Monday, September 28, 2015

ಪಾಕಿಸ್ತಾನದ ಅಣುಸ್ಥಾವರವನ್ನು ಧ್ವಂಸ ಮಾಡುವ ಸ್ಕೆಚ್ ಹಾಕಿತ್ತೇ ಇಸ್ರೇಲ್!?

ಇಸವಿ ೧೯೮೪. ಭಾರತದ ಬಾಹ್ಯ ಬೇಹುಗಾರಿಕೆ ಸಂಸ್ಥೆಯಾದ R&AW ದ ಬೇಹುಗಾರರು ಒಂದು ಅತಿ ಮಹತ್ವದ ದಾಖಲೆಯನ್ನು ಸಂಪಾದಿಸಿಬಿಟ್ಟಿದ್ದರು. ಅಮೇರಿಕಾದ ರಾಜತಾಂತ್ರಿಕರು ನವದೆಹಲಿಯಿಂದ  ವಾಷಿಂಗ್ಟನ್ನಿಗೆ ಕಳಿಸಿದ್ದ ಒಂದು ರಹಸ್ಯ ಕಡತವನ್ನು ಅದ್ಯಾವ ಮಾಯೆಯಲ್ಲಿಯೋ ಮಾರ್ಗದಲ್ಲಿಯೇ intercept ಮಾಡಿದ್ದ ಭಾರತದ ಬೇಹುಗಾರರು ಅದರ ಒಂದು ನಕಲು ಪ್ರತಿ ಮಾಡಿಕೊಂಡುಬಿಟ್ಟಿದ್ದರು. ಅದರಲ್ಲಿದ್ದ ಮಾಹಿತಿ ಮಾತ್ರ ಬೆಚ್ಚಿಬೀಳಿಸುವಂತಿತ್ತು.

ಪಾಕಿಸ್ತಾನದಲ್ಲಿ ಆಗುತ್ತಿದ್ದ ಬೆಳವಣಿಗೆಗಳ ಮೇಲೆ ಬರೋಬ್ಬರಿ ಒಂದು ನಜರ್ ಮಡಗಿದ್ದ ಅಮೇರಿಕಾ ಎಲ್ಲವನ್ನೂ ಅದರಲ್ಲಿ ದಾಖಲಿಸಿತ್ತು. ಅದರಲ್ಲಿದ್ದ ಖತರ್ನಾಕ್ ವಿಷಯ - 'ಇನ್ನು ಎರಡು ವರ್ಷಗಳಲ್ಲಿ ಪಾಕಿಸ್ತಾನ ಪರಿಪೂರ್ಣ ಪರಮಾಣು ಶಕ್ತಿಯುಳ್ಳ ರಾಷ್ಟ್ರವಾಗಿ ಹೊರಹೊಮ್ಮುತ್ತದೆ. ಪಾಕಿಸ್ತಾನದ ಕಹುಟಾದಲ್ಲಿರುವ ಅಣುಸ್ಥಾವರದಲ್ಲಿ ಅಣುಬಾಂಬಿನ ತಯಾರಿ ತ್ವರಿತ ಗತಿಯಲ್ಲಿ ಸಾಗುತ್ತಿದೆ!'

ಇನ್ನೆರೆಡು ವರ್ಷಗಳಲ್ಲಿ ಪಾಕಿಸ್ತಾನವೂ ಅಣುಬಾಂಬ್ ಹೊಂದಲಿದೆ ಅನ್ನುವ ವಿಷಯ ದೊಡ್ಡ ಮಟ್ಟಿನ ಸಂಚಲನವನ್ನು ಹುಟ್ಟುಹಾಕಿತು. ಭಾರತದ ಸರ್ಕಾರ, ಸೇನೆ, ರಾಜತಾಂತ್ರಿಕ ವಲಯಗಳಲ್ಲಿ ದೊಡ್ಡ ಮಟ್ಟದ ಗಲಿಬಿಲಿ, ಗಾಬರಿ, ಆತಂಕ! ಪಾಕಿಸ್ತಾನ ಮೊದಲೇ ಎಲ್ಲ ರೀತಿಯಿಂದ ಅಸ್ಥಿರವಾದ ದೇಶ. ಯಾವ ತಲೆಕೆಟ್ಟ ಮನುಷ್ಯ ಯಾವಾಗ ಬಂದು ಅಲ್ಲಿನ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾನೋ ಗೊತ್ತಿಲ್ಲ. ಪರಿಸ್ಥಿತಿ ಮೊದಲೇ ಅಷ್ಟು ನಾಜೂಕಾಗಿರುವಾಗ ಪಾಕಿಗಳ ಕೈಯಲ್ಲಿ ಅಣುಬಾಂಬ್ ಸಹ ಬಂದುಬಿಟ್ಟರೆ ಅಷ್ಟೇ ಮತ್ತೆ. ಅದು ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ ಅಲ್ಲ. ಅದಕ್ಕಿಂತ ನೂರು ಪಟ್ಟು ಡೇಂಜರ್. ಸೀದಾ ಅಂಡರ್ವೇರ್ ಚಡ್ಡಿಯಲ್ಲಿಯೇ ಕೆಂಡ ಬಂದುಬಿದ್ದಂತೆ. 'ಪಾಕಿಸ್ತಾನದ ಅಣುಬಾಂಬ್ ತಯಾರಾಗದಂತೆ ಏನಾದರೂ ಉಪಾಯ ಮಾಡಬೇಕು. ಏನು ಮಾಡಬೇಕು?' ಅಂತ ಆಗಿನ ಪ್ರಧಾನಿ ಇಂದಿರಾ ಗಾಂಧಿಯಿಂದ ಹಿಡಿದು ಸೈನ್ಯದ ಮುಖ್ಯಸ್ಥರು, ಬೇಹುಗಾರಿಕೆ ಸಂಸ್ಥೆಗಳ ಹಿರಿಯರು ಎಲ್ಲ ತಲೆಕೆಡಿಸಿಕೊಂಡರು. ಆವಾಗ ನೆನಪಾಗಿದ್ದೇ ಇಸ್ರೇಲ್ ಎಂಬ ಮಧ್ಯಪ್ರಾಚ್ಯದ ಪುಟ್ಟ ದೇಶ.

ಆಗ ಭಾರತ ಮತ್ತು ಇಸ್ರೇಲ್ ಮಧ್ಯೆ formal ರಾಜತಾಂತ್ರಿಕ ಸಂಬಂಧಗಳು ಇರಲಿಲ್ಲ. ಯಾಕೆಂದರೆ ಭಾರತ official ಆಗಿ ಪ್ಯಾಲೆಸ್ಟೈನ್ ವಿಮೋಚನಾ ಸಂಸ್ಥೆ (PLO) ಮತ್ತು ಅದರ ಮುಖ್ಯಸ್ಥ ಯಾಸೀರ್ ಅರಾಫತ್ ಅವರನ್ನು ಬೆಂಬಲಿಸುತ್ತಿತ್ತು. PLO ಮತ್ತು ಇತರೆ ಸಂಸ್ಥೆಗಳು ಸ್ವತಂತ್ರ ಪ್ಯಾಲೆಸ್ಟೈನ್ ದೇಶಕ್ಕಾಗಿ ಇಸ್ರೇಲ್ ವಿರುದ್ಧ ಹೋರಾಡುತ್ತಿದ್ದವು. ಇಸ್ರೇಲ್ ಜೊತೆ formal ರಾಜತಾಂತ್ರಿಕ ಸಂಬಂಧ ಇಲ್ಲದಿದ್ದರೆ ಏನಾಯಿತು backdoor diplomacy ಅಂತ ಇರುತ್ತದೆ ನೋಡಿ. ಹಾಗಾಗಿ ಕೆಲವು ವಲಯಗಳಲ್ಲಿ ಇಸ್ರೇಲ್ ಜೊತೆ ಒಂದು ರೀತಿಯ informal ಮತ್ತು ರಹಸ್ಯ ಸಂಬಂಧ ಇದ್ದೇ ಇತ್ತು. ಭಾರತದ ಬೇಹುಗಾರಿಕೆ ಸಂಸ್ಥೆ R&AW ಮತ್ತು ಇಸ್ರೇಲಿನ ಮಹಾ ಖತರ್ನಾಕ್ ಬೇಹುಗಾರಿಕೆ ಸಂಸ್ಥೆಯಾದ ಮೊಸ್ಸಾದ್ (Mossad) ಮಧ್ಯೆ ಒಂದು ರೀತಿಯ ಸಂಬಂಧ ಇತ್ತು. ಕೆಲವು ವಿಷಯಗಳಲ್ಲಿ ವಿಚಾರ, ಮಾಹಿತಿ ವಿನಿಮಯ ಆಗುತ್ತಿತ್ತು. ವಿಶೇಷ ಕಾರ್ಯಾಚರಣೆಗಳಲ್ಲಿ ಭಾಗಿಯಾಗುತ್ತಿದ್ದ ಭಾರತ ಸೈನ್ಯದ ಸೈನಿಕರಿಗೆ ಕಮಾಂಡೋ ತರಬೇತಿಯನ್ನು ಇಸ್ರೇಲಿಗಳೇ ಕೊಟ್ಟಿದ್ದರು ಅಂತ ಸುದ್ದಿ ಇತ್ತು. ಆದರೆ ಅವೆಲ್ಲವೂ ಗುಪ್ತ, ಗುಪ್ತ.

