Friday, October 23, 2015

ಸನ್ಯಾಸದಿಂದ ಸಂಸಾರದ ತನಕ...ಒಂದು ಅಪಚಾರ ಉಪಚಾರವಾದ ಕಥೆ

ತಪ್ಪೇ ಮಾಡದವರು ಯಾರವರೇ? ತಪ್ಪೇ ಮಾಡದವರು ಎಲ್ಲವರೇ?

ಬಹಳ ಹಿಂದೆ ಮಾಡಿದ್ದ ತಪ್ಪೊಂದು, ಅಪಚಾರವೊಂದು ಬಹು ದೊಡ್ಡ ಉಪಚಾರವಾಗಿ ಹೊರಹೊಮ್ಮಿದ್ದನ್ನು ಕೇಳಿದಾಗ, ನೋಡಿದಾಗ ಬಹಳ ಸಂತೋಷವಾಯಿತು. ಶುದ್ಧ ಧಾರವಾಡ ಆಡುಭಾಷೆಯಲ್ಲೊಂದು ಕಥೆ.

***

ಹೋದ ಸರೆ ಇಂಡಿಯಾಕ್ಕೆ ಹೋದವ ಸಿರ್ಸಿಗೆ ಹೋಗಿದ್ದೆ. ಸಿರ್ಸಿ ಹತ್ತಿರ ನಮ್ಮ ಅಜ್ಜಿಮನಿ ಅದ. ಸಿರ್ಸಿಯಿಂದ ಸ್ವಾಧಿ ಮಠದ ಕಡೆ ಹೋಗೋ ರೋಡಿನ್ಯಾಗ ಒಂದು ಐದು ಮೈಲು ದೂರದಾಗ ಅದ. ನಿಸರ್ಗದ ಮಡಿಲಾಗ ತಲೆಯಿಟ್ಟು ಮಲಗಿರುವ ಚಂದದ ಹಳ್ಳಿ.

ಮುಂಜಾನೆ ಲಗೂ ಧಾರವಾಡದಿಂದ ಸಿರ್ಸಿ ಬಸ್ ಹಿಡದೆ. ಏನು ಒಂದು ಮೂರು ತಾಸಿನ್ಯಾಗ ಅಂದ್ರ ಸಿರ್ಸಿ ಮುಟ್ಟಿಬಿಟ್ಟೆ. ಬಸ್ ಸ್ಟಾಂಡಿಗೆ ಬಂದು ಕರಕೊಂಡು ಹೋಗ್ತೇನಿ ಅಂತ ಮಾಮಾನ ಮಗ ಹೇಳಿದ್ದ. ಆದರೆ ಆ ಆಸಾಮಿ ಅಲ್ಲೆಲ್ಲೂ ಕಾಣಲಿಲ್ಲ. ಫೋನ್ ಹಚ್ಚಿ, 'ಎಲ್ಲಿದ್ದೀಪಾ ಹೀರೋ?' ಅಂದೆ. 'ಈಗ ಬಂದೆ. ಹುಲಿಯಪ್ಪನ ಕಟ್ಟೆ ದಾಟಿದೆ. ಬಂದೇಬಿಟ್ಟೆ,' ಅಂದ. 'ಇಂವಾ ಬರಲಿಕ್ಕೆ ಇನ್ನೂ ಒಂದು ಹತ್ತು ಹದಿನೈದು ನಿಮಿಷವಾದರೂ ಬೇಕು. ಏನು ಮಾಡಲಿ?' ಅಂತ ವಿಚಾರ ಮಾಡಿದೆ

ಸಿರ್ಸಿ ಊರ ನಡು ನಿಂತು 'ಏನು ಮಾಡಲಿ?' ಅಂತ ಯಾರರೆ ಕೇಳ್ತಾರೇನು? ಇಲ್ಲ. ಕೆಲಸ ಇರಲಿ ಬಿಡಲಿ. ಅದು ಬೇಕಾಗಿರಲಿ ಬ್ಯಾಡಾಗಿರಲಿ. ಒಟ್ಟಿನಾಗ ಒಂದು ಕವಳ ಹಾಕಿಬಿಡೋದು. ಕವಳ ಅಂದ್ರ ನಮ್ಮ ಸಿರ್ಸಿ ಭಾಷಾದಾಗ ಎಲಿಅಡಿಕಿ ಅಂತ. ನಾನೂ ಅದನ್ನೇ ಮಾಡಿದೆ. ಒಂದು ಜರ್ದಾ ೪೨೦ ಪಾನ್ ಆರ್ಡರ್ ಮಾಡಿದೆ. ಮಸ್ತಾಗಿ ಮಾಡಿಕೊಟ್ಟ. ಹಾಕ್ಕೊಂಡು ಒಂದೆರೆಡು ಪಿಚಕಾರಿ ಪಚಕ್ ಅಂತ ಹಾರಿಸಿ, ಅಲ್ಲೇ ಆಕಡೆ ಈಕಡೆ ನೋಡಿಕೋತ್ತ ನಿಂತಿದ್ದೆ. ಆವಾಗ ಆತು ನೋಡ್ರಿ ನನ್ನ ಮ್ಯಾಲೆ ಅಟ್ಯಾಕ್! ಫುಲ್ ಗ್ಯಾಂಗ್ ಅಟ್ಯಾಕ್!

ಯಾರೋ ಒಬ್ಬವ ಬಂದು ನನ್ನ ಮುಂದ ನಿಂತ. ಅವನ ಹಿಂದ ಒಬ್ಬಾಕಿ. ಅವನ ಹೆಂಡ್ತಿನೇ ಇರಬೇಕು. ಜೊತಿಗೆ ಮೂರು ಮಕ್ಕಳು. ಒಂದು ಹೆಣ್ಣು, ಎರಡು ಗಂಡು.

ನನ್ನ ಮತ್ತ ಮತ್ತ ನೋಡಿದ. ಪಿಕಿಪಿಕಿ ನೋಡಿದ. ಮ್ಯಾಲಿಂದ ಕೆಳಗಿನವರೆಗೆ ಸ್ಕ್ಯಾನಿಂಗ್ ಮಾಡಿದ. ಡೀಪ್ ಸ್ಕ್ಯಾನಿಂಗ್ ಮಾಡಿದ. 'ಇವ ಅವನೇ ಹೌದೋ ಅಲ್ಲವೋ?' ಅನ್ನುವ ತರಹ ಕಣ್ಣು ದೊಡ್ಡದು ಮಾಡಿ, ಸಣ್ಣದು ಮಾಡಿ ನೋಡೇ ನೋಡಿದ. ನನಗ ಸ್ವಲ್ಪ ಘಾಬರಿ ಆತು. ಹೊಸಾ ಊರಾಗ ಹೀಂಗ ಒಮ್ಮೆಲೇ ಒಂದು ಸಂಸಾರ ಬಂದು ಅಟ್ಯಾಕ್ ಮಾಡಿಬಿಟ್ಟರೆ ಹ್ಯಾಂಗ್ರೀ? ಹಾಂ?

'ಏ, ಯಾರೋ ನೀನು? ಏನು?' ಅಂತ ಮಾತಾಡೋಣ ಅಂತ ಬಾಯಿ ಬಿಟ್ಟೆ. ಕವಳ ಹಾಕಿದ್ದು ಮರ್ತೇ ಬಿಟ್ಟಿದ್ದೆ. ಕವಳದ ರಸ ಕಟಬಾಯಿಂದ ಇಳೀತು. ಇನ್ನೇನು ನನ್ನ ಶರ್ಟ್ ಮ್ಯಾಲೆ ಚಿತ್ತಾರ ಮೂಡಿಸಬೇಕು ಅನ್ನೋದ್ರಾಗ ಪಿಚಕ್ ಅಂತ ಒಂದು ಸಿಕ್ಸರ್ ಪಿಚಕಾರಿ ಹಾರಿಸಿದೆ. ಮುಂದೆ ನಿಂತವ ಜಿಗಿದು ಬಾಜೂಕ ಸರಿದ. ಅವನೂ ಕವಳದ ಕೇಸೇ ಇದ್ದ. ಹಾಂಗಾಗಿ ಅವಂಗ ರೂಢಿ ಇತ್ತು. ನಾ ಮಾತಾಡುವ ಪರಿಸ್ಥಿತಿ ಬರಲೇ ಇಲ್ಲ. ಮೊದಲು ಮಾನಸಿಕ ಅಟ್ಯಾಕ್ ಆಗಿತ್ತು. ಈಗ ದೇಹದ ಮೇಲೆ ಕೂಡ ಅಟ್ಯಾಕ್ ಆಗೇಬಿಡ್ತು.

'ಮಹೇಶಣ್ಣಾ! ಮಹೇಶಣ್ಣಾ!!' ಅಂದವನೇ ಆ ಆದ್ಮಿ ನನ್ನ ಕೈ ಹಿಡಿದುಕೊಂಡುಬಿಟ್ಟ.

ನಾ ಫುಲ್ ದಂಗಾಗಿಬಿಟ್ಟೆ. ಮತ್ತೇನ್ರೀ? ಯಾರೋ ಗುರುತಿಲ್ಲದ ಮನುಷ್ಯಾ ಒಮ್ಮೆಲೇ ಹಿಂಗ ಮಾಡಿದರೆ!? ಹಾಂ?

ಕೈಯಂತೂ ಹಿಡಕೊಂಡೇಬಿಟ್ಟಿದ್ದ. ಈಗ ನನ್ನ ಎರಡೂ ಕೈ ತೊಗೊಂಡು ಅವನ ಕಣ್ಣಿಗೆ ಒತ್ತಿಕೊಂಡ. ನನ್ನ ಕೈ ತೊಗೊಂಡು ಹೋಗಿ ಅವನ ಜೋಡಿ ಇದ್ದ ಹೆಂಗಸಿನ ಕಣ್ಣಿಗೂ ಒತ್ತಿಸಿಬಿಟ್ಟ. ಶೀ! ಒಂದು ನಮೂನಿ ಅಸಹ್ಯ ಫೀಲ್ ಆತು. ಮಕ್ಕಳಿಗೆ ನನ್ನ ಕಾಲಿಗೆ ಡೈವ್ ಹೊಡೆದು ನಮಸ್ಕಾರ ಮಾಡ್ರಿ ಅಂದ. ಮೂರೂ ಮಕ್ಕಳು ಅದೇ ರೀತಿ ಮಾಡಿದವು. ಅವು ನನ್ನ ಕಾಲಿಗೆ ಹೀಂಗ ಡೈವ್ ಹೊಡೆದವು ಅಂದ್ರ ಅವರು ಡೈವ್ ಹೊಡೆದ ಅಬ್ಬರಕ್ಕೆ ನನ್ನ ಬ್ಯಾಲೆನ್ಸ್ ತಪ್ಪಿ ನಾನು ಡೈವ್ ಹೊಡೆಯೋ ಹಾಂಗ ಆಗಿತ್ತು. ಪುಣ್ಯಕ್ಕೆ ಕೆಳಗೆ ಬೀಳಲಿಲ್ಲ.

ಸುಧಾರಿಸಿಕೊಂಡು ನೋಡಿದರೆ ಆ ಮನುಷ್ಯಾನ ಕಣ್ಣಾಗ ನೀರು. ಸಂತೋಷದ ಕಣ್ಣೀರು. ಮತ್ತ ಮತ್ತ ನನ್ನ ಕೈಗಳನ್ನು ಕಣ್ಣಿಗೆ ಒತ್ತಿಕೊಂಡ. ಅವನ ಕಣ್ಣೀರಿನಿಂದ ನನ್ನ ಕೈಯೆಲ್ಲಾ  ಒದ್ದಿ ಒದ್ದಿ.

'ಮಹೇಶಣ್ಣಾ, ಮಹೇಶಣ್ಣಾ, ನೀ ನನ್ನ ಭಾಗ್ಯದ ದೇವರು. ನೀನೇ ನನ್ನ ಭಾಗ್ಯದ ದೇವರು. ನಿನ್ನ ಉಪಕಾರ ಹ್ಯಾಂಗ ಮರೀಲಿ? ಅಣ್ಣಾ, ಅಣ್ಣಾ!' ಅನ್ಕೋತ್ತ ಕಾಲಿಗೆ ಬಿದ್ದುಬಿಟ್ಟ. ಅವನ ಜೋಡಿ ಇದ್ದ ಹೆಂಗಸೂ ಕಾಲಿಗೆ ಬಿದ್ದಳು. ಕೆಟ್ಟ embarrassing ಬಿಡ್ರಿ. ಅಸಹ್ಯ! ಗೊತ್ತಿಲ್ಲದ ಊರಿನ್ಯಾಗ ಯಾರ್ಯಾರೋ ಕೈ ಹಿಡಿದು ಕಣ್ಣಿಗೆ ಒತ್ತಿಕೊಳ್ಳೋದು, ಕಾಲಿಗೆ ಬೀಳೋದು! ಹಾಂ? What's this nonsense, I say!

ಈ ಮನುಷ್ಯಾ ಎಲ್ಲರೆ ಹುಚ್ಚ ಇರಬಹುದೇನೋ ಅಂತ ಅನ್ನಿಸ್ತು. ಆದ್ರ ಹುಚ್ಚರು ಅಕೇಲಾ ಇರ್ತಾರ. ಇಂವಾ ಪೂರ್ತಿ ಸಂಸಾರದ ಜೋಡಿ ಇದ್ದಾನ. ಎಲ್ಲರೆ ಪೂರ್ತಿ ಸಂಸಾರ ಹುಚ್ಚ ಅದೇನು ಮತ್ತ? ಅಂತ ಏನೇನೋ ವಿಚಾರ ಬಂತು.

'ಮಹೇಶಣ್ಣಾ!  ನಾನು, ನಾನು, ಎಸ್. ಎಸ್. ಭಟ್. ಗೊತ್ತಾಗಲಿಲ್ಲ?' ಅಂತ ಕೇಳಿಬಿಟ್ಟ.

ಆಂವಾ ಏನೋ ಎಸ್. ಎಸ್. ಭಟ್ ಅಂದಾ. ನಾನು ಮಾತ್ರ ನೋ ನೋ ಭಟ್ ಆಗೇ ಇದ್ದೆ. ಯಾರಿವಾ ಅಂತ ಒಟ್ಟೇ ತಲಿಗೆ ಹೊಳಿವಲ್ಲತು. Who is this S.S. Bhat?

'ನಾನು, ನಾನು, ಸಣ್ಣ ಸ್ವಾಮಿ. ನಿನ್ನ ಜೋಡಿ ಮಠದಾಗ ಇದ್ದೆ. ನೆನಪಾತೇನೋ ಮಹೇಶಣ್ಣಾ? ಸಣ್ಣ ಸ್ವಾಮಿ,' ಅಂತ ಕೇಳಿಬಿಟ್ಟ ನೋಡ್ರಿ. ಆವಾಗ ಮಾತ್ರ ದೊಡ್ಡ ಝಟಕಾ ಶಾಕ್ ಹೊಡೀತು ನನಗ.

ಇಂವಾ ನಮ್ಮ ಮಾಜಿ ಸಣ್ಣ ಸ್ವಾಮಿನೇ? ಮತ್ತ ಎಸ್. ಎಸ್. ಭಟ್ ಅಂತಾನ? ಏನು ಇದರ ಅರ್ಥ?

ನಾನು ಒಂದು ಡೀಪ್ ಫ್ಲಾಶ್ ಬ್ಯಾಕಿಗೆ ಹೋದೆ. ಇಪ್ಪತ್ತೇಳು ವರ್ಷದ ಹಿಂದಕ್ಕೆ ಹೋದೆ. ಸಿರ್ಸಿ ಬಸ್ಟಾಂಡಿನಲ್ಲಿ ಸಿಕ್ಕಿದ್ದ ಎಸ್. ಎಸ್. ಭಟ್ ಮಾತ್ರ ಕೈ ಹಿಡಿದುಕೊಂಡೇ ಇದ್ದ. ಅವನ ಕಣ್ಣಲ್ಲಿ ಆನಂದಭಾಷ್ಪ. ಅದು ನಿರಂತರ.

