Wednesday, August 05, 2020

ವಿದೇಶದಲ್ಲಿ ಸ್ವದೇಶಿ ಉಗ್ರರ ಉದ್ದೇಶಿತ ಹತ್ಯೆಗಳು...ಡ್ರೋನ್ ಕಾರ್ಯಾಚರಣೆಗಳು

ಜನರಲ್ ಡೇವಿಡ್ ಪೆಟ್ರೆಯಸ್ - ಅಮೇರಿಕಾ ಕಂಡ ಒಬ್ಬ ಮಹಾ ಸೇನಾನಾಯಕ. ಕೈಮೀರಿ ಹೋಗುತ್ತಿದ್ದ ಅಫ್ಘಾನಿಸ್ತಾನ್ ಮತ್ತು ಇರಾಕ್ ಯುದ್ಧಗಳನ್ನು ನಿಯಂತ್ರಿಸಿ, ಪರಿಸ್ಥಿತಿ ಅಮೇರಿಕಾಗೆ ಅನುಕೂಲಕರವಾಗುವಂತೆ ಮಾಡುವಲ್ಲಿ ಅವರದ್ದು ದೊಡ್ಡ ಪಾತ್ರವಿತ್ತು. ಅಧ್ಯಕ್ಷ ಬುಷ್ ಸಾಹೇಬರು ಶುರು ಮಾಡಿ, ರಾಡಿ ಎಬ್ಬಿಸಿದ್ದ ಯುದ್ಧಗಳನ್ನು ಒಂದು ರೀತಿಯಲ್ಲಿ ಮುಗಿಸಿ, ೨೦೦೮ ರ ಆರ್ಥಿಕ ಸಂಕಷ್ಟದಿಂದ ದಿವಾಳಿಯ ತುದಿಯಲ್ಲಿದ್ದ ಅಮೇರಿಕಾವನ್ನು ದುರಸ್ತಿ ಮಾಡುತ್ತೇನೆ ಎಂದು ಹೇಳಿಕೊಂಡೇ ಅಧ್ಯಕ್ಷ ಸ್ಥಾನಕ್ಕೆ ಬಂದಿದ್ದರು ಪ್ರೆಸಿಡೆಂಟ್ ಒಬಾಮಾ. ಅವರು ಜನರಲ್ ಡೇವಿಡ್ ಪೆಟ್ರೆಯಸ್ ಅವರು ಸೇನೆಯಲ್ಲಿ ಮಾಡಿದ ಕೆಲಸದಿಂದ ಬಹಳ ಸಂತುಷ್ಟರಾಗಿದ್ದರು. ಒಳ್ಳೆ ಕೆಲಸಕ್ಕೆ ಬಹುಮಾನವೆಂಬಂತೆ ಅಮೇರಿಕಾದ ಬೇಹುಗಾರಿಕೆ ಸಂಸ್ಥೆಯಾದ ಸಿಐಎ (ಸೆಂಟ್ರಲ್ ಇಂಟೆಲಿಜೆನ್ಸ್ ಏಜನ್ಸಿ) ಡೈರೆಕ್ಟರ್ ಪದವಿಗೆ ಪೆಟ್ರೆಯಸ್ ಅವರನ್ನು ೨೦೧೧ ರಲ್ಲಿ ನೇಮಕ ಮಾಡಿದರು.

ಹೊಸ ಹುದ್ದೆಯನ್ನು ವಹಿಸಿಕೊಳ್ಳುವ ಮೊದಲು ಪೆಟ್ರೆಯಸ್ ಮಾಜಿ ಸಿಐಎ ಮುಖ್ಯಸ್ಥ ಮೈಕಲ್ ಹೈಡೆನ್ ಅವರನ್ನು ಭೇಟಿಯಾಗಲು ಬಯಸಿದರು. ಮೈಕಲ್ ಹೈಡೆನ್ ಕೂಡ ಸೇನಾಧಿಕಾರಿಯೇ.  ನೌಕಾದಳದಲ್ಲಿದ್ದರು. ನಂತರ ಹಲವಾರು ಉನ್ನತ ಹುದ್ದೆಗಳ ಬಳಿಕ ಜಾರ್ಜ್ ಬುಷ್ ಕಾಲದಲ್ಲಿ ಸಿಐಎ ಸಂಸ್ಥೆಯ ನಿರ್ದೇಶಕರಾಗಿದ್ದರು. ಒಬಾಮಾ ಸರ್ಕಾರ ಬಂದಾಗ ಸಂಪ್ರದಾಯದಂತೆ ಸರ್ಕಾರದ ಹಿರಿತಲೆಗಳೆಲ್ಲ ಬದಲಾಗಿದ್ದವು. ಮೈಕಲ್ ಹೈಡೆನ್ ಸಹ ತಮ್ಮ ಪದವಿ ಬಿಟ್ಟು ಹೋಗಿದ್ದರು. ಅಂತಹ ಮಾಜಿ ಸಿಐಎ ಮುಖ್ಯಸ್ಥನನ್ನು ಅಧಿಕಾರ ವಹಿಸಿಕೊಳ್ಳಲಿರುವ ಡೇವಿಡ್ ಪೆಟ್ರೆಯಸ್ ಭೇಟಿಯಾಗಲು ಉತ್ಸುಕರಾಗಿದ್ದರು. ಇಬ್ಬರೂ ಮೊದಲಿಂದಲೂ ಪರಿಚಿತರು ಮತ್ತು ಸ್ನೇಹಿತರು ಕೂಡ ಆಗಿದ್ದರು.

ಮೈಕಲ್ ಹೈಡೆನ್ ಅವರ ಮನೆಯಲ್ಲಿ ಬೆಳಗಿನ ಉಪಹಾರಕ್ಕೆಂದು ಇಬ್ಬರೂ ಸೇರಿದ್ದರು. ಅಲ್ಲಿಯವರೆಗೆ ಕೇವಲ ಸೈನ್ಯದಲ್ಲಿ ಮಾತ್ರ ಕೆಲಸ ಮಾಡಿದ್ದ ಡೇವಿಡ್ ಪೆಟ್ರೆಯಸ್ ಅವರಿಗೆ ಸಿಐಎ ಎಂಬ ಸಂಕೀರ್ಣ ಸಂಸ್ಥೆಯ ಒಳಸುಳಿಗಳ ಬಗೆಗಿನ ಸೂಕ್ಷ್ಮ ಮಾಹಿತಿಗಳನ್ನು ಹೈಡನ್ ನೀಡಿದರು. ಸಿಐಎ ಅಂದರೆ ಸೈನ್ಯವಲ್ಲ. ಸೈನ್ಯದಲ್ಲಾದರೆ ಸ್ಪಷ್ಟವಾದ ಶ್ರೇಣಿ ವ್ಯವಸ್ಥೆ ಇರುತ್ತದೆ. ಬೂಟು ಕುಟ್ಟಿ ಸಲ್ಯೂಟ್ ಹೊಡೆಯುತ್ತಾರೆ. ಮಾಡಿದ ಆಜ್ಞೆ ಪಾಲಿಸುತ್ತಾರೆ. ಆದರೆ ಸಿಐಎ ಅಂದರೆ ಅದೊಂದು ದೊಡ್ಡ ಕಾರ್ಪೊರೇಟ್ ಕಂಪನಿಯನ್ನು ಸಂಬಾಳಿಸಿದ ಹಾಗೆ. ಬೇರೆ ಬೇರೆ ತಲೆಗಳಿಗೆ ಬೇರೆ ಬೇರೆ ಎಣ್ಣೆ ತಿಕ್ಕಿ ಕೆಲಸ ತೆಗೆಯಬೇಕು. ಸಿಐಎ ವಿಶ್ಲೇಷಕರಲ್ಲಿ ಅನೇಕರು ದೊಡ್ಡ ಬುದ್ಧಿವಂತರು. ಹಾಗಾಗಿ ಕೊಂಚ ವಿಭಿನ್ನ ಸ್ವಭಾವದವರೂ ಸಹ. ತುಂಬಾ ಕಾಳಜಿಯಿಂದ ಸಂಬಾಳಿಸಿಕೊಂಡು ಹೋಗಿ ಎನ್ನುವ ಕಿವಿಮಾತುಗಳನ್ನು ಮಾಜಿ ಸಿಐಎ ಮುಖ್ಯಸ್ಥ ಹೈಡೆನ್ ಹೊಸ ಸಿಐಎ ಮುಖ್ಯಸ್ಥ ಪೆಟ್ರೆಯಸ್ ಅವರಿಗೆ ತಿಳಿಸಿದ್ದರು.

ಸಿಐಎ ಎಂಬ ಸಂಸ್ಥೆ ಮತ್ತೊಂದು ಸೈನ್ಯವಾಗುತ್ತಿದೆ. ಆದರೆ ಅದು ಸಿಐಎ ಕೆಲಸವಲ್ಲ. ಉದ್ದೇಶಿತ ಹತ್ಯೆಗಳು (targeted killings) ಮತ್ತು ರಹಸ್ಯ ಕಪ್ಪು ಕಾರ್ಯಾಚರಣೆಗಳು (black covert operations) ಸಿಐಎ ಸಂಸ್ಥೆಯ ಹೆಚ್ಚಿನ ವೇಳೆ ಮತ್ತು ಸಂಪನ್ಮೂಲಗಳನ್ನು ಖಾಲಿ ಮಾಡುತ್ತಿವೆ. ಎರಡನೇ ಮಹಾಯುದ್ಧದ ಸಮಯದಲ್ಲಾದರೂ ಸಿಐಎ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೇನೆಯ ತರಹ ವರ್ತಿಸಿತ್ತೋ ಇಲ್ಲವೋ ಗೊತ್ತಿಲ್ಲ. ಸಿಐಎ ಇದೇ ತರಹ ಉದ್ದೇಶಿತ ಹತ್ಯೆಗಳು ಮತ್ತು ಕಪ್ಪು ಕಾರ್ಯಾಚರಣೆಗಳಲ್ಲಿಯೇ ತೊಡಗಿಸಿಕೊಂಡರೆ ಮುಂದೊಂದು ದಿನ ಸಿಐಎ ತನ್ನ ಮೂಲಭೂತ ಧ್ಯೇಯವಾದ ಬೇಹುಗಾರಿಕೆಯನ್ನೇ ಮರೆತುಬಿಟ್ಟೀತು. ಎಚ್ಚರ! ಎಂದು ಎಚ್ಚರಿಸಿದ್ದರು ಹೈಡೆನ್.

ದೂರ ಕುಳಿತು ಹಾರಿಸಬಹುದಾದಂತಹ ಡ್ರೋನುಗಳು ಸಿಐಎ ತಂತ್ರಜ್ಞರ ಕೈಗೆ ಬಂದಿದ್ದೇ ಬಂದಿದ್ದು ಮಕ್ಕಳ ಕೈಯಲ್ಲಿ ಹೊಸ ಆಟಿಕೆ ಬಂದಂತಾಗಿತ್ತು. ದೂರದ ದೇಶಗಳಲ್ಲಿ ಎಲ್ಲೆಲ್ಲೋ ಓಡಾಡಿಕೊಂಡಿದ್ದ ಉಗ್ರರನ್ನು ಜಿಪಿಎಸ್ ಬಳಸಿ ಟ್ರ್ಯಾಕ್ ಮಾಡುವುದು, ಕಂಪ್ಯೂಟರ್ ಪರದೆ ಮೇಲೆ ಅವರನ್ನು ಅಟ್ಟಿಸಿಕೊಂಡು ಹೋಗುವುದು, ಬರೋಬ್ಬರಿ ನಿಶಾನೆಯಲ್ಲಿ ಬಂದಾಗ ಸಾವಿರಾರು ಮೈಲು ದೂರದಿಂದ ಬಟನ್ ಒತ್ತುವದು. ಡ್ರೋನಿನಿಂದ ಒಂದು hellfire ಮಿಸೈಲ್ ಚಿಮ್ಮುತ್ತದೆ. ಉಗ್ರ ಮತ್ತು ಸಹಚರರ ಕಾರವಾನಿಗೆ ಕಾರ್ವಾನನ್ನೇ ನಾಶಮಾಡಿಬಿಡುತ್ತದೆ. ಅದನ್ನು ನೋಡಿ ವಿಡಿಯೋ ಗೇಮ್ ಗೆದ್ದ ಸಂತಸದಲ್ಲಿ ಮಕ್ಕಳು ಚಪ್ಪಾಳೆ ತಟ್ಟಿದಂತೆ ಸಂಭ್ರಮಿಸುತ್ತಾರೆ ಗೇಮ್ ಬಾರಿಸಿದ್ದ ತಂತ್ರಜ್ಞರು. ಹೀಗೇ ಮುಂದುವರೆದರೆ ಸಿಐಎ ಎಂಬುದು ಕೊಲ್ಲುವ ಯಂತ್ರವಾಗಿಬಿಟ್ಟೀತು (killing machine) ಎಂದು ಎಚ್ಚರಿಸಿದ್ದರು ಮಾಜಿ ಮುಖ್ಯಸ್ಥ ಹೈಡೆನ್.

ಎಲ್ಲಾ ಕೇಳಿಸಿಕೊಂಡ ಪೆಟ್ರೆಯಸ್ ಧನ್ಯವಾದ ಅರ್ಪಿಸಿ ನಿರ್ಗಮಿಸಿದರು. ಹೊಸ ಹುದ್ದೆಯನ್ನು ಹೇಗೆ ಯಶಸ್ವಿಯಾಗಿ ನಿಭಾಯಿಸಬೇಕು? ಅಂತರಾಳದಲ್ಲಿ ಸಿಐಎ ಅಷ್ಟೊಂದು ಬದಲಾಗಿದೆಯೇ? ಮೂಲ ಉದ್ದೇಶವಾದ ಬೇಹುಗಾರಿಕೆ ಪಕ್ಕಕ್ಕೆ ಹೋಗಿ ಉದ್ದೇಶಿತ ಹತ್ಯೆಗಳು ಅವುಗಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆಯೇ? ಎನ್ನುವ ವಿಚಾರಗಳು ಅವರ ತಲೆಯಲ್ಲಿ.

ಅಂದು ಪೆಟ್ರೆಯಸ್ ಅವರಿಗೇ ಗೊತ್ತಿರಕ್ಕಿಲ್ಲ, ಕೆಲವೇ ದಿವಸಗಳಲ್ಲಿ ಅವರೊಂದು ಐತಿಹಾಸಿಕ ನಿರ್ಧಾರ ಕೈಗೊಳ್ಳಲಿದ್ದರು. ಅದನ್ನು ಅಧ್ಯಕ್ಷ ಒಬಾಮಾ ತುಂಬು ಹೃದಯದಿಂದ ಅನುಮೋದಿಸಲಿದ್ದರು. ಇಡೀ ಅಮೇರಿಕಾದ ಅಧಿಕಾರಶಾಹಿಗೇ ಅದೊಂದು ಅಭೂತಪೂರ್ವ ನಿರ್ಧಾರವಾಗಲಿತ್ತು. ಇಡೀ ದೇಶಕ್ಕೆ ಸಾಕಷ್ಟು ವಿವರಣೆ ಕೊಡುವ ಪ್ರಸಂಗ ಬರಬಹುದಿತ್ತು. ಎಲ್ಲ ಕಪ್ಪು ಕಾರ್ಯಾಚರಣೆಗಳ ಹಾಗೆ ಅದನ್ನು ಗೌಪ್ಯವಾಗಿ ಇಡಲು ಸಾಧ್ಯವಿರಲಿಲ್ಲ. ಇಷ್ಟೆಲ್ಲಾ ತಲೆಬಿಸಿ ಏಕೆಂದರೆ....ಮೊಟ್ಟ ಮೊದಲ ಬಾರಿಗೆ ಅಮೇರಿಕಾ ತನ್ನ ದೇಶದ ನಾಗರಿಕನೊಬ್ಬನನ್ನು ಉದ್ದೇಶಿತ ಹತ್ಯೆಯ ಮೂಲಕ ಕೊಲ್ಲಲಿತ್ತು. ಸ್ವಂತ ದೇಶದ ನಾಗರಿಕನಾದರೂ ಅವನನ್ನು ಕೊಲ್ಲಲೇಬೇಕಾಗಿತ್ತು. ಏಕೆಂದರೆ ಅವನೊಬ್ಬ ಅಲ್-ಕೈದಾ ಉಗ್ರನಾಗಿದ್ದ. ತುಂಬಾ ಖತರ್ನಾಕ್ ಉಗ್ರನಾಗಿದ್ದ.

ಶ್ವೇತಭವನದ ನೆಲಮಾಳಿಗೆಯಲ್ಲಿ ಕಚೇರಿ ಹೊಂದಿದ್ದ counter terrorism ಮುಖ್ಯಸ್ಥ ಜಾನ್ ಬ್ರೆನ್ನನ್ ಹತ್ಯಾಪಟ್ಟಿಯನ್ನು (kill list) ಸಂಬಾಳಿಸುತ್ತಿದ್ದರು. ಯಾರನ್ನು ಆ ಪಟ್ಟಿಗೆ ಸೇರಿಸಬೇಕು, ಯಾರನ್ನು ತೆಗೆಯಬೇಕು, ಯಾರನ್ನು ಪಟ್ಟಿಯಲ್ಲಿ ಮೇಲೆ ಕೆಳಗೆ ಮಾಡಬೇಕು ಅನ್ನುವ ಮಾಹಿತಿಯನ್ನು ಬರೋಬ್ಬರಿ ಸಂಗ್ರಹಿಸಿಟ್ಟುಕೊಳ್ಳುವುದೇ ಅವರ ಕೆಲಸ. ಮುಂದೆ ಅವರೂ ಕೂಡ ಸಿಐಎ ಮುಖ್ಯಸ್ಥರಾದರು. ಅದು ಬೇರೆ ಮಾತು ಬಿಡಿ.

ಡೇವಿಡ್ ಪೆಟ್ರೆಯಸ್ ಸಿಐಎ ಮುಖ್ಯಸ್ಥರಾಗಿ ಬರುವ ಹೊತ್ತಿಗೆ ಹತ್ಯಾಪಟ್ಟಿಯ ಮೊದಲನೇ ಸ್ಥಾನದಲ್ಲಿದ್ದವನು ಉದ್ದವಾಗಿ ಗಡ್ಡ ಬಿಟ್ಟುಕೊಂಡಿದ್ದ ಒಬ್ಬ ಇಸ್ಲಾಮಿಕ್ ಪ್ರವಚನಕಾರ. ಅಷ್ಟೊತ್ತಿಗಾಗಲೇ  ಒಸಾಮಾ ಬಿನ್ ಲಾಡೆನ್ನಿಗೆ ಒಂದು ಗತಿ ಕಾಣಿಸಿಯಾಗಿತ್ತು. ಒಸಾಮಾ ಬಿನ್ ಲಾಡೆನ್ ಕಾರ್ಯಾಚರಣೆಯ ನಂತರ ಪಾಕಿಸ್ತಾನದಲ್ಲಿ ಅಲ್ಲಲ್ಲಿ ಕಂಡ ಅಲ್-ಖೈದಾ ಉಗ್ರರನ್ನು ಡ್ರೋನ್ ಮೂಲಕ ಸಂಹಾರ ಮಾಡಿಯಾಗಿತ್ತು. ಒಂದು ಅರ್ಥದಲ್ಲಿ ಪಾಕಿಸ್ತಾನವನ್ನು ಸ್ವಚ್ಛ ಮಾಡಿಯಾಗಿತ್ತು. ಒಂದು ಅರ್ಥದಲ್ಲಿ ಅದು 'ಸ್ವಚ್ಛ ಪಾಕಿಸ್ತಾನ' ಅಭಿಯಾನ, ಅಮೇರಿಕಾದ ದೃಷ್ಟಿಯಲ್ಲಿ.

ಅಮೇರಿಕಾದ ಗಮನ ನಂತರ ತಿರುಗಿದ್ದು ಅರೇಬಿಯನ್ ದ್ವೀಪಕಲ್ಪದಲ್ಲಿರುವ (Arabian Peninsula) ಯೆಮೆನ್ ದೇಶದತ್ತ. ಮೊದಲೇ ಅರಾಜಕತೆ ಮತ್ತು ಅಂತರ್ಯುದ್ಧದಲ್ಲಿ ಮುಳುಗಿಹೋಗಿರುವ ದೇಶ ಯೆಮೆನ್. ಉಗ್ರರ ಬೀಡು. ಅಂತಹ ದೇಶದಲ್ಲಿದ್ದ ಅಮೇರಿಕಾದ ಹತ್ಯಾಪಟ್ಟಿಯ ಅಗ್ರಸ್ಥಾನ ಅಲಂಕರಿಸಿದ್ದ ಉಗ್ರ, ಪ್ರವಚನಕಾರ - ಅನ್ವರ್ ಅಲ್-ಅವಲಾಕಿ. ಅವನಿಗೆ ಒಂದು ಬರೋಬ್ಬರಿ ಮುಹೂರ್ತವಿಡಬೇಕಾಗಿತ್ತು.

ಈ ಅನ್ವರ್ ಅಲ್-ಅವಲಾಕಿಯದು ವಿಚಿತ್ರ ಪಯಣ. ಅಮೇರಿಕಾದಲ್ಲೇ ಹುಟ್ಟಿದ್ದ ನಾಗರಿಕ ಇವನು. ಬೇರೆ ದೇಶದಲ್ಲಿ ಹುಟ್ಟಿ, ನಂತರ ವಲಸೆ ಬಂದು, ಎಷ್ಟೋ ವರ್ಷಗಳ ನಂತರ ಅಮೇರಿಕಾದ ಪೌರತ್ವ ಪಡೆದವರಲ್ಲಿ ಕೆಲವರು ಉಗ್ರರಾಗಿರುವುದು ಉಂಟು. ಆದರೆ ಅಮೇರಿಕಾದಲ್ಲೇ ಹುಟ್ಟಿ, ಇಲ್ಲೇ ಬೆಳೆದು ದೊಡ್ಡವನಾದ ಮನುಷ್ಯನೊಬ್ಬ ಉಗ್ರನಾಗುತ್ತಾನೆ ಮತ್ತು ದೂರದ ಯೆಮೆನ್ ದೇಶಕ್ಕೆ ಹೋಗಿ ದಾಂಗುಡಿಯಿಟ್ಟು ಹುಟ್ಟಿದ ನಾಡಿಗೇ ಕಂಟಕವಾಗಿದ್ದವರಲ್ಲಿ ಇವನೇ ಮೊದಲನೆಯವನು ಇರಬೇಕು.

ಅನ್ವರ್ ಅಲ್-ಅವಲಾಕಿ ೧೯೭೧ ರಲ್ಲಿ ಅಮೇರಿಕಾದ ನ್ಯೂ ಮೆಕ್ಸಿಯೋ ರಾಜ್ಯದಲ್ಲಿ ಜನಿಸಿದ. ಅವನ ತಂದೆ ನಾಸೀರ್ ಅಲ್-ಅವಲಾಕಿ ನ್ಯೂ ಮೆಕ್ಸಿಕೋ ವಿಶ್ವವಿದ್ಯಾಲಯದಲ್ಲಿ ಕೃಷಿ ಅರ್ಥಶಾಸ್ತ್ರವನ್ನು ಓದಿಕೊಂಡಿದ್ದ. ಓದು ಮುಗಿಸಿದ ತಂದೆ ತನ್ನ ದೇಶವಾದ ಯೆಮನ್ ದೇಶಕ್ಕೆ ಹಿಂತಿರುಗಿದ. ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕೆಲಸ ಮಾಡಿದ. ಯೆಮೆನ್ ದೇಶದ ಅಧ್ಯಕ್ಷ ಸಾಲೇಹ್ ಅವರ ಅವಧಿಯಲ್ಲಿ ಕೃಷಿ ಮಂತ್ರಿ ಕೂಡ ಆಗಿದ್ದ.

ಅಮೇರಿಕಾದಲ್ಲಿ ಹುಟ್ಟಿದ್ದರಿಂದ ಅಮೇರಿಕನ್ ಪೌರತ್ವ ಸಹಜವಾಗಿ ಅನ್ವರ್ ಅಲ್-ಅವಲಾಕಿಗೆ ದೊರಕಿತ್ತು. ೧೯೯೦ ರ ಸಮಯದಲ್ಲಿ ಅನ್ವರ್  ಅಲ್-ಅವಲಾಕಿ ಮಾತೃಭೂಮಿ ಅಮೇರಿಕಾಗೆ ವಾಪಸ್ ಬಂದ. ಕೊಲೊರಾಡೊ ವಿಶ್ವವಿದ್ಯಾಲಯದಲ್ಲಿ ಪದವಿಗೆ ಸೇರಿಕೊಂಡ. ಅಲ್ಲಿನ ಮುಸ್ಲಿಂ ಸಮುದಾಯದ ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾದ. ಆದರೆ ಅದು ಬೇಡವೆಂದು ಬಿಟ್ಟುಬಿಟ್ಟ. ಅವನಿಗೆ ಅವರ ಕಟ್ಟಲೆಗಳು ಅಂದು ತುಂಬಾ ಕಟ್ಟರ್ ಎನಿಸಿದ್ದವು. ಒಂದು ಹೆಂಡವಿಲ್ಲ, ಹುಡುಗಿಯಿಲ್ಲ...ಹೀಗೆ ಮಜಾ ಇಲ್ಲ ಅಂದ ಮೇಲೆ ಯಾವನಿಗೆ ಬೇಕ್ರೀ ಈ ಮುಸ್ಲಿಂ ವಿದ್ಯಾರ್ಥಿವೃಂದದ ನಾಯಕತ್ವ ಎಂದು ಅದನ್ನು ತಿರಸ್ಕರಿಸಿದ್ದ. ಇಂತಹ so called ಆಧುನಿಕ ಮನಸ್ಥಿತಿಯ ಮುಸ್ಲಿಂ ಯುವಕ ಮುಂದೊಂದು ದಿನ ಕಟ್ಟರ್ ಉಗ್ರನಾಗುತ್ತಾನೆ ಮತ್ತು ಹತ್ಯಾಪಟ್ಟಿಯ ಅಗ್ರಸ್ಥಾನ ಅಲಂಕರಿಸುತ್ತಾನೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ.

ಡಿಗ್ರಿ ಮುಗಿಯುವ ಹೊತ್ತಿಗೆ ಬದಲಾಗಿದ್ದ ಅವಲಾಕಿ. ಡಿಗ್ರಿ ಮುಗಿಸಿದ ಬಳಿಕ ಸರಿಯಾದ ನೌಕರಿ ಹಿಡಿಯುವ ಬದಲು ಕೊಲೊರಾಡೊ ರಾಜ್ಯದ ಫೋರ್ಟ್ ಕಾಲಿನ್ಸ್ ನಗರದ ಮಸೀದಿಯಲ್ಲಿ ಪ್ರವಚನಕಾರನಾಗಿ ಕೆಲಸ ಶುರು ಮಾಡಿದ. ಯೆಮೆನ್ ದೇಶದಲ್ಲಿದ್ದ ತಂದೆ ಉರಿದುಕೊಂಡ. ಸರಿಯಾದ ನೌಕರಿ ಮಾಡು ಎಂದು ಉಪದೇಶ ಮಾಡಿದ. ಮಗ ಕೇಳಲಿಲ್ಲ. ಪ್ರವಚನಕಾರನಾಗಿ ತಕ್ಕ ಮಟ್ಟಿನ ಅನುಭವ ಪಡೆದುಕೊಂಡ ಅನ್ವರ್ ಅಲ್-ಅವಲಾಕಿಗೆ ಪ್ರಮೋಷನ್ ದೊರೆಯಿತು. ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯೇಗೋ ನಗರಕ್ಕೆ ಹೊರಟುಬಿಟ್ಟ. ಅಲ್ಲಿನ ಮಸೀದಿಯೊಂದರಲ್ಲಿ ಇಮಾಮ್ ಎಂದು ನೇಮಕಗೊಂಡಿದ್ದ.

ನಿಧಾನವಾಗಿ ಆತನ ವಿಚಾರಗಳು ಕಟ್ಟರ್ ಇಸ್ಲಾಮಿನತ್ತ ತಿರುಗಲಾರಂಭಿಸಿದ್ದವು. ಇಸ್ಲಾಂ ಹೇಳುವಂತೆ ಎಲ್ಲರೂ ಪರಿಶುದ್ಧವಾದ ಜೀವನವನ್ನು ನಡೆಸಬೇಕು ಎಂದು ಭಯಂಕರವಾಗಿ ಉಪದೇಶ ಕುಟ್ಟುತ್ತಿದ್ದ. ಅವನ ಖುದ್ದು ಜೀವನ ನೋಡಿದರೆ ಮಾತ್ರ...ವೇದಾಂತ ಹೇಳಲು ಆದರೆ ತಿನ್ನುವುದು ಮಾತ್ರ ಬದನೇಕಾಯಿ ಎನ್ನುವಂತಾಗಿತ್ತು. ನಾಲ್ಕಾರು ಸಲ ಪೊಲೀಸರು ಎತ್ತಾಕಿಕೊಂಡು ಹೋಗಿದ್ದರು. ಏಕೆಂದರೆ ಅಂತಹ ಪವಿತ್ರ ಇಮಾಮ್ ಸಾಹೇಬರು ರಸ್ತೆ ಮೇಲೆ ಬೀದಿ ವೇಶ್ಯೆಯರೊಂದಿಗೆ ಚೌಕಾಸಿ ಮಾಡುತ್ತಾ ಕೂತುಬಿಟ್ಟಿದ್ದರು. ಪೊಲೀಸರು ರೂಟೀನಾಗಿ ದಂಡ ಹಾಕಿ ಎಚ್ಚರಿಕೆ ಕೊಟ್ಟು ಕಳಿಸಿದ್ದರು.

ಆದರೆ ೧೯೯೯ ರಲ್ಲಿ ಕೇಂದ್ರ ತನಿಖಾ ಸಂಸ್ಥೆ FBI ಅನ್ವರ್ ಅಲ್-ಅವಲಾಕಿಯ ಮೇಲೆ ಒಂದು ನಜರ್ ಮಡಗಿತು. ಈ ಇಮಾಮ್ ಯಾಕೋ ಖತರ್ನಾಕ್ ಆಗುತ್ತಿದ್ದಾನೆ ಮತ್ತು ಉಗ್ರರ ಸಂಪರ್ಕಕ್ಕೆ ಬರುತ್ತಿದ್ದಾನೆ ಎನ್ನುವ ಸುಳಿವು ಹತ್ತಿತ್ತು. ಏಕೆಂದರೆ ೯/೧೧ ರ ದಾಳಿಯಲ್ಲಿ ಪಾಲ್ಗೊಂಡ್ದಿದ್ದ ಇಬ್ಬರು ಉಗ್ರರಾದ ಖಾಲಿದ್ ಅಲ್-ಮಿಧಾರ್ ಮತ್ತು ನವಾಫ್ ಅಲ್ - ಹಜ್ಮಿ ಈ ಇಮಾಮನ ಮಸೀದಿಗೇ ಪ್ರಾರ್ಥನೆಗೆ ಬರುತ್ತಿದ್ದರು. ೯/೧೧ ರ ಉಗ್ರರಿಗೇ ಪ್ರವಚನ ಮಾಡಿದ್ದ ಕಿಲಾಡಿ ಈತ. ಅವನಿಗೆ ಅಂದು ಅದು ಗೊತ್ತಿರಲಿಕ್ಕಿಲ್ಲ ಬಿಡಿ.

FBI ತನಿಖೆ ಮಾಡಿದರೂ ಇವನ ಮೇಲೆ ಕ್ರಮ ಕೈಗೊಳ್ಳಬೇಕಾಗುವಂತಹ ಯಾವುದೇ ಪುರಾವೆ ಸಿಗಲಿಲ್ಲ. ೯/೧೧ ರ ದಾಳಿಯಾಗುವ ಹೊತ್ತಿಗೆ ಈತ ಅಮೇರಿಕಾದ ಪೂರ್ವತೀರಕ್ಕೆ ಹೋಗಿದ್ದ. ಉತ್ತರ ವರ್ಜೀನಿಯಾ ಭಾಗದ ಮಸೀದಿಯೊಂದರಲ್ಲಿ ಇಮಾಮ್ ಆಗಿ ಕೆಲಸಮಾಡಿಕೊಂಡಿದ್ದ.

ಅಷ್ಟೊತ್ತಿಗೆ ಪ್ರವಚನದ ಕಲೆ ಸಿದ್ಧಿಸಿತ್ತು. ಸ್ವಾರಸ್ಯಕರವಾಗಿ ವಿನೋದಭರಿತವಾಗಿ ಪ್ರವಚನ ಮಾಡುತ್ತಿದ್ದ. ಪ್ರಸಿದ್ಧನೂ ಆದ. ೯/೧೧ ರ ನಂತರ ಅಮೇರಿಕಾದಲ್ಲಿ ಇಸ್ಲಾಮ್ ಬಗ್ಗೆ ಒಂದು ತರಹದ ಭಯಮಿಶ್ರಿತ ಕುತೂಹಲ. ಇಸ್ಲಾಮ್ ಧರ್ಮವನ್ನು ಸ್ವಾರಸ್ಯಕರವಾಗಿ ವಿಶ್ಲೇಷಣೆ ಮಾಡಬಲ್ಲ ಜನರಿಗೆ ಸಾಕಷ್ಟು ಬೇಡಿಕೆ. ಇವನಿಗೂ ಬೇಡಿಕೆ ಬಂತು. ಆಗಾಗ ದೊಡ್ಡ ದೊಡ್ಡ ಪತ್ರಿಕೆಗಳ ವರದಿಗಾರು, ಟೀವಿ ಸುದ್ದಿಗಾರರು ಇವನಿಗೆ ಫೋನ್ ಮಾಡಿ ಬೈಟ್ಸ್ ಕೇಳುತ್ತಿದ್ದರು.

ನಾವು ಅಮೇರಿಕಾಗೆ ಬಂದಿದ್ದು 'ಬೆಳೆಸಲಿಕ್ಕೆ ಹೊರತೂ ಬೀಳಿಸಲಿಕ್ಕಲ್ಲ' ಎಂದು ದೊಡ್ಡದಾಗಿ ಪುಂಗಿದ. ವಿಶ್ವದ ಒಂದು ಬಿಲಿಯನ್ ಮುಸ್ಲಿಮರ ಮತ್ತು ಅಮೇರಿಕನ್ನರ ನಡುವೆ ಸೇತುವೆಯಾಗೋಣ ಎಂದ.

೯/೧೧ ರ ನಂತರ ಅಮೇರಿಕಾದ ಅಧಿಕಾರಶಾಹಿ ಸಂಶಯ ಬಂದ ಎಲ್ಲ ಸಂಘ ಸಂಸ್ಥೆಗಳ ಮೇಲೆ ಮುರ್ಕೊಂಡು ಬಿತ್ತು. ಸಮಗ್ರವಾಗಿ ತನಿಖೆ ಮಾಡಲು ಹೊರಟಿತು. ಹಾಗೆ ಮಾಡಿದ್ದು ಇಲಿಗಳ ಬಿಲಗಳ ಬುಡದಲ್ಲಿ ಮೆಣಸಿನ ಹೊಗೆ ಹಾಕಿದಂತಾಯಿತು. ಆ ಘಾಟಿಗೆ ಇಲಿಗಳೂ, ಹೆಗ್ಗಣಗಳೂ ಎಲ್ಲ ಪುತಪುತನೆ ಹೊರಬೀಳತೊಡಗಿದವು.

ತನ್ನ ಸಂಸ್ಥೆಗಳ ಬುಡಕ್ಕೆ ಬಂದಾಗ ಅನ್ವರ್ ಅಲ್-ಅವಲಾಕಿ ಕೂಡ ಕ್ರುದ್ಧನಾದ. ಮಾಡುತ್ತಿದ್ದ ಪ್ರವಚನಗಳ ಧಾಟಿ ಮತ್ತು ವಿಷಯ ಬದಲಾಯಿತು. ಸರ್ಕಾರದ ವಿರುದ್ಧ ಕೂಗಾಡಲು ಆರಂಭಿಸಿದ. ಅಮೇರಿಕಾ ಮುಸ್ಲಿಮರ ವಿರುದ್ಧ ಯುದ್ಧಕ್ಕೆ ನಿಂತಿದೆ ಎಂದುಬಿಟ್ಟ. ಅದು ಅವನ ಹತಾಶೆಯ ಉತ್ತುಂಗವಾಗಿತ್ತು ಎಂದು ಕಾಣುತ್ತದೆ.

ಅಮೇರಿಕಾದ ಸಹವಾಸ ಸಾಕಾಯಿತು ಎಂದೆನಿಸಿರಬೇಕು. ಸೀದಾ ಲಂಡನ್ನಿಗೆ ಹಾರಿಬಿಟ್ಟ. ಅಲ್ಲಿನ ಮಸೀದಿಯೊಂದರಲ್ಲಿ ಶುರುಮಾಡಿದ. ಮತ್ತದನ್ನೇ - ಬೆಂಕಿಯುಗುಳುವ ಪ್ರವಚನಗಳನ್ನು. ಲಂಡನ್ನಿನ ಪಡ್ಡೆ ಪೊರ್ಕಿಗಳೆಲ್ಲ ಇವನ ಭಾಷಣಗಳಿಂದ ಸಿಕ್ಕಾಪಟ್ಟೆ ಪ್ರಭಾವಿತರಾದರು. ಇವನ ಭಾಷಣಗಳ ಸೀಡಿ ಡಿಸ್ಕುಗಳ ಕಟ್ಟು ಬಿಸಿದೋಸೆಯಂತೆ ಮಾರಾಟವಾಯಿತು. ಆದರೂ ಇವನ ಊಟ ಬಟ್ಟೆಗೆ ಮಾತ್ರ ರೊಕ್ಕ ಕಮ್ಮಿಯೇ ಆಯಿತು.

ರೊಕ್ಕ ಕಮ್ಮಿಯಾಯಿತು, ೯/೧೧ ರ ನಂತರ ಎಲ್ಲ ದೇಶಗಳೂ ಕಟ್ಟರ್ ಇಸ್ಲಾಮಿಸ್ಟುಗಳನ್ನು ಟೈಟ್ ಮಾಡುತ್ತಿದ್ದರಿಂದ ಎಲ್ಲ ಕಡೆ ಬಹಳ ಹೀಟ್. ಹಾಗಾಗಿ ಹಳೆ ಗಂಡನ ಪಾದವೇ ಸರಿ ಎನ್ನುವ ಮಾದರಿಯಲ್ಲಿ ಮತ್ತೆ ಯೆಮೆನ್ ದೇಶಕ್ಕೇ ವಾಪಸ್ ಬಂದ. ಬಂದವನೇ ಒಂದು ಕಂಪ್ಯೂಟರ್ ತೆಗೆದುಕೊಂಡ. ಇಂಟರ್ನೆಟ್ ಸಂಪರ್ಕ ಹಾಕಿಸಿದ. ಕಂಪ್ಯೂಟರ್ ಮುಂದೆ ಕುಳಿತವ ಇಂಟರ್ನೆಟ್ ಮೇಲೆ ಸಿಗುವ ಅಸಂಖ್ಯಾತ ಚಾಟ್ ರೂಮುಗಳಲ್ಲಿ ಮತ್ತು ಯೂಟ್ಯೂಬ್ ಮೇಲೆ ವರ್ಚುಯಲ್ ಪ್ರವಚನ ಶುರುಮಾಡಿಬಿಟ್ಟ.

ಅನ್ವರ್ ಅಲ್-ಅವಲಾಕಿಯ ಪ್ರವಚನಗಳು ಇಂಗ್ಲಿಷ್ ಭಾಷೆಯಲ್ಲಿ ಇರುತ್ತಿದ್ದವು. ಬೇರೆ ಯಾವ ಭಾಷೆ ಮೇಲೂ ಅವನಿಗೆ ಪ್ರಭುತ್ವ ಇರಲಿಲ್ಲ. ಈ ಕಾರಣದಿಂದ, ಅವೆಷ್ಟೇ ಖಡಕ್ ಆಗಿದ್ದರೂ, ಬಹಳ ಜನರನ್ನು ತಲುಪಲಿಲ್ಲ. ಆದರೆ ಯಾರನ್ನು ತಲುಪಿದವೋ ಅವರಲ್ಲಿ ಕೆಲವರು ಸಿಕ್ಕಾಪಟ್ಟೆ ಡೇಂಜರ್ ಉಗ್ರರಾಗಿಬಿಟ್ಟರು. ಚಡ್ಡಿ ಬಾಂಬರ್ (underwear bomber) ಎಂದೇ ಖ್ಯಾತನಾದ ನೈಜೀರಿಯಾದ ಉಮರ್ ಫಾರೂಕ್ ಅಬ್ದುಲ್ಮುತಲ್ಲಬ್ ಕೂಡ ಅಂತವರಲ್ಲಿ ಒಬ್ಬ.

ಈ ಪುಣ್ಯಾತ್ಮ ಚಡ್ಡಿಯಲ್ಲಿ ಬಾಂಬ್ ಅಡಗಿಸಿಟ್ಟುಕೊಂಡು ೨೦೦೯ ಕ್ರಿಸ್ಮಸ್ ದಿನದಂದು ನೈಜೀರಿಯಾದಿಂದ ಅಮೇರಿಕಾದ ಡೆಟ್ರಾಯಿಟ್ ನಗರಕ್ಕೆ ಬರಲಿದ್ದ ವಿಮಾನ ಹತ್ತಿಬಿಟ್ಟ. ಅದು ಅದೃಷ್ಟವಶಾತ್ ವಿಫಲವಾಯಿತು. ಅವನ ಚಡ್ಡಿಯಲ್ಲಿ ಸಣ್ಣ ಸ್ಪೋಟವಾಯಿತೇ ವಿನಃ ಇಡೀ ವಿಮಾನವೇ ಢಮ್ ಎಂದು ಎಲ್ಲರೂ ಆಕಾಶದಲ್ಲೇ ಲೀನರಾಗಿ ದೊಡ್ಡ ಅನಾಹುತವಾಗಲಿಲ್ಲ. ಅಷ್ಟರಮಟ್ಟಿಗೆ ದೇವರು ದಯೆತೋರಿದ್ದ.

ಈ ಅನಾಹುತಕ್ಕೆ ಕೈಹಾಕುವ ಕೆಲವು ದಿನಗಳ ಮೊದಲು ಇದೇ ಚಡ್ಡಿ ಬಾಂಬರ್ ಪ್ರವಚನಕಾರ ಅನ್ವರ್ ಅಲ್-ಅವಲಾಕಿಗೆ ಇಂಟರ್ನೆಟ್ ಸಂದೇಶ ಕಳಿಸಿದ್ದ. ಇತರ ಧರ್ಮಗಳ ಬಗ್ಗೆ ಮತ್ತು ಅಮೇರಿಕಾದ ಬಗ್ಗೆ ದ್ವೇಷ ಕಾರಿಕೊಂಡಿದ್ದ. ಜಿಹಾದ್ ಮಾಡುವುದಾಗಿ ಡಂಗುರ ಸಾರಿದ್ದ. ಅದೇ ಜಿಹಾದಿನ ಮೊದಲ ಭಾಗವಾಗಿ ಚಡ್ಡಿ ಬಾಂಬ್ ಸಿದ್ಧಪಡಿಸಿದ್ದ.

ಈ ಚಡ್ಡಿ ಬಾಂಬರ್ ಮಾಡಿದ ಕಾರ್ಯಾಚರಣೆ ವಿಫಲವಾದರೂ ಅಧಿಕಾರಿಗಳು ತನಿಖೆಗೆ ಕುಳಿತರು. ಒಂದನ್ನೊಂದು ಜೋಡಿಸುತ್ತ ಹೋದಂತೆ ಇದು ಅನ್ವರ್ ಅಲ್-ಅವಲಾಕಿಯ ಪಾದದ ಬುಡಕ್ಕೇ ಬಂದು ಸೇರಿತು. ಆಗಲೇ ಈ ಅಲ್-ಅವಲಾಕಿ ಅಮೇರಿಕನ್ನರ ಕಟ್ಟುನಿಟ್ಟಿನ ನಿಗರಾಣಿಯಲ್ಲಿ ಬಂದುಬಿಟ್ಟ. ಈ ಅಲ್-ಅವಲಾಕಿ ಅರೇಬಿಯನ್ ದ್ವೀಪಕಲ್ಪ ದೇಶವಾದ ಯೆಮೆನ್ನಿನಲ್ಲಿ ಕುಳಿತು ಏನೇನು ಸ್ಕೀಮ್ ಹಾಕುತ್ತಿದ್ದಾನೆ ಎನ್ನುವ ಒಂದು ಸಂಪೂರ್ಣ ಚಿತ್ರಣ ಸಿಗಲಾರಂಭಿಸಿತು. ಇವನು ಕೇವಲ ಎಲ್ಲರಂತೆ ಬಂಡಲ್ ಬಿಡುವ ಪ್ರವಚನಕಾರನಲ್ಲ. ತಾನು ಕಾರುವ ದ್ವೇಷಕ್ಕೆ ಒಂದು ನಿಖರವಾದ ರೂಪುರೇಷೆಗಳನ್ನು ಕೊಟ್ಟು, ಹಲವಾರು ಹಿಂಸಾತ್ಮಕ ಘಟನೆಗಳಿಗೆ ಮಾಸ್ಟರ್ ಪ್ಲಾನ್ ಹಾಕುತ್ತಿದ್ದಾನೆ ಎಂದು ಖಚಿತವಾಯಿತು.

ಅನ್ವರ್ ಅಲ್-ಅವಲಾಕಿ ಯೆಮೆನ್ ದೇಶದಲ್ಲಿ ಅಲ್-ಖೈದಾ ಸಂಘಟನೆಯನ್ನು ಶಿಸ್ತುಬದ್ಧವಾಗಿ ಬೆಳೆಸುತ್ತಿದ್ದಾನೆ ಎಂದು ಖಚಿತವಾಯಿತು. counter terrorism ಬಾಸ್ ಜಾನ್ ಬ್ರೆನ್ನನ್ ಶ್ವೇತಭವನದ ತಮ್ಮ ಕಚೇರಿಯಿಂದಲೇ ಸೌದಿ ಅರೇಬಿಯಾಕ್ಕೆ ಫೋನ್ ಮಾಡಿದರು. ತಮ್ಮ ಸಂಪರ್ಕಗಳ ಜೊತೆ ಮಾತಾಡಿದರು. ಅನ್ವರ್ ಅಲ್-ಅವಲಾಕಿಯ ಕಾರ್ನಾಮೆಗಳ ಬಗ್ಗೆ ಹೆಚ್ಚಿನ ಮಾಹಿತಿ ತರಿಸಿಕೊಂಡರು. ತಮ್ಮ ಮುಂದಿದ್ದ ಹತ್ಯಾಪಟ್ಟಿಯತ್ತ ಒಮ್ಮೆ ಗಂಭೀರವಾಗಿ ನೋಡಿದರು.

ಯೆಮೆನ್ ದ್ವೀಪಕಲ್ಪದಲ್ಲಿ ಅನ್ವರ್ ಅಲ್-ಅವಲಾಕಿಯ ಕಿತಾಪತಿಗಳು ಅಲ್-ಖೈದಾ ಸಂಘಟನೆಯನ್ನು ಅಲ್ಲಿ ಬೆಳೆಸಲು ಎಷ್ಟು ನೆರವಾಯಿತೋ ಬಿಟ್ಟಿತೋ. ಆದರೆ ಪಾಕಿಸ್ತಾನ, ಅಫ್ಘಾನಿಸ್ತಾನಗಳಿಂದ ಓಡಿಸಲ್ಪಟ್ಟಿದ್ದ ಉಗ್ರರಿಗೆ ಒಂದು ತಂಗುದಾಣವಂತೂ ಆಗತೊಡಗಿತು. ಅಲ್ಲಿಂದ ಒಂದು ಚಿಕ್ಕ ಕೊಲ್ಲಿ ದಾಟಿಬಿಟ್ಟರೆ ಎದುರಿಗೇ ಸೋಮಾಲಿಯಾ. ಅಲ್ಲಿಗೆ ತಲುಪಿಕೊಂಡರೆ ಸ್ವರ್ಗ. ಏಕೆಂದರೆ ಅಲ್ಲಿ ಯಾವಾಗಲೂ ಅರಾಜಕತೆ. ಹಾಗಾಗಿ ಅಲ್-ಖೈದಾ ಉಗ್ರರಿಗೆ ಅಲ್ಲಿ ರಾಜಾಶ್ರಯ. ಹಾಗಾಗಿ ಯೆಮೆನ್ ದೇಶದಲ್ಲಿ ಅಲ್-ಖೈದಾ ಬೆಳೆಯುವುದು ತುಂಬಾ ಚಿಂತೆಯ ವಿಷಯವಾಗಿತ್ತು.

ಈ ಅನ್ವರ್ ಅಲ್-ಅವಲಾಕಿಯನ್ನು ಹತ್ಯಾಪಟ್ಟಿಗೆ ಸೇರಿಸಬೇಕೋ ಹೇಗೆ ಎನ್ನುವುದರ ಬಗ್ಗೆ ರಾಷ್ಟ್ರೀಯ ರಕ್ಷಣಾ ವ್ಯವಸ್ಥೆಯ ಸಭೆಗಳಲ್ಲಿ ವ್ಯಾಪಕವಾಗಿ ಚರ್ಚೆ ಆರಂಭವಾಯಿತು. ಇಷ್ಟೆಲ್ಲಾ ಚರ್ಚೆಗೆ ಕಾರಣವಿತ್ತು. ಯಾಕೆಂದರೆ ಈ ಅಲ್-ಅವಲಾಕಿ ಅಮೇರಿಕನ್ ನಾಗರಿಕ. ದೇಶದ ಶತ್ರು ಎಂದು ಯಾವುದೋ ದೇಶದ ಅಬ್ಬೇಪಾರಿಯನ್ನು ಉಡಾಯಿಸಿಬಿಡುವುದು ಬೇರೆ ಮಾತು. ಆದರೆ ತನ್ನದೇ ದೇಶದ ಪ್ರಜೆಯನ್ನು ಉಗ್ರ ಎಂದು ಆಪಾದಿಸಿ ಕೊಲ್ಲುವುದಿದೆಯಲ್ಲ ಅದು ದೊಡ್ಡ ಕಿರಿಕಿರಿಯ ಸಮಸ್ಯೆ. ಅಮೇರಿಕಾದಲ್ಲಿ ಪೊಲೀಸರು ಯಾರೋ ಒಬ್ಬನನ್ನು ಕೊಂಚ ತದುಕಿದರೂ ಸಾಕು ಜನ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಾರೆ ಮತ್ತು ಪೊಲೀಸರ ಸಮವಸ್ತ್ರ ಬಿಚ್ಚಿಸುವ ಲೆವೆಲ್ಲಿಗೆ ಕೇಸ್ ಜಡಿಯುತ್ತಾರೆ. ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ, ಆದರೆ ಮಾನವಹಕ್ಕುಗಳ ಬಗ್ಗೆ ಸಿಕ್ಕಾಪಟ್ಟೆ ಪ್ರಜ್ಞೆ ಇದೆ. of course, ತಮ್ಮ ಅನುಕೂಲಕ್ಕೆ ತಕ್ಕಂತೆ. ಆದರೆ ಅಮೇರಿಕನ್ ನಾಗರಿಕನಿಗೆ ಶಾರೀರಿಕ ಹಾನಿ ಮಾಡುವ ಮೊದಲು ಸಾವಿರಾರು ಬಾರಿ ಯೋಚನೆ ಮಾಡಬೇಕಾಗುತ್ತದೆ.

ಅಮೇರಿಕಾದ ನ್ಯಾಯಾಂಗ ವ್ಯವಸ್ಥೆಯ ವಕೀಲರ ದೊಡ್ಡ ತಂಡವೊಂದು ಅನ್ವರ್ ಅಲ್-ಅವಲಾಕಿಯ ಕೇಸ್ ಫೈಲುಗಳನ್ನು ತೆಗೆದುಕೊಂಡು ಹಗಲೂ ರಾತ್ರಿ ಅಭ್ಯಾಸ ಮಾಡಲು ಆರಂಭಿಸಿತು. ಭೂತಗನ್ನಡಿ ಹಿಡಿದು ನೋಡಿದರು. ಚಡ್ಡಿ ಬಾಂಬರ್ ಪ್ರಕರಣಕ್ಕೆ ತಾಳೆ ಹಾಕಿದರು. ಅಲ್-ಅವಲಾಕಿಯನ್ನು ಉಡಾಯಿಸಿಬಿಟ್ಟರೆ ಸಂವಿಧಾನದ ಉಲ್ಲಂಘನೆ ಆಗುತ್ತದೆಯೋ ಎನ್ನುವುದರ ಬಗ್ಗೆ ದೊಡ್ಡ ದೊಡ್ಡ ಕಾನೂನು ಪಂಡಿತರು ಸಾಕಷ್ಟು ಸಮಯ ವ್ಯಯಿಸಿ ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಎಲ್ಲರ ಅಭಿಪ್ರಾಯ ಒಂದೇ ಆಗಿತ್ತು. ಅಲ್-ಅವಲಾಕಿ ಅತ್ಯಂತ ಅಪಾಯಕಾರಿ ಉಗ್ರನಾಗಿ ಹೊರಹೊಮ್ಮಲಿದ್ದಾನೆ. ಅವನನ್ನು ಬೇಗನೆ 'ತಟಸ್ಥ'ಗೊಳಿಸಿದಷ್ಟು ಒಳ್ಳೆಯದು. He had to be neutralized fast!

ಅಲ್-ಅವಲಾಕಿಯ ಮರಣಶಾಸನ ಹೊರಬಿದ್ದು ಅದಕ್ಕೆ ಒಬಾಮಾ ಸಾಹೇಬರ ಅನುಮತಿಯ ಮುದ್ರೆ ಬೀಳುವ ಹೊತ್ತಿಗೆ ಈ ಮನುಷ್ಯ ಎಲ್ಲೋ ನಾಪತ್ತೆ. ಯೆಮೆನ್ ದೇಶದಲ್ಲಿ ಅಮೇರಿಕಾದ ಬೇಹುಗಾರಿಕೆ ಜಾಲ ಅಷ್ಟಾಗಿ ಇರಲಿಲ್ಲ. ಬೇಹುಗಾರಿಕೆ ಮಾಹಿತಿಗೆ ಅಮೇರಿಕಾ ಯೆಮೆನ್ ದೇಶದ ಅಧ್ಯಕ್ಷ ಸಾಲೇಹ್ ಮೇಲೆ ಅವಲಂಬಿತ. ಸೌದಿ ಅರೇಬಿಯಾದ ಬೇಹುಗಾರಿಕೆ ಸಂಸ್ಥೆ ತಕ್ಕ ಮಟ್ಟಿನ ಮಾಹಿತಿ ಕೊಡುತ್ತಿತ್ತು.

೨೦೧೦ ರಲ್ಲಿ ಒಂದು ದೊಡ್ಡ ಲಫಡಾ ಆಗಿತ್ತು. ಅಂದು ಬಂದಿದ್ದ ಮಾಹಿತಿ ತಪ್ಪಿತ್ತು. ಆ ಮಾಹಿತಿ ಪ್ರಕಾರ ಅಲ್ -ಖೈದಾ ಉಗ್ರರಿದ್ದಾರೆ ಎಂದು ಅಮೇರಿಕಾ ಬಾಂಬ್ ಹಾಕಿದರೆ ಯಾರು ಉಡೀಸ್ ಆಗಿರಬೇಕು ಊಹಿಸಿ. ಯೆಮೆನ್ ದೇಶದ ಡೆಪ್ಯುಟಿ ಗವರ್ನರ್ ಸಾಹೇಬರು ಶಿವಾಯ ನಮಃ ಆಗಿದ್ದರು. ಅಮೇರಿಕಾದವರು ಅದೇನೇ ವಿಷಾದ ವ್ಯಕ್ತಪಡಿಸಿದರೂ ಅಧ್ಯಕ್ಷ ಸಾಲೇಹ್ ಸಿಟ್ಟಿಗೆದ್ದಿದರು. ತಮ್ಮ ದೇಶದಲ್ಲಿ ಅಲ್ - ಖೈದಾ ವಿರುದ್ಧ ಕಾರ್ಯಾಚರಣೆ ಮಾಡುತ್ತೇನೆ ಎಂದು ಬಂದ ಅಮೇರಿಕಾದವರಿಗೆ ಅನುಮತಿ ಕೊಟ್ಟು, ಬೇಹುಗಾರಿಕೆ ಮಾಹಿತಿ ಕೊಟ್ಟರೆ ಹೀಗಾ ಮಾಡೋದು? ಹೋಗಿ ಹೋಗಿ ತನ್ನ ಡೆಪ್ಯುಟಿ ಗವರ್ನರ್ ಮನುಷ್ಯನನ್ನೇ ಉಡಾಯಿಸಿಬಿಡೋದೇ? ಸಿಟ್ಟಿಗೆದ್ದಿದ್ದ ಯೆಮೆನ್ ಅಧ್ಯಕ್ಷರು ಅಮೇರಿಕಾದ ರಹಸ್ಯ ಕಾರ್ಯಾಚರಣೆಗಳ ಮೇಲೆ ನಿರ್ಬಂಧ ವಿಧಿಸಿದ್ದರು.

ಮುಂದೆ ಯೆಮೆನ್ ದೇಶದಲ್ಲಿ ಪರಿಸ್ಥಿತಿ ಬಿಗಡಾಯಿಸತೊಡಗಿತ್ತು. ಅಂತರ್ಯುದ್ಧ ಜೋರಾಗತೊಡಗಿತ್ತು. ಅಧ್ಯಕ್ಷ ಸಾಲೇಹ್ ದೇಶದ ಮೇಲಿನ ಹತೋಟಿ ಕಳೆದುಕೊಳ್ಳಲಾರಂಭಿಸಿದರು. ಬಂಡುಕೋರರು ದೇಶವನ್ನು ಆಕ್ರಮಿಸಿಕೊಂಡರು. ಅಧ್ಯಕ್ಷ ಸಾಲೇಹ್ ಅವರ ಹಿಡಿತ ರಾಜಧಾನಿ ಸಾನಾ ಶಹರಕ್ಕೆ ಮಾತ್ರ ಎನ್ನುವಂತಾಯಿತು. ಒಮ್ಮೆಯಂತೂ ಅಧ್ಯಕ್ಷರ ಅರಮನೆ ಮೇಲೆಯೇ ಬಂಡುಕೋರರು ರಾಕೆಟ್ ದಾಳಿ ಮಾಡಿದರು. ಅಂದು ಅಧ್ಯಕ್ಷರು ಢಮ್ ಎಂದು ಮಟಾಷ್ ಆಗಬೇಕಿತ್ತು. ಅದೃಷ್ಟ ಚೆನ್ನಾಗಿತ್ತು. ಅವರ ತಲೆಗೆ ರಾಕೆಟ್ ಬಡಿದು ಬುರುಡೆ ಬಿಚ್ಚಿಕೊಂಡರೂ ಸಮಯಕ್ಕೆ ಸರಿಯಾಗಿ ಅವರನ್ನು ಪಕ್ಕದ ಸೌದಿಗೆ ಒಯ್ಯಲಾಯಿತು. ಅಲ್ಲಿ ಏಳು ಘಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಪ್ರೆಸಿಡೆಂಟ್ ಸಾಲೇಹ್ ಬಚಾವಾದರು. ಆದರೆ ಯೆಮನ್ ಅವರ ಹತೋಟಿಯಿಂದ ತಪ್ಪಿಹೋಗಿತ್ತು. ಇದರ ಜೊತೆಗೆ ಅವರು ಅಮೇರಿಕಾದ ಸೇನಾಪಡೆಗಳ ಮೇಲೆ ವಿಧಿಸಿದ್ದ ನಿರ್ಬಂಧನೆಗಳು ಕೂಡ ಗಾಳಿಗೆ ತೂರಿಹೋಗಿದ್ದವು.

ಮಾಹಿತಿ ತಪ್ಪಿನಿಂದ ಡೆಪ್ಯುಟಿ ಗವರ್ನರ್ ಕೊಲ್ಲಲ್ಪಟ್ಟ ಮೇಲೆ ಸಿಐಎ ಮತ್ತು ಸೇನಾಪಡೆಗಳಿಗೆ ಬರೋಬ್ಬರಿ ಒಂದು ವರ್ಷ ಕೆಲಸ ಮಾಡಲು ಆಗಿರಲಿಲ್ಲ. ಈಗ ಯೆಮೆನ್ ದೇಶದ ಮೇಲೆ ಹೆಚ್ಚಿನ ಸಂಪನ್ಮೂಲಗಳನ್ನು ಹಾಕಲಾಯಿತು. ಅಮೇರಿಕಾದ ಮೇರಿಲ್ಯಾಂಡ್ ರಾಜ್ಯದ ಫೋರ್ಟ್ ಮೀಡ್ ಪ್ರದೇಶದಲ್ಲಿರುವ ಫೋನ್ ಟ್ಯಾಪಿಂಗ್ ಕೇಂದ್ರದಲ್ಲಿ ಯೆಮೆನ್ ದೇಶದ ಮೊಬೈಲ್ ಫೋನುಗಳ ಮೇಲೆ ನಿಗಾಯಿಡಲು ಹೆಚ್ಚಿನ ವಿಶ್ಲೇಷಕರು ನೇಮಕಗೊಂಡರು. ಕಿವಿಗೆ ಹೆಡ್-ಫೋನ್ ಸಿಕ್ಕಿಸಿಕೊಂಡು ಕಂಪ್ಯೂಟರ್ ಮೇಲೆ ಇಮೇಲ್ ಸ್ಕ್ಯಾನ್ ಮಾಡುವುದೇ ಅವರ ಕೆಲಸ. ದೊಡ್ಡ ಹುಲ್ಲಿನ ಬಣಿವೆಯಲ್ಲಿ ಅಲ್-ಅವಲಾಕಿ ಎನ್ನುವ ಸೂಜಿಯನ್ನು ಹುಡುಕಿದ ಹಾಗೆ. ಹುಡುಕಲೇ ಬೇಕಾಗಿತ್ತು. ಒಮ್ಮೆ ಲ್ಯಾಚ್ ಆದ ಮೇಲೆ ತಾನೇ ಕ್ಯಾಚ್ ಮಾಡುವುದು!?

