Sunday, March 27, 2016

ಸಂಜೀವ್ ಕುಮಾರ್, ಸುಲಕ್ಷಣಾ ಪಂಡಿತ್ - ಬಾಲಿವುಡ್ಡಿನ ಪುರಾತನ ಹಿಟ್ ಜೋಡಿಯ ದುರಂತ ಕಥೆ

ಎಪ್ಪತ್ತನೇ (೧೯೭೦) ಇಸವಿಯ ಆಸುಪಾಸಿರಬಹುದು. ಮುಂಬೈ. ಆಗಿನ ಬಾಂಬೆ. ಸ್ಥಳ - ಯಾವದೋ ಒಂದು ಫಿಲ್ಮ್ ಸ್ಟುಡಿಯೋ.

'ಛಟೀರ್!' ಅಂತ ಆವಾಜ್  ಕೇಳಿಸಿತು. ಸಂಶಯವೇ ಬೇಡ. ಕಪಾಳಕ್ಕೆ ಬಾರಿಸಿದಾಗ ಹೊರಹೊಮ್ಮುವ ಶಬ್ದ. ಯಾರೋ ಯಾರಿಗೋ ಕಪಾಳಕ್ಕೆ ಬಾರಿಸಿದ್ದರು. ಸಾಕಷ್ಟು ಜೋರಾಗೇ ಬಾರಿಸಿದ್ದರು.

ನೋಡಿದರೆ ಒಬ್ಬ ಸಿನೆಮಾ ನಟ ಲಗುಬಗೆಯಲ್ಲಿ ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದ. ಒಂದು ಕೆನ್ನೆಯ ಮೇಲೆ ಕೈಯಿಟ್ಟುಕೊಂಡು, ನೆಲ ನೋಡುತ್ತ, ಅಪಮಾನದಿಂದ ಗಡಿಬಿಡಿಯಲ್ಲಿ ಹೊರನಡೆಯುತ್ತಿದ್ದ. ಅನಿರೀಕ್ಷಿತವಾಗಿ ವಿನಾಕಾರಣ ಕಪಾಳಕ್ಕೆ ಏಟು ತಿಂದವರು ಒಂದು ತರಹದ ಪಾಪಪ್ರಜ್ಞೆ, ಮುಜುಗರ, ಅವಮಾನ, ಸಿಟ್ಟು, ಖೇದ, ವಿಷಾದ ಇತ್ಯಾದಿ ಭಾವನೆಗಳ ಮಿಶ್ರಣದಂತಿರುವ ಒಂದು ವಿಶೇಷ ಭಾವನೆಯನ್ನು ಮುಖದ ಮೇಲೆ ಹೊತ್ತು, ಒಂದು ವಿಶೇಷ ರೀತಿಯಲ್ಲಿ ನಡೆದು ಹೋಗುತ್ತಿರುತ್ತಾರೆ ನೋಡಿ. ಅದೇ ಮಾದರಿಯಲ್ಲಿ.

ಯಾವದೋ ಸಿನೆಮಾದ ಶೂಟಿಂಗಿನ ದೃಶ್ಯ ಅಂತ ಎಲ್ಲರೂ ಅಂದುಕೊಂಡರು. ಆದರೆ ಅದು ಯಾವದೇ ಸಿನಿಮಾದ ಶೂಟಿಂಗ್ ಆಗಿರಲಿಲ್ಲ. ಸಂಜೀವ್ ಕುಮಾರ್ ಎಂಬ ನಟನ ಕಪಾಳಕ್ಕೆ ನೂತನ್ ಎಂಬ ನಟಿ ಎಲ್ಲರ ಮುಂದೆಯೇ ಬಾರಿಸಿದ್ದಳು. ಎಲ್ಲರ ಸಮ್ಮುಖದಲ್ಲಾದ ದೊಡ್ಡ ಅವಮಾನದಿಂದ ಕುಸಿದುಹೋದ ನಟ ಅಲ್ಲಿಂದ ಹೊರಹೋಗುತ್ತಿದ್ದ.

ಸಂಜೀವ್ ಕುಮಾರ್

ಸಂಜೀವ್ ಕುಮಾರ್ ಆಗಿನ್ನೂ ಪ್ರವರ್ಧಮಾನಕ್ಕೆ ಬರುತ್ತಿದ್ದ. Sanjeev Kumar the great actor ಅಂತ ಇನ್ನೂ ಖ್ಯಾತನಾಗಿರಲಿಲ್ಲ. ನೂತನ್ ಮಾತ್ರ ಆಗಲೇ ದೊಡ್ಡ ನಟಿ. ಮತ್ತೆ ನೂತನ್ ಸಿನಿಮಾ ಹಿನ್ನೆಲೆಯಿಂದ ಬಂದವಳು. ಅವಳ ತಾಯಿ ಶೋಭನಾ ಸಮರ್ಥ ಒಂದು ಕಾಲದ ದೊಡ್ಡ ನಟಿ. ತಂಗಿ ತನುಜಾ ಕೂಡ ನಟಿ. ಮತ್ತೆ ನೂತನಳಿಗೆ ದೊಡ್ಡ ಹೆಸರಿತ್ತು. ೧೯೫೦ ರ ದಶಕದಲ್ಲೇ ರಸ್ತೆ ಬದಿಯಲ್ಲಿ ಸ್ನಾನ ಮಾಡುವ ಬಡ ಹೆಂಗಸಿನ bold ದೃಶ್ಯದಲ್ಲಿ ಅತ್ಯಂತ ಸಹಜವಾಗಿ ಅಭಿನಯಿಸಿದ್ದಳು. ಮಡಿವಂತಿಕೆಯ ಆಕಾಲದಲ್ಲಿ ಒಬ್ಬ ನಟಿ ಅದನ್ನು ನಿಭಾಯಿಸಿದ್ದು ದೊಡ್ಡ ಮಾತು.

ಅಂತಹ ಖ್ಯಾತ ನಟಿ ನೂತನ್ ಸಂಜೀವ್ ಕುಮಾರನಿಗೆ ಯಾಕೆ ಬಾರಿಸಿದಳು?

ಎರಡು ವಿವರಣೆಗಳು ಇವೆ. ಒಂದು ಸಂಜೀವ್ ಕುಮಾರ್ ಆಕೆಯಲ್ಲಿ ನಿಜವಾಗಿಯೂ ಅನುರಕ್ತನಾಗಿದ್ದ. ದಿಲ್-ಓ-ಜಾನ್-ಸೇ ಪ್ರೀತಿಸುತ್ತಿದ್ದ. ಪ್ರೇಮ ನಿವೇದಿಸಿಕೊಂಡ. ಆಕೆಗೆ ಇಷ್ಟವಾಗಲಿಲ್ಲ. ಅವತ್ತು ಮೂಡು ಕೆಟ್ಟಿತ್ತು ಅಂತ ಕಾಣುತ್ತದೆ. ಮತ್ತೆ ಅದೇ ಮಾತು ಎತ್ತಿದ್ದ ಪಾಗಲ್ ಪ್ರೇಮಿಯ ಕೆನ್ನೆ ಊದಿಸಿ ಕಳಿಸಿದ್ದಳು.

ಮತ್ತೊಂದು ವಿವರಣೆ ಅಂದರೆ ಸಂಜೀವ್ ಕುಮಾರ್ ತನಗೆ ನೂತನ್ ಜೊತೆ ಸಂಬಂಧ (affair) ಇದೆ ಅಂತ ಗಾಳಿಸುದ್ದಿ ಹರಿಬಿಟ್ಟಿದ್ದ. ಯಾಕೆ? ಸಂಜೀವ್ ಕುಮಾರ್ ಆಗ ಇನ್ನೂ ಹೇಳಿಕೊಳ್ಳುವಂತಹ ನಟನಾಗಿರಲಿಲ್ಲ. ದೊಡ್ಡ ನಟಿಯೊಬ್ಬಳೊಂದಿಗೆ affair ಇದೆ ಅಂತ ಗಾಳಿಸುದ್ದಿ ಹಬ್ಬಿಸಿ scope ತೆಗೆದುಕೊಳ್ಳಲು ನೋಡಿದ್ದನೇ? ಇರಬಹುದು. ಅದು ನೂತನಳನ್ನು ಕೆರಳಿಸಿತ್ತು. ಅದಕ್ಕೇ ಬಾರಿಸಿದ್ದಳು. ಕೆನ್ನೆ ಊದಿಸಿದ್ದಳು.

