Monday, October 13, 2014

ಮಾಡಿ ಅಂಡರ್ವರ್ಲ್ಡ್ ಸಂಗ, ರೆಕ್ಕೆ ಸುಟ್ಟುಕೊಂಡ ಪತಂಗ

ಗೀತಿಕಾ ಮಹಡಿಯಿಂದ ಕೆಳಗೆ ಇಳಿದು ಬಂದಳು. ಈಗ ಆಕೆ ಮಾಜಿ ನಟಿ. ಮದುವೆಯಾಗಿದೆ, ಮಕ್ಕಳಿವೆ. ಮೊದಲಿನ ಹಾಗೆ ಮೂರೂ ಹೊತ್ತು ಶೂಟಿಂಗ್, ಅದು ಇದು ಅಂತ ಸದಾ ಬ್ಯುಸಿ ಅಲ್ಲ ಆಕೆ.

ಡ್ರಾಯಿಂಗ್ ರೂಮಿಗೆ ಬಂದು ಸೋಫಾದ ಮೇಲೆ ಕುಳಿತಳು. ಎದುರಿಗಿದ್ದ ಯಾವದೋ ಪತ್ರಿಕೆ ಕೈಗೆತ್ತಿಕೊಂಡು ಹಾಗೆ ಸುಮ್ಮನೆ ಕಣ್ಣಾಡಿಸಿದಳು. ಅಷ್ಟರಲ್ಲಿ ಆಕೆಯ ಚಿಕ್ಕ ಮಗಳು ಬಂದಳು. ಬಂದವಳೇ ಟಿವಿ ಆನ್ ಮಾಡಿದಳು. 'ಎಷ್ಟು ಟೀವಿ ನೋಡ್ತೀಯಾ ಪುಟ್ಟಿ? ಸಾಕು ಆಫ್ ಮಾಡು.........' ಅನ್ನಲು ಹೊರಟಿದ್ದ ಗೀತಿಕಾ ಮಾತು ಅರ್ಧಕ್ಕೆ ನಿಲ್ಲಿಸಿದಳು. ಟೀವಿ ಮೇಲೆ ಬರುತ್ತಿದ್ದ ಬ್ರೇಕಿಂಗ್ ನ್ಯೂಸ್ ಫಟಾಕ್ ಅಂತ ಸೆಳೆಯಿತು. ಭಯಂಕರ ಆಸಕ್ತಿಯಿಂದ ನೋಡತೊಡಗಿದಳು. ಅಷ್ಟರಲ್ಲಿ ಮಗಳು ಚಾನೆಲ್ ಚೇಂಜ್ ಮಾಡಿಬಿಟ್ಟಳು. ಒಂದೇ ಕ್ಷಣ. ಮಗಳ ಮೇಲೆ ಸಿಕ್ಕಾಪಟ್ಟೆ ರೇಗಿದ ಗೀತಿಕಾ, ಆಕೆ ಕೈಯಿಂದ ರಿಮೋಟ್ ಕಿತ್ತುಕೊಂಡು, ತುರಂತವಾಗಿ ಮೊದಲಿನ ಚಾನೆಲ್ ಗೆ ವಾಪಸ್ ಬಂದು, ಬಿಟ್ಟ ಕಣ್ಣು ಮುಚ್ಚದೆ, ಬರುತ್ತಿದ್ದ ಬ್ರೇಕಿಂಗ್ ನ್ಯೂಸ್ ನೋಡುವದನ್ನು ಮುಂದುವರೆಸಿದಳು. 'ನನಗೆ ಟೀವಿ ನೋಡಬೇಡ ಅಂದೆ ಮತ್ತೆ? ಈಗ ನೀನೇ ನೋಡ್ತಾ ಇದ್ದೀಯಲ್ಲಾ ಮಮ್ಮಿ? ಬೇರೆ ಚಾನೆಲ್ ಹಾಕು,' ಅಂತ ಹಟ ಮಾಡಿದ ಮಗಳನ್ನು ಕೆಕ್ಕರಿಸಿ ನೋಡಿದಳು. ಒಂದೇ ಕ್ಷಣ. ಮತ್ತೆ ಪದೇ ಪದೇ ರಿಪೀಟ್ ಆಗುತ್ತಿದ್ದ, ರೋಚಕ, sensational ಬ್ರೇಕಿಂಗ್ ನ್ಯೂಸ್ ನೋಡುವದರಲ್ಲೇ ಮಗ್ನಳಾಗಿ ಹೋದಳು. 'ಅಮ್ಮಾ ಯಾಕೋ ಇವತ್ತು ಕಿರಿಕ್ ಮೂಡಿನಲ್ಲಿ ಇದ್ದ ಹಾಗೆ ಕಾಣ್ತಾಳೆ. ಯಾರಿಗೆ ಬೇಕು ಈ ಅಮ್ಮನ ಸಹವಾಸ?' ಅನ್ನೋ ಹಾಗೆ ಲುಕ್ ಕೊಟ್ಟ ಚಿಕ್ಕ ಮಗಳು, 'ರಾಣೀ....... ' ಅಂತ ಕರೆಯುತ್ತ, ಕೆಲಸದ ಹೆಂಗಸನ್ನು ಹುಡುಕುತ್ತ ಹೋದಳು.

ಅದೆಂತಹ ಬ್ರೇಕಿಂಗ್ ನ್ಯೂಸ್ ಬರುತ್ತಿತ್ತು? ಅದನ್ನು ಯಾಕೆ ಅಷ್ಟೊಂದು ಕಾತುರತೆಯಿಂದ, ಭಯದಿಂದ, ಆತಂಕದಿಂದ, ಕುತೂಹಲದಿಂದ ಗೀತಿಕಾ ನೋಡುತ್ತಿದ್ದಳು?

ಬ್ರೇಕಿಂಗ್ ನ್ಯೂಸ್: ನಾಪತ್ತೆಯಾಗಿದ್ದ ಮುಂಬೈ ಪೋಲೀಸ್ ಮಾಜಿ ಅಧಿಕಾರಿ, ಎನ್ಕೌಂಟರ್ ಸ್ಪೆಷಲಿಸ್ಟ್ ಕರುಣ್ ಕೋರ್ಡೆ ರೈಲು ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಸಸ್ಪೆಂಡ್ ಆಗಿದ್ದ ಅವರು, ತನಿಖೆಗೆ ಹಾಜರಾಗದೇ ನಾಪತ್ತೆಯಾಗಿದ್ದರು. ಎನ್ಕೌಂಟರ್ ಸ್ಪೆಷಲಿಸ್ಟ್ ಅಂತಲೇ ಹೆಸರು ಮಾಡಿದ್ದ ಕೋರ್ಡೆ ಕಳೆದ ಕೆಲವು ವರ್ಷಗಳಲ್ಲಿ ಅನೇಕ ಸಂದೇಹಗಳಿಗೆ ಒಳಗಾಗಿದ್ದರು. ವಿವಾದಗಳಿಗೆ ಈಡಾಗಿದ್ದರು. ಅವರ ಮೇಲೆ ಇತರ ಬೇರೆ ಆರೋಪಗಳೂ ಇದ್ದವು. ಮೊದಲಿನ ಇಲಾಖಾ ತನಿಖೆಗಳಲ್ಲಿ ಯಾವದೂ ಸಾಬೀತಾಗಿರಲಿಲ್ಲ. ಈಗ ಒಮ್ಮೆಲೇ ರೈಲು ಹಳಿಗಳ ಮೇಲೆ ಶವವಾಗಿ ಪತ್ತೆಯಾಗಿರುವ ಕರುಣ್ ಕೋರ್ಡೆ ತಮ್ಮ ಸಾವಿನಲ್ಲಿ ಅನೇಕ ಪ್ರಶ್ನೆಗಳನ್ನು ಪ್ರಶ್ನೆಗಳನ್ನಾಗಿಯೇ ಉಳಿಸಿ ಹೋಗಿಬಿಟ್ಟಿದ್ದಾರೆ......

ಹೀಗೆ ಬ್ರೇಕಿಂಗ್ ನ್ಯೂಸ್ ಬರುತ್ತಿತ್ತು. ಕರುಣ್ ಕೋರ್ಡೆ ಅಂತ ಹೆಸರು ಕೇಳಿದ ಗೀತಿಕಾಳ ಚಹರಾಪಟ್ಟಿ ಏಕ್ದಂ ಬದಲಾಗಿ ಹೋಯಿತು. ಒಮ್ಮೆಲೇ ಮುಖ ಕಳಾಹೀನವಾಯಿತು. ಆದರೆ ಕರುಣ್ ಕೋರ್ಡೆ ಸತ್ತ ಅಂತ ಸುದ್ದಿ ಮನಸ್ಸಿನಲ್ಲಿ ಇಳಿದು, ಕಾಂಕ್ರೀಟ್ ನಂತೆ ಗಟ್ಟಿಯಾದ ತಕ್ಷಣ ಒಂದು ತರಹದ ರಿಲೀಫ್ ಮುಖದ ಮೇಲೆ ಮೂಡಿ ಬಂತು. ಪೂರ್ತಿ ನಿರುಮ್ಮಳ. ಏನೋ ಒಂದು ದೊಡ್ಡ ಪೀಡೆ ಕಳೆದಂತಾಯಿತು. ಸತ್ತ, ಅದೂ ನಾಯಿಯಂತೆ ರೈಲ್ವೆ ಹಳಿ ಮೇಲೆ ಸತ್ತ ಅನ್ನುವದನ್ನು ಕೇಳಿದ ಗೀತಿಕಾ ತಾನೇ ಕೊಂದು, ಪ್ರತಿಕಾರ ತೀರಿಸಿಕೊಂಡಳೋ ಎಂಬಂತೆ ಗಹಗಹಿಸಿ ನಕ್ಕಳು. ಯಾರಾದರೂ ನೋಡಿ ಘಾಬರಿಯಾದಾರು ಅಂತ ಸುಮ್ಮನಾಗಿ, ಸಾವರಿಸಿಕೊಂಡು ಮತ್ತೆ ಬ್ರೇಕಿಂಗ್ ನ್ಯೂಸ್ ನೋಡತೊಡಗಿದಳು.

ಅದ್ಯಾರೋ ಮಾಜಿ ಎನ್ಕೌಂಟರ್ ಸ್ಪೆಷಲಿಸ್ಟ್ ಸತ್ತು ಹೋದರೆ ಮಾಜಿ ನಟಿ ಗೀತಿಕಾ ಅದೇಕೆ ಆಪರಿ ರಿಯಾಕ್ಟ್ ಮಾಡಿದಳು!?

ಅದರ ಹಿಂದೊಂದು ದೊಡ್ಡ ಕಥೆಯಿತ್ತು. ಭಯಾನಕ ನೆನಪುಗಳಿದ್ದವು.

೧೯೯೦ ರ ದಶಕದ ಮೊದಲಿನ ದಿನಗಳು. ಆಗಷ್ಟೇ ಗೀತಿಕಾ ಬಾಲಿವುಡ್ಡಿಗೆ ಎಂಟ್ರಿ ಕೊಟ್ಟಿದ್ದಳು. ಅಪ್ರತಿಮ ಸುಂದರಿ ಆಕೆ. ಎಲ್ಲ ಹೀರೋಯಿಣಿಯರಿಗಿಂತ ಒಂದ್ನಾಕು ಇಂಚು ಜಾಸ್ತಿಯೇ ಎತ್ತರವಿದ್ದಳು. ತಂದೆ ಕೂಡ ಬಾಲಿವುಡ್ಡಿನ ನಿರ್ಮಾಪಕರೇ. ೬೦, ೭೦ ರ ದಶಕದಲ್ಲಿ ಒಂದಿಷ್ಟು ಸಿನೆಮಾ ಅವರೂ ಮಾಡಿದ್ದರು. ಹಾಗಾಗಿ ಗೀತಿಕಾಳ ಬಾಲಿವುಡ್ಡ ಎಂಟ್ರಿ ತುಂಬ ಸುಲಭವಾಗಿಯೇ ಆಗಿತ್ತು. ಅದ್ಯಾಕೆ ಮಾಡಬಾರದ ಲಫಡಾ ಮಾಡಿಕೊಂಡು ಕೂತಳೋ ಏನೋ? ತಂದೆಯಾದರೂ ಮಗಳಿಗೆ ಸರಿಯಾಗಿ ವಾರ್ನಿಂಗ್ ಕೊಡಬಾರದೇ? ಕೊಟ್ಟಿದ್ದರೋ ಏನೋ? ಯಾರಿಗೆ ಗೊತ್ತು? ನಸೀಬ್ ಸರಿಯಿಲ್ಲ ಅಂದರೆ ರಾತ್ರಿ ಕಂಡ ಬಾವಿಯಲ್ಲಿ ಹಗಲು ಹೋಗಿ ಬೀಳಬೇಕಾಗುತ್ತದೆ. ಆ ಮಾದರಿಯಲ್ಲಿ ಗೀತಿಕಾಳ ಲೈಫ್ ಒಂದು ವಿಚಿತ್ರ ತಿರುವು ತೆಗೆದುಕೊಂಡುಬಿಟ್ಟಿತು.

೯೦ ರ ದಶಕದ ಮೊದಲಿನ ದಿನಗಳು ಅಂದರೆ ಕೇಳಬೇಕೇ? ಮುಂಬೈ ಮಾಫಿಯಾದ ಮೇರು ದಿನಗಳು ಅವು. ಇನ್ನೂ ೧೯೯೩ ರ ಮುಂಬೈ ಸ್ಪೋಟಗಳು ಆಗಿರಲಿಲ್ಲ. ಮುಂಬೈ ಅಂಡರ್ವರ್ಲ್ಡ್ ಪೂರ್ತಿ ದುಬೈನಲ್ಲಿ ಬೀಡು ಬಿಟ್ಟಿತ್ತು. ದೊಡ್ಡ ದೊಡ್ಡ ಭಾಯಿಗಳೆಲ್ಲ ಅಲ್ಲಿದ್ದರು. ಹಾಯಾಗಿ ಲಕ್ಸುರಿ ಜೀವನ ಮಾಡಿಕೊಂಡು ಆರಾಮಿದ್ದರು. ಅವರ ಚೇಲಾಗಳು ಮುಂಬೈನಲ್ಲಿ ಘೋಡಾ (ಪಿಸ್ತೂಲು) ಒತ್ತುತ್ತ, ಹಲ್ಲಾ ಗುಲ್ಲಾ ಎಬ್ಬಿಸುತ್ತ, ದೊಡ್ಡ ಪ್ರಮಾಣದ ವಸೂಲಿ ಮಾಡುತ್ತ, ಮಾಡಿದ ಕಾಸನ್ನು ಹವಾಲಾ ಮೂಲಕ ದುಬೈಗೆ ತಲುಪಿಸುತ್ತ ಎಲ್ಲರೂ ಮಜವಾಗಿದ್ದರು. ದೊಡ್ಡ ದೊಡ್ಡ ಕೆಲಸ ಮಾಡಿದ ಲೋಕಲ್ ರೌಡಿಗಳಿಗೆ ಪ್ರಮೋಷನ್ ಅಂದರೆ ದುಬೈ ಟ್ರಿಪ್ಪು. ಅಲ್ಲಿ ಲಿಮಿಟ್ ಇಲ್ಲದ ಮೋಜು, ಮಸ್ತಿ. ಭಾರತದಲ್ಲಿ ಭಯಂಕರ ದೊಡ್ಡ ಕೊಲೆ ಗಿಲೆ ಮಾಡಿಬಿಟ್ಟರೆ ದುಬೈನಲ್ಲೇ ಪರ್ಮನೆಂಟ್ ವಾಸ್ತ್ಯವ್ಯ. ಡಾನ್ ಜೊತೆಗೇ ಇದ್ದು, ಅಲ್ಲಿಂದಲೇ ಕೆಲಸ. ಚಿಕ್ಕ ಡಾನ್ ಆದ ಹಾಗೆ.

ದುಬೈನಲ್ಲಿದ್ದ ಅಂಡರ್ವರ್ಲ್ಡ್ ಭಾಯಿಗಳಿಗೆ ದೊಡ್ಡ ಆಕರ್ಷಣೆ ಅಂದರೆ ಬಾಲಿವುಡ್ಡು. ಇದು ನಿನ್ನೆ ಮೊನ್ನೆಯದಲ್ಲ. ಹಾಜಿ ಮಸ್ತಾನನ ಕಾಲದಿಂದಲೂ ಇದ್ದಿದ್ದು. ಭಾಯಿಗಳ ಶಕ್ತಿಗೆ, ತಾಕತ್ತಿಗೆ, ರೊಕ್ಕದ ಝಣಝಣಕ್ಕೆ ಬಾಲಿವುಡ್ ಫುಲ್ ಫಿದಾ. ತಾರೆಯರ ಸೌಂದರ್ಯಕ್ಕೆ, ನಾಚ್ ಗಾನಾಕ್ಕೆ, ನಖರಾಕ್ಕೆ, ಹೈ ಫೈ ನೌಟಂಕಿಗಳಿಗೆ ಅಂಡರ್ವರ್ಲ್ಡ್ ನ ಭಾಯಿ ಲೋಗ್ ಫುಲ್ ಫಿದಾ. ಯಾವಾಗ ಭಾಯಿಗಳಿಗೆ ಬಾಲಿವುಡ್ಡಿನಲ್ಲಿದ್ದ ಬೇರೆ ಬೇರೆ ರೊಕ್ಕದ ಮೂಲಗಳು ತಿಳಿದವೋ ಆವತ್ತಿನಿಂದ ಚಿತ್ರ ನಿರ್ಮಾಣದಿಂದ ಹಿಡಿದು, overseas rights, VCD, DVD, ಮ್ಯೂಸಿಕ್ ರೈಟ್ಸ್, ತಾರೆಯರನ್ನು ಒಟ್ಟಾಗಿ ಕರೆದುಕೊಂಡು ಹೋಗಿ ಮೂವಿಗಳ ಪ್ರಮೋಷನ್ ಮಾಡುವದು, ಎಲ್ಲವನ್ನೂ ಭಾಯಿ ಜನರೇ ಶುರು ಹಚ್ಚಿಕೊಂಡರು. ಸಿಕ್ಕಾಪಟ್ಟೆ ರೊಕ್ಕ ಮಾಡಿಕೊಂಡರು. ಹೀಗೆ ಪೂರ್ತಿ ಬಾಲಿವುಡ್ಡಿಗೆ ಬಾಲಿವುಡ್ಡೇ ಅಂಡರ್ವರ್ಲ್ಡ್ ಮಯವಾಗಿ ಹೋಯಿತು. ಎರಡೂ ಕಡೆ ಸಲ್ಲುವವರೇ ಜಾಸ್ತಿಯಾಗಿ, ಬಾಲಿವುಡ್ಡಿನಲ್ಲಿ ಇದ್ದಾರೆ ಅಂದ್ರೆ ಅಂಡರ್ವರ್ಲ್ಡ್ ಜೊತೆ ಸಂಪರ್ಕ ಹೊಂದೇ ಇರುತ್ತಾರೆ ಬಿಡಿ ಅನ್ನುವ ಹಾಗೆ ಆಗಿಹೋಯಿತು.

