ್ಲೆ," ಅಂತ ಅತ್ತಿಯವರಾದ ಗೋದಾವರಿ ಬಾಯಿ ತಮ್ಮ ಸೊಸಿಯಾದ ಗೋಮತೀ ಬಾಯಿಯನ್ನು ತಮ್ಮ ಎಂದಿನ ಶಂಖಾ ಹೊಡೆಯುವ ಶೈಲಿಯಲ್ಲಿ ಕರೆದರು.

"ಏನ್ ಒದರ್ತದ ಅಂತೀನಿ ಈ ಮುದುಕಿ. ಒದರಿಕೊಂಡು ಒದರಿಕೊಂಡು ಸಾಯ್ತದ. ಈಗರೆ ಒಂದು ತುತ್ತು ಉಂಡು ಎದ್ದೆನೋ ಇಲ್ಲೋ. ಅಷ್ಟರಾಗ ಸತ್ತವರ ಗತೆ ಹೊಯ್ಕೊಳ್ಳಿಕತ್ತದ. ಸೂಡ್ಲಿ ಮುದ್ಕಿ ತಂದು. ಏನು ಪುಣ್ಯಾ(!) ಮಾಡಿ ಪಡಕೊಂಡು ಬಂದೇನಿ ಇಂಥಾ ಅತ್ತೀನ! ನನ್ನ ಖೊಟ್ಟಿ ನಸೀಬಾ!" ಅಂತ ಹಣಿ ಹಣಿ ತಟ್ಟಿಕೋತ್ತ, ಊಟ ಮಾಡಿ ತೊಳ್ಕೊಂಡ ಒದ್ದಿ ಕೈ ಎಲ್ಲಿ ಒರೆಸಿಕೊಳ್ಳಲಿ ಅಂತ ನೋಡಿಕೋತ್ತ ಸೊಸಿ ಬಂದಳು. ಹಬ್ಬಾ ಅಂತ ರೇಶ್ಮಿ ಸೀರಿ ಬ್ಯಾರೆ ಉಟ್ಟಗೊಂಡು ಬಿಟ್ಟಾಳ ಅಕಿ ಇವತ್ತು. ನಿತ್ಯ ಉಡು ಕಾಟನ್ ಸೀರಿ ಆಗಿದ್ದರ ಆಗಲೇ ಆದಕ್ಕs ಕೈ ಒರೆಸಿ ಆಗಿ ಹೋಗ್ತಿತ್ತು.

"ಏನ್ರೀ?!" ಅಂತ ಬಂದು ನಿಂತ ಗೋಮತೀ ಅತ್ತಿಯವರನ್ನ ಕೇಳಿದಳು. ಒದ್ದಿ ಕೈ ಜೋರಾಗಿ ಝಾಡಿಸಿದಳು. ನೀರು ಹೋಗಲಿ ಅಂತ. ಅದು ಮಳ್ಯಾಗ ತೊಯ್ಕೊಂಡ ಬಂದ ನಾಯಿ ಮೈ ಝಾಡಿಸಿದಂಗ ಅತ್ತಿಗೆ ಕಾಣಿಸ್ತು. ಕೆಟ್ಟ ಇರಿಟೇಟ್ ಆತ ಅವರಿಗೆ.

"ಅಲ್ಲೆ ಬಚ್ಚಲದಾಗ ಚಂದಾಗಿ ಟಾವೆಲ್ ಇಟ್ಟಿರ್ತಾರ. ಅದರಾಗ ಕೈ ಒರೆಸಿಕೊಂಡು ಬರಲಿಕ್ಕೆ ಇಕಿಗೆ ಏನು ಧಾಡಿ?" ಅಂತ ಮನಸ್ಸಿನ್ಯಾಗ ಅಂದುಕೊಂಡರು ಅತ್ತಿಯವರು. ಬಾಯಿ ಬಿಟ್ಟು ಹೇಳಲಿಲ್ಲ.

"ಏನಿಲ್ಲಾ, ಒಂಚೂರು ಗೋಮ್ಯಾ (ಗೋಮಯ) ಹಚ್ಚಿ ಬಿಡವಾ. ಎಲ್ಲಾರದ್ದೂ ಊಟ ಆತು," ಅಂತ 'ಗೋಮಯ' ಹಚ್ಚಲಿಕ್ಕೆ ತಮ್ಮ ಸೊಸಿಗೆ 'ಸುಪಾರಿ' ಕೊಟ್ಟರು ಗೋದಾವರಿ ಬಾಯಿ.

ಗೋಮಯ  ಹಾಕುವದು, ಹಚ್ಚುವದು - ಭಾಳ ಮುಖ್ಯ ಚಟುವಟಿಕೆ. ಊಟಾದ ಮ್ಯಾಲೆ ಹಚ್ಚಲಿಕ್ಕೇ ಬೇಕು. ಇಲ್ಲಂದ್ರ ಎಲ್ಲಾ ಕಡೆ ಮೈಲಿಗಿ ಮೈಲಿಗಿ. ಮುಸುರಿ ಎಲ್ಲ ಹೋಗಿ ಮೊದಲಿನ ಕುಸುರಿ ಬರಬೇಕು ಅಂದ್ರ ಗೋಮಯ ಹಚ್ಚಲಿಕ್ಕೇ ಬೇಕು. ಅದು ಬ್ರಾಹ್ಮರ ಪದ್ಧತಿ. ಸಂಪ್ರದಾಯಸ್ತ ಗೋದಾವರಿ ಬಾಯಿಯವರ ಮನಿಯೊಳಗ ನಿಂತ್ರ, ಕುಂತ್ರ, ಮಲ್ಕೊಂಡ್ರ, ಎದ್ದರ, ಹೋದ್ರ, ಬಂದ್ರ, ಏನು ಮಾಡಿದರೂ ಗೋಮಯ ಹಚ್ಚಿಬಿಟ್ಟರ 'ಬಾರಾ ಖೂನ್ ಮಾಫ್' ಅನ್ನೋಹಾಂಗ ಎಲ್ಲಾ ಓಕೆ. ಗೋಮಯದ ನಂತರ ಚಿಂತೆ ಯಾಕೆ?