***

ಅದು ೧೯೮೮ ರ ಮಾತು. ಆಗ ಮಾತ್ರ ಮೆಟ್ರಿಕ್ ಮುಗಿಸಿದ್ದೆ. ನಾ ಗಳಿಸಿದ್ದ ಜಸ್ಟ್ ಥರ್ಡ್ ಕ್ಲಾಸ್ ಮಾರ್ಕ್ಸು, ಆಗಿನ ನನ್ನ ವೇಷ, ಭೂಷಣ, ಹಾವ ಭಾವ, ನಡವಳಿಕೆ, ಚಟಗಳು, ಇತ್ಯಾದಿ ನೋಡಿದ ನಮ್ಮ ಮನಿ ಮಂದಿ ವಿಚಾರ ಮಾಡಿದರು. 'ಇಂವಾ ಪೂರ್ತಿ ಕೆಟ್ಟು ಕೆರಾ ಹಿಡಿದು ಹೋಗ್ಯಾನ. ಪಿಯೂಸಿಗೆ ಹಾಕೋದು ಸುಮ್ಮನೇ ರೊಕ್ಕ ದಂಡ. ಇಲ್ಲೇ ಧಾರವಾಡದಾಗೇ ಇದ್ದರೆ ಇನ್ನೂ ಕೆಟ್ಟು, ಮಂದಿನೂ ಕೆಡಿಸಿ ಇಡ್ತಾನ. ಎಲ್ಲದರಕಿಂತ ಹೆಚ್ಚಾಗಿ ನಮ್ಮ ಜೀವಾ ತಿಂದು ತಿಂದು ತೇಗಿಬಿಡ್ತಾನ. ಹಾಂಗಾಗಿ ಈ ಉಡಾಳ, ಚಾಂಡಾಲ ಹುಡುಗನ್ನ ಬ್ಯಾರೆ ಎಲ್ಲರೆ ಇಡಬೇಕು,' ಅಂತ ವಿಚಾರ ಮಾಡಿದರು.

'ಎಲ್ಲಿಡಬೇಕು??' ಅಂತ ಮುಂದಿನ ಪ್ರಶ್ನೆ ಬಂತು ಮನಿ ಮಂದಿ ತಲ್ಯಾಗ.

'ಹ್ಯಾಂಗೂ ಇಂವಾ ಕಾಲೇಜಿಗೆ ಹೋಗಲಿಕ್ಕೆ ಉಪಯೋಗಿಲ್ಲ. ನೀವು ಜಗ್ಗೆ ರೊಕ್ಕಾ ಖರ್ಚು ಮಾಡಿ ಕಾಲೇಜಿಗೆ ಹಾಕಿದರೂ ಇಂವಾ ಏನೂ ಪಾಸ್ ಆಗೋದಿಲ್ಲಾ. ಬದಲಿಗೆ ಕಾಲೇಜ್ ಬಾಗಿಲಾ ಮುಚ್ಚಿಸೇ ಬರ್ತಾನ. ಹಾಂಗಾಗಿ ಯಾವದರೆ ಮಠದಾಗ ಇಟ್ಟು ಬರ್ರಿ ಇವನ್ನ. ಅಲ್ಲಿ ಸ್ವಾಮಿಗಳ ಸೇವಾ ಮಾಡಿಕೊಂಡು, ಏನೋ ಇವನ ನಸೀಬದಾಗ ಇದ್ದರೆ ಒಂದು ಚೂರು ವೇದಾ, ಮಂತ್ರಾ, ಅದು ಇದು ಕಲಿತು ಸುಧಾರಿಸಬಹುದು. ಮಠದಾಗ ಒಗೆದು ಬರ್ರಿ ನಿಮ್ಮ ಉಡಾಳ ಹೊನಗ್ಯಾ ಹುಡುಗನ್ನ,' ಅಂತ ಊರ ಮಂದಿ ಉದ್ರಿ ಉಪದೇಶ ಕೊಟ್ಟರು. ಇನ್ನೊಬ್ಬರ ಮಕ್ಕಳನ್ನ ಭಾವಿಗೆ ತಳ್ಳಲಿಕ್ಕೆ ಮಂದಿ ಹ್ಯಾಂಗ ತುದಿಗಾಲ ಮ್ಯಾಲೆ ನಿಂತಿರ್ತಾರ ನೋಡ್ರಿ.

ನನಗೇನು? ಮನಿನೂ ಒಂದೇ ಮಠಾನೂ ಒಂದೇ. ದಿವಸಕ್ಕೆ ನಾಲ್ಕು ಹೊತ್ತು ಪುಷ್ಕಳ ತಿಂಡಿ, ಊಟ ಸಿಗಬೇಕು. ಮ್ಯಾಲಿಂದ ನನ್ನ ಸಣ್ಣ ಪುಟ್ಟ ಚಟಗಳಿಗೆ ಸಣ್ಣ ಪ್ರಮಾಣದ ರೊಕ್ಕ ಇದ್ದರೆ ಸಾಕು. ಆ ರೊಕ್ಕಾ ನಾ ಹ್ಯಾಂಗರೆ ಮಾಡಿ ಜುಗಾಡ್ ಮಾಡಿಕೋತ್ತೇನಿ ಬಿಡ್ರೀ. 'ಚಟವೇ ಚಟುವಟಿಕೆಯ ಮೂಲವಯ್ಯಾ' ಅಂತ ನಮ್ಮ ನಂಬಿಕೆ. ಚಟ ಅಂದ್ರ ಹೆಚ್ಚು ಏನಿಲ್ಲಾ. ದಿನಕ್ಕ ಒಂದು ಹತ್ತು ಗುಟ್ಕಾ ಚೀಟಿ, ಊಟಾದ ಮ್ಯಾಲೆ ಒಂದು ಜರ್ದಾ ಪಾನ್, ಮತ್ತ ವಾರಕ್ಕೆ ನಾಲ್ಕಾರು ಸರೆ ಸಂಜಿ ಮುಂದ ನಮ್ಮ ವಿಜಯ್ ಮಲ್ಯಾ ಸಾಹೇಬರ ತೀರ್ಥ ಅಂದ್ರ ಬಿಯರ್. ಅದೂ ಒಂದು ನಾಲ್ಕೇ ಬಾಟಲಿ ಅಷ್ಟೇ. ಇಷ್ಟು ಬಿಟ್ಟು ಸಿಗರೇಟ್, ನಾನ್ವೆಜ್, ಡ್ರಗ್ಸ್, ಮೂಗಬಟ್ಟು ಇತ್ಯಾದಿ ಯಾವ ಚಟಾನೂ ಇಲ್ಲ ನೋಡ್ರಿ.

ನನ್ನ ಮಠದಾಗ ಬಿಡೋದು ಅಂತ ನಿರ್ಧಾರ ಆತು. ಅದರ ಪ್ರಕಾರ ನನ್ನ ತೊಗೊಂಡು ಹೋಗಿ ಮಠದಾಗ ಬಿಟ್ಟು ಬಂದರು. ನನಗೂ ಮನಿಯಾಗ ಇದ್ದು ಇದ್ದು ಸಾಕಾಗಿ ಹೋಗಿತ್ತು. ಪ್ರತಿ ದಿನ ಮನಿ ಮಂದಿ ಕಡೆ ಬೈಸಿಕೊಳ್ಳೋದು. ಅವರಿಗೆ ತಿರುಗಿ ಬೈಯೋದು. ಬರೇ ಜಗಳ. ಕಡೀಕ್ಕ ಅವರಿಗೇ ಸಾಕಾಗಿ, ಅವರು ನನಗ ಸೆಂಟಿಮೆಂಟಲ್ ಫಿಟ್ಟಿಂಗ್ ಇಟ್ಟು, ನನಗೇ ನನ್ನ ಬಗ್ಗೆ ಕೆಟ್ಟ ಅನಿಸುವಂತೆ ಮಾಡೋದು. ಇದೆಲ್ಲಾ ತಲಿಬ್ಯಾನಿ ಯಾವಂಗ ಬೇಕ್ರೀ? ಇದರಕಿಂತ ಮಠದಾಗ ಇರೋದು ಬೆಟರ್. ಮತ್ತ ಮಠದ ಊಟ ಮನಿ ಊಟಕ್ಕಿಂತ ರುಚಿ ಇರ್ತದ. ಮತ್ತ ದಿನಾ ಎರಡೂ ಹೊತ್ತೂ ಊಟಕ್ಕೆ ಏನರೆ ಸ್ವೀಟ್ ಮಾಡೇ ಮಾಡಿರ್ತಾರ. ಮತ್ತ ನಾನೂ ಒಂದು ಜನಿವಾರ ಹಾಕ್ಕೊಂಡು, ಮೈತುಂಬಾ ಭಸ್ಮಾ ಬಳಕೊಂಡು, ಈಗ ಇರುವ ಉದ್ದ ಕೂದಲಾನೇ ಪೋನಿಟೇಲ್ ಗತೆ ಕಟ್ಟಿಕೊಂಡು, ಅದೇ ಚಂಡ್ಕಿ ಅಂತ ಪೋಸ್ ಕೊಟ್ಟುಬಿಟ್ಟೆ ಅಂದ್ರ ನೋಡಿದ ಮಂದಿ, 'ಇದು ಯಾವದೋ ಭಯಂಕರ ಬ್ರಾಹ್ಮಣ ಬ್ರಹ್ಮಚಾರಿ ಇದ್ದಂಗ ಅದ. ಇದಕ್ಕೂ ಒಂದಿಷ್ಟು ದಕ್ಷಿಣಾ ಕೊಡಬೇಕು,' ಅಂದುಕೊಂಡು ನಮಗೂ ರೊಕ್ಕಾ ಕೊಡ್ತಾರ. ಅಂತ ನಮ್ಮ ಆಶಾ. ಹಾಂಗ ರೊಕ್ಕ ಬಂದ್ರ ಅದು ನಮ್ಮ ಚಟಕ್ಕ ಸಾಕು. ಇಲ್ಲಂದರೂ ನಮ್ಮ ಅಪ್ಪಾ ಕೊಡ್ತಾರ ಬಿಡ್ರಿ. ನಮ್ಮವ್ವನ ಕಣ್ಣು ತಪ್ಪಿಸಿ ನನ್ನ ಚಟದ maintenance ಮಾಡವರು ಇಬ್ಬರು. ಒಬ್ಬರು ನಮ್ಮ ಅಪ್ಪಾ. ಇನ್ನೊಬ್ಬವಾ ಅಂದ್ರ ನಮ್ಮ ಅಜ್ಜ. ಅವ್ವನ ಅಪ್ಪ. ಸಿರ್ಸಿ ಕಡೆ ಇರತಾನ. ಧಾರವಾಡ ಕಡೆ ಬಂದಾಗೊಮ್ಮೆ ಪ್ರೀತಿ ಮೊಮ್ಮಗ ಉರ್ಫ್ ನನ್ನ ಕೈಯಾಗ ಒಂದಿಷ್ಟು ರೊಕ್ಕಾ, ಸೂಪರ್ ಕ್ವಾಲಿಟಿ ಮನಿಯಾಗ ಬೆಳೆದ ಅಡಿಕಿ, ಒಂದೆರೆಡು ಜರ್ದಾ ಡಬ್ಬಿ ಕೊಟ್ಟೇ ಹೋಗ್ತಾನ. ಅವನೇ ದೊಡ್ಡ ಚಟ ಸಾರ್ವಭೌಮ. ನಾ ಅವನ ಮೊಮ್ಮಗ. ಕೇಳಬೇಕೇ ಇನ್ನು?

ಹೀಂಗ ವಿಚಾರ ಮಾಡಿ ನಾನೂ ಮಠಕ್ಕೆ ಹೋಗಿ ಇರಲಿಕ್ಕೆ ತಯಾರಾದೆ. ಸ್ವಾಮಿಗಳೂ ಪರ್ಮಿಷನ್ ಕೊಟ್ಟರು. ನಮ್ಮ ಅಜ್ಜಾ ಮಠದ ಸ್ವಾಮಿಗಳ ಕಡೆ ಭಾಳ ವಶೀಲಿ ಹಚ್ಚಿದ್ದ ಅಂತ ಕಾಣಿಸ್ತದ. ಅವನ ಮಾತು ಹೆಂಗ ತೆಗೆದು ಹಾಕಿಯಾರು ಸ್ವಾಮಿಗಳು? ಅವರನ್ನ ಸ್ವಾಮಿಗಳನ್ನಾಗಿ ಮಾಡಿದವನೇ ನಮ್ಮ ಅಜ್ಜಾ. ಹೆಚ್ಚು ಕಮ್ಮಿ ಮಾತಾಡಿದರೆ ಅವರ ಕಾವಿ ಬಿಚ್ಚಿ ಕೋವಿ ತೋರಿಸಿ ಓಡಸ್ತಾನ ನಮ್ಮ ಅಜ್ಜ. ಅಷ್ಟು ಜೋರ್ ಇದ್ದಾನ. ಕೋವಿ ಅಂತೂ ಇಟ್ಟೇ ಬಿಟ್ಟಾನ ಮನಿಯಾಗ. ಅದೂ ದೊಡ್ಡ ಕಾರ್ತೂಸ್ ಹಾಕ್ಕೊಂಡು ಆನೆ, ಹುಲಿ ಬೇಟೆಯಾಡೋ ಕೋವಿ.

ನನ್ನ ಮಠದಾಗ ತಂದು ಬಿಟ್ಟರು. ಮಠದಾಗ ಸೆಟಲ್ ಆದೆ. ಏ, ಮಠದಾಗ ಲೈಫ್ ಭಾಳ ಮಸ್ತಿತ್ತು ಬಿಡ್ರಿ. ಕೆಲಸ ಇಲ್ಲ ಬೊಗಸಿ ಇಲ್ಲ. ಮಸ್ತಾಗಿ ಊಟ ಕಟದು, ಬೇಕಾದಾಗ ಗಡದ್ದ ನಿದ್ದಿ ಹೊಡದು, ಅಲ್ಲೇ ಹತ್ತಿರ ಇದ್ದ ನದಿಯಾಗ ಮಸ್ತ ಈಜು ಹೊಡೆದು, ಸುತ್ತಮುತ್ತಲಿನ ಅಡವಿಯಾಗ ಅಲದಾಡಿಕೊಂಡು ಆರಾಮ ಇದ್ದೆ. ಮ್ಯಾಲಿಂದ ಯಾರದ್ದೂ ಕಿರಿಕಿರಿ ಪಿರಿಪಿರಿ ಇಲ್ಲ. ನಮ್ಮ ಅವ್ವನ nonstop ಕ್ಯಾಂ! ಕ್ಯಾಂ! ಅಂತ ಬೈಯೋದಂತೂ ಇಲ್ಲವೇ ಇಲ್ಲ. ಮಸ್ತಾಗಿತ್ತು ಲೈಫ್.

'ಏ, ಮಾಣಿ, ವೇದ ಪಾಠಶಾಲಾಕ್ಕ ಹೋಗಿ ಕೂಡೋ! ಒಂದು ನಾಲ್ಕು ಮಂತ್ರಾ ಕಲಿ!' ಅಂತ ಒಂದು ದಿನ ಸ್ವಾಮಿಗಳು ನನಗ ಜೋರ್ ಮಾಡಿದರು. ಹಾಂಗ ಜೋರ್ ಮಾಡಿದ ಮುಂದಿನ ವಾರನೇ ನಮ್ಮ ಅಜ್ಜ ಮಠಕ್ಕ ಬಂದಿದ್ದ. ಅಲ್ಲೇ ಹತ್ತಿರದ ಹಳ್ಯಾಗ ಇರ್ತಾನ. ಅವಂಗ ಕಂಪ್ಲೇಂಟ್ ಹೇಳಿದೆ. 'ನೋಡಜ್ಜಾ, ಸ್ವಾಮಿಗಳು ನನಗ ಜೋರ್ ಮಾಡ್ತಾರ. ಮಂತ್ರಾ ಗಿಂತ್ರಾ ಕಲಿ ಅಂತಾರ,' ಅಂತ ಹೇಳಿದೆ ನೋಡ್ರಿ ಅಷ್ಟೇ. ನಮ್ಮಜ್ಜ ಸ್ವಾಮಿಗಳಿಗೆ ಅದೇನು ಗಜ್ಜು ಕೊಟ್ಟು ಬಂದನೋ ಗೊತ್ತಿಲ್ಲ. ನಂತರ ನನ್ನ ಸುದ್ದಿಗೆ ಮಾತ್ರ ಯಾರೂ ಬರಲಿಲ್ಲ. ಮತ್ತ ಸಿರ್ಸಿ ಟೌನ್ ಅಲ್ಲೇ ಹತ್ತಿರ. ಭಾಳ ಅಂದ್ರ ಒಂದು ಐದಾರು ಕಿಲೋಮೀಟರ್. ಹಾಂಗಾಗಿ ನಮ್ಮ ಸಂಜೆ ವೇಳೆಯ 'ತೀರ್ಥಯಾತ್ರೆ'ಗೆ ಏನೂ ತೊಂದ್ರಿ ಇರಲಿಲ್ಲ. ಸಿರ್ಸಿ ಟೌನಿನ್ಯಾಗ ಬಾರಿನಾಗ ಕೂತು ಮಸ್ತ ಪಾರ್ಟಿ ಮಾಡಿ ರಾತ್ರಿ ಎಷ್ಟೇ ಹೊತ್ತಿಗೆ ಮಠಕ್ಕ ಬಂದರೂ ನಮ್ಮ ಸಲುವಾಗಿ ಒಂದು ದೊಡ್ಡ ಗಂಗಾಳದಾಗ ಊಟ ಅಂತೂ ರೆಡಿ ಇರ್ತಿತ್ತು. ಗೋಪಾಲಕೃಷ್ಣ ಹೆಗಡೆ ಅವರ ಮೊಮ್ಮಗ ಅಂದ್ರ ಸುಮ್ಮನೇ ಏನು? ನಮ್ಮ ಅಜ್ಜ ಎಲ್ಲಾರಿಗೂ ಹೇಳಿ, ಎಲ್ಲ ಬರೋಬ್ಬರಿ ವ್ಯವಸ್ಥಾ ಮಾಡಿ ಇಟ್ಟಿದ್ದ. ಅಷ್ಟು ಪ್ರೀತಿ ನನ್ನ ಮ್ಯಾಲೆ.

