Tuesday, September 09, 2014

ಬ್ರಾದಲ್ಲಿ ಬಾಂಬಿಟ್ಟುಕೊಂಡು ಬಂದಿದ್ದ LTTE ಹಂತಕಿ!

ಶ್ರೀಲಂಕಾದ ದುರ್ಗಮ ಅರಣ್ಯದ ಮಧ್ಯೆ ಇದ್ದ ತನ್ನ ಹೆಡ್ ಕ್ವಾರ್ಟರ್ ನಲ್ಲಿ ಕುಳಿತಿದ್ದ LTTE ಹುಲಿಗಳ ಸುಪ್ರೀಮೋ ವೇಲುಪಿಳ್ಳೈ ಪ್ರಭಾಕರನ್ ಬರಲಿಕ್ಕಿದ್ದ ಒಂದು ಮಹತ್ವದ ಸುದ್ದಿಗಾಗಿ ಕಾಯುತ್ತಿದ್ದ. ಆಗಾಗ ತನ್ನ ವಯರ್ಲೆಸ್ ಸೆಟ್ ನೋಡುತ್ತ ಕುಳಿತದ್ದ. ಪಕ್ಕದಲ್ಲಿ ಕುಳಿತಿದ್ದ ಅವನ ಖಾಸಮ್ ಖಾಸ್ ಬೇಹುಗಾರಿಕೆ ಚೀಫ್ ಖತರ್ನಾಕ್ ಪೊಟ್ಟು ಅಮ್ಮನ್.

ಅಷ್ಟರಲ್ಲಿ ವಯರ್ಲೆಸ್ ಸೌಂಡ್ ಮಾಡಿತು. ಮೆಸೇಜ್ ಬಂತು. 'ಆಪರೇಷನ್ ಫೇಲ್ ಆಗಿದೆ. ಡಗ್ಲಾಸ್ ದೇವಾನಂದ ಮತ್ತೊಮ್ಮೆ ಬಚಾವಾಗಿ ತಪ್ಪಿಸಿಕೊಂಡು ಹೋದ. ಓವರ್ ಅಂಡ್ ಔಟ್!'

'ಥತ್ ತೆರೇಕಿ....ಅವನಮ್ಮನ್! ಮತ್ತೊಮ್ಮೆ ಚಾನ್ಸ್ ಮಿಸ್ಸಾಯಿತು....' ಅಂದವನೇ, ವಯರ್ಲೆಸ್ ಸೆಟ್ ಹತಾಶೆಯಿಂದ ಎಸೆದಂತೆ ಮಾಡಿ, ಸೀಟ್ ಬಿಟ್ಟು, ಎದ್ದು ಹೊರಟ ಪ್ರಭಾಕರನ್. ಹಿಂದೆಯೇ ಹೋದ ಪೊಟ್ಟು ಅಮ್ಮನ್.

'ಪೊಟ್ಟು, ಮುಂದಿನ ಆಪರೇಷನ್ ಗೆ ತಯಾರಿ ಮಾಡು. ಇದು ಹೀಗೆಲ್ಲ ಬಗೆಹರಿಯೋ ಸಮಸ್ಯೆಯಲ್ಲ. ಇದಕ್ಕೆ ಒಂದು ಆತ್ಮಾಹುತಿ (ಸೂಸೈಡ್ ಬಾಂಬಿಂಗ್) ಕಾರ್ಯಾಚರಣೆಯೇ ಆಗಿಬಿಡಲಿ. ಬ್ಲಾಕ್ ಟೈಗರ್ ಸ್ಕ್ವಾಡಿನಲ್ಲಿ ಸೂಸೈಡ್ ಬಾಂಬರ್ ಇರಬೇಕಲ್ಲ? ಒಂದು ತಯಾರ್ ಮಾಡಿ ಕಳಿಸಿಬಿಡು. ಅಷ್ಟೇ ರೆಗ್ಯುಲರ್ ಆಗಿ ಉಪಯೋಗಿಸುವ ಸೂಸೈಡ್ ಬಾಂಬ್ ಬೆಲ್ಟ್ ಬೇಡ. ತಿಳೀತಾ?' ಅಂತ ಮುಂದಿನ ಕಾರ್ಯಾಚರಣೆಗೆ ಆದೇಶ ನೀಡಿದ ಪ್ರಭಾಕರನ್.

ಪೊಟ್ಟು ಅಮ್ಮನ್ ಗೆ ಎಲ್ಲ ತಿಳಿಯಿತು. ಸೂಸೈಡ್ ಬಾಂಬಿಂಗ್ ಅನ್ನುವ ಆತ್ಮಾಹುತಿ ಕಾರ್ಯಾಚರಣೆಗಳ ಪಿತಾಮಹ ಅವನು. ಸೂಸೈಡ್ ಬಾಂಬಿಂಗ್ ಮಾಡಿ, ತಾವೂ ಸತ್ತು, ಟಾರ್ಗೆಟ್ ಗಳನ್ನೂ ಸಹ ಮಟಾಶ್ ಮಾಡುತ್ತಿದ್ದ ಬ್ಲಾಕ್ ಟೈಗರ್ಸ್ ಎಂಬ ಸ್ಪೆಷಲ್ LTTE ಉಗ್ರರ ದಳ ಡೈರೆಕ್ಟ್ ಅವನ ಅಡಿಯಲ್ಲೇ ಕೆಲಸ ಮಾಡುತ್ತಿತ್ತು. ಒಂದು ಒಳ್ಳೆ ಬ್ಲಾಕ್ ಟೈಗರ್ ಉಗ್ರಗಾಮಿಯನ್ನು ತಯಾರು ಮಾಡಿ ಕಳಿಸುವದು ಪೊಟ್ಟು ಅಮ್ಮನ್ ಗೆ ದೊಡ್ಡ ಮಾತಾಗಿರಲಿಲ್ಲ. ರಾಜೀವ್ ಗಾಂಧಿ, ಶ್ರೀಲಂಕಾ ಅಧ್ಯಕ್ಷ ಪ್ರೇಮದಾಸ, ಇನ್ನೂ ಹಲವಾರು ಗಣ್ಯರನ್ನು ಸೂಸೈಡ್ ಬಾಂಬಿಂಗ್ ಮಾಡಿಸಿ ಕೊಂದು ಒಗೆದವನಿಗೆ ಇದೇನು ದೊಡ್ಡ ಸವಾಲಾಗಿರಲಿಲ್ಲ.

ಆದರೆ ಪ್ರಭಾಕರನ್, 'ಸೂಸೈಡ್ ಬೆಲ್ಟ್ ಬಾಂಬ್ ಬೇಡ,' ಅಂದಿದ್ದು ಯಾಕೆ ಅಂತ ತಿಳಿಯಲಿಲ್ಲ.