"ಈ ನಮ್ಮ ಅಪ್ಪ ಎಲ್ಲಿಂದ ನನಗ ಗೋಮತೀ ಅಂತ ಹುಡುಕಿ ಹುಡುಕಿ ತಂದು ಹೆಸರು ಇಟ್ಟನೋ. ಗೋಮತೀ ಅಂತ ಹೆಸರದ ಅಂತ by default ಬರೇ ನನಗs ಗೋಮಯ ಹಚ್ಚೋ ಕೆಲಸಾ ಹಚ್ಚತಾಳ ನಮ್ಮತ್ತಿ. ನಮ್ಮಪ್ಪಗ ಏನು ತಲಿ ಕೆಟ್ಟಿತ್ತೋ ಏನೋ. ಹೋಗಿ ಹೋಗಿ ಗೋಮತಿ ಅಂತ ಹೆಸರಿಟ್ಟುಬಿಟ್ಟಾನ. ಸೂಡ್ಲಿ ತಂದು," ಅಂತ ಅವರಪ್ಪನ ಬೈಕೊಂಡು ಗೋಮಯ ಹಚ್ಚಲಿಕ್ಕೆ ತಯಾರಾದಳು ಗೋಮತಿ ಬಾಯಿ.

ಸಂಪ್ರದಾಯಸ್ತ ಬ್ರಾಹ್ಮರ ಮನಿಯೊಳಗ ಯಾವಾಗಲೂ ಸಿಗೋ ಖಾಯಂ ಸಾಮಾನುಗಳು ಅಂದ್ರ ಗೋಮೂತ್ರ, ಗೋಮಯ. ಮನ ಶುದ್ಧ ಮಾಡಿಕೊಳ್ಳಲಿಕ್ಕೆ ಗೋಮೂತ್ರ. ಮನಿ ಶುದ್ಧ ಮಾಡಲಿಕ್ಕೆ ಗೋಮಯ.

ಊಟ ಮಾಡಿದ ಎಲಿ ಎತ್ತಿ ಆಗಿತ್ತು. ಗೋಮತಿ ಬಾಯಿ ಗೋಮಯ ಹಾಕಿ, ನೀರು ಗೊಜ್ಜಿ, ಸೀರಿ ಸೊಂಟಕ್ಕ ಎತ್ತಿ ಕಟ್ಟಿಕೊಂಡು, ಒಂದು ಪ್ಲಾಸ್ಟಿಕ್ ಕಾರ್ಡ್ ತೊಗೊಂಡು, ಅದರಿಂದ ಗೋಮಯವನ್ನು ಎಲ್ಲಾ ಕಡೆ ಹರಡಿ, 'ಸರ್ವಂ ಗೋಮಯಂ' ಮಾಡಿ, ಗೋಮಯ ಹಾಕೋ ಪುಣ್ಯದ ಕೆಲಸಕ್ಕೆ ರೆಡಿ ಆದಳು. ಗಂಡನ ಹಳೆ ಕ್ರೆಡಿಟ್ ಕಾರ್ಡ್ ಗೋಮಯ ಹಾಕಲಿಕ್ಕೆ ಬೆಸ್ಟ್ ಆಗ್ತದ ಅಂತ ಹೇಳಿ ತೆಗೆದು ಇಟ್ಟುಕೊಂಡಾಳ ಅಕಿ. ಕ್ರೆಡಿಟ್ ಕಾರ್ಡಿನ ಎರಡು ದೊಡ್ಡ ಉಪಯೋಗ ಅಂದ್ರ ಒಂದು ದ್ವಾಶಿ ಮಾಡಲಿಕ್ಕೆ ಮತ್ತ ಗೋಮಯ ಹಾಕಲಿಕ್ಕೆ. ಪಿಜ್ಜಾ ಮ್ಯಾಲೆ ಟೊಮೇಟೊ ಸಾಸ್ ಸವರಲಿಕ್ಕೂ ಬೆಷ್ಟ್ ನೋಡ್ರೀ. ಎಲ್ಲೆ ಏನೇ ಸವರೋ ಕೆಲಸಿದ್ದರೂ ಒಂದು ಹಳೆ ಕ್ರೆಡಿಟ್ ಕಾರ್ಡ್ ಇದ್ದು ಬಿಟ್ಟರ ಬೆಷ್ಟ್. ಕ್ರೆಡಿಟ್ ಕಾರ್ಡ್ ಒಂದೇ ಅಲ್ಲ, ಡೆಬಿಟ್ ಕಾರ್ಡ್ ಸಹ ಓಕೆ. ಲ್ಯಾಮಿನೇಟೆಡ್ ಕಾರ್ಡ್ ಇದ್ದರ ಆತು ನೋಡ್ರೀ. ಮಸ್ತ ಸೂಟ್ ಆಗ್ತದ ಗೋಮಯದ ಕೆಲಸಕ್ಕ.

ಗೋಮತಿ ಬಾಯಿ ತನ್ನ ತವರು ಮನಿಯೊಳಗ ಹ್ಯಾಂಗ ಗೋಮಯ ಹಚ್ಚಲಿಕ್ಕೆ ಕಲ್ತಿದ್ದಳೋ ಅದರ ಪ್ರಕಾರ ಗೋಮಯ ಹಚ್ಚಲಿಕ್ಕೆ ಶುರು ಮಾಡಿದಳು.

"ಗೋಮತೀ!!!!" ಅಂತ ಅತ್ತಿ ಗೋದಾವರಿ ಬಾಯಾರು ಮತ್ತ ಸೈರೆನ್ ಮೊಳಗಿಸಿದರು.

"ಏನ್ರೀ!!?" ಅನ್ನೋಹಾಂಗ ತಲಿ ತಿರುಗಿಸಿ ನೋಡಿದಳು ಗೋಮತಿ.

"ಹ್ಯಾಂಗ ಗೋಮಯ ಹಚ್ಚಲಿಕತ್ತೀ ಮಾರಾಳಾ? ಹಾಂ? ಏನಾಗ್ಯದ ನಿನಗ ಅಂತೇನಿ? ಹಾಂ?" ಅಂತ ಒಂದು ತರಹದ ಆಕ್ಷೇಪಿಸುವ ದನಿಯೊಳಗ ಹೇಳಿದರು ಅತ್ತಿ ಗೋದಾವರಿ ಬಾಯಿ.

ಸರ್ರ್ ಅಂತ ಸಿಟ್ಟು ಬಂತು ಗೋಮತಿ ಬಾಯಿಗೆ. ಅಲ್ಲೆ ಬಿದ್ದಿದ್ದ ಗೋಮಯವನ್ನು ಉಂಡಿ ಕಟ್ಟಿ, ಅತ್ತಿ ಮಸಡಿಗೆ ಗುರಿ ಇಟ್ಟು, ಮಿಸ್ ಆಗದಂಗ ಒಗೆದು ಬಿಡುವಷ್ಟು ಸಿಟ್ಟು ಬಂತು. ಆದರೂ ದೀರ್ಘ ಉಸಿರಾಟ ಮಾಡಿ, ಬಾಬಾ ರಾಮದೇವರನ್ನು ನೆನಪ ಮಾಡಿಕೊಂಡು, ಸಿಟ್ಟು ಇಳಿಸಿಕೊಂಡಳು ಗೋಮತಿ.

