Saturday, November 01, 2014

ಇಂದಿರಾ ಗಾಂಧಿ ಹತ್ಯೆಯ ಹಿಂದೆ ಹೀಗೊಂದು ಭಯಾನಕ ಅಂತರಾಷ್ಟ್ರೀಯ ಸಂಚು ಇತ್ತೇ?

ಅಕ್ಟೋಬರ್ ೩೧, ೧೯೮೪ ರಂದು ಇಂದಿರಾ ಗಾಂಧಿ ಹತ್ಯೆಯಾಯಿತು. ನಿನ್ನೆಗೆ ಮೂವತ್ತು ವರ್ಷ. ಅವರ ಸಿಖ್ ಅಂಗರಕ್ಷಕರೇ ಗುಂಡಿಟ್ಟು ಕೊಂದು ಬಿಟ್ಟರು. ಅದಾಗುವ ಕೆಲವೇ ತಿಂಗಳ ಹಿಂದೆ ಇಂದಿರಾ ಗಾಂಧಿ ಪಂಜಾಬಿನಲ್ಲಿ ಖಲಿಸ್ತಾನಿ ಉಗ್ರವಾದವನ್ನು ಹತ್ತಿಕ್ಕಲು ಆಪರೇಷನ್ ಬ್ಲೂಸ್ಟಾರ್ ಅನ್ನುವ ಸೈನಿಕ ಕಾರ್ಯಾಚರಣೆ ಮಾಡಿದ್ದರು. ಫಿರಂಗಿ ಹಚ್ಚಿ ಸಿಖ್ ಜನರ ಪರಮ ಪವಿತ್ರ ಸುವರ್ಣ ಮಂದಿರವನ್ನು ಉಡಾಯಿಸಿ ಬಿಟ್ಟಿದ್ದರು. ಆ ಹೊತ್ತಿನ ಮಟ್ಟಿಗೆ ದೊಡ್ಡ ಮಟ್ಟದ ಖಲಿಸ್ತಾನಿ ಉಗ್ರರೆಲ್ಲರನ್ನೂ ಕೊಂದು ಉಗ್ರವಾದಕ್ಕೆ ಒಂದು ಮಂಗಳ ಹಾಡಿದ್ದರು ಇಂದಿರಾ ಗಾಂಧಿ. ಆದರೆ ಸಿಖ್ ಸಮುದಾಯ ಸಿಕ್ಕಾಪಟ್ಟೆ ಸಿಟ್ಟಿಗೆದ್ದಿತ್ತು. ಸೈನ್ಯದಲ್ಲಿ ಸಿಖ್ ಸೈನಿಕರ ಆಂತರಿಕ ದಂಗೆಗಳಾಗಿದ್ದವು. ಉಕ್ಕಿನ ಹಸ್ತದಿಂದ ಅವನ್ನೂ ಸಹ ಹತ್ತಿಕ್ಕಿದ್ದರು ಇಂದಿರಾ ಗಾಂಧಿ. ಆವಾಗ ಸುವರ್ಣ ಮಂದಿರದಲ್ಲಿ ಅನೇಕ ಅಮಾಯಕರು ಸತ್ತು ಹೋಗಿದ್ದರು. ಸೈನ್ಯ, ಇಂದಿರಾ ಗಾಂಧಿ ನಿರ್ದೇಶಿಸಿದಂತೆ, ಬೇಕಂತಲೇ ಅವರನ್ನು ಕೊಂದರು ಅಂತ ಸುದ್ದಿ ಹರಡಿಕೊಂಡಿದ್ದರು ಸಿಖ್ ಜನರು. ಇದೆಲ್ಲ ಕೂಡಿ ಇಂದಿರಾ ಅಂದರೆ ಸಿಖ್ ಜನಾಂಗ ಕೊತ ಕೊತ ಕುದಿಯುತ್ತಿತ್ತು. ಮೊದಲೇ ಯುದ್ಧ, ಗದ್ದಲ, ಇತ್ಯಾದಿಗಳಿಗೆ ಹೆಸರಾದ ಮಂದಿ ಸಿಖ್ ಜನ. ಸೇಡು ತೀರಿಸಿಕೊಳ್ಳದೇ ಬಿಡುವರಲ್ಲ. ಹಾಗಂತಲೇ ನೀಟಾಗಿ ಸ್ಕೆಚ್ ಹಾಕಿ, ಇಂದಿರಾ ಗಾಂಧಿಯ ಸಿಖ್ ಅಂಗರಕ್ಷಕರಿಂದಲೇ ಅವರನ್ನು ಕೊಲ್ಲಿಸಿಬಿಟ್ಟರು.

ಇದೆಲ್ಲ ಎಲ್ಲರಿಗೂ ಗೊತ್ತಿರುವ ವಿಷಯವೇ. ಆದರೆ ಆ ಅಂಗರಕ್ಷಕರು ಎಲ್ಲದನ್ನೂ ಅವರೇ ಮಾಡಿದರೇ? ಅಥವಾ ಅವರ ಹಿಂದೆ ಸೂತ್ರಧಾರರಾಗಿ ಬೇರೆ ಯಾರೋ ಇದ್ದರೋ? ಇಂದಿರಾ ಗಾಂಧಿ ಹತ್ಯೆಯ ಹಿಂದೆ ಕಣ್ಣಿಗೆ ಕಾಣದ ಒಂದು ಷಡ್ಯಂತ್ರವಿತ್ತೇ?