'ಸೊಂಟದ ಸುತ್ತ ಸುತ್ತಿಕೊಳ್ಳುತ್ತಿದ್ದ ಸೂಸೈಡ್ ಬೆಲ್ಟ್ ಬಾಂಬ್ ಬೇಡ ಅಂದರೆ ಮತ್ತೇನು?' ಅನ್ನೋ ಲುಕ್ ಕೊಟ್ಟ ಪೊಟ್ಟು ಅಮ್ಮನ್.

ಪ್ರಭಾಕರನ್ ಏನೋ ಗಹನ ವಿಚಾರದಲ್ಲಿ ಇದ್ದವ, ಪೊಟ್ಟು ಅಮ್ಮನನ ಡೌಟ್ ಅರ್ಥ ಮಾಡಿಕೊಂಡವನಂತೆ ಒಂದು ದೀರ್ಘ ಶ್ವಾಸ ಎಳೆದುಕೊಂಡು ಹೇಳಿದ, 'ಈ ಸಲ ಸೂಸೈಡ್ ಬಾಂಬ್ ಹೆಂಗಸರ ಬ್ರಾದಲ್ಲಿ ಫಿಟ್ ಮಾಡಿಬಿಡಿ. ಬೆಲ್ಟ್ ಬಾಂಬಿಗಿಂತ ಸೇಫ್ ಅದು. ಕಂಡು ಹಿಡಿಯುವದೂ ಕಷ್ಟ. ಬಾಂಬ್ ಚೆಕ್ ಮಾಡಲು ಪೂರ್ತಿ ಬಾಡಿ ಸ್ಕ್ರೀನಿಂಗ್, ಫ್ರಿಸ್ಕಿಂಗ್ ಮಾಡುವವರೂ ಸಹ, ದೇಹದ ಅಲ್ಲಿ ಇಲ್ಲಿ ತಡವಿ, ತಟ್ಟಿ ನೋಡಿಯಾರೆ ವಿನಃ ಸೀದಾ, ತೀರಾ ಎದೆಗೇ ಕೈಹಾಕುವದಿಲ್ಲ. ಅದಕ್ಕೇ ಬ್ರಾ ಬಾಂಬ್ ಮಾಡಿ, ಒಂದು ಲೇಡಿ ಬ್ಲಾಕ್ ಟೈಗರ್ ಒಬ್ಬಳಿಗೆ ಹಾಕಿ, ಕಳಿಸಿಬಿಡಿ. ಈ ಸಲ ಮಾತ್ರ ಡಗ್ಲಾಸ್ ದೇವಾನಂದ ಬದುಕಿರಬಾರದು,' ಅಂತ ಆಖ್ರೀ ಮಾತು ಹೇಳಿದ ಪ್ರಭಾಕರನ್ ಜಾಗ ಖಾಲಿ ಮಾಡಿದ. ಪೊಟ್ಟು ಅಮ್ಮನ್ ನಿಗೆ ಇದರಕಿಂತ ಹೆಚ್ಚಿನ ಸೂಚನೆ ಏನೂ ಬೇಕಾಗಿರಲೇ ಇಲ್ಲ. ಪದ್ಮಾಸನ ಹಾಕಿ ಕೂತುಬಿಟ್ಟ ಒಂದು ಹೊಸ ಅವಿಷ್ಕಾರ ತಯಾರ್ ಮಾಡಲು. ಅದೇ - ಸೂಸೈಡ್ ಬ್ರಾ ಬಾಂಬ್.

**
ಡಗ್ಲಾಸ್ ದೇವಾನಂದ

ಡಗ್ಲಾಸ್ ದೇವಾನಂದ್ ಒಬ್ಬನೇ LTTE ಮುಖಂಡ ಪ್ರಭಾಕರನ್ ಗೆ ಮುಳ್ಳಾಗಿದ್ದ. ಪ್ರಭಾಕರನದು ಶುದ್ಧ ಫ್ಯಾಸಿಸ್ಟ್ ಮನಸ್ಸು. ಬೇರೆ ಯಾರೂ ತಮಿಳ ನಾಯಕರು ಇರಲೇಬಾರದು, ಯಾವದೇ ತರಹದ ತಾತ್ವಿಕ ಅಥವಾ ಇತರೆ ಬಿನ್ನಾಭಿಪ್ರಾಯ ಸಲ್ಲದು.  ಪ್ರಭಾಕರನ ನಾಯಕತ್ವ, ತತ್ವ, ಸಿದ್ಧಾಂತ ಒಪ್ಪದ ಯಾರೇ ಆಗಿರಲಿ ಅವರಿಗೆ ಒಂದೇ ದಾರಿ. ಅದು ನೇರ ಮಸಣಕ್ಕೆ. ಅಂತಹ ಶುದ್ಧ ಫ್ಯಾಸಿಸ್ಟ್ ಡಿಕ್ಟೇಟರ್ ಮನಸ್ಸು ಪ್ರಭಾಕರನದು.

ಒಂದು ಲೆವೆಲ್ಲಿಗೆ ಪ್ರಭಾಕರನ್ ಬಂದ ಕೂಡಲೇ ಮಾಡಿದ್ದೇ ಅದು. ಸಿಸ್ಟಮ್ಯಾಟಿಕ್ ಆಗಿ ಉಳಿದ ತಮಿಳು ಸಂಘಟನೆಗಳನ್ನು, ಅವುಗಳ ನಾಯಕರನ್ನು ಬೇರು ಸಮೇತ ಕಿತ್ತೆಸೆದ.

ಒಂದು ಕಾಲದ ಸ್ನೇಹಿತ, TELO ಸಂಘಟನೆ ನಾಯಕ, ಸಭಾರತ್ನಂನನ್ನು ಜಾಫ್ನಾದಲ್ಲಿ ನಾಯಿಯಂತೆ ಬೇಟೆಯಾಡಿ ಕೊಂದರು LTTE ಹುಲಿಗಳು. TELO ದ ಸಾವಿರಕ್ಕೂ ಹೆಚ್ಚು ಕೇಡರ್ ಗಳನ್ನು ಸಾಮೂಹಿಕವಾಗಿ ಹತ್ಯೆ ಮಾಡಿ, ಗುಂಡಿ ತೋಡಿ, ಹೂಳಿ, ಮುಚ್ಚಿ ಬಂದರು.

