Tuesday, August 06, 2024

ಮಾದಕ ನಟಿಗೆ ಮಾದಕ ವಸ್ತುಗಳ ಪ್ರಕರಣದಲ್ಲಿ ಮುಕ್ತಿ...

ಮಮತಾ ಕುಲಕರ್ಣಿ ಎನ್ನುವ ಪುರಾತನ ಬಾಲಿವುಡ್ ನಟಿಗೆ ಮುಂಬೈನ ಠಾಣೆ ನ್ಯಾಯಾಲಯದಲ್ಲಿ ದಾಖಲಾಗಿದ್ದ ಮಾದಕ ವಸ್ತು ಪ್ರಕರಣದಲ್ಲಿ ಉನ್ನತ ನ್ಯಾಯಾಲಯ (ಹೈಕೋರ್ಟ್) ಮುಕ್ತಿ ನೀಡಿದೆ. 

ಮಮತಾ ಕುಲಕರ್ಣಿ...ಆಕೆಯ ಸೌಂದರ್ಯ, ಬಿನ್ನಾಣ, ಮತ್ತೊಂದು ನೋಡಿ ಅದು ಯಾರು ಅವಳಿಗೆ ಮಾದಕ ನಟಿ ಎಂದು ಬಿರುದು ಕೊಟ್ಟರೋ! ಯಾವ ಶುಭ ಮುಹೂರ್ತದಲ್ಲಿ ಕೊಟ್ಟರೋ! ಮಾದಕತೆ ಅಂತೂ ಇತ್ತು. ಅದು ಸಾಕಾಗಲಿಲ್ಲ ಎಂದು ಈ ಮಮತಾ ಕುಲಕರ್ಣಿ ಮಾದಕ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಕಳ್ಳಸಾಗಾಣಿಕೆ ಮಾಡುವ ಅಂತರರಾಷ್ಟ್ರೀಯ ಮಾಫಿಯಾ ಕಿಲಾಡಿ ವಿಕಿ ಗೋಸ್ವಾಮಿ ಜೊತೆ ಸೇರಿಕೊಂಡು ಇವಳ ಮೇಲೂ ಮಾದಕ ವಸ್ತುಗಳ ಆರೋಪ ಇರುವುದು ಇಂದು ನಿನ್ನೆಯದಲ್ಲ. 

ವರಿಷ್ಠ ಸಿನೆಮಾ ಪತ್ರಕರ್ತೆ ಆಮ್ರಪಾಲಿ ಶರ್ಮಾ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಮಮತಾ ಕುಲಕರ್ಣಿ ಬಗ್ಗೆ ನಾಲ್ಕು ಭಾಗಗಳ ಕಾರ್ಯಕ್ರಮ ಮಾಡಿದ್ದಾರೆ. ಅನೇಕ ಹೊಸ ವಿಷಯಗಳು ತಿಳಿದವು. ಆ ಮಾಹಿತಿಗಳನ್ನು ಕೂಡ ಈ ಲೇಖನದಲ್ಲಿ ಹಾಕಿದ್ದೇನೆ. ಹುಡುಕಿದರೆ ಇಂಟರ್ನೆಟ್ ಮೇಲೆ ಈ ಎಲ್ಲ ವಿಷಯ ಇದೆ. ಆಮ್ರಪಾಲಿ ಶರ್ಮಾ ಎಲ್ಲವನ್ನೂ ಕ್ರೋಢಿಕರಿಸಿ ಕೊಟ್ಟಿದ್ದಾರೆ.

ಈಗ ಸುಮಾರು ಏಳೆಂಟು ವರ್ಷಗಳ ಹಿಂದೆ ಮಹಾರಾಷ್ಟ್ರದ ಠಾಣೆಯ ಪೊಲೀಸರು ಸೊಲ್ಲಾಪುರ ಮೂಲದ ಔಷಧಿ ತಯಾರಿಸುವ ಕಂಪನಿಯೊಂದರ ಬಗ್ಗೆ ಮಾದಕ ವಸ್ತುಗಳ ತಯಾರಿಕೆಗೆ ಬೇಕಾಗುವ ಕಚ್ಚಾ ಸಾಮಗ್ರಿ ತಯಾರಿಸಿ ಪರದೇಶಕ್ಕೆ ಸಾಗಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು. ಭಾರತದಲ್ಲೇ ಇದ್ದ ಸುಮಾರು ಜನರನ್ನು ಬಂಧಿಸಿ ಒಳಗೆ ಕೂಡ ತಳ್ಳಿದ್ದರು. ಇದೇ ಪ್ರಕರಣದಲ್ಲಿ ಆಫ್ರಿಕಾದ ಕೀನ್ಯಾದಲ್ಲಿ ನೆಲೆಸಿದ್ದಾಳೆ ಎಂದು ಹೇಳಲಾದ ಮಾಜಿ ಬಾಲಿವುಡ್ ನಟಿ ಮಮತಾ ಕುಲಕರ್ಣಿ ಮತ್ತು ಆಕೆಯ ಪತಿ ಎಂದು ಹೇಳಲಾದ ವಿಕಿ ಗೋಸ್ವಾಮಿಯನ್ನೂ ಆರೋಪಿ ಎಂದು ಹೆಸರಿಸಲಾಗಿತ್ತು. ಅವರ ಬಂಧನಕ್ಕಾಗಿ ರೆಡ್ ಕಾರ್ನರ್ ನೋಟೀಸ್ ಇತ್ಯಾದಿ ಹೊರಡಿಸಿದ್ದರೂ ಪತ್ತೆಯಾಗಿರಲಿಲ್ಲ. 

ಇದರ ಮಧ್ಯೆ ವಿಕಿ ಗೋಸ್ವಾಮಿಯನ್ನು ಅಮೇರಿಕಾದ ಮಾದಕ ವಸ್ತು ನಿರೋಧಕ ದಳದವರು ಎತ್ತಾಕಿಕೊಂಡು ಹೋದರು. ಕೀನ್ಯಾದ ಆಕಾಶಾ ಸಹೋದರರು ಮಾಡುತ್ತಿದ್ದ ಬೃಹತ್ ಪ್ರಮಾಣದ ಮಾದಕವಸ್ತು ಕಳ್ಳಸಾಗಾಣಿಕೆ ದಂಧೆಯನ್ನು ಮಟ್ಟ ಹಾಕಲೇಬೇಕು ಎಂದು ನಿರ್ಧರಿಸಿದ್ದ ಅಮೆರಿಕದವರು ಕೀನ್ಯಾ ಸರ್ಕಾರದ ಬುರುಡೆಗೆ ಬಂದೂಕಿಟ್ಟು ಆಕಾಶಾ ಸಹೋದರರು ಮತ್ತು ಅವರ ಅತ್ಯಂತ ನಿಕಟವರ್ತಿಯಾಗಿದ್ದ ಗೋಸ್ವಾಮಿಯನ್ನು ಎತ್ತಾಕಿಕೊಂಡು ಅಮೆರಿಕಕ್ಕೆ ತೆಗೆದುಕೊಂಡು ಹೋದರು. ಆ ಪ್ರಕರಣ ಅಮೇರಿಕಾದಲ್ಲಿ ನಡೆಯುತ್ತಲಿದೆ. ಗೋಸ್ವಾಮಿ ಸರ್ಕಾರದ ಪರವಾಗಿ ಮಾಫಿ ಸಾಕ್ಷಿದಾರನಾಗಿ ಆಕಾಶಾ ಸಹೋದರರಿಗೆ ಕೈಯೆತ್ತಿದ್ದಾನೆ ಎಂದು ಓದಿದ ನೆನಪು. ಒಟ್ಟಿನಲ್ಲಿ ಅಮೆರಿಕದಲ್ಲೇ ಇದ್ದಾನೆ. ಸ್ವಲ್ಪ ರಿಯಾಯತಿ ಕೊಟ್ಟಿರಬೇಕು. ಅವನು ದುಬೈ ಮತ್ತಿತರ ಕಡೆ ಜೈಲಿನಲ್ಲಿದ್ದು ಏಳು ಕೆರೆಗಳ ನೀರು ಕುಡಿದು ಬಂದವ. ಏನೋ ಜುಗಾಡ್ ಮಾಡಿಕೊಂಡಿರುತ್ತಾನೆ ಬಿಡಿ.

ಅಮೆರಿಕದವರು ಕೀನ್ಯಾದ ಡ್ರಗ್ ಕಳ್ಳಸಾಗಾಣಿಕೆ ಮಾಡುವವರ ಮೇಲೆ ಮುರಿದುಕೊಂಡು ಬಿದ್ದಾಗ ಮಮತಾ ಕುಲಕರ್ಣಿಯನ್ನೂ ವಿಚಾರಣೆಗೆ ಒಳಪಡಿಸಿದ್ದರು. ಆದರೆ ಎತ್ತಾಕಿಕೊಂಡು ಹೋಗಲಿಲ್ಲ.

ಮಹಾರಾಷ್ಟ್ರದ ಠಾಣೆ ಪೊಲೀಸರು, ನ್ಯಾಯಾಲಯ ಅದೆಷ್ಟೇ ನೋಟೀಸ್, ಸಮನ್ಸ್ ಕೊಟ್ಟರೂ ಮಮತಾ ಕ್ಯಾರೇ ಎನ್ನಲಿಲ್ಲ. ಕೀನ್ಯಾ ಬಿಟ್ಟು ಕದಲಲಿಲ್ಲ. ಆಗ ಆಕೆಯ ಭಾರತದಲ್ಲಿರುವ ಆಸ್ತಿ ಪಾಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡುವ ಪ್ರಕ್ರಿಯೆ ಆರಂಭವಾಯಿತು. ಮುಂಬೈನಲ್ಲಿ ಆಕೆಯ ಹೆಸರನಲ್ಲಿ ಇದ್ದ ಮೂರ್ನಾಲ್ಕು ಫ್ಲ್ಯಾಟುಗಳಿಗೆ ಬೀಗಮುದ್ರೆ ಬಿತ್ತು. ಬ್ಯಾಂಕ್ ಖಾತೆಗಳು ಮುಚ್ಚಿಕೊಂಡವು. ಒಟ್ಟಿನಲ್ಲಿ ದೂರ ಕುಳಿತವಳ ಮೂಗು ಹಿಡಿದು ಬಾಯಿ ತೆರೆಸುವ ತಂತ್ರ.

ಯಾವಾಗ ಬ್ಯಾಂಕ್ ಖಾತೆಗಳು ಮುಚ್ಚಿಕೊಂಡವೋ ಆಗ ದೂರದಿಂದಲೇ ಬಾಯ್ಬಾಯಿ ಬಡಿದುಕೊಂಡು ಕೇಸ್ ನಡೆಸಲು ವಕೀಲರನ್ನು ನೇಮಕ ಮಾಡಿಕೊಂಡಳು ಮಮತಾ ಕುಲಕರ್ಣಿ. ಕೋಟಿ ಕೋಟಿ ರೂಪಾಯಿಗಳು ಇದ್ದರೂ ಇಲ್ಲದಂತೆ ಆಗಿಬಿಟ್ಟಿತು. ಆಕೆ ಅಲ್ಲಿ ದೂರದ ಕೀನ್ಯಾದ ಮೊಂಬಾಸಾ ಶಹರದ ಸಮುದ್ರ ತೀರದ ಬಂಗಲೆಯಲ್ಲಿ ಆರಾಮಾಗಿದ್ದರೂ ಮುಂಬೈನಲ್ಲಿ ಖರ್ಚುಗಳು ಇದ್ದವು. ತಂದೆ ತಾಯಿ ಇದ್ದಂತಿಲ್ಲ. ಇಬ್ಬರು ಸಹೋದರಿಯರು ಇದ್ದಾರೆ. ಅದರಲ್ಲಿ ಒಬ್ಬಳಿಗೆ ಆರೋಗ್ಯದ ಸಮಸ್ಯೆ. ಚಿಕಿತ್ಸೆಗೆ ದುಡ್ಡು ಇವಳೇ ಕೊಡಬೇಕು. ಆ ಇಬ್ಬರು ಸಹೋದರಿಯರೂ ಕೂಡ ಮಮತಾಳ ಹಾದಿಯಲ್ಲೇ ನಟಿಯರಾಗಲು ಪ್ರಯತ್ನಿಸಿದರೂ ಜಾಸ್ತಿ ಏನೂ ಗಿಟ್ಟಿದ ಹಾಗೆ ಕಾಣುವುದಿಲ್ಲ. ಹಾಗಾಗಿ ಹಿರಿಯಕ್ಕ ಮಮತಾಳೇ ಖರ್ಚಿಗೆ ಕಾಸು ಕೊಡಬೇಕು. ಪುಣ್ಯಕ್ಕೆ ಹಿರಿಯಕ್ಕನ ಇತರೆ ಚಾಳಿಗಳು ಮನೆಮಂದಿಗೆಲ್ಲ ಇದ್ದಂತಿಲ್ಲ.

ಮಮತಾ ತನ್ನ ಮೇಲಿನ ಪ್ರಕರಣವನ್ನು ರದ್ದು ಪಡಿಸುವಂತೆ ಹೈಕೋರ್ಟಿಗೆ ಮೊರೆ ಹೋಗಿದ್ದಳು. ಅವಳ ಮೇಲೆ ಮಾದಕವಸ್ತು ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಕೆಳಗಿನ ನ್ಯಾಯಾಲಯದಲ್ಲಿ ದಾಖಲಾಗಿರುವ ಆರೋಪಪಟ್ಟಿಯನ್ನು (chargesheet) ಓದಿ, ಅವಳ ವಕೀಲರ ವಾದವನ್ನು ಆಲಿಸಿ, ಮಮತಾಳ ಮೇಲೆ ಆರೋಪ ಮಾಡಲು ಬೇಕಾದ ಸಾಕ್ಷಿಗಳನ್ನು ಕೊಟ್ಟಿಲ್ಲ ಎಂದು ಅವಳ ಮೇಲಿನ ದೂರನ್ನೇ ಖಾರಿಜ್ ಮಾಡಿದೆ ಹೈಕೋರ್ಟ್. FIR has been quashed. ಅಂದರೆ ಕೆಳಗಿನ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ ಪ್ರಕರಣದಿಂದ ಇವಳ ಹೆಸರನ್ನು ಕೈಬಿಡಲಾಗುತ್ತದೆ. ಇನ್ನು ಇದಕ್ಕೆ ವಿರೋಧವಾಗಿ ಸರಕಾರ ಸುಪ್ರೀಂ ಕೋರ್ಟಿಗೆ ಹೋದರೆ ನೋಡಬೇಕು. ಅಲ್ಲಿಯವರೆಗೆ ಮಮತಾ ನಿರಾಳ. ಇನ್ನು ಜಪ್ತಿ ಮಾಡಿರುವ ಫ್ಲ್ಯಾಟುಗಳು, ಮುಚ್ಚಿಕೊಂಡಿರುವ ಬ್ಯಾಂಕ್ ಖಾತೆಗಳು ಯಾವಾಗ ಮುಕ್ತಿಗೊಂಡು, ಕಾಸು ಕೈಗೆ ಬಂದು, ಅಕ್ಕ ತಂಗಿಯರ ಯೋಗಕ್ಷೇಮ ವಿಚಾರಿಸಿಕೊಳ್ಳಲು ಆಗುತ್ತದೆಯೋ ಗೊತ್ತಿಲ್ಲ. ಆಗಬಹುದು ಸದ್ಯದಲ್ಲೇ.

ಹೇಳಿಕೇಳಿ ಮಾಜಿ ಚಿತ್ರನಟಿ. ಸಾಕಷ್ಟು ದುಡ್ಡು ಕಾಸಿದೆ. ಕೇಸ್ ಜಡಿದರೆ ಏನಾದರೂ ಗಿಟ್ಟೀತೋ ಎನ್ನುವ ಹುನ್ನಾರದಲ್ಲಿ ಸಾಕ್ಷಿ ಇಲ್ಲದಿದ್ದರೂ ಕೇಸ್ ಜಡಿದರೋ ಗೊತ್ತಿಲ್ಲ. ಮತ್ತೊಬ್ಬ ಮರಾಠಿ ನಟಿ ಶ್ರದ್ಧಾ ಮೆಂಗಳೆ ಮೇಲೆ ಕೂಡ ಬೇರೆ ತರಹದ ಕೇಸ್ ಜಡಿದಿದ್ದರು. ಜಡಿದವರು ಮತ್ತದೇ ಠಾಣೆ ಪೊಲೀಸರೇ. ಜಡಿಯುವುದರ ಮೇಲ್ವಿಚಾರಣೆಯನ್ನು ನೋಡಿದವರು ಮತ್ತದೇ ವಿವಾದಾತ್ಮಕ ಕಮಿಷನರ್ ಸಾಹೇಬರೇ. ಅದೇ ಮುಕೇಶ್ ಅಂಬಾನಿ ಮನೆ ಮುಂದೆ ಬಾಂಬಿಟ್ಟ ಪ್ರಕರಣದಲ್ಲಿ ಸಿಕ್ಕಾಕಿಕೊಂಡು, ಬೇರೆಯೆಲ್ಲರನ್ನೂ ಸಿಕ್ಕಿಸಿ, ತಾವು ಹೊರಗೆ ಬಂದ ಪರಂಬೀರ್ ಸಿಂಗ್ ಎನ್ನುವ ಹೈ ಪ್ರೊಫೈಲ್ ಪೊಲೀಸ್ ಅಧಿಕಾರಿ. ಈಗ ನಿವೃತ್ತರಾಗಿದ್ದಾರೆ. ಶ್ರದ್ಧಾ ಮೆಂಗಳೆ ಎಂಬ ನಟಿಗೆ ಜಾಮೀನು ಭಾಗ್ಯವೂ ಸಿಕ್ಕಿರಲಿಲ್ಲ. ಹಸುಗೂಸಿನ ತಾಯಿಯಾಗಿದ್ದ ಆಕೆ ಗಂಡನ ಜೊತೆ ಅದ್ಯಾರೋ ದೊಡ್ಡ ಐಎಎಸ್ ಅಧಿಕಾರಿಯನ್ನು ಬ್ಲಾಕ್ಮೇಲ್ / ಹನಿಟ್ರಾಪ್ ಮಾಡಲು ಹೋಗಿದ್ದಳು ಎನ್ನುವ ಆರೋಪಕ್ಕೆ ಸಿಲುಕಿದ್ದಳು. ಅವಳು ಮತ್ತು ಖಾಸಗಿ ಪತ್ತೇದಾರಿ ಕೆಲಸ ಮಾಡುವ ಆಕೆಯ ಗಂಡನ ಮೇಲೆ ಸಾಕಷ್ಟು ಬ್ಲಾಕ್ಮೇಲ್ ಆರೋಪಗಳು ಇದ್ದವು. ಈ ಬಾರಿ ದೊಡ್ಡ ಐಎಎಸ್ ಅಧಿಕಾರಿಗೆ ಸ್ಕೀಮ್ ಹಾಕಿದ್ದರು. ಆತನೂ ಏಳು ಕೆರೆ ನೀರು ಕುಡಿದ ಆಸಾಮಿಯೇ. ತನ್ನ ವ್ಯಾಪಕ ಸಂಪರ್ಕಗಳನ್ನು ಉಪಯೋಗಿಸಿದ. ಬ್ಲಾಕ್ಮೇಲ್ ಮಾಡುವವರಿಗೆ ಏಕೆ ದುಡ್ಡು ಕೊಡಲಿ? ಅದನ್ನೇ ಬೇರೆಯದಕ್ಕೆ ಖರ್ಚು ಮಾಡಿ ಈ ಬ್ಲಾಕ್ಮೇಲ್ ದಂಪತಿಗಳಿಗೆ ಒಂದು ಗತಿ ಕಾಣಿಸುತ್ತೇನೆ ಎಂದು ಪಣತೊಟ್ಟ ಪರಿಣಾಮ ಕೇಸ್ ಬಿತ್ತು. ಸಾದಾ ಕೇಸ್ ಸಾಲದ್ದಕ್ಕೆ ಡಾನ್ ರವಿ ಪೂಜಾರಿ ಬೇರೆ ಫೋನ್ ಮಾಡಿ ಆ ನಟಿಯ ಪರವಾಗಿ ಬೆದರಿಕೆ ಹಾಕಿದ ಎಂದು ಕೂಡ ಸೇರಿಸಿ, ಆಕೆ ಅತಿ ಕಠಿಣ ಮಕೋಕಾ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ ಒಳಗೆ ಹೋಗಿದ್ದಳು. ಎರಡು ಮೂರು ವರ್ಷದ ನಂತರ ಕೇಸಿನಿಂದಲೇ ಖುಲಾಸೆ. ಈ ಮಧ್ಯದಲ್ಲಿ ರವಿ ಪೂಜಾರಿಯನ್ನು ಆಫ್ರಿಕಾದಿಂದ ಎತ್ತಾಕಿಕೊಂಡು ಬಂದರು. ಮಮತಾ ಏನಾದರೂ ಇಲ್ಲೇ ಇದ್ದರೆ ಇಂತಹದೇ ಗತಿಯಾಗುತ್ತಿತ್ತೋ ಏನೋ. ನಮ್ಮಲ್ಲಿ ಕಾನೂನು ಪ್ರಕ್ರಿಯೆ ಹೇಗೆ ಅಂದರೆ process becomes the punishment. 

ಮಮತಾ ಕುಲಕರ್ಣಿಯ ಮೂಲ ಹೆಸರು ಪದ್ಮಾವತಿ ಕುಲಕರ್ಣಿ. ಅವಳೇ ಹೇಳಿಕೊಂಡಂತೆ ಅತ್ಯಂತ ಸಂಪ್ರದಾಯಸ್ಥ ಮರಾಠಿ ಕೊಂಕಣಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದವಳು. ತಂದೆ RTO ಅಧಿಕಾರಿ. ಅವಳ ತಾಯಿಗೆ ತಾನು ಚಿತ್ರನಟಿಯಾಗಬೇಕು ಎನ್ನುವ ಆಸೆ ಇತ್ತಂತೆ. ಆಗೆಲ್ಲ ಮಹಿಳೆಯರಿಗೆ ತುಂಬಾ ಕಟ್ಟುಪಾಡು ಇರುತ್ತಿತ್ತು. ಹದಿನಾರು ಹದಿನೆಂಟು ವರ್ಷಕ್ಕೆಲ್ಲ ಮದುವೆಯಾಗಿ ನಂತರ ಬೇಗನೆ ಮಕ್ಕಳಾಗಿ ಪತಿ, ಮಕ್ಕಳು, ಕುಟುಂಬ ಎಂದು ಅದೆಷ್ಟು ಸುಂದರಿಯರ ನಟಿಯಾಗುವ ಕನಸು ಕಮರಿ ಹೋಗಿತ್ತೋ. ಹೇಮಾಮಾಲಿನಿಯ ತಾಯಿ, ದುರಂತ ಅಂತ್ಯ ಕಂಡ ದಿವ್ಯಾ ಭಾರತಿಯ ತಾಯಿ ಎಲ್ಲ ಅದೇ ವರ್ಗಕ್ಕೆ ಸೇರಿದವರು. ಅವರ ಮಕ್ಕಳಿಗೆ ನಟಿಯಾಗಬೇಕು ಎಂದು ಅದೆಷ್ಟು ಆಸೆಯಿತ್ತೋ ಗೊತ್ತಿಲ್ಲ ಆದರೆ ತಾಯಿಯಂದಿಯರಿಗೆ ಮಾತ್ರ ಆ ಆಸೆ ಉತ್ಕಟವಾಗಿತ್ತು. ಹಾಗಾಗಿಯೇ ಮಕ್ಕಳ ಹಿಂದೆ ಕೈತೊಳೆದು ಕೊಂಡು ನಟಿಯಾಗು ಎಂದು ಹಿಂದೆ ಬಿದ್ದಿದ್ದರು. ಅದೃಷ್ಟವಿದ್ದವರು ಆದರು. ಇಲ್ಲದವರು ದುರಂತ ಅಂತ್ಯ ಕಂಡರು.

ಮಮತಾಳಿಗೆ ದೇವದತ್ತವಾದ ಸೌಂದರ್ಯವಿತ್ತು. ತಂದೆ RTO ಅಧಿಕಾರಿಯಾಗಿದ್ದರಿಂದ ಅನೇಕ ಸಿನೆಮಾ ಜನರ ಪರಿಚಯವಿತ್ತು. RTO ಬಹು ಮುಖ್ಯವಾದ ಹುದ್ದೆ. ಅನೇಕ ಸಿನೆಮಾ ದೊಡ್ಡ ಮಂದಿ ಇವಳ  ತಂದೆಯ ಸಹಾಯ ತೆಗೆದುಕೊಂಡಿದ್ದರೋ ಏನೋ. ಹಾಗಾಗಿ ಮಮತಾ ನಟಿಯಾಗಲು ಸಹಾಯ ಮಾಡಿರಬಹುದು. ತಾಯಿಗೆ ಅಷ್ಟು ಸಾಕಾಯಿತು. ಮಗಳನ್ನು ಬರೋಬ್ಬರಿ ತಯಾರ್ ಮಾಡಿದಳು. ಅಪ್ರತಿಮ ಸೌಂದರ್ಯ, ತಕ್ಕಮಟ್ಟಿನ ನಟನೆ ಎಲ್ಲ ಇತ್ತು. ಮಮತಾ ಆರಂಭದಲ್ಲಿ ತೆಲುಗಿನಲ್ಲಿ ಯಶಸ್ವಿಯಾದಳು. ಹಿಂದಿ ಚಿತ್ರರಂಗದ ಗಮನ ಸೆಳೆದಳು. ೧೯೯೦ ರ ದಶಕದಲ್ಲಿ ದೊಡ್ಡ ದೊಡ್ಡ ಹಿಟ್ ಚಿತ್ರಗಳನ್ನು ಕೊಟ್ಟಳು. ಐಟಂ ಹಾಡುಗಳ ನರ್ತಕಿಯಾಗಿ ತನ್ನ ಮಾದಕತೆಯಿಂದ ಬೇಕಾದ ಬೇಡವಾದ ಎಲ್ಲರ ಗಮನವನ್ನೂ ಸೆಳೆದಳು.

ಚಿತ್ರಗಳಲ್ಲಿ ಸಾಕಷ್ಟು ಬೋಲ್ಡಾಗಿ ನಟಿಸುತ್ತಿದ್ದ ನಟಿ ಮಮತಾ ಮತ್ತೂ 'ಎದೆ'ಗಾರಿಕೆ ತೋರಿಸುವ ಕೆಲಸಕ್ಕೆ ಇಳಿದುಬಿಟ್ಟಳು. ಸ್ಟಾರ್ ಡಸ್ಟ್ ಎನ್ನುವ ಅತ್ಯಂತ ಜನಪ್ರಿಯ ಸಿನೆಮಾ ಮಾಸಪತ್ರಿಕೆಯ ಮುಖಪುಟಕ್ಕೆ ತೆರೆದೆದೆಯ (topless)  ಪೋಸ್ ಕೊಟ್ಟುಬಿಟ್ಟಳು. ೧೯೯೦ ರ ಕಾಲದಲ್ಲಿ ಅದು ಬಹಳ ಸ್ಪೋಟಕ ವಿಷಯ. ಕಾಟಾಚಾರಕ್ಕೆ ಕೈಗಳಿಂದ ಎದೆ ಮುಚ್ಚಿಕೊಂಡಂತೆ ಮಾಡಿಕೊಂಡು ತನ್ನ ಅಮೂಲ್ಯ 'ಆಸ್ತಿಗಳ' ಪುಕ್ಕಟೆ ಧರ್ಮದರ್ಶನ ಮಾಡಿಸಿ ಮಾದಕ ನೋಟ ಬೀರಿದ್ದ ಮಮತಾಳ ಫೋಟೋ ಹೊಂದಿದ್ದ ಪತ್ರಿಕೆಯ ಆ ಸಂಚಿಕೆ ದಾಖಲೆ ಮಾರಾಟ ಕಂಡಿತ್ತು. 

ಹಾಗೆ ಫೋಟೋ ಹಾಕಿದ್ದಕ್ಕೆ ಆ ಪತ್ರಿಕೆ ಮೇಲೆ, ಪೋಸ್ ಕೊಟ್ಟಿದ್ದ ಮಮತಾ ಮೇಲೆ ಅಶ್ಲೀಲತೆ ಪ್ರದರ್ಶನ ಮಾಡಿದ್ದಕ್ಕೆ ಕೇಸ್ ಕೂಡ ಬಿದ್ದಿತ್ತು. ಎಷ್ಟೋ ವರ್ಷಗಳ ನಂತರ ಕ್ಷಮೆಯಾಚನೆ ಮಾಡಿದ್ದಕ್ಕೆ ಸಾಂಕೇತಿಕ ದಂಡ ಹಾಕಿ ಹಾಳಾಗಿ ಹೋಗು ಅಂದು ಬಿಟ್ಟು ಕಳಿಸಿತ್ತು ನ್ಯಾಯಾಲಯ.

ಆ ಪ್ರಚೋದಾತ್ಮಕ ಫೋಟೋ ನೋಡಿ ನಿದ್ದೆ ಬಿಟ್ಟು ಎದ್ದು ಕುಳಿತಿದ್ದು ದೇಶದ ಯುವಜನತೆ. ಆದರೆ ವಿಶೇಷ ಆಸಕ್ತಿ ತೆಗೆದುಕೊಂಡು ಠಣಾಂಗ್ ಎಂದು ತಾನಿದ್ದ ಐಷಾರಾಮಿ ಹಡಗಿನಲ್ಲೇ ಜಿಗಿದು ಕುಳಿತು ಕಾಮಾಸಕ್ತಿಯಿಂದ ಕನಲಿದವ ಭೂಗತಲೋಕದ ಡಾನ್ ಛೋಟಾ ರಾಜನ್. ಆಗ ಛೋಟಾ ರಾಜನ್ ಎಲ್ಲಿದ್ದ?? ೧೯೯೩ ರ  ಮುಂಬೈ ಸ್ಪೋಟದ ನಂತರ ದಾವೂದ್ ಇಬ್ರಾಹಿಂ ಗ್ಯಾಂಗಿನಿಂದ ಹೊರಬಂದಿದ್ದ ಛೋಟಾ ರಾಜನ್ ದುಬೈ ಬಿಟ್ಟು ಓಡಿದ್ದ. ಶತ್ರುಗಳಿಂದ ಕಾಪಾಡಿಕೊಳ್ಳಲು ಕೆಲ ಕಾಲ ಮಲೇಷ್ಯಾ ದೇಶದ ಹೊರಗೆ ಅಂತರರಾಷ್ಟ್ರೀಯ ಸಮುದ್ರದಲ್ಲಿ ಲಂಗರು ಹಾಕಿದ್ದ ಐಷಾರಾಮಿ ಹಡಗೊಂದರಲ್ಲಿ ಆತ ನೆಲೆಸಿದ್ದ. ಆತನನ್ನು ತಮ್ಮ ಕಾರ್ಯಗಳಿಗೆ ಬಳಸಿಕೊಳ್ಳಬೇಕು ಎಂದು ಯೋಜನೆ ಹಾಕಿದ್ದ ದೇಶ ವಿದೇಶಗಳ ಬೇಹುಗಾರಿಕೆ ಸಂಸ್ಥೆಗಳು ಆತನಿಗೆ ಆ ಸೌಭಾಗ್ಯ ಮತ್ತು ಸೌಕರ್ಯ ಕರುಣಿಸಿದ್ದವು ಎನ್ನುವ ಸುದ್ದಿ ಇತ್ತು.

