Saturday, March 28, 2015

ನಿನ್ನ ಎರಡೂ ಮಕ್ಕಳಿಗೆ ಮುಂಜವಿ ಮಾಡಿಬಿಡು. ಎಲ್ಲ ಸಮಸ್ಯೆ ಪರಿಹಾರ ಆಗಿಬಿಡ್ತದ!


ಮೊನ್ನೆ ಅಪರೂಪಕ್ಕೆ ಒಬ್ಬ ಪುರಾತನ ಗೆಳತಿ ಸಿಕ್ಕಿದ್ದಳು. ಎಲ್ಲೆ ಅಂತೀರಿ ಏನು? ಅಲ್ಲೇ ಧಾರವಾಡದ ಮಾಳಮಡ್ಡಿ ರಾಮಚಂದ್ರನ ಅಂಗಡ್ಯಾಗ ಕಾಯಿಪಲ್ಲೆ ಆರಿಸಿಕೋತ್ತ, ಚೌಕಾಶಿ ಮಾಡಿಕೋತ್ತ, ಬುಟ್ಟಿ ತುಂಬಿಸಿಕೋತ್ತ ನಿಂತಿದ್ದಳು.

ಭೆಟ್ಟಿಯಾದ ಮೇಲೆ ಉಭಯ ಕುಶಲೋಪರಿ ಎಲ್ಲಾ ಆತು.

'ಯಾವಾಗ ಬಂದಿ? ಎಷ್ಟು ದಿವಸ ಇರೋದು?' ಅಂತ ಕೇಳಿದಳು.

'ಬಂದು ಒಂದೆರೆಡು ವಾರ ಆತು ನೋಡವಾ. ಇಲ್ಲೇ ಖಾಯಂ ಇನ್ನು. ರಿಟೈರ್ ಆಗಿಬಿಟ್ಟೆ ನೋಡವಾ,' ಅಂದೆ.

'ನೀ ಯಾವಾಗ ಕೆಲಸಾ ಮಾಡಿ ಮಾರಾಯಾ ರಿಟೈರ್ ಆದೆ ಅಂತ ಹೇಳಲಿಕ್ಕೆ!?' ಅನ್ನೋ ಲುಕ್ ಕೊಟ್ಟಳು. ಆದ್ರೆ ಬಾಯಿ ಬಿಟ್ಟು ಹೇಳಲಿಲ್ಲ. ಹೇಳಿ ಕೇಳಿ ಸಂಸ್ಕಾರವಂತ ಮನಿತನದ ಹುಡುಗಿ.

'ಮತ್ತ? ಮುಂದ? ಏನು ಮಾಡ್ತೀ ಈಗ? ಇಡೀ ದಿವಸ ಮನಿಯಾಗ?' ಅಂತ ಕೇಳಿದಳು.

'ಏನಿಲ್ಲ. ಫುಲ್ ಟೈಮ್ ರೀಡರ್ ಮತ್ತು ಪಾರ್ಟ್ ಟೈಮ್ ರೈಟರ್ ನೋಡವಾ. ಅದರ ಜೋಡಿ ಸಮಾಜ ಸೇವಾ ಅಂತ ಏನೋ ಮಾಡ್ತೇನಿ,' ಅಂದೆ.

'ನೀನು!? ಸಮಾಜ ಸೇವಾ!? ನಂಬಲಿಕ್ಕೆ ಸಾಧ್ಯ ಇಲ್ಲ. ಏನಪಾ ಮಾಡ್ತೀ ಸಮಾಜ ಸೇವಾ?' ಅಂತ ಕೇಳಿದಳು. ಎಷ್ಟಂತ ಅಕಿ ತಡಕೊಂಡಾಳು? ಏನರೆ ಟಾಂಟ್ ಹೊಡಿಲಿಕ್ಕೇ ಬೇಕು ನೋಡ್ರೀ. ನಮಗೇನು ಫರಕ್ ಇಲ್ಲ. ಕ್ವಾಣದ ಚರ್ಮದ ಮಂದಿ ನಾವು.

'ಸಮಾಜ ಸೇವಾ ಅಂದ್ರ ಲೈಫ್ ಕೋಚ್ ಅಂತ ಮುಫ್ತಿನ್ಯಾಗ ಅಂದ್ರ ಫ್ರೀ ಒಳಗ ಮಂದಿಗೆ ಸಲಹೆ ಸೂಚನೆ ಉಚಿತವಾಗಿ ಕೊಡತೇನಿ ನೋಡವಾ. ಮಂದಿ ಏನೇನೋ ಪ್ರಾಬ್ಲಮ್ ಹೇಳಿಕೋತ್ತ ಬರತಾರ. ನಾನು ಭಾಳ ಅಲ್ಲದಿದ್ದರೂ ಸ್ವಲ್ಪರೆ ದುನಿಯಾ ನೋಡೇನಿ ನೋಡು. ನಮ್ಮ ಅನುಭವ, ಕಲಿತ ಅಲ್ಪ ಸ್ವಲ್ಪ ಜ್ಞಾನ ಉಪಯೋಗಿಸಿ ಏನೇನೋ ಸಲಹಾ ಕೊಡತೇನಿ ನೋಡವಾ. ಎಲ್ಲಕ್ಕಿಂತ ಹೆಚ್ಚಾಗಿ ಫುಲ್ ಲಕ್ಷ್ಯವಿಟ್ಟು ಮಂದಿ ಏನು ಹೇಳ್ತಾರ ಅಂತ ಸುಮ್ಮ ಕೂತು ಕೇಳತೇನಿ. ಅದೇ ಭಾಳ ಮುಖ್ಯ ಅಂತ ನಮ್ಮ ಕಡೆ ಬಂದವರು ಹೇಳ್ತಾರ. ನಡು ನಡು ಅಡ್ಡ ಬಾಯಿ ಹಾಕದೇ, ನನ್ನ ಗತೆ ಲಕ್ಷ್ಯ ಕೊಟ್ಟು ಕೇಳವರೇ ಸಿಗೋದಿಲ್ಲ ಅಂತ ಆತು. ಎಷ್ಟೋ ಸರೆ ನಮ್ಮ ಕಡೆ ಅವರ ತೊಂದ್ರಿ ತಾಪತ್ರಯ ಹೇಳಿಕೋತ್ತ ಇರ್ತಾರ. ಆವಾಗಲೇ ಅವರಿಗೇ ಅವರ ತೊಂದ್ರಿಗೆ ಉತ್ತರ ಸಿಕ್ಕುಬಿಡ್ತದ. ಇದೇ ಸಮಾಜ ಸೇವಾ ಮಾಡ್ಕೋತ್ತ ಇದ್ದೇನಿ,' ಅಂದೆ.

'ಅಲಲಲಲಾ! ಭಾರಿ ಆತಲ್ಲೋ. ಮೊದಲು ನೋಡಿದರೆ ನೀನೇ ಒಂದು ದೊಡ್ಡ ತೊಂದ್ರಿ ಮತ್ತ ತಾಪತ್ರಯ ಇದ್ದಂಗ ಇದ್ದಿ. ಈಗ ನೋಡಿದರೆ ಮಂದಿ ಪ್ರಾಬ್ಲಮ್ ಬಗೆಹರಿಸಿಬಿಡ್ತಿ ಅಂತಾತು. ಹೀಂಗರೆ ಮಾಡಿ ಒಂದಿಷ್ಟು ಪುಣ್ಯಾ ಕಟ್ಕೊ!' ಅಂದು ಬಿಟ್ಟಳು. ಅಕಟಕಟ!

'ನಿನಗೂ ಏನರೆ ಪ್ರಾಬ್ಲಮ್ ಇದ್ದರೆ ಮುದ್ದಾಂ ಬಾ ಮಾರಾಳ. ಏನೂ ಭಿಡೆ ಮಾಡಿಕೋಬ್ಯಾಡ. ಏನೇ ಇದ್ದರೂ ಬಗೆಹರಿಸಿಕೊಡೋಣ. ನಮ್ಮನಿ ಗೊತ್ತದಲ್ಲಾ ಎಲ್ಲದ ಅಂತ? ಮೊದಲೆಲ್ಲಿತ್ತೋ ಅಲ್ಲೇ ಅದ. ನಾ ಅಷ್ಟೇ ಔಟ್ ಹೌಸ್ ಒಳಗ ಇರ್ತೇನಿ. ಮನಿ ಹಿಂದೇ ಅದ. ಸೀದಾ ಅಲ್ಲಿಗೇ ಬಂದುಬಿಡು. ತಿಳೀತ???' ಅಂತ ಹೇಳಿದೆ.

'ಮನಿಯಾಗ ಇರದೇ ಔಟ್ ಹೌಸ್ ಒಳಗ ಯಾಕ ಇರ್ತೀ? ಮನಿಯಿಂದ ಹೊರಗ ಹಾಕ್ಯಾರ? ಒದ್ದು ಓಡಿಸ್ಯಾರ ಏನು???' ಅಂತ ಕೇಳಿಬಿಟ್ಟಳು.

'ಛೆ! ಛೆ! ನನಗ ಒಂಬತ್ತನೇತ್ತಾ ಇದ್ದಾಗಿಂದ ನಮ್ಮ ಮನಿ ಔಟ್ ಹೌಸ್ ಒಳಗ ಒಬ್ಬನೇ ಇದ್ದು ರೂಢಿ ಆಗಿ ಬಿಟ್ಟದ. ಒಂದು ಟೈಪ್ ಕುಟೀರದ ಹಾಂಗ ಅದ. ನನ್ನದೇ ಆದ ಪ್ರತ್ಯೇಕ ಔಟ್ ಹೌಸ್. ಅದಕ್ಕೇ ಅಲ್ಲೇ ಇರ್ತೇನಿ. ಊಟ, ತಿಂಡಿ, ಅದಕ್ಕ ಇದಕ್ಕ ಮಾತ್ರ ಮನಿ ಕಡೆ ಬರ್ತೇನಿ. ತಲಿ ಓಡಬೇಕು ಅಂದ್ರ ಏಕಾಂತ ಬೇಕು ನೋಡವಾ. ಗದ್ದಲದಾಗ ಅವೆಲ್ಲ ಆಗೋದಿಲ್ಲ,' ಅಂತ ನಮ್ಮ ಒಂಟಿ ಗೂಬೆ ಅಸ್ತಿತ್ವಕ್ಕೆ ಒಂದು ವಿವರಣೆ ಕೊಟ್ಟೆ.

ಅಷ್ಟರಾಗ ಅಕಿ ಕಾಯಿಪಲ್ಲೆ ತೊಗೊಳ್ಳೋ ಕೆಲಸ ಮುಗಿತು. ನಮಗ ಕೆಲಸ ಇರಲಿಲ್ಲ. ಇಕಿ ಕಂಡಳು ಅಂತ ನಾ ಅಲ್ಲೆ ಬ್ರೇಕ್ ಹಾಕಿದ್ದೆ. ಇಕಿ ಹೊಂಟಳು ಅಂತ ನಾನೂ ಹೊಂಟೆ. ಅಕಿ ಜೋಡಿ ಅಲ್ಲ ಮತ್ತ. ಅಕಿ ಬ್ಯಾರೆ ಕಡೆ ಹೋದಳು. ನಾ ಪ್ಯಾಟಿ ಕಡೆ ಒಂದು ರೌಂಡ್ ಹಾಕಲಿಕ್ಕೆ ಹೊಂಟೆ.

ಇದಾದ ಮ್ಯಾಲೆ ಮರ್ತು ಬಿಟ್ಟಿದ್ದೆ.

