Monday, June 09, 2014

ಭಾರತದ ಪ್ರಪ್ರಥಮ ವಿಮಾನ ಅಪಹರಣದ ಹಿಂದಿನ ಹಕೀಕತ್ತು!

ಜನವರಿ ೩೦, ೧೯೭೧.

ಭಾರತದ ಇತಿಹಾಸದಲ್ಲಿ ಪ್ರಪ್ರಥಮ ವಿಮಾನ ಅಪಹರಣ ಆಗಿಹೋಗಿತ್ತು!

ಕಾಶ್ಮೀರದ ಶ್ರೀನಗರದಿಂದ ಜಮ್ಮುವಿಗೆ ಬರುತ್ತಿದ್ದ ಇಂಡಿಯನ್ ಏರ್ಲೈನ್ಸ್ ವಿಮಾನವನ್ನು ಕಾಶ್ಮೀರಿ ಉಗ್ರವಾದಿಗಳು ಅಪಹರಿಸಿದ್ದರು. ಹಶೀಂ ಖುರೇಶಿ ಎಂಬ ಉಗ್ರವಾದಿ ತನ್ನ ಸಂಬಂಧಿಯೊಬ್ಬನೊಂದಿಗೆ ವಿಮಾನ ಅಪಹರಿಸಿ ಪಾಕಿಸ್ತಾನದ ಲಾಹೋರಿಗೆ ಅದನ್ನು ತೆಗೆದುಕೊಂಡು ಹೋದ. ಭಾರತದ ಜೈಲಿನಲ್ಲಿದ್ದ ಮೂವತ್ತು ಕಾಶ್ಮೀರಿ ಉಗ್ರವಾದಿಗಳನ್ನು ಬಿಟ್ಟರೆ ಮಾತ್ರ ಪ್ರಯಾಣಿಕರನ್ನು ಬಿಡುತ್ತೇನೆ ಅಂದ. ಭಾರತ ಮಾತ್ರ "ಏ! ಅದೆಲ್ಲ ಆಗೋದಿಲ್ಲ" ಅಂತ ಹೇಳಿ, ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ವಿರುದ್ಧ ಲಬೋ ಲಬೋ ಅಂತ ಬೊಬ್ಬೆ ಹಾಕಿತು. ದೊಡ್ಡ ಮಟ್ಟದಲ್ಲಿ ಪಾಕಿಸ್ತಾನದ ಮೇಲೆ ಅದೇನು ಒತ್ತಡ ಬಂತೋ ಏನೋ. ಒಟ್ಟಿನಲ್ಲಿ ಯಾವದೇ ಉಗ್ರಗಾಮಿಗಳ ಬಿಡುಗಡೆ ಇಲ್ಲದೆ ಎಲ್ಲ ಪ್ರಯಾಣಿಕರು ಮರುದಿವಸ ಸುರಕ್ಷಿತವಾಗಿ ಅಮೃತಸರ್ ಮುಖಾಂತರ ಭಾರತಕ್ಕೆ ಮರಳಿ ಬಂದರು. ಒಟ್ಟಿನಲ್ಲಿ ಎಲ್ಲ ಸುಖಾಂತ್ಯ.

ಇಂತಹ ಹಸೀಂ ಖುರೇಷಿಯನ್ನು ಪಾಕಿಸ್ತಾನ 'ಇವನು ನಮ್ಮವನು. ನಮ್ಮ ಕಾಶ್ಮೀರದ ಸಲುವಾಗಿ ಹೋರಾಟ  ಮಾಡಿದವನು' ಅಂತ ಸನ್ಮಾನ ಮಾಡಿತು. ಭಾರತ ಈ ಘಟನೆಯಿಂದ ಸಿಕ್ಕಾಪಟ್ಟೆ ಸಿಟ್ಟಿಗೆದ್ದು, 'ಇನ್ನು ಮುಂದೆ ಯಾವದೇ ಪಾಕಿಸ್ತಾನದ ವಿಮಾನಗಳು ಭಾರತದ ವಾಯುಪ್ರದೇಶದ ಮೇಲೆ ಹಾರಿ ಹೋಗುವಂತಿಲ್ಲ,' ಅಂತ ನಿರ್ಬಂಧ ಹಾಕಿಕೊಂಡು ಕೂತು ಬಿಟ್ಟಿತು. ಅದು  ಪಾಕಿಸ್ತಾನಕ್ಕೆ ಒಂದು ಬಗಣಿ ಗೂಟ ಬಡಿದ ಹಾಗೆಯೇ. ಆಗಿನ್ನೂ ಬಾಂಗ್ಲಾದೇಶ ಪ್ರತ್ಯೇಕ ದೇಶ ಅಂತ ಆಗಿರಲಿಲ್ಲ. ಅದು ಪೂರ್ವ ಪಾಕಿಸ್ತಾನ ಅಂತಲೇ ಚಲಾವಣೆಯಲ್ಲಿತ್ತು. ದಿನಕ್ಕೆ ಹತ್ತಾರು ನಾಗರಿಕ, ಸಾಮಾನು ಸಾಗಾಣಿಕೆ ವಿಮಾನಗಳು ಪಶ್ಚಿಮ ಪಾಕಿಸ್ತಾನದಿಂದ ಪೂರ್ವ ಪಾಕಿಸ್ತಾನಕ್ಕೆ ಮತ್ತು ತಿರುಗಾ ವಾಪಸ್ ಹಾರಾಡುತ್ತಿದ್ದವು. ಈಗ ಭಾರತ ಹಾಕಿದ ಕೊಕ್ಕೆಯಿಂದ ಆ ವಿಮಾನಗಳೆಲ್ಲ ಅರಬೀ ಸಮುದ್ರದ ಗುಂಟ ಕೆಳಗೆ ಹಾರಿ, ಶ್ರೀಲಂಕಾ ತುದಿಯಲ್ಲಿ ರೌಂಡ್ ಹೊಡೆದು, ಬಂಗಾಳ ಕೊಲ್ಲಿಯ ಗುಂಟ ಮೇಲೆ ಕ್ರಮಿಸಿ, ಹೋಗಿ ಬಂದು ಮಾಡಬೇಕಾಗುತ್ತಿತ್ತು. ದೊಡ್ಡ ತಲೆನೋವು. ಒಂದಕ್ಕೆರೆಡು ಖರ್ಚು. ಅದರಕಿಂತ ದೊಡ್ಡ ಹೊಡೆತ ಅಂದ್ರೆ ಮೂರ್ನಾಕು ಪಟ್ಟು ಹೆಚ್ಚಿಗೆ ಟೈಮ್ ಬೇಕಾಗುತ್ತಿತ್ತು. ಕೆಲವೊಂದು ವಿಮಾನಗಳಿಗೆ ಶ್ರೀಲಂಕಾದಲ್ಲಿ ಇಂಧನದ ಮರು ಭರ್ತಿ ಕೂಡ ಮಾಡಬೇಕಾಗುತ್ತಿತ್ತು.