ಇದೆಲ್ಲ ವಿಷಯವನ್ನು ವಿಚಾರಿಸಲು ನೇಮಿಸಿದ್ದು ನ್ಯಾಯಮೂರ್ತಿ ಥಕ್ಕರ್ ಆಯೋಗ. ಅದು ಕೆಲವು ಸಂಶಯಗಳನ್ನು ವ್ಯಕ್ತಪಡಿಸಿದರೂ, ಯಾರನ್ನೂ ಬೆರಳು ತೋರಿಸಿ, 'ಇಂತಿಂತವರು ಹತ್ಯೆಯ ಹಿಂದಿನ ಸಂಚಿನಲ್ಲಿ ಇದ್ದರು. ಹೀಗೀಗೆ ಸಂಚು ಮಾಡಿದರು. ಮಾಡಿ ಮುಗಿಸಿಬಿಟ್ಟರು,' ಅಂತ ಮಾತ್ರ ಹೇಳಲಿಲ್ಲ. ಇಂದಿರಾ ಗಾಂಧಿಯ ಆಪ್ತ ಸಹಾಯಕ ಆರ್. ಕೆ. ಧವನ್ ಮೇಲೆ ದೊಡ್ಡ ಪ್ರಮಾಣದ ಸಂಶಯ, ಅಸಮಾಧಾನ ವ್ಯಕ್ತಪಡಿಸಿತ್ತು ಥಕ್ಕರ್ ವರದಿ. ಅಷ್ಟೇ. ಆದರೆ ಸ್ವತಃ ರಾಜೀವ್ ಗಾಂಧಿಯೇ, 'ಧವನ್ ಮೇಲೆ ಯಾವದೇ ಸಂಶಯ ಪಡಲು ಸಾಧ್ಯವೇ ಇಲ್ಲ. ಅವರು ನಮ್ಮ ಕುಟುಂಬದ ಒಂದು ಭಾಗವೇ ಆಗಿದ್ದರು. ಅಂತವರ ಮೇಲೆ ಸಂಶಯ ಪಡುವದೇ? ಅದು ಮಹಾ ಪಾಪ,' ಅನ್ನುವ ಧಾಟಿಯಲ್ಲಿ ಹೇಳಿಕೆ ನೀಡಿ, ಆರ್. ಕೆ. ಧವನ್ ಅವರನ್ನು ಬಚಾವು ಮಾಡಿದ್ದಲ್ಲದೇ ಅವರಿಗೆ ದೊಡ್ಡ ಸ್ಥಾನ ಮಾನ ಕೊಟ್ಟು ಚೆನ್ನಾಗಿಯೇ ನೋಡಿಕೊಂಡರು.

ಥಕ್ಕರ ಆಯೋಗದ ವರದಿ ಬಿಟ್ಟರೆ ಇಂದಿರಾ ಗಾಂಧಿ ಹತ್ಯೆಯ ಹಿಂದೆ ಇರಬಹುದಾದ ಸಂಚಿನ ಮೇಲೆ ಬೆಳಕು ಚೆಲ್ಲುವಂತಹ ಮಾಹಿತಿ ಹೊರಗೆ ಬಂದಿಲ್ಲ ಬಿಡಿ. ರಾಜೀವ್ ಗಾಂಧಿ ಹತ್ಯೆಯ ಬಗ್ಗೆ, ಹಿಂದಿದ್ದ ಸಂಭವನೀಯ ಷಡ್ಯಂತ್ರದ ಬಗ್ಗೆ ಅನೇಕ ಒಳ್ಳೊಳ್ಳೆ ಪುಸ್ತಕಗಳು ಬಂದಿವೆ. ಆಸಕ್ತಿಯಿಂದ ಓದಿಕೊಂಡು, ಒಂದಕ್ಕೊಂದು ಮಾಹಿತಿ ಜೋಡಿಸುತ್ತ ಹೋದರೆ ಒಂದು ಭಯಾನಕ ಷಡ್ಯಂತ್ರದ ಪೂರ್ತಿ ಮಾಹಿತಿ ಸಿಕ್ಕು ಬಿಡುತ್ತದೆ. ಆದರೆ ಇಂದಿರಾ ಗಾಂಧಿ ಹತ್ಯೆಯ ಬಗ್ಗೆ ಆ ತರಹದ ಮಾಹಿತಿ ಸಿಗುವದಿಲ್ಲ.

ಆದರೆ ಲಂಡನ್ ಮೂಲದ ತಾರಿಕ್ ಅಲಿ ಅನ್ನುವವರು ಒಂದು ಪುಸ್ತಕ ಬರೆದಿದ್ದಾರೆ. ಅವರು ಯಾವದೋ ಒಂದು ಡಾಕ್ಯುಮೆಂಟರಿಗೆ ಅಂತ ಒಂದು 'ಕಾಲ್ಪನಿಕ' ಸ್ಕ್ರಿಪ್ಟ್ ಬರೆದಿದ್ದರಂತೆ. ಯಾವದೋ ಕಾರಣಕ್ಕೆ ಆ ಡಾಕ್ಯುಮೆಂಟರಿ ಆಗಲಿಲ್ಲ. ಬರೆದ ಸ್ಕ್ರಿಪ್ಟನ್ನೇ ಪುಸ್ತಕದ ರೂಪದಲ್ಲಿ ಬಿಡುಗಡೆ ಮಾಡಿದ್ದಾರೆ.

ಪುಸ್ತಕದ ಹೆಸರು - The Assassination: Who Killed Indira G?