"ಏನಾತ್ರೀ? ಹಚ್ಚಲಿಕತ್ತೀನಲ್ಲಾ ಗೋಮಯ? ಇನ್ನೆಂಗ ಹಚ್ಚ ಬೇಕ್ರೀ? ಅದನ್ನೂ ಹೇಳಿ ಬಿಡ್ರೀ. ಅಥವಾ ತೋರಿಸಿಯೇ ಕೊಟ್ಟ ಬಿಡ್ರಲ್ಲಾ?" ಅಂತ ವಾಪಸ್ ಪ್ರಶ್ನೆ ಒಗೆದಳು ಗೋಮತಿ ಬಾಯಿ.

ಹೊಸದಾಗಿ ಲಗ್ನಾ ಮಾಡಿಕೊಂಡು ಬಂದಾಳ. ಇನ್ನೂ ಅತ್ತಿ ಮನಿ ಎಲ್ಲಾ ಪದ್ಧತಿ ಕಲ್ತಿಲ್ಲ ಅಂತ ಕಾಣಸ್ತದ.

ಅತ್ತಿಯವರು ಅವರ ಮನಿ ಪದ್ಧತಿ ಪ್ರಕಾರ ಗೋಮಯ ಹಚ್ಚೋದನ್ನ ಹ್ಯಾಂಗ ಅಂತ ತೋರಿಸಿಕೊಟ್ಟು ಬಿಡ್ತಿದ್ದರೋ ಏನೋ. ಆದರ ಏನು ಮಾಡೋದು ಅವರಿಗೆ ಎಲ್ಲ ಕಡೆ rheumatic pain. ಅದಕ್ಕ ಅವರಿಗೆ ಅವೆಲ್ಲ ಬಗ್ಗಿ, ಮಾಡಿ, ತೋರಿಸಲಿಕ್ಕೆ ಆಗೋದಿಲ್ಲ. ಓಣಿ ತುಂಬಾ, "ನನಗ ಭಾಳ romantic pain ನೋಡ್ರೀ! ಭಾಳ ತ್ರಾಸು ಕೊಡ್ತದ. ಕೂತ್ರ ಕೂಡಲಿಕ್ಕೆ ಕೊಡೋದಿಲ್ಲ. ನಿಂತ್ರ ನಿಂದ್ರಲಿಕ್ಕೆ ಕೊಡೋದಿಲ್ಲ. ಸಾಕಾಗಿ ಹೋಗ್ಯದ ಈ ರೋಮ್ಯಾಂಟಿಕ್ ಪೇನಿನಿಂದ," ಅಂತ ಹುಚ್ಚುಚ್ಚರೆ ಇಂಗ್ಲಿಷ್ ಮಾತಾಡಲಿಕ್ಕೆ ಮಾತ್ರ ಬರ್ತದ ಗೋದಾವರಿ ಬಾಯಾರಿಗೆ. rheumatic pain ಅನ್ನೋದಕ್ಕ ರೋಮ್ಯಾಂಟಿಕ್ ಪೇನ್ ಅನ್ಕೋತ್ತ ಅಡ್ಯಾಡ್ತಾರ.

"ಗೋಮತೀ! ಗೋಮಯ ಹಾಂಗ ಅಡ್ಡಡ್ಡ ಹಚ್ಚಬಾರದವಾ. ಹೀಂಗ ಹೀಂಗ.... ಉದ್ದುದ್ದ ಉದ್ದುದ್ದ ಹಚ್ಚಬೇಕು. ತಿಳೀತಾ? ಉದ್ದುದ್ದ ಉದ್ದುದ್ದ. ಸೀದಾ ಸೀದಾ ಗೆರಿ ಹೊಡೆದಂಗ ಹಚ್ಚವಾ. ಉದ್ದುದ್ದ ಉದ್ದುದ್ದ....." ಅಂತ ಗೋಮಯ ಹ್ಯಾಂಗ ಹಚ್ಚಬೇಕು ಅನ್ನೋದರ ಬಗ್ಗೆ ಪೂರ್ಣ ಮಾಹಿತಿ ಕೊಟ್ಟರು. ಆಕ್ಷನ್ ಮಾಡಿ ತೋರಿಸಿದರು.

ಗೋಮತಿ, "ಹಾಂ!" ಅಂದುಕೊಂಡಳು. "ಏನಪಾ ಇದು ವಿಚಿತ್ರ? ಗೋಮಯನೂ ಅಡ್ಡ ಉದ್ದ ಅಂತ ಹಚ್ಚತಾರ ಏನು?" ಅಂತ ಅಕಿಗೆ ಜಿಜ್ಞಾಸೆ. ಗೊತ್ತಿರಲಿಲ್ಲ. ಇನ್ನೂ 'ಸಣ್ಣ' ಹುಡುಗಿ ಅದು.

"ಉದ್ದುದ್ದ ಹಚ್ಚಬೇಕ್ರೀ? ಯಾಕ್ರೀ?" ಅಂತ ಕೇಳಿದಳು.

