Saturday, April 25, 2015

ಮುಲ್ಲಾ ನಸ್ರುದ್ದೀನ ಮತ್ತು ಆನೆ

ಮುಲ್ಲಾ ನಸ್ರುದ್ದೀನ ಇದ್ದ ಊರಿಗೆ ಆನೆ ಬಂದಿತ್ತು. ಅದು ಆ ಊರಿಗೆ ಆನೆ ಅಂತ ಒಂದು ಪ್ರಾಣಿ ಬಂದಿದ್ದು ಅದೇ ಮೊದಲನೇ ಸಲ. ಹಾಗಂತ ಮಾತ್ರ ಅದನ್ನು ತಂದವರಿಗೆ ಗೊತ್ತಿರಲಿಲ್ಲ ಅಷ್ಟೇ. ಅವರು ಯಾರೋ ಆನೆ ಮಾರಾಟಗಾರರು. ತಮ್ಮ ಆನೆ ಮಾರಾಟ ಮಾಡಲು ಅಂತ ಊರಿಂದೂರಿಗೆ ತಿರುಗುತ್ತ, ಮುಲ್ಲಾನ ಊರಿಗೆ ಬಂದು, ಡೇರೆ ಹಾಕಿಕೊಂಡು, ಆನೆಯನ್ನು ಪ್ರದರ್ಶನಕ್ಕೆ ಇಟ್ಟುಕೊಂಡು ಕೂತಿದ್ದರು.

ಎಲ್ಲರಂತೆ ಮುಲ್ಲಾ ಸಹಿತ ಆನೆ ನೋಡಲು ಹೋದ. ಹೋದವರೆಲ್ಲ ದೂರ ನಿಂತು ಆನೆಯನ್ನು ನೋಡುತ್ತ, ಆಶ್ಚರ್ಯ ಪಡುತ್ತ, ಸಂಭ್ರಮಿಸುತ್ತ, ತಮ್ಮ ತಮ್ಮಲ್ಲೇ ಏನೇನೋ ಮಾತಾಡುತ್ತ ಇದ್ದರು. ಇವನು ಹೇಳಿ ಕೇಳಿ ಮುಲ್ಲಾ ನಸ್ರುದ್ದೀನ. ಎಲ್ಲರಕಿಂತ ಸ್ವಲ್ಪ ಬೇರೆಯೇ. ಸೀದಾ ಆನೆಯ ಹತ್ತಿರಕ್ಕೇ ಹೋಗಿಬಿಟ್ಟ!

ಹೋದವನೇ ಆನೆಯ ಸುತ್ತ ತಿರುಗತೊಡಗಿದ. ನೋಡಿದವರಿಗೆ ಅನ್ನಿಸಬೇಕು, 'ಎಲ್ಲಿ ಇವನು ಗಜಶಾಸ್ತ್ರ ಪಂಡಿತನೋ ಹೇಗೆ? ಆನೆಯನ್ನು ವಿಸ್ತೃತವಾಗಿ ಅಭ್ಯಸಿಸಿ, ಅದರ ಗುಣ ವಿಶೇಷ, ಕುಂದು ಕೊರತೆ ಎಲ್ಲ ಕಂಡುಹಿಡಿಯುತ್ತಿದ್ದಾನೋ ಹೇಗೆ?' ಅಂತ. ಮುಲ್ಲಾ ಆನೆಯ ಸುತ್ತ ರೌಂಡ್ ಹಾಕಿಯೇ ಹಾಕಿದ.

ಆನೆ ಮಾರುವವರು ಸಹ ಮುಲ್ಲಾನ ಚಟುವಟಿಕೆಗಳನ್ನು ಗಮನಿಸಿದರು. ಅವರಿಗೆ ಏನೆನ್ನಿಸಿತೋ ಏನೋ. ಬಂದವರೇ, ಮುಲ್ಲಾ ನಸ್ರುದ್ದೀನನನ್ನು ಸ್ವಲ್ಪ ಆಕಡೆ ಕರೆದುಕೊಂಡು ಹೋದವರೇ, ಏನೋ ಕುಸುಪುಸು ಮಾತಾಡಿ, ಅವನ ಕೈಯಲ್ಲಿ ಒಂದಿಷ್ಟು ಚಿನ್ನದ ನಾಣ್ಯಗಳನ್ನು ತುರುಕಿ, ಆನೆ ಮಾರಾಟವಾಗುವ ತನಕ ಬಾಯಿ ಮುಚ್ಚಿಕೊಂಡು ಸುಮ್ಮನೆ ಕೂತಿರಬೇಕೆಂದೂ, ಆನೆ ಮಾರಾಟವಾದ ನಂತರ ಮತ್ತಿಷ್ಟು ಕಾಸು ಕೊಡುವದಾಗಿ ಹೇಳಿದರು. ಮುಲ್ಲಾನಿಗೆ ಏನು, ಎತ್ತ, ಎಂತ ಅಂತ ತಿಳಿಯಲಿಲ್ಲ. ಆದರೂ ಕಾಸು ಕೊಡುತ್ತಿದ್ದಾರೆ. ಏನೂ ಮಾತಾಡಬೇಡ ಅನ್ನುತ್ತಿದ್ದಾರೆ. ಓಕೆ. ಸರಿ, ಅಂದುಕೊಂಡ ಮುಲ್ಲಾ ಕಾಸು ತೆಗೆದುಕೊಂಡು, ಆನೆ ಸುತ್ತ ಸುತ್ತುವದನ್ನು ಬಿಟ್ಟು, ತಾನೂ ಜನರಲ್ಲಿ ಒಂದಾದ.

ಮುಲ್ಲಾ ಆನೆ ಸುತ್ತ ಆ ಪರಿ ಸುತ್ತುತ್ತ ಇರುವದನ್ನು ಗಮನಿಸಿದ್ದ ಆನೆ ಮಾರಾಟದ ಮಂದಿ, 'ಈ ಮುಲ್ಲಾ ಯಾರೋ ಗಜಶಾಸ್ತ್ರದ ಪಂಡಿತನೇ ಇರಬೇಕು. ಅವರ ಆನೆಯಲ್ಲಿ ಇರಬಹುದಾದ, ಇಲ್ಲದಿರಬಹುದಾದ ಕುಂದು ಕೊರತೆ ಎಲ್ಲ ಕಂಡು ಹಿಡಿದು, ಜನರ ಮುಂದೆ ಜಾಗಟೆ ಬಾರಿಸಿಬಿಟ್ಟ ಅಂದರೆ ಆನೆ ಮಾರಾಟ ಮಾಡುವದು ಕಷ್ಟವಾಗಬಹುದು,' ಅಂತ ವಿಚಾರ ಮಾಡಿ, ಮುಲ್ಲಾನಿಗೆ ರೊಕ್ಕ ಕೊಟ್ಟು ಪಟಾಯಿಸಿದ್ದರು. ಅಥವಾ ಹಾಗಂತ ತಿಳಿದಿದ್ದರು.

ಮುಂದೆ ಸ್ವಲ್ಪ ಸಮಯದ ನಂತರ ಆನೆಯ ಮಾರಾಟವಾಯಿತು. ಆನೆ ತಂದವರು ಖುಷ್ ಆದರು. ತಮ್ಮ ರೊಕ್ಕ ಎಣಿಸಿಕೊಂಡ ನಂತರ ಮುಲ್ಲಾ ನಸ್ರುದ್ದೀನನನ್ನು ಹುಡುಕಿದರು. ಮೊದಲಾಡಿದ ಮಾತಿನಂತೆ ಮತ್ತೊಂದಿಷ್ಟು ಕಾಸು ಕೈಯಲ್ಲಿಟ್ಟರು. ಒಂದು ಪ್ರಶ್ನೆ ಕೇಳಿದರು. 'ಮುಲ್ಲಾ ಸಾಹೇಬರೇ, ಆನೆಯನ್ನು ಅಷ್ಟೊಂದು ಕುತೂಹಲದಿಂದ, ಅಷ್ಟೊಂದು ಕೂಲಂಕಷವಾಗಿ ಪರೀಕ್ಷೆ ಮಾಡುತ್ತಿದ್ದಿರಲ್ಲ. ಏನು ಅನ್ನಿಸಿತು ಆನೆ ಬಗ್ಗೆ? ಈಗ ಎಲ್ಲ ಬಿಚ್ಚಿ ಹೇಳಿ.'

ಮುಲ್ಲಾ ನಸ್ರುದ್ದೀನ ದೀರ್ಘವಾಗಿ ಉಸುರೆಳೆದುಕೊಂಡ. 'ಆನೆ ಅಂದರೆ ಹಿಂದೂ ಬಾಲ, ಮುಂದೂ ಬಾಲವಿರುವಂತಹ ಒಂದು ವಿಚಿತ್ರ ಪ್ರಾಣಿ!' ಅಂದವನೇ, ಸಲಾಂ ಮಾಡಿ, ಕಾಸು ಎಣಿಸುತ್ತ, ಮನೆ ದಾರಿ ಹಿಡಿದ.

ಈ ಪುಣ್ಯಾತ್ಮ ಗಜಶಾಸ್ತ್ರ ಪಂಡಿತ, ಆನೆಯ ಗುಣ ವಿಶೇಷಗಳನ್ನು ವಿಶ್ಲೇಷಣೆ ಮಾಡಿ ತಮ್ಮ ಆನೆ ಮಾರಾಟಕ್ಕೆ ಅಡ್ಡಿಯಾದಾನು ಅಂತ ಹೆದರಿ ಅವನಿಗೆ ಕಾಸು ಕೊಟ್ಟು, ಒಳಗಾಕಿಕೊಂಡೆವು ಅಂತ ಖುಷಿ ಪಟ್ಟಿದ್ದ ಆನೆ ಮಾರಾಟಗಾರರು ಮಾತ್ರ ಮುಲ್ಲಾನ ಗಜಶಾಸ್ತ್ರದ 'ಪ್ರಾವಿಣ್ಯತೆ' ಕೇಳಿ ತಲೆ ತಲೆ ಚಚ್ಚಿಕೊಂಡರು.

ನೀತಿ: ಕೆಲವರು ವಿಷಯದ ಬಗ್ಗೆ ಏನೂ ಗೊತ್ತಿಲ್ಲದಿದ್ದರೂ ಎಲ್ಲ ಗೊತ್ತಿದ್ದವರಂತೆ 'ಲುಕ್' ಕೊಡುತ್ತಿರುತ್ತಾರೆ. ಅಂತವರಿಂದ ತುಂಬ impress ಆಗುವ ಮುನ್ನ ಸ್ವಲ್ಪ ಮಾತಾಡಿಸಿ ನೋಡಿ. Light travels faster than sound. This is why some people look bright until you hear them speak.

Friday, April 17, 2015

ದೇವರಿಗೆ ಬಿಟ್ಟ ಹೋರಿ, ಎತ್ತು, ಅನಧೀಕೃತ ಎತ್ತು

ಎಲ್ಲ ಹೋರಿಗಳೂ ಎತ್ತುಗಳಾಗುವದಿಲ್ಲ
ಎಲ್ಲ ಗಂಡುಗಳೂ ಗಂಡರಾಗುವದಿಲ್ಲ

ಹಾಗೆಯೇ ಎಲ್ಲ ಗುಂಡುಗಳೂ 'ಢಮ್' ಅಂತ ಹಾರುವದಿಲ್ಲ. ಕೆಲವು ಟಿಸಮದ್ದು ಆಗಿ ಕೇವಲ ಕುಸಪುಸಾ ಅಂತ ಗ್ಯಾಸ್ ಬಿಡುವ ಶಬ್ದ ಮಾಡುತ್ತವೆಯೇ ಹೊರತೂ ಹಾರುವದಿಲ್ಲ ಅಂತ ಕೆಲವರ ಕುಚೋದ್ಯ.

ಎತ್ತು = ಗಂಡ
ಹೋರಿ = ಗಂಡಾಂತರ (ಗಂಡನಿಂದ ಅಂತರ = ಗಂಡಾಂತರ. ನಂತರ ಆಗುವ ಆವಾಂತರ ಗಂಡ್ವಾಂತರ)

ಹಾಗಂತ ಸಮೀಕರಣ ಪ್ರೇಮಿಗಳು ಮಾಡಿದ ಏನೋ ಒಂದು ತರಹದ ಸಮೀಕರಣ. ಒಪ್ಪಿಸಿಕೊಳ್ಳಿ.

'ಏನು ಹೋರಿ ಲೈಫು ಅಷ್ಟು ಮಜಾನೇ?' ಅಂತ ಕೇಳಿದವರಿಗೆ, ದನದ ಕೊಟ್ಟಿಗೆ ನೋಡಿ, ಹೋರಿ, ಮಣಕ, ಹಸು, ಕರ, ಎಮ್ಮೆ, ಕೋಣ ಎಲ್ಲವನ್ನೂ ನೋಡಿದ ಅನುಭವದಿಂದ ಹೇಳಬಹುದಾದ ಒಂದೇ ಮಾತೆಂದರೆ, 'ದೇವರಿಗೆ ಬಿಟ್ಟ ಹೋರಿ ಮಾತ್ರ ಖುಷಿಯಾಗಿರುತ್ತದೆ. ಇಲ್ಲವಾದಲ್ಲಿ ಹೆಚ್ಚಿನವು ಅನಧಿಕೃತ ಎತ್ತುಗಳಾಗಿ, ಆದರೂ ಹೋರಿ ಅಂತ ಕರೆಯಿಸಿಕೊಳ್ಳುವ ಪ್ರಾರಬ್ಧ ಕರ್ಮದ  ಗಂಡು ಕರುಗಳ ಹಾಲತ್ ಭಾಳ ಖರಾಬ್!'

ಇದೆಲ್ಲ ವಿಚಾರ ಚಿಕ್ಕಂದಿನಲ್ಲಿ ಅಜ್ಜನಮನೆ ಹೊನ್ನೆಗದ್ದೆ, ಸಿರಸಿ ಕೊಟ್ಟಿಗೆಯಲ್ಲಿ ಕಂಡು ಬರುತ್ತಿದ್ದ ಅಸಂಖ್ಯಾತ ಹೋರಿ ಕರುಗಳ ನೆನಪಲ್ಲಿ ಈಗ ಬಂತು. ಅವು ಎತ್ತುಗಳಾಗಲು ಯೋಗ್ಯವಲ್ಲ. ಯಾಕೆಂದರೆ ಕಾಮಗಾರಿ ಮಾಡಬಲ್ಲ ಎತ್ತಿನ ಬ್ರೀಡಿನವೇ ಅಲ್ಲ ಅವು. ಪಾಪ. ಕಡಿದು ತಿನ್ನುವ ಮಂದಿಗೆ ಮಾರುವಂತಿಲ್ಲ. ಅಷ್ಟಿನ ಮಟ್ಟಿನ ಧರ್ಮ ನಿಷ್ಠೆ ಇತ್ತು ಆವಾಗಿನ ಮಂದಿಗೆ. ಹಾಗಾಗಿ ಎತ್ತುಗಳಾಗಲಿಕ್ಕೆ ಯೋಗ್ಯವಿಲ್ಲದಿದ್ದರೂ ಮಾರಲಿಕ್ಕೆ ಆಗುವದಿಲ್ಲ.  ಆದರೆ ಅವುಗಳ '#@$' ಬಡಿಸದೇ ಇಟ್ಟುಕೊಳ್ಳುವಂತಿಲ್ಲ. ಇಲ್ಲವಾದರೆ ಅವುಗಳ ಜವಾನಿ, ದಿವಾನಿ, ಕಹಾನಿ ವಿಪರೀತ. ಮಸ್ತಿಗೆ ಬಂದಾಗ ಮ್ಯಾನೇಜ್ ಮಾಡುವದು ಕಷ್ಟ. ದೇವರಿಗೆ ಬಿಡೋಣ ಅಂದರೆ ಎಷ್ಟು ಅಂತ ಬಿಡೋಣ? ದೇವರೇ ಖುದ್ದಾಗಿ, 'ಸಾಕಪ್ಪೋ ಸಾಕು. ಊರಿಗೆ ಒಂದೇ ದೇವರ ಹೋರಿ ಸಾಕಪ್ಪೋ,' ಅಂದು ಬಿಡುತ್ತಾನೆ. ಯಾಕೆಂದರೆ ದೇವರಿಗೆ ಬಿಟ್ಟ ಹೋರಿ ಏನು ಮಾಡಿದರೂ ಓಕೆ. ಅದು ಎಲ್ಲಿ ಮೇಯ್ದರೂ ಓಕೆ. ಕದ್ದು ಮೇಯ್ದರೂ ಓಕೆ. ಬಾರಾ ಖೂನ್ ಮಾಫ್. ಎಲ್ಲ ಹೋರಿಗಳನ್ನೂ ದೇವರ ಹೋರಿ ಅಂತ ಮಾಡಿ ಬಿಟ್ಟು ಬಿಟ್ಟರೆ, ಎಲ್ಲ ಗದ್ದೆ, ಹಿತ್ತಲು ಫುಲ್ ಮಟಾಶ್! ಹಾಗಾಗಿ ಊರಿಗೆ ಒಂದಲ್ಲ, ಐದಾರು ಊರು ಸೇರಿದ ಒಂದು ಗ್ರಾಮಕ್ಕೆ ಒಂದು ದೇವರ ಹೋರಿ ಅಂತ ಬಿಡುತ್ತಿದ್ದರು ಅಂತ ನೆನಪು. ಉಳಿದವೆಲ್ಲ ಬಡಿಸಿಕೊಳ್ಳಬಾರದ ಜಾಗದಲ್ಲಿ ಬರೋಬ್ಬರಿ ಬಡಿಸಿಕೊಂಡ ಹೋರಿ ನಾಮಾಂಕಿತ ಅನಧಿಕೃತ ಎತ್ತುಗಳೇ. ಅಷ್ಟೇ ಎತ್ತುಗಳ ಬಾಸಿಂಗ, ಕೋಡು ಸಿಂಗಾರ, ದೀಪಾವಳಿಯ ಓಡಾಟ, ಸಡಗರ ಇತ್ಯಾದಿ ಮಾತ್ರ ಇಲ್ಲ. ಫುಲ್ ಟೊಮ್ಮೆ! ಹಳೇ ಕಾಲದ ಬೋಡಮ್ಮ, ಫಣಿಯಮ್ಮಗಳ ಸ್ಥಿತಿ, ಪರಿಸ್ಥಿತಿ. ಪಾಪ. ಮೂರೊತ್ತು ದಾಣಿ, ಅಕ್ಕಚ್ಚು ಸಿಕ್ಕರೆ ಹಾಕಿದ ಅಕ್ಕಯ್ಯನಿಗೆ, ಭಾವಯ್ಯನಿಗೆ, ಮಾವಯ್ಯನಿಗೆ, ಅತ್ತೆಗೆ ನಮೋ ನಮಃ. ಹಾಗೆಯೇ ಇರುತ್ತಿದ್ದವು ಪಾಪದ ಹೋರಿಗಳೆಂಬ ಅನಧಿಕೃತ ಎತ್ತುಗಳು. 

ಹೀಗೇ ವಿಚಾರ ಮಾಡಿ, ಅದೆಷ್ಟು ಹೋರಿ ಕರುಗಳನ್ನು ಅನಧಿಕೃತ ಎತ್ತುಗಳನ್ನಾಗಿ ಮಾಡಿ, ಜೀವನ ಪರ್ಯಂತ ಸಾಕಿದ ಪುಣ್ಯ ನಮ್ಮ ಅಜ್ಜನಮನೆಯವರಿಗೆ ಅದೆಷ್ಟು ಬಂತೋ! ಅದೇ ಪುಣ್ಯ ನಮಗೂ ಸ್ವಲ್ಪ ತಾಕುತ್ತಿದೆ ಅಂದುಕೊಂಡಿದ್ದೇವೆ.

ಮೊದಲೆಲ್ಲ ಅಂದರೆ ೧೯೭೫-೭೬ ಟೈಮಿನಲ್ಲಿ ಕಮ್ಮಿ ಕಮ್ಮಿ ಅಂದರೂ ಆರು ಆಕಳು, ನಾಲ್ಕು ಎಮ್ಮೆ, ಒಂದು ಜೋಡಿ ಭರ್ಜರೀ ಎತ್ತು ಇತ್ತು ನಮ್ಮ ಅಜ್ಜನಮನೆ ಕೊಟ್ಟಿಗೆಯಲ್ಲಿ. ಹೋರಿ ಕರ, ಕೋಣದ ಮಣಕಗಳ ಸಂಖ್ಯೆ ಬಿಡಿ. ಅಸಂಖ್ಯ. ಗೊಬ್ಬರದ ಗಾಡಿ ಹೊಡೆಯಲಿಕ್ಕೆ, ಆಲೆಮನೆಯಲ್ಲಿ ಗಾಣದಲ್ಲಿ ಕಬ್ಬು ಅರೆಯಲು ಕೋಣ ಬೇಕು ಅಂದರೆ ಪಕ್ಕದ ಮನೆ ಶಂಬಜ್ಜ (ಉರ್ಫ್ ಶಂಬಪ್ಪಚ್ಚಿ ಉರ್ಫ್ ಶಂಭು ಹೆಗಡೆ) ಬರೋಬ್ಬರಿ ಜೋಡಿ ಕೋಣ ಮಡಿಗಿದ್ದ. ಆಲೆಮನೆಗೆ ಕೋಣ ಕೊಡಯ್ಯಾ ಅಂದರೆ, 'ಯನ್ನ ಮನೆ ಕ್ವಾಣಾ ಬರೀ ಗೊಬ್ಬರ ಹೊಡಿಯಲ್ಲೆ ಮಾತ್ರ ಸರಿ ಮಾರಾಯಾ ಗೋಪಾಲಾ. ಆಲೆಮನಿಗೆ ಅವೆಲ್ಲಾ ತಡೀತ್ವಿಲ್ಯಾ,' ಅಂತ ನಮ್ಮ ಅಜ್ಜ ಗೋಕೃನಾಹೆಹೊ (ಗೋಪಾಲ ಕೃಷ್ಣ ನಾರಾಯಣ ಹೆಗಡೆ, ಹೊನ್ನೆಗದ್ದೆ) ಗೆ ಭೋಂಗು ಬಿಡುತ್ತಿದ್ದ. ಎಷ್ಟು ನಿಜವೋ ಏನೋ. ಸರಿ ಅಂತ ಹೇಳಿ ನಮ್ಮಜ್ಜ ಆಲೆಮನೆಗೇ ಅಂತ ಸ್ಪೆಷಲ್ ಆಗಿ ತಯಾರಾಗಿರುತ್ತಿದ್ದ ಕೋಣ ಹುಡುಕುತ್ತ ಹೋಗುತ್ತಿದ್ದ. (ಗೋಕೃನಾಹೆಹೊ, ಇದು ನಮ್ಮಜ್ಜನ ಮನೆಯ ಎಲ್ಲ ಪಾತ್ರೆ, ಪಗಡೆಗಳ ಮೇಲೆ ಕೆತ್ತಿದಂತಹ ಬರಹ. ಅವರದ್ದು ಅಂತ ಖಾತ್ರಿ ಮಾಡಲಿಕ್ಕೆ)

ಈಗ ಬಿಡಿ. ಎಲ್ಲ ಬದಲಾಗಿ ಹೋಗಿದೆ. ನಮ್ಮ ಅಜ್ಜನಮನೆ ಊರಿನಲ್ಲಿ ಕೊಟ್ಟಿಗೆ ಎಲ್ಲ ಫುಲ್ ಮಾಯವಾಗಿದೆ. ಎಲ್ಲರೂ ಡೇರಿಯಿಂದ ಹಾಲು ತರುವವರೇ. ಅದು ಏನೋ ನಮ್ಮ ಸಣ್ಣ ಮಾವ, ಪ್ರಕಾಶ ಹೆಗಡೆ, ಇನ್ನೂ ಇದ್ದಾನೆ ಮತ್ತು ಅವನಿಗೆ ಹಸು, ಕರು, ಎಲ್ಲ ಭಾಳ ಇಷ್ಟ ಅಂತ ಒಂದೆರೆಡು ಕರೆಯುವ ದನ, ಒಂದು ಎಮ್ಮೆ, ಒಂದು ಕರು ಇದೆ. ೨೦೧೨ ಡಿಸೆಂಬರ್ ನಲ್ಲಿ ನಾನು ಹೋದಾಗ ಒಂದೇ ಕರು ಇತ್ತು. ಅದು ಹೋರಿಯಾಗಿತ್ತೇ, ಹಸುವಾಗಿತ್ತೇ ಅಂತ ನಾನು ಗಮನಿಸಲಿಲ್ಲ. ಯಾಕೆಂದರೆ ಅದನ್ನು ಅಪ್ಪಿ ಮುದ್ದಾಡುವದರಲ್ಲಿಯೇ ಸಮಯ ಹೋಯಿತು. ಅಷ್ಟು ಮುದ್ದಾಗಿತ್ತು ಕರು. ಅದಕ್ಕೆ ಇನ್ನೂ ಕೇವಲ ಮೂರೋ ನಾಲ್ಕೋ ತಿಂಗಳಿರಬಹುದು ಅಷ್ಟೇ. ಹೋರಿಯಾಗಿದ್ದರೆ ಅದು ದೇವರ ಹೋರಿಯಾಗುತ್ತದೆಯೋ ಅಥವಾ ಎತ್ತಾಗಲು ಯೋಗ್ಯವಲ್ಲದಿದ್ದರೂ ಅನಧೀಕೃತ ಎತ್ತಾಗಿ ಪಾಪದ ಫಣಿಯಮ್ಮನ ಜಿಂದಗಿ ಕಳೆಯುತ್ತದೆಯೋ ಅಂತೆಲ್ಲ  ಈಗ ನೆನಪಾಯಿತು.

* ಹಳೆಯ ಬ್ಲಾಗ್ ಪೋಸ್ಟುಗಳಾದ, 'ಗಂಡಾಂತರ ಸೆ ಹೆಂಡಾಂತರ ತಕ್ ', 'ಬಗಲಲ್ಲೇ ಇರೋ ಬ್ರಹ್ಮಚಾರಿ, ದೂರ ಇರೋ ಗಂಡಾಚಾರಿ..ಇಬ್ಬರನ್ನೂ ನಂಬಬಾರದು' ಇವನ್ನು ಓದುತ್ತ, ಪ್ರೀತಿಯ ಹೊನ್ನೆಗದ್ದೆ ಫೋಟೋ ನೋಡುತ್ತ ಇದ್ದಾಗ ತಲೆಗೆ ಬಂದಿದ್ದು ಈ ಬ್ಲಾಗ್. ಅದ್ಭುತ ಹೊನ್ನೆಗದ್ದೆ ಫೋಟೋ ನೋಡಲು ಕೆಳಗಿನ ಲಿಂಕ್ ಇವೆ.

ಹೊನ್ನೆಗದ್ದೆ - ೧ (ಇದರಲ್ಲಿ ಇನ್ನೊಂದ್ನಾಲ್ಕು ಕೊಟ್ಟಿಗೆ ಫೋಟೋಗಳು ಇವೆ)
ಹೊನ್ನೆಗದ್ದೆ - ೨
ಹೊನ್ನೆಗದ್ದೆ - ೩
ಹೊನ್ನೆಗದ್ದೆ - ೪


ಹೊನ್ನೆಗದ್ದೆ, ಸಿರ್ಸಿ. ಮುದ್ದಾದ ಕರುವಿನ ಜೊತೆ ನಾನು :)

Psychotherapist v/s psycho the rapist. ಒಂದು ಸಲ ಭಗವದ್ಗೀತೆ ಟ್ರೈ ಮಾಡಿ (ವೀಕೆಂಡ್ ಸ್ಪೆಷಲ್)


'ವಾರ ಪೂರ್ತಿ ಏನು ಮಹಾ ಕೆಲಸ ಮಾಡಿದೆ?' ಅಂತ ಖಾತೆಖಿರ್ದಿ ತೆಗೆದುಕೊಂಡು ಕೂತರೆ, ಈಗಿತ್ತಲಾಗೆ ಬರೀ ಮಂದಿ ತಲೆ ಶಾಂತ ಮಾಡಿದ್ದೇ ಎದ್ದು ಕಾಣುತ್ತಿದೆ. Monday ದಿನ ಎಲ್ಲಾರಿಗೂ ಮಂಡೆ ಬಿಸಿ. 'ನಿಮ್ಮೌರ್, ವೀಕೆಂಡ್ ಸ್ವಲ್ಪ ವಿಶ್ರಾಂತಿ ಮಾಡಿ, ಸೋಮವಾರ ಮಸ್ತ ಫ್ರೆಶ್ ಆಗಿ ಬರ್ರೋ!' ಅಂತ ಬಾಯಿಬಿಟ್ಟು ಹೇಳಲಿಕ್ಕೆ ಆಗುವದಿಲ್ಲ. ಈ ಮಂದಿ ವೀಕೆಂಡ್ ಏನು ಮಾಡಿ ಬರುತ್ತಾರೋ ಅವರಿಗೇ ಗೊತ್ತು. ವಿಶ್ರಾಂತಿಗೆ ಅಂತ ಕೊಟ್ಟ ವಾರಾಂತ್ಯದಲ್ಲಿ ವಿಶ್ರಾಂತಿಯೊಂದನ್ನು ಬಿಟ್ಟು ಬೇರೆ ಎಲ್ಲ ಮಾಡಿ ಬಂದಿರುತ್ತಾರೆ ಅಂತ ಕಾಣುತ್ತದೆ ಅವರ ಹಾಲತ್ ನೋಡಿದರೆ. ಸೋಮವಾರ ಬೆಳಿಗ್ಗೆ, 'ಓಂ ಶಾಂತಿ, ಶಾಂತಿ, ಶಾಂತಿ,' ಅಂತ ನಾವು ನಮ್ಮನ್ನು ಖುದ್ದ ಶಾಂತ ಮಾಡಿಕೊಳ್ಳಲು ಶಾಂತಿ ಮಂತ್ರ ಜಪಿಸಿದರೆ 'ಯಾರು ಶಾಂತಿ? ಯಾವ ಶಾಂತಿ? ಡಿಸ್ಕೋ ಶಾಂತಿಯೇ?? ವಿಜಯಶಾಂತಿಯೇ ????' ಅಂತ ಅಡ್ಡಬಾಯಿ ಹಾಕಿ, ಹೇಳಿದ್ದನ್ನೂ ಸರಿಯಾಗಿ ಕೇಳದೇ, ಆ ಮಳ್ಳ ಡಿಸ್ಕೋ ಶಾಂತಿಯಂತೆ, Monday ಮಂಡೆ ಬಿಸಿಯಿಂದ ಧಿಮಿಧಿಮಿ ಕುಣಿಯತೊಡಗುತ್ತಾರೆ. ಮೇಲಿನ ಬಾಸ್ ಕೂಡ ಅಷ್ಟೇ. ಅವನಿಗೆ ಮನೆ ಕಡೆ ಕಷ್ಟ, ಇಲ್ಲಿ ಆಫೀಸಿನ ಕಡೆ ನಷ್ಟ, ಎಲ್ಲ ಸಂಬಾಳಿಸಿ ಸಂಬಾಳಿಸಿ ಅಂಬೋ ಅಂದುಬಿಡುತ್ತಾನೆ. ನಡುವೆ ಸಿಕ್ಕ ನಮ್ಮಂತವರು ಯಾರಿಗೆ ಥಂಡಾ ಮಾಡಬೇಕೋ, ಯಾರಿಗೆ ಗರಂ ಮಾಡಬೇಕೋ ಅಂತ ನಮ್ಮ ತಲೆ, ಆದಷ್ಟು, ಗರಂ ಮಾಡಿಕೊಳ್ಳದೇ ಕೆಲಸ ಮಾಡುತ್ತೇವೆ. ತಲೆಗೆ ಎಣ್ಣೆ ಹಾಕಿ ತಟ್ಟುತ್ತೇವೆ. ಅಕಸ್ಮಾತ ಯಾರಾದರೂ ನಮ್ಮ ಬುರುಡೆಗೇ ತಟ್ಟಿಬಿಟ್ಟರೆ, 'ನಗು ನಗುತಾ ನಲಿ ನಲಿ, ಏನೇ ಆಗಲಿ' ಅಂತ ಹಾಡಿ, ನಕ್ಕು, ತಟ್ಟಿಸಿಕೊಂಡು, ಲೆಕ್ಕ ಪುಸ್ತಕದಲ್ಲಿ ಬರೋಬ್ಬರಿ ಬರೆದಿಟ್ಟುಕೊಂಡು ಬರುತ್ತೇವೆ. ಮುಂದೆ ಅವರ ಬುರುಡೆಗೆ ತಟ್ಟುವ ಅವಕಾಶ ಸಿಕ್ಕಾಗ ತಟ್ಟದೇ brownie point ಗಳಿಸಬೇಕು ನೋಡಿ. ಇನ್ನೊಬ್ಬರ ಬುರುಡೆಗೆ ತಟ್ಟಬಹುದಾದ ಸಮಯದಲ್ಲೂ, ದೊಡ್ಡ ಮನಸ್ಸು ಮಾಡಿ, ತಟ್ಟದೇ, 'ಪಾಪ ಅಂತ ತಟ್ಟಿಲ್ಲ ನೋಡು. you owe me one,' ಅಂತ corporate goodwill, ill will ಎಲ್ಲದರ ಲೆಕ್ಕ ಬರೋಬ್ಬರಿ ಇಟ್ಟುಕೊಳ್ಳಬೇಕಾಗುತ್ತದೆ. ಮುಂದೆ ಯಾವಾಗಾದರೂ ಕೆಲಸಕ್ಕೆ, ಸಂಬಂಧಗಳನ್ನು ವೃದ್ಧಿಸಲು, ಹೊಸ ಸಂಪರ್ಕಗಳನ್ನು ಬೆಳೆಸಿಕೊಳ್ಳಲು ಎಲ್ಲ ಭಾಳ ಉಪಯೋಗವಾಗುತ್ತದೆ. 'ಅಯ್ಯೋ! ಆಫೀಸ್ ಪಾಲಿಟಿಕ್ಸ್ ಇಷ್ಟವಿಲ್ಲ,' ಅಂತ ಕೂತರೆ ಮುಗಿದೇ ಹೋಯಿತು. ಇಷ್ಟವಾಗಲಿ ಬಿಡಲಿ ಅಷ್ಟಿಷ್ಟು ಪಾಲಿಟಿಕ್ಸ್ ಮಾಡಲೇ ಬೇಕಾಗುತ್ತದೆ. ಇಲ್ಲವೆಂದರೆ ನಮ್ಮ ಕಸಿನ್ ರಾಮ ಭಟ್ಟ ಹೇಳುತ್ತಿದ್ದಂತೆ, 'ಕೆಲಸ ಕೊಟ್ಟೂ ಕೊಟ್ಟೂ ಕೊಂದು ಹಾಕಿ ಬಿಡುತ್ತಾರೆ ಮಾರಾಯ,' ಅನ್ನುವ ಮಾದರಿಯಲ್ಲಿ ನಿಮ್ಮ ಕೆಲಸ, ಅವರ ಕೆಲಸ, ಮಂದಿ ಕೆಲಸ, ಹಂದಿ ಕೆಲಸ, ಎಲ್ಲ ನೀವೇ ಮಾಡಬೇಕಾಗಿ ಬಂದು, ತಿಂಗಳ ಕೊನೆಗೆ ಮಾತ್ರ ಕೇವಲ ನಿಮ್ಮ ಶೇಂಗಾ ಪಗಾರ್ (peanuts pay) ಎಣಿಸಬೇಕಾಗುತ್ತದೆ.

ಕಾರ್ಪೊರೇಟ್ ಮಂದಿಗೆ ಅದರಲ್ಲೂ ನಮ್ಮ IT (Information Technology) ಮಂದಿಗೆ ಒಂದಾದಮೇಲೊಂದು ಕಂಪ್ಲೇಂಟ್ ಮಾಡಲಿಕ್ಕೆ ಮಾತ್ರ ಬರೋಬ್ಬರಿ ಬರುತ್ತದೆ. 'ಅದು ಸರಿಯಿಲ್ಲ. ಇದು ಸರಿಯಲ್ಲ. ಆ ಟೀಮಿನವರು ಅದು ಕೊಡಲಿಲ್ಲ. ಅವನು ಅದು ಸರಿ ಮಾಡಲಿಲ್ಲ. ಇವನು ಇವತ್ತು ರಜೆ. ಆಕೆಯ ಮಗನಿಗೆ ಹುಷಾರಿಲ್ಲ. ಅದಕ್ಕೇ ಆಕೆ ಬಂದಿಲ್ಲ. ಇವನ ಮಗಳು ಹುಷಾರಾದಳು. ಆದ್ರೆ ಇವನು ಇವತ್ತು ಜಡ್ಡು ಬಿದ್ದಿದ್ದಾನೆ,' ಇದೇ ಗೋಳು. ಬಾಸ್ ನಿಗೆ ಮಾತ್ರ, 'ಕೆಲಸವಾಯಿತೇ??? ಆಗಿಲ್ಲವೇ? ಲಫಡಾ ಆಯಿತಲ್ಲ? ಹಾಂ? ಈಗ ದೊಡ್ಡ ಸಾಹೇಬರ, stakeholders ತಲೆ ತಿಕ್ಕಲು ಯಾವ ತರಹದ ನವರತ್ನ ತೈಲ ತಯಾರು ಮಾಡಬೇಕು? ಆ ತೈಲವನ್ನೂ ನೀನೇ ತಯಾರು ಮಾಡಿ ಕೊಟ್ಟುಬಿಡು. ಅದನ್ನು ನಾನು ನಿನ್ನ ತಲೆಗೇ ಮೊದಲು ತಿಕ್ಕಿ, ಬರೋಬ್ಬರಿ ಪ್ರಾಕ್ಟೀಸ್ ಮಾಡಿಕೊಂಡು ಹೋಗಿ, ಅವರ ತಲೆಗೆ ತಿಕ್ಕಿ ಬರುತ್ತೇನೆ. Hope it works,' ಅಂದುಬಿಡುತ್ತಾನೆ. ಇದು ಕಾರ್ಪೊರೇಟ್ ಮಾದರಿಯ ಅಕಟಕಟಾ ಕ್ಷಣ. ಒಂದು Powerpoint ಮಾಡಿಕೊಟ್ಟರೆ ಬಾಸ್ ಆಸಾಮಿ ಖುಷಿ. ಅದೇ ಅವನಿಗೆ ಆವತ್ತು ನವರತ್ನ ತೈಲ.

ಸರಿ ಮಧ್ಯಾನದ ಹೊತ್ತಿಗೆ, ಇಲ್ಲಿ ನಾವು ಶೇರುಗಾರರಾಗಿ ನಮ್ಮ ತಂಡಗಳ ಚಿಕ್ಕ ಹುಡುಗ, ಹುಡುಗಿಯರ ದುಃಖ ದುಮ್ಮಾನ ಇತ್ಯಾದಿ ಕೇಳಿ, ಅದೂ ತುಂಬ empathy ಅಂದರೆ ಸಹಾನುಭೂತಿಯಿಂದ, ವಿಭೂತಿ ಗಿಬೂತಿ ಹಚ್ಚಿ, ಗಮನ ಕೊಟ್ಟು ಕೇಳಿ, 'I feel your pain. Really I do,' ಅಂತ ಗ್ಲಿಸರೀನ್ ಕಣ್ಣೀರು ಸುರಿಸಿ, ಒಂದು ಸೈಕೋಥೆರಪಿ (psychotherapy) ಸೆಶನ್ ಮಾಡಿ ಮುಗಿಸಿರುತ್ತೇವೆ. 'I feel your pain' ಅನ್ನುವದರ ಬದಲು ತಪ್ಪಿ 'I understand' ಅಂದರೆ ಅದು ಒಮ್ಮೊಮ್ಮೆ ಬ್ಯಾಕ್ ಫೈರ್ ಆಗಿ ಬಂದು ನಿಮ್ಮ ಬ್ಯಾಕಿಗೇ ಕಚ್ಚಿಕೊಳ್ಳುತ್ತದೆ. ಅಲ್ಲ ರೀ, ಇನ್ನೊಬ್ಬರ ತೊಂದರೆ ನಮಗೆ ಹೇಗೆ ಅರ್ಥವಾಗಲು ಸಾಧ್ಯ? ಅದನ್ನ ಫೀಲ್ ಮಾಡಿಕೊಳ್ಳಬಹುದೇ ವಿನಹ ಅರ್ಥ ಮಾಡಿಕೊಳ್ಳುವದು ಕಷ್ಟ. 'I understand your problem' ಅಂದುಬಿಟ್ಟರೆ ಒಮ್ಮೊಮ್ಮೆ ಕೆಲವರಿಗೆ ಸಿಕ್ಕಾಪಟ್ಟೆ ಕೋಪ, ರೋಷ, frustration ಎಲ್ಲ ಬಂದು, 'you really don't understand shit. you moron,' ಅಂತ ಬೈದು ಬಿಟ್ಟಿದ್ದೂ ಇದೆ. ಮಕ್ಕಳ ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಳ್ಳುವ ತಂದೆ ತಾಯಿಯಂತೆ, ನಾವು ನಮ್ಮ ಆಫೀಸ್ ಮಕ್ಕಳ, ತಮ್ಮ ತಂಗಿಯರ ಎಲ್ಲವನ್ನೂ, ಅಂದರೆ ಸಣ್ಣ ಪುಟ್ಟ ತಪ್ಪುಗಳನ್ನು, ಆಕ್ರೋಶದಿಂದ ವ್ಯಕ್ತಪಡಿಸಿದ ಮಾತುಗಳನ್ನು, ಹೊಟ್ಟೆಗೆ ಹಾಕಿಕೊಂಡು ಹೊಟ್ಟೆ ಬೆಳೆಸುತ್ತೇವೆಯೇ ಹೊರತು ತಲೆ ಕೆಡಿಸಿಕೊಳ್ಳುವದಿಲ್ಲ. ಅದಕ್ಕೆಂದೇ, 'I  feel your problem, pain' ಅಂದು ಪೀಠಿಕೆ ಹಾಕಿ, ತೈಲ ತಿಕ್ಕಿ, ತಲೆ ತಣ್ಣಗೆ ಮಾಡುವ ಪ್ರಯತ್ನ ಮಾಡುತ್ತೇವೆ. ನಿಮ್ಮ understanding ಬಗ್ಗೆ ಜನ ತಕರಾರು ತೆಗೆಯಬಹುದು. ಆದರೆ ನಿಮ್ಮ feeling ಅಂದರೆ ಭಾವನೆಗಳ ಬಗ್ಗೆ ತಕರಾರು ತೆಗೆಯುವದು ಕಷ್ಟ. ತಕರಾರು ತೆಗೆಯಲು ಬಂದರೆ, 'ಅರ್ರೆ! ಫೀಲಿಂಗ್ ಗಳು ಬಂದು ಬಿಡುತ್ತವೆ ಕಣ್ರೀ. ನಿಮ್ಮ ಕಷ್ಟ ಅರ್ಥವಾಗಿರಲಿಕ್ಕಿಲ್ಲ. ಆದ್ರೆ ಫೀಲ್ ಆಯ್ತು ಕಣ್ರೀ. ಫೀಲ್ ಸಹ ಆಗಬಾರದು ಅಂದ್ರೆ ಹೆಂಗ್ರೀ? ಫೀಲಿಂಗ್ ಆಗೋದು ಬಿಡೋದು ನಮ್ಮ ಕೈಯಲ್ಲಿದ್ದರೆ ಜಗತ್ತು ಬೇರೇನೆ ತರಹ ಇರುತ್ತಿತ್ತು ಬಿಡಿ,' ಅಂತ ಉಲ್ಟಾ ರೋಪ್ ಹಾಕಬಹುದು. ಫೀಲಿಂಗ್ ಅಂದರೆ  ಭಾವನೆಗಳ ಬಗ್ಗೆ ಭಾವನಾತ್ಮಕವಾಗಿ ಮಾತಾಡಿ ಭಾವನಾತ್ಮವಾಗಿ ಬೆಸುಗೆ ಹಾಕಿ, ತೇಪೆ ಹಾಕಿ ಎಲ್ಲ ಸರಿ ಮಾಡಲು ಬರುತ್ತದೆ. ಹಾಗಾಗಿ, 'I  feel your problem, pain' ಅಂದುಬಿಡುವದು ಬೆಸ್ಟ್ ಅಂತ ಪರಮಗುರುವಾಗಿದ್ದ ಒಬ್ಬ ಹಳೆ ಪಂಟರ್ ಮ್ಯಾನೇಜರ್ ಹೇಳಿಕೊಟ್ಟಿದ್ದು ಬರೋಬ್ಬರಿ workout ಆಗಿದೆ. ಅಷ್ಟೇ ಯಾರಾದರೂ ಹೆರಿಗೆ ನೋವು ಅಂದರೆ ಮಾತ್ರ ಹಾಗೆನ್ನಬೇಡಿ. ತುಂಬ ಅಭಾಸವಾಗುತ್ತದೆ. ಆಸ್ಪತ್ರೆ ಮುಟ್ಟಿಸಿ. ಬೇಗ.

ವಾರ ಪೂರ್ತಿ ಇದೇ ತರಹದ ಮಾತುಕತೆ, ಮೀಟಿಂಗ್ ಗಳಲ್ಲಿ ಪೊಕಳೆ, ಎಣ್ಣೆ ಗಾಣದಲ್ಲಿ ಬೇರೆ ಬೇರೆ ರೀತಿ ತೈಲ ತೆಗೆಯುವದು, ಅವನ್ನು ನಾವೂ ಹಚ್ಚಿಕೊಂಡು, ಇನ್ನೊಬ್ಬರಿಗೂ ಹಚ್ಚಿ, ಮಂಡೆ ಹಾಳಾದ ಮಂದಿಗೆ counseling, ಮಂಡೆ ಬಿಸಿಯಾದ ಮಂದಿಗೆ psychotherapy ಮಾಡಿ ಮಾಡಿ, 'ಅಂತೂ ಶುಕ್ರವಾರ ಮಧ್ಯಾನ ಬಂತಪ್ಪಾ,' ಅಂತ ಹುಸ್! ಅಂತ ರಿಲಾಕ್ಸ್ ಆಗೋಣ ಅನ್ನುವಷ್ಟರಲ್ಲಿ invariably ಯಾರಿಗಾದರೂ, ಯಾವದೋ ಕಾರಣಕ್ಕೆ, ಶುಕ್ರವಾರ ಮಧ್ಯಾನವೇ ಹುಚ್ಚು ಹೆಚ್ಚಾಗಿ, ಅವರನ್ನು ಕಂಟ್ರೋಲ್ ಮಾಡಲಿಕ್ಕೆ ಸಾಧ್ಯವಿಲ್ಲ ಅನ್ನುವ ಪರಿಸ್ಥಿತಿ ಬರುತ್ತದೆ. ಸಾಮಾನ್ಯವಾಗಿ ಏನಾದರೂ ಒಂದು production problem ಬರುತ್ತದೆ ಅಥವಾ 'ಶುಭ ಶುಕ್ರವಾರ ಬಂದಿದೆ. ಮಂದಿಗೆ ಬತ್ತಿ ಇಡೋಣ. ವೀಕೆಂಡ್ ಮೂಡ್ ಹಾಳು ಮಾಡೋಣ,' ಅಂತ ಯಾರಾದರೂ ವಿಘ್ನಸಂತೋಷಿ ಸುಮ್ಮನೆ ಕಿರಿಕ್ ಮಾಡುತ್ತಾನೆ. ಇಲ್ಲದ ಸಲ್ಲದ ಸಮಸ್ಯೆ ತೆಗೆದುಕೊಂಡು ಕೂಡುತ್ತಾನೆ. ಆವಾಗ ಸಣ್ಣ ಪುಟ್ಟ psychotherapy ಇತ್ಯಾದಿ ಎಲ್ಲ ನಡೆಯುವದಿಲ್ಲ ಅಂತ ಹೇಳಿ ದೊಡ್ಡ ಮಟ್ಟದ ಶಾಕ್ ಟ್ರೀಟ್ಮೆಂಟ್ ಕೊಡಬೇಕಾಗುತ್ತದೆ. ಅದಕ್ಕೆಂದೇ ಒಂದಿಬ್ಬರು ಶಾಕ್ ಟ್ರೀಟ್ಮೆಂಟ್ ಕೊಡುವ ಪರಿಣಿತರಿಗೆ ಸರಿಯಾಗಿ ಬಿಸ್ಕಿಟ್ ಹಾಕಿ, ಅವರಿಗೆ ಕೊಡಬೇಕಾದ ಸಕಲ ಮರ್ಯಾದೆ, ಅವರಿಗೆ ತಿಕ್ಕಬೇಕಾದ ಸ್ಪೆಷಲ್ ತೈಲ ಎಲ್ಲ ಸರಿ ಮಾಡಿ ತಿಕ್ಕಿ ಇಟ್ಟಿರುವದರಿಂದ ಅವರೂ ಇಂತದ್ದಕ್ಕೇ ಕಾಯುತ್ತಿರುತ್ತಾರೆ. ಅವರು ನಮ್ಮ ಟೀಮಿನ ದೊಡ್ಡ ದಂಡಪಿಂಡಗಳು. ಸಿಕ್ಕಾಪಟ್ಟೆ ಮೇಧಾವಿಗಳು. ಆದರೆ ಒಂದೇ ಕೆಲಸ ಭಾಳ ವರ್ಷದಿಂದ ಮಾಡಿ ಮಾಡಿ ಅದು ಬಿಟ್ಟು ಅವರಿಗೆ ಹೊಸದೂ ಏನೂ ಬರುವದಿಲ್ಲ. ಆದರೆ ಎಲ್ಲಿಯಾದರೂ crisis ಅನ್ನುವಂತದ್ದು ಇದ್ದರೆ ಮಾತ್ರ ಇವರೇ ಬೇಕು. ಹಾಗಾಗಿ ವರ್ಷಕ್ಕೆ ನಾಲ್ಕೇ ಸಲ ಅವರು ಬಂದು ನನ್ನ ಕೆಲಸ ಮಾಡಿಕೊಟ್ಟರೂ ಸಾಕು. ಅವರಿಗೆ ಕೊಡುವ ಪಗಾರ, ಗಿಗಾರ, ಬಗ್ಗಿ ಮಾಡುವ ನಮಸ್ಕಾರ ಎಲ್ಲ ಓಕೆ. ಅಂತವರಿಗೆ ಸುಪಾರಿ ಕೊಟ್ಟು ಬಿಟ್ಟರೆ ಶುಕ್ರವಾರದ ಎಂತದೇ crisis ಇದ್ದರೂ ಕ್ಷಣಮಾತ್ರದಲ್ಲಿ ಬಗೆಹರಿಸಿ, ಯಾರಾದರೂ ಸುಮ್ಮನೆ ಕಿರಿಕ್ ಮಾಡಿದ್ದರೆ ಅವರಿಗೆ ಬರೋಬ್ಬರಿ ಶಾಕ್ ಕೊಟ್ಟು, ಅವಾಜ್ ಹಾಕಿ, ಬೈದು, ಮತ್ತೆ ನಾವೇ ಇವರ ಪರವಾಗಿ ಅವರ ಕ್ಷಮೆ ಕೇಳಿ (ನಮ್ಮದೇನು ಗಂಟು ಹೋಗುತ್ತದೆ? ಕಾರ್ಪೊರೇಟ್ ಕ್ಷಮೆ ಕೇಳುವದೂ ಸಹ ಒಂದು ತರಹದ ತೈಲ ತಿಕ್ಕಿದಂತೆಯೇ), ಆ ಪಾರ್ಟಿಗೂ ಒಂದು ಸಣ್ಣ ಸೈಕೋಥೆರಪಿ (psychotherapy) ಮಾಡಿ ಬಿಡುತ್ತೇನೆ. ಎಲ್ಲರೂ ಖುಷ್. ವೀಕೆಂಡ್ ಶುರು ಮಾಡಲು ರೆಡಿ.

ನೋಡಿದರೆ ಹೀಗೆ ವಾರ ಪೂರ್ತಿ ಒಂದು ತರಹದ ಸೈಕೋಥೆರಪಿಸ್ಟ್ (psychotherapist ಉರ್ಫ್ ಮೆಂಟಲ್ ಡಾಕ್ಟರ್) ಕೆಲಸ ನಮ್ಮದು. ಇಷ್ಟೊತ್ತಿಗೆ ನಮ್ಮ ತಲೆಯೂ ಸುಮಾರು ಹನ್ನೆರಡಾಣೆ ಆಗಿರುತ್ತದೆ. ಯಾಕೆಂದರೆ ನಾನು psychotherapist ಕೆಲಸ ಮಾಡಿದರೆ ಜೊತೆಗಿನ ಮಂದಿ psycho the rapist ಕೆಲಸ ಮಾಡಿ, ನಮ್ಮ ತಲೆ ಹಟ್ಟು, ಮಂಡೆಯ ಗ್ಯಾಂಗ್ ರೇಪ್ ಮಾಡಿ, ರಾಡಿ ಎಬ್ಬಿಸಿರುತ್ತಾರೆ. ಧಾರವಾಡ ಕಡೆ ಜವಾರಿ ಭಾಷೆಯಲ್ಲಿ, 'ಏ ಹುಚ್ಚಾ! ಎಷ್ಟು ತಲಿ ಹಡ್ತಿ ಮಾರಾಯ!' ಅನ್ನುವ ಮಾತಿಗೆ ತಕ್ಕಂತೆ ಇರುತ್ತಾರೆ ಈ psycho the rapist ಮಂದಿ. ಪ್ರೊಫೆಷನಲ್ ತಲೆ ರೇಪ್ ಮಾಡುವವರು. Psychotherapist v/s psycho the rapist.

ಹೀಗೆ ವಾರಾಂತ್ಯ ಶುರುವಾಗುತ್ತದೆ. psycho the rapist ಮಂದಿ, Psychotherapist ನಾವೂ ಎಲ್ಲ ಪೆಟ್ಟಿಗೆ ಕಟ್ಟಿಕೊಂಡು, ಮನೆ ಹಾದಿ ಹಿಡಿಯುತ್ತೇವೆ. ದೇಹ ಮತ್ತು ಮನಸ್ಸಿನ ವಿಶ್ರಾಂತಿಗೆ ಅಂತ ವಾರಾಂತ್ಯ ಕೊಟ್ಟರೆ ಹೆಚ್ಚಿನ ಜನ ವಾರಾಂತ್ಯದಲ್ಲಿ ಸಿಕ್ಕಾಪಟ್ಟೆ ಮೋಜು, ಮಸ್ತಿ ಮಾಡಿಬಿಡುತ್ತಾರೆ. ತಮ್ಮ ದೇಹದ, ಮನಸ್ಸಿನ ಬ್ಯಾಟರಿ ರಿಚಾರ್ಜ್ ಮಾಡಿಕೊಳ್ಳುವ ಬದಲು ಪೂರ್ತಿ ಖಾಲಿ ಮಾಡಿಕೊಂಡು, Monday ಮುಂಜಾನೆ ಕುಂಡೆ ಮೇಲೆ ಕೆಂಡ ಬಿದ್ದವರಂತೆ ಚಿಟಿ ಚಿಟಿ ಚೀರುತ್ತ ಮತ್ತೆ ಸೋಮವಾರ ಬೆಳಿಗ್ಗೆ ಬರುತ್ತಾರೆ. ಸೋಮವಾರ ಬೆಳಿಗ್ಗೆ ನಾವು 'ಓಂ! ಶಾಂತಿ, ಶಾಂತಿ, ಶಾಂತಿ' ಅನ್ನೋಣ ಅಂದರೆ ಇವರು ಡಿಸ್ಕೋ ಶಾಂತಿಯಂತೆ ಧಿಮಿಧಿಮಿ ಕುಣಿಯಲು ರೆಡಿಯಾಗಿ ಬಂದಿರುತ್ತಾರೆ. ಮೊದಲೇ ಇವರ ಪೂರ್ತಿ ಖಾಲಿಯಾದ ಬ್ಯಾಟರಿ, ಮೇಲಿಂದ ಕೆಲಸದ ಒತ್ತಡ. ಡೆಡ್ಲಿ ಕಾಂಬಿನೇಶನ್. ಡಿಸ್ಕೋ ಶಾಂತಿ ಮೈಮೇಲೆ ಬಂದೇ ಬಿಡುತ್ತಾಳೆ. ತಾಪಡ್ತೋಪ್ ಸೈಕೋಥೆರಪಿ ಶುರು ಮಾಡಿಕೊಳ್ಳಬೇಕಾಗಿ ಬರುತ್ತದೆ.