ಭಾರತ ಮೂಲದ ಭೂಗತಲೋಕದ ಕುಳಗಳಿಗೆ ಧರ್ಮಪತ್ನಿಯರು ಯಾರಿದ್ದರೂ ಕರ್ಮಪತ್ನಿಯರು ಮಾತ್ರ ಬಾಲಿವುಡ್ಡಿನ ನಟಿಯರೇ ಆಗಬೇಕು. ದುಡ್ಡು ತಳ್ಳು ತಮಾಷೆ ನೋಡು. ಒಂದು ಸಿನೆಮಾದಲ್ಲಿ ಅವಕಾಶ, ಎಲ್ಲೋ ಸಿಕ್ಕಿ ಬಿದ್ದಿರುವ ದುಡ್ಡಿನ ವಸೂಲಿ, ಬೇರೆ ಗೂಂಡಾಗಳು, ರಾಜಕಾರಣಿಗಳು, ಪೊಲೀಸರಿಂದ ಉಪಟಳ ತಪ್ಪಿಸಿ...ಹೀಗೆ ಹಲವಾರು ಕಾರಣ ಹೇಳಿಕೊಂಡು ನಟಿಯರು ಭೂಗತ ಜಗತ್ತಿನ ಖದೀಮರಿಗೆ ಹತ್ತಿರವಾಗುತ್ತಿದ್ದರು. ಇನ್ನು ಕೆಲವರು ಶುದ್ಧ ಆಸೆಬುರುಕಿಯರು. ಅವರಿಗೆ ದೊಡ್ಡ ದೊಡ್ಡ ಅರಬ್ ಶ್ರೀಮಂತರಿಗೆ ಕೇಳಿದ್ದೆಲ್ಲ ಕೊಟ್ಟು, ಎಲ್ಲ ರೀತಿಯಲ್ಲಿ ಸೇವೆ ಮಾಡಿ ಭಯಂಕರ ರೊಕ್ಕ ಮಾಡಿಕೊಳ್ಳಬೇಕು. ಇರುವ ನಾಲ್ಕು ದಿನಗಳ ಯವ್ವನದಲ್ಲಿ ಸಿಕ್ಕಾಪಟ್ಟೆ ದುಡಿದುಬಿಡಬೇಕು ಎನ್ನುವ ಇರಾದೆ. ಹೇಗೂ ಅರಬ್ ಶ್ರೀಮಂತರು ಮತ್ತು ದುಬೈನಲ್ಲಿ ನೆಲೆಸಿರುವ ಡಾನ್ ಗಳು ಖಾಸಮ್ ಖಾಸ್ ಗೆಣೆಕಾರರು. ಹೀಗೆ ಬೇರೆ ಬೇರೆ ಕಾರಣಗಳಿಗೆ ದುಬೈನಲ್ಲಿ ಮಂಚ ಹತ್ತಿ ಬಂದವರು ಅನೇಕ ನಟಿಯರು. 

ಲಂಚ ಮಂಚ ಸ್ಕೀಮಿನ ಫಲಾನುಭವಿಗಳು ಅನೇಕರಾದರೂ ಹೆಸರು ಕೆಲವರದ್ದು ಮಾತ್ರ ಹೊರಗೆ ಬಂದಿದೆ. ಮಂದಾಕಿನಿ ದಾವೂದನ ಮಾಲು. ನಗ್ಮಾ, ಸೋನಿಕಾ ಗಿಲ್ ಅವನ ತಮ್ಮ ಅನೀಸ್ ಇಬ್ರಾಹಿಮ್ಮನ ಮಾಲುಗಳು. ಮೋನಿಕಾ ಬೇಡಿ ಮತ್ತೊಬ್ಬ ಪಾತಕಿ ಅಬು ಸಲೇಮನ ಮಾಲು. ಹೀನಾ ಕೌಸರ್ ಡ್ರಗ್ ಲಾರ್ಡ್ ಇಕ್ಬಾಲ್ ಮಿರ್ಚಿಯ ಅಧಿಕೃತ ಪತ್ನಿ. ಸೋನಾ ಎಂಬ ನಟಿ ಸ್ಮಗ್ಲರ್ ಹಾಜಿ ಮಸ್ತಾನನ ಪತ್ನಿ. ಶೈಲಾ ಎನ್ನುವ ನಟಿ ಇರ್ಫಾನ್ ಗೋಗಾ ಎನ್ನುವ ಕಿಡ್ನಾಪಿಂಗ್ ಕಿಂಗ್ ಪತ್ನಿ. ದುಬೈನಲ್ಲಿ ಹೋಟೆಲ್ ನಡೆಸುತ್ತಿದ್ದ ಸೋನಿಕಾ ಗಿಲ್ ಮತ್ತು ಕಲ್ಪನಾ ಐಯ್ಯರ್ ಎಂಬ ಮಾಜಿ ನಟಿಯರಿಗೆ ಹೋಟೆಲ್ ಹಾಕಿ ಕೊಟ್ಟವ ಅನಿಸ್ ಇಬ್ರಾಹಿಂ ಎನ್ನುವ ಗುಸುಗುಸು. ಹೀಗೆ ಒಬ್ಬಬ್ಬ ಡಾನ್ ಗಳ ಒಂದೋ ಎರಡೋ ಮಾಲುಗಳ ಹೆಸರುಗಳು ಮಾತ್ರ ಹೊರಗೆ ಬಂದಿವೆ. ಆದರೆ ಇಂಟರ್ನೆಟ್ ಸಮುದ್ರದ ಆಳದಲ್ಲಿ ಬಲೆ ಹಾಕಿ ಹುಡುಕುತ್ತಾ ಹೋದರೆ ಇನ್ನೂ ಅನೇಕ ನಟ ನಟಿಯರು ಇವತ್ತಿಗೂ ಬೇರೆ ಬೇರೆ ಪಾತಕಿಗಳ ಸೇವೆಯಲ್ಲಿ ಇದ್ದಾರೆ ಎನ್ನುವ ಮಾಹಿತಿ ಸಿಗುತ್ತದೆ. 

ಬಾಲಿವುಡ್ ನಟಿಯರು, ಭಾರತದ ಹೈಟೆಕ್ ವೇಶ್ಯೆಯರು ವಿಶ್ವದ ತುಂಬೆಲ್ಲಾ ಅದೆಷ್ಟು ಜನಪ್ರಿಯರು ಎಂದರೆ ದೂರದ ಆಫ್ರಿಕಾದ ನೈಜೇರಿಯಾದ ಪರಮ ಕ್ರೂರಿ ಸರ್ವಾಧಿಕಾರಿ ಸಾನಿ ಅಬಾಚಾ ಸತ್ತು ಬಿದ್ದಾಗ ಅವನ ಜೊತೆಯಲ್ಲಿ ಇದ್ದವರೂ ನಮ್ಮ ಸುಂದರಿಯರೇ ಆಗಿದ್ದರ ಬಗ್ಗೆ ಏನು ಹೇಳೋಣ?? ಹೆಮ್ಮೆ ಪಡೋಣವೇ??? ಸ್ಪೋಟಕ ವಿಷಯವೆಂದರೆ ನಾಲ್ಕಾರು ಭಾರತೀಯ ಬೆಲೆವೆಣ್ಣುಗಳ ಮಧ್ಯೆ ಕಾಮೋತ್ತೇಜಕ ಮಾತ್ರೆಗಳನ್ನು ತೆಗೆದುಕೊಂಡು ಜಿಗಿಜಿಗಿದು ಪೌರುಷ ಮೆರೆಯುತ್ತಿದ್ದ ಸರ್ವಾಧಿಕಾರಿ ಸಾನಿ ಅಬಾಚಾ ಒಮ್ಮೆಲೇ ಠಾ ಎಂದು ಉದ್ಗರಿಸಿ ಸತ್ತುಹೋಗಿದ್ದು. ಬೆಲೆವೆಣ್ಣುಗಳ ಮೂಲಕ ಅವನಿಗೆ ವಿಷಪ್ರಾಶನ ಮಾಡಿಸಿದರೇ?  ಅದರ ಉಸ್ತುವಾರಿಯನ್ನು ಇಸ್ರೇಲಿ ಬೇಹುಗಾರಿಕೆ ಸಂಸ್ಥೆ ವಹಿಸಿಕೊಂಡಿತ್ತೇ?? ಅದರ ಹಿಂದಿನ ಕಾರಣ ಅಬಾಚಾ ಗಳಿಸಿದ್ದ ಹಲವಾರು ಬಿಲಿಯನ್ ಡಾಲರುಗಳ ಅಕ್ರಮ ಸಂಪತ್ತಿತ್ತೇ?? ಹೀಗೆ ಅನೇಕ ಕುತೂಹಲಕಾರಿ ಅಂಶಗಳಿವೆ. ಮತ್ತೊಮ್ಮೆ ಅದರ ಬಗ್ಗೆ ಬರೆಯೋಣ. ನಮ್ಮ ಬೆಲೆವೆಣ್ಣುಗಳ ಜನಪ್ರಿಯತೆ ಬೇಡಿಕೆ ಎಲ್ಲ ಕಡೆ ಹೇಗೆಲ್ಲಾ ಇತ್ತು ಎನ್ನುವ ಮಾತಿಗೆ ಹೇಳಿದ್ದು. ಇಂತಹದೇ ವರ್ಗಕ್ಕೆ ಸೇರಿದವಳು ಮಾಜಿ ಮಿಸ್ ಇಂಡಿಯಾ ಪಮೇಲಾ ಚೌಧರಿ ಉರ್ಫ್ ಪಮೇಲಾ ಬೋರ್ಡೆಸ್. ಅವಳ ವ್ಯಾಪ್ತಿ ಲಿಬಿಯಾದ ಸರ್ವಾಧಿಕಾರಿ ಗಡಾಫಿವರೆಗೂ ಇತ್ತು. 

ಮಮತಾ ಕುಲಕರ್ಣಿಯ ವಿಷಯಕ್ಕೆ ಮರಳಿದರೆ...ಭಯಂಕರ 'ಎದೆ'ಗಾರಿಕೆ ತೋರಿಸಿ ತೆರೆದೆದೆಯ ದರ್ಶನ ಮಾಡಿಸಿದ ಮಮತಾ ಕುಲಕರ್ಣಿ ಕಾರಣದಿಂದ ಪೂರ್ತಿ ಹುಚ್ಚನಾದವ ಡಾನ್ ಛೋಟಾ ರಾಜನ್. ಅವಳನ್ನು ಅನುಭವಿಸಲೇಬೇಕು ಎಂದುಕೊಂಡು ಬಾಲಿವುಡ್ಡಿನಲ್ಲಿ ತನ್ನ ಸೂತ್ರಗಳನ್ನು ಎಳೆಯತೊಡಗಿದ. ದಾವೂದ್ ಇಬ್ರಾಹಿಂನ ರೊಕ್ಕವನ್ನು ಬಾಲಿವುಡ್ಡಿನಲ್ಲಿ ಸಂಬಾಳಿಸುತ್ತಿದ್ದ ಮುಕೇಶ್ ದುಗ್ಗಲ್ ಎಂಬ ನಿರ್ಮಾಪಕ ಕಮ್ ನಿರ್ದೇಶಕನನ್ನು ತನ್ನತ್ತ ಸೆಳೆಯಲು ನೋಡಿದ. ಅದರಲ್ಲಿ ತಕ್ಕಮಟ್ಟಿಗೆ ಯಶಸ್ವಿ ಕೂಡ ಆದ. ಆ ದುಗ್ಗಲ್ ಪುಣ್ಯಾತ್ಮ ಮಮತಾ ಕುಲಕರ್ಣಿಯನ್ನು ಛೋಟಾ ರಾಜನ್ ನಿಗೆ ಅರ್ಪಿಸಿದನೇ?? ಗೊತ್ತಿಲ್ಲ. ಇನ್ನೊಬ್ಬ ನಟಿ ಮೋನಿಕಾ ಬೇಡಿಯನ್ನು ಅಬು ಸಲೇಮನಿಗೆ ನಂಟು ಮಾಡಿ ಕೊಟ್ಟವ ಮಾತ್ರ ಅವನೇ ಎಂದು ದಾಖಲಾಗಿದೆ. ಮುಕೇಶ್ ದುಗ್ಗಲ್ ಬೇಗನೆ ಶಿವನ ಪಾದ ಸೇರಿಕೊಂಡ. ಇತ್ತ ದಾವೂದನ ರೊಕ್ಕವನ್ನೂ ತೆಗೆದುಕೊಳ್ಳುತ್ತಾ ಅತ್ತ ಕಡೆ ಛೋಟಾ ರಾಜನ್ನನಿಗೂ ಸೇವೆ ಮಾಡುತ್ತಾ ಇರುವ ವಿಷಯ ದಾವೂದ್ ಗ್ಯಾಂಗಿಗೆ ತಿಳಿಯಲು ಜಾಸ್ತಿ ವೇಳೆ ಹಿಡಿಯಲಿಲ್ಲ. ಅವನನ್ನು "ಎತ್ತಿಬಿಡಿ" ಎಂದು ಆಜ್ಞೆ ಮಾಡಿಬಿಟ್ಟ ಛೋಟಾ ಶಕೀಲ್. ಮುಕೇಶ್ ದುಗ್ಗಲ್ ಮಾಫಿಯಾ ಗುಂಡಿಗೆ ಬಲಿಯಾದ. ಇದೇ ರೀತಿ ದಿನೇಶ್ ಆನಂದ ಎನ್ನುವ ನಟ ಜೀವ ಕಳೆದುಕೊಂಡ. ಸೂಪರ್ ಸ್ಟಾರ್ ನಟಿಯರ ಕಾರ್ಯದರ್ಶಿ ಅಜಿತ್ ದೇವಾನಿ ಗುಂಡಿಗೆ ಬಲಿಯಾದ. ಅವನು ಒಂದು ಕಾಲದಲ್ಲಿ ಮಂದಾಕಿನಿ (ಅದೇ ದಾವೂದ್ ಇಬ್ರಾಹಿಂ ಕುಖ್ಯಾತಿಯ) ಮತ್ತು ನಟಿ ಮನಿಷಾ ಕೊಯಿಲಾರಾಳ ಸಿನೆಮಾ ಕರಿಯರ್ ಸಂಬಾಳಿಸಿದ ವ್ಯಕ್ತಿ. ಅಜಿತ್ ದೇವಾನಿಯ ಹತ್ಯೆ ನಟಿ ಮನಿಷಾ ಕೊಯಿರಾಲಾ ಕೊಟ್ಟ ಸುಪಾರಿಯಾಗಿತ್ತೇ ಎನ್ನುವ ಗುಲ್ಲು ಎದ್ದಿತ್ತು. ಏಕೆಂದರೆ ವಿದೇಶದಿಂದ ಬಂಧಿಸಿ ತಂದಿದ್ದ ಭೂಗತ ಪಾತಕಿ ಅಬು ಸಲೇಮನನ್ನು ಮಂಪರು ಪರೀಕ್ಷೆಗೆ ಗುರಿಪಡಿಸಿದಾಗ ಆತ ಕಾರಿಕೊಂಡಿದ್ದ ಅನೇಕ ಭಯಾನಕ ವಿಷಯಗಳಲ್ಲಿ ಅದೂ ಒಂದಾಗಿತ್ತು. ಮನಿಷಾ ಅನೀಸ್ ಇಬ್ರಾಹಿಂನಿಗೆ ತನ್ನ ಕಾರ್ಯದರ್ಶಿ ದೇವಾನಿ ದುಡ್ಡು ನುಂಗಿದ್ದಾನೆ ಎಂದು ದೂರು ಕೊಟ್ಟಿದ್ದಳು. ಅನೀಸ್ ದೇವಾನಿಯನ್ನು ಎತ್ತಿಸಿಬಿಟ್ಟ ಎಂದಿದ್ದ ಮಂಪರಿನಲ್ಲಿದ್ದ ಅಬು ಸಲೇಮ್.  ಅದಕ್ಕೆ ಪೂರಕವೆಂಬಂತೆ ಆಕೆಯನ್ನು ಯಾರೂ ಏನೂ ಕೇಳಿಯೇ ಇರಲಿಲ್ಲ. ಆದರೂ "ನಾನವಳಲ್ಲ, ನಾನವಳಲ್ಲ" ಎಂದು ಅಳುತ್ತಾ ಮನಿಷಾ ಏಕೆ ಅಂದಿನ ಮುಂಬೈ ಪೊಲೀಸ್ ಕಮಿಷನರನ್ನು ಭೇಟಿಯಾದಳು? ಮುಂದೆ ಕೆಲವೇ ದಿನಗಳಲ್ಲಿ ಆ ಕಮಿಷನರ್ ಎತ್ತಂಗಡಿ ಆಗಿದ್ದು ಕಾಕತಾಳೀಯವೇ ಎನ್ನುವ ಸಂಶಯ ಕಾಡಿತ್ತು. ಆದರೆ ಅಜಿತ್ ದೇವಾನಿ ಹತ್ಯೆಯ ತನಿಖೆ ಮಾಡಿದ ಪೊಲೀಸರು ಮನಿಷಾ ಕೊಯಿರಾಲಾಳಿಗೆ ಕ್ಲೀನ್ ಚಿಟ್ ಕೊಟ್ಟುಬಿಟ್ಟಿದ್ದರಿಂದ ಆಕೆ ಬಚಾವು. ಯಾರೂ ಏನೂ ಹೇಳುವಂತಿಲ್ಲ.

ಡಾನ್ ಛೋಟಾ ರಾಜನ್ನನ ಅವಿರತ ಪ್ರಯತ್ನದಿಂದ ಮಮತಾ ಛೋಟಾ ರಾಜನ್ ಮಾಲು ಎಂದು ಬಾಲಿವುಡ್ ತುಂಬಾ ಗುಸುಗುಸು. ಹೆಚ್ಚಿನ ವಿವರಗಳಾಗಲೀ ಫೋಟೋಗಳಾಗಲೀ ಸಿಕ್ಕಿಲ್ಲ. 

ಬಾಲಿವುಡ್ಡಿನಲ್ಲಿ ಮಮತಾಳ ಜನಪ್ರಿಯತೆ ಇಳಿಮುಖವಾಗತೊಡಗಿದಾಗ ಒಂದು ಲಫಡಾ ಆಗಿ ಬಹಳ ದೊಡ್ಡ ಸುದ್ದಿ ಮಾಡಿತು. ರಾಜಕುಮಾರ್ ಸಂತೋಷಿ...ಬಾಲಿವುಡ್ಡಿನ ದೊಡ್ಡ ನಿರ್ದೇಶಕ, ನಿರ್ಮಾಪಕ. ಅನೇಕರನ್ನು ನಟ ನಟಿಯರನ್ನಾಗಿ ಮಾಡಿದ ಮತ್ತು ತನಗೆ ಬಗ್ಗದವರನ್ನು ಸದೆಬಡಿದ ಖ್ಯಾತಿ ಕುಖ್ಯಾತಿ ಎರಡೂ ಇರುವ ದೊಡ್ಡ ಮನುಷ್ಯ. ಇಂತಹ ದೊಡ್ಡ ಮನುಷ್ಯ "ಚೈನಾ ಗೇಟ್" ಎನ್ನುವ ದೊಡ್ಡ ಬಜೆಟ್ಟಿನ ಚಿತ್ರಕ್ಕೆ ಕೈಹಾಕಿದ. ಮಮತಾ ಕುಲಕರ್ಣಿಯನ್ನು ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಿದ್ದ. ಮಧ್ಯೆ ಈ ಸಂತೋಷಿ ಮತ್ತು ಮಮತಾ ಮಧ್ಯೆ ಏನೋ ಕಿರಿಕ್ ಆಯಿತು. ಮಮತಾಳನ್ನು ಚಿತ್ರದಿಂದ ತೆಗೆದುಬಿಟ್ಟ. ಇವಳು ಇಲ್ಲದ ಗದ್ದಲ ಎಬ್ಬಿಸಿದಳು. "ನಿರ್ಮಾಪಕ ಸಂತೋಷಿ ನನ್ನ ಬಲಾತ್ಕಾರಕ್ಕೆ ಪ್ರಯತ್ನಿಸಿದ್ದ. ನಾನು ವಿರೋಧಿಸಿದೆ. ಪ್ರತಿಕಾರವೆಂಬಂತೆ ಸಿನೆಮಾದಿಂದ ತೆಗೆದಿದ್ದಾನೆ," ಎಂದು ಮಮತಾ ಆರೋಪ ಮಾಡಿದಳು. ಆದರೆ ಅದೆಲ್ಲೂ ಹೋಗಲಿಲ್ಲ. ತಣ್ಣಗಾಯಿತು. ಸಂತೋಷಿ ಕ್ಯಾರೇ ಮಾಡದೇ ಊರ್ಮಿಳಾ ಮಾತೊಂಡಕರ್ ಎನ್ನುವ ಮತ್ತೊಬ್ಬ ನಟಿಯೊಂದಿಗೆ ಚಿತ್ರ ಮುಂದುವರೆಸಿದ.

ಆಗ ಬಂತು ನೋಡಿ ಸಂತೋಷಿಗೆ ಒಂದು ಫೋನ್ ಕಾಲ್. ಫೋನ್ ಎತ್ತಿದ ಸಂತೋಷಿಯ ಮುಖದಲ್ಲಿ ಸಂತೋಷ ಮಾಯವಾಗಿ ಮುಖ ಕಪ್ಪಿಟ್ಟಿತು. ಆಕಡೆಯಿಂದ ಡಾನ್ ಛೋಟಾ ರಾಜನ್ ಅಬ್ಬರಿಸುತ್ತಿದ್ದ. ಮುಂಬೈ ಭೂಗತ ಲೋಕದ ಭಯಂಕರ ಬೈಗಳನ್ನು ಬರೋಬ್ಬರಿ ಪೂಜೆಗೆ ಹೂವಿನಂತೆ ಎರಚುತ್ತಾ ಅಬ್ಬರಿಸುತ್ತಿದ್ದ. ಥಂಡಾ ಹೊಡೆದು ಮೈಯೆಲ್ಲಾ ಬೆವರಿದ ಸಂತೋಷಿ, "ಓಕೆ ನಾನಾ ಭಾಯ್. ಎಲ್ಲ ನೀವು ಹೇಳಿದ ತರಹವೇ ಆಗುತ್ತದೆ," ಎಂದು ಉಸುರಿ ಫೋನಿಡುವಾಗ ಥರ ಥರ ಕಂಪಿಸುತ್ತಿದ್ದ. ಮುಕೇಶ್ ದುಗ್ಗಲ್, ದಿನೇಶ ಆನಂದ, ಅಜಿತ್ ದೇವಾನಿ, ಗುಲಶನ್ ಕುಮಾರ್, ಜಾವೇದ್ ಸಿದ್ದಿಕಿ, ಅಶ್ರಫ್ ಪಟೇಲ್, ತಾಕಿಯುದ್ದೀನ್ ವಾಹಿದ್ ಮುಂತಾದ ಭೂಗತರ ಗುಂಡುಗಳಿಗೆ ಬಲಿಯಾದ ಬಾಲಿವುಡ್ ಮತ್ತು ಬಿಸಿನೆಸ್ ಜನರ ಪ್ರೇತಾತ್ಮಗಳು ಸಂತೋಷಿಯನ್ನು ಸುತ್ತುವರೆದು ಕೀ ಕೀ ಎನ್ನುತ್ತಾ ಮೆದುಳಿಗೇ ಕೈಹಾಕಿದಂತೆ ಭಾಸವಾಯಿತು. ಡಾನ್ ಛೋಟಾ ರಾಜನ್ ಮಾತು ಕೇಳದಿದ್ದರೆ ತಾನೂ ಭೂಗತರ ಗುಂಡುಗಳಿಗೆ ಬಲಿಯಾಗಿ ಆ ಪ್ರೇತಾತ್ಮಗಳ ಜೊತೆ ಸೇರಿ ಕೀ ಕೀ ಎನ್ನಬೇಕಾದೀತು ಎಂದವನೇ ಮಮತಾಳಿಗೆ ಬರಲು ಹೇಳಿಕಳಿಸಿದ ಸಂತೋಷಿ.

ಅತಿ ಆಶ್ಚರ್ಯವೆಂಬಂತೆ "ಚೈನಾ ಗೇಟ್" ಚಿತ್ರದಿಂದ ಗೇಟ್ ಪಾಸ್ ಪಡೆದು ಹೊರಗೆ ಹೋಗಿದ್ದ ಮಮತಾ ಮತ್ತೆ ಚಿತ್ರ ತಂಡಕ್ಕೆ ಮರಳಿ ಸೇರಿಕೊಂಡಳು. ಚಿತ್ರೀಕರಣದಲ್ಲಿ ಭಾಗವಹಿಸಿದಳು. ಆಕೆಯ ಭೂಗತಲೋಕದ ಗೆಳೆಯ ಛೋಟಾ ರಾಜನ್ ನಿಂದ ಬರೋಬ್ಬರಿ ಬೆಂಡೆತ್ತಿಸಿಕೊಂಡಿದ್ದ ಸಂತೋಷಿ ಕಮಕ್ ಕಿಮಕ್ ಅನ್ನದೇ ಚಿತ್ರೀಕರಣ ಮುಗಿಸಿಕೊಟ್ಟ. ಆದರೆ ಎಡಿಟಿಂಗ್ ಸಮಯದಲ್ಲಿ ಕತ್ತರಿ ಹಿಡಿದು ಕೂತ ಸಂತೋಷಿ ಮಮತಾ ಇದ್ದ ಸೀನ್ ಗಳನ್ನು ಯದ್ವಾ ತದ್ವಾ ಕತ್ತರಿಸಿ ಮಮತಾಳ ಪಾತ್ರವನ್ನು ಯಾರೋ ಯಃಕಶ್ಚಿತ ಎಕ್ಸಟ್ರಾ ನಟಿಯ ಪಾತ್ರಕ್ಕೆ ಇಳಿಸಿಬಿಟ್ಟ. ಆ ರೀತಿ ಸೇಡು ತೀರಿಸಿಕೊಂಡ. ಮತ್ತೊಬ್ಬ ನಟಿ ಊರ್ಮಿಳಾ ಮಾತೋಂಡ್ಕರ್ ಸಿಕ್ಕಾಪಟ್ಟೆ ಸ್ಕೋಪ್ ಪಡೆದುಬಿಟ್ಟಳು. ತುಂಬಾ ಜನಪ್ರಿಯವಾದ "ಛಮ್ಮಾ ಛಮ್ಮಾ" ಹಾಡು ಅವಳ ಪಾಲಾಗಿತ್ತು. ಇದೆಲ್ಲ ಮಮತಾಳಿಗೆ ಯಾವಾಗ ತಿಳಿಯಿತೋ ಗೊತ್ತಿಲ್ಲ. ಆದರೆ ಆಗ ಛೋಟಾ ರಾಜನ್ ಮತ್ತೆ ಈ ವಿಷಯದಲ್ಲಿ ತಲೆ ಹಾಕಿದಂತೆ ಕಂಡು ಬರಲಿಲ್ಲ. ಮತ್ತೆ ಎಲ್ಲ ನಿರ್ಮಾಪಕರಂತೆ ಸಂತೋಷಿ ಕೂಡ ಹೊಸ ಚಿತ್ರ ಮುಗಿದ ಬಳಿಕ ಎಲ್ಲ ಡಾನ್ ಗಳಿಗೆ ಕೊಡುವಷ್ಟು ಕಪ್ಪು ಕಾಣಿಕೆ, ತಪ್ಪು ಕಾಣಿಕೆ ಇತ್ಯಾದಿ ಕೊಟ್ಟು ಕೈಮುಗಿದು ಸಾಷ್ಟಾಂಗ ಕೂಡ ಹಾಕಿಬಿಟ್ಟಿದ್ದ. ತಾನಿದ್ದಲ್ಲಿಗೆ ಎಂದೋ ಬಂದು ಕೆಲವು ಬಾರಿ ಹಾಸಿಗೆ ಬೆಚ್ಚಗೆ ಮಾಡಿ ಸುಖ ಕೊಟ್ಟು ಹೋಗಿದ್ದ ಮಮತಾಳಿಗೆ ರಾಜನ್ ಹೆಚ್ಚಿಗೆ ಮತ್ತೇನೂ ಮಾಡಲಿಲ್ಲ. "ಚೈನಾ ಗೇಟ್" ಚಿತ್ರ ತುಂಬಾ ಯಶಸ್ವಿಯಾಯಿತು. ತನ್ನ ಮಹತ್ವ ಕಮ್ಮಿಯಾಗಿದ್ದು ಕಂಡು ಮಮತಾ ಕೊತಕೊತ ಕುದ್ದುಕೊಂಡಳು ಬಿಟ್ಟರೆ ಮತ್ತೇನೂ ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ.

ಛೋಟಾ ರಾಜನ್ನನ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ ನಿರ್ಮಾಪಕ ಸಂತೋಷಿ ಶಿಸ್ತುಬದ್ಧವಾಗಿ ಮಮತಾಳ ಸಿನಿಮಾ ವೃತ್ತಿಜೀವನಕ್ಕೆ ಕೊಡಲಿಯಿಟ್ಟ. ದಾವೂದ್ ಇಬ್ರಾಹಿಂನ ಮಾಲು ಮಂದಾಕಿನಿ. ಆಕೆಯನ್ನು ಹಾಕಿಕೊಂಡರೆ ಯಾವಾಗ ಏನು ತಲೆನೋವು ಬರುತ್ತದೆ ಗೊತ್ತಿಲ್ಲ. ಸುಮ್ಮನೇ ಏಕೆ ಸಮಸ್ಯೆಯನ್ನು ಕರೆಸಿಕೊಳ್ಳಬೇಕು ಎಂದು ಬಾಲಿವುಡ್ ಮಂದಿ ಮಂದಾಕಿನಿ, ಹಾಗೆಯೇ ಮೋನಿಕಾ ಬೇಡಿ, ಮುಂತಾದ ಭೂಗತರ ಗೆಳತಿಯರನ್ನು avoid ಮಾಡುತ್ತಿದ್ದರೋ ಅದೇ ಮಮತಾಳಿಗೂ ಆಯಿತು. ಅವಕಾಶಗಳು ಪೂರ್ತಿ ಒಣಗಿ ಹೋಗತೊಡಗಿದವು. ಬಾಲಿವುಡ್ ಒಳಗೇ ಮತ್ತೊಂದು ಮಾಫಿಯಾ ಇದೆ. ನಿರ್ಮಾಪಕ ನಿರ್ದೇಶಕರ ಸಾಫ್ಟ್ ಮಾಫಿಯಾ. ಅದು ತುಂಬಾ ಬಲಿಷ್ಠವಾಗಿದೆ ಮತ್ತು ಅವರೊಡನೆ ಅವರು ಹೇಳಿದ ರೀತಿಯಲ್ಲಿ ಹೊಂದಾಣಿಕೆ (compromise) ಮಾಡಿಕೊಳ್ಳದಿದ್ದರೆ ಯಾರ ಭವಿಷ್ಯವನ್ನು ಬೇಕಾದರೂ ಅವರು ಮುರಿದು ಎಸೆಯಬಲ್ಲರು ಎಂದು ಗೊತ್ತಾಗುವ ಹೊತ್ತಿಗೆ ಮಮತಾ ಬಾಲಿವುಡ್ಡಿಗೆ ಸಂಪೂರ್ಣವಾಗಿ ಅಪ್ರಸ್ತುತಳೂ ಮತ್ತು ಅಪಥ್ಯವೂ ಆಗಿದ್ದು ದುರಂತ.