ಪಾಕಿಸ್ತಾನ ಅಣುಬಾಂಬ್ ತಯಾರಿಸಲಿದೆ ಮತ್ತು ಇನ್ನು ಕೇವಲ ಎರಡೇ ವರ್ಷದಲ್ಲಿ ಭಾರತದ ಬುಡಕ್ಕೇ ಬೆಂಕಿ ಇಡಲಿದೆ ಅಂತ ಮಾಹಿತಿ ಸಿಕ್ಕ ನಂತರ ಭಾರತಕ್ಕೆ ಇಸ್ರೇಲ್ ನೆನಪಾಗಲು ಕಾರಣವೂ ಇತ್ತು. ಕೇವಲ ಮೂರೇ ವರ್ಷಗಳ ಹಿಂದೆ ಇಸ್ರೇಲ್ ಒಂದು ಮಹಾ ಭಯಂಕರ, ಹಿಂದೆಂದೂ ಯಾರೂ ಮಾಡಿರದ ಒಂದು ಜಾಬಾಜ್ ಕಾರ್ಯಾಚರಣೆ ಮಾಡಿಬಿಟ್ಟಿತ್ತು. ಅದು ಏನು ಗೊತ್ತೇ? ಇಸ್ರೇಲಿನ ಪಕ್ಕದ ಮನೆಯಂತಿದ್ದ ಇರಾಕ್ ದೇಶದಲ್ಲಿ ಹುಚ್ಚ ಸರ್ವಾಧಿಕಾರಿ ಸದ್ದಾಮ್ ಹುಸೇನ್ ಇದ್ದ. ಅವನಿಗೂ ದೊಡ್ಡ ದೊಡ್ಡ ಶಸ್ತ್ರಾಸ್ತ್ರಗಳ ಹುಚ್ಚು. ಅವನೂ ಅಣುಬಾಂಬ್ ತಯಾರು ಮಾಡಲು ಹೊರಟಿದ್ದ. ಅದಕ್ಕೆ ಬೇಕಾದ ವಿಜ್ಞಾನಿಗಳನ್ನು, ತಂತ್ರಜ್ಞರನ್ನು ವಿದೇಶಗಳಿಂದ ಆಮದು ಮಾಡಿಕೊಂಡಿದ್ದ. ತನ್ನ ಅಕ್ಕಪಕ್ಕದ ರಾಷ್ಟ್ರವೊಂದು, ಅದರಲ್ಲೂ ಹುಚ್ಚ ಸರ್ವಾಧಿಕಾರಿಯೊಬ್ಬ ಆಳುತ್ತಿದ್ದ ಪರಮ ಶತ್ರು ರಾಷ್ಟ್ರವೊಂದು, ಅಣುಬಾಂಬ್ ತಯಾರಿಸುತ್ತಲಿದೆ ಎಂಬುದನ್ನು ಇಸ್ರೇಲ್ ಕಡೆಗಣಿಸಲು ಸಾಧ್ಯವೇ ಇರಲಿಲ್ಲ. ಇಸ್ರೇಲ್ ಪಕ್ಕದಲ್ಲಿರುವವು ಅಷ್ಟೂ ರಾಷ್ಟ್ರಗಳು ಇಸ್ಲಾಮಿಕ್ ರಾಷ್ಟ್ರಗಳು. ಇಸ್ರೇಲ್ ಯಹೂದಿಗಳ ದೇಶ. ಅವರಿಗೆ ಮತ್ತು ಅವರ ಇಸ್ಲಾಮಿಕ್ ನೆರೆಹೊರೆಯವರಿಗೆ ಮೊದಲಿಂದಲೂ ದ್ವೇಷ ಮತ್ತು ಬಡಿದಾಟ. ಇಸ್ರೇಲಿನ ಹುಟ್ಟಡಗಿಸಿಯೇ ತೀರುತ್ತೇವೆ ಅಂತ ಅಕ್ಕಪಕ್ಕದ ಇಸ್ಲಾಮಿಕ್ ರಾಷ್ಟ್ರಗಳ ಪ್ರತಿಜ್ಞೆ. ಅದೇ ರೀತಿ ನಡೆದಿತ್ತು ಕೂಡ. ಸಾಕಷ್ಟು ಬಾರಿ ಸಿರಿಯಾ, ಈಜಿಪ್ಟ್, ಜೋರ್ಡಾನ್, ಇರಾಕ್ ಎಲ್ಲ ಇಸ್ರೇಲ್ ಮೇಲೆ ದಾಳಿ ಮಾಡಿದ್ದವು. ೧೯೬೫ ರಲ್ಲಿ ಅಂತೂ ಸಿರಿಯಾ, ಈಜಿಪ್ಟ್, ಜೋರ್ಡಾನ್ ಮೂರೂ ದೇಶಗಳು ಕೂಡಿಯೇ ಇಸ್ರೇಲ್ ಮೇಲೆ synchronized ದಾಳಿ ಮಾಡಿಬಿಟ್ಟಿದ್ದವು. ಅದೇ 'ಆರು ದಿವಸಗಳ ಯುದ್ಧ'. ಇಸ್ರೇಲಿಗೆ ಮುಂಚಿತ ಮಾಹಿತಿ ಕೂಡ ಒಂದಿನಿತೂ ಸಿಕ್ಕಿರಲಿಲ್ಲ. 'ಮಾಡು ಇಲ್ಲವೇ ಮಡಿ!' ಎಂಬ ಕಠಿಣ ಪರಿಸ್ಥಿತಿ ಇಸ್ರೇಲಿಗೆ. ತಮ್ಮ ದೇಶದ, ಯಹೂದಿ ಜನಾಂಗದ ಅಸ್ತಿತ್ವದ ಬುಡಕ್ಕೇ ಬಂದಾಗ ಇಸ್ರೇಲಿಗಳಿಗೆ ಎಲ್ಲೆಲ್ಲಿಂದಲೋ ಇನ್ನಿಲ್ಲದ ಶೌರ್ಯ, ಪರಾಕ್ರಮ, determination ಎಲ್ಲ ಬಂದುಬಿಟ್ಟಿತು. ಅದು ಹೇಗೋ ಮಾಡಿ, ದೊಡ್ಡ ಪ್ರಮಾಣದ ಬಲಿದಾನ ನೀಡಿ, ಇಸ್ರೇಲಿಗಳು ಯುದ್ಧ ಗೆದ್ದುಕೊಂಡಿದ್ದರು. ಯುದ್ಧ ಗೆದ್ದುಕೊಂಡಿದ್ದೊಂದೇ ಅಲ್ಲ,  ಈಜಿಪ್ಟ್, ಸಿರಿಯಾ, ಜೋರ್ಡಾನ್ ದೇಶಗಳಿಗೆ ಬರೋಬ್ಬರಿ ಬಡಿದು, ಪ್ರತಿ ದೇಶದ ದೊಡ್ಡ ಪ್ರಮಾಣದ ಜಾಗಗಳನ್ನೂ ಕೂಡ ಆಕ್ರಮಿಸಿ ಕೂತುಬಿಟ್ಟಿದ್ದರು. ಈಜಿಪ್ಟ್ ಸೈನಾಯ್ ಕಳೆದುಕೊಂಡರೆ ಸಿರಿಯಾ ಗೋಲನ್ ಪ್ರದೇಶವನ್ನೂ ಕಳೆದುಕೊಂಡಿತು. ಜೋರ್ಡಾನ್ ಅಂತೂ ಜೋರ್ಡಾನ್ ನದಿಯ ಪಶ್ಚಿಮ ದಂಡೆಯನ್ನು ಪೂರ್ತಿಯಾಗಿ ಕಳೆದುಕೊಂಡು ಅಮ್ಮಾತಾಯಿಯಾಗಿ ಹೋಯಿತು. ಇಷ್ಟೆಲ್ಲ ಸಾಧಿಸಲು ಸಾವಿರಾರು ಇಸ್ರೇಲಿ ಸೈನಿಕರು ಮತ್ತು ನಾಗರಿಕರು ದೊಡ್ಡ ಪ್ರಮಾಣದ ಪರಮ ಬಲಿದಾನ ನೀಡಿದರು. ವೀರಮರಣ ಹೊಂದಿದರು. ಪುಟ್ಟ ದೇಶವಾದ ಇಸ್ರೇಲಿಗೆ ಆ ಯುದ್ಧ ಮಾತ್ರ ಎಲ್ಲ ರೀತಿಯಲ್ಲಿಯೂ ತುಂಬಾ ದುಬಾರಿಯಾಗಿತ್ತು. ಅಷ್ಟೆಲ್ಲಾ ನಷ್ಟವಾದರೂ ಯುದ್ಧ ಗೆದ್ದಿದ್ದೊಂದೇ ಸಮಾಧಾನ.

ಇದಾದ ನಂತರ ಇಸ್ರೇಲ್ ಸಿಕ್ಕಾಪಟ್ಟೆ ಜಾಗರೂಕವಾಗಿಬಿಟ್ಟಿತು. ತನ್ನ ನೆರೆಯ ದೇಶಗಳು ಮತ್ತು ಅವುಗಳ ಕಾರ್ನಾಮೆಗಳ ಮೇಲೆ ಒಂದು ಕಣ್ಣು ಬರೋಬ್ಬರಿ ಇಟ್ಟಿತ್ತು. ಅಂತಹದೇ ಸಂದರ್ಭದಲ್ಲಿ ಇರಾಕಿನ ಪೊರ್ಕಿ ಸರ್ವಾಧಿಕಾರಿ, ಪರಮ ಕ್ರೂರಿ, ಸದ್ದಾಮ್ ಹುಸೇನ್ ಅಣುಬಾಂಬಿನ ತಯಾರಿಕೆ ಶುರುಮಾಡಿಕೊಂಡಿದ್ದ. ಇಸ್ರೇಲ್ ಅದನ್ನು ಕಡೆಗಣಿಸುವ ಹಾಗೆ ಇರಲೇ ಇಲ್ಲ. ಅಂತರಾಷ್ಟ್ರೀಯ ಸಮುದಾಯದಿಂದ ಇರಾಕಿಗೆ ಬುದ್ಧಿ ಹೇಳಿಸಿದರು. ಆಕಡೆ ಕಿವಿಯಿಂದ ಕೇಳಿ ಈಕಡೆ ಕಿವಿಯಿಂದ ಬಿಟ್ಟವನಂತೆ ಅಸಡ್ಡೆಯಿಂದ ಎದ್ದು ಹೋದ ಸದ್ದಾಮ್. ಇರಾಕ್ ಮೇಲೆ ಏನೇನೋ ಆರ್ಥಿಕ, ಇತರೆ ದಿಗ್ಬಂಧನ ವಿಧಿಸುವ ಹಾಗೆ ಮಾಡಿದರು. ಅದಕ್ಕೆಲ್ಲ ಸದ್ದಾಮ ಕ್ಯಾರೆ ಅನ್ನಲಿಲ್ಲ. ಆಗ ಇಸ್ರೇಲ್ ಮಾಡಿದ್ದು ಅಂದರೆ ಸಾರಾಸಗಟಾಗಿ ಅಣುಸ್ಥಾವರಕ್ಕೆ ಸಂಬಂಧಿಸಿದ ಮಂದಿಯನ್ನು ಕೊಲ್ಲಲು ನಿಂತಿದ್ದು. ರಹಸ್ಯ ಕಾರ್ಯಾಚರಣೆಗಳನ್ನು ಮಾಡಿ ಸದ್ದಾಮನ ಅಣುವಿಜ್ಞಾನಿಗಳನ್ನು ಸಿಕ್ಕಸಿಕ್ಕಲ್ಲಿ ಹಿಡಿದು ಕೊಲ್ಲತೊಡಗಿತು ಇಸ್ರೇಲ್. ಅಂತಹ ರಹಸ್ಯ ಮತ್ತು ನಿಗೂಢ ಹತ್ಯೆಗಳು ಅಣುಬಾಂಬ್ ತಯಾರಿಕೆಗೆ ಒಂದು ರೀತಿಯ ಹಿನ್ನಡೆ ಉಂಟು ಮಾಡಿದವು. ಆದರೆ ಸದ್ದಾಮ್ ಕೆಲವೊಂದು ವಿಷಯಗಳಲ್ಲಿ ಸಿಕ್ಕಾಪಟ್ಟೆ ಹುಂಬ. ಆತನಲ್ಲಿ ಬೇಕಾದಷ್ಟು ಪೆಟ್ರೋಲ್ ರೊಕ್ಕವಿತ್ತು. ತನ್ನ ಅಣುವಿಜ್ಞಾನಿಗಳು ಇಸ್ರೇಲಿ ಹಂತಕರ ಕೈಯಲ್ಲಿ ಚಿತ್ರವಿಚಿತ್ರ ರೀತಿಯಲ್ಲಿ ಸಾಯುತ್ತಿದ್ದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಣುವಿಜ್ಞಾನಿಗಳನ್ನು ಖರೀದಿಸಲು ನಿಂತುಬಿಟ್ಟ ಸದ್ದಾಮ್ ಹುಸೇನ್. ಬೇರೆ ಬೇರೆ ದೇಶಗಳಲ್ಲಿ ಸರ್ಕಾರಿ ಕೆಲಸ ಮಾಡಿಕೊಂಡು ಸಣ್ಣ ಪ್ರಮಾಣದ ಶೇಂಗಾ ಪಗಾರ್ ತೆಗೆದುಕೊಳ್ಳುತ್ತಿದ್ದ ಅಣುವಿಜ್ಞಾನಿಗಳು ದುರಾಸೆಯಿಂದ, ಜೀವದ ಹಂಗು ತೊರೆದು, ಇರಾಕಿಗೆ ಬಂದು ಅಣುಬಾಂಬ್ ತಯಾರಿಕೆಗೆ ಟೊಂಕ ಕಟ್ಟಿ ನಿಂತುಬಿಟ್ಟರು. ಅಂತವರ ಪರಿಶ್ರಮದಿಂದ ಇರಾಕಿನ ಅಣುಸ್ಥಾವರ ಒಂದು ಹಂತಕ್ಕೆ ಬಂದಿತ್ತು. ಇಸ್ರೇಲ್ ಆದರೂ ಎಷ್ಟು ಅಂತ ಅಣುವಿಜ್ಞಾನಿಗಳನ್ನು ಕೊಂದೀತು? ಆಗ ಇಸ್ರೇಲ್ ಒಂದು ಖಡಕ್ ನಿರ್ಧಾರಕ್ಕೆ  ಬಂದೇಬಿಟ್ಟಿತು. ಹಿಂದೆಂದೂ ಯಾರೂ ಮಾಡಿರದ ಕಾರ್ಯಾಚರಣೆಯೊಂದಕ್ಕೆ ಸ್ಕೆಚ್ ಹಾಕಿಬಿಟ್ಟಿತು. ಆ ಕಾರ್ಯಾಚರಣೆ ಏನು ಅಂದರೆ - ಸದ್ದಾಮ ಹುಸೇನನ ಅಣುಸ್ಥಾವರದ ಮೇಲೆ ವೈಮಾನಿಕ ಬಾಂಬ್ ದಾಳಿ ಮಾಡಿ ಇಡೀ nuclear complex ನ್ನೇ ನೆಲಸಮ ಮಾಡಿಬಿಡುವದು.

