Tuesday, May 29, 2018

ನೆರಳು

ಒಮ್ಮೆ ಒಬ್ಬ ಮನುಷ್ಯ ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದ. ಒಮ್ಮೆಲೇ ಸಿಂಹದ ಗರ್ಜನೆ ಕೇಳಿಸಿತು. ಭೀತನಾದ ಮನುಷ್ಯ ಅತ್ತಿತ್ತ ನೋಡುವಷ್ಟರಲ್ಲಿ ಭೀಕರ ಸಿಂಹವೊಂದು ಅಟ್ಟಿಸಿಕೊಂಡು ಬಂದಿತು. ಜೀವ ರಕ್ಷಿಸಿಕೊಳ್ಳಲು ಓಡಿದ. ಇನ್ನೇನು ಸಿಂಹ ಮೈಮೇಲೆ ಎರಗುತ್ತದೆ ಅನ್ನುವಷ್ಟರಲ್ಲಿ ಸಿಕ್ಕ ಮರವೊಂದನ್ನೇರಿ ಬಚಾವಾದ. ಸಿಂಹ ಮರದ ಕೆಳಗೇ ನಿಂತು ರೋಷದಿಂದ ಗರ್ಜಿಸುತ್ತಿತ್ತು.

ಅದೇ ಮರದ ಮೇಲೆ ಕೋತಿಯೊಂದು ಸಹ ಇತ್ತು. ಅದು ಕೂಡ ಸಿಂಹ ಬಂದಿದ್ದರಿಂದ ತುಂಬಾ ಹೆದರಿತ್ತು. ಸಿಂಹ ಕೋತಿಯನ್ನು ಗಮನಿಸಿತು. ಮೊದಲು ಒಂದೇ ಬೇಟೆ ಎಂದುಕೊಂಡರೆ ಈಗ ಎರಡು ಬೇಟೆ ಇವೆ ಮರದ ಮೇಲೆ. ಒಂದನ್ನಾದರೂ ಬೇಟೆಯಾಡಲೇಬೇಕು. ಆದರೇನು ಮಾಡುವದು? ಎರಡೂ ಮರದ ಮೇಲೆ ಕೂತಿವೆ. ಕೆರಳಿದ ಸಿಂಹ ಮತ್ತೂ ಜೋರಾಗಿ ಗರ್ಜಿಸತೊಡಗಿತು. ಸಿಂಹಕ್ಕೆ ಅದೇನೆನ್ನಿಸಿತೋ ಏನೋ. ನೆಲದ ಮೇಲೆ ಮೂಡಿದ್ದ ಕೋತಿಯ ನೆರಳಿನ ಮೇಲೆ ಪಂಜಾದಿಂದ ಆಕ್ರಮಣ ಮಾಡುತ್ತ ಮತ್ತೂ ಭೀಕರವಾಗಿ ಗರ್ಜಿಸತೊಡಗಿತು.

ಕೋತಿ ಮತ್ತೂ ಭೀತಗೊಂಡಿತು. ಸಿಂಹ ಭೀಕರವಾಗಿ ಗರ್ಜಿಸಿ, ಕೋತಿಯ ನೆರಳಿನ ಮೇಲೆ ಪಂಜಾದಿಂದ ಹೊಡೆದಾಗೊಮ್ಮೆ ಕೋತಿ ಎಲ್ಲಿ ತನ್ನ ಮೇಲೆಯೇ ಸಿಂಹ ಆಕ್ರಮಣ ಮಾಡಿತೋ ಎಂಬಂತೆ ಪ್ರಾಣಭಯದಿಂದ ಸಿಕ್ಕಾಪಟ್ಟೆ ಕಿರುಚಾಡುತ್ತ, ಒಂದು ಕೊಂಬೆಯಿಂದ ಮತ್ತೊಂದು ಕೊಂಬೆಗೆ ಹಾರುತ್ತಿತ್ತು. ಕೂತ ಕಡೆ ಕೂಡಲಿಲ್ಲ. ಅಷ್ಟು ಭಯ, ಗಾಬರಿ ಕೋತಿಗೆ.

ಸುಮಾರು ಹೊತ್ತು ಹೀಗೇ ನಡೆಯಿತು. ಕೋತಿಯ ನೆರಳಿನ ಮೇಲೆ ಸಿಂಹ ಆಕ್ರಮಣ ಮಾಡುವದು. ಅದಕ್ಕೆ ಪ್ರತಿಯಾಗಿ ಕೋತಿ ಕಿರುಚಾಡುತ್ತ ಭೀತಿಯಿಂದ ಆಕಡೆಯಿಂದ ಈಕಡೆಗೆ ನೆಗೆದಾಡುವದು. ಕೋತಿಯ ನಸೀಬ್ ಕೆಟ್ಟಿತ್ತು. ಒಮ್ಮೆ ಕೊಂಬೆಯಿಂದ ಕೊಂಬೆಗೆ ಹಾರುವಾಗ ಪೊರಪಾಟಿನಲ್ಲಿ ಆಯತಪ್ಪಿ ಕೆಳಗೆ ಬಿತ್ತು. ಮುಂದೇನು? ಅದಕ್ಕೇ ಕಾದಿದ್ದ ಸಿಂಹ ಒಂದೇ ಏಟಿನಲ್ಲಿ ಕೋತಿಯನ್ನು ಮುಗಿಸಿ ಸ್ವಾಹಾ ಮಾಡಿತು. ಪೆದ್ದು ಕೋತಿ! ಮರದ ಮೇಲೆ ಸುಮ್ಮನೆ ಕೂತಿದ್ದರೆ ಬದುಕುಳಿಯುತ್ತಿತ್ತು. ಸಿಂಹದ ಗರ್ಜನೆಗೆ ಹೆದರಿ, ಗಾಬರಿಗೊಂಡು, ತನ್ನ ನೆರಳಿನ ಮೇಲೆ ಸಿಂಹ ಆಕ್ರಮಣ ಮಾಡಿದಾಗೊಮ್ಮೆ ಅತ್ತಿಂದಿತ್ತ ಹಾರಾಡಿ, ಆಯತಪ್ಪಿ ಬಿದ್ದು, ಸಿಂಹಕ್ಕೆ ಆಹಾರವಾಗಿತ್ತು.

ಕೋತಿಯನ್ನು ಹೀಗೆ ಬೇಟೆಯಾಡಿದ ಸಿಂಹ ಏನೋ ಪಾಠ ಕಲಿತಿತು. ಕೋತಿಯ ನೆರಳಿನ ಮೇಲೆ ಆಕ್ರಮಣ ಮಾಡಿದರೆ ಮರದ ಮೇಲಿಂದ ಕೋತಿ ಉದುರಿ ಬಿತ್ತು. ಹಾಗಾದರೆ ಮನುಷ್ಯನ ನೆರಳಿನ ಮೇಲೆ ದಾಳಿ ಮಾಡಿದರೆ ಮೇಲಿರುವ ಮನುಷ್ಯನೂ ಕೆಳಗೆ ಉರುಳಿ ಬಿದ್ದರೂ ಬೀಳಬಹುದು. ಹೊಟ್ಟೆ ಇನ್ನೂ ತುಂಬಿಲ್ಲ. ಮನುಷ್ಯನನ್ನೂ ಬೇಟೆಯಾಡಿಬಿಡಬೇಕು ಎಂದುಕೊಂಡಿತು.

ಕೋತಿಯ ನೆರಳಿನ ಮೇಲೆ ಆಕ್ರಮಣ ಮಾಡಿದಂತೆಯೇ ಮನುಷ್ಯನ ನೆರಳಿನ ಮೇಲೂ ಆಕ್ರಮಣ ಮಾಡಿ ಭೀಕರವಾಗಿ ಗರ್ಜನೆ ಮಾಡಿತು. ಅದೆಷ್ಟೇ ಬಾರಿ ಮನುಷ್ಯನ ನೆರಳಿನ ಮೇಲೆ ಆಕ್ರಮಣ ಮಾಡಿದರೂ ಮನುಷ್ಯ ಕೆಳಗೆ ಬೀಳಲಿಲ್ಲ. ತಲೆಯೆತ್ತಿ ನೋಡಿದರೆ ಕೂತಲ್ಲೇ ಕೂತಿದ್ದಾನೆ. ಕೋತಿಯಂತೆ ಅತ್ತಿತ್ತ ಹಾರಾಡುತ್ತಿಲ್ಲ. ಭೀತನಾಗುತ್ತಿಲ್ಲ. ಪ್ರತಿಕ್ರಿಯೆ ತೋರುತ್ತಿಲ್ಲ.

ಸುಮಾರು ಹೊತ್ತು ಮನುಷ್ಯನ ನೆರಳಿನ ಮೇಲೆ ದಾಳಿ ಮಾಡಿದ ಸಿಂಹ ಆ ಮನುಷ್ಯ ಕೆಳಗೆ ಬೀಳುವದಿಲ್ಲ ಎಂದು ಖಾತ್ರಿಯಾದ ಮೇಲೆ ಅಲ್ಲಿಂದ ಹೊರಟುಹೋಯಿತು. ಸಿಂಹ ಹೋಯಿತು ಎಂದು ಖಾತ್ರಿಯಾದ ಮೇಲೆ ಮರದ ಮೇಲಿಂದ ಕೆಳಗಿಳಿದು ಬಂದ ಮನುಷ್ಯ ತನ್ನ ಮನೆ ಸೇರಿಕೊಂಡ.

ನೀತಿ: ನಮ್ಮ ಜೀವನದಲ್ಲಿ ಆಗುತ್ತಿರುವ ಎಲ್ಲ ಘಟನೆಗಳು, ಅನುಭವಗಳು ಎಲ್ಲ ನಮ್ಮ ನೆರಳಿನ ಮೇಲೆ ಆಗುತ್ತಿವೆ ಎಂದು ತಿಳಿಯಬೇಕು. ಸುಖವಿರಲಿ, ದುಃಖವಿರಲಿ, ನಲಿವಿರಲಿ, ನೋವಿರಲಿ, ಲಾಭವಿರಲಿ, ನಷ್ಟವಿರಲಿ, ಆರೋಗ್ಯವಿರಲಿ, ರೋಗವಿರಲಿ  - ಇದ್ಯಾವುದೂ "ನಮಗೆ" ಆಗುತ್ತಿಲ್ಲ. ನಮ್ಮ ನೆರಳಿಗೆ ಆಗುತ್ತಿವೆ ಎಂದು ತಿಳಿಯಬೇಕು. ಹಾಗೆ ತಿಳಿದಾಗ ಮಾತ್ರ ನಿರ್ಲಿಪ್ತತೆಯಿಂದ ಸಂಸಾರದ ಸಾಗರವನ್ನು ದಾಟಬಹುದು. ಅದನ್ನು ಬಿಟ್ಟು ಮೂಢ ಕೋತಿಯಂತೆ ಸಿಂಹ ನೆರಳಿನ ಮೇಲೆ ದಾಳಿ ಮಾಡಿದಾಗ ವಿನಾಕಾರಣ ಗಾಬರಿಗೊಂಡು ಅತ್ತಿಂದಿತ್ತ ಹಾರಾಡಿ ಪೊರಪಾಟಿನಲ್ಲಿ ಕೆಳಗೆ ಬಿದ್ದು ಸಿಂಹದ ಪಾಲಾಗಬಾರದು. ಮರದ ಮೇಲಿರುವ ಕೋತಿ ಅಜ್ಞಾನದಿಂದ ಕೂಡಿರುವ ಜೀವಾತ್ಮ. ಸಿಂಹ ವಿಧಿ. ಸಿಂಹದ ಆಕ್ರಮಣ ಕರ್ಮಫಲ. ಸಿಂಹ ಅದೆಷ್ಟೇ ರೋಷದಿಂದ ಗರ್ಜಿಸಿ ನೆರಳಿನ ಮೇಲೆ ಆಕ್ರಮಣ ಮಾಡಿದರೂ ವಿಚಲಿತನಾಗದೇ ಸ್ಥಿತಪ್ರಜ್ಞನಾಗಿ ಕುಳಿತ ಮನುಷ್ಯನೂ ಜೀವಾತ್ಮನೇ. ಅಷ್ಟೇ ಅವನಿಗೆ ಜ್ಞಾನೋದಯವಾಗಿದೆ. ತಾನು ಪರಬ್ರಹ್ಮ (ಅಹಂ ಬ್ರಹ್ಮಾಸ್ಮಿ) ಎಂದು ಮನವರಿಕೆಯಾಗಿದೆ. ಸಂಸಾರದ ಪ್ರಕ್ರಿಯೆಗಳೆಲ್ಲ ತನ್ನದೇ ನೆರಳಾದ ಜೀವಾತ್ಮದ ಮೇಲೆ ಎಂದು ತಿಳಿದಿರುವ ಕಾರಣ ಆತ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳುವದಿಲ್ಲ. ಬಂದದ್ದನ್ನೆಲ್ಲಾ ಎದುರಿಸುತ್ತಾನೆ. ಫಲಾಫಲಗಳನ್ನು ನಿರ್ಲಿಪ್ತತೆಯಿಂದ ಸ್ವೀಕರಿಸುತ್ತಾನೆ. ಸ್ಥಿತಪ್ರಜ್ಞನಾಗಿ ಇರುತ್ತಾನೆ.

ಮಹಾರಾಷ್ಟ್ರದಲ್ಲಿ ಆಗಿಹೋದ ಶ್ರೇಷ್ಠ ಸಂತರಾದ ಸಂತ ಜ್ಞಾನೇಶ್ವರರು ಬರೆದ 'ಜ್ಞಾನೇಶ್ವರಿ' ಎಂಬ ಪುಸ್ತಕದಲ್ಲಿ ಬರುವ ನೀತಿಕಥೆ.

ಇಂತಹ ನೀತಿಕಥೆಗಳಿಂದ ಏನುಪಯೋಗ?  ಬದುಕಿನ ಬಾಣಲೆಯಲ್ಲಿ ವಿಧಿ ಹೊತ್ತಿಸಿದ ಬೆಂಕಿಯಲ್ಲಿ ಬರೋಬ್ಬರಿ ಹುರಿದು / ಉರಿದು ಹೋಗುತ್ತಿರುವಾಗ ಇವೆಲ್ಲ ನೆನಪಾಗುತ್ತವೆಯೇ? ಉಪಯೋಗವಾಗುತ್ತವೆಯೇ? ಎಂದು ಕೇಳಿದರೆ ಅಂತಹ ಸಂದರ್ಭಗಳಲ್ಲೇ ಇಂತಹ ನೀತಿಕಥೆಗಳ ಗರಿಷ್ಠ ಮೌಲ್ಯ ಮತ್ತು ಉಪಯೋಗ. ಇಲ್ಲವಾದರೆ ಕ್ರೂರ ವಿಧಿ ಬಹು ಬೇಗ ಹಣಿದುಬಿಟ್ಟೀತು. 

Sunday, May 13, 2018

ಅಪರಾಧ ಲೋಕದ ದೇವಪಿತೃಗಳು. ಭಾರತಕ್ಕೆ ತುಂಬಾ ಬೇಕಾಗಿರುವ ಕುಖ್ಯಾತರೊಂದಿಗೆ ಮುಖಾಮುಖಿ.