EPRLF ಅನ್ನುವ ಇನ್ನೊಂದು ತಮಿಳು ಸಂಘಟನೆಯ ಅಧಿವೇಶನ ಮದ್ರಾಸಿನಲ್ಲಿ ನಡೆಯುತ್ತಿತ್ತು. ಶಿವರಸನ್ ನೇತ್ರತ್ವದಲ್ಲಿ, AK - ೪೭ ಬಂದೂಕು ಹಿಡಿದು, ಮದ್ರಾಸ್ ಅಪಾರ್ಟ್ಮೆಂಟ್ ಒಂದಕ್ಕೆ ನುಗ್ಗಿದ ಉಗ್ರರು ಇಡೀ EPRLF ನಾಯಕ ಸಮೂಹವನ್ನೇ ವೈಪ್ ಔಟ್ ಮಾಡಿಬಿಟ್ಟರು. ಇದೇ ಸಿವರಸನ್ ಮುಂದಿನ ವರ್ಷ ರಾಜೀವ್ ಗಾಂಧಿಯನ್ನು ಉಡಾಯಿಸಿಬಿಟ್ಟ.

ತಮಿಳು ಸೌಮ್ಯ ನಾಯಕರಾದ ಅಮೃತಲಿಂಗಂ ಮತ್ತು ಯೋಗಿ ಅವರನ್ನು ಕೋಲಂಬೋದ ನಿವಾಸಕ್ಕೆ ಸಂಧಾನದ ಮಾತುಕತೆಯಾಡಲು ಬಂದ LTTE ಉಗ್ರರು ಗುಂಡಿಟ್ಟು ಕೊಂದರು.

PLOTE ನಾಯಕ ಉಮಾಮಹೇಶ್ವರನ್ ನನ್ನು ಕೊಲಂಬೋದ ಪೇಟೆಯಲ್ಲಿ ಅಟ್ಟಾಡಿಸಿ ಕೊಂದರು.

ಶ್ರೀಲಂಕಾದ ಸರಕಾರದಲ್ಲಿ ಮಂತ್ರಿಯಾಗಿ, ತಮಿಳರಿಂದ ಗದ್ದಾರ್ ಅಂತ ಬ್ರಾಂಡ್ ಆಗಿದ್ದ ಲಕ್ಷ್ಮಣ ಕದಿರಾಗಮರ ಈಜಲು ಸ್ವಿಮ್ಮಿಂಗ್ ಪೂಲಿಗೆ ಇಳಿದವ ಮತ್ತೆ ಎದ್ದು ಬರಲಿಲ್ಲ. ಪಕ್ಕದ ಮನೆಯ ಬಚ್ಚಲ ಕಿಟಿಕಿ ಮೂಲೆಯಿಂದ ಹಾರಿಸಿದ್ದ ಸ್ನೈಪರ್ ಬುಲೆಟ್ ಅವನ ಬುರುಡೆಯನ್ನು ಸೈಲೆಂಟ್ ಆಗಿ ಬಿಚ್ಚಿತ್ತು. ಅವನು ಸ್ವಿಮ್ಮಿಂಗ್ ಪೂಲಿನಲ್ಲೇ ಹೆಣವಾಗಿ ತೇಲಿದ್ದ. ಮಟಾಶ್!

EROS ಸಂಘಟನೆಯ ಬಾಲಕುಮಾರ್ ತನ್ನ ಸಂಘಟನೆಯನ್ನು ವಿಸರ್ಜಿಸಿ, ತನ್ನೆಲ್ಲ ಕೇಡರ್ ಗಳನ್ನು ಕರೆದುಕೊಂಡು ಬಂದು, ಶರಣಾಗತನಾಗಿ, ಅಂಬೋ! ಅಂದು ಬಿಟ್ಟ. ಬಾಲಕುಮಾರ ಶಾಲಾ ಬಾಲಕನಂತೆ, ಹಾಫ್ ಪ್ಯಾಂಟ್ ಹಾಕಿಕೊಂಡು, ಕೈಕಟ್ಟಿಕೊಂಡು ಪ್ರಭಾಕರನ್ ಎಂಬ ಹೆಡ್ ಮಾಸ್ತರ್ ಮುಂದೆ ವಿನೀತನಾಗಿ ನಿಂತ ಅಂತ ಬದುಕಿಕೊಂಡ.

ಇನ್ನೂ ಎಷ್ಟೋ ಜನ ತಮಿಳ ನಾಯಕರನ್ನು ಪ್ರಭಾಕರನ್ ಮುಲಾಜಿಲ್ಲದೆ ಕೊಂದು ಹಾಕಿದ್ದ. ತಮಿಳ್ ಈಲಂ ಅಂದರೆ ಪ್ರಭಾಕರನ್. ಪ್ರಭಾಕರನ್ ಅಂದರೆ ತಮಿಳ್ ಈಲಂ. ಹಾಗೆ ಇರಬೇಕು ಅಂತ ಅವನ ಡಿಮ್ಯಾಂಡ್. ಅದನ್ನ ಕಾಂಪ್ರಾಮೈಸ್ ಮಾಡುವ ಪ್ರಶ್ನೆ ಇಲ್ಲವೇ ಇಲ್ಲ.

ಹೀಗೆ ಎಲ್ಲ ತರಹದ ತಮಿಳು ನಾಯಕರನ್ನು ಮುಗಿಸಿದ್ದ ಪ್ರಭಾಕರನಿಗೆ ಈ EPDP ಎಂಬ ಸಂಘಟನೆಯ ಡಗ್ಲಾಸ್ ದೇವಾನಂದ ಎಂಬ ಮುಖಂಡ ತುಂಬ ದೊಡ್ಡ ಅಡಚಿಣೆಯಾಗಿದ್ದ. ಸಾಲದ್ದಕ್ಕೆ ಶ್ರೀಲಂಕಾ ಸರ್ಕಾರ ಬೇರೆ ಸೇರಿಕೊಂಡು ಮಂತ್ರಿಯಾಗಿ ಮೆರೆಯುತ್ತಿದ್ದ. ಪ್ರಭಾಕರನ್ ಪ್ರಕಾರ ಅವನು ನಂಬರ್ ಒನ್ ಗದ್ದಾರ್. ಅವನನ್ನು ಕೊಲ್ಲಲೇ ಬೇಕಾಗಿತ್ತು. ಈ ಹಿಂದೆ ಕೆಲವು ಹತ್ಯಾ ಪ್ರಯತ್ನಗಳನ್ನು ಮಾಡಿತ್ತು LTTE. ದೇವಾನಂದನ ಗುಡ್ ಲಕ್ ಸಕತ್ತಾಗಿತ್ತು. ಬಚಾವಾಗಿಬಿಟ್ಟಿದ್ದ. ಮತ್ತೂ ಹುಶಾರಾಗಿದ್ದ. ಸೆಕ್ಯೂರಿಟಿ ಬಲಪಡಿಸಿಕೊಂಡಿದ್ದ.