ಐಡಿಯಾ ಏನೋ ಚನ್ನಾಗಿತ್ತು. ಆದರೆ ಅದನ್ನು ಕಾರ್ಯರೂಪಕ್ಕೆ ತರುವದು ಅಷ್ಟು ಸುಲಭವೇ? ಇರಾಕಿನ ಮೇಲೆ ಬಾಂಬ್ ದಾಳಿ ಮಾಡಲು ಇಸ್ರೇಲಿ ವಿಮಾನಗಳು ಶತ್ರು ದೇಶಗಳಾದ ಜೋರ್ಡಾನ್, ಸೌದಿ ಅರೇಬಿಯಾ ದಾಟಿ ಇರಾಕ್ ತಲುಪಬೇಕು. ದಾರಿಯಲ್ಲಿ ಬೇಕಾದಷ್ಟು ಶತ್ರು ರೇಡಾರುಗಳು (radar) ಇವೆ. ಅವುಗಳ ಕಣ್ಣಿಗೆ ಬಿದ್ದರೆ ಯಾವದೇ ಮುಲಾಜಿಲ್ಲದೆ ಇಸ್ರೇಲಿಗಳ ಜೊತೆ ಕಾದಾಟ ಶುರು ಮಾಡೇಬಿಡುತ್ತಾರೆ. ಒಮ್ಮೆ ಜೋರ್ಡಾನ್ ಅಥವಾ ಬೇರೆ ಯಾರ ಜೊತೆಯಾದರೂ ಕಾದಾಟ ಶುರುವಾದರೆ ಇರಾಕಿಗೆ ಸುದ್ದಿ ತಿಳಿದು, ಏನಾದರೂ ಜುಗಾಡ್ ಮಾಡಿಕೊಂಡು, ಸದ್ದಾಮ್ ತನ್ನ ಅಣುಸ್ಥಾವರ ಉಳಿಸಿಕೊಳ್ಳುತ್ತಾನೆ. ಒಟ್ಟಿನಲ್ಲಿ ಶತ್ರು ದೇಶಗಳ ರೇಡಾರುಗಳ ಕಣ್ಣಿಗೆ ಬೀಳದಂತೆ ಇರಾಕ್ ತಲುಪಿಕೊಳ್ಳಬೇಕು. ಅಣುಸ್ಥಾವರದ ಮೇಲೆ ಬಾಂಬ್ ಹಾಕಿ, ನಿರ್ನಾಮ ಮಾಡಿ, ಇರಾಕ್ ಮಾಡುವ ಪ್ರತಿದಾಳಿಯಿಂದ ಬಚಾವಾಗಿ, ಮತ್ತದೇ ವೇಗದಲ್ಲಿ, ಮತ್ತೊಮ್ಮೆ ಯಾವದೇ ರೇಡಾರುಗಳಿಗೆ ಕಾಣದಂತೆ ವಾಪಸ್ ಬಂದು ಇಸ್ರೇಲ್ ತಲುಪಿಕೊಳ್ಳಬೇಕು.

ಇಂತಹದೊಂದು ರಿಸ್ಕಿ ಕಾರ್ಯಾಚರಣೆಗೆ ಇಸ್ರೇಲಿಗಳು ಬರೋಬ್ಬರಿ ಸ್ಕೆಚ್ ಹಾಕಲು ಕುಳಿತರು. ಮೊಸ್ಸಾದಿನ ಬೇಹುಗಾರರು ರಹಸ್ಯವಾಗಿ ಇರಾಕಿಗೆ ಹೋದರು. ಅದು ಹೇಗೆ ಸಾಧಿಸಿದರೋ ಗೊತ್ತಿಲ್ಲ. ಹೇಗೋ ಮಾಡಿ ಅಣುಸ್ಥಾವರದ ಹಲವು ಸುತ್ತಿನ ರಕ್ಷಣೆಯನ್ನು  ಭೇದಿಸಿ, ರಹಸ್ಯವಾಗಿ ಒಳಗೆ ನುಸುಳಿ, ಆಯಕಟ್ಟಿನ ಜಾಗಗಳಲ್ಲಿ beacon ಗಳನ್ನು ಹುದುಗಿಸಿಟ್ಟು ಬಂದರು. ಅವು ರಹಸ್ಯ ರೇಡಿಯೋ ತರಂಗಗಳನ್ನು ಸೂಸುತ್ತಿದ್ದವು. ಆ ರೇಡಿಯೋ ತರಂಗಗಳು ಮುಂದೆ ಮಾಡಬೇಕು ಅಂದುಕೊಂಡಿರುವ ವೈಮಾನಿಕ ಬಾಂಬ್ ದಾಳಿಗೆ ತುಂಬಾ ಸಹಾಯಕಾರಿಯಾಗಲಿದ್ದವು.

ಇಸ್ರೇಲ್ ವಿವರವಾಗಿ ಎಲ್ಲ ಪ್ಲಾನ್ ಮಾಡಿತು. ರೇಡಾರುಗಳಿಂದ ಕಣ್ತಪ್ಪಿಸಿ ಹಾರಲು ವಿಮಾನದ ಪೈಲಟ್ಟುಗಳಿಗೆ ವಿಶೇಷ ತರಬೇತಿಯಾಯಿತು. ಕಾರ್ಯಾಚರಣೆ ವೇಳೆಗೆ ಏನೆಲ್ಲ ತಪ್ಪುಗಳಾಗಬಹುದು, ಅವನ್ನು ಹೇಗೆ ಸರಿಪಡಿಸಿಕೊಳ್ಳಬೇಕು, ಆಕಸ್ಮಾತ ಸರಿಪಡಿಸಿಕೊಳ್ಳಲಾಗದ ತಪ್ಪುಗಳಾದರೆ ಹೇಗೆ ನಷ್ಟವನ್ನು ಕಮ್ಮಿ ಮಾಡಿಕೊಳ್ಳಬೇಕು, ಆಕಸ್ಮಾತ ಯಾವದಾದರೂ ಇಸ್ರೇಲಿ ಯುದ್ಧ ವಿಮಾನವನ್ನು ಶತ್ರುಗಳು ಹೊಡೆದುರುಳಿಸಿದರೆ ಪೈಲಟ್ಟುಗಳು ಏನು ಮಾಡಬೇಕು, ಇತ್ಯಾದಿ, ಇತ್ಯಾದಿ. ಒಂದು ಸಮಗ್ರ ಯೋಜನೆ ತಯಾರಾಯಿತು. ಇಸ್ರೇಲಿನಲ್ಲಿಯೇ ಇರಾಕಿನ ಅಣುಸ್ಥಾವರದ ಮಾಡೆಲ್ ಮಾಡಿಕೊಂಡು ಸಿಕ್ಕಾಪಟ್ಟೆ ಪ್ರಾಕ್ಟೀಸ್ ಮಾಡಿದ ಇಸ್ರೇಲಿಗಳು ಒಂದು ಅಭೂತಪೂರ್ವ ಕಾರ್ಯಾಚರಣೆಗೆ ತಯಾರಾದರು.

ಇಸ್ರೇಲಿಗೆ ಮಾವನಂತಿರುವ ಅಮೇರಿಕಾ ತನ್ನ ಬೇಹುಗಾರಿಕೆ ಉಪಗ್ರಹಗಳು ತೆಗೆದಿದ್ದ ಫೋಟೋ ಇತ್ಯಾದಿ ಮಾಹಿತಿ ಕೊಟ್ಟಿತು. ಸದ್ದಾಮ್ ಹುಸೇನನ ಅಣುಸ್ಥಾವರವನ್ನು ಧ್ವಂಸ ಮಾಡಲು ಮುಹೂರ್ತ ನಿಕ್ಕಿಯಾಯಿತು. ಜೂನ್ ೭, ೧೯೮೧. ಎಲ್ಲ ಸರಿಯಾಗಿದೆ ಅಂತ ಮತ್ತೆ ಮತ್ತೆ ಖಾತ್ರಿ ಮಾಡಿಕೊಂಡ ಅಂದಿನ ಖಡಕ್ ಪ್ರಧಾನಿ ಮೆನಾಕೆಮ್ ಬೆಗಿನ್ ಅಂತಿಮ ಅನುಮತಿ ಕೊಟ್ಟರು. ಇಸ್ರೇಲಿನಿಂದ ನೆಗೆದ ಬಾಂಬರ್ ವಿಮಾನಗಳು, ಫೈಟರ್ ವಿಮಾನಗಳು ಅತಿ ಕಡಿಮೆ ಎತ್ತರದಲ್ಲಿ ಹಾರಿದವು. ರೇಡಾರುಗಳಿಂದ ತಪ್ಪಿಸಿಕೊಳ್ಳಬೇಕು ಅಂದರೆ ಕಮ್ಮಿ ಎತ್ತರದಲ್ಲಿ, ಅತಿ ವೇಗದಲ್ಲಿ ಹಾರಬೇಕು. ಅದು ತುಂಬಾ ರಿಸ್ಕಿ ಕೂಡ. ಆದರೆ ಬೇರೆ ಮಾರ್ಗವಿರಲಿಲ್ಲ. ಅದೇ ರೀತಿ ಹಾರಿದವು. ಜೋರ್ಡಾನ್, ಸೌದಿ ಅರೇಬಿಯಾ ದೇಶಗಳ ರೇಡಾರುಗಳ ಕಣ್ಣಿಗೆ ಬೀಳಲಿಲ್ಲ. ಇರಾಕಿನ ಗಡಿ ಪ್ರವೇಶಿಸಿದ ಇಸ್ರೇಲಿ ವಿಮಾನಗಳು ಅಣುಸ್ಥಾವರವನ್ನು ಸಮೀಪಿಸಿದವು. ಎತ್ತರದಲ್ಲಿ ಹಾರುವ ಹದ್ದು ಬೇಟೆ ಕಂಡ ತಕ್ಷಣ ಒಮ್ಮೆಲೇ ಸಟಾಕ್ ಅಂತ ಕೆಳಗೆ ಡೈವ್ ಮಾಡಿ ಬೇಟೆಯನ್ನು ಒಂದು ಕ್ಷಣದಲ್ಲಿ ಹಿಡಿದು ಮರುಕ್ಷಣದಲ್ಲಿ ಮಿಂಚಿನ ವೇಗದಿಂದ ಎತ್ತರಕ್ಕೆ ಹಾರಿಹೋಗುವ ಮಾದರಿಯಲ್ಲಿ ಒದೊಂದೇ ಇಸ್ರೇಲಿ ವಿಮಾನ ಡೈವ್ ಹೊಡೆದು, ಅಣುಸ್ಥಾವರದ ಮೇಲೆ ಬರೋಬ್ಬರಿ ಬಾಂಬುಗಳ ಮಳೆಗರೆದು, ವೇಗವಾಗಿ ಮೇಲಕ್ಕೇರಿ, ತರಾತುರಿಯಲ್ಲಿ ಇರಾಕಿನ ಗಡಿ ದಾಟಿಕೊಂಡವು. ನೋಡನೋಡುತ್ತಿದಂತೆಯೇ ಸದ್ದಾಮ್ ಹುಸೇನನ ಅಣುಸ್ಥಾವರ ಢಮಾರ್ ಅಂದುಹೋಗಿತ್ತು. ಇರಾಕಿನ anti-aircraft artillery ಸಿದ್ಧವಾಗಿ, ವಾಪಸ್ ಹಾರಿಹೋಗುತ್ತಿದ್ದ ಇಸ್ರೇಲಿ ವಿಮಾನಗಳತ್ತ ಗುಂಡು ಹಾರಿಸುವಷ್ಟರಲ್ಲಿ ತುಂಬ ತಡವಾಗಿಹೋಗಿತ್ತು. ಧೂಳೆದ್ದು ಹೋದ ಅಣುಸ್ಥಾವರದ ಮುಂದೆ ಸದ್ದಾಮ್ ಮತ್ತು ಅವನ ಮಂದಿ ಲಬೋ ಲಬೋ ಅಂತ ಬಾಯಿ ಬಡಿದುಕೊಳ್ಳುತ್ತ ಕೂತರು. ಇತ್ತಕಡೆ ಇಸ್ರೇಲಿಗಳು ಮತ್ತೆ ಅತಿ ಕಮ್ಮಿ ಎತ್ತರದಲ್ಲಿ ಹಾರುತ್ತ, ಸೌದಿ ಅರೇಬಿಯಾ, ಜೋರ್ಡಾನ್ ದೇಶಗಳ ರೇಡಾರುಗಳ ಕಣ್ಣು ತಪ್ಪಿಸಿ, ಮರಳಿ ಇಸ್ರೇಲಿಗೆ ಬಂದು ಸೇರಿಕೊಂಡವು. ಯಾವದೇ ತರಹದ ಕಷ್ಟನಷ್ಟ ಸಂಭವಿಸಿರಲಿಲ್ಲ. ಇಸ್ರೇಲಿಗಳ ಖದರು ಅಂದರೆ ಅದು. dare devil ಮಾದರಿಯ ಕಾರ್ಯಾಚರಣೆ ಮಾಡುವಲ್ಲಿ ಇಸ್ರೇಲಿಗಳದು ಎತ್ತಿದ ಕೈ. ಸಿಂಹದ ಗುಹೆಯೊಳಗೇ ನುಗ್ಗಿ ಸಿಂಹದ ಬೇಟೆಯಾಡಿ ಬಂದಂತೆ. ಹಿಮ್ಮತ್ ಅಂದರೆ ಅದು!