ಹೀಗೆ ಇದ್ದಾಗ ಗೀತಿಕಾ ಕೂಡ ಒಂದು ಶೋ ಮಾಡಲು ದುಬೈಗೆ ಹೋಗಬೇಕಾಯಿತು. ಭೂಗತ ಲೋಕದ ದೊಡ್ಡ ಭಾಯಿಯೊಬ್ಬನ ಮನೆಯಲ್ಲಿ ಏನೋ ಕಾರ್ಯಕ್ರಮ. ಅದಕ್ಕೆ ದೊಡ್ಡ ದೊಡ್ಡ ನಟ, ನಟಿಯರನ್ನು ಕರೆಯಿಸಿ, ಒಂದು ಮನೋರಂಜನಾ ಕಾರ್ಯಕ್ರಮ ಏರ್ಪಡಿಸಿ, ದುಬೈನಲ್ಲಿ ತಮ್ಮ ಸಾಮರ್ಥ್ಯದ ಒಂದು ಝಳಕ್ ತೋರಿಸಿ, ಅಲ್ಲಿನ ಅರಬ್ ಶೇಖ್ ಗಳ ಮುಂದೆ ಸ್ಕೋಪ್ ತೆಗೆದುಕೊಳ್ಳುವ ಹುನ್ನಾರ ಡಾನ್ ಗಳದ್ದು. ಮತ್ತೆ ಡಾನ್ ಗಳ ಮತ್ತು ಹಲವು ನಟ ನಟಿಯರ ಮಧ್ಯೆ ವ್ಯವಹಾರ ಮೀರಿದ ಚಿತ್ರ ವಿಚಿತ್ರ ವಯಕ್ತಿಕ ಸಂಬಂಧಗಳೂ ಇದ್ದವು ನೋಡಿ. ಎಲ್ಲದಕ್ಕೂ ಆಯಿತು ಅಂತ ಒಂದು ದುಬೈ ಟ್ರಿಪ್. ಇಡೀ ಟ್ರಿಪ್ಪಿನ ಪ್ರಾಯೋಜಕ ಕುಖ್ಯಾತ ಡಾನ್ ಛೋಟಾ ಫಕೀರ್.

ಹೊರಟವರಲ್ಲಿ ಮೂರ್ನಾಕು ಜನ ದೊಡ್ಡ ದೊಡ್ಡ ನಟ ನಟಿಯರು ಇದ್ದರು. ಇನ್ನೂ ಒಂದಿಷ್ಟು ಜನ ಸೆಕೆಂಡ್ ಲೆವೆಲ್ ನಟ ನಟಿಯರೂ ಇದ್ದರು. ಗೀತಿಕಾ ತರಹದವರು. ಮ್ಯೂಸಿಕ್ ಕಂಪೋಸರ್ ಜನ ಸಹಿತ ಹೊರಟಿದ್ದರು. ದೊಡ್ಡ ಟೋಳಿ. ಆಗ ಮಾತ್ರ ಬಾಲಿವುಡ್ಡಿಗೆ ಎಂಟ್ರಿ ಕೊಟ್ಟಿದ್ದ ಗೀತಿಕಾಳಿಗೆ ಇದು ಮೊದಲನೇ ದುಬೈ ಟ್ರಿಪ್. ಆಕೆಗೆ ಅಂಡರ್ವರ್ಲ್ಡ್ ಭಾಯಿ ಲೋಗ್ ಗಳ ಬಗ್ಗೆ ಗೊತ್ತಿತ್ತಾ? ಭಾಯಿ ಲೋಗ್ ಬೇರೆ ಬೇರೆ ತಾರೆಯರನ್ನು ಹೇಗೇಗೆ, ಯಾತ್ಯಾತಕ್ಕೆಲ್ಲ ಉಪಯೋಗಿಸಿಕೊಂಡಿದ್ದರು ಅಂತೆಲ್ಲ ಆಕೆಗೆ ಗೊತ್ತಿತ್ತಾ? ಆದರೂ ಹೋದಳೇ? ಅಥವಾ ಹೋಗಲೇಬೇಕಾದಂತಹ ಒಂದು ತರಹದ ಅನಿವಾರ್ಯತೆಯನ್ನು ತಂದು ಹಾಕಿತ್ತಾ ಬಾಲಿವುಡ್? ಬಾಲಿವುಡ್ ನಲ್ಲಿ ಯಶಸ್ಸು ಬೇಕು ಅಂದರೆ ಭಾಯಿ ಲೋಗ್ ಜೊತೆ compromise ಮಾಡಿಕೊಳ್ಳಲೇ ಬೇಕು ಅಂತ ಆಗಿಂದಲೇ ಪರೋಕ್ಷವಾಗಿ brain washing ಶುರುವಾಗಿ ಬಿಟ್ಟಿತ್ತೇ? ಒಟ್ಟಿನಲ್ಲಿ ಎಲ್ಲ ಕೂಡಿ ಬಂದು ಗೀತಿಕಾಳ ದುಬೈ ಟ್ರಿಪ್ ನಿಕ್ಕಿಯಾಗಿತ್ತು.

ದುಬೈಗೆ ಹೋದಳು. ಸುಮಾರು ಒಂದು ವಾರದ ಪ್ರೊಗ್ರಾಮ್ ಇತ್ತು. ಪ್ರತಿದಿನ ಸಂಜೆ ಪ್ರೊಗ್ರಾಮ್ ಇರುತ್ತಿತ್ತು. ಲೈವ್ ನಾಚ್ ಗಾನಾ. ಏನೂ ವಿಶೇಷ ಅನ್ನಿಸಲಿಲ್ಲ ಗೀತಿಕಾಗೆ. ಯಾವದೇ ರೀತಿಯ ತೊಂದರೆಯೂ ಆಗಲಿಲ್ಲ. ಇದ್ದ ದೊಡ್ಡ ದೊಡ್ಡ ನಾಲ್ಕಾರು ಭಾಯಿ ಲೋಗ್ ಜನ ಇವಳ ಬಗ್ಗೆ ಏನೂ ವಿಶೇಷ ಆಸಕ್ತಿ ತೋರಿಸಿರಲಿಲ್ಲ. ಮತ್ತೆ ಗೀತಿಕಾಗಿಂತ ದೊಡ್ಡ ದೊಡ್ಡ ನಟಿಮಣಿಯರೆಲ್ಲ ಅಲ್ಲಿ ಇದ್ದರಲ್ಲ? ಅವರೆಲ್ಲ ಭಾಯಿ ಜನರ ಡವ್ವುಗಳು. ಅವರ ಮಧ್ಯೆ ಲವಿ ಡವಿ ಜೋರಾಗಿ ನಡೆಯುತ್ತಿತ್ತು. ಅವನ್ನೆಲ್ಲ ಬೆರಗುಗಣ್ಣಿಂದ ನೋಡುತ್ತ, ಮುಂಬೈನಲ್ಲಿದ್ದಾಗ ಕೇವಲ ಹೆಸರು ಮಾತ್ರ ಕೇಳಿದ್ದ ಭೂಗತ ದೊರೆಗಳನ್ನು ಹತ್ತಿರದಿಂದ ನೋಡಿ, ರೋಮಾಂಚನ ಫೀಲ್ ಮಾಡಿಕೊಳ್ಳುವ ಥ್ರಿಲ್ ಗೀತಿಕಾಳದ್ದು. ಅದರಲ್ಲೂ ಎಲ್ಲೋ ಒಮ್ಮೆ ದೊಡ್ಡ ಭೂಗತ ದೊರೆ ಅಪರೂಪಕ್ಕೆ ಎಂಬಂತೆ ಸ್ವಲ್ಪ ಕಾಳು ಹಾಕಿದ ಅಂದರೆ ನೆಲದ ಮೇಲೆ ಕಾಲೇ ನಿಲ್ಲುತ್ತಿರಲಿಲ್ಲ ಗೀತಿಕಾ ತರಹದ ಇನ್ನೂ ಮಾತ್ರ ಬಾಲಿವುಡ್ಡಿನಲ್ಲಿ ಅಂಬೆಗಾಲಿಡುತ್ತಿದ್ದ ಕಂದಮ್ಮಗಳಿಗೆ. ಡಾನ್ ಜನಗಳು ಯಾರ್ಯಾರನ್ನೋ ಹೀರೋ ಹೀರೋಯಿಣಿ ಮಾಡಿದ್ದರು. ಯಾರ್ಯಾರನ್ನೋ ಕೊಳೆತ ಹಣ್ಣಿನಂತೆ ತೆಗೆದು ಬಿಸಾಕಿದ್ದರು. ಭಾಯಿಗಳ ಮಾತು ಕೇಳದ ಕೆಲವು ನಿರ್ಮಾಪಕರು ಡಾನ್ ಗಳು ಕಳಿಸಿದ್ದ ಶಾರ್ಪ್ ಶೂಟರ್ ಗಳು ಹಾರಿಸಿದ್ದ ಗುಂಡು ತಿಂದು ಸತ್ತೇ ಹೋಗಿದ್ದರು. ಆಮಟ್ಟಿಗಿತ್ತು ಬಾಲಿವುಡ್ ಮೇಲೆ ಭಾಯಿಗಳ ಹಿಡಿತ.

ಗೀತಿಕಾಳ ಖಾತಿರ್ದಾರಿಗೆ ನಿಂತವ ರಫೀಕ್. ಡಾನ್ ಛೋಟಾ ಫಕೀರನ ಖಾಸಮ್ ಖಾಸ್ ಮನುಷ್ಯ. ಹಾಗಂತ ಅವನೇ ಹೇಳಿಕೊಂಡಿದ್ದ. ಡಾನ್ ಛೋಟಾ ಫಕೀರನ ಬಲಗೈ ಬಂಟನೇ ತನ್ನ ಆತಿಥ್ಯಕ್ಕೆ, ಸತ್ಕಾರಕ್ಕೆ ನಿಂತು ಬಿಟ್ಟಿದ್ದಾನೆ ಅಂತ ತಿಳಿದ ಗೀತಿಕಾ ಫುಲ್ ಥ್ರಿಲ್. ಆ ವಯಸ್ಸೇ ಅಂತಹದು. ಇನ್ನೂ ಇಪ್ಪತ್ತರ ಹರೆಯ ಆಕೆಗೆ. ಫುಲ್ ಖುಷ್. ರಫೀಕ್ ಕೂಡ ತುಂಬ ಸಭ್ಯವಾದ ರೀತಿಯಲ್ಲಿಯೇ ನಡೆದುಕೊಂಡಿದ್ದ. ತನ್ನ ಬಾಸ್ ಛೋಟಾ ಫಕೀರ್ ಬಗ್ಗೆ ಏನೇನೋ ಭಯಂಕರ ರೋಚಕ ಕಥೆ ಹೇಳುತ್ತಿದ್ದ ರಫೀಕ್. ಅವನ್ನೆಲ್ಲ ಬಾಯಿ ಬಿಟ್ಟುಗೊಂಡು ತನ್ಮಯತೆಯಿಂದ ಕೇಳುತ್ತಿದ್ದಳು ಗೀತಿಕಾ. ರಫೀಕ್ ಆಗಲೇ ಹೊಸ ಹಕ್ಕಿಗೆ ಕಾಳು ಹಾಕಲು ಶುರು ಮಾಡಿದ್ದನೇ? ಹೇಗೂ ಬಾಸ್ ಛೋಟಾ ಫಕೀರ್ ದೊಡ್ಡ ದೊಡ್ಡ ನಟಿಯರ ತೆಕ್ಕೆಯಲ್ಲಿಯೇ ಇರುತ್ತಿದ್ದರು. ಅವರ ಸಹಾಯಕರಾದ ರಫೀಕನಂತವರು ಸೆಕೆಂಡ್ ಲೆವೆಲ್ ನಟಿಯರನ್ನು ಪಟಾಯಿಸಿದರೆ ತಪ್ಪೇನು? ಹಾಗಂತ ಅಂದುಕೊಂಡನೇ ರಫೀಕ್?

ನೋಡಲು ಸಕತ್ತಾಗಿದ್ದ ರಫೀಕ್. ಹೇಳಿ ಕೇಳಿ ಲಂಬಾ ಚೌಡಾ ಪಠಾಣ. ಮೂಲತಃ ಅಫ್ಘಾನಿ. ಮತ್ತೆ ಕೇಳಬೇಕೆ? ಇನ್ನೂ ಮೂವತ್ತು ವರ್ಷ ಅವನಿಗೆ. ಮುಂಬೈನಲ್ಲಿ ಅವನಿಗೂ ದೊಡ್ಡ ಹೆಸರಿತ್ತು. ಒಂದೆರೆಡು ಬಹಳ ದೊಡ್ಡ ಗೇಮ್ ಬಾರಿಸಿದ್ದ. ಇನ್ನೂ ಮುಂಬೈನಲ್ಲೇ ಇದ್ದರೆ ಪೊಲೀಸರು ಎನ್ಕೌಂಟರ್ ಮಾಡೇ ಬಿಡುತ್ತಾರೆ ಅನ್ನುವ ಸನ್ನಿವೇಶ ಉಂಟಾದಾಗ ಖುದ್ದು ಡಾನ್ ಛೋಟಾ ಫಕೀರನೇ ಮಾಂಡವಲಿ (ಸಂಧಾನ) ಮಾಡಿಸಿ, ಕೊಡಬೇಕಾದ ಪೋಲೀಸರಿಗೆಲ್ಲ ಕೊಡಬೇಕಾದಷ್ಟು ಕಾಣಿಕೆ ಎಲ್ಲ ಸಲ್ಲಿಸಿ, ಮುಂಬೈನಿಂದ ದುಬೈಗೆ ರಫೀಕನನ್ನು ಉಡ್ಕಿ ಹಾರಿಸಿದ್ದ. ದುಬೈಗೆ ಬಂದು ನೆಲೆಸಿದ್ದ ರಫೀಕ್ ಈಗ ರಫೀಕ್ ಭಾಯ್. ಇದೆಲ್ಲ ಗೀತಿಕಾಳಿಗೆ ಈಗ ಗೊತ್ತಾಯಿತು. ಗೊತ್ತಾಗಿ, 'ಹೌದಾ!?' ಅನ್ನುವ ಹಾಗೆ ಸಿಕ್ಕಾಪಟ್ಟೆ ಎಕ್ಸೈಟ್ ಆಗಿಬಿಟ್ಟಳು.

ಒಂದು ವಾರ ರಫೀಕ್ ಜೊತೆ ದುಬೈ ಸುತ್ತಿದ್ದೇ ಸುತ್ತಿದ್ದು. ಸಕತ್ತಾಗಿ ಶಾಪಿಂಗ್ ಮಾಡಿಸಿಬಿಟ್ಟ ರಫೀಕ್. ಆದರೆ ಸಭ್ಯತೆಯ ಎಲ್ಲೆ ಎಂದೂ ಮೀರಲಿಲ್ಲ. ಸ್ವಲ್ಪ ಒಳ್ಳೆ ಪರಿಚಯವಾಗಿ, ಕ್ಲೋಸ್ ಫ್ರೆಂಡ್ ಫೀಲಿಂಗ್ ಬಂದ ಮೇಲೆ ಒಂದಿಷ್ಟು ಪೋಲಿ ಜೋಕ್ಸ್ ಮಾತ್ರ ಎಗ್ಗಿಲ್ಲದೆ ಹೊಡೆಯುತ್ತಿದ್ದ ರಫೀಕ್. ಕೆಂಪು ಕೆಂಪಾಗುತ್ತಿದ್ದ ಗೀತಿಕಾ ಬಿದ್ದು ಬಿದ್ದು ನಗುತ್ತಿದ್ದಳು. 'ಮಂಚಕ್ಕೆ ಕರೆಯೋ ಮೊದಲು ಮಾಲನ್ನು ಸಾಕಷ್ಟು ನಗಿಸಬೇಕು ರಫೀಕ್ ಮಿಯಾ. ಗೊತ್ತು ಕ್ಯಾ? ಹಸೀ ತೋ ಫಸೀ ರೇ! ನಕ್ಕರೆ ಬಿದ್ದಳು. ಹುಡುಗಿಯನ್ನು ನಗಿಸುವದರಲ್ಲಿ ಗೆದ್ದೆ ಅಂದರೆ ಎಲ್ಲ ಗೆದ್ದಂತೆ. ನಂತರ ಹಾಸಿಗೆಗೆ ತಾನಾಗೇ ಬರುತ್ತಾಳೆ. ಅಂಡರ್ವರ್ಲ್ಡ್ ಭಾಯಿ ಅಂತ ಹೆದರಿಸಿ, ಬೆದರಿಸಿ ಮಾಲು ಪಟಾಯಿಸಬೇಕು ಅಂತಿಲ್ಲ ಮಿಯಾ. ಥೋಡಾ ನರ್ಮೀ ಸೆ ಕಾಮ್ ಕರೋ ಜೀ. ಬಾಲಿವುಡ್ ಹುಡುಗಿಯರಿಗೆ ದುಬೈ ತೋರಿಸಿ, ಐಶ್ ಮಾಡಿಸಿ, ಶಾಪಿಂಗ್ ಮಾಡಿಸಿ, ನಗಿಸಿ, ನಗು ನಗುತ್ತಲೇ ಮಂಚ ಹತ್ತಿಸಿ. ಏ ಬಾಲಿವುಡ್ ಕಿ ಲಡ್ಕಿಯಾ ಸಬ್ ಕುತ್ತೀ ಚೀಜ್ ಹೋತಿ ಹೈ. ಪೈಸೆ ಕೆ ಪೀಛೆ. ಎಲ್ಲ ರೊಕ್ಕದ ಹಿಂದೆ ಓಡ್ತಾರೆ. ಪೈಸಾ ಫೇಂಕ್ ಔರ್ ತಮಾಷಾ ದೇಖ್ ಭಾಯ್. ದುಡ್ಡು ಎಸೆದು ಮಜಾ ನೋಡಿ,' ಅಂತ ಬಾಸ್ ಛೋಟಾ ಫಕೀರ್ ಉವಾಚ. ಅದೇ ಟೆಕ್ನೀಕ್ ಉಪಯೋಗಿಸಿ ರಫೀಕ್ ಗೀತಿಕಾಗೆ ಕಾಳು ಹಾಕಲು ಶುರು ಮಾಡಿದ್ದ. ಬೆಣ್ಣೆ ಹತ್ತಿರ ಬೆಂಕಿ ಹೋಗಲಿ ಅಥವಾ ಬೆಂಕಿ ಹತ್ತಿರ ಬೆಣ್ಣೆಯೇ ಹೋಗಲಿ ಕರಗುವದು ಮಾತ್ರ ಬೆಣ್ಣೆಯೇ. ಅಲ್ಲವೇ? ಬೆಣ್ಣೆಯಂತಿದ್ದ ಗೀತಿಕಾ ರಫೀಕ್ ಎಂಬ ಅಂಡರ್ವರ್ಲ್ಡ್ ಭಾಯಿಯ ಬೆಂಕಿಯ ಝಳಕ್ಕೆ ಕರಗಲು ಆರಂಭಿಸಿದ್ದಳು. ಪ್ರಕೃತಿಯ ನಿಯಮ. ಯಾರೇನು ಮಾಡಲು ಆಗುತ್ತದೆ?

ರಫೀಕ್ ಕೂಡ ಗೀತಿಕಾ ಮೇಲೆ ಫಿದಾ ಆಗಿದ್ದನೇ? ಅಥವಾ ಅವನ ಮಿದುಳಲ್ಲಿ ಬೇರೇನೋ ಖತರ್ನಾಕ್ ಪ್ಲಾನಿಂಗ್ ನಡೆಯುತ್ತಿತ್ತೋ? ಗೀತಿಕಾ ಮಾತ್ರ ರಫೀಕ್ ಮೇಲೆ ಫುಲ್ ಫಿದಾ. infatuation ಅನ್ನಿ. ಭೂಗತ ಡಾನ್ ಗಳ ಮೇಲೆ ಹುಚ್ಚಿಯರಂತೆ ಫುಲ್ ಫಿದಾ ಆದ ಬಾಲಿವುಡ್ ಸುಂದರಿಯರ ಲಿಸ್ಟ್ ಬಹಳ ದೊಡ್ದದಿದೆ ಬಿಡಿ. ಅದಕ್ಕೆ ಮತ್ತೊಂದು ಹೆಸರು ದಾಖಲಾಗಿತ್ತು. ಅದೇ ಗೀತಿಕಾ.