ಈ ಸಲದ ಹತ್ಯೆಯ ಯತ್ನ ಯಶಸ್ವಿಯಾಗಲೇ ಬೇಕು ಅಂತ ಎರಡು ಅತ್ಯುತ್ತಮ ಕೇಡರುಗಳನ್ನು ಕಳಿಸಿದ್ದ ಪ್ರಭಾಕರನ್. ಆಟೋಮ್ಯಾಟಿಕ್ ವೆಪನ್ಸ್, ಗ್ರೆನೇಡು  ತೆಗೆದುಕೊಂಡ, ಸಾಯಿಸಿ, ಬೇಕಾದರೆ ತಾವೂ ಸತ್ತು ಬರಲು ರೆಡಿಯಾಗಿಯೇ ಇದ್ದ LTTE ಹಂತಕರು ಕೊಲಂಬೋ ಸೇರಿಕೊಂಡು, ಡಗ್ಲಾಸ್ ದೇವಾನಂದನ ಮನೆ ಮೇಲೆ ಒಂದು ದೊಡ್ಡ ಅಟ್ಯಾಕ್ ಮಾಡಲು ಬರೋಬ್ಬರಿ ಮುಹೂರ್ತಕ್ಕೆ ಹೊಂಚು ಹಾಕಿಕೊಂಡು ಕೂತಿದ್ದರು.

ಬಂತು ಮುಹೂರ್ತದ ದಿನ.

ಡಗ್ಲಾಸ್ ದೇವಾನಂದ ಎಂದಿನಂತೆ, ತನ್ನ ಮನೆಯ ಮೇಲಿನ ಮಹಡಿಯ ಕೋಣೆಯಲ್ಲಿ ಏನೋ ಬರೆಯುತ್ತ, ಓದುತ್ತ ಕೂತಿದ್ದ. ಕೆಳಗೆ ಶಸ್ತ್ರಧಾರಿ ಅಂಗರಕ್ಷಕರು ಇದ್ದರು. ಆದರೆ ಅವರು LTTE ಕಮಾಂಡೋ ಟ್ರೇನಿಂಗ್ ಹೊಂದಿದ್ದ ಉಗ್ರರಿಗೆ ಸಾಟಿಯಾಗಿರಲಿಲ್ಲ ಬಿಡಿ. ಗ್ರೆನೇಡ್ ಎಸೆಯುತ್ತಲೇ ಬಂದು, ಹೊರಗಿದ್ದವರನ್ನು ಕೊಂದು, ಒಂದು ಕ್ಷಣದಲ್ಲಿ ಇಡೀ ಕಾಂಪೌಂಡನ್ನು ತಮ್ಮ ತಾಬಾಗೆ ತೆಗೆದುಕೊಂಡ LTTE ಉಗ್ರರಿಗೆ ಮುಂದಿನ ಹೆಜ್ಜೆ ಬಗ್ಗೆ ಏನೂ ಡೌಟ್ ಇರಲಿಲ್ಲ. ಸೀದಾ ಮೇಲೆ ಹೋಗುವದು, ರೂಮಿನಲ್ಲಿದ್ದ ದೇವಾನಂದನನ್ನು ಗುಂಡಿಕ್ಕಿ ಜರಡಿ ಜರಡಿ ಮಾಡಿ ಹಾಕಿಬಿಡುವದು. ಆ ಗಮ್ಯದ ಮೇಲೇ ಅವರ ಲಕ್ಷ್ಯ.

ಕೆಳಗಾಗುತ್ತಿದ್ದ ಗಲಾಟೆಯಿಂದ ಡಗ್ಲಾಸ್ ದೇವಾನಂದ ಎಚ್ಚತ್ತ. ಅವನೂ ಒಂದು ಕಾಲದಲ್ಲಿ ಗೆರಿಲ್ಲಾ ಯುದ್ಧ ಮಾಡಿದವನೇ ತಾನೇ. instincts, reflexes ಎಲ್ಲ ತಂತಾನೆ ಜಾಗೃತವಾದವು. ಆ ಕ್ಷಣದಲ್ಲಿ ಹತ್ತಿರ ಇದ್ದ ಆಯುಧ ಅಂದರೆ ಟೇಬಲ್ ಡ್ರಾವರಿನಲ್ಲಿದ್ದ ಒಂದು ಸಣ್ಣ ಪಿಸ್ತೂಲು ಮಾತ್ರ. LTTE ಹಂತಕರಿಬ್ಬರ ದೊಡ್ಡ ಮಟ್ಟದ ಶಸ್ತ್ರಗಳ ಮುಂದೆ ಅದು ಏನೂ ಅಲ್ಲ. ಹೇಗೆ ಆತ್ಮರಕ್ಷಣೆ ಮಾಡಿಕೊಳ್ಳಲಿ ಅಂತ ಕ್ವಿಕ್ ಆಗಿ ಯೋಚಿಸಿದ ಡಗ್ಲಾಸ್. ಹಂತಕರು ಕೆಳಗಿದ್ದ ಅಂಗರಕ್ಷಕರನ್ನು ಗುಂಡಿಟ್ಟು ಕೊಲ್ಲುತ್ತ, ದಾರಿ ಕ್ಲಿಯರ್ ಮಾಡಿಕೊಳ್ಳುತ್ತ, ಮೆಟ್ಟಿಲು ಹತ್ತಿ, ರಣಕೇಕೆ ಹಾಕುತ್ತ, ಮಹಡಿ ಮೇಲೆ ಬರುತಿದ್ದರು. ಕೆಲವೇ ಕೆಲವು ಕ್ಷಣ ಹೆಚ್ಚೆಂದರೆ. ಇನ್ನೇನು ದೇವಾನಂದನ ರೂಮಿನ ಎದುರಲ್ಲಿ ಪ್ರತ್ಯಕ್ಷರಾಗಿ, ಗುಂಡಿನ ಮಳೆಗರಿದೇ ಬಿಡುತ್ತಾರೆ ಅನ್ನುವಷ್ಟರಲ್ಲಿ ದೇವಾನಂದ ಒಂದು ಖತರ್ನಾಕ್ ಕೆಲಸ ಮಾಡಿಬಿಟ್ಟ. ತನ್ನಲ್ಲಿದ್ದ ಚಿಕ್ಕ ರಿವಾಲ್ವರಿನಿಂದ ಒಂದೇ ಒಂದು ಗುಂಡು ಗುರಿಯಿಟ್ಟು ಹೊಡೆದ. ಯಾವದಕ್ಕೆ? ರೂಮಿನಲ್ಲಿದ್ದ ಒಂದೇ ಒಂದು ದೀಪದ ಬಲ್ಬಿಗೆ. ಠಳ್! ಅಂತ ಶಬ್ದ ಮಾಡುತ್ತ ಬಲ್ಬ್ ಒಡೆದುಹೋಯಿತು. ಎಲ್ಲ ಕಡೆ ಕಗ್ಗತ್ತಲೆ ಆವರಿಸಿಬಿಟ್ಟಿತು. ಹಂತಕರು ಒಂದು ಕ್ಷಣ ಅಪ್ರತಿಭರಾದರು. ಕಾರ್ಯಾಚರಣೆಯನ್ನು ಸಾವಿರ ಬಾರಿ ರಿಹರ್ಸಲ್ ಮಾಡಿದ್ದರೂ ಇದೊಂದನ್ನು ಅವರು ನಿರೀಕ್ಷಿಸಿರಲಿಲ್ಲ. ಒಂದು ಕ್ಷಣ ಫೈರ್ ಮಾಡುವದನ್ನು ನಿಲ್ಲಿಸಿ, ಅಲ್ಲಿಲ್ಲಿ ಇರಬಹುದಾದ ಲೈಟ್ ಸ್ವಿಚ್ಚಿಗಾಗಿ ತಡಕಾಡಿದರು.