ಯಾವಾಗ ಭಾರತಕ್ಕೆ ಪಾಕಿಸ್ತಾನ ಕಹುಟಾದಲ್ಲಿ ರಹಸ್ಯವಾಗಿ ಅಣುಸ್ಥಾವರ ಕಟ್ಟುತ್ತಿದೆ ಮತ್ತು ಅದರ ಹಿಂದಿನ ಉದ್ದೇಶ ಅಣುಬಾಂಬ್ ತಯಾರಿಸುವದು ಅಂತ ಖಾತ್ರಿಯಾಯಿತೋ, ಭಾರತ ಹೋಗಿ ನಿಂತಿದ್ದು ಇಸ್ರೇಲ್ ಮುಂದೆ. ರಾಜತಾಂತ್ರಿಕ ಸಂಬಂಧ ಬಹಿರಂಗವಾಗಿ ಇರಲಿಲ್ಲ. ಆದರೆ backdoor diplomacy ಇತ್ತು. ಅದನ್ನೇ ಉಪಯೋಗಿಸಿಕೊಂಡು ಭಾರತದ ಉನ್ನತ ಮಟ್ಟದ ಬೇಹುಗಾರಿಕೆ ಅಧಿಕಾರಿಗಳು ಇಸ್ರೇಲಿಗಳನ್ನು ಭೆಟ್ಟಿಯಾಗಿ ತಾವು ಸಂಗ್ರಹಿಸಿದ್ದ ಮಾಹಿತಿಯನ್ನು ಇಸ್ರೇಲ್ ಮುಂದಿಟ್ಟರು. ಆ ಹೊತ್ತಿಗೆ R&AW ಪ್ರತ್ಯೇಕವಾಗಿ ಒಬ್ಬ ಪಾಕಿಸ್ತಾನಿ ಏಜೆಂಟನನ್ನು ಕೂಡ ತಯಾರು ಮಾಡಿತ್ತು. ಆತ ಕೂಡ ಕಹುಟಾ ಅಣುಸ್ಥಾವರದ ಮಾಹಿತಿಯನ್ನು ಕೊಡತೊಡಗಿದ್ದ. ಒಮ್ಮೆ ಹೀಗಾಯಿತು. ಆತ ಇಡೀ ಅಣುಸ್ಥಾವರದ ಒರಿಜಿನಲ್ blueprint ಸಂಪಾದಿಸಿಬಿಟ್ಟಿದ್ದ. ಅದನ್ನು ಭಾರತಕ್ಕೆ ಹಸ್ತಾಂತರ ಮಾಡಲು ಅವನು ಕೇಳಿದ್ದು ಕೇವಲ ಹತ್ತು ಸಾವಿರ ರೂಪಾಯಿಗಳು. ಯಾಕೋ ಗೊತ್ತಿಲ್ಲ. ಭಾರತ ಸರ್ಕಾರ, ಇಂದಿರಾ ಗಾಂಧಿ ಹತ್ತು ಸಾವಿರ ರೂಪಾಯಿ ಕೊಟ್ಟು ಅಮೂಲ್ಯವಾದ ಮಾಹಿತಿಯನ್ನು ಪಡೆಯಲು ಮನಸ್ಸು ಮಾಡಲೇ ಇಲ್ಲ. ಅದೊಂದು ನಾವು ಮಾಡಿದ ದೊಡ್ಡ ತಪ್ಪು ಅಂತ R&AW ದ ಮಾಜಿ ಅಧಿಕಾರಿ ಆರ್. ಕೆ. ಯಾದವ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಭಾರತ ತೋರಿಸಿದ ಮಾಹಿತಿ ನೋಡಿದ ಇಸ್ರೇಲ್ ಬೆಚ್ಚಿಬಿತ್ತು. ಪಾಕಿಸ್ತಾನ ಮತ್ತು ಇಸ್ರೇಲ್ ಮಧ್ಯೆ ಅಂತಹ ವೈರತ್ವ ಅಂತೇನೂ ಇರಲಿಲ್ಲ. ಇಸ್ಲಾಮಿಕ್ ರಾಷ್ಟ್ರವಾದ ಪಾಕಿಸ್ತಾನ ಕೂಡ ಇಸ್ರೇಲ್ ಜೊತೆ ಯಾವದೇ ಸಂಬಂಧ ಇಟ್ಟುಕೊಂಡಿರಲಿಲ್ಲ. ಪಾಕ್ ಕೂಡ ಪ್ಯಾಲೆಸ್ಟೈನ್ ಸಂಗ್ರಾಮವನ್ನು ಬೆಂಬಲಿಸುತ್ತಿತ್ತು. ಇಸ್ರೇಲ್ ಯಾಕೆ ಕಳವಳಗೊಂಡಿತು ಅಂದರೆ ಅದಕ್ಕಿದ್ದ ಕಾರಣ ಒಂದೇ. ಒಮ್ಮೆ ಯಾವದಾರೂ ಒಂದು ಇಸ್ಲಾಮಿಕ್ ದೇಶಕ್ಕೆ ಅಣುಬಾಂಬ್ ಸಿಕ್ಕಿತು ಅಂತಾದರೆ ಅಷ್ಟರಮಟ್ಟಿಗೆ ಇಸ್ರೇಲಿಗೆ ಅಭದ್ರತೆ, ರಿಸ್ಕ್ ಜಾಸ್ತಿಯಾಯಿತು ಅಂತಲೇ ಅರ್ಥ. ನಂತರ ಅಣುಬಾಂಬ್ ಮಾಡುವ ಮಾಹಿತಿಯನ್ನು ಪಾಕಿಸ್ತಾನ ಇತರೆ ಇಸ್ಲಾಮಿಕ್ ದೇಶಗಳ ಜೊತೆ ಹಂಚಿಕೊಳ್ಳುವದರಲ್ಲಿ ಸಂದೇಹವೇ ಇಲ್ಲ. ಪಾಕಿಸ್ತಾನ official ಆಗಿ ಆ ಕೆಲಸ ಮಾಡುವದಿಲ್ಲ ಅಂತಿಟ್ಟುಕೊಂಡರೂ ದುರಾಸೆಗೆ ಬಿದ್ದ ಪಾಕಿ ವಿಜ್ಞಾನಿಗಳು ಆ ಕೆಲಸ ಮಾಡುವದರಲ್ಲಿ ಯಾವದೇ ಸಂಶಯವಿರಲಿಲ್ಲ. ಪಾಕಿಸ್ತಾನದ ಅಣುಶಕ್ತಿ ಯೋಜನೆಯ ಪಿತಾಮಹ ಅಬ್ದುಲ್ ಖಾದಿರ್ ಖಾನ್ ಎಲ್ಲ ಮಾಹಿತಿಯನ್ನು ಹಾಲೆಂಡಿನಲ್ಲಿ ನೌಕರಿ ಮಾಡಿಕೊಂಡಿದ್ದಾಗ ಕದ್ದಿದ್ದ. ಕದ್ದು ತಂದ ಮಾಹಿತಿಯಿಂದಲೇ ಪಾಕಿಸ್ತಾನದ ಅಣುಶಕ್ತಿ ಪ್ರೊಗ್ರಾಮ್ ಶುರುಹಚ್ಚಿಕೊಂಡಿದ್ದ. ಅಂತಹ ಕಳ್ಳ ಖಾನ್ ಒಮ್ಮೆ ಅಣುಬಾಂಬ್ ಮಾಡುವದನ್ನು ಕಲಿತುಬಿಟ್ಟ ಅಂದರೆ ಅವನು ನಂತರ ಮಾಡುವ ಪ್ರಮುಖ ಕೆಲಸವೆಂದರೆ ಸರಿಯಾದ ರೊಕ್ಕ ಕೊಟ್ಟ ಮಂದಿಗೆ ಬಾಂಬ್ ಮಾಡುವ ತಂತ್ರಜ್ಞಾನವನ್ನು ಮಾರುವದು. ಬೇಕಾದಷ್ಟು ರೊಕ್ಕ ಕೊಟ್ಟು ಅಣುಬಾಂಬ್ ಮಾಹಿತಿಯನ್ನು ಕೊಂಡುಕೊಳ್ಳಲು ಇಸ್ರೇಲಿನ ಪರಮ ವೈರಿ ದೇಶಗಳಾದ ಲಿಬಿಯಾ, ಇರಾಕ್, ಇರಾನ್, ಸಿರಿಯಾ ಎಲ್ಲ ತುದಿಗಾಲ ಮೇಲೆ ನಿಂತು ರೆಡಿ ಇರುತ್ತವೆ ಅಂತ ತಿಳಿಯಲಾರದಷ್ಟು ಪರಮ ದಡ್ಡ ದೇಶವಲ್ಲ ಇಸ್ರೇಲ್. ಇಸ್ರೇಲಿನ ವಿದೇಶಾಂಗ ನೀತಿ, ರಕ್ಷಣಾ ನೀತಿ ಸ್ಪಷ್ಟ - ಯಾವದೇ ಇಸ್ಲಾಮಿಕ್ ದೇಶ ಅಣುಬಾಂಬ್ ಹೊಂದಕೂಡದು. ಹೊಂದಲೇಕೂಡದು. No chance. ಇಸ್ರೇಲ್ ಜೊತೆ ನೇರವಾಗಿ ವೈರತ್ವ ಇರಲಿ ಬಿಡಲಿ. ಇಸ್ಲಾಮಿಕ್ ದೇಶವೊಂದು ಅಣುಬಾಂಬ್ ತಯಾರು ಮಾಡುತ್ತಿದೆ ಅಂತಾದರೆ ಇಸ್ರೇಲಿಗಳ ಪಾಲಿಸಿ ಇಷ್ಟೇ - ಸದ್ದಾಮ್ ಹುಸೇನನ ಅಣುಸ್ಥಾವರಕ್ಕೆ ಏನು ಮಾಡಿ ಬಂದಿದ್ದರೋ ಅದನ್ನೇ ಮಾಡುವದು. ಚಿಂದಿ ಉಡಾಯಿಸಿಬಿಡುವದು. ಅದೂ ಯಾವ ರೀತಿಯಲ್ಲಿ ಅಂದರೆ ಆ ದೇಶದ ಅಣುಶಕ್ತಿ ಪ್ರೋಗ್ರಾಮ್ ಒಂದು ಹತ್ತು ವರ್ಷ ಹಿಂದಕ್ಕೆ ಹೋಗಿರಬೇಕು. ಮತ್ತೆ ಸುಧಾರಿಸಿಕೊಳ್ಳಲು ಆಗಿರಬಾರದು. ಆ ರೀತಿಯಲ್ಲಿ ಬಾರಿಸಿ ಬಂದುಬಿಡಬೇಕು. ಇಸ್ರೇಲಿಗಳ ರಣನೀತಿ ಸಿಂಪಲ್. ಮಾತುಕತೆ ಗೀತುಕತೆ ಅಂತೆ ಕೂತರೆ ಬುಡಕ್ಕೇ ಬಂದು ಇಸ್ರೇಲಿನ ಅಸ್ತಿತ್ವಕ್ಕೇ ಸಂಚಕಾರ ಬರುತ್ತದೆ. ಹಾಗಾಗಿ ಇಸ್ರೇಲಿಗಳದು ಸದಾ ದಂಡಂ ದಶಗುಣಂ ಅನ್ನುವ policy!