ಸ್ವಲ್ಪ ದಿವಸ ಆದ ಮ್ಯಾಲೆ ಒಂದು ದಿವಸ, 'ಮಂಗೇಶಾ! ಮಂಗೇಶಾ!' ಅಂತ ಒದರಿಕೋತ್ತ ಯಾರೋ ಮನಿ ಬಾಜೂಕಿಂದ ಬರಲಿಕತ್ತಿದ್ದರು. ನೋಡಿದರೆ ಇಕಿನೇ. ಆವತ್ತು ಕಾಯಿಪಲ್ಲೆ ಅಂಗಡ್ಯಾಗ ಸಿಕ್ಕ ಪುರಾತನ ಗೆಳತಿ. ಅಕಿ ಹಿಂದೆ ಒಂದು ಬುಶ್ ಶರ್ಟ್ ಹಾಕ್ಕೊಂಡು, ಅದನ್ನ ಮುಂದೆ ಮಾತ್ರ ಇನ್ ಶರ್ಟ್  ಮಾಡಿಕೊಂಡು, ಹಿಂದೆ ಹಾಂಗೇ ಬಿಟ್ಟುಕೊಂಡು, ಕೋಲು ಬಸವನ ಹಾಂಗೆ ತಲಿ ಕುಣಿಸುತ್ತ ಒಂದು ಗಂಡು ಆದಮೀ ಸಹ ಬರುತ್ತಿತ್ತು. ಡೌಟೇ ಬ್ಯಾಡ. ಅಕಿ ಗಂಡನೇ ಇರಬೇಕು. ಇಷ್ಟೆಲ್ಲ ಆಗೋದ್ರಾಗ ನನ್ನ ಔಟ್ ಹೌಸ್ ಮುಂದೇ ಬಂದು ಬಿಟ್ಟರು.

'ಬರ್ರಿ! ಬರ್ರಿ! ಏನು ಈಕಡೆ? ಬರ್ರಿ! ಬರ್ರಿ ಕೂಡ್ರಿ. ಔಟ್ ಹೌಸ್ ಸಣ್ಣದು ಅದ. ಭಾಳ ಸ್ವಚ್ಚ ಏನೂ ಇಲ್ಲ. ಸ್ವಲ್ಪ ಅಡ್ಜಸ್ಟ್ ಮಾಡಿಕೊಂಡು ಕೂತು ಬಿಡ್ರೀ,' ಅಂತ ಹೇಳಿದೆ.

'ಇವರು ಯಾರವಾ? ನಿಮ್ಮನಿಯವರು ಏನು?' ಅಂತ ಕೇಳಿದೆ. ಅಕಿ 'ಹೌದು' ಅಂದಳು. 'ಒಳ್ಳೇದು, ಒಳ್ಳೇದು, ಕೂಡ್ರೀ. ನಿಮ್ಮ ಪ್ಯಾಂಟ್ ಭಾಳ್ ಟೈಟ್ ಅದ ಏನ್ರೀ ಸರ್? ನೆಲಕ್ಕ ಕೂಡಲಿಕ್ಕೆ ಆಗ್ತದೋ ಇಲ್ಲೋ? ಖುರ್ಚಿ ತರಿಸಲಿ ಏನು?' ಅಂತ ಇಲ್ಲದ ಉಪಚಾರ ಮಾಡಿದೆ. ನಮ್ಮದೇನೂ ತೊಂದ್ರಿ ಇಲ್ಲ ಬಿಡ್ರೀ. ನಾವು ಲುಂಗಿ ಮಂದಿ. ನೆಲದ ಮ್ಯಾಲೆ ಆರಾಮ್ ಕೂತು ಬಿಡ್ತೇವಿ. ಅಷ್ಟೇ ಮುಂದೆ 'ಪಂಚಾಂಗ' ಮುಚ್ಚಿಕೊಂಡು ಕೂಡೋದನ್ನ ಮರಿಬಾರದು ಅಷ್ಟೇ. ಅಕಿಯಂತೂ ಸೀರಿ ಗಿರಾಕಿ. ಅಕಿನೂ ಆರಾಮ ನೆಲಕ್ಕ ಕೂಡ್ತಾಳ. ಏನರೆ ಪ್ರಾಬ್ಲಮ್ ಇದ್ದರೆ ಅಕಿ ಗಂಡಂದೇ. ಆವಾ ಪ್ಯಾಂಟ್ ಗಿರಾಕಿ. ಅವನೂ ಹ್ಯಾಂಗೋ ಮಾಡಿ ಕೆಳಗೇ ಕೂತ. ಅವನ ಪ್ಯಾಂಟೇನೂ ಪರ್ರ್! ಪರ್ರ್! ಅಂತ ಸೀಳು ಬಿಟ್ಟ ಸೌಂಡ್ ಬರಲಿಲ್ಲ ಅಂದ ಮ್ಯಾಲೆ ಓಕೆ.

'ಏನು ತೊಗೋತ್ತೀರಿ? ಚಹಾ, ಕಾಫಿ, ಬೋರ್ನ್ವಿಟಾ, ಹಾರ್ಲಿಕ್ಸ್, ಥಮ್ಸ್ ಅಪ್, ತುಮ್ಸ್ ಅಪ್, ಲಿಮ್ಕಾ, ಗಿಮ್ಕಾ???' ಅಂತ ಕೇಳಿದೆ. ಯಾವದನ್ನೂ ಕೊಡುವ ಪರಿಸ್ಥಿತಿ ಒಳಗ ಇರಲಿಲ್ಲ. ಚಹಾ, ಕಾಫಿ ಮಾಡಿಕೊಡಬಹುದಾದ ನಮ್ಮ ಅಮ್ಮ ಅವರಮ್ಮನ ತಿಥಿಗೆ ಅಂತ ಊರಿಗೆ ರೈಟ್ ಹೇಳಿಬಿಟ್ಟಿದ್ದರು. ಮತ್ತ ಇದ್ದ ಥಮ್ಸ್ ಅಪ್ ಎಲ್ಲಾ ಹಳೆ ಮಂಗ್ಯಾ ರಮ್ ಜೋಡಿ ಹಾಕಿಕೊಂಡು ಕುಡಿದಾಗಿತ್ತು. ಲಿಮ್ಕಾ ಸ್ಮಿರ್ನಾಫ್ ವೋಡ್ಕಾ ಜೊತೆ ಹರೋಹರ ಅಂದು ಬಿಟ್ಟಿತ್ತು.

'ಏನೂ ಬ್ಯಾಡ. ಎಲ್ಲಾ ಮುಗಿಸಿಕೊಂಡೇ ಬಂದೇವಿ,' ಅಂತ ಹೇಳಿದಳು. ಹಾಂಗೇ ಹೇಳಬೇಕು. ಮತ್ತ ಮತ್ತ ಕೇಳಿದರೆ ಮಾತ್ರ ಏನರೆ ಬೇಕು ಅಂತ ಹೇಳಬೇಕು. ಅದು ಪದ್ಧತಿ. ಅಲ್ಲಾ?

'ಏನು ಬಂದಿದ್ದು? ಏನು ಸೇವಾ ಮಾಡ್ಲೀ?' ಅಂತ ಕೇಳಿದೆ.

'ಒಂದು ದೊಡ್ಡ ಪ್ರಾಬ್ಲಮ್ ಆಗಿಬಿಟ್ಟದ ಮಾರಾಯಾ. ಏನರೆ ಸಲಹಾ ಕೊಡ್ತಿಯೇನೋ ಅಂತ ಆಶಾ ನೋಡಪಾ!' ಅಂದಳು ಗೆಳತಿ.

'ಏನು? ಹೇಳವಾ. ಭಿಡೆ ಬಿಟ್ಟು, ಎಲ್ಲಾ ಬಿಚ್ಚಿ ಹೇಳಿಬಿಡು,' ಅಂತ ಹೇಳಿದೆ. ಅವರಿಗೂ ಹೇಳಿಕೊಳ್ಳಲಿಕ್ಕೆ ಫ್ರೀ ಅನ್ನಿಸಬೇಕು ನೋಡ್ರೀ.

'ಹ್ಯಾಂ??? ಎಲ್ಲಾ ಬಿಚ್ಚಿ????? ಅಂದ್ರ???' ಅಂತ ಒಂದು ತರಹ ರಾಂಗ್ ಆಗಿ ಕೇಳಿದಳು.

'ಅಂದ್ರ ಎಲ್ಲಾ ಅಂದ್ರ ಫುಲ್ ಬಿಚ್ಚಿ ಅಂದ್ರ ಮನಸ್ಸು ಬಿಚ್ಚಿ ಹೇಳಿಕೊಂಡು ಬಿಡು ಅಂತ. ಮತ್ತೇನಿಲ್ಲ,' ಅಂತ ಹೇಳಿ ದೇಶಾವರಿ ನಗೆ ನಕ್ಕೆ.

'ಹಾಂಗ ಹೇಳೋ ನಮ್ಮಪ್ಪಾ. 'ಎಲ್ಲಾ ಬಿಚ್ಚಿ ಹೇಳು' ಅನ್ನೋದನ್ನ ಕೇಳಿ ಒಂದು ಸರ್ತೇಕ್ ಎದಿ ಧಸಕ್ ಅಂದಿತ್ತು,' ಅಂತ ಅವಳೇ ಹೇಳಿಕೊಂಡಳು. ಪಕ್ಕದಲ್ಲಿ ಅಕಿ ಗಂಡ ಅನ್ನೋ ಪ್ರಾಣಿ ಇದು ಯಾವದರ ಖಬರೇ ಇಲ್ಲದೇ ಮೊಬೈಲ್ ಒಳಗ ಹಾವು ಏಣಿ ಆಟ ಆಡಿಕೋತ್ತ ಕೂತಿತ್ತು. ಅಯ್ಯೋ ಇವನ ಮನಿಕಾಯಾ! ಏನು ಪರಿಸ್ಥಿತಿ ಅಂತೇನಿ? ಇಕಿ ಹೆಂಡತಿ ನೋಡಿದರೆ ಏನೋ ದೊಡ್ಡ ಪ್ರಾಬ್ಲಮ್ ಅದ ಅಂತ ಹೇಳಿಕೊಳ್ಳಲಿಕ್ಕೆ ಬಂದಾಳ. ಅಕಿ ಗಂಡನ್ನ ನೋಡಿದರೆ ಯಾವದೇ ಚಿಂತೆಯಿಲ್ಲದವನ ಹಾಂಗ ಗೇಮ್ ಆಡಿಕೋತ್ತ ಕೂತಾನ. ಸುಖ ಪುರುಷ ಅನ್ನಬೇಕೋ ಅಥವಾ ಖಬರಗೇಡಿ ಅನ್ನಬೇಕೋ ತಿಳಿಲಿಲ್ಲ.

'ನನ್ನ ಇಬ್ಬರು ಮಕ್ಕಳದ್ದೇ ದೊಡ್ಡ ಪ್ರಾಬ್ಲಮ್ ಆಗಿಬಿಟ್ಟದ ನೋಡಪಾ!' ಅಂದಳು.

'ಎಷ್ಟು ವಯಸ್ಸು ಮಕ್ಕಳಿಗೆ?' ಅಂತ ಕೇಳಿದೆ.

'ಹದಿಮೂರು, ಹದಿನಾಲ್ಕು,' ಅಂತ ಹೇಳಿದಳು.

'ಹಾಂ! ನಾ ಅಂದುಕೊಂಡೆ. thirteen, fourteen. ಟೀನ್ ಏಜ್. ಹದಿ ವಯಸ್ಸು. ಟೀನ್ ಏಜ್ ಒಳಗ ಎಲ್ಲಾ ಮಕ್ಕಳದ್ದೂ ಪ್ರಾಬ್ಲಮ್ ಇರೋದೇ ನೋಡವಾ. ಏನು ಮಾಡಲಿಕ್ಕೆ ಬರ್ತದ? ಅವು ಮೈಯಾಗಿನ ಹಾರ್ಮೋನ್ ಏನು ಇರ್ತಾವ ನೋಡು ಅವು ಸಿಕ್ಕಾಪಟ್ಟೆ ಹಾರ್ಮೋನಿಯಂ ಬಾರಿಸಲಿಕ್ಕೆ ಶುರು ಮಾಡಿಬಿಡ್ತಾವ. ಮಕ್ಕಳು ಮಂಗ್ಯಾನ ಗತೆ ಮಾಡ್ತಾವ. ನಿಮ್ಮಂತಾ ತಂದೆ ತಾಯಿ ನೀವೆಲ್ಲಾ ಆ ವಯಸ್ಸಿನ್ಯಾಗ ಏನೇನು ಬಾಲಲೀಲೆಗಳನ್ನು ಮಾಡಿದ್ದಿರಿ ಅಂತ ನೆನೆಸಿಕೋಬೇಕು. ನಿಮ್ಮ ಖಟಿಪಿಟಿ ಎಲ್ಲ ನಿಮ್ಮ ತಂದೆ ತಾಯಿ ಹ್ಯಾಂಗ ಸಹಿಸಿಕೊಂಡು ನಿಮ್ಮನ್ನೆಲ್ಲಾ ದೊಡ್ಡವರನ್ನಾಗಿ ಮಾಡಿದರು ಅಂತ ತಿಳ್ಕೊಂಡು ನಿಮ್ಮ ಮಕ್ಕಳನ್ನೂ ಹಾಂಗೇ ದೊಡ್ಡವರನ್ನಾಗಿ ಮಾಡಬೇಕು ನೋಡವಾ,' ಅಂತ ಹಾಗೇ ಜನರಲ್ ಸಮಾಧಾನ ಹೇಳಿದೆ.