ಇದೇ ಟೈಮ್ ಅಂದ ದೇವಾನಂದ ಸದ್ದು ಮಾಡದೆ ತನ್ನ ರೂಮಿನ ಬಾಲ್ಕನಿಯತ್ತ ಸರಿದ. ಬಾಲ್ಕನಿ ಸೇರಿಕೊಂಡವನೇ ಕೆಳಗೆ ಹಾರಿಬಿಟ್ಟ. ದೊಡ್ಡ ಸೈಜಿನ ಆಸಾಮಿ ಅವನು. ಧಬ್! ಅಂತ ಶಬ್ದವಾಯಿತು. LTTE ಉಗ್ರರಿಗೆ ಗೊತ್ತಾಗಿಯೇ ಹೋಯಿತು. ಡಗ್ಲಾಸ್ ಜಿಗಿದು ಓಡಿ ಹೋಗುತ್ತಿದ್ದಾನೆ ಅಂತ. ಮೇಲೆ ಬಂದವರು ಕೆಳಗೆ ಇಳಿದು ಹೊರಬಾಗಿಲಿನತ್ತ ಓಡಿದರು. ಹೊರಗೆ ಬಂದು ನೋಡಿದರೆ ಬಾಲ್ಕನಿಯಿಂದ ಕೆಳಗೆ ಜಿಗಿದಿದ್ದ ಡಗ್ಲಾಸ್ ದೇವಾನಂದ ಗೇಟ್ ಹಾರಿ ರಸ್ತೆಗೆ ಓಡುವದರಲ್ಲಿದ್ದ. ಶುದ್ಧ ತಮಿಳ. ಹುಟ್ಟುವಾಗಲೇ ಲುಂಗಿಯನ್ನೇ ಉಟ್ಟು ಹುಟ್ಟಿರುತ್ತಾರೇನೋ ಅನ್ನುವಂತೆ ಅವನೂ ಲುಂಗಿಯಲ್ಲೇ ಇದ್ದ. ಬಾಲ್ಕನಿ ಜಿಗಿದು, ಹಾರಿ ಓಡುವಾಗ ಲುಂಗಿ ಬಿಚ್ಚಿ, ಎಲ್ಲೋ ಬಿದ್ದು ಹೋಗಿತ್ತು. ಲುಂಗಿ ಹೋದರೆ ಹೋಗಲಿ, ಪುಂಗಿ ಊದಲು ಪ್ರಾಣ ಉಳಿದರೆ ಸಾಕು ಅನ್ನುವ ರೀತಿಯಲ್ಲಿ ಅಂಡರ್ವೇರ್ ಚಡ್ಡಿಯಲ್ಲಿಯೇ ರಸ್ತೆಗೆ ಬಂದಿದ್ದ ಡಗ್ಲಾಸ್ ದೇವಾನಂದ. ಕೈಯಲ್ಲಿ ಒಂದು ಪಿಸ್ತೂಲಿತ್ತು. ಕೇವಲ ಐದೇ ಐದು ಗುಂಡು ಉಳಿದಿದ್ದವು. ಹಿಂದೆ ಫೈರ್ ಮಾಡುತ್ತ ಅಟ್ಟಿಸಿಕೊಂಡು ಬರುತ್ತಿದ್ದ LTTE ಯೋಧರು.

ಸ್ವತಃ ಗೆರಿಲ್ಲಾ ಆಗಿದ್ದ ದೇವಾನಂದನಿಗೆ ಗೊತ್ತೇ ಇತ್ತು, ಒಂದು ಕ್ಷಣ ಹಿಂತಿರುಗಿ ನೋಡಿದರೂ ಸಾವು ಕಟ್ಟಿಟ್ಟ ಬುತ್ತಿ ಅಂತ. ಹೇಗೋ ಮಾಡಿ, ಹಿಂತಿರುಗಿ ನೋಡದೇ, ಭುಜದ ಮೇಲಿಂದ, ಎತ್ತರಪತ್ತರ ಬ್ಯಾಕ್ ಫೈರಿಂಗ್ ಮಾಡುತ್ತ ಓಡಿಬಿಟ್ಟ. ಕೊಲೊಂಬೋದ ಪಾಶ್ ಬಡಾವಣೆಯೊಂದರಲ್ಲಿ, ಕೇವಲ ಚಡ್ಡಿ ಹಾಕಿಕೊಂಡು ಓಡುತ್ತಿದ್ದ ಒಬ್ಬ ವಿಚಿತ್ರ ಮನುಷ್ಯ, ಹಿಂದೆ ಫೈರ್ ಮಾಡುತ್ತ ಬರುತ್ತಿದ್ದ ಮತ್ತಿಬ್ಬರು. ಕಂಡವರು ಬೆಚ್ಚಿ ಬೀಳಬೇಕು.