ಒಂದು ವಾರ ಮುಗಿದೇ ಹೋಯಿತು. ಗೀತಿಕಾಳಿಗೆ ದುಬೈ ಬಿಟ್ಟು ಬರುವ ಮನಸ್ಸೇ ಇಲ್ಲ. ದಿನವಿಡೀ ರಫೀಕ್ ಜೊತೇನೇ ಇರಬೇಕು ಅನ್ನಿಸುತ್ತಿತ್ತು. ಆದರೇನು ಮಾಡುವದು? ವಾಪಸ್ ಮುಂಬೈಗೆ ಬರಲೇಬೇಕಾಗಿತ್ತು. ಕೊನೆಯ ದಿವಸ ರಫೀಕ್ ಭರ್ಜರಿ ಶಾಪಿಂಗ್ ಮಾಡಿಸಿದ. ಕಬ್ಬಿಣ ಸರಿಯಾಗಿ ಕಾದಿದೆ ಅಂತ ಅರಿತಿದ್ದ ರಫೀಕ್ ಒಂದು ದೊಡ್ಡ ಹೊಡೆತ ಹಾಕೇಬಿಟ್ಟ. ಹೃದಯದಾಕಾರದ ಒಂದು ಮಹಾ ತುಟ್ಟಿ ಪೆಂಡೆಂಟ್ ಇರುವ ಬಂಗಾರದ ಚೈನ್ ಗೀತಿಕಾಳಿಗೆ ಗಿಫ್ಟ್ ಅಂತ ಕೊಟ್ಟುಬಿಟ್ಟ. ರಫೀಕ್, ಗೀತಿಕಾ ಅಂತ ಹೆಸರು ಬೇರೆ ಕೆತ್ತಿಸಿಬಿಟ್ಟಿದ್ದ. ಸುಮ್ಮನೆ ಪ್ರೆಸೆಂಟ್ ಕೊಡಲಿಲ್ಲ. ಪಾಕೀಜಾ ಚಿತ್ರದ ಭಯಂಕರ ರೋಮ್ಯಾಂಟಿಕ್ ಡೈಲಾಗ್ ಬೇರೆ ಹೊಡೆದಿದ್ದ. ಆ ಗಿಫ್ಟ್ ತೆಗೆದುಕೊಳ್ಳುವಷ್ಟರಲ್ಲಿ ಗೀತಿಕಾ ಫುಲ್ ಕರಗಿ ಹೋಗಿದ್ದಳು. ಇಲ್ಲದ ಮನಸ್ಸಿನಿಂದ ವಾಪಸ್ ಮುಂಬೈಗೆ ಪ್ಲೇನ್ ಹತ್ತಿದ್ದಳು. 'ನೀನು ಎಲ್ಲೇ ಇರು. ನಿನ್ನ ಹುಡುಕಿ ಫೋನ್ ಮಾಡ್ತೀನಿ,' ಅಂತ ರಫೀಕ್ ಹೇಳಿಬಿಟ್ಟಿದ್ದ. ಅವನಿಗೆ ಮುಂಬೈನಲ್ಲಿ, ಬಾಲಿವುಡ್ಡಿನಲ್ಲಿ ಇದ್ದ ವ್ಯಾಪಕ ಸಂಪರ್ಕಗಳನ್ನು ತಿಳಿದಿದ್ದ ಗೀತಿಕಾಗೆ ಅದರಲ್ಲಿ ಏನೂ ಆಶ್ಚರ್ಯ ಅನ್ನಿಸಲಿಲ್ಲ.  ಆದರೆ ಮುಂದೆ ರಫೀಕನ ಜೊತೆ ಆಗಲಿದ್ದ ಫೋನ ಸಂಭಾಷಣೆಗಳೇ ಆಕೆಯ ಭವಿಷ್ಯದ ಬುಡಕ್ಕೇ ಬತ್ತಿ ಇಡುತ್ತವೆ ಅಂತ ಏನಾದರೂ ಅವಳಿಗೆ ತಿಳಿದಿತ್ತೇ?

ಗೀತಿಕಾಳನ್ನು ಪ್ಲೇನ್ ಹತ್ತಿಸಿದ ನಂತರ ರಫೀಕ್ ವಾಪಸ್ ಬಂದ. ಮನೆಗೆ ಬಂದವನೇ ಒಂದು ಮಗ್ ಬಿಯರ್ ರೆಡಿ ಮಾಡಿಕೊಂಡ. ಒಂದು ನಂಬರ್ ಡಯಲ್ ಮಾಡಿದ. ಫೋನ್ ನಲ್ಲಿ ಮಾತಾಡಿದ್ದು ಇಷ್ಟು. 'ಸಾಬ್, ಕಾಮ್ ಹೋ ಗಯಾ ಹೈ. ನಿಮ್ಮ ಕೆಲಸ ಆಗಿದೆ. ನಿಮ್ಮದೂಕಿ ಕೆಲಸ ಶುರು ಹಚ್ಚಿಕೊಳ್ಳಿ ಸಾಬ್. ಮತ್ತೇನಾದರೂ ಕೆಲಸ ಇದ್ದರೆ ಹೇಳಿ ಸಾಬ್. ಮುಂಬೈನಲ್ಲಿ ನಮ್ಮದು ಗ್ಯಾಂಗಿನ ಬಚ್ಚಾ ಲೋಗ್ ಬಗ್ಗೆ ಸ್ವಲ್ಪ ಕಾಳಜಿ ವಹಿಸಿ ಸಾಬ್. ಕಳೆದ ವಾರ ಮೂವರನ್ನು ಎನ್ಕೌಂಟರ್ ನಲ್ಲಿ ಉಡಾಯಿಸಿ ಬಿಟ್ಟಿರಿ. ಭಾಯಿ ಛೋಟಾ ಫಕೀರ್ ಜೊತೆ ಡೀಲ್ ಆಗಿದ್ದು ಇಬ್ಬರು ಅಂತ ತಾನೇ? ಯಾಕೆ ಸಾಬ್ ಹಾಗೆ ಮಾಡಿಬಿಟ್ಟಿರಿ? ಅದರಲ್ಲೂ ದೊಡ್ಡ ಶಾರ್ಪ್ ಶೂಟರ್ ಒಬ್ಬನನ್ನೂ ಕೂಡ ತೆಗೆದುಬಿಟ್ಟಿರಿ. ಸ್ವಲ್ಪ ರೆಹೆಮ್ (ಕರುಣೆ) ತೋರಿಸಿ ಸಾಬ್,' ಅಂದ. ಆಕಡೆ ಎನ್ಕೌಂಟರ್ ಸ್ಪೆಷಲಿಸ್ಟ್ ಕರುಣ್ ಕೋರ್ಡೆ ವಿಕೃತ ನಗೆ ನಕ್ಕ. 'ಅಚ್ಛಾ, ಅಚ್ಛಾ, ಈಗ ಫೋನ್ ಇಡು ಸಾಕು,' ಅಂತ ಪೋಲೀಸರ ದಬಾಯಿಸೋ ದನಿಯಲ್ಲಿ ಆರ್ಡರ್ ಮಾಡಿ ಫೋನ್ ಕುಕ್ಕಿದ ಕರುಣ್ ಕೋರ್ಡೆ, 'ಇಸ್ಕಿ ಮಾಯಿಲಾ, ಇನ್ನು ಮುಂದೈತೆ ಊರ ಹಬ್ಬ. ಮಸ್ತ ಬಕರಾ ಬಿತ್ತು ಬಲೆಗೆ. ಇನ್ನು ಬಲಿ ತೆಗೆದುಕೊಂಡು ಆಪೋಶನ ತೆಗೆದುಕೊಂಡು ಬಿಡ್ತೀನಿ,' ಅಂತ ಗಹಗಹಿಸಿದ. ದುಬೈನಲ್ಲಿ ಕೂತ ಭೂಗತ ಪಾತಕಿ ರಫೀಕ್  ಮುಂಬೈ ಎನ್ಕೌಂಟರ್ ಸ್ಪೆಷಲಿಸ್ಟ್ ಕರುಣ್ ಕೋರ್ಡೆಗೆ ಅದೆಂತಹ ಡೀಲ್ ವರ್ಕ್ ಔಟ್ ಮಾಡಿ ಕೊಟ್ಟಿದ್ದ?

ಗೀತಿಕಾ ಬಂದು ಮುಂಬೈ ತಲುಪಿಕೊಂಡಳು. ಮನೆ ಮಾತ್ರ ಮುಟ್ಟಿದ್ದಳು. ಅಷ್ಟರಲ್ಲಿ ಒಬ್ಬ ದೊಡ್ಡ ಪ್ರೊಡ್ಯೂಸರ್ ಬಂದವನೇ ಒಂದು ದೊಡ್ಡ ಬಜೆಟ್ಟಿನ ಬಿಗ್ ಬ್ಯಾನರ್ ಮೂವಿಗೆ ಸೈನ್ ಹಾಕಿಸಿಕೊಂಡು ಬಿಟ್ಟ. ಅದೂ ಸೂಪರ್ ಹೀರೋ ತರುಣ್ ಕುಮಾರ್ ಜೊತೆಗೆ. ದೊಡ್ಡ ಮಟ್ಟದ ಪೇಮೆಂಟ್ ಕೂಡ ಕೊಟ್ಟ. ಥ್ಯಾಂಕ್ಸ್ ಹೇಳಿದರೆ, 'ದುಬೈ ಭಾಯಿ ಹೇಳಿದ ಅಂದ ಮೇಲೆ ನಮ್ಮದೇನಿದೆ? ಅವರದ್ದೇ ದುಡ್ಡು ತಾಯಿ. ಟೈಮಿಗೆ ಸರಿಯಾಗಿ ಬಂದು ಶೂಟಿಂಗ್ ಮಾಡಿ ಹೋಗಿ. ದೊಡ್ಡ ಉಪಕಾರವಾಗುತ್ತೆ,' ಅಂತ ಏನೋ ಹೇಳಿ ಹೋಗಿಬಿಟ್ಟಿದ್ದ ಆ ಪ್ರೊಡ್ಯೂಸರ್. 'ಏನಪ್ಪಾ ಇದು ಒಮ್ಮೆಲೇ ನಸೀಬ್ ಖುಲಾಯಿಸಿಬಿಟ್ಟಿತು?' ಅಂತ ಅಂದುಕೊಂಡ ಗೀತಿಕಾ ಹ್ಯಾಪಿ ಹ್ಯಾಪಿ ಫೀಲಿಂಗ್ ಅನುಭವಿಸೋಣ ಅನ್ನುವಷ್ಟರಲ್ಲಿ ಫೋನ್ ರಿಂಗಾಯಿತು. ಅದೂ ಮನೆ ಲ್ಯಾಂಡ್ ಲೈನ್. ಆವಾಗೆಲ್ಲ ಅದೇ ತಾನೇ? ಎಲ್ಲಿಯ ಮೊಬೈಲ್? ಫೋನ್ ಎತ್ತಿದರೆ, ಆಕಡೆ ದುಬೈನಿಂದ ಆಶಿಕ್ ರಫೀಕ್. ಎಕ್ಸೈಟ್ಮೆಂಟ್ ತಡಿಯಲಾಗದೇ, 'ರಫೀಕ್! ಮೈ ಡಾರ್ಲಿಂಗ್! ಐ ಯಾಮ್ ಸೋ ಹ್ಯಾಪಿ ಯಾರ್!' ಅಂತ ಚೀರಿಯೇ ಬಿಟ್ಟಳು ಗೀತಿಕಾ. ಒಂದೇ ಉಸಿರಿನಲ್ಲಿ ಎಲ್ಲ ಕಥೆ ಹೇಳಿ ಮುಗಿಸಿದಳು. ಕೇಳಿದ ರಫೀಕ್, ಅತಿ ತಣ್ಣಗೆ, 'ಎಲ್ಲ ಗೊತ್ತು ಜಾನೇಮನ್' ಅಂದುಬಿಟ್ಟ. 'ಎಲ್ಲಾ ಗೊತ್ತಾ? ಹೇಗೆ!?' ಅಂತ ಸಿಕ್ಕಾಪಟ್ಟೆ ಆಶ್ಚರ್ಯದಿಂದ ಕೇಳಿದಳು. 'ಏನಿಲ್ಲ. ನೀನು ಹೋದ ನಂತರ ಬಾಸ್ ಛೋಟಾ ಫಕೀರ್ ಹತ್ತಿರ ಮಾತಾಡಿದೆ. ಯಾವದೋ ಒಂದು ಹೊಸ ಸಿನೆಮಾದ ಕಾಸ್ಟಿಂಗ್ ಬಗ್ಗೆ ಯಾವದೋ ಪ್ರೊಡ್ಯೂಸರ್ ಹತ್ತಿರ ಬಾಸ್ ಮಾತಾಡುತ್ತಿದ್ದರು. ಯಾವದಾದರೂ ಒಳ್ಳೆ, ಹೊಸ ಮುಖ ಇದ್ದರೆ ಹೇಳಿ ಅಂತ ಬಾಸ್ ಕೇಳಿದರು. ನಿನ್ನನ್ನು ಬಾಸ್ ಗೆ ನೆನಪಿಸಿಕೊಟ್ಟೆ. ಬಾಸ್ ಗೆ ತುಂಬ ಇಷ್ಟವಾಯಿತು. ಅದೂ ಮತ್ತೆ ನಾನು, ಅವರ ರೈಟ್ ಹ್ಯಾಂಡ್, ಹೇಳ್ತಾ ಇದಿನೀ ಅಂದ್ರೆ ಇಲ್ಲ ಅಂತಾರಾ? ಓಕೆ ಅಂತ ಹೇಳಿ, ಪ್ರೊಡ್ಯೂಸರನಿಗೆ ನಿನ್ನನ್ನೇ ಹಾಕಿಕೊಳ್ಳುವಂತೆ ಬಾಸ್ ತಾಕೀತು ಮಾಡೇಬಿಟ್ಟರು. ಭಾಯಿ ಹೇಳಿದ ಮಾತು ಅಂದರೆ ಮುಗೀತು ಅಷ್ಟೇ. ಅದೇ ಕಾರಣ. All the best for your new movie. ಮತ್ತೆ ಮಾತಾಡೋಣ,' ಅಂತ ಹೇಳಿ ರಫೀಕ್ ಫೋನ್ ಇಟ್ಟೇ ಬಿಟ್ಟ. 'ರಫೀಕ್, ಒಂದು ನಿಮಿಷ ಇರೋ ಪ್ಲೀಸ್,' ಅಂತ ಏನೋ ಹೇಳಲು ಹೊರಟ ಗೀತಿಕಾ ಕೂಡ ಫೋನ್ ಇಟ್ಟಳು. ಆ ಕಡೆ, ಮುಂಬೈ ಪೋಲಿಸ್ ಕ್ರೈಂ ಬ್ರಾಂಚಿನ ರಹಸ್ಯ ಕೋಣೆಯೊಂದರಲ್ಲಿ ಇನ್ನೊಬ್ಬರು ಕೂಡ ಫೋನ್ ಇಟ್ಟರು. ರೆಕಾರ್ಡರ್ ಸ್ವಿಚ್ ಆಫ್ ಮಾಡಿದರು. ಅವರೇ ಎನ್ಕೌಂಟರ್ ಸ್ಪೆಷಲಿಸ್ಟ್ ಕರುಣ್ ಕೋರ್ಡೆ!  ಗೀತಿಕಾ ಮತ್ತು ಭೂಗತ ಪಾತಕಿ ರಫೀಕ್ ನಡುವಿನ ಸಂಭಾಷಣೆಗಳನ್ನು ಕದ್ದಾಲಿಸಿ, ಟೇಪ್ ಮಾಡಲು ಶುರು ಮಾಡಿದ್ದರು ಕರುಣ್ ಕೋರ್ಡೆ. ಯಾಕೆ? ಏನಿತ್ತು ಇನ್ಸ್ಪೆಕ್ಟರ್ ಕೋರ್ಡೆಯ ಭಯಂಕರ ಬುರುಡೆಯಲ್ಲಿ?

ಖತರ್ನಾಕ್ ಕರುಣ್ ಕೋರ್ಡೆ ನಂತರ ಫೋನ್ ಮಾಡಿದ್ದು ಸೂಪರ್ ಹೀರೋ ತರುಣ್ ಕುಮಾರನಿಗೆ. ಅವನೇ ಅದೇ ತರುಣ್ ಕುಮಾರ್. ಈಗ ಮಾತ್ರ ಗೀತಿಕಾ ಸೈನ್ ಹಾಕಿದಳು ನೋಡಿ ಒಂದು ಸಿನೆಮಾಕ್ಕೆ. ಅದರ ಹೀರೋ. ದೊಡ್ಡ ಮಟ್ಟಿಗೆ ಚಲಾವಣೆಯಲ್ಲಿದ್ದ ಹೀರೋ. ದುಬೈ ಭೂಗತ ದೊರೆಗಳ ಚಾಯ್ ವಾಲಾ ಹುಡುಗ ಇದ್ದ ಹಾಗೆ ಇದ್ದ. ಅವರಿಗೆ ಇಲ್ಲದ ಬೆಣ್ಣೆ ಹಚ್ಚುತ್ತಿದ್ದ. ರಾತ್ರಿ ಕುಡಿದು ಹುಚ್ಚುಚ್ಚಾಗಿ ಮಾತಾಡುತ್ತಿದ್ದ. ಏನೇನೋ ಕನವರಿಸುತ್ತಿದ್ದ. ಭೂಗತರಿಗೆ ಫ್ರೀ ಎಂಟರ್ಟೈನ್ಮೆಂಟ್. ಪೊಲೀಸರಿಗೆ ಮಸ್ತ ಕಮಾಯಿ. ಆ ಹೀರೋ ಭೂಗತರ ಜೊತೆ ಮಾತಾಡುತ್ತ, ಮಳ್ಳು ಹರಿಯುವದನ್ನೂ ಕೂಡ ಇದೇ ಪೋಲೀಸ್ ಇನ್ಸಪೆಕ್ಟರ್ ಕೋರ್ಡೆ ಪತ್ತೆ ಹಚ್ಚಿದ್ದರು. ಒಂದು ದಿವಸ ಆ ಹೀರೋನನ್ನು ಆಟಕಾಯಿಸಿಕೊಂಡರು. ಚನ್ನಾಗಿ ಮಾತಿನಲ್ಲಿಯೇ ಬೆಂಡೆತ್ತಿ, ಧಮಿಕಿ ಹಾಕಿದ್ದರು. ಭೂಗತ ಲೋಕದೊಂದಿಗೆ ಸಂಪರ್ಕ ಹೊಂದಿದ ಕಾರಣ TADA ಒಳಗೆ ಅಂದರ್ ಮಾಡಿಬಿಡುವದಾಗಿ ಹೆದರಿಸಿದ್ದರು. ಪತ್ರಿಕೆಗಳಿಗೆ ಸುದ್ದಿ ಕೊಡುವದಾಗಿ ಹೇಳಿದ್ದರು. ಸಿನೆಮಾ ಕರಿಯರ್ ಪೂರ್ತಿಯಾಗಿ ಬರ್ಬಾದ್ ಮಾಡಿ ಬಿಡುತ್ತೇನೆ ಅಂತ ಹೇಳಿದ್ದ ಕೋರ್ಡೆ ಮಾತಿನಲ್ಲಿ ತರುಣ್ ಕುಮಾರ್ ಗೆ ಏನೂ ಸಂಶಯವಿರಲಿಲ್ಲ. ಅವರ ಕಾಲು ಹಿಡಿದು ದಮ್ಮಯ್ಯ ಗುಡ್ಡೆ ಹಾಕಿದ್ದ. ಮುಂದೆ ಒಂದು ದಿವಸ ಇವನಿಂದ ಮಸ್ತಾಗಿ ವಾಪಸ್ ಕೆತ್ತೋಣ ಅಂತ ಹೇಳಿ, ಆವತ್ತು ಏನೂ ಕಾಸು ಗೀಸು ಕಿತ್ತುಕೊಳ್ಳದೆ, 'ಕೋಯಿ ಬಾತ್ ನಹಿ. ಚಿಂತೆ ಬೇಡ. ಹೀಗೆ ಇರು. ಏನಾದರೂ ಕೆಲಸವಿದ್ದರೆ ಬಂದು ನೋಡು,' ಅಂತ ಉಪದೇಶ ಮಾಡಿ ಕಳಿಸಿದ್ದರು ಕೋರ್ಡೆ. ಆವತ್ತಿಂದ ಇನ್ಸಪೆಕ್ಟರ್ ಕೋರ್ಡೆ ಹಂಗಿಗೆ ಬಂದಿದ್ದ ತರುಣ್ ಕುಮಾರನಿಗೆ ಕೋರ್ಡೆ ಅಮ್ಮ ಅಪ್ಪನಿಕಿಂತಲೂ ಹೆಚ್ಚಾಗಿ ಹೋಗಿದ್ದರು. ಅಂತಹವನಿಂದ ಒಂದು ಖತರ್ನಾಕ್ ಕೆಲಸ ಮಾಡಿಸಲೇ ಬೇಕಾಗಿತ್ತು. ಹಿಂದಿನ ಪೋಲೀಸ್ ಉಪಕಾರಗಳನ್ನು ನೆನಪಿಸಿ ಈಗ ಏನೋ ವಸೂಲಿ ಮಾಡಬೇಕಾಗಿತ್ತು.

