Friday, April 21, 2017

ಆಕೆಯ ಸ್ವರಮಾಧುರ್ಯದಲ್ಲಿ ಅಂತಹ ಶಕ್ತಿಯಿತ್ತು!

ಆಕೆ ಭಾರತದ ಒಬ್ಬ ಖ್ಯಾತ ಸಂಗೀತ ವಿದುಷಿ. ಕಾರ್ಯಕ್ರಮ ಕೊಡಲು ಅಮೇರಿಕಾಗೆ ಹೋಗಿದ್ದಳು. ಅಲ್ಲಿ ಒಬ್ಬ ಗೆಳೆಯರ ಮನೆಯಲ್ಲಿ ತಂಗಿದ್ದಳು.

ಒಂದು ದಿನ ಮಧ್ಯಾಹ್ನದ ಊಟದ ನಂತರ ಹಾಡತೊಡಗಿದಳು. ಒಂದಿಷ್ಟು ಜನ ಬಂಧುಮಿತ್ರರು ಸೇರಿದ್ದರು. ಅವರಿಗಾಗಿ ಅಂತ ಒಂದು ಅನೌಪಚಾರಿಕ ಸಂಗೀತ ಕಚೇರಿ.

ಪಕ್ಕದ ಅಪಾರ್ಟ್ಮೆಂಟಿನಲ್ಲಿ ಏನೋ ರಿಪೇರಿ ಕೆಲಸ ನಡೆಯುತ್ತಿತ್ತು. ಜೋರಾಗಿ ಕುಟ್ಟುವ, ಒಡೆಯುವ ಶಬ್ದ ಕೇಳಿಬರುತ್ತಿತ್ತು. ಇವಳು ಈಕಡೆ ಇಂಪಾಗಿ ಸಂಗೀತ ಹಾಡುತ್ತಿದ್ದರೆ ಆಕಡೆಯಿಂದ ಕರ್ಕಶ ಶಬ್ದ. ಅದರಿಂದಾಗಿ ರಸಭಂಗವಾಗುತ್ತಿತ್ತು. ಏನೂ ಮಾಡುವಂತಿರಲಿಲ್ಲ. ಪಕ್ಕದ ಮನೆಯವರು ಅವರ ಮನೆ ರಿಪೇರಿ ಮಾಡಿಸಿಕೊಳ್ಳುತ್ತಿದ್ದರೆ ಏನಂತ ಆಕ್ಷೇಪಣೆ ಮಾಡಲಾಗುತ್ತದೆ?

ರಿಪೇರಿ ಗದ್ದಲದಿಂದ ಕಿರಿಕಿರಿ ಜಾಸ್ತಿಯಾಗಿದ್ದು ಸಂಗೀತ ಕೇಳಲು ಬಂದವರಿಗೇ. ಇವಳು ಒಮ್ಮೆ ಹಾಡಲು ಆರಂಭಿಸಿದಳು ಅಂದರೆ ಮುಗಿಯಿತು. ಅಷ್ಟು ತಲ್ಲೀನಳಾಗಿ ಹಾಡುತ್ತಿದ್ದಳು. ಅಂದು ಕೂಡ ಅಷ್ಟೇ. ಇವಳ ಇಂಪಾದ ಸಂಗೀತ ಕರ್ಕಶ ಶಬ್ದಮಾಲಿನ್ಯವನ್ನು ಮೀರಿ ಹರಿಯಿತು.

ಸಂಗೀತ ಕಚೇರಿ ಆರಂಭವಾಗಿ ಸ್ವಲ್ಪ ಸಮಯವಾಗಿತ್ತು. ಆಕಡೆಯಿಂದ ಬರುತ್ತಿದ್ದ ರಿಪೇರಿ ಶಬ್ದಗಳು ಒಮ್ಮೆಲೆ ನಿಂತುಹೋದವು. ಸಂಗೀತ ಕೇಳಲು ಬಂದವರು ನಿರಾಳರಾಗಿ ಸಂಗೀತ ಕೇಳುವದರಲ್ಲಿ ಮೈಮರೆತರು. ಒಂದು ವಿಷಯ ಅವರು ಗಮನಿಸಿರಲಿಲ್ಲ.