ದೇವಾನಂದನ ನಸೀಬ ಚೊಲೋ ಇತ್ತು. ಬಚಾವ್ ಆಗಿ ಬಿಟ್ಟ! ಅದೇನಾಯಿತೋ ಏನೋ LTTE ಹಂತಕರಿಗೆ. ಎಲ್ಲಿ ಮದ್ದು, ಗುಂಡು ಮುಗಿಯಿತೋ, ಇನ್ನೂ ಬೆನ್ನಟ್ಟಿ ಸಿಕ್ಕಿ ಬಿದ್ದರೆ ರಿಸ್ಕ್ ಅಂದುಕೊಂಡರೋ ಅಥವಾ ವಯರ್ಲೆಸ್ ಮೇಲೆ ಮತ್ತಿನ್ನೇನಾದರೂ ಆರ್ಡರ್ ಬಂದಿತ್ತೋ ಗೊತ್ತಿಲ್ಲ. ದೇವಾನಂದನನ್ನು ಚೇಸಿಂಗ್ ಮಾಡುವದನ್ನು ಬಿಟ್ಟು ಪರಾರಿಯಾದರು. ಚಡ್ಡಿಧಾರಿ ದೇವಾನಂದ ಗುಂಡು ಇರುವ ತನಕ ಹಾರಿಸುತ್ತ, ಓಡುವಷ್ಟು ಓಡಿದ. ಗುಂಡು ಮುಗಿಯಿತು. ಲೈಫ್ ಸಹಿತ ಮುಗಿಯಿತು, ಅಂತ ಅಂದುಕೊಂಡು ಅಟ್ಟಿಸಿಕೊಂಡು ಬರುತ್ತಿದ್ದ ಸಾವಿಗೆ ತೆರೆದುಕೊಳ್ಳಲು ತಯಾರಾದರೆ ಹಂತಕರು ನಾಪತ್ತೆಯಾಗಿದ್ದರು. ಅಂತೂ ದೇವಾನಂದ ಮತ್ತೊಮ್ಮೆ ಬಚಾವಾಗಿದ್ದ. ಅದು ಎಷ್ಟನೇ ಸಲವಾಗಿತ್ತು? ಎಂಟನೇಯದೋ ಒಂಬತ್ತನೇಯದೋ ಸಲವಾಗಿರಬೇಕು. one lucky chap!

ಈ ಹತ್ಯಾಯತ್ನ ವಿಫಲವಾದ ನಂತರವೇ ಕುದ್ದು ಹೋಗಿದ್ದ ಪ್ರಭಾಕರನ್. ಮುಂದಿನ ಸಲ ಸೂಸೈಡ್ ಬಾಂಬರ್ ಕಳಿಸಿ, ದೇವಾನಂದನನ್ನು ತೆಗೆಸಿಬಿಡುವಂತೆ ಪೊಟ್ಟು ಅಮ್ಮನ್ ಗೆ ಆಜ್ಞೆ ಕೊಟ್ಟಿದ್ದ. ಆ ಕಾರ್ಯಾಚರಣೆಗೆ ಮೊತ್ತ ಮೊದಲ ಬ್ರಾ ಬಾಂಬ್ ತಯಾರ್ ಆಗುವದಿತ್ತು.

**

ಬ್ರಾ ಬಾಂಬ್ ತಯಾರ್ ಮಾಡಿದರು LTTE ಬಾಂಬ್ ತಂತ್ರಜ್ಞರು. padded bra ದ ಪ್ಯಾಡಿಂಗ್ ತೆಗೆದು, ಅದರಲ್ಲಿ ಬಾಂಬ್ ಕೆಮಿಕಲ್ ತುಂಬಿ, ಸೀಲ್ ಮಾಡಿ, ವೈರ್, ಸ್ವಿಚ್ ಎಲ್ಲ ಬರೋಬ್ಬರಿ ಫಿಟ್ ಮಾಡಿ, ಪಕ್ಕಾ ಆರ್ಡಿನರಿ ಬ್ರಾ ಕಾಣುವಂತೆ ಮಾಡಿ ಕೊಟ್ಟುಬಿಟ್ಟರು. ಮಹಾ ಕುಶಲಕರ್ಮಿಗಳು ಅವರು. ಯಾವ ಇಂಜಿನಿಯರಗೂ ಕಮ್ಮಿ ಇಲ್ಲ. ಬ್ರಾ ಬಾಂಬ್ ಪ್ರಾಜೆಕ್ಟಿನ ಪೂರ್ತಿ ಉಸ್ತುವಾರಿಯನ್ನು ಪೊಟ್ಟು ಅಮ್ಮನ್ ವಹಿಸಿಕೊಂಡಿದ್ದ. ಮತ್ತೆ ಮತ್ತೆ ಟೆಸ್ಟ್ ಮಾಡಿ, ಪರ್ಫೆಕ್ಟ್ ಆಗಿ ಕೆಲಸ ಮಾಡುತ್ತಿದೆ ಅಂತ ಖಾತ್ರಿ ಮಾಡಿಕೊಂಡಾದ ಮೇಲೆ ಒಂದು ಫೈನಲ್ ಬ್ರಾ ಬಾಂಬ್ ತಯಾರ್ ಮಾಡಿಕೊಟ್ಟರು. ಅದರ ಮೇಲೆ ಡಗ್ಲಾಸ್ ದೇವಾನಂದನ ಸಾವಿನ ನೋಟೀಸ್ ಅವರೇನೋ ಬರೆದರು. ಆದರೆ ಅದಕ್ಕೆ ದೇವರು ಸಹಿ ಹಾಕಿದನೇ?

LTTE ಸೂಸೈಡ್ ಬಾಂಬರಗಳು ಎಲ್ಲ ಬ್ಲಾಕ್ ಟೈಗರ್ಸ್ ಎಂಬ ಸ್ಪೆಷಲ್ ವಿಂಗ್ ನಿಂದ ಬರುತಿದ್ದರು. ಒಬ್ಬಳನ್ನು ಸೆಲೆಕ್ಟ್ ಮಾಡಲಾಯಿತು. ಭಾಗ್ಯದ ಬಾಗಿಲೇ ತೆರೆಯಿತು ಅನ್ನುವಷ್ಟು ಎಕ್ಸೈಟ್ ಆದಳು. ತಮಿಳ್ ಈಲಂ ಸಲುವಾಗಿ ಪ್ರಾಣವನ್ನು ಬಲಿದಾನ ಕೊಡಲು ಅಷ್ಟೆಲ್ಲ ಜನ ಕಾದಿರುವಾಗ ತನಗೇ ಆ ಭಾಗ್ಯ ಸಿಕ್ಕಿತಲ್ಲ ಅಂತ ಧನ್ಯತೆ ಫೀಲಿಂಗ್ ಅವಳಿಗೆ.

