Sunday, October 22, 2017

ಸ್ವಪ್ನಸಿಂಹ

ಅದ್ವೈತ ವೇದಾಂತದ ಸಾರವನ್ನು, ತಿರುಳನ್ನು ಒಂದೇ ವಾಕ್ಯದಲ್ಲಿ ಹೇಳಬೇಕು ಅಂದರೆ ಹೀಗೆ ಹೇಳಬಹುದು - 'ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವನಾಪರಃ' ಅರ್ಥಾತ್  'ಬ್ರಹ್ಮ (ಪರಬ್ರಹ್ಮ) ಸತ್ಯ. ಜಗತ್ತೆಂಬುದು ಮಿಥ್ಯೆ. ಜೀವವು ಬ್ರಹ್ಮನೇ ಹೊರತು ಬೇರೆಯಲ್ಲ.'

ಇದು ಶ್ರೀ ಆದಿ ಶಂಕರಾಚಾರ್ಯ ವಿರಚಿತ 'ವಿವೇಕ ಚೂಡಾಮಣಿ' ಎಂಬ ಗ್ರಂಥದಲ್ಲಿ ಬರುವ ಒಂದು ಶ್ಲೋಕ ಅಥವಾ ಶ್ಲೋಕದ ಭಾಗ. ಇದೇ ಅದ್ವೈತ ವೇದಾಂತದ ತಿರುಳು (Essence, Gist, Crux).

ಬ್ರಹ್ಮ ಸತ್ಯ. ಜಗತ್ತು ಮಿಥ್ಯೆ.

ಇದನ್ನು ಕೇಳಿದಾಗ ಜಿಜ್ಞಾಸುಗಳಲ್ಲಿ ಒಂದು ಪ್ರಶ್ನೆ ಉದ್ಭವಿಸಬಹುದು. ಅದ್ವೈತ ವೇದಾಂತ ಸಹ ಸತ್ಯವನ್ನು ಅರಿಯಲು ಉಪಯೋಗಿಸುವದು ಪ್ರಸ್ಥಾನತ್ರಯವೇ. ಪ್ರಸ್ಥಾನತ್ರಯ ಅಂದರೆ ಉಪನಿಷತ್ತುಗಳು, ಭಗವದ್ಗೀತೆ ಮತ್ತು ಬ್ರಹ್ಮಸೂತ್ರ. ವೇದಾಂತ ನಿಂತಿರುವದೇ ಇವುಗಳ ಬುನಾದಿಯ ಮೇಲೆ.

ಉಪನಿಷತ್ತುಗಳು, ಭಗವದ್ಗೀತೆ ಮತ್ತು ಬ್ರಹ್ಮಸೂತ್ರ ಇವೆಲ್ಲ ಇದೇ ಜಗತ್ತಿನಲ್ಲಿ ಇವೆ. ಜಗತ್ತು ಮಿಥ್ಯೆ ಎಂದಾಗಿದೆ. ಜಗತ್ತೇ ಮಿಥ್ಯೆ ಎಂದು ಒಪ್ಪಿಕೊಂಡ ಮೇಲೆ ಜಗತ್ತಿನಲ್ಲಿರುವ ಎಲ್ಲವೂ ಮಿಥ್ಯೆ ತಾನೇ? ಹಾಗಾದರೆ ಉಪನಿಷತ್ತುಗಳು, ಭಗವದ್ಗೀತೆ ಮತ್ತು ಬ್ರಹ್ಮಸೂತ್ರ ಕೂಡ ಮಿಥ್ಯೆ. ಹಾಗಾಗಿ ಇಂತಹ ಮಿಥ್ಯೆಗಳ ಆಧಾರದ ಮೇಲೆ ನಿಂತಿರುವ ಅದ್ವೈತ ವೇದಾಂತ ಕೂಡ ಮಿಥ್ಯೆ. ಇಂತಹ ಮಿಥ್ಯೆಯ ಮೂಟೆ ಸತ್ಯವನ್ನು ಹೇಗೆ ತೋರಿಸೀತು? ಒಂದು ವೇಳೆ ತೋರಿಸುತ್ತದೆ ಅಂತಾದರೂ ಅದು ಸತ್ಯವಾಗಿರುತ್ತದೆಯೇ?