ಭಾರತ ವಿಧಿಸಿದ ಈ ವಿಮಾನ ಹಾರಾಟದ ಮೇಲಿನ ನಿರ್ಬಂಧ ಮುಂದೆ ಕೆಲವು ತಿಂಗಳಲ್ಲಿ ಆದ ೧೯೭೧ ರ ಭಾರತ-ಪಾಕ್ ಯುದ್ಧದ ಫಲಿತಾಂಶ ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಪೂರ್ವ ಪಾಕಿಸ್ತಾನದಲ್ಲಿ ಯುದ್ಧ ಶುರುವಾಗಿ, ಭಾರತದ ಪಡೆಗಳು, ಬಾಂಗ್ಲಾ ಬಂಡುಕೋರರು ಕೂಡಿ ಪಾಕಿಸ್ತಾನದ ಪಡೆಗಳನ್ನು ಅಟ್ಟಾಡಿಸಿಕೊಂಡು ಬಡಿಯುತ್ತಿದ್ದರೆ, ಸರಕು ಹೊತ್ತು ತಂದು, ಪಡೆಗಳಿಗೆ ಗುಂಡು, ಮದ್ದು, ಆಹಾರ ಪೂರೈಕೆ ಮಾಡಬೇಕಾಗಿದ್ದ ವಿಮಾನಗಳು ಭಾರತದ ಮೇಲಿಂದ ಸಮಯಕ್ಕೆ ಸರಿಯಾಗಿ ಹಾರಿ ಬರಲಾಗದೇ, ಪಾಕಿ ಪಡೆ ಸೋಲೊಪ್ಪಿಕೊಂಡು, ಕೇವಲ ಎರಡು ವಾರಗಳಲ್ಲಿ ಪಾಕಿಸ್ತಾನದ ವಿಭಜನೆಯಾಗಿ, ಬಾಂಗ್ಲಾದೇಶದ ಜನ್ಮವಾಗಿತ್ತು. ೯೩,೦೦೦ ಪಾಕಿ ಸೈನಿಕರು ಯುದ್ಧಕೈದಿಗಳಾಗಿ ಬಂಧಿಯಾಗಿದ್ದರು. ಪಾಕಿಸ್ತಾನದ ಜನರಲ್ ನಿಯಾಜಿ ಶರಣಾಗತಿಯ ಪತ್ರದ ಮೇಲೆ ಸಹಿ ಹಾಕಿ, ಮಾಮೂಲಿ ಯುದ್ಧಕೈದಿಯಂತೆ ಎದ್ದು ಹೋಗಿ ಇತರೆ ಯುದ್ಧ ಕೈದಿಗಳ ಹಾಗೆ ಸಾಲಿನಲ್ಲಿ ಕೂತಿದ್ದ. ಒಟ್ಟಿನಲ್ಲಿ ಪಾಕಿಸ್ತಾನ ಕೇವಲ ಕೆಲವೇ ತಿಂಗಳ ಹಿಂದೆ ಮಾಡಿಸಿ, ಹೆಮ್ಮೆ ಪಟ್ಟುಕೊಂಡಿದ್ದ ವಿಮಾನ ಅಪಹರಣವೊಂದು ಅದರ ಮೂಲಕ್ಕೇ ಬಂದು, ಬಡಿಯಬಾರದ ರೀತಿಯಲ್ಲಿ ಬಡಿದು, ಆ ದೇಶದ ವಿಭಜನೆಯಲ್ಲಿ ಒಂದು ಮಹತ್ವದ ಪಾತ್ರ ವಹಿಸಿತ್ತು.

ಈ ವಿಮಾನದ ಅಪಹರಣ ಮೇಲೆ ಹೇಳಿದ ಹಾಗೆ ಇಷ್ಟು ಸರಳವಾಗಿ ಆಗಿಬಿಟ್ಟಿತಾ? ಅಥವಾ.......

ಈಗ ಸಿಗುತ್ತಿರುವ ಮಾಹಿತಿ ನೋಡುತ್ತ ಹೋದರೆ ಈ ಅಪಹರಣ ಭಾರತದ ಬಾಹ್ಯ ಬೇಹುಗಾರಿಕೆ ಸಂಸ್ಥೆ R&AW (Research & Analysis Wing) ಮಾಡಿಸಿದ್ದ ಒಂದು ರಹಸ್ಯ ಕಾರ್ಯಾಚರಣೆಯಾಗಿತ್ತು!

ಈ ಹಶೀಂ ಖುರೇಷಿ ಎಂಬ ವಿಮಾನ ಅಪಹರಣಕಾರ ಆಗಲೇ R&AW ಏಜೆಂಟ್ ಆಗಿದ್ದ. ಕಾಶ್ಮೀರ ಉಗ್ರವಾದಿಗಳ ಜೊತೆಗಿದ್ದೇ ಅವರ ವಿವರವನ್ನೆಲ್ಲ ಭಾರತದ ಬೇಹುಗಾರರಿಗೆ ಕೊಡುತ್ತಿದ್ದ. ಒಳ್ಳೆಯದೇ. ಹೀಗೇ ಮುಂದುವರಿದ್ದರೆ ಏನೂ ದೊಡ್ಡ ವಿಶೇಷವಿರಲಿಲ್ಲ. ಮುಂದೆ ಈ ಖುರೇಷಿ ಮಕಬೂಲ್ ಭಟ್ಟ್ ಎಂಬ ದೊಡ್ಡ ಉಗ್ರಗಾಮಿಯ ಸಂಪರ್ಕದಲ್ಲಿ ಬಂದ. ಆಗ ಈ ಹಶೀಂ ಖುರೇಷಿಯನ್ನು ಪಾಕಿಸ್ತಾನಕ್ಕೆ ಕಳಿಸಿದರು. ಅಲ್ಲಿ ಏನಾಯಿತೋ ಗೊತ್ತಿಲ್ಲ. ಆದರೆ ಈ ಖುರೇಶಿಯ ನಿಯತ್ತು ಮಾತ್ರ ಕೆಟ್ಟು ಹೋಗಿ ಈಗ ಪಕ್ಕಾ ಕಾಶ್ಮ್ರೀರಿ ಉಗ್ರವಾದಿಯಾಗಿಬಿಟ್ಟ. R&AW ಜೊತೆ ಎಲ್ಲ ಸಂಬಂಧ ಕಡಿದುಕೊಂಡು ಪೂರ್ತಿಯಾಗಿ ಪಾಕಿಗಳಿಗಾಗಿ ಕೆಲಸ ಶುರು ಮಾಡಿಬಿಟ್ಟ. ಅಷ್ಟೊಂದು ವರ್ಷಗಳಿಂದ, ಅಷ್ಟೆಲ್ಲ ಖರ್ಚು ಮಾಡಿ, ಅಭಿವೃದ್ಧಿ ಮಾಡಿಕೊಂಡಿದ್ದ ಒಬ್ಬ ಖಾಸ್ ಏಜೆಂಟ್ ಕೈಕೊಟ್ಟು ಹೋಗುತ್ತಾನೆ ಎಂದರೆ ಅದೊಂದು ದೊಡ್ಡ ನಷ್ಟ. ಇರಲಿ ಅಂತ R&AW ಸುಮ್ಮನಾಯಿತು. ಬೇಹುಗಾರಿಕೆಯಲ್ಲಿ ಇದೆಲ್ಲ ಇದ್ದಿದ್ದೇ.

ಹೀಗೆ ನಿಯತ್ತು ಖರಾಬ್ ಆದ ಖುರೇಷಿಗೆ ಪಾಕಿಸ್ತಾನದಲ್ಲಿ ವಿಮಾನ ಅಪಹರಣದ ತರಬೇತಿಯನ್ನು ಕೊಡಲಾಯಿತು. ಪಾಕಿ ವಾಯುಪಡೆಯಲ್ಲಿ ಇಂತಹ ತರಬೇತಿ ಕೊಡುವ ಜನರೇ ಇದ್ದರು.

ಹೀಗೆ ತರಬೇತಿ ಪಡೆದುಕೊಂಡ ಹಶೀಂ ಖುರೇಷಿ ಮತ್ತೆ ವಾಪಸ್ ಗಡಿಯೊಳಗೆ ನುಸುಳಿದ.  ಈ ಸಲ ನಿಯತ್ತು ಖರಾಬ್ ಆದವನ ನಸೀಬ್ ಸಹಿತ ಖರಾಬಾಗಿತ್ತು. ಗಡಿ ಭದ್ರತಾ ಪಡೆ (Border Security Force - BSF) ಕೈಗೆ ಸಿಕ್ಕಾಕಿಕೊಂಡ. "ಸಿಕ್ಕ್ಯಾ ನನ್ಮಗನೇ!" ಅಂತ ಸರಿಯಾಗಿ ಬಾರಿಸಿ, ಅವನನ್ನು ಮತ್ತೆ ಭಾರತದ ಬೇಹುಗಾರಿಕೆ ಸಂಸ್ಥೆ R&AW ಕೈಗೆ ಕೊಟ್ಟುಬಿಟ್ಟಿತು BSF. ತನ್ನ ಕಥೆ ಮುಗೀತು ಅಂತ ಅಂದುಕೊಂಡ ಖುರೇಷಿ. ಯಾಕಂದ್ರೆ R&AW ಜೊತೆ ಗದ್ದಾರಿ ಮಾಡಿ ಓಡಿ ಹೋಗಿದ್ದ. ಈಗ ಸಿಕ್ಕು ಬಿದ್ದಿದ್ದಾನೆ. ಇಂತವನನ್ನು ಒಂದು ಗುಂಡು ತಲೆ ಹಿಂದೆ ನುಗ್ಗಿಸಿ ಕೊಲ್ಲದೇ ಮತ್ತೇನು ಪೂಜೆ ಮಾಡುತ್ತಾರೆಯೇ? ಕಲ್ಮಾ ಓದಿಕೊಂಡು ಸಾಯಲು ತಯಾರಾಗಿದ್ದ.