ಕೋರ್ಡೆ ಫೋನ್ ಮಾಡಿದಾಗ ತರುಣ್ ಕುಮಾರ್ ಯಾವದೋ ಸಿನೆಮಾದ ಸೆಟ್ಟಲ್ಲಿ ಇದ್ದ. ಅವನಿಗೆ ಹೇಳುವದನ್ನು ಸಂಕ್ಷಿಪ್ತವಾಗಿ ಹೇಳಿ ಮುಗಿಸಿದರು. ಎಲ್ಲಾ ತರಹದ ಭಡವಾಗಿರಿ (ತಲೆಹಿಡುಕತನ) ಮಾಡಿದ್ದ ತರುಣ್ ಕುಮಾರನಿಗೆ ಇನ್ಸ್ಪೆಕ್ಟರ್ ಕರುಣ್ ಕೋರ್ಡೆ ಹೇಳಿದ್ದನ್ನು ಅರ್ಥ ಮಾಡಿಕೊಳ್ಳಲು ಜಾಸ್ತಿ ಸಮಯ ಬೇಕಾಗಲೇ ಇಲ್ಲ. 'ಆಯಿತು ಸಾಬ್. ನೀವು ಚಿಂತೆ ಮಾಡ್ಬೇಡಿ. ದೇಖೋ ಆಪ್! ನೋಡಿ ನಿಮ್ಮ ಮಿಕವನ್ನು ಹೇಗೆ ಬಲೆಗೆ ಬೀಳಸ್ತೀನಿ ಅಂತ. ಅಷ್ಟೇ ಸಾಬ್, ನಿಮ್ಮದು ಎಲ್ಲ ಆದ ಮೇಲೆ ನಮಗೂ ಸ್ವಲ್ಪ ಮಜಾ ಮಾಡೋಕೆ ಬಿಡಿ ಸಾಬ್,' ಅಂದು ಬಿಟ್ಟ ನಾಚಿಗೆಗೆಟ್ಟ ಹೀರೋ. ಸಿಂಹದ ಭೋಜನ ಮುಗಿದ ನಂತರ ಸೀಳು ನಾಯಿಗಳು ಉಳಿದ, ಇದ್ದ ಬಿದ್ದ ಕಳೆವರವನ್ನು ಕಿತ್ತು ಕಿತ್ತು ತಿನ್ನಲು ಅನುಮತಿ ಕೇಳಿದಂತೆ. 'ಥತ್! ನಿನ್ನ ಹೀರೋ ಜನ್ಮಕ್ಕಿಷ್ಟು ಬೆಂಕಿ ಹಾಕ,' ಅಂದುಕೊಂಡ ಕೋರ್ಡೆ ಫೋನಿಟ್ಟರು. ಯಾಕೋ ಮೈಯೆಲ್ಲ ನೋವೆನ್ನಿಸಿತು. ಮಸಾಜ್ ಮಾಡಿಸಿಕೊಳ್ಳಬೇಕು ಅನ್ನಿಸಿತು. ಎಳೆ ಚಿಗರೆ ಮರಿಯಂತಹ ಹುಡುಗಿ ಗೀತಿಕಾ ನೆನಪಾದಳು. ಯಾಕೋ ಏನೋ ಈಗಿತ್ತಲಾಗೆ ಕೋರ್ಡೆ ಸಾಹೇಬರಿಗೆ ನಟಿ ಗೀತಿಕಾ ಪದೇ ಪದೇ ನೆನಪಾಗುತ್ತಾಳೆ. ಅವರ ಪಲ್ಲಂಗ ಪುರಾಣ ಬಹಳ ದೊಡ್ಡದು. ಮನಸ್ಸು ಬಂತು ಅಂದರೆ ಅಷ್ಟೇ. ಮನಸ್ಸಿಗೆ ಬಂದವರನ್ನು ಹುರಿದು ಮುಕ್ಕಿದ ಹೊರತೂ ಅವರಿಗೆ ಸಮಾಧಾನವೇ ಇಲ್ಲ. ಆದರೆ ಹುಲಿಯಂತಹ ಸಹನೆ ಕೂಡ ಇದೆ ಅವರಿಗೆ. ಗಡಿಬಿಡಿ ಮಾಡಿ ಬೇಟೆ ತಪ್ಪಿಸಿಕೊಳ್ಳೋ ಪೈಕಿ ಅವರು ಅಲ್ಲವೇ ಅಲ್ಲ. ಒಂದೊಂದು ಎನ್ಕೌಂಟರ್ ಮಾಡುವಾಗಲೂ ಅಷ್ಟೇ. ಪಕ್ಕಾ ಪ್ಲಾನಿಂಗ್ ಕೋರ್ಡೆ ಸಾಹೇಬರದ್ದು. ಈಗ ಅಂತಹುದೇ ಒಂದು ಬೇರೆಯೇ ತರಹದ ಎನ್ಕೌಂಟರ್ ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು ಕರುಣ್ ಕೋರ್ಡೆ.

ಮುಂದೆ ಸ್ವಲ್ಪ ದಿವಸದಲ್ಲಿಯೇ ಗೀತಿಕಾ ಸಹಿ ಹಾಕಿದ್ದ ಬಿಗ್ ಬ್ಯಾನರ್ ಚಿತ್ರದ ಮುಹೂರ್ತ ಸಮಾರಂಭವಿತ್ತು. ದೊಡ್ಡ ಬಜೆಟ್ಟಿನ ಚಿತ್ರ. ಬಹಳ ಅದ್ದೂರಿಯಾಗಿಯೇ ಮಾಡಿದ್ದರು ಸಮಾರಂಭವನ್ನು. ಒಳ್ಳೆ ಪೇಜ್ 3 ಪಾರ್ಟಿ ಇದ್ದ ಹಾಗೆ ಇತ್ತು. ಕೆಲವು ಸಣ್ಣ ಬಜೆಟ್ಟಿನ ಮೂವಿಗಳಲ್ಲಿ ಮಾತ್ರ ಮಾಡಿದ್ದ ಗೀತಿಕಾ ಅಷ್ಟು ಅದ್ದೂರಿ ಮುಹೂರ್ತ ಸಮಾರಂಭ ಅಲ್ಲಿಯ ತನಕ ನೋಡಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಆಕೆ ಚಿಕ್ಕಂದಿನಿಂದ ತುಂಬ ಇಷ್ಟಪಟ್ಟಿದ್ದ ಹೀರೋ ತರುಣ್ ಕುಮಾರ್ ಜೊತೆ ಮೊದಲ ಬಾರಿಗೆ ಭೆಟ್ಟಿಯಾಗೋ ಅವಕಾಶ. ಜೊತೆಗೆ ನಾಯಕಿಯಾಗಿ ನಟಿಸುವ ಭಾಗ್ಯ ಬೇರೆ. ಗೀತಿಕಾ ಸಕತ್ತಾಗಿ ತಯಾರಾಗಿಯೇ ಬಂದಿದ್ದಳು ಮುಹೂರ್ತದ ಸಮಾರಂಭಕ್ಕೆ.

ಮುಹೂರ್ತದ ಶಾಟ್ ಗೆ ಮೇಕ್ಅಪ್ ಮಾಡಲು ಬಂದಿದ್ದ ಮೇಕ್ಅಪ್ ಮ್ಯಾನ್ ವಿಚಿತ್ರ ಲುಕ್ ಕೊಟ್ಟ. ಯಾರೋ ಆಕೆಗೆ ಪರಿಚಯವಿಲ್ಲದವ. ಏನೋ ರಹಸ್ಯ ಹೇಳುವಂತೆ ಕಿವಿ ಹತ್ತಿರ ಬಂದು ಗುಸು ಗುಸು ಅಂದ. 'ಈ ಸಿನೆಮಾದಲ್ಲಿ ಅಂಡರ್ವರ್ಲ್ಡ್ ರೊಕ್ಕ ಇನ್ವೆಸ್ಟ್ ಆಗಿದೆ ಗೊತ್ತಾ? ಭಾಯಿ ಲೋಗ್. ಮಹಾ ಡೇಂಜರ್. ಅದಕ್ಕೇ ಇರಬೇಕು ಪೊಲೀಸರು ಅದರಲ್ಲೂ ಎನ್ಕೌಂಟರ್ ಸ್ಪೆಷಲಿಸ್ಟ್ ಕರುಣ್ ಕೋರ್ಡೆ ಸೆಟ್ ಮೇಲೆ ಇದ್ದಾನೆ ಇವತ್ತು. ಪ್ರೊಡ್ಯೂಸರ್ ಜೊತೆ ಕೂಡ ಏನೋ ಮಾತಾಡುತ್ತಿದ್ದ. ಏನೋ ಎಂತೋ!?' ಅಂತ ಒಂದು ರೀತಿಯ ಭೀತಿಯ ಧ್ವನಿಯಲ್ಲಿ ಉಸುರಿದನು. ಗೀತಿಕಾ ಏನೂ ಜಾಸ್ತಿ ಲಕ್ಷ್ಯ ಕೊಡಲಿಲ್ಲ ಅವನ ಮಾತುಗಳ ಕಡೆ. ಅವಳಿಗೆ ಬಾಲಿವುಡ್ಡು, ಭೂಗತ ಜಗತ್ತು, ಪೊಲೀಸರು ಅದೆಲ್ಲ ಇನ್ನೂ ಗೊತ್ತಾಗಿರಲಿಲ್ಲ. ಚಿಕ್ಕ ಮಕ್ಕಳ innocence ಇನ್ನೂ ಸ್ವಲ್ಪ ಉಳಿದುಕೊಂಡಿತ್ತು. ಕಾಲ ಅದನ್ನು ಹುರಿದು ಮುಕ್ಕಲಿಕ್ಕೆ ಇನ್ನೂ ಟೈಮ್ ಇತ್ತು.

ಮುಹೂರ್ತದ ಶಾಟ್ ಗೆ ರೆಡಿಯಾಗಿ ಬಂದವಳ ಎದುರಿಗೆ ಬಂದವನು ಅದೇ ಹೀರೋ ತರುಣ್ ಕುಮಾರ್. ಆಕೆಯ ಆರಾಧ್ಯ ದೈವ. ಆಕೆಗಿಂತ ಕಮ್ಮಿ ಕಮ್ಮಿ ಅಂದರೂ ಇಪ್ಪತ್ತು ವರ್ಷಕ್ಕೆ ದೊಡ್ಡವ. ಸಕತ್ ಬಾಡಿ ಮೆಂಟೇನ್ ಮಾಡಿ ಇನ್ನೂ ಯಂಗ್ ಹೀರೋ ಇದ್ದಾಗೆ ಇದ್ದ. ಭಯ ಭಕ್ತಿಯಿಂದ ಕಾಲು ಮುಟ್ಟಿ ನಮಸ್ಕಾರ ಮಾಡಿದಳು. ಎಬ್ಬಿಸಿ, ಹಿಡಿದೆತ್ತಿ, ಅಪ್ಪಿಕೊಂಡುಬಿಟ್ಟ ತರುಣ್. ಹಿರಿಯರು ಎಬ್ಬಿಸಿ, ಅಪ್ಪಿದ ಹಾಗಿರಲಿಲ್ಲ ಅದು. ಗೀತಿಕಾಳಿಗೆ ಮೈಮೇಲೆ ಜಿರಳೆ ಹರಿದ ಅನುಭವ. ಆದರೆ ಏನಂತ ನಿರ್ಧರಿಸಲಾಗದೇ ಬಾಲಿವುಡ್ಡಿನ ದಿಗ್ಗಜ ತರುಣ್ ಕುಮಾರ್ ಜೊತೆ ಗುಬ್ಬಿಯಾಗಿ ನಿಂತು ಫೋಟೋಗ್ರಾಫರುಗಳಿಗೆ ಪೋಸ್ ನೀಡಿದಳು. ಮುಹೂರ್ತದ ಶಾಟ್ ಕೂಡ ಓಕೆ ಆಯಿತು. ಸ್ಕ್ರಿಪ್ಟ್ ಚರ್ಚೆ ಮಾಡೋಣ ಅಂತ ಡೈರೆಕ್ಟರ್, ಸ್ಕ್ರಿಪ್ಟ್ ರೈಟರ್, ಹೀರೋ ಎಲ್ಲ ಹೋದರು. ಗೀತಿಕಾಳನ್ನೂ ಸಹ ಬಾ ಅಂದರು. ಅವರ ಜೊತೆ ಹೋಗಿ ಕೂತಳು.

ಸ್ವಲ್ಪ ಸಮಯದ ಚರ್ಚೆ ನಂತರ ಡೈರೆಕ್ಟರ್ ಎಲ್ಲ ಎದ್ದು ಬೇರೆ ಏನೋ ಕೆಲಸಕ್ಕೆ ಅಂತ ಹೋದರು. ಹೀರೋ ಮತ್ತೆ ಗೀತಿಕಾ  ಇಬ್ಬರೇ ಉಳಿದರು. ಹೀರೋ ಸ್ಪಾಟ್ ಬಾಯ್ ಹತ್ತಿರ ತನಗೆ ಬಿಯರ್ ಮತ್ತು ಗೀತಿಕಾಗೆ ಸಾಫ್ಟ್ ಡ್ರಿಂಕ್ ತರಿಸಿದ. ಅಷ್ಟರಲ್ಲಿ ಇನ್ನೊಬ್ಬರು ಯಾರೋ ಬಂದರು. ಅವರನ್ನು ನೋಡಿದಾಕ್ಷಣ ಹೀರೋ ಖುದ್ದಾಗಿ ಎದ್ದು ನಿಂತು, ವಿಪರೀತ ಭಯ ಭಕ್ತಿಯಿಂದ ಸ್ವಾಗತ ಮಾಡಿ, ಲಗುಬಗೆಯಿಂದ ಮತ್ತೊಂದು ಖುರ್ಚಿ ತರಿಸಿ, ಅರ್ಜೆಂಟ್ ಆಗಿ, 'ಏನು ಕುಡಿತೀರಿ ಸರ್?' ಅಂತ ಕೇಳಿದ್ದಕ್ಕೆ ಅವರು, 'ಡ್ಯೂಟಿ ಮೇಲೆ ಇದ್ದಾಗ ಬರೇ ಸಾಫ್ಟ್ ಡ್ರಿಂಕ್ ಹೀರೋ ಭಾಯ್,' ಅಂದಿದ್ದರು. ಎಂತ ಡ್ಯೂಟಿಯೋ ಏನೋ ಅಂತ ಅಂದುಕೊಂಡಳು ಗೀತಿಕಾ. ಸೂಪರ್ ಹೀರೋ ತರುಣ್ ಕುಮಾರನೇ ಆಪರಿ ಖಾತಿರ್ದಾರಿ ಮಾಡೋದು ನೋಡಿದರೆ ಯಾರೋ ದೊಡ್ಡ ಮನುಷ್ಯರೇ ಇರಬೇಕು ಅಂದುಕೊಂಡಳು.

'ಗೀತಿಕಾ ಇವರು ಗೊತ್ತಿರಬೇಕಲ್ಲಾ?' ಅಂದ ಹೀರೋ ತರುಣ್.

'ಸ್ವಾರಿ, ಗೊತ್ತಾಗಲಿಲ್ಲ. ಯಾರು?' ಅಂದಳು. ಪರಿಚಯವಿಲ್ಲದ್ದಕ್ಕೆ ತನ್ನನ್ನು ತಾನೇ ಬೈದುಕೊಂಡಳು. ಜನರಲ್ ನಾಲೆಜ್ ಸ್ವಲ್ಪ ಜಾಸ್ತಿ ಮಾಡಿಕೊಳ್ಳಬೇಕು ಅಂದುಕೊಂಡಳು. ಯಾರಾದರೂ ದೊಡ್ಡ ಪ್ರೋಡ್ಯೂಸರೋ, ಡೈರೆಕ್ಟರೋ ಆಗಿದ್ದು, ತಾನು ಪರಿಚಯವಿಲ್ಲವೆಂದರೆ ಅದು ಅವಮಾನ ಅಂತ ತಿಳಿದುಕೊಂಡು ಬಾಲಿವುಡ್ಡಿನಲ್ಲಿ ಬಲಿ ಹಾಕಿಬಿಟ್ಟರೆ? ಅಲ್ಲಿನ ಜನರ ಬೃಹತ್ ego ಗಳ ಬಗ್ಗೆ ಆಕೆಗೆ ಸಾಕಷ್ಟು ಪರಿಚಯವಿತ್ತು.

'ಇವರಮ್ಮಾ. ಫೇಮಸ್ ಎನ್ಕೌಂಟರ್ ಸ್ಪೆಷಲಿಸ್ಟ್ ಕರುಣ್ ಕೋರ್ಡೆ ಸಾಹೇಬರು. ಯಾವಾಗಲೂ ಪೇಪರ್ ನಲ್ಲಿ ಮಿಂಚ್ತಾನೇ ಇರ್ತಾರೆ. ಇವರೇ ಒರಿಜಿನಲ್ ಎನ್ಕೌಂಟರ್ ಸ್ಪೆಷಲಿಸ್ಟ್. ಉಳಿದವರೆಲ್ಲ ಇವರ ಕಾಪಿ ಮಾಡಿದವರೇ. ಈಗಾಗಲೇ ಐವತ್ತರ ಮೇಲೆ ಎನ್ಕೌಂಟರ್ ಮಾಡಿ ಮುಗಿಸಿದ್ದಾರೆ. ಇವರಿದ್ದಾರೆ ಅಂತ ನಮ್ಮಂತಹ ಜನ extortion call ಗಳ ಭಯವಿಲ್ಲದೆ, ನೆಮ್ಮದಿಯಿಂದ ಫೋನ್ ಎತ್ತಬಹುದು. ಗೊತ್ತಾ? ಅಂಡರ್ವರ್ಲ್ಡ್ ಜನರಿಗೆ ಸಿಂಹಸಪ್ನ ಕೋರ್ಡೆ ಸಾಹೇಬರು. ಗೊತ್ತಾ?' ಅಂತ ಕೋರ್ಡೆ ಸಾಹೇಬರಿಗೆ ಸಕತ್ ಬಿಲ್ಡ್ ಅಪ್ ಕೊಟ್ಟ ಹೀರೋ.

ಕೋರ್ಡೆ ಸಾಹೇಬರು ಅತ್ಮಾಭಿಮಾನದಿಂದ ಬೀಗಿದರು. ಮೊದಲೇ ಲಂಬಾ ಚೌಡಾ ಇದ್ದ ವಿಶಾಲ ಎದೆ ಮತ್ತೂ ಉಬ್ಬಿತು. ಬೆನ್ನು ಹುರಿ ನೇರ ಮಾಡಿಕೊಂಡು ಕೂತರು. ಆದರೂ ದೊಡ್ಡ ಪ್ರಮಾಣದ ಪೋಲಿಸ್ ಹೊಟ್ಟೆ ಕಾಣುತ್ತಿತ್ತು. ಎತ್ತರಕ್ಕೆ, ದಪ್ಪಕ್ಕೆ ಇದ್ದರು ಕೋರ್ಡೆ. ಸುಮಾರು ಐವತ್ತು ವರ್ಷದವರಿರಬಹುದು. ಮುಖದಲ್ಲಿ ಒಂದು ತರಹದ ಮಹಾ ಒರಟುತನ, ಪೋಲೀಸ್ ಹುಂಬತನ ಎದ್ದು ಕಾಣುತ್ತಿತ್ತು. ಸಿವಿಲ್ ಡ್ರೆಸ್ಸಿನಲ್ಲಿ ಇದ್ದರೂ ಖಾಕಿ ಪ್ಯಾಂಟ್, ಬಿಳಿಯ ಶರ್ಟ್ ಧರಿಸಿದ್ದರು. ಪ್ಯಾಂಟ್ ಎಡಗಡೆ ಸ್ವಲ್ಪ ಉಬ್ಬಿತ್ತು. ಅದು ಅವರ ಸರ್ವೀಸ್ ರಿವಾಲ್ವರ್ ಅಂತ ಗೀತಿಕಾಗೆ ಗೊತ್ತಾಗಲಿಲ್ಲ ಬಿಡಿ. ಆಕೆ ಸಂಕೋಚದಿಂದ ಏನೋ ಒಂದು ತರಹದ ವಿಶ್ ಮಾಡಿ, ತಲೆ ತಗ್ಗಿಸಿ, ತನ್ನ ಸಾಫ್ಟ್ ಡ್ರಿಂಕ್ ಹೀರುತ್ತ ಕೂತಳು. ಎದ್ದು ಹೋಗೋಣ ಅಂದರೆ ಹೀರೋ ತರುಣ್ ಸರ್ ಪರ್ಮಿಷನ್ ಬೇಕು.

