Monday, July 29, 2019

ಆರ್ಥಿಕ ಸ್ವಾತಂತ್ರ್ಯ & ಬೇಗನೆ ನಿವೃತ್ತಿ... ಹೊಸ ತಲೆಮಾರಿನ ವಿನೂತನ ಚಿಂತನೆ

ಅಮೇರಿಕಾದ millennial ತಲೆಮಾರಿನ ಯುವಜನತೆ ಹೊಸ ಯೋಚನೆ / ಯೋಜನೆಯೊಂದರ ಹಿಂದೆ ಬಿದ್ದಿದೆ. ಹಾಗಾಗಿ ಬೆಂಕಿ ಬಿದ್ದಿದೆ.

ಬೆಂಕಿ ಬಿದ್ದಿದೆ?? ಅಂದ್ರೆ ಏನ್ರೀ??

ಬೆಂಕಿ = FIRE ಅಂದರೆ Financial Independence & Retire Early. ಅದನ್ನೇ "ಆರ್ಥಿಕ ಸ್ವಾತಂತ್ರ್ಯ & ಬೇಗನೆ ನಿವೃತ್ತಿ" ಅಂದಿದ್ದು.

ಹೊಸ ತಲೆಮಾರಿನವರ ಈ 'ಬೆಂಕಿಯಂತಹ' ಯೋಚನೆ ಏನು ಅಂದರೆ ಆದಷ್ಟು ಬೇಗ ಆರ್ಥಿಕವಾಗಿ ಸ್ವತಂತ್ರರಾಗುವುದು ಮತ್ತು ಬೇಗ ನಿವೃತ್ತಿ ತೆಗೆದುಕೊಳ್ಳುವುದು.

ಆರ್ಥಿಕ ಸ್ವಾತಂತ್ರ್ಯ ಅಂದರೆ ಸಾಲ ಇರಬಾರದು. ಇದ್ದರೂ ತೀರಿಸಲು ಬೇಕಾಗುವ ದುಡ್ಡಿಗಾಗಿ ಸಂಬಳದ ಹಂಗಿನಲ್ಲಿ ಇರಬಾರದು. ಜೀವನದ ಅಗತ್ಯಗಳಿಗಾಗಿ ಕೆಲಸ ಮಾಡಲೇಬೇಕು ಅನ್ನುವಂತಹ ಪರಿಸ್ಥಿತಿ ಇರಬಾರದು. ಇಷ್ಟಿದ್ದ ಮೇಲೆ ನೀವು ನಿಮ್ಮ ಖುಷಿಯ ಕೆಲಸ ಮಾಡಿ, ಅದರಿಂದ ರೊಕ್ಕ ಮಾಡಿಕೊಂಡರೆ ಅದು ನಿಮಗೆ ಬಿಟ್ಟಿದ್ದು. ಕೇವಲ ಸಂಬಳಕ್ಕಾಗಿ ಮಾತ್ರ ಕೆಲಸ ಮಾಡುವ compulsion ಇರಬಾರದು.

ಬೇಗನೆ ನಿವೃತ್ತಿ ಅಂದರೆ ಎಲ್ಲ ಬಿಟ್ಟು ಕೂತುಬಿಡುವುದು ಅಂತಲ್ಲ. ಆತ್ಮಸಂತೋಷದ ಕೆಲಸ ಮಾಡಿಕೊಂಡಿರುವುದು. ಎಲ್ಲರೂ ಎರಡೇ ಕಾರಣಕ್ಕೆ ಕೆಲಸ ಮಾಡುತ್ತಾರೆ. ೧) ಕೆಲಸ ಮಾಡದಿದ್ದರೆ ಹೊಟ್ಟೆ ತುಂಬುವುದಿಲ್ಲ. ೨) ಮಾಡುವ ಕೆಲಸವನ್ನು ಅದೆಷ್ಟು ಪ್ರೀತಿಸುತ್ತಾರೆ ಅಂದರೆ ರೊಕ್ಕ ಬರದಿದ್ದರೂ ಅವರು ಆ ಕೆಲಸ ಮಾಡಲಿಕ್ಕೆ ತಯಾರಿರುತ್ತಾರೆ.

೯೯. ೯೯% ಜನ ಮೊದಲನೇ ವರ್ಗಕ್ಕೆ ಸೇರುವವರು. ಜೀವನೋಪಾಯಕ್ಕೊಂದು ಕೆಲಸ ಬೇಕು. ಏನೋ ಒಂದು ಕೆಲಸ ಆರಂಭ ಮಾಡಿದ್ದಾಗಿದೆ. ಏನೋ ಒಂದು ರೀತಿಯ ಪ್ರಾವಿಣ್ಯತೆ ಬಂದಿದೆ. ತಕ್ಕಮಟ್ಟಿನ ಸಂಬಳ ಸಿಗುತ್ತಿದೆ. ಮೈತುಂಬಾ ಜವಾಬ್ದಾರಿಗಳಿವೆ. ಕೆಲಸ ಬಿಡುವಂತಿಲ್ಲ. ನಿವೃತ್ತಿಯ ಬಗ್ಗೆ ವಿಚಾರ ಮಾಡುವುದು ದೂರದ ಮಾತು. ನಿವೃತ್ತಿಯ ಕನಸನ್ನು ಕಾಣುವುದೂ ಕೂಡ ಕಷ್ಟ. ಗಾಣದೆತ್ತಿನಂತೆ ಸಾಯುವ ತನಕ ಅಥವಾ  ವಯಸ್ಸು ಅರವತ್ತು ಆಗುವ ತನಕ, most importantly ಒಂದು ದೊಡ್ಡ ಮಟ್ಟದ ರೊಕ್ಕದ ಗಂಟು ಕೂಡುವ ತನಕ ಕೆಲಸ ಮಾಡಲೇಬೇಕು. ಆ ಕೆಲಸ soul crushing ಇದ್ದರೂ ಸರಿ. ಆತ್ಮಸಂತೋಷವನ್ನು ಕೊಂದಾದರೂ ರೊಕ್ಕ ಮಾಡಲೇಬೇಕು.

