Saturday, July 05, 2014

ಅಗಲಿದ ಪ್ರೊ.ಜಮಖಂಡಿಯವರಿಗೊಂದು ನಮನ

ಧಾರವಾಡದ ಕರ್ನಾಟಕ ಸೈನ್ಸ್ ಕಾಲೇಜಿನಲ್ಲಿ ಕೆಮಿಸ್ಟ್ರಿ ಪ್ರೊಫೆಸರ್ ಆಗಿ ರಿಟೈರ್ ಆಗಿದ್ದ ಪ್ರೊಫೆಸರ್ ಜಮಖಂಡಿ ತಮ್ಮ ಎಂಬತ್ತನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ತುಂಬ ಆತ್ಮೀಯರಾಗಿದ್ದ ಅವರ ಬಗ್ಗೆ ಕೆಲ ನೆನಪುಗಳು....

ಪ್ರೊ. ಜಮಖಂಡಿ

ಸುಮಾರು ೧೯೬೦ ರಿಂದ ೧೯೯೪ ರ ವರೆಗೆ ಕರ್ನಾಟಕ ಕಾಲೇಜ್ ಆವರಣದಲ್ಲಿ ಎಲ್ಲಾದರೂ 'ಘಂ' ಅಂತ ಅತ್ತರದ ಸುವಾಸನೆ ಬಂದರೆ ಒಂದು ಖಾತ್ರಿಯಾಗುತ್ತಿತ್ತು. ಪ್ರೊ. ಜಮಖಂಡಿ ಸುತ್ತಮುತ್ತಲೆಲ್ಲೋ ಇದ್ದಾರೆ ಅಂತ. ಅವರದ್ದು ಒಂದು ಖಾಯಂ ಅತ್ತರದ ಬ್ರಾಂಡಿತ್ತು. ಕೆಮಿಸ್ಟ್ರಿ ಲ್ಯಾಬುಗಳ ಸುತ್ತ ಮುತ್ತ, ಒಳಗಿನ ಕೆಮಿಕಲ್ಲುಗಳ ಘಾಟು ವಾಸನೆ ಮೀರಿ ಸುವಾಸನೆ ಏನಾದರೂ ಬರುತ್ತಿತ್ತು ಅಂತಿದ್ದರೆ ಡೌಟೇ ಬೇಡ. ಲ್ಯಾಬ್ ಒಳಗೆ ಇದ್ದವರು ಪ್ರೊ. ಜಮಖಂಡಿಯೇ ಆಗಿರುತ್ತಿದ್ದರು. ಅಂತಹ ಅತ್ತರ್ ಸ್ಪೆಷಲಿಸ್ಟ್ ಅವರು.

ನಮಗೆ ಅವರು ಕ್ಲಾಸಿನಲ್ಲಿ ಮಾಸ್ತರಾಗಿ ಕಲಿಸಿದ್ದು ಕಡಿಮೆ. ಆದರೆ ಧಾರವಾಡದಲ್ಲಿ ಒಬ್ಬ ಅತ್ಯಂತ ಆತ್ಮೀಯರಾಗಿ, ಕುಟುಂಬದ ಸ್ನೇಹಿತರಾಗಿ, well-wisher ಆಗಿ ಅಕ್ಕರೆಯಿಂದ ಕಂಡಿದ್ದು ತುಂಬ ಜಾಸ್ತಿ.

೧೯೮೮. ಪಿಯೂಸಿ ಮೊದಲನೇ ವರ್ಷ ಕೆಮಿಸ್ಟ್ರಿ ಲ್ಯಾಬ್ ಪ್ರೊಫೆಸರ್ ಅವರೇ. ಖಡಕ್ ಮಾಸ್ತರರು. ಅತಿ ಮುತುವರ್ಜಿಯಿಂದ ಲ್ಯಾಬ್ ಜರ್ನಲ್ ಚೆಕ್ ಮಾಡುತ್ತಿದ್ದರು. ಚಿಕ್ಕ ಚಿಕ್ಕ ವಿಷಯಗಳನ್ನು ಗಮನಿಸಿ, ತಿದ್ದಿ ಅವರು ಕೊಡುತ್ತಿದ್ದ feedback ಇನ್ನೂ ನೆನಪಿವೆ. ಸಣ್ಣ ಸಣ್ಣ ತಪ್ಪುಗಳಾಗಿ ದೊಡ್ಡ ದೊಡ್ಡ ಮಾರ್ಕ್ಸ್ ಕಳೆದು ಹೋಗುವದು ಬೇಡ ಅನ್ನುವ ಕಳಕಳಿ ಪ್ರೊ. ಜಮಖಂಡಿ ಅವರದ್ದು.

