Monday, March 06, 2017

ಡಾ. ಪ್ರಕಾಶ್ ಆಮ್ಟೆ

Dr. Prakash Baba Amte – The Real Hero : ಸಮಾಜಸೇವಕ ಪ್ರಕಾಶ್ ಆಮ್ಟೆ ಅವರ ಜೀವನಾಧಾರಿತ ಚಿತ್ರ.

ಬಾಬಾ ಆಮ್ಟೆ ಅವರ ಹೆಸರು ಚಿರಪರಿಚಿತ. ಖಡಕ್ ಗಾಂಧಿವಾದಿ. ಸ್ವಾತಂತ್ರ್ಯಪೂರ್ವದಲ್ಲೇ ನಿಷೇಧಿತ ಸಾಮಾಜಿಕ ಸುಧಾರಣಾ ಕಾರ್ಯಗಳಾದ ಶೌಚಾಲಯ ಸ್ವಚ್ಛತೆ, ಕುಷ್ಠರೋಗಿಗಳ ಆರೈಕೆಗಳಲ್ಲಿ ತೊಡಗಿಸಿಗೊಂಡವರು. ಏಷ್ಯಾದ ನೊಬೆಲ್ ಪ್ರಶಸ್ತಿಯೆಂದೇ ಖ್ಯಾತವಾದ ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು ಪಡೆದುಕೊಂಡವರು.

ಅಂತಹ ಬಾಬಾ ಆಮ್ಟೆಯವರ ಪುತ್ರ ಪ್ರಕಾಶ್ ಆಮ್ಟೆ. ತಂದೆಗೆ ತಕ್ಕ ಮಗ. ವೃತ್ತಿಯಿಂದ ವೈದ್ಯರು. ಪ್ರಕಾಶರ ಅಣ್ಣ ವಿಕಾಸರಿಗೆ ಇಂಜಿನಿಯರ್ ಆಗಬೇಕೆಂದಿತ್ತು. ‘ನಿಮ್ಮಲ್ಲಿ ಒಬ್ಬರು ಇಂಜಿನಿಯರ್, ಇನ್ನೊಬ್ಬರು ಡಾಕ್ಟರ್ ಆಗಬೇಕು ಅಂದರೆ ಖರ್ಚು ನಿಭಾಯಿಸುವದು ಬಡವನಾದ ನನಗೆ ಕಷ್ಟ. ಒಬ್ಬರು ಓದಿದ ಪುಸ್ತಕ ಇನ್ನೊಬ್ಬರು ಓದುವಂತಾದರೆ ಎಷ್ಟೋ ಖರ್ಚು ಉಳಿತಾಯವಾದಂತಾಗುತ್ತದೆ. ಹಾಗಾಗಿ ಇಬ್ಬರೂ ಒಂದೇ ವಿಷಯ ಓದಿ. ಯಾವ ವಿಷಯ ಅಂತ ನಿಮಗೆ ಬಿಟ್ಟಿದ್ದು. ಇಬ್ಬರೂ ಇಂಜಿನಿಯರಿಂಗ್ ಓದಿ ಅಥವಾ ಮೆಡಿಕಲ್ ಓದಿ,’ ಎಂದು ಹೇಳಿದ ತಂದೆ ಬಾಬಾ ಆಮ್ಟೆ ಖಾಲಿ ಕೈ ತೋರಿಸಿದ್ದರು. ಇದ್ದಬಿದ್ದ ದುಡ್ಡನ್ನೆಲ್ಲ ಸಮಾಜಸೇವೆಗೇ ವ್ಯಯಿಸಿದ್ದ ಅವರು ಸುಳ್ಳನ್ನೇನೂ ಹೇಳಿರಲಿಲ್ಲ.

ತಮ್ಮ ಪ್ರಕಾಶನ ಆಸೆ ನೆರವೇರಿಸಲು ಅಣ್ಣ ವಿಕಾಸ್ ಸಹ ಮೆಡಿಕಲ್ ಆಯ್ದುಕೊಂಡರು. ಇಬ್ಬರೂ ನಾಗಪುರ್ ಮೆಡಿಕಲ್ ಕಾಲೇಜ್ ಸೇರಿದರು. ವೈದ್ಯಕೀಯ ಪದವಿ ಪಡೆದುಕೊಂಡರು. ಪ್ರಕಾಶ್ ಮಾಸ್ಟರ್ ಡಿಗ್ರಿ ಸಹ ಶುರು ಮಾಡಿದ್ದರು. ಆಗ ಸಮಾಜಸೇವೆ ಕೈಬೀಸಿ ಕರೆಯಿತು. ಮಾಸ್ಟರ್ ಡಿಗ್ರಿಯನ್ನು ಅರ್ಧಕ್ಕೆ ಬಿಟ್ಟು ಮಹಾರಾಷ್ಟ್ರದ ಗೊಂಡಾರಣ್ಯದ ಮೂಲೆಯಲ್ಲಿದ್ದ ಹೇಮಲಕಸಾ ಪ್ರದೇಶಕ್ಕೆ ಹೊರಟರು. ಮೆಡಿಕಲ್ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಮಂದಾಕಿನಿ ದೇಶಪಾಂಡೆ ಅಷ್ಟೊತ್ತಿಗೆ ಪ್ರಕಾಶರ ಪತ್ನಿಯಾಗಿದ್ದರು.