ಅಷ್ಟರಲ್ಲಿ ಪ್ರೊಡ್ಯೂಸರ್ ಬಂದ. ಕೋರ್ಡೆ ಸಾಹೇಬರು ಎದ್ದು ಅವನ ಜೊತೆ ಲಕ್ಸುರಿ ವ್ಯಾನ್ ಒಳಗೆ ಹೋದರು. ಏನೋ ಮಾತುಕತೆಗೆ ಅಂತ ಅಂದುಕೊಂಡಳು ಗೀತಿಕಾ. ಖಾಲಿ ಕೈಯಲ್ಲಿ ಹೋಗಿದ್ದ ಕೋರ್ಡೆ ಒಂದು ಬ್ರೀಫ್ ಕೇಸ್ ಸಮೇತ ಹೊರಗೆ ಬಂದಿದ್ದ. ಡಾನ್ ಛೋಟಾ ಫಕೀರ್ ಮಂತ್ಲಿ ಪೇಮೆಂಟ್ ಕಳಿಸಿದ್ದ. ಮಾಫಿಯಾದ ಫ್ರಂಟ್ ಅಂತ ಮುಂಬೈನಲ್ಲಿದ್ದ ಪ್ರೊಡ್ಯೂಸರ್ ಅದನ್ನು ಪೋಲೀಸ್ ಸಾಹೇಬರಿಗೆ ಒಪ್ಪಿಸಿದ್ದ. ಅದು ತುಂಬ ಹಳೆಯ ಸಿಸ್ಟಮ್.

ಕೋರ್ಡೆ ಹೊರಡುವ ಮೊದಲು ಮತ್ತೊಮ್ಮೆ ಬಂದು ಹೀರೋ ತರುಣ್ ಕುಮಾರನ ನ ಬೆನ್ನು ಚಪ್ಪರಸಿ, 'ಮತ್ತೆ ಸಿಗೋಣ. ಇನ್ನೂ ಸ್ವಲ್ಪೇ ದಿವಸದಲ್ಲಿ ಮುಂದಿನ ಸ್ಟೆಪ್. ನೆನಪಿದೆಯೆಲ್ಲ? ಹಾಂ?' ಅಂತ ಏನೋ ನಿಗೂಢ ಅರ್ಥದಲ್ಲಿ ಹೇಳಿದ್ದನ್ನು ಗೀತಿಕಾ ಗಮನಿಸಲಿಲ್ಲ. ಅವಳು ಎಲ್ಲೋ ನೋಡುತ್ತಿದ್ದರೆ ತರುಣ್ ಮತ್ತು ಕೋರ್ಡೆ ಒಂದು ತರಹ ವಿಕೃತವಾಗಿ ಗೀತಿಕಾ ಕಡೆ ನೋಡಿ ತುಟಿ ಸವರಿಕೊಂಡರು. ಏನೋ ನೆನೆಸಿಕೊಂಡು ಕೋರ್ಡೆ ಅವರ ಸೊಂಟ  ಒಂದು ಸಲ ಕಳಕ್ ಅಂತು. ಭಂಗಿ ಸರಿ ಮಾಡಿಕೊಂಡವರೇ ಅಲ್ಲಿಂದ ಹೊರಟು ಹೋದರು.

ಗೀತಿಕಾ ಶೂಟಿಂಗ್ ನಲ್ಲಿ ಬ್ಯುಸಿ ಆದಳು. ಅದು ಆಕೆಯ ಮೊದಲನೇ ದೊಡ್ಡ ಫಿಲಂ ಅಂತ ದಿಲ್ ಲಗಾಕೆ ಅನ್ನುವಂತೆ ಪೂರ್ತಿ ತೊಡಗಿಸಿಕೊಂಡು ಕೆಲಸ ಮಾಡುತ್ತಿದ್ದಳು. ಅವಳು ಹೇಳಿಕೊಳ್ಳುವಂತಹ ಅಭಿನೇತ್ರಿ ಅಲ್ಲ. ಹಾಗಾಗಿ ಕಷ್ಟ ಸ್ವಲ್ಪ ಜಾಸ್ತಿಯೇ ಪಡಬೇಕಾಗುತ್ತಿತ್ತು. ಅದೂ ಒಬ್ಬ ಚಾಲ್ತಿಯಲ್ಲಿರುವ ಸೂಪರ್ ಹೀರೋ ಮುಂದೆ ನಟಿಸೋದು  ಅಂದ್ರೆ ಅಷ್ಟು ಸುಲಭವೇ? ಏನೋ ಅವಳ ನಸೀಬಕ್ಕೆ ಹೀರೋ ತರುಣ್ ಸಹಿತ ತುಂಬ ಸಪೋರ್ಟ್ ಮಾಡಿ ಹೇಗೋ ಚಿತ್ರೀಕರಣ ನಡೆದಿತ್ತು. ತರುಣ್ ಮೇಲೆ ಭಕ್ತಿಭಾವ ಜಾಸ್ತಿಯೇ ಆಗಿತ್ತು. ಮುಂದೊಂದು ದಿನ ಅದೇ ಮುಳ್ಳಾಗಲಿತ್ತೇ?

ಆಗಾಗ ದುಬೈದಿಂದ ರಫೀಕ್ ಫೋನ್ ಮಾಡುತ್ತಲೇ ಇರುತ್ತಿದ್ದ. ಅದೆಂಗೋ ಮಾಡಿ ಬರೋಬ್ಬರಿ ಅವಳ ಲೊಕೇಶನ್ ಹುಡುಕಿ ಫೋನ್ ಮಾಡುತ್ತಿದ್ದ. ಒಮ್ಮೊಮ್ಮೆ ಸ್ಟುಡಿಯೋಕ್ಕೇ ಫೋನ್. ಫೋನ್ ಬಂತು, ಶೂಟಿಂಗ್ ಗೆ ತೊಂದರೆಯಾಯಿತು ಅಂತ ಡೈರೆಕ್ಟರ್ ಸಿಡಿಮಿಡಿ ಮಾಡಿದರೆ ಪ್ರೊಡ್ಯೂಸರ್ ಪಿಸುಮಾತಿನಲ್ಲಿ, 'ಭಾಯಿ ಲೋಗ್ ಫೋನ್. ಸ್ವಲ್ಪ ಅಡ್ಜಸ್ಟ್ ಮಾಡಿ,' ಅಂತ ದಮ್ಮಯ್ಯ ಹಾಕುತ್ತಿದ್ದ. ಗೀತಿಕಾಳಿಗೆ ಫೋನ್ ಮಾಡುವ ಮೊದಲು ಇನ್ಸ್ಪೆಕ್ಟರ್ ಕೋರ್ಡೆಗೆ ತಿಳಿಸುವದನ್ನು ಮಾತ್ರ ರಫೀಕ್ ಮರೆಯುತ್ತಿರಲಿಲ್ಲ. ಖತರ್ನಾಕ್ ಕೋರ್ಡೆ ಎಲ್ಲವನ್ನು ಬರೋಬ್ಬರಿಯಾಗಿ ಕೇಳುತ್ತ, ರೆಕಾರ್ಡ್ ಮಾಡಿಕೊಳ್ಳುತ್ತ ಹೊರಟಿದ್ದ. ಸೆಟ್ ಮೇಲೆ ಗುಸು ಗುಸು. 'ಹೀರೋಯಿನ್ ಗೀತಿಕಾ ಭಾಯಿ ಲೋಗ್ ಜನರ ಮಾಲು. ಅದಕ್ಕೇ ಅವಳಿಗೆ ರೋಲ್ ಸಿಕ್ಕಿದೆ' ಅಂತ. ಅವಳಿಗೇ ತಿಳಿಯದಂತೆ ಗೀತಿಕಾ ಅಂಡರ್ವರ್ಲ್ಡ್ ನ ಆಳಕ್ಕೆ ಇಳಿಯುತ್ತಿದ್ದಳು.

ಮುಂದೊಂದು ದಿನ ಇನ್ಸ್ಪೆಕ್ಟರ್ ಕೋರ್ಡೆ ಶೂಟಿಂಗ್ ನಡೆಯುತ್ತಿದ್ದ ಲೊಕೇಶನ್ ಗೆ ಬಂದ. ಒಬ್ಬನೇ ಬರಲಿಲ್ಲ. ಜೊತೆಗೆ ಇನ್ನೂ ನಾಕು ಜನ ಇದ್ದರು. ಇಬ್ಬರು ಮಹಿಳೆಯರೂ ಇದ್ದರು. ಎಲ್ಲರೂ ಮಫ್ತಿಯಲ್ಲಿ ಇದ್ದರು. ಬಂದವರು ಫಿಲಂ ಯೂನಿಟ್ ಜನರೊಂದಿಗೆ ಮಾತಾಡಿಕೊಂಡು, ತಮಾಷೆ ಮಾಡಿಕೊಂಡು ಇದ್ದರು.

ಶಾಟ್ ಮುಗಿಯಿತು. ಹೀರೋ ತರುಣ್, ಗೀತಿಕಾ ಬಂದು ಕೂತರು. ಕೋರ್ಡೆ ಕೂಡ ಬಂದು ಕೂತ. ತರುಣ್ ಜೊತೆ ಏನೋ ಒಂದಿಷ್ಟು ಹರಟೆ, ನಗು, ಪೋಲಿ ಮಾತು. ಗೀತಿಕಾ ಎದ್ದು ತನ್ನ ಮೇಕ್ಅಪ್ ವ್ಯಾನ್ ಸೇರಿಕೊಂಡಳು. ಬಾಗಿಲು ಹಾಕಿಕೊಂಡು ಏನೋ ಓದುತ್ತ ಕೂತಳು. ಮುಂದಿನ ಶಾಟ್ ಗೆ ಇನ್ನೂ ಒಂದೆರೆಡು ಘಂಟೆ ಟೈಮ್ ಇತ್ತು. ತಂಪಾದ AC ವ್ಯಾನ್ ಒಳಗೆ ಸಕತ್ ಹಾಯಾಗಿತ್ತು.

ಯಾರೋ ವ್ಯಾನಿನ ಬಾಗಿಲು ಬಡಿದರು. ಅದು ಅವಳಿಗೆ ಅಂತ ಮಂಜೂರು ಮಾಡಿದ್ದ exclusive ವ್ಯಾನ್ ಆಗಿತ್ತು. ಹೀರೋಯಿನ್ ಅಂದರೆ ಅಷ್ಟೂ ಬೇಡವೇ? ಯಾರಪಾ ಇದು ಅಂತ  ಬಾಗಿಲು ತೆಗೆದು ನೋಡಿದರೆ, ಗಂಟು ಮುಖ ಹಾಕಿಕೊಂಡು ನಿಂತಿದ್ದ ಇನ್ಸಪೆಕ್ಟರ್ ಕೋರ್ಡೆ. ಅವನ ಜೊತೆ ಮಾರಮ್ಮನ ಲುಕ್ಕಿನ ಇಬ್ಬರು ಧಾಡಸಿ ಮಹಿಳೆಯರು. ಅವರು ಮಫಿಯಲ್ಲಿದ್ದ ಕ್ರೈಂ ಬ್ರಾಂಚ್ ಲೇಡಿ ಕಾನ್ಸ್ಟೇಬಲ್ ಗಳು ಅಂತ ಗೀತಿಕಾಗೆ ಗೊತ್ತಾಗಿದ್ದು ನಂತರ.

ಯಾವದೇ ಅನುಮತಿ ಗಿನುಮತಿ ಕೇಳದೆ ವ್ಯಾನ್ ಒಳಗೆ ನುಗ್ಗೇ ಬಿಟ್ಟ ಕೋರ್ಡೆ. ಹಿಂದೆ ಫಾಲೋ ಮಾಡಿದ ಇಬ್ಬರು ಮಾರಮ್ಮರಲ್ಲಿ ಒಬ್ಬಳು ಧಡ್ ಅಂತ ವ್ಯಾನಿನ ಬಾಗಿಲು ಹಾಕಿಕೊಂಡು ಒಳಗೆ ಬಂದು ವಿಕೃತವಾಗಿ ನಕ್ಕಳು. ಪಾನ್ ಜಗಿದು ಜಗಿದು ಕೆಂಪಾಗಿದ್ದ ಅವಳ ಹಲ್ಲುಗಳಿಂದ ರಕ್ತ ಜಿನುಗಿದಂತೆ ಪಾನ್ ರಸ ಜಿನುಗುತ್ತಿತ್ತು. ಮೇಲಿಂದ ವಿಕೃತ ನಗು. ಗೀತಿಕಾ ಒಮ್ಮೆಲೇ ಬೆಚ್ಚಿದಳು.

'ಏನು ಸಾರ್? ಹೀಗೆ ಒಮ್ಮೆಲೆ..... ' ಅಂತ ಏನೋ ಹೇಳಲು ಗೀತಿಕಾ ಹೊರಟಿದ್ದಳು. ಮುಂದಾಗುವದನ್ನು ಅವಳು ಸ್ವಲ್ಪವೂ ನಿರೀಕ್ಷಿಸಿರಲಿಲ್ಲ. ಒಬ್ಬಳು ಲೇಡಿ ಕಾನ್ಸ್ಟೇಬಲ್ ಒಮ್ಮೆಲೇ ಅವಳನ್ನು ಹಿಂದೆ ನೂಕಿದಳು. ಸೋಫಾ ಮೇಲೆ ಹೋಗಿ ಬಿದ್ದ ಗೀತಿಕಾ ಒಂದು ತರಹದ ಶಾಕ್ ಆಗಿ, confuse ಆದಳು.

'ಚುಪ್! ಕೇಳಿದಾಗ ಮಾತ್ರ ಮಾತಾಡಬೇಕು. ಓಕೆ?' ಅಂತ ಇನ್ನೊಬ್ಬ ಮಾರಮ್ಮ ಗೊಗ್ಗರು ದನಿಯಲ್ಲಿ ಒದರಿದಳು.

ಗೀತಿಕಾ ಬೆದರಿದ ಹುಲ್ಲೆಯಂತೆ ಸೋಫಾದ ಮೇಲೆ ಕುಳಿತಿದ್ದಳು. 'ಏನು ಸಾರ್ ಇದೆಲ್ಲ?' ಅನ್ನುವ ರೀತಿಯಲ್ಲಿ, ದೈನ್ಯದಿಂದ ಕೋರ್ಡೆಯತ್ತ ನೋಡುತ್ತಿದ್ದಳು. ಅವಳಿಗೇನು ಗೊತ್ತು ಕ್ರೈಂ ಬ್ರಾಂಚ್ ಪೊಲೀಸರು ಹೇಗೆ ಬೇರೆ ಬೇರೆ ಟೈಪಿನ ಜನರನ್ನು ಮೆತ್ತಗೆ ಮಾಡುತ್ತಾರೆ ಅಂತ.

ಈಗ ಕೋರ್ಡೆ ಮಾತಾಡಲು ಶುರು ಮಾಡಿದ. ದನಿಯಲ್ಲಿ ಯಾವದೇ ಭಾವನೆಗಳಿಲ್ಲ. ಯಾವದೇ ಏರಿಳಿತಗಳಿಲ್ಲ. ಗಂಟು ಮುಖದಲ್ಲಿ ಯಾವದೇ ಬದಲಾವಣೆಯಿಲ್ಲ.

'ಮೇಡಂ, ಸ್ವಲ್ಪ ವಿಚಾರಣೆ ಮಾಡೋದು ಇದೆ. ಪ್ಲೀಸ್ ಸಹಕರಿಸಿ. ಇವರಿಬ್ಬರು ನಮ್ಮ ಕಾನ್ಸ್ಟೇಬಲ್ಸ. ನಾವೆಲ್ಲ ಕ್ರೈಂ ಬ್ರಾಂಚ್ ನವರು. ಗೊತ್ತಿರಬಹುದು ಅಂತ ಅಂದುಕೊಂಡಿದ್ದೀನಿ,' ಅಂದ ಕೋರ್ಡೆ.

ಆಪರಿ ಘಾಬರಿಗೊಂಡಿರುವ ಗೀತಿಕಾ ಏನು ಹೇಳಿಯಾಳು? ಇಲ್ಲಿಯ ತನಕ ಪೋಲೀಸ್, ಕೇಸ್, ಎನ್ಕ್ವೈರಿ ಏನೂ ಗೊತ್ತಿಲ್ಲದ, ಲೋಕ ಜ್ಞಾನವಿಲ್ಲದ ಹುಡುಗಿ ಅವಳು. ಈಗ ಧುತ್ತನೆ ಕ್ರೈಂ ಬ್ರಾಂಚ್ ಪೊಲೀಸರು ಬಂದು ಆಟಕಾಯಿಸಿಕೊಂಡರೆ ಏನು ಮಾಡಿಯಾಳು?

'ಗೀತಿಕಾ ಮೇಡಂ, ನಿಮಗೆ ಮತ್ತು ಅಂಡರ್ವರ್ಲ್ಡ್ ಜನರಿಗೆ ಸಂಬಂಧ ಇದೆ ಅಂತ ಸುದ್ದಿಯಾಗುತ್ತಿದೆ. ಅದಕ್ಕೆ ತನಿಖೆ ಮಾಡಬೇಕು. ದುಬೈ ಭಾಯಿಗಳೊಂದಿಗೆ ತುಂಬ ಕ್ಲೋಸ್ ಅಂತೆ ನೀವು. ಹೌದಾ?' ಅಂತ ಹೇಳಿ, 'ಈ ಸಿನೆಮಾ ಹುಡುಗಿಯರದ್ದೆಲ್ಲ ಇದೇ ಗೋಳು. ಅಲ್ಲವಾ?' ಅಂತ ಮಾರಮ್ಮನಂತಹ ಕಾನ್ಸ್ಟೇಬಲ್ ಒಬ್ಬಳನ್ನು ನೋಡಿ ಹೇಳಿದ. ಆಕೆ, 'ಹೋ ಸಾಬ್! ಬರಾಬರ್ ಬೋಲಾ. ಕುತ್ತೀ ಚೀಜ್ ಸಾಲಿ ಸಬ್' ಅಂದು ಕೆಕ್ಕರಿಸಿ ನೋಡಿ, 'ನಿನಗೆ ಇದೆ ಇನ್ನು....' ಅನ್ನೋ ಕೆಟ್ಟ ಲುಕ್ ಕೊಟ್ಟಳು. ಅದೇ ಹೊತ್ತಿಗೆ ಇನ್ನೊಬ್ಬ ಮಾರಮ್ಮ ಎದ್ದಳು. ಮೊದಲು ಗೀತಿಕಾಳನ್ನು ಸೋಫಾದ ಮೇಲೆ ತಳ್ಳಿದಾಕೆ ಆಕೆ. ಎದ್ದು ಬಂದು, ಗೀತಿಕಾಳಿಗೆ ನಾಕು ಕೊಟ್ಟೇ ಬಿಡ್ತಾಳೋ ಅನ್ನುವ ಮಾದರಿಯಲ್ಲಿ ಒಮ್ಮೆಲೇ ಹತ್ತಿರಕ್ಕೆ ಬಂದು, ಗೀತಿಕಾ ಹೆದರಿ ಮುದ್ದೆಯಾದರೆ, 'ಬಾತ್ರೂಮ್ ಎಲ್ಲಿ? ಎಲೆಅಡಿಕೆ ಉಗಳಬೇಕು,' ಅಂದು ಬಿಟ್ಟಳು. ವಿಕೃತವಾಗಿ ಕೆಂಪು ಹಲ್ಲು ತೋರಿಸುತ್ತ ನಕ್ಕಳು. 'ಬದುಕಿದೆಯಾ ಬಡ ಜೀವವೇ,' ಅಂತ ಸುಧಾರಿಕೊಂಡ ಗೀತಿಕಾ ವ್ಯಾನಿನ ಕೊನೆಯಲ್ಲಿದ ಬಾತ್ರೂಮ್ ತೋರಿಸಿದಳು. ಒಳಗೆ ಹೋದ ಕಾನ್ಸ್ಟೇಬಲ್ ಮಾರಮ್ಮ, ಬಾಗಿಲೂ ಹಾಕಿಕೊಳ್ಳದೆ, ಕ್ಯಾಕರಿಸಿ ಪಾನ್ ಉಗುಳಿದಳು. ನೀರೂ ಹಾಕದೇ, ಹಾಗೇ ಬಂದು, ಕೆಂಪನೆ ಹಲ್ಲು ತೋರಿಸುತ್ತ ಕೋರ್ಡೆ ಸಾಹೇಬರ ಜೊತೆ ಕೂತು ಶೋ ಕೊಡತೊಡಗಿದಳು. ಒಟ್ಟಿನಲ್ಲಿ ಒಳಹೊಕ್ಕ ಹತ್ತೇ ಹತ್ತು ನಿಮಿಷದಲ್ಲಿ ಗೀತಿಕಾಳನ್ನು ಮಾನಸಿಕವಾಗಿ ಹಣ್ಣು ಹಣ್ಣು ಮಾಡಿ ಹಾಕಿಬಿಟ್ಟರು ಕೋರ್ಡೆ ಮತ್ತು ಅವರ ತಂಡ. ಅದೆಲ್ಲ ಅವರಿಗೆ ರೂಟೀನ್. ಹಮ್ ಕೋ ಪತಾ ಹೈ ಕಿಸ್ ಕೊ ಕೈಸೆ ತೋಡ್ನೇಕಾ. ನಮಗೆ ಗೊತ್ತು ಯಾರನ್ನು ಹೇಗೇಗೆ ಮುರಿಯಬೇಕು ಅಂತ. ಅದು ಕ್ರೈಂ ಬ್ರಾಂಚ್ ಸ್ಪೆಷಾಲಿಟಿ.