ಇತ್ತ ಕಡೆ ಸಿಐಎ ದಕ್ಷಿಣ ಸೌದಿ ಅರೇಬಿಯಾದ ಮರಭೂಮಿ ಪ್ರದೇಶದಲ್ಲಿ ಒಂದು ರಹಸ್ಯ ಡ್ರೋನ್ ನೆಲೆಯನ್ನು ಕಟ್ಟಲಾರಂಭಿಸಿತು. ಈ ಡ್ರೋನ್ ನೆಲೆ ಪಕ್ಕದ ಯೆಮೆನ್ ದೇಶದಲ್ಲಿ ಮಾಡಬೇಕಾದ ಅಲ್ - ಖೈದಾ ಉಗ್ರರ ಬೇಟೆಯ ಕೇಂದ್ರವಾಗಲಿತ್ತು. 'ಏನಾದರೂ ಮಾಡಿಕೊಳ್ಳಿ. ಆದರೆ ನಮ್ಮ ದೇಶದಲ್ಲಿ ನಿಮ್ಮ ಡ್ರೋನ್ ನೆಲೆಯಿದೆ ಎಂದು ಯಾರಿಗೂ ಗೊತ್ತಾಗಬಾರದು,' ಎಂದು ಸೌದಿಗಳ ಕಟ್ಟಾಜ್ಞೆ. ಪಾಪ ಅವರ ಅನಿವಾರ್ಯತೆಗಳು ಒಂದೇ ಎರಡೇ. ಈಕಡೆ ಅಮೇರಿಕಾಗೆ ಎದುರಾಡುವಂತಿಲ್ಲ. ಆಕಡೆ ಇತರ ಮುಸ್ಲಿಮರನ್ನು ಎದುರಾಕಿಕೊಳ್ಳುವಂತಿಲ್ಲ. ಅಕ್ಕಿ ಮೇಲೆ ಆಸೆ. ನೆಂಟರ ಮೇಲೆ ಪ್ರೀತಿ. ನೆಂಟರನ್ನು ಕೊಲ್ಲುತ್ತೇವೆ ಎನ್ನುವ ಮಿತ್ರರು ಎಂದು ಹೇಳಿಕೊಳ್ಳುವ ಅಮೇರಿಕನ್ನರು. ಒಟ್ಟಿನಲ್ಲಿ ಸೌದಿ ಅರೇಬಿಯಾಗೆ ಕಷ್ಟ ಕಷ್ಟ ಇವರನ್ನೆಲ್ಲ ನಿಭಾಯಿಸುವುದು.

ಸೌದಿ ಅರೇಬಿಯಾದ ಡ್ರೋನ್ ನೆಲೆ ಸ್ಥಾಪಿತವಾಗುವವರೆಗೆ ಕಾಯುವಂತಿರಲಿಲ್ಲ. ಅಭ್ಯಾಸ ಶುರುವಾಗಲೇಬೇಕಿತ್ತು. ಅದಕ್ಕಾಗಿ ಇಥಿಯೋಪಿಯಾ ಮತ್ತು ಜಿಬೌಟಿ ದೇಶಗಳ ನೆಲೆಗಳಿಂದ ಡ್ರೋನುಗಳನ್ನು ಹಾರಿಸಲಾಯಿತು. ಅವು ಯೆಮೆನ್ ಮೇಲೆ ಹಾರಿ ತಕ್ಕ ಮಟ್ಟಿನ ಮಾಹಿತಿಗಳನ್ನು ಸಂಗ್ರಹಿಸಿ ತಂದವು. ಡ್ರೋನ್ ಮತ್ತು ಜಿಹಾದಿಗಳ ನಡುವೆ ಬೆಕ್ಕು ಇಲಿ ನಡುವಿನ ಬೇಟೆಯಂತಹ ಕಾಳಗ ಶುರುವಾಗಿತ್ತು.

ಜಿಹಾದಿಗಳೇನೂ ಕೈಕಟ್ಟಿ ಕುಳಿತಿರಲಿಲ್ಲ. ದಾಳಿಗಳಿಂದ ಬಚಾವಾಗುವ ಉಪಾಯಗಳನ್ನು ರೂಪಿಸಿಕೊಂಡಿದ್ದರು. ತಲೆ ಮೇಲೆ ಯೆಮೆನ್ ವಾಯುಪಡೆಯ ವಿಮಾನಗಳು ಹಾರಿದರೆ ನಿಂತಲ್ಲೇ ನಿಂತಿರುತ್ತಿದ್ದರು. ಯೆಮೆನ್ ಯುದ್ಧವಿಮಾನಗಳು ಸಾಮಾನ್ಯವಾಗಿ ತಮ್ಮ ಗುರಿ ಮೇಲೆ ಬಾಂಬ್ ಹಾಕಿದ್ದೇ ಕಮ್ಮಿ. ಯಾವಾಗಲೂ ಗುರಿ ತಪ್ಪಿ ಎಲ್ಲೋ ಹಾಕುತ್ತಿದ್ದವು. ಹಾಗಾಗಿ ಅವುಗಳಿಂದ ತಪ್ಪಿಸಿಕೊಳ್ಳುವ ಉತ್ತಮ ವಿಧಾನ ಎಂದರೆ ನಿಂತಲ್ಲೇ ನಿಂತಿರುವುದು. ಅದೇ ತಲೆ ಮೇಲೆ ಡ್ರೋನುಗಳು ಹಾರಲು ಶುರುವಾದಾಗ ಇದರ ಉಲ್ಟಾ ಉಪಾಯ. ತಮ್ಮ ತಮ್ಮ ವಾಹನ ಹತ್ತಿ ಮರಭೂಮಿಯಲ್ಲಿ ಅಡ್ಡಾದಿಡ್ಡಿ ಗಾಡಿ ಓಡಿಸುತ್ತಿದ್ದರು. ಅವರಿಗೆ ಡ್ರೋನುಗಳ ಒಂದು ಮುಖ್ಯ ನ್ಯೂನ್ಯತೆ ಗೊತ್ತಿತ್ತು. ಡ್ರೋನುಗಳಲ್ಲಿನ ಕ್ಯಾಮೆರಾಗಳಲ್ಲಿ ಚಿತ್ರ ದಾಖಲಾಗಿ, ಅದು ಸಂಸ್ಕರಿಸಲ್ಪಟ್ಟು, ಆಕಾಶದಲ್ಲಿನ ಉಪಗ್ರಹಕ್ಕೆ ಸೇರಿ, ಅಲ್ಲಿಂದ ಅಮೇರಿಕಾದ ಯಾವುದೋ ಮೂಲೆಯಲ್ಲಿನ ಡ್ರೋನ್ ಕೇಂದ್ರಕ್ಕೆ ರವಾನೆಯಾಗಿ, ಅಲ್ಲಿನ ಕಂಪ್ಯೂಟರ್ ಮೂಲಕ ಅದರ ಮುಂದೆ ಕೂತಿದ್ದ ಡ್ರೋನಾಚಾರ್ಯನ (Drone Operator) ಪರದೆ ಮೇಲೆ ಉಗ್ರರ ಚಿತ್ರ ಮೂಡಿ ಬರುವ ವರಗೆ ನಾಲ್ಕಾರು ಸೆಕೆಂಡುಗಳ ವಿಳಂಬ (latency) ಇರುತ್ತಿತ್ತು. ಹಾಗಾಗಿ ದೂರದಲ್ಲಿ ಕುಳಿತು ಡ್ರೋನ್ ಮೂಲಕ ಮಿಸೈಲ್ ಹಾರಿಸುತ್ತಿದ್ದ ಡ್ರೋನಾಚಾರ್ಯನ ಗುರಿ ತಪ್ಪುವ ಸಾಧ್ಯತೆಗಳು ಇರುತ್ತಿದ್ದವು. ಹಾಗಾಗಿ ಡ್ರೋನ್ ಕಂಡ ಕೂಡಲೇ ಶರವೇಗದಲ್ಲಿ ಗಾಡಿ ಓಡಿಸುವ ತಂತ್ರ ಅವುಗಳಿಂದ ಬಚಾವಾಗಲು ಉಪಯುಕ್ತವಾಗಿತ್ತು.

ಇದೇ ಕಾರಣದಿಂದ ಮೊದಲೊಮ್ಮೆ ಅನ್ವರ್ ಅಲ್-ಅವಲಾಕಿ ಅಮೇರಿಕನ್ ದಾಳಿಯಿಂದ ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದ. ಅವನನ್ನು ಅಂದು ಬಿಡಬಾರದು ಎಂದು ಡ್ರೋನ್ ಮತ್ತು ಯುದ್ಧ ವಿಮಾನ ಎರಡನ್ನೂ ಒಮ್ಮೆಲೇ ಕಳಿಸಲಾಗಿತ್ತು. ಡ್ರೋನ್ ಕಂಡಕೂಡಲೇ ತನ್ನ ವಾಹನ ಹತ್ತಿ ಮರಭೂಮಿಯಲ್ಲಿ ಪರಾರಿಯಾಗಿಬಿಟ್ಟ ಖದೀಮ ಅಲ್-ಅವಲಾಕಿ. ಮೇಲೆ ಹೇಳಿದ ತಾಂತ್ರಿಕ ವಿಳಂಬದ ಕಾರಣದಿಂದ ಡ್ರೋನ್ ಹಾರಿಸಿದ ಮಿಸೈಲ್ ಗುರಿತಪ್ಪಿತ್ತು. ಯುದ್ಧವಿಮಾನ ಟಾರ್ಗೆಟ್ ಲಾಕ್ ಮಾಡಿ ಇನ್ನೇನು ಮಿಸೈಲ್ ಹಾರಿಸೋಣ ಅನ್ನುವಷ್ಟರಲ್ಲಿ ಕಾರ್ಮೋಡ ಕವಿದುಬಿಟ್ಟಿತು. ಟಾರ್ಗೆಟ್ ಲಾಕ್ ಆಗಲೇ ಇಲ್ಲ.ಕಾರ್ಮೋಡ ಸರಿಯುವಷ್ಟರಲ್ಲಿ ಅಲ್-ಅವಲಾಕಿ ಬೇರೆ ಗಾಡಿಯನ್ನು ಹತ್ತಿ ವಿರುದ್ಧ ದಿಕ್ಕಿನಲ್ಲಿ ಓಡಿಬಿಟ್ಟ. ಮೇಲೆ ಹಾರುತ್ತಿದ್ದ ಯುದ್ಧವಿಮಾನ ಮೊದಲಿನ ಗಾಡಿಯನ್ನು ಅಟ್ಟಿಸಿಕೊಂಡು ಹೋಗಿ ಟಾರ್ಗೆಟ್ ಲಾಕ್ ಆದ ತಕ್ಷಣ ಅದರ ಮೇಲೆ ಬಾಂಬ್ ಹಾಕಿ ಅದನ್ನು ಉಡೀಸ್ ಮಾಡಿತು. ಅದರಲ್ಲಿದ್ದ ಇತರೆ ಉಗ್ರರು ಮಟಾಷ್ ಆದರು. ಆದರೆ ಅಲ್-ಅವಲಾಕಿ ಬಚಾವಾಗಿದ್ದ. ಅವನಿಗೆ ಅದೃಷ್ಟದ ಬಗ್ಗೆ ಮತ್ತು ವಿಧಿಯಾಟದ ಬಗ್ಗೆ ಹೆಚ್ಚಿನ ನಂಬುಗೆ ಬಂದಿತ್ತು. ಹುಂಬ ಧೈರ್ಯ ಮತ್ತೂ ಜಾಸ್ತಿಯಾಗಿತ್ತು.

ಅಲ್-ಅವಲಾಕಿ ಮತ್ತು ಪ್ರಮುಖ ಉಗ್ರರು ಪದೇ ಪದೇ ತಪ್ಪಿಸಿಕೊಳ್ಳುತ್ತಿದ್ದ ಕಾರಣ ಶ್ವೇತಭವನದಲ್ಲಿ ಅಧ್ಯಕ್ಷ ಒಬಾಮಾ ಮತ್ತು counter terrorism ಚೀಫ್ ಜಾನ್ ಬ್ರೆನ್ನನ್ ಕಳವಳಗೊಂಡಿದ್ದರು. ಉಸ್ತುವಾರಿ ವಹಿಸಿದ್ದ ಸಿಐಎ ಮತ್ತು ಸೇನಾಪಡೆಗಳ ನಾಯಕತ್ವದ ಮೇಲೆ ಅಸಮಾಧಾನಗೊಂಡಿದ್ದರು. ಯೆಮೆನ್ ದೇಶದಲ್ಲಿ ರಹಸ್ಯ ಕಾರ್ಯಾಚರಣೆಗಳಿಗೆ ಪೂರ್ತಿ ಅನುಮತಿಯನ್ನು ನೀಡಿ ಒಂದು ವರ್ಷದ ಮೇಲಾಗಿಹೋಗಿತ್ತು. ಆದರೂ ಒಂದೇ ಒಂದು ದೊಡ್ಡ ಉಗ್ರನ ಸಂಹಾರ ಆಗಿರಲಿಲ್ಲ. ಒಂದಲ್ಲ ಒಂದು ಕಾರಣದಿಂದ ಕಾರ್ಯಾಚರಣೆಗಳು ವಿಫಲವಾಗಿದ್ದವು. ಕೆಲವೊಂದರಲ್ಲಿ, ತಪ್ಪಿನಿಂದಾಗಿ, ನಾಗರಿಕರು ಬಲಿಯಾಗಿದ್ದು ದೊಡ್ಡ ಮುಜುಗರಕ್ಕೆ ಕಾರಣವಾಗಿತ್ತು. ಅದರಲ್ಲೂ ಜಿಬೌಟಿ ದೇಶ ಪ್ರತಿಯೊಂದು ಡ್ರೋನ್ ಕಾರ್ಯಾಚರಣೆಗೆ ಮುಂಗಡ ಅನುಮತಿ ಪಡೆಯಬೇಕೆಂದು ಹೇಳಿತ್ತು. ಇದೊಂದು ದೊಡ್ಡ ಕಿರಿಕಿರಿ ಸೇನಾಪಡೆಗಳಿಗೆ.

ಈ ಹೊತ್ತಿಗೆ ದಕ್ಷಿಣ ಸೌದಿ ಅರೇಬಿಯಾದಲ್ಲಿ ಸಿಐಎ ರಹಸ್ಯವಾಗಿ ಕಟ್ಟುತ್ತಿದ್ದ ಡ್ರೋನ್ ನೆಲೆ ತಯಾರಾಗಿತ್ತು. ಸಿಐಎ ಸಂಸ್ಥೆಯ ಹೊಸ ಡೈರೆಕ್ಟರ್ ಆಗಿ ಬಂದಿದ್ದ ಡೇವಿಡ್ ಪೆಟ್ರೆಯಸ್ ಪಾಕಿಸ್ತಾನದಲ್ಲಿದ್ದ ರೀಪರ್ ಡ್ರೋನುಗಳನ್ನು ಹೊಸ ನೆಲೆಗೆ ವರ್ಗಾಯಿಸಿದರು. ಡ್ರೋನ್ ಮತ್ತು ಆಕಾಶದಲ್ಲಿರುವ ಉಪಗ್ರಹಗಳ ನಡುವಿನ ಸಂಪರ್ಕ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲಾಯಿತು. ಡ್ರೋನ್ ಮತ್ತು ಅವುಗಳನ್ನು ಚಲಾಯಿಸುತ್ತಿದ್ದ ದೂರದಲ್ಲಿನ ತಂತ್ರಜ್ಞರ ನಡುವಿನ ವಿಳಂಬ ಸಾಕಷ್ಟು ಕಡಿಮೆಯಾಯಿತು. Drones were almost ready for real-time operations!

ಹೊಸ ಡ್ರೋನ್ ನೆಲೆಯನ್ನು ಸ್ಥಾಪಿಸುವುದರ ಜೊತೆಗೆ ಸಿಐಎ ಅದ್ಭುತವೆನ್ನಿಸುವಂತಹ ಸಾಧನೆಯನ್ನು ಮಾಡಿತ್ತು. ಅನ್ವರ್ ಅಲ್-ಅವಲಾಕಿಯ ಅತಿ ಹತ್ತಿರದ ವಲಯದಲ್ಲಿ ಒಬ್ಬ ಗೂಢಚಾರನನ್ನು ಬೆಳೆಸಿತ್ತು. ಡ್ರೋನ್ ಇರಲಿ, ಯುದ್ಧವಿಮಾನವಿರಲಿ, ಅವೆಲ್ಲ ಒಂದು ಕಡೆಯಾದರೆ ವೈರಿಯ ಪಕ್ಕದಲ್ಲೇ ಇದ್ದುಕೊಂಡು ಮಾಹಿತಿ ಕೊಡುವ ಗೂಢಚಾರ ಎಲ್ಲವನ್ನೂ ಮೀರಿದವ. Nothing beats hum-int (human intelligence).

ಅಲ್-ಅವಲಾಕಿಯ ಬೇಟೆಗೆ ವೇದಿಕೆ ಸಜ್ಜಾಗಿತ್ತು. ಅಂದು ಸೆಪ್ಟೆಂಬರ್ ೩೦, ೨೦೧೧. ಸೌದಿ ಅರೇಬಿಯಾದ ದಕ್ಷಿಣ ಮರಭೂಮಿಯ ಡ್ರೋನ್ ನೆಲೆಯಿಂದ ಹಾರಿದ ಡ್ರೋನುಗಳು ಯೆಮೆನ್ ಪ್ರವೇಶಿಸಿದವು. ವಿಶಾಲವಾದ ಮರಭೂಮಿಯಲ್ಲಿ ಉಗ್ರರ ಹಲವಾರು ವಾಹನಗಳು ಗುಂಪಾಗಿ ಕ್ಯಾರವಾನ್ ಮಾದರಿಯಲ್ಲಿ ಹೊರಟಿದ್ದವು. ಡ್ರೋನ್ ಪಡೆ ಅವನ್ನು ಹಿಂಬಾಲಿಸುತ್ತಿತ್ತು. ಸೂಕ್ಷ್ಮವಾಗಿ ಗಮನಿಸುತ್ತಿತ್ತು.

ಬೆಳಗಿನ ತಿಂಡಿಗೆಂದು ಕಾರವಾನ್ ನಿಂತಿತು. ತಮ್ಮ ತಮ್ಮ ವಾಹನಗಳಿಂದ ಹೊರಗಿಳಿದು ಬಂದು ನೋಡಿದರೆ... ತಲೆ ಮೇಲೆ ರುದ್ರವೀಣೆಯ ಝೇಂಕಾರ. Killer drones had arrived! ಎದ್ದೆವೋ ಬಿದ್ದೆವೋ ಸತ್ತೇವೋ ಎಂಬಂತೆ ಮತ್ತೆ ತಮ್ಮ ತಮ್ಮ ವಾಹನಗಳಲ್ಲಿ ತೂರಿಕೊಂಡರು. ಬದುಕಿದರೆ ಸಾವಿರ ಬಾರಿ ಬೆಳಗಿನ ತಿಂಡಿ ಎಂದು ತಿಂಡಿಗೆ ದೊಡ್ಡದೊಂದು ನಮಸ್ಕಾರ ಹಾಕಿದರು. ಆದರೆ ಅಷ್ಟೊತ್ತಿಗೆ ಡ್ರೋನುಗಳು ಟಾರ್ಗೆಟ್ ಲಾಕ್ ಮಾಡಿಯಾಗಿತ್ತು. ಮುಂದೆ ನಡೆದದ್ದು ಮಾರಣಹೋಮ...ಅದೂ ಸಾಂಗೋಪಾಂಗವಾಗಿ. Carefully orchestrated symphony of destruction.

ಎರಡು ಪ್ರಿಡೇಟರ್ ಡ್ರೋನುಗಳು ಲೇಸರ್ ಕಿರಣಗಳನ್ನು ಕಾರುಗಳ ಮೇಲೆ ಸೂಸಿದವು. ಅದನ್ನು ಟಾರ್ಗೆಟ್ ಪೇಂಟಿಂಗ್ ಎನ್ನುತ್ತಾರೆ. ಈ ತರಹ ಲೇಸರ್ ಕಿರಣಗಳನ್ನು ಉಪಯೋಗಿಸುವುದರಿಂದ ಮುಂದೆ ಕ್ಷಿಪಣಿ ಹಾರಿಸಿದಾಗ ಗುರಿ ಮುಟ್ಟುವ ಸಾಧ್ಯತೆಗಳು ತುಂಬಾ ಹೆಚ್ಚು. ಈ ಎರಡು ಪ್ರಿಡೇಟರ್ ಡ್ರೋನುಗಳು ಲೇಸರ್ ಉಪಯೋಗಿಸಿ ಟಾರ್ಗೆಟ್ ಲಾಕ್ ಮಾಡಿಕೊಟ್ಟರೆ ಬೇರೊಂದು ರೀಪರ್ ಡ್ರೋನ್ ತನ್ನಲ್ಲಿನ ಕ್ಷಿಪಣಿಗಳನ್ನು ಹಾರಿಸಿತು. Direct hit!

ಕಾರವಾನಿನಲ್ಲಿದ್ದ ಎಲ್ಲ ವಾಹನಗಳೂ ಉಡೀಸ್. ಎಲ್ಲ ಪ್ರಯಾಣಿಕರೂ ಮಟಾಷ್. ಅನ್ವರ್ ಅಲ್-ಅವಲಾಕಿ ಕೂಡ ಎಲ್ಲರೊಂದಿಗೆ ಭಸ್ಮವಾಗಿದ್ದ. ಜೊತೆಗೆ 'Inspire' ಎನ್ನುವ ಧಾರ್ಮಿಕ ಪತ್ರಿಕೆಯೊಂದರ ಸಂಪಾದಕ ಸಮೀರ್ ಖಾನ್ ಕೂಡ. ನಂತರ ನೋಡಿದರೆ ಅವನೂ ಅಮೇರಿಕನ್ ಪೌರನಾಗಿದ್ದ. ಹೀಗೆ ಪ್ರಪಥಮ ಬಾರಿಗೆ ಅಮೇರಿಕಾ ತನ್ನದ್ದೇ ದೇಶದ ಇಬ್ಬರು ನಾಗರಿಕರನ್ನು ಉದ್ದೇಶಿತ ಹತ್ಯಾ ಕಾರ್ಯಾಚರಣೆಯೊಂದರಲ್ಲಿ ಕೊಂದಿತ್ತು.

ಅನ್ವರ್ ಅಲ್ - ಅವಲಾಕಿ ಸತ್ತರೇನಾಯಿತು ಅವನಿಗೊಬ್ಬ ಕುಲದೀಪಕನಂತಿದ್ದ ಮಗನಿದ್ದ. ಅವನೇ ಅಬ್ದುಲ್ ರಹಮಾನ್ ಅಲ್ - ಅವಲಾಕಿ. ಅಪ್ಪ ಸತ್ತಾಗ ಅವನಿಗೆ ಹದಿನಾರು ವರ್ಷ. ಅವನೂ ಅಮೇರಿಕನ್ ಪೌರನೇ. ಅಪ್ಪ ಅವಲಾಕಿ ವಿದ್ಯಾಭ್ಯಾಸ ಮುಗಿದ ಮೇಲೆ ನೌಕರಿ ಮಾಡದಿದ್ದರೂ ಅದೆಲ್ಲೋ ಚೋಕರಿ (ಹುಡುಗಿ) ಸಂಪಾದಿಸಿ ಕುಲದೀಪಕನೊಬ್ಬನಿಗೆ ಜನ್ಮ ಕೊಟ್ಟಿದ್ದ. ತನ್ನ ಜನ್ಮ ಸಾರ್ಥಕ ಮಾಡಿಕೊಂಡಿದ್ದ.

ಅಪ್ಪ ಅವಲಾಕಿ ಅಮೇರಿಕಾ, ಇಂಗ್ಲೆಂಡ್ ಎಲ್ಲ ಸುತ್ತಾಡಿ ವಾಪಸ್ ಯೆಮನ್ ದೇಶಕ್ಕೇ ಬಂದಿದ್ದ. ಮಗ ಕೂಡ ಬಂದಿದ್ದ. ಅವನಿಗೆ ಯೆಮೆನ್ ಬಿಟ್ಟರೆ ಬೇರೆ ಯಾವ ದೇಶವೂ ಗೊತ್ತಿಲ್ಲ.

ಮಗ ಅಬ್ದುಲ್ ರಹಮಾನನಿಗೆ ಅಪ್ಪನ ಖತರ್ನಾಕ್ ಕಾರ್ನಾಮೆಗಳ ಬಗ್ಗೆ ಅದೆಷ್ಟು ಗೊತ್ತಿತ್ತೋ ಇಲ್ಲವೋ. ಅವನು ಎಲ್ಲ ಹದಿಹರೆಯದ ಹುಡುಗರ ಹಾಗೆ ಆಟೋಟಗಳು, ಸಂಗೀತ, ಸಾಮಾಜಿಕ ಜಾಲತಾಣಗಳು ಎಂದು ತನ್ನ ಪಾಡಿಗೆ ತಾನಿದ್ದ.

ತಂದೆ ಎದುರಿಗಿದ್ದಾಗ ತಂದೆಯನ್ನು ಅಷ್ಟಾಗಿ ಮಿಸ್ ಮಾಡಿಕೊಂಡಿರಲಿಕ್ಕಿಲ್ಲ. ಆದರೆ ಸೆಪ್ಟೆಂಬರ್ ೨೦೧೧ ಹೊತ್ತಿಗೆ ತಂದೆಯ ನೆನಪು ಜಾಸ್ತಿಯಾಗತೊಡಗಿತು. ತಂದೆಯನ್ನು ಹುಡುಕಲು ಮನೆ ಬಿಟ್ಟು ಹೊರಟ. ಚೀಟಿಯೊಂದನ್ನು ಬರೆದಿಟ್ಟು ಪರಾರಿ.

ತಂದೆ ಯೆಮೆನ್ ದೇಶದ ಶಾಬ್ವಾ ಪ್ರಾಂತದಲ್ಲಿ ಎಲ್ಲೋ ಅಡಗಿದ್ದಾನೆ ಅನ್ನುವ ಮಾಹಿತಿ ಇತ್ತು. ಅಲ್ಲಿಗೇ ಹೋದ. ಆದರೆ ಅಲ್ಲಿ ಆಗಿದ್ದ ಮೊದಲಿನ ಡ್ರೋನ್ / ವಿಮಾನ ದಾಳಿಯಲ್ಲಿ ಪವಾಡದ ರೀತಿಯಲ್ಲಿ ಪಾರಾಗಿದ್ದ ಅನ್ವರ್ ಅಲ್ -ಅವಲಾಕಿ ಅಲ್ಲಿಂದ ಬೇರೆ ಕಡೆ ಹೋಗಿದ್ದ.

ತಂದೆಯನ್ನು ಹುಡುಕಿಕೊಂಡು ಯೆಮೆನ್ ದೇಶದ ತುಂಬಾ ಅಲೆದ. ಎಷ್ಟೋ ದಿವಸಗಳ ನಂತರ ಸುದ್ದಿ ತಿಳಿಯಿತು. ಜಿಹಾದಿ ಪಿತಾಜಿ ಇನ್ನಿಲ್ಲ. ಡ್ರೋನ್ ದಾಳಿಯಲ್ಲಿ ಪಿತಾಜಿ ಫಿನಿಷ್ ಆಗಿದ್ದಾನೆ ಎಂದು. ಮನೆಗೆ ಫೋನ್ ಮಾಡಿ ತಿಳಿಸಿದ. ವಾಪಸ್ ಬರುತ್ತಿದ್ದೇನೆ ಎಂದು ಕೂಡ ಹೇಳಿದ.

ಆದರೆ ಅವನು ಮನೆಗೆ ಮರಳಲಿಲ್ಲ. ಅಂದು ಅಕ್ಟೋಬರ್ ೧೪, ೨೦೧೧. ತಂದೆ ಅವಲಾಕಿ ತೀರಿಹೋಗಿ ಎರಡು ವಾರಗಳಾಗಿತ್ತು. ಮನೆಗೆ ಮರಳುತ್ತಿದ್ದ ಮಗ ಅಬ್ದುಲ್ ರಹಮಾನ್ ಅವಲಾಕಿ ದಾರಿಯಲ್ಲಿ ಹೋಟೆಲೊಂದರ ಹೊರಾಂಗಣದಲ್ಲಿ ಕೂತಿದ್ದ. ಲೋಕಲ್ ಸ್ನೇಹಿತರೊಂದಿಗೆ ತಿಂಡಿ ತೀರ್ಥ ಮಾಡಿಕೊಂಡಿದ್ದ. ದೂರದಲ್ಲಿ ಮತ್ತದೇ ಆವಾಜ್ ಕೇಳಿ ಬಂತು. ಕ್ರಮೇಣ ಜೋರಾಗತೊಡಗಿತು. ಮತ್ತೆ ರುದ್ರವೀಣೆಯ ಝೇಂಕಾರ. ಆಗಸದಲ್ಲಿ ಮತ್ತೆ ಮೂಡಿಬಂದಿದ್ದವು ರಾಕ್ಷಸ ಡ್ರೋನುಗಳು.

ಏನಾಗುತ್ತಿದೆ ಎಂದು ಅರಿವಾಗುವ ಮುನ್ನವೇ ಡ್ರೋನುಗಳಿಂದ ಹಾರಿದ್ದ ಕ್ಷಿಪಣಿಗಳು ಅವಲಾಕಿ ಕುಳಿತಿದ್ದ ಹೋಟೆಲನ್ನು ಚಿಂದಿ ಚಿಂದಿ ಮಾಡಿದ್ದವು. ಫುಲ್ ಫ್ಲಾಟ್. ಹತ್ತಾರು ಜನ ಮಟಾಷ್. ಮಗ ಕೂಡ ಅಪ್ಪನಂತೆ ಡ್ರೋನ್ ದಾಳಿಯಲ್ಲಿ ಫಿನಿಷ್!

ಸುದ್ದಿ ತಿಳಿದ ಹತ್ತಾರು ಘಂಟೆಗಳ ನಂತರ ಸ್ನೇಹಿತರಾರೋ ಆತನ ಫೇಸ್ಬುಕ್ ಖಾತೆಯನ್ನು ಮರಣೋತ್ತರ ಖಾತೆಯನ್ನಾಗಿ ಬದಲಾಯಿಸಿದ್ದರು. ಅಲ್ಲಿ ಶ್ರದ್ಧಾಂಜಲಿಗಳು ಹರಿದುಬರುತ್ತಿದ್ದವು.

ಅವನ ದುರ್ದೈವ ನೋಡಿ. ಅಮೇರಿಕಾದವರಿಗೆ ಅವನನ್ನು ಕೊಲ್ಲುವ ಯಾವ ಇರಾದೆಯೂ ಇರಲಿಲ್ಲ. ಅಪ್ಪ ದೊಡ್ಡ ಉಗ್ರನಿದ್ದಾನೆ ಅಂದಾಕ್ಷಣ ಮಗ ಕೂಡ ಉಗ್ರ, ಅವನನ್ನೂ ಕೊಲ್ಲಬೇಕು ಅಂತೇನೂ ಇಲ್ಲವಲ್ಲ. ಮಗ ಅವಲಾಕಿ ಹತ್ಯಾ ಪಟ್ಟಿಯಲ್ಲಿ ಇರಲಿಲ್ಲ. ಅಂದು ನಿಜವಾಗಿ ಮುಹೂರ್ತವಿಟ್ಟಿದ್ದು ಇಬ್ರಾಹಿಂ ಅಲ್ - ಬನ್ನಾ ಎನ್ನುವ, ಈಜಿಪ್ಟ್ ಮೂಲದ, ಅಲ್ - ಖೈದಾ ಉಗ್ರನಿಗಾಗಿ. ಅವನೂ ಅವತ್ತು ಅದೇ ಹೋಟೆಲಿನಲ್ಲಿದ್ದಾನೆ ಎನ್ನುವ ಮಾಹಿತಿ ಬಂದಿತ್ತು. ಆದರೆ ಕಾರ್ಯಾಚರಣೆ ಮುಗಿದ ಎಷ್ಟೋ ದಿನಗಳ ನಂತರ ಗೊತ್ತಾಯಿತು, ಆ ಈಜಿಪ್ಟ್ ಮೂಲದ ಉಗ್ರ ಅಂದು ಅಲ್ಲಿ ಇರಲೇ ಇಲ್ಲ ಎಂದು. ಮಾಹಿತಿ ತಪ್ಪಾಗಿತ್ತು. ಅದೇನೋ ಅಂತಾರಲ್ಲ...wrong place and wrong time...ಆ ಮಾದರಿಯಲ್ಲಿ ಯಾವುದಕ್ಕೂ ಸಂಬಂಧವಿರದ ಅವಲಾಕಿ ಜೂನಿಯರ್ ಬಲಿಯಾಗಿದ್ದ. ಅಪ್ಪ ಮಾಡಿದ ಪಾಪಗಳು ಮಗನಿಗೆ ಸುತ್ತಿಗೊಂಡಿದ್ದವೇನೋ? ಯಾರಿಗೆ ಗೊತ್ತು.

ಅವನೊಬ್ಬ ಇನ್ನೂ ಇದ್ದನಲ್ಲ. ಡಾ. ನಾಸಿರ್ ಅಲ್ - ಅವಲಾಕಿ. ಯೆಮೆನ್ ದೇಶದ ರಾಜಕಾರಣಿ. ಕುಟುಂಬದ ಪಿತಾಮಹ. ಮಗ ಮತ್ತು ಮೊಮ್ಮಗ ಇಬ್ಬರನ್ನೂ ಡ್ರೋನ್ ದಾಳಿಯಲ್ಲಿ ಕಳೆದುಕೊಂಡ ಅದೃಷ್ಟಹೀನ. ಅವನು ಕಂಪ್ಯೂಟರ್ ಮುಂದೆ ಕುಳಿತು ಒಂದು ಶ್ರದ್ಧಾಂಜಲಿ ವಿಡಿಯೋ ಮಾಡಿ ಯುಟ್ಯೂಬ್ ಮೇಲೆ ಹರಿಬಿಟ್ಟ. ತನ್ನ ಮಗನ ಜೀವನ ಮತ್ತು ಆತನ ಉಪದೇಶಗಳು ವ್ಯರ್ಥವಾಗಿಹೋಗದಂತೆ ನೋಡಿಕೊಳ್ಳುವುದು ಸಮುದಾಯದ ಜವಾಬ್ದಾರಿಯೆಂದು ಹೇಳಿದ. ಅಮೇರಿಕಾವನ್ನು ಒಂದಿಷ್ಟು ಬೈದ. ಒಟ್ಟಿನಲ್ಲಿ ವೈಕುಂಠ ಸಮಾರಾಧನೆ ಮಾಡಿ ಮುಗಿಸಿದ ಮಾದರಿಯಲ್ಲಿ ಕೆಲಸ ಮುಗಿಸಿದ. 

ಇವೆಲ್ಲಾ ರಹಸ್ಯ ಕಾರ್ಯಾಚರಣೆಗಳು. ಸರ್ಕಾರ ಬಹಿರಂಗವಾಗಿ ಮಾತಾಡುವುದಿಲ್ಲ. ಆದರೂ ಮಾನವಹಕ್ಕುಗಳ ಹೋರಾಟಗಾರರು ಸಿಐಎ, ಸೈನ್ಯವನ್ನು ಕೋರ್ಟಿಗೆ ಎಳೆದಿದ್ದರು. ರಾಷ್ಟೀಯ ಭದ್ರತೆ ಮತ್ತು ರಹಸ್ಯ ಕಾಪಾಡಿಕೊಳ್ಳುವ ಕಾನೂನುಗಳ ಸಹಾಯದಿಂದ ಏನೂ ದೊಡ್ಡ ಭಾನಗಡಿಯಾಗಿಲ್ಲ.

ಮಾಹಿತಿಯನ್ನು ಕೊಡದೇ ಸತಾಯಿಸುತ್ತಿದ್ದ ಸಿಐಎ ವಕೀಲರನ್ನು ಹಿಡಿದು ತೀಡಿದ ನ್ಯಾಯಾಧೀಶರು ಹೇಳಿದರಂತೆ, 'ರೀ ಸ್ವಾಮಿ, ಸಿಐಎ ಏನೂ ಮಾಡಿಲ್ಲ. ಡ್ರೋನ್ ಹಾರಿಸಿಲ್ಲ. ಉಗ್ರರನ್ನು ಕೊಂದಿಲ್ಲ ಎಂದು ಹೇಳುತ್ತೀರಿ. ಇದೊಳ್ಳೆ ರಾಜ ಮೈಮೇಲೆ ಬಟ್ಟೆಯಿದ್ದಾಗಲೂ ಬಟ್ಟೆಯಿಲ್ಲ ಅನ್ನುವಂತೆ ಇದೆಯೆಲ್ಲ!' ಎಂದು ಹತಾಶೆಯಲ್ಲಿ ತಮ್ಮ ಸುತ್ತಿಗೆ ಕುಟ್ಟಿ ಎದ್ದು ಹೋದರಂತೆ. ಅವರಾದರೂ ಎಷ್ಟಂತ ತಲೆ ಚಚ್ಚಿಕೊಂಡಾರು. ಮೊಂಡ ಸಿಐಎ ಹಾಗೆಲ್ಲ ತನ್ನ ಗುಟ್ಟುಗಳನ್ನು ಅಧಿಕೃತವಾಗಿ ಬಿಟ್ಟುಕೊಡುವುದಿಲ್ಲ. ಆದರೆ ಅನಧಿಕೃತವಾಗಿ ಮಾತ್ರ ತನಗೆ ಬೇಕಾದ ವರದಿಗಾರರಿಗೆ ಬೇಕಾದಷ್ಟೇ ಮಾಹಿತಿಯನ್ನು ಕೊಡುತ್ತದೆ. ಅವರು ಅದನ್ನು ಬರೆದು, ಅದು ಜಗತ್ತಿನಲ್ಲಿ ಎಲ್ಲ ಕಡೆ ಕಡೆಗೆ ಹರಡಿ, ಉಗ್ರರಲ್ಲಿ ಒಂದು ತರಹದ ಹೆದರಿಕೆಯನ್ನು ಹುಟ್ಟಿಸಿರುತ್ತದೆ. ಹೆದರಿದ ಉಗ್ರ ಎಷ್ಟೋ ಉತ್ತಮ. ಸದಾ ತನ್ನ ಬೆನ್ನ ಹಿಂದೆ ಅಪಾಯಗಳನ್ನು ಹುಡುಕುತ್ತಾ ಇರುತ್ತಾನಾದ್ದರಿಂದ ಅವನಿಗೆ ಪೂರ್ತಿ ವೇಳೆ ಸ್ಕೀಮ್ ಹಾಕಲಾಗುವುದಿಲ್ಲ.

ಜನರಲ್ ಡೇವಿಡ್ ಪೆಟ್ರೆಯಸ್ ಸಿಐಎ ಮುಖ್ಯಸ್ಥರಾಗುವವರೆಗೂ ಡ್ರೋನ್ ಕಾರ್ಯಾಚರಣೆಗಳಿಗೆ ಒಂದು ಶಿಸ್ತು ಬಂದಿರಲಿಲ್ಲ. ಸೇನೆ ಮತ್ತು ಸಿಐಎ ನಲ್ಲಿ ಇದ್ದ tech savvy ಜನರು ಒಳ್ಳೆ ವಿಡಿಯೋ ಗೇಮ್ ಆಡಿದಂತೆ ಡ್ರೋನ್ ಹಾರಿಸಿಕೊಂಡಿದ್ದರು. ಡ್ರೋನ್ ತಂತ್ರಜ್ಞಾನ ಕೂಡ ಪೂರ್ತಿಯಾಗಿ ಪ್ರಬುದ್ಧವಾಗಿರಲಿಲ್ಲ. latency (ವಿಳಂಬ) ಮುಂತಾದ ಅಡೆತಡೆಗಳು ಇದ್ದವು. ಹತ್ಯಾದರ (kill rate) ತೃಪ್ತಿದಾಯಕವಾಗಿರಲಿಲ್ಲ. ದೂರ ಕುಳಿತು, ಲಕ್ಷಾಂತರ ಡಾಲರ್ ಬೆಲೆಬಾಳುವ ಡ್ರೋನ್  ಕ್ಷಿಪಣಿಗಳನ್ನು ಬೇಕಾಬಿಟ್ಟಿ ಹಾರಿಸಲು ಅವು ದೀಪಾವಳಿ ಪಟಾಕಿಗಳಲ್ಲ ನೋಡಿ.

ಸೇನೆಯ ಶಿಸ್ತನ್ನು ಸಿಐಎ ಗೆ ತರಲು ಪೆಟ್ರೆಯಸ್ ಶ್ರಮಪ್ರಟ್ಟರು. ತಕ್ಕ ಮಟ್ಟಿಗೆ ಯಶಸ್ವಿ ಕೂಡ ಆದರು. ಆದರೆ ಸಿಐಎ ಮುಖ್ಯಸ್ಥರಾಗಿ ಒಂದು ವರ್ಷ ಚಿಲ್ಲರೆ ದಿನ ಇದ್ದರು ಅಷ್ಟೇ. ತಾವೇ ಮಾಡಿಕೊಂಡ ಲಫಡಾ ಅವರಿಗೆ ಮುಳುವಾಯಿತು. ಒಬಾಮಾ ಸರ್ಕಾರಕ್ಕೆ ಹೆಚ್ಚಿನ ಮುಜುಗರ ತರುವ ಮೊದಲೇ ರಾಜೀನಾಮೆ ಕೊಟ್ಟು ಮನೆಗೆ ಹೋದರು. ಅಥವಾ ರಾಜೀನಾಮೆ ಕೇಳಿ ಪಡೆದುಕೊಂಡು ಮನೆಗೆ ಕಳಿಸಲಾಯಿತು.

ತಮ್ಮ ಆತ್ಮಕಥೆಯನ್ನು ಬರೆಯಬೇಕೆಂಬ ಹುಕಿ ಅವರಿಗೂ ಇತ್ತು. ಆದರೆ ವೇಳೆ ಕಮ್ಮಿ. ಅದಕ್ಕಾಗಿ ಪೌಲಾ ಬ್ರಾಡವೆಲ್ ಎಂಬ ಲೇಖಕಿಯನ್ನು ನೇಮಕಮಾಡಿಕೊಂಡರು. ಆಕೆ ಇವರ ಕಚೇರಿಯಲ್ಲೇ ಕೂತು ಇವರ ಆತ್ಮಕಥೆ ಬರೆಯತೊಡಗಿದಳು. ಆತ್ಮಕಥೆ ಹೇಳುತ್ತಾ ಹೇಳುತ್ತಾ ಬರೆಯುತ್ತಾ ಬರೆಯುತ್ತಾ ಇಬ್ಬರ ಆತ್ಮಗಳ ಸಮ್ಮಿಲನ ಆಗಿಬಿಟ್ಟಿತು ಎಂದು ಕಾಣುತ್ತದೆ. ಅಲ್ಲೊಂದು 'ಪರಮೇಶಿ ಪ್ರೇಮಪ್ರಸಂಗ' ಶುರುವಾಗಿಬಿಟ್ಟಿತು. ಬೇಹುಗಾರಿಕೆಯಂತಹ ಅತಿಸೂಕ್ಷ್ಮ ಹುದ್ದೆಗಳಲ್ಲಿರುವ ವ್ಯಕ್ತಿಗಳಿಗೆ ಅಂತಹ ಲಫಡಾಗಳು ಸಂಪೂರ್ಣವಾಗಿ ವರ್ಜ್ಯ. ಮಧುಬಲೆ (honey trap) ಮೂಲಕವೇ ತಾನೇ ದೊಡ್ಡ ದೊಡ್ಡ ಮನುಷ್ಯರನ್ನು ಹಳ್ಳಕ್ಕೆ ಕೆಡವಿ, ಬ್ಲಾಕ್ಮೇಲ್ ಮಾಡಿ, ಮಾಹಿತಿ ಗುಂಜುವುದು? ಇಲ್ಲಿ ಆ ಅಪಾಯ ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಸಂಸಾರವೊಂದಿಗ ಸಿಐಎ ಮುಖ್ಯಸ್ಥ ತನ್ನ ಆತ್ಮಕಥೆ ಬರೆಯಲು ಬಂದ ಲೇಖಕಿಯ ಆತ್ಮದಲ್ಲಿ ಲೀನನಾಗಿ ಪಡ್ಡೆ ಹುಡುಗನಂತೆ ಆಡುತ್ತಾನೆ ಅನ್ನುವುದು ಸಹಿಸಲು ಅಸಾಧ್ಯವಾದ ವಿಷಯವಾಗಿತ್ತು.

ಈ ಆತ್ಮಕಥೆಯ ಲೇಖಕಿಯಾದರೂ ಸುಮ್ಮನೆ ಜಮ್ಮಚಕ್ಕ ಮಾಡಿ ಎದ್ದು ಹೋದಳೇ? ಇಲ್ಲ. ಸಿಐಎ ಮುಖ್ಯಸ್ಥನಂತಹ ದೊಡ್ಡ ಶಕ್ತಿಶಾಲಿ ಮನುಷ್ಯನ ಸಾಂಗತ್ಯ ಸಿಕ್ಕಿದ್ದೇ ಚಾನ್ಸ್ ಎಂದು ಹೇಳಿ ಸ್ವಾಮಿಕಾರ್ಯದೊಂದಿಗೆ ಸ್ವಕಾರ್ಯವನ್ನೂ ಮಾಡಿಕೊಳ್ಳತೊಡಗಿದಳು. ಪೆಟ್ರೆಯಸ್ ಸಾಹೇಬರ ಹೆಸರನ್ನು ಹೇಳಿಕೊಂಡು ಧಮಿಕಿ ಹಾಕುವ ಮಟ್ಟಕ್ಕೆ ಬಂದಳು. ಆವಾಗ ಇದೆಲ್ಲದರ ಮೇಲೆ ಬರೋಬ್ಬರಿ ನಜರ್ ಮಡಗಿದ್ದ FBI ಎಚ್ಚರಿಕೆಯ ಗಂಟೆ ಬಾರಿಸಿತು. ಒಬಾಮಾ ಸಾಹೇಬರು ಭ್ರಮನಿರಸನಗೊಂಡಿದ್ದರು. ಪೆಟ್ರೆಯಸ್ ಅವರ ಬಾಸ್ ಆಗಿದ್ದ ಅಂದಿನ ರಾಷ್ಟ್ರೀಯ ಬೇಹುಗಾರಿಕೆ ನಿರ್ದೇಶಕ (Director Of National Intelligence) ಜಿಮ್ ಕ್ಲಾಪರ್ ಅವರನ್ನು ಕರೆದು - 'ಅವರ ರಾಜೀನಾಮೆ ಪಡೆದುಕೊಳ್ಳಿ. ಇಲ್ಲವಾದರೆ ನಾನೇ ಅವರನ್ನು ಓಡಿಸಬೇಕಾಗುತ್ತದೆ. ಇದನ್ನು ತ್ವರಿತವಾಗಿ ಮಾಡಿ, ಪ್ಲೀಸ್' ಅಂದು ತಮ್ಮ ತಲೆ ಮೇಲೆ ಕೈಯಾಡಿಸಿಕೊಂಡರು. ಆದರೆ ಒಂದು ತೊಂದರೆಯೂ ಇತ್ತು. ಮುಂದಿನ ಕೆಲವೇ ತಿಂಗಳಲ್ಲಿ ಅಧ್ಯಕ್ಷರ ಚುನಾವಣೆ ಬರಲಿತ್ತು. ಒಬಾಮಾ ಎರಡನೇ ಅವಧಿಗೆ ಸಿದ್ಧರಾಗುತ್ತಿದ್ದರು. ಗೆಲ್ಲುವ ಸಾಧ್ಯತೆಗಳು ಚೆನ್ನಾಗಿದ್ದವು. ಅವು ಹಾಗೇ ಇರಲಿ ಎಂದುಕೊಂಡು ಈ ಲಫಡಾವನ್ನು ಅಲ್ಲಿಯವರೆಗೆ ಹೇಗೋ ಸಂಬಾಳಿಸಿದರು ಎಂದು ಕಾಣುತ್ತದೆ. ನವೆಂಬರ್ ೯ ರಂದು ಒಬಾಮಾ ಮತ್ತೊಮ್ಮೆ ಅಧ್ಯಕ್ಷರಾಗಿ ಚುನಾಯಿತರಾದರು. ಈಕಡೆ ಅಂದೇ ಪೆಟ್ರೆಯಸ್ ಸಾಹೇಬರು ತಮ್ಮ ಕಚೇರಿ ಖಾಲಿ ಮಾಡಿದರು. ಆತ್ಮಕಥೆ ಬರೆಯಲು ಬಂದು ಇವರ ನೌಕರಿಗೆ ಕುತ್ತು ತಂದಾಕೆ ಆಕೆ ಎಲ್ಲಿ ಹೋದಳು? ಆಕೆಯನ್ನು ಪೆಟ್ರೆಯಸ್ ಸಾಹೇಬರೇ ಮೊದಲು ಓಡಿಸಿದ್ದರು. ತಮ್ಮ ಹೆಸರಿನಲ್ಲಿ ಧಮಿಕಿ ಹಾಕುವಷ್ಟು ಮುಂದುವರೆದಿದ್ದಾಳೆ ಎಂದು ತಿಳಿದುಬಂದಾಗಲೇ ಆಕೆಗೆ ಗೇಟ್ ಪಾಸ್ ಕೊಟ್ಟು ಕಳಿಸಿದ್ದರು.

ಹೀಗೆ ಡ್ರೋನ್ ಕಾರ್ಯಾಚರಣೆಯ ಸ್ವರೂಪವನ್ನೇ ಬದಲಾಯಿಸಿದ್ದ ಪೆಟ್ರೆಯಸ್ ತಮ್ಮ ವೃತ್ತಿ ಜೀವನವನ್ನು ಮಾತ್ರ ವಿರೂಪಗೊಳಿಸಿಗೊಂಡು ಮನೆ ಸೇರಿದ್ದರು.

ಏನೇ ಇರಲಿ, ರಾಷ್ಟ್ರದ ಹಿತರಕ್ಷಣೆಗಾಗಿ ತನ್ನದೇ ದೇಶದ ನಾಗರಿಕನೊಬ್ಬನನ್ನು ಕೊಲ್ಲುವುದಿದೆಯೆಲ್ಲ ಅದು ತುಂಬಾ ಕಷ್ಟಕರ ಸಂಗತಿ. ತನ್ನ ವಿರೋಧಿಗಳನ್ನು ಮುಲಾಜಿಲ್ಲದೆ ಕೊಲ್ಲುವ ಇಸ್ರೇಲ್ ಸಹ ತನ್ನ ನಾಗರಿಕರನ್ನು ಕೊಲ್ಲುವಾಗ ಬಹಳ ಯೋಚನೆ ಮಾಡುತ್ತದೆ. ಹಾಗಾಗಿ ತಾನೇ ಮಾರ್ಡೇಚಾಯ್ ವನುನುವನ್ನು ಜಗತ್ತಿನ ತುಂಬೆಲ್ಲಾ ಹುಡುಕಿ, ಇಂಗ್ಲೆಂಡಿನಲ್ಲಿ ಪತ್ತೆ ಹಚ್ಚಿ, honey trap ಮಾಡಿ ಪುಸಲಾಯಿಸಿ ಇಟಲಿ ದೇಶಕ್ಕೆ ಒಯ್ದು, ಅಲ್ಲಿಂದ ಕಿಡ್ನಾಪ್ ಮಾಡಿ, ಇಸ್ರೇಲಿಗೆ ಕರೆತಂದು, ಕೇಸ್ ಹಾಕಿ, ಇಪ್ಪತ್ತು ಚಿಲ್ಲರೆ ವರ್ಷಗಳ ಕಾಲ ಸೆರೆಮನೆಗೆ ತಳ್ಳಿತ್ತು. ಪರಮಾಣು ವಿಜ್ಞಾನದ ರಹಸ್ಯಗಳನ್ನು ಕದ್ದು ಇಸ್ರೇಲಿನಿಂದ ಓಡಿದ್ದ ತನ್ನದೇ ದೇಶದ ನಾಗರಿಕನನ್ನು, ಮನಸ್ಸು ಮಾಡಿದ್ದರೆ, ಇಸ್ರೇಲ್ ಜಗತ್ತಿನ ಯಾವ ದೇಶದಲ್ಲಾದಾರೂ ಕೊಂದು ಬರಬಹುದಿತ್ತು. ಅವನ ಹೆಣ ಕೂಡ ಸಿಗುತ್ತಿರಲಿಲ್ಲ. ಆದರೆ  ಇಸ್ರೇಲ್ ಹಾಗೆ ಮಾಡಲಿಲ್ಲ. ತನ್ನದೇ ದೇಶದ ನಾಗರಿಕನನ್ನು ಕೊಂದರೆ ಅದನ್ನು ದೇಶದಲ್ಲಿ ಜನತೆಗೆ ಸಮಜಾಯಿಸಿಕೊಟ್ಟು ವಿವರಿಸುವುದು ಕಷ್ಟ. ಸರಕಾರ ಬದಲಾಗಿಹೋದೀತು. ರಾಜಕಾರಣಿಗಳ ಭವಿಷ್ಯವೇ ಖತಂ ಆಗಿಹೋದೀತು ಎಂದೆಲ್ಲ ವಿಚಾರ ಮಾಡಿ, ಎಲ್ಲೆಲ್ಲೋ ಅಲೆದುಕೊಂಡಿದ್ದ ಕಳ್ಳನನ್ನು ಇಲ್ಲದ ತೊಂದರೆ ತೆಗೆದುಕೊಂಡು ಬಂಧಿಸಿ ವಾಪಸ್ ಕರೆತಂದಿತೇ ವಿನಃ ಎನ್ಕೌಂಟರ್ ಮಾಡಲಿಲ್ಲ.

ಮೊತ್ತಮೊದಲ ಬಾರಿಗೆ ವಿದೇಶದಲ್ಲಿ ಡ್ರೋನ್ ಉಪಯೋಗಿಸಿ ತನ್ನದೇ ದೇಶದ ನಾಗರಿಕನನ್ನು ಕೊಲ್ಲುವ ಸಂದರ್ಭ ಬಂದಾಗ ಇಂತಹದೇ ದ್ವಂದ್ವಗಳನ್ನು ಅಮೇರಿಕಾ ಕೂಡ ಎದುರಿಸಿತ್ತು. ಇದಕ್ಕಾಗಿಯೇ ಖ್ಯಾತ ವಕೀಲರ ಒಂದು ತಂಡ ಹಲವಾರು ತಿಂಗಳುಗಳ ಕಾಲ ಸಂವಿಧಾನವನ್ನು ಅಭ್ಯಾಸ ಮಾಡಿ ಒಂದು ಸಮಗ್ರ ಕಾನೂನು ಅಭಿಪ್ರಾಯವನ್ನು ಒಬಾಮಾ ಸಾಹೇಬರಿಗೆ ಕೊಟ್ಟಿತ್ತು. ಅವರೇ ಹಾರ್ವರ್ಡ್ ವಿಶ್ವವಿದ್ಯಾಲಯದ ಖ್ಯಾತ ಕಾನೂನು ಕಾಲೇಜಿನಲ್ಲಿ ಓದಿದ ಪ್ರತಿಭಾವಂತ ವಕೀಲರು. ಅದನ್ನು ಕಿಸೆಯಲ್ಲಿ ಸರಿಯಾಗಿ ಇಟ್ಟುಕೊಂಡೇ ವಿದೇಶದಲ್ಲಿ ಬಲಿಯುತ್ತಿದ್ದ ಸ್ವದೇಶಿ ಉಗ್ರರ ಮೇಲೆ ಡ್ರೋನ್ ದಾಳಿಯ ಅನುಮತಿ ಕೊಟ್ಟಿದ್ದರು.

ಮುಂದೆ ಡ್ರೋನ್ ದಾಳಿ ಎಂಬುದು ಸರ್ವೇಸಾಮಾನ್ಯವಾಗಿಹೋಯಿತು. ನೆವಡಾ ರಾಜ್ಯದ ವಿಶಾಲ ಮರಭೂಮಿಯಲ್ಲಿ ಡ್ರೋನ್ ಕಾರ್ಯಾಚರಣೆಗಳ ಕೇಂದ್ರಸ್ಥಾನವಿದೆಯೆಂದು ಸುದ್ದಿ. ಅಲ್ಲಿ ಕುಳಿತ ಡ್ರೋನಾಚಾರ್ಯರು ವಿಶ್ವಾದ್ಯಂತ ಉಗ್ರರ ಬೇಟೆಯನ್ನು ಇಂದಿಗೂ ಮುಂದುವರೆಸಿದ್ದಾರೆ. ಇತ್ತೀಚೆಗೆ ಬಲಿಯಾದ ಇರಾನಿನ ಮಹಾದಂಡನಾಯಕ ಸುಲೇಮಾನಿ ಇದಕ್ಕೆ ಲೇಟೆಸ್ಟ್ ಉದಾಹರಣೆ. ಕಳ್ಳನಂತೆ ಬಾಗ್ದಾದಿಗೆ ಬಂದು ಇಳಿದವನಿಗೆ ಏನು ಬಂದು ಬಡಿಯಿತು ಎಂದು ಅರ್ಥವಾಗುವುದರ ಮುನ್ನವೇ ಭಸ್ಮವಾಗಿದ್ದ. ಸುತ್ತಮುತ್ತಲಿನ ಜನ ತಲೆಯೆತ್ತಿ ನೋಡಿದರೆ...ಮತ್ತೆ ಅದೇ...ಡ್ರೋನುಗಳ ರುದ್ರವೀಣೆಯ ಝೇಂಕಾರ.

ಮುಖ್ಯ ಮಾಹಿತಿ ಮೂಲ: The Way of the Knife: The CIA, a Secret Army, and a War at the Ends of the Earth by Mark Mazzetti

ಪುಸ್ತಕದ ಲೇಖಕರು ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ವಿಜೇತರು.

Wednesday, July 29, 2020

ಭೂಗತಲೋಕದೊಂದಿಗೆ ಮತ್ತೊಮ್ಮೆ ಭಾನಗಡಿ...ಸೂಪರ್ ಕಾಪ್ ರಾಕೇಶ್ ಮಾರಿಯಾ ಜೀವನಕಥನದಿಂದ

ಸೂಪರ್ ಕಾಪ್  ರಾಕೇಶ್ ಮಾರಿಯಾ ಜೀವನಕಥನ

ಅದು ಅಕ್ಟೋಬರ್ ೧೯೯೮ ರ ಸಮಯ. ಮುಂಬೈನಲ್ಲಿ ತುಂಬಾ ಆತಂಕದ ದಿನಗಳು ಅವು.   ಭೂಗತಲೋಕದವರಿಂದ ಹಫ್ತಾ ವಸೂಲಿ ಮತ್ತು ಗುಂಡಿನ ದಾಳಿಗಳು ಉತ್ತುಂಗದಲ್ಲಿದ್ದವು. ಕುಖ್ಯಾತ ಡಾನ್ ದಾವೂದ್ ಇಬ್ರಾಹಿಂ ಮತ್ತು ಆತನ ಸೋದರ ಅನೀಸ್ ಇಬ್ರಾಹಿಂ ಮುಂಬೈನ ಹವಾಮಾನವನ್ನು ತುಂಬಾ ಗರಮ್ ಮಾಡಿಬಿಟ್ಟಿದ್ದರು. ಅವರ ಪರವಾಗಿ ಅವರ ಬಂಟರಾದ ಛೋಟಾ ಶಕೀಲ್ ಮತ್ತು ಅಬು ಸಲೇಮ್ ಮುಂಬೈ ತುಂಬಾ 'ಧೂಮ್ ಮಚಾಲೇ ಧೂಮ್!' ಎಂಬಂತೆ ದಾಂಗುಡಿ ಇಟ್ಟಿದ್ದರು. ಬಾಲಿವುಡ್ ಚಿತ್ರೋದ್ಯಮ, ಬಿಲ್ಡರುಗಳು, ವ್ಯಾಪಾರಿಗಳೇ ಅವರ ಮುಖ್ಯ ಟಾರ್ಗೆಟ್ಟುಗಳು. ಭೂಗತಲೋಕದ ಇತರ ಡಾನುಗಳಾದ ಛೋಟಾ ರಾಜನ್, ಅರುಣ್ ಗಾವ್ಳಿ, ಅಶ್ವಿನ್ ನಾಯಕ್ ಕೂಡ ಸಕ್ರಿಯರಾಗಿದ್ದರು. ಒಟ್ಟಿನಲ್ಲಿ ಇವರೆಲ್ಲರ ಕಾರ್ನಾಮೆಗಳಿಂದ ಮುಂಬೈ ಗಡ ಗಡ ಗಡ ಗಡ!

ಆಗ ಭಾಜಪ - ಶಿವಸೇನೆಯ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿತ್ತು. ಟಫ್ ಕಾಪ್ ಎಂದೇ ಖ್ಯಾತರಾಗಿದ್ದ ಖಡಕ್ ಪೊಲೀಸ್ ಅಧಿಕಾರಿ ಅರವಿಂದ್ ಇನಾಮದಾರ್ ರಾಜ್ಯದ ಪೊಲೀಸ್ ಮುಖ್ಯಸ್ಥರಾಗಿದ್ದರು. ಮುಂಬೈ ಶಹರದ ಪೊಲೀಸ್ ಕಮಿಷನರ್ ಆಗಿ ಮತ್ತೊಬ್ಬ ಟಫ್ ಕಾಪ್ ರಾನ್ನಿ ಮೆಂಡೋನ್ಸಾ ಇದ್ದರು. ೧೯೯೭ ರಲ್ಲಿ ಕ್ಯಾಸೆಟ್ ಕಿಂಗ್ ಗುಲಶನ್ ಕುಮಾರನನ್ನು, ಕೇಳಿದಷ್ಟು ಹಫ್ತಾ ಕೊಡಲಿಲ್ಲ ಎನ್ನುವ ಕಾರಣಕ್ಕೆ, ಡಾನ್ ಅಬು ಸಲೇಂನ ಬಂಟರು ನಡುಬೀದಿಯಲ್ಲಿ ಉಡಾಯಿಸಿದ್ದರು. ತಾಳತಪ್ಪುತ್ತಿರುವ ಕಾನೂನು ವ್ಯವಸ್ಥೆಯನ್ನು ಸರಿದಾರಿಗೆ ತರಲು ಗಟ್ಟಿಗ ರಾನ್ನಿ ಮೆಂಡೋನ್ಸಾರನ್ನು ಮುದ್ದಾಂ ತಂದು ಕಮಿಷನರ್ ಹುದ್ದೆಯಲ್ಲಿ ಕೂರಿಸಲಾಗಿತ್ತು.

ಸರಕಾರದ ಮೇಲೆ ಮತ್ತು ಪೊಲೀಸರ ಮೇಲೆ ಒತ್ತಡ ದಿನದಿಂದ ದಿನಕ್ಕೆ ತುಂಬಾ ಜಾಸ್ತಿಯಾಗುತ್ತಿತ್ತು. ಮಾಧ್ಯಮಗಳು ಭೂಗತಲೋಕದ ಆಟಾಟೋಪಗಳನ್ನು ಹೈಲೈಟ್ ಮಾಡಿ, 'ಮುಂಬೈನಲ್ಲಿ ಏನಾಗುತ್ತಿದೆ? ಜವಾಬ್ದಾರರು ಯಾರು? ಉತ್ತರ ಕೊಡುವವರು ಯಾರು?' ಎಂದು ನಿರಂತರವಾಗಿ ಬೊಬ್ಬೆ ಹೊಡೆಯುತ್ತಿದ್ದವು.

೧೯೯೮, ಅಕ್ಟೋಬರ್ ೮ ರಂದು, ದೊಡ್ಡ ಬಿಸಿನೆಸ್ ಕುಳ ಭರತ್ ಷಾ ಅವರನ್ನು ಭೂಗತಲೋಕದವರು ಗುಂಡು ಹಾರಿಸಿ ಉಡಾಯಿಸಿಬಿಟ್ಟರು. 'ರೂಪಂ' ಮತ್ತು 'ರೂಪಮಿಲನ್' ಎಂಬ ಪ್ರಸಿದ್ಧ ಸಿದ್ಧಉಡುಪುಗಳ ಅಂಗಡಿಗಳ ಮಾಲೀಕನಾಗಿದ್ದ ಭರತ್ ಷಾನನ್ನು ಮುಂಬೈ ಪೊಲೀಸ್ ಕಮಿಷನರ್ ಕಚೇರಿಯ ಸಮೀಪದಲ್ಲೇ, ಕೊಂಚ ಆಚೆ ಇರುವ ರಸ್ತೆಯಲ್ಲಿ, ಗುಂಡಿಕ್ಕಿ ಕೊಲ್ಲಲಾಗಿತ್ತು. Underworld was becoming very daring and unafraid of anything or anybody!

