Wednesday, September 02, 2015

ಕೋತಿ ವಿದ್ಯೆ, ಬ್ರಹ್ಮ ವಿದ್ಯೆ, ಶಿಕ್ಷಕ, ಗುರು......

ಕನ್ನಡದಲ್ಲಾದರೆ ಶಿಕ್ಷಕ, ಗುರು ಅನ್ನುವ ಎರಡು ಬೇರೆ ಬೇರೆ ಪದಗಳಿವೆ. ಇಂಗ್ಲೀಷಿನಲ್ಲಿ ಎರಡಕ್ಕೂ ಟೀಚರ್ ಅಂದುಬಿಡುತ್ತಾರೆ. master ಅನ್ನುವ ಪದವನ್ನು ಗುರು ಎಂಬ ಅರ್ಥದಲ್ಲಿ ಬಳಸುತ್ತಾರಾದರೂ, ಬಹಳ ಕಮ್ಮಿ. ಮಾಸ್ಟರ್ ಪದ ರಿಂಗ್ ಮಾಸ್ಟರ್, ಸ್ಟೇಷನ್ ಮಾಸ್ಟರ್, ಪೋಸ್ಟ್ ಮಾಸ್ಟರ್, ಹೆಡ್ ಮಾಸ್ಟರ್ ಅನ್ನುವ ಶಬ್ದಗಳಲ್ಲಿ ಬಳಕೆಯಾಗುವದೇ ಹೆಚ್ಚು.

ಶಿಕ್ಷಕ ಮತ್ತು ಗುರು - ಇವೆರೆಡರ ನಡುವೆ ವ್ಯತ್ಯಾಸ ಇದೆಯೇ?

ಮೊನ್ನೆ ಗುರು ಪೂರ್ಣಿಮೆಯಂದು ಜಗದ್ಗುರು ಶ್ರೀಕೃಷ್ಣ ಪರಮಾತ್ಮನಿಂದ ಹಿಡಿದು, ನಮ್ಮ ಆದಿ ಗುರು ಶಂಕರರನ್ನೂ ಸೇರಿಸಿಕೊಂಡು ಎಲ್ಲರಿಗೂ ನಮನ ಸಲ್ಲಿಸುವಾಗ ಒಂದು ಮಾತು ನೆನಪಿಗೆ ಬಂದಿತ್ತು. ಶಿಕ್ಷಕ ಮತ್ತು ಗುರುವಿನ ನಡುವಿನ ವ್ಯತ್ಯಾಸವನ್ನು ಪರಿಣಾಮಕಾರಿಯಾಗಿ ತಿಳಿಸಿದ ಒಂದು ಮಾತು.

'ಶಿಕ್ಷಕ ಬದುಕುವದನ್ನು ಕಲಿಸಿದರೆ, ಗುರು ಬದುಕನ್ನೇ ಬದಲಾಯಿಸಿಬಿಡುತ್ತಾನೆ.'

ಓಶೋ ಉರ್ಫ್ ಭಗವಾನ ರಜನೀಶ್ ಒಂದು ಕಡೆ ಹೇಳುತ್ತಾರೆ, 'ತಾನು ಕಲಿತಿದ್ದನ್ನು ಇನ್ನೊಬ್ಬರಿಗೆ ಕಲಿಸುವವ ಶಿಕ್ಷಕ. ತಾನು ತಿಳಿದಿದ್ದನ್ನು ಇನ್ನೊಬ್ಬರಿಗೆ ತಿಳಿಯುವಂತೆ ಕಲಿಸುವವ ಗುರು,' ಅಂತ.

The master has known, and imparts what he has known. The teacher has received from one who has known, and delivers it intact to the world, but he himself has not known.