ಸಾಧಾರಣವಾಗಿ ಲ್ಯಾಬೋರೇಟರಿ ಕ್ಲಾಸಿಗೆ ಬರುವ ಪ್ರೊಫೆಸರಗಳು ಲೆಕ್ಚರ್ ಕೊಡುವದು, ಅದೂ ವಿಷಯದ ಹೊರತಾಗಿ ಮಾತಾಡುವದು ಬಹಳ ಕಡಿಮೆ. ಆದರೆ ಪ್ರೊ. ಜಮಖಂಡಿ ಅದಕ್ಕೊಂದು ಅಪವಾದ. ಲ್ಯಾಬಿನಲ್ಲಿ ಪ್ರಾಕ್ಟಿಕಲ್ ಶುರು ಮಾಡುವ ಮೊದಲು ಆವತ್ತಿನ ಪ್ರಾಕ್ಟಿಕಲ್ ಬಗ್ಗೆ ವಿವರಿಸಲು ಒಂದು ಹತ್ತು ಹದಿನೈದು ನಿಮಿಷ ಇರುತ್ತಿತ್ತು. ಅದನ್ನು ಹೇಳಿ ಮುಗಿಸಿದ ಪ್ರೊ. ಜಮಖಂಡಿ ನಂತರ ಒಂದಿಷ್ಟು ಹೊತ್ತು ಇತರೇ ವಿಷಯಗಳ ಬಗ್ಗೆ ಮಾತಾಡುತ್ತಿದ್ದರು. ಮುಖ್ಯವಾಗಿ ಪಿಯೂಸಿ ವಿದ್ಯಾರ್ಥಿಗಳಿಗೆ ಮುಂದೆ ಏನು ಮಾಡಬಹುದು, ಯಾವ್ಯಾವ ರೀತಿಯ ಅವಕಾಶಗಳಿವೆ, ಇತ್ಯಾದಿ. ಅದೊಂದು ವಿಷಯದಲ್ಲಿ ಅವರಿಗೆ ತುಂಬ passion ಇತ್ತು. ಕರ್ನಾಟಕ ಸೈನ್ಸ್ ಕಾಲೇಜಿನಿಂದ ಬೇರೆ ಬೇರೆ ಖ್ಯಾತ ವಿದ್ಯಾಸಂಸ್ಥೆಗಳಿಗೆ ಯಾರ್ಯಾರು ಪ್ರವೇಶ ಗಿಟ್ಟಿಸಿದ್ದರು, ಅವರು ಈಗ ಏನು ಮಾಡುತ್ತಿದ್ದಾರೆ, ಅವರು ಹೇಗೆ ಓದುತ್ತಿದ್ದರು, ಅದು ಇದು ಇತ್ಯಾದಿ. Highly motivational.

ಅವರು ಕೊಡುತ್ತಿದ್ದ ಉಪದೇಶ ಕೇವಲ IIT, AIIMS ಇಂತಹ ಎಲ್ಲರಿಗೂ ಗೊತ್ತಿದ್ದ ಕೆಲವೇ ಉನ್ನತ ವಿದ್ಯಾಸಂಸ್ಥೆಗಳ ಬಗ್ಗೆ ಮಾತ್ರ ಇರುತ್ತಿರಲಿಲ್ಲ. UDCT - Mumbai, BITS - Pilani, BIT - Ranchi, Roorkee, JIPMER - Pondicherry, Vellore Medical College, AFMC, ಹೊರ ರಾಜ್ಯದ ರೀಜನಲ್ ಇಂಜಿನಿಯರಿಂಗ್ ಕಾಲೇಜುಗಳು, ಇತ್ಯಾದಿ. ಒಂದೇ ಎರಡೇ. ಹೀಗೆ ಅನೇಕಾನೇಕ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇರುವ ಹಲವಾರು ಅವಕಾಶಗಳ ಬಗ್ಗೆ ಅವರಿಗೆ ಮಾಹಿತಿ ಇತ್ತು. ಅಂತಹ ವಿದ್ಯಾಲಯಗಳಲ್ಲಿ ಪ್ರವೇಶ ಗಿಟ್ಟಿಸಿ, ಸಾಧನೆ ಮಾಡಿದ ಅವರ ಹಳೆಯ ವಿದ್ಯಾರ್ಥಿಗಳ ಬಗ್ಗೆ ಅಪಾರ ಹೆಮ್ಮೆ ಇತ್ತು. ಹತ್ತು, ಇಪ್ಪತ್ತು ವರ್ಷ ಹಿಂದಿನ ವಿದ್ಯಾರ್ಥಿಗಳ ಹೆಸರು ನೆನಪಿಟ್ಟು, 'ಇಂತವ ಇಷ್ಟು ರಾಂಕ್ ಬಂದು, ಇಲ್ಲಿ ಆ ಕೋರ್ಸ್ ಮಾಡಿ, ನಂತರ ಅಲ್ಲಿ ಇನ್ನೊಂದು ಕೋರ್ಸ್ ಮಾಡಿ, ಈಗ ಹೀಗಿದಾನೆ. ಅವರೂ ಸಹ ಒಂದು ದಿವಸ ನಿಮ್ಮಂತೆ ಇಲ್ಲೇ, ಹೀಗೇ ಕೆಮಿಸ್ಟ್ರಿ ಪ್ರಾಕ್ಟಿಕಲ್ ಮಾಡಿ ಹೋಗಿದ್ದರು. ಅವರಿಗೆ ಸಾಧ್ಯವಾಗಿದ್ದು ನಿಮಗೂ ಸಾಧ್ಯವಾಗಬಹುದು. Everyone must explore these opportunities. Don't limit yourselves to only local colleges!' ಅಂತ ಪ್ರೊ. ಜಮಖಂಡಿ ಉಪದೇಶ. ಧಾರವಾಡದ ವಿದ್ಯಾರ್ಥಿಗಳು ಮಾಹಿತಿ ಇಲ್ಲ ಅನ್ನುವ ಕಾರಣಕ್ಕೆ ಅವಕಾಶದಿಂದ ವಂಚಿತರಾಗಬಾರದು ಎಂಬ ಕಳಕಳಿ ಅವರ ಮಾತುಗಳಲ್ಲಿ. ಅವರು ಹೇಳುವ ಮೊದಲು ಎಷ್ಟೋ ವಿದ್ಯಾಲಯಗಳ ಬಗ್ಗೆ, ಅಲ್ಲಿರುವ ಕೋರ್ಸುಗಳ ಬಗ್ಗೆ ನಮಗೆಲ್ಲ ಗೊತ್ತೂ ಇರಲಿಲ್ಲ. ಹೀಗೆಲ್ಲ ಹೆಚ್ಚಿನ ಉಪದೇಶ ಮಾಡಲಿಕ್ಕೆ ಅವರಿಗೇನು ಹೆಚ್ಚಿನ ಪಗಾರ್ ಸಿಗ್ತಿದ್ದಿಲ್ಲ ಬಿಡಿ. ಅದು ಅವರ passion ಮತ್ತೆ ವಿದ್ಯಾರ್ಥಿಗಳ ಬಗ್ಗೆ ಇರುವ ಒಂದು ತರಹದ ಕಾಳಜಿ, ನಿಷ್ಠೆ.

