Friday, September 19, 2014

ಫೋನಲ್ಲೇ ಆಶೀರ್ವಚನ ಮಾಡಿದ್ದ ಸ್ವಾಮಿಗಳು

ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಗಳು
[ಹವ್ಯಕ ಭಾಷೆ ಗೊತ್ತಿಲ್ಲದವರಿಗೆ: ಒಮ್ಮೆ ನಮ್ಮ ಸ್ವಾಮಿಗಳ ಜೊತೆ ಫೋನಲ್ಲಿ ಮಾತಾಡುವ ಸೌಭಾಗ್ಯ ಸಿಕ್ಕಿತ್ತು. ಅದರ ಬಗ್ಗೆ ಒಂದು ಬ್ಲಾಗ್ ಪೋಸ್ಟ್. ಅಷ್ಟೇ]

'ಅದಾಗಿ ಹತ್ತು ವರ್ಷಾಗೋತ?' ಹೇಳಿ ನನ್ನನ್ನೇ ನಾ ಕೇಳಿಕೆಂಡಿ.

ಹೌದು, ೨೦೦೪ ರ ಒಂದು ದಿವಸ. ಆವಾಗ ಬಾಸ್ಟನ್ ನಗರದ ಆಸುಪಾಸಿನಲ್ಲಿ ಇದ್ದಿದ್ದಿ. ರಾತ್ರಿ ಸುಮಾರು ಹನ್ನೊಂದು ಗಂಟೆ ಹೊತ್ತು. ಭಾರತದಲ್ಲಿ ಬೆಳಿಗ್ಗೆ ಒಂಬತ್ತು ಘಂಟೆ ಹೊತ್ತು.

ಮನೆ ಫೋನ್ ರಿಂಗಾತು. 'ಯಾರಪಾ ಇಷ್ಟೊತ್ತಿನಲ್ಲಿ ಫೋನ್ ಮಾಡ್ಜಾ?' ಹೇಳಿ ನೋಡಿರೆ ಕಾಲರ್ ಐಡಿ ಒಳಗೆ ಅಪ್ಪನ ನಂಬರ್ ಕಂಡ್ಚು. ಅದೂ ಅಪ್ಪನ ಮೊಬೈಲ್ ನಂಬರ್. ಅಂವಾ ಫೋನ್ ಮಾಡದು ಕಮ್ಮಿ. ನಾನೇ ಮಾಡದು. ಅದೂ ವಾರದ ಒಂದು ದಿವಸ, ಒಂದು ಸಮಯ ಹೇಳಿ ನಿರ್ಧರಿಸಿಕೆಂಡು ಅದೇ ಹೊತ್ತಿಗೆ ಫೋನ್ ಮಾಡಿ, ವಾರದ ಮಾತುಕತೆ ಮುಗ್ಸದು ನಮ್ಮ ರೂಢಿ. ಹಾಂಗಿದ್ದಾಗ ಇಂವಾ ಈಗ ಎಂತಕ್ಕೆ ಫೋನ್ ಮಾಡ್ತಾ ಇದ್ದಾ? ಅದೂ ಮೊಬೈಲ್ ನಿಂದ? ಹೇಳಿ ಒಂದು ಕ್ಷಣ ವಿಚಾರ ಬಂದಿದ್ದು ಖರೆ. ಆವಾಗ ಮತ್ತೆ ಮೊಬೈಲ್ ಕಾಲ್ ರೇಟ್ ಅದೂ ಇಂಟರ್ನ್ಯಾಷನಲ್ ಕಾಲ್ ರೇಟ್ ಎಲ್ಲಾ ಸುಮಾರು ಜಾಸ್ತಿ ಇದ್ದಿತ್ತು ನೋಡಿ. ಹಾಂಗಾಗಿ ಏನೋ ಇಂಪಾರ್ಟೆಂಟ್ ವಿಷಯವೇ ಇದ್ದಿಕ್ಕು. ಅದಕ್ಕೇ ಅಪ್ಪಾ ಫೋನ್ ಮಾಡಿದ್ದಾ ಹೇಳಿ ತೆಳಕಂಡು ಫೋನ್ ಎತ್ತ್ಜಿ.