(From the book - Autobiography of a Spiritually Incorrect Mystic by Osho)

ಕಲಿತಿದ್ದು vs. ತಿಳಿದಿದ್ದು. ನೀವೇ ವಿಚಾರ ಮಾಡಿ. ಎಷ್ಟೋ ವಿಷಯಗಳನ್ನು ಕಲಿತಿರುತ್ತೇವೆ ಆದರೆ ಪೂರ್ತಿ ತಿಳಿದಿರುವದಿಲ್ಲ. ಅರಿತಿರುವದಿಲ್ಲ. ಎಷ್ಟೋ ಸಮಸ್ಯೆಗಳನ್ನು ಫಾರ್ಮುಲಾ ಹಚ್ಚಿ ಚಕಾಚಕ್ ಅಂತ ಬಿಡಿಸಿಬಿಡುತ್ತೇವೆ. ಆದರೆ ಉಪಯೋಗಿಸಿದ ಫಾರ್ಮುಲಾ ಹಿಂದಿನ ಒರಿಜಿನಲ್ concept ಎಲ್ಲ ಸಮಯದಲ್ಲೂ ಗೊತ್ತಿರುವದಿಲ್ಲ. ಗೊತ್ತಿರಲೇಬೇಕು ಅಂತೇನೂ ಇಲ್ಲ. ಕಲಿತ ಎಲ್ಲ ವಿಷಯಗಳನ್ನು ತಿಳಿದುಕೊಳ್ಳಲೂಬೇಕು ಅಂದರೆ ಈ ಜನ್ಮ ಸಾಕಾಗಲಿಕ್ಕಿಲ್ಲ. ಕಾರ್ ಚಲಾಯಿಸುವದನ್ನು ಕಲಿಯುತ್ತೇವೆ. ಹಾಗಂತ ಕಾರ್ ಹೇಗೆ ಕೆಲಸ ಮಾಡುತ್ತದೆ ಅನ್ನುವದನ್ನು ತಿಳಿಯುತ್ತ ಕೂಡಲಿಕ್ಕೆ ಆಗುತ್ತದೆಯೇ? ಅದನ್ನು ಕಲಿತು, ತಿಳಿಯಬೇಕಾದ ಅವಶ್ಯಕತೆ ಇರುವದು ಆಟೋಮೊಬೈಲ್ ಇಂಜಿನಿಯರ್, ಮೆಕ್ಯಾನಿಕ್ ಮಂದಿಗೆ ಮಾತ್ರ.

'ಶಿಕ್ಷಕ ಬದುಕುವದನ್ನು ಕಲಿಸಿದರೆ, ಗುರು ಬದುಕನ್ನೇ ಬದಲಾಯಿಸಿಬಿಡುತ್ತಾನೆ,' ಅಂದ ಮಾತ್ರಕ್ಕೆ ಶಿಕ್ಷಕ ಕಲಿಸಿದ ಬದುಕಲು ಬೇಕಾಗುವ ವಿದ್ಯೆ ಕಮ್ಮಿ ಕಿಮ್ಮತ್ತಿನದು ಅಥವಾ ಗುರು ಕಲಿಸುವ ಬ್ರಹ್ಮವಿದ್ಯೆ, ಆತ್ಮವಿದ್ಯೆ ಹೆಚ್ಚಿನದು ಅಂತ ಲೆಕ್ಕವಲ್ಲ. ಅವೆರೆಡೂ ಒಂದಕ್ಕೊಂದು ಪೂರಕ. ಶಿಕ್ಷಕ ಕಲಿಸಿದ ವಿದ್ಯೆಗಳಿಂದ ಒಂದು ತಕ್ಕ ಮಟ್ಟಿನ ಬದುಕು ಕಟ್ಟಿಗೊಂಡಿದ್ದರೆ ಮಾತ್ರ ಗುರು ಯಾವಾಗಲೋ ಬಂದು ಅದನ್ನು ಬದಲಾಯಿಸಿಯಾನು. ಬದುಕೇ ಇಲ್ಲದಿದ್ದರೆ ಬದಲಾಯಿಸಲಿಕ್ಕೆ ಏನಿದೆ?