ಮತ್ತೆ ಸೋಮವಾರ ನಮ್ಮ psychotherapist ಕೆಲಸ ಶುರುಮಾಡಬೇಕು ಅಂತ ನಮಗೆ ಗೊತ್ತಿರುತ್ತದೆ. ಶುಕ್ರವಾರ ಮುಗಿಯುವ ಹೊತ್ತಿಗೆ ನಮ್ಮದೂ ತಲೆ ಹನ್ನೆರಡಾಣೆ ಆಗಿರುತ್ತದೆ. ನಮಗೇ ಒಬ್ಬ ದೊಡ್ಡ psychotherapist ನ ಜರೂರತ್ತು ಇರುತ್ತದೆ. 'ಮಾನವ ಇತಿಹಾಸದಲ್ಲೇ ಪ್ರಥಮ ಮತ್ತು ಅತ್ಯುತ್ತಮ psychotherapist ಅಂದರೆ ಭಗವಾನ್ ಶ್ರೀಕೃಷ್ಣ. ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಮಾಡಿದ ಉಪದೇಶಕ್ಕಿಂತ ಒಳ್ಳೆಯ psychotherapy ಇಲ್ಲವೇ ಇಲ್ಲ,' ಅಂತ ಅದೇನು ಒಂದು ಮಾತು, ಯಾವದೋ ಪ್ರವಚನದಲ್ಲಿ ಬನ್ನಂಜೆ ಗೋವಿಂದಾಚಾರ್ಯರು ಹೇಳಿದ್ದರೋ ಅದು ಈಗ ಸ್ವಂತ ಅನುಭವದಿಂದ, ಹದಿಮೂರು ವರ್ಷಗಳ ಗೀತಾಧ್ಯಯನದಿಂದ ಸೋಲಾ ಅಣೆ, ಶಂಬರ್ ಟಕಾ, ಸೆಂಟ್ ಪರ್ಸೆಂಟ್, ಸತ್ಯ ಅನ್ನಿಸಿದೆ. ಹಾಗಾಗಿ ನಾವು ತಗಡು ಮನುಷ್ಯರೂಪಿ  psychotherapist ಗಳೆಲ್ಲರ ಗೊಡವೆ ಬಿಟ್ಟು, the best psychotherapist ಶ್ರೀಕೃಷ್ಣನ psychotherapy ಯ magnum opus ಮಹಾಗ್ರಂಥ ಭಗವದ್ಗೀತೆ, ಅದರ ಮೇಲೆ ಲಭ್ಯವಿರುವ ಒಳ್ಳೊಳ್ಳೆ ಭಾಷ್ಯಗಳು, youtube ಮೇಲೆ ಸಿಗುವ ಒಳ್ಳೊಳ್ಳೆ ಪ್ರವಚನಗಳನ್ನು ಓದುತ್ತ, ನೋಡುತ್ತ, ಅದರಲ್ಲಿ ತಲ್ಲೀನರಾಗಿ, ಎಷ್ಟು ಸಾಧ್ಯವೋ ಅಷ್ಟು ಬ್ಯಾಟರಿ ಚಾರ್ಜ್ ಮಾಡಿಕೊಂಡು ಮತ್ತೆ ಸೋಮವಾರಕ್ಕೆ ತಯಾರಾಗುತ್ತೇವೆ. ಮನಸ್ಸಿಟ್ಟು, ತೆರೆದ ಮನದಿಂದ, ಶ್ರದ್ಧೆಯಿಂದ, ಭಗವದ್ಗೀತೆ, ಅದ್ವೈತ ವೇದಾಂತ ಓದುತ್ತಿದ್ದರೆ ಮೇಲಿಂದ ಮೇಲೆ ಆಗುವ 'ಆಹಾ!' ಎನ್ನುವ epiphany ಗಳ ಬಗ್ಗೆ, ಬರುವ wisdom ಬಗ್ಗೆ, sudden flashes of insights ಗಳ ಬಗ್ಗೆ, ಉತ್ತಮಗೊಳ್ಳುವ ಮಾನಸಿಕ & ಶಾರೀರಿಕ ಆರೋಗ್ಯದ ಬಗ್ಗೆ ಸಂದೇಹವೇ ಬೇಡ. ಅಷ್ಟೇ, ನಿಮ್ಮ ಮಂಡೆಯ, ನಿಮ್ಮ ಮನಸ್ಸಿನ ಭೂಮಿ ಹಸನಾಗಿದ್ದು, ಒಳ್ಳೆ ಪೋಷಕಾಂಶದಿಂದ ಕೂಡಿದ್ದು ಆಗಿರಬೇಕು ಅಷ್ಟೇ. ಇಲ್ಲದಿದ್ದರೆ ಭಗವದ್ಗೀತೆ ಉತ್ತಿದ ಬೀಜ, ಕಾದ ಹಂಚಿನಂತಿರುವ ನಮ್ಮ ನಿಮ್ಮಂತವರ ಗರ್ಮಾಗರಂ ಮಂಡೆ ಮೇಲೆ ಬಿದ್ದು, ರೋಸ್ಟ್ ಆಗಿಬಿಡುತ್ತದೆ ಅಷ್ಟೇ. ಬಾಡಿ ಹೋದ ಬಳ್ಳಿಯಿಂದ ಹೇಗೆ ಹೂವು ಅರಳಲಾರದೋ ಹಾಗೆಯೇ ರೋಸ್ಟಾದ ಬೀಜದಿಂದ ಮೊಳಕೆ ಕೂಡ ಒಡೆಯಲಾರದು. ಹಾಗಾಗಿ ಶ್ರದ್ಧೆ (faith, trust) ಭಾಳ ಮುಖ್ಯ.

Monday ಬೆಳಿಗ್ಗೆ ತುಂಬ ಮಂಡೆ ಬಿಸಿ ಅಥವಾ ಯಾವಾಗಲೂ ಮಂಡೆ ಬಿಸಿ ಅಂತ ಅನ್ನಿಸಿದರೆ ಒಂದು ಕೆಲಸ ಮಾಡಿ. ಸುಮ್ಮನೆ ತಮಾಷೆಗೆ ಅಂತ ಅಂದುಕೊಂಡರೂ ಓಕೆ. ಆದರೆ ಟ್ರೈ ಮಾಡಿ ನೋಡಿ. ವಾರಾಂತ್ಯದಲ್ಲಿ ಮೋಜು, ಮಸ್ತಿ, ಸುತ್ತಾಟ, ತಿರುಗಾಟ, ಹರಟೆ, ಪರಟೆ, ಸಿನೆಮಾ, ಮಾಲು, ಹಮಾಲು, ವಗೈರೆ ವಗೈರೆ ಸ್ವಲ್ಪ (ಜಾಸ್ತಿ ಏನೂ ಬೇಡ) ಕಮ್ಮಿ ಮಾಡಿ, ಸ್ವಲ್ಪ ಅಂತರ್ಮುಖಿಯಾಗಿ, ಮಾತುಕತೆ, ಇಂಟರ್ನೆಟ್, ಫೇಸ್ಬುಕ್, ಹಾಳುವರಿ ಬಿಟ್ಟು, ಭಗವದ್ಗೀತೆಗೆ, ಅಧ್ಯಾತ್ಮಕ್ಕೆ  ತೆರೆದುಕೊಳ್ಳಿ. ಜೊತೆಗಿರುವವರನ್ನೂ ಹಾಗೆ ಮಾಡಲು ಪ್ರೇರೇಪಿಸಿ. ಹಾಗಂತ ನಮ್ಮ ಬಿಟ್ಟಿ ಸಲಹೆ, ಉದ್ರಿ ಉಪದೇಶ. ನಮಗಂತೂ ಸಿಕ್ಕಾಪಟ್ಟೆ ಉಪಯೋಗವಾಗಿದೆ. ನಿಮಗೂ ಆದರೆ ಅದಕ್ಕಿಂತ ದೊಡ್ಡ ಸಂತೋಷ ಇನ್ನೇನಿದೆ?

(ಕೆಳಗಿನ ಕಾರ್ಟೂನ್ ನೋಡಿ. 'ಆಸೆಯೇ ದುಃಖಕ್ಕೆ ಮೂಲ,' ಅಂತ ಬುದ್ಧ ಹೇಳಿದ್ದನ್ನಂತೂ ನಾವು ಕೇಳಲಿಲ್ಲ. ಬದಲಿಗೆ ನಾವು ದುರಾಸೆಗೆ ಬಿದ್ದು, ಅವನ್ನು ಪೂರೈಸಿಕೊಳ್ಳಲಿಕ್ಕಾಗಿ ಎದ್ದೋ, ಬಿದ್ದೋ, ಸತ್ತೋ ಕಾರ್ಪೊರೇಟ್ ಕರ್ಮಿಗಳಾಗಿ, ಈ ಹಾಲತ್ತಿಗೆ ಬಂದು ಮುಟ್ಟಿ, ಸೈಕೊಥೆರಪಿಸ್ಟ್ ಮುಂದೆ ಹೇಗೆ ಬಾಯಿಬಿಟ್ಟು ಹೇಳಿಕೊಳ್ಳುತ್ತೇವೆ ನೋಡಿ. ಮೇಲಿಂದ ಆ ಪುಣ್ಯಾತ್ಮ ಸೈಕೊಥೆರಪಿಸ್ಟ್ ನಮ್ಮ ಗೋಳು ಕೇಳಿದ ಅಂತ ಅವನಿಗೆ ರೊಕ್ಕ. ಅದನ್ನೂ ಕ್ರೆಡಿಟ್ ಕಾರ್ಡಿಗೆ ಉಜ್ಜಿ ಬಂದಿರುತ್ತೇವೆ. ಅದನ್ನು ತೀರಿಸಲು ಮತ್ತೆ ಮಂಡೆ ಬಿಸಿ, Monday ಬಿಸಿ. ಅದ್ಭುತ ಕಾರ್ಟೂನ್.)

Wednesday, April 15, 2015

ಅಗಲಿದ ಪ್ರೊ. ಭೂಸನೂರಮಠರ ಬಗ್ಗೆ ಕೆಲವು ನೆನಪುಗಳು



೧೯೯೦. ಮೇ, ಜೂನ್ ತಿಂಗಳ ಒಂದು ದಿವಸ. ಧಾರವಾಡದ ಕರ್ನಾಟಕ ಸೈನ್ಸ್ ಕಾಲೇಜ್. ಭೌತಶಾಸ್ತ್ರ ವಿಭಾಗ.

'ಏ ಇವನೇ! ಮೆತ್ತಗಿಂದು ತೊಗೊಂಡು ಬಾರss ಮತ್ತ. ಒಳ್ಳೆ ಮೆತ್ತಗಿಂದು ಇರಬೇಕು. ಹಾಕ್ಕೊಂಡು ಕುಂತ್ರ ಮಸ್ತ ಅನ್ನಿಸಬೇಕು,' ಅಂತ ಒಬ್ಬ ದೊಡ್ಡ ಮಾಸ್ತರ್ರು ತಮ್ಮ ವಿಭಾಗದ ಚಪರಾಸಿಯೊಬ್ಬನಿಗೆ ಹೇಳುತ್ತಿದ್ದರು. ಅವರು ಆ ವಿಭಾಗದ ಮುಖ್ಯಸ್ಥರು (HoD). ಅಂತವರು ಒಬ್ಬ ಚಪರಾಸಿ (peon) ಮನುಷ್ಯನೊಂದಿಗೆ ಅಷ್ಟು ಆತ್ಮೀಯತೆಯಿಂದ, ತಮ್ಮ ಮನೆಯವನೋ ಎಂಬಂತೆ ಸಲಿಗೆಯಿಂದ ಮಾತಾಡಿದ್ದನ್ನು ನೋಡಿ ಅಚ್ಚರಿಪಟ್ಟಿದ್ದೆ. ತಮ್ಮ ಜೊತೆ ಕೆಲಸ ಮಾಡುವ ಎಲ್ಲರನ್ನೂ, ಅವರ ಸ್ಥಾನ ದೊಡ್ದದು ಚಿಕ್ಕದು ಅಂತ ಭೇದಭಾವ ಮಾಡದೇ, ಒಳ್ಳೆ ರೀತಿಯಿಂದ ನೋಡಿಕೊಳ್ಳಬೇಕು ಅನ್ನುವ ಮ್ಯಾನೇಜ್ಮೆಂಟ್ ಪಾಠ ಆವತ್ತು ನನ್ನ ಮುಂದೆಯೇ ಆಗುತ್ತಿತ್ತು. ಆವತ್ತು ಆದರ ಮಹತ್ವ ತಿಳಿಯಿತೇ? ಗೊತ್ತಿಲ್ಲ. ಇವತ್ತು ಬರೋಬ್ಬರಿ ತಿಳಿದಿದೆ. ಅದನ್ನು ಕಾಯಾ, ವಾಚಾ, ಮನಸಾ ಆಚರಿಸಿ ತೋರಿಸಿದ ಮಹನೀಯರು ನೆನಪಾಗಿದ್ದಾರೆ. 'ಶರಣರ ಗುಣ ಮರಣದಲ್ಲಿ ಕಾಣು' ಅನ್ನುವಂತೆ ಧಾರವಾಡದ ದೊಡ್ಡ ಶರಣರೊಬ್ಬರ ನೆನಪು ಅವರ ಮರಣದಲ್ಲಿ ಜರೂರ್ ಆಗುತ್ತಿದೆ.

ಆವತ್ತು ಅಷ್ಟು ಆತ್ಮೀಯತೆಯಿಂದ, ಕಾಳಜಿಯಿಂದ, ತಮ್ಮ ಚಪ್ರಾಸಿಗೆ ತಮ್ಮ HoD ಖುರ್ಚಿಗೆ ಒಂದು ಮೆತ್ತನೆ ದಿಂಬು ತಂದು ಕೊಡು ಅಂತ ಕೇಳುತ್ತಿದ್ದವರು ಪ್ರೊ. ಭೂಸನೂರಮಠ. ಮೊನ್ನೆ ಮಾತ್ರ ಅಗಲಿದ್ದಾರೆ. ತುಂಬ ನೆನಪಿಗೆ ಬರುತ್ತಿದ್ದಾರೆ.

ಆರ್ಸೀರೇಮಠರು, ಆರ್ಸೀರೇಮಠರು ಅಂತ ಅಂದಿನ ಕವಿವಿ ಕುಲಪತಿ ದಿವಂಗತ ಆರ್. ಸೀ. ಹಿರೇಮಠ ಅವರ ನಂತರ ಯಾರಾದರೂ ಮಠರ ಹೆಸರು ಕೇಳಿದ್ದರೆ ಅದೂ ಭೂಸನೂರಮಠರೇ! ಯಾಕೆಂದರೆ ಅವರು ಕೆಸಿಡಿಯಲ್ಲಿ ತಂದೆಯವರ ಸಹೋದ್ಯೋಗಿ.

ಭೂಸನೂರುಮಠರ ಹೆಸರು ಇಷ್ಟೊಂದು ಕೇಳಿದ್ದೆ ಆದರೆ ಆವರನ್ನು ಖುದ್ದಾಗಿ ನೋಡಲಿಕ್ಕೆ ಹದಿನಾರು ವರ್ಷ ಅಂದರೆ ಪಿಯೂಸಿ ಮೊದಲನೇ ವರ್ಷದ ತನಕ ಕಾಯಬೇಕಾಯಿತು. ಮಾತಾಡಿಸಲು, ಅವರ ಸಲಹೆ, ಸೂಚನೆ, ಸಹಾಯ ಕೇಳಲು? ಇನ್ನೂ ಎರಡು ವರ್ಷ ಅಂದರೆ ಪಿಯೂಸಿ ಮುಗಿಯಬೇಕಾಯಿತು.

ಭೂಸನೂರಮಠ ತಂದೆಯವರ ಸಹೋದ್ಯೋಗಿಯಾಗಿದ್ದರು. ಕುಟುಂಬಗಳ ಮಧ್ಯೆ ಆತ್ಮೀಯತೆಯಿತ್ತು. ಅವರ ಇಬ್ಬರು ಪುತ್ರರು ನಮ್ಮ ಅಣ್ಣನಿಗೂ ಹಿರಿಯರಾಗಿದ್ದು ಅವನ ಒಳ್ಳೆ ಸ್ನೇಹಿತರಾಗಿದ್ದರು. ತರಂಗದಲ್ಲಿ, ಸುಧಾದಲ್ಲಿ ಬರುತ್ತಿದ್ದ ಅವರ ವೈಜ್ಞಾನಿಕ ಸಾಹಿತ್ಯ ಕಣ್ಣಿಗೆ ಬೀಳುತ್ತಿತ್ತು. ಆದರೆ ಆವಾಗ ನಮಗೆ ವಿಜ್ಞಾನ, ಸಾಹಿತ್ಯ ಎರಡೂ ತಿಳಿಯುತ್ತಿರಲಿಲ್ಲ. ಇವರು ಬರೆದ sci-fi ಅರ್ಥವಾಗದೇ, ನಮಗೆ ಅರ್ಥವಾದ ಪತ್ತೇದಾರಿ ಕಾದಂಬರಿಗಳಿಗೇ ಮರಳುತ್ತಿದ್ದೆವು.  ಹಿರಿಯರು ಆಗಾಗ ಎಚ್ಚರಿಸುತ್ತಿದರು, 'ಭಾಳ ಪತ್ತೇದಾರಿ ಓದಿದರೆ ಕತ್ತೇದಾರ ಆಗ್ತಿ ನೋಡು. ಭಾಳ mystery ಪುಸ್ತಕ ಓದಿದರೆ ಮೇಸ್ತ್ರೀ ಆಗಿಹೊಗ್ತೀ ನೋಡು!' ಅನ್ನುವ ಎಚ್ಚರಿಕೆಗಳನ್ನು ಧಿಕ್ಕರಿಸಿ, ಅವನ್ನೇ ಓದಿ ಓದಿ, ಈಗ software ಮೇಸ್ತ್ರಿ (project manager) ಆಗಿ ಕೂತಿದ್ದೇವೆ. ಅದೆಲ್ಲ ಇರಲಿ. ಅಂದು ರಾಭೂ (ರಾಜಶೇಖರ ಭೂಸನೂರಮಠ) ಅವರ ವೈಜ್ಞಾನಿಕ ಕಥೆ ಓದಲಿಲ್ಲ. ಮುಂದೆ ಓದೋಣ. ತಾವು ಹೋದರೂ ತಮ್ಮ ಸಾಹಿತ್ಯ ಬಿಟ್ಟು ಹೋಗಿದ್ದಾರೆ ರಾಭೂ.

೧೯೯೦ ರ ಮೇ, ಜೂನ್ ವೇಳೆಯಲ್ಲಿ ರಾಭೂ ಅವರನ್ನು ಭೆಟ್ಟಿಮಾಡುವ ಸಂದರ್ಭ ಬರುತ್ತಲೇ ಇರಲಿಲ್ಲವೇನೋ. But, thanks to BITS, Pilani. ಪಿಯೂಸಿ ನಂತರ, ಪ್ರೀತಿಯ ಅಣ್ಣ ಹೇಳಿದ ಅಂತ ಕೊನೇ ಕ್ಷಣದಲ್ಲಿ ಅರ್ಜಿ ಹಾಕಿದ್ದೆ. ಹಾಕಿದ್ದು ಒಂದೇ ವಿಷಯಕ್ಕೆ. ಕಂಪ್ಯೂಟರ್ ಸೈನ್ಸ್. ಇಂಜಿನಿಯರಿಂಗ್ ಮಾಡಿದರೆ ಅದರಲ್ಲೇ ಮಾಡಬೇಕು. ಯಾಕೆ, ಏನು ಗೊತ್ತಿಲ್ಲ. ಅಣ್ಣ ಅದರಲ್ಲೇ ಮಾಡಿದ್ದಾನೆ. ಆ ಕಾರಣ ಸಾಕು. ಅದೇನು ನಮ್ಮ ನಸೀಬವೋ ಗೊತ್ತಿಲ್ಲ. ಅಲ್ಲಿ ಪ್ರವೇಶ ಸಿಕ್ಕೇ ಬಿಡಬೇಕೇ! ಪಿಯೂಸಿ ಮಾರ್ಕ್ಸ್ ಅಷ್ಟಕಷ್ಟು ಛೊಲೋ ಇತ್ತು ಅನ್ನಿ. ಒಂದೇ ಮಾರ್ಕಿನಿಂದ ಹತ್ತನೇ ರಾಂಕ್ ಮಿಸ್. ಪಿಲಾನಿಯಲ್ಲಿ ಪ್ರವೇಶ ಸಿಕ್ಕ ನಂತರ ಹೋಗಲೋ ಬೇಡವೋ ಅಂತ ದ್ವಂದ್ವ ನಮಗೆ ಮತ್ತೆ ತಂದೆತಾಯಿ ಇಬ್ಬರಿಗೂ. 'ಸಿಕ್ಕಿದೆ. ಅಲ್ಲೇ ಹೋಗು. Don't think otherwise,' ಅಂತ ಸಿಕ್ಕಾಪಟ್ಟೆ ಪ್ರೋತ್ಸಾಹ, ಉತ್ತೇಜನ ನೀಡಿದವರು ಒಬ್ಬ ನಮ್ಮ ಅಣ್ಣ, ಇನ್ನೊಬ್ಬರು ಕೆಸಿಡಿಯ ಮಾಜಿ ಪ್ರೊಫೆಸರ್ ಕೆಮಿಸ್ಟ್ರಿ ವಿಭಾಗದ ದಿವಂಗತ ಡಾ. ಜಮಖಂಡಿ. ಇನ್ನೂ ಕೆಲವು ಸಹೃದಯಿಗಳೂ, well wishers ಎಲ್ಲ ಸಕತ್ತಾಗಿ ಪಂಪ್ ಹೊಡೆದರು ಅಂತ ಹೇಳಿ ಪಿಲಾನಿಗೇ ಹೋಗಿ ಸೇರೋಣ ಅಂತ ನಿರ್ಧಾರ ಮಾಡಿದ್ದಾಯಿತು. ಆವಾಗ ನೆನಪಾದವರೇ ಇದೇ ಪ್ರೊ. ಭೂಸನೂರಮಠ. ಯಾಕೆಂದರೆ ಅವರ ಇಬ್ಬರು ಪುತ್ರರು, ಒಬ್ಬ ಸೊಸೆ ಎಲ್ಲ BITS, Pilani ಯಿಂದಲೇ ಡಿಗ್ರಿ ಮಾಡಿದ್ದರು. ಅದು ಗೊತ್ತಿತ್ತು. ಅದು ಬಿಟ್ಟರೆ ಮತ್ತೊಬ್ಬ ಕೆಸಿಡಿ ಪ್ರೊಫೆಸರ್ ಪ್ರೊ. ಏ. ಜಿ. ಹಿರೇಮಠ ಅವರ ಮಕ್ಕಳು ಸಹ ಅಲ್ಲಿ ಓದಿದ್ದರು ಅಂತ ನೆನಪು. ಆದರೆ ಮಾಹಿತಿ ತೆಗೆಯಲು ನಾವು ಆರಿಸಿಕೊಂಡಿದ್ದು ಪ್ರೊ. ಭೂಸನೂರಮಠ ಅವರನ್ನು. ಪ್ರೊ. ಏ. ಜಿ. ಹಿರೇಮಠ ಸಹಿತ ಒಳ್ಳೆ ಪರಿಚಯದವರೇ. ಅವರ ಮಾವ ಪ್ರೊ. ಪರಮಶಿವಯ್ಯ ನಮ್ಮ ತಂದೆಯವರಿಗೆ ಪರಮ ಗುರುಗಳು. ಪ್ರೊ. ಪರಮಶಿವಯ್ಯ ಅವರನ್ನು, ಅವರ ಸಹಾಯವನ್ನು ನೆನಪಿಸಿಕೊಂಡೇ ಇಂದಿಗೂ ಸಂಜೆಯ ದೀಪ ಹಚ್ಚುತ್ತಾರೆ ನಮ್ಮ ತಂದೆಯವರು. ಆದರೂ ಭೂಸನೂರಮಠರನ್ನೇ ಆಶ್ರಯಿಸಿದೆ.

ಇದೇ ನಿಮಿತ್ತ, ಒಂದು ದಿವಸ ತಂದೆಯವರೊಡನೆ ಕೆಸಿಡಿ ಭೌತಶಾಸ್ತ್ರ ವಿಭಾಗದಲ್ಲಿ ರಾಭೂ ಅವರನ್ನು ಕಂಡೆ. ಪಿಯೂಸಿಗೆ ಬಂದಾಗ ಅವರನ್ನು ನೋಡಿದ್ದೆ. ಆದರೆ ಮಾತಾಡಿಸಿರಲಿಲ್ಲ. ಅವರು ನಮಗೆ ಕಲಿಸಿರಲೂ ಇಲ್ಲ. ಮತ್ತೆ ನಾವು ಪಿಯೂಸಿಯಲ್ಲಿ ಪೂರ್ತಿಯಾಗಿ ನೆಚ್ಚಿಕೊಂಡಿದ್ದು 'ಗಣಿತ ಲೋಕ'ದ ದಿವಂಗತ ಪ್ರೊ. ಶ್ರೀನಿವಾಸ ದೇಶಪಾಂಡೆ ಅವರನ್ನು. ಹಾಗಾಗಿ ಪಿಯೂಸಿಯಲ್ಲಿ ಕ್ಲಾಸಿಗೆ ಹೋಗಿದ್ದು, ಕೂತಿದ್ದು ಎಲ್ಲ ಭಾಳ ಕಮ್ಮಿ. ಗತಿಯಿಲ್ಲ ಅಂತ ಪ್ರಾಕ್ಟಿಕಲ್ ಒಂದಕ್ಕೆ ಹೋಗಿ ಬಂದರೆ ಅದೇ ದೊಡ್ಡದು. 'ಮತ್ತೆ ಸಹೋದ್ಯೋಗಿಯ ಮಗ. ಕ್ಲಾಸಿಗೆ ಬರದಿದ್ದರೂ ಮನೆಯಲ್ಲಿ ಕೂತು ಓದುತ್ತಾನೆ(!),' ಅಂತ ಅರ್ಥಮಾಡಿಕೊಂಡಿದ್ದ ತಂದೆಯವರ ಅನೇಕ ಸಹೋದ್ಯೋಗಿಗಳು ನಮಗೆ 'ಬಾರಾ ಖೂನ್ ಮಾಫ್' ಅನ್ನುವಂತೆ ಎಲ್ಲ ರಿಯಾಯಿತಿ ಕೊಟ್ಟಿದ್ದರು. Except Statistics ಶೆಟ್ಟಿ ಮೇಡಂ ಮತ್ತು ಆರ್ಗಾನಿಕ್ ಕೆಮಿಸ್ಟ್ರಿ ಪಾಠ ಮಾಡುತ್ತಿದ್ದ ಡಾ. ಕಟ್ಟಿ. ಅದರ ಬಗ್ಗೆಲ್ಲ ಮತ್ತೆ ಬರೆಯೋಣ ಬಿಡಿ. ಹೀಗೆಲ್ಲ ಇರುವಾಗ ರಾಭೂ ಸರ್ ನಮಗೆ ಕಲಿಸಿದ್ದರೂ ಎಷ್ಟು ಪರಿಚಯವಾಗುತ್ತಿದ್ದರೋ ಏನೋ ಗೊತ್ತಿಲ್ಲ.

ತಂದೆಯವರೊಂದಿಗೆ ಹೋಗಿ ರಾಭೂ ಅವರನ್ನು ಕಂಡೆ. ಸಹೋದ್ಯೋಗಿಯೊಂದಿಗೆ ತಂದೆಯವರೇ ಮಾತಾಡಿದರು. ನಾನು ಒಂದು ನಮಸ್ಕಾರವೋ, ಹಾಪ್ ನಮಸ್ಕಾರವೋ ಹೊಡೆದುಕೊಂಡು, ಅಪರೂಪಕ್ಕೆ ಭಕ್ತ ಪ್ರಹಲ್ಲಾದನ ಹಾಗೆ ನಿಂತಿದ್ದೆ. ಆಕಾಲದಲ್ಲಿ ನಾನು ಕೀಚಕನಂತೆ ಲುಕ್ ಕೊಡುತ್ತ ನಿಂತಿದ್ದೇ ಜಾಸ್ತಿ ಅಂತ ಗೆಳೆಯರ, ಗೆಳತಿಯರ ಇಂದಿನ ಕುಚೋದ್ಯ.

ರಾಭೂ ಒಳ್ಳೆ ರೀತಿಯಲ್ಲಿ ಮಾತಾಡಿದರು. ತಮ್ಮ ಪುತ್ರರಿಬ್ಬರ ಬಿಟ್ಸ್, ಪಿಲಾನಿ ದಿನಗಳ ಬಗ್ಗೆ ಸುದ್ದಿ ಹೇಳಿದರು. ತಮ್ಮ ಎರಡನೇ ಸೊಸೆ ಸಹಿತ ಪಿಲಾನಿಯಲ್ಲೇ ಓದಿದ್ದು. ಆಕೆಯ ತಂದೆ ಅಲ್ಲಿಯೇ ಪ್ರೊಫೆಸರ್ ಅಂತೆಲ್ಲ ಹೇಳಿದರು. ಅದೆಲ್ಲ ಗೊತ್ತೇ ಇತ್ತು ಬಿಡಿ. 'ಸರಿ, ಒಮ್ಮೆ ಮನೆಗೆ ಬಂದು ಬಿಡಿ. ಆರಾಮ್ ಕೂತು ಮಾತಾಡೋಣ. ನನ್ನ ಕೈಯಲ್ಲಿ ಎಷ್ಟಾಗತ್ತೋ ಅಷ್ಟಂತೂ ಮಾಡೇ ಮಾಡ್ತೀನಿ. ನಮ್ಮ ಹುಡುಗ,' ಅಂತ ಹೇಳಿ, ಶಭಾಶಿ ಕೊಟ್ಟು, 'ಪಿಲಾನಿಗೇ ಹೋಗಿ ಸೇರು,' ಅಂತ ಹೇಳಿ ಕಳಿಸಿದ್ದರು. ಅವರ ಮನೆಗೆ ಎಂದು, ಯಾವ ಸಮಯಕ್ಕೆ ಹೋಗಬೇಕು ಅಂತ ನಿರ್ಧರಸಿ ವಾಪಸ್ ಬಂದಾಯಿತು.

ರಾಭೂ ತಮ್ಮ ಚಪರಾಸಿಗೆ ಅವರ ಖುರ್ಚಿಗೆ ಯಾವ ತರಹದ ಮೆತ್ತಗಿನ ದಿಂಬು ಸರಿ ಹೊಂದುತ್ತದೆ ಅನ್ನುವದರ ಬಗ್ಗೆ, ಚಿಕ್ಕ ಮಕ್ಕಳಿಗೆ ಹೇಳುವಂತೆ ಹೇಳುವದನ್ನು ಮುಂದುವರೆಸಿದರು. ಆ ಪುಣ್ಯಾತ್ಮ ತಲೆಯಾಡಿಸುತ್ತ, 'ಹೂಂನ್ರೀ ಸರ್ರಾ, ಹೂಂನ್ರೀ ಸರ್ರಾ' ಅಂತ ಅನ್ನುತ್ತ ನಿಂತಿದ್ದ. ಮುಂದೆ ಎಂತಹ ದಿಂಬು ತಂದು ಕೊಟ್ಟನೋ ಏನೋ?

***

ನಿರ್ಧರಿಸಿದ ಸಮಯಕ್ಕೆ ಸರಿಯಾಗಿ ಪ್ರೊ. ಭೂಸನೂರಮಠರ ಮನೆಗೆ ಬಂದೆವು. ನಮ್ಮನ್ನು ನಿರೀಕ್ಷೆ ಮಾಡುತ್ತಿದ್ದ ಸರ್ ಆತ್ಮೀಯವಾಗಿ ಸ್ವಾಗತಿಸಿದರು. ಚಹಾ ಇತ್ಯಾದಿ ಬಂತು. ಸರ್ ಅವರೇ ತಂದು ಕೊಟ್ಟಿದ್ದರಿಂದ ಅವರ ಮನೆಯಲ್ಲಿದ್ದ ಅವರ ಶ್ರೀಮತಿಯವರನ್ನು, ಇತರೆ ಕುಟುಂಬ ವರ್ಗದವರನ್ನು ನಾನು ನೋಡಲಿಲ್ಲ.

ಸರ್ ಸಕತ್ತಾಗಿ ಕಥೆ ಹೇಳಿದರು. ಎರಡು ಪರಿಚಯ ಪತ್ರ ಬರೆದುಕೊಡುವದಾಗಿ ಹೇಳಿದರು. ಒಂದು ಗೊತ್ತಿತ್ತು. ಆವಾಗ ಅಲ್ಲೇ ಪಿಲಾನಿಯಲ್ಲಿ ಮಾಸ್ತರಿಕೆ ಕೆಲಸ ಮಾಡಿಕೊಂಡಿದ್ದ ಅವರ ಸೊಸೆಗೆ. ಎರಡನೇ ಮಗ ಎಲ್ಲೋ ವಿದೇಶಕ್ಕೆ ಹೋಗಿದ್ದ ಅಂತ ನೆನಪು. ಹಾಗಾಗಿ ಸೊಸೆ, ತಂದೆಯ ಮನೆ ಪಿಲಾನಿಗೆ ಬಂದು, ತಾನು ಕಲಿತ ಸಂಸ್ಥೆಯಲ್ಲಿಯೇ ಮಾಸ್ತರಿಕೆ ಮಾಡಿಕೊಂಡಿದ್ದಳು. ಸರಿ ಅವರಿಗೆ ಒಂದು ಪರಿಚಯ ಪತ್ರ. ಇನ್ನೊಂದು ಪರಿಚಯ ಪತ್ರವನ್ನು ಯಾರಿಗೆ ಬರೆದು ಕೊಡುವರಿದ್ದಾರೆ ಸರ್? ಅಂತ ಸಿಕ್ಕಾಪಟ್ಟೆ ಕುತೂಹಲ. ಅವರ ಬೀಗರಿಗೆ ಬರೆದು ಕೊಡುತ್ತಾರೋ ಹೇಗೆ? ಯಾಕೆಂದರೆ ಅವರ ಸೊಸೆ ತಂದೆ, ಪ್ರೊ. ಗೋಪಾಲನ್, ಆಗ ಬಿಟ್ಸ್, ಪಿಲಾನಿಯ ಪ್ರವೇಶ ವಿಭಾಗದ (admissions department) ಮುಖ್ಯಸ್ಥರಾಗಿದ್ದರು. ನಮಗೆ ಬರುತ್ತಿದ್ದ ಪತ್ರಗಳ ಮೇಲೆಲ್ಲ ಅವರದೇ ರುಜು ಇರುತ್ತಿತ್ತು. ಯಾರಿಗೆ ಇನ್ನೊಂದು ಪತ್ರ ಬರೆದುಕೊಡುತ್ತಾರೆ ರಾಭೂ?????

ರಾಭೂ ಇನ್ನೊಂದು ಪರಿಚಯ ಪತ್ರ ಬರೆದುಕೊಡುತ್ತೇನೆ ಅಂತ ಹೇಳಿದ್ದು ಅವರಿಗೆ, ಅಂದರೆ ಸ್ವಂತ ಪ್ರೊ. ಭೂಸನೂರಮಠರಿಗೇ, ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರ ಬೋಧಿಸಿ, ಕಾಲಾನಂತರ ಆಗತಾನೇ ಪ್ರವರ್ಧಮಾನಕ್ಕೆ ಬರುತ್ತಿದ್ದ  BITS, Pilani ಭೌತಶಾಸ್ತ್ರದ ವಿಭಾಗ ಸೇರಿದ್ದ ಅವರ ಮಾಜಿ ಗುರು ಡಾ. ಖರೆ ಅವರಿಗೆ. ಯಪ್ಪಾ! ಎಲ್ಲಿಯ ಧಾರವಾಡದ ರಾಭೂ, ಎಲ್ಲಿ ಅವರಿಗೆ ವಾರಣಾಸಿಯಲ್ಲಿ ಪಾಠ ಮಾಡಿದ್ದ ಅದ್ಯಾರೋ ಮರಾಠಿ ಆದಮೀ ಡಾ. ಖರೆ. ಇರಲಿ ಪಿಲಾನಿಯ ಮಾಸ್ತರಿಗೆ ಪರಿಚಯ ಪತ್ರ ಬರೆದುಕೊಡುತ್ತೇನೆ ಅನ್ನುತ್ತಿದ್ದಾರೆ. ಒಳ್ಳೆಯದೇ ಆಯಿತು. ಯಾಕೆಂದರೆ ನಮಗೆ ಧಾರವಾಡವಿರಲಿ, ಪಿಲಾನಿಯಿರಲಿ, ಅಮೆರಿಕಾನೇ ಇರಲಿ, ಕ್ಲಾಸಿಗೆ ಹೋಗಿ ಕೂಡಲಿಕ್ಕೆ ಸುತಾರಾಂ ಇಷ್ಟವಿಲ್ಲ. ಸ್ವಂತ ಓದಿ ಎಷ್ಟು ತಿಳಿಯಿತೋ ಅಷ್ಟೇ ಸಾಕು ಅನ್ನುವ ಸ್ವಲ್ಪ 'self study' ಹಮ್ಮು ಆವಾಗಿತ್ತು. ಹಾಗಾಗಿ ಮುಂದೆ ಎಲ್ಲಿಯಾದರೂ ಪಿಲಾನಿಯಲ್ಲಿ ಇದೇ ಡಾ. ಖರೆ ಪ್ರೊಫೆಸರ್ ಕ್ಲಾಸಿಗೆ ಚಕ್ಕರ್ ಹೊಡೆಯುವ ಸಂದರ್ಭ ಬಂದರೆ ತಮ್ಮ ಶಿಷ್ಯ ರಾಭೂನ ಶಿಷ್ಯ ಅಂತ ಸ್ವಲ್ಪ ಡಿಸ್ಕೌಂಟ್ ಕೊಟ್ಟಾರು, ಹಾಜರಾತಿ ಮುಫತ್ತಿನಲ್ಲಿ ಕೊಟ್ಟಾರು ಆತನ ದೂ(ದು)ರಾಲೋಚನೆ ನಮ್ಮ ಮನಸ್ಸಿನಲ್ಲಿ ಬಂದಿತ್ತೇ? ಈಗ ನೆನಪಿಲ್ಲ. ಪಿಲಾನಿಗೆ ಹೋದ ಮೇಲೆ ತಿಳಿಯಿತು ಅಲ್ಲಿ ಹಾಜರಾತಿ ಕಡ್ಡಾಯ ಇಲ್ಲವೇ ಇಲ್ಲ ಅಂತ. ನಂತರ ಇನ್ನೂ ಒಂದು ಸ್ವಲ್ಪ ತಡವಾಗಿಯಾದರೂ ಬರೋಬ್ಬರಿ ತಿಳಿಯಿತು. ಅದೇನೆಂದರೆ ಹಾಜರಾತಿ ಜರೂರತ್ತಿಲ್ಲ, ಹೆಚ್ಚಿನವು open book ಪರೀಕ್ಷೆಗಳು, ಮೊದಲು ಓದಿದರೂ ಅಷ್ಟೇ, ಪರೀಕ್ಷೆಯಲ್ಲಿ ಪುಸ್ತಕ ತೆಗೆದು ನೋಡಿದರೂ ಅಷ್ಟೇ. ಅವೆಲ್ಲ misunderstanding ಗಳನ್ನು ದೂರಮಾಡಿದ ಪಿಲಾನಿಯ radical ಶಿಕ್ಷಣ ಪದ್ಧತಿಗೆ ಒಂದು ದೊಡ್ಡ ಸಲಾಂ.

ಭೂಸನೂರಮಠರು ಏನೇನೋ ಸುದ್ದಿ ಹೇಳಿದರು. ಹೇಳಿ ಕೇಳಿ ಅವರು ಕಥೆಗಾರರು. ನಾವು ಕಥೆ ಓದುವವರು. ಹೀಗಾಗಿ ಓಕೆ. 'ಏ ಏಳೋ! ತಡಾ ಆಗ್ಲಿಕತ್ತದ' ಅಂತ ಲುಕ್ ಕೊಡುತ್ತ ಕೂತವರು ನಮ್ಮ ತಂದೆಯವರು. ಯಾಕೆಂದರೆ ಸ್ವಲ್ಪ ಹೊತ್ತಿಗಾಗಲೇ ಧಾರವಾಡ ರೈಲ್ವೆ ಸ್ಟೇಷನ್ ರಿಸರ್ವೇಶನ್ ಖಿಡಕಿ ಬಂದಾಗುವದರಲ್ಲಿತ್ತು. ದೆಹಲಿಗೆ ಹೋಗುವ ನಮ್ಮ ಟಿಕೆಟ್ ಇನ್ನೂ ಬುಕ್ಕಾಗಿರಲಿಲ್ಲ. ಅದೇ ವರ್ಷ ಗೋವಾ - ದೆಹಲಿ ನಿಜಾಮುದ್ದೀನ್ ಅಂತ ಒಂದು ಡೈರೆಕ್ಟ್ ಟ್ರೈನ್ ಶುರುವಾಗಿ, ಅದಕ್ಕೆ ಧಾರವಾಡದಿಂದ ಲಿಂಕ್ ಎಕ್ಸಪ್ರೆಸ್ ಮೂಲಕ ಕನೆಕ್ಷನ್ ಇದ್ದು, ದೆಹಲಿಗೆ ಹೋಗುವ ಮಂದಿಗೆ ಭಾಳ ಅನುಕೂಲ ಕೂಡ ಆಗಿತ್ತು. ಅದೂ ಸಹ ಒಂದು ಶುಭ ಸಂದೇಶ ಅಂತ ಮಂದಿ ವಿಮರ್ಶಿಸಿ ಪಿಲಾನಿಗೇ ಹೋಗಲು ಹೇಳಿದ್ದರು ಕೆಲವರು. ಇಲ್ಲ ಅಂದರೆ ಮೊದಲು ಪೂನಾಕ್ಕೆ, ಮುಂಬೈಗೆ ಅಲ್ಲಿ ಇಲ್ಲಿ ಹೋಗಿ ದೆಹಲಿ ತಲುಪಿ, ನಂತರ ಬಸ್ಸೋ, ಮತ್ತೊಂದು ಟ್ರೈನೋ ಹಿಡಿದು, ಮರಳುಗಾಡಿನ ಮೂಲೆಯಲ್ಲಿರುವ ಪಿಲಾನಿ ಮುಟ್ಟಬೇಕಾಗಿತ್ತು. ಈಗ ಗೋವಾ - ನಿಜಾಮುದ್ದೀನ್ ಟ್ರೈನ್ ಆಗಿದ್ದು ಬೆಸ್ಟ್. ಧಾರವಾಡ ಒಳಗೆ ಹತ್ತಿ ಒಮ್ಮೆ ಮೀರಜ್ ಒಳಗೆ ಬದಲು ಮಾಡಿದರೆ ಸೀದಾ ದೆಹಲಿ.

ಆದರೂ ಭೂಸನೂರಮಠ ಅವರು ಹೇಳಿದ ಪಿಲಾನಿ ಕಥೆಗಳು ಇನ್ನೂ ನೆನಪಲ್ಲಿವೆ. 'ಅಲ್ಲೆ ನೋಡಪಾ ಎಲ್ಲಾ ಭಾಳ ಶಿಸ್ತುಬದ್ಧ. Everything runs like a clockwork. ಮತ್ತ ಪ್ರತಿ ಪರೀಕ್ಷೆಯ ಉತ್ತರ ಪತ್ರಿಕೆ ನಿನ್ನ ಕೈಯಾಗ ಹಿಡಿಸೇ ಬಿಡ್ತಾರ ನೋಡು. Because they insist on transparency. ಅಕಸ್ಮಾತ ಯಾರರೆ ಮಾಸ್ತರು ನಿನ್ನ ಉತ್ತರ ಪತ್ರಿಕೆ ಬರೋಬ್ಬರಿ ತಿದ್ದಿಲ್ಲ ಅಂದ್ರ ನೀನು ಹೋಗಿ ಅವರ ಜೋಡಿ ಜಗಳ ಸಹ ಮಾಡಬಹದು. ನಮ್ಮ ಕಾಶ್ಯಾ (ಅಂದರೆ ಸಣ್ಣ ಮಗ ಕಾಶಿನಾಥ) ಮನ್ನೆ ಜರ್ಮನಿಯಿಂದ ಪತ್ರ ಬರೆದಿದ್ದ. ಆವಾ ಅಲ್ಲೆ ಯಾವದೋ ಜರ್ಮನ್ ಮಾಸ್ತರ್ ಜೋಡಿ ಹಾಕ್ಕೊಂಡು ಗುದ್ದಾಡಿದ ಅಂತ ಹೇಳಿ. ಹೇಳಿ ಕೇಳಿ ಪಿಲಾನಿಯೊಳಗ ನಾಲ್ಕು ವರ್ಷ ಮಾಸ್ತರ್ ಮಂದಿ ಜೋಡಿ ಗುದ್ದಾಡಿ, ವಾದ ಮಾಡಿ ರೂಢಿ ನೋಡು. You can be very frank with your teachers there. You can argue and if you convince them that you deserve more marks they will give you,' ಅಂತ ಹೇಳಿ ಭೂಸನೂರಮಠ ಬಿಟ್ಸ್, ಪಿಲಾನಿಯ ಶೈಕ್ಷಣಿಕ ವಾತಾವರಣದ ಬಗ್ಗೆ ಏನೋ ಒಂದು ಬಗೆಯ ಅಚ್ಚರಿ ಮೂಡಿಸಿದ್ದರು. ಆದರೆ ಅವರು ಹೇಳದ ಒಂದು ಮಾತು ನಂತರ ಅರ್ಥವಾಯಿತು. ಮಾಸ್ತರ್ ಜೋಡಿ ಹೋಗಿ ಗುದ್ದಾಡಬಹುದು. ಮಾಸ್ತರದ್ದು ತಪ್ಪಿದ್ದರೆ ತಿದ್ದಿಕೊಂಡು, ಹೆಚ್ಚಿನ ಮಾರ್ಕ್ಸ್ ಹಾಕಿ ಕಳಿಸುತ್ತಾರೆ. on the flip side, ಮಾಸ್ತರ್ ಮತ್ತೊಮ್ಮೆ ಚೆಕ್ ಮಾಡಿದಾಗ, ನಿಮ್ಮ ಹೆಚ್ಚಿನ ತಪ್ಪುಗಳು ಕಂಡು ಬಂದರೆ, ಮಾರ್ಕ್ಸ್ ಕಮ್ಮಿ ಸಹಿತ ಮಾಡಿ ಕೊಡುತ್ತಾರೆ. ಆ ಪಾಠ ನನಗೆ ಮರೆಯಲಾರದಂತೆ ಕಲಿಸಿದವರು inorganic chemistry ಕಲಿಸಿದ್ದ ಪ್ರೊ. ಎಲ್. ಕೆ. ಸಿಂಗ್. ಹೇಗೂ ಬಿಟ್ಟಿ revaluation ಇದೆ, ಕರೆದು ಕೇಳಿದರೆ ಹೋಗಿ ನಮ್ಮ ಧಾರವಾಡ ಶೈಲಿಯಲ್ಲಿ ವಾದ ಮಾಡಿ ಬಂದಾರಾಯಿತು, ಅಂತ ಒಂದು ಟೆಸ್ಟಿನ ಉತ್ತರ ಪತ್ರಿಕೆಯ ಮೌಲ್ಯಮಾಪನ ಸರಿಯಾಗಿಲ್ಲ ಅಂತ ಪ್ರೊ. ಎಲ್. ಕೆ. ಸಿಂಗ್ ಅವರಿಗೆ ವಾಪಸ್ ಕೊಟ್ಟು ಬಂದರೆ, ಒಂದು ವಾರದ ನಂತರ ಕರೆದು, ಹೊಸದಾಗಿ ಮೌಲ್ಯಮಾಪನ ಮಾಡಿದ ಪೇಪರ್ ಕೈಯಲ್ಲಿಟ್ಟಿದ್ದರು. ನೋಡಿದರೆ ಮೊದಲಿನಗಿಂತ ಎರಡು ಮಾರ್ಕ್ಸ್ ಕಡಿಮೆ. ಅಕಟಕಟಾ! ಮೊದಲು ಕಂಡಿರದಿದ್ದ ತಪ್ಪು ಈಗ ಕಂಡಿತ್ತು ಸರ್ ಅವರಿಗೆ. ಬರೋಬ್ಬರಿ ಮಾರ್ಕ್ಸ್ ಕಳೆದು ಕಳಿಸಿದ್ದರು. ಸುಖಾ ಸುಮ್ಮನೆ ಬಿಟ್ಟಿಯಲ್ಲಿ ಚಡ್ಡಿ ಕಳೆಯಿಸಿಕೊಂಡು ಬಂದ ಕೆಟ್ಟ ಫೀಲಿಂಗ್. ಅದೇ ಕೊನೆ! ನಂತರ ನಾನು ಮತ್ತೆ ಯಾವದೇ ತರಹದ ಮರುಮೌಲ್ಯಮಾಪನಕ್ಕೆ ಅರ್ಜೀ ಹಾಕಲಿಲ್ಲ. ಮುಂದಿನ ಮೂರೂವರೆ ವರ್ಷ 'ಪಾಲಿಗೆ ಬಂದಷ್ಟು ಪಂಚಾಮೃತ' ಅಂತ ಸ್ವೀಕರಿಸಿ, ತಲೆಗೂ ಪ್ರೋಕ್ಷಿಸಿಕೊಂಡು, ಡಿಗ್ರಿ ಸರ್ಟಿಫಿಕೇಟು ತೊಗೊಂಡು ಬಂದೆ. ನಂತರ ಅದಕ್ಕೆ ತರಹ ತರಹದ ಉಪ್ಪಿನಕಾಯಿ ಹಚ್ಚಿಕೊಂಡು ನೆಕ್ಕುತ್ತಿದ್ದೇನೆ. ಡಿಗ್ರಿ ಸರ್ಟಿಫಿಕೇಟ್ ಗಳ ಹಣೆಬರೆಹವೇ ಅಷ್ಟು. ಎಲ್ಲರೂ ಅದನ್ನೇ ತಾನೇ ಮಾಡುತ್ತಿರುವದು???? ;)

ಇದೆಲ್ಲ ಕಥೆ ಭೂಸನೂರುಮಠ ಅವರ ಜೊತೆ ಆದ ಮಾತುಕತೆಗಳ ಮಧ್ಯೆ ಕಳೆದುಹೋಗಿತ್ತು. ಮೊದಲೇ ಹೇಳಿದಂತೆ ಪಿಲಾನಿಯಲ್ಲಿರುವ ತಮ್ಮ ಸೊಸೆಗೆ (ಪ್ರೊ. ಸುಜಾತಾ ಗೋಪಾಲನ್ ಭೂಸನೂರಮಠ) ಮತ್ತು ಅಲ್ಲಿನ ಭೌತಶಾಸ್ತ್ರ ವಿಭಾಗದ ಡಾ. ಖರೆಯವರಿಗೆ ಪತ್ರ ಬರೆದುಕೊಡುವದಾಗಿ ಹೇಳಿದರು. ಇಂತಹ ದಿನ, ಇಷ್ಟು ಹೊತ್ತಿಗೆ ಬಂದು ಪತ್ರಗಳನ್ನು ತೆಗೆದುಕೊಂಡು ಹೋಗು ಅಂತ ಬೀಳ್ಕೊಟ್ಟರು. ಬೀಳ್ಕೊಡುವ ಮೊದಲು ಡಾ. ಖರೆ ಅವರ ಬಗ್ಗೆ ಒಂದು ಮಜವಾದ ಘಟನೆ ಹೇಳಿದರು ರಾಭೂ.

ಮೊದಲೇ ಹೇಳಿದಂತೆ ಡಾ. ಖರೆ ಭೂಸನೂರಮಠರಿಗೆ ವಾರಣಾಸಿಯಲ್ಲಿ ಭೌತಶಾಸ್ತ್ರ ಕಲಿಸಿದವರು. ನಂತರ ಪಿಲಾನಿಗೆ ಬಂದು ಅಲ್ಲಿ ಮಾಸ್ತರಿಕೆ ನಡೆಸಿದ್ದರು. ಎಂಬತ್ತರ ದಶಕದಲ್ಲಿ ಭೂಸನೂರಮಠರ  ಹಿರಿಯ ಮಗ ವಿಶ್ವನಾಥ ಅವರು ಪಿಲಾನಿಯಲ್ಲಿ  ಕೆಮಿಕಲ್ ಇಂಜಿನಿಯರಿಂಗ್ ಓದಲು ಹೋದರು. ಮೊದಲನೇ ಸೆಮಿಸ್ಟರ್ ನ ಯಾವದೋ ಒಂದು ಫಿಸಿಕ್ಸ್ ಕೋರ್ಸ್ ಇದೇ ಡಾ. ಖರೆ ಪಾಠ ಮಾಡುತ್ತಿದ್ದರು. ಎಂದೋ ಒಂದು ದಿವಸ ಭೂಸನೂರಮಠರ ಮಗ ಅವರ ಕಣ್ಣಿಗೆ ಬಿದ್ದಿದ್ದಾನೆ. ಅವರಿಗೆ ಏನೋ ಸಂಶಯ ಬಂದಿದೆ. ಹುಡುಗನನ್ನು ನಿಲ್ಲಿಸಿ ಒಂದೇ ಒಂದು ಪ್ರಶ್ನೆ ಕೇಳಿದ್ದಾರೆ, 'Are you Bhoosnoormath's son????' ಅಷ್ಟೇ. ಡಾ. ಖರೆ ಅಂದರೆ ಖತರ್ನಾಕ್. ಸರಿ ಸುಮಾರು ಮೂವತ್ತು ವರ್ಷದ ಹಿಂದೆ ನೋಡಿದ್ದ ಅಪ್ಪ (ರಾಭೂ) ಅವರ ಚಹರಾಪಟ್ಟಿ ನೆನಪಿಟ್ಟುಕೊಂಡು, 'ಇವನು ಅವರ ಮಗನೇ ಇರಬೇಕು' ಅಂತ ಬರೋಬ್ಬರಿ ಆಟಕಾಯಿಸಿಕೊಂಡಿದ್ದರು. ಆದರೆ ಅಂತಹ ಡಾ. ಖರೆ ನಮ್ಮನ್ನು ಹಿಡಿದು, 'Are you Bhoosnoormath's student????' ಅಂತ ಮಾತ್ರ ಕೇಳಲಿಲ್ಲ. ಅಕಸ್ಮಾತ ರಾಭೂ ನಮಗೆ ಪಾಠ ಮಾಡಿ, ನಾವು ಅವರ ಕ್ಲಾಸ್ ಅಟೆಂಡ್ ಮಾಡಿ, ಏನೇನೋ ಮಾಡಿದ್ದರೆ, ಅದೇನೋ quantum effect ಆಗಿ ಕೇಳುತ್ತಿದ್ದರೋ ಏನೋ. ಆದರೆ ಹಾಗಾಗಲಿಲ್ಲ.

ಸರಿ. ರಾಭೂ ಅವರಿಗೆ ವಂದನೆ ಅರ್ಪಿಸಿ, ಧನ್ಯವಾದ ಹೇಳಿ ಅವರ ಮನೆಯಿಂದ ಹೊರಟೆವು. ದೆಹಲಿಗೆ ರೈಲ್ವೆ ಟಿಕೆಟ್ ಸಹಿತ ಸಿಕ್ಕಿತು. ಮುಂದೆ ರಾಭೂ ಹೇಳಿದ ವೇಳೆಗೆ ಹೋಗಿ, ಅವರು ನೀಟಾಗಿ ಬರೆದು, ಲಕೋಟೆಯಲ್ಲಿ ಹಾಕಿ, ಸೀಲ್ ಮಾಡಿ, ಮೇಲೆ ಹೆಸರು ಬರೆದಿಟ್ಟಿದ್ದ ಎರಡು ಪರಿಚಯ ಪತ್ರಗಳನ್ನು ತಂದೆ. ಒಂದು ಅವರ ಸೊಸೆಗೆ. ಇನ್ನೊಂದು ಅವರ ಗುರುಗಳಾದ ಡಾ. ಖರೆ ಅವರಿಗೆ.

ಪಿಲಾನಿಗೆ ಹೋಗಿ ಸೇರಿಕೊಳ್ಳಲು ಒಂದೋ ಎರಡು ವಾರಗಳಿದ್ದವು. ಧಾರವಾಡ ಬಿಟ್ಟು ಹೋಗಲು ಮನಸ್ಸೇ ಇರಲಿಲ್ಲ. ಕಾರಣ ಒಂದು ಚಿಗರೆ ಮರಿ. ಅದರೊಂದಿಗೆ ಸಿಕ್ಕಾಪಟ್ಟೆ ಪ್ರೀತಿಯಾಗಿ ಹೋಗಿತ್ತು. ಮುಂದೆ ಅದು ಒಂದು ಟ್ರಾಜಿಡಿ ಆಗಿಹೋಯಿತು. ದೊಡ್ಡ ಟ್ರಾಜಿಡಿ. ಅದರ ಬಗ್ಗೆ ಹಿಂದೆ ಬರೆದಿದ್ದೆ. ಸಮಯವಿದ್ದಾಗ ಓದಿಕೊಳ್ಳಿ.