'ಹಲೋ ಅಪ್ಪಾ! ಎಂತದೋ ಸುದ್ದಿ?' ಅಂದಿ.

'ಯಾನು ಮಗಾ, ಅಪ್ಪಾ' ಅಂದಾ. ಇದು ಅಪ್ಪನ ಫೋನ್ ಮಾಡಿ ಗ್ರೀಟ್ ಮಾಡ ಭಾಷೆ. ಕಾಲ್ ಕ್ವಾಲಿಟಿ ಚೊಲೊ ಇತ್ತಿಲ್ಲೆ. ಗೊಜಾ ಗೊಜಾ ಅಂತು. ಸಿಗ್ನಲ್ ಸರಿ ಸಿಕ್ಕಾಂಗಿಲ್ಲೆ ಅಂದಕಂಡಿ. ಆ ಕಾಲದ ಮೊಬೈಲ್ ವ್ಯಾಷಾ ನೆನೆಸಿಕೆಂಡರೆ ಸಾಕು. ಸಿಗ್ನಲ್ ಸಿಗ್ತಿಲ್ಲೆ. ಕೂಗದ ಬಿಡ್ತ್ವಿಲ್ಲೆ. ಕೂಗದು ನೋಡಿರೆ ಸಾಕು. ಎಲ್ಲಾರು ಹನಿ ಹತ್ರ ಇದ್ದರೆ ಅವು ಕೂಗದೇ ಕೇಳಬುಡ್ಗು. ಆ ನಂನಿ ವ್ಯಾಷಾ. ಈಗೂ ಹಾಂಗೇ ಆತು. ಸರಿ ಕೇಳಿದ್ದೇ ಇಲ್ಲೆ.

ಸಿರ್ಸಿ, ಜೀಎಮ್ಮಾ, ರಾಮಚಂದ್ರಾಪುರ ಮಠ, ಸ್ವಾಮಿಗಳು, ಬಂಜ್ರು...... ಹೇಳಿ ಬಿಡಿಬಿಡಿಯಾಗಿ ಒಂದಿಷ್ಟು ಎಂತೋ ಕೇಳ್ಚು.

'ಸರಿ ಕೇಳ್ತಾ ಇಲ್ಲ್ಯೋ. ಎಂತಾ ಹೇಳ್ತಾ ಇದ್ಯನ. ಎಲ್ಲಾರು ಲ್ಯಾಂಡ್ ಲೈನ್ ಸಿಕ್ಕರೆ ನೋಡಾ,' ಅಂದಿ.

'ಅಡ್ಡಿಲ್ಲೆ ನೋಡ್ತೆ. ಸಿಗ್ನಲ್ಲು ಸರಿ ಸಿಕ್ತಿಲ್ಲೆ....' ಹೇಳಿಕೆತ್ತ ಅಪ್ಪಾ ಇಟ್ಟಾ ಫೋನ್.

ಸ್ವಲ್ಪೇ ಹೊತ್ತಿನ ನಂತರ ಮತ್ತ ಬಂತು ಫೋನ್. ಅದೇ ನಂಬರ್. ಈ ಸರಿಯಾದರೂ ಸಮಾ ಕೇಳಿರೆ ಸಾಕು ಅಂದ್ಕಂಡು ಫೋನ್ ಎತ್ತ್ಜಿ. ಮತ್ತೆ ಅಪ್ಪಾ. ಈ ಸರಿ ಸುಮಾರು ಸರಿ ಕೇಳ್ಚು.

'ಹಾಂ! ಈಗ ಸುಮಾರು ಸರಿ ಕೇಳ್ತು. ಹೇಳು' ಅಂದಿ. ಒಳಬದಿಂದ ಹೆರಗೆ ಬಂದು, ಎಲ್ಲೋ ಸಿಗ್ನಲ್ ಚೊಲೊ ಸಿಗ ಜಾಗಾ ಹುಡುಕ್ಜೀ ಅಂದನಪಾ ಅಪ್ಪಾ. 

ಸುಮಾರು ಹೊತ್ತು ಹೇಳಿದ ಮ್ಯಾಲೆ ವಿಷಯ ಗೊತ್ತಾತು. ವಿಷಯ ಇಷ್ಟಿತ್ತು.