ಬಂಗಾರದಂತಹ ಬದುಕು, ಬಂಗಾರದಂತಹ ಬದುಕು ಕಟ್ಟಿಗೊಂಡನು / ಕಟ್ಟಿಗೊಂಡಳು ಅಂತ ಕೇಳುತ್ತಿರುತ್ತೇವೆ. ಇಲ್ಲಿ ಬಂಗಾರ ಎಲ್ಲಿಂದ ಬಂತು? ಅಲ್ಲೇ ಒಳ್ಳೆಯ ಶಿಕ್ಷಕರ ಮಹತ್ವ ತಿಳಿಯೋದು. ನಮಗೇ ಗೊತ್ತಿರೋದಿಲ್ಲ ನಾವೆಲ್ಲರೂ ಒಂದು ಬಂಗಾರದ ಗಣಿಯ ಮೇಲೆಯೇ ಕೂತಿದ್ದೇವೆ ಅಂತ. ನಾವು ಮಣ್ಣಿನ ದಿಬ್ಬದ ಮೇಲೆ ಕೂತಿದ್ದೇವೆ ಅಂತ ತಿಳಿದಿರುತ್ತೇವೆ. ಆದರೆ ಒಳ್ಳೆ, ನುರಿತ ಶಿಕ್ಷಕನಿಗೆ ಮಾತ್ರ ನೀವು ಕುಳಿತಿದ್ದು ಬರೋಬ್ಬರಿ ಬಂಗಾರದ ಗಣಿ ಮಾದರಿಯ ದಿಬ್ಬದ ಮೇಲೆಯೇ ಅಂತ ಗೊತ್ತಾಗಿಬಿಡುತ್ತದೆ. ನಿಮ್ಮಲ್ಲೇ ಹುದುಗಿರುವ ಬಂಗಾರದ ಅದಿರು ಅಂದರೆ ಅದೇ ನಿಮ್ಮ hidden potential. ನಿಮ್ಮ ಬಲಗಳು (strengths) ಯಾವವು, ಬಲಹೀನತೆಗಳು (weaknesses) ಯಾವವು ಎಲ್ಲ ಬರೋಬ್ಬರಿ ಗೊತ್ತಾಗುವದು ಒಳ್ಳೆಯ ಶಿಕ್ಷಕರಿಗೆ ಮಾತ್ರ. ನಿಮ್ಮ hidden potential ಅನ್ನು ನಿಮಗೇ ತೋರಿಸಿ, ಅದನ್ನು ಹೇಗೆ ಸತ್ವಶಾಲಿಯಾಗಿ (effective) ಬಳಸಿಕೊಂಡು, ಹೇಗೆ ಒಳ್ಳೆಯ ಬಾಳು ರೂಪಿಸಿಕೊಳ್ಳಬೇಕು ಅಂತ ತೋರಿಸಿಕೊಡುತ್ತಾರೆ ಶಿಕ್ಷಕರು. ಶಿಕ್ಷಣ ವ್ಯವಸ್ಥೆ ಅದಕ್ಕೆ ಪೂರಕವಾಗಿ ಇರಬೇಕಷ್ಟೇ. ಮತ್ತೆ ಶಿಕ್ಷಕ ತೋರಿಸಬಹುದಾದ, ನಮ್ಮಲ್ಲೇ ಇರುವ hidden potential ನಮಗೇ ಇಷ್ಟವಾಗಬೇಕು. ಒಳ್ಳೆ ಬರಹಗಾರನ hidden potential ಇಟ್ಟುಕೊಂಡು ಡಾಕ್ಟರ ಆಗುತ್ತೇನೆ ಅಂತ ಹೇಳಿ ಹೊರಟರೆ ಬಂಗಾರದ ಗಣಿ ಬಿಟ್ಟು ಮಣ್ಣಿನ ದಿಬ್ಬ ಅಗೆದಂತೆಯೇ.