ಇಂತಹ ಮೂಲಭೂತ ಸಂಶಯ ಯಾರಿಗೂ ಬರಬಹುದು. ಈ ಸಂಶಯವನ್ನು ನಿವಾರಿಸಲು ವೇದಾಂತಿಗಳು ಒಂದು ದೃಷ್ಟಾಂತವನ್ನು ಉಪಯೋಗಿಸುತ್ತಾರೆ. 'ಸ್ವಪ್ನಸಿಂಹ' ಅಂತ ಆ ದೃಷ್ಟಾಂತದ ಹೆಸರು.

ಮಂಚದ ಮೇಲೆ ಮಲಗಿದ್ದೀರಿ. ಚೆನ್ನಾಗಿ ನಿದ್ದೆ ಬಂದಿದೆ. ಒಂದು ಕನಸು ಬೀಳುತ್ತದೆ. ಕನಸಿನಲ್ಲಿ ನೀವು ಕಾಡಿನಲ್ಲಿ ನಡೆದು ಹೋಗುತ್ತಿದ್ದೀರಿ. ಸುಂದರವಾದ ಕಾಡು. ರಮಣೀಯ ದೃಶ್ಯಗಳು. ಜುಳುಜುಳು ಹರಿಯುವ ನದಿ. ಅದರಲ್ಲಿ ತೇಲುತ್ತಿರುವ ಸುಂದರ ಹಂಸಗಳು. ಒಂದಕ್ಕಿಂತ ಒಂದು ಸುಂದರ. ಇಂತಹ ಕನಸನ್ನು ತುಂಬಾ ಸಂತಸದಿಂದ ಆಸ್ವಾದಿಸುತ್ತಿದ್ದೀರಿ.

ಆಗ ಒಮ್ಮೆಲೇ ಸಿಂಹಗರ್ಜನೆ ಕೇಳಿಬರುತ್ತದೆ. 'ಎಲ್ಲಿಂದ ಬಂತಪ್ಪಾ ಇದು?' ಎಂದು ಭಯದಿಂದ ಅತ್ತಿತ್ತ ನೋಡುವಷ್ಟರಲ್ಲಿ ದೈತ್ಯ ಭೀಕರ ಸಿಂಹವೊಂದು ನಿಮ್ಮೆದುರು ಪ್ರತ್ಯಕ್ಷವಾಗಿರುತ್ತದೆ. ಇನ್ನೇನು ಆ ಕ್ರೂರ ಸಿಂಹ ನಿಮ್ಮ ಮೇಲೆ ದಾಳಿ ಮಾಡಬೇಕು ಅನ್ನುವಷ್ಟರಲ್ಲಿ ಕನಸು ಮುರಿದುಬೀಳುತ್ತದೆ. ನಿದ್ದೆ ಮುಗಿಯುತ್ತದೆ. ಒಮ್ಮೆಲೇ ಎಚ್ಚರವಾಗುತ್ತದೆ. ಬೆಚ್ಚಿಬಿದ್ದು ಎದ್ದು ಕೂಡುತ್ತೀರಿ. ಕನಸು ಎಂದು ಅರಿವಾದರೂ ಭೀತಿ ಹೋಗಿರುವದಿಲ್ಲ. ಮೈ ಇನ್ನೂ ನಡುಗುತ್ತಿರುತ್ತದೆ. ಉಸಿರಾಟ ಯದ್ವಾತದ್ವಾ ಆಗಿರುತ್ತದೆ. ಕೊಂಚ ಸಮಯದ ನಂತರ ಎಲ್ಲ ಸಹಜಸ್ಥಿತಿಗೆ ಬರುತ್ತದೆ. ಆದರೆ ಒಂದು ಮಾತು ನಿಜ. ಒಮ್ಮೆ ಅಂತಹ ಭೀಕರ ಕನಸು ನೋಡಿ ಎದ್ದ ಮೇಲೆ ಅಷ್ಟು ಸುಲಭಕ್ಕೆ ನಿದ್ದೆ ಬರುವದಿಲ್ಲ.