ಏನೇ ಕಾರಣವಿರಲಿ ಆದರೆ ಸಂಜೀವ್ ಕುಮಾರ್ ಅನ್ನುವ ಸೂಕ್ಷ್ಮ ಸಂವೇದನೆಗಳ, ನಾಜೂಕು ಹೃದಯದ ನಟ ಮಾತ್ರ ಆ ಘಟನೆಯಿಂದ ಕುಸಿದುಹೋದ. ಮತ್ತೂ ಅಂತರ್ಮುಖಿಯಾದ. ಮದ್ಯದ ಬಾಟಲಿ ಮತ್ತೂ ಆತ್ಮೀಯವಾಯಿತು. ಸಿಗರೇಟ್ ಮತ್ತೂ ಪ್ರಿಯವಾಯಿತು. ಸಂಜೀವ್ ಕುಮಾರನ ಅವಸಾನ ಆರಂಭವಾಗಿತ್ತು.

ಹೀಗೆ ನೂತನಳಿಂದ ತಿರಸ್ಕೃತನಾಗಿ, ಅವಮಾನಿತನಾದ ಸಂಜೀವ್ ಕುಮಾರ್ ಒಳ್ಳೆ ನಟನಾಗುವತ್ತ ಗಮನ ಹರಿಸಿದ. ಪ್ರೀತಿ, ಪ್ರೇಮ ಎಲ್ಲ backseat ಗೆ ಹೋಯಿತು. ೧೯೬೫ ರಿಂದ ೧೯೭೦ ರ ವರೆಗೆ ಸಾಧಾರಣ ನಟನಾಗಿದ್ದವ ೧೯೭೦ ರ ನಂತರ ಏಕ್ದಂ ಟಾಪ್ ನಟನಾಗಿಬಿಟ್ಟ. ಸೂಪರ್ ಸ್ಟಾರ್ ಆಗಿರಲಿಕ್ಕಿಲ್ಲ. ಆದರೆ ಅದ್ಭುತ ನಟ ಅಂತ ಮಾತ್ರ ಖ್ಯಾತನಾದ. ಆಕಾಲದ ದೊಡ್ಡ ದೊಡ್ಡ ನಟರಿದ್ದ ಸಿನೆಮಾಗಳಲ್ಲಿ ತನ್ನದೇ ಒಂದು ಛಾಪು ಮೂಡಿಸಿಕೊಂಡು, ಅವರೆಲ್ಲರ ಕರಿಷ್ಮಾವನ್ನು ಮೀರಿ, ತನ್ನದೇ ಒಂದು ಬ್ರಾಂಡ್ ಸೃಷ್ಟಿಸಿಕೊಂಡಿದ್ದು ಸಣ್ಣ ಸಾಧನೆಯಲ್ಲ. ಮತ್ತೆ ಯಾವದೇ ನಖರಾಗಳಿಲ್ಲದ ಕಲಾವಿದ ಅಂತಲೇ ಖ್ಯಾತನಾದ. ನಿರ್ಮಾಪಕರ, ನಿರ್ದೇಶಕರ favorite ಆದ. ಒಂದಾದಮೇಲೊಂದು ಅದ್ಭುತ ಸಿನೆಮಾಗಳನ್ನು ಕೊಟ್ಟ.

ಮುಂದೆ 'ಶೋಲೆ' ಅನ್ನುವ blockbuster ಸಿನಿಮಾ ಬಂತು. ಶೋಲೆ ಅನ್ನುವ phenomenon ಬಗ್ಗೆ ಹೇಳುವದೇನಿದೆ. ಅಂತಹ ಮತ್ತೊಂದು ಮೂವಿ ಬರಲಿಲ್ಲ. ಬರಲಿಕ್ಕೂ ಇಲ್ಲ. ಅದರಲ್ಲಿ ಸಂಜೀವ್ ಕುಮಾರ ಅಭಿನಯಿಸಿದ ತೋಳಿಲ್ಲದ ಠಾಕೂರನ ಪಾತ್ರವನ್ನು ಮರೆಯಲಾದೀತೇ? ಸಾಧ್ಯವೇ ಇಲ್ಲ.

'ಶೋಲೆ' ಮಾಡುವ ಸಮಯದಲ್ಲಿ ಸಂಜೀವ್ ಕುಮಾರನನ್ನು ಸಂಪೂರ್ಣವಾಗಿ ಆವರಿಸಿಕೊಂಡವಳು ಸಹನಟಿ ಹೇಮಾಮಾಲಿನಿ. ಆಕೆ dream girl ಅಂತಲೇ ಖ್ಯಾತಳಾಗಿದ್ದಳು. ಆಕೆಗೆ ಭರತನಾಟ್ಯದಲ್ಲಿ ದೊಡ್ಡ ಮಟ್ಟದ ಸಾಧನೆಯಿತ್ತು. ಪ್ರಧಾನಿ ನೆಹರು ಮುಂದೆ ನೃತ್ಯ ಪ್ರದರ್ಶನ ಮಾಡಿದಾಗ ನೆಹರು 'ಹ್ಯಾಂ!' ಅಂತ ಬಿಟ್ಟ ಬಾಯಿ ಮುಚ್ಚದೇ ನೋಡುತ್ತ ಕುಳಿತಿದ್ದರಂತೆ. ಆ ಮಟ್ಟದ ಸುಂದರಿ ಅವಳು. ಏಕ್ದಂ ಅಪ್ಸರೆ.

'ಶೋಲೆ' ಸಿನಿಮಾದ ಸೆಟ್ಟಿನಲ್ಲಿ ಹೇಮಾಮಾಲಿನಿಯ ಕಳ್ಳಾಮಳ್ಳಿ ಆಟ ಇಬ್ಬರ ಜೊತೆಗೆ ನಡೆಯುತ್ತಿತ್ತು. ಆಕಡೆ ಪೈಲ್ವಾನ ಧರ್ಮೇಂದ್ರ ಕಾಳು ಹಾಕುತ್ತಿದ್ದ. ಈಕಡೆ ಸಂಜೀವ್ ಕುಮಾರ್ ತನ್ನದೇ dignified ಶೈಲಿಯಲ್ಲಿ ಓಲೈಸುತ್ತಿದ್ದ. ಇಬ್ಬರ ಜೊತೆಗೂ ಇವಳ ಸರಸ.

'ಶೋಲೆ' ಮುಗಿಯುವ ಹೊತ್ತಿಗೆ ಎಲ್ಲ ತೈರಾಗಿತ್ತು. ಹೇಮಾಮಾಲಿನಿಯ ಕಳ್ಳಾಮಳ್ಳಿ ಆಟ ಮುಗಿದಿತ್ತು. ಕಳ್ಳ ಧರ್ಮೇಂದ್ರ ಹೇಮಾಮಾಲಿನಿಯ ಹೃದಯವನ್ನು ಕದ್ದಿದ್ದ. ಗೆದ್ದಿದ್ದ. ಆಕಡೆ ಆ ಕಳ್ಳ ಗೆದ್ದರೆ ಕಳ್ಳಾಮಳ್ಳಿಯಲ್ಲಿ ಮಳ್ಳನಾದವ ಮತ್ತೆ ಇದೇ ಸಂಜೀವ್ ಕುಮಾರ್.

ನೂತನ್ ಕೆನ್ನೆಗೆ ಬಾರಿಸಿ ಕೈಕೊಟ್ಟಾಗ ಹೇಗೋ ಮಾಡಿ ಸುಧಾರಿಸಿಕೊಂಡಿದ್ದ. ಆದರೆ ಈಗ ಫುಲ್ crush ಆಗಿಹೋದ. ಹೇಮಾಮಾಲಿನಿ ಇವನ ಹೃದಯದ ಮೇಲೆಯೇ ಥೈಯ್ಯಾಥಕ್ಕಾ ಅಂತ ಕುಣಿದು, ಅದನ್ನು ಹೊಸಕಿಹಾಕಿ, ಕೈಕೊಟ್ಟು ಪೋಯಾಚ್ ಆಗಿದ್ದಳು. ಈ ಆಘಾತದಿಂದ ಮಾತ್ರ ಸಂಜೀವ್ ಕುಮಾರ್ ಚೇತರಿಸಿಕೊಳ್ಳಲೇ ಇಲ್ಲ. ದೊಡ್ಡ ಮಟ್ಟದ ಖಿನ್ನತೆ (depression) ಆವರಿಸಿಕೊಂಡಿತು.

೧೯೭೫ ರ ಹೊತ್ತಿಗೆ ಸಂಜೀವ್ ಕುಮಾರ್ ದೊಡ್ಡ ನಟ. ಒಂದರಮೇಲೊಂದು ಹಿಟ್ ಮೂವಿಗಳನ್ನು ಕೊಟ್ಟ. ಎಂತೆಂತಹ ಮೂವಿಗಳು! ಇವತ್ತಿಗೂ ನೋಡಿ ಖುಷಿಪಡಬಹುದು. ಪ್ರಬುದ್ಧ ನಟನೆ. ಮನಮುಟ್ಟುವ ಸಂಭಾಷಣೆ. Powerful screen presence. Totally awesome performance. ಅದು ಸಂಜೀವ್ ಕುಮಾರನ ಸ್ಪೆಷಾಲಿಟಿ.