ವಿದ್ಯಾರ್ಥಿಗಳನ್ನು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (NDA) ಸೇರುವಂತೆ ಪ್ರೋತ್ಸಾಹಿಸಿದ ಮಾಸ್ತರು ಅವರನ್ನು ಬಿಟ್ಟರೆ ಬೇರೆ ಯಾರೂ ಇರಲಿಕ್ಕೆ ಇಲ್ಲ. ಅವರೇ ಕರ್ನಾಟಕ ಕಾಲೇಜಿನ NCC ಕಮಾಂಡೆಂಟ್ ಕೂಡ ಆಗಿದ್ಡರಾ? ಸರಿ ನೆನಪಿಲ್ಲ. ಅವರ ಪರ್ಸನಾಲಿಟಿ ಅದಕ್ಕೆ ಸೂಟ್ ಆಗುವಂತಿತ್ತು. ಯಾವಾಗಲೂ ಸ್ಲಿಮ್ ಅಂಡ್ ಟ್ರಿಮ್, ನೀಟ್ ಆಗಿ ಡ್ರೆಸ್ ಮಾಡಿಕೊಂಡು, ಶಿಸ್ತಾಗಿ ಇರುತ್ತಿದ್ದ ಜಮಖಂಡಿ ಪ್ರೊಫೆಸರ್ ನೋಡಿದರೆ NCC ತರಬೇತಿ ಪಡೆದವರಂತೆ ಕಾಣುತ್ತಿದ್ದರು.

