Thursday, August 08, 2019

ಕುಸಿದ ಷೇರುಪೇಟೆಯಲ್ಲಿ ರೊಕ್ಕ ಮಾಡಿಕೊಳ್ಳುವ 'ಕುಳ್ಳ ವ್ಯಾಪಾರಿಗಳು'

ಪಕ್ಕದ ಮನೆ ಹೊತ್ತಿ ಉರಿಯುತ್ತಿದ್ದರೆ, ಅದರಲ್ಲೇ ಬೀಡಿ ಹಚ್ಚಿಕೊಂಡನಂತೆ. ಷೇರುಪೇಟೆಯಲ್ಲಿನ 'ಕುಳ್ಳ ಮಾರಾಟ' (short selling) ಎನ್ನುವುದು ಇದೇ ಮಾದರಿಯದ್ದು. ಷೇರುಪೇಟೆ ಕುಸಿದಾಗ ಹೆಚ್ಚಿನ ಹೂಡಿಕೆದಾರರು ನಷ್ಟ ಅನುಭವಿಸಿದರೆ ಈ ಪ್ರಚಂಡ ಕುಳ್ಳರು (short sellers) ಬರೋಬ್ಬರಿ ಲಾಭ ಕಮಾಯಿಸುತ್ತಾರೆ. ಅದೇ ಷೇರುಪೇಟೆ ಮೇಲಕ್ಕೆ ಹೋದರೆ ಕುಳ್ಳರು ವಿಲವಿಲ ಒದ್ದಾಡಿಬಿಡುತ್ತಾರೆ. ಒಮ್ಮೊಮ್ಮೆ ಸರಿಯಾಗಿ ಪ್ಲಾನ್ ಮಾಡಿಕೊಳ್ಳದೇ ಷೇರುಪೇಟೆಗೆ ಬರುವ ಕುಳ್ಳ ಮಾರಾಟಗಾರರು ಅಂಗಿ ಚಡ್ಡಿ ಸಮೇತ ಸರ್ವಸ್ವವನ್ನೂ ಕಳೆದುಕೊಂಡ ಉದಾಹರಣೆಗಳಿಗೆ ಏನೂ ಕಮ್ಮಿಯಿಲ್ಲ ಬಿಡಿ.

ಏನಿದು 'ಕುಳ್ಳ ಮಾರಾಟ' ಅಥವಾ short selling?

ನಿಮ್ಮ ಹತ್ತಿರ ಎಬಿಸಿಡಿ ಕಂಪನಿಯ ೧೦೦ ಷೇರುಗಳು ಇವೆ ಎಂದಿಟ್ಟುಕೊಳ್ಳಿ. ಕುಳ್ಳ ಬರುತ್ತಾನೆ. 'ಸಾರ್, ನಿಮ್ಮ ಷೇರುಗಳನ್ನು ಒಂದಿಷ್ಟು ಕಾಲ ಭಾಡಿಗೆಗೆ ಕೊಡುತ್ತೀರಾ?' ಎಂದು ಕೇಳುತ್ತಾನೆ. ಪುಗಸಟ್ಟೆ ಕೇಳುವುದಿಲ್ಲ. ಭಾಡಿಗೆ ಕೊಡುತ್ತೇನೆ ಅನ್ನುತ್ತಾನೆ. ಕುಳ್ಳನಿಗೆ ಷೇರುಗಳನ್ನು ಭಾಡಿಗೆ ಕೊಟ್ಟ ಸಮಯದಲ್ಲಿ ಡಿವಿಡೆಂಡ್ ಬಂದರೆ ಅದನ್ನೂ ನಿಮಗೇ ಕೊಡುತ್ತಾನೆ. ಒಪ್ಪಂದದಂತೆ ಭಾಡಿಗೆಗೆ ತೆಗೆದುಕೊಂಡ ಷೇರುಗಳನ್ನು ವಾಪಸ್ ಮಾಡುತ್ತೇನೆ ಅನ್ನುತ್ತಾನೆ. ಕುಳ್ಳನ ಪರವಾಗಿ ಒಬ್ಬ ಬ್ರೋಕರ್ ಗ್ಯಾರಂಟಿ ಕೊಡುತ್ತಾನೆ. ಬ್ರೋಕರ್ ಏನೂ ಸುಮ್ಮನೇ ಗ್ಯಾರಂಟಿ ಕೊಡುವುದಿಲ್ಲ. ಕುಳ್ಳನ ಹತ್ತಿರ ಡೆಪಾಸಿಟ್ ಇಸಿದುಕೊಂಡಿರುತ್ತಾನೆ. ಭಾಡಿಗೆಗೆ ಷೇರುಗಳನ್ನು ತೆಗೆದುಕೊಂಡ ಕುಳ್ಳ ನಾಪತ್ತೆಯಾದರೆ ಕುಳ್ಳನ ಡೆಪಾಸಿಟ್ ಹಣದಲ್ಲಿ ಷೇರುಗಳನ್ನು ಖರೀದಿ ಮಾಡಿ ಮೂಲ ಮಾಲೀಕನಿಗೆ ಮುಟ್ಟಿಸುವ ಜವಾಬ್ದಾರಿ ಬ್ರೋಕರನದು.

ಷೇರುಗಳನ್ನು ಭಾಡಿಗೆ ಮೇಲೆ ಕೊಡುವುದೇ? ಭಾಡಿಗೆ ರೊಕ್ಕ ಬಂದರೆ ಯಾರಿಗೆ ಬೇಡ? ಡಿವಿಡೆಂಡ್ ಸಹಿತ ಬರುತ್ತದೆ. ಮೇಲಿಂದ ಬ್ರೋಕರ್ ಗ್ಯಾರಂಟಿ ಬೇರೆ ಕೊಡುತ್ತಾನೆ. ಷೇರುಪೇಟೆಯಲ್ಲಿ ರೊಕ್ಕ ಬಂದರೆ ಯಾರಿಗೆ ಬೇಡ ಹೇಳಿ. ಹಾಗಾಗಿ ಕುಳ್ಳನಿಗೆ ಷೇರುಗಳು ಭಾಡಿಗೆಗೆ ಸಿಗುತ್ತವೆ.

ಭಾಡಿಗೆ ಷೇರುಗಳು ಸಿಕ್ಕ ತಕ್ಷಣ ಕುಳ್ಳ ಮಾಡುವ ಕೆಲಸವೇನು ಗೊತ್ತೇ? ಭಾಡಿಗೆ ಷೇರುಗಳನ್ನು ಮಾರುಕಟ್ಟೆಯಲ್ಲಿ ತನ್ನದೇ ಷೇರುಗಳೇನೋ ಅನ್ನುವಂತೆ ಮಾರಾಟ ಮಾಡಿಬಿಡುತ್ತಾನೆ. ಬಂದ ರೊಕ್ಕ ಎಣಿಸುತ್ತಾನೆ.

ಭಾಡಿಗೆಗೆ ತಂದುಕೊಂಡ ಷೇರುಗಳನ್ನು ಮಾರಿಬಿಡುವ ಕುಳ್ಳನ ಯೋಜನೆ ಏನಿರುತ್ತದೆ? ಭಾಡಿಗೆಗೆ ತೆಗೆದುಕೊಂಡ ಷೇರುಗಳನ್ನು ಮರಳಿಸಬೇಕಲ್ಲ??

ಕುಳ್ಳ ಸುಖಾಸುಮ್ಮನೆ ಷೇರುಪೇಟೆಗೆ ಬಂದಿರುವುದಿಲ್ಲ. ಅವನ ಯೋಜನೆ ಮತ್ತು ಯೋಚನೆ ಖತರ್ನಾಕ್.

ಮುಂದೊಂದು ದಿನ ಷೇರುಪೇಟೆಯಲ್ಲಿ ಎಬಿಸಿಡಿ ಕಂಪನಿಯ ಷೇರುಗಳು ಮಕಾಡೆಯಾಗಿ ಬಿದ್ದವು ಅಂದುಕೊಳ್ಳಿ. ಕುಳ್ಳ ಹೋದವನೇ ಕಮ್ಮಿ ಬೆಲೆಯಲ್ಲಿ ಆ ಷೇರುಗಳನ್ನು ಕೊಳ್ಳುತ್ತಾನೆ. ವಾಯಿದೆ ಪ್ರಕಾರ ಅವನ್ನು ಮೂಲ ಮಾಲೀಕನಿಗೆ ಹಿಂತಿರುಗಿಸಿ ರೊಕ್ಕ ಎಣಿಸುತ್ತ ಹೋಗುತ್ತಿರುತ್ತಾನೆ.

ಇಲ್ಲಿ ಕುಳ್ಳ ರೊಕ್ಕ ಎಲ್ಲಿ ಮಾಡಿಕೊಂಡ?

ಕುಳ್ಳ ಎಬಿಸಿಡಿ ಕಂಪನಿಯ ಷೇರುಗಳನ್ನು ಭಾಡಿಗೆಗೆ ತೆಗೆದುಕೊಂಡಾಗ ಅದರ ಬೆಲೆ ೧೦೦ ರೂಪಾಯಿ ಇತ್ತು ಎಂದಿಟ್ಟುಕೊಳ್ಳಿ. ಅದನ್ನು ಮಾರಿದ ಕುಳ್ಳ ೧೦೦ ರೂಪಾಯಿ ಗಳಿಸಿದ. ನಂತರ ಆ ಷೇರುಗಳು ಬಿದ್ದುಹೋಗಿ ೭೫ ರೂಪಾಯಿ ಆಯಿತು ಅಂದಿಟ್ಟುಕೊಳ್ಳಿ. ಕುಳ್ಳ ಆವಾಗ ಖರೀದಿ ಮಾಡಿದ. ಇದರಲ್ಲಿ ೨೫ ಪರ್ಸೆಂಟ್ ಲಾಭ ಮಾಡಿಕೊಂಡ. ಷೇರುಗಳ ಮೇಲೆ ಒಂದಿಷ್ಟು ಭಾಡಿಗೆ ಅಂತ ಕೊಟ್ಟ. ಒಟ್ಟಿನಲ್ಲಿ ಷೇರು ಬೆಲೆ ಬಿದ್ದಷ್ಟೂ ಕುಳ್ಳನಿಗೆ ಲಾಭ.

ಆಕಸ್ಮಾತ ಷೇರಿನ ಬೆಲೆ ಏರಿಬಿಟ್ಟರೇ? ಕುಳ್ಳನಿಗೆ ನಷ್ಟ. ೧೦೦ ರೂಪಾಯಿಗೆ ಮಾರಿದ ಭಾಡಿಗೆ ಷೇರುಗಳನ್ನು ೧೦೫ ರೂಪಾಯಿಗೆ ಖರೀದಿಸಿ ಮರಳಿಸಬೇಕು ಅಂದರೆ ಕುಳ್ಳನಿಗೆ ಜೀವ ಹೋದಷ್ಟು ನೋವಾಗುತ್ತದೆ. ಮತ್ತೆ ಆಗಬಹುದಾದ ನಷ್ಟಕ್ಕೆ ಲಿಮಿಟ್ ಇಲ್ಲ. ಷೇರುಗಳು ಸಿಕ್ಕಾಪಟ್ಟೆ ಜಂಪ್ ಆಗಿ ೧೦೦ ಬೆಲೆಯ ಎಬಿಸಿಡಿ ಕಂಪನಿ ಷೇರುಗಳು ೧೫೦, ೨೦೦ ಎಲ್ಲ ತಲುಪಿಬಿಟ್ಟರೆ ಕುಳ್ಳ ಮಟಾಷ್!! ಕುಳ್ಳ ರಿಯಾಕ್ಟ್ ಮಾಡುವ ಮೊದಲೇ ಬ್ರೋಕರ್ ಇವನ ಡೆಪಾಸಿಟ್ ಜಪ್ತಿ ಮಾಡಿ, ಅದರಲ್ಲೇ ಬಂದಷ್ಟು ಷೇರುಗಳನ್ನು ಖರೀದಿಸಿ, 'ಯೋ ಕುಳ್ಳ, ಜಾಸ್ತಿ ಡೆಪಾಸಿಟ್ ಕೊಡ್ತೀಯಾ ಅಥವಾ ಅಕೌಂಟ್ ಬಂದ್ ಮಾಡಲಾ?' ಎಂದು ರೋಪ್ ಹಾಕುತ್ತಾನೆ. ಅದೇ ಮಾರ್ಜಿನ್ ಕಾಲ್! ಷೇರುಪೇಟೆಯಲ್ಲಿನ ಧಮ್ಕಿ! ಕುಳ್ಳನ ಮನೆ ಮುಂದೆ ಜನ ಪ್ರತ್ಯಕ್ಷರಾಗುತ್ತಾರೆ. ದೊಡ್ಡ ಪ್ರಮಾಣದ ಲಫಡಾ ಆದರೆ ಕುಳ್ಳ ಮನೆಮಠ ಕಳೆದುಕೊಂಡು ಬೀದಿಗೆ ಬರುತ್ತಾನೆ.

ವೃತ್ತಿಪರ ಕುಳ್ಳರು ತಮ್ಮ ರಿಸರ್ಚ್ ಮಾಡಿಕೊಂಡೇ ಬಂದಿರುತ್ತಾರೆ. ಅವರೂ ನುರಿತ ಪಟುಗಳೇ. ಯಾವ ಕಂಪನಿಯ ಷೇರುಗಳು ಬೀಳಲಿವೆ ಎನ್ನುವ ಅಂದಾಜು ಇಟ್ಟುಕೊಂಡೇ 'ಕುಳ್ಳ ಮಾರಾಟಕ್ಕೆ' ಇಳಿದಿರುತ್ತಾರೆ. ಮತ್ತೆ ತಾವು ಕುಳ್ಳ ವ್ಯಾಪಾರಕ್ಕೆ ಸ್ಕೆಚ್ ಹಾಕಿದ ಷೇರುಗಳ ಮೇಲೆ ಹದ್ದಿನಕಣ್ಣು ಇಟ್ಟಿರುತ್ತಾರೆ. ಷೇರಿನ ಬೆಲೆ ತಾವು ಮಾರಿದ ಬೆಲೆಗಿಂತ ಕೊಂಚ ಮೇಲೆ ಹೋಗುವ ಲಕ್ಷಣ ಕಂಡುಬಂದರೂ ಸಾಕು. ಕುಳ್ಳ ಪಟಾಕ್ ಅಂತ ಷೇರು ಖರೀದಿ ಮಾಡಿಬಿಡುತ್ತಾನೆ. ನಷ್ಟವನ್ನು ಅಷ್ಟಕ್ಕೇ ಲಿಮಿಟ್ ಮಾಡಿಕೊಳ್ಳುತ್ತಾನೆ.