ಭಾರತ ಮತ್ತು ಇಸ್ರೇಲ್ ರಹಸ್ಯ ಮಾತುಕತೆಗೆ ಕೂತವು. ಭಾರತವಂತೂ ನೇರವಾಗಿ ಹೋಗಿ ಪಾಕಿಸ್ತಾನವನ್ನು  ತಡವಿಕೊಳ್ಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಅನೇಕ ಆಂತರಿಕ ತೊಂದರೆಗಳಿದ್ದವು. ಖಲಿಸ್ತಾನ ಉಗ್ರವಾದ, ನಕ್ಸಲರ ಸಮಸ್ಯೆ, ಕಳೆಗುಂದುತ್ತಿದ್ದ ಸೊವಿಯಟ್ ಒಕ್ಕೂಟ, ಇತ್ಯಾದಿ ಹಲವಾರು ಸಮಸ್ಯೆಗಳು. ಮತ್ತೆ ಆ ತರಹದ ಕರಾರುವಕ್ಕಾಗಿ surgical operation ಮಾಡುವ ಕಾಬೀಲಿಯತ್ತು, ಹಿಮ್ಮತ್ತು, ತಾಕತ್ತು, ಜ್ಞಾನ, ಅನುಭವ ಎಲ್ಲ ಇಸ್ರೇಲಿಗೆ ಮಾತ್ರ ಇತ್ತು.

ಇಸ್ರೇಲ್ ಒಂದು ಖತರ್ನಾಕ್ ಪ್ಲಾನ್ ಹಾಕಿತು. ರಹಸ್ಯವಾಗಿ ಇರಾಕಿಗೆ ಹೋಗಿ ಅಣುಸ್ಥಾವರವನ್ನು ಧ್ವಂಸ ಮಾಡಿ ಬಂದಂತಹದ್ದೇ ಪ್ಲಾನ್. ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದರು. ಹಿಮಾಲಯದ ಮೂಲೆಯಿಂದ ಪಾಕಿಸ್ತಾನ್ ಪ್ರವೇಶಿಸುವದು. ನಂತರ ವೈಮಾನಿಕ ಬಾಂಬ್ ದಾಳಿ ಮಾಡಿ ಅಣುಸ್ಥಾವರವನ್ನು ಮಟಾಶ್ ಮಾಡುವದು. ವಾಪಸ್ ಹೋಗಲು ಇಂಧನದ ಮರುಭರ್ತಿ ಮಾಡುವ ಜರೂರತ್ತಿತ್ತು. ಇಸ್ರೇಲಿಗಳು ಭಾರತವನ್ನು ಕೇಳಿದ್ದು ಒಂದೇ ಸಹಾಯ - ಭಾರತ ಮತ್ತು ಪಾಕ್ ಗಡಿಗೆ ಸಮೀಪವಿದ್ದ ಗುಜರಾತಿನ ಜಾಮ್ ನಗರ್ ವಾಯುಅಡ್ಡೆಯಲ್ಲಿ ಕಾರ್ಯಾಚರಣೆ ಮುಗಿದ ನಂತರ ಇಸ್ರೇಲಿ ವಿಮಾನಗಳಿಗೆ ಇಳಿಯಲು ಮತ್ತು ಇಂಧನ ತುಂಬಿಸಿಕೊಂಡು ಹಾರಿಹೋಗಲು ಅನುಮತಿ. ಈ ಕೋರಿಕೆ ಭಾರತವನ್ನು ಸ್ವಲ್ಪ ಮಟ್ಟಿನ ಕಷ್ಟಕ್ಕೆ ಈಡುಮಾಡಿತು. ಕಾರ್ಯಾಚರಣೆಯಲ್ಲಿ ನೇರವಾಗಿ ಭಾಗಿಯಾಗಿ, ಯಾವದೇ ರೀತಿಯ ವಿವಾದವನ್ನು ಮೈಮೇಲೆ ಎಳೆದುಕೊಳ್ಳಲು ಭಾರತಕ್ಕೆ ಮನಸ್ಸಿರಲಿಲ್ಲ. ಆದರೆ ಇಸ್ರೇಲ್ ಕೇಳಿದಷ್ಟಾದರೂ ಸಹಾಯ ಮಾಡದ್ದಿದರೆ ಆ ಕಾರ್ಯಾಚರಣೆ ಸಾಧ್ಯವಿರಲಿಲ್ಲ. ಏನೇನೋ ವಿಚಾರ ವಿಮರ್ಶೆ ಎಲ್ಲ ಆದ ಮೇಲೆ ಭಾರತ ಅಷ್ಟು ಮಟ್ಟಿನ ಸಹಾಯ ಮಾಡಲು ಒಪ್ಪಿಕೊಂಡಿತ್ತು. ಅತ್ತಕಡೆ ಇಸ್ರೇಲಿಗಳು ತಮ್ಮ ಪ್ಲಾನಿಂಗ್ ಮುಂದುವರೆಸಿದರು.

ಆದರೆ ಕಾರ್ಯಾಚರಣೆ ಆಗಲೇ ಇಲ್ಲ! ವೈಮಾನಿಕ ದಾಳಿಯಾಗಲೇ ಇಲ್ಲ! ಪಾಕಿಸ್ತಾನದ ಕಹುಟಾ ಅಣುಸ್ಥಾವರ ನಿರ್ನಾಮವಾಗಲೇ ಇಲ್ಲ!

ಯಾಕೆ ಆಗಲಿಲ್ಲ ಅಂತ ಕೇಳಿದರೆ ದೊಡ್ಡಣ್ಣ ಅಮೇರಿಕಾಗೆ ಅದರ ಬೇಹುಗಾರಿಕೆ ಸಂಸ್ಥೆ CIA ಮೂಲಕ ಎಲ್ಲ ವಿಷಯ ಗೊತ್ತಾಗುತ್ತಿತ್ತು. ಮತ್ತೆ ಆವಾಗ ಆಫ್ಘನ್-ಸೊವಿಯಟ್ ಯುದ್ಧ ಜೋರಾಗಿ ನಡೆಯುತ್ತಿತ್ತು. ಅಮೇರಿಕಾ ಆಫ್ಫನ್ ಮುಜಾಹಿದೀನ್ ಬಂಡುಕೋರರಿಗೆ ಎಲ್ಲ ಸಹಾಯ ಒದಗಿಸಿ ರಷ್ಯಾವನ್ನು ಬರೋಬ್ಬರಿ ಬಗ್ಗುಬಡಿಯುತ್ತಿತ್ತು. ಮಧ್ಯೆ ಕೂತ ಪಾಕಿಸ್ತಾನ ಬಹು ಮುಖ್ಯ ದಲ್ಲಾಳಿ, coordinator ಕೆಲಸ ಮಾಡುತ್ತಿತ್ತು. ಹಾಗಾಗಿ ಅಂದು ಅಮೇರಿಕಾಗೆ ಪಾಕಿಸ್ತಾನವನ್ನು ಸುಪ್ರೀತಗೊಳಿಸಿಟ್ಟುಕೊಳ್ಳುವ ದರ್ದು ಇತ್ತು. ಹಾಗಾಗಿ ಅಮೇರಿಕಾ ಇಸ್ರೇಲನ್ನು ಅದೆಷ್ಟೇ ಇಷ್ಟಪಡುತ್ತಿದ್ದರೂ ಪರಮ ಪ್ರೀತಿಯ ಪಾಕಿಸ್ತಾನದ ಮೇಲೆ ದಾಳಿ ಮಾಡುವ ಈ ಕಾರ್ಯಾಚರಣೆಗೆ ಅಮೇರಿಕಾ ತನ್ನ ಅನುಮತಿ ಕೊಡಲೇ ಇಲ್ಲ. 'Nothing doing. Absolutely nothing doing,' ಅಂದುಬಿಟ್ಟಿತು.

ಎಲ್ಲ ರೆಡಿಯಾಗಿದ್ದ ಭಾರತ ಇಸ್ರೇಲಿ ಜಂಟಿ ಕಾರ್ಯಾಚರಣೆ ಹೇಗೆ ಭಂಗವಾಯಿತು ಅನ್ನುವದರ ಬಗ್ಗೆ ಬೇರೆ ಬೇರೆ ತರಹದ conflicting theories ಇವೆ. ಒಂದು ಮೂಲದ ಪ್ರಕಾರ ಬಹಳ ಮೊದಲೇ ಅಮೇರಿಕಾ ಇಸ್ರೇಲಿಗೆ ಕಟ್ಟುನಿಟ್ಟಾಗಿ ಹೇಳಿತ್ತು, 'ಈ ಕಾರ್ಯಾಚರಣೆ ಮಾಡಲೇಕೂಡದು. ಪಾಕಿಸ್ತಾನವನ್ನು, ಅದರ ಅಣುಶಕ್ತಿ ಕಾರ್ಯಕ್ರಮವನ್ನು ಸಂಬಾಳಿಸುವ ಜವಾಬ್ದಾರಿ ಅಮೇರಿಕಾದ್ದು. ಇಸ್ರೇಲಿಗೆ ಯಾವದೇ ತೊಂದರೆ ಉಂಟಾಗದಂತೆ ಅಮೇರಿಕಾ ನೋಡಿಕೊಳ್ಳುತ್ತದೆ. ಅದರ ಬಗ್ಗೆ ಭರವಸೆ ಕೂಡ ಕೊಡುತ್ತದೆ. ಆಫ್ಘನ್ - ಸೊವಿಯಟ್ ಸಮರದಲ್ಲಿ ಸೊವಿಯಟ್ ಯೂನಿಯನ್ನನ್ನು ಬಗ್ಗುಬಡಿದು, communism ಗೆ ಒಂದು ಅಂತಿಮ ಇತಿಶ್ರೀ ಹಾಡಲು ಪಾಕಿಸ್ತಾನದ ಪೂರ್ತಿ ಬೆಂಬಲ ಬೇಕು. ಹಾಗಾಗಿ ಸದ್ಯಕ್ಕೆ ಪಾಕಿಸ್ತಾನಕ್ಕೆ ಏನೂ ಮಾಡದೇ ಸುಮ್ಮನಿರಿ.' ದೊಡ್ಡಣ್ಣ ಅಮೇರಿಕಾ ಅಷ್ಟು ಕಟ್ಟುನಿಟ್ಟಾಗಿ ಹೇಳಿದ ಮೇಲೆ ಇಸ್ರೇಲ್ ಸುಮ್ಮನಾಯಿತು. ಇದು ಒಂದು theory.

