Sunday, January 27, 2019

ಅಜ್ಞಾನದ ಆಳ

ಒಬ್ಬ ಮನುಷ್ಯನಿಗೆ 'ಅವನೊಂದು ಇಲಿ' ಎನ್ನುವ ಭಾವನೆ ಮನಸ್ಸಿನಲ್ಲಿ ಮೂಡಿತು. ಅದೇ ಭಾವನೆ ಬೆಳೆಯುತ್ತ ಹೋಗಿ ಭ್ರಾಂತಿಯಾಗಿ, ಭ್ರಮೆಯಾಗಿಹೋಯಿತು. ಮನುಷ್ಯ ಫುಲ್ ಮಾನಸಿಕ ರೋಗಿಯಾಗಿಹೋದ. 'ನಾನೊಂದು ಇಲಿ' ಎನ್ನುವ (ತಪ್ಪು)ನಂಬಿಕೆಯಲ್ಲೇ ಕೊರಗತೊಡಗಿದ.

ಯಾರ್ಯಾರೋ ವೈದ್ಯರಿಗೆ ತೋರಿಸಿದರು. ಏನೇನೋ ಚಿಕಿತ್ಸೆ ಮಾಡಿಸಿದರು. ಏನೂ ಪ್ರಯೋಜನವಾಗಲಿಲ್ಲ. 'ನಾನೊಂದು ಇಲಿ. ನಾನೊಂದು ಇಲಿ,' ಎನ್ನುತ್ತಲೇ ಇರುತ್ತಿದ್ದ. ಎಲ್ಲರಿಗೂ ಇವನ ಈ ವರ್ತನೆಯಿಂದ ಮಹಾ ಕಿರಿಕಿರಿ.

ಕೊನೆಗೊಮ್ಮೆ ದೇವರಂತೆ ಹೊಸ ವೈದ್ಯರೊಬ್ಬರು ಸಿಕ್ಕರು. ಅವರು ಏನೇನೋ ಹೊಸ ಹೊಸ ಚಿಕಿತ್ಸೆ ಮಾಡಿದರು. ಅಂತೂ ಇಂತೂ ಸರಿಹೋದ. 'ನಾನೊಂದು ಇಲಿ' ಎನ್ನುವ ಭಾವನೆ ಮನಸ್ಸಿನಿಂದ ದೂರವಾಯಿತು. ಎಲ್ಲರೂ ನಿರಾಳರಾಗಿ ದೊಡ್ಡ ನಿಟ್ಟುಸಿರೊಂದನ್ನು ಬಿಟ್ಟರು. ವೈದ್ಯರನ್ನೂ ಹಿಡಿದು.

ಈ 'ಇಲಿ ಗಿರಾಕಿ' ತಲೆ ರಿಪೇರಿಯಾದ ಮೇಲೆ ಆಸ್ಪತ್ರೆಯಿಂದ ಬಿಡುಗಡೆಗೊಂಡ. ಮನೆ ಕಡೆ ನಡೆದ.

ಸ್ವಲ್ಪೇ ಹೊತ್ತಿನಲ್ಲಿ ವಾಪಸ್ ಓಡಿಬಂದ. ತುರ್ತಾಗಿ ವೈದ್ಯರನ್ನು ನೋಡಬೇಕು ಅಂದ. ಅವನಿಗೋ ಫುಲ್ ಧಾವಂತ. ಡಿಸ್ಚಾರ್ಜ್ ಆಗಿದ್ದ ಪೇಷಂಟ್ ಮತ್ತೆ ಬಂದಿದ್ದಾನೆ ಎಂದು ತಿಳಿದ ವೈದ್ಯರೂ ಬೇಗ ಓಡಿ ಓಡಿ ಬಂದರು.

'ಏನ್ರೀ?? ಮತ್ತೆ ಬಂದ್ರಿ? ಏನು ಸಮಸ್ಯೆ?' ಎಂದು ಕೇಳಿದರು ವೈದ್ಯರು.

'ಡಾಕ್ಟರ್, ಅದು... ' ಎಂದು ಎಳೆದ.

'ನೀವು ಇಲಿ ಅಲ್ಲ! ನೀವು ಇಲಿ ಅಲ್ಲವೇ ಅಲ್ಲ! ನೀವು ಮನುಷ್ಯರು. ಶುದ್ಧ ಮನುಷ್ಯರು. ಅದರ ಬಗ್ಗೆ ಸಂಶಯ ಬೇಡ. ಹೋಗಿ ಬನ್ನಿ,' ಎಂದು ಸಾಗಹಾಕಲು ನೋಡಿದರು ವೈದ್ಯರು.

'ಅದು ಸರಿ ಡಾಕ್ಟರ್. ನಾನು ಇಲಿ ಅಲ್ಲ ಅಂತ ಪೂರ್ತಿಯಾಗಿ ಮನವರಿಕೆಯಾಗಿದೆ. ಆದರೆ...' ಎಂದು ನಿಲ್ಲಿಸಿದ.

'ನೀವು ಇಲಿಯಲ್ಲ ಅಂತ ಮನವರಿಕೆಯಾಗಿದೆ ಅಂದ ಮೇಲೆ ಮತ್ತೇನ್ರೀ ನಿಮ್ಮ ಪ್ರಾಬ್ಲೆಮ್ಮು??' ಎಂದು ಕೊಂಚ ಅಸಹನೆಯಿಂದ ಪ್ರಶ್ನಿಸಿದರು ಡಾಕ್ಟರ್. ಇಂತಹ ರೋಗಿಗಳಿಂದ ಡಾಕ್ಟರ್ ಮಂದಿ ಮಾನಸಿಕ ರೋಗಿಗಳಾಗಿಬಿಡುತ್ತಾರೆ.

'ನಾನು ಇಲಿಯಲ್ಲ ಎಂದು ನನಗೆ ಗೊತ್ತಾಗಿದೆ. ಆದರೆ ಆ ವಿಷಯ ಪಕ್ಕದ ಮನೆ ಬೆಕ್ಕಿಗೆ ಗೊತ್ತಾಗಬೇಕಲ್ಲ? ಅದು ಅಲ್ಲೇ ನಿಂತಿತ್ತು. ನಾನು ಇನ್ನೂ ಇಲಿಯಂದೇ ಭಾವಿಸಿ ಮೈಮೇಲೆ ಎರಗೀತು ಅನ್ನೋ ಭಯ ಡಾಕ್ಟರ್!' ಎಂದು ಗೊಳೋ ಎಂದು ಅತ್ತ.

'ಸಿಸ್ಟರ್! ಬಾಯ್ಸ್! ಯಾರಿದ್ದೀರಿ ಅಲ್ಲಿ?? ಇವನನ್ನು ಮತ್ತೊಮ್ಮೆ ಅಡ್ಮಿಟ್ ಮಾಡಿಕೊಳ್ಳಿ! ಅರ್ಜೆಂಟ್' ಎಂದು ಚೀರುತ್ತಾ ಡಾಕ್ಟರ್ ಬೇಹೋಶ್ ಆದರು.

ನೀತಿ: ನಮ್ಮ ಅಜ್ಞಾನದ ಆಳ ಅಂದರೆ ಹೀಗಿರುತ್ತದೆ. ಅಷ್ಟು ಸುಲಭವಾಗಿ ದೂರವಾಗುವುದಿಲ್ಲ. ಅಜ್ಞಾನ ಪದರುಗಳಲ್ಲಿ(layers) ಇರುತ್ತದೆ. ಒಂದು ಪದರು ಕಳೆದ ಎಷ್ಟೋ ಕಾಲದ ನಂತರ ಮತ್ತೊಂದು ಪದರು ಬರುತ್ತದೆ. ಭಾವಿ ಅಗೆಯುವಾಗ ಎಷ್ಟೋ ಅಡಿಗಳ ನಂತರ ಒಂದು ಬಂಡೆ ಬರುತ್ತದೆ. ಅದನ್ನು ಅಗೆದು ತೆಗೆದೋ ಅಥವಾ ಸ್ಪೋಟಿಸಿ ತೆಗೆದೋ ಅಗೆಯುವುದನ್ನು ಮುಂದುವರೆಸುತ್ತೀರಿ. ಮತ್ತೆ ಎಷ್ಟೋ ಅಡಿಗಳ ನಂತರ ಮತ್ತೊಂದು ಬಂಡೆ ಬರುತ್ತದೆ. ಅದನ್ನೂ ತೆಗೆದು ಮುಂದುವರೆದು, ಅಂತಹ ಎಷ್ಟೋ ಬಂಡೆಗಳನ್ನು ತೆಗೆದು ಹಾಕಿದ ಮೇಲೆ ನೀರು ಸಿಗುತ್ತದೆ. ಅಜ್ಞಾನದ ನಿವಾರಣೆಯೂ ಹಾಗೆಯೇ. ಅದಕ್ಕಾಗಿಯೇ ಲೆಕ್ಕವಿಲ್ಲದಷ್ಟು ಜನ್ಮಗಳಿರುವುದು. Take your own time! ಅಷ್ಟೇ ಅಜ್ಞಾನದ ಮೊದಲ ಪದರು ನಿವಾರಣೆಯಾದ ತಕ್ಷಣ ಸಂಪೂರ್ಣ ಜ್ಞಾನ ಬಂತು ಅಂತ ಭಾವಿಸದಿದ್ದರೆ ಬಚಾವು. ಇಲ್ಲವಾದರೆ 'ಇಲಿ ಅಲ್ಲ' ಅನ್ನುವ ಭಾವನೆ ಹೋದರೂ ಪಕ್ಕದ ಮನೆ ಬೆಕ್ಕಿಗೆ 'ನಾನು ಇಲಿಯಲ್ಲ' ಎಂದು ಗೊತ್ತಿದಿದೆಯೋ ಇಲ್ಲವೋ ಅನ್ನುವ (ತಪ್ಪು) ಭಾವನೆ ಬರುತ್ತದೆ. ಅದೂ ನಿವಾರಣೆ ಆಯಿತು ಅಂದಿಟ್ಟುಕೊಳ್ಳಿ. ಮನೆಯಲ್ಲಿರುವ ಇಲಿ ಹಿಡಿಯಲು ಇಟ್ಟಿರುವ ಬೋನಿಗೆ 'ನಾನೊಂದು ಇಲಿ' ಆನ್ನಿಸಿಬಿಟ್ಟರೆ ಏನು ಗತಿ? ಇಲಿ ಪಾಷಾಣಕ್ಕೆ ಗೊತ್ತಾಗುತ್ತದೆಯೇ ನಾನು ಮನುಷ್ಯ ಎಂದು??? ಹೀಗೇ ಒಂದಾದ ಮೇಲೊಂದು ಅಜ್ಞಾನದ ಪದರುಗಳು ಅನಾವರಣಗೊಳ್ಳುತ್ತಲೇ ಹೋಗುತ್ತವೆ. ಅವಕ್ಕೆ ಬೇರೆ ಬೇರೆ ತರಹದ 'ಜ್ಞಾನ' ಚಿಕಿತ್ಸೆ ಬೇಕಾಗುತ್ತದೆ.

ಆದಿ ಶಂಕರರು 'ವಿವೇಕ ಚೂಡಾಮಣಿ' ಎನ್ನುವ ಗ್ರಂಥ ಬರೆದಿದ್ದಾರೆ. ಸ್ವಾಮಿ ಚಿನ್ಮಯಾನಂದರು ಅದರ ಮೇಲೆ ಇಂಗ್ಲೀಷಿನಲ್ಲಿ ಭಾಷ್ಯ ಬರೆದಿದ್ದಾರೆ. ಅದರಲ್ಲಿ ಈ ಉದಾಹರಣೆ ಸಿಕ್ಕಿತು.

