Sunday, March 20, 2016

ಮೀರ್ ಡಾಗನ್ - ಇಸ್ರೇಲಿ ಬೇಹುಗಾರಿಕೆಯ ಧೀಮಂತ ನಾಯಕ

ಮೊಸ್ಸಾದ್ (Mossad)! ಹೆಸರು ಕೇಳಿರಬೇಕಲ್ಲ? ಇಸ್ರೇಲ್ ಎಂಬ ಪುಟ್ಟ ದೇಶದ ಖತರ್ನಾಕ್ ಬೇಹುಗಾರಿಕೆ ಸಂಸ್ಥೆ. ಮೊಸ್ಸಾದ್ ಅಂತ ನೆನಪಾದರೂ ಸಾಕು ಇಸ್ರೇಲಿನ ವಿರುದ್ಧ ಕಿತಾಪತಿ ಮಾಡುವವರು ಕನಸಿನಲ್ಲೂ ಬೆಚ್ಚಿಬೀಳುತ್ತಾರೆ. ಅದಕ್ಕೆ ಕಾರಣವಿಲ್ಲದಿಲ್ಲ. 'ನೀವು ಇಸ್ರೇಲಿಗೆ ಯಾವದೇ ತರಹದಲ್ಲಿ ಅಪಾಯವನ್ನು ತಂದೊಡ್ಡುತ್ತೀರಿ ಅಥವಾ ಇಸ್ರೇಲ್ ವಿರುದ್ಧ ಪಾತಕ ಎಸೆಗಿದ್ದೀರಿ ಅಂತಾದರೆ ಇಸ್ರೇಲ್ ನೀವು ಬ್ರಹ್ಮಾಂಡದ ಯಾವ ಮೂಲೆಯಲ್ಲಿದ್ದರೂ ಬಂದು ನಿಮ್ಮನ್ನು ಬೇಟೆಯಾಡುತ್ತದೆ. No exceptions!' ಅನ್ನುವ ಅಲಿಖಿತ ನಿಯಮವೊಂದನ್ನು ಒಂದಾದಮೇಲೊಂದು ಖತರ್ನಾಕ್ ಕಾರ್ಯಾಚರಣೆಗಳಲ್ಲಿ ಸಾಬೀತು ಮಾಡಿ ತೋರಿಸಿದ್ದು ಮೊಸ್ಸಾದ್. ವಿಶ್ವದ ಬೇಹುಗಾರಿಕೆ ಸಂಸ್ಥೆಗಳಲ್ಲೇ ಮೊಸ್ಸಾದಿಗೆ ಅಗ್ರಸ್ಥಾನ. ಅಮೇರಿಕಾದ ಬೇಹುಗಾರಿಕೆ ಸಂಸ್ಥೆ CIA ಕೂಡ ಮೊಸ್ಸಾದಿನಿಂದ ಪಾಠ ಹೇಳಿಸಿಕೊಳ್ಳುತ್ತದೆ. ತನ್ನ ಹತ್ತಿರ ಸಾಧ್ಯವಿಲ್ಲದ ಅಥವಾ ಕೆಲವು ಅನಿವಾರ್ಯತೆಗಳಿಂದ ಮಾಡಲಾಗದ ಕಪ್ಪು ಕಾರ್ಯಾಚರಣೆಗಳನ್ನು (black ops, covert operations) ಮೊಸ್ಸಾದ್ ಮೂಲಕ ಮಾಡಿಸಿಬಿಡುತ್ತದೆ. When it comes to executing sensational black ops, no one is better than Israelis. They are the supreme experts.

ಮೀರ್ ಡಾಗನ್

ಇಂತಹ ಖತರ್ನಾಕ್ ಬೇಹುಗಾರಿಕೆ ಸಂಸ್ಥೆಯ ನೇತೃತ್ವ ವಹಿಸಿದ್ದ ಟಾಪ್ ಬೇಹುಗಾರ ಮೀರ್ ಡಾಗನ್ ತಮ್ಮ ಎಪ್ಪತ್ತೊಂದನೆಯ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ೨೦೦೨ ರಿಂದ ೨೦೧೦ ರ ವರಗೆ ನಿರಂತರವಾಗಿ ಎಂಟು ವರ್ಷಗಳ ಕಾಲ ಮೊಸ್ಸಾದಿನ ಡೈರೆಕ್ಟರ್ ಆಗಿದ್ದವರು ಅವರು. ಎಂಟು ವರ್ಷಗಳ ಕಾಲ ಮೊಸ್ಸಾದಿನಂತಹ ಸಂಸ್ಥೆಯ ಡೈರೆಕ್ಟರ್ ಆಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುವದೆಂದರೆ ಸಾಮಾನ್ಯ ಮಾತಲ್ಲ. ಹುಲಿಯ ಮೇಲಿನ ಸವಾರಿಯದು. ಮೊಸ್ಸಾದಿನ ರಹಸ್ಯ ಕಾರ್ಯಾಚರಣೆಗಳು ವಿಶ್ವದ ಎಲ್ಲಾ ಕಡೆ ನಡೆಯುತ್ತಲೇ ಇರುತ್ತವೆ. ಸದಾ ಸಿಕ್ಕಾಪಟ್ಟೆ ಒತ್ತಡ. ಎಲ್ಲಿಯಾದರೂ ಏನಾದರೂ ಕೊಂಚ ಹೇರಾಪೇರಿಯಾದರೂ ಇಸ್ರೇಲಿಗೆ ದೊಡ್ಡ ಮಟ್ಟದ ಗಂಡಾಂತರ. ಅಂತರರಾಷ್ಟ್ರೀಯ ಸಮುದಾಯದಲ್ಲಿ ಮಾನ ಹೋಗುತ್ತದೆ. ಸ್ಕೆಚ್ ಹಾಕಿದ್ದ ಉಗ್ರಗಾಮಿಯನ್ನು ಗಮನಿಸುವದು ಅಥವಾ ಅವನನ್ನು ಕೊಲ್ಲುವದು ಎಲ್ಲಿಯಾದರೂ ಹೆಚ್ಚುಕಮ್ಮಿಯಾದರೆ ಇಸ್ರೇಲಿಗೆ ದೊಡ್ಡ ಅಪಾಯ ಎದುರಾಗುತ್ತದೆ. ನಿಮಿಷ ನಿಮಿಷಕ್ಕೆ ಹೊಸ ಹೊಸ ಖತರ್ನಾಕ್ ಮಾಹಿತಿ ಪ್ರವಾಹದ ಮಾದರಿಯಲ್ಲಿ ಹರಿದು ಬರುತ್ತಿರುತ್ತದೆ. ಮೊಸ್ಸಾದಿನ ಡೈರೆಕ್ಟರ್ ಕೆಲಸ ಅಂದರೆ must be the most stressful job. ಮತ್ತೆ ವರ್ಷಕ್ಕೊಮ್ಮೆ ಬೇರೆ ರಾಜಕೀಯ ಪಕ್ಷದ ನಾಯಕ ಬಂದು ಕೂಡುತ್ತಾನೆ. ಹೀಗೆಲ್ಲ ಇರುವಾಗ ಮೊಸ್ಸಾದಿನಂತಹ ಸಂಸ್ಥೆಯ ನೇತೃತ್ವವನ್ನು ಅಖಂಡ ಎಂಟು ವರ್ಷ ಯಶಸ್ವಿಯಾಗಿ ನಿಭಾಯಿಸುವದು ಅಂದರೆ ಸಣ್ಣ ಮಾತಲ್ಲ.

ಮೀರ್ ಡಾಗನ್ ಇಸ್ರೇಲಿ ಸೈನ್ಯದಲ್ಲಿ ಸೇವೆ ಸಲ್ಲಿಸಿದವರು. ಇಸ್ರೇಲಿನಲ್ಲಿ ಮೊಸ್ಸಾದಿನ ಡೈರೆಕ್ಟರ್ ಮುಂತಾದ ಪ್ರಮುಖ ಸ್ಥಾನಗಳಿಗೆ ಯಾರೋ ಅಬ್ಬೇಪಾರಿ ಸರ್ಕಾರಿ ಬಾಬುವನ್ನು ತಂದು ಕೂಡಿಸುವ ಪದ್ಧತಿ ಇಲ್ಲ. ಸೈನ್ಯ, ಬೇಹುಗಾರಿಕೆ, ಇತರೆ ರಕ್ಷಣಾ ಇಲಾಖೆಗಳಿಂದಲೇ ಬಂದಿರಬೇಕು. ಎಲ್ಲ ಕೆಲಸ ಗೊತ್ತಿರಬೇಕು. ಸಮಯ ಬಂದಾಗ ಮಾಡಲೂ ಬರಬೇಕು. ನೀವು ನಂಬಲಿಕ್ಕಿಲ್ಲ ಆದರೆ ಕೆಲವೊಂದು ಖತರ್ನಾಕ್ ಕಾರ್ಯಾಚರಣೆಗಳಲ್ಲಿ ಮೊಸ್ಸಾದಿನ ಡೈರೆಕ್ಟರ್ ಅವರೇ ಖುದ್ದಾಗಿ spot ಮೇಲಿರುತ್ತಾರೆ. ಇತರೆ ಬೇಹುಗಾರರಂತೆ ಮಾರುವೇಷ ಧರಿಸಿ ಇಡೀ ಕಾರ್ಯಾಚರಣೆಯ ಉಸ್ತುವಾರಿ ವಹಿಸಿರುತ್ತಾರೆ. ಉಳಿದವರು ತೆಗೆದುಕೊಂಡ ದೊಡ್ಡ ಮಟ್ಟದ risk ಇವರೂ ತೆಗೆದುಕೊಂಡಿರುತ್ತಾರೆ. ಒಂದೆರೆಡು ಉದಾಹರಣೆ ಕೊಡುತ್ತೇನೆ.