ಒಂದು ಕಂಪನಿಯ ಷೇರುಗಳು ಬೀಳಬಹುದು ಎನ್ನುವ ಮಾಹಿತಿ ಕುಳ್ಳರಿಗೆ ಎಲ್ಲಿಂದ ದೊರೆಯುತ್ತದೆ? ಒಮ್ಮೊಮ್ಮೆ ಆ ಮಾಹಿತಿ ಪಬ್ಲಿಕ್ ಆಗಿಯೇ ಸಿಗುತ್ತದೆ. ಕಂಪನಿ ತೊಂದರೆಯಲ್ಲಿದೆ ಅಂತ ಗೊತ್ತಾದರೆ ಅದರ ಷೇರು ಬೀಳುತ್ತದೆ. ಆದರೆ ಕುಳ್ಳರಿಗೆ ಒಳಗಿನ ಖಾಸಗಿ ಮಾಹಿತಿ ಕೂಡ ಇರುವ ಸಾಧ್ಯತೆಗಳನ್ನು ತೆಗೆದುಹಾಕಲಿಕ್ಕೆ ಸಾಧ್ಯವಿಲ್ಲ. ಅದು insider information. ಅಂತಹ ಮಾಹಿತಿ ಉಪಯೋಗಿಸಿಕೊಂಡು ಕುಳ್ಳ ಮಾರಾಟ ಮಾಡುವುದು ತಪ್ಪು ಮತ್ತು ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಪಡಿಸಬಹುದು. ಆದರೆ ಅದನ್ನು ಕೋರ್ಟಿನಲ್ಲಿ ಸಿದ್ಧ ಮಾಡುವುದು ಅಷ್ಟೇ ಕಷ್ಟ. ಹಾಗಾಗಿ short sellers walk a fine line between legal and illegal.

ಕಂಪನಿಯ ಷೇರುಗಳ ಪೈಕಿ ಎಷ್ಟು ಷೇರುಗಳು ಕುಳ್ಳರ ಹತ್ತಿರ ಇವೆ ಎನ್ನುವ ಮಾಹಿತಿ ಸಾರ್ವಜನಿಕವಾಗಿ ಸಿಗುತ್ತದೆ. ಸ್ಟಾಕ್ ಎಕ್ಸ್ಚೇಂಜ್ ಅವನ್ನು ಕ್ರೋಢೀಕರಿಸಿ ಷೇರುದಾರರಿಗೆ ಸಿಗುವಂತೆ ಮಾಡಿರುತ್ತಾರೆ. ಅದನ್ನೇ short ratio ಅನ್ನುತ್ತಾರೆ. ಕುಳ್ಳ ಅನುಪಾತ! :)

ಕುಳ್ಳ ಅನುಪಾತ ಏರುತ್ತಿದೆ ಅಂದರೆ ಕಂಪನಿಯ ಷೇರು ಬೆಲೆ ಕುಸಿಯಲಿದೆ ಎನ್ನುವ ಲೀಡಿಂಗ್ ಇಂಡಿಕೇಟರ್. ಕುಳ್ಳ ಅನುಪಾತ ಇಳಿಯುತ್ತಿದೆ ಅಂದರೆ ಉಲ್ಟಾ. ಷೇರು ಬೆಲೆ ಏರಲಿದೆ. ಹಾಗಾಗಿ ಕುಳ್ಳರು ಜಾಗ ಖಾಲಿ ಮಾಡುತ್ತಿದ್ದಾರೆ ಎನ್ನುವ ಸೂಚನೆ.

ದೊಡ್ಡ ದೊಡ್ಡ ಅನಾಹುತಗಳಾದಾಗ ತನಿಖಾಧಿಕಾರಿಗಳು ಇದೇ ಕುಳ್ಳ ಅನುಪಾತವನ್ನು ಗಮನಿಸುತ್ತಾರೆ. ಅಮೇರಿಕಾದಲ್ಲಿ ೯/೧೧ ದುರಂತವಾಯಿತು. ಕೆಲ ದಿವಸಗಳ ಮೊದಲು ಅನೇಕ ವಿಮಾನ ಕಂಪನಿಗಳ ಕುಳ್ಳ ಅನುಪಾತ ಏರಿತ್ತು. ಅರ್ಥ ಏನು? ೯/೧೧ ಆಗಲಿದೆ ಎಂದು ಮೊದಲೇ ಗೊತ್ತಿತ್ತು ಅಂತ ತಾನೇ? ವಿಮಾನ ಕಂಪನಿಗಳ ಷೇರುಗಳನ್ನು ಕುಳ್ಳ ಮಾರಾಟ ಮಾಡಲು ಯಾರು ಕೂತಿದ್ದರು? ಅವರಿಗೆ ಮತ್ತು ೯/೧೧ ದುರಂತಕ್ಕೆ  ಕಾರಣನಾದ ಒಸಾಮಾ ಬಿನ್ ಲಾಡೆನ್ ಮತ್ತು ಅಲ್ಕೈದಾಕ್ಕೆ ಏನು ಸಂಬಂಧ? ಅಮೇರಿಕಾ ಹೊತ್ತಿ ಉರಿದರೆ ಇವರು ಅದರಲ್ಲೇ ಬೀಡಿ ಹಚ್ಚಿ ರೊಕ್ಕ ಮಾಡಿಕೊಂಡರೇ? ಆ ದಿಕ್ಕಿನಲ್ಲಿ ತನಿಖೆ ಹೋಯಿತೋ ಇಲ್ಲವೋ ಗೊತ್ತಿಲ್ಲ. ಆದರೆ ೯/೧೧ ಆಗುವ ಕೆಲ ದಿವಸಗಳ ಮೊದಲು ಅನೇಕ ಕಂಪನಿಗಳ, ಅದರಲ್ಲೂ ದೊಡ್ಡ ದೊಡ್ಡ ವಿಮಾನಯಾನ ಕಂಪನಿಗಳ, ಕುಳ್ಳ ಅನುಪಾತ ಗಣನೀಯವಾಗಿ ಏರಿತ್ತು.

ಮೊನ್ನೆ ಕೆಫೆ ಕಾಫಿ ಡೇ ಪ್ರೊಮೋಟರ್ ಸಿದ್ಧಾರ್ಥ್ ಮೃತರಾದರು. ಮರುದಿವಸವೇ ಆ ಕಂಪನಿಯ ಷೇರುಗಳು ೧೦-೨೦% ಬಿದ್ದವು. ಯಾರಾದರೂ ಆ ಕಂಪನಿಯ ಕುಳ್ಳ ಮಾರಾಟದ ಪೊಸಿಷನ್ ತೆಗೆದುಕೊಂಡು ಕೂತಿದ್ದೇ ಹೌದಾದರೆ ಅವರು ಸಿಕ್ಕಾಪಟ್ಟೆ ಕಮಾಯಿಸಿಬಿಟ್ಟರು. ಅವರಿಗೆ ಒಳಗಿನ ಮಾಹಿತಿ ಏನಾದರೂ ಗೊತ್ತಿತ್ತೇ? ತನಿಖಾಧಿಕಾರಿಗಳು ಆ ಬಗ್ಗೆ ವಿಚಾರಣೆ ಮಾಡಿರುತ್ತಾರೆ ಬಿಡಿ. ಈಗ ಅದೊಂದು ಸಾಮಾನ್ಯ ಪ್ರಕ್ರಿಯೆ ಆಗಿಬಿಟ್ಟಿದೆ. ತನಿಖಾ ಸಂಸ್ಥೆಗಳು ಮತ್ತು ಸ್ಟಾಕ್ ಎಕ್ಸ್ಚೇಂಜ್ ಗಳು ಕುಳ್ಳ ಅನುಪಾತದ ಮೇಲೆ ಮತ್ತು ಖತರ್ನಾಕ್ ಕುಳ್ಳರ ಮೇಲೆ ಒಂದು ಕಣ್ಣು ಇಟ್ಟಿರುತ್ತವೆ. ಖತರ್ನಾಕ್ ಕುಳ್ಳರು ಎಷ್ಟು ಜಾಬಾದ್ ಇರುತ್ತಾರೆ ಅಂದರೆ ದೊಡ್ಡ ದೊಡ್ಡ ಕುಳಗಳಿಗೇ ಗುಂಡು ತುಂಡು ಎಲ್ಲ ಸಮರ್ಪಣೆ ಮಾಡಿ ಅವರನ್ನೂ ಒಳಗಾಕಿಕೊಂಡಿರುತ್ತಾರೆ. ಒಂದು ತರಹದ ಮ್ಯಾಚ್ ಫಿಕ್ಸಿಂಗ್. ಎಲ್ಲರೂ ಬಿಕರಿಯಾಗುವವರೇ! ಅಷ್ಟೇ ಸರಿಯಾದ ಬೆಲೆ ಬಂದಾಗ ಮಾತ್ರ. ಸರಿಯಾದ ಬೆಲೆಗೆ  ಎಲ್ಲರೂ ಬಿಕರಿಯಾಗಿ ಷೇರುಪೇಟೆ ತನ್ನ ಮೇಲಿನ ನಂಬಿಕೆ ಕಳೆದುಕೊಳ್ಳುತ್ತದೆ. ಷೇರುಪೇಟೆಯಲ್ಲಿ ಭೂಗತಲೋಕದ ಹೂಡಿಕೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಹಾಗಾಗಿ ಕೆಲವು ದೊಡ್ಡ ಪಂಟರುಗಳು, ಅವರು ಸಾಮಾನ್ಯ ಹೂಡಿಕೆದಾರರು ಇರಬಹುದು ಅಥವಾ ಕುಳ್ಳರಿರಬಹುದು, ಅವರು ಭೂಗತ ಲೋಕದ ಜೊತೆ ಸಂಪರ್ಕ ಇಟ್ಟುಕೊಂಡಿದ್ದರೆ ಆಶ್ಚರ್ಯವಿಲ್ಲ.

ಕೆಲವು ದೇಶಗಳು ಈ ಕುಳ್ಳ ಮಾರಾಟ ಪದ್ಧತಿಯನ್ನು ನಿಷೇಧಿಸಿವೆ. ಹೆಚ್ಚಿನ ದೇಶಗಳು 'ನಗ್ನ ಕುಳ್ಳ ಮಾರಾಟ' (naked short selling) ಮಾತ್ರ ನಿಷೇಧಿಸಿವೆ. ನಗ್ನ ಕುಳ್ಳ ಮಾರಾಟದಲ್ಲಿ ಕುಳ್ಳರು ಷೇರುಗಳನ್ನು ಭಾಡಿಗೆಗೂ ತೆಗೆದುಕೊಳ್ಳುವುದಿಲ್ಲ. ಷೇರುಗಳು ಇವೆ ಎಂದು ಸುಳ್ಳು ಹೇಳಿ ಮಾರಾಟ ಮಾಡಿಕೊಂಡು ಗಾಯಬ್ ಆಗುತ್ತಾರೆ. ಮೂರು ದಿವಸಗಳ ನಂತರ ಕುಳ್ಳರಿಂದ ಷೇರು ಕೊಂಡವನಿಗೆ ಷೇರು ಸಿಗದೇ ಆ ಟ್ರೇಡ್ ಫೇಲ್ ಆಗುತ್ತದೆ. ಮತ್ತೂ ಇನ್ನಿತರ ತೊಂದರೆಗಳೂ ಆಗಿ ಮಾರುಕಟ್ಟೆ ಮೇಲೆ ಮತ್ತು ಕಂಪನಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಹೀಗಾಗಿ ನಗ್ನ ಕುಳ್ಳರನ್ನು ಶಿಕ್ಷಿಸುವ ಕಾನೂನುಗಳೂ ಇವೆ.

ಒಮ್ಮೊಮ್ಮೆ ಸರ್ಕಾರವೇ ಕುಳ್ಳ ಮಾರಾಟವನ್ನು ನಿಷೇಧಿಸುತ್ತದೆ. ೨೦೦೮ ರಲ್ಲಿ ದೊಡ್ಡ ಮಟ್ಟದ ಆರ್ಥಿಕ ಹಡಾಗತಿ ಆಗಿ, ಅಮೇರಿಕಾದ ಆರ್ಥಿಕ ವ್ಯವಸ್ಥೆ ಅದರಲ್ಲೂ ಅಮೇರಿಕಾದ ಬ್ಯಾಂಕುಗಳೆಲ್ಲ ತಲೆ ಮೇಲೆ ಟಾವೆಲ್ ಹಾಕಿಕೊಂಡು ಮಕಾಡೆ ಮಲಗಿದಾಗ ಅವುಗಳ ಷೇರುಗಳ ಕುಳ್ಳ ವ್ಯಾಪಾರ ಮಾಡುವುದನ್ನು ತಾತ್ಕಾಲಿಕವಾಗಿ ಸರ್ಕಾರ ನಿಷೇಧಿಸಿತ್ತು. ಮೊದಲೇ ಸಾಯಲು ಬಿದ್ದಿದ್ದ ಬ್ಯಾಂಕುಗಳು. ಕುಳ್ಳರು ಅವಕ್ಕೂ ಸ್ಕೆಚ್ ಹಾಕಿದ್ದರೆ ಅಮೇರಿಕಾ ಜೊತೆಗೆ ವಿಶ್ವದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಗೋವಿಂದಾ ಗೋವಿಂದಾ ಆಗುತ್ತಿತ್ತು ಅನ್ನುವ ಭಯ. ಆದರೂ Lehman Brothers ಎನ್ನುವ ದೊಡ್ಡ investment bank ಢಮ್ ಅಂದುಹೋಗಲು ಈ ಕುಳ್ಳರ ಕಾಣಿಕೆ ಸಹಿತ ದೊಡ್ಡ ಮಟ್ಟದಲ್ಲಿ ಕಾರಣ.

ಇಷ್ಟೆಲ್ಲಾ ಹೇಳಿದ ಮೇಲೆ ಕುಳ್ಳ ಮಾರಾಟ ತಪ್ಪು ಅಂತಲ್ಲ. ಅದು ಒಂದು stock portfolio management ಮಾಡುವ ವಿಧಾನ. ರಿಸ್ಕ್ ಮ್ಯಾನೇಜ್ ಮಾಡಲು ತುಂಬಾ ಸಹಾಯಕಾರಿ. ಕೆಲವು ಷೇರುಗಳ ಮೇಲೆ ಲಾಂಗ್ ಪೊಸಿಷನ್ ತೆಗೆದುಕೊಂಡರೆ, ಅವುಗಳ ಮೇಲಿನ ರಿಸ್ಕ್ ಮ್ಯಾನೇಜ್ ಮಾಡಲು ಬೇರೆ ಕೆಲವು ಷೇರುಗಳ ಮೇಲೆ ಶಾರ್ಟ್ (ಕುಳ್ಳ) ಪೊಸಿಷನ್ ತೆಗೆದುಕೊಂಡರೆ ಅಲ್ಲಿಗಲ್ಲಿಗೆ ರಿಸ್ಕ್ ತಕ್ಕಮಟ್ಟಿಗೆ hedge ಆದಂತೆ. Hedge funds ಇಂತಹ ಅನೇಕಾನೇಕ ಟೆಕ್ನೀಕುಗಳನ್ನು ಉಪಯೋಗಿಸುತ್ತವೆ. ಹಾಗಾಗಿಯೇ ಷೇರುಪೇಟೆ ಹೇಗೇ ಇದ್ದರೂ ಅವು ಸದಾ ಲಾಭದಲ್ಲೇ ಇರುತ್ತವೆ. ಅಥವಾ ಲಾಭದಲ್ಲಿ ಇರಲು ಸಾಧ್ಯ ಅಂತ ತಮ್ಮ ಹೂಡಿಕೆದಾರರಿಗೆ ಹೇಳುತ್ತವೆ.