ಏನೋ ಓದಿದಾಗ, ಏನೋ ಕೇಳಿದಾಗ, ಏನೋ ಹೊಳೆದಾಗ, 'ಆಹಾ! ಈಗ ಪರಿಹಾರ ಸಿಕ್ಕಿತು' ಅನ್ನಿಸಿದಾಗ 'ಇದು ಎಷ್ಟನೇ ಪದರಿನ ಅಜ್ಞಾನ ಇರಬಹುದು? ಸಂಪೂರ್ಣ ಜ್ಞಾನಕ್ಕೆ ಇನ್ನೆಷ್ಟು ಮೆಟ್ಟಿಲು?' ಎಂದು ಆಲೋಚಿಸುವ ವಿವೇಕ ಬಂದರೆ ಅದೇ ದೊಡ್ಡ ಭಾಗ್ಯ. ಅದರ ಬದಲಾಗಿ ಮೊದಲನೇ ಸಲ ವಿವೇಕ ಉದಯವಾದಾಗಲೇ ಸಂಪೂರ್ಣ ಜ್ಞಾನ ಬಂತು ಅಂತ ತಿಳಿದರೆ ಮತ್ತೊಮ್ಮೆ ಆಸ್ಪತ್ರೆಗೆ ಅಡ್ಮಿಟ್ ಆಗಿ ಚಿಕಿತ್ಸೆ ತೆಗೆದುಕೊಳ್ಳಬೇಕಾದೀತು! :)

ಈ ಸಂಸ್ಕಾರಗಳು ಅನ್ನುವವು ಅಜ್ಞಾನದ ಅಭಿವ್ಯಕ್ತಿಗಳು (manifestations). ಹಾಗಾಗಿಯೇ ಆಳವಾಗಿ ಬೇರೂರಿರುವ ಸಂಸ್ಕಾರಗಳು ಅಷ್ಟು ಬೇಗವಾಗಿ ನಿವಾರಣೆಯಾಗುವದಿಲ್ಲ. ಆಗಿವೆ ಅನ್ನಿಸಿದರೂ ಮುಂದೆ ಎಷ್ಟೋ ವರ್ಷಗಳ ನಂತರ ಮತ್ತೆ ಅಭಿವ್ಯಕ್ತವಾಗಿ ಮತ್ತೆ ಕಿರಿಕಿರಿ ಕೊಡಲಾರಂಭಿಸುತ್ತವೆ. ಮತ್ತೊಂದು ಬಂಡೆ ಬಂತು ಎಂದರ್ಥ.

ಎಷ್ಟೋ ಸಂಸ್ಕಾರಗಳು ವ್ಯಸನಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಒಂದು ವ್ಯಸನ ಬಿಟ್ಟರೂ ಅದೇ ಮತ್ತೆ ಎಷ್ಟೋ ವರ್ಷಗಳ ಮತ್ತೆ ಕಾಣಿಸಿಕೊಳ್ಳುತ್ತದೆ. ಕಾರಣ ಮತ್ತೆ ಇದೇ. ಕೆಲವರು ಅದೆಷ್ಟು ಬಾರಿ ಸಿಗರೇಟ್ ಸೇದುವುದನ್ನು ಬಿಟ್ಟು ಮತ್ತೆ ಹಿಡಿದುಕೊಂಡಿರುತ್ತಾರೋ!

https://www.amazon.in/Vivekachudamani-Swami-Chinmayananda/dp/B077PS778F/ref=sr_1_1?ie=UTF8&qid=1548611986&sr=8-1&keywords=vivekachoodamani+swami+chinmayananda

Thursday, January 24, 2019

ಶೇಖ್ ಸಾಹೇಬರ ರಹಸ್ಯ ಡವ್ವು!

ಅವನೊಬ್ಬ ಇಸ್ರೇಲಿಗಳಿಗೆ ದೊಡ್ಡ ತಲೆನೋವಾಗಿಹೋಗಿದ್ದ.ಅವನೇ ಶೇಖ್ ಯಾಸಿನ್. ಹಮಾಸ್ ಎನ್ನುವ ಪ್ಯಾಲೆಸ್ತೇನಿ ಉಗ್ರಗಾಮಿ ಸಂಘಟನೆಯೊಂದರ ಸಂಸ್ಥಾಪಕರಲ್ಲಿ ಒಬ್ಬ. ಮುಖ್ಯ ಸಂಸ್ಥಾಪಕ ಅಂದರೂ ಅಡ್ಡಿಯಿಲ್ಲ.

ಹಮಾಸ್ - ಮೊದಲಿಂದಲೂ ಹಿಂಸಾಚಾರವನ್ನೇ ಮುಂದಿಟ್ಟುಕೊಂಡು ಇಸ್ರೇಲಿಗೆ ತೊಂದರೆ ಕೊಟ್ಟ ಉಗ್ರಗಾಮಿ ಸಂಘಟನೆ. ಅದೂ ಎಂತಹ ಹಿಂಸಾಚಾರ ಅಂತೀರಿ? ಭೀಕರ ಆತ್ಮಹತ್ಯಾ ದಾಳಿಗಳು. ಹಿಂದೆಂದೂ ಆಗಿರದಂತಹ ಆತ್ಮಹತ್ಯಾ ದಾಳಿಗಳಿಗೆ ಇಸ್ರೇಲಿಗಳು ತತ್ತರಿಸಿಹೋಗಿದ್ದರು. ಸರ್ಕಸ್ ಟೆಂಟಿನಂತಹ ದಿರುಸು ಧರಿಸಿ, ಫುಲ್ ಬುರ್ಖಾ ಹಾಕಿಕೊಂಡು ಬಸ್ ಹತ್ತಿದವರು ಗಂಡಸರೋ ಹೆಂಗಸರೋ ಗೊತ್ತಿಲ್ಲ. ತೀರಾ ಬಟ್ಟೆ ಬಿಚ್ಚಿಸಿ ಚೆಕ್ ಮಾಡುವ ಪದ್ಧತಿ ಇನ್ನೂ ಬಂದಿರಲಿಲ್ಲ. ಅಷ್ಟರ ಮಟ್ಟಿಗೆ ಎಲ್ಲ ಹಿಂಸಾಚಾರಗಳ ಮಧ್ಯೆಯೂ ಇಸ್ರೇಲಿಗಳು ಸಭ್ಯತೆ ಕಾದುಕೊಂಡಿದ್ದರು. ತೊಂದರೆ ಬಂದಿದ್ದು ಯಾವಾಗ ಈ ಟೆಂಟ್ ಬಟ್ಟೆ ಮತ್ತು ಬುರ್ಖಾ ಮಂದಿ ಢಮ್! ಎಂದು ಸ್ಪೋಟಿಸಿಕೊಂಡು, ಇಡೀ ಬಸ್ಸಿಗೆ ಬಸ್ಸನ್ನೇ ಆಹುತಿ ತೆಗೆದುಕೊಂಡು, ನಾಲ್ಕಾರು ಡಜನ್ ಜನರನ್ನು ಸಾರಾಸಗಟಾಗಿ ಕೊಂದಾಗ. ಅತೀ ಕಮ್ಮಿ ಬಂಡವಾಳ ಆದರೆ ಅತೀ ಹೆಚ್ಚಿನ ಧಮಾಕಾ ಅಂದರೆ ಆತ್ಮಹತ್ಯಾ ದಾಳಿ. ಗಾಜಾ ಪಟ್ಟಿಯಲ್ಲಿನ ಪಾನ್ ಬೀಡಿ ದುಕಾನುಗಳಲ್ಲೆಲ್ಲ ಸುಯಿಸೈಡ್ ಬೆಲ್ಟ್ ಬಾಂಬುಗಳು ಬಿಟ್ಟಿಯಾಗಿ ಸಿಕ್ಕು, ಕಂಡಕಂಡ ಅಂಡೆಪಿರ್ಕಿಗಳೆಲ್ಲ ಅವನ್ನು ಸೊಂಟಕ್ಕೆ ಸುತ್ತಿಕೊಂಡು ಇಸ್ರೇಲ್ ಬಸ್ ಹತ್ತುತ್ತಿದ್ದರು. ಮಾರ್ಗ ಮಧ್ಯೆ ಬಸ್ ಫುಲ್ ರಶ್ ಆಗಿದ್ದಾಗ ಅಲ್ಲಾ ಹೋ ಅಕ್ಬರ್ ಅಂದವರೇ.....ಮುಂದೆ ಫುಲ್ ಮಟಾಷ್!

ಯಾವಾಗ ಪರಿಸ್ಥಿತಿ ಹದ್ದು ಮೀರತೊಡಗಿತೋ ಇಸ್ರೇಲಿನ ಆಂತರಿಕ ಭದ್ರತಾ ಸಂಸ್ಥೆ 'ಶಬಾಕ್' ಬೇರೆ ವಿಧಿಯಿಲ್ಲದೇ ಸೀದಾ ಹೋಗಿ ಶೇಖ್ ಯಾಸೀನನನ್ನೇ ಎತ್ತಾಕಿಕೊಂಡು ಬಂದಿತು. ಅಕ್ಷರಷ 'ಎತ್ತಾಕಿಕೊಂಡೇ' ಬಂತು. ಯಾಕೆಂದರೆ ಅವನು 'ಚಕ್ರಪೀಠಾಧಿಪತಿ'. ಚಕ್ರವಿರುವ ತಳ್ಳುಗಾಡಿ ಖುರ್ಚಿಯಲ್ಲಿಯೇ ಅವನ ಫುಲ್ ಜೀವನ. ವಿಕಲಾಂಗ. Quadriplegic. ಆದರೆ ಬಾಯಿ ಮಾತ್ರ ಬೊಂಬಾಯಿ. ಅದ್ಯಾವ ರೀತಿಯಲ್ಲಿ ಪ್ರವಚನ ಮಾಡುತ್ತಿದ್ದ ಅಂದರೆ ತಕ್ಕಮಟ್ಟಿನ ವಿದ್ಯಾವಂತರೂ ಸಹ ಫುಲ್ brainwash ಆಗಿ, ಸುಯಿಸೈಡ್ ಬೆಲ್ಟ್ ಬಾಂಬ್ ಖರೀದಿಗೆ ಹೊರಟುಬಿಡುತ್ತಿದ್ದರು. ಅಷ್ಟು effective ಆಗಿ ಮಸೀದಿಗಳಲ್ಲಿ firebrand ಪ್ರವಚನ ನೀಡುತ್ತಿದ್ದ. ಕುಳಿತಲ್ಲಿಂದಲೇ ಬೆಂಕಿಯುಗುಳುತ್ತಿದ್ದ. ಮಹಾ ಡೇಂಜರ್ ಮನುಷ್ಯ.