(ಪುಸ್ತಕದ ಹೊರಗಿನ ಹೆಚ್ಚಿನ ಮಾಹಿತಿ: ಮೇಲಿನ ಭರತ್ ಷಾ ಬೇರೆ ಮತ್ತು ವಜ್ರದ ವ್ಯಾಪಾರಿ, ದೊಡ್ಡ ಬಾಲಿವುಡ್ ಕುಳ ಭರತ್ ಷಾ ಬೇರೆ.  ವಜ್ರದ ವ್ಯಾಪಾರಿ ಆ ಭರತ್ ಷಾ ಕೂಡ ಭೂಗತಲೋಕದ ಲಫಡಾದಲ್ಲಿ ಮುಂದೊಂದು ದಿನ ಸಿಕ್ಕಾಕಿಕೊಂಡಿದ್ದ. ಛೋಟಾ ಶಕೀಲನ ಪರವಾಗಿ ಬಾಲಿವುಡ್ಡಿನಲ್ಲಿ ಹಣ ತೊಡಗಿಸುತ್ತಾನೆ ಎಂದು ಬಂಧಿಸಿದ್ದರು ಅವನನ್ನು. 'ಚೋರಿ ಚೋರಿ ಚುಪ್ಕೇ ಚುಪ್ಕೇ' ಎನ್ನುವ ಸಲ್ಮಾನ್ ಖಾನ್, ಪ್ರೀತಿ ಜಿಂಟಾ, ರಾಣಿ ಮುಖರ್ಜಿ ನಟಿಸಿದ್ದ ಸಿನಿಮಾ ಬಗ್ಗೆ ತನಿಖೆ ಮಾಡಿದ್ದ ಪೊಲೀಸರು ನಿರ್ದೇಶಕ ನದೀಮ್ ರಿಜ್ವಿಯನ್ನು ಹಾಕಿ ರುಬ್ಬಿದಾಗ ಎಲ್ಲ ಬಾಯಿಬಿಟ್ಟಿದ್ದ. ಅವರೆಲ್ಲ ಭೂಗತರೊಂದಿಗೆ ಮಾತಾಡಿದ್ದ ಫೋನ್ ರೆಕಾರ್ಡಿಂಗ್ ಸಿಕ್ಕಿತ್ತು. ಆದರೆ ಕೊನೆಗೆ ಎಲ್ಲರೂ ನಿರಪರಾಧಿಗಳು ಎಂದು ಬಿಡುಗಡೆಯಾಗಿದ್ದು ಕೂಡ ಅಷ್ಟೇ ಸತ್ಯ...ಏನು ಹೇಳೋಣ ಅದಕ್ಕೆ!? Irony of our times!?)

ಈ ಭಯಾನಕ ಹತ್ಯೆಯ ನೆನಪು ಮಾಸುವ ಮೊದಲೇ, ಕೇವಲ ಒಂದು ವಾರದ ಮೊದಲು, ಅಕ್ಟೋಬರ್ ೧೩ ರಂದು, ಭಾಂಡುಪ್ಪಿನಲಿ ಹೋಟೆಲ್ ನಡೆಸಿಕೊಂಡಿದ್ದ ಕುರುಪ್ ಸಹೋದರರಾದ ಕೃಷ್ಣದಾಸ್ ಮತ್ತು ಹರಿದಾಸರನ್ನು, ಅವರು ಹೋಟೆಲಿನ ಗಲ್ಲಾಪೆಟ್ಟಿಗೆ ಮೇಲೆ ಕುಳಿತಿದ್ದಾಗೇ, ಗುಂಡಿಟ್ಟು ಕೊಲ್ಲಲಾಯಿತು. ಅಷ್ಟಕ್ಕೇ ಸುಮ್ಮನಾಗದ ಅಂಡರ್ವರ್ಲ್ಡ್ ಶೂಟರುಗಳು ಅಲ್ಲಿ ಕುಳಿತು ಉಪಹಾರ ಸೇವಿಸುತ್ತಿದ್ದ ಗ್ರಾಹಕರ ಮೇಲೂ ಅಡ್ಡಾದಿಡ್ಡಿಯಾಗಿ ಗುಂಡು ಹಾರಿಸಿ ಮೋಟಾರಬೈಕ್ ಮೇಲೆ ಪರಾರಿಯಾದರು.

ಇಂತಹ ಘಟನೆಗಳು ಸರ್ವೇಸಾಮಾನ್ಯ ಎಂಬಂತಾಗಿಬಿಟ್ಟಿತ್ತು. ಸದಾ ಚಮಕಾಯಿಸುತ್ತಿರುವ ಶಹರ ಎಂದೇ ಖ್ಯಾತವಾದ ಮುಂಬೈ ಮೇಲೆ ಮಂಕು ಛಾಯೆ ಕವಿದಿತ್ತು. ಭೂಗತಲೋಕದಿಂದ ಯಾವಾಗ ಫೋನ್ ಕರೆ ಬರುತ್ತದೋ ಎಂದು ಎಲ್ಲರೂ ಚಿಂತಿತರು. ಎಲ್ಲಿಂದ ಮತ್ತು ಯಾರಿಂದ ಎನ್ನುವುದಷ್ಟೆ ಪ್ರಶ್ನೆ. ಕರೆ ಬರುವುದು ಮಾತ್ರ ಖಾತ್ರಿ. ಮನೆಯಲ್ಲಿ ಏನಾದರೂ ಶುಭಕಾರ್ಯ ಅಥವಾ ದೊಡ್ಡ ಮಟ್ಟದ ಖರೀದಿ ಮಾಡಿದರಂತೂ ಮುಗಿದೇಹೋಯಿತು. ಭೂಗತಲೋಕಕ್ಕಾಗಿ ಪಾಲು ತೆಗೆದಿಟ್ಟೇ  ಖರ್ಚು ಮಾಡಬೇಕು. ಇಲ್ಲವಾದರೆ ಕಂಡಕಂಡವರ ಮೇಲೆ ಕಂಡಲ್ಲಿ ಗುಂಡು. ಯಾರಿಗೆ ಬೇಕು ಇದೆಲ್ಲಾ ಭಾನಗಡಿ ಎಂದು ಭೂಗತರಿಗೆ ಕೊಡುವ ಕಾಣಿಕೆ ಕೊಟ್ಟು ಶಾಂತಿಯನ್ನು ತಕ್ಕ ಮಟ್ಟಿಗಾದರೂ ಖರೀದಿ ಮಾಡುತ್ತಿದ್ದರು ಜನ. ಪೊಲೀಸರಿಗೆ ಬಂದು ದೂರು ಕೊಡುವ ಹುಚ್ಚು ಧೈರ್ಯ ಯಾರೂ ಮಾಡುತ್ತಿರಲಿಲ್ಲ.

ದಸರಾ ಹಬ್ಬದ ನಂತರದ ಹದಿನೈದು ದಿವಸಗಳಲ್ಲಿ ಹನ್ನೆರೆಡು ಶೂಟ್ ಔಟ್ ಗಳು ಆಗಿದ್ದವು ಎಂದರೆ ಪರಿಸ್ಥಿತಿ ಎಷ್ಟು ಗಂಭೀರವಾಗಿತ್ತು ಎಂದು ತಿಳಿಯಬಹುದು. ಇದನ್ನು ಗಮನಿಸಿದ ಕೇಂದ್ರ ಸರ್ಕಾರ ದೆಹಲಿಯಿಂದ ಖುದ್ದು ಗೃಹ ಕಾರ್ಯದರ್ಶಿಯವರನ್ನು ಮುಂಬೈಗೆ ಕಳಿಸಿತು. ವರದಿಯನ್ನು ತರಿಸಿಕೊಂಡಿತು. ಅಷ್ಟು ಖರಾಬಾಗಿತ್ತು ಪರಿಸ್ಥಿತಿ.

ಅಂದು ಭೂಗತಲೋಕದ ಕೈ ಮೇಲಾಗಿ ಪೊಲೀಸರು ಕೊಂಚ ಮಂಕಾಗಲು ಒಂದು ಕಾರಣ ನ್ಯಾಯಮೂರ್ತಿ ಆಗಿಯಾರ್ ಕೊಟ್ಟಿದ್ದ ಒಂದು ವರದಿ. ಅದು ಪೊಲೀಸರಿಗೆ ವ್ಯತಿರಿಕ್ತವಾಗಿತ್ತು. ನೈತಿಕ ಬಲವನ್ನು ಕುಗ್ಗಿಸಿತ್ತು.

ಹಿಂದಿನ ವರ್ಷ ಮುಂಬೈ ಪೊಲೀಸರು ಎಂಬತ್ತು ಎನ್ಕೌಂಟರುಗಳನ್ನು ಮಾಡಿದ್ದರು. ಭೂಗತಲೋಕದವರ ಆಟಾಟೋಪವನ್ನು ನಿಯಂತ್ರಿಸಲು ಅವು ಸಹಾಯ ಮಾಡಿದ್ದವು. ಆದರೆ ಅವುಗಳ ವಿರುದ್ಧ ಸಮಾಜದ ಕೆಲ ವಲಯಗಳಲ್ಲಿ ಅಸಹನೆ ಮತ್ತು ಅಸಮಾಧಾನ ಮೂಡಿತ್ತು. ಅಂಥವರು ರಿಟ್ ಹಾಕಿದರು. ಎನ್ಕೌಂಟರುಗಳು ನಕಲಿ ಎಂದು ಆರೋಪಿಸಿದರು. ಆವಾಗ ಸರ್ಕಾರ ನ್ಯಾಯಮೂರ್ತಿ ಆಗಿಯಾರ್ ಅವರನ್ನು ತನಿಖೆಗೆ ನೇಮಿಸಿತು. ಮೂರು ವಿವಾದಾತ್ಮಕ ಎನ್ಕೌಂಟರ್ ಹತ್ಯೆಗಳನ್ನು ವಿವರವಾಗಿ ತನಿಖೆ ಮಾಡಲು ಕುಳಿತರು ನ್ಯಾಯಮೂರ್ತಿ ಆಗಿಯಾರ್. ಆ ಮೂರು ಎನ್ಕೌಂಟರುಗಳು ನಕಲಿ ಎಂದು ವರದಿ ಕೊಟ್ಟುಬಿಟ್ಟರು ನ್ಯಾಯಮೂರ್ತಿ ಆಗಿಯಾರ್. ಹೈಕೋರ್ಟ್ ಆ ವರದಿಯನ್ನು ಪರಾಮರ್ಶಿಸಿ ಮುಂದಿನ ಕ್ರಮ ಕೈಗೊಳ್ಳಲಿತ್ತು. ಎನ್ಕೌಂಟರ್ ಮಾಡಿದ್ದ ಎನ್ಕೌಂಟರ್ ಸ್ಪೆಷಲಿಸ್ಟ್ ಮಾದರಿಯ ಅಧಿಕಾರಗಳ ಮೇಲೆ, ಅವರ ತಂಡಗಳ ಮೇಲೆ ತುಂಬಾ ಒತ್ತಡ. ಇಲಾಖೆಗೆ ಆತಂಕ. ಕಾನೂನು ವ್ಯವಸ್ಥೆ ಕುಸಿಯುತ್ತಿದೆ ಎಂದು ಬೊಬ್ಬೆ ಹೊಡೆಯುವವರು ಒಂದು ಕಡೆ. ಮತ್ತೊಂದು ಕಡೆ ನಕಲಿ ಎನ್ಕೌಂಟರ್ ಮಾಡುತ್ತೀರಾ ಎಂದು ಜೋರು ಮಾಡುವವರ ಕಿರಿಕಿರಿ. ಇವುಗಳ ಮಧ್ಯೆ ಹೈರಾಣಾಗಿತ್ತು ಮುಂಬೈ ಪೊಲೀಸ್.

ಈ ಕಾಲಘಟ್ಟದಲ್ಲಿ ನಾನು ಸಹಾಯಕ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿದ್ದೆ. ಡಿಜಿಪಿ ಸಾಹೇಬರ ಕಚೇರಿಯಲ್ಲಿ ಅವರ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದೆ. ಹಾಗಿದ್ದಾಗ ಒಂದು ದಿನ ಅಲ್ಲಿಗೆ ಯಾರು ಬಂದಿರಬಹದು? ಊಹಿಸಿ. ಮುಂಬೈ ಪೊಲೀಸ್ ಕಮಿಷನರ್ ಟಫ್ ಕಾಪ್ ರಾನ್ನಿ ಮೆಂಡೋನ್ಸಾ ಖುದ್ದಾಗಿ ಬಂದಿದ್ದರು. ಪಟಕ್ಕೆಂದು ಎದ್ದು ನಿಂತು ಸಟಕ್ಕೆಂದು ಒಂದು ಸಲ್ಯೂಟನ್ನು ಸ್ಮಾರ್ಟ್ ಆಗಿ ಹಾಕಿದ್ದೆ. ವಿಧೇಯತೆಯಿಂದ ನಿಂತೆ.

'ಇಲ್ಲೇನು ಮಾಡುತ್ತಿದ್ದೀರಿ, ರಾಕೇಶ್?' ಎಂದರು ರಾನ್ನಿ ಮೆಂಡೋನ್ಸಾ. ಸದಾ ಹಸನ್ಮುಖಿ ಅವರು. 'ನೀವು ನನಗೆ ಮುಂಬೈ ಶಹರದಲ್ಲಿ ಕೆಲಸ ಮಾಡಲು ಬೇಕು. ಅಲ್ಲಿ ಯುದ್ಧ ನಡೆಯುತ್ತಿದೆ' ಅಂದರು ಅವರು. ಯುದ್ಧ ಎಂದರೆ ಭೂಗತಲೋಕದ ವಿರುದ್ಧದ ಯುದ್ಧ ಎಂದು ನನಗೆ ಅರ್ಥವಾಗಿತ್ತು.

'ನಿಮಗೇನು ಸರಿ ಅನ್ನಿಸುತ್ತದೋ ಹಾಗೆ ಆಗಲಿ ಸರ್,' ಎಂದು ಹೇಳಿದೆ. ಅವರ ಮಾತಿನ ಅರ್ಥವನ್ನು ಅವರ ನಿರ್ಭಾವುಕ ಮುಖದಲ್ಲಿ ಹುಡುಕಿದೆ. ಡಿಜಿಪಿ ಸಾಹೇಬರನ್ನು ಭೇಟಿ ಮಾಡಲು ಬಂದಿದ್ದರು. ಅವಸರದಲ್ಲೇ ವಾಪಸ್ ಹೋಗಿದ್ದರು ಕಮಿಷನರ್ ರಾನ್ನಿ ಮೆಂಡೋನ್ಸಾ. ಆದರೆ ಅವರು ಆಡಿದ ಮಾತಿಗೆ ಪಕ್ಕಾ ಎನ್ನುವ ಭಾವನೆ ನನಗೆ ಬಂದಿತು.

ಜಾಸ್ತಿ ಕಾಯುವ ಪ್ರಮೇಯ ಬರಲಿಲ್ಲ. ಮಹಾರಾಷ್ಟ್ರದ ಅಂದಿನ ಗೃಹಮಂತ್ರಿ ಗೋಪಿನಾಥ್ ಮುಂಡೆ ನನಗೆ ಕರೆ ಮಾಡಿದರು. ಬಂದು ಭೇಟಿಯಾಗಲು ತಿಳಿಸಿದರು.

ತಕ್ಷಣ ನನ್ನ ಮೇಲಾಧಿಕಾರಿಯಾದ ಡಿಜಿಪಿ ಅರವಿಂದ ಇನಾಮದಾರ್ ಅವರನ್ನು ಕಂಡು ಗೃಹಮಂತ್ರಿಗಳ ಕರೆ ಬಂದಿದ್ದರ ಬಗ್ಗೆ ತಿಳಿಸಿದೆ. ಗೃಹಮಂತ್ರಿ ಮುಂಡೆ, ಡಿಜಿಪಿ ಮತ್ತು ಕಮಿಷನರ್ ಮೊದಲೇ ಮಾತಾಡಿಕೊಂಡಿದ್ದಾರೆ ಎಂದು ನಂತರ ತಿಳಿಯಿತು. ಹದಗೆಡುತ್ತಿರುವ ಪರಿಸ್ಥಿತಿಯನ್ನು ನಿಭಾಯಿಸಲು ನನ್ನನ್ನು ಮತ್ತೆ ಮುಂಬೈ ಶಹರದಲ್ಲಿ ಸಕ್ರಿಯ ಕರ್ತವ್ಯಕ್ಕೆ ಹಾಕುವ ಪ್ರಸ್ತಾವ ಚರ್ಚೆಯಾಗಿದೆ ಎಂದು ತಿಳಿಸಿದರು. ನಾನು ಹಿಂದೆ ಮುಂಬೈನಲ್ಲಿ ಸಕ್ರಿಯ ಅಧಿಕಾರಿಯಾಗಿದ್ದಾಗ ಸೂಕ್ಷ್ಮವಾಗಿ ಸೃಷ್ಟಿಸಿ ಮತ್ತು ಅಷ್ಟೇ ಜತನದಿಂದ ಅಭಿವೃದ್ಧಿಪಡಿಸಿಕೊಂಡಿದ್ದ ಮಾಹಿತಿದಾರರ ಜಾಲದ ಬಗ್ಗೆ ಅವರಿಗೆ ಗೊತ್ತಿತ್ತು. ಭೂಗತಲೋಕವನ್ನು ಪರಿಣಾಮಕಾರಿಯಾಗಿ ಹಣಿಯಲು ಅಂತಹ ಮಾಹಿತಿದಾರರ ಜಾಲದ ಅವಶ್ಯಕತೆ ಮತ್ತು ಅದನ್ನು ಸಂಬಾಳಿಸಿಕೊಂಡು ಹೋಗಬಲ್ಲ ದಕ್ಷ ಅಧಿಕಾರಿಯೊಬ್ಬ ಬೇಕಾಗಿತ್ತು. ಹಾಗಾಗಿ ನನಗೆ ಬುಲಾವಾ ಬಂದಿತ್ತು. ಡಿಜಿಪಿ ಇದನ್ನೆಲ್ಲಾ ಹೇಳಿದಾಗ ಒಂದು ಕ್ಷಣ ಆಶ್ಚರ್ಯವಾಯಿತು.

ಪೊಲೀಸರಿಗೆ ಬರೋಬ್ಬರಿ ಮಾಹಿತಿ ಕೊಡುವ ಮಾಹಿತಿದಾರರು (ಖಬರಿಗಳು) ಅಂದರೆ ನನಗೆ ತುಂಬಾ ಆಸಕ್ತಿ. ಅವರದ್ದೊಂದು ವಿಶಿಷ್ಟ ಲೋಕ. ಸಾಮಾನ್ಯರಿಗೆ ಸುಲಭದಲ್ಲಿ ಅರ್ಥವಾಗುವುದಿಲ್ಲ. ಹಾಗಿರುತ್ತಾರೆ ಪೊಲೀಸ್ ಖಬರಿಗಳು ಮತ್ತು ಅವರ ಲೋಕ. ಭೂಗತಲೋಕ ಮತ್ತು ಸಾಮಾನ್ಯರ ಲೋಕದ ನಡುವಿನ ಗಡಿಪ್ರದೇಶ ಅದು.

ಹಿಂದೆ ಮುಂಬೈನಲ್ಲಿ ಕ್ರೈಂ ಬ್ರಾಂಚಿನ ಡಿಸಿಪಿಯಾಗಿದ್ದಾಗ, ೧೯೯೩ ರ ಮುಂಬೈ ಸರಣಿ ಸ್ಪೋಟಗಳನ್ನು ತನಿಖೆ ಮಾಡುವಾಗ, ನಾನು ಖಬರಿಗಳ ಜಾಲವನ್ನು ಸೃಷ್ಟಿಸಲು ಆರಂಭಿಸಿದ್ದೆ. ಈ ಖಬರಿಗಳು ಒಂದು ತರಹದ ವಿಚಿತ್ರ ಜನ. ಒಮ್ಮೆ ನಿಮ್ಮನ್ನು ನಂಬಿದರು ಅಂದರೆ ಮುಗಿಯಿತು. ಜೀವನಪೂರ್ತಿ ನಿಮ್ಮ ಜೊತೆಯಿರುತ್ತಾರೆ ಅವರು. ನಿಮ್ಮ ಹುದ್ದೆ, ಕೆಲಸ ಬದಲಾಗಬಹುದು. ಆದರೆ ನಿಮ್ಮ ಖಬರಿ ಮಾತ್ರ ನಿಮಗೆ ಮಾಹಿತಿ ಕೊಡುತ್ತಲೇ ಇರುತ್ತಾನೆ. ನೀವು ಎಲ್ಲೇ ಇದ್ದರೂ ಅವನ ಯೋಗಕ್ಷೇಮವನ್ನು ವಿಚಾರಿಸಿಕೊಳ್ಳುತ್ತೀರಿ ಎಂದು ನಂಬುತ್ತಾನೆ ಮತ್ತು ನಿರೀಕ್ಷಿಸುತ್ತಾನೆ ಕೂಡ. ೧೯೯೩ ರ ಸರಣಿ ಸ್ಫೋಟಗಳ ತನಿಖೆ ಮುಗಿಸಿ, ಕ್ರೈಂ ಬ್ರಾಂಚಿನಿಂದ ವರ್ಗಾವಣೆಯಾಗಿ, ಡಿಜಿಪಿ ಕಚೇರಿಯಲ್ಲಿ ಇದ್ದಾಗಲೂ ಕೂಡ ಮುಂಬೈ ಖಬರಿಗಳು ನನಗೆ ಮಾಹಿತಿ ಕೊಡುತ್ತಲೇ ಇದ್ದರು. ನನಗೆ ಆ ಮಾಹಿತಿಗಳು ಅಷ್ಟೇನೂ ಉಪಯೋಗಕ್ಕೆ ಬರುತ್ತಿರಲಿಲ್ಲ. ಆದರೆ ಖಬರಿಗಳ ಮಹತ್ವ ಗೊತ್ತಿತ್ತು. ಅವರ ವಿಶ್ವಾಸವನ್ನು ಕಾಪಾಡಿಕೊಂಡು ಬರುತ್ತಿದ್ದೆ.

ಒಮ್ಮೆ ಒಬ್ಬ ಖಬರಿ ಕೊಟ್ಟಿದ್ದ ಮಾಹಿತಿ ತುಂಬಾ ಖರಾಬಾಗಿತ್ತು. ತುಂಬಾ critical ಆಗಿತ್ತು. It was absolutely chilling!

ಬರೋಬ್ಬರಿ ನೆನಪಿದೆ. ಅಂದು ೨೨ ಏಪ್ರಿಲ್ ೧೯೯೭. ರಾತ್ರಿ ತುಂಬಾ ವೇಳೆಯಾಗಿತ್ತು. ಹಾಸಿಗೆ ಪಕ್ಕದ ಫೋನ್ ಮೊರೆಯತೊಡಗಿತ್ತು. ಪೊಲೀಸ್ ಅಧಿಕಾರಿಗಳಾದ ನಮಗೆ ಹೊತ್ತಲ್ಲದ ಹೊತ್ತಲ್ಲಿ ಬರುವ ಫೋನ್ ಕರೆಗಳು ವಿಶೇಷವೇನೂ ಅಲ್ಲ. ಕಣ್ಣು ತಿಕ್ಕುತ್ತಾ ಎದ್ದು ಕೂತು ಫೋನ್ ಎತ್ತಿದೆ. ಕರೆಯಿಂದ ನಿದ್ರಾಭಂಗವಾದ ಪತ್ನಿ ಪ್ರೀತಿ ಕೂಡ ಎದ್ದು ಕೂತಳು.

'ಸಾಬ್, ಗುಲಶನ್ ಕುಮಾರನ ವಿಕೆಟ್ ಬೇಗ ಬೀಳಲಿದೆ!' ಅಂದಿತು ಆ ಕಡೆಯಿದ್ದ ಧ್ವನಿ. ಅವನು ನನ್ನ ಖಾಸ್ ಖಬರಿ. ಕೊಟ್ಟ ಮಾಹಿತಿ ಯಾವಾಗಲೂ ಪಕ್ಕಾ. ಖೋಟಾ ಆಗಿದ್ದೇ ಇಲ್ಲ. ಅಂಥವನು ಹೇಳುತ್ತಿದ್ದ - ಶೀಘ್ರದಲ್ಲೇ ಗುಲಶನ್ ಕುಮಾರನ ವಿಕೆಟ್ ಬೀಳಲಿದೆ. ಅಂದರೆ ಭೂಗಲೋಕ ಅವನನ್ನು ಕೊಲ್ಲಲಿದೆ.

ಗುಲಶನ್ ಕುಮಾರ ಒಬ್ಬ ದೊಡ್ಡ ಬಿಸಿನೆಸ್ ಕುಳ. ಕ್ಯಾಸೆಟ್ ಕಿಂಗ್ ಎಂದೇ ಹೆಸರಾಗಿದ್ದ. ಸಾಕಷ್ಟು ವಿವಾದಾತ್ಮಕ ವ್ಯಕ್ತಿ. ದೆಹಲಿಯಲ್ಲಿ ರಸ್ತೆ ಮೇಲೆ ಹಣ್ಣಿನ ರಸ ಮಾರಿಕೊಂಡಿದ್ದ ವ್ಯಕ್ತಿ ಅವನು. ಸಣ್ಣ ಪ್ರಮಾಣದಲ್ಲಿ ಮ್ಯೂಸಿಕ್ ಕ್ಯಾಸೆಟ್ ವ್ಯವಹಾರ ಶುರು ಮಾಡಿದ. ಕಾಪಿ ರೈಟ್ ಕಾಯಿದೆಯಲ್ಲಿನ ಲೋಪದೋಷಗಳನ್ನು ಕಂಡುಕೊಂಡ. ಅವುಗಳನ್ನು ಉಪಯೋಗಿಸಿಕೊಂಡು, ಮಿಮಿಕ್ರಿ ಕಲಾವಿದರಂತವರನ್ನು ಹಿಡಿದು, ಅವರಿಂದ ಜನಪ್ರಿಯ ಗೀತೆಗಳನ್ನು ಹಾಡಿಸಿ, ಅವನ್ನು ಕಮ್ಮಿ ಬೆಲೆಯ ಕ್ಯಾಸೆಟ್ಟುಗಳ ಮೇಲೆ ಮುದ್ರಿಸಿ, ಹತ್ತು ಹದಿನೈದು ರೂಪಾಯಿಗಳಿಗೆಲ್ಲ ಮಾರಾಟ ಮಾಡಿ ನೋಡನೋಡುತ್ತಿದಂತೆ ಸಿಕ್ಕಾಪಟ್ಟೆ ರೊಕ್ಕ ಮಾಡಿಬಿಟ್ಟ. ಬಹು ಎತ್ತರಕ್ಕೆ ಬೆಳೆದ. ಹಲವರ ಕೆಂಗಣ್ಣಿಗೆ ಗುರಿಯಾದ. ಮಹತ್ವಾಕಾಂಕ್ಷಿಯಾಗಿದ್ದ ಅವನು ಕನಸಿನ ನಗರಿ ಮುಂಬೈಗೆ ಬಂದ. ಇಲ್ಲಿ ಹಲವಾರು ಉದ್ಯಮಗಳಿಗೆ ಕೈ ಹಾಕಿದ. ಕ್ಯಾಸೆಟ್ ಉದ್ಯಮವನ್ನು ಮತ್ತೂ ಬೆಳೆಸಿದ. ಬಾಲಿವುಡ್ಡಿಗೆ ದಾಖಲಾದ. ಸಿನಿಮಾ ನಿರ್ಮಾಣದಲ್ಲೂ ತೊಡಗಿಕೊಂಡ. ಇಂತಹ ಗುಲಶನ್ ಕುಮಾರನ ವಿಕೆಟ್ಟನ್ನು ಭೂಗತಲೋಕ ಸದ್ಯದಲ್ಲೇ ಉರುಳಿಸಲಿದೆ ಎಂದು ನನ್ನ ಮಾಹಿತಿದಾರ ಹೇಳಿದಾಗ ಇದೆಲ್ಲ ಒಮ್ಮೆಲೆ
ನೆನಪಾಯಿತು.

'ಯಾರು ಉರುಳಿಸಲಿದ್ದಾರೆ ವಿಕೆಟ್?' ಎಂದು ಕೇಳಿದೆ.

'ಅಬು ಸಲೇಂ, ಸಾಬ್. ಅವನು ತನ್ನ ಶಾರ್ಪ್ ಶೂಟರುಗಳ ಜೊತೆ ಸೇರಿ ಪ್ಲಾನ್ ನಿಕ್ಕಿ ಮಾಡಿದ್ದಾನೆ. ಗುಲಶನ್ ಕುಮಾರ್ ದಿನವೂ ಬೆಳಿಗ್ಗೆ ಮನೆಯಿಂದ ಹೊರಟ ನಂತರ ಹತ್ತಿರದ ಶಿವಮಂದಿರವೊಂದಕ್ಕೆ ಹೋಗುತ್ತಾನೆ. ಅಲ್ಲಿಯೇ ಅವನ ಕೆಲಸ ಮುಗಿಸಲಿದ್ದಾರೆ!' ಎಂದು ಸ್ಪಷ್ಟವಾಗಿ ಹೇಳಿದ ಮಾಹಿತಿದಾರ.

ಬೇರೆ ಏನೇ ಇದ್ದರೂ ಗುಲಶನ್ ಕುಮಾರ್ ದೇವರ ಪರಮ ಭಕ್ತ. ಶಿವ ಮತ್ತು ದೇವಿ ಅವನ ಆರಾಧ್ಯದೈವಗಳು.

'ಮಾಹಿತಿ ಪಕ್ಕಾ ಇದೆ ತಾನೇ?' ಎಂದು ಕೇಳಿದೆ.

'ಏಕ್ದಂ ಪಕ್ಕಾ ಸಾಬ್. ಪಕ್ಕಾ ಇಲ್ಲದ್ದಿದ್ದರೆ ನಿಮಗೆ ಹೇಳುತ್ತೇನೆಯೇ ನಾನು?' ಎಂದು ತಿರುಗಿ ಕೇಳಿದ ಮಾಹಿತಿದಾರ.

'ಸರಿ. ಮತ್ತೇನಾದರೂ ಮಾಹಿತಿ ಸಿಕ್ಕರೆ ತಿಳಿಸುತ್ತಿರು,' ಎಂದು ಮಾಹಿತಿದಾರನಿಗೆ ಹೇಳಿ ಫೋನಿಟ್ಟೆ.

ಗಹನವಾದ ಯೋಚನೆಯಲ್ಲಿ ತೊಡಗಿದ್ದ ನನ್ನನ್ನು ಗಮನಿಸಿದ ಪತ್ನಿ,'ಎಲ್ಲ ಓಕೆ ನಾ?' ಎಂದು ಕೇಳಿದಳು. ಗೊತ್ತಾಗಿತ್ತು ಅವಳಿಗೆ 'ಎಲ್ಲ ಓಕೆ ಇಲ್ಲ' ಎಂದು.

'ಯಾರೋ ಒಬ್ಬರನ್ನು ಗುಂಡಿಕ್ಕಿ ಕೊಲ್ಲಲಿದ್ದಾರೆ. ಹಾಗಂತ ಮಾಹಿತಿ ಬಂದಿದೆ,' ಎಂದು ಕ್ಲುಪ್ತವಾಗಿ ಹೇಳಿದೆ.

'ಮತ್ತೇನು. ಎಚ್ಚರಿಸಿ ಅವರನ್ನು!' ಎಂದಳು ಆಕೆ.

'ಅದು ಗೊತ್ತು ನನಗೆ. ಅದಕ್ಕಿಂತ ಮೊದಲು ನಾನು ಒಂದು ವಿಷಯವನ್ನು ಖಾತ್ರಿ ಮಾಡಿಕೊಳ್ಳಬೇಕು,' ಎಂದು ಹೇಳಿದೆ.

ಇಷ್ಟಾದ ನಂತರ ನಾವಿಬ್ಬರೂ ನಿದ್ದೆ ಮಾಡಲಿಲ್ಲ. ನಿದ್ದೆ ಬರಲಿಲ್ಲ. ಮುಂಜಾನೆಯಾದ ನಂತರ ನಾನು ಮಾಡಿದ ಮೊದಲ ಕೆಲಸವೆಂದರೆ ಬಾಲಿವುಡ್ಡಿನ ಡೈರೆಕ್ಟರ್ ಮಹೇಶ್ ಭಟ್ಟರಿಗೆ ಫೋನ್ ಮಾಡಿದ್ದು. ಅಷ್ಟು ಬೆಳಬೆಳಿಗ್ಗೆ ನನ್ನಿಂದ ಫೋನ್ ಬಂತು ಎಂದು ಅವರಿಗೆ ಒಂದು ತರಹದ ಆಶ್ಚರ್ಯವಾಯಿತು. ನಾನು ಸೀದಾ ವಿಷಯಕ್ಕೆ ಬಂದೆ.

'ನಿಮಗೆ ಗುಲಶನ್ ಕುಮಾರ್ ಗೊತ್ತೇ?' ಎಂದು ಕೇಳಿದೆ.

'Of course ಗೊತ್ತು. ಅವರಿಗಾಗಿ ಒಂದು ಸಿನೆಮಾ ನಿರ್ದೇಶಿಸುತ್ತಿದ್ದೇನೆ,' ಎಂದರು ಮಹೇಶ್ ಭಟ್.

'ಒಂದು ಕೆಲಸ ತ್ವರಿತವಾಗಿ ಮಾಡಿ. ಅರ್ಜೆಂಟ್ ಮತ್ತು ಇಂಪಾರ್ಟೆಂಟ್. ಗುಲಶನ್ ಕುಮಾರ್ ಅವರು ದಿನವೂ ಬೆಳಿಗ್ಗೆ ಮನೆ ಹತ್ತಿರದ ಶಿವಮಂದಿರಕ್ಕೆ ಹೋಗುತ್ತಾರೋ ಎಂದು ಕೇಳಿ ವಿಚಾರಿಸಿ. ನನಗೆ ತಿಳಿಸಿ,' ಎಂದು ಹೇಳಿದೆ. ನಂತರ ಅನ್ನಿಸಿತು, ಬೆಳಬೆಳಿಗ್ಗೆ ಹೀಗೆ ಒಮ್ಮೆಲೇ ಕೇಳಿದರೆ ಅವರಿಗೆ ವಿಷಯ ತಿಳಿಯಲಿಕ್ಕಿಲ್ಲ. ಹಾಗಾಗಿ ಹೆಚ್ಚಿನ ವಿವರಣೆ ನೀಡಿದೆ. ಗುಲಶನ್ ಕುಮಾರ್ ಅವರಿಗೆ ಅಪಾಯವಿರುವುದರ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದೆ.

ಸ್ವಲ್ಪ ಸಮಯದ ನಂತರ ಮಹೇಶ್ ಭಟ್ ವಾಪಸ್ ಫೋನ್ ಮಾಡಿದರು. ಗುಲಶನ್ ಕುಮಾರ್ ದಿನವೂ ಮನೆ ಹತ್ತಿರದ ಶಿವಮಂದಿರಕ್ಕೆ ಹೋಗುತ್ತಾನೆ ಎಂಬುದನ್ನು ಖಾತ್ರಿ ಪಡಿಸಿದರು. ನಾನು ತಿಳಿಸಿದ್ದ ಅಪಾಯದ ಬಗೆಗೂ ಅವರಿಗೆ ತಿಳಿಸಿದ್ದರು. ಎಚ್ಚರ ವಹಿಸುವಂತೆ ಹೇಳಿದ್ದರು. ನಾನು ಮಹೇಶ್ ಭಟ್ಟರಿಗೆ ಮತ್ತೊಂದು ಕೆಲಸ ಮಾಡಲು ಹೇಳಿದೆ, 'ನಾನು ಈಗಲೇ ಮುಂಬೈ ಕ್ರೈಂ ಬ್ರಾಂಚಿಗೆ ವಿಷಯ ಮುಟ್ಟಿಸುತ್ತೇನೆ. ಅವರು ಸರಿಯಾದ ರಕ್ಷಣಾ ವ್ಯವಸ್ಥೆ ಮಾಡುತ್ತಾರೆ. ಅಲ್ಲಿಯ ತನಕ ಗುಲಶನ್ ಕುಮಾರರಿಗೆ ಮನೆ ಬಿಟ್ಟು ಹೊರಗೆ ಬಾರಬಾರದು ಎಂದು ತಿಳಿಸಿ.'

ನಂತರ ನಾನು ಮುಂಬೈನ ಕ್ರೈಂ ಬ್ರಾಂಚ್ ವಿಭಾಗಕ್ಕೆ ಕರೆ ಮಾಡಿದೆ. ಎಲ್ಲ ವಿವರ ತಿಳಿಸಿದೆ. ಅವರು ಗುಲಶನ್ ಕುಮಾರರಿಗೆ ಬೇಕಾದ ರಕ್ಷಣೆ ಕೊಟ್ಟರು.

ಇಷ್ಟೆಲ್ಲಾ ಮತ್ತು ಹೀಗೆಲ್ಲಾ ಆದ ನಂತರವೂ ೧೨ ಆಗಸ್ಟ್ ೧೯೯೭ ರಂದು ಗುಲಶನ್ ಕುಮಾರರನ್ನು ಕೊಲೆ ಮಾಡಲಾಯಿತು. ಅದನ್ನು ಕೇಳಿ ನನಗೆ ದೊಡ್ಡ ಆಘಾತ.

ಗುಲಶನ್ ಕುಮಾರ್ ಕೊಲೆಯಾಯಿತು ಎಂದು ಮಾಹಿತಿ ಬಂದಾಗ ನಾನು ಕೇಳಿದ ಮೊದಲ ಪ್ರಶ್ನೆ, 'ಎಲ್ಲಿ?'

'ಅವರು ಶಿವಮಂದಿರದಿಂದ ಹೊರಬರುತ್ತಿದ್ದರು. ಆವಾಗ ಕೊಲ್ಲಲಾಲಗಿದೆ,' ಎನ್ನುವ ಉತ್ತರ ಬಂತು.

'ಅರೇ! ಅದು ಹೇಗೆ ಸಾಧ್ಯ? ಅವರಿಗೆ ಮುಂಬೈ ಪೊಲೀಸ್ ರಕ್ಷಣೆ ಇರಲಿಲ್ಲವೇ?' ಎಂದು ಕೇಳಿದೆ. ಉತ್ತರ ಆ ಕ್ಷಣ ಸಿಗಲಿಲ್ಲ.

ಒಂದೆರೆಡು ಕಡೆ ವಿಚಾರಿಸಿದಾಗ ನಿಜವಾದ ವಿಷಯ ತಿಳಿಯಿತು. ಮೊದಲು ಮುಂಬೈ ಪೊಲೀಸರು ರಕ್ಷಣೆ ಕೊಟ್ಟಿದ್ದರು. ನಂತರ ಗುಲಶನ್ ಕುಮಾರ್ ಉತ್ತರ ಪ್ರದೇಶದ ಪೊಲೀಸ್ ಕಮಾಂಡೋಗಳಿಂದ ರಕ್ಷಣೆ ಪಡೆದುಕೊಂಡರು. ಉತ್ತರ ಪ್ರದೇಶದ ನೋಯಿಡಾದಲ್ಲಿ ಅವರ ದೊಡ್ಡ ಕ್ಯಾಸೆಟ್ ಕಾರ್ಖಾನೆ ಇತ್ತಲ್ಲ. ಹಾಗಾಗಿ ಉತ್ತರ ಪ್ರದೇಶ ಸರ್ಕಾರಕ್ಕೂ ಅವರೊಬ್ಬ ಅಮೂಲ್ಯ ಉದ್ದಿಮೆದಾರ. ಅವರ ರಕ್ಷಣೆ ಉತ್ತರ ಪ್ರದೇಶ ಸರ್ಕಾರದ ಹೊಣೆ ಕೂಡ. ಹಾಗಾಗಿ ಅವರೂ ರಕ್ಷಣೆ ಕೊಟ್ಟಿರಬೇಕು. ಭೂಗತಲೋಕದ ಅಬು ಸಲೇಂ ಕಡೆಯ ಹಂತಕರು ಎಲ್ಲವನ್ನೂ ಗಮನಿಸುತ್ತಿದ್ದರು. ತಮ್ಮ ಯೋಜನೆಯನ್ನು ಕೊಂಚ ಮುಂದೂಡಿದರು. ತಮ್ಮ ಬೇಟೆ ಮೈಮರೆಯುವದನ್ನೇ ಕಾಯುತ್ತಿದ್ದರು. ಒಂದೆರೆಡು ತಿಂಗಳಾದರೂ ತನ್ನ ಮೇಲೆ ಯಾವ ದಾಳಿಯೂ ಆಗಲಿಲ್ಲ ಎಂದು ಗುಲಶನ್ ಕುಮಾರ್ ಕೊಂಚ ನಿರಾಳರಾದರು. ಭದ್ರತೆ ಬಗ್ಗೆ ನಿರ್ಲಕ್ಷ ಮಾಡಿದರು. ಭದ್ರತಾ ಸಿಬ್ಬಂದಿ ಕೂಡ ರಿಲಾಕ್ಸ್ ಆಗಿರಬೇಕು. ಇಂತಹ ಸನ್ನಿವೇಶಕ್ಕಾಗಿಯೇ ಕಾಯುತ್ತಿದ್ದರು ಹಂತಕರು. ಮತ್ತೊಮ್ಮೆ ಮುಹೂರ್ತ ನಿಕ್ಕಿ ಮಾಡಿದರು. ಶಿವಮಂದಿರದ ಮುಂದೆಯೇ ಗುಂಡಿಟ್ಟು ಕೊಂದರು. ಗುಲಶನ್ ಕುಮಾರರನ್ನು ಉದ್ದೇಶಿಸಿ ಹಂತಕರಾಡಿದ ಕೊನೆಯ ಮಾತು - 'ಯೋ! ಇಲ್ಲಿ ಪೂಜೆ ಮಾಡಿದ್ದು ಸಾಕು. ಉಳಿದಿದ್ದನ್ನು 'ಮೇಲೆ' ಹೋಗಿ ಮಾಡು!' ನಂತರ ಮೊರೆದಿದ್ದು ಅವರ ಬಂದೂಕುಗಳು. ಢಮ್! ಢಮ್! ಹದಿನಾರು ಗುಂಡುಗಳನ್ನು ನುಗ್ಗಿಸಿದ್ದರು. ಕ್ಯಾಸೆಟ್ ಕಿಂಗ್ ಖಲ್ಲಾಸ್!

ಇಂತಹದೇ ಮತ್ತೊಂದು ಮಾಹಿತಿಯನ್ನು ನಾನು ಕ್ರೈಂ ಬ್ರಾಂಚ್ ವಿಭಾಗಕ್ಕೆ ಕೊಟ್ಟಿದ್ದೆ. ಬಟ್ಟೆಯ ಮಿಲ್ಲುಗಳ ಕಾರ್ಮಿಕ ನಾಯಕ ಡಾ. ದತ್ತಾ ಸಾಮಂತ್ ಭೂಗತಲೋಕದವರ ನಿಶಾನೆಯಲ್ಲಿ ಬಂದಿದ್ದರು. ಅವರದ್ದೂ ವಿಕೆಟ್ ಸದ್ಯದಲ್ಲೇ ಉರುಳಲಿದೆ ಎನ್ನುವ ಖಚಿತ ಮಾಹಿತಿ ಬೇರೊಂದು ಸಂದರ್ಭದಲ್ಲಿ ನನ್ನ ಮಾಹಿತಿದಾರನೊಬ್ಬ ಕೊಟ್ಟಿದ್ದ. ೧೬ ಜನೆವರಿ ೧೯೯೭ ರಂದು ದತ್ತಾ ಸಾಮಂತರನ್ನು ಗುಂಡಿಟ್ಟು ಕೊಲ್ಲಲಾಯಿತು. ಆ ದಿನ ನಾನು ಕಚೇರಿಯ ಕೆಲಸಕ್ಕೆಂದು ಔರಂಗಾಬಾದಿಗೆ ಹೋಗಿದ್ದೆ. ಆಗ ಫೋನ್ ಬಂತು. ಫೋನ್ ಮೇಲಿದ್ದವರು ಅಂದಿನ ಮುಂಬೈ ಕ್ರೈಂ ಬ್ರಾಂಚಿನ ಚೀಫ್ ರಂಜಿತ್ ಸಿಂಗ್ ಶರ್ಮಾ. 'ನೀವು ಬಂದು ನಮಗೆ ತನಿಖೆಯಲ್ಲಿ ಸಹಾಯ ಮಾಡಬಹುದೇ?' ಎಂದು ಕೇಳಿದ್ದರು. ವಿನಂತಿಸಿಕೊಂಡಿದ್ದರು.

ನನ್ನ ಕಿರಿಯ ಸಹೋದ್ಯೋಗಿಗಳು ನನ್ನ ಕುರಿತು ಸದಾ ತಮಾಷೆ ಮಾಡುತ್ತಿರುತ್ತಾರೆ. 'ಮುಂದಾಗಲಿರುವ ದುರಂತಗಳ ಬಗ್ಗೆ ಭವಿಷ್ಯ ನುಡಿಯುವ ಜ್ಯೋತಿಷಿ ನಮ್ಮ ಮಾರಿಯಾ ಸಾಹೇಬರು!' ಎಂದು.

ಹೀಗೆ ತುಂಬಾ ನಿಖರ ಮಾಹಿತಿ ಕೊಡುವ ಮಾಹಿತಿದಾರರ ಅತ್ಯುತ್ತಮ ಜಾಲವನ್ನು ನಾನು ಹೊಂದಿದ್ದೆ. ಎಲ್ಲೇ ಇರಲಿ, ಏನೇ ಆಗಲಿ ನನಗೆ ಮಾಹಿತಿ ಹರಿದುಬರುತ್ತಲೇ ಇತ್ತು. ಇದರ ಸದುಪಯೋಗ ಮಾಡಿಕೊಳ್ಳಲು ನನ್ನನ್ನು ಮತ್ತೊಮ್ಮೆ ಮುಂಬೈ ಶಹರಕ್ಕೆ ನಿಯೋಜಿಸುವ ಬಗ್ಗೆ ಪ್ರಸ್ತಾವ ಮತ್ತು ಚರ್ಚೆಯಾಗಿತ್ತು.

ಗೃಹಮಂತ್ರಿ ಗೋಪಿನಾಥ ಮುಂಡೆಯವರ ಅಣತಿಯಂತೆ ನಾನು ಹೋಗಿ ಅವರನ್ನು ಭೇಟಿಯಾದೆ. ತೀವ್ರವಾಗಿ ಬೆಳೆಯುತ್ತಿರುವ ಭೂಗತಲೋಕದ ಚಟುವಟಿಕೆಗಳ ಬಗ್ಗೆ ಸರ್ಕಾರ ತುಂಬಾ ಆತಂಕಗೊಂಡಿದೆ ಎಂದು ಮುಂಡೆ ತಿಳಿಸಿದರು. ಉದ್ಯಮಿಗಳು ಅಧೀರರಾಗುತ್ತಿದ್ದಾರೆ ಮತ್ತು ಶುದ್ಧ ಬಿಸಿನೆಸ್ ಶಹರ ಎನ್ನುವ ಮುಂಬೈನ ಪ್ರತಿಷ್ಠೆಗೆ ಕಳಂಕ ಬರುತ್ತಿದೆ ಎನ್ನುವುದರ ಬಗ್ಗೆ ಅವರು ಚಿಂತಿತರಾಗಿದ್ದಾರೆಂದು ತಿಳಿಸಿದರು. ಸರ್ಕಾರ ನನ್ನನ್ನು ಮುಂಬೈ ಶಹರದ ಹೆಚ್ಚುವರಿ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲು ನಿರ್ಧರಿಸಿರುವುದಾಗಿ ತಿಳಿಸಿದರು. ನಾನು ನನ್ನ ಕೆಲಸದಲ್ಲಿ ಯಶಸ್ವಿಯಾಗಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ, ಸರ್ ಎಂದು ಹೇಳಿದೆ.

ಮುಂದಿನ ಮೂರ್ನಾಲ್ಕು ದಿವಸಗಳಲ್ಲಿ ನನ್ನನ್ನು ಮುಂಬೈನ ಅಡಿಷನಲ್ ಕಮಿಷನರ್ ಆಫ್ ಪೊಲೀಸ್ ಎಂದು ನೇಮಕ ಮಾಡಿರುವ ಆದೇಶ ಕೈಸೇರಿತು. ತಕ್ಷಣ ಹೋಗಿ ವರದಿ ಮಾಡಿಕೊಂಡೆ. ಒಬ್ಬ ಹೆಚ್ಚುವರಿ ಆಯುಕ್ತರ ಸೇವೆಯನ್ನು ಹೇಗೆ ಸದುಪಯೋಗ ಮಾಡಿಕೊಳ್ಳಬೇಕು ಎನ್ನುವುದು ಸಂಪೂರ್ಣವಾಗಿ ಕಮಿಷನರ್ ಸಾಹೇಬರಿಗೆ ಬಿಟ್ಟಿದ್ದು. ಕಮಿಷನರ್ ರಾನ್ನಿ ಮೆಂಡೋನ್ಸಾ ಅವರನ್ನು ಹೋಗಿ ಭೇಟಿಯಾದೆ. 'ನಿಮ್ಮ ಹೊಸ ಜವಾಬ್ದಾರಿಯನ್ನು ಹೇಗೆ ನಿಭಾಯಿಸಬೇಕು ಎಂದುಕೊಂಡಿದ್ದೀರಿ, ರಾಕೇಶ್?' ಎಂದು ಕೇಳಿದರು ಬಾಸ್ ಮೆಂಡೋನ್ಸಾ. 'ಸರ್, ನೀವು ಬಯಸಿದರೆ ನನ್ನನ್ನು ಕ್ರೈಂ ಬ್ರಾಂಚಿಗೆ ನಿಯುಕ್ತಿ ಮಾಡಿ. ಅಲ್ಲಿನ ಉತ್ಕೃಷ್ಟ ಮೂಲಸೌಕರ್ಯಗಳನ್ನು ಮತ್ತು ನುರಿತ ಮಾನವಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿ ಭೂಗತಲೋಕವನ್ನು ಹಣಿಯಬಹುದು ಸರ್,' ಎಂದು ಸಲಹೆ ನೀಡಿದೆ. ಮೆಂಡೋನ್ಸಾ ಒಂದು ಕ್ಷಣ ವಿಚಾರ ಮಾಡಿದರು. 'ಅದು ಬೇಡ. ನಾನು ನಿಮ್ಮನ್ನು ನೈಋತ್ಯ ವಲಯಕ್ಕೆ ಅಡಿಷನಲ್ ಕಮಿಷನರ್ ಎಂದು ನೇಮಕ ಮಾಡುತ್ತೇನೆ,' ಎಂದರು ಅವರು.

ಸಮಸ್ಯೆಯತ್ತ ವಿಭಿನ್ನವಾಗಿ ನೋಡುವ ಪ್ರಯತ್ನ ಅವರದ್ದಾಗಿತ್ತು. ಮುಂಬೈ ಭೂಗತಲೋಕದ ತಾಯಿಬೇರುಗಳು ಇದ್ದದ್ದೇ ನೈಋತ್ಯ ವಲಯದಲ್ಲಿ. ಬಾಲಿವುಡ್ ಉದ್ಯಮದ ಹೆಚ್ಚಿನ ಭಾಗ ಅಲ್ಲಿತ್ತು. ಹೆಚ್ಚಿನ ಪಾಲು ಬಿಲ್ಡರುಗಳು ಮತ್ತು ಅವರ ಹೊಸ ಹೊಸ ವಸತಿ ಸಮುಚ್ಛಯಗಳ ಯೋಜನೆಗಳು ಕೂಡ ಅಲ್ಲೇ ಇದ್ದವು. ಭೂಗತದಲೋಕದ ಹಫ್ತಾ ವಸೂಲಿ ಮತ್ತು ಗುಂಡಿನ ಚಕಮಕಿಗಳು ಕೂಡ ಹೆಚ್ಚಾಗಿ ಬಾಂದ್ರಾದಿಂದ ದಹಿಸರದ ವರೆಗೆ ಹಬ್ಬಿದ್ದವು.

ನನ್ನ ಮೇಲೆ ತುಂಬಾ ನಿರೀಕ್ಷೆಗಳು ಇದ್ದವು. ಇದು ನನ್ನನ್ನು ತುಂಬಾ ಒತ್ತಡಕ್ಕೆ ದೂಕಿತು. ಆದರೆ ಕೆಲವು ರೀತಿಗಳಲ್ಲಿ ಒಳ್ಳೆಯದೂ ಆಯಿತೆನ್ನಿ. ನಾನು ಮೂಲತಃ ಬಾಂದ್ರಾ ಏರಿಯಾದವನೇ. 'ಮರಳಿ ಗೂಡಿಗೆ' ಎನ್ನುವಂತಹ ಸಂತಸದ ಪೋಸ್ಟಿಂಗ್ ಅದಾಗಿತ್ತು. ತಾಯಿ ಮತ್ತು ಸಹೋದರಿ ಪೂನಂ ಅವರ ಮನೆಗಳು ನನ್ನ ಹೊಸ ಕಚೇರಿಯ ತುಂಬಾ ಹತ್ತಿರದಲ್ಲಿದ್ದವು. ಅವರನ್ನು ಆಗಾಗ ಭೇಟಿಯಾಗಬಹುದು ಎನ್ನುವುದು ಸಂತಸದ ವಿಷಯವಾಗಿತ್ತು.

ನಾನು ಅಂದೇ ಚಾರ್ಜ್ ತೆಗೆದುಕೊಂಡೆ. ಅಂದು ತುಂಬಾ ಬಿಸಿಯಾಗಿದ್ದೆ. ಎಲ್ಲ ಸಿಬ್ಬಂದಿ ಜೊತೆ ಅನೇಕ ಸುದೀರ್ಘವಾದ ಮತ್ತು ವಿವರವಾದ ಸಭೆಗಳನ್ನು ಮಾಡಿದೆ. ಭೂಗತಲೋಕವನ್ನು ಬಗ್ಗು ಬಡಿಯುವ ಬಗ್ಗೆ ಯೋಜನೆಗಳು ರೂಪಿತಗೊಂಡವು. ಎಲ್ಲ ಮುಗಿದಾಗ ಮಧ್ಯರಾತ್ರಿ! ಕಚೇರಿ ಬಿಟ್ಟವನು ಸೀದಾ ಹೋಗಿದ್ದು ಅಮ್ಮನ ಬಳಿ. ತಡರಾತ್ರಿಯಾದರೂ ಅಮ್ಮ ಮಾತ್ರ ಕಾಯುತ್ತಿದ್ದಳು. ಪತ್ನಿ ಪ್ರೀತಿ ಕೂಡ ಅಮ್ಮನ ಮನೆ ತಲುಪಿಕೊಂಡಿದ್ದಳು. ಹೊಸ ಹುದ್ದೆಯ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಲು ಅಮ್ಮನ ಆಶೀರ್ವಾದ ಬೇಕಾಗಿತ್ತು.

'ಇನ್ನು ಮುಂದೆ ಹೆಚ್ಚೆಚ್ಚು ನನ್ನನ್ನು ನೋಡಲು ಬರುತ್ತೀ ತಾನೇ!?' ಎಂದಳು ಅಮ್ಮ. ಬಗ್ಗಿ ನಮಸ್ಕರಿಸಿದೆ.

'of course ಅಮ್ಮಾ,' ಎಂದು ಹೇಳಿದೆ. ಮತ್ತು I meant it.

'ಜನರಿಗೆ ಸಹಾಯ ಮಾಡಲೆಂದು ದೇವರು ನಿನಗೆ ಈ ಹುದ್ದೆಯನ್ನು ಕೊಟ್ಟಿದ್ದಾನೆ. ಯಾವಾಗಲೂ ಯಾವುದಕ್ಕೂ ಹೆದರದಿರು. ಏಕೆಂದರೆ ಸತ್ಯ ನಿನ್ನನ್ನು ರಕ್ಷಿಸುವ ಗುರಾಣಿಯಾಗಿರುತ್ತದೆ. ಸತ್ಯಮೇವ ಜಯತೆ,' ಎಂದು ಹೇಳಿದಳು ಅಮ್ಮ. ಆಕೆ ಯಾವಾಗಲೂ ಹೇಳಿದ್ದು ಅದೇ ಮಾತು. ಆದರೆ ಪ್ರತಿಯೊಮ್ಮೆ ಆಕೆ ಆ ಮಾತುಗಳನ್ನು ಹೇಳಿದಾಗ ಅದು ನನ್ನಲ್ಲಿನ ನಿಲುವನ್ನು ಮತ್ತೂ ಧೃಡಗೊಳಿಸುತ್ತಿತ್ತು. ಮತ್ತೆ ಮತ್ತೆ ನನ್ನ ನಿಜವಾದ ಗುರಿಯನ್ನು ಸ್ಪಷ್ಟಪಡಿಸುತ್ತಿತ್ತು. ಮಧ್ಯರಾತ್ರಿಯ ನಂತರ ಮನೆ ಕಡೆ ಹೊರಟರೆ ತಲೆ ತುಂಬಾ ಯೋಚನೆಗಳು ಮತ್ತು ಯೋಜನೆಗಳು. ಹೊಸ ಹುದ್ದೆಯ ಸವಾಲುಗಳನ್ನು ಎದುರಿಸಲು ನಾನು ಉತ್ಸುಕನಾಗಿದ್ದೆ.

ಆರಾಮಾಗಿ ಕುಳಿತು ಯೋಚಿಸಲು ವೇಳೆ ಇರಲಿಲ್ಲ. ಹೊಸ ಹುದ್ದೆಗೆ ಬಂದು ಹದಿನೈದು ದಿನಗಳೂ ಕಳೆದಿರಲಿಲ್ಲ. ಆಗಲೇ ಆಗಿಹೋಯಿತು ಒಂದು ದೊಡ್ಡ ಶೂಟ್ ಔಟ್! ಡಿಸೆಂಬರ್ ೮, ೧೯೯೮ ರಂದು ಅಂಧೇರಿಯಲ್ಲಿ ಇಕ್ಬಾಲ್ ಜುಮ್ಮಾ ಚುನ್ನಾವಾಲಾ ಎನ್ನುವ ಇಪ್ಪತ್ತೆಂಟು ವರ್ಷದ ಯುವೋದ್ಯಮಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು. ಜೊತೆಗೆ ಅವನ ಸೇವಕ ಮಣಿ ಸುಬ್ರಮಣಿಯನ್ ಸ್ವಾಮಿ ಕೂಡ ಖಲ್ಲಾಸ್!

'ಭೂಗತಲೋಕ ನಿಮಗೆ ಸ್ವಾಗತ ಕೋರಿದೆ, ಸಾಬ್!' ಎಂದು ಗಂಭೀರವಾಗಿಯೇ ಹೇಳಿದರು ನನ್ನ ಸಿಬ್ಬಂದಿ. ಅವರೇನೇ ಹೇಳಿದರೂ ನನಗೆ ಖಚಿತವಾಗಿತ್ತು...ಭೂಗತಲೋಕ ನನ್ನನ್ನು ಮತ್ತು ನನ್ನ ಆಳವನ್ನು ಅಳೆಯುತ್ತಿದೆ. ಪರೀಕ್ಷಿಸುತ್ತಿದೆ. ಸಂಶಯವೇ ಬೇಡ!

'ದಾನ ಕೊಡಿ. ಗ್ರಹಣದಿಂದ ಮುಕ್ತರಾಗಿ,' ಇದು ಛೋಟಾ ಶಕೀಲನ ಟ್ಯಾಗ್ ಲೈನ್ ಆಗಿಹೋಗಿತ್ತು.  ಮುಂಬೈನ ಭಿಕ್ಷುಕರು ಗ್ರಹಣದ ಸಮಯದಲ್ಲಿ ಭಿಕ್ಷೆಯೆತ್ತುವಾಗ ಬಳಸುವ ವಾಕ್ಯವನ್ನು ಈ ಭೂಗತಜೀವಿ ಶ್ರೀಮಂತರನ್ನು ಫೋನ್ ಮಾಡಿ ಬೆದರಿಸುವಾಗ ಬಳಸುತ್ತಿದ್ದ. ಭೂಗತಲೋಕವೆಂಬುದು ನಿಮ್ಮನ್ನು ಕಾಡುತ್ತಿರುವ ಗ್ರಹಣವಿದ್ದಂತೆ. ಈ ಗ್ರಹಣದಿಂದ ಮುಕ್ತಿ ಬೇಕಾದರೆ 'ದಾನ' ಕೊಡಿ. ಅಷ್ಟೇ ದಾನವನ್ನು ಹವಾಲಾ ಮೂಲಕ ದುಬೈ ಮುಖಾಂತರ ಕರಾಚಿಗೆ ಕಳಿಸಿಬಿಡಿ. ಈ ಕಡೆ ರೊಕ್ಕ ಬಂದಂತೆ ನಿಮ್ಮ ಗ್ರಹಣ ಕೂಡ ಬಿಡುತ್ತದೆ. ಮುಂಬೈ ಭಿಕ್ಷುಕರ ಟ್ಯಾಗ್ ಲೈನ್ ಉಪಯೋಗಿಸಲು ಅವನಿಗೇನೋ ತಮಾಷೆ. ರೊಕ್ಕ ಕೊಟ್ಟು ಮುಕ್ತಿ ಪಡೆದುಕೊಳ್ಳುವವರಿಗೆ ಪ್ರಾಣ ಸಂಕಟ. ದಾನ ಕೊಡದೇ ಗ್ರಹಣ ಸಂಪೂರ್ಣವಾಗಿ ಆವರಿಸಿಕೊಂಡರೆ ಅಷ್ಟೇ ಮತ್ತೆ! ಮತ್ತದೇ ಗೋಲಿಬಾರ್! ಢಮ್! ಢಮ್!