೧೯೭೬ ರಲ್ಲಿ ಬಂತು 'ಉಲ್ಝನ್' ಎನ್ನುವ suspense thriller ಮೂವಿ. ಸಂಜೀವ್ ಕುಮಾರನೇ ನಾಯಕ. ನಾಯಕನಟಿ ಹೊಸಬಳು. ಅದು ಅವಳ ಮೊದಲ ಸಿನಿಮಾ. ಅವಳೇ ಸುಲಕ್ಷಣಾ ಪಂಡಿತ್. ಆಗ ಆಕೆಗೆ ಇನ್ನೂ ಮಾತ್ರ ಇಪ್ಪತ್ತು ವರ್ಷ. ಸಂಜೀವ್ ಕುಮಾರನಿಗೆ ಬರೋಬ್ಬರಿ ಮೂವತ್ತೆಂಟು. ಖ್ಯಾತ ಲೇಖಕಿ ಶೋಭಾ ಡೇ ಹೇಳುತ್ತಾಳೆ ಒಂದು ಪುಸ್ತಕದಲ್ಲಿ. ಬಾಲಿವುಡ್ಡಿನಲ್ಲಿ ಹೀರೋಗಳಿಗೆ ವಯಸ್ಸಾಗುವದೇ ಇಲ್ಲ. ಆದರೆ ಹೀರೋಯಿನ್ನಗಳನ್ನು ಮಾತ್ರ ಇಪ್ಪತ್ತೈದು ವರ್ಷ  ಆಗುವಷ್ಟರಲ್ಲೇ ಹುರಿದು ಮುಕ್ಕಿರುತ್ತದೆ ಈ ಬಾಲಿವುಡ್! ಅದು ನಿಜ ಅನ್ನಿ.

ಸುಲಕ್ಷಣಾ ಪಂಡಿತ್

ಈ ಸುಲಕ್ಷಣಾ ಪಂಡಿತ್ ಯಾರೋ ಅಬ್ಬೇಪಾರಿಯಲ್ಲ. ಹಿಂದೂಸ್ತಾನಿ ಸಂಗೀತದ ಖ್ಯಾತ ಗಾಯಕ, ದಿಗ್ಗಜ, ಪಂಡಿತ್ ಜಸರಾಜ್ ಅವರ ಖಾಸಾ ಸಹೋದರನ ಮಗಳು. ನಂತರ ಆಕೆಯ ತಂಗಿ ವಿಜೇತಾ ಪಂಡಿತ್ ಕೂಡ ನಟಿಯೆಂದು ಮಿಂಚಿದ್ದಳು. ಸಂಗೀತ ಸಂಯೋಜಕರಾದ ಜತಿನ್-ಲಲಿತ್ ಸಹ ಈಕೆಯ ಖಾಸಾ ಸಹೋದರರು.

ಪ್ರಪ್ರಥಮ ಸಿನೆಮಾದಲ್ಲಿ ಸಂಜೀವ್ ಕುಮಾರನಂತಹ ಪ್ರಬುದ್ಧ ನಟನೊಂದಿಗೆ ನಟಿಸುವದು ಅಂದರೆ ಸಣ್ಣ ಮಾತಲ್ಲ. ಮತ್ತೆ 'ಉಲ್ಝನ್' ತುಂಬಾ intense ಅನ್ನುವಂತಹ ಸಿನೆಮಾ. ನೀವು ನೋಡಿ. ನಿಮಗೇ ಗೊತ್ತಾಗುತ್ತದೆ. ಅತಿ ಹತ್ತಿರದ ಸಂಬಂಧಗಳ ಮಧ್ಯೆ ಇರುವ complexity ಗಳನ್ನು ತೆರೆ ಮೇಲೆ ತೋರಿಸುವದು ಅಂದರೆ ಸುಲಭದ ಮಾತಲ್ಲ. ಸಂಜೀವ್ ಕುಮಾರ್ ಅಂತಹ ಅನೇಕ ಪಾತ್ರಗಳನ್ನು ನಿಭಾಯಿಸಿದ್ದ. ಅಂತಹ ಕಠಿಣ ಪಾತ್ರಗಳಲ್ಲೇ ಆತನ ಪ್ರತಿಭೆ ಮೂಡಿಬರುತ್ತಿತ್ತು. ಆದರೆ ತನ್ನ ಮೊದಲ ಸಿನಿಮಾದಲ್ಲಿ ನಟಿಸುತ್ತಿರುವ ಸುಲಕ್ಷಣಾ ಪಂಡಿತ್ ಎಂಬ ಇಪ್ಪತ್ತೂ ಪೂರ್ತಿ ತುಂಬದ ಹುಡುಗಿ ಸಂಜೀವ್ ಕುಮಾರ್ ಎದುರಲ್ಲಿ ತಕ್ಕ performance ಕೊಡಬಲ್ಲಳೇ ಅಂತ ಎಲ್ಲರೂ ವಿಚಾರ ಮಾಡುತ್ತಿದ್ದರು. But she delivered a stellar performance and the movie was a super duper hit of 1976.

'ಉಲ್ಝನ್' ಚಿತ್ರದಲ್ಲಿ ಸುಲಕ್ಷಣಾ ಪಂಡಿತಳ ಅಭಿನಯ ನೋಡಿದ ಬಾಲಿವುಡ್ಡಿನ ಹಿರಿತಲೆಗಳೆಲ್ಲ 'ವಾಹ್!' ಅಂದಿದ್ದರು. ಒಬ್ಬ ಪ್ರತಿಭಾವಂತ ನಟಿ ಬಂದಳು ಅಂದುಕೊಂಡರು. ಸೌಂದರ್ಯದಲ್ಲಂತೂ ಅಪ್ಸರೆಯರನ್ನು ಮೀರಿಸುವಂತಿದ್ದಳು. ಜೊತೆಗೆ ಒಳ್ಳೆ ನಟಿ. ಮತ್ತೆ ಸಂಗೀತಗಾರರ ಕುಟುಂಬದಿಂದ ಬಂದಿದ್ದಕ್ಕೆ ಸಂಗೀತ ರಕ್ತದಲ್ಲೇ ಇತ್ತು. ಎಷ್ಟೋ ಚಿತ್ರಗೀತೆಗಳನ್ನು ತಾನೇ ಹಾಡಿದ್ದಳು. ಹಿನ್ನೆಲೆ ಗಾಯನಕ್ಕಾಗಿ Film Fare ಪ್ರಶಸ್ತಿ ಪಡೆದ ನಟಿ ಇವಳೊಬ್ಬಳೇ ಇರಬೇಕು.

ಅದೇ ಸಮಯದಲ್ಲಿ ನಟಿ ಶಬಾನಾ ಆಜ್ಮಿ ಒಮ್ಮೆ ಹೇಳಿದ್ದಳು. 'ಈ ಸುಲಕ್ಷಣಾ ಪಂಡಿತ್ ನೋಡಿದರೆ ಒಂದು ತರಹದ ಅಸೂಯೆಯಾಗುತ್ತದೆ. ಎಂತಹ  ಅಪೂರ್ವ ಸೌಂದರ್ಯವತಿ! ಎಂತಹ ಪ್ರಬುದ್ಧ ಅಭಿನೇತ್ರಿ! ಎಂತಹ ಮಧುರ ಕಂಠದ ಗಾಯಕಿ! ಇವೆಲ್ಲವೂ ಒಬ್ಬಳಲ್ಲೇ ಇವೆ ಅಂದರೆ ಎಷ್ಟು rare! ನಟಿ ಅಂತ ಇದ್ದರೆ ಸುಲಕ್ಷಣಾಳಂತಿರಬೇಕು. ನನಗೆ ಆಕೆ ತುಂಬಾ ಇಷ್ಟ. ನನ್ನ ಮೆಚ್ಚಿನ ನಟಿ ಆಕೆ.' ಒಬ್ಬ ಮಹಾನ್ ನಟಿಯಿಂದ ಮತ್ತೊಬ್ಬ budding star ಗೆ genuine compliments. ಶಬಾನಾ ಆಜ್ಮಿ ಆಗಲೇ ದೊಡ್ಡ ನಟಿ. ಅಂತವಳೇ ಹೊಸ ಹುಡುಗಿ ಸುಲಕ್ಷಣಾ ಪಂಡಿತ್ ಬಗ್ಗೆ ಹೀಗೆ ಹೇಳಿದಳು ಅಂದರೆ ವಿಚಾರ ಮಾಡಿ ಸುಲಕ್ಷಣಾ ಪಂಡಿತಳ potential ಬಗ್ಗೆ.