https://upload.wikimedia.org/wikipedia/en/e/ee/Ahmed_Yassin.JPG
ಶೇಖ್ ಯಾಸಿನ್
ಖತರ್ನಾಕ್ ಶಬಾಕ್ ಪೊಲೀಸರು ಈ  ವಯ್ಯನನ್ನು ಎತ್ತಾಕಿಕೊಂಡು ಬಂದರು ಸರಿ. ಆದರೆ ಇವನನ್ನು ಹಾಕ್ಕೊಂಡು ರುಬ್ಬೋಣ, ಬರೋಬ್ಬರಿ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಕೊಟ್ಟು ಬಾಯಿಬಿಡಿಸೋಣ ಅಂದರೆ ಇವನೋ ವಿಕಲಾಂಗ. ಥರ್ಡ್ ಡಿಗ್ರಿ ಕೊಡೋದು ದೂರದ ಮಾತು. ಶಬಾಕ್ ಎನ್ನುವ ಖತರ್ನಾಕ್ ಪೊಲೀಸ್ ಘಟಕದ ಸಾಮಾನ್ಯ ಪೇದೆಯೊಬ್ಬ ಒಂದೇ ಒಂದು ಏಟು ಬರೋಬ್ಬರಿ ಕೊಟ್ಟರೂ ಸಾಕು. ಈ ಚಕ್ರಪೀಠಾಧಿಪತಿ ವಿಕಲಾಂಗ ಅಲ್ಲಾ ಕೋ ಪ್ಯಾರೇ ಆಗಿಬಿಡುತ್ತಿದ್ದ. ಅಷ್ಟು ಅಶಕ್ತ ಮತ್ತು ಬಲಹೀನ. ಮತ್ತೆ ಆ firebrand ಇಮಾಮ್ ಶೇಖ್ ಯಾಸೀನ್ ಏನಾದರೂ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಲಾಕಪ್ ಡೆತ್ ಆಗಿ ಸತ್ತ ಅಂದರೆ ಮುಗಿಯಿತು. ಇಡೀ ಪ್ಯಾಲೆಸ್ಟೈನ್ ಹೊತ್ತಿ ಉರಿದು, ಇಸ್ರೇಲಿನ ಸೆರಗಿನ ಕೆಂಡ ದಾವಾಗ್ನಿಯಾಗಿ, ಇಸ್ರೇಲಿನ ಸುಡಬಾರದ ಜಾಗವೆಲ್ಲ ಸುಟ್ಟು, ದೊಡ್ಡ ರಾಜಕಾರಣಿಗಳ ಖುರ್ಚಿಗೆ ಆಪತ್ತು ಬರುತ್ತಿತ್ತು. ಹಾಗಾಗಿ ಎತ್ತಾಕಿಕೊಂಡು ಬಂದರೂ ಈ prize catch ಅನ್ನುವಂತಹ ಶೇಖ್ ಯಾಸೀನ್ ಎಂಬ ಗಿರಾಕಿಯನ್ನು ಅತ್ಯಮೂಲ್ಯ ವಸ್ತುವಿನಂತೆ ಕಾಪಾಡಿಕೊಳ್ಳಬೇಕಿತ್ತು. ಆದರೆ ಬಾಯಿ ಕೂಡ ಬಿಡಿಸಬೇಕಿತ್ತು. ಅವನಿಗೇ ಗೊತ್ತು ಮುಂದೆ ಎಷ್ಟು ಆತ್ಮಹತ್ಯಾ ದಾಳಿಗಳು ಆಗಲಿವೆ, ಯಾವಾಗ ಆಗಲಿವೆ, ಎಲ್ಲಿ ಆಗಲಿವೆ, ಯಾರು ಮಾಡಲಿದ್ದಾರೆ ಎಲ್ಲ. ಎಲ್ಲವನ್ನೂ ತನ್ನ ಭಯಂಕರ ಬುರುಡೆಯಲ್ಲಿ ಅದುಮಿಟ್ಟುಕೊಂಡು ಕುಳಿತಿದ್ದ ಭಡವ. ಅವನಿಗೂ ಗೊತ್ತು ತನಗೆ ಯಾರೂ ಏನೂ ಮಾಡುವಂತಿಲ್ಲ ಎಂದು. ಸತ್ತು ಹುತಾತ್ಮನಾಗಿ ಜನರನ್ನು ಮತ್ತಿಷ್ಟು ಮತಾಂಧರನ್ನಾಗಿ ಮಾಡುವ ಉಮೇದಿ ಬೇರೆ.

ಶಬಾಕ್ ಪೊಲೀಸರು ಹೇಗೆ ಇವನ ಬಾಯಿಬಿಡಿಸಬೇಕು ಎಂದು ತಲೆ ಮೇಲೆ ಕೈಹೊತ್ತು ಕುಳಿತಾಗ ಒಬ್ಬ ಹಿರಿಯ ಅಧಿಕಾರಿಗೆ ಏನೋ ನೆನಪಾಯಿತು. 'Yes! That should do it!' ಅಂದವರೇ ತಮ್ಮ ಸಹಾಯಕನನ್ನು ಕರೆದರು. ಏನೋ ಸೂಚನೆ ಕೊಟ್ಟರು. ಅವರ ಸೂಚನೆ ಪ್ರಕಾರ ಸಹಾಯಕ ಹೋಗಿ ಏನೋ ವಸ್ತುವನ್ನು ತಂದು ಕೊಟ್ಟ. ಮುಂದಿನ ಸುತ್ತಿನ ವಿಚಾರಣೆಗೆ ತಯಾರಾದರು.

ಕುಳಿತಿದ್ದ ಚಕ್ರಪೀಠದ ಸಮೇತ ಶೇಖ್ ಸಾಬ್ರನ್ನು ಒರಟಾಗಿ ಎತ್ತಿದ ಯಮಕಿಂಕರರಂತಹ ಪೊಲೀಸರು ಅವನನ್ನು interrogation ಕೋಣೆಯಲ್ಲಿ ಒಗೆದು ಬಂದರು. ಹಿಂದೆಯೇ ಹೋದರು ಆ ಹಿರಿಯ ಅಧಿಕಾರಿ. ಅವರ ಹಿಂದೆಯೇ ಹೋಗಿದ್ದು ಒಂದು ಟೀವಿ ಮತ್ತು ಒಂದು ವಿಡಿಯೋ ಪ್ಲೇಯರ್.  ಅವರ ಕೈಯಲ್ಲಿ 'ಏನೋ' ಇತ್ತು.

ಶೇಖ್ ಸಾಬನ ಮುಂದೆಯೇ ಒಂದು ಖುರ್ಚಿ ಹಾಕಿಕೊಂಡು ಕುಳಿತರು ಆ ಹಿರಿಯ ಅಧಿಕಾರಿ.

'ಶೇಖ್ ಸಾಬ್ರೇ, ನೀವಂತೂ ಕೇಳಿದ ಪ್ರಶ್ನೆಗಳಿಗೆ ಒಂದಕ್ಕೂ ಉತ್ತರ ಕೊಡುತ್ತಿಲ್ಲ. ನಮ್ಮ 'ಭಾಷೆ'ಯಲ್ಲಿ ನಿಮ್ಮನ್ನು ಮಾತಾಡಿಸೋಣ ಅಂದ್ರೆ ಒಂದೇ ಏಟಿಗೆ ಹುತಾತ್ಮರಾಗಿಬಿಡುತ್ತೀರಿ. ಹಾಗಾಗಿ ಬೇರೆ ವಿಧಿಯಿಲ್ಲ...' ಎಂದು ಪೀಠಿಕೆ ಇಟ್ಟವರೇ ತಮ್ಮ ಕೈಯಲ್ಲಿದ್ದ ಸಾಮಾನನ್ನು ತೆಗೆದು ವಿಡಿಯೋ ಪ್ಲೇಯರ್ ಒಳಗೆ ತುರುಕಿದರು. ಅದೊಂದು ವಿಡಿಯೋ ಕ್ಯಾಸೆಟ್ಟಾಗಿತ್ತು. ಪ್ಲೇ ಒತ್ತಿ ಕೂತರು.

'ಶೇಖ್ ಸಾಬ್ರೇ, ಲಾಕಪ್ಪಿನಲ್ಲಿ ಕೂತು ನಿಮಗೆ ಬೋರಾಗಿರಬಹುದು. ನೋಡಿ ಎಂಜಾಯ್ ಮಾಡಿ. ನೀವು ಒಪ್ಪಿದರೆ ಇದನ್ನು ನಿಮ್ಮ ಏರಿಯಾದ ಕೇಬಲ್ ಆಪರೇಟರ್ ಗೆ ಕೊಡೋಣ ಅಂದುಕೊಂಡಿದ್ದೇನೆ. ನಿಮ್ಮ ಹಿಂಬಾಲಕರೂ ನೋಡಿದರೆ ಚೆನ್ನ. ಯಾವುದಕ್ಕೂ ನೀವು ಮೊದಲು ನೋಡಿ,' ಅಂದರು.

ವಿಡಿಯೋ ಮೂಲಕ ಟೀವಿ ಮೇಲೆ ಮೂಡಿಬಂದ ದೃಶ್ಯ ನೋಡಿದ ವಿಕಲಾಂಗ ಶೇಖ್ ಯಾಸಿನ್ ತಳ್ಳುಗಾಡಿ ಖುರ್ಚಿಯಿಂದ ಫಣಂಗನೇ ಮಂಗ್ಯಾನ ಮಾದರಿಯಲ್ಲಿ ಹಾರಿಯೇ ಬಿಡುತ್ತಿದ್ದನೇನೋ. ಆದರೆ ಫುಲ್ ಲ್ಯಾಪ್ಸ್ ಕೇಸ್. ಕುಳಿತಲ್ಲೇ ಕನಲಿದ. ಭಯಂಕರ ಮುಜುಗರ ಅನುಭವಿಸುತ್ತ ಮಿಡುಕಿದ. ನಸುಗುನ್ನಿಯಂತೆ ಮುಲುಗಿದ. ಅವಮಾನದಲ್ಲಿ ತಲೆತಗ್ಗಿಸಿ, 'ಸಾಕು ನಿಲ್ಲಿಸಿ. ಏನು ಕೇಳಬೇಕೋ ಕೇಳಿ. ಪ್ಲೀಸ್ ವಿಡಿಯೋ ಬಂದ್ ಮಾಡಿ!' ಎಂದು ಅಂಬೋ ಅಂದ.

ಅರೇ ಇಸ್ಕಿ! ಏನೇ ಒತ್ತಡ ಹಾಕಿ ಏನೇ ಕೇಳಿದರೂ ಅಸಡ್ಡೆಯಿಂದ ನಗುತ್ತ ಕುಳಿತವ ಯಾವುದೋ ಒಂದು ವಿಡಿಯೋ ನೋಡಿದ ಕೂಡಲೇ ಪೂರ್ತಿ ಕರಗಿಹೋಗಿ ಬೇಕಾಗಿದ್ದನ್ನು ಕೇಳಿ ಎಲ್ಲ ಹೇಳುತ್ತೇನೆ ಎನ್ನುವ ಲೆವೆಲ್ಲಿಗೆ ಬಂದದ್ದು ಹೇಗೆ!?

ಆ ವೀಡಿಯೋದಲ್ಲಿ ಶೇಖ್ ಸಾಬನ ರಾಸಲೀಲೆ ದಾಖಲಾಗಿತ್ತು. ಮಸೀದಿಗಳಲ್ಲಿ ಯದ್ವಾತದ್ವಾ ಆಚಾರ ಹೇಳುತ್ತಿದ್ದ ಇದೇ ಪುಣ್ಯಾತ್ಮ ತನ್ನ ವೈಯಕ್ತಿಕ ಜೀವನದಲ್ಲಿ ಮಾತ್ರ ಯಥೇಚ್ಛವಾಗಿ ಬದ್ನೇಕಾಯಿ ತಿನ್ನುತ್ತಾನೆ ಮತ್ತು ತಿನ್ನಿಸುತ್ತಾನೆ ಎಂದು ಇವನ ಪ್ರವಚನ ಕೇಳುವ ಮಂದಿಗೆ ಗೊತ್ತಾಗಿಬಿಟ್ಟರೆ ಅಷ್ಟೇ ಮತ್ತೆ. ಮುಗಿಯಿತು ಇವನ ಕಥೆ. ಗಾಜಾ ಪಟ್ಟಿ ಉದ್ದಕ್ಕೂ ನಾಯಿಯಂತೆ ಅಟ್ಟಾಡಿಸಿಕೊಂಡು ಓಡ್ಯಾಡಿಸಿ ಕಲ್ಲಿಂದ ಹೊಡೆದು ಸಾಯಿಸುತ್ತಿದ್ದರು. ಅಥವಾ ಮತ್ತೂ ತಲೆ ಕೆಟ್ಟರೆ ಸುಯಿಸೈಡ್ ಬೆಲ್ಟ್ ಬಾಂಬ್ ಕಟ್ಟಿಕೊಂಡು ಇವನನ್ನೇ ಅಪ್ಪಿಕೊಂಡು ಸ್ಪೋಟಿಸಿಕೊಂಡುಬಿಡುತ್ತಿದ್ದರು. ಅಷ್ಟು ಖರಾಬಾಗಿತ್ತು ಶೇಖ್ ಸಾಬನ ರಾಸಲೀಲೆ.