ಕನಸಿನಲ್ಲಿ ಬಂದಿತ್ತು ಸಿಂಹ. ಅದು ಮಿಥ್ಯೆ. ಮಿಥ್ಯೆ ಎಂದರೆ ಸುಳ್ಳು ಅಂತ ಅರ್ಥವಲ್ಲ. ಸಂಪೂರ್ಣವಾಗಿ ಸತ್ಯ ಅಲ್ಲ ಅಷ್ಟೇ. ಕನಸಿನಲ್ಲಿ ಬಂದ ಸಿಂಹ ಕನಸು ಹಟಾತ್ತಾಗಿ ಮುರಿದು ಬೀಳುವ ತನಕ ನಿಜವೇ ಆಗಿತ್ತು. ನಿಮಗೆ ತುಂಬಾ ಹೆದರಿಕೆ ಆಗಿತ್ತು. ಅಲ್ಲಿಗೆ ಜೀವನ ಮುಗಿಯಿತು. ಸಿಂಹ ಕೊಂದು ತಿಂದು ಮುಗಿಸುತ್ತದೆ ಅಂತ ಭೀತಿಯಾಗಿತ್ತು. ಕನಸಿನಲ್ಲಿ ಬಂದ ಸಿಂಹದಿಂದ ಏನು ಪ್ರಯೋಜನವಾಯಿತೋ ಇಲ್ಲವೋ ಗೊತ್ತಿಲ್ಲ. ಕನಸು ಮುಗಿದು ಎಚ್ಚರವಂತೂ ಆಯಿತು. ಇಲ್ಲವಾದರೆ ಬಿದ್ದಿದ್ದ ಕನಸಿನಲ್ಲಿ ಸುಂದರ ಕಾಡಿನ ರಮಣೀಯ ದೃಶ್ಯಗಳನ್ನು ಸವಿಯುತ್ತ ಇನ್ನೂ ಅದೆಷ್ಟು ಗಂಟೆಗಳ ಕಾಲ ನಿದ್ರೆ ಮಾಡಿಕೊಂಡು ಇರುತ್ತಿದ್ದಿರೋ ಏನೋ.

ಉಪನಿಷತ್ತು, ಭಗವದ್ಗೀತೆ, ಬ್ರಹ್ಮಸೂತ್ರ ಮತ್ತು ಇನ್ನಿತರ ವೇದಾಂತದ ಗ್ರಂಥಗಳು, ಜ್ಞಾನದ ಮೂಲಗಳು ಕನಸಿನಲ್ಲಿ ಬಂದ ಸಿಂಹಗಳಿದ್ದಂತೆ. ಸ್ವಪ್ನಸಿಂಹಗಳು. ಮಿಥ್ಯೆ ನಿಜ. ಆದರೆ ನಿದ್ದೆಯಿಂದ ಬಡಿದೆಬ್ಬಿಸಲು ಮಾತ್ರ ತುಂಬಾ ಸಹಾಯಕಾರಿ. Very effective. Practically useful.

ನಮ್ಮ ಜಾಗ್ರತಾವಸ್ಥೆ ಕೂಡ ಸ್ವಪ್ನಾವಸ್ಥೆಯೇ. ಎಚ್ಚರವಿದ್ದಾಗ ಕಾಣುವದೂ ಕೂಡ ಕನಸೇ. ಹಾಗಾಗಿಯೇ ಜಗತ್ತು ಮಿಥ್ಯೆ. ಕೇವಲ ಹನ್ನೆರೆಡು ಮಂತ್ರಗಳಿರುವ ಮಾಂಡೂಕ್ಯ ಉಪನಿಷತ್ತು ಮತ್ತು ಅದರ ಮೇಲೆ ಆದಿ ಶಂಕರರ ಗುರುವಿನ ಗುರುಗಳಾದ ಗೌಡಪಾದಾಚಾರ್ಯರು ಬರೆದ ಕಾರಿಕ (commentary) ಈ ವಿಷಯವನ್ನು ಮನದಟ್ಟು ಮಾಡಿಕೊಡುತ್ತವೆ.

ನಾವು ಕಣ್ಣು ಬಿಟ್ಟುಕೊಂಡು ಕುಳಿತಾಗ ಇರುವ ಸ್ಥಿತಿ ಜಾಗ್ರತಾವಸ್ಥೆ. ಉಳಿದ ಎರಡು ಸ್ಥಿತಿಗಳು ಅಂದರೆ ಸ್ವಪ್ನಾವಸ್ಥೆ ಮತ್ತು ಸುಷುಪ್ತಿ (ಗಾಢ ನಿದ್ದೆ).