ಅಪ್ಪಾ ಸಿರ್ಸಿ ಸಮೀಪದ ಕಾನಸೂರ ಹತ್ತಿರದ ಮಸಗುತ್ತಿಮನೆ ಹೇಳ ಹಳ್ಳಿಗೆ ಬಂಜಾ. ಧಾರವಾಡದ ಜೀಎಮ್ ಹೆಗಡೆ ಸಂಗ್ತಿಗೆ ಬಂಜಾ. ಅದು ಜೀಎಮ್ ಹೆಗಡೆ ಮೂಲ ಮನೆ. ಜೀಎಮ್ ಹೆಗಡೆ ನಮಗೆಲ್ಲ ಜೀಯಮ್ಮಾ ಹೇಳೇ ಆತ್ಮೀಯ. ಅಂವಾ ಧಾರವಾಡದಲ್ಲಿ ಕನ್ನಡ ಪ್ರೊಫೆಸರಾ. ಸಂಬಂಧಿ ಕೂಡ ಹೌದು. ಆವತ್ತು ನಮ್ಮ ರಾಮಚಂದ್ರಾಪುರದ ಮಠದ ಸ್ವಾಮಿಗಳು ಜೀಎಮ್ ಹೆಗಡೆ ಮನಿಗೆ ಬಂದಿದ್ದರು ಹೇಳ್ಯಾತು. ಪಾದಪೂಜೆಯೋ ಮತ್ತೆಂತೋ ಇತ್ತು ಕಾಣ್ತು. ಎಲ್ಲ ಕೂಡಿ ಇವೆಲ್ಲಾ ಧಾರವಾಡದಿಂದ ಸ್ವಾಮಿಗಳ ದರ್ಶನಕ್ಕೆ ಬಂದವು. ಇಷ್ಟು ಆಗಿದ್ದು .

'ಸರಿ. ಚೊಲೊ ಆತು. ಸ್ವಾಮಿಗಳಿಗೆ ನಮ್ಮದೂ ನಮಸ್ಕಾರ ಹೇಳಿಬಿಡು ಹಂಗಾರೆ,' ಹೇಳಿ ಮಾತು ಮುಗಸಲ್ಲೆ ಹೊಂಟಿ.

'ಸ್ವಾಮಿಗಳು ಮಾತಾಡ್ತಿ ಅಂದ್ರೆ ಮಾತಾಡ್ತ್ಯಾ?' ಹೇಳಿ ಕೇಳಿಬಿಡವ ಅಪ್ಪಾ!

ಹಾಂ! ಹೇಳಿ ಬೆಚ್ಚ್ಬಿದ್ದಿ. ಜೀವನದಲ್ಲಿ ಸ್ವಾಮಿಗಳನ್ನ, ಸನ್ಯಾಸಿಗಳನ್ನ ನೋಡಿದ್ದೇ ಭಾಳ ಕಮ್ಮಿ, ಮಾತು ಗೀತು ಆಡಿದ್ದೇ ಇಲ್ಲೆ. ಈಗ ಫೋನ್ ನಲ್ಲಿ ಸ್ವಾಮಿಗಳ ಸಂಗ್ತಿಗೆ ಮಾತಾಡಸ್ತಿ ಅಂಬಾ. ಹ್ಯಾಂಗನ? ಎಂತನ? ಎಂತಾರು ಮಳ್ಳ ಹಲ್ಬಿರೆ ಕಷ್ಟಾ. ನಾ ಮಳ್ಳ ಹಲ್ಬಿರೆ ಹೇಳಿ. ಸ್ವಾಮಿಗಳು ಮಳ್ಳ ಹಲ್ಬತ್ರು ಹೇಳಿ ಅಲ್ಲಾ ಮತ್ತೆ. ಮಳ್ಳ ಹಲಬಲ್ಲೆ ಅವ್ರಿಗೆಂತಾ ಮಳ್ಳಾ? ಮಳ್ಳ ಗಿಳ್ಳ ಹಲ್ಬ ವ್ಯಾಷ ಇದ್ದರೆ ಅದೆಲ್ಲಾ ನಮ್ಮದೇ.