ಒಮ್ಮೆ ಮಿಶನ್ನಿಗೆ ಸೆಲೆಕ್ಟ್ ಆದಳು ಆದಾಗಿಂದ ಆಕೆಗೆ ಬೇರೆಯೇ ತರಬೇತಿ ಶುರು ಮಾಡಲಾಯಿತು. ಡಗ್ಲಾಸ್ ದೇವಾನಂದನ ಕೊಲಂಬೊ ಸಚಿವಾಲಯದ ಫುಲ್ ಡೀಟೇಲ್ಸ್ ತಂದಿದ್ದ LTTE ಬೇಹುಗಾರರು ಆಕೆಗೆ ಟ್ರೇನಿಂಗ ಕೊಡಲು ಶುರು ಮಾಡಿದರು. ಎಲ್ಲಿಂದ ಎಂಟ್ರಿ ಕೊಡಬೇಕು, ಎಲ್ಲೆಲ್ಲಿ ಮೆಟಲ್ ಡಿಟೆಕ್ಟರ್ ಇರುತ್ತವೆ, ಅವನ್ನು ಹೇಗೆ ಯಾಮಾರಿಸಬೇಕು, ಡಗ್ಲಾಸ್ ದೇವಾನಂದನನ್ನು ಭೇಟಿಯಾಗುವ ಮೊದಲು ಯಾರಾರು ಸಿಗುತ್ತಾರೆ, ಅವರಿಗೆಲ್ಲ ಏನೇನು ಪಟ್ಟಿ ಓದಿ, ಪಟಾಯಿಸಿ, ದೇವಾನಂದನ ಕಚೇರಿ ತಲುಪಿಕೊಳ್ಳಬೇಕು. ತಲುಪಿಕೊಂಡಾದ ಮೇಲೆ? ಆಮೇಲೇನು? ಅಣ್ಣ ಪ್ರಭಾಕರನ್, ತಮಿಳ್ ಈಳಂ ನೆನೆದು ಬಟನ್ ಒತ್ತಿ ಬಿಟ್ಟರೆ ಎಲ್ಲ ಭಸ್ಮ. ಖೇಲ್ ಖತಂ!

ಹಂತಕಿ ತಯಾರಾಗಿ ಕೊಲಂಬೊ ಸೇರಿಕೊಂಡಳು. ಬ್ರಾ ಬಾಂಬ್ ಸ್ಪೋಟಿಸಿ, ಆತ್ಮಾಹುತಿ ಮಾಡಿಕೊಂಡು, ಡಗ್ಲಾಸ್ ದೇವಾನಂದ ಅನ್ನುವ ಕ್ರಿಮಿಯನ್ನು ಕೊಂದು, ಅಣ್ಣ ಪ್ರಭಾಕರನ್ ಅವರ ಸಾಟಿಯಿಲ್ಲದ ನಾಯಕತ್ವಕ್ಕೆ ಇದ್ದ ಒಂದೇ ಒಂದು ತೊಡಕನ್ನು ತೆಗೆದೊಗೆಯುವ ಘಳಿಗೆ ಬಂತು.

ಮುಂದೇನಾಯಿತು ಅನ್ನುವದನ್ನ ತಿಳಿಯಲು ಕೆಳಗಿನ ವೀಡಿಯೊ ಕ್ಲಿಪ್ಪಿಂಗ್ ನೋಡಿಬಿಡಿ. ಕ್ಲೋಸ್ಡ್ ಸರ್ಕ್ಯೂಟ್ ಟೀವಿಯಲ್ಲಿ ಹಂತಕಿಯ ಎಲ್ಲ ಕಾರ್ನಾಮೆ ರೆಕಾರ್ಡ್ ಆಗಿದೆ.



ಅದೇನು ಮಿಸ್ಟೇಕ್ ಆಯಿತೋ ಏನೋ. ಇಷ್ಟೆಲ್ಲ ತಯಾರಿ ಮಾಡಿಕೊಂಡು ಬಂದಿದ್ದ ಹಂತಕಿ ದೇವಾನಂದನನ್ನು ತಲುಪುವ ಮೊದಲೇ ಸ್ಪೋಟಿಸಿಕೊಂಡುಬಿಟ್ಟಳು. ದೇವಾನಂದನ ಸಚಿವಾಲಯದ ಹೊರಗಿನ ಆಫೀಸಿನಲ್ಲಿ  ಕುಳಿತು, ತನ್ನ ಭೇಟಿಗೆ ಸಂಬಂಧಿಸಿದ ಏನೋ ಪ್ರಕ್ರಿಯೆ, ನೋಂದಣಿ ಮುಗಿಸುತ್ತಿದ್ದ ಆಕೆ ಮೈಮೇಲೆ ಅದ್ಯಾವ ದೆವ್ವ ಬಂತೋ ಗೊತ್ತಿಲ್ಲ. ಟ್ರಿಗರ್ ಒತ್ತೇ ಬಿಟ್ಟಿದ್ದಾಳೆ. ಸುತ್ತ ಮುತ್ತ ಎಲ್ಲ ಮಟಾಶ್! ಖಲಾಸ್!

ಅವಳೇ ಸ್ವಿಚ್ ಒತ್ತಿಬಿಟ್ಟಳೋ ಅಥವಾ ಎಲ್ಲೋ ಮಿಸ್ಟೇಕಿನಲ್ಲಿ ಟ್ರಿಗರ್ ಒತ್ತಿ ಆಕ್ಸಿಡೆಂಟ್ ಆಯಿತೋ? ಮೊತ್ತ ಮೊದಲ ಬ್ರಾ ಬಾಂಬ್ ನೋಡಿ. ಎಲ್ಲೋ ಉತ್ಪಾದನಾ ನ್ಯೂನ್ಯತೆ ನುಸುಳಿ, ಏನಾದರೂ ಪೊರಪಾಟಾಯಿತಾ? ಗೊತ್ತಿಲ್ಲ. ಒಟ್ಟಿನಲ್ಲಿ ಅದೇ ಕಚೇರಿಯ ಬೇರೆಲ್ಲೋ ಕುಳಿತಿದ್ದ ಡಗ್ಲಾಸ್ ದೇವಾನಂದ ಮತ್ತೊಮ್ಮೆ ಬಚಾವಾಗಿಬಿಟ್ಟಿದ್ದ. ಎಂತಾ ಗುಡ್ ಲುಕ್ ಮಾರ್ರೆ!?

ಹತ್ತನೇ ಬಾರಿ ಹತ್ಯಾ ಯತ್ನ ನಡೆದುಹೋಗಿತ್ತು! ಅದರಲ್ಲೂ ಬಚಾವ್!

ಇದಾದ ಮೇಲೆ ಇನ್ನೊಂದು ಹತ್ಯಾ ಯತ್ನ ಕಡೇಯದು ನಡೆದಿತ್ತು ೨೦೦೭ ರಲ್ಲಿ. ಅದರಲ್ಲೂ ಬಚಾವ್!