ಜಾಗ್ರತಾವಸ್ಥೆ ಕೂಡ ಒಂದು ತರಹದ ಸ್ವಪ್ನಾವಸ್ಥೆಯೇ. ಮಲಗಿ ಕನಸನ್ನು ಕಾಣುತ್ತಿರುವಾಗ ಆ ಕನಸು ಹೇಗೆ ೧೦೦% ನೈಜವಾಗಿರುತ್ತದೋ ಹಾಗೆಯೇ ಎಚ್ಚರವಾಗಿರುವಾಗ ಈ ಜಗತ್ತೆಂಬ (ಸಂಸಾರವೆಂಬ) ಕನಸು ಕೂಡ ೧೦೦% ನಿಜ ಅಂತ ಅನ್ನಿಸುತ್ತದೆ. ಹೀಗಿರುವಾಗ ಎಂದೋ ಒಂದು ದಿನ ಭಗವಂತನ ಕೃಪೆಯಾಗಿ ಯಾವುದೋ ಉಪನಿಷತ್ತನ್ನೋ, ಭಗವದ್ಗೀತೆಯನ್ನೋ ಅಥವಾ ಮತ್ತ್ಯಾವುದೋ ಅಮೋಘ ಗ್ರಂಥವನ್ನು ಕೈಗೆತ್ತಿಕೊಳ್ಳುತ್ತೇವೆ. ಅದರಲ್ಲಿರುವ ಅಮೂಲ್ಯ ಜ್ಞಾನ ಸ್ವಪ್ನಸಿಂಹದಂತೆ ಮೇಲೆರಗಿ ಬರುತ್ತದೆ. ಈ ಜಗತ್ತು, ಜೀವನ, ಸಂಸಾರ ಎಂಬ ಸುಂದರ ಕನಸು ಭಗ್ನಗೊಳ್ಳುತ್ತದೆ. ಅಷ್ಟರಮಟ್ಟಿಗೆ ಆ ಗ್ರಂಥಗಳು ಮತ್ತು ಅವುಗಳಲ್ಲಿರುವ ಜ್ಞಾನಶಕ್ತಿ ಕೆಲಸ ಮಾಡಿರುತ್ತದೆ. ಅಜ್ಞಾನದಿಂದ ತಾತ್ಕಾಲಿಕವಾಗಿ ಬಡಿದೆಬ್ಬಿಸಿರುತ್ತವೆ. ಆದರೆ ಆದಿಯಿಲ್ಲದ ಈ ಅಜ್ಞಾನ (ಮಾಯೆ) ಅದೆಷ್ಟು ದಟ್ಟವಾಗಿರುತ್ತದೆ ಅಂದರೆ ಮತ್ತೆ ನಿದ್ರೆಗೆ ಜಾರುತ್ತೇವೆ. ಮತ್ತೆ ಸಂಸಾರದ ಕನಸನ್ನು ರಸವತ್ತಾಗಿ ಆಸ್ವಾದಿಸುತ್ತ ಜೀವನವನ್ನು ಅಪವ್ಯಯ ಮಾಡುತ್ತೇವೆ. ಭಗವಂತನ ಕೃಪೆ ಇದ್ದರೆ ಮತ್ತೆ ಮತ್ತೆ ಈ ಸಂಸಾರವೆಂಬ ಕನಸಿನಲ್ಲಿ ಜ್ಞಾನವೆಂಬ ಸ್ವಪ್ನಸಿಂಹವನ್ನು ಕಂಡು ಬೆಚ್ಚಿಬಿದ್ದು ಎದ್ದು ಕೂಡುತ್ತವೆ. ಈ ಸಂಸಾರವೆಂಬ ಆದಿಯಿಲ್ಲದ ಅಜ್ಞಾನದ ಗಾಢ ಸ್ವಪ್ನವನ್ನು ಆಗಾಗ ತಾತ್ಕಾಲಿಕವಾಗಿಯಾದರೂ ಭಂಗಗೊಳಿಸಲು ಸ್ವಪ್ನಸಿಂಹ ಬೇರೆ ಬೇರೆ ರೂಪದಲ್ಲಿ ಬರಬಹುದು. ಗುರುವಿನ ರೂಪದಲ್ಲಿ ಬರಬಹುದು. ಅಧ್ಯಯನದ ರೂಪದಲ್ಲಿ ಬರಬಹುದು. ಅನುಭವಗಳ ರೂಪದಲ್ಲಿ ಬರಬಹುದು. ಕಷ್ಟಕಾರ್ಪಣ್ಯಗಳ ರೂಪದಲ್ಲಿ ಬರಬಹುದು. Possibilities are limitless.