'ಇಲ್ಲೋ ಮಾರಾಯ ನನ್ನ ಮಕ್ಕಳದ್ದು ಉಪದ್ರವ ಭಾಳ ಆಗ್ಯದ. ನಿನಗ ಹೇಳತೇನಿ ನೋಡು. ಪ್ರತಿ ಮಾತಿಗೆ ಉಲ್ಟಾ ಮಾತಾಡ್ತಾವ ನೋಡು. ಜಗಳ ಬರೇ ಜಗಳ. ಮನಿಯೊಳಗ ಮೂರೂ ಹೊತ್ತು ಜಗಳ. ಅಪ್ಪ ಅಂದ್ರ ಬೆಪ್ಪ. ಮತ್ತ ನಾ ಅವ್ವಾ ಅಂದ್ರ ದೆವ್ವಾ ಆಗಿಬಿಟ್ಟೇನಿ. ಸಾಕಾಗಿ ಹೋಗ್ಯದ ಮಾರಾಯ. ಬರೇ ನಮ್ಮ ಜೋಡಿ ಒಂದೇ ಜಗಳಾಡ್ತಾರ ಅಂದ್ರ ಅದೊಂದು ಮಾತು ಬ್ಯಾರೆ. ಅಡಗಿ ಮಾಡಾಕಿ ಜೋಡಿ, ಕೆಲಸಕ್ಕೆ ಬರವರ ಜೋಡಿ ಎಲ್ಲಾರ ಜೋಡಿ ಜಗಳ ನೋಡಪಾ ನನ್ನ ಮಕ್ಕಳದ್ದು. ಮನ್ನೆ ಅಂತೂ ಅಡಗಿ ಮಾಡಾಕಿ ಮಾರಿಗೇ ಪ್ಲೇಟ್ ಒಗೆದು ಬಿಟ್ಟವು ನೋಡು ನನ್ನ ಮಕ್ಕಳು. ಅದೇನೋ ಅಡಿಗಿ ರುಚಿ ಆಗಿದ್ದಿಲ್ಲಂತ. ಪಾಪ ಅಕಿ ಮಡಿ ಫಣಿಯಮ್ಮ ಅತ್ತಗೋತ್ತ, ಕಣ್ಣೀರು ಹಾಕಿಕೋತ್ತ ಹೋತು ನೋಡಪಾ. ಅದೂ ಶುಕ್ರವಾರ. ಏನರೆ ಮುತ್ತೈದೆ ಕಣ್ಣಾಗ ಶುಕ್ರವಾರ ಹಾಂಗ ಕಣ್ಣೀರು ಹಾಕಿ ಕಳಿಸಿದ್ದರೆ ಎಂತಾ ದೊಡ್ಡ ಪಾಪ ಆಗ್ತಿತ್ತು ಅಂತ ನೆನಿಸ್ಕೊಂಡ್ರ ಎದಿ ಢವ್ ಅಂತದ. ಪುಣ್ಯಕ್ಕೆ ಅಕಿ ಮಡಿಯಾಕಿ. ಕೆಂಪ ಸೀರಿ ಕೇಸ್. ಅಕಿ ನಮ್ಮ ನೌಕರಿನೇ ಬಿಟ್ಟು ಹೋದಳು ನೋಡಪಾ. ಈಗ ನಾನೇ ಎಲ್ಲ ಕೆಲಸ ಮಾಡಬೇಕು. ನನ್ನ ಎರಡು ಕ್ವಾಣ ಮಕ್ಕಳು ಒಂದು ಕಡ್ಡಿ ಕೆಲಸ ಅಂತೂ ಮಾಡೋದಿಲ್ಲ. ಮ್ಯಾಲಿಂದ ಜಗಳ, ಬೈಗಳ. ಸಾಕಾಗಿ ಹೋಗ್ಯದ ನೋಡಪಾ. ಏನರೆ ಸಲಹಾ ಕೊಡ್ತಿಯೇನೋ ಅಂತ ಬಂದೇವಿ ನೋಡಪಾ!' ಅಂದು ಅಂಬೋ ಎಂದಳು ಗೆಳತಿ.

'ನೀವೇನಂತೀರಿ ಸರ್? ನಿಮ್ಮ ಮನಿಯವರು ಇಷ್ಟೆಲ್ಲಾ ಹೇಳ್ತಾರ. ಮಕ್ಕಳದ್ದು ಇಷ್ಟೆಲ್ಲಾ ಪ್ರಾಬ್ಲಮ್ ಅದನ? ಹಾಂ?' ಅಂತ ಮೊಬೈಲ್ ಮ್ಯಾಲೆ ಹಾವು ಏಣಿ ಗೇಮ್ ಆಡಿಕೋತ್ತ ಕೂತಿದ್ದ ಅಕಿ ಗಂಡನ್ನ ಕೇಳಿದೆ.

ಗೇಮ್ ನಿಂದ ತಲಿ ಎತ್ತಿ, 'ಹ್ಯಾಂ??????' ಅನ್ನೋ ಹಾಂಗ ನೋಡಿದ. ಈ ಕಡೆ ಖಬರೇ ಇಲ್ಲ ಅವಂಗ. ಒಂದು ಅನಾಹುತ ಪ್ರಶ್ನೆ ಕೇಳಿಬಿಟ್ಟ.

'ಅದೇನೋ ಹಾರ್ಮೋನಿಯಂ ಅಂದ್ರಲ್ಲಾ? ನಮ್ಮ ಮಕ್ಕಳನ್ನು ಹಾರ್ಮೋನಿಯಂ ಕ್ಲಾಸಿಗೆ ಹಾಕೋಣ ಅಂತೀರೇನು? ಯಾರ ಕಡೆ? ಗೋಪಾಳಪುರದ ಪಂಡಿತ್ ವಸಂತ್ ಕನಕಾಪುರ ಅವರ ಕಡೆ ಕ್ಲಾಸಿಗೆ ಹಚ್ಚಿ ಬರ್ಲಾ?' ಅಂತ ಕೇಳಿಬಿಟ್ಟ. ಅವಂದೂ ಇರಲಿ ಅಂತ ಇಟ್ಟು ಬಿಟ್ಟ. ಇಡ್ಲಿ ಗಿರಾಕಿ. ಸೂಡ್ಲಿ ತಂದು.

ನಾನು 'ಹದಿವಯಸ್ಸಿನ್ಯಾಗ ಹಾರ್ಮೋನುಗಳು ಹಾರ್ಮೋನಿಯಂ ಬಾರಸ್ತಾವ' ಅನ್ನೋದನ್ನ ಹ್ಯಾಂಗೆಂಗೋ ಕೇಳಿ, ಏನೇನೋ ಅರ್ಥ ಮಾಡಿಕೊಂಡು, ಅನಾಹುತ ಪ್ರಶ್ನೆ ಕೇಳಿಬಿಟ್ಟಿದ್ದ ಅಕಿ ಗಂಡ. ಎಂತೆಂತಾ ಮಂದಿ ಇರ್ತಾರಪಾ ಈ ಜಗತ್ತಿನಲ್ಲಿ! ಇಂತಾ ಖಬರಗೇಡಿ ಮಂದಿ ಸಹಿತ ಸಂಸಾರ ಮಾಡ್ತಾರಂತ. ಶಿವನೇ ಶಂಭುಲಿಂಗ.

'ಏ ಇಕಿನ. ಒಂದು ಕೆಲಸಾ ಮಾಡು,' ಅಂದೆ.

'ಏನು???' ಅಂತ ಕೇಳಿದಳು.

'ಸ್ವಲ್ಪ ಕುಂಡ್ಲಿ ತೋರಿಸು. ತಂದಿರಬೇಕಲ್ಲಾ????' ಅಂತ ಕೇಳಿ ನನ್ನ ಪಂಚಾಂಗ ಹುಡಕಲಿಕ್ಕೆ ಶುರು ಮಾಡಿದೆ. ಪಂಚಾಂಗ ಸಿಗವಲ್ಲತು. ಪಂಚಾಂಗ ಎಲ್ಲೋ ಪಂಚೆಯಲ್ಲಿ ಕಳೆದು ಹೋಗಿರ್ತದ. ಅಥವಾ ಪಂಚಾಂಗದ ಮ್ಯಾಲೇ ನಾ ಕೂತು ಬಿಟ್ಟೇನೋ ಏನೋ????

'ಏನಂದೀ?!! ಏನು ತೋರಿಸಲೀ???' ಅಂತ ಹೂಂಕರಿಸಿದಳು.

ನಾನು ನನ್ನ ಪಂಚಾಂಗ ಹುಡುಕುದ್ರಾಗ ಬ್ಯುಸಿ ಇದ್ದೆ. ಇಕಿ ಕಡೆ ಗಮನ ಕೊಡದೇ, ಮತ್ತ ಮತ್ತ, 'ಕುಂಡ್ಲಿ, ಕುಂಡ್ಲಿ. ಲಗೂ ಲಗೂ ಕುಂಡ್ಲಿ ತೆಗೆದು ತೋರಿಸು,' ಅಂದು ಪಂಚಾಂಗ ಹುಡುಕೋದನ್ನ ಮುಂದುವರೆಸಿದೆ.