ಕುಳ್ಳ ಮಾರಾಟದಲ್ಲಿ ಷೇರನ್ನು ಭಾಡಿಗೆಗೆ ತೆಗೆದುಕೊಳ್ಳುವುದು, ಅದಕ್ಕೆ ಭಾಡಿಗೆ ಕೊಡುವುದು, ಮಾರಾಟ ಮಾಡುವುದು, ಬೆಲೆ ಕಮ್ಮಿಯಾದಾಗ ವಾಪಸ್ ಖರೀದಿ ಮಾಡುವುದು ಎಲ್ಲ automated. ಎಲ್ಲ ಕಂಪ್ಯೂಟರಗಳ ಮೂಲಕ ಆಗಿಹೋಗುತ್ತದೆ. ಅಲ್ಲಿ ಯಾರು ಕುಳ್ಳ, ಯಾರು ಲಂಬೂ, ಯಾರು ಬ್ರೋಕರ್ ಏನೂ ತಿಳಿಯುವುದಿಲ್ಲ. ಷೇರುಪೇಟೆಯ ಗೂಳಿ, ಕರಡಿಗಳ ಮಧ್ಯೆ ಎಲ್ಲರೂ ಕಳೆದುಹೋಗುತ್ತಾರೆ!

ಕಳ್ಳರನ್ನು ನಂಬಿದರೂ ಕುಳ್ಳರನ್ನು ನಂಬಬಾರದಂತೆ. ಆದರೆ ಷೇರುಪೇಟೆಯ ಕುಳ್ಳರನ್ನು ನಂಬಿ. ಏಕೆಂದರೆ ಅವರಿಗೆ ಗೊತ್ತಿರುವ ಮಾಹಿತಿ ಯಾರಿಗೂ ಗೊತ್ತಿರುವುದಿಲ್ಲ. ಅಷ್ಟೇ ಅವರನ್ನೂ ಸಹ ಅಳೆದೂ ತೂಗಿಯೇ ನಂಬಿ!

Monday, July 29, 2019

ಆರ್ಥಿಕ ಸ್ವಾತಂತ್ರ್ಯ & ಬೇಗನೆ ನಿವೃತ್ತಿ... ಹೊಸ ತಲೆಮಾರಿನ ವಿನೂತನ ಚಿಂತನೆ

ಅಮೇರಿಕಾದ millennial ತಲೆಮಾರಿನ ಯುವಜನತೆ ಹೊಸ ಯೋಚನೆ / ಯೋಜನೆಯೊಂದರ ಹಿಂದೆ ಬಿದ್ದಿದೆ. ಹಾಗಾಗಿ ಬೆಂಕಿ ಬಿದ್ದಿದೆ.

ಬೆಂಕಿ ಬಿದ್ದಿದೆ?? ಅಂದ್ರೆ ಏನ್ರೀ??

ಬೆಂಕಿ = FIRE ಅಂದರೆ Financial Independence & Retire Early. ಅದನ್ನೇ "ಆರ್ಥಿಕ ಸ್ವಾತಂತ್ರ್ಯ & ಬೇಗನೆ ನಿವೃತ್ತಿ" ಅಂದಿದ್ದು.

ಹೊಸ ತಲೆಮಾರಿನವರ ಈ 'ಬೆಂಕಿಯಂತಹ' ಯೋಚನೆ ಏನು ಅಂದರೆ ಆದಷ್ಟು ಬೇಗ ಆರ್ಥಿಕವಾಗಿ ಸ್ವತಂತ್ರರಾಗುವುದು ಮತ್ತು ಬೇಗ ನಿವೃತ್ತಿ ತೆಗೆದುಕೊಳ್ಳುವುದು.

ಆರ್ಥಿಕ ಸ್ವಾತಂತ್ರ್ಯ ಅಂದರೆ ಸಾಲ ಇರಬಾರದು. ಇದ್ದರೂ ತೀರಿಸಲು ಬೇಕಾಗುವ ದುಡ್ಡಿಗಾಗಿ ಸಂಬಳದ ಹಂಗಿನಲ್ಲಿ ಇರಬಾರದು. ಜೀವನದ ಅಗತ್ಯಗಳಿಗಾಗಿ ಕೆಲಸ ಮಾಡಲೇಬೇಕು ಅನ್ನುವಂತಹ ಪರಿಸ್ಥಿತಿ ಇರಬಾರದು. ಇಷ್ಟಿದ್ದ ಮೇಲೆ ನೀವು ನಿಮ್ಮ ಖುಷಿಯ ಕೆಲಸ ಮಾಡಿ, ಅದರಿಂದ ರೊಕ್ಕ ಮಾಡಿಕೊಂಡರೆ ಅದು ನಿಮಗೆ ಬಿಟ್ಟಿದ್ದು. ಕೇವಲ ಸಂಬಳಕ್ಕಾಗಿ ಮಾತ್ರ ಕೆಲಸ ಮಾಡುವ compulsion ಇರಬಾರದು.

ಬೇಗನೆ ನಿವೃತ್ತಿ ಅಂದರೆ ಎಲ್ಲ ಬಿಟ್ಟು ಕೂತುಬಿಡುವುದು ಅಂತಲ್ಲ. ಆತ್ಮಸಂತೋಷದ ಕೆಲಸ ಮಾಡಿಕೊಂಡಿರುವುದು. ಎಲ್ಲರೂ ಎರಡೇ ಕಾರಣಕ್ಕೆ ಕೆಲಸ ಮಾಡುತ್ತಾರೆ. ೧) ಕೆಲಸ ಮಾಡದಿದ್ದರೆ ಹೊಟ್ಟೆ ತುಂಬುವುದಿಲ್ಲ. ೨) ಮಾಡುವ ಕೆಲಸವನ್ನು ಅದೆಷ್ಟು ಪ್ರೀತಿಸುತ್ತಾರೆ ಅಂದರೆ ರೊಕ್ಕ ಬರದಿದ್ದರೂ ಅವರು ಆ ಕೆಲಸ ಮಾಡಲಿಕ್ಕೆ ತಯಾರಿರುತ್ತಾರೆ.

೯೯. ೯೯% ಜನ ಮೊದಲನೇ ವರ್ಗಕ್ಕೆ ಸೇರುವವರು. ಜೀವನೋಪಾಯಕ್ಕೊಂದು ಕೆಲಸ ಬೇಕು. ಏನೋ ಒಂದು ಕೆಲಸ ಆರಂಭ ಮಾಡಿದ್ದಾಗಿದೆ. ಏನೋ ಒಂದು ರೀತಿಯ ಪ್ರಾವಿಣ್ಯತೆ ಬಂದಿದೆ. ತಕ್ಕಮಟ್ಟಿನ ಸಂಬಳ ಸಿಗುತ್ತಿದೆ. ಮೈತುಂಬಾ ಜವಾಬ್ದಾರಿಗಳಿವೆ. ಕೆಲಸ ಬಿಡುವಂತಿಲ್ಲ. ನಿವೃತ್ತಿಯ ಬಗ್ಗೆ ವಿಚಾರ ಮಾಡುವುದು ದೂರದ ಮಾತು. ನಿವೃತ್ತಿಯ ಕನಸನ್ನು ಕಾಣುವುದೂ ಕೂಡ ಕಷ್ಟ. ಗಾಣದೆತ್ತಿನಂತೆ ಸಾಯುವ ತನಕ ಅಥವಾ  ವಯಸ್ಸು ಅರವತ್ತು ಆಗುವ ತನಕ, most importantly ಒಂದು ದೊಡ್ಡ ಮಟ್ಟದ ರೊಕ್ಕದ ಗಂಟು ಕೂಡುವ ತನಕ ಕೆಲಸ ಮಾಡಲೇಬೇಕು. ಆ ಕೆಲಸ soul crushing ಇದ್ದರೂ ಸರಿ. ಆತ್ಮಸಂತೋಷವನ್ನು ಕೊಂದಾದರೂ ರೊಕ್ಕ ಮಾಡಲೇಬೇಕು.

ಇನ್ನು ೦. ೦೧% ಜನ ಎರಡನೇ ವರ್ಗದವರು. ತುಂಬಾ ಅದೃಷ್ಟವಂತರು. ಅವರಿಗೆ perfect ಆಗಿ ಹೊಂದುವ ಕೆಲಸಕ್ಕೆ ಇವರು ಬರೋಬ್ಬರಿ ಬಂದುಬಿಟ್ಟಿರುತ್ತಾರೆ. ಆ ಕೆಲಸದಲ್ಲೇ ಕೈಲಾಸ ಕಂಡು ಸಂತೋಷ ಪಡುವವರು. ಅಂತವರಲ್ಲಿ ಕೆಲವರು ತುಂಬಾ ರೊಕ್ಕ ಕೂಡ ಸಂಪಾದಿಸುತ್ತಾರೆ. ರೊಕ್ಕ ಕಮ್ಮಿ ಗಳಿಸಿದರೂ ಆತ್ಮಸಂತೋಷದ ಕಾರಣ ಕೆಲಸದಲ್ಲಿ  ಮುಳುಗಿರುತ್ತಾರೆ. ಅವರು ಸತ್ತರೂ ಆ ಕೆಲಸ ಬಿಟ್ಟು ಬರುವುದಿಲ್ಲ. ಅವರಿಗೆ ಈ FIRE ಅಭಿಯಾನ ದೊಡ್ಡ ಮಾತಲ್ಲ. ಆತ್ಮಸಂತೋಷದ ಕೆಲಸ ಒಂದು ತರಹದ ನಿವೃತ್ತಿಯೇ. When you enjoy your work, your vocation becomes your vacation.

ಹಾಗಾದರೆ ಆರ್ಥಿಕ ಸ್ವಾತಂತ್ರ್ಯ ಗಳಿಸುವುದು ಹೇಗೆ? ರೊಕ್ಕ ಗಳಿಸಲೂ ರೊಕ್ಕ ಬೇಕು. ಹಾಗಾಗಿ ಮೊದಲು ಒಂದು ಕೆಲಸ ಮಾಡಲೇಬೇಕು. ಸಂಬಳ ಗಳಿಸಬೇಕು. ಗಳಿಸಿದ್ದರಲ್ಲಿ ಗರಿಷ್ಠ ಮೊತ್ತವನ್ನು ಉಳಿಸಬೇಕು. ಉಳಿಸಿದ್ದನ್ನು ಜತನದಿಂದ ಹೂಡಿಕೆ ಮಾಡಿ ಬೆಳೆಸಬೇಕು. ಹಾಗೆ ಹನಿಹನಿಯಾಗಿ ಬೆಳೆದಿದ್ದು ಒಂದು ಹಂತ ಮುಟ್ಟಿದಾಗ ಸಿಗುತ್ತದೆ ಆರ್ಥಿಕ ಸ್ವಾತಂತ್ರ್ಯ. FIRE ಅಭಿಯಾನಕ್ಕೆ ಪೂರಕ ಪರಿಕಲ್ಪನೆ minimalism. minimalism ಅಂದರೆ ಅನವಶ್ಯಕ ಖರ್ಚುಗಳನ್ನು ಕಮ್ಮಿ ಮಾಡುವುದು. ಇದು ಕೇವಲ ರೊಕ್ಕ ಉಳಿಸಲು ಮಾತ್ರವಲ್ಲ, ಜೀವನವನ್ನು ಸರಳ ಮಾಡಿಕೊಳ್ಳಲೂ ಸಹ minimalism ತುಂಬಾ ಸಹಾಯಕಾರಿ.

ಆರ್ಥಿಕ ಸ್ವಾತಂತ್ರ್ಯ ಬಂತು ಅಂತ ಹೇಗೆ ತಿಳಿದುಕೊಳ್ಳುವುದು? ಆರ್ಥಿಕ ಸ್ವಾತಂತ್ರ್ಯಕ್ಕೆ ಒಂದೇ ವ್ಯಾಖ್ಯಾನವಿಲ್ಲ. ಅದು ವೈಯಕ್ತಿಕ. ಆದರೆ ಒಂದು ಜನರಲ್ ವ್ಯಾಖ್ಯಾನ ಕೊಡಬಹುದು. ಅದೇನು ಅಂದರೆ...

೧) ಸಾಲ ಇರಬಾರದು. ಸಾಲ ಇದ್ದರೂ ತಿಂಗಳ ಕಂತನ್ನು ಕಟ್ಟುವಷ್ಟು ರೊಕ್ಕ ನಿಮ್ಮ ಹೂಡಿಕೆಗಳಿಂದ ಬರುತಿರಬೇಕು.

೨) ದೊಡ್ಡ ದೊಡ್ಡ ಖರ್ಚುಗಳಿಗೆ ಬೇರೆ ಬೇರೆ ಫಂಡ್ಸ್ ತೆಗೆದಿಟ್ಟಿರಬೇಕು. ಉದಾಹರಣೆಗೆ: ಮಕ್ಕಳ ಶಿಕ್ಷಣಕ್ಕೆ, ವಿವಾಹಗಳಿಗೆ, ಮತ್ತಿತರ ಖರ್ಚುಗಳಿಗೆ.

೩) ಮಾಸಿಕ / ವಾರ್ಷಿಕ ಖರ್ಚಿನಲ್ಲಿ ಜಾಸ್ತಿ ವ್ಯತ್ಯಾಸ ಬರಬಾರದು. ಖರ್ಚಿಗೆ ತಿಂಗಳಿಗೆ ಸರಾಸರಿ ೫೦,೦೦೦ ಬೇಕು ಅಂತಿಟ್ಟುಕೊಳ್ಳಿ. ಮುಂದಿನ ವರ್ಷ ತಿಂಗಳಿಗೆ ಒಮ್ಮೆಲೇ ೧,೦೦,೦೦೦ ಖರ್ಚು ಬರುವಂತಿರಬಾರದು. ಬರುವಂತಿದ್ದರೆ ಹೆಚ್ಚಿನ ಖರ್ಚಿಗೆ ಬೇರೆ ಒಂದು category ಯಲ್ಲಿ ಪ್ರತ್ಯೇಕ ಫಂಡ್ ಇರಬೇಕು. ವರ್ಷದಿಂದ ವರ್ಷಕ್ಕೆ ಖರ್ಚು ಹಣದುಬ್ಬರದ ಅನುಪಾತದಲ್ಲಿ ಬೆಳೆಯಬಹುದು ಅಷ್ಟೇ.