ಆದರೆ ಆಗ R&AW ದ ಮುಖ್ಯಸ್ಥರಾಗಿದ್ದವರು ರಾಮೇಶ್ವರನಾಥ್ ಕಾವ್. R&AW ದ ಸ್ಥಾಪಕರೂ ಅವರೇ. ಭಾರತದ ಬೇಹುಗಾರಿಕೆಯ ಪಿತಾಮಹ ಅವರು. ಮತ್ತೆ ಸಿಕ್ಕಾಪಟ್ಟೆ ಚಾಣಾಕ್ಷ. ತಲೆ ಅಂದ್ರೆ ತಲೆ ಅವರದ್ದು. ಅವರು ಹಾಕಿದ ಮಾಸ್ಟರ್ ಪ್ಲಾನ್ ಹೇಗಿತ್ತು ಅಂದ್ರೆ ಅದು ಮಾಸ್ಟರ್ ಸ್ಟ್ರೋಕ್ ಆಗಿ, ಪಾಕಿಸ್ತಾನಕ್ಕೆ ಎಲ್ಲಿಂದ ಏನು ಬಂದು ಬಡಿಯಿತು ಅಂತ ಕೂಡ ಗೊತ್ತಾಗಲಿಲ್ಲ.

ಸಿಕ್ಕಿಬಿದ್ದಿದ್ದ ಹಶೀಂ ಖುರೇಷಿಯ ಜೊತೆ ಮಾತುಕತೆಗೆ ಕೂತರು R&AW ಚೀಫ್ ಕಾವ್. ಇಲ್ಲದ ಒತ್ತಡ ಹಾಕಿದರು. ಆಮಿಷ ಒಡ್ಡಿದರು. ಮತ್ತೆ ಭಾರತದ ಪರವಾಗಿ, ಪಾಕಿಸ್ತಾನದ ವಿರುದ್ಧವಾಗಿ ಕೆಲಸ ಮಾಡುವಂತೆ ಬ್ರೈನ್ ವಾಶ್ ಮಾಡಿಬಿಟ್ಟರು.  ಒಟ್ಟಿನಲ್ಲಿ ಒತ್ತಡದಲ್ಲಿ, ಆಮಿಷದಲ್ಲಿ ಬಂದ ಹಶೀಂ ಖುರೇಷಿ ಮತ್ತೆ ಭಾರತದ ಪರವಾಗಿ ಕೆಲಸ ಮಾಡಲು ರೆಡಿ ಆದ.

ಹಶೀಂ ಖುರೇಷಿ ಬಿಚ್ಚಿಟ್ಟ ವಿವರ ಎಲ್ಲ ಕೇಳಿ ರಾಮೇಶ್ವರನಾಥ್ ಕಾವ್ ಬೆಚ್ಚಿ ಬಿದ್ದರು. ಪಾಕಿಗಳು ಏನು ಪ್ಲಾನ್ ಹಾಕಿ ಕೊಟ್ಟಿದ್ದರು ಗೊತ್ತೆ? ಆ ಕಾಲದ ಪ್ರಧಾನಿ ಇಂದಿರಾ ಗಾಂಧಿಯ ಮಗ ರಾಜೀವ್ ಗಾಂಧಿ ಹಾರಿಸುತ್ತಿದ್ದ ವಿಮಾನವನ್ನೇ ಅಪಹರಿಸಿಬಿಡು ಅಂತ ಹೇಳಿದ್ದರು! ಆಗ ರಾಜೀವ್ ಗಾಂಧಿ ಇಂಡಿಯನ್ ಏರ್ಲೈನ್ಸ್ ನಲ್ಲಿ ಪೈಲಟ್ ಅಂತ ಕೆಲಸ ಮಾಡಿಕೊಂಡಿದ್ದರು.

ರಾಮೇಶ್ವರನಾಥ್ ಕಾವ್ ವಿಚಾರ ಮಾಡಿದರು. ಮೊದಲ ಕೆಲಸ ಅಂದರೆ ಈ ಹಶೀಂ ಖುರೇಷಿ ಸಿಕ್ಕಿಬಿದ್ದಿರುವದು ಯಾರಿಗೂ ಗೊತ್ತಾಗಬಾರದು. ಮುಖ್ಯವಾಗಿ ಪಾಕಿಗಳಿಗೆ, ಕಾಶ್ಮೀರ ಉಗ್ರವಾದಿಗಳಿಗೆ ಗೊತ್ತಾಗಲೇ ಬಾರದು. ಅದಕ್ಕೆಂದು ರಹಸ್ಯವಾಗಿ ಖುರೇಶಿಯನ್ನು ಬೆಂಗಳೂರಿಗೆ ಸಾಗಿಸಿ ಅಡಗಿಸಿಡಲಾಯಿತು. ಮುಂದಿನ ಮಾಸ್ಟರ್ ಪ್ಲಾನ್ ಶುರು ಮಾಡಿತು R&AW.

ಪಾಕಿಸ್ತಾನದ ತಂತ್ರವನ್ನು ಅದಕ್ಕೇ ತಿರುಮಂತ್ರ ಮಾಡುವ ಯೋಜನೆ ರಾಮೇಶ್ವರನಾಥ್ ಕಾವ್ ಹಾಕಿದರು. ಇಂದಿರಾ ಗಾಂಧಿ 'ಓಕೆ' ಅಂತ ಅನುಮತಿ ಕೊಟ್ಟರು.

ಖುರೇಷಿಗೆ ವಿಮಾನ ಅಪಹರಣ ಮಾಡಲು R&AW ಹೇಳಿತು. ಕೇವಲ ಹೇಳಿದ್ದೊಂದೇ ಅಲ್ಲ, ಸರಿಯಾಗಿ ಪ್ಲಾನ್ ಮಾಡಿಕೊಟ್ಟು, ಆಯುಧ ಸಮೇತ ಅವನನ್ನು ಪ್ಲೇನ್ ಒಳಗೆ ನುಗ್ಗಿಸುವ ವ್ಯವಸ್ಥೆ ಕೂಡ ಮಾಡಿತು. ಅಷ್ಟೇ ಅದು ರಾಜೀವ್ ಗಾಂಧಿ ಇದ್ದ ಪ್ಲೇನ್ ಮಾತ್ರ ಆಗಿರಲಿಲ್ಲ. ಎಲ್ಲಾದ್ರೂ ಹೆಚ್ಚೂ ಕಮ್ಮಿ ಆದ್ರೆ!? ಒಂದು ದೊಡ್ಡ ಇಂಟೆಲಿಜೆನ್ಸ್ ಕಾರ್ಯಾಚರಣೆ  ಮಾಡಲು ನಮ್ಮದೇ ಒಂದು ವಿಮಾನವನ್ನು ಅಪಹರಣ ಮಾಡಿಸುವದೇ ದೊಡ್ಡ ರಿಸ್ಕಿ ಕೆಲಸ. ಅಂತದ್ದರಲ್ಲಿ ಅಮ್ಮಾವರ ಮಗನನ್ನು ಹಾಕಿಕೊಂಡು ದೊಡ್ಡ ಲಫಡಾ ಬೇಡ ಅಂತ ಬೇರೆ ಪೈಲಟ್ ಇದ್ದ ವಿಮಾನಕ್ಕೆ ಅಪಹರಣದ ಸ್ಕೆಚ್ ಹಾಕಿತು R&AW. ಅದಕ್ಕೆಂದೇ ಒಂದು ರಿಟೈರ್ ಮಾಡಿ, ಗುಜರಿಗೆ ಹಾಕಲು ರೆಡಿ ಇದ್ದ ವಿಮಾನವೊಂದನ್ನು ಮತ್ತೆ ಸೇವೆಗೆ ಕರೆತರಲಾಯಿತು. ಯಾಕೆಂದ್ರೆ ಪ್ಲಾನ್ ಪ್ರಕಾರ ಖುರೇಷಿ ಆ ವಿಮಾನವನ್ನು ಲಾಹೋರಿನಲ್ಲಿ ಧ್ವಂಸ ಮಾಡಬೇಕಿತ್ತು. ಯಾಕೆ? ಅದೇನು ರಹಸ್ಯವಿತ್ತೋ? ಗೊತ್ತಿಲ್ಲ.