ಹೀಗೆ ನಮ್ಮಲ್ಲೇ ಇರುವ hidden potential ಎಂಬ ಬಂಗಾರದ ಗಣಿಯನ್ನು ಹೇಗೆ ಅಗೆಯಬೇಕು, ಅದಿರನ್ನು ಹೇಗೆ ಹೊರತೆಗೆಯಬೇಕು, ಹೇಗೆ ಸಂಸ್ಕರಿಸಬೇಕು, ಇತ್ಯಾದಿ ಹೇಳಿಕೊಡುತ್ತಾರೆ ಒಳ್ಳೆ ಶಿಕ್ಷಕರು. ಬಂಗಾರ ಉಪಯೋಗಕ್ಕೆ ಬರಬೇಕು ಅಂದರೆ ಅದಕ್ಕೊಂದಿಷ್ಟು ತಾಮ್ರ ಇತ್ಯಾದಿ ಸೇರಿಸಬೇಕು. ಅಂದರೆ ಕೇವಲ ಪುಸ್ತಕ ವಿದ್ಯೆ ಅಷ್ಟೇ ಅಲ್ಲ ಜೊತೆಗೆ ವ್ಯಾವಹಾರಿಕ ಜ್ಞಾನವೂ ಬೇಕು ಅಂದರೆ academic knowledge ಜೊತೆಗೆ ಒಂದಿಷ್ಟು street smartness ಸಹ ಬೇಕು ಅಂತ ಅರ್ಥ. ಇದೆಲ್ಲ ಇದ್ದರೆ ಬರೋಬ್ಬರಿ ಬಂಗಾರದ ಗಣಿಗಾರಿಕೆ ಮಾಡಿ, ಬಂಗಾರ ತೆಗೆದು, ಏನು ಬೇಕೋ ಎಲ್ಲ ಆಭರಣ ಮಾಡಿಕೊಂಡು, 'ಬಂಗಾರದಂತಹ ಬದುಕು' ಕಟ್ಟಿಕೊಳ್ಳಬಹುದು. ಅದಕ್ಕೆ ಒಳ್ಳೆಯ ಶಿಕ್ಷಕರು ತುಂಬಾ ಸಹಕಾರಿ. ಬೇಕೇಬೇಕು. ಒಳ್ಳೆಯ ಶಿಕ್ಷಕರ ಸಹಾಯ, ಮಾರ್ಗದರ್ಶನ ಇದ್ದರೆ ಹತ್ತು ನಿಮಿಷದಲ್ಲಿ ಕಲಿಯಬಹುದಾದ್ದನ್ನು ಸ್ವಂತ ಕಲಿಯಲು ಹತ್ತು ದಿನ ಬೇಕಾಗುತ್ತದೆ. ಅಷ್ಟು ಟೈಮ್ ಯಾರ ಹತ್ತಿರವೂ ಇಲ್ಲ. ಹಾಗಾಗಿ self study ಎಷ್ಟೇ ಸಮಾಧಾನ, ಸಂತೃಪ್ತಿ ತಂದುಕೊಟ್ಟರೂ ಅದು ತುಂಬಾ ನಿಧಾನ.

