Saturday, March 11, 2017

ಕೋರಂಟಿ.....The Qurantine

'ನಮ್ಮ ವಿಮಾನ ಈಗ ಟಾಂಜಾನಿಯಾದ ದಾರ್-ಏ-ಸಲಾಮ್ ವಿಮಾನನಿಲ್ದಾಣದಲ್ಲಿ ಇಳಿಯಲು ಸಜ್ಜಾಗುತ್ತಿದೆ. ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಿ, ಮುಂದಿರುವ ಟ್ರೇ ಟೇಬಲ್ ಮಡಚಿಟ್ಟು, ಸೀಟನ್ನು ಸೀದಾ ಮಾಡಿಕೊಂಡು ಕುಳಿತು ಸಹಕರಿಸಬೇಕಾಗಿ ವಿನಂತಿ' - ಗಗನಸಖಿಯ ಇಂಪಾದ ದನಿ ತಂಪಾಗಿ ತೇಲಿಬಂತು.

ಅಕ್ಟೋಬರ್ ೧೧, ೧೯೯೫. ಮುಂಬೈನಿಂದ ಎಂಟು ತಾಸುಗಳ ಪಯಣದ ಬಳಿಕ ಟಾಂಜಾನಿಯಾ ತಲುಪಲಿದ್ದೆ. ಸಿಕ್ಕಾಪಟ್ಟೆ excitement. ಹೇಳಿಕೇಳಿ ಆಫ್ರಿಕಾ. ಕಪ್ಪುಖಂಡ ಆಫ್ರಿಕಾ ಬಗ್ಗೆ ಕೇಳಿದ್ದು, ಓದಿದ್ದು ಎಲ್ಲ ಬಹಳವಿತ್ತು. ಇನ್ನು ಕೆಲವೇ ನಿಮಿಷಗಳಲ್ಲಿ ಪ್ರತ್ಯಕ್ಷ ದರ್ಶನವಾಗಲಿದೆ. ಹೇಗಿರುತ್ತದೆಯೋ ಏನೋ? ವಿಮಾನ ಕೆಳಗಿಳಿಯುತ್ತಿದ್ದಂತೆಯೇ ಎಲ್ಲಿ ಕಾಡುಜನರು ಬಂದು 'ಜಿಂಗಾಚಿಕ್ಕಾ ಜಿಂಗಾಲೆ. ಜಿಂಗಾಚಿಕ್ಕಾ ಜಿಂಗಾಲೆ,' ಎಂದು ಕಾಡು ನೃತ್ಯ ಶುರು ಮಾಡುತ್ತಾರೇನೋ! ಎಲ್ಲಿ runway ಮೇಲೆಯೇ ಕಾಡುಪ್ರಾಣಿಗಳು ಓಡಾಡಿಕೊಂಡಿರುತ್ತವೆಯೋ ಏನೋ! ಯಾರಿಗೆ ಗೊತ್ತು? ಆಫ್ರಿಕಾದಲ್ಲಿ  ಏನೂ ಆಗಬಹುದು. totally unpredictable ಅಂತ ಕೇಳಿದ್ದೆ. ಮತ್ತೆ ಆಫ್ರಿಕಾದ ಬಗ್ಗೆ ಸಿಕ್ಕಾಪಟ್ಟೆ impression ಮಾಡಿದ ಚಿತ್ರ Gods must be crazy (ಭಾಗ ೧ & ೨). ಅದರ ಗಾಢವಾದ ಪ್ರಭಾವ ಇತ್ತು ನೋಡಿ.

ಆಗೆಲ್ಲ ವಿಮಾನದಲ್ಲಿ ವಿಂಡೋ ಸೀಟ್ ಹಿಡಿದು ಪ್ರಯಾಣಿಸುವ ಚಟ ಇತ್ತು. ಅಜ್ಜನಮನೆ ಸಿರ್ಸಿಗೆ ಹೋಗುವಾಗ ಬಸ್ಸಿನಲ್ಲಿ ಕಿಡಕಿ ಪಕ್ಕದ ಸೀಟಿಗಾಗಿ ಯುದ್ಧ, ರಕ್ತಪಾತ ಮಾಡಿ ಬಂದ ನಮಗೆ ವಿಮಾನದಲ್ಲಿ ಕೇಳಿದರೆ ಕಿಡಕಿ ಪಕ್ಕದ ಸೀಟನ್ನು ನಗುತ್ತ ಕೊಡುತ್ತಾರೆ ಅನ್ನುವದೇ ದೊಡ್ಡ ಮಾತಾಗಿತ್ತು. ಮುಂಬೈನಲ್ಲಿ ಕೇಳಿ ಕಿಡಕಿ ಸೀಟು ಪಡೆದುಕೊಂಡಿದ್ದೆ. ಅಂತಹ ಕಿಡಕಿ ಸೀಟಿನಿಂದ ಕೆಳಗೆ ಬಗ್ಗಿ ನೋಡಿದರೆ  ರಮಣೀಯ ಅರಬ್ಬೀ ಸಮುದ್ರ. ಕೊಲ್ಲಿಯಂತೆ ಕೊರೆದು ಒಳಗೆ ಬಂದಿತ್ತು. ನಮ್ಮ ದೇಶದಲ್ಲಿ ಅರಬ್ಬೀ ಸಮುದ್ರವನ್ನು ಕುಮಟಾ, ಗೋವಾ, ಕಾರವಾರದಲ್ಲಿ ನೋಡಿದ್ದೆ. ಆದರೆ ಆಫ್ರಿಕಾದಲ್ಲಿ ಅರಬ್ಬೀ ಸಮುದ್ರಕ್ಕಿರುವ ಲುಕ್ಕೇ ಬೇರೆ. ಒಂದು ತರಹದ mesmerizing effect.

ಕೊಲ್ಲಿ ಸುತ್ತ ಒಂದು ರೌಂಡ್ ಹೊಡೆದ ಏರ್ ಇಂಡಿಯಾದ ವಿಮಾನ  ಇಳಿಯಲು ಆರಂಭಿಸಿತು. ದಾರ್-ಏ-ಸಲಾಮ್ ನಗರ ಸ್ಪಷ್ಟವಾಗಿ ಕಾಣತೊಡಗಿತು. ಎಲ್ಲೂ ಕಾಡು, ಕಾಡು ಪ್ರಾಣಿಗಳು ಕಾಣಿಸಲಿಲ್ಲ. ನಾಡು ಮತ್ತು ನಾಡು ಪ್ರಾಣಿಗಳೇ ಕಂಡವು. ಎಲ್ಲ ದೊಡ್ಡ ನಗರಗಳಲ್ಲಿ ಇರುವಂತೆ ಸ್ಲಮ್ಮು, ಟ್ರಾಫಿಕ್ ಎಲ್ಲ ಕಂಡಿತು. ಒಳ್ಳೇದು. ನಮ್ಮ ದೇಶ ಇದ್ದಂತೆಯೇ ಇದೆ. ಅಲ್ಲಿ ನಮ್ಮ ಭಾರತ ಮೂಲದ ಜನರಂತೂ ಭರಪೂರ ಇದ್ದಾರೆ ಅಂತ ಗೊತ್ತಿತ್ತು. ಬಾಕಿ ಎಲ್ಲ ಸಹಿತ ನಮ್ಮ ದೇಶ ಇದ್ದಂತೆಯೇ ಇದೆ. ಒಳ್ಳೆಯದೇ ಆಯಿತು.

ವಿಮಾನ ಯಾವದೇ ತೊಂದರೆಯಿಲ್ಲದೆ ಲ್ಯಾಂಡ್ ಆಯಿತು. Jetway ಇರಲಿಲ್ಲ. ಮೆಟ್ಟಿಲುಗಳಿರುವ ಸಾದಾ ಏಣಿಯನ್ನು ಹಾಕಿದ್ದರು. ಇಳಿದು ಬಂದರೆ ಮೈಗೆ ರಾಚಿದ್ದು ರಣ ರಣ ಬಿಸಿಲು. ಭೂಮಧ್ಯರೇಖೆಯಿಂದ (equator) ಕೊಂಚ ಮಾತ್ರ ಕೆಳಗಿರುವ ಪ್ರದೇಶ. ಹಾಗಾಗಿ ಬಿಸಿಲು ಜಾಸ್ತಿ. ಆವಾಗ ಇನ್ನೂ ಬೆಳಿಗ್ಗೆ ಒಂಬತ್ತು ಘಂಟೆ ಸಮಯ. ಆವಾಗಲೇ ಅಷ್ಟು ಬಿಸಿಲು. ಇನ್ನು ಮಧ್ಯಾಹ್ನವಾದಂತೆ ಹೇಗಿರುತ್ತದೋ ಏನೋ.

ವಿಮಾನ ನಿಲ್ದಾಣ ಸಾಕಷ್ಟು ದೊಡ್ಡದಾಗಿತ್ತು. ಬೇರೆ ಬೇರೆ ದೇಶಗಳ ಸುಮಾರು ವಿಮಾನಗಳು ಕಂಡುಬಂದವು. Runway ಮೇಲೆ ಯಾವ ಕಾಡುಪ್ರಾಣಿಗಳೂ ಕಂಡುಬರಲಿಲ್ಲ. ಕಾಡುಜನರೂ ಕಂಡುಬರಲಿಲ್ಲ. ಅಷ್ಟರಮಟ್ಟಿಗೆ ನೆಮ್ಮದಿ. ನಿರಾಳ.

ಮೆಟ್ಟಿಲಿರುವ ಏಣಿ ಇಳಿದು ಒಂದು ನೂರು ಹೆಜ್ಜೆ ದೂರದಲ್ಲಿ arrival lounge ಇತ್ತು. ಒಳಗೆ ಬಂದರೆ ಅಲ್ಲೂ ಸಿಕ್ಕಾಪಟ್ಟೆ ಸೆಕೆ. ಮೂಲೆಯಲ್ಲಿದ್ದ AC ಗೊಳೋ ಎಂದು ತಿಣುಕಾಡುತ್ತಿತ್ತು.

ಎಲ್ಲಿ ನೋಡಿದರೂ ಕಪ್ಪು ಜನರು. ಕಪ್ಪುಖಂಡದಲ್ಲಿ ಕಪ್ಪು ಜನರಲ್ಲದೇ ಮತ್ಯಾರು ಇರುತ್ತಾರೆ? ಆದರೂ ಕಪ್ಪು ಜನರು ಅಂದರೆ ಏನೋ ಒಂದು ತರಹದ uneasiness. ಅದು ನಮ್ಮ ಪೂರ್ವಗ್ರಹ (prejudice). ದರಿದ್ರ ಅಮೇರಿಕನ್ ಹಾಲಿವುಡ್ ಮೂವಿಗಳ ಪ್ರಭಾವ. ಅವುಗಳಲ್ಲಿ ಕಪ್ಪು ಜನರನ್ನು ಸಿಕ್ಕಾಪಟ್ಟೆ ಖರಾಬ್ ಬೆಳಕಿನಲ್ಲಿ ತೋರಿಸಿ ಕಪ್ಪು ಜನರ ಬಗ್ಗೆ ಒಂದು ತರಹದ  ಭಯ ಹುಟ್ಟಿಸಿಬಿಟ್ಟಿರುತ್ತಾರೆ. ಆದರೆ ಆಫ್ರಿಕಾದ ಕಪ್ಪು ಜನ ಎಷ್ಟು  ಒಳ್ಳೆಯವರು, ಎಷ್ಟು ಮುಗ್ಧರು, ಎಷ್ಟು ಸರಳ ಜನ ಅಂತೆಲ್ಲ ಆಮೇಲೆ ಗೊತ್ತಾಯಿತು. ಅದರಲ್ಲೂ ಮಿಲಿಟರಿ ಸಮವಸ್ತ್ರ ಧರಿಸಿ, ಏಕೆ-೪೭ ಬಂದೂಕು ಹಿಡಿದು ಓಡಾಡುತ್ತಿದ್ದ ಪೋಲಿಸ್ ಮಂದಿಯಂತೂ ಪುರಾಣದ ರಾಕ್ಷಸರನ್ನು ನೆನಪಿಸುವಂತಿದ್ದರು. ಏರ್ಪೋರ್ಟ್ ಬಿಟ್ಟು ಹೊರಗೆ ಹೋಗಿ ತಣ್ಣನೆ ಸ್ಟಾಫ್ ಕ್ವಾರ್ಟರ್ಸ್ ಸೇರಿಕೊಂಡರೆ ಸಾಕು ಅನ್ನಿಸಿತ್ತು.