'ಏ!!!! ಏನು ಮಾತಾಡ್ತೀಯೋ ಹುಚ್ಚಾ! ಏ!!!' ಅಂತ ಅನ್ಕೋತ್ತ ಮೈ ಮ್ಯಾಲೇ ಏರಿ ಬಂದು ಬಿಟ್ಟಳು. ಇಕಿ ಏರಿ ಬಂದ ಅಬ್ಬರಕ್ಕೆ, ತುದಿಗಾಲ ಮ್ಯಾಲೆ ಕೂತು, ನನ್ನ ಪಂಚಾಂಗ ಹುಡುಕುತ್ತಿದ್ದ ನಾನು ಮುಂದ ಮುಕ್ಕರಿಸಿ ಬಿದ್ದುಬಿಟ್ಟೆ. ಶಿವಾಯ ನಮಃ ಅನ್ನೋ ಹಾಂಗ ಅಕಿ ಮಡಿಲಾಗ ಹೋಗಿ ನನ್ನ ತಲಿ ಕೂತು ಬಿಡ್ತು. ಅದು ಅಕಿ ಮತ್ತ ನಾನು ಎದರಾ ಬದರಾ ನೆಲದ ಮ್ಯಾಲೆ ಕೂತು ಮಾತಾಡ್ಲಿಕತ್ತಿದ್ದಿವಿ ನೋಡ್ರೀ. ಅದೂ ಪಂಚಾಂಗ ಹುಡಕಲಿಕ್ಕೆ ಬಗ್ಗಿದ್ದೆ ನೋಡ್ರೀ. ಇಕಿ ಒಮ್ಮಲೆ 'ಏ!' ಅಂತ ಚೀರ್ಕೊತ್ತ ಬರೋ ತನಕಾ ಘಾಬರಿ ಆಗಿ, ಮುಂದೆ ಮುಕ್ಕರಿಸಿ ಬಿದ್ದು, 'ಅಮ್ಮಾ ನಿನ್ನ ಮಡಿಲಿನಲ್ಲಿ ಕಂದ ನಾನು' ಆಗಿ ಹೋತು. ಅಕಿ ಸೀರಿಯಿಂದ ಒಗ್ಗರಣಿ ವಾಸನಿ ಘಂ ಅಂತ ಮೂಗಿಗೆ ಬಡೀತು. ಡೌಟೇ ಇಲ್ಲ! ಬರೋಕಿಂತ ಮೊದಲು ಸಾರಿಗೆ ಖಮ್ ಅಂತ ಒಗ್ಗರಣಿ ಹಾಕೇ ಬಂದಾಳ. ಬರೆ ಛಂದ ಸೀರಿ ಉಟಗೊಂಡು ಬಂದುಬಿಟ್ಟರೆ ಆತೇನು? ಏನು ಮಾಡಲಿಕ್ಕೆ ಬರ್ತದ? ಅವು ನಮ್ಮ ದೇಸಿ ಮಸಾಲಿ ವಾಸನಿ ಬಟ್ಟೆಗೆ ಹಿಡಕೊಂಡು ಬಿಡ್ತಾವ ನೋಡ್ರೀ. ಏನೂ ಮಾಡಲಿಕ್ಕೆ ಬರೋದಿಲ್ಲ. ನಮಗಂತೂ ಅಷ್ಟು ಖಮ್ ಅನ್ನುವ ಸಾರು, ಜೋಡಿ ಬಿಸಿ ಅನ್ನ, ಹಪ್ಪಳ, ಸಂಡಿಗಿ ಉಣ್ಣೋ ನಸೀಬ್ ಅಂತೂ ಇಲ್ಲ. ಹ್ಯಾಂಗೂ ಇಕಿ ಮ್ಯಾಲೆ ಬಿದ್ದಾಗ್ಯದ. ಖಮ್ ಅನ್ನೋ ಸಾರಿನ ವಾಸನಿಯಾದರೂ ಮಸ್ತ ಕುಡಕೊಂಡು ಬರೋಣ ಅಂತ ಹೇಳಿ, ಅಕಿ ಮ್ಯಾಲೆ ಬಿದ್ದವ ಹಾಗೇ ಒಂದೆರೆಡು ಕ್ಷಣ ಜಾಸ್ತಿಯೇ ಅಕಿ ಮಡಿಲಾಗ ತಲಿ ಇಟ್ಟು, ಆಮ್ಯಾಲೆ ಎತ್ತಿ, ಅಂದ್ರ ನನ್ನ ತಲಿ ಮಾತ್ರ ಎತ್ತಿ ಅಂತ, ಈಕಡೆ ತಂದು ಸುಧಾರಿಸಿಕೊಂಡೆ ನೋಡ್ರೀ.

ಬಾಜೂಕೇ ಅಕಿ ಗಂಡ ಪ್ರಾಣಿ ಕೂತದ. ಅದಕಂತೂ ಖಬರೇ ಇಲ್ಲ. ಅದು ತನ್ನ ಹಾವು ಏಣಿ ಆಟದಾಗ ಫುಲ್ ಮಗ್ನ. ಇಲ್ಲಿ ಹೆಂಡತಿ ಮಡಿಲಾಗ ಯಾರದ್ದೋ ತಲಿ ಬಂದು ಸ್ಥಾಪನಾ ಆದ ಖಬರೂ ಇಲ್ಲ. ನಾನೇ ಗಡಿಬಿಡಿಯಾಗ ಸುಧಾರಿಸಿಕೊಂಡು, ಎದ್ದು, ಬರೋಬ್ಬರಿ ಕೂತೆ.

'ಏ! ಏನಾತ? ಆ ಪರಿ ಒದರೀದಿ? ನಾ ಏನಂದೆ? ಕುಂಡ್ಲಿ, ಜನ್ಮ ಕುಂಡ್ಲಿ, ಜಾತಕ, ಹೊರೋಸ್ಕೊಪ್, ಅದನ್ನ ತೋರಿಸು ಅಂದೆ. ಅದಕ ಹಾಂಗ್ಯಾಕ ಚೀರಿಕೋತ್ತ, ಕೈಯೆತ್ತಿ, ಹೊಡಿಲಿಕ್ಕೆ ಬಂದಿ??? ಹಾಂ?' ಅಂತ ಕೇಳಿದೆ.

'ಕುಂಡಲಿ ಅಂದ್ಯಾ? ನನಗ ಏನೋ ಅಂದಂಗ ಕೇಳಿತು,' ಅಂತ ರಾಗಾ ಎಳದಾಕಿನೇ, 'ಸ್ವಲ್ಪ ಸರೀತ್ನಾಗಿ ಮಾತಾಡು. ಮೊದಲಿಂದ ಆ ಹುಚ್ಚ ಸುನೀಲ್ ಶೆಟ್ಟಿ ಗತೆ ಹಕಲಾ ಮಾತಾಡ್ತಿ. ಮ್ಯಾಲಿಂದ ಸದಾ ಎಲಿ ಅಡಕಿ, ಗುಟ್ಕಾ ಅದು ಇದು ತಿಂದು ತಿಂದು, ನಾಲಿಗಿ ದಪ್ಪಾಗಿ ಒಟ್ಟ ಹೊಳ್ಳವಲ್ತು. ಕುಂಡ್ಲಿ ಅನ್ನೋವಾಗ ಆ 'ಲ' ವತ್ತನ್ನ ಬರೋಬ್ಬರಿ ಹೇಳು. ಇಲ್ಲ ಅಂದ್ರ ಕೆಟ್ಟ ಅರ್ಥ ಬರ್ತದ. ಹುಚ್ಚನ್ನ ತಂದು,' ಅಂತ ಬೈದಳು.

'ಓಹೋ! ಇದು ನಾ ಕುಂಡ್ಲಿ ಅಂದಾಗ ಅಕಿಗೆ 'ಕುಂ' ನಂತರ ಬರುವ 'ಡಿ' ನಂತರದ 'ಲ'ಕಾರ ಕೇಳೇ ಇಲ್ಲ ಅಂತ ಕಾಣಿಸ್ತದ. ಅದಕ್ಕೇ ಅಪಾರ್ಥ ಮಾಡಿಕೊಂಡು ಚೀರ್ಲಿಕತ್ತಿದ್ದಳು. ಹುಚ್ಚಿ!'  ಅಂತ ಅರ್ಥ ಮಾಡಿಕೊಂಡೆ. ವಿವರಿಸಿ ಹೇಳೋಣ ಅಂತ ಮಾಡಿದೆ. ನೋಡಿದರೆ ಅಕಿದು 'ತುಲಾ' ರಾಶಿ. 'ಏ! ಹುಚ್ಚಿ! ನಿಂದು ತುಲಾ ರಾಶಿ. ಅದಕ್ಕೇ ನೋಡು ನೀ ಸರಿಯಾಗಿ ಕೇಳಿಸಿಕೊಳ್ಳದೇ ಬೈಲಿಕ್ಕೆ ಬರ್ತಿ,' ಅಂತ. 'ನಾ ತುಲಾ ರಾಶಿ ಅನ್ನೋದು, ಅಕಿಗೆ ಆ ತುಲಾಕ್ಕ ಒಂದು 'ಲ' ವತ್ತು ಜಾಸ್ತಿನೇ ಕೊಟ್ಟಂಗ ಅನ್ನಿಸಿ, ಏನೋ ಬೇರೆನೇ ಕೇಳಿಸಿ, ಮತ್ತೇನೋ ಅಪಾರ್ಥ ಆಗೋದು, ಯಾವದೂ ಬ್ಯಾಡೇ ಬ್ಯಾಡ,' ಅಂತ ಹೇಳಿ ಸುಮ್ಮನಾದೆ.

'ಕುಂಡ್ಲಿನೇ? ಯಾರುವು? ನನ್ನ ಮಕ್ಕಳದ್ದೇ? ಅದ್ಯಾಕ ಬೇಕು?' ಅಂತ ಕೇಳಿದಳು.

'ಮತ್ತ? ಕುಂಡಲಿ ತಂದಿಲ್ಲ ಅಂದ್ರ ನಿಮ್ಮ ರೇಶನ್ ಕಾರ್ಡ್ ತಂದಿಯೇನು? ಅಥವಾ ತೊರಗಲ್ಲಮಠನ ಅಂಗಡಿಯ ಕಿರಾಣಿ ಪಟ್ಟಿ ತಂದಿಯೋ? ಏನು ಮಬ್ಬರಾಂಗ ಕೇಳ್ತಿ?' ಅಂತ ಝಾಡಿಸಿದೆ.

'ಅದೇನು ನಿನ್ನ ಮುಂದ ಇರೋದು? ಅಷ್ಟ ದೊಡ್ಡ ಪೆಟ್ಟಿಗೆ. ಒಳ್ಳೆ ಬಾಳು ಹಜಾಮನ ಹಡಪದ ಪೆಟ್ಟಿಗೆ ಸೈಜಿನದು ಅದ. ಏನದು?' ಅಂತ ನನಗೇ ಜೋರು ಮಾಡಿಬಿಟ್ಟಳು.

'ಏ ಇದ? ಇದು ನನ್ನ ಲ್ಯಾಪ್ ಟಾಪ್ ಕಂಪ್ಯೂಟರ್. ಯಾಕ?' ಅಂತ ಕೇಳಿದೆ.

'ಲ್ಯಾಪ್ ಟಾಪ್ ಕಂಪ್ಯೂಟರ್ ಅಂತ ಹೇಳಿದಿ ನೋಡು ಭಾಳ ಚೊಲೋ ಆತು. ಎಲ್ಲೆ ಮೊದಲು ನೀ ಬ್ರಾಹ್ಮಂಡರವ ಆಗಿ ಈಗ ಹಜಾಮತಿ ಕೆಲಸ ಶುರು ಮಾಡಿಯೇನೋ ಅಂತ ಮಾಡಿದ್ದೆ ನಿನ್ನ ಮುಂದಿರೋ ಹಡಪದ ಪೆಟ್ಟಿಗೆ ಸೈಜಿನ ಸಾಮಾನು ನೋಡಿ. ಆ ಲ್ಯಾಪ್ ಟಾಪ್ ಕಂಪ್ಯೂಟರ್ ಇದ್ದು ಏನು ಉಪಯೋಗ? ತೆಗೆದು ಒಲಿಗೆ ಹಾಕಿ, ಉರಿ ಹಚ್ಚಿ, ನೀರು ಕಾಯಿಸಿಕೊಂಡು ಸ್ನಾನಾ ಮಾಡಲಿಕ್ಕೆ? ಹಾಂ?' ಅಂತ ನನಗೇ ಜಬರಿಸಿದಳು. ಜೋರ ಅದ ಈ ಆಂಟಿ ಫೋರ್ಸ್!

'ಏ! ಯಾಕ? ಏನಾತು? ನನಗ, ನನ್ನ ಲ್ಯಾಪ್ ಟಾಪಿಗೆ ಯಾಕ ಬೈತೀ?' ಅಂತ ಕೇಳಿದೆ.

'ಮತ್ತೇನು? ಲ್ಯಾಪ್ ಟಾಪ್ ಒಳಗ ಕುಂಡಲಿ ಹಾಕಿ, ನೋಡಿ, ನಮ್ಮ ತೊಂದ್ರಿಗೆ ಪರಿಹಾರ ಹೇಳಲಿಕ್ಕೆ ಬರೋದಿಲ್ಲ? ಏನು ತಲಿ ಇಟ್ಟೀಪಾ? ಎಲ್ಲಾ ವೇಸ್ಟ್!' ಅಂದಳು ಅಕಿ.

ಕರೆಕ್ಟ್ ಹೇಳಿದಳು. ಲ್ಯಾಪ್ ಟಾಪ್ ಒಳಗ ಇಕಿ ಮಕ್ಕಳ ಡಾಟಾ ಫೀಡ್ ಮಾಡಿ, ಕುಂಡಲಿ ತೆಗೆದು, ನೋಡಿ, ಪರಿಹಾರ ಹೇಳಿಬಿಡೋಣ. ಅದೇ ಕರೆಕ್ಟ್ ಅನ್ನಿಸ್ತು.