***

ಸರಿ, ಆಗಸ್ಟ್ ೧೯೯೦ ರ ಮೊದಲ ವಾರದಲ್ಲಿ ಪಿಲಾನಿಗೆ ಬಂದು ಮುಟ್ಟಿದ್ದಾಯಿತು. ಆಗ ಧಾರವಾಡದಲ್ಲೇ ಇದ್ದ, ನಮ್ಮ ಆತ್ಮೀಯರಾದ, ನವಲೂರಿನ ಭೋರುಕಾ ಟೆಕ್ಸ್ಟೈಲ್ MD ಆಗಿದ್ದ ಅಗ್ರವಾಲಾ ಸಾಹೇಬರು ತುಂಬ ಸಹಾಯ ಮಾಡಿದರು. ಅವರು ಸಹ ಪಿಲಾನಿ ಸಮೀಪದವರೇ. ಹಾಗಾಗಿ ಅವರ ದೆಹಲಿಯ ಮನುಷ್ಯನೊಬ್ಬನನ್ನು ನಮ್ಮ ಜೊತೆಗೇ ಕಳಿಸಿಬಿಟ್ಟರು. ಛೋಟ್ ಮಲ್ಲ ಜೋಷಿ ಅಂತ ಆತನ ಹೆಸರು. ಆ ಪುಣ್ಯಾತ್ಮರ ಬಗ್ಗೆ ಮತ್ತೆ ಬರೆಯೋಣ ಬಿಡಿ. ಅವರೇ ನಮ್ಮನ್ನು ದೆಹಲಿಯಿಂದ ಕರೆದೊಯ್ದು, ಪಿಲಾನಿಗೆ ಮುಟ್ಟಿಸಿ, ನಾವು 'ನೀವು ಹೋಗಿ. ಮುಂದಿನದು ನಾವು ನೋಡಿಕೊಳ್ಳುತ್ತೇವೇ,' ಅಂದ ಮೇಲೆ ನಮ್ಮನ್ನು ಬಿಟ್ಟು ಹೋಗಿದ್ದರು. Thanks CM Joshi Sir.

ಪಿಲಾನಿ ಅಂದರೆ ಎಲ್ಲದೂ very well organized, everything runs like a clockwork ಅಂತ ಎಲ್ಲರಿಂದ ಕೇಳಿದ್ದು, ಓದಿದ್ದು ಯಾವದರಲ್ಲೂ ಏನೂ ಅತಿಶಯೋಕ್ತಿ ಇರಲೇ ಇಲ್ಲ. ಅಷ್ಟು ಚನ್ನಾಗಿ ನಿಭಾಯಿಸಿಕೊಂಡು ಹೋಗುತ್ತಾರೆ. Hats off to the way they run the institution! Role model for any educational institution.

ಸರಿ. ಪಿಲಾನಿ ಸೇರಿದ್ದಾಯಿತು. ಹಾಸ್ಟೆಲ್ ರೂಂ ಸಿಕ್ಕಿದ್ದಾಯಿತು. ಎರಡು ದಿನ ಬಿಟ್ಟು ತಂದೆಯವರು ವಾಪಸ್ ಹೊರಡಲಿಕ್ಕೆ ಇದೆ. ಅಷ್ಟರೊಳಗೆ ಭೂಸನೂರಮಠ ಅವರ ಸೊಸೆ ಮತ್ತೆ ಅವರ ಬೀಗರನ್ನು ಭೆಟ್ಟಿಯಾಗಿ, ಭೂಸನೂರಮಠ ಅವರು ಕೊಟ್ಟ ಪರಿಚಯ ಪತ್ರ ಎಲ್ಲ ಕೊಟ್ಟು, ನಮ್ಮ ಪರಿಚಯ ಮಾಡಿಕೊಳ್ಳಬೇಕು. ಮುಂದಿನ ಹೆಜ್ಜೆ ಅಂದರೆ ಪಿಲಾನಿಯ ಕ್ಯಾಂಪಸ್ಸಿನಲ್ಲಿ ಭೂಸನೂರಮಠ ಅವರ ಬೀಗರ ಮನೆ ಹುಡುಕಬೇಕು. ಏನು ಮಾಡಬೇಕು? ಸರಿ ಅಂತ ಹೇಳಿ ಪಿಲಾನಿ ಕ್ಯಾಂಪಸ್ಸಿನ ತುಂಬ ಚಕ್ಕರ್ ಹೊಡೆದಿದ್ದು ಆಯಿತು. ಮೊದಲು ಹೋಗಿದ್ದು ಅವರ ಬೀಗರಾದ ಪ್ರೊ. ಗೋಪಾಲನ್ ಅವರ ಆಫೀಸ್ ಚೇಂಬರ್ ಹುಡುಕಿಕೊಂಡು. ಅದೇನೋ ಸಿಕ್ಕಿತು. ಆದರೆ ಬೀಗ ಹಾಕಿತ್ತು. ಅವರ ಸೊಸೆಯ ಚೇಂಬರ್ ಸಿಕ್ಕಿತ್ತೇ ಇಲ್ಲವೇ ಅಂತ ನೆನಪಿಲ್ಲ. ಸರಿ, ಯಾರನ್ನಾದರೂ ಹಿಡಿದು ಗೋಪಾಲನ್ ಅವರ ಸ್ಟಾಫ್ ಕ್ವಾರ್ಟರ್ ಎಲ್ಲಿದೆ ಅಂತ ಕೇಳೋಣ ಅನ್ನುವಷ್ಟರಲ್ಲಿ ಒಬ್ಬರು ಸಿಕ್ಕರು. ಅವರು ಗಣಿತ ವಿಭಾಗದ ಮಹಾ eccentric ಆದರೆ ತುಂಬಾ funny ಆದ ಡಾ. ಪೀ.ಕೆ. ರಾಮನ್ ಅಂತ ಆಮೇಲೆ ಗೊತ್ತಾಯಿತು. ಹೆಸರು ಪೀಕೆ ಆದರೂ ಎಂದೂ ಶೆರೆ ಪಿರೇ ಕುಡಿದವರೇ ಅಲ್ಲ ಅವರು. ಅಂತಹ ಡಾ. ಪೀ. ಕೆ. ರಾಮನ್ ನಾವು ಮಾತಾಡಿಸಿದಾಗ ಪ್ರೀತಿಯಿಂದ ಮಾತಾಡಿ, ಭೂಸನೂರಮಠರ ಬೀಗರಾದ ಪ್ರೊ. ಗೋಪಾಲನ್ ಅವರ ಮನೆಗೆ ಬರೋಬ್ಬರಿ ದಾರಿ ತೋರಿಸಿದ್ದರು. ಮತ್ತೆ ಪಿಲಾನಿ ಕ್ಯಾಂಪಸ್ ಅಂದರೆ ಪೂರ್ತಿ ಗ್ರಿಡ್ ಸಿಸ್ಟಮ್. ಅಡ್ರೆಸ್ ಸಿಕ್ಕರೆ ಹುಡುಕುವದು ತುಂಬ ಸುಲಭ. ಡಾ. ಪೀ. ಕೆ. ರಾಮನ್ ಅವರಿಗೆ ಥ್ಯಾಂಕ್ಸ್ ಹೇಳಿದರೆ ತಮ್ಮ ಪಕ್ಕಾ ತಮಿಳು ಶೈಲಿಯಲ್ಲಿ 'mention not. mention not' ಅಂದರು. ತಮಿಳು ಅವರ specialty ಅಂತ ಅವರ ಕೆಳಗೆ ಎರಡನೇ semester ನಲ್ಲಿ 'Probability & Statistics' ಎಂಬ ಕೋರ್ಸಿನಲ್ಲಿ ವಿಷಯ ಕಲಿಯುವದರಕಿಂತ ಹೆಚ್ಚಾಗಿ ತಮಿಳು ಕಲಿತಾಗ ಅರ್ಥವಾಯಿತು.

ಸರಿ, ಡಾ. ಪೀ. ಕೆ. ರಾಮನ್ ಕೊಟ್ಟ ದಾರಿ ಹಿಡಿದು ಭೂಸನೂರಮಠ ಅವರ ಪಿಲಾನಿ ಬೀಗರ ಮನೆ ಬಾಗಿಲು ತಟ್ಟಿದೆವು. ಬಾಗಿಲು ತೆರೆದು, ಒಳಗೆ ಸ್ವಾಗತಿಸಿದವರು ಪ್ರೊ. ಗೋಪಾಲನ್ ಅವರ ಪತ್ನಿ ಅಂತ ನೆನಪು. ನಮ್ಮ ಪರಿಚಯ ಮಾಡಿಕೊಂಡೆವು. ಧಾರವಾಡದ ತಮ್ಮ ಬೀಗರ ಪೈಕಿ ಅಂತ ತಿಳಿದ ನಮಗೆ ಸಿಕ್ಕಾಪಟ್ಟೆ ಸತ್ಕಾರವಾಯಿತು. ಭೂಸನೂರಮಠ ಅವರ ಸೊಸೆ ಸುಜಾತಾ ಮೇಡಂ ಸಹಿತ ಬಂದು, ಸಿಕ್ಕಾಪಟ್ಟೆ ಖಾತಿರ್ದಾರಿ ಮಾಡಿದರು. ಅವರು ಶುದ್ದ ತಮಿಳೆ. ಬೆಳೆದಿದ್ದು ರಾಜಸ್ಥಾನದ ಪಿಲಾನಿಯಲ್ಲಿ. ಭೂಸನೂರಮಠರ ಸೊಸೆಯಾಗಿ ಬಂದ ಮೇಲೆ ಎಲ್ಲೋ ಅಷ್ಟಿಷ್ಟು ಧಾರವಾಡ ಕನ್ನಡ ಕಲಿದ್ದರು ಅಂತ ಕಾಣುತ್ತದೆ. 'ತೊಗೊರೀ! ಇನ್ನೂ ಸ್ವಲ್ಪ ತೊಗೊರೀ!' ಅಂತ ಅವರು ಆತ್ಮೀಯತೆಯಿಂದ, ಪ್ರೀತಿಯಿಂದ, ತಮಿಳ accent ನಲ್ಲಿ ಧಾರವಾಡ ಕನ್ನಡ ಮಾತಾಡಿ, ಅಷ್ಟೊಂದು ಖಾತಿರ್ದಾರಿ ಮಾಡಿದ್ದನ್ನು ಹೇಗೆ ಮರೆಯೋಣ!? ಅವರು ಎಲ್ಲೇ ಇದ್ದರೂ ತಣ್ಣಗಿರಲಿ.

ಸರಿ, ಭೂಸನೂರಮಠರ ಬೀಗರ ಆತಿಥ್ಯ ಭರ್ಜರಿಯಾಗಿತ್ತು. ಮಗ ಏನಾದರೂ ಲಫಡಾ ಮಾಡಿಕೊಂಡರೆ ಆಪತ್ಕಾಲಕ್ಕೆ ದೂರದ ಊರಿನಲ್ಲಿ ಪರಿಚಯದವರು ಯಾರಾದರೂ ಇದ್ದಾರೆ ಅಂತೆ ತಂದೆಯವರು ನೀರಾಳವಾಗಿದ್ದರೋ ಏನೋ!? ಗೊತ್ತಿಲ್ಲ. ಅವರ ಮನೆಯಿಂದ ವಾಪಸ್ ಬರುವಾಗ, 'ನಿನಗೆ ಸೈಕಲ್ ಏನಾದರೂ ಕೊಳ್ಳುವದಿದ್ದರೆ ಭೂಸನೂರಮಠ ಬಾಯಿಯನ್ನು ಕರೆದುಕೊಂಡು ಹೋಗು' ಅಂತ ಅಂದುಬಿಟ್ಟರು ತಂದೆಯವರು. ಅಕಟಕಟಾ! ಪಾಪ ಬಹಳ ಭೋಳೆ ಸ್ವಭಾವದವರು ತಂದೆಯವರು. ಪಿಲಾನಿ ಕ್ಯಾಂಪಸ್ ನಲ್ಲಿ ಎಲ್ಲರೂ ಸೈಕಲ್ ಹೊಡೆಯುತ್ತಿದ್ದಿದ್ದನ್ನು ನೋಡಿದ ಅವರು ಹೋಗುವ ಮೊದಲೇ ಒಂದು ಸೈಕಲ್ ಕೊಡಿಸಲೇ ಅಂತ ಕೇಳಿದ್ದರು. ನಾನು ಉರಿದುಕೊಂಡು ಬೈದಿದ್ದೆ. ಆದರೂ ಹೋಗೋವಾಗ ಇರಲಿ ಅಂತ ಮತ್ತೊಮ್ಮೆ ಹೇಳಿದ್ದರು. ಉದ್ರಿ ಉಪದೇಶ ಮಾಡಿದ್ದರು. ಎಲ್ಲಿಯಾದರೂ ಹಿಂದಿ ಭಾಷೆ, ವ್ಯವಹಾರಿಕೆ ಬರದ ಮಗ ೮೦೦ ರೂಪಾಯಿ ಸೈಕಲ್ಲಿಗೆ ೧೬೦೦ ರುಪಾಯಿ ಕೊಟ್ಟು, ತಮ್ಮ ತಲೆ ನುಣ್ಣಗೆ ಬೋಳಿಸಿಯಾನು ಅಂತ ಕಾಳಜಿ. 'ಅಪ್ಪಾ! ನೀ ಸುಮ್ಮ ಕೂಡೋ ಮಾರಾಯಾ. ನಮ್ಮ ಹಾಸ್ಟೆಲ್ ಬೇಕಾದಷ್ಟು ಹತ್ರ ಅದ. ಸೈಕಲ್ ಏನೂ ಸದ್ಯಕ್ಕೆ ಬ್ಯಾಡ,' ಅಂತ ತಂದೆಯವರನ್ನು ಸುಮ್ಮನಿರಿಸಿ ಸಾಗಹಾಕಿದ್ದೆ. ಅದೇನು ಅದೃಷ್ಟವೋ ಏನೋ. ನಾಲ್ಕೂ ವರ್ಷ ನಮ್ಮ ಮೂರೂ ಹಾಸ್ಟೆಲ್ ನಮಗೆ ಹೋಗಬೇಕಾದ ವಿಭಾಗಗಳಿಗೆ ಹತ್ತಿರವೇ ಇದ್ದವು. ಸೈಕಲ್ ಖರೀದಿ ಮಾಡುವ ಪ್ರಸಂಗವೇ ಬರಲಿಲ್ಲ. ಮೇಲಿಂದ ಸೈಕಲ್ ಹೊಡೆಯುವುದು ಅಂದರೆ ಒಂದು ತರಹದ lower level ಮಂದಿ ಮಾಡುವದು ಅಂತ ತಲೆಯಲ್ಲಿ ಬೇರೆ ಇತ್ತು ನೋಡಿ. ಹಾಗಾಗಿ ಒಟ್ಟೇ ಸೈಕಲ್ ಹೊಡೆಯಲೇ ಇಲ್ಲ. ಪಿಲಾನಿ ಕ್ಯಾಂಪಸ್ ತುಂಬ ನಮ್ಮದು ನಟರಾಜಾ ಸರ್ವೀಸ್. ಅಂದರೆ ಶುದ್ಧ ಕಾಲ್ನಡಿಗೆ.

ಸರಿ. ಪಿಲಾನಿಯಲ್ಲಿ ಇಷ್ಟೆಲ್ಲ ಸೆಟಲ್ ಮಾಡಿಸಿ ತಂದೆಯವರು ವಾಪಸ್ ಧಾರವಾಡ ಸೇರಿಕೊಂಡರು. ವಾರಕ್ಕೊಮ್ಮೆ ಪತ್ರ ವ್ಯವಹಾರ. 'ಆಗಾಗ ಹೋಗಿ ಭೂಸನೂರಮಠ ಬಾಯಿಯನ್ನು ತಪ್ಪದೇ ಭೆಟ್ಟಿಮಾಡುತ್ತಿರು,' ಅಂತ ಕಾಳಜಿ ಭರಿತ ಸಲಹೆ ಧಾರವಾಡದಿಂದ. ಹೋಗಿ ಭೆಟ್ಟಿ ಮಾಡಿದ್ದೂ ಆಯಿತು. ಅವರೂ ಸಹ ಧಾರವಾಡದ ಬೀಗರ ಪೈಕಿ ಹುಡುಗ ಬಂದಿದ್ದಾನೆ ಅಂತ ಸಿಕ್ಕಾಪಟ್ಟೆ ಪ್ರೀತಿಯಿಂದ ಮತ್ತೆ ಮತ್ತೆ, 'ತೊಗೊರೀ! ಇನ್ನೂ ಸ್ವಲ್ಪ ತೊಗೊರೀ!' ಅಂತ ಸತ್ಕಾರ ಮಾಡಿಯೇ ಮಾಡಿದರು. ನಮಗೇನು?? ಕೊಟ್ಟಿದ್ದೆಲ್ಲವನ್ನೂ ಸ್ವಾಹಾ ಮಾಡಿ, ಒಂದಲ್ಲ ಎರಡು ಕಪ್ಪು ಚಹಾ ಕುಡಿದು ಬಂದೆವು. ಕಂಪನಿಗೆ ಇರಲಿ ಅಂತ ಸೂತ್ರ ಸಂಬಂಧವಿಲ್ಲದ ಬೆಂಗಾಲಿ ದೋಸ್ತನೊಬ್ಬನನ್ನೂ ಸಹ ಕರೆದುಕೊಂಡು ಹೋಗಿದ್ದೆ. homesick ಆಗಿ ತುಂಬಾ ಅಬ್ಬೇಪಾರಿಯಾಗಿತ್ತು ಅದು. ಅದಕ್ಕೇ ಅಂತಲೂ ಆಯಿತು, ರಾಗ್ಗಿಂಗ್ (ragging) ಸಮಯದಲ್ಲಿ ನಮ್ಮ ಕಂಪನಿಗೂ ಅಂತ ಆಯಿತು ಅಂತ ಕರೆದುಕೊಂಡು ಹೋಗಿದ್ದೆ. ಆಗಸ್ಟ್ ಮೊದಲನೇ ವಾರದಿಂದ ಹಿಡಿದು ಅಕ್ಟೋಬರ್ ಮೊದಲನೇ ವಾರದ ವರೆಗೆ ರಾಗಿಂಗ್ ಸಮಯ. ಒಬ್ಬೊಬ್ಬರೇ ಓಡಾಡುವದು ಡೇಂಜರ್. ಇಬ್ಬರಿದ್ದರೆ ಒಳ್ಳೆಯದು. ಸಿಕ್ಕೊಂಡು ಬಿದ್ದರೂ ೫೦%  ೫೦% ಆಗಿಬಿಡುತ್ತದೆ. ಮತ್ತೆ ವಯಸ್ಸಿಗೆ ಮೀರಿ ಹೊನಗ್ಯಾ ಹಾಂಗೆ ಅಡ್ಡಾದಿಡ್ಡಿ ಬೆಳೆದು, ಸದ್ದಾಮ್ ಹುಸೇನ್ ಮಾದರಿ ಮೀಸೆ ಬಿಟ್ಟಿದ್ದ ನಮ್ಮನ್ನು ಎಷ್ಟೋ ಜನ ಮಾಸ್ಟರ್ ಡಿಗ್ರಿ (ME) ಮಾಡಲಿಕ್ಕೆ ಬಂದವ ಅಂತ ತಿಳಿದುಕೊಂಡು, ಸಿಳ್ಳೆ ಹೊಡೆದು ರಾಗ್ಗಿಂಗ್ ಮಾಡಲು ಕರೆಯುತ್ತಿರಲೇ ಇಲ್ಲ. ಜೊತೆಗೊಬ್ಬ ಕುರಿಯಂತಹ ಒಬ್ಬ ಅಬ್ಬೇಪಾರಿಯನ್ನು ಕರೆದುಕೊಂಡು ಹೋಗಿಬಿಟ್ಟರೆ ನಾವು ಅದೆಷ್ಟೋ ಸೇಫ್.

ಹೀಗೆ ಮೊದಲನೇ ಸೆಮಿಸ್ಟರ್ ಜೀವನ ನಡೆಯುತ್ತಿತ್ತು. ೧೯೯೦ ಸೆಪ್ಟೆಂಬರ್ ಇರಬೇಕು. ಒಂದು ದಿವಸ ನಮ್ಮ ಕೃಷ್ಣಾ ಭವನ ಹಾಸ್ಟೆಲ್ಲಿನ ರೂಂ ನಂಬರ್ ೨೪೫ ರಲ್ಲಿ ಕೂತಿದ್ದೆ. ಅದು ನನ್ನ ಖುದ್ದು ರೂಮು. ಸಂಜೆ ಸುಮಾರು ಆರು, ಆರೂವರೆ ಹೊತ್ತು. ಯಾರೋ ಬಾಗಿಲು ತಟ್ಟಿದರು. ಯಾರೋ ಸೀನಿಯರ್ ಇರಬೇಕು. ರಾಗ್ಗಿಂಗ್ ಗಾಗಿ ಎತ್ತಾಕಿಕೊಂಡು ಹೋಗಲು ಬಂದಿರಬೇಕು ಅಂತ ದೂಸರಾ ಮಾತಾಡದೇ ಬಾಗಿಲು ತೆಗೆದೆ. ಹೊರಗೆ ನಿಂತವರು ಒಬ್ಬ ಆದಮೀ. ಸೀನಿಯರ್ ಇರಬಹುದೇನೋ ಎನ್ನುವಂತೆ, ರಾಗ್ಗಿಂಗ್ ಟೈಮ್ ಪದ್ಧತಿ ಪ್ರಕಾರ, ಶಿಸ್ತಿನಿಂದ, 'Good evening, Sir,' ಅಂದುಬಿಟ್ಟೆ. ಮಳ್ಳ ಮುಖ ಮಾಡಿದೆ. 'ಹೋಗ್ಗೋ ನಿನ್ನ! ನಾ ನಿಮ್ಮ ಅಣ್ಣ ಇದ್ದಾಂಗ ಮಾರಾಯಾ. ನಾ ಕಾಶಿನಾಥ ಭೂಸನೂರಮಠ. ಪ್ರೊ. ಭೂಸನೂರಮಠ ಅವರ ಮಗ,' ಅಂತ ಹೇಳಿದ ಅವರು ಡುಬ್ಬ ಚಪ್ಪರಿಸಿ, ಚಪ್ಪರಿಸಿ ನಕ್ಕರು. ನಾನು ಮತ್ತೂ ಭಾಳ ಸಣ್ಣಾದೆ. ಕರಗಿಹೋದೆ. ಭೂಸನರಮಠ ಪ್ರೊಫೆಸರ್ ಹೇಳುತಿದ್ದ, ಮತ್ತೆ ನಮ್ಮ ಅಣ್ಣ ಯಾವಾಗಲೂ ಹೇಳುತ್ತಿದ್ದ 'ಈಶ್ಯಾ, ಕಾಶ್ಯಾ'ರಲ್ಲಿ ಇವರೇ ಕಾಶ್ಯಾ ಉರ್ಫ್ ಕಾಶಣ್ಣ ಅಂತ ಆವಾಗ ತಿಳಿಯಿತು. ಭೂಸನೂರಮಠ ಕುಟುಂಬದಲ್ಲಿ ಮೊದಲು ನೋಡಿದ್ದು ಪ್ರೊಫೆಸರ್, ನಂತರ ಅವರ ಬೀಗರು & ಸೊಸೆ ಇತ್ಯಾದಿ, ನಂತರ ಇವರೇ ಸಣ್ಣ ಮಗ ಕಾಶಿನಾಥ.

ತಮ್ಮ ಧಾರವಾಡದ ಹುಡುಗ, ಅದೂ ತಮ್ಮ ಕುಟುಂಬದ ಸ್ನೇಹಿತರ ಮಗ ಒಬ್ಬ ಪಿಲಾನಿಗೆ ಬಂದಿದ್ದಾನೆ ಅಂತ ಖುದ್ದಾಗಿ ಭೇಟಿಯಾಗಿ ಮಾತಾಡಿಸಿಕೊಂಡು ಹೋಗಲು ಬಂದಿದ್ದರು ಕಾಶಿನಾಥ ಭೂಸನೂರಮಠ. ಎಷ್ಟು ದೊಡ್ಡ ಮನಸ್ಸು ಅವರದು! ಎಷ್ಟು ಪ್ರೀತಿ! ಆಗ ಅವರು ವಿದೇಶದಲ್ಲಿ ಓದುತ್ತಿದ್ದರು ಅಂತ ನೆನಪು. ರಜೆಗಾಗಿ ಬಂದವರು ಧಾರವಾಡಕ್ಕೆ, ಮಾವನ ಮನೆ ಪಿಲಾನಿಗೆ ಬಂದಿದ್ದರು. ಧಾರವಾಡಕ್ಕೆ ಹೋದಾಗ ಹೀಗೆ ಹೆಗಡೆಯವರ ಹುಡುಗ ಒಂದು ಪಿಲಾನಿಗೆ ಹೋಗಿ ಕೂತಿದೆ ಅಂತ ತಿಳಿದಿದೆ. ಮತ್ತ ನಮ್ಮ ತಂದೆ ತಾಯಿ ಕೂಡ ಹೋಗಿ ಭೆಟ್ಟಿಯಾಗಿದ್ದಾರೆ. ನಮ್ಮ ಹುಡುಗ, ಒಂದು ಸಲ ಭೆಟ್ಟಿಯಾಗೋಣ ಅಂತ ಬಂದೇ ಬಿಟ್ಟಿದ್ದರು ಅವರು. ಭಾಳ ಖುಷಿಯಾಯಿತು ಅವರನ್ನು ಭೆಟ್ಟಿಯಾಗಿ.

'ನಡಿ, ಸ್ವಲ್ಪ ಅಡ್ಯಾಡಿ ಬರೋಣ,' ಅಂದರು ಕಾಶಿನಾಥ. ಸಂಜೆ ಹೊತ್ತು. ಓಡ್ಯಾಡಲು ಹೇಳಿ ಮಾಡಿಸಿದಂತಹ ಸುಂದರ ಕ್ಯಾಂಪಸ್.  ನಮಗೆ ರಾಗ್ಗಿಂಗ್ ಕಾಟ ಅಂತ ರೂಮಿನಲ್ಲೇ ಗೂಟ ಹೊಡೆದುಕೊಂಡು ಕೂತಿದ್ದೆವು. ಈಗ ನಮ್ಮ ಸೂಪರ್ ಸೀನಿಯರ್ ಅನ್ನುವಂತಹ ವ್ಯಕ್ತಿ ಬಂದು, 'ಹೋಗೋಣ ಬಾ' ಅನ್ನುತ್ತಿದ್ದಾರೆ. ರೈಟ್ ಅಂತ ಹೇಳಿ, 'ಒನ್ ಮಿನಿಟ್ ಪ್ಲೀಸ್,' ಅಂತ ಹೇಳಿ, ಅವರನ್ನು ಹೊರಗೇ ನಿಲ್ಲಿಸಿ, ಬಾಗಿಲು ಹಾಕಿ, ಉಟ್ಟಿದ್ದ ಸಾಬರ ಚೌಕಳಿ ಲುಂಗಿ ಕಳೆದು, ಟೆರ್ರಿಕಾಟ್ ಪ್ಯಾಂಟ್ ಹಾಕಿಕೊಂಡು, ಧಾರವಾಡದ ಲೈನ್ ಬಜಾರ್ ಪುಟಾಣೆ ಟೈಲರ್ ಹೊಲೆದಿದ್ದ ಫುಲ್ ಶರ್ಟ್ ಹಾಕಿಕೊಂಡು, Nike (ಅಣ್ಣ ತಂದುಕೊಟ್ಟಿದ್ದು) ಶೂ ಹಾಕಿಕೊಂಡು ಹೊರಗೆ ಬಂದೆ. ರಾಗ್ಗಿಂಗ್ ಟೈಮ್ ನಲ್ಲಿ ಜೀನ್ಸ್ ಪ್ಯಾಂಟ್, ಟೀ-ಶರ್ಟ್, ಚಪ್ಪಲ್ ಎಲ್ಲ  ನಿಷಿದ್ಧ. ಶುದ್ದ ಫಾರ್ಮಲ್ ಇರಬೇಕು. ಪ್ರಾರಬ್ಧ. ಅದರ ಬಗ್ಗೆಲ್ಲ ಮತ್ತೊಮ್ಮೆ ಬರೆಯೋಣ.

ಸರಿ, ತಯಾರಾಗಿ ಹೊರಬಿದ್ದೆವು. ಕಾಶಿನಾಥ ಭೂಸನೂರಮಠ ಅವರೇ ಪಿಲಾನಿಯ ಮಾಜಿ ವಿದ್ಯಾರ್ಥಿ. ಅವರಿಗೆ ಎಲ್ಲೆಲ್ಲಿ ಓಡಾಡಿ, ಏನೇನು ನೆನಪು ಮಾಡಿಕೊಳ್ಳುವದಿತ್ತೋ? ಒಟ್ಟಿನಲ್ಲಿ ಗಿಚ್ಚಾಗಿ ಪಿಲಾನಿ ಕ್ಯಾಂಪಸ್ ತುಂಬ ಒಂದೆರೆಡು ಘಂಟೆ ಅಡ್ಯಾಡಿ, ಏನೇನೋ ಸುದ್ದಿಯೆಲ್ಲ ಮಾತಾಡಿ, ಕೊನೆಗೆ ಪಿಲಾನಿಯ ಕ್ಯಾಂಪಸ್ ಒಳಗೆ ಇರುವ Connaught Place ಸೇರಿದೆವು. ದೆಹಲಿಯಲ್ಲಿ ದೊಡ್ಡ Connaught Place ಇದ್ದರೆ ನಮ್ಮ ಪಿಲಾನಿಯದು ಸಣ್ಣ Connaught Place. ಅಲ್ಲಿ ಕಾಶಿನಾಥ ಭೂಸನೂರಮಠರು ಒತ್ತಾಯ ಮಾಡಿ, ನನ್ನಿಷ್ಟ ಕೇಳಿ, ಅದರ ಪ್ರಕಾರ milkshake ಆರ್ಡರ್ ಮಾಡಿ, ತಾವೂ ತಮ್ಮ milkshake ಆರ್ಡರ್ ಮಾಡಿ ಕಾಯುತ್ತ ಕುಳಿತೆವು. ಹರಟೆ ನಿರಂತರ. ಅದೂ ಇಬ್ಬರು ಧಾರವಾಡ ಮಂದಿ ಸಿಕ್ಕಿದರೆ ಕೇಳಬೇಕೇ?

milkshake ಇತ್ಯಾದಿ ಬಂತು. ಕುಡಿದಾಯಿತು. ಹರಟೆ ಏನೋ ಜೋರಾಗಿಯೇ ನಡೆದಿತ್ತು. ಆದರೆ ಅವರಿಗೆ ಮನೆಗೆ, ಮಾವನ ಮನೆಗೆ, ಹೋಗುವ ಅನಿವಾರ್ಯತೆ ಇತ್ತು. ನನಗೆ ಯಾವದೇ ತರಹದ ಅನಿವಾರ್ಯತೆ ಇರಲಿಲ್ಲ. ಆದರೆ ಒಬ್ಬನೇ ಹೋದರೆ ಹಾಸ್ಟೆಲ್ ಮುಟ್ಟಿಕೊಳ್ಳುವ ಚಾನ್ಸೇ ಇರಲಿಲ್ಲ. Connaught Place ನಿಂದ ನನ್ನ ಹಾಸ್ಟೆಲ್ ಆದ ಕೃಷ್ಣಾ ಭವನಕ್ಕೆ ಬರಬೇಕು ಅಂದರೆ ಕಮ್ಮಿ ಕಮ್ಮಿ ಅಂದರೂ ಅರ್ಧ ಡಜನ್ ಹಾಸ್ಟೆಲ್ ಸಿಗುತ್ತಿದ್ದವು. ಯಾರೋ ಸೀನಿಯರ್ ಗಳು ಎತ್ತಾಕಿಕೊಂಡು ಹೋಗುವದು ಖಾತ್ರಿಯಿತ್ತು. ನಂತರ ಹಾಸ್ಟೆಲ್ ಮುಟ್ಟುವದು ಎಂದೋ? ಯಾವ ಸ್ಥಿತಿಯಲ್ಲೋ? ಅದೆಲ್ಲ ಕಾಶಿನಾಥ ಭೂಸನೂರಮಠ ಅವರಿಗೆ ಗೊತ್ತೇ ಇತ್ತು. ಹಾಗಾಗಿ ಅವರ ಮಾವನ ಮನೆಯ ಪೂರ್ತಿ ವಿರುದ್ಧ ದಿಕ್ಕಿನಲ್ಲಿ, ಒಂದು ಮೂರು ಮೈಲಿ ದೂರವಿದ್ದರೂ, ನಮ್ಮ ಹಾಸ್ಟೆಲ್ ತನಕ, ರೂಂ ತನಕ ಮುಟ್ಟಿಸಿ ಹೋಗಿದ್ದರು. ಒಳ್ಳೆ ಅಣ್ಣನ ಹಾಗೆ. ಅವರು ಹೋದ ಮರುಕ್ಷಣವೇ ಸೀನಿಯರ್ ಮಂದಿ ರೈಡ್ ಮಾಡಿ, ನಾವು ರಾತ್ರಿಯೆಲ್ಲ ರಾಗ್ಗಿಂಗ್ ಮಾಡಿಸಿಕೊಂಡಿದ್ದು ಬೇರೆ ಮಾತು ಬಿಡಿ. ಆದರೆ ಅವರ ಕಾಳಜಿಗೆ, ಪ್ರೀತಿಗೆ, ಆತ್ಮೀಯತೆಗೆ ಸದಾ ಕೃತಜ್ಞ.

ಸರಿ, ಮತ್ತೊಂದು ಪರಿಚಯ ಪತ್ರ ಇತ್ತು ನೋಡಿ. ಡಾ. ಖರೆ ಅವರಿಗೆ ಕೊಡಬೇಕಾಗಿದ್ದು. ಅದು ಹಾಗೆಯೇ ಇತ್ತು. ಮೊದಲನೇ ಸೆಮಿಸ್ಟರ್ ನಲ್ಲಿ modern physics ಅನ್ನುವ ಒಂದು ವಿಷಯ ಇತ್ತು. ಅದನ್ನು ಡಾ. ಖರೆ ಪಾಠ ಮಾಡುತ್ತಿದ್ದರು. ಅಷ್ಟೇ ನಮ್ಮ ತರಗತಿಗೆ ಅಲ್ಲ. ನಮ್ಮ ತರಗತಿಗೆ ಡಾ. ಸುಬುದ್ಧಿ ಅಂತ ಒಬ್ಬರಿದ್ದರು. ಮಜಾ ಕೇಳಿ. ಈ ಸುಬುದ್ಧಿ ಸಹ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಿಂದ ಬಂದವರೇ. ಧಾರವಾಡದಲ್ಲಿ ರಾಭೂ ಇವರ ಬಗ್ಗೆ ಕೂಡ ಹೇಳಿದ್ದರು. ಆದರೆ ಇವರಿಗೆ ಪರಿಚಯ ಪತ್ರ ಇತ್ಯಾದಿ ಕೊಟ್ಟಿರಲಿಲ್ಲ. ಪಿಲಾನಿಯಲ್ಲಿ ಇಂತಹದೇ ಮಾಸ್ತರ್ ಕ್ಲಾಸಿಗೇ ಹೋಗಿ ಕೂಡಬೇಕು ಅಂತ ಏನೂ ನಿರ್ಬಂಧನೆ ಇಲ್ಲ. ನಿಮಗೆ ಯಾರು ಇಷ್ಟವಾಗುತ್ತರೋ ಅವರ ಕ್ಲಾಸಿಗೆ ಹೋಗಿ ಕೂಡಬಹುದು. ಸುಮ್ಮನೆ ತಲುಬಿಗೆ ಅಂತ ಒಂದು ದಿವಸ ಡಾ. ಖರೆ ಕ್ಲಾಸಿಗೆ ಹೋಗಿ ಕೂತಿದ್ದೆ. ಏನೋ ಸಕತ್ತಾಗಿ ಪಾಠ ಮಾಡಿದರು. ನಾವೇನೂ ಪಾಠ ಕೇಳಲಿಕ್ಕೆ ಹೋಗಿರಲಿಲ್ಲ. ಅಕಸ್ಮಾತ ಡಾ. ಖರೆ ಸಿಕ್ಕರೆ ಭೂಸನೂರಮಠ ಅವರು ಕೊಟ್ಟಿದ್ದ ಪತ್ರ ಅವರಿಗೆ ಕೊಟ್ಟು, ನಮಸ್ಕಾರ ಹೇಳಿ ಬಂದರಾಯಿತು ಅಂತ ಹೋಗಿದ್ದೆ.

ಕ್ಲಾಸು ಮುಗಿಯಿತು. ಯಾರ್ಯಾರೋ 'ಶಾಣ್ಯಾ' ಮಂದಿ ಡಾ. ಖರೆ ಹತ್ತಿರ ಏನೇನೋ ಪ್ರಶ್ನೆ ಕೇಳುತ್ತ ನಿಂತರು. ಆವತ್ತು ನಮಗೆ ಈ quantum physics, time-travel ಇತ್ಯಾದಿ ನಿಜವಾಗಿಯೂ ಅರ್ಥವಾಗಿರಲಿಲ್ಲ. ಹಾಗಾಗಿ ಅದನ್ನು 'ಅರ್ಥ ಮಾಡಿಕೊಂಡು', ಡೌಟ್ ಕೇಳುತ್ತ ನಿಂತ ಪಿಲಾನಿಯ ಶಾಣ್ಯಾ ದೋಸ್ತರನ್ನು, 'ಹ್ಯಾಂ???????' ಅನ್ನುತ್ತ ಧಾರವಾಡ ಶೈಲಿಯಲ್ಲಿ ಬೆಚ್ಚಿ ನೋಡುತ್ತ ನಿಂತಾಯಿತು. ಅದೇ ಹೊತ್ತಿಗೆ ಸೀನಿಯರ್, ಅದೂ ಒಬ್ಬಾಕೆ ಹುಡುಗಿ, 'ಏ, ಫ್ರೆಶರ್! ಬಾ ಇಲ್ಲಿ' ಅನ್ನಬೇಕೇ? 'ಸ್ವಲ ತಡಿ. ಇಲ್ಲಿ ಡಾ. ಖರೆ ಸಾಹೇಬರನ್ನು ಭೆಟ್ಟಿ ಆಗೋದೈತಿ. ನಿಂದರ್ ಬೇ ನಿಮ್ಮೌನ್!' ಅಂತ ಆಕೆಗೆ ಸನ್ನೆ ಮಾಡಿ ಖರೆ ಸಾಹೇಬರನ್ನು ಕಾದಿದ್ದಾಯಿತು. ಅಂದು ಅವರು, ಮತ್ತೆ ಬೇರೆ ಪ್ರೊಫೆಸರುಗಳು ಯಾರೂ ಹೇಳಿದಾಗ ತಿಳಿಯದ modern physics ಇಂದು ಆದಿ ಶಂಕಾರಾಚಾರ್ಯರರ ಅದ್ವೈತ ವೇದಾಂತ ಓದಿದಾಗ ಫಟಾಕ್, ಫಟಾಕ್ ಅಂತ ಅರ್ಥವಾಗುತ್ತಿದೆ. ಇದಕ್ಕೆ ಏನೆನ್ನೋಣ? Was I not ready yet back then??? May be not.

ಡಾ. ಖರೆ ಶಾಣ್ಯಾ ಹುಡುಗರ ಸಮಸ್ಯೆ ಇತ್ಯಾದಿ ಬಗೆಹರಿಸಿ, ನಿಧಾನವಾಗಿ ಹೊರಗೆ ಬಂದರು. ಸರಕ್ಕನೆ ಹೋಗಿ, ಧಾರವಾಡ ಶೈಲಿಯಲ್ಲಿ ಆಟಕಾಯಿಸಿಕೊಂಡು, ನಮಸ್ಕಾರ ಮಾಡಿದೆ. ವಿವರ ಹೇಳಿದೆ. ಭೂಸನೂರಮಠ ಅವರಿಗೆ, ನಮ್ಮ ಕುಟುಂಬಕ್ಕೆ ಇರುವ ದೋಸ್ತಿ ಎಲ್ಲ ವಿಷಯ ಹೇಳಿದೆ. ಡಾ. ಖರೆ ಸಮಾಧಾನದಿಂದ ಎಲ್ಲ ಕೇಳಿದರು.

ಎಲ್ಲ ಸಮಾಧಾನದಿಂದ ಕೇಳಿದ ಡಾ. ಖರೆ ಶುದ್ಧ ಮರಾಠಿಯಲ್ಲಿ ಶುರು ಹಚ್ಚಿಕೊಂಡುಬಿಟ್ಟರು. ಅವರಂತೂ ಮರಾಠಿ ಮಾನುಸ್ ಬಿಡಿ. ಆದರೆ ನಾನು ಕಾನಡಿ (ಕನ್ನಡದ) ಹೆಗಡೆ. ಎಲ್ಲಿ ನನ್ನ ಅಡ್ದೆಸರು ಹೆಗಡೆಯನ್ನು ಮರಾಠಿಯ ಹೇಗಡೆ ಅಂತ ಮಾಡಿಕೊಂಡು ಮರಾಠಿಯಲ್ಲಿಯೇ ಶುರು ಹಚ್ಚಿಕೊಂಡರೋ ಏನೋ ಗೊತ್ತಿಲ್ಲ. ನಿಮಗೆ ನಿಜ ಹೇಳಬೇಕು ಅಂದರೆ ಆವತ್ತಿಗೆ ನಮಗೆ ಧಾರವಾಡ ಕನ್ನಡ ಬಿಟ್ಟರೆ ಬೇರೆ ಯಾವದೇ ಭಾಷೆ ಸರಿಯಾಗಿ ಬರುತ್ತಿದ್ದಿಲ್ಲ. ಅದೂ ಸುನೀಲ್ ಶೆಟ್ಟಿ ಹಾಗೆ ತೋತ್ಲಾ ಮಾತಾಡುವದು ಮಾತ್ರ ಬರುತ್ತಿತ್ತು. ಇವರು ಹೋಗಿ ಹೋಗಿ ಮರಾಠಿಯಲ್ಲಿ ಬ್ಲೇಡ್ ಹಾಕತೊಡಗಿದರೆ ನಾವೇನು ಮಾಡೋಣ? ಹೆಂಗೋ ಮಾಡಿ, 'ಮರಾಠಿ ಮುಲಾಂ (ಮಾಲೂಮ್) ನಹಿ,' ಅಂತ ಹೇಳಿದ್ದಾಯಿತು. ಆವಾಗ ಡಾ. ಖರೆ ಮರಾಠಿಯಲ್ಲಿ ಕೊರೆಯುವದನ್ನು ನಿಲ್ಲಿಸಿದರು.

(ಹೆಗಡೆ ಉರ್ಫ್ ಹೇಗಡೆ ಉರ್ಫ್ 'ಹೇ ಗಧೆ' ಅಂದರೆ  'ಏ ಕತ್ತೆ' ಅಂತ ಪಿಲಾನಿಯ ಉತ್ತರ ಭಾರತದ ಮಿತ್ರರು ಸುಮ್ಮನೆ ಕಿಚಾಯಿಸಲು ನಮಗಿಟ್ಟ ಹೆಸರು. Standard across all national campuses. All Hegdes have to bear with it ;))

ಇಷ್ಟೆಲ್ಲ ಆದ ಮೇಲೆ ಡಾ. ಖರೆ ವಿಷಯಕ್ಕೆ ಬಂದರು. ಪ್ರೊ. ಭೂಸನೂರಮಠ, ಅವರ ಮಕ್ಕಳನ್ನೆಲ್ಲ ತುಂಬಾ ನೆನಪಿಸಿಕೊಂಡರು. ನಾನೂ ಸಹ ಅದೇ ಘರಾಣಾದಿಂದ ಹೊರಬಿದ್ದವನು ಅಂತ ಕೇಳಿ ತುಂಬ ಖುಷಿ ಪಟ್ಟರು. ರಾಭೂ ಕೊಟ್ಟಿದ್ದ ಪತ್ರ ಕೊಟ್ಟೆ. ಓದುತ್ತ ಓದುತ್ತ ಡಾ. ಖರೆ ಅವರ ಮುಖದ ಮೇಲೆ ಮಂದಹಾಸ ಮೂಡಿತು. ಮಸ್ತಾಗಿ ಬರೆದಿರಬೇಕು ರಾಭೂ.

***

ಮನ್ನಿತ್ತಲಾಗೆ ಪ್ರೊ. ರಾಜಶೇಖರ ಭೂಸನೂರಮಠ ಉರ್ಫ್ ರಾಭೂ, ತಮ್ಮ ಎಪ್ಪತ್ತೈದನೆಯ ವಯಸ್ಸಿನಲ್ಲಿ, ನಿಧನರಾದರು ಅಂತ ತಿಳಿಯಿತು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನೆಮ್ಮದಿ ಸಿಗಲಿ.

ಒಮ್ಮೊಮ್ಮೆ ಒಂದು ಘಟನೆ ನಡೆದಾಗ ಮೆದುಳಿನ ಅದು ಯಾವ್ಯಾವ ಕವಾಟಗಳು ತೆಗೆದುಕೊಳ್ಳುತ್ತವೋ ಏನೋ ಗೊತ್ತಿಲ್ಲ. ನೆನಪುಗಳು ಉಕ್ಕಿ ಬಂದು ಬಿಡುತ್ತವೆ. ಬರೆದು ಹಾಕುವ ತನಕ ಸಮಾಧಾನವಿಲ್ಲ.

'ರಾಭೂ ಬಗ್ಗೆ ಇಷ್ಟೇ ನೆನಪುಗಳೇ?' ಅಂತ ಕೇಳಿದರೆ 'ಇನ್ನೂ ಭಾಳ ಇವೆ,' ಅಂತನೇ ಹೇಳಬೇಕಾಗುತ್ತದೆ. ಸದ್ಯಕ್ಕೆ ಇಷ್ಟು ಸಾಕಲ್ಲವೇ?

ಮುಲ್ಲಾ ನಸ್ರುದ್ದೀನ್ ಮಾಡಿದ ಕಳ್ಳಸಾಗಾಣಿಕೆ

ಮುಲ್ಲಾ ನಸ್ರುದ್ದೀನ್ ಆಗಾಗ ತನ್ನ ದೇಶದ ಗಡಿ ದಾಟಿ, ಪಕ್ಕದ ದೇಶಕ್ಕೆ ಹೋಗುತ್ತಿದ್ದ. ಬರುವಾಗ ಮಾತ್ರ ಒಂದು ಹಿಂಡು ಕತ್ತೆಗಳನ್ನು ಹೊಡೆದುಕೊಂಡು ಬರುತ್ತಿದ್ದ. ಗಡಿ ಕಾಯವ ಕಾವಲುಗಾರರಿಗೆ ಸಂಶಯ ಬಂತು. 'ಈ ನಸ್ರುದ್ದೀನ್ ಇಷ್ಟೊಂದು ಕತ್ತೆಗಳನ್ನು ಹೊಡೆದುಕೊಂಡು ಬರುತ್ತಿದ್ದಾನೆ. ಕತ್ತೆಗಳನ್ನು ಉಪಯೋಗಿಸುವದು ಸಾಮಾನು ಸಾಗಣೆ ಮಾಡಲಿಕ್ಕೆ. ಎಲ್ಲಿ ಈ ನಸ್ರುದ್ದೀನ್ ಏನಾದರೂ ಕಳ್ಳಸಾಗಾಣಿಕೆ ಮಾಡುತ್ತಿದ್ದಾನೋ ಹೇಗೆ? ಕಳ್ಳ ನನ್ನ ಮಗ!' ಅಂತ ಸಂದೇಹಪಟ್ಟರು. ಕೇಳಿದರು. ನಸ್ರುದ್ದೀನ್ ಮಾತ್ರ ಹೆಚ್ಚಿಗೆ ಮಾತಾಡದೇ, ಬೇಕಾದರೆ ಚೆಕ್ ಮಾಡಿಕೊಳ್ಳಿ, ಶೋಧಿಸಿಕೊಳ್ಳಿ ಅಂದುಬಿಟ್ಟ. ಗಡಿ ಕಾವಲುಗಾರರು ಎಲ್ಲ ಶೋಧಿಸಿದರು. ಏನೂ ಸಿಗಲಿಲ್ಲ. ನಸ್ರುದ್ದೀನ್ ಮತ್ತು ಕತ್ತೆಗಳನ್ನು ದೇಶದ ಒಳಗೆ ಹೋಗಲು ಬಿಟ್ಟರು. ಇದು ಹಾಗೆಯೇ ಮುಂದುವರೆಯಿತು.

ಮುಂದೆ ಬಹಳ ವರ್ಷಾನಂತರ ಮುಲ್ಲಾ ನಸ್ರುದ್ದೀನ್ ಆ ವ್ಯಾಪಾರ ಬಿಟ್ಟು, ನಿವೃತ್ತನಾಗಿ ಬೇರೆ ಊರು ಸೇರಿಕೊಂಡ. ಒಂದು ದಿವಸ ಅವನಿಗೆ ಒಬ್ಬ ಪರಿಚಯಸ್ಥ ಸಿಕ್ಕ. ಅವನು ಯಾರಾಗಿದ್ದ ಅಂದರೆ ಬಹಳ ಹಿಂದೆ ನಸ್ರುದ್ದೀನ್ ಕತ್ತೆಗಳನ್ನು ಗಡಿ ಮೂಲಕ ತರುತ್ತಿರುವಾಗ ಹಿಡಿದು, ಚೆಕ್ ಮಾಡಿದ್ದ ಗಡಿ ಕಾವಲಿನವ. ಅವನಿಗೆ ಮೊದಲಿನ ಕುತೂಹಲ ಹೋಗಿರಲೇ ಇಲ್ಲ.

'ನಸ್ರುದ್ದೀನ್, ನೀನು ಪಕ್ಕದ ದೇಶದಿಂದ ಅದೆಷ್ಟು ಬಾರಿ ಕತ್ತೆಗಳನ್ನು ತಂದೆ. ನಾವು ಪ್ರತಿ ಬಾರಿ ಎಷ್ಟು ಹುಡುಕಿದೆವು, ನೀನು ಏನು ಕಳ್ಳಸಾಗಾಣಿಕೆ ಮಾಡುತ್ತಿರಬಹುದು ಅಂತ ಕಂಡುಹಿಡಿಯಲಿಕ್ಕೆ. ನಾವು ಎಷ್ಟೇ ಹುಡುಕಿದರೂ ಏನೂ ಸಿಗಲೇ ಇಲ್ಲ. ನಿಜ ಹೇಳು. ನೀನು ಏನು ಕಳ್ಳಸಾಗಾಣಿಕೆ ಮಾಡುತ್ತಿದ್ದೆ? ಮತ್ತು ಅದು ಹೇಗೆ ಮಾಡುತ್ತಿದ್ದೆ?' ಅಂತ ಕೇಳಿದ ಮಾಜಿ ಕಾವಲಿನವ.

ನಸ್ರುದ್ದೀನ್ ತುಂಟ ನಗೆ ನಕ್ಕ. 'ಜನಾಬ್, ನಾನು ಕತ್ತೆಗಳ ಕಳ್ಳಸಾಗಾಣಿಕೆ ಮಾಡುತ್ತಿದ್ದೆ. ಪಕ್ಕದ ದೇಶದಲ್ಲಿ ಕತ್ತೆಗಳು ಸೋವಿಯಾಗಿ ಸಿಗುತ್ತಿದ್ದವು. ಅಲ್ಲಿ ಖರೀದಿಸಿ, ಈಕಡೆ ಹೊಡೆದುಕೊಂಡು ಬಂದು, ನಮ್ಮ ದೇಶದಲ್ಲಿ ಲಾಭಕ್ಕೆ ಮಾರುತ್ತಿದ್ದೆ. ಅಷ್ಟೇ,' ಅಂದು ಗಡ್ಡ ನೀವಿಕೊಂಡ.

'ಅಯ್ಯೋ! ಕತ್ತೆಗಳನ್ನೇ ಕಳ್ಳಸಾಗಾಣಿಕೆ ಮಾಡುತ್ತಿದ್ದೆಯೇ!? ನಾವು ನೀನು ಕತ್ತೆಗಳ ಮೂಲಕ ಬೇರೆ ಏನೋ ಕಳ್ಳಸಾಗಾಣಿಕೆ ಮಾಡುತ್ತಿರಬೇಕು ಅಂತ ಸಾಮಾನುಗಳನ್ನು ಕಂಡುಹಿಡಿಯುವತ್ತ ಲಕ್ಷ್ಯ ಕೊಟ್ಟೆವು. ಕತ್ತೆಗಳೇ ಆ ಕಳ್ಳಸಾಗಾಣಿಕೆ ಸಾಮಾನುಗಳು ಆಗಿರಬಹುದು ಅಂತ ಗ್ರಹಿಸಲೇ ಇಲ್ಲ. ನೀನು ಪ್ರಳಯಾಂತಕ ಬುದ್ಧಿವಂತ ನಸ್ರುದ್ದೀನ್!' ಅಂತ ಹೇಳಿ, ಬೆನ್ನು ತಟ್ಟಿ ಎದ್ದು ಹೋದ.

ನೀತಿ: Don't just focus on the content but also give attention to the context :) ನಮ್ಮ ಮನಸ್ಸಿನಲ್ಲಿ ಏಳುವ ಅನೇಕ ವಿಚಾರಗಳು ಕತ್ತೆಗಳಿದ್ದಂತೆ. ಅವುಗಳಲ್ಲಿ ಅರ್ಥ ಹುಡುಕುವದರಲ್ಲಿ ಸಮಯ ವ್ಯರ್ಥ ಮಾಡುವದರಕಿಂತ ಕತ್ತೆಗಳಂತಹ ವಿಚಾರಗಳನ್ನೇ ಗಮನಿಸಿ, ಇಷ್ಟೊಂದು ಕತ್ತೆಗಳಂತಹ ವಿಚಾರಗಳು ಏಕೆ ಬರುತ್ತಿವೆ ಅಂತ ಯೋಚಿಸಬೇಕು.

ಆಧಾರ: Beyond Mindfulness: The Direct Approach to Lasting Peace, Happiness, and Love by Stephan Bodian 

Tuesday, April 14, 2015

ಹೀಗೊಂದು ವಿಚಿತ್ರ 'ಮುತ್ತೈದೆ ಸಾವು'

ಸುಮಾರು ಮೂವತ್ತು ವರ್ಷಗಳ ಹಿಂದೆ ನಡೆದ ಘಟನೆ. ಅವರೊಬ್ಬರು ಮುತ್ತೈದೆ. ವಯಸ್ಸು ಒಂದು ೫೫ -  ೬೦ ಇರಬಹದು. ಅವರ ಗಂಡಗ ಒಂದು ಐದಾರು ವರ್ಷ ಹೆಚ್ಚು. ಒಂದು ೬೦ - ೭೦ ವರ್ಷ ಇದ್ದೀತು ಅಂತ ಅನ್ನರೀ.

ಹೀಂಗಿದ್ದಾಗ ಗಂಡಗ ಏನೋ ಸ್ವಲ್ಪ ಆರೋಗ್ಯ ಕೆಡ್ತು. ಮೊದಲು ಮನಿಯೊಳಗೇ ಟ್ರೀಟ್ಮೆಂಟ್ ಆತು. ಅನಾರೋಗ್ಯ ಜಾಸ್ತಿ ಆತು ಅಂದ ಕೂಡಲೇ ಸ್ವಲ್ಪ ದಿವಸ ಆಸ್ಪತ್ರೆಯಲ್ಲೂ ಅಡ್ಮಿಟ್ ಆದರು. ಅಲ್ಲೆ ಸ್ವಲ್ಪ ಆರಾಮಾದರು. ಮನಿಗೆ ಬಂದರು. ಮತ್ತ ಜಡ್ಡು ಬಿದ್ದರು. ಹೀಂಗೆ ಒಂದು ನಾಲ್ಕಾರು ತಿಂಗಳು ನಡೆದಿತ್ತು.