ಅದೇ ವೇಳ್ಯಾದಾಗ ಆ ಮಠದಾಗ ಒಬ್ಬ ಜೂನಿಯರ್ ಸ್ವಾಮಿ ಇದ್ದ. ನಮ್ಮ ವಯಸ್ಸಿನವನೇ. ಅವಂಗ ಆಗಲೇ ಸನ್ಯಾಸ ದೀಕ್ಷಾ ಆಗಿಬಿಟ್ಟಿತ್ತು. ಏನು ಒಂದು ಹದಿನೆಂಟು ಇಪ್ಪತ್ತು ವರ್ಷ ಇರಬೇಕು ಪಾಪ. ಲೈಫ್ ಎಂಜಾಯ್ ಮಾಡುವ ವಯಸ್ಸಿನ್ಯಾಗ ಪಾಪ ಆ ಸಣ್ಣ ಮಾಣಿಗೆ ತಲಿ ಬೋಳಿಸಿ, ಕಾವಿ ಹಾಕಿ ಕೂಡಿಸೇಬಿಟ್ಟಾರ. ಹಿರಿಯ ಸ್ವಾಮಿಗಳು ತೀರಿ ಹೋದ ನಂತರ ಅವನೇ ಅಂತ ಮುಂದ. ಹಾಂಗಾಗಿ ಅವಂದು ಟ್ರೈನಿಂಗ್ ನಡೆದಿತ್ತು.

ಅದೇನು ಯೋಗಾಯೋಗವೋ ಗೊತ್ತಿಲ್ಲ. ನನಗ ಮತ್ತ ಆ ಜೂನಿಯರ್ ಸ್ವಾಮಿಗೆ ಭಾಳ ದೋಸ್ತಿಯಾಗಿಬಿಡ್ತು. ಪಾಪ ಒಳ್ಳೆ ಹುಡುಗ ಅದು. ನನ್ನ ಗತೆನೇ ಕೊಬ್ಬಿದ ಹೋರಿಯಾಂಗೇ ಇದ್ದ ಅವನೂ. ಅಷ್ಟ ಬೀಜಾ ಬಡಿದ ಎತ್ತಿನ ಗತೆ ಮಾಡಿ ಸನ್ಯಾಸ  ದೀಕ್ಷಾ ಕೊಟ್ಟು ಕೂಡಿಸಿಬಿಟ್ಟಾರ. ಆಮೇಲೆ ಗೊತ್ತಾತು ಅವಂಗ ಸನ್ಯಾಸ ಒಟ್ಟೇ ಮನಸ್ಸಿಲ್ಲ ಅಂತ. ಒಂದು ಚಹಾ ಕುಡಿಯೋಹಾಂಗಿಲ್ಲ. ಒಂದು ಎಲಿ ಅಡಿಕಿ, ಗುಟ್ಕಾ, ಜರ್ದಾ ಪಾನ್ ಹಾಕೋ ಹಾಂಗಿಲ್ಲ. ಕಲರ್ ಕಲರ್ ಬಟ್ಟೆ ಸಹಿತ ಇಲ್ಲ. ಇನ್ನು ಸಿನೆಮಾ, ಬ್ಲೂಫಿಲ್ಮ್ ಅಂತೂ ಇಲ್ಲೇ ಇಲ್ಲ. ಅವೆಲ್ಲಾ ಎಲ್ಲರೆ ಕನಸಿನ್ಯಾಗ ಕಂಡ್ರೆ ನೋಡಿಕೊಂಡು ಜಟಕಾ ಹೊಡ್ಕೋಬೇಕು ಅಷ್ಟೇ. ಬಿಯರ್ ಗಿಯರ್ ಅಂತೂ ಇಲ್ಲೇ ಇಲ್ಲ ಬಿಡ್ರಿ. ಆ ಸಣ್ಣ ಸ್ವಾಮಿನ್ನ ಮಠ ಬಿಟ್ಟು ಹೊರಗೆ ಕೂಡ ಬಿಡ್ತಿದ್ದಿಲ್ಲ.

ಅಂತಾ repressed ಪರಿಸ್ಥಿತಿಯಲ್ಲಿದ್ದ ಸಣ್ಣ ಸ್ವಾಮಿ ನನ್ನ ದೋಸ್ತಿ ಮಾಡಿಬಿಟ್ಟ. ಮುಗೀತು ಅವನ ಕಥಿ. ನನ್ನ ಎಲ್ಲಾ ಚಟಗಳನ್ನೂ ಆಂವಾ ಕಲಿತುಬಿಟ್ಟ. ಕದ್ದು ಮುಚ್ಚಿ ಎಲ್ಲಾ ಮಾಡಲಿಕ್ಕೆ ಶುರುಮಾಡಿಬಿಟ್ಟ. ನಾ ಸಿಗರೇಟ್ ಸೇದ್ತಿದ್ದಿಲ್ಲ. ನಾನ್ವೆಜ್ ತಿಂತಿದ್ದಿಲ್ಲ. ಆ ಸಣ್ಣ ಸ್ವಾಮಿ ಸೂಳಿಮಗ್ಗ ಅವೂ ಬೇಕು. ಅವನ ಪ್ರಾಬ್ಲಮ್ ಅಂದ್ರ ಮಠ ಬಿಟ್ಟು ಹೊರಗ ಬರೋ ಹಾಂಗಿಲ್ಲ. ಹಾಂಗಾಗಿ ನಾ ದಲಾಲ್ ಆಗಿಬಿಟ್ಟೆ. ಸ್ವಾಮಿ ಕಡೆ ಒಂದಕ್ಕೆ ನಾಲ್ಕು ಪಟ್ಟು ರೊಕ್ಕಾ ತೊಗೊಳ್ಳೋದು, ಆಮೇಲೆ ಸಿರ್ಸಿ ಪಟ್ಟಣಕ್ಕೆ ಬಂದು ಎಲ್ಲಾ ತೊಗೊಂಡು ಹೋಗಿ ಅವಂಗ ಕೊಡೋದು. ಮ್ಯಾಲಿಂದ ಅವಂಗ ಅವನ್ನೆಲ್ಲ ಕದ್ದು ಮುಚ್ಚಿ ಮಾಡಲಿಕ್ಕೆ ಎಲ್ಲ ಅನುಕೂಲ ಮಾಡಿಕೊಡೋದು. ಆ ದಲ್ಲಾಳಿ ದಂಧೆದಾಗ ಖರೇ ಅಂದ್ರೂ ಒಂದಿಷ್ಟು ರೊಕ್ಕಾ ಮಾಡಿಕೊಂಡೆ ಬಿಡ್ರಿ. ಸುಳ್ಳು ಹೇಳಂಗಿಲ್ಲ.

ನನ್ನ ಸಹವಾಸದಿಂದ ಜೂನಿಯರ್ ಸ್ವಾಮಿ ಕೆಟ್ಟು ಕೆರಾ ಹಿಡಿದು ಹೋದ. ಆ ಹುಚ್ಚ ಸೂಳಿಮಗ್ಗ ರೂಮಿನ್ಯಾಗ ಒಂದು ಟೀವಿ ಮತ್ತು ಒಂದು ವೀಡಿಯೊ ಹಾಕಿಸಿ ಕೊಟ್ಟಿದ್ದರು ದೊಡ್ಡ ಸ್ವಾಮಿಗಳು. ದೊಡ್ಡ ಸ್ವಾಮಿಗಳು ಮಾಡಿದ ಪ್ರವಚನದ ವೀಡಿಯೊ ಟೇಪ್ ಸಹಿತ ಕೊಟ್ಟಿದ್ದರು. ಅವನ್ನೆಲ್ಲ ನೋಡಿ ಸಣ್ಣ ಸ್ವಾಮಿ ಛಲೋತ್ನಾಗಿ ವೇದಾಧ್ಯಯನ ಮಾಡಲಿ ಅಂತ ಅವರ ಉದ್ದೇಶ. ನಾ ಮಸ್ತ ಮಸ್ತ ಬ್ಲೂಫಿಲ್ಮ್ ವೀಡಿಯೊ ತಂದು ಕೊಟ್ಟುಬಿಟ್ಟೆ. ಮೂರೂ ಹೊತ್ತು ಅದನ್ನೇ ನೋಡಿಕೋತ್ತ ಕೂತು ಬಿಡ್ತಿತ್ತು ಆ ಹಾಪ್ ಸ್ವಾಮಿ.

ಒಮ್ಮೆ ಮಟ ಮಟ ಮಧ್ಯಾನ ಖಬರಿಲ್ಲದೇ ಬಿಯರ್ ಕುಡದು, ಬ್ಲೂಫಿಲ್ಮ್ ವೀಡಿಯೊ ಹಾಕಿಕೊಂಡು ನೋಡಿಕೋತ್ತ ಕೂತು ಬಿಟ್ಟಾನ ನಮ್ಮ ಸಣ್ಣ ಸ್ವಾಮಿ. ನಾ ಅಲ್ಲಿ ಇರಲಿಲ್ಲ. ನಾ ಆಗ ಮಾತ್ರ ಹೊರಗ ಹೋಗಿದ್ದೆ. 'ಜವಾನಿ ಕಿ ಕಹಾನಿ' ಅಂತ ಒಂದು ಖತರ್ನಾಕ್ ಬ್ಲೂಫಿಲ್ಮ್ ಹಾಕಿಕೊಟ್ಟುಬಿಟ್ಟಿದ್ದೆ. ಅದನ್ನು ನೋಡಿಕೋತ್ತ ಕೂತಾನ ಸಣ್ಣ ಸ್ವಾಮಿ. ಮತ್ತ ಕುಡಿದ ನಾಲ್ಕು ಬಾಟಲಿ ಕಿಂಗ್ ಫಿಷರ್ ಸ್ಟ್ರಾಂಗ್ ಬಿಯರ್ ಮಸ್ತ ಕಿಕ್ ಬ್ಯಾರೆ ಕೊಟ್ಟದ. ಪೀಠದ ಮ್ಯಾಲೆ ಅಡ್ಡ ಬಿದ್ದವನೇ ಕಾವಿ ಎತ್ತಿದವನೇ ಒಳಗಿನ ಕೋವಿ ಕೈಯಾಗ ತೊಗೊಂಡು ಜಟಕಾ ಹೊಡಕೋತ್ತ ಕಳೆದುಹೋಗ್ಯಾನ. ಆಗ ಆತು ಘಾತ!

ಜೂನಿಯರ್ ಸ್ವಾಮಿ ಕೋಣೆ ಬಾಜೂಕೇ ದೊಡ್ಡ ಸ್ವಾಮಿಗಳ ನಿವಾಸ. ಅವರೂ ಪಾಪ ಮಧ್ಯಾನ ಏನೋ ಒಂದು ಸಣ್ಣ ವಿಶ್ರಾಂತಿ ಮಾಡಲಿಕ್ಕೆ ಅಂತ ಹಾಂಗೇ ಸ್ವಲ್ಪ ಅಡ್ಡಾಗ್ಯಾರ. ಬಾಜೂಕಿನ ಸಣ್ಣ ಸ್ವಾಮಿ ರೂಮಿನಿಂದ ಕೆಟ್ಟ ಕೆಟ್ಟ ಅಸಹ್ಯ ಸೌಂಡ್ ಬರ್ಲಿಕತ್ತಿದ್ದು ಅವರಿಗೆ ಕೇಳ್ಯದ. ಮಠದಾಗ ಏನು ಬಂತು ಮನಿಯೊಳಗ ಸುದಾ ಗಂಡಾ ಹೆಂಡತಿ ಬೆಡ್ರೂಮ್ ಬಿಟ್ಟು ಎಲ್ಲೂ ಅಂಥಾ ಸೌಂಡ್ ಕೇಳಿ ಬರಲೇಬಾರದು. ಅಂತಾದ್ರಾಗ ಜೂನಿಯರ್ ಸ್ವಾಮಿ ರೂಮಿನಿಂದ ಅಂಥಾ ಸೌಂಡ್ ಬರ್ಲಿಕತ್ತದ! ಚೆಕ್ ಮಾಡೋಣ ಅಂತ ಎದ್ದು ಬಂದಾರ ದೊಡ್ಡ ಸ್ವಾಮಿಗಳು.

ನಾ ಆ ಜೂನಿಯರ್ ಸ್ವಾಮಿ ರೂಂ ಬಿಟ್ಟು ಹೋಗೋಕಿಂತ ಮೊದಲು ಹೇಳೇ ಹೋಗೇನಿ. 'ಲೇ, ಸ್ವಾಮೀ! ಟೀವಿ ವಾಲ್ಯೂಮ್ ಸಣ್ಣದಾಗಿ ಇಟ್ಟುಕೋಪಾ. ಮತ್ತ ಬಾಗಿಲಾ ಬರೋಬ್ಬರಿ ಹಾಕ್ಕೋ. ಚಿಲಕಾ ಹಾಕ್ಕೋ. ಆಮ್ಯಾಲೆ ಬೇಕಾದ್ರ ಒಳಗ ಏನರೆ ಮಾಡಿಕೋ' ಅಂತ. ಎಲ್ಲೆ ಲಕ್ಷ್ಯಇರಬೇಕು? ನಾ ಏನು ಬಾಗಿಲಾ ಮುಂದು ಮಾಡಿಕೊಂಡು ಬಂದಿದ್ದೆ ಅಷ್ಟೇ. ಹಾಂಗೇ ಅದ. ದೊಡ್ಡ ಸ್ವಾಮಿಗಳು ಬಂದು ಬಾಗಿಲಾ ಸ್ವಲ್ಪ ಹೀಂಗ ಲೈಟಾಗಿ ಒಳಗ ದುಗಿಸ್ಯಾರ. ಬಾಗಿಲಾ ತೆಗೆದದ. ಆವಾಗ ನಮ್ಮ ಸಣ್ಣ ಸ್ವಾಮಿಯ ವಿರಾಟರೂಪದ ವಿಶ್ವದರ್ಶನ ಆಗಿಬಿಟ್ಟದ!