'ಖರೆ ನೋಡು! ನನಗ ಅದು ಹೊಳಿಲೇ ಇಲ್ಲ. ಹಾಂಗೇ ಮಾಡೋಣ,' ಅಂದೆ.

'ಎಲ್ಲಿ ಹೊಳಿಬೇಕು? ಲ್ಯಾಪ್ ಟಾಪ್ ಮ್ಯಾಲೆ ಬರೇ ಯಾರ್ಯಾರದ್ದೋ ಮಂದಿ ಜೋಡಿ ಹೊಲಸ್ ಹೊಲಸ್ ಚಾಟಿಂಗ್ ಒಂದು ಮಾಡಲಿಕ್ಕೆ ಬರ್ತದ ಮಂಗ್ಯಾಗ. ಅದು ಬಿಟ್ಟು ಏನರೆ ಒಳ್ಳೆ ಕೆಲಸಕ್ಕೂ ಅದನ್ನ ಉಪಯೋಗಿಸೋಣ ಅನ್ನೋ ತಲಿ ಎಲ್ಲಿಂದ ಬರಬೇಕು?' ಅಂತ ಅಕಿ ಸಣ್ಣ ದನಿಯಲ್ಲಿ ಗೊಣಗಿದಳು. ನನಗ ಕೇಳಿಸ್ತು. ಮತ್ತ ಯಾವಾಗಾದ್ರೂ ಇಡೋಣ ಇಕಿಗೆ ರಿವರ್ಸ್ ಫಿಟ್ಟಿಂಗ್ ಅಂತ ಅಂದುಕೊಂಡೆ.ಅಷ್ಟಕ್ಕೇ ಬಿಟ್ಟೆ.

'ಹೂಂ! ನಿನ್ನ ಮಕ್ಕಳ ಜನ್ಮ ದಿನಾಂಕ, ಹುಟ್ಟಿದ ಟೈಮ್ ಹೇಳಿಬಿಡು, ಸಾಕು,' ಅಂದೆ.

ಅಕಿ ಹೇಳಿದಳು. ಜನ್ಮ ಸ್ಥಳ ಅಂತೂ ಗೊತ್ತೇ ಅದ. ಧಾರವಾಡ. ತವರು ಮನಿ, ಗಂಡನ ಮನಿ ಎರಡೂ ಒಂದೇ ಊರಲ್ಲಿ ಇರುವ 'ಪುಣ್ಯ' ಮಾಡಿರುವವರಲ್ಲಿ ಈಕೆ ಕೂಡ ಒಬ್ಬಳು.

ಅಕಿ ಕೊಟ್ಟ ಅಕಿ ಮಕ್ಕಳ ಡಾಟಾ ಕಂಪ್ಯೂಟರ್ ಒಳಗ ಫೀಡ್ ಮಾಡಿದೆ. ಚಕ್ ಅಂತ ಕುಂಡಲಿ ತಯಾರಾಗಿ ಬಂದವು. 'ವಾಹ್! ಕುಂಡಲಿ ತಯಾರಾಗೇ ಬಿಟ್ಟವು. ಈ ಸಾಫ್ಟ್ವೇರ್ ಮಂದಿ ಏನೇನು ಸಾಧಿಸಿಬಿಟ್ಟಾರ ನೋಡು. ಇದಿಲ್ಲ ಅಂದ್ರ ಕೈಯಾಗ ಕುಂಡಲಿ ಹಾಕಬೇಕು ಅಂದ್ರ ಕಮ್ಮಿ ಕಮ್ಮಿ ಅಂದ್ರೂ ಒಂದು ಅರ್ಧಾ ತಾಸಾದರೂ ಬೇಕಾಗ್ತಿತ್ತು' ಅಂತ ಹೇಳಿದೆ.

'ಏ! ಅದೆಂಗ ಕುಂಡಲಿ ಹಾಕಿದಿ? ಮಕ್ಕಳ ಹೆಸರು ಬ್ಯಾಡಾ?' ಅಂತ ಕೇಳಿದಳು ಅಕಿ.

'What's in a name!' ಅಂತ ಶೇಕಪ್ಪ ಅಯ್ಯರ್ ಅಂದ್ರ ಶೇಕ್ಸಪಿಯರನ ವಾಕ್ಯ ಹೇಳಿ, 'ಹೆಸರು ತೊಗೊಂಡು ಹೆಸರು ಬ್ಯಾಳಿ ಪಾಯಸ ಮಾಡಿಕೊಂಡು ಕುಡಿ. ಏನೂ ಬೇಕಾಗಿಲ್ಲ. ನಿನ್ನ ಮಕ್ಕಳಿಗೆ x ಮತ್ತು y ಅಂತ ಹೆಸರು ಕೊಟ್ಟೇನಿ. ಅದು ಓಕೆ. ಎಂತೆಂತಾ ದೊಡ್ಡ ದೊಡ್ಡ ಸಮೀಕರಣಗಳನ್ನೇ x, y ಅಂತ ಹೇಳಿ, ಬಿಡಿಸಿ, solve ಮಾಡಿ ಒಗೆದು, ಡಿಗ್ರಿ ಮ್ಯಾಲೆ ಡಿಗ್ರಿ ತೊಗೊಂಡು ಬಂದೇನಿ. ಇನ್ನು ಕುಂಡಲಿ ಒಳಗ ಹೆಸರು ಇದ್ದರೇನು ಬಿಟ್ಟರೇನು? ಎಲ್ಲಾ ಓಕೆ,'  ಅಂತ ದೊಡ್ಡದಾಗಿ ಮೀಟರ್ ಹೊಡೆದೆ.

'ಏನರೆ ಮಾಡ್ಕೋ! ಒಟ್ಟ ನನ್ನ ಮಕ್ಕಳ ಸಮಸ್ಯಾಕ್ಕ ಒಂದು ಸಮಾಧಾನ ಹೇಳು. ಲಗೂ ಹೇಳೋ!' ಅಂತ ಅಕಿ ಗಡಿಬಿಡಿ ಮಾಡಿದಳು.

'ಸ್ವಲ್ಪ ತಡಿ ಮಾರಾಳ. ಕಂಪ್ಯೂಟರನಾಗಿಂದ ಕುಂಡಲಿ ಭರ್ ಅಂತ ಬಂತು ಅಂತ prediction ಹೇಳಲಿಕ್ಕೆ ಸ್ವಲ್ಪ ಟೈಮ್ ಬೇಕು,' ಅಂತ ಹೇಳಿ ಡೀಟೇಲ್ ಆಗಿ ಅಕಿ ಎರಡೂ ಮಕ್ಕಳ ಕುಂಡಲಿ ನೋಡಿದೆ. ಎರಡರಲ್ಲೂ ಗುರು ಬಲ ಭಾಳ ಮಸ್ತ ಇತ್ತು. ಮತ್ತ ವಯಸ್ಸೂ ಸರಿ ಇತ್ತು.

'ಏ ಇಕಿನ ಒಂದು ಕೆಲಸಾ ಮಾಡು,' ಅಂದೆ.

'ಏನು ಅಂತ ಹೇಳೋ ಮಾರಾಯಾ. ಈ ಮಕ್ಕಳ ಪೀಡಾ ಕಳೆದು ಹೋಗ್ತದ ಅಂದ್ರ ಒಂದಲ್ಲ ಹತ್ತು ಕೆಲಸಾ ಬೇಕಾದರೂ ಮಾಡ್ತೇನಿ. ಹೇಳು. ಲಗೂ ಹೇಳು,' ಅಂತ ಅಕಿ ಬೊಂಬಡಾ ಬಾರಿಸಿದಳು. ಪಾಪ! ಮಕ್ಕಳ ಕಾರಣದಿಂದ ಬಹಳ ತ್ರಾಸಿನಾಗ ಇದ್ದಾಳ ನಮ್ಮ ಪುರಾತನ ಗೆಳತಿ.

ನಾನೂ ಮತ್ತ ನನ್ನ ಡೀಪ್ ಥಿಂಕಿಂಗ್ ಮೋಡಿಗೆ ಹೋದೆ. ನೋಡ್ರೀ ಜ್ಯೋತಿಷ್ಯ ಅನ್ನೋದು ಒಂದು ವೇದಾಂಗ. ವೇದಗಳನ್ನು, ಅದರಲ್ಲಿರುವ ಮಂತ್ರಗಳನ್ನು ಪಠಿಸುವಾಗ ಇರುವ ಶ್ರದ್ಧೆ ಭವಿಷ್ಯ ನುಡಿಬೇಕಾದ್ರ ಸಹ ಇರಬೇಕು. ಗಡಿಬಿಡಿಯೊಳಗ ಏನೋ ಹೇಳಿದ್ರ ಜ್ಯೋತಿಷ್ಯದ ಮೂಲ ಪುರುಷ ಪರಾಶರ ಮೆಚ್ಚೋದಿಲ್ಲ. ಯಾವ ಪರಾಶರ? ಅಂತ ಕೇಳಿದ್ರ, ಬಾಲಿವುಡ್ಡಿನ ದೀಪಕ ಪರಾಶರನೂ ಅಲ್ಲ, ದೊಡ್ಡ ವಕೀಲ ಪರಾಶರನ್ ಕೂಡ ಅಲ್ಲ ಅಂತ ತಿಳಿದುಕೊಳ್ಳಿ. ಎಂತೆಂತಹ ಮಂದಿ ಗಂಟು ಬೀಳ್ತಾರಾಪಾ!?

'ನೋಡು ಒಂದು ಕೆಲಸಾ ಮಾಡು,' ಅಂತ ಮತ್ತೆ ಅಂದೆ. ಮಾತು ನಿಲ್ಲಿಸಿದೆ. ಅಕಿ 'ಲಗೂ ಹೇಳಿ ಸಾಯಿ' ಅನ್ನೋ ಲುಕ್ ಕೊಟ್ಟಳು. ನಾ ಏನೋ ಹೇಳಲಿಕ್ಕೆ ರೆಡಿ ಆಗಿದ್ದೆ. ಆದ್ರ ಕೇವಲ ಅಕಿ ಒಬ್ಬಾಕಿನೇ ಕೇಳಿದರೆ ಏನು ಉಪಯೋಗ? ಅಕಿ ಗಂಡನೂ ಕೇಳಬೇಕು. ಅವರು ಇಬ್ಬರೂ ಕೂಡೇ ನಾವು ಕೊಡುವ ಜ್ಯೋತಿಷ್ಯ ಆಧಾರಿತ ಸಮಾಧಾನವನ್ನು ಜಾರಿಗೆ ತಂದು, ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬೇಕು.

'ಸರ್ರಾ! ಒಂದು ನಿಮಿಷ. ಸ್ವಲ್ಪ ಈ ಕಡೆ ಲಕ್ಷ್ಯ ಕೊಡ್ತೀರಿ ಏನು?' ಅಂತ ಅಕಿ ಗಂಡಗ ಪ್ರಾಂಪ್ಟ್ ಮಾಡಿದೆ. ಆ ಹಾಪ್ ಸೂಳೆಮಗ ಇನ್ನೂ ಅವನ ಹಾವು-ಏಣಿ ಆಟ ಮುಗಿಸವಲ್ಲ. ಇಕಿ ನಮ್ಮ ಗೆಳತಿ ಅಕಿ ಮೊಣಕೈ ತೊಗೊಂಡು ಹೋಗಿ ಅವನ ಪಕ್ಕೆಲಿಬಿನ್ಯಾಗ ಹೆಟ್ಟಿದಳು ನೋಡ್ರೀ. 'ಅವ್ವಾ! ಏನ ನೀನು????' ಅಂತ ನೋವಿನಾಗ ಅನಕೋತ್ತ ಈ ಕಡೆ ಲಕ್ಷ್ಯ ಕೊಟ್ಟ ಅಕಿ ಗಂಡ. ಗಮನ ಕೊಡದ ಗಂಡಂದಿರ ಗಮನ ಹ್ಯಾಂಗೆ ಬರೋಬ್ಬರಿ ಸೆಳೆಯಬೇಕು ಅಂತ ಹೆಂಗಸೂರಿಗೆ ಗೊತ್ತಿರ್ತದ.