ಹೀಂಗಿದ್ದಾಗ ಯಾಕೋ ಒಂದು ಸರೆ ಗಂಡನ ಆರೋಗ್ಯ ಸ್ವಲ್ಪ ಜಾಸ್ತಿನೇ ಬಿಗಡಾಯಿಸಿಬಿಡ್ತು. ವಯಸ್ಸು ಬ್ಯಾರೆ ಎಪ್ಪತ್ತರ ಸನಿಹ ಬಂದುಬಿಟ್ಟದ. ಮತ್ತ ಎಲ್ಲೆ ಇವರ ಆಯಸ್ಸು ಮುಗಿಯೋ ಟೈಮ್ ಬಂದದೋ, ಮ್ಯಾಲೆ ಹೋಗೇ ಬಿಡ್ತಾರೋ, ಅಂತ ಮಂದಿ ಎಲ್ಲ ಮಾತಾಡಿಕೊಂಡರು. ಸಹಜ ಮಾತಾಡಿಕೊಂಡರು ಬಿಡ್ರೀ.

ಮಂದಿ ಮಾತಾಡಿದ ಅಂತಹ ಮಾತುಗಳು ಹೆಂಡತಿ ಮ್ಯಾಲೆ ಪರಿಣಾಮ ಬೀರಿದವೋ ಏನೋ ಗೊತ್ತಿಲ್ಲ. ಒಂದು ದಿವಸ ಅವರ ಹೆಂಡತಿ ಹೋದವರೇ, ಮುಂದಿನ ಮನೆ ಕಾಂಪೌಂಡ್ ನಲ್ಲಿದ್ದ ದೊಡ್ಡ ಭಾವಿಯಲ್ಲಿ ಡೈವ್ ಹೊಡದೇಬಿಟ್ಟರು. ಮುಳುಗಿ ಹೋದರು. ಮುಳಗಿ ಸತ್ತೇಹೋದರು. ಫಿನಿಶ್!

ಈ ಮುತ್ತೈದೆ ಬಾಯಾರು ಯಾಕ ಹೀಂಗ ಮಾಡಿದರು ಅಂತ ವಿವರಿಸಲಿಕ್ಕೆ ಒಂದು ಥಿಯರಿ ಬೇಕಲ್ಲ? 'ಅವರಿಗೆ ಮುತ್ತೈದೆ ಸಾವೇ ಬೇಕಾಗಿತ್ತಂತ. ಎಲ್ಲರೆ ಗಂಡ ಮೊದಲೇ ತೀರಿಕೊಂಡಾರು ಅಂತ ಹೆದರಿ ತಾವೇ ತಮ್ಮ ಪ್ರಾಣ ಮೊದಲು ಕಳೆದುಕೊಂಡುಬಿಟ್ಟರು,' ಅಂತ ಲೊಚ್ ಲೊಚ್ ಅಂದವರು ಎಲ್ಲರು. ಸತ್ತವರು ಖರೇ ಹಾಂಗೇ ವಿಚಾರ ಮಾಡಿ ಸತ್ತಿದ್ದರೇ? ಅಥವಾ ಬೇರೆ ಯಾವದೋ ಕಾರಣಕ್ಕೆ ಜೀವನಕ್ಕೆ ರೈಟ್ ಹೇಳಿ ಹೋಗಿಬಿಟ್ಟಿದ್ದರೋ? ಗೊತ್ತಿಲ್ಲ.

ವಿಚಿತ್ರ ಅಂದರೆ ಅವರ ಗಂಡ ಮಾತ್ರ ಚೇತರಿಸಿಕೊಂಡು, ಪೂರ್ತಿ ಆರಾಮಾಗಿ, ಹೆಂಡತಿ ಮುತ್ತೈದೆಯಾಗಿಯೇ ತೀರಿ ಹೋದ ಬಳಿಕವೂ ಮುಂದೆ ಹತ್ತು ಹದಿನೈದು ವರ್ಷವಿದ್ದು ನಂತರ ತೀರಿಕೊಂಡರು. ಇದಕ್ಕೇನಂತೀರೀ? 'ಕೆಟ್ಟ ಕಾಡೋ ಹೆಂಡತಿ ಅನ್ನೋ ಪೀಡಾ ಹೋತು ಅಂತ ಅಜ್ಜ ಹ್ಯಾಂಗ ಫಟಾಕ್ ಅಂತ ಎದ್ದು ಕೂತರು ನೋಡ್ರೀ!?' ಅಂತ ಕಿಡಿಗೇಡಿ ಮಂದಿ ಜೋಕ್ ಹೊಡೆದರು. ಒಮ್ಮೊಮ್ಮೆ ಸತ್ತವರ ಉಳಿದ ಆಯುಸ್ಸು ಇದ್ದವರಿಗೆ ಬಂದು ಬಿಡ್ತದ ಅನ್ನೋಹಾಂಗ ಮತ್ತೂ ಒಂದಿಷ್ಟು ವರ್ಷ ಆರಾಮಿದ್ದು ನಂತರ ಆರಾಮಾಗೇ ಹೋದರು. ಏನೋ ಎಂತೋ. ದೇವರಾಟ ಬಲ್ಲವರ್ಯಾರು!?

ಅಲ್ಲ ಇನ್ನೊಂದು ಮಾತು. ಸತ್ತುಕೊಂಡ ಮುತ್ತೈದೆ ಬಾಯಾರ ಮನಿ ಕಾಂಪೌಂಡ್ ಒಳಗೇ ಒಂದು ದೊಡ್ಡ ಭಾವಿ ಇತ್ತು. ನಮ್ಮ ಧಾರವಾಡದ ಮಾಳಮಡ್ಡಿಯ ಹಳೆ ಕಾಲದ ಕಾಂಪೌಂಡ್ ಒಳಗ ಎಲ್ಲ ಕಂಪೌಂಡ್ ಒಳಗೂ ಒಂದು ದೊಡ್ಡ ದೆವ್ವದಂತಹ ಭಾವಿ ಖಾಯಂ. ಹಾಂಗಿದ್ದಾಗ ಈ ಮುತ್ತೈದೆ ಬಾಯಾರು ಹೋಗಿ ಹೋಗಿ ತಮ್ಮ ಮುಂದಿನ ಮನಿಯವರ ಭಾವ್ಯಾಗ ಜಿಗದು ಯಾಕ ತಮ್ಮಪ್ರಾಣ ಕಳೆದುಕೊಂಡರು? ಅದು ಮಾತ್ರ ಬಗೆಹರಿಯದ ಚಿದಂಬರ ರಹಸ್ಯ.

'ಭಾಳ ಛಲೋ ಕೆಲಸ ಮಾಡಿದರು. ಇವರು ನಮ್ಮ ಮನಿ ಭಾವ್ಯಾಗ ಬೀಳದೇ, ಹೋಗಿ ಮುಂದಿನ ಮನಿ ಭಾವ್ಯಾಗ ಬಿದ್ದು ಸತ್ತರು. ನಮ್ಮ ಭಾವಿಯಾಗೇ ಬಿದ್ದು ಸತ್ತಿದ್ದರೆ ನಮಗೇ ಭಾಳ ತೊಂದ್ರಿಯಾಗಿಬಿಡ್ತಿತ್ತು. ಸಾಯೋದು ಸತ್ತರು. ಸೂಡ್ಲೀ! ಹೋಗೋವಾಗ ಅಷ್ಟರೆ ಉಪಕಾರ ಮಾಡಿ ಹೋದರು. ಅವರಿಗೊಂದು ದೊಡ್ಡ ನಮಸ್ಕಾರ,' ಅಂತ ಅವರ ಮನೆ ಜನ ಆಡಿಕೊಂಡರು. 'ಏನು ಆಗಿತ್ತು ಅಂತೇನಿ ಅವರಿಗೆ!? ಜೀವಂತ ಇದ್ದಾಗಂತೂ ಸಿಕ್ಕಾಪಟ್ಟೆ ದುರ್ಬುದ್ಧಿ ಅವರಿಗೆ. ಸಾಯೋವಾಗ ಸಹಿತ ತಮ್ಮ ಕೆಟ್ಟ ಬುದ್ಧಿ ತೋರಿಸಿಯೇ ಸತ್ತರು. ತಮ್ಮ ಮನಿಯಾಗ ಸ್ವಂತ ಭಾವಿ ಇದ್ದರೂ ನಮ್ಮ ಮನಿ ಭಾವ್ಯಾಗ ಬಂದು ಬಿದ್ದು ಸತ್ತುಕೊಂಡರು ನೋಡ್ರೀ. ಎಂತಾ ದುರ್ಬುದ್ಧಿ ಅಂತ? ಇವರು ಹೀಂಗ ಮಾಡಿದರು ಅಂತ ನಾವೇನು ಮಾಡೋಣ ಈಗ? ಇವರು ನಮ್ಮ ಭಾವಿಗೆ ಬಂದು ಬಿದ್ದರು ಅಂತ ನಾವು ಇವರ ಭಾವಿಗೆ ಹೋಗಿ ಬೀಳೋಣ ಏನು???? ಹಾಂ?' ಅಂತ ಎದುರಿನ ಮನೆಯವರು ಉರಿದುಕೊಂಡರು. ಉರಿ ಶಮನ ಮಾಡಿಕೊಳ್ಳಲಿಕ್ಕೆ ಅದೆಷ್ಟು ಬರ್ನಾಲ್ ಬೇಕಾಯಿತೋ ಪಾಪ! ಮನೆ ಭಾವಿಗೆ ಯಾರೋ ಬಂದು ಬಿದ್ದು ಸಾಯುತ್ತಾರೆ ಅಂದರೆ ಸಣ್ಣ ಮಾತೇ!? ಆ ರಾಡಿ ಸ್ವಚ್ಛ ಮಾಡೋದು ಅಂದರೆ ಸಣ್ಣ ಕೆಲಸವೇ? ಸತ್ತವರೆನೋ ಹೋಗಿಬಿಡ್ತಾರೆ. ತೊಂದ್ರೆ ಮಾತ್ರ ಇದ್ದವರಿಗೆ.

ಮುತ್ತೈದೆಯಾಗಿಯೇ ಸತ್ತವರಿಗೆ ಸ್ವರ್ಗ ಸಿಕ್ಕಿತೋ ಅಥವಾ ಆತ್ಮಹತ್ಯೆ ಮಾಡಿಕೊಂಡವರಿಗೆ ಸದ್ಗತಿ ಇಲ್ಲ ಅನ್ನುವ ಹಾಗೆ ದೆವ್ವ, ಭೂತ, ಪಿಶಾಚಿ ಇತ್ಯಾದಿ ಆಗಿ ಓಡಾಡಿಕೊಂಡಿದ್ದಾರೋ? ಗೊತ್ತಿಲ್ಲ. ಆಕಡೆಯಿಂದ ಭೂತ ಚೇಷ್ಟೆ, ಪ್ರೇತ ಬಾಧೆ ಇತ್ಯಾದಿ ಕೇಳಿಬಂದಿಲ್ಲ. ಹಾಗಾಗಿ ಸದ್ಗತಿ ಸಿಕ್ಕಿರಬಹುದು ಅಂತ ಭಾವನೆ.

* ಮುತ್ತೈದೆ ಭಾಗ್ಯದ ಬಗ್ಗೆ ಬರೆದಿದ್ದ ಹಳೆಯದೊಂದು ಲೇಖನ. 'ಮುತ್ತೈದೆ ಭಾಗ್ಯ : ಅವಳಿಗೆ ಹಾಗೆ. ಇವನಿಗೆ ಹೀಗೆ. ಆದರೆ ಯಾಕೆ? But Why?'

Friday, April 10, 2015

ಎದ್ದೇಳು ಮಂಜುನಾಥ

ಸುಪ್ರಭಾತ! ಶುಭ ಮುಂಜಾನೆ!

ಆಕಾಶವಾಣಿ ಧಾರವಾಡದಿಂದ ಭಕ್ತರ ಕೋರಿಕೆ ಮೇಲೆ ಪ್ರಸಾರವಾಗುತ್ತಿದೆ 'ಎದ್ದೇಳು ಮಂಜುನಾಥ' ಭಕ್ತಿ ಗೀತೆ. ಇದು ಭಕ್ತರಿಗೇ ಅರ್ಪಣೆ.

ಎದ್ದೇಳು ಮಂಜು'ನಾತ' ಏಳು ಬೆಳಗಾಯಿತು
ಸಂಡಾಸಿಗೆ ಹೋದ ಮಂದಿಯೆಲ್ಲ ಡಿಸ್ಕೋ ಹೊಡೆಯುತಿಹರು
ನೀರು ಹಾಕಿ ಬರದೇ ಗಬ್ಬು ನಾತ ಹೊಡೆಸುತಿಹರು
ಗಜರಾಜನು ನಿನಗೆ fresh ಆಗಿ ಲದ್ದಿ ಹಾಕುತಿಹನು
ಆದಿಶೇಷನು ನಿನಗೆ ಅವನ ಮೊಟ್ಟೆಯ ಆಮ್ಲೆಟ್ (omelet) ಮಾಡುತಿಹನು
ಎದ್ದೇಳು ಮಂಜು'ನಾತ' ಏಳು ಬೆಳಗಾಯಿತು

ಧರ್ಮಸ್ಥಳದ ಮಂಜುನಾಥ, ಅಣ್ಣಪ್ಪ, ಹೆಗ್ಗಡೆ ಎಲ್ಲರ ಕ್ಷಮೆ ಕೋರಿಯೇ ಬಿಡುತ್ತೇನೆ! ಇಲ್ಲಾಂದ್ರೆ ಅಲ್ಲಿಯ ಅಣ್ಣಪ್ಪ ದೇವರು ಮುರಕೊಂಡು ಬಿದ್ದ ಅಂದರೆ ಕಷ್ಟ. ಧರ್ಮಸ್ಥಳಕ್ಕೆ ಸುಳ್ಳು ಹೇಳಿ, ಮನಮಾನಿ ಮಾಡಿ, ಭೋಂಗು ಬಿಟ್ಟು, ಬರೋಬ್ಬರಿ ಬರ್ಬಾದಾಗಿ ಹೋದ ಎಷ್ಟೋ ಜನರು ನಮಗೆ ಗೊತ್ತು ಬಿಡಿ. ನಿಮಗೆ ಒಂದು ಮಾತು ಹೇಳಲೇ? ನಿಮಗೆ ಯಾರಾದರೂ ರೊಕ್ಕ ಕೊಡಬೇಕಿದ್ದು ಕೊಡದೇ ಸತಾಯಿಸುತ್ತಿದ್ದರೆ ಒಂದು ಆವಾಜ್ ಹಾಕಿ, 'ಧರ್ಮಸ್ಥಳಕ್ಕೆ ಬರೆದು ಬಿಡುತ್ತೇನೆ' ಅಂತ. ನಿಮ್ಮ ಆವಾಜಿಗೆ ಒಪ್ಪಿ, ರೊಕ್ಕ ವಾಪಸ್ ಕೊಟ್ಟರೋ ಸರಿ. ಇಲ್ಲ ಅಂದರೆ ಒಂದು ಸಿಂಪಲ್ ಪೋಸ್ಟ್ ಕಾರ್ಡಿನಲ್ಲಿ ನಿಮ್ಮ ವ್ಯಾಜ್ಯ ಬರೆದು, ಶ್ರೀ ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ, ಅಂತ ವಿಳಾಸ ಬರೆದು ಪೋಸ್ಟ್ ಮಾಡೇ ಬಿಡಿ. ಒಂದೇ ಮಾತು ನೆನಪಲ್ಲಿ ಇಡಿ. ಸತ್ಯ ನಿಮ್ಮ ಪರವಾಗಿ ಇರಬೇಕು ಅಷ್ಟೇ. ಇಲ್ಲಾಂದ್ರೆ ಧರ್ಮಸ್ಥಳದ ಅಣ್ಣಪ್ಪ ಉಲ್ಟಾ ಹೊಡೆದುಬಿಡುತ್ತಾನೆ. ನಿಮ್ಮ ಬತ್ತಿ ನಿಮ್ಮ ಬ್ಯಾಕಿಗೇ ಬಂದು ಕೂಡುತ್ತದೆ. ನಿಮ್ಮ ಅರ್ಜಿ ಸ್ವೀಕರಿಸಿದ ಶ್ರೀ ಹೆಗ್ಗಡೆ ಅವರು ಧರ್ಮಸ್ಥಳದ ದೇವರ ಪರವಾಗಿ ಒಂದೇ ಒಂದು ಪತ್ರ ಹಾಕುತ್ತಾರೆ ನಿಮ್ಮ ವಿರುದ್ಧ ಪಾರ್ಟಿಗೆ. 'ಹೀಗೆ ನಿಮ್ಮ ಕುರಿತಾಗಿ ಇಂತವರು ಹೀಗೆ ಬರೆದಿದ್ದಾರೆ. ನೀವು ನಿಮ್ಮ ಆತ್ಮಸಾಕ್ಷಿಗೆ ಒಪ್ಪುವಂತೆ ಮುಂದಿನ ಕ್ರಮ ಕೈಗೊಳ್ಳಿ. ಧರ್ಮಸ್ಥಳದ ದೇವರು ನಿಮಗೆ ಒಳ್ಳೆಯದು ಮಾಡಲಿ. ಇಂತಿ ನಮಸ್ಕಾರ. ಶ್ರೀ ಧರ್ಮಸ್ಥಳ ಕ್ಷೇತ್ರ,' ಅಂತ ಸ್ಟ್ಯಾಂಡರ್ಡ್ ಪತ್ರ ನಿಮ್ಮ ವಿರುದ್ಧ ಪಾರ್ಟಿಗೆ ಹೋಗುತ್ತದೆ. ಎಷ್ಟೋ ಮಂದಿ ಧರ್ಮಸ್ಥಳದಿಂದ ಪತ್ರ ಬಂತು ಅಂತ ಹೇಳಿ, ಹೆದರಿ, ತಮ್ಮದು ತಪ್ಪಿದ್ದರೆ ಪ್ರಾಯಶ್ಚಿತ ಮಾಡಿಕೊಳ್ಳುತ್ತಾರೆ. ಭಂಡ ಮಂದಿ ಮಾತ್ರ ಅದನ್ನು ಧಿಕ್ಕರಿಸುತ್ತಾರೆ. ಅದರ ಪರಿಣಾಮ ಏನು ಗೊತ್ತೇ? ಧರ್ಮಸ್ಥಳದ ದೇವರಾದ ಮಂಜುನಾಥ, ಅಣ್ಣಪ್ಪ ಭಂಡ ಮಂದಿಗೆ ಅವರದ್ದೇ ಆದ ಪಾಪ ಪ್ರಜ್ಞೆ ಮೂಲಕ ಬರೋಬ್ಬರಿ ಇಕ್ಕುತ್ತಾರೆ. ಅದರ ಪರಿಣಾಮವಾಗಿ ಮಂದಿ ಫುಲ್ ಹುಚ್ಚರಾಗಿಹೋಗುತ್ತಾರೆ. ಧಾರವಾಡದ ಬೆಳಗಾಂ ರೋಡಿಗೆ ಬರುತ್ತಾರೆ. ಯಾಕೆಂದರೆ ಧಾರವಾಡದ ಮೆಂಟಲ್ ಹಾಸ್ಪಿಟಲ್ ಇರುವದು ಬೆಳಗಾಂ ರೋಡಿನಲ್ಲೇ ನೋಡಿ. ಇದೆಲ್ಲ ಕೇವಲ ಬೊಗಳೆ ಅಂತ ಹೇಳದಿರಿ. ಸಿರ್ಸಿ ಕಡೆ ನಮ್ಮ ಬಹಳ ಹತ್ತಿರದ ಸಂಬಂಧಿಯೇ ಒಬ್ಬ ಹೀಗೆ ಧರ್ಮಸ್ಥಳದ ಜೊತೆ ಲಫಡಾ ಮಾಡಿಕೊಂಡು, ಹುಚ್ಚನಾಗಿ, ಅಕಾಲ ಮೃತ್ಯುವಿಗೆ ಈಡಾಗಿದ್ದನ್ನು ಖುದ್ದಾಗಿ ಕಂಡಿದ್ದೇನೆ. ಅನೇಕಾನೇಕ ಉದಾಹರಣೆಗಳು ಇವೆ. ನಿಮಗೆ ಟೋಪಿ ಹಾಕಿದ ಮಂದಿ ನಿಮಗೆ ನಿಮ್ಮ ರೊಕ್ಕ, ನಿಮ್ಮ ಆಸ್ತಿ ವಾಪಸ್ ಕೊಡುತ್ತಾರೋ ಇಲ್ಲವೋ ಅದರ ಬಗ್ಗೆ ಧರ್ಮಸ್ಥಳದ ಅಣ್ಣಪ್ಪ, ಮಂಜುನಾಥ ಗ್ಯಾರಂಟಿ ಕೊಡುವದಿಲ್ಲ. ಆದರೆ ನೀವು ಸತ್ಯವಂತರಾಗಿದ್ದು, ಖುಲ್ಲಂ ಖುಲ್ಲಾ ಪೂರ್ತಿ ದಿಲ್ ಖೋಲ್ಕೆ ಧರ್ಮಸ್ಥಳದ ಮಂಜುನಾಥನಿಗೆ ಅರ್ಜಿ ಹಾಕಿಕೊಂಡಿರಿ ಅಂದರೆ ನಿಮ್ಮ ವಿರುದ್ಧ ಪಾರ್ಟಿಯ ಕುಂಡಲಿಯಲ್ಲಿ ಎಲ್ಲ ತರಹದ ಶನಿ ವಕ್ಕರಿಸಿದ ಅಂತ ತಿಳಿಯಿರಿ.

ಜೈ ಧರ್ಮಸ್ಥಳ!

ಲಿಂಗವ್ವನ ದೆವ್ವ!


(ಲಿಂಗವ್ವನ ದೆವ್ವ - ಇದು ಒಂದು ನೀಳ್ಗತೆ. ಅಕಾಲದಲ್ಲಿ ಅಸಹಜ ಮರಣಕ್ಕೆ ತುತ್ತಾದ ಮನೆ ಕೆಲಸದ ಮಹಿಳೆಯೊಬ್ಬಳು ದೆವ್ವವಾಗಿ ಬಂದು ಮೂವರನ್ನು ಕಾಡಿದಳೇ? ಕೇವಲ ಕಾಡಿದಳೋ ಅಥವಾ......... ಕಥೆ ಮೂರು ಭಾಗಗಳಲ್ಲಿದೆ. ಕಥೆ ಬಹಳ ಉದ್ದ ಅನಿಸಿದರೆ ಒಂದೊಂದೇ ಭಾಗವನ್ನು ಓದಿಕೊಳ್ಳಬಹುದು. ದೊಡ್ಡ, ಉದ್ದ ಲೇಖನ. ಕಾಗುಣಿತ ದೋಷಗಳನ್ನು ಮತ್ತೆ ಮತ್ತೆ ಓದಿ ತಿದ್ದುಪಡಿ ಮಾಡುತ್ತೇನೆ. ಮಾಡಿದ್ದೇನೆ. ಇನ್ನೂ ತಿದ್ದುತ್ತಿದ್ದೇನೆ. ನೀವು ದೋಷಗಳನ್ನು ತಿಳಿಸಿದರೆ ಅದಕ್ಕೆ ವಂದನೆ.)

ಭಾಗ - ೧. ಜಯಮಾಲಾ. ಅಮೇರಿಕಾದ ನ್ಯೂಯಾರ್ಕ್. 

ಆಕೆಯ ಹೆಸರು ಜಯಮಾಲಾ. ಮೂಲತಃ ಧಾರವಾಡದವಳು. ಮದುವೆ ಬಳಿಕ ಅಮೇರಿಕಾದ ನ್ಯೂಯಾರ್ಕಿನಲ್ಲಿ ನೆಲೆಸಿದ್ದಾಳೆ. ಎರಡು ಹೆಣ್ಣುಮಕ್ಕಳು ಒಂದು ಗಂಡ ಇದ್ದಾರೆ. ಮಕ್ಕಳೂ ಸಾಕಷ್ಟು ದೊಡ್ಡವರಾಗಿಬಿಟ್ಟಿದ್ದಾರೆ. ಆಮ್ಮ ಅಷ್ಟೇನೂ ಬೇಕು ಅಂತಿಲ್ಲ. ಗಂಡ ತನ್ನ ಉದ್ಯೋಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿ. ದೊಡ್ಡ ಉದ್ಯಮಪತಿ. ಜೊತೆಗೆ ಪತ್ನಿಗೂ ಸಹ ಪತಿ ಅಂತ ಆತ ಮರೆತೇ ಬಿಟ್ಟಿದ್ದಾನೆ. ತಿಂಗಳಲ್ಲಿ ಎರಡು ವಾರ ತನ್ನ ವ್ಯವಹಾರದ ನಿಮಿತ್ತ ಮನೆಯಿಂದ ಹೊರಗೇ ಇರುತ್ತಾನೆ. ಊರಲ್ಲಿ ಇದ್ದಷ್ಟು ದಿವಸ ರಾತ್ರಿ ಎಷ್ಟೋ ಘಂಟೆಗೆ ಮನೆಗೆ ಬರುತ್ತಾನೆ. ಸುಸ್ತು ಅಂತ ಒಂದು ದೊಡ್ಡ ಸೈಜಿನ ಡ್ರಿಂಕ್ ಮಾಡಿಕೊಂಡು, ಮತ್ತೆ ಕಂಪ್ಯೂಟರ್ ಬಿಚ್ಚಿಕೊಂಡು ಕೂಡುತ್ತಾನೆ. ಮಕ್ಕಳು ಮಲಗಿರುತ್ತವೆ. ಅಥವಾ ತಮ್ಮ ಪಾಡಿಗೆ ತಮ್ಮ ತಮ್ಮ ಪ್ರತ್ಯೇಕ ರೂಮಿನಲ್ಲಿ ಏನೋ ಮಾಡಿಕೊಂಡಿರುತ್ತವೆ. ಗಂಡ ಬಂದ ಅಂತ ಜಯಮಾಲಾ ಕೂಡ ಬಂದು ಕೂಡುತ್ತಾಳೆ, ಕಂಪನಿ ಕೊಡಲು. ಕಾಟಾಚಾರಕ್ಕೆ ಅವಳಿಗೊಂದು ಹಲೋ ಹೇಳಿ ತನ್ನ ಡ್ರಿಂಕ್, ತನ್ನ ಕಂಪ್ಯೂಟರ್, ಆಫೀಸಿನ ಕೆಲಸದಲ್ಲೇ ಆತ ಕಳೆದುಹೋಗುತ್ತಾನೆ. ಅವನ ಡ್ರಿಂಕ್ ಮುಗಿದು, ಮತ್ತೊಂದು ತರಲು ಹೋದಾಗ, ಜಯಮಾಲಾ ಕಡೆಗೆ ತಿರುಗಿ, 'ಡಾರ್ಲಿಂಗ್! ನಿನಗೂ ಒಂದಿಷ್ಟು ವೈನ್ ತಂದು ಕೊಡಲಾ?' ಅಂತ ಕೇಳಿ, ಉಪಚಾರ ಕೂಡ ಮಾಡುತ್ತಾನೆ. ಜಯಮಾಲಾ ಅಂತೂ ದಿನದಲ್ಲಿನ ಬೇಸರ ಕಳೆಯಲು ಹಗಲೇ ಸಾಕಷ್ಟು ವೈನ್ ಕುಡಿದು ಬಿಟ್ಟಿರುತ್ತಾಳೆ. ಹಾಗಾಗಿ ರಾತ್ರೆಯ ಹೊತ್ತಿಗೆ ದಿನದಲ್ಲೇ ಕುಡಿದ ವೈನಿನಿಂದ ತಲೆ ಗಿಂವ್ ಅಂತಿರುತ್ತದೆ. ಆದರೂ 'ಥಾಂಕ್ಯೂ! ಎಸ್! ಒಂದು ಗ್ಲಾಸಿನಲ್ಲಿ ಒಂದಿಷ್ಟು ವೈಟ್ ವೈನ್ ಪ್ಲೀಸ್,' ಅಂದುಬಿಡುತ್ತಾಳೆ. ಎಣ್ಣೆಗೆ ಅಷ್ಟು ಒಗ್ಗಿಕೊಂಡುಬಿಟ್ಟಿದ್ದಾಳೆ.  ಅಷ್ಟು ವೈನ್ ಹಾಕದಿದ್ದರೆ ರಾತ್ರೆ ನಿದ್ದೆ ಬರುವದಿಲ್ಲ. ಜಯಮಾಲಾನ ತೊಡೆ ಮೇಲೆ ಕೂತಿರುವ 'ಬನ್ನಿ' ಎನ್ನುವ ಪೊಮೇರಿಯನ್ ನಾಯಿ ಆಕೆಯ ಮುಖ ನೆಕ್ಕಿ, 'ನನಗೇನೂ ಇಲ್ಲವಾ?' ಅಂತ ಪೆಚ್ಚುಮೋರೆ ಮಾಡುತ್ತದೆ. 'ಡಾರ್ಲಿಂಗ್, ಹಾಗೆ ಬರುವಾಗ ಬನ್ನಿಗಾಗಿ ಒಂದೆರೆಡು ಡಾಗ್ ಬಿಸ್ಕಿಟ್ ಎತ್ತಿಕೊಂಡು ಬನ್ನಿ' ಅಂತ ಗಂಡನಿಗೆ ಹೇಳುತ್ತಾಳೆ. ಅವನಿಗೇನು? ಯಾರಿಗೆ ಬೇಕಾದರೂ ಬಿಸ್ಕಿಟ್ ಹಾಕಲು ರೆಡಿ ಅವನು. ಒಟ್ಟು ಅವನಿಗೆ ತೊಂದರೆ ಕೊಡದಿದ್ದರೆ ಆಯಿತು. ಅವನಿಗೆ ರೊಕ್ಕ ಮಾಡುವದೇ ಒಂದು ಚಟ. ರೊಕ್ಕ ಮಾಡಿ ಮಾಡಿ ಹೆಂಡತಿ ಮಕ್ಕಳ ಮೇಲೆ ಸುರಿಯುತ್ತಾನೆ. ಅದೇ ತಾನು ತನ್ನ ಕುಟುಂಬಕ್ಕೆ ಕೊಡಬಹುದಾದ ದೊಡ್ಡ ಕಾಣಿಕೆ ಅಂತ ತಿಳಿದಿದ್ದಾನೆ.

ಗಂಡ ಇನ್ನೂ ಎರಡು ಡ್ರಿಂಕ್ ಹಾಕುತ್ತಾನೆ. ಜಯಮಾಲಾ ಮತ್ತೂ ಎರಡು ಗ್ಲಾಸ್ ವೈನ್ ಕುಡಿಯುತ್ತಾಳೆ. ಬನ್ನಿ ಎಂಬ ಕುನ್ನಿ ಮತ್ತೂ ಎರಡು ಡಾಗ್ ಬಿಸ್ಕೀಟು ತಿಂದು ಸಾಕಾಗಿ, ಎದ್ದು ಹೋಗಿ, ತನ್ನ ನಾಯಿ ಹಾಸಿಗೆ ಮೇಲೆ ಹೋಗಿ ಪವಡಿಸಿ, ತಾಚಿ ತಾಚಿ ಅಂದರೆ ನಿದ್ದೆ ಮಾಡಿಬಿಡುತ್ತದೆ. ಘಂಟೆ ನೋಡಿದರೆ ರಾತ್ರಿ ಹನ್ನೊಂದು.

'ಊಟ ಮಾಡೋಣವೇ ಡಾರ್ಲಿಂಗ್?' ಅನ್ನುತ್ತಾಳೆ ಜಯಮಾಲಾ. ಹಸಿವೇನೂ ಇಲ್ಲ. ಆದರೂ ಒಂದಿಷ್ಟು ತಿಂದೇ ಮಲಗಬೇಕು. ಇಲ್ಲವಾದರೆ ಹೊಟ್ಟೆ ಸೇರಿದ ಎಣ್ಣೆ ಪರಮಾತ್ಮ ರಾತ್ರಿ ತೊಂದರೆ ಕೊಡುತ್ತಾನೆ. ಗಂಡನ ಉತ್ತರಕ್ಕೆ ಕಾಯದೇ ಎದ್ದು ಅಡಿಗೆಮನೆಯತ್ತ ನಡೆಯುತ್ತಾಳೆ. ಕುಡಿದ ಎರಡು ದೊಡ್ಡ ಗ್ಲಾಸ್ ವೈನಿನ ನಶೆ ಸ್ವಲ್ಪ ಜೋಲಿ ಹೊಡಿಸುತ್ತದೆ. ಆದರೂ ಸಾವರಿಸಿಕೊಂಡು ಹೋಗಿ, ಫ್ರಿಜ್ ನಿಂದ ತಂಗುಳ ಅಡುಗೆ ತೆಗೆದು, ಮೈಕ್ರೋವೇವ್ ಒಳಗೆ ಹೆಟ್ಟಿ, ಸ್ವಿಚ್ ಆನ್ ಮಾಡಿ, ತಂಗಳನ್ನ ಬಿಸಿಯಾಗುವದನ್ನೇ ಕಾಯುತ್ತಾಳೆ. ಇನ್ನೇನು ಊಟಕ್ಕೆ ತಯಾರಾಗಿಯೇ ಬಿಟ್ಟಿತು ಅಂತ ಗಡಬಡಾಯಿಸಿ ಲಾಸ್ಟ್ ಡ್ರಿಂಕ್ ತೆಗೆದುಕೊಳ್ಳಲು ಗಂಡ ಓಡಿ ಬರುತ್ತಾನೆ. 'ಸಾಕು. ಎಷ್ಟು ಕುಡಿಯುತ್ತೀರಿ?' ಅನ್ನುವ ಲುಕ್ ಜಯಮಾಲಾ ಕೊಟ್ಟರೆ, ಆಕೆಯ ಕಣ್ಣು ತಪ್ಪಿಸಿ, ಆತ ಮತ್ತೊಂದು ದೊಡ್ಡ ಪತಿಯಾಲಾ ಪೆಗ್ ಮಾಡಿಕೊಂಡು, ಪೆದ್ದ ನಗೆ ನಗುತ್ತಾನೆ. ಎಷ್ಟೆಂದರೂ ಪತಿಯಲ್ಲವೇ? ಪತಿ ಎಷ್ಟು 'ಪತಿ'ಯಾಲಾ ಪೆಗ್ ಹಾಕಿದರೇನು? ಅನ್ನುವ ರೀತಿಯಲ್ಲಿ ಭಂಡ ನಗು ಬೇರೆ ಆತನದು.

ಊಟ ಮುಗಿಸುತ್ತಾರೆ. ಮಾತಿಲ್ಲ. ಕಥೆಯಿಲ್ಲ. ಇಬ್ಬರ ಮಧ್ಯೆ ಮಾತುಕತೆ ಇತ್ಯಾದಿ ಸತ್ತು ಹೋಗಿ ವರ್ಷಗಳೇ ಆಗಿಹೋಗಿವೆ. ಊಟ ಮುಗಿಸಿ, ಪಾತ್ರೆಗಳನ್ನು ಡಿಶ್ ವಾಷರಿಗೆ ತುಂಬಿ, ಹಲ್ಲು ಮತ್ತೊಂದು ತಿಕ್ಕುವ ಕೆಲಸಕ್ಕೆ ಹೋಗುತ್ತಾರೆ. ಅದೆಲ್ಲ ಮುಗಿಸಿ ಬಂದು, ತಮ್ಮ ಮಾಸ್ಟರ್ ಬೆಡ್ರೂಮಿನಲ್ಲಿ ಮಲಗುತ್ತಾರೆ. ಆತ ಮತ್ತೆ ತನ್ನ ಬ್ಲಾಕಬೆರ್ರಿ ಸ್ಮಾರ್ಟ್ ಫೋನ್ ತೆಗೆದು, ಈಮೇಲ್ ಚೆಕ್ ಮಾಡುತ್ತ, ಏನೇನೋ ಮಾಡುತ್ತ ಮತ್ತೊಂದಿಷ್ಟು ಹೊತ್ತು ಹೆಂಡತಿ ಕಡೆ ಕುಂಡೆ ಹಾಕಿ ಮಲಗಿ ಕಳೆಯುತ್ತಾನೆ. 'ಆಹಾ! ಎಷ್ಟು ರೋಮ್ಯಾಂಟಿಕ್ ಈತ' ಅಂತ ಮನಸ್ಸಿನಲ್ಲಿಯೇ ನಿಟ್ಟುಸಿರು ಬಿಟ್ಟು, ಜಯಮಾಲಾ ಒಂದು ನಿದ್ದೆ ಗುಳಿಗೆ ತೆಗೆದುಕೊಂಡು ಮಲಗುತ್ತಾಳೆ. ಆಕೆಗೆ ಮಲಗಿ ಎಷ್ಟೋ ಹೊತ್ತು ಆದರೂ ನಿದ್ದೆಯೇ ಬರುವದಿಲ್ಲ. ಅದಕ್ಕೆಂದೇ ಡಾಕ್ಟರ್ 'ಭಾಳ ಅಪರೂಪಕ್ಕೆ ಒಮ್ಮೆ ಮಾತ್ರ ಇದನ್ನು ತೊಗೊಳ್ಳಿ. ದಿನಾ ದಿನಾ ತೆಗೆದುಕೊಳ್ಳಬೇಡಿ. ಚಟವಾಗಿ ಬಿಡುತ್ತದೆ,' ಅಂತ ಹೇಳಿಯೇ ಕೊಟ್ಟಿದ್ದಾನೆ. ಅದೂ ಎಣ್ಣೆ ಹಾಕಿದ ನಂತರವಂತೂ ತೆಗೆದುಕೊಳ್ಳಲೇ ಬೇಡಿ ಅಂತ ಹೇಳಿದರೂ ಜಯಮಾಲಾ ಕೇರ್ ಮಾಡುವದಿಲ್ಲ. ಮಾತ್ರೆ ತೆಗೆದುಕೊಳ್ಳದಿದ್ದರೆ ನಿದ್ರೆ ಬರುವದಿಲ್ಲ. ಏನೇನೋ ನೆನಪುಗಳು ಕಾಡುತ್ತವೆ. ಕಳೆದು ಹೋಗಿರುವ ಜವಾನಿ ನೆನಸಿಕೊಂಡು ದುಖವಾಗುತ್ತತೆ. ಅರ್ಧ ಹಣ್ಣಾಗಿರುವ ತಲೆಗೆ ಅದೆಷ್ಟು ಬಣ್ಣ ಬಳಿದುಕೊಂಡರೂ ಬಾಹ್ಯ ಸೌಂದರ್ಯ ನಶಿಸುತ್ತಿದೆ ಅಂತ ಬರೋಬ್ಬರಿ ಗೊತ್ತಾಗಿ, ಅದರಿಂದ ಮೊದಲು ಇರುತ್ತಿದ್ದ ವಿಶ್ವಾಸ ಮರೆಯಾಗಿ, ಒಂದು ತರಹದ ಕಿರಿಕಿರಿಯಾಗಿ, ಮನಸ್ಸಿಗೆ ತುಂಬ ಯಾತನೆಯಾಗುತ್ತದೆ. ಎಲ್ಲ ಕೂಡಿ ತಲೆ ಕಲಸುಮೆಲೋಗರ. ಅವಳಿಗೆ ಸದ್ಯಕ್ಕೆ ನಲವತ್ತನಾಲ್ಕು, ನಲವತ್ತೈದು ವರ್ಷ. ಆದರೂ ಟೀನೇಜ್, ಹದಿಹರೆಯದ ನೆನಪುಗಳು ತುಂಬ ಕಾಡುತ್ತವೆ. ಯಾರ್ಯಾರೋ ನೆನಪಾಗಿ, ಏನೇನೋ ಕೇಳಿ ತೊಂದರೆ ಕೊಡುತ್ತಾರೆ. ಏನೇನೋ ಕನಸುಗಳು. ಹುಚ್ಚೇ ಹಿಡಿದು ಬಿಡುತ್ತದೆಯೋ ಅನ್ನುವ ಹಾಗಾಗಿ, ಹಾಳಾಗಿ ಹೋಗಲಿ ಅಂತ ಒಂದು ನಿದ್ದೆ ಮಾತ್ರೆ ತೆಗೆದುಕೊಂಡು, ತನ್ನ ಈಮೇಲ್ ಅದೂ ಇದು ಮಾಡುತ್ತಿರುವ ಗಂಡನಿಗೆ ಒಂದು ಒಣ 'ಗುಡ್ ನೈಟ್' ಹೇಳಿ, ತಾನೂ ಸಹ ಅವನಕಡೆ ಬೆನ್ನು ಹಾಕಿ ಕಣ್ಣು ಮುಚ್ಚುತ್ತಾಳೆ. ಮಾತ್ರೆಯ ಪ್ರಭಾವಕ್ಕೆ ನಿದ್ದೆ ಬಂದೇ ಬಿಡುತ್ತದೆ. ಈಕೆ ನಿದ್ದೆ ಹೋದಳು ಅಂತ ಖಾತ್ರಿ ಮಾಡಿಕೊಂಡ ಗಂಡ ಪೀಡೆ ಕಳೆಯಿತು ಅಂತ ಫೇಸ್ ಬುಕ್ ಮೇಲೆ ತನ್ನ ಆಫೀಸಿನ ಬಿಳಿಯ ಸೆಕ್ರೆಟರಿ ಜೊತೆಗೆ ಲಲ್ಲೆಗರಿಯಲು ಶುರುವಿಟ್ಟುಕೊಳ್ಳುತ್ತಾನೆ. ಅದು ಅವನ ಹೊಸ ಖಯಾಲಿ. ಹೊಸದಾಗಿ ಪಟಾಯಿಸಿದ ಪರ್ಯಾಯ ಹೆಂಡತಿ ಉರ್ಫ್ ಗರ್ಲ್ ಫ್ರೆಂಡ್.

ಮರುದಿನ ಸಾವಕಾಶವಾಗಿ ಏಳೂವರೆಗೆ ಎದ್ದು ಕೆಳಗೆ ಬರುತ್ತಾಳೆ ಜಯಮಾಲಾ. ಮಕ್ಕಳು ಆಗಲೇ ಎದ್ದು, ಅವರ ಪಾಡಿಗೆ ಅವರು ತಯಾರಾಗಿ, ಕಾರ್ನ್ ಫ್ಲೇಕ್ಸ್ ತಿಂದು, ಜೊತೆಗೊಂದು ಸೇಬು ತಿಂದು, ಶಾಲೆಗೆ ಹೊರಡಲು ತಯಾರಾಗಿರುತ್ತಾರೆ. ಅಮ್ಮನನ್ನು ನೋಡಿ ಹುಬ್ಬೇರಿಸಿದಂತೆ ಮಾಡಿ ಒಂದು ಗುಡ್ ಮಾರ್ನಿಂಗ್ ಹಾಕಿ, ಒಬ್ಬಳು ಐಪಾಡಿನಲ್ಲಿ ಸಂಗೀತ ಕೇಳುತ್ತ, ಇನ್ನೊಬ್ಬಾಕೆ ಮೊಬೈಲ್ ನಲ್ಲಿ ಯಾರದ್ದೋ ಜೊತೆ ಹರಟೆ ಹೊಡೆಯುತ್ತಿರುತ್ತಾಳೆ. ಅಷ್ಟರಲ್ಲಿ ಶಾಲೆಗೆ ಹೋಗುವ ಬಸ್ ಬರುತ್ತದೆ. ಜಯಮಾಲಾನ ಕಡೆಗೆ ಸರಿಯಾಗಿ ನೋಡದೇ ಒಂದು 'ಬೈ ಬೈ ಮಾಮ್!' ಅಂತ ಹೇಳಿ ಹೋಗಿಬಿಡುತ್ತಾರೆ. ಮತ್ತೆ ಜಯಮಾಲಾಗೆ ದೊಡ್ಡ ಮನೆಯ ಒಂಟಿತನ ಕಾಡುತ್ತದೆ. ಅದನ್ನು ಅರ್ಥಮಾಡಿಕೊಂಡ ನಾಯಿ ಬನ್ನಿ ಎದ್ದು ಬಂದು, ಅಮ್ಮಾವರ ತೊಡೆ ಮೇಲೆ ಹತ್ತಿ, ಪ್ರೀತಿ ಮಾಡುತ್ತದೆ. 'ಇದೇ  ಒಂದು ನನ್ನ ಪ್ರೀತಿ ಮಾಡುವ ಜೀವ ಉಳಿದಿದ್ದು ಈ ಮನೆಯಲ್ಲಿ,' ಅಂತ ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾಳೆ ಜಯಮಾಲಾ.

ಹಿಂದಿನ ರಾತ್ರಿಯ ವೈನಿನ ಪ್ರಭಾವವೋ, ನಿದ್ದೆ ಮಾತ್ರೆಯ ಪ್ರಭಾವವೋ, ಅಥವಾ ಮತ್ತೇನೋ ಗೊತ್ತಿಲ್ಲ. ಜಯಮಾಲಾಗೆ ತಲೆ ಗಿಂವ್ ಅನ್ನುತ್ತದೆ. ಒಂದು ದೊಡ್ಡ ಕಪ್ಪಿನಲ್ಲಿ ಸ್ಟ್ರಾಂಗ್ ಕಾಫಿ ಮಾಡಿಕೊಂಡು ಕುಡಿದ ನಂತರ ಎಷ್ಟೋ ಹಾಯೆನಿಸುತ್ತದೆ. ಕಾಫಿ ಕುಡಿದ ನಂತರ ಬಾತ್ರೂಂ ಹೊಕ್ಕಿಬಿಡುತ್ತಾಳೆ. ನಾಯಿ ಬನ್ನಿ 'ನಾನೂ ಒಳಗೆ ಬರ್ಲಾ?' ಅನ್ನುವಂತೆ ಬಾತ್ರೂಂ ಹೊಕ್ಕಲು ನೋಡುತ್ತದೆ. 'ನೋ ಬನ್ನಿ ನೋ. ನೀನು ಹೊರಗೇ ಇರು. ಸ್ನಾನ ಮುಗಿಸಿ ಬರ್ತೀನಿ. ನಂತರ ವಾಕಿಂಗ್ ಹೋಗೋಣ. ಪಾರ್ಕಿಗೆ ಹೋಗಿಬರೋಣ,' ಅಂತ ಚಿಕ್ಕ ಮಕ್ಕಳಿಗೆ ಹೇಳಿದ ಹಾಗೆ ಹೇಳಿ, ಬಾತ್ರೂಂ ಬಾಗಿಲು ಮುಚ್ಚಿಕೊಳ್ಳುತ್ತಾಳೆ ಜಯಮಾಲಾ.

ಕಮೋಡ್ ಮೇಲೆ ಕೂತವಳೇ ಅಡಗಿಸಿಟ್ಟಿದ್ದ ಸಿಗರೇಟು ತೆಗೆದು ಹಚ್ಚಿಬಿಡುತ್ತಾಳೆ. 'ಸಂಡಾಸಕ್ಕೆ ಹೋದಾಗೊಂದು ಸಲ ಸಿಗರೇಟು ಭಾಗ್ಯ' ಅನ್ನುವ ಸ್ಕೀಮ್ ಯಾವಾಗಿಂದ ಶುರುಮಾಡಿಕೊಂಡೆ ಅನ್ನುವದು ಖುದ್ದು ಅವಳಿಗೇ ಮರೆತುಹೋಗಿದೆ. ಆದರೆ ಸಿಗರೇಟು ಇಲ್ಲದಿದ್ದರೆ 'ಅದು' ಆಗುವದಿಲ್ಲ. ಮತ್ತೆ ಬೇರೆ ಯಾವ ಸಮಯದಲ್ಲೂ ಸಿಗರೇಟ್ ಅಷ್ಟಾಗಿ ಬೇಕು ಅನ್ನಿಸುವದಿಲ್ಲ. ಅದಕ್ಕೇ ಜಯಮಾಲಾ ಕೂಡ ಸಿಗರೇಟ್ ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡಿಲ್ಲ. ಜವಾನಿಯಲ್ಲಿದ್ದಾಗ, ಹರೆಯದ ಮಸ್ತಿಯಲ್ಲಿದ್ದಾಗ, ಬಾಯ್ ಫ್ರೆಂಡುಗಳ ಸಿಗರೇಟ್ ಇಸಿದುಕೊಂಡು ಒಂದೋ ಎರಡೋ ದಂ ಹೊಡೆದು ಹೊಡೆದು ಅಭ್ಯಾಸವಾಗಿತ್ತು. ಒಬ್ಬ ಪುಣ್ಯಾತ್ಮ ಬಾಯ್ ಫ್ರೆಂಡ್ ಸಂದೀಪ ಬಾಂದೇಕರ ವಾರಾಂತ್ಯಕ್ಕೆ ಅಂತ ಗೋವಾಕ್ಕೆ ಬೇರೆ ಕರೆದುಕೊಂಡು ಹೋಗಿಬಂದಿದ್ದ. ಜಯಮಾಲಾಳ ಮನೆಯಲ್ಲಿ ತಂದೆ ತಾಯಿ ಎಲ್ಲ ತುಂಬ ಲಿಬರಲ್. ಅವರೇ ದೊಡ್ಡ ಸ್ವೇಚ್ಛಾಚಾರಿಗಳು. ಅದಕ್ಕೇ ಜಯಮಾಲಾ, ಅದಕ್ಕೂ ಮೊದಲು ಆಕೆಯ ಅಕ್ಕ, ಇಬ್ಬರೂ ಹೆಣ್ಣು ಮಕ್ಕಳೂ ಬೇಕುಬೇಕಾದ ಹಾಗೆ ಮನ್ಮಾನಿ ಮಾಡಿಕೊಂಡಿದ್ದರು. ಗೋವಾಕ್ಕೆ ಕರೆದುಕೊಂಡು ಹೋಗಿದ್ದ ಬಾಯ್ ಫ್ರೆಂಡ್ ಬಾಂದೇಕರ ಬರೇ ಸಾದಾ ಸಿಗರೇಟು ಒಂದೇ ಅಲ್ಲ ಗಾಂಜಾ ತುಂಬಿದ ಸಿಗರೇಟ್ ಕೊಟ್ಟು ಬಿಟ್ಟಿದ್ದ. ಸಿಕ್ಕಾಪಟ್ಟೆ ನಶೆ ಏರಿತ್ತು. ನಶೆ ಇಳಿದು, ಕಳೆಯುವ ತನಕ ಮತ್ತೇನೋ ಕಳೆದುಕೊಂಡಿದ್ದು ಅನುಭವಕ್ಕೆ ಬಂದಿತ್ತು. ಕನ್ಯತ್ವ ಸೂರೆ ಮಾಡಿದ್ದ ಬಾಯ್ ಫ್ರೆಂಡ್ ಬಾಂದೇಕರ ಮೀಸೆ ಕೆಳಗೆ ನಗುತ್ತ ಮುಂದೇ ಕೂತಿದ್ದ. 'ಅಯ್ಯೋ! ಏನು ಮಾಡಿಕೊಂಡೆ? ಛೆ!' ಅಂತ ಒಂದು ಕ್ಷಣ ವಿಷಾದವೆನಿಸಿತೋ ಏನೋ.  ಅದು ಈಗ ನೆನಪಿಲ್ಲ ಜಯಮಾಲಾಳಿಗೆ. ಯಾಕೆಂದರೆ ಅದಕ್ಕೆಲ್ಲ ಅವಕಾಶ ಕೊಡದೇ ಒಂದು ತಣ್ಣನೆಯ ಬೀಯರ್ ಬಾಟಲಿ ಕೈಯಲ್ಲಿಟ್ಟು, ಮತ್ತೊಂದು ಗಾಂಜಾ ಸಿಗರೇಟು ಕೊಟ್ಟು, 'ಆರಾಮಾಗಿ ಹೊಡಿ ನೀ ಜಯೂ ಡಾರ್ಲಿಂಗ್. ಏನ್ ಚಿಂತಿ ಮಾಡಬ್ಯಾಡ. ನಾವಿಬ್ಬರೂ ಖರೇ ಲವರ್ಸ್. ಮುಂದ ಮಾಡೋದು ಈಗೇ ಮಾಡಿ ಮುಗಿಸಿದಿವಿ. ಮತ್ತ ಮಾಡೋಣ?' ಅಂತ ಕಣ್ಣು ಹೊಡೆದಿದ್ದ. ಕಾಮ ಕೇಳಿಗೆ ಆಹ್ವಾನಿಸಿದ್ದ. ಒಂದು ದೊಡ್ಡ ಬಾಟಲ್ ಬೀಯರ್ ಕುಡಿದು, ನಾಲ್ಕು ಗಾಂಜಾ ಜುರ್ಕಿ ಎಳೆಯುವವರೆಗೆ ಮತ್ತೆ ಮೂಡು ಬಂದಿತ್ತು. ಒಳಗಿಂದ ಕಾಮ ಕೆರಳಿ ನಿಂತಿತ್ತು. ಮತ್ತೆ ಹಾವಿನಂತೆ ಒಬ್ಬರಿಗೊಬ್ಬರು ಸುರಳಿ ಸುತ್ತಿ ಸುತ್ತಿ ಒಂದಾಗುತ್ತಿದ್ದರೆ ಮೇಲೆ ಸೀಲಿಂಗ್ ಫ್ಯಾನ್ ತನ್ನ ಪಾಡಿಗೆ ತಾನು ತಿರುಗುತ್ತಿತ್ತು. ಅಂತಹ ಅದೆಷ್ಟು ಘಟನೆಗಳನ್ನು ನೋಡಿತ್ತೋ ಆ ಸೀಲಿಂಗ್ ಫ್ಯಾನು?

ಸಂಡಾಸದ ಕಮೋಡ್ ಮೇಲೆ ಕೂತು, ಬಾಯಲ್ಲಿ ಸಿಗರೇಟು ಇಟ್ಟುಕೊಂಡು ದಮ್ಮು ಎಳೆಯುತ್ತಿರುವಾಗ ಇದೆಲ್ಲ ನೆನಪಾಯಿತು. ಸಿಗರೇಟು ಮುಗಿಸಿ, ಕೆಲಸ ಮುಗಿಸಿ, ಒಂದು ಒಳ್ಳೆ ಸ್ನಾನ ಮಾಡಿ, ತಯಾರಾಗಿ ಬರುವ ತನಕ ಒಂಬತ್ತು ಘಂಟೆ. ಅರಮನೆಯಂತಹ ಮನೆಯಲ್ಲಿವೆ ನಾಲ್ಕೋ ಐದೋ ಬಾತರೂಮು. ಎಲ್ಲರಿಗೂ ಅವರದ್ದೇ ಖುದ್ದು ಪ್ರತ್ಯೇಕ ಬಾತ್ರೂಮು. ಮತ್ತೆ ಬಂದ ಗೆಸ್ಟುಗಳಿಗೆ ಅಂತಲೇ ಒಂದು ಬೇರೆ. ಹಾಗಾಗಿ ಅವರವರ ಬಾತ್ರೂಮಿನಲ್ಲಿ ಯಾರು ಏನು ಮಾಡಿದರೂ ಓಕೆ. ಈಕೆ ಸಿಗರೇಟು ಹೊಡೆದರೆ ಆಕೆಯ ಹೆಣ್ಣುಮಕ್ಕಳು ಡ್ರಗ್ ಇಂಜೆಕ್ಷನ್ ಸಹಿತ ಚುಚ್ಚಿಕೊಳ್ಳೋದು, ಡ್ರಗ್ ಮೂಸುವದು ಎಲ್ಲ ಅವರ ಅವರ ಬಾತ್ರೂಮಿನಲ್ಲೇ ಅಂತ ಜಯಮಾಲಾಗೆ ಗೊತ್ತಿಲ್ಲ. ಸಂಜೆಯಾದೊಡನೆಯೇ ದೊಡ್ಡವಳ ಕಣ್ಣು ಗುಡ್ಡೆ ಮೇಲೇಕೆ ಹೋಗುತ್ತವೆ ಅಂತ ಎಂದದಾರೂ ಆಕೆ ನೋಡಿದ್ದರೆ ತಾನೆ ಸಂಶಯ ಬರೋದು, ಗೊತ್ತಾಗೋದು? ಅಮ್ಮ ಅಂದರೆ ಗುಮ್ಮ ಅನ್ನುವ ಟೀನೇಜ್ ಮಕ್ಕಳು ಅದನ್ನೆಲ್ಲ ಹೊರಗೆ ಬಿಟ್ಟುಕೊಳ್ಳುತ್ತಾರೆಯೇ?