ಧ್ಯಾನಕ್ಕೆ ಅಂತ ಇದ್ದ ಪೀಠದ ಮ್ಯಾಲೆ ಸಣ್ಣ ಸ್ವಾಮಿ ಅಸಡಾ ಬಸಡಾ ಬಿದ್ದುಕೊಂಡಾನ. ಮೈ ಮ್ಯಾಲಿನ ವಸ್ತ್ರಾ ಎಲ್ಲಾ ಎತ್ತರಪತ್ತರ. ಕೈಯಾಗ ಬಿಯರ್ ಬಾಟಲಿ. ಕಾವಿ ಲುಂಗಿ ಎತ್ತಿ, ಒಳಗಿನ ಕೋವಿ ಕೈಯಾಗ ಬ್ಯಾರೆ ಹಿಡಕೊಂಡು..... ರಾಮ ರಾಮ! ನಾ ಹೇಳಲಾರೆ ಮುಂದಿಂದು. ಫುಲ್ ಜಟಕಾ ಸೆಶನ್. ಎದುರಿಗೆ ಟೀವಿ ಮ್ಯಾಲೆ ಕೆಟ್ಟಾಕೊಳಕ ಬ್ಲೂಫಿಲ್ಮ್. ವೇದ, ಉಪನಿಷತ್ತು, ಭಗವದ್ಗೀತಾ,  ಬ್ರಹ್ಮಸೂತ್ರ, ಇತ್ಯಾದಿ ಇರಬೇಕಾದ ಪುಸ್ತಕದ ಸಣ್ಣ ಟೇಬಲ್ ಮ್ಯಾಲೆ ರತಿ ವಿಜ್ಞಾನ, ಸುರತಿ ಮುಂತಾದ 'ದೇವರ' ಪುಸ್ತಕಗಳು. ಜೂನಿಯರ್ ಸ್ವಾಮಿಗೆ ಮಾತ್ರ ಖಬರೇ ಇಲ್ಲ. ದೊಡ್ಡ ಸ್ವಾಮಿಗಳು ಅವನ ಹಿಂದೇ ಬಂದು ನಿಂತರೂ ಈ ಪುಣ್ಯಾತ್ಮ ಮಾತ್ರ  'ಆಹ್! ಆಹ್! ಒಹ್! ಆಹ್!' ಅಂತ ಸಂತೋಷದಿಂದ ಮುಲುಗಿಕೋತ್ತ ಕಾವಿಯೊಳಗಿನ ಕೋವಿ ಮರ್ದನದಲ್ಲಿ ಫುಲ್ ಕಳೆದು ಹೋಗ್ಯಾನ. ಅಂತ್ಯದಲ್ಲಿ ಫುಲ್ ಕ್ಲೈಮ್ಯಾಕ್ಸಿಗೆ ಹೋಗಿಬಿಟ್ಟಾನ. ಅದೇ ಹೊತ್ತಿಗೆ ನಾಲ್ಕು ಬಿಯರ್ ಕುಡಿದಿದ್ದು ಬರೋಬ್ಬರಿ ತಲಿಗೆ ಹತ್ಯದ. ನಿದ್ದಿ ಬಂದದ. ಹ್ಯಾಂಗೂ ಕಾವಿಯೊಳಗಿನ ಕೋವಿಯಿಂದ ಫೈರಿಂಗ್ ಆತು. ಕೋವಿಯಂತೂ ನಿತ್ರಾಣ ಆಗಿ ಮಲಕೊಂಡುಬಿಡ್ತು. ಇನ್ನು ತಾನೂ ಮಲ್ಕೋಳ್ಳೋಣ ಅಂತ ಟೀವಿ ಆಫ್ ಮಾಡಲಿಕ್ಕೆ ಎದ್ದಾನ. ಆವಾಗ ಕಂಡಾರ ದೊಡ್ಡ ಸ್ವಾಮಿಗಳು. ಮುಂದೆ ಯಮರಾಜನ ಗತೆ ನಿಂತುಬಿಟ್ಟಾರ. ಸಣ್ಣ ಸ್ವಾಮಿ ಫುಲ್ ಥಂಡಾ.

ಅಲ್ಲೇ ಅವನ್ನ ಹಾಕ್ಕೊಂಡು ಹಾಕ್ಕೊಂಡು ಒದ್ದಾರ ದೊಡ್ಡ ಸ್ವಾಮಿಗಳು. ಆ ಗದ್ದಲ ಕೇಳಿದ ಮಠದ ಮಂದಿಯೆಲ್ಲ ಬಂದಾರ. ಜೂನಿಯರ್ ಸ್ವಾಮಿ ರೂಂ ನೋಡಿದರೆ ಒಳ್ಳೆ ಸೂಳ್ಯಾರ ರೂಮು ಇದ್ದಂಗ ಇತ್ತು. ಹೊಲಸ್ ಹೊಲಸ್ ಪುಸ್ತಕ, ಹೊಲಸ್ ಹೊಲಸ್ ವೀಡಿಯೊ, ಶೆರೆ ಬಾಟಲಿ, ಗುಟ್ಕಾ ಚೀಟಿ, ಜರ್ದಾ ಡಬ್ಬಿ, ಸಿಗರೇಟ್, ತಿಂದು ಒಗೆದಿದ್ದ ಎಲುಬಿನ ಚೂರುಗಳು. ರಾಮಾ! ರಾಮಾ! ಯಾವ್ಯಾವ ವಸ್ತುಗಳು ಮಠದ ಹತ್ತಿರಕ್ಕೂ ಬರಬಾರದು ಅಂತದನೋ ಅಂತವೆಲ್ಲ ಸ್ವಾಮಿ ರೂಮಿನಾಗ ಬರಾಮತ್ತು ಆಗಿಬಿಟ್ಟಾವ. ಶಿವಾಯ ನಮಃ!

ಎಲ್ಲಾರೂ ಕೂಡಿ ಜೂನಿಯರ್ ಸ್ವಾಮಿಯನ್ನ ಕಟ್ಟಿ ಹಾಕಿ ದನಾ ಬಡದಾಂಗ ಬಡದಾರ. 'ಯಾರು ನಿನಗ ಈ ಎಲ್ಲಾ ಚಟಾ ಹಚ್ಚಿದರು? ಯಾರು ನಿನಗ ಇದೆಲ್ಲಾ ತಂದು ಕೊಟ್ಟರು? ಎಷ್ಟು ದಿವಸಗಳಿಂದ ಇದು ನಡೆದದ?' ಅಂತ ಜೂನಿಯರ್ ಸ್ವಾಮಿಯ ಫ್ರೆಶ್ ಆಗಿ ಬೋಳಿಸಿದ ಬುರುಡೆಗೆ ಹಾಕ್ಕೊಂಡು ತಟ್ಟಿ ತಟ್ಟಿ ಕೇಳ್ಯಾರ. ಕಟ್ಟಿ ಹಾಕಿ ಅಷ್ಟೆಲ್ಲಾ ಮಂದಿ ಹಾಕ್ಕೊಂಡು ನಾದಿದರೆ ಆಂವಾ ಆದರೂ ಏನು ಮಾಡಬೇಕು? ಅದೂ ತಪ್ಪು ಬ್ಯಾರೆ ಮಾಡಿ, ರೆಡ್ ಹ್ಯಾಂಡ್ ಆಗಿ ಸಿಕ್ಕೊಂಡು ಬಿದ್ದಾನ. ಚಟಾ ಮಾಡಲಿಕ್ಕೂ ಬುದ್ಧಿ ಬೇಕ್ರೀ. ನಾನೂ ಅವೆಲ್ಲಾ ಚಟ ಅಲ್ಲೇ ಮಠದಾಗೇ ಮಾಡಿಕೊಂಡೇ ಇದ್ದೆ. ನನ್ನ ಯಾರರ ಹಿಡದರೇನು? ಇಲ್ಲ.

ಆಪರಿ ಗಜ್ಜು ತಿಂದ ಸಣ್ಣ ಸ್ವಾಮಿ ಎಲ್ಲಾ ಒಪ್ಪಿಕೊಂಡು ಅಂಬೋ ಅಂದುಬಿಟ್ಟ. ನನ್ನ ಹೆಸರು ಹೇಳಿಬಿಟ್ಟ. ಪೂರ್ಣ ಹೆಸರು, ಕುಲ, ಗೋತ್ರ, ಪ್ರವರ ಎಲ್ಲ ಹೇಳಿಬಿಟ್ಟ. ಗುಡಿಯೊಳಗ ಭಟ್ಟಾ ನಿಮ್ಮ ಹೆಸರೀಲೆ ಅರ್ಚನಾ ಮಾಡುವಾಗ ಹೇಳ್ತಾನ ನೋಡ್ರಿ ಹಾಂಗ ನನ್ನ ಹೆಸರು ಹೇಳಿಬಿಟ್ಟ. ಆಗ ನಾನೂ ಶಿವಾಯ ನಮಃ ಆಗಿಹೋದೆ.

ಈಗ ದೊಡ್ಡ ಸ್ವಾಮಿಗಳಿಗೆ ತೊಂದ್ರಿಗೆ ಬಂತು. ಜೂನಿಯರ್ ಸ್ವಾಮಿ...ಅವನ್ನ ಬಿಡ್ರೀ, ಮಠದಿಂದ ಓಡಸ್ತಾರ. ರೆಡಿಯಾಗಿ ನಿಂತಿರುವ ಬೇರೆ ಬ್ರಹ್ಮಚಾರಿನ ಕರಕೊಂಡು ಬಂದು ದೀಕ್ಷಾ ಕೊಟ್ಟು ಮುಂದಿನ ಸ್ವಾಮೀನ ಹೊಸ್ತಾಗಿಂದ ತಯಾರು ಮಾಡಲಿಕ್ಕೆ ಕೂಡ್ತಾರ. ಮಠದವರ ಚಿಂತಿ ಅದಲ್ಲ. ನನ್ನ ಏನು ಮಾಡಬೇಕು? ಅದೇ ದೊಡ್ಡ ಚಿಂತಿ. ಯಾಕಂದ್ರ ಆದ ಅಷ್ಟೂ ಲಫಡಾಕ್ಕೆ ನಾನೇ ಕಾರಣ ಅಂತ ಗೊತ್ತಾಗಿಬಿಟ್ಟದ. ಆ ಹುಚ್ಚ ಸೂಳಿಮಗ ಸಣ್ಣ ಸ್ವಾಮಿ ನಮ್ಮ ಹೆಸರು, ಮಾಡಿದ ಕಾರ್ನಾಮಾ ಎಲ್ಲ ಹೇಳಿದ ಮ್ಯಾಲೆ ನಾವಾದರೂ ಏನು ಮಾಡೋಣ?

ದೊಡ್ಡ ಸ್ವಾಮಿಗಳಿಗೆ ನನ್ನನ್ನೂ ಮಠದಿಂದ ಓಡಿಸಬೇಕು ಅಂತ ಇಚ್ಛಾ. ಆದರೆ ನಮ್ಮಜ್ಜನ ನೆನಪಾತು. ಸ್ವಲ್ಪ ಥಂಡಾ ಹೊಡೆದರು. ಹಿಂದೊಮ್ಮೆ, 'ಪಾಠಶಾಲಾದಾಗ ಹೋಗಿ ಕೂಡು. ಮಂತ್ರಾ ಕಲಿ, ಅದು ಇದು,' ಅಂತ ನನ್ನ ಜಬರಿಸಿದಾಗ ನಮ್ಮಜ್ಜಗ ಚಾಡಿ ಹೇಳಿಕೊಟ್ಟಿದ್ದೆ. ನಮ್ಮಜ್ಜ ಸ್ವಾಮಿಗಳಿಗೆ ಸಣ್ಣದಾಗಿ ಬೆಂಡೆತ್ತಿ ಹೋಗಿದ್ದ. ಅಂತಾ ಖಡಕ್ ಅಜ್ಜನ ಬಿಂದಾಸ್ ಮೊಮ್ಮಗ ನಾನು. ಸಣ್ಣ ಸ್ವಾಮೀನ ಮಠ ಬಿಟ್ಟು ಓಡಿಸಿದಷ್ಟು ಸಸಾರ ಅಲ್ಲ ನನ್ನ ಮಠ ಬಿಟ್ಟು ಓಡಿಸೋದು.

ಇದಾದ ನಂತರ ನಮ್ಮ ಅಜ್ಜಗ, ಅಪ್ಪಗ ಮಠದಿಂದ ಬುಲಾವಾ ಹೋತು. 'ಲಗೂನ ಬರ್ರಿ. ನಿಮ್ಮ ಹುಡುಗನ ಬಗ್ಗೆ ಭಾಳ ಅರ್ಜೆಂಟ್ ಮಾತಾಡಬೇಕು. ಮಠದ ಮರ್ಯಾದಿ ಪ್ರಶ್ನೆ,' ಅಂತ ಹೇಳಿದರು. ನಮ್ಮ ಅಪ್ಪಗ ಫೋನ್ ಮಾಡಿದರು. ನಮ್ಮ ಅಜ್ಜ ಅಲ್ಲೇ ಹತ್ತಿರದ ಹಳ್ಳಿಯೊಳಗ ಇರೋದ್ರಿಂದ ಮಠದವರು ಯಾರೋ ಹೋಗಿ ಹೇಳಿಬಂದರು.

'ಅಲ್ಲಿ ಮಠದಾಗ ಏನು ಕೆತ್ತೆಬಜೆ ಕಾರ್ಬಾರ್ ಮಾಡಿ ಕೂತಾನೋ ಈ ಪುಣ್ಯಾತ್ಮ. ಲಗೂನೆ ಹೋಗಿ ನೋಡಿ ಬರ್ರಿ. ಹೇಳಿ ಕೇಳಿ ಹುಚ್ಚ ಹನುಮಂತ ಇದ್ದಂಗ ಇದ್ದಾನ 'ನಿಮ್ಮ' ಮಗಾ. ಎಲ್ಲರೆ ಮಠಕ್ಕೆ ಬೆಂಕಿ ಗಿಂಕಿ ಹಚ್ಚಿ ಕೂತಾನೋ ಏನೋ. ಲಗೂನ ಹೋಗಿ ಬರ್ರಿ,' ಅಂತ ನಮ್ಮವ್ವ ಬ್ಯಾರೆ ನಮ್ಮಪ್ಪನ ತಲಿ ತಿಂದಾಳ. ತಿನಲಿಕ್ಕೆ ತಲಿ ಏನೂ ಉಳಿದಿಲ್ಲ. ಆದರೂ ತಿಂತಾಳ. ನನ್ನ 'ಗುಣಗಾನ' ಮಾಡೋವಾಗೆಲ್ಲಾ 'ನಿಮ್ಮ ಮಗ' ಅಂತಾಳ ನೋಡ್ರಿ ನಮ್ಮವ್ವ. ಎಲ್ಲಾ ಅವ್ವಂದಿರೂ ಹಾಂಗs. ಅವರ ಪ್ರಕಾರ ಒಳ್ಳೆ ಕೆಲಸ ಮಾಡಿದಾಗ 'ನನ್ನ ಮಗ' ಅನ್ನೋದು, ಕೆಟ್ಟ ಕೆಲಸ ಮಾಡಿದಾಗ 'ನಿಮ್ಮ ಮಗ' ಅಂತ ಹೇಳಿ ಮಗನ್ನ, ಮಗನ ಅಪ್ಪನ್ನ ಇಬ್ಬರನ್ನೂ ಕೂಡೇ ಬೈದುಬಿಡೋದು. ಇದೇ ಆತು ಈ ಅವ್ವಂದಿರದ್ದು!

ಮರುದಿನವೇ ನಮ್ಮ ಅಜ್ಜ, ನಮ್ಮ ಅಪ್ಪ ಕೂಡೇ ಬಂದಾರ ಮಠಕ್ಕ. ದೊಡ್ಡ ಮಂದಿ. ಅವರಿಗೇನು ಭಾರಿ ಮರ್ಯಾದಿ ಬಿಡ್ರೀ. ಅವರಿಬ್ಬರನ್ನೂ ತಮ್ಮ ಪ್ರೈವೇಟ್ ಚೇಂಬರಿಗೆ ಕರೆಸಿಕೊಂಡ ದೊಡ್ಡ ಸ್ವಾಮಿಗಳು ಗೊಳೋ ಅಂದುಬಿಟ್ಟರು. 'ಹೆಗಡೆ ಅವರೇ, ಕೋತಿ ವನ ಕೆಡಿಸಿತು ಅಂದಂತೆ ನಿಮ್ಮ ಮಾಣಿ ನಮ್ಮ ಮಠ ಕೆಡಸ್ಲಿಕತ್ತದ. ಮಂಗ್ಯಾನ್ಕಿಂತ ದೊಡ್ಡ ಡೇಂಜರ್ ನಿಮ್ಮ ಮಾಣಿ. ಇನ್ನೂ ಅಂವಾ ಮಠದಾಗೇ ಉಳಿದುಕೊಂಡ ಅಂದ್ರ ಮುಂದಿನ ಸರೆ ನೀವು ಬರೋತನಕಾ ಮಠಾ ಇರಂಗಿಲ್ಲರಿ. ಒಳ್ಳೆ ಪೀಡಾ ತಂದು ನಮ್ಮ ಕೊರಳಾಗ ಕಟ್ಟುಬಿಟ್ಟಿರಲ್ಲರೀ......ಅಯ್ಯೋ! ಶಿವಾ! ಪರಮಾತ್ಮಾ! ಆದಿ ಶಂಕರಾ! ಹಾದಿ ಶಂಕರಾ! ಬೀದಿ ಶಂಕರಾ! ಹೆಗಡೆಯವರೇ ಎಲ್ಲಾ ನಿಮ್ಮ ಕೈಯಾಗ ಅದ. ನಿಮ್ಮ ಇಪ್ಪತ್ತು ತಲೆಮಾರಿನ ಹಿರಿಯರು ಕಟ್ಟಿ, ಬೆಳೆಸಿದ ಮಠ ಇದು. ನಿಮ್ಮದೇ ವಂಶದ ಕುಲದೀಪಕ ಮಾಣಿ ಇದನ್ನ ಸರ್ವನಾಶ ಮಾಡ್ಲಿಕತ್ತಾನ ನೋಡ್ರಿ. ಹೀಂಗಾದ್ರ ಸತ್ತು ಸ್ವರ್ಗ ಸೇರಿಕೊಂಡಿರುವ ನಿಮ್ಮ ಪೂರ್ವಜರಿಗೆ ಮುಕ್ತಿ ಸಿಗ್ತದ ಏನ್ರೀ? ನಿಮ್ಮ ಉಡಾಳ ಮಾಣೀನ ಇಲ್ಲಿಂದ ಕರಕೊಂಡು ಹೋಗ್ರಿಪಾ. ಇಲ್ಲಂದ್ರ ನಾನೇ ಪೀಠ ತ್ಯಾಗ ಮಾಡಿ ಎಲ್ಲರೆ ತಪಸ್ಸು ಮಾಡಲಿಕ್ಕೆ ಹೋಗಿಬಿಡ್ತೇನಿ,' ಅಂತ ಫುಲ್ ಗೊಳೋ ಅಂದು, ಸೆಂಟಿಮೆಂಟಲ್ ಫಿಟ್ಟಿಂಗ್ ಇಟ್ಟು, ಎಮೋಷನಲ್ ಬ್ಲಾಕ್ಮೇಲ್ ಮಾಡಿಬಿಟ್ಟಾರ.