'ಉಲ್ಝನ್' ಸಿನಿಮಾ ಏನೋ ಮುಗಿಯಿತು. ಹಿಟ್ ಕೂಡ ಆಯಿತು. ಆದರೆ ಬೇರೊಂದು ಶುರುವಾಯಿತು. love at first sight ಅನ್ನುವ ಹಾಗೆ love at first film ಆಗಿಬಿಟ್ಟಿತು. ಸಂಜೀವ್ ಕುಮಾರನೊಡನೆ ನಟಿಸಿದ್ದ ಸುಲಕ್ಷಣಾ ಪಂಡಿತ್ ಅವನ ಮೇಲೆ ಫುಲ್ ಫಿದಾ. head over heels in love ಅಂತಾರಲ್ಲ ಆ ಮಾದರಿಯ ಹುಚ್ಚು ಪ್ರೀತಿ.

ಆದರೆ ಸಂಜೀವ್ ಕುಮಾರನ ಸಂವೇದನೆಗಳು, ಭಾವನೆಗಳು ಸತ್ತುಹೋಗಿದ್ದವು. ಮೊದಲು ನೂತನ್ ನಂತರ ಹೇಮಾಮಾಲಿನಿಯಿಂದ ತಿರಸ್ಕೃತನಾಗಿದ್ದ ಸಂಜೀವ್ ಕುಮಾರನ ಹೃದಯ ಮುರುಟಿಹೋಗಿತ್ತೋ ಅಥವಾ ಕಲ್ಲಾಗಿಹೋಗಿತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಸುಲಕ್ಷಣಾ ಪಂಡಿತಳ ಪ್ರೀತಿಗೆ ಆತ ಸ್ಪಂದಿಸಲೇ ಇಲ್ಲ.

ಅವನು ಸ್ಪಂದಿಸಲಿಲ್ಲ ಅಂದ ಮೇಲೆ ಇವಳಾದರೂ ಬಿಟ್ಟಳೇ? ಇಲ್ಲ. ಅದು ಹುಚ್ಚು ಪ್ರೀತಿ. ಉಡದಂತೆ ಕಚ್ಚಿ ಹಿಡಿದಿತ್ತು. ಈಕಡೆ ಈ ಪುಣ್ಯಾತ್ಮ ಸಂಜೀವ್ ಕುಮಾರನಾದರೂ ಇಷ್ಟವಿಲ್ಲವೆಂದು ಬಿಟ್ಟುಹೋದನೇ? ಇಲ್ಲ. ಅಂತಹ ದಿವ್ಯ ಸುಂದರಿ ಮೈಮೇಲೆ ಬಿದ್ದು ಬಂದಾಗ ಅದೆಂಗೆ ಬಿಟ್ಟಾನು? ಹೇಳಿಕೇಳಿ ಗಂಡಸಿನ ಹಡಬೆ ಮನಸ್ಸು. ಸುಂದರಿಯ ಸಾಂಗತ್ಯ ಬಿಟ್ಟಿ ಸಿಗುತ್ತದೆ ಅಂದರೆ ನಾಯಿಯಂತಾಗಿಬಿಡುತ್ತದೆ. ಇಲ್ಲೂ ಅದೇ ಆಯಿತು.

ಸುಲಕ್ಷಣಾ ಪಂಡಿತ್ & ಸಂಜೀವ್ ಕುಮಾರ್. ಸೂಪರ್ ಜೋಡಿ

ಏನೋ ಒಂದು ತರಹದ ಸಂಬಂಧ ಇಬ್ಬರ ನಡುವೆ ಏರ್ಪಟ್ಟಿತು. live in relationship. ಇಬ್ಬರೂ ದಂಪತಿಯಂತೆಯೇ ಇದ್ದರು. ಅಷ್ಟೇ ದಾಂಪತ್ಯದ ಅಧಿಕೃತ ಮೊಹರು ಬಿದ್ದಿರಲಿಲ್ಲ. ಆದರೆ ಸುಲಕ್ಷಣಾ ಪಂಡಿತ್ ಮಾತ್ರ ಸಂಜೀವ್ ಕುಮಾರನನ್ನು ಯಾವದೇ ಪತ್ನಿಗಿಂತ ಹೆಚ್ಚಾಗಿ ನೋಡಿಕೊಂಡಳು. ಅವನ ಬೇಕುಬೇಡಗಳನ್ನು ಗಮನಿಸಿಕೊಂಡಳು.

ಸಂಜೀವ್ ಕುಮಾರನ ಖಿನ್ನತೆ ಜಾಸ್ತಿಯಾಯಿತು. ಅದಕ್ಕೆ ತಕ್ಕಂತೆ ಕುಡಿತ, ಸಿಗರೇಟ್ ಮಿತಿ ಮೀರತೊಡಗಿತ್ತು. ಒಂದು ಸಣ್ಣ ಹೃದಯಾಘಾತವೂ ಆಯಿತು. ಅಮೇರಿಕಾಗೆ ಹೋಗಿ ವೈದ್ಯರನ್ನು ಕಂಡು ಬಂದ. ಸಂಜೀವ್ ಕುಮಾರನ ಕುಟುಂಬದಲ್ಲಿ ಹೆಚ್ಚಿನ ಜನರಿಗೆ ಅದೇನೋ congenital heart problem ಇತ್ತಂತೆ. ಸಂಜೀವ್ ಕುಮಾರನ ಒಬ್ಬನೋ, ಇಬ್ಬರೋ ಸಹೋದರರು ಐವತ್ತು ವರ್ಷಗಳಾಗುವ ಮೊದಲೇ ಹೃದಯ ಸಂಬಂಧಿ ತೊಂದರೆಗಳಿಂದ ನಿಧನರಾಗಿದ್ದರು. ತಪಾಸಣೆ ಮಾಡಿದ ವೈದ್ಯರು ಖಡಕ್ ಎಚ್ಚರಿಕೆ ಕೊಟ್ಟಿದ್ದರು, 'ಮದ್ಯಪಾನ, ಸಿಗರೇಟ್ ಬಿಡಿ. ಇಲ್ಲವಾದರೆ ನಿಮಗೂ ಅದೇ ತೊಂದರೆ ಕಾದಿದೆ.'

ಎಲ್ಲ ಚಟ ಬಿಡೋಣ ಅಂದರೆ ಹೇಗೆ ಬಿಟ್ಟಾನು? ಕಣ್ಮುಚ್ಚಿ ಕೂತರೆ ನೂತನ್ ಕಪಾಳಕ್ಕೆ ಬಾರಿಸಿದ್ದು ನೆನಪಾಗುತ್ತಿತ್ತು. ಹೇಮಾಮಾಲಿನಿ ಕಳ್ಳಾಮಳ್ಳಿ ಆಟ ಆಡಿ ಮಳ್ಳನನ್ನಾಗಿ ಮಾಡಿಹೋಗಿದ್ದು ನೆನಪಾಗಿ ವಿಪರೀತ ವೇದನೆಯಾಗುತ್ತಿತ್ತು. ಅದನ್ನೆಲ್ಲ ಮರೆಸಲು, ತಾತ್ಕಾಲಿಕವಾಗಿ ಶಮನ ಮಾಡಲು ಮತ್ತೆ ಅವೇ ವಿಷಗಳು ಬೇಕು. ಮದ್ಯ, ಸಿಗರೇಟ್.

ಆಕೆಯನ್ನು ಅವನು ಪತ್ನಿ ಅಂತ ಸ್ವೀಕರಿಸದಿದ್ದರೂ ಸುಲಕ್ಷಣಾ ಮಾತ್ರ ಸಂಜೀವ್ ಕುಮಾರನನ್ನು ಪತಿಯಂತಲೇ ಭಾವಿಸಿ ಎಲ್ಲ ಸೇವೆ ಮಾಡಿದಳು. ಚಟಗಳಿಂದ ಬಿಡಿಸಲು ನೋಡಿದಳು. ಒಳೊಳಗೇ ಫುಲ್ ಖೋಕ್ಲಾ ಆಗಿಹೋಗಿದ್ದ ಸಂಜೀವ್ ಕುಮಾರ್ ಯಾವದಕ್ಕೂ ಸ್ಪಂದಿಸಲಿಲ್ಲ.