ಈಕೆ ವಾಕಿಂಗ್ ಹೋಗಲು ಸರಿಯಾದ ಡ್ರೆಸ್ ಹಾಕಿಕೊಂಡು ಕೆಳಗೆ ಬರುವ ಹೊತ್ತಿಗೆ ಗಂಡನೂ ತಯಾರಾಗಿ ಕಾಫಿ ಕುಡಿಯುತ್ತ ಕೂತಿದ್ದ. ಕೆಳಗೆ ಬಂದ ಜಯಮಾಲಾ ಮತ್ತೆಲ್ಲಿ ತಗಲಿಹಾಕಿಕೊಂಡು ತಲೆ ತಿಂದರೆ ಕಷ್ಟ ಅಂತ ಗಡಿಬಿಡಿಯಲ್ಲಿ ಕಾಫಿ ಮುಗಿಸಿದವನೇ, ಬ್ರೀಫ್ ಕೇಸ್ ಎತ್ತಿಕೊಂಡು, ಕಾರ್ ಕೀ ಗೊಂಚಲನ್ನು ಗಲಗಲ ಮಾಡುತ್ತ, 'ಸರಿ ಡಾರ್ಲಿಂಗ್. ಹೋಗಿ ಬರ್ತೀನಿ. ಸಂಜೆ ಸಿಗೋಣ' ಅಂದವನೇ ಓಡಿಬಿಟ್ಟ. 'ಎಷ್ಟು avoid ಮಾಡುತ್ತಿದ್ದಾನೆ? ಯಾರಿಗೂ ನಾ ಬೇಕಾಗಿಯೇ ಇಲ್ಲ' ಅಂತ ಅಂದುಕೊಂಡಳು. ಖಿನ್ನತೆ ಉಮ್ಮಳಿಸಿ ಬಂತು. 'ಏ ನಾನು ಇದ್ದೀನಿ. ಐ ಲವ್ ಯು' ಅನ್ನುವ ಹಾಗೆ ನಾಯಿ ಬನ್ನಿ ಬಂದು ಪ್ರೀತಿ ಮಾಡಿತು. 'ಹೌದು ಬನ್ನಿ. ನೀ ಒಂದೇ ಇರೋದು unconditional ಪ್ರೀತಿ ಮಾಡುವ ಪ್ರಾಣಿ. ಬಾ ಹೋಗೋಣ,' ಅಂತ ಹೇಳಿ, ಬನ್ನಿಗೆ ನಾಯಿಪಟ್ಟಿ ಹಾಕಿಕೊಂಡು ವಾಕಿಂಗ್ ಹೊರಟಳು.

ಜಯಮಾಲಾ ಬನ್ನಿ ಜೊತೆ ಹೊರಗೆ ಬಂದು, ಮನೆಗೆ ಬೀಗ ಹಾಕಿಕೊಂಡು, ರಸ್ತೆಗೆ ಇಳಿಯುವ ತನಕ ಅಲ್ಲಿ ರಸ್ತೆ ಕೊನೆಯಲ್ಲಿ ಗಂಡನ ಕಾರು ನಿಂತಿತ್ತು. 'ಮನೆ ಬಿಟ್ಟವ ಅಲ್ಲೇಕೆ ನಿಂತ?' ಅಂತ ಒಂದು ಕ್ಷಣ ಅಂದುಕೊಂಡಳು. ಅಷ್ಟರಲ್ಲಿ ಕಾರು ಹೋಗೇ ಬಿಟ್ಟಿತು. ಗಂಡ ಆಫೀಸ್ ಸೆಕ್ರೆಟರಿ ಜೊತೆ ಲವ್ವಿ ಡವ್ವಿ ಶುರು ಮಾಡಿದ್ದು ಒಂದೇ ಅಲ್ಲದೇ ಆಕೆಗೆ ತನ್ನ ಮನೆಯ ಹತ್ತಿರವೇ ಒಂದು ಮನೆ ಕೂಡ ಮಾಡಿ ಇಟ್ಟುಕೊಂಡೇ ಬಿಟ್ಟಿದ್ದ. ಅದು ಜಯಮಾಲಾಗೆ ಗೊತ್ತಿರಲಿಲ್ಲ ಅಷ್ಟೇ. ಈಕೆ ನಿದ್ದೆ ಗುಳಿಗೆ ತೆಗೆದುಕೊಂಡು ಮಲಗಿದಾಕ್ಷಣ ಆಕೆಯ ಗಂಡ ಮನೆಯಿಂದ ಹೊರಗೆ ಬಿದ್ದು, ಆಲ್ಲೇ ಸ್ವಲ್ಪ ಮುಂದೆ ಹೋಗಿ, ಬಲಕ್ಕೆ ತಿರುಗಿದರೆ ಸಿಗುತ್ತಿದ್ದ ಸುಂದರ ಸೆಕ್ರೆಟರಿ ಮನೆ ಸೇರಿ, ಜಮ್ಮ ಚಕ್ಕ ಮಾಡಿ, ಮತ್ತೆ ಬೆಳಗಿನ ಜಾವ ಮನೆ ಸೇರಿಕೊಂಡುಬಿಡುತ್ತಿದ್ದ. ದಿನನಿತ್ಯದಂತೆ ಇವತ್ತೂ ಸಹ ಆಫೀಸಿಗೆ ಹೋಗುವಾಗ ಸೆಕ್ರೆಟರಿಯನ್ನು ಪಿಕಪ್ ಮಾಡಿಕೊಂಡು ಹೋಗಲು ನಿಂತಿದ್ದ. ಕಾರಿನ ರಿಯರ್ ವ್ಯೂ ಮಿರರ್ ನಲ್ಲಿ ನಾಯಿ ಜೊತೆ ಮನೆ ಬಿಟ್ಟ ಹೆಂಡತಿಯನ್ನು ಕಂಡಿದ್ದೇ ಗಾಡಿ ಬಿಟ್ಟೇಬಿಟ್ಟ. ಅಷ್ಟರಲ್ಲೇ ಸೆಕ್ರೆಟರಿ ಬಂದು ಗಾಡಿ ಹತ್ತಿ ಕೂತಿದ್ದಳೇ? ಗೊತ್ತಿಲ್ಲ.

ಜಯಮಾಲಾ ಬನ್ನಿ ಜೊತೆ ಹೊರಟಳು. ಅವರ ಮನೆ ಹತ್ತಿರದಲ್ಲೇ ಒಂದು ಸುಂದರ ಪಾರ್ಕಿದೆ. ಪಾರ್ಕಿನ ನಟ್ಟ ನಡುವೆ ಒಂದು ದೊಡ್ಡ ಸೈಜಿನ ಸುಂದರ ಕೊಳವೂ ಇದೆ. ತುಂಬ ಪ್ರಶಾಂತ ವಾತಾವರಣವಿದೆ. ವಾರದ ದಿನಗಳಲ್ಲಿಯಂತೂ ಯಾರೂ ಹೆಚ್ಚಿನ ಜನ ಇರದೇ ನಿರ್ಜನವಾಗಿರುತ್ತದೆ.

ವಾಕಿಂಗ್ ಮಾಡುತ್ತ ಬಂದ ಜಯಮಾಲಾ ಮತ್ತು ಬನ್ನಿ ಪಾರ್ಕಿನ ಮಧ್ಯೆ ಇರುವ ಕೊಳದ ಸಮೀಪ ಬಂದರು. ಶಾಂತವಾಗಿತ್ತು ಕೊಳ. ಒಂದು ಮೂಲೆಯಲ್ಲಿ ಬಾತುಕೋಳಿಗಳು ಆರಾಮವಾಗಿ ಆಚೀಚೆ ಓಡಾಡಿಕೊಂಡಿದ್ದವು. ಒಂದಿಷ್ಟು ದಡಕ್ಕೆ ಬಂದು, ಹುಲ್ಲುಹಾಸಿನಲ್ಲಿ ಏನೋ ಹುಡುಕುತ್ತಿದ್ದವು. ಬನ್ನಿ ನಾಯಿಗೆ ಬಾತುಕೋಳಿಗಳನ್ನು ಕಂಡರೆ ಏನೋ ಆಸಕ್ತಿ. ಆಕಡೆ ಹೋಗೋಣ ಬಾ ಎನ್ನುವಂತೆ ತನ್ನ ಮಾಲಕೀನಳನ್ನು ಎಳೆಯುತ್ತಿತ್ತು. ಅದಕ್ಕೆ ಒಪ್ಪದ ಜಯಮಾಲಾ ಅನ್ಯಮನಸ್ಕಳಾಗಿ ಏನೋ ನೋಡುತ್ತ ನಿಂತಿದ್ದಳು. ಕೊಳದ ಮಧ್ಯೆ ಒಮ್ಮೆಲೇ ಮಂಜು ಮುಸುಕಿದಂತಾಯಿತು. 'ಅರೇ! ಎಲ್ಲ ಕಡೆ ಎಳೆ ಬಿಸಿಲಿದೆ. ಅದು ಹೇಗೆ ಕೊಳದ ಮಧ್ಯೆ ಮಂಜು? ಅದೂ ದಟ್ಟವಾಗುತ್ತಿರುವ ಮಂಜು?' ಅಂತ ಅಂದುಕೊಂಡು ಅಚ್ಚರಿಪಟ್ಟು, ಮುಖ ಸ್ವಲ್ಪ ಮುಂದೆ ಮಾಡಿ ನೋಡಿದಳು.

ಕೊಳದ ಮಧ್ಯೆ ಕವಿದಿದ್ದ ಮಂಜು ದಟ್ಟವಾಗುತ್ತಲೇ ಹೋಯಿತು. ಅದು ಒಂದು ರೀತಿಯ ಹೊಗೆಯ ರೂಪ ತಾಳಿ, ಜಯಮಾಲಾ ನಿಂತಿದ್ದ ದಡದ ಕಡೆ ಧಾವಿಸತೊಡಗಿತು. ಮನುಷ್ಯರಿಗೆ ಕಾಣದ್ದು ಪ್ರಾಣಿಗಳಿಗೆ ಕಾಣುತ್ತವೆ ಅನ್ನುತ್ತಾರೆ. ಹಾಗೆ ಜೋರಾಗಿ ದಡದತ್ತ ಧಾವಿಸಿ ಬರುತ್ತಿದ್ದ ಮಂಜಿನಲ್ಲಿ, ಧೂಮದ ಮಾರುತದಲ್ಲಿ ನಾಯಿ ಬನ್ನಿಗೆ ಏನು ಕಂಡಿತೋ ಗೊತ್ತಿಲ್ಲ. ಸಾಯುವ ರೀತಿಯಲ್ಲಿ ಕೂಗಿಕೊಳ್ಳತೊಡಗಿತು. ಊಳಿಡತೊಡಗಿತು. ತುಂಬ ವೇಗವಾಗಿ ಆಗಮಿಸುತ್ತಿದ್ದ ಮಂಜು, ಹೊಗೆ, ಅದರಲ್ಲಿ  ಏನನ್ನೋ ಕಂಡು, ಹೆದರಿ ಊಳಿಡುತ್ತಿರುವ ನಾಯಿ. ಅಷ್ಟರಲ್ಲಿ ಖುದ್ದು ಜಯಮಾಲಾಳಿಗೆಯೇ ಒಂದು ತರಹದ ಮಂಕು ಕವಿಯತೊಡಗಿತು. ಯಾವದೋ ಒಂದು ಭ್ರಮೆಯ ಲೋಕಕ್ಕೆ, ಸುಪ್ತ ಪ್ರಜ್ಞೆಯ ತುಂಬ ಆಳಕ್ಕೆ ಇಳಿದು ಹೋಗುತ್ತಿರುವ ಅನುಭವವಾಯಿತು. ಭೂಮಿ ಬಿಟ್ಟು ಬೇರೆಯೇ ತರಹದ ಒಂದು ಲೋಕದ ಮೇಲೆ ಇದ್ದಂತಾಗಿ, ಪ್ರಜ್ಞೆ ತುಂಬ selective ಅನ್ನುವಂತೆ ಆಗಿ, ಒಂದು ತರಹದ ಸಂಮೋಹಿನಿ ಸ್ಥಿತಿಗೆ ಹೋದಂತಾಗಿ, ಜಯಮಾಲಾ ಗರಬಡಿದವಳಂತೆ, ವೇಗವಾಗಿ ಬರುತ್ತಿರುವ ಮಂಜೋ, ಗಾಳಿಯೋ ತರಹದ special effect ನ್ನೇ ನೋಡುತ್ತ ಕಲ್ಲಾಗಿಬಿಟ್ಟಳು. ನಾಯಿ ಬನ್ನಿಯದು ಮಾತ್ರ ನಿರಂತರ ಊಳಿಡುವಿಕೆ.

ಮಂಜಿನ ಸುಂಟರಗಾಳಿ ಬಂದು ದಡವನ್ನು ತಲುಪೇ ಬಿಟ್ಟಿತು. ಅದು ಬರುತ್ತಿದ್ದ ರಭಸಕ್ಕೆ ಹೆದರಿ, ತಾನೂ ಸಹ ಎಲ್ಲಿ ಅದರಲ್ಲೇ ಕೊಚ್ಚಿಕೊಂಡು ಹೋಗಿಬಿಡುತ್ತೇನೋ ಅಂತ ಆತಂಕಗೊಂಡಿದ್ದ ಜಯಮಾಲಾ, ಅದು ದಡಕ್ಕೆ ಆಗಮಿಸಿ, ಅಲ್ಲೇ ನಿಂತಿದ್ದಕ್ಕೆ ಒಂದು ರೀತಿ ನಿರಾಳವಾದಳು. ಸುಂಟರಗಾಳಿ ನಿಂತರೂ ಮಂಜು ಮಾತ್ರ ಕವಿದೇ ಇತ್ತು. ಮಂಜು ಸ್ವಲ್ಪ ಕರಗಿದಂತಾಗತೊಡಗಿತು. ಮುಂದಿದ್ದ ಮಂಜು ಕರಗಿದಂತೆ ಅದರಿಂದ ಏನೋ ಒಂದು ತರಹದ ಆಕೃತಿ ಹೊರಹೊಮ್ಮತೊಡಗಿತು. ಶಿಲೆಯಿಂದ ಶಿಲ್ಪ ಹೊರಹೊಮ್ಮಿದ ಮಾದರಿಯಲ್ಲಿ. ಒಂದೊಂದು ಕ್ಷಣಕ್ಕೆ, ಒಂದೊಂದು ಚಾಣದ ಹೊಡೆತಕ್ಕೆ ಬಂಡೆಕಲ್ಲು ಶಿಲ್ಪದ ಆಕೃತಿಗೆ ಬಂದ ಹಾಗೆ.  ಮಂಜು ಸ್ವಲ್ಪ ಸ್ವಲ್ಪ ಕರಗುತ್ತಿದ್ದಂತೆ ಆಕೃತಿ ಸ್ಪಷ್ಟವಾಗತೊಡಗಿತು. ಒಂದು ಮನುಷ್ಯಾಕೃತಿ ಮೂಡತೊಡಗಿತ್ತು. ಪೂರ್ತಿ ವಿವರ ತಿಳಿಯುವಷ್ಟು ಮಂಜು ಕರಗಿರಲಿಲ್ಲ. ಕೇವಲ outline ಒಂದೇ ಕಾಣುತ್ತಿತ್ತು. ಕೆಲವು ಸಿಕ್ಕಾಪಟ್ಟೆ tense ನಿಮಿಷಗಳ ನಂತರ ಕೊಳದ ದಂಡೆ ಮೇಲೆ, ಜಯಮಾಲಾ ಮುಂದೆ ಒಂದು ಮನುಷ್ಯಾಕೃತಿ ಮೂಡಿತು.

ಇಷ್ಟಾಗುವ ಹೊತ್ತಿಗಾಗಲೇ ಜಯಮಾಲಾ ಬೇರೆಯೇ ಲೋಕಕ್ಕೆ ಹೋದಂತವಳಾಗಿಬಿಟ್ಟಿದ್ದಳು. ಮುಂದೆ ಮೂಡಿದ ಮನುಷ್ಯಾಕೃತಿ ಜಯಮಾಲಾ ಕಡೆಗೆ ಬೆನ್ನು ಹಾಕಿ ನಿಂತಿತ್ತು. ಉತ್ತರ ಕರ್ನಾಟಕದ ಕಡೆ ಜವಾರಿ ಮಹಿಳೆಯರು ಉಡುವಂತಹ ಶುದ್ಧ ಇಳಕಲ್ಲ ಸೀರೆಯನ್ನು ಅಸಡ್ಡಾಳವಾಗಿ ಉಟ್ಟಿತ್ತು. ಸೀರೆ ಉಟ್ಟಿತ್ತು ಅನ್ನುವದರಕಿಂತ ಹೆಚ್ಚಾಗಿ ಲುಂಗಿ ತರಹ ಸುತ್ತಿಕೊಂಡಿತ್ತು. ಆ ವಿಚಿತ್ರವನ್ನು ಬರೋಬ್ಬರಿ ಅರಿಯಲಾಗದ ಜಯಮಾಲಾ ಫುಲ್ ಥಂಡಾ ಹೊಡೆದಳು.

'ಏ ಜಯೂ. ಏ ಜಯಕ್ಕಾ. ನನ್ನ ಖುನಾ ಹಿಡದಿ ಏನವಾ?' ಅಂದುಬಿಟ್ಟಿತು ಆ ಆಕೃತಿ. ಒಂದು ರೀತಿ ಗೊಗ್ಗರ ಧ್ವನಿಯಿತ್ತು.

ಜಯೂ, ಜಯಕ್ಕಾ ಅಂತ ಜಯಮಾಲಾಳನ್ನು ತುಂಬ ಆತ್ಮೀಯತೆಯಿಂದ ಕರೆಯುತ್ತಿತ್ತು ಅ ನಿಗೂಢ ಆಕೃತಿ. ಧಾರವಾಡದ ತುಂಬ ಆತ್ಮೀಯರು, ಮನೆ ಮಂದಿ ಮಾತ್ರ ಹಾಗೆ ಕರೆಯುತ್ತಿದ್ದರು. ಇಲ್ಲಿ ಪರದೇಶದ ಎಲ್ಲಿಯದೋ ಪಾರ್ಕಿನ ಯಾವದೋ ಕೊಳದ ಮೇಲೆ ಧುತ್ ಅಂತ ಇಳಕಲ್ಲ ಸೀರೆ ಸುತ್ತಿಕೊಂಡು ಪ್ರತ್ಯಕ್ಷವಾದ ಆಕೃತಿಯೊಂದು ಮುಖವನ್ನೂ ತೋರಿಸದೇ, ಬೆನ್ನು ಹಾಕಿ ನಿಂತು, ಜಯೂ, ಜಯಕ್ಕಾ ಅನ್ನುತ್ತ ಖುನಾ (ಪರಿಚಯ) ಸಿಕ್ಕಿತೇ? ಅನ್ನುತ್ತಿದೆ. ಇದೆಂತಹ ವಿಚಿತ್ರ? ಆಶ್ಚರ್ಯ? ಪಕ್ಕದಲ್ಲಿ ನಾಯಿ ಬನ್ನಿ ಮಾತ್ರ ಮುಖ ಮೇಲೆ ಮಾಡಿ ವಿಚಿತ್ರ ರೂಪದಲ್ಲಿ  ಕೂಗುತ್ತಿತ್ತು. ಅದಕ್ಕೇನು ಕಂಡುಬಂದಿತ್ತೋ!? ಶಿವನೇ ಬಲ್ಲ.

'ಏ ಹಲ್ಕಟ್ ನಾಯಿ. ಸುಮ್ಮ ಕುಂದ್ರ ನೀ. ಹಾಂಗ ಹೊಯ್ಕೋಬ್ಯಾಡ. ಮತ್ತ ಮತ್ತ ಹೇಳಂಗಿಲ್ಲ ನೋಡು ನಾ!' ಅಂತ ಗೊಗ್ಗರು ದನಿಯ ಆ ವ್ಯಕ್ತಿ ನಾಯಿಗೆ ಎಚ್ಚರಿಕೆ ಕೊಟ್ಟಿತು. ಆಗ ಮಾತ್ರ ಜಯಮಾಲಾ ಕೊಂಚ ಅಪ್ರತಿಭಳಾದಳು. 'ಈ ವ್ಯಕ್ತಿ ಯಾರು, ಏನು ಅಂತ ಗೊತ್ತಿಲ್ಲ. ಮೇಲಿಂದ ನಾಯಿಗೆ ಬೇರೆ ಜೋರು ಮಾಡುತ್ತಿದೆ. ಏನು ಇದು?' ಅಂದುಕೊಂಡಳು ಜಯಮಾಲಾ.

'ಯಾರು ನೀವು? ನಂದು ಹೆಂಗ ಗೊತ್ತದ ನಿಮಗ? ಸ್ವಲ ತಿರುಗಿ ಮಾತಾಡಿರಿ ನೋಡೋಣ,' ಅಂದ ಜಯಮಾಲಾಳ ದೃಷ್ಟಿ ಸಹಜವಾಗಿ ಮುಂದೆ ನಿಂತ ಆಕೃತಿಯ ಮೇಲಿಂದ ಕೆಳಗೆ ಕ್ರಮಿಸಿ ಪಾದದ ಮೇಲೆ ಬಂದು ನಿಂತು ಬಿಟ್ಟಿತು. ಅಷ್ಟೇ. ಅವಳಿಗೇ ಗೊತ್ತಿಲ್ಲದಂತೆ ಜಯಮಾಲಾಳ ಕಣ್ಣು ಇಷ್ಟಗಲವಾಯಿತು. ಗಾಬರಿ, ಹೆದರಿಕೆ, ಆತಂಕ ಇತ್ಯಾದಿಗಳ ಮಿಶ್ರಣದಂತಿದ್ದ ಲುಕ್ ಆಕೆಯ ಮುಖದ ಮೇಲೆ ಬಂತು. ಗಂಟಲಿನಾಳದಿಂದ ಒಂದು ಭಯಾನಕ ಚೀತ್ಕಾರ ಜನ್ಮತಾಳಿತು ಆದರೆ ಹೊರಬೀಳಲಿಲ್ಲ. ಮುಂದೆ ನಿಂತ ಆಕೃತಿ ಜಯಮಾಲಾ ಕಡೆಗೆ ಬೆನ್ನು ಮಾಡಿ ನಿಂತಿದ್ದರೂ ಪಾದಗಳು ಮಾತ್ರ ಜಯಮಾಲಾಳ ಕಡೆಗೇ ಮುಖ ಮಾಡಿ ನಿಂತಿದ್ದವು! ಥೇಟ್ ದೆವ್ವಗಳ ಪಾದಗಳು ಉಲ್ಟಾ ಇರುತ್ತವೆ ಅನ್ನುತ್ತಾರಲ್ಲ ಹಾಗೆ. ಪಾದದ ಉಗುರುಗಳಿಗೆ ರಕ್ತವನ್ನೇ ಪೇಂಟ್ ಹೊಡೆದಿದ್ದಾರೋ ಎಂಬಂತೆ ಕೆಂಪು ಬಣ್ಣದ ಚೀಪ್ ನೇಲ್ ಪಾಲಿಶ್ ಬಡಿದುಕೊಂಡಿತ್ತು.

ಇನ್ನೇನು ಜಯಮಾಲಾ ಎದ್ದೆನೋ ಬಿದ್ದೆನೋ ಅಂತ ಅಲ್ಲಿಂದ ಓಡಬೇಕು ಅನುವಷ್ಟರಲ್ಲಿ ಮುಂದೆ ನಿಂತ ಆಕೃತಿ ಗಹಗಹಿಸಿ ನಗತೊಡಗಿತು. ಮುಂದೆ ನಿಂತ ಆಕೃತಿಯ ಕುತ್ತಿಗೆಯೊಂದೇ ಕಿರ್ರ್ss ಅಂತ ಶಬ್ದ ಮಾಡುತ್ತ ಈಕಡೆ ಹೊರಳಿತು. ಬೀಭತ್ಸ ನೋಟ. ಮುಖ ಕಾಣದ ಹಾಗೆ ಮುಖದ ತುಂಬ ಬಿದ್ದುಕೊಂಡಿರುವ ಜಡೆಗಟ್ಟಿರುವ ಬಿಳಿಯ ಕೂದಲು, ಅಲ್ಲಿ ಇಲ್ಲಿ ಕಾಣುತ್ತಿದ್ದ ಒಂದಿಷ್ಟು ಸುಕ್ಕುಗಟ್ಟಿದ ಮುಖ. ವಿಕಾರವಾಗಿ ಹೊರಗೆ ಚಾಚಿಕೊಂಡಿದ್ದ ನಾಲಿಗೆ. ಮೊದಲು ಪಾದ, ಈಗ ಮುಖ ಮಾತ್ರ ಮುಂದಕ್ಕೆ. ಬೆನ್ನು ಮಾತ್ರ ಹಾಗೆಯೇ ಇತ್ತು. ದೆವ್ವ. ಸಂಶಯವೇ ಇಲ್ಲ. ದೆವ್ವ. ಆದರೆ ಯಾರ ದೆವ್ವ?

'ಜಯೂ, ಜಯಕ್ಕಾ. ನಾನವಾ. ನಾನು ಲಿಂಗವ್ವ. ನಿನ್ನ, ನಿಮ್ಮಕ್ಕನ್ನ ಸಣ್ಣ ಇದ್ದಾಕಿಂದ ಸಾಕಿದಾಕಿ ನಾ. ಅಷ್ಟು ಪ್ರೀತಿಯಿಂದ ನಿಮ್ಮನ್ನೆಲ್ಲ ಸಾಕಿ, ದೊಡ್ಡ ಮಾಡಿ, ನಿಮ್ಮ ಮನಿಮಂದಿಯೊಳಗ ನಾನೂ ಒಬ್ಬಾಕಿ ಆಗಿ ಎಷ್ಟು ಸೇವಾ ಮಾಡಿಕೊಂಡು ಎಷ್ಟು ಆರಾಮ ಇದ್ದೆ. ನೀನು ನನ್ನ ಮಗಳಿಗಿಂತಲೂ ಹೆಚ್ಚು.  ನೀ ಹಾದಿ ತಪ್ಪಬಾರದು. ಆದ್ರ ಹುಚ್ಚು ಹರೆಯ ಬಂದೈತಿ. ನನ್ನ ಜಯೂ ಏನೇನೋ ತಪ್ಪು ಮಾಡಾಕತ್ತೈತಿ ಅಂತ ನನ್ನ ಹೊಟ್ಟಿ ಉರಿದು, ಏನೋ ಒಂದು ಮಾತು ನಿಮ್ಮ ಅಪ್ಪಾರಿಗೆ ಹೇಳಿದ್ರ ನನ್ನ ಕೊಂದೇ ಒಗೆದು ಬಿಟ್ಟರಲ್ಲವಾ. ಕೊಂದೇ ಬಿಟ್ಟಿರಿ. ನಾ ಏನು ಮಾಡಿದ್ದೆ ನೀವು ಕೊಲ್ಲೋವಂತಾದ್ದು? ಹಾಂ?' ಅಂದ ಆ ಆಕೃತಿ ವಿಕೃತ ಧ್ವನಿಯಲ್ಲಿ ಗೋಳಿಡುತ್ತ, ಕೈ ಮುಂದೆ ಮಾಡುತ್ತ ಜಯಮಾಲಾಳ ಕುತ್ತಿಗೆಗೆ ಕೈ ಹಾಕಲು ಬಂದೇ ಬಿಟ್ಟಿತು.

'ಲಿಂ.... ಲಿಂ..... ಲಿಂಗ......ವಾ ...... ಲಿಂಗವ್ವಾ...... ನೀನು! ಇಲ್ಲೆ! ಈಗ!' ಅಂತ ಒಂದು ದೊಡ್ಡ ಚೀತ್ಕಾರ ಜಯಮಾಲಾಳ ಬಾಯಿಂದ ಬಿದ್ದಿದ್ದೇ ಕೊನೆ. ಆಕೆಯೂ ಪ್ರಜ್ಞೆ ತಪ್ಪಿ ಬಿದ್ದೇ ಬಿಟ್ಟಳು. ಮುಂದೆ ಆಕೆಗೇನೂ ನೆನಪಿಲ್ಲ. ನಾಯಿಯಲ್ಲಿ ಸ್ವಾಮಿರಕ್ಷಣೆ instinct ಜಾಗೃತವಾಗಿದೆ. ಒಡತಿಗೆ ಏನಾಯಿತೋ ಏನೋ ಅಂತ ನಾಯಿ ಬನ್ನಿ ಆ ಆಕೃತಿಗೆ ಕಚ್ಚಲು ಹೋಯಿತು.

'ಬಾರಲೇ ಬಾ ನಾಯಿ ಸೂಳಿಮಗನೇ!' ಅಂತ ಚಿಕ್ಕ ಪಮೇರಿಯನ್ ನಾಯಿಯನ್ನು ಕುತ್ತಿಗೆ ಹಿಡಿದು ಎತ್ತಿದ ಲಿಂಗವ್ವನ ದೆವ್ವ ಕುಂಯ್ ಕುಂಯ್ ಅನ್ನುತ್ತಿದ್ದ ನಾಯಿಯ ಕುತ್ತಿಗೆಯನ್ನು ಲಟಕ್ ಅಂತ ಮುರಿಯಿತು. ಮುಖದ ಮೇಲೆ ಹರಡಿಕೊಂಡಿದ್ದ ಕೂದಲು ಈಚೆಗೆ ಸರಿಸಿಕೊಂಡಿತು. ಮುಂದಿನ ಭೀಕರ ದೃಶ್ಯ ನೋಡಲು ಜಯಮಾಲಾಳಿಗೆ ಎಚ್ಚರ ಇರಲಿಲ್ಲ. ಲಿಂಗವ್ವನ ಬಾಯಿಯಿಂದ ಅನಾಮತ್ತ ಹೊರಗೆ ಬಿದ್ದಿದ್ದು ಎರಡು ದೊಡ್ಡ ಚೂಪನೇ ಕೋರೆ ಹಲ್ಲುಗಳು. ಸತ್ತು ಬಿದ್ದಿದ್ದ ನಾಯಿ ಬನ್ನಿಯ ಕೊರಳಿಗೆ ಕೋರೆ ಹಲ್ಲುಗಳನ್ನು ನುಗ್ಗಿಸಿತು ಲಿಂಗವ್ವನ ದೆವ್ವ. ಕುತ್ತಿಗೆಯ ರಕ್ತನಾಳಗಳಿಗೆ ಬರೋಬ್ಬರಿ ತೂತು ಮಾಡಿರಬೇಕು ಕೋರೆ ಹಲ್ಲುಗಳು. ಬಿಸಿ ಬಿಸಿ ರಕ್ತ ಹರಿದುಬಂತು. ಪ್ರವಾಹದ ರೀತಿಯಲ್ಲಿ ಹೊರಬಿದ್ದ ನಾಯಿ ರಕ್ತವನ್ನು ಪಚಪಚ ಕುಡಿಯಿತು ಲಿಂಗವ್ವನ ದೆವ್ವ. ಒಂದೇ ಘಳಿಗೆಯಲ್ಲಿ ಅಷ್ಟೂ ರಕ್ತ ಕುಡಿದು, ಗಹಗಹಿಸಿ ನಕ್ಕಿತು. ರಕ್ತದಿಂದ ಕೆಂಪಾಗಿದ್ದ ಕೋರೆ ಹಲ್ಲುಗಳನ್ನು ಒಳಗೆ ಎಳೆದುಕೊಂಡು, ಕೇಕೆ ಕೇಕೆ ಹಾಕುತ್ತ, ಸತ್ತ ನಾಯಿಯ ಕಳೇಬರವನ್ನು ಎತ್ತಿ ಮೇಲೆ ಬೀಸಾಡಿತು. ಚೆಂಡಿನಂತೆ ಮೇಲೆ ಹೋದ ನಾಯಿ ಕಳೇಬರ ರೊಯ್ಯಂತ ಕೆಳಗೆ ಬಂದು ಬರೋಬ್ಬರಿ ಜಯಮಾಲಾಳ ಪಕ್ಕಕ್ಕೇ ಬಿತ್ತು. ದೂರದಿಂದ ಗಮನಿಸುತ್ತಿದ್ದ ಪಾರ್ಕ್ ಪೋಲೀಸ್ ಒಬ್ಬನಿಗೆ ಆದ ಇಷ್ಟೂ ಘಟನೆಗಳಲ್ಲಿ ಎಷ್ಟು ಕಂಡಿತೋ ಗೊತ್ತಿಲ್ಲ. ಆದರೂ ಏನೋ ಕಂಡಿರಲೇ ಬೇಕು. ಅದಕ್ಕೇ ತನ್ನ ಗಾಲ್ಫ್ ಕಾರ್ಟ್ ತರಹದ ಚಿಕ್ಕ ಕಾರಿನಲ್ಲಿ ಬಂದೇ ಬಿಟ್ಟ. ಬಂದವನಿಗೆ ಕಂಡಿದ್ದು ಕೊಳದ ಮೇಲೆ ಬಿದ್ದಿದ್ದ ಮಹಿಳೆ, ಪಕ್ಕದಲ್ಲಿ ರಕ್ತಸಿಕ್ತ ನಾಯಿಯ ಶವ. ಅವನು ಈ ಕಡೆ ಗಮನಿಸುತ್ತಿದ್ದರೆ ಆಕಡೆ ಲಿಂಗವ್ವನ ದೆವ್ವ ಕೊಳದಲ್ಲಿ ಲೀನವಾಗುತ್ತಿತ್ತು. ಅದರ ಹಿಂದೆಯೇ ಒಂದು ಮಂಜಿನ ಹಾದಿ, ಹೊಗೆಯ ಸುಂಟರಗಾಳಿ ಕೂಡ. ಅದನ್ನು ಮಾತ್ರ ಪಾರ್ಕ್ ಪೋಲೀಸ್ ನೋಡಲಿಲ್ಲ. ಅವನು ತನ್ನ ವಾಕಿ ಟಾಕಿಯಲ್ಲಿ ಕಂಟ್ರೋಲ್ ರೂಮಿಗೆ ಮಾತಾಡಿ ಅಂಬುಲೆನ್ಸ್ ಕಳಿಸಲು ಕೇಳುತ್ತಿದ್ದ.

***

ಭಾಗ -೨. ಪ್ರೊ. ಬಿ. ಬಾಗೇವಾಡಿ. ಬೆಂಗಳೂರು.

ಅವರು ಪ್ರೊಫೆಸರ್ ಬಿ. ಬಾಗೇವಾಡಿ. ಬಸವಣ್ಣೆಪ್ಪ ಬಾಗೇವಾಡಿ ಅಂತ. ಅದೇಕೋ ಇನ್ನೊಂದು ಇನಿಶಿಯಲ್ ಆಗಿ ಅವರು ಅಪ್ಪನ ಹೆಸರಾದ ಬಲವಂತಪ್ಪ ಅನ್ನುವದರ ಮತ್ತೊಂದು ಬಿ ಸೇರಿಸಿಕೊಂಡು ಬಿ.ಬಿ. ಬಾಗೇವಾಡಿ ಆಗಿಲ್ಲ. ಯಾಕೋ ಏನೋ. ಮೊದಲಿಂದಲೂ ಪ್ರೊ. ಬಿ. ಬಾಗೇವಾಡಿ ಅಂತಲೇ ಖ್ಯಾತರು. ಇವರು ಯಾರು ಅಂದರೆ ಮೇಲೆ ದೆವ್ವ ನೋಡಿ ಎಚ್ಚರ ತಪ್ಪಿ ಬಿದ್ದ ಜಯಮಾಲಾಳ ಖಾಸಾ ತಂದೆ.

ಪ್ರೊ. ಬಾಗೇವಾಡಿ ಅಂದರೆ ಖತರ್ನಾಕ್. ಸಿಕ್ಕಾಪಟ್ಟೆ ಪ್ರತಿಭಾವಂತರು. ಮೇಲಿಂದ ಸಿಕ್ಕಾಪಟ್ಟೆ ರೂಪವಂತರೂ ಕೂಡ. ಎತ್ತರಕ್ಕೆ, ಸ್ಲಿಮ್ಮಾಗಿ, ಕೆಂಪಕೆಂಪಗೆ ಇದ್ದರು. ಅರವತ್ತರ ದಶಕದಲ್ಲೇ ಇಂಗ್ಲೆಂಡ್, ಅಮೇರಿಕಾ, ಆಫ್ರಿಕಾ, ಆಸ್ಟ್ರೇಲಿಯ ಅಂತ ಹೇಳಿ ಅವರು ಹೋಗಿ, ಇದ್ದು, ತಿರುಗಾಡಿ ಬರದ ದೇಶಗಳಿಲ್ಲ. ಕೆಲವೊಂದು ದೇಶಗಳಲ್ಲಿ ನಾಲ್ಕಾರು ವರ್ಷ ಇದ್ದು ಕೂಡ ಬಂದಿದ್ದರು. ದೊಡ್ಡ ಸಂಶೋಧಕರು. ಧಾರವಾಡಕ್ಕೆ ಬಂದು ಪೂರ್ಣ ಪ್ರಮಾಣದ ಪ್ರೊಫೆಸರ್ ಆದ ಮೇಲೂ ಅವರು ವರ್ಷಕ್ಕೆ ಕಮ್ಮಿ ಕಮ್ಮಿ ಅಂದರೂ ಮೂರ್ನಾಲ್ಕು ತಿಂಗಳು ವಿದೇಶದಲ್ಲಿಯೇ ಇರುತ್ತಾರೆ.

ವಿದೇಶಿ ಪ್ರಭಾವವೋ ಏನೋ ಗೊತ್ತಿಲ್ಲ. ಪ್ರೊ. ಬಾಗೇವಾಡಿ ಮೊದಲಿಂದ ತುಂಬ ಸ್ವೇಚ್ಚಾ ಸ್ವಭಾವದವರು. ವಿದ್ಯೆ, ಬುದ್ಧಿ, ರೂಪ ಎಲ್ಲ ಇದ್ದ ಮೇಲೆ ಸ್ವೇಚ್ಚಾಚಾರ ಸಹಿತ ಇದ್ದುಬಿಟ್ಟರೆ ಕೇಳಬೇಕೇ? ಅವರ ಸುತ್ತ ಮುತ್ತ ಸಖಿಯರೇ ಸಖಿಯರು. ಅವರು ಮಹಿಳೆಯರ ಮೇಲೆ ಬಿದ್ದು ಹೋಗುವ ಪ್ರಶ್ನೆಯೇ ಇಲ್ಲ. ಅವರೇ ಮೈಮೇಲೆಯೇ ಬಿದ್ದು ಬರುತ್ತಿದ್ದರು. ಸಹೋದ್ಯೋಗಿಗಳಲ್ಲೇ ಎರಡು ಮೂರು ಮಹಿಳೆಯರ ಜೊತೆ ಅಫೇರ್ ಗಿಟ್ಟಿಸಿ, ಆರಾಮವಾಗಿ ಅವನ್ನು ದಕ್ಕಿಸಿಕೊಂಡಿದ್ದು ಅವರ ಸಾಮರ್ಥ್ಯಕ್ಕೆ ಒಂದು ನಿದರ್ಶನ. ಮತ್ತೆ ತಮ್ಮ ಕೆಳಗೆ ಓದುತ್ತಿದ್ದ ಸುಂದರ ವಿದ್ಯಾರ್ಥಿನಿಯರನ್ನು ತಿನ್ನದೇ ಬಿಟ್ಟವರೇ ಅಲ್ಲ ಅವರು. ಆದರೆ ನಮ್ಮ ಪ್ರೊಫೆಸರ್ ಬಾಗೇವಾಡಿ ಅವರ ಕುರಿತು ಒಂದು ಮಾತು ಹೇಳಲೇ ಬೇಕು. ಅವರೆಂದೂ ಮಹಿಳೆಯರನ್ನು ಶೋಷಿಸಿ, ಯಾವದೋ ಕಷ್ಟದಲ್ಲಿ ಸಿಕ್ಕಿಸಿ, ಹುರಿದು ಮುಕ್ಕಿದ ಮಾಸ್ತರ್ ಮಂದಿ ತರಹದವರು ಮಾತ್ರ ಅಲ್ಲವೇ ಅಲ್ಲ. ಸುರಸುಂದರಾಂಗ ಪ್ರೊ. ಬಾಗೇವಾಡಿ ಬೀಳಬಹುದಾದ ಮೀನಿಗಾಗಿ ಬಲೆ ಹಾಕಿಕೊಂಡು ಕೂಡುತ್ತಿದ್ದರು. ಎಷ್ಟೋ ಸಲ ತಾವಾಗೇ ಮೀನು ಬಲೆಗೆ ಬಂದು ಬಿದ್ದು,  ಸ್ವಂತ ಇಚ್ಛೆಯಿಂದ ಫಿಶ್ ಫ್ರೈ ಆಗಿ ಹೋಗುತ್ತಿದ್ದವು. ಅಂತವರನ್ನು ಮಾತ್ರ ಬಾಗೇವಾಡಿ ಪುಷ್ಕಳವಾಗಿ ತಿಂದು, ತೇಗಿ, ಹೊಟ್ಟೆ ಮೇಲೆ ಕೈಯಾಡಿಸುತ್ತಿದ್ದರು. ಹೊಟ್ಟೆ ಮಾತ್ರ ಪರ್ಫೆಕ್ಟ್ ಸಪಾಟ. ಅಷ್ಟು ಸಕತ್ತಾಗಿ ದೇಹ ಕಾದಿಟ್ಟುಕೊಂಡು ಬಂದಿದ್ದರು ಅವರು. ಇಂತಹ ಪ್ರೊ. ಬಾಗೇವಾಡಿಗೆ ಒಂದು ಅಧಿಕೃತ ಧರ್ಮ ಪತ್ನಿ ಇಬ್ಬರು ಪುತ್ರಿಯರು. ಜಯಮಾಲಾ ಮತ್ತು ಆಕೆಯ ಅಕ್ಕ. ಪುತ್ರಿಯರಿಬ್ಬರೂ ಮದುವೆಯಾಗಿ ಅಮೇರಿಕಾದಲ್ಲಿ ನೆಲೆಸಿದ್ದಾರೆ.

ಹೀಗೆ ಅಪ್ಪನೇ ಇಷ್ಟು ಬಿಂದಾಸ್ ಸ್ವಭಾವದವರು ಅಂತಾದ ಮೇಲೆ ಮಕ್ಕಳು ಬೇರೆ ಯಾವ ತರಹ ತಾನೇ ತಯಾರಾದಾರು? ಮತ್ತೆ ಹೇಳಿ ಕೇಳಿ ವಿದೇಶಗಳಲ್ಲಿ ಇದ್ದು, ಸಿಕ್ಕಾಪಟ್ಟೆ liberal ಮನೋಭಾವ ಬೇರೆ ಬೆಳೆಸಿಕೊಂಡು ಬಂದು ಬಿಟ್ಟಿದ್ದರು ಪ್ರೊಫೆಸರ್. ಹಾಗಾಗಿ ಜಯಮಾಲಾ ಮತ್ತು ಅವರ ಅಕ್ಕನಿಗೆ ಯಾವದೇ ತರಹದ ನಿರ್ಬಂಧ ಹೇರದೇ ಹಾಯಾಗಿರಲು ಬಿಟ್ಟು ಬಿಟ್ಟಿದ್ದರು. ಚಡ್ತಿ ಜವಾನಿಗೆ ಬಂದ ಹುಡುಗಿಯರು. ಲಂಗವೂ ಇಲ್ಲ. ಲಂಗೂ ಇಲ್ಲ. ಲಗಾಮೇ ಇಲ್ಲ. ಮೇಲೆ ತಂದೆತಾಯಿಂದ ಬಂದಂತಹ ರೂಪ, ಲಾವಣ್ಯ. ಖರ್ಚು ಮಾಡಲು ಕೈತುಂಬ ರೊಕ್ಕ. ಹೆಣ್ಣುಮಕ್ಕಳು ಹಾಳಾಗಲು ಮತ್ತೇನು ಬೇಕು? ಜಯಮಾಲಾಳ ಅಕ್ಕನ ಜಮಾನಾ ಮುಗಿದಿತ್ತು. ಆಕೆ ಸಹ ಸಾಕಷ್ಟು ರಂಗರಲಿಯಾ ಮಾಡಿ, ಅರ್ಧ ಡಜನ್ ಹುಡುಗರನ್ನು ಬೋಳಿಸುವಷ್ಟು ಬೋಳಿಸಿ, ಒಂದಿಬ್ಬರ ಜೊತೆ 'ಸುಹಾಗ್ ರಾತ್' (ಪ್ರಸ್ತ) ಸಹ ಮುಗಿಸಿ, ಎಲ್ಲರಿಗೂ ನಾಮ ಹಾಕಿ, ಕೊನೆಗೆ ಮನೆಯವರು ನೋಡಿ ಮಾಡಿಸಿದ ಒಳ್ಳೆ ವರನೊಂದಿಗೆ ಮದುವೆಯಾಗಿದ್ದಳು. ಸ್ಪಿನ್ ಬಾಲರ್ ಕೈಯಲ್ಲಿ ಫಾಸ್ಟ್ ಬಾಲರುಗಳು ಮೊದಲು ಉಪಯೋಗಿಸಿ ಕೊಟ್ಟಂತಹ ಹಳೆಯ ಚೆಂಡಿನಂತೆ ಆಗಿ ಅಮೇರಿಕಾ ಸೇರಿಕೊಂಡಿದ್ದಳು. ನಂತರದ್ದೇ ತಂಗಿ ಜಯಮಾಲಾನ ಜಮಾನಾ. ಅಕ್ಕನ ಹಾದಿಯಲ್ಲಿಯೇ ನಡೆದು ಹೊರಟಿದ್ದಳು ಜಯಮಾಲಾ.

'ಹದಿನಾರರ ವಯಸ್ಸು. ಅದು ಹುಚ್ಚು ಖೋಡಿ ಮನಸ್ಸು,' ಅನ್ನುವಂತೆ ಜಯಮಾಲಾಳ ಪರಿಸ್ಥಿತಿ. ರೂಪ, ಯವ್ವನ, ಸ್ವೇಚ್ಛೆ - ಇದು ಅತ್ಯಂತ deadly combination. ಅದಕ್ಕೆ ತಕ್ಕಂತೆ ಪಿಯೂಸಿ ಮೊದಲನೇ ವರ್ಷ. ಕಾಲೇಜು ಬೇರೆ. ಶಾಲೆಯ ನಿರ್ಬಂಧನೆಗಳು ಇಲ್ಲ. ಬೇಕಾದ ಹಾಗೆ ಡ್ರೆಸ್ ಮಾಡಿಕೊಂಡು, ಪ್ರೊ. ಬಾಗೇವಾಡಿ ಪ್ರೀತಿಯ ಮಗಳಿಗೆ ಅಂತ ತೆಗೆದುಕೊಟ್ಟಿದ್ದ ಮೊಪೆಡ್ ಮೇಲೆ ಊರೆಲ್ಲ ಸುತ್ತಾಡಿಕೊಂಡು, ಚಂದ ಕಂಡ ಪಡ್ಡೆ ಹುಡುಗರಿಗೆ ಪಿಕಿ ಪಿಕಿ ಸಿಗ್ನಲ್ ಕೊಟ್ಟು, ಪಡ್ಡೆ ಹುಡುಗರ ಒಂದು ಚಿಕ್ಕ ಸೈನ್ಯವೇ ಆಕೆಯ ಹಿಂದೆ ಬೀಳುವಂತೆ ಮಾಡಿಕೊಂಡು, ಅದರಲ್ಲೇ ಏನೋ ಒಂದು ತರಹದ ಆನಂದ ಕಾಣುತ್ತಿದ್ದಳು ಜಯಮಾಲಾ. ಹರೆಯಕ್ಕೆ ಬಂದ ಕುದುರೆ ಸ್ವಲ್ಪ ಜಾಸ್ತಿಯೇ ಕೆನೆಯುತ್ತಿತ್ತು. ಜಿಗಿದು ಜಿಗಿದು ಓಡುತ್ತಿತ್ತು. ಛಂಗ ಛಂಗ ನೆಗೆಯುತ್ತಿತ್ತು.

ಅವನು ಸಂದೀಪ ಬಾಂದೇಕರ. ಆಗ ಅವನಿಗೆ ಸುಮಾರು ಇಪ್ಪತ್ನಾಲ್ಕು ವರ್ಷ ವಯಸ್ಸಾಗಿತ್ತು. ಅದೆಷ್ಟು ವರ್ಷಗಳಿಂದ ಬಿಎ ಮಾಡುತ್ತ ಕುಳಿತು ಬಿಟ್ಟಿದ್ದನೋ ಆ ಪುಣ್ಯಾತ್ಮ. ಶುದ್ಧ ಪಡ್ಡೆ ಹುಡುಗ. ಮೇಲಿಂದ ಶ್ರೀಮಂತರ ಮನೆಯ ಸುಂದರ ಹುಡುಗ. ಮೇಲಿಂದ ಕ್ರೀಡಾಪಟು. ಆಗಲೇ ಸುಮಾರು ಮಂದಿ ಕನ್ಯೆಯರು ಅವನ ಮುಂದೆ ಪರೇಡ್ ಮಾಡಿ ಹೋಗಿದ್ದರು. ಅವನೂ ಯಾರನ್ನೂ ಖಾಯಂ ಅಂತ ಹಿಡಿದಿಟ್ಟುಕೊಳ್ಳದೇ, ತನ್ನ ಕೆಲಸ ಮುಗಿದ ಮೇಲೆ ಬೈ ಬೈ ಹೇಳಿ ಕಳಿಸುತ್ತಿದ್ದ. Wham! Bam! Thank you ma'am! -  'ಬನ್ನಿ, ಬಾರಿಸುತ್ತೇನೆ, ಧನ್ಯವಾದ' ಅನ್ನುವ ಮಾತನ್ನು ಅಕ್ಷರಶ ಪಾಲಿಸಿಕೊಂಡು ಬಂದಿದ್ದ.

ಅಂತವನ ಕಣ್ಣಿಗೆ ಬಿದ್ದವಳೇ ಜಯಮಾಲಾ ಬಾಗೇವಾಡಿ ಅನ್ನುವ ನಮ್ಮ ಕಥಾ ನಾಯಕಿ. ಮೊದಲೇ ಸಿಕ್ಕಾಪಟ್ಟೆ ಫಾರ್ವರ್ಡ್ ಹುಡುಗಿ. ಸಂದೀಪ ಬಾಂದೇಕರ ಕಾಳು ಹಾಕಿದ್ದೇ ಹಾಕಿದ್ದು ಈಕೆಯೂ ರೈಟ್ ಅಂದು ಬಿಟ್ಟಳು. ನಂತರ ಅವರಿಬ್ಬರೂ ಜೋಡಿ ಅಂತ ಖಾತ್ರಿಯಾಗಿ, ಹಾಗೆಯೇ ಪ್ರಸಾರ ಕೂಡ ಆಗಿಹೋಯಿತು. ನಂತರ ಆಕೆಯ ಹಿಂದೆ ಬಂದ ನಾಲ್ಕಾರು ಹುಡುಗರನ್ನು ಬಾಂದೇಕರ ತನ್ನ ರೌಡಿ ಗ್ಯಾಂಗ್ ಉಪಯೋಗಿಸಿಕೊಂಡು ಬರೋಬ್ಬರಿ ಸ್ಕ್ರಾಪ್ ಮಾಡಿ ಹಾಕಿದ ಮೇಲೆ ಜಯಮಾಲಾಳನ್ನು, ತೊನೆಯುತ್ತಿದ್ದ ಆಕೆಯ ಜವಾನಿಯನ್ನು ದೂರದಿಂದ ನೋಡಿ ಜೊಲ್ಲು ಸುರಿಸಿದ ಮಂದಿ ಇದ್ದರೇ ಹೊರತೂ ಹತ್ತಿರಕ್ಕೆ ಬಂದು ಹಾಯ್ ಹಲೋ ಅಂದ ಮಂದಿ ಇರಲೇ ಇಲ್ಲ. ಅಲ್ಲಿಂದ ಆಕೆ ಬಾಂದೇಕರ ಸಂದ್ಯಾನ ಮಾಲು.

ದಿನಾ ಸಂಜೆ ಬಾಂದೇಕರ ಮತ್ತು ಜಯಮಾಲಾ ಭೆಟ್ಟಿಯಾಗುತ್ತಿದ್ದರು. ಬರೋಬ್ಬರಿ ಐದೂವರೆ ಹೊತ್ತಿಗೆ ಚಕಾಚಕ್ ಸಿಂಗಾರ ಮಾಡಿಕೊಂಡು ಅಪ್ಸರೆಯಂತೆ ಕಂಗೊಳಿಸುತ್ತ ತಯಾರಾದ ಜಯಮಾಲಾ ತನ್ನ ಮೊಪೆಡ್ ಹತ್ತಿ ಹೊರಟು ಬಿಡುತ್ತಿದ್ದಳು. ಅಲ್ಲೇ ಮನೆ ಹತ್ತಿರ, ಸ್ವಲ್ಪ ಕೆಳಗೆ ಒಂದು ದೊಡ್ಡ ಅಕೇಸಿಯಾ ಮರಗಳ ತೋಪು ಇತ್ತು. ಅಲ್ಲಿಯೇ ಆಕೆಯ ಮಾಲ್ ಬಾಂದೇಕರ ಬಂದು, ತನ್ನ ಆ ಕಾಲದ ಮಹಾ ದೊಡ್ಡ ಆಕರ್ಷಣೆಯಾಗಿದ್ದ ಯಮಹಾ - ೩೫೦ ಬೈಕ್ ಸ್ಟಾಂಡ್ ಹಚ್ಚಿಕೊಂಡು, ಸ್ಟೈಲಾಗಿ ಸಿಗರೇಟು ಸೇದುತ್ತ ನಿಂತಿರುತ್ತಿದ್ದ. ಪರಮ ದುಬಾರಿ, ಮೆಂಥಾಲ್ ಸುವಾಸನೆಯಿದ್ದ, ಚಾಕಲೇಟ್ ಬಣ್ಣದ, ಉದ್ದದ ಮೋರ್ ಸಿಗರೇಟ್ ಅವನ ಬ್ರಾಂಡ್. ಹಾಗೆಲ್ಲ ಸ್ಟೈಲ್ ಮಾಡದಿದ್ದರೆ ಅವನು ಹೊಸ ಹೊಸ ಮಾಲು ಪಟಾಯಿಸುವದು ಹೇಗೆ?

ಅಕೇಸಿಯಾ ತೋಪಿನೊಳಗೆ ಹೊಕ್ಕ ಜೋಡಿ ಹಕ್ಕಿಗಳು ಏನೇನು ಕಿತಾಪತಿ ಮಾಡುತ್ತಿದ್ದವೋ ಏನೋ? ನೋಡಿದವರು ಯಾರು? ತಾಸುಗಟ್ಟಲೆ ಅವರಿಬ್ಬರ ಮೊಪೆಡ್ ಮತ್ತು ಬೈಕ್ ಗಳನ್ನು ತೋಪಿನ ಹೊರಗೆ ನೋಡಿದ ಮಂದಿ ಅವರವರ ಊಹೆಗೆ ತಕ್ಕಂತೆ ಏನೇನೋ ಮಾತಾಡುತ್ತಿದ್ದರು. 'ಒಟ್ಟಿನಲ್ಲಿ ಬಾಂದೇಕರ ಸಂದ್ಯಾ ಮತ್ತು ಬಾಗೇವಾಡಿ ಜಯಾಂದು ಮಸ್ತ ಡಿಂಗ್ ಡಾಂಗ್ ನಡದೈತಿ,' ಅಂತ ಮಾತ್ರ ಎಲ್ಲ ಕಡೆ ಸುದ್ದಿ. ಗುಸು ಪುಸು ಗಾಳಿ ಸುದ್ದಿ.

ಆದರೆ ಅವರಿಬ್ಬರ ಮಧ್ಯೆ ನಿಜವಾಗಿ ನಡೆಯುತ್ತಿದ್ದನ್ನು ನೋಡಿ ಬೆಚ್ಚಿಬಿದ್ದವಳು ಒಬ್ಬಳಿದ್ದಳು. ಆಕೆಯೇ ಮನೆಯ ಕೆಲಸದ ಹೆಂಗಸು ಲಿಂಗವ್ವ. ಸುಮಾರು ನಲವತ್ತೈದು ಐವತ್ತು ವರ್ಷದ ಖಡಕ್ ಜವಾರಿ ಹೆಣ್ಣುಮಗಳು. ಬಿಜಾಪುರ ಕಡೆಯವಳು. ಪ್ರೊ. ಬಾಗೇವಾಡಿ, ಅವರ ಪತ್ನಿ ಎಲ್ಲ ಆಕಡೆಯವರೇ ನೋಡಿ. ಪ್ರೊ. ಬಾಗೇವಾಡಿಯ ಮಾವ ತಮ್ಮ ಮಗಳ ಮದುವೆಯ ನಂತರ  ಮಗಳ ಸಹಾಯಕ್ಕೆ ಇರಲಿ ಅಂತ ಲಿಂಗವ್ವನನ್ನು ಕಳಿಸಿಕೊಟ್ಟಿದ್ದರು. ಅಂದಿನಿಂದ ಆಕೆ ಪ್ರೊ. ಬಾಗೇವಾಡಿ ಮನೆಯವಳೇ ಆಗಿ ಹೋಗಿದ್ದಳು.