1998 ರಲ್ಲಿ ಬರೋಬ್ಬರಿ 341 ಹಫ್ತಾ ವಸೂಲಿ ಬೆದರಿಕೆ ಪ್ರಕರಣಗಳು ವರದಿಯಾದವು. ಉದ್ಯಮಿಗಳಲ್ಲಿ ಮತ್ತು ಬಾಲಿವುಡ್ ಗಣ್ಯರಲ್ಲಿ ಧೈರ್ಯ ತುಂಬಿ ಭೂಗತಲೋಕದ ಬಗ್ಗೆ ಇದ್ದ ಭಯವನ್ನು ದೂರ ಮಾಡುವುದು ನಮ್ಮ ಪ್ರಮುಖ ಆದ್ಯತೆಯಾಯಿತು. ಸಂಶಯ ಬಂದವರನ್ನು ಪ್ರತಿಬಂಧಕ ಬಂಧನಕ್ಕೆ ಒಳಪಡಿಸಿದೆವು. ಕಠಿಣ ಕಾಯ್ದೆಗಳಡಿ ಬುಕ್ ಮಾಡಿ ಜೈಲಿಗೆ ಕಳಿಸಿದೆವು. 638 ಜನರನ್ನು ಅಂದರ್ ಮಾಡಲಾಯಿತು. ಅಷ್ಟರಮಟ್ಟಿಗೆ ಭೂಗತಲೋಕದ ಕಾಲಾಳುಗಳು ಒಳಗೆ ಹೋಗಿ ಕಿರ್ಕಿರಿ ಕೊಂಚ ಕಮ್ಮಿಯಾಯಿತು. ನನ್ನ ವಲಯದಲ್ಲಿ ಭೂಗತಲೋಕಕ್ಕೆ 'ಶೂನ್ಯ ಸಹಿಷ್ಣುತೆ' (zero tolerance) ಪಾಲಿಸಿ ಜಾರಿಯಲ್ಲಿದೆ ಎನ್ನುವ ಸ್ಪಷ್ಟ ಸಂದೇಶ ಕೂಡ ಭೂಗತಲೋಕಕ್ಕೆ  ಹೋಯಿತು. ಇಂತಹ ಕ್ರಮಗಳು ಕ್ರಮೇಣವಾಗಿ ಫಲ ನೀಡಲಾರಂಭಿಸಿದವು. Tide had begun to turn!

ನನಗೆ ಒಮ್ಮೊಮ್ಮೆ ಅನ್ನಿಸುತ್ತಿತ್ತು- ಈ ಭೂಗತಲೋಕದವರು ಬಾಲಿವುಡ್ಡಿನ ಜನರೊಂದಿಗೆ ಬೆಕ್ಕು ಇಲಿಯ ಚೆಲ್ಲಾಟವಾಡುತ್ತಿದ್ದರೆ ಎಂದು. ಕಳ್ಳ ಬೆಕ್ಕಾದ ಭೂಗತಲೋಕಕ್ಕೆ ಚೆಲ್ಲಾಟವಾದರೆ ತೆರೆ ಮೇಲೆ ಹುಲಿಯಂತೆ ಮೆರೆದರೂ ನಿಜಜೀವನದಲ್ಲಿ ಇಲಿಯಂತಿರುವ ಬಾಲಿವುಡ್ಡಿಗೆ ಪ್ರಾಣ ಸಂಕಟ. ಬೆಕ್ಕಿಗೆ ಚೆಲ್ಲಾಟವಾದರೆ ಇಲಿಗೆ ಪ್ರಾಣ ಸಂಕಟ. ದೂರದ ದೇಶದಲ್ಲೆಲ್ಲೋ ಕುಳಿತು ಒಂದು ಫೋನ್ ಕರೆ ಮಾಡಿ ಬಾಲಿವುಡ್ ದಿಗ್ಗಜರನ್ನು ಬಗ್ಗಿಸಿ ಬಾರಿಸುವುದರಲ್ಲಿ ಭೂಗತಲೋಕದದವರಿಗೆ ಅದೇನೋ ತರಹದ ವಿಕೃತಾನಂದ. ಪರದೇಸಿ ಡಾನ್ ಗಳು ತಮಗೆ ಬೇಕಾದ ನಟ ನಟಿಯರಿಗೆ ಅವಕಾಶ ಕೊಡುವಂತೆ ಆಜ್ಞೆ ಮಾಡುತ್ತಿದ್ದರು. ಸಿನೆಮಾದ ಜಾಗತಿಕ ಮಾರಾಟದ ಹಕ್ಕುಗಳನ್ನು ತಮಗೆ ಬೇಕಾದವರಿಗೆ ಬೇಕಾಬಿಟ್ಟಿ ದರಕ್ಕೆ ಮಾರುವಂತೆ ಬೆದರಿಕೆ ಹಾಕುತ್ತಿದ್ದರು. ತಾವು ಇಷ್ಟಪಟ್ಟ ನಟ ನಟಿಯರನ್ನು ತಮಗೆ ಬೇಕಾದ ಹಾಗೆ ವಿದೇಶಗಳಲ್ಲಿರುವ ತಮ್ಮ ನೆಲೆಗಳಿಗೆ ಬಿಂದಾಸಾಗಿ ಕರೆಯಿಸಿಕೊಳ್ಳುತ್ತಿದರು. ತಮ್ಮ ತಾಳಕ್ಕೆ ಕುಣಿಸುತ್ತಿದರು. literally ಕುಣಿಸುತ್ತಿದರು. ಭೂಗತ ಡಾನ್ ಗಳ ಖಾಸಗಿ ಪಾರ್ಟಿಗಳಲ್ಲಿ ಕುಣಿದು ಬಂದ ನಟ ನಟಿಯರು ಬಹಳ ಜನ.

1994 ರಲ್ಲಿ ಆದ ಜಾವೇದ್ ಸಿದ್ದಿಕ್ ಎನ್ನುವ ಬಾಲಿವುಡ್ ನಿರ್ದೇಶಕ ನಿರ್ಮಾಪಕನ ಹತ್ಯೆ ಇದಕ್ಕೊಂದು ಒಳ್ಳೆ ಉದಾಹರಣೆ. ಜಾವೇದ್ ಸಿದ್ದಿಕ್ ಅಷ್ಟೇನೂ ದೊಡ್ಡ ಕುಳನಲ್ಲ. ಏನೋ ಒಂದು ಫಿಲಂ ಮಾಡಲು ಯೋಜನೆ ಹಾಕಿದ. ಬಂತು ದುಬೈನಿಂದ ಫೋನ್! 'ಪಾಕಿಸ್ತಾನಿ ನಟಿ ಅನಿತಾ ಅಯೂಬಳನ್ನು ನಾಯಕಿಯಾಗಿ ಹಾಕಿಕೊಳ್ಳಬೇಕು. ದೂಸರಾ ಮಾತಾಡುವಂತಿಲ್ಲ!' ಪಾಕಿಸ್ತಾನಿ ಸುಂದರಿ ಅನಿತಾ ಅಯೂಬ್ ಆಗಲೇ ದುಬೈ ಭೂಗತದೊರೆಗಳ 'ಆಪ್ತ' ಗೆಳತಿ ಎನ್ನುವ ಪಿಸುಮಾತಿತ್ತು. 'ಅವಳನ್ನು ಹಾಕಿಕೊಂಡರೆ ಫಿಲಂ ಮಕಾಡೆ ಮಲಗಿಬಿಡುತ್ತದೆ. ಲಾಭ ಹೋಗಲಿ ಹಾಕಿದ ಬಂಡವಾಳ ಕೂಡ ವಾಪಸ್ ಬರುವುದಿಲ್ಲ ಭಾಯ್! ಪ್ಲೀಸ್ ಅರ್ಥ ಮಾಡಿಕೋ,' ಎಂದು ಬಡಪಾಯಿ ಜಾವೇದ್ ಸಿದ್ದಿಕ್ ಡಾನ್ ಅಬು ಸಲೇಂ ಎದುರು ಕಷ್ಟ ಹೇಳಿಕೊಂಡ. ಸುಂಕದವನ ಮುಂದೆ ಕಷ್ಟ ಹೇಳಿಕೊಂಡಂತಾಯಿತು. ಇವರೆಲ್ಲಾ ದಪ್ಪ ಚರ್ಮದ ಮಂದಿ ಸರಳವಾಗಿ ಮಾತು ಕೇಳುವುದಿಲ್ಲ. ಎಲ್ಲರಿಗೂ ಒಂದು ಬರೋಬ್ಬರಿ ಪಾಠ ಕಲಿಸಬೇಕು ಎಂದುಕೊಂಡ ಅಬು ಸಲೇಂ ಫೋನೆತ್ತಿಕೊಂಡು ತನ್ನ ಬಂಟರಿಗೆ ಹೇಳಿದ್ದು ಒಂದೇ ಮಾತು. ಉಡಾದೋ ಉಸ್ಕೊ! ಅವನನ್ನು ಉಡಾಯಿಸಿಬಿಡಿ. ಬಾಸ್ ಹೇಳಿದಂತೆ ಬಂಟರು ಜಾವೇದ್ ಸಿದ್ದಿಕನನ್ನು ದಿನ್ದಹಾಡೇ ಗುಂಡಿಟ್ಟು ಕೊಂದರು. ಆಗ ಅವನ ಪತ್ನಿ ಅವನ ಜೊತೆಯಲ್ಲಿದ್ದಳು. ತಾರೀಕು 7 ಜೂನ್ 1994.

ಬಾಲಿವುಡ್ಡಿನ ಜಗಳಗಳೂ ಸಹ ಡಾನ್ ದಾವೂದ್ ಇಬ್ರಾಹಿಮ್ಮನ ನ್ಯಾಯಾಲಯದಲ್ಲಿ ತೀರ್ಮಾನವಾಗತೊಡಗಿದವು. ಇಬ್ಬರು ನಿರ್ಮಾಪಕರ ಎರಡು ಹೊಸ ಸಿನೆಮಾಗಳು ಒಂದೇ ಹೊತ್ತಿಗೆ ಬಿಡುಗಡೆಗೆ ತಯಾರಾದವು. ಯಾರ ಸಿನೆಮಾ ಯಾವಾಗ ಬಿಡುಗಡೆಯಾಗಬೇಕು? ಯಾವ ರೀತಿ ಬಿಡುಗಡೆಯಾದರೆ ಯಾರಿಗೆ ಜಾಸ್ತಿ ಲಾಭ? ನಿರ್ಮಾಪಕರು ಮಾತಾಡಿಕೊಂಡರು. ಜಗಳ ಬಗೆಹರಿಯಲಿಲ್ಲ. ಭೂಗತಲೋಕದ ದೊರೆಯಿಂದ ಬಂತು ಬುಲಾವಾ. 'ಇಬ್ಬರೂ ದುಬೈಗೆ ಬನ್ನಿ. ಕುಳಿತು ಮಾತಾಡೋಣ!' ಬುಲಾವಾ ಬಂದ ಮೇಲೆ ದೂಸರಾ ಮಾತೇ ಇಲ್ಲ. ಇಬ್ಬರೂ ಘಟಾನುಘಟಿ ನಿರ್ಮಾಪಕರು ದುಬೈ ವಿಮಾನ ಹತ್ತಿದರು. ದಾವೂದನ ನ್ಯಾಯಾಲಯದಲ್ಲಿ ದುವಾ ಸಲಾಮಿ ಮಾಡಿಕೊಂಡು, ತಮ್ಮ ತಮ್ಮ ವಾದ ಮಂಡಿಸಿದರು. ದಾವೂದ್ ನಿರ್ಧರಿಸಿದ. ಅಲ್ಲಿಗೆ ಕೇಸ್ ಖತಮ್. ಡಾನ್ ತೀರ್ಪು ಕೊಟ್ಟ ಅಂದರೆ ಮುಗಿಯಿತು. ಅದನ್ನು ಪಾಲಿಸಲೇಬೇಕು. ಯಾಕೆಂದರೆ ಭೂಗತಲೋಕ ನೀಡಿದ ತೀರ್ಪಿಗೆ ಮೇಲ್ಮನವಿ ಸಲ್ಲಿಸುವಂತಿಲ್ಲ. ಎದುರಾಡಿದರೆ ಸೀದಾ 'ಮೇಲೇ' ಹೋಗಬೇಕಾದೀತು! ಜೋಕೆ!

ನಿಮಗೆ ಇನ್ನೊಂದು ತಮಾಷೆಯ ವಿಷಯ ಹೇಳುತ್ತೇನೆ. ಒಮ್ಮೆ ಒಬ್ಬ ಖ್ಯಾತ ಬಾಲಿವುಡ್ ಹೀರೋ ದುಬೈಗೆ ಹೋಗಿದ್ದ. ಅವನಿಗೂ ಬಲಾವಾ ಬಂದಿತ್ತು. ಭಾಯಿ ದಾವೂದನ ಹುಟ್ಟುಹಬ್ಬ. ದಾವತ್ ಇರುತ್ತದೆ. ನೀನು ಬಂದು ಕುಣಿಯಬೇಕು! ಆಯಿತು ಮತ್ತೇನು ಮಾಡಿಯಾನು ಹೀರೋ? ಹೋದ. ಕುಣಿದು ಬಂದ. ದುಬೈನಿಂದ ಹೊರಟವ ಮುಂಬೈ ವಿಮಾನನಿಲ್ದಾಣದಲ್ಲಿ ಇಳಿದು ಹೊರಬಂದರೆ ಕಿಡ್ನಾಪ್ ಮಾಡಲ್ಪಟ್ಟ. ತಲೆಗೆ ಗನ್ನಿಟ್ಟಿದ್ದರು ಮುಂಬೈನ ಲೋಕಲ್ ಭೂಗತರು. ಲೋಕಲ್ ಡಾನ್ ಅರುಣ್ ಗಾವ್ಳಿಗೆ ಎಲ್ಲ ವಿಷಯ ತಿಳಿದಿತ್ತು. ಅವನ ಪರಮಶತ್ರುವಾದ ದಾವೂದನ ದರ್ಬಾರಿನಲ್ಲಿ ಕುಣಿದುಬಂದರಾಯಿತೇ? ತನ್ನ ದರ್ಬಾರಿನಲ್ಲೂ ಕುಣಿಯಬೇಕು ತಾನೇ? ಆ ನಟನನ್ನು ತಲೆಗೆ ಗನ್ನಿಟ್ಟುಕೊಂಡೇ ಅರುಣ್ ಗಾವ್ಳಿಯ ಅಡ್ಡೆಯಾದ ಖತರ್ನಾಕ್ ದಾಗಡಿ ಚಾಳ್ ಗೆ ಕರೆದೊಯ್ಯಲಾಯಿತು. 'ನಮ್ಮದೂ ನವರಾತ್ರಿ ಹಬ್ಬ ನಡೆದಿದೆ. ಇಲ್ಲೂ ಕುಣಿ ಮಗನೇ!' ಎಂದು ನವರಾತ್ರಿ ಪೆಂಡಾಲಿನಲ್ಲಿ ರಾತ್ರಿಯಿಡೀ ಆ ನಟನನ್ನು ಕುಣಿಸಿ ಮಜಾ ತೆಗೆದುಕೊಂಡರು. ಹೀಗೆ ಭೂಗತರ ನಡುವಿನ ದ್ವೇಷದ ಅಡಕತ್ತರಿಯಲ್ಲಿ ಚೂರ್ಚೂರಾಗಿ ಕತ್ತರಿಸಲ್ಪಡುತ್ತಿದ್ದವರು ನಮ್ಮ ಹೀರೋ ನಟನಂತವರು.

ಇನ್ನೊಂದು ಘಟನೆ ನನಗೆ ಬರೋಬ್ಬರಿ ನೆನಪಿದೆ. ತುಂಬಾ ಹಿರಿಯ ಮತ್ತು ಪ್ರತಿಷ್ಠಿತ ನಿರ್ದೇಶಕ ನಿರ್ಮಾಪಕರೊಬ್ಬರು ಒಮ್ಮೆ ನನ್ನ ಕಚೇರಿಗೆ ಬಂದಿದ್ದರು. ಅವರ ಜೊತೆಗೆ ಬುರ್ಖಾ ಧರಿಸಿದ್ದ ಒಬ್ಬ ಮಹಿಳೆ ಕೂಡ ಇದ್ದಳು.

'ಈ ಮಹಿಳೆಯ ಪರವಾಗಿ ನಿಮ್ಮ ಸಹಾಯವನ್ನು ಕೇಳಿಕೊಂಡು ಬಂದಿದ್ದೇನೆ, ಮಿಸ್ಟರ್ ಮಾರಿಯಾ,' ಅಂದರು ಆ ಹಿರಿಯ ಬಾಲಿವುಡ್ ಮನುಷ್ಯ. ಅವರ ಮಾತಿನಿಂದಲೇ ಅರ್ಥವಾಯಿತು ವಿಷಯ ತುಂಬಾ ಗಂಭೀರವಾಗಿದೆ ಎಂದು. ಅವರು ಕಳಿಸಿದ್ದ ಸಂದರ್ಶಕರ ಚೀಟಿ (visitor's slip) ನೋಡಿದೆ. ಜೊತೆಗಿದ್ದ ಬುರ್ಖಾಧಾರಿ ಮಹಿಳೆಯ ಹೆಸರು ಅದರಲ್ಲಿ ಇರಲಿಲ್ಲ.

'ಸರಿ. ಹೇಳಿ. ನಾನು ಹೇಗೆ ನಿಮಗೆ ಸಹಾಯ ಮಾಡಲಿ?' ಎಂದು ಕೇಳಿದೆ.

'ಸರ್, ಈಕೆ ಖ್ಯಾತ ಸಿನೆಮಾ ಮತ್ತು ಟೆಲಿವಿಷನ್ ನಟಿ. ಇವಳಿಗೆ ಇತ್ತೀಚೆಗೆ ಅನೀಸ್ ಇಬ್ರಾಹಿಂನಿಂದ ಬೆದರಿಕೆ ಕರೆಗಳು ಬರುತ್ತಿವೆ. ದೂರು ಕೊಟ್ಟರೆ ಕೊಲ್ಲುವದಾಗಿ ಈಕೆಯನ್ನು ಬೆದರಿಸಿದ್ದಾರೆ. ನಿಮ್ಮನ್ನು ಭೇಟಿ ಮಾಡಲು ಈಕೆ ಸಿದ್ಧಳಿರಲಿಲ್ಲ. ನೀನು ಯಾರಂತ ಯಾರಿಗೂ ಗೊತ್ತಾಗುವುದಿಲ್ಲ ಎನ್ನುವ ಭರವಸೆ ಕೊಟ್ಟು ಕರೆದುಕೊಂಡು ಬಂದಿದ್ದೇನೆ ಸರ್. ನೀವು ಸಹ ಗೌಪ್ಯತೆಯನ್ನು ಕಾಯ್ದುಕೊಳ್ಳಿ ಎಂದು ತಮ್ಮಲ್ಲಿ ವಿನಂತಿಸುತ್ತೇನೆ. ಇವಳ ಹೆಸರು ಎಲ್ಲೂ ಹೊರಬರಬಾರದು,' ಎಂದರು ಅವರು.

'ಮುದ್ದಾಂ ಸಹಾಯ ಮಾಡೋಣ. ಎಲ್ಲವನ್ನೂ ಗೌಪ್ಯವಾಗಿಯೇ ಇಡೋಣ. ಆದರೆ ನೀವು ಎಲ್ಲ ವಿಷಯವನ್ನೂ ನಮಗೆ ತಿಳಿಸಬೇಕು. ಪೂರ್ತಿ ವಿಷಯ ತಿಳಿಯದಿದ್ದರೆ ಹೇಗೆ ಸಹಾಯ ಮಾಡೋಣ?' ಎಂದು ಭರವಸೆ ನೀಡಿದೆ.

'ಎಷ್ಟು ಹಣ ಡಿಮಾಂಡ್ ಮಾಡುತ್ತಿದ್ದಾನೆ ಆತ (ಅನೀಸ್ ಇಬ್ರಾಹಿಂ)?' ಎಂದು ಕೇಳಿದೆ.

ಮುಂದೆ ಕೆಲವು ಕ್ಷಣ ಯಾರೂ ಮಾತಾಡಲಿಲ್ಲ. ನಂತರ ಆ ಬುರ್ಖಾಧಾರಿ ಮಹಿಳೆ ಮಾತಾಡಿದಳು.

'ಅವನು ದುಡ್ಡಿಗಾಗಿ ಡಿಮಾಂಡ್ ಮಾಡುತ್ತಿಲ್ಲ. ದುಬೈಗೆ ಬರುವಂತೆ ಆಗ್ರಹ ಪಡಿಸುತ್ತಿದ್ದಾನೆ,' ಎಂದಳು ಆಕೆ. ಮುಖವನ್ನು ಮುಚ್ಚಿದ್ದ ಬುರ್ಖಾ ಮಾತ್ರ ತೆಗೆಯಲಿಲ್ಲ.

'ದುಬೈಗೆ ಕರೆಯುತ್ತಿದ್ದಾನೆಯೇ??' ಎಂದು ಕೇಳಿದೆ. ಮುಖದಲ್ಲಿ ಪ್ರಶ್ನೆಯಿತ್ತು. ಆಕೆ ಏನು ಹೇಳಲು ಪ್ರಯತ್ನಿಸುತ್ತಿದ್ದಾಳೆ ಮತ್ತು ನಾನು ಈ ವಿಷಯದ ಬಗ್ಗೆ ಏನೆಂದುಕೊಳ್ಳಲು ಶುರು ಮಾಡಿದ್ದೇನೆ ಎರಡೂ ಒಂದೇ ಇರಬಹುದೇ ಅನ್ನುವುದನ್ನು ಖಾತ್ರಿ ಮಾಡಿಕೊಳ್ಳಬೇಕಿತ್ತು.

'ಅವನ ಜೊತೆ ನಾನು ಮಲಗಬೇಕಂತೆ!' ಎಂದು ಹೇಳಿದಳು. ಆಕೆಗೆ ಮುಂದೆ ಮಾತಾಡಲಾಗಲಿಲ್ಲ. ಬಿಕ್ಕಳಿಸತೊಡಗಿದಳು. ಈಗ ಬುರ್ಖಾ ಪರದೆ ಸರಿಯಿತು. ಮುಖದ ದರ್ಶನವಾಯಿತು. ಆಕೆಯ ಕಣ್ಣಾಲಿಗಳಿಂದ ಪ್ರವಾಹ. ಆಕೆಯೊಬ್ಬ ಪ್ರತಿಷ್ಠಿತ ಮತ್ತು ಸಂಭಾವಿತ ನಟಿಯಾಗಿದ್ದಳು.

'ಸದಾ ಫೋನ್ ಕಾಲ್ ಮೇಲೆ ಫೋನ್ ಕಾಲ್ ಬರುತ್ತಿವೆ. ಅವನಿಗೆ ಇವಳ ಹುಚ್ಚು ಹಿಡಿದಿದೆ. He seems to be obsessed with her. ಇವಳು ಆತ್ಮಹತ್ಯೆಯ ವಿಚಾರ ಕೂಡ ಮಾಡುತ್ತಿದ್ದಳು. ಅದೃಷ್ಟವಶಾತ್ ನನ್ನ ಬಳಿ ಹೇಳಿಕೊಂಡಳು. ಈಗ ಹೇಳಿ ಸರ್. ಇವಳನ್ನು ಹೇಗೆ ರಕ್ಷಿಸಬಹುದು?' ಎಂದರು ಬಾಲಿವುಡ್ಡಿನ ಆ ಹಿರಿಯ ಜೀವಿ. ಅವರು ಅವರಿಬ್ಬರ ಜೀವಗಳನ್ನು ನನ್ನ ತೆಕ್ಕೆಗೆ ಹಾಕಿದ್ದರು. ಪೂರ್ತಿ ನಂಬಿದ್ದರು. ನಾವು ಪೊಲೀಸರು ಕೊಂಚ ಅಜಾಗರೂಕತೆಯಿಂದ ವರ್ತಿಸಿದರೂ ಇಬ್ಬರ ಪ್ರಾಣಕ್ಕೂ ಕುತ್ತು ಬರುತ್ತಿತ್ತು.

'ನಿಮ್ಮ ವಿವೇಕಕ್ಕೆ ಮತ್ತು ಧೈರ್ಯಕ್ಕೆ ಒಂದು ಸಲಾಮ್ ಸರ್. ನೀವು ನಮ್ಮಲ್ಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಏನೆಲ್ಲಾ ಬೇಕೋ ಅದನ್ನು ಮಾಡುತ್ತೇನೆ,' ಎಂದು ಮಾತು ಕೊಟ್ಟೆ.

'ಆದರೆ ಮಿಸ್ಟರ್ ಮಾರಿಯಾ, ನೀವು ಕಂಪ್ಲೇಂಟ್ ದರ್ಜು ಮಾಡಿಕೊಂಡರೆ ನನಗೆ ತುಂಬಾ ತೊಂದರೆಯಾಗುತ್ತದೆ. ಆ ಹೆಚ್ಚಿನ ಒತ್ತಡವನ್ನು ನಾನು ಭರಿಸಲಾರೆ. ದಿನದಿಂದ ದಿನಕ್ಕೆ ನನ್ನ ಖಿನ್ನತೆ ಹೆಚ್ಚಾಗುತ್ತಿದೆ. ಆತ್ಮಹತ್ಯೆಯ ಹೊರತು ನನಗೇನೂ ತೋಚುತ್ತಿಲ್ಲ. ಹೋಗಿ ಅವನ ತೆಕ್ಕೆಯಲ್ಲಿ ಬೀಳುವದಕ್ಕಿಂತ ನನಗೆ ಸಾವೇ ಮೇಲೆನಿಸುತ್ತಿದೆ,' ಎಂದು ಆ ನಟಿ ಪರಿಪರಿಯಾಗಿ ಬೇಡಿಕೊಂಡಳು.

ನನ್ನ ಕೆಲವು ಹಿರಿಯ ಮತ್ತು ಅನುಭವಿ ಸಿಬ್ಬಂದಿಯನ್ನು ಕರೆದು ಈ ವಿಷಯದ ಬಗ್ಗೆ ವಿವರಿಸಿದೆ. ಸೂಕ್ಷ್ಮತೆ ಬಗ್ಗೆ ಹೇಳಿದೆ. ಗೌಪ್ಯತೆ ಬಗ್ಗೆ ಅವರಿಗೆ ಅರಿವಿತ್ತು. ಅವರು ತುಂಬಾ ಚಾಕ್ಯಚಕ್ಯತೆಯಿಂದ ಈ ಮ್ಯಾಟರನ್ನು ನಿಪಟಾಯಿಸಿದರು. ಆ ಪಾಪದ ನಟಿಗೆ ರಹಸ್ಯವಾಗಿ ಎಲ್ಲ ರಕ್ಷಣೆ ನೀಡಲಾಯಿತು. ಅವಳಿಗೂ ತಕ್ಕ ಮಟ್ಟಿನ ಧೈರ್ಯ ಬಂದಿತು. ತೀವ್ರ ಖಿನ್ನತೆಗೆ ಜಾರಿದ್ದ ಆಕೆ ಚೇತರಿಸಿಕೊಂಡಳು. ಅವಳ ಮಾನ ಮತ್ತು ಪ್ರಾಣ ಎರಡನ್ನೂ ಕಾಪಾಡುವಲ್ಲಿ ಯಶಸ್ವಿಯಾಗಿದ್ದೆವು. ಅದರ ಬಗ್ಗೆ ಹೆಮ್ಮೆ ಇದೆ. ಆದರೆ ವೃತ್ತಿಯ ಅನಿವಾರ್ಯತೆಗಳು ಇರುತ್ತವೆ ನೋಡಿ. ಇಂತಹ ಯಶಸ್ಸನ್ನು ಬಹಿರಂಗವಾಗಿ ಸಂಭ್ರಮಿಸುವಂತಿಲ್ಲ.

ಹೀಗೆ ಭೂಗತಲೋಕದ ಕಬಂಧಬಾಹುಗಳು ಬಾಲಿವುಡ್ಡಿನ ಎಲ್ಲ ಕಡೆ ಚಾಚಿಕೊಂಡಿವೆ. ಎಲ್ಲಿ ಹೇಗೆ ಏನನ್ನು ತಟ್ಟಿದರೆ ಏನು ಹೇಗೆ ಉದುರುತ್ತದೆ ಎನ್ನುವುದು ಭೂಗತಲೋಕದ ಖೂಳರಿಗೆ ಬರೋಬ್ಬರಿ ಗೊತ್ತಿದೆ. ಹಾಗಾಗಿ ತಟ್ಟಿ ತಟ್ಟಿ ಮಜಾ ತೆಗೆದುಕೊಳ್ಳುತ್ತಾರೆ. ಜೊತೆಗೆ ರೊಕ್ಕ ಮಾಡಿಕೊಳ್ಳುತ್ತಾರೆ.

ಬಾಲಿವುಡ್ಡಿನ ದೊಡ್ಡ ದೊಡ್ಡ ಮನುಷ್ಯರಿಂದ ಹಿಡಿದು ಸಣ್ಣ ಪುಟ್ಟ ನಟ ನಟಿಯರ ಜೊತೆ ನಾನು ಸದಾ ಸಂಪರ್ಕದಲ್ಲಿ ಇರುತ್ತಿದ್ದೆ. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೆ.

'ಭೂಗತಲೋಕದ ಡಿಮಾಂಡುಗಳಿಗೆ ತಲೆಬಾಗಬೇಡಿ. ಧೈರ್ಯದಿಂದ ದೂರು ಕೊಡಿ. ನಾವು ನಿಮಗೆ ರಕ್ಷಣೆ ಕೊಡುತ್ತೇವೆ,' ಎನ್ನುವುದು ಬಾಲಿವುಡ್ ಜನರಿಗೆ ನನ್ನ ಸದಾ ವಿನಂತಿ ಮತ್ತು ಸಲಹೆಯಾಗಿತ್ತು. ಇದನ್ನು ಹೇಳುವುದು ಸುಲಭ. ಆದರೆ ಆಚರಣೆಯಲ್ಲಿ ತರುವುದು ತುಂಬಾ ಕಷ್ಟ ಎಂದು ಗೊತ್ತಿತ್ತು. ಸಾಮಾನ್ಯರು ಭೂಗತಲೋಕದ ಉಪಟಳವನ್ನು ಸಹಿಸುವ ಮನಸ್ಥಿತಿಯಲ್ಲಿ ಇರುವುದಿಲ್ಲ. ಅವರಿಗೆ ಅವರ ಜೀವದ ಮತ್ತು ಅವರ ಪ್ರೀತಿಪಾತ್ರರ ಜೀವದ ಬಗ್ಗೆಯೇ ಚಿಂತೆ. ಅದು ಸಹಜ ಕೂಡ. ಆದರೆ ಬಾಲಿವುಡ್ಡಿನ ಕೆಲವು ಹಿರಿತಲೆಗಳಾದ ಯಶ್ ಚೋಪ್ರಾ, ರಮೇಶ್ ಸಿಪ್ಪಿ, ಮಹೇಶ್ ಭಟ್, ವಿಧು ವಿನೋದ್ ಚೋಪ್ರಾ, ಮನಮೋಹನ್ ದೇಸಾಯಿ ಮುಂತಾದವರು ಭೂಗತಲೋಕದ ಬೆದರಿಕೆಗಳಿಗೆ ಅಷ್ಟಾಗಿ ಜಗ್ಗಲಿಲ್ಲ. ದೂರು ಕೊಟ್ಟರು. ನಾವು ಅವರನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯೂ ಆದೆವು. ನನ್ನ ದೃಷ್ಟಿಯಲ್ಲಿ ಅಂಥವರು ಬಾಲಿವುಡ್ಡಿನ ನಿಜವಾದ ಹೀರೋಗಳು!

ನಾನು ಈ ಹುದ್ದೆಗೆ ಬಂದು ಹದಿಮೂರು ತಿಂಗಳಾಗಿದ್ದವು. ಸಾಧಾರಣವಾಗಿ ಎರಡು ವರ್ಷಗಳ ಪೋಸ್ಟಿಂಗ್ ಇರುತ್ತದೆ. ಅದೇ ಹೊತ್ತಿಗೆ ಸರಕಾರ ಬದಲಾಯಿತು. ಭಾಜಪ - ಶಿವಸೇನೆ ಮನೆಗೆ ಹೋದವು. NCP - ಕಾಂಗ್ರೆಸ್ ಅಧಿಕಾರ ಹಿಡಿಯಿತು. ಆ ಹೊತ್ತಿಗೆ ನನ್ನ ಏರಿಯಾದಲ್ಲಿ ಒಂದು ಚಿಕ್ಕ ಗಲಾಟೆ ನಡೆಯಿತು. ಸಾಮಾನ್ಯವಾಗಿ ಬಾರುಗಳಲ್ಲಿ ನಡೆಯುವ ಘಟನೆ. ತಿಂದು ಕುಡಿದು ಬಿಲ್ ಕೊಡದೆ ಪರಾರಿಯಾಗಲು ಯತ್ನಿಸಿದ್ದರು ಪೊರ್ಕಿಗಳು. ಬಾರಿನವರು ಆಕ್ಷೇಪಿಸಿದ್ದರು. ಪೊರ್ಕಿಗಳು ಹೋಗಿ ತಮ್ಮ ಗ್ಯಾಂಗ್ ಕರೆದುಕೊಂಡು ಬಂದು ಬಾರಿನಲ್ಲಿ ತೋಡ್ ಪೋಡ್ ಮಾಡಿ ದಾಂಧಲೆ ಎಬ್ಬಿಸಿದ್ದರು.

ಪೊರ್ಕಿಗಳ ಮೇಲೆ ಕೇಸ್ ಹಾಕಿ ಕ್ರಮ ಕೈಗೊಳ್ಳುವಂತೆ ಹೇಳಿದ್ದೇ ತಪ್ಪಾಯಿತು ಎಂದು ಕಾಣುತ್ತದೆ. ಪೊರ್ಕಿಗಳು ಅಂದಿನ ಹೊಸ ಗೃಹಮಂತ್ರಿಗಳಿಗೆ 'ಸಮೀಪ'ದವರಾಗಿದ್ದರಂತೆ. ಕೇಸ್ ಹಾಕದೇ ಇರಲು ಒತ್ತಡ ಬಂತು. ನಾನು ಕ್ಯಾರೇ ಮಾಡಲಿಲ್ಲ. ಆಗ ಹರಿದಾಡತೊಡಗಿತು ನನ್ನ ವರ್ಗಾವಣೆಯ ಬಗ್ಗೆ ಗುಸುಗುಸು ಪಿಸುಮಾತು.

ಮಕ್ಕಳ ರಜೆಗಳು ಬಂದಿದ್ದವು. ಅವರಿಗೆ ಮಾಡಿದ ಪ್ರಾಮಿಸ್ ಉಳಿಸಿಕೊಳ್ಳಬೇಕಿತ್ತು. ಹಾಗಾಗಿ ಮೊದಲೇ ನಿರ್ಧರಿಸಿದಂತೆ ರಜೆ ಮೇಲೆ ತೆರಳಲು ನಿರ್ಧರಿಸಿದೆ. ಬಾಸ್ ಮೆಂಡೋನ್ಸಾ ಹೇಳಿದರು, 'ರಜೆಯಲ್ಲಿದ್ದಾಗ ನಿನ್ನನ್ನು ವರ್ಗಾವಣೆ ಮಾಡಬಹುದು. ಅದು ಚೆನ್ನಾಗಿರಲ್ಲ. ನಂತರ ಬೇಕಾದರೆ ರಜೆ ತೆಗೆದುಕೋ.'

'ವರ್ಗಾವಣೆ ಆಗುವುದಿದ್ದರೆ ಆಗೇ ಆಗುತ್ತದೆ ಸರ್. ಕುಟುಂಬಕ್ಕೆ ಮಾಡಿದ ಪ್ರಾಮಿಸ್ ಉಳಿಸಿಕೊಳ್ಳಬೇಕಿದೆ. ಪೂರ್ವನಿರ್ಧರಿತ ರಜೆ ಮೇಲೆ ಹೋಗಲು ಅನುಮತಿ ಕೊಡಿ,' ಎಂದೆ. ರಜೆ ಮೇಲೆ ಹೋದೆ. ಒಂದು ರಜೆ ವಿಶ್ರಾಂತಿ ನಿಜವಾಗಿಯೂ ಬೇಕಾಗಿತ್ತು.

ನಿರೀಕ್ಷಿಸಿದಂತೆ ರಜೆಯಲ್ಲಿದ್ದಾಗ ವರ್ಗಾವಣೆಯ ಆದೇಶ ಬಂತು. ಎರಡು ವರ್ಷ ಇರಬೇಕಾದವನು ಹದಿಮೂರು ತಿಂಗಳಲ್ಲೇ ಎತ್ತಂಗಡಿಯಾಗಿದ್ದೆ.

ರೈಲ್ವೆ ಪೊಲೀಸ್ ಇಲಾಖೆಯ ಕಮಿಷನರ್ ಪೋಸ್ಟ್ ನನಗಾಗಿ ಕಾಯುತ್ತಿತ್ತು. ಅದರ ಸವಾಲುಗಳಿಗೆ ತಯಾರಾಗತೊಡಗಿದೆ.

ಹೀಗೆ ತಮ್ಮ ಜೀವನಕಥನದ ಒಂದು ಅಧ್ಯಾಯದ ಕಥೆ ಹೇಳಿ ಮುಗಿಸುತ್ತಾರೆ ಸೂಪರ್ ಕಾಪ್ ರಾಕೇಶ್ ಮಾರಿಯಾ.

ಮಾಹಿತಿ ಮೂಲ: ಸೂಪರ್ ಕಾಪ್ ರಾಕೇಶ್ ಮಾರಿಯಾ ನಿವೃತ್ತಿಯ ನಂತರ ಬರೆದುಕೊಂಡಿರುವ, tell-it-all ಮಾದರಿಯ, ಜೀವನಕಥನ - Let Me Say It Now by Rakesh Maria.

ಮೂಲ ಪುಸ್ತಕಕ್ಕೆ ಹೋಲಿಸಿದರೆ ಈ ಬ್ಲಾಗ್ ಲೇಖನ ಬರೆಯುವಾಗ ಶೈಲಿ ಬದಲಾಗಿರಬಹುದು. ಪುಸ್ತಕದ ಭಾಷಾಂತರ ಉದ್ದೇಶವಲ್ಲ. ಒಂದು ಒಳ್ಳೆಯ ಪುಸ್ತಕವನ್ನು ಪರಿಚಯಿಸುವ ಉದ್ದೇಶ ಮತ್ತು ಪ್ರಯತ್ನ ಮಾತ್ರ.

ಕೆಲವು ಹೆಚ್ಚಿನ ಮಾಹಿತಿಗಳನ್ನು ಅಂತರ್ಜಾಲ, ರಾಕೇಶ್ ಮಾರಿಯಾ ಬಗ್ಗೆ ಹಿಂದೆ ಬರೆದಿದ್ದ ಬ್ಲಾಗ್ ಲೇಖನಗಳು, ಇತರೆ ಪುಸ್ತಕಗಳು, ಸಿನೆಮಾಗಳು, ಮುಂತಾದವುಗಳಿಂದ ಆರಿಸಿದ್ದು.

ಮತ್ತೂ ಹೆಚ್ಚಿನ ಮಾಹಿತಿಗೆ 'ಓಂ ಗೂಗಲ್ಲಾಯ ನಮಃ' ಮಂತ್ರ ಪಠಿಸಿ. :)

ರಾಕೇಶ್ ಮಾರಿಯಾ ಬಗ್ಗೆ ಬರೆದಿದ್ದ ಹಳೆಯ ಬ್ಲಾಗ್ ಲೇಖಗಳು:

** ಸೂಪರ್ ಕಾಪ್ ರಾಕೇಶ ಮಾರಿಯಾ ಈಗ ಮುಂಬೈನ ಟಾಪ್ ಕಾಪ್

** ರಾಹುಲ್ ಭಟ್ ಬುಡಕ್ಕೆ ಬಿಸಿ, ಮಹೇಶ್ ಭಟ್ ಮಂಡೆ ಬಿಸಿ

Wednesday, July 22, 2020

ಆಪರೇಷನ್ ಒಪೇರಾ...ಇರಾಕಿನ ಅಣುಸ್ಥಾವರದ ಮೇಲೆ ಇಸ್ರೇಲಿನ ರೋಚಕ ಕಾರ್ಯಾಚರಣೆ

ಆ ದಿನ ಶುಕ್ರವಾರ, ಜೂನ್ ೭, ೧೯೮೧.  ಅಂದು ಯಹೂದಿಗಳಿಗೆ ಹಬ್ಬದ ದಿನ. ಗತಕಾಲದಲ್ಲಿ ಆ ದಿನವೇ ದೇವರು ಯಹೂದಿಗಳಿಗೆ ಸೈನೈ ಪರ್ವತದ ಮೇಲೆ ಅವರ ಧರ್ಮಗ್ರಂಥವಾದ 'ತೋರಾ'ವನ್ನು ದಯಪಾಲಿಸಿದ ಎಂದು ಯಹೂದಿಗಳು ನಂಬುತ್ತಾರೆ. ಆ ದಿನವನ್ನು ಹಬ್ಬದಂತೆ ಆಚರಿಸುತ್ತಾರೆ. ಹಲವಾರು ಇಸ್ರೇಲಿಗಳು ಅಂದು ತಮ್ಮ ದೇವಾಲಯಗಳಲ್ಲಿ ನೆರೆದಿದ್ದರು. ಮತ್ತೆ ಅನೇಕರು ಇಸ್ರೇಲಿನ ಬಂಗಾರದಂತಹ ಮರಳುಳ್ಳ ಸಮುದ್ರತಟದ ಬೀಚುಗಳಲ್ಲಿ ಬೋರಲು ಬಿದ್ದು ಮಜಾ  ಮಾಡುತ್ತಿದ್ದರು.

ಮಧ್ಯಾಹ್ನ ಸುಮಾರು ೪ ಘಂಟೆ ಹೊತ್ತಿಗೆ ನೆತ್ತಿ ಮೇಲೆ ಒಮ್ಮೆಲೇ ಹಾರಿಹೋದವು ಇಸ್ರೇಲಿ ವಾಯುಪಡೆಯ ಅಮೇರಿಕಿ ನಿರ್ಮಿತ ಅತ್ಯಾಧುನಿಕ ಎಂಟು F-16 ಯುದ್ಧವಿಮಾನಗಳು. ಇಸ್ರೇಲಿನ ಎಲಿಯಾಟ್ ಕೊಲ್ಲಿಯನ್ನು ದಾಟಿ ಸೌದಿ ಅರೇಬಿಯಾದತ್ತ ವಿಮಾನಗಳು ಹಾರಿದ್ದನ್ನು ಬೀಚುಗಳ ಮೇಲಿದ್ದವರು ಗಮನಿಸದೇ ಇರಲು ಸಾಧ್ಯವಿರಲಿಲ್ಲ.

ಆ F-16 ವಿಮಾನಗಳು ಇಸ್ರೇಲಿನ ಸೈನೈ ಪ್ರದೇಶದಲ್ಲಿರುವ ಎಟ್ಜಿಯಾನ್ ವಾಯುನೆಲೆಯಿಂದ ಹಾರಿದ್ದವು. ಅವುಗಳ ಹಿಂದೆಯೇ ಅವುಗಳ ಅಂಗರಕ್ಷರೋ ಎಂಬಂತೆ ಭಯಂಕರ sonic boom ಮಾಡುತ್ತ ಮುಗಿಲಿಗೆ ಲಗ್ಗೆ ಹಾಕಿದವು ಹೆಚ್ಚಿನ ಎಂಟು F-15 ಫೈಟರ್ ವಿಮಾನಗಳು. ಒಟ್ಟಿನಲ್ಲಿ ಹದಿನಾರು ಡೆಡ್ಲಿ ಯುದ್ಧವಿಮಾನಗಳ ಮೆರವಣಿಗೆ ಎಲ್ಲೋ ಹೊರಟಿತ್ತು. ಎಲ್ಲೇನು ಮಟಾಷ್ ಆಗಲಿತ್ತೋ ಆವತ್ತು!?

ಜೋರ್ಡಾನ್ ಇಸ್ರೇಲಿನ ಪಕ್ಕದ ದೇಶ. ಅಂದು ಅದೇನು ಕಾಕತಾಳಿಯವೋ ಗೊತ್ತಿಲ್ಲ. ಜೋರ್ಡಾನ್ ದೇಶದ ರಾಜ ಕಿಂಗ್ ಹುಸೇನ್ ಅದೇ ಹೊತ್ತಿಗೆ ತಮ್ಮ ಐಷಾರಾಮಿ ರಾಯಲ್ ಹಡಗಿನಲ್ಲಿ ಸಮುದ್ರವಿಹಾರ ಮಾಡಿಕೊಂಡಿದ್ದರು. ಹೇಳಿಕೇಳಿ ಮಹಾರಾಜರು. ಅವರ ಬಳಿ ಹತ್ತಾರು ರಾಯಲ್ ಹಡಗುಗಳು, ದೋಣಿಗಳು ಇದ್ದವು. ಎಲ್ಲ ವ್ಯವಸ್ಥೆ ಹೊಂದಿರುವಂತಹವು. ದೇಶವಿದೇಶದ ಸಖಿಯರನ್ನು ಒಟ್ಟಾಕಿಕೊಂಡು ಕೆಂಪು ಸಮುದ್ರದ ಎಲಿಯಾಟ್ ಕೊಲ್ಲಿಯಲ್ಲಿ ಮೀನು ಹಿಡಿಯುವದೆಂದರೆ ಮಹಾರಾಜರಿಗೆ ಖುಷಿಯೋ ಖುಷಿ. ಅಂತಹ ಖುಷಿಯಲ್ಲಿದ್ದರೂ ಅವರೂ ಸಹ ತಲೆ ಮೇಲೆ ಹತ್ತಾರು ಇಸ್ರೇಲಿ ಯುದ್ಧವಿಮಾನಗಳು ಹಾರಿಹೋಗಿದ್ದನ್ನು ಗಮನಿಸದಿರಲಿಲ್ಲ.

ಬೇರೆ ಅರಬ್ ದೇಶಗಳಿಗೆ ಹೋಲಿಸಿದರೆ ಇಸ್ರೇಲ್ ಮತ್ತು ಜೋರ್ಡನ್ ನಡುವೆ ಸಂಬಂಧ ತಕ್ಕ ಮಟ್ಟಿಗೆ ಚೆನ್ನಾಗಿಯೇ ಇತ್ತು. ಆದರೂ ಮೊದಲು ಬೇಕಾದಷ್ಟು ಸಲ ಯುದ್ಧವಾಗಿತ್ತು ಕೂಡ. ಯಾವುದಕ್ಕೂ ಸೇಫ್ಟಿಗೆ ಇರಲಿ ಎಂದು ವಿಚಾರ ಮಾಡಿದ ಕಿಂಗ್ ಹುಸೇನ್ ಮಾಡಿದ ಮೊದಲ ಕೆಲಸವೆಂದರೆ ಸೀದಾ ತಮ್ಮ ಐಷಾರಾಮಿ ಹಡಗಿನ ರೇಡಿಯೋ ರೂಮಿಗೆ ಹೋಗಿದ್ದು. ಅಲ್ಲಿ ವಯರ್ಲೆಸ್ ಸೆಟ್ ಎತ್ತಿಕೊಂಡವರೇ ತಮ್ಮ ಸೇನೆಗೆ ಸುದ್ದಿ ಮುಟ್ಟಿಸಿದರು...'ಇಸ್ರೇಲಿ ಯುದ್ಧವಿಮಾನಗಳು ಆಕಾಶಕ್ಕೇರಿವೆ. ಯಾವುದಕ್ಕೂ ಎಚ್ಚರ ವಹಿಸಿ. ಈ ಮಾಹಿತಿಯನ್ನು ಸುತ್ತಮುತ್ತಲಿನ ನಮ್ಮ ಇತರೇ ಅರಬ್ ಮಿತ್ರ ದೇಶಗಳೊಂದಿಗೆ ಹಂಚಿಕೊಳ್ಳಿ!'

ಯಾಕೋ ಏನೋ ಗೊತ್ತಿಲ್ಲ. ಈ ಮಾಹಿತಿಯನ್ನು ಸ್ವೀಕರಿಸಿದ ಜೋರ್ಡನ್ ಸೇನೆಯ ಕಂಟ್ರೋಲ್ ರೂಮ್ ಸಿಬ್ಬಂದಿ ಇದನ್ನು ಯಾರೊಂದಿಗೂ ಹಂಚಿಕೊಳ್ಳಲೇ ಇಲ್ಲ.  ದಿನನಿತ್ಯ ಬರುವಂತಹ ಅನೇಕ ರೂಟೀನ್ ಮಾಹಿತಿಗಳಲ್ಲಿ ಇದೂ ಒಂದಿರಬಹುದು ಎಂದುಕೊಂಡರೋ ಏನೋ. ಒಟ್ಟಿನಲ್ಲಿ ಇಸ್ರೇಲಿ ಯುದ್ಧವಿಮಾನಗಳು ತರಾತುರಿಯಲ್ಲಿ ಕೆಂಪು ಸಮುದ್ರದ ಮೇಲೆ ಹಾರಿಹೋಗಿದ್ದು ಸುದ್ದಿಯಾಗಲೇ ಇಲ್ಲ. ಮಾಹಿತಿಯನ್ನು ಅಕ್ಕಪಕ್ಕದ ದೇಶಗಳೊಡನೆ ಹಂಚಿಕೊಳ್ಳಲೇ ಇಲ್ಲ.

ಅದು ಒಳ್ಳೆಯದೇ ಆಯಿತು. ಅಂದು ಅದೃಷ್ಟಲಕ್ಷ್ಮಿ ಇಸ್ರೇಲಿಗಳ ಪಕ್ಷದಲ್ಲಿ ಇದ್ದಳು ಅಂತ ಕಾಣುತ್ತದೆ. ಏಕೆಂದರೆ ಆ ಹದಿನಾರು ಇಸ್ರೇಲಿ ಯುದ್ಧವಿಮಾನಗಳು ಸುಖಾಸುಮ್ಮನೆ ಗಗನಕ್ಕೆ ಚಿಮ್ಮಿರಲಿಲ್ಲ. ಆವತ್ತಿನ ಕಾರ್ಯಾಚರಣೆ ಬಹು ಮುಖ್ಯವಾದ ಕಾರ್ಯಾಚರಣೆಯಾಗಿತ್ತು. ಅದರ ಕೋಡ್ ನೇಮ್ ಆಪರೇಷನ್ ಒಪೇರಾ. ಉದ್ದೇಶ ಸ್ಪಷ್ಟವಾಗಿತ್ತು. ಇರಾಕಿನಲ್ಲಿ ಸದ್ದಾಮ ಹುಸೇನ್ ನಿರ್ಮಿಸುತ್ತಿದ್ದ ಅಣುಸ್ಥಾವರವನ್ನು ನೆಲಸಮ ಮಾಡುವುದು ಮತ್ತು ಯಾವುದೇ ಹಾನಿಯಿಲ್ಲದಂತೆ ವಾಪಸ್ ಇಸ್ರೇಲ್ ತಲುಪಿಕೊಳ್ಳುವುದು.

ಇಂತಹದೊಂದು ರಹಸ್ಯ ಮತ್ತು ಖತರ್ನಾಕ್ ವೈಮಾನಿಕ ಕಾರ್ಯಾಚರಣೆಗೆ ತಯಾರಿ ಕೆಲವು ವರ್ಷಗಳ ಹಿಂದೆಯೇ ಆರಂಭವಾಗಿತ್ತು. ೧೯೭೬ ರಲ್ಲಿ ಇರಾಕ್ ದೇಶ ಫ್ರಾನ್ಸ್ ದೇಶದೊಂದಿಗೆ ಅಣುಸ್ಥಾವರದ ನಿರ್ಮಾಣಕ್ಕಾಗಿ ಒಪ್ಪಂದವೊಂದಕ್ಕೆ ಸಹಿ ಹಾಕಿತ್ತು. ಫ್ರೆಂಚರು ಆ ಅಣುಸ್ಥಾವರಕ್ಕೆ ಒಸಿರಾಕ್ ಎಂದು ಕರೆದರೆ ಇರಾಕಿಗಳು ತಾಮೂಜ್ ಎಂದು ನಾಮಕರಣ ಮಾಡಿಕೊಂಡಿದ್ದರು. ಇರಾಕಿನ ಅಪಾರ ಪೆಟ್ರೋಲ್ ಸಂಪತ್ತಿನ ಮೇಲೆ ಕಣ್ಣಿಟ್ಟಿದ್ದ ಆಸೆಬುರುಕ ಫ್ರೆಂಚರು ಇರಾಕಿಗಳಿಗೆ ಆಟಂ ಬಾಂಬ್ ಮಾಡಲು ಬೇಕಾಗುವಷ್ಟು ಯುರೇನಿಯಂ ಕೂಡ ಕೊಡುವದಾಗಿ ಹೇಳಿದ್ದರು.

ಈ ವಿಷಯವನ್ನು ಇರಾಕ್ ಮತ್ತು ಫ್ರಾನ್ಸ್ ಅದೆಷ್ಟೇ ಗುಪ್ತವಾಗಿ ಇಡಲು ಯತ್ನಿಸಿದರೂ ಇಸ್ರೇಲಿನ ಖಡಕ್ ಬೇಹುಗಾರಿಕೆ ಸಂಸ್ಥೆ ಮೊಸ್ಸಾದ್ ಇದರ ಮಾಹಿತಿಯನ್ನು ಬಹುಬೇಗನೆ ಸಂಪಾದಿಸಿ ಸರ್ಕಾರಕ್ಕೆ ಮುಟ್ಟಿಸಿತ್ತು. ಇಸ್ರೇಲ್ ರಾಜತಾಂತ್ರಿಕ ಮಾರ್ಗಗಳ ಮೂಲಕ ಇರಾಕಿಗೆ ಅಣುಸ್ಥಾವರ ಸಿಗುವುದನ್ನು ತಪ್ಪಿಸಲು ನೋಡಿತು. ತಲೆಕೆಟ್ಟ ಸರ್ವಾಧಿಕಾರಿ ಸದ್ದಾಮ್ ಹುಸೇನ್ ಅಣುಶಕ್ತಿಯನ್ನು ಗಳಿಸುತ್ತಾನೆ ಎಂದರೆ ಅದು ಇಸ್ರೇಲಿನ ಅಸ್ತಿತ್ವದ ಬುಡಕ್ಕೇ ಬಾಂಬಿಟ್ಟಂತೆ. ಅದನ್ನು ತಡೆಗಟ್ಟಿ ಎಂದು ಅಂತರರಾಷ್ಟ್ರೀಯ ಸಮುದಾಯದ ಮುಂದೆ ಜಾಗಟೆ ಬಾರಿಸಿತು ಇಸ್ರೇಲ್. ರೊಕ್ಕ ಮಾಡುವ ತರಾತುರಿಯಲ್ಲಿದ್ದ ಫ್ರೆಂಚರು ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಅವರು ಸದ್ದಾಮ್ ಹುಸೇನನ್ನು ನುಣ್ಣಗೆ ಬೋಳಿಸುವಲ್ಲೇ ಮಗ್ನರು. ಅವನಿಗೋ ರೊಕ್ಕವೆಂಬುವುದು ಕರಡಿ ಮೈಮೇಲಿನ ಕೂದಲಿದ್ದಂತೆ. ಫ್ರೆಂಚರು ಬೋಳಿಸಿದಷ್ಟೂ ಬೆಳೆಯುತ್ತಿತ್ತು. ಒಟ್ಟಿನಲ್ಲಿ ಇಸ್ರೇಲಿಗಳ ಆಕ್ಷೇಪಣೆ  ಅರಣ್ಯರೋದನವಾಯಿತೇ ವಿನಃ ಮತ್ತೇನೂ ಉಪಯೋಗವಾಗಲಿಲ್ಲ.

ಆಗ ಮೊಸ್ಸಾದ್ ಕಾರ್ಯಾಚರಣೆಗೆ ಇಳಿಯಿತು. ನುರಿತ ಗೂಢಚಾರರನ್ನು ಉಪಯೋಗಿಸಿಕೊಂಡು ಫ್ರೆಂಚ್ ದೇಶದಿಂದ ಇರಾಕಿಗೆ ಹೋಗಬೇಕಾಗಿದ್ದ ಅಣುಸ್ಥಾವರದ ಉಪಕರಣಗಳನ್ನು ರಹಸ್ಯವಾಗಿ ಹಾಳುಮಾಡಿತು. ಸದ್ದಾಮ ಹುಸೇನ್ ಹೆಚ್ಚಿನ ರೊಕ್ಕ ಕೊಟ್ಟು ಅವುಗಳ ದುರಸ್ತಿ ಮಾಡಿಸಿಕೊಂಡ. ಹೆಚ್ಚಿನ ರಕ್ಷಣಾವ್ಯವಸ್ಥೆ ಮಾಡಿಸಿಕೊಂಡು ಇರಾಕಿಗೆ ತರಿಸಿಕೊಂಡ. ಸಣ್ಣ ಸಣ್ಣ ಕಾರ್ಯಾಚರಣೆಗಳ ಮೂಲಕ ಸದ್ದಾಮ ಹುಸೇನನ ಯೋಜನೆಗೆ ಭಂಗ ತರುವುದು ಎಂದರೆ ಆನೆಯನ್ನು ಸೂಜಿಯಿಂದ ಚುಚ್ಚಿ ಚುಚ್ಚಿ ಕೊಲ್ಲಲು ಪ್ರಯತ್ನಿಸಿದಂತೆ ಎಂದು ಇಸ್ರೇಲಿಗೆ ಮನವರಿಕೆ ಆಯಿತು. ಆನೆಯನ್ನು ನೆಲಕ್ಕೆ ಉರುಳಿಸಬೇಕು ಅಂದರೆ ನಡುನೆತ್ತಿಗೆ ಬರೋಬ್ಬರಿ ಗುರಿಯಿಟ್ಟು ದೊಡ್ಡ ಕಾಡತೂಸನ್ನೇ ಹೊಡೆಯಬೇಕು. ಬಾಕಿ ಎಲ್ಲ ವ್ಯರ್ಥ ಪ್ರಯತ್ನ ಎಂದು ಮನದಟ್ಟಾಯಿತು ಇಸ್ರೇಲಿಗೆ.

೧೯೭೭ ರಲ್ಲಿ ಮೇನಾಕೇಮ್ ಬೆಗಿನ್ ಇಸ್ರೇಲಿನ ಪ್ರಧಾನಿ. ಭಯಂಕರ ಖಡಕ್ ಮನುಷ್ಯ. ರಕ್ಷಣಾ ಸಚಿವ ಯೇಜರ್ ವೈಸಮನ್ ಮತ್ತು ಸೇನಾಪಡೆಗಳ ಮುಖ್ಯಸ್ಥ ರಾಫುಲ್ ಏಟಾನ್ ಕೂಡ ಅಷ್ಟೇ ಗಟ್ಟಿಗರು. ಆದರೆ ಫ್ರಾನ್ಸ್ ದೇಶಕ್ಕೆ ಏನೂ ಮಾಡುವಂತಿಲ್ಲ. ಒಂದು ತರಹದ ಮಿತ್ರ ದೇಶವದು. ಏನೇ ಮಾಡಿದರೂ ಇರಾಕಿಗೇ ಮಾಡಬೇಕು. ಇರಾಕಿಗೆ ಮಾಡುವುದೇನೂ ಬಾಕಿ ಉಳಿದಿಲ್ಲ. ದೊಡ್ಡ ಮಟ್ಟದ ಕಾರ್ಯಾಚರಣೆಯೇ ತಕ್ಕ ಮದ್ದು ಎಂದುಕೊಂಡರು. ಯೋಜನೆ ಹಾಕಲು ಕುಳಿತರು.

ಈ ಕಾರ್ಯಾಚರಣೆಗೆ ಸ್ಕೆಚ್ ಹಾಕುವ ಪೂರ್ಣ ಜವಾಬ್ದಾರಿಯನ್ನು ಇಸ್ರೇಲಿ ವಾಯುಸೇನೆಯ ಡೇವಿಡ್ ಐವರಿ ಅವರಿಗೆ ವಹಿಸಲಾಯಿತು. ಅವರಿಗೆ ಸಹಾಯಕರಾಗಿ ಕರ್ನಲ್ ಅವಿಯಮ್ ಸೆಲ್ಲಾ ನಿಯೋಜಿತರಾದರು. ಬೇಕಾದ ಮಾಹಿತಿಯನ್ನು ಒದಗಿಸಲು ಮೊಸ್ಸಾದ್ ಸದಾ ಸಿದ್ಧವಿತ್ತು.

೧೯೮೧ ರ ಸೆಪ್ಟೆಂಬರ್ ಹೊತ್ತಿಗೆ ಅಣುಸ್ಥಾವವರ ಪೂರ್ಣಗೊಳ್ಳುತ್ತದೆ ಅನ್ನುವ ಪಕ್ಕಾ ಮಾಹಿತಿ ಬಂದಿದ್ದು ದೊಡ್ಡ ಆತಂಕಕ್ಕೆ ಎಡೆಮಾಡಿಕೊಟ್ಟಿತು. ಅದಕ್ಕಿಂತ ಮೊದಲೇ ಸದ್ದಾಮನ ಹೆಮ್ಮೆಯ ಅಣುಸ್ಥಾವರಕ್ಕೆ ಒಂದು ಶಾಶ್ವತ ಗತಿ ಕಾಣಿಸಲೇಬೇಕು ಎನ್ನುವ ಧೃಡ ನಿರ್ಧಾರಕ್ಕೆ ಬಂದರು ಪ್ರಧಾನಿ ಬೆಗಿನ್.

ತುಂಬಾ ಅನಿರೀಕ್ಷಿತವೆಂಬಂತೆ ಈ ಯೋಜನೆಗೆ ಪರೋಕ್ಷ  ಸಹಾಯ ಒಂದು ವಿಚಿತ್ರ ದೇಶದಿಂದ ಬಂತು. ಅದು ಇರಾಕಿನ ಪಕ್ಕದ ದೇಶ ಇರಾನಿನಿಂದ. ೧೯೭೯ ರಲ್ಲಿ ಇರಾನಿನಲ್ಲಿ ಧಾರ್ಮಿಕ ಕ್ರಾಂತಿಯಾಗಿತ್ತು. ಅಲ್ಲಿನ ಮಹಾರಾಜ ರೇಝಾ ಪೆಹ್ಲವಿಯನ್ನು ಖೊಮೇನಿ ಎಂಬ ಶಿಯಾ ಧರ್ಮಗುರುವಿನ ಹಿಂಬಾಲಕರು ಓಡಿಸಿದ್ದರು. ರೇಝಾ ಪೆಹ್ಲವಿ ತುಂಬಾ ದುಷ್ಟನಾಗಿದ್ದ. ಜನರಿಗೂ ಸಾಕಾಗಿತ್ತು. ಒಟ್ಟಿನಲ್ಲಿ ಇರಾನಿನಲ್ಲಿ ಮಹಾರಾಜ ರೇಝಾ ಪೆಹ್ಲವಿಯ ಅಮೇರಿಕನ್ ಸ್ನೇಹಿ ಸರ್ಕಾರ ಹೋಗಿ ಅಮೇರಿಕಾ, ಇಸ್ರೇಲ್ ಮುಂತಾದ ಪಶ್ಚಿಮದ ದೇಶಗಳನ್ನು ನಖಶಿಖಾಂತ ದ್ವೇಷಿಸುವ ಖೊಮೇನಿ ಸರ್ಕಾರ ಇರಾನ್ ದೇಶದಲ್ಲಿ ಸ್ಥಾಪಿತವಾಗಿತ್ತು.