೪) ಆರೋಗ್ಯ ವಿಮೆ ಮತ್ತಿತರ ವಿಮೆ ಇರಬೇಕು. ವಿಮೆ ಇಲ್ಲ ಅಂದರೆ ಒಂದು ಸಣ್ಣ ಅನಾರೋಗ್ಯ ಹಣಕಾಸು ಪರಿಸ್ಥಿತಿಯನ್ನು ರಾಡಿ ಎಬ್ಬಿಸಿಬಿಡಬಹುದು.

ಇಷ್ಟು ಇದ್ದ ಮೇಲೆ... ನಿಮ್ಮ ಹತ್ತಿರ ವಾರ್ಷಿಕ ಖರ್ಚಿನ ೨೫ ಪಟ್ಟು ಮೊತ್ತದ ರೊಕ್ಕವಿದ್ದರೆ ನೀವು ಆರ್ಥಿಕವಾಗಿ ಸ್ವತಂತ್ರರು. ನಿಮ್ಮ ಮಾಸಿಕ ಖರ್ಚು ೫೦,೦೦೦ ಅಂದಿಟ್ಟುಕೊಳ್ಳಿ. ವಾರ್ಷಿಕ ಖರ್ಚು ೬,೦೦,೦೦೦ ಆಯಿತು. ೬,೦೦,೦೦೦ x ೨೫ = ೧,೫೦,೦೦,೦೦೦. ಒಂದು ಕೋಟಿ ಐವತ್ತು ಲಕ್ಷ. ಇದರಿಂದ ವರ್ಷವೂ ೪% ತೆಗೆದರೆ ನಿಮ್ಮ ವಾರ್ಷಿಕ ಖರ್ಚು ೬,೦೦,೦೦೦ ಬರುತ್ತದೆ. ಹಾಗಾಗಿ ಇದಕ್ಕೆ ೪% ನಿಯಮ ಎಂದು ಕೂಡ ಹೇಳುತ್ತಾರೆ. ಇದು FIRE ಅಭಿಯಾನದ ಬೆನ್ನುಮೂಳೆ.

ಯಾವತ್ತು ನಿಮ್ಮ ಕಡೆ ನಗದು ರೋಕ್ಡಾ ಒಂದೂವರೆ ಕೋಟಿ ಬಂತೋ ಅಂದು ನೀವು ಆರ್ಥಿಕವಾಗಿ ಸ್ವತಂತ್ರರು.

ನೀವು ಇನ್ನೂ conservative ಮತ್ತು ಕಮ್ಮಿ ರಿಸ್ಕ್ ತೆಗೆದುಕೊಳ್ಳಬೇಕು ಅಂದರೆ ವಾರ್ಷಿಕ ಖರ್ಚಿನ ೩೩ ಪಟ್ಟು ಇರುವ ಗಂಟಿನ ಗುರಿ ಇಟ್ಟುಕೊಳ್ಳಿ. ಅದು ಮತ್ತೂ ಸೇಫ್. ಅದಕ್ಕಾಗಿ ಬೇಕಾಗುವ ಗಂಟು ಸುಮಾರು ಎರಡು ಕೋಟಿ. ಅಷ್ಟೇ. ಇದು ೩% ನಿಯಮ.

ಕೇವಲ ಇಷ್ಟು ರೊಕ್ಕ ಮಾಡಿಟ್ಟುಕೊಂಡುಬಿಟ್ಟರೆ ಬೇಗನೆ ನಿವೃತ್ತಿ ತೆಗೆದುಕೊಂಡು ಕೂತುಬಿಡಬಹುದೇ? ರೊಕ್ಕ ಇದ್ದರಷ್ಟೇ ಸಾಲದು ಸ್ವಾಮೀ. ರೊಕ್ಕ ಬೆಳೆಯಬೇಕು ಕೂಡ. ಅರವತ್ತು ವರ್ಷಕ್ಕೆ ನಿವೃತ್ತರಾದಾಗಲೇ ಮತ್ತೂ ಇಪ್ಪತ್ತೈದು ಮೂವತ್ತು ವರ್ಷಗಳಿಗಾಗಿ ಪ್ಲಾನ್ ಮಾಡಬೇಕಾಗುತ್ತದೆ. ಮೂವತ್ತು ನಲವತ್ತು ವಯಸ್ಸಿಗೆಲ್ಲ ರಿಟೈರ್ ಆದರೆ ಕಮ್ಮಿ ಕಮ್ಮಿಯೆಂದರೂ ೪೦-೫೦ ವರ್ಷಕ್ಕಾಗಿ ಪ್ಲಾನ್ ಮಾಡಬೇಕಾಗುತ್ತದೆ. ಹಾಗಾಗಿ ಈ ರೊಕ್ಕ ಕಮ್ಮಿ ಕಮ್ಮಿಯೆಂದರೂ ೬-೮% ದರದಲ್ಲಿ ಬೆಳೆಯಬೇಕು. ಯಾಕೆ ಅಂದರೆ ಸುಮಾರು ೪% ಹಣವನ್ನು ವಾರ್ಷಿಕ ಹಣದುಬ್ಬರ (inflation) ತಿಂದುಹಾಕುತ್ತದೆ. ಮತ್ತೊಂದು ೪% ನಿಮ್ಮ ಖರ್ಚಿಗಾಗಿ ಬೇಕು. ಹಾಗಾಗಿ ಕನಿಷ್ಠ ೮% ದರದಲ್ಲಿ ನಿಮ್ಮ ಇಡುಗಂಟು ಬೆಳೆದರೆ ನಿಮ್ಮ ಖರ್ಚಿಗೂ ಸಾಕು ಮತ್ತು ಅಸಲು ಹಾಗೆ ಉಳಿಯುತ್ತದೆ. ಒಂದು ವರ್ಷ ಹೆಚ್ಚು ಮತ್ತೊಂದು ವರ್ಷ ಕಮ್ಮಿ ಬಂದರೂ ಓಕೆ. ನಿಮ್ಮ ವಾರ್ಷಿಕ ಖರ್ಚು ಮಾತ್ರ ಬದಲಾಗಬಾರದು.

FIRE ಅಭಿಯಾನ ಏಕೆ ಆರಂಭವಾಯಿತು? ಆತ್ಮಸಂತೋಷಕ್ಕಾಗಿ. ಸಂಬಳಕ್ಕಾಗಿ ಕೆಲಸ ಮಾಡಿದ್ದು ಸಾಕು. ಇನ್ನೊಂದಿಷ್ಟು ವರ್ಷ ಆತ್ಮಸಂತೋಷಕ್ಕಾಗಿ ಬದುಕೋಣ ಎನ್ನುವ ಆಸೆ.

ಎಷ್ಟೋ ಜನರಿಗೆ ನಿವೃತ್ತರಾಗುವ ಆಸೆ ಇರುತ್ತದೆ. ಆರ್ಥಿಕವಾಗಿಯೂ ಸ್ವತಂತ್ರರಾಗಿರುತ್ತಾರೆ. ಅದು ಅವರಿಗೆ ಗೊತ್ತಿರುವುದಿಲ್ಲ ಅಷ್ಟೇ. 'ಮುಂದೆ ರೊಕ್ಕ ಕಮ್ಮಿ ಬಿದ್ದೀತು,' ಎನ್ನುವ ಆತಂಕದಲ್ಲಿ ಕೆಲಸ ಮಾಡುತ್ತಲೇ ಇರುತ್ತಾರೆ. FIRE ಉಪಯೋಗಿಸುವ ೪% ನಿಯಮದ framework ಒಂದು ಫಾರ್ಮುಲಾ ಕೊಡುತ್ತದೆ. ಅವರವರ ಆರ್ಥಿಕ ಸ್ವಾತಂತ್ರ್ಯದ ಮಟ್ಟವನ್ನುಅರಿಯಲೊಂದು ಸಾಧನ.

ಸರಿಯಾಗಿ ಯೋಚಿಸಿ ಯೋಜನೆ ಮಾಡಿಕೊಂಡರೆ ೨೨ ವರ್ಷದಲ್ಲಿ ಕೆಲಸ ಶುರುಮಾಡಿ, ಒಳ್ಳೆ ಕೆಲಸ ಮಾಡಿ, ಒಳ್ಳೆ ಸಂಬಳ ಗಳಿಸಿ, ಗಳಿಸಿದ್ದರಲ್ಲಿ ಜಾಸ್ತಿ ಉಳಿಸಿ, ಉಳಿಸಿದ್ದನ್ನು ಕ್ರಮಬದ್ಧವಾಗಿ ಹೂಡಿಕೆ ಮಾಡಿ ಬೆಳೆಸಿ ಒಂದು ಗಂಟು ಮಾಡಿಟ್ಟುಕೊಂಡರೆ ೩೫-೪೦ ವರ್ಷಕ್ಕೆ ನಿವೃತ್ತರಾಗುವುದು ಸಾಧ್ಯ. ಹಾಗಂತ FIRE ಮಂದಿಯ ಅಭಿಮತ. ನಿವೃತ್ತಿಯೆಂದರೆ, ನೆನಪಿಡಿ, ಪೂರ್ತಿ ವಿಶ್ರಾಂತ ಜೀವನವಲ್ಲ. ಆತ್ಮಸಂತೋಷದ ಕೆಲಸ ಮಾಡಿಕೊಂಡಿರಬಹುದು. ಯಾರಿಗೆ ಗೊತ್ತು? ಅದರಲ್ಲೇ ದೊಡ್ಡ ಕಮಾಯಿ ಆಗಬಹುದು.

ಹೆಚ್ಚಿನ ಮಾಹಿತಿಗಾಗಿ ಒಂದಿಷ್ಟು ಲಿಂಕುಗಳು:

https://en.wikipedia.org/wiki/FIRE_movement

https://www.firecalc.com/

https://www.mrmoneymustache.com/

https://www.investopedia.com/terms/f/four-percent-rule.asp

https://www.theminimalists.com/minimalism/

Sunday, July 28, 2019

ಬಡ್ಡಿಮಕ್ಕಳ ದುನಿಯಾ

ಊರಿಗೆ ಒಂದು ದಾರಿಯಾದರೆ, ಪೋರನಿಗೊಂದು ದಾರಿ - ಹೀಗೆ ಒಂದು ಗಾದೆ ಮಾತಿದೆ. ವಿಶ್ವದ ಉಳಿದ ಎಲ್ಲ ದೇಶಗಳ ಆರ್ಥಿಕ ಸಮಸ್ಯೆಗಳೇ ಒಂದು ರೀತಿಯವು. ನಮ್ಮ ಅಮೆರಿಕಾದ ಆರ್ಥಿಕ ಸಮಸ್ಯೆಗಳೇ ಪೂರ್ತಿ ವಿಚಿತ್ರ ರೀತಿಯವು.

ಅಮೆರಿಕಾದ ಆರ್ಥಿಕ ತಜ್ಞರು ತಲೆಕೆಡಿಸಿಕೊಂಡು ಕೂತಿದ್ದಾರೆ. 'ಹಣದುಬ್ಬರ (inflation) ತುಂಬಾ ಕಮ್ಮಿಯಾಗಿಬಿಟ್ಟಿದೆ. ಕನಿಷ್ಠ ೨% ಹಣದುಬ್ಬರ ಇರಬೇಕೆಂದು ಆರ್ಥಿಕ ನೀತಿ ರೂಪಿಸಿದರೆ, ಹಣದುಬ್ಬರ ೧.೫% ಗೆ ಇಳಿದುಬಿಟ್ಟಿದೆ. ಹೀಗಾದ್ರೆ ಹೆಂಗೆ ಸಿವಾ!' ಅಂತ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

ಹಣದುಬ್ಬರ ಕಮ್ಮಿಯಾದರೆ ಒಳ್ಳೆಯದಲ್ಲವೇ? ಅಲ್ಲವಂತೆ. ಹಣದುಬ್ಬರ ಒಂದು ಮಟ್ಟಕ್ಕಿಂತ ಕಮ್ಮಿಯಾಗಿ ಹೋದರೆ ಆರ್ಥಿಕ ವಹಿವಾಟುಗಳು ಕಮ್ಮಿಯಾಗುತ್ತವೆ. ದೊಡ್ಡ ದೊಡ್ಡ ಟಿಕೆಟ್ ವಸ್ತುಗಳನ್ನು ಕೊಳ್ಳುವ ಇರಾದೆಯನ್ನು ಜನ ಮುಂದೂಡುತ್ತಾರೆ. ಅರೆ! ಇದು ವಿಚಿತ್ರವಾಗಿದೆಯೆಲ್ಲಾ!? ಅಂತ ಅಂದುಕೊಂಡರೆ ಇದೊಂದು ಅರ್ಥಶಾಸ್ತ್ರದ paradox. ಕಮ್ಮಿ ಹಣದುಬ್ಬರ ನಿತ್ಯಜೀವನಕ್ಕೆ ಬೇಕಾದ ವಸ್ತುಗಳನ್ನು ಕೊಳ್ಳಲು ಸಹಾಯಕ. ಆದರೆ ಕಮ್ಮಿ ಹಣದುಬ್ಬರ ಹಾಗೇ ಇದ್ದುಬಿಟ್ಟರೆ ಜನ ದೊಡ್ಡ ಟಿಕೆಟ್ ವಸ್ತುಗಳ ಖರೀದಿಯನ್ನು ಮುಂದೂಡುತ್ತಲೇ ಹೋಗುತ್ತಾರೆ. ಬೆಲೆ ಮುಂದೆ ಇನ್ನೂ ಕಮ್ಮಿಯಾದೀತು ಅನ್ನುವ ದು(ದೂ)ರಾಸೆ. ಹಾಗಾಗಿ ವಾಣಿಜ್ಯವನ್ನು ಪ್ರಚೋದಿಸಲು 'ಆರೋಗ್ಯಕರ' ಹಣದುಬ್ಬರ ಇರಬೇಕಂತೆ! ಹೊಡೀರಿ ಹಲಗಿ!