ಅವನು ಡಾನ್ ಛೋಟಾ ಶಕೀಲ್. ಪರಮಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಬಂಟ. ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿದ್ದಾನೆ. ಅಲ್ಲಿಂದಲೇ ಭೂಗತಲೋಕದ ವ್ಯವಹಾರ ಸಂಬಾಳಿಸುತ್ತಾನೆ. ಸೇಠುಗಳಿಗೆ ಧಮ್ಕಿ ಹಾಕಿ, ಅವರಿಂದ ಝಣಝಣ ರೊಕ್ಕ ಉದುರಿಸಲು ಆಗಾಗ ಫೋನ್ ಮಾಡುತ್ತಿರುತ್ತಾನೆ. ಅದು ಆತನ ವೃತ್ತಿ. ಆದರೆ ಡಾನ್ ಛೋಟಾ ಶಕೀಲನಿಗೆ ಒಮ್ಮೊಮ್ಮೆ ಪತ್ರಕರ್ತರೊಂದಿಗೆ ಹರಟೆ ಹೊಡೆಯಬೇಕು ಎನ್ನಿಸಿಬಿಡುತ್ತದೆ. ಆಗ ಒಂದು ನಂಬರಿಗೆ ಡಯಲ್ ಮಾಡುತ್ತಾನೆ. ಭಾರತದಲ್ಲಿರುವ ಒಬ್ಬ ಮಹಿಳಾ ಪತ್ರಕರ್ತೆ ಫೋನೆತ್ತಿ, 'ಹೇಳಿ ಶಕೀಲ್ ಭಾಯ್,' ಎಂದು ಪಕ್ಕಾ ವೃತ್ತಿಪರ ಪತ್ರಕರ್ತೆಯೊಬ್ಬಳ ನಿರ್ಭಾವುಕ ದನಿಯಲ್ಲಿ ತಮ್ಮ ಎಲ್ಲ ಮಾಹಿತಿದಾರರೊಂದಿಗೆ ಮಾತಾಡಿದಂತೆ ನಿರುದ್ವೇಗದಿಂದ ಮಾತಾಡುತ್ತಾರೆ.  ಆಕಡೆಯಿಂದ ಛೋಟಾ ಶಕೀಲ್, 'ಶೀಲಾಜೀ, ಹೇಗಿದ್ದೀರಿ ನೀವು?' ಎಂದು ಕುಶಲ ವಿಚಾರಿಸುತ್ತಾನೆ. ಮುಂದೆ ಘಂಟೆಗಟ್ಟಲೆ ಹರಟೆ ಹೊಡೆಯುತ್ತಾನೆ. ನಡುನಡುವೆ ಭೂಗತಲೋಕಕ್ಕೆ ಸಂಬಂಧಪಟ್ಟ ಬ್ರೇಕಿಂಗ್ ನ್ಯೂಸ್ ಅನ್ನಿಸುವಂತಹ ಮಾಹಿತಿಗಳನ್ನು ಹರಿಬಿಡುತ್ತಾನೆ. ಆಗ ಆ ಮಹಿಳಾ ಪತ್ರಕರ್ತೆ ಮೈಯೆಲ್ಲಾ ಕಿವಿಯಾಗಿ ಬರೋಬ್ಬರಿ ನೋಟ್ ಮಾಡಿಕೊಳ್ಳುತ್ತಾರೆ. ಶಕೀಲ್ ಮಾತುಕತೆ ಮುಗಿಸಿದಾಗ ಮಾಧ್ಯಮ ಲೋಕ ಮತ್ತೊಂದು ಬಿಗ್ ಬ್ರೇಕಿಂಗ್ ಸುದ್ದಿಗೆ ಅಣಿಯಾಗಿರುತ್ತದೆ. ಶೀಲಾ ರಾವಲ್ ಎಂಬ ದಿಟ್ಟ ಕ್ರೈಂ ಪತ್ರಕರ್ತೆ ತುಂಬಾ ರೋಚಕ ಅನ್ನಿಸುವಂತಹ ಮತ್ತೊಂದು ಸುದ್ದಿಯನ್ನು ಬ್ರೇಕ್ ಮಾಡಿರುತ್ತಾರೆ. ಕ್ರೈಂ ಮಾಧ್ಯಮಲೋಕದ ಅನಭಿಷಿಕ್ತ ಮಹಾರಾಣಿಯ ಕಿರೀಟಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿರುತ್ತದೆ.

ಶೀಲಾ ರಾವಲ್ ಮತ್ತು ಅವರು ಬರೆದಿರುವ ಪುಸ್ತಕ 

ಅವರು ಶೀಲಾ ರಾವಲ್. ಮೊದಲು ಶೀಲಾ ಭಟ್ ಆಗಿದ್ದರು. ವಿವಾಹದ ನಂತರ ಶೀಲಾ ರಾವಲ್ ಎಂದು ಚಾಲ್ತಿಯಲ್ಲಿದ್ದಾರೆ. ನಿಜವಾದ ಕ್ರೈಂ ಪತ್ರಕರ್ತರೇ ಕಮ್ಮಿ. ಪೊಲೀಸರು ಬಿಡುಗಡೆ ಮಾಡಿದ ಪತ್ರಿಕಾಹೇಳಿಕೆಗಳಿಗೇ ಮಸಾಲೆ ಹಾಕಿ, ಅದನ್ನೇ ಹಿಂದೆ ಮುಂದೆ ಮಾಡಿ ಬರೆದು ಕ್ರೈಂ ಪತ್ರಕರ್ತ ಎಂದು ಸ್ಕೋಪ್ ತೆಗೆದುಕೊಳ್ಳುವವರೇ ಜಾಸ್ತಿ. ಅದರಲ್ಲೂ ಕ್ರೈಂ ವರದಿ ಮಾಡುವ ಪತ್ರಕರ್ತರಲ್ಲಿ ಹೆಚ್ಚಿನವರು ಗಂಡಸರು. ಆ ಫೀಲ್ಡ್ ಮಹಿಳೆಯರಿಗೆ ಸರಿಯಾದದ್ದಲ್ಲ ಎಂದು ಮಹಿಳಾ ಪತ್ರಕರ್ತೆಯರು ಹೆಚ್ಚಾಗಿ ಕ್ರೈಂ ರಿಪೋರ್ಟಿಂಗ್ ಮಾಡಲು ಹೋಗುವದಿಲ್ಲ. ಅಂತಹ ಪುರುಷಪ್ರಧಾನ ಲೋಕದ ಗಾಜಿನ ಛಾವಣಿಯನ್ನು (glass ceiling) ಛಿದ್ರಮಾಡಿ ಯಶಸ್ವಿಯಾದವರು ಶೀಲಾ ರಾವಲ್.

ಸಾಂಪ್ರದಾಯಿಕ ಗುಜರಾತಿ ಬ್ರಾಹ್ಮಣ ಸಮಾಜದಲ್ಲಿ ಹುಡುಗಿಯರು ನೌಕರಿ ಚಾಕರಿಗೆ ಬರುವದೇ ಕಮ್ಮಿ. ಅದರಲ್ಲೂ ಪತ್ರಿಕೋದ್ಯಮಕ್ಕೆ ಅದರಲ್ಲೂ ಕ್ರೈಂ ಪತ್ರಿಕೋದ್ಯಮಕ್ಕೆ ಬರುವದು ದೂರದ ಮಾತು. ಇಂತಹ ಲೋಕಕ್ಕೆ ಶೀಲಾ ರಾವಲ್ ಎಂಬ ಗುಜರಾತಿ ಬ್ರಾಹ್ಮಣ ಹುಡುಗಿ ಎಂಟ್ರಿ ಕೊಟ್ಟಿದ್ದೊಂದೇ ಅಲ್ಲ, ದೊಡ್ಡ ಮಟ್ಟದ ಎಲ್ಲ ಭೂಗತ ಪಾತಕಿಗಳನ್ನು ಮುಖತಃ ಭೆಟ್ಟಿಯಾದ ಹೆಗ್ಗಳಿಕೆ ಯಾರಿಗಾದರೂ ಇದ್ದರೆ ಅದು ಶೀಲಾ ರಾವಲ್ ಅವರಿಗೆ ಮಾತ್ರ. ಮಹಿಳಾ ಪತ್ರಕರ್ತೆಯರು ಹೋಗಲಿ ಘಟಾನುಘಟಿ ಪುರುಷ ಪತ್ರಕರ್ತರೇ ಇವರು ಭೇಟಿಯಾದಷ್ಟು ಭೂಗತ ಪಾತಕಿಗಳನ್ನು ಖುದ್ದಾಗಿ ಭೇಟಿಯಾಗಿಲ್ಲ.

ಮೊದಲು ಶೀಲಾ ಭಟ್ ರಾವಲ್ ಹೆಚ್ಚಾಗಿ ಪತ್ರಿಕೆಗಳಲ್ಲಿ ಬರೆಯುತ್ತಿದ್ದರು. ಈಗಿತ್ತಲಾಗೆ ಅವರೂ ದೃಶ್ಯಮಾಧ್ಯಮಕ್ಕೆ ಶಿಫ್ಟ್ ಆಗಿದ್ದಾರೆ. ಅಲ್ಲೂ ಭೂಗತಲೋಕದ ಬಗ್ಗೆ ಲೇಟೆಸ್ಟ್ ಸುದ್ದಿಗಳನ್ನು ಬ್ರೇಕ್ ಮಾಡುತ್ತಲೇ ಇರುತ್ತಾರೆ.

ನೆನಪಿರಲಿ. ಈ ಖಡಕ್ ಕ್ರೈಂ ರಿಪೋರ್ಟಿಂಗ್ ಎಂಬುದು ಕತ್ತಿಯ ಅಲುಗಿನ ಮೇಲೆ ಸರ್ಕಸ್ ಮಾಡಿದ ಹಾಗೆ. ಅಷ್ಟು ಅಪಾಯಕಾರಿ. ಭೂಗತಲೋಕದ ಸಂಕೀರ್ಣ ಸಮೀಕರಣಗಳನ್ನು ಸರಿಯಾಗಿ  ಅರ್ಥಮಾಡಿಕೊಳ್ಳದ ಪತ್ರಕರ್ತರು ಚಿತ್ರವಿಚಿತ್ರವಾಗಿ ಸತ್ತುಹೋಗಿದ್ದಾರೆ. ೩೦೧೧ ರಲ್ಲಿ ಜ್ಯೋತಿರ್ಮಯ್ ಡೇ ಎಂಬ ಮುಂಬೈನ ಖ್ಯಾತ  ಕ್ರೈಂ ಪತ್ರಕರ್ತರು ದಾವೂದ್ ಇಬ್ರಾಹಿಂ ಮತ್ತು ಛೋಟಾ ರಾಜನ್ ನಡುವಿನ ವೈರತ್ವಕ್ಕೆ ಮತ್ತು ಮತ್ತೊಬ್ಬ ಪತ್ರಕರ್ತೆಯ ಕಾರಸ್ಥಾನಕ್ಕೆ ಜೀವವನ್ನೇ ಕಳೆದುಕೊಂಡರು. ಹಂತಕರ ಗುಂಡಿಗೆ ದಾರುಣವಾಗಿ ಬಲಿಯಾದರು. ೧೯೮೦ ರ ದಶಕದಲ್ಲಿ ಅಯ್ಯರ್ ಎಂಬ ಪತ್ರಕರ್ತರೂ ಹೀಗೇ ಭೂಗತಲೋಕದ ಗುಂಡಿಗೆ ಬಲಿಯಾಗಿದ್ದರು. ದೇಶಿ ಡಾನ್  ಅರುಣ್ ಗೌಳಿಯನ್ನು ಸರಿಯಾಗಿ ಇಂಟರ್ವ್ಯೂ ಮಾಡಲಿಲ್ಲ ಎಂದು ಗೌಳಿಯ ಬಂಟರು ಮತ್ತೊಬ್ಬ ಪತ್ರಕರ್ತೆ ಮೇಲೆ ಹಲ್ಲೆ ಮಾಡಿದ್ದರು. ಭೂಗತಲೋಕದ ನೈಜವಾದ ರಿಯಲ್ ರಿಪೋರ್ಟಿಂಗ್ ಮಾಡುವದು ಅಂದರೆ ಸುಲಭದ ಮಾತಲ್ಲ. ಭೂಗತ ಲೋಕದ ಮಂದಿಯ ಬಗ್ಗೆ ತಮಗೆ ಸರಿಯೆನ್ನಿಸಿದ್ದನ್ನು ಬರೆದು ಅರಗಿಸಿಕೊಳ್ಳುವದು ಸುಲಭವೂ ಅಲ್ಲ. ಆದರೆ ಅದನ್ನೆಲ್ಲ ಸಾಧಿಸಿ ತೋರಿಸಿದ್ದಷ್ಟೇ ಅಲ್ಲ ಭೂಗತಲೋಕವೇ ಎದ್ದು ನಿಂತು ಇವರ ನಿಯತ್ತನ್ನು, ವೃತ್ತಿಪರತೆಯನ್ನು ಗೌರವಿಸಬೇಕು ಎನ್ನುವಂತಹ ವ್ಯಕ್ತಿತ್ವವನ್ನು ಸದಾ ಕಾಪಾಡಿಕೊಂಡು ಬಂದವರು ಶೀಲಾ ರಾವಲ್.

ಅದು ಇಸ್ವಿ ೨೦೦೫. ದಾವೂದ್ ಇಬ್ರಾಹಿಂ ತುಂಬಾ ಖುಷಿಯಾಗಿದ್ದ. ಪಾಕಿಸ್ತಾನದ ಖ್ಯಾತ ಕ್ರಿಕೆಟರ್ ಜಾವೇದ್ ಮಿಯಾಂದಾದ್ ಜೊತೆ ಸಂಬಂಧ ಬೆಳೆಸಿದ್ದ. ಅವರಿಬ್ಬರ ಕುಟುಂಬಗಳ ಮಧ್ಯೆ ಗೆಳೆತನ ಮೊದಲಿಂದಲೂ ಇತ್ತು. ತನ್ನ ಮಗಳನ್ನು ಜಾವೇದ್ ಮಿಯಾಂದಾದನ ಮಗನಿಗೆ ಮದುವೆ ಮಾಡಿಕೊಟ್ಟ ದಾವೂದ್ ಕ್ರಿಕೆಟಿಗನ ಬೀಗನಾಗಿ ಬದಲಾಗಿದ್ದ. ಈ ಐತಿಹಾಸಿಕ ಮದುವೆ ಭಯಂಕರ ವಿಜೃಂಭಣೆಯಿಂದ ಜರುಗಿತ್ತು. ಪಾಕಿಸ್ತಾನದ ಕರಾಚಿಯಲ್ಲಿ, ಸೌದಿಯ ಮೆಕ್ಕಾದಲ್ಲಿ ವೈಭವೋಪೇತ ಸಮಾರಂಭಗಳು ನಡೆದಿದ್ದವು. ಅಲ್ಲೆಲ್ಲ ದಾವೂದ್ ಹಾಜರಿದ್ದ. ಅಲ್ಲೆಲ್ಲ ಅವನಿಗೆ ಬರೋಬ್ಬರಿ ರಕ್ಷಣಾ ವ್ಯವಸ್ಥೆಯನ್ನು ಮಾಡಲಾಗಿತ್ತು. ನಂತರ ದುಬೈನಲ್ಲಿ ಆರತಕ್ಷತೆಯನ್ನು ಇಟ್ಟುಕೊಳ್ಳಲಾಗಿತ್ತು. ಅದಕ್ಕೆ ಮಾತ್ರ ದಾವೂದ್ ಬರಲೇ ಇಲ್ಲ ಎಂದು ಗುಲ್ಲಾಗಿತ್ತು. ದುಬೈಗೆ ಬರಲಿರುವ ದಾವೂದನ್ನು ಉಡಾಯಿಸಿಬಿಡುವ ಖತರ್ನಾಕ್ ಸ್ಕೀಮ್ ಒಂದನ್ನು ಭಾರತೀಯ ಬೇಹುಗಾರರು ಹಾಕಿದ್ದಾರೆ ಎಂದು ಮೊದಲೇ ಮಾಹಿತಿ ಪಡೆದುಕೊಂಡ ದಾವೂದ್ ಅದೆಲ್ಲ ರಿಸ್ಕ್ ಬೇಡವೇ ಬೇಡ ಎಂದು ದುಬಾಯಿಗೆ ಬರಲೇ ಇಲ್ಲ. ಅವನ ಅನುಪಸ್ಥಿತಿಯಲ್ಲಿಯೇ ಅವನ ಮಗಳ ಆರತಕ್ಷತೆ ನಡೆದುಹೋಯಿತು. ಇಂತಹ ಸುದ್ದಿ ಎಲ್ಲ ಪತ್ರಿಕೆಗಳಲ್ಲಿ ಬಂದಿತ್ತು. ಅದನ್ನೇ ಇಲ್ಲಿಯವರೆಗೆ ನಾವೂ ಕೂಡ ನಂಬಿದ್ದೆವು.