೧೯೯೦ ರಲ್ಲಿ ನಮ್ಮ ಪಿಯೂಸಿ ಮುಗಿದು, BITS, Pilani ಯಲ್ಲಿ ಬೇಕಾಗಿದ್ದ ಕಂಪ್ಯೂಟರ್ ಸೈನ್ಸಿಗೆ ಪ್ರವೇಶ ಸಿಕ್ಕು, ಹೋಗಲೋ ಬೇಡವೋ ಅಂತ ದ್ವಂದ್ವದಲ್ಲಿ ನಾವು, ಅಷ್ಟು ದೂರ ಕಳಿಸುವದೋ ಬೇಡವೋ ಅಂತ ಅವರದ್ದೇ ದ್ವಂದ್ವದಲ್ಲಿ ಮನೆಯವರೂ ಇದ್ದಾಗ, 'ಏ! Nothing doing. You must go there. It's a very good college. ಮಸ್ತ ಕಾಲೇಜೈತಿ. ನಮ್ಮ ಹಳೇ ಸ್ಟೂಡೆಂಟ್ಸ್ ಕೆಲವರು ಹೋಗಿ, ಭಾಳ ಚೊಲೋ ಮಾಡ್ಕೊಂಡಾರ. ಮರೀ, ಸುಮ್ಮನ ಹೋಗಪಾ ನೀ. ಏನ್ ವಿಚಾರ ಮಾಡ್ತೀ? Don't think otherwise, I say' ಅಂತ ಹೇಳಿ, 'ಏ, ಅಲ್ಲೇ ಕಳಿಸೋ ಮಾರಾಯ ನಿನ್ನ ಮಗನ್ನ. ಏನ್ ವಿಚಾರ ಮಾಡ್ತೀ?' ಅಂತ ತಂದೆಯವರಿಗೂ ಹೇಳಿ BITS, ಪಿಲಾನಿಗೇ ಹೋಗುವದು ಅಂತ ನಿರ್ಧಾರ ಮಾಡಿ, ಹೋಗಿ ಸೇರಿಕೊಂಡಿದ್ದರ ಹಿಂದೆ ಪ್ರೊ. ಜಮಖಂಡಿ ನೀಡಿದ್ದ ಪ್ರೋತ್ಸಾಹ, ಧೈರ್ಯ, ಹುರುಪು ಎಲ್ಲದಕ್ಕೆ ಸದಾ ಚಿರಋಣಿ. BITS, Pilani ಸೇರಲು, ಸೇರಿದ ನಂತರ ಸೆಟಲ್ ಆಗಲು ಎಲ್ಲ ರೀತಿಯ ಮಾಹಿತಿ, ಸಹಾಯ ನೀಡಿದ ಇನ್ನೊಬ್ಬ ಮಹನೀಯರು ಪ್ರೊ. ಭೂಸನೂರಮಠರು. ಅವರೂ ಸಹ ತಂದೆಯವರ ಸಹೋದ್ಯೋಗಿಗಳೇ. ಅವರ ಇಬ್ಬರು ಗಂಡು ಮಕ್ಕಳು, ಸೊಸೆ ಎಲ್ಲ BITS, Pilani ಯಲ್ಲೇ ಓದಿದವರು. ಪ್ರೊ. ಜಮಖಂಡಿ, ಪ್ರೊ. ಭೂಸನೂರುಮಠ ನೆರೆಹೊರೆಯವರೇ ಅಂತ ನೆನಪು. (ಕವಿವಿ ನಿರ್ಮಾತ್ಯ ಡಿ.ಸಿ. ಪಾವಟೆ ಅವರ ಪುತ್ರ ಒಂದು ಕಾಲದಲ್ಲಿ ಪಿಲಾನಿಯಲ್ಲಿ ಪ್ರೊಫೆಸರ್ ಆಗಿದ್ದರು ಅಂತ ಕೇಳಿದ್ದು. ಆ ಕಾರಣಕ್ಕೋ ಏನೋ ಕವಿವಿ, ಕೆಸಿಡಿ ಮಾಸ್ತರುಗಳಿಗೆ ಪಿಲಾನಿ ಬಗ್ಗೆ ಗೊತ್ತಿತ್ತು ಮತ್ತು ಸುಮಾರು ಜನರ ಮಕ್ಕಳು ಅಲ್ಲಿ ವಿದ್ಯಾಭ್ಯಾಸ ಮಾಡಿದ್ದರು.)

೧೯೯೩, ಮಾರ್ಚ್. ಮುಂದೆ ಇಂಜಿನಿಯರಿಂಗ್ ಮೂರನೇ ವರ್ಷದಲ್ಲಿದ್ದಾಗ REC, ಕುರುಕ್ಷೇತ್ರ, ಹರ್ಯಾಣದಲ್ಲಿ ನಡೆದ ತಾಂತ್ರಿಕ ಅಧಿವೇಶನಕ್ಕೆ ಒಂದು ಪ್ರಬಂಧ ಕಳಿಸಿದ್ದೆ. ಆಯ್ಕೆ ಆಗಿತ್ತು. ಪ್ರಬಂಧ ಮಂಡಿಸಲು ಹೋಗಿದ್ದೆ. ಪ್ರಥಮ ಬಹುಮಾನ ಬಂತು. ಪತ್ರ ಬರೆದು ಧಾರವಾಡದ ಎರಡು ಗುರುಗಳ ಜೊತೆ ಸಂತಸ ಹಂಚಿಗೊಂಡಿದ್ದೆ. ಒಬ್ಬರು ಇದೇ ಪ್ರೊ. ಜಮಖಂಡಿ. ಪಿಲಾನಿಗೆ ಹೋಗಲು ಸ್ಪೂರ್ತಿ, ಪ್ರೋತ್ಸಾಹ ಎಲ್ಲ ನೀಡಿದವರೇ ಅವರು. ಅವರೊಂದಿಗೆ ಹಂಚಿಕೊಂಡಿಲ್ಲ ಅಂದರೆ ಹೇಗೆ? ಇನ್ನೊಬ್ಬರು ನಮ್ಮ 'ಗಣಿತ ಲೋಕದ' ದಿ. ದೇಶಪಾಂಡೆ ಸರ್. ಅವರಿಗಂತೂ ಸಿಕ್ಕಾಪಟ್ಟೆ ಹೆಮ್ಮೆ. ಪ್ರಥಮ ಬಹುಮಾನದ ಸರ್ಟಿಫಿಕೇಟ್ ಕಾಪಿ ಸರ್ ನೋಡಿ ಖುಷಿ ಪಡಲಿ ಅಂತ ಪತ್ರದೊಂದಿಗೆ ಕಳಿಸಿದ್ದರೆ, ದೇಶಪಾಂಡೆ ಸರ್ ಅದನ್ನ ನೋಟೀಸ್ ಬೋರ್ಡ್ ಮೇಲೆ ಹಾಕಿಸಿ, 'ನೋಡ್ರೀ ನಮ್ಮ ೧೯೯೦ ಬ್ಯಾಚಿನ ಸ್ಟೂಡೆಂಟ್!' ಅಂತ ಹಲಗಿ ಬಾರಿಸಿದ್ದೇ ಬಾರಿಸಿದ್ದು! ಅವರ ಅಭಿಮಾನ ದೊಡ್ಡದು. ಪ್ರೊ. ಜಮಖಂಡಿ ತಿರುಗಿ ಪತ್ರ ಬರೆದಿದ್ದರೋ ಇಲ್ಲವೋ ನೆನಪಿಲ್ಲ. ಆದರೆ ಪ್ರೊ. ಜಮಖಂಡಿ ಸಿಕ್ಕಾಪಟ್ಟೆ ಖುಷಿಯಾಗಿ, ಅಭಿನಂದನೆ, ಶುಭ ಹಾರೈಕೆಗಳನ್ನ ಹೇಳಿದ್ದರು ಅಂತ ಮನೆಯವರು ಮಾತ್ರ ತಿಳಿಸಿದ್ದರು. ನಮ್ಮ ಚಿಕ್ಕ ಚಿಕ್ಕ ಸಾಧನೆಗಳ ಮೇಲೆ ಇವರಿಗೆಲ್ಲ ಎಷ್ಟು ಹೆಮ್ಮೆ! ಎಷ್ಟು ದೊಡ್ಡ ಹೃದಯ, ಮನಸ್ಸು! ಅಂತೆಲ್ಲ ವಿಚಾರ ಇವತ್ತು ಮತ್ತೆ ಬಂತು.

