Tuesday, May 28, 2024

ಆಪರೇಷನ್ ಈಗಲ್ ಕ್ಲಾ...ಎಕ್ಕುಟ್ಟಿಹೋಗಿದ್ದ ಒಂದು ರಕ್ಷಣಾ ಕಾರ್ಯಾಚರಣೆ

ಏಪ್ರಿಲ್ ೨೪, ೧೯೮೦ ಅತ್ಯಂತ ದುರದೃಷ್ಟಕರ ದಿನವಾಗಿತ್ತು. ಇರಾನಿನ ರಾಜಧಾನಿ ಟೆಹ್ರಾನಿನಲ್ಲಿ ಬಂಧಿತರಾಗಿದ್ದ ೬೬ ಒತ್ತೆಯಾಳುಗಳನ್ನು ರಕ್ಷಿಸಲು ಮಾಡಿದ ಅಮೇರಿಕಾದ ಸೇನಾ ಕಾರ್ಯಾಚರಣೆ ದಾರುಣವಾಗಿ ವಿಫಲವಾಗಿತ್ತು. ಯಾವುದೇ ಒತ್ತೆಯಾಳುಗಳನ್ನು ರಕ್ಷಿಸಲಾಗಲಿಲ್ಲ. ಎಂಟು ಜನ ಅಮೇರಿಕಾದ ಸೇನಾ ಸಿಬ್ಬಂದಿ ಆ ಆಕಸ್ಮಿಕ ಅವಘಡದಲ್ಲಿ ಮೃತರಾಗಿದ್ದರು. 

ಸುಮಾರು ಆರು ತಿಂಗಳ ಮೊದಲು ಅಂದರೆ ನವೆಂಬರ್ ೪, ೧೯೭೯ ರಂದು ಸುಮಾರು ೩೦೦೦ ಉಗ್ರಗಾಮಿ ವಿದ್ಯಾರ್ಥಿಗಳು ಟೆಹರಾನಿನಲ್ಲಿದ್ದ ಅಮೆರಿಕಾದ ರಾಯಭಾರ ಕಚೇರಿಯ ಮೇಲೆ ದಾಳಿ ಮಾಡಿದರು. ೬೩ ಅಮೇರಿಕನ್ ನಾಗರಿಕರನ್ನು ಒತ್ತೆಯಾಳಾಗಿ ವಶಮಾಡಿಕೊಂಡರು. ವಿದೇಶಾಂಗ ಇಲಾಖೆಯ ಕಚೇರಿಗೆ ಕೆಲಸದ ನಿಮಿತ್ತ ಹೋಗಿದ್ದ ಇನ್ನೂ ಮೂರು ಜನ ಕೂಡ ಬಂಧಿಗಳಾದರು. ಈ ಘಟನೆ ಆಗುವ ಎರಡು ವಾರಗಳ ಮೊದಲು, ಅಂದಿನ ಅಮೇರಿಕಾದ ಅಧ್ಯಕ್ಷ ಜಿಮ್ಮಿ ಕಾರ್ಟರ್, ಪನಾಮಾದಲ್ಲಿಆಶ್ರಯ ಪಡೆದಿದ್ದಇರಾನಿನ ಪದಚ್ಯುತ ದೊರೆ ಮೊಹಮದ್ ರೇಜಾ ಷಾ ಪೆಹ್ಲವಿಗೆ, ಕ್ಯಾನ್ಸರಿಗೆ ಚಿಕಿತ್ಸೆ ಪಡೆಯಲು, ಅಮೆರಿಕಾದೊಳಗೆ ಬರಲು ಅನುಮತಿ ನೀಡಿದ್ದರು. ಇರಾನಿನ ಹೊಸ ನಾಯಕ ಧರ್ಮಗುರು ಆಯಾತೊಲ್ಲಾ ಖೊಮೇನಿ ಮಾಜಿ ದೊರೆಯನ್ನುಇರಾನಿಗೆ ಹಸ್ತಾಂತರ ಮಾಡಲು ಮತ್ತು ಇರಾನಿನಲ್ಲಿ ಅಮೇರಿಕಾದ ಹಸ್ತಕ್ಷೇಪವನ್ನು ನಿಲ್ಲಿಸಲು ಬಲವಾದ ಕರೆಯನ್ನು ನೀಡಿದರು. ಆರಂಭಿಕ ಸಂಧಾನದ ಯಶಸ್ಸಿನ ಫಲವಾಗಿ ೧೩ ಜನ ಒತ್ತೆಯಾಳುಗಳು ನವೆಂಬರ್ ಮಧ್ಯದ ಹೊತ್ತಿಗೆ ಬಿಡುಗಡೆಯಾದರು. ಉಳಿದವರು ಮಾತ್ರ ಸೆರೆಯಲ್ಲಿಯೇ ಉಳಿದರು. 