ಹೀಗೆ ಸಂಜೀವ್ ಕುಮಾರನ ಪ್ಯಾರ್ ಮೊಹಬ್ಬತ್ತಿನ ಮೋಹದಲ್ಲಿ ಕಳೆದುಹೋದ ಸುಲಕ್ಷಣಾಗೆ ಹೆಚ್ಚಿನ ಅವಕಾಶಗಳೂ ಬರಲಿಲ್ಲ. ಮತ್ತೆ ಬಾಲಿವುಡ್ಡಿನಲ್ಲಿ ಕೇವಲ ಸೌಂದರ್ಯ, ಪ್ರತಿಭೆ ಇದ್ದಾಕ್ಷಣ ಎಲ್ಲರೂ ಟಾಪ್ ಹೀರೋಯಿನ್ ಆಗುವದಿಲ್ಲ. ಎಷ್ಟೋ ಮಂದಿಯ ಹಾಸಿಗೆಯನ್ನು ಗರಮ್ ಮಾಡಬೇಕಾಗುತ್ತದೆ. ಯಾರ್ಯಾರದ್ದೋ ಜೊತೆ ಚಿತ್ರ ವಿಚಿತ್ರ ಒಂದು ರಾತ್ರಿಯ ಸಂಬಂಧಗಳನ್ನು ಮಾಡಿಕೊಂಡು ಯಶಸ್ಸಿನ ಏಣಿ ಹತ್ತಬೇಕಾಗುತ್ತದೆ. ಯಶಸ್ಸೇ ಮುಖ್ಯ ಅನ್ನುವ ನಟಿಯರು ಎಲ್ಲದಕ್ಕೂ ರೆಡಿ ಇರುತ್ತಾರೆ. ಹಾಗೆ ಮಾಡಿಯೇ ಒಂದು ಮಟ್ಟಕ್ಕೆ ಯಶಸ್ವಿ ಕೂಡ ಆಗುತ್ತಾರೆ. ಸಂಜೀವ್ ಕುಮಾರನನ್ನು ಆರಾಧಿಸುತ್ತಿದ್ದ ಸುಲಕ್ಷಣಾ ಇವೆಲ್ಲ ಮಾಡಲಿಲ್ಲ. ಮತ್ತೆ ಒಳ್ಳೆ ಸಂಸ್ಕಾರವಂತ ಮನೆತನದ ಹುಡುಗಿ. ಒಟ್ಟಿನಲ್ಲಿ ೧೯೮೦ ರ ಹೊತ್ತಿಗೆ ಆಕೆಯನ್ನು ಬಾಲಿವುಡ್ ಹಳೆಯ ಮಾಲು, old stock ಅಂತ discard ಮಾಡಿಯಾಗಿತ್ತು. ಆಗ ಆಕೆಗೆ ಕೇವಲ ಇಪ್ಪತ್ತನಾಲ್ಕು ವರ್ಷ ವಯಸ್ಸು.

ಈಕಡೆ ಸಂಜೀವ್ ಕುಮಾರ್ ವಿಪರೀತವಾಗಿ ಊದಿಕೊಳ್ಳತೊಡಗಿದ್ದ. ಅವನಿಗೂ ನಲವತ್ತು ವರ್ಷದ ಮೇಲಾಗಿತ್ತಲ್ಲ. ಸಣ್ಣ ಪ್ರಮಾಣದ ಬೊಜ್ಜು ಬರುವದು ಸಹಜ. ಆದರೆ ಇವನ ಕುಡಿತ ಇತ್ಯಾದಿ ಸೇರಿ ಜಾಸ್ತಿಯೇ ದಪ್ಪಗಾದ. ಸಂಜೀವ್ ಕುಮಾರ್ ಮೊದಲಿಂದಲೂ ಸ್ವಲ್ಪ heavyset ಮನುಷ್ಯ. ಆದರೆ ಗಾತ್ರದಿಂದಾಗಿ ವಿಕಾರವಾಗಿ ಎಂದೂ ಕಾಣುತ್ತಿರಲಿಲ್ಲ. ಸುಂದರನಾಗಿದ್ದ. pleasantly plump ಅನ್ನಬಹುದಿತ್ತು ಅಷ್ಟೇ.

೧೯೮೦ ರ ಸಮಯದಲ್ಲಿ ಸಂಜೀವ್ ಕುಮಾರ್ ಜಾಸ್ತಿ ದಪ್ಪಗಾದರೂ ಅವಕಾಶಗಳೇನೂ ಕಮ್ಮಿಯಾಗಲಿಲ್ಲ. ಮತ್ತೆ ಸಂಜೀವ್ ಕುಮಾರ್ ಸಹಿತ ತನ್ನ ವಯಕ್ತಿಕ ಸಮಸ್ಯೆಗಳು ಏನೇ ಇದ್ದರೂ ನಟನೆಗೆ ನಿಂತ ಅಂದರೆ ಮುಗಿಯಿತು. ಯಾವಾಗಲೂ stellar performance. ಅದರ ಬಗ್ಗೆ ದೂಸರಾ ಮಾತೇ ಇಲ್ಲ.

ಎಂತೆಂತಹ ಮಂಗ್ಯಾ ತರಹ ಇರುವವರನ್ನೇ ಸುಂದರರನ್ನಾಗಿ ತೋರಿಸುವ ಬಾಲಿವುಡ್ ಮಂದಿಗೆ ವಿಪರೀತವಾಗಿ ಊದಿಕೊಂಡಿದ್ದ ಸಂಜೀವ್ ಕುಮಾರನನ್ನು presentable ಅಂತ ತೋರಿಸುವದು ಒಂದು ದೊಡ್ಡ ಕಷ್ಟವೇ? ತನ್ನ ಜೀವನದ ಕೊನೆಯ ವರ್ಷಗಳಲ್ಲಿ ಸಂಜೀವ್ ಕುಮಾರ್ ಸದಾ ಸೂಟ್ ಧರಿಸಿಕೊಂಡೇ ಪಾತ್ರ ಮಾಡುತ್ತಿದ್ದ. ಅದು ಅವನಿಗೆ ಒಪ್ಪುತ್ತಿತ್ತು ಕೂಡ. ಮತ್ತೆ ಒಳ್ಳೆ ಸೂಟ್ ಇದ್ದುಬಿಟ್ಟರೆ ಸಾಕು. ಎಲ್ಲ ಸಣ್ಣ ಪುಟ್ಟ ನ್ಯೂನ್ಯತೆಗಳು ಅದರಲ್ಲಿ ಮುಚ್ಚಿಹೋಗುತ್ತವೆ. ಆಕರ್ಷಕ ಸೂಟ್, ಇಲ್ಲ ಕನಿಷ್ಠ ಪಕ್ಷ ಒಂದು ಕೋಟ್ ಧರಿಸಿಯೇ ನಟಿಸುತ್ತಿದ್ದ. ಹೀಗಾಗಿ ಸಂಜೀವ್ ಕುಮಾರನ ಸ್ಥೂಲ ಕಾಯ ಒಂದು obstacle ಆಗಲೇ ಇಲ್ಲ. ಅದಕ್ಕೇ ಅಲ್ಲವೇ ಹೇಳೋದು, ಬಾಲಿವುಡ್ಡಿನಲ್ಲಿ ಹೀರೋಗಳಿಗೆ ವಯಸ್ಸಾಗುವದೇ ಇಲ್ಲ ಅಂತ.

ನವೆಂಬರ್ ೬, ೧೯೮೫. ದೊಡ್ಡ ದುರ್ದಿನ. ಸಂಜೀವ್ ಕುಮಾರ್ ತೀರಿಹೋದ. ವೈದ್ಯರು ಹೇಳಿದ ಮಾತು ನಿಜವಾಗಿತ್ತು. ಅವನ ಸಹೋದರರು ತೀರಿಹೋದ ರೀತಿಯಲ್ಲೇ ತೀರಿಹೋಗಿದ್ದ. ದೊಡ್ಡ ಹೃದಯಾಘಾತವಾಗಿತ್ತು. ಹೆಚ್ಚಿನ ಸಿನೆಮಾಗಳಲ್ಲಿ ಐವತ್ತು ವರ್ಷ ಮೀರಿದ ವ್ಯಕ್ತಿಯ ಪಾತ್ರಗಳಲ್ಲೇ ಪ್ರಬುದ್ಧ ಅಭಿನಯ ನೀಡಿದ್ದ ಮಹಾನ್ ನಟ ಸಂಜೀವ್ ಕುಮಾರ್ ತಾನು ಮಾತ್ರ ಐವತ್ತು ವರ್ಷ ಮುಟ್ಟುವ ಮೊದಲೇ ತನ್ನ ನಲವತ್ತೇಳನೆಯ ವಯಸ್ಸಿನಲ್ಲಿ ನಿಧನನಾಗಿದ್ದು ಒಂದು ದೊಡ್ಡ ವಿಪರ್ಯಾಸ. ಅದಕ್ಕಿಂತ ಹೆಚ್ಚಾಗಿ ದೊಡ್ಡ ದುರಂತ. ಅಂತಹ ಮನೋಜ್ಞ ಕಲಾವಿದ ಇನ್ನೊಂದಿಷ್ಟು ವರ್ಷ ಇರಬೇಕಿತ್ತು. Miss him a lot. What an actor he was!

ಸಂಜೀವ್ ಕುಮಾರನ ನಿಧನ ಸುಲಕ್ಷಣಾ ಪಂಡಿತ್ ಗೆ ದೊಡ್ಡ ಆಘಾತ. big shock. ಅದ್ಯಾವ ಮಟ್ಟದ ಆಘಾತ ಎಂದರೆ  ಅವಳು ಆ ಆಘಾತದಿಂದ ಅಂದು ಒಂದು ತರಹದ trans ಸ್ಥಿತಿಗೆ ಹೋದವಳು ಅದರಿಂದ ಇನ್ನೂ ಹೊರಗೇ ಬಂದಿಲ್ಲ. She has become a total mental wreck. 