೧೯೯೨ ರಲ್ಲಿ ಇಪ್ಪತ್ತು ವರ್ಷಗಳ ನಿರಂತರ ಹುಡುಕಾಟದ ನಂತರ ಪ್ಯಾಲೆಸ್ಟೈನ್ ಉಗ್ರಗಾಮಿ ಅತಿಫ್ ಬೆಸೋ ಎಂಬುವನನ್ನು ಮೊಸ್ಸಾದಿನ ರಹಸ್ಯ ಹಂತಕರು ಪ್ಯಾರಿಸ್ಸಿನಲ್ಲಿ ಗುಂಡಿಟ್ಟು ಕೊಂದರು. ೧೯೭೨ ರಲ್ಲಿ ಜರ್ಮನಿಯ ಮ್ಯೂನಿಕ್ ಶಹರದಲ್ಲಿ ನಡೆದ ಒಲಿಂಪಿಕ್ ನಲ್ಲಿ ಇಸ್ರೇಲಿ ಕ್ರೀಡಾಪಟುಗಳ ಇಡೀ ತಂಡವನ್ನು ಪ್ಯಾಲೆಸ್ಟೈನ್ ಉಗ್ರಗಾಮಿಗಳು ಅಪಹರಿಸಿದ್ದರು. ಜರ್ಮನಿ ನಡೆಸಿದ rescue ಕಾರ್ಯಾಚರಣೆ ಎಕ್ಕುಟ್ಟಿಹೋಗಿತ್ತು. ಅಷ್ಟೂ ಇಸ್ರೇಲಿ ಕ್ರೀಡಾಪಟುಗಳನ್ನು ಉಗ್ರರು ಕೊಂದಿದ್ದರು. ಇಸ್ರೇಲ್ ಅಂದೇ ಒಂದು ನಿರ್ಧಾರ ಕೈಗೊಂಡಿತ್ತು. 'ಇವರನ್ನು ಬಿಡುವದಿಲ್ಲ. ಮ್ಯೂನಿಕ್ ಹತ್ಯಾಕಾಂಡಕ್ಕೆ ಕಾರಣವಾದವರನ್ನು ಒಬ್ಬೊಬ್ಬರನ್ನಾಗಿ ಹಿಡಿಹಿಡಿದು ಕೊಲ್ಲುತ್ತೇವೆ,' ಅಂತ ಖಡಕ್ ನಿರ್ಧಾರ ತೆಗೆದುಕೊಂಡಿದ್ದ ಇಸ್ರೇಲಿಗಳು ಅದೇ ಪ್ರಕಾರ ಮಾಡಿತೋರಿಸಿದ್ದರು. ೧೯೭೯ ರ ಹೊತ್ತಿಗೆ ಸುಮಾರು ಎಲ್ಲರನ್ನೂ ಮೊಸ್ಸಾದ್ ಒಂದಕ್ಕಿಂತ ಒಂದು ಖತರ್ನಾಕ್ ಕಾರ್ಯಾಚರಣೆಗಳಲ್ಲಿ ಮುಗಿಸಿಹಾಕಿತ್ತು. ಅಂದಿನ ಮೊಸ್ಸಾದಿನ ಡೈರೆಕ್ಟರ್ ಝ್ವೀ ಝಾಮಿರ್ ಕೆಲವು ಕಾರ್ಯಾಚರಣೆಗಳ ನೇತೃತ್ವವನ್ನು ತಾವೇ ವಹಿಸಿದ್ದರು. ಅದೂ ಹಂತಕರ ತಂಡದ ಕಾರ್ ಡ್ರೈವರ್ ಆಗಿ. ಎಲ್ಲಿಯಾದರೂ ಕೇಳಿದ್ದೀರೇನು ಈ ತರಹದ ನಾಯಕತ್ವದ ಬಗ್ಗೆ? Leading from the front ಅಂದರೆ ಇದು. ಮೊಸ್ಸಾದಿನ ಡೈರೆಕ್ಟರ್ ಅಂದರೆ ಹೀಗೆ. ಮೇಲೆ ಹೇಳಿದ ಅತಿಫ್ ಬೆಸೋ ಎಂಬ ಉಗ್ರಗಾಮಿ ಮ್ಯೂನಿಕ್ ಹತ್ಯಾಕಾಂಡದ ಹಂತಕರಲ್ಲಿ ಉಳಿದುಕೊಂಡಿದ್ದ ಕೊನೆಯ ಕೊಂಡಿ. ಇಪ್ಪತ್ತು ವರ್ಷ ತಲೆ ಮರೆಸಿಕೊಂಡಿದ್ದ. ಇಸ್ರೇಲ್ ನಿರಂತರವಾಗಿ ಹುಡುಕಿ ೧೯೯೨ ರಲ್ಲಿ ಅವನನ್ನು ಕೊಂದಿತು. ಅತಿಫ್ ಬೆಸೋನ ತಲೆಗೆ ಗುಂಡು ಬೀಳುವದನ್ನು ಮೊಸ್ಸಾದಿನ ಅಂದಿನ ಡೈರೆಕ್ಟರ್ ಶಾಬಟೈ ಶಾವಿತ್ ಕೇವಲ ಕೆಲವೇ ಅಡಿಗಳ ದೂರದಲ್ಲಿ ಮಾರುವೇಷದಲ್ಲಿ ಕಾರಿನಲ್ಲಿ ಕೂತು ನೋಡುತ್ತಿದ್ದರು. ಇಪ್ಪತ್ತು ವರ್ಷಗಳಿಂದ ಬೇಟೆಗಾಗಿ ಕಾದಿದ್ದ ಮಿಕ ಗುಂಡು ತಿಂದು ನೆಲಕ್ಕೆ ಉರುಳಿದಾಗಲೇ 'let's move' ಅಂದಿದ್ದರು ಶಾಬಟೈ ಶಾವಿತ್. ಉಳಿದೆಲ್ಲ ಮೊಸ್ಸಾದಿನ ಬೇಹುಗಾರರಂತೆ ರಹಸ್ಯವಾಗಿ ಫ್ರಾನ್ಸ್ ಪ್ರವೇಶಿಸಿದ್ದ ಅವರೂ ಸಹ ಅಲ್ಲಿಂದ ಅಷ್ಟೇ smooth ಆಗಿ ಕಳಚಿಕೊಂಡಿದ್ದರು. ಹೀಗಿರುತ್ತಾರೆ ಮೊಸ್ಸಾದ್ ಎಂಬ ಖತರ್ನಾಕ್ ಸಂಸ್ಥೆಯ ಮುಖ್ಯಸ್ಥರು. Always leading from the front.

ಮೊಸ್ಸಾದಿನ ನಾಯಕ ಅಂತ ಯಾರೋ ಸರ್ಕಾರಿ ಬಾಬುವನ್ನು ತಂದು ಕೂಡಿಸುವದಿಲ್ಲ ಅಂತ ವಿವರಿಸಲು ಮೇಲಿನ ಉದಾಹರಣೆಗಳನ್ನು ಕೊಟ್ಟೆ. ಮೊನ್ನೆ ತೀರಿಹೋದ ಮೊಸ್ಸಾದಿನ ಮಾಜಿ ಡೈರೆಕ್ಟರ್ ಮೀರ್ ಡಾಗನ್ ಇದೇ ಮಾದರಿಯ ನಾಯಕರು. ಅವರ ಬಗ್ಗೆ ಹೆಚ್ಚಿನ ಮಾಹಿತಿ ಹೊರಗೆ ಬಂದಿಲ್ಲ. ಇಸ್ರೇಲ್ ಹಾಗೆಲ್ಲ ಮಾಹಿತಿ ಕೊಡುವದೇ ಇಲ್ಲ. ಎಷ್ಟೋ ದಶಕಗಳ ನಂತರ ಯಾರೋ ಲೇಖಕರು ಹೇಗೋ ಮಾಡಿ ಒಂದಿಷ್ಟು ಮಾಹಿತಿ ಹೊರತೆಗೆಯುತ್ತಾರೆ. ಆಗ ತಿಳಿಯುತ್ತವೆ ಕೆಲವು ಖತರ್ನಾಕ್ ಮಾಹಿತಿ. ಇನ್ನು ಇಪ್ಪತ್ತು ಮೂವತ್ತು ವರ್ಷಗಳ ಮೇಲೆ ಮೀರ್ ಡಾಗನ್ ಅವರು ಖುದ್ದಾಗಿ on the spot ನೇತೃತ್ವ ವಹಿಸಿದ್ದ ಕಾರ್ಯಾಚರಣೆಗಳು, ಅವುಗಳಲ್ಲಿ ಇವರ ಪಾತ್ರ, ಇತ್ಯಾದಿಗಳ ಮೇಲೆ ಪುಸ್ತಕಗಳು, ಮಾಹಿತಿಗಳು ಹೊರಬಂದರೆ ಏನೂ ವಿಶೇಷವಿಲ್ಲ.

೨೦೦೨ ರಲ್ಲಿ ಮೊಸ್ಸಾದಿನ ಡೈರೆಕ್ಟರ್ ಅಂತ ನೇಮಕವಾದವರು ಮೀರ್ ಡಾಗನ್. ಆಗ ಇರಾಕಿನಲ್ಲಿ, ಅಫಘಾನಿಸ್ತಾನದಲ್ಲಿ ಅಮೇರಿಕಾ ಯುದ್ಧ ಮಾಡುತ್ತಿತ್ತು. ಇರಾಕ್ ಬಗ್ಗೆ ಇಸ್ರೇಲಿಗೆ ಬರೋಬ್ಬರಿ ಮಾಹಿತಿ ಇತ್ತು. ಯಾಕೆಂದರೆ ಅದು ಇಸ್ರೇಲಿನ ಪಕ್ಕದ ದೇಶ ಮತ್ತು ಬದ್ಧ ವೈರಿ. ಸದ್ದಾಮ್ ಹುಸೇನ್ ಅಂತೂ ಇಸ್ರೇಲಿನ ಹುಟ್ಟಡಗಿಸಿಯೇ ತೀರುತ್ತೇನೆ ಅನ್ನುತ್ತಲೇ ಸತ್ತ. ಇರಾಕಿನಲ್ಲಿ ಬರೋಬ್ಬರಿ ಬೇಹುಗಾರಿಕೆ ಮಾಡಿಕೊಟ್ಟಿದ್ದು ಮೊಸ್ಸಾದ್. ಅವೆಲ್ಲದರ overall in-charge ಇದೇ ಮೀರ್ ಡಾಗನ್. 'ಹರಿವ ಗಂಗೆಯಲ್ಲಿ ಮಿಂದವರೇ ಜಾಣರು,' ಎಂಬಂತೆ ಅಮೇರಿಕಾ ಸದ್ದಾಮ್ ಹುಸೇನನ ಹಿಂದೆ ಹೋದರೆ ಈ ಅವಕಾಶವನ್ನು ಬರೋಬ್ಬರಿ ಉಪಯೋಗಿಸಿಕೊಂಡ ಇಸ್ರೇಲ್ systematic ಆಗಿ ಇರಾಕಿನ ಬುದ್ಧಿವಂತರನ್ನು, ಮಿಸೈಲ್ ತಂತ್ರಜ್ಞಾನದ ಪರಿಣಿತರನ್ನು, ವಿಜ್ಞಾನಿಗಳನ್ನು ಕೊಂದುಹಾಕಿತು. ಮುಂದೊಂದು ದಿವಸ ಇಸ್ರೇಲ್ ವಿರುದ್ಧ ಕೆಲಸ ಮಾಡದಿರಲಿ ಅನ್ನುವ ದೂರಾಲೋಚನೆ. ಎಲ್ಲಿಯ ಮಟ್ಟಿಗೆ ಅಂದರೆ ಇನ್ನು ಐವತ್ತು ವರ್ಷಗಳ ಕಾಲ ಇರಾಕಿನಲ್ಲಿ ಯಾವದೇ ತರಹದ ದೊಡ್ಡ ಪ್ರಮಾಣದ ಮಿಸೈಲ್, ಪರಮಾಣು ತಂತ್ರಜ್ಞಾನ ಇತ್ಯಾದಿ ತಯಾರಾಗುವದೇ ಇಲ್ಲ. ಎರಡು ಮೂರು ತಲೆಮಾರಿನ ವಿಜ್ಞಾನಿಗಳ ಸಂಕುಲವನ್ನೇ ಇಸ್ರೇಲಿನ ಮೊಸ್ಸಾದ್ ಮೀರ್ ಡಾಗನ್ ಅವರ ನೇತೃತ್ವದಲ್ಲಿ ನಿರ್ನಾಮ ಮಾಡಿಹಾಕಿತು. ದಮ್ಮು ಅಂದರೆ ಅದು. ದೂರದೃಷ್ಟಿ ಅಂದರೆ ಅದು. ಉರಿವ ಮನೆಯಲ್ಲಿ ಗಳ ಹಿರಿದು ತಮ್ಮ ಬೀಡಿ ಹಚ್ಚಿಕೊಳ್ಳುವದು ಅಂದರೆ ಅದು. ಇಸ್ರೇಲಿನ ಭದ್ರತೆಯ ಮಾತು ಬಂತು ಅಂದರೆ ಅವರಿಗೆ ಎಲ್ಲ ಓಕೆ. ಹೇಗೂ ಅಮೇರಿಕಾ ಇರಾಕಿನಲ್ಲಿ ಅಬ್ಬರಿಸುತ್ತಿತ್ತು. ಒಂದಿಷ್ಟು ಬೆಂಕಿ ಹಚ್ಚಿತ್ತು. ಈಗಲ್ಲದೆ ಮತ್ತೆ ಯಾವಾಗ ಮೈ ಕಾಸಿಕೊಳ್ಳೋಣ ಅಂತ ಇಸ್ರೇಲಿಗಳೂ ತಮ್ಮ ಮೈ ಬಿಸಿಮಾಡಿಕೊಂಡು, ಬೇಕಾದ ಫಾಯಿದೆ ಮಾಡಿಕೊಂಡರು. ಇದಕ್ಕೆಲ್ಲ ಒಂದು ದೊಡ್ಡ ಪ್ರಮಾಣದ vision, overall strategy, orchestration ಕೊಟ್ಟು, ಇತರೆ ನಾಯಕತ್ವದ ಗುರುತರ ಜವಾಬ್ದಾರಿ ನಿಭಾಯಿಸಿದವರು ಇದೇ ಮೀರ್ ಡಾಗನ್. ಇಸ್ರೇಲಿ ಸೈನ್ಯದಲ್ಲಿ paratrooper commando ಆಗಿ ಸೇವೆ ಶುರು ಮಾಡಿದ್ದ ಮೀರ್ ಡಾಗನ್ ಮೇಜರ್ ಜನರಲ್ ಅಂತ ರಿಟೈರ್ ಆಗಿದ್ದರು. ಎಲ್ಲ ಯುದ್ಧಗಳಲ್ಲಿ ಭಾಗವಹಿಸಿದ್ದರು. ಸರಿಸುಮಾರು ಮೂವತ್ತು ವರ್ಷಗಳ ಖಡಕ್ ಅನುಭವವಿತ್ತು. ಅವೆಲ್ಲವನ್ನು ಮೊಸ್ಸಾದಿಗೆ ಧಾರೆಯರೆದಿದ್ದರು ಮೀರ್ ಡಾಗನ್.