ನಮ್ಮಜ್ಜ ನನ್ನ ಎಷ್ಟೇ ಪ್ರೀತಿ ಮಾಡತಿರಬಹುದು. ಆದ್ರ ಮಠದ ವಿಷಯ, ದೊಡ್ಡ ಸ್ವಾಮಿಗಳ ವಿಷಯ ಬಂತು ಅಂದ್ರ ಅವರು ಭಾಳ ಸೀರಿಯಸ್ ಆಗಿಯೇ ತೊಗೋತ್ತಾರ. ಮಠ ಕಟ್ಟಿ ಬೆಳಸಲಿಕ್ಕೆ ಭಾಳ ಶ್ರಮಾ ಪಟ್ಟಾರ. ದೊಡ್ಡ ಸ್ವಾಮಿಗಳು ಅಂದ್ರ ಅವರಿಗೆ ಖಾಸಾ ತಮ್ಮ ಇದ್ದಂಗ. ಹಾಂಗಾಗಿ ನನ್ನ ಮಠದಿಂದ ಕಮಾನೆತ್ತಿ ಎತ್ತಂಗಡಿ ಮಾಡೇಬಿಡಬೇಕು ಅಂತ ಅಲ್ಲೇ ಸ್ಪಾಟ್ ಡಿಸಿಷನ್ ತೊಗೊಂಡೇ ಬಿಟ್ಟಾರ. ನನಗ ಮಠ ಭಾಳ ಹಿಡಿಸಿಬಿಟ್ಟಿತ್ತು. ಜೂನಿಯರ್ ಸ್ವಾಮಿಗೆ ಎಲ್ಲಾ ಚಟಾ ಹಿಡಿಸಿ, ಅವಕ್ಕೆ  ಬೇಕಾಗೋ ಎಲ್ಲ ಸಾಮಾನುಗಳನ್ನು ಒಂದಕ್ಕೆರೆಡು ರೇಟ್ ಹಾಕಿ ತಂದುಕೊಟ್ಟು, ನಾನೂ ಸ್ವಲ್ಪ ರೊಕ್ಕಾ ಗಿಕ್ಕಾ ಮಾಡಿಕೊಂಡಿದ್ದೆ. ಹಾಂಗಿದ್ದಾಗ ಈ ಮಂಗ್ಯಾ ಸಣ್ಣ ಸ್ವಾಮಿ ಖಬರಿಲ್ಲದೇ ಮಾಡಿಕೊಂಡ ಲಫಡಾದಿಂದ ಎಲ್ಲಾ ಕುಲಗೆಟ್ಟು, ಹದಗೆಟ್ಟು ಹೋಗಿಬಿಟ್ಟದ. ಆ ಹಾಪನ ಕಾಲದಾಗ ನನ್ನನ್ನೂ ಮಠ ಬಿಟ್ಟು ಓಡಸಲಿಕತ್ತಾರ. ಛೇ! ಎಂತಾ ನಸೀಬಾ ನೋಡ್ರಿ.

ಏನು ಮಾಡಲಿಕ್ಕೆ ಬರ್ತದ? ಮಠ ಬಿಟ್ಟು ಬಂದೆ. ನಮ್ಮ ಅಜ್ಜ, ಅಪ್ಪನ ಜೋಡಿನೇ ಅವರು ಬಂದಿದ್ದ ಕಾರಿನಲ್ಲೇ ಹೊರಟೆ. ಮಠದ ದ್ವಾರದಲ್ಲೇ ಒಂದು ಫುಲ್ ಸ್ಕ್ರಾಪ್ ಆಗಿ ಮೋಡಕಾ ಆಗಿದ್ದ ಶರೀರ ಕಂಡು ಬಂತು. ನಮಗ ಒಮ್ಮೆಲೇ ಗುರ್ತೇ ಸಿಗಲಿಲ್ಲ. ಯಾರೋ ತಿಪ್ಪಿ ಕೆದರೋ ಹೇಮಾಮಾಲಿನಿ ಅಣ್ಣನೋ ತಮ್ಮನೋ ಕಂಡಂಗ ಕಂಡ. ನಮ್ಮ ಕಾರು ಹೊಂಟಿದ್ದು ನೋಡಿದ ಕೂಡಲೇ ಹುಚ್ಚನ ಗತೆ ಎತ್ತರ ಪತ್ತರ ಹೆಜ್ಜಿ ಹಾಕ್ಕೋತ್ತ ಓಡಿ ಬಂತು ಆ ಆಕೃತಿ. ನೋಡಿದರೆ ನಮ್ಮ ಹಳೆ ಸಣ್ಣ ಸ್ವಾಮಿ. ಮಠದಿಂದ ಒದ್ದು ಓಡಿಸಿ ಜಸ್ಟ್ ಒಂದು ದಿನಾ ಆಗ್ಯದ. ಏನು ಹಾಲತ್ ಮಾಡಿಕೊಂಡಾನ! ಅಬಬಬಬಾ! ನೋಡಿದರೆ ಸಾಕು. ಕಾಶಿಯೊಳಗ ಗಂಗಾ ನದಿಯೊಳಗ ಸ್ನಾನಾ ಮಾಡಿ ಬರ್ತಿದ್ದ ಶಂಕರಾಚಾರ್ಯರ ಕಣ್ಣಿಗೆ ದಿನಾ ಒಬ್ಬವ ಕೆಟ್ಟಾ ಕೊಳಕ ಹೇಶಿ ಚಾಂಡಾಲ ಕಂಡುಬರ್ತಿದ್ದನಂತ. ಅಂತಾ ಹೇಶಿ ಚಾಂಡಾಲ ಅವತಾರ ಮಾಡಿಕೊಂಡು ನಿಂತಿತ್ತು ನೋಡ್ರಿ ಆ ಸಣ್ಣ ಸ್ವಾಮಿ. ಆ ಕಾಶಿ ಚಾಂಡಾಲ ತನ್ನ ಜೋಡಿ ಒಂದು ನಾಲ್ಕು ಹೊಲಸ್ ನಾಯಿ ಬ್ಯಾರೆ ಹಿಡಕೊಂಡು ಅಡ್ಯಾಡ್ತಿದ್ದನಂತ. ನಮ್ಮ ಸಣ್ಣ ಸ್ವಾಮಿ ಸುತ್ತಮುತ್ತಲ ನಾಯಿಯೊಂದು ಇಲ್ಲ. ಇನ್ನೂ ಎರಡು ದಿವಸ ಇಂವಾ ಹಿಂಗೇ ಇದ್ದಾ ಅಂದ್ರ ಇವನೇ ನಾಯಿಯಾಗಿ ಹೋಗ್ತಾನ. ಶಂಕರಾಚಾರ್ಯರ ಕಥಿಯೊಳಗ ನೋಡಿದರೆ ಆ ಕಾಶಿ ಚಾಂಡಾಲ ದೇವರು ಶಿವಾ ಆಗಿದ್ದನಂತ. ಶಂಕರಾಚಾರ್ಯರನ್ನು ಪರೀಕ್ಷಾ ಮಾಡಲಿಕ್ಕೆ ಹೊಲಸ್ ಚಾಂಡಾಲನ ರೂಪಾ ಧರಿಸಿದ್ದಂತ. ಅದರ ಮ್ಯಾಲೆ ಆದಿ ಶಂಕರಾಚಾರ್ಯರು 'ಮನೀಷಾ ಪಂಚಕಂ' ಅಂತ ಐದೇ ಐದು ಶ್ಲೋಕದ ಸಣ್ಣ ಪುಸ್ತಕಾ ಬರೆದಾರ. ಅದರ ಅರ್ಥ - ದೇವರು ಯಾವದೇ ರೂಪದಲ್ಲಿ ಕಾಣಿಸಬಹುದು. ಯಾರನ್ನೂ ಮೇಲು ಕೀಳು ಅಂತ ಕಡೆಗಣಿಸಿಬಾರದು - ಅಂತ. ಹಾಂಗಾಗಿ ನಾವೂ ಎಲ್ಲರೆ ಈ ಹೇಶಿ ಸಣ್ಣ ಸ್ವಾಮಿ ದೇವರೇನೋ ಅಂತ ಗಾಡಿ ನಿಲ್ಲಿಸಿದಿವಿ. 

ಈ ಮಾಜಿ ಸಣ್ಣ ಸ್ವಾಮಿ ಆ ಪರಿ ಡಿಕ್ಕಿ ಹೊಡೆಯವರ ಗತೆ ಕಾರಿಗೆ ಅಡ್ಡ ಬರೋದು ನೋಡಿದ ಮ್ಯಾಲೆ ಗಾಡಿ ನಿಲ್ಲಿಸಲಿಕ್ಕೇ ಬೇಕಾತು. ನಿಲ್ಲಿಸಿದ ಕೂಡಲೇ ನಮ್ಮ ಅಜ್ಜ ಅವರ ಕಡೆ ಕಿಡಕಿ ಗಾಜು ಕೆಳಗ ಇಳಿಸಿದರು. ಹತ್ತಿರ ಬಂದ. 'ಘಂ!' ಅಂತ ಕೆಟ್ಟ ವಾಸನಿ ಹೊಡಿತು. ಮತ್ತ ಕಿಡಕಿ ಹಾಕಿದರು. ಆದ್ರ ಅವನ ಜೋಡಿ ಮಾತಾಡಬೇಕಿತ್ತು. ಏನು ಅಂತ ಕೇಳಬೇಕಿತ್ತು. ಅಜ್ಜನ ಪ್ರೀತಿಯ ಮೊಮ್ಮಗನಾದ ನನ್ನ ಕಾರಣದಿಂದ ಸಣ್ಣ ಸ್ವಾಮಿ ಈ ಪರಿಸ್ಥಿತಿಗೆ ಬಂದು ನಿಂತಾನ. moral obligation ಬಂತು ನಮ್ಮ ಅಜ್ಜಗ. ಮತ್ತಿ ಕಿಡಕಿ ಇಳಿಸಿದರು. ದೂರ ನಿಂತು ಮಾತಾಡು ಅಂದರು. ಆಂವಾ ಮಾತಾಡಲಿಲ್ಲ. ಗೊಳೋ ಅಂತ ಅತ್ತ.

'ಮಾಡೋದೆಲ್ಲ ಮಾಡಿ, ಮಠದಿಂದ ಒದ್ದು ಹೊರಗ ಹಾಕಿಸಿಕೊಂಡು ಈಗ್ಯಾಕ ಅಳ್ತಿಯೋ ಹುಚ್ಚ ಸೂಳಿಮಗನ???' ಅಂತ ಒದರಿದರು ನಮ್ಮ ಅಜ್ಜ. ಮೊದಲು ಏನು ಗೌರವ, ಏನು ಮರ್ಯಾದಿ ಕೊಟ್ಟು, ಕಾಲಿಗೆ ಬೀಳ್ತಿದ್ದರು. 'ಸಣ್ಣ ಸ್ವಾಮಿಗಳೇ!' ಅಂತ ಭಾಳ ಮರ್ಯಾದೆಯಿಂದ ಅನ್ನಿಸ್ಕೋತ್ತಿದ್ದವಾ ಒಂದೇ ದಿನದಾಗ 'ಹುಚ್ಚ ಸೂಳಿಮಗಾ!' ಆಗಿಬಿಟ್ಟ. ಶಿವನೇ ಶಂಭುಲಿಂಗ!

ಅವಂದು ಅತ್ತು ಮುಗಿವಲ್ಲತು. ನಮ್ಮ ಅಜ್ಜಗ ಸಿಟ್ಟು ಬಂತು. 'ನಡಿ ನೀ,' ಅಂದ್ರು ಕಾರ್ ಡ್ರೈವರಗ. ಕಾರು ಹೊಂಟು ಹೋಗ್ತದ ಅಂದ ಕೂಡಲೇ ಮಾಜಿ ಸಣ್ಣ ಸ್ವಾಮಿ ಅಳೋದು ನಿಲ್ಲಿಸಿ, ಗೊಸ್ ಗೊಸ್ ಅನ್ಕೋತ್ತ ಮಾತಾಡ್ಲಿಕ್ಕೆ ಶುರು ಮಾಡಿದ. ನಡು ನಡು ಜರ್ಕ್ ಹೊಡಿತಿದ್ದ. ನಿನ್ನೆ ಮಾತ್ರ ಎಷ್ಟು ಖುಷಿಂದ ಬಿಯರ್ ಕುಡಿದು, ನಾನ್ವೆಜ್ ತಿಂದು, ಬ್ಲೂಫಿಲಂ ನೋಡಿ, ಕಾವಿಯೊಳಗಿನ ಕೋವಿಗೆ ಜಟಕಾ ಹೊಡೆದು ಮಕ್ಕೊಂಡಿದ್ದ. ಇವತ್ತು ಭಿಕಾರಿಯಾಗಿ ರಸ್ತೆದಾಗ ತಿಪ್ಪಿ ಕೆಬರವರ ಅವತಾರ ಮಾಡಿಕೊಂಡು ಅಳ್ಳಿಕತ್ತಾನ. ಮ್ಯಾಲಿಂದ ಜರ್ಕ್ ಹೊಡಿಲಿಕತ್ತಾನ. ಸ್ವಲ್ಪ ಖಬರಿಟ್ಟುಕೊಂಡು ಜಟಕಾ ಹೊಡೆದಿದ್ದರೆ ಈ ಪರಿಸ್ಥಿತಿ ಬರ್ತಿದ್ದಿಲ್ಲ.

'ಗೋಪಾಲಕೃಷ್ಣ ಹೆಗಡೆರೇ, ನನ್ನ ಪಾಡು ನಾಯಿಪಾಡಾಗಿ ಹೋಗ್ಯದರೀ. ನಿಮ್ಮ ಮೊಮ್ಮಗನ ಕಾಲದಾಗ ನಾ ಹಾಳಾಗಿ ಹೋದೆ. ಎಷ್ಟು ದೊಡ್ಡ ಮಠದ ಪೀಠಾಧಿಪತಿ ಆಗಬೇಕಾದವ ನಾ ಆಗಿದ್ದೆ. ಈಗ ನೋಡ್ರಿ ನನ್ನ ಪರಿಸ್ಥಿತಿ. ನಿಮ್ಮ ಮೊಮ್ಮಗನಿಂದ ನಾ ಹಾಳಾಗಿ ಹೋದೆ ದೊಡ್ಡ ಹೆಗಡೆರೇ' ಅಂತ ಗೊಳೋ ಅಂದ.