'ಸರಿ ಮಾರಾಯಾ. ಆದ್ರೆ ಮೊಬೈಲ್ ನಲ್ಲಿ ಆದ್ರೆ ಸರಿ ಅಪ್ಪದು ಸುಳ್ಳು. ಕಡಿಗೆ ಸ್ವಾಮಿಗಳ ಕೈಗೆ ಫೋನ್ ಕೊಟ್ಟಾಗೂ ಗೊಜಾ ಗೊಜಾ ಆದ್ರೆ ಕಷ್ಟ. ಹ್ಯಾಂಗೆ ಮಾತಾಡಸ್ತೆ? ಒಳಬದಿಗೆ ಸಿಗ್ನಲ್ ಸರಿ ಸಿಗ್ತಿಲ್ಲೆ ಅಂಬೆ? ಹಾಂ?' ಹೇಳಿ ಕೇಳ್ಜೆ.

'ಒಳಬದಿಗೆ ಹೋಗಿ ನೋಡ್ತೆ. ಜೀಯಮ್ಮ ಹೆಗಡೆ ಕೂಡೆ ಮಾತಾಡಿ ಲ್ಯಾಂಡ್ ಲೈನ್ ವ್ಯವಸ್ಥೆ ಮಾಡಲಾಗ್ತಾ ನೋಡ್ತೆ. ಲೈನ್ ಮ್ಯಾಲೇ ಇರು. ಅಕಾ?' ಹೇಳಿಕೆತ್ತ ಒಳಬದಿಗೆ ಹೊಂಟಾ ಕಾಣ್ತು ಅಪ್ಪಾ. ಎಂತಕ್ಕೆ ಅಂದರೆ ಫೋನ್ ಮತ್ತ ಗೊಜಾ ಗೊಜಾ ಹೇಳಲ್ಲೆ ಶುರು ಮಾಡ್ಚು.

ನಂತರ ಕೇಳಿದ್ದು ಫುಲ್ ರನ್ನಿಂಗ್ ಕಾಮೆಂಟರಿ. ಖರೆ ಅಂದ್ರೂ ಅದು ರನ್ನಿಂಗ್ ಕಾಮೆಂಟರಿನೇ. ಎಂತಕ್ಕೆ ಅಂದ್ರೆ ಸ್ವಾಮಿಗಳು ಇದ್ದ ಜಾಗಕ್ಕೆ ಒಂದು ಲ್ಯಾಂಡ್ ಫೋನ್ ತಂದು ಇಡವು ಹೇಳಿ ಇಡೀ ಜೀಎಮ್ ಹೆಗಡೆ ಮನೆ ಜನಾ ಎಲ್ಲಾ ರನ್ನಿಂಗ್ ಅಂದ್ರೆ ಅತ್ಲಾಬದಿಂದ ಇತ್ಲಾ ಬದಿಗೆ ಓಡ್ಯಾಡ್ಜ ಕಾಣ್ತು.

'ಏ, ಹನಿ ಇತ್ಲಾಗ್ ಎಳಿಯಾ. ವೈರ್ ಹನಿ ಶಣ್ಣಾಗೋತು ಕಾಣ್ತು. ಮೊಬೈಲ್ ಸಿಗ್ನಲ್ ಇಲ್ಲೇ ಇಲ್ಯಾ? ಮಳ್ಳಸತ್ತ ಮೊಬೈಲೇಯಾ ಹೇಳಿ. ಒಳಬದಿಗೆ ಹತ್ತೇ ಇಲ್ಲೇ. ತಡೀರಿ. ವೈರ್ ತಪ್ಪಲೆ ಒಳ ಬದಿಗೆ ಹೋಜಾ ಮಾಣಿ. ಏ! ಸಿಗ್ಚನೋ ವೈರ್? ಬೆಗ್ಗನೆ ತಗಂಬಾ ಮಾರಾಯಾ!' ಹೇಳಿ ದೊಡ್ಡ ಮಟ್ಟದ ಕಾಮಗಾರಿ ಶುರು ಮಾಡಿದಿದ ಕಾಣ್ತು ಜೀಎಮ್ ಹೆಗಡೆ ಮನೆಯವರು. ಇದೆಲ್ಲ ಪೂರ್ತಿ ಕೇಳಿದ್ದಿಲ್ಲೆ. ಗೊಜಾ ಗೊಜಾ ಹೇಳಿ ಕೇಳ್ತಾ ಇದ್ದ ಚೂರು ಪಾರಿಂದ ಏನೋ ಒಂದು ತರಹದ ಅರ್ಥ ನಾವೇ ಮಾಡಿಕೆಂಡಿದ್ದು.