ಹೀಗೆ ಒಳ್ಳೆಯ ಶಿಕ್ಷಕ ಬಂಗಾರದಂತಹ ಬಾಳು ಕಟ್ಟಿಕೊಳ್ಳಲು ಸಹಾಯಮಾಡಿ ಹೋಗಿರುತ್ತಾನೆ. ಹಾಗೆಯೇ ಬಾಳು ಕೂಡ ಕಟ್ಟಿಗೊಂಡಿರುತ್ತೇವೆ. ನಂತರ ಯಾವಾಗಲೋ ನಮ್ಮ ಪರಿಸ್ಥಿತಿ ಅನುಕೂಲವಾದಾಗ, ವ್ಯಕ್ತಿತ್ವ ಪಕ್ವವಾದಾಗ, ಮುಹೂರ್ತ ಕೂಡಿಬಂದಾಗ ಅದೆಲ್ಲಿಂದಲೋ ಒಬ್ಬವ ಬಂದು ನಿಲ್ಲುತ್ತಾನೆ. ಅವನೇ ಗುರು! ಗುರು ಅಂತ ಅವನೇನೂ ಬೋರ್ಡ್ ಹಾಕಿಕೊಂಡು ಬಂದು ನಿಂತಿರುವದಿಲ್ಲ. ನಮ್ಮಲ್ಲೇ ಹುದುಗಿರುವ ಪರಮಗುರು, ನಮ್ಮ ಆತ್ಮಗುರು ಮಾನವಾಕೃತಿಯ ಆ ಗುರುವಿನಲ್ಲಿ ತನ್ನನ್ನೇ ತಾನು ಕಂಡುಕೊಂಡು ಆ ಆಕೃತಿಯನ್ನು ಗುರು ಅಂತ ಸ್ವೀಕರಿಸಿಬಿಡುತ್ತಾನೆ. ಅದು ಜೀವಂತ ಆಕೃತಿಯೇ ಆಗಿರಬಹುದು ಅಥವಾ ಎಂದೋ ಅಳಿದು ಹೋದ ಆಕೃತಿಯ ಉಪದೇಶವೇ  ಇರಬಹುದು. ಕೃಷ್ಣ, ಬುದ್ಧ, ಕ್ರಿಸ್ತ, ಆದಿ ಶಂಕರರು ಇವತ್ತು ಇಲ್ಲ. ಆದರೂ ಅನೇಕರಿಗೆ ಅವರುಗಳೇ ಗುರುಗಳು, ಅವರ ಉಪದೇಶಗಳ ಮೂಲಕ.

ಗುರು ಬದುಕು ಬದಲಾಯಿಸುವದು ಅಂದರೆ ನಿಮ್ಮ ಬದುಕು ಬಂಗಾರದ್ದೇ ಆಗಿದ್ದರೂ ಅದೆಲ್ಲ ಕವಡೆ ಕಿಮ್ಮತ್ತಿಲ್ಲದ ಕಾಗೆ ಬಂಗಾರ ಅಂದುಬಿಡುತ್ತಾನೆ. ನೀವು, ನಿಮ್ಮ ಬಾಡಿ, ನಿಮ್ಮ ಗಾಡಿ, ಲೇಡಿ, ಬೀಡಿ ಎಲ್ಲ ಬಂಗಾರದ್ದೇ ಇರಬಹುದು. ಆದರೆ ಆತ್ಮಜ್ಞಾನ, ಬ್ರಹ್ಮಜ್ಞಾನ ಮತ್ತು ಅದು ತಂದುಕೊಡುವ ಸಮೃದ್ಧಿ, ಸಮಾಧಾನ, ಸಂತೃಪ್ತಿ ಮುಂದೆ ಇವೆಲ್ಲ ಕಾಗೆ ಬಂಗಾರಕ್ಕೆ ಸಮಾನ ಅಂತ ಕಲಿಸಿಕೊಡುತ್ತಾನೆ. ತಿಳಿಸಿಕೊಡುತ್ತಾನೆ. ಅರಿವನ್ನು ಮೂಡಿಸಿಕೊಡುತ್ತಾನೆ. ಮೊದಲು ಬಂಗಾರದಂತಹ ಬದುಕು ಕಟ್ಟಿಕೊಂಡು, ಬಂಗಾರದ ಮೇಲಿನ ಮೋಹ ತಕ್ಕ ಮಟ್ಟಿಗೆ ಕಡಿಮೆಯಾದ ಮನುಷ್ಯ ಮಾತ್ರ ಇಂತಹ ಖಡಕ್ ಉಪದೇಶಗಳಿಗೆ ತನ್ನನ್ನು ತಾನು ತೆರೆದುಕೊಳ್ಳಬಲ್ಲ. ಅಲ್ಲಿಯ ತನಕ ನಿಜವಾದ ಗುರು ನಿಮಗೆ ಸಿಗುವದೂ ಇಲ್ಲ ಬಿಡಿ. ಅದು ಒಂದು ಮಾತೇ ಇದೆಯಲ್ಲ. When the student is ready, the master shows up. ಹಾಗೆ.