ನಮ್ಮ ಅಜ್ಜ ಮತ್ತ ಅವಂಗ ಹಾಕ್ಕೊಂಡು ಚಡಾಬಡಾ ಅಂತ ಮಸ್ತ ಮಸ್ತ ಖಡಕ್ ಶಬ್ದ ಉಪಯೋಗಿಸಿ ಬಯ್ದರು. ಕೆಟ್ಟ ಮಾರಿ ಮಾಡಿಕೊಂಡು ಸ್ವಲ್ಪ ಸ್ವಲ್ಪ ಅಳುತ್ತ, ನಡು ನಡು ಗೊಸಕ್ ಗೊಸಕ್ ಅಂತ ಮೂಗಿನ್ಯಾಗಿನ ಗೊಣ್ಣಿ ಮ್ಯಾಲೆ ಎಳಕೋತ್ತ, ಜರ್ಕ್ ಹೊಡ್ಕೋತ್ತ ನಿಂತಿತ್ತು ಸಣ್ಣ ಸ್ವಾಮಿ. ಮಾಜಿ ಸಣ್ಣ ಸ್ವಾಮಿ.

ಸಂಸ್ಕೃತದಾಗ ಏನೋ ಹೇಳಿ ಜೋರಾಗಿ ಗೊಳೋ ಅಂದ. ನಮಗ್ಯಾರಿಗೂ ಇವಾ ಏನಂದಾ ಅಂತ ತಿಳಿಲಿಲ್ಲ.

'ಸೀದಾ ಸೀದಾ ಕನ್ನಡದಾಗ ಮಾತಾಡದೇ ಸಂಸ್ಕೃತ ಗಿಂಸ್ಕೃತ ಅಂತ ಬ್ಲೇಡ್ ಹಾಕಿದಿ ಅಂದ್ರ ನೋಡ್ಕೋ ಮತ್ತ. ಕೆಳಗಿಳಿದು ಬಂದು ಝಾಡಿಸಿ ಝಾಡಿಸಿ ಒದಿತೇನಿ ನೋಡು ಬೇವಕೂಫಾ! ಕನ್ನಡದಾಗ ಬೊಗಳು!' ಅಂತ ನಮ್ಮ ಅಜ್ಜಾ ಜೋರಾಗಿ ಆವಾಜ್ ಹಾಕಿದರು.

'ನಾ ಸಂಸ್ಕೃತ ಒಳಗ ಹೇಳಿದ್ದರ ಅರ್ಥ ಅಂದ್ರ ನಾ ಈಗ ದೋಭಿ ಕಾ ಕುತ್ತಾ ಆಗಿಬಿಟ್ಟೆ. ನ ಘರ್ ಕಾ ನ ಘಾಟ್ ಕಾ. ನಾನೂ ಹಾಂಗೆ. ಬ್ರಾಹ್ಮಣರ ಕುತ್ತಾ. ನ ಮಠ ಕಾ ನ ಗಾಂವ್ ಕಾ. ನಾಯಿಪಾಡು ಆತಲ್ಲರೀ ಹೆಗಡೆಯವರೇ! ನಂದು ದೋಭಿ ನಾಯಿಪಾಡು ಆತಲ್ಲರೀ. ನನ್ನ ಗತಿ ಏನ್ರೀ? ಮುಂದಿನ ಜೀವನ ಹ್ಯಾಂಗ್ರೀ? ವಿದ್ಯಾ ಕಲಿತಿಲ್ಲ. ನಾ ನಾಲ್ಕನೇ ಕ್ಲಾಸ್ ಫೇಲ್. ಮಠದಾಗೂ ಏನೂ ಮಂತ್ರಾ ಕಲಿಲಿಲ್ಲ. ಕಲಿಲಿಕ್ಕೆ ನಿಮ್ಮ ಮೊಮ್ಮಗ ಬಿಡಲಿಲ್ಲ. ಏನೇನೋ ತಂತ್ರ ಕಲಿಸಿಬಿಟ್ಟ. ಅದನ್ನೆಲ್ಲಾ ಕಲಿತ ನಾನು ನಾಲ್ಕೂ ಹೊತ್ತೂ ಬರೇ ನನ್ನ 'ಯಂತ್ರ' ಹಿಡಕೊಂಡು 'ಆಯುಧ ಪೂಜಾ' ಮಾಡಿಕೋತ್ತ ಕೂತುಬಿಟ್ಟೆ. ಮುಂದಿನ ಗತಿ ಏನ್ರೀ? ನಾ ಮೊದಲೇ ದಟ್ಟ ದರಿದ್ರ ಬ್ರಾಹ್ಮಣ. ಆಸ್ತಿ ಪಾಸ್ತಿ ಏನೂ ಇಲ್ಲ. ಅಪ್ಪ ಅವ್ವ ಇಲ್ಲದ ಅನಾಥ,' ಅಂತ ಹೇಳಿಕೋತ್ತ ಮತ್ತ ಕಾರಿನ ಹತ್ತಿರ ಬಂದ. ಕೆಟ್ಟ ಹೊಲಸ್ ನಾತ ಹೊಡಿತದ ಈ ಅನಾಥ ದೋಭಿ ಕುತ್ತಾ. 'ಏ, ದೂರ ನಿಂತು ಮಾತಾಡೋ ನಾತಾ ಹೊಡೆಯೋ ಅನಾಥಾ. ನಮ್ಮ ಮೂಗುಗಳನ್ನು ಅನಾಥ ಮಾಡಬ್ಯಾಡ ಹೇಶಿ ಸೂಳಿಮಗನೇ!' ಅಂತ ನಮ್ಮ ಅಜ್ಜಾ ಒದರಿದರು. ಸ್ವಲ್ಪ ಹಿಂದೆ ಸರಿದ. ತನ್ನ ಅಳಾಣ, ಗೊಸ್ ಗೊಸ್ ಅಂತ ಮೂಗು ಸೇದಾಣ ಮಾತ್ರ ಮುಂದುವರೆಸಿದ್ದ.

ಈಗ ನಮ್ಮ ಅಜ್ಜಗ ಭಾಳ ಕೆಟ್ಟ ಅನಿಸ್ತು. ಇದು ಫುಲ್ ಸ್ಕ್ರಾಪ್ ಕೇಸ್. ಜಾತಿಂದ ಬ್ರಾಹ್ಮಣ ಬ್ಯಾರೆ. ಅದೂ ಸನ್ಯಾಸ ದೀಕ್ಷಾ ತೊಗೊಂಡ ಬ್ರಾಹ್ಮಣ. ಮಾಡಬಾರದ್ದು ಮಾಡಿ ರೆಡ್ ಹ್ಯಾಂಡ್ ಸಿಕ್ಕೊಂಡು ಬಿದ್ದುಬಿಟ್ಟಾನ. ಮುಂದೆ ಯಾವ ದಾರಿಗಳೂ ಇಲ್ಲ. ಎಲ್ಲೇ ಹೋದರೂ ಮಂದಿ ಛೀ! ಥೂ! ಅಂತ ಬೈದು ಓಡಸ್ತಾರ. ಒಂದು ನಯೇ ಪೈಸೆ ರೊಕ್ಕ ಎಲ್ಲೂ ಹುಟ್ಟೋದಿಲ್ಲ. 'ಈ ಸೀಮೆ  ಬಿಟ್ಟು ದೂರ ಹೋಗಪಾ,' ಅಂತ ಹೇಳೋಣ ಅಂದರೆ ಈ ಪುಣ್ಯಾತ್ಮ ನಾಲ್ಕನೇತ್ತಾ ಫುಲ್ ಫೇಲಾಗಿಬಿಟ್ಟಾನ. ಮಂತ್ರ ಗಿಂತ್ರ ಬರೋದಿಲ್ಲ. ಬಂದರೂ ಬ್ರಾಹ್ಮಣರು ಇವನ್ನ ತಮ್ಮ ಕಂಪೌಂಡ್ ಒಳಗೂ ಬಿಟ್ಟುಕೊಳ್ಳೋದಿಲ್ಲ. ಒಳಗ ಕರೆದು, ಪೂಜಾ ಮಾಡಿಸಿ, ದಕ್ಷಿಣಾ ಕೊಡೋದು ದೂರ ಉಳೀತು. ಈ ಪಾಪಿ ಸೂಳಿಮಗನ ನೆರಳು ಬಿತ್ತು ಅಂದರೂ ಒಂದು ಟಂಕಿ ಪಂಚಗವ್ಯ ತರಿಸಿ ಇಡೀ ಮನಿ ಸ್ವಚ್ಛ ಮಾಡಸ್ತಾರ. ಅಂತಹ ಕರುಣಾಜನಕ ಸ್ಥಿತಿ ಪಾಪ ನಮ್ಮ ಸಣ್ಣ ಸ್ವಾಮಿದು.

'ಮನಿಗೆ ಬಂದು ನನ್ನ ಭೆಟ್ಟಿಯಾಗು. ನಿನಗ ಏನರೆ ಒಂದು ವ್ಯವಸ್ಥಾ ಮಾಡತೇನಿ. ನನ್ನ ಮೊಮ್ಮಗನ ಸಹವಾಸದಿಂದ ಇಂತಾ ಪರಿಸ್ಥಿತಿ ಬಂದದ ಅಂತಿ. ಅದನ್ನೇನೂ ನಾ ಪೂರ್ತಿ ನಂಬೋದಿಲ್ಲ. ಆದರೂ ನನ್ನ ಪ್ರೀತಿ ಮೊಮ್ಮಗನ ಮ್ಯಾಲೆ ಯಾವದೇ ಅಪವಾದ ಬರೋದು ಬ್ಯಾಡ. ನಿನಗ ಏನರೆ ಜುಗಾಡ್ ಮಾಡಿಕೊಡತೇನಿ. ಚಿಂತಿ ಮಾಡಬ್ಯಾಡ. ಮನಿಗೆ ಬಂದು ನನ್ನ ನೋಡು. ತಿಳಿತೇನೋ? ಹಾಂ?' ಅಂತ ಅಬ್ಬರಿಸಿದರು ನಮ್ಮ ಅಜ್ಜ.

ಆ ಹುಚ್ಚ ಮಾಜಿ ಸಣ್ಣ ಸ್ವಾಮಿಗೆ ನಂಬಿಕೆ ಬಂದಂಗ ಕಾಣಲಿಲ್ಲ. ಮುಂದಿನ ಸೀಟಿನ್ಯಾಗ ಕೂತಿದ್ದ ನನ್ನ ತಲಿ ಮ್ಯಾಲೆ ಕೈಯಿಟ್ಟರು ನಮ್ಮ ಅಜ್ಜಾ. ಅಜ್ಜನ ಕೈ ತಲಿ ಮ್ಯಾಲೆ ಬಂತು ಅಂದ್ರ ಭಾಳ ಖುಷಿ ಆಗ್ತದ. ಕೂಲಿಂಗ್ ಟಚ್ ಅದು. 'ಏ, ಹುಚ್ಚಾ! ಇಲ್ಲಿ ನೋಡು. ನನ್ನ ಪ್ರೀತಿ ಮಮ್ಮಗನ ತಲಿ ಮ್ಯಾಲೆ ಕೈಯಿಟ್ಟು ಹೇಳತೇನಿ. ನಿನಗ ವಚನಾ ಕೊಡತೇನಿ. ನಿನ್ನ ನಡು ನೀರಾಗ ನಾ ಕೈ ಬಿಡಂಗಿಲ್ಲ. ನೀ ಸಾಯೋ ತನಕಾ ಆರಾಮ್ ಇರಬೇಕು. ಹಾಂಗ ವ್ಯವಸ್ಥಾ ಮಾಡಿಕೊಡತೇನಿ. ಮನಿಗೆ ಬಾ!' ಅಂತ ಹೇಳಿದರು.

'ನಿಮ್ಮ ಉಡಾಳ, ಲಪುಟ, ೪೨೦, ಖತರ್ನಾಕ್ ಮಮ್ಮಗ ನನ್ನ ತಲಿ ಮ್ಯಾಲೆ ಭಸ್ಮಾಸುರನ ಗತೆ ಕೈಯಿಟ್ಟ. ನಾ ಸುಟ್ಟು ಭಸ್ಮ ಆದೆ. ಈಗ ನೀವು ನಿಮ್ಮ ಮಮ್ಮಗನ ತಲಿ ಮ್ಯಾಲೆ ಕೈಯಿಟ್ಟು ಆಣಿ ಮಾಡ್ಲಿಕತ್ತೀರಿ. ಎಂತಾ ಮಮ್ಮಗರೀ ನಿಮ್ಮ ಮಮ್ಮಗಾ?! ಅದೇನು ನನ್ನ ತಲಿ ಮ್ಯಾಲೆ ಕೈಯಿಟ್ಟನೋ ಅಥವಾ ವಾಮನ ಬಲಿ ಚಕ್ರವರ್ತಿ ತಲಿ ಮ್ಯಾಲೆ ಕಾಲಿಟ್ಟಂಗ ಕಾಲಿಟ್ಟು ಭೂಮ್ಯಾಗ ಹೂಳಿ ಬಿಟ್ಟನೋ ಗೊತ್ತಿಲ್ಲ. ಕೆಟ್ಟ ಕಿಡಿಗೇಡಿ ನಿಮ್ಮ ಮೊಮ್ಮಗ,' ಅನ್ನೋ ಲುಕ್ ಕೊಟ್ಟಗೋತ್ತ ನಿಂತಿತ್ತು ಆ ಹುಚ್ಚ. ನಾ ಪೆಕಪೆಕಾ ಅಂತ ನಕ್ಕುಬಿಟ್ಟೆ. ಕೆಟ್ಟ ಕಿಡಿಗೇಡಿ ನಾ.

'ಬಂದು ಭೆಟ್ಟಿ ಮಾಡು,' ಅಂತ ಮತ್ತೊಮ್ಮೆ ಹೇಳಿ ಗಾಡಿ ಬಿಡಲಿಕ್ಕೆ ಹೇಳಿದರು. ಆ ಹುಚ್ಚ ಮಾಜಿ ಸಣ್ಣ ಸ್ವಾಮಿ ಸುದಾ ನಮ್ಮ ಜೋಡಿ ಬರಲಿಕ್ಕೆ ಹೊಂಟುಬಿಟ್ಟಿತ್ತು. ಎರಡು ದಿವಸದಿಂದ ಕೇರ್ ಆಫ್ ಫುಟ್ಪಾತ್ ಆಗಿ ಕೆಟ್ಟ ನಾರ್ಲಿಕತ್ತದ ಹೇಶಿ. ನಮ್ಮ ಜೋಡಿ ಕಾರಿನ್ಯಾಗ ಬರಲಿಕ್ಕೆ ಹೊಂಟದ.

'ಏ, ಏ, ಅಲ್ಲೇ ದೂರ ನಿಂದ್ರು. ಮನಿಗೆ ಬಂದು ಭೆಟ್ಟಿಯಾಗು ಅಂದ್ರ ಈಗ ನಮ್ಮ ಜೋಡಿನೇ ಬಾ ಅಂತ ಅಲ್ಲ. ಆಮೇಲೆ ಯಾವಾಗ ಬೇಕಾದರೂ ಬಂದು ನೋಡು ಅಂತ. ಏನು ನಮ್ಮ ಗಾಡಿ ಹತ್ತಲಿಕ್ಕೆ ಬರ್ಲಿಕತ್ತಿಯಲ್ಲಾ? ಹಾಂ!? ನಾವು ಫುಲ್ ಮಡಿಯೊಳಗ ದೊಡ್ಡ ಸ್ವಾಮಿಗಳನ್ನು ನೋಡಿ, ಪ್ರಸಾದ ತೊಗೊಂಡು, ಮನಿಗೆ ಹೊಂಟೇವಿ. ನೀ ಬಂದು ಮೈಲಿಗಿ ಮಾಡಬ್ಯಾಡಾ ಪುಣ್ಯಾತ್ಮ!' ಅಂತ ಹೇಳಿದರು ನಮ್ಮಜ್ಜಾ.

ಈ ರೀತಿ ಕೆಟ್ಟದಾಗಿ ಬೈಸಿಕೊಂಡ ಆ ಹೇಶಿ ಮತ್ತ ಗೊಳೋ ಅಂತ ಅತ್ತಿತು.

'ಯಾಕೋ!? ಏನಾತು ಈಗ? ಹಾಂ?' ಅಂತ ಕೇಳಿದರು ಅಜ್ಜ.