ಇಷ್ಟೆಲ್ಲ ಒತ್ತಡ ಹಾಕಿದರೂ, ಒಂದು ತರಹ ಬ್ಲಾಂಕ್ ಔಟ್ ಆಗಿಬಿಟ್ಟಿದ್ದ ಗೀತಿಕಾಳಿಗೆ ತಲೆ ಬುಡ ಗೊತ್ತಾಗಲಿಲ್ಲ. 'ಇಲ್ಲ, ಇಲ್ಲ. ನಿಮಗೇನೋ ತಪ್ಪು ಮಾಹಿತಿ ಸಿಕ್ಕಿರಬೇಕು ಸಾರ್. ನಾನು ಅಂತವಳು ಅಲ್ಲವೇ ಅಲ್ಲ,' ಅಂತ ಏನೋ ಸಮಜಾಯಿಷಿ ಕೊಡಲು ಹೋದಳು. ಮಾರಮ್ಮ ಕಾನ್ಸ್ಟೇಬಲ್ ರಪ್ಪ್ ಅಂತ ಒಂದು ಬೀಸಿದಳು. ಗೀತಿಕಾ ಏಟಿನಿಂದ ತಪ್ಪಿಸಿಕೊಂಡಳು. ತಪ್ಪಿಸಿಕೊಳ್ಳಲಿ ಅಂತಲೇ ಅವರ ಉದ್ದೇಶವಾಗಿತ್ತು. ಗೀತಿಕಾ ಯಾವಾಗಲೂ ಫುಲ್ ಟೆನ್ಷನ್ ನಲ್ಲಿ ಇರಬೇಕು. ಅದೇ ಅವರ ಉದ್ದೇಶ. ಅದಕ್ಕೇ ಎಲ್ಲ ರೋಪ್ ಹಾಕುತ್ತಿದ್ದುದು.

ಈಗ ಇನ್ನೊಬ್ಬ ಮಾರಮ್ಮ ಕಾನ್ಸ್ಟೇಬಲ್ ಒಂದು ವಾಕ್ಮನ್ (ಚಿಕ್ಕ ಟೇಪ್ ಪ್ಲೇಯರ್) ತೆಗೆದಳು. ಒಳಗೆ ಒಂದು ಕ್ಯಾಸೆಟ್ಟು ತುರುಕಿದಳು. ಬಲವಂತವಾಗಿ ಹೆಡ್ ಫೋನ್ ಗೀತಿಕಾಳಿಗೆ ಜಡಿದು, 'ಮೊದಲು ಕೇಳು, ನನ್ಮಗಳೇ! ಮುಂದೆ ಮಾತಾಡುವಿಯಂತೆ!' ಅನ್ನೋ ಹಾಗೆ ರೋಪ್ ಹಾಕಿದಳು. ಹೆಡ್ ಫೋನ್ ಒಳಗೆ ಕೇಳಿಬರುತ್ತಿದ್ದನ್ನು ಕೇಳುತ್ತ ಹೋದಂತೆ ಗೀತಿಕಾಳ ಚಹರಾಪಟ್ಟಿ ಬದಲಾಗುತ್ತ ಹೋಯಿತು. ಮುಖ ಬಿಳುಚಿತು. ಮುಖದ ಮೇಲೆ ದೆವ್ವ ನೋಡಿದವಳ ಲುಕ್ ಬಂತು. ಏನೋ ಹೇಳಲು ಬಾಯ್ತೆರೆದಳು. 'ಚುಪ್! ಬಾಯ್ಮುಚ್ಚಿ ಕೇಳು!' ಅನ್ನೋ ಹಾಗೆ ಸಂಜ್ಞೆ ಮಾಡಿದಳು ಮಾರಮ್ಮ. ಕೋರ್ಡೆ ಸಾಹೇಬರು ತಮ್ಮ ಮೀಸೆಯಡಿ ನಗುತ್ತ, ಕುಹಕ ನೋಟ ಬೀರುತ್ತ, 'ಈಗೆನಂತೀ?????' ಅನ್ನುವ ಲುಕ್ ಕೊಟ್ಟರು.

ಒಂದೈದು ನಿಮಿಷದ ನಂತರ ವಾಕ್ಮನ್ ಆಫ್ ಮಾಡಿದಳು. 'ಸಾರ್, ಅದು ಅದು ರಫೀಕ್ ಕೇವಲ ಗೊತ್ತು ಸಾರ್. ಅದೂ ದುಬೈಗೆ ಹೋದಾಗ ಭೆಟ್ಟಿಯಾಗಿದ್ದು. ಅವನೇ ದೋಸ್ತಿ ಮಾಡಿಕೊಂಡಿದ್ದು. ಅವನೇ ಫೋನ್ ಮಾಡುತ್ತಿರುತ್ತಾನೆ. ನಾನೇನು ಮಾಡ್ಲೀ ಸಾರ್? ಫೋನ್ ಮಾಡಬೇಡ ಅನ್ನೋಕೆ ನಾನ್ಯಾರು? ಮತ್ತೆ ಇಂಡಸ್ಟ್ರಿನಲ್ಲಿ ಇರಬೇಕು ಅಂದ್ರೆ ಏನು ಮಾಡ್ಲೀ ಸಾರ್?' ಅಂತ ಗೀತಿಕಾ ಏನೋ ಹೇಳಲು ಹೋದಳು.

ಈಗ ಇನ್ಸ್ಪೆಕ್ಟರ್ ಕೋರ್ಡೆ ಫುಲ್ ಅವಾಜ್ ಹಾಕಿದ. ಒಮ್ಮೆಲೆ ಪೋಲೀಸ್ ಭಾಷೆಗೆ ಇಳಿದುಬಿಟ್ಟ. 'ಇದು ಸ್ಯಾಂಪಲ್ ಅಷ್ಟೇ. ಇನ್ನೂ ಹಲವಾರು ತಾಸುಗಳ ರೆಕಾರ್ಡಿಂಗ್ ಇವೆ ನನ್ನ ಹತ್ತಿರ. ಅಂಡರ್ವರ್ಲ್ಡ್ ಜೊತೆ ಸಂಪರ್ಕವಿರುವವರನ್ನೆಲ್ಲ TADA ಒಳಗೆ ಅಂದರ್ ಮಾಡುವಂತೆ ಕಮಿಷನರ್ ಸಾಹೇಬರ ಆರ್ಡರ್ ಆಗಿದೆ. ಗೊತ್ತಿರಬೇಕಲ್ಲ ಜಾನಕೀ ಭಾಯ್ ಶಾ? ಡೈಮಂಡ್ ಕಿಂಗ್. ದೊಡ್ಡ ಪ್ರೊಡ್ಯೂಸರ್. ಅವನನ್ನೂ ಒಳಗೆ ಹಾಕಿ ರುಬ್ಬುತ್ತ ಇದೀವಿ. ನಿಮ್ಮಂತಾ ಸೂಳೆರನ್ನೂ ಅಷ್ಟೇ ಮಾಡ್ಬೇಕು. ನಿಮ್ಮನ್ನ ರುಬ್ಬೋ ರೀತಿನೇ ಬೇರೆ. TADA ಅಂದ್ರೆ ಜಾಮೀನ್ ಗೀಮೀನ್ ಇಲ್ಲ. ಗೊತ್ತು ತಾನೇ?' ಅಂತ ಹೇಳಿ ವಿಕಾರವಾಗಿ ನಕ್ಕ. ಅವನ ಆವಾಜು, ಆ ಪೋಲೀಸ್ ಕೊಳಕು ಭಾಷೆ, TADA ಅನ್ನೋ ಕರಾಳ ಕಾಯಿದೆಯ ಧಮ್ಕಿ, ಟಾರ್ಚರ್ ಬೆದರಿಕೆ, ಅಬ್ಬಾ! ಮತ್ತೇನು ಬೇಕು? ಎಂತೆಂತವರೋ ಮಾನಸಿಕವಾಗಿ ಮುರಿದು ಹೋಗಬೇಕು. ಇನ್ನು ಗೀತಿಕಾಳಂತಹ ಮುಗ್ಧೆಯ ಗತಿಯೇನಾಗಬೇಕು? ಅಂತವರನ್ನು ತಾನೇ ಎಲ್ಲರೂ ಶೋಷಣೆ ಮಾಡೋದು? ಎಲ್ಲದಕ್ಕೂ ಫಸ್ಟ್ ಟೈಮ್ ಅಂತ ಇದ್ದೇ ಇರುತ್ತದಲ್ಲ? ಬಾಲಿವುಡ್ಡಿನಲ್ಲೂ ಅಷ್ಟೇ. ಅಂಡರ್ವರ್ಲ್ಡ್, ಪೋಲೀಸ್, ರಾಜಕಾರಣಿಗಳಿಂದ ಶೋಷಣೆ ಒಂದಲ್ಲ ಒಂದು ಟೈಮ್ ನಲ್ಲಿ ಶುರುವಾಗಿಯೇ ಆಗುತ್ತದೆ. professional hazard ಅದು.

ಅಷ್ಟರಲ್ಲಿ ಇನ್ಸ್ಪೆಕ್ಟರ್ ಕೋರ್ಡೆ ಮೊಬೈಲ್ ಮೇಲೆ ಕಾಲ್ ಬಂತು. ಆಗ ಮೊಬೈಲ್ ಇತ್ತು ಅಂದರೆ ಅದು ದೊಡ್ಡ ಮಾತು. ಅಂತದ್ದರಲ್ಲಿ ತುಂಬ ದುಬಾರಿ ಮೊಬೈಲ್ ಇಟ್ಟಿದ್ದ ಕೋರ್ಡೆ. 'ಸಾಬ್, ಎಸ್ ಸರ್,' ಅಂದು, ಮಾತು ನಿಲ್ಲಿಸಿ, ಮೌತ್ ಪೀಸ್ ಮೇಲೆ ಕೈಯಿಟ್ಟು, 'ಕಮಿಷನರ್ ಸಾಹೇಬರ ಫೋನ್. ಇನ್ನೂ ಯಾಕೆ ನಿನ್ನ ಎತ್ತಾಕಿಕೊಂಡು ಬಂದಿಲ್ಲ ಅಂತ ರೇಗುತ್ತಿದ್ದಾರೆ!' ಅಂತ ಗೀತಿಕಾಳಿಗೆ ಭೋಂಗು ಬಿಟ್ಟ ಕೋರ್ಡೆ ಫೋನಲ್ಲಿ ಮಾತು ಮುಂದುವರೆಸಿದ, 'ಸಾರ್, ಗೀತಿಕಾನ್ನ ಮಾತಾಡಸ್ತಾ ಇದೀವಿ ಸಾರ್. ಇನ್ನೂ ಒಂದು ಸ್ವಲ್ಪ ಹೊತ್ತು ವಿಚಾರಣೆ ಮಾಡ್ಬಿಟ್ಟು, ಅರೆಸ್ಟ್ ಮಾಡಿಕೊಂಡು ಬಂದು ಬಿಡ್ತೀನಿ ಸಾರ್. ಎಲ್ಲಿ ಸಾರ್? ನಿಮ್ಮ ಚೇಂಬರ್ ಪಕ್ಕ ಇರೋ ಕಾಲಾ ಟಾರ್ಚರ್ ಸೆಲ್ ಗೆ ತನ್ನಿ ಅಂದ್ರಾ? ಓಕೆ ಸಾರ್,' ಅಂತ ಅಂದು, 'ಮುಗೀತು ಇನ್ನು. ಹೇಳಲು ಕೇಳಲು ಏನೂ ಉಳಿದಿಲ್ಲ. ತಯಾರಾಗು,' ಅನ್ನುವ ಲುಕ್ ಕೊಟ್ಟ ಕೋರ್ಡೆ, 'ಏ, ಬಾಯಾರೇ, ಅದೇನು ನಿಮ್ಮ ಪದ್ಧತಿ ಇರುತ್ತಲ್ಲ? ಹೆಂಗಸರನ್ನು ಅರೆಸ್ಟ್ ಮಾಡೋದು? ಅದನ್ನ ಫಾಲೋ ಮಾಡಿ, ಎಳೆದ್ಕೊಂಡು ಬನ್ನಿ. ನಮ್ಮ ಕಾನೂನಿನಲ್ಲಿ ಹೆಂಗಸರನ್ನು ಗಂಡಸು ಪೊಲೀಸರು ಮುಟ್ಟೋ ಹಾಗಿಲ್ಲ. ಆದರೆ ಹಾಕ್ಕೊಂಡು ರುಬ್ಬೋ ಮಾತು? ಅದು  ಬೇರೇನೇ,' ಅಂತ ವಿಕಾರವಾಗಿ ನಕ್ಕು, 'ಜಲ್ದೀ! ಜಲ್ದೀ!' ಅಂತ ಅವಸರಿಸಿ, ಮೇಕ್ಅಪ್ ವ್ಯಾನಿನ ಬಾಗಿಲನ್ನು ತೆಗೆದು ಹೊರಬಂದ. ಲೇಡಿ ಕಾನ್ಸ್ಟೇಬಲ್ ಇಬ್ಬರು ಒಳಗೇ ಇದ್ದು, ಒತ್ತಡ ಮೈಂಟೈನ್ ಮಾಡಿದ್ದರು. ಅಷ್ಟೊತ್ತಿಗೆ ಗೀತಿಕಾಗೆ ಫುಲ್ ನರ್ವಸ್ ಬ್ರೇಕ್ ಡೌನ್ ಆಗಿ, ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಕೋರ್ಡೆ ಸಾಹೇಬ ಹಾಕಿದ ಪ್ಲಾನ್ ಅಲ್ಲಿಯವರೆಗೆ ಪರ್ಫೆಕ್ಟ್ ಆಗಿ ವರ್ಕ್ ಆಗಿತ್ತು. ಕರೆಕ್ಟ್ ಆಗಿ ಅಷ್ಟೊತ್ತಿಗೆ ಮೊಬೈಲ್ ಮೇಲೆ ಫೋನ್ ಮಾಡುವಂತೆ ಮೊದಲೇ ಯಾರಿಗೋ ಹೇಳಿಟ್ಟಿದ್ದ. ಅದನ್ನೇ ಕಮಿಷನರ್ ಫೋನ್ ಅಂತ ಹೇಳಿ ultimate ಧಮಿಕಿ ಹಾಕಿದ್ದ. ಮಾಸ್ಟರ್ ಸ್ಟ್ರೋಕ್.

ಕೋರ್ಡೆ ಹೊರಗೆ ಬಂದ ಕೂಡಲೇ ಸೂಪರ್ ಹೀರೋ ತರುಣ್ ಅವನನ್ನು ವಕ್ಕರಿಸ್ಕೊಂಡ. ಏನು ವಿಷಯ ಅಂತ ಕೇಳಿದ. ಕೋರ್ಡೆ ಸಂಕ್ಷಿಪ್ತವಾಗಿ ಹೇಳಿದಂತೆ ನಟಿಸಿದ. ಹೇಳಲು ಏನು ಉಳಿದಿತ್ತು? ಆ ಸೂಪರ್ ಹೀರೋ ತರುಣ್ ಕೂಡ ಈ ಸ್ಕೀಮಿನಲ್ಲಿ ಭಾಗಿ ತಾನೇ? ಈಗ ಅವನ ಪಾತ್ರ ಮಾಡುವ ಟೈಮ್ ಬಂದಿತ್ತು. ಗೀತಿಕಾಳನ್ನು ಪೂರ್ತಿಯಾಗಿ ಮಾನಸಿಕವಾಗಿ ಮುರಿಯುವ ಸ್ಕೀಮಿನಲ್ಲಿ ಆಖ್ರೀ ಹೊಡೆತ ಸೂಪರ್ ಹೀರೋ ಮಹಾನುಭಾವನದೇ ಇತ್ತು.

ಒಮ್ಮೆಲೇ ಗೀತಿಕಾಳ ಮೇಕ್ಅಪ್ ವ್ಯಾನ್ ಒಳಗೆ ಬಂದುಬಿಟ್ಟ ಹೀರೋ. ಅದೇ ಸಮಯಕ್ಕೆ ಇನ್ಸ್ಪೆಕ್ಟರ್ ಕೋರ್ಡೆ ತನ್ನ ದೊಡ್ಡ ದನಿಯಲ್ಲಿ ತನ್ನ ಇಬ್ಬರು ಲೇಡಿ ಕಾನ್ಸ್ಟೇಬಲ್ ಗಳನ್ನು ಹೊರಗೆ ಬರುವಂತೆ ಆಜ್ಞೆ ಮಾಡಿದ. ಒಳಗೆ ಗೀತಿಕಾ ಮೇಲೆ ಒತ್ತಡ ಹಾಕುತ್ತ ಕುಳಿತಿದ್ದ ಮಾರಮ್ಮರಿಬ್ಬರು ಎದ್ದು, ಪೋಲೀಸ್ ಭಾಷೆಯಲ್ಲಿ ಆಕೆಯನ್ನು ಬೈಯುತ್ತ, ಹೊರಗೆ ಬಂದರು. ಅವರು ಹೊರಗೆ ಹೋಗಿದ್ದೇ ತಡ, ಒಳಗಿಂದ ಸೂಪರ್ ಹೀರೋ ತರುಣ್ ಕುಮಾರ್ ಬಾಗಿಲು ಹಾಕಿಕೊಂಡು ಗೀತಿಕಾಳಿಗೆ ಉಲ್ಟಾ ಪಟ್ಟಿ ಓದತೊಡಗಿದ. ಖತರ್ನಾಕ್ ಕೋರ್ಡೆ ನಿರ್ದೇಶಿಸುತ್ತಿದ್ದ ನಾಟಕದಲ್ಲಿ ತನ್ನ ಪಾತ್ರ ಶುರು ಮಾಡಿದ್ದ.