ಈ ಸಂಸಾರವೆಂಬ ಸುಂದರ(!) ಕನಸನ್ನು ಜ್ಞಾನವೆಂಬ ಸ್ವಪ್ನಸಿಂಹ ಪದೇ ಪದೇ ಭಂಗಗೊಳಿಸಿದಾಗ ಮೊದಮೊದಲು ರಸಭಂಗವಾಗಿ ಕಿರಿಕಿರಿ ಉಂಟಾದರೂ ಮನುಷ್ಯ ತನ್ನ ಅಸ್ತಿತ್ವಕ್ಕೆ ಸಂಬಂಧಪಟ್ಟ ಕೆಲವು ಅತಿ ಮುಖ್ಯ ಪ್ರಶ್ನೆಗಳನ್ನು ಕೇಳಲು ಶುರು ಮಾಡುತ್ತಾನೆ. ಆ ಪ್ರಕ್ರಿಯೆ ಒಮ್ಮೆ ಆರಂಭವಾಯಿತೆಂದರೆ ಮೋಕ್ಷದತ್ತ ಹೊರಟಂತೆಯೇ. ಸಾವಿರಾರು ಜನ್ಮ ಬೇಕಾಗಬಹುದು. ಆದರೆ ಗುರಿಯತ್ತ ಬದಲಾಗದ ಪ್ರಯಾಣ ಶುರುವಾಗಿರುತ್ತದೆ.

ಮಿಥ್ಯೆಗಳೇ ಆದರೂ ವೇದ, ಉಪನಿಷತ್ತು, ಇತ್ಯಾದಿಗಳ ಉಪಯುಕ್ತತೆಯನ್ನು ಮನದಟ್ಟು ಮಾಡಿಸಲು ವೇದಾಂತಿಗಳು ಮತ್ತೊಂದು ದೃಷ್ಟಾಂತವನ್ನು ಕೊಡುತ್ತಾರೆ.

ಕಾಡಿನಲ್ಲಿ ನಡೆದುಹೋಗುತ್ತಿರುವಾಗ ಒಂದು ಮುಳ್ಳು ಕಾಲಿಗೆ ಚುಚ್ಚುತ್ತದೆ. ಮುಳ್ಳನ್ನು ತೆಗೆದೆಸೆದರೂ ಮುಳ್ಳಿನ ಒಂದು ಸಣ್ಣ ಚೂರು ಪಾದದಲ್ಲೇ ಉಳಿದುಕೊಳ್ಳುತ್ತದೆ. ಆಗ ಏನು ಮಾಡುತ್ತೀರಿ? ಮುಳ್ಳಿನ ಚೂರನ್ನು ಪಾದದಲ್ಲೇ ಇಟ್ಟುಕೊಂಡು ಮುಂದುವರೆಯುವದು ಅಪಾಯ. ಮುಂದೆ infection ಆಗಿ ಹೆಚ್ಚಿನ ಅಪಾಯ ಆಗಬಹುದು. ಮುಳ್ಳಿನ ಚೂರನ್ನು ತೆಗೆದುಹಾಕೋಣ ಅಂದರೆ ಅದಕ್ಕೆ ಬೇಕಾದ ಸೂಜಿ ಇತ್ಯಾದಿ ಸಲಕರಣೆ ತುರ್ತಕ್ಕೆ ನಿಮ್ಮಲ್ಲಿ ಇಲ್ಲ. ಏನು ಮಾಡಬೇಕು?