ಲೇಖಕರೇ ಹೇಳಿಕೊಂಡಂತೆ ಇದು ಒಂದು fictional ಪುಸ್ತಕ. ಕಾದಂಬರಿ ತರಹದ್ದು. ಆದರೆ ಇಂದಿರಾ ಗಾಂಧಿ ಹತ್ಯೆಯ ಕಾಲದ geopolitical realities ಗಳನ್ನು ಗಮನಕ್ಕೆ ತೆಗೆದುಕೊಂಡು, 'ಇಂದಿರಾ ಹತ್ಯೆಗೆ ಇವೂ ಕಾರಣವಾಗಿರಬಹುದೇ? ಹತ್ಯೆಯನ್ನು ಅಂಗರಕ್ಷಕರೇ ಮಾಡಿದ್ದರೂ ಸೂತ್ರಧಾರರೂ ಇಂತವರು ಇರಬಹುದೇ?' ಅನ್ನುವ ಒಂದು theory ಯನ್ನು ಲೇಖಕ ತಾರಿಕ್ ಅಲಿ ಹರಿಬಿಡುತ್ತಾರೆ. ಮತ್ತೊಮ್ಮೆ ನೆನಪಿರಲಿ ಇದೆಲ್ಲ ಅವರ ಕಲ್ಪನೆ ಅಷ್ಟೇ.

ಪುಸ್ತಕದ ಸಾರಾಂಶ ಇಷ್ಟು. ೧೯೮೪ ಜೂನ್ ತಿಂಗಳಲ್ಲಿ ಆಪರೇಷನ್ ಬ್ಲೂಸ್ಟಾರ್ ಮಾಡಿ, ಸಿಖ್ ಉಗ್ರವಾದವನ್ನು ಮಟ್ಟ ಹಾಕಿ ಇಂದಿರಾ ಗಾಂಧಿ ಯಶಸ್ಸಿನ ಪರಾಕಾಷ್ಠೆಯಲ್ಲಿದ್ದರು. ಆಗ ಅತ್ತಕಡೆ ಆಫ್ಘಾನಿಸ್ತಾನವನ್ನು ಸೊವಿಯಟ್ ರಶಿಯಾ ಆಕ್ರಮಿಸಿಕೊಂಡಿತ್ತು. ಅಮೇರಿಕಾ ಆಫ್ಘನ್ ಮುಜಾಹಿದೀನ್ ಬಂಡುಕೋರರಿಗೆ ಎಲ್ಲ ಸಹಾಯ ಮಾಡಿ ರಶಿಯಾವನ್ನು ಸರಿಯಾಗಿ ಹಣಿಯುತ್ತಿತ್ತು. ಪಾಕಿಸ್ತಾನ ಎಂಬ ತಗಡು ದೇಶ ಆಫ್ಘನ್ ಬಂಡುಕೋರರು ಮತ್ತು ಅಮೇರಿಕಾ ಮಧ್ಯೆ ದಲ್ಲಾಳಿ ತರಹ ಕೂತು ರಶಿಯಾಕ್ಕೆ ಸರಿಯಾಗಿ ಬತ್ತಿ ಇಡುತ್ತಿತ್ತು. ಆಫ್ಘನ್ ಮುಜಾಹಿದೀನರಿಗೆ ಪಾಕಿಸ್ತಾನ ಅಂದರೆ ತವರು ಮನೆ ತರಹ ಆಗಿತ್ತು. ಆಫ್ಘನ್ ಗಡಿಯೊಳಕ್ಕೆ ನುಗ್ಗಿ, ರಶಿಯಾ ವಿರುದ್ಧ ಗೆರಿಲ್ಲಾ ಕಾರ್ಯಾಚರಣೆ ಮಾಡಿ, ಪಾಕಿಸ್ತಾನದೊಳಕ್ಕೆ ವಾಪಸ್ ಬಂದು, ಬಲೂಚಿಸ್ತಾನದ ಎಲ್ಲೋ ಮೂಲೆಯಲ್ಲಿ ಹೊಕ್ಕಿ ಕೂತು ಬಿಡುತ್ತಿದ್ದರು. ರಶಿಯಾಕ್ಕೆ ಸಾಕು ಸಾಕಾಗಿ ಹೋಗಿತ್ತು. ಪಾಕಿಸ್ತಾನವನ್ನು ಹಿಡಿದು, ಸರಿಯಾಗಿ ಬಾರಿಸಿಬಿಡೋಣ ಅಂದರೆ ಅದೊಂದು ಹೆಚ್ಚಿನ ತಲೆನೋವು. ಆಕ್ರಮಿಸಿದ್ದ ಅಫಘಾನಿಸ್ತಾನವನ್ನೇ ಸಂಬಾಳಿಸಿಕೊಂಡು ಹೋಗುವದು ಸಾಕಾಗಿದೆ. ಹಾಗಿರುವಾಗ ಹೊಸದಾಗಿ ಪಾಕಿಸ್ತಾನವನ್ನೆಲ್ಲಿ ಆಕ್ರಮಿಸೋಣ? ಅಂತ ರಶಿಯಾದ ತಲೆಬಿಸಿ. ಆದರೆ ಪಾಕಿಸ್ತಾನಕ್ಕೆ ಒಂದು ಗತಿ ಕಾಣಿಸಿದ ಹೊರತೂ ಮುಜಾಹಿದೀನ ಬಂಡುಕೋರರ ಹಾವಳಿ ನಿಲ್ಲುವದಿಲ್ಲ. ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಬೇಕು ಅಂದರೆ ಏನು ಮಾಡಬೇಕು? ಅಂತ ರಶಿಯಾ ವಿಚಾರ ಮಾಡಿತು. ಹೇಗೂ ಭಾರತ, ಇಂದಿರಾ ಗಾಂಧಿ ರಶಿಯಾಕ್ಕೆ ಪರಮಾಪ್ತರು. ಇಂದಿರಾ ಗಾಂಧಿಗೆ ಹೇಳಿ, ಮನವಿ ಮಾಡಿಕೊಂಡು, ಪಾಕಿಸ್ತಾನದ ಮೇಲೆ ಆಕ್ರಮಣ ಮಾಡಿ ಅಂತ ಹೇಳಿದರೆ ಹೇಗೆ? ಹೇಗೂ ಇಂದಿರಾ ಗಾಂಧಿಗೆ ಪಾಕಿಸ್ತಾನ ಕಂಡರೆ ಬದ್ಧ ದ್ವೇಷ. ಅದೂ ಎಲ್ಲರಿಗೂ ಗೊತ್ತಿತ್ತು.