ಇನ್ನು ೦. ೦೧% ಜನ ಎರಡನೇ ವರ್ಗದವರು. ತುಂಬಾ ಅದೃಷ್ಟವಂತರು. ಅವರಿಗೆ perfect ಆಗಿ ಹೊಂದುವ ಕೆಲಸಕ್ಕೆ ಇವರು ಬರೋಬ್ಬರಿ ಬಂದುಬಿಟ್ಟಿರುತ್ತಾರೆ. ಆ ಕೆಲಸದಲ್ಲೇ ಕೈಲಾಸ ಕಂಡು ಸಂತೋಷ ಪಡುವವರು. ಅಂತವರಲ್ಲಿ ಕೆಲವರು ತುಂಬಾ ರೊಕ್ಕ ಕೂಡ ಸಂಪಾದಿಸುತ್ತಾರೆ. ರೊಕ್ಕ ಕಮ್ಮಿ ಗಳಿಸಿದರೂ ಆತ್ಮಸಂತೋಷದ ಕಾರಣ ಕೆಲಸದಲ್ಲಿ  ಮುಳುಗಿರುತ್ತಾರೆ. ಅವರು ಸತ್ತರೂ ಆ ಕೆಲಸ ಬಿಟ್ಟು ಬರುವುದಿಲ್ಲ. ಅವರಿಗೆ ಈ FIRE ಅಭಿಯಾನ ದೊಡ್ಡ ಮಾತಲ್ಲ. ಆತ್ಮಸಂತೋಷದ ಕೆಲಸ ಒಂದು ತರಹದ ನಿವೃತ್ತಿಯೇ. When you enjoy your work, your vocation becomes your vacation.

ಹಾಗಾದರೆ ಆರ್ಥಿಕ ಸ್ವಾತಂತ್ರ್ಯ ಗಳಿಸುವುದು ಹೇಗೆ? ರೊಕ್ಕ ಗಳಿಸಲೂ ರೊಕ್ಕ ಬೇಕು. ಹಾಗಾಗಿ ಮೊದಲು ಒಂದು ಕೆಲಸ ಮಾಡಲೇಬೇಕು. ಸಂಬಳ ಗಳಿಸಬೇಕು. ಗಳಿಸಿದ್ದರಲ್ಲಿ ಗರಿಷ್ಠ ಮೊತ್ತವನ್ನು ಉಳಿಸಬೇಕು. ಉಳಿಸಿದ್ದನ್ನು ಜತನದಿಂದ ಹೂಡಿಕೆ ಮಾಡಿ ಬೆಳೆಸಬೇಕು. ಹಾಗೆ ಹನಿಹನಿಯಾಗಿ ಬೆಳೆದಿದ್ದು ಒಂದು ಹಂತ ಮುಟ್ಟಿದಾಗ ಸಿಗುತ್ತದೆ ಆರ್ಥಿಕ ಸ್ವಾತಂತ್ರ್ಯ. FIRE ಅಭಿಯಾನಕ್ಕೆ ಪೂರಕ ಪರಿಕಲ್ಪನೆ minimalism. minimalism ಅಂದರೆ ಅನವಶ್ಯಕ ಖರ್ಚುಗಳನ್ನು ಕಮ್ಮಿ ಮಾಡುವುದು. ಇದು ಕೇವಲ ರೊಕ್ಕ ಉಳಿಸಲು ಮಾತ್ರವಲ್ಲ, ಜೀವನವನ್ನು ಸರಳ ಮಾಡಿಕೊಳ್ಳಲೂ ಸಹ minimalism ತುಂಬಾ ಸಹಾಯಕಾರಿ.

ಆರ್ಥಿಕ ಸ್ವಾತಂತ್ರ್ಯ ಬಂತು ಅಂತ ಹೇಗೆ ತಿಳಿದುಕೊಳ್ಳುವುದು? ಆರ್ಥಿಕ ಸ್ವಾತಂತ್ರ್ಯಕ್ಕೆ ಒಂದೇ ವ್ಯಾಖ್ಯಾನವಿಲ್ಲ. ಅದು ವೈಯಕ್ತಿಕ. ಆದರೆ ಒಂದು ಜನರಲ್ ವ್ಯಾಖ್ಯಾನ ಕೊಡಬಹುದು. ಅದೇನು ಅಂದರೆ...