ನಮ್ಮ ತಂದೆಯವರ ಸಹೋದ್ಯೋಗಿಯಾಗಿದ್ದರು ಅನ್ನುವದರಕಿಂತ ಹೆಚ್ಚು ಆತ್ಮೀಯ ಮಿತ್ರರಾಗಿದ್ದರು. ಸಹೋದ್ಯೋಗಿಗಳಲ್ಲಿ ತಂದೆಯವರೊಂದಿಗೆ ಆತ್ಮೀಯತೆಯಿಂದ ಏಕವಚನದಲ್ಲಿ ಮಾತಾಡುತ್ತಿದ್ದ ತುಂಬ ಕ್ಲೋಸ್ ಮಿತ್ರರು, ನನಗೆ ಗೊತ್ತಿದ್ದ ಮಟ್ಟಿಗೆ, ಇಬ್ಬರೇ. ಒಬ್ಬರು ಇವರು ಪ್ರೊ. ಜಮಖಂಡಿ, ಇನ್ನೊಬ್ಬರು ಫಿಸಿಕ್ಸ್ ವಿಭಾಗದ ಪ್ರೊ. ಹಿರೇಗೌಡರ. ಇಬ್ಬರಿಗೂ ನಮ್ಮೆಲ್ಲರ ಮೇಲೆ ತುಂಬ ಪ್ರೀತಿ, ಅಭಿಮಾನ, ಹೆಮ್ಮೆ ಎಲ್ಲ. ಅದಕ್ಕೆಲ್ಲ ತಿರುಗಿ ಏನು ಕೊಡಲು ಸಾಧ್ಯ? ಅವರಿಗೆಲ್ಲ ಜೀವನಪೂರ್ತಿ ಚಿರರುಣಿಗಳಾಗಿ ಇರಬಹುದು. ಅಷ್ಟೇ.

ಪ್ರೊ. ಜಮಖಂಡಿ ಅವರ ಮತ್ತೊಂದು ವಿಶೇಷ ಅಂದ್ರೆ ಅವರಿಗೆ ಕಾಲೇಜ್ ಎಂಬದು ಒಂದು ಫಸ್ಟ್ ಲವ್ ಇದ್ದ ಹಾಗೆ. ರಜೆ ಇದ್ದರೂ ಕಾಲೇಜಿಗೆ ಬಂದು, ತಮ್ಮ ಆಫೀಸ್ ನಲ್ಲಿ ಒಂದೆರೆಡು ತಾಸು ಕೂತು, ಯಾರಾದರೂ ಸಹೃದಯಿಗಳು ಸಿಕ್ಕರೆ ಹೆಮ್ಮಾಡಿ ಕ್ಯಾಂಟೀನಿನಲ್ಲಿ ಒಂದು ಚಹಾ ಕುಡಿದು, ಕ್ಯಾಂಪಸ್ ಒಂದು ರೌಂಡ್ ಹಾಕಿ, ನಂತರ ಮನೆಗೆ ವಾಪಸ್ ಹೋದರೆ ಅವರಿಗೊಂದು ರೀತಿಯ ಸಮಾಧಾನ. ಮತ್ತೆ ಕಾಲೇಜಿಗೆ ಹತ್ತಿರವೇ ಇದ್ದ ಕ್ವಾರ್ಟರ್ಸನಲ್ಲಿಯೇ ಅವರ ವಸತಿ. ಉದಯ ಹಾಸ್ಟೆಲ್ ಮುಂದೆ ಇದ್ದ, ಸಾಲು ಸಾಲಾದ, ದೊಡ್ಡ ಹಳೆ ಬಂಗಲೆ ತರಹದ ಒಂದು ಕ್ವಾರ್ಟರನಲ್ಲಿ ಅವರಿದ್ದರು. ಒಮ್ಮೆ ತುಂಬ ಸಣ್ಣವನಿದ್ದಾಗ ಅವರ ಮನೆಗೆ ಹೋಗಿದ್ದ ನೆನಪು. ತಂದೆಯವರ ಇತರೆ ಸಹೋದ್ಯೋಗಿಗಳಾದ ಪ್ರೊ. ಪೂಜಾರಿ, ಪ್ರೊ. ಭೂಸನೂರಮಠ, ಪ್ರೊ. ಜಾಲಿಹಾಳ್ ಎಲ್ಲ ಅದೇ ಸಾಲಿನಲ್ಲಿ ಇದ್ದವರು. ಇಂದಿಗೂ ಆ ರಸ್ತೆಗಳಲ್ಲಿ ಹೋದರೆ ಹಳೆಯ ಎಷ್ಟೊಂದು ಮಧುರ ನೆನಪುಗಳು.