R&AW ಮಾಡಿಕೊಟ್ಟ ಪ್ಲಾನ್ ಪ್ರಕಾರ ವಿಮಾನದ 'ಅಪಹರಣ'(!) ಮಾಡಿದ ಖುರೇಷಿ. ಲಾಹೋರಿನಲ್ಲಿ ಆಗಿನ ಪಾಕಿಸ್ತಾನದ ವಿದೇಶಾಂಗ ಸಚಿವ ಝುಲ್ಫಿಕರ್ ಅಲಿ ಭುಟ್ಟೋ ಏನೇನೋ ಸಂಧಾನ ಮಾಡಿದರು. ಭಾರತ ಲಬೋ ಲಬೋ ಅಂತ ಬೊಬ್ಬೆ ಹಾಕಿತು. ಅಷ್ಟೊತ್ತಿಗೆ ಪಾಕಿಸ್ತಾನದ ಮೇಲೆ ಒತ್ತಡ ಕೂಡ ಸಾಕಷ್ಟು ಬಂದಿತ್ತು. ಭಾರತಕ್ಕೆ ಉಗ್ರವಾದಿಗಳನ್ನು ಬಿಡಲು ಖುರೇಷಿ 'ಒತ್ತಡ' ಹಾಕಿದನಾದರೂ, ಅವನಿಗೂ ಸಹ ಗೊತ್ತಿತ್ತು 'ಅಪಹರಣದ' ಹಿಂದಿನ ನಿಜವಾದ ಮರ್ಮ. ಗೊತ್ತಿಲ್ಲದ್ದು ಕೇವಲ ಪಾಕಿಗಳಿಗೆ ಮಾತ್ರ. ತಮ್ಮ ಪ್ಲಾನ್ ಪ್ರಕಾರ ಖುರೇಷಿ ವಿಮಾನ ಅಪಹರಣ ಮಾಡಿದ್ದಾನೆ ಅಂತ ಪಾಕಿಗಳು ಖುಷಿಯಲ್ಲಿಯೇ ಇದ್ದರು. ರಾಜೀವ್ ಗಾಂಧಿ ಇದ್ದ ಪ್ಲೇನ್ ಅಪಹರಣ ಮಾಡಲಿಲ್ಲ ಅಂತ ಒಂದು ಸಣ್ಣ ಅಸಮಾಧಾನ ಇತ್ತು. ಆದರೇನು, ಕಾಶ್ಮೀರ್ ಹೋರಾಟಕ್ಕೆ ಸಾಕಷ್ಟು ಸ್ಕೋಪ್ ಸಿಕ್ಕಿತು ಬಿಡಿ ಅಂತ ಅಷ್ಟಕ್ಕೇ ಸುಮ್ಮನಾದರು.

ಭುಟ್ಟೋ ಜೊತೆ ಏನೇನೋ 'ಸಂಧಾನ' ಮಾಡಿದ ಭೋಂಗು ಬಿಟ್ಟ ಖುರೇಷಿ, ಪ್ರಯಾಣಿಕರನ್ನು ಇಳಿಸಿ, ಬಾಂಬಿಟ್ಟು ಪ್ಲೇನ್ ಢಂ ಅನ್ನಿಸಿಬಿಟ್ಟ. ವಿಮಾನದಲ್ಲಿ ಏನಾದರೂ ಕುರುಹುಗಳಿದ್ದು, ಪಾಕಿಗಳಿಗೆ ಸಿಕ್ಕು ರಾಡಿ ಏಳುವದು ಬೇಡವೇ ಬೇಡ ಅಂತ R&AW ಎಚ್ಚರಿಕೆ ವಹಿಸಿ ಪ್ಲೇನ್ ಸ್ಫೋಟಿಸಿಬಿಡು ಅಂತ ಹೇಳಿತ್ತಾ? ಗೊತ್ತಿಲ್ಲ. ಕೆಲವರು ಹೇಳಿದರು ISI ವಿಮಾನವನ್ನು ಸ್ಪೋಟಿಸಿತು ಅಂತ. ರಾಮೇಶ್ವರನಾಥ್ ಕಾವ್ ಅವರ ತಲೆ ನೋಡಿ. ಹೋದರೂ ಲಡಕಾಸಿ ವಿಮಾನವೇ ಹೋಗಲಿ ಅಂತ ಹುಡುಕಿ ಹುಡುಕಿ ಡಕೋಟಾ ಗಾಡಿಯಂತಿದ್ದ ವಿಮಾನವನ್ನೇ ಕಳಿಸಿದ್ದರು. ಅದರ ಹೆಸರು ಗಂಗಾ!

ಬಹಳ ಜನರಿಗೆ ಗೊತ್ತಿಲ್ಲದ ವಿಷಯವೆಂದರೆ ಆ ಹೊತ್ತಿಗಾಗಲೇ ಇಂದಿರಾ ಗಾಂಧಿ ಬಾಂಗ್ಲಾದೇಶದ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿಬಿಡಬೇಕು ಅನ್ನುವ ನಿರ್ಧಾರಕ್ಕೆ ಬಂದು ಬಿಟ್ಟಿದ್ದರು. ದಿನಕ್ಕೆ ಲಕ್ಷಗಟ್ಟಲೆ ನಿರಾಶ್ರಿತರು ಪೂರ್ವ ಪಾಕಿಸ್ತಾನದಿಂದ ಬಂದು ಭಾರತದ ಗಡಿಯಲ್ಲಿ ತುಂಬ ಅಶಾಂತಿ ನೆಲೆಸಿತ್ತು. ನಿರಾಶ್ರಿತರಿಗೆ ಊಟ, ವಸತಿ ಇತ್ಯಾದಿ ಒದಗಿಸುವದು ದೊಡ್ಡ ತಲೆನೋವು. ನಿರಾಶ್ರಿತರು ಮತ್ತೆ ಸ್ಥಳೀಯರ ನಡುವೆ ಗಲಭೆ. ಸಾಕು ಸಾಕಾಗಿತ್ತು ಭಾರತಕ್ಕೆ ಈ ಪಾಕಿಗಳ ಆಂತರಿಕ ಸಮಸ್ಯೆ. 'ಇದನ್ನು ಬಗೆಹರಿಸಿ' ಅಂತ ಇಂದಿರಾ ಗಾಂಧಿ ಅಂತರಾಷ್ಟ್ರೀಯ ಸಮುದಾಯದ ಮುಂದೆ ತಮ್ಮಟೆ ಬಾರಿಸಿದರು. ಅಮೇರಿಕಾ ವಿಯೆಟ್ನಾಂ ಯುದ್ಧದಲ್ಲಿ ಮುಳುಗಿ ಹೋಗಿತ್ತು. ಮತ್ತೆ ಆಗಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ ಗೆ ಇಂದಿರಾ ಗಾಂಧಿ ಕಂಡರೆ ಆಗುತ್ತಿರಲಿಲ್ಲ. ಬೇಕಂತಲೇ ಇಂದಿರಾ ಗಾಂಧಿಯನ್ನು ಮುಕ್ಕಾಲು ಘಂಟೆ ಕಾಯಿಸಿದ್ದ ಅವರನ್ನು ಭೆಟ್ಟಿಯಾಗಲು ಹೋದಾಗ. ಆವಾಗಲೇ ಇಂದಿರಾ ಗಾಂಧಿ ಒಂದು ನಿರ್ಧಾರಕ್ಕೆ ಬಂದು ತಮ್ಮ ಸರ್ಕಾರದ ಎಲ್ಲ ದೊಡ್ಡ ತಲೆಗಳಿಗೆ ಬಾಂಗ್ಲಾ ಯುದ್ಧದ ತಯಾರಿ ಮಾಡುವಂತೆ ಹೇಳಿದ್ದರು. ಸ್ಯಾಮ್ ಮಾಣಿಕ್ಷಾ ಎಂಬ ಸೈನ್ಯದ ಜನರಲ್ ಮಿನಿಮಂ ಆರು ತಿಂಗಳ ತಯಾರಿ ಬೇಕೇ ಬೇಕು ಅಂತ ಹೇಳಿ ತಯಾರಿ ಶುರುವಿಟ್ಟುಕೊಂಡಿದ್ದರು. ರಾಮೇಶ್ವರನಾಥ್ ಕಾವ್ ಬೇಹುಗಾರಿಕೆ ತಯಾರಿ ಮಾಡಿ, ಬಾಂಗ್ಲಾ ಬಂಡುಕೋರರಿಗೆ R&AW ಮೂಲಕ ತರಬೇತಿ ಕೊಟ್ಟು, ಪಾಕಿ ಪಡೆಗಳ ಮೇಲೆ ಗೆರಿಲ್ಲಾ ದಾಳಿ ಶುರು ಹಚ್ಚಿಕೊಂಡಿದ್ದರು.