ಪಾಕಿಗಳನ್ನು ಕೇಳಿದರೆ ಅವರು ಮತ್ತೊಂದು ಕಥೆ ಹೇಳುತ್ತಾರೆ. ಪಾಕಿಗಳ ಪ್ರಕಾರ ಏನಾಗಿತ್ತು ಅಂದರೆ..... 'ಭಾರತ ಮತ್ತು ಇಸ್ರೇಲ್ ನಮ್ಮ ಅಣುಸ್ಥಾವರವನ್ನು ನಾಶಪಡಿಸಬೇಕು ಅಂತ ಪ್ಲಾನ್ ಹಾಕಿಕೊಂಡಿದ್ದವು. ನಮಗೆ ಅದು ಕೊನೆಯ ಕ್ಷಣದಲ್ಲಿ ಗೊತ್ತಾಯಿತು. ಇಸ್ರೇಲಿ ವಿಮಾನಗಳು ನಮ್ಮ ಗಡಿಯೊಳಗೆ ನುಗ್ಗುವ ಮುನ್ನವೇ ನಮ್ಮ ವಾಯುಪಡೆ ಸನ್ನದ್ಧವಾಗಿತ್ತು. ಆಗಲೇ ನಮ್ಮ ಫೈಟರ್ ವಿಮಾನಗಳು ಗಗನಕ್ಕೇರಿ ಪಾಕಿಸ್ತಾನವನ್ನು ಕಾಯುತ್ತಿದ್ದವು. ಇಸ್ರೇಲ್ ಮತ್ತು ಭಾರತಕ್ಕೆ ರಾಜತಾಂತ್ರಿಕ channel ಮೂಲಕ ಖಡಕ್ ಎಚ್ಚರಿಕೆ ಕೊಡಲಾಯಿತು. 'ನಮ್ಮ ಪ್ಲಾನ್ ಪಾಕಿಸ್ತಾನಕ್ಕೆ ತಿಳಿದುಬಿಟ್ಟಿದೆ. ಕಾರ್ಯಾಚರಣೆ ಇನ್ನು ಮುಂದುವರೆಯಿಸುವದು ಮೂರ್ಖತನ,' ಅಂತ ಅರ್ಥಮಾಡಿಕೊಂಡ ಇಸ್ರೇಲಿಗಳು ತಮ್ಮ ವಿಮಾನಗಳನ್ನು ವಾಪಸ್ ಕರೆಯಿಸಿಕೊಂಡರು. ಪಾಕಿಸ್ತಾನದ ಮೇಲೆ ರಹಸ್ಯ ವೈಮಾನಿಕ ದಾಳಿ ಮಾಡುವದು ಅಂದರೆ ಅದೇನು ಹಲ್ವಾ ತಿಂದಂತೆಯೇ? ಪಾಕಿಸ್ತಾನ್ ಇರಾಕ್ ಅಲ್ಲ ಅಂತ ಇಸ್ರೇಲಿಗಳಿಗೆ ಬರೋಬ್ಬರಿ ಗೊತ್ತಾಯಿತು,' ಅಂತ ಹೇಳಿಕೊಂಡು ಪಾಕಿಗಳು ಮೀಸೆ ತಿರುವುತ್ತಾರೆ. ಇದು ಸತ್ಯವೋ ಅಥವಾ ಪಾಕಿಗಳು ತಮ್ಮ ಗರಮ್ ಮಸಾಲಾ ಹಾಕಿ ಪಂಟು ಹೊಡೆದದ್ದೋ ಗೊತ್ತಿಲ್ಲ.

ಈ ರಹಸ್ಯ ಕಾರ್ಯಾಚರಣೆಗೆ ನಿಷ್ಪಾಪಿ ನಾಗರಿಕ ವಿಮಾನವೊಂದು ಹರಕೆಯ ಕುರಿಯ ಮಾದರಿಯಲ್ಲಿ ಬಲಿಯಾಗುವದಿತ್ತೇ ಎಂಬ ಖತರ್ನಾಕ್ ಸುದ್ದಿ ಕೂಡ ಹರಿದಾಡಿತ್ತು. ಅದಕ್ಕೆ ಕಾರಣವೂ ಇತ್ತು. ಇಸ್ರೇಲಿನಿಂದ ಹಾರಿ ಬರಲಿದ್ದ ವಿಮಾನಗಳಿಗೆ ಈ ಸಲ ರೇಡಾರುಗಳನ್ನು ತಪ್ಪಿಸಿಕೊಂಡು ಬರಲಾಗುತ್ತಿರಲಿಲ್ಲ. ಹಿಂದಿನ ಸಲ ಇರಾಕಿಗೆ ಹಾರಬೇಕಾದಾಗ ದೂರ ಭಾಳ ಕಮ್ಮಿ. ಮತ್ತೆ ಮಧ್ಯೆ ಇರುವ ದೇಶಗಳು ಜೋರ್ಡಾನ್ ಮತ್ತು ಸೌದಿ ಅರೇಬಿಯಾ ಮಾತ್ರ. ಚಿಕ್ಕ ವಾಯು ಪ್ರದೇಶ. ಕಮ್ಮಿ ರೇಡಾರುಗಳು. ಇಸ್ರೇಲಿ ವಿಮಾನಗಳು ಹೇಗೋ ಮಾಡಿ ಕಮ್ಮಿ ಎತ್ತರದಲ್ಲಿ, ಅತಿ ವೇಗದಿಂದ ಹಾರಿ ರೇಡಾರುಗಳಿಂದ ತಪ್ಪಿಸಿಕೊಂಡಿದ್ದವು. ಈಗ ಇಸ್ರೇಲಿನಿಂದ ಹಾರಿ, ಹಿಮಾಲಯ ರೌಂಡ್ ಹಾಕಿ, ಪಾಕಿಸ್ತಾನಕ್ಕೆ ಎಂಟ್ರಿ ಕೊಡಬೇಕು ಅಂದರೆ ಭಾಳ ದೂರ ಕ್ರಮಿಸಬೇಕು. ಅಷ್ಟು ದೂರ ನಿರಂತರವಾಗಿ ಕಮ್ಮಿ ಎತ್ತರದಲ್ಲಿ ಹಾರುವದು ಅಸಾಧ್ಯ. ಹಾಗಾಗಿ ಹಲವಾರು ದೇಶಗಳ ರೇಡಾರುಗಳ ಕಣ್ಣಿಗೆ ಬಿದ್ದೇಬೀಳುತ್ತವೆ. ಒಮ್ಮೆ ರೇಡಾರ್ ಪರೀಧಿಯಲ್ಲಿ ಬಂದವು ಅಂದರೆ ನಂತರ air traffic controller ಜೊತೆ ಮಾತುಕತೆ ಶುರುವಾಗುತ್ತದೆ. ಮಾತುಕತೆಯಲ್ಲಿ air traffic controller ಮಂದಿಯನ್ನು ಮಂಗ್ಯಾ ಮಾಡಬೇಕು ಅಂದರೆ ಅಸಲಿಯಲ್ಲಿ ಯುದ್ಧ ವಿಮಾನಗಳಾದರೂ ಯಾವದೋ ಒಂದು ನಾಗರಿಕ ವಿಮಾನದ ತರಹ ನಾಟಕ ಮಾಡಬೇಕು. ನಾಟಕ ಮಾಡುವದು ಅಷ್ಟು ಸುಲಭವಲ್ಲ. ನಾಗರಿಕ ವಿಮಾನದ call sign ಉಪಯೋಗ ಮಾಡಬೇಕು. ಯಾವ್ಯಾವದೋ call sign ಬೇಕಾಬಿಟ್ಟಿ ಉಪಯೋಗ ಮಾಡಿದರೆ air traffic controller ಮಂದಿಗೆ ಗೊತ್ತಾಗಿಬಿಡುತ್ತದೆ. ಆ ಸಮಯದಲ್ಲಿ, ಅದೇ ದಾರಿಯಲ್ಲಿ ಹೋಗುತ್ತಿರಬಹುದಾದ ನಾಗರಿಕ ವಿಮಾನದ್ದೇ call sign ಉಪಯೋಗಿಸಬೇಕು. ಹಾಗಾಗಬೇಕು ಅಂದರೆ ಆ ನಾಗರಿಕ ವಿಮಾನ ನಾಪತ್ತೆಯಾಗಬೇಕು. ಅಂದರೆ ಅದನ್ನು ಆಕಾಶದಲ್ಲೇ ಹೊಡೆದುರಿಳಿಸಿ, ಸಮುದ್ರಕ್ಕೆ ಬೀಳಿಸಿ, ಸಂಪೂರ್ಣವಾಗಿ ಗಾಯಬ್ ಆಗಿಬಿಡುವಂತೆ ಮಾಡಬೇಕು. ನಂತರ ದಾಳಿಗೆ ಹೊರಟಿದ್ದ ನಾಲ್ಕಾರು ಇಸ್ರೇಲಿ ವಿಮಾನಗಳು close formation ಅಂದರೆ ಅತಿ ಹತ್ತಿರ ಹತ್ತಿರವಾಗಿ ಹಾರಬೇಕು. ರೇಡಾರಿನಲ್ಲಿ ಒಂದೇ ವಿಮಾನದ ಫುಟ್ ಪ್ರಿಂಟ್ ಕಂಡಂಗೆ ಕಂಡುಬರಬೇಕು. ನಾಗರಿಕ ವಿಮಾನದಂತೆ ವರ್ತಿಸಿ ರೇಡಾರುಗಳಿಂದ ಬಚಾವ್ ಆಗಬೇಕು. ಈ ಥಿಯರಿ ತುಂಬಾ impractical, ಕಷ್ಟಸಾಧ್ಯ ಅಂತ ಅನ್ನಿಸಿದರೂ ರಹಸ್ಯ ಕಾರ್ಯಾಚರಣೆಗಳ ಬಗ್ಗೆ ಗೊತ್ತಿರುವವರಿಗೆ ಪೂರ್ತಿ ಅಸಾಧ್ಯ ಅಂತೇನೂ ಅನ್ನಿಸುವದಿಲ್ಲ. ಅದರಲ್ಲೂ ಇಸ್ರೇಲಿಗಳು ಎಂತೆಂತಹ ಖತರ್ನಾಕ್ ಕಾರ್ಯಾಚರಣೆಗಳನ್ನು ಮಾಡಿದ್ದಾರೆ. ಅವರ ರಹಸ್ಯ ಕಾರ್ಯಾಚರಣೆಗಳು ಮೇಲ್ನೋಟಕ್ಕೆ ಎಲ್ಲವೂ ಇಂಪಾಸಿಬಲ್ ಅನ್ನಿಸಿಬಿಡುತ್ತವೆ. ಅಂದು ಇಸ್ರೇಲಿ ಕಾರ್ಯಾಚರಣೆ ಕಾರ್ಯಗತವಾಗಿದ್ದರೆ ಯಾವದೋ ದೇಶದ ನಾಗರಿಕ ವಿಮಾನವೊಂದು ಕಾರಣವಿಲ್ಲದೇ ಆಕಾಶದಲ್ಲಿ ಢಂ ಅಂದುಹೋಗುತ್ತಿತ್ತು. ನಂತರ ಯಾರೋ ಹೇಗೋ ಪರಿಸ್ಥಿತಿಯನ್ನು ಸಂಬಾಳಿಸುತ್ತಾರೆ. ಮಾಧ್ಯಮಗಳಲ್ಲಿ ತರಹ ತರಹದ ಕಥೆಗಳನ್ನು ಹರಿಬಿಟ್ಟು ಮಂದಿಯನ್ನು ಮಂಗ್ಯಾ ಮಾಡುತ್ತಾರೆ. ಸ್ವಲ್ಪ ದಿವಸಗಳ ನಂತರ ಜನ ಎಲ್ಲಾ ಮರೆಯುತ್ತಾರೆ. ಒಟ್ಟಿನಲ್ಲಿ ಈ ಕಾರ್ಯಾಚರಣೆಯೇ ರದ್ದಾಗಿದ್ದರಿಂದ ಒಂದಿಷ್ಟು ಮಂದಿ ಅಕಾಲ ಮೃತ್ಯುವಿನಿಂದ ಬಚಾವಾದರು. ಅವರ ಅದೃಷ್ಟ. ಇಲ್ಲವಾದರೆ ಇಸ್ರೇಲ್, ಭಾರತ, ಪಾಕಿಸ್ತಾನದ ಮಧ್ಯದ ರಹಸ್ಯ ಕಾರ್ಯಾಚರಣೆಗೆ ಯಾವದೋ ನಿಷ್ಪಾಪಿ ನಾಗರಿಕ ವಿಮಾನದಲ್ಲಿದ್ದ ಪ್ರಯಾಣಿಕರು ಹರಕೆ ಕುರಿಗಳಾಗುತ್ತಿದ್ದವು. They are called collateral damages. Part of and cost of doing this kind of covert operations.

