Saturday, February 10, 2018

ಹನುಮನಿಗೆ ಶರಣಾದ ಶನಿ

ಶನಿಯ ದುಷ್ಪರಿಣಾಮಗಳು ದೂರವಾಗಲು ಹನುಮಂತನನ್ನು ಆರಾಧಿಸುವಂತೆ ಸಲಹೆ ಕೊಡುತ್ತಾರೆ. ವಾರದ ದಿನಗಳಲ್ಲಿ ಒಂದಾದ 'ಶನಿ'ವಾರದಲ್ಲಿ ಶನಿಯ ಹೆಸರಿದ್ದರೂ ಶನಿವಾರ ಹನುಮಂತನ ಪೂಜೆಯ ದಿನವೆಂದೇ ಹೆಚ್ಚು ಚಾಲ್ತಿಯಲ್ಲಿದೆ. ಶನಿವಾರಗಳಂದು ಹನುಮಪ್ಪನ ಗುಡಿಗಳಲ್ಲಿ ವಿಪರೀತ ರಶ್. ಅಲ್ಲವೇ? ಪರೀಕ್ಷೆ ಹತ್ತಿರವಿದ್ದರಂತೂ ಕೇಳಲೇಬೇಡಿ. ಹನುಮಂತ ಸಿಕ್ಕಾಪಟ್ಟೆ ಬ್ಯುಸಿ. :)

ಶನಿಗೂ ಹನುಮಂತನಿಗೂ ಎಲ್ಲಿಂದೆಲ್ಲಿಯ ಸಂಬಂಧ? ಕಾಟ ಶನಿ ಕೊಟ್ಟರೆ ಹನುಮಂತ ಹೇಗೆ ಪರಿಹರಿಸುತ್ತಾನೆ?

ಅದರ ಹಿಂದೊಂದು ಕಥೆ ಇದೆ.

ರಾಮಾಯಣದ ಕಾಲದಲ್ಲಿ ರಾಮಸೇತು ಕಟ್ಟುವ ಸಮಯ. ಅದೇ ಸಮಯದಲ್ಲಿ ಶನಿ ಮಹಾರಾಜ ಹನುಮಂತನ ಹೆಗಲೇರಿದ. ಹನುಮಂತನ ಜಾತಕದ ಪ್ರಕಾರ ಶನಿ ವಕ್ಕರಿಸಿಕೊಂಡಿತ್ತು. ಹಾಗಾಗಿ ಶನಿ ಹನುಮಂತನ ಬೆನ್ನೇರಿದ್ದ.

ರಾಮಸೇತು ಕಟ್ಟುವ ಕಾರ್ಯದಲ್ಲಿ ಹನುಮಂತ ಎರ್ರಾಬಿರ್ರಿ ಬ್ಯುಸಿ. ದೊಡ್ಡ ದೊಡ್ಡ ಬಂಡೆಗಲ್ಲುಗಳನ್ನು ಬೆನ್ನ ಮೇಲೆ ಹೊತ್ತುಕೊಂಡು ಬಂದು ಸಮುದ್ರಕ್ಕೆ ಎಸೆಯುತ್ತಿದ್ದ. ಸಿಕ್ಕಾಪಟ್ಟೆ ಉತ್ಸಾಹ ರಾಮಬಂಟನಿಗೆ. ಬೆನ್ನ ಮೇಲಿದ್ದ ಶನಿಯ ಪಾಡನ್ನು ಮಾತ್ರ ಕೇಳಬೇಡಿ. ಹನುಮಂತ ಹೊತ್ತು ತರುತ್ತಿದ್ದ ದೊಡ್ಡ ದೊಡ್ಡ ಬಂಡೆಕಲ್ಲುಗಳ ಕೆಳಗೆ ಸಿಕ್ಕು ನುಜ್ಜುಗುಜ್ಜಾಗಿ ಹೋಗುತ್ತಿದ್ದ. ಪಡಬಾರದ ಪಾಡು ಶನಿ ಮಹಾರಾಜನದು. ಏರಬಾರದ ಸಮಯದಲ್ಲಿ ಬೆನ್ನೇರಿಬಿಟ್ಟಿದ್ದ.