'ನನ್ನ ಕಡೆ ಒಂದು ಪೈಸೆ ರೊಕ್ಕ ಇಲ್ಲರೀ. ನಿಮ್ಮ ಊರಿಗೆ, ಮನಿಗೆ ಹ್ಯಾಂಗ ಬರಲೀ ನಾ? ಒಂದು ದಮಡಿ ಸಹಿತ ರೊಕ್ಕಿಲ್ಲರಿ! ಬಸ್ ಚಾರ್ಜ್ ರೀ!' ಅಂತ ಗೊಳೋ ಅಂತು ಆ ಆಕೃತಿ.

'ಹೂಂ! ತೊಗೋ ಇಲ್ಲಿ,' ಅಂತ ನೂರು ರೂಪಾಯಿಯ ಒಂದು ಸಣ್ಣ ಗಡ್ಡಿ ಒಗೆದರು. ಆಸೆಬುರುಕ ಬೆಗ್ಗರ್ ಗತೆ ಬರೋಬ್ಬರಿ ಕ್ಯಾಚ್ ಹಿಡಿದ. ಥ್ಯಾಂಕ್ಸ್ ಅಂದುಬಿಟ್ಟ. ಅದೂ ಇಂಗ್ಲೀಷ್ನ್ಯಾಗ. ಅವಂಗ ಇಂಗ್ಲೀಷ್ ಒಳಗ ಬರುವ ಶಬ್ದ ಅದೊಂದೇ ಇರಬೇಕು. ಆವಾಗ ಸಂಸ್ಕೃತ ಒಳಗ ಏನೋ ಹೇಳಿದ ಈಗ ಇಂಗ್ಲೀಶ್ ಒಳಗ.

'ಹಾಂ! ಮತ್ತೊಂದು ಮಾತು. ಸ್ವಲ್ಪ ಸಿರ್ಸಿ ಪ್ಯಾಟಿ ಕಡೆ ಹೋಗಿ ಬಾ. ಪ್ಯಾಟ್ಯಾಗ ಒಂದು ಜೋಡಿ ಛಲೋ ಧೋತ್ರ, ಅಂಗಿ, ಚಪ್ಪಲ್ ಎಲ್ಲಾ ಖರೀದಿ ಮಾಡು. ನಮ್ಮನಿಗೆ ಬರುವಾಗ ಅವತಾರ ಸರಿಯಿರಬೇಕು. ತಿಳಿತೇನು???' ಅಂತ ಅವಾಜ್ ಹಾಕಿದರು. ನಮ್ಮ ಅಜ್ಜನ ಕಿತಬಿ ನೋಡ್ರಿ. ನನ್ನ ತಲಿ ತಟ್ಟಿ ಹೇಳಿದರು. 'ಇಂವಾ ಏನರೆ ಇದೇ ಅವತಾರ ಮಾಡಿಕೊಂಡು ನಮ್ಮನಿ ಕಡೆ ಸುಳಿದಾ ಅಂದ್ರ ಮುಗೀತು ಇವನ ಕಥಿ. ನಿಮ್ಮಜ್ಜಿ ಅಂದ್ರ ನನ್ನ ಹೇಣ್ತಿ ಅಂದ್ರ ನಿಮ್ಮವ್ವನ ಅವ್ವಾ ಇವನ ಹೆಣಾ ಹಾಕ್ತಾಳ ನೋಡು. ಇಂವಾ ಹ್ಯಾಂಗ ಬಂದರೂ ನಿಮ್ಮ ಅಜ್ಜಿ ಕಡೆ ಗಜ್ಜು ತಿನ್ನವಾ ಇದ್ದಾನ ತೊಗೋ. ಅದರೂ ಹೇಳಿದೆ. ನಿಮ್ಮಜ್ಜಿ ಅಂದ್ರ ಮಹಾಕಾಳಿ ಆಕಿ!' ಅಂತ ನಮ್ಮಜ್ಜಿ ಬಗ್ಗೆ ಹೇಳಿದರು. ಅದೇನು ತಮ್ಮ ಹೆಂಡ್ತಿ ಹೊಗಳಿದರೋ ಬೈದರೋ ಗೊತ್ತಾಗಲಿಲ್ಲ. ನಮ್ಮಜ್ಜಿಯ ಕೆಟ್ಟ ಖಡಕ್ ಸ್ವಭಾವ ನೆನಪಿಸಿಕೊಂಡು ನಕ್ಕೆ.

ನಾವು ಅಜ್ಜಿಮನಿ ಕಡೆ ಗಾಡಿ ಬಿಟ್ಟಿವಿ. ನಾನು ಮತ್ತ ನಮ್ಮಪ್ಪ ಅಜ್ಜಿಮನಿಯೊಳಗ ಒಂದು ನಾಲ್ಕು ದಿನಾ ಮಸ್ತ ಮಜಾ ಮಾಡಿ ಧಾರವಾಡಕ್ಕೆ ವಾಪಸ್ ಬಂದ್ವಿ. 'ಮಠದಾಗ ಆರು ತಿಂಗಳು ಇದ್ದು ಎಷ್ಟು ತೆಳ್ಳಗಾಗಿ ಬಿಟ್ಟದ ನನ್ನ ಮುದ್ದು ಕೂಸು!' ಅಂತ ಅಜ್ಜಿ ಪ್ರೀತಿ ಮಾಡಿ, ಖಾತಿರ್ದಾರಿ ಮಾಡಿ, ಸ್ಪೆಷಲ್ ಸ್ಪೆಷಲ್ ಅಡಿಗಿ ಮಾಡಿ, ಉಣ್ಣಿಸಿ, ತಿನ್ನಿಸಿ, ಪ್ರೀತಿ ಮಮ್ಮಗನಾದ ನನ್ನನ್ನು ಮತ್ತೂ ಹೊನಗ್ಯಾ ಮಾಡಿ ಕಳಿಸಿದಳು.

ಮಠದಿಂದ ಡಿಬಾರ್ ಆಗಿ ಕೇರ್ ಆಫ್ ಫುಟ್ಪಾತ್ ಆಗಿದ್ದ ಸ್ವಾಮಿ ಎರಡು ದಿವಸ ಬಿಟ್ಟು ಬಂದ. ಅವನ ಹೆಸರಿಗೆ ಅರ್ಧಾ ಎಕರೆ ಅಡಿಕಿ ತ್ವಾಟಾ, ಒಂದು ಎಕರೆ ಭತ್ತದ ಗದ್ದಿ ಬರೆದು ಕೊಟ್ಟರು ನಮ್ಮ ಅಜ್ಜಾ. ಅದು ಖಾಯಂ ಆಗಿಬಿಡಬೇಕು ಅಂತ ಹೇಳಿ ರಿಜಿಸ್ಟರ್ ಸಹಿತ ಮಾಡಿಸಿ, ಕಾಗದಪತ್ರ ಅವನ ಕೈಯಾಗ ಕೊಟ್ಟು, 'ಏ, ಜಾತಿ ಕೆಟ್ಟ ಬ್ರಾಹ್ಮಣಾ, ತೊಗೋ ನಿನ್ನ ದಕ್ಷಿಣಾ!' ಅಂತ ಹೇಳಿದರು. ಅರ್ಧಾ ಎಕರೆ ಅಡಿಕಿ ತ್ವಾಟಾ, ಒಂದು ಎಕರೆ ಭತ್ತದ ಗದ್ದಿ ಅಂದರ ಸಣ್ಣ ಮಾತೇನ್ರೀ?? ಒಂದು ಆರು-ಎಂಟು ಜನರ ಕುಟುಂಬ ಆರಾಮ ಇರಬಹುದು ಅದರಾಗ. ನೋಡಿದರೆ ಇಂವಾ ಅನಾಥ ಸೂಳಿಮಗ. ಸಿಂಗಲ್ ಆದ್ಮಿ. ಅಲ್ಲೇ ತ್ವಾಟದ ಮೂಲ್ಯಾಗ ಒಂದು ಸಣ್ಣ ಮನಿ ಬ್ಯಾರೆ ಕಟ್ಟಿಸಿಕೊಟ್ಟರು. ಅದು ಒಳ್ಳೆ ಪಕ್ಕಾ ಮನಿ ಮತ್ತ. ಛಲೋನೇ ಇತ್ತು. ಈ ರೀತಿ ನಮ್ಮ ಅಜ್ಜಾ ಕೊಟ್ಟ ಮಾತಿನಂತೆ ಮಾಜಿ ಸಣ್ಣ ಸ್ವಾಮೀನ ಜೀವನದಾಗ ಸೆಟಲ್ ಮಾಡಿಸಿಕೊಟ್ಟರು.

ಕೆಟ್ಟು ಕೆರಾ ಹಿಡಿದಿದ್ದ ಮಾಜಿ ಸಣ್ಣ ಸ್ವಾಮಿ ಎಲ್ಲಾ ಚಟಾ ಸ್ವಲ್ಪ ಲಿಮಿಟ್ ಒಳಗ ಇಟ್ಟುಕೊಂಡು ಒಳ್ಳೆ ರೀತಿಂದ ಕೆಲಸ ಮಾಡಿದ. ತ್ವಾಟಾ, ಗದ್ದಿ ಛಲೋತ್ನಾಗಿ ಸಾಗುವಳಿ ಮಾಡಿದ. ಸ್ವಲ್ಪ ರೊಕ್ಕ ಕಾಸು ಮಾಡಿಕೊಂಡ. ಆವಾಗ ಮತ್ತ ನಮ್ಮ ಅಜ್ಜನ ಮುಂದ ಬಂದು ನಿಂತ.

'ಏನೋ? ಈಗ ಏನೋ? ನಿನಗ ಎಲ್ಲಾ ಮಾಡಿ ಕೊಟ್ಟೇನಲ್ಲೋ? ಮತ್ತೇನು ಬೇಕು? ನನ್ನ ತಲಿ ಮ್ಯಾಲೆ ಹತ್ತಿ ಕೂಡಬೇಕೇನು?' ಅಂದ್ರು ನಮ್ಮ ಅಜ್ಜ. ಇವನ ಕಾಲದಾಗ ಸಾಕಾಗಿ ಹೋಗ್ಯದ ಅವರಿಗೆ.

ಅದಕ್ಕೆ ಉತ್ತರ ಆ ಮಾಜಿ ಸಣ್ಣ ಸ್ವಾಮಿ ಹೇಳಲಿಲ್ಲ. ಅಲ್ಲೇ ಇದ್ದ ನಮ್ಮ ಅಜ್ಜಿ ಹೇಳಿದರು.

'ಅವಂಗ ಒಂದು ಲಗ್ನಾ ಮಾಡಿ ಒಗೀರಿ. ಬೆದಿಗೆ ಬಂದ ಹೋರಿ ಆಗ್ಯಾನ. ಮಠದಾಗ ಏನೇನು ಮಾಡಿ ಬಂದಾನ ಅಂತ ಗೊತ್ತೇ ಅದ. ಹಾಂಗಿದ್ದಾಗ ಇಂತಾ ಗೂಳಿ ಸೂಳಿಮಗನ್ನ ಹಾಂಗೇ ಬಿಟ್ಟರೆ ನಮ್ಮೂರಿನ ಒಂದೇ ಒಂದು ಕನ್ಯಾ ಸೇಫ್ ಇಲ್ಲ ನೋಡ್ರಿ ಮತ್ತ. ನಮ್ಮನಿಯಾಗ ಯಾರೂ ಹೆಣ್ಣಮಕ್ಕಳು ಇರಲಿಕ್ಕಿಲ್ಲ. ಆದ್ರ ಊರಾಗ ಇದ್ದಾರ. ಯಾರದ್ದರೆ ಬಡವರ ಮನಿ ಒಂದು ಯಬಡ ಹುಡುಗಿ ತಂದು ಲಗೂನ ಕಟ್ಟಿಬಿಡ್ರಿ ಈ ಪಾಪಿ ಸೂಳಿಮಗ್ಗ! ಇಲ್ಲಾ ಅಂದ್ರ, 'ನಿಮ್ಮ ಮಮ್ಮಗನಿಂದ ನಾ ಹಾಳಾದೆ. ನಿಮ್ಮ ಮಮ್ಮಗ ನನಗ ಎಲ್ಲಾ ಚಟಾ ಹಚ್ಚಿಸಿ ಹಾಳುಮಾಡಿದಾ. ಅದಕss ನನ್ನ ಲಗ್ನ ಆಗವಲ್ಲತು,' ಅಂತ ನನ್ನ ಮುದ್ದು ಮಮ್ಮಗಗ ಶಾಪಾ ಹೊಡಿತದ ಈ ಹುಚ್ಚ. ಇವನ ಶಾಪ ಯಾಕ ನನ್ನ ಪ್ರೀತಿ ಮಮ್ಮಗಗ ತಟ್ಟಬೇಕು?' ಅಂತ ನಮ್ಮ ಅಜ್ಜಿ ಅವರ ಫಿಟ್ಟಿಂಗ್ ಇಟ್ಟರು. ಅಜ್ಜನಿಗೆ ಗೊತ್ತಿಲ್ಲದ ವಿಷಯ ಅಂದರೆ ಈ ಸಣ್ಣ ಸ್ವಾಮಿ ಅಜ್ಜಿ ಹೇಳಿದ ಕೆಲಸ ಎಲ್ಲ ಭಕ್ತಿಯಿಂದ ಮಾಡಿಕೊಟ್ಟು ಅಜ್ಜಿಯ ಫೇವರಿಟ್ ಆಗಿಬಿಟ್ಟಾನ ಅಂತ. ಮೊದಲು ಅಜ್ಜಿಗೆ ಹೋಗಿ 'ನನ್ನ ಲಗ್ನಾ ಮಾಡ್ರಿ,' ಅಂತ ಹೇಳ್ಯಾನ. ಅಜ್ಜಿ ಹೇಳ್ಯಾರ, 'ನೀ ಹೋಗಿ ನಮ್ಮ ಯಜಮಾನರ ಮುಂದ ಹೇಳು. ನಾ ನಿನ್ನ ಸಪೋರ್ಟ್ ಮಾಡತೇನಿ. ನಿನಗ ಒಂದು ಹುಡುಗಿ ಸಹಿತ ನೋಡಿಟ್ಟೇನಿ. ಅಕಿ ಜೋಡಿ ನಿನ್ನ ಲಗ್ನಾ ಮಾಡಿಸೇಬಿಡ್ತೇನಿ,' ಅಂತ. ಹೀಂಗ ಮೊದಲೇ ಮಾಮಲಾ ಫಿಟ್ ಆಗಿಬಿಟ್ಟದ.

ಎಲ್ಲರಿಗೂ ಅಜ್ಜಿ ಮಾತು ಒಪ್ಪಿಗಿ ಆಗ್ಯದ. ಸಿರ್ಸಿ ಸೀಮ್ಯಾಗ ಅಂತೂ ಈ ಹುಚ್ಚ ಸೂಳಿಮಗಗ ಯಾರೂ ಹೆಣ್ಣು ಕೊಡೋದಿಲ್ಲ. ಇಂವಾ ಒಂದು ಕಾಲದಾಗ ಸ್ವಾಮಿಯಾಗಿದ್ದಾ, ಮಾಡಬಾರದ್ದು ಮಾಡಿ ಡಿಬಾರ್ ಆಗಿ ಮಠದಿಂದ ಓಡಿ ಬಂದಾನ ಅಂತ ನೆನಪಾದ ಕೂಡಲೇ ಮಂದಿ ಕುಂಡಿ ತಟ್ಟಿಕೊಂಡು ನಗ್ತಾರ. ಹಾಂಗಿರೋವಾಗ ಹೆಣ್ಣು ಕೊಡೋದು ದೂರ ಉಳಿತು ಬಿಡ್ರೀ.