ಆದರೆ ಮೊತ್ತಮೊದಲಬಾರಿಗೆ ಶೀಲಾ ರಾವಲ್ ತಮ್ಮ ಪುಸ್ತಕದಲ್ಲಿ  Godfathers of Crime (Face-to-Face with India's most wanted) ಹೊಚ್ಚ ಹೊಸ ಖತರ್ನಾಕ್ ಮಾಹಿತಿಯೊಂದನ್ನು ಹೊರಹಾಕಿದ್ದಾರೆ. ಬೆಚ್ಚಿಬೀಳಿಸುವ ಮಾಹಿತಿ ಎಂದರೆ - ದುಬೈನಲ್ಲಿ ನಡೆದ ಮಗಳ ಆರತಕ್ಷತೆಗೆ ಖುದ್ದು ದಾವೂದ್ ಮುದ್ದಾಂ ಬಂದಿದ್ದ. ತನ್ನ ಹಿತೈಷಿಗಳ ಸಲಹೆ ಪ್ರಕಾರ ಕೊಂಚ low profile ಕಾದುಕೊಂಡಿದ್ದ. ಪ್ರಚಾರದಿಂದ ದೂರವಿದ್ದ. ಆದರೆ ಯಾರ್ಯಾರನ್ನು ತನ್ನ ಪುತ್ರಿಯ ಮದುವೆಯ ಆರತಕ್ಷತೆಯಲ್ಲಿ ಸ್ವಾಗತಿಸಬೇಕಿತ್ತೋ, ಯಾರ್ಯಾರ ಖಾತಿರ್ದಾರಿ ಮಾಡಬೇಕಿತ್ತೋ ಅವೆಲ್ಲವನ್ನೂ ದಾವೂದ್ ಬರೋಬ್ಬರಿ ನಿಭಾಯಿಸಿದ್ದ. ಭಾರತಕ್ಕೆ, ಪಾಕಿಸ್ತಾನಕ್ಕೆ, ಅರಬ್ ಸಂಯುಕ್ತ ಸಂಸ್ಥಾನಕ್ಕೆ ಮುಜುಗರವಾಗದಿರಲಿ, ಅಲ್ಲಿನ ಸರ್ಕಾರಗಳಿಗೆ ಮುಖಭಂಗವಾಗದೇ ಇರಲಿ ಅನ್ನುವ ಕಾರಣಕ್ಕೆ ಅವನಿಗೆ ಕಡ್ಡಾಯವಾಗಿ low profile ಕಾದುಕೊಳ್ಳಲು ಕಟ್ಟುನಿಟ್ಟಾಗಿ ಹೇಳಲಾಗಿತ್ತು. ಹಾಗಾಗಿಯೇ ದಾವೂದ್ ದುಬೈಗೆ ಬರಲೇ ಇಲ್ಲ. ಅವನಿಗೆ ಇಲ್ಲಿ ಪ್ರವೇಶವಿಲ್ಲ ಎಂದು ನಂತರ ಹೇಳಿಕೊಳ್ಳಲು ಸಾಧ್ಯವಾಗಿದ್ದು.

ಆದರೆ ದಾವೂದ್ ಪುತ್ರಿಯ ಆರತಕ್ಷತೆಗೆ ಹರಸಾಹಸ ಮಾಡಿ ಆಮಂತ್ರಣ ಗಿಟ್ಟಿಸಿದ್ದ ಶೀಲಾ ರಾವಲ್ ದಾವೂದನನ್ನು ನೋಡಿದ್ದೊಂದೇ ಅಲ್ಲ, ದಾವೂದ್ ತಮಗೆ ಗೌರವದಿಂದ ಸಲಾಂ ಕೂಡ ಮಾಡಿದ್ದ ಎನ್ನುವ ಬ್ರೇಕಿಂಗ್ ನ್ಯೂಸ್ ನೀಡಿ ಎಲ್ಲ ಸರ್ಕಾರಗಳು ನೀಡಿದ ಹೇಳಿಕೆಗಳು ಶುದ್ಧ ಭೋಂಗು ಎಂದು ತಿಳಿಯುವಂತೆ ಮಾಡಿದ್ದಾರೆ.

'ಅಲ್ಲ ಶೀಲಾ ಅವರೇ, ದಾವೂದನ ಪುತ್ರಿಯ ವಿವಾಹದ ಆರತಕ್ಷತೆ ಆಗಿದ್ದು ೨೦೦೫ ರಲ್ಲಿ. ದಾವೂದ್ ದುಬೈಗೆ ಬರಲೇ ಇಲ್ಲ ಎನ್ನುವ ಸುದ್ದಿಯೇ ಅಂದಿನಿಂದಲೂ ಚಾಲ್ತಿಯಲ್ಲಿತ್ತು. ಈಗ ೨೦೧೫ ರಲ್ಲಿ ನೀವು ನಿಮ್ಮ ಪುಸ್ತಕದಲ್ಲಿ ದಾವೂದ್ ಖುದ್ದಾಗಿ ಅಲ್ಲಿ ಹಾಜರಿದ್ದ ಎಂದರೆ ಹೇಗೆ ನಂಬೋದು?' ಎಂದು ಕೇಳಿದರೆ ಅದಕ್ಕೂ ಸಮರ್ಪಕ ವಿವರಣೆ ಕೊಡುತ್ತಾರೆ ಲೇಖಕಿ ಪತ್ರಕರ್ತೆ ಶೀಲಾ. 'ಆಗಲೇ ಆ ಸುದ್ದಿಯನ್ನು ಬ್ರೇಕ್ ಮಾಡಲು ಕೆಲವು ಅನಿವಾರ್ಯತೆಗಳು ಇದ್ದವು. ಸರ್ಕಾರಗಳಿಂದ ವಿನಂತಿಭರಿತ ಒತ್ತಡವಿತ್ತು. ಬೇರೆಬೇರೆ ದೇಶಗಳ ಸರ್ಕಾರಗಳಿಗೆ ಅವರದೇ ಆದ ಕಾರಣಗಳಿಗಾಗಿ ದಾವೂದ್ ದುಬೈಗೆ ಬರಲೇ ಇಲ್ಲ ಎಂದು ಹೇಳಿಕೊಳ್ಳಬೇಕಾಗಿತ್ತು. ಹಾಗಾಗಿ ನಿಜ ಸುದ್ದಿ ತಿಳಿದಿದ್ದ ನಮ್ಮಂತವರೂ ಕೂಡ ಅಂತಹ ವಿನಂತಿ ಮತ್ತು ಒತ್ತಡಗಳ ಕಾರಣಗಳಿಂದ ಆಗ ಆ ಸ್ಟೋರಿಯನ್ನು ಬ್ರೇಕಿಂಗ್ ನ್ಯೂಸ್ ಮಾಡಲಾಗಲಿಲ್ಲ.'

ಇದು ನಂಬಲಾಗದ ವಿವರಣೆ ಏನಲ್ಲ. ಎಂತಹ ದಿಟ್ಟ ಪತ್ರಕರ್ತರೇ ಆಗಲಿ, ಒಮ್ಮೊಮ್ಮೆ ಅತಿ ದೊಡ್ಡಮಟ್ಟದಿಂದ ವಿನಯಪೂರ್ವಕ ವಿನಂತಿಗಳು ಬಂದಾಗ ಒಪ್ಪಲೇಬೇಕಾಗುತ್ತದೆ. ದೇಶದ ಹಿತದ ಪ್ರಶ್ನೆ, ಮಾನದ ಪ್ರಶ್ನೆ ಅಂತೆಲ್ಲ ಫಿಟ್ಟಿಂಗ್ ಇಟ್ಟುಬಿಡುತ್ತಾರೆ. ಮತ್ತೆ ಪತ್ರಕರ್ತರಿಗೆ ಅಮೂಲ್ಯ ಸಂಪರ್ಕಗಳನ್ನು ಜತನದಿಂದ ಕಾಪಿಟ್ಟುಕೊಳ್ಳಬೇಕಾಗುತ್ತದೆ. ಹಾಗಾಗಿ ಸುದ್ದಿ ಗೊತ್ತಾದ ತಕ್ಷಣ ಬರೆದು ಬಿಸಾಡಲು ಆಗುವದಿಲ್ಲ. ವೃತ್ತಿಪರರ ಅನಿವಾರ್ಯತೆಗಳು ಅವರಿಗೇ ಗೊತ್ತು.

ಡಾನ್ ಛೋಟಾ ಶಕೀಲನನ್ನು ತುಂಬಾ ಕಾಡಿ ಬೇಡಿ ದಾವೂದ್ ಪುತ್ರಿಯ ಆರತಕ್ಷತೆ ಸಮಾರಂಭಕ್ಕೆ ಆಮಂತ್ರಣ ಗಿಟ್ಟಿಸಿದ್ದರು ಶೀಲಾ. ಆಮಂತ್ರಣ ಸಿಕ್ಕಿತು ಅಂದಾಕ್ಷಣ ಕೈಬೀಸಿಕೊಂಡು, ಬೇಕಾದರೆ ಲಕೋಟೆಯಲ್ಲಿ ನೂರು ರೂಪಾಯಿ ನೋಟಿನ ಆಹೇರು ಇಟ್ಟುಕೊಂಡು, ಹೋಗಿಬಿಡಲು ಅದೇನು ಸಾಮಾನ್ಯನ ಮಗಳ ಮದುವೆಯೇ? ಅಂತರರಾಷ್ಟ್ರೀಯ ಉಗ್ರವಾದಿ ಎಂದು ಎಲ್ಲ ಕಡೆ ನೋಟೆಡ್ ಆದ ಭೂಗತಪಾತಕಿಯ ಖಾಸಗಿ ಸಮಾರಂಭ ಅದು. ದುಬೈನ ಪರಮ ದುಬಾರಿ ಐಷಾರಾಮಿ ಹಿಲ್ಟನ್ ಹೋಟೆಲ್ ಅಂದು ಅಕ್ಷರಶಃ ಕೋಟೆಯಾಗಿತ್ತು. ಆ ಮಟ್ಟದ ರಕ್ಷಣಾ ವ್ಯವಸ್ಥೆಯಿತ್ತು. ಸಾರ್ವಜನಿಕವಾಗಿ ದಾವೂದ್ ಇಬ್ರಾಹಿಂನನ್ನು ಟೆರರಿಸ್ಟ್, ಡಾನ್, ಪಾತಕಿ ಏನೇ ಅನ್ನಿ ಆದರೆ ಒಂದು ಖತರ್ನಾಕ್ ಓಪನ್ ಸೀಕ್ರೆಟ್ ಅಂದರೆ ಅನೇಕ ದೇಶಗಳ ಬೇಹುಗಾರಿಕೆ ಸಂಸ್ಥೆಗಳಿಗೆ ಆತನ ಅವಶ್ಯಕತೆ ತುಂಬಾ ಇದೆ. ಅದಕ್ಕೆ ಮುಖ್ಯ ಕಾರಣ ಆತನ ಹತೋಟಿಯಲ್ಲಿರುವ ದಕ್ಷ ಹವಾಲಾ ವ್ಯವಸ್ಥೆ. ಪ್ರಪಂಚದ ಯಾವ ಮೂಲೆಗೆ ಬೇಕಾದರೂ ಆತ ನಿಮಿಷಾರ್ಧದಲ್ಲಿ ಕೋಟಿ ಕೋಟಿ ಡಾಲರುಗಳನ್ನು ಬೇಕಾದ ಕರೆನ್ಸಿಯಲ್ಲಿ ನೀಟಾಗಿ ತಲುಪಿಸಬಲ್ಲ. ಅದೇ ಅವನ ಸ್ಪೆಷಾಲಿಟಿ. ಅದಕ್ಕೊಂದು ಪರ್ಯಾಯ ವ್ಯವಸ್ಥೆ ಮತ್ತು ಪರ್ಯಾಯ ದೊರೆ ಬರದ ಹೊರತೂ ದಾವೂದನ ಕೂದಲು ಕೂಡ ಕೊಂಕುವದಿಲ್ಲ. ಕೊಂಕಲು ಕೆಲವೊಂದು ಜಾಗತಿಕ ಹಿತಾಸಕ್ತಿಗಳು ಬಿಡುವದೂ ಇಲ್ಲ. ಈ ಕಡೆ ಭಾರತ ಮತ್ತು ಪಾಕಿಸ್ತಾನ ಅದೆಷ್ಟೇ ಗಜುಮ್ ಹಾಕಿದರೂ ಸರಿ, ಅದೇನೇ ಲಗಾಟಿ ಹೊಡೆದರೂ ಸರಿ, ಏನೂ ಆಗುವದಿಲ್ಲ. ಆಕಡೆ ಗಹಗಹಿಸಿ ರಕ್ಕಸನಗೆ ನಗುತ್ತ ದಾವೂದ್ ಆರಾಮಾಗಿ ಇರುತ್ತಾನೆ. ಶೀಲಾ ರಾವಲ್ ಕೂಡ ಅದನ್ನೇ ಬರೆಯುತ್ತಾರೆ.

ಬ್ಯಾಕ್ ಟು ದಾವೂದ್ ಪುತ್ರಿಯ ಆರತಕ್ಷತೆ ಸಮಾರಂಭ...ವಧುವರರು ಸ್ಥಾಪಿತರಾಗಿದ್ದ ಮಂಟಪದಿಂದ ಕೊಂಚ ದೂರದಲ್ಲಿ, ಕೊಂಚ ಕತ್ತಲಿರುವ ಜಾಗದಲ್ಲಿ, ಮೃದು ದಪ್ಪನೆ ಚರ್ಮದ ದುಬಾರಿ ಖುರ್ಚಿ ಮೇಲೆ ಡಾನ್ ದಾವೂದ್ ಇಬ್ರಾಹಿಂ ಕಾಲ ಮೇಲೆ ಕಾಲು ಹಾಕಿಕೊಂಡು ವಿರಾಜಮಾನನಾಗಿದ್ದ. ಮಿರಿಮಿರಿ ಮಿಂಚುತ್ತಿರುವ ದುಬಾರಿ ಸೂಟ್ ಧರಿಸಿದ್ದ ಆತ ಚಮಕಾಯಿಸುತ್ತಿದ್ದ. ವಧುವರರಿಗೆ ಶುಭಕೋರಲು ಬಂದು ಹೋಗುತ್ತಿದ್ದ ಎಲ್ಲರೂ ಆತನಿಗೆ ಬರೋಬ್ಬರಿ ಕಾಣುತ್ತಿದ್ದರು. ಆದರೆ ಆತ ಎಲ್ಲರಿಗೂ ಅಷ್ಟು ಸುಲಭವಾಗಿ ಕಾಣುತ್ತಿರಲಿಲ್ಲ. ನನಗೆ ಕಂಡ. ದೊಡ್ಡ ಮೀಸೆಯ ಅವನನ್ನು ನಾನು ಮಿಸ್ ಮಾಡಿಕೊಳ್ಳುವಂತೆಯೇ ಇರಲಿಲ್ಲ. ಕೊಂಚ ತಲೆ ತಗ್ಗಿಸಿ, ಕಣ್ಣಲ್ಲೇ ವಂದಿಸಿದೆ. ಗೌರವ ಸೂಚಿಸಿದೆ. ಅದಕ್ಕೆ ಪ್ರತಿಯಾಗಿ ದಾವೂದ್ ಸಹ ಗೌರವ ಸಲ್ಲಿಸಿದ. ಸಲಾಂ ಮಾಡಿದ. ಹೀಗೆ ತಮ್ಮ ಅತಿ ದುರ್ಲಭ 'ದಾವೂದ್ ದರ್ಶನ'ದ ಬಗ್ಗೆ ಬರೆದುಕೊಂಡಿದ್ದಾರೆ ಶೀಲಾ ರಾವಲ್.