ಈಗ ಇಲ್ಲಿನ ಆರ್ಥಿಕತಜ್ಞರ ಮುಂದಿರುವ ಪ್ರಶ್ನೆ - ಹಣದುಬ್ಬರ ಏರಿಸುವುದು ಹೇಗೆ? ಉತ್ತರ ಸರಳ. ಮತ್ತೆ ಹೇಗೆ? ಮತ್ತೇ ಅದನ್ನೇ ಮಾಡಬೇಕು. ಬಡ್ಡಿ ದರ ಇಳಿಸಬೇಕು. ಸದ್ಯದ ಸೆಂಟ್ರಲ್ ಬ್ಯಾಂಕ್ ಬಡ್ಡಿ ದರ ೨.೫%. ನಂಬಿದರೆ ನಂಬಿ ಬಿಟ್ಟರೆ ಬಿಡಿ. ಇಲ್ಲಿನ ಬಡ್ಡಿ ದರ ಅಷ್ಟೇ. ಮನೆ ಸಾಲದ ದರ ೩-೪%. ವಾಹನ ಸಾಲದ ದರ ೪. ೭೫ - ೫. ೫%. ನೀವು ಇಟ್ಟ ಠೇವಣಿಗಳ ಮೇಲೆ ೨. ೫% ಬಡ್ಡಿ ಸಿಕ್ಕರೆ ದೊಡ್ಡ ಮಾತು. ಹೀಗೆ ಒಟ್ಟಿನಲ್ಲಿ ಬಡ್ಡಿಮಕ್ಕಳ ದುನಿಯಾ!

ಅಧ್ಯಕ್ಷ ಟ್ರಂಪ್ ಸಾಹೇಬರು ಮಾತ್ರ ಕೂಗಾಡುತ್ತಲೇ ಇರುತ್ತಾರೆ, 'ನಾನು ಮೊದಲಿಂದ ಹೇಳುತ್ತಲೇ ಇದ್ದೇನೆ. ಬಡ್ಡಿ ದರ ಕಮ್ಮಿ ಮಾಡಿ, ಕಮ್ಮಿ ಮಾಡಿ ಎಂದು. ಈ ಫೆಡರಲ್ ರಿಸರ್ವ್ ಛೇರ್ಮನ್ ಕೇಳುತ್ತಲೇ ಇಲ್ಲ. ಇಡೀ ಎಕಾನಮಿ ಎಕ್ಕುಟ್ಟಿ ಹೋದರೆ ಅವನೇ ಜವಾಬ್ದಾರಿ' ಎಂದು ಟ್ವೀಟ್ ಮಾಡುತ್ತ ಪಾಪದ ಚೇರ್ಮನ್ನನ ಚೇರ್ ಅಲ್ಲಾಡಿಸುತ್ತಲೇ ಇರುತ್ತಾರೆ. ಟ್ರಂಪ್ ಸಾಹೇಬರು ಹೇಳಿಕೇಳಿ ಶುದ್ಧ ವ್ಯಾಪಾರಿ. ಪೂರ್ವಾಶ್ರಮದಲ್ಲಿ ಸಾಕಷ್ಟು ರೊಕ್ಕ ಮಾಡಿಕೊಂಡಿದ್ದಾರೆ. ಜೊತೆಗೆ ಮೂರೋ ನಾಲ್ಕೋ ಬಾರಿಯೋ ದಿವಾಳಿ ಕೂಡ ಆಗಿ ಅಂಬೋ ಎಂದು ಕೈಯೆತ್ತಿ ನಮಸ್ಕಾರ ಮಾಡಿ ಹೂಡಿಕೆದಾರರಿಗೆ, ಸಾಲಕೊಟ್ಟವರಿಗೆ, ಉದ್ಯೋಗಿಗಳಿಗೆ ಲಾಂಗಲ್ಲೊಂದು ನಾಮ ಎಳೆದು ಹೋಗಿಯೂ ಇದ್ದಾರೆ ಕೂಡ.

ವ್ಯಾಪಾರಿಗಳಿಗೆ ಕಮ್ಮಿ ರೇಟಿನಲ್ಲಿ ಸಾಲ ಸಿಕ್ಕರೆ ಅದೇ ಸೀರುಂಡೆ. ಅದನ್ನೇ ಟ್ರಂಪ್ ಸಾಹೇಬರು ಡಿಮ್ಯಾಂಡ್ ಮಾಡುತ್ತಿರುವುದು. ಏನೇನೋ ಅರ್ಥಶಾಸ್ತ್ರ ಓದಿಕೊಂಡ ದೊಡ್ಡ ಮಂದಿಯೆಲ್ಲ ಬಡ್ಡಿ ದರ ಇನ್ನೂ ಕಮ್ಮಿ ಮಾಡಿದರೆ ಹೆಂಗ್ರಿ?? ಅಂತ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ  ಅಷ್ಟೇ. ಅವರಿಗೂ ಈಗ ಬೇಗ ದಾರಿ ಉಳಿದಿಲ್ಲ. ಮತ್ತೆ ಬಡ್ಡಿದರ ಕಮ್ಮಿಯಾಗಲಿದೆ. ಬಡ್ಡಿಮಕ್ಕಳಿಗೆ ಜೈ!

ಬಡ್ಡಿ ದರ ಕಮ್ಮಿಯಾಗುತ್ತ ಹೋಗಿ ಹೋಗಿ ಶೂನ್ಯಕ್ಕೆ ಹೋಗಿ, ಮತ್ತೂ ಕೆಳಗಿಳಿದು ನೆಗೆಟಿವ್ ಆಗಿ, ಅಂದರೆ ಸಾಲ ತೆಗೆದುಕೊಂಡರೆ ನೀವು ಬಡ್ಡಿ ಕೊಡಬೇಕಿಲ್ಲ. ನಿಮಗೇ ಅವರು ಬಡ್ಡಿ ಕೊಡುತ್ತಾರೆ, ಅಂತಹ ಪರಿಸ್ಥಿತಿ ಬಂದರೆ ಏನೂ ಆಶ್ಚರ್ಯವಿಲ್ಲ. ಜಪಾನ್ ಮತ್ತಿತರ ಕೆಲವು ದೇಶಗಳಲ್ಲಿ ಹಾಗಾಗಿದೆ.

ಬಡ್ಡಿಮಗ ಅಂದರೆ ಯಾರು? ಬಡ್ಡಿಗೆ  ರೊಕ್ಕ ಕೊಡುವವನೇ? ಅಥವಾ, ಇಟ್ಟ ಠೇವಣಿ ಮೇಲೆ ಬರುವ ಬಡ್ಡಿಯಲ್ಲಿ ಹಾಯಾಗಿ ಜೀವನ ಮಾಡುವವನೇ?

ಎರಡೂ ಅಲ್ಲ. ಬಡ್ಡಿಮಗ ಅಂದರೆ ಮತ್ತೇನೂ ಅಲ್ಲ. ಮತ್ತದೇ ವೇಶ್ಯಾಪುತ್ರ. ಸೂ..ಮಗ.

ಆದರೂ ಬಡ್ಡಿಮಗ ಎನ್ನುವ 'ಒಳ್ಳೆಯ' ಬೈಗುಳ ಕೊಂಚ ಸಹ್ಯವಾಗಲು ಕಾರಣ ಮತ್ತೆ ಬಡ್ಡಿಯ ಮಹಿಮೆಯೇ ಇರಬಹುದೇನೋ!?

ಹುಡುಕಿದಾಗ ಕೆಳಗಿನ ಮಾಹಿತಿ ಸಿಕ್ಕಿತು. ಕನ್ನಡ ಪಂಡಿತರು ಅಭಿಪ್ರಾಯ ತಿಳಿಸಬಹುದು.

'ಬಡ್ಡಿಮಗ' ಎಂಬ ಒಂದು ಬೈಗುಳದ ಮಾತಿದೆ. ಇದಕ್ಕೂ ಬಡ್ಡಿಗೂ ಏನೇನೂ ಸಂಬಂಧವಿಲ್ಲ. ಈ ಸಮಾಸಪದದ ಮೊದಲ ಭಾಗವಾದ 'ಬಡ್ಡಿ' ಎಂಬುದು 'ಬೊಡ್ಡಿ' ಎಂಬುದರ ವ್ಯತ್ಯಸ್ತ ರೂಪ. ಅದು ಪೊಡ್ಡಿ< ಪೋಟಿ ಎಂಬ ಶಬ್ದದಿಂದ ಬಂದಿದೆ; ಈ ಶಬ್ದಕ್ಕೆ ಸೂಳೆ ಎಂಬರ್ಥವಿದೆ. (ತಮಿಳಿನಲ್ಲಿ ಪೊಟ್ಟಿ, ಮಲಯಾಳಂನಲ್ಲಿ ಪಟ್ಟಿ, ತುಳುವಿನಲ್ಲಿ ಪಡಪೆ, ಪಡಪ್ಪೆ ರೂಪಗಳಿವೆ). ಈಗ ಬೈಗುಳದ ಅರ್ಥ ಸ್ಪಷ್ಟವಾಗುತ್ತದಲ್ಲವೇ!

ಆಧಾರ: http://pvnarayana42.blogspot.com/2013/11/1_9.html


Thursday, July 11, 2019

೫ ಟ್ರಿಲಿಯನ್ ಡಾಲರ್ ಎಕಾನಮಿ

ಮೈಕ್ರೋಸಾಫ್ಟ್ ಸ್ಥಾಪಕ ಬಿಲ್ ಗೇಟ್ಸ್ ಉಲ್ಲೇಖಿಸಿದ್ದು ಅಂತ ನೆನಪು. "ನಾವು ಸಾಮಾನ್ಯವಾಗಿ ಮಾಡುವ ತಪ್ಪೇನೆಂದರೆ, ಅಲ್ಪಾವಧಿಯ ಬದಲಾವಣೆಗಳನ್ನು ಜಾಸ್ತಿಯಾಗಿ ಅಂದಾಜಿಸುತ್ತೇವೆ ಮತ್ತು ದೀರ್ಘಾವಧಿಯ ಬದಲಾವಣೆಗಳನ್ನು ಕಮ್ಮಿಯಾಗಿ ಅಂದಾಜಿಸುತ್ತೇವೆ."

ಮುಂದಿನ ಐದು ವರ್ಷಗಳಲ್ಲಿ ಭಾರತದ ಎಕಾನಮಿ ೫ ಟ್ರಿಲಿಯನ್ ಡಾಲರ್ ಆಗುವ ಸಾಧ್ಯತೆಗಳಿಗಿಂತ ಮುಂದಿನ ಹತ್ತು ವರ್ಷಗಳಲ್ಲಿ ೧೦ ಟ್ರಿಲಿಯನ್ ಡಾಲರ್ ಎಕಾನಮಿ ಆಗುವ ಸಾಧ್ಯತೆಗಳೇ ಹೆಚ್ಚಿರಬಹುದು. ನೋಡಿದರೆ ಜಾಸ್ತಿ ವ್ಯತ್ಯಾಸವಿಲ್ಲ. ಐದು ವರ್ಷದಲ್ಲಿ ಡಬಲ್ ಆಗಿ, ಮುಂದಿನ ಐದು ವರ್ಷಗಳಲ್ಲಿ ಮತ್ತೆ ಡಬಲ್ ಆದರೆ ೧೦ ಟ್ರಿಲಿಯನ್ ಡಾಲರ್ ಎಕಾನಮಿ ಆದಂತೆಯೇ. ಆ ಸಾಧ್ಯತೆಗಳು ಹೆಚ್ಚು ಏಕೆಂದರೆ ಹೆಚ್ಚಿನ ಸಮಯ ಸಿಗುತ್ತದೆ. ಉದಾಹರಣೆ: ಶೇರ್ ಮಾರ್ಕೆಟ್ ಸರಾಸರಿ ೧೦% ಲಾಭ ಕೊಡುತ್ತದೆ ನಿಜ. ದೀರ್ಘಾವಧಿಯಲ್ಲಿ ನೋಡಿದಾಗ ಮಾತ್ರ. ಒಂದು ವರ್ಷ ಹೆಚ್ಚು, ಒಂದು ವರ್ಷ ಕಮ್ಮಿ, ಮತ್ತೊಂದು ವರ್ಷ ಬಂಪರ್ ಲಾಭ, ಮತ್ತೊಂದು ವರ್ಷ ದೊಡ್ಡ ಲಾಸ್. ಹೀಗೆಲ್ಲಾ ಆಗಿ ದೀರ್ಘಕಾಲದ (೨೦-೩೦ ವರ್ಷಗಳ) ಸರಾಸರಿ ೧೦%. ಅದನ್ನು ನಂಬಿಕೊಂಡು ಪ್ರತಿವರ್ಷ ಅಷ್ಟೇ ಬರುತ್ತದೆ ಅಂದುಕೊಳ್ಳಲಿಕ್ಕೆ ಸಾಧ್ಯವಿಲ್ಲ.

೧೯೬೦-೭೦ ಸಮಯದಲ್ಲಿ ಚೀನಾ ತನ್ನ ಆರ್ಥಿಕ ಪ್ರಗತಿಯ ಬಗ್ಗೆ ಕೊಚ್ಚಿಕೊಳ್ಳುತ್ತಿತ್ತಂತೆ. ತಮ್ಮದೇ ರೀತಿಯಲ್ಲಿ ಚೀನಾದ ಎಕಾನಮಿಯನ್ನು ಅಭ್ಯಸಿಸಿದ್ದ ಸುಬ್ರಮಣಿಯನ್ ಸ್ವಾಮಿ, ಚೀನಾದ GDP ಅಷ್ಟು ಜಾಸ್ತಿ ಇರಲಿಕ್ಕೆ ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು. ಚೀನಾ ಕೊಟ್ಟ ಅಂಕಿಅಂಶಗಳನ್ನೇ ಇಟ್ಟುಕೊಂಡ IMF, ವಿಶ್ವಬ್ಯಾಂಕ್ ಇತ್ಯಾದಿ ಚೀನಾಕ್ಕೆ ಆರ್ಥಿಕ ನೆರವನ್ನು ನಿರಾಕರಿಸಿದವು. ಆವಾಗ ಚೀನಾ ಹೇಳಿತಂತೆ - ನಾವು GDP ತಪ್ಪಾಗಿ ಲೆಕ್ಕ ಹಾಕಿದ್ದೇವೆ. ಸುಬ್ರಮಣಿನ್ ಸ್ವಾಮಿ ಹಾಕಿದ GDP ಲೆಕ್ಕ ಸರಿಯಿದೆ. ಅದರ ಪ್ರಕಾರ ಆರ್ಥಿಕ ನೆರವು ನೀಡಿ!!

Wednesday, May 29, 2019

'ನೆನಪೇ ಸಂಗೀತ' ಓದಿದಾಗ ನೆನಪಾಗಿದ್ದು...