'ನೋಡವಾ, ನೋಡ್ರೀ ಸರ್! ಒಂದು ಕೆಲಸಾ ಮಾಡಿ ಬಿಡ್ರೀ! ನಾ ನಿಮ್ಮ ಇಬ್ಬರೂ ಮಕ್ಕಳ ಕುಂಡಲಿ ಡೀಟೇಲ್ ಆಗಿ ನೋಡಿದೆ. ನೋಡಿಯೇ ಇದನ್ನ ಹೇಳಲಿಕತ್ತೇನಿ. ಒಂದು ಕೆಲಸಾ ಮಾಡೇ ಬಿಡ್ರೀ. ಮಾಡ್ತೀರಿ?' ಅಂತ ಮಾತು ನಿಲ್ಲಿಸಿದೆ.

'ಏ! ಬರೇ ಇದ ಆತು. ಲಗೂ ಹೇಳು. ಇಲ್ಲಂದ್ರ ಮತ್ತ ನಮ್ಮನಿಯವರು ಅವರ ಮೊಬೈಲ್ ನ್ಯಾಗ ಹಾವು ಏಣಿ ಆಟ ಶುರು ಮಾಡಿದರು ಅಂದ್ರ ಕಷ್ಟ. ಲಗೂ ಹೇಳೋ. ಏನು ಮಾಡಬೇಕು? ಅಂತ' ಅಂದಳು ಅವಳು.

'ಇಬ್ಬರೂ ಮಕ್ಕಳಿಗೆ ಮುಂಜವಿ (ಉಪನಯನ) ಮಾಡಿ ಬಿಡ್ರೀ! ಎಲ್ಲಾ ಸರಿಯಾಗಿಬಿಡ್ತದ. ಸಂಶಯನೇ ಬ್ಯಾಡ. ಮುಂಜವಿ ಮಾಡಿ ಒಂದು ವರ್ಷದ ನಂತರ ನನಗ ಬಂದು ಹೇಳ್ರೀ. ನಿಮ್ಮ ಸಮಸ್ಯಾ ಪರಿಹಾರ ಆಗ್ಯದೋ ಇಲ್ಲೋ ಅಂತ' ಹಾಗಂತ ಫುಲ್ ವಿಶ್ವಾಸದಿಂದ ಹೇಳಿದೆ. ಅದರಾಗ ಏನದ? ಕುಂಡಲಿ ಒಳಗ ಬರೋಬ್ಬರಿ ಕಾಣಸ್ಲಿಕತ್ತದ. ಗುರು ಬಲ ಅದ. ವಯಸ್ಸೂ ಸರಿ ಅದ. ಮತ್ತೇನು? ಶಾಸ್ತ್ರೋಕ್ತವಾಗಿ ಮುಂಜವಿ ಮಾಡಿ, ಬ್ರಹ್ಮೋಪದೇಶ ಕೊಟ್ಟು, ಮಕ್ಕಳಿಗೆ ದಿನಕ್ಕೆ ಎರಡು ಹೊತ್ತು ಸಂಧ್ಯಾವಂದನೆ ಮಾಡಲಿಕ್ಕೆ ಕೂಡಿಸಿಬಿಟ್ಟರೆ ಎಲ್ಲಾ ಸಮಸ್ಯೆ ಪರಿಹಾರ ಆಗೇಬಿಡ್ತಾವ.

'ಹಾಂ!!!! ಏನಂದೀ????? ಏನಂದೀ?????' ಅಂತ ದೆವ್ವ ನೋಡಿಬಿಟ್ಟಳೋ, ಅಥವಾ ನಾ ಎಲ್ಲರೆ ಇಕಿಗೆ 'ಮಾಟ ಮಾಡಿಸಿರಿ, ಮಂತ್ರ ಮಾಡಿಸಿರಿ, ಪ್ರಾಣಿಬಲಿ ಕೊಡ್ರೀ, ನರಬಲಿ ಕೊಡ್ರೀ' ಅಂತ ಹೇಳಿದೆನೋ ಅನ್ನೋಹಾಂಗ ಸಿಕ್ಕಾಪಟ್ಟೆ ಆಶ್ಚರ್ಯ, ಘಾತ ಆದವರಂಗ ಒದರಿಬಿಟ್ಟಳು. ಅಕಿ ಗಂಡ ಮಾತ್ರ ಏನೋ ಒಂದು ತರಹದಾಗ ತಲಿ ಆಕಡೆ ಈಕಡೆ ಆಡಿಸುತ್ತ, ನನ್ನನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ನಗುತ್ತ, ಮತ್ತ ತನ್ನ ಹಾವು ಏಣಿ ಆಟಕ್ಕೆ ಹೋಗಿಬಿಟ್ಟ.

'ಯಾಕ? ಏನಾತು? ನಾ ಹೇಳಿದ್ರಾಗ ಏನರೆ ತಪ್ಪು ಅದ ಏನು?' ಅಂತ ನನಗೇ ಸಂಶಯ ಬಂತು. ಮತ್ತ ಮತ್ತ ಚೆಕ್ ಮಾಡಿದೆ. ಡಬಲ್ ಚೆಕ್ ಮಾಡಿದೆ. ಎಲ್ಲ ಬರೋಬ್ಬರಿ ಅದ. ಇಬ್ಬರೂ ಮಕ್ಕಳ ಮುಂಜವಿಗೆ ಸರಿಯಾದ ಟೈಮ್. ಮುಂಜವಿ ಮಾಡಿಬಿಡ್ರೀ ಅಂದ್ರ ಇಕಿ ಯಾಕ ಇಷ್ಟು ರಾಂಗ್ ಅಗಲಿಕತ್ತಾಳ? ಅಂತ ತಿಳಿಲಿಲ್ಲ ನನಗ. ಹೆಚ್ಚಿನ ವಿವರೆಣೆ ಕೊಡೋಣ ಅಂತ ಮುಂದುವರೆಸಿದೆ.

'ನೋಡು, ನೀವು ವೈಷ್ಣವ ಮಂದಿ. ಅದರಾಗೂ ಆಚಾರ್ ಮಂದಿ. ನೀವು ನಿಮ್ಮ ಮಕ್ಕಳ ತಲಿ ಸ್ವಚ್ಚ ಬೋಳಿಸಿ, ದೊಡ್ಡ ಸೈಜಿನ ಚಂಡಿಕಿ ಇಡಿಸಿಯೇ ಮುಂಜವಿ ಮಾಡಬೇಕು ನೋಡವಾ. ಆಮ್ಯಾಲೆ ಇನ್ನೊಂದು ಮಾತು. ಮುಂಜವಿ ಹುಡುಗುರ ಬೋಳ ತಲಿ ಮ್ಯಾಲೆ ಕೆಂಪ ಬಣ್ಣದಾಗ ಸ್ವಸ್ತಿಕಾ ಬರಿತಾರ ನೋಡು. ಅದನ್ನ ಯಾರರೆ ಖಡಕ್ ಬ್ರಹ್ಮಚಾರಿ ಬರೆದರ ಅದು ಮುಂಜವಿ ವಟುಗಳಿಗೆ ಮುಂದ ಭಾಳ ಛಲೋ ಆಗ್ತದ ಅಂತ ಪ್ರತೀತಿ. ಬೇಕಾದ್ರ ನಿನ್ನ ಮಕ್ಕಳ ಬೋಳ ತಲಿ ಮ್ಯಾಲೆ, ಸ್ವಸ್ತಿಕಾ ಪೇಂಟ್  ಹೊಡಿಲಿಕ್ಕೆ ನಾ ಬರ್ತೇನಿ ನೋಡು. ನನಗ ಮುಂಜವಿ ವಟುಗಳ ಬೋಳ ತಲಿ ಮ್ಯಾಲೆ, ನನ್ನ ವಾಟರ್ ಕಲರ್ ಮಾಡೋ ಬ್ರಶ್ ಒಳಗ ಪೇಂಟ್ ಹೊಡೆಯೋದು ಅಂದ್ರ ಭಾಳ ಸೇರ್ತದ ನೋಡು. ಮತ್ತ ಅದು ಪುಣ್ಯದ ಕೆಲಸ ಬ್ಯಾರೆ. ನಮ್ಮ ನಲವತ್ತೂ ಚಿಲ್ಲರೆ ವರ್ಷಗಳ ಸಾಧನೆ, ಬ್ರಹ್ಮಚರ್ಯದ ಬೆನಿಫಿಟ್ ಎಲ್ಲ ನಿನ್ನ ಮಕ್ಕಳಿಗೂ ಸಿಕ್ಕು, ಲಗೂನೆ ಎಲ್ಲ ಸಮಸ್ಯೆ ಪರಿಹಾರ ಆಗ್ತದ. ಇದರಾಗ ಡೌಟ್ ಬ್ಯಾಡೇ ಬ್ಯಾಡ. ಅಷ್ಟೇ ನೀ ನನಗ ಭಾಳ ಮೊದಲೇ ತಿಳಿಸಬೇಕು. ಇಡೀ ಊರಾಗ ಇರೋ ಆಚಾರಿ ಅಂದ್ರ ಬ್ರಹ್ಮಚಾರಿ ನಾ ಒಬ್ಬನೇ ನೋಡು. ಮುಂಜವಿ ಸೀಸನ್ ಒಳಗ ಭಾಳ ಬ್ಯುಸಿ ಇರ್ತೇನಿ. ದಿನಕ್ಕೆ ಅರ್ಧಾ ಡಜನ್ ಮುಂಜವಿ ವಟುಗಳ ಬೋಳ ತಲಿ ಮ್ಯಾಲೆ ಸ್ವಸ್ತಿಕಾ ಪೇಂಟ್ ಹೊಡೆದು ಬಂದ ದಿನಗಳೂ ಅವ ನೋಡವಾ. ಅಷ್ಟು ಡಿಮ್ಯಾಂಡ್ ಅದ ನನಗ. ಎಲ್ಲೆ ಸಿಗಬೇಕು ಈ ಬೋಕಡ್ ಛಾಪ್ ಮಂದಿಗೆ ನನ್ನಂತಾ ಖಡಕ್ ಬ್ರಹ್ಮಚಾರಿ? ಹಾಂ?' ಅಂತ ಉದ್ದಾಗಿ ಇಟ್ಟುಬಿಟ್ಟೆ.

ಅಕಿ ನನ್ನ ಮಾರಿನೇ ನೋಡ್ಕೋತ್ತ ಕೂತುಬಿಟ್ಟಿದ್ದಳು. ಒಂದು ತರಹ ಸಂಮೋಹಿನಿಗೆ ಒಳಗಾಗಿ ಬಿಟ್ಟಿದ್ದಳು. ಎಲ್ಲರೆ ನನ್ನನ್ನು ಅಷ್ಟು ದಿಟ್ಟಿಸಿ ಪಿಕಿ ಪಿಕಿ ನೋಡಿ ಇಕಿ ಎಲ್ಲೆ hypnotize ಆಗಿಬಿಟ್ಟಳೋ ಅಂತ ಸಂಶಯ ಬಂತು. ಅಕಿ ಮಾರಿ ಮುಂದ ಕೈಯಾಡಿಸಿದೆ. ಆವಾಗ ಎಚ್ಚರಾತು ಅಕಿಗೆ. ಫುಲ್ ಆವಾಜ್ ಹಾಕೇ ಬಿಟ್ಟಳು.

'ಏನಂತ ಪರಿಹಾರ ಹೇಳ್ತಿಯೋ ನಮ್ಮಪ್ಪಾ? ಹುಚ್ಚ ಹುಚ್ಚ ಇದ್ದಿ ನೋಡು. ಏನೋ ದೇಶ ಸುತ್ತಿ, ಕೋಶ ಓದಿ ಮತ್ತ ವಾಪಸ್ ಧಾರವಾಡಕ್ಕೆ ಬಂದು ಕೂತಿ ಅಂತ ಮಾಡಿದರೆ ಮೊದಲಿನ ಹಾಪ್ ಇದ್ದಂಗೇ ಇದ್ದಿ ನೋಡು. ಇನ್ನೂ ಜಾಸ್ತಿ ಹಾಪ್ ಆಗಿ. ಮುಂಜವಿ ಮಾಡಲೇ? ನನ್ನ ಮಕ್ಕಳ ಮುಂಜವಿ ಮಾಡಲೇ? ಹಾಂ?' ಅಂತ ಅಬ್ಬರಿಸಿದಳು.