ಪ್ರೊ. ಜಮಖಂಡಿ ಅವರ ಬಗ್ಗೆ ಬಹಳ ಜನರಿಗೆ ಗೊತ್ತಿರದ ಒಂದು ಸಂಗತಿ ಅಂದರೆ ಅವರು ಭೂತ ಬಂಗಲೆಯೊಂದರಲ್ಲಿ, ಭೂತಗಳನ್ನು ಓಡಿಸಿ, ಧೈರ್ಯದಿಂದ ವರ್ಷಾನುಗಟ್ಟಲೆ ಅಲ್ಲೇ ಇದ್ದು, ಸಂಸಾರ ಮಾಡಿ ಬಂದವರು!!

ಧಾರವಾಡದ ಸುಳ್ಳದಮಠ ಕಾಂಪೌಂಡ್. ಅಲ್ಲೇ ಸಪ್ತಾಪುರ ಭಾವಿಯಿಂದ ಸ್ವಲ್ಪ ಈಕಡೆ, ಸರ್ಕಲ್ ಎದುರಿಗೇ ಇದೆ. ಹಳೇ ಕಾಲದ ಬಂಗಲೆ. ದೊಡ್ಡ ಕಾಂಪೌಂಡ್. ಮರಗಿಡಗಳಿಂದ ತುಂಬಿದ್ದು. ಮೊದಲು ಸುತ್ತಮುತ್ತ ಹೆಚ್ಚು ಮನೆ ಗಿನೆ ಇಲ್ಲದೆ, ಒಂದು ತರಹದ ಗವ್ವ್ ಎನ್ನುವ ಭೂತ ಬಂಗಲೆ ವಾತಾವರಣ. ಆ ಮನೆಯಲ್ಲಿ ಭೂತ ಚೇಷ್ಟೆ. paranormal activity. ಒಣ ಹಾಕಿದ್ದ ಬಟ್ಟೆಗಳಿಗೆ ಒಮ್ಮೆಲೇ ಬೆಂಕಿ ಹತ್ತಿ ಭಸ್ಮವಾಗುವದು, ಮಡಚಿಟ್ಟ ಬಟ್ಟೆಗಳನ್ನು ಬಿಚ್ಚಿದರೆ ಕಟ್ ಕಟ್ ಆದಂತೆ ಹರಿದು ಹೋಗುವದು, ಪಾತ್ರೆಗಳ ಉರುಳುವಿಕೆ, ಹೀಗೆಲ್ಲ ಚಿತ್ರ ವಿಚಿತ್ರ. ನಮಗೆ ತುಂಬ ಬೇಕಾದವರೇ ಒಬ್ಬರು ೧೯೬೦ ರ ದಶಕದಲ್ಲಿ ಅಲ್ಲಿ ಭಾಡಿಗೆಗೆ ಇದ್ದರು. ಹೀಗಾಗಿ ನಂಬದೇ ಇರಲು ಕಾರಣಗಳೇ ಇಲ್ಲ. ನಮ್ಮ ಆಪ್ತರು ಎಲ್ಲ ಪೂಜೆ ಪುನಸ್ಕಾರ ಮಾಡಿಸಿದರು. ಆದರೂ ಭೂತ ಚೇಷ್ಟೆ ನಿಲ್ಲಲಿಲ್ಲ. ಸ್ವಲ್ಪ ವೇಳೆಯ ನಂತರ ಅವರಿಗೆ ಸಾಕಾಗಿ ಮನೆ ಖಾಲಿ ಮಾಡಿಕೊಂಡು ಹೋದರು.

ನಂತರ ಅದೇ ಮನೆಗೆ ಬಂದವರು ಇದೇ ಪ್ರೊ. ಜಮಖಂಡಿ. ಅವರಿಗೂ ಅದೇ ಅನುಭವ. ಸುಮಾರು ಅದೇ ತರಹದ ಭೂತ ಚೇಷ್ಟೆಗಳು. ಸ್ವಲ್ಪ ಹೆಚ್ಚು ಕಮ್ಮಿ.