 


ವಿದ್ಯಾಭೂಷಣರು. ಹೆಚ್ಚಿನವರಿಗೆ ಇವರ ಪರಿಚಯ ಇದ್ದೇ ಇರುತ್ತದೆ. ಒಂದು ಕಾಲದಲ್ಲಿ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಕುಕ್ಕೆ ಸುಬ್ರಮಣ್ಯ ಮಠದ ಪೀಠಾಧಿಪತಿಗಳಾಗಿದ್ದವರು. ೧೯೯೭ ರಲ್ಲಿ ಸನ್ಯಾಸ ತ್ಯಜಿಸಿ, ತಾವು ಪ್ರೀತಿಸಿದ ಯುವತಿಯನ್ನು ವಿವಾಹವಾಗಿ ಸಂಸಾರಸ್ಥರಾದವರು. ಮೊದಲಿಂದಲೂ ಸುಶ್ರಾವ್ಯ ಗಾಯನಕ್ಕೆ ಹೆಸರಾದವರು. ಹಲವಾರು ಜನಪ್ರಿಯ ಸಂಗೀತ ಧ್ವನಿಮುದ್ರಿಕೆಗಳನ್ನು ಹೊರತಂದವರು.

ಇಂತಹ ವಿದ್ಯಾಭೂಷಣರು ತಮ್ಮ ಜೀವನ ಕಥನ ಬರೆದುಕೊಂಡಿದ್ದಾರೆ. ಅದರ ಹೆಸರು - ನೆನಪೇ ಸಂಗೀತ.

ಜೀವನ ಕಥನ, ಆತ್ಮಚರಿತ್ರೆಗಳನ್ನು ಓದುವಾಗ ಒಂದು ನಿಯಮ ಪಾಲಿಸಬೇಕಂತೆ. ಅದರಲ್ಲೂ ಓದಲು ಸಮಯವಿಲ್ಲ, ಬೇರೆ ಕೆಲಸಗಳಲ್ಲಿ ತುಂಬಾ ಬ್ಯುಸಿ ಅನ್ನುವವರಂತೂ ಮುದ್ದಾಂ ಪಾಲಿಸಲೇಬೇಕಾದ ನಿಯಮ ಒಂದಿದೆ. ಒಂದು ನೂರು ನೂರೈವತ್ತು ವರ್ಷಗಳ ಹಿಂದೆ ಪ್ರಕಟವಾಗಿ, ಇಂದಿಗೂ ಜನಪ್ರಿಯ ಮತ್ತು ಪ್ರಸ್ತುತವಾಗಿರುವ ಜೀವನಚರಿತ್ರೆಗಳನ್ನು ಮಾತ್ರ ಓದಬೇಕಂತೆ. ಏಕೆಂದರೆ ಕಾಲಚಕ್ರ ಯಾವುದೇ ಮುಲಾಜಿಲ್ಲದೆ ಹೆಚ್ಚಿನ ವ್ಯಕ್ತಿಗಳನ್ನು ಮತ್ತು ಅವರ ಜೀವನ ಚರಿತ್ರೆಗಳನ್ನು ಕಸದ ಬುಟ್ಟಿಗೆ ಎಸೆಯುತ್ತದೆ. ನಮ್ಮಲ್ಲಿ ಹೆಚ್ಚಿನವರ ಜೀವನ ಇರುವದೇ ಹಾಗೆ. ಕಸದ ಬುಟ್ಟಿಗೇ ಲಾಯಕ್ಕು. ಏನು ಮಾಡಲಿಕ್ಕೆ ಬರುತ್ತದೆ. ಗಾಂಧೀಜಿಯವರ ಆತ್ಮಕಥೆ, ಸ್ವಾಮಿ ಯೋಗಾನಂದರ 'The autobiography of a yogi' ಮುಂತಾದವನ್ನು ನೋಡಿ. ಪ್ರಕಟವಾಗಿ ನೂರು ವರ್ಷಗಳ ಮೇಲಾದರೂ ಮುದ್ರಣದ ಮೇಲೆ ಮರುಮುದ್ರಣ, ಆವೃತ್ತಿಯ ಮೇಲೆ ಹೊಸ ಆವೃತ್ತಿ ಬರುತ್ತಲೇ ಇರುತ್ತವೆ. ಇನ್ನು ನಮ್ಮ ಗುರುಗಳಾದ ಸ್ವಾಮಿ ಅನುಭವಾನಂದರಂತೂ ಎಲ್ಲ ಜೀವನ ಚರಿತ್ರೆಗಳನ್ನು ಸಾರಾಸಗಟಾಗಿ ಕಸದಬುಟ್ಟಿಗೆ ಎಸೆಯಿರಿ ಎಂದುಬಿಡುತ್ತಾರೆ. ಖಡಕ್ ಅದ್ವೈತಿಯಾಗಿರುವ ಅವರಿಗೆ ಈ ಜಗತ್ತೇ ಒಂದು ಭ್ರಮೆ. ಭ್ರಮೆ ಬಗ್ಗೆ ಬರೆದ ಪುಸ್ತಕ ಮತ್ತೂ ದೊಡ್ಡ ಭ್ರಮೆ. ಅದನ್ನೇನು ಓದೋದು ಎನ್ನುವ ಅಸಡ್ಡೆ. ಹಾಗಾಗಿಯೇ ಅವರು ಜೀವನ ಕಥನಗಳನ್ನು 'Autobiography of a dumbo' ಎಂದು ಹಾಸ್ಯ ಮಾಡುತ್ತಿರುತ್ತಾರೆ.

ವಿದ್ಯಾಭೂಷಣರ ಬಗ್ಗೆ ಮತ್ತು ಅವರ ಜೀವನದ ಬಗ್ಗೆ ಕುತೂಹಲ ಇದ್ದೇ ಇತ್ತು. ಸನಾತನ ಸಂಪ್ರದಾಯದ ಸ್ವಾಮಿಯೊಬ್ಬರು ಸನ್ಯಾಸ ಬಿಟ್ಟು ಸಂಸಾರ ಸೇರಿದ್ದು ಆಗಿನ ಕಾಲದಲ್ಲಿ ದೊಡ್ಡ ಬಂಡಾಯವೇ. ಅದರಲ್ಲೂ ಪ್ರತಿಷ್ಠಿತ ಅಷ್ಟಮಠಗಳ ಸನ್ಯಾಸಿಯೊಬ್ಬರು ಹಾಗೆ ಮಾಡಿದರು ಅಂದರೆ ಅಕಟಕಟಾ!

೧೯೯೭ ರ ಮೇ ಅಥವಾ ಜೂನ್ ಇರಬಹುದು ಅಂತ ನೆನಪು. ಒಂದು ಸಮಾರಂಭದಲ್ಲಿ, ಆಗತಾನೇ ಮದುವೆಯಾಗಿದ್ದ, ವಿದ್ಯಾಭೂಷಣ ಮತ್ತು ಅವರ ಪತ್ನಿ ರಮಾರನ್ನು ನೋಡುವ ಅವಕಾಶ ಸಿಕ್ಕಿತ್ತು. ಆಮೇಲೆ ನೋಡಿಲ್ಲ. ಆದರೆ ಸುಮಾರು ವರ್ಷ ಸುದ್ದಿಯಲ್ಲಿತ್ತು ವಿದ್ಯಾಭೂಷಣರ ಸಂಸಾರ ಜೀವನ. ರಂಗುರಂಗಾದ ಗಾಸಿಪ್ ಕೇಳಿಬರುತ್ತಿತ್ತು. ಅವೆಲ್ಲ ಎಷ್ಟು ನಿಜ ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲವಿತ್ತು. ಹಾಗಾಗಿ ವಿದ್ಯಾಭೂಷಣರ ಜೀವನ ಕಥನದ ಪುಸ್ತಕ ಎತ್ತಿಕೊಂಡೆ. ಮತ್ತೆ ನಾನು ಆತ್ಮಚರಿತೆಗಳ ಬಗ್ಗೆ ಇರುವ, ಮೇಲೆ ಹೇಳಿದ, ನಿಯಮವನ್ನು ಅಷ್ಟು ಕಟ್ಟುನಿಟ್ಟಾಗಿ ಪಾಲಿಸುವದಿಲ್ಲ. ಏಕೆಂದರೆ ಓದುವುದೇ ಜೀವ, ಓದುವುದೇ ಜೀವನ ನಮಗೆ. ಅದರಲ್ಲೂ ವೈಯಕ್ತಿವಾಗಿ ಗೊತ್ತಿಲ್ಲದವರ ಜೀವನ ಚರಿತ್ರೆಗಳನ್ನು ಯಾವುದೇ ಪೂರ್ವಗ್ರಹಗಳಿಲ್ಲದೇ ಎತ್ತಿಕೊಳ್ಳುತ್ತೇನೆ. ಅದೇ ಪರಿಚಯದವರು ಬರೆದ ಆತ್ಮಕಥೆಗಳನ್ನು ಹಾಗೇ ಇಟ್ಟಿರುತ್ತೇನೆ. ನಮ್ಮ ಧಾರವಾಡ ಹೇಳಿ ಕೇಳಿ ಸಾಹಿತಿಗಳ ಊರು. ಎಲ್ಲರೂ ತಮ್ಮ ತಮ್ಮ ಜೀವನಚರಿತೆ ಬರೆಯುವವರೇ. ಒತ್ತಾಯ ಮಾಡಿ ಒಂದು ಕಾಪಿ ಕೊಟ್ಟು ಅಥವಾ ಮಾರಿ ಹೋಗುವವರೇ. ಹೆಚ್ಚಿನವು ಸೀದಾ ರದ್ದಿಗೆ ಹಾಕಲು ಯೋಗ್ಯವಾಗಿರುತ್ತವೆ.

೧೯೯೭ ರಲ್ಲಿ ಸಮಾರಂಭವೊಂದರಲ್ಲಿ ವಿದ್ಯಾಭೂಷಣ ದಂಪತಿಗಳನ್ನು ನೋಡಿದ್ದೆ ಅಂದೆನಲ್ಲ. ಅದು ಪತ್ರಕರ್ತ, ಲೇಖಕ, 'ಹಾಯ್ ಬೆಂಗಳೂರ್' ಪತ್ರಿಕೆಯ ಸಂಪಾದಕ ರವಿ ಬೆಳೆಗೆರೆ ಅವರು ಆಯೋಜಿಸಿದ್ದ ಸಮಾರಂಭವಾಗಿತ್ತು. ರವಿಯವರ ಕೆಲವೊಂದು ಪುಸ್ತಕಗಳು ಬಿಡುಗಡೆಯಾಗಲಿದ್ದವು, ಅದಕ್ಕಾಗಿ ಆಯೋಜಿಸಿದ್ದ ಸಮಾರಂಭ ಎಂದು ನೆನಪು. ಬೆಂಗಳೂರಿನ ಹೈಕೋರ್ಟ್ ಹಿಂದಿರುವ ಪ್ರೆಸ್ ಕ್ಲಬ್ ಆವರಣದಲ್ಲಿ ಇತ್ತು.

೧೯೯೬ ಅಕ್ಟೋಬರ್ ಸಮಯದಿಂದ ರವಿ ಬೆಳಗೆರೆ ನನ್ನನ್ನು ಇನ್ನಿಲ್ಲದಂತೆ impress ಮಾಡಿದ್ದರು. 'ಹಾಯ್ ಬೆಂಗಳೂರ್' ಎನ್ನುವ ಅಂದಿನ ಸ್ಪೋಟಕ ಟ್ಯಾಬ್ಲಾಯ್ಡ್ ಹಾಗಿತ್ತು. ಜೇನುಗೂಡಿಗೆ ಕೈಹಾಕಿದಂತೆ, ಖದೀಮರ ಚಡ್ಡಿ ಬಿಚ್ಚಿದಂತೆ...ಹಾಗೆ ಬರೆಯುತ್ತಿದ್ದರು ರವಿ. ಓದಿದ ನಾನು ಫುಲ್ ಫ್ಲಾಟ್. ಬಿಗ್ ಫ್ಯಾನ್ ಆಗಿಬಿಟ್ಟೆ.

ಧಾರವಾಡದವರಾದ ನಮಗೆ ಹುಬ್ಬಳ್ಳಿಯಲ್ಲಿ ಕೆಲಸ ಮಾಡಿಕೊಂಡಿದ್ದ ರವಿ ಬೆಳಗೆರೆ ಹೆಸರೇನೂ ಅಪರಿಚಿತವಾಗಿರಲಿಲ್ಲ. ಅವರು ಮೊದಲು 'ಸಂಯುಕ್ತ ಕರ್ನಾಟಕ' ಪತ್ರಿಕೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಅವರ ಕಥೆಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಆದರೆ ನಾವಿನ್ನೂ ಆಗ ತುಂಬಾ ಚಿಕ್ಕವರು. ಅವನ್ನೆಲ್ಲ ಅಷ್ಟೊಂದು ಓದುತ್ತಿರಲಿಲ್ಲ. 'ತರಂಗ' ಪತ್ರಿಕೆಗಾಗಿ ರವಿ ಬೆಳಗೆರೆ ಖುಷ್ವಂತ್ ಸಿಂಗರ 'ದಿಲ್ಲಿ' ಎಂಬ ಕಾದಂಬರಿಯನ್ನು ಅನುವಾದಿಸಿದ್ದರು ಎಂದು ನೆನಪು. ಬೋಳು ಕುಂಡೆ ಬಿಟ್ಟುಕೊಂಡು ಮುಘಲ್ ಅರಸನ ಮುಂದೆ ಮೈಮೇಲೆ ವಸ್ತ್ರವಿಲ್ಲದ ದ್ರೌಪದಿಯಂತಹ ಹೆಣ್ಣುಮಗಳೊಬ್ಬಳ ಚಿತ್ರ ಆ ಧಾರಾವಾಹಿಗೆ ಇರುತ್ತಿತ್ತು. ಅದನ್ನು ನೋಡಿದರೇ ಇರುಸುಮುರುಸಾಗುತ್ತಿತ್ತು. ಅಂತಹ ಚಿಣ್ಣ ವಯಸ್ಸು ನಮ್ಮದು. ಹಾಗಾಗಿ ರವಿ ಬೆಳಗೆರೆ ಬರೆದಿದ್ದನ್ನು ೧೯೯೦ ರ ವರೆಗೆ ಜಾಸ್ತಿ ಓದಿರಲಿಲ್ಲ.