'ಯಾಕ!? ನಿನ್ನ ಮಕ್ಕಳ ಮುಂಜವಿ ಮಾಡಿಬಿಟ್ಟೀರಿ ಏನು? ಆಗಿಬಿಟ್ಟದ? ಮುಂಜವಿ ಆಗಿದ್ದರೆ ನನ್ನ ಕಡೆ ಇಬ್ಬರನ್ನೂ ದಿನಾ ಕಳಿಸಿಬಿಡು. ಅದು ಅವರಿಗೆ ಗಾಯತ್ರಿ ಮಂತ್ರದ ಉಪದೇಶ ಬರೋಬ್ಬರಿ ಆಗಿಲ್ಲ ಅಂತ ಅನ್ನಸ್ತದ. ನಾ ಎಲ್ಲಾ ಮಂತ್ರ ಬರೋಬ್ಬರಿ ಹೇಳಿಕೊಟ್ಟು, ಅವರ ಯಂತ್ರ ಏನರೆ ಬರ್ಬಾದ ಆಗಿದ್ದರೆ ಅದನ್ನೂ ಸರಿ ಮಾಡಿಸಿ ಕಳಿಸಿಬಿಡ್ತೇನಿ. ಒಮ್ಮೆ ಮೂಗು ಹಿಡಕೊಂಡು, ನೂರಾ ಎಂಟು ಗಾಯತ್ರಿ ಮಂತ್ರ ಶುರುಮಾಡಿಕೊಂಡರು ನಿನ್ನ ಮಕ್ಕಳು ಅಂದ್ರ ನಿನ್ನ ಪ್ರಾಬ್ಲಮ್ ಎಲ್ಲಾ ಪರಿಹಾರ ಆಗೇ ಬಿಟ್ಟವು ಅಂತ ತಿಳ್ಕೋ ನೀ. ಸಂಶಯವೇ ಬ್ಯಾಡ,' ಅಂತ ಹೇಳಿದೆ.

'ಅಯ್ಯೋ!!! ಏನಾಗ್ಯದೋ ನಿನಗ???? ನಾ ಹೇಳೋದನ್ನ ಮೊದಲು ಕೇಳು. ಆತುರಗೇಡಿ. ಏಳ್ರಾಗ ಹುಟ್ಟಿದವರಾಂಗ ಮಾಡಬೇಡ,' ಅಂದು ಥಾಂಬ ಥಾಂಬ ಅಂದಳು.

'ಏನು? ಹೇಳು. ನಾ ಗಪ್ಪ ಕೂತು ಕೇಳತೇನಿ. ಹೇಳು' ಅಂದೆ.

'ನನಗ ಎರಡೂ ಹೆಣ್ಣಮಕ್ಕಳು. ಹುಡುಗಿಯರು. ಒಬ್ಬಾಕಿಗೆ ಹದಿನಾಲ್ಕು. ಸಣ್ಣಾಕಿಗೆ ಹದಿಮೂರು. ಅವರದ್ದೇ ಸಮಸ್ಯಾ ಆಗ್ಯದ. ಅದನ್ನ ಹೇಳಿ, ನಿನ್ನ ಕಡೆ ಏನರೆ ಪರಿಹಾರ ಕೇಳಿ ಹೋಗೋಣ ಅಂದ್ರ ಅವರ ಮುಂಜವಿ ಮಾಡು ಅಂತಿಯಲ್ಲ ಮಾರಾಯಾ??? ಏನು ಹೇಳೋಣ?' ಅಂತ ಅಕಿ ಹಣಿ ಹಣಿ ಘಟ್ಟಿಸಿಕೊಂಡಳು.

ಹ್ಯಾಂ? ಇದೆಂಗ ಹೀಂಗಾತು? ಗಜಬ್ ಹೋಯಿ ಗವಾ! ಅಕಟಕಟಾ!!!!!

'ಮೊದಲೇ ಹೇಳಬೇಕೋ ಬ್ಯಾಡೋ???? ನಿನ್ನುವು ಎರಡೂ ಹೆಣ್ಣು ಅಂತ. ಮೊದಲು ಹೇಳದೇ ಈಗ ಬೈತಿಯಲ್ಲಾ??? ಹಾಂ?' ಅಂತ ನಾನೇ ರಿವರ್ಸ್ ಬಾರಿಸಿಬಿಟ್ಟೆ. ಅದೇನೋ ಅಂತಾರಲ್ಲ. Offense is the best defense. ಹಾಂಗ.

'ಹೇಳಲಿಕ್ಕೆ ಎಲ್ಲಿ ಕೊಟ್ಟಿ ನೀನು? ನನಗ ಮಾತಾಡಲಿಕ್ಕೆ ಬಿಟ್ಟರಲ್ಲಾ? ಹಾಂ? ಕುಂಡಲಿ ಹಾಕೋವಾಗ ಮಕ್ಕಳ ಹೆಸರು ಹೇಳತೇನಿ ಅಂದೆ. ನೀ ಏನಂದೀ? ಅದೇನೋ ದೊಡ್ಡ ಶೇಕ್ಸಪಿಯರ್ ಹೇಳಿದ ಅಂತ What's in a name ಅಂತ ಡೌಲು ಬಡಕೋತ್ತ, ಅದೇನೋ x, y ಅಂತ ಹೆಸರು ಇಟ್ಟಗೊಂಡು ಕುಂಡಲಿ ಮಾಡಿ ಇಲ್ಲದ್ದು ಸಲ್ಲದ್ದನ್ನ ಹೇಳಿಬಿಟ್ಟಿ. ಹುಚ್ಚ! ದೊಡ್ಡ ಹುಚ್ಚ! ನೀನು ದೊಡ್ಡ ಹಾಪ್ ಇದ್ದಿ ಅಂತ ಗೊತ್ತಿದ್ದರೂ ನಿನ್ನ ಕಡೆ ನನ್ನ ಸಮಸ್ಯಾಕ್ಕ ಪರಿಹಾರ ಕೇಳಲಿಕ್ಕೆ ಬಂದಾಕಿ ನಾನು. ನನಗೇ ಬುದ್ಧಿ ಇಲ್ಲ ನೋಡು,' ಅಂತ ಹೇಳಿದ ಅಕಿ ಮತ್ತೆ ಮತ್ತೆ ಹಣಿ ಹಣಿ ತಟ್ಟಿಕೊಂಡಳು. ಅಕಿ ಗಂಡ ಮಿಸಿ ಕೆಳಗ ನಕ್ಕೋತ್ತ ತನ್ನ ಹಾವು ಏಣಿ ಆಟ ಮುಂದುವರೆಸಿದ್ದ. ಹಾಪ್ ಸೂಳೆಮಗ.

'ನಿನ್ನ ಎರಡೂ ಮಕ್ಕಳು ಹೆಣ್ಣು ಆದರೇನು? ನಿನ್ನ ಸಮಸ್ಯೆಗೆ ಪರಿಹಾರ ಮಾತ್ರ ಮುಂಜವಿನೇ ನೋಡವಾ. ಮುಂಜವಿ ಮಾಡೋದು ಬಿಟ್ಟು ಬ್ಯಾರೆ ಪರಿಹಾರ ಇಲ್ಲ,' ಅಂತ ಹೇಳೇಬಿಟ್ಟೆ. ಇಕಿ ಮುಂದ ನಾ ತಪ್ಪು ಮಾಡಿದೆ ಅಂತ ಹ್ಯಾಂಗ ಒಪ್ಪಿಕೊಳ್ಳಲಿ?

'ಅಯ್ಯೋ! ಹೆಣ್ಣು ಹುಡುಗಿಯರಿಗೆ ಯಾರರ ಮುಂಜವಿ ಮಾಡ್ತಾರೇನು? ನಿಂದು ತಲಿ ಪೂರ್ತಿ ಕೆಟ್ಟದ ಏನು? ಹಾಂ?' ಅಂತ ಆವಾಜ್ ಹಾಕಿದಳು.

'ಮುಂಜವಿ ಮಾಡಬೇಕು. ಆದರೆ ನಿನ್ನ ಹೆಣ್ಣುಮಕ್ಕಳಿಗೆ ಅಲ್ಲ!' ಅಂತ ಒಂದು ಬಾಂಬ್ ಒಗೆದೆ.

'ಮತ್ತ ಯಾರಿಗೆ ಮುಂಜವಿ ಮಾಡಬೇಕು? ನಿನಗೇ ಇನ್ನೊಂದು ಸಲ ಮುಂಜವಿ ಮಾಡಬೇಕೇನು? ಯಾರಿಗೆ ಗೊತ್ತು? ನಿಂದು ಮುಂಜವಿ ಆಗ್ಯದೋ ಇಲ್ಲೋ ದೇವರಿಗೇ ಗೊತ್ತು. ಆಗಿಲ್ಲ ಅಂತ ಕಾಣಸ್ತದ. ಅದಕ್ಕೇ ಹುಚ್ಚುಚ್ಚರೆ ಏನೇನೋ ಅಂತಿ' ಅಂದು ಬಿಟ್ಟಳು.

'ಮುಂಜವಿ ಮಾಡಬೇಕು. ನಿನ್ನ ಹೆಣ್ಣುಮಕ್ಕಳಿಗೆ ಅಲ್ಲ. ಹೆಣ್ಣುಮಕ್ಕಳಿಗೆ ಮುಂಜವಿ ಮಾಡಲಿಕ್ಕೆ ನಮ್ಮ ಶಾಸ್ತ್ರದಾಗ ಅವಕಾಶ ಇಲ್ಲ. ಆದ್ರ ನೀನು ಒಂದು ನಾಲ್ಕು ಯೋಗ್ಯ ಬ್ರಾಹ್ಮಣ ವಟುಗಳ ಮುಂಜವಿ sponsor ಮಾಡಿ, ಎಲ್ಲಾ ಖರ್ಚೂ ವಹಿಸಿಕೊಂಡು, ನನ್ನ ಕಡೆನೇ ಅವರ ಬೋಳು ತಲಿ ಮ್ಯಾಲೆ ಸ್ವಸ್ತಿಕಾ ಪೇಂಟ್ ಮಾಡಿಸಿಬಿಟ್ಟಿ ಅಂದ್ರ ನಿನ್ನ ಮಕ್ಕಳ ಪ್ರಾಬ್ಲಮ್ ಎಲ್ಲ ಪರಿಹಾರ ಆಗಿಬಿಡ್ತದ. ಇದು ಶಂಬರ್ ಟಕಾ ಖರೆ! ಸೋಲಾ ಆಣೆ ಖರೆ!' ಅಂತ ಹೇಳಿಬಿಟ್ಟೆ.

'ಅದೆಂಗ ನನ್ನ ಸಮಸ್ಯೆ ಪರಿಹಾರ ಆಗ್ತದ? ಯಾರ್ಯಾರದ್ದೋ ಮುಂಜವಿ ನಾ ಖರ್ಚು ಕೊಟ್ಟು ಮಾಡಿಸಲಿಕ್ಕೆ ನನಗ ತಲಿ ಕೆಟ್ಟದ ಏನು? ಮುಂಜವಿಗೆ ಏನು ಕಮ್ಮಿ ಖರ್ಚು ಬರ್ತದ ಏನು? ನನ್ನ ಇಬ್ಬರು ಹೆಣ್ಣುಮಕ್ಕಳ ಲಗ್ನದ ಖರ್ಚಿಗಾಗಿ ರೊಕ್ಕಾ ಕೂಡಿಸಿ ಇಡಲಿಕ್ಕೇ ನನಗ ಭಾಳ ತೊಂದ್ರಿಯದ. ಅಂತಾದ್ರಾಗ ಯಾರ್ಯಾರದ್ದೋ ಮುಂಜವಿ ಮಾಡಿಸಿದರೆ ನನ್ನ ಹೆಣ್ಣುಮಕ್ಕಳ ಸಮಸ್ಯೆ ಪರಿಹಾರ ಆಗ್ತದ ಅಂತ ಏನೇನೋ ಹೇಳ್ತಿಯಲ್ಲಾ? ಹಾಂ?' ಅಂತ ಬೈದಳು.