ಮುಂದೆ ಎಲ್ಲ ಎಣಿಸಿದಂತೆಯೇ ಆಯಿತು. ಪಾಕಿಸ್ತಾನದ ಅಣುಶಕ್ತಿ ಪ್ರೋಗ್ರಾಮಿಗೆ ಯಾವದೇ ಅಡೆತಡೆ ಬರಲಿಲ್ಲ. ಪಾಕಿಸ್ತಾನ ಏನೋ ಒಂದು ತರಹದ ಅಣುಬಾಂಬ್ ತಯಾರು ಮಾಡಿಕೊಂಡಿತು. ಅಥವಾ ತಯಾರಿದೆ ಅಂತ ಸುಮ್ಮನೆ ತಮ್ಮಟೆ ಬಾರಿಸಿತು. ನಿರೀಕ್ಷಿಸಿದಂತೆ ಪಾಕಿಸ್ತಾನದ ಕಳ್ಳ ವಿಜ್ಞಾನಿ ಅಬ್ದುಲ್ ಖಾದಿರ್ ಖಾನ್ ತಂತ್ರಜ್ಞಾನವನ್ನು ಕಾಳಸಂತೆಯಲ್ಲಿ ಮಾರಲು ಹೊರಟ. ಆವಾಗ ಮಾತ್ರ ಅಮೇರಿಕಾಗೆ ಬಿಸಿ ಮುಟ್ಟಿತು. ಅಮೇರಿಕಾ ಸುಮ್ಮನಿರಲಿಲ್ಲ. ಅಂದಿನ ಪಾಕಿಸ್ತಾನದ ಸರ್ವಾಧಿಕಾರಿ ಪರ್ವೇಜ್ ಮುಷರಫನನ್ನು ಹಿಡಿದು ಸಮಾ ಬೆಂಡೆತ್ತಿತು. ಅವನು ಹೋಗಿ ಕಳ್ಳ ವಿಜ್ಞಾನಿ ಖಾನನನ್ನು ಬೆಂಡೆತ್ತಿದ. ಬಂಧಿಸಿ ಮನೆಯಲ್ಲಿ ಕೂಡಿಸಿದ. ಖಾನ್, ಮುಷರಫ್ ಎಲ್ಲರೂ ಕಳ್ಳರೇ! ಹಾಗಾಗಿ ಒಬ್ಬರ ಜುಟ್ಟು ಇನ್ನೊಬ್ಬರ ಕೈಯಲ್ಲಿ. ಅದೇನೋ ಒಂದು ತರಹದ ಮಾಂಡವಲಿ ಮಾಡಿಕೊಂಡರು. ಕಳ್ಳ ವಿಜ್ಞಾನಿಗೆ ಗೃಹ ಬಂಧನ ವಿಧಿಸಿ ಮನೆಯಲ್ಲಿ ಕೂಡಿಹಾಕಿದರು. ಆವಾಗಿಂದ ಕಳ್ಳ ವಿಜ್ಞಾನಿ ಗಪ್ ಚುಪ್. ಮೊನ್ನೆ ನಮ್ಮ ಅಬ್ದುಲ್ ಕಲಾಮ್ ನಿಧನರಾದಾಗ, 'ಅಬ್ದುಲ್ ಕಲಾಮ್ ಒಬ್ಬ ಸಾಧಾರಣ ವಿಜ್ಞಾನಿ,' ಅಂತ ಅಸಹ್ಯವಾಗಿ ಉಲಿದಿದ್ದ. ಈ ಪುಣ್ಯಾತ್ಮನ ಕಳ್ಳತನದ, ಸುಳ್ಳುತನದ ದಿವ್ಯ ಚರಿತೆಯೆಲ್ಲ ಜಗಜ್ಜಾಹೀರಾಗಿದೆ.

ಪಾಕಿಸ್ತಾನವನ್ನು ಸದೆಬಡಿಯಲಾಗದಿದ್ದರೂ ಇಸ್ರೇಲ್ ತನ್ನ ಇತರೆ ನೆರೆಹೊರೆ ರಾಷ್ಟ್ರಗಳನ್ನು ಅಣುಬಾಂಬ್ ತಯಾರಿಸದಂತೆ ಹೇಗೆ ಹದ್ದುಬಸ್ತಿನಲ್ಲಿಟ್ಟುಕೊಂಡಿದೆ ಅಂತ ನೋಡುತ್ತಾ ಹೋದರೆ ಅದೇ ಒಂದು ರೋಚಕ ಕಹಾನಿ.

ಇಸ್ರೇಲಿನಿಂದ ಒಮ್ಮೆ ತಾರಾಮಾರಾ ಬಡಿಸಿಕೊಂಡಿದ್ದ ಸದ್ದಾಮ್ ಹುಸೇನ್ ಮತ್ತೆ ಅಣುಬಾಂಬ್ ಮಾಡಲು ಹೋಗಲಿಲ್ಲ. ಕೆನಡಾದ ಮಹಾ ಪ್ರತಿಭಾವಂತ ರಾಕೆಟ್ ವಿಜ್ಞಾನಿ ಜೆರಾಲ್ಡ್ ಬುಲ್ ಬಂದು, 'ಅಣುಬಾಂಬ್ ವಿಷಯ ಬಿಡಿ. ನಿಮಗೆ ದೊಡ್ಡ ಪ್ರಮಾಣದ ಸಾಂಪ್ರದಾಯಿಕ ಕ್ಷಿಪಣಿಯನ್ನು ತಯಾರಿಸಿಕೊಡುತ್ತೇನೆ. ಅದನ್ನು ಉಪಯೋಗಿಸಿ ನೀವು ಇಸ್ರೇಲನ್ನು ಹಣಿಯಬಹುದು,' ಅಂತ ಪುಂಗಿ ಊದಿದ. ಸಿಕ್ಕಾಪಟ್ಟೆ ಥ್ರಿಲ್ ಆದ ಸದ್ದಾಮ್ ಅವನಿಗೆ ಸುಪಾರಿ ಕೊಟ್ಟುಬಿಟ್ಟ. ಜೆರಾಲ್ಡ್ ಬುಲ್ ಇರಾಕಿಗೆ ಬಂದು ಕ್ಷಿಪಣಿ ಪ್ರೋಗ್ರಾಮ್ ಶುರು ಮಾಡಿದ. ಇಸ್ರೇಲ್ ಮೊದಲು ಏನು ಮಾಡಿತ್ತೋ ಅದನ್ನೇ ಮಾಡಿತು. ಜೆರಾಲ್ಡ್ ಬುಲ್ ಎಂಬ ಯಬಡನಿಗೆ ಗಿಣಿಗೆ ಹೇಳುವಂತೆ ತಿಳಿಸಿ ಹೇಳಿತು. ಆ ಪುಣ್ಯಾತ್ಮ ಕೇಳಲಿಲ್ಲ. ಮೊಸ್ಸಾದಿನ ರಹಸ್ಯ ಹಂತಕರು ಆಸ್ಟ್ರಿಯಾ ದೇಶದ ವಿಯೆನ್ನಾದ ಅವನ ಮನೆಗೇ ಹೋಗಿ ಅವನ ತಲೆಗೆ ಎರಡು ಗುಂಡು ನುಗ್ಗಿಸಿ ಬಂದರು. ಮತ್ತೊಮ್ಮೆ ಸದ್ದಾಮ್ ಹುಸೇನ್ ಲಬೋ ಲಬೋ ಅಂತ ಹೊಯ್ಕೊಂಡ. ಅಡ್ವಾನ್ಸ್ ಅಂತ ರೊಕ್ಕ ಬೇರೆ ಕೊಟ್ಟು ಕುಂತಿದ್ದ. ಮಿಲಿಯನ್ ಡಾಲರುಗಟ್ಟಲೇ ಅಡ್ವಾನ್ಸ್ ತೆಗೆದುಕೊಂಡು, ಕ್ಷಿಪಣಿ ಪ್ರೋಗ್ರಾಮ್ ಅರ್ಧಂಬರ್ಧ ಮಾಡಿದ್ದ ಕೆನಡಾದ ರಾಕೆಟ್ ತಂತ್ರಜ್ಞ ಜೆರಾಲ್ಡ್ ಬುಲ್ ಇಸ್ರೇಲಿಗಳ ಮಾತು ಕೇಳದೇ 'ಶಿವಾಯ ನಮಃ' ಆಗಿಹೋಗಿದ್ದ. ಹೀಗೆ ಇಸ್ರೇಲಿಗಳಿಂದ ಪದೇಪದೇ ತಾರಾಮಾರಾ ಬಡಿಸಿಕೊಂಡ ಸದ್ದಾಮ್ ಹುಸೇನ್ ಸುಮ್ಮನಾದ. ನಂತರ ಅವನೇ ಹರೋಹರ ಆಗಿಹೋದ. ಹಿಂದಿನ ಪ್ರೆಸಿಡೆಂಟ್ ಬುಶ್ ಸಾಹೇಬರು ಮಾಡಿದ ಮಹಾ ದೊಡ್ಡ ಕೆಲಸ ಅದು. ಇಸ್ರೇಲ್ ಪೆಕಪೆಕಾ ಅಂತ ತಟ್ಟಿಕೊಂಡು ನಕ್ಕಿತು. ಅಮೇರಿಕಾದ ರೊಕ್ಕ, ಇಸ್ರೇಲಿಗಳಿಗೆ ಜಾತ್ರೆ.