2000 ಇಸ್ವಿಯಲ್ಲಿ ಥಾಯ್ಲೆಂಡಿನ ಬ್ಯಾಂಕಾಕ್ ನಲ್ಲಿ ದಾವೂದ್ ಇಬ್ರಾಹಿಂ ಕಡೆಯವರು ಮಾಡಿದ ಹತ್ಯಾ ಪ್ರಯತ್ನದಲ್ಲಿ ಗುಂಡೇಟು ತಿಂದರೂ ಪವಾಡ ಸದೃಶ್ಯ ರೀತಿಯಲ್ಲಿ ಬಚಾವಾದ ಡಾನ್ ಛೋಟಾ ರಾಜನ್ ದೇಶ ವಿದೇಶಗಳ ಬೇಹುಗಾರಿಕೆ ಸಂಸ್ಥೆಗಳ ಸಹಾಯದಿಂದ ಇರಾನಿನಲ್ಲಿ ನೆಲೆಗೊಂಡ. ತೀವ್ರ ಮಧುಮೇಹಿಯಾಗಿದ್ದ ಆತ ಗುಂಡೇಟಿನಿಂದ ಆದ ಗಾಯಗಳಿಂದ ಚೇತರಿಸಿಕೊಳ್ಳಲು ತುಂಬಾ ಸಮಯ ಬೇಕಾಯಿತು. ಮತ್ತೆ ವೈಯಕ್ತಿಕ ಸುರಕ್ಷೆ ತುಂಬಾ ಮುಖ್ಯವಾಗಿತ್ತು. ಹಾಗಾಗಿ ಹೊರಗಿನ ಜನರ ಸಂಪರ್ಕ ಕಡಿದುಕೊಂಡ. ಭೂಗತಲೋಕವನ್ನು ಕಂಪ್ಯೂಟರ್ ಮತ್ತು ಫೋನ್ ಮೂಲಕ ಸಂಬಾಳಿಸತೊಡಗಿದ. ಇರಾನಿನಲ್ಲಿ ಆತನ ಮನೆ ಕೆಲಸ ಮಾಡಿಕೊಂಡಿದ್ದ ಮಹಿಳೆಯನ್ನೇ ಶಾದಿ ಮಾಡಿಕೊಂಡು ಅವಳಿಗೊಂದು ಮಗುವನ್ನೂ ಕರುಣಿಸಿಬಿಟ್ಟ. ಮಮತಾ ಮುಂತಾದ ಬಾಲಿವುಡ್ಡಿನ ಮಾಲೆಲ್ಲ ಆತನಿಗೆ ಹಳೆಯ ಸರಕಾಗಿಹೋಗಿತ್ತು.

ಈ ಸಮಯದಲ್ಲಿ ಮಮತಾಳಿಗೆ ಗಂಟು ಬಿದ್ದವ ದುಬೈನಲ್ಲಿ ಕುಳಿತು ಮೇಲ್ನೋಟಕ್ಕೆ ಎಂಪೈರ್ ಹೋಟೆಲ್ ಸಮೂಹದ ಮಾಲೀಕ ಎಂದು ಪೋಸ್ ಕೊಡುತ್ತಾ ದೊಡ್ಡ ಮಟ್ಟದ ಡ್ರಗ್ ದಂಧೆ ಮಾಡುತ್ತಿದ್ದ ವಿಕಿ ಗೋಸ್ವಾಮಿ. ಆತ ಎಂದಿನಿಂದಲೋ ಇವಳ ಫ್ಯಾನ್ ಆಗಿದ್ದನಂತೆ. ಅಷ್ಟೇ ಮೊದಲು  ಚಾನ್ಸ್ ಸಿಗಲಿಲ್ಲ. ಅವನ ಅಪ್ಪನಂತಹ ಡಾನ್ ಛೋಟಾ ರಾಜನ್ ಮಮತಾಳನ್ನು exclusive ಆಗಿ ಕಬ್ಜಾ ಮಾಡಿಕೊಂಡು ಕೂತಿದ್ದ. ಸಿಂಹದ ಮಾಲಿಗೆ ನಾಯಿ ನರಿ ಬಾಯಿ ಹಾಕುವುದಿಲ್ಲ. ಸಿಂಹ ತಿಂದು ಮುಗಿಸಿ ದೂರ ಹೋದ ನಂತರ ಅಪಾಯವಿಲ್ಲ ಎಂದಾಗ ಮಾತ್ರ ಅವು ಉಳಿದ ಬಳಿದ ಚೂರು ಪಾರಿಗೆ ಜೊಲ್ಲು ಸುರಿಸುತ್ತ ಬರುತ್ತವೆ. ವಿಕಿ ಗೋಸ್ವಾಮಿಯದು ಇದೇ ಪರಿಸ್ಥಿತಿ.

ಸಂತೋಷಿ ಹಾಕಿದ ಸ್ಕೆಚ್ ನಿಂದ ಒಂದು ರೀತಿಯಲ್ಲಿ ಬಾಲಿವುಡ್ಡಿನಿಂದ ಬಹಿಷ್ಕಾರ ಹಾಕಿಸಿಕೊಂಡು ಓತ್ಲಾ ಹೊಡೆಯುತ್ತಾ ಖಾಲಿ ಕೂತಿದ್ದ ಮಮತಾಳಿಗೆ ದುಬೈನಿಂದ ಬಿಟ್ಟೂ ಬಿಡದೆ ಫೋನ್ ಮಾಡುತ್ತಿದ್ದ ಗೋಸ್ವಾಮಿ ಅವಳನ್ನು ಪಟಾಯಿಸಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಗೋಸ್ವಾಮಿಯ ಜೊತೆಗಿರಲು 2002 ರ ಹೊತ್ತಿಗೆ ಮಮತಾ ದುಬೈಗೆ ಶಿಫ್ಟ್ ಆದಳು. ಚಿತ್ರರಂಗದಿಂದ ಸಂಪೂರ್ಣವಾಗಿ ಮಾಯವಾದಳು. ಅವಳ ಬಗ್ಗೆ ಹೆಚ್ಚಿನ ಮಾಹಿತಿ ಆಗ ಕೇಳಿದರೂ ಸಿಗುತ್ತಿರಲಿಲ್ಲ.

ದುಬೈಗೆ ಶಿಫ್ಟ್ ಆಗುವ ಮೊದಲು ಮುಂಬೈನಲ್ಲಿ ಮತ್ತೊಂದು ಲಫಡಾ ಮಾಡಿಕೊಂಡಳು ಮಮತಾ ಕುಲಕರ್ಣಿ. 

ಒಂದು ದಿನ ರಾತ್ರಿ ಕೆಲವರು ಒಬ್ಬ ಯುವತಿಯನ್ನು ಕರೆದುಕೊಂಡು ಮತ್ತು ನಾಲ್ಕಾರು ಯುವಕರನ್ನು ಎಳೆದುಕೊಂಡು ಓಶಿವಾರಾ ಪೊಲೀಸ್ ಠಾಣೆಗೆ ಬಂದರು. ಯಾವುದೋ ಟ್ರಾಫಿಕ್ ಸಿಗ್ನಲ್ ಒಂದರಲ್ಲಿ ಒಂದು ಕಾರ್ ನಿಂತಿತ್ತು. ಅಚಾನಕ್ಕಾಗಿ ಅದರಿಂದ ಕಾಪಾಡಿ!! ಕಾಪಾಡಿ!! ಎನ್ನುವ ಮಹಿಳೆಯ ಮೊರೆ ಕೇಳಿಬಂತು. "ನನ್ನನ್ನು ಕಾಪಾಡಿ! ಕಿಡ್ನ್ಯಾಪ್ ಮಾಡುತ್ತಿದ್ದಾರೆ. ಕಾಪಾಡಿ!" ಎಂದು ಮಹಿಳೆ ಕಷ್ಟಪಟ್ಟು ಹೇಗೋ ಮಾಡಿ ಕಾರಿನ ಕಿಟಕಿಯಿಂದ ಬೊಬ್ಬೆ ಹಾಕುತ್ತಿದ್ದಳು. ಒಳಗಿದ್ದ ದಾಂಡಿಗರು ಅವಳನ್ನು ಬಲವಂತದಿಂದ ಸುಮ್ಮನಿರಿಸಿ ಅಲ್ಲಿಂದ ಪರಾರಿಯಾಗಲು ನೋಡಿದರು. ಸುತ್ತುವರೆದ ಜನ ಬಿಡಲಿಲ್ಲ. ವಾಡಿಕೆಯಂತೆ ನಾಲ್ಕು ಧರ್ಮದೇಟು ಕೊಟ್ಟಿರಬಹುದು. ಎಲ್ಲರನ್ನೂ ಕರೆದುಕೊಂಡು ಓಶಿವಾರ ಠಾಣೆಗೆ ಬಂದು ಪೊಲೀಸರಿಗೆ ಒಪ್ಪಿಸಿದರು.

ಹಾಗೆ ಬೊಬ್ಬೆ ಹಾಕಿದ್ದ ಹುಡುಗಿ ಮಮತಾ ಕುಲಕರ್ಣಿ ಆಗಿದ್ದಳು. ತನಿಖೆಗೆ ಇಳಿದ ಪೊಲೀಸರು ಮೀಸೆ ಕೆಳಗೆ ಮುಸಿಮುಸಿ ನಕ್ಕರು. ಅಂತಹ ಅದೆಷ್ಟು ಡ್ರಾಮಾ ಅವರು ನೋಡಿಬಿಟ್ಟಿದ್ದರೋ. ಅದು ಕಿಡ್ನ್ಯಾಪ್ ಪ್ರಕರಣವೂ ಅಲ್ಲ ಎಂತ ಮಣ್ಣೂ ಅಲ್ಲ ಎಂಬುದು ನುರಿತ ಪೊಲೀಸರಿಗೆ ಕ್ಷಣಾರ್ಧದಲ್ಲಿ ತಿಳಿಯಿತು. ಅದೊಂದು ಆ ತರಹದ "ಬುಕಿಂಗ್" ಪ್ರಕರಣವಾಗಿತ್ತು ಅಷ್ಟೇ. ವ್ಯವಹಾರ ಕುದುರಿಸಿದ್ದ ಯುವಕರ ತಂಡ ಮಜಾ ಮಾಡಲು ಆಕೆಯನ್ನು ಕರೆದುಕೊಂಡು ಹೊರಟಿದ್ದರು. ಮಧ್ಯೆ ಎಲ್ಲೋ ಕೊಡು ತೆಗೆದುಕೊಳ್ಳುವ ಲೆಕ್ಕಾಚಾರ workout ಆಗಿಲ್ಲ. ರೊಕ್ಕ ವಾಪಸ್ ಕೊಟ್ಟು ರೈಟ್ ಹೇಳು ಅಂದಿರಬೇಕು ಅವರು. ರೊಕ್ಕವನ್ನು ಹಡಪ್ ಸ್ವಾಹಾ ಮಾಡಿ ಓಡೋಣ ಎಂದು ಕಿಡ್ನ್ಯಾಪ್ ಎಂದು ಸುಳ್ಳು ಬೊಬ್ಬೆ ಹೊಡೆದಳು ಎಂದು ಯುವಕರು ಅಂಬೋ ಅಂದಾಗ ಪೊಲೀಸರಿಗೆ ನಂಬದೇ ಇರಲು ಕಾರಣವೇ ಇರಲಿಲ್ಲ. ಹೈಟೆಕ್ ವೇಶ್ಯಾವೃತ್ತಿ ಬಹಳ ಸಾಮಾನ್ಯವಾಗಿತ್ತು. ಅನೇಕ ಚಿತ್ರತಾರೆಯರು, ಮಾಡೆಲ್ ಗಳು, ಇತರರು ತುಂಬಾ ರೂಟೀನ್ ಆಗಿ ಅದರಲ್ಲಿ ತೊಡಗಿಸಿಕೊಂಡಿದ್ದರು. ರೊಕ್ಕದ ವಿಷಯಕ್ಕೆ ರಂಪಾಟ ಇತ್ಯಾದಿ ಸಹಜವಾಗಿತ್ತು. ಪೊಲೀಸರು ಅದೇನು ಮಾಡಿದರೋ ಗೊತ್ತಿಲ್ಲ. ಆದರೆ ಮಮತಾ ಕೂಡ ಆ ದಂಧೆಗೆ ಇಳಿದಿದ್ದಾಳಂತೆ ಅನ್ನುವ ಸುದ್ದಿ ಗುಸುಗುಸು ಹಬ್ಬಿ ಏನಾದರೂ ಚೂರು ಪಾರು ಮರ್ಯಾದೆ ಉಳಿದಿದ್ದರೆ ಅದೂ ಕೂಡ ಮಾಯವಾಯಿತು. ಇದೇ ಸಮಯದಲ್ಲಿ ಗೋಸ್ವಾಮಿ ಬೇರೆ ಗಂಟು ಬಿದ್ದು ಬಾ ಬಾ ಎಂದು ಕರೆಯುತ್ತಿದ್ದ. ಗಂಟು ಮೂಟೆ ಕಟ್ಟಿದ ಮಮತಾ ದುಬೈಗೆ ಹಾರಿದಳು. ಸಿನಿಮಾ ಕರಿಯರ್ ಮುಗಿದಿತ್ತು. ಮಾದಕ ಸುಂದರಿಯ ಅಸಲಿ ಮಾದಕ ದುನಿಯಾ ಶುರುವಾಗಲಿತ್ತು, ವಿಕಿ ಗೋಸ್ವಾಮಿ ಎಂಬ ಡ್ರಗ್ ದೊರೆಯ ಸಾಂಗತ್ಯ ಮತ್ತು ಸಾರಥ್ಯದಲ್ಲಿ.

ದುಬೈಗೆ ಹೋಗಿ ಗೋಸ್ವಾಮಿಯ ಜೊತೆ ಸೆಟಲ್ ಆದೆ ಅನ್ನುವಷ್ಟರಲ್ಲಿ ದುಬೈ ಸರ್ಕಾರ ಗೋಸ್ವಾಮಿಯನ್ನು ಡ್ರಗ್ ಸಾಗಾಣಿಕೆ ಆರೋಪದಡಿ ಬಂಧಿಸಿ ಹದಿನೈದೋ ಇಪ್ಪತ್ತೋ ವರ್ಷದ ಸೆರೆವಾಸದ ಶಿಕ್ಷೆ ವಿಧಿಸಿ ಒಳಗೆ ತಳ್ಳಿತು. ಅಮೇರಿಕಾದಲ್ಲಿ ಆದ ೯/೧೧ ರ ದುರಂತದ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಸಮೀಕರಣಗಳು ಬದಲಾದವು. ಅಮೆರಿಕದವರು ತಾವೇ ಪೋಷಿಸಿಕೊಂಡು ಬಂದಿದ್ದ ಉಗ್ರರು , ಡ್ರಗ್ ದಂಧೆಯವರು ಮುಂತಾದವರ ಮೇಲೆ ಅವರದ್ದೇ ಕಾರಣಕ್ಕೆ ಮುರಿದುಕೊಂಡು ಬಿದ್ದು ಸದೆಬಡಿಯತೊಡಗಿದರು. ಗೋಸ್ವಾಮಿ ಏಕೆ ಒಳಗೆ ಹೋದ ಎಂಬುದು ಸ್ಪಷ್ಟವಿಲ್ಲ. ಆದರೆ ದಾವೂದ್ ಮತ್ತು ಇತರೆ ಮುಸ್ಲಿಂ ಡ್ರಗ್ ಸಿಂಡಿಕೇಟ್ ಗಳೊಂದಿಗೆ ಸಂಬಂಧ ಹಳಸಿತ್ತು ಎಂದು ಕಾಣುತ್ತದೆ. ಮತ್ತೆ ಮೇಲಿಂದ ಹಿಂದೂ ಬೇರೆ. ಸಾಫ್ಟ್ ಟಾರ್ಗೆಟ್. ಹಾಗಾಗಿ ಬಡಿದು ಒಳಗೆ ಕಳಿಸಿರಬೇಕು. ಅದೆಷ್ಟು ಬಾರಿ ಕೊಲ್ಲಿ ರಾಷ್ಟ್ರಗಳಲ್ಲಿ ಬೇರೆ ಬೇರೆ ಮುಸ್ಲಿಂ ಮಾಫಿಯಾ ದೊರೆಗಳು, ಡ್ರಗ್ ಲಾರ್ಡುಗಳು ಬೇರೆ ಬೇರೆ ಕಾರಣಕ್ಕೆ ಬಂಧಿತರಾಗಿಲ್ಲ. ತಮ್ಮ ತಮ್ಮಲ್ಲೇ ಏನೋ ಸಂಧಾನ ಮಾಡಿಕೊಳ್ಳುತ್ತಾರೆ. ತಾವು ಡ್ರಗ್ ದಂಧೆಯನ್ನು ಯಾವದೇ ಕಾರಣಕ್ಕೂ ನಡೆಯಲು ಬಿಡುವುದಿಲ್ಲ ಎಂದು ತೋರಿಸಿಕೊಳ್ಳಲು ತಮ್ಮ ಅವಕೃಪೆಗೆ ಪಾತ್ರರಾದವರನ್ನು ಗೋಸ್ವಾಮಿಯ ಹಾಗೆ ಬಡಿದು ಒಳಗೆ ತಳ್ಳುತ್ತಾರೆ. ಒಟ್ಟಿನಲ್ಲಿ ಮಮತಾಳ ಗೆಣೆಕಾರ ಗೋಸ್ವಾಮಿ ಒಳಗೆ ಹೋದ. 

ದುಬೈನಲ್ಲೇ ಇದ್ದ ಮಮತಾ ಗೋಸ್ವಾಮಿಯ ಹೋಟೆಲ್ ಮತ್ತಿತರ ಕಾನೂನುಬದ್ಧ ದಂಧೆಗಳನ್ನು ಸಂಬಾಳಿಸಿಕೊಂಡು ಇದ್ದಳಂತೆ. ನಡುವೆ ಒಮ್ಮೆ ಭಾರತದಲ್ಲಿ ನಡೆವ ಅಪರೂಪದ ಕುಂಭ ಮೇಳದಲ್ಲಿ ಕಂಡು ಬಂದಳು ಅಂತಲೂ ಸುದ್ದಿ ಇತ್ತು. ಮುಂದೆ ಮಮತಾಳೇ ಹೇಳಿಕೊಂಡಂತೆ ಹಿಮಾಲಯದಲ್ಲಿ ದೀಕ್ಷೆ ತೆಗೆದುಕೊಂಡು ಅಧ್ಯಾತ್ಮ ಸಾಧನೆ ಮಾಡಿದಳಂತೆ. Autobiography of a Yogini ಎನ್ನುವ ಪುಸ್ತಕ ಕೂಡ ಬರೆದಿದ್ದಾಳೆ. ಹುಡುಕಿದರೆ ಅದರ ಸಾಫ್ಟ್ ಕಾಪಿ ನಿಮಗೆ ಈಗಲೂ ಇಂಟರ್ನೆಟ್ ಮೇಲೆ ಸಿಗಬಹುದು. ಅದೊಂದು ಸ್ವಪ್ರಕಾಶಿತ e-book ಎಂದು ನನಗೆ ನೆನಪು. ಓದಲು ಸಾಧ್ಯವೇ ಇಲ್ಲದ ಹಾಗಿದೆ. ಮುದ್ರಣದೋಷಗಳು ತುಂಬಿ ತುಳುಕುತ್ತಿವೆ. ಹಾಗಾಗಿ ಈಗ ಹತ್ತಾರು ವರ್ಷಗಳ ಹಿಂದೆ ಬಿಟ್ಟಿ ಸಿಕ್ಕ ಪುಸ್ತಕವನ್ನು ಓದಲಾಗದೆ ಸೋಲೊಪ್ಪಿಕೊಂಡಿದ್ದೆ. ಈಗ ಮತ್ತೊಮ್ಮೆ ಓದಲು ಪ್ರಯತ್ನಿಸಿ ನೋಡಬೇಕು. 

ಮುಸ್ಲಿಂ ಧರ್ಮಕ್ಕೆ ಮತಾಂತರವಾದರೆ ಜೈಲಿನಿಂದ ಬೇಗ ಮುಕ್ತಿ ಸಿಗುತ್ತದೆ ಎಂದು ಯಾರೋ ಗೋಸ್ವಾಮಿಗೆ ಐಡಿಯಾ ಕೊಟ್ಟರು. ಮತಾಂತರದ ಕರಾರುಗಳು ಏನಿದ್ದವೋ ಗೊತ್ತಿಲ್ಲ. ಮಮತಾ ಕುಲಕರ್ಣಿ ಮತ್ತು ಗೋಸ್ವಾಮಿ ಇಬ್ಬರೂ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡು ವಿವಾಹವಾದರು. ಅದು ಕೇವಲ ಶಿಕ್ಷೆ ಕಡಿಮೆ ಮಾಡಿಸಿಕೊಂಡು ಜೈಲಿನಿಂದ ಹೊರಬರಲು ಎಂದು ಸುದ್ದಿ. 

ಆಗಲೇ ಗೋಸ್ವಾಮಿ ಹಲವಾರು ವರ್ಷ ದುಬೈ ಜೈಲಿನಲ್ಲಿ ಕಳೆದಿದ್ದ. ಮೇಲಿಂದ ಇಸ್ಲಾಂ ಕೂಡ ಸ್ವೀಕರಿಸಿದ. ಅದೂ ಮಮತಾಳ ಜೊತೆ. ಮತ್ತೆ ಬೇರೆಲ್ಲ ಏನೇನೋ ಸಮೀಕರಣಗಳು ವರ್ಕೌಟ್ ಆಗಿರಲೇ ಬೇಕು. ಅವೆಲ್ಲದರ ಫಲಶ್ರುತಿ ಎಂಬಂತೆ ದುಬೈ ಜೈಲಿನಿಂದ ಬಿಡುಗಡೆ ಹೊಂದಿದ.

ಗೋಸ್ವಾಮಿ ಆಫ್ರಿಕಾದ ತುಂಬೆಲ್ಲಾ ಮೊದಲಿಂದಲೂ ವ್ಯಾಪಕವಾಗಿ ಡ್ರಗ್ ದಂಧೆ ಮಾಡಿಕೊಂಡಿದ್ದ. ಆಫ್ರಿಕಾದ ಬೇರೆ ಬೇರೆ ದೇಶಗಳಲ್ಲಿ ಆತನ ನೆಲೆ, ಸಹಚರರು ಎಲ್ಲ ಇದ್ದರು. ಕೀನ್ಯಾ ದೇಶವನ್ನು ಆಯ್ಕೆ ಮಾಡಿಕೊಂಡು ಅಲ್ಲಿನ ಸಮುದ್ರ ತೀರದ ಮೊಂಬಾಸಾ ನಗರಕ್ಕೆ ಗೋಸ್ವಾಮಿ ಮತ್ತು ಮಮತಾ ಹಾರಿದರು. ಮಾಡಿಟ್ಟುಕೊಂಡಿದ್ದ ದುಡ್ಡು ಭರಪೂರ ಇರಬೇಕು. ಸಮುದ್ರ ತಟದಲ್ಲಿ ವಿಲ್ಲಾ ಖರೀದಿಸಿ ಹೊಸ ಜೀವನ ಶುರು ಮಾಡಿದರು. 

ಗೋಸ್ವಾಮಿ ಹಳೆ ಚಾಳಿ ಬಿಡಲಿಲ್ಲ. ಬುದ್ಧಿ ಬಂದಾಗಿನಿಂದ ಆತನಿಗೆ ಗೊತ್ತಿದ್ದದ್ದು ಒಂದೇ ಉದ್ಯೋಗ. ಅದೇ ಡ್ರಗ್ ದಂಧೆ. ಗುಜರಾತಿನ ಪೊಲೀಸ್ ಅಧಿಕಾರಿಯೊಬ್ಬನ ಮಗ ಮಾಡಿದ್ದು ಅದೊಂದೇ ದಂಧೆ. ಬೀದಿಯಲ್ಲಿ ಡ್ರಗ್ ಮಾರಿಕೊಂಡಿದ್ದವ ದಾವೂದ್, ಛೋಟಾ ರಾಜನ್, ಇಕ್ಬಾಲ್ ಮಿರ್ಚಿ ಮುಂತಾದವರ ಆಶ್ರಯದಲ್ಲಿ ದೊಡ್ಡ ಡ್ರಗ್ ಕುಳವಾಗಿದ್ದ. ಜಗತ್ತಿನ ಎಲ್ಲ ಕಡೆ ವ್ಯಾಪಕವಾಗಿ ಸಂಪರ್ಕಗಳನ್ನು ಬೆಳೆಸಿಕೊಂಡ. 

ಕೀನ್ಯಾದಲ್ಲಿ ಡ್ರಗ್ ದಂಧೆಗೆ ಇಬ್ಬರು ಅಪ್ಪಂದಿರು. ಒಂದು ಆಕಾಶಾ ಸಹೋದರರ ಗ್ಯಾಂಗ್. ಮತ್ತೊಂದು ಭಾರತ ಮೂಲದವನು ಎಂದು ಹೇಳಲಾದ ಅಲಿ ಪುಂಜಾನಿ ಎಂಬಾತನ ಗ್ಯಾಂಗ್. ಅಲಿ ಪುಂಜಾನಿಯೂ ಬಾಲಿವುಡ್ ನಟಿಯರ ಹುಚ್ಚು ಹತ್ತಿಸಿಕೊಂಡವನೇ. ಒಂದು ಕಾಲದಲ್ಲಿ ಸಾಕಷ್ಟು ಮಿಂಚಿದ್ದ ಕಿಮ್ ಶರ್ಮಾ ಎಂಬ ನಟಿಯನ್ನು ಮದುವೆಯಾಗಿ ಕೀನ್ಯಾದಲ್ಲಿ ನೆಲೆಸಿದ್ದ. ಬೇರೆ ಹಕ್ಕಿ ಸಿಕ್ಕ ಮೇಲೆ ಕಿಮ್ ಶರ್ಮಾಳಿಗೆ ಸೋಡಾ ಚೀಟಿ(ವಿಚ್ಛೇದನ) ಕೊಟ್ಟ. ಮಂಗ್ಯಾ ಆದ ಕಿಮ್ ಶರ್ಮಾ ವಾಪಸ್ ಬಂದು ಬಾಲಿವುಡ್ಡಿನಲ್ಲಿ ಆಂಟಿ , ಅಜ್ಜಿ ಪಾತ್ರ ಹುಡುಕುತ್ತಿದ್ದಳು. ಹಾಗೆಯೇ ತಲೆಮಾಸಿದ ಆಸಾಮಿಗಳೊಡನೆ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಾ ಚಾಲ್ತಿಯಲ್ಲಿರುವ ಪ್ರಯತ್ನ ಮಾಡುತ್ತಿದ್ದಳು. ನಾಲ್ಕಾರು ಮದುವೆ ವಿಚ್ಛೇದನ ಎಲ್ಲ ಕಂಡ ಒಂದು ಕಾಲದ ಟೆನಿಸ್ ಪಟು ಲೀಯಾಂಡರ್ ಫೇಸ್ ಜೊತೆ ಆಕೆ ಠಳಾಯಿಸಿದ್ದು ಕೊನೆಯ ಬಾರಿಗೆ ಸುದ್ದಿ ಮಾಡಿತ್ತು.

ಕೀನ್ಯಾದಲ್ಲಿ ಆಕಾಶಾ ಸಹೋದರರು ಮತ್ತು ಅಲಿ ಪುಂಜಾನಿ ನಡುವೆ ಡ್ರಗ್ ದಂಧೆಯ ಕುರಿತಾಗಿ ವೈಷಮ್ಯವಿತ್ತು. ಒಮ್ಮೆ ನೈಟ್ ಕ್ಲಬ್ ಒಂದರಲ್ಲಿ ಒಬ್ಬರಿಗೊಬ್ಬರು ಎದುರಾದಾಗ ಗುಂಡುಗಳು ಹಾರಿ ಅಂಗರಕ್ಷಕರು ಗಾಯಗೊಂಡಿದ್ದರು. ಆಗ ಆಕಾಶಾ ಸಹೋದರರ ಜೊತೆ ಗೋಸ್ವಾಮಿಯೂ ಇದ್ದ.

ಮುಂದೆ ಅಮೇರಿಕಾದ ಮಾದಕ ವಸ್ತು ನಿಗ್ರಹ ದಳ ದಾಳಿ ಮಾಡಿ ಆಕಾಶಾ ಸಹೋದರರು ಮತ್ತು ಗೋಸ್ವಾಮಿಯನ್ನು ಎತ್ತಾಕಿಕೊಂಡು ಅಮೆರಿಕಕ್ಕೆ ಕರೆದುಕೊಂಡು ಹೋಗಿ ಕೇಸ್ ನಡೆಸುತ್ತಿದೆ. ಅದೇ ಸಮಯದಲ್ಲಿ ಅಲಿ ಪುಂಜಾನಿ ಭಾರತಕ್ಕೆ ಹಾರಿ ಬಂದು ಮುಂಬೈನ ಆಸ್ಪತ್ರೆಯೊಂದರಲ್ಲಿ ಮಲಗಿದ್ದ. ಅವನಿಗೇನು ನಿಜವಾದ ಆರೋಗ್ಯದ ತೊಂದರೆಯೋ ಅಥವಾ ಕಾನೂನಿನಿಂದ ಮತ್ತು ವೈರಿಗಳಿಂದ ಬಚಾವ್ ಆಗಲು ಹಾಕಿದ್ದ ಸ್ಕೀಮೋ ಗೊತ್ತಿಲ್ಲ. 

ಗೋಸ್ವಾಮಿಯನ್ನು ಅಮೆರಿಕಾಕ್ಕೆ ಎಳೆದೊಯ್ದ ಮೇಲೆ ಮಮತಾ ಕೀನ್ಯಾದಲ್ಲೇ ಇದ್ದಳು. ಕೀನ್ಯಾದಲ್ಲಿ ಆಕೆಯ ಸಂದರ್ಶನ ಮಾಡಿದ್ದ ಪತ್ರಕರ್ತೆ ಶೀಲಾ ರಾವಲ್ ಅವರಿಗೆ ವಿವರವಾದ ವಿಡಿಯೋ ಸಂದರ್ಶನ ಕೊಟ್ಟಿದ್ದಳು. ಪರಮಾತ್ಮನನ್ನು ಸಾಕ್ಷಾತ್ಕಾರ ಮಾಡಿಕೊಂಡ ಸಾಧ್ವಿಯ ರೂಪದಲ್ಲಿ ಮಾತಾಡಿದ್ದಳು. ಅಧ್ಯಾತ್ಮದ ಮಾತುಗಳು ಕೇಳಲು ಚೆನ್ನಾಗಿತ್ತು.

ನಂತರ ಆಗಿದ್ದೇ ೨೦೧೬ ರ ಸೊಲ್ಲಾಪುರ ಡ್ರಗ್ ಪ್ರಕರಣ. ಅದರಲ್ಲಿ ಪೊಲೀಸರು ಆಕೆಯನ್ನೂ ಸೇರಿಸಿದ್ದರು. ಈಗ ಅದೇ ಪ್ರಕರಣದಲ್ಲಿ ನ್ಯಾಯಾಲಯ ಸದ್ಯಕ್ಕಂತೂ ಮುಕ್ತಿ ಕೊಟ್ಟಿದೆ. ಆದರೂ ಮಮತಾ ಮಾತ್ರ ಭಾರತಕ್ಕೆ ಬರಲಿಕ್ಕಿಲ್ಲ. ಬಂದರೆ ಸುಖಾಸುಮ್ಮನೆ ತೊಂದರೆ ಕೊಟ್ಟಾರು ಎನ್ನುವ ಆತಂಕ ಅನೇಕ ಹಾಲಿ ಮಾಜಿ ಕುಖ್ಯಾತರಲ್ಲಿದೆ. ಅದರಲ್ಲಿ ತಪ್ಪೂ ಇಲ್ಲ. ಸಿಕ್ಕಷ್ಟು ರೊಕ್ಕ ಗುಂಜಿಬಿಡೋಣ ಎಂದು ದುಷ್ಟ ವಿಚಾರಮಾಡುವ ಅಧಿಕಾರಶಾಹಿ ರಕ್ತಪಿಪಾಸುಗಳಿಗೆ ನಮ್ಮಲ್ಲಿ ಕೊರತೆ ಏನಿಲ್ಲ. ವ್ಯವಸ್ಥೆಯೇ ಹಾಗಿದೆ.