೧೯೭೧ ರಲ್ಲಿ ಪಾಕಿಸ್ತಾನವನ್ನು ಒಡೆದು, ಬಾಂಗ್ಲಾದೇಶ ಮಾಡಿಕೊಟ್ಟುಬಿಟ್ಟಿದ್ದರು ಇಂದಿರಾ ಗಾಂಧಿ. ಆವಾಗಲೇ ಪಾಕಿಸ್ತಾನವನ್ನು ಪೂರ್ತಿಯಾಗಿ ನಾಶ ಮಾಡಿ, ಆಪೋಶನ ತೆಗೆದುಕೊಳ್ಳುವ ಒಂದು ಮಾಸ್ಟರ್ ಪ್ಲಾನ್ ಹಾಕಿದ್ದರು ಅವರು. ಆದರೆ ಅವರದ್ದೇ ಸಂಪುಟದಲ್ಲಿದ್ದ ಗದ್ದಾರ್ ಜನರಿಂದ ಮಾಹಿತಿ ಸೋರಿ ಹೋಗಿ, ಅಮೇರಿಕಾಕ್ಕೆ ಮುಟ್ಟಿ, ಅಲ್ಲಿನ ಆಗಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ ಬಂಗಾಲ ಕೊಲ್ಲಿಗೆ ದೊಡ್ಡ ಮಟ್ಟದ ನೌಕಾಪಡೆ ಕಳಿಸಿ, ಬರೋಬ್ಬರಿ ಆವಾಜ್ ಹಾಕಿದ್ದರು. ಅಷ್ಟು ದೊಡ್ಡ ಮಟ್ಟದ ಆವಾಜ್ ಬಂತು ಅಂತ ಆವತ್ತು ಇಂದಿರಾ ಭುಸುಗುಡುತ್ತಲೇ ಪಾಕಿಸ್ತಾನ ನಿರ್ನಾಮ ಮಾಡುವ ಆಲೋಚನೆಯಿಂದ ಹಿಂಜರಿದಿದ್ದರು. ಆದರೆ ಒಳಗೆ ರೋಷ ಹಾಗೇ ಇತ್ತು. ಈಗ ರಶಿಯಾ ಸುಪಾರಿ ಕೊಟ್ಟು, 'ಸ್ವಲ್ಪ ಪಾಕಿಸ್ತಾನವನ್ನು ವಿಚಾರಿಸಿಕೊಳ್ಳಿ. ನಾವು ಉಳಿದಿದ್ದನ್ನು ನೋಡಿಕೊಳ್ಳುತ್ತೇವೆ. ಅಮೇರಿಕಾದ ಚಿಂತೆ ನಿಮಗೆ ಬೇಡ,' ಅಂತ ಹೇಳಿದಾಗ ಇಂದಿರಾ ಸಿಕ್ಕಾಪಟ್ಟೆ ಹುರುಪಾಗಿಬಿಟ್ಟರು.