ನಂತರ ಶುರುವಾದದ್ದು ಸಿರಿಯಾ ದೇಶದವರ ಲೋಚಾ. ೨೦೦೫ - ೨೦೦೬ ಹೊತ್ತಿಗೆ ಸಿರಿಯಾದ ಸರ್ವಾಧಿಕಾರಿ ಅಸ್ಸಾದ್ ಉತ್ತರ ಕೋರಿಯಾದ ಬೆಂಬಲದಿಂದ ಅಣುಸ್ಥಾವರ ಕಟ್ಟಲು ಶುರುಮಾಡಿದ. ಇಸ್ರೇಲ್ ಹೋಗಿ ಬಾಂಬಿನ ಮಳೆಗರೆದು ಅಣುಸ್ಥಾವರವನ್ನೇ ನಿರ್ನಾಮ ಮಾಡಿಬಂತು. ಹಾಗೇ ಬರಲಿಲ್ಲ. ಇಸ್ರೇಲಿಗಳ ಗುಂಡಿಗೆ ನೋಡಿ. ಅಸ್ಸಾದನ ಅರಮನೆ ಮೇಲೆಯೇ ಹಾರಿದ ಯುದ್ಧವಿಮಾನಗಳು buzz ಮಾಡಿದವು. ಫೈಟರ್ ವಿಮಾನ ತಲೆ ಮೇಲೆ ಹಾರಿ buzz ಮಾಡಿತು ಅಂದರೆ ಒಂದು ಖಡಕ್ ವಾರ್ನಿಂಗ್ ಕೊಟ್ಟಂಗೆ. ಅರ್ಥಮಾಡಿಕೊಂಡ ಅಸ್ಸಾದ್ ಮುಚ್ಚಿಕೊಂಡು ಕೂತ. ನಂತರ ಅಸ್ಸಾದನ ಮಿಸೈಲ್ ಪ್ರೋಗ್ರಾಮಿನ ಮುಖ್ಯಸ್ಥ ಸಮುದ್ರ ತೀರದ ತನ್ನ ಐಶಾರಮಿ ವಿಲ್ಲಾದಲ್ಲಿ ಕೂತು ಇಳಿಸಂಜೆಯ ಮಾರ್ಟಿನಿ ಕುಡಿಯುತ್ತಿದ್ದ. ದೂರದ ಸಮುದ್ರದಲ್ಲಿ ಲಂಗರು ಹಾಕಿದ್ದ ಹಡಗಿನಿಂದ ಇಸ್ರೇಲಿ ನುರಿತ ಗುರಿಕಾರರು (snipers) ಸುಮಾರು ಒಂದೂವರೆ ಎರಡು ಕಿಲೋಮೀಟರ್ ದೂರದಿಂದ ಸ್ನೈಪರ್ ಬಂದೂಕಿನಿಂದ ಗುಂಡು ಹಾರಿಸಿ ಕರಾರುವಕ್ಕಾಗಿ ಅವನ ಬುರುಡೆ ಬಿಚ್ಚಿ ಮೇಲೆ ಕಳಿಸಿಬಿಟ್ಟರು. ಅದಾದ ನಂತರ ಸಿರಿಯಾದ ಸರ್ವಾಧಿಕಾರಿ ಅಸ್ಸಾದನ ಮಿಸೈಲ್ ಪ್ರೋಗ್ರಾಮ್, ಅಣುಶಕ್ತಿ ಪ್ರೋಗ್ರಾಮ್ ಎಲ್ಲ ತಬ್ಬಲಿಯಾಗಿಹೋಯಿತು.

ಎಪ್ಪತ್ತರ ದಶಕದಲ್ಲಿ ಇಸ್ರೇಲಿನ ವೈರಿ ಈಜಿಪ್ಟ್ ಸಹಿತ ಸಣ್ಣ ಪ್ರಮಾಣದ ಅಣುಶಕ್ತಿ ಪ್ರೋಗ್ರಾಮ್ ಶುರುಮಾಡಿತ್ತು. ಅದರಲ್ಲಿ ಕೆಲಸ ಮಾಡುತ್ತಿದ್ದ ಒಂದಿಬ್ಬರು ಜರ್ಮನ್ ಇಂಜಿನಿಯರುಗಳು ನಿಗೂಢವಾಗಿ ಸತ್ತುಬಿದ್ದ ನಂತರ ಅವರಿಗೆ ಜನರ ಕೊರತೆಯಾಗಿ ಅವರ ಪ್ರೋಗ್ರಾಮ್ ಮುಂದುವರಿಯೇ ಇಲ್ಲ. ಇಸ್ರೇಲ್ ಹಾಗೆ ಮಾಡಿ ಇಜಿಪ್ಟಿನ ತಲೆನೋವು ನಿವಾರಿಸಿಕೊಂಡಿತ್ತು.

ಈಗಿತ್ತಲಾಗೆ ಇಸ್ರೇಲಿನ ಮಗ್ಗುಲಲ್ಲಿ ಮುಳ್ಳಾಗಿದ್ದು ಇರಾನ್. ಅವರೂ ಅಣುಶಕ್ತಿ, ಅಣುಬಾಂಬ್ ತಯಾರಿಕೆಯಲ್ಲಿ ಮಗ್ನರು. ಇಸ್ರೇಲ್, ಅಮೇರಿಕಾ ಕೂಡಿ ಕಂಪ್ಯೂಟರ್ ವೈರಸ್ಸುಗಳನ್ನು ತಯಾರು ಮಾಡಿ, ಇರಾನಿನ ಕಂಪ್ಯೂಟರ್ ಜಾಲದಲ್ಲಿ ನುಗ್ಗಿಸಿ, ಅವು ಅಣುಸ್ಥಾವರದ ಉಪಕರಣಗಳನ್ನು ಢಂ ಅನ್ನಿಸಿಬಿಟ್ಟವು. ಇರಾನಿನ ಅಣುಶಕ್ತಿ ಪ್ರೋಗ್ರಾಮ್ ಒಂದಿಷ್ಟು ವರ್ಷ ಹಿಂದಕ್ಕೆ ಹೋಯಿತು. ಸುಮಾರು ಜನ ಇರಾನಿ ವಿಜ್ಞಾನಿಗಳ ಹತ್ಯೆ ಕೂಡ ಆಯಿತು. ಅದಕ್ಕೆ ಪ್ರತಿಯಾಗಿ ಇಸ್ರೇಲಿಗಳ ಮೇಲೆ, ಅವರ ಜಾಗತಿಕ interest ಗಳ ಮೇಲೆ ಇರಾನ್ ಕೂಡ covert operations ಮಾಡಲು ನೋಡಿತು. ಅಷ್ಟೇನೂ ಹಾನಿಯಾಗಲಿಲ್ಲ. ವಾಪಸ್ ಚಿಗಿತುಕೊಂಡ ಇರಾನಿಗಳು ಮತ್ತೊಮ್ಮೆ ಅಣುಶಕ್ತಿ ಪ್ರೋಗ್ರಾಮ್ ಶುರು ಮಾಡಿದರು. ಮತ್ತೆ ಬಡಿದು ಬರುತ್ತೇನೆ ಇಸ್ರೇಲ್ ಎದ್ದು ನಿಂತಿತ್ತು. ಬರಾಕ್ ಒಬಾಮಾ ಸಾಹೇಬರು ಇಸ್ರೇಲ್, ಇರಾನ್ ಎರಡೂ ದೇಶಗಳಿಗೆ ಏನೋ ಒಂದು ರೀತಿಯ ಸಮಾಧಾನ ಮಾಡಿದ್ದಾರೆ. ಕೇವಲ ಶಾಂತಿಯುತ ಉಪಯೋಗಕ್ಕೆ ಮಾತ್ರ ಅಣುಶಕ್ತಿ ಬಳಕೆ ಮಾಡುವಂತೆ ಇರಾನ್ ಜೊತೆಗೆ ಏನೋ ಒಪ್ಪಂದ ಮಾಡಿಕೊಂಡಿದ್ದಾರೆ. ಇಸ್ರೇಲಿಗೆ ಪೂರ್ತಿ ಸಮಾಧಾನವಿಲ್ಲ. ಅದರೂ ಸದ್ಯಕ್ಕೆ ಸುಮ್ಮನಿದೆ. ಮುಂದೇನೋ ಗೊತ್ತಿಲ್ಲ.

ಪೂರಕ ಓದಿಗೆ:

Deception: Pakistan, the United States, and the Secret Trade in Nuclear Weapons by Adrian Levy, Catherine Scott-Clark

Raid on the Sun: Inside Israel's Secret Campaign that Denied Saddam the Bomb by Rodger Claire

Mission R&AW by RK Yadav

How PAF Prevented an Israeli Attack on Pakistan's Nuclear Assets


ಇಸ್ರೇಲಿ ಯುದ್ಧವಿಮಾನ (ಸಾಂದರ್ಭಿಕ ಚಿತ್ರ)

11 comments:

ವಿ.ರಾ.ಹೆ. said...

ರೋಚಕ, ಆಸಕ್ತಿಕರ ವಿಷಯ !

Mahesh Hegade said...

Thanks, Vikas.

Harsha Bhat said...

As always, war strategy is more interesting than the war ... very nice article.

Mahesh Hegade said...

Thank you very much, Harsha Bhat.

Unknown said...

Very interesting article 👍

Mahesh Hegade said...

Thank you very much, Vidyadhar Hegde.

sunaath said...

ಇಷ್ಟೆಲ್ಲ ರಹಸ್ಯ ಕಾರ್ಯಾಚರಣೆಗಳ ತಂತ್ರಗಳನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು. ನಮ್ಮ ಅಣುವಿಜ್ಞಾನಿ ಹೋಮಿ ಭಾಭಾ ಸಹ ೧೯೬೬(?)ರಲ್ಲಿ ವ್ಹಿಯೆನ್ನಾಗೆ ಹೋಗುವಾಗ, ವಿಮಾನ-ಸ್ಫೋಟದಲ್ಲಿ ಮೃತರಾದರು. ಇದು ಅಮೆರಿಕಾದ ಕೈವಾಡ ಎಂದು ಹೇಳಲಾಗುತ್ತಿದೆ.

Mahesh Hegade said...

ಸುನಾಥ್ ಸರ್, ನೀವು ಹೇಳಿರುವದು ನಿಜ. ಭಾಭಾ, ವಿಕ್ರಂ ಸಾರಾಭಾಯಿ ನಿಧನಗಳ ಹಿಂದೆ ಸಂಚುಗಳು ಇದ್ದವು ಅಂತ conspiracy theories ಇರುವದು ನಿಜ. ಮತ್ತೊಬ್ಬ ಕ್ಷಿಪಣಿ ತಂತ್ರಜ್ಞ ನಂಬಿ ನಾರಾಯಣನ್ ಅವರನ್ನು ಸುಳ್ಳು ಕೇಸಿನಲ್ಲಿ ಸಿಕ್ಕಿಸಿ ಅಂತರಿಕ್ಷ ಪ್ರೋಗ್ರಾಮಿಗೆ ಹಿನ್ನಡೆ ತಂದೊಡ್ಡಲಾಯಿತು ಅಂತಲೂ ಸುದ್ದಿ ಇದೆ.

Unknown said...

Nimma Article, extraordinary Sir. Thumba chennagi odisikondu hoguthe.I would become fan of you anstha idhe :-)

Mahesh Hegade said...

ಧನ್ಯವಾದ ಹೇಮಂತ ಕುಮಾರ್.

ಪ್ರವಾಸಿ said...

http://postcard.news/operation-kahuta-indian-raw-agency-prime-minister-betrayed-india