ಈಗ ಮನೆ ಮಠಕ್ಕೆ ಹಾಕಿದ್ದ ಬೀಗಮುದ್ರೆ ತೆರವಾಗಿವೆ. ಬ್ಯಾಂಕ್ ಖಾತೆಗಳು ಚಾಲೂ ಆಗಿವೆ. ಅಕ್ಕ ತಂಗಿಯರ ಜವಾಬ್ದಾರಿ ಇದೆ ಎಂದು ಕೋರ್ಟ್ ಅರ್ಜಿಯಲ್ಲಿ ಹಾಕಿಕೊಂಡಿದ್ದಳು. ಅದನ್ನೆಲ್ಲ ನಿಭಾಯಿಸಿಕೊಂಡು ಎಲ್ಲಿದ್ದರೂ ಆರಾಮಾಗಿರಲಿ. Every saint has a past and every sinner has a future ಎನ್ನುವ ಮಾತೇ ಇದೆಯೆಲ್ಲ. ಅದೇ ರೀತಿ ಮಮತಾ ಕುಲಕರ್ಣಿಯ ಇಲ್ಲಿನ ವರೆಗಿನ ಜೀವನ. ಮುಂದೆ ನೋಡಬೇಕು. ಶುಭಮಸ್ತು ಎಂದು ಹಾರೈಸಲೇನು ಅಡ್ಡಿ. ಅಲ್ಲವೇ?

ಮಮತಾ ಕುಲಕರ್ಣಿ ಬಗ್ಗೆ ಈ ಹಿಂದೆ ಬರೆದಿದ್ದ ಲೇಖನಗಳು ಕೆಳಗಿವೆ.

'ಕುಲಕರ್ಣಿ ಮಮ್ಮಿ' ಸನ್ಯಾಸ ತೊಗೋಂಡಳಾ?!.....ಅಕಟಕಟಾ!

ಡ್ರಗ್ ಮಾಫಿಯಾಕ್ಕೆ ಮರ್ಮಾಘಾತ ಕೊಟ್ಟ ಅಮೇರಿಕಾದ DEA

ಅಪರಾಧ ಲೋಕದ ದೇವಪಿತೃಗಳು. ಭಾರತಕ್ಕೆ ತುಂಬಾ ಬೇಕಾಗಿರುವ ಕುಖ್ಯಾತರೊಂದಿಗೆ ಮುಖಾಮುಖಿ

Mamta Kulkarni, Vicky Goswami complete saga summarized for the uninitiated

Tuesday, June 11, 2024

(ನಕಲಿ) ಎನ್ಕೌಂಟರ್ ಹೇಗೆ ನಡೆಯುತ್ತದೆ...ಗುಲ್ಲು ಖಬರಿ ಹೇಳಿದ ಪೊಲೀಸ್ ಎನ್ಕೌಂಟರ್ ಕಥೆ ಮತ್ತು ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳ ಪುರಾಣ

'ಎನ್ಕೌಂಟರ್ ಮಾಡುವ ಮೊದಲು ಪೊಲೀಸ್ ತಂಡ ಬರೋಬ್ಬರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತದೆ. ಪಾತಕಿಯನ್ನು ಕ್ಯಾಚ್ ಹಾಕಿಕೊಂಡ ನಂತರ ಬಂಧಿತನನ್ನು ರಹಸ್ಯ ಜಾಗವೊಂದರಲ್ಲಿ ಇಡುತ್ತಾರೆ. ಅದು ಫಾರ್ಮ್ ಹೌಸ್ ಇರಬಹುದು ಅಥವಾ ಮಾಹಿತಿದಾರನ ಖಾಸಗಿ ಜಾಗವಿರಬಹುದು. ನಗರದ ಹೊರಪ್ರದೇಶದಲ್ಲಿ ಅನೇಕ ಅತಿಥಿಗೃಹಗಳಿವೆ. ಅವುಗಳ ಮಾಲೀಕರೂ ಸಹ ರೂಮುಗಳನ್ನು ಪೊಲೀಸರಿಗೆ ಕೊಡುತ್ತಾರೆ. ಅವರಿಗೂ ಪೊಲೀಸರ ಕೃಪಾಶೀರ್ವಾದ ಪಡೆಯುವ ತವಕ. ಅಂತಹ ರೂಮುಗಳನ್ನೂ ಉಪಯೋಗಿಸಿಕೊಳ್ಳಲಾಗುತ್ತದೆ. ಬಂಧಿತನ ಅಪರಾಧಲೋಕದ ಸಮಗ್ರ ದಾಖಲೆಗಳನ್ನು (dossier) ಮತ್ತೊಮ್ಮೆ ಪರಿಶೀಲನೆ ಮಾಡಲಾಗುತ್ತದೆ. ಆಸಾಮಿ ಇತ್ತೀಚಿಗೆ ಜೈಲಿನಿಂದ ಹೊರಬಂದಿದ್ದರೆ ಜೈಲಿನ ವರದಿಯನ್ನು ತರಿಸಿಕೊಂಡು ಪರಿಶೀಲನೆ ಮಾಡಲಾಗುತ್ತದೆ. ಬಂಧಿತ ಎಷ್ಟು ಕೇಸುಗಳಲ್ಲಿ ಬೇಕಾಗಿದ್ದಾನೆ, ಈ ಹಿಂದೆ ಎಷ್ಟು ಪ್ರಕರಣಗಳಲ್ಲಿ ಸೆರೆಹಿಡಿಯಲ್ಪಟ್ಟಿದ್ದ, ಎಷ್ಟು ಪ್ರಕರಣಗಳಲ್ಲಿ ಅಪರಾಧಿ ಎಂದು ಸಾಬೀತಾಗಿತ್ತು, ಇತ್ಯಾದಿಗಳನ್ನು ಗಮನಿಸಲಾಗುತ್ತದೆ. ಬಂಧಿತನ ಮೇಲೆ ಒಂದಾದರೂ ೩೦೨ ಪ್ರಕರಣ (ಕೊಲೆ) ಇದ್ದರೆ ಆತ ಎನ್ಕೌಂಟರಿಗೆ ಯೋಗ್ಯ ಎಂದು ಪರಿಭಾವಿಸಲಾಗುತ್ತದೆ. ಹಿರಿಯ ಅಧಿಕಾರಿಗಳ ಜೊತೆ ಮತ್ತೊಮ್ಮೆ ಚರ್ಚೆಯಾಗುತ್ತದೆ. ಮುಂದುವರೆಯಲು ಅವರ ಅನುಮತಿಯನ್ನು ಪಡೆಯಲಾಗುತ್ತದೆ,' ಎಂದು ಗುಲ್ಲು ಖಬರಿ ಹೇಳಿದ.

'ಎನ್ಕೌಂಟರ್ ನಡೆಯುವ ಸ್ಥಳವನ್ನು ಹೇಗೆ ನಿರ್ಧರಿಸಲಾಗುತ್ತದೆ?' ಎಂದು ಕೇಳಿದೆ.

'ಯಾವ ಪ್ರದೇಶದಲ್ಲಿ ಸುಲಿಗೆ ಮುಂತಾದ ಅಂಡರ್ವರ್ಲ್ಡ್ ಚಟುವಟಿಕೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆಯೋ ಅಂತಹ ಪ್ರದೇಶವನ್ನು ಆರಿಸಿಕೊಳ್ಳಲಾಗುತ್ತದೆ. ಎನ್ಕೌಂಟರ್ ರಾತ್ರಿ ನಡೆಯಲಿದ್ದರೆ ಹೆಚ್ಚು ಕತ್ತಲಿರುವ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ರಸ್ತೆ ದೀಪಗಳು ಇದ್ದರೆ ಅವನ್ನು ತೆಗೆಸಲಾಗುತ್ತದೆ. ಆಗದಿದ್ದರೆ ಕೈಗೆ ಸಿಕ್ಕ ಕಲ್ಲಿನಿಂದ ದೀಪಗಳನ್ನು ಒಡೆದರೂ ಒಡೆದರೇ. ಎನ್ಕೌಂಟರಿಗೆ ತೆರಳುವ ಮೊದಲು ತಂಡದ ನಾಯಕ ಸ್ಟೇಷನ್ ಡೈರಿಯಲ್ಲಿ ಒಂದು ಎಂಟ್ರಿ ಮಾಡುತ್ತಾರೆ. ಇಂತಿಂತಹ ಗ್ಯಾಂಗಸ್ಟರ್ ಬಗ್ಗೆ ಮಾಹಿತಿ ಸಿಕ್ಕಿದೆ. ಇಷ್ಟೊತ್ತಿಗೆ ತನ್ನ ಸಹವರ್ತಿಯನ್ನು ಭೇಟಿಯಾಗಲು ಗ್ಯಾಂಗಸ್ಟರ್ ಇಂತಹ ಜಾಗಕ್ಕೆ  ಬರಲಿದ್ದಾನೆ. ಶಸ್ತ್ರಾಸ್ತ್ರ ಹೊಂದಿರಬಹುದಾದ ಆತನನ್ನು ಬಂಧಿಸಲು ತಂಡ ತೆರಳುತ್ತಿದೆ ಎಂಬುದು ಆ ಡೈರಿ ಎಂಟ್ರಿಯ ಸಾರಾಂಶ,' ಎಂದು ಗುಲ್ಲು ಖಬರಿ ಹೇಳಿದ.

'ಪೊಲೀಸ್ ಸ್ಟೇಷನ್ ಬಿಟ್ಟು ಹೊರಟ ನಂತರ ಏನಾಗುತ್ತದೆ?' ಎಂದು ಕೇಳಿದೆ.

'ಎಲ್ಲ ಪೊಲೀಸ್ ಸಿಬ್ಬಂದಿ ಮಫ್ತಿಯಲ್ಲಿರುತ್ತಾರೆ. ಎನ್ಕೌಂಟರ್ ಮಾಡಬೇಕಾದ ವ್ಯಕ್ತಿಯನ್ನು ಖಾಸಗಿ ವಾಹನವೊಂದರಲ್ಲಿ ಕರೆತರಲಾಗುತ್ತದೆ. ಕೈಗೆ ಬೇಡಿ ಹಾಕಿರುತ್ತಾರೆ. ಇಬ್ಬರು ಪೊಲೀಸ್ ಪೇದೆಗಳ ಮಧ್ಯೆ ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡು ಕರೆತರುತ್ತಾರೆ. ಅಂತಹ ವಾಹನಗಳ ಗ್ಲಾಸಿಗೆ ಕಪ್ಪು ಪೊರೆ ಇರುತ್ತದೆ. ಒಳಗಿರುವವರಾರೂ ಹೊರಗೆ ಕಾಣಬಾರದಲ್ಲ. ಎನ್ಕೌಂಟರ್ ತಂಡದ ನಾಯಕ ಬೇರೆ ವಾಹನದಲ್ಲಿ ಆಗಮಿಸುತ್ತಾರೆ. ಎಲ್ಲರೂ ತುಂಬಾ ಒತ್ತಡದಲ್ಲಿ ಇರುತ್ತಾರೆ. ಎನ್ಕೌಂಟರ್ ಮಾಹಿತಿ ಸ್ವಲ್ಪ ಕೂಡ ಸೋರಿಕೆಯಾಗದಂತೆ ಅನೇಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ,' ಎಂದು ಗುಲ್ಲು ಖಬರಿ ಹೇಳಿದ.

'ಎನ್ಕೌಂಟರ್ ಆಗುವ ಕೆಲವೇ ಕೆಲವು ನಿಮಿಷಗಳ ಮೊದಲು ಎನ್ಕೌಂಟರ್ ಆಗಲಿರುವ ವ್ಯಕ್ತಿಯ ವರ್ತನೆ ಹೇಗಿರುತ್ತದೆ?' ಎಂದು ಕೇಳಿದೆ. 

'ಪೊಲೀಸರು ಆತನೊಂದಿಗೆ ಅಂತಹ ದುರ್ವರ್ತನೆಯನ್ನೇನೂ ತೋರುವುದಿಲ್ಲ. ಅವನ ಜೊತೆ ಚೆನ್ನಾಗಿಯೇ ಮಾತಾಡಿ ನಯವಾಗಿಯೇ ಅವನಿಗೆ ಗೊತ್ತಿರಬಹುದಾದ ಭೂಗತಲೋಕದ ಮಾಹಿತಿಯನ್ನು ಪಡೆಯುತ್ತಾರೆ. ಒಮ್ಮೊಮ್ಮೆ ಜೋಕ್ ಹೊಡೆಯುತ್ತಾರೆ. ಆರೋಪಿ ಮತ್ತು ಪೊಲೀಸರು ಕೂಡಿಯೇ ನಗುತ್ತಾರೆ. ಅವನ ಪ್ರಿಯ ಖಾದ್ಯ ಮತ್ತು ಮದ್ಯ ತರಿಸಿಕೊಟ್ಟು ಉಪಚಾರ ಮಾಡುವುದೂ ಉಂಟು. ಎನ್ಕೌಂಟರ್ ಆಗಲಿರುವ ವ್ಯಕ್ತಿಗೆ ಅವನು ಎನ್ಕೌಂಟರಿನಲ್ಲಿ ಸಾಯಲಿದ್ದಾನೆ ಎನ್ನುವ ಸುಳಿವು ಸಿಗಬಾರದು ಎಂದು ಎಲ್ಲ ಪ್ರಯತ್ನ ಮಾಡಲಾಗುತ್ತದೆ. ಆದರೆ ಭೂಗತಲೋಕದಲ್ಲಿ ಪಳಗಿರುವ ಪಂಟರುಗಳಿಗೆ ಅವರ ಬಂಧನವಾದಾಗಲೇ ಗೊತ್ತಾಗಿರುತ್ತದೆ ತಮ್ಮ ಎನ್ಕೌಂಟರ್ ಆಗಲಿದೆ ಎಂದು. ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಯ ತಂಡ ಬಂಧಿಸಿತು ಅಂದರೆ ಎನ್ಕೌಂಟರ್ ಮಾಡಲೆಂದೇ ಬಂಧಿಸಿರುತ್ತಾರೆ ಎಂದು ಅರಿಯದಷ್ಟು ಮೂರ್ಖರಿರುವುದಿಲ್ಲ ಅವರು. ಅಂತವರು ತಮ್ಮ ಕೊನೆಯ ಪ್ರಯಾಣದಲ್ಲಿ ಗಡಗಡ ನಡುಗಲಾರಂಭಿಸುತ್ತಾರೆ ಮತ್ತು ಅಳುತ್ತಾರೆ ಕೂಡ. 'ಬಿಟ್ಟುಬಿಡಿ! ಪ್ಲೀಸ್!' ಎಂದು ಅಂಗಲಾಚುತ್ತಾರೆ. ಅಂಡರ್ವರ್ಲ್ಡ್ ಬಿಟ್ಟುಬಿಡುತ್ತೇವೆ ಎಂದು ಹೇಳುತ್ತಾರೆ. ಇನ್ನು ಕೆಲವರು ಬೇಕಾದಷ್ಟು ದುಡ್ಡು ಕಾಸು ಇತ್ಯಾದಿಗಳ ಆಮಿಷ ಒಡ್ಡುತ್ತಾರೆ. ಪೊಲೀಸರು ಒಮ್ಮೆ ಅವರ ಹಣೆಬರಹ ನಿರ್ಧರಿಸಿಬಿಟ್ಟಿದ್ದರೆ ಮುಗಿಯಿತು ಅಷ್ಟೇ. ಇವೆಲ್ಲಾ ಏನಕ್ಕೂ ಉಪಯೋಗವಿಲ್ಲ. ಎನ್ಕೌಂಟರ್ ಮಾಡಿ ಮಾಡಿ ಒಗ್ಗಿರುವ ಅಧಿಕಾರಿಗಳು ಯಾವುದಕ್ಕೂ ಕರಗುವುದಿಲ್ಲ. ತಂಡದ ಎಲ್ಲರೂ ಮೊಬೈಲ್ ಫೋನುಗಳನ್ನು ಆಫ್ ಮಾಡುತ್ತಾರೆ. ಸುತ್ತಮುತ್ತ ಯಾರೂ ಇಲ್ಲ ಎಂದು ಖಚಿತಪಡಿಸಿಕೊಳ್ಳುತ್ತಾರೆ. ರಸ್ತೆ ಬದಿಯ ವ್ಯಾಪಾರಿಗಳು, ಭಿಕ್ಷುಕರು ಅಥವಾ ಇತರರು ಯಾರಾದರೂ ಕಂಡರೆ ಅವರನ್ನು ಓಡಿಸುತ್ತಾರೆ. ಯಾರೂ ನೋಡುತ್ತಿಲ್ಲ ಎಂದು ಖಚಿತವಾದ ಮೇಲೆ ಪಾತಕಿಗೆ ಕಾರಿನಿಂದ ಹೊರಬರಲು ಹೇಳುತ್ತಾರೆ. ಕೊನೇಕ್ಷಣದ ಕೊನೆಯ ಪ್ರಯತ್ನವೆಂಬಂತೆ ಜೀವ ಉಳಿಸುವಂತೆ ಪಾತಕಿ ಮತ್ತೆ ಮತ್ತೆ ಗೋಗರಿಯುತ್ತಾನೆ. ಒಳಗಿದ್ದ ಪೊಲೀಸ್ ಪೇದೆ ಶಕ್ತಿಯೆಲ್ಲವನ್ನೂ ಹಾಕಿ ಆತನನ್ನು ಹೊರಗೆ ದೂಡುತ್ತಾನೆ. ಹಾಗೆ ಹೊರಗೆ ಉರುಳಿಬಿದ್ದವನ ಮೇಲೆ ಸುತ್ತುವರೆದಿರುವ ಪೊಲೀಸರ ಬಂದೂಕುಗಳು ಒಂದೇ ಸವನೆ ಮೊರೆಯುತ್ತವೆ. ಅಲ್ಲಿಗೆ ಆರೋಪಿ ಖಲಾಸ್. ಸಾಮಾನ್ಯವಾಗಿ ಕಾಲಿಗೆ, ಹೊಟ್ಟೆಗೆ ಮತ್ತು ತಲೆಗೆ ಗುಂಡು ಹೊಡೆದಿರುತ್ತಾರೆ. ಪಾತಕಿಯ ಶವದ ಕೈಯಲ್ಲಿ ಒಂದು ಆಯುಧವನ್ನು ಹಿಡಿಸುತ್ತಾರೆ. ಅದು ಅವನಿಂದಲೇ ವಶಪಡಿಸಿಕೊಂಡಿರುವ ಆಯುಧವಾಗಿರಲೂಬಹುದು. ಅದರಿಂದ ನಾಲ್ಕಾರು ಗುಂಡುಗಳನ್ನು ಗಾಳಿಯಲ್ಲಿ ಹಾರಿಸುತ್ತಾರೆ. ಪಾತಕಿ ಪೊಲೀಸರ ಮೇಲೆ ಗುಂಡು ಹಾರಿಸಿದ್ದ ಎಂದು ಕಥೆ ಕಟ್ಟಲು ಬೇಕು ಎಂದು ಹೀಗೆ ಮಾಡುತ್ತಾರೆ. ಒಮ್ಮೊಮ್ಮೆ ಹೊಸದಾಗಿ ಸೇರಿರುವ ಪೊಲೀಸರು ಗಾಯಗಳಿಂದ ಸುರಿಯುತ್ತಿರುವ ರಕ್ತ, ಬುರುಡೆಯಿಂದ ಹೊರಸಿಡಿದಿರುವ ಮಿದುಳಿನ ಗುಲಾಬಿ ಬಣ್ಣದ ಲೋಳೆ, ಶವ ಎಲ್ಲ ನೋಡಿ ಉದ್ವಿಗ್ನತೆಯಿಂದ ಅಸ್ವಸ್ಥರಾಗಿ ಅಲ್ಲೇ ವಾಂತಿ ಮಾಡಿಕೊಂಡ ನಿದರ್ಶನಗಳೂ ಇವೆ,' ಎಂದು ಗುಲ್ಲು ಖಬರಿ ಹೇಳಿದ.

'ಎನ್ಕೌಂಟರ್ ಆದವ ಸತ್ತಿದ್ದಾನೆ ಎಂದು ಹೇಗೆ ಖಾತ್ರಿ ಮಾಡಿಕೊಳ್ಳುತ್ತಾರೆ?' ಎಂದು ಕೇಳಿದೆ.

'ಮೊದಲು ನಾಡಿ ಬಡಿತ ನೋಡುತ್ತಾರೆ. ಮೂಗು ಮುಚ್ಚುತ್ತಾರೆ. ಬದುಕಿದ್ದರೆ ಬಾಯಿಯಿಂದ ಉಸಿರಾಡುತ್ತಾನೆ. ಎನ್ಕೌಂಟರ್ ರಾತ್ರಿ ಮಾಡಿದರೆ ಆತನ ಕಣ್ಣಿನ ಮೇಲೆ ಬ್ಯಾಟರಿ ಪ್ರಕಾಶಿಸುತ್ತಾರೆ. ಕಣ್ಣುಗುಡ್ಡೆ ಅತ್ತಿತ್ತ ಚಲಿಸದಿದ್ದರೆ ಸತ್ತಿದ್ದಾನೆ ಎಂದರ್ಥ. ಕೆಲವು ವರ್ಷಗಳ ಹಿಂದೆ ಎನ್ಕೌಂಟರ್ ಒಂದರಲ್ಲಿ ಒಬ್ಬಾತ ಸತ್ತಿರಲೇ ಇಲ್ಲ. ಹೆಣ ಎಂದು ಆಸ್ಪತ್ರೆಗೆ ತೆಗೆದುಕೊಂಡು ಹೋದ ಮೇಲೆ ಎದ್ದು ಕುಳಿತು ಬೊಬ್ಬೆ ಹಾಕಿದ. ಅಂದಿನಿಂದ ಸ್ಥಳದಲ್ಲೇ ಸತ್ತಿರುವುದರ ಬಗ್ಗೆ ಖಾತ್ರಿ ಮಾಡಿಕೊಳ್ಳುತ್ತಾರೆ,' ಎಂದು ಗುಲ್ಲು ಖಬರಿ ಹೇಳಿದ.

'ಎನ್ಕೌಂಟರ್ ನಂತರ ಏನಾಗುತ್ತದೆ?' ಎಂದು ಕೇಳಿದೆ.

'ಎನ್ಕೌಂಟರ್ ನಂತರ ಎಲ್ಲರ ಮೊಬೈಲ್ ಫೋನ್ ಆನ್ ಆಗುತ್ತವೆ. ಕಂಟ್ರೋಲ್ ರೂಮಿಗೆ ಕರೆ ಮಾಡಿ ಎನ್ಕೌಂಟರ್ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಪಂಚನಾಮೆ ಪ್ರಕ್ರಿಯೆ ಮಾಡುತ್ತಾ ಕಾಗದಪತ್ರ ತಯಾರಿಸಲು ಆರಂಭಿಸುತ್ತಾರೆ. ಶವವನ್ನು ಆಸ್ಪತ್ರೆಗೆ ಸಾಗಿಸುತ್ತಾರೆ. ಎನ್ಕೌಂಟರ್ ತಂಡದ ಎಲ್ಲ ಸದಸ್ಯರಿಗೂ ನಿರ್ದಿಷ್ಟ ಜವಾಬ್ದಾರಿಗಳನ್ನು ಕೊಟ್ಟಿರುತ್ತಾರೆ. ಒಬ್ಬನು ಕಾಗದಪತ್ರ ತಯಾರಿಸುವಲ್ಲಿ ಸ್ಥಳೀಯ ಪೊಲೀಸರಿಗೆ ಸಹಕರಿಸುತ್ತಾನೆ. ಎನ್ಕೌಂಟರ್ ಮಾಡಿದ ತಂಡದ ನಾಯಕ ಫೋನ್ ಮಾಡಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಕೊಡುತ್ತಾನೆ. ಮತ್ತೊಬ್ಬ ಪೊಲೀಸ್ ಪತ್ರಕರ್ತರಿಗೆ ಫೋನ್ ಮಾಡಿ ವಿವರ ಕೊಡುತ್ತಾನೆ. ನಿಮ್ಮಂತಹ ಪತ್ರಕರ್ತರು ಬ್ರೇಕಿಂಗ್ ನ್ಯೂಸ್ ಕೊಡಲು ಧಾವಿಸಿ ಬರುತ್ತೀರಿ. ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಯ ನ್ಯೂಸ್ ಬೈಟ್ ತೆಗೆದುಕೊಳ್ಳುತ್ತೀರಿ. ಹಗಲಿನಲ್ಲಿ ಎನ್ಕೌಂಟರ್ ನಡೆದರೆ, ಗ್ಯಾಂಗಸ್ಟರ್ ಯಾವುದೋ ಸಿನೆಮಾ ವ್ಯಕ್ತಿಯನ್ನೋ, ಬಿಲ್ಡರನನ್ನೋ ಅಥವಾ ವ್ಯಾಪಾರಿಯನ್ನೋ ಕೊಲ್ಲಲು ಬರುವ ಬಗ್ಗೆ ಮಾಹಿತಿ ಇತ್ತು. ಶರಣಾಗು ಎಂದು ಹೇಳಿದೆವು. ಕೇಳದೇ ಪೊಲೀಸರ ಮೇಲೆಯೇ ದಾಳಿ ಮಾಡಿದ. ಆತ್ಮರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು ಎಂದು ನ್ಯೂಸ್ ಬೈಟ್ ಕೊಡುತ್ತಾರೆ. ಎನ್ಕೌಂಟರ್ ರಾತ್ರಿ ನಡೆದರೆ, ಗ್ಯಾಂಗಸ್ಟರ್ ಅವನ ಸಹವರ್ತಿಯನ್ನು ಭೇಟಿ ಮಾಡಲು ಬಂದಿದ್ದ ಎಂದು ಸ್ಕ್ರಿಪ್ಟ್ ಬದಲಾವಣೆ ಆಗುತ್ತದೆ ಅಷ್ಟೇ. ಉಳಿದ ವಿಷಯ ಸೇಮ್ ಟು ಸೇಮ್ ಇರುತ್ತದೆ. ಎನ್ಕೌಂಟರ್ ತಂಡದ ಅಧಿಕಾರಿಯೊಬ್ಬರು ಆಸ್ಪತ್ರೆಯಲ್ಲಿ ಶವಪರೀಕ್ಷೆಯನ್ನು ಮ್ಯಾನೇಜ್ ಮಾಡುತ್ತಿರುತ್ತಾರೆ. ಶವಪರೀಕ್ಷೆಯಲ್ಲಿ ವಿವಾದಾಸ್ಪದ ವಿಷಯ ಯಾವುದೂ ಬರದಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿ,' ಎಂದು ಗುಲ್ಲು ಖಬರಿ ಹೇಳಿದ.

'ಕ್ರೈಮ್ ಬ್ರಾಂಚ್ ಪೊಲೀಸರು ಎನ್ಕೌಂಟರ್ ಮಾಡಿದ ಮೇಲೆ ಸ್ಥಳೀಯ ಪೊಲೀಸರ ಕಾರ್ಯವಿಧಾನ ಹೇಗಿರುತ್ತದೆ?' ಎಂದು ಕೇಳಿದೆ. 

'ಎನ್ಕೌಂಟರಿನಲ್ಲಿ ಸತ್ತ ವ್ಯಕ್ತಿಯ ಮೇಲೆ ೩೦೭ ಕೊಲೆ ಯತ್ನ, ೩೫೩ ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ ಯತ್ನ ಮತ್ತು ೨೫ (A) ಅಕ್ರಮ ಶಸ್ತ್ರಾಸ್ತ್ರ ಕಾಯಿದೆಗಳ ಅಡಿಯಲ್ಲಿ ಕೇಸ್ ದಾಖಲಾಗುತ್ತದೆ. ಅದರ ಆಧಾರದ ಮೇಲೆ ಸ್ಥಳೀಯ ಪೊಲೀಸರ ತನಿಖೆ ಆರಂಭವಾಗುತ್ತದೆ. ಮೃತನ ಸಂಬಂಧಿಕರಿಗೆ ಮಾಹಿತಿ ಮುಟ್ಟಿಸಲಾಗುತ್ತದೆ. ಮೃತ ವ್ಯಕ್ತಿ ಉಪಯೋಗಿಸಿದ್ದ ಎಂದು ತೋರಿಸಲಾದ ಪಿಸ್ತೂಲನ್ನು ಪ್ರಯೋಗಾಲಯಕ್ಕೆ ಕಳಿಸಲಾಗುತ್ತದೆ,' ಎಂದು ಗುಲ್ಲು ಖಬರಿ ಹೇಳಿದ.

'ಎನ್ಕೌಂಟರ್ ತಂಡ ತುಂಬಾ ರಿಸ್ಕ್ ತೆಗೆದುಕೊಳ್ಳುತ್ತದೆ. ಅಲ್ಲವೇ?? ಎನ್ಕೌಂಟರ್ ಮಾಡಲು ತುಂಬಾ ಧೈರ್ಯ ಬೇಕಾಗಬಹುದು ಅನ್ನಿಸುತ್ತದೆ. ಅಲ್ಲವೇ?' ಎಂದು ಕೇಳಿದೆ.

'ಅದೂ ಹೌದೆನ್ನಿ. ವಾಸ್ತವದಲ್ಲಿ ಎನ್ಕೌಂಟರ್ ನಿಜವಾಗಿ ಹೇಗೆ ನಡೆಯುತ್ತದೆ ಎಂದು ತಿಳಿದುಕೊಂಡ ಮೇಲೆ ನಿಮಗೆನಿಸುತ್ತದೆ??'  ಎಂದು ಗುಲ್ಲು ಖಬರಿ ಕೇಳಿದ. ಈಗ ಪ್ರಶ್ನೆ ಕೇಳುವ ಬಾರಿ ಅವನದು.

'ಕೋರ್ಟು, ಕಾನೂನಿನ ಮೂಲಕ ಮಾಫಿಯಾವನ್ನು ಸದೆಬಡಿಯಲು ಸಾಧ್ಯವಾಗಿಲ್ಲ. ಹಾಗಾಗಿ ಎನ್ಕೌಂಟರ್ ವಿಧಾನ ತಕ್ಕ ಮಟ್ಟಿಗೆ ಮಾಫಿಯಾದ ಬೆನ್ನುಮೂಳೆ ಮುರಿಯುವಲ್ಲಿ ಯಶಸ್ವಿಯಾಗಿರಬಹುದು. ಆದರೆ ಈ ಎನ್ಕೌಂಟರ್ ವಿಧಾನದಲ್ಲಿ ಆರೋಪಿಗೆ ತನ್ನನ್ನು ಸಮರ್ಥಿಸಿಕೊಳ್ಳುವ ಅವಕಾಶವಿರುವುದಿಲ್ಲ. ನನ್ನ ಆತಂಕವೇನೆಂದರೆ ಕೆಲವು ನಿಷ್ಪಾಪಿ ವ್ಯಕ್ತಿಗಳೂ ಕೂಡ ತಪ್ಪು ಗ್ರಹಿಕೆಯಿಂದ ಇಂತಹ ನಕಲಿ ಎನ್ಕೌಂಟರುಗಳಲ್ಲಿ ಕೊಲ್ಲಲ್ಪಟ್ಟಿರಬಹುದು. ಅದು ಎನ್ಕೌಂಟರ್ ಕಾರ್ಯಾಚರಣೆಗಳ ದುಷ್ಪರಿಣಾಮ ಎಂದೆನಿಸುತ್ತದೆ,' ಎಂದು ನನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. 