ಮತ್ತೊಂದು ಚೂಪಾದ ಮುಳ್ಳನ್ನು ತೆಗೆದುಕೊಳ್ಳಿ. ಆ ಮುಳ್ಳಿನಿಂದ ಪಾದದಲ್ಲಿರುವ ಮುಳ್ಳಿನ ಚೂರನ್ನು ಜತನದಿಂದ ತೆಗೆಯಿರಿ. ನಂತರ ಮುಳ್ಳಿನ ಚೂರನ್ನು ಮತ್ತು ಅದನ್ನು ತೆಗೆಯಲು ಉಪಯೋಗಿಸಿದ ಮುಳ್ಳನ್ನು, ಎರಡನ್ನೂ ಕೂಡ, ಎಸೆದು ಮುನ್ನೆಡೆಯಿರಿ.

ಇಲ್ಲಿ ಪಾದದಲ್ಲಿ ಹೊಕ್ಕಿರುವ ಮುಳ್ಳು ಅಜ್ಞಾನ (ಮಾಯೆ). ಅದನ್ನು ತೆಗೆಯಲು ಉಪಯೋಗಿಸಿದ್ದು ಕೂಡ ಮುಳ್ಳೇ. ಅದು ಜ್ಞಾನ. ಮುಳ್ಳಾದರೇನಾಯಿತು? ಉಪಯೋಗಕ್ಕೆ ಬಂತು ತಾನೇ? ವೇದೋಪನಿಷತ್ತಿನ ಮೇಲೆ ಆಧಾರಿತ ವೇದಾಂತ ಜ್ಞಾನ ಮತ್ತೊಂದು ಮುಳ್ಳಿದ್ದಂತೆ. ಅಜ್ಞಾನವೆಂಬ ಮುಳ್ಳನ್ನು ಜ್ಞಾನವೆಂಬ ಮತ್ತೊಂದು ಮುಳ್ಳಿನಿಂದ ತೆಗೆಯಬೇಕು. ನಂತರ ಎರಡೂ ಮುಳ್ಳುಗಳನ್ನು ಎಸೆಯಬೇಕು.

ಜ್ಞಾನವೆಂಬ ಮುಳ್ಳು ಚೆನ್ನಾಗಿದೆ ಅಂತ ಜೊತೆಗಿಟ್ಟುಕೊಂಡರೆ ಉಪಯೋಗವಿಲ್ಲ. That is missing the point. ಅಂತವರು ಪಂಡಿತರಾದಾರೇ ವಿನಃ ಜ್ಞಾನಿಗಳಾಗುವದಿಲ್ಲ. ಆದರೆ ವೇದಾಂತ ಅಧ್ಯಯನ ಮಾಡುವ ಹಲವಾರು ಜನ ಕೇವಲ ಪಂಡಿತರಾಗುತ್ತಾರೆ ವಿನಃ ಜ್ಞಾನಿಗಳಾಗುವದಿಲ್ಲ. ಅವರಿಗೆ ಮುಳ್ಳಿನಿಂದ ಮುಳ್ಳನ್ನು ತೆಗೆಯಬಹುದು ಎಂಬ ವಿವೇಕ ಮೂಡಿರುವದಿಲ್ಲ. ಜ್ಞಾನವೆಂಬ ಮುಳ್ಳನ್ನು ಹಿಡಿದುಕೊಂಡು ಮಂದಿ ಮೈಗೆ ಚುಚ್ಚುತ್ತ ಅಡ್ಡಾಡುತ್ತಿರುತ್ತಾರೆ. ತಲೆ ತಿನ್ನುವ ವೇದಾಂತಿಗಳು. ದೀಡ ಪಂಡಿತರು.