'ಥೋ! ಸ್ವಾಮಿಗಳನ್ನ ನಮ್ಮ ಸಂಗ್ತಿಗೆ ಫೋನ್ ನಲ್ಲಿ ಮಾತಾಡಸವು ಹೇಳಿ ಎಲ್ಲರಿಗೂ ಎಷ್ಟ ತೊಂದ್ರೆಯನ,' ಹೇಳಿ ಅನ್ನಿಸಿತ್ತಾ? ಗೊತ್ತಿಲ್ಲ. ಜೀಎಮ್ ಹೆಗಡೆ ಮನೆ ಜನಾ ಎಲ್ಲರೂ ಇಷ್ಟು ಆತ್ಮೀಯರು ಅಂದ್ರೆ ಅಷ್ಟು ಆತ್ಮೀಯರು. ಅಂತವಕ್ಕೆ ತ್ರಾಸು ಕೊಡದ್ದೇ ಮತ್ಯಾರಿಗೆ ತ್ರಾಸು ಕೊಡನ? ಹೇಳಿ.

'ಮಗಾ, ಯಾನು ಫೋನ್ ಇಡ್ತೆ. ನೀನೂ ಇಡು. ಜಿಎಮ್ ಮಾವನ ಮನೆ ಲ್ಯಾಂಡ್ ಲೈನ್ ತಯಾರಾತು. ಸ್ವಾಮಿಗಳ ಬುಡಕ್ಕೇ ತೆಕ ಹೋಗಿ ಇಟ್ಟಿದ್ದ ಅವ್ಕಾ. ಅಲ್ಲಿಂದಲೇ ಡಯಲ್ ಮಾಡ್ತೆ. ಅಕಾ? ಮಾಡಿ ಸ್ವಾಮಿಗಳ ಕೈಗೆ ಕೊಡ್ತೆ. ಅಡ್ಡಿಲ್ಯ?' ಹೇಳಿ ಅಪ್ಪಾ ಫೋನ್ ಕಟ್ ಮಾಡ್ಜಾ. ರನ್ನಿಂಗ್ ಕಾಮೆಂಟರಿ ಮುಗತ್ತು. ನಾನೂ ಫೋನ್ ಇಟ್ಟು. ಮುಂದೆ ಬಪ್ಪ ಸ್ವಾಮಿಗಳ ಫೋನಿಗೆ ಕಾದು ಕೂತೆ.

ರಿಂಗಾತು ಮತ್ತೆ. ಬಂತಲಿ ಫೋನ್. ಫೋನ್ ಎತ್ತಕರೆ ಒಂದು ನಮ್ನಿ ಭಯ ಮಿಶ್ರಿತ ಭಕ್ತಿಯೋ ಅಥವಾ ಭಕ್ತಿ ಮಿಶ್ರಿತ ಭಯವೋ. ಒಟ್ಟು ಒಂದ್ನಮ್ನಿ. ಹೇಳಿ ಕೇಳಿ ಸ್ವಾಮಿಗಳಪಾ. ಎದ್ರಿಗೆ ಭೆಟ್ಟಿಯಾದರೆ ನಮಸ್ಕಾರ ಹಾಕಿ, ಕೈ ಮುಕ್ಕಂಡು ನಿಂತಕಂಡು, ಹೇಳಿದ್ದ ಕೇಳಿಕೆಂಡು, ಪ್ರಸಾದ ಕೊಡ್ತ್ರು ತಂಗಂಡು ಬಂದರೆ ಮುಗತ್ತು. ಫೋನ್ ನಲ್ಲಿ ಹ್ಯಾಂಗೆ ಮಾಡವು? ಎಂತಾ ಹೇಳವು? ಹ್ಯಾಂಗನ?

ಫೋನ್ ಎತ್ತಿ ಹಲೋ ಅಂದೆ. ಮತ್ತೆ ಅಪ್ಪನೇ ಇದ್ದಿದ್ದಾ. ಇಂಟ್ರೊಡಕ್ಷನ್ ಕೊಡಲೆ.