ಬ್ಲೂಸ್ಟಾರ್ ಕಾರ್ಯಾಚರಣೆಯ ಯಶಸ್ಸಿನಿಂದ ಥ್ರಿಲ್ ಆಗಿದ್ದ ಸೈನ್ಯ ಕೂಡ ರೈಟ್ ಅಂತು. ಪಾಕಿಸ್ತಾನದ ಮೇಲೆ ಆಕ್ರಮಣದ ಒಂದು ಯೋಜನೆ ತಯಾರಾಯಿತು. ಇದು ಹೇಗೋ ಲೀಕ್ ಆಗಿ, ಈ ಯೋಜನೆ ಪಾಕಿಸ್ತಾನಕ್ಕೆ ಮತ್ತು ಅಮೇರಿಕಾಗೆ ತಿಳಿದು ಬಿಟ್ಟಿತು. ಪಾಕಿಸ್ತಾನಕ್ಕಿಂತ ಹೆಚ್ಚಾಗಿ ಅಮೇರಿಕಾ ಬೆಚ್ಚಿ ಬಿತ್ತು. ಭಾರತ ಆಕ್ರಮಣ ಮಾಡಿ, ಪಾಕಿಸ್ತಾನ ಏನಾದರೂ ಯುದ್ಧ ಮಾಡಬೇಕಾಗಿ ಬಂದರೆ ಆಫ್ಘನ್ ಮುಜಾಹಿದೀನರು ಅನಾಥರಾಗಿ ಬಿಡುತ್ತಿದ್ದರು. ರಶಿಯಾ ಆರಾಮಾಗಿ ಅವರ ಬ್ಯಾಂಡ್ ಬಾರಿಸಿ ಬಿಡುತ್ತಿತ್ತು. ಹಾಗೇನಾದರೂ ಆಗಿದ್ದರೆ USA ಮತ್ತು USSR ಎಂಬ ಎರಡು ಸೂಪರ್ ಪವರ್ ಗಳ ಮಧ್ಯೆ ನಡೆಯುತ್ತಿದ್ದ ಶೀತಲ ಸಮರದಲ್ಲಿ ಅಮೇರಿಕಾಗೆ ಸೋಲಾಗುತ್ತಿತ್ತು. by hook or by crook ಸೊವಿಯಟ್ ಯೂನಿಯನ್ ನನ್ನು ನಿರ್ನಾಮ ಮಾಡಿ ಒಗೆಯಬೇಕೆಂದು ಪಣ ತೊಟ್ಟಿದ್ದ ಅಂದಿನ ಅಧ್ಯಕ್ಷ ರೇಗನ್, ಉಪಾಧ್ಯಕ್ಷ ಬುಶ್ (ಹಿರಿಯ), CIA ಮುಖ್ಯಸ್ಥ ವಿಲಿಯಂ ಕೇಸೀ ಅವರಿಗೆ ಮತ್ತು ಅಮೇರಿಕಾದ ವಿದೇಶಾಂಗ ನೀತಿ ರೂಪಿಸುತ್ತಿದ್ದ ಮಂದಿಗೆ ಇದು ಸುತಾರಾಂ ಇಷ್ಟವಿರಲಿಲ್ಲ. ಪಾಕಿಸ್ತಾನವನ್ನು ಬೆಂಡೆತ್ತುವ ಭಾರತದ ಮಹದಾಸೆಗೆ ಒಂದು ಕಡಿವಾಣ ಹಾಕಿ, ಪಾಕಿಸ್ತಾನದ ಮೇಲೆ ಆಗಲಿರುವ ಆಕ್ರಮಣ ತಪ್ಪಿಸಲೇ ಬೇಕಿತ್ತು. ಅದಕ್ಕೆ ಏನು ಮಾಡಬೇಕು? ಬೇರೆ ಬೇರೆ ಸಾಧ್ಯತೆಗಳನ್ನು ಹುಡುಕುತ್ತ ಹೊರಟರು ಪಾಕಿಸ್ತಾನ ಮತ್ತು ಅಮೇರಿಕಾ.

ಪಾಕಿಸ್ತಾನ ಪಂಜಾಬಿನ ಖಲಿಸ್ತಾನ ಉಗ್ರರಿಗೆ ಬೇಕಾದಷ್ಟು ಸಪೋರ್ಟ್ ಮಾಡಿತ್ತು. ಈಗ ಬ್ಲೂಸ್ಟಾರ್ ಕಾರ್ಯಾಚರಣೆಯ ನಂತರ ಸಿಖ್ ಸಮುದಾಯದಲ್ಲಿ ಇಂದಿರಾ ವಿರುದ್ಧ ದೊಡ್ಡ ಮಟ್ಟದ ಆಕ್ರೋಶ, ಸೇಡಿನ ಭಾವನೆ ಎದ್ದಿದ್ದು ಗೊತ್ತಿರದ ಸಂಗತಿಯೇನಾಗಿರಲಿಲ್ಲ. ಎಲ್ಲ ಗೊತ್ತೇ ಇತ್ತು. ಇಂದಿರಾ ಹತ್ಯೆಗೆ ಅನೇಕ ಯೋಜನೆಗಳನ್ನು ಬೇರೆ ಬೇರೆ ಸಿಖ್ ಉಗ್ರಗಾಮಿ ಸಂಘಟನೆಗಳು ಹಾಕಿ ಕೊಳ್ಳುತ್ತಿದ್ದವು. ಅಂತಹ ಸಂಘಟನೆಗಳನ್ನು ಪಾಕಿಸ್ತಾನದ ISI, ಅಮೇರಿಕಾದ CIA ಬೇಹುಗಾರರು infiltrate ಮಾಡಿದ್ದರು!