ಸ್ವಲ್ಪ ಹೊತ್ತಿನ ನಂತರ ಶನಿ ಮಹಾರಾಜ ಬಂಡೆಗಳ ಕೆಳಗೆ ಸಿಕ್ಕು ಫುಲ್ ಸ್ಕ್ರಾಪ್ ಆಗಿಬಿಟ್ಟ.

'ಯೋ, ಹನುಮ! ನಿನ್ನ ಹೆಗಲಿನಿಂದ ಕೆಳಗೆ ಇಳಿಯಬೇಕು ಮಾರಾಯ. ಒಂದು ನಿಮಿಷ ಸಮಯ ಕೊಡು. ಬಂಡೆಗಳನ್ನು ತರುವದನ್ನು ನಿಲ್ಲಿಸು ಮಾರಾಯಾ. ನನ್ನ ಮೈಯೆಲ್ಲಾ ಮುರಿದುಹೋಯಿತು ನಿನ್ನ ಬಂಡೆಗಳ ಕೆಳಗೆ ಸಿಕ್ಕು,' ಎಂದು ಅಂಬೋ ಅಂದ.

ಹನುಮಂತ ಖಡಕ್ಕಾಗಿ ಒಂದೇ ಮಾತು ಹೇಳಿದ, 'ನೀನು ನನ್ನ ಒಂದು ಮಾತಿಗೆ ಒಪ್ಪಿದರೆ ಮಾತ್ರ ನನ್ನ ಹೆಗಲಿನಿಂದ ಕೆಳಗೆ ಇಳಿಯಲು ಅನುವು ಮಾಡಿಕೊಡುತ್ತೇನೆ. ಇಲ್ಲವಾದರೆ ಅಲ್ಲೇ ಕೂತಿರು. ಏನು ಫಲ ಕೊಡಬೇಕೋ ಕೊಡು.'

ಎಲ್ಲರಿಗೂ ಪೀಡೆ ಕೊಡುವ ಶನಿಗೆ ಕೆಳಗಿಳಿದು ಎಸ್ಕೇಪ್ ಆದರೆ ಸಾಕಾಗಿತ್ತು. ಹನುಮಂತ ಏನೇ ಕೇಳಿದರೂ ಒಪ್ಪಿಕೊಳ್ಳುತ್ತೇನೆ ಅಂದ. ಹನುಮನ ಕರಾರು ಏನೆಂದು ಕೇಳಿದ ಶನಿ.

'ನನ್ನ ಭಕ್ತರಿಗೆ ನೀನು ಬಿಲ್ಕುಲ್ ತೊಂದರೆ ಕೊಡಬಾರದು,' ಎಂದು ಕೇಳಿಕೊಂಡ ಹನುಮಂತ. ಅದಕ್ಕೆ ದೂಸರಾ ಮಾತಿಲ್ಲದೆ ಒಪ್ಪಿಕೊಂಡ ಶನಿ.

ಹಾಗೆ ಭಾಷೆ ತೆಗೆದುಕೊಂಡ ಮೇಲೆಯೇ ಹನುಮಂತ ಶನಿಗೆ ತನ್ನ ಬೆನ್ನು ಬಿಟ್ಟು ಇಳಿಯಲು ಅನುವು ಮಾಡಿಕೊಟ್ಟ. ಬದುಕಿದೆಯಾ ಬಡಜೀವವೇ ಅನ್ನುವ ಮಾದರಿಯಲ್ಲಿ ಶನಿ ಹನುಮನ ಹೆಗಲಿನಿಂದ ಕೆಳಗಿಳಿದ.

