Friday, July 31, 2015

ಗುರು ಪೂರ್ಣಿಮೆ....

ಜುಲೈ ೩೧, ಶುಕ್ರವಾರ. ಇಂದು ಗುರು ಪೂರ್ಣಿಮೆ. ಫೇಸ್ಬುಕ್ ಮೇಲೆ ಹಾಕಿದ್ದ ಕೆಲವು ಪೋಸ್ಟುಗಳನ್ನು ಇಲ್ಲೂ ಹಾಕಿದ್ದೇನೆ ಅಷ್ಟೇ.

ಶಿಕ್ಷಕ ಬದುಕುವದನ್ನು ಕಲಿಸಿದರೆ ಗುರು ಬದುಕನ್ನೇ ಬದಲಾಯಿಸಿಬಿಡುತ್ತಾನೆ.

*****
ಒಬ್ಬ ಶ್ರೀಮಂತ ಬಂಗಾಳಿ ಮನುಷ್ಯ ಪ್ರತಿ ವರ್ಷ ಸಿಕ್ಕಾಪಟ್ಟೆ ಭರ್ಜರಿಯಿಂದ ಕಾಳಿ ಪೂಜೆ ಮಾಡುತ್ತಿದ್ದ. ಹಲವಾರು ಬಲಿತ ಆಡುಗಳನ್ನು ಕಡಿಸುತ್ತಿದ್ದ. ಕಾಳಿಗೆ ಅರ್ಪಿಸುತ್ತಿದ್ದ. ಊರ ಮಂದಿಗೆ ಫ್ರೀ ಮಟನ್ ಊಟ ಹಾಕಿಸುತ್ತಿದ್ದ. ಕಾಳಿ ಮಾತೆಯ ಮೇಲೆ ಆತನದು ಭಕ್ತಿಯ ಪರಾಕಾಷ್ಠೆ!...ಅಂತ ಅಂದುಕೊಂಡಿದ್ದರು ಮಂದಿ. ಅಂದುಕೊಂಡಿದ್ದರು.

ಹೀಗಿದ್ದಾಗ ಒಂದು ವರ್ಷ ಅಚಾನಕ್ ಕಾಳಿ ಪೂಜೆ, ಆಡಿನ ಬಲಿ ಎಲ್ಲ ನಿಲ್ಲಿಸಿಬಿಟ್ಟ. ಕಾಳಿ ಪೂಜೆಯ ನೆಪದಲ್ಲಿ ಬಿಟ್ಟಿ ಮಟನ್ ಊಟ ತಪ್ಪಿಹೊಯಿತಲ್ಲಾ ಅಂತ ಊರಿನ ಮಂದಿ ಪೇಚಾಡಿಕೊಂಡರು.

'ಯಾಕೆ ಸ್ವಾಮೀ, ಕಾಳಿ ಪೂಜೆ, ಆಡಿನ ಬಲಿ ಎಲ್ಲ ನಿಲ್ಲಿಸಿಬಿಟ್ಟಿರಿ??' ಅಂತ ಕೇಳಿದರು.

'ಏನೂ ಇಲ್ಲ. ಏನು ಮಾಡೋಣ?? ಮಟನ್ ತಿನ್ನೋಣ ಅಂದರೆ ಎಲ್ಲ ಹಲ್ಲುಗಳೂ ಬಿದ್ದು ಹೋಗಿವೆ. ಮಾಂಸ ಅಗಿಲಿಕ್ಕೆ ಭಾಳ ಕಷ್ಟ!' ಅಂತ ಹಲ್ಲು ಬಿದ್ದೋದ ಬೊಚ್ಚು ಬಾಯಿ ತೆಗೆದು ಪೆಕಪೆಕಾ ಅಂತ ನಕ್ಕ ಆ ಶ್ರೀಮಂತ!

ಹಲ್ಲು ಹೋದ ಮೇಲೆ ಮಟನ್ ಮೇಲೆ ವೈರಾಗ್ಯ ಬಂದರೂ ಅಷ್ಟೇ ಬಿಟ್ಟರೂ ಅಷ್ಟೇ. ಹಲ್ಲಿದ್ದಾಗಲೇ ಕಡಲೆ ಮೇಲೆ ವೈರಾಗ್ಯ ಬಂದ ಮಂದಿ ಇದ್ದಾರೆಯೇ? :)