ಮುಂದೆ ರವಿ ಬೆಂಗಳೂರು ಭೂಗತಲೋಕದ ಬಗ್ಗೆ ವ್ಯಾಪಕವಾಗಿ ಬರೆಯತೊಡಗಿದರು. ಆಗ ಬಂತು ನೋಡಿ ಮಜಾ. 'ಕರ್ಮವೀರ' ಪತ್ರಿಕೆಯಲ್ಲಿ 'ಪಾಪಿಗಳ ಲೋಕದಲ್ಲಿ' ಎನ್ನುವ ಹೆಸರಿನಲ್ಲಿ ಸರಣಿ ಲೇಖನ ಬರೆದು ಸಂಚಲನ ಸೃಷ್ಟಿಸಿಬಿಟ್ಟರು. ಭೂಗತಲೋಕ ಅಸಲಿಯಲ್ಲಿ ಹೇಗಿರುತ್ತದೆ, ಮಾಫಿಯಾ ಡಾನ್ಸ್ ಹೇಗಿರುತ್ತಾರೆ, ಭೂಗತಲೋಕ, ಪೊಲೀಸ್, ಸಿನಿಮಾ ನಟನಟಿಯರು, ರಾಜಕಾರಣಿಗಳು ಮತ್ತು ಅವರ ನಡುವಿನ ಅತಿ ವಿಚಿತ್ರ ಅನ್ನಿಸುವಂತಹ ಸಮೀಕರಣಗಳು, ಸಂಬಂಧಗಳ ಬಗ್ಗೆ ರವಿ ಬೆಳಗೆರೆ ತುಂಬಾ ರೋಚಕವಾಗಿ ಬರೆಯುತ್ತಿದ್ದರು. ಅವರ ಶೈಲಿಗೆ, ಮಾಹಿತಿಗೆ ಫುಲ್ ಫಿದಾ ನಾನು.

ಮುಂದೆ 'ಕರ್ಮವೀರ' ಬಿಟ್ಟ ರವಿ ತಮ್ಮದೇ 'ಹಾಯ್ ಬೆಂಗಳೂರ್' ಟ್ಯಾಬ್ಲಾಯ್ಡ್ ಮಾಡಿಕೊಂಡ ಮೇಲಂತೂ ಮುಗಿದೇಹೋಯಿತು. ಅವರ 'ಖಾಸ್ ಬಾತ್' ಅಂಕಣಗಳಿಂದ ಅತ್ಯಾಪ್ತ ಮಿತ್ರನಂತಾಗಿಹೋಗಿದ್ದರು ರವಿ. ಫೋನ್ ಮಾಡಿದರೆ ಅವರೇ ಫೋನ್ ಎತ್ತುತ್ತಿದ್ದರು. ಸಮಯವಿದ್ದರೆ ನಾಲ್ಕು ಮಾತಾಡುತ್ತಿದ್ದರು. ಅವರ ಸಮಾರಂಭಗಳಿಗೆ ಹೋದರೆ ಪರಿಚಯ ಮಾಡಿಕೊಳ್ಳುತ್ತಿದ್ದರು. ಅದಕ್ಕೂ ಹೆಚ್ಚಾಗಿ ಒಮ್ಮೆ ಪರಿಚಯವಾದವರನ್ನು ನೆನಪಿಟ್ಟುಕೊಳ್ಳುತ್ತಿದ್ದರು. ಹೀಗೆಲ್ಲ ಇದ್ದಾಗ ನಾನು ಅವರ ದೊಡ್ಡ ಫ್ಯಾನ್ ಆಗಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ.

ಆಗ ನಾನೂ ಬೆಂಗಳೂರಿನಲ್ಲಿ ಓತ್ಲಾ ಹೊಡೆದುಕೊಂಡು ಇದ್ದೆ. ಆಫ್ರಿಕಾದ ಟಾಂಜಾನಿಯಾದಲ್ಲಿ ಒಂದು ವರ್ಷ ಸಾಫ್ಟ್ವೇರ್ ಕೂಲಿ ಕೆಲಸ ಮಾಡಿಬಂದಿದ್ದೆ. ಅಮೇರಿಕಾಗೆ ಹೊರಡುವ ತಯಾರಿಯಲ್ಲಿದ್ದೆ. ವೀಸಾ ಕೊಂಚ ತಡವಾಗಿತ್ತು. ಚಾಯ್ ಪಾನಿ ಮತ್ತು ಜರ್ದಾ ಕವಳದ ಖರ್ಚಿಗೆ ಇರಲಿ ಅಂತ ಒಂದು ನೌಕರಿ ಮಾಡಿಕೊಂಡಿದ್ದೆ. ಇರಲು ಅಣ್ಣನ ಮನೆಯಿತ್ತು. ರಿಕ್ಷಾ ಮತ್ತು ಪುಷ್ಪಕ್ ಬಸ್ ಹಿಡಿದು ಊರೆಲ್ಲ ಓಡಾಡಿಕೊಂಡಿರುತ್ತಿದ್ದೆ. ಹೀಗಿರುವಾಗ ರವಿ ಬೆಳಗೆರೆಯವರ ಪುಸ್ತಕ ಬಿಡುಗಡೆ ಸಮಾರಂಭ ಇತ್ತು. ಹೋಗಿದ್ದೆ. ಅಲ್ಲೇ ದರ್ಶನವಾಗಿತ್ತು ನವವಿವಾಹಿತ ವಿದ್ಯಾಭೂಷಣ ದಂಪತಿಗಳದ್ದು.

ಇದಾಗುವ ಹಿಂದಿನ ವಾರ ಮಾತ್ರ ತಮ್ಮ ಪತ್ರಿಕೆಯಲ್ಲಿ exclusive scoop ಎಂಬಂತೆ ರವಿ ಬೆಳಗೆರೆ ವಿದ್ಯಾಭೂಷಣರ ವಿವಾಹದ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದರು. ಎಲ್ಲೋ ರಹಸ್ಯ ಸ್ಥಳದಲ್ಲಿ ಅವರು ಮದುವೆಯಾದರೆ ಈ ಖತರ್ನಾಕ್ ಪತ್ರಕರ್ತ ಅಲ್ಲೂ ಹೋಗಿ, ಯಾರಿಗೂ ಸಿಗದ ಫೋಟೋಗಳು, ನವದಂಪತಿಗಳ ಸಂದರ್ಶನ ಮತ್ತು ವಿಸ್ತೃತ ವರದಿ ಪ್ರಕಟಿಸಿದ್ದರು. ಮತ್ತೊಂದು ಸ್ಪೋಟಕ ಸಂಚಿಕೆಯಾಗಿತ್ತು. ಆ ಸಂಚಿಕೆಯಲ್ಲೇ ವಿದ್ಯಾಭೂಷಣ ದಂಪತಿಗಳು ಮುಂದಿನ ವಾರದ ಸಮಾರಂಭಕ್ಕೆ ಬರಲಿದ್ದಾರೆ ಅಂತ ಹಾಕಿದ್ದರೇ? ನೆನಪಿಲ್ಲ.

ತಮ್ಮ ಜೀವನ ಚರಿತೆಯಲ್ಲಿ ವಿದ್ಯಾಭೂಷಣರು ರವಿ ಬೆಳಗೆರೆ ಹೇಗೆ ಬ್ರೇಕಿಂಗ್ ನ್ಯೂಸ್ ಕೊಟ್ಟರು ಅನ್ನುವ ವಿಷಯವನ್ನು ವಿವರಿಸಿದ್ದಾರೆ. ವಿದ್ಯಾಭೂಷಣರು ಮದುವೆಯಾಗಲು ನಿರ್ಧರಿಸಿದಾಗ ಅವರ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ತೀರಾ ಬಹಿರಂಗವಾಗಿ ವಿವಾಹವಾದರೆ ಮತ್ತೂ ಹೆಚ್ಚಿನ ದಾಂಧಲೆಯಾಗಿ ಲಫಡಾ ಆದೀತು ಎಂದು ವಿಚಾರ ಮಾಡಿದ ವಿದ್ಯಾಭೂಷಣರು ತಮ್ಮ ಆಪ್ತರ ಮೂಲಕ ಅದೆಲ್ಲೋ ಮಳವಳ್ಳಿ ಬಳಿ ಕಾಡಿನ ಮಧ್ಯೆ ಇರುವ ದೇವಾಲಯವೊಂದರಲ್ಲಿ ವಿವಾಹವಾಗುವ ಸ್ಕೆಚ್ ಹಾಕಿದ್ದರು. ಒಬ್ಬ ದೊಡ್ಡ ಮನುಷ್ಯರು ಎಲ್ಲ ವ್ಯವಸ್ಥೆ ಮಾಡಿಕೊಟ್ಟಿದ್ದರು. ಯಾರಿಗೂ ಸುಳಿವು ಸಹಿತ ಬಿಟ್ಟುಕೊಟ್ಟಿರಲಿಲ್ಲ. ಆದರೇನು ಮಾಡುತ್ತೀರಿ? ಆ ದೊಡ್ಡ ಮನುಷ್ಯರೂ ಸಹ ರವಿ ಬೆಳಗೆರೆಯವರ ದೊಡ್ಡ ಅಭಿಮಾನಿಯಾಗಿದ್ದರಂತೆ. ತಮ್ಮ ನೆಚ್ಚಿನ ಪತ್ರಕರ್ತನಿಗೆ ಒಂದು exclusive scoop ಸಿಗಲಿ ಅಂದು ರವಿ ಬೆಳಗೆರೆಯವರಿಗೆ ಸುದ್ದಿ ಮುಟ್ಟಿಸಿದ್ದರು. ಇಂತಹ ಸುದ್ದಿ ಸಿಕ್ಕರೆ ತಮ್ಮ ಮೋಟಾರ್ ಬೈಕ್ ಹತ್ತಿ ರವರವ ನರಕಕ್ಕೆ ಸಹ ಹೋಗಲು ಸಿದ್ಧವಿರುತ್ತಿದ್ದ ರವಿ ಬರೋಬ್ಬರಿ ಹಾಜರಾಗಿದ್ದರು. ಇನ್ನಿಲ್ಲದಂತೆ ಗಂಟು ಬಿದ್ದು exclusive ಫೋಟೋಗಳನ್ನು ಮತ್ತು ಸಂದರ್ಶನವನ್ನು ಸಂಪಾದಿಸಿಕೊಂಡು ಬಂದಿದ್ದರು. ಜೊತೆಗೆ ನವದಂಪತಿಗಳಿಗೆ ನೈತಿಕ ಬೆಂಬಲ ಸೂಚಿಸಿದ್ದರು. ತಮ್ಮದೇ ಹವಾ ಮೇಂಟೈನ್ ಮಾಡಿದ್ದ ರವಿಯವರ ಬೆಂಬಲ ತುಂಬಾ ಉಪಯುಕ್ತ ಅನ್ನಿಸಿರಬೇಕು ವಿದ್ಯಾಭೂಷಣರಿಗೆ. ಇಡೀ ಸಮಾಜವೇ ಅವರ ವಿರುದ್ಧ ನಿಂತಿತ್ತು. It must have meant a great deal to him. So ಹೀಗೆ ವಿದ್ಯಾಭೂಷಣರ ಬಂಡಾಯಕಾರಿ ಮದುವೆ ವಿಷಯ 'ಹಾಯ್ ಬೆಂಗಳೂರ್' ನಲ್ಲಿ ಪ್ರಕಟವಾಗುವಂತಾಗಿದ್ದು ಎಂದು ವಿದ್ಯಾಭೂಷಣರು ಬರೆದುಕೊಂಡಿದ್ದಾರೆ.

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವಿದ್ಯಾಭೂಷಣ ದಂಪತಿಗಳನ್ನು ನೋಡಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ವಿದ್ಯಾಭೂಷಣರ ಪತ್ನಿ ರಮಾ ಹಳದಿ ರೇಷ್ಮೆ ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ಆಗ ಅವರಿಗೆ ಇನ್ನೂ ೨೦-೨೧ ವರ್ಷವಿರಬಹುದು ಅಷ್ಟೇ. ವಿದ್ಯಾಭೂಷಣರನ್ನು ನೋಡಿದರೆ ನಲವತ್ತು ದಾಟಿದವರ ಹಾಗೆ ಕಾಣುತ್ತಿದ್ದರು. ನೆರೆದಿದ್ದ ಜನ ತರೇವಾರಿ ಮಾತಾಡಿಕೊಂಡರು. ಕೆಲವರು ಕೊಂಚ ಅಸಭ್ಯ lewd ಅನ್ನುವಂತಹ ಜೋಕ್ ಹೊಡೆದರು. ಎಲ್ಲ ರೀತಿಯಿಂದ ಸರಿಯಿದ್ದು, ಸಮಾಜದ ಒಪ್ಪಿಗೆ, ಗುರುಹಿರಿಯರ ಅನುಮತಿಯೊಂದಿಗೆ ಶಾಸ್ತ್ರೋತ್ರವಾಗಿ ಮದುವೆಯಾದಾಗಲೇ ನಮ್ಮ ಜನ, ಬಿಟ್ಟಿ ಊಟ ಗದುಮಿದ ನಂತರವೂ, ಟೀಕೆ ಟಿಪ್ಪಣಿ ಮಾಡುವುದನ್ನು ಬಿಡುವದಿಲ್ಲ. ಹಾಗಿರುವಾಗ ಇಲ್ಲಿ ನಲವತ್ತು ವರ್ಷದ ಸನ್ಯಾಸಿಯೊಬ್ಬ, ಕೆಟ್ಟು ಪಟ್ಟಣ ಸೇರಿದ ಮಾದರಿಯಲ್ಲಿ, ೨೦-೨೧ ವರ್ಷದ ಸುಂದರಿಯನ್ನು ಮದುವೆಯಾದರೆ ಅನ್ನದೇ ಬಿಟ್ಟಾರೆಯೇ?? ಅಂದರು. ಬಾಯಿತುರಿಕೆ ತೀರಿಸಿಕೊಂಡರು. ವೇದಿಕೆ ಮೇಲಿದ್ದ ವಿದ್ಯಾಭೂಷಣ ದಂಪತಿಗಳಿಗೆ ಅದೆಲ್ಲ ಕೇಳಿದ್ದು ಸುಳ್ಳು. ಆ ಹೊತ್ತಿಗಾಗಲೇ ಅಂತಹ ಅದೆಷ್ಟು ಬೆಂಕಿಯಲ್ಲಿ ಬೆಂದಿದ್ದವೋ ಅವೆರೆಡು ಮುಗ್ಧ ಜೀವಗಳು.