ಶೇಖ್ ಯಾಸೀನ್ ಸಾಬ್ರು ವಿಕಲಾಂಗರೇನೋ ನಿಜ. ಆದರೆ ನಪುಂಸಕರಲ್ಲ ನೋಡಿ. ಮೇಲಿಂದ ಭಿಕ್ಷೆಯ ಫುಡ್ಡು. ಹಾಗಾಗಿ ಉಪ್ಪು ಹುಳಿ ಖಾರ ವಸಿ ಜಾಸ್ತಿನೇ ತಿನ್ನುತ್ತಿದ್ದರು. ಇವರ ಮೇಲಿನ ಭಕ್ತಿಯಿಂದ ಜನ ತರೇವಾರಿ ತಿಂಡಿ ತಿನ್ನಿಸಿ, ಊಟ ಉಣ್ಣಿಸಿ ಸಾಹೇಬರು ಕೊಂಚ ಜಾಸ್ತಿಯೇ 'ಉಛಲ್ ಕೂದ್' ಮಾಡುತ್ತಿದ್ದರು. ಆದರೇನು ಮಾಡುವುದು ಹೆಂಡತಿ / ಗೆಳತಿ ಯಾರೂ ಇರಲಿಲ್ಲ. ಆದರೆ ಜಾಸ್ತಿ ದಿವಸ ಸುಖದ ವ್ಯತ್ಯಯ ಆಗಲೇ ಇಲ್ಲ ಸಾಬರಿಗೆ.

ಅವಳು ಯಾರೋ ಗಾಜಾ ಪಟ್ಟಿಯ ಸುಂದರಿ. ಶೇಖ್ ಸಾಬರ ಬೆಂಕಿಯುಗುಳುವ ಪ್ರವಚನಗಳಿಂದ ಅವಳೂ ಪ್ರಭಾವಿತಳೇ. ತನ್ನದೇ ರೀತಿಯಲ್ಲಿ ಪ್ಯಾಲೆಸ್ಟೈನ್ ಸಂಗ್ರಾಮಕ್ಕೆ ತನ್ನ 'ಸೇವೆ' ಸಲ್ಲಿಸುತ್ತಿದ್ದಳು. ಅವರವರ ಭಾವಕ್ಕೆ, ಅವರವರ ಭಕ್ತಿಗೆ ತಕ್ಕಂತೆ ಸೇವೆ ನೋಡಿ.

'ಪಾಪ ಶೇಖ್ ಸಾಬ್ರು! ಅದೆಷ್ಟು ಕಷ್ಟ ಪಟ್ಟು ಪ್ರವಚನ ಮಾಡುತ್ತಾರೆ. ಎಲ್ಲವನ್ನೂ ಹಮಾಸ್ ಸಂಘಟನೆಗೆ ಅರ್ಪಿಸಿಕೊಂಡುಬಿಟ್ಟಿದ್ದಾರೆ. ಮನೆಯಲ್ಲೊಂದು ಹೆಣ್ಣು ಜೀವಕ್ಕೆ ಗತಿಯಿಲ್ಲ. ಪಾಪ ಶೇಖ್ ಸಾಬ್ರು...' ಎಂದುಕೊಂಡಳೋ ಏನೋ. ಶೇಖ್ ಸಾಬ್ರ ಮನೆಕೆಲಸ ಮಾಡುವ ನೆಪದಲ್ಲಿ ವಾರದಲ್ಲಿ ಒಂದೆರೆಡು ದಿನ ಮಧ್ಯಾಹ್ನ ಬರುತ್ತಿದ್ದಳು. ಜಾಡೂ ಪೋಛಾ ಮಾಡಿ, ಭಾಂಡಿ ಗಿಂಡಿ ತಿಕ್ಕಿ, ಬಟ್ಟೆ ಗಿಟ್ಟೆ ಒಗೆದುಕೊಟ್ಟು, ಶೇಖ್ ಸಾಬ್ರ ಬಿಸ್ತರ್ ಗಿಸ್ತರ್ ಬರೋಬ್ಬರಿ ಮಾಡಿ ಹೋಗುತ್ತಿದ್ದಳು. ಆಪ್ತ ಸಹಾಯಕಿ ಮಾದರಿಯಲ್ಲಿ.

ಅದೇನು ಶೇಖ್ ಸಾಬ್ರ ಮೇಲೆ ಅವಳಿಗೇ ಅನುರಾಗ ಹುಟ್ಟಿತೋ ಅಥವಾ ಚಕ್ರಪೀಠದ ಮೇಲೆ ಕುಳಿತೇ ಶೇಖ್ ಸಾಹೇಬ್ರು ಅವಳಿಗೆ 'ಆವ್,ಆವ್' ಎಂದು 'ಆವ್ ರೇ' ಕಾಳು ಹಾಕಿದರೋ ಗೊತ್ತಿಲ್ಲ. ಆದರೆ ಸಂಬಂಧ ಮಾತ್ರ ಮುಂದಿನ ಹಂತಕ್ಕೆ ಹೋಗಿಬಿಟ್ಟಿತು.

ಶೇಖ್ ಸಾಬರಂತೂ ವಿಕಲಾಂಗರು. ಸುಂದರಿಯೇ ಮೈಮೇಲೆ ಬಿದ್ದು ಬರಬೇಕೇ ವಿನಃ ಇವರು ಅದೆಷ್ಟೇ ಇಷ್ಟಪಟ್ಟರೂ ಅದೆಷ್ಟೇ ಕಷ್ಟಪಟ್ಟರೂ ಹಾರಲಾರರು, ಜಿಗಿಯಲಾರರು, ಬಾರಿಸಲಾರರು. ಎಲ್ಲ ಸುಂದರಿಯ ಕೈಯಲ್ಲಿ. ಆಕೆ ಅಳಿಲುಸೇವೆ ಮಾಡುತ್ತೇನೆ ಎಂದಿರಬೇಕು. ಇವರು ಏನೆಂದುಕೊಂಡರೋ. ಇವರ ಅಳಿಲು. ಆಕೆಯ ಸೇವೆ. ಯಾ ಅಲ್ಲಾ!

ಮನೆ ಕೆಲಸ ಮುಗಿಸಿದ ಸುಂದರಿ ತಾನೂ ವಿವಸ್ತ್ರಳಾಗಿ, ಶೇಖ್ ಸಾಬ್ರನ್ನೂ ವಿವಸ್ತ್ರಗೊಳಿಸಿ, ಮಲಗಿಸಿ, ಲಾಲಿ ಜೋಗುಳ ಹಾಡಿ, 'ಸೇವೆ' ಎಲ್ಲ ಮಾಡಿ, ತಾನೂ ಪವಿತ್ರಳಾಗಿ ಸಾಬ್ರನ್ನೂ ಖುಷ್ ಮಾಡುತ್ತಿದ್ದಳು. ಅವರಿಗೆ ಗೊತ್ತಿಲ್ಲದ ವಿಷಯವೆಂದರೆ ಆಗಲೇ ಎಲ್ಲವನ್ನೂ under surveillance ಇಟ್ಟಿದ್ದ ಇಸ್ರೇಲಿನ ಶಬಾಕ್ ಎಲ್ಲವನ್ನೂ ರಹಸ್ಯವಾಗಿ ವಿಡಿಯೋ ಮಾಡುತ್ತಿತ್ತು. ಮತ್ತೆ ಅವೆಲ್ಲ ಅತ್ಯಂತ ಕ್ರಮಬದ್ಧವಾಗಿ ಶೇಕ್ ಸಾಬ್ರ ಮೇಲೆ ಮಡಗಿದ್ದ ಮಾಸ್ಟರ್ ಫೈಲ್ ನಲ್ಲಿ ದಾಖಲಾಗುತ್ತಿದ್ದವು.

ಈಗ ಅದೇ ರಾಸಲೀಲೆಯ ಒಂದು ಝಳಕ್ ತೋರಿಸಿದ್ದರು. ಅದನ್ನು ನೋಡಿದ ಶೇಖ್ ಸಾಬ್ರು ಬೆಚ್ಚಿಬಿದ್ದು, ಮೆತ್ತಗಾಗಿ, ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ತಯಾರಾಗಿದ್ದರು. ಇಲ್ಲವಾದರೆ ವೀಡಿಯೊ ಪಬ್ಲಿಕ್ ಆಗಿಬಿಟ್ಟರೆ ಅಷ್ಟೇ ಮತ್ತೆ. ಹುಚ್ಚು ನಾಯಿಯಂತೆ ಹೊಡೆದು ಕೊಲ್ಲುತ್ತಾರೆ. ಬೇರೆ ಯಾರೋ ಏನೇನೋ ಸೇವೆ ಮಾಡಿಸಿಕೊಂಡಿದ್ದರೆ 'ಹೋಗಲಿ ಬಿಡಿ. ವಿಕಲಾಂಗನಾದರೆ ಏನಂತೆ, ಹಡಬಿಟ್ಟಿ ಮನಸ್ಸು ಕೇಳಬೇಕಲ್ಲ. ಹೋಗಲಿ ಬಿಡಿ,' ಎಂದು ನಗಣ್ಯ ಮಾಡುತ್ತಿದ್ದರೋ ಏನೋ. ಆದರೆ ಇವನೋ ದೊಡ್ಡ ಇಮಾಮ್ ಸಾಬ್. ಊರಿಗೆಲ್ಲ ಪಾವಿತ್ರ್ಯತೆಯ ಉಪದೇಶ ಮಾಡಿಕೊಂಡು ತಿರುಗಿ, ಆದರ ಮೇಲೆಯೇ ದಾನ ಎತ್ತಿ ತನ್ನ ಚಾಯ್ ಪಾನಿಗೆ ವ್ಯವಸ್ಥೆ ಮಾಡಿಕೊಂಡ ಗಡವ. ಇಂತವ ವೇದಾಂತ ಹೇಳಿ ಬದನೆಕಾಯಿ ತಿನ್ನುತ್ತಾನೆ ಅಂದರೆ ಮಂದಿ ಸಿಟ್ಟಿಗೆದ್ದು ಸಿಗಿದಾಕುತ್ತಿದ್ದರು ಅಷ್ಟೇ.

ಹೀಗೆ ಯುಕ್ತಿಯಿಂದ ಶೇಕ್ ಸಾಬ್ರ ಬಾಯಿ ಬಿಡಿಸಿತ್ತು ಇಸ್ರೇಲಿನ ತನಿಖಾ ಸಂಸ್ಥೆ ಶಬಾಕ್. ಎಂದೋ ಮಾಡಿದ್ದ ವಿಡಿಯೋ ಅಂದು ಆಯ್ತ ವೇಳೆಗೆ ನೆನಪಾಗಿ ಬರೋಬ್ಬರಿ ಉಪಯೋಗಕ್ಕೆ ಬಂದಿತ್ತು.

ಶೇಖ್ ಸಾಬ್ರನ್ನು ಬರೋಬ್ಬರಿ ವಿಚಾರಣೆ ಮಾಡಿ, ಎಲ್ಲ ಮಾಹಿತಿಯನ್ನು ಬರೋಬ್ಬರಿ ಗುಂಜಿ, ಸಾಬ್ರನ್ನು ಬರೋಬ್ಬರಿ ಹಿಂಡಿ ಹಿಪ್ಪೆ ಮಾಡಿ ಜೈಲಿಗೆ ಅಟ್ಟಿತು ಇಸ್ರೇಲ್. ಜೈಲಿನಲ್ಲಿ ಕೊಳೆಯುತ್ತಲೇ ಹಮಾಸ್ ಉಗ್ರರಿಗೆ ರಹಸ್ಯ ಸಂದೇಶಗಳನ್ನು ರವಾನಿಸುತ್ತ ಉಗ್ರಗ್ರಾಮಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಲೇ ಇದ್ದ ಶೇಖ್ ಯಾಸೀನ್. ಆದರೆ ಸುಂದರಿಯ 'ಸೇವೆ' ಮಾತ್ರ ತಪ್ಪಿಹೋಗಿತ್ತು. ಪಾಪ ಸಾಬ್ರು! ಅದಿದ್ದರೆ ಇನ್ನೂ ಜಬರ್ದಾಸ್ತಾಗಿ ಅಗ್ನಿಯುಗುಳುತ್ತಿದ್ದರೇನೋ!