-- ಶ್ರೀ ರಾಮಕೃಷ್ಣ ಪರಮಹಂಸ

'ಶ್ರೀ ರವೀಂದ್ರನಾಥ ಟಾಗೋರರ ಪಿತಾಶ್ರೀ ವೃದ್ಧ ಶ್ರೀ ದೇವೇಂದ್ರನಾಥ ಟಾಗೋರರು ಒಮ್ಮೆಲೇ ಏಕ್ದಂ ವೈರಾಗಿಯಾಗಿ, ಎಲ್ಲವನ್ನೂ ತ್ಯಜಿಸಿಬಿಟ್ಟರಲ್ಲಾ. ಋಷಿ ಆಗಿಬಿಟ್ಟರಲ್ಲಾ. ಅವರ ಬಗ್ಗೆ ನಿಮ್ಮ ಅಭಿಪ್ರಾಯ???' ಅಂತ ಕೇಳಿದಾಗ ತಮ್ಮದೇ ಶೈಲಿಯಲ್ಲಿ ರಾಮಕೃಷ್ಣ ಪರಮಹಂಸರು ಉತ್ತರಿಸಿದ ರೀತಿ.

#ಡಂಬಾಚಾರ #ಗುರುಪೂರ್ಣಿಮೆ #ವೈರಾಗ್ಯ

*****

ದೊಡ್ಡ ದೊಡ್ಡ ವೇದಾಂತದ ತಿರುಳನ್ನು ಬಾಲವಾಡಿ ಮಾಣಿಗೆ ಅರ್ಥವಾಗುವ ರೀತಿಯಲ್ಲಿ ಹೇಳಲಿಕ್ಕೆ ಬರುವಂತಹ ಗುರುಗಳು ಬಹಳ ಕಮ್ಮಿ. ಅದೇನೋ ಅಂತಾರಲ್ಲಾ....'ಬಾಲವಾಡಿಯಲ್ಲಿ ಸರಿಯಾಗಿ ಕಲಿತುಬಿಟ್ಟರೆ ಸಾಕು. ಅದೇ ಜೀವನ ಪರ್ಯಂತ ಸಾಕಾಗುತ್ತದೆ,' ಅಂತ. ಬಾಲವಾಡಿಯಲ್ಲಿ ಅಧ್ಯಾತ್ಮವನ್ನು ಸರಿಯಾಗಿ ಕಲಿಯದ ನಮ್ಮಂತಹ ಮಂದಿಗೆ ಬರೋಬ್ಬರಿ ವೇದಾಂತವನ್ನು, ಅದೂ ಪಾಶ್ಚಾತ್ಯ ಚಿಂತನೆಗೆ ಬಲಿಯಾಗಿ ತಲೆ ಕಲಬೆರೆಕೆಯಾಗಿ ಹಾಪ್ ಆಗಿದ್ದ ಮಂದಿಗೆ ವೇದಾಂತವನ್ನು ಅತಿ ಸರಳವಾಗಿ ಬೋಧಿಸಿದ ನಮ್ಮ ಈ ಗುರುವರ್ಯನ ಬಗ್ಗೆ ಹಿಂದೊಮ್ಮೆ ಬರೆದಿದ್ದ ಬ್ಲಾಗ್ ಲೇಖನ ಇಂದು ಗುರು ಪೂರ್ಣಿಮೆಯಂದು with full gratitude ಮತ್ತೊಮ್ಮೆ!

ಗುರು ಬೆರಳನಿಂದ ಏನೋ ತೋರಿಸುತ್ತಾನೆ. ನಾವು ನೀವು ಗುರು ತೋರಿಸಿದ್ದನ್ನು ಬಿಟ್ಟು ಗುರುವಿನ ಬೆರಳನ್ನೇ ನೋಡುತ್ತಾ ಕೂತರೆ ಗುರು ಏನು ಮಾಡಿಯಾನು? :) (ಸೂಫಿ ಕವಿ ರೂಮಿ)