ಆಧುನಿಕ ವೇದಾಂತಿಗಳು ಮತ್ತೊಂದು ದೃಷ್ಟಾಂತವನ್ನು ಕೊಡುತ್ತಾರೆ. ಪೋಲ್ ವಾಲ್ಟ್ (pole vault) ಕ್ರೀಡೆಯ ಬಗ್ಗೆ ನಿಮಗೆ ಗೊತ್ತಿರಬಹುದು. ಒಂದು ಉದ್ದನೆಯ ಗಳವನ್ನು ಹಿಡಿದು, ವೇಗವಾಗಿ ಓಡಿಬಂದು, ಗಳವನ್ನು ಭೂಮಿ ಮೇಲೆ ಊರಿ, ಅದನ್ನು ಬಲವಾಗಿ ಬಗ್ಗಿಸಿ, ಬಗ್ಗಿಸಿದಾಗ ಆಕರವಾದ spring ಶಕ್ತಿಯಿಂದ ಮೇಲೆ ಹೋಗುವಾಗ ಅದರ ಜೊತೆಯೇ ಮೇಲೆ ಹೋಗಿ, ಅತಿ ಎತ್ತರಕ್ಕೆ ಹೋದಾಗ ಗಳವನ್ನು ಬಿಟ್ಟು ಹಾರುವದು ಪೋಲ್ ವಾಲ್ಟ್. ಮೇಲೆ ಹೋದಾಗ ಗಳವನ್ನು ಬಿಡಲಿಲ್ಲ ಅಂದರೆ ಹಾರಲು ಆಗುವದಿಲ್ಲ. ಕೆಳಗೆ ಬೀಳಬೇಕಾಗುತ್ತದೆ. ವೇದೋಪನಿಷತ್ತಿನ ಜ್ಞಾನ ಎಂದರೆ ಪೋಲ್ ವಾಲ್ಟಿನ ಗಳವಿದ್ದಂತೆ. ಎತ್ತರಕ್ಕೆ ಹಾರಲು ಬೇಕೇಬೇಕು. ಆದರೆ ಅಜ್ಞಾನದ hurdle ಪಾರಾಗಬೇಕು ಅಂದರೆ ಸರಿಯಾದ ಸಮಯದಲ್ಲಿ ಗಳವನ್ನು ಬಿಟ್ಟು ಛಲಾಂಗ್ ಹೊಡೆಯಲೇಬೇಕು. ಗಳ ಚೆನ್ನಾಗಿದೆ, ಮೇಲೆ ಬರಲು ಸಹಾಯ ಮಾಡಿದೆ ಅಂತ ಮೋಹ ತೋರುವಂತಿಲ್ಲ.

ಮಿಥ್ಯೆಯ ಬಗ್ಗೆ ಒಂದು ಸಣ್ಣ ವಿವರಣೆ. ಮಿಥ್ಯೆ ಅಂದರೆ ಸುಳ್ಳು ಅಂತಲ್ಲ. ಮಿಥ್ಯೆ ಅಂದರೆ ಸಂಪೂರ್ಣ ಸತ್ಯವಲ್ಲ ಅಷ್ಟೇ. ವೇದಾಂತಿಗಳು ಅನೇಕ ಉದಾಹರಣೆ ಕೊಡುತ್ತಾರೆ. ಕನ್ನಡಿಯಲ್ಲಿನ ಪ್ರತಿಬಿಂಬ. ಕಣ್ಣಿಗೆ ಕಾಣುತ್ತದೆ. ಆದರೆ ತಂದುಕೊಡಿ ಅಂದರೆ ಸಾಧ್ಯವಿಲ್ಲ. ಮರಭೂಮಿಯಲ್ಲಿ ಕಾಣುವ ಮೃಗಜಲ (mirage) ಕೂಡ ಮಿಥ್ಯೆ. ಥೇಟ್ ನೀರಿನಂತೆಯೇ ಕಾಣುತ್ತದೆ. ಹೋಗಿ ನೋಡಿದರೆ ನೀರು ಇರುವದಿಲ್ಲ. ಜಾದೂಗಾರ ಏನೇನೋ ಜಾದೂ ಮಾಡುತ್ತಾನೆ. ಎಲ್ಲ ನೈಜವಾಗಿರುತ್ತದೆ. ಆದರೆ ನಿಜವಾಗಿರುವದಿಲ್ಲ.