ಜೀವನ ಪರ್ಯಂತ ಜೇಲಿಗೆ ಹಾಕಿತ್ತು ಇಸ್ರೇಲ್. ಆದರೆ ಶೇಖ್ ಸಾಬ್ರ ಲಕ್ ಅಂದರೆ ಲಕ್. ಭಯಂಕರ ಅದೃಷ್ಟ. ಜೇಲಿನಿಂದ ಬಿಡುಗಡೆಯಾಗುವಂತಹ ಒಂದು ಸನ್ನಿವೇಶ ಅಚಾನಕ್ ಆಗಿ ಸೃಷ್ಟಿಯಾಗಿಬಿಡಬೇಕೇ!? ಅದೂ ಇಸ್ರೇಲ್ ಮಾಡಿಕೊಂಡ ಸ್ವಯಂಕೃತ ಅಪರಾಧದಿಂದಾಗಿ. ಅದರಲ್ಲೂ ಮಹಾನ್ ಖತರ್ನಾಕ್ ಬೇಹುಗಾರಿಕೆ ಸಂಸ್ಥೆ ಮೊಸ್ಸಾದ್ ಮಾಡಿಕೊಂಡ ಒಂದು ಲಫಡಾ ಶೇಖ್ ಯಾಸೀನ್ ಬಿಡುಗಡೆಯಾಗುವಂತೆ ಮಾಡಿದ್ದು ಒಂದು ವಿಚಿತ್ರ. Total irony.

೧೯೯೭ ರಲ್ಲಿ ಹಮಾಸ್ ಉಗ್ರರಿಗೆ ಒಂದು ಖಡಕ್ ಸಂದೇಶ ಮುಟ್ಟಿಸಬೇಕೆಂದುಕೊಂಡ ಇಸ್ರೇಲ್ ಹಮಾಸ್ ಮುಖಂಡ ಖಾಲಿದ್ ಮೇಷಾಲ್ ಮೇಲೆ ಮರಣಶಾಸನ ಜಾರಿ ಮಾಡಿತು. ಎಂದಿನಂತೆ ಅದರ ಜವಾಬ್ದಾರಿ ಹೋಗಿದ್ದು ಮೊಸ್ಸಾದ್ ಎಂಬ ಖತರ್ನಾಕ್ ಬೇಹುಗಾರಿಕೆ ಸಂಸ್ಥೆಗೆ. ಅಂದಿನ ಮೊಸ್ಸಾದ್ ಮುಖ್ಯಸ್ಥ ಡ್ಯಾನಿ ಯಟೋಮ್ ಆ ಕಾರ್ಯಾಚರಣೆ ತುಂಬಾ ಕಷ್ಟಕರವಾಗಿದೆ ಮತ್ತು ತುಂಬಾ ರಿಸ್ಕಿ ಎಂದು ಪ್ರಧಾನಿ ನೇತನ್ಯಾಹು ಅವರಿಗೆ ಪರಿಪರಿಯಾಗಿ ಹೇಳಿದರು. ಸದ್ಯಕ್ಕೆ ಖಾಲಿದ್ ಮೇಶಾಲನ ಗೇಮ್ ಬಾರಿಸುವುದು ಬೇಡ, ಮುಂದೆ ನೋಡೋಣ ಎಂದು ಹೇಳಿದರು. ಖಡಕ್ ಪ್ರಧಾನಿ ನೆತಾನ್ಯಾಹೂಗೆ ಸಹನೆ ಕಮ್ಮಿ. ಖುದ್ ಟಾಪ್ ಕಮಾಂಡೋ ಆಗಿದ್ದ ಅವರು ಅಂತಹ ಹಲವಾರು ಕಾರ್ಯಾಚರಣೆ ಮಾಡಿದ್ದರು. ವಿಮಾನ ಅಪಹರಣಕಾರರ ಗೇಮ್ ಖುದ್ದಾಗಿ ಬಾರಿಸಿದ್ದರು. ಹಮಾಸ್ ಮಾಡುತ್ತಿದ್ದ ಆತ್ಮಹತ್ಯಾ ದಾಳಿಗಳಲ್ಲಿ ತುಂಬಾ ಜನ ಇಸ್ರೇಲಿಗಳು ಭಸ್ಮವಾಗುತ್ತಿದ್ದರು. ಪ್ರಧಾನಿ ಮೇಲೆ ಇನ್ನಿಲ್ಲದ ಒತ್ತಡ. ಏನಾದರೂ ಮಾಡಲೇಬೇಕಿತ್ತು. ಇಸ್ರೇಲ್ ನೋಡಿಕೊಂಡು ಸುಮ್ಮನಿರಲ್ಲ ಎನ್ನುವ ಖಡಕ್ ಸಂದೇಶ ಉಗ್ರರಿಗೆ ರವಾನೆಯಾಗಲೇಬೇಕಿತ್ತು. ಒಂದು ದೊಡ್ಡ ಬಲಿ ಕೇಳುತ್ತಿತ್ತು ಇಸ್ರೇಲ್ ಜನತೆ. ಹಾಗಾಗಿ ತಮ್ಮ ಮೊಸ್ಸಾದ್ ಮುಖ್ಯಸ್ಥನ ಮಾತು ಕೇಳಲಿಲ್ಲ ಅವರು.

ಖಾಲೆದ್ ಮೇಷಾಲನನ್ನು ಕೊಲ್ಲಲು ಹಾಕಿದ್ದ ಸ್ಕೆಚ್ ಗಬ್ಬೆದ್ದುಹೋಯಿತು. ಪಕ್ಕದ ಜೋರ್ಡಾನ್ ದೇಶದ ರಾಜಧಾನಿ ಅಮ್ಮಾನ್ ನಗರದಲ್ಲಿ ಆಫೀಸ್ ಮಾಡಿಕೊಂಡಿದ್ದ ಖಾಲೆದ್ ಮೇಷಾಲ್ ಮೊಸ್ಸಾದ್ ಹಂತಕರಿಂದ ಬಚಾವಾಗಿಬಿಟ್ಟ. ಅದಕ್ಕಿಂತ ಹೆಚ್ಚಾಗಿ ಮೊಸ್ಸಾದ್ ಹಂತಕರು ಸಿಕ್ಕಾಕಿಕೊಂಡುಬಿಟ್ಟರು. ಇಸ್ರೇಲಿಗೆ ದೊಡ್ಡ ಮಟ್ಟದ ಮುಜುಗರ. Big embarrassment. ಪಕ್ಕದಲ್ಲಿದ್ದ ಎಲ್ಲ ಅರಬ್ ರಾಷ್ಟ್ರಗಳು ವೈರಿ ದೇಶಗಳು. ಇದ್ದುದರಲ್ಲಿಯೇ ಜೋರ್ಡಾನ್ ಸ್ನೇಹದ ಹಸ್ತ ಚಾಚಿತ್ತು. ಏನೇನೋ ಒಪ್ಪಂದ ಮಾಡಿಕೊಂಡಿತ್ತು. ತನ್ನ ದೇಶದಲ್ಲಿ ಹತ್ಯೆ ಮಾಡುವಂತಿಲ್ಲ, ಗೇಮ್ ಬಾರಿಸುವಂತಿಲ್ಲ ಅಂತೆಲ್ಲ ಒಪ್ಪಂದ ಇತ್ತು. ಹೀಗೆಲ್ಲ ಇರುವಾಗ ಇಸ್ರೇಲ್ ತನ್ನ ದೇಶದಲ್ಲಿ ಗೇಮ್ ಬಾರಿಸಲು ನೋಡಿದ್ದು ದೊಡ್ಡ ಪ್ರಮಾಣದ ಮಿತ್ರದ್ರೋಹ ಅಂತ ಅಲ್ಲಿನ ಅಧ್ಯಕ್ಷ / ರಾಜ ಬೋಡು ತಲೆಯ ಕಿಂಗ್ ಹುಸೇನ್ ದೊಡ್ಡ ಪ್ರಮಾಣದಲ್ಲಿ ರಚ್ಛೆ ಹಿಡಿದು ಕೂತರು. ಸೀದಾ ಶ್ವೇತಭವನಕ್ಕೇ ಫೋನ್ ಹಚ್ಚಿ ಅಧ್ಯಕ್ಷ ಬಿಲ್ ಕ್ಲಿಂಟನ್ ಸಾಹೇಬರ ಮುಂದೆ ಗೊಳೋ ಎಂದರು. ಆಗ ಅದು ಕೇವಲ ಇಸ್ರೇಲಿನ ಸಮಸ್ಯೆಯಾಗಿ ಉಳಿಯಲಿಲ್ಲ.

ಬಿಲ್ ಕ್ಲಿಂಟನ್ ಸಾಹೇಬರಿಗೆ ಇದೆಲ್ಲ ಮಂಡೆಬಿಸಿ ಬೇಕಾಗಿಯೇ ಇರಲಿಲ್ಲ. ಎರಡನೇ ಅವಧಿಯಲ್ಲಿ ಸಕತ್ ಮಜಾ ಮಾಡಿಕೊಂಡು ಸಿಕ್ಕಸಿಕ್ಕ ಸುಂದರಿಯರ ಬ್ಯಾಂಡ್ ಬಾರಿಸಿಕೊಂಡು ಆರಾಮಾಗಿ ಇರೋಣ ಅಂದರೆ ಇಸ್ರೇಲ್ ಮತ್ತು ಜೋರ್ಡಾನ್ ಮಧ್ಯೆ ರಾಮರಾಡಿ. 'ಸಂಧಾನ ಮಾಡಿಕೊಂಡು ಎಲ್ಲ ಬಗೆಹರಿಸಿಕೊಳ್ಳಿ!' ಎಂದು ಇಸ್ರೇಲಿನ ಪ್ರಧಾನಿ ನೆತನ್ಯಾಹು ಅವರಿಗೆ ಕಟ್ಟಾಜ್ಞೆ ಮಾಡಿದ ಬಿಲ್ ಕ್ಲಿಂಟನ್ ತಮ್ಮ ಅಂದಿನ ಸಖಿ ಮೋನಿಕಾ ಲೆವಿನ್ಸ್ಕಿಯನ್ನು ಹುಡುಕುತ್ತ ಕಳೆದುಹೋದರು. ನೆತನ್ಯಾಹು ಅವರ ವಿವರಣೆ ಕೇಳಲು ಅವರಿಗೆ ಟೈಮ್ ಇರಲಿಲ್ಲ. ಮೂಡ್ ಕೂಡ ಇರಲಿಲ್ಲ.

(ಖಾಲೆದ್ ಮೇಷಾಲ್ ಹತ್ಯಾಪ್ರಯತ್ನದ ಬಗ್ಗೆ, ಅದರ ವೈಫಲ್ಯದ ಬಗ್ಗೆ ಮೊದಲೊಮ್ಮೆ ವಿವರವಾಗಿ ಬರೆದಿದ್ದೆ. ಇಲ್ಲಿದೆ. ಆಸಕ್ತರು ಓದಬಹುದು.)

ಬರೋಬ್ಬರಿ ವಸೂಲಿ ಮಾಡುವಂತೆ ಬಾಕಿ ಎಲ್ಲ ಅರಬ್ ದೇಶಗಳು ಜೋರ್ಡಾನ್ ದೊರೆ ಹುಸೇನರ ಬೋಳು ತಲೆಯನ್ನು ಬರೋಬ್ಬರಿ ತಿಕ್ಕಿದವು. ದೊಡ್ಡ ಮಟ್ಟದ ಡಿಮ್ಯಾಂಡ್ ಇಟ್ಟುಕೊಂಡು ಕೂತಿದ್ದರು ಅವರು. He wanted his pound of flesh and more!

ಮೊತ್ತ ಮೊದಲ ಡಿಮ್ಯಾಂಡ್ - ಖಾಲೆದ್ ಮೇಷಾಲ್ ಮೇಲೆ ಪ್ರಯೋಗಿಸಲಾದ ರಹಸ್ಯ ವಿಷಕ್ಕೆ ಪ್ರತಿಮದ್ದನ್ನು (antidote) ತುರ್ತಾಗಿ ಕಳಿಸಬೇಕು. ಜೊತೆಗೆ ನುರಿತ ಇಸ್ರೇಲಿ ವೈದ್ಯರೂ ಸಹ. At any cost, ಖಾಲೆದ್ ಮೇಷಾಲ್ ಉಳಿಯಲೇಬೇಕು. ಸೆಕೆಂಡ್ ಡಿಮ್ಯಾಂಡ್ - ಜೇಲಿನಲ್ಲಿರುವ ಹಮಾಸ್ ಸಂಸ್ಥಾಪಕ ಶೇಖ್ ಯಾಸೀನರನ್ನು ಬಿಡುಗಡೆ ಮಾಡಬೇಕು ಮತ್ತು ಸುರಕ್ಷಿತವಾಗಿ ಜೋರ್ಡಾನ್ ದೇಶಕ್ಕೆ ತಲುಪಿಸಬೇಕು. ಮೂರನೇ ಡಿಮ್ಯಾಂಡ್ - ನೂರಾರು ಜನ ಹಮಾಸ್ ಉಗ್ರರನ್ನು ಜೇಲಿನಿಂದ ಬಿಡುಗಡೆ ಮಾಡಬೇಕು.