http://maheshuh.blogspot.com/2014/10/blog-post_27.html

*****

ಗುರು ಪೂರ್ಣಿಮೆಯಂದು ಪೂಜ್ಯ ಆದಿ ಶಂಕರರನ್ನು ಧ್ಯಾನಿಸುತ್ತ ಸಮುದ್ರದ ದಡದಲ್ಲಿ ಕೂತ ವ್ಯಕ್ತಿಗೆ ಅದ್ವೈತ ವೇದಾಂತದ, ಅಧ್ಯಾತ್ಮದ ದರ್ಶನವಾಯಿತು ಅಂದರೆ ಏಕ್ದಂ ಹೀಗೆ ಅನ್ನಿಸಬಹುದು.....ಅರೇ! ಏಳುವ ಅಲೆಗಳು 'ಬೇರೆ ಬೇರೆ' ಅಂತ ಕಂಡರೂ ಅದೇ 'ಒಂದು' ಸಮುದ್ರದಲ್ಲಿ ಲೀನವಾಗಿಬಿಡುತ್ತವೆ. ಅಲೆಗಳು ಬೇರೆಯಲ್ಲ, ಸಮುದ್ರ ಬೇರೆಯಲ್ಲ. ಎರಡೂ ಒಂದೇ.....ಅಲೆಗಳ ಆಕಾರ, ಗಾತ್ರ ಎಲ್ಲ ಬೇರೆ ಇರಬಹದು. ಆದ್ರೆ ಮೂಲ ಮಾತ್ರ ಒಂದೇ. ಅದೇ ಸಮುದ್ರ. ಎಷ್ಟೇ ಎತ್ತರಕ್ಕೆ ಎದ್ದರೂ ಅಲೆಗಳು ಮತ್ತೆ ಮೂಲ ಸಮುದ್ರದಲ್ಲೇ ಲೀನವಾಗಲಿಕ್ಕೇಬೇಕು.

ಇದೆಲ್ಲ ಅದ್ವೈತವನ್ನು ತಿಳಿದವರಿಗೆ ಅಥವಾ ಅದ್ವೈತವನ್ನು ಅಧ್ಯಯನ ಮಾಡಿ ಅದರ ಸತ್ಯಾಸತ್ಯತೆಯ ಬಗ್ಗೆ ಖುದ್ ತಿಳಿಯಬೇಕು ಅನ್ನುವವರಿಗೆ.

ಇನ್ನು...ಅದ್ವೈತ ಖಂಡನಾ ಶಾಸ್ತ್ರ ಓದಿಕೊಂಡು, ಮಣಿ ಮಂಜರಿ ಎನ್ನುವ ಅಪದ್ಧವನ್ನು ನಂಬಿಕೊಂಡು ಅದರಲ್ಲೇ ಬಿದ್ದು ಹೊರಳಾಡುತ್ತಿರುವವರಿಗೆ ಸಮುದ್ರದ ದಂಡೆ ಮೇಲೆ ಕೂತಾಗ, ಅಲೆಗಳನ್ನು ನೋಡಿದಾಗ ಇದೂ ನೆನಪಾಗಬಹದು...... ಅದೇ ಒಂದು ಶಾಯರಿ.....

Samunder Ke Kinare Bethe Hain Kabhi To Koi Lehar Aayegi
Kismat Badle Ya Na Badle G**nd To Dhul Jayegi

ಸಮುದ್ರದ ದಂಡೆಯಲ್ಲಿ ಕೂತಿದ್ದೇವೆ. ಎಂದೋ ಯಾವದೋ ಒಂದು ಅಲೆ ಬರಬಹುದು.
ಅದೃಷ್ಟ ಬದಲಾಗುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ಮು*ಳಿ ಮಾತ್ರ ತೊಳೆದು ಹೋಗಬಹುದು! :)

2 comments:

sunaath said...

ರಾಮಕೃಷ್ಣ ಪರಮಹಂಸರ ಆಧ್ಯಾತ್ಮಿಕ ಸಿದ್ಧಾಂತಗಳನ್ನು ಓದಿ, ತಿಳಿದು ಸಂತೋಷವನ್ನು ಅನುಭವಿಸಿದೆ. ಕೊನೆಯಲ್ಲಿ ನಿಮ್ಮ ಶಾಯರಿಯನ್ನು ಓದಿ, ನಗುವಿನ ಅಲೆಗಳಲ್ಲಿ ಮುಳುಗಿ ಹೋದೆ. ‘ಊಟದ ಜೊತೆಗೆ ಉಪ್ಪಿನಕಾಯಿ ಬೇಕು’ ಅಂತಾರಲ್ಲ, ಹಾಗೆ ಗಂಭೀರ ತತ್ವವಿಚಾರನದ ನಂತರ ಇಂತಹ ಹಾಸ್ಯದ ಜೋಡಣೆಯೂ ಬೇಕು. ಶ್ರೀಗುರು ನಿಮಗೆ ಸಿದ್ಧಿಯನ್ನು ಕೊಡಲಿ.

Mahesh Hegade said...

Thank you Sunaath Sir. ನಿಮ್ಮ ಹಾರೈಕೆ, ಆಶೀರ್ವಾದ ಇರಲಿ!