ಅಂದು ಹಾಗೆ ಕೊಟ್ಟ ಮಾತಿನ ಪ್ರಕಾರ ಶನಿದೇವ ಹನುಮಂತನ ಭಕ್ತರಿಗೆ ಆದಷ್ಟು ಕಮ್ಮಿ ಕಷ್ಟ ಕೊಡುತ್ತಾನೆ ಅಂತ ನಂಬಿಕೆ.

ಇದನ್ನು ಪುರಾಣದ ಅಡುಗೂಲಜ್ಜಿ ಕಥೆ ಅಂತ ನಗಣ್ಯ ಮಾಡಿದರೂ ಇದರಲ್ಲಿ ಒಂದು ಒಳ್ಳೆ ನೀತಿ ಅಡಗಿದೆ. ಸದಾ ಒಂದಿಲ್ಲೊಂದು ಕೆಲಸ (ಒಳ್ಳೆಯ ಕೆಲಸ) ಮೈಮೇಲೆ ಎಳೆದುಕೊಂಡು, ಅದರಲ್ಲೇ ಮಗ್ನರಾಗಿರುವ ಜನರಿಗೆ ಮನೋಕ್ಲೇಶಗಳು ಕಮ್ಮಿ. ಅವರು ತಮ್ಮ ಅಚ್ಚುಮೆಚ್ಚಿನ ಕೆಲಸದಲ್ಲಿ ಅದೆಷ್ಟು ಕಳೆದುಹೋಗಿರುತ್ತಾರೆ ಅಂದರೆ ಯಾವ ಶನಿ ಬಂದು, ಎಷ್ಟೇ ವರ್ಷ ಇದ್ದು, ಏನೇ ಕಷ್ಟ ಕೊಟ್ಟು ಹೋದರೂ ಅವರಿಗೆ ಜಾಸ್ತಿ ಏನೂ ಅನ್ನಿಸುವದಿಲ್ಲ. ಹಾಗಂತ ಅವರ ಪಾಲಿನ ಕರ್ಮಫಲ ಪ್ರಾಪ್ತಿಯಾಗದೇ ಹೋಗಿರುತ್ತದೆ ಅಂತಲ್ಲ. ಆದರೆ ಅವರಿಗೆ ಒಂದು overriding ಧ್ಯೇಯ, ಗುರಿ ಇರುವದರಿಂದ ಶನಿಯಿಂದ ಬರುವ so called ಕಷ್ಟಗಳು ಅವರನ್ನು ಧೃತಿಗೆಡಿಸುವದಿಲ್ಲ. ರಾಮಸೇತು ಕಟ್ಟುವದು ಅಂದರೆ ಒಂದು ಒಳ್ಳೆ ಕೆಲಸಕ್ಕೆ ಶ್ರದ್ಧೆಯಿಂದ ಕಮಿಟ್ ಆಗುವದು. ಬಂಡೆಗಲ್ಲುಗಳನ್ನು ಎತ್ತಿಕೊಂಡು ಬರುವದು ಅಂದರೆ ಇಲ್ಲ ಸಲ್ಲದ ವಿಚಾರ ಮಾಡದೇ ಏಕಾಗ್ರತೆಯಿಂದ ಕಠಿಣ ಪರಿಶ್ರಮ ಪಡುವದು.