'ನೀವು ಹೇಳುವುದು ಕೂಡ ಸರಿ. ತಪ್ಪುಗಳು ಆಗಬಹುದು. ತಪ್ಪು ಮಾಡುವುದು ಮಾನವ ಸಹಜ ಗುಣ. ಆದರೆ ಕೆಲಸ ಮಾಡಲು ಪ್ರಯತ್ನ ಮಾಡುವವ ಮಾತ್ರ ತಪ್ಪು ಮಾಡಲು ಸಾಧ್ಯ. ಎನ್ಕೌಂಟರ್ ಹಿಂದಿನ ಉದ್ದೇಶ ಮುಖ್ಯ. ಸುಖಾಸುಮ್ಮನೆ ಜನರನ್ನು ಕೊಲ್ಲುವುದು ಎನ್ಕೌಂಟರುಗಳ ಉದ್ದೇಶವಲ್ಲ. ಸಮಾಜಕ್ಕೆ ಕಂಟಕಪ್ರಾಯರಾದವರನ್ನು ನಿರ್ಮೂಲನೆ ಮಾಡುವುದು ಉದ್ದೇಶ,' ಎಂದು ಗುಲ್ಲು ಖಬರಿ ಸಮರ್ಥಿಸಿಕೊಂಡ. 

'ಕೆಲವು ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳು ತಮಗಿರುವ ಪ್ರಭಾವವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ ಎಂದು ಕೇಳಿದ್ದೇನೆ. ಕೆಲವು ಅಧಿಕಾರಿಗಳು ಮಾಫಿಯಾ ಜೊತೆ ಶಾಮೀಲಾಗಿದ್ದಾರೆ ಎನ್ನುವ ಆರೋಪಗಳಿವೆ. ಮಾಫಿಯಾದಿಂದ ರಕ್ಷಣೆ ಕೇಳಿದ ವ್ಯಕ್ತಿಗಳಿಂದಲೇ ಕೆಲವು ಅಧಿಕಾರಿಗಳು ಹಣ ವಸೂಲಿ ಕೂಡ ಮಾಡುತ್ತಾರೆ ಎನ್ನುವ ಆರೋಪವಿದೆ. ರಕ್ಷಕರೇ ಭಕ್ಷಕರಾದರೆ ಹೇಗೆ?' ಎಂದು ಕೇಳಿದೆ.

'ಒಂದು ಗ್ಯಾಂಗಿನ ಬಗ್ಗೆ ಮಾಹಿತಿ ಬೇಕು ಅಂತಾದರೆ ವಿರೋಧಿ ಗ್ಯಾಂಗಿನ ಜೊತೆ ಸಂಪರ್ಕ ಇಟ್ಟುಕೊಳ್ಳಬೇಕಾಗುತ್ತದೆ. ಮಾಫಿಯಾದಿಂದ ಬೆದರಿಕೆಗೆ ಒಳಗಾಗುವ ಹೆಚ್ಚಿನ ಜನ ಮಹಾ ಸುಬಗರೇನೂ ಆಗಿರುವುದಿಲ್ಲ. ಹೆಚ್ಚಿನವರು ದೋ ನಂಬರ್ ದಂಧೆಯ ಜನರೇ. ಕಪ್ಪುಹಣದ ದೊರೆಗಳೇ. ಅಂತಹ ಜನರಿಗೆ ಮಾಫಿಯಾ ಕೂಡ ಬೆದರಿಸಿ ಹಣ ವಸೂಲ್ ಮಾಡುತ್ತದೆ. ಮಾಫಿಯಾದಿಂದ ರಕ್ಷಣೆ ಕೊಡುವ ನೆಪದಲ್ಲಿ ಕೆಲವು ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳೂ ಕೂಡ ವಸೂಲಿ ಮಾಡುತ್ತಾರೆ. ಅದರಲ್ಲಿ ತಪ್ಪೇನಿದೆ?' ಎಂದು ಗುಲ್ಲು ಖಬರಿ ಸಮರ್ಥಿಸಿಕೊಳ್ಳಲು ನೋಡಿದ.

'ಎನ್ಕೌಂಟರ್ ಸ್ಪೆಷಲಿಸ್ಟ್ ಆಫೀಸರ್ ಒಬ್ಬರು ಎನ್ಕೌಂಟರಿನಲ್ಲಿ ಹತನಾದ ಪಾತಕಿಯ ಕುಟುಂಬಕ್ಕೆ ಹಣಕಾಸಿನ ಸಹಾಯ ಕೂಡ ಮಾಡಿದ ನಿದರ್ಶನವಿದೆ. ಗೊತ್ತೇ? ಪಾತಕಿಯೊಬ್ಬನು ಎನ್ಕೌಂಟರಿನಲ್ಲಿ ಮೃತನಾದ ನಂತರ ಅಧಿಕಾರಿಗೆ ತಿಳಿಯಿತು ಆತನ ಕುಟುಂಬ ಜೀವನ ಸಾಗಿಸಲು ತುಂಬಾ ಕಷ್ಟಪಡುತ್ತಿದೆ ಎಂದು. ಆಗ ಅವರು ಆ ಕುಟುಂಬಕ್ಕೆ ಹಣಕಾಸಿನ ಸಹಾಯ ಕೂಡ ಮಾಡಿದ್ದರು. ಅಂತಹ ಅಧಿಕಾರಿಗಳೂ ಇದ್ದಾರೆ,' ಎಂದು ಹೆಚ್ಚಿನ ಸಮರ್ಥನೆ ಕೊಡಲು ಪ್ರಯತ್ನಿಸಿದ ಗುಲ್ಲು ಖಬರಿ.

ಮತ್ತೊಂದು ಬಿಯರ್ ಮುಗಿಸಿದ ಗುಲ್ಲು ಖಬರಿ ಎದ್ದು ನಡೆದ. 

ಈ ಎಲ್ಲ ಸಂಕೀರ್ಣ ವಿಷಯಗಳ ಬಗ್ಗೆ ನನ್ನ ತಲೆಯ ತುಂಬಾ ವಿರೋಧಾತ್ಮಕ (contradictory) ಆಲೋಚನೆಗಳೇ ತುಂಬಿದ್ದವು. 

***

ಮುಂಬೈನ ಜಿತೇಂದ್ರ ದೀಕ್ಷಿತ್ ಹೊಸ ತಲೆಮಾರಿನ ತನಿಖಾ ಪತ್ರಕರ್ತರಲ್ಲಿ ಒಬ್ಬರು. ಹೆಚ್ಚಾಗಿ ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡಿದ್ದರೂ ಮೂರ್ನಾಲ್ಕು ಒಳ್ಳೆಯ ಪುಸ್ತಕಗಳನ್ನು ಬರೆದಿದ್ದಾರೆ. ಈ ಲೇಖನದ ಮೇಲೆ ಬರೆದ ಭಾಗಕ್ಕೆ ಆಧಾರ ಅವರ ಪುಸ್ತಕ - Bombay 3


ಈ ಪುಸ್ತಕವನ್ನು ನೈಜ ಘಟನೆಗಳ ಮೇಲೆ ಆಧಾರಿತ ಕಾದಂಬರಿಯಂತೆ ರೂಪಿಸಿದ್ದಾರೆ ಜಿತೇಂದ್ರ ದೀಕ್ಷಿತ್. ತುಂಬಾ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಮುಂಬೈ ಅಪರಾಧ ಪ್ರಪಂಚದ ಬಗ್ಗೆ ಸ್ವಲ್ಪ ಅರಿವಿದ್ದವರೂ ಕೂಡ ಪಾತ್ರಗಳನ್ನು ಗುರುತಿಸಬಹುದು ಮತ್ತು ಹೊಸ ವಿಷಯಗಳನ್ನು ತಿಳಿದು ಅಚ್ಚರಿ ಪಡಬಹುದು. ಅಂದಿನ ಕಾಲದಲ್ಲಿ ಪ್ರಕಟವಾಗುತ್ತಿದ್ದ ಸುದ್ದಿಗಳ  ಹಿಂದಿನ ನಿಜವಾದ ಹಿಕ್ಮತ್ತನ್ನು ಅರಿತು, ಹೇಗೆ ಮಾಧ್ಯಮದ ಮುಖ್ಯ ವಾಹಿನಿಯಲ್ಲಿ ಕೇವಲ ಬೂಸಾ ಸುದ್ದಿ ಪ್ರಕಟವಾಗುತ್ತದೆ ಎಂದು ಕೂಡ ತಿಳಿಯಬಹುದು.

ಒಮ್ಮೆ ಜಿತೇಂದ್ರ ದೀಕ್ಷಿತ್ ತಮಗೆ ಆತ್ಮೀಯರಾಗಿದ್ದ ಮುಂಬೈ ಕ್ರೈಮ್ ಬ್ರಾಂಚಿನ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಯೊಬ್ಬರಿಗೆ, 'ಸರ್, ನನ್ನನ್ನೂ ಕೂಡ ಒಂದು ಎನ್ಕೌಂಟರಿಗೆ ಕರೆದುಕೊಂಡು ಹೋಗಿ. ನಾನು ಖುದ್ದಾಗಿ ನೋಡಬೇಕು ಒಂದು ಎನ್ಕೌಂಟರ್ ನಿಜವಾಗಿ ಹೇಗಾಗುತ್ತದೆ ಎಂದು. ಪ್ಲೀಸ್ ಸರ್,' ಎಂದು ಇನ್ನಿಲ್ಲದಂತೆ ಗಂಟುಬಿದ್ದಿದ್ದರಂತೆ. 

ಜಿತೇಂದ್ರರನ್ನು ಅವರ ಖಾಸಾ ತಮ್ಮನಂತೆ ಇಷ್ಟಪಡುತ್ತಿದ್ದ ಅಧಿಕಾರಿ, 'ಆಯಿತು. ನಿನ್ನನ್ನು ಒಂದು ಎನ್ಕೌಂಟರಿಗೆ ಕರೆದೊಯ್ಯುತ್ತೇನೆ. ಆದರೆ ಒಂದು ಕಂಡೀಶನ್!' ಎಂದಿದ್ದರು.

'ಏನು ಕಂಡೀಶನ್ ಸರ್??' ಎಂದು ಕುತೂಹಲದಿಂದ ಕೇಳಿದ್ದರು ದೀಕ್ಷಿತ್.

'ನೀನೂ ಕೂಡ ಪಾತಕಿಯ ಮೇಲೆ ಒಂದು ಗುಂಡು ಹಾರಿಸಬೇಕು. ಒಪ್ಪಿಗೆಯೇ??' ಎಂದು ಗಂಭೀರವಾಗಿಯೇ ಕೇಳಿದ್ದರು ಎನ್ಕೌಂಟರ್ ಸ್ಪೆಷಲಿಸ್ಟ್.

'ಸರ್ ನೀವು ಸೀರಿಯಸ್ ಆಗಿ ಈ ಮಾತು ಹೇಳುತ್ತಿದ್ದೀರಾ??' ಎಂದು ಕೇಳಿದರು ದೀಕ್ಷಿತ್.

'ಹೌದು ಮತ್ತೆ!? ಎನ್ಕೌಂಟರ್ ನೋಡಿದ ಮೇಲೆ ಭಾಗಿಯಾಗದಿದ್ದರೆ ಹೇಗೆ? ನೀನು ಎನ್ಕೌಂಟರ್ ಬಗ್ಗೆ ಇಲ್ಲದ ಸಲ್ಲದ ಸುದ್ದಿ ಮಾಡುವುದಿಲ್ಲ ಎಂಬುದಕ್ಕೆ ನಮಗೆ ಗ್ಯಾರಂಟಿ ಬೇಕಲ್ಲ. ಖಾತ್ರಿ ಬೇಕಲ್ಲ. ನೀನೂ ಒಂದು ಗುಂಡು ಹಾರಿಸಿಬಿಟ್ಟರೆ ನೀನೂ ಅದರಲ್ಲಿ ಪಾಲುದಾರನಾಗುತ್ತಿ. ಮುಂದಾಗುವ ಪರಿಣಾಮಮಗಳಿಗೆ ನೀನೂ ಬಾಧ್ಯಸ್ಥನಾಗುತ್ತಿ. ಏನಂತೀ??' ಎಂದು ಕೇಳಿದ್ದರು ಎನ್ಕೌಂಟರ್ ಸ್ಪೆಷಲಿಸ್ಟ್.

ಅದೆಲ್ಲ ತಮಗೆ ಸಾಧ್ಯವಿಲ್ಲವೆಂಬತೆ ತಲೆಯಾಡಿಸಿ ಬಂದಿದ್ದರು ದೀಕ್ಷಿತ್. ಮುಗುಳ್ನಕ್ಕು ಬೀಳ್ಕೊಟ್ಟಿದ್ದರು ಎನ್ಕೌಂಟರ್ ಸ್ಪೆಷಲಿಸ್ಟ್.

ಮುಂಬೈನ ಕ್ರೈಂ ಬ್ರಾಂಚ್ ಕಚೇರಿಯಿಂದ ದೀಕ್ಷಿತ್ ಹೊರಟಿದ್ದರಂತೆ. ಆಗ ಓಡಿ ಬಂದವನು ಆ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಯ ಖಾಸ್ ಮಾಹಿತಿದಾರ ಗುಲ್ಲು ಖಬರಿ. ಅನೇಕ ಎನ್ಕೌಂಟರುಗಳಿಗೆ ಖಡಕ್ ಮಾಹಿತಿ ಕೊಡುತ್ತಿದ್ದವನೇ ಅವನು. ಅವನೂ ಸಹ ಚಿಕ್ಕಮಟ್ಟದ ಪಾತಕಿಯೇ. ಆದರೂ ಪೊಲೀಸರಿಗೆ ಅವನು ಬೇಕೇಬೇಕು. ಸಣ್ಣ ಮೀನನ್ನು ಉಪಯೋಗಿಸಿಕೊಂಡು ದೊಡ್ಡ ಮೀನನ್ನು ಹಿಡಿದ ಹಾಗೆ. 

ಅಂತಹ ಗುಲ್ಲು ಖಬರಿ ಹೇಳಿದ, 'ಸಂಜೆ ಭೇಟಿಯಾಗಿ. ನಾನು ನಿಮಗೆ ಎನ್ಕೌಂಟರ್ ಬಗ್ಗೆ ಎಲ್ಲ ಮಾಹಿತಿ ಕೊಡುತ್ತೇನೆ.'

ಅದರಂತೆ ಸಂಜೆ ಗುಲ್ಲು ಖಬರಿಯನ್ನು ಭೇಟಿಯಾದರು ದೀಕ್ಷಿತ್. ಆಗ ಗುಲ್ಲು ಖಬರಿ ಬಿಚ್ಚಿಟ್ಟ ವಿವರಗಳು ಮೇಲೆ ಹೇಳಿದಂತೆ ಇದ್ದವು. ಎಲ್ಲ ಗೊತ್ತಿದ್ದ ವಿಷಯವೇ. ಗುಲ್ಲು ಖಬರಿ ಖಾತ್ರಿ ಪಡಿಸಿದ್ದ ಅಷ್ಟೇ. ಸ್ವಲ್ಪ ರಂಗೀನ್ ಆಗಿ ವರ್ಣಿಸಿದ್ದ.

ಹೆಚ್ಚಿನ ಎನ್ಕೌಂಟರುಗಳು ನಕಲಿ. ಆದರೇನು ಮಾಡುವುದು? ಭೂಗತಲೋಕದ ಉಪಟಳ ಮಿತಿಮೀರಿದಾಗ ಕಂಡುಕೊಂಡ ಉತ್ತರ ಎನ್ಕೌಂಟರ್. ಅನೇಕ ಸಲ ಎನ್ಕೌಂಟರ್ ಹೆಸರಿನಲ್ಲಿ ಊಹಿಸಲಾಗದ ದೌರ್ಜನ್ಯ ನಡೆದುಹೋಗಿದೆ. ಉದ್ದೇಶಪೂರ್ವಕವಾಗಿ ದೌರ್ಜನ್ಯ, ಶೋಷಣೆ, ವಸೂಲಿ ಎಲ್ಲ ನಡೆದಿದೆ. ಬೆಳಕು ಇದ್ದಲ್ಲಿ ಸ್ವಲ್ಪ ಮಟ್ಟಿನ ಶಾಖ ಕೂಡ ಇದ್ದೇ ಇರುತ್ತದಲ್ಲ. ಆ ಮಾದರಿ. 

ಈ ಪುಸ್ತಕದಲ್ಲಿ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಯ ಹೆಸರು ಬದಲಾಯಿಸಿದ್ದರೂ ಮುಂಬೈ ಭೂಗತಲೋಕದ ಬಗ್ಗೆ ಅರಿವಿದ್ದವರಿಗೆ ತಿಳಿಯುವ ವಿಷಯ ಆ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿ ದಿವಂಗತ ವಿಜಯ್ ಸಲಸ್ಕರ್ ಎಂದು. ಅವರು ಮುಂದೆ ೨೬/೧೧/೨೦೦೮ ರಂದು ನಡೆದ ಮುಂಬೈ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವ್ಯಕ್ತಿ. ಖತರ್ನಾಕ್ ಎನ್ಕೌಂಟರ್ ಸ್ಪೆಷಲಿಸ್ಟ್. ಹಾಗೆಯೇ ಉಳಿದ ಎನ್ಕೌಂಟರ್ ಸ್ಪೆಷಲಿಸ್ಟಗಳಂತೆ ಸಾಕಷ್ಟು ವಿವಾದಾತ್ಮಕ ಅಧಿಕಾರಿ ಕೂಡ. ಐವತ್ತಕ್ಕೂ ಹೆಚ್ಚು ಕುಖ್ಯಾತ ಪಾತಕಿಗಳನ್ನು ಎನ್ಕೌಂಟರುಗಳಲ್ಲಿ ಕೊಂದಿದ್ದ ಸಲಸ್ಕರ್ ತಾವು ಕೂಡ ಎನ್ಕೌಂಟರ್ ಒಂದರಲ್ಲೇ ಮೃತರಾಗಿದ್ದು ದುರಂತ ಮತ್ತು ವಿಪರ್ಯಾಸ. 

ಮುಂಬೈನಿಂದ ಬೆಂಗಳೂರಿಗೆ ಬಂದು ಮೂವರನ್ನು ಎನ್ಕೌಂಟರ್ ಮಾಡಿದ ಆಧಿಕಾರಿ ವಿಜಯ್ ಸಲಸ್ಕರ್. ೨೦೦೧ ರಲ್ಲಿ ಛೋಟಾ ರಾಜನ್ ಬಣಕ್ಕೆ ಸೇರಿದ್ದ ಮೂವರು ಪಾತಕಿಗಳಾದ ಜಗ್ಗು 'ಫಕೀರಾ' ಶೆಟ್ಟಿ, ಸುಶೀಲ್ ಗಾಂವಕರ್, ಚಿಕಣ್ಯಾ  ಎಂಬವರನ್ನು ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣದ ಹೊರಗೆ ಎನ್ಕೌಂಟರ್ ಮಾಡಿ ಢಮ್ ಅನಿಸಿದ್ದರು. 

೨೦೦೦ ಸೆಪ್ಟೆಂಬರಿನಲ್ಲಿ ಥೈಲಾಂಡಿನ ಬ್ಯಾಂಕಾಕಿನಲ್ಲಿ ಛೋಟಾ ರಾಜನ್ ಮೇಲೆ ದಾವೂದ್ ಗುಂಪು ನಡೆಸಿದ್ದ ಹತ್ಯಾ ಪ್ರಯತ್ನದ ನಂತರ ದಾವೂದ್ ಮತ್ತು ರಾಜನ್ ಗ್ಯಾಂಗಗಳ ಮಧ್ಯೆ ಗ್ಯಾಂಗ್ ವಾರ್ ವಿಕೋಪಕ್ಕೆ ಹೋಗಿತ್ತು. ಛೋಟಾ ರಾಜನ್ ಮಾರಣಾಂತಿಕವಾಗಿ ಗಾಯಗೊಂಡಿದ್ದ. ಅವನಿದ್ದ ರಹಸ್ಯ ತಾಣದ ಮಾಹಿತಿಯನ್ನು ಲೀಕ್ ಮಾಡಿದವರು ಯಾರು ಎಂದು ತನ್ನದೇ ರೀತಿಯಲ್ಲಿ ತನಿಖೆ ಮಾಡಿಸಿದ ರಾಜನ್ ಗದ್ದಾರ್ (ದ್ರೋಹಿಗಳು) ಎಂದು ಸಂಶಯ ಬಂದ ಎಲ್ಲರನ್ನೂ ಉಡಾಯಿಸಿಬಿಡುವಂತೆ ಆಜ್ಞೆ ಮಾಡಿಬಿಟ್ಟ. ನಂತರ ನಡೆದಿದ್ದು ದೊಡ್ಡ ಪ್ರಮಾಣದ ಮಾರಣಹೋಮ. 

ಮುಂಬೈನ ದೊಡ್ಡ ಹೋಟೆಲ್ ಮಾಲೀಕ ವಿನೋದ್ ಶೆಟ್ಟಿ ಮತ್ತು ಆತನ ಇಬ್ಬರು ಸ್ನೇಹಿತರನ್ನು ಕೊಲ್ಲಲಾಯಿತು. ಗುಂಡಿಟ್ಟು ಕೊಂದವ ಜಗ್ಗು ಶೆಟ್ಟಿ. ಅದೇ ಜಗ್ಗು ಶೆಟ್ಟಿ ಮತ್ತು ಜೊತೆಗೆ ಮತ್ತಿಬ್ಬರು ರಾಜನ್ ಬಂಟರು ಬೆಂಗಳೂರು ಮೂಲಕ ದೇಶಬಿಟ್ಟು ಪರಾರಿಯಾಗಲಿದ್ದಾರೆ ಎನ್ನುವ ಸುಳಿವು ಸಿಕ್ಕ ಇದೇ ಎನ್ಕೌಂಟರ್ ಸ್ಪೆಷಲಿಸ್ಟ್ ಸಲಸ್ಕರ್ ಬೆಂಗಳೂರಿಗೆ ಧಾವಿಸಿ ಬಂದಿದ್ದರು. ಬೆಂಗಳೂರು ಪೊಲೀಸರ ಸಹಕಾರದೊಂದಿಗೆ ವಿಮಾನ ನಿಲ್ದಾಣದ ಹೊರಗೇ ಮೂವರನ್ನು ಎನ್ಕೌಂಟರ್ ಮಾಡಿ ಎಸೆದಿದ್ದರು. ನಕಲಿ ಎನ್ಕೌಂಟರ್ ಇರಬಹುದೋ ಎನ್ನುವ ಅನುಮಾನ ಎಂದಿನಂತೆ ವ್ಯಕ್ತವಾಗಿತ್ತು. ಎನ್ಕೌಂಟರಿನಲ್ಲಿ ಸತ್ತ ಮೂವರ ಬಳಿಯೂ ಬ್ಯಾಂಕಾಕಿಗೆ ಹೋಗುವ ಬೋರ್ಡಿಂಗ್ ಪಾಸ್ ಇದ್ದವು. ವಿಮಾನದ ಬೋರ್ಡಿಂಗ್ ಪಾಸ್ ಪಡೆದವರು ವಿಮಾನ ನಿಲ್ದಾಣದಿಂದ ಹೊರಗೆ ಹೇಗೆ ಬರಲು ಸಾಧ್ಯ? ಅವರಲ್ಲಿ ಕೆಲವರು ಪಂಚೆ ಧರಿಸಿದ್ದರು. ಅಂತರರಾಷ್ಟ್ರೀಯ ಪ್ರಯಾಣಕ್ಕೆ ಹೊರಟವರು ಪಂಚೆ ಧರಿಸಿ ಹೋಗುವುದು ಕೂಡ ಸಾಮಾನ್ಯವಲ್ಲ. ಹಾಗಾಗಿ ಎಂದಿನಂತೆ ನಕಲಿ ಎನ್ಕೌಂಟರ್ ಎನ್ನುವ ಹುಯಿಲು ಎದ್ದಿತ್ತು. ಆದರೇನು ಮಾಡುವುದು?? ಭೂಗತ ಪಾತಕಿಗಳ ಸಾವಿಗೆ ಅಳುವವರು ಯಾರು? ಅವರ ಮನೆಯವರು ಅತ್ತರೆ ಅದೇ ದೊಡ್ಡ ಮಾತು. 

ಬೆಂಗಳೂರಿನ ಈ ಎನ್ಕೌಂಟರ್ ಬಗ್ಗೆ, ತುಂಬಾ ವರ್ಷಗಳ ನಂತರ, ವರಿಷ್ಠ ತನಿಖಾ ಪತ್ರಕರ್ತ ಬಲಜೀತ್ ಪರಮಾರ್ ಜೊತೆ ಮಾತಾಡುತ್ತಿದ್ದ ವಿನೋದ್ ಶೆಟ್ಟಿಯ ಸಹೋದರ ಧನಂಜಯ ಶೆಟ್ಟಿ ಹೇಳಿದ್ದರು: 'ಛೋಟಾ ರಾಜನ್ನನ ಬ್ಯಾಂಕಾಕಿನ ರಹಸ್ಯ ತಾಣ ಲೀಕ್ ಆಗುವಲ್ಲಿ ನನ್ನ ಸಹೋದರ ವಿನೋದನ ಪಾತ್ರ ಏನೂ ಇರಲಿಲ್ಲ. ಸಂಶಯ ಪಿಶಾಚಿ ಛೋಟಾ ರಾಜನ್ ವಿನಾಕಾರಣ ನನ್ನ ತಮ್ಮ ವಿನೋದನನ್ನು ತೆಗೆಸಿಬಿಟ್ಟ. ಎಷ್ಟೋ ತಿಂಗಳುಗಳ ಕಾಲ ಕೊಲೆ ಮಾಡಿದ್ದ ಜಗ್ಗು ಶೆಟ್ಟಿ ಮತ್ತಿತರರ ಪತ್ತೆ ಆಗಿರಲಿಲ್ಲ. ನಮ್ಮದೇ ರೀತಿಯಲ್ಲಿ ಹುಡುಕಿದೆವು. ಸಲಸ್ಕರ್ ಸಾಹೇಬ್ರಿಗೆ ಟಿಪ್ ಕೊಟ್ಟೆವು...' ಎಂದು ಹೇಳಿ ಮೌನವಾಗುತ್ತಾರೆ. 

ಹೀಗೆ "ಟಿಪ್" ಸಿಕ್ಕ ಸಲಸ್ಕರ್ ಸಾಹೇಬರು ಎಂದಿನಂತೆ ಎನ್ಕೌಂಟರ್ ಮಾಡಿದರು ಎಂದು ಬಾಯ್ಬಿಟ್ಟು ಹೇಳಬೇಕಾಗಿಲ್ಲ ತಾನೇ? ಇದೇ ಸರಣಿಯಲ್ಲಿ ನಡೆದ ಮುಂದಿನ ಎನ್ಕೌಂಟರಿನಲ್ಲಿ ಮಾಸ್ಟರ್ ಮೈಂಡ್ ಪಣಿಯೂರು ಸಾಧು ಶೆಟ್ಟಿ ಕೂಡ ಕೆಲವೇ ತಿಂಗಳ ನಂತರ ಸಲಸ್ಕರ್ ಅವರ ಗುಂಡುಗಳಿಗೆ ಬಲಿಯಾಗಿ ಹೋದ. ಸಾಧು ಶೆಟ್ಟಿಯ ಟಿಪ್ ಕೊಟ್ಟ ಎಂದು ದಿನೇಶ್ ಶೆಟ್ಟಿ ಎಂಬಾತ ರಾಜನ್ ಬಂಟರ ಗುಂಡಿಗೆ ಬಲಿಯಾದ. ಹೀಗೆ ಮುಗಿಯದ ಸಾವಿನ ಸರಣಿ ಇದು. ಮುಂದೆ ಐದಾರು ವರ್ಷಗಳ ಬಳಿಕ, ೨೦೦೮ ರಲ್ಲಿ, ಎನ್ಕೌಂಟರ್ ಸ್ಪೆಷಲಿಸ್ಟ್ ಸಲಸ್ಕರ್ ಅವರೇ ೨೬/೧೧ ರ ಮುಂಬೈ ಉಗ್ರರ ದಾಳಿಯಲ್ಲಿ 'ಸಂಶಯಾಸ್ಪದ' ರೀತಿಯಲ್ಲಿ ಮೃತರಾದರು. ಗಾಯಗೊಂಡು ಸಹಾಯಕ್ಕೆ ಮೊರೆಯಿಡುತ್ತಿದ್ದ ಸಲಸ್ಕರ್ ಮತ್ತು ಇತರ ಪೊಲೀಸ್ ಸಿಬ್ಬಂದಿಗೆ ತಕ್ಷಣ ಏಕೆ ಸಹಾಯ ದೊರಕಲಿಲ್ಲ ಎಂಬುದು ಅನೇಕರ ಪ್ರಶ್ನೆ. ಅದರ ಬಗ್ಗೆ ಅನೇಕ ತನಿಖಾ ವರದಿಗಳು, ಪುಸ್ತಕಗಳು ನಂತರ ಬಂದವು. ಉತ್ತರ ಮಾತ್ರ ದೊರೆಯಲಿಲ್ಲ.  

ಎನ್ಕೌಂಟರ್ ಸ್ಪೆಷಲಿಸ್ಟ್ ವಿಜಯ್ ಸಲಸ್ಕರ್ ಸಾವಿನ ಹೊತ್ತಿಗೆ ಮುಂಬೈನಲ್ಲಿ ಎನ್ಕೌಂಟರ್ ಯುಗ ಮುಗಿದಿತ್ತು. ಹಳೆಯ ಕಾಲದ ರಕ್ತಸಿಕ್ತ ಭೂಗತಲೋಕವನ್ನು ಎನ್ಕೌಂಟರ್ ಮೂಲಕ ಒಂದು ಮಟ್ಟಕ್ಕೆ ಸ್ವಚ್ಛ ಮಾಡಿಯಾಗಿತ್ತು. ಈಗ ಖಾಕಿ ಮತ್ತು ಖಾದಿಯೇ ನಾಜೂಕಿನಿಂದ ಭೂಗತಲೋಕವನ್ನು ಸಂಬಾಳಿಸುತ್ತಾರೆ. ಅವಶ್ಯಕತೆ ಬಿದ್ದಾಗ ಮಾತ್ರ ಪರದೇಶದಲ್ಲಿ ಕೂತು ಫೋನ್ ಮಾಡುತ್ತಿದ್ದ ಪಾತಕಿಗಳನ್ನು ಉಪಯೋಗಿಸಿಕೊಂಡು ವಸೂಲಿ ಮತ್ತಿತರ ದಂಧೆ ನಡೆಸಿದರು. ನಡೆಸುತ್ತಿದ್ದಾರೆ. 