ಸಂಜೀವ್ ಕುಮಾರ್ ಹೋಗಿದ್ದೇ ಹೋಗಿದ್ದು ಸುಲಕ್ಷಣಾ ಪಂಡಿತ್ ತನ್ನಲ್ಲೇ ತಾನು ಕಳೆದುಹೋದಳು. ಆಕೆಗಿನ್ನೂ ಆವಾಗ ಜಸ್ಟ್ ಇಪ್ಪತ್ತೊಂಬತ್ತು ವರ್ಷ. ಬಾಲಿವುಡ್ ಅಂತೂ ಎಂದೋ ಬಾಗಿಲು ಮುಚ್ಚಿತ್ತು. ಅಲ್ಲಿ ಇಲ್ಲಿ ಹಾಡುವ ಅವಕಾಶಗಳು ಸಿಗುತ್ತಿದ್ದವು. ಅವೂ ಅಷ್ಟಕಷ್ಟೇ. ಈಗಂತೂ ಒಂದು ತರಹದ ಹುಚ್ಚಿ ಬೇರೆ ಆಗಿಬಿಟ್ಟಳು. ನಿರುಪದ್ರವಿ ಹುಚ್ಚಿ.

ತಲೆ ಮೇಲೊಂದು ಸೂರು ಅಂತ ಮುಂಬೈನಲ್ಲಿ ಒಂದು ಫ್ಲಾಟ್ ಇತ್ತು. ಸಂಜೀವ್ ಕುಮಾರ್ ಸತ್ತುಹೋದ ಮೇಲೆ ಇವಳು ಒಬ್ಬಳೇ. ತಲೆ ಪೂರ್ತಿ ಕೆಟ್ಟುಹೋಯಿತು. ಸದಾ ಅವನ ಧ್ಯಾನದಲ್ಲೇ ಇರುತ್ತಿದ್ದಳು. ಅವಳ ಭ್ರಮೆಯ ಲೋಕದಲ್ಲಿ ಆತ ಸತ್ತಿರಲಿಲ್ಲ. ಮತ್ತೆ ಮತ್ತೆ 'ಉಲ್ಝನ್' ಸಿನೆಮಾದ ವೀಡಿಯೊ ಹಾಕಿಕೊಂಡು ನೋಡುತ್ತ ದಿನ ಕಳೆಯುತ್ತಿದ್ದಳು. ಬಾಕಿ ಯಾವುದರ ಬಗ್ಗೆಯೂ ಖಬರೇ ಇಲ್ಲ. ಯಾವಾಗಲೋ ಅಪರೂಪಕ್ಕೆ ಕೆಲಸದವಳು ಬಂದು ಮನೆ ಕ್ಲೀನ್ ಮಾಡಿಕೊಟ್ಟರೆ ಅದೇ ದೊಡ್ಡ ಮಾತು. ಸ್ನಾನ, ಊಟ, ತಿಂಡಿ, ನಿದ್ರೆ ಯಾವದರ ಬಗ್ಗೆ ಕೂಡ ಖಬರಿಲ್ಲ. ಮತ್ತೆ ಆಕೆಗೆ ಇದ್ದ ಸಂಬಂಧಿಕರಾದರೂ ಯಾರು? ಆಗಷ್ಟೇ ಬಾಲಿವುಡ್ಡಿಗೆ ಎಂಟ್ರಿ ಕೊಟ್ಟಿದ್ದ ತಂಗಿ ವಿಜೇತಾ ಪಂಡಿತ್ ಬ್ಯುಸಿ. ತಮ್ಮಂದಿರಾದ ಜತಿನ್-ಲಲಿತ್ ಆಗ ತುಂಬಾ ಚಿಕ್ಕವರು. ಬಾಲಿವುಡ್ಡಿನಲ್ಲಿ ಕಾಲಿಟ್ಟಿರಲೂ ಇಲ್ಲ. ಯಾರಾದರೂ ಬಂದು ಸಹಾಯ ಮಾಡೋಣ ಅಂದರೆ ಸುಲಕ್ಷಣಾ ಅದಕ್ಕೆ ತೆರೆದುಕೊಳ್ಳಬೇಕಲ್ಲ? ಒಪ್ಪಬೇಕಲ್ಲ? ಅದೆಲ್ಲ ತಲೆಗೆ ಹೋಗಬೇಕಲ್ಲ? ಪಾಪದವಳು ಸುಲಕ್ಷಣಾ. ತನ್ನದೇ ಲೋಕದಲ್ಲಿ ಇರುತ್ತಿದ್ದಳು. ಸಂಜೀವ್ ಕುಮಾರ್ ಜೊತೆ ನಟಿಸಿದ ದೃಶ್ಯಗಳನ್ನು ಮತ್ತೆ ಮತ್ತೆ ನೋಡುವದು. ಅವನ ಜೊತೆ ಹಾಡಿ ಕುಣಿದ ಡುಯೆಟ್ ಹಾಡುಗಳನ್ನು ನಿರಂತರವಾಗಿ ಕೇಳುವದು ಮತ್ತು ಹಾಡುವದು. ಇವನ್ನೇ ಮಾಡುತ್ತ ಹೇಗೋ ಬದುಕಿದ್ದಳು.

ಹೇಳಿದರೆ ನೀವು ನಂಬಲಿಕ್ಕಿಲ್ಲ. ಆದರೆ ಸುಲಕ್ಷಣಾ ಪಂಡಿತಳ ವಿಚಿತ್ರ ಭ್ರಮಾಲೋಕದ ಜೀವನ ಯಾವ ಮಟ್ಟವನ್ನು ಮುಟ್ಟಿತ್ತು ಅಂದರೆ ಆಕೆಯ ಮನೆಯ ಒಳಭಾಗದ ತುಂಬೆಲ್ಲ ಪಾಚಿ (moss, fungus) ಫುಲ್ ಬೆಳೆದುಬಿಟ್ಟಿತ್ತು. ಅದೂ ಆಕೆಗೆ ಖಬರಿಲ್ಲ. ಸಂಜೀವ್ ಕುಮಾರನ ಸುತ್ತ ಒಂದು ಭ್ರಮಾಲೋಕ ಸೃಷ್ಟಿಸಿಕೊಂಡು ಅದರಲ್ಲೇ ಕಳೆದುಹೋಗಿದ್ದಳು. ಇದು ಸುಮಾರು ೧೯೯೦ ರ  ಮಾತಿರಬಹುದು. ಸಂಜೀವ್ ಕುಮಾರ್ ತೀರಿಹೋಗಿ ಐದಾರು ವರ್ಷಗಳ ಬಳಿಕ. ನೀವೇ ಊಹಿಸಿಕೊಳ್ಳಬಹುದು ಪಾಪ ಅವಳ ಮನಃಸ್ಥಿತಿ ಹೇಗಿತ್ತು ಅಂತ.