ಮಹಾರಾಜ ರೇಝಾ ಪೆಹ್ಲವಿಯ ಸರ್ಕಾರವಿದ್ದಾಗ ಅವನು ಎಲ್ಲಾ ರಕ್ಷಣಾ ಸಾಮಗ್ರಿಗಳನ್ನು ಅಮೇರಿಕಾದಿಂದ ಕೊಳ್ಳುತ್ತಿದ್ದ. ಹಾರ್ಡ್ ಕ್ಯಾಶ್ ಕೊಡುತ್ತಿದ್ದ ಕಾರಣ ಅವನ ಬೇಡಿಕೆಗಳನ್ನು ತ್ವರಿತ ಆದ್ಯತೆ ಮೇಲೆ ಪೂರೈಸುತ್ತಿತ್ತು ಅಮೇರಿಕಾ. ಅವನು ದೇಶ ಬಿಟ್ಟು ಹೋಗುವ ಮೊದಲಷ್ಟೇ ದೊಡ್ಡ ಪ್ರಮಾಣದ F - 16 ಯುದ್ಧವಿಮಾನಗಳಿಗೆ ಆರ್ಡರ್ ಕೊಟ್ಟಿದ್ದ. ಇಸ್ರೇಲ್ ಕೂಡ ನಮಗೂ ಬೇಗ F - 16 ಕೊಡಿ ಎಂದು ಕೇಳಿತ್ತು. ಇಸ್ರೇಲ್ ಎಷ್ಟೆಂದರೂ ಉದ್ದರಿ ಗಿರಾಕಿ. ಒಮ್ಮೊಮ್ಮೆ ಬಿಟ್ಟಿಯಾಗೂ ಕೇಳುತ್ತಿತ್ತು. ಇರಾನ್ ಹಾರ್ಡ್ ಕ್ಯಾಶ್ ಕೊಡುತ್ತಿದ್ದ ಗ್ರಾಹಕ. ಹಾಗಾಗಿ ಇಸ್ರೇಲಿಗೆ ಅತ್ಯಾಧುನಿಕ F - 16 ಯುದ್ಧ ವಿಮಾನಗಳ ಪೂರೈಕೆ ತಡವಾಗಿತ್ತು. ಇರಾನಿನಲ್ಲಿ ಸರ್ಕಾರ ಬದಲಾಗಿ ಯಾವಾಗ ಅಮೇರಿಕಾವನ್ನು ದ್ವೇಷಿಸುವ ಸರ್ಕಾರ ಬಂತೋ ಅಂದೇ ಅಮೇರಿಕಾ ಇರಾನಿಗೆ ರಕ್ಷಣಾ ಸಾಮಗ್ರಿಗಳ ಪೂರೈಕೆ ನಿಲ್ಲಿಸಿತು. ಇರಾನಿಗೆ ಹೋಗಬೇಕಾಗಿದ್ದ F - 16 ವಿಮಾನಗಳನ್ನು ಇಸ್ರೇಲಿಗೆ ಕೊಡುವದಾಗಿ ಹೇಳಿತು.

ಇರಾಕ್ ವಿರುದ್ಧ ಇಸ್ರೇಲ್ ಮಾಡಲು ಕುಳಿತಿದ್ದ ರಹಸ್ಯ ಕಾರ್ಯಾಚರಣೆಗೆ F - 16 ಯುದ್ಧವಿಮಾನಗಳು ತುಂಬಾ ಮುಖ್ಯವಾಗಿದ್ದವು. ಹಿಂದೆಂದೂ ಯಾರೂ ಮಾಡಿರದಂತಹ ವೈಮಾನಿಕ ಕಾರ್ಯಾಚರಣೆ. ಹಾಗಾಗಿ ಅತ್ಯಾಧುನಿಕ ತಂತ್ರಜ್ಞಾನವಿದ್ದ ವಿಮಾನ ಜರೂರ್ ಬೇಕಾಗಿತ್ತು.

ಎಂಟು F - 16 ಯುದ್ಧವಿಮಾನಗಳು ಮುಖ್ಯ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವುದೆಂದು ಮತ್ತು ಎಂಟು F - 15 ಫೈಟರ್ ವಿಮಾನಗಳು ಅವುಗಳಿಗೆ ಬೆಂಬಲ ನೀಡುವದೆಂದು ಕಾರ್ಯಾಚರಣೆಯ ದೊಡ್ಡಮಟ್ಟದ ರೂಪುರೇಷೆ ತಯಾರಾಯಿತು.

ವಿಮಾನದ ಪೈಲಟ್ಟುಗಳು ಮತ್ತು ಅವರ ಸಂಗಡಿಗರು ಅಭ್ಯಾಸ ಆರಂಭಿಸಿದರು. ಇಸ್ರೇಲಿನ ನೆಗೆವ್ ಮರಭೂಮಿಯಲ್ಲಿ ಇರಾಕಿನ ಅಣುಸ್ಥಾವರವನ್ನು ಹೋಲುವ ಒಂದು ಮಾದರಿಯನ್ನು ನಿರ್ಮಿಸಲಾಯಿತು. ಅದರ ಮೇಲೆ ಇಸ್ರೇಲಿನ ಸೇನೆ ಕಾರ್ಯಾಚರಣೆಯ ತಯಾರಿಯನ್ನು ಶುರು ಮಾಡಿತು.

ಸೇನಾ ಮುಖ್ಯಸ್ಥ ರಾಫುಲ್ ಏಟಾನ್ ಖುದ್ದಾಗಿ ಸಮರಾಭ್ಯಾಸದಲ್ಲಿ ಭಾಗಿಯಾದರು. ಪೈಲಟ್ ಪಕ್ಕ ಕುಳಿತು, ಅಭ್ಯಾಸದ ಬಾಂಬಿಂಗ್ (mock bombing raid) ದಾಳಿಯಲ್ಲಿ ಪಾಲ್ಗೊಂಡು, ಎಲ್ಲವೂ ಸರಿಯಾಗಿದೆ ಎಂದು ಅವರಿಗೆ ಖುದ್ದಾಗಿ ಮನದಟ್ಟಾಗಬೇಕಿತ್ತು. ಅಲ್ಲಿಯವರೆಗೆ ಅವರಿಗೆ ಸಮಾಧಾನವಿಲ್ಲ. ಮತ್ತು ದೇಶದ ಪ್ರಧಾನಿಯೆದುರು ಹೋಗಿ ೧೦೦% ಖಾತ್ರಿ ಕೊಡುವ ಬಗ್ಗೆ ವಿಶ್ವಾಸವಿರಲಿಲ್ಲ.

ತಾವು ಖುದ್ದಾಗಿ ಪಾಲ್ಗೊಂಡಿದ್ದ ಸಮರಾಭ್ಯಾಸದ ದಾಳಿಯ ನಂತರ ಸೇನಾ ಮುಖ್ಯಸ್ಥ ಏಟಾನ್ ಮನೆಯೆತ್ತ ನಡೆದರು. ಪಕ್ಕದಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಅವಿರಾಮ್ ಸೆಲ್ಲಾ ಹಿಂಬಾಲಿಸಿದರು. ಬಾಸ್ ಏನು ಹೇಳುತ್ತಾರೋ ಎಂಬ ಬಗ್ಗೆ ಸೆಲ್ಲಾ ಅವರಿಗೆ ಕುತೂಹಲ ಮತ್ತು ಆತಂಕ. ರಾಫುಲ್ ಏಟಾನ್ ಒಪ್ಪಿದರೆ ಮಾತ್ರ ಯೋಜನೆ ಮುಂದುವರೆಯುತ್ತದೆ. ಇಲ್ಲವಾದರೆ ಮತ್ತೆ ಶುರುವಿಂದ ಯೋಜನೆ ಮಾಡಲು ಕೂಡಬೇಕು. ಸಮಯ ಕಮ್ಮಿಯಿತ್ತು. ಒತ್ತಡ ತುಂಬಾ ಇತ್ತು.

ರಾಫುಲ್ ಏಟಾನ್ ಅಂದರೆ ಅವರೊಂದು ಬಗೆಯ ನಿಗೂಢ ರಹಸ್ಯ...Enigma. ಸದಾ ಮೌನಿ. ಎಲ್ಲವನ್ನೂ ಬಾಯಿಬಿಟ್ಟು ಹೇಳುವವರಲ್ಲ. ತಲೆ ಮಾತ್ರ ಹನ್ನೆರೆಡೂ ಘಂಟೆ ಓಡುತ್ತಲೇ ಇರುತ್ತಿತ್ತು. ರಷಿಯನ್ ನಿರಾಶ್ರಿತರಾಗಿ ಇಸ್ರೇಲಿಗೆ ಬಂದಿದ್ದರು ಅವರ ಪೂರ್ವಜರು. ಸೇನೆ ಸೇರುವ ಮೊದಲು ಏಟಾನ್ ಕೃಷಿಕರಾಗಿದ್ದರು. ಒಳ್ಳೆಯ ಬಡಗಿ ಕೂಡ.

ಸೇನೆ ಸೇರಿದ ಏಟಾನ್ ಇಸ್ರೇಲ್ ಕಂಡ ಮಹಾ ಸೇನಾನಿ ಏರಿಯಲ್ ಶರೋನ್ ಕೆಳಗೆ ಪಳಗಿದರು. ಅವರ ನೆರಳಿನಂತೆ ಕೆಲಸ ಮಾಡಿದರು. ೧೯೬೦, ೧೯೭೦ ರ ದಶಕಗಳ ಪ್ರಮುಖ ಯುದ್ಧಗಳಲ್ಲಿ ಭಾಗವಹಿಸಿದ್ದರು. ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ್ದರು. ಇಸ್ರೇಲಿನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ದೊಡ್ಡ ಮಟ್ಟದ ಕಾಣಿಕೆ ಸಲ್ಲಿಸಿದ್ದರು. ೧೯೭೮ ರಲ್ಲಿ ಇಸ್ರೇಲಿ ಸೇನಾಪಡೆಗಳ ಮುಖ್ಯಸ್ಥರಾಗಿ ನೇಮಕವಾಗಿದ್ದರು.

ಇಂತಹ ರಾಫುಲ್ ಏಟಾನ್ ದಾರಿಯುದ್ದಕ್ಕೂ ಒಂದೇ ಒಂದು ಮಾತಾಡಲಿಲ್ಲ. ಪಕ್ಕದಲ್ಲಿ ಕುಳಿತ ಅವಿರಾಮ್ ಸೆಲ್ಲಾಗೆ ಇನ್ನಿಲ್ಲದ ಚಡಪಡಿಕೆ. ಅರ್ಧ ಘಂಟೆಯ ಪ್ರಯಾಣದ ಬಳಿಕ ಏಟಾನ್ ಕ್ಲುಪ್ತವಾಗಿ ಹೇಳಿದ್ದು ಒಂದೇ ಮಾತು... 'ಚಿಂತೆ ಬೇಡ. ಸರ್ಕಾರ ನಿಮ್ಮ ಯೋಜನೆಯನ್ನು ಅನುಮೋದಿಸುತ್ತದೆ.' ಈ ಮಾತನ್ನು ಕೇಳಿದ ಸೆಲ್ಲಾ ಸಮಾಧಾನದ ನಿಟ್ಟುಸಿರನ್ನು ಬಿಟ್ಟರು. ಮನದಲ್ಲಿ ಸಾರ್ಥಕ ಭಾವನೆ. ತಮ್ಮ ಸೇನಾನಾಯಕನ ಬಗೆಗೊಂದು ದೊಡ್ಡ ಮಟ್ಟದ ಗೌರವ.

ಸೇನೆಯ ಮಹಾದಂಡನಾಯಕರು ಖುದ್ದಾಗಿ ಎಲ್ಲ ಪರಿಶೀಲನೆ ಮಾಡಿ ಓಕೆ ಕೊಟ್ಟರೂ ಇತರ ಅನೇಕರಿಗೆ ಈ ಖತರ್ನಾಕ್ ಕಾರ್ಯಾಚರಣೆಯ ಯಶಸ್ಸಿನ ಬಗ್ಗೆ ಸಂಪೂರ್ಣ ವಿಶ್ವಾಸವಿರಲಿಲ್ಲ. ಅದರಲ್ಲೂ ನಾಯಕ ಸಮೂಹದಲ್ಲಿ ಅತಿ ಪ್ರಮುಖರಾಗಿದ್ದ ಸೇನಾ ಬೇಹುಗಾರಿಕೆ ಮುಖ್ಯಸ್ಥ ಯೇಷುವಾ ಸಾಗಿ, ಅಂದಿನ ಮೊಸ್ಸಾದ್ ಮುಖ್ಯಸ್ಥ ಇಜ್ಜಾಕ್ ಹೋಫೀ, ಸಚಿವ ಎಝೆರ್ ವೆಯಿಸ್ಮನ್, ಉಪಪ್ರಧಾನಿ ಯಿಗೇಲ್ ಯಾಡಿನ್ ಯೋಜನೆಯನ್ನು ಅನುಮೋದಿಸಲಿಲ್ಲ. ಕಾರ್ಯಾಚರಣೆ ವಿಫಲವಾದರೆ ಇಸ್ರೇಲಿನ ಬುಡಕ್ಕೇ ಬರುತ್ತದೆ. ದೊಡ್ಡಮಟ್ಟದ ಅವಮಾನ ಮುಜುಗರವಾಗುತ್ತದೆ. ಇಂತಹ ಅಪಾಯಕಾರಿ ಕಾರ್ಯಾಚರಣೆ ಬೇಡ ಎಂದರು. ಉಪಪ್ರಧಾನಿ ಯಾಡಿನ್ ಅಂತೂ ರಾಜೀನಾಮೆ ಬಿಸಾಡಿ ಎದ್ದು ಹೊರಟಿದ್ದರು. ಮುತ್ಸದ್ದಿ ಪ್ರಧಾನಿ ಬೆಗಿನ್ ಅವರನ್ನು ತಡೆದರು. ಇತರರಿಗೆ ಮನವರಿಕೆ ಮಾಡಿಕೊಡಲು ಕುಳಿತರು. ತಮ್ಮ ಸಹವರ್ತಿಗೆಗಳಿಗೆ ಮನವರಿಕೆ ಮಾಡಿಕೊಟ್ಟು, ಕಾರ್ಯಾಚರಣೆಯ ಯೋಜನೆಗೆ ಅವರ ಒಪ್ಪಿಗೆಯನ್ನು ತ್ವರಿತವಾಗಿ ಪಡೆಯಬೇಕಾಗಿದ್ದುದು ಅವರ ಅಂದಿನ ಬಹುಮುಖ್ಯ ಆದ್ಯತೆಯಾಗಿತ್ತು.

ಅಂತೂ ಇಂತೂ ಎಲ್ಲಾ ಪ್ರಮುಖರ ಒಪ್ಪಿಗೆ ಸಿಕ್ಕಿತು. ಮೇ ೮, ೧೯೮೧ ಕ್ಕೆ ಮುಹೂರ್ತ ನಿಗದಿಯಾಯಿತು. ಎಲ್ಲವೂ ಸಂಪೂರ್ಣವಾಗಿ ತಯಾರಾಗಿತ್ತು. ಎಲ್ಲಿಯವರೆಗೆ ಅಂದರೆ ಪೈಲಟ್ಟುಗಳು ವಿಮಾನಗಳನ್ನೇರಿ ಕುಳಿತಿದ್ದರು. ವಿಮಾನಗಳು ಇನ್ನೇನು ಟೇಕ್ ಆಫ್ ಆಗಬೇಕು ಅನ್ನುವಷ್ಟರಲ್ಲಿ ಮತ್ತೊಂದು ವಿಘ್ನ. ಪ್ರತಿಪಕ್ಷದ ನಾಯಕ ಶಿಮೋನ್ ಪೆರೇಸ್ 'ಪ್ರೇಮ ಪತ್ರ' ಕಳಿಸಿದ್ದರು. 'ಈ ಅಪಾಯಕಾರಿ ಕಾರ್ಯಾಚರಣೆ ಬೇಡ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲಿಗೆ ದೊಡ್ಡ ಮುಜುಗರವಾಗುತ್ತದೆ. ಇನ್ನೂ ತಡವಾಗಿಲ್ಲ. ಕಾರ್ಯಾಚರಣೆಯನ್ನು ರದ್ದು ಮಾಡಿ,' ಎಂಬುದು ಅವರ ಪ್ರೇಮ ಪತ್ರದ ಸಾರಾಂಶ.

ಇದು ಪ್ರಧಾನಿ ಬೆಗಿನ್ ಅವರಿಗೆ ದೊಡ್ಡ ಕಿರಿಕಿರಿಯಾಯಿತು. ಇದು ಅತ್ಯಂತ ರಹಸ್ಯವಾದ ಕಾರ್ಯಾಚರಣೆಯಾಗಿತ್ತು. ಅಧಿಕಾರದಲ್ಲಿದ್ದ ಪಕ್ಷದ ಕೆಲವೇ ಕೆಲವು ಜನರಿಗೆ, ಅದೂ ಅವಶ್ಯವಿದ್ದರೆ ಮಾತ್ರ, ಬೇಕಾದಷ್ಟೇ ಮಾಹಿತಿಯನ್ನು ಕೊಡಲಾಗಿತ್ತು. ಹೀಗಿದ್ದಾಗ ಪ್ರತಿಪಕ್ಷದ ನಾಯಕ ಶಿಮೋನ್ ಪೆರೇಸ್ ಅವರಿಗೂ ಮಾಹಿತಿ ದೊರಕಿದೆ ಅಂದರೆ ಏನರ್ಥ? ಎಲ್ಲಿ ಮಾಹಿತಿ ಸೋರಿಕೆಯಾಗಿದೆ? ಇದರ ಪರಿಣಾಮಗಳೇನು? ಎಂದು ಪ್ರಧಾನಿ ಬೆಗಿನ್ ತಲೆಕೆಡಿಸಿಕೊಂಡರು.

ರಾಜಕೀಯದ ರಾಡಿಯನ್ನು ತುರ್ತಾಗಿ ಸಂಬಾಳಿಸಬೇಕಿತ್ತು. ಕಾರ್ಯಾಚರಣೆಯನ್ನು ಸ್ವಲ್ಪ ಮಟ್ಟಿಗಾದರೂ ಮುಂದಕ್ಕೆ ಹಾಕಲೇಬೇಕಾದ ಅನಿವಾರ್ಯತೆ ಅವರಿಗೆ. ಸೇನೆಯಲ್ಲಿ ದೊಡ್ಡ ಮಟ್ಟದ ನಿರಾಶೆ. ಏನೂ ಮಾಡಲಿಕ್ಕೆ ಆಗುವುದಿಲ್ಲ. ಒಮ್ಮೊಮ್ಮೆ ಹೀಗಾಗಿಬಿಡುತ್ತದೆ.

ಪ್ರಧಾನಿ ಬೆಗಿನ್ ಪೂರ್ತಿಯಾಗಿ ಹಿಮ್ಮೆಟ್ಟಲಿಲ್ಲ. ಒಂದು ತಿಂಗಳು ಮುಂದಕ್ಕೆ ಹಾಕಿದರು. ಜೂನ್ ೭ ಕ್ಕೆ ಹೊಸ ಮುಹೂರ್ತ ನಿಗದಿ ಮಾಡಿದರು.

ಅಣುಸ್ಥಾವರದ ಮೇಲೆ ದಾಳಿ ಮಾಡಲಿದ್ದ ಎಂಟು F - 16 ವಿಮಾನಗಳ ಮುಂಭಾಗದಲ್ಲಿ ಸ್ಥಾಪಿತರಾಗಿ ನಾಯಕತ್ವ ವಹಿಸಿಕೊಂಡಿದ್ದವರು ಪೈಲಟ್ ಝೀವ್ ರಾಝ್. ಬೆಂಗಾವಲಿನ ಮತ್ತೊಂದು ಎಂಟು F-15 ವಿಮಾನಗಳ ಗುಂಪಿನ ನಾಯಕರಾಗಿದ್ದವರು ಸ್ಕ್ವಾಡ್ನರ್ನ್ ಕಮ್ಯಾಂಡರ್ ಆಮಿರ್ ನಾಚುಮಿ. ಅಮೋಸ್ ಯಾಡ್ಲಿನ್ ಮತ್ತಿತರ ಪೈಲಟ್ಟುಗಳಲ್ಲಿ ಮುಖ್ಯರು. ಅವರು ಮುಂದೊಂದು ದಿನ ಸೇನಾ ಬೇಹುಗಾರಿಕೆ ಸಂಸ್ಥೆಯ ಮುಖ್ಯಸ್ಥರಾದರು.

ಪೈಲಟ್ ಇಲಾನ್ ರಾಮೋನ್ ಎಲ್ಲರಿಗಿಂತ ಚಿಕ್ಕವರು. ಅನನುಭವಿ. ಆದರೆ ತುಂಬಾ ಚೆನ್ನಾಗಿ ಓದಿಕೊಂಡಿದ್ದರು.  ಎಲ್ಲ ಪುಸ್ತಕಗಳನ್ನು ಬರೋಬ್ಬರಿ ತಿರುವಿಹಾಕಿ, ತಪ್ಪಿಲ್ಲದಂತೆ ಲೆಕ್ಕಾಚಾರ ಹಾಕಿ, ಒಂದು ಪ್ರಮುಖ ನಿರ್ಧಾರಕ್ಕೆ ಬರಲು ಸಹಾಯಕರಾಗಿದ್ದರು. ಅದೇನೆಂದರೆ... ಇಸ್ರೇಲಿ ಯುದ್ಧವಿಮಾನಗಳು ಯಾವುದೇ ತೊಂದರೆಯಿಲ್ಲದೆ, ಹೊರಗಿನಿಂದ ಇಂಧನದ ಮರುಭರ್ತಿಯ ಅವಶ್ಯಕತೆ ಇಲ್ಲದೆ ೯೬೦ ಕಿಲೋಮೀಟರುಗಳ ಪ್ರಯಾಣವನ್ನು ಮಾಡಬಲ್ಲವು. ಈ ಪಕ್ಕಾ ಲೆಕ್ಕಾಚಾರ ಯೋಜನೆ ಹಾಕಲು ಕುಳಿತವರಿಗೆ ತುಂಬಾ ಸಹಾಯಕಾರಿಯಾಗಿತ್ತು. ಅನನುಭವಿಯಾದರೂ ತಮ್ಮ ಬುದ್ಧಿಮತ್ತೆಯಿಂದ ಇಲಾನ್ ರಾಮೋನ್ ಕಾರ್ಯಾಚರಣೆಯ ತಂಡದಲ್ಲಿ ತಮ್ಮ ಜಾಗ ಗಿಟ್ಟಿಸಿಕೊಂಡಿದ್ದರು.

ಹಿಂದೆಂದೂ ಮಾಡದ ಕಾರ್ಯಾಚರಣೆಯಾಗಿದ್ದ ಕಾರಣ ಯೋಜನಾ ಮುಖ್ಯಸ್ಥ ಡೇವಿಡ್ ಇವ್ರಿ ಸಾಮಾನ್ಯವಾಗಿ ರೂಡಿಯಲ್ಲಿ ಇಲ್ಲದ (unusual) ತೀರ್ಮಾನಗಳನ್ನು ತೆಗೆದುಕೊಂಡಿದ್ದರು. ವಿಮಾನದ ಎಂಜಿನುಗಳು ಚಾಲನೆಯಲ್ಲಿ ಇರುವಾಗಲೇ ಇಂಧನ ತುಂಬುವುದು. ಇಂಧನದ ಟ್ಯಾಂಕುಗಳು ಖಾಲಿಯಾದಂತೆ ಅವುಗಳನ್ನು ಅಲ್ಲಲ್ಲಿಯೇ ಬಿಸಾಕಿಬಿಡಿ ಎಂಬುದು ಇನ್ನೊಂದು ನಿರ್ಧಾರ. ಕಾರ್ಯಾಚರಣೆಯ ಬೇರೆ ಬೇರೆ ಅಪಾಯಗಳನ್ನು ಎದುರಿಸಲು ಈ ಅಪಾಯಗಳನ್ನು ತೆಗೆದುಕೊಳ್ಳಲೇಬೇಕಾಗಿತ್ತು. ಅದಕ್ಕೆ ತಕ್ಕ ಅಭ್ಯಾಸಗಳನ್ನು ತಂಡ ಪದೇ ಪದೇ ಮಾಡಿ ಎಷ್ಟೋ ಪ್ರಮಾಣದ ಅಪಾಯದ ಸಾಧ್ಯತೆಗಳನ್ನು ಸಾಕಷ್ಟು ಕಮ್ಮಿ ಮಾಡಿತ್ತು. There is a saying in risk management. You manage certain risks so that you can take those risks which you can't manage. ಆ ಮಾದರಿಯಲ್ಲಿ.

ಅದೇ ಸಮಯದಲ್ಲಿ ಇರಾನ್ ಮತ್ತು ಇರಾಕ್ ನಡುವೆ ಭೀಕರ ಯುದ್ಧ ನಡೆದಿತ್ತು. ಇರಾಕ್ ತನ್ನ ಅಣುಸ್ಥಾವರವರದ ರಕ್ಷಣೆಗಾಗಿ ಮಿಸೈಲ್ ಬ್ಯಾಟರಿ ಮತ್ತು ಫೈಟರ್ ವಿಮಾನಗಳನ್ನು ನಿಯೋಜಿಸಿರುವ ಸಾಧ್ಯತೆಗಳು ಬಹಳವಿದ್ದವು. ಹೀಗಾಗಿ ಬೆಂಗಾವಲಿಗೆ ಹೋಗಲಿದ್ದ ಇಸ್ರೇಲಿ F-15 ಫೈಟರ್ ವಿಮಾನಗಳ ಮುಖಾಮುಖಿ ಇರಾಕಿನ ಬಳಿಯಿದ್ದ ಸೋವಿಯೆಟ್ ಪೂರೈಸಿದ್ದ ಮಿಗ್ ವಿಮಾನಗಳ ಜೊತೆ ಆಗುವುದು ಖಾತ್ರಿಯಿತ್ತು. ಅದಕ್ಕೂ ತಯಾರಿ ಮಾಡಿಕೊಳ್ಳಬೇಕಾಗಿತ್ತು. ಇರಾಕಿ ಮಿಗ್ ವಿಮಾನಗಳು ಗಗನಕ್ಕೇರಿ ಇಸ್ರೇಲಿ ಯುದ್ಧವಿಮಾನಗಳ ಜೊತೆ 'ಶ್ವಾನ ಯುದ್ಧ' (Dog Fight) ಗೆ ನಿಂತುಬಿಟ್ಟವು ಅಂದರೆ ಅಷ್ಟೇ ಮತ್ತೆ. ಗೋವಿಂದಾ ಗೋವಿಂದ! ಒಂದು ರಹಸ್ಯ ಕಾರ್ಯಾಚರಣೆ ಹಾಳಾಗಿಹೋಗಿ ಅದು ಮೂರನೇ ವಿಶ್ವಯುದ್ಧಕ್ಕೆ ಕಾರಣವಾದರೂ ಅಚ್ಚರಿಯಿರಲಿಲ್ಲ. ಹಾಗಾಗದಂತೆ ನೋಡಿಕೊಳ್ಳಬೇಕಿತ್ತು.

ಎಂತಹ ದೊಡ್ಡ ಮಟ್ಟದ ಅಪಾಯಕಾರಿ ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತಿದ್ದೇವೆ ಎಂದು ಎಲ್ಲರಿಗೂ ಗೊತ್ತಿತ್ತು. ಒಂದು ವೇಳೆ ಇರಾಕಿಗಳು ಎಚ್ಚೆತ್ತುಕೊಂಡು ಮರುದಾಳಿ ಮಾಡಿದರೆ ಬಚಾವಾಗುವ ಸಾಧ್ಯತೆಗಳು ಬಹಳ ಕಮ್ಮಿಯಿದ್ದವು. ವಿಮಾನಗಳ ನಡುವಿನ 'ಶ್ವಾನ ಯುದ್ಧದಲ್ಲಿ' ಬಡಿಸಿಕೊಂಡು, ಹೊತ್ತಿ ಉರಿಯುತ್ತಿರುವ ವಿಮಾನ ಬಿಟ್ಟು, ಪ್ಯಾರಾಚೂಟ್ ಮೂಲಕ ಹಾರಿಕೊಂಡರೂ ಇರಾಕಿನಲ್ಲಿ ಬೀಳುತ್ತಿದ್ದರು ಇಸ್ರೇಲಿಗಳು. ಒಮ್ಮೆ ಇರಾಕಿಗಳ ಕೈಯಲ್ಲಿ ಸಿಕ್ಕರೆ ಮುಂದೆ ಭೀಕರ. ಕೊಡಬಾರದ ಹಿಂಸೆ ಕೊಟ್ಟು ಕೊಲ್ಲುತ್ತಿದ್ದರು. ಊಹಿಸಿಕೊಳ್ಳಲೂ ಸಾಧ್ಯವಿಲ್ಲದಂತಹ ಕ್ರೂರಿಗಳು ಸದ್ದಾಮನ ಬಂಟರು. ಇದನ್ನೆಲ್ಲಾ ಎಲ್ಲರಿಗೂ ಎಳೆಎಳೆಯಾಗಿ ಬಿಡಿಸಿ ಹೇಳಲಾಗಿತ್ತು. ಎಲ್ಲವನ್ನೂ ಮೀರಿದ್ದು ಇಸ್ರೇಲಿಗಳ ದೇಶಪ್ರೇಮ. ಮಾಡು ಇಲ್ಲವೇ ಮಡಿ ಎನ್ನುವಂತಹ ಅನಿವಾರ್ಯತೆ. ಹಾಗಾಗಿ ಕಾರ್ಯಾಚರಣೆಗೆ ಅರ್ಪಿಸಿಕೊಂಡಿದ್ದರು.

ಜೂನ್ ೭, ೧೯೮೧. ಕಾರ್ಯಾಚರಣೆಯ ದಿನ ಬಂದೇಬಿಟ್ಟಿತು. ಇಸ್ರೇಲಿನಿಂದ ಹಾರಿದ ಹದಿನಾರು ವಿಮಾನಗಳು ಕೆಂಪು ಸಮುದ್ರದ ಅಕಾಬಾ ಕೊಲ್ಲಿಯ ಮೇಲಿಂದ ಉತ್ತರ ಸೌದಿ ಅರೇಬಿಯಾದ ಮರಭೂಮಿಯತ್ತ ಹಾರಿದವು. ಯೂಫ್ರೆಟೀಸ್ ನದಿಯನ್ನು ದಾಟಿ ಇರಾಕಿನ ಗಡಿಯನ್ನು ಪ್ರವೇಶಿಸಿದವು.

ಇಸ್ರೇಲಿಗಳು ಹಾಕಿಕೊಂಡಿದ್ದ ಅಸಾಂಪ್ರದಾಯಿಕ ವಾಯುಮಾರ್ಗದಲ್ಲಿ  (flight path) ಒಂದು ಖಚಿತ ಹೆಗ್ಗುರುತು (landmark) ಇತ್ತು. ಅದೊಂದು ದೊಡ್ಡ ಸರೋವರ ಮತ್ತು ಸರೋವರದ ಮಧ್ಯದಲ್ಲಿರುವ ಒಂದು ನಡುಗಡ್ಡೆ. F-16 ವಿಮಾನಗಳನ್ನು ಮುನ್ನೆಡಿಸುತ್ತಿದ್ದ ನಾಯಕ ಝೀವ್ ರಾಝ್ ಆ ಹೆಗ್ಗುರಿತಿಗಾಗಿ ಹುಡುಕಿಯೇ ಹುಡುಕಿದರು. ಸರೋವರ ಕಂಡರೂ ಅದರೊಳಗೆ ಇದ್ದ ನಡುಗಡ್ಡೆ ಮಾತ್ರ ಕಾಣಲಿಲ್ಲ. ಒಂದು ಕ್ಷಣ ಗಾಬರಿಗೊಂಡರು ಅವರು. ದಾರಿ ತಪ್ಪಿ ಎಲ್ಲೋ ಬಂದುಬಿಟ್ಟಿದ್ದೆವೋ ಏನೋ ಎನ್ನುವ ಆತಂಕ ಕಾಡಿತು. ಬೇಗನೇ ಸಮಸ್ಯೆ ಪರಿಹಾರವಾಯಿತು. ಆ ದಿನಗಳಲ್ಲಿ ತುಂಬಾ ಮಳೆಯಾಗಿತ್ತು. ಸರೋವರ ಬಹಳ ತುಂಬಿತ್ತು. ನಡುಗಡ್ಡೆ ಸ್ವಲ್ಪ ಮುಳುಗಿತ್ತು. ಹಾಗಾಗಿ ಮೇಲ್ನೋಟಕ್ಕೆ ಕಂಡಿರಲಿಲ್ಲ. ಸೂಕ್ಷ್ಮವಾಗಿ ಗಮನಿಸಿದಾಗ ಕಂಡಿತು. ಅಬ್ಬಾ! ಎಂದು ನಿಟ್ಟುಸಿರಿಟ್ಟ ನಾಯಕ  ಝೀವ್ ರಾಝ್ ಆ ಕ್ಷಣಕ್ಕೆ, ತಾತ್ಕಾಲಿಕವಾದರೂ, ನಿರುಮ್ಮಳರಾದರು. Such moments of solace were absolute luxuries even if temporary!

ಅಂತೂ ಕೊನೆಗೆ ಇರಾಕಿನ ಅಣುಸ್ಥಾವರ ಅವರ ಕಣ್ಣಳತೆಯಲ್ಲಿ ಬಂದಿತು. ಸದ್ದಾಮ್ ಹುಸೇನನ ಹೆಮ್ಮೆಯ ಪ್ರತೀಕದಂತೆ ಎದ್ದು ನಿಂತಿತ್ತು. ಸುತ್ತಲೂ ಎತ್ತರವಾದ ಮತ್ತು ಸಾಕಷ್ಟು ಧೃಡವಾದ ರಕ್ಷಣಾಗೋಡೆಗಳು ಇದ್ದವು.

ಅಲ್ಲಿಯ ತನಕ ಗೌಪ್ಯತೆಯನ್ನು ಕಾಯ್ದುಕೊಳ್ಳಲು ವಿಮಾನಗಳ ಮಧ್ಯೆ ಸಂಪೂರ್ಣ ರೇಡಿಯೋ ನಿಶ್ಶಬ್ದವಿತ್ತು. Complete radio silence. ಈಗ ಅನಿವಾರ್ಯವಾಗಿ ಪೈಲಟ್ ಝೀವ್ ರಾಝ್ ತಮ್ಮ ರೇಡಿಯೋ ಎತ್ತಿಕೊಂಡರು. ತಮ್ಮ ಸಹವರ್ತಿಗಳಿಗೆ ಕ್ಲುಪ್ತ ಸಂದೇಶವನ್ನು ರವಾನಿಸಿದರು. ಅಣುಸ್ಥಾವರವನ್ನು ಸಮೀಪಿಸಿದ್ದೇವೆ. ಎಲ್ಲರೂ ಎತ್ತರವನ್ನು ಹೆಚ್ಚಿಸಿಕೊಳ್ಳಿ. ಶತ್ರುದೇಶಗಳ ರೇಡಾರುಗಳಿಂದ ತಪ್ಪಿಸಿಕೊಳ್ಳಲೆಂದು ಅತಿ ಕಮ್ಮಿ ಎತ್ತರದಲ್ಲಿ ಹಾರಿ ಬಂದಿದ್ದರು. ಈಗ ವಿದ್ಯುತ್ಕಂಬ ಮುಂತಾದವುಗಳಿಂದ ಬಚಾವಾಗಲು ಎತ್ತರ ಹೆಚ್ಚು ಮಾಡಿಕೊಳ್ಳಬೇಕಾಗಿತ್ತು.

ಒಂದು ವಿಷಯ ಮಾತ್ರ ಎಲ್ಲರನ್ನೂ ಅಚ್ಚರಿಗೀಡುಮಾಡಿತು. ತುಂಬಾ ಸೋಜಿಗವೆನ್ನಿಸುವಂತೆ ಅಲ್ಲೆಲ್ಲೂ ವೈಮಾನಿಕ ರಕ್ಷಣಾ ವ್ಯವಸ್ಥೆ ಇರಲೇ ಇಲ್ಲ! ಇಸ್ರೇಲಿನ ಹದಿನಾರು ವಿಮಾನಗಳು ಅಣುಸ್ಥಾವರವನ್ನು ಸಮೀಪಿಸಿದರೂ ಒಂದೇ ಒಂದು ಇರಾಕಿ ಮಿಗ್ ವಿಮಾನ ಗಗನಕ್ಕೇರಿರಲಿಲ್ಲ. ಮಿಸೈಲ್ ಬ್ಯಾಟರಿ ಕಾಣಲಿಲ್ಲ. ಸಣ್ಣ ಪ್ರಮಾಣದ anti artillery ತೋಪುಗಳು ಹಾರಿಸಲ್ಪಟ್ಟರೂ ಅವು ಯಾವುದೂ ಗುರಿ ಮುಟ್ಟಲಿಲ್ಲ. ಇಸ್ರೇಲಿ ಯುದ್ಧವಿಮಾನಗಳಿಗೆ ಯಾವುದೇ ತರಹದ ಹಾನಿಯಾಗಲಿಲ್ಲ.

ಎತ್ತೆರಕ್ಕೇರಿದ್ದ ಯುದ್ಧ ವಿಮಾನಗಳು ಒಮ್ಮೆಲೇ ಡೈವ್ ಹೊಡೆದವು. ಒಂದಾದಮೇಲೊಂದರಂತೆ ಬರೋಬ್ಬರಿ ೩೫ ಡಿಗ್ರಿ ಕೋನದಲ್ಲಿ ಬಾಂಬಿಂಗ್ ಮಾಡಿದವು. ನೋಡನೋಡುತ್ತಿದ್ದಂತೆ ಸದ್ದಾಮ ಹುಸೇನನ ಅಣುಸ್ಥಾವರದ ಬಕ್ಕ ತಲೆಯಂತಹ ಗುಮ್ಮಟ ಢಮಾರ್ ಎಂದುಬಿಟ್ಟಿತು. ಬುರುಡೆ ಬಿಚ್ಚಿಕೊಂಡ ಅಬ್ಬರಕ್ಕೆ ಎಲ್ಲೆಡೆ ಧೂಳು ಅಂದರೆ ಅಷ್ಟು ಧೂಳು!

ಉಳಿದ ಬಂಕರ್ ಬಸ್ಟರ್ ಮಾದರಿಯ ಬಾಂಬುಗಳು ತಳತನಕ ಇಳಿದು ನಂತರ ಸ್ಪೋಟವಾಗಿ ಎಲ್ಲವನ್ನೂ ಗುಡಿಸಿ ಗುಂಡಾಂತರ ಮಾಡಿಬಿಟ್ಟವು. ಇಸ್ರೇಲಿ ಪೈಲಟ್ ಒಬ್ಬ ಪೊರಪಾಟಿನಲ್ಲಿ ಪಕ್ಕದ ಕಟ್ಟಡದ ಮೇಲೂ ಬಾಬಿಂಗ್ ಮಾಡಿಬಿಟ್ಟ. ಅದೂ ಕೂಡ ಟೋಟಲ್ ಉಡೀಸ್!

ಇಷ್ಟೆಲ್ಲಾ ಆಗಲು ತೆಗೆದುಕೊಂಡಿದ್ದು ಕೇವಲ ಎಂಬತ್ತು ಸೆಕೆಂಡುಗಳು ಅಂದರೆ ನೀವು ನಂಬಲಿಕ್ಕಿಲ್ಲ. ಆದರೆ ಅದೇ ವಾಸ್ತವ. Simply unbelievable!

ಶತ್ರು ದೇಶದಿಂದ ಹೊರಬೀಳುವ ಮೊದಲು ಎಲ್ಲ ಇಸ್ರೇಲಿ ಪೈಲೆಟ್ಟುಗಳು ಸುರಕ್ಷಿತರಾಗಿದ್ದಾರೆ ಎಂದು ಖಾತ್ರಿ ಮಾಡಿಕೊಳ್ಳಬೇಕಾಗಿತ್ತು. ಅದು ಯೋಜನೆಯ ಒಂದು ಪ್ರಮುಖ ಹೆಜ್ಜೆ. ದಾಳಿ ಮಾಡಿದ F-16 ವಿಮಾನತಂಡದ ಕ್ಯಾಪ್ಟನ್ ಮತ್ತು ಬೆಂಗಾವಲಿಗಿದ್ದ F-15 ವಿಮಾನತಂಡದ ಕ್ಯಾಪ್ಟನ್ ರೇಡಿಯೋ ಜಾಲಕ್ಕೆ ದಾಖಲಾದರು. ಎಲ್ಲರಿಗೂ ತಾವು ಸುರಕ್ಷಿತರಾಗಿದ್ದೇವೆ ಎಂದು ಖಾತ್ರಿ ಪಡಿಸಲು ಕೋರಿದರು. ಒಬ್ಬರಾದ ಮೇಲೆ ಒಬ್ಬರಂತೆ ಹದಿನೈದು ಜನ ಪೈಲೆಟ್ಟುಗಳು 'ಚಾರ್ಲಿ' ಎನ್ನುವ ಕೋಡೆಡ್ ಸಂದೇಶ ರವಾನಿಸುವ ಮೂಲಕ ತಮ್ಮ ತಮ್ಮ ಇರುವಿಕೆಯನ್ನು ಖಾತ್ರಿ ಪಡಿಸಿದರು.

ಆದರೆ ಹದಿನಾರನೇ ಸಂದೇಶ ಬರಲೇ ಇಲ್ಲ. ಯಾರು ಕಳೆದುಹೋಗಿದ್ದಾರೆ ಎಂದು ಎಲ್ಲರೂ ತಲೆಕೆಡಿಸಿಕೊಂಡರು.ಆತಂಕಗೊಂಡರು.

ತಾಳೆ ಹಾಕಿದರೆ ತಂಡದ ಅತ್ಯಂತ ಕಿರಿಯ ಸದಸ್ಯನಾಗಿದ್ದ ರಾಮೋನ್ ಗಾಯಬ್! ಅವನಿಗೆ ಏನಾಯಿತು!? ಎಂದು ಎಲ್ಲರೂ ಗಾಬರಿಗೊಂಡರು. ನಂತರ ಬಿದ್ದು ಬಿದ್ದು ನಕ್ಕರು. ರಾಮೋನ್ ಅನನುಭವಿ. ಹಾಗಾಗಿ ಎಲ್ಲರಿಗಿಂತ ಕೊನೆಯಲ್ಲಿದ್ದ. ಒಂದು ಕ್ಷಣ ಅವನಿಗೆ ಅದೇನು ಮಂಕು ಕವಿಯಿತೋ ಗೊತ್ತಿಲ್ಲ. ಇರಾಕಿ ಮಿಗ್ ವಿಮಾನವೊಂದು ದಾಳಿ ಮಾಡಲು ಬೆನ್ನೆಟ್ಟಿಬರುತ್ತಿದೆ ಎಂದು ಭ್ರಮಿಸಿಬಿಟ್ಟ. ಒಮ್ಮೊಮ್ಮೆ ಯುದ್ಧದ adrenaline rush ಹೇಗಿರುತ್ತದೆ ಅಂದರೆ ಇಲ್ಲದ ಕಡೆಯೂ ಶತ್ರುಗಳು ಕಾಣುತ್ತಾರೆ. ಇಲ್ಲದ ಮಿಗ್ ವಿಮಾನವನ್ನು ಕಲ್ಪಿಸಿಕೊಂಡು, ಅದು ತನ್ನನ್ನು ಮತ್ತು ಇತರ ಇಸ್ರೇಲಿಗಳನ್ನು ಹೊಡೆದುರುಳಿಸುವ ಮುನ್ನ ಅದನ್ನು ನಾಶಪಡಿಸುವುದು ಹೇಗೆ ಎಂದು ಸ್ಕೆಚ್ ಹಾಕುತ್ತಿದ್ದ ರಾಮೋನ್ 'ಚಾರ್ಲಿ' ಸಂದೇಶ ಕಳಿಸದೇ ಇತರರನ್ನು ಚಿಂತೆಗೆ ದೂಡಿದ್ದ. ಪುಣ್ಯಕ್ಕೆ ಬಹುಬೇಗನೆ ತಪ್ಪಿನ ಅರಿವಾಗಿ ಕಟ್ಟಕಡೆಯ 'ಚಾರ್ಲಿ' ಸಂದೇಶ ರವಾನಿಸಿದ್ದ. ನಾಯಕರು ನಿಟ್ಟುಸಿರು ಬಿಟ್ಟು ವಿಮಾನಗಳನ್ನು ಶರವೇಗದಲ್ಲಿ ಇಸ್ರೇಲಿನತ್ತ ತಿರುಗಿಸಿದರು. ಮುಂದೊಂದು ದಿನ ಮಹಾನ್ ಪ್ರತಿಭಾವಂತ ರಾಮೋನ್ ಇಸ್ರೇಲಿನ ಪ್ರಪಥಮ ಬಾಹ್ಯಾಕಾಶಯಾನಿ ಎಂದು ಪ್ರಸಿದ್ಧನಾದ. ಆದರೆ ೨೦೦೩ ರಲ್ಲಿ ಆದ ಕೊಲಂಬಿಯಾ ಬಾಹ್ಯಾಕಾಶ ನೌಕೆಯ ಸ್ಪೋಟದ ದುರಂತದಲ್ಲಿ ಪ್ರಾಣ ಕಳೆದುಕೊಂಡ. ಭಾರತೀಯ ಮೂಲದ ಅಮೇರಿಕಾದ ಬಾಹ್ಯಾಕಾಶಯಾನಿ ಕಲ್ಪನಾ ಚಾವ್ಲಾ ಕೂಡ ಅದೇ ದುರಂತದಲ್ಲಿ ಅಸುನೀಗಿದ್ದರು.

ವಾಪಸ್ ಇಸ್ರೇಲಿನತ್ತ ಹೊರಟರೂ ಇರಾಕಿನ ಗಡಿ ದಾಟುವ ಮೊದಲು ಇರಾಕಿ ಮಿಗ್ ವಿಮಾನಗಳು ದಾಳಿ ಮಾಡಿಯೇ ಮಾಡುತ್ತವೆ ಎಂದುಕೊಂಡೇ ಹೊರಟಿದ್ದರು ಇಸ್ರೇಲಿಗಳು. ಆದರೆ ಹಾಗೇನೂ ಆಗಲೇ ಇಲ್ಲ. ಎಲ್ಲ ಹದಿನಾರೂ ವಿಮಾನಗಳು ಸುರಕ್ಷಿತವಾಗಿ ಇಸ್ರೇಲ್ ತಲುಪಿಕೊಂಡವು.

ಅಂದು ಅದು ಇಸ್ರೇಲಿಗಳ ಸುದೈವವೋ ಅಥವಾ ಆ ಇರಾಕಿ ಅಧಿಕಾರಿಯ ದುರ್ದೈವವೋ ಗೊತ್ತಿಲ್ಲ. ಅಣುಸ್ಥಾವರದ ರಕ್ಷಣಾ ಅಧಿಕಾರಿ ರಾಜಧಾನಿ ಬಾಗ್ದಾದಿನ ಕೆಫೆಯೊಂದರಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದ. ಈ ಕಡೆ ಅಣುಸ್ಥಾವರ ಧೂಳೆದ್ದು ಹೋಗುತ್ತಿದ್ದರೆ ಈ ಪುಣ್ಯಾತ್ಮ ಮಾತ್ರ 'ಯಾ ಹಬೀಬಿ! ಯಾ ಹಬೀಬಿ!' ಎಂದು ಪಲಕುತ್ತ ಒಂದಾದ ಮೇಲೊಂದು ಏಲಕ್ಕಿ ಪರಿಮಳದ ಕಾಫೀ ಹೀರುತ್ತಾ ಕುಳಿತಿದ್ದ. ಅದು ಅರಬರ ಪದ್ಧತಿ ಬಿಡಿ. ಅವನ ಕೆಳಗಿನ ಜನರಿಗೆ ಅವನ ಆಜ್ಞೆ ಬರದ ಹೊರತೂ ಮಿಸೈಲ್ ಹಾರಿಸುವಂತಿಲ್ಲ ಮತ್ತು ಮಿಗ್ ವಿಮಾನಗಳನ್ನು ಇಸ್ರೇಲಿಗಳ ಬೇಟೆಗೆ ಕಳಿಸುವಂತಿಲ್ಲ. ಕಾಫೀ ಮೇಲೆ ಕಾಫೀ ಕುಡಿಯುತ್ತ ಕುಳಿತಿದ್ದ ಈ ಪುಣ್ಯಾತ್ಮ ಸಂಪರ್ಕಕ್ಕೆ ಸಿಗಲಿಲ್ಲ. ಮುಂದೆ ಆತ ಯಾರಿಗೂ ಎಲ್ಲಿಗೂ ಸಿಗಲಿಲ್ಲ. ತನ್ನ ಹೆಮ್ಮೆಯ ಅಣುಸ್ಥಾವರ ಮಟಾಷ್ ಆಯಿತೆಂದು ಕೊತಕೊತ ಕುದಿಯುತ್ತಿದ್ದ ಸದ್ದಾಮ ಹುಸೇನ್ ಬಲಿಗಾಗಿ ಹಾತೊರೆಯುತ್ತಿದ್ದ. ಸರಿಯಾಗಿ ಕೆಲಸ ಮಾಡದ ಈ ಗಿರಾಕಿ ಸಿಕ್ಕ. ಸಿಕ್ಕ ಮೇಲೆ ಮತ್ತೇನು? ಇತರರಿಗೆ ಒಂದು ಪಾಠವೆಂಬಂತೆ ಆ ರಕ್ಷಣಾ ಅಧಿಕಾರಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿಬಿಟ್ಟ ಸದ್ದಾಮ್ ಹುಸೇನ್. ಹಾಗೆ ಗಲ್ಲಿಗೆ ಹಾಕುವುದು ತುಂಬಾ ಸಾಮಾನ್ಯವಾಗಿತ್ತು ಬಿಡಿ. ಇಂದಿಗೂ ಕೂಡ ಅರಬ್ ದೇಶಗಳಲ್ಲಿ ಶಿಕ್ಷೆಗಳನ್ನು ಬಹಿರಂಗವಾಗಿ ಕೊಡಲಾಗುತ್ತದೆ. ಕೆಲವೊಮ್ಮೆ ಚಿತ್ರಹಿಂಸೆಗಳನ್ನೂ ಕೂಡ!

ಇಸ್ರೇಲ್ ಮಾಡಿದ ದಾಳಿಯಲ್ಲಿ ಹತ್ತು ಇರಾಕಿ ಸೈನಿಕರು ಮತ್ತು ಒಬ್ಬ ಫ್ರೆಂಚ್ ಇಂಜಿನಿಯರ್ ಹತನಾದ ಎಂದು ವರದಿಯಾಯಿತು.

ಇಸ್ರೇಲಿನ ಈ ಜಾಬಾದ್ ಕಾರ್ಯಾಚರಣೆ ಇಸ್ರೇಲಿನ ನಾಗರಿಕರಿಗೆ ಒಂದು ತರಹದ ನೆಮ್ಮದಿಯನ್ನು ತಂದುಕೊಟ್ಟಿತು. ಆ ನೆಮ್ಮದಿ ಸಂಭ್ರಮಕ್ಕೆ ಅನುವು ಮಾಡಿಕೊಟ್ಟಿತು. ಎಲ್ಲರೂ ಸಂಭ್ರಮಿಸಿದರು. ಈ ಕಾರ್ಯಾಚರಣೆ ಅಸಾಧ್ಯ ಎಂದು ಹೇಳಿದವರೂ ಸಹ ತಾವು ಇಸ್ರೇಲಿ ವಾಯುಪಡೆಯ ಕ್ಷಮತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಕ್ಕೆ ವಿಷಾದ ಹೇಳಿದರು. ಸಂಭ್ರಮದಲ್ಲಿ ಪಾಲ್ಗೊಂಡರು. ಒಂದು ತರಹದ ವಿಚಿತ್ರ ಶಾಂತಿಯ ಮಂತ್ರ ಪಠಿಸುತ್ತ ಕುಳಿತಿರುತ್ತಿದ್ದ ಪ್ರತಿಪಕ್ಷದ ನಾಯಕ ಶಿಮೋನ್ ಪೆರೇಸ್ ಅವರನ್ನು ಹೊರತುಪಡಿಸಿ ಎಲ್ಲರೂ ಇಸ್ರೇಲಿ ಸೇನೆಯ daredevil ಕಾರ್ಯಾಚರಣೆಯನ್ನು ಕೊಂಡಾಡಿದರು. ಏನು ಅವರ ಶಾಂತಿ ಮಂತ್ರವೋ ಏನು ಅವರ ಭ್ರಾಂತಿ ಮಂತ್ರವೋ ಕೊನೆವರೆಗೂ ಇಸ್ರೇಲಿಗಳಿಗೆ ತಿಳಿಯಲಿಲ್ಲ ಅನ್ನಿ.

ಬೇರೆ ಬೇರೆ ದೇಶಗಳು ಇಸ್ರೇಲನ್ನು ಕಟುವಾಗಿ ಖಂಡಿಸಿದವು. ಅದು ಅವುಗಳ ಅನಿವಾರ್ಯತೆ. ಅಂತರರಾಷ್ಟ್ರೀಯ ಸಮುದಾಯ, ಅದು ಇದು, ಮಣ್ಣು ಮಸಿ ಅಂತೆಲ್ಲ ಕಟ್ಟುಪಾಡು ನೀತಿನಿಯಮ ಇರುತ್ತವೆ ನೋಡಿ. ಹಾಗಾಗಿ ಹೆಚ್ಚಿನ ದೇಶಗಳು ಇಸ್ರೇಲನ್ನು ಖಂಡಿಸಿ ಠರಾವು ಪಾಸ್ ಮಾಡಿದವು. ಇಸ್ರೇಲಿನ ಪರಮಾಪ್ತ ಅಮೇರಿಕಾ ಕೂಡ ಕಾಟಾಚಾರಕ್ಕೆ ಎಂದು ಇಸ್ರೇಲನ್ನು ಖಂಡಿಸಿತು. ಸಣ್ಣಪುಟ್ಟ ಆರ್ಥಿಕ ನಿರ್ಬಂಧಗಳನ್ನು ವಿಧಿಸಿತು. ಅಂದು ಅಮೇರಿಕಾದ ಅಧ್ಯಕ್ಷರಾಗಿದ್ದವರು ರೊನಾಲ್ಡ್ ರೀಗನ್ ಸಾಹೇಬರು. ಮೊದಲು ಹಾಲಿವುಡ್ಡಿನಲ್ಲಿ ಸಿನಿಮಾ ನಟನಾಗಿದ್ದರು. ಅವರಿಗೆ ನಟನೆ ಹೇಳಿಕೊಡಬೇಕೇ? ಬಹಿರಂಗವಾಗಿ ಇಸ್ರೇಲನ್ನು ಟೀಕಿಸುತ್ತ ಅಂತರಂಗದಲ್ಲಿ ಇಸ್ರೇಲಿನ ಬೆನ್ನುತಟ್ಟಿದರು. ಅಮೇರಿಕಾ ಮಾಡಲಾಗದ ಆದರೆ ಮಾಡಲೇಬೇಕಾದ ಇನ್ನಿತರ ಕಪ್ಪು ಕಾರ್ಯಾಚರಣೆಗಳ ಸುಪಾರಿಯನ್ನು ಇಸ್ರೇಲಿಗೆ ಕೊಟ್ಟರು. ರೇಗನ್ ಸಾಹೇಬರಿಗೆ ಸದ್ದಾಮನ ನಂತರ ಲಿಬಿಯಾದ ಸರ್ವಾಧಿಕಾರಿ ಗಡ್ಡಾಫಿಯನ್ನು ಹಣಿಯಬೇಕಾಗಿತ್ತು. ಅದಕ್ಕಾಗಿ ರಂಗಸ್ಥಳ ಸಜ್ಜಾಗಬೇಕಿತ್ತು. ಅದನ್ನು ಇಸ್ರೇಲ್ ಅದರಲ್ಲೂ ಇಸ್ರೇಲಿನ ಮೊಸ್ಸಾದ್ ಬಿಟ್ಟು ಬೇರೆ ಯಾರೂ ಮಾಡಿಕೊಡಲು ಸಾಧ್ಯವಿಲ್ಲ ಎಂದು ಅವರಿಗೆ ಗೊತ್ತಿತ್ತು. ಇಸ್ರೇಲನ್ನು ಖಂಡಿಸಿದ ಹಾಗೆ ನಟಿಸಿದ ರೇಗನ್ ಸಾಹೇಬರು ಮುಂದೆ ಹೇಗೆ ಅದೇ ಇಸ್ರೇಲನ್ನು ಉಪಯೋಗಿಸಿಕೊಂಡು ಗಡಾಫಿಯನ್ನು ಹಣಿದರು ಎಂದು ನೋಡಿದರೆ ಅದೊಂದು ರೋಚಕ ಕಥೆ.

ಮುಂದೆ ಬರೋಬ್ಬರಿ ಹತ್ತು ವರ್ಷಗಳ ನಂತರ ಅಂದರೆ ೧೯೯೧ ರಲ್ಲಿ ಮೊದಲ ಗಲ್ಫ್ ಯುದ್ಧ ಶುರುವಾಯಿತು. ಕುವೈತ್ ದೇಶವನ್ನು ಆಕ್ರಮಿಸಿ ಕೂತಿದ್ದ ಸದ್ದಾಮ್ ಹುಸೇನನನ್ನು ಓಡಿಸಲು ಎಂದು ಶುರುವಾದ ಯುದ್ಧವದು. ಹಾಗಂತ ಅಮೇರಿಕಾ ಜಗತ್ತಿಗೆ ಪುಂಗಿತ್ತು. ನಿಜವಾದ ವಿಷಯ ಎಲ್ಲರಿಗೂ ನಂತರ ಗೊತ್ತಾಯಿತು. ಒಂದು ಕಾಲದಲ್ಲಿ ಸದ್ದಾಮ ಹುಸೇನ್ ಅಮೇರಿಕಾದ ಬಂಟ. ಅಮೇರಿಕಾದ ಮಾತು ಕೇಳಿ ಮಳ್ಳನಂತೆ ಇರಾನ್ ವಿರುದ್ಧ ಸೆಣೆಸಿದ. ಉಪಯೋಗವಿಲ್ಲದ ಯುದ್ಧ ಮಾಡಿದ. ನಂತರ ತಪ್ಪಿನ ಅರಿವಾಯಿತೇನೋ ಗೊತ್ತಿಲ್ಲ. ಅಮೇರಿಕಾದ ಸಂಗ ತೊರೆದು ಹೊರಟ. ಬಿಟ್ಟಿಯಾಗಿ ಪೆಟ್ರೋಲ್ ಕೊಡಲು ಒಪ್ಪಲಿಲ್ಲ. ಸದ್ದಾಮನಿಗೆ ನಾಲ್ಕು ಪೆಟ್ಟು ಕೊಟ್ಟು ಬುದ್ಧಿ ಹೇಳಬೇಕು ಎನ್ನುವ ಗ್ರಾಂಡ್ ಸ್ಕೀಮಿನಡಿಯಲ್ಲಿ ಮೊದಲ ಗಲ್ಫ್ ಯುದ್ಧ ಶುರುವಾಯಿತು. ಅದಕ್ಕೆ ತಾತ್ಕಾಲಿಕವಾಗಿ ಬಲಿಯಾಗಿದ್ದು ಕುವೈತ್. ಅದೇನೇ ಇರಲಿ. ೧೯೯೧ ರ ಮೊದಲ ಗಲ್ಫ್ ಯುದ್ಧದ ಸಂದರ್ಭದಲ್ಲಿ ಮಾತ್ರ ಅಂದಿನ ಅಮೇರಿಕಾದ ಅಧ್ಯಕ್ಷ ಜಾರ್ಜ್ ಬುಷ್ (ಸೀನಿಯರ್) ಮತ್ತು ರಕ್ಷಣಾ ಕಾರ್ಯದರ್ಶಿ ಡಿಕ್ ಚೀನಿ ಇಸ್ರೇಲ್ ಹತ್ತು ವರ್ಷದ ಹಿಂದೆ, ಇಡೀ ಅಂತರರಾಷ್ಟ್ರೀಯ ಸಮುದಾಯವನ್ನು ಎದುರಾಕಿಕೊಂಡು, ಮಾಡಿದ ಕಾರ್ಯಾಚರಣೆಯನ್ನು ಹೊಗಳಿದ್ದರು. ಅಂದು ಇಸ್ರೇಲ್ ಸದ್ದಾಮ್ ಹುಸೇನನ ಅಣುಸ್ಥಾವರವನ್ನು ನಿರ್ನಾಮ ಮಾಡಿರದಿದ್ದರೆ ನಮಗೆ ಇವತ್ತು ಅದೊಂದು ದೊಡ್ಡ ತಲೆನೋವಾಗುತ್ತಿತ್ತು. ಕುವೈತಿನ ವಿಮೋಚನೆ ಅಷ್ಟು ಸುಲಭವಾಗಿ ಆಗುತ್ತಿರಲಿಲ್ಲ ಎಂದು ಪುಂಗಿದರು. ಹೆಚ್ಚಿನವರು ಅಹುದಹುದು ಎಂಬಂತೆ ತಲೆದೂಗಿದರು. ಒಳಗಿನ ಹೂರಣ ಗೊತ್ತಿದ್ದವರು ಪೆಕಪೆಕನೆ ನಕ್ಕರು. It was again all about cheap oil.

ಈ perfect ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಪೈಲಟ್ ಝೀವ್ ರಾಝ್ ಅವರಿಗೆ ಇಸ್ರೇಲಿನ ಪ್ರತಿಷ್ಠಿತ ಸೇವಾ ಪದಕವನ್ನು ನೀಡಲಾಯಿತು. 'ನನಗೊಬ್ಬನಿಗೇ ಪದಕ ಕೊಟ್ಟರೆ ಹೇಗೆ? ಉಳಿದ ಹದಿನೈದು ಜನರಿಗೂ ಕೊಡಬೇಕು' ಎಂದು  ಝೀವ್ ರಾಝ್ ನಮ್ರತೆಯಿಂದಲೇ ಆಕ್ಷೇಪಣೆ ವ್ಯಕ್ತಪಡಿಸಿದರೆ ಸೇನಾ ಮುಖ್ಯಸ್ಥ ರಾಫುಲ್ ಏಟಾನ್ ಏನೆಂದರು ಗೊತ್ತೇ? 'ಬಡಿದಾಟವಿಲ್ಲ. ಕಾದಾಟವಿಲ್ಲ. ಹೋದಿರಿ. ಬಾಂಬ್ ಹಾಕಿದಿರಿ. ವಾಪಸ್ ಬಂದಿರಿ. ಆಕಾಶದಲ್ಲಿ ಯುದ್ಧ ಗಿದ್ಧ ಏನೂ ಆಗಲಿಲ್ಲವಲ್ಲ. ಹಾಗಾಗಿ ಉಳಿದವರಿಗೆಲ್ಲ ಪದಕ ಯಾಕೆ? ಮುಂದೆ ನಿಜವಾದ ಕಾದಾಟವಾದಾಗ ನೋಡೋಣ,' ಎಂದು ಬೂಟು ಕುಟ್ಟುತ್ತ ಹೊರಟುಬಿಟ್ಟರು. ಆ ಮನುಷ್ಯ ಎಷ್ಟು insensitive ಎಂದು ಅನ್ನಿಸಬಹುದು. ಆದರೆ ಇಸ್ರೇಲಿಗಳೇ ಹಾಗೆ. ಕೊಂಚ ಕಟು ಸ್ವಭಾವದವರು. ಸೇನೆಯಲ್ಲಂತೂ ಕೊಂಚ ಜಾಸ್ತಿಯೇ ಅನ್ನಿ. Everybody is a winner ಎಂದು ಎಲ್ಲರ ತಲೆಗೆ ಎಣ್ಣೆ ತಿಕ್ಕಿ, ಎಲ್ಲರನ್ನೂ ಒಂದು ತರಹದ mediocrity ಗೆ ತಳ್ಳುವ ಸಂಪ್ರದಾಯವಿಲ್ಲ. Bar of excellence is very high.