ಖಿನ್ನತೆಯನ್ನು ದೂರಮಾಡಲು work therapy ಅಂತೇನೋ ಇದೆ ಅಂತ ನೆನಪು. ಅದರ ಹಿಂದಿನ ಐಡಿಯಾ ಇದೇ. ಕೆಲಸವಿಲ್ಲದೇ ಕೂತರೆ ಶನಿ ಸೀದಾ ಮನಸ್ಸಿಗೇ ಬಂದು ಒಂದು ಹುಳ ಬಿಡುತ್ತಾನೆ. ಆ ಹುಳವೇ ಇಡೀ ಮನಸ್ಸನ್ನು ಆವರಿಸಿಕೊಂಡು ಮನುಷ್ಯ ಪಡಬಾರದ ಪಾಡು ಪಡುತ್ತಾನೆ. ಅದೇ ಒಂದು ಗುರಿಯಿರುವ ಮನುಷ್ಯನಿಗೆ ಅದರ ಹತ್ತು ಪಟ್ಟು ಹೆಚ್ಚು ಕಷ್ಟ ಬಂದರೂ ಅವನ ಗುರಿ ಅಷ್ಟು ಖಡಕ್ ಆಗಿರುವದರಿಂದ ಅವನಿಗೆ ಅವೆಲ್ಲ ಸಣ್ಣ ಕಿರಿಕಿರಿ ಅನ್ನಿಸಬಹುದೇ ವಿನಃ  debilitating blockers ಆಗುವದಿಲ್ಲ.

Most of our so called problems are self inflicted and due to wrong thinking. A change in perspective is what is required to address most of the problems. Sometimes addressing a problem means simply making peace with the problem. Some problems just can't be solved! No use fretting about such problems.

ನೋಡುವ ದೃಷ್ಟಿ ಬದಲಾದರೆ ಸೃಷ್ಟಿ ತಂತಾನೇ ಬದಲಾಗುತ್ತದೆ ಅನ್ನುವ ಮಾತು ನಿಜ. 

ಸೃಜನಶೀಲ, ಕ್ರಿಯಾಶೀಲ ಜೀವನ ಜಾರಿಯಲ್ಲಿರಲಿ!

ರಾಮಾಯಣದಲ್ಲಿ ಬರುವ ಅನೇಕ ಕಥೆಗಳು ಗೊತ್ತಿದ್ದರೂ ಈ ಶನಿ versus ಹನುಮಂತನ ಕಥೆ ಗೊತ್ತಿರಲಿಲ್ಲ. ಗೊತ್ತಾಗಿದ್ದಕ್ಕೆ ಸಂತಸ.

ಶನಿವಾರವೇ ಇದನ್ನು ಬರೆಯುವಂತಾದದ್ದು ಶನ್ಮಂತನ (ಶನಿ+ಹನುಮಂತ) ಜಾಯಿಂಟ್ ಕೃಪೆ ಅನ್ನಲೇ!? :)

ಹ್ಯಾಪಿ ಶನಿವಾರ! :)

2 comments:

sunaath said...

ಇಂತು ಮಹೇಶಮುನಿ ಕೃತ ‘ಶನಿಪುರಾಣೇ ಹನುಮಾನ್ ಮಹಾತ್ಮ್ಯಮ್’ ಸಮಾಪ್ತಮ್. ಶುಭಮಸ್ತು.
ಮಹೇಶರೆ, ನಿಮ್ಮ ಪ್ರವಚನ ತುಂಬ ರಂಜಿಸಿತು. ಅದಾದ ಮೇಲೆ ನೀವು ಕೊಟ್ಟಿರುವ ಬೋಧನೆಗಳು ನಿಜವಾಗಿಯೂ ಉತ್ತಮವಾಗಿವೆ. ಈ ಪುರಾಣವನ್ನು ಶ್ರವಣ ಮಾಡಿದವರಿಗೆ ಶುಭಫಲಗಳು ದೊರೆಯುವವು ಎಂದು ನಾನು ಅಗದಿ ಸೀರಿಯಸ್ ಆಗಿಯೇ ಹೇಳುತ್ತಿದ್ದೇನೆ. ಧನ್ಯವಾದಗಳು.

Mahesh Hegade said...

ಧನ್ಯವಾದಗಳು, ಸುನಾಥ್ ಸರ್!

ಪ್ರವಚನಕಾರನನ್ನಾಗಿಯೂ ಮಾಡಿದ್ದೀರಿ. ಥ್ಯಾಂಕ್ಸ್! :)