'ಏನಮ್ಮಾ ಗೀತಿಕಾ? ಛೆ!ಛೆ! ಹೀಗಾ ಮಾಡಿಕೊಳ್ಳೋದು? ಹೋಗಿ ಹೋಗಿ ಅಂಡರ್ವರ್ಲ್ಡ್ ಜನರ ಸಂಗ ಮಾಡಿಕೊಂಡು ಕೂತೆಯಲ್ಲಮ್ಮಾ? ಈಗ ನೋಡು ಅವರ ಹತ್ತಿರ ನಿನ್ನ ರೆಕಾರ್ಡಿಂಗ್ ಎಲ್ಲ ಇದೆ. TADA ದಲ್ಲಿ ಹಾಕುತ್ತೇನೆ ಅಂತ ಕೋರ್ಡೆ ಕೂತಿದ್ದಾರೆ. ಮೇಲಿಂದ ಪ್ರೆಷರ್ ಬೇರೆ ತುಂಬ ಇದೆಯಂತೆ. ಜಾನಕಿ ಭಾಯಿ ಶಾನಂತಹ ನೂರಾರು ಕೋಟಿಗೆ ತೂಗುವ ಪ್ರೋಡ್ಯೂಸರನನ್ನೇ ಬಿಡಲಿಲ್ಲ. ಗೊತ್ತಲ್ಲ? ಎಲ್ಲೋ ದುಬೈನಲ್ಲಿ ಯಾವದೋ ಡಾನ್ ಜೊತೆ ಇದ್ದ ಅವನ ಒಂದು ಫೋಟೋ ಸಿಕ್ಕಿತು ಅಂತ ಒಳಗೆ ಹಾಕಿ ಹಣಿಯುತ್ತಿದ್ದಾರೆ. ಇನ್ನು ನಿನ್ನ ಬಿಟ್ಟಾರೆಯೇ? ಏನೋ ಒಂದು ನಿಮಿಷ ಟೈಮ್ ಕೊಡಿ ಅಂತ ಕೋರ್ಡೆ ಸಾಹೇಬರನ್ನು ಕೇಳಿಕೊಂಡು ಬಂದೆ. ಛೆ! ಎಂತ ಕೆಲಸವಾಯಿತು. ಈ ಸಿನೆಮಾ ಅಂತೂ ಗೋವಿಂದಾ. ನಿನ್ನ ಸಿನೆಮಾ ಕರಿಯರ್ ಕೂಡ ಗೋವಿಂದಾ ಗೋssವಿಂದಾ!' ಅಂತ ಎದ್ದ. ಗೊತ್ತಿತ್ತು ಅವನಿಗೆ ಗೀತಿಕಾ ಸೀದಾ ಕಾಲಿಗೇ ಬೀಳುತ್ತಾಳೆ ಅಂತ. ಅಂತಹ ಅದೆಷ್ಟು ಅಂತಹ ಆಕ್ಟಿಂಗ್ ಮಾಡಿದ್ದನೋ ಅವನೋ!

ಇನ್ಸ್ಪೆಕ್ಟರ್ ಕೋರ್ಡೆ ಮತ್ತು ಹೀರೋ ನಡುವೆ ಇದ್ದ ಕ್ಲೋಸ್ ಗೆಳೆತನವನ್ನು ಗೀತಿಕಾ ಗಮನಿಸಿದ್ದಳು. ಈಗ ತನ್ನನ್ನು ಯಾರಾದರೂ ಉಳಿಸಿದರೆ, ಸಿಲುಕಿರುವ ಕಷ್ಟದಿಂದ ಪಾರು ಮಾಡಿದರೆ ಅದು ಸೂಪರ್ ಹಿರೋ ತರುಣ್ ಕುಮಾರನೇ ಅಂತ ಹೇಳಿ ಅವನ ಕಾಲಿಗೆ ಬಿದ್ದು, 'ಹೇಗಾದರೂ ಮಾಡಿ ಕಾಪಾಡಿ. ಒಂದು ಮಾತು ಕೋರ್ಡೆಗೆ ಹೇಳಿ ನೋಡಿ. ರೆಕಾರ್ಡಿಂಗ್ ಇದ್ದರೂ ನಾನು ಏನೂ ಮಾತಾಡಿಲ್ಲ. ಆ ರಫೀಕನೇ ಮಾತಾಡಿ ಏನೇನೋ ಹೇಳುತ್ತಿರುತ್ತಿದ್ದ. ನಾನು ಕೇವಲ ಮಾತು ಕೇಳುತ್ತಿದ್ದೆ ಅಷ್ಟೇ ಸಾರ್. ಮತ್ತೆ, ಮತ್ತೆ, ಸಿನೆಮಾಕ್ಕೆ ಫೈನಾನ್ಸ್ ಮಾಡಿಸಿದ್ದು, ನನ್ನ ಹೀರೋಯಿನ್ ಅಂತ ಸೆಲೆಕ್ಟ್ ಮಾಡಿಸಿದ್ದು ಎಲ್ಲ ಅವನೇ ಸಾರ್. ನಾನು ಏನೂ ಕೇಳಿರಲೇ ಇಲ್ಲ. ಈಗ ನೋಡಿದರೆ ಈ ಪೊಲೀಸರು ನಾನೇ ಅಂಡರ್ವರ್ಲ್ಡ್ ನವರ ಹಿಂದೆ ಬಿದ್ದು ಎಲ್ಲ ಮಾಡಿಸಿಕೊಂಡೆ ಅನ್ನುವ ರೀತಿಯಲ್ಲಿ ಮಾತಾಡುತ್ತಿದ್ದಾರೆ. ನಿಮಗಾದರೂ ನನ್ನ ಮೇಲೆ ನಂಬಿಕೆ ಇದೆಯಲ್ಲ ಸರ್? ಇದೆ ತಾನೇ?' ಅಂತ ಗೊಳೋ ಅಂತ ಅಳುತ್ತ, ಹೀರೋ ಕಾಲಿಗೆ ತಲೆ ಕುಟ್ಟಿ, ಕುಟ್ಟಿ ಅತ್ತಳು. ಅವಳಿಗೆ ಕಾಣದಂತೆ ಹೀರೋ ವಿಕೃತವಾಗಿ ನಕ್ಕ. ಕ್ಲೈಮಾಕ್ಸ್ ಗೆ ಹತ್ತಿರ ಬರುತ್ತಿತ್ತು.

'ನಾನೇನೋ ನಂಬ್ತೀನಿ ಗೀತಿಕಾ. ಆದ್ರೆ ಇನ್ಸ್ಪೆಕ್ಟರ್ ಕೋರ್ಡೆನ ನಂಬಿಸೋದು ಹೇಗೆ? ಅವನು ಮಹಾ ಪ್ರಚಂಡ. ಅಂಡರ್ವರ್ಲ್ಡ್ ನಲ್ಲೂ ಅವನ ಮಾಹಿತಿದಾರರಿದ್ದಾರೆ. ಅವರಿಂದಲೂ ಮಾಹಿತಿ ತೆಗೆದಿದ್ದಾನೆ. ಅವನ ಹತ್ತಿರ ಮತ್ತೂ ಕೆಲವು ಸಾಕ್ಷ್ಯಗಳಿವೆ. ನಿನಗೆ ರಫೀಕ್ ಕೊಟ್ಟಿದ್ದ ಹಾರ್ಟ್ ಪೆಂಡೆಂಟ್ ಚೈನ್ ಬಗ್ಗೆ ಸಹಿತ ಅವನಿಗೆ ಗೊತ್ತು. ಇಷ್ಟೆಲ್ಲ ಇದ್ದ ಮ್ಯಾಲೆ ಏನು ಮಾಡೋಣ? ನನಗೂ ಏನೂ ತೋಚ್ತಾ ಇಲ್ಲ. ಆದರೂ ಇರು. ಇನ್ನೊಂದು ಸಲ ಮಾತಾಡಿ ಬರ್ತೀನಿ,' ಅಂತ ಇನ್ಸ್ಪೆಕ್ಟರ್ ಕೋರ್ಡೆಯೊಂದಿಗೆ ಮಾತಾಡಿ ಬರುತ್ತೇನೆ ಅಂತ ವ್ಯಾನಿನಿಂದ ಇಳಿದು ಹೋದ. ಶೂನ್ಯವನ್ನು ದಿಟ್ಟಿಸುತ್ತ ಗೀತಿಕಾ ಹಾಗೇ ಕುಳಿತಿದ್ದಳು. ಜಾಸ್ತಿ ಏನೂ ಹೋಪ್ ಉಳಿದಿರಲಿಲ್ಲ ಆಕೆಗೆ.

ವಾಪಸ್ ಬಂದ ಸೂಪರ್ ಹೀರೋ ತರುಣ್ ಕುಮಾರ್. ಏನಾದರೂ ಜುಗಾಡ್ ಮಾಡಿ, ಅರೆಸ್ಟ್ ಆಗುವದರಿಂದ ತಪ್ಪಿಸಿಕೊಳ್ಳೋ ಉಪಾಯ ಹೇಳಿಯಾನೇ ಅಂತ ಗೀತಿಕಾ ಆಸೆಯ ಕಂಗಳಿಂದ ನೋಡಿದಳು. ಮುಳುಗುವವರಿಗೆ ಹುಲ್ಲು ಕಡ್ಡಿಯೂ ದೊಡ್ಡ ಆಸರೆಯೇ.

'ಕೋರ್ಡೆ ಜೊತೆ ಮಾತಾಡಿದೆ. 'ಏನೋ ಪೊರಪಾಟಿನಲ್ಲಿ ಹುಡುಗಿ ಅಂಡರ್ವರ್ಲ್ಡ್ ಜನರ ಜೊತೆ ಮಾತಾಡಿ, ಸಹವಾಸ ಮಾಡಿ ತಪ್ಪು ಮಾಡಿಕೊಂಡಿದಾಳೆ. ಮತ್ತೆ ಅವಳಾಗೇ ಸಂಪರ್ಕ ಮಾಡಲು ಹೋಗೇ ಇರಲಿಲ್ಲ. ದುಬೈಗೆ ಎಲ್ಲರ ಹಾಗೆ ಹೋಗಿದ್ದಳು. ಅಲ್ಲಿ ಅವನು ಯಾರೋ ರಫೀಕ್ ಅಂತ ತಗಲಾಕಿಕೊಂಡು, ಹಿಂದೆ ಬಿದ್ದಿದ್ದಾನೆ. ಈ ಸಲ ಮಾಫ್ ಮಾಡಿ ಬಿಟ್ಟು ಬಿಡಿ.ಒಳ್ಳೆ ಹುಡುಗಿ ಅವಳು,' ಅಂತೆಲ್ಲ ಹೇಳಿದೆ,' ಅಂದ  ಹೀರೋ ತರುಣ್ ದೊಡ್ಡದೊಂದು ನಿಟ್ಟುಸಿರು ಬಿಟ್ಟ.

'ಸೊ ಏನಂದ್ರು ಕೋರ್ಡೆ? ಅರ್ಥವಾಯಿತಾ ಅವರಿಗೆ? ನನ್ನನ್ನು ಬಿಟ್ಟು ಬಿಡುತ್ತಾರಂತೆಯೇನು? ಮತ್ತೆ ಕಮಿಷನರ್??' ಅಂತ ಏನೋ ಒಂದು ಆಸೆಯಿಂದ ಕೇಳಿದಳು.

'ಅಷ್ಟು ಸುಲಭವಿಲ್ಲಮ್ಮ ಅದು. ಕೋರ್ಡೆ ಏನೋ ಕೇಳುತ್ತಿದ್ದಾನಮ್ಮ. ಅದೆಲ್ಲ ಆಗೋ ಮಾತಲ್ಲ ಬಿಡು. ಸುಮ್ಮನೆ ಅರೆಸ್ಟ್ ಆಗಿ, ಅವರ ಜೊತೆ ಹೋಗು. ಮುಂದೆ ಕೋರ್ಟಲ್ಲಿ ಬಡಿದಾಡಿ, ಬಿಡಿಸಿಕೊಂಡು ಬರೋಣವಂತೆ. ನನ್ನತ್ರ ಇನ್ನು ಏನೂ ಸಾಧ್ಯವಿಲ್ಲಮ್ಮ,' ಅಂತ ಹೇಳಿ ಹೊರಡಲು ಮುಂದಾದ ಹೀರೋ ತರುಣ್.

'ಸಾರ್, ನಿಲ್ಲಿ. ಏನು ಬೇಕಂತೆ ಕೋರ್ಡೆಗೆ? ಎಷ್ಟು ಕಾಸು ಬೇಕಂತೆ? ಈ ಫಿಲ್ಮಿಂದು ಎಲ್ಲ ಅವರಿಗೇ ಕೊಟ್ಟು ಬಿಡ್ತೇನಿ. ಬೇಕಾದರೆ ಮುಂದಿನ ಕೆಲವು ಫಿಲ್ಮಿನ ದುಡ್ಡು ಸಹ ಅವರಿಗೇ ಕೊಡ್ತೀನಿ. ಕೇಳಿ ಸಾರ್ ಅವರತ್ರ. ಎಷ್ಟು ಬೇಕು ಅಂತ?' ಅಂತ ಗೀತಿಕಾ ಗೋಗರೆದಳು.

'ದುಡ್ಡಲ್ಲ ಅವನು ಕೇಳಿದ್ದು,' ಅಂತ ಅರ್ಧ ಮಾತ್ರ ಹೇಳಿ ಅಡ್ಡ ಗೋಡೆ ಮೇಲೆ ಉದ್ದಕ್ಕೆ ದೀಪ ಇಟ್ಟ ತರುಣ್ ಕುಮಾರ್.

'ಮತ್ತೆ?!' ಅಂತ ಕೇಳಿದಳು ಗೀತಿಕಾ. ದುಡ್ದಲ್ಲದಿದ್ದರೆ ಮತ್ತೇನಿರಬಹುದು!!!!!

'ಸ್ವಲ್ಪ ಅಡ್ಜಸ್ಟ್ ಮಾಡಿಕೋಬೇಕಂತೆ. compromise. ಮಾಮೂಲಿ. ಎಲ್ಲ ಹೀರೋಯಿನ್ಸ್ ಮಾಡೋದೇ. ಅದನ್ನೇ ಕೇಳ್ತಾ ಇದಾನೆ ಅವನು,' ಅಂತ ಹೇಳಿ ಒಂದು ಹಾವು ಬಿಟ್ಟುಬಿಟ್ಟ ಹೀರೋ. ಹೆಚ್ಚಿನ ಎಫೆಕ್ಟ್ ಗೆ ಅಂತ ಹೇಳಿ, ಅವನೇ ಹೇಳಿದ, 'ನನಗೆ ಗೊತ್ತು ನೀನಿದಕ್ಕೆಲ್ಲ ಒಪ್ಪುವ ಪೈಕಿ ಅಲ್ಲ ಅಂತ. ಆದರೂ ಅವನು ಕೇಳಿದ ಅಂತ ಹೇಳಿದೆ. ಅಷ್ಟೇ. ಇರಲಿ ಬಿಡು,' ಅಂತ ಹೇಳಿ ಮತ್ತೆ ಹೊರಗೆ ಹೊರಟ ನಾಟಕ ಮಾಡಿದ. ಹೋಗಲಿಲ್ಲ.

adjustment , compromise - ಚಿತ್ರರಂಗದಲ್ಲಿ ಎಲ್ಲರಿಗೂ ಗೊತ್ತಿರುವ ಕುಖ್ಯಾತ ಶಬ್ದಗಳು. ಗೀತಿಕಾಳಿಗೂ ಎಲ್ಲ ಗೊತ್ತಿತ್ತು. ಏನೋ ಅವಳ ಪುಣ್ಯಕ್ಕೆ ಅಲ್ಲಿ ತನಕ ಯಾರೂ ಅವಳನ್ನು casting couch ಅಂತ ಹೇಳಿ ಮಂಚಕ್ಕೆ ಎಳೆದಿರಲಿಲ್ಲ. ಈಗ ಕೋರ್ಡೆ ಅದನ್ನೇ ಬೇರೆ ರೀತಿಯಲ್ಲಿ ಡಿಮ್ಯಾಂಡ್ ಮಾಡುತ್ತಿದ್ದ. ಡೈರೆಕ್ಟರ್, ಪ್ರೊಡ್ಯೂಸರ್ ಯಾರೂ ಕೇಳದ್ದನ್ನ ಒಬ್ಬ ಪೋಲೀಸ್ ಆಫೀಸರ್ ಕೇಳುತ್ತಿದ್ದ. ಅದಕ್ಕಾಗಿಯೇ ಒಂದು ತಪ್ಪಿಸಿಕೊಳ್ಳಲಾಗದಂತಹ ಚಕ್ರವ್ಯೂವಹದಂತಹ ಬಲೆ ಹಾಕಿ, ಸರಿಯಾಗಿ ಸಿಗಿಸಿ ಹಾಕಿದ್ದ. ಟ್ರ್ಯಾಪ್ ಮಾಡಿದ್ದ.

ಗೀತಿಕಾ ಒಂದು ದೊಡ್ಡ ದ್ವಂದ್ವದಲ್ಲಿ ಸಿಲುಕಿದಳು. ಏನು ಮಾಡಲಿ? ಅಂತ ಫುಲ್ confuse ಆದಳು. ಅದೇ ಟೈಮಿಗೆ ಹೊರಗಿಂದ ದಬ್ ದಬ್ ಅಂತ ಜೋರಾಗಿ ಯಾರೋ ಬಾಗಿಲು ಬಡಿದರು. ಜೊತೆಗೆ ಕಾನ್ಸ್ಟೇಬಲ್ ಮಾರಮ್ಮನ ಕರ್ಕಶ ದನಿ. 'ಏ ಕತ್ತೆ! ಏ ಲೌಡಿ! ಹೊರಗೆ ಬಾರೆ. ನಡಿ ಇನ್ನು. ತಡವಾಗ್ತಿದೆ,' ಅಂತ ಅವಸರ ಮಾಡಿದಳು. ಎಲ್ಲ ಮೊದಲೇ ಪ್ರಿ ಪ್ಲಾನ್ಡ್. ಪರ್ಫೆಕ್ಟ್ ಟೈಮಿಂಗ್. ಗೊತ್ತು ಅವರಿಗೆ. ಪೂರ್ತಿಯಾಗಿ ಮಾನಸಿಕವಾಗಿ ಬ್ರೇಕ್ ಡೌನ್ ಮಾಡಿದ ನಂತರ ಗಡಿಬಿಡಿ ಮಾಡಿಬಿಟ್ಟರೆ ಮುಗಿಯಿತು ಅಂತ. ಎಂತವರೂ ಕಮಿಟ್ ಆಗಿ ಬಿಡುತ್ತಾರೆ. ಆಕಡೆ ಮಾಫಿಯಾ, ಈಕಡೆ ಹಿತಚಿಂತಕರಂತೆ ಪೋಸ್ ಕೊಡುತ್ತ ಪಾಪಕೂಪದ ಮತ್ತಿಷ್ಟು ಆಳಕ್ಕೆ ತಳ್ಳುತ್ತಿದ್ದ ಸೂಪರ್ ಹೀರೋ ತರುಣ್ ಕುಮಾರ್ ಅಂತಹ ಜನರನ್ನು ಉಪಯೋಗಿಸಿಕೊಂಡು ಅದೆಷ್ಟು ಜನ ಬಾಲಿವುಡ್ ಬೆಡಗಿಯರನ್ನು ಪಳಗಿಸಿಕೊಂಡಿದ್ದರೋ ಕೋರ್ಡೆಯಂತಹ ಖಾಕಿ ದುರುಳರು. ಗೀತಿಕಾಗೆ ಅದೆಲ್ಲ ಗೊತ್ತಿರಲಿಲ್ಲ ಬಿಡಿ.

'ಆಯ್ತು ಹೀರೋ ಸರ್! ಒಪ್ಪಿಗೆ ಅಂತ ಕೋರ್ಡೆ ಸಾಹೇಬರಿಗೆ ತಿಳಿಸಿ,' ಅಂದವಳೇ ಮುಖ ಆಕಡೆ ತಿರುಗಿಸಿದಳು. ಅವಳ ಮೇಲೆ ಅವಳಿಗೇ ಅಸಹ್ಯವಾಯಿತೇ? ಗೊತ್ತಿಲ್ಲ.