ಪ್ರೊ. ಜಮಖಂಡಿ ಸಹ ಪೂಜೆ ಮಾಡಿಸಿದರು. ಅವರ ಮುಸ್ಲಿಂ ಪದ್ಧತಿ ಪ್ರಕಾರ ಯಾವದೋ ದರ್ಗಾಕ್ಕೆ ಹೋಗಿ, ಅಲ್ಲಿನ ಮೌಲ್ವಿಗೆ ಹೇಳಿಕೊಂಡು, ಚದ್ದರ್ ಅದು ಇದು ಹೊದೆಸಿ, ಏನೋ ತಾಯಿತ ತೆಗೆದುಕೊಂಡು ಬಂದರು. ಮಜಾ ನೋಡಿ! ಅದರ ನಂತರ ಭೂತ ಚೇಷ್ಟೆ ಫುಲ್ ಬಂದ್! ಭೂತ ಓಡಿ ಹೋಯಿತೋ, ಶಾಂತವಾಯಿತೋ! ಗೊತ್ತಿಲ್ಲ. ಒಟ್ಟಿನಲ್ಲಿ paranormal activities ನಿಂತುಹೋದವು. ಸುಮಾರು ವರ್ಷ ಅದೇ ಸುಳ್ಳದಮಠ ಕಾಂಪೌಂಡ್ ಮನೆಯಲ್ಲಿಯೇ ಇದ್ದರು ಪ್ರೊ. ಜಮಖಂಡಿ. ನಂತರ ಕೆಸಿಡಿ ಸ್ಟಾಫ್ ಕ್ವಾರ್ಟರ್ಸಗೆ ಬಂದು, ರಿಟೈರ್ ಆಗುವವರೆಗೆ ಅಲ್ಲೇ ಇದ್ದು, ಈಗ ಹುಬ್ಬಳ್ಳಿಗೆ ಹೋಗಿ ಸೆಟಲ್ ಆಗಿದ್ದರು ಅಂತ ಕೇಳಿದ್ದು.

ಆಗಾಗ ಮನೆಗೆ ಬರುತ್ತಿದ್ದರು ಪ್ರೊಫೆಸರ್. ತಮ್ಮ ಬಜಾಜ್ ಸ್ಕೂಟರ್ ಮೇಲೆ ಬಂದು, ಎದುರಿಗೆ ಬಂದ ನಮಗೆ, 'ಮರೀ! ಏನ್ ಮಾಡಾಕತ್ತೀ!? ಪಪ್ಪಾ ಮನಿಯಾಗ ಅದಾನs?' ಅಂತ ಪ್ರೀತಿಯಿಂದ ತಲೆ ಸವರುತ್ತ ಒಳಗೆ ಬರುತ್ತಿದ್ದ ಪ್ರೊ. ಜಮಖಂಡಿ ಇವತ್ತು ತುಂಬ ನೆನಪಾದರು.

ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನೆಮ್ಮದಿ, ದುಃಖ ಭರಿಸುವ ಶಕ್ತಿ ದೇವರು ಕರುಣಿಸಲಿ.

Rest In Peace, ಪ್ರೊ. ಜಮಖಂಡಿ!

*********************************************

ಜಮಖಂಡಿ ಕುಟುಂಬವನ್ನು ಸಂಪರ್ಕಿಸಿ, ಫೋಟೋ ತರಿಸಿಕೊಟ್ಟ ಧಾರವಾಡದ ಶ್ರೀಮತಿ ರಕ್ಷಾ ಭಾವಿಕಟ್ಟಿಯವರಿಗೆ ಧನ್ಯವಾದ.

ನಮ್ಮ ಪ್ರೀತಿಯ ಕರ್ನಾಟಕ ಕಾಲೇಜಿನ ಒಂದಿಷ್ಟು ಫೋಟೋ ನೋಡಲು ಇಲ್ಲಿ ಹೋಗಿ.

ಪ್ರೊ. ಜಮಖಂಡಿ ಇದ್ದ ಸುಳ್ಳದಮಠ ಬಂಗಲೆಯ ಒಂದು ಫೋಟೋ. ೨೦೧೨, ಫೆಬ್ರುವರಿಯಲ್ಲಿ ಧಾರವಾಡಕ್ಕೆ ಹೋದಾಗ, ಮುಂಜಾನೆ ವಾಕ್ ಹೋದಾಗ ತೆಗೆದಿದ್ದು. ಈಗ ಖಾಲಿ ಜಾಗ ಎಲ್ಲ ತುಂಬಿ ಹೋಗಿದ್ದು ಮೊದಲಿನ ಗತ್ತು, ಗಾಂಭೀರ್ಯ, ಗವ್ವೆನ್ನುವ ಭೂತ ಬಂಗಲೆ ಲುಕ್ ಏನೂ ಉಳಿದಿಲ್ಲ.

೧೯೯೦ ರ ಟೈಮಿನಲ್ಲಿ ಸುಳ್ಳದಮಠ ಕಾಂಪೌಂಡ್ ಬಂಗಲೆಯಲ್ಲಿ ಗ್ರಂಥಾಲಯದ ಶಾಖೆಯಿತ್ತು. ಅಲ್ಲಿ ಹೋಗಿ ಪುಸ್ತಕ ತಂದಿದ್ದು ನೆನಪಿದೆ. 