ಯಾವಾಗ ಸಿಖ್ ಅಂಗರಕ್ಷರನ್ನು ಉಪಯೋಗಿಸಿಕೊಂಡು ಇಂದಿರಾ ಗಾಂಧಿಯ ಹತ್ಯೆ ಮಾಡಿಬಿಡಬೇಕು ಎನ್ನುವ ಯೋಜನೆಯ ಸುಳಿವು ಪಾಕಿಸ್ತಾನ, ಅಮೇರಿಕಾ ಕಿವಿಗೆ ಬಿತ್ತೋ ಅಂತರಾಷ್ಟ್ರೀಯ ಬೇಹುಗಾರರು ಜಾಗೃತರಾಗಿ ಬಿಟ್ಟರು. ಅಥವಾ ಅಂತಹದೊಂದು ಖತರ್ನಾಕ್ ಐಡಿಯಾ ಅವರೇ ಕೊಟ್ಟಿದ್ದರೋ ಏನೋ. ಒಟ್ಟಿನಲ್ಲಿ ಇಂತಹ ಸದಾವಕಾಶ ಮತ್ತೆ ಸಿಗುವದಿಲ್ಲ ಅಂತ ಅವರಿಗೆ ಖಾತ್ರಿಯಾಗಿ ಹೋಯಿತು. ಅಂತಹ ಇಂದಿರಾ ಹತ್ಯೆಯ ಯೋಜನೆಯನ್ನು ಯಾವದೇ ರೀತಿಯಲ್ಲಿ ವಿಫಲವಾಗಲು ಬಿಡಬಾರದು ಅಂತ ಖುದ್ದಾಗಿ ತಾವೇ ಅದರ ಮೇಲ್ವಿಚಾರಣೆಗೆ ನಿಂತು ಬಿಟ್ಟರು. ಕೇವಲ ಭಾರತದ ಸಿಖ್ ಜನರೇ ಆಗಿದ್ದರೆ ಎಲ್ಲಾದರೂ ತಪ್ಪು ಮಾಡಿಕೊಂಡು ಹತ್ಯೆಯ ಯತ್ನದಲ್ಲಿ ವಿಫಲರಾಗುತ್ತಿದ್ದರೋ ಏನೋ. ಆದರೆ ಈಗ ವೃತ್ತಿಪರ ಬೇಹುಗಾರರು, covert operation specialist ಗಳು ಟೊಂಕ ಕಟ್ಟಿ ಅವರ ಸಹಾಯಕ್ಕೆ ನಿಂತರು. ಶಿಸ್ತುಬದ್ಧವಾಗಿ ಯೋಜನೆ ಹಾಕಿಕೊಟ್ಟರು. ಅದಕ್ಕೆಂದೇ ಬೇರೆ ಬೇರೆ ಬೇಹುಗಾರಿಕೆ ಸಂಸ್ಥೆಗಳ ಸ್ಪೆಷಲಿಸ್ಟಗಳು ಪಾಕಿಸ್ತಾನಕ್ಕೆ ಬಂದು ಕೂತಿದ್ದರು. ಹಂತಕರಲ್ಲಿ ಒಬ್ಬನಾದ ಬೀಯಂತ್ ಸಿಂಗನನ್ನು ರಹಸ್ಯವಾಗಿ ಪಂಜಾಬ್ ಗಡಿಯಿಂದ ಹೆಲಿಕಾಪ್ಟರ್ ನಲ್ಲಿ ಪಾಕಿಸ್ತಾನಕ್ಕೆ ಲಿಫ್ಟ್ ಮಾಡಿ, ಅವನನ್ನು ಪಾಕಿಸ್ತಾನದಲ್ಲಿ ವಾರಗಟ್ಟಲೆ ಇಟ್ಟುಕೊಂಡು, ಬರೋಬ್ಬರಿ ತರಬೇತಿ ನೀಡಿ, step by step ಸೂಚನೆ ಕೊಟ್ಟು, rehearsal ಮಾಡಿಸಿಯೇ ಕಳಿಸಲಾಗಿತ್ತು. ಅವರು ಹೇಳಿದಂತೆ ಬಂದು ಮಾಡುವದಷ್ಟೇ ಅವನ ಕೆಲಸವಾಗಿತ್ತು. ಅದಕ್ಕೆ ಬೇಕಾದ ಇನ್ನಿತರ ವ್ಯವಸ್ಥೆಗಳನ್ನು ಅಂತರಾಷ್ಟ್ರೀಯ ಬೇಹುಗಾರಿಕೆ ಸಂಸ್ಥೆಗಳ covert operators ಅವರದ್ದೇ ರೀತಿಯಲ್ಲಿ ಮಾಡುತ್ತಿದ್ದರು.

ಹೀಗೆ ಪಾಕಿಸ್ತಾನ ಮತ್ತು ಅಮೇರಿಕಾ ಎರಡೂ ಕೂಡಿ, ಆಫ್ಘಾನಿಸ್ತಾನದಲ್ಲಿ ಸೊವಿಯಟ್ ರಶಿಯಾ ಹಣಿಯುವ ತಮ್ಮ ಪ್ಲಾನಿಗೆ ಎಲ್ಲಿ ಇಂದಿರಾ ಗಾಂಧಿ ಮುಳ್ಳಾಗಿ ಬಿಡುತ್ತಾರೋ ಅನ್ನುವ ಆತಂಕದಲ್ಲಿ, ಇಂದಿರಾ ಗಾಂಧಿಯನ್ನು ತೆಗೆಸಿಬಿಟ್ಟರು ಅಂತ ತಾರಿಕ್ ಅಲಿ ಅವರ ಕಲ್ಪನೆ. once again ಕಲ್ಪನೆ. ಆದರೆ ಆಗಿನ geopolitical ವಸ್ತುಸ್ಥಿತಿ ಗಮನಿಸಿದರೆ ಇದ್ದರೂ ಇರಬಹುದು ಅನ್ನಿಸುತ್ತದೆ. ತಾರಿಕ್ ಅಲಿ ಇನ್ನೂ ಹೆಚ್ಚಿನ ಕಲ್ಪನೆ ಮಾಡಿಕೊಂಡು covert operators, ಅವರ ತರಬೇತಿ ವಿಧಾನ ಎಲ್ಲ ವಿವರವಾಗಿ ಬರೆದಿದ್ದಾರೆ. ಅದು ಬೇರೆ ಬಿಡಿ.

ತಾರಿಕ್ ಅಲಿ ಕಲ್ಪಿಸಿಕೊಂಡಿರುವ ಥಿಯರಿಯಲ್ಲಿ ಭಯಾನಕ ಅನ್ನಿಸುವ ಒಂದು ಅಂಶವಿದೆ. ಅದು ಏನಾದರೂ ನಿಜವೇ ಆಗಿ, ಒಂದು ದಿವಸ ಹೊರಗೆ ಬಂದರೆ ಅದೊಂದು ದೊಡ್ಡ ಸ್ಪೋಟಕ explosive ಸುದ್ದಿ ಆಗುವದರಲ್ಲಿ ಯಾವದೇ ಸಂಶಯವಿಲ್ಲ.