'ಮಗಾ, ಫೋನ್ ಸ್ವಾಮಿಗಳ ಕೈಗೆ ಕೊಡ್ತೆ. ಮಾತಾಡು,' ಹೇಳಿಕೆತ್ತ ಅಪ್ಪ ಸ್ವಾಮಿಗಳ ಕೈಗೆ ಕೊಟ್ಟಾ ಕಾಣ್ತು.

'ಅವನ ಹೆಸರು ಮಹೇಶಾ ಹೇಳಿ. ಅಮೇರಿಕಾದಲ್ಲಿ ಇದ್ದಾ. ಯನ್ನ ಕಿರಿ ಮಗಾ. ಮಾತಾಡಿ ನೀವು.......' ಫೋನ್ ಕೊಡ್ತಾ, ಹೇಳದು ಕೇಳ್ಚು. ಓಹೋ! ಇದು ಸ್ವಾಮಿಗಳಿಗೆ ನಮ್ಮ ಇಂಟ್ರೊಡಕ್ಷನ್. ಅವರಿಗೂ ನಮ್ಮ ನಾಮಧೇಯ ಮತ್ತೊಂದು ಎಲ್ಲ ಗೊತ್ತಾಗವಲಿ. ಇಲ್ಲೆ ಅಂದ್ರೆ ಎಂತಾ ಹೇಳಿ ಮಾತಾಡವು ಅವರು?

ಸ್ವಾಮಿಗಳು ಲೈನ್ ಮ್ಯಾಲೆ ಬಂದ್ರು. ನಮಸ್ಕಾರ ಅಂದಿ. ಸ್ವಾಮಿಗಳು ಒಂದು ಮೂರು ನಾಕು ನಿಮಿಷ ಮಾತಾಡ್ಜ್ರು. ಶುದ್ಧವಾಗಿ, ಅಡೆ ತಡೆ ಇಲ್ಲದೇ, ಸರಳವಾಗಿ ಮಾತಾಡ್ಜ್ರು. ಫೋನ್ ಮೇಲೆ ಅಷ್ಟು ಚೊಲೊ ಮಾತಾಡದೂ ಒಂದು ಸ್ಕಿಲ್ಲು. ಎಲ್ಲರಿಗೂ ಬತ್ತಿಲ್ಲೆ. ಫೋನ್ ಮ್ಯಾಲೆ ಗೊಜ್ಜು ಬೀಸವೇ ಜಾಸ್ತಿ. ನನ್ನೂ ಹಿಡದು. ಆದ್ರೆ ಸ್ವಾಮಿಗಳದ್ದು ಶುದ್ಧ, ಸರಳ, ಸ್ಪಷ್ಟ, ಸುಲಲಿತ ಮಾತು.