ಇಸ್ರೇಲಿಗೆ ಬೇರೆ ಗತಿ ಇರಲಿಲ್ಲ. ಎಲ್ಲ ಡಿಮ್ಯಾಂಡ್ ಒಪ್ಪಿಕೊಂಡಿತು. ಖದೀಮ ಶೇಖ್ ಯಾಸೀನನನ್ನು ಆತನ ಚಕ್ರಪೀಠದ ಸಮೇತ ಹೆಲಿಕಾಪ್ಟರಿನಲ್ಲಿ ಕುಳ್ಳಿರಿಸಿ ಜೋರ್ಡನ್ ದೇಶಕ್ಕೆ ಕಳುಹಿಸಿಕೊಟ್ಟರು. ಬಿಟ್ಟಿ ಹೆಲಿಕಾಪ್ಟರಿನಲ್ಲಿ ಗಾಜಾ ಪಟ್ಟಿಯ ತನ್ನ ಜನರಿಗೆ ಕೈಬೀಸುತ್ತ ಶೇಖ್ ಯಾಸೀನ್ ಹಾರಿಹೋಗುತ್ತಿದ್ದರೆ ಇತ್ತ ಕಡೆ ಪ್ರಧಾನಿ ನೆತನ್ಯಾಹು ಹಣೆ ಹಣೆ ಚಚ್ಚಿಕೊಂಡರು. ಹಾಕಿದ್ದ ಸ್ಕೆಚ್ ತಪ್ಪಿತ್ತು. ಗೇಮ್ ಬಾರಿಸಲಾಗಿರಲಿಲ್ಲ. ಆದರೆ ಮೊಸ್ಸಾದ್ ಡೈರೆಕ್ಟರ್ ಡ್ಯಾನಿ ಯಟೋಮ್ ನೌಕರಿಗೆ ಮಾತ್ರ ಬ್ಯಾಂಡ್ ಬಾರಿಸಿದ್ದರು ನೆತನ್ಯಾಹು. ಹೊಸ ಮೊಸ್ಸಾದ್ ಡೈರೆಕ್ಟರ್ ಎಫ್ರೆಮ್ ಹಾಲಿವೀ ಬಂದು ಕುಳಿತರು. ಖುರ್ಚಿ ಮೇಲೆ ಕೂಡುವ ಮೊದಲೇ ವಿಷಕ್ಕೆ ತಕ್ಕ ಪ್ರತಿಮದ್ದನ್ನು ಹಿಡಿದುಕೊಂಡು ಜೋರ್ಡನ್ ದೇಶಕ್ಕೆ ಓಡುವ ಕರ್ಮ ಅವರದ್ದು. ಪಾಪ. ಮೊಸ್ಸಾದ್ ಎಂಬ ಖತರ್ನಾಕ್ ಸಂಸ್ಥೆಯ ಡೈರೆಕ್ಟರ್ ಒಳ್ಳೆ ಜವಾನನಾಗಿ ಹೋಗಿದ್ದ. ಟೈಮ್ ಖರಾಬ್ ಇದ್ದರೆ ನೋಡಿ ಹೀಗೆಲ್ಲ ಆಗುತ್ತದೆ.

ಇಸ್ರೇಲಿಗಳಿಗೆ ಠೇoಗಾ ತೋರಿಸಿ, ಅವರನ್ನು ಅಣಗಿಸುತ್ತ,ಅವರದ್ದೇ ಹೆಲಿಕಾಪ್ಟರಿನಲ್ಲಿ ಹಾರಿಹೋಗಿದ್ದ ಶೇಖ್ ಯಾಸೀನ್ ಪಕ್ಕದ ಜೋರ್ಡಾನ್ ದೇಶದಲ್ಲಿ ಸಿಕ್ಕಾಪಟ್ಟೆ ಚಮಕಾಯಿಸಿದ. ಅಲ್ಲವನಿಗೆ ಫುಲ್ ರಾಜೋಪಚಾರ. ಖುದ್ದು ಸಿಕ್ಕಾಪಟ್ಟೆ ರಸಿಕರಾಗಿದ್ದ ಜೋರ್ಡನ್ ದೇಶದ ರಾಜ ಕಿಂಗ್ ಹುಸೇನ್ ಶೇಖ್ ಸಾಬ್ರ 'ಸೇವೆ'ಗಾಗಿ ಗೆಳತಿಯರನ್ನೂ ಸರಬರಾಜು ಮಾಡಿದ್ದರೆ? ಗೊತ್ತಿಲ್ಲ. ಜೋರ್ಡಾನಿನ ರಾಜ ಕಿಂಗ್ ಹುಸೇನರ ರಸಿಕತೆ legendary. ಅದನ್ನೇ ದಾಳವಾಗಿ ಬಳಸಿಕೊಂಡಿದ್ದ ಅಮೇರಿಕಾದ ಬೇಹುಗಾರಿಕೆ ಸಂಸ್ಥೆ ಸಿಐಎ ಕಿಂಗ್ ಹುಸೇನರಿಗೆ ಹಾಲಿವುಡ್ ನಟಿಯರನ್ನು ತಲೆಹಿಡಿಹಿಡಿದೇ ಅವರನ್ನು ಫುಲ್ compromise ಮಾಡಿತ್ತು. ಒಳ್ಳೆ ಅಮೇರಿಕನ್ ಏಜೆಂಟರಂತೆ ಕಿಂಗ್ ಹುಸೇನ್ ಆಗಲು ಕಾರಣ ಅದೇ. ಅವರ ರಾಸಲೀಲೆಗಳ ಗುಟ್ಟುಗಳೆಲ್ಲ ಸಿಐಎಗೆ  ಗೊತ್ತಿದ್ದವು. ಹಾಲಿವುಡ್ ನಟಿಯೊಬ್ಬಳಿಗೆ ಕಿಂಗ್ ಹುಸೇನ್ ಕರುಣಿಸಿದ ನಾಜಾಯಿಸ್(illegitimate) ಮಗನೊಬ್ಬ ಮುಂದೊಂದು ದಿನ ಹುಚ್ಚು ನೆತ್ತಿಗೇರಿ ಅಮ್ಮನನ್ನೇ ಕೊಂದುಬಿಟ್ಟ. ಅದೆಲ್ಲ ದೊಡ್ಡ ಕಥೆ. ಮುಂದೊಮ್ಮೆ ಬರೆಯೋಣ.

ಎಲ್ಲ ತರಹದ ರಾಜೋಪಚಾರದಿಂದ ಸಿಕ್ಕಾಪಟ್ಟೆ excite ಆದ ಶೇಖ್ ಯಾಸೀನ್ ಜೋರ್ಡಾನಿನಲ್ಲಿ ಕುಳಿತೇ ಸಿಕ್ಕಾಪಟ್ಟೆ ಪ್ರವಚನ ಕೊಟ್ಟ. ಅವನ ಪ್ರವಚನದ ಕ್ಯಾಸೆಟ್ಟುಗಳು ಅರಬ್ ದೇಶಗಳ ತುಂಬೆಲ್ಲ ಸಿಕ್ಕಾಪಟ್ಟೆ ಬಿಕರಿಯಾದವು. ಹಮಾಸ್ ಕೊಪ್ಪರಿಗೆ ತುಂಬಿತು. ಗಾಜಾ ಪಟ್ಟಿಯ ಅರಬ್ ಜನ ಇಸ್ರೇಲಿನ ವಿರುದ್ಧದ ದ್ವೇಷದ ಅಫೀಮಿನ ಅಮಲಲ್ಲಿ ಮತ್ತಿಷ್ಟು ಸುಯಿಸೈಡ್ ಬಾಂಬಿಂಗ್ ಮಾಡತೊಡಗಿದರು. ಶೇಖ್ ಯಾಸೀನ್ ಎಂಬ ಪೀಡೆ ಪಕ್ಕದ ದೇಶದಲ್ಲಿ ಕುಳಿತು ಇಸ್ರೇಲಿಗೆ ಮತ್ತೆ ಕಾಟ ಕೊಡತೊಡಗಿತು.

ಮುಂದೆ ಸ್ವಲ್ಪ ವರ್ಷಗಳ ನಂತರ ಜೋರ್ಡನ್ ಮತ್ತು ಹಮಾಸ್ ಮಧ್ಯೆ ಸಂಬಂಧ ಹಳಸಿತು. ಕಿಂಗ್ ಹುಸೇನ್ ಸಾಹೇಬರ ಖಾಲಿ ಬುರುಡೆಗೆ ಅಮೇರಿಕಾ ಬಿಸಿನೀರು ಕಾಯಿಸಿತು. 'ನಿಮ್ಮ ದೇಶದಿಂದ ಹಮಾಸ್ ಉಗ್ರರನ್ನು ಮುಲಾಜಿಲ್ಲದೆ ಹೊರಗಟ್ಟಿ,' ಎನ್ನುವ ಕಟ್ಟಾಜ್ಞೆ ಮಾಡಿತು. ಅಮೇರಿಕಾದ ಮಾತು ಕೇಳದಿದ್ದರೆ ಬುಡಕ್ಕೇ ಬಂದೀತು ಎಂದು ಥಂಡಾ ಹೊಡೆದ ಹುಸೇನ್ ಸಾಹೇಬರು ಹೇಳಿದಷ್ಟು ಮಾಡಿ ಸಲ್ಯೂಟ್ ಹೊಡೆದರು.  ಜೋರ್ಡಾನ್ ಬಿಟ್ಟ ಹಮಾಸ್ ಉಗ್ರರು ಮೊದಲು ಈಜಿಪ್ಟ್, ನಂತರ ಸಿರಿಯಾ, ನಂತರ ಕತಾರ್ ದೇಶಕ್ಕೆ ಹೋಗಿ ಕುಳಿತರು. ಎಲ್ಲಿ ಕುಳಿತರೇನು? ಇಸ್ರೇಲ್ ಪಕ್ಕದ ಪ್ಯಾಲೆಸ್ಟೈನ್ ಗಾಜಾ ಪಟ್ಟಿಯಲ್ಲಿ ತಮ್ಮ ಶಿಷ್ಯರ ಮೂಲಕ ಭಯೋತ್ಪಾದನೆಯನ್ನು ಮುಂದುವರೆಸಿದ್ದರು.

ಗಾಜಾ ಪಟ್ಟಿ....ಮಾತೃಭೂಮಿ. ಸ್ವರ್ಗಾದಪೀ ಗರೀಯಸೀ... ಸ್ವರ್ಗಕ್ಕಿಂತ ಹೆಚ್ಚು. ದೂರ ಕುಳಿತ ಶೇಖ್ ಯಾಸೀನ್ ಸಾಬ್ರಿಗೂ ಹಾಗೇ ಅನ್ನಿಸಿರಲೂ ಸಾಕು. ಗಾಜಾ ಪಟ್ಟಿಗೆ ಹಿಂತಿರುಗಬೇಕು ಎಂದು ಹಪಹಪಿಸತೊಡಗಿದರು. ಮೊದಲಿನ ಗೆಳತಿ, ಆಕೆಯ ಸೇವೆ ನೆನಪಾಗಿರಲೂ ಸಾಕು. ಯಾರಿಗೆ ಗೊತ್ತು? ಒಟ್ಟಿನಲ್ಲಿ ೨೦೦೧-೨೦೦೨ ರ ಆಸುಪಾಸಿನಲ್ಲಿ ಮತ್ತೆ ಗಾಜಾ ಪಟ್ಟಿಯಲ್ಲಿ ಪ್ರತ್ಯಕ್ಷನಾದ ಶೇಖ್ ಯಾಸೀನ್. ಮತ್ತದೇ ಚಕ್ರಪೀಠಾಧಿಪತಿ, ಕಾಲಿನಲ್ಲಿ ತೋರಿಸಿದ್ದನ್ನು ಪ್ರಸಾದಂತೆ ಸ್ವೀಕರಿಸಿ ಕೆಲಸ ಮಾಡುವ ಶಿಷ್ಯವೃಂದ, ಮಾತೃಭೂಮಿಯ ಘಮಲು! ದ್ವೇಷದ ಅಮಲು! ಒಟ್ಟಿನಲ್ಲಿ ಹಾಯಾಗಿದ್ದರು ಶೇಖ್ ಯಾಸೀನ್ ಸಾಬ್ರು. ಪ್ರವಚನಗಳ ಮೂಲಕ ಇಸ್ರೇಲ್ ವಿರುದ್ಧ ಬೆಂಕಿಯುಗುಳುವ ಕೆಲಸ ಮಾತ್ರ ನಿರಂತರ.