ಅದೇನೆಂದರೆ, ಹಂತಕರಲ್ಲಿ ಒಬ್ಬನಾದ ಬೀಯಂತ್ ಸಿಂಗನನ್ನು, ಇಂದಿರಾ ಹತ್ಯೆಯ ನಂತರ, ಅಲ್ಲೇ ಇದ್ದ ರಕ್ಷಣಾ ಪಡೆಯವರು ಗುಂಡಿಟ್ಟು ಕೊಂದು ಬಿಟ್ಟರು. ಪರಿಸ್ಥಿತಿ ನಿಯಂತ್ರಿಸಲು ಅಂತ ಗುಂಡು ಹಾರಿಸಿದರು. ಅದರಲ್ಲಿ ಗುಂಡು ತಿಂದ ಬಿಯಾಂತ್ ಸಿಂಗ್ ಸತ್ತು ಹೋದನೇ? ಅಥವಾ ಬೀಯಂತ್ ಸಿಂಗನನ್ನು ಮುಗಿಸೇ ಬಿಡಿ ಅಂತ ಬೇರೆ ಎಲ್ಲಿಂದಲೋ ಆಜ್ಞೆ ಬಂದಿತ್ತೆ? ಲೇಖಕ ತಾರಿಕ್ ಅಲಿ ಅವರ ಕಲ್ಪನೆ ಪ್ರಕಾರ ಇಂದಿರಾ ಹತ್ಯೆಯ ಮಾಸ್ಟರ್ ಪ್ಲಾನ್ ಹಾಕಿದವರಿಗೆ ಬಿಯಾಂತ್ ಸಿಂಗ್ ಉಳಿಯುವದು ಬೇಕಾಗಿಯೇ ಇರಲಿಲ್ಲ. ಯಾಕೆಂದರೆ ಅವನು ಪಾಕಿಸ್ತಾನಕ್ಕೆ ಹೋಗಿದ್ದ. ಅಲ್ಲಿ ನಾಮೀ ಬೇಹುಗಾರರನ್ನು ಭೆಟ್ಟಿಯಾಗಿದ್ದ. covert operations ಮಾಡುವ ವಿಶ್ವದ ಕೆಲವೇ ಕೆಲವು ಸ್ಪೆಷಲಿಸ್ಟಗಳ ಮುಖ ಪರಿಚಯ ಎಲ್ಲ ಅವನಿಗೆ ಇತ್ತು. ಅನೇಕ ರಹಸ್ಯಗಳನ್ನು ಅರಿತಿದ್ದ. ಮುಂದೊಂದು ದಿನ ಅವನು ಅದನ್ನೆಲ್ಲ ಯಾರ ಮುಂದಾದರೂ ಬಾಯಿ ಬಿಟ್ಟರೆ ಕಷ್ಟ ಅಂತ ಅವನನ್ನು 'ತೆಗೆದು' ಬಿಡುವಂತೆ ಇಂದಿರಾ ನಿವಾಸದ ರಕ್ಷಣಾ ಸಿಬ್ಬಂದಿಗೆ ಆಜ್ಞೆಯಾಗಿತ್ತು. ಹಾಗಿದ್ದರೆ ವಿದೇಶದ ಬೇಹುಗಾರರು ಭಾರತದ ರಕ್ಷಣಾ ಏಜನ್ಸಿಗಳನ್ನೂ ಸಹ infiltrate ಮಾಡಿದ್ದರೆ? ಅವುಗಳಲ್ಲೂ ಅವರ ಏಜೆಂಟಗಳು ಇದ್ದರೆ? ಅಂತವರು ಗದ್ದಾರಿ ಮಾಡಿಬಿಟ್ಟರೆ? ಅಂತೆಲ್ಲ ಯೋಚನೆಗಳನ್ನು ಹರಿಬಿಡುತ್ತಾರೆ ತಾರಿಕ್ ಅಲಿ. ಮತ್ತೆ ಬೀಯಾಂತ್ ಸಿಂಗ್ ಹತ್ಯೆ ಬಗ್ಗೆ ಅನೇಕ ಗೊಂದಲಗಳೂ ಇವೆ. ಅವನ್ನು ಮೊದಲು ಬಂಧಿಸಿ ನಂತರ ಕೊಲ್ಲಲಾಯಿತು ಅಂತಲೂ ಸುದ್ದಿಯಾಗಿತ್ತು.

ಒಟ್ಟಿನಲ್ಲಿ ಒಂದು ಇಂಟೆರೆಸ್ಟಿಂಗ್ ಮಾಹಿತಿ. 'ಹೀಗೂ ಆಗಿರಬಹುದೇ?' ಅಂತ ಅನ್ನಿಸದೇ ಇರುವದಿಲ್ಲ. ಚಿಕ್ಕ ಪುಸ್ತಕ. ಅದೂ ನಾಟಕದಂತೆ ಬರೆದಿದ್ದು. ಒಂದೆರೆಡು ಘಂಟೆಗಳಲ್ಲಿ ಓದಿ ಮುಗಿಸಿಬಿಡಬಹುದು. ಆದರೆ ಅದರಲ್ಲಿನ ಸಾಧ್ಯತೆಗಳು, ಅಂತರಾಷ್ಟ್ರೀಯ ಮಟ್ಟದ covert operations, ದೊಡ್ಡ ದೊಡ್ಡ ಷಡ್ಯಂತ್ರಗಳು ಇತ್ಯಾದಿಗಳ ಬಗ್ಗೆ ಯೋಚನೆ ಮಾಡಿದಂತೆ ತಲೆ ಗಿಂವ್ವೆನ್ನುತ್ತದೆ.