ಪಾಸ್ಪೋರ್ಟ್, ವೀಸಾ ತಪಾಸಣೆ ಎಲ್ಲ ಆಯಿತು. ಎಲ್ಲ ಸರಿಯಾಗಿತ್ತು. ಇನ್ನೇನು ಲಗೇಜ್ ಸಂಗ್ರಹಿಸಿಕೊಂಡು ಹೊರಗೆ ಹೋಗೋಣ ಅನ್ನುವಷ್ಟರಲ್ಲಿ ಮತ್ತೊಂದು formality ಬಗ್ಗೆ ಒಬ್ಬ ಕಪ್ಪು ಮನುಷ್ಯ ಬಂದು ಹೇಳಿದ.

ಹಳದಿ ಜ್ವರದ ಲಸಿಕೆ (yellow fever vaccination) ಹಾಕಿಸಿಕೊಂಡಿದ್ದರ ಪ್ರಮಾಣಪತ್ರ. ನೆನಪಾಯಿತು. ಆಫ್ರಿಕಾಗೆ ಹೋಗಬೇಕು ಅಥವಾ ಆಫ್ರಿಕಾದಿಂದ ಬರಬೇಕು ಅಂದರೆ ಈ ಲಸಿಕೆಯ ಅಗತ್ಯವಿತ್ತು. ಅದೇ ಪ್ರಕಾರ ಮುಂಬೈನಲ್ಲಿ ಲಸಿಕೆ ಹಾಕಿಸಿ, ಸರಿಯಾದ ಪ್ರಮಾಣಪತ್ರ ತೆಗೆದುಕೊಂಡಿದ್ದೆ. ಅದನ್ನು ಭಯ ಭಕ್ತಿಯಿಂದ ತೋರಿಸಿದೆ.

ನೋಡಿದ ಕಪ್ಪು ಮನುಷ್ಯ ತನ್ನ ಕಪ್ಪು ಮೊಗದಲ್ಲಿ ಅಷ್ಟೂ ಬಿಳಿ ಹಲ್ಲುಗಳನ್ನು ತೋರಿಸುತ್ತ ವಿಚಿತ್ರವಾಗಿ ನಕ್ಕ. ಅವನ  ಪಕ್ಕದಲ್ಲಿ, ಒಂದು ಕಡೆ, ಆಗಲೇ ಒಂದಿಷ್ಟು ಪ್ರಯಾಣಿಕರ ಗುಂಪು ಸೇರತೊಡಗಿತ್ತು. ನನಗೂ ಅಲ್ಲೇ ಹೋಗಿ ನಿಲ್ಲು ಅಂದ. ನಾನು ಕೇಳುವ ಮೊದಲೇ, 'ನಿನ್ನ ಹಳದಿ ಜ್ವರದ ಲಸಿಕೆ ಸರ್ಟಿಫಿಕೇಟ್ ಸರಿ ಇಲ್ಲ!' ಅಂದುಬಿಟ್ಟ. ಅರೇ ಇಸ್ಕಿ! ಲಸಿಕೆ ಹಾಕಿಸಿಕೊಂಡು, ಸರ್ಟಿಫಿಕೇಟ್ ತೆಗೆದುಕೊಂಡು ಹೋಗಬೇಕು ಅಂತ ಹೇಳಿದ್ದರು. ಅದೇ ಪ್ರಕಾರ ಮಾಡಿದ್ದೆ. ಇಲ್ಲಿ ನೋಡಿದರೆ ಲಸಿಕೆ ಸರ್ಟಿಫಿಕೇಟ್ ಸರಿಯಿಲ್ಲ ಅನ್ನುತ್ತಿದ್ದಾನೆ. ಏನಿದರರ್ಥ!? ತಿಳಿಯಲಿಲ್ಲ.

ಸ್ವಲ್ಪ ಹೊತ್ತಿನ ನಂತರ ಎಲ್ಲ ಪ್ರಯಾಣಿಕರ ಲಸಿಕೆ ಪ್ರಮಾಣಪತ್ರದ ಪರಿಶೀಲನೆ ಮುಗಿಯಿತು. ಒಂದು ಹತ್ತು ಹದಿನೈದು ಜನ ನನ್ನಂತವರಿದ್ದರು. ಲಸಿಕೆ ಪ್ರಮಾಣಪತ್ರದ ಪ್ರಾಬ್ಲಮ್ ಜನ. ನಮ್ಮನ್ನೆಲ್ಲ ಅಲ್ಲೇ ಪಕ್ಕದಲ್ಲಿದ್ದ ಒಂದು ಕೋಣೆಗೆ ಹೋಗುವಂತೆ ಹೇಳಿದ. ಹಿಂದೆ ಅವನೂ ಬಂದ. ದನದ ದೊಡ್ಡಿಯೊಳಗೆ ದೂಡಿಸಿಕೊಂಡಂತಾಯಿತು.

'ನಿಮ್ಮ ಲಸಿಕೆ ಪ್ರಮಾಣ ಪತ್ರಗಳು ಸರಿಯಿಲ್ಲ. ನಿಮ್ಮಗಳನ್ನು quarantine ನಲ್ಲಿ ಹೆಚ್ಚಿನ ವೀಕ್ಷಣೆಗೆ ಇಡಲಾಗುತ್ತದೆ. ಅದು ಇಲ್ಲಿನ ನಿಯಮ. ನಿಮ್ಮ ಆರೋಗ್ಯದಲ್ಲಿ ಯಾವದೇ ತೊಂದರೆಯಿಲ್ಲ ಅಂತ ಸರ್ಕಾರಿ ವೈದ್ಯರು ಖಾತ್ರಿ ಮಾಡಿದ ಮೇಲೆಯೇ ನಿಮ್ಮನ್ನು ಹೊರಗೆ ಬಿಡಲಾಗುತ್ತದೆ. ಏನೂ ಭಯಪಡುವ ಕಾರಣವಿಲ್ಲ. ಆರಾಮಾಗಿರಿ,' ಅಂದವನೇ ಹೀ ಹೀ ಅಂತ ಮೈಯನ್ನೆಲ್ಲ ಕುಲುಕಿಸಿ ನಕ್ಕ. ಅದೇನೋ ಗೊತ್ತಿಲ್ಲ. ಆಫ್ರಿಕಾದ ಕಪ್ಪು ಜನ ಸುಖಜೀವಿಗಳು. ಮಾತಿಗೊಮ್ಮೆ ಎದೆಯಾಳದಿಂದ ಡೀಪಾಗಿ ನಗುತ್ತಾರೆ. ಅವರು ನಗುವದನ್ನು ನೋಡಿದರೆ ನಮಗೆ ನಗು ಬರುತ್ತದೆ. ಅಥವಾ ನಮ್ಮ ಪರಿಸ್ಥಿತಿ ಖರಾಬ್ ಇದ್ದರೆ irritate ಆಗಿ ಸಿಟ್ಟು ಬರುತ್ತದೆ. ನುಣ್ಣಗೆ ಬೋಳಿಸಿಕೊಂಡಿದ್ದ ಆ ಕರಿಯನ ತಲೆಬುರುಡೆಗೆ ಚಡಾಪಡಾ ತಟ್ಟುವಷ್ಟು ಸಿಟ್ಟು ಬಂತು. ಎಂಟು ತಾಸುಗಳ ಪಯಣದ ನಂತರ ನಮ್ಮ ತಲೆ ಮೊದಲೇ ಹನ್ನೆರಡಾಣೆ ಆಗಿದೆ. ಮನೆಗೆ ಹೋಗಿ ಏನಾದರೂ ತಿಂದು ಕುಡಿದು, ಮುಚ್ಚಾಕಿಕೊಂಡು ಮಲಗೋಣ ಅಂದರೆ ಇವನದ್ದೊಂದು ಕಿರ್ಕಿರಿ. ಮೇಲಿಂದ ನಗುತ್ತಿದ್ದಾನೆ ಬೇರೆ. ಅಧಿಕಪ್ರಸಂಗಿ!

'ಸರ್, ನಮ್ಮ ಹತ್ತಿರ ಲಸಿಕೆ ಪ್ರಮಾಣ ಪತ್ರ ಇದೆ. ಇದರಲ್ಲೇನು ತಪ್ಪಿದೆ!?' ಅಂತ ಒಂದಿಬ್ಬರು ಕೇಳಿದರು. ಉಳಿದ ನಾವೆಲ್ಲಾ ಅವರ ಧ್ವನಿಗೆ ಕೋರಸ್ ಧ್ವನಿ ಕೂಡಿಸಿದೆವು.

'ಹಾಂಗೆ ಕೇಳಿ. ಎಲ್ಲ ಹೇಳ್ತೇನಿ!' ಅನ್ನುವವನಂತೆ ತೊಡೆ ತಟ್ಟಿ ಮತ್ತೆ ನಕ್ಕ ಕರಿಯ 'ನನಗೆ ಗೊತ್ತಿತ್ತು. ನೀವು ಶಾಣ್ಯಾ ಮಂದಿ ಇದನ್ನು ಕೇಳೇ ಕೇಳುತ್ತೀರಿ ಎಂದು,' ಅನ್ನುವ ಲುಕ್ ಕೊಟ್ಟ. ಮತ್ತೆ ಅದೇ ಪ್ಯಾಲಿ ನಗು. ಗಹಗಹಿಸಿ ನಗು. ಅದೊಂದನ್ನು ಅವರಿಂದ ಕಲಿಯಬಹುದು. 'ಆಕಾಶವೇ ಬೀಳಲಿ ಮೇಲೆ, ನಾನಂತೂ ನಗುವವನೇ,' ಅನ್ನುವ ಅವರ carefree ಮನೋಭಾವ.

'ನೋಡಿ, ನಿಮ್ಮಲ್ಲಿ ಕೆಲವು ಜನರ ಹತ್ತಿರ ಲಸಿಕೆ ಸರ್ಟಿಫಿಕೇಟ್ ಇಲ್ಲವೇ ಇಲ್ಲ. ಇನ್ನು ಕೆಲವರ ಹತ್ತಿರ ಇದ್ದವು expire ಆಗಿವೆ,' ಅಂದು suspenseful ಆಗಿ ಮಾತು ನಿಲ್ಲಿಸಿದ.