೧) ಸಾಲ ಇರಬಾರದು. ಸಾಲ ಇದ್ದರೂ ತಿಂಗಳ ಕಂತನ್ನು ಕಟ್ಟುವಷ್ಟು ರೊಕ್ಕ ನಿಮ್ಮ ಹೂಡಿಕೆಗಳಿಂದ ಬರುತಿರಬೇಕು.

೨) ದೊಡ್ಡ ದೊಡ್ಡ ಖರ್ಚುಗಳಿಗೆ ಬೇರೆ ಬೇರೆ ಫಂಡ್ಸ್ ತೆಗೆದಿಟ್ಟಿರಬೇಕು. ಉದಾಹರಣೆಗೆ: ಮಕ್ಕಳ ಶಿಕ್ಷಣಕ್ಕೆ, ವಿವಾಹಗಳಿಗೆ, ಮತ್ತಿತರ ಖರ್ಚುಗಳಿಗೆ.

೩) ಮಾಸಿಕ / ವಾರ್ಷಿಕ ಖರ್ಚಿನಲ್ಲಿ ಜಾಸ್ತಿ ವ್ಯತ್ಯಾಸ ಬರಬಾರದು. ಖರ್ಚಿಗೆ ತಿಂಗಳಿಗೆ ಸರಾಸರಿ ೫೦,೦೦೦ ಬೇಕು ಅಂತಿಟ್ಟುಕೊಳ್ಳಿ. ಮುಂದಿನ ವರ್ಷ ತಿಂಗಳಿಗೆ ಒಮ್ಮೆಲೇ ೧,೦೦,೦೦೦ ಖರ್ಚು ಬರುವಂತಿರಬಾರದು. ಬರುವಂತಿದ್ದರೆ ಹೆಚ್ಚಿನ ಖರ್ಚಿಗೆ ಬೇರೆ ಒಂದು category ಯಲ್ಲಿ ಪ್ರತ್ಯೇಕ ಫಂಡ್ ಇರಬೇಕು. ವರ್ಷದಿಂದ ವರ್ಷಕ್ಕೆ ಖರ್ಚು ಹಣದುಬ್ಬರದ ಅನುಪಾತದಲ್ಲಿ ಬೆಳೆಯಬಹುದು ಅಷ್ಟೇ.

೪) ಆರೋಗ್ಯ ವಿಮೆ ಮತ್ತಿತರ ವಿಮೆ ಇರಬೇಕು. ವಿಮೆ ಇಲ್ಲ ಅಂದರೆ ಒಂದು ಸಣ್ಣ ಅನಾರೋಗ್ಯ ಹಣಕಾಸು ಪರಿಸ್ಥಿತಿಯನ್ನು ರಾಡಿ ಎಬ್ಬಿಸಿಬಿಡಬಹುದು.

ಇಷ್ಟು ಇದ್ದ ಮೇಲೆ... ನಿಮ್ಮ ಹತ್ತಿರ ವಾರ್ಷಿಕ ಖರ್ಚಿನ ೨೫ ಪಟ್ಟು ಮೊತ್ತದ ರೊಕ್ಕವಿದ್ದರೆ ನೀವು ಆರ್ಥಿಕವಾಗಿ ಸ್ವತಂತ್ರರು. ನಿಮ್ಮ ಮಾಸಿಕ ಖರ್ಚು ೫೦,೦೦೦ ಅಂದಿಟ್ಟುಕೊಳ್ಳಿ. ವಾರ್ಷಿಕ ಖರ್ಚು ೬,೦೦,೦೦೦ ಆಯಿತು. ೬,೦೦,೦೦೦ x ೨೫ = ೧,೫೦,೦೦,೦೦೦. ಒಂದು ಕೋಟಿ ಐವತ್ತು ಲಕ್ಷ. ಇದರಿಂದ ವರ್ಷವೂ ೪% ತೆಗೆದರೆ ನಿಮ್ಮ ವಾರ್ಷಿಕ ಖರ್ಚು ೬,೦೦,೦೦೦ ಬರುತ್ತದೆ. ಹಾಗಾಗಿ ಇದಕ್ಕೆ ೪% ನಿಯಮ ಎಂದು ಕೂಡ ಹೇಳುತ್ತಾರೆ. ಇದು FIRE ಅಭಿಯಾನದ ಬೆನ್ನುಮೂಳೆ.

ಯಾವತ್ತು ನಿಮ್ಮ ಕಡೆ ನಗದು ರೋಕ್ಡಾ ಒಂದೂವರೆ ಕೋಟಿ ಬಂತೋ ಅಂದು ನೀವು ಆರ್ಥಿಕವಾಗಿ ಸ್ವತಂತ್ರರು.

ನೀವು ಇನ್ನೂ conservative ಮತ್ತು ಕಮ್ಮಿ ರಿಸ್ಕ್ ತೆಗೆದುಕೊಳ್ಳಬೇಕು ಅಂದರೆ ವಾರ್ಷಿಕ ಖರ್ಚಿನ ೩೩ ಪಟ್ಟು ಇರುವ ಗಂಟಿನ ಗುರಿ ಇಟ್ಟುಕೊಳ್ಳಿ. ಅದು ಮತ್ತೂ ಸೇಫ್. ಅದಕ್ಕಾಗಿ ಬೇಕಾಗುವ ಗಂಟು ಸುಮಾರು ಎರಡು ಕೋಟಿ. ಅಷ್ಟೇ. ಇದು ೩% ನಿಯಮ.