ಒಮ್ಮೊಮ್ಮೆ ಹೀಗಾಗುತ್ತದೆ. ಕೆಲವು ಖತರ್ನಾಕ್ ಲೇಖಕರಿಗೆ ಇಂತಹ ರೋಚಕ ಘಟನೆಗಳ ಬಗ್ಗೆ ಎಲ್ಲ ಮಾಹಿತಿ ಬರೋಬ್ಬರಿ ಸಿಕ್ಕಿರುತ್ತದೆ. ಆದರೆ ಎಲ್ಲವನ್ನೂ ಇದ್ದಕ್ಕಿದ್ದ ಹಾಗೆ ಬರೆದು ಬಿಟ್ಟರೆ ಏನೇನೋ ಸಮಸ್ಯೆಗಳು ಎದುರಾಗುತ್ತವೆ. ಕೋರ್ಟು, ಕೇಸು, ಅದು ಇದು ಅಂತ ರಗಳೆ. ಅದಕ್ಕೇ ಅಂತಲೇ ಇದ್ದದ್ದನ್ನು ಇದ್ದ ಹಾಗೆಯೇ ಬರೆದು, ಹೆಸರು ಗಿಸರು ಒಂದಿಷ್ಟು ಚೇಂಜ್ ಮಾಡಿ, ಕಾಲ್ಪನಿಕ ಅಂತ ಒಂದು ಲೇಬಲ್ ಅಂಟಿಸಿಬಿಡುತ್ತಾರೆ. ಅವರ ತಪ್ಪಲ್ಲ ಬಿಡಿ. ಇದೇ ಮಾದರಿಯಲ್ಲಿ ಜಾನ್ ಕೆನಡಿ ಹತ್ಯೆ (Kennedy Must Be Killed: A Novel by Chuck Helppie), ವಿಮಾನ ಸ್ಪೋಟದಲ್ಲಿ ಪಾಕಿಸ್ತಾನದ ಅಧ್ಯಕ್ಷ ಜಿಯಾ ಉಲ್ ಹಕ್ ಸಂಶಯಾಸ್ಪದ ಸಾವು (A Case of Exploding Mangoes by Mohammed Hanif) ಬಗ್ಗೆ ಒಳ್ಳೊಳ್ಳೆ ಪುಸ್ತಕಗಳು ಬಂದಿವೆ. ಕಾಲ್ಪನಿಕ ಅಂತ ಅವರು ಹೇಳಿಕೊಂಡಿದ್ದು ಬಿಟ್ಟರೆ ಸ್ವಲ್ಪ ಸಾಮಾನ್ಯ ಜ್ಞಾನ ಇರುವವರಿಗೂ ಎಲ್ಲ ಬರೋಬ್ಬರಿ ಗೊತ್ತಾಗಿ, ಸಂಚಿನ ಸೂತ್ರಧಾರಿಗಳು ಯಾರು, ಎಂತ ಅಂತ ಎಲ್ಲ ತಿಳಿದುಬಿಡುತ್ತದೆ. ಇದೂ ಅದೇ ಮಾದರಿಯ ಪುಸ್ತಕ ಇರಬಹುದೇ? ಗೊತ್ತಿಲ್ಲ ;)

ಭಾರತದ ಬಾಹ್ಯ ಬೇಹುಗಾರಿಕೆ ಸಂಸ್ಥೆ R&AW ದ ಸ್ಥಾಪಕ ಮತ್ತು ಇಂದಿರಾ ಗಾಂಧಿಯ ಪರಮಾಪ್ತ, ಅವರ ಸುತ್ತ ಇರುತ್ತಿದ್ದ ಕಾಶ್ಮೀರಿ ಕೂಟದಲ್ಲಿನ ಪ್ರಮುಖ, ದಿವಂಗತ ರಾಮೇಶ್ವರ್ ನಾಥ್ ಕಾವ್ ಇಂದಿರಾ ಹತ್ಯೆಯ ಬಗ್ಗೆ most authentic & real ಅನ್ನುವಂತಹ ಒಂದು ಪುಸ್ತಕ ಬರೆದಿಟ್ಟಿದ್ದಾರಂತೆ. ಆದರೆ ಅವರು ಒಂದು ಕಂಡೀಶನ್ ಹಾಕಿ ಸತ್ತು ಹೋದರು. 'ನನ್ನ ಸಾವಿನ ಇಪ್ಪೈತ್ತೈದು ವರ್ಷಗಳ ನಂತರವೇ ಇದನ್ನು ಪ್ರಕಟಿಸಬಹುದು. ಅಲ್ಲಿಯವರೆಗೆ ಸೀಲ್ ಮಾಡಿ ಇಡತಕ್ಕದ್ದು,' ಅಂತ. ಅದೇನೇನು ಸ್ಪೋಟಕ ಮಾಹಿತಿ ಬರೆದಿದ್ದಾರೋ ಭಾರತದ ಗೂಢಚರ್ಯೆಯ ಪಿತಾಮಹ ಕಾವ್. ಹಾಗಂತ ಅವರು R&AW  ದ ನಿವೃತ್ತ ಅಧಿಕಾರಿ ಯಾದವ್ ಅವರಿಗೆ ಹೇಳಿಕೊಂಡಿದ್ದರಂತೆ. ಅದನ್ನು ಯಾದವ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಅದೂ ಒಂದು ಅದ್ಭುತ ಪುಸ್ತಕ. Mission R&AW by RK Yadav. ಆ ಪುಸ್ತಕದಿಂದ ಆಯ್ದ ಒಂದು ಬರಹ ಇಲ್ಲಿದೆ ನೋಡಿ.


No comments: