Sunday, October 18, 2015

ಚಡ್ಯಾಗ ಏನೈತಿ? ಅಂಥಾದ್ದೇನೈತಿ?

ಈಗಂತೂ ಎಲ್ಲಾ ಕಡೆ ಬರೇ ಚಡ್ಡಿದೇ ಸುದ್ದಿ. ಯಾರರ ಮೇಲೆ ಕೇಸ್ ಹೆಟ್ಟಬೇಕು ಅಂದ್ರ ನಿಮ್ಮ ಕಡೆ ಏನಿಲ್ಲದಿದ್ದರೂ ಚಡ್ಡಿ ಮಾತ್ರ ಇರಬೇಕು ನೋಡ್ರಿ. ಬಡ್ಡಿಮಕ್ಕಳ ಕಾಲ ಮುಗಿತು. ಈಗ ಚಡ್ಡಿಮಕ್ಕಳ ಕಾಲ. ಚಡ್ಡಿಯಲ್ಲಿ ಕಡ್ಡಿಯಿರುವ 'ಕಡ್ಡಿ'ಮಕ್ಕಳಿಗೆ ಉರ್ಫ್ ಗಂಡುಮಕ್ಕಳಿಗೆ ಮಾತ್ರ ಕೆಟ್ಟಕಾಲ. ಎಲ್ಲಿಂದ, ಯಾರು, ಯಾವ ಚಡ್ಡಿ ತೋರಿಸಿ ಎಂತಹ ಕೇಸ್ ಜಡಿಯುತ್ತಾರೋ ಅಂತ ಹೇಳಲಿಕ್ಕೆ ಸಾಧ್ಯವಿಲ್ಲ. 

'ಚಡ್ಡಿ ಮಹಾತ್ಮೆ' ಹೀಂಗ ಇರಬೇಕಾದ್ರ ಒಮ್ಮೆ ಧಾರವಾಡದಾಗ ಜವಾರಿ ಮಂದಿ ತಲಿಕೆಡಿಸಿಕೊಂಡ್ರಂತ, 'ಅವನೌನ್! ಎಲ್ಲರೂ ಈ ಪರಿ ಚಡ್ಡಿ ತೋರಿಸಿ ತೋರಿಸಿ, ಹೆದರಿಸಿ, ಕಂಪ್ಲೇಂಟ್ ಜಡಿಯಾಕತ್ತಾರು. ಅಂದ ಮ್ಯಾಲೆ ಚಡ್ಯಾಗ ಏನೈತಿ? ಅಂಥಾದ್ದೇನೈತಿ? ಸೀರಿ ಒಳಗ ಇಲ್ಲದ್ದು. ಪರಕಾರ ಒಳಗ ಸಿಗದಿದ್ದು. ಪೋಲಕಾ ಒಳಗ ಕಾಣದ್ದು. ಜಂಪರ್ ಒಳಗ ದಕ್ಕದ್ದು. ಅಂಥಾದ್ದೇನೈತಿ? ಚಡ್ಯಾಗ ಏನೈತಿ?' ಅಂತ ಗುರ್ರಾಜ ಹೊಸಕೋಟಿ ಗತೆ, 'ಏನೈತಿ? ಒಳಗ ಏನೈತಿ? ಧಾರವಾಡದಾಗ ಇಲ್ಲದ್ದು. ಹುಬ್ಬಳ್ಳಿಯಾಗ ಸಿಗದ್ದು. ಗದಗದಾಗ ದೊರಕದ್ದು. ರೋಣದಾಗ ಇಲ್ಲದ್ದು. ಏನೈತಿ? ಉಣ್ಣಾಕ ಏನೈತಿ? ತಿನ್ನಾಕ ಏನೈತಿ?' ಅಂತ 'ಮಹಾ ಕ್ಷತ್ರಿಯ' ಚಿತ್ರದ ಹಾಡನ್ನು ಹಾಡಿ ಹಾಡಿ ಅವರನ್ನು ಅವರೇ ಕೇಳಿಕೊಂಡರಂತೆ.

'ಚಡ್ಯಾಗ ಡಿಎನ್ಎ ಇರತೈತಿ. ಹುಡುಕಿದರೆ ಸಿಗತೈತಿ,' ಅಂದ ಒಬ್ಬವ.