ಕೇವಲ ಇಷ್ಟು ರೊಕ್ಕ ಮಾಡಿಟ್ಟುಕೊಂಡುಬಿಟ್ಟರೆ ಬೇಗನೆ ನಿವೃತ್ತಿ ತೆಗೆದುಕೊಂಡು ಕೂತುಬಿಡಬಹುದೇ? ರೊಕ್ಕ ಇದ್ದರಷ್ಟೇ ಸಾಲದು ಸ್ವಾಮೀ. ರೊಕ್ಕ ಬೆಳೆಯಬೇಕು ಕೂಡ. ಅರವತ್ತು ವರ್ಷಕ್ಕೆ ನಿವೃತ್ತರಾದಾಗಲೇ ಮತ್ತೂ ಇಪ್ಪತ್ತೈದು ಮೂವತ್ತು ವರ್ಷಗಳಿಗಾಗಿ ಪ್ಲಾನ್ ಮಾಡಬೇಕಾಗುತ್ತದೆ. ಮೂವತ್ತು ನಲವತ್ತು ವಯಸ್ಸಿಗೆಲ್ಲ ರಿಟೈರ್ ಆದರೆ ಕಮ್ಮಿ ಕಮ್ಮಿಯೆಂದರೂ ೪೦-೫೦ ವರ್ಷಕ್ಕಾಗಿ ಪ್ಲಾನ್ ಮಾಡಬೇಕಾಗುತ್ತದೆ. ಹಾಗಾಗಿ ಈ ರೊಕ್ಕ ಕಮ್ಮಿ ಕಮ್ಮಿಯೆಂದರೂ ೬-೮% ದರದಲ್ಲಿ ಬೆಳೆಯಬೇಕು. ಯಾಕೆ ಅಂದರೆ ಸುಮಾರು ೪% ಹಣವನ್ನು ವಾರ್ಷಿಕ ಹಣದುಬ್ಬರ (inflation) ತಿಂದುಹಾಕುತ್ತದೆ. ಮತ್ತೊಂದು ೪% ನಿಮ್ಮ ಖರ್ಚಿಗಾಗಿ ಬೇಕು. ಹಾಗಾಗಿ ಕನಿಷ್ಠ ೮% ದರದಲ್ಲಿ ನಿಮ್ಮ ಇಡುಗಂಟು ಬೆಳೆದರೆ ನಿಮ್ಮ ಖರ್ಚಿಗೂ ಸಾಕು ಮತ್ತು ಅಸಲು ಹಾಗೆ ಉಳಿಯುತ್ತದೆ. ಒಂದು ವರ್ಷ ಹೆಚ್ಚು ಮತ್ತೊಂದು ವರ್ಷ ಕಮ್ಮಿ ಬಂದರೂ ಓಕೆ. ನಿಮ್ಮ ವಾರ್ಷಿಕ ಖರ್ಚು ಮಾತ್ರ ಬದಲಾಗಬಾರದು.

FIRE ಅಭಿಯಾನ ಏಕೆ ಆರಂಭವಾಯಿತು? ಆತ್ಮಸಂತೋಷಕ್ಕಾಗಿ. ಸಂಬಳಕ್ಕಾಗಿ ಕೆಲಸ ಮಾಡಿದ್ದು ಸಾಕು. ಇನ್ನೊಂದಿಷ್ಟು ವರ್ಷ ಆತ್ಮಸಂತೋಷಕ್ಕಾಗಿ ಬದುಕೋಣ ಎನ್ನುವ ಆಸೆ.

ಎಷ್ಟೋ ಜನರಿಗೆ ನಿವೃತ್ತರಾಗುವ ಆಸೆ ಇರುತ್ತದೆ. ಆರ್ಥಿಕವಾಗಿಯೂ ಸ್ವತಂತ್ರರಾಗಿರುತ್ತಾರೆ. ಅದು ಅವರಿಗೆ ಗೊತ್ತಿರುವುದಿಲ್ಲ ಅಷ್ಟೇ. 'ಮುಂದೆ ರೊಕ್ಕ ಕಮ್ಮಿ ಬಿದ್ದೀತು,' ಎನ್ನುವ ಆತಂಕದಲ್ಲಿ ಕೆಲಸ ಮಾಡುತ್ತಲೇ ಇರುತ್ತಾರೆ. FIRE ಉಪಯೋಗಿಸುವ ೪% ನಿಯಮದ framework ಒಂದು ಫಾರ್ಮುಲಾ ಕೊಡುತ್ತದೆ. ಅವರವರ ಆರ್ಥಿಕ ಸ್ವಾತಂತ್ರ್ಯದ ಮಟ್ಟವನ್ನುಅರಿಯಲೊಂದು ಸಾಧನ.