'ನಾವು  ಅವೆರೆಡೂ ವಿಭಾಗಕ್ಕೆ ಸೇರಿಲ್ಲ. ನಾವು ಹೊಸದಾಗಿ ಲಸಿಕೆ ಹಾಕಿಸಿಕೊಂಡು, ಫ್ರೆಶ್ ಆದ ಗರಿಗರಿ ಸರ್ಟಿಫಿಕೇಟ್  ತಂದಿದ್ದೇವೆ,' ಅಂತ ನಾವುಗಳು ಹೇಳುವ ಮುಂಚೆ ಅವನೇ ಹೇಳಿದ, 'ನಿಮ್ಮ ಸರ್ಟಿಫಿಕೇಟನ್ನು ಸರಿಯಾಗಿ ಓದಿ. ಚಿಕ್ಕ ಅಕ್ಷರಗಳಲ್ಲಿ ಬರೆದಿದ್ದಾರೆ. ಪ್ರಯಾಣಕ್ಕಿಂತ ಕನಿಷ್ಠ ಮೂರು ದಿನ ಮೊದಲು ತೆಗೆದುಕೊಂಡ ಲಸಿಕೆಗಳು ಮಾತ್ರ valid. ಉಳಿದವು invalid!'

ಅಲ್ಲಿಗೆ ಶಿವಾಯ ನಮಃ!

ನಾನಂತೂ ಹೊರಡುವ ದಿನವಷ್ಟೇ ಲಸಿಕೆ ತೆಗೆದುಕೊಂಡಿದ್ದೆ. ಹೊರಡಲು ಮೂರು ದಿನವಿದ್ದಾಗಷ್ಟೇ ಇದೊಂದು ಹೊಸ ಕಂಡೀಶನ್ ಬಗ್ಗೆ ಗೊತ್ತಾಗಿತ್ತು. ಗುಜರಾತಿನ ಅಹಮದಾಬಾದಿನಲ್ಲಿ ಕುಳಿತಿದ್ದ ನೌಕರಿ ಕೊಡಿಸಿದ್ದ ಏಜೆಂಟ್ ಫೋನ್ ಮಾಡಿ, 'ಅದೇನೋ ಹಳದಿ ಜ್ವರದ ಲಸಿಕೆಯಂತೆ. ತೆಗೆದುಕೊಂಡು ಹೋಗಬೇಕಂತೆ,' ಅಂದಿದ್ದ. ಅವನಿಗೂ ಸರಿಯಾದ ಮಾಹಿತಿ ಇರಲಿಲ್ಲ. ಆಗ ನಾನಿದ್ದದ್ದು ಬೆಂಗಳೂರಿನಲ್ಲಿ. 'ಅಲ್ಲೇ ವಿಚಾರಿಸು. ಸಿಗಬಹುದು. ಒಟ್ಟಿನಲ್ಲಿ ಆ ಲಸಿಕೆ ಹಾಕಿಸಿಕೊಂಡೇ ದೇಶ ಬಿಡು,' ಅಂದಿದ್ದ. ಹೊರಡುವ ಮುನ್ನ ಮತ್ತೊಂದು ತಲೆಬಿಸಿ.

ಯಾರ ಹತ್ತಿರ ಕೇಳೋಣ? ಆಗ ನಮ್ಮ ಮನೆಯಿದ್ದ ದೊಮ್ಮಲೂರಿನ ಅಥವಾ ಪಕ್ಕದ ಇಂದಿರಾ ನಗರದಲ್ಲಿದ್ದ ಖಾಸಗಿ ಚಿಕಿತ್ಸಾಲಯಗಳಲ್ಲಿ ಹೋಗಿ ಕೇಳಿದರೆ ಅವರಿಗೆ ಏನೂ ಗೊತ್ತಿರಲಿಲ್ಲ. ಹಳದಿ ಜ್ವರ ಅಂದರೆ ಅವರಿಗೆ ಹಳದಿರಾಮ ಮತ್ತು ಅವನ ಚೂಡಾ, ಸ್ವೀಟ್ಸ್ ನೆನಪಾಗಿರಬೇಕು. ಆ ಯಬಡ ಲುಕ್ ಕೊಟ್ಟರು. ಉಪಯೋಗಿಲ್ಲದವರು ಅಂತ ವಾಪಸ್ ಬಂದೆ.

ಮನೆಯಲ್ಲಿದ್ದ ದೈತ್ಯ ಫೋನ್ ಡೈರೆಕ್ಟರಿ ತೆಗೆದು ಕೂತೆ. ಬೆಂಗಳೂರಿನಲ್ಲಿದ್ದ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಫೋನ್ ಮಾಡಿದೆ. ಅಲ್ಲೂ ಅಷ್ಟೇ. ಮೊದಲೇ ಸರ್ಕಾರಿ ಆಸ್ಪತ್ರೆಗಳು. ಕೆಲವೊಂದು ಕಡೆ ಫೋನ್ ಎತ್ತುವವರಿಗೂ ಗತಿ ಇರಲಿಲ್ಲ. ಉಳಿದ ಕಡೆ ಫೋನೆತ್ತಿ, ತಾಸುಗಟ್ಟಲೇ ಕಾಯಿಸಿದ ನಂತರ 'ನಮಗೆ ಗೊತ್ತಿಲ್ಲ' ಅಂತ ಫೋನಿಟ್ಟರು. ಕೆಲವು ಕಡೆ ಮಾಹಿತಿ ಕೇಳಿ ಫೋನ್ ಮಾಡಿದ್ದೇ ತಪ್ಪೇನೋ ಎಂಬಂತೆ ಬೈದರು. 'ಜನಸೇವೆಯೇ ಜನಾರ್ಧನ ಸೇವೆ,' ಅಂತ ಸರ್ಕಾರ ಲಬೋ ಲಬೋ ಹೊಯ್ಕೊಳ್ಳೋದೇ ಆಯಿತು. ಜನಸೇವೆ ಹೋಗಲಿ ದನಸೇವೆ ಅಂದರೆ ದನಕ್ಕೆ ಬಡಿದಂತೆ ಬಡಿಯಲಿಲ್ಲ ಅನ್ನುವದೇ ದೊಡ್ಡ ಪುಣ್ಯ.

ಒಟ್ಟಿನಲ್ಲಿ ಪ್ರಯಾಣಕ್ಕೆ ಕೇವಲ ಎರಡೇ ದಿನ ಇತ್ತು. ಈ ಹಳದಿ ಜ್ವರದ ಲಸಿಕೆಯ ವಿಷಯ ಇತ್ಯರ್ಥವಾಗದೇ ತಲೆ ಹನ್ನೆರಡಾಣೆಯಾಯಿತು.

ರಾತ್ರಿ ಮಲಗಿದರೆ ಹಳದಿ ಜ್ವರದ ಲಸಿಕೆಯೊಂದೇ ಏನು ಕಾಮನಬಿಲ್ಲಿನಲ್ಲಿರುವ ಏಳೂ ಬಣ್ಣಗಳ ಜ್ವರದ ಲಸಿಕೆ ಹಾಕಿಸಿಕೊಂಡ ಭಯಾನಕ ಕನಸು ಬಿತ್ತು. ಬೆಚ್ಚಿ ಬಿದ್ದೆ. ಎದ್ದೆ. ಬೆಳಗಿನ ಜಾವದಲ್ಲಿ ಒಳ್ಳೆ ನಿದ್ದೆ ಬಂತು. ಎದ್ದಾಗ ಒಂದು ಮಸ್ತ್ ಐಡಿಯಾ ಬಂತು. ಮತ್ತೆ 'ಓಂ ನಮೋ ಬೆಳಗಾಂವಕರಾಯ ನಮಃ!'. ಮಿಸ್ಟರ್ ಬೆಳಗಾಂವಕರ್ ಅವರಿಗೇ ಫೋನ್ ಹಚ್ಚುವದು. ಅದೇ ಒಂದು ಉಳಿದ ದಾರಿ.

ಶ್ರೀ ಬೆಳಗಾಂವಕರ್ - ಧಾರವಾಡ ಮೂಲದ ಖ್ಯಾತ ಕನ್ನಡ ಲೇಖಕಿ / ಕಾದಂಬರಿಗಾರ್ತಿ ಶ್ರೀಮತಿ ಸುನಂದಾ ಮಹಿಷಿ ಬೆಳಗಾಂವಕರ್ ಅವರ ಪತಿ. ಬೆಳಗಾಂವಕರ್ ಕುಟುಂಬ ಸರಿಸುಮಾರು ಮೂವತ್ತು ವರ್ಷ ಆಫ್ರಿಕಾದ ವಿವಿಧ ದೇಶಗಳಲ್ಲಿ ಇದ್ದು ಬಂದಿತ್ತು. ಶ್ರೀ ಬೆಳಗಾಂವಕರ್ ಆಫ್ರಿಕಾದ ವಿವಿಧೆಡೆ ಚಾರ್ಟರ್ಡ್ ಅಕೌಂಟೆಟ್ ಅಂತ ಕೆಲಸ ಮಾಡಿ ನಿವೃತ್ತರಾಗಿದ್ದರು.

೧೯೯೫ ರಲ್ಲಿ ಒಂದು ವರ್ಷದ ಮಟ್ಟಿಗೆ ಆಫ್ರಿಕಾದ ಟಾಂಜಾನಿಯಾಕ್ಕೆ ಹೋಗುವ ಅವಕಾಶ ಬಂದಾಗ ಮೊದಲು ನೆನಪಾದವರೇ ಸುನಂದಾ ಬೆಳಗಾಂವಕರ್. ಅವರು ಅಮ್ಮನ ಖಾಸ್ ಗೆಳತಿ ಸುಜಾತಾ ಮಹಿಷಿಯ ಅಕ್ಕ. ಅಮ್ಮನಿಗೂ ಒಳ್ಳೆಯ ಪರಿಚಯವಿದ್ದವರೇ. ಆಫ್ರಿಕಾದಿಂದ ಮರಳಿದ ನಂತರ ಬೆಂಗಳೂರಿಗೇ ಬಂದು ನೆಲೆಸಿದ್ದರು. ಅಮ್ಮ ಅವರ ಫೋನ್ ನಂಬರ್ ಕೊಟ್ಟಿದ್ದಳು. ಕೆಲವೇ ದಿವಸಗಳ ಹಿಂದೆ ಫೋನ್ ಮಾಡಿದ್ದೆ. ಅವರ ಮನೆಗೆ ಹೋಗಿ, ಅವರನ್ನೆಲ್ಲ ಭೇಟಿಯಾಗಿ, ಆಫ್ರಿಕಾ ಬಗ್ಗೆ ಸಾಕಷ್ಟು ಮಾಹಿತಿ ತೆಗೆದುಕೊಂಡು ಬಂದಿದ್ದೆ. ಆವಾಗ ಇಂಟರ್ನೆಟ್ ಇತ್ಯಾದಿ ಇರಲಿಲ್ಲ. ಮಾಹಿತಿಯನ್ನು ಇದೇ ರೀತಿಯಲ್ಲಿ  ಸಂಗ್ರಹಿಸಬೇಕಾಗುತ್ತಿತ್ತು. ಅವರ ಮನೆಗೆ ಹೋದಾಗ ಸುನಂದಾ, ಅವರ ಪತಿ, ಪುತ್ರ ಎಲ್ಲ ಬಹಳ ಆದರದಿಂದ ಉಪಚರಿಸಿ ಸಾಕಷ್ಟು ಮಾಹಿತಿ ಕೊಟ್ಟಿದ್ದರು. ಆವಾಗ ಈ ಹಳದಿ ಜ್ವರದ ಲಸಿಕೆ ಬಗ್ಗೆ ನನಗೆ ಗೊತ್ತೂ ಇರಲಿಲ್ಲ. ಹಾಗಾಗಿ ಅದರ ಬಗ್ಗೆ ಕೇಳುವ ಪ್ರಶ್ನೆಯೇ ಬರಲಿಲ್ಲ. ಅವರಾದರೂ ಹೇಗೆ ನೆನಪುಮಾಡಿಕೊಂಡು ಅದರ ಬಗ್ಗೆಯೇ ಹೇಳಿಯಾರು? ಒಟ್ಟಿನಲ್ಲಿ ಒಂದು ಮಹತ್ವದ ಮಾಹಿತಿ ಬೇಕಾಗುವದರ ಬಗ್ಗೆ ಗೊತ್ತಿರಲಿಲ್ಲ. ಹಾಗಾಗಿ ಸಿಕ್ಕಿರಲಿಲ್ಲ.