ಇದಾದ ನಂತರ ಇಸ್ರೇಲ್ ಬಹಿರಂಗವಾಗಿ ತನ್ನ ವಿದೇಶಾಂಗ ನೀತಿಯನ್ನು ಪ್ರಕಟಿಸಿತು. ಅದರ ತಿರುಳು ತುಂಬಾ ಸರಳವಾಗಿತ್ತು ಮತ್ತು ಅಷ್ಟೇ ಸ್ಪಷ್ಟವಾಗಿತ್ತು. ಮಧ್ಯಪ್ರಾಚ್ಯದ ಯಾವುದೇ ದೇಶ ಪರಮಾಣು ತಂತ್ರಜ್ಞಾನವನ್ನು ಹೊಂದುವುದನ್ನು ಅಥವಾ ಅಭಿವೃದ್ಧಿ ಪಡಿಸುವುದನ್ನು ಇಸ್ರೇಲ್ ಸಹಿಸುವುದಿಲ್ಲ. ಸಹಿಸುವುದಿಲ್ಲ ಅಷ್ಟೇ ಅಲ್ಲ. ಇಸ್ರೇಲ್ ಅಂತಹ ಪ್ರಯತ್ನಗಳನ್ನು ಶತಾಯಗತಾಯ ವಿರೋಧಿಸುತ್ತದೆ ಮತ್ತು ತಡೆಯುತ್ತದೆ.

ಮುಂದೆ ಇದು Begin Doctrine ಎಂದೇ ಖ್ಯಾತವಾಯಿತು. ಇಸ್ರೇಲ್ ಅದನ್ನು ಕರಾರುವಕ್ಕಾಗಿ ಪಾಲಿಸಿಕೊಂಡು ಬಂದಿದೆ ಕೂಡ. ಇರಾಕಿನ ನಂತರ ಅಣುಸ್ಥಾವರ ಕಟ್ಟಲು ಹೋದ ಸಿರಿಯಾಕ್ಕೆ ಅದೇ ಗತಿಯಾಯಿತು. ಸದ್ಯಕ್ಕೆ ಇರಾನಿಗೂ ಅದೇ ಗತಿಯಾಗುತ್ತಿದೆ. ಆದರೆ ಚಿಕ್ಕ ಚಿಕ್ಕ ಡೋಸುಗಳಲ್ಲಿ ಇರಾನಿಗೆ ಕಂಪ್ಯೂಟರ್ ವೈರಸ್ ಮೂಲಕ, ಕಂಡಕಂಡಲ್ಲಿ ಇರಾನಿ ಅಣುವಿಜ್ಞಾನಿಗಳನ್ನು ನಿಗೂಢವಾಗಿ ಕೊಲ್ಲುವ ಮೂಲಕ, ಸೇನಾ ಮುಖ್ಯಸ್ಥ ಸುಲೇಮಾನಿ ಅಂತವರನ್ನು ಅಮೇರಿಕಾವನ್ನು ಮುಂದಿಟ್ಟುಕೊಂಡು ಡ್ರೋನ್ ಮುಖಾಂತರ ಉಡಾಯಿಸಿಬಿಡುವ ಮೂಲಕ ಇರಾನಿಗೆ ಬಿಸಿ ಮುಟ್ಟಿಸುತ್ತಿದೆ ಇಸ್ರೇಲ್. ಮುದೊಂದು ದಿನ ಇರಾನಿನ ಅಣುಸ್ಥಾವರವೂ ಭೂಮಿಯಲ್ಲಿ ಲೀನವಾದರೆ ಯಾವ ಆಶ್ಚರ್ಯವೂ ಇಲ್ಲ. ಏಕೆಂದರೆ Begin Doctrine ಚಾಲ್ತಿಯಲ್ಲಿದೆ. ಮುಂದೂ ಇರುತ್ತದೆ.

ಮುಖ್ಯ ಮಾಹಿತಿ ಮೂಲ: No Mission Is Impossible: The Death-Defying Missions of the Israeli Special Forces by Michael Bar-Zohar, Nissim Mishal

Saturday, February 15, 2020

ಮಗನಿಗೆ ತುರ್ತಾಗಿ ಇಪ್ಪತ್ತೊಂದು ವರ್ಷವಾಗಬೇಕಿದೆ...

'ನನ್ನ ಮಗನಿಗೆ ಇಪ್ಪತ್ತೊಂದು ವರ್ಷವಾಗುವುದನ್ನೇ ಕಾಯುತ್ತಿದ್ದೇನೆ ಮಾರಾಯ,' ಅಂದ ಒಬ್ಬ ಪರಿಚಿತ.

'ಯಾಕೆ? ಮದುವೆ ಮಾಡೋಕಾ? ಅಷ್ಟು ಬೇಗ? ಅರ್ಜೆಂಟಾ? ಏನಾದರೂ ಲವ್ವು ಗಿವ್ವು ಅಂತ ಲಫಡಾ ಮಾಡಿಕೊಂಡು ಕೂತಿದ್ದಾನ?' ಎಂದು ನಾನು ಕೇಳಿದೆ. ನಮ್ಮ ತಲೆ ಓಡೋದೇ ಹಾಗೆ.

'ಹಾಗಲ್ಲ. ಅವನು ಇಪ್ಪತ್ತೊಂದು ವರ್ಷದವನಾಗಿಬಿಟ್ಟ ಅಂದರೆ ನನ್ನನ್ನು ಮತ್ತು ಅವರಮ್ಮನನ್ನು ಅಮೇರಿಕಾದ ಗ್ರೀನ್ ಕಾರ್ಡಿಗೆ ಸ್ಪಾನ್ಸರ್ ಮಾಡಬಹುದು. ಮಗಳೂ ಅಲ್ಲೇ ಹುಟ್ಟಿದ್ದಾಳೆ. ಆ ರೀತಿಯಲ್ಲಾದರೂ ಗ್ರೀನ್ ಕಾರ್ಡ್ ಒಂದು ಸಿಕ್ಕುಬಿಟ್ಟರೆ ಸಾಕು ಮಾರಾಯ. ವಾಪಸ್ ಬಂದು ಅಲ್ಲೇ ನೆಲೆಸಿಬಿಡೋಣ ಅಂದುಕೊಂಡಿದ್ದೇವೆ,' ಎಂದು ಉದ್ದಾಗಿ ಬಿಟ್ಟ. ಶ್ವಾಸವನ್ನು ಬಿಟ್ಟ. ಪುಣ್ಯಕ್ಕೆ ಅದೊಂದನ್ನೇ ಬಿಟ್ಟ.

ಇದು ಕಿರಿಕ್ ಪಾರ್ಟಿ ಕೇಸ್. ಸುಮಾರು ಇಪ್ಪತ್ತು ಇಪ್ಪತ್ತೈದು ವರ್ಷದ ಹಿಂದೆ ಅಮೇರಿಕಾಗೆ ಬಂದಿದ್ದ ಪಾರ್ಟಿ. ನಮ್ಮ ಸಮಕಾಲೀನರೇ. ಅದೇನೋ ಗೊತ್ತಿಲ್ಲ. ಒಂದು ಹತ್ತು ಹನ್ನೆರೆಡು ವರ್ಷ ಇಲ್ಲಿದ್ದರು. ಎರಡು ಮಕ್ಕಳೂ ಆದರು. ಆಗ ಆ ಕುಟುಂಬ ವಾಪಸ್ ಭಾರತಕ್ಕೆ ಹೊರಟು ನಿಂತಿತು.

ಕಾರಣ ಕೇಳಿದರೆ ಒಬ್ಬೊಬ್ಬರ ಬಳಿ ಒಂದೊಂದು ಕಾರಣ ಹೇಳಿದರು. ಒಂದೇ ಸಾಲಿಡ್ ಕಾರಣ ಇರಲಿಲ್ಲವಾದ್ದರಿಂದ ಒಬ್ಬೊಬ್ಬರ ಹತ್ತಿರ ಒಂದೊಂದು ರೀತಿಯಲ್ಲಿ ಪುಂಗಿದರು.

'ವಯಸ್ಸಾದ ತಂದೆತಾಯಿಗಳಿದ್ದಾರೆ ಧಾರವಾಡದಲ್ಲಿ. ನೋಡಿಕೊಳ್ಳಬೇಕು,' ಅಂದ. ಅದು ಶುದ್ಧ ಫೇಕ್ ಎಂದು ಕೇಳಿದಾಗಲೇ ಗೊತ್ತಾಗಿತ್ತು. ಅವನ ಅಪ್ಪ ಅಮ್ಮ ಧಾರವಾಡ ಬಿಟ್ಟು ಬೆಂಗಳೂರಿಗೆ ಬಂದು ಹೊಂದಿಕೊಳ್ಳುವ ಪೈಕಿಯವರೇ ಅಲ್ಲ. ಧಾರವಾಡದಲ್ಲೇ ಹೊಸೆಲ್ಲಾಪುರದ ಕರ್ಮಠ ಅಗ್ರಹಾರ ಬಿಟ್ಟು ಬೇರೆ ಕಡೆ ಹೋದರೆ ಅವರಿಗೆ ಸರಿಯಾಗೋದು ಡೌಟ್. ಅಂತದ್ದರಲ್ಲಿ ಈ ಪುಣ್ಯಾತ್ಮ ಹೋಗಿ ನೆಲೆಸುವ ಬೆಂಗಳೂರಿನ ಕಿಷ್ಕಿಂಧೆಯಂತಹ ಅಪಾರ್ಟ್ಮೆಂಟಿನಲ್ಲಿ ಬಂದು ಇದ್ದಾರೆಯೇ? ಸಾಧ್ಯವೇ ಇಲ್ಲ.

ಇನ್ನು ಅವನ ಪತ್ನಿ. ಅತ್ತೆ ಮಾವನನ್ನು ಜೀವಂತ ರುಬ್ಬುವ ಪೈಕಿ. ಅಮೇರಿಕಾಗೆ ಬಂದಾಗಲೇ ರುಬ್ಬಿ ಓಡಿಸಿದ್ದಾಳೆ. ಸೊಸೆ ಹತ್ತಿರ ರುಬ್ಬಿಸಿಕೊಂಡ ವೃದ್ಧ ಜೀವಗಳು ವೀಸಾ ಅವಧಿಗೆ ಮುಂಚೆಯೇ ಟಿಕೆಟ್ಟಿನ ದಿನ ಬದಲು ಮಾಡಿಸಿಕೊಂಡು ಪೋಯಾಚ್ ಆಗಿದ್ದರು. ನಂತರ ಧಾರವಾಡ ಕಡೆ ಹೋಗಿ ಮಗನನ್ನು ಮತ್ತು ಸೊಸೆಯನ್ನು ಬೇರೆ ಬೇರೆ ರೀತಿಯಲ್ಲಿ 'ಹೊಗಳಿ'ದ್ದರು. ಅರ್ಥವಾಯಿತಲ್ಲ ಸೊಸೆಗೆ ಅತ್ತೆ ಮಾವನ ಬಗ್ಗೆ ಇರುವ ಕಾಳಜಿ?

'ಹುಬ್ಬಳ್ಳಿ-ಧಾರವಾಡ ವ್ಯಾಪಕವಾಗಿ ಅಭಿವೃದ್ಧಿಗೊಳ್ಳುತ್ತಿದೆ. ಟೆಕ್ ಪಾರ್ಕ್, ಸಾಫ್ಟ್ವೇರ್ ಪಾರ್ಕ್ ಎಲ್ಲ ಬಂದಿವೆ. ಹುಬ್ಬಳ್ಳಿಯಲ್ಲಿ ಒಂದು ಸಾಫ್ಟ್ವೇರ್ ಕಂಪನಿ ತೆಗೆಯೋಣ ಅಂತ ವಿಚಾರ. ಹೂಡಿಕೆದಾರರು ಇದ್ದಾರೆ. ಹುಬ್ಬಳ್ಳಿಯಲ್ಲಿ ಇಂಜಿನಿಯರಿಂಗ್ ಮುಗಿಸಿದ ಪದವೀಧರರೂ ಸಿಗುತ್ತಾರೆ. ಒಂದಿಷ್ಟು ಜನರಿಗೆ ನೌಕರಿ ಕೊಟ್ಟ ಪುಣ್ಯವೂ ಸಿಕ್ಕಂತಾಯಿತು,' ಎಂದು ಬೇರೆಯೊಬ್ಬರ ಹತ್ತಿರ ಪುಂಗಿದ.

ಹುಬ್ಬಳ್ಳಿಯಲ್ಲಿ ತೆಗೆದ ಕಂಪನಿ ಬರಕತ್ತಾಗಲಿಲ್ಲ. ಹುಬ್ಬಳ್ಳಿಗೆ ಬಂದು ನೋಡಿದ ಹೂಡಿಕೆದಾರ ವಿಮಾನನಿಲ್ದಾಣದಿಂದಲೇ ಓಡಿಹೋದ.

'ಹುಬ್ಬಳ್ಳಿ ಸಾಕಷ್ಟು ಕಾಸ್ಮೊಪಾಲಿಟನ್ ಆಗಿಲ್ಲ. ಇಲ್ಲಿ ಬೇರೆ ಕಡೆಯಿಂದ ಜನರನ್ನು ಕರೆತರುವುದು ಕಷ್ಟ,' ಅಂದ ಬಂಗಾಳಿ ಹೂಡಿಕೆದಾರ.

'ಅಯ್ಯೋ, ನಾನಿದ್ದೇನೆ. ನನ್ನ ಸ್ಥಳೀಯ ಲೋಕಲ್ ಸ್ನೇಹಿತರು ಜಾಯಿನ್ ಆಗುತ್ತಾರೆ. ಬೇರೆಯವರು ಯಾಕೆ ಬೇಕು?'ಎಂದು ಇವನು ಕೇಳಿದ.

ಇವನ ಮುಖ ನೋಡಿ ಬೆಚ್ಚಿಬಿದ್ದ ಹೂಡಿಕೆದಾರ, 'Unbelievable, Incredible' ಎಂದೆಲ್ಲ ಹಲುಬಿ, ಬಡಬಡಿಸಿ, ಉಡದಾರಕ್ಕೆ ಕಟ್ಟಿಕೊಂಡು ಬಂದಿದ್ದ ರೊಕ್ಕದ ಚೀಲವಾದರೂ ಇದೆಯೋ ಅಥವಾ ಹುಬ್ಬಳ್ಳಿಯ ಪಾಕೆಟಮಾರುಗಳು ಅದನ್ನೂ ಲಪಟಾಯಿಸಿಬಿಟ್ಟಾರು ಎಂದು ಹೆದರಿ, ರಾತ್ರೋ ರಾತ್ರಿ ಹೋಟೆಲ್ ಖಾಲಿಮಾಡಿಕೊಂಡು, ಮರುದಿನದ ವಿಮಾನಕ್ಕೂ ಕಾಯದೆ, ಟ್ಯಾಕ್ಸಿ ಮಾಡಿಕೊಂಡು ಬೆಂಗಳೂರು ತಲುಪಿ ಅಲ್ಲಿಂದ ಗಾಯಬ್ ಆದವನು ಇವನಿಗೆ ಇನ್ನೂ ಸಿಕ್ಕಿಲ್ಲ. ಹೋಟೆಲ್ ಬಿಲ್ ಕೂಡ ಚುಕ್ತಾ ಮಾಡಿರಲಿಲ್ಲವಂತೆ. ಇವನೇ ಮಾಡಿ ಕೈತೊಳೆದುಕೊಳ್ಳಬೇಕಾಯಿತು.

ಆದರೂ ಹುಬ್ಬಳ್ಳಿಯಲ್ಲಿ ಸಾಫ್ಟ್ವೇರ್ ಕಂಪನಿ ತೆಗೆಯುವ ಉಮೇದಿ ಕಮ್ಮಿಯಾಗಲಿಲ್ಲ. ಹುಬ್ಬಳ್ಳಿಯಲ್ಲಿ ಬೇರೆ ಏನೋ ಬಿಸಿನೆಸ್ ಮಾಡಿಕೊಂಡಿದ್ದ ಭಾವ ಅಂದರೆ ಅಕ್ಕನ ಗಂಡನ ತಲೆ ಮೇಲೆ ಕೈಯಿಟ್ಟ. ಭಸ್ಮಾಸುರನ ಮಾದರಿಯಲ್ಲಿ. ಮುಗಿಯಿತು ಭಾವನ ಕಥೆ. ವ್ಯಾಪಾರಿ ಭಾವ ಒಂದು ಹತ್ತು ಹದಿನೈದು ಲಕ್ಷಕ್ಕೆ ಹಗುರವಾಗಿಹೋದ. ಅದನ್ನು ತೆಗೆದುಕೊಂಡು ಬಂದು ಟೆಕ್ ಪಾರ್ಕಿನಲ್ಲಿ ಪಾಯಿಖಾನೆ ಸೈಜಿನ ಆಫೀಸ್ ತೆಗೆದು ಕೂತ. ಅಲ್ಲೇ ಓತ್ಲಾ ಹೊಡೆದುಕೊಂಡು ಓಡಾಡಿಕೊಂಡಿದ್ದ ಉಂಡಾಡಿಗುಂಡನಂತಹ ಇಂಜಿನಿಯರಿಂಗ್ ಪದವೀಧರರು ಸಿಕ್ಕರು. ತುಂಬಾ ಚೀಪಾಗಿ ಸಿಕ್ಕರು ಎಂದು ಕರೆದುಕೊಂಡು ಬಂದ. ಅದೇನೋ ಅಂತಾರಲ್ಲ.... If you pay peanuts, you will only get monkeys. ಆ ಮಾದರಿಯ ಮಂದಿ ಸಿಕ್ಕರು. ಗಣಪತಿ ಮಾಡಿ ಅಂದರೆ ಗಣಪತಿಯ ಅಪ್ಪ, ದೊಡ್ಡಪ್ಪ, ಚಿಕ್ಕಪ್ಪನನ್ನು ಮಾಡಿ ಕೊಟ್ಟರು. ಅಲ್ಲಿಗೆ ಇವನನ್ನು ನಂಬಿ ಏನೋ ಚೂರುಪಾರು ಸಾಫ್ಟ್ವೇರ್ ಕೆಲಸವನ್ನು ಅಮೇರಿಕಾದಿಂದ ಕಳಿಸಿಕೊಟ್ಟಿದ್ದ ಹಳೆಯ ಕಂಪನಿ ಮಾಲೀಕ ಖಡಕ್ಕಾಗಿ ಹೇಳಿದ್ದು ಒಂದೇ ಮಾತು, 'ನೋಡು, ನೀನೇ ಖುದ್ದಾಗಿ ಕೂತು ನನ್ನ ಸಾಫ್ಟವೇರಿಗೆ ತ್ಯಾಪೆ ಹಚ್ಚಿ ಕೊಡುವದಾದರೆ ಓಕೆ. ಬೇರೆ ಯಾರಿಂದನೋ  ತ್ಯಾಪೆ ಹಚ್ಚಿಸಿ  ಕೊಡಿಸುತ್ತೇನೆ ಅಂದರೆ ಬೇಡವೇಬೇಡ. ಅವರು ಮಾಡಿಟ್ಟ ರಾಡಿಯನ್ನು ಸರಿ ಮಾಡಿಕೊಳ್ಳಲು ನಾನು ಇಲ್ಲಿ ಮತ್ತೆ ನಾಲ್ಕು ಜನರನ್ನು ಇಟ್ಟುಕೊಳ್ಳಬೇಕಾಗುತ್ತದೆ. ಏನಂತೀ??'

ಹುಬ್ಬಳ್ಳಿಯಲ್ಲಿ ಉಂಡಾಡಿಗುಂಡರನ್ನು ಇಟ್ಟುಕೊಂಡು ಕೂತರೆ ಕೆಲಸವಾದಂತೆಯೇ ಸರಿ ಎಂದು ನಿರ್ಧರಿಸಿ ಟೆಕ್ ಪಾರ್ಕಿನ ಪಾಯಿಖಾನೆ ಸೈಜಿನ ಆಫೀಸಿಗೆ ಬೀಗ ಜಡಿದು, VRL ನೈಟ್ ಬಸ್ ಹಿಡಿದು ಬೆಂಗಳೂರಿಗೆ ಬಂದು ಸೇರಿಕೊಂಡ. ಅತ್ತೆ ಮಾವನ ಜೊತೆ ಧಾರವಾಡದಲ್ಲಿ ಕಿತ್ತಾಡಿಕೊಂಡಿದ್ದ ಪತ್ನಿ ಮತ್ತು ಮಕ್ಕಳು ಕೂಡ ಸೇರಿಕೊಂಡರು.

ಇವನು ಮತ್ತೆ ತನ್ನ ಹಳೆ ಕಂಪನಿಯ ಓಬಿರಾಯನ ಕಾಲದ ಸಾಫ್ಟವೇರಿಗೆ ತ್ಯಾಪೆ ಹಚ್ಚುತ್ತಾ ಕೂತಿದ್ದಾನೆ. ಇವನನ್ನು ಬಿಟ್ಟರೆ ಬೇರೆ ಯಾರಿಗೂ ಆ ತಗಡು ಸಾಫ್ಟವೇರ್ ಅರ್ಥವಾಗದ ಕಾರಣ ಇವನ ಹಳೆಯ ಮಾಲೀಕನಿಗೂ ಬೇರೆ ಗತಿಯಿಲ್ಲ. ಇವನಿಗೆ ಒಂದು ರೀತಿಯ hostage ಆತ. ಇವನ ಜುಟ್ಟು ಅವನ ಕೈಯಲ್ಲಿ ಮತ್ತು ಅವನ ಜುಟ್ಟು ಇವನ ಕೈಯಲ್ಲಿ.

ಅಮೇರಿಕಾದಲ್ಲಿದಾಗ ಅಲ್ಲಿ ಹೋದವರೇ ಕೊಳ್ಳುಬಾಕ ಸಂಸ್ಕೃತಿಗೆ ಒಳಗಾಗಿ ರೊಕ್ಕವನ್ನಷ್ಟೂ ಖರ್ಚು ಮಾಡಿಕೊಂಡರು. ಅವಶ್ಯವಿಲ್ಲದಿದ್ದರೂ ಎರಡೆರೆಡು ದುಬಾರಿ ಕಾರ್ ಕೊಂಡರು. ಮೂರು ಐದು ವರ್ಷಕ್ಕೆ ಕಾರ್ ಬದಲಾಯಿಸಿದರು. ನೆರೆಹೊರೆಯವರ ಮುಂದೆ ತಾವೇ ದೊಡ್ಡ ಸ್ಥಿತಿವಂತರು ಎನ್ನುವಂತೆ ಪೋಸ್ ಕೊಟ್ಟರು. ಅರಮನೆಯಂತಹ ಮನೆ ಕೊಂಡರು. ಅಲ್ಲೂ ಒಂದಿಷ್ಟು ರೊಕ್ಕ ಬ್ಲಾಕ್ ಆಯಿತು. ಭಾರತಕ್ಕೆ ಬರುವಾಗ ಬಂದಷ್ಟಕ್ಕೆ ಮಾರಿ ಬಂದರು. ಅಲ್ಲೂ ಒಂದಿಷ್ಟು ಖೋತಾ. ಮಲಗಿಬಿಟ್ಟಿದ್ದ ಶೇರ್ ಮಾರ್ಕೆಟ್ ಉಳಿದ ಇದ್ದ ಬಿದ್ದ ರೊಕ್ಕವನ್ನು ನುಂಗಿ ನೀರು ಕುಡಿದಿತ್ತು.

ಭಾರತಕ್ಕೆ ಬಂದ ಕೂಡಲೇ ಅಲ್ಲಿ ರಿಯಲ್ ಎಸ್ಟೇಟ್ ಬೂಮ್ ಎನ್ನುವ ಹುಚ್ಚುಮುಂಡೆ ಮದುವೆ ನಡೆದಿತ್ತು. ಇದ್ದಬಿದ್ದ ರೊಕ್ಕವನ್ನೆಲ್ಲ ಕಂಡ ಕಂಡ ಸೈಟು, ಫ್ಲಾಟ್ ಖರೀದಿ ಮಾಡಲು ಬಳಸಿದರು. ಎರಡು ಮೂರು ವರ್ಷಕ್ಕೆ ಅವುಗಳ ಬೆಲೆ ಡಬಲ್ ಆಗಿದ್ದು ನೋಡಿ ಮನಸಿನಲ್ಲೇ ಮಂಡಿಗೆ ತಿಂದರು. ಬರೋಬ್ಬರಿ ತುಪ್ಪ ಹಾಲು ಸಕ್ಕರೆಪುಡಿ ಹಾಕಿಯೇ ತಿಂದರು.

ಮೋದಿ ಸಾಹೇಬರು ಬಂದು ಕೂತರು. ಮೊದಲು ನೋಟು ಅಮಾನ್ಯೀಕರಣ  ಮಾಡಿದರು. ಒಮ್ಮೆಲೇ ಹಣದ, ಅದರಲ್ಲೂ ಕಪ್ಪುಹಣದ ಮತ್ತು ನಕಲಿ ಹಣದ, ಹರಿವು ನಿಂತಿತು. ಹಡಬಿಟ್ಟಿ ಕಪ್ಪುಹಣದ ಕಾರಣದಿಂದ ಆಕಾಶಕ್ಕೆ ಏರಿದ್ದ ರಿಯಲ್ ಎಸ್ಟೇಟ್ ಭೂಮಿಗೆ ಧಡಕ್ ಎಂದು ಬಿದ್ದು, ಅಲ್ಲೇ ನಿಲ್ಲದೆ ಸೀದಾ ಪಾತಾಳಕ್ಕೆ ಹೋಗಿ ಮಕಾಡೆ ಮಲಗಿಬಿಟ್ಟಿತು. ಬಂದ ಬೆಲೆಗೆ ಮಾರೋಣ ಅಂದರೆ ಜನರ ಹತ್ತಿರ ರೊಕ್ಕವೇ ಇಲ್ಲ. ರಿಯಲ್ ಎಸ್ಟೇಟ್ ಫುಲ್ ಠುಸ್!!

ಮೋದಿ ಸಾಹೇಬರು ಇತರ ಮೂಲಭೂತ ಬದಲಾವಣೆಗಳನ್ನು ಮಾಡಲು ಹೊರಟರು. ಅದನ್ನು ವಿರೋಧಿಸಿ ದೇಶಾದ್ಯಂತ ಹೋರಾಟ. ಒಳಗಿನ ಹಿತಶತ್ರುಗಳಿಗೆ ಮೆಣಸಿನ ಹೊಗೆ ಹಾಕಿಸಿಕೊಂಡ ಹಾಗಾಗಿದೆ. ಮೊದಲಾಗಿದ್ದರೆ ಅಲ್ಲೊಂದು ಬಾಂಬ್ ಬ್ಲಾಸ್ಟ್, ಇಲ್ಲೊಂದು ಗಲಭೆ, ಮತ್ತೊಂದು ಕಡೆ ಒಂದು ರೇಪ್ ಅಂತ ಆಗಿ ಜನರ ಗಮನವೆಲ್ಲ ಬೇರೆಡೆ ಹೋಗುತ್ತಿತ್ತು. ನಕಲಿ ರೊಕ್ಕ, ಕಪ್ಪು ಹಣ ಯಥೇಚ್ಛವಾಗಿ ಹರಿದಾಡುತ್ತಿತ್ತು. ನಿಜವಾದ ಸಮಸ್ಯೆಗಳೆಲ್ಲವೂ ಚಾಪೆ ಕೆಳಗಿ ಗುಡಿಸಿಹೋಗುತಿದ್ದವು. ಕಸ ಕಣ್ಣಿಗೆ ಕಾಣದಿದ್ದರೂ ಎಲ್ಲ ಕಸ ಚಾಪೆ ಕೆಳಗೇ ಇರುತ್ತಿತ್ತು. ಈಗ ಮೋದಿಯವರು ಚಾಪೆ, ಗುಡಾರ ಎಲ್ಲ ಎತ್ತಿ ಎಲ್ಲವನ್ನೂ ಝಾಡಿಸಿ ಝಾಡಿಸಿ ಒಗೆಯುತ್ತಿದ್ದಾರೆ ಮತ್ತು ಖದೀಮರನ್ನು ಝಾಡಿಸಿ ಝಾಡಿಸಿ ಒದೆಯುತ್ತಿದ್ದಾರೆ. ಖದೀಮರ ಅರಚಾಟ ವಿವಿಧ ಪ್ರತಿಭಟನೆಗಳ ರೂಪ ಪಡೆದುಕೊಂಡು ಎಲ್ಲ ಕಡೆ ಒಂದು ತರಹದ ಅಶಾಂತಿ ಮತ್ತು ಗದ್ದಲ.

ಹಾಗಾಗಿ ಈಗ ಭಾರತ ಬೇಸರ. 'ಇಲ್ಲಿ ಬರೇ ಗದ್ದಲ ಮಾರಾಯ. ದಿನಾ ಒಂದೊಂದು ರೀತಿಯ ಪ್ರತಿಭಟನೆ. ಸಾಕಾಗಿ ಹೋಗಿದೆ. ಅದಕ್ಕೇ ಅಮೇರಿಕಾಗೆ ವಾಪಸ್ ಬರೋಣ ಅಂತ ಮಾಡಿದ್ದೇವೆ,' ಅಂತ ಹೊಸ ವರಸೆ ಶುರುವಾಗಿದೆ. ಉಲ್ಟಾ ವಲಸೆಯ ವರಸೆ.

ಅಮೇರಿಕಾದಲ್ಲಿ ಹುಟ್ಟಿರುವ ಕಾರಣ ಇಲ್ಲಿನ ಪೌರತ್ವ ಹೊಂದಿರುವ ಮಗ ಇಪ್ಪತ್ತೊಂದು ವರ್ಷಗಳಾದ ಬಳಿಕ ಅಪ್ಪಅಮ್ಮನನ್ನು ಗ್ರೀನ್ ಕಾರ್ಡಿಗಾಗಿ ಪ್ರಾಯೋಜಿಸಬಹುದು. ಒಮ್ಮೆ ಗ್ರೀನ್ ಕಾರ್ಡ್ ಸಿಕ್ಕರೆ ಶಾಶ್ವತವಾಗಿ ಬಂದು ನೆಲೆಸಬಹುದು. ವ್ಯಾಪಾರ ಉದ್ಯೋಗಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಮಾಡಬಹುದು.

ಹಾಗಾಗಿ ಇವನ ಮಗನಿಗೆ ತುರ್ತಾಗಿ ಇಪ್ಪತ್ತೊಂದು ವರ್ಷವಾಗಬೇಕಿದೆ.  ಐವತ್ತೂ ಚಿಲ್ಲರೆ ವಯಸ್ಸಿನಲ್ಲಿ ಉಲ್ಟಾ ವಲಸೆ ಬಂದು ಇಲ್ಲಿ ನೆಲೆಸುವುದೋ ಹೇಗೋ? ಇವನ ಪತ್ನಿಗೆ ಮುಂದೊಂದು ದಿನ ಮಗ ಸೊಸೆಯ ಚಿಕೆತ್ಸೆಯ ಡೋಸ್ ಇಲ್ಲಿ ಸಿಗಲಿದೆ. ತಾನು ತನ್ನ ಅತ್ತೆ ಮಾವಂದಿರಿಗೆ ಕೊಟ್ಟ ಔಷಧದ ಡೋಸಿಗಿಂತ ಸಣ್ಣ ಡೋಸ್ ಇರಲಿ ಮತ್ತು ಔಷಧಿ ಕೊಂಚ ಸಿಹಿ ಇರಲಿ ಅಂತಾದರೂ ಆಶಿಸುವ ಬುದ್ಧಿ ಆಕೆಗಿದೆಯೋ ಎಂದು ನೋಡಿದರೆ ಆಕೆ ಆಗಲೇ ಅಮೇರಿಕಾದಲ್ಲಿ ಮುಂದೆ ಕೊಳ್ಳಬೇಕಾದ ಕಾರುಗಳ ಬಗ್ಗೆ ಮತ್ತು ಮನೆಯ ಗುಂಗಿನಲ್ಲಿ ಕಳೆದುಹೋಗಿದ್ದಾಳೆ.

ಕಾಲಾಯ ತಸ್ಮೈ ನಮಃ

Thursday, February 13, 2020

ತೆಪ್ಪದ ಮೇಲೆ ಕೆಪ್ಪನ ಮಾಡಿ ಬೆಪ್ಪನಂತೆ ತೆಪ್ಪಗೆ ಕೂಡಿಸಯ್ಯ ತಂದೆ...

ಭಾಗವತ ಪುರಾಣದಲ್ಲಿ ಒಂದು ಕಥೆ ಓದಿದ ನೆನಪು. ಎಲ್ಲ ವಿವರಗಳೂ ನೆನಪಿಲ್ಲ. ಆದರೆ ಕಥೆಯ ಸಾರಾಂಶ ಇಷ್ಟು.

ಒಬ್ಬ ಋಷಿ ತನ್ನ ದೈನಂದಿನ ಧಾರ್ಮಿಕ ಕ್ರಿಯಾವಿಧಿಗಳಲ್ಲಿ ತೊಡಗಿರುತ್ತಾನೆ. ಅದೇ ಸಮಯಕ್ಕೆ ಅವನ ಪತ್ನಿ ಅಲ್ಲಿಗೆ ಬರುತ್ತಾಳೆ. ಆಕೆ ಸರಸದ ಮೂಡಿನಲ್ಲಿ ಇರುತ್ತಾಳೆ. ಪತಿ ನೋಡಿದರೆ ಇಲ್ಲಿ ದೇವರ ಪೂಜೆಯಲ್ಲಿ ಮಗ್ನ.

ರಾ ರಾ ಸರಸಕು ರಾ ರಾ... 'ಆಪ್ತಮಿತ್ರ' ಚಿತ್ರದ ನಾಗವಲ್ಲಿಯ ಮಾದರಿಯಲ್ಲಿ ತನ್ನ ಪತಿಯನ್ನು ಸರಸಕ್ಕೆ ಆಹ್ವಾನಿಸುತ್ತಾಳೆ. ಪೂಜೆಯಲ್ಲಿ ಮುಳುಗಿದ್ದ ಪತಿ ಅದನ್ನು ನಯವಾಗಿಯೇ ನಿರಾಕರಿಸುತ್ತಾನೆ. ಪೂಜಾ ಕಾರ್ಯಗಳಲ್ಲಿ ಪುನಃ ಮಗ್ನನಾಗುತ್ತಾನೆ.

ತಾನು ಅಷ್ಟು ಪ್ರೀತಿಯಿಂದ ಸರಸಕ್ಕೆ ಕರೆದರೂ ಪತಿ ನಿರಾಕರಿಸಿಬಿಟ್ಟ ಎಂದು ಋಷಿಯ ಪತ್ನಿ ಬೇಸರಗೊಳ್ಳುತ್ತಾಳೆ. ಅಲ್ಲಿಂದ ಹೋಗುತ್ತಾಳೆ. ಪತ್ನಿ ಬೇಸರಗೊಂಡು ಹೋಗಿದ್ದನ್ನು ಋಷಿ ಗಮನಿಸುತ್ತಾನೆ.

ಸುಮಾರು ಹೊತ್ತಿನ ನಂತರ ಋಷಿಯ ಪೂಜಾಕಾರ್ಯಗಳು ಮುಗಿಯುತ್ತವೆ. ಈಗ ತುರ್ತಾಗಿ ಪತ್ನಿಯನ್ನು ಗಮನಿಸಿಕೊಳ್ಳಬೇಕು. ಆಗ ಕರೆದಾಗ ಸರಸಕ್ಕೆ ಬರಲಿಲ್ಲ ಎಂದು ಬೇಸರಗೊಂಡಿದ್ದಳು. ಈಗ ಹೋಗಿ ಮಸ್ಕಾ ಹೊಡೆದು ರಮಿಸಬೇಕು. ಅದು ತನ್ನ ಕರ್ತವ್ಯ ಎಂದುಕೊಳ್ಳುತ್ತಾನೆ ಋಷಿ.

ಪತ್ನಿಯ ಹತ್ತಿರ ಹೋಗಿ ಮಸ್ಕಾ ಹೊಡೆಯುತ್ತಾನೆ. ಆದರೂ ಆಕೆ ಅಷ್ಟು ಬೇಗ ಸಮಾಧಾನಗೊಳ್ಳುವುದಿಲ್ಲ.

ಈಗ ಋಷಿ heavy duty ಫಿಟ್ಟಿಂಗ್ ಇಡುತ್ತಾನೆ.

'ಪ್ರಿಯೆ, ಒಂದು ವಿಷಯ ಗೊತ್ತೇ?' ಎಂದು ಕೇಳಿದ ಋಷಿ.

'ಏನು??' ಎಂದು ಮುಖ ಊದಿಸಿಕೊಂಡೇ ಕೇಳಿದಳು ಪತ್ನಿ.

'ನಮ್ಮ ಧಾರ್ಮಿಕ ಗ್ರಂಥಗಳು ಏನು ಹೇಳುತ್ತವೆ ಗೊತ್ತೇ?' ಎಂದು ಕೇಳಿದ ಋಷಿ.

'ಅದೆಲ್ಲ ನಿಮಗೇ ಗೊತ್ತು. ನೀವೇ ಹೇಳಿ,' ಎಂದು ಉತ್ತರಿಸಿದಳು ಪತ್ನಿ.

'ಈ ಸಂಸಾರವೆಂಬ ಸಾಗರವನ್ನು ದಾಟಲು ಇರುವ ಅತ್ಯುತ್ತಮ ಸಾಧನವೆಂದರೆ ಪತ್ನಿ ಎಂಬ ತೆಪ್ಪ. ಪತ್ನಿಯೆಂಬ ತೆಪ್ಪವನ್ನು ಉಪಯೋಗಿಸಿಕೊಂಡು ಸಂಸಾರವೆಂಬ ಮಹಾಸಾಗರವನ್ನು ಸುಲಭವಾಗಿ ದಾಟಬಹುದು. ಪತ್ನಿಯಾದ ನಿನ್ನ ಮಹತ್ವ ಅಷ್ಟಿದೆ. ಗೊತ್ತೇ??' ಎಂದು ಫುಲ್ ಫಿಟ್ಟಿಂಗ್ ಇಡುತ್ತಾನೆ.

ಪತ್ನಿ ಫುಲ್ ಖುಷಿಯಾಗಿಬಿಡುತ್ತಾಳೆ. ಪತ್ನಿಯಾಗಿರುವ ತನಗೆ ಇರುವ ಮಹತ್ವ ತಿಳಿದು ಸಂತೋಷದಿಂದ ಉಬ್ಬಿಹೋಗುತ್ತಾಳೆ. ಮೊದಲಿನ ವಿರಸವನ್ನು ಮರೆಯುತ್ತಾಳೆ. ಋಷಿ ಮತ್ತು ಪತ್ನಿ ಸರಸದಲ್ಲಿ ತೊಡಗುತ್ತಾರೆ.

ಈ ಕಥೆಯ ಪ್ರಭಾವವೋ ಏನೋ... ತಲೆತಲಾಂತರಗಳಿಂದ ಪುರುಷರು ಸಂಸಾರವೆಂಬ ಸಾಗರವನ್ನು ದಾಟಲು ಪತ್ನಿಯೆಂಬ ತೆಪ್ಪವನ್ನು ನಂಬಿಕೊಂಡಿದ್ದಾರೆ. ಆದರೆ ಎಷ್ಟು ಜನ ಯಶಸ್ವಿಯಾಗಿ ದಾಟಿದ್ದಾರೆ? ಎಷ್ಟು ಜನ ತೆಪ್ಪವನ್ನೇರಿ ನಡುನೀರಿನಲ್ಲೇ ಮುಳುಗಿಹೋಗಿ ಗೊಟಕ್ ಅಂದಿದ್ದಾರೆ?

ಸಂಸಾರವೆಂಬ ಸಾಗರವನ್ನು ದಾಟಲು ಪತ್ನಿ ಉತ್ತಮ ತೆಪ್ಪ ಎನ್ನುವ ಮಾತು ನಿಜವಿರಬಹುದು. ಆದರೆ ಪೂರ್ತಿ ವಿವರ ಅದಲ್ಲ ಅನ್ನಿಸುತ್ತದೆ. ಪೂರ್ತಿ ವಿವರಗಳು ಮಿಸ್ ಆಗಿರುವ ಸಂಶಯ. ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಎಲ್ಲವನ್ನೂ ಪೂರ್ತಿಯಾಗಿ ಬಿಡಿಸಿ ಹೇಳುವ ರೂಢಿ ಇರಲಿಲ್ಲ. ಏನು ಹೇಳಬೇಕೋ ಅದನ್ನು ಕ್ಲುಪ್ತವಾಗಿ ಸೂಚ್ಯವಾಗಿ ಹೇಳುತ್ತಿದ್ದರು. ನಂತರ ಬೇಕೆಂದರೆ ದಡ್ಡ ಶಿಷ್ಯರಿಗೆ ಗುರುಗಳು ಮಿಸ್ಸಿಂಗ್ ಡೀಟೇಲ್ಸ್ ಕೊಡುತ್ತಿದ್ದರು.

ಈಗ ಅಂತಹ ಗುರುಗಳೂ ಇಲ್ಲ. ಜನರು ಕೂಡ ಪೂರ್ತಿ ವಿವರಗಳನ್ನು ತಿಳಿಯದೇ, ತಿಳಿಯುವ ವ್ಯವಧಾನವೂ ಇಲ್ಲದೆ ಗಡಬಿಡಿ ಮಾಡಿ ಗುಂಡಾಂತರ ಮಾಡಿಕೊಂಡು ಗಂಡಾತರಕ್ಕೆ ಒಳಗಾಗುತ್ತಾರೆ.

ನೀವು ಎಂದಾದರೂ ತೆಪ್ಪದ ಮೇಲೆ ಹೋಗಿದ್ದರೋ ಇಲ್ಲವೋ ಗೊತ್ತಿಲ್ಲ. ಬಿದಿರು ಅಥವಾ ಮರದ ದಿಮ್ಮಿಗಳಿಂದ ಮಾಡಿರುವ ತೆಪ್ಪ ಎಂದೂ ನೀರಲ್ಲಿ ಮುಳುಗುವುದಿಲ್ಲ. ಆದರೆ ಬುಡಮೇಲಾಗುವುದು ಜಾಸ್ತಿ. ತೆಪ್ಪದ ಮೇಲೆ ಪ್ರಯಾಣ ಮಾಡುವುದೂ ಸಹ ಒಂದು ಕಲೆ. ತೆಪ್ಪ ನಡೆಸುವ ನಾವಿಕ ನುರಿತ ವೃತ್ತಿಪರನೇ ಆಗಿದ್ದರೆ ಕಾಳಜಿ ವಹಿಸುತ್ತಾನೆ.

ದೋಣಿ ಹತ್ತಿದಂತೆ  ದುಡುಂ ಅಂತ ತೆಪ್ಪದ ಮೇಲೆ ಕುಪ್ಪಳಿಸಿ ಹತ್ತುವಂತಿಲ್ಲ. ತೆಪ್ಪದ center of gravity ಯ ಸುತ್ತಲಿಂದ ತೆಪ್ಪದ ಮೇಲೆ ಜನರು ಹತ್ತುತ್ತಾರೆ. ಬರೋಬ್ಬರಿ ಬ್ಯಾಲೆನ್ಸ್ ಇರಬೇಕು. ಒಮ್ಮೆ ತೆಪ್ಪ ಹತ್ತಿದ ಮೇಲೆ ನಿಂತ ಜಾಗದಲ್ಲೇ ತೆಪ್ಪಗೆ ನಿಂತಿರಬೇಕು. ಅಥವಾ ಕೂರುವಂತಹ ಜಾಗದಲ್ಲಿದ್ದರೆ ಕೂರಬಹುದು. ತೆಪ್ಪ ನಡುನೀರಿನಲ್ಲಿರುವಾಗ ಕುಣಿದು ಕುಪ್ಪಳಿಸುವಂತಿಲ್ಲ. ಇಳಿಯುವಾಗಲೂ ಅಷ್ಟೇ. ಸಾವಕಾಶವಾಗಿ ಇಳಿಯಬೇಕು. ಯಾವಾಗಲೂ ತೆಪ್ಪದ center of gravity ಬರೋಬ್ಬರಿ ಇರಬೇಕು. ತಪ್ಪಿದರೆ ತೆಪ್ಪ ಬುಡಮೇಲಾಗುತ್ತದೆ. ಆದರೂ ತೇಲುತ್ತಲೇ ಇರುತ್ತದೆ. ಮೇಲಿದ್ದವರು ಮಾತ್ರ ಜಲಸಮಾಧಿ ಹೊಂದುತ್ತಾರೆ.

ಸಂಸಾರವೆಂಬ ಸಾಗರವನ್ನು ದಾಟಲು ಪತ್ನಿಯೆಂಬ ತೆಪ್ಪವನ್ನು ಅವಲಂಬಿಸುವವರೂ ಕೂಡ ಇಂತಹ ತಪ್ಪುಗಳನ್ನು ಮಾಡುತ್ತಾರೆ. ತೆಪ್ಪದ ಮೇಲೆಯೇ ಅಂದರೆ ಪತ್ನಿಯ ಜಾಸ್ತಿ ಅವಲಂಬನೆ. ತೆಪ್ಪ ನಡೆಸುವ ನಾವಿಕ  ಅಂದರೆ ದೇವರನ್ನು ಕಡೆಗಣಿಸಿಬಿಡುತ್ತಾರೆ. ಪತ್ನಿಯೆಂಬ ತೆಪ್ಪ ನಿಮ್ಮದೇ ಆದರೂ ಸಂಸಾರ ಸಾಗರದಲ್ಲಿ ಅದನ್ನು ನಡೆಸುವ ನಾವಿಕ ದೇವರು.

ತೆಪ್ಪದ ಮೇಲೆ ಸರಿಯಾಗಿ ತೆಪ್ಪಗೆ ಕುಳಿತುಕೊಳ್ಳಿ. ಕಿವಿಗಳನ್ನು ಕೆಪ್ಪನಂತೆ ಮಾಡಿಕೊಳ್ಳಿ. ಏನೂ ಮಾಡದೆ ಸುಮ್ಮನೆ ಬೆಪ್ಪನ ತರಹ ಕುಳಿತುಕೊಳ್ಳಿ. ಇಲ್ಲವಾದರೆ ತೆಪ್ಪಅಂದರೆ ನಿಮ್ಮ ಪತ್ನಿ ಬುಡಮೇಲಾಗುತ್ತಾಳೆ. ತೆಪ್ಪಕ್ಕೆ ಉರ್ಫ್ ಅವಳಿಗೆ ಏನೂ ಆಗಲಿಕ್ಕಿಲ್ಲ. ತೆಪ್ಪದ ಮೇಲೆ ಕುಳಿತಿರುವ ನೀವು ಮಾತ್ರ ಮಟಾಷ್! ತೆಪ್ಪ ಮತ್ತೆ ತೇಲುತ್ತದೆ. ನಾವಿಕನಿಗೆ ಈಜು ಬರುವ ಕಾರಣ ಆತ ಮತ್ತೆ ತೆಪ್ಪ ವಾಪಸ್ ಹತ್ತುತ್ತಾನೆ. ತೆಪ್ಪದ ಮೇಲೆ ಪ್ರಯಾಣಿಸಬಹುದಾದ ಹೊಸ ಪ್ರಯಾಣಿಕನಿಗಾಗಿ  ಕಾಯುತ್ತಾನೆ. ಪತ್ನಿಯೆಂಬ ತೆಪ್ಪವೂ ಕಾಯುತ್ತದೆ. ಹೊಸ ಪತಿಗಾಗಿ. ತೆಪ್ಪ ಬುಡಮೇಲಾಗುವುದು ಅಂದರೆ ಸೋಡಾಚೀಟಿ ಡೈವೋರ್ಸ್ ಕೇಸ್. ತೆಪ್ಪದ ಮೇಲೆ ಹೊಸ ಪ್ರಯಾಣಿಕ ಬಂದ ಎಂದರೆ ಮೊದಲಿನ ಪತ್ನಿ ಮರುವಿವಾಹ ಮಾಡಿಕೊಂಡಳು ಎಂದು ಅರ್ಥ.

ಹೀಗಾಗಿ ಸಂಸಾರ ಸಾಗರವನ್ನು ದಾಟಲು ಪತ್ನಿಯೆಂಬ ತೆಪ್ಪವನ್ನು ಹತ್ತುವ ವಿಚಾರವಿರುವವರು ತೆಪ್ಪದ ಮೇಲೆ ಕೆಪ್ಪನಾಗಿ ತೆಪ್ಪಗೆ ಬೆಪ್ಪನ ಹಾಗೆ ಕುಳಿತುಕೊಳ್ಳಬೇಕು. ಹಾಗೆ ಮಾಡಿದರೆ ಸಂಸಾರ ಸಾಗರವನ್ನು ಯಶಸ್ವಿಯಾಗಿ ದಾಟುವ ಸಾಧ್ಯತೆಗಳು ಇವೆ. ಖಾತ್ರಿ ಇಲ್ಲ ಮತ್ತೆ.

ಅದಕ್ಕೇ ಅಲ್ಲವೇ ಹೇಳೋದು 'ಪತ್ನಿ ಮಾತಾಡುವಾಗ ಪತಿ ಸುಮ್ಮನಿರಬೇಕು. ಪತ್ನಿ ಸುಮ್ಮನಿದ್ದಾಗ ಪತಿ ಮಾತಾಡಬಾರದು.' ಕೆಪ್ಪನಾಗಿ ಬೆಪ್ಪನಂತೆ ಇರಬೇಕು. ಪತಿ ಜಾಸ್ತಿ ಬೆಪ್ಪನಾದಾಗ ಅಪ್ಪನಾಗುತ್ತಾನೆ. ಬೆಪ್ಪ ಅಪ್ಪ. ಅಮ್ಮನಿಗೆ ತಲೆಕೆಟ್ಟಾಗ ಗುಮ್ಮನಾಗುತ್ತಾಳೆ. ಅಮ್ಮ ಗುಮ್ಮ.

ಸಂಸಾರ ಸಾಗರವನ್ನು ದಾಟಲು ಪತ್ನಿಗಿಂತ ಉತ್ತಮವಾದ ತೆಪ್ಪವಿಲ್ಲವೇ ಎಂದು ಕೇಳಿದರೆ. ಇಲ್ಲ ಎಂದು ಹೇಳಬೇಕಾಗುತ್ತದೆ. ತೆಪ್ಪ ಇಲ್ಲ. ಆದರೆ ತೆಪ್ಪಕ್ಕಿಂತ ಉತ್ತಮವಾದ ಬೇರೆ ಸಾಧನ ಇದೆ. ಅದು ಅಧ್ಯಾತ್ಮ. ಇದು ರಾಮಕೃಷ್ಣ ಪರಮಹಂಸರು ಹೇಳಿದ್ದು.

ಒಮ್ಮೆ ರಾಮಕೃಷ್ಣರು ಶಿಷ್ಯರ ಜೊತೆ ಚಿಕ್ಕದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ರಭಸದ ಗಾಳಿಗೆ ದೋಣಿ ವಿಪರೀತವಾಗಿ ಹೊಯ್ದಾಡುತ್ತಿತ್ತು. ಪಕ್ಕದಲ್ಲೇ ಬೃಹದಾಕಾರದ ಹಡಗೊಂದು ಲಂಗರು ಹಾಕಿ ನಿಂತಿತ್ತು. ಅದನ್ನು ತೋರಿಸುತ್ತ ರಾಮಕೃಷ್ಣರು ಹೇಳಿದರು, 'ಆ ದೊಡ್ಡ ಹಡಗನ್ನು ನೋಡಿ. ಸಪ್ತಸಾಗರಗಳನ್ನೂ ಸಹ ಲೀಲಾಜಾಲವಾಗಿ ಯಾವುದೇ ಅಡೆತಡೆಗಳಿಲ್ಲದೆ ದಾಟಬಲ್ಲದು. ಗುರುಗಳು, ಪುಣ್ಯಪುರುಷರು, ದೇವರು, ಅಧ್ಯಾತ್ಮ  ಅಂದರೆ ಅಂತಹ ದೊಡ್ಡ ಹಡಗು ಇದ್ದಂತೆ. ಸಾಗರ ದಾಟಲು ಜನರು ಅಂತಹವುಗಳನ್ನು ಅವಲಂಬಿಸಬೇಕೇ ವಿನಃ ತಾತ್ಕಾಲಿಕವಾದ ಸಾಧನಗಳಾದ ಚಿಕ್ಕದೋಣಿಗಳನ್ನಲ್ಲ.' Gem of wisdom!

ತೆಪ್ಪ ಹತ್ತಿ ಸಾಗರ ದಾಟಲಿಕ್ಕೆ ಆಗಲಿಕ್ಕಿಲ್ಲ. ಆದರೆ ದೊಡ್ಡ ಹಡಗುಗಳು ದೂರದ ಸಮುದ್ರದಲ್ಲಿ ಲಂಗರು ಹಾಕಿರುವ ಕಾರಣ ಅವುಗಳ ಹತ್ತಿರ ಹೋಗಿ ಮುಟ್ಟಿಕೊಳ್ಳಲಿಕ್ಕಾದರೂ ತೆಪ್ಪ, ಚಿಕ್ಕದೋಣಿ ಮುಂತಾದ ತಾತ್ಕಾಲಿಕ ಸಾಧನಗಳ ಅವಶ್ಯಕತೆ ಇರುತ್ತದೆ. ಅವನ್ನು ಅಷ್ಟರಮಟ್ಟಿಗೆ ಉಪಯೋಗಿಸಿಕೊಂಡು, ತಕ್ಕ ಸಮಯದಲ್ಲಿ ಅವನ್ನು ತ್ಯಜಿಸಿ, ದೊಡ್ಡ ಹಡಗನ್ನು ಹತ್ತಿದವನು ಜಾಣ. ಅದು ಬಿಟ್ಟು ತೆಪ್ಪದಲ್ಲೇ ಸಾಗರ ದಾಟುತ್ತೇನೆ ಅಂತ ಹೊರಟವ ನಡುನೀರಿನಲ್ಲೇ ಮಟಾಷ್ ಆಗುವ ಸಾಧ್ಯತೆಗಳು ಹೆಚ್ಚು.

ತೆಪ್ಪ ಬಿಟ್ಟು ಹಡಗು ಹತ್ತಿ ಅಂದರೆ ಹೆಂಡತಿ ಮಕ್ಕಳನ್ನು ಎಲ್ಲ ಬಿಟ್ಟು ಸನ್ಯಾಸಿಯಾಗಿ ಗಡ್ಡ ಬಿಟ್ಟು ಗುಡ್ಡ ಹತ್ತಿ ಅಥವಾ ಹಡಗು ಹತ್ತಿ ಎಂದು ಅರ್ಥವೇ? ಆ ಅರ್ಥವೂ ಇದೆ. ಕೆಲವು ಸಂಪ್ರದಾಯಗಳಲ್ಲಿ ಕುಟುಂಬಸ್ಥರು ತಕ್ಕ ಸಮಯದಲ್ಲಿ ಕುಟುಂಬದ ಸದಸ್ಯರ ಅನುಮತಿ ಪಡೆದುಕೊಂಡು ಸನ್ಯಾಸಿಯಾಗಬಹುದು.  ಸಂಸಾರ ಸಾಗರವನ್ನು ದಾಟಲು ಅಧ್ಯಾತ್ಮವೆಂಬ ದೊಡ್ಡ ಹಡಗು ಅವಶ್ಯವಾದರೂ ಮೊದಲು ಉಪಯೋಗಿಸಿದ ತೆಪ್ಪ, ಚಿಕ್ಕದೋಣಿಗಳನ್ನು (ಕುಟುಂಬ) ಸಂಪೂರ್ಣವಾಗಿ ತ್ಯಜಿಸಬೇಕೆಂದೇನೂ ಇಲ್ಲ. ದೊಡ್ಡ ಹಡಗು ಎಲ್ಲವನ್ನೂ ಹೊತ್ತೊಯ್ಯಬಲ್ಲದು. ನಿಮ್ಮ ತೆಪ್ಪವೊಂದು ಅದಕ್ಕೆ ದೊಡ್ಡ ಮಾತಲ್ಲ. ನೀವು ಹಡಗು ಹತ್ತಿ. ನಿಮ್ಮ ತೆಪ್ಪವನ್ನೂ ತೆಪ್ಪಗೆ ಹಡಗು ಹತ್ತಿಸಿ. ಜೊತೆಯಲ್ಲಿ ಜೊತೆಜೊತೆಯಾಗಿ ಸಂಸಾರವೆಂಬ ಸಾಗರವನ್ನು ಅಧ್ಯಾತ್ಮವೆಂಬ ಹಡಗಿನಲ್ಲಿ ಯಶಸ್ವಿಯಾಗಿ ದಾಟಿ. ತೆಪ್ಪವಿಲ್ಲದವರು ಈಜಿ ಹಡಗನ್ನು ಮುಟ್ಟಿಕೊಳ್ಳಬಹುದು. ನಂತರ ಹತ್ತಬಹುದು. ಕೊಂಚ ಕಷ್ಟದ ಕೆಲಸ. ಈಜಿನಲ್ಲಿ ಪರಿಣಿತಿ ಬೇಕಾಗುತ್ತದೆ. ಸಾಕಷ್ಟು ಸಮಯ, ಶ್ರಮ, ಸಾಧನೆ ಬೇಡುತ್ತದೆ. ಹಾಗಾಗಿ ಹೆಚ್ಚಿನವರಿಗೆ ಪ್ರಾರಂಭದಲ್ಲಿ ತೆಪ್ಪವೇ ಒಳ್ಳೆಯದು. ತೆಪ್ಪದ ಸಹಾಯವಿಲ್ಲದೆ ಈಜಿ ಹಡಗನ್ನು ಮುಟ್ಟಿಕೊಳ್ಳುವುದು ಅಂದರೆ ಖಡಕ್ ಬ್ರಹ್ಮಚರ್ಯದ ಸಾಧನೆಯಿಂದ ಅಧ್ಯಾತ್ಮದತ್ತ ಸಾಗುವುದು ಎಂದರ್ಥ. ಆ ಮಾರ್ಗ ಎಲ್ಲರಿಗೂ ಹೇಳಿದ್ದಲ್ಲ. ಎಲ್ಲರಿಗೂ ಸಾಧ್ಯವಿಲ್ಲ.

ಹೊಸದಾಗಿ ತೆಪ್ಪ ಹತ್ತುವವರು ವಿಚಾರ ಮಾಡಿ ಹತ್ತಿ. ತೆಪ್ಪ ಗಮ್ಯಕ್ಕೊಂದು ಸಾಧನವೇ ವಿನಃ ಗಮ್ಯವೇ ಅಲ್ಲ.

ಪತಿಗೆ ಪತ್ನಿ ತೆಪ್ಪ. ಪತ್ನಿಗೆ ಪತಿ ತೆಪ್ಪ. ಮಕ್ಕಳಿಗೆ ಅಪ್ಪ ಅಮ್ಮ ತೆಪ್ಪ.

ತೆಪ್ಪ ಎಂದ ಕೂಡಲೇ ಬೆಪ್ಪನಾಗಿ, ಕೆಪ್ಪನಂತೆ ಮತ್ತು ತೆಪ್ಪಗೆ ಎನ್ನುವ ಶಬ್ದಗಳು ಕಿವಿಯಲ್ಲಿ ಮೊಳಗಬೇಕು. ಹಾಗಾದಾಗ ಮಾತ್ರ ತೆಪ್ಪದ ಮೇಲಿನ ಪಯಣ ಸುರಕ್ಷಿತವಾಗಿರುತ್ತದೆ.

ಕೌಲಗಿ ಟೀಚರ್ ಬರೆದ ಪುಸ್ತಕ...ಇನ್ನೂಓದಿಲ್ಲ

ಸ್ವಲ ದಿವಸಗಳ ಹಿಂದೆ ಧಾರವಾಡ ಕಡೆಯಿಂದ ಸುದ್ದಿ ಬಂತು - ಕೌಲಗಿ ಟೀಚರ್ ಪುಸ್ತಕ ಬರೆದಿದ್ದಾರೆ. ಅಷ್ಟೇ ಸುದ್ದಿ. ಯಾವ ಪುಸ್ತಕ, ಪುಸ್ತಕದ ಹೆಸರೇನು, ಯಾವ ಭಾಷೆಯಲ್ಲಿದೆ, ಇತ್ಯಾದಿ ಮಾಹಿತಿ ಕೇಳಿದರೆ ಗೊತ್ತಿಲ್ಲ. ಯಾಕೆಂದರೆ ನನ್ನ ಧಾರವಾಡ ಸ್ನೇಹಿತರು ನನ್ನ ಜೊತೆ ಎಲ್ಲ ಮಾಹಿತಿ ಹಂಚಿಕೊಳ್ಳುತ್ತಾರೆ. ಆದರೆ ಹೆಚ್ಚಿನ ಮಾಹಿತಿ ಅವರಿಗೆ ಗೊತ್ತಿರುವುದಿಲ್ಲ. ಮಾಡಲಿಕ್ಕೆ ಸಾವಿರ ಕೆಲಸ ಅವರಿಗೆ. ನನ್ನ ಹಾಗೆ ಉದ್ಯೋಗಿಲ್ಲದ ಮಂದಿಯೇ ಅವರು?

ಒಟ್ಟಿನಲ್ಲಿ ನಮ್ಮ ಶಾಲಾ ಶಿಕ್ಷಕಿ ಕೌಲಗಿ ಟೀಚರ್ ಪುಸ್ತಕ ಬರೆದಿದ್ದಾರೆಂದು ತಿಳಿಯಿತು. ತಿಳಿದ ಮೇಲೆ ಅದರ ಬಗ್ಗೆ ಮಾಹಿತಿ ಹುಡುಕಬೇಕಾಯಿತು. ಎಲ್ಲಾ ಪುಸ್ತಕಗಳು ಸಿಗುವ, ಎಲ್ಲವನ್ನೂ ಕರುಣಿಸುವ ಮಾತೃಸ್ವರೂಪಿ ಅಮ್ಮಿಜಾನ್ (amazon) ಜಾಲತಾಣದಲ್ಲೂ ಕೌಲಗಿ ಟೀಚರ್ ಬರೆದ ಪುಸ್ತಕ ಇಲ್ಲ. ಸಪ್ನಾ ಆನ್ಲೈನ್ ಪುಸ್ತಕದ ಮಳಿಗೆಯಲ್ಲೂ ಇಲ್ಲ. ಕೌಲಗಿ ಅಂತ ಸರ್ಚ್ ಕೊಟ್ಟರೆ ಬೇರೆ ಯಾರೋ ಕೌಲಗಿ ಬರೆದ ಪುಸ್ತಕಗಳು ಕಂಡು ಬಂದವು. ಒಂದು ತಾಂತ್ರಿಕ ವಿಷಯಕ್ಕೆ ಸಂಬಂಧಪಟ್ಟಿದ್ದು. ಅದು ಅವರ ಪುತ್ರ  ಬರೆದಿದ್ದು ಅಂತ ಕಾಣುತ್ತದೆ. ಇನ್ನೂ ಹೊಸ ಪುಸ್ತಕವಾದ ಕಾರಣ ಆನ್ಲೈನ್ ಮಳಿಗೆಗಳಲ್ಲಿ ಬಂದ ಹಾಗೆ ಕಾಣುವುದಿಲ್ಲ. ಇರಲಿ ಮುಂದೆ ಸಿಕ್ಕೀತು. ಅಥವಾ ಧಾರವಾಡದಲ್ಲಿ ಕನ್ನಡ ಪುಸ್ತಕಗಳ ಭಂಡಾರವನ್ನೇ ಮನೆಯಲ್ಲಿ ಇಟ್ಟುಕೊಂಡಿರುವ ನಮ್ಮ ಪರಿಚಿತ ಜನರಿದ್ದಾರೆ. ಅವರ ಖಾಸಗಿ ಸಂಗ್ರಹದಲ್ಲಿ ಟೀಚರ್ ಬರೆದ ಪುಸ್ತಕ ಸಿಕ್ಕೀತು.