ಮುಂದೇನು? ಮುಗಿಯಿತಲ್ಲ ಇವರ ನಾಟಕ? ಮುಂದಿನ ಹೆಜ್ಜೆಗಳು ಸ್ಟ್ಯಾಂಡರ್ಡ್ ಪ್ರೋಸೆಸ್. ಮೊದಲು ಇನ್ಸ್ಪೆಕ್ಟರ್ ಕೋರ್ಡೆ ಗೀತಿಕಾಳನ್ನು ಹುರಿದು ಮುಕ್ಕಿದ. ನಂತರ ತನಗೆ ಬೇಕಾದ ಹಿರಿಯ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಆಹುತಿ ಕೊಟ್ಟ. ನೀರಿಗಿಳಿದ ಮೇಲೆ ಮಳೆಯೇನು ಚಳಿಯೇನು? ಅದೇ ಮನೋಭಾವ ಗೀತಿಕಾಳಿಗೂ ಬಂತು. ಪಕ್ಕಾ ಪ್ರೊಫೆಶನಲ್ ಕಾಲ್ ಗರ್ಲ್ ಆಗಿ ತಯಾರಾಗಿಬಿಟ್ಟಳು. ಸಿನೆಮಾಕ್ಕಿಂತ ಹೆಚ್ಚಿನ ಕಾಸು ರಾತ್ರಿ ರಾಣಿ ಬಿಸಿನೆಸ್ಸಿನಲ್ಲಿ ಇತ್ತು. ಅದು ಮುಂದೆ ಅವಳಿಗೂ ತಿಳಿಯಿತು. ಡೈರೆಕ್ಟರ್, ಪ್ರೊಡ್ಯೂಸರ್, ಹೀರೋಗಳು ಎಲ್ಲರೂ adjustment, compromise ಕೇಳುವವರೇ ಅಂತ. ಕೋರ್ಡೆ ಒಬ್ಬನೇ ದುಡ್ಡು ಕೊಡದೆ ಅನುಭವಿಸುತ್ತಿದ್ದ. ಅವನ ಹತ್ತಿರ ಬಿಡಿ ಇವಳನ್ನು ನಾಲ್ಕು ಜನ್ಮಕ್ಕೆ ಬ್ಲಾಕ್ ಮೇಲ್ ಮಾಡುವಷ್ಟು ಮಟೀರಿಯಲ್ ಇತ್ತು. ಅವೆಲ್ಲ ತೋರಿಸಿ ತೋರಿಸಿಯೇ ಹೆದರಿಸಿ ಇಟ್ಟುಕೊಂಡಿದ್ದ.

'ನಿನ್ನ ಪರಿಸ್ಥಿತಿ ಎಷ್ಟೋ ಬೆಟರ್ ಗೀತಿಕಾ. ಆ ಕೋರ್ಡೆ ಎಷ್ಟು ದುರುಳ ಅಂದರೆ ಹೀರೋಯಿನ್ನುಗಳನ್ನು ದಂಧೆಗೆ ಇಳಿಸಿ, ಅವರಿಂದ ಕಮಿಷನ್ ಕೂಡ ಪಡೆಯುತ್ತಾನೆ. ನಿನ್ನ ಹತ್ತಿರ ಫ್ರೀ ಸರ್ವೀಸ್ ಒಂದೇ ಪಡೆಯುತ್ತಾನೆ. ದಂಧೆಯ ದುಡ್ಡನ್ನು ಮುಟ್ಟಲು ಬರುವದಿಲ್ಲ ಅಂದರೆ ಎಷ್ಟೋ ಬೆಟರ್ ಬಿಡು. ನಮ್ಮ ಸ್ಥಿತಿ ನೋಡು. ಅವನಿಗೆ, ಅವನ ಗೆಳೆಯರಿಗೆ ಬಿಟ್ಟಿ ಸರ್ವೀಸ್ ಕೊಡಬೇಕು. ಮೇಲಿಂದ ಮಂತ್ಲಿ ಪೇಮೆಂಟ್ ಕೂಡ ಕೊಡಬೇಕು,' ಅಂತ ಸೈಡ್ ರೋಲ್ ಮಾಡುತ್ತಿದ್ದ ನಟಿ ಒಬ್ಬಾಕೆ ಹೇಳಿದ್ದಳು. ಕೋರ್ಡೆನೇ ಹಾಗೆ ಹೇಳಿಸಿದ್ದ. ಬಲೆಗೆ ಬಿದ್ದ ಮಿಕಕ್ಕೆ ಸ್ವಲ್ಪ ಹಾಯೆನಿಸುವ ಹಾಗೆ ಮಾಡಿದರೆ ಮಿಕ ಅಷ್ಟು ಒದ್ದಾಡುವದಿಲ್ಲ ನೋಡಿ. ಬಲೆಯಲ್ಲಿಯೇ ಹೊಂದಿಕೊಂಡು ಇರುತ್ತದೆ.

ರಫೀಕ್ ತನ್ನ ಕೆಲಸ ಮುಗಿಯಿತು ಅನ್ನುವವಂತೆ ಫೋನ್ ಮಾಡುವದನ್ನು ನಿಲ್ಲಿಸಿದ. ಗೀತಿಕಾಳ ದೋಸ್ತಿ ಮಾಡಿ, ಅವಳನ್ನು ಪಟಾಯಿಸಿ, ಫೋನ್ ಮಾಡಿ, ಕೋರ್ಡೆಗೆ ಬ್ಲಾಕ್ ಮೇಲ್ ಮಾಡಲು ಅನುವು ಮಾಡಿ ಕೊಡುವದಷ್ಟೇ ಅವನ ಕೆಲಸವಾಗಿತ್ತು. ಅಷ್ಟು ಮಾಡಿಕೊಟ್ಟಿದ್ದ. ಅದಕ್ಕೆ ಪ್ರತಿಫಲವಾಗಿ ಇನ್ಸ್ಪೆಕ್ಟರ್ ಕೋರ್ಡೆ ರಫೀಕನ ಎದುರಾಳಿ ಗ್ಯಾಂಗಿನ ಗೂಂಡಾಗಳಿಬ್ಬರನ್ನು ಡಿಸ್ಕೌಂಟ್ ರೇಟಿನಲ್ಲಿ ಎನ್ಕೌಂಟರ್ ಮಾಡಿಕೊಟ್ಟಿದ್ದ.

ಸೂಪರ್ ಹೀರೋ ತರುಣ್ ಕುಮಾರ್ ಸಹಿತ ಗೀತಿಕಾಳನ್ನು ಹುರಿದು ಮುಕ್ಕಿದ. ಮುಂದೆ ಅವನ ಯಾವದೋ ಒಂದು ಫಿಲ್ಮಿಗೆ ಹೀರೋಯಿನ್ ಅಂತ ಆಯ್ಕೆಯಾಗಬೇಕು ಅಂದರೆ ಎಲ್ಲರೊಂದಿಗೆ ಮಲಗುವದು ಅನಿವಾರ್ಯವಾಗಿತ್ತು. ಮಲಗಿ ಬಂದಳು. ಒಂದು ಕಾಲದಲ್ಲಿ ಪೂಜಿಸಿದ್ದ ತರುಣ್ ಕುಮಾರ್ ಬಗ್ಗೆ ಕಣ್ಣಲ್ಲಿ ಅಸಹ್ಯವಿತ್ತು. ಅವನಿಗೆ ಅದೆಲ್ಲ ಫರಕ್ ಇಲ್ಲ ಬಿಡಿ.

ಮುಂದೆ ಸಿನೆಮಾದಲ್ಲಿ ಅವಕಾಶ ಕಮ್ಮಿ ಆದಂತೆ ದುಬೈ ಟ್ರಿಪ್ ಹೊಡೆಯುವದು ಜಾಸ್ತಿಯಾಯಿತು. ರಫೀಕ್ ಮತ್ತೆ ಭೆಟ್ಟಿಯಾದರೂ ಗೀತಿಕಾನೇ ಅವನಿಗೆ ಕ್ಯಾರೆ ಅನ್ನದೇ ಹೋಗುತ್ತಿದ್ದಳು. ಅವನಿಗಿಂತ ದೊಡ್ಡ ಲೆವೆಲ್ಲಿನ ಭಾಯಿ ಲೋಗ್ ಜೊತೆ, ಅರಬ್ ಶೇಖ್ ಜನರ ಜೊತೆ, ದೊಡ್ಡ ದೊಡ್ಡ ಇಂಟರ್ನ್ಯಾಷನಲ್ ಕುಳಗಳ ಜೊತೆಯಲ್ಲ ವ್ಯವಹಾರ ಕುದುರಿದ ಮೇಲೆ ರಫೀಕ್ ಅಂದರೆ ಯಾರೋ ಏನೋ.

ಮುಂದೆ ಯಾರೋ ಒಬ್ಬವ ಡಿಸ್ಟ್ರಿಬ್ಯೂಟರ್ ಸಿಕ್ಕ. ಅವನಿಗೂ ಒಂದೋ ಎರಡೋ ಮದುವೆಯಾಗಿ ಡೈವೋರ್ಸ್ ಆಗಿತ್ತು. ಸಕತ್ ರೊಕ್ಕ ಇದ್ದ ಪಾರ್ಟಿ. ಅವನ ಜೊತೆ ಶಾದಿ ಮಾಡಿಕೊಂಡ ಗೀತಿಕಾ ಧರ್ಮ ಕೂಡ ಚೇಂಜ್ ಮಾಡಿಕೊಂಡುಬಿಟ್ಟಳು. ಈಗ ಬೇಗಂ ಆಗಿ ಹಾಯಾಗಿದೆ ಬದುಕು. ಮದುವೆ ಮುಂಚೆ, ಯಾವದೋ ಕಾಲದಲ್ಲಿ, ಮೊದಲು ಗ್ರಾಹಕರಾಗಿ, ನಂತರ ಗೆಣೆಕಾರರಾಗಿ ಸಿಕ್ಕಿದ್ದ ಸಿಕ್ಕಾಪಟ್ಟೆ powerful ಮಿನಿಸ್ಟರ್ ಒಬ್ಬನನ್ನು ಹಿಡಿದು, ಕೋರ್ಡೆ ಮೇಲೆ ವಶೀಲಿ ಬಾಜಿ ಮಾಡಿಸಿ, ಅವನ ಬ್ಲಾಕ್ ಮೇಲ್ ಇಕ್ಕುಳದಿಂದ ಪಾರಾದಳು ಗೀತಿಕಾ. ಮತ್ತೆ ಅದೇ ಹೊತ್ತಿಗೆ ಕೋರ್ಡೆ ಸಾಹೇಬರ ಗ್ರಹಗತಿ ಕೂಡ ಕೆಟ್ಟುಹೋಗಿ, ಸಾಕಷ್ಟು ವಿವಾದಗಳಲ್ಲಿ ಸಿಕ್ಕಿ ಒದ್ದಾಡುತ್ತಿದ್ದರು. ಅವರ ದಸ್ತಾವೇಜಿನಿಂದ ಗೀತಿಕಾ ಎಂದೋ ನಿಕಾಲಿಯಾಗಿ ಹೋಗಿದ್ದಳು.

ಕೋರ್ಡೆ ಸಾಹೇಬರ ಶವಪೆಟ್ಟಿಗೆಗೆ ಕೊನೆ ಮೊಳೆ ಹೊಡೆದಿದ್ದು ಒಂದು ಅತ್ಯಾಚಾರದ ಕೇಸ್. ವರ್ಜಿನ್ ಕನ್ಯೆಯರು ಎಂದರೆ ವಿಪರೀತ ಹುಚ್ಚು, ಮೂಢನಂಬಿಕೆ ಬೆಳೆಸಿಕೊಂಡಿದ್ದ ಕೋರ್ಡೆ ಅಪ್ರಾಪ್ತ ವಯಸ್ಕ ಹುಡುಗಿಯೊಬ್ಬಳ ಮೇಲೆ ರೇಪ್ ಮಾಡಿದ ಆರೋಪಕ್ಕೆ ಸಿಕ್ಕು ಸಸ್ಪೆಂಡ್ ಆದರು. ಅದೇನು ಅನಿವಾರ್ಯತೆಗಳು ಇದ್ದವೋ ಏನೋ. ತನಿಖೆಗೆ ಒಳಗಾಗದೇ ನಾಪತ್ತೆಯಾಗಿಬಿಟ್ಟರು. ಈಗ ನೋಡಿದರೆ ಮುಂಬೈಯಿಂದ ಎಷ್ಟೋ ದೂರದಲ್ಲಿ ರೈಲು ಹಳಿಗಳ ಮೇಲೆ ಶವವಾಗಿ ಪತ್ತೆಯಾಗಿದ್ದರು. ಪಾಪದ ಕೊಡ ತುಂಬಿ ಬಂದಿತ್ತು.

ಟೀವಿ ಮೇಲೆ ಬ್ರೇಕಿಂಗ್ ನ್ಯೂಸ್ ಹಾಗೇ ಮುಂದುವರೆದಿತ್ತು. ಕೋರ್ಡೆ ಸಾಹೇಬರದು ಆತ್ಮಹತ್ಯೆಯೋ ಅಥವಾ ಕೊಲೆಯೋ ಅಂತ ಜಿಜ್ಞಾಸೆ ನಡೆದಿತ್ತು. ಗೀತಿಕಾಗೆ ಅದ್ಯಾವದೂ ಬೇಕಾಗಿರಲಿಲ್ಲ. ಪಿಶಾಚಿಯಂತೆ ಕಾಡಿದ್ದ ಕಿರಾತಕ ಕೋರ್ಡೆ ನಿರ್ನಾಮವಾಗಿ ಹೋಗಿದ್ದ. ಅಷ್ಟೇ ಸಾಕಾಗಿತ್ತು. ಬದುಕಿದ್ದರೆ ಮುಂದೊಮ್ಮೆ ಗೀತಿಕಾಳ ಮಕ್ಕಳನ್ನೂ ಬಿಡದೇ, ಅವರನ್ನೂ ಭಕ್ಷಿಸಿ ಬಿಡುವಂತಹ ರಾಕ್ಷಸನಾಗಿದ್ದ ಕೋರ್ಡೆ. ಯಾವದೋ ಒಂದು ತಾರಾ ಕುಟುಂಬದ ಮೂರು ತಲೆಮಾರುಗಳ ಅಬಲೆಯರನ್ನು ತಿಂದು ಮುಗಿಸಿದ್ದೆ ಅಂತ ಗರ್ವದಿಂದ ಹೇಳಿಕೊಳ್ಳುತ್ತಿದ್ದ ಆ ರಾಕ್ಷಸ ಕೋರ್ಡೆ. ಯಾವ ದೌರ್ಭಾಗ್ಯವಂತ ತಾರಾ ಕುಟುಂಬವೋ ಅದು?

ಅಷ್ಟರಲ್ಲಿ ಗೀತಿಕಾಳ ಇಬ್ಬರೂ ಹೆಣ್ಣು ಮಕ್ಕಳು ಬಂದರು. ಕೋರ್ಡೆಯಂತಹ ರಾಕ್ಷಸರಿಂದ ರಕ್ಷಿಸಲೋ ಎಂಬಂತೆ ಗೀತಿಕಾ ಮಕ್ಕಳಿಬ್ಬರನ್ನೂ ಗಟ್ಟಿಯಾಗಿ ಅಪ್ಪಿಕೊಂಡುಬಿಟ್ಟಳು. ಆ ಕಂದಮ್ಮಗಳಿಗೆ ಯಾಕೆ ಅಂತ ತಿಳಿಯಲಿಲ್ಲ. ಯಾಕೆಂದರೆ ಅವರಿಗೆ ಕೋರ್ಡೆ ಬಗ್ಗೆ ಗೊತ್ತಿರಲಿಲ್ಲ. ಕೋರ್ಡೆಯಂತಹ ಕಿರಾತಕ ಯಾರ ಬಾಳಲ್ಲೂ ಬರದೇ ಇರಲಿ ಅಂತ ಒಂದು ಕ್ಷಣ ಕಣ್ಮುಚ್ಚಿ ಪ್ರಾರ್ಥಿಸಿದಳು ಗೀತಿಕಾ.

ಒಂದು ವಿಷಯ ಮಾತ್ರ ಗೀತಿಕಾಗೆ ಗೊತ್ತೇ ಇರಲಿಲ್ಲ. ಇನ್ಸ್ಪೆಕ್ಟರ್ ಕೋರ್ಡೆಗೆ ಗೀತಿಕಾಳನ್ನು ಕಾಣಿಕೆ ಮಾದರಿಯಲ್ಲಿ ಒಪ್ಪಿಸಿದ್ದು  ಡಾನ್ ಛೋಟಾ ಫಕೀರ್ ಅಂತ. ವರ್ಷಕ್ಕೆ ಇಷ್ಟು ಕೋಟಿ ರೂಪಾಯಿ, ಇಷ್ಟು ಹೊಸ ಬಾಲಿವುಡ್ ನಟಿಮಣಿಯರ ಆಹುತಿ ಅಂತ ಒಪ್ಪಂದ ಕೋರ್ಡೆ ಮತ್ತು ಡಾನ್ ಛೋಟಾ ಫಕೀರ್ ನಡುವೆ. ಮತ್ತೆ ಆ ಚದುರಂಗದಾಟದಲ್ಲಿ ರಫೀಕ್, ತರುಣ್ ಕುಮಾರ್ ಎಲ್ಲರಿಗೆ ಬೇರೆ ಬೇರೆ ಪಾತ್ರವಿತ್ತು. ಅದೆಲ್ಲ ರಹಸ್ಯ ಕೋರ್ಡೆಯೊಂದಿಗೆ ಸಮಾಧಿಯಾಯಿತು.

(ಇಂತಹ ಅನೇಕ ಸುದ್ದಿಗಳನ್ನು ಅಲ್ಲಿ ಇಲ್ಲಿ ಓದಿದ್ದರೂ ಈ ಕಥೆಗೆ ಒಂದು ಸಾಲಿಡ್ ಐಡಿಯಾ ಸಿಕ್ಕಿದ್ದು ಒಂದು ನೈಜ ಘಟನೆಯ ಬಗ್ಗೆ ಈ ಪತ್ರಿಕಾ ವರದಿ ಓದಿದಾಗ. ಅದು ಕಥೆಯ ಎಳೆ ಅಷ್ಟೇ. ವಿವರಗಳೆಲ್ಲವೂ ಪೂರ್ತಿಯಾಗಿ ನನ್ನ ಕಲ್ಪನೆ. ನೈಜ ಘಟನೆಯಲ್ಲಿ ಇರಬಹುದಾದ ಯಾವದೇ ಸನ್ನಿವೇಶಗಳಿಗೆ, ವ್ಯಕ್ತಿಗಳಿಗೆ ಸಾಮ್ಯತೆ ಕಂಡು ಬಂದರೆ ಅದು ಖಂಡಿತವಾಗಿಯೂ ಉದ್ದೇಶಪೂರ್ವಕವಲ್ಲ. ಈ ಮಾದರಿಯ ವಿವರಗಳು ಸುಕೇತು ಮೆಹತಾ ಬರೆದ 'Maximum City', ವಿಕ್ರಮ ಚಂದ್ರ ಬರೆದ 'Sacred Games' ಪುಸ್ತಕದಲ್ಲಿ ಬೇಕಾದಷ್ಟು ಇವೆ. ಹುಸೇನ್ ಝೈದಿ ಬರೆದ 'Dongri to Dubai', 'Byculla to Bankok' ಇತ್ಯಾದಿ ಪುಸ್ತಕಗಳಲ್ಲಿ ಬಾಲಿವುಡ್, ಮಾಫಿಯಾ, ಪೋಲೀಸ್ ಎಲ್ಲದರ ಬಗ್ಗೆ ಬೇಕಾದಷ್ಟು ವಿವರಗಳು ಇವೆ.)

3 comments:

Anonymous said...

Hello Mahesh,

amazing article. But who is the actress mentioned here? Is it Preity Zinta????

Mahesh Hegade said...

Thank you very much.

I do not know who the actress is. I could not guess from the media report. Let it be so. Other details are all purely fictional and imaginary.

Vimarshak Jaaldimmi said...


Article with suspense!

Was there a hero named Arun Kumar too who used to appear on ZedTV?