ಮನೆಯ ಬಾಗಿಲಲ್ಲಿ ಒಂದಿಷ್ಟು ಜನ ಪ್ರತ್ಯಕ್ಷರಾಗಿದ್ದರು. ಅವರೆಲ್ಲ ಪಕ್ಕದ ಮನೆಯಲ್ಲಿ ರಿಪೇರಿ ಕೆಲಸ ಮಾಡಿಕೊಂಡಿದ್ದವರು. ಅವರು ಧರಿಸಿದ್ದ ಕೆಲಸಗಾರರ ದಿರಿಸು, ತಲೆಗೆ ಹಾಕಿದ್ದ ಸುರಕ್ಷಾ ಹೆಲ್ಮೆಟ್, ಕೈಯಲ್ಲಿದ್ದ ಸುತ್ತಿಗೆ ಮತ್ತಿತರ ಸಲಕರಣೆಗಳು ಅವರೇ ಕೆಲಸಗಾರರು ಅಂತ ಸಾರಿ ಹೇಳುತ್ತಿದ್ದವು. ಎಲ್ಲ ಸ್ಥಳೀಯ ಅಮೇರಿಕನ್ನರು. ಅವರಿಗೆ ಭಾರತೀಯ ಸಂಗೀತದ ಗಂಧಗಾಳಿಯಿಲ್ಲ. ಆದರೂ ಬಾಗಿಲಲ್ಲಿ ಬಂದು ನಿಂತಿದ್ದರು.

ಸಂಗೀತ ಕೇಳುತ್ತ ಕುಳಿತಿದ್ದ ಜನ ಆಗ ಬಾಗಿಲಲ್ಲಿ ನೆರೆದಿದ್ದ ಕೆಲಸಗಾರರನ್ನು ನೋಡಿದರು. ನೋಡಿ ಒಂದು ಕ್ಷಣ ವಿಸ್ಮಿತರಾದರು. 'ಇವರೆಲ್ಲ ಯಾರು? ಇಲ್ಲಿ ಬಾಗಿಲಿನಲ್ಲಿ ಏಕೆ ಒಂದಾಗಿ ಬಂದು ನಿಂತಿದ್ದಾರೆ?' ಎಂದುಕೊಂಡು ವಿಚಾರಿಸಿಕೊಳ್ಳಲು ಹೋದರು.

ಆ ಕೆಲಸಗಾರರಲ್ಲಿ ಒಬ್ಬ ಹೇಳಿದ. 'ಈ ಸಂಗೀತದ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ಆದರೆ ಈ ಸಂಗೀತ ತುಂಬಾ ಹೃದಯಸ್ಪರ್ಶಿಯಾಗಿದೆ. ಮನತಟ್ಟುತ್ತಿದೆ. ನಾವೂ ಕೂಡ ಬಾಗಿಲಲ್ಲಿ ನಿಂತು ಈ ದಿವ್ಯ ಸಂಗೀತವನ್ನು ಕೇಳಬಹುದೇ?' ಎಂದು ವಿನಂತಿ ಮಾಡಿಕೊಂಡ.

ಸಂಗೀತ ಕಚೇರಿ ಮುಗಿಯುವತನಕ ಅಲ್ಲಾಡಲಿಲ್ಲ ಆ ಜನ. ಅಷ್ಟು ತನ್ಮಯತೆಯಿಂದ ಆಲಿಸಿದರು.

ಹೀಗೆ ತನ್ನ ಸ್ವರಮಾಧುರ್ಯದಿಂದ ಅಮೇರಿಕನ್ ಕೆಲಸಗಾರರನ್ನು ಆ ಮಟ್ಟಿಗೆ ಮೋಡಿ ಮಾಡಿದವಳು ಬೇರೆ ಯಾರೂ ಅಲ್ಲ, ಆಕೆ ಎಂ.ಎಸ್. ಸುಬ್ಬುಲಕ್ಷ್ಮಿ. ಆಕೆ ಒಮ್ಮೆ ಹಾಡಲು ಕೂತಳು ಅಂದರೆ ಅಷ್ಟೇ. ಎಂತವರನ್ನೂ ಸೆಳೆಯುತ್ತಿತ್ತು ಅವಳ ಕಂಠಮಾಧುರ್ಯ. ಭಾರತೀಯ ಸಂಗೀತದ ಗಂಧಗಾಳಿ ಗೊತ್ತಿಲ್ಲದ, ಮನೆ ರಿಪೇರಿ ಮಾಡುತ್ತಿದ್ದ ಕೆಲಸಗಾರರಂತಹ ಜವಾರಿ ಜನರನ್ನೂ ಸಹ ಸೆಳೆಯಿತು ಅಂದರೆ ಅವಳ ಸಂಗೀತಸುಧೆಯಲ್ಲಿ ಏನೋ ಮಾಂತ್ರಿಕ ಶಕ್ತಿಯಿತ್ತು ಎಂದರೆ ಉತ್ಪ್ರೇಕ್ಷೆ ಆಗಲಿಕ್ಕಿಲ್ಲ. ಅದರಲ್ಲೂ ಮಾಡುತ್ತಿದ್ದ ಕೆಲಸ ಬಿಟ್ಟು ಬಂದು ಸಂಗೀತ ಕೇಳಿದರು ಅಂದರೆ ಸಣ್ಣ ಮಾತೇ!?