ಗೂಗಲ್ ಇರುವಾಗ ಹೆಚ್ಚಿನ ಮಾಹಿತಿ ಹುಡುಕಲೇನು ಕಷ್ಟ?

ಹುಡುಕಿದರೆ ಪುಸ್ತಕದ ಬಗ್ಗೆ ಸ್ವಲ್ಪ ಮಾಹಿತಿ ಸಿಕ್ಕಿತು, ಅವಧಿ ಜಾಲತಾಣದಲ್ಲಿ.

ಪುಸ್ತಕದ ಹೆಸರು - 'ನೀರ ಮೇಲೆ ಅಲೆಯ ಉಂಗುರ'.

'ಬಪ್ಪರೇ! ನಮ್ಮ ಟೀಚರ್ ಭಾಳ ಶಾಣ್ಯಾ ಇದ್ದಾರ!' ಎನ್ನುವ ಭಾವನೆ ಮನದಲ್ಲಿ ಮೂಡಿತು. ಶಾಣ್ಯಾನೇ? ಯಾಕೆ?

ಅದು ನೋಡಿ..."ನೀರಿನಲ್ಲಿ" ಅಲೆಯ ಉಂಗುರು ಅಂತ ಇಟ್ಟಿಲ್ಲ. ನೀರ "ಮೇಲೆ" ಅಲೆಯ ಉಂಗುರ ಅಂತ ಇಟ್ಟಿದ್ದಾರೆ. There lies the subtle difference. ಮಾಸ್ಟರ್ ಸ್ಟ್ರೋಕ್ ಅಂದರೆ ಅದು.

'ನೀರಿನಲ್ಲಿ ಅಲೆಯ ಉಂಗುರ' ಎನ್ನುವುದು ಪುರಾತನ ಕಾಲದ ಸುಮಧುರ ಚಿತ್ರಗೀತೆಯೊಂದರ ಆರಂಭಿಕ ಸಾಲು. ಒಂದು ಚಿತ್ರಗೀತೆ ಪ್ರಖ್ಯಾತವಾಯಿತು ಅಂದರೆ ಅಷ್ಟೇ ಮತ್ತೆ. ಅದರ ಅಂದ ಚಂದಗಳನ್ನು ಪೂರ್ತಿಯಾಗಿ ರಾಡಿಯೆಬ್ಬಿಸುವ parody ಗಳು ಬರುತ್ತವೆ ಮತ್ತು ಅವೇ ಮೂಲಗೀತೆಗಿಂತ ಹೆಚ್ಚು (ಕು)ಖ್ಯಾತವಾಗಿ ಬಿಡುತ್ತವೆ. ಕೌಲಗಿ ಟೀಚರ್ ಅಪ್ಪಿತಪ್ಪಿಯಾದರೂ 'ನೀರಿನಲ್ಲಿ ಅಲೆಯ ಉಂಗುರ' ಎಂದು ಹೆಸರಿಟ್ಟಿದ್ದರೆ ಅದೂ ಕೂಡ parody ಆಗುತ್ತಿತ್ತೋ ಏನೋ. ನಮ್ಮ ಧಾರವಾಡ ಕಡೆ ಎಲ್ಲವನ್ನೂ ಅಪಭ್ರಂಶ ಮಾಡಿ ವಿಕೃತಾನಂದ ತೆಗೆದುಕೊಳ್ಳುವುದು ಧಾರವಾಡದ ಮೂಲನಿವಾಸಿಗಳ ವಿಶೇಷ ಗುಣಗಳಲ್ಲಿ ಒಂದು.

'ನೀರಿನಲ್ಲಿ ಅಲೆಯ ಉಂಗುರ... ' ಎಂತಹ ಸುಮಧುರ ಗೀತೆ. ತುಂಬಾ ಸುಂದರವಾದ ಗೀತಸಾಹಿತ್ಯ. ನಮ್ಮ ಧಾರವಾಡದಲ್ಲಿ ಕಿಡಿಗೇಡಿಗಳು ಯಾರೂ ಅದನ್ನು ಹಾಗೆ ಹಾಡುವುದಿಲ್ಲ. ಅವರ ಅಂದಾಜೇ ಬೇರೆ.

'ನೀರಿನಲ್ಲಿ ಅಲೆಯ ಉಂಗುರ
ಎಲ್ಲೆಲ್ಲೋ ಗುಂಗುರ ಕೂದಲ
ಕೈಯಾಗ ಕೊಟ್ಟನಲ್ಲ
ಬಾಯಾಗ ಇಟ್ಟನಲ್ಲ
..
..
ನೀರಿನಲ್ಲಿ ಅಲೆಯ ಉಂಗುರ'

'ಏನಲೇ, ಹೇಶಿ ಮಂಗ್ಯಾನಿಕೆ!? ಏನು ಅಸಹ್ಯ ಅಸಹ್ಯ ಮಾತಾಡ್ತೀ! ಎಂಥಾ ಛಂದ ಹಾಡಿನ ಪೂರ್ತಿ ರಾಡಿ ಎಬ್ಬಿಸಿ ಇಟ್ಟಿ ನೋಡು!' ಅಂತ ಆಕ್ಷೇಪಿಸಿದರೆ ನಿಮಗೆ ಧಾರವಾಡದ ಫೇಮಸ್ ಬೂಚ್ ಬೀಳುವುದು ಗ್ಯಾರಂಟಿ. ಅಷ್ಟು ಜಾಬಾದ್ ಇರುತ್ತಾರೆ ನಮ್ಮ ಕಡೆ ಜನ.

'ಅಲ್ಲಪಾ ಹೀರೋ, ಏನು ತಪ್ಪು ಅದ ಇದ್ರಾಗ??' ಅಂತ ನಿಮಗೇ ವಾಪಸ್ ಇಡುತ್ತಾರೆ.

ಪೂರ್ವಗ್ರಹ ಪೀಡಿತವಾಗಿರುವುದು ನಿಮ್ಮ ಮನಸ್ಸು. ನೀವು ಏನೇನೋ ವಿಚಾರ ಮಾಡಿ, 'ಏನಲೇ, ಅದೇನು ಕೆಟ್ಟ ಹೊಲಸ್ ಹೊಲಸ್ lyrics?? ಕೈಯ್ಯಾಗ ಕೊಡೋದಂತ. ಬಾಯಾಗ ಇಡೋದಂತ! ಅಸಹ್ಯ!' ಅಂತೇನಾದರೂ ಆಕ್ಷೇಪಿಸಿದಿರೋ ಅದಕ್ಕೆ ಖಡಕ್ ಬೂಚ್ ರೆಡಿ.

'ಅಲ್ಲಪಾ ದೋಸ್ತ, ಎಲ್ಲಾ ಹೊಲಸು ನಿನ್ನ ತಲಿಯಾಗದ. ನನ್ನ ಹಾಡಿಗಾಗ ಏನೂ ಹೊಲಸಿಲ್ಲ. ಕೈಯಾಗ ಕೊಡೋದು, ಬಾಯಾಗ ಇಡೋದು ಅಂದ್ರ ಪ್ರಸಾದ ಮಾರಾಯ. ದೇವರ ಪ್ರಸಾದವನ್ನು  ಒಂದೋ ಕೈಯಾಗ ಕೊಡ್ತಾರ. ಒಂದು ವೇಳೆ ಕೈ ಸ್ವಚ್ಛ ಇರಲಿಲ್ಲ ಅಂದ್ರ ಸೀದಾ ಬಾಯಾಗೇ ಇಡ್ತಾರ. ಗೊತ್ತಾತ? ಈಗರೇ ಗೊತ್ತಾತ??' ಅಂತ ನಿಮಗೆ ಬರೋಬ್ಬರಿ ಉಲ್ಟಾ ಬತ್ತಿ ಇಟ್ಟು ಬ್ಲಾಸ್ಟ್ ಮಾಡಿರುತ್ತಾರೆ.

'ನಿನ್ನ ದರಿದ್ರ ಹಾಡಿನಾಗ ಬರೋದು ದೇವರ ಪ್ರಸಾದನೇ? ನಾ ಏನೋ ಬೇರೇನೇ ತಿಳಿದುಕೊಂಡೆ... ' ಅಂತ ನೀವು ಅಂದೇ ಅನ್ನುತ್ತೀರಿ.

ಆವಾಗ ಗಾಯದ ಮೇಲೆ ಬರೋಬ್ಬರಿ ಮತ್ತೊಂದಿಷ್ಟು ಉಪ್ಪನ್ನು ತಿಕ್ಕುತ್ತಾರೆ. 'ಅದಕ್ಕೇ ಹೇಳಿದೆ ದೋಸ್ತ...ಅರ್ಥ ಅನರ್ಥ ಎಲ್ಲಾ ನಮ್ಮ ನಮ್ಮ ತಲಿಯಾಗ ಇರ್ತಾವ. ನಿನ್ನ ತಲಿಯಾಗ  ಏನು ಬಂದಿತ್ತು ಅಂತ ನಾ ಈಗ ಹೇಳಲಾ?' ಎಂದು ಬಿಡುತ್ತಾರೆ.

ಬತ್ತಿ ಇಡಿಸಿಕೊಂಡು ಬ್ಯಾಕ್ ಬ್ಲಾಸ್ಟ್ ಮಾಡಿಸಿಕೊಂಡಿರುವ ನೀವು ಅಷ್ಟಕ್ಕೇ ಸುಮ್ಮನಾಗುತ್ತೀರಿ. ಯಾರಿಗೆ ಬೇಕು ಜಾಸ್ತಿ ಗೂಟ ಬಡಿಸಿಕೊಳ್ಳೋದು ಅಂತ ಸುಮ್ಮನಾಗುತ್ತೀರಿ.

('ನೀರಿನಲ್ಲಿ ಅಲೆಯ ಉಂಗುರ... '  ಹಾಡಿನ parody ಯನ್ನು ನಮ್ಮ ಊರಿನ ಕಡೆ ಭಾಷೆಯಲ್ಲಿ ನಾನೂ ಮಾಡಿದ್ದೆ. ಅಂತ್ಯದಲ್ಲಿದೆ. ಓದಿ. ಎಂಜಾಯ್ ಮಾಡಿ.)

ನಮ್ಮ ಧಾರವಾಡಿಗಳ ಕರಾಮತ್ತು ಅಂದರೆ ಹೀಗೆ. ಗೀತೆಯೊಂದನ್ನು ರಾಡಿ ಎಬ್ಬಿಸಿದರೂ ಅದನ್ನು ಡಿಫೆಂಡ್ ಮಾಡಿಕೊಳ್ಳುವುದನ್ನು ಅವರಿಂದಲೇ ಕಲಿಯಬೇಕು.

'ನೀರಿನ ಮೇಲೆ ಅಲೆಯ ಉಂಗುರ' ಎಂದು ಹೆಸರಿಡುವ ಮೂಲಕ ಪಾಪ್ಯುಲರ್ parody ಯಿಂದ ನಮ್ಮ ಟೀಚರ್ ಪುಸ್ತಕ ಬಚಾವಾಗಿದೆ. ಇಲ್ಲವಾದರೆ ನಮ್ಮ ಉಡಾಳ ದೋಸ್ತರು ಇದಕ್ಕೂ ಒಂದು 'ಗತಿ' ಕಾಣಿಸುವುದರಲ್ಲಿ ಸಂಶಯವಿರಲಿಲ್ಲ. ಇದಕ್ಕೆ ಏನೆಂದು parody ಮಾಡುತ್ತಾರೋ ಗೊತ್ತಿಲ್ಲ. ಗೊತ್ತಾದಾಗ ತಿಳಿಸುತ್ತೇನೆ.

ಕೌಲಗಿ ಟೀಚರ್ ಬರೆದ ಪುಸ್ತಕದ ಹೆಸರು ಗೊತ್ತಾಯಿತು. ಈಗ ಸ್ವಲ್ಪ ದಿವಸಗಳ ಹಿಂದೆ ಬಿಡುಗಡೆಯಾಯಿತು ಅಂತ ತಿಳಿಯಿತು. ಇನ್ನೂ ಸಿಕ್ಕಿಲ್ಲ ಎಂದೂ ಹೇಳಿದೆ.

ಪುಸ್ತಕದ ಸಾಫ್ಟ್ ಕಾಪಿ ಎಲ್ಲಾದರೂ ಸಿಗಬಹುದೇ ಎಂದು ಹುಡುಕಿದೆ. ಸಿಗಲಿಲ್ಲ. ನಿಮಗೆ ಸಿಕ್ಕಿದರೆ ತಿಳಿಸಿ.

ಆದರೆ ಕೌಲಗಿ ಟೀಚರ್ ಬ್ಲಾಗ್ ಸಿಕ್ಕಿತು. ಲಿಂಕ್ ಇಲ್ಲಿದೆ. ಈಗಿತ್ತಲಾಗೆ update ಮಾಡಿಲ್ಲ ಎಂದು ಕಾಣುತ್ತದೆ.

ಪುಸ್ತಕ ಸಿಗಲಿಲ್ಲ. ಬ್ಲಾಗ್ ಆದರೂ ಸಿಕ್ಕಿತಲ್ಲ ಎನ್ನುವ ಸಂತೋಷ. ನಮ್ಮ ಶಿಕ್ಷಕ ಶಿಕ್ಷಕಿಯರಲ್ಲಿ ತುಂಬಾ ಜನ ಪ್ರತಿಭಾವಂತರು ಮತ್ತು ಸೃಜನಶೀಲರು ಇದ್ದರು. ಆದರೆ ನನಗೆ ತಿಳಿದ ಮಟ್ಟಿಗೆ ಯಾರೂ ಬ್ಲಾಗ್ ಇತ್ಯಾದಿ ಮಾಡಿಕೊಂಡು ಸಕ್ರಿಯರಾಗಿದ್ದು ನನಗೆ ಗೊತ್ತಿರಲಿಲ್ಲ. ಕೌಲಗಿ ಟೀಚರೇ ಮೊದಲನೆಯವರು. ಬೇರೆ ಶಿಕ್ಷಕರ ಬ್ಲಾಗ್ ಇತ್ಯಾದಿ ಸಿಕ್ಕರೆ ತಿಳಿಸಿ.

ನಿನ್ನೆ ಸುಮಾರು ಹೊತ್ತು ಕೌಲಗಿ ಟೀಚರ್ ಬ್ಲಾಗ್ ಓದಿದೆ. ಅವರ ಜೀವನದ ಅನುಭವಗಳನ್ನು ಒಳಗೊಂಡ ಲೇಖನಗಳು ನಿಜವಾಗಿಯೂ ಜ್ಞಾನದ ಖನಿಗಳು. True gems! ಅವರು ತುಂಬಾ ಕಷ್ಟ ಪಟ್ಟು ಜೀವನ ಸಾಗಿಸಿದವರು ಎಂದು ಗೊತ್ತಿತ್ತು. ಆದರೆ ಜಾಸ್ತಿ ವಿವರಗಳು ಗೊತ್ತಿರಲಿಲ್ಲ. ತಾವು ಅನುಭವಿಸಿದ ಕಷ್ಟಗಳು, ಅವನ್ನು ಎದುರಿಸಿದ ರೀತಿ, ಇತ್ಯಾದಿಗಳನ್ನು ಮನೋಜ್ಞವಾಗಿ ಬರೆದುಕೊಂಡಿದ್ದಾರೆ. ಅದಕ್ಕೆ hats off. ಅವನ್ನು ಬಿಟ್ಟು ಒಂದಿಷ್ಟು ಕವನ, ಭಾಷಾಂತರ, ಇತ್ಯಾದಿ ಇವೆ. ಅವು ನನ್ನ ಆಸಕ್ತಿಯ ವಿಷಯಗಳು ಅಲ್ಲ. ಮತ್ತೊಮ್ಮೆ ನೋಡೋಣ ಅಂತ ಬಿಟ್ಟಿದ್ದೇನೆ.

ಕೌಲಗಿ ಟೀಚರ್ ಪುಸ್ತಕ ಸಿಕ್ಕಿಲ್ಲ. ಆದರೆ ಕೌಲಗಿ ಟೀಚರ್ ಮಾತ್ರ ೧೯೮೨ ರಲ್ಲೇ ಸಿಕ್ಕಿದ್ದರು. ಅದು ನಾವು ಐದನೇ ಕ್ಲಾಸಿಗೆ ಬಂದ ವರ್ಷ. ದಿಬ್ಬದ ಕೆಳಗಿನ ಪ್ರಾಥಮಿಕ ಶಾಲೆಯಿಂದ ದಿಬ್ಬದ ಮೇಲಿನ ಮಾಧ್ಯಮಿಕ ಶಾಲೆಗೆ ಬಂದಾಗ ಅಲ್ಲಿ ಕಂಡ ಅನೇಕ ಹೊಸ ಹೊಸ ಮಾಸ್ತರ್ ಟೀಚರ್ ಪೈಕಿ ಕೌಲಗಿ ಟೀಚರ್ ಕೂಡ ಒಬ್ಬರು.

ಕೌಲಗಿ ಟೀಚರ್ ಅಣ್ಣನ ಮಗ ಮಿಳಿಂದ ನಮ್ಮ ಸಹಪಾಠಿ. ಸಹಪಾಠಿಯ ಅತ್ಯಾ (ಸೋದರತ್ತೆ) ಇಲ್ಲಿ ಟೀಚರ್ ಅನ್ನುವುದರ ಬಗ್ಗೆ ವಿಸ್ಮಯ ಪಡಬೇಕೋ ಅಥವಾ ಟೀಚರ್ ಅಳಿಯ (ಸೋದರಳಿಯ) ನಮ್ಮ ಸಹಪಾಠಿ ಅನ್ನುವುದರ ಬಗ್ಗೆ ಬೆರಗಾಗಬೇಕೋ ಎನ್ನುವ ಸಂಕೀರ್ಣತೆಯನ್ನು ವಿಶ್ಲೇಷಿಸಲಾಗದ ಚಿಣ್ಣ ವಯಸ್ಸು ಅದು.

ಕೌಲಗಿ ಟೀಚರ್ ಮಗ ಮತ್ತು ಮಗಳು ಕೂಡ ನಮ್ಮ ಶಾಲೆಯಲ್ಲೇ ಇದ್ದಾರೆ ಅಂತ ಕೂಡ ಕೆಲ ದಿವಸಗಳ ಮೇಲೆ ತಿಳಿಯಿತು. ಅವರ ಮಗ ನಮಗಿಂತ ಒಂದು ವರ್ಷಕ್ಕೆ ಹಿರಿಯ. ಮಗಳು ಒಂದು ವರ್ಷಕ್ಕೆ ಕಿರಿಯಳು. ಇಬ್ಬರೇ ಮಕ್ಕಳು ಎಂದು ಇಲ್ಲಿಯವರೆಗೆ ತಿಳಿದಿದ್ದೆ. ಬ್ಲಾಗ್ ಓದಿದ ನಂತರ ಗೊತ್ತಾಯಿತು ಇನ್ನೊಬ್ಬ ಮಗಳಿದ್ದಾಳೆ ಅಂತ. ಅವಳು ಜಾಸ್ತಿ ಕಿರಿಯಳು ಇರಬೇಕು. ಹಾಗಾಗಿ ಆಗ ಗೊತ್ತಾಗಿರಲಿಲ್ಲ.

ಟೀಚರ್ ಮಗ ಒಂದು ವರ್ಷಕ್ಕೆ ಹಿರಿಯ ಎಂದು ಹೇಳಿದೆ ನೋಡಿ. ಅವನಿಗೆ ಅವನ ಪರಿಚಿತರು ಸಂಬಂಧಿಕರು ನಾಣಿ, ನಾಣ್ಯಾ ಅನ್ನುತ್ತಿದ್ದರು. ಅವನು ಮಾತ್ರ ತನ್ನ ಹೆಸರನ್ನು ರವಿ ಎಂದು ಹೇಳಿಕೊಳ್ಳುತ್ತಿದ್ದ. ಆಗ ಮಾತ್ರ ನಮಗೆ ರೂಢನಾಮ, ಅಂಕಿತನಾಮ ಎಂದೆಲ್ಲ ಕನ್ನಡ ವ್ಯಾಕರಣ ಶುರುವಾಗಿತ್ತು. ನಾಣಿ ಅವನ ರೂಢನಾಮ ಮತ್ತು ರವಿ ಅವನ ಅಂಕಿತನಾಮ ಇರಬಹುದೇನೋ ಅಂದುಕೊಂಡಿದ್ದರೆ ಅದು ಯಾರ ತಪ್ಪೂ ಅಲ್ಲ.

ಕೌಲಗಿ ಟೀಚರ್ ಮತ್ತೊಂದು ರೀತಿಯಿಂದ ಕೂಡ ಹೆಸರುವಾಸಿ. ಅವರ ಹಿರಿಯ ಸಹೋದರ ಪ್ರೊ. ಹಂಚಿನಮನಿಯವರು. ಜನತಾ ಕಾಲೇಜಿನ ಖ್ಯಾತ ಪ್ರಾಧ್ಯಾಪಕರು. ಧಾರವಾಡದ ಮಟ್ಟಿಗೆ ಅವರು  ಪ್ರೈವೇಟ್ ಟ್ಯೂಷನ್ ಲೋಕದ ಪಿತಾಮಹ. ಮೊದಲೂ ಪ್ರೈವೇಟ್ ಟ್ಯೂಷನ್ ಇತ್ತು. ಆದರೆ ಅದನ್ನು ಒಂದು ಶಿಸ್ತುಬದ್ಧವಾದ ಕೈಗಾರಿಕೆ ತರಹ ಮಾಡಿದವರು ಪ್ರೊ. ಹಂಚಿನಮನಿ. of course, ನಮ್ಮ ಪ್ರೀತಿಯ 'ಗಣಿತಲೋಕ'ದ ಶ್ರೀನಿವಾಸ ದೇಶಪಾಂಡೆ ಸರ್ ಸಹ ಪ್ರೈವೇಟ್ ಟ್ಯೂಷನ್ ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದ್ದರು. ಅವರು ದುರದೃಷ್ಟವಶಾತ್ ಬೇಗ ದಿವಂಗತರಾದರು. ಪ್ರೊ. ಹಂಚಿನಮನಿ ಮೊದಲು ಟ್ಯೂಷನ್ ಮಾಡಿ, ನಂತರ ಅವರದ್ದೇ ಕಾಲೇಜು ಕೂಡ ಮಾಡಿಕೊಂಡಿದ್ದಾರೆ. ಕೌಲಗಿ ಟೀಚರ್ ಬ್ಲಾಗ್ ಓದಿದಾಗ ತಿಳಿಯಿತು ಪ್ರೊ. ಹಂಚಿನಮನಿಯವರಿಗೆ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿ ಕೂಡ ಬಂದಿದೆ ಎಂದು. ಸಂತೋಷ. ಕೌಲಗಿ ಟೀಚರ್ ಅಣ್ಣನ ಮಗ ನಮ್ಮ ಸಹಪಾಠಿ ಅಂತ ಹೇಳಿದೆ ನೋಡಿ. ಆತ ಪ್ರೊ. ಹಂಚಿನಮನಿಯವರ ಮಗ. ಈ ಕೌಲಗಿ ಟೀಚರ್ ಅವನ ಅತ್ಯಾ(ಸೋದರತ್ತೆ).

ಕೌಲಗಿ ಟೀಚರ್ ಮಗಳು ನಮಗಿಂತ ಒಂದು ವರ್ಷಕ್ಕೆ ಕಿರಿಯಳು ಎಂದು ಹೇಳಿದೆ ನೋಡಿ. ನಾವು ಎಂಟನೇ ಕ್ಲಾಸಿನಲ್ಲಿ ಇದ್ದಾಗ, ಅಂದರೆ ೧೯೮೫ ರಲ್ಲಿ, ಎಂದಿನಂತೆ ವಾರ್ಷಿಕ ಕ್ರೀಡಾಕೂಟವಾಗಿತ್ತು. ಪ್ರತಿ ವರ್ಷದಂತೆ ನಾಲ್ಕು ಹೌಸ್ ಗಳು. ಕೆಂಪು, ಹಳದಿ, ನೀಲಿ, ಹಸಿರು. ನಮಗೆ ಆ ವರ್ಷ ಹಸಿರು ಹೌಸ್ ಬಂದಿತ್ತು. ನಮ್ಮ ಶಾಲೆಯ ಮಾಸ್ತರ್ ಟೀಚರ್ ಮಂದಿ ಭಯಂಕರ ಸೃಜನಶೀಲರು. Very creative! ಏನಾದರೂ ಹೊಸದನ್ನು ಪ್ರಯತ್ನ ಮಾಡುತ್ತಲೇ ಇರುತ್ತಿದ್ದರು. ಆ ವರ್ಷ ಕೂಡ ಹೊಸದೊಂದನ್ನು ಪ್ರಯತ್ನ ಮಾಡಿದ್ದರು. ಅದೇನು ಅಂದರೆ.... ಭಾರತಮಾತೆಯ ವೇಷ. ಪ್ರತಿ ಬಣ್ಣದ ಮನೆಗೂ ಒಬ್ಬಳು ಭಾರತಮಾತೆ. ಒಂದು ಚಿಣ್ಣ ಬಾಲೆಗೆ ಭಾರತಮಾತೆಯ ವೇಷ ಹಾಕಿಸಿ, ಕೈಯಲ್ಲೊಂದು ತ್ರಿಶೂಲ ಕೊಟ್ಟುಬಿಟ್ಟಿದ್ದರು. ಅವರು ತಮ್ಮ ತಮ್ಮ ಮನೆಗಳ ನಾಯಕಿಯರು. ಕ್ರೀಡಾಕೂಟದ ಮುಖ್ಯ  ಅಂಗವಾದ ಪರೇಡ್ ನಡೆದಾಗ ಪ್ರತಿಯೊಂದು ಬಣ್ಣದ ಮನೆಯ ಮುಂದೆ ಒಬ್ಬೊಬ್ಬ ಭಾರತಮಾತೆ. ಕೆಂಪು ಮನೆಯ ತಂಡದ ಮುಂದೆ ಕೆಂಪು ಭಾರತಮಾತೆ. ನೀಲಿ ಮನೆಯ  ತಂಡದ ಮುಂದೆ ನೀಲಿ ಭಾರತಮಾತೆ. ಹಳದಿ  ಮನೆಯ  ತಂಡದ ಮುಂದೆ ಹಳದಿ ಭಾರತಮಾತೆ. ಹಸಿರು ಮನೆಯ ತಂಡದ ಮುಂದೆ ಹಸಿರು ಭಾರತಮಾತೆ.

ಆ ವರ್ಷ ನನ್ನದು ಹಸಿರು ಮನೆ ಅಂದರೆ ಗ್ರೀನ್ ಹೌಸ್. ನಮ್ಮ ಮನೆಯ ಭಾರತಮಾತೆ ಆಗಿದ್ದವಳು ಇದೇ ಕೌಲಗಿ ಟೀಚರ್ ಮಗಳು. ಅವಳ ಹೆಸರು? ನಮಿತಾನೋ ಅಥವಾ ನಮ್ರತಾನೋ ಎಂದು ನೆನಪು. ಅಂಕಿತನಾಮ ಅದು ಇರಬಹುದು. ಇನ್ನು ರೂಢನಾಮ? ಆಕೆಯ ತುಂಟ ಸಹಪಾಠಿ ಹುಡುಗರನ್ನು ಕೇಳಬೇಕು. ಏನಾದರೂ ತರಲೆ ಹೆಸರು ಇಟ್ಟಿದ್ದಾರು. ರೂಢನಾಮವಿಲ್ಲದ KEB ಕನ್ಯೆಯರು ತುಂಬಾ ವಿರಳ. ಅಂದಿನ ರೂಢನಾಮಗಳನ್ನು ನೆನಸಿಕೊಂಡರೆ ಇವತ್ತಿಗೂ ನಗು ನಿರಂತರ. ಉದಾಹರಣೆಗೆ ನಮ್ಮ ಕ್ಲಾಸಿನ ಇಂದಿರಾ ಗಾಂಧಿ. B ಕ್ಲಾಸಿನ ಹಿರೋಯಿಣಿ ಅನಿತಾ ರಾಜ್. ಕೆಲವರಿಗಂತೂ 'ದೇವನೊಬ್ಬ ನಾಮ ಹಲವು' ಮಾದರಿಯಲ್ಲಿ 'ಸುಂದರಿಯೊಬ್ಬಳು ರೂಢನಾಮಗಳು ಹಲವು' ಇರುತ್ತಿದ್ದವು. ಕೊನೆಗೆ ರೂಢನಾಮವಿಟ್ಟವರೇ ನಾಮ ಹಾಕಿಸಿಕೊಂಡು ಹೋಗುತ್ತಿದ್ದುದು ಸಾರ್ವಕಾಲಿಕ ದುರಂತ ಬಿಡಿ.

ಕೌಲಗಿ ಟೀಚರ್ ಮಗಳು ಸಿಕ್ಕಳು ಒಳ್ಳೆದಾಯಿತು. ನಮ್ಮ ಹಸಿರು ಮನೆಗೊಬ್ಬ ಮಹಾಲಕ್ಷ್ಮಿ ಉರ್ಫ್ ಭಾರತಮಾತೆ ಸಿಕ್ಕಳು. ಪರೇಡಿನಲ್ಲಿ ಲೀಡ್ ಮಾಡಿದಳು. ಹಸಿರು ಭಾರತಮಾತೆ ತುಂಬಾ ಚೆನ್ನಾಗಿ ತಯಾರಾಗಿದ್ದಳು. ಆದರೆ ಕೆಂಪು ಮನೆಯ ಭಾರತಮಾತೆ ಎಲ್ಲರಿಗಿಂತ ಭರ್ಜರಿಯಾಗಿ ಚಮಕಾಯಿಸುತ್ತಿದ್ದಳು ಎಂದು ನೆನಪು. ಆ ಬಣ್ಣವೇ ಹಾಗೆ. ನನ್ನ ಫೇವರಿಟ್ ಕೂಡ. ಮತ್ತೆ ಭರ್ಜರಿ ಅಲಂಕಾರ ಶೃಂಗಾರ ಕೂಡ ಮಾಡಿರುತ್ತಿದ್ದರು. ಕೆಂಪು ಮನೆಯ ಭಾರತಮಾತೆ ಕೂಡ ಕೆಂಪುಕೆಂಪಾಗಿ ತುಂಬಾ ಮುದ್ದು ಮುದ್ದಾಗಿದ್ದಳು. ಯಾರಾಗಿದ್ದಳು ಆಕೆ? ಗೊತ್ತಿಲ್ಲ. ಕೇಳಿದರೆ ಯಾರಿಗೂ ಗೊತ್ತಿಲ್ಲ. ಈಗ ಯಾರಿಗೂ ನೆನಪೇ ಇಲ್ಲ. ನನ್ನೊಬ್ಬನನ್ನು ಬಿಟ್ಟು.

'ಮಹೇಶಾ! ಕೌಲಗಿ ಟೀಚರ್ ಮಗಳು ಸಿಕ್ಕಳು ಅಂತ ನೀ ಬಚಾವ್ ನೋಡಪಾ. ಇಲ್ಲಂದ್ರ ನಿನಗೇ ಸೀರಿ ಉಡಿಸಿ, ಇದೇ ನಮ್ಮ ಗ್ರೀನ್ ಹೌಸಿನ ಭಾರತಮಾತೆ ಅಂತ ಕಳಸ್ತಿದ್ದರು. ಅದನ್ನು ವಿಚಾರ ಮಾಡಪಾ. ಹೋಗಿ ಹೋಗಿ ನಲವತ್ತು ವರ್ಷದ ನಂತರ ಅವತ್ತು ರೆಡ್ ಹೌಸಿನ ಭಾರತಮಾತೆಯಾಗಿದ್ದ ಸುಂದರಿ ಯಾರು ಅಂತ ಈಗ ವಿಚಾರ ಮಾಡ್ತಿಯಲ್ಲಪ್ಪಾ! ಅದೆಲ್ಲಾ ಇರ್ಲಿ ಈಗ ಇನ್ನೊಂದು ಡ್ರಿಂಕ್ಸ್ ತೊಗೋ!' ಎಂದು ಧಾರವಾಡದ ದೋಸ್ತರು ಶುದ್ಧ ಮಷ್ಕಿರಿ ಮಾಡುತ್ತಾರೆ. ಶಾಲಾ ನಾಟಕಗಳಲ್ಲಿ ಕೃಷ್ಣನ ಪಾತ್ರ, ಸತ್ಯಹರಿಶ್ಚಂದ್ರನ ಪಾತ್ರ ಹಾಕಿಯಾಗಿತ್ತು. ಇನ್ನು ಸೀರೆ ಉಟ್ಟುಕೊಂಡು ಭಾರತಮಾತೆಯ ಪಾತ್ರ ಹಾಕುವುದು ಬಾಕಿ ಇತ್ತೇನೋ. ಗೆಳೆಯರ ಪ್ರಕಾರ ಕೌಲಗಿ ಟೀಚರ್ ಮಗಳು ಸಿಕ್ಕಿದ್ದಕ್ಕೆ ನಾನು  ಬಚಾವಂತೆ. ಇಲ್ಲವಾದರೆ ಅಷ್ಟೇ ಮತ್ತೆ. ಗ್ರೀನ್ ಹೌಸಿನ ಹಸಿರು ಭಾರತಮಾತೆ ವೇಷದಲ್ಲಿ ಬೃಹನ್ನಳೆ ಮಾದರಿಯಲ್ಲಿ ಕಂಗೊಳಿಸುವ 'ಭಾಗ್ಯ' ನನ್ನದಾಗುತ್ತಿತ್ತಂತೆ. ಎಣ್ಣೆ ಪರಮಾತ್ಮ ಒಳಗೆ ಸೇರಿದಾಗ ಎಂತೆಂತಹ ಜೋಕ್ಸ್ ಮಾಡುತ್ತಾರಪ್ಪಾ ನಮ್ಮ ಖತರ್ನಾಕ್ ದೋಸ್ತರು.

ಇನ್ನು ಒಂದು ವಿಷಯ ನೋಡಿ. ನೀವು ಮಾಸ್ತರ್ ಟೀಚರ್ ಮಗ ಅಥವಾ ಮಗಳಾಗಿಬಿಟ್ಟಿರಿ ಎಂದರೆ ನಿಮ್ಮ ಮೂಲ ಹೆಸರು ಯಾರಿಗೂ ಬೇಕಾಗುವುದಿಲ್ಲ. ಎಲ್ಲರಿಗೂ ನೀವು ಅಂತಹ ಟೀಚರ್ ಮಗ ಅಥವಾ ಇಂತಹ ಮಾಸ್ತರ್ ಮಗಳು. ನನ್ನ ಉದಾಹರಣೆಯನ್ನೇ ತೆಗೆದುಕೊಳ್ಳಿ. ಹೆಚ್ಚಿನವರಿಗೆ ನಾನು ಹೆಗಡೆ ಸರ್ ಮಗ. ಮಾಸ್ತರರಿಗೆ "ಜಾಸ್ತಿ" ಮರ್ಯಾದೆ ಕೊಡಬೇಕು ಅನ್ನಿಸಿದಾಗ ಹೆಗಡೆನ ಮಗ. ಮಾಸ್ತರ್ ಕ್ಲಾಸಿನಿಂದ ಬೋರಾಗಿದ್ದರೆ, ಹಿಂದೆ ಮುಂದೆ ಏನೇನೋ ವಿಶೇಷಣಗಳನ್ನು ಸೇರಿಸಿ ಅಂಥಾ ಹೆಗಡೆ ಸರ್ ಮಗ ಅಥವಾ ಇಂಥಾ ಹೆಗಡೆ ಮಾಸ್ತರ್ ಮಗ ಅಂದುಬಿಡುತ್ತಾರೆ. ಮುಂದಿಂದ ಮಾತ್ರ ಹೆಗಡೆ ಸರ್ ಮಗ. ಅದು fact of life. ಅದನ್ನು ಒಪ್ಪಿಕೊಳ್ಳಲೇಬೇಕು. ನಮ್ಮ ಸಮಾಜದಲ್ಲಿ ಶಿಕ್ಷಕರಿಗೆ ಅದೆಷ್ಟು ಗೌರವ ಇದೆ ಅಂದರೆ ಅವರ ಇಡೀ ವಂಶವೇ ಅವರ ಹೆಸರಿನ ಮೇಲೆ ಗುರುತಿಸಲ್ಪಡುತ್ತದೆ.

ಇದನ್ನು ಯಾಕೆ ಹೇಳಿದೆ ಅಂದರೆ ನಮ್ಮ ಇನ್ನೊಬ್ಬ ಸಹಪಾಠಿ ಇದ್ದಳು. ಆಕೆ ನಮ್ಮ ಇನ್ನೊಬ್ಬ ಶಿಕ್ಷಕಿಯಾಗಿದ್ದ ಕಲ್ಲಾಪುರ ಟೀಚರ್ ಅವರ ಮಗಳು. ಎಷ್ಟೋ ವರ್ಷಗಳ ನಂತರ ಆಕೆ ಫೇಸ್ಬುಕ್ ನಲ್ಲಿ ನಮ್ಮ ಶಾಲೆಯ ನಮ್ಮ ಬ್ಯಾಚಿನ ಗ್ರೂಪ್ಪಿನಲ್ಲಿ ಸಿಕ್ಕಿದಳು. ದೋಸ್ತರ ಮಾತಿನ ನಡುವೆ ಆಕೆಗೆ ಮೊದಲಿನಂತೆಯೇ 'ಕಲ್ಲಾಪುರ ಟೀಚರ್ ಮಗಳು' ಉರ್ಫ್  ಶಾರ್ಟ್ ಅಂಡ್ ಸ್ವೀಟಾಗಿ KTM ಎಂದು ಸಂಬೋಧಿಸಿದರೆ ಆಕೆ ಎರ್ರಾ ಬಿರ್ರಿ ರಾಂಗ್ ಆಗಿ, ಫುಲ್ ರೈಸ್ ಆಗಿ, 'ಏ, ನನ್ನ ಹೆಸರು ಪದ್ಮಮಾಧವಿ ಅಂತ ಅದ. ನಿನಗ ಗೊತ್ತದ ಅಂತ ತಿಳ್ಕೊಂಡೇನಿ. ಖಬರ್ದಾರ್! ಬರೋಬ್ಬರಿ ಹೆಸರಿಂದ ಕರೀ!' ಎಂದು ಫುಲ್ ಆವಾಜ್ ಹಾಕಿದ್ದಳು. ನಾನು ಫುಲ್ ಥಂಡಾ. ತೋಬಾ!! ತೋಬಾ!! KTM ಎಂಬ ನಾಮಧೇಯವನ್ನು ಅಷ್ಟಕ್ಕೇ ಬಿಟ್ಟು, ಅವಳಿಗೆ 'ಜೋ ತುಮ್ಕೋ  ಹೋ ಪಸಂದ್ ವಹೀ ಬಾತ್ ಕರೇಂಗೆ' ಹಾಡಿನ ಮಾದರಿಯಲ್ಲಿ'ಆತು ಮಾರಾಳ. ನೀ ಹ್ಯಾಂಗ ಹೇಳ್ತೀ ಹಾಂಗೇ ಆಗಲಿ. ಓಕೇನಾ?' ಎಂದು ಹೇಳಿ, ತಲೆಗೆ ನವರತ್ನ ತೈಲ ತಿಕ್ಕಿ, ಅವಳನ್ನು ಸಮಾಧಾನ ಮಾಡುವಷ್ಟರಲ್ಲಿ ನಮ್ಮ ತಲೆ ಬರೋಬ್ಬರಿ ಹನ್ನೆರಡಾಣೆ.

ಕೌಲಗಿ ಟೀಚರ್ ಮಗನಿಗಾಗಲಿ ಅಥವಾ ಮಗಳಿಗಾಗಲಿ ಕೌಲಗಿ ಟೀಚರ್ ಮಗ ಅಥವಾ ಮಗಳು ಎಂದು ಗುರುತಿಸಿಕೊಳ್ಳಲು ಯಾವುದೇ ಅಭ್ಯಂತರ ಆವಾಗೂ ಇರಲಿಲ್ಲ ಮತ್ತು ಈಗಲೂ ಇಲ್ಲ ಎಂದು ನನ್ನ ಭಾವನೆ. On the contrary, it is a great honor to be identified in that manner. ಆದರೆ ಅದನ್ನೇ ಮತ್ತೂ ಎಳೆದು ನಮ್ಮ ಸಹಪಾಠಿ ಮಿಳಿಂದನನ್ನು ಕೌಲಗಿ ಟೀಚರ್ ಅಳಿಯ (ಸೋದರಳಿಯ) ಅಂದುಬಿಟ್ಟರೆ ಅದು  ಯಬಡತನ. ನಮ್ಮ ಸಹಪಾಠಿ ನಮ್ಮ ಸಹಪಾಠಿಯೇ. ಅವನ ವಿಷಯಕ್ಕೆ ಬಂದರೆ ಕೌಲಗಿ ಟೀಚರ್ ಅವನ ಅತ್ಯಾ ಅಂತಲೇ ಗುರುತಿಸಲ್ಪಡುತ್ತಾರೆಯೇ ವಿನಃ not the other way around!

ಐದರಿಂದ ಹತ್ತನೇ ತರಗತಿ. ಫುಲ್ ಆರು ವರ್ಷ. ಅಷ್ಟೂ ವರ್ಷ ನಾವು ಮತ್ತು ಕೌಲಗಿ ಟೀಚರ್ ಒಂದೇ ಶಾಲೆಯಲ್ಲಿ ಇದ್ದರೂ ಅವರು ನಮಗೆ ಪಾಠ ಮಾಡಲಿಲ್ಲ. ಅವರು ಇಂಗ್ಲಿಷ್ ಪಾಠ ಮಾಡುತ್ತಿದ್ದರು. ಹೆಚ್ಚಾಗಿ B ವಿಭಾಗಕ್ಕೆ ಅವರೇ ಇರುತ್ತಿದ್ದರು. ನಮ್ಮದು ಮೊದಲಿಂದ A ವಿಭಾಗ. ಹಾಗಾಗಿ ಕೌಲಗಿ ಟೀಚರ್ ನಮಗೆ ಪಾಠ ಮಾಡಲಿಲ್ಲ. ಹಾಗೆ ನೋಡಿದರೆ ಅವರು ನಮ್ಮ ವರ್ಗಕ್ಕೆ absentee ಪಿರಿಯಡ್ಡುಗಳಿಗೆ ಬಂದಿದ್ದೂ ಬಹಳ ಕಮ್ಮಿಯೇ.

೧೯೮೩ ರಲ್ಲಿ ಕೌಲಗಿ ಟೀಚರ್ ಪತಿ ವಿಧಿವಶರಾದರು. ಅದು ನಮಗೆಲ್ಲ ದೊಡ್ಡ ಆಘಾತ. ಪತ್ನಿ ನಮ್ಮ ಶಿಕ್ಷಕಿ. ಅವರ ಮಕ್ಕಳಿಬ್ಬರು ನಮ್ಮ ಜೊತೆಯಲ್ಲಿ ಶಾಲೆಯಲ್ಲಿದ್ದಾರೆ. ಅಂತವರ ಪತಿ ಅಚಾನಕ್ ಆಗಿ ವಿಧಿವಶರಾಗಿಬಿಡುತ್ತಾರೆ ಅಂದರೆ ಚಿಣ್ಣ ವಯಸ್ಸಿನ ನಮಗೆಲ್ಲ ದೊಡ್ಡ ಶಾಕ್! ಕೌಲಗಿ ಟೀಚರ್ ಬ್ಲಾಗ್ ಓದಿದಾಗ ಹೆಚ್ಚಿನ ವಿವರ ತಿಳಿಯಿತು. ಅವರ ಪತಿಗೆ ಹೃದಯ ಸಂಬಂಧಿ ತೊಂದರೆಗಳು ಇದ್ದವಂತೆ. ಸಾಕಷ್ಟು ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೆ ದೇವರಾಟದ ಮುಂದೆ ಯಾರು ಏನು ಮಾಡಲಿಕ್ಕೆ ಬರುತ್ತದೆ.

ಮೂವತ್ತೈದು ವರ್ಷದ ಆಸುಪಾಸಿನಲ್ಲೇ ಪತಿಯನ್ನು ಕಳೆದುಕೊಂಡ ಕೌಲಗಿ ಟೀಚರ್ single-handedly ಸಂಸಾರ ನಡೆಸಿದರು. ಶಾಲೆಯಲ್ಲಿ ನೌಕರಿ ಅಂತ ಒಂದಿತ್ತು. ಅದೊಂದು ದೊಡ್ಡ ವರದಾನವಾಗಿತ್ತು. ಬಹಳ ಕಷ್ಟ ಪಟ್ಟು, ಅನೇಕ ತ್ಯಾಗಗಳನ್ನು ಮಾಡಿ ಜೀವನ ನಡೆಸಿದರು. ಸಂಸಾರವನ್ನು ಸಂಬಾಳಿಸಿದರು. ಮಕ್ಕಳನ್ನು ಬೆಳೆಸಿದರು. ಎಲ್ಲ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ, ಒಂದಕ್ಕಿಂತ ಒಂದು ಕಠಿಣ ಪರೀಕ್ಷೆಗಳಲ್ಲಿ ಪಾಸಾದರು. ಅದು ಅವರ ಹಿರಿಮೆ. ಗರಿಮೆ. ಆ ದೃಷ್ಟಿಯಿಂದ ಅವರೊಬ್ಬ ದೊಡ್ಡ ರೋಲ್ ಮಾಡೆಲ್. ಅವರ ಬ್ಲಾಗ್ ಓದಿದಾಗ ಅವರ ಜೀವನದ ಸವಾಲುಗಳ, ಕಷ್ಟ ಕಾರ್ಪಣ್ಯಗಳ ಮತ್ತು ಹೋರಾಟಗಳ ಒಂದು ಝಲಕ್ ನಿಮಗೆ ಸಿಗುತ್ತದೆ. ನಿಮಗೆ ಅವರ ಪರಿಚಯವಿಲ್ಲದಿದ್ದರೂ ಸರಿ, ನಿಮಗೆ ಅರಿವಿಲ್ಲದಂತೆ ನೀವೇ ಅಂದಿರುತ್ತೀರಿ - Hats off to you madam! You are simply great!

ಕೌಲಗಿ ಟೀಚರ್ ಮೊದಲು ಹೇಗಿದ್ದರೋ ಜಾಸ್ತಿ ನೆನಪಿಲ್ಲ. ಆದರೆ ಪತಿಯನ್ನು ಕಳೆದುಕೊಂಡ ಮೇಲೆ ಅವರಲ್ಲಿ ಒಂದು marked difference ಕಂಡುಬಂದಿದ್ದು ನಿಜ. ತುಂಬಾ emotional ಆಗುತ್ತಿದ್ದರು. ಪದೇ ಪದೇ ಭಾವೋದ್ವೇಗಕ್ಕೆ ಒಳಗಾಗುತ್ತಿದ್ದರು. ನಾವೇ ಅಂತಹ ಎರಡು ವಿಷಮ ಸಂದರ್ಭಗಳನ್ನು ಕಂಡು ಬೆಚ್ಚಿಬಿದ್ದಿದ್ದೇವೆ. 'ಟೀಚರ್ ಹೀಗ್ಯಾಕೆ? Why such an emotional outburst!?' ಎಂದು ಕೇಳಿಕೊಂಡಿದ್ದಿದೆ. ಪಾಪ! ಅವರ ಮನೋವೇದನೆಗಳ ಬಗ್ಗೆ, ತಳಮಳಗಳ ಬಗ್ಗೆ, ತಲ್ಲಣಗಳ ಬಗ್ಗೆ ಬೇರೆಯವರಿಗೆ ಹೇಗೆ ಗೊತ್ತಾಗಬೇಕು?

೧೯೮೭ - ೮೮ ರಲ್ಲಿ ಕಾಮತ್ ಟೀಚರ್ ಮೇಲೆ ವಿದ್ಯಾರ್ಥಿಯೊಬ್ಬ ದೌರ್ಜನ್ಯ ಮಾಡಿದಾಗ ತುಂಬಿದ ಪ್ರೇಯರ್ ಅಸೆಂಬ್ಲಿಯಲ್ಲಿಯೇ ಟೀಚರ್ ತೀವ್ರ ಭಾವೋದ್ವೇಗಕ್ಕೆ ಒಳಗಾಗಿದ್ದರು. ನಾವೆಲ್ಲಾ ಫುಲ್ ಥಂಡಾ. ತಮ್ಮ ಸಹೋದ್ಯೋಗಿಗೆ ಆದ ತೊಂದರೆ ಕೌಲಗಿ ಟೀಚರ್ ಅವರಿಗೆ ದೊಡ್ಡ ಮಟ್ಟದ ಆಘಾತವನ್ನುಂಟುಮಾಡಿತ್ತು. ಅದರ ಬಗ್ಗೆ ಬೇರೊಂದು ಬ್ಲಾಗ್ ಪೋಸ್ಟಿನಲ್ಲಿ ಬರೆದಿದ್ದೆ. ಆಸಕ್ತರು ಅಲ್ಲಿ ಓದಬಹುದು. ಲಿಂಕ್ ಇಲ್ಲಿದೆ. ಅಲ್ಲಿ ಕೌಲಗಿ ಟೀಚರ್ ಹೆಸರು ಹಾಕಿಲ್ಲ. ಅದು ಬೇರೆ ವಿಷಯಕ್ಕೆ ಸಂಬಂಧಪಟ್ಟ ಲೇಖನವಾಗಿದ್ದರಿಂದ ಅವಶ್ಯಕತೆ ಕಂಡುಬಂದಿರಲಿಲ್ಲ. (ಆ ಲೇಖನದಲ್ಲಿ ಈ ವಿಷಯ ಹುಡುಕುವುದು ಕಷ್ಟ ಅಂದುಕೊಂಡರೆ ಆ ಮಾಹಿತಿಯನ್ನು ಕೆಳಗೆ ಹಾಕಿದ್ದೇನೆ.)

***
ಕಾಮತ್ ಟೀಚರ್ ಘಟನೆ

ಮುಂದೆ ಸ್ವಲ್ಪ ದಿನಗಳಲ್ಲಿ ಒಂದು ವಿಚಿತ್ರ ಘಟನೆ ನಡೆದುಹೋಯಿತು. ನೆನಪು ಸ್ವಲ್ಪ ಮಸುಕಾಗಿದೆ. ಈ ಘಟನೆ ಒಂಬತ್ತನೆ ಕ್ಲಾಸಿನಲ್ಲಿದ್ದಾಗಲೇ ನಡೆಯಿತೋ ಅಥವಾ ಒಂಬತ್ತು ಮುಗಿದು ಹತ್ತನೆ ಕ್ಲಾಸಿಗೆ ಬಂದಾಗ ನಡೆಯಿತೋ ಸರಿ ನೆನಪಿಲ್ಲ.

ಒಂದು ದಿನ ಶಾಲೆ ಎಂದಿನಂತೆ ಆರಂಭವಾಗಿತ್ತು. ಪ್ರಾರ್ಥನೆ ಮುಗಿದಿತ್ತು. ಹೆಡ್ ಮಾಸ್ಟರ್, ಕೆಲವು ಬೇರೆ ಬೇರೆ ಶಿಕ್ಷಕರು ಏನೇನೋ ಸೂಚನೆ, ಸಲಹೆ ಇತ್ಯಾದಿಗಳನ್ನು ಮೈಕಿನಲ್ಲಿ ಹೇಳುತ್ತಿದ್ದರು. ಎಲ್ಲ ಎಂದಿನಂತೆ. ಆಗ ಸಡನ್ನಾಗಿ ಸ್ಟೇಜಿನ ಮೇಲೆ ವಿಚಿತ್ರವಾಗಿ ಕೂಗುತ್ತ, ಎತ್ತರ ಪತ್ತರ ಕೈಯಾಡಿಸುತ್ತ ಓಡಿಬಂದವರು ಒಬ್ಬ ಮಹಿಳಾ ಟೀಚರ್. ಸಡನ್ನಾಗಿ ಎಂಟ್ರಿ ಕೊಟ್ಟವರೇ ಒಂದು ದೊಡ್ಡ scene ಸೃಷ್ಟಿ ಮಾಡಿಬಿಟ್ಟರು. ನವರಸಗಳಿರುವ ಸನ್ನಿವೇಶ. ಎಲ್ಲರೂ ಫುಲ್ ಥಂಡಾ. ಆ ಮಹಿಳಾ ಟೀಚರ್ ಏನು ಹೇಳುತ್ತಿದ್ದಾರೆ, ಯಾರನ್ನು ಕುರಿತು ಹೇಳುತ್ತಿದ್ದಾರೆ, ಯಾಕೆ ಅಂತಹ ಭಾವಾವೇಶ, ಏನಾಗಿದೆ ಇವರಿಗೆ, ಅದೂ ಸುಮಾರು ಐನೂರು, ಆರನೂರು ವಿದ್ಯಾರ್ಥಿಗಳು, ಅರವತ್ತು ಎಪ್ಪತ್ತು ಶಿಕ್ಷಕರು ಎಲ್ಲ ನಿಂತಿರುವಾಗ ಏನಿದು ಇಂತಹ ವಿಚಿತ್ರ scene? ಅಂತ ಎಲ್ಲರಿಗೂ ಆಶ್ಚರ್ಯ.

'ಏನ್ರೀ ಸರ್!? ಹೀಂಗಾದ್ರ ಹ್ಯಾಂಗ್ರೀ? ಹ್ಯಾಂಗ ಜೀವನ ಮಾಡಬೇಕರೀ?' ಅಂತ ಏನೇನೋ ಅನ್ನುತ್ತ ಗೊಳೋ ಅಂತ ಅತ್ತುಬಿಟ್ಟರು. ಒಂದು ಕ್ಷಣ ಅಪ್ರತಿಭರಾದ ಹೆಡ್ ಮಾಸ್ಟರ್ ಸಾವರಿಸಿಕೊಂಡು, ಒಂದು ತರಹದ embarrassment ಫೀಲ್ ಮಾಡಿಕೊಂಡು, ಆ ಮೇಡಂ ಅವರನ್ನು ಸ್ವಂತ ಸಹೋದರಿಯಂತೆಯೇ ಲೈಟಾಗಿ ತಬ್ಬಿಕೊಂಡು ಸ್ಟೇಜ್ ಮೇಲೆಯೇ ಏನೋ ಒಂದು ತರಹದ ಸಮಾಧಾನ ಮಾಡಿದ್ದರು. ತುಂಬಾ uneasy ಅನ್ನಿಸಿತ್ತು ಹೆಡ್ ಮಾಸ್ಟರ್ ಅವರಿಗೆ. ಅಳುತ್ತ ಬಂದಿದ್ದ ಟೀಚರ್ ಅಳುತ್ತಲೇ, ಕನ್ನಡಕ ತೆಗೆದು ಕಣ್ಣೀರು ಒರೆಸಿಕೊಳ್ಳುತ್ತ, ಸ್ಟೇಜ್ ಬಿಟ್ಟು ಹೋದರು. ಹೆಡ್ ಮಾಸ್ಟರ್ ಕೋಣೆ ಸೇರಿಕೊಂಡರು. ಅಲ್ಲಿಗೆ ಆವತ್ತಿನ prayer assembly ಅನ್ನುವ ದಿನದ ರೂಟೀನ್ ಮುಗಿದಿತ್ತು. ನಮ್ಮ ನಮ್ಮ ಕ್ಲಾಸ್ ಕಡೆ ಹೊರಟೆವು. ಮಂಗೇಶಿ ಟೀಚರ್ ಆವತ್ತು ಶಾಲೆಗೆ ಬಂದಿರಲಿಲ್ಲ! ನಾವು ಅದನ್ನು ಗಮನಿಸಿರಲೂ ಇಲ್ಲ.

'ಏ, ಆ ಟೀಚರ್ ಹಾಂಗ್ಯಾಕ ಮಾಡಿದ್ರಲೇ? ಏನಾತು ಅವರಿಗೆ ಒಮ್ಮೆಲೇ? ಅದೂ ಮೈ ಮ್ಯಾಲೆ ದೆವ್ವ ಬಂದಾಂಗ ಮಾಡಿಬಿಟ್ಟರಲ್ಲಲ್ಲೇ? ಯಾರಿಗೆ ಏನಾತು ಅಂತ ಆ ಟೀಚರ್ ಆಪರಿ ಹೊಯ್ಕೊಂಡು, ಚೀರಾಡಿ, ಅತ್ತು, ಕರೆದು, ಕಣ್ಣಾಗ ನೀರು ತಂದುಕೊಂಡ್ರು?? ಯಾಕ ಚೀರಾಡಿದರು? ಏನಾತು? ಏನು ಲಫಡಾ ಆಗ್ಯದ್ರಲೇ??' ಅಂತ ಕೇಳಿದರೆ ಒಂದು ದೊಡ್ಡ ಲಫಡಾ ಆಗಿದ್ದರ ಬಗ್ಗೆ ಬ್ರೇಕಿಂಗ್ ನ್ಯೂಸ್ ಬರುತ್ತಿತ್ತು.

***

ಮತ್ತೊಂದು ಘಟನೆ ೧೯೮೬ ರಲ್ಲಿ ಆಗಿದ್ದು. ಎಂಟನೇ ಕ್ಲಾಸಿನಲ್ಲಿ ಇದ್ದೆವು. ಆಗ ನಮ್ಮ ಶಾಲೆಯವರು ಯಾವುದೋ ಕಾರಣಕ್ಕೆ ಪಾಲಕರಿಂದ ವಂತಿಗೆ ಸಂಗ್ರಹಿಸುತ್ತಿದ್ದರು. ಶಾಲಾ ಅಭಿವೃದ್ಧಿಗೆ ವಂತಿಗೆ ಎಂದು ನೆನಪು. ಶಿಕ್ಷಕ ಶಿಕ್ಷಕಿಯರನ್ನು ಆರೇಳು ಜನರ ಗುಂಪುಗಳನ್ನಾಗಿ ಮಾಡಿ ಒಂದೊಂದು ಏರಿಯಾಗಳಿಗೆ ಕಳಿಸುತ್ತಿದ್ದರು. ಅವರು ಆ ಏರಿಯಾದಲ್ಲಿರುವ ಪಾಲಕರ ಮನೆಗಳಿಗೆ ಭೇಟಿ ಕೊಟ್ಟು ವಂತಿಗೆ ಸಂಗ್ರಹಿಸಬೇಕು.

ಕೌಲಗಿ ಟೀಚರ್ ಸಹ ಅಂತಹ ಒಂದು ಗುಂಪಿನಲ್ಲಿ ಇದ್ದರು. ಒಂದು ದಿನ ನಮ್ಮ ಕ್ಲಾಸಿಗೆ ಬಂದರು ಟೀಚರ್. ತುಂಬಾ ಕೋಪದಲ್ಲಿದ್ದರು. ಯಾವುದೋ ಪಿರಿಯಡ್ ಮುಗಿದಿತ್ತು. ಮುಂದಿನ ಶಿಕ್ಷಕರು ಬಂದಿರಲಿಲ್ಲ. ದುಮುದುಮುಗುಡುತ್ತ ಬಂದ ಕೌಲಗಿ ಟೀಚರ್ ಒಬ್ಬ ವಿದ್ಯಾರ್ಥಿಯನ್ನು ಎಬ್ಬಿಸಿದರು. ಫುಲ್ ಆವಾಜ್ ಹಾಕಿಬಿಟ್ಟರು...

'ಏ, ಏನು ಮಂದಿ ಇದ್ದೀರಿ ನೀವು? ಮನಿಗೆ ಬಂದ್ರ ಒಳಗ ಕರಿಬೇಕು ಅಂತ ಬುದ್ಧಿಯಿಲ್ಲ. ಹಾಂ?? ಸಂಸ್ಕಾರ ಇಲ್ಲ. ಹಾಂ? ಯಾರವಾ ನಿಮ್ಮ ಅಣ್ಣ? ಅವನೂ ಇದೇ ಸಾಲಿ ಸ್ಟೂಡೆಂಟ್ ಹೌದಿಲ್ಲೋ? ನಾವು ಕೆಳಗ ನಿಂತು ಮ್ಯಾಲೆ ನೋಡ್ಲಿಕತ್ರ ಹಾಂಗೇ ನೋಡಿಕೋತ್ತ ನಿಂತಿದ್ದ. ಯಾರೇ ಇರಲಿ ಒಳಗ ಬರ್ರಿ ಅಂತ ಕರಿಬೇಕು ಅನ್ನೋ  ಬುದ್ಧಿಯಿಲ್ಲ? ಸಂಸ್ಕಾರ ಇಲ್ಲಾ? ಏನು ಮಂದೀನೋ ನೀವು?? ಒಂದು ನೆನಪ ಇಡು. ನಾವೇನೂ ಭಿಕ್ಷಾ ಕೇಳಲಿಕ್ಕೆ ಬಂದಿದ್ದಿಲ್ಲ. ಸಾಲಿಯಿಂದ ಕಳಿಸಿದ್ದರು ಅಂತ ಬಂದಿದ್ದಿವಿ. ವಂತಿಗೆ ಕೊಡದಿದ್ದರೂ ಚಿಂತಿರಲಿಲ್ಲ. ಮನಿ ಒಳಗ ಕರೆಯೂವಷ್ಟು ಸಂಸ್ಕಾರ ಇಲ್ಲ ಅಂದ್ರ ಹ್ಯಾಂಗ?? ಮನಿ ಮುಂದ ಬಂದವರನ್ನ ಮೊದಲು ಒಳಗ ಕರೆದು ಕೂಡಿಸೋದನ್ನ ಕಲೀರಿ. ಉಳಿದಿದ್ದು ಮುಂದಿನ ಮಾತು!' ಎಂದು ಅಬ್ಬರಿಸಿಬಿಟ್ಟರು.

ಆವಾಜ್ ಹಾಕಿಸಿಕೊಂಡ ನಮ್ಮ ಸಹಪಾಠಿಗೆ ಮೊದಮೊದಲು ಏನೂ ತಿಳಿದೇ ಇಲ್ಲ. ಬೆಬ್ಬೆ ಬೆಬ್ಬೆ ಅಂದಿದ್ದಾನೆ. ತೊದಲಿದ್ದಾನೆ. 'ನೀ ಬಾಯ್ಮುಚ್ಚು!!' ಎಂದು ಅವನನ್ನು ಗದರಿಸಿ ಮತ್ತೂ ಒಂದಿಷ್ಟು ಬೈದಿದ್ದಾರೆ.