ದಾವೂದ್ ಇಬ್ರಾಹಿಂ ಬಿಟ್ಟರೆ ಮತ್ತೊಬ್ಬ ದೊಡ್ಡ ಡಾನ್ ಅಂದರೆ ದಾವೂದನ ಕಡುವೈರಿ ಛೋಟಾ ರಾಜನ್. ಸೆಪ್ಟೆಂಬರ್ ೨೦೦೦ ನಲ್ಲಿ ಥೈಲಾಂಡಿನ ರಾಜಧಾನಿ ಬ್ಯಾಂಕಾಕಿನಲ್ಲಿ ಛೋಟಾ ರಾಜನ್ ಮೇಲೆ ದಾವೂದ್ ಕಳಿಸಿದ್ದ ಶಾರ್ಪ್ ಶೂಟರ್ಸ್ ಮಾರಣಾಂತಿಕ ಹಲ್ಲೆ ಮಾಡಿದರು. ನಾಲ್ಕಾರು ಗುಂಡೇಟು ತಿಂದಿದ್ದ ಛೋಟಾ ರಾಜನ್ ಬಚಾವಾಗಿದ್ದೇ ಒಂದು ದೊಡ್ಡ ಪವಾಡ. ಛೋಟಾ ರಾಜನ್ನನ ಅತ್ಯಾಪ್ತರಿಗೆ ಇನ್ನಿಲ್ಲದ ಆಮಿಷ ತೋರಿಸಿ ಅವರ ನಿಯತ್ತನ್ನು ಖರಾಬ್ ಮಾಡಿದ್ದ D ಕಂಪನಿ ಅವರ ಮೂಲಕ ಛೋಟಾ ರಾಜನ್ ಇರುವ ರಹಸ್ಯ ಸ್ಥಳದ ಮಾಹಿತಿ ತೆಗೆದಿತ್ತು. ಮಾಹಿತಿ ಸಿಕ್ಕಿದ್ದೇ ತಡ, ಛೋಟಾ ಶಕೀಲ್ ಹಂತಕರ ಒಂದು ಟೀಮ್ ತಯಾರು ಮಾಡಿ ಬ್ಯಾಂಕಾಕಿಗೆ ಕಳುಹಿಸಿಬಿಟ್ಟ. ರಾಜನ್ನನಿಗೆ ಮರಾಮೋಸ ಮಾಡಿದ್ದ ಅವನ ಮನುಷ್ಯನೊಬ್ಬ ಬಂದು ರಾಜನ್ ಇದ್ದ ಮನೆಯ ಬಾಗಿಲು ಬಡಿದಿದ್ದ. ಯಾರು ಎಂದು ಬಾಗಿಲಲ್ಲಿರುವ ಸಣ್ಣ ಪೀಪ್ ಹೋಲ್ ಮೂಲಕ ನೋಡಿದ ರಾಜನ್ನನ ಖಾಸ್ ಆದ್ಮಿ ರೋಹಿತ್  ವರ್ಮಾ. ಇವನು ನಮ್ಮವನೇ ತಾನೇ ಎಂದು ಬಾಗಿಲು ತೆಗೆದುಬಿಟ್ಟ. ಅದೇ ಅವನು ಮಾಡಿದ ದೊಡ್ಡ ತಪ್ಪು. ದೊಡ್ಡ ಪೊರಪಾಟಾಗಿಬಿಟ್ಟಿತು. ಗದ್ದಾರಿ ಮಾಡಿದ್ದ ಮನುಷ್ಯ ಸರಕ್ ಎಂದು ಪಕ್ಕಕ್ಕೆ ಸರಿದುಬಿಟ್ಟ. ಅವನ ಬೆನ್ನ ಹಿಂದೆ ಅವಿತುಕೊಂಡಿದ್ದರು ಛೋಟಾ ಶಕೀಲ್ ಕಳಿಸಿದ್ದ ಹಂತಕರು. ಮೊದಲು ಒಳಗೆ ನುಗ್ಗಿದವ ಛೋಟಾ ಶಕೀಲನ ಖಾಸ್ ಬಂಟ ಮುಂಬೈ ಜೋಗೇಶ್ವರಿ ಮೂಲದ ಮುನ್ನಾ ಜಿಂಗಾಡಾ. ಹಿಂದೆಯೇ ಮೊರೆದವು ಹಂತಕರ ಬಂದೂಕುಗಳು. ಹಲವಾರು ಗುಂಡೇಟು ತಿಂದ ರೋಹಿತ್  ವರ್ಮಾ ಅಲ್ಲೇ ಜರಡಿ ಜರಡಿಯಾಗಿ ರಕ್ತ ಸುರಿಸುತ್ತ ಸತ್ತ. ಅವನ ನೇಪಾಳಿ ಹೆಂಡತಿ ಕೂಡ ಹಂತಕರ ಗುಂಡಿಗೆ ಬಲಿಯಾದಳು. ಬಾಗಿಲು ಹಾಕಿದ್ದ ಕೋಣೆಯೊಂದರಲ್ಲಿ ಇದ್ದ ಎನ್ನುವ ಒಂದೇ ಕಾರಣಕ್ಕೆ ರಾಜನ್ ಬಚಾವಾದ. ಬಾಗಿಲ ಮೂಲಕವೇ rapid ಫೈರಿಂಗ್ ಮಾಡಿದ್ದರು. ನಾಲ್ಕಾರು ಗುಂಡು ರಾಜನ್ನನಿಗೆ ಬಿತ್ತು ಕೂಡ. ಅಂತಹ ಪರಿಸ್ಥಿತಿಯಲ್ಲೂ ಬಾಲ್ಕನಿ ಜಿಗಿದು ಕೆಳಕ್ಕೆ ಹಾರಿ ಫುಟ್ ಪಾತ್ ಮೇಲೆ ಬಿದ್ದಿದ್ದ ಛೋಟಾ ರಾಜನ್ನನನ್ನು ಯಾರೋ ಆಸ್ಪತ್ರೆಗೆ ಸೇರಿಸಿದ್ದರು. ಹಾಗಾಗಿ ಬದುಕಿಕೊಂಡ.

ಛೋಟಾ ರಾಜನ್ ಮೇಲೆ ದಾಳಿಯಾಗಿದೆ ಎಂದು ಸರಕಾರ ಖಾತ್ರಿ ಪಡಿಸುವ  ಮೊದಲೇ ತಮ್ಮ ಮಾಹಿತಿದಾರರ ಮೂಲಕ ಎಲ್ಲ ಮಾಹಿತಿ ತೆಗೆದಿದ್ದ ಖತರ್ನಾಕ ಪತ್ರಕರ್ತೆ ಶೀಲಾ ಭಟ್ ತುರಂತವಾಗಿ ಥೈಲ್ಯಾಂಡಿಗೆ ಹಾರಿದ್ದರು. ಅದೆಂತಹ ಪರ್ಫೆಕ್ಟ್ ಮಾಹಿತಿಜಾಲ ಅವರದ್ದು ನೋಡಿ. ವಿಮಾನ ಇಳಿದವರೇ ಸೀದಾ ಹೋಗಿದ್ದು ಛೋಟಾ ರಾಜನ್ ದಾಖಲಾಗಿದ್ದ ಆಸ್ಪತ್ರೆಗೆ. ರಾಜನ್ ಕೊಂಚ ಚೇತರಿಸಿಕೊಂಡಿದ್ದ. ಅವನನ್ನು ಮತ್ತು ಅವನ ಸಹಚರರನ್ನು ಸಂದರ್ಶಿಸಿ ವಾರಗಳ ಕಾಲ ಒಂದರಮೇಲೊಂದು ಬ್ರೇಕಿಂಗ್ ನ್ಯೂಸ್ ಕೊಟ್ಟವರು ಶೀಲಾ ಭಟ್. ಆಗ ಟೆಲಿವಿಷನ್ ಚಾನೆಲ್ಲುಗಳು ಅಷ್ಟೊಂದು ವ್ಯಾಪಕವಾಗಿರಲಿಲ್ಲ. ಥೈಲಾಂಡಿನಲ್ಲಿ ಕೂತು ಹಾಟ್ ನ್ಯೂಸ್ ವರದಿಗಳನ್ನು ಫಟಾಫಟ್ ಅಂತ ಬರೆದು ಬರೆದು ರೋಚಕ ಸಂಚಲನ ಸೃಷ್ಟಿಸಿದವರು ಶೀಲಾ ರಾವಲ್.

ಮುಂದೆ ೨೦೦೩ ರ ಹೊತ್ತಿಗೆ ಡಾನ್ ಅಬು ಸಲೇಂನನ್ನು ಅಮೇರಿಕಾದ FBI ಪೋರ್ಚುಗಲ್ ದೇಶದ ಸಹಕಾರದೊಂದಿಗೆ ಲಿಸ್ಬನ್ ಶಹರದಲ್ಲಿ ಅಟ್ಟಾಡಿಸಿ ಬಂಧಿಸಿತು. ಜೊತೆಗೆ ಸೆರೆ ಸಿಕ್ಕಾಕೆ ಅವನ ಪ್ರೇಯಸಿ ಬಾಲಿವುಡ್ ನಟಿ ಮೋನಿಕಾ ಬೇಡಿ. ಶೀಲಾ ರಾವಲ್ ಎಲ್ಲರಿಗಿಂತ ಭಿನ್ನ. ಅವರು ಬೇರೆ ಮಾಹಿತಿಯನ್ನು ಹುಡುಕುತ್ತ ಅಮೇರಿಕಾದ ಅಟ್ಲಾಂಟಾ ನಗರಕ್ಕೆ ಹಾರಿದ್ದರು. ಅವರಿಗೆ ಗೊತ್ತಿತ್ತು ಡಾನ್ ಅಬು ಸಲೇಂನ ಅಧಿಕೃತ ಪತ್ನಿ ಸಮೀರಾ ಜುಮಾನಿ ಅಟ್ಲಾಂಟಾ ನಗರದಲ್ಲೆಲ್ಲೋ ನೆಲೆಸಿದ್ದಾಳೆ ಎಂದು. ನಿಖರವಾಗಿ ಎಲ್ಲಿ ಎಂದು ಗೊತ್ತಿರಲಿಲ್ಲ. ಮತ್ತೆ ತಮ್ಮ ಮಾಹಿತಿದಾರರ ಜಾಲವನ್ನು ಜಾಲಾಡಿದ ಶೀಲಾ ರಾವಲ್ ಹುಲ್ಲಿನ ರಾಶಿಯಲ್ಲಿ ಸೂಜಿ ಹುಡುಕಿದಂತೆ ಸಮೀರಾ ಜುಮಾನಿಯ ವಿಳಾಸ ಕಂಡುಹಿಡಿದಿದ್ದು ಮಾತ್ರವಲ್ಲ ಆಕೆಯನ್ನು ಕಾಡಿ ಬೇಡಿ, ಏನೇನೋ ಮಾಡಿ, ಸಂದರ್ಶನ ಕೂಡ ಮಾಡಿದ್ದರು. ಅಮೇರಿಕಾದ ಅಟ್ಲಾಂಟಾ ನಗರದಿಂದ ಅಬು ಸಲೇಂನ ಯಾರಿಗೂ ಗೊತ್ತಿಲ್ಲದ ಅಮೇರಿಕಾದಲ್ಲಿನ ಜೀವನದ ಬಗ್ಗೆ ಕರಾರುವಕ್ಕಾಗಿ ವರದಿ ಮಾಡಿದ್ದರು. ದೊಡ್ಡ ಸ್ಕೂಪ್ ಕೊಟ್ಟಿದ್ದರು.

ಶೀಲಾ ರಾವಲ್ ಅವರ ಲೇಟೆಸ್ಟ್ ಸ್ಕೂಪ್ ಅಂದರೆ ಬಾಲಿವುಡ್ಡಿನ ಪುರಾತನ ಮಾದಕ ನಟಿ ಮಮತಾ ಕುಲಕರ್ಣಿಯನ್ನು ಕೀನ್ಯಾ ದೇಶದ ಮೊಂಬಾಸಾ ಶಹರದಲ್ಲಿ ಸಂದರ್ಶನ ಮಾಡಿದ್ದು. ಅದೇನು ಕರ್ಮವೋ ಏನೋ. ಎಲ್ಲರೂ ಆ ಪುಣ್ಯಾತಗಿತ್ತಿ ಮಮತಾ ಕುಲಕರ್ಣಿಯನ್ನು ಮಾದಕ ನಟಿ ಮಾದಕ ನಟಿ ಅಂದಿದ್ದೇ ಅಂದಿದ್ದು ಅವಳು ಹೋಗಿ ಹೋಗಿ ಮಾದಕ ವಸ್ತುಗಳ ಕಳ್ಳಸಾಗಾಣಿಕೆ ಜಾಲದಲ್ಲಿ ಸಿಕ್ಕಾಕಿಕೊಂಡುಬಿಡಬೇಕೇ!? ಆಕೆಯ ಪತಿ ವಿಕಿ ಗೋಸ್ವಾಮಿ ಕುಖ್ಯಾತ ಡ್ರಗ್ ಸ್ಮಗ್ಲರ್ ಎಂದು ಆಪಾದನೆ. ತನಿಖಾ ಸಂಸ್ಥೆಗಳಿಂದ ಬಚಾವಾಗಲು ವಿಕಿ ಗೋಸ್ವಾಮಿ ಮತ್ತು ಬಾಲಿವುಡ್ಡಿನಲ್ಲಿ ಕಿರಿಕ್ ಮಾಡಿಕೊಂಡು ಸವಕಲು ನಾಣ್ಯವಾಗಿದ್ದ ಮಮತಾ ಕುಲಕರ್ಣಿ ದುಬೈನಲ್ಲಿ ನೆಲೆಸಿದ್ದರು. ವಿಕಿ ಗೋಸ್ವಾಮಿಯ ನಸೀಬ್ ಖರಾಬಾಗಿತ್ತು. ದುಬೈ ಸರ್ಕಾರ ಅವನನ್ನು ಬಂಧಿಸಿ ಸೆರೆಮನೆಗೆ ಕಳಿಸಿತ್ತು. ಅಂದಿನ ಪ್ರೇಯಸಿ ಮಮತಾ ಕುಲಕರ್ಣಿ ಅವನ ಬಿಡುಗಡೆಗಾಗಿ ಕಾದು ಕೂತಿದ್ದಳು. ಗೆಳೆಯ ಗೋಸ್ವಾಮಿ ಜೈಲಿನಲ್ಲಿದ್ದಾಗ ನೀನು ಏನು ಮಾಡುತ್ತಿದ್ದೆ ಎಂದು ಕೇಳಿದರೆ ಅದೇ ಸಮಯದಲ್ಲಿ ಹಿಮಾಲಯದಲ್ಲಿ ಅಧ್ಯಾತ್ಮ ಸಾಧನೆ ಮಾಡಿ ಆತ್ಮದ ಸಾಕ್ಷಾತ್ಕಾರ ಮಾಡಿಕೊಂಡೆ ಅನ್ನುತ್ತಾಳೆ. ಎಲ್ಲಿಂದ ನಗಬೇಕೋ ತಿಳಿಯುವದಿಲ್ಲ. ವಿಕಿ ಗೋಸ್ವಾಮಿಯ ಬಿಡುಗಡೆ ನಂತರ ಮದುವೆಯಾಗಿ ಗಂಡ ಹೆಂಡತಿ ಇಬ್ಬರೂ ಕೀನ್ಯಾ ದೇಶದಲ್ಲಿ ನೆಲೆಸಿದರು. ಅವರ ಪ್ರಕಾರ ಕಾನೂನುಬದ್ಧ ವ್ಯಾಪಾರ ವ್ಯವಹಾರ ಮಾಡಿಕೊಂಡಿದ್ದಾರೆ. ತನಿಖಾ ಸಂಸ್ಥೆಗಳ ಪ್ರಕಾರ ಅವರು ಕುಖ್ಯಾತ ಡ್ರಗ್ ಕಳ್ಳಸಾಗಾಣಿಕೆದಾರರು. ಮುಂಬೈ ಪೊಲೀಸರು, ಅಮೇರಿಕಾದ drug enforcement  agency (DEA) ಎಲ್ಲ ಅವರ ಹಿಂದೆ ಬಿದ್ದಿದ್ದಾರೆ. ಈಗ ಎರಡು ಮೂರು ವರ್ಷಗಳ ಹಿಂದೆ ವಿಕಿ ಗೋಸ್ವಾಮಿ ಮತ್ತು ಕೀನ್ಯಾದ ಕುಖ್ಯಾತ ಆಕಾಶಾ ಸಹೋದರರನ್ನು DEA ಬಂಧಿಸಿದಾಗ ಒಂದು ಕಾಲದ ಮಾದಕ ನಟಿ ಮಮತಾ ಕುಲಕರ್ಣಿಯನ್ನೂ ಸಹ ಬಂಧಿಸಲಾಗಿದೆ ಎನ್ನುವ ಸುದ್ಧಿ ಹಬ್ಬಿತ್ತು. ಬಾಕಿ ಪತ್ರಕರ್ತರೆಲ್ಲ ಇಲ್ಲೇ ಕೂತು ಪುಂಖಾನುಪುಂಖವಾಗಿ ಕಲರ್ ಕಲರ್ ಗಾಳಿಪಟ ಹಾರಿಸಿದರೆ ಶೀಲಾ ರಾವಲ್ ಎಂದಿನಂತೆ ತಮ್ಮ ವಿಭಿನ್ನ ದಾರಿ ಹಿಡಿದರು. ಮೇಜರ್ ಸ್ಕೂಪ್ ಎಂಬಂತೆ ಸೀದಾ ಕೀನ್ಯಾಕ್ಕೆ ಹೋಗಿ ಮಮತಾ ಕುಲಕರ್ಣಿಯ ಸಂದರ್ಶನವನ್ನೇ ಸಂಪಾದಿಸಿಬಿಟ್ಟರು. ಆತ್ಮ ಸಾಕ್ಷಾತ್ಕಾರ ಮಾಡಿಕೊಂಡು ಸಾಧ್ವಿಯಾಗಿರುವೆ ಎನ್ನುವ ಮಮತಾ ಕುಲಕರ್ಣಿಯ ಸಂದರ್ಶನ ತುಂಬಾ ಕುತೂಹಲಭರಿತವಾಗಿದೆ ಮತ್ತು ಮಜವಾಗಿದೆ.