ಸಿಂಹಸ್ವಪ್ನದ ಬಗ್ಗೆ ಕೇಳಿದ್ದೆ. ಆದರೆ ಸ್ವಪ್ನಸಿಂಹದ ಬಗ್ಗೆ ಕೇಳಿರಲಿಲ್ಲ. ಮನ್ನಿತ್ತಲಾಗೆ ಪಾರ್ಥಸಾರಥಿ ಎಂಬ ವೇದಾಂತಿಗಳು ಬರೆದ ಪುಸ್ತಕ ಓದುತ್ತಿದ್ದೆ. ಅದರಲ್ಲಿ ಸ್ವಪ್ನಸಿಂಹ ಬಂತು. ಸ್ವಲ್ಪ ಮಟ್ಟಿಗಾದರೂ ಅಜ್ಞಾನದ ಸುಂದರ ಕನಸಿನಿಂದ ಬಡಿದೆಬ್ಬಿಸಿತು. ಮತ್ತೊಮ್ಮೆ ಅಜ್ಞಾನದ ನಿದ್ದೆ ಬಂದು ಅದರಲ್ಲಿ ಸಂಸಾರವೆಂಬ ಸುಂದರ ಸ್ವಪ್ನದಲ್ಲಿ ಮುಳುಗಿಹೋಗುವ ಮೊದಲು ಮುಂದೊಂದು ದಿನ ಮತ್ತೊಮ್ಮೆ ಸ್ವಪ್ನಸಿಂಹ ದರ್ಶನವಾಗುವವರೆಗೆ ಮಾಹಿತಿಗೆ ಇರಲಿ ಅಂತ ಇಷ್ಟೆಲ್ಲ ಬರೆದೆ ಅಷ್ಟೇ! :)

ಸಿಂಹಸ್ವಪ್ನಕ್ಕೂ ಸ್ವಪ್ನಸಿಂಹಕ್ಕೂ ಏನು ಸಂಬಂಧ ಎಂಬ ಜಿಜ್ಞಾಸೆ. ಈಗ ಈ ಶಬ್ದಗಳ etymology ಹುಡುಕಿಕೊಂಡು ಹೋಗಬೇಕು. ಹೀಗೆ ಏನೇನೋ ಹುಡುಕುವದರಲ್ಲೂ ಮಜಾ ಇದೆ ಬಿಡಿ.

'ಸ್ವಪ್ನಸಿಂಹ' ಮಾಹಿತಿ ಆಧಾರ: Vedanta Treatise - The Eternities by A. Parthasarathy

ಸುಪ್ರಸಿದ್ಧ ಯಕ್ಷಗಾನ ಕಲಾವಿದರಾಗಿದ್ದ ಕರ್ಕಿ ಕೃಷ್ಣ ಹಾಸ್ಯಗಾರರು ಅದ್ಭುತ ಸಿಂಹನೃತ್ಯ ಪ್ರಯೋಗ ಮಾಡುತ್ತಿದ್ದರು. ಕೆಳಗೆ ಹಾಕಿದ್ದೇನೆ. ನೋಡಿ ಎಂಜಾಯ್ ಮಾಡಿ.

2 comments:

sunaath said...

ಗುರುಗಳೆ,
ಸಿಂಹಸ್ವಪ್ನದಂತಿರುವ ಈ ಸಂಸಾರದಲ್ಲಿ, ಸ್ವಪ್ನಸಿಂಹದಂತಿರುವ ನಿಮ್ಮ ಬರಹದಿಂದ ಎಚ್ಚರಿಕೆ ಮೂಡುತ್ತಿದೆ. ಧನ್ಯವಾದಗಳು. ಒಂದು ವಿಶೇಷವನ್ನು ನಾನು ಇಲ್ಲಿ ಹೇಳಲೇ ಬೇಕು: ಅದು ನಿಮ್ಮ ಭಾಷೆ. ನಿಮ್ಮ ಲೇಖನದ ಭಾಷೆಯು ತುಂಬ ಚೆನ್ನಾಗಿದೆ. ಲೇಖನದಲ್ಲಿ ಕ್ರಮಬದ್ಧತೆ ಇದೆ, ತಿಳಿಸಬಯಸುವ ವಿಷಯವನ್ನು ಮನದಟ್ಟಾಗುವಂತೆ, ಸರಳವಾಗಿ ತಿಳಿಸುತ್ತಿದ್ದೀರಿ. ಅಭಿನಂದನೆಗಳು.

Mahesh Hegade said...

ಮೆಚ್ಚುಗೆಭರಿತ ತಮ್ಮ ಈ ಕಾಮೆಂಟಿಗೆ ಅನಂತ ಧನ್ಯವಾದಗಳು,ಸುನಾಥ್ ಸರ್.