ಈಗ ಮತ್ತೆ ಫೋನ್ ಹಚ್ಚಿದೆ. ಬೆಳಗಾಂವಕರ್ ಸಿಕ್ಕರು. ಹಳದಿ ಜ್ವರದ ಲಸಿಕೆಯ ವಿಷಯ ಹೇಳಿದೆ. ಎಲ್ಲಿ ಸಿಗಬಹುದು ಅಂತ ಕೇಳಿದೆ. ಬೆಂಗಳೂರಿನಲ್ಲಿ ಎಲ್ಲಿ ಸಿಗಬಹುದು ಅಂತ ಅವರಿಗೆ ಗೊತ್ತಿರಲಿಲ್ಲ. ಆದರೆ ಮುಂಬೈನಲ್ಲಿ ಎಲ್ಲಿ ಸಿಗಬಹುದು ಅಂತ ಗೊತ್ತಿತ್ತು. ಅದರ ವಿವರ ಕೊಟ್ಟರು. ನಾನು ಹೇಗೂ ಮುಂಬೈನಿಂದಲೇ ಟಾಂಜಾನಿಯಾಕ್ಕೆ ಹೊರಟಿದ್ದೆ. ಸಾಕಷ್ಟು ಸಮಯವೂ ಇತ್ತು. ಮುಂಬೈನಲ್ಲೇ ಲಸಿಕೆ ಹಾಕಿಸಿದರಾಯಿತು ಅಂದುಕೊಂಡೆ.

ಮುಂಬೈನಲ್ಲಿ ಅದೆಲ್ಲೋ ಕೊಲಾಬಾ ಪ್ರದೇಶದಲ್ಲಿ ನೌಕಾನೆಲೆ ಇದೆ. ಅಲ್ಲಿ ನೌಕಾದಳದವರ ಆಸ್ಪತ್ರೆ ಇದೆ. ಅಲ್ಲಿ ಆಫ್ರಿಕಾಗೆ ಹೋಗುವ ಪ್ರಯಾಣಿಕರಿಗೆ ಹಳದಿ ಜ್ವರದ ಲಸಿಕೆ ಹಾಕುತ್ತಾರೆ. ಪಾಸ್ಪೋರ್ಟ್, ವೀಸಾ ತೆಗೆದುಕೊಂಡು ಹೋಗಬೇಕು. ಇಷ್ಟು ಮಾಹಿತಿ ಕೊಟ್ಟರು ಶ್ರೀ ಬೆಳಗಾಂವಕರ್. ಅನಂತಾನಂತ ಧನ್ಯವಾದ ಹೇಳಿ ಫೋನ್ ಇಟ್ಟೆ. ಇಷ್ಟು ಮಾಹಿತಿ ಸಿಕ್ಕ ಬಳಿಕ ಎಷ್ಟೋ ನಿರಾಳ.

ಹೇಗೂ ಬೆಂಗಳೂರಿನಿಂದ ಬೆಳಿಗ್ಗೆ ಹೊರಟ ವಿಮಾನ ಮಧ್ಯಾನ್ಹ ಮುಂಬೈ ಮುಟ್ಟುತ್ತದೆ. ಹೋಟೆಲ್ ಕೊಟ್ಟಿದ್ದಾರೆ. ಟಾಂಜಾನಿಯಾಕ್ಕೆ ಹೋಗುವ ವಿಮಾನವಿರುವದು ಮರುದಿನ ಬೆಳಗಿನ ಜಾವ. ಹೀಗಾಗಿ ಮಧ್ಯೆ ಬೇಕಾದಷ್ಟು ಟೈಮ್ ಇತ್ತು.

ಮುಂಬೈ ಮುಟ್ಟಿದೆ. ಏರ್ ಇಂಡಿಯಾ ಅಲ್ಲೇ ಹತ್ತಿರದಲ್ಲಿದ್ದ ಸೆಂಟಾರ್ ಹೋಟೆಲ್ಲಿನಲ್ಲಿ ರೂಮ್ ಕೊಟ್ಟಿತ್ತು. ಮೊದಲ ಬಾರಿಗೆ ಫೈವ್ ಸ್ಟಾರ್ ಹೋಟೆಲ್ಲಿನಲ್ಲಿ ತಂಗುವ ಭಾಗ್ಯ. ಮೇಲಿಂದ ಊಟಕ್ಕೆ ಬೇರೆ ಕೂಪನ್ ಕೊಟ್ಟಿದ್ದರು. ಫೈವ್ ಸ್ಟಾರ್ ಬಫೆ ಊಟ.

ಮತ್ತೆ ಯಾವಾಗ ಫೈವ್ ಸ್ಟಾರ್ ಹೋಟೆಲ್ಲಿನಲ್ಲಿ ಊಟ ಮಾಡುವ ಭಾಗ್ಯ ಸಿಗುತ್ತದೋ ಇಲ್ಲೋ ಅಂತ ಆಲೋಚಿಸಿ ಪಾಂಗಿತವಾಗಿ ಕಂಠಪೂರ್ತಿ ಊಟ ಮಾಡಿ ತಂಪಾದ ಕೋಣೆಗೆ ಬಂದರೆ ಮುಚ್ಚಾಕಿಕೊಂಡು ಮಲಗಿಬಿಡೋಣ ಅನ್ನಿಸಿತು. ಆದರೆ ಲಸಿಕೆ ಕೆಲಸ ಬಾಕಿಯಿತ್ತು. ಆದರೂ ಕಣ್ಣು ಮುಚ್ಚಿಯೇಬಿಟ್ಟೆ. ಒಂದು ಅರ್ಧ ಮುಕ್ಕಾಲು ಘಂಟೆ ನಿದ್ದೆ ಮಾಡಿ ಎದ್ದೆ.

ಸೆಂಟಾರ್ ಹೋಟೆಲಿನಿಂದ ಹೊರಬಂದರೆ 'ಬಕ್ರಾ ಸಿಕ್ಕಿತು!' ಅಂತ ಟ್ಯಾಕ್ಸಿ ಮಂದಿ ಸುತ್ತುವರೆದರು. ಒಂದು ಟ್ಯಾಕ್ಸಿ ಮಾಡಿಕೊಂಡು, ಹರ್ಕು ಮುರ್ಕು ಹಿಂದಿಯಲ್ಲಿ ನನ್ನ ಉದ್ದೇಶ ಹೇಳಿದೆ. ಟ್ಯಾಕ್ಸಿ ಮಂದಿಗೆ ಗೊತ್ತಿಲ್ಲದ ವಿಷಯವಿರುತ್ತದೆಯೇ? ಅವನಿಗೆ ಎಲ್ಲ ಬರೋಬ್ಬರಿ ಗೊತ್ತಿತ್ತು. ನೌಕಾದಳದ ಆಸ್ಪತ್ರೆಗೆ ಕರೆದೊಯ್ಯುವದಾಗಿ, ನನ್ನ ಕೆಲಸ ಮುಗಿಯುವವರೆಗೆ ಕಾದು ವಾಪಸ್ ಕರೆತರುವದಾಗಿ ಹೇಳಿದ. ಅವನು quote ಮಾಡಿದ ರೇಟ್ ಕೇಳಿ ನನಗೆ ಸಣ್ಣ ಪ್ರಮಾಣದ ಟೋಪಿ ಬಿದ್ದ ಬಗ್ಗೆ ಸಂಶಯವಿರಲಿಲ್ಲ. ಆದರೆ ತುರ್ತಾಗಿ ಹೋಗಿ ಲಸಿಕೆ ಹಾಕಿಸಿಕೊಂಡು ಬರಬೇಕಿತ್ತು. ಸರಿಯೆಂದು ಟ್ಯಾಕ್ಸಿ ಹತ್ತಿದೆ.

ಮುಂಬೈ ಟ್ರಾಫಿಕ್ಕಿನಲ್ಲಿ ಸುಮಾರು ಹೊತ್ತು ಪಯಣಿಸಿದ ನಂತರ ನೌಕಾದಳದ ಆಸ್ಪತ್ರೆ ಬಂತು. ಅಲ್ಲಿ ಎಲ್ಲ ಶಿಸ್ತುಬದ್ಧ. ರಕ್ಷಣಾಸಂಸ್ಥೆಗಳು ಏನು ಮಾಡಿದರೂ ಚೆನ್ನಾಗಿ ಮಾಡುತ್ತವೆ. ಅದರ ಬಗ್ಗೆ ದೂಸರಾ ಮಾತಿಲ್ಲ.

ಅಲ್ಲಿ ಲಸಿಕೆ ಹಾಕಿಸಿಕೊಳ್ಳಲು ಹತ್ತು ಹದಿನೈದು ಜನರಿದ್ದರೂ ಸಿಕ್ಕಾಪಟ್ಟೆ efficient ವ್ಯವಸ್ಥೆ ಹೊಂದಿದ್ದರಿಂದ ಹತ್ತು ನಿಮಿಷದಲ್ಲಿ ಲಸಿಕೆ ಹಾಕಿ, ಒಂದು ಸರ್ಟಿಫಿಕೇಟ್ ಕೊಟ್ಟು ಕಳಿಸಿದರು. ಐದು ಘಂಟೆಗೆ ಆಸ್ಪತ್ರೆ ಮುಚ್ಚಲಿತ್ತು. ನನಗೆ ಅದೂ ಗೊತ್ತಿರಲಿಲ್ಲ. ಎಲ್ಲ ಪ್ರಕ್ರಿಯೆ ಮುಗಿದು, ಕೈಯಲ್ಲಿ ಲಸಿಕೆ ಸರ್ಟಿಫಿಕೇಟ್ ಬಂದಾಗ ಘಂಟೆ ನಾಲ್ಕೂ ಮುಕ್ಕಾಲು. ಅದೃಷ್ಟ ಚೆನ್ನಾಗಿತ್ತು. ಇನ್ನೂ ತಡವಾಗಿದ್ದರೆ ಅಷ್ಟೇ ಮತ್ತೆ.

ಹೀಗೆ ಹೊರಡುವ ದಿನ, ಅದೂ ಕೊನೇ ಕ್ಷಣದಲ್ಲಿ, ಹಳದಿ ಜ್ವರದ ಲಸಿಕೆ ಹಾಕಿಸಿಕೊಂಡಾಗಿತ್ತು. ಈಗ ಇಲ್ಲಿ ಟಾಂಜಾನಿಯಾದಲ್ಲಿ ನೋಡಿದರೆ ಇಷ್ಟೆಲ್ಲಾ ಸಾಹಸ ಮಾಡಿ ಲಸಿಕೆ ಹಾಕಿಸಿಕೊಂಡು ಬಂದ ಲಸಿಕೆ valid ಇಲ್ಲ ಅನ್ನುತ್ತಿದ್ದಾನೆ. ಏನಿದರ ಅರ್ಥ? ಪರದೇಶಕ್ಕೆ ಬಂದಾಗ ಹೀಗಾಗಿಬಿಟ್ಟರೆ ಹೇಗೆ? What to do now?