ಮುಂಬೈನ ಎಲ್ಲ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳೂ ಸಹ ತರಹೇವಾರಿ ವಿವಾದಗಳಿಗೆ ಸಿಕ್ಕು ನೇಪಥ್ಯಕ್ಕೆ ಸರಿದುಹೋದರು. ಕೆಲವರು ನಿವೃತ್ತರಾದರು. ಅರುಣ್ ಬೋರ್ಡೆ ಎಂಬ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿ ಅಪ್ರಾಪ್ತೆಯ ಮೇಲಿನ ಬಲಾತ್ಕಾರ ಪ್ರಕರಣದಲ್ಲಿ ಆರೋಪಿಯಾಗಿ ನಾಪತ್ತೆಯಾಗಿದ್ದವರು ರೈಲ್ವೆ ಹಳಿಗಳ ಮೇಲೆ ಶವವಾಗಿ ಪತ್ತೆಯಾದರು. ವಿಪರ್ಯಾಸವೆಂದರೆ ಮುಂದೆ ಆ ಬಲಾತ್ಕಾರ ಪ್ರಕರಣದಲ್ಲಿ ಎಲ್ಲರೂ ಖುಲಾಸೆಯಾದರು. ಆತ್ಮಹತ್ಯೆ ಮಾಡಿಕೊಂಡ ಇವರು ಮಾತ್ರ ಜೀವ ಕಳೆದುಕೊಂಡರು. ಅವರ ಹೆಣ ರೈಲ್ವೆ ಹಳಿಗಳ ಮೇಲೆ ಪತ್ತೆಯಾದ ಬಗ್ಗೆಯೂ ಸಂಶಯಗಳಿದ್ದವು. ತುಂಬಾ ಚಾಣಾಕ್ಷ ಅಧಿಕಾರಿಯಾಗಿದ್ದ ಅರುಣ್ ಬೋರ್ಡೆ ನಕಲಿ ಎನ್ಕೌಂಟರ್ ಆದಾಗ ಅದನ್ನು ನೈಜ ಎನ್ಕೌಂಟರ್ ಎಂದು ತೋರಿಸುವಂತಹ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿ, ಟೈಟ್ ಕೇಸ್ ಮಾಡಿ, ಆರೋಪ ಪೊಲೀಸರ ಮೇಲೆ ಬರದಂತೆ ನೋಡಿಕೊಳ್ಳುವಲ್ಲಿ ತುಂಬಾ ನಿಷ್ಣಾತರಾಗಿದ್ದರಂತೆ. ಹಾಗಾಗಿ ಎನ್ಕೌಂಟರ್ ಮಾಡುವ ತಂಡಗಳಲ್ಲಿ ಅವರಿಗೆ ತುಂಬಾ ಬೇಡಿಕೆ ಇತ್ತು. ತಮ್ಮ ಪೊಲೀಸ್ ವೃತ್ತಿಯ ಉತ್ತುಂಗದಲ್ಲಿದ್ದಾಗ ಬಾಲಿವುಡ್ ನಟಿಯೊಬ್ಬಳನ್ನು ಆಹುತಿ ತೆಗೆದುಕೊಂಡಿದ್ದರು ಎಂಬುದರ ಬಗ್ಗೆ ಕೂಡ ಗುಸುಗುಸು ಇತ್ತು. ಆ ನಟಿ ದುಬೈನಲ್ಲಿ ನೆಲೆಸಿದ್ದ ಭೂಗತ ಪಾತಕಿಯೊಂದಿಗೆ ಸಂಬಂಧ ಹೊಂದಿದ್ದಳಂತೆ. ಆಕೆಯ ಫೋನ್ ಟ್ಯಾಪ್ ಮಾಡಿ, ಪಾತಕಿಯೊಂದಿಗಿನ ಸಂಭಾಷಣೆ ರೆಕಾರ್ಡ್ ಮಾಡಿಟ್ಟುಕೊಂಡು, ಆಕೆಯನ್ನು ಬ್ಲಾಕ್ಮೇಲ್ ಮಾಡಿ, ಅವಳನ್ನುಅನುಭವಿಸಿ ಚಪ್ಪರಿಸಿದ್ದರು ಎನ್ನುವ ಆರೋಪ ಅವರು ಆತ್ಮಹತ್ಯೆ ಮಾಡಿಕೊಂಡ ಮೇಲೆ ಬಂದಿದ್ದು ವಿಪರ್ಯಾಸ. 

ಮತ್ತೊಬ್ಬ ಎನ್ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ಎರಡು ಬಾರಿ ಇಲಾಖೆಯಿಂದ ವಜಾಗೊಂಡರೂ ಎರಡೂ ಬಾರಿ ಆಡಳಿತ ಟ್ರಿಬ್ಯೂನಲ್ ಹೋಗಿ ನೌಕರಿ ವಾಪಸ್ ಪಡೆದುಕೊಂಡು ಬಂದಿದ್ದರು. ಲಖನ್ ಭೈಯ್ಯಾ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿದ್ದರು. ನಾಲ್ಕಾರು ವರ್ಷ ಜೇಲಿನಲ್ಲಿದ್ದು ಬಂದರು. ಕೆಳಗಿನ ನ್ಯಾಯಾಲಯದಲ್ಲಿ ಖುಲಾಸೆಗೊಂಡರು. ತುಂಬಾ ಆಶ್ಚರ್ಯವೆಂಬಂತೆ ಕೆಳಗಿನ ನ್ಯಾಯಾಲಯದಲ್ಲಿ ಖುಲಾಸೆಗೊಂಡ ಆರೋಪಿ ಇವರೊಬ್ಬರೇ ಆಗಿದ್ದರು. ಉಳಿದ ಎಲ್ಲ ಪೊಲೀಸ್ ಸಿಬ್ಬಂದಿ ಶಿಕ್ಷೆಗೆ ಗುರಿಯಾಗಿದ್ದರು. ಮೊನ್ನೆ ಮುಕೇಶ್ ಅಂಬಾನಿ ಮನೆಯೆದುರು ಸ್ಪೋಟಕ ತುಂಬಿದ ವಾಹನ ನಿಲ್ಲಿಸಿ ನಕಲಿ ಬೆದರಿಕೆ ಹಾಕಿದ ಪ್ರಕರಣ ದೊಡ್ಡ ಸುದ್ದಿ ಮಾಡಿತ್ತಲ್ಲ. ಅದರಲ್ಲಿ ಆರೋಪಿ ಈಗ. ಜಾಮೀನ್ ಮೇಲೆ ಹೊರಗಿದ್ದರು.

ಲಖನ್ ಭೈಯ್ಯಾ ನಕಲಿ ಎನ್ಕೌಂಟರ್ ಪ್ರಕರಣ ಹೈಕೋರ್ಟಿಗೆ ಹೋಗಿತ್ತು. ಅಲ್ಲಿ ಈಗ ಪ್ರದೀಪ್ ಶರ್ಮಾಗೂ ಶಿಕ್ಷೆಯಾಗಿದೆ. ಸುಪ್ರೀಂ ಕೋರ್ಟ್ ಜಾಮೀನು ಕೊಟ್ಟಿದೆ. ಮುಂದೆ ನೋಡಬೇಕು ನೂರಕ್ಕೂ ಹೆಚ್ಚು ಎನ್ಕೌಂಟರ್ ಮಾಡಿದ ಪ್ರದೀಪ್ ಶರ್ಮಾ ಭವಿಷ್ಯ ಏನಾಗಲಿದೆ ಎಂದು. 

ಬೆಳಗಾವಿಯಲ್ಲಿ ರಹಸ್ಯವಾಗಿ ನೆಲೆಸಿದ್ದ ಮುಂಬೈ (ಅದರಲ್ಲೂ ಠಾಣೆ ಪ್ರದೇಶದ) ಭೂಗತಲೋಕದ ಕುಖ್ಯಾತ ಪಾತಕಿ ಸುರೇಶ್ ಮಾಂಚೇಕರನನ್ನು ಎತ್ತಾಕಿಕೊಂಡು ಹೋಗಿ ಕೊಲ್ಲಾಪುರ ಸಮೀಪ ಎನ್ಕೌಂಟರ್ ಮಾಡಿದ್ದ ಎನ್ಕೌಂಟರ್ ಸ್ಪೆಷಲಿಸ್ಟ್ ರವೀಂದ್ರ ಆಂಗ್ರೆ ಮುಂದೆ ತಾವೇ ವಸೂಲಿಗೆ ಇಳಿದರು ಎನ್ನುವ ಆರೋಪಕ್ಕೆ ಗುರಿಯಾಗಿ ಅಮಾನತ್ತಾಗಿದ್ದರು. ನಂತರ ನಿವೃತ್ತರಾಗಿದ್ದಾರೆ. 

ಹೆಚ್ಚಿನ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳು ತುಂಬಾ ಪ್ರಚಾರಪ್ರಿಯರಾಗಿದ್ದರು. ಅದಕ್ಕೆ ಆರೋಪವೆಂಬತೆ ತಣ್ಣಗೆ ಮುಂಬೈ ಭೂಗತಲೋಕವನ್ನು ಅವರದ್ದೇ ರೀತಿಯಲ್ಲಿ ಸ್ವಚ್ಛ ಮಾಡಿದವರು ಮುಂಬೈನ ಪ್ರಫುಲ್ ಭೋಸ್ಲೆ. ಅವರೂ ನೂರಕ್ಕೂ ಹೆಚ್ಚು ಜನರನ್ನು ಎನ್ಕೌಂಟರುಗಳಲ್ಲಿ 'ಮೇಲೆ' ಕಳಿಸಿದ್ದಾರೆ. ಅವರೂ ಸಹ ಖ್ವಾಜಾ ಯೂನುಸ್ ಎಂಬ ಶಂಕಿತ ಉಗ್ರ ಪೊಲೀಸ್ ಕಸ್ಟಿಡಿಯಲ್ಲಿದ್ದಾಗ ಆದ ಸಾವಿನ ಪ್ರಕರಣದ ಆರೋಪಿ. ಇಪ್ಪತ್ತು ವರ್ಷಗಳ ನಂತರವೂ ಆ ಕೇಸ್ ನಡೆಯುತ್ತಿದೆ. ಪ್ರಫುಲ್ ಭೋಸ್ಲೆ ನಿವೃತ್ತರಾಗಿದ್ದಾರೆ. ಮಾಧ್ಯಮಗಳಿಂದ ಬಹು ದೂರ ಅವರು, ಎಂದಿನಂತೆ.

ಖ್ವಾಜಾ ಯೂನುಸ್ ಲಾಕಪ್ ಸಾವಿನ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮತ್ತೊಬ್ಬ ಎನ್ಕೌಂಟರ್ ಸ್ಪೆಷಲಿಸ್ಟ್ ಸಚಿನ್ ವಜೆ ಎಷ್ಟೋ ವರ್ಷಗಳ ಕಾಲ ಪೊಲೀಸ್ ಇಲಾಖೆಯಿಂದ ಅಮಾನತ್ತಾಗಿ ಹೊರಗೇ ಉಳಿದಿದ್ದರು. ಇತ್ತೀಚೆಗೆ ಮರಳಿ ಬಂದವರೇ ದೊಡ್ಡ ಭಾನಗಡಿ ಮಾಡಿಕೊಂಡರು. ಅದು ಯಾವುದೋ ದೊಡ್ಡ ಮಟ್ಟದ ಸಂಚಿನ ಭಾಗವಾಗಿ ಖ್ಯಾತ ಉದ್ಯಮಿ ಮುಕೇಶ್  ಅಂಬಾನಿ ಮನೆಯ ಮುಂದೆ ಸ್ಪೋಟಕ ತುಂಬಿದ ವಾಹನ ಇಟ್ಟು ಬಂದರು. ಏನೋ ಮಾಡಲು ಹೋಗಿ ಏನೋ ಆಯಿತು. ಆ ವಾಹನದ ಮಾಲೀಕ ಮನ್ಸುಖ್ ಹರೇನನಿಗೆ ತಪ್ಪು ಒಪ್ಪಿಕೊಳ್ಳಲು ಹೇಳಿದರು. ಪೊಲೀಸರು ಕೇಳಿದ್ದಕ್ಕೆ ವಾಹನ ಕೊಟ್ಟಿದ್ದೇ ಆತನ ತಪ್ಪು. ಅದು ಬಿಟ್ಟರೆ ಈ ಪೊಲೀಸರು ಆ ಜೀಪಿನಲ್ಲಿ ಸ್ಪೋಟಕ ತುಂಬಿ ಅಂಬಾನಿ ಮನೆಯೆದುರೇಕೆ ಇಟ್ಟುಬಂದರು ಎಂಬುದರ ಬಗ್ಗೆ ಏನೂ ಗೊತ್ತಿರಲಿಲ್ಲ ಆ ನಿಷ್ಪಾಪಿ ಬಡ ಮನುಷ್ಯನಿಗೆ. ಮಾಡದ ತಪ್ಪು ನಾನೇಕೆ ಒಪ್ಪಿಕೊಳ್ಳಲಿ ಎಂದು ಆತ ರೊಳ್ಳೆ ತೆಗೆದರೆ ಆತನನ್ನು ಶಾಶ್ವತವಾಗಿ ಸುಮ್ಮನಿರಿಸುವ ಸುಪಾರಿಯನ್ನು ತಮ್ಮ ಒಂದು ಕಾಲದ ಗುರು, ನಿವೃತ್ತರಾಗಿ ರಾಜಕೀಯ ಪ್ರವೇಶಿಸಿದ್ದ ಮಾಜಿ ಎನ್ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾಗೆ ಕೊಟ್ಟುಬಿಟ್ಟರು ಇನ್ಸ್ಪೆಕ್ಟರ್ ವಜೆ. ಪ್ರದೀಪ್ ಶರ್ಮಾ ಸುಪಾರಿಯನ್ನು ತಮ್ಮ ಪರಿಚಯದ ಹಂತಕರಿಗೆ ಕೊಟ್ಟರು. ಹಂತಕರಲ್ಲಿ ಪೆರೋಲ್ ಮೇಲೆ ಹೊರಗಿದ್ದ ಮಾಜಿ ಪೊಲೀಸ್ ಕಾನ್ಸ್ಟೇಬಲ್ ವಿನಾಯಕ ಶಿಂದೆ ಕೂಡ ಇದ್ದ. ಈ ಪುಣ್ಯಾತ್ಮ ಲಖನ್ ಭೈಯ್ಯಾ ನಕಲಿ ಎನ್ಕೌಂಟರ್ ಕೇಸಿನಲ್ಲಿ ಶಿಕ್ಷೆಗೆ ಒಳಗಾದವ. ಪೆರೋಲ್ ಮೇಲೆ ಹೊರಗೆ ಬಂದವ ಈ ಭಾನಗಡಿ ಮಾಡಿ ಮತ್ತೊಂದಿಷ್ಟು ಕೇಸ್ ತಲೆ ಮೇಲೆ ಎಳೆದುಕೊಂಡು ಮತ್ತೆ ಒಳಗೆ ಹೋಗಿದ್ದಾನೆ. ಟಿಪಿಕಲ್ ಭಕ್ಷಕನಾಗಿ ಪರಿವರ್ತನೆಯಾಗಿದ್ದ ಆರಕ್ಷಕ.

ಒಟ್ಟಿನಲ್ಲಿ ಮನ್ಸುಖ್ ಹಿರೇನನನ್ನು ಕತ್ತು ಹಿಸುಕಿ ಕೊಂದು ಸಮುದ್ರದಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡು ಸತ್ತ ಎಂದು ಸಾಧಿಸಲು ಹೊರಟಿದ್ದರು. ಆದರೆ ಉಬ್ಬರ ಇಳಿದು ಅವನ ಹೆಣ ಬೇಗನೆ ದಡಕ್ಕೆ ಬಂದು ಪತ್ತೆಯಾಗಿಬಿಟ್ಟಿತು. ಅಷ್ಟೊತ್ತಿಗೆ ಸ್ಥಳೀಯ ಉಗ್ರ ನಿಗ್ರಹ ಪೊಲೀಸ್ ತಂಡ  ಇವರ ಭಾಂಡಾ ಎಲ್ಲ ಬಿಚ್ಚಿತ್ತು. ಮುಂದೆ ತನಿಖೆಗೆ ಇಳಿದ NIA ಸಚಿನ್ ವಜೆ, ಪ್ರದೀಪ್ ಶರ್ಮಾರನ್ನು ಆರೋಪದ ಮೇಲೆ ಒಳಗೆ ಕಳಿಸಿದೆ. 

ಉಡುಪಿ ಮೂಲದ ದಯಾ ನಾಯಕ್ ನೇಪಥ್ಯಕ್ಕೆ ಸೇರಿಹೋದ ಮತ್ತೊಬ್ಬ ಎನ್ಕೌಂಟರ್ ಸ್ಪೆಷಲಿಸ್ಟ್. ಒಂದು ಕಾಲದಲ್ಲಿ ಎನ್ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾರ ನೀಲಿಗಣ್ಣಿನ ಹುಡುಗ ಅವರು. ೨೦೦೫ ರ ಸಮಯದಲ್ಲಿ ಅಕ್ರಮ ಆಸ್ತಿ ಗಳಿಕೆ ಕೇಸಿನಲ್ಲಿ ಸಿಕ್ಕಿಕೊಂಡು ಅಮಾನತ್ತಾಗಿ, ಜೇಲಿಗೆ ಹೋಗಿ, ನಂತರ ನಿರ್ದೋಷಿ ಎಂದು ಹೊರಗೆ ಬಂದಿದ್ದಾರೆ. ಮುಂಬೈನ ಉಗ್ರ ನಿಗ್ರಹ ದಳದ ಹಿರಿಯ ಅಧಿಕಾರಿಯಾಗಿದ್ದಾರೆ. ಎಲ್ಲ ಎನ್ಕೌಂಟರ್ ಸ್ಪೆಷಲಿಸ್ಟಗಳ ಹಾಗೆ ಅವರ ಬಂದೂಕು ಸಹ ತಣ್ಣಗಾಗಿದೆ.

ಮುಕೇಶ್ ಅಂಬಾನಿ ಮನೆ ಮುಂದೆ ಬಾಂಬಿಟ್ಟ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಚುರುಕಾಗಿ ಕೆಲಸ ಮಾಡಿ ತಮ್ಮ ಒಂದು ಕಾಲದ ಗುರು ಪ್ರದೀಪ್ ಶರ್ಮಾ ಮತ್ತು ಶರ್ಮಾರ (ಹೊಸ) ನೀಲಿಗಣ್ಣಿನ ಹುಡುಗನಾಗಿ ಬದಲಾಗಿದ್ದ ಸಚಿನ್ ವಜೇ ಇಬ್ಬರನ್ನೂ ಬಂಧಿಸಿದ್ದರು. ಹೀಗೆ ಒಂದು ಅರ್ಥದಲ್ಲಿ ದಯಾ ನಾಯಕ್ ತಮ್ಮ ಗುರುವಿಗೇ ತಿರುಮಂತ್ರ ಹಾಕಿದರೋ ಎನ್ನಿಸುತ್ತದೆ. ಮುಂದೆ ಪ್ರಕರಣದ ತನಿಖೆಯನ್ನು NIA  ವಹಿಸಿಕೊಂಡಿದೆ. 

ಬೇರೆ ನಗರಗಳ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳ ಕಥೆಗಳೂ ವಿಚಿತ್ರವಾಗಿವೆ. ದೆಹಲಿ ಪೊಲೀಸ್ ಇಲಾಖೆಯ ಎನ್ಕೌಂಟರ್ ಸ್ಪೆಷಲಿಸ್ಟ್ ರಾಜಬೀರ್ ಸಿಂಗ್ ಮತ್ತು ಮೋಹನ್ ಚಂದ ಶರ್ಮಾ ಕೂಡ ಈ  ಲೋಕದಿಂದಲೇ ಕಳಚಿಕೊಂಡಿದ್ದಾರೆ. 

ಬೇಗ ಬಂದ ಯಶಸ್ಸು ಸೀದಾ ತಲೆಗೆ ಏರಿಬಿಡುತ್ತದೆ ಅನ್ನುತ್ತಾರಲ್ಲ ಹಾಗೆ ಯಶಸ್ಸು, ಮೆಚ್ಚುಗೆ, ಪುಕ್ಕಟೆ ಪ್ರಚಾರ ಎಲ್ಲ ರಾಜಬೀರ್ ಸಿಂಗರ ತಲೆಗೇರಿತ್ತು ಎಂದು ಕಾಣುತ್ತದೆ. ಖ್ಯಾತ ಎನ್ಕೌಂಟರ್ ಸ್ಪೆಷಲಿಸ್ಟ್ ಆಗಿದ್ದವರು ಮುಂದೆ ದೆಹಲಿಯ ಭೂಗತಲೋಕದಲ್ಲಿ ತಾವೇ ವ್ಯಾಪಕವಾಗಿ ಕೈಯಾಡಿಸತೊಡಗಿದರು. ದೊಡ್ಡ ಮಟ್ಟದ ವಸೂಲಿ, ಸಂಧಾನ ಎಲ್ಲ ಅವರ ಮೂಲಕವೇ ನಡೆಯತೊಡಗಿತ್ತು. ದೆಹಲಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತುಂಬಾ ಸಕ್ರಿಯರಾಗಿದ್ದರಂತೆ. ಅವರ ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ಬೇನಾಮಿಯಾಗಿ ನಿರ್ವಹಣೆ ಮಾಡುತ್ತಿದ್ದ ರಿಯಲ್ ಎಸ್ಟೇಟ್ ದಳ್ಳಾಳಿಯೇ ಅವರನ್ನು ಗುಂಡಿಟ್ಟು ಕೊಂದುಬಿಟ್ಟ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ದುಡ್ಡಿಗಾಗಿ ರಾಜಬೀರ್ ಸಿಂಗ್ ಹಾಕುತ್ತಿದ್ದ ಒತ್ತಡ ತಡೆಯಲಾಗದೇ ಕೊಂದುಬಿಟ್ಟೆ ಎಂದು ಆತ ಹೇಳಿದನಾದರೂ ಮೂಲ ಉದ್ದೇಶ ಏನಾಗಿತ್ತು?? ಕಾಣದ ಕೈಗಳ ಕೈವಾಡ ಏನಾದರೂ ಇತ್ತೇ?? ಎಂಬುದರ ಬಗ್ಗೆ ಸಂಶಯಗಳಂತೂ ಇವೆ. ಅವರ ಮಗ ಈಗ ಐಪಿಎಸ್ ಅಧಿಕಾರಿ! ವೆಲ್ ಡನ್!

ದೆಹಲಿಯ ಮತ್ತೊಬ್ಬ ಎನ್ಕೌಂಟರ್ ಸ್ಪೆಷಲಿಸ್ಟ್ ಮೋಹನ್ ಚಂದ್ ಶರ್ಮಾ ಇಸ್ಲಾಮಿಸ್ಟ್ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಹುತಾತ್ಮರಾದರು. ಅದು 'ಬಾಟ್ಲಾ ಹೌಸ್ ಎನ್ಕೌಂಟರ್' ಎಂದೇ (ಕು)ಖ್ಯಾತವಾಗಿದೆ. ತುಂಬಾ ಜನಪ್ರಿಯರಾಗಿದ್ದ ಮೋಹನ್ ಚಂದ್ ಶರ್ಮಾ ಅವರ ಬಗ್ಗೆ ವೃತ್ತಿಮತ್ಸರ ಹೊಂದಿದ್ದ ಸಹೋದ್ಯೋಗಿಗಳೇ, ಕಾರ್ಯಾಚರಣೆ ಸಮಯದಲ್ಲಿ, ಅವರನ್ನು ಗುಂಡಿಟ್ಟು ಕೊಂದರು ಎನ್ನುವ ಸುದ್ದಿ ಕೂಡ ಹರಡಿತ್ತು. ಕಾರ್ಯಾಚರಣೆಯ ಸಮಯದಲ್ಲಿ ಆದ ಪ್ರಮಾದದಿಂದ ಶರ್ಮಾ ಸಹೋದ್ಯೋಗಿಗಳ ಗುಂಡಿಗೆ ಬಲಿಯಾದರು. ಅದೊಂದು ಆಕಸ್ಮಿಕ. ಅದರ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲ ಎಂಬುದು ಒಂದು ವಿವರಣೆ. ಮನುಷ್ಯ ಹೇಗೂ ಸತ್ತುಹೋಗಿದ್ದಾರೆ. ಉಗ್ರರ ಗುಂಡಿಗೆ ಬಲಿಯಾದರು ಎಂದರೆ ಅವರಿಗೆ ಒಂದು ಮರ್ಯಾದೆ, ಗೌರವ ಎಂದು ಹಾಗೆ ಸುದ್ದಿ ಮಾಡಲಾಯಿತು ಎನ್ನುವ ಸುದ್ದಿ ಕೂಡ ಹರಿದಾಡಿತ್ತು. ಸತ್ಯ ಮಾತ್ರ ಬೇರೆಲ್ಲೋ ಇರಬೇಕು.

ಈಗ ಎನ್ಕೌಂಟರಗಳ ಸಂಖ್ಯೆ ಕಮ್ಮಿಯಾಗಿದೆ. ರಹಸ್ಯವನ್ನು ಕಾಪಾಡಿಕೊಳ್ಳುವುದು ಕಷ್ಟ. ಯಾರು ಹೇಗೆ ಎಲ್ಲಿ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡುಬಿಡುತ್ತಾರೋ ಎನ್ನುವ ಆತಂಕ. ಪ್ರತಿ ಎನ್ಕೌಂಟರ್ ಆದಾಗಲೂ ನಕಲಿ ಎನ್ಕೌಂಟರ್ ಎಂದು ಆರೋಪ ಬರುತ್ತಿತ್ತು. ಆಧಾರರಹಿತ ಆರೋಪ ಎಂದು ತಳ್ಳಿಹಾಕುತ್ತಿದ್ದರು. ಈಗ ಹಾಗಲ್ಲ. ವಿಡಿಯೋ ಕ್ಲಿಪ್ಪಿಂಗ್ ಸಿಕ್ಕರೆ ಕಷ್ಟ. ಹಾಗಾಗಿ ಈಗ ಎನ್ಕೌಂಟರ್ ಮಾತು ಬಿಡಿ. ಠಾಣೆಯಲ್ಲಿ ಉಡಾಳರಿಗೆ ನಾಲ್ಕು ಬಾರಿಸಲೂ ಪೊಲೀಸರು ಹಿಂದೆಮುಂದೆ ನೋಡುವಂತಾಗಿದೆ. ರಾಯಚೂರಿನಲ್ಲಿ ಕುಡಿದು ಗದ್ದಲ ಮಾಡುತ್ತಿದ್ದ ನಾಲ್ಕು ಪೋಕರಿಗಳನ್ನು ಎತ್ತಾಕಿಕೊಂಡು ಬಂದ ಮಹಿಳಾ ಅಧಿಕಾರಿಯೊಬ್ಬರು ಅವರ ಕುಂಡೆ ಮೇಲೆ ನಾಲ್ಕು ಬಾರಿಸಿದ್ದು ಕೂಡ ವಿಡಿಯೋ ಆಗಿ ವೈರಲ್ ಆಗಬೇಕೇ?? ಬೆಂಗಳೂರಿನಲ್ಲಿ ಮಹಿಳೆಯೊಬ್ಬಳನ್ನು ಚುಡಾಯಿಸಿದ ಆರೋಪದ ಮೇಲೆ ಠಾಣೆಗೆ ಕರೆಸಲಾಗಿದ್ದ ವ್ಯಕ್ತಿಗೆ ನಾಲ್ಕು ಬಡಿದಿದ್ದು ಕೂಡ ವಿಡಿಯೋ ಆಗಿ ವೈರಲ್ ಆಗಿತ್ತು. ಹೀಗಾದಾಗ ಪೊಲೀಸರಿಗೆ ತಲೆನೋವು. ಹಾಗಾಗಿ ಅವರೂ ಹಿಂದೇಟು ಹಾಕುತ್ತಾರೆ. 

ಈಗೇನಿದ್ದರೂ "ಹಾಫ್ ಎನ್ಕೌಂಟರ್" ಯುಗ ಎಂದು ಕಾಣುತ್ತದೆ. ತುಂಬಾ ಗಂಭೀರ ಪ್ರಕರಣಗಳಲ್ಲಿ, ಜನಾಕ್ರೋಶ ವಿಪರೀತವಾದಾಗ, ಕಾಲಿಗೆ ಗುಂಡು ಹೊಡೆದು ಬಿಡುತ್ತಾರಪ್ಪ. ಅದೂ ಸರಿಯಾಗಿ ಮೊಣಕಾಲ ಚಿಪ್ಪಿಗೇ ಹೊಡೆಯುತ್ತಾರೆ. ಅದು ಹೇಗೋ!!?? ಸರಿಯಾಗಿ ಮೊಣಕಾಲ ಚಿಪ್ಪಿಗೆ ಹೊಡೆದರೆ ಅವನು ಜೀವಮಾನ ಕುಂಟನಾಗುತ್ತಾನೆ. ಅದೇ ಉದ್ದೇಶವೇನೋ ಗೊತ್ತಿಲ್ಲ. ದೂರದ ಲೆಬನಾನಿನಲ್ಲಿ ಕೆಲವು ಪ್ಯಾಲೆಸ್ಟೈನ್ ಉಗ್ರರು ದಂಧೆ ನಡೆಸುವ ಸೂಳೆಯರಿಗೆ ಆ ಶಿಕ್ಷೆ ಕೊಡುತ್ತಿದ್ದ ಬಗ್ಗೆ ಓದಿದ್ದಿದೆ. ಅದು ಈಗ ನಮ್ಮಲ್ಲಿ ಬಂದಂತಿದೆ.

೨೦೧೯ ನವೆಂಬರಿನಲ್ಲಿ ಹೈದರಾಬಾದ್ ಸಮೀಪ ನಾಲ್ವರ ಎನ್ಕೌಂಟರ್ ಆಗಿದ್ದೇ ಕೊನೆಯ ದೊಡ್ಡ ಎನ್ಕೌಂಟರ್ ಇರಬಹುದು. ಪಶುವೈದ್ಯ ವೃತ್ತಿಯಲ್ಲಿದ್ದ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದ ಆರೋಪವಿತ್ತು ಆ ನಾಲ್ವರ ಮೇಲೆ. ನಿಮಗೆ ನೆನಪಿದ್ದರೆ ಆಗ ಜನಾಕ್ರೋಶ ಉತ್ತುಂಗಕ್ಕೆ ಹೋಗಿತ್ತು. ಜನಾಕ್ರೋಶವನ್ನು ನಿಯಂತ್ರಿಸಲೋ ಏನೋ ಗೊತ್ತಿಲ್ಲ. ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ದ ಆರೋಪಿಗಳನ್ನು ಪೊಲೀಸರು ಢಮ್ ಅನಿಸಿದ್ದರು. ಜನ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿ ಪೊಲೀಸರ ಮೇಲೆ ಹೂಮಳೆ ಕೂಡ ಸುರಿಸಿ ಕೈಮುಗಿದು ಕೃತಜ್ಞತೆ ಸಲ್ಲಿಸಿದ್ದರು. ನಕಲಿ ಎನ್ಕೌಂಟರ್ ಎಂದು ಆರೋಪ ಬಂತು. ಮುಂದೆ ನ್ಯಾಯಾಂಗ ತನಿಖೆ ಎಲ್ಲ ನಡೆಯಿತು. 

೨೦೦೭ ರಲ್ಲಿ ಬೆಳಗಾವಿಯಲ್ಲಿ ನಡೆದ ಕುಖ್ಯಾತ ಪಾತಕಿ ಪ್ರವೀಣ್ ಶಿಂತ್ರೆ ಎನ್ಕೌಂಟರ್ ಕೂಡ ಇದೇ ಮಾದರಿಗೆ ಸೇರಿದ್ದು. ಗೃಹಿಣಿಯೊಬ್ಬಳ ಹತ್ಯೆ ಮಾಡಲು ಸುಪಾರಿಯನ್ನು ಆಕೆಯ ಪತಿಯೇ ಖುದ್ದು ಪ್ರವೀಣ್ ಶಿಂತ್ರೆಗೆ ಕೊಟ್ಟಿದ್ದ ಎಂಬುದು ಆರೋಪ. ಶಾಪಿಂಗಿಗೆ ಎಂದು ಕರೆದುಕೊಂಡು ಬಂದು, ಇವರ ಮನೆಯಲ್ಲಿ ಸ್ವಲ್ಪ ಹೊತ್ತು ಕೂತಿರು ಎಂದು ಹಂತಕರ ಕೈಗೆ ಆ ಪಾಪದ ಮಹಿಳೆಯನ್ನು ಒಪ್ಪಿಸಿಹೋಗಿದ್ದ. ಪಶುಗಳಿಂತಲೂ ವಿಕೃತ ಕಾಮಿಯಾಗಿದ್ದ ಶಿಂತ್ರೆ ತನ್ನ ಸಂಗಡಿಗರ ಜೊತೆ ಸೇರಿ ಆ ಪಾಪದ ಮಹಿಳೆಯನ್ನು ಪಶುವಿನಂತೆ ಹಿಂಸಿಸಿ, ಸರಣಿ ಬಲಾತ್ಕಾರಕ್ಕೆ ಗುರಿಪಡಿಸಿ, ಭೀಕರವಾಗಿ ಕೊಂದು, ಸಮೀಪದ ಘಾಟಿಗೆ ಎಸೆದುಬಂದ. ಅಂತಹ ಅದೆಷ್ಟೋ ಅತ್ಯಾಚಾರ ಮತ್ತು ಕೊಲೆಗಳನ್ನು ಮಾಡಿ ದಕ್ಕಿಸಿಕೊಂಡು ಆರಾಮಾಗಿದ್ದ ಬೆಳಗಾವಿಯ ಲೋಕಲ್ ಡಾನ್ ಪ್ರವೀಣ್ ಶಿಂತ್ರೆ. ಆದರೆ ಈ ಪ್ರಕರಣದಲ್ಲಿ ಮಾತ್ರ ಜನಾಕ್ರೋಶ ಯಾವ ಮಟ್ಟಿಗೆ ಹೋಗಿತ್ತು ಎಂದರೆ ಬೆಳಗಾವಿ ಪೊಲೀಸರಿಗೆ ಆಕ್ರೋಶಗೊಂಡಿದ್ದ ಮಹಿಳೆಯರನ್ನು ಸಂಬಾಳಿಸುವುದೇ ಕಷ್ಟವಾಗಿತ್ತು. Something drastic had to be done to calm the public.