ಇಸ್ರೇಲಿ ಮಹಿಳೆ ಎಷ್ಟು ಸಬಲವಾಗಿದ್ದಾಳೆ ಎನ್ನುವ ಕುರಿತು ಇಸ್ರೇಲಿನ ಉಕ್ಕಿನ ಮಹಿಳೆ, ಮಾಜಿ ಪ್ರಧಾನಿ ಗೋಲ್ಡಾ ಮೀರ್ ಒಂದು ಮಾತು ಹೇಳಿದ್ದರು. ಅದೇನೆಂದರೆ - In Israel, women don't break the glass ceiling, they shatter it. ದಿಟ್ಟ ಪತ್ರಕರ್ತೆ ಶೀಲಾ ರಾವಲ್ ಅವರಿಗೆ ಇದು ಬರೋಬ್ಬರಿಯಾಗಿ ಒಪ್ಪುತ್ತದೆ. ಪುರುಷಪ್ರಾಧಾನ್ಯವಾದ ಕ್ರೈಂ ಪತ್ರಿಕೋದ್ಯಮದ ಗಾಜಿನ ಛಾವಣಿಯನ್ನು ಮುಟ್ಟಿದ್ದೊಂದೇ ಅಲ್ಲ ಅದನ್ನು ಚೂರುಚೂರಾಗಿ ಛಿದ್ರ ಮಾಡಿದ ಮೊದಲ ಮಹಿಳಾ ಪತ್ರಕರ್ತೆ ಶೀಲಾ ರಾವಲ್ ಅವರೇ ಇರಬೇಕು ಅನ್ನಿಸುತ್ತದೆ. ಅವರ ದಿಟ್ಟತನಕ್ಕೆ ಮತ್ತು ಅವರು ಸದಾ ಕೊಡುವ ರೋಚಕ ವರದಿಗಳಿಗೆ ಒಂದು ಸಲಾಂ.

ಇನ್ನೂ ಹೆಚ್ಚಿನ ರೋಚಕ ವಿವರಗಳಿಗೆ ಅವರ ಪುಸ್ತಕ ಮುದ್ದಾಂ ಓದಿರಿ. ಪೂರ್ತಿ ಓದಿ ಮುಗಿಸುವ ಮುನ್ನ ನೀವು ಅದನ್ನು ಕೆಳಗಿಡುವದಿಲ್ಲ. ಅದು ಗ್ಯಾರಂಟಿ!

ಶೀಲಾ ರಾವಲ್ ಮಾಡಿದ ಮಮತಾ ಕುಲಕರ್ಣಿಯ ಸಂದರ್ಶನ. youtube ಮೇಲೆ ಇತರೆ ವಿಡಿಯೋಗಳು ಸಿಗುತ್ತವೆ.



* ಅಪರಾಧ ಲೋಕದ ದೇವಪಿತೃಗಳು. ಭಾರತಕ್ಕೆ ತುಂಬಾ ಬೇಕಾಗಿರುವ ಕುಖ್ಯಾತರೊಂದಿಗೆ ಮುಖಾಮುಖಿ - ಈ ಬ್ಲಾಗ್ ಪೋಸ್ಟಿನ ಶೀರ್ಷಿಕೆ ವಿಚಿತ್ರವಾಗಿದೆಯಲ್ಲ ಎಂದುಕೊಂಡರೆ ವಿವರಣೆ ಇಷ್ಟೇ, ಅದು ಪುಸ್ತಕದ ಇಂಗ್ಲೀಷ್ ಹೆಸರನ್ನು ಕನ್ನಡೀಕರಿಸುವ ಪ್ರಯತ್ನ. Godfathers of Crime (Face-to-Face with India's most wanted). Godfather ಗೆ ದೇವಪಿತೃ ಸರಿಹೊಂದುತ್ತದೋ ಇಲ್ಲವೋ ಗೊತ್ತಿಲ್ಲ. ಅದಕ್ಕೆ ಬೇರೇನಾದರೂ ಸಮಂಜಸ ಪದವಿದೆಯೇ? ಹಾಗೆಯೇ Most wanted ಗೆ ಏನೆನ್ನಬಹುದು?

Sunday, May 06, 2018

ಕಾನೂನು ಪಂಡಿತ ಸುಬ್ರಮಣಿಯನ್ ಸ್ವಾಮಿ

ಪ್ರತಿಷ್ಠಿತ ಮತ್ತು ಪ್ರಭಾವಿ ವ್ಯಕ್ತಿಗಳ ಮೇಲೆ ಜಡಿದಿರುವ ಮೊಕದ್ದಮೆಗಳಿಂದ ಸುಬ್ರಮಣಿಯನ್ ಸ್ವಾಮಿ ಸುದ್ದಿಯಲ್ಲಿರುತ್ತಾರೆ. ತಮ್ಮ ಮೊಕದ್ದಮೆಗಳನ್ನು ಹೆಚ್ಚಾಗಿ ತಾವೇ ವಾದಿಸುತ್ತಾರಾದ್ದರಿಂದ ಬಹಳ ಜನ ಸ್ವಾಮಿಯವರು ಖುದ್ದು ವಕೀಲರು ಎಂದು ತಿಳಿದಿದ್ದಾರೆ. ಸ್ವಾಮಿ ವಕೀಲರಲ್ಲ. ಆದರೆ ೯೯% ವಕೀಲರಿಗಿಂತ ಹೆಚ್ಚಿನ ಕಾನೂನು ಜ್ಞಾನ ಅವರಿಗಿದೆ. ಹಾಗಾಗಿಯೇ ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡಾಗ ಅವರ ಕಾನೂನು ಜ್ಞಾನವನ್ನು ಪುರಸ್ಕರಿಸಿ ನ್ಯಾಯಾಧೀಶರು ಸ್ವಾಮಿಯವರಿಗೆ ವಾದ ಮಂಡಿಸಲು ಅನುಮತಿ ಕೊಡುತ್ತಾರೆ. ಹೈಕೋಟ್, ಸುಪ್ರೀಂ ಕೋರ್ಟ್ ಕೂಡ ಅವರ ಕಾನೂನು ಜ್ಞಾನವನ್ನು ಪುರಸ್ಕರಿಸಿ ವಾದ ಮಾಡಲು ಅನುವು ಮಾಡಿಕೊಡುತ್ತದೆ ಅಂದರೆ ಸ್ವಾಮಿಯವರ ಕಾನೂನು ಜ್ಞಾನ ಎಷ್ಟು ಉತ್ಕೃಷ್ಟವಾದದ್ದು ಎಂದು ತಿಳಿಯುತ್ತದೆ.

ಸ್ವಾಮಿಯವರಲ್ಲಿರುವ ಒಂದು ಗಮನಾರ್ಹ ಮತ್ತು ಪ್ರಶಂಸಾರ್ಹ ಗುಣ ಎಂದರೆ ಹೊಸ ವಿಷಯಗಳನ್ನು ತ್ವರಿತವಾಗಿ ಕಲಿಯುವ ಆಸಕ್ತಿ ಮತ್ತು ಹೊಸ ವಿಷಯಗಳ ಮೇಲೆ ದಾಖಲೆ ಸಮಯದಲ್ಲಿ ಪರಿಣಿತಿ ಸಾಧಿಸುವದು. ಸ್ವಾಮಿ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ PhD ವಿದ್ಯಾರ್ಥಿಯಿದ್ದಾಗ ಚೀನಾ ದೇಶದ ಆರ್ಥಿಕತೆ ಬಗ್ಗೆ ಅಭ್ಯಸಿಸತೊಡಗಿದರು. ಅದಕ್ಕಾಗಿ ಮ್ಯಾಂಡ್ರಿನ್ ಭಾಷೆ ಕಲಿತು ಕೆಲವೇ ತಿಂಗಳುಗಳಲ್ಲಿ ಆ ಭಾಷೆಯಲ್ಲಿ ಪ್ರಬುದ್ಧವಾಗಿ ಓದು ಬರೆದು ಮಾತಾಡಬಲ್ಲವರಾದರು. ಮುಂದೆ ಮುರಾರ್ಜಿ ದೇಸಾಯಿ ಪ್ರಧಾನಿಯಾದಾಗ ಚೀನಾ ದೇಶಕ್ಕೆ ಹೋಗಿ, ಚೀನಿಯರೊಂದಿಗೆ ಅವರದ್ದೇ ಭಾಷೆಯಲ್ಲಿ ಸರಾಗವಾಗಿ ಮಾತಾಡಿ, ಭಾರತದ ಕೆಲಸ ಮಾಡಿಕೊಂಡು ಬಂದರು ಸ್ವಾಮಿ. ಅದನ್ನು ನೋಡಿ ಅಂದಿನ ವಿದೇಶಾಂಗ ಮಂತ್ರಿಯಾಗಿದ್ದ ವಾಜಪೇಯಿಯವರು ಕೊಂಚ ಕಸಿವಿಸಿ ಅನುಭವಿಸಿದರಂತೆ. ತಾವು ವಿದೇಶಾಂಗ ಮಂತ್ರಿಯಾಗಿದ್ದರೂ ಈ ಮಹಾತ್ಮ ಸ್ವಾಮಿ ಹೋಗಿ ತಮ್ಮಿಂದಾಗದ ಕೆಲಸ ಮಾಡಿಕೊಂಡುಬಂದುಬಿಟ್ಟನಲ್ಲ ಎಂಬ ಈರ್ಷ್ಯೆ.

ಅದೆಲ್ಲ ಇರಲಿ. ಸ್ವಾಮಿ ಕಾನೂನು ಪಂಡಿತರಾಗಿದ್ದೇ ದೊಡ್ಡ ಕಥೆ. ಅವರ ಕುಟುಂಬದಲ್ಲಿ ಮೊದಲು ಕಾನೂನು ಕಲಿತವರು ಅವರ ಪತ್ನಿ ರೋಕ್ಸ್ನಾ. ರೋಕ್ಸ್ನಾಕೂಡ ಹಾರ್ವರ್ಡ್ PhD ಪದವೀಧರೆ. ಅವರು ಓದಿದ್ದು ಗಣಿತಶಾಸ್ತ್ರ. ಅಮೇರಿಕಾದಲ್ಲೇ ಇದ್ದರೆ ಅವರ ಗಣಿತದಲ್ಲಿ ಅವರು ಸಾಧಿಸಿದ್ದ ಸ್ಪೆಷಾಲಿಟಿಗೆ ಸ್ಕೋಪ್ ಇತ್ತೋ ಏನೋ. ಆದರೆ ಭಾರತದಲ್ಲಿ ಅವರಿಗೆ ಕಾಲೇಜಿನಲ್ಲಿ ಗಣಿತದ ಮಾಸ್ತರಿಣಿ ಕೆಲಸ ಬಿಟ್ಟರೆ ಬೇರೆ ಕೆಲಸ ಸಿಗುತ್ತಿರಲಿಲ್ಲ. ಮೇಲಿಂದ ಮಕ್ಕಳೂ ಚಿಕ್ಕವರಿದ್ದರು. ಹಾಗಾಗಿ ರೋಕ್ಸ್ನಾಕೆಲಸ ಮಾಡಲು ಹೋಗಲಿಲ್ಲ. ಕಾನೂನು ಕಲಿಯಲೇಬೇಕು ಎಂಬ ಪರಿಸ್ಥಿತಿ ಉದ್ಭವವಾದದ್ದು ತುರ್ತುಪರಿಸ್ಥಿತಿ ಸಮಯದಲ್ಲಿ. ಇಂದಿರಾ ಗಾಂಧಿ ವಿರುದ್ಧ ಹೋರಾಡುತ್ತಿದ್ದ ಸ್ವಾಮಿ ಭೂಗತರಾಗಿದ್ದರು. ಸರ್ಕಾರ ಅವರನ್ನು ಎಲ್ಲ ಕಡೆ ಹುಡುಕುತ್ತಿತ್ತು. ಸಿಕ್ಕಿದ್ದರೆ ಎನ್ಕೌಂಟರ್ ಮಾಡಿ ಒಗೆಯುತ್ತಿತ್ತೇನೋ. ಅಷ್ಟು ಆಕ್ರೋಶವಿತ್ತು ಅವರ ಮೇಲೆ. ತುರ್ತುಪರಿಸ್ಥಿತಿ ಕಾಲದಲ್ಲಿ ತಮ್ಮ ಅಂಕುಶವನ್ನು ಉಪಯೋಗಿಸಿ ಇಂದಿರಾ ಗಾಂಧಿ ಎಂತೆಂತಹ ಮದಗಜಗಳನ್ನೇ ಮೆತ್ತಗೆ ಮಾಡಿದ್ದರು. ಆದರೆ ಸ್ವಾಮಿಯವರನ್ನು ಮಟ್ಟ ಹಾಕಲು ಆಗಿರಲಿಲ್ಲ.

ಸ್ವಾಮಿ ಸಿಗದಿದ್ದಾಗ ಇಂದಿರಾ ಗಾಂಧಿಯವರ ಕರಾಳ ವ್ಯವಸ್ಥೆ ಮುರಕೊಂಡು ಬಿದ್ದಿದ್ದು ಸ್ವಾಮಿಯವರ ಪರಿವಾರದ ಮೇಲೆ. ರಾತ್ರೋರಾತ್ರಿ ಅವರ ಮನೆ ಖಾಲಿ ಮಾಡಿಸಲಾಯಿತು. ಇಬ್ಬರು ಚಿಕ್ಕ ಮಕ್ಕಳನ್ನು ಒಬ್ಬಂಟಿಯಾಗಿ ಸಂಬಾಳಿಸಿಕೊಂಡಿದ್ದ ರೋಕ್ಸ್ನಾ ಅರ್ಧರಾತ್ರಿಯಲ್ಲಿ ಬೀದಿಗೆ ತಳ್ಳಲ್ಪಟ್ಟರು. ದೆಹಲಿಯ ಮೈಕೊರೆಯುವ ಚಳಿಯಲ್ಲಿ ಫುಟ್ಪಾತ್ ಮೇಲೆ ಎರಡು ಚಿಕ್ಕಮಕ್ಕಳೊಂದಿಗೆ ನಿರ್ಗತಿಕರಂತೆ ರಾತ್ರಿ ಕಳೆದ ರೋಕ್ಸ್ನಾಕಾನೂನು ಅಭ್ಯಾಸ ಮಾಡುವ ನಿರ್ಧಾರ ಮಾಡಿದ್ದರು. ಮುಂದೆ ಕಾನೂನು ಪದವಿ ಗಳಿಸಿದ ಅವರು ವಕೀಲೆಯಾಗಿ ಆದಾಯ ಗಳಿಸತೊಡಗಿದರು. ಸ್ವಾಮಿಯವರ ನೌಕರಿಯನ್ನು ಸರ್ಕಾರ ಸ್ವಾಹಾ ಮಾಡಿತ್ತು. ಪತ್ನಿ ರೋಕ್ಸ್ನಾಗಳಿಸುತ್ತಿದ್ದ ಆದಾಯದಿಂದ ಸಂಸಾರ ಹೇಗೋ ನಡೆದಿತ್ತು.