'ನೋಡು ಅದು ಹೀಂಗ ವರ್ಕ್ ಔಟ್ ಆಗ್ತದ. ನಿನಗ ಇಬ್ಬರು ಹೆಣ್ಣುಮಕ್ಕಳು. ಭಾಳ ತ್ರಾಸು ಕೊಡ್ತಾರ. ಜೀವಾ ತಿಂತಾರ. ಆದ್ರ ಅವರಿಗೆ ಮುಂಜವಿ ಮಾಡಿಸಿ, ಮೂಗು ಹಿಡಿಸಿ, ಸಂಧ್ಯಾವಂದನೆಗೆ ಕೂಡಿಸಲಿಕ್ಕೆ ಆಗೋದಿಲ್ಲ. ಹೆಚ್ಚಂದ್ರ ಕಡಿಗ್ಯಾಗ ಆದಾಗ ಮನಿ ಹೊರಗ ಕೂಡಿಸಬಹುದು ಅಷ್ಟೇ. ಅದಕ್ಕೇ ಬ್ಯಾರೆ ವಟುಗಳಿಗೆ ಮುಂಜವಿ ಮಾಡಿಬಿಡೋದು. ಆದ್ರ ಅವರಿಗೆ ಮೊದಲೇ ಹೇಳಿಬಿಡೋದು, 'ನೋಡ್ರೀಪಾ, ನಿಮ್ಮ ನೂರಾ ಎಂಟು ಗಾಯತ್ರಿ ಮಂತ್ರದಾಗ ಐವತ್ತು ಪರ್ಸೆಂಟ್ ನಮ್ಮ ಹುಡುಗಿಯರ ಲೆಕ್ಕಕ್ಕೆ ನೋಡ್ರೀ' ಅಂತ. ನಾಕು ಮಂದಿ ವಟುಗಳು ಶೇಕಡಾ ಐವತ್ತು ಕೊಟ್ಟರು ಅಂದ್ರ ಎರಡು ಫುಲ್ ಆತು. ಆತೋ ಇಲ್ಲೋ? ಅದು ನಿನ್ನ ಎರಡು ಹೆಣ್ಣುಮಕ್ಕಳ ಖಾತಾದಾಗ ಜಮಾ ಆಗ್ತದ. ಅದರ ಫಲ ನಿನಗ ಸಿಗ್ತದ. ನಿನ್ನ ಹೆಣ್ಣುಮಕ್ಕಳು ಮಾರಮ್ಮ, ಕಾಳಮ್ಮನ ಅವತಾರ ಬಿಟ್ಟು ಒಳ್ಳೆ ಲಕ್ಷ್ಮಿ, ಸರಸ್ವತಿಯಂತಹ ಸಾತ್ವಿಕ ದೇವಿಯರಾಗಿ ಬದಲಾಗಿಬಿಡ್ತಾರ. ಒಟ್ಟಿನಾಗ ಮುಂಜವಿ ಮಾಡೋದೇ ಒಂದು ಪರಿಹಾರ ನೋಡವಾ. ಅದನ್ನ ಬಿಟ್ಟು ನಿನ್ನ ಮಕ್ಕಳ ಸಮಸ್ಯೆಗೆ ಬ್ಯಾರೆ ಪರಿಹಾರ ಇಲ್ಲವೇ ಇಲ್ಲ' ಅಂತ ದೊಡ್ಡ ಓಳು ಬಿಟ್ಟೆ.

'ಹಾಂಗಂತೀ?????' ಅಂತ ದೊಡ್ಡದಾಗಿ ಓಂ ಅಂತ ಬಾಯಿ ತೆಗೆದಳು.

'ಹೌದು! ಅದೇ ಒಂದು ದಾರಿ. ನೀನು ಒಂದು ಕೆಲಸ ಮಾಡು. ನಾಕು ಒಳ್ಳೆ, ಯೋಗ್ಯ ಬ್ರಾಹ್ಮಣ ವಟುಗಳನ್ನ ಹುಡುಕು. ಅದೂ ನಿಮ್ಮ ಹಾಂಗೇ ವೈಷ್ಣವ ಆಚಾರ್ ಇರಬೇಕು ಆ ವಟುಗಳು. ನೀ ಮತ್ತೆಲ್ಲೆರ ಪಟ್ಟೆಗಾರ ಮಂದಿ, ಚಮಗಾರ್ ಮಂದಿ ಒಳಗ ವಟು ಹುಡಿಕಿಕೊಂಡು ಬಂದು ಗಿಂದಿ ಎಲ್ಲರೆ. ವೈಷ್ಣವ ಬ್ರಾಹ್ಮಣರೇ ಬೇಕು. ಸ್ಮಾರ್ತರೂ ಸಹ ನಡೆಯೋದಿಲ್ಲ. ತಿಳೀತಾ? ನಂತರ ನನಗ ಒಂದು ಮಾತು ತಿಳಿಸು. ಮುಂಜವಿಗೆ ಮುಹೂರ್ತ ನೋಡೇಬಿಡೋಣ. ನಾನೇ ನಿಂತು ಮಾಡಿಸಿಬಿಡ್ತೇನಿ ಆ ನಾಲ್ಕು ಬಡ ವಟುಗಳ ಮುಂಜವಿ. ಖರ್ಚು ಮಾತ್ರ ನಿಂದು ನೋಡವಾ. ನೀ ರೊಕ್ಕಾ ಒಂದು ತಯಾರ್ ಇಟ್ಟುಕೊಂಡುಬಿಡು. ಒಂದು ಕೆಲಸ ಮಾಡು. ರೊಕ್ಕಾ ನನ್ನ ಕೈಯಾಗ ಕೊಟ್ಟುಬಿಡು. ಒಂದು ಮುಂಜವಿಗೆ ಕಮ್ಮಿ ಕಮ್ಮಿ ಅಂದರೂ ಒಂದೂವರಿ ಲಕ್ಷ ರೂಪಾಯಿ ಬೇಕು ನೋಡವಾ. ನಿನಗ ಅಂತ ಡಿಸ್ಕೌಂಟ್. ಕೇವಲ ಒಂದು ಲಕ್ಷ. ನಾಕು ವಟುಗಳ ಮುಂಜವಿಗೆ ನಾಲ್ಕು ಲಕ್ಷ ರೂಪಾಯಿ ನನ್ನ ಕೈಯಾಗ ಕೊಟ್ಟುಬಿಡು. ನಾನು ಎಲ್ಲ ಅವರ ಮುಂಜವಿ, ಅದರ ಜೊತೆಗಿನ ಗಾಯತ್ರಿ ಮಂತ್ರದ ಫಿಫ್ಟಿ ಪರ್ಸೆಂಟ್ ಡೀಲ್ ಎಲ್ಲಾ ಮುಗಿಸಿಕೊಡ್ತೇನಿ. ಇನ್ನೂ ಒಂದು ಮಾತು. ವಟುಗಳ ಹುಡುಕೋ ಕೆಲಸ ನಿನ್ನ ಕಡೆ ಆಗೋದಿಲ್ಲ. ಅದನ್ನೂ ನಾನೇ ಮಾಡಿಕೊಡ್ತೇನಿ. ನನ್ನ ಸಮಾಜಸೇವೆ ಅಂದ್ಕೋ. ನೀನು ಲಗೂನೆ ನಾಲ್ಕು ಲಕ್ಷಕ್ಕೆ ವ್ಯವಸ್ಥೆ ಒಂದು ಮಾಡಿಬಿಡು ಮಾರಾಳ. ಬಾಕಿ ಎಲ್ಲ ನಾನು ನೋಡಿಕೋತ್ತೇನಿ,' ಅಂತ ಹೇಳಿಬಿಟ್ಟೆ.

ಇಕಿ ನಾಲ್ಕು ಲಕ್ಷ ರೂಪಾಯಿ ತಂದು ನನ್ನ ಕೈಯಾಗ ಇಟ್ಟಳು ಅಂದ್ರ, ಅಲ್ಲೆ ಮಾಳಮಡ್ಡಿ ವನವಾಸಿ ರಾಮದೇವರ ಗುಡಿಯಾಗ ಆಗುವ ಉಚಿತ ಸಾಮೂಹಿಕ ಉಪನಯನದಾಗ ನಾಲ್ಕು ಮಂದಿ ವಟುಗಳನ್ನ ಹಿಡಿದು, ಅವರ ಕೈಯಾಗ ತಲಾ ಒಂದೊಂದು ನೂರು ರೂಪಾಯಿ ಕೊಟ್ಟು, 'ಹೋಗಿ ಮಜಾ ಮಾಡ್ರೋ ನಿಮ್ಮಾಪ್ರಾ. ನಿಮ್ಮ ಸಂಧ್ಯಾವಂದನೆ ಒಳಗ ನಮ್ಮ ಇಬ್ಬರು ಹುಡುಗಿಯರಿಗೆ ಫಿಫ್ಟಿ ಪರ್ಸೆಂಟ್ ಕೊಟ್ಟು ಬಿಡ್ರೋ' ಅಂತ ಡೀಲ್ ಕುದರಿಸಿಬಿಡತೇನಿ. ಉಳಿದ ರೊಕ್ಕಾ? ಗೆಳತಿ ರೊಕ್ಕಾ ನಮ್ಮ ಜಾತ್ರಿ. ಯಾರದ್ದೋ ರೊಕ್ಕಾ ಯಲ್ಲಮ್ಮನ ಜಾತ್ರಿ ಇದ್ದಂಗೆ. ಮೊದಲೇ ನಮ್ಮ ಕಡೆ ರೊಕ್ಕಿಲ್ಲ. ಕೆಲಸ? ಜೀವನದಲ್ಲೇ ಮಾಡಿಲ್ಲ. ಯಾರಿಗದ, ಯಾರಿಗಿಲ್ಲ ಈ ಭ್ಯಾಗ್ಯ? ಹೀಗೆಲ್ಲ ವಿಚಾರ ಮಾಡುತ್ತ, ಮನಸ್ಸಿನ್ಯಾಗೇ ಮಂಡಗಿ ತಿನಕೋತ್ತ ಕೂತಿದ್ದೆ. ಅದೂ ಹಾಲು, ತುಪ್ಪದ ಜೋಡಿ.ಮನಸ್ಸಿನ್ಯಾಗ ತಿನ್ನೋದು ಅಂದ ಮ್ಯಾಲೆ ಜಿಪುಣತನ ಯಾಕೆ? ಹೌದಿಲ್ಲೋ?

'ಸರಿ! ಎಲ್ಲ ವಿಚಾರ ಮಾಡಿ ತಿಳಸ್ತೇನಿ. ಇನ್ನೂ ನಾಕು ಮಂದಿ ಕಡೆ ಕೇಳಿ ಏನು ಅಂತ ಒಂದು ಡಿಸಿಷನ್ ತೊಗೋತ್ತೇನಿ ನೋಡಪಾ' ಅಂತ ಅಂದಾಕಿನೇ ತನ್ನ ಗಂಡನ್ನ ಎಬ್ಬಿಸಿಕೊಂಡು ಹೋಗಿಬಿಟ್ಟಳು.

ಅಕಿ ನಾಲ್ಕು ಲಕ್ಷ ರೂಪಾಯಿ ತಂದು ನನ್ನ ಕೈಯಾಗ ಇಡ್ತಾಳೋ? ಇಲ್ಲೋ?

ಗೊತ್ತಿಲ್ಲ. ಕಾಲವೇ ಎಲ್ಲ ಹೇಳಲಿದೆ.

3 comments:

sunaath said...

ಶಹಭಾಶ್, ಬಹಾದ್ದೂರ ಹುಡುಗಾ! ನಿನ್ನದು ಸೋಡಮುಂಜವಿ ಅಷ್ಟs ಆಧಂಗ ಕಾಣ್ತದ!

Anaga Kolimathur said...


Very nice write-up!

To be more effective as a life coach, it may be better to have a Jummy and a Kemps!

Mahesh Hegade said...

Thanks Sunaath Sir.