ಆದ್ರ ನಮ್ಮಜ್ಜಿ ಅಂದ್ರ ಅಕಿ ಭಾಳ resourceful ಮಹಿಳೆ. ಆ ಜೋಗ ಫಾಲ್ಸ್ ಕಡೆ ಲಿಂಗನಮಕ್ಕಿನೋ, ಮಂಗನಮಕ್ಕಿನೋ ಅಂತ ಒಂದು ಸೀಮೆ ಬರ್ತದ ನೋಡ್ರಿ. ಅಲ್ಲಿಂದ ಯಾವದೋ ಒಂದು ಕನ್ಯಾ ಹುಡುಕಿಕೊಂಡು ಬಂದುಬಿಟ್ಟಾಳ. ಪಾಪ ಬಡವರ ಮನಿ ಕನ್ಯಾ. ಅಪ್ಪಾ ದೇವರ ಗುಡಿ ಭಟ್ಟಾ. ಅಂತವಂಗ ಸಾಲಾಗಿ ಅರ್ಧಾ ಡಜನ್ ಹೆಣ್ಣುಮಕ್ಕಳನ್ನು ದೇವರು ದಯಪಾಲಿಸಿಬಿಟ್ಟಾನ. ಆ ಭಟ್ಟನ ಹಿರೇ ಮಗಳೇ ನಮ್ಮಜ್ಜಿ ಹುಡುಕಿದ ಕನ್ಯಾ. ವಯಸ್ಸು ಬ್ಯಾರೆ ಇಪ್ಪತ್ತರ ಮ್ಯಾಲೆ ಆಗಿಬಿಟ್ಟದ. ಆಗಲೇ ತಡಾ ಆಗಿಬಿಟ್ಟದ. ಹಾಂಗಾಗಿ ಆ ಲಿಂಗನಮಕ್ಕಿ ಭಟ್ಟಾ ಸಿಕ್ಕಿದ್ದೇ ವರಾ, ಅದೂ ಸಿರ್ಸಿ ಸೀಮ್ಯಾಗ ಬಂಗಾರದ ಬೆಳೆ ಬರೋ ಅರ್ಧಾ ಎಕರೆ ಅಡಿಕಿ ತ್ವಾಟದ ಮಾಲೀಕ ವರಾ ಸಿಕ್ಕಾನ ಅಂತ ಹೇಳಿ ಒಪ್ಪೇಬಿಟ್ಟಾನ. ಒಂದು ತಿಂಗಳದಾಗ ಎಲ್ಲಾ ಮಾತುಕತೆ ಮುಗಿದು ಲಗ್ನಾ ಮಾಡಿ ಢಾಂ ಢೂಮ್ ಢುಸ್ ಅನ್ನಿಸಿಬಿಟ್ಟಾರ.

ಲಗ್ನ ಆಗಿದ್ದೇ ಆಗಿದ್ದು 'ಜವಾನಿ ಕಿ ಕಹಾನಿ' ಅನ್ನೋ ಬ್ಲೂಫಿಲ್ಮ್ ನೋಡಿ ಕಲಿತ ಎಲ್ಲಾ ಕಲೆಗಳನ್ನೂ ಹಿಡಿದು ಬಿಡದೆ, ಹಗಲು ರಾತ್ರಿ ಅನ್ನೋ ಖಬರಿಲ್ಲದೇ ಸ್ವಾಮಿ ಪ್ರಯೋಗ ಮಾಡಿಬಿಟ್ಟಾನ. ತಿಂಗಳ ಅನ್ನೋದ್ರಾಗ ಫಸ್ಟ್ ಪ್ರೊಡಕ್ಷನ್ ಶುರು ಮಾಡೇಬಿಟ್ಟಾನ. ಲಗ್ನಾಗಿ ಹತ್ತೇ ತಿಂಗಳದಾಗ ಸಣ್ಣ ಸ್ವಾಮಿಗೆ ಒಬ್ಬ ಗಂಡು ಮಗಾ.

ಅದೇ ಪ್ರಕಾರ ಮುಂದ ಐದು ವರ್ಷದಾಗ ಮತ್ತೂ ಎರಡು ಪ್ರೊಡಕ್ಷನ್ ಮಾಡಿಕೊಂಡ ಮಾಜಿ ಸಣ್ಣ ಸ್ವಾಮಿ. ಅವೇ ಮೂರು ಮಕ್ಕಳನ್ನು ಕರಕೊಂಡು ಹೆಂಡ್ತಿ ಜೋಡಿ ಸಿರ್ಸಿಗೆ ಬಂದಾನ. ಆಗಲೇ ನಾ ಕಂಡುಬಿಟ್ಟೇನಿ. ನನಗಂತೂ ಅವನ ಗುರ್ತೇ ಸಿಕ್ಕಿಲ್ಲ ಬಿಡ್ರೀ. ಆಂವಾ ಮಾತ್ರ ಅದೆಂಗೊ ನನ್ನ ಗುರುತು ಹಿಡಿದುಬಿಟ್ಟಾನ. ನಾ ಮಾಡಿದ 'ಉಪಕಾರಗಳೆಲ್ಲ' ನೆನಪಾಗಿಬಿಟ್ಟಾವ. ಹಾಂಗಾಗಿ ಆ ರೀತಿ ನನ್ನ ಕೈ ಹಿಡಕೊಂಡು, ಆನಂದದ ಕಣ್ಣೀರು ಹಾಕ್ಕೋತ್ತ, ಸಂತೋಷದಾಗ ಮಾತಾಡ್ಲಿಕ್ಕೆ ಆಗದೇ, ಕಾಲಿಗೆ ಬಿದ್ದು ಬಿದ್ದು ಥ್ಯಾಂಕ್ಸ್ ಹೇಳಳಿಕತ್ತಾನ.

ಅಬ್ಬಾ! ನನಗೂ ಸಮಾಧಾನ ಆತು ಬಿಡ್ರೀ. ಅವಂಗ ಚಟಾ ಹಚ್ಚಿಸಿ, ಅವನ್ನ ಹಾಳು ಮಾಡಿಬಿಟ್ಟೆ ಅಂತ ನನಗೇನೂ guilty conscience ಆಗಿದ್ದಿಲ್ಲ. ಮತ್ತ ಮ್ಯಾಲಿಂದ ನಮ್ಮ ಅಜ್ಜ ಬ್ಯಾರೆ ಅವಂಗ ಎಲ್ಲಾ ವ್ಯವಸ್ಥಾ ಮಾಡಿಕೊಟ್ಟಾರ. ಅಜ್ಜಿ ಸಂಸಾರ ಮಾಡಿಸಿಕೊಟ್ಟಾರ. ಅದರೂ ನಾವು ಭಾಳ ಹಿಂದೆ ಮಾಡಿದ್ದ  ಕೆಲಸ ಪಾಪ ಆಗಲಿಲ್ಲ, ಬದಲಿಗೆ ಪುಣ್ಯವೇ ಆತು ಅಂತ ಸಂತೋಷ. ಇಲ್ಲಂದ್ರ ನೋಡ್ರಿ, ಈ ಹುಚ್ಚ ಸೂಳಿಮಗ ಮನಸ್ಸಿಲ್ಲದಿದ್ದರೂ ಸ್ವಾಮಿಯಾಗಿ ಬರೇ ಲಂಪಟ ಕೆಲಸ ಮಾಡಿಕೋತ್ತ, ಪೂಜಿ ಪುನಸ್ಕಾರ ಎಲ್ಲ ಬಿಟ್ಟು, ಧ್ಯಾನದಾಗ ಕೂತರೂ ಬರೇ ಸಂಸಾರದ ಸುಖಗಳ ಬಗ್ಗೆನೇ ವಿಚಾರ ಮಾಡಿಕೋತ್ತ ಪೀಠ ಹಾಳು ಮಾಡ್ತಿದ್ದ. useless fellow. ಎಲ್ಲ ಚಟ ಮಾಡಿದ. ಲಗೂನೇ ಕೆಟ್ಟ. ಕೆಟ್ಟು ಕೆರ ಹಿಡಿದ. ಸಿಕ್ಕೊಂಡು ಬಿದ್ದ. ಡಿಬಾರ್ ಆದ. ಒಳ್ಳೇದೇ ಆತು. ಮುಂದ ಅವಂಗೂ ಎಲ್ಲಾ ಒಳ್ಳೇದೇ ಆತು. ಹಾಂಗಾಗಿ ಸ್ವಾಮಿಯನ್ನು ನಾವಂತೂ ಕೆಡಿಸಿ ಹಾಳು ಮಾಡಲಿಲ್ಲ. ಆ ಪಾಪ ನಮಗ ತಾಗೋದಿಲ್ಲ. ಅಷ್ಟೇ ಸಾಕು.

ಒಂದೇ ಒಂದು ಕೆಟ್ಟದಾತು ಅಂತ ಅನ್ನಿಸ್ತದ. ಇಂವಾ ಕೆಟ್ಟು ಕೆರಾ ಹಿಡಿದು, ಎಲ್ಲಾ ಚಟಾ ಮಾಡಿ, ಮಠದಾಗ ಸಿಕ್ಕೊಂಡು ಬಿದ್ದಿದ್ದಿಲ್ಲಾ ಅಂದ್ರ ನಾವೂ ಮಠದಾಗೇ ಇರಬಹುದಿತ್ತು. I miss it very much. ಮಠ ಏನೂ ಅಷ್ಟು ಮಿಸ್ ಮಾಡಿಕೊಳ್ಳೋದಿಲ್ಲ ಬಿಡ್ರೀ. ಆದ್ರ ಮಠದ ಅಡಿಗಿ ರುಚಿ ಮಾತ್ರ ಮರಿಲಿಕ್ಕೆ ಆಗೋದಿಲ್ಲ. ಅದರಾಗೂ ಮಠದ ಹುಳಿ ಅದರಾಗೂ ಸ್ಪೆಷಲ್ ಬದನಿಕಾಯಿ ಹುಳಿ ಅಂದ್ರ ಮುಗೀತು. ಏನು ರುಚಿ ಅಂತೀರಿ! ಒಂದು ತಪ್ಪಲೆ ಬಿಸಿಬಿಸಿ ಅನ್ನದ ಮ್ಯಾಲೆ ಒಂದು ಕೊಳಗಾ ಹುಳಿ ಹಾಕಿಸಿಕೊಂಡು, ಮ್ಯಾಲಿಂದ ಅರ್ಧಾ ವಾಟಗಾ ಬಿಸಿ ತುಪ್ಪಾ ಹಾಕಿಸಿಕೊಂಡು, ಒಂದು ಇಪ್ಪತ್ತು ಹಲಸಿನಕಾಯಿ ಹಪ್ಪಳ ಕರಂ ಕುರಂ ಮಾಡಿ ತಿನ್ನಕೋತ್ತ, ವಾಸನಿ ಮಿಡಿ ಉಪ್ಪಿನಕಾಯಿ ನಂಜಿಕೋತ್ತ ಊಟ ಮಾಡಿ, ಒಂದು ಅರ್ಧಾ ಡಜನ್ ಕಾಯಿ ಹೋಳಿಗಿ ಕತ್ತರಿಸಿ, ಒಂದು ಲೀಟರ್ ಮಸಾಲಿ ಮಜ್ಜಿಗಿ ಕುಡಿದು, ಊಟ ಮುಗಿಸಿ, ಕಲಕತ್ತಾ ಎಲಿಯಾಗ ಬಾಬಾ ೧೬೦ ಕೇಸರಯುಕ್ತ ಜರ್ದಾ ಹಾಕಿ, ಮ್ಯಾಲಿಂದ ಹುರಿದ ಚಾಲಿ ಅಡಿಕಿ ಹಾಕಿದ ಪಾನ್ ಹಾಕ್ಕೊಳ್ಳೋದು ಅಂದ್ರ ಸ್ವರ್ಗ ಸುಖಾ ರೀ. ಅದು ಮಠದಾಗ ಇದ್ದಾಗ ಸಿಕ್ಕಿತ್ತು. ಈ ಹುಚ್ಚ ಸೂಳಿ ಮಗನ ಕಾಲಾದಾಗ ಆ ಸುಖ ನಮಗ ತಪ್ಪಿಹೋಗ್ಯದ. ಇವನದೇನು? ಆರಾಮ್ ಇದ್ದಾನ.

ಹಾಂ, ಈಗ ಗೊತ್ತಾಗಿರಬೇಕಲ್ಲಾ ಇವನ ಹೆಸರು ಎಸ್. ಎಸ್. ಭಟ್ ಯಾಕ ಅಂತ? ಅಯ್ಯೋ! ಸಣ್ಣ ಸ್ವಾಮಿ ಭಟ್ ಅಂತ. ಭಟ್ಟರ ಮನುಷ್ಯಾ. ಮೂಲ ಹೆಸರು ಸನ್ಯಾಸ ತೊಗೊಂಡಾಗ ಹೋತು. ನಂತರ ಎಲ್ಲರೂ ಸಣ್ಣ ಸ್ವಾಮಿ ಭಟ್ಟಾ ಅಂತಲೇ ಕರಿತಿದ್ದರು. ಮಾತಿಗೊಮ್ಮೆ ಸ್ವಾಮಿ ಸ್ವಾಮಿ ಅಂದಾಗೊಮ್ಮೆ ಹಳೇದೆಲ್ಲಾ ನೆನಪಾಗೋದು ಬ್ಯಾಡ ಅಂತ ಹೇಳಿ ಹಾಪ್ ಸೂಳಿಮಗಾ ಎಸ್. ಎಸ್. ಭಟ್ ಅಂತ ಮಾಡಿಕೊಂಡಾನ.

ಸ್ವಾಮಿಯೇ ಶರಣಂ ಅಯ್ಯಯಪ್ಪಾ!! ಸಣ್ಣ ಸ್ವಾಮಿಯೇ ಶರಣಂ ಅಯ್ಯಯಪ್ಪಾ!!!

ಅಷ್ಟರಲ್ಲಿ ಮಾಮಾನ ಮಗನ ಬುಲೆಟ್ ಪಟಪಟಿಯ ಸೌಂಡ್ ಕೇಳಿತು. ಫ್ಲಾಶ್ ಬ್ಯಾಕಿನಾಗ ಕಳೆದುಹೋಗಿದ್ದೆ. ಪಟಪಟಿ ಸೌಂಡ್ ಕೇಳಿ ಎದ್ದು ಹೊರಗ ಬಂದೆ. ಸಣ್ಣ ಸ್ವಾಮಿ ಭಟ್ಟನಿಗೆ ವಿದಾಯ ಹೇಳಿ ಅಜ್ಜಿಮನೆ ಕಡೆ ಹೊಂಟೆ.

***

ವಿ. ಸೂ: ಇದೊಂದು ಪೂರ್ತಿ ಕಾಲ್ಪನಿಕ ಕಥೆ. ಯಾವದೇ ವ್ಯಕ್ತಿಗಳಿಗಾದರೂ ಅಥವಾ ಯಾವದೇ ಘಟನೆಗಳಿಗಾದರೂ ಸಾಮ್ಯತೆ ಕಂಡುಬಂದಲ್ಲಿ ಅದು ಶುದ್ಧ ಕಾಕತಾಳೀಯವಷ್ಟೇ.

***

ಸ್ಪೂರ್ತಿ: 'ಮಠ' ಅನ್ನುವ ಕನ್ನಡ ಸಿನೆಮಾ.

14 comments:

sunaath said...

ಮಹೇಶಪ್ಪಾ,
ಮಲ್ಯಪ್ಪನ್ನ ಒಳಗ ಇಳಿಸಿದಷ್ಟು ಆನಂದ ಆತು. ಏನಪಾ, ಪ್ರತಿ ಸಾಲಿನ್ಯಾಗೂ ನಗಿ ಬುಗ್ಗಿ; ಪ್ರತಿ ಒಂದು ಪ್ಯಾರಾಕ್ಕೂ ಹುಚ್ಚು ಹಿಡಿಯೋ ಅಷ್ಟು ನಗಿ!ದೇವರು ನಿನಗ ಒಳ್ಳೇದು (-ಖರೆ ಖರೆ ಒಳ್ಳೇದು-)ಮಾಡ್ಲ್ಯಪಾ!

Unknown said...

Very well written. I enjoyed reading it. Laughter is the best medicine.

Mahesh Hegade said...

ಧನ್ಯವಾದ ಸುನಾಥ್ ಸರ್! ನಿಮಗೆ ಅಷ್ಟು ಹಿಡಿಸಿದ್ದು ನಮಗೆ ಸಂತೋಷ. ಆಶೀರ್ವಾದ, ಹಾರೈಕೆ ಹೀಗೇ ಇರಲಿ :)

Mahesh Hegade said...

Thank you very much, Radha madam.

ವಿ.ರಾ.ಹೆ. said...

Seriously..... I m LMBO....ROFL :D :D

ವಿ.ರಾ.ಹೆ. said...

Seriously..... I m LMBO....ROFL :D :D

Mahesh Hegade said...

Thanks Vikas :) ROFL

Kushi said...

Chennagide.. Mahesh sir

Kushi said...

Chennagide.. Mahesh sir

Mahesh Hegade said...

ಧನ್ಯವಾದ, ಖುಷಿ.

Unknown said...

Devru eege innastu bareyo hage madli sir... tumba chennagide... pls. barire... nidde madodu bittu barire.. nanu oota madodu bittu odutini...

Mahesh Hegade said...

ಧನ್ಯವಾದ Manju Maya.

Anonymous said...

Super Story Sir!

Mahesh Hegade said...

@Anonymous - ಧನ್ಯವಾದಗಳು!