ಪರಿಸ್ಥಿತಿ ಎಲ್ಲಿಯವರೆಗೆ ಬಿಗಡಾಯಿಸಿತು ಅಂದರೆ ಅವಳಿದ್ದ ಆ ಮನೆಯಲ್ಲಿ ಉಳಿಯಲು ಸಾಧ್ಯವೇ ಇಲ್ಲ. ಅಲ್ಲೇ ಆಕೆಯನ್ನು ಉಳಿಯಲು ಬಿಟ್ಟರೆ ಸತ್ತೇಹೋಗುತ್ತಾಳೆ ಅನ್ನುವ ಪರಿಸ್ಥಿತಿ ಬಂದಾಗ ತಂಗಿ ವಿಜೇತಾ ಪಂಡಿತ್, 'ಈ ಅಕ್ಕನನ್ನು ಹೀಗೇ ಬಿಟ್ಟರೆ ಇನ್ನು ಕೆಲವೇ ದಿವಸಗಳಲ್ಲಿ ಇವಳು ಕೂಡ ಸ್ವರ್ಗ ಸೇರುತ್ತಾಳೆ. ಬೇರೆ ಏನಾದರೂ ವ್ಯವಸ್ಥೆ ಮಾಡಬೇಕು' ಅಂತ ನಿರ್ಧರಿಸಿದಳು. ಆದರೆ ಬೇಕಲ್ಲ ರೊಕ್ಕ? ಅದೇ ದೊಡ್ಡ ಪ್ರಾಬ್ಲಮ್. ಸುಲಕ್ಷಣಾ ಪಂಡಿತ್ ಅಂತೂ ಫುಲ್ ಠಣ್ ಠಣ್ ಗೋಪಾಲ್. ರೊಕ್ಕ ಹೋಗಲಿ ಆಕೆಗೆ ದಿನ ನಿತ್ಯದ ಊಟಕ್ಕೂ ತೊಂದರೆ. ಆಗ ಆಪತ್ಬಾಂಧವನಂತೆ ಬಂದವನು ನಟ ಜಿತೇಂದ್ರ. ಸುಲಕ್ಷಣಾ ಪಂಡಿತ್ ಜೊತೆ ಅನೇಕ ಸಿನೆಮಾಗಳಲ್ಲಿ ನಟಿಸಿದ್ದ. ಅವರದ್ದು ಹಿಟ್ ಜೋಡಿ ಕೂಡ. ಅದನ್ನೆಲ್ಲ ನೆನಪಿಸಿಕೊಂಡ ಜಿತೇಂದ್ರ ದೊಡ್ಡ ಮನಸ್ಸು ಮಾಡಿ, ಪೂರ್ತಿ ಎಕ್ಕುಟ್ಟಿಹೋಗಿದ್ದ ಆ ಸುಲಕ್ಷಣಾ ಪಂಡಿತಳ ಪಾಚಿಗಟ್ಟಿ ಹಾಳುಬಿದ್ದಿದ್ದ ಮನೆಯನ್ನು ಕೊಂಡುಕೊಂಡ. ಮಾರ್ಕೆಟ್ ರೇಟಿಗಿಂತ ಜಾಸ್ತಿ ಬೆಲೆಯನ್ನು ಕೊಟ್ಟೇ ಖರೀದಿ ಮಾಡಿದ. ಹಳೆಯ ಸಹನಟಿಯ ಉಳಿದ ಜೀವನಕ್ಕೆ ಉಪಯೋಗವಾಗಲಿ ಅನ್ನುವ ಉದಾತ್ತ ಭಾವನೆ. ಜಿತೇಂದ್ರ ಕೊಟ್ಟ ರೊಕ್ಕದಿಂದ ಒಂದು ಪುಟ್ಟ ಮನೆ ಖರೀದಿ ಮಾಡಿದರು. ಸುಲಕ್ಷಣಾ ಪಂಡಿತಳನ್ನು ಅಲ್ಲಿಗೆ ಶಿಫ್ಟ್ ಮಾಡಿದ ತಂಗಿ ವಿಜೇತಾ ಅಕ್ಕನ ದೇಖರೇಖಿಗೆ ನಿಂತಳು. ಆಕೆಗೂ ಅವಳ ಸಂಸಾರವಿತ್ತು. ಸಂಗೀತ ಸಂಯೋಜಕ ಆದೇಶ ಶ್ರೀವಾತ್ಸವ ಎಂಬುವವನನ್ನು ವಿವಾಹವಾಗಿದ್ದ ವಿಜೇತಾ ಎರಡು ಚಿಕ್ಕಮಕ್ಕಳ ತಾಯಿ. ಹಾಗಿದ್ದರೂ ಅಕ್ಕನನ್ನು ಬೇರೆ ಮನೆಗೆ ಶಿಫ್ಟ್ ಮಾಡಿದ ನಂತರ ಆಗಾಗ ಬಂದು ನೋಡಿ ಹೋಗುತ್ತಿದ್ದಳು. ತಕ್ಕಮಟ್ಟಿಗೆ ಅಕ್ಕನನ್ನು ನೋಡಿಕೊಂಡಳು. ಇಲ್ಲವಾದರೆ ಸುಲಕ್ಷಣಾ ಪಂಡಿತ್ ಎಂದೋ ಹರೋಹರ ಆಗಿರುತ್ತಿದ್ದಳು.

ಸುಲಕ್ಷಣಾಗೆ ಸುಮಾರು ನಲವತ್ತು ವರ್ಷ ವಯಸ್ಸು ಆಗುವ ಹೊತ್ತಿಗೆ ಇಷ್ಟೆಲ್ಲ ಆಗಿಹೋಗಿತ್ತು. ಒಂದು ಕಾಲದ ದಿವ್ಯ ಸುಂದರಿ ಈಗ ಜೀವಚ್ಚವ. Walking dead.

ಇಷ್ಟೆಲ್ಲ ಆಗಿಯೇ ಇಪ್ಪತ್ತು ವರ್ಷಗಳ ಮೇಲಾಗಿದೆ. ಈಗ ಸುಲಕ್ಷಣಾ ಪಂಡಿತ್ ಗೆ ಅರವತ್ತು ವರ್ಷ. ಮನಃಸ್ಥಿತಿಯಲ್ಲಿ ಏನೂ ಬದಲಾವಣೆ ಇಲ್ಲ. ಸಂಜೀವ್ ಕುಮಾರ್ ತೀರಿಹೋಗಿ ಆಗಲೇ ಮೂವತ್ತು ವರ್ಷದ ಮೇಲಾಗಿಹೋಯಿತು. ಇವಳು ಮಾತ್ರ ಕಳೆದ ಮೂವತ್ತು ವರ್ಷಗಳಿಂದ ತನ್ನದೇ ಭ್ರಮಾಲೋಕದಲ್ಲಿ ಇದ್ದಾಳೆ. She lives in the time frozen reality of her own.

ಈಗ ಸ್ವಲ್ಪ ವರ್ಷಗಳ ಹಿಂದೆ ಮನೆಯಲ್ಲೇ ಬಿದ್ದು ಮೂಳೆ ಮುರಿಯಿತಂತೆ. ಆವಾಗ ತನ್ನ ಮನೆಗೇ ಕರೆದುಕೊಂಡು ಬಂದಳು ವಿಜೇತಾ ಪಂಡಿತ್. ಅವಳ ಮನೆಯ ಒಂದು ಕೋಣೆಯಲ್ಲಿ ಸದಾ ಮಲಗಿಯೇ ಇರುತ್ತಾಳೆ ಸುಲಕ್ಷಣಾ ಪಂಡಿತ್. ತಾನೇ ಹಾಡಿದ್ದ ಹಳೆಯ ಹಾಡುಗಳೇ ಸಂಗಾತಿ. ಅವು ಬೇಜಾರಾದಾಗ ಮತ್ತೆ ಮತ್ತೆ ಸಂಜೀವ್ ಕುಮಾರನ ಜೊತೆ ನಟಿಸಿದ್ದ ಸಿನೆಮಾಗಳ ವೀಡಿಯೊ ನೋಡುವದು. ಅದರಲ್ಲಿ ಏನೂ ಬದಲಾವಣೆ ಇಲ್ಲ. ತಂಗಿ ವಿಜೇತಾ ಬಿಟ್ಟರೆ ಬೇರೆ ಯಾರ ಜೊತೆಗೂ ಮಾತಿಲ್ಲ, ಕಥೆಯಿಲ್ಲ. ಬೇರೆಯೇ ಲೋಕದಲ್ಲಿ ಇರುತ್ತಾಳೆ ಅಂದ ಮೇಲೆ ಆ ಭ್ರಮಾಲೋಕದಲ್ಲಿ ಬೇರೆ ಜನ ಇದ್ದರೆ ತಾನೇ ಪರಿಚಯ ಹಿಡಿಯುವದು, ಮಾತಾಡುವದು ಇತ್ಯಾದಿ? Totally lost case!

ಸುಲಕ್ಷಣಾ ಪಂಡಿತಳ ಈಗಿನ ಹಾಲತ್ ಇಷ್ಟು ನಾಜೂಕಾಗಿದೆ ಅಂದರೆ ಕೆಲವು ವಿಷಯಗಳನ್ನು ಅವಳಿಗೆ ತಿಳಿಸುವದೇ ಇಲ್ಲವಂತೆ. ತಿಳಿಸಿದರೆ ಮತ್ತೆಲ್ಲಿ ಮತ್ತೊಮ್ಮೆ ಆಘಾತಕ್ಕೆ ಒಳಗಾಗಿ ಮತ್ತೇನಾದರೂ ಆದೀತೋ ಅಥವಾ ಇವಳೂ ತೀರಿಹೋದರೆ ಅಂತ ಆತಂಕ. ತಂಗಿ ವಿಜೇತಾ ಪಂಡಿತ್ ಯಾವದೋ ಪತ್ರಿಕೆಗೆ ಕೊಟ್ಟ ಸಂದರ್ಶನದಲ್ಲಿ ಹೇಳಿದ್ದಳು, 'ಎಲ್ಲರಿಗಿಂತ ಹಿರಿಯವಳಾಗಿದ್ದ ನಮ್ಮಕ್ಕ ಸಂಧ್ಯಾ ಭಯಾನಕವಾಗಿ ಕೊಲೆಯಾದಳು. ಅದನ್ನೂ ನಾವು ಸುಲಕ್ಷಣಾಳಿಗೆ ತಿಳಿಸಲಿಲ್ಲ. ಮೊನ್ನೆ ನನ್ನ ಪತಿ ಆದೇಶ ಕ್ಯಾನ್ಸರ್ ಗೆ ಬಲಿಯಾದ. ಅದನ್ನೂ ನಾವು ಸುಲಕ್ಷಣಾಳಿಗೆ ಹೇಳಲಿಲ್ಲ. ಯಾಕೆಂದರೆ ಅವಳದ್ದು ಮೊದಲೇ ಘಾಸಿಗೊಂಡಿರುವ ಮನಸ್ಸು. ಇಂತಹ ಆಘಾತಕಾರಿ ವಿಷಯಗಳನ್ನು ತಿಳಿಸಿದರೆ ಅವಳಿಗೆ ಮತ್ತೇನಾದರೂ ಆಗಿಬಿಟ್ಟರೆ ಅಂತ ಆತಂಕ. ಆಕೆಗೆ ಸಣ್ಣ ಪ್ರಮಾಣದ ಆಘಾತವನ್ನೂ ಸಹ ಸಹಿಸುವ ಶಕ್ತಿಯಿಲ್ಲ.' ಪಾಪ!

ಸುಲಕ್ಷಣಾ ಪಂಡಿತಳ ಹಿರಿಯಕ್ಕ ಸಂಧ್ಯಾ ಪಂಡಿತ್ ಸಿಂಗ್. ಸಹೋದರಿಯರಲ್ಲೇ ಅತ್ಯಂತ ಸುಂದರಿ ಅವಳಂತೆ. ಆಕೆಯನ್ನು ಸಿನೆಮಾ ಅವಕಾಶಗಳು ಹುಡುಕಿಕೊಂಡು ಬಂದಿದ್ದವು. ಸಿನೆಮಾದಲ್ಲಿ ಆಸಕ್ತಿಯಿರದ ಆಕೆ ಯಾವದೋ ದೊಡ್ಡ ಸರ್ಕಾರಿ ಬಾಬು ಸಿಂಗ್ ಎಂಬುವವನನ್ನು ಮದುವೆಯಾಗಿ ಆರಾಮ್ ಇದ್ದಳು. ಒಂದೆರೆಡು ವರ್ಷಗಳ ಹಿಂದೆ ಭೀಕರವಾಗಿ ಕೊಲೆಯಾದಳು. ಸ್ವಂತ ಮಗನೇ ಅಮ್ಮನ ಬಳಿಯಿದ್ದ ಕೋಟ್ಯಂತರ ರೂಪಾಯಿ ಬೆಲೆಬಾಳುವ ವಡವೆಗಳನ್ನು ದೋಚಲು ಅಮ್ಮನನ್ನು ಕೊಂದುಬಿಟ್ಟ ಅಂತ ಪೋಲೀಸರ ಆರೋಪ. ಇನ್ನೂ ಕೋರ್ಟಿನ ತೀರ್ಮಾನ ಬಂದಿಲ್ಲ. ಇಂತಹ ಅಕ್ಕನ ಮಗನನ್ನು ಬಾಲ್ಯದಲ್ಲಿ ಆಡಿಸಿ ಬೆಳೆಸಿದವರು ಇದೇ ಸುಲಕ್ಷಣಾ ಮತ್ತು ವಿಜೇತಾ ಅನ್ನುವ ಚಿಕ್ಕಮ್ಮಂದಿರು. ಅಂತಹ ಹುಡುಗ ಇವರ ಅಕ್ಕನನ್ನು, ಸ್ವಂತ ತಾಯಿಯನ್ನು ಕೊಂದುಬಿಟ್ಟ ಅನ್ನುವ ಸುದ್ದಿ ಕೇಳಿದರೆ ಸುಲಕ್ಷಣಾಳ ಹಾಲತ್ ಅಷ್ಟೇ ಮತ್ತೆ. ಅಥವಾ ಅವಳಿಗೆ ಅವೆಲ್ಲ ಗೊತ್ತಾದರೂ ಆಗುತ್ತದೆಯೋ ಇಲ್ಲವೋ ಅನ್ನುವದೂ ದೊಡ್ಡ ಡೌಟ್. ಯಾಕೆಂದರೆ ಕಳೆದ ಮೂವತ್ತು ವರ್ಷಗಳಿಂದ ಆಕೆಯ brain ಬಂದಾಗಿಬಿಟ್ಟಿದೆ.

ಮೊನ್ನಿತ್ತಲಾಗೆ ಯಾಕೋ ನನ್ನ ಮೆಚ್ಚಿನ ನಟ ಸಂಜೀವ್ ಕುಮಾರ್ ಮತ್ತು ನೆಚ್ಚಿನ ನಟಿ ಸುಲಕ್ಷಣಾ ಪಂಡಿತ್ ಬಗ್ಗೆ ಮಾಹಿತಿ ಹುಡುಕುತ್ತಿದ್ದಾಗ ಇದೆಲ್ಲ ವಿಷಯ ತಿಳಿಯಿತು. ಹೃದಯ ಭಾರವಾಯಿತು. ಇಂತಹ ಪರಿಸ್ಥಿತಿ ಬರಬಾರದಿತ್ತು.

ಸಂಜೀವ್ ಕುಮಾರನ ನಸೀಬ್ ನೋಡಿದರೆ ಪಾಪ ಅನ್ನಿಸುತ್ತದೆ. ತಾನಾಗೇ ಒಲಿದು ಬಂದು, ಶಾಸ್ತ್ರೋಕ್ತವಾಗಿ ಮದುವೆಯಾಗದಿದ್ದರೂ ಯಾವದೇ ಪತ್ನಿಗೆ ಕಮ್ಮಿಯಿಲ್ಲದಂತೆ ಸೇವೆ ಮಾಡಿದ್ದ, ತಾಯಿಯಂತೆ ಸಲುಹಿದ್ದ, ಅಪರೂಪದ ಸುಂದರಿ ಸುಲಕ್ಷಣಾಳನ್ನು ಒಪ್ಪಿ, ಅವಳ ಭಾವನೆಗಳಿಗೆ ಸ್ಪಂದಿಸಿ, ಅವಳಿಗೊಂದು ಬಾಳು ಕೊಟ್ಟಿದ್ದರೆ ಎಲ್ಲಿ ಇವನ ಬಾಳೂ ಹಸನಾಗುತ್ತಿತ್ತೇನೋ!? ಯಾರಿಗೆ ಗೊತ್ತು. ಒಂದು ಅದ್ಭುತ ಫಿಲ್ಮಿ ಜೋಡಿಯಂತೂ ಆಗುತ್ತಿತ್ತು. ಅದರಲ್ಲಿ ಡೌಟೇ ಇಲ್ಲ. ಅವರಿಬ್ಬರ ಮಧ್ಯೆ super chemistry ಇತ್ತು.

ಏನು ಮಾಡಲಿಕ್ಕೆ ಬರುತ್ತದೆ? ಸಂಜೀವ್ ಕುಮಾರ್ ನೂತನ್, ಹೇಮಾಮಾಲಿನಿಯ ಗುಂಗಿನಿಂದ ಹೊರಗೇ ಬರಲಿಲ್ಲ. ಅದರಲ್ಲೇ ಕೊರಗಿ ಕೊರಗಿ ಕಳೆದುಹೋದ. ಸತ್ತೂಹೋದ. ಸುಲಕ್ಷಣಾ ಅವನ ಗುಂಗಿನಲ್ಲಿ ಕಳೆದುಹೋಗಿದ್ದಾಳೆ. ಜೀವಂತ ಶವದಂತೆ ಬದುಕಿದ್ದಾಳೆ. ಮುಂದೇನೋ ಗೊತ್ತಿಲ್ಲ. ಒಟ್ಟಿನಲ್ಲಿ ಈ ಜೋಡಿಯದು ದುರಂತ ಕಥೆ.

ಸುಲಕ್ಷಣಾ ಪಂಡಿತ್

5 comments:

Unknown said...

Very interesting life story and so tragic.First love is never forgotten... Maybe Bollywood should consider making a movie from this story

Mahesh Hegade said...

Thank you Radha Kulkarni madam.

sunaath said...

ಈ ಪಂಡಿತ್ ಕುಟುಂಬವು ಎಷ್ಟೆಲ್ಲ ಆಘಾತಗಳಿಗೆ ಒಳಗಾಗಿದೆ ಎಂದು ಓದಿ ವ್ಯಥೆಯಾಯಿತು. ಸುಲಕ್ಷಣಾ ಭ್ರಮೆಗೊಳಗಾಗಿದ್ದಾರೆ; ಆದರೆ ವಿಜೇತಾ ಈ ಎಲ್ಲ ವಿಪತ್ತುಗಳನ್ನು ಎದುರಿಸಿ ನಿಲ್ಲಬೇಕಲ್ಲ. ದೇವರು ವಿಜೇತಾರಿಗೆ ಸ್ಥೈರ್ಯವನ್ನು ಕೊಡಲಿ ಎಂದು ಪ್ರಾರ್ಥಿಸುತ್ತೇನೆ.

Arun Gullapura said...


Very touching!

Remember an excellent scene of munji, probably in "Upanayan" movie.

Mahesh Hegade said...

Thank you Sunaath Sir.