ನಿಮಗೆ ಶಿಕ್ಷಕರಲ್ಲೇ ಗುರುಗಳೂ ಸಿಕ್ಕಿಬಿಟ್ಟಿದ್ದಾರೆಯೇ? ಒಳ್ಳೆಯದು. ಮೊದಲೆಲ್ಲ ಹಾಗೇ ಇರುತ್ತಿತ್ತು. ಆಗೆಲ್ಲ ಶಿಕ್ಷಣ ಬ್ರಹ್ಮವಿದ್ಯೆಯಿಂದ ಶುರುವಾಗುತ್ತಿತ್ತು. ವೇದ, ಉಪನಿಷತ್ತು, ವೇದಾಂಗ ಇತ್ಯಾದಿ. ಬ್ರಹ್ಮವಿದ್ಯೆ ಬದುಕು ಬದಲಾಯಿಸುವ ವಿದ್ಯೆ. ಆ ವಿದ್ಯೆ ಕಲಿಯುವಾಗ ವೇದಾಧಾರಿತ ವೇದಾಂಗಗಳಾದ ಆಯುರ್ವೇದ, ಜ್ಯೋತಿಷ್ಯ, ವ್ಯಾಕರಣ, ನ್ಯಾಯ ಮುಂತಾದ ವಿಷಯಗಳ ಅಧ್ಯಯನ ಅವರವರ hidden potential ಗೆ ಅನುಗುಣವಾಗಿ ಆಗುತ್ತಿತ್ತು. ಡಿಗ್ರಿ ಮಾಡಿದವರು ಮುಂದೆ ಮಾಸ್ಟರ್ ಡಿಗ್ರಿ ಮಾಡಿದಂತೆ. ಮೊದಲು ಬ್ರಹ್ಮವಿದ್ಯೆ ಎಲ್ಲರೂ ಕಲಿಯುತ್ತಿದ್ದರು. ಬದುಕಲು ಬೇಕಾದ ವಿದ್ಯೆಗಳು ವೇದಾಂಗಗಳ ಅಧ್ಯಯನದ ಮೂಲಕ ಕಲಿತು ಆಗಿನ ಕಾಲದಲ್ಲೂ ವೈದ್ಯರು, ವಕೀಲರು, ವ್ಯಾಕರಣ ಪಂಡಿತರು ಎಲ್ಲರೂ ತಯಾರಾಗುತ್ತಿದ್ದರು. ಆದರೆ ಭದ್ರ ಬುನಾದಿಯಾಗಿ ಬ್ರಹ್ಮವಿದ್ಯೆ ಇರುತ್ತಿತ್ತು. ಅದೇ ದೊಡ್ಡ ಆಸ್ತಿ. ಮಿಕ್ಕಿದ್ದೆಲ್ಲ ಜಾಸ್ತಿ.