ಖುದ್ದು ಸ್ವಾಮಿಯವರು ಕಾನೂನು ಕಲಿಯಬೇಕೆಂದು  ತೀರ್ಮಾನ ಮಾಡುವಂತಹ ಸಂದರ್ಭ ಕೊಂಚ ಸಮಯದ ನಂತರ ಬಂತು. ಸ್ವಾಮಿ ಯಾರೊಂದಿಗೂ ರಾಜಿ ಮಾಡಿಕೊಳ್ಳುವ ವ್ಯಕ್ತಿಯೇ ಅಲ್ಲ. ತಮಗೆ ಸರಿಯೆನ್ನಿಸಿದ್ದನ್ನು ಮಾಡುವವರೇ. ತಮ್ಮ ಖಡಕ್ ನಿರ್ಧಾರಗಳಿಂದ ಅವರ ಪಕ್ಷಕ್ಕೇ ಮುಜುಗರ ಮಾಡಿಬಿಡುತ್ತಿದ್ದರು. ಸತ್ಯದ ಪರವಾಗಿದ್ದಾಗ ಯಾರನ್ನೂ ಕೇರ್ ಮಾಡುವ ಅವಶ್ಯಕತೆಯಿಲ್ಲ ಎಂಬುದು ಅವರ ಖಡಕ್ ನಂಬಿಕೆ.

ಹೀಗೆ ಹಲವರಿಗೆ ಮಗ್ಗುಲಮುಳ್ಳಾಗಿದ್ದ ಸ್ವಾಮಿಯವರನ್ನು ಹಣಿಯಲು ಉಪಯೋಗಿಸಿದ್ದು ಮಾನನಷ್ಟ ಮೊಕದ್ದಮೆ ಎಂಬ ಅಸ್ತ್ರ. ಆದರಲ್ಲೂ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಎಂಬ ಕರಾಳ ಅಸ್ತ್ರ. ಎಷ್ಟೋ ದೇಶಗಳು ಮಹಾ ಅನಿಷ್ಟ ಕಾನೂನಾದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ತೆಗೆದುಹಾಕಿವೆ. ಭಾರತ ಮಾತ್ರ ಆಂಗ್ಲರ ಆಳ್ವಿಕೆಯ ಪಳೆಯುಳಿಕೆಯಂತಹ ಶಿಲಾಯುಗದ ಜನವಿರೋಧಿ ಕಾನೂನುಗಳನ್ನೇ ಪಾಲಿಸಿಕೊಂಡು ಬರುತ್ತಿದೆ. ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಅದೇ ಜಾತಿಗೆ ಸೇರಿದ್ದು. ಯಾರ ಮೇಲೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಬೀಳುತ್ತದೋ ಅವರು ಗಾಣಕ್ಕೆ ಸಿಕ್ಕ ಕಬ್ಬಿನ ಜಲ್ಲೆಯಂತೆ ಪೂರ್ತಿಯಾಗಿ ಹಿಂಡಿಹಿಪ್ಪೆಯಾಗಿಹೋಗುತ್ತಾರೆ.

ಸ್ವಾಮಿಯವರನ್ನು ಹಣಿಯಲು ಉಪಯೋಗಿಸಿದ್ದು ಇದನ್ನೇ. ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಎದುರಿಸಲು ಪ್ರತಿವಾದಿ ಪ್ರತಿಸಲ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕಾಗುತ್ತದೆ. ಸ್ವಾಮಿಯವರು ಇದ್ದಿದ್ದು ದೆಹಲಿಯಲ್ಲಿ. ಅವರ ಮೇಲೆ ಮೊಕದ್ದಮೆ ದಾಖಲಿಸಿದ್ದು ಮುಂಬೈನಲ್ಲಿ. ತುರ್ತುಪರಿಸ್ಥಿತಿಯಲ್ಲಿ ಆಡಳಿತಶಾಹಿಯ ಕುತಂತ್ರಕ್ಕೆ ನೌಕರಿ ಕಳೆದುಕೊಂಡಿದ್ದ ಸ್ವಾಮಿಯವರ ಆರ್ಥಿಕ ಪರಿಸ್ಥಿತಿನಾಜೂಕಾಗಿತ್ತು. ಮೇಲಿಂದ ಮುಂಬೈನಲ್ಲಿ ವಕೀಲರ ಖರ್ಚು. ತಿಂಗಳಿಗೆ ನಾಲ್ಕಾರು ಬಾರಿ ಮುಂಬೈಗೆ ಬಂದುಹೋಗುವ ಖರ್ಚು. ಮುಂಬೈನಲ್ಲಿ ಉಳಿಯಲು ಮತ್ತು ಓಡಾಡಲು ಮತ್ತೊಂದಿಷ್ಟು ಖರ್ಚು. ಹೀಗೆ ಸ್ವಾಮಿಯವರನ್ನು ಎಲ್ಲ ರೀತಿಯಿಂದ ಹಿಂಡಿ ಹಿಪ್ಪೆ ಮಾಡಿಬಿಡುವಂತಹ ಸ್ಕೀಮ್ ಹಾಕಲಾಗಿತ್ತು. ಈ ಷಡ್ಯಂತ್ರವನ್ನು ಖ್ಯಾತ ವಕೀಲ ರಾಮ್ ಜೇಠಮಲಾನಿ ರೂಪಿಸಿದ್ದರು. ಸೂತ್ರದಾರು ಬೇರೆ ಯಾರೋ ಇದ್ದರು.

ಯಾವಾಗ ತಮ್ಮ ಮೇಲೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಬಿತ್ತೋ ಮೊದಲಬಾರಿಗೆ ಸ್ವಾಮಿ ಕಾನೂನು ಪುಸ್ತಕ ತೆರೆದು ಕೂತರು. ವಕೀಲೆ ಪತ್ನಿ ರೋಕ್ಸ್ನಾತಕ್ಕಮಟ್ಟಿನ ಸಹಾಯ ಮತ್ತು ಮಾರ್ಗದರ್ಶನ ಮಾಡಿದರು. ಸ್ವಾಮಿಯವರ ಬುದ್ಧಿಮತ್ತೆ ಮತ್ತು ಏಕಾಗ್ರತೆಯ ಬಗ್ಗೆ ದೂಸರಾ ಮಾತೇ ಇಲ್ಲ. ಒಂದು ವಿಷಯವನ್ನು ಎತ್ತಿಕೊಂಡರು ಅಂದರೆ ಅಷ್ಟೇ ಮತ್ತೆ. ಅದರಲ್ಲಿ ಪರಿಣಿತರಾಗಿಯೇ ಬಿಡುತ್ತಿದ್ದರು. ಕಾನೂನಿನ ವಿಷಯದಲ್ಲೂ ಅದೇ ಆಯಿತು.

ಕಾನೂನನ್ನು ಅಧ್ಯಯನ ಮಾಡುತ್ತಿದ್ದಾಗ ಸ್ವಾಮಿ ಒಂದು ವಿಷಯವನ್ನು ಗಮನಿಸಿದರು. ನೋಟ್ ಮಾಡಿಕೊಂಡರು. ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹಾಕಿದವನ ಜನ್ಮಜಾಲಾಡಿಬಿಡುವ ಅವಕಾಶವನ್ನು ಕಾನೂನು ಪ್ರತಿವಾದಿಗೆ ಕಲ್ಪಿಸುತ್ತದೆ. ಇದನ್ನೇ ಟ್ರಂಪ್ ಕಾರ್ಡ್ ಮಾಡಿಕೊಂಡು ತಮ್ಮ ಮೇಲೆ ಕೇಸ್ ಹಾಕಿದವನನ್ನು ಹಣಿಯಬೇಕು ಎಂದು ನಿರ್ಧರಿಸಿದರು ಸ್ವಾಮಿ. ತಮ್ಮ ಮೇಲೆ ಬೇರೆ ಯಾರದ್ದೋ ಇಶಾರೆಯಂತೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದವನ ಪೂರ್ವಾಪರ ತೆಗೆದುಕೊಂಡು ಕೂತರು ಸ್ವಾಮಿ.

ಸ್ವಾಮಿಯವರ ಮೇಲೆ ಕೇಸ್ ಹಾಕಿದವನೇನೂ ಸುಬಗನಲ್ಲ. ಶುದ್ಧ ತಲೆಹಿಡುಕ. ಅನೈತಿಕ ವ್ಯವಹಾರಗಳಿಗೆ ಮಹಿಳೆಯರನ್ನು ಸರಬರಾಜು ಮಾಡಿದ ಆರೋಪ ಅವನ ಮೇಲಿತ್ತು. ವೃತ್ತಿಪರ ರಾಜಕಾರಣಿಯಾಗಿದ್ದ ಅವನು ಸ್ವಕಾರ್ಯಸಿದ್ಧಿಗಾಗಿ ಪಿಂಪ್ ಕೆಲಸ ಮಾಡಿ ಸಿಕ್ಕಿಬಿದ್ದಿದ್ದ.

ತೆರೆದ ನ್ಯಾಯಾಲಯದಲ್ಲಿ ಸ್ವಾಮಿ ಖುದ್ದಾಗಿ ಅವನ ಜನ್ಮಜಾಲಾಡತೊಡಗಿದರು. ಆತ ಉದಯೋನ್ಮುಖ ರಾಜಕಾರಣಿ. ಅವನಿಗೆ ಮುಂದೆ ಏನೇನೋ ಸಾಧಿಸಬೇಕಾಗಿತ್ತು. ಹಾಗಿರುವಾಗ ಯಾರದ್ದೋ ಇಶಾರೆ ಮೇಲೆ ಸುಳ್ಳು ಕೇಸು ಹಾಕಿದ್ದ. ಅದಕ್ಕೆ ಅವನಿಗೆ ಕಾಣಿಕೆ ಸಂದಾಯವಾಗಿತ್ತು. ಕೋರ್ಟಿಗೆ ಬಂದು ಸ್ವಾಮಿಯವರಿಗೆ ಕಾಟ ಕೊಟ್ಟರೆ ತನ್ನ ಕೆಲಸ ಮುಗಿಯಿತು ಎಂದುಕೊಂಡಿದ್ದ.

ಸ್ವಾಮಿ ಅವನನ್ನು ಕಟಕಟೆಗೆ ಕರೆಯಲು ನ್ಯಾಯಾಲಯದ ಅನುಮತಿ ಕೋರಿದರು. ಕೋರಿಕೆ ನ್ಯಾಯಸಮ್ಮತವಾಗಿದ್ದರಿಂದ ನ್ಯಾಯಾಲಯ ಅನುಮತಿ ಕೊಟ್ಟಿತು. ಕೇಸ್ ಜಡಿದವ ಕಟಕಟೆಗೆ ಬಂದು ನಿಂತ ನೋಡಿ. ಮುಂದೆ ಅಷ್ಟೇ ಮತ್ತೆ. ಅವನನ್ನು ಪೂರ್ತಿಯಾಗಿ ತೊಳೆದುಬಿಟ್ಟರು ಸ್ವಾಮಿ. ಅವನ ತಲೆಹಿಡುಕತನ, ಮಹಿಳೆಯರನ್ನು ಸರಬರಾಜು ಮಾಡಿದ ಕಾರ್ನಾಮೆಗಳನ್ನು ಎಳೆಎಳೆಯಾಗಿ, ರಂಗುರಂಗೀನಾಗಿ ಬಿಚ್ಚಿಡತೊಡಗಿದರು. ಮೊದಮೊದಲು ಮುಜುಗರದಿಂದ ನಸುಗುನ್ನಿಯಂತೆ ಒಳೊಳಗೇ ಮಿಸುಕಾಡಿದ ಆ ಕೊರಮ ಪೂರ್ತಿ ಬತ್ತಲೆಯಾಗುವ ಮೊದಲೇ ಎರಡೂ ಕೈಯೆತ್ತಿ ಅಂಬೋ ಅಂದುಬಿಟ್ಟ. ಸ್ವಾಮಿಯವರ ಮೇಲೆ ನಡೆದ ಕಾರಸ್ಥಾನವನ್ನು ಎಲ್ಲ ವಿವರಗಳೊಂದಿಗೆ ಹೇಳಿಬಿಟ್ಟ.

'ನ್ಯಾಯಾಧೀಶರೇ, ಈ ಸುಬ್ರಮಣಿಯನ್ ಸ್ವಾಮಿ ಯಾರು ಅಂತಲೇ ನನಗೆ ಗೊತ್ತಿರಲಿಲ್ಲ. ಯಾರ್ಯಾರೋ ಏನೇನೋ ಪಂಪ್ ಹೊಡೆದು ನನ್ನಿಂದ ಇವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿಸಿದರು. ನನಗೆ ಏನೂ ಬೇಕಿಲ್ಲ. ಪರಿಹಾರ ಗಿರಿಹಾರ ಏನೂ ಬೇಡ ಸರ್. ಈ ಮೊಕದ್ದಮೆಯನ್ನು ಹಿಂದೆ ತೆಗೆದುಕೊಳ್ಳಲು ಅನುಮತಿ ಕೊಡಿ. ಮುಕ್ತಿ ಕೊಡಿ ಸ್ವಾಮಿ!' ಎಂದೋ ಕೋರ್ಟಿನಲ್ಲೇ ಕಣ್ಣೀರು ಸುರಿಸುತ್ತ ಅಡ್ಡಡ್ಡ ನಮಸ್ಕಾರ ಹಾಕಿಬಿಟ್ಟ.

ಅಲ್ಲಿಗೆ ಎಲ್ಲ ದೂದ್ ಕಾ ದೂದ್ ಪಾನಿ ಕಾ ಪಾನಿ ಆಗಿಹೋಯಿತಲ್ಲ!? ಮೊಕದ್ದಮೆ ವಜಾ ಆಗಿಹೋಯಿತು. ಸುಳ್ಳು ಕೇಸ್ ಹಾಕಿದ್ದಕ್ಕೆ ನ್ಯಾಯಾಲಯ stricture ಪಾಸ್ ಮಾಡಿ ಸ್ವಾಮಿಯವರನ್ನು ದೋಷಮುಕ್ತ ಮಾಡಿತು.

ಅತ್ಯಂತ ಶ್ರೇಷ್ಠ ವಕೀಲ ರಾಮ್ ಜೇಠಮಲಾನಿಗೇ ನೀರು ಕುಡಿಸಿದ್ದರು ಸ್ವಾಮಿ. ಸ್ವಾಮಿಯ ಖದರ್ ಅಂದರೆ ಅದು. ಅದೇ ಕೊನೆ. ನಂತರ ರಾಮ್ ಜೇಠಮಲಾನಿ ಆದಿಯಾಗಿ ಎಲ್ಲ ವಕೀಲರು ತಮ್ಮ ಕಕ್ಷಿದಾರಿಗೆ ಹೇಳುತ್ತಿದ್ದುದು ಒಂದೇ ಮಾತು - ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡುವ ಮೊದಲು ಜೋಕೆ. ನೀವೇ ಬೆತ್ತಲೆಯಾಗಿ ಹೋದೀರಿ. ಸುಬ್ರಮಣಿಯನ್ ಸ್ವಾಮಿಯ ವಿರುದ್ಧ ಮಾತ್ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲೇಬೇಡಿ. ಕೇವಲ ಸಿವಿಲ್ ಮಾನನಷ್ಟ ಮೊಕದ್ದಮೆ ಮಾತ್ರ ಹೂಡಿ. ಸುಬ್ರಮಣ್ಯ ಸ್ವಾಮಿ ಎಲ್ಲಿ ಹೇಗೆ ಬತ್ತಿ ಇಟ್ಟು ಬ್ಲಾಸ್ಟ್ ಮಾಡುತ್ತಾನೆ ಎಂದು ಹೇಳಲಾಗುವದಿಲ್ಲ!!