ಬೆಳಗಾವಿಯಲ್ಲಿ ಹೀಟ್ ಹೆಚ್ಚಾದ ಕೂಡಲೇ ಶಿಂತ್ರೆ ಬೆಳಗಾವಿ ಬಿಟ್ಟು ಓಡಿದ. ದೂರದ ಬೆಂಗಳೂರಿನಲ್ಲಿ ಸಿನೆಮಾ ನಟಿಯೊಬ್ಬಳ ತೆಕ್ಕೆಯೊಳಗೆ ಬಿದ್ದು ಹೊರಳಾಡುತ್ತಿದ್ದ ಪ್ರವೀಣ್ ಶಿಂತ್ರೆಯನ್ನು, ಅವನ ಬೆಳಗಾವಿಯ ಗೆಳತಿಯರನ್ನು ಬರೋಬ್ಬರಿ ರುಬ್ಬಿ, ಅವರ ಮೂಲಕವೇ ಮಾತಾಡಿಸಿ, ಮೊಬೈಲ್ ಫೋನ್ ಟ್ರ್ಯಾಕ್ ಮಾಡುತ್ತಿದ್ದ ಪೊಲೀಸರು ಕೊನೆಗೆ ಅವನನ್ನು ಉಡುಪಿಯಿಂದ ಎತ್ತಾಕಿಕೊಂಡು ಬಂದಿದ್ದರು. ಅವನ ಮನೆಗೆ ಮಹಜರಿಗೆ ಕರೆದೊಯ್ದಾಗ ಪೊಲೀಸರ ಮೇಲೆಯೇ ಪರವಾನಿಗೆ ಇಲ್ಲದ ಬಂದೂಕಿನಿಂದ ದಾಳಿ ಮಾಡಲು ಪ್ರಯತ್ನಿಸಿದ. ಸ್ವರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದರು. ಪ್ರವೀಣ್ ಶಿಂತ್ರೆ ಸತ್ತ. ಇದು ಅಧಿಕೃತ ಸುದ್ದಿ. 

ವ್ಯವಸ್ಥೆಗೆ ಬಹುದೊಡ್ಡ ತಲೆನೋವಾಗಿದ್ದ ಮತ್ತು ವಿಪರೀತ ಮಹಿಳಾ ಆಕ್ರೋಶಕ್ಕೆ ಕಾರಣನಾಗಿದ್ದ ಕುಖ್ಯಾತ ಪಾತಕಿ ಪ್ರವೀಣ್ ಶಿಂತ್ರೆಯನ್ನು ಪಕ್ಕಕ್ಕೆ ಸರಿಸಲೇಬೇಕಾಗಿತ್ತು. ನಾಜೂಕಾಗಿ ಸರಿಸಿದರು. ಅಷ್ಟೇ ವಿಷಯ ಎಂದರು ಒಳಗಿನ ಸುದ್ದಿ ಗೊತ್ತಿದ್ದ ಕುಂದಾನಗರಿಯ ಶಾಣ್ಯಾ ಮಂದಿ. ಉಳಿದ ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಶಿಕ್ಷೆಯಾಗಿತ್ತು. ಹೈಕೋರ್ಟಿನ ಧಾರವಾಡ ಪೀಠ ಮುಂದೆ ಎಲ್ಲರನ್ನೂ ನಿರ್ದೋಷಿ ಎಂದು ಬಿಡುಗಡೆ ಮಾಡಿತು. ಡಾನ್ ಶಿಂತ್ರೆ ಎನ್ಕೌಂಟರಿನಲ್ಲಿ ಪುಕ್ಸಟ್ಟೆ ಸತ್ತಿದ್ದೇ ಭಾಗ್ಯವೋ?? ಮೃತಳಾಗಿದ್ದ ಗೃಹಿಣಿಯ ತಾಯಿ ಮಾತ್ರ ವೈಯಕ್ತಿಕ ನೆಲೆಗಟ್ಟಿನಲ್ಲಿ ಆರೋಪಿಗಳ ವಿರುದ್ಧ ಕಾನೂನು ಹೋರಾಟ ಮಾಡುತ್ತಿದ್ದರು. ಪ್ರಕರಣ ಸುಪ್ರೀಂ ಕೋರ್ಟ್ ವರೆಗೆ ಹೋಗಿತ್ತು ಎಂದು ಓದಿದ ನೆನಪು. ಮುಂದೇನೂ ಆದ ಹಾಗೆ ಕಾಣುವುದಿಲ್ಲ. ಒಟ್ಟಿನಲ್ಲಿ ಶಿಂತ್ರೆಯ ಎರಡು ದಶಕಗಳಿಗೂ ಮೀರಿದ ಪಾಪದ ಕೊಡ ತುಂಬಿ ಬಂದಿತ್ತು ಎಂದಷ್ಟೇ ಹೇಳಬಹುದು. ಸತ್ತ. ಬೆಳಗಾವಿಗೆ ತಾತ್ಕಾಲಿಕ ನೆಮ್ಮದಿಯಂತೂ ಸಿಕ್ಕಿತ್ತು.

ಕರ್ನಾಟಕ ಮಟ್ಟದಲ್ಲಿ ಎನ್ಕೌಂಟರ್ ಮಾಡುವಲ್ಲಿ ಬೆಳಗಾವಿ ಪೊಲೀಸರೇ ಮುಂದೆ ಎಂದು ಹೇಳಬಹುದೇನೋ. ಸಂಜಯ್ ನೇಸರಕರ್, ರಾಜು ಕಣಬರಕರ್ ಮುಂತಾದವರನ್ನು ಆ ಮೊದಲೇ ಢಮ್ ಎನಿಸಿ ರಿವಾಲ್ವರಿಗೆ ಆಗಾಗ ಕೆಲಸ ಕೊಟ್ಟಿದ್ದರು ಅಲ್ಲಿನ ಪೊಲೀಸರು.

ಉತ್ತರಪ್ರದೇಶದಲ್ಲಿ, ಬುಲ್ಡೋಜರ್ ಬಾಬಾರ ರಾಜ್ಯದಲ್ಲಿ ಮಾತ್ರ ಇತ್ತೀಚಿಗೆ ದೊಡ್ಡ ಪ್ರಮಾಣದಲ್ಲಿ ಎನ್ಕೌಂಟರುಗಳು ನಡೆದು ಅಪರಾಧಲೋಕ ಒಂದು ಮಟ್ಟಕ್ಕೆ ಸ್ವಚ್ಛವಾಗಿದೆ. ಸಂಪೂರ್ಣವಾಗಿ ಹಡಾಲೆದ್ದು ಹೋಗಿದ್ದ ಕಾನೂನು ಸುವ್ಯವಸ್ಥೆಯನ್ನು ಹಾದಿಗೆ ತರಲು ಯೋಗಿಜೀ ಅವರಿಗೆ ಬೇರೆ ದಾರಿಯಿರಲಿಲ್ಲ ಎಂದು ಕಾಣುತ್ತದೆ. 

ಒಟ್ಟಿನಲ್ಲಿಎಲ್ಲ ತಿಳಿದ ಮೇಲೆ ನಿಷ್ಪಾಪಿಗಳ ಎನ್ಕೌಂಟರ್ ಆಗದೇ ಇರಲಿ ಶಿವಾ ಎಂದು ಹರಾ ಹರಾ ಸುಪಾರಿ ಎನ್ಕೌಂಟರೇಶ್ವರಾ ಎಂದು ಕೈಮುಗಿಯಬೇಕಷ್ಟೆ. 

Tuesday, June 04, 2024

ಜಾನ್ ಬೆನೆ ರಾಮ್ಸೆ...ಪತ್ತೆಯಾಗದ ಒಂದು ರೋಚಕ ಕೊಲೆ ಪ್ರಕರಣ

ಜಾನ್ ಬೆನೆ ರಾಮ್ಸೆ ಕೊಲೆಯಾಗಿ ೨೭ ವರ್ಷವಾಯಿತು. ಇನ್ನೂ ಕೊಲೆಗಾರ ಪತ್ತೆಯಾಗಿಲ್ಲ. ಕೊಲೊರಾಡೊ ರಾಜ್ಯದ ತನ್ನ ಮನೆಯ ನೆಲಮಾಳಿಗೆಯಲ್ಲೇ (basement) ಆಗ ಆರು ವರ್ಷದ ಮಗುವಾಗಿದ್ದ ಜಾನ್ ಬೆನೆಯ ಶವ ಪತ್ತೆಯಾಗಿತ್ತು. ತುಂಬಾ ಸದ್ದು ಮಾಡಿದ, ಇಂದಿಗೂ ಜನರ ಕುತೂಹಲವನ್ನು ಹಿಡಿದಿಟ್ಟುಕೊಂಡಿರುವ ಕೊಲೆ ಪ್ರಕರಣ ಅದು. 

ಜಾನ್ ಬೆನೆ ಕೇವಲ ಆರು ವರ್ಷದ ಹೆಣ್ಣುಮಗು. ೧೯೯೬ ರ ಕ್ರಿಸ್ಮಸ್ ಮರುದಿನ ಆಕೆಯ ಮೃತದೇಹ ಆಕೆಯ ಮನೆಯ ನೆಲಮಾಳಿಗೆಯಲ್ಲಿ ಪತ್ತೆಯಾಗಿತ್ತು. ಆಕೆಯನ್ನು ಲೈಂಗಿಕ ದೌರ್ಜನ್ಯಕ್ಕೆ ಗುರಿಪಡಿಸಲಾಗಿತ್ತು. ಹೊಡೆಯಲಾಗಿತ್ತು. ಹಗ್ಗದಿಂದ ಕತ್ತು ಬಿಗಿದು ಕೊಲ್ಲಲಾಗಿತ್ತು. ಆಕೆ ಚಿಕ್ಕಮಕ್ಕಳ ಸೌಂದರ್ಯಸ್ಪರ್ಧೆಗಳಲ್ಲಿ ವಿಜೇತೆಯಾಗಿದ್ದಳು. ಅನೇಕ ತನಿಖೆಗಳು ನಡೆದರೂ (ಇವತ್ತಿಗೂ ನಡೆಯುತ್ತಿದ್ದರೂ), ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಆಕೆಯ ಹಂತಕ ಯಾರಿರಬಹುದು ಎಂಬುದರ ಬಗ್ಗೆ ಅನೇಕ ಊಹಾಪೋಹಗಳು ಇವೆ. ಹೊಸ ಹೊಸ ಸಂದೇಹಗಳು ಮತ್ತು ಶಂಕಿತರು ಚಾಲ್ತಿಗೆ ಬರುತ್ತಿರುತ್ತವೆ. ತಂದೆ, ತಾಯಿ ಮತ್ತು ಸಹೋದರ ಕೂಡ ಈ ಶಂಕೆಗಳಿಂದ ಪಾರಾಗಿಲ್ಲ. 

ಜಾನ್ ಬೆನೆ ಕೊಲೆಯಾದ ರಾತ್ರಿ ಮನೆಯಲ್ಲಿ ಇದ್ದವರು ಆಕೆಯ ತಂದೆ ಜಾನ್, ತಾಯಿ ಪ್ಯಾಟ್ರಿಸಿಯಾ ಮತ್ತು ಒಂಬತ್ತು ವರ್ಷದ ಆಕೆಯ ಹಿರಿಯ ಸಹೋದರ ಬರ್ಕ್ ಮಾತ್ರ. 

೧೯೯೬, ಡಿಸೆಂಬರ್ ೨೬ ರ ಬೆಳಿಗ್ಗೆ ತಾಯಿ ಪ್ಯಾಟ್ರಿಸಿಯಾಗೆ ಗೀಚಿದ್ದ ಒಂದು ಪತ್ರ ಸಿಕ್ಕಿತ್ತು. ಅವರ ಮನೆಯ ಟೇಬಲ್ ಮೇಲಿದ್ದ ನೋಟ್ ಪ್ಯಾಡಿನ ಹಾಳೆಯೊಂದರ ಮೇಲೆ, ಅಲ್ಲೇ ಇದ್ದ ಕಪ್ಪು ಬಣ್ಣದ ದಪ್ಪ ಅಕ್ಷರ ಬರೆಯುವ ಪೆನ್ನಿನಲ್ಲಿ(black marker) ಗೀಚಿದ ಒಂದು ಹಣದ ಬೇಡಿಕೆಯ ಪತ್ರ ಅದಾಗಿತ್ತು. '೧೧೮, ೦೦೦ ಡಾಲರ್ ಹಣ ಕೊಡಿ. ಹಣ ದೊರೆತ ಕೂಡಲೇ ನಿಮ್ಮ ಮಗಳನ್ನು ಬಿಡುಗಡೆ ಮಾಡಲಾಗುತ್ತದೆ!' 

ಕೆಲವೇ ದಿನಗಳ ಹಿಂದೆ ತಂದೆ ಜಾನನಿಗೆ ಕೆಲಸದಲ್ಲಿ ವಾರ್ಷಿಕ ಬೋನಸ್ ದೊರೆತಿತ್ತು. ಆ ಬೋನಸ್ಸಿನ ಮೊತ್ತ ಕೂಡ ಕರಾರುವಕ್ಕಾಗಿ ೧೧೮,೦೦೦ ಡಾಲರೇ ಆಗಿತ್ತು! ಇತ್ತಕಡೆ ತಾಯಿಗೆ ಈ ಬೇಡಿಕೆ ಪತ್ರ ದೊರೆಯುತ್ತಿದ್ದರೆ ಅತ್ತಕಡೆ ಮಗುವೆಲ್ಲಿ ಎಂದು ಮನೆಯಲ್ಲಿ ಹುಡುಕಾಡುತ್ತಿದ್ದ ತಂದೆಗೆ ಅವಳ ಶವ ನೆಲಮಾಳಿಗೆಯಲ್ಲಿ ದೊರೆತಿತ್ತು. 

ತನಿಖೆ ಆರಂಭವಾದ ಕೂಡಲೇ ಪಾಲಕರು ಕ್ರಿಮಿನಲ್ ವಕೀಲರನ್ನು ನೇಮಕ ಮಾಡಿಕೊಂಡರು. ಪಾಲಕರು ತಾವಾಗಿಯೇ ಪೊಲೀಸರ ತನಿಖೆಗೆ ಅಷ್ಟೇನೂ ಸಹಕರಿಸಲಿಲ್ಲ. ಅದು ಅವರಿಗಿರುವ ಹಕ್ಕು. ಶಂಕಿತರು ಎಂದು ಅಧಿಕೃತವಾಗಿ  ಹೆಸರಿಸದೇ ಯಾರನ್ನೂ ತನಿಖೆಗೆ ಸಹಕರಿಸಿ, ನಿಮ್ಮ ಅಧಿಕೃತ ಹೇಳಿಕೆ ದಾಖಲಿಸಿ ಎಂದು ಬಲವಂತ ಮಾಡುವಂತಿಲ್ಲ. ಆದರೆ ತಮ್ಮ ಮಗುವಿನ ಕೊಲೆಗಾರನ(ರ)ನ್ನು ಪತ್ತೆ ಮಾಡಲು ಪಾಲಕರೇಕೆ ಸಹಕರಿಸಲಿಲ್ಲ ಎನ್ನುವ ಸಂಶಯ ಮಾತ್ರ ಮೂಡುತ್ತದೆ. ಪಾಲಕರ ಅಸಹಕಾರದ ಮಧ್ಯೆಯೂ ತನಿಖೆ ನಡೆದಿತ್ತು. 

೨೦೦೬ ರಲ್ಲಿ ತಾಯಿ ಪ್ಯಾಟ್ರಿಸಿಯಾ ಕ್ಯಾನ್ಸರ್ ರೋಗಕ್ಕೆ ಬಲಿಯಾಗಿ ಮೃತಳಾದಳು. ಅದಾದ ಎರಡು ವರ್ಷಗಳ ಬಳಿಕ, ೨೦೦೮ ರಲ್ಲಿ, ತನಿಖೆಯ ಉಸ್ತುವಾರಿ ವಹಿಸಿದ್ದ ಅಧಿಕಾರಿ, ಕುಟುಂಬಕ್ಕೆ ಪತ್ರ ಬರೆದು, ಡಿಎನ್ಎ ಪರೀಕ್ಷೆ ಮತ್ತು ಇತರೆ ಕಾರಣಗಳಿಂದ ಇಡೀ ಕುಟುಂಬಕ್ಕೆ ಕ್ಲೀನ್ ಚಿಟ್ ಕೊಡಲಾಗಿದೆ ಎಂದರು. ಆಶ್ಚರ್ಯವೆಂದರೆ, ಆ ಅಧಿಕಾರಿ ಬದಲಾದ ನಂತರ ತನಿಖೆಯ ಜವಾಬ್ದಾರಿ ವಹಿಸಿಕೊಂಡ ಹೊಸ ಅಧಿಕಾರಿ ಮಾತ್ರ ಕ್ಲೀನ್ ಚಿಟ್ ಕೊಟ್ಟಿದ್ದಕ್ಕೆ ಅತೃಪ್ತಿ ವ್ಯಕ್ತಪಡಿಸುತ್ತಾ, 'ಅವರಿಗೆ ಕ್ಲೀನ್ ಚಿಟ್ ಕೊಡಬಾರದಿತ್ತು. ಈ ಪ್ರಕರಣದ ತನಿಖೆಯ ಸದ್ಯದ ಸ್ಥಿತಿಗತಿ, ಲಭ್ಯವಾಗಿರುವ ಸಾಕ್ಷ್ಯಗಳು ಮತ್ತು ಪ್ರಕರಣದ ಸಂಕೀರ್ಣತೆ (complexity) ನೋಡಿದರೆ ಕ್ಲೀನ್ ಚಿಟ್ ಕೊಟ್ಟಿದ್ದು ಸರಿಯಾಗಿದೆ ಎಂದು ಅನ್ನಿಸುವುದಿಲ್ಲ,' ಎಂದುಬಿಟ್ಟರು. 

ಜಾನ್ ಬೆನೆಯ ಹಿರಿಯ ಸಹೋದರ ಬರ್ಕ್ ಅಧಿಕೃತವಾಗಿ ಶಂಕಿತ ಎಂದು ತನಿಖೆಯ ವ್ಯಾಪ್ತಿಯಲ್ಲಿ ಬಂದಿರಲಿಲ್ಲ. ಟೀವಿ ವಾಹಿನಿಯೊಂದು ಆತನೇ ಕೊಲೆಗಾರ ಎಂಬಂತೆ ಬಿಂಬಿಸಿತ್ತು. ಬ್ಯಾಟರಿಯಿಂದ ತಂಗಿಯ ತಲೆಗೆ ಹೊಡೆದ. ಆಕೆ ಸತ್ತಳು. ಮುಂದಾಗಿದ್ದೆಲ್ಲ ಸತ್ಯವನ್ನು ಮುಚ್ಚಿಡುವ ಕೆಲಸ ಅಷ್ಟೇ ಅಂದಿತ್ತು ಆ ಕಾರ್ಯಕ್ರಮ. ಜಾನ್ ಬೆನೆ ಕುಟುಂಬ ಆ ವಾಹಿನಿಯ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ ಎಂದಿತ್ತು. ಏನಾಯಿತೋ ಗೊತ್ತಿಲ್ಲ. 

ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪತ್ರವನ್ನು ಗಮನಿಸಿದರೆ ಹೊರಗಿನಿಂದ ಯಾರೋ ಒಳಗೆ ಬಂದು ಆಕೆಯನ್ನು ಕೊಲೆ ಮಾಡಿರಬಹುದು ಎಂದು ಸಹಜವಾಗಿ ಅನ್ನಿಸುತ್ತದೆ. ಆ ನಿಟ್ಟಿನಲ್ಲಿ ಅನೇಕ ಹೆಸರುಗಳು ಚರ್ಚೆಗೆ ಬಂದಿವೆ.

ಆ ಪೈಕಿ ಮೈಕಲ್ ಹೆಲ್ಗೋಟ್ ಎಂಬಾತ ಒಬ್ಬ. ಆತ ಧರಿಸುತ್ತಿದ್ದ ಬೂಟುಗಳ ಮಾದರಿಯ ಹೆಜ್ಜೆ ಗುರುತುಗಳು ಅಪರಾಧದ ಸ್ಥಳದಲ್ಲಿ ಕಂಡುಬಂದಿದ್ದವು. ಹಾಗಾಗಿ ಶಂಕಿತರ ಪಟ್ಟಿಯಲ್ಲಿ ಆತ ಮುಂದಿದ್ದ. ಏಕೋ ಏನೋ ಗೊತ್ತಿಲ್ಲ, ೧೯೯೭ ರಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡು ಸತ್ತ. ಸತ್ತ ಮೇಲೆ ಆತನ ಬಗ್ಗೆ ತನಿಖೆಯನ್ನು ಕೈಬಿಡಲಾಯಿತು.

ಪಾಲಕರು ಒಬ್ಬ ಖಾಸಗಿ ಪತ್ತೇದಾರನನ್ನು ತನಿಖೆಗಾಗಿ ನೇಮಕ ಮಾಡಿಕೊಂಡಿದ್ದರು. ಆತ ಹೇಳುವ ಪ್ರಕಾರ: ಮೈಕಲ್ ಹೆಲ್ಗೋಟ್ ತನ್ನ ಕುಟುಂಬದೆದುರು ತಾನೇ ಕೊಲೆಗಾರ ಎಂದು ತಪ್ಪೊಪ್ಪಿಕೊಂಡಿದ್ದ. ಆತನ ತಪ್ಪೊಪ್ಪಿಕೊಂಡಿದ್ದರ ಧ್ವನಿಮುದ್ರಿಕೆ ಆತನ ಕುಟುಂಬದವರ ಬಳಿ ಇದೆ.

೨೦೦೬ ರಲ್ಲಿ ಅಲೆಕ್ಸ್ ರಿಚ್ ಎಂಬ ಹೊಸ ಶಂಕಿತ ತನ್ನ ಹೇಳಿಕೆ ಮೂಲಕ ಬಿರುಗಾಳಿಯನ್ನೇ ಸೃಷ್ಟಿಸಿದ. ಆತ ಹೇಳಿದ್ದು: ಜಾನ್ ಬೆನೆ ಸಾಯುವ ದಿನ ನಾನು ಅವಳ ಜೊತೆ ಇದ್ದೆ. ಅವಳ ಸಾವು ಒಂದು ಅಪಘಾತ.

ಮೊದಲು ಆತನ ಹೇಳಿಕೆ ಕಡೆ ಗಮನ ಕೊಡಲಾಯಿತಾದರೂ ನಂತರ ಆತ ಸುಳ್ಳು ಹೇಳುತ್ತಿದ್ದಾನೆ ಎಂದು ಭಾವಿಸಲಾಯಿತು. ಆತನ ಪತ್ನಿಯೇ ಆತನ ಹೇಳಿಕೆಗೆ ವಿರೋಧಾತ್ಮಕ ಹೇಳಿಕೆ ಕೊಟ್ಟು, ಆತ ಎಲ್ಲೂ ಹೋಗಿರಲಿಲ್ಲ. ಜಾನ್ ಬೆನೆ ಸತ್ತ ಸ್ಥಳದಿಂದ ಸಾವಿರಾರು ಮೈಲು ದೂರದಲ್ಲಿರುವ ಅಲಬಾಮಾದ ಮನೆಯಲ್ಲಿದ್ದ ಎಂದು ಹೇಳಿದಳು. ಆತನ ಡಿಎನ್ಎ ಕೂಡ ಹೊಂದಾಣಿಕೆ ಆಗಲಿಲ್ಲ. ಹಾಗಾಗಿ ಅವನ ಹೇಳಿಕೆಯನ್ನು ತನಿಖಾ ತಂಡ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. 

ಕ್ರಿಸ್ಮಸ್ ಸಮಯದಲ್ಲಿ ಸಾಂತಾ ಕ್ಲಾಸ್ ವೇಷ ಧರಿಸಿ ಮಕ್ಕಳನ್ನು ರಂಜಿಸುತ್ತಿದ್ದ ಸ್ಥಳೀಯ ವ್ಯಕ್ತಿಯೊಬ್ಬ ಜಾನ್ ಬೆನೆಯನ್ನು ಕೊಂದಿರಬಹುದೇ ಎನ್ನುವ ಸಂಶಯ ಕೂಡ ವ್ಯಕ್ತವಾಗಿತ್ತು. ದಶಕಗಳ ಹಿಂದೆ ಆ ವ್ಯಕ್ತಿಯ ಮಗು ಕೂಡ ನಿಗೂಢವಾಗಿ ಅಪಹರಿಸಲ್ಪಟ್ಟಿತ್ತು. ಆದರೆ ಆ ವ್ಯಕ್ತಿಯನ್ನು ಶಂಕಿತರ ಪಟ್ಟಿಗೆ ಸೇರಿಸಲು ಸಾಂದರ್ಭಿಕ ಸಾಕ್ಷ್ಯಗಳು ಸಿಗಲಿಲ್ಲ.

ಆರು ವರ್ಷದ ಈ ಬಾಲ ಸುಂದರಿಯ ನಿಗೂಢ ಕೊಲೆ ಪ್ರಕರಣ ಎಂದಾದರೂ ಬಗೆ ಹರಿದೀತೇ ಎಂದು ಕೇಳಿದರೆ ಗೊತ್ತಿಲ್ಲ ಎಂಬುದೇ ಉತ್ತರ. 

ಜಾನ್ ಬೆನೆಯ ತಾಯಿ ಪ್ಯಾಟ್ರಿಸಿಯಾ ತೀರಿಹೋಗಿದ್ದಾಳೆ. ತಂದೆ ಜಾನನಿಗೆ ಈಗ ೮೦ ವರ್ಷ ವಯಸ್ಸು. 

'ಡಿಎನ್ಎ ತಂತ್ರಜ್ಞಾನ ಈಗ ತುಂಬಾ ಮುಂದುವರೆದಿದೆ. ನ್ಯಾಯ ಸಿಗಬಹುದು ಎಂಬ ನಿರೀಕ್ಷೆ ಇದೆ,' ಎಂದು ನಿಡುಸುಯ್ಯುತ್ತಾನೆ ತಂದೆ ಜಾನ್.

ಇವತ್ತಿಗೂ ತುಂಬಾ ಚರ್ಚೆಯಲ್ಲಿರುವ ಪ್ರಕರಣ ಇದು. ಈ ಪ್ರಕರಣದ ಬಗ್ಗೆ ಅಸಂಖ್ಯಾತ ಪುಸ್ತಕಗಳು, ಸಾಕ್ಷ್ಯಚಿತ್ರಗಳು, ಲೇಖನಗಳು, ಕೊಲೆ ಹೇಗಾಗಿರಬಹುದು ಎಂಬುದರ ಬಗ್ಗೆ ತಜ್ಞರಿಂದ ಬೇರೆ ಬೇರೆ ತರಹದ ಸಿದ್ಧಾಂತಗಳು ಎಲ್ಲ ಬಂದಿವೆ. ಈಗಲೂ ಬರುತ್ತಿರುತ್ತವೆ. ಆದರೆ ಕೊಲೆಗಾರ ಮಾತ್ರ ಇನ್ನೂ ಸಿಕ್ಕಿಲ್ಲ. 

ಕೊಲೊರಾಡೊ ರಾಜ್ಯದ ಬೌಲ್ಡರ್ ನಗರದ ಪೊಲೀಸ್ ಇಲಾಖೆ ಮಾತ್ರ ಪ್ರಕರಣವನ್ನು ಥಂಡಿಬೊಗಸಕ್ಕೆ (cold storage) ಹಾಕದೇ ಸಕ್ರಿಯವಾಗಿ ತನಿಖೆ ಮಾಡುತ್ತಲೇ ಇದೆ. ಆಗಾಗ ಹೊಸ ಮಾಹಿತಿ ಕೊಡುತ್ತದೆ. 

ಈ ಕೊಂಡಿಯಲ್ಲಿ ಪ್ರಕರಣದ ಇತ್ತೀಚಿನ ಮಾಹಿತಿ ಸಿಗುತ್ತದೆ. 

ಒಟ್ಟಿನಲ್ಲಿ ಒಂದು ಅತಿ ನಿಗೂಢ ಕೊಲೆ ಪ್ರಕರಣ. ಮನೆಯಲ್ಲಿ ಇದ್ದವರೇ ನಾಲ್ಕು ಜನ. ಅದರಲ್ಲಿ ಒಬ್ಬರು ಕೊಲೆಯಾಗುತ್ತಾರೆ. ಮನೆಯವರ ಮೇಲೆ ಸಂಶಯ ಬಂದರೂ ಆಧಾರವಿಲ್ಲ. ಹೊರಗಿಂದ ಯಾರು, ಏಕೆ, ಹೇಗೆ ಬಂದು ಕೊಲೆಯನ್ನು ಮಾಡಿದರು? ಅಪಹರಣ ಮೂಲ ಉದ್ದೇಶವಾಗಿತ್ತೇ?? ಅಪಹರಣದ ಸಂಚು ಹಡಾಲೆದ್ದು ಹೋಗಿ ಕೊಲೆಯಲ್ಲಿ ಪರ್ಯವಸಾನವಾಯಿತೇ? ಲೈಂಗಿಕ ದೌರ್ಜನ್ಯ ಏಕೆ ಮಾಡಲಾಯಿತು? ಕರಾರುವಕ್ಕಾಗಿ ೧೧೮, ೦೦೦ ಡಾಲರುಗಳಿಗೇ ಏಕೆ ಬೇಡಿಕೆ ಇಡಲಾಗಿತ್ತು?? ಆಕಸ್ಮಿಕವೊಂದರಲ್ಲಿ ಮನೆಯ ಜನರಿಂದಲೇ ಆಕೆ ಉದ್ದೇಶವಿಲ್ಲದೇ ಕೊಲೆಯಾಗಿಬಿಟ್ಟಳೇ?? ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮನೆಯವರೇ ಈ ಕಥೆ ಹೆಣೆದರೆ?? ಹೀಗೆ ಪ್ರಶ್ನೆಗಳು ಅನೇಕ. ಉತ್ತರ ಸದ್ಯಕ್ಕೆ ಇಲ್ಲ. ಎಲ್ಲ ಅಯೋಮಯ. 

ಮಾಹಿತಿ ಆಧಾರ: Who Killed Child Beauty Queen JonBenét Ramsey in Her Colorado Home 27 Years Ago Today?