ಇಮಾದ್ ಮುಗ್ನಿಯೇ

ಇಮಾದ್ ಮುಗ್ನಿಯೇ. ಜಾಸ್ತಿ ಜನ ಈ ಕಿರಾತಕನ ಹೆಸರು ಕೇಳಿರಲಿಕ್ಕಿಲ್ಲ. ಯಾಕೆಂದರೆ ಅವನು background operator. ತೆರೆಮರೆಯಲ್ಲಿದ್ದು ಇಸ್ರೇಲ್ ವಿರುದ್ಧ ಕಾರ್ಯಾಚರಣೆ ಮಾಡುತ್ತಿದ್ದ. ಹೆಝಬೊಲ್ಲಾ ಎಂಬ ಉಗ್ರಗಾಮಿ ಸಂಘಟನೆಯ ಹಿರಿಯ ನಾಯಕ. ಮಿಲಿಟರಿ ವಿಭಾಗದ ಮುಖ್ಯಸ್ಥ. ಒಂದು ಕಾಲದಲ್ಲಿ ಯಾಸಿರ್ ಅರಾಫತ್ ಅವರಿಗಾಗಿ ಕೆಲಸ ಮಾಡಿದ್ದ. ೧೯೮೩ ರಲ್ಲಿ ಅರಾಫತ್ ಅವರ ಅಂಡಿನ ಮೇಲೆ ಒದ್ದು, ಅವರನ್ನು ಮತ್ತು ಅವರ ಫತಾ ಬಣದ ಉಗ್ರಗಾಮಿಗಳನ್ನು ಲೆಬನಾನಿನ ಬಿರೂಟ್ ನಗರದಿಂದ ಓಡಿಸಿತ್ತು ಇಸ್ರೇಲ್. ಆಗ ಈ ಇಮಾದ್ ಮುಗ್ನಿಯೇ ಎಂಬ ಕಿರಾತಕ ಎಲ್ಲೋ ಸಿಂಕ್ ಆಗಿದ್ದ. ಮುಂದೆ ಪ್ರತ್ಯಕ್ಷನಾಗಿದ್ದು ಹೆಝಬೊಲ್ಲಾ ಎಂಬಾ ಶಿಯಾ ಉಗ್ರಗಾಮಿ ಸಂಘಟನೆಯ ದೊಡ್ಡ ತಲೆಯಾಗಿ. ಹೆಝಬೊಲ್ಲಾ ಹಿಂದೆ ಇರಾನ್ ನಿಂತಿತ್ತು. ಸಿರಿಯಾ ಸಪೋರ್ಟ್ ಮಾಡುತ್ತಿತ್ತು. ಲೆಬನಾನಿನ ರಾಜಧಾನಿ ಬಿರೂಟಿನಲ್ಲಿ ತಳಊರಿದ ಹೆಝಬೊಲ್ಲಾ ವಿಪರೀತವಾಗಿ ಬೆಳೆಯಿತು. ಇಡೀ ಲೆಬನಾನನ್ನೇ ನಿಯಂತ್ರಿಸತೊಡಗಿತು. ಇರಾನ್ ಮತ್ತು ಸಿರಿಯಾ ದೇಶಗಳು ಹೇಳಿಕೊಟ್ಟಂತೆ ಇಸ್ರೇಲ್ ಮೇಲೆ ದಾಳಿ ಮಾಡತೊಡಗಿತು. ಉಗ್ರಗಾಮಿಗಳು ಕಿರಿಕಿರಿ ಶುರು ಮಾಡಿದರು. ಮತ್ತೇ ಅವೇ ಕಿತಾಪತಿಗಳು. ವಿಮಾನ ಅಪಹರಣ, ವಿದೇಶಿಗಳ ಹತ್ಯೆ, ಗಡಿಯಲ್ಲಿರುತ್ತಿದ್ದ ಇಸ್ರೇಲಿ ಸೈನಿಕರನ್ನು ಮರಾಮೋಸದಿಂದ ಅಪಹರಿಸಿ ಚಿತ್ರಹಿಂಸೆ ಕೊಟ್ಟು ಕೊಲ್ಲುವದು, ಇತ್ಯಾದಿ. ಇಂತಹ ಎಲ್ಲ ಕೃತ್ಯಗಳ ಹಿಂದಿದ್ದವ ಪೈಶಾಚಿಕ ಮನೋಭಾವದ ಇದೇ ಇಮಾದ್ ಮುಗ್ನಿಯೇ.

ಈ ಇಮಾದ್ ಮುಗ್ನಿಯೇ ಎಲ್ಲಿರುತ್ತಾನೆ ಎಂಬುದೇ ಯಾರಿಗೂ ಗೊತ್ತಿರಲಿಲ್ಲ. ಲೆಬನಾನಿನ ಬಿರೂಟ್ ನಗರದ ಒಂದು ಭಾಗ ಪೂರ್ತಿ ಹೆಝಬೊಲ್ಲಾ ಕೈಯಲ್ಲಿತ್ತು. ಅಲ್ಲಿ ಅವರದ್ದೇ ಹುಕುಮ್ಮತ್. ಅಲ್ಲೆಲ್ಲೋ ಒಂದು ನೆಲಮಾಳಿಗೆಯಲ್ಲಿ ಈ ಇಮಾದ್ ಮುಗ್ನಿಯೇ ಇರುತ್ತಾನೆ ಅಂತ ಗೊತ್ತಿತ್ತೇ ವಿನಃ ಬಾಕಿ ಏನೂ ಮಾಹಿತಿ ಇರಲಿಲ್ಲ. ಮತ್ತೆ ಅವನ ಮೇಲೆ ಇರಾನ್ ಮತ್ತು ಸಿರಿಯಾ ದೇಶಗಳ ಛತ್ರಛಾಯೆ. ಆ ದೇಶಗಳ ಬೇಹುಗಾರಿಕೆ ಸಂಸ್ಥೆಗಳು ಅವನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದವು. ಅವರಿಗೆ ಅಷ್ಟು ಮುಖ್ಯ ಅವನು. ಅವಕಾಶ ಸಿಕ್ಕರೆ ಮೊಸ್ಸಾದಿನ ಹಂತಕರು ಇಮಾದ್ ಮುಗ್ನಿಯೇನನ್ನು ಉಡಾಯಿಸುತ್ತಾರೆ ಅಂತ ಅವರಿಗೂ ಗೊತ್ತಿತ್ತು. ಹಾಗಾಗಿಯೇ ಇಮಾದ್ ಮುಗ್ನಿಯೇಗೆ extra protection ಕೊಟ್ಟಿದ್ದವು.

ಈ ಇಮಾದ್ ಮುಗ್ನಿಯೇ ಮೇಲೆ ಕಣ್ಣಿಟ್ಟಿದ್ದ ಮತ್ತೊಂದು ದೇಶ ಅಮೇರಿಕಾ. ಬಹಳ ಹಿಂದೊಮ್ಮೆ ಅಮೇರಿಕಾದ ವಿಮಾನವೊಂದನ್ನು ಅಪಹರಿಸಿದ್ದ ಈ ಇಮಾದ್. ಒಂದು ಖಡಕ್ ಸಂದೇಶ ಮುಟ್ಟಿಸಲು ವಿಮಾನದಲ್ಲಿದ್ದ ಒಬ್ಬ ಅಮೇರಿಕನ್ ನಾಗರಿಕನನ್ನು ಕೊಂದಿದ್ದ ಬೇರೆ. ಬಿರೂಟ್ ನಗರದಲ್ಲಿ ೧೯೮೩ ರಲ್ಲಿ ಅಮೇರಿಕಾದ ಶಾಂತಿಪಡೆಗಳ ಮೇಲಾದ ದೊಡ್ಡ ಪ್ರಮಾಣದ ಬಾಂಬ್ ದಾಳಿಗಳ ಹಿಂದೆಯೂ ಇಮಾದ್ ಮುಗ್ನಿಯೇಯ ಕೈವಾಡವಿತ್ತು. ಸರಿಸುಮಾರು ಮುನ್ನೂರು ಅಮೇರಿಕನ್, ಐವತ್ತು ಫ್ರೆಂಚ್ ಸೈನಿಕರ ರಕ್ತ ಈ ದುಷ್ಟನ ಕೈಗೆ ಮೆತ್ತಿಕೊಂಡಿತ್ತು. ಅಮೇರಿಕಾದ ಬೇಹುಗಾರಿಕೆ ಸಂಸ್ಥೆ CIA ಕೈತೊಳೆದುಕೊಂಡು ಇವನ ಹಿಂದೆ ಬಿದ್ದಿತ್ತು. ಒಸಾಮಾ ಬಿನ್ ಲಾಡೆನ್ ಹಿಂದೆ ಹೇಗೆ ಬಿದ್ದಿದ್ದರೋ ಅದೇ ಮಾದರಿಯಲ್ಲಿ. ಅಮೇರಿಕಾದವರ ದೃಷ್ಟಿಯಲ್ಲಿ ಈ ಇಮಾದ್ ಮುಗ್ನಿಯೇ ಲಾಡೆನ್ ಗಿಂತ ಏನೂ ಕಮ್ಮಿ ಅಪಾಯಕಾರಿಯಾಗಿರಲಿಲ್ಲ.