ಹೀಗೆ ಘಟಾನುಘಟಿ ವಕೀಲರಿಗೆ ಅವರದ್ದೇ ಆಟದಲ್ಲಿ ಅವರಿಗೇ ನೀರು ಕುಡಿಸಿದ್ದ ಭೂಪ ಸುಬ್ರಮಣಿಯನ್ ಸ್ವಾಮಿ.

ಮುಂದೆ ಸ್ವಾಮಿಯವರನ್ನು ಕೋರ್ಟಿನಲ್ಲಿ ತಡವಿಕೊಳ್ಳಲು ಹೋಗಿ  ತಾರಾಮಾರಾ ಬಾರಿಸಿಕೊಂಡವರು ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ.

೧೯೮೩ ರಲ್ಲಿ ತುಂಬಾ ಅನಿರೀಕ್ಷಿತವಾಗಿ ಹೆಗಡೆ ಕರ್ನಾಟಕದ ಮುಖ್ಯಮಂತ್ರಿಯಾದರು. ದೇವೇಗೌಡರೋ, ಬಂಗಾರಪ್ಪನವರೋ ಅಥವಾ ಬೊಮ್ಮಾಯಿಯವರೋ ಆಗಬಹುದು ಎಂದುಕೊಂಡಿದ್ದರೆ ರಾಜ್ಯಸಭಾ ಸದಸ್ಯರಾಗಿದ್ದ ಹೆಗಡೆ ತಮ್ಮ ಚಾಣಾಕ್ಷ ದಾಳ ಉರುಳಿಸಿ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದರು.

ಮುಖ್ಯಮಂತ್ರಿಯಾದ ಮೇಲೆ ಜನತಾ ಪರಿವಾರದ ಮೇಲೆ ರಾಷ್ಟ್ರಮಟ್ಟದಲ್ಲಿ ಕೂಡ ಸಂಪೂರ್ಣ ಹಿಡಿತ ಸಾಧಿಸಲು ಯತ್ನಿಸಿದರು ಹೆಗಡೆ. ಆದರೆ ಜನತಾ ಪರಿವಾರದ ಮತ್ತೊಬ್ಬ ಮಹತ್ವಾಕಾಂಕ್ಷಿ ರಾಜಕಾರಣಿ ಚಂದ್ರಶೇಖರ್ ಅದಕ್ಕೆ ಪರೋಕ್ಷವಾಗಿ ಅಡ್ಡಗಾಲು ಹಾಕಿದರು. ಹೊರಗಿಂದ ಹೆಗಡೆ ಜೊತೆ ಭಾಯಿ ಭಾಯಿ ವರ್ತನೆ ತೋರಿದರೂ ಹೆಗಡೆಯವರನ್ನು ಮಟ್ಟಹಾಕುವ ಸುಪಾರಿಯನ್ನು ಸುಬ್ರಮಣ್ಯ ಸ್ವಾಮಿಗೆ ಕೊಟ್ಟರು. ವೃತ್ತಿಪರ ಭಾಡಿಗೆ ಸೈನಿಕನಂತೆ (mercenary) ಸುಪಾರಿ ತೆಗೆದುಕೊಂಡ ಸ್ವಾಮಿ ಹೆಗಡೆಗೆ ಸ್ಕೆಚ್ ಹಾಕಲು ಕುಳಿತರು.

ಹೆಗಡೆಯವರ ಬಗ್ಗೆ ಆಗ ಒಂದು ಗುಸುಗುಸು ಚಾಲ್ತಿಯಲ್ಲಿತ್ತು. ಅದೇನೆಂದರೆ ಹೆಗಡೆ ಸರ್ಕಾರ ವಿರೋಧಪಕ್ಷಗಳ ನಾಯಕರುಗಳ ಫೋನಿಗೆ ಕಳ್ಳಗಿವಿ ಹಚ್ಚಿ ಕೂತಿದೆ. ಫೋನ್ ಟ್ಯಾಪಿಂಗ್ ಮಾಡುತ್ತಿದೆ. ಸಂಭಾಷಣೆಗಳನ್ನು ಕದ್ದಾಲಿಸುತ್ತದೆ. ಸ್ವಾಮಿ ಇದನ್ನೇ ದೊಡ್ಡ ಇಶ್ಯೂ ಮಾಡಿದರು. ಕೇಂದ್ರದಲ್ಲಿ ಕಾಂಗ್ರೆಸ್ಸಿನ ರಾಜೀವ್ ಗಾಂಧಿ ಸರ್ಕಾರವಿತ್ತು. ಅವರಿಗೂ ಹೆಗಡೆಯವರನ್ನು ಹಣಿಯಬೇಕಾಗಿತ್ತು. ಮತ್ತೆ ರಾಜೀವ್ ಗಾಂಧಿ ಸ್ವಾಮಿಯವರಿಗೆ ತುಂಬಾ ಆಪ್ತಮಿತ್ರರೂ ಕೂಡ. ಕಾಂಗ್ರೆಸ್ ಸರ್ಕಾರದ ಅಧಿಕಾರಿಗಳು ಸ್ವಾಮಿಯವರ ತೋಪನ್ನು ಹೆಗಡೆ ವಿರುದ್ಧ ಸಂಗ್ರಹಿಸಿದ್ದ ಮಾಹಿತಿಯೆಂಬ ಮದ್ದಿನಿಂದ ತುಂಬಿದರು. ಹೀಗೆ ತುಪಾಕಿ ತುಂಬಿಕೊಂಡ ಸ್ವಾಮಿ ಹೆಗಡೆ ವಿರುದ್ಧ ಒಂದಾದಮೇಲೊಂದು ಗುಂಡು ಹಾರಿಸತೊಡಗಿದರು. ಪ್ರಹಾರ ಮಾಡತೊಡಗಿದರು. ಮಾಸ್ಟರ್ ಸ್ಟ್ರೋಕ್ ಎಂಬಂತೆ ಯಾರ್ಯಾರ ಫೋನುಗಳನ್ನು ಕದ್ದಾಲಿಸಲಾಗುತ್ತಿದೆ ಎನ್ನುವ ಪಟ್ಟಿಯನ್ನು ಬಿಡುಗಡೆ ಮಾಡಿಬಿಟ್ಟರು ಸ್ವಾಮಿ. ಅಲ್ಲಿಗೆ ದೊಡ್ಡ ಹಗರಣವಾಯಿತು. ಅದೇ ಟೆಲಿಫೋನ್ ಕದ್ದಾಲಿಕೆ ಪ್ರಕರಣ.

ಹೆಗಡೆ ತಪ್ಪೊಪ್ಪಿಕೊಳ್ಳಲಿಲ್ಲ. ಆದರೂ ತಮ್ಮ ಇಮೇಜನ್ನು ರಕ್ಷಿಕೊಳ್ಳಲು ಮತ್ತು ಮೌಲ್ಯಾಧಾರಿತ ರಾಜಕಾರಣಿ ಎಂದು ಬಿಂಬಿಸಿಕೊಳ್ಳಲು ತಾವು ತಪ್ಪು ಮಾಡಿಲ್ಲ ಆದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುತ್ತಿದ್ದೇನೆ ಎಂದು ಪುಂಗಿದವರೇ ರಾಜೀನಾಮೆ ಎಸೆದು ಕೂತರು. ಆ ಹಿಂದೆ ಕೂಡ ಎರಡೋ ಮೂರೋ ಬಾರಿಯೋ ಬಾಟ್ಲಿಂಗ್ ಹಗರಣ ಇತ್ಯಾದಿ ಆದಾಗಲೂ ಹೀಗೇ ರಾಜೀನಾಮೆ ಕೊಟ್ಟಿದ್ದರು. ಅವರನ್ನು ಆರಾಧಿಸುತ್ತಿದ್ದ ಶಾಸಕರು ಅವರ ಮನವೊಲಿಸಿ ರಾಜೀನಾಮೆ ಹಿಂತೆಗೆದುಕೊಳ್ಳುವಂತೆ ಮಾಡಿದ್ದರು. ಹೆಗಡೆಯವರಿಗೂ ಅದೇ ಬೇಕಾಗಿತ್ತು. ಆದರೆ ಈ ಬಾರಿ ಮಾತ್ರ ವಾಪಸ್ ಬನ್ನಿ ಎಂದು ಯಾರೂ ಹೆಗಡೆಯವರನ್ನು ಕರೆಯಲೇ ಇಲ್ಲ. ಬೊಮ್ಮಾಯಿ ಮುಖ್ಯಮಂತ್ರಿಯಾದರು. ಹೆಗಡೆ ನೇಪಥ್ಯಕ್ಕೆ ಸರಿದರು. ತಮಗೆ ಗಾದಿ ತಪ್ಪಿದ್ದಕ್ಕೆ ಸಿಟ್ಟಿಗೆದ್ದ ದೇವೇಗೌಡ ಭಿನ್ನಮತ ಶುರುವಿಟ್ಟುಕೊಂಡರು. ಒಟ್ಟಿನಲ್ಲಿ ಹೆಗಡೆಯವರ ಬುಡಕ್ಕೆ ಬರೋಬ್ಬರಿ ಬಿಸಿನೀರು ಕಾಸಿದ್ದರು ಸ್ವಾಮಿ.

ಸ್ವಾಮಿ ಬಿಡುಗಡೆ ಮಾಡಿದ್ದ ಪಟ್ಟಿಯಲ್ಲಿದ್ದ ಫೋನ್ ಕದ್ದಾಲಿಸಲ್ಪಟ್ಟ ಮಂದಿಯ ಪೈಕಿಯಲ್ಲಿ ಕೇವಲ ರಾಜಕಾರಣಿಗಳು ಮಾತ್ರ ಇರಲಿಲ್ಲ. ಸುಮಾರು ಜನ ಹೈಫೈ ಮಹಿಳಾಮಣಿಗಳೂ ಇದ್ದರು. ಹೆಗಡೆಯವರ ರಸಿಕತೆ ಬಗ್ಗೆ, ಶೃಂಗಾರಲೀಲೆಗಳ ಅಲ್ಲಲ್ಲಿ ಗುಸುಗುಸು ಇತ್ತು. ಈಗ ಅದೆಲ್ಲ ಬಹಿರಂಗವಾಗಿ ಹೆಗಡೆಯವರಿಗೆ ಮತ್ತು expose ಆದ ಮಹಿಳಾಮಣಿಗಳಿಗೆ ದೊಡ್ಡ ಮಟ್ಟದ ಮುಜುಗರ. ಯಾವುದೋ ಹುತ್ತದ ಮುಂದೆ ಕುಂತು ಪುಂಗಿಯೂದಿದರೆ ಹಾವೊಂದೇ ಅಲ್ಲ ಹಾವುರಾಣಿಯರು ಸಹ ಪ್ರತ್ಯಕ್ಷವಾಗಿ ಭುಸ್ ಅನ್ನಬೇಕೇ!?

ಖುರ್ಚಿ ಕಳೆದುಕೊಂಡು ಖಾಲಿ ಕುಳಿತಿದ್ದ ಹೆಗಡೆ ಸ್ವಾಮಿಯವರನ್ನು ತಡವಿಕೊಳ್ಳುವ ವಿಚಾರ ಮಾಡಿದರು. ಮತ್ತೆ ರಾಮ ಜೇಠಮಲಾನಿ ಸಲಹೆ ಕೊಟ್ಟರು. ಮತ್ತೊಬ್ಬ ರಾಮ ಅದೇ ರಾಮನಾಥ ಗೋಯೆಂಕಾ ತಮ್ಮ ಪತ್ರಿಕೆ ಇಂಡಿಯನ್ ಎಕ್ಸ್ಪ್ರೆಸ್ ಮತ್ತು ಅದರ ಖಡಕ್ ಸಂಪಾದಕ ಅರುಣ್ ಶೌರಿ ಮೂಲಕ ಹೆಗಡೆಯವರಿಗೆ ಎಲ್ಲ ಬೆಂಬಲ ಕೊಡುವದಾಗಿ ಆಶ್ವಾಸನೆ ಕೊಟ್ಟರು. ಅಂದು ರಾಮಕೃಷ್ಣ ಹೆಗಡೆ, ರಾಮ್ ಜೇಠಮಲಾನಿ ಮತ್ತು ರಾಮನಾಥ ಗೋಯೆಂಕಾ 'ರಾಮತ್ರಯ'ರೆಂದೇ ಖ್ಯಾತರಾಗಿದ್ದರು.

ಹಿಂದೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದಾಗ ಆದ ಲಫಡಾದಿಂದ ಪಾಠ ಕಲಿತಿದ್ದ ರಾಮ್ ಜೇಠಮಲಾನಿ ಮುಂಬೈನಲ್ಲಿ ಸುಬ್ರಮಣಿಯನ್ ಸ್ವಾಮಿ ವಿರುದ್ಧ ಸಿವಿಲ್ ಮಾನನಷ್ಟ ಮೊಕದ್ದಮೆ ಹೂಡುವಂತೆ ಸಲಹೆ ಕೊಟ್ಟರು. ಅದರಂತೆ ಮುಂಬೈ ಕೋರ್ಟಿನಲ್ಲಿ ಸ್ವಾಮಿ ವಿರುದ್ಧ ಮೊಕದ್ದಮೆ ಹಾಕಿದರು ಹೆಗಡೆ.

ಸ್ವಾಮಿ ಮತ್ತೊಮ್ಮೆ ವಕೀಲರ ಅವತಾರ ಎತ್ತಿದರು. ಅಷ್ಟೊತ್ತಿಗಾಗಲೇ ಅನೇಕ ಕೇಸುಗಳನ್ನು ಸ್ವಂತ ಬಡಿದಾಡಿ ಸಾಕಷ್ಟು ನೈಜ ಅನುಭವ ಮತ್ತು ಪಾಂಡಿತ್ಯ ಗಳಿಸಿದ್ದರು.

ಸ್ವಾಮಿ ಕೊಟ್ಟ ಮೊದಲನೇ ಏಟಿಗೇ ರಾಮಕೃಷ್ಣ ಹೆಗಡೆ ಮತ್ತು ಅವರ ವಕೀಲ ರಾಮ್ ಜೇಠಮಲಾನಿ ರಾಮಾ! ಕೃಷ್ಣಾ! ಮುರಾರಿ! ಕಾಪಾಡೋ! ಎನ್ನುತ್ತ ಮಕಾಡೆ ಮಲಗಿಬಿಟ್ಟರು. ಅಂತಹ ಮಾಸ್ಟರ್ ಸ್ಟ್ರೋಕ್ ಬಾರಿಸಿದ್ದರು ಸುಬ್ರಮಣ್ಯ ಸ್ವಾಮಿ.