Tuesday, May 28, 2024

ಆಪರೇಷನ್ ಈಗಲ್ ಕ್ಲಾ...ಎಕ್ಕುಟ್ಟಿಹೋಗಿದ್ದ ಒಂದು ರಕ್ಷಣಾ ಕಾರ್ಯಾಚರಣೆ

ಏಪ್ರಿಲ್ ೨೪, ೧೯೮೦ ಅತ್ಯಂತ ದುರದೃಷ್ಟಕರ ದಿನವಾಗಿತ್ತು. ಇರಾನಿನ ರಾಜಧಾನಿ ಟೆಹ್ರಾನಿನಲ್ಲಿ ಬಂಧಿತರಾಗಿದ್ದ ೬೬ ಒತ್ತೆಯಾಳುಗಳನ್ನು ರಕ್ಷಿಸಲು ಮಾಡಿದ ಅಮೇರಿಕಾದ ಸೇನಾ ಕಾರ್ಯಾಚರಣೆ ದಾರುಣವಾಗಿ ವಿಫಲವಾಗಿತ್ತು. ಯಾವುದೇ ಒತ್ತೆಯಾಳುಗಳನ್ನು ರಕ್ಷಿಸಲಾಗಲಿಲ್ಲ. ಎಂಟು ಜನ ಅಮೇರಿಕಾದ ಸೇನಾ ಸಿಬ್ಬಂದಿ ಆ ಆಕಸ್ಮಿಕ ಅವಘಡದಲ್ಲಿ ಮೃತರಾಗಿದ್ದರು. 

ಸುಮಾರು ಆರು ತಿಂಗಳ ಮೊದಲು ಅಂದರೆ ನವೆಂಬರ್ ೪, ೧೯೭೯ ರಂದು ಸುಮಾರು ೩೦೦೦ ಉಗ್ರಗಾಮಿ ವಿದ್ಯಾರ್ಥಿಗಳು ಟೆಹರಾನಿನಲ್ಲಿದ್ದ ಅಮೆರಿಕಾದ ರಾಯಭಾರ ಕಚೇರಿಯ ಮೇಲೆ ದಾಳಿ ಮಾಡಿದರು. ೬೩ ಅಮೇರಿಕನ್ ನಾಗರಿಕರನ್ನು ಒತ್ತೆಯಾಳಾಗಿ ವಶಮಾಡಿಕೊಂಡರು. ವಿದೇಶಾಂಗ ಇಲಾಖೆಯ ಕಚೇರಿಗೆ ಕೆಲಸದ ನಿಮಿತ್ತ ಹೋಗಿದ್ದ ಇನ್ನೂ ಮೂರು ಜನ ಕೂಡ ಬಂಧಿಗಳಾದರು. ಈ ಘಟನೆ ಆಗುವ ಎರಡು ವಾರಗಳ ಮೊದಲು, ಅಂದಿನ ಅಮೇರಿಕಾದ ಅಧ್ಯಕ್ಷ ಜಿಮ್ಮಿ ಕಾರ್ಟರ್, ಪನಾಮಾದಲ್ಲಿಆಶ್ರಯ ಪಡೆದಿದ್ದಇರಾನಿನ ಪದಚ್ಯುತ ದೊರೆ ಮೊಹಮದ್ ರೇಜಾ ಷಾ ಪೆಹ್ಲವಿಗೆ, ಕ್ಯಾನ್ಸರಿಗೆ ಚಿಕಿತ್ಸೆ ಪಡೆಯಲು, ಅಮೆರಿಕಾದೊಳಗೆ ಬರಲು ಅನುಮತಿ ನೀಡಿದ್ದರು. ಇರಾನಿನ ಹೊಸ ನಾಯಕ ಧರ್ಮಗುರು ಆಯಾತೊಲ್ಲಾ ಖೊಮೇನಿ ಮಾಜಿ ದೊರೆಯನ್ನುಇರಾನಿಗೆ ಹಸ್ತಾಂತರ ಮಾಡಲು ಮತ್ತು ಇರಾನಿನಲ್ಲಿ ಅಮೇರಿಕಾದ ಹಸ್ತಕ್ಷೇಪವನ್ನು ನಿಲ್ಲಿಸಲು ಬಲವಾದ ಕರೆಯನ್ನು ನೀಡಿದರು. ಆರಂಭಿಕ ಸಂಧಾನದ ಯಶಸ್ಸಿನ ಫಲವಾಗಿ ೧೩ ಜನ ಒತ್ತೆಯಾಳುಗಳು ನವೆಂಬರ್ ಮಧ್ಯದ ಹೊತ್ತಿಗೆ ಬಿಡುಗಡೆಯಾದರು. ಉಳಿದವರು ಮಾತ್ರ ಸೆರೆಯಲ್ಲಿಯೇ ಉಳಿದರು. 

ಅಮೇರಿಕಾದ ಸೈನ್ಯ ಒತ್ತೆಯಾಳುಗಳನ್ನು ರಕ್ಷಿಸುವ ಯೋಜನೆನ್ನು ಹಾಕಿತು. ಪೂರ್ವಾಭ್ಯಾಸಗಳನ್ನು ಮಾಡಿತು. ಏಪ್ರಿಲ್ ೧೬, ೧೯೮೦ ರಂದು ಅಧ್ಯಕ್ಷ ಕಾರ್ಟರ್ ಅಂತಿಮ ಅನುಮತಿ ನೀಡಿದರು. ಸೈನ್ಯದ ನಾಲ್ಕೂ ದಳಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿದ್ದವು. ಅದು ಒಟ್ಟು ಎರಡು ದಿನಗಳ ಕಾರ್ಯಾಚರಣೆನೆಯಾಗಲಿತ್ತು. ನಾಲ್ಕು ಹೆಲಿಕಾಪ್ಟರುಗಳು ಮತ್ತು ಒಂದು C - ೧೩೦ ವಿಮಾನ ಕಾರ್ಯಾಚರಣೆಗೆ ನಿಯೋಜಿಸಲ್ಪಟ್ಟಿದ್ದವು. ರಾಜಧಾನಿ ಟೆಹರಾನಿನಿಂದ ಸುಮಾರು ೨೦೦ ಮೈಲಿ ದೂರವಿದ್ದ ನಿರ್ಜನ ಮರಭೂಮಿಯಲ್ಲಿ ಒಂದು ಜಾಗವನ್ನು ಗುರುತಿಸಲಾಗಿತ್ತು. ಅಲ್ಲಿ ಹೆಲಿಕಾಪ್ಟರುಗಳಿಗೆ ಇಂಧನ ಮರುಭರ್ತಿ ಮಾಡುವ ಯೋಜನೆಯಿತ್ತು. ಹೆಲಿಕಾಪ್ಟರುಗಳು ಅಲ್ಲಿಂದ ಮತ್ತೊಂದು ರಹಸ್ಯ ಜಾಗಕ್ಕೆ ಸೈನಿಕರನ್ನು ಕರೆದೊಯ್ಯಲಿದ್ದವು. ಅಲ್ಲಿಂದ ಮರುದಿನ ಸೈನಿಕರು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಿದ್ದರು. ಏಪ್ರಿಲ್ ೧೯, ೧೯೮೦ ರಿಂದಲೇ ಸೈನ್ಯ ಅರಬ್ ಕೊಲ್ಲಿಯ ಒಮಾನ್ ದೇಶದಲ್ಲಿ ಮತ್ತು ಅರಬ್ಬೀ ಸಮುದ್ರದಲ್ಲಿ ಬಂದಿಳಿದಿತ್ತು. 

ಏಪ್ರಿಲ್ ೨೪, ೧೯೮೦ ರಂದು ಆಪರೇಷನ್ ಈಗಲ್ ಕ್ಲಾ (Operation Eagle Claw) ಆರಂಭವಾಯಿತು.  ಅರಬ್ಬೀ ಸಮುದ್ರದಲ್ಲಿ ಲಂಗರು ಹಾಕಿದ್ದ ಅಮೇರಿಕಾದ ಯುದ್ಧನೌಕೆ ನಿಮಿಟ್ಜ್ ನಿಂದ ಕಮಾಂಡೋಗಳನ್ನು ಹೊತ್ತ ನೌಕಾದಳದ ಹೆಲಿಕಾಪ್ಟರುಗಳು ೬೦೦ ಮೈಲುಗಳ ಪ್ರಯಾಣವನ್ನು ಆರಂಭಿಸಿದವು. C - ೧೩೦ ಸರಕು ಸಾಗಣೆ ವಿಮಾನಗಳು ಮೊದಲೇ ತಲುಪಿದ್ದವು. ಮಾರ್ಗಮಧ್ಯೆ ಹವಾಮಾನ ತುಂಬಾ ಕೆಟ್ಟಿತು. ಮರಭೂಮಿಯಲ್ಲಿ ಉಂಟಾಗುವ 'ಹಬೂಬ್' ಎಂಬ ಮರಳಿನ ಬಿರುಗಾಳಿ ತುಂಬಾ ತೀವ್ರವಾಗಿ ಬೀಸಿತು. ಹೆಲಿಕಾಪ್ಟರುಗಳನ್ನು ಆ ಬಿರುಗಾಳಿಯ ಮಧ್ಯೆ ಚಲಾಯಿಸುವುದು ಅಪಾಯಕಾರಿ ಮತ್ತು ಕಷ್ಟದ ಕೆಲಸವಾಗಿತ್ತು. ಕಮ್ಮಿಯಾದ ಬೆಳಕು, ಹೆಲಿಕಾಪ್ಟರು ಮತ್ತು ವಿಮಾನಗಳಿಗೆ ಆದ ಡ್ಯಾಮೇಜ್ ಮತ್ತು ಕೆಲವು ಸೈನಿಕರ ದೈಹಿಕ ಅಸ್ವಸ್ಥತೆ ಮುಂತಾದ ಕಾರಣಗಳಿಂದ ಕಾರ್ಯಾಚರಣೆಯನ್ನು ಮುಂದುವರೆಸುವುದು ದುಸ್ಸಾಹಸ ಅನ್ನಿಸಿತು. ಅಧ್ಯಕ್ಷ ಕಾರ್ಟರ್ ತಮ್ಮ ಆಪ್ತರೊಂದಿಗೆ ಸಮಾಲೋಚನೆ ನಡೆಸಿದರು. ಕಾರ್ಯಾಚರಣೆಯನ್ನು ಅಲ್ಲಿಗೇ ನಿಲ್ಲಿಸುವುದು ಸೂಕ್ತ ಎಂದು ನಿರ್ಧರಿಸಿದರು. ಆ ಆಜ್ಞೆ ಸೈನ್ಯಕ್ಕೆ ತಲುಪಿತು.

ಇರಾನಿನ ಮರಭೂಮಿಯ ರಹಸ್ಯ ಸ್ಥಳದಲ್ಲಿ ಆಗಲೇ ಕೆಲವು ಹೆಲಿಕಾಪ್ಟರುಗಳು, ಇಂಧನ ಮರುಭರ್ತಿ ಮಾಡುವ ವಿಮಾನ ಮೊದಲೇ ಬಂದು ಇಳಿದಿದ್ದವಲ್ಲ. ಈಗ ಎಲ್ಲವೂ ತುರ್ತಾಗಿ ಅಲ್ಲಿಂದ ನಿರ್ಗಮಿಸಬೇಕಾಗಿತ್ತು. ಗಡಿಬಿಡಿಯಲ್ಲಿ ಏನು ಪೊರಪಾಟಾಯಿತೋ, ಹೆಲಿಕಾಪ್ಟರೊಂದು ಇಂಧನ ಮರುಭರ್ತಿ ಮಾಡುವ ವಿಮಾನಕ್ಕೆ ಡಿಕ್ಕಿ ಹೊಡೆಯಿತು. ಮೊದಲೇ ಪೂರ್ತಿ ಇಂಧನ ತುಂಬಿದ್ದ ವಿಮಾನ. ದೊಡ್ಡ ಸ್ಪೋಟವಾಯಿತು. ವಾಯುಸೇನೆಯ ಐದು ಮತ್ತು ಭೂಸೇನೆಯ ಮೂವರು ಸೈನಿಕರು ಆ ದುರ್ಘಟನೆಯಲ್ಲಿ ಮೃತರಾದರು. 

ಈ ವಿಫಲ ಕಾರ್ಯಾಚರಣೆಯಿಂದ ರಕ್ಷಣಾ ಇಲಾಖೆ ಅನೇಕ ಮಹತ್ವದ ಪಾಠಗಳನ್ನು ಕಲಿತು ಅನೇಕ ಸುಧಾರಣೆಗಳನ್ನು ಮಾಡಿಕೊಂಡಿತು. ಸೇನೆಯ ವಿವಿಧ ವಿಭಾಗಗಳ ಮಧ್ಯೆ ಸಮನ್ವಯತೆಯ ಕೊರತೆ ಎದ್ದು ಕಂಡಿತ್ತು. ಅದನ್ನು ನಿವಾರಿಸಲು ಒಂದು ವಿಶೇಷ ಜಂಟಿ ಕಮಾಂಡನ್ನು ಸ್ಥಾಪಿಸಲಾಯಿತು. ಅದೇ JSOC - Joint Special Operations Command. ಇದನ್ನು ಕ್ರಮಬದ್ಧವಾಗಿ ಅಭಿವೃದ್ಧಿಪಡಿಸಿ, ಸುಮಾರು ನಲವತ್ತು ವರ್ಷಗಳ ನಂತರ ಈಗ ಎಲ್ಲ ವಿಶೇಷ ಸೇನಾ ಕಾರ್ಯಾಚರಣೆಗಳು ಇದರ ಅಡಿಯಲ್ಲೇ ನಡೆಯುತ್ತವೆ. ಪ್ರತಿಯೊಂದು ಕಾರ್ಮೋಡಕ್ಕೂ ಬೆಳ್ಳಿಗೆರೆಯೊಂದು ಇರುತ್ತದೆಯಂತೆ. ಆ ರೀತಿಯಲ್ಲಿಆಪರೇಷನ್ ಈಗಲ್ ಕ್ಲಾ ದಾರುಣವಾಗಿ ವಿಫಲವಾದರೂ JSOC ಸ್ಥಾಪನೆಗೆ ಕಾರಣವಾಗಿದ್ದಕ್ಕೆ ಸಮಾಧಾನ ಪಡಬೇಕು.

ಮಾಹಿತಿ ಆಧಾರ : US Army Airborne & Special Operations Museum 

Tuesday, May 21, 2024

ವಿದೇಶಿ ನೇರ ಹೂಡಿಕೆ (Foreign Direct Investment) ಹೀಗೂ ಬರಬಹುದೇ ಶಿವಾ!!??

೧೯೭೦ ರ ದಶಕದಲ್ಲಿ ಸೌದಿಯ ದೊರೆ ಫಹಾದ್ ಇಟಲಿಯ ಪ್ರಖ್ಯಾತ ಕ್ಯಾಸಿನೊದಲ್ಲಿ ಜೂಜಾಡಲು ಕುಳಿತ. ಕುಳಿತೇಟಿಗೆ  ೬ ಮಿಲಿಯನ್ ಡಾಲರುಗಳನ್ನು ಕಳೆದುಬಿಟ್ಟ! ಅವನಿಗೇನು!? ಹೇಳಿಕೇಳಿ ಹಡಬೆ ಪೆಟ್ರೋಲ್ ದುಡ್ಡು. ಇವನು ಉಡಾಯಿಸಿದ. ಅಂದು ಸೌದಿಯ ದೊರೆಯ ತೆಕ್ಕೆಯಲ್ಲಿ ಇದ್ದವರು ವಿಶ್ವದ ಟಾಪ್ ಕ್ಲಾಸ್ ವೇಶ್ಯೆಯರು. ಈ ಘಟನೆಯ ಫೋಟೋಗಳು ಮತ್ತು ಸುದ್ದಿ ಜಗಜ್ಜಾಹೀರಾಗಿ ಸೌದಿ ರಾಜ ಕುಟುಂಬ ಮುಜುಗರಕ್ಕೆ ಒಳಗಾಯಿತು. ಇಟಲಿಯನ್ನು ಬಿಟ್ಟು ಬೇರೊಂದು ಸುರಕ್ಷಿತ ಸ್ಥಳವನ್ನು ತಮ್ಮ ವಿವಿಧ ರೀತಿಯ "ಚಟುವಟಿಕೆಗಳಿಗೆ" ಕಂಡುಕೊಳ್ಳಬೇಕಾಯಿತು. 

ಸೌದಿಗಳು ಮೋಜು ಮಸ್ತಿಗೆ ಬೇರೊಂದು ಜಾಗ ಹುಡುಕುತ್ತಿದ್ದಾರೆ ಎಂಬ ಸುದ್ದಿ ಕಿವಿಗೆ ಬಿದ್ದ ಕೂಡಲೇ ಜಾಗೃತರಾದವರು ಆಫ್ರಿಕಾದಲ್ಲಿರುವ ಮೊರಾಕೊ ದೇಶದ ರಾಜ ಹಸನ್. ದಿವಾಳಿ ಅಂಚಿನಲ್ಲಿದ್ದ ಮೊರಾಕೊವನ್ನು ಬಚಾವ್ ಮಾಡಲು ಅವರಿಗೆ ಬಂಡವಾಳದ ಜರೂರತ್ತು ಇತ್ತು. ಮೊರಾಕೊ ದೇಶದಲ್ಲಿ ತೈಲ ಇರಲಿಲ್ಲ. ಬೇರೆ ದೇಶಗಳಲ್ಲಿ ದುಡಿಯುತ್ತಿದ್ದ ಅಸಂಖ್ಯಾತ ಪ್ರಜೆಗಳು ಕಳಿಸುತ್ತಿದ್ದ ವಿದೇಶಿ ವಿನಿಮಯ ಅರೆಕಾಸಿನ ಮಜ್ಜಿಗೆಯಾಗಿತ್ತು ದೊರೆ ಹಸನ್ ಅವರಿಗೆ. ಇಂತಹ ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯಲ್ಲಿ ಅವರು ತಮಗಿರುವ ಇಪ್ಪತ್ತು ಅರಮನೆಗಳನ್ನು ಹೇಗೆ ನಡೆಸಿಕೊಂಡು ಬಂದಾರು?? 

ಸೌದಿಗಳಿಗೆ ಫೋನ್ ಮಾಡಿದ ಕಿಂಗ್ ಹಸನ್, 'ನಮ್ಮಲ್ಲಿ ಬನ್ನಿ. ಬೇಕಾದಷ್ಟು ಜಾಗ ಇದೆ. ನಿಮಗೆ ಬೇಕಾದ ಹಾಗೆ ಇರಿ. ಮೋಜು ಮಸ್ತಿ ಮಾಡಿ,' ಎನ್ನುವ ಮುಕ್ತ ಆಹ್ವಾನವನ್ನು ಕೊಟ್ಟರು. 

ಸೌದಿ ರಾಜಕುಟುಂಬದ ಡಜನ್ನುಗಟ್ಟಲೇ ಸಣ್ಣ ದೊಡ್ಡ ರಾಜಕುಮಾರರು ಮೊರಾಕೊದ ಟಾಂಜೇರ್ ಪರ್ವತಗಳ ಸುತ್ತಮುತ್ತ ವೈಭವೋಪೇತ ಅರಮನೆಗಳನ್ನು ನಿರ್ಮಿಸಿಕೊಂಡರು. 'ರಿಫ್' ಎಂದು ಕರೆಯಲ್ಪಡುತ್ತಿದ್ದ ಆ ನಿರ್ಜನ ಪ್ರದೇಶ ಜನವಸತಿಯಿಂದ ತುಂಬಾ ದೂರದಲ್ಲಿತ್ತು. ಸೌದಿಗಳ ಮೋಜು ಮಸ್ತಿಗೆ ಹೇಳಿ ಮಾಡಿಸಿದಂತಿತ್ತು. ಸೌದಿ ಅರೇಬಿಯಾದಲ್ಲೇ ತಮ್ಮ ಮೋಜು ಮಸ್ತಿ ಮಾಡೋಣ ಅಂದರೆ ಅಲ್ಲೆಲ್ಲ ಕಟ್ಟರ್ ವಹಾಬಿ ಸಂಸ್ಕೃತಿ. ಮೋಜು ಮಸ್ತಿ ಎಲ್ಲ ನಿಷೇಧಿತ. ಯೂರೋಪ್ ಚೆನ್ನಾಗಿತ್ತು. ಆದರೆ ಅಲ್ಲಿ ಪಾಶ್ಚಾತ್ಯ ಮಾಧ್ಯಮಗಳ ಕಾಟ. ಯಾವ ಸುಲ್ತಾನ ಯಾವ ಕ್ಯಾಸಿನೊದಲ್ಲಿ ದಿವಾಳಿಯಾದ. ಯಾರು ಯಾವ ವಿದೇಶಿ ಸೂಪರ್ ಮಾಡೆಲ್ ವೇಶ್ಯೆ ಮೇಲೆ ದುಡ್ಡು ಸುರಿದ ಎಂಬುದೆಲ್ಲವನ್ನೂ ಫೋಟೋ ಸಮೇತ ಪ್ರಕಟಿಸಿಬಿಡುತ್ತಾರೆ. ಮೊರಾಕೊದ ದುರ್ಗಮ ಟ್ಯಾಂಜೆರ್ ಪರ್ವತ ಪ್ರದೇಶದಲ್ಲಿ ಅಂತಹ ತೊಂದರೆಗಳು ಇಲ್ಲ. ಎಲ್ಲ ಸೊಗಸಾಗಿದೆ ಎಂದುಕೊಂಡ ಸೌದಿಯ ಪುಂಡ ರಾಜಕುಮಾರರು ಓಡೋಡಿ ಬಂದು ಮೊರಾಕೊದಲ್ಲಿ ದುಡ್ಡು ಸುರಿದರು.ಆ ಜಾಗಕ್ಕೆ ಹೋಗಲು ಪತ್ರಕರ್ತರು ಪ್ರಯತ್ನಿಸಿದರೆ ಮೊರಾಕೊದ ನಿರ್ಮಾನುಷ, ಕಾನೂನೇ ಇಲ್ಲದ ಪ್ರದೇಶಗಳ ಮೂಲಕ ಬರಬೇಕಾಗುತ್ತಿತ್ತು. ಆ ಮೂಲಕ ಬರುವ ಹುಚ್ಚು ಸಾಹಸ ಮಾಡಿದವರು ಅಪಹರಣಕ್ಕೆ ಗುರಿಯಾಗುತ್ತಿದ್ದರು. ಅಪಹರಣ ಮಾಡಿದ ವ್ಯಕ್ತಿಯ ಬಳಿ ವಸೂಲಿ ಮಾಡಲು ಏನೂ ಇಲ್ಲ ಅಂತಾದರೆ ಸಿಕ್ಕಿದ್ದನ್ನು ದೋಚಿಕೊಂಡು, ಕತ್ತು ಸೀಳಿ ಹೆಣವನ್ನು ಎಲ್ಲೋ ಎಸೆಯುತ್ತಿದ್ದರು ಸ್ಥಳೀಯ ಕ್ರೂರ ದರೋಡೆಕೋರರು. ಮುಂದೆ ಹೆಣ ಕೂಡ ಸಿಗುತ್ತಿರಲಿಲ್ಲ. 

ಸೌದಿಯ ಪುಂಡ ರಾಜಕುಮಾರರು ಇಲ್ಲೂ ಲಫಡಾ ಮಾಡಿಕೊಂಡರು. ಸೌದಿಯ ರಾಜಕುಮಾರನೊಬ್ಬ ವಿಪರೀತ ಮದ್ಯ ಸೇವಿಸಿ, ಭೋಗಿಸಲು ಕರೆಸಿಕೊಂಡಿದ್ದ ಹುಡುಗಿಯೊಬ್ಬಳ ಮೊಲೆಯನ್ನು ಯರ್ರಾಬಿರ್ರಿ ಕಚ್ಚಿಬಿಟ್ಟಿದ್ದ ಎಂಬ ಸುದ್ದಿ ಯಾರಿಂದ ಮುಚ್ಚಿಟ್ಟರೂ ಸಿಐಎ ನಂತಹ ಬೇಹುಗಾರಿಕೆ ಸಂಸ್ಥೆಗಳಿಂದ ಮಾತ್ರ ಮುಚ್ಚಿಡಲಾಗಲಿಲ್ಲ. 

ಈ ಸಂದರ್ಭದಲ್ಲಿ ಮೊರಾಕೊದ ರಾಜ ಹಸನ್ ಮಾತ್ರ ತಮ್ಮ"ರಾಜಧರ್ಮ"ವನ್ನು ಚಾಚೂ ತಪ್ಪದೆ ಪಾಲಿಸಿದರು. ಹಗರಣವನ್ನು ಸೊಗಸಾಗಿ ಮುಚ್ಚಿಹಾಕಿದರು. ಆ ಮೂಲಕ ಮೊರಾಕೊ ದೇಶದಲ್ಲಿ ವಿದೇಶಿ ನೇರ ಹೂಡಿಕೆ ಮಾಡಿ ತಪ್ಪು ಮಾಡಲಿಲ್ಲ ಎಂದು ಸೌದಿಗಳಿಗೆ ಮನದಟ್ಟು ಮಾಡಿಕೊಟ್ಟರು. 

ರಾಜೋಚಿತವಾಗಿ ರಾಜಾರೋಷದಿಂದ ರಾಜಕುಮಾರನಿಂದಲೇ  ಮೊಲೆ ಕಚ್ಚಿಸಿಕೊಂಡಿದ್ದ ಯುವತಿಯ ಕಡೆಯವರಿಗೆ ಕೊಡುವಷ್ಟು ಕೊಟ್ಟು ಬಾಯಿ ಮುಚ್ಚಿಕೊಂಡಿರಿ ಇಲ್ಲವಾದರೆ ಶಾಶ್ವತವಾಗಿ ಮೊರಾಕೊದ ಜೈಲಿಗೆ ಹಾಕಿಬಿಡುತ್ತೇವೆ ಎಂಬ ಧಮಿಕಿ ಹಾಕಿದರು. ಮೊರಾಕೊದ ಕುಖ್ಯಾತ ಜೈಲಿಗೆ ಹೋದವರು ಯಾರೂ ವಾಪಸ್ ಬರುವ ಸಾಧ್ಯತೆಗಳು ಕಮ್ಮಿ ಎಂದು ಗೊತ್ತಿದ್ದ ಅವರು ಕಚ್ಚಿದ್ದು ಮೊಲೆ ಅಷ್ಟೇ ತಾನೇ, ಜೀವವನ್ನೇನೂ ತೆಗೆದಿಲ್ಲವಲ್ಲ, ಮೇಲಿಂದ ಜಾಕೆಟ್ ತುಂಬಾ ರೊಕ್ಕ ತುಂಬಿ ಕಳಿಸುತ್ತಿದ್ದಾರಲ್ಲ ಎಂದುಕೊಂಡು ರಾಜ ಹಸನ್ ಕಡೆಯವರು ಕೊಟ್ಟ ರೊಕ್ಕ ಇತ್ಯಾದಿಯನ್ನು ಪ್ರಸಾದದಂತೆ ಸ್ವೀಕರಿಸಿ ಸಲಾಂ ಮಾಡಿದರು. ಧಮಕಿ ತಂತ್ರ ಕೆಲಸ ಮಾಡಿತು. ಈ ಘಟನೆ ಎಲ್ಲೂ ಸುದ್ದಿಯಾಗಲಿಲ್ಲ.

ಮೊರಾಕೊದ ಈ ತರಹದ "ನಾಜೂಕಾದ" ರಾಜತಾಂತ್ರಿಕ ನೀತಿಯಿಂದ ಖುಷಿಯಾದ ಸೌದಿ ಅರೇಬಿಯಾ ಮತ್ತು ಇತರೆ ಕೊಲ್ಲಿ ಅರಬ್ ದೇಶಗಳು ಕಂಡಾಪಟ್ಟೆ ದುಡ್ಡನ್ನು ಮೊರಾಕೊ ದೇಶದಲ್ಲಿ ಹೂಡಿಕೆ ಮಾಡಿದವು. ಎಷ್ಟು ದುಡ್ಡು ಹರಿದು ಬಂತು ಎಂದು ಕರಾರುವಕ್ಕಾಗಿ ಹೇಳುವುದು ಕಷ್ಟವಾದರೂ ಮೂಗಿನ ಮೇಲೆ ಬೆರಳಿಡುವಂತಹ ದೊಡ್ಡ ಮೊತ್ತ ಹರಿದು ಬಂದಿದ್ದು ಸುಳ್ಳಲ್ಲ. ೧೯೯೮ ರಲ್ಲಿ, ಸೌದಿ ಅರೇಬಿಯಾದ ರಕ್ಷಣಾ ಮಂತ್ರಿಯಾಗಿದ್ದ ಸುಲ್ತಾನನೊಬ್ಬ, ರಹಸ್ಯವಾಗಿ, ಮೊರಾಕೊದ ರಾಷ್ಟೀಯ ತೈಲ ಸಂಸ್ಕರಣಾಗಾರವನ್ನು ೪೨೦ ಮಿಲಿಯನ್ ಡಾಲರುಗಳಿಗೆ ಖರೀದಿಸಿದ್ದ. ಅವನದೇನು ಫೋರ್ಟ್ವೆಂಟಿ ಭಾನಗಡಿ ವ್ಯವಹಾರವೋ ಗೊತ್ತಿಲ್ಲ. ೪೨೦ ಮಿಲಿಯನ್ ಡಾಲರಿಗೇ ಖರೀದಿಸಿದ್ದು ಕಾಕತಾಳೀಯ ಇರಬಹುದು ಕೂಡ. ವ್ಯವಹಾರವನ್ನು ಮಧ್ಯವರ್ತಿಗಳ ಮೂಲಕ, ಶೆಲ್ ಕಂಪನಿಗಳ ಮೂಲಕ ಮಾಡಿ ಮೂಲ ಖರೀದಿದಾರರನ್ನು ರಹಸ್ಯವಾಗಿ ಇರಿಸಲು ಎಂದಿನಂತೆ ಪ್ರಯತ್ನ ಮಾಡಲಾಯಿತು. ಮೊರಾಕೊದ ಕಾಸಾಬ್ಲ್ಯಾಂಕಾ ಪಟ್ಟಣದ ಮಸೀದಿಯೊಂದಕ್ಕೆ ಒಂದು ಬಿಲಿಯನ್ ಡಾಲರ್ ದೇಣಿಗೆ ಕೊಟ್ಟಿತು ಸೌದಿ ಅರೇಬಿಯಾ. ಒಳೊಳಗೆ ಕಳ್ಳ ವ್ಯವಹಾರ ಎಷ್ಟೇ ಇದ್ದರೂ ಸಾರ್ವಜನಿಕವಾಗಿ ಕೂಡ ಸಮಾಜಸೇವೆ ಮಾಡಿದೆವು ಎಂದು ತೋರಿಸಿಕೊಳ್ಳಬೇಕಲ್ಲ. 

***

'ವಿದೇಶಿ ನೇರ ಹೂಡಿಕೆ'ಯ ಬಗ್ಗೆ ಸುದ್ದಿ ಬಂದಾಗೆಲ್ಲ ನನಗೆ ಸಿಐಎ ಮಾಜಿ ಹಿರಿಯ ಬೇಹುಗಾರ ರಾಬರ್ಟ್ ಬೇರ್ ಹೇಳಿದ ಈ ಘಟನೆ ನೆನಪಾಗುತ್ತದೆ. 

ಅವರ ಅದ್ಭುತ ಪುಸ್ತಕ Sleeping with the Devil: How Washington Sold Our Soul for Saudi Crude . ಅದರಲ್ಲಿ ದೊರೆತ ಮಾಹಿತಿ ಮೇಲೆ ಆಧಾರಿತ ಲೇಖನ.