'ಮತ್ತೆ ಬಂದು ವಕ್ಕರಿಸಿಕೊಂಡಿತೇ ಈ ಪಿಶಾಚಿ!' ಎಂದು ಅಂದುಕೊಂಡರು ಇಸ್ರೇಲಿಗಳು. ಆದರೆ ಆಗ ಮಾತ್ರ ಅಮೇರಿಕಾದಲ್ಲಿ ೯/೧೧ ಅನಾಹುತ ಆಗಿಹೋಗಿತ್ತು. ಅಮೇರಿಕಾ ಅಫ್ಘಾನಿಸ್ತಾನ್ ಮೇಲೆ ಮೊದಲು ನಂತರ ಇರಾಕ್ ಮೇಲೆ ಮುರಿದುಕೊಂಡು ಬಿತ್ತು. ಪಕ್ಕವಾದ್ಯ ನುಡಿಸಿದ್ದು ಇಸ್ರೇಲ್. ಇರಾಕಿನ ನಿರ್ನಾಮ, ಅದರಲ್ಲೂ ಸದ್ದಾಮ್ ಹುಸೇನ್ ಎಂಬ ಬದ್ಧ ವೈರಿಯ ನಿರ್ನಾಮ, ಇಸ್ರೇಲಿನ ಅಂದಿನ ಮುಖ್ಯ ಆದ್ಯತೆಯಾಗಿತ್ತು. ಪಕ್ಕದ ಗಾಜಾ ಪಟ್ಟಿಯಲ್ಲಿ ಶೇಖ್ ಯಾಸೀನ್ ಮತ್ತು ಆತನ ಶಿಷ್ಯರು ಹಾವಳಿ ಮಾಡಿಕೊಂಡಿದ್ದರೂ ಕೊಂಚ ನಿರ್ಲಕ್ಷ್ಯ ಮಾಡಿತ್ತು ಇಸ್ರೇಲ್.

೨೦೦೩-೨೦೦೪ ರಲ್ಲಿ ಹಮಾಸ್ ಹಾವಳಿ ತುಂಬಾ ಜಾಸ್ತಿಯಾಯಿತು. ಡಿಸೆಂಬರ್ ೨೦೦೩ ರಲ್ಲಿ ಸದ್ದಾಮ್ ಹುಸೇನ್ ಕೂಡ ಸಿಕ್ಕಿಬಿದ್ದ. ಅಲ್ಲಿಗೆ ಇಸ್ರೇಲಿನ ಆ ಸಮಸ್ಯೆ ಮುಗಿಯಿತು. ಆಗ ಹಮಾಸ್ ಕಡೆ ಗಮನ ತಿರುಗಿಸಿತು ನೋಡಿ ಇಸ್ರೇಲ್! ಪರಶಿವ ತನ್ನ ಮೂರನೇ ಕಣ್ಣು ಬಿಟ್ಟ! ಎದುರಿಗೆ ಬಂದ ಕಾಮಣ್ಣಗಳೆಲ್ಲ ಭಸ್ಮವಾಗಿಹೋದರು! ಹಮಾಸ್ ಮುಖಂಡರ ವಿರುದ್ಧ ಮರಣಶಾಸನ wholesale ಆಗಿ ಜಾರಿಯಾಯಿತು. ಇಸ್ರೇಲ್ ರಕ್ಷಣಾವ್ಯವಸ್ಥೆಗೆ ಒಂದೇ ವಾಕ್ಯದ ಖಡಕ್ ಆಜ್ಞೆ - wipe out the entire leadership of Hamas in the Gaza strip! ಹಮಾಸ್ ಸಂಘಟನೆಯ ನಾಯಕವೃಂದವನ್ನು 'ತೆಗೆದುಬಿಡಿ' ಎನ್ನುವ blanket authorization!

ಇದಕ್ಕೇ ಕಾದು ಕುಳಿತಿತ್ತು ಇಸ್ರೇಲಿನ ಸೈನ್ಯ. ಮೊದಲು ಹೋದವ ಸಾಲಾ ಶೆಹಾದೆ ಎಂಬ ಕಿರಾತಕ. ಹಮಾಸ್ ಸಂಸ್ಥಾಪಕರಲ್ಲಿ ಒಬ್ಬ. ಗಾಜಾ ಪಟ್ಟಿ ಎಂಬ ಕೊಳೆಗೇರಿಯಲ್ಲಿ ಮೂರಂತಸ್ತಿನ ಭವ್ಯ ಮನೆ ಕಟ್ಟಿಕೊಂಡು, ಎರಡು ಮೂರು ಹೆಂಡತಿ ಮಕ್ಕಳ ಜೊತೆ ಹಾಯಾಗಿದ್ದ. ಆತ ಶೇಖ್ ಯಾಸೀನನ ಬಲಗೈ ಬಂಟ. ವಾರಕ್ಕೊಂದು ಆತ್ಮಹತ್ಯಾ ದಾಳಿ ಮಾಡಿಸಲಿಲ್ಲ ಅಂದರೆ ಅವನಿಗೆ ಉಂಡನ್ನ ಅರಗುತ್ತಿರಲಿಲ್ಲ.

ಇಸ್ರೇಲಿ ವಾಯುಸೇನೆಯ ವಿಮಾನವೊಂದು precision ಬಾಂಬಿಂಗ್ ಮಾಡಿತು ನೋಡಿ. JDAM ಎನ್ನುವ ಮಹಾಶಕ್ತಿಶಾಲಿ ಬಾಂಬೊಂದು ಬಿದ್ದ ಅಬ್ಬರಕ್ಕೆ ಕುಟುಂಬ ಸಮೇತ ಸಾಲಾ ಶೆಹಾದೆ ಪಾತಾಳ ಸೇರಿಕೊಂಡ. ಅಲ್ಲೊಂದು ಮೂರಂತಸ್ತಿನ ಆಲೀಶಾನ್ ಮಹಲಿತ್ತು ಎನ್ನುವುದಕ್ಕೆ ಯಾವುದೇ ಕುರುಹು ಪುರಾವೆ ಉಳಿದಿರಲಿಲ್ಲ. ಕೊಳೆಗೇರಿ ನಡುವೆ ಎಲ್ಲ ಸೇರಿಹೋಗಿತ್ತು. ಸಾಲಾ ಶೆಹಾದೆ ಎನ್ನುವ ಘಟಸರ್ಪದ ಪೂರ್ತಿ ವಂಶ ನಿರ್ನಾಮವಾಗಿತ್ತು. ಹಾವೊಂದನ್ನೇ ಕೊಲ್ಲಬಾರದು. ಹುತ್ತವನ್ನು ನೆಲಸಮ ಮಾಡಿ ಹುತ್ತದಲ್ಲಿರುವ ಮೊಟ್ಟೆ , ಮರಿ ಎಲ್ಲವನ್ನೂ ನಾಶಮಾಡಬೇಕಂತೆ. ಅದನ್ನೇ ಮಾಡಿತ್ತು ಇಸ್ರೇಲ್.

ನಂತರದ ಬಾರಿಯೇ ಶೇಖ್ ಯಾಸೀನನದ್ದು. ಅವನಿಗೆ ಗೊತ್ತಾಗಿಯೇ ಹೋಗಿತ್ತು ತನ್ನ ಆಯುಷ್ಯ ಕೂಡ ಮುಗಿದಿದೆ ಎಂದು. ಆದರೆ ಹುಂಬ. ಅವರೆಲ್ಲರೂ ಹುಂಬರೇ. ಇಲ್ಲವಾದರೆ ಉಗ್ರರಾಗುತ್ತಾರೆಯೇ??

ತನ್ನ ಮೇಲೆಯೂ ಇಸ್ರೇಲ್ ವಿಮಾನದ ಮೂಲಕ ಬಾಂಬ್ ಹಾಕಲಿದೆ ಎಂದು ಅಂದಾಜಿಸಿದ. ತಕ್ಕಮಟ್ಟಿಗಿನ precaution ತೆಗೆದುಕೊಂಡ. ಮನೆ ಪಕ್ಕದ ಮಸೀದಿಗೆ ಹೋಗುವದಿದ್ದರೂ ಎರಡು ಮೂರು ವಾಹನ ಬದಲಾಯಿಸುತ್ತಿದ್ದ. ಹೋಗುವಾಗ ವಾಹನದಲ್ಲಿ ಹೋಗುತ್ತಿದ್ದ. ಬರುವಾಗ ವಾಹನ ಖಾಲಿ ಇರುತ್ತಿತ್ತು. ವಿಕಲಾಂಗನನ್ನು ಕಂಬಳಿಯಲ್ಲಿ ಮುಚ್ಚಿ ಎತ್ತಿಕೊಂಡು ಬಂದು ಮನೆ ಸೇರಿಸುತ್ತಿದ್ದರು ಶಿಷ್ಯರು. ಖಾಲಿ ವಾಹನದ ಮೇಲೆ ಬೇಕಾದರೆ ಇಸ್ರೇಲ್ ಬಾಂಬ್ ಹಾಕಿಕೊಳ್ಳಲಿ ಎನ್ನುವ ಸ್ಕೀಮ್.

ಇಸ್ರೇಲ್ ರಹಸ್ಯವಾಗಿ ಎಲ್ಲವನ್ನೂ ಗಮನಿಸುತ್ತಿತ್ತು. ಶೇಖ್ ಯಾಸೀನನ್ನು ಯಾಮಾರಿಸಲು ಎಂದೇ ತಲೆಮೇಲೆ ನಾಲ್ಕಾರು F-೧೫ ವಿಮಾನಗಳು ಹಾರಾಡಿಕೊಂಡಿರುವಂತೆ ಮಾಡಿತ್ತು. ಅವಕ್ಕೆ ಬೇರೆ ಕೆಲಸವಿಲ್ಲ. ಇಸ್ರೇಲಿನಿಂದ ಗಾಜಾ ಪಟ್ಟಿಗೆ ತಿರುಗಾ ಮುರುಗಾ ಟ್ರಿಪ್ ಹೊಡೆಯುವುದೇ ಕೆಲಸ. ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಬಾಂಬ್ ಹಾಕಬಹುದು.

ಶೇಖ್ ಯಾಸೀನ್ ಮತ್ತು ಸಂಗಡಿಗರು ಗಮನಿಸದ ಸಂಗತಿಯೊಂದಿತ್ತು. ಆಗಾಗ ಗಾಜಾ ಪಟ್ಟಿಯೊಳಗೆ ಪುಸಕ್ಕನೆ ನುಸುಳಿ ವಾಪಸ್ ಹೋಗಿಬಿಡುತ್ತಿದ್ದ ಅಪಾಚೆ ಹೆಲಿಕ್ಯಾಪ್ಟರಗಳು. ಈಕಡೆ ಶೇಖ್ ಯಾಸೀನ್ ತಂಡದ ಗಮನ ಪೂರ್ತಿ ತಲೆ ಮೇಲೆ ಹಾರಾಡುವ ವಿಮಾನಗಳ ಮೇಲಿದ್ದರೆ ಗಡಿಯಾಚೆಯಿಂದಲೇ ಮಾನಿಟರ್ ಮಾಡುತ್ತಿದ್ದ ಅಪಾಚೆ ಹೆಲಿಕ್ಯಾಪ್ಟರಗಳ ಬಗ್ಗೆ ಉಗ್ರರ ಗಮನ ಹೋಗಿರಲಿಲ್ಲ.