ಕೋತಿ ವಿದ್ಯೆ, ಬ್ರಹ್ಮ ವಿದ್ಯೆ ಅಂತ ಇದೆ. 'ಕಲಿಯುವ ಮೊದಲು ಎಲ್ಲವೂ ಬ್ರಹ್ಮ ವಿದ್ಯೆ. ಕಲಿತಾದ ನಂತರ ಕೋತಿ ವಿದ್ಯೆ,' ಅಂತ ಗಾದೆ ಮಾತಿದೆ. ಬದುಕಲು ಬೇಕಾಗಿದ್ದು ಕೋತಿ ವಿದ್ಯೆ. ಬದುಕು ಬದಲಾಯಿಸಿಕೊಳ್ಳಲು ಬೇಕಾಗಿದ್ದು ಬ್ರಹ್ಮ ವಿದ್ಯೆ. ಮೊದಲು ಎರಡೂ ಒಂದೇ ಸಲ ಕಲಿಸುತ್ತಿದ್ದರು. ನಮ್ಮ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಕೋತಿ ವಿದ್ಯೆಗಳನ್ನು ಮಾತ್ರ ಕಲಿಯುತ್ತೇವೆ. ಅದು ಬೇಕು ಬಿಡಿ. ಹೇಳಿಕೇಳಿ ಮಂಗನಿಂದ ಮಾನವರಾದವರು, ಆಗುತ್ತಿರುವವರು ನಾವು. ರೂಪದಲ್ಲಿ ಏನೋ ಒಂದು ತರಹ ಮಾನವರಂತೆ ಕಂಡರೂ ನಮ್ಮ ಬುದ್ಧಿ ಮಂಗನದೇ ಇರುತ್ತದೆ. ಅದಕ್ಕೇ ತಾನೇ ಮಾನವ ಮನಸ್ಸನ್ನು ಮಂಗನಿಗೆ ಹೋಲಿಸುವದು. ಕೇವಲ ಸಾದಾ ಮಂಗವಲ್ಲ ನಮ್ಮ ಮನಸ್ಸು. ಬರೋಬ್ಬರಿ ಹೆಂಡ ಕುಡಿದು, ಮೈಮೇಲೆ ಭೂತ ಬಂದಂತಹ ಮಂಗಕ್ಕೆ  ಮೇಲಿಂದ ಚೇಳೊಂದು ಕಡಿದುಬಿಟ್ಟರೆ ಹೇಗೆ ಅಂತ ಊಹಿಸಿ. ಎಗ್ಗಾದಿಗ್ಗಿ ಎಗರಾಡುತ್ತಿರುತ್ತದೆ. ಹಾಗೆ ನಮ್ಮ ಮನಸ್ಸು. ಅಷ್ಟು ಚಂಚಲ.

[There was a monkey, restless by his own nature, as all monkeys are. As if that were not enough someone made him drink freely of wine, so that he became still more restless. Then a scorpion stung him. When a man is stung by a scorpion, he jumps about for a whole day; so the poor monkey found his condition worse than ever. To complete his misery a demon entered into him. What language can describe the uncontrollable restlessness of that monkey? The human mind is like that monkey.

Swami Vivekananda, Raja-Yoga]