'ಏ, ಹಾಪ್ ಸೂಳಿಮಗನ! ಚಡ್ಯಾಗ ಡಿಎನ್ಎ ಬಿಟ್ಟು ಇನ್ನೂ ಭಾಳ ಭಾಳ ಸ್ಯಾಂಪಲ್ ಇರ್ತಾವ. ಚರ್ಮದ್ದು, ಕೂದಲದ್ದು, ಬೆವರಿಂದು, ರಕ್ತದ್ದು. ಅವನ್ನೆಲ್ಲ ಪೊಲೀಸರು ತೊಗೊಂಡು ಹೋಗಿ, ಪರೀಕ್ಷಾ ಮಾಡಿಸಿ ಕೇಸ್ ಹೆಟ್ಟತಾರ. ಗೊತ್ತೈತಿ???' ಅಂತ ಮತ್ತೊಬ್ಬವ ಅಂದ. ಏನೋ ಮರ್ತೆ ಅಂತ ಅವನೇ ಮತ್ತೆ ನೆನಪು ಮಾಡಿಕೊಂಡು, 'ಯಾರರೆ ನಿನ್ನಂತಾ ಹಲಕಟ್ ಎಲ್ಲರೆ ಚಡ್ಡಿ ಮ್ಯಾಲೆ ಇಂಜಿನ್ ಆಯಿಲ್ ಮಸ್ತಾಗಿ ಬಿಟ್ಟು ಬಂದಿದ್ದ ಅಂದ್ರ ಇಂಜಿನ್ ಎಣ್ಣಿ ಕಲಿನೂ ಇರತೈತಿ. ರಟ್ಟಿನ ಗತೆ ಆಗಿ ಕುಂತಿರತೈತಿ ಅಂತ ಕಾಣಸ್ತೈತಿ,' ಅಂದು ವಿಕಾರವಾಗಿ ನಕ್ಕ. ಮಷ್ಕಿರಿ ಸೂಳಿಮಕ್ಕಳು!

ನಮ್ಮ ಬಸು ಉರ್ಫ್ ಬಸವರಾಜ ಪಾಪ ಸ್ವಲ್ಪ ಲೇಟ್ ಆಗಿ ಹರಟಿ ಮಂಡಳಿ ಸೇರಿಕೊಂಡ. ಅವಂಗ ಏನೂ ಹಿನ್ನೆಲೆ ಗೊತ್ತೇ ಇಲ್ಲ. ಬರೆ ಇಷ್ಟೇ ಕೇಳಿಸಿಕೊಂಡಾನ, 'ಚಡ್ಯಾಗ ಏನೈತಿ? ಅಂಥಾದ್ದೇನೈತಿ?' ಅಷ್ಟೇ ವಿಷಯ ಅವನ ತಲಿಯಾಗ ಇಳಿದೈತಿ.

ಬಡ್ಡ  ತಲಿ ಮಬ್ಬ ಬಸೂಗ ಇರು ಒಂದೇ ಚಟಾ ಅಂದ್ರ ಕಂಡಲ್ಲಿ ಇಡೋದು. 'ನಂದೂ ಇಡ್ಲಿ?' ಅಂತ ಎಲ್ಲಾ ಕಡೆ 'ಇಟ್ಟೆ, ಇಟ್ಟೆ' ಅಂತ ಅನಕೋತ್ತ ಅಡ್ಯಾಡತಾನ ಹಾಪ್ ಬಸು.

ಇಲ್ಲೆ ಬ್ಯಾರೆ 'ಚಡ್ಯಾಗ ಏನೈತಿ?' ಅನ್ನೋ ವಿಷಯದ ಮ್ಯಾಲೆ ಭಾಳ ಮಹತ್ವದ ಅಧಿವೇಶನ ನಡದೈತಿ. ಹಾಂಗಿದ್ದಾಗ ಬಸು ತನ್ನ ಅಮೂಲ್ಯವಾದ ಸಂಶೋಧನೆಯನ್ನು ಮಂಡಿಸಲಿಲ್ಲ ಅಂದ್ರ ಹ್ಯಾಂಗ??? ಮಂಡಿಸಲಿಕ್ಕೇ ಬೇಕು.

'ಲೇ, ನಿಮ್ಮೌರ್! ನನಗ ಗೊತ್ತೈತಿ!' ಅಂದ ಬಸು.

'ಏನ ಗೊತ್ತೈತಲೇ ನಿನಗ ಬಸ್ಯಾ??' ಅಂತ ಕೇಳ್ಯಾರ ಎಲ್ಲರೂ.

'ಚಡ್ಯಾಗ ಏನೈತಿ, ಏನಿರತೈತಿ ಅಂತ ಬರೋಬ್ಬರಿ ಗೊತ್ತೈತಿ ನನಗ,' ಅಂದುಬಿಟ್ಟ ಬಸು. ಗುಂಡು ಹೊಡೆದಂಗ ಹೇಳ್ಯಾನ.

'ಚಡ್ಯಾಗ ಏನಿರತೈತಿ?? ಹೇಳು ನೋಡೋಣ,' ಅಂತ ಚಾಲೆಂಜ್ ಒಗೆದಾರ ದೋಸ್ತರು.

'ಮತ್ತೇನು ಇರತೈತ್ರೋ ನಿಮ್ಮಾಪರಾ!? ಎಲಾಸ್ಟಿಕ್ (elastic) ಇರತೈತಿ!' ಅಂದುಬಿಟ್ಟಾನ ಬಸು.

ಎಲ್ಲಾರೂ ಧಾರವಾಡದ KUD ಪಾರ್ಕಿನ ಹಳದಿ ಸಿಂಹದ ಮೂರ್ತಿ ಗತೆ ಇಷ್ಟು ದೊಡ್ಡ ಬಾಯಿ ಬಿಟ್ಟು, 'ಹ್ಯಾಂ???!!' ಅಂದು ಬೆಕ್ಕಸ ಬೆರಗಾಗಿಬಿಟ್ಟಾರ.

ಈ ದೋಸ್ತ ಮಬ್ಬ ಸೂಳಿಮಕ್ಕಳಿಗೆ ತಾನು ಹೇಳಿದ ಉತ್ತರ ಬರೋಬ್ಬರಿ ತಿಳಿದಿಲ್ಲ ಅಂತ ಗೊತ್ತಾದ ಬಸು clarification ಕೊಟ್ಟಾನ.

'ಮತ್ತೇನ್ರೋ!? ಚಡ್ಯಾಗ ಎಲಾಸ್ಟಿಕ್ ಇಲ್ಲದೇ ಮತ್ತೇನು ಇರಾಕ ಸಾಧ್ಯ? ಈಗ ಕಸಿ, ಲಾಡಿ ಇರೋ ಚಡ್ಡಿ ಯಾರೂ ಹಾಕೋದಿಲ್ಲಪಾ. ಹಾಂಗಾಗಿ ಈಗಿನ ಚಡ್ಯಾಗ ಎಲಾಸ್ಟಿಕ್ ಮಾತ್ರ ಇರತೈತಿ,' ಅಂದು, 'ಹ್ಯಾಂಗೈತಿ ನನ್ನ ಉತ್ತರ!!??' ಅಂತ ಲುಕ್ ಕೊಟ್ಟಾನ.

ಶುದ್ಧ ಲಾಡಿ, ಕಸಿ ಇದ್ದ ಪಟ್ಟಾಪಟ್ಟಿ ಚಡ್ಡಿ ಹಾಕ್ಕೊಂಡು ಕುಂತ ಧಾರವಾಡದ ಜವಾರಿ ಮಂದಿಯೆಲ್ಲ ಬಸೂನ್ನ ಅಲ್ಲೇ ಹಾಕಿಕೊಂಡು ಮಲಗಿಸಿ ಮಲಗಿಸಿ ಬಡದಾರ. ಉಳ್ಳಾಡಿಸಿ, ಉಳ್ಳಾಡಿಸಿ ಕಟದಾರ.

ಆಪರಿ ನಾದಿಸ್ಕೋತ್ತ ಬಸು ಒಂದೇ ಸವನೇ ಒಂದೇ ಮಾತು ಹೊಯ್ಕೊಳ್ಳಾಕತ್ತಾನ.....

'ನಿಮ್ಮೌರ್ ನಾ ಹೇಳಿದ್ದು ಹೆಂಗಸೂರ ಚಡ್ಡಿ ಬಗ್ಗೆ! ನಿಮ್ಮಂತಾ ಜವಾರಿ ಗಂಡಸೂರ ಚಡ್ಡಿ ಬಗ್ಗೆ ಅಲ್ಲರೋ! ಹೆಂಗಸೂರ ಚಡ್ಯಾಗ ಎಲಾಸ್ಟಿಕ್ ಮಾತ್ರ ಇರತೈತ್ರೋ. ಲಾಡಿ ಇರಂಗಿಲ್ಲರೋ. ಲಾಡಿ ಚಡ್ಡಿ ಯಾವ ಹೆಂಗಸೂರೂ ಹಾಕ್ಕೊಳ್ಳಂಗಿಲ್ಲರೋ! ಅದರಾಗೂ ಕೇಸ್ ಜಡಿಯುವ ಮಂದಿ ಅಂತೂ ಸಾಧ್ಯನೇ ಇಲ್ಲರೋ!' ಅಂತ ಹೊಯ್ಕೊಂಡಾನ.

'ಏ, ಸಾಕ್ರಿಲೇ ಹೆಟ್ಟಿದ್ದು. ಸಾಕ್ರಿಲೇ ಗಜ್ಜು ಕೊಟ್ಟಿದ್ದು. ಸೊಂಟಾ ಮುರಿಬ್ಯಾಡ್ರಿಲೇ. ನಂದಿನ್ನೂ ಲಗ್ನಾ ಆಗಿಲ್ಲ,' ಅನ್ನುವವರೆಗೆ ದೋಸ್ತರು ಬಸೂನ್ನ ಹಾಕ್ಕೊಂಡು ನಾದಿಬಿಟ್ಟಾರ. ನಂತರ ನಿಲ್ಲಿಸಿದ್ದಾರೆ.

ಬಸು ಎದ್ದು ನಿಂತು, ಸ್ಥಾನ ಪಲ್ಲಟವಾಗಿದ್ದ ತನ್ನ ಲುಂಗಿ ಸರಿಮಾಡಿಕೊಳ್ಳುವಾಗ ಹೊರಗ ಹಣಿಕಿ ಹಾಕೈತಿ ಅವನ ಎಲಾಸ್ಟಿಕ್ ಇರುವ VIP ಚಡ್ಡಿ. ತಾವೆಲ್ಲ ಲಾಡಿಯಿರುವ ಪಟ್ಟಾಪಟ್ಟಿ ಚಡ್ಡಿ ಹಾಕಿರುವಾಗ ತಮಗಿಲ್ಲದಂತಹ ಎಲಾಸ್ಟಿಕ್ ಚಡ್ಡಿ ಹಾಕ್ಯಾನ ಈ ಬಸ್ಯಾ ಅಂತ ಸಿಟ್ಟಿಗೆದ್ದ ಜವಾರಿ ದಾಂಡಿಗರು ತಮ್ಮ ತಮ್ಮ ಪಟ್ಟಾಪಟ್ಟಿಯ ಕಸೆ ಲಾಡಿಗಳನ್ನು ಟೈಟ್ ಮಾಡಿಕೊಂಡವರೇ ಮತ್ತೊಮ್ಮೆ ಬಸ್ಯಾನ ಮೇಲೆ ಬೀಳಲಿಕ್ಕೆ ಬಂದರೆ.......

'ಶಿವಾಯ ನಮಃ!' ಅಂದ ಬಸ್ಯಾ ಮಾತ್ರ, 'ಇವರು 'ಚಡ್ಯಾಗ ಏನೈತಿ? ಏನು ಇರತೈತಿ?' ಅಂತ ತಲಿಕೆಡಿಸಿಕೊಂಡು ಕುಂತಿದ್ದರು. ಎಲಾಸ್ಟಿಕ್ ಇರತೈತಿ ಅಂದ್ರ ಇಷ್ಟ್ಯಾಕ ಖುನ್ನಸ್, ಸಿಟ್ಟು ?' ಅಂತ ವಿಚಾರ ಮಾಡುತ್ತ  ಅಲ್ಲಿಂದ ಎಸ್ಕೇಪ್. ಗ್ರೇಟ್ ಎಸ್ಕೇಪ್!

2 comments:

sunaath said...

ಈಗಂತೂ ಕಾಲ ಬದಲಾಗೇದರೀ! ಯಾರ ಚಡ್ಯಾಗ ಏನಿರತೈತೋ?

Mahesh Hegade said...

Thanks Sunaath, Sir.