ಸರಿಯಾಗಿ ಯೋಚಿಸಿ ಯೋಜನೆ ಮಾಡಿಕೊಂಡರೆ ೨೨ ವರ್ಷದಲ್ಲಿ ಕೆಲಸ ಶುರುಮಾಡಿ, ಒಳ್ಳೆ ಕೆಲಸ ಮಾಡಿ, ಒಳ್ಳೆ ಸಂಬಳ ಗಳಿಸಿ, ಗಳಿಸಿದ್ದರಲ್ಲಿ ಜಾಸ್ತಿ ಉಳಿಸಿ, ಉಳಿಸಿದ್ದನ್ನು ಕ್ರಮಬದ್ಧವಾಗಿ ಹೂಡಿಕೆ ಮಾಡಿ ಬೆಳೆಸಿ ಒಂದು ಗಂಟು ಮಾಡಿಟ್ಟುಕೊಂಡರೆ ೩೫-೪೦ ವರ್ಷಕ್ಕೆ ನಿವೃತ್ತರಾಗುವುದು ಸಾಧ್ಯ. ಹಾಗಂತ FIRE ಮಂದಿಯ ಅಭಿಮತ. ನಿವೃತ್ತಿಯೆಂದರೆ, ನೆನಪಿಡಿ, ಪೂರ್ತಿ ವಿಶ್ರಾಂತ ಜೀವನವಲ್ಲ. ಆತ್ಮಸಂತೋಷದ ಕೆಲಸ ಮಾಡಿಕೊಂಡಿರಬಹುದು. ಯಾರಿಗೆ ಗೊತ್ತು? ಅದರಲ್ಲೇ ದೊಡ್ಡ ಕಮಾಯಿ ಆಗಬಹುದು.

ಹೆಚ್ಚಿನ ಮಾಹಿತಿಗಾಗಿ ಒಂದಿಷ್ಟು ಲಿಂಕುಗಳು:

https://en.wikipedia.org/wiki/FIRE_movement

https://www.firecalc.com/

https://www.mrmoneymustache.com/

https://www.investopedia.com/terms/f/four-percent-rule.asp

https://www.theminimalists.com/minimalism/

Sunday, July 28, 2019

ಬಡ್ಡಿಮಕ್ಕಳ ದುನಿಯಾ

ಊರಿಗೆ ಒಂದು ದಾರಿಯಾದರೆ, ಪೋರನಿಗೊಂದು ದಾರಿ - ಹೀಗೆ ಒಂದು ಗಾದೆ ಮಾತಿದೆ. ವಿಶ್ವದ ಉಳಿದ ಎಲ್ಲ ದೇಶಗಳ ಆರ್ಥಿಕ ಸಮಸ್ಯೆಗಳೇ ಒಂದು ರೀತಿಯವು. ನಮ್ಮ ಅಮೆರಿಕಾದ ಆರ್ಥಿಕ ಸಮಸ್ಯೆಗಳೇ ಪೂರ್ತಿ ವಿಚಿತ್ರ ರೀತಿಯವು.

ಅಮೆರಿಕಾದ ಆರ್ಥಿಕ ತಜ್ಞರು ತಲೆಕೆಡಿಸಿಕೊಂಡು ಕೂತಿದ್ದಾರೆ. 'ಹಣದುಬ್ಬರ (inflation) ತುಂಬಾ ಕಮ್ಮಿಯಾಗಿಬಿಟ್ಟಿದೆ. ಕನಿಷ್ಠ ೨% ಹಣದುಬ್ಬರ ಇರಬೇಕೆಂದು ಆರ್ಥಿಕ ನೀತಿ ರೂಪಿಸಿದರೆ, ಹಣದುಬ್ಬರ ೧.೫% ಗೆ ಇಳಿದುಬಿಟ್ಟಿದೆ. ಹೀಗಾದ್ರೆ ಹೆಂಗೆ ಸಿವಾ!' ಅಂತ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

ಹಣದುಬ್ಬರ ಕಮ್ಮಿಯಾದರೆ ಒಳ್ಳೆಯದಲ್ಲವೇ? ಅಲ್ಲವಂತೆ. ಹಣದುಬ್ಬರ ಒಂದು ಮಟ್ಟಕ್ಕಿಂತ ಕಮ್ಮಿಯಾಗಿ ಹೋದರೆ ಆರ್ಥಿಕ ವಹಿವಾಟುಗಳು ಕಮ್ಮಿಯಾಗುತ್ತವೆ. ದೊಡ್ಡ ದೊಡ್ಡ ಟಿಕೆಟ್ ವಸ್ತುಗಳನ್ನು ಕೊಳ್ಳುವ ಇರಾದೆಯನ್ನು ಜನ ಮುಂದೂಡುತ್ತಾರೆ. ಅರೆ! ಇದು ವಿಚಿತ್ರವಾಗಿದೆಯೆಲ್ಲಾ!? ಅಂತ ಅಂದುಕೊಂಡರೆ ಇದೊಂದು ಅರ್ಥಶಾಸ್ತ್ರದ paradox. ಕಮ್ಮಿ ಹಣದುಬ್ಬರ ನಿತ್ಯಜೀವನಕ್ಕೆ ಬೇಕಾದ ವಸ್ತುಗಳನ್ನು ಕೊಳ್ಳಲು ಸಹಾಯಕ. ಆದರೆ ಕಮ್ಮಿ ಹಣದುಬ್ಬರ ಹಾಗೇ ಇದ್ದುಬಿಟ್ಟರೆ ಜನ ದೊಡ್ಡ ಟಿಕೆಟ್ ವಸ್ತುಗಳ ಖರೀದಿಯನ್ನು ಮುಂದೂಡುತ್ತಲೇ ಹೋಗುತ್ತಾರೆ. ಬೆಲೆ ಮುಂದೆ ಇನ್ನೂ ಕಮ್ಮಿಯಾದೀತು ಅನ್ನುವ ದು(ದೂ)ರಾಸೆ. ಹಾಗಾಗಿ ವಾಣಿಜ್ಯವನ್ನು ಪ್ರಚೋದಿಸಲು 'ಆರೋಗ್ಯಕರ' ಹಣದುಬ್ಬರ ಇರಬೇಕಂತೆ! ಹೊಡೀರಿ ಹಲಗಿ!