ಅವತ್ತೇನೋ ಒಂದು ದಿವಸ ಲಿಂಗವ್ವ ಮನೆ ಹತ್ತಿರದ ಅಕೇಸಿಯಾ ತೋಪಿನ ಒಳಗಿನ ಹಾದಿಯಲ್ಲಿ ನಡೆದುಕೊಂಡು ಬರುತ್ತಿದ್ದಳು. ಆಗ ಕಂಡಿದ್ದಾರೆ ಮನೆ ಮಗಳು ಜಯಮಾಲಾ ಮತ್ತು ಆಕೆಯ ಬಾಯ್ ಫ್ರೆಂಡ್ ಬಾಂದೇಕರ. ಕೇವಲ ಕಂಡಿದ್ದರೆ ಅಷ್ಟು ಥಂಡಾ ಹೊಡೆಯುತ್ತಿರಲಿಲ್ಲವೇನೋ ಕೆಲಸದ ಲಿಂಗವ್ವ. ಕ್ರೀಡಾಪಟು ಬಾಂದೇಕರ ಜೋರಾಗಿ 'ಕ್ರೀಡೆ' ಶುರುಮಾಡಿಕೊಂಡಿದ್ದ. ಜಯಮಾಲಾಳ ಬಿಡಬಾರದ ಜಾಗದಲ್ಲಿ ಕೈಬಿಟ್ಟು, ಕೈಗೆ ಸರಿಯಾಗಿ ಕೆಲಸ ಕೊಟ್ಟು, ಜಯಮಾಲಾಳ ಜೊತೆ ಲಲ್ಲೆ ಹೊಡೆಯುತ್ತ ಕೂತಿದ್ದ. ಮಾತು ಬೇಸರವಾದಾಗೊಮ್ಮೆ ತುಟಿಗಳು ತುಟಿಗೆ ಬೆಸೆದುಕೊಂಡು ಮೌನಕ್ಕೆ ಒಂದು ಅರ್ಥ, ಸಂತೋಷದಿಂದ ಹೊರಹೊಮ್ಮುತ್ತಿದ್ದ ನರಳುವಿಕೆಗಳಿಗೆ ಬೇರೆಯೇ ಅರ್ಥ ತಂದು ಕೊಡುತ್ತಿದ್ದವು. ಇದೆಲ್ಲವನ್ನೂ ನೋಡಿದ ಲಿಂಗವ್ವ, 'ಯವ್ವಾ! ಏನು ಮಾಡಾಕತ್ಯಾಳ ನಮ್ಮ ಹುಡುಗಿ!? ಯಾರವಾ ಈ ಭಾಡ್ಕೋ!' ಅಂತ ಅಂದುಕೊಂಡು ಸಿಟ್ಟಿಗೆದ್ದಿದ್ದಳು. ಬೇರೆ ಯಾರೋ ಆಗಿದ್ದರೆ ಹೋಗಿ ನಾಲ್ಕು ಹಾಕಿ, ಹುಡುಗಿಯನ್ನು ದರ ದರ ಎಳೆದುಕೊಂಡು ಬಂದು ಬಿಡುತ್ತಿದ್ದಳು. ಆದರೆ ಈಕೆ ಮಾಲೀಕರ ಮಗಳು. ತಾನೇ ಎತ್ತಿ, ಆಡಿಸಿ, ಬೆಳೆಸಿದ ಮುದ್ದಿನ ಕೂಸು. ಈ ವಿಷಯದಲ್ಲಿ ಲಿಂಗವ್ವ ದುಡುಕಲಿಲ್ಲ. ಏನೋ ವಿಚಾರ ಮಾಡುತ್ತ ಅಲ್ಲಿಂದ ಹೊರಟು ಬಂದಳು.

ಲಿಂಗವ್ವ ಮನೆಗೆ ಬಂದು ನೋಡಿದರೆ ಪ್ರೊ. ಬಾಗೇವಾಡಿ ಮನೆ ಮುಂದಿನ ಲಾನಿನಲ್ಲಿ ಆರಾಮ್ ಖುರ್ಚಿ ಹಾಕಿಕೊಂಡು ಕೂತು ತಮ್ಮ trademark ಪೈಪ್ ಎಳೆಯುತ್ತ ಕೂತಿದ್ದರು. ಲಿಂಗವ್ವನನ್ನು ಪ್ರೊ. ಬಾಗೇವಾಡಿ ತಮ್ಮ ತಂಗಿಯಂತೆ ನೋಡುತ್ತಿದ್ದರು. ಬೇರೆ ಎಲ್ಲ ಹೆಣ್ಣುಮಕ್ಕಳನ್ನು ತಮ್ಮದೇ ದೃಷ್ಟಿಯಲ್ಲಿ ನೋಡುತ್ತಿದ್ದ ಬಾಗೇವಾಡಿಗೆ ಹಳ್ಳಿಯ ಜವಾರಿ ಟೈಪಿನ ಲಿಂಗವ್ವನನ್ನು ತಂಗಿಯಂತೆ ನೋಡುವದು ಅದಾಗೇ ರೂಢಿಯಾಗಿತ್ತು ಅನ್ನಿ. ಲಿಂಗವ್ವನಿಗೂ ಸಾಹೇಬರು ಅಂದರೆ ಥೇಟ್ ಅಣ್ಣಾವರೇ.

'ಏ ಯಪ್ಪಾ! ನಮ್ಮ ಜಯೂಂದು ಸ್ವಲ್ಪ ಜಾಸ್ತಿನೇ ಆಗೈತಿ ನೋಡೋ ಅಣ್ಣಾ. ಅದು ಯಾವದೋ ಭಾಡ್ಯಾನ ಜೋಡಿ ಜಾಸ್ತಿ ಅಡ್ಯಾಡಾಕ ಹತ್ಯಾಳ. ಏನರೆ ಒಂದೀಟು ಮಾಡು. ಇನ್ನೂ ಸಣ್ಣ ಹುಡುಗಿ. ಮುಂದೆ ಯಾವದರೆ ಒಳ್ಳೆ ಮನಿತನಕ್ಕೆ ಕೊಟ್ಟು ಲಗ್ನಾ ಮಾಡಬೇಕು ಅಂದ್ರ ಇವೆಲ್ಲಾ ಹೊರಗ ಬಂದು ತೊಂದ್ರಿ ತಂದು ಇಡತೈತೋ ಯಪ್ಪಾ. ಇದನ್ನ ಈಗೇ ಬಂದು ಮಾಡಿಸಿ ನಿನ್ನ ಮನಿ ಲಕ್ಷ್ಮಿ ಉಳಿಸಿಕೊಳ್ಳೋ ಯಣ್ಣಾ!' ಅನ್ನುವಷ್ಟರಲ್ಲಿ ಲಿಂಗವ್ವನ ಕಣ್ಣಲ್ಲಿ ನೀರು ಧಾರಾಕಾರ.

ಪ್ರೊ. ಬಾಗೇವಾಡಿ ಅಪ್ರತಿಭರಾದರು. ಪರಿಸ್ಥಿತಿ ಸಿಕ್ಕಾಪಟ್ಟೆ ಗಂಭೀರವಾಗಿದೆ ಅಂತ ಅವರಿಗೆ ಸರಿಯಾಗಿ ಮನದಟ್ಟಾಯಿತು. ಮಗಳಿಗೆ ಬುದ್ಧಿ ಹೇಳೋಣ ಅಂದರೆ ಸಿಕ್ಕಾಪಟ್ಟೆ ತಲೆ ಮೇಲೆ ಏರಿಸಿಕೊಂಡು, ಸಲಿಗೆ ಕೊಟ್ಟು, ಸ್ವೇಚ್ಚಾಚಾರವೇ modernity ಅನ್ನುವ ಮಾದರಿಯಲ್ಲಿ ಬೆಳೆಸಿಬಿಟ್ಟಿದ್ದಾರೆ. ಇವರು ಏನೋ ಒಂದು ಮಾತು ಅಂದು, ಆಕೆ ಮಗಳು ಜಯಮಾಲಾ ಮತ್ತೇನೋ ತಿಳಿದುಕೊಂಡು, ಮೊದಲೇ sensitive ಹುಡುಗಿ ಬೇರೆ, ಏನಾದರೂ ಅವಗಢ ಮಾಡಿಕೊಂಡರೆ ಅಂತ ಚಿಂತೆ. ಅದಕ್ಕೇ ಒಂದು ನಿರ್ಧಾರಕ್ಕೆ ಬಂದರು. ಒಂದು ಕೆಲಸ ಮಾಡಲು ಮುಂದಾದರು. ಅದೇ ಮುಂದೆಲ್ಲ ಆಗುವ ಅನಾಹುತಕ್ಕೆ ಕಾರಣವಾಯಿತೇ?

ಹೇಳಿ ಕೇಳಿ ದೊಡ್ಡ ಪ್ರೊಫೆಸರ್ ಸಾಹೇಬರು. ಊರಿನ ಗಣ್ಯ ವ್ಯಕ್ತಿಗಳಲ್ಲಿ ಒಬ್ಬರು. ಹಾಗಾಗಿ ಎಲ್ಲ ಉನ್ನತ ಅಧಿಕಾರಿಗಳ ಪರಿಚಯ ಇತ್ತು ಬಾಗೇವಾಡಿ ಸಾಹೇಬರಿಗೆ. ಮತ್ತೆ ಜಿಲ್ಲಾ ಪೋಲೀಸ್ ವರಿಷ್ಠನಂತೂ ಅವರ ಖಾಸಂ ಖಾಸ್ ಗೆಣೆಕಾರ. ಇಬ್ಬರೂ ಕೂಡಿಯೇ ಅದೆಷ್ಟು ಬಾಟಲಿ ಎಣ್ಣೆ ಹೊಡೆದು ಮುಗಿಸಿದ್ದರೋ. ಪ್ರತಿ ಸಲ ವಿದೇಶ ಪ್ರವಾಸದಿಂದ ಬರುವಾಗೊಮ್ಮೆ ತಮ್ಮ ಸ್ನೇಹಿತ ಪೊಲೀಸಪ್ಪನಿಗೆ ಒಳ್ಳೊಳ್ಳೆ ಇಂಪೋರ್ಟೆಡ್ ಎಣ್ಣೆ ತಂದು ಕೊಟ್ಟೂ ಕೊಟ್ಟೂ ಸಿಕ್ಕಾಪಟ್ಟೆ ದೋಸ್ತಿ ಇಬ್ಬರಲ್ಲೂ. ಮಗಳಿಗೆ ಬುದ್ಧಿ ಹೇಳಿ ಬಾಂದೇಕರನ ಸಾಂಗತ್ಯದಿಂದ ಬಿಡಿಸುವದರ ಬದಲು ಪೋಲೀಸರ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾದರು. ಫೋನ್ ಎತ್ತಿದವರೇ ತಮ್ಮ ದೋಸ್ತ ಪೋಲೀಸ್ ಸಾಹೇಬನ ಜೊತೆ ಮಾತಾಡಿದರು.

'ಹೀಗೀಗೆ ಆಗಿದೆ. ಮಗಳಿಗೆ ಯಾರೋ ಒಬ್ಬನು ಗಂಟು ಬಿದ್ದಿದ್ದಾನೆ. ಇವಳಿಗೂ ಹುಡುಗು ಬುದ್ಧಿ. ಅರಿವಿಲ್ಲದೆ ದಿನವೂ ಆತನ ಜೋಡಿ ಭೇಟಿ, ಹರಟೆ ಶುರು ಹಚ್ಚಿಕೊಂಡಿದ್ದಾಳೆ. ದಿನಾ ಸಂಜೆ ಅಕೇಸಿಯಾ ತೋಪಿನಲ್ಲಿ ಸಿಗುತ್ತಾರೆ. ಯಾರಾದರೂ ಪೋಲೀಸರಿಬ್ಬರನ್ನು ಕಳಿಸಿ, ಹುಡುಗನಿಗೆ ಬೇಕಾದರೆ ಎರಡು ತಪರಾಕಿ ಕೊಟ್ಟು, ಬೈದು, ಮಗಳ ಸುದ್ದಿಗೆ ಬಂದರೆ ಹುಷಾರ್ ಅಂತ ಜೋರಾಗಿ ಅವಾಜ್ ಹಾಕಿ, ಆ ಹುಡುಗ ಹೆಚ್ಚು ತರ್ಲೆ ಮಾಡಿದರೆ ಅವನನ್ನು ಒದ್ದು ಒಳಗೆ ಹಾಕಿ, ಸರಿಯಾಗಿ ಬುದ್ಧಿ ಕಲಿಸಿಬಿಡಿ. ಇಷ್ಟು ಮಾಡಿಬಿಟ್ಟರೆ ದೊಡ್ಡ ಉಪಕಾರ. ಈ ವಾರ ಸ್ವಲ್ಪ ಬ್ಯುಸಿ. ಮುಂದಿನ ವಾರ ಸಿಗೋಣ. ಪಾರ್ಟಿ ಮಾಡೋಣ,' ಅಂತ ತಮ್ಮ ದೋಸ್ತ ಪೊಲೀಸನಿಗೆ ಹೇಳಿ ಫೋನಿಟ್ಟರು ಪ್ರೊ. ಬಾಗೇವಾಡಿ.

'ಏ! ನೀ ಚಿಂತಿ ಬಿಡೋ ಮಾರಾಯಾ. ನಿನ್ನ ಮಗಳು ಅಂದ್ರ ನನ್ನ ಮಗಳು ಇದ್ದಂಗ. ನಾ ನಮ್ಮ ಲೇಡಿ ACP ಜೋಡಿ ಒಂದು ಟೀಂ ಕಳಿಸಿ, ಆ ಹುಡುಗ ಯಾರು ಅಂತ ಚೆಕ್ ಮಾಡಿಸಿ, ಜಾಸ್ತಿ ಏನರೆ ಆವಾಜ್ ಮಾಡಿದರೆ ಅಂದರ್ ಮಾಡಿ, ಬರೋಬ್ಬರಿ ರುಬ್ಬಿ, ಮುಂದ ನಿನ್ನ ಮಗಳ ಸುದ್ದಿಗೆ ಬಂದಿರಬಾರದು ನೋಡು ಹಾಂಗೆ ಮಾಡಿ ಬಿಡ್ತೇನಿ. ಇಷ್ಟೂ ಮಾಡಾಕ ಆಗಿಲ್ಲ ಅಂದ್ರ ನಿಮ್ಮ ಊರಾಗ SP ಅಂತ ಕುಂತು ಏನು ಉಪಯೋಗನೋ? ಚಿಂತಿ ಮಾಡಬ್ಯಾಡ ನೀ. ನಿನ್ನ ಮಗಳು ಕೈಬಿಟ್ಟು ಹೋಗೋದಿಲ್ಲ ತಗೋ,' ಅಂದ ಧಾರವಾಡ SP ಸಾಹೇಬರು ತಮ್ಮ ಖಾಸಮ್ ಖಾಸ್ ಲೇಡಿ ACP ಸಾವಿತ್ರಿಬಾಯಿ ಧೋಂಗಡೆಗೆ ಬರಲು ಹೇಳಿ ಕಳಿಸಿದರು.

ACP ಸಾವಿತ್ರಿಬಾಯಿ ಧೋಂಗಡೆಗೆ ಸಾಹೇಬರ ಆಜ್ಞೆ ಅಂದರೆ ಮುಗಿದೇ ಹೋಯಿತು. ಇಡೀ ಊರಿಗೇ ಒಬ್ಬ ಮಹಿಳಾ ಅಧಿಕಾರಿ ಆಕೆ, ಅದೂ ACP ಮಟ್ಟದಲ್ಲಿ. ಸಾಹೇಬರು ಹೇಳಿದ್ದನ್ನೆಲ್ಲ ಗಮನವಿಟ್ಟು ಕೇಳಿದಳು. ಇಂತಹ ಅದೆಷ್ಟು ಕೇಸುಗಳನ್ನು ನಿಪಟಾಯಿಸಿ ನೀರು ಕುಡಿದಿದ್ದಳೋ ಆಕೆ. ಸರಿ ಅಂತ ಹೇಳಿ, ಒಂದು ಸಲ್ಯೂಟ್ ಸಾಹೇಬರಿಗೆ ಕುಟ್ಟಿ ಬಂದಳು. ಸಂಜೆ ಅಕೇಸಿಯಾ ತೋಪಿನ ಕಡೆ ಹೋಗಿ ಮಾಡಬೇಕಾದ ಕಾರ್ಯಾಚರಣೆಗೆ ಒಂದೆರೆಡು ಇನ್ಸ್ಪೆಕ್ಟರ್, ಒಂದು ನಾಲ್ಕು ಪೇದೆಗಳು, ಹುಡುಗಿ ಇರುವ ಸಂಗತಿ ಆದ್ದರಿಂದ ಒಂದಿಬ್ಬರು ಮಹಿಳಾ ಪೇದೆಗಳನ್ನು ಹಾಕಿಕೊಂಡು, ತಂಡ ಮಾಡಿಕೊಂಡು ತಯಾರಾಗಿ ಕೂತಳು. ಖುದ್ದಾಗಿ SP ಸಾಹೇಬರೇ ಕೊಟ್ಟಂತಹ ಸುಪಾರಿ. ಬರೋಬ್ಬರಿ ನಿರ್ವಹಿಸಿ, ಕೆಲಸ ಮಾಡಿಕೊಟ್ಟರೆ ಭಾಳ ಒಳ್ಳೆಯದು. ಹಾಗಂತ ಹೇಳಿ ಸಂಜೆಯಾಗುವದನ್ನೇ ಕಾಯುತ್ತ ಕುಳಿತಳು.

ACP ಸಾವಿತ್ರಿಬಾಯಿ ಧೋಂಗಡೆ ಸಂಜೆ ತನ್ನ ಪೋಲೀಸ್ ಟೋಳಿ ಕಟ್ಟಿಗೊಂಡು, ಜೀಪಿನಲ್ಲಿ ಅಕೇಸಿಯಾ ತೋಪಿನ ಕಡೆ ಹೋದಳು. ಹೊರಗೆ ಎರಡು ಗಾಡಿ ನಿಂತಿದ್ದವು. 'ಸಂಶಯವೇ ಬೇಡ. ಹುಡುಗ ಹುಡುಗಿ ಒಳಗೇ ಇದ್ದಾರೆ,' ಅಂತ ಆಕೆಗೆ ಖಾತ್ರಿಯಾಗಿಯೇ ಹೋಯಿತು. ತನ್ನ ತಂಡ ಕರೆದುಕೊಂಡವಳೇ, ಪಕ್ಕಾ ಪೋಲೀಸ್ ದಾಳಿಗೆ ಹೊರಟವಳ ಹಾಗೆ ಕಳ್ಳ ಹೆಜ್ಜೆ ಇಡುತ್ತ, ರಿವಾಲ್ವರ್ ಮೇಲೆ ಕೈಯಿಟ್ಟುಕೊಂಡೇ, ತಾನೇ ಲೀಡ್ ಮಾಡುತ್ತ ಹೊರಟಳು ACP ಸಾವಿತ್ರಿಬಾಯಿ ಧೋಂಗಡೆ.

ತೋಪಿನ ಜಾಸ್ತಿ ಒಳಗೆ ಹೋಗುವ ಜರೂರತ್ತೇ ಬರಲಿಲ್ಲ. ಮುಂದೆ ಸ್ವಲ್ಪೇ ದೂರದಲ್ಲಿ ಒಂದು ಮಸ್ತಾದ, ವರಚ್ಚಾದ ಜಾಗ ನೋಡಿಕೊಂಡು ಜಯಮಾಲಾ, ಬಾಂದೇಕರ್ ಪ್ರೇಮಿಗಳು ಬರೋಬ್ಬರಿ ಪವಡಿಸಿಬಿಟ್ಟಿದ್ದರು. ಪ್ರೇಮಿಗಳೇನೋ ಕಂಡರು. ಆದರೆ ಕಂಡು ಬಂದ ಭಂಗಿ, ಅವಸ್ಥೆ ಮಾತ್ರ ಸಿಕ್ಕಾಪಟ್ಟೆ ಖರಾಬಾಗಿತ್ತು. ಒಳ್ಳೆ ಮಲೆಯಾಳಿ ಬ್ಲೂ ಫಿಲಂ ಸಿನೆಮಾದ ಸೆಟ್ ಒಂದರಲ್ಲಿ ಪವಡಿಸಿ, 'ದೇವರ ಪಿಚ್ಚರ್' ಶೂಟಿಂಗ್ ನಲ್ಲಿ ತೊಡಗಿ ಬಿಟ್ಟಿದ್ದರು ಜಯಮಾಲಾ ಮತ್ತೆ ಆಕೆಯ ಮಾಲ್ ಬಾಂದೇಕರ್. ಆವತ್ತು ಅದೇನು ಮೂಡು ಬಂದಿತ್ತೋ ಇಬ್ಬರಿಗೂ. ಇಬ್ಬರೂ ಟಾಪ್ ಲೆಸ್ (topless) ಆಗಿ ಕೂತು 'ದೇವರ ಪೂಜೆ' ಮಾಡುತ್ತ ಮೈಮರೆತು ಬಿಟ್ಟಿದ್ದರು. ಬಾಂದೇಕರ್ ಅಂತೂ ಜಯಮಾಲಾಳ ಎರಡೂ 'ಕಲಶ ಪೂಜೆ' ಮಾಡುತ್ತ, ಮಾಡಿ ಮಾಡಿ ಸಾಕಾಗಿ, ಪ್ರಸಾದಕ್ಕೇ ಬಾಯಿ ಹಾಕಿ, ಪ್ರಸಾದ ತಿನ್ನಬೇಕೋ, ಹೀರಬೇಕೋ, ಚೀಪಬೇಕೋ ಅಂತ ನಿರ್ಧರಿಸಲಾಗದೇ, ಒಂದರಮೇಲೊಂದು ಅಂತ 'ಪೂಜಾ ವಿಧಿ' ನೆರವೇರಿಸುತ್ತ, ಸುಖ ಅನುಭವಿಸುತ್ತ ಮೈಮರೆತುಬಿಟ್ಟಿದ್ದ. ಜಯಮಾಲ ಕೂಡ ಅಷ್ಟೇ. ಭಾಡ್ಕೋ ಬಾಂದೇಕರ್ ಎಲ್ಲೆಲ್ಲೋ ಕಚಗುಳಿಯಿಟ್ಟು ಜಯಮಾಲಾ ಸುಖದ ಚರಸೀಮೆ ತಲುಪಿದಾಗೊಮ್ಮೆ ಆಕೆಯ ಕೇಕೆ ಆ ನಿರ್ಜನ ಆಕೇಸಿಯಾ ತೋಪಿನಲ್ಲಿ ಮಾರ್ದನಿಸುತ್ತಿತ್ತು. ಕೇಕೆ ಹೊಡೆದವಳೇ ಕಣ್ಣು ಮುಚ್ಚಿ ಬಿಡುತ್ತಿದ್ದಳು. ಒಮ್ಮೆ ಕಣ್ಣು ಬಿಟ್ಟಾಗ ಎದುರಿಗೆ ಕಂಡ, ಬರೋಬ್ಬರಿ ಖಡಕ್ ಆಗಿ ನಿಂತಿದ್ದ ಪೋಲೀಸರನ್ನು ನೋಡಿ ಚಿಟಾರನೇ ಚೀರಿ ಬಿಟ್ಟಳು. ಆಕೆಯ ಚೀತ್ಕಾರದಿಂದ ಎಚ್ಚೆತ್ತ ಬಾಂದೇಕರ್ ಏನಾಯಿತೋ ಅಂತ ನೋಡಲು ಆಕೆಯ ಕಲಶ ಪೂಜೆ, ಪ್ರಸಾದ ಸೇವನೆ ಬಿಟ್ಟು, ಹಿಂತಿರುಗಿ ನೋಡಿ ಫುಲ್ ಥಂಡಾ ಹೊಡೆದ. ಇಬ್ಬರೂ ಮೇಲಂಗಿ ಕಳಚಿ, ಫುಲ್ ಟಾಪ್ ಲೆಸ್ ಆಗಿ, ಮೈಮರೆತು ದುವಾ ಸಲಾಂ ಮಾಡಿಕೊಳ್ಳುವ ಸಮಯದಲ್ಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿಟ್ಟಿದ್ದಾರೆ. ಚಕ್ಕನೆ ಬಟ್ಟೆ ಹಾಕಿಕೊಳ್ಳೋಣ ಅಂದ್ರೆ ಉನ್ಮಾದದ ಮೂಡಿನಲ್ಲಿದ್ದವರು ಇಬ್ಬರ ಬಟ್ಟೆಗಳನ್ನೂ ಮುದ್ದೆ ಮಾಡಿ ದೂರ ಒಗೆದು ಬಿಟ್ಟಿದ್ದಾರೆ. ಮತ್ತೇನು ಮಾಡಲಿಕ್ಕೆ ಬರುತ್ತದೆ? ವಸ್ತ್ರಾಪಹರಣವಾದ ಗೋಪಿಕೆಯರು ಎದೆ ಮುಂದೆ, ಎರಡೂ ಕೈಗಳನ್ನು ಕತ್ತರಿ ಆಕಾರದಲ್ಲಿ ಮಾಡಿಕೊಂಡು, ಎಷ್ಟು ಮುಚ್ಚಲು ಸಾಧ್ಯವೋ ಅಷ್ಟು ಮುಚ್ಚಿಕೊಂಡು, ಮಂಗ್ಯಾನ ಮುಖ ಮಾಡಿಕೊಂಡು ನಿಂತರು. ವ್ಯತ್ಯಾಸ ಇಷ್ಟೇ. ಇಲ್ಲಿ ಬಾಂದೇಕರ್ ಎಂಬ ಕೃಷ್ಣನೂ ಟಾಪ್ ಲೆಸ್ ಆಗಿ, ಜಯಮಾಲಾ ಅನ್ನುವ ಗೋಪಿಕೆಯಂತೆ ಕೈಯಿಂದ ಎದೆ ಮುಚ್ಚಿ ನಿಂತಿದ್ದ. ಕಲಿಯುಗದ ಕೃಷ್ಣನ ಟಾಪ್ ಲೆಸ್ ಅವತಾರ. ಬೇರೆ ಯಾರೋ ಆಗಿದ್ದರೆ ಇಂತಹ ಸನ್ನಿವೇಶದಲ್ಲಿ ಪೋಲೀಸರ ಕೈಗೆ ಸಿಕ್ಕಿದ್ದೇವೆ ಅಂತ ಹೆದರಿಕೊಂಡು ಏನೇನೋ ಆಗಿ ಹೋಗುತ್ತಿದ್ದರು. ಆದರೆ ಅವನು ರೌಡಿ ಬಾಂದೇಕರ್. ಅಷ್ಟಷ್ಟು ಪೋಲೀಸರ ಸಹವಾಸ ಅವನಿಗಿತ್ತು. ಹಾಗಾಗಿ ಫುಲ್ ಏನೂ ಥಂಡಾ ಹೊಡೆಯಲಿಲ್ಲ.

'ಭೋಸಡೀಕೆ! ಬ್ಯಾಂಚೋದ್! ಇಂತಾ ಹೊಲಸು ಕೆಲಸಾ ಮಾಡಾಕತ್ತಿದ್ದಿ!?ಹಾಂ?' ಅನ್ನುತ್ತ ಏರಿ ಬಂದ ಪೋಲೀಸ್ ACP ಸಾವಿತ್ರಿಬಾಯಿ ಬಾಂದೇಕರನ ಕಪಾಳಕ್ಕೆ ಒಂದು ಬಿಟ್ಟಳು. ಆ ಏಟಿಗೆ ತತ್ತರಿಸಿದವನ ಕುಂಡೆಗೆ ಒಂದು ಝಾಡಿಸಿ ಒದ್ದಳು. ಹಾರಿ ಹೋಗಿ ಬಿದ್ದ ಬಾಂದೇಕರ್. ಜಯಮಾಲಾಳ ಪ್ರೀತಿ ನೋಡಿ, ಪ್ರೇಮ ನೋಡಿ. ತನ್ನ ಪ್ರೇಮಿ ಬಾಂದೇಕರನಿಗೆ ಹಾಕಿ ನಾದುತ್ತಿದ್ದಾರೆ, ರುಬ್ಬುತ್ತಿದ್ದಾರೆ ಅಂತ ವಿಲಿವಿಲಿ ಒದ್ದಾಡಿದ ಜಯಮಾಲಾ, ತಾನು ಅಷ್ಟೊಂದು ಮಂದಿ ಮುಂದೆ ಟಾಪ್ ಲೆಸ್ ಆಗಿ ನಿಂತಿದ್ದೇನೆ ಅನ್ನುವದರ ಖಬರೂ ಇಲ್ಲದೇ, 'ಸ್ಯಾಂಡೀ! ಸ್ಯಾಂಡೀ! ಐ ಲವ್ ಯು!' ಅನ್ನುತ್ತ ಹೋಗಿ ಬಾಂದೇಕರನನ್ನು ಅಪ್ಪಿಕೊಂಡು, ನೆಲದ ಮೇಲೆ ಮಲಗಿ ಬಿಟ್ಟಳು. ಅದನ್ನು ನೋಡಿದ ಪೊಲೀಸರು ತಲೆ ತಲೆ ಚಚ್ಚಿಕೊಂಡರು. ಅಷ್ಟರಲ್ಲಿ ಪೊಲೀಸರು ಹೋಗಿ ಬಾಂದೇಕರನನ್ನು ಮೇಲೆ ಎಬ್ಬಿಸಿ, ಈಚೆ ಕರೆದುಕೊಂಡು ಬಂದಿದ್ದರು. ಇಬ್ಬರು ಮಹಿಳಾ ಪೇದೆಗಳು ಹೋಗಿ ಜಯಮಾಲಾಳನ್ನೂ ಸಹ ಆಚೆಗೆ ಕರೆದುಕೊಂಡು ಬಂದರು. ಒಬ್ಬ ಪೋಲೀಸ್ ಪೇದೆ ಜೋಡಿ ಹಾವುಗಳಂತೆ ಸುತ್ತಿ ಸುತ್ತಿ ಮುದ್ದೆಯಾಗಿದ್ದ ಹುಡುಗಿಯ ವಸ್ತ್ರಗಳನ್ನು, ಹುಡುಗನ ವಸ್ತ್ರಗಳನ್ನು ಬೇರೆ ಬೇರೆ ಮಾಡಿ, ಅವರವರ ವಸ್ತ್ರಗಳನ್ನು ಅವರವರಿಗೇ ಕೊಟ್ಟು, ಹಾಕಿಸುವ ಪ್ರಯತ್ನದಲ್ಲಿದ್ದ. ಅವನು ಹೊಸ ಪೇದೆ ಅಂತ ಕಾಣುತ್ತದೆ. ಗಡಿಬಿಡಿಯಲ್ಲಿ ಬಾಂದೇಕರನ ಸ್ಯಾಂಡೋ ಕಟ್ ಬನಿಯನ್ ಅನ್ನು ಜಯಮಾಲಾಳಿಗೂ, ಜಯಮಾಲಾಳ ಬ್ರಾವನ್ನು ಬಾಂದೇಕರನಿಗೂ ಕೊಟ್ಟು ಮಂಗ್ಯಾ ಆದ. ಉಳಿದ ಪೊಲೀಸರೆಲ್ಲ ಒಂದು ಕ್ಷಣ ನಕ್ಕು, ಅದು ನಗುವ ದೃಶ್ಯವಲ್ಲ ಅಂತ ಜಾಸ್ತಿ ನಗಲಿಲ್ಲ. ಅಂತೂ ಇಂತೂ ಟಾಪ್ ಲೆಸ್ ಆಗಿ, 'ದೇವರ ಪೂಜೆ' ಮಾಡುತ್ತ, ಮೈಮರೆತಿದ್ದ ಪ್ರೇಮಿಗಳಿಗೆ ಬಟ್ಟೆ ಹಾಕಿಸಿದ ಪೊಲೀಸರು ಹುಸ್ಸಪಾ ಅಂತ ದೊಡ್ಡ ನಿಟ್ಟುಸಿರು ಬಿಟ್ಟರು.

ಮತ್ತೊಮ್ಮೆ ಬಾಂದೇಕರನ ಕಪಾಳಕ್ಕೆ ರಪಾ ರಪಾ ಅಂತ ಬಿಟ್ಟಳು ACP ಸಾವಿತ್ರಿಬಾಯಿ. ಅಷ್ಟರಲ್ಲಿ ಆಕೆಯ ಪೇದೆಗಳು ಆತ ಯಾರು, ಏನು, ಎತ್ತ ಅಂತ ಆತನ ಕುಲಗೋತ್ರ ಜಾತಕ ಆಕೆಗೆ ಪೂರ್ತಿ ವಿವರಿಸಿದ್ದರು. ಬಾಂದೇಕರ್ ಸಣ್ಣ ರೌಡಿ ಅಂತ ಗೊತ್ತಾಗಿದ್ದಕ್ಕೆ, ಅದೂ ತಮ್ಮ SP ಸಾಹೇಬರ ದೋಸ್ತನ ಮಗಳ ಜೊತೆ ಮಷ್ಕಿರಿ ಮಾಡುತ್ತ ಕುಳಿತಿದ್ದ ಅಂತ ಬಂದ ಜಾಸ್ತಿ ಸಿಟ್ಟಿಗೆ ನಾಲ್ಕು ಜಾಸ್ತಿಯೇ ಕೊಟ್ಟಳು.

ಸಂದೀಪ್ ಬಾಂದೇಕರನನ್ನು ಎಳೆದುಕೊಂಡು ಲಾಕಪ್ಪಿಗೆ ಹಾಕಿ, ಮುಂದೆ SP ಸಾಹೇಬರು ಹೇಗನ್ನುತ್ತಾರೋ ಹಾಗೆ ಮಾಡಿದರಾಯಿತು ಅಂತ ವಿಚಾರ ಮಾಡಿದಳು ACP ಸಾವಿತ್ರಿಬಾಯಿ. ಅದೇ ಪ್ರಕಾರ ಅವನನ್ನು ಎತ್ತಾಕಿಕೊಂಡು ಬರುವಂತೆ ಆಜ್ಞೆ ಮಾಡಿ, ತೋಪಿನ ಹೊರಗೆ ನಿಲ್ಲಿಸಿದ್ದ ಜೀಪಿನ ಹತ್ತಿರ ಹೊರಟಳು. ಆಗ ನೆನಪಾಯಿತು ಜಯಮಾಲಾಳ ಬಗ್ಗೆ. ಆಕೆಯ ಪ್ರೀತಿಯ ಬಾಂದೇಕರ್ ಸ್ಯಾಂಡಿಗೆ (ಸಂದೀಪನಿಗೆ) ಪೊಲೀಸರು ಕೊಟ್ಟ ಪೆಟ್ಟುಗಳು ತನಗೇ ಬಿದ್ದವು ಎನ್ನುವಂತೆ ಮಳ್ಳ ಮುಖ ಮಾಡಿಕೊಂಡು, ಕಣ್ಣಲ್ಲಿ ನೀರು ತಂದುಕೊಂಡು ನಿಂತಿದ್ದಳು ಜಯಮಾಲಾ ಬಾಗೇವಾಡಿ D/O ಪ್ರೊ. ಬಾಗೇವಾಡಿ.

'ಏ ಹುಡುಗಿ! ಸುಮ್ಮನೇ ಮನಿಗೆ ಹೋಗು. ನೋಡಾಕ ಭಾಳ ಛಂದ ಇದ್ದೀ. ಅದಕ್ಕೆ ತಕ್ಕಂತೆ ಒಳ್ಳೆ ಗುಣ, ನಡತೆ ಸಹ ಸ್ವಲ್ಪ ಕಲಿ. ಹುಟ್ಟಿದ ಮನಿಗೆ ಮತ್ತ ನಾಳೆ ಹೋಗೋ ಮನಿಗೆ ಒಳ್ಳೆ ಹೆಸರು ತರೋಹಾಂಗ ನಡೆದುಕೊಳ್ಳೋದನ್ನ ಕಲಿ. ಒಳ್ಳೆಯವರ ಮನಿ ಹುಡುಗಿ, ನಮ್ಮ ಸಾಹೇಬರ ದೋಸ್ತನ ಮಗಳು ಅಂತ ಒಳ್ಳೆ ಮಾತಿನಾಗ ನಿನಗ ಹೇಳಿ, ಸುಮ್ಮನೆ ಮನಿಗೆ ಕಳಿಸಾಕತ್ತೇನಿ. ಬ್ಯಾರೆ ಯಾರರೆ ಆಗಿದ್ದರೆ ನಿನ್ನೂ ಎಳಕೊಂಡು ಹೋಗಿ, ತುರಕಬಾರದ ಜಗಾದಾಗ ಖಾರಪುಡಿ ತುರುಕಿ, ಪೋಲೀಸರ ಕೈಯಾಗ ಸಿಕ್ಕೊಂಡವರ ಗತಿ ಏನಾಕ್ಕೈತಿ ಅನ್ನೋದನ್ನ ತೋರಸ್ತಿದ್ದೆ. ನಡಿ ನಡಿ. ಸಂಜಿಯಾತು. ದೌಡ್ ಮನಿ ಸೇರಿಕೋ,' ಅಂತ ಪೋಲೀಸ್ ಧಾಟಿಯಲ್ಲಿ ಉದ್ರಿ ಉಪದೇಶ ಮಾಡಿದ ACP ಸಾವಿತ್ರಿಬಾಯಿ ಧೋಂಗಡೆ ಜಯಮಾಲಾಳಿಗೆ 'ನಡೆ, ನಡೆ. ಜಾಗಾ ಖಾಲಿ ಮಾಡು. ಈಗೇ ಮಾಡು,' ಅನ್ನುವ ಕಣ್ಸನ್ನೆ ಮಾಡಿದಳು.

ಈ ಜಯಮಾಲಾಳಿಗೆ ಆ ಪೊರ್ಕಿ ಸ್ಯಾಂಡಿ ಬಾಂದೇಕರನ ಮೇಲೆ ಅದೆಂತ ಪ್ರೇಮ, ಅದೆಂತ ಪ್ರೀತಿ ದೇಹದ ಅದ್ಯಾವ ಮೂಲೆಮೂಲೆಯಿಂದ ಉಕ್ಕಿ ಬಂತೋ ಗೊತ್ತಿಲ್ಲ. ಒಟ್ಟಿನಲ್ಲಿ ಜ್ವಾಲಾಮುಖಿಯಿಂದ ಹರಿದ ಲಾವಾ ರಸದಂತೆ ಉಕ್ಕಿ ಬಂತು  ಪ್ರೀತಿ. 'ಸ್ಯಾಂಡಿ! ಮೈ ಸ್ಯಾಂಡಿ!' ಅಂತ ಕಾನ್ವೆಂಟ್ ಉಚ್ಚಾರದಲ್ಲಿ ಕೂಗುತ್ತ ಓಡಿ ಹೋದ ಜಯಮಾಲಾ ಹೋಗಿ ಬಾಂದೇಕರನನ್ನು ಅಪ್ಪಿಬಿಟ್ಟಳು. ಒಳ್ಳೆ 'ಏಕ್ ದುಜೆ ಕೆ ಲಿಯೇ' ಸಿನೆಮಾ ಸೀನು. ಇದನ್ನು ನೋಡಿ ಪೊಲೀಸರೂ ಸಹ ದಂಗಾಗಿ ಬಿಟ್ಟರು. ಅಪ್ಪಿಕೊಂಡು ಬೆಸೆದುಕೊಂಡಿದ್ದ ಅಮರ ಪ್ರೇಮಿಗಳನ್ನಿಬ್ಬರನ್ನು ಬಿಡಿಸಲು ನೋಡಿದರು. 'ಏ! ಆ ಹುಡುಗಿ ಬಿಡಲೇ ನಿಮ್ಮೌನ್!' ಅನ್ನುತ್ತ ಬಾಂದೇಕರನಿಗೆ ನಾಲ್ಕು ಹಾಕಿದರು. 'ಸಾಹೇಬ್ರಾ, ನಾ ಎಲ್ಲಿ ಅಕಿನ್ನ ಹಿಡಕೊಂಡೇನಿ? ಅಕಿನೇ ನನ್ನ ಹಿಡಿದುಕೊಂಡಾಳ,' ಅನ್ನುವ ರೀತಿಯಲ್ಲಿ ಮಳ್ಳ ಮುಖ ಮಾಡಿದ ಬಾಂದೇಕರ. ಜಯಮಾಲಾಳಿಗೆ ಹೊಡೆಯುವಂತಿಲ್ಲ. ಜಗ್ಗಿ ಬಿಡಿಸಲು ಆಗುತ್ತಿಲ್ಲ. ಹೇಳಿ ಕೇಳಿ ಪ್ರಾಯದ ಹುಡುಗಿ. ಮನಸ್ಸು ಮಾಡಿ ಹುಡುಗನನ್ನು ಅಪ್ಪಿಕೊಂಡಳು ಅಂದರೆ ಅಷ್ಟೇ ಮತ್ತೆ. ಉಡದಂತಹ ಉಕ್ಕಿನ ಹಿಡಿತ. ಪ್ರೀತಿಯ ಹಿಡಿತ. ಪ್ರೇಮದ ತುಡಿತ.

ಇದೊಳ್ಳೆ ತಲೆಬಿಸಿಯಾಯಿತು ACP ಧೋಂಗಡೆ ಬಾಯಿಗೆ. SP ಸಾಹೇಬರನ್ನು ಸಂಪರ್ಕಿಸಿ, 'ಸಾರ್, ಹೀಗಾಗಿದೆ. ಏನು ಮಾಡೋಣ?' ಅಂತ ಕೇಳಲು ಅದು ೧೯೯೦ ರ ದಶಕ. ಇನ್ನೂ ಮೊಬೈಲ್ ಇತ್ಯಾದಿ ಬಂದಿರಲಿಲ್ಲ. ಜೀಪಿನಲ್ಲಿ ವಯರ್ಲೆಸ್ ವಾಕಿ ಟಾಕಿ ಇದೆ. ಅದರ ಮೂಲಕ ಸಂಪರ್ಕಿಸಬಹುದು. ಆದರೆ ಇದು ಗುಟ್ಟಿನಲ್ಲಿ ಮಾಡಿ ಮುಗಿಸಬೇಕಾದ ಕೆಲಸ. ವಯರ್ಲೆಸ್ ಎತ್ತಿಕೊಂಡರೆ ಅಷ್ಟೇ ಮತ್ತೆ. ಅದು ಕಂಟ್ರೋಲ್ ರೂಂ ಮೂಲಕ ಹೋಗಿ, ಊರ ಎಲ್ಲ ಪೊಲೀಸರಿಗೆ ಡಂಗುರ ಹೊಡೆಯುತ್ತದೆ. ನಾಳೆ ಪೇಪರಿನಲ್ಲಿ ಈ ಸುದ್ದಿ ಎಲ್ಲ ಬರುತ್ತದೆ. 'ಏನು ಮಾಡುವದು ಈಗ? ಈ ಯಬಡ ಹುಡುಗಿ ಬೇರೆ ಮಳ್ಳ ಹುಡುಗನನ್ನು ಬಿಡುತ್ತಿಲ್ಲ. ಏನು ಮಾಡಲಿ?' ಅಂತ ತಲೆ ಮತ್ತೊಂದು ಕೆರೆದುಕೊಂಡಳು ACP ಧೋಂಗಡೆ ಬಾಯಿ. ತಲೆ ಓಡಲಿ ಅಂತ ಒಂದು ಫೈರ್ ಗುಟ್ಕಾ ಪ್ಯಾಕೆಟ್ ಹರಿದು, ಪೂರ್ತಿ ಬಾಯಿಗೆ ಸುರಿದುಕೊಂಡು, ಗರಗರ ಅಂತ ಅಗಿದು, ಪಿಚಕ್ ಅಂತ ಒಂದು ಪಿಚಕಾರಿ ಹಾರಿಸಿ, ಜಯಮಾಲಾಳ ಕಡೆ ಕೆಕ್ಕರಿಸಿ ನೋಡಿ, ವಿಚಿತ್ರವಾಗಿ ನಕ್ಕಳು. ಏನೋ ಒಂದು ಉತ್ತರ ಸಿಕ್ಕಿತು ಅನ್ನುವ ಲುಕ್ ACP ಧೋಂಗಡೆ ಬಾಯಿಯ ಮುಖದ ಮೇಲೆ.

'ಏ! ಈ ಹುಡುಗಿ ಕೆಟ್ಟ ಖಟಮಂಡ (ಮೊಂಡಿ) ಇದ್ದಂಗ ಐತಿ. ಮನಿಯಾಗ ಭಾಳ ಅಚ್ಛಾ ಮಾಡಿ, ಮುದ್ದು ಮಾಡಿ ಬೆಳೆಸ್ಯಾರ ಅಂತ ಕಾಣಸ್ತೈತಿ. ಹಾಕ್ಕೊಂಡು ರುಬ್ಬೋಣ ಅಂದ್ರ ಭಾರಿ contacts ಇಟ್ಟಾನ ಇಕಿ ಅಪ್ಪಾ. ಇಕಿ ನಾವು ಹೇಳಿದ್ದು ಕೇಳೋದಿಲ್ಲ ಅಂದ್ರ ಒಂದು ಕೆಲಸ ಮಾಡಿಬಿಡೋಣ,' ಅಂತ ಅಂದು, ಮಾತು ನಿಲ್ಲಿಸಿದ ACP ಧೋಂಗಡೆ ಬಾಯಿ ಮತ್ತೊಂದು ಸಲ ಗುಟ್ಕಾ ಪಿಚಕಾರಿ ಹಾರಿಸಿದಳು. 'ಏನು ಮಾಡೋಣ ಅಂತೀರಿ ಮೇಡಂ?' ಅಂತ ಕೇಳಿದವನು ಅದೇ ಯಬಡ ಪೇದೆ. ವಸ್ತ್ರ ಅದಲು ಬದಲು ಮಾಡಿ ಕೊಟ್ಟಿದ್ದ ನೋಡಿ, ಅವನೇ. 'ಈ ಹುಡುಗಿಯನ್ನೂ ಸಹಿತ ಹಾಕ್ಕೊಂಡು ನಡೀರಿ. ತೊಗೊಂಡು ಹೋಗಿ ಲಾಕಪ್ಪಿನಾಗ ಒಗೆಯೋಣ. ಆಮ್ಯಾಲೆ SP ಸಾಹೇಬರು ಬೇಕಾದ್ರ ಇವರಪ್ಪಗ ಫೋನ್ ಮಾಡಲಿ. ಅವರು ಬಂದು ಬಿಡಿಸಿಕೊಂಡು ಹೋಗಲಿ. ಮತ್ತೇನು ಮಾಡೋಣ? ಇಕಿ ಖರೆ ಅಂದ್ರೂ ಭಾಳ ಖಟಮಂಡ ಅದಾಳ ನೋಡ್ರೀ. ಬ್ಯಾರೆ ಯಾರರೆ  ಆಗಿ ಹೀಂಗ ಹಟ ಹಿಡಿಬೇಕಾಗಿತ್ತು. ಆವಾಗ ತೋರಸ್ತಿದ್ದೆ ಈ ACP ಧೋಂಗಡೆ ಬಾಯಿ ಅಂದ್ರ ಏನು ಅಂತ,' ಅಂತ ಹೇಳಿ, ಲೆಫ್ಟ್ ರೈಟ್ ಮಾಡುತ್ತ, ಅಕೇಸಿಯಾ ತೋಪಿನಿಂದ ಹೊರಗೆ ಹೊರಟೇ ಬಿಟ್ಟಳು. ಉಳಿದ ಪೋಲೀಸ್ ಸಿಬ್ಬಂದಿ ಕೂಡ ಬಾಂದೇಕರ ಮತ್ತು ಜಯಮಾಲಾಳನ್ನು ಕರೆದುಕೊಂಡು, ಅವರವರಲ್ಲೇ ಕುಸುಪುಸು ಮಾತಾಡುತ್ತ, ಕೆಲ ನಿಮಿಷಗಳ ಹಿಂದೆ ನೋಡಿದ 'ದೇವರ ಪೂಜೆ'ಯ ಬಗ್ಗೆ ಮಾತಾಡುತ್ತ, ತಾವು ಹಿಂದೆ ವೇಶ್ಯೆಯರ ಮೇಲೆ ದಾಳಿ ಮಾಡಿದಾಗ ಸಹ ಇಂತಹ ಖರಾಬ್ ಸ್ಥಿತಿಯಲ್ಲಿ ಸಿಕ್ಕವರು ಇಲ್ಲ ಅಂತ ಈ ಪ್ರೇಮಿಗಳ 'ಎದೆ'ಗಾರಿಕೆ ಬಗ್ಗೆ ತಾರೀಫು ಮಾಡುತ್ತ, ಪೋಲಿಸ್ ಜೀಪು ಇದ್ದಲ್ಲಿ ಬಂದು ಮುಟ್ಟಿದರು. ಪ್ರೇಮಿಗಳನ್ನೂ ಜೀಪ್ ಒಳಗೆ ತಳ್ಳಿ, ತಾವೂ ಕುಳಿತರು. ಧಾರವಾಡ ಟೌನ್ ಪೋಲೀಸ್ ಠಾಣೆಗೆ ಕರೆದೊಯ್ಯಲು ತಯಾರಾದರು. ಆದರೆ ಒಂದು ತೊಂದರೆ ಇತ್ತು. ಈ ಹುಡುಗ, ಹುಡುಗಿಯ ಮೊಪೆಡ್ ಮತ್ತು ಬೈಕ್. ಅವನ್ನೇನು ಮಾಡಬೇಕು? ಫೈರ್ ಗುಟ್ಕಾ ತಿಂದ ACP ಧೋಂಗಡೆ ಬಾಯಿಯ ತಲೆ ಸಿಕ್ಕಾಪಟ್ಟೆ ಓಡಿ, ಐಡಿಯಾ ಮೇಲೆ ಐಡಿಯಾ ಬರುತ್ತಿದ್ದವು. 'ಏ ರಾಮಪ್ಪಾ, ಏ ಭೀಮಪ್ಪಾ, ನೀವು ಚಾವಿ ಇಸಕೊಂಡು, ಗಾಡಿ ಹೊಡಕೊಂಡು ಸ್ಟೇಷನ್ ಗೆ ಬಂದು ಬಿಡ್ರೀ,' ಅಂದವಳೇ, 'ಏ ಹುಡಗ, ಹುಡುಗಿ, ನಿಮ್ಮ ನಿಮ್ಮ ಗಾಡಿ ಚಾವಿ ಕೊಡ್ರೀ. ದೌಡ್ ಕೊಡ್ರೀ,' ಅಂತ ಗಡಿಬಿಡಿ ಮಾಡಿದಳು. ಬಾಂದೇಕರ್ ಮತ್ತು ಜಯಮಾಲಾ ಮರುಮಾತಿಲ್ಲದೆ ತಮ್ಮ ತಮ್ಮ ಗಾಡಿಗಳ ಕೀಲಿ ಕೊಟ್ಟು ಕುಳಿತರು. ಪೇದೆ ರಾಮಪ್ಪ, ಭೀಮಪ್ಪ ಜೀಪಿನಿಂದ ಇಳಿದು 'ಮೂಳೆ ಮುರಿಯುವ ಜೀಪಿನಲ್ಲಿ ಹೋಗುವದರಕಿಂತ ಹಾಯಾಗಿ ಬೈಕಿನಲ್ಲೇ ಹೋಗುವದು ಎಷ್ಟು ಮಸ್ತ' ಅಂತ ಅಂದುಕೊಳ್ಳುತ್ತ, ಯಾರು ಹುಡುಗಿಯ ಸಣ್ಣ ಮೊಪೆಡ್ ಹತ್ತಬೇಕು ಮತ್ತೆ ಯಾರು ಹುಡುಗನ ಯಮನ ಸೈಜಿನ ಯಮಹಾ - ೩೫೦ ಸೀಸಿ ಬೈಕ್ ಹತ್ತಬೇಕು ಅಂತ ಯೋಚಿಸುತ್ತ ಆಕಡೆ ಹೋದರು. ಸೇವೆಯಲ್ಲಿ ಹಿರಿಯನಾಗಿದ್ದ ರಾಮಪ್ಪ ಬೈಕ್ ಮೇಲೆ ಹತ್ತುವದೆಂದೂ ಮತ್ತೆ ಜೂನಿಯರ್ ಭೀಮಪ್ಪ ಮೊಪೆಡ್ ಹತ್ತುವದೆಂದು ನಿರ್ಧಾರ ಆಗಿಯೇ ಹೋಯಿತು. ಪೋಲೀಸ್ ಇಲಾಖೆ ಕೆಲಸ ಮಾಡುವದೇ ಹಾಗೆ. ಎಲ್ಲ ಸೀನಿಯಾರಿಟಿ ಮೇಲೆ ನಿರ್ಧಾರಿತ. ಪೇದೆಗಳು ಬೈಕ್, ಮೊಪೆಡ್ ಸ್ಟಾರ್ಟ್ ಮಾಡಿ ರೆಡಿ ಆದ ಕೂಡಲೇ ACP ಧೋಂಗಡೆ ಬಾಯಿ 'ರೈಟ್! ರೈಟ್! ದೌಡ್ ನಡಿಯೋ. ಈಗಲೇ ಭಾಳ ತಡಾ ಆಗೈತಿ. ಇನ್ನೂ ಲೇಟ್ ಆದ್ರ SP ಸಾಹೇಬರು ನಾಲ್ಕು ಪೆಗ್ ಹಾಕಿ, ಯಾವದರೆ ರಂಡಿ ಬಾಜೂಕ ಮಲಕೊಂಡು ಬಿಟ್ಟರು ಅಂದ್ರ ಈ ಹುಡುಗಿನ ನಾವು ರಾತ್ರಿ ಪೂರಾ ಲಾಕಪ್ಪಿನಾಗ ಇಟಗೊಂಡು ಕುಂದ್ರಬೇಕು. ಯಾರಿಗೆ ಬೇಕು ಆ ಲಫಡಾ? ದೌಡ್, ದೌಡ್!' ಅಂತ ಗಡಿಬಿಡಿ ಮಾಡಿದಳು. ಪೋಲೀಸ್ ಡ್ರೈವರ್ ಗಾಡಿ ಚಾಲೂ ಮಾಡಿ, ರೊಂಯ್ಯನೆ ಹೊಂಟು ಬಿಟ್ಟ. ಹಿಂದೆ ಮೊಪೆಡ್, ಬೈಕ್ ಮೇಲೆ ಪೇದೆಗಳು ಹಿಂಬಾಲಿಸಿದರು. ಪಶ್ಚಿಮ ದಿಕ್ಕಿನಲ್ಲಿ ಸೂರ್ಯ ಮುಳುಗುತ್ತಿದ್ದ.

ಠಾಣೆಗೆ ಬಂದು ಮುಟ್ಟಿತು ಪೋಲೀಸ್ ಜೀಪ್. ಬಾಂದೇಕರನನ್ನು ಎಳೆದುಕೊಂಡು ಹೋಗಿ, ವಸ್ತ್ರ ಎಲ್ಲ ಬಿಚ್ಚಿಸಿ, ಕೇವಲ ಚಡ್ಡಿ ಮೇಲೆ ಲಾಕಿಪ್ಪಿಗೆ ಹಾಕಿದರು. ಲಾಕಪ್ಪಿಗೆ ಹಾಕೋ ಮುಂಚೆ ಚಡ್ಡಿ ಒಂದು ಬಿಟ್ಟು ಎಲ್ಲ ಬಟ್ಟೆ ಬಿಚ್ಚೋದು ಪೋಲೀಸರ ಸ್ಟ್ಯಾಂಡರ್ಡ್ ಪದ್ಧತಿ. ಹೆಚ್ಚಿನ ವಸ್ತ್ರ ಮೈಮೇಲೆ ಇದ್ದರೆ ಅದರಲ್ಲೇ ಎಲ್ಲಿಯಾದರೂ ಉರುಳು ಗಿರುಳು ಹಾಕಿಕೊಂಡು ಸತ್ತು ಗಿತ್ತು ಹೋದಾರು ಅಂತ ಪೋಲೀಸರ ಮುನ್ನೆಚ್ಚರಿಕೆ. ಜಯಮಾಲಾಳನ್ನು ಅಲ್ಲೇ ಇದ್ದ ಬೆಂಚ್ ಮೇಲೆ ಕೂಡಿಸಿದರು. ಠಾಣೆಯಲ್ಲಿದ್ದ ಎಲ್ಲರೂ ಅವಳನ್ನು ವಿಚಿತ್ರವಾಗಿ ನೋಡಿದರು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಬಂದಿದ್ದ ಪೇದೆಗಳು ತಮ್ಮ ಸಹೋದ್ಯೋಗಿಗಳಿಗೆ ಪೂರ್ತಿ ವರದಿ ಒಪ್ಪಿಸಲು ಅವರನ್ನು ಚಹಾ ಕುಡಿದು ಬರೋಣ ಅಂತ ಕರೆದು, ನಗುತ್ತ, ಹೆಗಲ ಮೇಲೆ ಕೈಹಾಕಿ ಕರೆದುಕೊಂಡು ಹೋದರು. ACP ಧೋಂಗಡೆ ಬಾಯಿ SP ಸಾಹೇಬರಿಗೆ ಫೋನ್ ಹಚ್ಚಿ ಎಲ್ಲ ವಿವರಿಸಿದಳು. SP ಸಾಹೇಬರು ತಮ್ಮ ಗೆಳೆಯನ ಮಗಳೂ ಸಹ ಠಾಣೆಗೆ ಬಂದು ಕೂತಿದ್ದಾಳೆ ಅಂತ ತಿಳಿದು ಕೊಂಚ ಅಪ್ರತಿಭರಾದರು. ಫೋನಿಟ್ಟ ಅವರು ತಮ್ಮ ಮಿತ್ರ ಪ್ರೊ. ಬಾಗೇವಾಡಿಗೆ ಫೋನ್ ಮಾಡಿ, ಸಂಕ್ಷಿಪ್ತವಾಗಿ ಎಲ್ಲ ಹೇಳಿದರು. ಚಿಂತೆ ಮಾಡುವ ಅಗತ್ಯ ಇಲ್ಲ ಅಂತ ಹೇಳಿದರು. ಠಾಣೆಗೆ ಹೋಗಿ, ಮಗಳನ್ನು ಮನೆಗೆ ಕರೆದೊಯ್ಯುವಂತೆ ಹೇಳಿದರು. SP ಸಾಹೇಬರು ಅವತ್ತು ಸಿಕ್ಕಾಪಟ್ಟೆ ಬ್ಯುಸಿ. ಇಲ್ಲ ಅಂದರೆ ಅವರೇ ಠಾಣೆಗೆ ಹೋಗಿ, ಜಯಮಾಲಾಳಿಗೆ ಬುದ್ಧಿ ಹೇಳಿ, ಮನೆಗೆ ಬಿಟ್ಟು ಬರುತ್ತಿದ್ದರೋ ಏನೋ. ಅದು ಆಗದು ಎಂದು ಪ್ರೊ. ಬಾಗೇವಾಡಿಗೆ ಠಾಣೆಗೆ ಹೋಗಿ ಮಗಳನ್ನು ಕರೆದುಕೊಂಡು ಹೋಗು ಅಂತ ಹೇಳಿದ್ದರು.