ಹೀಗೆ ಮೊಸ್ಸಾದ್ ಮತ್ತು ಸಿಐಎ ಜಂಟಿಯಾಗಿ ಕಾರ್ಯಾಚರಣೆ ಮಾಡುತ್ತಿದ್ದವು. ತುಂಬಾ ಪರಿಶ್ರಮದ ನಂತರ ಇಮಾದ್ ಮುಗ್ನಿಯೇ ಬಗ್ಗೆ ಸ್ವಲ್ಪ ಸ್ವಲ್ಪವಾಗಿ ಮಾಹಿತಿ ಬರತೊಡಗಿತು. ಆಗಾಗ ಪಕ್ಕದ ಸಿರಿಯಾ ದೇಶಕ್ಕೆ ಹೋಗಿ ಬರುತ್ತಾನೆ ಅಂತ ಗೊತ್ತಾಗಿತ್ತು. ಅಷ್ಟು ಗೊತ್ತಾಗಿದ್ದೇ ಗೊತ್ತಾಗಿದ್ದು ಮೊಸ್ಸಾದ್ ಮತ್ತು ಸಿಐಎ ಸಿರಿಯಾ ದೇಶದಲ್ಲಿದ್ದ ತಮ್ಮ ಬೇಹುಗಾರಿಕೆ ಜಾಲವನ್ನು ಮತ್ತೂ ಬಲಪಡಿಸಿದವು. ಹೊಸ ಹೊಸ ರಹಸ್ಯ ಏಜೆಂಟಗಳ ನೇಮಕಾತಿಯಾಯಿತು. ಮೊಸ್ಸಾದಿನ ಬೇಹುಗಾರರು ಸಿರಿಯಾದ ರಾಜಧಾನಿ ಡಮಾಸ್ಕಸ್ ಗೆ ಹೋಗಿ ಝೇಂಡಾ ಹೊಡೆದರು. ಅತ್ಯಂತ ರಿಸ್ಕಿ ಕೆಲಸ ಅದು. ಶತ್ರು ದೇಶದಲ್ಲಿ ಹೋಗಿ ಕಾರ್ಯಾಚರಣೆ ಮಾಡುವದು ಅಂದರೆ ಕತ್ತಿಯ ಅಲಗಿನ ಮೇಲೆ ನಡೆದಂತೆ. ಮತ್ತೆ ಹಿಂದೆ ಸೆರೆ ಸಿಕ್ಕಿದ್ದ ಮೊಸ್ಸಾದಿನ ಬೇಹುಗಾರರನ್ನು ಸಿರಿಯಾ ಹಿಂಸಿಸಿ ಹಿಂಸಿಸಿ ಕೊಂದಿತ್ತು. ಪಬ್ಲಿಕ್ ನಲ್ಲಿ ಗಲ್ಲಿಗೆ ಹಾಕಿತ್ತು. ಹೀಗೆಲ್ಲ ಇರುವಾಗ ಅಪಾಯಕಾರಿ ಉಗ್ರವಾದಿ ಇಮಾದ್ ಮುಗ್ನಿಯೇ ವಿರುದ್ಧ ಸಿರಿಯಾದಲ್ಲಿ ಕಾರ್ಯಾಚರಣೆ ಮಾಡುವದೆಂದರೆ ಸಿಂಹದ ಗುಹೆಯನ್ನು ಹೊಕ್ಕು ಸಿಂಹ ಬರಲಿ ಅಂತ ಕಾದು ಕೂತಂತೆ!

ಹಲವಾರು ವರ್ಷಗಳ ಮೊಸ್ಸಾದ್, ಸಿಐಎ ತಂಡಗಳ ಪರಿಶ್ರಮ ಫಲ ಕೊಟ್ಟಿತ್ತು. ೨೦೦೮ ರ ಹೊತ್ತಿಗೆ ಇಮಾದ್ ಮುಗ್ನಿಯೇ, ಅವನು ಡಮಾಸ್ಕಸ್ ನಗರಕ್ಕೆ ಬಂದು ಹೋಗಿ ಮಾಡುವದು, ಅವನಿಗೆ ಅಲ್ಲಿದ್ದ ಪ್ರೇಯಸಿ ಎಲ್ಲದರ ಬಗ್ಗೆ ಬರೋಬ್ಬರಿ ಮಾಹಿತಿ ಸಿಕ್ಕಿತ್ತು. ಮೊಸ್ಸಾದಿನ ಹಂತಕರಿಗೆ ಬುಲಾವಾ ಹೋಯಿತು. 'ಮಿಕವನ್ನು ಹುಡುಕಿಕೊಟ್ಟಿದ್ದೇವೆ. ಬೇಟೆ ನಿಮಗೆ ಬಿಟ್ಟಿದ್ದು. ಒಟ್ಟಿನಲ್ಲಿ ಇಮಾದ್ ಮುಗ್ನಿಯೇ ಈ ಲೋಕ ಬಿಟ್ಟುಹೋಗಬೇಕು. ಅಷ್ಟೇ!' ಅಂದ ಶುದ್ಧ ಬೇಹುಗಾರರು ಪಕ್ಕಕ್ಕೆ ಸರಿದರು. ಮೊಸ್ಸಾದಿನ ಮತ್ತು ಸಿಐಎ ತಂಡಗಳ ನುರಿತ ಹಂತಕರು ಮುಂಚೂಣಿಗೆ ಬಂದರು. ಇಮಾದ್ ಮಿಯಾನನ್ನು ಮೇಲೆ ಕಳಿಸುವ ಪ್ಲಾನಿಂಗ್ ಶುರುವಾಯಿತು.

ಸಿಐಎ ಮತ್ತು ಮೊಸ್ಸಾದಿನ ರಹಸ್ಯ ಪ್ರಯೋಗಶಾಲೆಯಲ್ಲಿ ಅತಿ ಚಿಕ್ಕ ಸೈಜಿನ ಸ್ಪೋಟಕವನ್ನು ತಜ್ಞರು ತಯಾರಿಸಿದರು. ಮೊಸ್ಸಾದ್ ಅದನ್ನು ತನ್ನದೇ ರಹಸ್ಯ ರೀತಿಯಲ್ಲಿ ಡಮಾಸ್ಕಸ್ ನಗರಕ್ಕೆ ತಲುಪಿಸಿತು. ಮೊಸ್ಸಾದಿನ ಬೇಹುಗಾರರು ಅದು ಹೇಗೋ ಮಾಡಿ ಇಮಾದ್ ಮುಗ್ನಿಯೇ ಡಮಾಸ್ಕಸ್ ನಗರಕ್ಕೆ ಬಂದಾಗ ಸದಾ ಉಪಯೋಗಿಸ್ತುತ್ತಿದ್ದ Mitsubishi Pajero ವಾಹನವನ್ನು compromise ಮಾಡಿಬಿಟ್ಟಿದ್ದರು. ಒಂದು ವಾಹನ ಒಮ್ಮೆ compromise ಆಯಿತು ಅಂದರೆ ಸಾಕು. ಮುಗೀತು. ಉಳಿದಿದ್ದನ್ನು ಬಾಂಬ್ ಪರಿಣಿತರು ನೋಡಿಕೊಳ್ಳುತ್ತಾರೆ. ಮೊದಲೇ ತಯಾರುಮಾಡಿಟ್ಟುಕೊಂಡಿದ್ದ ಚಿಕ್ಕ ಶಕ್ತಿಶಾಲಿ ಸ್ಪೋಟಕವನ್ನು ಡ್ರೈವರ್ ಸೀಟಿನ headrest ನಲ್ಲಿ ಅತ್ಯಂತ ಕೌಶಲ್ಯದಿಂದ ಹುದುಗಿಸಿಟ್ಟರು ಮೊಸ್ಸಾದಿನ ಬಾಂಬ್ ತಂತ್ರಜ್ಞರು. ಇನ್ನು ಸರಿಯಾದ ಸಮಯಕ್ಕೆ ಕಾಯುವ ಕೆಲಸ.

ಕೆಲವು ದಿವಸಗಳ ನಂತರ ಮತ್ತೊಮ್ಮೆ ಡಮಾಸ್ಕಸ್ ನಗರಕ್ಕೆ ಬಂದ ಕಿರಾತಕ ಇಮಾದ್ ಮುಗ್ನಿಯೇ. ಸಿರಿಯಾದ ದೊಡ್ಡ ದೊಡ್ಡ ತಲೆಗಳ ಜೊತೆ ಮಾತುಕತೆ, ಮೇಜವಾನಿ ಎಲ್ಲ ಆಯಿತು. ಇಸ್ರೇಲ್ ವಿರುದ್ಧ ಮುಂದೆ ಮಾಡಬೇಕಾದ ಹೊಸ ಹೊಸ ವಿಧ್ವಂಸಕ ಕೃತ್ಯಗಳಿಗೆ ಬರೋಬ್ಬರಿ ಸುಪಾರಿ ತೆಗೆದುಕೊಂಡ. ಹೊಟ್ಟೆ ತುಂಬಾ ಊಟ ಮಾಡಿದ. ಹೊಟ್ಟೆ ತುಂಬಿದ ಮೇಲೆ ಹೊಟ್ಟೆ ಕೆಳಗಿನದರ ಬಗ್ಗೆ ಆಸಕ್ತಿ ಮೂಡಿತು. ಪ್ರೇಯಸಿ ನೆನಪಾದಳು. ಅದೇ Mitsubishi Pajero ವಾಹನವನ್ನು ತೆಗೆದುಕೊಂಡು ಹೋದ. ತಲೆ ಹಿಂದೆ ಬಾಂಬ್ ಕೂತಿರುವದು ಅವನಿಗೆ ಗೊತ್ತೇ ಇರಲಿಲ್ಲ. ಇಮಾದ್ ಮುಗ್ನಿಯೇನ ಪ್ರತಿಯೊಂದು ಚಲನವಲನಗಳನ್ನು ಡಮಾಸ್ಕಸ್ ನಗರಕ್ಕೆ ಬಂದಿಳಿದಿದ್ದ ಮೊಸ್ಸಾದ್ ಮತ್ತು ಸಿಐಎ ಜಂಟಿ ತಂಡ ಗಮನಿಸುತ್ತಿತ್ತು. ಅದರಲ್ಲಿ ಒಬ್ಬನ ಕೈಯಲ್ಲಿ ರಿಮೋಟ್ ಕಂಟ್ರೋಲ್. ಅದನ್ನು ಒತ್ತಿದರೆ ಮುಗಿಯಿತು. ಇಮಾದ್ ಮುಗ್ನಿಯೇ ಕೂತಿದ್ದ ವಾಹನ ಬ್ಲಾಸ್ಟ್ ಆಗಿಹೋಗುತ್ತಿತ್ತು.

೧೨ ಫೆಬ್ರವರಿ ೨೦೦೮. ಪ್ರೇಯಸಿ ಮನೆಗೆ ಹೋದ ಇಮಾದ್ ಮುಗ್ನಿಯೇ ಹೊಟ್ಟೆ ಕೆಳಗಿನ ಕೆಲಸ ಮುಗಿಸಿಬಂದ. ಕೊಂಚ ದೂರದಲ್ಲಿ ಕಾದಿದ್ದ ಮೊಸ್ಸಾದ್ ಮತ್ತು ಸಿಐಎ ಬೇಹುಗಾರರು ಎಲ್ಲ ಖಾತ್ರಿ ಮಾಡಿಕೊಂಡರು. ಇಮಾದ್ ಮುಗ್ನಿಯೇ ಡೋರ್ ತೆಗೆದು ವಾಹನ ಚಲಾಯಿಸಲು ಕೂತ. ಈ ಕಡೆ ರಿಮೋಟ್ ಕಂಟ್ರೋಲ್ ಹಿಡಿದವ ಸ್ವಿಚ್ ಒತ್ತಿಬಿಟ್ಟ. ದೊಡ್ಡ ಸ್ಪೋಟ. ಇಮಾದ್ ಮುಗ್ನಿಯೇ ಎಂಬ ಖತರ್ನಾಕ್ ಉಗ್ರಗಾಮಿ ಹರೋಹರ. ಅವನ ವಾಹನ, ಅವನು ಎಲ್ಲ ಆ ದೊಡ್ಡ ಸ್ಪೋಟದಲ್ಲಿ ಶಿವಾಯ ನಮಃ!

ಪೂರ್ತಿ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ಮೊಸ್ಸಾದಿನ ಮುಖ್ಯಸ್ಥ ಇದೇ ಮೀರ್ ಡಾಗನ್ ಅಮೇರಿಕಾಗೆ ಫೋನ್ ಮಾಡಿ ಸಿಐಎ ಮುಖ್ಯಸ್ಥನಿಗೆ ಕಾರ್ಯಾಚರಣೆ ಯಶಸ್ವಿಯಾಗಿದ್ದನ್ನು ನಿರ್ಭಾವುಕರಾಗಿ ತಿಳಿಸಿದ್ದರು. ಇಡೀ ವಿಶ್ವಕ್ಕೇ ಇದೊಂದು most sensational ಕಾರ್ಯಾಚರಣೆಯಾದರೂ ಪಕ್ಕಾ ವೃತ್ತಿಪರ ಬೇಹುಗಾರ ಮೀರ್ ಡಾಗನ್ ತರಹದವರಿಗೆ ಇದು just a part of the job. ಅವರು ತಮ್ಮ ಮುಂದಿದ್ದ ಪಟ್ಟಿಯಲ್ಲಿ ಇಮಾದ್ ಮುಗ್ನಿಯೇ ಎಂಬ ದಿವಂಗತನ ಹೆಸರನ್ನು ತೆಗೆದುಹಾಕಿ ಮುಂದಿನ ಮಿಕ ಯಾರು ಅಂತ ನೋಡಿದರು. ಮುಂದಿನ ಟಾರ್ಗೆಟ್ ಹಮಾಸ್ ಎಂಬ ಉಗ್ರಗಾಮಿ ಸಂಸ್ಥೆಯ ದೊಡ್ಡ ತಲೆ ಮಹಮೂದ್ ಅಲ್-ಮಾಭೂ. ಅವನ ಪಾಪದ ಕೊಡ ತುಂಬಿತ್ತು. ಮೀರ್ ಡಾಗನ್ ಅವರ ರೇಡಾರಿನಲ್ಲಿ ಬಂದುಬಿಟ್ಟ. ಆದರೆ ಎರಡು ವರ್ಷ ಆಯುಸ್ಸು ಬಾಕಿ ಇತ್ತು. ೨೦೧೦ ರ ವರೆಗೆ ಸಾಯಲಿಲ್ಲ. ಅಷ್ಟು ಸಮಯ ಬೇಕಾಗಿತ್ತು ಒಂದು ದೊಡ್ಡ ಪ್ರಮಾಣದ ರಹಸ್ಯ ಕಾರ್ಯಾಚರಣೆಯನ್ನು ಪ್ಲಾನ್ ಮಾಡಲು. ಮೀರ್ ಡಾಗನ್ ಒಂದು ನೀಲನಕ್ಷೆ ಹಾಕಿಕೊಟ್ಟರು. ಮೊಸ್ಸಾದಿನ ಇತರೆ ಬೇಹುಗಾರರು ಮಹಮೂದ್ ಅಲ್-ಮಾಭೂನ ಹತ್ಯೆಗೆ ಮುಹೂರ್ತ ಹುಡುಕತೊಡಗಿದರು. ಸ್ಕೆಚ್ ಹಾಕತೊಡಗಿದರು.


ಮಹಮೂದ್ ಅಲ್-ಮಾಭೂ

ಮಹಮೂದ್ ಅಲ್-ಮಾಭೂ - ಹಮಾಸ್ ಎಂಬ ಉಗ್ರಗಾಮಿ ಸಂಸ್ಥೆಯ ಹಿರಿ ತಲೆ. ಇಸ್ರೇಲ್ ವಿರುದ್ಧ ಮಾಡುವ ಕಾರ್ಯಾಚರಣೆಗಳಿಗೆ ಬೇಕಾಗುವ ಯುದ್ಧ ಸಾಮಗ್ರಿಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬರೋಬ್ಬರಿ ಚೌಕಾಶಿ ಮಾಡಿ ಖರೀದಿಸುವದೇ ಅವನ ಕೆಲಸ. He was a weapons procurement specialist.

ಹಮಾಸ್ ಎಂಬುದು ಇಸ್ರೇಲಿಗೆ ಮಗ್ಗುಲ ಮುಳ್ಳು. ಯಾಕೆಂದರೆ ಹಮಾಸ್ ಉಗ್ರರು ಎಲ್ಲೋ ದೂರದಲ್ಲಿ ಇರುವವರಲ್ಲ. ಇಸ್ರೇಲ್ ಪಕ್ಕದ ಪ್ಯಾಲೆಸ್ಟೈನ್ ದೇಶದ ಗಾಜಾ ಪಟ್ಟಿಯಲ್ಲಿ (Gaza strip) ಇರುವವರು. ಸಾಮಾನ್ಯ ಅರಬ್ ಜನರಂತೆಯೇ ಇರುವವರು. ಕೆಲಸಕ್ಕಾಗಿ ಇಸ್ರೇಲ್ ಒಳಗೂ ಬರುತ್ತಿದ್ದರು. ಗಾಜಾ ಪಟ್ಟಿಯ ಅದೆಷ್ಟೋ ಜನ ಬೆಳಿಗ್ಗೆ ಇಸ್ರೇಲಿಗೆ ಕೆಲಸಕ್ಕೆ ಬಂದು ಸಂಜೆ ಗಾಜಾ ಪಟ್ಟಿ ಸೇರಿಕೊಳ್ಳುತ್ತಿದ್ದರು. ಬೇರೆ ಬೇರೆ ದೇಶವಾದರೂ ಆ ತರಹದ ವ್ಯವಸ್ಥೆ ಇತ್ತು. ಒಮ್ಮೊಮ್ಮೆ ಇಂತವರಲ್ಲಿ ಹಮಾಸ್ ಉಗ್ರಗಾಮಿಗಳೂ ಇರುತ್ತಿದ್ದರು. ಗಡಿರಕ್ಷಣಾ ಪಡೆಗಳ ಕಣ್ಣು ತಪ್ಪಿಸಿ ಬಂದು, ಒಳಗೆ ನುಗ್ಗಿ, ಆತ್ಮಹತ್ಯಾ ಬಾಂಬಿಂಗ್ (suicide bombing) ಮಾಡಿಕೊಂಡು ಒಂದೇ ಏಟಿನಲ್ಲಿ ಹತ್ತಿಪ್ಪತ್ತು ಇಸ್ರೇಲಿಗಳನ್ನು ಕೊಂದುಬಿಡುತ್ತಿದ್ದರು. ಇಸ್ರೇಲಿಗೆ ದೊಡ್ಡ ತಲೆನೋವು.

ಈ ಗಾಜಾ ಪಟ್ಟಿಯಲ್ಲಿ ಕುಳಿತ ಈ ಹಮಾಸ್ ಉಗ್ರಗಾಮಿ ಮಂದಿಗೆ ಎಲ್ಲಿಂದ ಆಯುಧ ಬರುತ್ತವೆ? ಯಾರು ಕಳಿಸುತ್ತಾರೆ? ಅಂತೆಲ್ಲ ತನಿಖೆ ಮಾಡಲು ಹೋದಾಗ ಎದ್ದು ಕಂಡ ಹೆಸರು - ಮಹಮೂದ್ ಅಲ್-ಮಾಭೂ ಎಂಬ weapons procurement specialist. ಅವನಿಗೆ ಒಂದು ಠಿಕಾಣಿ ಇಲ್ಲ. ಇಡೀ ಮಧ್ಯಪ್ರಾಚ್ಯದ ತುಂಬಾ ತಿರುಗುತ್ತಲೇ ಇರುತ್ತಿದ್ದ. ಒಂದಿನ ಕಟಾರಿನ ದೋಹಾದಲ್ಲಿದ್ದರೆ ಮರುದಿನ ಬಹರೇನಿನ ಮನಾಮಾದಲ್ಲಿ ಯಾವದೋ ಡೀಲ್ ಕುದುರಿಸುತ್ತಿದ್ದ. ಅಲ್ಲಿಂದ ದುಬೈಗೆ ಬಂದು ಹವಾಲಾ ರೊಕ್ಕ ತೆಗೆದುಕೊಂಡು ಮತ್ತೆಲ್ಲೋ ಹೋಗಿಬಿಡುತ್ತಿದ್ದ. ಒಟ್ಟಿನಲ್ಲಿ ಗಾಜಾ ಪಟ್ಟಿಯ ಹಮಾಸ್ ಉಗ್ರರಿಗೆ ಮಹಮೂದ್ ಅಲ್-ಮಾಭೂ ಅಂದರೆ ಉಡುಗೊರೆ ಕಳಿಸಿಕೊಡುತ್ತಿದ್ದ ದೂರ ದೇಶದ ಅಂಕಲ್ ಇದ್ದ ಹಾಗೆ. ಅಷ್ಟೇ ಈ ಅಂಕಲ್ ಕಳಿಸುತ್ತಿದ್ದ ಉಡುಗೊರೆ ಇಸ್ರೇಲಿಗೆ ತೊಂದರೆ ತಂದಿಡುತ್ತಿತ್ತು. ಆಗಲೇ ಅವನ ಮರಣಶಾಸನಕ್ಕೆ ಒಂದು ಸಹಿ ಹಾಕಿತು ಇಸ್ರೇಲ್. ಸಹಿ ಹಾಕಿದ ಮರಣಶಾಸನದ ಪತ್ರ ಮೊಸ್ಸಾದಿನ ಡೈರೆಕ್ಟರ್ ಮೀರ್ ಡಾಗನ್ ಅವರ ಟೇಬಲ್ ಮೇಲೆ ಬಂದು ಬಿತ್ತು. ತಮ್ಮ ಖಾಸ್ ಜನರನ್ನು ಕರೆದು, ಒಂದು ತಂಡ ಮಾಡಿ, ಅವರಿಗೊಂದು ನೀಲನಕ್ಷೆ ಹಾಕಿಕೊಟ್ಟು, 'Take care of him' ಅಂತ ಒಂದೇ ಸಾಲಿನ ಆಜ್ಞೆ ಕೊಟ್ಟು ಎದ್ದು ಹೋಗಿದ್ದರು ಮೀರ್ ಡಾಗನ್. ಸಾವಿರ ಕೆಲಸ ಅವರಿಗೆ.

ಮೀರ್ ಡಾಗನ್ ಅವರಿಗೆ ಈ ಮಹಮೂದ್ ಅಲ್-ಮಾಭೂ ಮತ್ತೆ ನೆನಪಾಗಿದ್ದು ಯಾವಾಗ ಗೊತ್ತೇ? ದುಬೈನ ಪೋಲಿಸ್ ಕಮಿಷನರ್ ಲಬೋ ಲಬೋ ಅಂತ ಬಾಯಿಬಾಯಿ ಬಡಿದುಕೊಂಡು, ಟೀವಿ ಕ್ಯಾಮರಾಗಳ ಮುಂದೆ ನಿಂತು, 'ಅಯ್ಯೋ! ಎಲ್ಲರೂ ನೋಡಿ. ಇಸ್ರೇಲಿನ ಮೊಸ್ಸಾದ್ ನಮ್ಮ ದುಬೈಗೆ ಬಂದು ಹಮಾಸ್ ನಾಯಕ ಮಹಮೂದ್ ಅಲ್-ಮಾಭೂವಿನ ಹತ್ಯೆ ಮಾಡಿ ಎಸ್ಕೇಪ್ ಆಗಿದೆ. ಇದ್ದಕ್ಕಾಗಿ ನಾನು ಮೊಸ್ಸಾದಿನ ಡೈರೆಕ್ಟರ್ ಮೀರ್ ಡಾಗನ್ ಅವರನ್ನೇ ನೇರ ಹೊಣೆಗಾರರನ್ನಾಗಿ ಮಾಡುತ್ತೇನೆ. ಅವರನ್ನು ದುಬೈ ಕಾನೂನಿನ ಪ್ರಕಾರ ಬುಕ್ ಮಾಡುತ್ತೇನೆ,' ಅಂತ ಅಪದ್ಧ ಪ್ರಲಾಪ ಮಾಡಿದಾಗಲೇ ಮೀರ್ ಡಾಗನ್ ಅವರಿಗೆ ಮಹಮೂದ್ ಅಲ್-ಮಾಭೂ ನೆನಪಾದ. ಪೆಕಪೆಕಾ ಅಂತ ನಕ್ಕು ಟೀವಿ ಆಫ್ ಮಾಡಿದ್ದರು ಡಾಗನ್. ದುಬೈ ಪೋಲಿಸ್ ಕಮಿಷನರನ ಅಸಂಬದ್ಧ ಪ್ರಲಾಪ ನೋಡುತ್ತಾ ಕೂಡಲು ಅವರಿಗೆ ಬೇರೆ ಕೆಲಸವಿಲ್ಲವೇ?

ಎರಡು ವರ್ಷಗಳ ಹಿಂದೆ ಶುರುಮಾಡಿದ್ದ ಒಂದು ರಹಸ್ಯ ಕಾರ್ಯಾಚರಣೆ ಫಲ ಕೊಟ್ಟಿತ್ತು. ಮಹಮೂದ್ ಅಲ್-ಮಾಭೂವನ್ನು ಮೊಸ್ಸಾದಿನ ಹಂತಕರು ಜನನಿಬಿಡ ದುಬೈನ ಹೋಟೆಲ್ ಒಂದರಲ್ಲಿ ಮುಗಿಸಿದ್ದರು. ಅಷ್ಟೂ ವಿವರ CC ಟೀವಿಯಲ್ಲಿ ದಾಖಲಾಗಿತ್ತು. ಹಾಗಾಗುತ್ತದೆ ಅಂತ ಗೊತ್ತೇ ಇತ್ತು. ಆ ರಿಸ್ಕ್ ತೆಗೆದುಕೊಂಡೇ ಮಾಡಿದ್ದರು. ಅಷ್ಟೇ, ಮಹಮೂದ್ ಅಲ್-ಮಾಭೂವಿನ ಕೊಲೆಯಾಗಿದೆ ಅಂತ ದುಬೈನ ಪೋಲೀಸರಿಗೆ ಗೊತ್ತಾಗುವಷ್ಟರಲ್ಲಿ ಮೊಸ್ಸಾದಿನ ಹಂತಕರು ದುಬೈ ಬಿಟ್ಟು ಹಾರಿದ್ದರು.

೧೯ ಜನೇವರಿ  ೨೦೧೦. ಅಂದು ಮಹಮೂದ್ ಅಲ್-ಮಾಭೂ ಸಿರಿಯಾದ ಡಮಾಸ್ಕಸ್ ನಗರದಿಂದ ದುಬೈಗೆ ಆಗಮಿಸಿದ. ಅವನಿಗೆ ಗೊತ್ತಿಲ್ಲದಂತೆಯೇ ಫಾಲೋ ಮಾಡಿತ್ತು ಮೊಸ್ಸಾದಿನ ಹಂತಕರ ತಂಡ. ಬೇರೆ ಬೇರೆ ದೇಶಗಳ ನಕಲಿ ಪಾಸ್ಪೋರ್ಟ್ ಬಳಸಿ ದುಬೈ ಶಹರವನ್ನು ಪ್ರವಾಸಿಗರಂತೆ ಪ್ರವೇಶಿಸಿದ್ದ ಮೊಸ್ಸಾದಿನ ಹಂತಕರು ಎಲ್ಲ ಕಡೆ ಕಣ್ಣಿಟ್ಟಿದ್ದರು. ದುಬೈ ವಿಮಾನ ನಿಲ್ದಾಣದಲ್ಲಿ ಏನು ಲ್ಯಾಂಡ್ ಆದನೋ ಆದ. ನಂತರ ಮಹಮೂದ್ ಅಲ್-ಮಾಭೂವಿನ ಮೇಲಿಟ್ಟ ಹದ್ದಿನ ಕಣ್ಣನ್ನು ಅವರು ತೆಗೆಯಲಿಲ್ಲ. ಮಹಮೂದ್ ಅಲ್-ಮಾಭೂವಿನ ಕಾರ್ಯಕ್ರಮದ ಪ್ರತಿಯೊಂದು ವಿವರಗಳನ್ನೂ ಹೆಕ್ಕಿ ತೆಗೆದಿದ್ದರು. ಎಲ್ಲಿಯ ವರೆಗೆ ಅಂದರೆ ಅವನು ಯಾವ ಹೋಟೆಲ್ಲಿಗೆ ಹೋಗುತ್ತಾನೆ. ಅಲ್ಲಿ ಅವನಿಗೆ ಯಾವ ಕೋಣೆಯನ್ನು ಕೊಡಲಾಗುತ್ತದೆ ಅನ್ನುವ ವಿವರಗಳಷ್ಟೇ ಅಲ್ಲ. ಮತ್ತೊಂದು ಖತರ್ನಾಕ್ ಕೆಲಸ ಮೊಸ್ಸಾದ್ ಮಾಡಿತ್ತು. ಮಹಮೂದ್ ಅಲ್-ಮಾಭೂವಿನ ಕೋಣೆಗೊಂದು ಡೂಪ್ಲಿಕೇಟ್ ಕೀ ಸಹಿತ ತಯಾರಿತ್ತು. ಬಕ್ರಾ ಬೋನಿಗೆ ಬರುತ್ತಿತ್ತು. ಬೋನಿನ ಕೀ ಮೊಸ್ಸಾದಿನ ಬೇಹುಗಾರರ ಕೀ ಚೈನಿನಲ್ಲಿ ತಿರುಗುತ್ತಿತ್ತು.

ಮಹಮೂದ್ ಅಲ್-ಮಾಭೂ ಸೀದಾ ಹೋಟೆಲ್ಲಿಗೆ ಬಂದ. check-in  ಮಾಡಿದ. ಮತ್ತೆ ಎದ್ದು ಬರಲಿಲ್ಲ. ಅವನ ಎದುರಿನ ಕೋಣೆಯಲ್ಲೇ ಇದ್ದರು ಮೊಸ್ಸಾದಿನ ಕಿಡೋನ್ ಎಂಬ ವಿಭಾಗದ ನುರಿತ ಹಂತಕರು. ಹತ್ಯೆಯ ಕೊನೆಯ ಭಾಗವನ್ನು ಸಂಬಾಳಿಸುವದು ಕಿಡೋನ್ ವಿಭಾಗದ ಕೆಲಸ. ನುರಿತ ಹಂತಕರು. actual ಹತ್ಯೆ ಮಾಡುವವರು, ಹತ್ಯಾಸ್ಥಳದಲ್ಲಿ ಯಾವದೇ ಕುರುಹುಗಳನ್ನು ಬಿಡದೇ ಕ್ಲೀನ್ ಮಾಡುವವರು ಎಲ್ಲ ಕಿಡೋನ್ ವಿಭಾಗದವರು. ಕಿಡೋನ್ ಅಂದರೆ ಹೀಬ್ರೂ ಭಾಷೆಯಲ್ಲಿ bayonet ಅಂತರ್ಥ.

ಯಾವದೋ ಮಾಯೆಯಲ್ಲಿ ಮಹಮೂದ್ ಅಲ್-ಮಾಭೂನ ಕೋಣೆ ಪ್ರವೇಶಿಸಿದ ಮೊಸ್ಸಾದಿನ ಕಿಡೋನ್ ಹಂತಕರ ತಂಡ ಅವನನ್ನು ಕೊಂದು ಮಿಂಚಿನ ವೇಗದಲ್ಲಿ ಹೋಟೇಲಿನಿಂದ ಮಾತ್ರವಲ್ಲ ದುಬೈನಿಂದಲೇ ಪರಾರಿಯಾಗಿತ್ತು. Another perfect assassination pulled off. Flawless execution. ಮೀರ್ ಡಾಗನ್ ಅವರ ಕಿರೀಟಕ್ಕೆ ಮತ್ತೊಂದು ಗರಿ.

ಮೀರ್ ಡಾಗನ್ ಅವರ ಉಸ್ತುವಾರಿಯಲ್ಲಾದ ಮತ್ತೊಂದು ಖತರ್ನಾಕ್ ಕಾರ್ಯಾಚರಣೆ ಅಂದರೆ ಇರಾನಿನ nuclear reactor ಗಳನ್ನು ಪೂರ್ತಿಯಾಗಿ ಕೆಡಿಸಿಬಿಟ್ಟಿದ್ದು. ಇದಕ್ಕಾಗಿ ಡಾಗನ್ ತಮ್ಮ ಜನರನ್ನು ಕಳಿಸಲಿಲ್ಲ. ಕಂಪ್ಯೂಟರ್ ಮೂಲಕ ಈ ಕಾರ್ಯಾಚರಣೆ ಮಾಡಿಸಿಬಿಟ್ಟರು. ಅದೇ ಅವರ ಮೇಧಾವಿತನ. ಎಲ್ಲ ಕಡೆ ದಂಡಂ ದಶಗುಣಂ ಅನ್ನುವ ಹುಂಬರ ಪೈಕಿ ಅಲ್ಲ ಅವರು.

ಮೊದಲು ೧೯೮೦ ರ ದಶಕದಲ್ಲಿ ಇರಾಕ್ ಆಟಂ ಬಾಂಬ್ ಮಾಡಲು ಹೊರಟಿತ್ತು. ಘಾಬರಿಬಿದ್ದ ಇಸ್ರೇಲ್ ಒಂದು dare devil ವೈಮಾನಿಕ ಕಾರ್ಯಾಚರಣೆ ಮಾಡಿ, ಇರಾಕಿನ ಅಣುಸ್ಥಾವರದ ಮೇಲೆ ಬಾಂಬ್ ದಾಳಿ ಮಾಡಿ, ಸದ್ದಾಮ್ ಹುಸೇನನ ಆಟಂ ಬಾಂಬ್ ಆಸೆಗೆ ತಣ್ಣೀರೆರೆಚಿ ಬಂದಿತ್ತು. ಆಮೇಲೆ ಸಿರಿಯಾದ ಸರ್ವಾಧಿಕಾರಿ ಅಸ್ಸಾದ್ ಆಟಂ ಬಾಂಬ್ ಮಾಡಲು ಹೊರಟ. ಅವನ ಅಣುಸ್ಥಾವರಕ್ಕೂ ಅದೇ ಗತಿ ಕಾಣಿಸಿತು ಇಸ್ರೇಲ್. ಆದರೆ ಇರಾನಿನ ಸಮಸ್ಯೆ ಸ್ವಲ್ಪ ಬೇರೆ ತರಹದ್ದು.

ಇರಾನ್ ಆಟಂ ಬಾಂಬ್ ಮಾಡುತ್ತೇನೆ ಅಂತ ಹೊರಡಲಿಲ್ಲ. ಶಾಂತಿಗಾಗಿ ಪರಮಾಣು ಶಕ್ತಿ ಅಂತ ಭೋಂಗು ಬಿಟ್ಟುಕೊಂಡು ಹೊರಟಿತ್ತು. ಹಾಗಂತ ಅಂತರರಾಷ್ಟ್ರೀಯ ಸಮುದಾಯವನ್ನು ನಂಬಿಸಿತ್ತು ಕೂಡ. ಹೀಗಿರುವಾಗ ವೈಮಾನಿಕ ದಾಳಿ ಮಾಡಿ ಇರಾನಿನ ಅಣುಸ್ಥಾವರವನ್ನು ಢಂ ಅನ್ನಿಸುವದು ಅಷ್ಟು ಸುಲಭದ ಮಾತಾಗಿರಲಿಲ್ಲ. ಮತ್ತೆ ಇರಾನ್ ಶಕ್ತಿಶಾಲಿ ದೇಶ. ಪ್ರತಿಭಾವಂತರ ದೇಶ.

ಅಂದಿನ ಇಸ್ರೇಲಿನ ಪ್ರಧಾನಿ ಮೀರ್ ಡಾಗನ್ ಅವರನ್ನು ಕರೆದು, 'ಸ್ವಲ್ಪ ಇರಾನನ್ನು ಗಮನಿಸಿಕೊಳ್ಳಿ,' ಅಂತ ಸೂಕ್ಷ್ಮವಾಗಿ ಹೇಳಿದ್ದು ಸಾಕಾಯಿತು ಮೀರ್ ಡಾಗನ್ ಅವರಿಗೆ. ಖತರ್ನಾಕ್ ಸ್ಕೀಮ್ ಹಾಕಲು ಕುಳಿತರು. ಇದು ದೇಹಶಕ್ತಿಯಿಂದಲ್ಲ ಮೆದುಳಿನ ಶಕ್ತಿಯಿಂದಲೇ ನಿವಾರಿಸಬೇಕಾದ ತೊಂದರೆ ಅಂತ ಅವರಿಗೆ ಗೊತ್ತಿತ್ತು. ಮೀರ್ ಡಾಗನ್ ನಂತರ ಮಾಡಿದ ಕೆಲಸ ಅಂದರೆ ಒಂದಿಷ್ಟು ಫೈಲುಗಳನ್ನು ಜೋಡಿಸಿಕೊಂಡು ಅಮೇರಿಕಾಗೆ ವಿಮಾನ ಹತ್ತಿಬಿಟ್ಟರು. ರಾಜಧಾನಿ ವಾಷಿಂಗ್ಟನ್ ತಲುಪಿದವರೇ ಸಿಐಎ ಮುಖ್ಯಸ್ಥರ ಜೊತೆ ದೊಡ್ಡ ಮಟ್ಟದ ಸಮಾಲೋಚನೆಯಲ್ಲಿ ಕುಳಿತರು. ಇರಾನನ್ನು ಹಣಿಯುವ ತಮ್ಮ ಯೋಜನೆಯ ರೂಪುರೇಷೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಡಾಗನ್ ಅವರ ಖತರ್ನಾಕ್ ಪ್ಲಾನ್ ಕೇಳಿದ ಸಿಐಎ ಸಮುದಾಯದಲ್ಲಿ ಸಿಕ್ಕಾಪಟ್ಟೆ excitement. ಮತ್ತೊಮ್ಮೆ ಮೊಸ್ಸಾದ್ ಮತ್ತು ಸಿಐಎ ಜಂಟಿ ಕಾರ್ಯಾಚರಣೆಗೆ ಸಿದ್ಧವಾದವು.

ನುರಿತ ಕಂಪ್ಯೂಟರ್ ತಂತ್ರಜ್ಞರ ತಂಡ ಒಂದು ಟೈಪಿನ ಕಂಪ್ಯೂಟರ್ ವೈರಸ್ ತಯಾರಿಸಲು ಕುಳಿತಿತು. ಅವರೆಲ್ಲ ಸಾಮಾನ್ಯ ಸಾಫ್ಟ್ವೇರ್ ಇಂಜಿನಿಯರ್ ಜನರಲ್ಲ. hacker ಟೈಪಿನ ಜನ. ಕಂಪ್ಯೂಟರ್ ವೈರಸ್ ತಯಾರಿಸಬಲ್ಲರು. ತಯಾರಿಸಿದ ವೈರಸ್ಸುಗಳನ್ನು ಕಂಪ್ಯೂಟರ್ ಜಾಲಗಳಲ್ಲಿ ಸೇರಿಸಿ, compromise ಆದ ಕಂಪ್ಯೂಟರಗಳನ್ನು ತಮಗೆ ಬೇಕಾದಂತೆ ಬಳಸಿಕೊಳ್ಳಬಲ್ಲರು. ಇರಾನಿನ ಅಣುಸ್ಥಾವರದ ಕಂಪ್ಯೂಟರ್ ಜಾಲದಲ್ಲಿ ಹೊಕ್ಕು, ಅಲ್ಲಿನ control system software ಮೇಲೆ ಅಧಿಪತ್ಯ ಸ್ಥಾಪಿಸಿ, ಅಲ್ಲಿನ ಯಂತ್ರಗಳಿಗೆ ಒಂದಕ್ಕೆರೆಡು ಸೂಚನೆಗಳನ್ನು ಕೊಟ್ಟು, ಆ ಯಂತ್ರಗಳು ಹದಗೆಟ್ಟುಹೋಗುವಂತೆ ಮಾಡುವ ವೈರಸ್ಸಿನ ನಿರ್ಮಾಣದಲ್ಲಿ ಅಂತಹ ನುರಿತ ಕಂಪ್ಯೂಟರ್ ತಂತ್ರಜ್ಞರು ತೊಡಗಿಸಿಕೊಂಡರು.

ಹೀಗೆ ತಯಾರಿಸಿದ stuxnet ಎಂಬ ಕಂಪ್ಯೂಟರ್ ವೈರಸ್ಸನ್ನು ಇಂಟರ್ನೆಟ್ ಮೂಲಕ ಇರಾನಿನ ಕಂಪ್ಯೂಟರ್ ಜಾಲದಲ್ಲಿ ತಳ್ಳಿದರು. ನಂತರ step by step ಆ stuxnet ವೈರಸ್ಸನ್ನು ಇರಾನಿನ ಪರಮಾಣು ಸ್ಥಾವರದ ಕಂಪ್ಯೂಟರ್ ಜಾಲದಲ್ಲಿ, ಎಲ್ಲ ರಕ್ಷಣೆಗಳನ್ನೂ ಭೇದಿಸಿ, ಒಳ ನುಗ್ಗಿಸುವಲ್ಲಿ ಇಸ್ರೇಲಿ ಮತ್ತು ಅಮೇರಿಕನ್ ತಂತ್ರಜ್ಞರು ಯಶಸ್ವಿಯಾದರು. ಮೊಸ್ಸಾದ್ ಮತ್ತು ಸಿಐಎ ಸಂಸ್ಥೆಗಳ ಹಿರಿ ತಲೆಗಳು go ahead ಅಂತ ಅನುಮತಿ ಕೊಟ್ಟವು. ನಂತರ ಆಗಿದ್ದು ಇರಾನಿನ ಅಣುಸ್ಥಾವರದ ಅತ್ಯಂತ ಮುಖ್ಯ ಯಂತ್ರಗಳಾದ centrifuge ಗಳ ಮಾರಣಹೋಮ. centrifuge ಯಂತ್ರಗಳನ್ನು ನಿಯಂತ್ರಿಸುವ control system software ಒಳಹೊಕ್ಕಿದ್ದ stuxnet ವೈರಸ್ ಅದರ ಸಂಪೂರ್ಣ ನಿಯಂತ್ರಣವನ್ನು ದೂರದಲ್ಲಿ ಕುಳಿತಿದ್ದ ಇಸ್ರೇಲಿ ಮತ್ತು ಅಮೇರಿಕನ್ ತಂತ್ರಜ್ಞರ ಕೈಗೆ ಅರ್ಪಿಸಿಬಿಟ್ಟಿತು. ನಂತರ ಇಸ್ರೇಲಿ ಮತ್ತು ಅಮೇರಿಕನ್ ತಂತ್ರಜ್ಞರು ಯದ್ವಾತದ್ವಾ ಕಮಾಂಡ್ ಕೊಟ್ಟ ಅಬ್ಬರಕ್ಕೆ ಎಲ್ಲ centrifuge ಯಂತ್ರಗಳು ಮೈ ಮೇಲೆ ದೆವ್ವ ಬಂದವರಂತೆ ತಿರುಗಿ ಪೂರ್ತಿ ಎಕ್ಕುಟ್ಟಿಹೋದವು. ಹುಚ್ಚಾಪಟ್ಟೆ ವರ್ತಿಸುತ್ತಿದ್ದ ಅವನ್ನು ನಿಯಂತ್ರಿಸಲು ಇರಾನಿನ ತಂತ್ರಜ್ಞರು ಬೇರೆ ಕಮಾಂಡ್ ಕೊಟ್ಟರೆ ಅವು ಮಾತು ಕೇಳಲೇ ಇಲ್ಲ. ಯಾಕೆಂದರೆ ಅವುಗಳ ಜುಟ್ಟು ಬೇರೆಯವರ ಕೈಯಲ್ಲಿತ್ತು. ಇರಾನಿನ ಪರಮಾಣು ಪ್ರೋಗ್ರಾಮ್ at least ಹತ್ತು ವರ್ಷ ಹಿಂದಕ್ಕೆ ಹೋಯಿತು. ಈ remote attack ನಿಂದ ಅವರು ಸುಧಾರಿಸಿಕೊಳ್ಳಲಿಕ್ಕೆ ಬಹಳ ವರ್ಷ ಬೇಕು ಬಿಡಿ. ಆ ಮಟ್ಟಿಗೆ ಇಸ್ರೇಲ್ ಸೇಫ್.

ಹೀಗೆ ಕಂಪ್ಯೂಟರ್ ಮೂಲಕ ಕಾರ್ಯಾಚರಣೆ ಮಾಡಲಾಯಿತು ಅಂದ ಮಾತ್ರಕ್ಕೆ ಮೊಸ್ಸಾದಿನ ಹಂತಕರಿಗೆ ಕೆಲಸ ಏನೂ ಕಮ್ಮಿಯಿರಲಿಲ್ಲ. ಅವರಿಗೆ ಖಡಕ್ ಆಜ್ಞೆ. ಇರಾನಿನ ಪರಮಾಣು ವಿಜ್ಞಾನಿಗಳು ಎಲ್ಲೇ ಕಂಡುಬಂದರೂ ದೂಸರಾ ವಿಚಾರ ಮಾಡದೇ ಕೊಂದುಬಿಡಿ. ಸುಮಾರು ಜನ ಇರಾನಿನ ವಿಜ್ಞಾನಿಗಳನ್ನು ಆಯ್ಕೆ ಮಾಡಿ ಮಾಡಿ ಕೊಂದರು ಮೊಸ್ಸಾದಿನ ಹಂತಕರು. ಇರಾನ್ ಉರಿದುಕೊಂಡಿತು. ಇಸ್ರೇಲಿನ ಜಾಗತಿಕ ಆಸಕ್ತಿಗಳ ಮೇಲೆ ಅಲ್ಲಲ್ಲಿ ದಾಳಿಯಾಯಿತು. ದೊಡ್ಡ ನಷ್ಟವೇನೂ ಆಗಲಿಲ್ಲ. ಇಸ್ರೇಲಿಗಳಿಗೆ ಗೊತ್ತು ತಮ್ಮನ್ನು ಹೇಗೆ ಕಾಪಾಡಿಕೊಳ್ಳಬೇಕು ಅಂತ. ದೆಹಲಿಯಲ್ಲಿ ಇಸ್ರೇಲಿ ರಾಯಭಾರಿಯೊಬ್ಬರ ಕಾರಿಗೆ ಬಾಂಬ್ ಅಂಟಿಸಿದ್ದರು. ಸ್ಪೋಟವಾದರೂ ಪ್ರಾಣಹಾನಿಯಾಗಲಿಲ್ಲ. ಇರಾನ್ ಅದನ್ನು ಮಾಡಿಸಿತ್ತು ಅಂತ ಬೇಹುಗಾರಿಕೆ ವಲಯದಲ್ಲಿ ಚರ್ಚೆಯಾಗಿತ್ತು.

ಹೀಗೆ ಅನೇಕಾನೇಕ ರೋಚಕ ಕಾರ್ಯಾಚರಣೆಗಳನ್ನು ರೂಪಿಸಿ, ಅವುಗಳ ಉಸ್ತುವಾರಿ ವಹಿಸಿಕೊಂಡು, ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು, ಮುಂಚೂಣಿಯಲ್ಲಿದ್ದು ಅವುಗಳನ್ನು ಮುನ್ನೆಡಿಸಿದ ಧೀಮಂತ ನಾಯಕ ಮೀರ್ ಡಾಗನ್, ಮೊಸ್ಸಾದಿನ ಮಾಜಿ ಡೈರೆಕ್ಟರ್.

ರಿಟೈರ್ ಆದ ನಂತರ ಡಾಗನ್ ಅವರಿಗೆ ದುರದೃಷ್ಟವಶಾತ್ ಕ್ಯಾನ್ಸರ್ ಬಂತು. ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿದ್ದರು. ಆದರೆ ಸಫಲರಾಗಲಿಲ್ಲ. ತಮ್ಮ ಎಪ್ಪತ್ತೊಂದನೆಯ (೭೧) ವಯಸ್ಸಿನಲ್ಲಿ ಇದೇ ಮಾರ್ಚ್ ೧೭ ರಂದು ಧೀರ ಮೀರ್ ಡಾಗನ್ ನಿಧನರಾಗಿದ್ದಾರೆ.

ತಮ್ಮ ಧೀರತನದಿಂದ, ಧೀಮಂತ ವ್ಯಕ್ತಿತ್ವದಿಂದ, extraordinary leadership ನಿಂದ ತುಂಬಾ ಇಷ್ಟವಾಗುತ್ತಾರೆ ಮೀರ್ ಡಾಗನ್. ಅವರ ಸಮಯದಲ್ಲಿ ನಡೆದ ರಹಸ್ಯ ಕಾರ್ಯಾಚರಣೆಗಳ ರೋಚಕ ವಿವರಗಳು ಅವರ ಬಗೆಗೊಂದು ಅನನ್ಯ ಗೌರವವನ್ನು ಮೂಡಿಸುತ್ತವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.

Rest in peace, Mr. Meir Dagan. Not only Israel but the whole world is grateful to you for making it a little more safe.

5 comments:

sunaath said...

Salutes to you Meir Dagan, Sir. I wish India too had one like you.
ಮಹೇಶರೆ, ಅನೇಕ ತಿಂಗಳುಗಳ ಹಿಂದೆ ಒಂದು ಆಂಗ್ಲ ಪತ್ರಿಕೆಯಲ್ಲಿ ಓದಿದ ನೆನಪು. ನೇಪಾಳದಲ್ಲಿದ್ದ ಉಗ್ರಗಾಮಿಯೊಬ್ಬನನ್ನು ಹಿಡಿಯಲು, ಭಾರತೀಯ ಪೋಲೀಸ ಅಧಿಕಾರಿಯೊಬ್ಬರು, ಬ್ಯಾಂಕಿನಿಂದ ಸಾಲ ತೆಗೆದು, ರಜೆ ತೆಗೆದುಕೊಂಡು, ನೇಪಾಳಕ್ಕೆ ಹೋಗಿದ್ದರು ಎಂದು. ನಮ್ಮಲ್ಲಿಯೂ ದೇಶಾಭಿಮಾನಿಗಳು, ಶೂರರು ಇದ್ದಾರೆ. ಆದರೆ ಅವರಿಗೆ ಸರಕಾರದಿಂದ ಸಕಾಲ ಬೆಂಬಲ ಸಿಗುವದಿಲ್ಲ ಎನ್ನುವುದು ಖೇದಕರ.

anni said...

thank you sir .nice to read about mossad .we are not getting proper books in kannada.

Mahesh Hegade said...

Thanks Sunaath Sir. ನೀವು ಹೇಳಿದ್ದು ಸರಿಯಿದೆ. ನಮ್ಮಲ್ಲಿ unity ಮತ್ತು ಇಚ್ಛಾಶಕ್ತಿಯ ಕೊರತೆ.

ಮತ್ತೊಂದು ಘಟನೆ ಬಗ್ಗೆ ನೆನಪಿಸಿದ್ದಕ್ಕೆ ಧನ್ಯವಾದ. ಅದು ಉಗ್ರ ಯಾಸೀನ್ ಭಟ್ಕಳ ಎಂಬಾತನನ್ನು ಭಾರತದ IB ನೇಪಾಳದಲ್ಲಿ ಬಂಧಿಸಿದ ಘಟನೆ. ಪೂರ್ಣ ವಿವರಗಳು ಇಲ್ಲಿವೆ ನೋಡಿ - http://www.openthemagazine.com/article/india/thankless-india#page6

Mahesh Hegade said...

ಧನ್ಯವಾದ ನವೀನ್ ಕುಮಾರ್. ನೀವು ಹೇಳಿದಂತೆ ಕನ್ನಡದಲ್ಲಿ ಮೊಸ್ಸಾದ್ ಮೇಲಾಗಲಿ, ರಹಸ್ಯ ಕಾರ್ಯಾಚರಣೆಗಳ ಮೇಲಾಗಲಿ ಒಳ್ಳೆ ಪುಸ್ತಕಗಳು ಇಲ್ಲ. ರವಿ ಬೆಳೆಗೆರೆ ಅವರು ಮೊಸ್ಸಾದ್ ಕಾರ್ಯಾಚರಣೆಯನ್ನು ರೂಪಾಂತರ ಮಾಡಿ ಹಿಮಾಗ್ನಿ ಬರೆದಿದ್ದರು. ಹಾಗಾಗಿ ಮೊಸ್ಸಾದ್ ಬಗ್ಗೆ ಜಾಸ್ತಿ ತಿಳಿಯಬೇಕು ಅಂದರೆ ಇಂಗ್ಲೀಶ್ ಭಾಷೆಯಲ್ಲಿನ ಪುಸ್ತಕಗಳನ್ನು ರೆಫರ್ ಮಾಡಬೇಕಾಗುತ್ತವೆ.

Mahesh Hegade said...

ಥ್ಯಾಂಕ್ಸ್ ವಿಕಾಸ್.