ಮುಂಬೈ ಕೋರ್ಟಿನ ಮುಂದೆ ಒಂದೇ ಒಂದು ಸಿಂಪಲ್ ಮನವಿ ಮಾಡಿಕೊಂಡರು ಸ್ವಾಮಿ - 'ಈ ಮನುಷ್ಯ ಹೆಗಡೆ ಕಾನೂನುಬದ್ಧವಾಗಿ ಅವರ ವಾಸಸ್ಥಾನವಾದ ಬೆಂಗಳೂರಿನಲ್ಲಿ ಮೊಕದ್ದಮೆ ಹೂಡಬೇಕು. ಕಾನೂನಿನಲ್ಲಿರುವ ಒಂದು ಸಣ್ಣ ದೋಷವನ್ನು (loophole) ದುರುದ್ದೇಶಪೂರ್ವಕವಾಗಿ ಬಳಸಿಕೊಳ್ಳಲು ಮುಂಬೈನಲ್ಲಿ ದಾವೆ ಹೂಡಿದ್ದಾರೆ. ಈ ದಾವೆಯನ್ನು ತಿರಸ್ಕರಿಬೇಕು ಮತ್ತು ದಾವೆ ಹೂಡುವದಾದರೆ ಬೆಂಗಳೂರಿನಲ್ಲಿ ಹೂಡಲು ಆಜ್ಞೆ ಮಾಡಬೇಕು.'

ಹೆಗಡೆ ಉಪಯೋಗಿಸಲು ನೋಡಿದ್ದ ಕಾನೂನಿನ loophole ಯಾವುದಾಗಿತ್ತು ಅಂದರೆ.....ಮಾನನಷ್ಟ ಮೊಕದ್ದಮೆ ಹೂಡುವಾಗ ನಿರೀಕ್ಷಿತ ಪರಿಹಾರದ ಮೊತ್ತವನ್ನು ನಮೂದಿಸಬೇಕಾಗುತ್ತದೆ. ಅದರ ಒಂದು ಶೇಕಡಾ ಮೊತ್ತವನ್ನು ಠೇವಣಿ ಅಂತ ಇಡಬೇಕಾಗುತ್ತದೆ. ೧೦ ರಿಂದ ೨೦% ಠೇವಣಿ ಇಡಬೇಕಾಗುತ್ತದೆ. ಉದಾಹರಣೆಗೆ ನೀವು ಒಬ್ಬರ ಮೇಲೆ ಎರಡು ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಹಾಕಿದರೆ ಅದರ ೧೦% ಅಂದರೆ ಇಪ್ಪತ್ತು ಲಕ್ಷ ರೂಪಾಯಿಗಳನ್ನು ಠೇವಣಿ ಇಡಬೇಕಾಗುತ್ತದೆ. ಸುಖಾಸುಮ್ಮನೆ ಇನ್ನೊಬ್ಬರಿಗೆ ವಿನಾಕಾರಣ ತೊಂದರೆ ಕೊಡಲು frivolous ಸುಳ್ಳು ಮೊಕದ್ದಮೆಗಳನ್ನು ಹೂಡದೇ ಇರಲಿ ಎನ್ನುವ ಸದುದ್ದೇಶದಿಂದ ಠೇವಣಿಯನ್ನು ನಿರ್ಧರಿಸಿರುತ್ತಾರೆ. ಆದರೆ ಮುಂಬೈನಲ್ಲಿ ಒಂದು advantage ಇತ್ತು. ನೀವು ಎಷ್ಟೇ ದೊಡ್ಡ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿ. ಠೇವಣಿ ಮಾತ್ರ ಕೇವಲ ಹತ್ತೇ ಸಾವಿರ ರೂಪಾಯಿ. ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ. ದುರುಪಯೋಗ ಮಾಡಲು ಹೇಳಿಮಾಡಿಸಿಟ್ಟಂತಹ loophole ಇದಾಗಿತ್ತು. ಹಾಗಾಗಿಯೇ ರಾ. ಕೃ. ಹೆಗಡೆ ಮುಂಬೈನಲ್ಲಿ ಕೇಸ್ ಹಾಕುವ ಸ್ಕೀಮ್ ಹಾಕಿದ್ದರು. ಆದರೆ ಉದ್ದಾಮ ಪಂಡಿತ ಸುಬ್ರಮಣಿಯನ್ ಸ್ವಾಮಿ ಅದಕ್ಕೆ ತಣ್ಣೀರೆರೆಚಿದ್ದರು.

ಮುಂಬೈ ಕೋರ್ಟ್ ಅವರ ಕೇಸನ್ನು ಹೊರಗೆಸೆದಾಗ ಹೆಗಡೆ ಮುಖಭಂಗ ಅನುಭವಿಸಿದರೇನೋ ನಿಜ. ಜಟ್ಟಿ ಮಕಾಡೆ ಬಿದ್ದರೂ ಮೀಸೆ ಮಣ್ಣಾಗಬಾರದು ನೋಡಿ. ಹಾಗಾಗಿ ಏನೇನೋ ತಿಪ್ಪರಲಾಗ ಹಾಕಿ ಬೆಂಗಳೂರಿನಲ್ಲೇ ಮಾನನಷ್ಟ ಮೊಕದ್ದಮೆ ದಾಖಲಿಸಿದರು. ದೊಡ್ಡ ಪ್ರಮಾಣದ ಠೇವಣಿಯನ್ನು ಎಲ್ಲಿಂದಲೋ ಜುಗಾಡ್ ಮಾಡಿ ತಂದರು. ಹೆಗಡೆಯವರು ರೊಕ್ಕ ಮಾಡಿಕೊಂಡಿರಲಿಲ್ಲ. ಹಾಗಾಗಿ ಅಷ್ಟು ದೊಡ್ಡ ಪ್ರಮಾಣದ ಠೇವಣಿ ಹೊಂದಿಸಲು ಸಾಕಷ್ಟು ಪರಿಶ್ರಮ ಪಟ್ಟಿರಬೇಕು.

ಹೆಗಡೆಯವರಿಗೆ ಮತ್ತು ಜನತಾ ಪರಿವಾರದ ಅನೇಕರಿಗೆ ತುರ್ತುಪರಿಸ್ಥಿತಿ ಕಾಲದಿಂದ ಆಪ್ತರಾಗಿದ್ದ ದೊಡ್ಡ ವಕೀಲ ಸಂತೋಷ್ ಹೆಗಡೆ ರಾಮಕೃಷ್ಣ ಹೆಗಡೆಯವರ ಪರವಾಗಿ ಕೇಸ್ ನಡೆಸಿದರು. ಸಿವಿಲ್ ಕೇಸ್. ವರ್ಷಾನುಗಟ್ಟಲೆ ನಡೆದರೂ ತೀರ್ಮಾನ ಬರಲಿಲ್ಲ. ಮತ್ತೆ ಸಿವಿಲ್ ಕೇಸ್ ಆದ ಕಾರಣ ಸ್ವಾಮಿಯವರಿಗೆ ಖುದ್ದಾಗಿ ಹಾಜರಾಗಿ ಕೇಸ್ ನಡೆಸುವ ಜರೂರತ್ತೂ ಇರಲಿಲ್ಲ. ಒಟ್ಟಿನಲ್ಲಿ ಇಸವಿ ೨೦೦೪ ರ ಹೊತ್ತಿಗೂ ಕೇಸ್ ಖುಲಾಸೆಯಾಗಿರಲಿಲ್ಲ. ಅಷ್ಟೊತ್ತಿಗೆ ಹೆಗಡೆ ಅವರ ರಾಜಕೀಯ ಜೀವನ ಒಂದು ದೊಡ್ಡ ಸರ್ಕಲ್ ರೌಂಡ್ ಹಾಕಿ ಮುಗಿದಿತ್ತು. ಆರೋಗ್ಯ ಬಹಳ ಕೆಟ್ಟಿತ್ತು. ಹೆಗಡೆ ಮರಣಶಯ್ಯೆಯಲ್ಲಿದ್ದರು. ಕೇಸ್ ನಡೆಸುವ ಉಮೇದಿ, ತಾಕತ್ತು ಅವರಲ್ಲಿ ಇರಲಿಲ್ಲ. ಹೆಚ್ಚಿನ ಸದ್ದು ಮಾಡದೆ ಸೈಲೆಂಟಾಗಿ ಅವರ ವಕೀಲರು ಸ್ವಾಮಿಯವರ ವಿರುದ್ಧ ಹಾಕಿದ್ದ ಮೊಕದ್ದಮೆಯನ್ನು ವಾಪಸ್ ತೆಗೆದುಕೊಂಡಿದ್ದು ಜಗತ್ತಿಗೆ ಗೊತ್ತಾಗದಿದ್ದರೂ ಸ್ವಾಮಿಯವರಿಗೆ ಮಾತ್ರ ಜರೂರ್ ಗೊತ್ತಾಯಿತು. ನಕ್ಕರು ಸ್ವಾಮಿ.

ಮರಣಶಯ್ಯೆಯಲ್ಲಿದ್ದ ಹೆಗಡೆ ಸುಬ್ರಮಣಿಯನ್ ಸ್ವಾಮಿಗಳನ್ನು ತುಂಬಾ ನೆನಪಿಸಿಕೊಂಡರಂತೆ. ಇಬ್ಬರಿಗೂ ಆಪ್ತರಾಗಿದ್ದ ವಿಜಯ ಮಲ್ಯರನ್ನು ಕರೆಸಿಕೊಂಡ ಹೆಗಡೆ, 'ಒಮ್ಮೆ ಸ್ವಾಮಿಯನ್ನು ಭೇಟಿ ಮಾಡಿಸಯ್ಯಾ. ಸಾಯೋ ಮುಂಚೆ ಅವರನ್ನು ಭೇಟಿಯಾಗಬೇಕು ಎಂದು ತುಂಬಾ ಅನ್ನಿಸುತ್ತಿದೆ,' ಎಂದು ಗೋಗರಿದರಂತೆ.

ಸ್ವಾಮಿಯವರನ್ನು ಭೇಟಿಯಾದ ಮಲ್ಯ ಹೆಗಡೆಯವರ ಕೋರಿಕೆಯನ್ನು ಸ್ವಾಮಿಯವರಿಗೆ ತಿಳಿಸಿದರಂತೆ. ಒಂದು ಕಾಲದಲ್ಲಿ ಬದ್ಧವೈರಿಯಾದರೇನಾಯಿತು? ಮನುಷ್ಯತ್ವಕ್ಕೆ, ಒಂದು ಕಾಲದ ಪರಿಚಯಕ್ಕೆ ಮಹತ್ವ ಕೊಟ್ಟ ಸ್ವಾಮಿ ಬೆಂಗಳೂರಿಗೆ ತೆರಳಿ ಹೆಗಡೆಯವರನ್ನು ಅವರ ಮನೆಯಲ್ಲಿ ಭೇಟಿಯಾದರು.

ಮಲಗಿದ್ದಲ್ಲಿಂದಲೇ ಸ್ವಾಮಿಯವರ ಎರಡೂ ಕೈಗಳನ್ನು ತಮ್ಮ ಕೈಯಲ್ಲಿ ತೆಗೆದುಕೊಂಡ ಹೆಗಡೆ, 'ಸ್ವಾಮೀ, ನಾವಿಬ್ಬರೂ ಸ್ನೇಹಿತರಾಗಿರಬೇಕಿತ್ತು ಕಣೋ. ಜಗಳವಾಡಿ ತಪ್ಪು ಮಾಡಿದೆವು,' ಎಂದು ಗೊಳೋ ಎಂದು ರೋಧಿಸಿದರಂತೆ. ಪಾಪ! ಗತಕಾಲದ ಏನೇನು ನೆನಪಾಗಿತ್ತೋ ಹೆಗಡೆಯವರಿಗೆ. ಮುಂದೆ ಕೆಲವೇ ದಿವಸಗಳಲ್ಲಿ ಹೆಗಡೆ ನಿಧನರಾದರು.

ಕರಿಷ್ಮಾ ಇದ್ದ ಚಾಣಾಕ್ಷ ರಾಜಕಾರಣಿ ಹೆಗಡೆ ಮತ್ತು ಅಸಾಧಾರಣ ಬುದ್ಧಿಮತ್ತೆಯ ಸ್ವಾಮಿ ಇಬ್ಬರೂ ಒಂದಾಗಿ ರಾಜಕಾರಣ ಮಾಡಿದ್ದರೆ ಏನೇನಾಗುತ್ತಿತ್ತೋ ಗೊತ್ತಿಲ್ಲ. ರಾಜಕಾರಣ ತುಂಬಾ ರಂಗೀನ್ ಆಗಿ ರೋಚಕವಾಗಿರುತ್ತಿತ್ತು. ಅದು ಮಾತ್ರ ಖಾತ್ರಿ. ೧೯೯೯ ರಲ್ಲಿ ಪ್ರಧಾನಿ ವಾಜಪೇಯಿ ಅವರ ಮುಂದೆಯೇ ಹೆಗಡೆ ಮತ್ತು ಸ್ವಾಮಿ ಮಧ್ಯೆ ಕಿಡಿಗಳು ಹಾರಿ ಜ್ವಾಲೆಯೆದ್ದಿತ್ತು. ಹೆಗಡೆಗೆ ಮಂತ್ರಿಗಿರಿ ಕೊಡಬಾರದು ಎಂದು ಹಠ ಹಿಡಿದು ಕೂತಿದ್ದರು ಜಯಲಲಿತಾ. ಆಕೆಯ ಹೆಗಲಿನ ಮೇಲೆ ಬಂದೂಕಿಟ್ಟು ಗುಂಡು ಹಾರಿಸುತ್ತಿದ್ದವರು ಇದೇ ಸ್ವಾಮಿ. ಅಂದು ಆಪ್ತೆಯಾಗಿದ್ದ ಆಕೆಯ ವಿರುದ್ಧ ಮುಂದಿನ ವರ್ಷಗಳಲ್ಲಿ ಸ್ವಾಮಿ ಅದ್ಯಾವ ರೀತಿಯಲ್ಲಿ ತಿರುಗಿಬಿದ್ದರು ಎಂದರೆ ಗಾಯಗೊಂಡ ಸಿಂಹಿಣಿಯಾದಂತಾದ ಜಯಲಲಿತಾ ಕೂಡ ಹೇಗೆ ಸ್ವಾಮಿಯವರ ಮೇಲೆ ದ್ವೇಷ ಸಾಧಿಸಿದರು ಅಂದರೆ ಒಮ್ಮೆಯಂತೂ ಸ್ವಾಮಿಯನ್ನು ಜಯಲಲಿತಾ ಬೆಂಬಲಿಗರ ಗುಂಪು ಬಡಿದು ಕೊಂದೇಬಿಟ್ಟಿತ್ತು. ಆಯ್ತ ವೇಳೆಗೆ ನ್ಯಾಯಾಧೀಶರ ಚೇಂಬರ್ ಒಳಗೆ ನುಗ್ಗಿದ ಸ್ವಾಮಿ ಬಚಾವಾಗಿದ್ದರು. ಮುಂದೆ ನಕ್ಷತ್ರಿಕನಂತೆ ಹಿಂದೆ ಬಿದ್ದ ಸ್ವಾಮಿ ಜಯಲಲಿತಾಳನ್ನು ಸೆರೆಮನೆಗೆ ಅಟ್ಟಿದರು. ಸೆರೆಮನೆಗೆ ಹೋಗುವ ಮೊದಲೇ ಆ ಪುಣ್ಯಾತ್ಗಿತ್ತಿ ಸ್ವರ್ಗ ಸೇರಿಕೊಂಡಳು. ಆಕೆಯ ಆಪ್ತೆ ಶಶಿಕಲಾ ಸ್ವಾಮಿಗಳಿಗೆ ಶಾಪ ಹಾಕುತ್ತಾ ಜೈಲಿನಲ್ಲಿ ರಾಗಿ ಬೀಸುತ್ತಿದ್ದಾಳೆ.

ಸ್ವಾಮಿಯವರ ಕಾನೂನಿನ ಕುಣಿಕೆ ಮುಂದೆ ಯಾರ್ಯಾರ ಕೊರಳಿಗೆ ಪಾಶದಂತೆ ಬೀಳಲಿದೆಯೋ!? ಭಗವಂತನೇ ಬಲ್ಲ.

ಮಾಹಿತಿ ಆಧಾರ: ಸುಬ್ರಮಣಿಯನ್ ಸ್ವಾಮಿಯವರ ಪತ್ನಿ ರೋಕ್ಸ್ನಾಸ್ವಾಮಿಯವರು ಬರೆದ ಪುಸ್ತಕ - Evolving with Subramanian Swamy: A Roller Coaster Ride.