ಸ್ವಾಮಿಗಳು ಮೊದಲು ನಮ್ಮ ಮನೆತನದ ಪರಿಚಯ ಎಲ್ಲ ಹೇಳ್ಜ್ರು. ಆಶ್ಚರ್ಯ ಅಂದ್ರೆ ಅವರು ಸ್ವಾಮಿಗಳಾಗಿದ್ದು ೧೯೯೦ ಆಸುಪಾಸಿನಲ್ಲಿ. ಆ ಹೊತ್ತಿಗೆ ಮಠದ ದೊಡ್ಡ ಭಕ್ತರಾಗಿದ್ದ ಅಜ್ಜ (ಅಪ್ಪನ ಅಪ್ಪ), ಸಣ್ಣಜ್ಜ  ಇತ್ಯಾದಿ ತೀರಿಹೋಗಿದ್ದ. ಅವೆಲ್ಲಾ ಇವರ ಹಿಂದಿನ ಸ್ವಾಮಿಗಳ ದೊಡ್ಡ ಭಕ್ತರಾಗಿದ್ದ. ಮತ್ತೆ ತಮ್ಮ ತಮ್ಮ ವಿದ್ವತ್ತು ಮತ್ತಿತರ ಕಾರಣಗಳಿಂದ ಹಿಂದಿನ ಸ್ವಾಮಿಗಳಿಗೆ ಭಾಳ ಕ್ಲೋಸ್ ಇದ್ದಿದ್ದ. ಆದ್ರೆ ಈ ಸ್ವಾಮಿಗಳು ಸ್ವತಃ ಅವರೆಲ್ಲರ ಪರಿಚಯ ಇಲ್ಲದಿದ್ದರೂ, ಅವರ ಮಠದ ಪರಿವಾರ ಕೊಟ್ಟ ಬ್ಯಾಕ್ ಗ್ರೌಂಡ್ ಮಾಹಿತಿ ತೆಳಕಂಡು, ಭಾಳ ಚಂದಾಗಿ ನಮ್ಮ ಮನೆತನದ ಹಿನ್ನಲೆ, ಹಿಂದಿನವರ ಭಕ್ತಿ, ಸೇವೆ ಎಲ್ಲಾ ಪ್ರಶಂಸಿದರು. ಒಳ್ಳೆದಾಗಲಿ ಹೇಳಿ ಆಶೀರ್ವಾದ ಮಾಡ್ಜ್ರು. ಬಂದಾಗ ಮಠಕ್ಕೆ ಮುದ್ದಾಂ ಬಾ ಅಂದ್ರು. ಎಂತಾರು ಕೇಳದಿದ್ದ ಹೇಳಿ ಕೇಳ್ಜ್ರು. 'ಎಂತದೂ ಇಲ್ಲೆ. ದೊಡ್ಡ ಮನಸ್ಸು ಮಾಡಿ, ತೊಂದರೆ ತಗಂಡು ಫೋನ್ ಮಾಡ್ಜ್ರೀ. ರಾಶಿ ಖುಷಿ ಆತು. ನಿಮ್ಮ ಆಶೀರ್ವಾದ ಇರ್ಲಿ ಯಾವಾಗಲೂ,' ಹೇಳಿ, ಮತ್ತೊಂದು ಸಲಾ ನಮಸ್ಕಾರ ಹೇಳ್ದಿ. ಸ್ವಾಮಿಗಳು ಫೋನ್ ಅಪ್ಪನ ಕೈಗೆ ಕೊಟ್ಟರು ಕಾಣ್ತು. ಮತ್ತ ಲೈನ್ ಮ್ಯಾಲೆ ಬಂದ ಅಪ್ಪಾ.

'ಆತಲಾ ಮಾತಾಡಿ. ನೀ ಹೋಗಿ ಮನೀಕ. ಸುಮಾರು ಹೊತ್ತಾಗಿಕ್ಕು ಅಲ್ಲದ?' ಅಂದಾ ಅಪ್ಪಾ.

ಟೈಮ್ ನೋಡಿರೆ ರಾತ್ರಿ ಹನ್ನೆರೆಡು ಘಂಟೆ ಮ್ಯಾಲಾಗೋಗಿತ್ತು. Absolutely worth it! ಹಾಳುವರಿ ಸಿನೆಮಾ, ಇಂಟರ್ನೆಟ್ ಅದು ಇದು ಹೇಳಿ ದಿನಾ ಲೇಟ್ ಆಗಿ ಮಲಗದು ಇದ್ದೇ ಇರ್ತಿತ್ತು. ಅಪರೂಪಕ್ಕೆ ಒಂದು ಒಳ್ಳೆ ಕೆಲಸದ ಸಲುವಾಗಿ ಮಲಗದು ಲೇಟ್ ಆದರೆ ಏನೂ ತೊಂದ್ರೆ ಇಲ್ಲೆ ಬಿಡಿ.

ಯಾರೋ ಭಕ್ತರು 'ಹೀಂಗೆ ಫೋನಲ್ಲಿ ಮಾತಾಡಿ,' ಹೇಳಿ ಒಂದು ಕೋರಿಕೆ ಮಾಡಿಕೆಂಡ್ರೆ ಅದನ್ನ ದೂಸರಾ ಮಾತಿಲ್ಲದೇ ಒಪ್ಪಿಗೆಂಡು, ಎಲ್ಲರಂಗೆ ಫೋನ್ ನಲ್ಲಿ ಮಾತಾಡಿದ್ದು ನೋಡಿ ಅವರ ಮೇಲೆ ರಾಶಿ ಗೌರವ, ಅಕ್ಕರೆ ಮೂಡ್ಚು. ರಾಶಿ ದೊಡ್ಡ ಗುಣ ಅದು.