ಅಷ್ಟರಲ್ಲಿ, 'ಮಿಸ್ಟರ್ ಮ್ಯಾಹೇಶ್!' ಅನ್ನುತ್ತ ಯಾರೋ ಒಬ್ಬ ಕರಿಯ ಬಂದ. 'ನಾನೇ ಮಹೇಶ್,' ಅಂತ ಹೇಳಿದೆ. 'ಜಾಂಬೋ! ಜಾಂಬೋ! ಹಬಾರಿ ಗಾನಿ?' ಅಂದ. ಪೆಕರು ನಗೆ ನಕ್ಕ. ಅದು ಯಾವ ಭಾಷೆಯಂತಲೇ ಗೊತ್ತಾಗಲಿಲ್ಲ. ಹಾಗಿದ್ದ ಮೇಲೆ ಏನಂದ ಅಂತ ಹೇಗೆ ಗೊತ್ತಾಗಬೇಕು? ಆಮೇಲೆ ಅಲ್ಲಿನ ಸ್ವಾಹಿಲಿ ಭಾಷೆ ಸ್ವಲ್ಪ ತಿಳಿದ ಮೇಲೆ ಗೊತ್ತಾಗಿದ್ದು ಏನೆಂದರೆ ಜಾಂಬೋ ಅಂದರೆ ಹಲೋ. ಹಬಾರಿ ಗಾನಿ ಅಂದರೆ how are you. ಶಿವನೇ ಶಂಭುಲಿಂಗ!

ಆ ಕರಿಯ ಹರಕು ಮುರುಕು ಇಂಗ್ಲೀಷಿನಲ್ಲಿ ಹೇಳಿದ ಮೇಲೆ ಗೊತ್ತಾಗಿದ್ದು ಅವನು ನಾನು ಕೆಲಸ ಮಾಡಲು ಬಂದಿದ್ದ ಕಂಪನಿಯವನು. ನನ್ನನ್ನು ವಿಮಾನನಿಲ್ದಾಣದಲ್ಲಿ receive ಮಾಡಿ, ಕರೆದುಕೊಂಡು ಹೋಗಲು ಬಂದಿದ್ದ. ಸುಮಾರು ಹೊತ್ತಾದರೂ ನಾನು ಹೊರಗೆ ಬರದ ಕಾರಣ ನನ್ನನ್ನು ಹುಡುಕಿಕೊಂಡು ಅವನೇ ಒಳಗೆ ಬಂದಿದ್ದಾನೆ.

ನಮ್ಮ ಕಂಪನಿಯ ಮನುಷ್ಯ ಮತ್ತು ನನ್ನನ್ನು ಹಿಡಿದಿಟ್ಟುಕೊಂಡಿದ್ದ ಏರ್ಪೋರ್ಟ್ ಅಧಿಕಾರಿ ಮನುಷ್ಯ ಇಬ್ಬರೂ ಸ್ವಲ್ಪ ಪಕ್ಕಕ್ಕೆ ಇನ್ನೊಂದು ರೂಮಿಗೆ ಹೋದರು. ಏನೇನೋ ಗುಸುಪುಸು ಮಾತಾಡಿಕೊಂಡರು. ಏನೋ ವ್ಯವಹಾರ ಕುದುರಿತು ಅಂತ ಕಾಣುತ್ತದೆ. ಇಬ್ಬರೂ ಸಂತುಷ್ಟರಾಗಿ, ಒಬ್ಬರ ಬೆನ್ನನ್ನು ಇನ್ನೊಬ್ಬರು ತಟ್ಟುತ್ತ, ಭಯಂಕರವಾಗಿ ನಗುತ್ತ ಬಂದರು.

ಅಲ್ಲಿಯವರೆಗೆ ಲಸಿಕೆ ಸರ್ಟಿಫಿಕೇಟ್ ಸರಿಯಿಲ್ಲ ಅಂತ ನನ್ನನ್ನು ಹಿಡಿದಿಟ್ಟುಕೊಂಡಿದ್ದ ಅಧಿಕಾರಿ, 'ನೀವು ಹೋಗಬಹುದು,' ಅಂದ. ನಮ್ಮ ಕಂಪನಿಯ ಮನುಷ್ಯನನ್ನು ತೋರಿಸುತ್ತ, 'ಇವರು ಎಲ್ಲ ಬಗೆಹರಿಸಿದ್ದಾರೆ,' ಅಂತ ನಗುತ್ತ ಹೇಳಿದ. ನಮ್ಮ ಕಂಪನಿಯ ಮನುಷ್ಯನಿಗೆ ಧನ್ಯವಾದ ಹೇಳಿದ. ಮತ್ತೆ ಮತ್ತೆ ಹೇಳಿದ. ಸಿಕ್ಕಾಕಿಕೊಂಡು ಬಿದ್ದವನು ನಾನು. ನನ್ನನ್ನು ಬಿಡಿಸಿಕೊಂಡ ನಮ್ಮ ಕಂಪನಿಯ ಮನುಷ್ಯ ಆ ಅಧಿಕಾರಿಗೆ ಥ್ಯಾಂಕ್ಸ್ ಹೇಳಬೇಕು. ಇಲ್ಲಿ ನೋಡಿದರೆ ಉಲ್ಟಾ. ಎಲ್ಲ ವಿಚಿತ್ರ. ಏನು ವಿಷಯವೋ ಏನೋ!

'ಯಪ್ಪಾ! ಅಂತೂ ಕೋರಂಟಿಯಲ್ಲಿ (quarantine) ಕೊಳೆಯುವ ಕರ್ಮದಿಂದ ಬಚಾವಾದೆ,' ಅನ್ನುವ ನೆಮ್ಮದಿಯಲ್ಲಿ ಹೊರಗೆ ಬಂದು ಲಗೇಜ್ ಹುಡುಕಿದೆ. ಪುಣ್ಯಕ್ಕೆ ಎಲ್ಲ ಲಗೇಜ್ ಸರಿಯಾಗಿ ಬಂದಿತ್ತು. ಮತ್ತೆ ನಾನು ತುಂಬಾ ತಡವಾಗಿ ಬಂದರೂ ಲಗೇಜ್ ಅಲ್ಲೇ ಇತ್ತು. ಆಫ್ರಿಕಾದ ವಿಮಾನನಿಲ್ದಾಣಗಳಲ್ಲಿ ಪ್ರಯಾಣಿಕರೇ ನಾಪತ್ತೆಯಾಗಿಬಿಡುತ್ತಾರೆ. ಹಾಗಿರುವಾಗ ಲಗೇಜ್ ನಾಪತ್ತೆಯಾಗುವದೇನೂ ದೊಡ್ಡ ಮಾತಲ್ಲ ಬಿಡಿ. ಹಾಗಾಗಿರಲಿಲ್ಲ. ಅದೇ ಪುಣ್ಯ.

ಕಂಪನಿ ಮನುಷ್ಯನ ಜೊತೆ ಹೊರಗೆ ಬಂದೆ. ನಿಲ್ಲಿಸಿದ್ದ ಕಾರಿನತ್ತ ಕರೆದೊಯ್ದ. ಅದಕ್ಕೊಬ್ಬ ಕರಿಯ ಡ್ರೈವರ್. ನಮ್ಮ ಕಂಪನಿ ಮನುಷ್ಯನೇ ದಡಿಯ ಅಂದುಕೊಂಡರೆ ಡ್ರೈವರ್ ಮತ್ತೂ ದಡಿಯ. ಇಂತಹ ಎರಡು ದೈತ್ಯಾಕೃತಿಗಳ ಜೊತೆ ನಾನು ಹೋಗಬೇಕು. ಮುಂದೆ ಏನು ಕಾದಿದೆಯೋ ಅಂತ ಚಿಂತೆಯಾಯಿತು. ಹೇಳಿಕೇಳಿ ಆಫ್ರಿಕಾ ನೋಡಿ.

ಸುಖಾಸುಮ್ಮನೆ ಬಡಪಾಯಿ ಕರಿಯರ ಮೇಲೆ ಸಂಶಯಪಟ್ಟೆ. ಸುರಕ್ಷಿತವಾಗಿ ಮನೆ ಮುಟ್ಟಿಸಿದರು. ಟಿಪ್ ಕೊಡೋಣ ಅಂದರೆ ನನ್ನ ಹತ್ತಿರ ಲೋಕಲ್ ಕರೆನ್ಸಿಯಲ್ಲಿ ಕಾಸೂ ಇರಲಿಲ್ಲ. 'ಹೇ!ಹೇ!' ಅಂತ ಹಾಪನ ಹಾಗೆ ನಕ್ಕು ಅವರನ್ನು ಕಳಿಸಿದೆ. ಅವರೂ ನಗುತ್ತ ಹೋದರು. ನಮಗೆ ಅಲ್ಲಿನ ಸ್ವಾಹಿಲಿ ಭಾಷೆ ಗೊತ್ತಿರಲಿಲ್ಲ. ಅವರಿಗೆ ಬರುವ ಇಂಗ್ಲಿಷ್ ಅಷ್ಟಕಷ್ಟೇ.

ಮರುದಿನ ಆಫೀಸಿಗೆ ಹೋದಾಗ ಹಿಂದಿನ ದಿನದ ಲಫಡಾ ಬಗ್ಗೆ ಹೇಳಿಕೊಂಡೆ. ಭಾರತೀಯ ಮೂಲದ ಬಾಸ್ ಪೆಕಪೆಕಾ ಅಂತ ನಕ್ಕ. 'ನೂರಕ್ಕೆ ತೊಂಬತ್ತು ಜನರ ಜೊತೆ ಹೀಗೇ ಆಗುತ್ತದೆ. ಎಷ್ಟೋ ಜನ ಹಳದಿ ಜ್ವರದ ಲಸಿಕೆಯನ್ನೇ ಹಾಕಿಸಿರುವದಿಲ್ಲ. ಏಕೆಂದರೆ ಅವರಿಗೆ ಗೊತ್ತೇ ಇರುವದಿಲ್ಲ. ಇನ್ನು ಕೆಲವರು, ನಿನ್ನಂತವರು, ಲಸಿಕೆ ಹಾಕಿಸಿರುತ್ತಾರೆ ಆದರೆ ಮೂರು ದಿವಸಗಳಾಗುವ ಮೊದಲೇ ಪ್ರಯಾಣ ಮಾಡಿರುತ್ತಾರೆ. ಒಟ್ಟಿನಲ್ಲಿ ಪ್ರತಿ ಸಲ ಇದು ಇದ್ದಿದ್ದೇ,' ಅಂದ.

'ಹಾಗಾದರೆ ನನ್ನನ್ನು ಹೇಗೆ ಬಿಡಿಸಿಕೊಂಡು ಬಂದರು? ನಿಯಮಗಳ ಪ್ರಕಾರ ಕೋರಂಟಿಗೆ ಹಾಕಬೇಕಿತ್ತು ತಾನೇ? ಕೋರಂಟಿಯಲ್ಲಿ ವೈದ್ಯರ ದೇಖರೇಖಿಯಲ್ಲಿಟ್ಟು, ಆರೋಗ್ಯದಲ್ಲಿ ಏನೂ ತೊಂದರೆಯಿಲ್ಲ, ಇವರಿಂದ ಹಳದಿ ಜ್ವರ ಹರಡುವದಿಲ್ಲ ಎಂದು ಖಾತ್ರಿಯಾದ ಮೇಲೆಯೇ ಹೊರಗೆ ಬಿಡಬೇಕು ತಾನೇ?' ಅಂತ ಮುಗ್ಧನಾಗಿ ಕೇಳಿದೆ.