ಟಿಕ್ಕಾ ಖಾನ್ ಎಂಬ ಪಾಕಿಸ್ತಾನದ ಜನರಲ್ ಪೂರ್ವ ಪಾಕಿಸ್ತಾನ (ಈಗಿನ ಬಾಂಗ್ಲಾದೇಶದಲ್ಲಿ) ಅಕ್ಷರಶ ನರಮೇಧ ಶುರುಮಾಡಿಕೊಂಡಿದ್ದ. ಬಂಗಾಲಿಗಳು ತಮಗೆ ಬೇರೆ ದೇಶವೇ ಬೇಕೆಂದು ಹಟ ಹಿಡಿದು ಕೂತಿದ್ದರು. ತಲೆಕೆಟ್ಟು ಹೋಗಿದ್ದ ಯಾಹ್ಯಾ ಖಾನ್ ಎಂಬ ಪಾಕಿ ಮಿಲಿಟರಿ ಸರ್ವಾಧಿಕಾರಿ ಬಂಗಾಳಿಗಳನ್ನು ಹಿಂದೆ ಮುಂದೆ ನೋಡದೆ ಉಡಾಯಿಸಿಬಿಡುವಂತೆ ಆಜ್ಞೆ ಕೊಟ್ಟಿದ್ದ. ಅದರಲ್ಲಿ ಹಿಂದೂ, ಮುಸ್ಲಿಂ ಎಂದು ನೋಡದೆ, ಯಾರ್ಯಾರು 'ಪ್ರತ್ಯೇಕ ದೇಶ ಬೇಕು' ಅಂತ ಅಂದರೋ ಅವರೆಲ್ಲರನ್ನು ಮಷೀನ್ ಗನ್ ಹಚ್ಚಿ ಕೊಂದು ಬಿಡಿ ಅಂತ ಸೈನ್ಯಕ್ಕೆ ಬ್ಲಾಂಕೆಟ್ ಪರ್ಮಿಷನ್. ಪೂರ್ವ ಪಾಕಿಸ್ತಾನದ ಸೈನ್ಯವೇ ಒಡೆದು ಹೋಗಿತ್ತು. ಅವರೆಲ್ಲ ಬಾಂಗ್ಲಾ ಬಂಡುಕೋರರೊಂದಿಗೆ ಸೇರಿ ಪಾಕಿಸ್ತಾನದ ಅಧಿಕೃತ ಸೈನ್ಯದ ಜೊತೆ ಹೋರಾಡುತ್ತಿದ್ದರು.

ಪಶ್ಚಿಮ ಪಾಕಿಸ್ತಾನದಿಂದ ಈಗಿನ ಬಾಂಗ್ಲಾದೇಶದ ಢಾಕ್ಕಾಕ್ಕೆ ವಿಮಾನಗಳು ದಿನಕ್ಕೆ ನೂರಾರು ಟ್ರಿಪ್ ಹೊಡೆಯುತ್ತಿದ್ದವು. ಸೈನಿಕರನ್ನು, ಸಾಮಾನು ಸಾಗಿಸಲು. ಎಲ್ಲವೂ ಈಕಡೆಯಿಂದಲೇ ಹೋಗಬೇಕಾಗಿತ್ತು ನೋಡಿ. ಯಾಕೆಂದ್ರೆ ಬಂಗಾಳಿಗಳು ಹೋರಾಟಕ್ಕೆ ನಿಂತಿದ್ದರು. ಪಾಕಿ ವಿಮಾನಗಳೆಲ್ಲ ಭಾರತದ ವಾಯುಪ್ರದೇಶದ ಮೇಲೆಯೇ ಹಾರಿ, ತ್ವರಿತವಾಗಿ ಮುಟ್ಟಿಕೊಳ್ಳುತ್ತಿದ್ದವು. ಮುಂದೊಂದು ದಿವಸ ಭಾರತ ನೇರವಾಗಿ ಪಾಕಿಸ್ತಾನವನ್ನು ತಡವಿಕೊಂಡಿದ್ದೇ ಆದರೆ ಈ ಪಾಕಿಗಳು ಇಷ್ಟು ತ್ವರಿತವಾಗಿ ಲಾಹೋರ್, ಇಸ್ಲಾಮಾಬಾದ್ ಗಳಿಂದ ಢಾಕ್ಕಾಗೆ, ಚಿಟ್ಗಾಂಗಿಗೆ ಸೈನ್ಯ ಮತ್ತೆ ಮದ್ದು ಗುಂಡು ಸಾಗಿಸುವದು ಮುಂದುವರೆದಿದ್ದರೆ ಭಾರತಕ್ಕೆ ತೊಂದರೆಯಾಗುವದು ಖಾತ್ರಿ ಇತ್ತು. ಮುಂದಾಗುವದನ್ನು ಲಕ್ಷದಲ್ಲಿಟ್ಟುಕೊಂಡು ಪಾಕಿಗಳನ್ನು ಭಾರತದ ವಾಯುಪ್ರದೇಶದ ಮೇಲೆ ಹಾರುವದನ್ನು ನಿರ್ಬಂಧಿಸಲು ಒಂದು ಒಳ್ಳೆ ನೆವ ಹುಡಕಬೇಕಾಗಿತ್ತು. ಅದಕ್ಕೆ ಇಂತಹ ವಿಮಾನ ಅಪಹರಣಕ್ಕಿಂತ ಒಳ್ಳೆಯ ನೆವ ಎಲ್ಲಿಂದ ಸಿಗುತ್ತಿತ್ತು? ಅದೂ ಪಾಕಿಗಳೇ ಹಾಕಿದ್ದ ಸ್ಕೀಮು. ಅದನ್ನು ಅವರಿಗೇ ತಿರುಗಿಸಿ ಭಾರತ ಫುಲ್ ಮೈಲೇಜ್ ತೆಗೆದುಕೊಂಡಿತ್ತು. ಯಾರೂ ಏನೂ ಹೇಳುವ ಹಾಗೆಯೇ ಇರಲಿಲ್ಲ. ಮುಂದೆ ಭಾರತ ಬಾಂಗ್ಲಾ ವಿಮೋಚನೆಯಲ್ಲಿ ನೇರವಾಗಿ ತೊಡಗಿಸಿಕೊಂಡಾಗ ಆಗಲೇ ಪಾಕಿ ಸೈನ್ಯ ಬಸವಳಿದು ಹೋಗಿತ್ತು. ಒಂದು ಬೆಂಕಿ ಪೊಟ್ಟಣ ಬೇಕೆಂದರೂ ಅದೂ ಸಹ ವಿಮಾನದಲ್ಲಿಯೇ ಬರಬೇಕು. ವಿಮಾನ ಫುಲ್ ರೌಂಡ್ ಹಾಕಿ ಬರುವ ತನಕ ಅಷ್ಟೇ ಮತ್ತೆ. ಎಲ್ಲ ಖತಂ. ಎರಡೇ ವಾರದಲ್ಲಿ ಯುದ್ಧ ಮುಗಿದು, ಪಾಕಿಸ್ತಾನ ಒಡೆದು, ಬಾಂಗ್ಲಾದೇಶವೆಂಬ ಒಂದು ಬ್ರಾಂಡ್ ನ್ಯೂ ದೇಶ ತಯಾರಾಗಿ, ಲಕ್ಷದಷ್ಟು ಪಾಕಿ ಸೈನಿಕರು ಸೆರೆ ಸಿಕ್ಕು, ಪಾಕಿಸ್ತಾನ ಬರ್ಬಾದ ಆಗಲು ಒಂದು ಮುಖ್ಯ ಕಾರಣ ಹೀಗೆ ಆಗಿದ್ದರಕಿಂತ ಮಾಡಿಸಿಕೊಂಡಿದ್ದು ಅಂತ ಹೇಳಬಹುದಾದ ಒಂದು ವಿಮಾನ ಅಪಹರಣ.