ಅದಾದ ಮೇಲೆ ೨೦೦೯ ರಲ್ಲಿ LTTE ಯನ್ನೇ ನಿರ್ನಾಮ ಮಾಡಲಾಯಿತು. ಡಗ್ಲಾಸ್ ದೇವಾನಂದ ಮಾತ್ರ ಆರಾಮ ಇದ್ದಾನೆ.

**
ಇಷ್ಟೆಲ್ಲ ಹೆವಿ ಡ್ಯೂಟಿ ಓದಿದ ಮೇಲೆ ಒಂದು ತುಂಟ ಹಾಸ್ಯ ಇದ್ದರೆ ಹೆಂಗೆ?

ಆಕಸ್ಮಾತ ಬ್ರಾ ಬಾಂಬ್ ಹಂತಕಿ ಡಗ್ಲಾಸ್ ದೇವಾನಂದನನ್ನು ಏನಾದರೂ ಭೆಟ್ಟಿಯಾಗಿದ್ದಳು ಅಂದುಕೊಳ್ಳಿ. ಅವನಿಗೆ ಬ್ರಾದಲ್ಲಿರುವ ಬಾಂಬುಗಳನ್ನು ಕಂಡುಹಿಡಿಯುವ ದಿವ್ಯದೃಷ್ಟಿ ಮತ್ತು ಶಾಯರಿ ಹುಚ್ಚು ಎರಡೂ ಇದ್ದರೆ ಇದೇ ಶಾಯರಿ ಹೊಡೆಯುತ್ತಿದ್ದನೋ ಏನೋ!

ಪಲಟ್ ಕರ್ ದೇಖ್ ಜಾನೇಮನ್
ಜಿಗರ್ ಮೇ ದಮ್ ಹಮ್ ಭೀ ರಖತೆ ಹೈ
ಬ್ರಾ ಮೇ ದೋ ಬಾಂಬ್ ತುಮ್ ರಖತಿ ಹೋ ತೋ ಕ್ಯಾ ಹುವಾ?
ಚಡ್ಡಿ ಮೇ ಏಕ್ ಗನ್ ಹಮ್ ಭೀ ರಖಾ ಕರ್ ತೇ ಹೈ

ತಿರುಗಿ ನೋಡು ಜಾನೇಮನ್
ಎದೆಯಲ್ಲಿ ದಮ್ ನಾನೂ ಇಟ್ಟಿರುತ್ತೇನೆ
ಬ್ರಾದಲ್ಲಿ ಎರಡು ಬಾಂಬ್ ನೀನಿಟ್ಟುಕೊಂಡರೆ ಏನಾಯಿತು?
ಚಡ್ಡಿಯೊಳಗೆ ತುಪಾಕಿಯೊಂದನ್ನು ನಾನೂ ಇಟ್ಟಿರುತ್ತೇನೆ

ಆಕೆಯಂತೂ ಬ್ರಾದಲ್ಲಿ ಬಾಂಬಿಟ್ಟುಕೊಂಡು ಬಂದಿದ್ದಳು. ಆತ್ಮರಕ್ಷಣೆಗೆ ಅಂತ ಡಗ್ಲಾಸ್ ದೇವಾನಂದ ಸಹಿತ ಚಡ್ಡಿಯೊಳಗೆ ಒಂದು ಗನ್ ಇಟ್ಟಿರುತ್ತಿದ್ದ ನೋಡಿ!

(ಚಡ್ಡಿಯೊಳಗೆ ತುಪಾಕಿಯೆಂದರೆ ಅಂದ್ರೆ ಚಡ್ಡಿ ಜೇಬಿನೊಳಗೆ ಅಂತ. ಅಪಾರ್ಥ ಬೇಡ :) ಶಾಯರಿ ಇಂಟರ್ನೆಟ್ ನಿಂದ ಕದ್ದಿದ್ದು. )

**

ಈ ಬ್ಲಾಗ್ ಪೋಸ್ಟಿಗೆ ಬೇಕಾದ ಮಾಹಿತಿ ಹೆಕ್ಕಿದ್ದು ಕೆಳಗಿನ ಎರಡು ಪುಸ್ತಕಗಳಿಂದ ಮತ್ತು ಹಲವಾರು ವೆಬ್ ಸೈಟ್ ಗಳಿಂದ. ಇವನ್ನು ಇತ್ತೀಚಿಗೆ ಓದಿದೆ. ಮೊದಲನೇ ಪುಸ್ತಕ ಸೀದಾ ಶ್ರೀಲಂಕಾದಿಂದಲೇ ತರಿಸಿದೆ. ಆರ್ಡರ್ ಮಾಡಿ ಒಂದೂವರೆ ತಿಂಗಳ ನಂತರ ಬಂತು.

೧) Gota's War by C.A. Chandraperuma

೨) This Divided Island: Stories from the Sri Lankan War by Samanth Subramanian

**

LTTE ಬಗ್ಗೆ ಹಿಂದೆ ಬರೆದಿದ್ದ ಎರಡು ಬ್ಲಾಗ್ ಪೋಸ್ಟುಗಳಿಗೆ ಲಿಂಕ್ಸ್ ಇಲ್ಲಿವೆ.

೧) ಪೋಡಿ ನಂಗಿ ತಮಿಳ್ ಪುಲಿಯಾದದ್ದು

೨)  LTTE ಸೇರಬಾರದು. ಸೇರಿದರೆ ಪ್ರೀತಿ ಮಾಡಬಾರದು

**

ಪ್ರಭಾಕರನ್, ಪೊಟ್ಟು ಅಮ್ಮನ್ ಮೊದಲ ಸನ್ನಿವೇಶದ ಸೃಷ್ಟಿ, ಸಂಭಾಷಣೆ ಎಲ್ಲ ನನ್ನವು. ಆದ ಘಟನೆಗಳ ಮೂಲ ಮಾಹಿತಿಗೆ ಚ್ಯುತಿ ಬರದಂತೆ.

3 comments:

Vimarshak Jaaldimmi said...


Many new insights!

ವಿ.ರಾ.ಹೆ. said...

ಅಯ್ಯಪ್ಪ. ಬಾಂಬ್ ಸ್ಪೋಟದ ರಿಯಲ್ ವಿಡಿಯೋ ಯಾವುದೂ ನೋಡಿರಲಿಲ್ಲ. ಭಯಾನಕವಾಗಿದೆ. ಇನ್ನು ದೊಡ್ಡ ಮಟ್ಟದ ಬಾಂಬ್ ಸ್ಪೋಟದ ಭೀಕರತೆ ಹೇಗಿರಬಹುದು ಅಂತ ಕಲ್ಪನೆ ಮಾಡಿಕೊಂಡರೆ ದಿಗಿಲಾಗತ್ತೆ!

Mahesh Hegade said...

Thanks Vikas! :)