ಒಂದು ದಿವಸ ಬೆಳಗಿನ ಜಾವದಲ್ಲಿ ಶೇಖ್ ಯಾಸೀನ್ ಮಸೀದಿಯಲ್ಲಿ ಪ್ರಾರ್ಥನೆ ಮತ್ತು ಪ್ರವಚನ ಮುಗಿಸಿದ. ಆಕಾಶದಲ್ಲಿ ಇಸ್ರೇಲಿ ಯುದ್ಧವಿಮಾನ ಎಂದಿನಂತೆ buzz ಮಾಡಿಕೊಂಡು ಹಾರಿಕೊಂಡಿತ್ತು. ವ್ಯಾನಿನೊಳಗೆ ತಳ್ಳುಗಾಳಿಯ ಖುರ್ಚಿಯೊಂದಿಗೆ ಶೇಖ್ ಸಾಬ್ರನ್ನು ಹತ್ತಿಸಲಾಯಿತು. ಅಷ್ಟೇ ಪಕ್ಕದ ಬಾಗಿಲಿಂದ ಶೇಖ್ ಸಾಬ್ರನ್ನು ಇಳಿಸಿಕೊಂಡು ಕಂಬಳಿಯಲ್ಲಿ ಸುತ್ತಲಾಯಿತು. ವ್ಯಾನ್ ಶೇಖ್ ಸಾಹೇಬರ ಮನೆ ಕಡೆ ಹೊರಟಿತು. ಬಾಂಬ್ ಬಿದ್ದರೆ ವ್ಯಾನ್ ಭಸ್ಮವಾಗಬೇಕು. ಜೊತೆಗೆ ಶೇಖ್ ಯಾಸೀನ್ ಕೂಡ ಹೋದ ಎಂದು ಇಸ್ರೇಲಿಗಳು ಅಂದುಕೊಳ್ಳಬೇಕು. ಆದರೆ ಕಂಬಳಿಯ ಹೊದಿಕೆಯಲ್ಲಿ ಶಿಷ್ಯರ ಭುಜದ ಮೇಲೆ ರಹಸ್ಯವಾಗಿ ಹೋಗುತ್ತಿದ್ದ ಶೇಖ್ ಯಾಸೀನ್ ಮಾತ್ರ ಸುರಕ್ಷಿತವಾಗಿರಬೇಕು. ಹಾಗಂತ ಹಮಾಸ್ ಉಗ್ರರ ಪ್ಲಾನ್. ತಮ್ಮನ್ನು ತಾವು ಬಹಳ ಶಾಣ್ಯಾ ಅಂತ ತಿಳಿದಿರಬೇಕು.

ವ್ಯಾನ್ ಮುಂದೆ ಹೋಯಿತು. ನಸುಗತ್ತಲಲ್ಲಿ ಕಂಬಳಿಯಲ್ಲಿ ಸುತ್ತಿದ್ದ ವಿಕಲಾಂಗ ಶೇಖ್ ಸಾಬನನ್ನು ನಾಲ್ಕಾರು ಜನ ಹಮಾಸ್ ಉಗ್ರರು ಹೊತ್ತು ಚಕಚಕನೆ ಅವನ ಮನೆಯತ್ತ ಸಾಗುತ್ತಿದ್ದರು. ಮನೆ ಮುಟ್ಟಿಕೊಂಡರೆ ಅಷ್ಟರಮಟ್ಟಿಗೆ ಬಚಾವು.

ಗಡಿ ಪಕ್ಕದಲ್ಲಿ ಇದೆಲ್ಲವನ್ನೂ ಗಮನಿಸುತ್ತಿದ್ದ ಅಪಾಚೆ ಹೆಲಿಕ್ಯಾಪ್ಟರ್ ಬೇಟೆಗೆ ತಯಾರಾದವು. ಗಾಜಾ ಪಟ್ಟಿಯೊಳಗೆ ಬರುವ ಜರೂರತ್ತೇ ಬರಲಿಲ್ಲ. ಕೋಳಿಯಂತೆ ನೆಲದಿಂದ ಕೆಲವೇ ಅಡಿ ಮೇಲೆ ಹಾರಿದವು. ಅಷ್ಟೇ elevation ಬೇಕಾಗಿದ್ದು. ಶೇಖ್ ಸಾಬ್ರನ್ನು ಕಂಬಳಿಯಲ್ಲಿ ಸುತ್ತಿ ಹೊತ್ತುಕೊಂಡು ಓಡುತ್ತಿದ್ದ ಹಮಾಸ್ ಉಗ್ರರನ್ನು ತಮ್ಮ ತೋಪಿನ ಗುರಿಯ ಸ್ಕೋಪಿನಲ್ಲಿ ತೆಗೆದುಕೊಂಡು ಬಟನ್ ಒತ್ತಿದ್ದೆ ಕೊನೆ. ನಾಲ್ಕಾರು hellfire ಎಂಬ ನರಕಸದೃಶ ಮಿಸೈಲುಗಳು ಕ್ಷಣಾರ್ಧದಲ್ಲಿ ಹಮಾಸ್ ಉಗ್ರರನ್ನು ಭಸ್ಮ ಮಾಡಿದ್ದವು. ಸದಾ ಬೆಂಕಿಯುಗುಳುವ ಪ್ರವಚನ ಮಾಡಿಕೊಂಡಿದ್ದ ವಿಕಲಾಂಗ ಉಗ್ರ ಶೇಕ್ ಯಾಸೀನ್ ಭಸ್ಮವಾಗಿದ್ದ. ಹೀಗೆ ಅವನ ಕಥೆ ಮುಗಿದಿತ್ತು.

ನಂತರ ಹಮಾಸ್ ಅಧ್ಯಕ್ಷ ಸ್ಥಾನಕ್ಕೆ ಬಂದವ ಡಾ. ರಂಟೀಸಿ. ವೃತ್ತಿಯಿಂದ ದೊಡ್ಡ ಡಾಕ್ಟರ್. ವಿದೇಶದಲ್ಲಿದ್ದು ಓದಿದ್ದ. ಸಾಕಷ್ಟು ರೊಕ್ಕ ಮಾಡಿಕೊಂಡು ಬಂದು ಗಾಜಾ ಪಟ್ಟಿಯಲ್ಲಿ ದೊಡ್ಡ ಉಗ್ರನಾಗಿದ್ದ. ಶೇಕ್ ಯಾಸೀನ್ ಸತ್ತ ನಂತರ ತೆರವಾದ ಸ್ಥಾನಕ್ಕೆ ಬಂದು ಕೂತ. ಸಾಯುತ್ತೇನೆ ಅಂತ ಗೊತ್ತಿತ್ತು. ಆದರೆ ಅಷ್ಟು ಬೇಗ ಸಾಯುತ್ತೇನೆ ಅಂತ ಗೊತ್ತಿರಲಿಲ್ಲ. ಶೇಖ್ ಯಾಸೀನ್ ಹತ್ಯೆಯ ಸೂತಕ ಇನ್ನೂ ಮುಗಿದಿರಲಿಲ್ಲ. ರಂಟೀಸಿ ಕೂಡ ಬೇಗ ಹೋಗಲಿ ಎಂದುಕೊಂಡ ಇಸ್ರೇಲ್ ಮತ್ತೆ ಹೆಲಿಕ್ಯಾಪ್ಟರ್ ದಾಳಿ ಮಾಡಿತು. ಈ ಸಲ ಗಾಜಾ ಪಟ್ಟಿಯೊಳಗೇ ನುಗ್ಗಿಬಂದ ಅಪಾಚೆ ಹೆಲಿಕಾಪ್ಟರುಗಳು ಗಲ್ಲಿ ಗಲ್ಲಿಗಳಲ್ಲಿ ಡಾ. ರಂಟೀಸಿಯ ಕಾರವಾನನ್ನು ಅಟ್ಟಿಸಿಕೊಂಡು ಹೋದವು. ಎಷ್ಟಂತ ಓಡಿಯಾರು ಉಗ್ರರು? ರಂಟೀಸಿ ಮತ್ತು ಅವನ ಜೊತೆಗಾರರು ಇದ್ದ ಕಾರವಾನ್ ಸ್ಕೋಪಿನಲ್ಲಿ ಬಂದಿದ್ದೆ ಕೊನೆ. ಮುಂದೆ ಮತ್ತೆ ಹೆಸರಿಗೆ ತಕ್ಕಂತೆ ನರಕದರ್ಶನ ಮಾಡಿಸುವ hellfire ಮಿಸೈಲ್ ಮಾತಾಡಿದವು. ನಾಲ್ಕಾರು ವಾಹನಗಳಿದ್ದ ಡಾ. ರಂಟೀಸಿಯ ಪೂರಾ ಕ್ಯಾರವಾನ್ ಭಸ್ಮ! ಫುಲ್ ರಾಖ್!

ಹೀಗೆ ಹಮಾಸ್ ಸಂಘಟನೆಯ ಗಾಜಾಪಟ್ಟಿಯಲ್ಲಿದ್ದ ಉಗ್ರರ ಹಿರಿತಲೆಗಳೆಲ್ಲ ೨೦೦೪ ಇಸ್ವಿಯ ಮಧ್ಯಭಾಗದ ಒಂದೆರೆಡು ತಿಂಗಳಲ್ಲಿ ಪೂರ್ತಿಯಾಗಿ ನಿರ್ನಾಮವಾಗಿ ಹೋದರು. Entire local leadership was wiped out!

ಪರಿಸ್ಥಿತಿ ತಕ್ಕಮಟ್ಟಿಗೆ ಹತೋಟಿಗೆ ಬಂತು. ಆತ್ಮಹತ್ಯಾ ದಾಳಿಗಳು ಅದೆಷ್ಟೋ ಕಮ್ಮಿಯಾದವು. ಜೋರ್ಡನ್ ದೇಶದಲ್ಲಿ ಮೊಸ್ಸಾದ್ ಹತ್ಯಾ ಪ್ರಯತ್ನ ವಿಫಲವಾಗಿ ಪವಾಡಸದೃಶವೆಂಬಂತೆ ಬಚಾವಾಗಿದ್ದ ಖಾಲೆದ್ ಮಿಶಾಲನಿಗೆ ಹಮಾಸ್ ಮುಖ್ಯಸ್ಥನ ಪಟ್ಟ ಕಟ್ಟಲಾಯಿತು. ಕತಾರ್ ದೇಶದಲ್ಲಿದ್ದ ಮೇಷಾಲ್ ಭದ್ರತೆ ಹೆಚ್ಚಿಸಿಕೊಂಡ. ಇಸ್ರೇಲಿಗಳು ಅಲ್ಲೂ ಬಂದು ಗೇಮ್ ಬಾರಿಸಿಯಾರು ಎನ್ನುವ ಭಯ ಅವನಿಗೆ.

ಮುಖ್ಯ ಮಾಹಿತಿ ಆಧಾರ: Rise and Kill First: The Secret History of Israel's Targeted Assassinations by Ronen Bergman

https://images-na.ssl-images-amazon.com/images/I/51JR8YeLk7L._SX327_BO1,204,203,200_.jpg


೮೦೦ ಪುಟಗಳ ಸಮೃದ್ಧ ಓದು. ಶುರುವಾತಿನಿಂದ ಇಸ್ರೇಲ್ ಮಾಡಿದ ಎಲ್ಲ ರಹಸ್ಯ ಕಾರ್ಯಾಚರಣೆಗಳ ಬಗ್ಗೆ ಸಮಗ್ರ ಮಾಹಿತಿ ಒಂದೇ ಪುಸ್ತಕದಲ್ಲಿ ಬೇಕೆಂದೆರೆ ಈ ಪುಸ್ತಕ ಓದಿ. Good starting point. Of course, there are many other books describing individual covert operation in greater detail.