ಅಂತಹ ಮನಸ್ಸು ಕಲಿಯಬಹುದಾದದ್ದು ಕೋತಿ ವಿದ್ಯೆ. ಹಾಗಾಗಿ ಕೋತಿ ವಿದ್ಯೆ ಬೇಕು. ಆದರೆ ಅದೇ ಪರಮ ವಿದ್ಯೆ ಅಂತ ತಿಳಿದುಕೊಂಡು ಅಷ್ಟಕ್ಕೇ ನಿಲ್ಲಿಸಿದರೆ ನಾವು ಮಂಗನಿಂದ ಮಾನವನಾಗುವದಿಲ್ಲ. ಮಂಗಗಳಾಗಿಯೇ ಉಳಿದುಬಿಡುತ್ತೇವೆ. ಅದಕ್ಕೇ ಇರಬೇಕು, 'Spirituality is like taking our evolution into our own hands,' ಅಂತ ಹೇಳುವದು. ಅಂದರೆ ಅಧ್ಯಾತ್ಮ, ಬ್ರಹ್ಮವಿದ್ಯೆ ಕಲಿಯುವದು, ಆಚರಿಸುವದು ಅಂದರೆ ನಮ್ಮ ವಿಕಸನವನ್ನು ನಾವೇ ಮುಂದುವರೆಸುವದು ಅಂತ ಅರ್ಥ. ನಮ್ಮ ವಿಕಸನದ ಜವಾಬ್ದಾರಿ ನಾವೇ ವಹಿಸಿಕೊಳ್ಳುವದು. ನಮ್ಮ ವಿಕಸನವನ್ನು ನಾವೇ ತ್ವರಿತಗೊಳಿಸುವದು. ಎಷ್ಟೋ ಜನ್ಮಗಳ ನಂತರ ಎಲ್ಲರಿಗೂ ಬ್ರಹ್ಮ ಜ್ಞಾನ ಸಿಕ್ಕೇಸಿಗುತ್ತದಂತೆ. ಹಾಗಂತ ಎಲ್ಲ ಮಹನೀಯರೂ, ಭಗವಾನ ಶ್ರೀಕೃಷ್ಣ ಎಲ್ಲರೂ ಹೇಳಿದ್ದಾರೆ. ಅದರೂ ಕೆಲವರಿಗೆ ಅದನ್ನು ತ್ವರಿತಗೊಳಿಸಿಕೊಳ್ಳುವ ಭಗವಂತನ grace ನ ಕೃಪೆಯಾಗುತ್ತದೆ. ಆಗ ಅವರಿಗೆ ತಕ್ಕ ಗುರುವೂ ಸಿಗುತ್ತಾನೆ. ಬಡಿದಾಡಿ ಕಟ್ಟಿಗೊಂಡ ಬಂಗಾರದ ಬದುಕು ಕೇವಲ ಕಾಗೆ ಬಂಗಾರದ್ದು ಅಂತ ಗೊತ್ತಾಗಿಬಿಡುತ್ತದೆ. ಅಂದಿನಿಂದ ಅವರ ವಿಕಸನ ಶುರು. ಅಲ್ಲಿಯವರೆಗೆ ಕೋಟಿ ಕೋಟಿ ಕೋತಿ ವಿದ್ಯೆ ಕಲಿತವ ಬ್ರಹ್ಮ ವಿದ್ಯೆಯ ಜಿಜ್ಞಾಸುವಾಗುತ್ತಾನೆ. ಬದುಕನ್ನು ಕಟ್ಟಿಕೊಂಡವ ಬದುಕನ್ನು ಬದಲಾಯಿಸಿಕೊಳ್ಳುವತ್ತ ಗಮನಹರಿಸುತ್ತಾನೆ. ಮುಂದೆ ಅವರವರ ಕರ್ಮಾನುಸಾರ ವಿಕಸನ ಆಗುತ್ತದೆ. ಇದೇ ಜನ್ಮದಲ್ಲಾಗಬಹುದು. ಇನ್ನೂ ಸಾವಿರ ಜನ್ಮಗಳು ಬೇಕಾಗಲೂಬಹುದು. ಆದರೂ ಶುಭಾರಂಭ. ಮಂಗನಿಂದ ಮಾನವನಾಗುವ ದಿಸೆಯಲ್ಲಿ all the best!

ಇನ್ನು ಮೂರು ದಿವಸಗಳ ನಂತರ ಸೆಪ್ಟೆಂಬರ್ ಐದು, ಶಿಕ್ಷಕರ ದಿನಾಚರಣೆ. ಅದರ ಬಗ್ಗೆ ಬರೆಯಲು ಶುರು ಮಾಡಿದ ಪೋಸ್ಟ ಎಲ್ಲೋ ಹೋಯಿತು. ಶಿಕ್ಷಕ ದಿನಾಚರಣೆ ದಿನ ಮತ್ತೊಂದು ಪೋಸ್ಟ್ ಹಾಕೋಣ. ಸದ್ಯಕ್ಕೆ ಇದು.

2 comments:

sunaath said...

ತುಂಬ ಸಮರ್ಪಕ ವಿಶ್ಲೇಷಣೆ. ನನಗೆ ಕಲಿಸಿದ ಕೆಲವು ಶಾಲಾಗುರುಗಳು ಇನ್ನೂ ನನ್ನ ಮನಸ್ಸಿನಲ್ಲಿ ವಿರಾಜಮಾನರಾಗಿದ್ದಾರೆ.

Mahesh Hegade said...

ಥ್ಯಾಂಕ್ಸ್ ಸುನಾಥ್ ಸರ್!