ಬಾಸ್ ತಟ್ಟಿಕೊಂಡು ನಕ್ಕ.

'ಕೋರಂಟಿಯೂ ಇಲ್ಲ, ಮಣ್ಣೂ ಇಲ್ಲ. ಒಂದಿಷ್ಟು ರೊಕ್ಕ ಬಿಸಾಕಿ ಬಿಡಿಸಿಕೊಂಡು ಬರುತ್ತೇವೆ. ಅದಕ್ಕೆಲ್ಲ ಅವರ ರೇಟ್ ಕಾರ್ಡ್ ಇದೆ. ಕಂಪನಿ ಮನುಷ್ಯನಿಗೆ ಇದೆಲ್ಲ ಕಾಮನ್. ಬರಬೇಕಾದವರು ಟೈಮಿಗೆ ಸರಿಯಾಗಿ ಹೊರಗೆ ಬರಲಿಲ್ಲ ಅಂದರೆ ಇವನು ಒಳಗೆ ಹೋಗುತ್ತಾನೆ. ಸೀದಾ ಕೋರಂಟಿಗೆ. ಅಲ್ಲಿ ನಿನ್ನಂತವರು ನಿಂತಿರುತ್ತೀರಿ. ನಮ್ಮ ಜನ ಅಂತ ಖಾತ್ರಿಯಾದ ಕೂಡಲೇ ರೇಟ್ ಕಾರ್ಡ್ ಪ್ರಕಾರ ವ್ಯವಹಾರ ಕುದುರಿಸುತ್ತಾನೆ. ಅಲ್ಲಿಗೆ ಎಲ್ಲ ಸಾಫ್. ಎಲ್ಲ ಕಡೆ ಇದೇ ಮಾರಾಯ. ದುಡ್ಡೇ ದೊಡ್ಡಪ್ಪ,' ಅಂದ. ಶಿವಾಯ ನಮಃ!

ಒಹೋ! ಇಲ್ಲೂ ಎಲ್ಲ ಲಂಚಮಯ ಅಂತ ಆವಾಗ ಗೊತ್ತಾಯಿತು. ಅದೇನು ದೇವಲೋಕವೇ. ಹೇಳಿಕೇಳಿ ಆಫ್ರಿಕಾ. ಅಭಿವೃದ್ಧಿ ಹೊಂದುತ್ತಿರುವ ದೇಶವೂ ಅಲ್ಲ. ಹಿಂದುಳಿದ ದೇಶ. ಟಾಂಜಾನಿಯಾ ಎಷ್ಟೋ ಪಾಲು ಬೇಕು. ಸಾಕಷ್ಟು ಮುಂದುವರೆದಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಬೇರೆ ಕೆಲವು ದೇಶಗಳೂ ಇವೆ. ಶುದ್ಧ ಕೊಂಪೆಗಳು.

ಹೀಗೆ ಹಳದಿ ಜ್ವರದ ಲಸಿಕೆ ಪ್ರಮಾಣಪತ್ರದ ಲಫಡಾದಿಂದ ಪಾರಾಗಿ ಬಂದಾಯಿತು. ಗರಿಗರಿ ನೋಟು ಎಲ್ಲವನ್ನೂ ನಿಭಾಯಿಸಿತ್ತು.

ಒಂದು ವಿಷಯ ಅರ್ಥವಾಗಲಿಲ್ಲ. ಲಸಿಕೆ ಹಾಕಿದ ಮೇಲೆ ಮೂರು ದಿವಸ ಕಾಯಬೇಕು ಅಂತ ನಿಯಮವಿದೆ ಅಂತ ಏರ್ ಇಂಡಿಯಾದವರು ಮೊದಲೇ ತಿಳಿಸಬಹುದಿತ್ತು. ಎರಡು ವಾರಗಳಿಂದ ಬೆಂಗಳೂರಿನಲ್ಲಿ ಅವರ ಆಫೀಸಿಗೆ ತಡಕಾಡುತ್ತಿದ್ದೆ. ಅದು ಬಿಡಿ ಹೋಗಲಿ. ಹೋಗುವ ದಿನ ಬೋರ್ಡಿಂಗ್ ಕಾರ್ಡ್ ಕೊಡುವ ಸಮಯದಲ್ಲಾದರೂ ಹೇಳಬಹುದಿತ್ತು. ಪ್ರಯಾಣವನ್ನು ಮುಂದೂಡಲು ಹೇಳಬಹುದಿತ್ತು. ಅದೇನನ್ನೂ ಮಾಡದೇ ಸೀದಾ ವಿಮಾನ ಹತ್ತಿಸಿ ಕಳುಹಿಸಿ, ಗೊತ್ತಿಲ್ಲದ ದೇಶದಲ್ಲಿ ಫಜೀತಿಗೆ ಸಿಗಿಸುವದ್ಯಾಕೆ ಎಂದು ವಿಚಾರ ಬಂತು.

ಕೇಳಿದರೆ ಯಾರಿಗೂ ಉತ್ತರ ಗೊತ್ತಿರಲಿಲ್ಲ. ಮತ್ತೆ ಏರ್ ಇಂಡಿಯಾ ಅಥವಾ ಬೇರೆ ಏರ್ಲೈನ್ಸ್ ಜನ ಅಥವಾ ವಲಸೆ ಅಧಿಕಾರಿಗಳು ಅಷ್ಟೆಲ್ಲಾ ಮುತುವರ್ಜಿ ವಹಿಸಿ, ಲಸಿಕೆ ಸರ್ಟಿಫಿಕೇಟ್ ಎಲ್ಲ ಚೆಕ್ ಮಾಡಿದರೆ ಆಕಡೆ ಆಫ್ರಿಕಾದ ಮಂದಿ ರೊಕ್ಕ ಮಾಡಿಕೊಳ್ಳುವದು ಹೇಗೆ? ಹೆಚ್ಚಾಗಿ ಏನೋ ಕನೆಕ್ಷನ್ ಇರಬೇಕು. 'ನೀವು ಏನೂ ಚೆಕ್ ಮಾಡದೇ ವಿಮಾನದಲ್ಲಿ ಬಕರಾಗಳನ್ನು ಕಳಿಸಿ. ನಾವು ಇಲ್ಲಿ ಸರಿಯಾಗಿ ಬೋಳಿಸುತ್ತೇವೆ. ನಾವೂ ಈಕಡೆಯಿಂದ ಹಾಗೇ ಮಾಡುತ್ತೇವೆ. ನೀವು ನಿಮ್ಮ ಕಡೆ ಇಳಿದ ಬಕರಾಗಳನ್ನು ಬೋಳಿಸಿಕೊಳ್ಳಿ!' ಹೀಗಂತ ಡೀಲ್ ಇರಬೇಕು.

ಒಂದು ವರ್ಷದ ನಂತರ ವಾಪಸ್ ಬಂದೆ. ಮುಂಬೈನಲ್ಲಿ ಮತ್ತೆ ಲಸಿಕೆ ಸರ್ಟಿಫಿಕೇಟ್ ಕಾರಣವಾಗಿ ಕ್ಯಾತೆ ತೆಗೆದು ತೊಂದರೆ ಕೊಟ್ಟರೆ ಅಂತ ಒಂದು ದೊಡ್ಡ ಮೊತ್ತವನ್ನು ಡಾಲರ್ ರೂಪದಲ್ಲಿ ಬೇರೆಯೇ ತೆಗೆದಿಟ್ಟುಕೊಂಡಿದ್ದೆ. ಮುಂಬೈನಲ್ಲಿ ಹಿಡಿದು ನಿಲ್ಲಿಸಿ,'ಲಸಿಕೆ ಸರ್ಟಿಫಿಕೇಟ್ ಸರಿಯಿಲ್ಲ. ಕೋರಂಟಿಗೆ ಕಳಿಸುತ್ತೇವೆ,' ಅಂತೆಲ್ಲ ರಗಳೆ ಶುರು ಮಾಡಿದರೆ ಅಷ್ಟು ರೊಕ್ಕ ಕೊಟ್ಟು, ಕೃಷ್ಣಾರ್ಪಣಮಸ್ತು ಅಂದು ಕೈಮುಗಿಯಲಿಕ್ಕೆ. ದೇವರ ದಯೆ. ನನ್ನ ಪುಣ್ಯ. ಮುಂಬೈನಲ್ಲಿ ಲಸಿಕೆ ಸರ್ಟಿಫಿಕೇಟ್ ನೋಡಿದರೇ ವಿನಃ ಏನೂ ಕಿರಿಕ್ ಮಾಡಲಿಲ್ಲ. ಬದುಕಿದೆಯಾ ಬಡ ಜೀವವೇ ಎಂಬಂತೆ ಬೇರೆ ಪ್ಲೇನ್ ಹಿಡಿದು ಬೆಂಗಳೂರು ತಲುಪಿಕೊಂಡೆ.

ಮುಂದೆ ಯಾವದೋ ಕನ್ನಡ ಪತ್ರಿಕೆಯೊಂದರಲ್ಲಿ ಲೇಖಕರೊಬ್ಬರು ತಮ್ಮ ಕೋರಂಟಿ ಅನುಭವ ಬರೆದುಕೊಂಡಿದ್ದರು. ಲೇಖಕರ ಹೆಸರು ಮರೆತುಹೋಗಿದೆ. ಆ ಲೇಖಕ ಆಫ್ರಿಕಾ ಪ್ರಯಾಣ ಮುಗಿಸಿ ಮುಂಬೈಗೆ ಬಂದು ಇಳಿದಿದ್ದಾರೆ. ಮತ್ತೆ ಹಳದಿ ಜ್ವರದ ಲಸಿಕೆ ಪ್ರಾಬ್ಲಮ್. ಕೋರಂಟಿಗೆ ಹಾಕುತ್ತೇವೆ ಅಂತ ಅಧಿಕಾರಿಗಳು ರಂಪ ಮಾಡಿದ್ದಾರೆ. ಬಿಟ್ಟು ಕಳಿಸಲು ಯಥಾಪ್ರಕಾರ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಇವರು ಲಂಚ ಕೊಡಲು ಒಪ್ಪಿಲ್ಲ. ಆಗಿದ್ದಾಗಲಿ, ಕೋರಂಟಿ ಅಂದರೇನು ಅಂತ ನೋಡಿಯೇಬಿಡೋಣ ಅಂತ ನಿಶ್ಚಯಿಸಿದ್ದಾರೆ. ಅಧಿಕಾರಿಗಳು, 'ಕೋರಂಟಿ ಅಂದರೆ ಹಾಗಿರುತ್ತದೆ. ಹೀಗಿರುತ್ತದೆ. ಸುಮ್ಮನೆ ಯಾಕೆ ತೊಂದರೆ ತೆಗೆದುಕೊಳ್ಳುತ್ತೀರಿ? ರೊಕ್ಕ ಕೊಟ್ಟು ಹೋಗಿರಿ,' ಅಂತೆಲ್ಲ ಬ್ರೈನ್ ವಾಶ್ ಮಾಡಲು ನೋಡಿದ್ದಾರೆ. ಇವರು ಒಪ್ಪಿಲ್ಲ. ಬೇರೆ ವಿಧಿಯಿಲ್ಲದೆ ಇವರನ್ನು ಕೋರಂಟಿಗೆ ಕಳಿಸಿದ್ದಾರೆ.