ಈಗ ಇಲ್ಲಿನ ಆರ್ಥಿಕತಜ್ಞರ ಮುಂದಿರುವ ಪ್ರಶ್ನೆ - ಹಣದುಬ್ಬರ ಏರಿಸುವುದು ಹೇಗೆ? ಉತ್ತರ ಸರಳ. ಮತ್ತೆ ಹೇಗೆ? ಮತ್ತೇ ಅದನ್ನೇ ಮಾಡಬೇಕು. ಬಡ್ಡಿ ದರ ಇಳಿಸಬೇಕು. ಸದ್ಯದ ಸೆಂಟ್ರಲ್ ಬ್ಯಾಂಕ್ ಬಡ್ಡಿ ದರ ೨.೫%. ನಂಬಿದರೆ ನಂಬಿ ಬಿಟ್ಟರೆ ಬಿಡಿ. ಇಲ್ಲಿನ ಬಡ್ಡಿ ದರ ಅಷ್ಟೇ. ಮನೆ ಸಾಲದ ದರ ೩-೪%. ವಾಹನ ಸಾಲದ ದರ ೪. ೭೫ - ೫. ೫%. ನೀವು ಇಟ್ಟ ಠೇವಣಿಗಳ ಮೇಲೆ ೨. ೫% ಬಡ್ಡಿ ಸಿಕ್ಕರೆ ದೊಡ್ಡ ಮಾತು. ಹೀಗೆ ಒಟ್ಟಿನಲ್ಲಿ ಬಡ್ಡಿಮಕ್ಕಳ ದುನಿಯಾ!

ಅಧ್ಯಕ್ಷ ಟ್ರಂಪ್ ಸಾಹೇಬರು ಮಾತ್ರ ಕೂಗಾಡುತ್ತಲೇ ಇರುತ್ತಾರೆ, 'ನಾನು ಮೊದಲಿಂದ ಹೇಳುತ್ತಲೇ ಇದ್ದೇನೆ. ಬಡ್ಡಿ ದರ ಕಮ್ಮಿ ಮಾಡಿ, ಕಮ್ಮಿ ಮಾಡಿ ಎಂದು. ಈ ಫೆಡರಲ್ ರಿಸರ್ವ್ ಛೇರ್ಮನ್ ಕೇಳುತ್ತಲೇ ಇಲ್ಲ. ಇಡೀ ಎಕಾನಮಿ ಎಕ್ಕುಟ್ಟಿ ಹೋದರೆ ಅವನೇ ಜವಾಬ್ದಾರಿ' ಎಂದು ಟ್ವೀಟ್ ಮಾಡುತ್ತ ಪಾಪದ ಚೇರ್ಮನ್ನನ ಚೇರ್ ಅಲ್ಲಾಡಿಸುತ್ತಲೇ ಇರುತ್ತಾರೆ. ಟ್ರಂಪ್ ಸಾಹೇಬರು ಹೇಳಿಕೇಳಿ ಶುದ್ಧ ವ್ಯಾಪಾರಿ. ಪೂರ್ವಾಶ್ರಮದಲ್ಲಿ ಸಾಕಷ್ಟು ರೊಕ್ಕ ಮಾಡಿಕೊಂಡಿದ್ದಾರೆ. ಜೊತೆಗೆ ಮೂರೋ ನಾಲ್ಕೋ ಬಾರಿಯೋ ದಿವಾಳಿ ಕೂಡ ಆಗಿ ಅಂಬೋ ಎಂದು ಕೈಯೆತ್ತಿ ನಮಸ್ಕಾರ ಮಾಡಿ ಹೂಡಿಕೆದಾರರಿಗೆ, ಸಾಲಕೊಟ್ಟವರಿಗೆ, ಉದ್ಯೋಗಿಗಳಿಗೆ ಲಾಂಗಲ್ಲೊಂದು ನಾಮ ಎಳೆದು ಹೋಗಿಯೂ ಇದ್ದಾರೆ ಕೂಡ.