ಮಹಾರಾಷ್ಟ್ರ ಮತ್ತು ಚತ್ತೀಸಘರ್ ಸರಹದ್ದಿನಲ್ಲಿರುವ ಹೇಮಲಕಸಾ ಕಾಡುಪ್ರದೇಶ ಇವರ ಕರ್ಮಭೂಮಿಯಾಯಿತು. ಅಲ್ಲಿರುವ ಆದಿವಾಸಿಗಳಿಗೆ ಎಲ್ಲ ತರಹದ ಸಹಾಯ ಮಾಡುವದು, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವದು ಆಮ್ಟೆ ದಂಪತಿಗಳ ಜೀವನದ ಪರಮೋಚ್ಛ ಧ್ಯೇಯವಾಯಿತು. ಅಲ್ಲಿನ ಆದಿವಾಸಿಗಳಿಗೆ ಹೊರಗಿನ ಜನಸಂಪರ್ಕವೇ ಇರಲಿಲ್ಲ. ಆಮ್ಟೆ ದಂಪತಿಗಳು ಧೃತಿಗೆಡಲಿಲ್ಲ. ನಿಧಾನವಾಗಿ ಆದಿವಾಸಿಗಳ ಮನಸ್ಸು ಮತ್ತು ಹೃದಯವನ್ನು ಗೆದ್ದರು. ಯಾವ ಪ್ರಾಥಮಿಕ ಸೌಲಭ್ಯಗಳೂ ಇಲ್ಲದ ಆ ಕಾಡಿನ ಕೊಂಪೆಯಲ್ಲಿ ಸಂಪೂರ್ಣ ಸ್ವಪ್ರಯತ್ನದಿಂದ ಆಸ್ಪತ್ರೆ, ಶಾಲೆ ಇತ್ಯಾದಿಗಳನ್ನು ಸ್ಥಾಪಿಸಿದರು. ಜವಾನನಿಂದ ಹಿಡಿದು ಡಾಕ್ಟರ್ ವರೆಗೆ ಎಲ್ಲ ರೀತಿಯ ಕೆಲಸಗಳ್ನೂ ತಾವೇ ಮಾಡಿದರು. ಅವರ ಸೇವೆಯಿಂದ ಪ್ರಭಾವಿತರಾದ ಒಂದಿಷ್ಟು ಜನ ಆಮ್ಟೆ ದಂಪತಿಗಳ ಸಹಾಯಕ್ಕೆ ನಿಂತರು. ಆಗ ಅವರ ಸಂಘಟನೆಗೆ ಹೆಚ್ಚಿನ ಶಕ್ತಿ ಬಂತು. ಅದನ್ನೆಲ್ಲ ಆದಿವಾಸಿಗಳ ಏಳ್ಗೆಗೆ ವಿನಿಯೋಗಿಸಿದರು.

ಮನುಷ್ಯರ ಸೇವೆ ಮಾಡೋಣ ಅಂತ ಬಂದಿದ್ದರು. ಒಂದಿಷ್ಟು ಕಾಡು ಪ್ರಾಣಿಗಳೂ ಜೊತೆಯಾದವು. ಬೇರೆಬೇರೆ ಕಾರಣಗಳಿಂದ ಅನಾಥವಾದ ಕಾಡುಪ್ರಾಣಿಗಳು. ನೋಡಿದರೆ ಪ್ರಾಣಿಸಂಗ್ರಹಾಲಯ ಅನ್ನಿಸಬೇಕು. ಹಾಗೆಂದರೆ ಪ್ರಕಾಶ್ ಆಮ್ಟೆ ತಿದ್ದುತ್ತಾರೆ – ‘ಇದು ಪ್ರಾಣಿಸಂಗ್ರಹಾಲಯವಲ್ಲ. ಪ್ರಾಣಿಗಳ ಅನಾಥಾಲಯ.’ ಅವರ ಪ್ರೀತಿಯ ಆಶ್ರಯ ಪಡೆದ ಹುಲಿ, ಚಿರತೆಗಳಂತಹ ಕ್ರೂರ ಪ್ರಾಣಿಗಳೂ ಸಹ ಸಾಕು ಬೆಕ್ಕುಗಳಂತಾಗಿಬಿಟ್ಟಿವೆ.

ಪ್ರಕಾಶ್ ಆಮ್ಟೆಯವರಿಗೂ ಖ್ಯಾತ ಮ್ಯಾಗ್ಸೆಸ್ಸೆ ಪ್ರಶಸ್ತಿ ದೊರೆತಿದೆ. ತಂದೆ ಮತ್ತು ಮಗನ ಜೋಡಿಯೊಂದು ಮ್ಯಾಗ್ಸೆಸ್ಸೆ ಪ್ರಶಸ್ತಿಯನ್ನು ಪಡೆದಿರುವದು ಇದೇ ಮೊದಲು.