ವಿಮಾನ ಅಪಹರಣವನ್ನು ಇಷ್ಟೆಲ್ಲ ರಹಸ್ಯವಾಗಿ ಮಾಡಿದ್ದರೂ ಇದೊಂದು ಭಾರತೀಯ ಬೇಹುಗಾರಿಕೆ ಸಂಸ್ಥೆಯೇ ಮಾಡಿಸಿದ ಒಂದು false flag ಕಾರ್ಯಾಚರಣೆ ಅಂತ ಗೊತ್ತಾಗಿಯೇ ಹೋಯಿತು. ಬಾಂಗ್ಲಾ ಯುದ್ಧದಲ್ಲಿ ತನ್ನ ಅಸ್ತಿತ್ವ ಕಾದುಕೊಳ್ಳಲು ಹೆಣಗಾಡುತ್ತಿದ್ದ ಪಾಕಿ ಸರ್ಕಾರಕ್ಕೆ ಸ್ವಲ್ಪ ತಡವಾಗಿ ತಿಳಿಯಿತು. ಪಾಕಿ ಜನ ಸಾಮಾನ್ಯರು ಮಾತ್ರ ಎಲ್ಲ ತಿಳಿದುಕೊಂಡು, ತಮ್ಮ ಸರಕಾರ ಎಷ್ಟು ಮಂದ ಬುದ್ಧಿಯ ಸರಕಾರ ಅಂತ ಅಂಡು ತಟ್ಟಿ ನಗುತ್ತಿದ್ದರು. ಕಾಶ್ಮೀರದಲ್ಲೇ ಕುಳಿತು ಪಾಕಿ ಏಜೆಂಟ್ ತರಹ ವರ್ತಿಸುತ್ತಿದ್ದ ಶೇಕ್ ಅಬ್ದುಲ್ಲಾ, 'ಇದು ಖಾತ್ರಿಯಾಗಿ ಭಾರತದ ಕೆಲಸ' ಅಂತ ಬೊಬ್ಬೆ ಹೊಡೆದೇ ಹೊಡೆದ. ಏನೂ ಉಪಯೋಗವಾಗಲಿಲ್ಲ. ಜನರಲ್ ಯಾಹ್ಯಾ ಖಾನ್ ಎಂಬ ಪಾಕಿಸ್ತಾನದ ಲಷ್ಕರಿ ಸರ್ವಾಧಿಕಾರಿ ಸಾಹೇಬರು ಬಂಗಾಲದ ಕಡೆಯಿಂದ ಒಂದರಮೇಲೊಂದರಂತೆ ಬರುತ್ತಿದ್ದ ಕೆಟ್ಟ ಸುದ್ದಿಗಳಿಗೆ ತತ್ತರಿಸಿ, ಅವರ ರಖಾವ್ ಆಗಿದ್ದ ಜನರಲ್ ರಾಣಿ ಎಂಬ ಅಪ್ರತಿಮ ಸುಂದರಿಯ ತೆಕ್ಕೆಯಲ್ಲಿ ಒಂದೆರೆಡು ಪೆಗ್ ಜಾಸ್ತಿಯೇ ಹಾಕಿ ಖಬರಿಲ್ಲದೆ ಪವಡಿಸಿಬಿಡುತ್ತಿದ್ದರು. ಅವರಿಗೆ ಹೊಟ್ಟೆ ತುಂಬ ತಂಗಡಿ ಕಬಾಬ್, ಕರುಳು ತುಂಬ ದುಬಾರಿ ವಿಸ್ಕಿ ಮತ್ತು ಪಾಕಿಸ್ತಾನದ ರಾಷ್ಟ್ರೀಯ ವೇಶ್ಯೆ ಎಂದೇ ಪ್ರಸಿದ್ಧವಾಗಿದ್ದ ಜನರಲ್ ರಾಣಿಯ ಸಾಂಗತ್ಯ ಸಿಕ್ಕುಬಿಟ್ಟರೆ ಏನೂ ಬೇಡ. ಕಡೆಕಡೆಗೆ ಜನರಲ್ ಯಾಹ್ಯಾ ಖಾನ್ ಯಾವ ಸ್ಥಿತಿಗೆ ಬಂದು ಮುಟ್ಟಿದರು ಅಂದರೆ ಎಲ್ಲ ವ್ಯವಹಾರ ಭುಟ್ಟೋ ಮತ್ತು ಜನರಲ್ ರಾಣಿ ಕೂಡಿ ಸಂಬಾಳಿಸುತ್ತಿದ್ದರು. ಯದ್ವಾ ತದ್ವಾ ತೀರ್ಮಾನ ತೆಗೆದುಕೊಂಡು ಪಾಕಿಸ್ತಾನದ ವಿಭಜನೆಗೆ ಕಾರಣೀಭೂತರಾಗಿದ್ದೇ ಯಾಹ್ಯಾ ಖಾನ್ ಅವರ ಸಾಧನೆ, ಹೆಗ್ಗಳಿಕೆ! ಬರ್ಬಾದ್ ಪಾಕಿಸ್ತಾನದ ನಸೀಬ್!

ಮುಂದೆ ಎಂದೋ ಒಂದು ದಿವಸ ಪಾಕಿಗಳಿಗೆ ಜ್ಞಾನೋದಯವಾಯಿತು. ತಾವು ಮೋಸ ಹೋಗಿದ್ದು ತಿಳಿಯಿತು. ಆಗ ಈ ಹಶೀಂ ಖುರೇಷಿಯನ್ನು ಬಂಧಿಸಿ, ಅವನನ್ನು ವಿಚಾರಣೆಗೆ ಒಳಪಡಿಸಿ, ಹತ್ತೊಂಬತ್ತು ವರ್ಷ ಕಾರಾಗ್ರಹವಾಸ ಶಿಕ್ಷೆ ವಿಧಿಸಲಾಯಿತು.

ನಂತರ ಭುಟ್ಟೋ ಅವರನ್ನೇ ಬೇರೆ ಕಾರಣಕ್ಕೆ ನೇಣು ಹಾಕಿ ಕೊಂದು ಬಿಟ್ಟರು ಪಾಕಿ ಸೈನ್ಯಾಧಿಕಾರಿಗಳು. ಮುಂದಿನ ಸರ್ವಾಧಿಕಾರಿ ಜಿಯಾ ಉಲ್ ಹಕ್ ಬಂದು ಅಬ್ಬರಿಸತೊಡಗಿದ್ದ.

ಅದೇನೇನೋ ಆಗಿ ೧೯೮೦ ರಲ್ಲಿ ಹಶೀಂ ಖುರೇಷಿಯ ಬಿಡುಗಡೆಯಾಯಿತು. ಪುಣ್ಯಾತ್ಮ ನೆದೆರ್ಲ್ಯಾಂಡಿಗೆ ಹೋಗಿ ಕೂತುಬಿಟ್ಟ. ತಣ್ಣನೆ ದೇಶದಲ್ಲಿ ಸ್ವಲ್ಪ ದಿವಸ ಆರಾಮಿದ್ದು ಬರೋಣ ಅಂತ ಹೇಳಿ.

ಹಶೀಂ ಖುರೇಷಿ ಹೇಳಿ ಕೇಳಿ ಡಬಲ್, ಟ್ರಿಪಲ್ ಏಜೆಂಟ್. ಆಕಡೆಯಿಂದ ಪಾಕಿಸ್ತಾನದ ISI, ಈಕಡೆಯಿಂದ R&AW ಎರಡೂ ಸಂಪರ್ಕದಲ್ಲಿದ್ದವು. ಎರಡೂ ಕಡೆಯಿಂದ ಆಮಿಷ ಬರುತ್ತಿದ್ದವು. ಏನು ತಲೆಗೆ ಬಂತೋ ಏನೋ ಇವನಿಗೆ. ಇಸ್ವಿ ೨೦೦೦ ರಲ್ಲಿ ಒಂದು ದಿವಸ ಭಾರತಕ್ಕೆ ಬಂದು ಇಳಿದುಬಿಟ್ಟ ಪುಣ್ಯಾತ್ಮ. R&AW ತನ್ನ ಪುರಾತನ ಏಜೆಂಟನನ್ನು ನಡು ನೀರಿನಲ್ಲಿ ಕೈಬಿಡದೆ ವಾಪಸ್ ಕರೆದು ತಂದು ಮತ್ತೆ ಕಾಶ್ಮೀರದಲ್ಲಿ ಸೆಟಲ್ ಮಾಡಿತು ಅಂತ ಸುದ್ದಿ. ಈಗ ಮತ್ತೆ ಕಾಶ್ಮೀರದಲ್ಲಿ ಏನೇನೋ ಅಭಿವೃದ್ಧಿ ಅದು ಇದು ಅಂತ ಕಾರ್ನಾಮೆ ಮಾಡುತ್ತಾ ಇದ್ದಾನೆ ಈ ಹಶೀಂ ಖುರೇಷಿ. ೧೯೭೧ ರಲ್ಲಿ ಮಾಡಿದ್ದ ವಿಮಾನ ಅಪಹರಣದ ಕೇಸ್ ಕೋರ್ಟಿನಲ್ಲಿ ಇನ್ನೂ ನಡೆಯುತ್ತಲೇ ಇದೆ. ನಮ್ಮ ದೇಶದ ಸಲುವಾಗೇ ವಿಮಾನ ಅಪಹರಣ ಮಾಡಿದರೂ ಅದೆಲ್ಲ ಪೂರ್ತಿ ರಹಸ್ಯ ಕಾರ್ಯಾಚರಣೆ. ಪಬ್ಲಿಕ್ ಆಗಿ ಅವನು ಒಬ್ಬ ಅಪರಾಧಿಯೇ. ಆ ಕೇಸ್ ಮುಚ್ಚಿ ಹೋಗಬಹುದು ಬಿಡಿ. ತಮ್ಮ ಪುರಾತನ ಏಜೆಂಟ್ ಬಗ್ಗೆ ಅಷ್ಟೆಲ್ಲ ಕಾಳಜಿ ವಹಿಸಿರುವ R&AW ಅಷ್ಟೂ ಮಾಡದೆ ಇದ್ದೀತೆ?

ಇದು ಭಾರತದ ಪ್ರಪ್ರಥಮ ವಿಮಾನ 'ಅಪಹರಣದ' ಹಿಂದಿನ ಹಕೀಕತ್ತು. ಅಥವಾ ಇದು ಹೊರಬಂದಿರುವಷ್ಟು ಹಕೀಕತ್ತು. ಇದರ ಹತ್ತು ಪಟ್ಟು ವಿವರಗಳು ಎಂದೂ ಹೊರಬರುವದಿಲ್ಲ ಬಿಡಿ. ಅವೆಲ್ಲ ಪರಮ ರಹಸ್ಯ. ಗೊತ್ತಿದ್ದವರು ಸತ್ತರೆಂದರೆ ಅವರೊಂದಿಗೆ ಅವೂ ಗೋರಿ ಸೇರುತ್ತವೆ.

ಹೀಗೆ ತಮ್ಮ ತಂತ್ರ ತಮಗೇ ತಿರುಮಂತ್ರವಾದಾಗಿನಿಂದ ಪಾಕಿಗಳು ಬಹಳ ಹುಶಾರಾಗಿಬಿಟ್ಟಿದ್ದಾರೆ. ತಾವೇ ಅಪಹರಣ ಮಾಡಿಸಿದರೂ ಅಪಹೃತ ವಿಮಾನಗಳು ತಮ್ಮ ದೇಶದಲ್ಲಿ ಬಂದು ಇಳಿಯಲು ಕೊಡುವದೇ ಇಲ್ಲ. ಹೆಚ್ಚೆಂದರೆ ಇಂಧನ ತುಂಬಿಸಿ, ಹತ್ಯಾರ ಬೇಕಾದರೆ ಕೊಟ್ಟು, ಬೇರೆ ಕಡೆ ಹೋಗಿ ಸಂಧಾನ ಗಿಂಧಾನ ಮಾಡಿಕೊಳ್ಳಿ ಅಂತ ಸಾಗಹಾಕಿಬಿಡುತ್ತಾರೆ. ೧೯೮೦ ರ ದಶಕದಲ್ಲಿ ಸಿಖ್ ಉಗ್ರಗಾಮಿಗಳು ಮೂರ್ನಾಕು ಅಪಹರಣ ಮಾಡಿದ್ದರು. ಆಗೆಲ್ಲ ಪಾಕಿಸ್ತಾನ ಕೇವಲ ತಾತ್ಕಾಲಿಕ ಸ್ಟಾಪ್ ಮಾತ್ರ. ಸಂಧಾನ ಆಗಿದ್ದು ದುಬೈನಲ್ಲಿ. ಇನ್ನೊಂದೆರೆಡು ಕೇಸ್ ಭಾರತದಲ್ಲೇ ಕಮಾಂಡೋ ಕಾರ್ಯಾಚರಣೆ ಮಾಡಿ ನಿವಾರಿಸಲಾಯಿತು. ೧೯೯೯ ರಲ್ಲಿ ಅಪಹರಣವಾದಾಗ  ಪಾಕಿಸ್ತಾನದಲ್ಲಿ ವಿಮಾನ ಇಳಿಸಲು ಕೂಡ ಅನುಮತಿ ಕೊಡಲಿಲ್ಲ. ಹಾಗಾಗಿಯೇ ಮೊದಲು ದುಬೈ, ನಂತರ ಕಂದಹಾರಕ್ಕೆ ಹೋಯಿತು ವಿಮಾನ. ಅದರಲ್ಲಿ ಭಾರತಕ್ಕೆ ದೊಡ್ಡ ಮಂಗಳಾರತಿ ಆಯಿತು ಬಿಡಿ. ಪಾಕಿಗಳು ಮೊದಲಾದ ಅವಮಾನಕ್ಕೆ ಸೇಡು ತೀರಿಸಿಕೊಂಡ ಹಾಗೆ ತಲೆಕೆಟ್ಟ ತಾಲಿಬಾನಿಗಳ ಮೂಲಕ ಸಂಧಾನ ಮಾಡಿಸಿ ತಮಗೆ ಬೇಕಾದ ಉಗ್ರರನ್ನು ಬಿಡಿಸಿಕೊಂಡು ಹೋಗಿದ್ದರು.

ಇದೆಲ್ಲ ವಿವರ ಸಿಕ್ಕಿದ್ದು ಇತ್ತೀಚಿಗೆ ಹೊರಬಂದ Mission R&AW ಎಂಬ ಪುಸ್ತಕದಲ್ಲಿ. R&AW ದ ಮಾಜಿ ಅಧಿಕಾರಿ ಆರ್. ಕೆ. ಯಾದವ್ ಒಂದು ಅದ್ಭುತ ಪುಸ್ತಕ ಬರೆದಿದ್ದಾರೆ. ಹಿಂದೆಲ್ಲ ಕೆಲವು R&AW ಅಧಿಕಾರಿಗಳು ಪುಸ್ತಕ ಬರೆದಿದ್ದರೂ ಅವೆಲ್ಲ ತುಂಬ superficial ಅನ್ನುವ ಹಾಗಿದ್ದವು. ಯಾಕೆಂದರೆ ಬೇಹುಗಾರಿಕೆ ಅಧಿಕಾರಿಗಳಿಗೆ ಅವರದ್ದೇ ಆದ ಕಾನೂನು, ಕಟ್ಟಳೆ, ಇತಿಮಿತಿಗಳು ಇರುತ್ತವೆ. ಬರೆದ ಪುಸ್ತಕ R&AW ಸಂಸ್ಥೆ ಮೊದಲು ಓದಿ, ತಿದ್ದುಪಡಿ ಮಾಡಿ, ಕೆಲವೊಂದು ಮಾಹಿತಿ ಬರೆಯದಂತೆ ಪ್ರತಿಬಂಧಿಸಿ, ನಂತರ ನೀರುನೀರಾದ (diluted) ಆದ ಆವೃತ್ತಿ ಹೊರಗೆ ಬರುತ್ತದೆ. ಆದರೆ ಈ ಯಾದವ್ ಸಾಹೇಬರು ತಮ್ಮ ಜೀವಮಾನ ಪೂರ್ತಿ R&AW ಜೊತೆ ಜಗಳವಾಡುತ್ತಲೇ ಕಳೆದವರು. ಹಾಗಾಗಿ ಯಾವದೇ ಭಿಡೆ ಇಲ್ಲದೆ ಎಲ್ಲ ಬರೆದು ಬಿಟ್ಟಿದ್ದಾರೆ. ಅದ್ಭುತ ವಿವರಗಳನ್ನು ದಾಖಲಿಸಿದ್ದಾರೆ. ಪುಸ್ತಕದ ಮೊದಲರ್ಧ ಸ್ವಲ್ಪ ಬೋರ್ ಹೊಡೆಸೀತು. ಆದ್ರೆ  ೧೯೭೦ ರ ದಶಕದಿಂದ ಆಗಿರುವ ಘಟನೆಗಳ ಬಗ್ಗೆ ಬರೆದಿರುವ ವಿವರಗಳು ಮೈಜುಮ್ಮೆನ್ನಿಸುವಂತೆ ಇವೆ. ಸುಮಾರು ಜನ ಇತರೆ ಅಧಿಕಾರಿಗಳು, ರಾಜಕಾರಣಿಗಳು ಬೆತ್ತಲಾಗಿದ್ದಾರೆ ಇದರಲ್ಲಿ. ಚಿತ್ರ ವಿಚಿತ್ರ ಖಾಸಗಿ ವಿವರಗಳೂ ಇವೆ. ಪತ್ರಿಕೆಗಳಲ್ಲಿ ಬರುವ, ಪಬ್ಲಿಕ್ ಆಗಿ ಲಭ್ಯವಿರುವ ಮಾಹಿತಿ ಎಷ್ಟು ಕಮ್ಮಿ ಮತ್ತು ಅಪೂರ್ಣ ಅಂತ ಅನ್ನಿಸುವದು ಇಂತಹ ಪುಸ್ತಕ ಓದಿದಾಗಲೇ!

ಹೀಗೆ ಎಷ್ಟೋ ಇಂತಹ ಪ್ರಕರಣಗಳು false flag operation ಆಗಿದ್ದರೆ ಏನೂ ಆಶ್ಚರ್ಯವಿಲ್ಲ. ಎಲ್ಲ ಓಕೆ ಬೇಹುಗಾರಿಕೆ ಎಂಬ ನಿಗೂಢ ಸಾಮ್ರಾಜ್ಯದಲ್ಲಿ.

ಈಗ ಲಭ್ಯವಿರುವ ಮಾಹಿತಿಗಳ ಪ್ರಕಾರ ೧೯೭೬ ರಲ್ಲಿ ಆದ ಇಸ್ರೇಲಿ ವಿಮಾನ ಅಪಹರಣ ಕೂಡ ಇದೇ ತರಹದ್ದು. ಇಸ್ರೇಲಿನ ಮೊಸ್ಸಾದ್ ಬೇಹುಗಾರಿಕೆ ಸಂಸ್ಥೆ PFLP ಎಂಬ ಪ್ಯಾಲೆಸ್ಟೈನ್ ಉಗ್ರರ ಗುಂಪನ್ನು infiltrate ಮಾಡಿತ್ತು. ಕೆಲವು ಟಾಪ್ ಲೆವೆಲ್ ಉಗ್ರರನ್ನು ಪಟಾಯಿಸಿ ಒಂದು ವಿಮಾನ ಅಪಹರಣ ಮಾಡಿಸಿ, ಅದನ್ನು ಉಗಾಂಡದ ಎಂಟೆಬ್ಬೆಗೆ ಅಪಹರಿಸಿ, ಅಲ್ಲಿಗೆ ಇಸ್ರೇಲಿ ಕಮಾಂಡೋಗಳು ಏನೇನೋ ಸಾಹಸ ಮಾಡಿ ಹೋಗಿ, ಉಗ್ರರನ್ನು ಕೊಂದು, ಜಗತ್ತೇ ಬೆರಗಾಗುವಂತಹ ಒಂದು surgical operation ಮಾಡಿ, ಎಲ್ಲರನ್ನೂ ಬಿಡಿಸಿಕೊಂಡು ಬಂದಿದ್ದರು. ಹಾಗಂತ ಹೇಳಿ ಜಗತ್ತಿಗೆ ತಿಳಿಸಿದ್ದು. ಒಳಗೆ ನೋಡಿದರೆ ಅದೂ ಒಂದು false flag operation. ಒಳ್ಳೆ ಮೈಲೇಜ್ ಪಡೆದುಕೊಂಡಿತು ಇಸ್ರೇಲ್.

ಈ false flag operations ಹೀಗಿರುತ್ತವೆ ಅಂದ್ರೆ ಮಾಡುವವರಿಗೆ ತಾವು ತಮ್ಮ ಧ್ಯೇಯಕ್ಕಾಗಿಯೇ, ಉದ್ದೇಶ ಸಾಧನೆಗಾಗಿಯೇ ಮಾಡುತ್ತಿದ್ದೇವೆ ಅಂತ ಅನ್ನಿಸುತ್ತದೆ. ಅವರಿಗೆ ಯಾವದೇ ತರಹದ ಸಂಶಯ ಕೂಡ ಬರುವದಿಲ್ಲ. ಪೂರ್ತಿ ಕಾರ್ಯಾಚರಣೆಯನ್ನು compartmentalize ಮಾಡಿಬಿಟ್ಟಿರುವದರಿಂದ ಸಂಪೂರ್ಣ ಮಾಹಿತಿ ಕೆಲವೇ ಕೆಲವು ಟಾಪ್ ಲೆವೆಲ್ ಜನರಿಗೆ ಬಿಟ್ಟರೆ ಯಾರಿಗೂ ಗೊತ್ತಿರುವದಿಲ್ಲ.

ಇಂತಹ false flag operation ಗಳ ಹಿಂದಿರುವ ಒಳಸಂಚು ಅರ್ಥಾತ conspiracy theory ಎಲ್ಲಿಯ ತನಕ ಹೋಗುತ್ತವೆ ಅಂದರೆ ಪ್ರತಿಯೊಂದು ಅವಘಡದ ಹಿಂದೆ 'ಹೀಗೂ ಆಗಿರಬಹುದಾ?' ಅನ್ನುವಂತಹ ವಿವರಗಳು ಹೊರಬರುತ್ತವೆ. ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಗೆ ತದ್ವಿರುದ್ಧ. ಕೆಲವೊಂದು ತುಂಬ ನಿಜ ಅನ್ನಿಸಿದರೆ ಕೆಲವೊಂದು 'ಸಾಧ್ಯವೇ ಇಲ್ಲ' ಅಂತ ಅನ್ನಿಸಿಬಿಡುತ್ತವೆ. ೯/೧೧, ೨೬/೧೧, ಓಸಾಮಾ ಬಿನ್ ಲಾಡೆನ್ ಹತ್ಯೆ, ವಿಯೆಟ್ನಾಂ ಯುದ್ಧ, ಕೆನಡಿ ಹತ್ಯೆ, ಸಂಜಯ್, ಇಂದಿರಾ, ರಾಜೀವ್ ಗಾಂಧಿಗಳ ಹತ್ಯೆ, LTTE  ನಿರ್ನಾಮ, ರಾಜಕುಮಾರಿ ಡಯಾನಾ ಅಪಘಾತ, ಹೀಗೆ ಎಲ್ಲದರ ಬಗ್ಗೆ ಚಿತ್ರ ವಿಚಿತ್ರ conspiracy theory ಗಳು ಸಿಗುತ್ತವೆ. ಗೂಗಲ್ ಮಾಡಿ ನೋಡಿ. ಅವೆಲ್ಲ ಎಷ್ಟು ನಿಜ? ಎಲ್ಲ ಅವರವರ ಭಾವಕ್ಕೆ, ಭಕುತಿಗೆ ಬಿಟ್ಟಂತೆ ಅಂತ ಹೇಳಿ ಸುಮ್ಮನಾಗಬೇಕು ಅಷ್ಟೇ!

Mission R&AW ಪುಸ್ತಕ

8 comments:

Vimarshak Jaaldimmi said...


Interesting!

Jummies may also sketch such plans!!

ವಿ.ರಾ.ಹೆ. said...

ಅರೆ! ಭಾರತದ ಈ ವಿಮಾನ ಅಪಹರಣದ ವಿಷಯ ಗೊತ್ತೇ ಇರಲಿಲ್ಲ ನಂಗೆ!! :( ಒಳ್ಳೇ ಕುತೂಹಲಕಾರಿಯಾಗಿ ಬರದ್ದೆ.

ಅಂದಹಾಗೆ ಇಂತಹ ಪುಸ್ತಕಗಳೆಲ್ಲಾ ಬಿಡುಗಡೆ ಆಗಿದ್ದೆ ಹೆಂಗೆ ಗೊತ್ತಾಗ್ತು ಮಾರಾಯ ನಿಂಗೆ?

Brijesh Mukre said...

bhaal chand bardi anna... odkont hodang hodang neenoo elli yavdar agent gigent aagi ant doubt barak shuru aagittu!! But it made a wonderful reading.

Mahesh Hegade said...

Vikas,

Thanks.

Recommendations feature from book sellers like amazon.com, goodreads.com are pretty good in recommending the books that are similar to the one you have liked.

Another useful tool is to create google alerts for terms you are interested in so that you get alerts when there is a new development on the topics you are interested in.

Manas Publications publishes many such books. So keep looking at their website.

After all this, many times you just chance upon on such books like many things in life :)

Mahesh Hegade said...

Thanks Brijesh.

ನಾವ್ ಏಜೆಂಟ್ ಆದರೂ ಕೇವಲ LIC ಏಜೆಂಟ್ ಮಾತ್ರ ಮಾರಾಯ. ಇವೆಲ್ಲಾ ಏಜೆಂಟ್ ಆಗೋ ಟೈಪ್ ಮಂದಿ ಬ್ಯಾರೆನೇ ಇರ್ತಾರ :)

Anonymous said...

very interesting read...

Mahesh Hegade said...

Thank you, Nagaraj Badiger.

Anonymous said...

What i don't realize is actually how you're not actually a lot more well-appreciated
than you may be now. You're so intelligent. You already know therefore significantly in relation to this topic, produced me in my view imagine it from a lot of varied angles.
Its like women and men don't seem to be interested except it is
one thing to do with Girl gaga! Your individual stuffs outstanding.
At all times maintain it up!

Feel free to visit my web-site phoenix law