ವ್ಯಾಪಾರಿಗಳಿಗೆ ಕಮ್ಮಿ ರೇಟಿನಲ್ಲಿ ಸಾಲ ಸಿಕ್ಕರೆ ಅದೇ ಸೀರುಂಡೆ. ಅದನ್ನೇ ಟ್ರಂಪ್ ಸಾಹೇಬರು ಡಿಮ್ಯಾಂಡ್ ಮಾಡುತ್ತಿರುವುದು. ಏನೇನೋ ಅರ್ಥಶಾಸ್ತ್ರ ಓದಿಕೊಂಡ ದೊಡ್ಡ ಮಂದಿಯೆಲ್ಲ ಬಡ್ಡಿ ದರ ಇನ್ನೂ ಕಮ್ಮಿ ಮಾಡಿದರೆ ಹೆಂಗ್ರಿ?? ಅಂತ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ  ಅಷ್ಟೇ. ಅವರಿಗೂ ಈಗ ಬೇಗ ದಾರಿ ಉಳಿದಿಲ್ಲ. ಮತ್ತೆ ಬಡ್ಡಿದರ ಕಮ್ಮಿಯಾಗಲಿದೆ. ಬಡ್ಡಿಮಕ್ಕಳಿಗೆ ಜೈ!

ಬಡ್ಡಿ ದರ ಕಮ್ಮಿಯಾಗುತ್ತ ಹೋಗಿ ಹೋಗಿ ಶೂನ್ಯಕ್ಕೆ ಹೋಗಿ, ಮತ್ತೂ ಕೆಳಗಿಳಿದು ನೆಗೆಟಿವ್ ಆಗಿ, ಅಂದರೆ ಸಾಲ ತೆಗೆದುಕೊಂಡರೆ ನೀವು ಬಡ್ಡಿ ಕೊಡಬೇಕಿಲ್ಲ. ನಿಮಗೇ ಅವರು ಬಡ್ಡಿ ಕೊಡುತ್ತಾರೆ, ಅಂತಹ ಪರಿಸ್ಥಿತಿ ಬಂದರೆ ಏನೂ ಆಶ್ಚರ್ಯವಿಲ್ಲ. ಜಪಾನ್ ಮತ್ತಿತರ ಕೆಲವು ದೇಶಗಳಲ್ಲಿ ಹಾಗಾಗಿದೆ.

ಬಡ್ಡಿಮಗ ಅಂದರೆ ಯಾರು? ಬಡ್ಡಿಗೆ  ರೊಕ್ಕ ಕೊಡುವವನೇ? ಅಥವಾ, ಇಟ್ಟ ಠೇವಣಿ ಮೇಲೆ ಬರುವ ಬಡ್ಡಿಯಲ್ಲಿ ಹಾಯಾಗಿ ಜೀವನ ಮಾಡುವವನೇ?

ಎರಡೂ ಅಲ್ಲ. ಬಡ್ಡಿಮಗ ಅಂದರೆ ಮತ್ತೇನೂ ಅಲ್ಲ. ಮತ್ತದೇ ವೇಶ್ಯಾಪುತ್ರ. ಸೂ..ಮಗ.

ಆದರೂ ಬಡ್ಡಿಮಗ ಎನ್ನುವ 'ಒಳ್ಳೆಯ' ಬೈಗುಳ ಕೊಂಚ ಸಹ್ಯವಾಗಲು ಕಾರಣ ಮತ್ತೆ ಬಡ್ಡಿಯ ಮಹಿಮೆಯೇ ಇರಬಹುದೇನೋ!?

ಹುಡುಕಿದಾಗ ಕೆಳಗಿನ ಮಾಹಿತಿ ಸಿಕ್ಕಿತು. ಕನ್ನಡ ಪಂಡಿತರು ಅಭಿಪ್ರಾಯ ತಿಳಿಸಬಹುದು.

'ಬಡ್ಡಿಮಗ' ಎಂಬ ಒಂದು ಬೈಗುಳದ ಮಾತಿದೆ. ಇದಕ್ಕೂ ಬಡ್ಡಿಗೂ ಏನೇನೂ ಸಂಬಂಧವಿಲ್ಲ. ಈ ಸಮಾಸಪದದ ಮೊದಲ ಭಾಗವಾದ 'ಬಡ್ಡಿ' ಎಂಬುದು 'ಬೊಡ್ಡಿ' ಎಂಬುದರ ವ್ಯತ್ಯಸ್ತ ರೂಪ. ಅದು ಪೊಡ್ಡಿ< ಪೋಟಿ ಎಂಬ ಶಬ್ದದಿಂದ ಬಂದಿದೆ; ಈ ಶಬ್ದಕ್ಕೆ ಸೂಳೆ ಎಂಬರ್ಥವಿದೆ. (ತಮಿಳಿನಲ್ಲಿ ಪೊಟ್ಟಿ, ಮಲಯಾಳಂನಲ್ಲಿ ಪಟ್ಟಿ, ತುಳುವಿನಲ್ಲಿ ಪಡಪೆ, ಪಡಪ್ಪೆ ರೂಪಗಳಿವೆ). ಈಗ ಬೈಗುಳದ ಅರ್ಥ ಸ್ಪಷ್ಟವಾಗುತ್ತದಲ್ಲವೇ!

ಆಧಾರ: http://pvnarayana42.blogspot.com/2013/11/1_9.html


Thursday, July 11, 2019

೫ ಟ್ರಿಲಿಯನ್ ಡಾಲರ್ ಎಕಾನಮಿ

ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಉಲ್ಲೇಖಿಸಿದ್ದು ಅಂತ ನೆನಪು. "ನಾವು ಸಾಮಾನ್ಯವಾಗಿ ಮಾಡುವ ತಪ್ಪೇನೆಂದರೆ, ಅಲ್ಪಾವಧಿಯ ಬದಲಾವಣೆಗಳನ್ನು ಜಾಸ್ತಿಯಾಗಿ ಅಂದಾಜಿಸುತ್ತೇವೆ ಮತ್ತು ದೀರ್ಘಾವಧಿಯ ಬದಲಾವಣೆಗಳನ್ನು ಕಮ್ಮಿಯಾಗಿ ಅಂದಾಜಿಸುತ್ತೇವೆ."

ಮುಂದಿನ ಐದು ವರ್ಷಗಳಲ್ಲಿ ಭಾರತದ ಎಕಾನಮಿ ೫ ಟ್ರಿಲಿಯನ್ ಡಾಲರ್ ಆಗುವ ಸಾಧ್ಯತೆಗಳಿಗಿಂತ ಮುಂದಿನ ಹತ್ತು ವರ್ಷಗಳಲ್ಲಿ ೧೦ ಟ್ರಿಲಿಯನ್ ಡಾಲರ್ ಎಕಾನಮಿ ಆಗುವ ಸಾಧ್ಯತೆಗಳೇ ಹೆಚ್ಚಿರಬಹುದು. ನೋಡಿದರೆ ಜಾಸ್ತಿ ವ್ಯತ್ಯಾಸವಿಲ್ಲ. ಐದು ವರ್ಷದಲ್ಲಿ ಡಬಲ್ ಆಗಿ, ಮುಂದಿನ ಐದು ವರ್ಷಗಳಲ್ಲಿ ಮತ್ತೆ ಡಬಲ್ ಆದರೆ ೧೦ ಟ್ರಿಲಿಯನ್ ಡಾಲರ್ ಎಕಾನಮಿ ಆದಂತೆಯೇ. ಆ ಸಾಧ್ಯತೆಗಳು ಹೆಚ್ಚು ಏಕೆಂದರೆ ಹೆಚ್ಚಿನ ಸಮಯ ಸಿಗುತ್ತದೆ. ಉದಾಹರಣೆ: ಶೇರ್ ಮಾರ್ಕೆಟ್ ಸರಾಸರಿ ೧೦% ಲಾಭ ಕೊಡುತ್ತದೆ ನಿಜ. ದೀರ್ಘಾವಧಿಯಲ್ಲಿ ನೋಡಿದಾಗ ಮಾತ್ರ. ಒಂದು ವರ್ಷ ಹೆಚ್ಚು, ಒಂದು ವರ್ಷ ಕಮ್ಮಿ, ಮತ್ತೊಂದು ವರ್ಷ ಬಂಪರ್ ಲಾಭ, ಮತ್ತೊಂದು ವರ್ಷ ದೊಡ್ಡ ಲಾಸ್. ಹೀಗೆಲ್ಲಾ ಆಗಿ ದೀರ್ಘಕಾಲದ (೨೦-೩೦ ವರ್ಷಗಳ) ಸರಾಸರಿ ೧೦%. ಅದನ್ನು ನಂಬಿಕೊಂಡು ಪ್ರತಿವರ್ಷ ಅಷ್ಟೇ ಬರುತ್ತದೆ ಅಂದುಕೊಳ್ಳಲಿಕ್ಕೆ ಸಾಧ್ಯವಿಲ್ಲ.

೧೯೬೦-೭೦ ಸಮಯದಲ್ಲಿ ಚೀನಾ ತನ್ನ ಆರ್ಥಿಕ ಪ್ರಗತಿಯ ಬಗ್ಗೆ ಕೊಚ್ಚಿಕೊಳ್ಳುತ್ತಿತ್ತಂತೆ. ತಮ್ಮದೇ ರೀತಿಯಲ್ಲಿ ಚೀನಾದ ಎಕಾನಮಿಯನ್ನು ಅಭ್ಯಸಿಸಿದ್ದ ಸುಬ್ರಮಣಿಯನ್ ಸ್ವಾಮಿ, ಚೀನಾದ GDP ಅಷ್ಟು ಜಾಸ್ತಿ ಇರಲಿಕ್ಕೆ ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಚೀನಾ ಕೊಟ್ಟ ಅಂಕಿಅಂಶಗಳನ್ನೇ ಇಟ್ಟುಕೊಂಡ IMF, ವಿಶ್ವಬ್ಯಾಂಕ್ ಇತ್ಯಾದಿ ಚೀನಾಕ್ಕೆ ಆರ್ಥಿಕ ನೆರವನ್ನು ನಿರಾಕರಿಸಿದವು. ಆವಾಗ ಚೀನಾ ಹೇಳಿತಂತೆ - ನಾವು GDP ತಪ್ಪಾಗಿ ಲೆಕ್ಕ ಹಾಕಿದ್ದೇವೆ. ಸುಬ್ರಮಣಿನ್ ಸ್ವಾಮಿ ಹಾಕಿದ GDP ಲೆಕ್ಕ ಸರಿಯಿದೆ. ಅದರ ಪ್ರಕಾರ ಆರ್ಥಿಕ ನೆರವು ನೀಡಿ!!