ಪ್ರೊ. ಬಾಗೇವಾಡಿಗೆ ಇದು ದೊಡ್ಡ ತಲೆಬಿಸಿಯಾಯಿತು. ಆವತ್ತು ಅವರದ್ದು ಒಂದು ದೊಡ್ಡ ಪ್ರೋಗ್ರಾಮ್ ಇತ್ತು. ತಮ್ಮ ಕೆಳಗೆ PhD ಮಾಡುತ್ತಿದ್ದ ಹೊಸ ಮಾಲೊಂದನ್ನು ಪಟಾಯಿಸಿದ್ದರು. ಅವತ್ತೇ ನಗರದ ಹೊರಗಿನ ರೆಸಾರ್ಟ್ ಒಂದರಲ್ಲಿ 'ಪಲ್ಲಂಗ ಪೂಜೆ' ಮಾಡೋಣ ಅಂತ ಪ್ಲಾನ್ ಹಾಕಿ, ರೂಂ ಸಹಿತ ಬುಕ್ ಮಾಡಿಟ್ಟುಕೊಂಡಿದ್ದರು. ಈಗ ನೋಡಿದರೆ ರೆಸಾರ್ಟ್ ಗೆ ಹೋಗಿ, ಹೊಸ ಹಕ್ಕಿ ಜೊತೆ ಪಲ್ಲಂಗ ಹತ್ತುವ ಪ್ಲಾನಿನ ಸತ್ಯಾನಾಶವಾಗಿ, ಪೋಲೀಸ್ ಠಾಣೆಗೆ ಹೋಗಿ, ಲಫಡಾ ಮಾಡಿಕೊಂಡು ಬಂದ ಮಗಳನ್ನು ಕರೆದುಕೊಂಡು ಬರಬೇಕಾಗಿದೆ. ಅಕಟಕಟಾ! ತಮ್ಮ ಮಗಳ ಬಾಯ್ ಫ್ರೆಂಡ್ ಲಫಡಾವನ್ನು ಬೇರೆ ರೀತಿಯಲ್ಲಿ ಬಗೆಹರಿಸಿದ್ದರೆ ಒಳ್ಳೆಯದಿತ್ತೇನೋ ಅಂತ ಅಂದುಕೊಂಡರು. ಸೀದಾ ಹೋಗಿ ಪೊಲೀಸರಿಗೆ ಸುಪಾರಿ ಕೊಟ್ಟು ಬಿಟ್ಟಿದ್ದರು. ಪೊಲೀಸರು ಅವರ ರೀತಿಯಲ್ಲಿ ಹ್ಯಾಂಡಲ್ ಮಾಡಿದ್ದರು. ಆದರೆ ದೊಡ್ಡ ಮಟ್ಟದ ಕಾಮಗಾರಿ ಮಾಡಿಬಿಟಿದ್ದರು. ಏನು ಮಾಡಲಿಕ್ಕೆ ಬರುತ್ತದೆ? ಹೇಳಿ ಕೇಳಿ ಮಗಳು. ಅದರಲ್ಲೂ ಪರಮ ಪ್ರೀತಿಯ ಕಿರಿಯ ಮಗಳು. ತಮ್ಮ ರಕ್ತ. ಬಿಡಲಿಕ್ಕೆ ಬರುತ್ತದೆಯೇ? ತಮ್ಮ ಸಂಶೋಧನಾ ವಿದ್ಯಾರ್ಥಿನಿಯ ಜೊತೆ ಪಲ್ಲಂಗಾರೋಹಣ ಕಾರ್ಯಕ್ರಮಕ್ಕೆ ಎಳ್ಳು ನೀರು ಬಿಟ್ಟು ಠಾಣೆಗೆ ಹೊರಡಲು ತಯಾರಾದರು. ಟೈಮ್ ನೋಡಿದರೆ ಸುಮಾರು ರಾತ್ರಿ ಎಂಟು ಘಂಟೆ.

ಪ್ರೊ. ಬಾಗೇವಾಡಿ ಅಂಗಿ, ಪ್ಯಾಂಟ್ ಹಾಕಿಕೊಂಡು ಹೊರ ಬಂದರೆ ಕಂಡಾಕೆ ಕೆಲಸದ ಲಿಂಗವ್ವ. ಆಕೆಯ ಮುಖದ ಮೇಲೆ ಆತಂಕದ ಛಾಯೆ. 'ಯಣ್ಣಾ, ಇನ್ನೂ ಜಯೂ ಮನಿಗೆ ಬಂದಿಲ್ಲ ನೋಡೋ. ಎಲ್ಲೆ ಹೊಗೈತೇನೋ ಹುಡುಗಿ. ಅದೂ ಹರೇದ ಹುಡುಗಿ. ಈಗ ಥ್ವಾಡೆ ದಿನದ ಹಿಂದೆ ಮಾತ್ರ ಅಕೀನ್ನ ಆ ಭಾಡ್ಯಾ ಹುಡುಗನ ಜೋಡಿ ನೋಡಿ ಬಂದಿದ್ದೆ. ಆವತ್ತಿಂದ ನನ್ನ ಎದಿ ಢವಾ ಢವಾ ಅನ್ನಾಕತ್ತೈತೋ. ಎಲ್ಲಿ ಹೋಗಿ ಕುಂತಾಳೋ? ಏನು ಮಾಡಿಕೊಂಡು ಕುಂತಾಳೋ? ಭಾಳ ಚಿಂತಿ ಆಗೈತೋ ಯಣ್ಣಾ,' ಅಂತ ಅಂಬೋ ಅಂದಳು. ಹೇಳಿ ಕೇಳಿ ಎತ್ತಿ, ಆಡಿಸಿ, ಬೆಳೆಸಿದ ಮಾತೃ ಹೃದಯ ಲಿಂಗವ್ವನದು. ಮಿಡಿಯದೇ ಇದ್ದೀತೇ?

ಲಿಂಗವ್ವನ ಮಾತನ್ನು ಪ್ರೊ. ಬಾಗೇವಾಡಿ ಕೇಳಿಸಿಕೊಂಡರು. ಆದರೆ ಉತ್ತರಿಸುವ ಗೋಜಿಗೆ ಹೋಗಲಿಲ್ಲ. ಗ್ಯಾರೇಜಿಗೆ ಬಂದು ತಮ್ಮ ಮಾರುತಿ ಕಾರನ್ನು ಹೊರಗೆ ತೆಗೆದರು. ಲಿಂಗವ್ವ ಗೇಟ್ ತೆಗೆದು ಕಾರಿಗೆ ಹೊರಗೆ ಹೋಗಲು ಅನುವು ಮಾಡಿಕೊಟ್ಟಳು. ಹೊರಟ ಪ್ರೊ. ಬಾಗೇವಾಡಿ ಒಂದು ಹತ್ತು ಮಾರು ದೂರ ಹೋಗಿದ್ದರೋ ಇಲ್ಲವೋ, ದಾರಿಯಲ್ಲಿ ಮನೆ ಕಡೆ ಬರುತ್ತಿದ್ದ ಅವರ ಪತ್ನಿ ಕಂಡಳು. ಅದೊಂದು ದೊಡ್ಡ ಹಾಪ್ ಮ್ಯಾಡ್ ಕೇಸು. ಆಕೆಗೆ ತಾನು, ತನ್ನ ಮನೆ, ಅಡುಗೆ, ಬಾಲ್ಯದಲ್ಲಿ ಗೆಳತಿಯಾಗಿದ್ದು ಜೊತೆಗೇ ಬಂದಿರುವ ಲಿಂಗವ್ವನ ಸಾಂಗತ್ಯ ಇಷ್ಟು ಇದ್ದು ಬಿಟ್ಟರೆ ಸಾಕು. ಬಾಕಿ ಏನೂ ಬೇಡ. ಮತ್ತೆ ಆಕೆ ಕನ್ನಡ ಶಾಲೆ ನಾಲ್ಕು ಪಾಸ್ ಅಷ್ಟೇ. ಹಾಗಾಗಿ ಪರಮ ಪಂಡಿತ ಪ್ರೊ. ಬಾಗೇವಾಡಿ ಮತ್ತು ಹೈಫೈ ಹೆಣ್ಣುಮಕ್ಕಳ ಮುಂದೆ ಆ ಪಾಪದ ಪತ್ನಿ, ಅಮ್ಮ ದೊಡ್ಡ ಬೋರ್ ಕೇಸು.

ಡ್ರೈವ್ ಮಾಡಿಕೊಂಡು ಹೊರಟ ಪ್ರೊಫೆಸರ್ ಠಾಣೆಗೆ ಬಂದು ಮುಟ್ಟಿದರು. ಯಾರು, ಏತಕ್ಕೆ ಬಂದಿದ್ದಾರೆ ಎಲ್ಲ ಹೇಳುವ ಜರೂರತ್ತೇ ಬರಲಿಲ್ಲ. ACP ಧೋಂಗಡೆ ಬಾಯಿಯೇ ಅವರನ್ನು ಒಳಗೆ ಕರೆದೊಯ್ದು ಮಗಳು ಜಯಮಾಲಾಳ ಮುಂದೆ ಕೂಡಿಸಿದಳು. 'Daddy. Please look at Sandy. How they have beaten him! That's very bad. Save him, Dad' ಅಂತ ಮಗಳು ಕಾನ್ವೆಂಟ್ ಇಂಗ್ಲೀಷಿನಲ್ಲಿಯೇ ಬೊಂಬಡಾ ಹೊಡೆದಳು. ತಾವು 'ಗೋಕಾಕ್ ವರದಿ ಜಾರಿಗೆ ಬರಲಿ' ಅಂತ ಘೋಷಣೆ ಕೂಗಿ ಮಕ್ಕಳನ್ನು ಮಾತ್ರ ಕಾನ್ವೆಂಟ್ ಶಾಲೆಗೆ ಹಾಕಿದ್ದು ಸಾರ್ಥಕವಾಯಿತು ಅನ್ನುವ ಭಾವನೆ ಪ್ರೊ. ಬಾಗೇವಾಡಿಗೆ ಬಂದಿರಲು ಸಾಕು. ಅಂತಹ ಪರಿಸ್ಥಿತಿಯಲ್ಲೂ ಇಂಗ್ಲೀಷಿನಲ್ಲಿ ಬೊಬ್ಬೆ ಹೊಡೆಯುತ್ತಾಳೆ. ಅದೂ ಅಷ್ಟು ಸುಲಲಿತವಾಗಿ. 'ಶಬಾಶ್ ಮಗಳೇ' ಅಂತ ಅಂದುಕೊಂಡರು. ಅವರ ಬಾಳೇ ಅವರನ್ನು ವ್ಯಂಗ್ಯ ಮಾಡಿದಂತೆ ಅನಿಸಿತು ಅವರಿಗೆ.

'ಮನೆಗೆ ಹೋಗೋಣ ಬಾ,' ಅಂತ ಹೇಳಿ ಮಗಳನ್ನು ಹೊರಡಿಸಲು ನೋಡಿದರು. ಆಕೆಯೋ ಅಮರ ಪ್ರೇಮಿ. ಆಕೆಯ ಪ್ರೇಮಿ ಸ್ಯಾಂಡಿ ಬಾಂದೇಕರನನ್ನೂ ಬಿಟ್ಟ ಹೊರತೂ ತಾನು ಠಾಣೆ ಬಿಟ್ಟು ಕದಲುವದಿಲ್ಲ ಅಂತ ಹೇಳಿ, ಕೂತಿದ್ದ ಬೆಂಚಿನಿಂದ ಇಳಿದು, ನೆಲದ ಮೇಲೆ ಪದ್ಮಾಸನ ಹಾಕಿ ಕುಳಿತೇ ಬಿಟ್ಟಳು ಜಯಮಾಲಾ. ಇನ್ನೂ ಹೆಚ್ಚಿನ ಒತ್ತಡ ಹಾಕಿದರೆ ಚಿಕ್ಕ ಮಕ್ಕಳಂತೆ ಹಟ ಮಾಡುತ್ತ ನೆಲಕ್ಕೆ ಹಣೆ ಹಣೆ ಘಟ್ಟಿಸಿಕೊಳ್ಳಲೂ ಸಹ ಸಿದ್ಧ ಅನ್ನುವ ಲುಕ್ ಕೊಟ್ಟಳು. ಪ್ರೊಫೆಸರ್ ಸಾಹೇಬರಿಗೆ ಮಗಳ ಮುಖದಲ್ಲಿ ತಮ್ಮ ಊರ ಹೊರಗಿನ 'ಉಗುಳು ಮಾರಿ' ಕ್ಷುದ್ರ ದೇವತೆ ಮಾರಮ್ಮ ನೆನಪಾದಳು. ಮಗಳಿಗೆ ನಾಲ್ಕು ಬಾರಿಸಿ ಎಳೆದುಕೊಂಡು ಹೋಗೋಣ ಅನ್ನುವಷ್ಟು ಸಿಟ್ಟು ಬಂತು. ಗಿಡವಾಗಿ ಬಗ್ಗದ್ದು ಈಗ ಮರವಾಗಿ ಬಗ್ಗೀತೇ? 'ಏನು ಮಾಡಲೀ?' ಅಂತ ಪ್ರೊಫೆಸರ್ ಬಾಗೇವಾಡಿ ಚಿಂತೆಗೆ ಒಳಗಾದರು.

ತಮ್ಮ ಕೆಲಸವಂತೂ ಆಯಿತು. ಮಗಳ ಬಾಯ್ ಫ್ರೆಂಡ್ ಪೊರ್ಕಿಯನ್ನು ಪೊಲೀಸರು ಹಿಡಿದು, ಚಡ್ಡಿ ಮೇಲೆ ಲಾಕಪ್ಪಿಗೆ ತಳ್ಳಿದ್ದಾರೆ. ಆತ ಪಾಠ ಕಲಿತಿರಬಹುದು. ಅವನನ್ನು ಲಾಕಪ್ ಒಳಗೇ ಕೂರಿಸಿ ಸಾಧಿಸುವದೇನಿದೆ? ಅವನನ್ನು ಬಿಟ್ಟು ಬಿಡಿ ಅಂತ ACP ಧೋಂಗಡೆ ಮೇಡಮ್ಮಿಗೆ ವಿನಂತಿ ಮಾಡಿದರು. ಅದಕ್ಕೆ ಮಾತ್ರ ACP ಧೋಂಗಡೆ ಸುತಾರಾಂ ಒಪ್ಪಲಿಲ್ಲ. ಅರೆ! ಒಳ್ಳೆ ಮಿಕ ಬಲೆಗೆ ಬಿದ್ದಿದೆ. ಅದೂ ದೊಡ್ಡ ಬಿಸಿನೆಸ್ ಕುಳ ಬಾಂದೇಕರ ಮನೆತನದ ಕರುಳ ಕುಡಿಯನ್ನೇ ಅಂದರ್ ಮಾಡಿಕೊಂಡು ಬಂದಿದ್ದಾರೆ. ಒಂದಿಷ್ಟು ಲಕ್ಷ ರೂಪಾಯಿ ಗುಂಜದೇ, ಈ ಮಳ್ಳ ಪ್ರೊಫ಼ೆಸರಪ್ಪ ಹೇಳಿದ ಅಂತ ಹಾಗೆಯೇ ಬಿಟ್ಟು ಕಳಿಸಲು ಆಕೆಗೇನು ಹುಚ್ಚೇ? ಆಕೆ ರೊಕ್ಕ ಮಾಡೋದು ಯಾವಾಗ? ಮೇಲಿನ ಅಧಿಕಾರಿಗಳಿಗೆ ಕಾಣಿಕೆ ತಲುಪಿಸೋದು ಯಾವಾಗ? ಹಾಂ? ಹಾಗಾಗಿ ಆಕೆ ACP ಧೋಂಗಡೆ ಪ್ರೊಫೆಸರ್ ಸಾಹೇಬರ ಕೋರಿಕೆ ಮನ್ನಿಸಲು ಸಿದ್ಧಳಾಗಲಿಲ್ಲ. ಪ್ರೊಫೆಸರ್ ಅವರು SP ಸಾಹೇಬರ ಜೊತೆ ಮಾತಾಡಿಸಿ ಅಂದರೆ ಅದು ಸಾಧ್ಯವಿಲ್ಲ ಅಂದು ಬಿಟ್ಟಳು.

ಈಗ ಪ್ರೊಫೆಸರ್ ಸಾಹೇಬರಿಗೆ ಏನು ಮಾಡಬೇಕೋ ತಿಳಿಯಲಿಲ್ಲ. ತನ್ನ ಬಾಯ್ ಫ್ರೆಂಡ್ ನನ್ನು ಹೊರಗೆ ಬಿಟ್ಟ ಹೊರತೂ ತಾನು ಠಾಣೆ ಬಿಟ್ಟು ಬರುವದಿಲ್ಲ ಅಂತ ಮಗಳು ಹಟ ಹಿಡಿದು ಕೂತು ಬಿಟ್ಟಿದ್ದಾಳೆ. ಆ ಹಲ್ಕಟ್ ಪೊರ್ಕಿಯನ್ನು ಬಿಟ್ಟುಬಿಡಿ ಅಂದರೆ ಪೋಲೀಸ್ ಮೇಡಂ ಒಪ್ಪುತ್ತಿಲ್ಲ. ಏನು ಮಾಡಬೇಕು ಪ್ರೊಫೆಸರ್ ಸಾಹೇಬರು? ಅವರಿಗೆ ಪೂರ್ತಿ ತಲೆ ಕೆಟ್ಟು, ತಾವೂ ಸಹ ಅಂಗಿ, ಪ್ಯಾಂಟು ಬಿಚ್ಚಿ, ಕೇವಲ ಚಡ್ಡಿ ಮೇಲೆ, ಮಗಳನ್ನೂ ಕರೆದುಕೊಂಡು ಲಾಕಪ್ಪಿನಲ್ಲಿ ಹೋಗಿ ಕೂತು ಬಿಡೋಣ ಅನ್ನಿಸುವಷ್ಟು ಸಾಕಾಗಿ ಬಿಟ್ಟಿತ್ತು. ಆಗ ACP ಧೋಂಗಡೆ ಬಾಯಿಯೇ ಒಂದು ಐಡಿಯಾ ಇದೆ ಅನ್ನುವ ಹಾಗೆ, 'ನಾನು ಎಲ್ಲ ಸರಿ ಮಾಡತೇನಿ. ನೀವು ಸುಮ್ಮ ಕೂತು ನೋಡ್ರೀ,' ಅನ್ನುವ ಹಾಗೆ ಪ್ರೊಫೆಸರ್ ಸಾಹೇಬರಿಗೆ ಕಣ್ಣು ಸನ್ನೆ ಮಾಡಿದಳು. ನಂತರ ಅಲ್ಲೇ ಇದ್ದ ಕ್ರೈಂ ಪೇದೆಗೆ ಏನೋ ಒದರಿ ಜೋರಾಗಿ ಆಜ್ಞೆ ಮಾಡಿದಳು. ಅದು ಏನೋ ಸಾಮಾನ್ಯ ಪೋಲೀಸ್ ಆಜ್ಞೆ ಇರಬೇಕು. ಪೇದೆ ತಾಪಡ್ತೋಪ್ ಕಾರ್ಯತತ್ಪರನಾದ. ಬಾಂದೇಕರ ಕುಳಿತಿದ್ದ ಲಾಕಪ್ಪಿನ ಬಾಗಿಲು ತೆಗೆದವನೇ, ಒಳಗೆ ಹೋಗಿ, ಬಾಂದೇಕರನ ಕುತ್ತಿಗೆಗೆ ಕೈ ಹಾಕಿ, ದರ ದರ ಎಳೆದುಕೊಂಡು ಆಕಡೆ ಹೋಗಿ ಬಿಟ್ಟ. ಎಲ್ಲಿ ಎಳೆದುಕೊಂಡು ಹೋದ ಅಂತ ಅದನ್ನೆಲ್ಲ ಬೆಕ್ಕಸ ಬೆರಗಾಗಿ ನೋಡುತ್ತಿದ್ದ ಜಯಮಾಲಾಳಿಗಾಗಲಿ, ಪ್ರೊಫೆಸರ್ ಸಾಹೇಬರಿಗಾಗಲಿ ತಿಳಿಯಲಿಲ್ಲ. ಆಗ ಫುಲ್ ಫಾರ್ಮಿಗೆ ಬಂದಳು ACP ಧೋಂಗಡೆ ಸಾವಿತ್ರಿಬಾಯಿ.

'ನೋಡವಾ ಹುಡುಗಿ, ನೋಡ್ರೀ ಪ್ರೊಫೆಸರ್ ಸಾಹೇಬ್ರ. ನಿಮಗ ಒಂದು ಮಾತು ನಾ ಈಗೇ ಕ್ಲೀರ್ ಮಾಡಿ ಬಿಡ್ತೇನಿ. ನೀವು ಏನೇ ಅಂದರೂ ನಮಗ ಆ ಸೂಳೆಮಗ ಬಾಂದೇಕರ ಪೈಕಿ ಹುಡುಗನ್ನ ಬಿಟ್ಟು ಕಳಿಸಾಕ ಆರ್ಡರ್ ಇಲ್ಲ. ಮತ್ತ ಈ ಹುಡುಗಿ ಹಟಾ ಮಾಡತೈತಿ ಅಂತ ರಾತ್ರಿ ಪೂರಾ ಇಕಿನ್ನ ಇಲ್ಲೇ ಇರಾಕ ನಾ ಹರ್ಗೀಸ್ ಕೊಡಂಗಿಲ್ಲ. ಅದು against law ಆಕ್ಕೈತಿ. ನೀವು ನೀವಾಗೇ ಹೋದರೆ ಭಾಳ ಛೊಲೋ. ಇಲ್ಲ ಅಂದ್ರ ನನ್ನ ತಲಿ ಕೆಡ್ತು ಅಂದ್ರ ಅಷ್ಟ ನೋಡ್ರೀ. ತಿಳಿತೇನವಾ ಹುಡುಗಿ? ಹಾಂ? ನಿಮ್ಮ ಅಪ್ಪಾರು ಬರಬಾರದ ಹೊತ್ತಿನ್ಯಾಗ, ಬರಬಾರದ ಜಗಾಕ್ಕ ಬಂದು, ನಿನ್ನ ಮನಿಗೆ ಕರ್ಕೊಂಡು ಹೋಗಬೇಕು ಅಂದ್ರ ಆ ಹಲ್ಕಟ್ ಸೂಳೆಮಗ ನಿನ್ನ ಗೆಣೆಕಾರ ಬಾಂದೇಕರ ಹುಡುಗನ್ನ ಹೊರಗ ಬಿಟ್ಟ ಹೊರತೂ ನೀ ಹೋಗಂಗಿಲ್ಲ ಅಂತ ಕುಂತಿಯೇನು? ಆಟಾ ಹಚ್ಚಿಯೇನು? ಹಾಂ?' ಅಂತ ಜೋರಾಗಿ ಆವಾಜ್ ಹಾಕಿದಳು.

ACP ಹಾಕಿದ ಆವಾಜಿನಿಂದ ಜಯಮಾಲಾ ಒಂದು ಕ್ಷಣ ಥಂಡಾ ಹೊಡೆದಿದ್ದಂತೂ ನಿಜ. ಆದರೆ ಆಕೆ ಹೆದರಲಿಲ್ಲ. ಆಗ ತೋಪಿನಲ್ಲಿ ಒಬ್ಬಳೇ ಬಾಂದೇಕರನ ಜೊತೆ ಸಿಗಬಾರದ ಸ್ಥಿತಿಯಲ್ಲಿ ಸಿಕ್ಕಾಗಲೇ ಹೆದರಲಿಲ್ಲ ಆಕೆ. ಈಗ ಜೊತೆಗೆ ತಂದೆ ಬೇರೆ ಇದ್ದಾರೆ. ಈಗ್ಯಾಕೆ ಪೋಲೀಸ್ ಮೇಡಂಗೆ ಹೆದರಬೇಕು ಆಕೆ? ಹೇಳಿ ಕೇಳಿ ಕಾನ್ವೆಂಟ್ ಶಾಲೆಯಲ್ಲಿ ಕಲಿತ ಪೂರ್ತಿ liberated ಹುಡುಗಿ ಅದು.

'ನೀವು ಏನು ಬೇಕಾದ್ದ ಮಾಡ್ರೀ ACP ಮೇಡಂ. ನನ್ನ ಪ್ರೀತಿಯ ಸ್ಯಾಂಡಿನ ನೀವು ಬಿಟ್ಟು ಕಳಿಸೋ ತನಕಾ ನಾ ಈ ಜಗಾ ಬಿಟ್ಟು ಕದಲಾಕಿ ಮಾತ್ರ ಅಲ್ಲ,' ಅಂತ ಹೇಳಿದ ಜಯಮಾಲಾ ಪಟ್ಟು ಹಿಡಿದು ಕೂತೇ ಇದ್ದಳು.

'ಏ ರಾಮಪ್ಪಾ! ಬಾರೋ ಇಲ್ಲೆ. ಆ ಬಾಂದೇಕರ ಹುಡುಗನ್ನ ಹಾಕಿ ಕಟ್ಟು. ಏ ಭೀಮಪ್ಪಾ ಚರ್ಮದ ಪಟ್ಟಾ ತೊಗೊಂಡು ಬಾರಲೇ. ಶುರು ಮಾಡೋಣ ನಮ್ಮ ಪೋಲೀಸ್ ಟ್ರೀಟ್ಮೆಂಟ್,' ಅಂತ ಹೇಳಿ ಅಬ್ಬರಿಸಿದ ACP ಧೋಂಗಡೆ ಮೇಡಂ ಆಕಡೆ ಹೋದರು. ಹೋಗಿ ಏನು ಮಾಡಿದರೋ ಗೊತ್ತಿಲ್ಲ. ನಂತರ ಕೇಳಿ ಬಂದಿದ್ದು ಮಾತ್ರ ಬಾಂದೇಕರನ ಭೀಕರ ಚೀತ್ಕಾರ. ಯಾವದೋ ಪ್ರಾಣಿಯನ್ನು ಜೀವಂತವಾಗಿ ಚರ್ಮ ಸುಲಿಯುತ್ತಿದ್ದಾರೋ ಅನ್ನುವಂತೆ ಕಿರುಚಿಕೊಳ್ಳುತ್ತಿದ್ದ ಬಾಂದೇಕರ್. ತನ್ನ ಪ್ರೇಮಿ ಸ್ಯಾಂಡಿಯ ಆ ಪರಿಯ ಚೀತ್ಕಾರ ಜಯಮಾಲಾಳ ಎದೆಯನ್ನೇ ಬಗೆದು, ಸೀದಾ ಹೃದಯಕ್ಕೇ ಕೈ ಹಾಕಿ, ಕರಾ ಪರಾ ಅಂತ ಕೆರೆದು ಬಿಟ್ಟಿತು. ಅಷ್ಟು ನೋವಾಯಿತು ಆಕೆಗೆ. 'Sandy! my dear Sandy. What's happening to you? What are they doing to you??' ಅಂತ ಮತ್ತೆ ಇಂಗ್ಲೀಷಿನಲ್ಲಿಯೇ ಬೊಂಬಡಾ ಹೊಡೆಯುತ್ತ, ಬಾಂದೇಕರನನ್ನು ಎಳೆದುಕೊಂಡು ಹೋಗಿದ್ದ ಕೋಣೆಯತ್ತ ಓಡಿದಳು. ಅಲ್ಲಿ ಕಂಡ ದೃಶ್ಯದಿಂದ ಫುಲ್ ಥಂಡಾ ಹೊಡೆದಳು. ತಲೆಗೆ ಚಕ್ಕರ್ ಬಂತು. ಆಕೆ ಬೀಳುವಷ್ಟರಲ್ಲಿ ಹಿಂದೆ ಬಂದ ಪ್ರೊಫೆಸರ್ ಸಾಹೇಬರು ಆಸರೆ ಕೊಟ್ಟಿದ್ದಕ್ಕೆ ಬೀಳಲಿಲ್ಲ ಅಷ್ಟೇ.

ಆ ಕೋಣೆಯಲ್ಲಿನ ದೃಶ್ಯ ಅಷ್ಟು ಭೀಕರವಾಗಿತ್ತು. ಬಾಂದೇಕರನನ್ನು ಒಂದು ಬೆಂಚಿನ ಮೇಲೆ ಅಂಗಾತ ಮಲಗಿಸಿದ್ದರು. ಮುಖ ಕೆಳಗೆ, ಬೆನ್ನು ಮೇಲೆ ಮಾಡಿ ಮಲಗಿಸಿದ್ದರು. ಕೈ ಕಾಲುಗಳನ್ನು ಬರೋಬ್ಬರಿ ಕಟ್ಟಿ ಹಾಕಿದ್ದರು. ದೊಡ್ಡ ಚರ್ಮದ ಪಟ್ಟಾದಿಂದ ACP ಧೋಂಗಡೆ ಮೇಡಂ ಅವನಿಗೆ ಸರಿಯಾಗಿ ಬಾರಿಸುತ್ತಿದ್ದಳು. ಪ್ರತಿ ಬಾರಿ ಆ ದಪ್ಪ ಚರ್ಮದ ಪಟ್ಟಾ ಆತನ ಬೆನ್ನ ಮೇಲೆ ಬಿದ್ದಾಗ ಒಂದು ದೊಡ್ಡ ಬಾಸುಂಡೆ ಮೂಡಿ ಕೆಂಪಾಗುತ್ತಿತ್ತು. ಅದಕ್ಕೆ ಸಾಥಿ ಎಂಬಂತೆ ಪೇದೆಯೊಬ್ಬ ಲಾಠಿಯಿಂದ ಅವನ ಕಾಲಿನ ಹಿಮ್ಮಡದ ಮೇಲೆ ಬರೋಬ್ಬರಿ ಬಾರಿಸುತ್ತಿದ್ದ. ಬಾಂದೇಕರ್ ಮಾತ್ರ ಚರ್ಮ ಸುಲಿಸಿಕೊಳ್ಳುತ್ತಿರುವ ಜೀವಂತ ಪ್ರಾಣಿಯಂತೆ ಲಬೋ ಲಬೋ ಅಂತ ಹೊಯ್ಕೊಳ್ಳುತ್ತಿದ್ದ. ಅವನಿಗೆ ಅದೆಷ್ಟು ನೋವಾಗುತ್ತಿತ್ತೋ ಏನೋ! ಪಾಪ!

ಟಾರ್ಚರ್ ಚೇಂಬರ್ ಬಾಗಿಲಲ್ಲಿ ಬಂದು ನಿಂತ ಜಯಮಾಲಾ ಮತ್ತು ಪ್ರೊಫೆಸರ್ ಸಾಹೇಬರನ್ನು ನೋಡಿದ ACP ಮೇಡಂ ಒಂದು ಕ್ಷಣ ಹೊಡೆಯುವದನ್ನು ನಿಲ್ಲಿಸಿ, ಪೇದೆಗೂ ನಿಲ್ಲಿಸುವಂತೆ ಹೇಳಿ, ಹೊರಗೆ ಬಂದಳು. ಕಬ್ಬಿಣ ಕಾದಿದೆ ಅಂತ ಆಕೆಗೆ ಬರೋಬ್ಬರಿ ಗೊತ್ತು. ಈಗೇ ಬಡಿದು ಬಿಡಬೇಕು. ಬಡಿದು ಈ ಮಳ್ಳ ಹುಡುಗಿ ಮತ್ತು ಆಕೆಯ ತಂದೆಯನ್ನು ಸಾಗಹಾಕಬೇಕು.

'ನೋಡು ಹುಡುಗಿ. ನೀ ಹಟ ಮಾಡಿಕೋತ್ತ ಇಲ್ಲೇ ಕುಂದರ್ತಿ ಅಂದ್ರ ನಾ ಈ ಹುಡುಗನ್ನ ಇವತ್ತು ಸಾಯ್ ಬಡಿಯಾಕಿನೇ. ಬೇಕಾದ್ರ ಲಾಕಪ್ ಡೆತ್ ಆಗೇ ಹೋಗ್ಲೀ. ಅವನೌನ್ ನಾ ಕೇರ್ ಮಾಡಂಗಿಲ್ಲ. ನನ್ನ ಕೈಯಾಗ ಅದೆಷ್ಟು ಲಾಕಪ್ ಡೆತ್ ಆಗಿ ಹೋಗ್ಯಾವ. ಹೆಣಾ ಸಹಿತ ಸಿಗದಾಂಗ ಗಾಯಬ್ ಮಾಡಿಸಿಬಿಡ್ತೇನಿ. ತಿಳಿತೇನು? ನೀನು ಮನಸ್ಸು ಬದಲು ಮಾಡಿ, ನಿಮ್ಮ ಅಪ್ಪಾರ ಜೋಡಿ ಮನಿಗೆ ಹೋದ್ರ, ನಾ ಅವಂಗ ಹೊಡೆಯೋದು ನಿಲ್ಲಿಸಿ, ನಾಳೆ ಮುಂಜಾನೆ ಏನು ಮಾಡಬೇಕೋ ಎಲ್ಲ ಮಾಡಿ, ಅವನ್ನ ಮನಿಗೆ ಕಳಿಸ್ತೇನಿ. ಒಂದು ಮಾತು ಮತ್ತ. ಆವಾ ಭಾಡ್ಕೋ ಮತ್ತ ಏನರೆ ನಿನ್ನ ಹಿಂದ ಬಿದ್ದಾ ಅಥವಾ ನೀನೆ ಅವನ ಹಿಂದ ಬಿದ್ದಿ ಅಂತ ನನಗ ಏನರೆ ಕಂಪ್ಲೇಂಟ್ ಬಂತು ಅಂದ್ರ ಅಷ್ಟೇ ಮತ್ತ. ಈಗ ಒಳ್ಳೆ ಪರಿಚಯ ಆಗೈತಿ. ಅವನ್ನ ಹಿಡಕೊಂಡು ಬಂದು ಮತ್ತ ಹಾಕ್ಕೊಂಡು ರುಬ್ಬತೇನಿ. ಇಬ್ಬರೂ ದೂರ ದೂರ ಉಳಿಯೋದು ನಿಮಗೇ ಚೊಲೋದು. ಐದು ನಿಮಿಷ ಟೈಮ್ ಕೊಡತೇನಿ. ವಿಚಾರ ಮಾಡು. ಮನಿಗೆ ಹೋಗ್ತೀಯೋ ಅಥವಾ ಇಲ್ಲೇ ಕುಂತು ನಿನ್ನ ಹುಡುಗನ ಲಾಕಪ್ ಡೆತ್ ಆದ ಮ್ಯಾಲೆ ಅವನ ಹೆಣ ಮಣ್ಣು ಮಾಡಾಕ ತೊಗೊಂಡು ಹೋಗ್ತೀಯೋ ಅಂತ. Choice is yours. It's entirely your choice my girl,' ಅಂತ ACP ಮೇಡಂ ಖಡಕ್ ಡೈಲಾಗ್ ಹೊಡೆದು, ತಾವೂ ಹೊರಗೆ ಬಂದು, ತಮ್ಮ ಪೇದೆಗಳಿಗೂ ಹೊರಗೆ ಬರಲು ಹೇಳಿದರು.

ಅದು ಮಾಸ್ಟರ್ ಸ್ಟ್ರೋಕ್. ಅದಕ್ಕೆ ಜಯಮಾಲಾ ಕ್ಲೀನ್ ಬೌಲ್ಡ್. ಆಕೆಗೇನು ಗೊತ್ತು ಪೋಲೀಸರ ನಾನಾ ರೀತಿಯ ಟೆಕ್ನೀಕುಗಳ ಬಗ್ಗೆ? ಇನ್ನೂ ಇಲ್ಲೇ ಕುಳಿತಿದ್ದರೆ ಪೊಲೀಸರು ಹೊಡೆದು, ಬಡಿದು ತನ್ನ ಸ್ಯಾಂಡಿಯನ್ನು ಕೊಂದೇ ಬಿಡುತ್ತಾರೆ ಅಂತ ತಿಳಿದು ಮನೆಗೆ ಹೊರಡುವ ನಿರ್ಧಾರ ಮಾಡಿ, ಅಪ್ಪ ಪ್ರೊಫೆಸರ್ ಸಾಹೇಬರ ಮುಖ ನೋಡಿ ತಲೆಯಾಡಿಸಿದಳು. 'Yes, baby, let's go home and have a nice dinner. Let me fix you a nice drink for you tonight. You have had a very rough day. I can see that. Let's go baby. Come on,' ಅಂತ ಇಲ್ಲದ ಮುದ್ದು ಮಾಡಿ ಮನೆಗೆ ಕರೆದುಕೊಂಡು ಹೋಗಲಿಕ್ಕೆ ತಯಾರಾದರು ಪ್ರೊಫೆಸರ್ ಬಾಗೇವಾಡಿ. ಅವರಿಗೆ ಇಷ್ಟು ಸಂತೋಷವಾಗಿತ್ತು ಅಂದರೆ ಮಗಳಿಗೆ ಒಂದೇ ಡ್ರಿಂಕ್ ಅಲ್ಲ ಕೇಳಿದ್ದರೆ ಇಡೀ ಬಾಟಲಿಯನ್ನೇ ಎತ್ತಿ ಕುಡಿಸುವಷ್ಟು ಸಂತೋಷವಾಗಿತ್ತು.

ಪ್ರೊಫೆಸರ್ ಸಾಹೇಬರು ಮಗಳನ್ನು ಕರೆದುಕೊಂಡು, ಕಾರಿನಲ್ಲಿ ಠಾಣೆಯ ಗೇಟ್ ದಾಟಿದ್ದೇ ದಾಟಿದ್ದು, ACP ಧೋಂಗಡೆ ಮೇಡಂ ತಮ್ಮ ಗೊಗ್ಗರು ದನಿಯಲ್ಲಿ, 'ಏ ಇವನ. ಒಂದು ಕೆಲಸ ಮಾಡು. ಆ ವ್ಯಾಪಾರಿ ಬಾಂದೇಕರಗ ಫೋನ್ ಹಚ್ಚು. ಮಗನ್ನ ಹಾಕ್ಕೊಂಡು ರುಬ್ಬಾಕತ್ತೇವಿ, ಮಗ ಜೀವಗೂಡ ಇರಬೇಕು ಅಂದ್ರ ಏಳು ಲಕ್ಷ ರೂಪಾಯಿ ಕೂಡಿಸಿ ಈಗೇ ತೊಗೊಂಡು ಬಾ ಅನ್ನು. ಚೌಕಾಶಿ ಮಾಡಿದರೆ ಐದು ಲಕ್ಷಕ್ಕೆ ಸೆಟಲ್ ಆಗು. ಅದ್ಕೂ ಕಮ್ಮಿ ಮಾತ್ರ ಇಲ್ಲ. ಹ್ಯಾಂಗೂ ನಾಳೆ ಈ ಭಾಡ್ಯಾನ್ನ ಹೀಂಗೇ ಮಾಡಿ, ಅವರಪ್ಪನ್ನ ಕರೆಯಿಸಿ ಡೀಲ್ ಮಾಡಬೇಕು ಅಂತ ಮಾಡಿದ್ದೆ. ಆದ್ರ ಆ ಹುಚ್ಚು ಹುಡುಗಿ ಕಾರಣದಿಂದ ಈ ಸೂಳೆಮಗನ್ನ ಇವತ್ತೇ ರುಬ್ಬೋ ಪರಿಸ್ಥಿತಿ ಬಂತು. ಹಂಗಾಗಿ ಈಗೇ ರಾತ್ರಿನೇ ಡೀಲ್ ಮಾಡಿ ಮುಗಿಸಿಬಿಡ್ತೇನಿ. ನಾಳಿ ಮುಂಜಾನಿ ತನಕಾ ಈ ಹುಚ್ಚ ಸೂಳೆ ಮಗ ಸತ್ತು ಹೋದ ಅಂದ್ರ ದೊಡ್ಡ ತಲಿ ಬ್ಯಾನಿ. ಫೋನ್ ಹಚ್ಚೋ!' ಅಂತ ಆರ್ಡರ್ ಮಾಡಿದಳು. ಅದರ ಪ್ರಕಾರ ಪೋಲೀಸ್ ಪೇದೆಯೊಬ್ಬ ಬಾಂದೇಕರನ ಅಪ್ಪನಿಗೆ ಫೋನ್ ಮಾಡಿ, ಎಲ್ಲ ವಿವರಿಸಿ, ಡೀಲ್ ಕುದುರಿಸಿದ. ಸತ್ತೆನೋ ಬಿದ್ದೆನೋ ಅಂತ ಓಡಿ ಬಂದ ಬಾಂದೇಕರನ ಅಪ್ಪ, ರೊಕ್ಕ ಕೊಟ್ಟು, ಮಗನನ್ನು ಬಿಡಿಸಿಕೊಂಡು ಹೋದ. ಆಕಡೆ ಜಯಮಾಲಾ ಮನೆ ಮುಟ್ಟಿ ಒಂದು ಘಂಟೆಯೊಳಗೆ ಬಾಂದೇಕರ ಸಹ ಮನೆ ಮುಟ್ಟಿ, ಅಂಗಾತ ಬಿದ್ದುಕೊಂಡು ನೋವಿನಿಂದ ಮುಲುಗಲು ಶುರು ಮಾಡಿದ. ಪ್ರೀತಿಯ ಅಮ್ಮ ಇಪ್ಪತ್ತೈದು ವರ್ಷದ ಕೋಣ ಮಗನಿಗೆ, ಪ್ರೀತಿಯಿಂದ ಕೊಂಕಣಿಯಲ್ಲಿ ಬೈಯುತ್ತ ಉಪ್ಪಿನ ಶಾಖ ಕೊಡಲು ಆರಂಭಿಸಿದಳು. ಅಮ್ಮನ ಪ್ರೀತಿ ಎದುರು ರೌಡಿ ಬಾಂದೇಕರ ಮಗುವಾದ, ಕಣ್ಣಲ್ಲಿ ನೀರಾದ.

ಈ ದೊಡ್ಡ ಲಫಡಾ ಆದ ಒಂದೇ ಒಂದು ವಾರಕ್ಕೆ ಪ್ರೊ. ಬಾಗೇವಾಡಿ ಮನೆಯಿಂದ ಲಿಂಗವ್ವ ನಾಪತ್ತೆಯಾಗಿಬಿಟ್ಟಳು. ಎಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ. ಆಕೆಗೆ ಪ್ರೊ. ಬಾಗೇವಾಡಿ ಕುಟುಂಬ ಬಿಟ್ಟರೆ ಬೇರೆ ಯಾರೂ ಇಲ್ಲ. ಆಕೆ ನಿರ್ಗತಿಕಳು. ಅದೇ ಕಾರಣಕ್ಕೆ ಪ್ರೊ. ಬಾಗೇವಾಡಿಯವರ ಮಾವ ಆಕೆಯನ್ನು ಮಗಳ ಜೊತೆ ಕೆಲಸಕ್ಕೆ, ಸಾಂಗತ್ಯಕ್ಕೆ ಇರಲಿ ಅಂತ ಕಳಿಸಿಕೊಟ್ಟಿದ್ದ. ಬಾಗೇವಾಡಿ ಕುಟುಂಬ ವಿದೇಶಗಳಿಗೆ ಹೋದಾಗ ಮಾತ್ರ ಆಕೆ ಬಿಜಾಪುರ ಕಡೆ ಹೋಗಿ, ಉಳಿದು ಬರುತ್ತಿದ್ದಳು. ಅಂತಹ ಲಿಂಗವ್ವ ಒಮ್ಮೆಲೇ ನಾಪತ್ತೆಯಾಗಿಬಿಟ್ಟಳು, ಅದೂ ಘಂಟೆಗಟ್ಟಲೇ, ದಿನಗಟ್ಟಲೇ ನಾಪತ್ತೆಯಾಗಿಬಿಟ್ಟಳು ಅಂದಾಕ್ಷಣ ಎಲ್ಲರೂ ಘಾಬರಿಯಾದರು. ಒಂದೋ ಎರಡೋ ದಿವಸ ಕಾದು ನೋಡಿದರು. ಆಗ ಕೂಡ ಎಂದು ಬರಲಿಲ್ಲವೋ ಪೊಲೀಸರಿಗೆ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟು ಬಂದರು. ಮತ್ತೆ ಅದೇ ಪೋಲೀಸ್ ಠಾಣೆಯಲ್ಲಿ. ಪ್ರೊ. ಬಾಗೇವಾಡಿ ಜೀವನದಲ್ಲಿ ಎಂದೂ ಪೋಲೀಸ್ ಠಾಣೆ ಮೆಟ್ಟಿಲು ಹತ್ತದಿದ್ದವರು ಹದಿನೈದು ದಿವಸಗಳಲ್ಲಿ ಎರಡು ಬಾರಿ ಹೋಗಿ ಬಂದಿದ್ದರು. ಅವರ SP ದೋಸ್ತ ಮತ್ತೆ ಮುತುವರ್ಜೀ ವಹಿಸಿ ತನಿಖೆ ಮಾಡಿಸಿದ. ಹೆಚ್ಚು ಹುಡುಕುವದು ಬೇಕಾಗಲೇ ಇಲ್ಲ. ಊರ ಹೊರಗಿನ ಕೆರೆಯಲ್ಲಿ ಹೆಣವೊಂದು ತೇಲುತ್ತಿತ್ತು. ಸತ್ತು ಮೂರ್ನಾಕು ದಿವಸಗಳಾಗಿತ್ತು ಅಂತ ಕಾಣುತ್ತದೆ. ವಿಕಾರಾಗಿ ಉಬ್ಬಿತ್ತು. ಹೆಣ ಈಚೆ ಎಳೆದು, ಗುರುತಿಸಲು ಪ್ರೊ. ಬಾಗೇವಾಡಿಯನ್ನು ಕರೆಸಿದರು. ನೋಡಿದರೆ ಅದು ಲಿಂಗವ್ವನದೇ ಹೆಣವಾಗಿತ್ತು!

ಪೊಲೀಸರು ಆತ್ಮಹತ್ಯೆ ಅಂತ ಕೇಸ್ ಕ್ಲೋಸ್ ಮಾಡಿದರು. ಲಿಂಗವ್ವನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಯಾವದೇ ಕಾರಣಗಳೂ ಇರಲಿಲ್ಲ. ಪ್ರೊ. ಬಾಗೇವಾಡಿ ಕುಟುಂಬದಲ್ಲಿ ಒಬ್ಬಳಾಗಿ ಏಕ್ದಂ ಆರಾಮ್ ಇದ್ದಳು ಆಕೆ. ಅಂತವಳು ಸಡನ್ನಾಗಿ ಕೆರೆಯಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಅಂದರೆ!? ತುಂಬ ಅಸಹಜ ಅನ್ನಿಸಿತು.

ಲಿಂಗವ್ವ ಸತ್ತ ಸುದ್ದಿ ಕೇಳಿದ ಜಯಮಾಲಾ ಮಾತ್ರ 'ಲಿಂಗವ್ವಾ! I can't believe you are gone. I really can't believe. Why did you kill yourself? Please tell me,' ಅಂತ ಬಿಕ್ಕಿ ಬಿಕ್ಕಿ ಅತ್ತಿದ್ದಳು. ತಂದೆ ಬಾಗೇವಾಡಿ ಎದೆ ಮೇಲೆ ತಲೆಯಿಟ್ಟು ಅತ್ತು ಅತ್ತು, ಕಣ್ಣೀರೆಲ್ಲ ಬತ್ತಿ ಹೋದ ಮೇಲೆ ತಲೆ ಈಚೆ ತೆಗೆದರೆ ಪ್ರೊಫೆಸರ್ ಸಾಹೇಬರ ಅಂಗಿ ಮಗಳ ಕಂಬನಿಯಿಂದ ಫುಲ್ ಒದ್ದೆ. ಪ್ರೊಫೆಸರ್ ಸಾಹೇಬರ ಮುಗ್ಧ ಹೆಂಡತಿ ಮಾತ್ರ ತನ್ನ ಆತ್ಮೀಯ ಬಾಲ್ಯ ಗೆಳತಿ ಲಿಂಗವ್ವಳನ್ನು ಕಳೆದುಕೊಂಡು ಶೂನ್ಯ ದಿಟ್ಟಿಸುತ್ತಿದ್ದಳು.

ಲಿಂಗವ್ವ ನಿಜವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಳೇ ಅಥವಾ ಆಕೆಯನ್ನು ಯಾರಾದರೂ ಕೊಲೆ ಮಾಡಿ ಕೆರೆಯಲ್ಲಿ ಮುಳುಗಿಸಿ ಬಂದಿದ್ದರೋ? ಅದು ಮಾತ್ರ ಯಾರಿಗೂ ಗೊತ್ತಿಲ್ಲದ ಚಿದಂಬರ ರಹಸ್ಯ.

Fast forward. ಇಪ್ಪತ್ತೈದು ವರ್ಷಗಳ ನಂತರ. ಈಗ ಪ್ರೊಫೆಸರ್ ಬಾಗೇವಾಡಿ ಧಾರವಾಡದಲ್ಲಿಲ್ಲ. ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ. ಅವರಿಗೆ ಈಗ ಸುಮಾರು ಎಂಬತ್ತು ವರ್ಷ. ಹೆಣ್ಣುಮಕ್ಕಳಿಬ್ಬರೂ ಮದುವೆಯಾಗಿ ಅಮೇರಿಕಾದಲ್ಲಿ ನೆಲೆಸಿದ್ದಾರೆ. 'ಡ್ಯಾಡ್, ನೀವು ಬೆಂಗಳೂರಿಗೆ ಅಥವಾ ಮುಂಬೈಗೆ ಶಿಫ್ಟ್ ಆಗಿ. ನಮಗೆ ಬಂದು ಹೋಗಿ ಮಾಡಲು ಸುಲಭ. ವಿಮಾನ ಸೌಲಭ್ಯವಿಲ್ಲದ ಧಾರವಾಡಕ್ಕೆ ಬಂದು ಹೋಗಿ ಮಾಡುವದು ಕಷ್ಟ,' ಅಂತ ಹೆಣ್ಣುಮಕ್ಕಳು, ಅಳಿಯಂದಿರು ಎಲ್ಲ ಬಹಳ ಹೇಳಿದ್ದಕ್ಕೆ ತಮ್ಮ ತುಂಬ ಪ್ರೀತಿಯ ಧಾರವಾಡ ಬಿಟ್ಟು ಬಂದು ಬೆಂಗಳೂರಿನಲ್ಲಿ ಒಂದು ಒಳ್ಳೆ ಫ್ಲಾಟ್ ಹಿಡಿದು ನೆಲೆಸಿದ್ದಾರೆ ಪ್ರೊ. ಬಾಗೇವಾಡಿ. ನಿವೃತ್ತ ಜೀವನ ಹೇಗೋ ಸಾಗುತ್ತಿದೆ. ಶಕ್ತಿ ಕುಂದುತ್ತಿದೆ. ಆದರೆ ಪ್ರೊಫೆಸರ್ ಸಾಹೇಬರು ತಮ್ಮ ಅಧ್ಯಯನ, ಪ್ರವಚನ ಇತ್ಯಾದಿ ಬಿಟ್ಟಿಲ್ಲ. ಹಳೆಯ ರಂಗೀನ್ ನೆನಪುಗಳನ್ನು ತಾಜಾ ಮಾಡಿಕೊಡಲು ಕೆಲ ಪುರಾತನ ಸಖಿಯರೂ ಸಹ ಬೆಂಗಳೂರಲ್ಲೇ ನೆಲೆಸಿದ್ದಾರೆ. ಆಗಾಗ ಬಂದು ಪ್ರೊಫೆಸರ್ ಸಾಹೇಬರ ಜೊತೆ ಹರಟೆ ಹೊಡೆದು, ಡ್ರಿಂಕ್ಸ ಮಾಡಿ ಒಂದು ರೀತಿಯ ಸಂತೋಷ ಕೊಟ್ಟು ಹೋಗುತ್ತಾರೆ.

ಅದೊಂದು ದಿವಸ ಸಂಜೆ ಸುಮಾರು ಏಳೂವರೆ ಹೊತ್ತು. ಪ್ರೊಫೆಸರ್ ಸಾಹೇಬರು ತಮ್ಮ ಮನೆಯ ಬಾಲ್ಕನಿಯಲ್ಲಿ ಕೂತಿದ್ದರು. ಮುಂದೆ ದುಬಾರಿ ವಿಸ್ಕಿ, ಸೋಡಾ, ಜೊತೆಗೆ ಮೆಲ್ಲಲು ಕುರ್ಕುರೆ ಎಲ್ಲ ಇತ್ತು. ತಮ್ಮ ಪೈಪಿಗೆ ತಂಬಾಕು ತುಂಬಿಸಿಕೊಂಡರು ಪ್ರೊಫೆಸರ್ ಬಾಗೇವಾಡಿ. ಅದು ಅವರ ಸುಮಾರು ಐವತ್ತು ವರ್ಷಗಳ ಸಂಪ್ರದಾಯ. ಸಂಜೆಯಾಯಿತು ಅಂದರೆ ಪೈಪ್ ಸೇದುತ್ತ ಒಂದೆರೆಡು ಪೆಗ್ ಹಿತಮಿತವಾಗಿ ಹಾಕಿ, ಬರೋಬ್ಬರಿ ಒಂಬತ್ತಕ್ಕೆ ನಿಲ್ಲಿಸಿ, ಸ್ವಲ್ಪೇ ಊಟ ಮಾಡಿ, ಮತ್ತೆ ಸ್ವಲ್ಪ ಓದಿ, ನಂತರ ಮಲಗಿಬಿಡುವದು. ಅದನ್ನು ತಪ್ಪದೇ ಪಾಲಿಸಿಕೊಂಡು ಬಂದಿದ್ದಾರೆ ಪ್ರೊಫೆಸರ್. ಹಿಂದೆ ಮುಂದೆ ಆಗುವ ರಾಕಿಂಗ್ ಖುರ್ಚಿಯಲ್ಲಿ (rocking chair) ಕೂತು, ಸಣ್ಣದಾಗಿ ಹಿಂದೆ ಮುಂದೆ ರಾಕಿಂಗ್ ಮಾಡುತ್ತ ಒಂದು ಡ್ರಿಂಕ್ ಮಾಡಿಕೊಂಡರು ಪ್ರೊಫೆಸರ್. ಅವರ ಮುಂದೆ ಸಹಿತ ಅಂತಹದೇ ಒಂದು ರಾಕಿಂಗ್ ಚೇರ್ ಇತ್ತು. ಅದರಲ್ಲಿ ಯಾರೂ ಕೂತಿರಲಿಲ್ಲ. ಡ್ರಿಂಕ್ ಮಾಡಿಕೊಳ್ಳಲು ಪ್ರೊಫೆಸರ್ ಬಗ್ಗಿದಾಗ ಅವರ ಮುಂದೆ  ಇದ್ದ ರಾಕಿಂಗ್ ಚೇರ್ ಒಂದು ಸಲ ಕಿರ್ರ್ ಅಂದಿತು. ಸ್ವಲ್ಪ ಹಿಂದೆ ಮುಂದೆ ಆಯಿತು ಯಾರೋ ಬಂದು ಕೂತಂಗೆ. ಆದರೆ ಅದನ್ನು ಪ್ರೊಫೆಸರ್ ಗಮನಿಸಲಿಲ್ಲ.