ಆಮೇಲೆ ಫುಲ್ ವಿವರ ತಿಳಿದಿದೆ. ಏನಾಗಿತ್ತು ಅಂದರೆ...ವಂತಿಗೆ ಎತ್ತಲು ಇವರ ತಂಡ ಅವನ ಮನೆಗೆ ಹೋಗಿದೆ. ಮಹಡಿ ಮೇಲಿರುವ ಮನೆ. ಇವರು ಮಹಡಿ ಹತ್ತಿಲ್ಲ. ಕೆಳಗೇ ನಿಂತು ಮೇಲೆ ನೋಡುತ್ತಾ ನಿಂತಿದ್ದಾರೆ. ನಮ್ಮ ಸಹಪಾಠಿಯ ಅಣ್ಣ ಮೇಲಿಂದ ನೋಡಿದ್ದಾನೆ. ಅವನಿಗೆ ಗೊತ್ತಾಗಲಿಲ್ಲವೋ ಅಥವಾ ಬೇರೆಯವರ ಮನೆಗೆ ಬಂದಿರಬೇಕು ಅಂದುಕೊಂಡನೋ ಗೊತ್ತಿಲ್ಲ. ಒಟ್ಟಿನಲ್ಲಿ ಇವರನ್ನು ಮೇಲೆ ಬರುವಂತೆ ಆಹ್ವಾನಿಸಿಲ್ಲ. ಕೆಳಗೆ ಬಂದು ಮೇಲೇರುವ ಬಾಗಿಲು ತೆರೆದಿಲ್ಲ. ಅವನೇ ಬಂದು ಕರೆಯಲಿ ಅಂತನೋ ಏನೋ ಗೊತ್ತಿಲ್ಲ. ಇವರೂ ಮೇಲೆ ಹೋಗಿಲ್ಲ. ಬೆಲ್ ಒತ್ತಿಲ್ಲ. ಇಷ್ಟಾದ ಮೇಲೆ ಇದಕ್ಕೆಲ್ಲ ತಿಲಕವಿಡುವಂತೆ ಆ ಪುಣ್ಯಾತ್ಮ, ಅಂದರೆ ನಮ್ಮ ಸಹಪಾಠಿಯ ಅಣ್ಣ, ಕೆಳಗಿಳಿದು ಬಂದು ಇವರ ಮುಂದೆಯೇ, ಏನೇನೂ ಸಂಬಂಧವಿಲ್ಲದಂತೆ, ತನ್ನ ಸೈಕಲ್ ಹತ್ತಿ ಪೋಯಾಚ್ ಆಗಿಬಿಟ್ಟಿದ್ದಾನೆ. ಅವನು ಅದೆಷ್ಟು ವರ್ಷಗಳ ಹಿಂದೆ ಆ ಶಾಲೆಯ ವಿದ್ಯಾರ್ಥಿಯಾಗಿದ್ದನೋ, ಅವನಿಗೆ ಇವರ ಪರಿಚಯ ಸಿಕ್ಕಿತೋ ಇಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ಅವನ ಮನೆಯ ಮುಂದೆ ನಿಂತ ಶಿಕ್ಷಕ ಶಿಕ್ಷಕಿಯರ ತಂಡ ಮಂಗ್ಯಾ ಆಗಿ ಮರಳಿ ಬಂದಿದೆ. ಅದೇ ಮರುದಿವಸ ದೊಡ್ಡ ಪ್ರಮಾಣದ ಆಕ್ರೋಶವಾಗಿ ಸ್ಪೋಟಗೊಂಡಿದೆ.

ಕೌಲಗಿ ಟೀಚರ್ ಫುಲ್ ಅಬ್ಬರಿಸುವ ಮೂಡಿನಲ್ಲಿ ಇದ್ದರು. ಹಾಗಾಗಿ ಮಾತು ಮುಂದುವರೆಯಿತು.

'ನಾವು ನಿನ್ನೆ, ಇಲ್ಲಿ ಇದ್ದಾನ ನೋಡು, ಇದೇ ರಮೇಶ ದೇಸಾಯಿ ಮನಿಗೆ ಕೂಡ ಹೋಗಿದ್ದಿವಿ. ಅಲ್ಲಿ ಹೋದಾಗ ಗೊತ್ತಾತು ಬೇರೆ ಟೀಚರ್ಸ್ ಆಗಲೇ ಬಂದು ರೊಕ್ಕ ತಗೊಂಡು ಹೋಗ್ಯಾರ ಅಂತ. ನಮಗ ಭಾಳ ಕೆಟ್ಟ ಅನ್ನಿಸ್ತು. ವಂತಿಗೆ ಕೇಳಲಿಕ್ಕೆ ಬಂದೆವೋ ಅಥವಾ ಡಕಾಯಿತಿ ಮಾಡಲಿಕ್ಕೆ ಬಂದೆವೋ ಅನ್ನಿಸಿಬಿಡ್ತು. ಆದ್ರೂ ರಮೇಶ್ ದೇಸಾಯಿ ಅವರ ಅಪ್ಪ ಅವ್ವ ನಮ್ಮನ್ನೆಲ್ಲಾ ಅದೆಷ್ಟು ಪ್ರೀತಿಯಿಂದ ಗೌರವದಿಂದ ಒಳಗ ಕರೆದು, ಕೂಡಿಸಿ, ಸತ್ಕಾರ ಮಾಡಿ, ಮತ್ತೊಮ್ಮೆ ವಂತಿಗೆ ಕೊಟ್ಟು ಕಳಿಸಿದರು. ಅಂತಹ ಮಂದಿ ಎಲ್ಲೇ, ಮನಿಗೆ ಬಂದ್ರ ಬಾಗಿಲಾ ತೆಗೆಯದ ನೀವು ಎಲ್ಲೇ!? ಥೂ ನಿಮ್ಮ!!'

ಒಂದು ಕಡೆ ಫುಲ್ ಸತ್ಕಾರ. ಇನ್ನೊಂದು ಕಡೆ ಫುಲ್ ತಿರಸ್ಕಾರ. ಒಟ್ಟಿನಲ್ಲಿ ಟೀಚರ್ ಮಂಡೆಗೆ ಸಾಲಿಡ್ ಮೆಣಸ್ಖಾರ. ಹಾಗಾಗಿ ತಲೆ ಫುಲ್ ಹಾಟ್. ಫುಲ್ ಗರಮ್. ಹಾಗಾಗಿ ನಮ್ಮ ಕ್ಲಾಸಿಗೆ ಬಂದು ದೊಡ್ಡ ಪ್ರಮಾಣದ ಒದರಾಟ, ಚೀರಾಟ! ಭೀಕರ ಆವಾಜ್!

ಸದಾ ಅಂತರ್ಮುಖಿಯಾಗಿರುತ್ತಿದ್ದ ಶಾಂತ ಸ್ವಭಾವದ ಕೌಲಗಿ ಟೀಚರ್ ಅವರ ರೌದ್ರಾವತಾರ ನೋಡಿದ್ದು ಅದೇ ಮೊದಲು. ಅದೇ ಕೊನೆ.

ಮೇಲೆ ಹೇಳಿದ ರಮೇಶ ದೇಸಾಯಿ ಉರ್ಫ್ ಎಲ್ಲರ ಪ್ರೀತಿಯ "ನವಿಲ ಢಬ್ಬ" ಎಲ್ಲಿ ಹೋದನೋ ಗೊತ್ತಿಲ್ಲ. ೧೯೯೦ ರ ದಶಕದಲ್ಲಿ ಅವನು ಹುಬ್ಬಳ್ಳಿಯಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದಾಗ ಭೇಟಿಯಾಗಿದ್ದ. ನಂತರ ಅವರ ಕುಟುಂಬದಲ್ಲಿ ಕೆಲವು ದುರಂತಗಳಾದವು ಎಂದು ಕೇಳಿದೆ. ನಮ್ಮ ಪ್ರೀತಿಯ "ನವಿಲ ಢಬ್ಬ" ಅವುಗಳಿಂದ ಆಘಾತಗೊಂಡನೇನೋ ಗೊತ್ತಿಲ್ಲ. ಈಗ ರಾಯಚೂರ ಕಡೆ ಎಲ್ಲೋ ಏನೋ ವ್ಯಾಪಾರ ಮಾಡಿಕೊಂಡಿದ್ದಾನೆ ಅಂತ ಕೇಳಿದೆ. ಕೌಲಗಿ ಟೀಚರ್ ಮತ್ತು ಕಂಪನಿಗೆ ಡಬಲ್ ಸತ್ಕಾರ ಸನ್ಮಾನ ಮಾಡಿದ ಪುಣ್ಯ ನಮ್ಮ ಮಿತ್ರ ನವಿಲ ಢಬ್ಬನಿಗೆ ಸಿಗಲಿ. ದೇವರು ಅವನಿಗೆ ಒಳ್ಳೇದು ಮಾಡಲಿ ಎಂಬುದೇ ನಮ್ಮ ಆಶಯ. ಕೌಲಗಿ ಟೀಚರ್ ಆಶೀರ್ವಾದವಂತೂ ಇದ್ದೇ ಇರುತ್ತದೆ. ನೀವು ಕೇಳಿ ಅಥವಾ ಬಿಡಿ. ನಂಬಿ ಅಥವಾ ಬಿಡಿ. ನಿಮಗೆ ಪಾಠ ಮಾಡಿದವರ, ಗುರುಹಿರಿಯರ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆ. ನಮ್ಮೆಲ್ಲರ  ತಪ್ಪುಒಪ್ಪುಗಳನ್ನು ಮೀರಿದ್ದು ಗುರು ಕಾರುಣ್ಯ. ನಾನು ತುಂಬಾ ತಡವಾಗಿ ಅರ್ಥಮಾಡಿಕೊಂಡ ಸಂಗತಿಗಳಲ್ಲಿ ಗುರು ಕಾರುಣ್ಯವೂ ಒಂದು.

 ( "ನವಿಲ ಢಬ್ಬ" ಅನ್ನುವ ಅನ್ವರ್ಥಕನಾಮದಲ್ಲಿ ಹೆಚ್ಚಿನ ವಿಶೇಷವೇನೂ ಇಲ್ಲ. ಕೊಂಚ ಮೈಕೈ ತುಂಬಿಕೊಂಡಿದ್ದ. ಹಾಗಾಗಿ ಢಬ್ಬ. ತಲೆ ಮೇಲೆ ಹಿಂದೆ ಸುಳಿಯಲ್ಲಿ ದಟ್ಟನೆಯ ಕೂದಲಿನ ಗೊಂಚಲು ನವಿಲಿನ ತಲೆ ಮೇಲೆ ಇರುವ ಸ್ಪೆಷಲ್ ಫಿಟ್ಟಿಂಗನ್ನು ನೆನಪಿಸುತ್ತಿತ್ತು. ಹಾಗಾಗಿ  "ನವಿಲ ಢಬ್ಬ". ಚಿತ್ರವಿಚಿತ್ರ ನಾಮಕರಣ ಮಾಡುವುದರಲ್ಲಿ ನಮ್ಮ ಜನ ಎತ್ತಿದ ಕೈ!)

ಮುಂದೆ ೧೯೮೬-೮೭ ರ ಸಮಯದಲ್ಲಿ ನಾವು ಒಂಬತ್ತು ಮತ್ತು ಹತ್ತನೆಯ ಕ್ಲಾಸ್. ಆಗಲೂ ಟೀಚರ್ ನಮಗೇನೂ ಪಾಠ ಮಾಡುತ್ತಿರಲಿಲ್ಲ. ಆದರೆ ಅಚಾನಕ್ ಆಗಿ ನನ್ನ ನಮಸ್ಕಾರಕ್ಕೆ ಪ್ರತಿ ನಮಸ್ಕಾರ ಹೇಳುವುದನ್ನು ನಿಲ್ಲಿಸಿದರು. ವಂದನೆಗೆ ಪ್ರತಿವಂದನೆ ದೂರದ ಮಾತು. ವಂದನೆಯನ್ನು ಸ್ವೀಕರಿಸಿದ ಬಗ್ಗೆ acknowledgement ಕೂಡ ಇಲ್ಲ. ಯಾವಾಗಲೋ ಒಮ್ಮೆ ಪ್ರತಿ ನಮಸ್ಕಾರ ಹೇಳಲಿಲ್ಲ ಅಂದರೆ ಮಾತು ಬೇರೆ. ಮೊದಲೇ ಶಿಕ್ಷಕರು. ಎಲ್ಲರೂ ಅವರಿಗೆ ನಮಸ್ಕಾರ ಹೇಳುವವರೇ. ಒಮ್ಮೊಮ್ಮೆ ಯಾವುದೋ ಪೊರಪಾಟಿನಲ್ಲಿ ಪ್ರತಿ ನಮಸ್ಕಾರ ಹೇಳುವುದಕ್ಕೆ ಆಗಿರಲಿಕ್ಕೆ ಇಲ್ಲ ಅಂದುಕೊಳ್ಳಬಹುದು. ಆದರೆ consistent ಆಗಿ ನಮಸ್ಕಾರಕ್ಕೆ ಪ್ರತಿ ನಮಸ್ಕಾರ ಹೇಳುವುದಿರಲಿ ದುರ್ದಾನ ತೆಗೆದುಕೊಂಡಂತೆ ಕೆಟ್ಟ ಮುಖ ಮಾಡಿಕೊಂಡು ಹೋಗುವುದಿದೆಯೆಲ್ಲ that was very obvious. ಅವರು ನಮ್ಮ ನಮಸ್ಕಾರಕ್ಕೆ ಪ್ರತಿ ನಮಸ್ಕಾರ ಹೇಳಲಿಲ್ಲ ಅಂದ ಮಾತ್ರಕ್ಕೆ ನಾವೇನೂ ನಮಸ್ಕಾರ ಹಾಕುವುದನ್ನು ಬಿಡಲಿಲ್ಲ. 'ನಮಸ್ಕಾರ ರೀ ಟೀಚರ್' ಎಂದು ಪೂರ್ತಿ ನಮಸ್ಕಾರ ಹಾಕಿದೆ. ಹಾಪ್ ನಮಸ್ಕಾರದ ಬದಲಿ ಯಾವಾಗಲೂ ಫುಲ್ ನಮಸ್ಕಾರ.

ಆಗ ನನಗೆ ಉದ್ಧಟ, ದುರಹಂಕಾರಿ, ತಿರಸಟ್ಟ, ವಡ್ಡ, ಜಗಳಗಂಟ ಇತ್ಯಾದಿ ಬಿರುದುಗಳು ಇದ್ದವು. ಬಿರುದಿನ ಜೊತೆ ಒಂದಿಷ್ಟು ಬಾವಲಿಗಳೂ ಕೂಡ. ಅದೆಲ್ಲ ಏನೇ ಇದ್ದರೂ ನನಗೆ ಶಿಕ್ಷಕರ ಬಗ್ಗೆ ಗೌರವ, ಪ್ರೀತಿ, ಅಭಿಮಾನ ಇತ್ತು. ಅವರಿಗೆ ತಿರುಗಿ ಮಾತಾಡಿದ ಅನ್ನುವ ಕಾರಣಕ್ಕೆ ಅವರ ಮೇಲೆ ನನಗೆ ಗೌರವವಿಲ್ಲ, ಪ್ರೀತಿಯಿಲ್ಲ, ಆದರವಿಲ್ಲ ಎಂದು ಯಾರೂ ಭಾವಿಸಿರಲಿಲ್ಲ. ಬಯ್ಯುವಾಗ ನನಗೆ ಅದೆಷ್ಟೇ ಬೈದರೂ  ನನ್ನ ಪ್ರಾಮಾಣಿಕ ನಮಸ್ಕಾರಕ್ಕೆ ಪ್ರತಿ ನಮಸ್ಕಾರ ಎಲ್ಲರೂ ಹಾಕುತ್ತಿದ್ದರು. ಪೂರ್ತಿ ನಮಸ್ಕಾರ ಹಾಕಿ ಹಾಕಿ ಸುಸ್ತಾಗಿದ್ದಾರೆ ಹಾಪ್ ನಮಸ್ಕಾರವನ್ನಾದರೂ ಹಾಕಿ ಕಳಿಸುತ್ತಿದ್ದರು.

ನಮಸ್ಕಾರದ ವಿಷಯಕ್ಕೆ ಬಂದರೆ ನಾನು ಧಾರಾಳಿ ಮತ್ತು ಶಿಸ್ತಿನ ಮನುಷ್ಯ. ಹಿರಿಯರಿಗೆ ನಮಸ್ಕಾರ ಹಾಕುವುದನ್ನು ತಪ್ಪಿಸಿದ್ದೇ ಇಲ್ಲ. ಎಲ್ಲಿಯವರೆಗೆ ಅಂದರೆ ಥೇಟ್ ಮರಳಿಹಳ್ಳಿ ಟೀಚರ್ ಅವರಂತೆಯೇ ಇದ್ದ ಅವರ ತಂಗಿಗೂ ನಮಸ್ಕಾರ ಹಾಕಿದ ಭೂಪ ನಾನು. ಆಕೆ ನಾಚಿಕೊಂಡು ಮಳ್ಳು ನಗೆ ಬೀರುತ್ತಾ ಹೋಗಿದ್ದಳು. ನಮಸ್ಕಾರ ಹಾಕಿದರೆ ಟೀಚರ್ ಯಾಕೆ ಹೀಗೆ ನಾಚಿಕೊಂಡರು ಅಂತ ವಿಚಾರ ಮಾಡುತ್ತಾ ಶಾಲೆಗೆ ಬಂದರೆ ಅಲ್ಲಿ ಒರಿಜಿನಲ್ ಮರಳಿಹಳ್ಳಿ ಟೀಚರ್ ಕಾಣಬೇಕೇ!? ಆವಾಗ ಗೊತ್ತಾಯಿತು ಆದ ಲಫಡಾ. ನೋಡಲಿಕ್ಕೆ ಇಬ್ಬರೂ ಒಂದೇ ತರಹ ಇದ್ದರು. ಹಾಪ್ ಸಾರಿಯಲ್ಲಿ (ಪರಕಾರ ಪೋಲ್ಕಾ ದಿರುಸಿನಲ್ಲಿ) ಕಂಡಾಕೆ ಟೀಚರ್ ಆಗಿರಲಿಕ್ಕಿಲ್ಲ ಎಂದು ನನಗೆ ತಿಳಿಯಬೇಕಿತ್ತು. ಆದರೂ ಯಾಕೆ ರಿಸ್ಕ್ ಎಂದು ಆಕೆಗೂ ಹಾಪ್ ನಮಸ್ಕಾರ ಹಾಕಿಯೇಬಿಟ್ಟಿದ್ದೆ. ಮರಳಿಹಳ್ಳಿ ಟೀಚರ್ ತಂಗಿಗೆ ಹಾಪ್ ನಮಸ್ಕಾರ ಹಾಕಿದ್ದನ್ನು ಹಿಂದೊಮ್ಮೆ ವಿವರವಾಗಿ ಬರೆದಿದ್ದೆ. ಲಿಂಕ್ ಇಲ್ಲಿದೆ. ಆಸಕ್ತರು ಓದಬಹುದು. 

ಬಿರುದು ಬಾವಲಿಗಳಿಂದ ಭೂಷಿತನಾಗಿ ಸಕಲ ಸದ್ಗುಣಸಂಪನ್ನನಾಗಿದ್ದ ನನ್ನ "ಸದ್ಗುಣ" ವಿಶೇಷಗಳು ಏನೇ ಇದ್ದರೂ ಕೌಲಗಿ ಟೀಚರ್ ಜೊತೆ ವಾದ ವಿವಾದ ಮಾಡಿದ್ದು, ಅವರಿಗೆ ತಿರಸಟ್ಟ ಉತ್ತರ ಕೊಟ್ಟಿದ್ದು ಅಥವಾ ಜಗಳ ಮಾಡಿದ್ದು ಅಥವಾ ಅವರು absentee ಪಿರಿಯಡ್ಡಿಗೆ ಬಂದಾಗ ಗದ್ದಲ ಹಾಕಿದ ಛಾನ್ಸೇ ಇಲ್ಲ. ಅಂತಹ ಲಫಡಾ ಆದ ಛಾನ್ಸೇ ಇಲ್ಲ. ನಾಸ್ತಿ. ನಾಸ್ತಿ. ಹಾಗಿರುವಾಗ ಅವರೇಕೆ ನನ್ನ ನಮಸ್ಕಾರಗಳಿಗೆ ಪ್ರತಿ ನಮಸ್ಕಾರ ಹೇಳಲಿಲ್ಲ? ನನಗೆ ಗೊತ್ತಿಲ್ಲ. ಈಗ ಗೊತ್ತಾಗಿ ಆಗಬೇಕಾಗಿದ್ದು ಏನೂ ಇಲ್ಲ. ಹಾಗಾಗಿ ಅದು ಹಾಗೇ ಇರಲಿ. ಅದರ ಬಗ್ಗೆ ಊಹಾಪೋಹ speculate ಮಾಡುವ ಇರಾದೆ ಇಲ್ಲ. No point.

ಕೌಲಗಿ ಟೀಚರ್ ಜೊತೆ ಏನೂ ಲಫಡಾ ಆಗದೇ ಇದ್ದರೂ ಬೇರೆ ಬೇರೆ ಟೀಚರ್ ಮಾಸ್ತರ್ ಜೊತೆ ವಾದ, ವಿವಾದ, ವಿತಂಡವಾದ, ಅವಿಧೇಯ ದುರ್ವರ್ತನೆ, ತಿರಸಟ್ಟು ಮಾತು, ಕುಹಕ, ಇತ್ಯಾದಿ ಇತ್ತು. ಅವರೂ ಸಾಕಷ್ಟು ಬಯ್ಯುತ್ತಿದ್ದರು. ನಾವೂ ವಾದವಿವಾದ ಮಾಡುತ್ತಿದ್ದೆವು. ಅಂತಹ ಅನೇಕಾನೇಕ ದುರ್ವರ್ತನೆಗಳ ನೇರ ಸಂತ್ರಸ್ತರಾದ ಶಿಕ್ಷಕ ಶಿಕ್ಷಿಕಿಯರೇ ನಮ್ಮನ್ನು ಭರಿಸಿಕೊಂಡು, ನಮ್ಮ ತಪ್ಪು ಒಪ್ಪುಗಳನ್ನೆಲ್ಲವನ್ನೂ ಹೊಟ್ಟೆಗೆ ಹಾಕಿಕೊಂಡು, ಅದರ ಪರಿಣಾಮವಾಗಿ ಹೊಟ್ಟೆ ವಿಪರೀತವಾಗಿ ಕೆಟ್ಟರೂ, ನಮ್ಮ ಮೇಲಿನ ಪ್ರೀತಿಯಿಂದ ನಮಸ್ಕಾರಕ್ಕೆ ಪ್ರತಿ ನಮಸ್ಕಾರ ಹಾಕಿದ್ದಾರೆ. ಪೊರೆದಿದ್ದಾರೆ. ಕಾಪಾಡಿದ್ದಾರೆ. ಅವರ ಆಶೀರ್ವಾದ ನಮ್ಮನ್ನು ಸದಾ ಕಾಯುತ್ತಲೇ ಇರುತ್ತದೆ.

ಅವರ ಜೊತೆ ನೇರಾನೇರ ದುರ್ವರ್ತನೆ ತೋರಿಸದಿದ್ದರೂ ಅವರ ಸಹೋದ್ಯೋಗಿ ಶಿಕ್ಷಕರು ನಮ್ಮ ಬಗ್ಗೆ ಟೀಕೆಟಿಪ್ಪಣೆ ಮಾಡಿದ್ದನ್ನು ಕೇಳಿದ ಕೌಲಗಿ ಟೀಚರ್ ನಮ್ಮ ಮೇಲೆ ಮುನಿಸಿಕೊಂಡಿದ್ದರೇ? Again mere speculation. Whatever it may be, it doesn't matter now.

ಇರಲಿ. ಸುಮಾರು ಒಂದೂವರೆ ಎರಡು ವರ್ಷಗಳ ಕಾಲ ಅವರು ನನ್ನ ನಮಸ್ಕಾರಕ್ಕೆ ವಾಪಸ್ ನಮಸ್ಕಾರ ಹಾಕಿದ ನೆನಪಿಲ್ಲ. ಹಾಗಂತ ನಾನೂ ಬಿಡಲಿಲ್ಲ. ಕಂಡಾಗೆಲ್ಲ ಒಂದು ಸಿಂಪಲ್ ಫುಲ್ ನಮಸ್ಕಾರ. ಸೈಕಲ್ ಮೇಲಿದ್ದರೆ ಹಾಪ್ ನಮಸ್ಕಾರ.

SSLC ಅಂತಿಮ ಪರೀಕ್ಷೆಯಲ್ಲಿ ಯಾವುದೋ ಒಂದು ವಿಷಯಕ್ಕೆ ಕೊಠಡಿ ಮೇಲ್ವಿಚಾರಕರಾಗಿ ಬಂದಿದ್ದರು. ಪರೀಕ್ಷೆ ಮುಗಿಯುವ ಹೊತ್ತು ಬಂದಿತ್ತು. ಪರೀಕ್ಷೆಗೆ ಮೊದಲು ನಾನು ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದೆ. ಪಥ್ಯದ ಆಹಾರ ತೆಗೆದುಕೊಂಡು ತಂದೆಯವರು ಬಂದು ಹೊರಗಡೆ ಕಾಯುತ್ತಿದ್ದರು. 'ಹೆಗಡೆ ಸರ್, ನಿಮ್ಮ ತಂದೆಯವರು, ಬಂದಂಗ ಕಾಣ್ತದ ನೋಡು' ಎಂದು ಸಹಜವಾಗಿ ಹೇಳಿದ್ದರು. ಆಗ ಮಾತ್ರ ಅವರ ಧ್ವನಿಯಲ್ಲಿ ತುಂಬು ವಾತ್ಸಲ್ಯವಿತ್ತು. ಅದನ್ನು ಗಮನಿಸದಷ್ಟು ದಡ್ಡ ನಾನಾಗಿರಲಿಲ್ಲ. ಎರಡು ವರ್ಷ ಪ್ರತಿ ನಮಸ್ಕಾರ ಹಾಕದೇ ignore ಮಾಡಿದ್ದ ಪೂಜ್ಯ ಟೀಚರ್ ಇವತ್ತಾದರೂ ಸಹಜವಾಗಿ ಒಂದು ಮಾತಾಡಿದರಲ್ಲ ಎನ್ನುವ ಧನ್ಯತೆಯ ಭಾವ. ಅದಕ್ಕೆ ಕಾರಣ ಅಂದು ಬಂದಿದ್ದ ನಮ್ಮ ತಂದೆಯವರೇ? ಗೊತ್ತಿಲ್ಲ. ಇರಬಹುದು. ನಮ್ಮ ತಂದೆಯವರು ಬಿಡಿ. ಅವರು ಎಲ್ಲರಿಂದಲೂ ಸನ್ಮಾನಿಸಲ್ಪಟ್ಟವರು. ಸಜ್ಜನಃ  ಸರ್ವತ್ರ ಪೂಜ್ಯತೇ ಅಂತ ಏನೋ ಮಾತಿದೆಯೆಲ್ಲ. ನಮ್ಮಂತಹ ದುರ್ಜನರನ್ನು ನೋಡಿದರೆ ಮಾತ್ರ ಸರ್ವರಿಗೂ ಎಲ್ಲೆಲ್ಲೋ ಏನೇನೋ ವತ್ರ ವತ್ರವಾಗಿ ಬರುತ್ತದೆಯೋ ಏನೋ. ವತ್ರ ವತ್ರ ಬರುತ್ತದೆ. ಬರೆದ ನಂತರ ನನಗೇ ತುಂಬಾ ನಗು ಬಂತು. Pardon my indulgence.

ಒಂಬತ್ತನೇ ಕ್ಲಾಸಿನಲ್ಲಿ ಶುರುವಾದ ನಮಸ್ಕಾರದ ಲಫಡಾ ಹತ್ತನೇ ಕ್ಲಾಸಿನಲ್ಲೂ ಮುಂದುವರೆಯಿತೇ? ಸರಿಯಾಗಿ ನೆನಪಿಲ್ಲ. ಆದರೆ ನಮಸ್ಕಾರದ ವಿಷಯವಾಗಿ ನಮ್ಮ ಶಾಲೆಯ ಫೇಮಸ್ ಎಮ್ಮೆ ಉರ್ಫ್ ಪೂಜ್ಯ ಎಂ. ಎ. ಸಿದ್ಧಾಂತಿ ಸರ್ ಒಂದು ಮಾತು ಹೇಳಿದ್ದರು. ಹತ್ತನೇ ಕ್ಲಾಸಿನಲ್ಲಿ ಇಂಗ್ಲೀಷ್ ಪಾಠ ಮಾಡುತ್ತಿದ್ದಾಗ ಎಮ್ಮೆ ಸರ್ ಹೇಳಿದ್ದು ಇನ್ನೂ ನೆನಪಿದೆ.

ಎಮ್ಮೆ ಸರ್ ಅಂದರೆ ಮುಗಿಯಿತು. ಭಯಂಕರ ಖಡಕ್ ಮಾಸ್ತರರು. ಎನ್ಕೌಂಟರ್ ಸ್ಪೆಷಲಿಸ್ಟ್ ಮಾಸ್ತರರು. ಏಕ್ ಮಾರ್ ದೋ ತುಕಡಾ. ಅದು ಅವರ ಮಾತಿನ ಶೈಲಿ.

ಅವರು ಕ್ಲಾಸಿನಲ್ಲಿ syllabus ಪಾಠಕ್ಕಿಂತ ಜೀವನಪಾಠ ಮಾಡಿದ್ದೇ ಜಾಸ್ತಿ.

ಎಮ್ಮೆ ಸರ್ ಉವಾಚ....

ಮರ್ಯಾದೆ, ಗೌರವ ಎಲ್ಲ ಕೊಟ್ಟು ಪಡೆಯಬೇಕಾಗಿದ್ದು. ಮೊದಲು ನಾವೇ ಕೊಡಬೇಕು. ಇತರರೇ ಮೊದಲು ಕೊಡಲಿ ಎಂದು ನಿರೀಕ್ಷೆ ಮಾಡಬಾರದು. ಆದರೆ ನಾವು ಗೌರವ ಕೊಟ್ಟ ಮೇಲೂ ತಿರುಗಿ ತಕ್ಕ ಪ್ರಮಾಣದ ಗೌರವ ವಾಪಸ್ ಬರಲಿಲ್ಲವೆಂದರೆ ಮತ್ತೆ ಮತ್ತೆ ಅದೇ ಮನುಷ್ಯನಿಗೆ ಗೌರವ ಕೊಡುವ 'ತಪ್ಪು' ಮಾಡಬಾರದು.

ಎಮ್ಮೆ ಸರ್ ಅವರ ಖಡಕ್ ಜವಾರಿ ಭಾಷೆಯಲ್ಲೇ ಹೇಳಬೇಕು ಅಂದರೆ.... 'ಒಮ್ಮೆ ನಮಸ್ಕಾರ ಅನ್ನಬೇಕು. ತಿರುಗಿ ನಮಸ್ಕಾರ ಅನ್ನಲಿಲ್ಲ ಅಂದ್ರ ಮುಂದಿನ ಸರ್ತೆ ಸಿಕ್ಕಾಗ ಅವರ  ಕಡೆ ದುರುದುರು ನೋಡಿಕೋತ್ತ ಹೋಗಬೇಕು. ಆವಾಗ ಗೊತ್ತಾಗ್ತದ. ಕೆಟ್ಟ ಕಣ್ಣೀಲೇ ಕೆಕ್ಕರಿಸಿ ದುರುದುರು ನೋಡಬೇಕು!'

ಎಮ್ಮೆ ನಿನಗೆ ಸಾಟಿಯಿಲ್ಲ!! ಎಮ್ಮೆ ಸರ್ ನಿಮಗೆ ಸಾಟಿಯಿಲ್ಲ!! Hats Off!!

ಎಮ್ಮೆ ಸರ್ ಉಪದೇಶ ಕೇಳಿದ ನಾವು ಅದನ್ನು ಪಾಲಿಸಲಿಲ್ಲ. At least ಶಿಕ್ಷಕ ಶಿಕ್ಷಕಿಯರ ವಿಚಾರದಲ್ಲಂತೂ ಅದನ್ನು ಪೂರ್ತಿ ನಿರ್ಲಕ್ಷ ಮಾಡಿದ್ದಾಯಿತು. ಯಾವುದೇ ಶಿಕ್ಷಕರ ಜೊತೆ ಏನೇ ಜಗಳವಾಗಿರಲಿ, ಏನೇ ಹೇರಾಫೇರಿ ಆಗಿರಲಿ, ಏನೇ ವಿರಸವಿರಲಿ ಅವರಿಗೆ ಎಂದಿನಂತೆ ಮರುದಿವಸ ಒಂದು ನಮಸ್ಕಾರ ಗ್ಯಾರಂಟಿ. ಹಿಂದಿನ ದಿನ ಮಾಸ್ತರ್ ಟೀಚರ್ ಹಾಕಿಕೊಂಡು ಬರೋಬ್ಬರಿ ರುಬ್ಬಿ ಬೈದಿದ್ದರ ಕಹಿ ಇನ್ನೂ ಇದ್ದರೆ ಮುಖದ ಮೇಲೆ ಎಂದಿನ ತುಂಟ ನಗೆ ಇರುತ್ತಿದ್ದಿಲ್ಲ. ಆದರೆ ಗೌರವಯುತ ನಮಸ್ಕಾರ ಮಾತ್ರ ಖಾತ್ರಿ. ಅದಕ್ಕೆಂದೂ ಖೋತಾ ಇಲ್ಲ. ವಾಪಸ್ ನಮಸ್ಕಾರ ಕೂಡ ಸಿಗುತ್ತಿತ್ತು. Most of the time.

೧೯೮೮ ರಲ್ಲಿ SSLC ಮುಗಿದ ನಂತರ ಕೌಲಗಿ ಟೀಚರ್ ಅವರನ್ನು ಆಮೇಲೆ ನೋಡಿದ್ದು ೨೦೧೨ ಡಿಸೆಂಬರ್ ನಲ್ಲಿ. ನಮ್ಮ ೧೯೮೮ SSLC ಬ್ಯಾಚಿನ ರಜತಮಹೋತ್ಸವ ಸ್ನೇಹಸಮ್ಮಿಲನ ಸಮಾರಂಭದಲ್ಲಿ.

ಸಮಾರಂಭ ಕೊಂಚ ರಾಡಿಯೆದ್ದಿತ್ತು. Scheduling problem. ಅದೇ ದಿನ ಮುಂಜಾನೆ ಬೇರೆ ಬ್ಯಾಚಿನವರ ಮತ್ತೊಂದು ಸಮಾರಂಭವಿತ್ತು. ಅವರದ್ದು ಮುಗಿದ ನಂತರ ನಮ್ಮದು. ಹಾಗಾಗಿ ತಡವಾಗಿ ಆರಂಭವಾಯಿತು. ಎರಡು ದಿವಸಗಳ ಹಿಂದೆ ಶಿಕ್ಷಣ ಸಂಸ್ಥೆಯ ವಜ್ರಮಹೋತ್ಸವವೋ ಏನೋ ಬೇರೆ ದೊಡ್ಡ ಸಮಾರಂಭವೂ ಇತ್ತು. ಹಾಗಾಗಿ ಹಾಲಿ ಮತ್ತು ಮಾಜಿ ಶಿಕ್ಷಕ ಶಿಕ್ಷಕಿಯರು ತಿಂಗಳಾನುಗಟ್ಟಲೇ ಅವುಗಳಲ್ಲಿ ತುಂಬಾ ಬ್ಯುಸಿ ಆಗಿದ್ದರು. ಮತ್ತು ಸುಸ್ತೂ ಆಗಿದ್ದರು.

ಸಮಾರಂಭದ ಊಟ ಮುಗಿದ ಮೇಲೂ ದಯವಿಟ್ಟು ಇರಬೇಕು ಮತ್ತು ಮಧ್ಯಾಹ್ನದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಶಿಕ್ಷಕ ಶಿಕ್ಷಕಿಯರಲ್ಲಿ ವಿನಂತಿ ಮಾಡಿಕೊಳ್ಳಲಾಗಿತ್ತು. ಆದರೆ ಮೂರು ಶಿಕ್ಷಕರನ್ನು ಬಿಟ್ಟರೆ ಎಲ್ಲರೂ ಊಟದ ನಂತರ ಪೋಯಾಚ್. ಪರಾರಿ. ಇರಲಿ ಬಿಡಿ. ಪಾಪ ಅವರಿಗೆಲ್ಲ ತುಂಬಾ ಸುಸ್ತಾಗಿರಬೇಕು. ಬೇರೆ ಅನಿವಾರ್ಯತೆಗಳೂ ಇದ್ದಿರಬಹುದು. ಹೆಗಡೆ ಸರ್, ಟಂಕಸಾಲಿ ಸರ್, ಚಿಕ್ಕಮಠ ಸರ್, ಈ ಮೂವರು ಮಾತ್ರ ಸಂಜೆವರೆಗೂ ಕೊನೆಯವರೆಗೂ ಇದ್ದರು.

ಸುಮಾರು ಜನ ಶಿಕ್ಷಕ ಶಿಕ್ಷಕಿಯರನ್ನು ಭೇಟಿಯಾದರೂ ಕೌಲಗಿ ಟೀಚರನ್ನು ಖುದ್ದಾಗಿ ಭೇಟಿಯಾಗಿ, ಕಾಲಿಗೆ ಫುಲ್ ನಮಸ್ಕಾರ ಹಾಕಿ, ಗುರುತು ಮರೆತಿದ್ದರೆ ಮರುಪರಿಚಯ ಮಾಡಿಕೊಂಡು, ಆಶೀರ್ವಾದ ಪಡೆಯಲು ಆಗಲಿಲ್ಲ. ಊಟದ ನಂತರವೂ ಎಲ್ಲರೂ ಇರುತ್ತಾರೆ ಅಂದುಕೊಂಡಿದ್ದು ತಪ್ಪಾಗಿತ್ತು. ಹಾಗಾಗಿ ಕೌಲಗಿ ಟೀಚರ್ ಅವರನ್ನು ನೋಡಿ ಕಣ್ತುಂಬಿಕೊಂಡರೂ ಖುದ್ದಾಗಿ ಭೇಟಿಯಾಗಲು ಆಗಲಿಲ್ಲ. ಮತ್ತೂ ಒಂದಿಬ್ಬರ ಕೇಸಿನಲ್ಲೂ ಅದೇ ಆಯಿತು. ನಮ್ಮ ದೌರ್ಭಾಗ್ಯ ಅಂದುಕೊಳ್ಳೋಣ.

ಅದೇ ನಮ್ಮ ಗ್ರಾಮಪುರೋಹಿತ ಟೀಚರ್ ನೋಡಿ. ಅವರ ವರ್ತನೆಗೆ ನಾನು ಫುಲ್ ಫಿದಾ. ಐದು, ಆರು, ಏಳು ಈ ಮೂರೂ ತರಗತಿಗಳಲ್ಲಿ ಕನ್ನಡ ಕಲಿಸಿದವರು ಅವರು. ಅದ್ಭುತ ಶಿಕ್ಷಕಿ. ಅಂತವರು ಪಾಪ ನನ್ನನ್ನು ಮುದ್ದಾಂ ಹುಡುಕಿ, ಮಾತಾಡಿಸಿ, ಪ್ರೀತಿಪಟ್ಟುಕೊಂಡು ಆಶೀರ್ವಾದ ಮಾಡಿ ಹೋದರು. ನನ್ನ ಪುಣ್ಯಕ್ಕೆ ಅವರ ಎದುರಿಗೇ ಸಿಕ್ಕೆ. ಒಳ್ಳೆದಾಯಿತು. ಇಲ್ಲವಾದರೆ ಮಿಸ್ಸಾಗಿಬಿಡುತ್ತಿದ್ದರು ನಮ್ಮ ಪ್ರೀತಿಯ ಹಳ್ಳಿಭಟ್ಟ ಟೀಚರ್. ಗ್ರಾಮಪುರೋಹಿತ ಅನ್ನುವ ಶಬ್ದದ ತತ್ಸಮ ತದ್ಭವ ಹಳ್ಳಿಭಟ್ಟ
ಎಂದು ನನ್ನ ಮಹಾ ಜೋಕ್. ಕೇಳಿದ ಗೆಳೆಯ ಗೆಳತಿಯರು ಉಳ್ಳಾಡಿ ಉಳ್ಳಾಡಿ ನಕ್ಕರು. All in good
jest. ತತ್ಸಮ ತದ್ಭವ ಮೊದಲು ಪರಿಚಯಿಸಿದವರೇ ಗ್ರಾಮಪುರೋಹಿತ ಟೀಚರ್. ಅದನ್ನು ಅವರ ಮೇಲೆಯೇ ಪ್ರಯೋಗಮಾಡಿಯಾಗಿತ್ತು. ನಮ್ಮಂತಹ ಶಿಷ್ಯರು ಬೇರೆ ಎಲ್ಲಿಯಾದರೂ ಸಿಕ್ಕಾರೇ!!??

ನಾವು ಹಿಂದಿನ ದಿನ ಶಾಲೆಗೆ ಹೋದ ವಿಷಯ ತಿಳಿದ ಗ್ರಾಮಪುರೋಹಿತ ಟೀಚರ್ ಆಗಲೇ ಭೇಟಿಯಾಗಲೆಂದು ಓಡಿ ಬಂದಿದ್ದರಂತೆ. ಅವರು ಬರುವ ವಿಷಯ ನಮಗೆ ಗೊತ್ತಿರಲಿಲ್ಲ. ನಾವು ಹೋದ ಮೇಲೆ ಅವರು ಬಂದರಂತೆ. ಜಸ್ಟ್ ಮಿಸ್ಸಾಗಿತ್ತು.

'ನಿನ್ನೆ ನಿನ್ನ ಭೇಟಿಯಾಗಲಿಕ್ಕೆ ಅಂತ ಓಡೋಡಿ ಬಂದ್ರ, ನೀನೇ ಇರಲಿಲ್ಲಲ್ಲೋ!' ಎಂದು ಹುಸಿಮುನಿಸು ತೋರಿಸಿದರು ಗ್ರಾಮಪುರೋಹಿತ ಟೀಚರ್.

'ಅಯ್ಯ ಟೀಚರ್! ನೀವು ಬರೋದು ಗೊತ್ತಿರಲಿಲ್ಲ ರೀ.. ' ಅನ್ನಲೂ ಬಿಡದೇ ಅಪ್ಪಿಕೊಂಡು ಮೈದಡವಿ ಆಶೀರ್ವಾದ ಮಾಡಿ ಹೋಗಿಬಿಟ್ಟರು. ಅದು ಅವರ ದೊಡ್ಡ ಗುಣ ಮತ್ತು ನಮ್ಮ ಸೌಭಾಗ್ಯ. ಅವರ ಸೋದರಸಂಬಂಧಿಯಾದ ಗ್ರಾಮಪುರೋಹಿತ ಸರ್ ನನ್ನ ಫೇವರಿಟ್ ಸರ್. ಪ್ರೈಮರಿ ಎರಡು ಮತ್ತು ಮೂರನೇ ಕ್ಲಾಸಿನಲ್ಲಿ ಪಾಠ ಮಾಡಿದವರು. ಗುರುಗಳಾಗಿದ್ದರೂ ಪಕ್ಕಾ ಸ್ನೇಹಿತರಂತೆ ವರ್ತಿಸುತ್ತಿದ್ದರು. My most favorite sir! ಗ್ರಾಮಪುರೋಹಿತ ಟೀಚರ್ ಕೂಡ ಈಗ ಫೇವರಿಟ್ ಆಗಿಬಿಟ್ಟರು.

ನಮ್ಮ ಶಾಲೆಯ ಸಮಾರಂಭವಂತೂ ಮುಗಿದಿತ್ತು. ೨೦೧೨ ರ  ಸಮಯ. ನಾನೂ ಆಗ ಫೇಸ್ಬುಕ್ ಮೇಲೆ ಸಾಕಷ್ಟು ಸಕ್ರಿಯನಾಗಿದ್ದೆ. ಆಗ ಫೇಸ್ಬುಕ್ ಮೇಲೆ ಕಂಡರು ಕೌಲಗಿ ಟೀಚರ್. ಅವರೂ ಫೇಸ್ಬುಕ್ ಮೇಲೆ ಇದ್ದರು. ಖುಷಿಯಾಗಿ ಅವರಿಗೆ ಒಂದು ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದೆ. ಅದನ್ನು ಅವರು accept ಮಾಡಿರಲಿಲ್ಲ. ಎಲ್ಲಿ ಟೀಚರಿಗೆ ನನ್ನ ಪರಿಚಯ ಸಿಗಲಿಲ್ಲವೋ ಏನೋ ಎಂದು ವಿಚಾರ ಮಾಡಿ ನನ್ನ ಪರಿಚಯದ ನೆನಪು ಮಾಡಿಕೊಡಲು ಒಂದೆರೆಡು ವಾಕ್ಯದ ಚಿಕ್ಕ ಸಂದೇಶವನ್ನು ಫೇಸ್ಬುಕ್ ಮೂಲಕವೇ ಕಳಿಸಿದ್ದೆ. ಅದಕ್ಕೆ Thumbs Up ಎನ್ನುವಂತೆ ನಿಗುರಿದ ಹೆಬ್ಬೆರಳಿನ ರಿಪ್ಲೈ ಕಳಿಸಿದ್ದರು. ಆದರೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದನ್ನು ಮಾತ್ರ accept ಮಾಡಿರಲಿಲ್ಲ. ಯಾಕೋ ಗೊತ್ತಿಲ್ಲ. ಜಾಸ್ತಿ ತಲೆಕೆಡಿಸಿಕೊಳ್ಳಲಿಲ್ಲ. ನಮ್ಮ ಬೇರೆ ಮಿತ್ರರು ಅವರ ಫ್ರೆಂಡ್ ಲಿಸ್ಟಿನಲ್ಲಿ ಇದ್ದರು. ಮೊದಲಿನ ಫ್ರೆಂಡ್ ರಿಕ್ವೆಸ್ಟ್ ಎಲ್ಲಿಯಾದರೂ ಡಿಲೀಟ್ ಮಾಡಿಬಿಟ್ಟರೇನೋ ಎಂದುಕೊಂಡೆ. ಒಮ್ಮೊಮ್ಮೆ by mistake ಡಿಲೀಟ್ ಆಗಿಬಿಡುತ್ತವೆ ನೋಡಿ. ಹಾಗೆಂದುಕೊಂಡು ಮತ್ತೊಮ್ಮೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದೆ. ಅದನ್ನೂ ಅವರು accept ಮಾಡಲಿಲ್ಲ. ಯಾಕೋ ಗೊತ್ತಿಲ್ಲ. ಹಿಂದೆ ನಮಸ್ಕಾರಕ್ಕೆ ವಾಪಸ್ ನಮಸ್ಕಾರ ಹಾಕದಿದ್ದಾಗ ಸ್ವಲ್ಪವಾದರೂ ತಲೆಕೆಡಿಸಿಕೊಂಡಿದ್ದೆ. ಈಗ ಫೇಸ್ಬುಕ್ ಫ್ರೆಂಡ್ ರಿಕ್ವೆಸ್ಟ್ ಬಗ್ಗೆ ಏನೂ ವಿಚಾರ ಮಾಡಲಿಲ್ಲ. ಫೇಸ್ಬುಕ್ ಫ್ರೆಂಡ್ ಆಗಲಿ ಬಿಡಲಿ ಟೀಚರ್ ಟೀಚರೇ. ಅವರು ಚೆನ್ನಾಗಿರಲಿ. ಅವರ ಆಶೀರ್ವಾದವಂತೂ ಇದ್ದೇ ಇರುತ್ತದೆ. ಅದು God granted. ಅಲ್ಲವೇ?

ಮುಂದೆ ೨೦೧೪ ರಲ್ಲಿ ಪೂಜ್ಯ ಟಂಕಸಾಲಿ ಸರ್ ತೀರಿಕೊಂಡರು. 'ಟಂಕ'ಸಾಲಿ'ಯೇ ಇಲ್ಲದ ಸಾಲಿಯೊಂದು ಸಾಲಿಯೇ ಕೃಷ್ಣಾ!' ಎನ್ನುವ ಶೀರ್ಷಿಕೆಯಡಿ ಅವರಿಗೊಂದು ಹಳೆಯ ನೆನಪುಗಳ ಶ್ರದ್ಧಾಂಜಲಿ ಲೇಖನ ಬರೆದಿದ್ದೆ. ಅದನ್ನು 'ಧಾರವಾಡ ಬಾಂಡ್ಸ್' ಎನ್ನುವ ಫೇಸ್ಬುಕ್ ಗ್ರೂಪ್ಪಿನಲ್ಲಿ ಶೇರ್ ಮಾಡಿದ್ದೆ. ಅದನ್ನು ಗಮನಿಸಿದ್ದ ಕೌಲಗಿ ಟೀಚರ್ ಅದಕ್ಕೆ ಕಾಮೆಂಟ್ ಹಾಕಿದ್ದರು. ಅವರ ಸಹೋದ್ಯೋಗಿಯಾಗಿದ್ದ ನಮ್ಮ ಪ್ರೀತಿಯ ಟಂಕಸಾಲಿ ಸರ್ ಬಗ್ಗೆ ತಾವೂ ಒಂದೆರೆಡು ಮಾತುಗಳನ್ನು ಹಂಚಿಕೊಂಡಿದ್ದರು. ಕೌಲಗಿ ಟೀಚರ್ ಕಾಮೆಂಟ್ ಹಾಕಿದಾಗಲೇ ನೆನಪಾಗಿದ್ದು ಅವರ ಹೆಸರು ಕೃಷ್ಣಾ ಎಂದು. ನಾನು ಶೀರ್ಷಿಕೆಯಲ್ಲಿ 'ಕೃಷ್ಣಾ' ಎಂದು ಏಕೆ ಹಾಕಿದ್ದೆ ಅಂದರೆ ನನಗೆ 'ನೀ ಸಿಗದ ಬಾಳೊಂದು ಬಾಳೆ ಕೃಷ್ಣಾ?' ಎನ್ನುವ ಭಾವಗೀತೆ ನೆನಪಾಗಿತ್ತು. ಆಮೇಲೆ ಅನ್ನಿಸಿದ್ದು... ನನಗೆ ಗೊತ್ತಿಲ್ಲದೆಯೇ ಒಂದೇ ಸಾಲಿನಲ್ಲಿ ಇಬ್ಬರು ಪೂಜ್ಯ ಶಿಕ್ಷಕರನ್ನು ನೆನದಂತಾಯಿತು. ಟಂಕಸಾಲಿ ಸರ್ ಮತ್ತು ಕೃಷ್ಣಾ ಕೌಲಗಿ ಟೀಚರ್. God's ways are strange!

೨೦೧೬ ಜೂನ್ ನಂತರ ನಾನೇ ಫೇಸ್ಬುಕ್ ಮೇಲೆ ಇಲ್ಲ. ನನಗೆ ಸಾಮಾಜಿಕ ಜಾಲತಾಣಗಳ ಅವಶ್ಯಕತೆ ಇಲ್ಲ. ಕಿರಿಕಿರಿ ಜಾಸ್ತಿ. ಸಮಯ ಹಾಳು. ಅದರಲ್ಲೂ ನಾನು ಸಿಕ್ಕಾಪಟ್ಟೆ opinionated ಮತ್ತು ಜಗಳಗಂಟ. ತಪ್ಪೋ ಸರಿಯೋ. ಎಲ್ಲ ವಿಷಯಗಳ ಮೇಲೆ ವಾದ, ವಿವಾದ, ವಾಗ್ವಾದ, ವಿತಂಡವಾದ ಮಾಡುವ ಹುಕಿ. ಅದಕ್ಕಾಗಿ ಮಂಡೆ ಬಿಸಿ. ಸಮಯ ಹಾಳು. ಬಾಂಧವ್ಯಗಳು ಹಾಳು. ಇದೆಲ್ಲಾ ಬೇಕಾಗಿಲ್ಲ ಎಂದು ನಿರ್ಧರಿಸಿ ಐದು ವರ್ಷಗಳ ಫೇಸ್ಬುಕ್ ಸಹವಾಸಕ್ಕೆ ದೊಡ್ಡ ನಮಸ್ಕಾರ ಹಾಕಿ ಮಂಗಳ ಹಾಡಿದೆ. Good riddance.

ನಾನು ಫೇಸ್ಬುಕ್ ಬಿಟ್ಟು ಬಹಳ ಸಮಯವಾಗಿದೆ. ಹಾಗಾಗಿ ಆಗಿನ ಫೇಸ್ಬುಕ್ ಮಿತ್ರರು, ಫ್ರೆಂಡ್ ರಿಕ್ವೆಸ್ಟ್ ಕಳಿಸಿದವರು, ಫ್ರೆಂಡ್ ಆದವರು, ಫ್ರೆಂಡ್ ಆಗದವರು, ಒಮ್ಮೆ ಫ್ರೆಂಡಾಗಿ ನಂತರ ತಾವೇ unfriend ಮಾಡಿದ ನಂತರವೂ ಕದ್ದು ಕದ್ದು ಹಣಿಕಿ ನೋಡುತ್ತಿದ್ದ ಕ್ರಿಮಿಕೀಟಗಳು, ಪದೇಪದೇ ಫ್ರೆಂಡ್ ರಿಕ್ವೆಸ್ಟ್ ಕಳಿಸಿ accept ಮಾಡುವ ಮೊದಲೇ cancel  ಮಾಡುತ್ತಿದ್ದ ಡೀಪಿ ಮೆಂಟಲ್ ಕೇಸುಗಳು, ಫೇಸ್ಬುಕ್ ಮೇಲೆಯೇ ಸುಪಾರಿ ಕೊಟ್ಟಿದ್ದ ಮೈತುಂಬಾ ಹಾವಿನ ವಿಷ ತುಂಬಿಕೊಂಡಿರುವ ವಿಷದ ಆಂಟಿಯರು ಮತ್ತು ಹಾವುರಾಣಿಯರು, ಸುಪಾರಿ ತೆಗೆದುಕೊಂಡು ಬದರಿಯಲ್ಲಿ ನಾರಾಯಣನ ಸನ್ನಿಧಾನದಲ್ಲಿದ್ದೇನೆ ಎನ್ನುವುದನ್ನೂ ಮರೆತು ಅಲ್ಲಿಂದಲೇ ಎನ್ಕೌಂಟರ್ ಮಾಡಿ ಕೊನೆಗೆ ತಮ್ಮ ತಲೆ ಮೇಲೆ ತಾವೇ ಕೈಯಿಟ್ಟುಕೊಂಡು ಭಸ್ಮವಾಗಿ ಹೋದ ಪ್ರೋಗ್ರೆಸಿವ್ ಪುಂಗಿಯಂತಹ ಭಸ್ಮಾಸುರಿಯರು, ಕೊಂಚವೂ ಜವಾಬ್ದಾರಿಯಿಲ್ಲದ ಫೇಸ್ಬುಕ್ ಗ್ರೂಪ್ಪುಗಳ ಅವಿವೇಕಿ ಅಡ್ಮಿನ್ನುಗಳು, ವಾದ ವಿವಾದ ಮಾಡಿ ಕೊನೆಗೆ ಎಲ್ಲವನ್ನೂ ಡಿಲೀಟ್ ಮಾಡಿಬಿಡುವ ಯಡಬಿಡಂಗಿ ಹುಚ್ಚರು, ಧೋಕೆಬಾಜುಗಳು, ಇತರೇ ಕಿರಿಕ್ ಗಿರಾಕಿಗಳು. ಇವೆಲ್ಲಾ ಫೇಸ್ಬುಕ್ ಮೇಲೆ ಸಿಕ್ಕ ನಮೂನಾಗಳು. ಒಂದೇ ಎರಡೇ. ಎಲ್ಲರೂ ಈಗ ನಗಣ್ಯ. ಎಲ್ಲದರಿಂದ ಎಲ್ಲರಿಂದ ಮುಕ್ತಿ ಮುಕ್ತಿ. ಮುಕ್ತ. ಮುಕ್ತ.

ಕೌಲಗಿ ಟೀಚರ್ ಫೇಸ್ಬುಕ್ ಮೇಲೆ ಇನ್ನೂ ಇದ್ದಾರೆ ಎಂದು ಕಾಣುತ್ತದೆ. ಗೂಗಲ್ ಸರ್ಚ್ ಮಾಡಿದಾಗ ಕಾಣುತ್ತದೆ.

ಕೌಲಗಿ ಟೀಚರ್ ಪುಸ್ತಕ ಬರೆದ್ದಿದ್ದಾರೆ ಎಂದು ತಿಳಿದಾಗ ಇದೆಲ್ಲಾ ನೆನಪಾಯಿತು. ಪುಸ್ತಕ ಓದಿದ ಮೇಲೆ ಏನು ಬರೆಯುತ್ತೇನೋ ಗೊತ್ತಿಲ್ಲ. ಓದಿದ ಎಲ್ಲ ಪುಸ್ತಕಗಳ ಮೇಲೆ ವಿಮರ್ಶೆ ಬರೆಯುವ ಔಕಾತ್ ಇಲ್ಲ. ನೋಡೋಣ.

ಕೌಲಗಿ ಟೀಚರ್ ಅವರ ಬ್ಲಾಗ್ ಓದಿದಾಗ ತಿಳಿಯಿತು ಅವರಿಗೆ ಈಗ ೭೫ ವರ್ಷವಂತೆ. ನಮ್ಮ ತಾಯಿಯ ವಯಸ್ಸೇ. ಅವರಿಗೆ ಮೊದಲಿಂದಲೂ ಕಣ್ಣಿನ ತೊಂದರೆ ಇತ್ತು ಅಂತ ಬ್ಲಾಗ್ ಓದಿದಾಗ ತಿಳಿಯಿತು. ಲೇಡೀಸ್ ಟೀಚರುಗಳಲ್ಲಿ ಸದಾ ಕನ್ನಡಕ ಹಾಕಿಕೊಂಡಿರುತ್ತಿದ್ದವರು ಅವರೇ ಒಬ್ಬರು ಎಂದು ನೆನಪು. ಈಗ ಕಾರಣ ಗೊತ್ತಾಯಿತು. ವಯೋಸಹಜ ಆರೋಗ್ಯ ಸಮಸ್ಯೆಗಳು ಇವೆ ಎಂದು ಹೇಳಿಕೊಂಡಿದ್ದಾರೆ. ಕೌಲಗಿ ಟೀಚರ್ ಅವರ ಅತಿದೊಡ್ಡ ಸತ್ವಬಲ ಅಂದರೆ ಅವರ ಪಾಸಿಟಿವ್ ಮನೋಭಾವ. ಏನೇ ಬಂದರೂ ಎದುರಿಸಿ ಗೆಲ್ಲುತ್ತೇನೆ ಎನ್ನುವ ಛಲ ಮತ್ತು ಆತ್ಮವಿಶ್ವಾಸ. ಹಾಗಾಗಿ ಅವರು ವಯೋಸಹಜ ತೊಂದರೆಗಳನ್ನೆಲ್ಲವನ್ನೂ ಸಮಚಿತ್ತದಿಂದ ಎದುರಿಸುತ್ತಾರೆ ಮತ್ತು ಇನ್ನೂ ಹಲವಾರು ವರ್ಷ ಬಾಳಿ ಬದುಕುತ್ತಾರೆ ಎನ್ನುವ ಬಗ್ಗೆ ಭರವಸೆ ಇದೆ. ಆ ವರದಾನವನ್ನು ಭಗವಂತ ಅವರಿಗೆ ಕರುಣಿಸಲಿ.

ಎಲ್ಲಕ್ಕಿಂತ ಮುಖ್ಯವಾಗಿ ಭಗವಂತನ ಆಶೀರ್ವಾದ ಕೌಲಗಿ ಟೀಚರ್ ಮೂಲಕ ನಮ್ಮೆಲ್ಲರ ಮೇಲೆ ಅಂದರೆ ಕೌಲಗಿ ಟೀಚರ್ ಶಿಷ್ಯವೃಂದದ ಮೇಲೆ ಇರಲಿ ಎಂದು ಬೇಡಿಕೊಳ್ಳುತ್ತೇನೆ.

ನಮ್ಮ ಪ್ರೀತಿಯ ಟೀಚರ್ ಎಂದುಕೊಂಡು ತೆರೆದ ಮನಸ್ಸಿನಿಂದ ಬರೆದಿದ್ದೇನೆ.  ಎಲ್ಲಾದರೂ ತಪ್ಪು ಅನ್ನಿಸಿದರೆ ದೊಡ್ಡ ಮನಸ್ಸಿನಿಂದ ಕ್ಷಮಿಸಿ ಹೊಟ್ಟೆಯಲ್ಲಿ ಹಾಕಿಕೊಳ್ಳಿ. ಏಕಾದಶಿ ಉಪವಾಸವಿದ್ದರೂ ತಪ್ಪನ್ನು ಹೊಟ್ಟೆಯೊಳಗೆ ಹಾಕಿಕೊಳ್ಳಬಹುದಂತೆ. ಹೀಗೆ ಬರೆದ ಮೇಲೆ ನಗು ಬಂತು. Pardon my indulgence.


*****
ಜೂನ್ ೧೮, ೨೦೧೪

ನೀರಿನಲ್ಲಿ ಅಲೆಯ ಉಂಗುರ
ಪಲ್ಕಿ ಮೇಲೆ ಕವಳದ್ ಕಲೆಯ ಉಂಗುರ
ಶೇರುಗಾರ್ ಬಂದನಲ್ಲ ಕವಳ ತುಪ್ಪಲೇ ಇಲ್ಲ
ಶೇರುಗಾರ್ ಬಂದನಲ್ಲ ಕವಳ ತುಪ್ಪಲೇ ಇಲ್ಲ
ಕವಳ ತುಪ್ಪಿದ್ಮ್ಯಾಲೆ ಪಿರುತಿ ಮಾಡುದಲ್ಲದಾ......ಆ....ಆ....

ನೀರಿನಲ್ಲಿ ಅಲೆಯ ಉಂಗುರ
ಪಲ್ಕಿ ಮೇಲೆ ಕವಳದ್ ಕಲೆಯ ಉಂಗುರ

ಕೆಲಸ ಮುಗಿಸಿ ಹೊರಟಿದ್ದ ತಂಡದ ಹೆಣ್ಣಾಳಿಗೆ ತಂಡದ ಶೇರುಗಾರರು ದರೆ ಅಂಚಿನಲ್ಲಿ, ದೋಣಿ ಮರಿಗೆ ಎಜ್ಜೆಯಲ್ಲಿ, ಬಾಯಲ್ಲಿದ್ದ ಕವಳ ತುಪ್ಪದೇ, ಗಡಿಬಿಡಿಯಲ್ಲಿ ಪಿರುತಿ ಮಾಡೋಕೆ ಹೋಗಿ, ಆಕೆಯ ಪಲ್ಕಿ (ಬ್ಲೌಸ್) ಮೇಲೆ ಕವಳದ ಕೆಂಪು ಚಿತ್ತಾರ ಮೂಡಿಸಿದಾಗ ಹೊರಹೊಮ್ಮಿದ ಹಾಡು.