ವಿದ್ಯಾಭೂಷಣರ ಪತ್ನಿ ರಮಾರ ಮುಖದ ಮೇಲೆ ದೈವೀ ಕಳೆಯಿತ್ತು. ಮೊದಲೇ ಸುಂದರಿ ಆಕೆ. ಮೇಲಿಂದ ನವವಿವಾಹಿತೆ. ಕೇಳಬೇಕೇ? ಮುಖದ ಮೇಲೆ ಲಕ್ಷ್ಮಿ ಕಳೆ ಬಂದಿದ್ದು ಸಹಜ ಬಿಡಿ. ವಿದ್ಯಾಭೂಷಣರ ಮುಖದ ಮೇಲೆ ಮಾತ್ರ ಚಿಂತೆಯ ಕಳೆ. ಅದೂ ಸಹಜವೇ ಬಿಡಿ. ಪೇಜಾವರರಿಂದ ಹಿಡಿದು ಮಾಧ್ವ ಸಮಾಜದ ಹಿರಿಕಿರಿ ಸ್ವಾಮಿಗಳೆಲ್ಲ ಅವರ ಮೇಲೆ ಸನ್ಯಾಸ ತ್ಯಜಿಸದಂತೆ ಮತ್ತು ವಿವಾಹವಾಗದಂತೆ ಸಿಕ್ಕಾಪಟ್ಟೆ ಒತ್ತಡ ಹಾಕಿದ್ದರಂತೆ. ಒತ್ತಡ ವಿಫಲವಾದಾಗ ಅವೆಲ್ಲ ಧಮ್ಕಿಯಾಗಿ ಪರಿವರ್ತನೆಯಾಗಿರಲು ಸಾಕು. ಸಮಾರಂಭದಲ್ಲಿ ಮಾತಾಡಿದ ರವಿ ಬೆಳಗೆರೆ ಹೇಳಿದ ಮಾತು ಇನ್ನೂ ನೆನಪಿದೆ. 'ವಿದ್ಯಾಭೂಷಣರನ್ನು ಈ ಸಮಾರಂಭಕ್ಕೆ ಕರೆತರಲು ಸಾಕಷ್ಟು ಕಷ್ಟ ಪಟ್ಟೆ. ಅವರ ವಿರೋಧಿಗಳು ಈ ಸಮಾರಂಭಕ್ಕೂ ಬಂದು, ಇಲ್ಲೂ ಪ್ರತಿಭಟನೆ ಮಾಡಿ, ಸಮಾರಂಭಕ್ಕೆ ವಿಘ್ನ ತಂದಾರು ಎನ್ನುವ ಆತಂಕವನ್ನು ವಿದ್ಯಾಭೂಷಣರು ವ್ಯಕ್ತಪಡಿಸಿದ್ದರು. ಅದಕ್ಕೆ ನಾನು ಹೇಳಿದೆ, 'ನೀವು ಬನ್ನಿ ಸ್ವಾಮೀ. ನಿಮಗೆ ಯಾರು ಏನು ಮಾಡುತ್ತಾರೆ ನೋಡೋಣ. ಅಂತವರನ್ನು ಎತ್ತಿ ಹೊರಗೆ ಒಗೆಯಲೆಂದೇ ನನ್ನ ಕಡೆಯ ಟಫ್ ಹುಡುಗರು ಇರುತ್ತಾರೆ. ನೀವು ಚಿಂತೆ ಮಾಡದೇ ಬನ್ನಿ,' ಎಂದು ಸಾವಿರ ಬಾರಿ ಹೇಳಿದ ಮೇಲೆ ಬರುವ ನಿರ್ಧಾರ ಮಾಡಿದರು,' ಎಂದು ಫುಲ್ ಆತ್ಮವಿಶ್ವಾಸದಿಂದ ರವಿ ಬೆಳಗೆರೆ ಹೇಳಿದಾಗ ಸಿಕ್ಕಾಪಟ್ಟೆ ಕರತಾಡನ ಮತ್ತು ವಿಶಿಲ್ ಸೀಟಿ. ತಿರುಗಿ ನೋಡಿದರೆ ಎಲ್ಲ ಕಡೆ ಟಫ್ ಜನ ತೋಳೇರಿಸುತ್ತ ನಿಂತಿದ್ದರು. ರವಿ ಬೆಳಗೆರೆಯವರ ಭೂಗತಲೋಕದ ಹಲವಾರು ಅಭಿಮಾನಿಗಳು ಬಂದಿದ್ದರು. ಹಾಗಾಗಿ ವಿದ್ಯಾಭೂಷಣರ ವಿರುದ್ಧ ಪ್ರತಿಭಟನೆ ಮಾಡಲು ಯಾರಾದರೂ ಬಂದಿದ್ದರೆ ಅಂತವರು ಟಫ್ ಜನರನ್ನು ನೋಡಿ ಸುಮ್ಮನೆ ಹೋಗಿರಬೇಕು.

ವಿದ್ಯಾಭೂಷಣರು ಸನ್ಯಾಸ ಬಿಟ್ಟರು. ಸಂಸಾರಿಯಾದರು. ಹೊಸ ಜೀವನ ಶುರುಮಾಡಿಕೊಂಡರು. ಆಗ ಶುರುವಾದವು ನೋಡಿ ಗಾಸಿಪ್ ಮತ್ತು ಗಾಳಿಸುದ್ದಿಗಳು. ಆಗ ಹರಡಿದ್ದ ಖತರ್ನಾಕ್ ಸುದ್ದಿಯೆಂದರೆ - ಅವರ ಸಂಸಾರದಲ್ಲಿ ಎಲ್ಲವೂ ಸರಿಯಿಲ್ಲವಂತೆ. ಡೈವೋರ್ಸಿಗೆ ಬಂದು ನಿಂತಿದೆಯಂತೆ. ಆ ಹುಡುಗಿಗೆ ಮದುವೆ ಇಷ್ಟವಿರಲಿಲ್ಲವಂತೆ. ಗೆಳತಿಯರ ಜೊತೆ ಚಾಲೆಂಜ್ ಮಾಡಿದ್ದಳಂತೆ. ಈ ಸನ್ಯಾಸಿಯ ಸನ್ಯಾಸತ್ವವನ್ನು ಭಂಗ ಮಾಡಿ, ತನ್ನ ವಶ ಮಾಡಿಕೊಳ್ಳದಿದ್ದರೆ ತನ್ನ ಹೆಸರೇ ರಮಾ ಅಲ್ಲ ಎಂದು ಚಾಲೆಂಜ್ ಮಾಡಿದ್ದಳಂತೆ. ಆ ಚಾಲೆಂಜಿಗಾಗಿ ಲವ್ ನಾಟಕ ಮಾಡಿದಳಂತೆ. ಈಗ ಬಿಟ್ಟು ಹೊರಟಿದ್ದಾಳಂತೆ. ವಿದ್ಯಾಭೂಷಣರು ತುಂಬಾ ಖಿನ್ನರಾಗಿದ್ದಾರಂತೆ...ಎಂದೆಲ್ಲಾ ಸುದ್ದಿಗಳು.

ಇದನ್ನು ಕೇಳಿ ತುಂಬಾ ಬೇಜಾರಾಗಿತ್ತು. ಮಾಧ್ವ ಸಮಾಜದವರೊಂದಿಗೆ ತುಂಬಾ ಒಡನಾಟ ಇಟ್ಟುಕೊಂಡಿರುವ ನಮ್ಮ ಚಿಕ್ಕಮ್ಮನೇ ಈ ಸುದ್ದಿ ಹೇಳಿದಾಗ ಒಂದು ತರಹದ ನಂಬಿಕೆ ಬಂದು ಹೆಚ್ಚಿನ ಬೇಸರವಾಗಿತ್ತು. ಮುಂದೊಂದು ದಿವಸ ಯಾವುದೋ ಪತ್ರಿಕೆಯಲ್ಲಿ ವಿದ್ಯಾಭೂಷಣರು ಎಲ್ಲವನ್ನೂ ಅಲ್ಲಗೆಳೆದು, ಅವರೆಲ್ಲ ಸುಖಸಂತೋಷದಿಂದಿರುವ ಬಗ್ಗೆ ಖಾತ್ರಿ ಕೊಟ್ಟಿದ್ದರು. ಓದಿ ಸಂತೋಷವಾಗಿತ್ತು. ಆದರೂ ಪೂರ್ತಿ ನಂಬಿಕೆ ಬಂದಿರಲಿಲ್ಲ. ಸಂಸಾರ ಢಮ್ ಅಂದಾಗ ಎಲ್ಲರೂ ಸುಳ್ಳು ಹೇಳಿ ತ್ಯಾಪೆ ಹಚ್ಚುವವರೇ ನೋಡಿ. ಡೈವೋರ್ಸ್ ಆಗುವ ಹಿಂದಿನ ದಿನದ ವರೆಗೂ ಫೇಸ್ಬುಕ್ ಮೇಲೆ ಗಂಡಹೆಂಡತಿ ಸಿಕ್ಕಾಪಟ್ಟೆ ಪ್ರೀತಿ ಮಾಡುವ ಕಾಲ ಇದು.

ಇಂತಹ ಕುಹಕಗಳಿಗೆಲ್ಲ ವಿದ್ಯಾಭೂಷಣರು ತಮ್ಮ ಜೀವನ ಕಥನದಲ್ಲಿ ಫುಲ್ ಸ್ಟಾಪ್ ಇಟ್ಟಿದ್ದಾರೆ. ಲವ್ ಮಾಡಿದವರು ಇವರಂತೆ. ಪ್ರಸ್ತಾವ ಇಟ್ಟವರೂ ಇವರೇ. ಪತ್ನಿ ಕೇವಲ ಭಕ್ತೆಯಾಗಿದ್ದಳು. ಇವರಿಗೆ ಸನ್ಯಾಸ ಬಿಡಲೇಬೇಕಾಗಿತ್ತು. ಹಾಗಾಗಿ ಮದುವೆಯಾಗಲೇಬೇಕಿತ್ತು. ಅದಕ್ಕಾಗಿ ಯಾರನ್ನಾದರೂ ಪ್ರೀತಿಸಲೇಬೇಕಾಗಿತ್ತು. ಇವಳು ಕಂಡಳು. ಕೇಳಿಯೇಬಿಟ್ಟೆ. ನಾನು ಆತುರಾತುರವಾಗಿ ಕೇಳಿದರೂ ಆಕೆ ಮಾತ್ರ ಎಲ್ಲ ತರಹದ ಪರಾಮರ್ಶೆ ಮಾಡಿ, ನಮಗೂ ವಿವೇಕ ಹೇಳಿ, ನಾವೆಲ್ಲದಕ್ಕೂ ಒಪ್ಪಿದ ಮೇಲೆಯೇ ಆಕೆ ಒಪ್ಪಿದ್ದು ಎಂದು ವಿದ್ಯಾಭೂಷಣರು ಬರೆದಿದ್ದನ್ನು ಓದಿದಾಗ ಪೂರ್ಣ ನೆಮ್ಮದಿ. ಮತ್ತು ಅವರ ಪತ್ನಿಯ ಬಗ್ಗೆ ಹೆಮ್ಮೆ. ೨೦-೨೧ ವರ್ಷದ ಯುವತಿಗೆ ಎಂತಹ ಪ್ರಬುದ್ಧತೆ ನೋಡಿ.

೧೫೦ ಚಿಲ್ಲರೆ ಪುಟಗಳ ಚಿಕ್ಕ ಪುಸ್ತಕ. ಚೆನ್ನಾಗಿ ಬರೆದಿದ್ದಾರೆ. ಚಿಕ್ಕವಯಸ್ಸಿನಲ್ಲೇ ಸನ್ಯಾಸ ಕೊಡುವುದು, ಕುಟುಂಬ ವರ್ಗದಲ್ಲೇ ಸನ್ಯಾಸ ಕೊಡುವುದನ್ನು ವಿರೋಧಿಸಿದ್ದಾರೆ. ಅದಕ್ಕೆ ನನ್ನ ಸಹಮತವಿದೆ.

ನಮ್ಮ ತಂದೆಯವರು ಸದಾ ಹೇಳುತ್ತಿದ್ದರು. ಯಶಸ್ವಿ ಸನ್ಯಾಸಿಯಾಗಲು ೧) ಜಾತಕದಲ್ಲಿ ಖಡಕ್ ಸನ್ಯಾಸಯೋಗವಿರಬೇಕು ೨) ಸಾಂಪ್ರದಾಯಿಕ ಗುರುಕುಲದಲ್ಲಿ ೧೨-೧೫ ವರ್ಷಗಳ ಅಧ್ಯಯನ ದೊಡ್ಡ ಸ್ವಾಮಿಗಳ ನಿಗರಾಣಿಯಲ್ಲಿ ಆಗಬೇಕು. ಇವೆರೆಡೂ ಆದರೆ ಮಾತ್ರ ಸನ್ಯಾಸ ಯಶಸ್ವಿಯಾಗುತ್ತದೆ ಎಂದು. ಅದು ನಿಜ ಅನ್ನಿಸುತ್ತದೆ. ೧೨-೧೫ ವರ್ಷಗಳ ಕಾಲ ಖಡಕ್ ಅಧ್ಯಯನ ಮಾಡಿದವನಿಗೆ ಒಂದೋ ವೈರಾಗ್ಯ ಮೂಡಿ ಸನ್ಯಾಸಕ್ಕೆ ಅವನಾಗೇ ಹಾತೊರೆಯುತ್ತಾನೆ. ಇಲ್ಲವಾದರೆ ಬೋರೆದ್ದು ಸಂಸಾರಿಯಾಗುತ್ತಾನೆ. ತೀರಾ ಚಿಕ್ಕವಯಸ್ಸಿಗೇ ಸನ್ಯಾಸ ಕೊಟ್ಟು ನಂತರ ಉಪದೇಶ ಮಾಡುತ್ತೇವೆ, ಅಧ್ಯಯನ ಮಾಡಿಸುತ್ತೇವೆ ಅನ್ನುವುದೆಲ್ಲ ಭಾಳ ರಿಸ್ಕಿ.

'ನೆನಪೇ ಸಂಗೀತ' ಓದಿ ಮುಗಿಸಿದಾಗ ವಿದ್ಯಾಭೂಷಣರ ಬಗ್ಗೆ ಮತ್ತು ಅವರ ಪತ್ನಿ ಬಗ್ಗೆ ತುಂಬಾ ಗೌರವ ಮೂಡಿಬಂತು. ಅವರಿಬ್ಬರ ಬಗ್ಗೆ ಅಷ್ಟೇ ಅಲ್ಲ. ವಿದ್ಯಾಭೂಷಣರ ಪತ್ನಿಯ ತಂದೆ ಬಳ್ಳಾರಿಯಲ್ಲಿ ತುಂಬಾ ದೊಡ್ಡ ವೈದ್ಯರು. ಸಮಾಜದಲ್ಲಿ ದೊಡ್ಡ ಹೆಸರು ಮಾಡಿದವರು. ಅಂತವರೂ ಸಹ ಒಂದು ಹಂತದ ನಂತರ ಎಲ್ಲವನ್ನೂ ಬೆಂಬಲಿಸಿದ್ದಕ್ಕೆ ಅವರಿಗೂ ಒಂದು ದೊಡ್ಡ ಸಲಾಂ.