ಅಲ್ಲಿ ಹೋದ ಲೇಖಕರು ಥಂಡಾ ಹೊಡೆದಿದ್ದಾರೆ. ಥೇಟ್ ನರಕ. 'ಹಳದಿ ಜ್ವರ ಬಂದರೆ ಏನಾಗುತ್ತದೋ ಗೊತ್ತಿಲ್ಲ. ಆದರೆ ಭಾರತದ ಸರ್ಕಾರಿ ಕೋರಂಟಿಯಲ್ಲಿದ್ದರೆ ಮಾತ್ರ ಏನಾದರೂ ಸೋಂಕು ಹತ್ತಿ ಸಾಯುವದು ಗ್ಯಾರಂಟಿ. ಬರಬಾರದ ರೋಗ ಬರುವದು ಖಚಿತ. ಕೊಲೆ ಯತ್ನವಾದರೂ ಆಶ್ಚರ್ಯವಿಲ್ಲ..... ' ಇದು ಅವರ ಸ್ವಂತ ಅನುಭವ. ಅದನ್ನೆಲ್ಲ ವಿವರವಾಗಿ ಬರೆದುಕೊಂಡಿದ್ದರು. ಭಯಾನಕವಾಗಿತ್ತು.

ಮುಂಬೈನ ಕೋರಂಟಿ (quarantine) ಮಹಾ ಕೊಳಕು ಜಾಗವಾಗಿತ್ತಂತೆ. ಮತ್ತೆ ಅದರಲ್ಲಿ ಆಫ್ರಿಕಾದಿಂದ ಬಂದಿದ್ದ ನೀಗ್ರೋ ಜನ ತುಂಬಿದ್ದರಂತೆ. ಯಾರೂ ಸುಬಗರಲ್ಲ. ಡ್ರಗ್ ಮಾರಾಟಗಾರರು, ಕಳ್ಳರು, ಕೊರಮರು ಇತ್ಯಾದಿ. ಕೋರಂಟಿಯೊಂದಿಗೆ ಮತ್ತು ಅದನ್ನು ನಡೆಸುತ್ತಿದ್ದ ಲಂಚಕೋರ ಅಧಿಕಾರಿಗಳೊಂದಿಗೆ ಡೀಲ್ ಹೊಂದಿದವರು. ಕೋರಂಟಿಯನ್ನು ಕಮ್ಮಿ ದರದ ವಸತಿಗೃಹವನ್ನಾಗಿ ಮಾಡಿಕೊಂಡು ಮಜಾ ಮಾಡುತ್ತಿರುವವರು. ಹಲವರಿಗೆ ಏಡ್ಸ್ ಮತ್ತಿತರ ಕಾಯಿಲೆಗಳು ಇದ್ದಿರಬಹುದು ಅಂತಲೂ ಇವರ ಊಹೆ. ಒಟ್ಟಿನಲ್ಲಿ ನರಕಸದೃಶ ಜಾಗ. Hellhole!

ಅದನ್ನು ನೋಡಿ, ಅಲ್ಲಿರುವ ಖತರ್ನಾಕ್ ನಿವಾಸಿಗಳಿಂದ ಒಂದು ತರಹದ hostility ಅನುಭವಿಸಿದ ಇವರ resolve ಕರಗಿದೆ. ಕೋರಂಟಿ ಸಹವಾಸ ಸಾಕೋ ಸಾಕು ಅಂತ ಕೊನೆಗೆ ಅಲ್ಲಿಯ ಲಂಚಗುಳಿ ಮಂದಿಗೆ ಕಾಣಿಕೆ ಕೊಟ್ಟು ಓಡಿ ಬಂದಿದ್ದಾರೆ. ತಮ್ಮ ಅನುಭವ ಬರೆದುಕೊಂಡಿದ್ದಾರೆ. quarantine ಗೆ ಕೋರಂಟಿ ಅನ್ನುವ ಶಬ್ದವನ್ನು ಮೊದಲ ಸಲ ಓದಿದ್ದೇ ಅವರ ಲೇಖನದಲ್ಲಿ. ಅವರ ಕೆಟ್ಟ ಅನುಭವ ಓದಿ ಅನ್ನಿಸಿದ್ದು - ಪುಣ್ಯಕ್ಕೆ ನಾನು ಬಚಾವಾದೆ!

ಸ್ವಲ್ಪ ದಿವಸಗಳ ಹಿಂದೆ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಜೀವನಚರಿತ್ರೆ ಓದುತ್ತಿದ್ದೆ. ಅವರಿಗೂ ಇದೇ ಅನುಭವವಾಗಿತ್ತಂತೆ. ನೈಜೀರಿಯಾದಲ್ಲಿ ಟೂರ್ನಮೆಂಟ್ ಮುಗಿಸಿ ಬಂದಿದ್ದಾರೆ. ಮುಂಬೈನಲ್ಲಿ ಇಳಿದರೆ ಮತ್ತೆ ಹಳದಿ ಜ್ವರದ ಲಸಿಕೆ ಪ್ರಾಬ್ಲಮ್. ಸಾನಿಯಾ ಮತ್ತು ಅವರ ತಾಯಿಯನ್ನು ಕೋರಂಟಿಗೆ ಕಳಿಸಿದ್ದರಂತೆ. ಅವರ ಅನುಭವವನ್ನು ಅವರ ಮಾತುಗಳಲ್ಲೇ ಕೇಳಿ. 'Ace against odds' by Sania Mirza ಪುಸ್ತಕದಿಂದ ಎತ್ತಿದ್ದು.

I traveled to Benin City, Nigeria in February 2003 and the trip proved to be a rewarding one as I won both the $10,000 singles titles on African soil to add to my growing confidence. I was in a very positive frame of mind when I caught the flight for Mumbai. However, I was in for a rude shock when I landed at the Sahar International Airport. My mother and I were stopped at the exit point by an official who claimed to be from the Health Department for Control of Yellow Fever. I believed that the dreadful disease was long eradicated and had no idea that I needed to be vaccinated before leaving for the African country. This was infuriating. If this killer disease was still a danger, the Nigerian Embassy could surely have warned us before stamping my visa!

Since we did not have the required papers to show that we had been immunized for yellow fever, we were quarantined in a remote place in the outskirts of the city of Mumbai for five days. We could hardly believe what was happening as my mom and I were whisked away by unknown men in a special car to a huge, depressingly old and ancient looking monument. The irony was dreadful. This bungalow that was to be our quarantine for yellow fever had yellow doors, windows, walls and beds! I remember praying for the doctors to come soon and declare us free of the disease.

Mom called up Dad, who was in Hyderabad, to inform him of the situation and he immediately flew down to Mumbai. To be fair, the officials tried to make us as comfortable as they could, given the limited budget they seemed to have. But my mother was livid. ‘Why are passengers not checked before they board the flight to Nigeria? Why should you even allow people to travel to that country without confirming that they have the immunization certificate if there is a risk of infection?’ she questioned the doctor who was in charge of looking after us.

‘Our department has been in existence for decades now and we need to go according to the rules since we have been employed specially for this purpose,’ was his dubious, unconvincing answer. ‘Madam, you will be glad to know that we have quarantined several famous people and celebrities as we want to protect everyone from this terrible disease.’ We didn’t even know what to say!

We spent the next five days lazing about. News had leaked to the media and our phones rang continuously as the press tried monitoring my health. We spent time playing cards or carrom in the ‘yellow house’ and I read books and magazines for most of the day. There was no television and the days seemed like weeks. It was a huge relief when we were finally cleared of any risk of having contracted yellow fever and were allowed to go back to the comforts of home and civilization.

ಜೀವನದಲ್ಲಿ ಪ್ರಪ್ರಥಮ ಬಾರಿಗೆ ನಾನೂ ಕೋರಂಟಿಗೆ almost ಹೋಗಿದ್ದೆ. ಅದೂ ಪರದೇಶದ ಕೋರಂಟಿಗೆ. ಸ್ವಲ್ಪದರಲ್ಲಿ ಬಚಾವ್. ಮತ್ತೆ ಆಫ್ರಿಕಾಗೆ ಹೋಗುವ ಸಂದರ್ಭ ಬಂದಿಲ್ಲ. ಈಗ ಬಿಡಿ. ಎಲ್ಲ ಮಾಹಿತಿ ಇಂಟರ್ನೆಟ್ ಮೇಲೆ ಸಿಗುತ್ತದೆ.

ಇಲ್ಲಿ ಅಮೇರಿಕಾದಲ್ಲಿ ನಿಮ್ಮ ಡಾಕ್ಟರ್ ಹತ್ತಿರ ಇಂತಹ ದೇಶಕ್ಕೆ ಹೋಗುತ್ತಿದ್ದೇನೆ ಅಂತ ಹೇಳಿದರೆ ಬೇಕಾದ ಎಲ್ಲ ಲಸಿಕೆ ಹಾಕಿ, ಸರ್ಟಿಫಿಕೇಟ್ ಕೊಡುತ್ತಾರೆ. ಸುಮ್ಮನೆ ಟೆಸ್ಟ್ ಮಾಡೋಣ ಅಂತ ನಮ್ಮ ಡಾಕ್ಟರ್ ಹತ್ತಿರ ಕೇಳಿದೆ. 'ಎಲ್ಲಿಗೆ?' ಅಂದರು. 'ಭಾರತಕ್ಕೆ' ಅಂದೆ. ಕಂಪ್ಯೂಟರಿನಲ್ಲಿ ಡಾಟಾ ಹಾಕಿ ಚೆಕ್ ಮಾಡಿದರು. 'ಯಾವದೇ ಲಸಿಕೆಗಳ ಅಗತ್ಯವಿಲ್ಲ. ಟೈಫಾಯಿಡ್, ಕಾಲರಾ, ಮಲೇರಿಯಾ ಲಸಿಕೆಗಳನ್ನು ಹಾಕಿಸಿಕೊಳ್ಳಲು ಸಲಹೆ ನೀಡುತ್ತೇವೆ. ಬೇಕಾದರೆ ಹಾಕಿಸಿಕೊಳ್ಳಿ,' ಅಂದರು. 'ಎಷ್ಟು ರೊಕ್ಕ?' ಅಂತ ಕೇಳಿದೆ. 'ಟೈಫಾಯಿಡ್, ಕಾಲರಾ ಲಸಿಕೆ ಉಚಿತ. ಮಲೇರಿಯಾದ್ದು ದೀರ್ಘ ಕೋರ್ಸ್ ಇದೆ. ಅದಕ್ಕೆ ನೂರು ಡಾಲರ್,' ಅಂದರು. 'ನಮ್ಮ ಧಾರವಾಡ ಗುಂಗಾಡ (ಸೊಳ್ಳೆ) ಕಡಿದರೆ ಮಲೇರಿಯಾ ಬರಲಿಕ್ಕಿಲ್ಲ. ಟೈಫಾಯಿಡ್, ಕಾಲರಾ ಹಾಕಿ,' ಅಂದು ಇಂಜೆಕ್ಷನ್ ತೆಗೆದುಕೊಳ್ಳಲು ರೆಡಿ ಆದೆ. ನೋಡಿದರೆ ಮಾತ್ರೆ ಮೂಲಕ ಲಸಿಕೆ. ಅದೂ ಐದು ವರ್ಷ ಬಾಳಿಕೆ ಬರುವಂತಹದ್ದು. ಸೂಪರ್! 'ನಮ್ಮ ಕಡೆ ಚಿಕನ್ ಗುನ್ಯಾ, ಡೆಂಗ್ಯೂ ಇದೆ. ಅದಕ್ಕೆ ಲಸಿಕೆ ಇಲ್ಲವೇ ಡಾಕ್ಟರ್?' ಅಂತ ಕೇಳಿದರೆ 'ಸದ್ಯಕ್ಕೆ ಇಲ್ಲ ಮಾರಾಯ,' ಅಂದು, 'ತಲೆ ತಿನ್ನಬೇಡ. ಜಾಗ ಖಾಲಿ ಮಾಡು,' ಅನ್ನುವ ಲುಕ್ ಕೊಟ್ಟ. ಇಪ್ಪತ್ತು ಡಾಲರ್ ಫೀ ಏನು ಪುಕ್ಕಟೆ ಕೊಟ್ಟಿರುತ್ತೇವೆಯೇ!? ಹಾಗಾಗಿ ಕೊಂಚ ತಲೆ ತಿಂದು, ಕಿಚಾಯಿಸಿಯೇ ಬರಬೇಕು. ನಮ್ಮ ಇಪ್ಪತ್ತು ಡಾಲರ್, ವಿಮೆ ಕಂಪನಿ ಮತ್ತೂ ನೂರು ಡಾಲರ್ ನಮ್ಮ ಪರವಾಗಿ ಕೊಡುತ್ತದೆ. ಪುಗಸಟ್ಟೆನೇ!?