ಡ್ರಿಂಕ್ ಮಾಡಿಕೊಂಡು ಒಂದು ಸಿಪ್ ಕುಡಿದ ಪ್ರೊಫೆಸರ್ ಪೈಪ್ ಹಚ್ಚಿದರು. ಒಂದು ದೀರ್ಘ ದಮ್ ಎಳೆದು, ಇಂಪೋರ್ಟೆಡ್ ವರ್ಜೀನಿಯಾ ತಂಬಾಕಿನ ಖಡಕ್ ಸುಗಂಧ ಹೀರಿದರು. ಶುದ್ಧ ತಂಬಾಕು. ಒಳಗಿನ ನಿಕೋಟಿನ್ ಬರೋಬ್ಬರಿ ಕಿಕ್ ಕೊಟ್ಟಿತು. ಸುರುಳಿ ಸುರುಳಿಯಾಗಿ ಹೊಗೆ ಬಿಟ್ಟರು ಪ್ರೊಫೆಸರ್. ಸುರುಳಿ ಸುರುಳಿಯಾಗಿ ಮೇಲೆ ಹೋಗುತ್ತಿದ್ದ ಹೊಗೆ ನೋಡುತ್ತ ಕುಳಿತರು. ಅದು ಸಹಜವಾಗಿ ಹಾರಿ ಹೋಗಬೇಕಾದ ಹೊಗೆ. ಆದರೆ ಹಾಗಾಗದೇ ಆ ಹೊಗೆ ಅಲ್ಲೇ ಸುತ್ತತೊಡಗಿತು. ಮತ್ತೂ ದಟ್ಟವಾಗತೊಡಗಿತು. ಅಷ್ಟು ಸ್ವಲ್ಪ ಸಿಗರೇಟಿನ ಹೊಗೆ ಅದೆಷ್ಟು ದಟ್ಟವಾಯಿತು ಅಂದರೆ ಪ್ರೊಫೆಸರ್ ಅವರಿಗೆ ಏನೂ ಕಾಣದಂತಾಯಿತು. ಅಂತದ್ದರಲ್ಲೇ ತಮ್ಮ ವಿಸ್ಕಿ ಗ್ಲಾಸ್ ಎತ್ತಿಕೊಳ್ಳಲು ಹೋದರು. ಸರಿಯಾಗಿ ಕಾಣದೇ ಗ್ಲಾಸ್ ನೆಲಕ್ಕೆ ಬಿದ್ದು, ಠಳ್ ಅಂತ ಒಡೆದು, ದೊಡ್ಡ ಸದ್ದಾಯಿತು. ಪ್ರೊಫೆಸರ್ ಮುಂದೆ ಇದ್ದ ಖಾಲಿ ರಾಕಿಂಗ್ ಖುರ್ಚಿಯಿಂದ ಯಾರೋ ಎದ್ದು ಬಂದರೇನೋ ಅನ್ನುವಂತೆ ಅದು ವಿಪರೀತವಾಗಿ ಹಿಂದೆ ಮುಂದೆ ಅಲ್ಲಾಡತೊಡಗಿತು. ಖುರ್ಚಿ ಬಿಟ್ಟು ಎದ್ದು ಬಂದ ಯಾವದೋ ಆಕೃತಿ ಹೊಗೆಯಲ್ಲಿ ಸೇರಿಕೊಂಡು, ದಟ್ಟವಾಗಿದ್ದ ಹೊಗೆ ಸುಂಟರಗಾಳಿಯಂತೆ ಚಕ್ರಚಕ್ರವಾಗಿ ತಿರುಗತೊಡಗಿ, ಅದರಲ್ಲೇ ಪ್ರೊಫೆಸರ್ ಕಳೆದು ಹೋದಂತಾಗಿ, ಅವರು ತಮ್ಮ ಸುಪ್ತ ಪ್ರಜ್ಞೆಯ ಯಾವದೋ ಒಂದು ಬೇರೆಯ ಹಂತವನ್ನೇ ತಲುಪತೊಡಗಿದರು. ಅಷ್ಟಾದಾಗ ಹೊಗೆ ಸ್ವಲ್ಪ ಕಮ್ಮಿಯಾಗಿ ಅದರಲ್ಲೊಂದು ಆಕೃತಿ ಮೂಡತೊಡಗಿತು. ಕಣ್ಣು ಬಿಟ್ಟು ನೋಡಿದರು. ಕಣ್ಣು ಉಜ್ಜಿಕೊಂಡು ನೋಡಿದರು. ಆಕೃತಿ ಮಾತಾಡತೊಡಗಿತು. ಸರಿಯಾಗಿ ಕಾಣುತ್ತಿರಲಿಲ್ಲ. ಆದರೆ ಮಾತು ಸರಿಯಾಗಿ ಕೇಳುತ್ತಿತ್ತು.

'ನಮಸ್ಕಾರ ಯಣ್ಣಾ. ಹ್ಯಾಂಗದೀ? ಆರಾಮ್ ಅದೀ? ಹರೇದಾಗ ನಿನ್ನ ನೋಡಿ ನಮ್ಮಣ್ಣಗ ವಯಸ್ಸು ಆಗೋದೇ ಇಲ್ಲ ಅಂತ ಮಾಡಿದ್ದೆ. ನೀನೂ ಕೂಡೆ ಮುದುಕ ಮುತ್ಯಾ ಆಗಿಬಿಟ್ಟಿಯಲ್ಲೋ ಯಣ್ಣಾ! ನನ್ನ ಖುನಾ ಹಿಡದಿ? ಹಾಂ? ಇಲ್ಲ? ನಾನೋ ಯಣ್ಣಾ. ನಿಮ್ಮ ಲಿಂಗವ್ವ. ನಿಮ್ಮ ಮನಿಯಾಗ ಕೆಲಸ ಮಾಡಿಕೊಂಡಿದ್ದೆ. ನಿಮ್ಮ ಲಗ್ನದ ವೇಳ್ಯಾದಾಗ ನಿನ್ನ ಹೆಂಡ್ತಿ ಜೋಡಿ ಬಂದಿದ್ದೆ. ನೆನಪಾತ ಯಣ್ಣಾ?' ಅಂತ ಆ ಅಸ್ಪಷ್ಟ ಆಕೃತಿ ಮಾತಾಡಿತು.

'ಏನು? ಏನು? ನೀನು ಲಿಂಗವ್ವನೇ? ಹಾಂ? ನೀ ಸತ್ತು ಹೋಗಿ ಇಪ್ಪತ್ತೈದು ವರ್ಷದ ಮ್ಯಾಲೆ ಆಗಿಹೋತು. ಏನಾಗಿತ್ತಬೇ ನಿನಗ ತಂಗಿ? ಕೆರಿಯೊಳಗ ಮುಳುಗಿ ಸತ್ತಿ. ಏನಾಗಿತ್ತು ಸಾಯಲಿಕ್ಕೆ? ನಮ್ಮ ಮನಿಯಾಗ ನೀನೂ ಸಹ ನಮ್ಮ ಒಬ್ಬಾಕಿ ಅನ್ನೋಹಾಂಗ ನೋಡಿಕೊಂಡಿವಿ. ಆದರೂ ನಿನ್ನ ಕೈಯಾಗೇ ನೀನೇ ನಿನ್ನ ಕೊಂದುಕೊಂಡುಬಿಟ್ಟಿ ನೋಡು. ಯಾಕ ಹಾಂಗ ಮಾಡಿದಿ ಲಿಂಗವ್ವಾ????' ಅನ್ನುತ್ತ ಪ್ರೊಫೆಸರ್ ಬಾಗೇವಾಡಿ ರೋಧಿಸಿದರು.

'ಯಣ್ಣಾ, ನಾನು ನಾನಾಗೇ ಸಾಯಲಿಲ್ಲ ಯಣ್ಣಾ' ಅಂದ ಲಿಂಗವ್ವ ಮಾತು ನಿಲ್ಲಿಸಿದಳು.

'ಮತ್ತೇ? ನೀನೇ ಮುಳುಗಿ ಸಾಯಲಿಲ್ಲ ಅಂದ್ರ? ಮತ್ತೇನು?' ಅಂತ ಘಾಬರಿಯಿಂದ ಕೇಳಿದರು ಪ್ರೊಫೆಸರ್ ಸಾಹೇಬರು.

'ಯಣ್ಣಾ, ನನಗ ಖೂನು ಮಾಡಿಬಿಟ್ಟರೋ. ನನ್ನ ಬಡಿದು, ಖೂನ್ ಮಾಡಿ, ಕೆರಿಯಾಗ ಮುಳುಗಿಸಿ ಬಂದರೋ. ಪೊಲೀಸರಿಗೆ ರೊಕ್ಕಾ ತಿನ್ನಿಸಿ ಆತ್ಮಹತ್ಯೆ ಅಂತ ತಿಪ್ಪಿ ಸಾರಿಸಿದರೋ ಯಣ್ಣಾ,' ಅಂತ ಲಿಂಗವ್ವನ ದೆವ್ವ ಕಥೆ ಹೇಳಿತು.

ಅದನ್ನು ಕೇಳಿದ ಪ್ರೊಫೆಸರ್ ದಿಗ್ಭ್ರಾಂತರಾದರು. ಎದ್ದು ನಿಲ್ಲಲು ನೋಡಿದರು. ಅಷ್ಟರಲ್ಲಿ ಮತ್ತೆ ಹೊಗೆ ದಟ್ಟವಾಗತೊಡಗಿತು. ಪ್ರೊಫೆಸರ್ ಸಾಹೇಬರು ಸುಪ್ತ ಪ್ರಜ್ಞೆಯ ಆ ಲೆವೆಲ್ ಬಿಟ್ಟು ಮೊದಲಿನ ಲೆವೆಲ್ಲಿಗೆ ಬರಲು ಆರಂಭಿಸಿದರು. ಲಿಂಗವ್ವನ ದೆವ್ವ ಗಹಗಹಿಸಿ ನಗುತ್ತ ಜೊತೆಗೆ ಬಿಕ್ಕಿ ಬಿಕ್ಕಿ ಅಳುತ್ತ ದೂರವಾಗುತ್ತಿರುವದು ಕೇಳಿಬರುತ್ತಿತ್ತು.

'ಏ ತಂಗಿ ಲಿಂಗವ್ವಾ ಸ್ವಲ್ಪ ನಿಂದ್ರು. ಸ್ವಲ್ಪ ನಿಂದರ್ ಬೇ. ನಿನಗ ಯಾರು ಖೂನು ಮಾಡಿದರು? ಯಾಕ? ಸ್ವಲ್ಪ ಹೇಳಿ ಹೋಗು ತಂಗಿ,' ಅನ್ನುತ್ತ ಪ್ರೊಫೆಸರ್ ಸಾಹೇಬರು ಮಾಯವಾಗುತ್ತಿರುವ ಲಿಂಗವ್ವನನ್ನು ಹಿಡಿಯಲು ನೋಡಿದರು. ಆಯ ತಪ್ಪಿ ಕೆಳಗೆ ಬಿದ್ದರು. ತಲೆ ಹೋಗಿ ಪ್ಯಾರಾಪೆಟ್ ಗೋಡೆಗೆ ಬಡಿಯಿತು. ಪ್ರಜ್ಞೆ ತಪ್ಪತೊಡಗಿತು. ಲಿಂಗವ್ವನ ಆಖ್ರೀ ಮಾತು ಮಾತ್ರ ಕೇಳಿತು. 'ಯಣ್ಣಾ, ಈಗ ಮಾತ್ರ ಹೋಗಿ ಅಮೇರಿಕಾದಾಗ ನಮ್ಮ ಹುಡುಗಿ ಜಯೂನ್ನ ಭೆಟ್ಟಿಯಾಗಿ ಬಂದೆ. ಅಕಿ ಕೂಡ ನನ್ನ ಖೂನಿನಾಗ ಭಾಗ ತೊಗೊಂಡಿದ್ದಳು. ಆದ್ರ ಪಾಪದ ಹುಡುಗಿ ಅಕಿಗೆ ಅದು ಖರೆನೇ ಗೊತ್ತಿರಲಿಲ್ಲ. ಅದಕ್ಕೇ ಅಕಿಗೆ ಹೇಳಿ ಬರೋಣ ಅಂತ ಹೋದ್ರ ಅಲ್ಲೆ ಹೋದಾಗ ನನ್ನ ರೂಪ ಭಾಳ ಖರಾಬ್ ಇತ್ತು. ಏನು ಮಾಡಲಿ? ನಾನು ಯಾರಿಗೆ ಹ್ಯಾಂಗ ಕಾಣಬೇಕೋ ಅದನ್ನ ದೇವರು ನಿರ್ಧಾರ ಮಾಡ್ತಾನ. ಈಗ ನೋಡು ನಿನಗ ನಾನು ಸರಿಯಾಗಿ ಕಾಣಿಸಲೇ ಇಲ್ಲ. ಆದ್ರ ನನ್ನ ದನಿ ಸರಿಯಾಗಿ ಕೇಳಿಸಿತು. ಆದ್ರ ನಾ ನಮ್ಮ ಜಯೂಗ ಹೆದರಿಸಲಿಕ್ಕೆ ಖರೆನೇ ಹೋಗಿರಲಿಲ್ಲ ಯಣ್ಣಾ. ಪ್ರೀತಿ ಜಯೂದು ಭಾಳ ನೆನಪಾಗ್ತಿತ್ತು. ಅದಕ್ಕೇ ಮಾತಾಡಿಸಿ ಬರೋಣ ಅಂತ ಹೋಗಿದ್ದೆ. ನೋಡಿದರೆ ಹುಡುಗಿ ನನ್ನ ರೂಪಾ ನೋಡಿ ತಲಿ ತಿರಿಗಿ ಬಿದ್ದು ಬಿಡ್ತು. ನನಗೂ ಆವಾಗ ಕೆಟ್ಟ ಹಸಿವ್ಯಾಗಿತ್ತು. ಅಕಿ ಹಲ್ಕಟ್ ನಾಯಿ ನನ್ನ ನೋಡಿ ಬೊಗಳಿ ಬೊಗಳಿ ನನಗ ಭಾಳ ಖುನ್ನಸ್ (ಸಿಟ್ಟು) ಬಂತು. ಅದನ್ನ ಕೊಂದು, ರಕ್ತಾ ಕುಡಿದು ಬಂದೆ ಯಣ್ಣಾ. ಜಯೂಗ ಹೇಳು ನಾ ಅಕಿಗೆ ಮುಂದ ಎಂದೂ ತೊಂದ್ರಿ ಕೊಡೋದಿಲ್ಲ ಅಂತ. ಬರ್ತೇನಿ ಯಣ್ಣಾ. ಇನ್ನೂ ಒಬ್ಬವನ್ನ ಭೆಟ್ಟಿಯಾಗೋದೈತಿ. ಅವನ್ನ ಭೆಟ್ಟಿಯಾಗಿ ಒಂದು ಕೆಲಸ ಮುಗಿಸೋದೈತಿ. ಬರ್ತೇನಿ ಅಣ್ಣಾ,' ಅನ್ನುವ ಲಿಂಗವ್ವನ ಮಾತುಗಳನ್ನು ಕೇಳುತ್ತ ಪ್ರೊಫೆಸರ್ ಬಾಗೇವಾಡಿ ಪ್ರಜ್ಞೆ ತಪ್ಪಿದರು. ಮುಂದೆ ಸ್ವಲ್ಪ ಸಮಯದ ನಂತರ ಅವರ ಹೆಂಡತಿ ಬಂದು ಪ್ರಜ್ಞೆ ತಪ್ಪಿ ಬಿದ್ದಿದ್ದ ಗಂಡನನ್ನು ಆಸ್ಪತ್ರೆಗೆ ಸಾಗಿಸಿದ್ದರು. ಅಷ್ಟು ಬೇಗ ಪ್ರಜ್ಞೆ ವಾಪಸ್  ಬರಲಿಲ್ಲ. ಆದರೆ ಸುಪ್ತ ಪ್ರಜ್ಞೆಯೊಳಗೆ ಇದ್ದ ಪ್ರೊಫೆಸರ್ ಸಾಹೇಬರಿಗೆ ಲಿಂಗವ್ವನ ಮುಂದಿನ ಹೆಜ್ಜೆ ಸ್ಪಷ್ಟವಾಗಿ ಗೋಚರಿಸುತ್ತಿದ್ದವು. ಲಿಂಗವ್ವನದು ಆತ್ಮಹತ್ಯೆಯಲ್ಲ ಕೊಲೆ ಎಂಬುದು ಸಿನಿಮಾ ನೋಡಿದಂತೆ ಅವರ ಸುಪ್ತ ಪ್ರಜ್ಞೆಯ ಪರದೆ ಮೇಲೆ ಮೂಡತೊಡಗಿತು. ಅದನ್ನು ನೋಡುತ್ತ ನೋಡುತ್ತ ಪ್ರೊಫೆಸರ್ ಸಾಹೇಬರು ಬೆವರತೊಡಗಿದರು. ಪ್ರಜ್ಞಾಹೀನ ಸ್ಥಿತಿಯೊಳಗೆ ಇದ್ದ ವ್ಯಕ್ತಿಯೊಬ್ಬ ಬೆವರತೊಡಗಿದ್ದನ್ನು ನೋಡಿದ ನರ್ಸ್ ಒಬ್ಬಾಕೆ  'ಡಾಕ್ಟರ್! ಇಲ್ಲಿ ನೋಡಿ' ಅಂತ ಕಿಟಾರನೇ ಕಿರುಚಿದಳು.

***
ಭಾಗ -೩. ಬಾಂದೇಕರ್ ಸಾವಕಾರ. ಧಾರವಾಡ.

ಸಂದೀಪ ಬಾಂದೇಕರ. ನಮ್ಮ ಜಯಮಾಲಾಳ ಹಳೆಯ ಗೆಣೆಕಾರ. ನೆನಪಿದೆ ತಾನೇ? ಈಗ ಇಪ್ಪತ್ತೈದು ವರ್ಷಗಳ ಬಳಿಕ ಅವನು ಬಾಂದೇಕರ್ ಸಾವಕಾರ. ಮೊದಲು ಅವರ ಅಪ್ಪನಿಗೆ ಆ ಹೆಸರಿತ್ತು. ಅಪ್ಪನ ನಂತರ ಈ ಪುಣ್ಯಾತ್ಮನಿಗೆ ಆ ಹೆಸರು ಬಂದಿದೆ. ಏನು ಸಾವಕಾರನೋ ಏನೋ! ಮೊದಲು ಬಾಂದೇಕರ ಕುಟುಂಬ ಎಂದರೆ ರಾಶಿ ರಾಶಿ ಕೋಟಿ ಆಸ್ತಿಯಿದ್ದ ಕುಟುಂಬವಾಗಿತ್ತು. ಈ ಸಂದೀಪ್ ಬಾಂದೇಕರ್ ತನ್ನ ಸಕಲ ಚಟಗಳಿಂದ ಇದ್ದ ಆಸ್ತಿಯೆಲ್ಲ ಕರಗಿಸಿ, ಈಗ ಒಂದೋ ಎರಡೋ ಕೋಟಿಗೆ ತೂಗುತ್ತಾನೆ ಅಷ್ಟೇ. ಕರಗಿ ಹೋದ ಆಸ್ತಿಯ ಖಬರೇ ಅವನಿಗಿಲ್ಲ. ಅವನಿಗೆ ಮೂರೂ ಹೊತ್ತು ಕರುಳ ತುಂಬ ಎಣ್ಣೆ, ಹೊಟ್ಟೆ ತುಂಬ ನಾನ್ವೆಜ್ ಊಟ, ಇಸ್ಪೀಟ್ ತಟ್ಟಲು ಜನ ಇದ್ದರೆ ಸಾಕು. ಬಾಕಿ ಏನೂ ಬೇಕಾಗಿಯೇ ಇಲ್ಲ. ಅದನ್ನೇ ಮಾಡಿ ಮಾಡಿ ಈ ಪರಿಸ್ಥಿತಿಗೆ ಬಂದು ಮುಟ್ಟಿದ್ದಾನೆ. ವಯಸ್ಸು ಸುಮಾರು ಐವತ್ತು. ಇತ್ತೀಚಿನವರೆಗೆ ದುಬಾರಿ ವೇಶ್ಯೆಯರ ಸಂಗದ ಹುಚ್ಚಿತ್ತು. ಲಕ್ಷ ಲಕ್ಷ ಕೊಟ್ಟು ಯಾರ್ಯಾರೋ ತಗಡು ಸಿನೆಮಾ ನಟಿಯರೊಂದಿಗೂ ಮಲಗಿ ಬಂದಿದ್ದೆ ಅಂತ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ. ಅದರ ಪರಿಣಾಮವೇ ಈಗ 'ಮದ್ದಿಲ್ಲದ ರೋಗ' ತಗಲಿಕೊಂಡು ಇನ್ನು ದಿನ ಎಣಿಸುತ್ತ ಇದ್ದಾನೆ. ಅದ್ಯಾಕೋ ಈಗ ಆ ಹುಚ್ಚೊಂದು ಇಲ್ಲ. ಮನೆಯಲ್ಲಿ ಬಂಗಾರದಂತಹ ಹೆಂಡತಿ ಒಂದು ಮಗು ಇದೆ. ಅದೆಲ್ಲದರ ಖಬರೇ ಬಾಂದೇಕರನಿಗೆ ಇಲ್ಲ. ವಾರಗಟ್ಟಲೇ ಅವನು ಮನೆ ಕಡೆ ಹೋಗುವದೇ ಇಲ್ಲ. ಸದಾ ಕಾಲ ಇಸ್ಪೀಟ್ ತಟ್ಟುತ್ತ, ಎಣ್ಣೆ ಹೀರುತ್ತ ಕೂತಿರುತ್ತಾನೆ. ಇಸ್ಪೀಟ್ ಖಾತೆ ಎಲ್ಲ ಉದ್ರಿ. ತಿಂಗಳಿಗೊಮ್ಮೆ ಲಕ್ಷಗಟ್ಟಲೇ ರುಪಾಯಿ ತಂದು ಇಸ್ಪೀಟ್ ಕ್ಲಬ್ಬಿನ ಮಾಲೀಕನ ಕೈಗೆ ಇಡುತ್ತಾನೆ. ಮಾಲೀಕ ಸರಿಯಾಗಿ ಉಂಡೆ ನಾಮ ತಿಕ್ಕುತ್ತಾನೆ. ಅದೆಲ್ಲ ಸಂದೀಪ್ ಬಾಂದೇಕರನಿಗೆ ತಿಳಿಯುವದಿಲ್ಲ. ಬಾಂದೇಕರ್ ಮಾತ್ರ, 'ಶೆರೆ ಕೊಡ್ರೀ. ಇಸ್ಪೀಟ್ ಆಡಾಕ ಮಂದಿ ಕೂಡಸ್ರೀ. ಅವನೌನ್ ಇವತ್ತು ರೊಕ್ಕಾ ಮಾಡಿಕೊಂಡೇ ಹೋಗವಾ ನಾ' ಅಂತ ಕೂತು ಬಿಡುತ್ತಾನೆ. ಇಸ್ಪೀಟ್ ಕ್ಲಬ್ಬಿನ ಮಂದಿಗೇನು? ಒಳ್ಳೆ ಬಕರಾ ಸಿಕ್ಕಿದೆ ಅಂತ ಸರಿಯಾಗಿ ಬೋಳಿಸುತ್ತಾರೆ. ಕಳೆದ ಹಲವಾರು ವರ್ಷಗಳಿಂದ ಬೋಳಿಸಿ ಬೋಳಿಸಿಯೇ ಬಾಂದೇಕರ್ ಎಂಬ ಕೋಟ್ಯಾಧಿಪತಿಯನ್ನು ಲಕ್ಷಾಧಿಪತಿಯನ್ನಾಗಿ ಮಾಡಿದ್ದಾರೆ. ಮುಂದೆ ಭಿಕ್ಷಾಧಿಪತಿಯನ್ನಾಗಿ ಮಾಡುವದು ಬಾಕಿಯಿದೆ. ಆ ಪ್ರಕ್ರಿಯೆ ಜಾರಿಯಲ್ಲಿದೆ.

ಆವತ್ತು ಒಂದು ದಿವಸ ಅಪರೂಪಕ್ಕೆ ಬಾಂದೇಕರ್ ಮನೆಯಿಂದ ಕ್ಲಬ್ಬಿಗೆ ಬಂದು ಕೂತಿದ್ದ. ಅಪರೂಪಕ್ಕೆ ಮನೆಗೆ ಹೋದವನು ವಾರದ ಸ್ನಾನ ಮಾಡಿ, ಶುಭ್ರವಾದ ಬಟ್ಟೆ ಧರಿಸಿಕೊಂಡು ಬಂದು ಕೂತಿದ್ದ. ಬಂದು ಕೂತವ ಸುಮ್ಮನೆ ಕೊರಳ ಮೇಲೆ ಕೈಯಾಡಿಸಿದ. 'ಅರೇ! ರುದ್ರಾಕ್ಷಿ ಮಾಲೆ ಮರೆತು ಬಂದುಬಿಟ್ಟೆ,' ಅಂದುಕೊಂಡ. ಅದನ್ನು ಎಂದೂ ಮರೆತವನೇ ಅಲ್ಲ ಅವನು. ದೊಡ್ಡ ಮಾಂತ್ರಿಕನೊಬ್ಬ ಮಂತ್ರಿಸಿ ಕೊಟ್ಟಿದ್ದ ರುದ್ರಾಕ್ಷಿ ಮಾಲೆ ಅದಾಗಿತ್ತು. ಆ ಹೊತ್ತಿಗೆ ಬಾಂದೇಕರನಿಗೆ ಕುಜ ರಾಹು ಸಂಧಿ ಕಾಲವಿದೆ, ಮರಣದ ಭಯವಿದೆ, ಹಾಗಾಗಿ ಇದನ್ನು ಧರಿಸು ಅಂತ ಹೇಳಿ ಮಹಾ ಮಂತ್ರವಾದಿಯೊಬ್ಬ ಕೊಟ್ಟಿದ್ದ ರುದ್ರಾಕ್ಷಿ ಮಾಲೆಯಾಗಿತ್ತು ಅದು. ಅದೇನು ನಂಬಿಕೆಯೋ ಏನೋ ಗೊತ್ತಿಲ್ಲ. ಅದನ್ನು ನಾಲ್ಕಾರು ತೊಲೆ ಬಂಗಾರದಲ್ಲಿ ದಪ್ಪಗೆ ಒಂದು ಸರ ಮಾಡಿಸಿಕೊಂಡು ಹಾಕಿಕೊಂಡಿದ್ದ. ಅದನ್ನು ಮಾತ್ರ ಇಸ್ಪೀಟ್ ಆಟಕ್ಕೆ ಎಂದೂ ಅಡವಿಟ್ಟಿರಲಿಲ್ಲ. ಕ್ಲಬ್ ಮಾಲೀಕ ರೊಕ್ಕ ಉದ್ರಿ ಕೊಡದೇ, ಆ ಮಾಲೆಯನ್ನೇ ಪಣಕ್ಕೆ ಇಡು ಅಂದಾಗ ಜಗಳಕ್ಕೆ ಬಿದ್ದಿದ್ದ. ನಡು ರಾತ್ರಿ ಫೋನ್ ಮಾಡಿ, ರೊಕ್ಕ ತರಿಸಿ, ಕ್ಲಬ್ ಮಾಲೀಕನ ಮುಖದ ಮೇಲೆ ಎಸೆದಿದ್ದನೇ ಹೊರತೂ ಆ ರುದ್ರಾಕ್ಷಿ ಮಾಲೆ ಮಾತ್ರ ತನ್ನ ಕತ್ತಿಂದ ತೆಗೆದಿರಲಿಲ್ಲ. ಅಷ್ಟೆಲ್ಲ ಆ ಮಾಲೆ ಮೇಲೆ ನಂಬಿಕೆಯಿಟ್ಟಿದ್ದ. ಅಂತದ್ದರಲ್ಲಿ ಆವತ್ತು ಸ್ನಾನ ಮಾಡುವಾಗ ಆ ಮಾಲೆ ತೆಗೆದಿಟ್ಟವ ಮತ್ತೆ ಧರಿಸದೇ ಬಂದು ಬಿಟ್ಟಿದ್ದ. ಯಾಕೋ ತುಂಬ ಕಸಿವಿಸಿಯಾಯಿತು ಬಾಂದೇಕರನಿಗೆ. ಒಂದು ಬಾರಿ ಮನೆಗೆ ಹೋಗಿ, ಬಚ್ಚಲಮನೆಯಲ್ಲಿ ಮರೆತುಬಂದಿದ್ದ ಮಾಲೆ ಧರಿಸಿ ಬಂದುಬಿಡಲೇ ಅಂದುಕೊಂಡ. ಅಷ್ಟರಲ್ಲಿ ಇಸ್ಪೀಟ್ ಕ್ಲಬ್ಬಿನ ಮಾಲೀಕ ವಿಸ್ಕಿ ಎಣ್ಣೆ, ಚಿಕನ್ - ೬೫  ತಂದು ಟೇಬಲ್ ಮೇಲಿಟ್ಟ. ಇಸ್ಪೀಟ್ ಪಟ್ಟು ತಟ್ಟುತ್ತ ಪಂಟರುಗಳು ಬಂದು ಆಟಕ್ಕೆ ಪ್ರೇರೇಪಿಸತೊಡಗಿದರು. ಬಾಂದೇಕರ ಉನ್ಮಾದಕ್ಕೆ ಬಂದು ಬಿಟ್ಟ. ರುದ್ರಾಕ್ಷಿ ಮಾಲೆ ಮರತೇ ಬಿಟ್ಟ. ತನ್ಮಯನಾಗಿ ಇಸ್ಪೀಟ್ ಎಲೆಗಳನ್ನು ತಟ್ಟುತ್ತ  ಅದರಲ್ಲೇ ಲೀನವಾಗಿ ಹೋದ.

ಘಂಟೆಗಟ್ಟಲೆ ಇಸ್ಪೀಟ್ ಆಟ ನಡೆಯಿತು. ಕ್ಲಬ್ಬಿನ ಮಾಲೀಕನಿಗೆ ಏನು? ದುಡ್ಡು ಹಚ್ಚಿ ಆಡುತ್ತಿ ಅಂದರೆ ಪಂಟರುಗಳನ್ನು ಇಳಿಸಲು ಅವನು ಸದಾ ಸಿದ್ದ. ಅವನಿಗೆ ಗೊತ್ತು ಯಾವಾಗಲೂ ಕೊನೆಗೆ ಕ್ಲಬ್ಬಿನ ಮಂದಿಯೇ ರೊಕ್ಕ ಕಾಣುವದು ಅಂತ. ಅದು ಗೊತ್ತಿಲ್ಲದೇ ಲಕ್ಷ ಲಕ್ಷ ಬೆಟ್ ಮಾಡಿ ಇಸ್ಪೀಟ್ ಆಡಿಸಲಿಕ್ಕೆ ಅವನಿಗೇನೂ ಹುಚ್ಚು ನಾಯಿ ಕಚ್ಚಿಲ್ಲ. House always wins!

ಕೊನೆಗೆ ನಾಲ್ಕು ಜನರ ಟೇಬಲ್ ಮೇಲೆ ಕೇವಲ ಇಬ್ಬರೇ ಉಳಿದರು. ಎಣ್ಣೆ ಬಾಟಲಿ ಸುಮಾರು ಖಾಲಿಯಾಗಿ ಹೋಗಿತ್ತು. ಆವತ್ತು ಬಾಂದೇಕರ್ ಸಕತ್ತಾಗಿ ಕಾಸು ಗೆಲ್ಲುತ್ತ ಹೊರಟಿದ್ದ. ಕಳೆದ ತಿಂಗಳು ಹಲವಾರು ಲಕ್ಷ ಕಳೆದುಕೊಂಡಿದ್ದ. ಈಗ ಅದನ್ನೆಲ್ಲ ಬಾಚಿಕೊಂಡು ಹೋಗಿಬಿಡಬೇಕು ಅಂತ ದುರಾಸೆ ಆತನಿಗೆ.

ಯಾಕೋ ಏನೋ ಗೊತ್ತಿಲ್ಲ. ಬಾಂದೇಕರ್ ಜೊತೆ ಆಡುತ್ತಿದ್ದ ಒಂಟಿ ಪಂಟರ್ ಟೇಬಲ್ ಬಿಟ್ಟು ಎದ್ದುಬಿಟ್ಟ. 'ಏ! ಎಲ್ಲಿ ಹೋಗುತ್ತೀ? ನನಗಿನ್ನೂ ಬಹಳ ಆಡಬೇಕಿದೆ. ನಿನಗೆ ಆಗಲ್ಲ ಅಂದರೆ ಬೇರೆ ಯಾರನ್ನಾದರೂ ಕಳಿಸು. ಜೊತೆಗೆ ಒಂದಿಷ್ಟು ವಿಸ್ಕಿ, ಶೇಂಗಾ ಕೂಡ ಕಳಿಸು,' ಅಂತ ಹೇಳಿ, ಹುಸ್ ಅನ್ನುತ್ತ, ಕೂತಿದ್ದ ಖುರ್ಚಿಯಲ್ಲಿ ದೇಹವನ್ನು ಕೆಳಗೆ ಇಳಿಸಿ ಸ್ವಲ್ಪ ಸುಸ್ತು ಕಮ್ಮಿ ಮಾಡಿಕೊಂಡ ಬಾಂದೇಕರ್.

ಬಾಂದೇಕರನ ಮುಂದಿದ್ದ ಪಂಟರ್ ಖುರ್ಚಿಯಲ್ಲಿ ಯಾರೋ ಬಂದು ಕೂತಂತಾಯಿತು. ಸರಿಯಾಗಿ ಕಾಣಲಿಲ್ಲ. ಕುಡಿದ ಎಣ್ಣೆ ಜಾಸ್ತಿಯಾಗಿರಬೇಕು ಅನ್ನಿಸಿತು. ಅದೆಲ್ಲ ಸರಿ. ಕಾರ್ಡ್ ಹಂಚಿ ಆಟ ಆಡಿದರೆ ಸಾಕು. ಕಳೆದುಕೊಂಡಿದ್ದನ್ನೆಲ್ಲ ವಾಪಸ್ ಗಳಿಸಬೇಕಿದೆ. ಹಾಗೆಂದುಕೊಂಡ ಬಾಂದೇಕರ್ ಮುಂದೆ ಕೂತಿದ್ದ ಪಂಟರನಿಗೆ ಕಾರ್ಡ್ ಹಂಚುವಂತೆ ಹೇಳಿದ. ಮುಂದೆ ಕುಳಿತಿದ್ದ ಅದೃಶ್ಯ ವ್ಯಕ್ತಿ ಕಾರ್ಡುಗಳನ್ನು ಹಂಚತೊಡಗಿತು. ತನಗೆ ಬರುತ್ತಿದ್ದ ಕಾರ್ಡುಗಳನ್ನು ನೋಡುತ್ತಿದ್ದಂತೆಯೇ ಬಾಂದೇಕರ್ ಬೆವರತೊಡಗಿದ. 'ಏ! What's this? What's this non-sense????' ಅಂತ ತೊದಲತೊಡಗಿದ. ಅವನು ಆಪರಿ ಹೆದರಿ, ತೊದಲಿ ಹುಚ್ಚನಂತೆ ಒದರಲೂ ಕಾರಣವಿತ್ತು. ಕಾರ್ಡು ಹಂಚುತ್ತ ಕೂತಿದ್ದ ಆ ಅದೃಶ್ಯ ವ್ಯಕ್ತಿ ಬಾಂದೇಕರನಿಗೆ ಕೇವಲ ಜೋಕರ್ ಕಾರ್ಡುಗಳನ್ನೇ ನೀಡತೊಡಗಿತ್ತು! ಒಂದಾದಮೇಲೊಂದು ಬಂದು ಬೀಳುತ್ತಿದ್ದ ಜೋಕರ್ ಕಾರ್ಡುಗಳನ್ನು ನೋಡಿದ ಬಾಂದೇಕರ್ ಇದೇನು ಭ್ರಮೆಯೋ ಅಂತ ತಲೆಯನ್ನು ಆಚೀಚೆ ಅಲುಗಾಡಿಸಿದ. ಅಲ್ಲ. ಭ್ರಮೆ ಅಲ್ಲವೇ ಅಲ್ಲ. ನಿಜವಾಗಿ ಎಲ್ಲವೂ ಜೋಕರುಗಳೇ. ಏನಿದು???!!!!

'ಏ! ಹಡಶಿ ಮಗನೇ! ಏನು ಆಟಾ ಹಚ್ಚಿ ಏನು? ಏನು ಕಾರ್ಡ್ ಹಂಚಾಕತ್ತಿ ನೀನು? ಯಾರು ನಿನ್ನ ಆಟ ಆಡಾಕ ಕಳಿಸ್ಯಾರ? ಎದ್ದು ಹೋಗು ಭೋಸಡಿ ಮಗನೇ,' ಅಂತ ಬೈದ ಬಾಂದೇಕರ್, 'ಏ ಹುಚ್ಚ ಸೂಳೆಮಗನೇ! ಏ ಕ್ಲಬ್ ಮ್ಯಾನೇಜರ್! ಯಾರನ್ನು ಆಡಾಕ ಕಳಸಿಯೋ ನಿಮ್ಮೌನಾ??? ಹಾಂ? ಏನು? ನಾ ಮಸ್ತ ರೊಕ್ಕಾ ಗೆಲ್ಲಾಕ ಹತ್ತೇನಿ ಅಂತ ಮಷ್ಕಿರಿ ಏನು? ಹಾಂ?' ಅನ್ನುತ್ತ ಆವಾಜ್ ಹಾಕಿದ.

ಬಾಂದೇಕರ್ ಹಾಕಿದ ಆವಾಜಿಗೆ ಬೆಚ್ಚಿ ಬಿದ್ದ ಇಸ್ಪೀಟ್ ಕ್ಲಬ್ ಮ್ಯಾನೇಜರ್. ಬಾಂದೇಕರ್ ಕುಳಿತಿದ್ದ ಟೇಬಲ್ ಮೇಲೆ ಬೇರೆ ಯಾರೂ ಇರಲೇ ಇಲ್ಲ. ಪಂಟರ್ ಎದ್ದು ಹೋಗಿದ್ದ. ಬಾಂದೇಕರ್ ಒಬ್ಬನೇ ಕೂತಿದ್ದ. ಈಗ ನೋಡಿದರೆ ಬಾಂದೇಕರ್ ಹುಚ್ಚನಂತೆ ಅರಚುತ್ತಿದ್ದ. ಸರಿಯಾಗಿ ಇಸ್ಪೀಟ್ ಎಲೆ ಹಾಕುತ್ತಿಲ್ಲ ಅಂತ ಚೀರುತ್ತಿದ್ದ. ಎಲ್ಲಿ ಈ ಬಾಂದೇಕರನಿಗೆ ಹುಚ್ಚೇ ಹಿಡಿಯಿತೋ ಅಂತ ಸಂಶಯ ಬಂತು ಕ್ಲಬ್ ಮ್ಯಾನೇಜರನಿಗೆ. ಬಾಂದೇಕರನ ಟೇಬಲ್ ಹತ್ತಿರ ಬಂದು ನೋಡೋಣ ಅನ್ನುವಷ್ಟರಲ್ಲಿ ಎಲ್ಲ ಕಡೆ ಹೊಗೆ. ದಟ್ಟ ಹೊಗೆ. 'ಏ! ಎಲ್ಲರೂ ಹೊರಗ ಓಡ್ರೋ! ಬೆಂಕಿ ಹತ್ತೈತಿ!' ಅಂತ ಯಾರೋ ಕೂಗಿದರು. ಎಲ್ಲರೂ ಕ್ಲಬ್ ಬಿಟ್ಟು ಹೊರಗೆ ಓಡಿ ಬಂದರು. ಹೊರಗೆ ಬಂದು ನೋಡಿದರೆ ಎಲ್ಲೂ ಬೆಂಕಿಯ ಸುಳಿವೇ ಇಲ್ಲ. ಒಳಗೆ ಹೋಗಲು ಮಾತ್ರ ಯಾರಿಗೂ ಧೈರ್ಯವಿಲ್ಲ.

ಅಮೇರಿಕಾದ ನ್ಯೂಯಾರ್ಕಿನ ಆಸ್ಪತ್ರೆಯಲ್ಲಿ ಮಲಗಿದ್ದ ಜಯಮಾಲಾ ಮತ್ತೆ ಸುಪ್ತ ಪ್ರಜ್ಞೆಗೆ ಜಾರಿದಳು. ಇತ್ತ ಕಡೆ ಬೆಂಗಳೂರಿನಲ್ಲಿ ಪ್ರೊಫೆಸರ್ ಬಾಗೇವಾಡಿ ಜ್ಞಾನ ತಪ್ಪಿ ಮಲಗಿದವರು ಕೂಡ ಸುಪ್ತ ಪ್ರಜ್ಞೆಯ ಮತ್ತೊಂದು ಹಂತಕ್ಕೆ ಹೋಗಿ ಮುಟ್ಟಿದರು. ಅವರಿಬ್ಬರ ಚಿತ್ತದ ಪರದೆ ಮೇಲೆ ಬಾಂದೇಕರ್ ಕುಳಿತಿದ್ದ ಕ್ಲಬ್ಬಿನಲ್ಲಿ ಆಗುತ್ತಿದ್ದ ಘಟನೆಗಳು ಬರೋಬ್ಬರಿ ಮೂಡಿ ಬರುತ್ತಿದ್ದವು. ಲಿಂಗವ್ವನ ಸಾವಿನ ರಹಸ್ಯ ಪೂರ್ತಿಯಾಗಿ ಬಿಚ್ಚಿಕೊಳ್ಳುತ್ತಿತ್ತು.

ಯಾವಾಗ ಬಾಂದೇಕರ್ ಆವಾಜ್ ಹಾಕಿದನೋ ಆವಾಗ ಅವನ ಮುಂದೆ ಕೂತು ಕೇವಲ ಜೋಕರ್ ಕಾರ್ಡುಗಳನ್ನೇ ಹಂಚುತ್ತಿದ್ದ ಆಕೃತಿ ಜಿಗಿದು ಬಿಟ್ಟಿತು. ಜಿಗಿದು ಸೀದಾ ಬಾಂದೇಕರನ ಕುತ್ತಿಗೆಗೇ ಕೈಹಾಕಿ ಹಿಚುಕತೊಡಗಿತು. ಬಾಂದೇಕರ್ ತನ್ನ ರುದ್ರಾಕ್ಷಿ ಮಾಲೆ ಹುಡುಕಿದ. ಅದೊಂದು ಇರುವ ತನಕ ಸಾವು ಬರಲು ಸಾಧ್ಯವೇ ಇಲ್ಲ ಅಂತ ಆಶ್ವಾಸನೆ ಕೊಟ್ಟಿದ್ದ ಮಾಂತ್ರಿಕ ಹೇಳಿದ್ದ. ಆದರೆ ಕೊರಳಲ್ಲಿ ಅದೆಲ್ಲಿರಬೇಕು? ಬಚ್ಚಲುಮನೆಯಲ್ಲಿ ಬಿಟ್ಟು ಬಂದಿದ್ದ. ನೋಡಿದ್ದ ಹೆಂಡತಿ ಅದನ್ನು ತನ್ನ ಮಾಂಗಲ್ಯಕ್ಕೆ ತಾಗಿಸಿಕೊಂಡು ದೇವರ ಪೀಠದಲ್ಲಿ ಇಟ್ಟು ಬಂದಿದ್ದಳು. ಕುತ್ತಿಗೆಯಲ್ಲಿ ಇದ್ದರೆ ಮಾತ್ರ ಅದು ಪ್ರಾಣ ಕಾಪಾಡಬಲ್ಲದು. ಈಗ ಇಲ್ಲ. ಲಿಂಗವ್ವನ ದೆವ್ವ ಸೀದಾ ಬಾಂದೇಕರನ ಕುತ್ತಿಗೆಗೇ ಕೈಹಾಕಿ, ತನ್ನ ಉಕ್ಕಿನ ಹಿಡಿತದಲ್ಲಿ ಬರೋಬ್ಬರಿ ಅದಮುತ್ತಿದೆ.

'ಯಾರು ನೀ? ಹಾಂ? ನನ್ಯಾಕ ಹೀಂಗ ಕೊಲ್ಲಾಕತ್ತೀ? ಹಾಂ? ಬರೇ ಜೋಕರ್ ಕಾರ್ಡ್ ಹಾಕ್ಕೋತ್ತ ಕುಂತಿದ್ದಿ. ಅದಕ್ಕೇ ಆವಾಜ್ ಹಾಕಿದೆ. ಬ್ಯಾಡ ಹೋಗು. ನಾ ಆಟಾ ಬಿಟ್ಟು ಎದ್ದು ಹೋಗ್ತೇನಿ. ನನ್ನ ಬಿಡು. ಪ್ಲೀಸ್!' ಅಂತ ಬಾಂದೇಕರ್ ಬೇಡಿಕೊಂಡ. ಬದುಕಲು ಬಿಟ್ಟರೆ ಸಾಕು ಅನ್ನುವ ಪರಿಸ್ಥಿತಿ ಅವನದು.

ಈಗ ಕುತ್ತಿಗೆಗೆ ಕೈ ಹಾಕಿ ಹಿಚುಕುತ್ತಿದ್ದ ಆಕೃತಿ ಸ್ಪಷ್ಟವಾಗತೊಡಗಿತು. ಇಪ್ಪತ್ತೈದು ವರ್ಷಗಳ ನಂತರವೂ ಆ ಮುಖವನ್ನು ಬಾಂದೇಕರ್ ಮರೆತಿರಲಿಲ್ಲ.

'ನೀ ನಮ್ಮ ಜಯಮಾಲಾ ಬಾಗೇವಾಡಿ ಅವರ ಮನಿಯಾಗ ಕೆಲಸ ಮಾಡ್ತಿದ್ದಿ. ಅಲ್ಲಾ? ನೀ ಹ್ಯಾಂಗ ಇಲ್ಲಿ ಬಂದಿ? ನೀ ಸತ್ತು ಹೋಗಿ ಎಷ್ಟು ವರ್ಷಾಗಿ ಹೋತು. ಈಗ ಹ್ಯಾಂಗ ಬಂದೀ? ಏನು ನಿನ್ನ ಹೆಸರು? ಗಂಗವ್ವಾ. ಅಲ್ಲಲ್ಲ ಲಿಂಗವ್ವಾ. ನನ್ನ ಯಾಕ ಸಾಯಿಸಲಿಕ್ಕೆ ಹೊಂಟೀ????' ಅಂತ ವಿಪರೀತ ಘಾಬರಿಯಿಂದ ಕೇಳಿದ ಬಾಂದೇಕರ್.

'ಎಷ್ಟು ಬರೋಬ್ಬರಿ ನೆನಪು ಇಟ್ಟಿಯೋ ನಮ್ಮಪ್ಪಾ. ನಾನೇ ಆ ಲಿಂಗವ್ವಾ. ನೀನು ಮತ್ತು ನಿನ್ನ ಗೆಳೆಯಾರು ಕೂಡಿ ನನ್ನ ಹೊತಗೊಂಡು ಹೋಗಿ, ಹಾಕ್ಕೊಂಡು ಬಡಿದು, ತಲಿ ಒಡೆದು ಕೊಂದು, ನಂತರ ನನ್ನ ಹೆಣ ಕೆರಿಯಾಗ ಒಗೆದು ಬಂದಿದ್ದಿರಿ.  ನಿನಗ ನೆನಪೈತಿ? ಹಾಂ? ನೆನಪೈತಿ? ಯಾಕ? ನಾ ಏನು ಮಾಡಿದ್ದೆ ಅಂತಾ ತಪ್ಪು? ನನ್ನ ಮಗಳ ಸಮಾನ ನಮ್ಮ ಜಯೂ ಅಂದ್ರ ನಮ್ಮ ಬಸವಣ್ಣೆಪ್ಪ ಬಾಗೇವಾಡಿ ಅಣ್ಣನ ಮಗಳು ಜಯೂ ನಿನ್ನ ಕೈಯಾಗ ಸಿಕ್ಕು ಹಾಳಾಗಿ ಹೋಗ್ತಾಳ ಅಂತ ನನ್ನ ಹೊಟ್ಟಿ ಉರದಿತ್ತೋ ಏ ಬಾಂದೇಕರ್. ಅದಕ್ಕೇ ಅದನ್ನ ನಮ್ಮ ಅಣ್ಣ ಪ್ರೊಫೆಸರ್ ಸಾಹೇಬರ ಕಿವಿಯಾಗ ಹಾಕಿದ್ದೆ. ಅವರು ಹೋಗಿ ಅವರ ದೋಸ್ತ ಪೋಲೀಸ್ ಸಾಹೇಬಗ ಹೇಳಿದರು. ಆವಾ ಕಳಿಸಿದ ಪೊಲೀಸರು ನಿನ್ನ ಮತ್ತ ನಮ್ಮ ಜಯಕ್ಕನ್ನ ಹಿಡಕೊಂಡು ಹೋದರು. ನಿನ್ನ ಹಾಕ್ಕೊಂಡು ರುಬ್ಬಿದರು. ಇದಕ್ಕೆಲ್ಲ ಕಾರಣ ನಾನೇ ಅಂತ ನಮ್ಮ ಜಯಮಾಲಾಗೇ ನಾನೇ ಹೇಳಿದ್ದೆ. ಅದರ ಜೋಡಿ ನಿನ್ನ ಸಹವಾಸ ಬಿಡು ಅಂತ ಸಹ ಹೇಳಿದ್ದೆ. ಅದು ಹರೆಯದ ವಯಸ್ಸು ನೋಡು. ಅಕಿ ಸಿಟ್ಟಿಗೆದ್ದು, ನನಗೇ ಬೈದಳು. ನನಗ ಏನೂ ಫರಕ್ ಬರಲಿಲ್ಲ. ಬ್ಯಾಸರ ಸಹಿತ ಆಗಲಿಲ್ಲ. ಆದ್ರ ಅಕಿ ಒಂದು ದೊಡ್ಡ ಅನಾಹುತ ತಪ್ಪು ಮಾಡಿಬಿಟ್ಟಳು ನೋಡು. ಅದೇನು ಹೇಳು? ಹೋಗಿ ಹೋಗಿ ನಿನಗ ಹೇಳಿ ಬಿಟ್ಟಳು. ನಿನಗ ಗೊತ್ತಾಗಿ ಹೋತು. ಒಂದು ದಿನ  ಸಂಜಿ ಬಂದವನೇ, ನಿನ್ನ ಕಾರಿನ್ಯಾಗ ನನ್ನ ಹೊತಗೊಂಡು ಹೋದಿ. ನೆನಪದ ಏನೋ ಭಾಡ್ಯಾ? ನೀನು ಮತ್ತ ನಿನ್ನ ದೋಸ್ತರು ಕೂಡಿ ನನಗ ಮನಗಂಡ ಹೊಡೆದಿರಿ, ಬಡಿದಿರಿ. ನಿನ್ನ ಒಂದು ಆಖ್ರೀ ಹೊಡೆತ ತಲಿಗೇ ಬಿತ್ತು ನೋಡು. ನನ್ನ ಜೀವ ಹೋಗೇ ಬಿಡ್ತು. ಆದರೂ ಖೂನ್ ಮಾಮಲಾ ನೋಡು. ನಾ ಶಿವನ ಪಾದಾ ಸೇರಿಕೊಳ್ಳಲೇ ಇಲ್ಲ. ದೆವ್ವ ಆದೆ. ದೆವ್ವ ಆಗಿ ಇಪ್ಪತ್ತೈದು ವರ್ಷ ಅಲ್ಲೆ ಇಲ್ಲೆ ಎಷ್ಟು ಅಡ್ಯಾಡೇನಿ ಅಂತ ಗೊತ್ತದ ಏನಲೇ ಬಾಂದೇಕರ್ ಭಾಡ್ಕೋ? ಹಾಂ? ನನ್ನ ಬಡಿದು ಕೊಂದು, ನೀರಾಗ ಮುಳುಗಿಸಿ ಬಂದು, ಅದು ಆತ್ಮಹತ್ಯೆ ಅಂತ ತಿಪ್ಪಿ ಸಾರಿಸಿಬಿಟ್ಟಿಯಲ್ಲೋ ಪಾಪಿ ಸೂಳಿಮಗನ! ಎಷ್ಟು ರೊಕ್ಕಾ ಕೊಟ್ಟಿ? ಹಾಂ? ಹಾಂ?' ಅನ್ನುತ್ತ ಲಿಂಗವ್ವನ ದೆವ್ವ ಬಾಂದೇಕರನ ಕುತ್ತಿಗೆಯನ್ನು ಮತ್ತೂ ಜೋರಾಗಿ ಅದುಮತೊಡಗಿತು. ಬಾಂದೇಕರನ ನಾಲಿಗೆ ಬಾಯಿಂದ ಹೊರಗೆ ಬರಲು ಶುರುವಾಯಿತು. ಕಣ್ಣು ಗುಡ್ಡೆ ಮೇಲೆ ಹೋಯಿತು. ಬಾಂದೇಕರ್ ಮರೆತು ಬಂದಿದ್ದ ರುದ್ರಾಕ್ಷಿ ಮಾಲೆಗಾಗಿ ಮತ್ತೊಮ್ಮೆ ತಡಕಾಡಿದ. ಅದು ಸಿಗಲಿಲ್ಲ. ಬಾಂದೇಕರ್ ಸತ್ತುಹೋದ. ಮತ್ತೊಂದು ದೆವ್ವವಾದ. ಈಗ ದೆವ್ವವಾದ ಬಾಂದೇಕರ್ ಇನ್ಯಾರಿಗೆ ಕಾಡಲಿದ್ದಾನೋ???

ದೆವ್ವಗಳ ಸುಪ್ತ ಪ್ರಜ್ಞೆಯ ಲೆವೆಲ್ಲಿನಲ್ಲಿ ಸೇರಿ, ಇದೆಲ್ಲವನ್ನೂ ನೋಡಿದ ಜಯಮಾಲಾಳಿಗೆ ಮತ್ತೆ ಪ್ರೊ. ಬಾಗೇವಾಡಿಗೆ ಲಿಂಗವ್ವನ ಸಾವಿನ ಹಿಂದಿನ ರಹಸ್ಯ ಬರೋಬ್ಬರಿ ತಿಳಿಯಿತು. ಏನೇನೋ ಅನಿಸಿತು. ಈಗ ಅನಿಸಿದರೆ ಏನು ಮಾಡಲಿಕ್ಕೆ ಬರುತ್ತದೆ??

***

ಬಾಂದೇಕರ್ ಕುಳಿತಿದ್ದ ಕ್ಲಬ್ಬಿಗೆ ಬಿದ್ದ ಬೆಂಕಿಯ ಆತಂಕ ದೂರವಾಯಿತು. ಎಲ್ಲರೂ ಒಳಗೆ ಬಂದು ನೋಡಿದರೆ ಅತ್ಯಂತ ವಿಚಿತ್ರವಾದ ರೀತಿಯಲ್ಲಿ ಬಾಂದೇಕರ್ ಸತ್ತು ಬಿದ್ದಿದ್ದ. ಅವನ ಮುಂದೆ ಹರಡಿದ್ದ ಹದಿಮೂರೂ ಇಸ್ಪೀಟ್ ಎಲೆಗಳು ಮಾತ್ರ ಎಲ್ಲವೂ ಜೋಕರ್ ಆಗಿದ್ದವು.

***
ವಿ. ಸೂ: ಇದೊಂದು ಕಾಲ್ಪನಿಕ ಕಥೆ. ಯಾವದೇ ವ್ಯಕ್ತಿಗಳಿಗಾದರೂ ಅಥವಾ ಯಾವದೇ ನೈಜ ಘಟನೆಗಳಿಗಾದರೂ ಸಾಮ್ಯತೆ ಕಂಡುಬಂದಲ್ಲಿ ಅದು ಶುದ್ದ ಕಾಕತಾಳೀಯವಷ್ಟೇ.

** horror ಕಥೆ ಬರೆದಿದ್ದು ಇದೇ ಮೊದಲು. ನಿಮಗೆ ಹೇಗನ್ನಿಸಿತು? ಅಭಿಪ್ರಾಯ ತಿಳಿಸಿ ಒಂದು ಕಾಮೆಂಟ್ ಹಾಕಿ. ಧನ್ಯವಾದ!