ಡಾ. ಪ್ರಕಾಶ್ ಮತ್ತು ಮಂದಾಕಿನಿ ಆಮ್ಟೆ 

ಇಂತಹ ಅದ್ಬುತ ವ್ಯಕ್ತಿಯ ಜೀವನಚರಿತ್ರೆಯನ್ನು ಸಿನೆಮಾ ಮಾಡಲಾಗಿದೆ. ಪ್ರಕಾಶ್ ಆಮ್ಟೆಯವರ ಪಾತ್ರದಲ್ಲಿ ನಾನಾ ಪಾಟೇಕರ್ ಅದ್ಭುತವಾಗಿ ಅಭಿನಯಿಸಿದ್ದಾರೆ. ಮಂದಾಕಿನಿ ಆಮ್ಟೆ ಪಾತ್ರವನ್ನು ಸೋನಾಲಿ ಕುಲಕರ್ಣಿ ಅಷ್ಟೇ ಸೊಗಸಾಗಿ ನಿಭಾಯಿಸಿದ್ದಾರೆ.

ಸಮಾಜಸೇವೆ ಎಂದರೆ ಏನು ಅಂತ ತಿಳಿಯಬೇಕಾದರೆ ಪ್ರಕಾಶ್ ಆಮ್ಟೆ ಅಂತಹವರ ಜೀವನನ್ನು ನೋಡಿ ಅರಿಯಬೇಕು. ಸಮಾಜಸೇವೆಗೆ benchmark ಅಂತ ಏನಾದರೂ ಇದ್ದರೆ ಅದು ಪ್ರಕಾಶ್ ಆಮ್ಟೆ ತರಹದವರ ಜೀವನವೇ ಇರಬೇಕು. ಸರಕಾರದ ಸಹಕಾರ ಹಾಳಾಗಿ ಹೋಗಲಿ. ಸರಕಾರ ಎಲ್ಲ ತರಹದ ಅಡೆತಡೆಗಳನ್ನು ಒಡ್ಡಿದಾಗಲೂ ವಿಚಲಿತರಾಗದೇ ತಪಸ್ಸಿನಂತೆ ನಿಕೃಷ್ಟರ ಸೇವೆ ಮಾಡುವದಿದೆಯಲ್ಲ, ಅದಕ್ಕೊಂದು hats off. ಕೇವಲ ಮಹಾತ್ಮರು ಮಾತ್ರ ಮಾಡಬಹುದಾದಂತಹ ಸಾಧನೆ ಅದು.

4 comments:

sunaath said...

ಬಾಬಾ ಆಮ್ಟೆಯವರ ಬಗೆಗೆ ತಿಳಿದಿದ್ದ ನನಗೆ, ಪ್ರಕಾಶ ಆಮ್ಟೆಯವರ ಬಗೆಗೆ ನೀವು ಬರೆದ ಪರಿಚಯವನ್ನು ಓದಿ ಖುಶಿಯಾಯಿತು. Great father and great son! ನಾನಾ ಪಾಟೇಕರರ ಅಭಿನಯವು rough & roaring ಪಾತ್ರಗಳಿಗೆ ಸರಿ ಹೊಂದುವುದು ಎಂದು ನನ್ನ ಭಾವನೆ. ಪ್ರಕಾಶ ಆಮ್ಟೆಯಂತಹ ಮೃದು ಮನುಷ್ಯನ ಪಾತ್ರ ಪಾಟೇಕರರಿಗೆ ಹೊಂದಿಕೆಯಾಯಿತೆ? ಚಿತ್ರದ ಟ್ರೇಲರ್ ನೋಡಿದಾಗ, ಅವರ ಅಭಿನಯದ ಬಗೆಗೆ ವಿಶೇಷವಾಗಿ ಗೊತ್ತಾಗಲಿಲ್ಲ.

Mahesh Hegade said...

ಕಾಮೆಂಟಿಗೆ ಧನ್ಯವಾದ ಸುನಾಥ್ ಸರ್. ಪ್ರಕಾಶ್ ಆಮ್ಟೆಯವರ ಪಾತ್ರದಲ್ಲಿ ತುಂಬಾ intensity ಇದೆ. ಅದನ್ನು ನಾನಾ ಅದ್ಭುತವಾಗಿ ತೆರೆ ಮೇಲೆ ತಂದಿದ್ದಾರೆ.

Anantha Krishna said...

ನಿನ್ನೆ ಕೌನ್ ಬನೇಗಾ ಕರೋಡ್ ಪತಿ ನೋಡಿದಾಗಲೇ ಡಾ ಪ್ರಕಾಶ್ ಆಮ್ಟೆ ಹಾಗೂ ಡಾ.ಮಂದಾಕಿನೀ ಆಮ್ಟೆ ಅವರ ಕುಱಿತು ಗೊತ್ತಾಗಿದ್ದು. ಇವರಿಬ್ಬರ ಸಮಾಜಸೇವೆ ಶ್ಲಾಘನೀಯ.

Mahesh Hegade said...

ನಿಮ್ಮ ಕಾಮೆಂಟಿಗೆ ಧನ್ಯವಾದಗಳು, ಅನಂತ ಕೃಷ್ಣ.