"ಗೊತ್ತಿಲ್ಲ ನಿನಗ!? ಹಾಂ!? ನಾವು ವೈಷ್ಣವ ಬ್ರಾಹ್ಮಂಡರು. ನಾವು ಎಲ್ಲ ಉದ್ದುದ್ದ ಹಚ್ಚವರು. ಹಣಿ ಮ್ಯಾಲೆ ಊದ್ದನೇ ನಾಮ ಉದ್ದಕ ಹಚ್ಚಿಗೊಳ್ಳೋದು. ಕಾಯಿಪಲ್ಲೆ ಹೆಚ್ಚೋದು ಉದ್ದುದ್ದ. ಅರವಿಗೆ ಸಬಕಾರ ಹಚ್ಚಿ ತಿಕ್ಕೋದು, ಅದೂ ಉದ್ದುದ್ದ. ಬಚ್ಚಲಾ, ಪಾಯಖಾನಿ ತಿಕ್ಕೋದು, ಅದೂ ಉದ್ದುದ್ದ. ಎಲ್ಲಿ ತನಕಾ ಅಂದ್ರ ನಿನ್ನ ಗಂಡ, ನಿನ್ನ ಮೈದುನಂದ್ರು ಬೂಟಿಗೆ ಪಾಲಿಶ್ ಸಹಿತ ಉದ್ದುದ್ದ ಉದ್ದುದ್ದ ಹಚ್ಚೇ ಮಾಡ್ತಾರ ನೋಡವಾ. ಒಂದು ನೆನಪಿಡ ಗೋಮತೀ, ನಮ್ಮ ಮನ್ಯಾಗ ಎಲ್ಲಾದನ್ನೂ ಉದ್ದುದ್ದ ಮಾಡಬೇಕು ನೋಡವಾ. ಅದಕs ಗೋಮಯ ಸಹಿತ ಉದ್ದುದ್ದ ಹಚ್ಚಿಬಿಡವಾ. ಎಲ್ಲಾ ಪದ್ಧತಿ ಶೀರ್ ಆಗಿಬಿಡಬೇಕು ನೋಡು. ಅಡ್ಡಡ್ಡ ಹಚ್ಚೋದೆಲ್ಲಾ ನಿಮ್ಮ ತವರು ಮನಿ ಕಡೆ ಮಂದಿ. ಸ್ಮಾರ್ತರು ಎಲ್ಲಾ ಅಡ್ಡಡ್ಡ ಹಚ್ಚತಾರ ನೋಡು. ಹಣಿ ಮ್ಯಾಲಿನ ನಿಂಬಿಹುಳಿ, ಮೈತುಂಬಾ ಬಳ್ಕೊಂಬೋ ಆ ಭಸ್ಮಾ, ಮತ್ತೊಂದು  ಎಲ್ಲಾ ಅಡ್ಡಡ್ಡ. ಆದ್ರ ನಾವು ವೈಷ್ಣವರು. ಅದಕs ಎಲ್ಲಾ ಉದ್ದುದ್ದ. ಎಲ್ಲಾ ಉದ್ದುದ್ದ.... ಉದ್ದುದ್ದ.... ತಿಳಿತೇನವಾ?" ಅಂತ ಹೇಳಿದರು. ಭಾಳ ಉದ್ದುದ್ದ ಆಗೇ ಹೇಳಿಬಿಟ್ಟರು.

"ಸ್ಮಾರ್ತರ ಮನಿ ಅಡ್ನಾಡಿ ಹುಡುಗಿ. ಆ ಸ್ಮಾರ್ತ ಮಂದಿನೇ ಪಕ್ಕಾ ಅಡ್ನಾಡಿ ಮಂದಿ. ತಾವು ಹ್ಯಾಂಗ ಅಡ್ನಾಡಿ ಇದ್ದಾರೋ ಹಾಂಗ ಎಲ್ಲಾದನ್ನೂ ಅಡ್ಡಡ್ಡ ಅಡ್ಡಡ್ಡ ಹಚ್ಚತಾರ. ಅಡ್ನಾಡಿ ಇದ್ದಿದ್ದಕ್ಕ ಅಡ್ಡಡ್ಡ ಹಚ್ಚತಾರೋ ಅಥವಾ ಅಡ್ಡಡ್ಡ ಹಚ್ಚಿ ಹಚ್ಚಿ ಹಾಂಗ ಅಡ್ನಾಡಿ ಆಗಿ ಕೂತಾವೋ, ದೇವರಿಗೇ ಗೊತ್ತು. ಇಲ್ಲಾ ಅವರ ಪರಮ ದೊಡ್ಡ ಅಡ್ನಾಡಿ ಶಂಕ್ರಾಚಾರ್ರಿಗೆ ಗೊತ್ತು. ಎಲ್ಲಿಂದ ಬಂದು ಗಂಟು ಬಿದ್ದದ ನನಗ ಈ ಪೀಡಾದಂತಾ ಹುಡುಗಿ? ಹುಚ್ಚಿ ಅಡ್ಡಡ್ಡ ಹಚ್ಚಲಿಕತ್ತದ ಗೋಮಯ. ಏನ್ ಕಲಿಸ್ಯಾಳೋ ಏನೋ ಇವರವ್ವಾ!?" ಅಂತ ಮನಸ್ಸಿನ್ಯಾಗೆ ಅಡ್ಡ ನಾಮ, ಅಡ್ಡಡ್ಡ ಭಸ್ಮ ಧರಿಸುವ ಅಡ್ನಾಡಿ ಸ್ಮಾರ್ತರನ್ನ ಬೈಕೊಂಡರು. ಸೈಲೆಂಟ್ ಆಗೇ ಬೈಕೊಂಡರು.

ಗೋಮತಿ ತಲಿ ತಲಿ ಚಚ್ಚಿಕೊಂಡಳು. "ಏನು ಹಾಪ್ ಮಂದಿ ಇದ್ದಾರಪಾ ಇವರು?" ಅಂತ ಅಂದುಕೊಂಡಳು. ಅಕಿ ಸ್ಮಾರ್ತ ಬ್ರಾಹ್ಮಣರ ಪೈಕಿ ಹುಡುಗಿ. ವೈಷ್ಣವರ ಮನಿಗೆ ಸೊಸಿ ಅಂತ ಬಂದಾಳ. ಅದು ಡೆಡ್ಲಿ ಕಾಂಬಿನೇಶನ್.

"ಎಲ್ಲಾ ಉದ್ದುದ್ದ ಹಚ್ಚಬೇಕಾ? ನಿಮ್ಮನಿಯಾಗ ಎಲ್ಲಾ ಉದ್ದುದ್ದ ಏನ್ರೀ? ನೋಡೋಣ ನೋಡೋಣ," ಅಂತ ಮನಸ್ಸಿನ್ಯಾಗ ಅಂದುಕೊಂಡಳು ಗೋಮತಿ. ಅಕಿ ಪಾಪ ಒಳ್ಳೆ ಹುಡುಗಿ. ಜಗಳಾ ಗಿಗಳಾ ಮಾಡಂಗಿಲ್ಲ ಅಕಿ. ಶಾಣ್ಯಾ ಇದ್ದಾಳ. ಏನೂ ಹೆಚ್ಚಗಿ ಮಾತಾಡದೇ ಗೋಮಯ ಹಚ್ಚೋ ಶಾಸ್ತ್ರ ಮುಗಿಸಿ, ಎಲಿ ಅಡಕಿ ಹಾಕಿಕೊಂಡು, ಹಾಂಗ ಸ್ವಲ್ಪ ಲೈಟ್ ಆಗಿ ರೆಸ್ಟ್ ಮಾಡೋಣ ಅಂತ ಹೇಳಿ ಅಡ್ಡಾದಳು. ಅತ್ತಿಗೆ ಕೇಳಬೇಕು ಅಂತ ಅನ್ನಿಸ್ತು. "ನೀವು ವೈಷ್ಣವರು ಮಲ್ಕೋ ಬೇಕು ಅಂದ್ರ ಅಡ್ಡಾಗ್ತೀರೋ? ಅಥವಾ ಉದ್ದಾಗ್ತೀರೋ?" ಅಂತ. ನೋಡಲಿಕ್ಕೆ ಹೋದರ ಅತ್ತಿ ಗೋದಾವರಿ ಬಾಯಾರು ಸಹಿತ ಅಡ್ಡಾಗಿ, ಗೊರಾ ಗೊರಾ ಅಂತ ಬಾಯಿ ಬಿಟ್ಟಗೊಂಡು ಗೊರಕೀ ಹೊಡಿಲಿಕತ್ತು ಬಿಟ್ಟಿದ್ದರು. ಬ್ರಾಹ್ಮಂಡರ ಭರ್ಜರೀ ಊಟದ ನಂತರ ಗೊರಕಿ ಬ್ರಹ್ಮರಂಧ್ರದಿಂದಲೇ ಹೊರಹೊಮ್ಮತದೋ ಅನ್ನೋಹಾಂಗ ಕೆಲವು ಮಂದಿ ಗೊರಕೀ ಹೊಡಿತಾರ. ಗೋದಾವರಿ ಬಾಯಿ ಸಹಿತ ಅದೇ ರೀತಿಯಲ್ಲಿ, ಮಾರಿ ಮ್ಯಾಲೆ ಸೀರಿ ಸೆರಗು ಮುಸುಕು ಹಾಕಿಕೊಂಡು ಗೊರಕಿ ಹೊಡಿಲಿಕತ್ತಿದ್ದರು. ಬ್ಯಾಸಿಗಿ ಟೈಮ್ ಬ್ಯಾರೆ. ಕಂಡಲ್ಲೆ ಬಂದು ಕೂಡೋ ನೊಣ ಬ್ಯಾರೆ. ಅದಕs ಮಾರಿ ಮ್ಯಾಲೆ ಬುರ್ಕಾದ ಗತೆ ಸೆರಗು ಮುಚ್ಚಿಕೊಂಡಿದ್ದರು. ಗೋಮತಿನೂ, "ಸೂಡ್ಲಿ ನೊಣ. ಒಂದು ಘಳಿಗಿ ಅಡ್ಡ ಆಗಲಿಕ್ಕೆ ಬಿಡೋದಿಲ್ಲ," ಅಂತ ಅಕಿನೂ ಸೆರಗನ್ನು ಬುರ್ಕಾ ಮಾಡಿಕೊಂಡು ಮಲಗಿದಳು.

ಮರುದಿನ ಮುಂಜಾನೆ. "ಎದ್ದೇಳು ಮಂಜುನಾಥಾ. ಏಳು ಬೆಳಗಾಯಿತು," ಅನ್ನೋ ರಾಯರ ಮಠದ ಲೌಡ್ ಸ್ಪೀಕರಿನಿಂದ ಹೊರಹೊಮ್ಮುತ್ತಿದ್ದ ಸುಪ್ರಭಾತಕ್ಕೆ ಗೋಮತಿ ಎದ್ದಳು. ಎದ್ದು ಹಿತ್ತಲ ಕಡೆ ಬಂದಳು. ಬರೋವಾಗ ಬಚ್ಚಲದಿಂದ  ಹಲ್ಲು ತಿಕ್ಕೋ ಬ್ರಶ್, ಅದರ ಮ್ಯಾಲೆ ಒಂದಿಷ್ಟು ಪೇಸ್ಟ್ ಹಚ್ಚಿಕೊಂಡೇ ಬಂದಿದ್ದಳು.

ಹಿತ್ತಲದಾಗ ಅತ್ತಿ ಗೋದಾವರಿ ಬಾಯಿ ಆಗಲೇ ತಮ್ಮ ಹಲ್ಲು ತಿಕ್ಕುವ ಕಾರ್ಯಕ್ರಮ ನಡೆಸುತ್ತಿದ್ದರು.

ಆತ್ತಿ ಗೋದಾವರಿ ಬಾಯಾರು ಹ್ಯಾಂಗ ಹಲ್ಲು ತಿಕ್ಕಲಿಕತ್ತಿದ್ದರು?

ಹಲ್ಲು ಮತ್ತ ಹ್ಯಾಂಗ ತಿಕ್ಕತ್ತಾರ್ರೀ? ಬ್ರಷ್ 'ಅಡ್ಡ' ಹಿಡಕೊಂಡು, 'ಅಡ್ಡಡ್ಡ' ತಿಕ್ಕತಾರ. ಮತ್ತ ಬೇರೆ ತರಹ ಹಲ್ಲು ತಿಕ್ಕವರನ್ನ ಎಲ್ಲರೆ ನೋಡಿರೇನು?

ಗೋಮತಿಗೆ ಏನೋ ಫ್ಲಾಶ್ ಆತು. "ತಡಿ ಅತ್ತಿಯವರಿಗೆ ಒಂದು ಇಡ್ತೇನಿ. ಒಂದು ಭಯಂಕರ  ಬತ್ತಿ," ಅಂತ ತಯಾರ ಆದಳು.

"ಗುಡ್ ಮಾರ್ನಿಂಗ್," ಅಂದು ಬಿಟ್ಟಳು.

ಅತ್ತಿಯವರಿಗೆ ವಿಚಿತ್ರ ಅನ್ನಿಸ್ತು. ಎಂದೂ ಗುಡ್ ಮಾರ್ನಿಂಗ್ ಅದೂ ಇದೂ ಅನ್ನದೇ, ಸುಮ್ಮ ಬಂದು, ತನ್ನ ಪಾಡಿಗೆ ತಾನು ಹಲ್ಲು ತಿಕ್ಕಿ, ಮಾರಿ ತೊಳಕೊಂಡು ಹೋಗೋ ಸೊಸಿ ಇವತ್ಯಾಕ ಗುಡ್ ಮಾರ್ನಿಂಗ್ ಅನ್ನಲಿಕತ್ತಾಳ ಅಂತ. ಅವರು ಒಮ್ಮೆ ಹಲ್ಲು ತಿಕ್ಕಲಿಕ್ಕೆ ಶುರು ಮಾಡಿದ್ರ ನಡು ಪೇಸ್ಟ್ ಉಗಳೋದಿಲ್ಲ. ಎಲ್ಲ ಕೊನಿಗೇ ಉಗುಳಿ, ಬಾಯಿ ಮುಕ್ಕಳಿಸಿ ಬಂದು ಬಿಡ್ತಾರ. ಇವತ್ತು ಸೊಸಿ ಜೋಡಿ ಮಾತಾಡಬೇಕು ಅಂತ ಪೇಸ್ಟ್ ಉಗುಳಿ, ಬಾಯಿ ಸುತ್ತಾ ಪೇಸ್ಟಿನ ನೊರಿ ನೊರಿ ಮಾಡಿಕೊಂಡು, ಬಿಳೆ ಡ್ರಾಕುಲಾ ಗತೆ ಅವತಾರ ಮಾಡಿಕೊಂಡು ನಿಂತು ಬಿಟ್ಟರು.

"ಏನವಾ ಗೋಮತೀ? ಹ್ಯಾಂಗಿದ್ದೀ?" ಅಂತ ಸಹಜ ಕೇಳಿದರು. ಬಾಯಾಗ ಪೇಸ್ಟ್ ಇದ್ದಿದ್ದಕ್ಕ ಸ್ವಲ್ಪ ಗೊಜಾ ಗೊಜಾ ಅಂತ ಎಕ್ಸಟ್ರಾ ಸೌಂಡ್ ಬಂತು.

"ಒಂದು ಡೌಟ್ ಬಂದದರೀ," ಅಂತ ಹೇಳಿ ಗೋಮತೀ ಮಾತು ನಿಲ್ಲಿಸಿದಳು.

"ಡೌಟ? ಏನವಾ ಅಂಥಾದ್ದು? ಅದೂ ಇಷ್ಟ ಮುಂಜಾನೆ ಮುಂಜಾನೆ. ಏನರ ವಿಶೇಷ ಅದ ಏನು? ಏನರೆ ಒಳ್ಳೆ ಸುದ್ದಿ ಅದ ಏನವಾ?" ಅಂತ ಕೇಳಿ ಬಿಟ್ಟರು ಗೋದಾವರಿ ಬಾಯಿ.

"ಥತ್ ಇವರ! ಇವರಿಗೆ ಬರೇ ಅದs ತಲ್ಯಾಗ. ಯಾವಾಗ ಅಜ್ಜಿ ಆಗ್ತೇನಿ ಅಂತ. ಹುಚ್ಚ ಮುದುಕಿ," ಅಂತ ಮನಸ್ಸಿನ್ಯಾಗ ಅಂದುಕೊಂಡಳು ಗೋಮತಿ.

"ಅಲ್ಲಾ ನಿನ್ನೆ ಹೇಳಿದಿರಿ. ನಾವು ವೈಷ್ಣವರು. ಉದ್ದ ನಾಮದವರು. ಎಲ್ಲಾ ಉದ್ದುದ್ದ ಮಾಡ್ತೇವಿ. ಎಲ್ಲಾದನ್ನೂ ಉದ್ದುದ್ದ ಮಾಡಬೇಕು ಅಂತ. ಹೌದಲ್ಲರೀ?" ಅಂತ ಕೇಳಿದಳು ಗೋಮತೀ. ಖಾತ್ರಿ ಮಾಡಿಕೊಳ್ಳೋ ಹಾಂಗ.

"ಹೌದವಾ! ಬರೋಬ್ಬರಿ ಅದ. ಎಲ್ಲಾ ಉದ್ದುದ್ದ. ಎಲ್ಲಾ ಉದ್ದುದ್ದ. ಅದು ನಮ್ಮ ಪದ್ಧತಿ ಏನವಾ. ಅದಕ್ಕೇನೀಗ?" ಅಂತ ಅಂದ ಗೋದಾವರಿ ಬಾಯಾರು, "ಏನು? ಇದರಾಗ ಏನು ಡೌಟ್ ಬಂತು?!" ಅನ್ನೋ ಲುಕ್ ಕೊಟ್ಟರು.

"ಹಾಂಗಿದ್ದರ ನೀವು ಹಲ್ಲು ಅಡ್ಡಡ್ಡ ಯಾಕ ತಿಕ್ಕಲಿಕತ್ತೀರಿ!!? ಹಾಂ? ಬ್ರಷ್ ಉದ್ದುದ್ದ ಹಿಡಕೊಂಡು, ಹಲ್ಲು ಸಹಿತ ಉದ್ದುದ್ದ ತಿಕ್ಕರಿ. ಬಚ್ಚಲಾ, ಸಂಡಾಸ್ ಸಹಿತ ಉದ್ದುದ್ದ ತಿಕ್ಕಿಸಿ, ತಿಕ್ಕಿಸಿ ಸ್ವಚ್ಚ ಮಾಡಿಸವರು ನೀವು. ಈಗ ಹಲ್ಲು ಅದೆಂಗ ಅಡ್ಡಡ್ಡ ತಿಕ್ಕತೀರಿ ಅಂತ? ಹಾಂ?" ಅಂತ ಸೊಸಿ ಬತ್ತಿ ಇಟ್ಟೇ ಬಿಟ್ಟಳು.

"ಏನಂದೀ!!!??" ಅಂತ ಕೆರಳಿದ ಸಿಂಹಿಣಿ ಹಾಂಗ ಗೋದಾವರಿ ಬಾಯಿ ಹೂಂಕರಿಸಿದರು.

"ಅಯ್ಯ! ಸಿಟ್ಟ್ಯಾಕ್ರೀ? ಡೌಟ್ ಬಂತ ನೋಡ್ರೀ. ಅದಕ್ಕs ಕೇಳಿದೆ. ಏನು ತಪ್ಪ ಮಾಡಿದೆ? ಎಲ್ಲಾ ಉದ್ದುದ್ದ, ಎಲ್ಲಾ ಉದ್ದುದ್ದ, ನಾಮದಿಂದ ಹಿಡಿದು ಎಲ್ಲ ಕಾಮ್ ವರೆಗೆ ಎಲ್ಲ ಉದ್ದುದ್ದ ಅಂದಿದ್ದರಿ ನೋಡ್ರೀ. ಅದಕs ಕೇಳಿದೆ," ಅಂತ ಅಮಾಯಕಳಾಗಿ ಹೇಳಿದಳು ಗೋಮತಿ.

"ನಿನಗ! ನಿನಗ! ಮೈಯ್ಯಾಗಿನ ಸೊಕ್ಕು ಹೆಚ್ಚಾಗ್ಯದ ಅಂತ ಅನ್ನಿಸ್ತದ. ಹುಚ್ಚುಚ್ಚರೆ ಮಾತಾಡ್ಲೀಕತ್ತಿ. ಸೊಕ್ಕೆನ? ಹಾಂ? ಏನಂತ ತಿಳ್ಕೊಂಡೀ? ಹಾಂ? ತಡಿ ನಿನಗ ಮಾಡಸ್ತೇನಿ," ಅಂತ ಗುಟುರು ಹಾಕುತ್ತ ಗೋದಾವರಿ ಬಾಯಿ, "ಏ! ಬಿಂದ್ಯಾ! ಏ ಬಿಂದ್ಯಾ! ಎಲ್ಲೆ ಹೋಗಿ ಸತ್ತಿಯೋ? ರಂಡ ಮುಂಡೆ ಗಂಡ. ಇಲ್ಲೆ ಬಾ ಸ್ವಲ್ಪ. ನಿನ್ನ ಹೇಣ್ತೀ ಏನಂತ ತಲಿಯೆಲ್ಲ ಮಾತಾಡ್ಲಿಕತ್ತಾಳ ಅಂತ ಹೇಳತೇನಿ. ಏ! ಬಿಂದ್ಯಾ!" ಅಂತ ತಮ್ಮ ಮಗ ಉರ್ಫ್ ಗೋಮತಿ ಗಂಡ ಬಿಂದ್ಯಾನ ಕರೆದರು. ಬಿಂದ್ಯಾ ಉರ್ಫ್ ಬಿಂದು ಮಾಧವ. ಅವನ ತಮ್ಮ ಸರಳರೇಖೆ ಮಾಧವ. ಅವನ ಕೆಳಗಿನವ ಶಂಕು ಮಾಧವ. ಕೊನೇದವ ತ್ರಿಕೋಣ ಮಾಧವ. ಫುಲ್ ಜಾಮಿಟ್ರಿ ಆಚಾರ್ ಮಂದಿ.

"ಏ! ಅವ್ವಾ! ಈಗ ಏಕ್ದಂ ಬರಲಿಕ್ಕೆ ಆಗಂಗಿಲ್ಲ. ಪಾಳಿ ಬಿಟ್ಟು ಬಂದರ ಸಂಡಾಸದ ಪಾಳಿ ತಪ್ಪಿ ಹೋಗ್ತದ. ಕೆಲಸಾ ಮುಗಿಸಿ ಆಮೇಲೆ ಬರ್ತೇನಿ," ಅಂತ ಅಂದು, "ಸಮುದಾಯ ಸಂಡಾಸದ ಪಾಳಿ ಯಾವಾಗ ಬರ್ತದಪಾ? ವತ್ರ ಬ್ಯಾರೆ ಭಾಳ ಆಗ್ಯದ," ಅಂತ ಬಿಂದ್ಯಾ ಸಂಕಟ ಪಟ್ಟಗೋತ್ತ, ನಾಲ್ಕಾರು ಕಪ್ಪಿ ನುಂಗಿ ಉದ್ದುದ್ದ ಮಲ್ಕೊಂಡ ಹಾವಿನ ಗತೆ  ಉದ್ದ ಬೆಳೆದು ಬಿಟ್ಟಿದ್ದ ಸಂಡಾಸ್ ಪಾಳಿ ಲೈನ್ ಒಳಗ ಚಡಪಡಿಸುತ್ತ ನಿಂತಿದ್ದ. ನಿಂತೇ ಇದ್ದ. ಅವ್ವ ಕರೆದಳು ಅಂತ ಹೋಗಲೇ ಇಲ್ಲ.

ಅಕಿ ಗಂಡಂತೂ ಬರಂಗಿಲ್ಲ ಅಂತ ಗೊತ್ತಾದ ಮ್ಯಾಲೆ ಸೊಸಿ ಗೋಮತಿ ಡಿಮಾಂಡ್ ಇನ್ನೂ ಜೋರ ಆತು.

"ಏನ್ರೀ ಅತ್ತಿಯವರ? ಹಾಂ? ಏನ ಹಚ್ಚೀರಿ? ಆಟಾ ಅಂತ ತಿಳಕೊಂಡೀರಿ ಏನ? ಹಾಂ? ಎಲ್ಲಾ ಉದ್ದುದ್ದs ಮಾಡಬೇಕು ಅನಕೋತ್ತ. ಹಾಂ? ಈಗ ಹಲ್ಲು ತಿಕ್ಕರಲ್ಲಾ, ಉದ್ದುದ್ದ ನೋಡೋಣ? ಆನಿ ದಂತ ಇದ್ದಂಗ ಅವ ನಿಮ್ಮ ಕ್ವಾರಿ ಹಲ್ಲು. ಉದ್ದುದ್ದ ತಿಕ್ಕಲಿಕ್ಕೆ ಬರೋಬ್ಬರಿ ಆಗ್ತದ. ತಿಕ್ಕರೀ. ಅಥವಾ ಉದ್ದ ತಿಕ್ಕಲಿಕ್ಕೆ ಯಾರನ್ನಾರ ಕರ್ಕೊಂಡು ಬಂದು ಇಟ್ಟಗೊಳ್ಳರೀ. ಅಷ್ಟ ಅವರು ವೈಷ್ಣವರು ಹೌದೋ ಅಲ್ಲ ಅಂತ ಮೊದಲೇ ಕೇಳಿಕೊಳ್ಳರೀ. ಈ ಮನಿಗೆ ಬಂದಾಗಿಂದ ನೋಡಲೀಕತ್ತೇನಿ. ಬರೇ ಇದs ಆತು. ನಾವು ವೈಷ್ಣವರು, ನಾವು ಎಲ್ಲಾ ಉದ್ದುದ್ದ. ನೀವು ಸ್ಮಾರ್ತರು ಎಲ್ಲಾ ಅಡ್ಡಡ್ಡ ಅನಕೋತ್ತ. ಹೋಗ್ಗಾ ನಿಮ್ಮ," ಅಂತ ಹಚ್ಚಿದವಲಕ್ಕಿ ಹಚ್ಚಿದಂಗ ಹಚ್ಚಿ ಅತ್ತೀನ ಕೈತೊಗೊಂಡು ಬಿಟ್ಟಳು ಸೊಸಿ.

ಅತ್ತಿ ಗೋದಾವರಿ ಬಾಯಿ, "ಹಾಂ" ಅಂತ ಬಿಟ್ಟ ಬಾಯಿ ಬಂದ್ ಮಾಡದೇ ನಿಂತಿದ್ದಳು. ನೊರಿ ನೊರಿ ಪೇಸ್ಟ್ ಹಾಂಗೆ ಬಾಯಿಂದ ಕಟಬಾಯಿಗೆ ಇಳಿದು, ಕಟಬಾಯಿಂದ ಇನ್ನೂ ಕೆಳಗ ಇಳಿದು, ಕುತ್ಗಿ ಮ್ಯಾಲೆ ಬಂದು, ನೊರಿ ನೊರಿ ಪೇಸ್ಟ್ ತಂಪತಂಪಾಗಿ, ಗುಳು ಗುಳು ಅಂದ ಮ್ಯಾಲೇ ಅತ್ತಿಯವರಿಗೆ ಖಬರ್ ಬಂತು. ಖಬರ್ ಏನೋ ಬಂತು ಆದರ ಸೊಸಿ ಮಾತ್ರ ಕೈತಪ್ಪಿ ಹೋಗ್ಯಾಳ ಅಂತ ಖಾತ್ರಿ ಆತು.

ಮುಂದ ಸ್ವಲ್ಪ ದಿವಸದಾಗ ಮಗಾ, ಸೊಸಿ ಬ್ಯಾರೆ ಮನಿ ಮಾಡಿದರಂತ. ಈಗ ಬಿಂದ್ಯಾ ಉದ್ದುದ್ದ ನಾಮಾ, ಅಡ್ಡಡ್ಡ ಹೆಂಡತಿ ಹಾಕಿದ ಮತ್ತ ಏನೇನೋ ಹಾಕ್ಕೊಂಡು ಒಂಥರಾ ಹೈಬ್ರಿಡ್ ಆಗಿ ಬಿಟ್ಟಾನ. "ಆವಾ ಬಂದ್ರ ಮಠದಾಗ ಕಾಲಿಡಲಿಕ್ಕೆ ಬಿಡಬ್ಯಾಡ್ರೀ! ಬಿಟ್ಟರ ನೋಡ್ರೀ ಮತ್ತ!" ಅಂತ ಅತ್ತಿಯವರಾದ ಗೋದಾವರಿ ಬಾಯಿಯವರು ಮಠದ ಆಚಾರ್ರಿಗೆ ಕಟ್ಟಾಜ್ಞೆ ಮಾಡಿಬಿಟ್ಟಾರ. ಪಾಪ ಬಿಂದ್ಯಾ! ಆರಾಧನಿ ಊಟ ಅಂದ್ರ ಸಾಯ್ತಿದ್ದಾ ಆವಾ. ಅದಕ್ಕೇ ಈಗ ಕಲ್ಲು ಬಿದ್ದು ಬಿಟ್ಟಿದೆ. ಪಾಪ!

(ಧಾರವಾಡದ ಆಚಾರರೊಬ್ಬರು ತಮ್ಮ ಪ್ರವಚನಗಳಲ್ಲಿ ಇಂತಹ ಜೋಕುಗಳನ್ನು ಹೇಳಿ, ಪ್ರವಚನಗಳನ್ನು ರಸವತ್ತಾಗಿ ಮಾಡುತ್ತಾರೆ ಅಂತ ಇತ್ತೀಚಿಗೆ ಒಬ್ಬ ಆಪ್ತರಿಂದ ಕೇಳಿದ್ದು. ಉದ್ದುದ್ದ, ಅಡ್ಡಡ್ಡ, ಗೋಮಯ, ಹಲ್ಲು ತಿಕ್ಕೋ ಜೋಕ್ ಹೇಳಿದ ಅವರಿಗೊಂದು ಧನ್ಯವಾದ. ಸಣ್ಣ ಜೋಕು ಅವರದ್ದು. ದೊಡ್ಡ ಮಸಾಲೆ ನಮ್ಮದು.)

ಅತ್ತೆ ಸೊಸೆ (ಸ್ಯಾಂಪಲ್ ಮಾತ್ರ)

9 comments:

Anonymous said...

ಬಿಂದ್ಯಾ ಉರ್ಫ್ ಬಿಂದು ಮಾಧವ. ಅವನ ತಮ್ಮ ಸರಳರೇಖೆ ಮಾಧವ. ಅವನ ಕೆಳಗಿನವ ಶಂಕು ಮಾಧವ. ಕೊನೇದವ ತ್ರಿಕೋಣ ಮಾಧವ. ಫುಲ್ ಜಾಮಿಟ್ರಿ ಆಚಾರ್ ಮಂದಿ!! LOL...!!!

ಲೇಖನ ಮಸ್ತ್ ಐತ್ರಿ ಸರ್...

Mahesh Hegade said...

ಧನ್ಯವಾದ ಬಡಿಗೇರ್ ಅವರಿಗೆ.

Unknown said...

Superb. Nammdoo Udda-adda combination. Naanu adda.Aaadare udda iddavarannooo adda maduvalli successful.

Mahesh Hegade said...

Thank you, Jamkhandi Sir.

>>
Naanu adda.Aaadare udda iddavarannooo adda maduvalli successful.
<<

LOL. Congrats, sir. Congrats to madam as well for letting you have the (illusion of) success.

Vimarshak Jaaldimmi said...


Hilarious!

Does not "murgi" aashram appear anywhere in this context?!

Shridhar said...

ಮಹೇಶ ಅವರ,
ಭಾಳ ಛಂದ ಬರದೀರಿ! ಹಳೆದೆಲ್ಲಾ ನೆನಪ ಆತು. ನಾವು ಅಡ್ಡಡ್ಡ, ನಮ್ಮ ಮನಿಯವರು ಉದ್ದುದ್ದ! ಶಂಕರಾಚಾರ್ಯರ ಕ್ರುಪಾದಿಂದ ಸಂಭಾಳಿಸಿಕೊಂಡು ಹೊಂಟೆವಿ, ಇಪ್ಪತ್ತ ವರ್ಷದಿಂದ.

Thanks to Vaishali Hegde for sending the link along.

Vijay Kulkarni said...

Mahesh very nice Blog, Addadda matte udduda tuba chennagi banded. Nanobne nagodu node, my wife was thinking I am getting crazy.

Mahesh Hegade said...

ಧನ್ಯವಾದ ಶ್ರೀಧರ್ ಅವರಿಗೆ. ಶಂಕ್ರಾಚಾರ್ಯರರ ಕೃಪಾ ಸದಾ ಇರ್ಲ್ರೀಪಾ ಎಲ್ಲರ ಮ್ಯಾಲೆ :) ಹಾಂಗ ವೈಶಾಲಿ ಹೆಗಡೆ ಅವರಿಗೂ ಥ್ಯಾಂಕ್ಸ್ ಹೇಳಿಬಿಡ್ರೀ.

Mahesh Hegade said...

Thanks Vijay Kulkarni :)