ಹಿರಿಯ ಪತ್ರಕರ್ತ TJS ಜಾರ್ಜ್ ಭಾರತರತ್ನ ಪ್ರಶಸ್ತಿ ವಿಜೇತೆ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಆತ್ಮಕಥೆ ಬರೆದಿದ್ದಾರೆ. ಓದಿ ಮುಗಿಸಿದೆ. ಇದೊಂದು ಘಟನೆ ಮನದಲ್ಲಿ ನಿಂತಿತು.

ಒಳ್ಳೆ ಪುಸ್ತಕ. TJS ಜಾರ್ಜ್ ಒಳ್ಳೆ ಪತ್ರಕರ್ತರು. ಸೊಗಸಾಗಿ ಬರೆಯುತ್ತಾರೆ ಅಂತ ಗೊತ್ತಿತ್ತು. ಆದರೆ ಜೀವನಚರಿತ್ರೆ ಬರೆಯುವದು ಪತ್ರಿಕಾವರದಿ ಬರೆದಂತೆ ಅಲ್ಲ. ಆದರೆ TJS ಜಾರ್ಜ್ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಕಥೆಯನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ನ್ಯಾಯ ಒದಗಿಸಿದ್ದಾರೆ.

2 comments:

sunaath said...

ಸುಬ್ಬುಲಕ್ಷ್ಮಿ ಮತ್ತು ಅವರ ಪತಿ ಸದಾಶಿವಮ್ ದುಡ್ಡಿನ ಅಭಾವದಿಂದಾಗಿ ತಮ್ಮ ಆಸ್ತಿಯನ್ನು ಮಾರಿಕೊಂಡಿದ್ದರು. ಆ ಸಮಯದಲ್ಲಿ ತಿರುಪತಿ ದೇವಸ್ಥಾನದ ಧರ್ಮದರ್ಶಿ ಮಂಡಲಿಯು ಅನ್ನಮಾಚಾರ್ಯರ ಕೀರ್ತನೆಗಳನ್ನು ಸುಬ್ಬುಲಕ್ಷ್ಮಿಯವರಿಂದ ಹಾಡಿಸಲು ಬಯಸುತ್ತಾರೆ. ಸುಬ್ಬುಲಕ್ಷ್ಮಿಯವರು ಇದು ದೇವರ ಸೇವೆಯೆಂದು ಹೇಳುತ್ತ, ಇದಕ್ಕೆ ಪ್ರತಿಫಲವನ್ನು ತೆಗೆದುಕೊಳ್ಳಲು ಒಪ್ಪುವುದಿಲ್ಲ. ಕೊನೆಗೆ, ಧರ್ಮದರ್ಶಿ ಮಂಡಲಿಯು ಏಳು ಲಕ್ಷ ರೂಪಾಯಿಗಳ ಠೇವಣಿಯನ್ನು ಬ್ಯಾಂಕಿನಲ್ಲಿಟ್ಟು,ಅದರ ಬಡ್ಡಿಯು ಸುಬ್ಬುಲಕ್ಷ್ಮಿಯವರಿಗೆ ಹೋಗುವ ವ್ಯವಸ್ಥೆ ಮಾಡುತ್ತದೆ! ಈ ಕೀರ್ತನೆಗಳ ರಿಕಾರ್ಡುಗಳ ಮಾರಾಟದಿಂದಾಗಿ ಧರ್ಮದರ್ಶಿ ಮಂಡಳಿಗೆ ಹತ್ತು ಲಕ್ಷ ರೂಪಾಯಿಗಳ ಸಂಪಾದನೆಯಾಗುತ್ತದೆ.

Mahesh Hegade said...

ಹೆಚ್ಚಿನ ಮಾಹಿತಿಯುಳ್ಳ ಕಾಮೆಂಟಿಗೆ ಧನ್ಯವಾದ ಸುನಾಥ್ ಸರ್.

ತಿರುಪತಿ ಘಟನೆ ಬಗ್ಗೆ ಪುಸ್ತಕದಲ್ಲೂ ಪ್ರಸ್ತಾಪ ಬಂದಿದೆ. ಸ್ವಲ್ಪ ಬೇರೆಯದಾಗಿ ಬರೆದಿದ್ದಾರೆ.