ಪ್ರೊ. ಜಮಖಂಡಿ ಕಾಲದಲ್ಲಿ ಸುಳ್ಳದಮಠ ಬಂಗಲೆ ಬಿಟ್ಟ ಭೂತ, ಅಲ್ಲೇ ಸ್ವಲ್ಪ ಮುಂದೆ ಇದ್ದ ಕೆಸಿಡಿ ಬ್ಯಾಡ್ಮಿಂಟನ್ ಕೋರ್ಟಿಗೆ ಶಿಫ್ಟ್ ಆಗಿತ್ತಾ? ಹಾಗೊಂದು ಸಂದೇಹ. ಯಾಕೆಂದರೆ ಕೆಸಿಡಿ ಬ್ಯಾಡ್ಮಿಂಟನ್ ಕೋರ್ಟಿನಲ್ಲಿ ಭೂತವಿದೆ ಅಂತ ಸುದ್ದಿಯಂತೂ ಇತ್ತು. :)

8 comments:

Shivakumar Hiremath said...

Sorry to hear about prof. Jamkhandi's demise. He taught us organic chemistry in Timmanagoudar's tuition. RIP sir!

Unknown said...

Very sad that Professor M Y M Jamkhandi Sir is no more. He was a lovable person and efficient teacher. I was his student at KCD for a year for PUC I science before shifting to arts stream. He had special love for me as we shared the same surname. He was not a NCC officer but nevertheless a disciplinarian. May his soul rest in peace.

Unknown said...

Hrudaya sparshisuva ee ninna barvanige bagge Hats off ...Keep writing .....

Mahesh Hegade said...

Thank you, Shivakumar Hiremath.
Thank you, Jamkhandi Sir.
Thank you, Guddin.

Shailesh Hegde said...


Excellent tribute to Dr. Jamakhandi sir who was an expert in organic chemistry, and had a superb talent and passion for teaching. He coached and motivated his students because he loved doing those things.

I fondly remember visiting him several times in his college office and at his home. He always graciously offered nice chai during those home visits.

He was a close family friend of ours and morally supported us always.

May his soul rest in peace.

Mahesh Hegade said...

Shailesh Hegde - very true. Of the past students he was proud of and talked about included you, Bhat brothers, Mullatti etc.

angadiindu said...

ಹೆಗಡೆಯವರಿಗೆ ನಮಸ್ಕಾರ. ಪ್ರೊ. ಜಮಖಂಡಿ ಸರ್ ತೀರಿಕೊಂಡ ಸಂಗತಿ ಓದಿ ಬಹಳ ಖೇದ ಎನಿಸಿತು. ನಮಗೆ ಕೆಸಿಡಿಯಲ್ಲಿ ಎರಡೂ ವರ್ಷ ಕೆಮಿಸ್ಟ್ರಿ ಪಾಠ ಮಾಡಿದ್ದರು.ಶೈಲೇಶ ಹೇಳಿದ ಹಾಗೆ, ಕಠಿಣ ವಿಷಯವಾದ ORGANIC CHEMISTRY ಯನ್ನು ಬಹಳ ಮುತುವರ್ಜಿಯಿಂದ ಹೇಳಿಕೊಟ್ಟು,ಅದರಲ್ಲಿ ನಮಗೆ ಆಸಕ್ತಿ ಬರುವಂತೆ ಮಾಡಿದ್ದರು. ಇವರ ಕ್ಲಾಸು ಹೆಚ್ಚಾಗಿ ಮದ್ಯಾಹ್ನ ಎರಡು ಗಂಟೆಗೆ ಇರುತ್ತಿತ್ತು. ಊಟದ ನಂತರ ಅದೂ Organic ಕೆಮಿಸ್ಟ್ರಿ ಕ್ಲಾಸ್. ಬೇರೆ ಯಾರಾದ್ರೂ Sir ಆಗಿದ್ರೆ ಖಂಡಿತ ಆಕಳಿಕೆ ಬರುವ ಸಮಯ.ಆದರೆ ಒಂದು ದಿನವೂ ಇವರ ಪಾಠ ಬೋರ್ ಅನ್ನಿಸಲಿಲ್ಲ. ಹಳ್ಳಿಯ ಹಾಗೂ ಕನ್ನಡ ಮೀಡಿಯಮ್ ಹುಡುಗರ ಬಗ್ಗೆ ವಿಶೇಷ ಕಾಳಜಿ ತೋರಿಸುತ್ತಿದ್ದರು. ಅಲ್ಲಾಃ ಅವರ ಆತ್ಮಕ್ಕೆ ಶಾಂತಿ ನೀಡಲಿ.
ನಿಮ್ಮ ಈ ಶ್ರದ್ಧಾಂಜಲಿ ಲೇಖನದಲ್ಲಿ ವಿಷಯ ನೋವಿನದಾಗಿದೆ ನಿಜ. ಆದರೆ ಅದನ್ನು ಬರೆದ ರೀತಿ ತುಂಬಾ ಮನ ಮುಟ್ಟುವಂತಿದೆ. ನಮ್ಮನ್ನು ಮತ್ತೊಮ್ಮೆ ಕರ್ನಾಟಕ ಕಾಲೇಜಿಗೆ ಕರೆದುಕೊಂಡು ಹೋಯ್ತು. ಧನ್ಯವಾದಗಳು.

Mahesh Hegade said...

ಧನ್ಯವಾದ ಅಂಗಡಿಯವರಿಗೆ.