ಆಫ್ರಿಕಾದಲ್ಲಿ ಹಳದಿ ಜ್ವರದ ಲಸಿಕೆ ಲಫಡಾವನ್ನೆಲ್ಲ ಮುಗಿಸಿಕೊಂಡು ೧೯೯೬ ಅಕ್ಟೋಬರಿನಲ್ಲಿ ಒಂದು ವರ್ಷದ ಬಳಿಕ ಬೆಂಗಳೂರಿಗೆ ವಾಪಸ್ ಬಂದೆ. ನಂತರ ಇಲ್ಲಿನ ನೌಕರಿ ಸಿಕ್ಕಿತು. ಅಮೇರಿಕಾಗೆ ಬರುವ ವೀಸಾ ಇತ್ಯಾದಿಗಳ processing ನಡೆಯುತಿತ್ತು. ಮೂರ್ನಾಲ್ಕು ತಿಂಗಳ ಟೈಮ್ ಇತ್ತು. ಆಗ ಮನೆಗೆ ಬಂದವನು ಒಬ್ಬ ಖತರ್ನಾಕ್ ನೆಂಟ! ಬಂದವನೇ ಪ್ಯಾಂಟ್ ಕಳಚಿಟ್ಟವನೇ ಪೈಜಾಮಾ ಹಾಕಿದ. ಅದೂ ಹಳದಿ ಬಣ್ಣದ ಪೈಜಾಮಾ. ಹಳದಿ ಬಣ್ಣದ ಪೈಜಾಮಾ ಹಾಕಿದ್ದು ಅವನು. ಆದರೆ ಹಳದಿ ಜ್ವರ ಬಂದಿದ್ದು ಮಾತ್ರ ನಮಗೆ ಮತ್ತು ನಮ್ಮ ಮನೆ ಜನರಿಗೆ. ಅಲ್ಲಿಯವರೆಗೆ 'ಉಂಡೂ ಹೋದ. ಕೊಂಡೂ ಹೋದ' ಮಾದರಿಯ ನೆಂಟರನ್ನು ಮಾತ್ರ ನೋಡಿದ್ದೆವು. ಇವನು ಉಂಡು, ಕೊಂಡು ಹೋಗಿದ್ದೊಂದೇ ಅಲ್ಲ ತಲೆ ಕೂಡ ಪೂರ್ತಿಯಾಗಿ ತಿಂದೂ ಹೋದ. ಅವನೇ the one and the only one ಹಳದಿ ಹಾಪಾ. ಹಳದಿ ಪೈಜಾಮ ಹಾಕಿ ನಮ್ಮನ್ನೆಲ್ಲ ಅವನ ತರಲೆ ಕಾರ್ನಾಮೆಗಳಿಂದ ಹಾಪರನ್ನಾಗಿ ಮಾಡಿದವ. ಅವನ ಪೀಡೆಯಿಂದ ಮುಕ್ತಿ ದೊರೆಯಬೇಕಾದರೆ ಇಡಗುಂಜಿ ಮಹಾಗಣಪತಿಯ ಕೃಪೆಯಾಗಬೇಕಾಯಿತು. ಮುಂದೆ ಅವನು ಹಳದಿ ಹಾಪನಿಂದ ಹಳದಿ ರಾಮನೂ ಆದ. ಅದೆಲ್ಲ ಕಥೆಯನ್ನು ಹಳದಿರಾಮಾಯಣದ ಹಾಪಖಾಂಡದಲ್ಲಿ ಓದಬಹುದು. ಆ ತಮಾಷೆಗಳನ್ನೆಲ್ಲ ಮತ್ತೆ ಯಾವಾಗಲಾದರೂ ಬರೆಯೋಣ. ಇಪ್ಪತ್ತು ವರ್ಷಗಳ ಹಿಂದೆ ಆಗಿದ್ದು. ಆದರೆ ಹಳದಿ ಹಾಪನಿಂದ ಬಂದ ಹಳದಿ ಜ್ವರ ಇನ್ನೂ ಬಿಟ್ಟಿಲ್ಲ. ಹಳದಿ ಹಾಪನಿಂದ ಬರುವ ಜ್ವರಕ್ಕೆ ಮಾತ್ರ ಯಾವ ಲಸಿಕೆ ಇದ್ದ ಹಾಗಿಲ್ಲ. ಆ ಪುಣ್ಯಾತ್ಮನ ಸಹವಾಸದಿಂದ ಸಾಕಾಗಿಹೋಗಿತ್ತು. ಇವತ್ತಿಗೂ ಹಳದಿ ರಾಮ ಅಂದರೆ ಬೆಚ್ಚಿ ಬೀಳುತ್ತೇವೆ.

ನೀವು ಮಾತ್ರ ಹುಷಾರಾಗಿರಿ. ಅಫ್ರಿಕಾ ಇರಲಿ ಅಥವಾ ಬೇರೆ ಎಲ್ಲಿ ಹೋಗುತ್ತಿದ್ದರೂ ಸರಿ. ಯಾವ್ಯಾವ ಲಸಿಕೆ ಇತ್ಯಾದಿಗಳು ಕಡ್ಡಾಯವಾಗಿ ಹಾಕಿಸ್ಕೊಳ್ಳಬೇಕು ಅನ್ನುವ ಮಾಹಿತಿಯನ್ನು ಬರೋಬ್ಬರಿ ಸಂಗ್ರಹಿಸಿ, ಅವನ್ನೆಲ್ಲ ಹಾಕಿಸಿಕೊಂಡು, ಡಬಲ್ ಚೆಕ್ ಮಾಡಿಕೊಂಡೇ ವಿಮಾನ ಹತ್ತಿ. ಇಲ್ಲವಾದರೆ ಕೋರಂಟಿ ದರ್ಶನವಾದೀತು! ಜೋಕೆ!

* ಶ್ರೀಮತಿ ಸುನಂದಾ ಬೆಳಗಾಂವಕರ್ ಅವರ ಕಿರಿಯ ಸಹೋದರ ವಿಠಲ್ ಮಹಿಷಿ, ಇಪ್ಪತ್ತು ವರ್ಷಕ್ಕೆ ಹಿರಿಯನಾದರೂ, ನನ್ನ ಆತ್ಮೀಯ ಸ್ನೇಹಿತ. ಎರಡು ವರ್ಷಗಳ ಹಿಂದೆ ತೀರಿಹೋದ. ಆಗ ಬರೆದ ಲೇಖನ - ಧಾರವಾಡದ ಮಹಿಷಿ ರೋಡಿನ 'ವಿಠಲ ಮಹಿಷಿ' ಎಂಬ ಹಿರಿಯ ಮಿತ್ರನ ನೆನಪಲ್ಲಿ.... 

* ಟಾಂಜಾನಿಯಾದ ಮತ್ತೊಂದು ಅನುಭವ - ಕ್ಯಾಬರೆ, ಲೈವ್ ಬ್ಯಾಂಡ್, ಕೈಕುಲುಕಿದ್ದ ದೇಶದ ಅಧ್ಯಕ್ಷನ ಮಗ! 

8 comments:

N'dnade Yd'b'dange said...


Vichitra anubhavagalu!

It would be nice if 'ಹಳದಿಮಾಯಣ' is readily available.

sunaath said...

ಕೋರಂಟಿ ಹಾಗು ಲೈವ್ ಬ್ಯಾಂಡ್! ಒಂದು ನರಕ, ಒಂದು ಸ್ವರ್ಗ(?)! ನಿಮ್ಮ ಬರಹದ ಮೂಲಕ ನನಗೂ ಅನುಭವಿಸಿದಂತೆ ಆಯಿತು. ಧನ್ಯವಾದಗಳು.

Mahesh Hegade said...

ಕಾಮೆಂಟಿಗೆ ಧನ್ಯವಾದಗಳು ಸುನಾಥ್ ಸರ್.

Om Otimarappanavar said...


Interesting information!

ವಿ.ರಾ.ಹೆ. said...

ನನ್ ಫ್ರೆಂಡ್ ಒಬ್ಬ ಎರಡುವರ್ಷದ ಹಿಂದೆ ಹೋಗ್ಬಂದಿದ್ದ. ಬೆಂಗಳೂರಿನಿಂದ ಹೋಗಿ ಮುಂಬಯಿಯಲ್ಲೇ ಲಸಿಕೆ ಹಾಕಿಸಿಕೊಂಡಿದ್ದು. ಕಂಪನಿ ಕಡೆಯಿಂದಲೇ ಹೋಗಿದ್ದರಿಂದ ಎಲ್ಲಾ ಮಾಹಿತಿ ಸರಿಯಾಗಿ ಇತ್ತು ಮೊದಲೇ. ಹಾಗಾಗಿ ಕೋರಂಟಿ ಅನುಭವ ಆಗಲಿಲ್ಲ ಅನ್ಸುತ್ತೆ :) ಸಾನಿಯಾ ಮಿರ್ಜಾಂಗೂ ಐದು ದಿನ ಕೂಡಾಕಿ ಇಟ್ಟಿದ್ರು ಅಂದ್ರೆ ಇದು ದೊಡ್ಡದೇ ಇರಬೇಕು !

Mahesh Hegade said...

@ವಿಕಾಸ್, ಕಾಮೆಂಟಿಗೆ ಧನ್ಯವಾದ :)

ManjuNath Basva said...

Qurantine 2017 ರಲ್ಲಿ ಓದಿದಾಗ ಅಷ್ಟೊಂದು ಕಿರಿಕಿರಿ ಅಂಥ ಅರ್ಥ ಅಗಲಿಲ್ಲ , ಈಗ 2020 ಮಾರ್ಚ್ ನಿಂದ ಈ Qurantine ಬಗ್ಗೆ ಬಹಳ ಗೋತ್ತು ಆಗೈತಿ.

Mahesh Hegade said...

@ManjuNath Basva,

ನೀವು ಹೇಳುವುದು ನಿಜ. Quarantine ಎಂದರೆ ಬೆಚ್ಚಿಬೀಳುವಂತಾಗಿದೆ!

ನಿಮ್ಮ ಕಾಮೆಂಟಿಗೆ ಧನ್ಯವಾದಗಳು.