ಇದೆಲ್ಲ ಆದ ಮೇಲೆ ಕಳೆದ ಹತ್ತು ವರ್ಷದಲ್ಲಿ ಭಾರತದಲ್ಲಿ ಮನೆ ಜನ ಬೇಕಾದಷ್ಟು ಸರಿ ಸ್ವಾಮಿಗಳನ್ನ ಬೇರೆ ಬೇರೆ ಸಂದರ್ಭದಲ್ಲಿ ಭೆಟ್ಟಿ ಆಜ. ನನ್ನ ಸಂಗ್ತಿ ಒಂದೇ ಒಂದು ಸಲ ಮಾತಾಡಿದ್ದು, ಅದೂ ಫೋನಲ್ಲಿ. ಅದನ್ನ ಸ್ವಾಮಿಗಳು ಮರ್ತಿದ್ದರಿಲ್ಲೆ ಹೇಳ್ಯಾತು. ಪ್ರತಿ ಸರಿ ನೆನಪಿಟ್ಟುಕೊಂಡು ನನ್ನ ಬಗ್ಗೆ ಕೇಳಿ, 'ಆಶೀರ್ವಾದ ತಿಳಿಸಿ,' ಹೇಳಿ ಸ್ವಾಮಿಗಳು ಮನೆ ಜನರ ಹತ್ತಿರ ಹೇಳ್ತ್ರು ಹೇಳ್ಯಾತು. ಅದು ಅವರ ದೊಡ್ಡ ಗುಣ. ಎಷ್ಟು ಜನ ಭಕ್ತರನ ಅವರಿಗೆ. ಅಂತಾದ್ರಲ್ಲಿ ನಮ್ಮನೆ ಜನ ಕಂಡಾಗ ನನ್ನನ್ನು  ನೆನಪಿಟ್ಟುಕೊಂಡು ವಿಚಾರಿಸಿ, ಆಶೀರ್ವಾದ ಮಾಡದು ಅಂದ್ರೆ ದೊಡ್ಡ ಮಾತು. ಅದಕ್ಕೇ ಅವರು ನಮ್ಮ ಸ್ವಾಮಿಗಳು.

ಈಗಿತ್ತಲಾಗೆ ನಮ್ಮ ಸ್ವಾಮಿಗಳ  ಬಗ್ಗೆ ಏನೇನೋ ಅಪವಾದ, ಆರೋಪ ಅದು ಇದು ಎಲ್ಲ ಬಂದಾಗ ಇದೆಲ್ಲ ಹಳೆ ಸುದ್ದಿ ನೆನಪಾತು. ಸ್ವಾಮಿಗಳ ಮೇಲೆ ಅಪವಾದ ಬಂದಿದ್ದು ಇದು ಮೊದಲನೇ ಸಲ ಅಲ್ಲ. ಆಗಾಗ ಅಗ್ನಿಪರೀಕ್ಷೆಗೆ ಒಳಗಾಗುತ್ತಲೇ ಬಂಜ್ರು ಅವರು. ಅಪವಾದ, ನಿಂದನೆ, ಆರೋಪ ಇತ್ಯಾದಿ ಶಂಕರಾಚಾರ್ಯರನ್ನೇ ಬಿಟ್ಟಿತ್ತಿಲ್ಲೆ ಅಂದ ಮ್ಯಾಲೆ ಮತ್ತೆಂತದು. ಸ್ವಾಮಿಗಳು ಎಲ್ಲವನ್ನೂ ಗೆದ್ದು ಬತ್ರು. ಅದರಲ್ಲಿ ಡೌಟ್ ಇಲ್ಲೆ.

ಸ್ವಾಮಿಗಳಿಗೆ ಇಲ್ಲಿಂದಲೇ ಒಂದು ಉದ್ದಂಡ, ಸಾಷ್ಟಾಂಗ ನಮಸ್ಕಾರ. ಅವರ ಆಶೀರ್ವಾದ ಸದಾ ಇರಲಿ.

3 comments:

ವಿ.ರಾ.ಹೆ. said...

Interesting....

Vimarshak Jaaldimmi said...


Very good writing!

May He resolve all the issues! No more goja-goja!!

Mahesh Hegade said...

Thanks Vikas.