ಅಮೇರಿಕಾದ ಸೈನ್ಯ ಒತ್ತೆಯಾಳುಗಳನ್ನು ರಕ್ಷಿಸುವ ಯೋಜನೆನ್ನು ಹಾಕಿತು. ಪೂರ್ವಾಭ್ಯಾಸಗಳನ್ನು ಮಾಡಿತು. ಏಪ್ರಿಲ್ ೧೬, ೧೯೮೦ ರಂದು ಅಧ್ಯಕ್ಷ ಕಾರ್ಟರ್ ಅಂತಿಮ ಅನುಮತಿ ನೀಡಿದರು. ಸೈನ್ಯದ ನಾಲ್ಕೂ ದಳಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿದ್ದವು. ಅದು ಒಟ್ಟು ಎರಡು ದಿನಗಳ ಕಾರ್ಯಾಚರಣೆನೆಯಾಗಲಿತ್ತು. ನಾಲ್ಕು ಹೆಲಿಕಾಪ್ಟರುಗಳು ಮತ್ತು ಒಂದು C - ೧೩೦ ವಿಮಾನ ಕಾರ್ಯಾಚರಣೆಗೆ ನಿಯೋಜಿಸಲ್ಪಟ್ಟಿದ್ದವು. ರಾಜಧಾನಿ ಟೆಹರಾನಿನಿಂದ ಸುಮಾರು ೨೦೦ ಮೈಲಿ ದೂರವಿದ್ದ ನಿರ್ಜನ ಮರಭೂಮಿಯಲ್ಲಿ ಒಂದು ಜಾಗವನ್ನು ಗುರುತಿಸಲಾಗಿತ್ತು. ಅಲ್ಲಿ ಹೆಲಿಕಾಪ್ಟರುಗಳಿಗೆ ಇಂಧನ ಮರುಭರ್ತಿ ಮಾಡುವ ಯೋಜನೆಯಿತ್ತು. ಹೆಲಿಕಾಪ್ಟರುಗಳು ಅಲ್ಲಿಂದ ಮತ್ತೊಂದು ರಹಸ್ಯ ಜಾಗಕ್ಕೆ ಸೈನಿಕರನ್ನು ಕರೆದೊಯ್ಯಲಿದ್ದವು. ಅಲ್ಲಿಂದ ಮರುದಿನ ಸೈನಿಕರು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಿದ್ದರು. ಏಪ್ರಿಲ್ ೧೯, ೧೯೮೦ ರಿಂದಲೇ ಸೈನ್ಯ ಅರಬ್ ಕೊಲ್ಲಿಯ ಒಮಾನ್ ದೇಶದಲ್ಲಿ ಮತ್ತು ಅರಬ್ಬೀ ಸಮುದ್ರದಲ್ಲಿ ಬಂದಿಳಿದಿತ್ತು. 

ಏಪ್ರಿಲ್ ೨೪, ೧೯೮೦ ರಂದು ಆಪರೇಷನ್ ಈಗಲ್ ಕ್ಲಾ (Operation Eagle Claw) ಆರಂಭವಾಯಿತು.  ಅರಬ್ಬೀ ಸಮುದ್ರದಲ್ಲಿ ಲಂಗರು ಹಾಕಿದ್ದ ಅಮೇರಿಕಾದ ಯುದ್ಧನೌಕೆ ನಿಮಿಟ್ಜ್ ನಿಂದ ಕಮಾಂಡೋಗಳನ್ನು ಹೊತ್ತ ನೌಕಾದಳದ ಹೆಲಿಕಾಪ್ಟರುಗಳು ೬೦೦ ಮೈಲುಗಳ ಪ್ರಯಾಣವನ್ನು ಆರಂಭಿಸಿದವು. C - ೧೩೦ ಸರಕು ಸಾಗಣೆ ವಿಮಾನಗಳು ಮೊದಲೇ ತಲುಪಿದ್ದವು. ಮಾರ್ಗಮಧ್ಯೆ ಹವಾಮಾನ ತುಂಬಾ ಕೆಟ್ಟಿತು. ಮರಭೂಮಿಯಲ್ಲಿ ಉಂಟಾಗುವ 'ಹಬೂಬ್' ಎಂಬ ಮರಳಿನ ಬಿರುಗಾಳಿ ತುಂಬಾ ತೀವ್ರವಾಗಿ ಬೀಸಿತು. ಹೆಲಿಕಾಪ್ಟರುಗಳನ್ನು ಆ ಬಿರುಗಾಳಿಯ ಮಧ್ಯೆ ಚಲಾಯಿಸುವುದು ಅಪಾಯಕಾರಿ ಮತ್ತು ಕಷ್ಟದ ಕೆಲಸವಾಗಿತ್ತು. ಕಮ್ಮಿಯಾದ ಬೆಳಕು, ಹೆಲಿಕಾಪ್ಟರು ಮತ್ತು ವಿಮಾನಗಳಿಗೆ ಆದ ಡ್ಯಾಮೇಜ್ ಮತ್ತು ಕೆಲವು ಸೈನಿಕರ ದೈಹಿಕ ಅಸ್ವಸ್ಥತೆ ಮುಂತಾದ ಕಾರಣಗಳಿಂದ ಕಾರ್ಯಾಚರಣೆಯನ್ನು ಮುಂದುವರೆಸುವುದು ದುಸ್ಸಾಹಸ ಅನ್ನಿಸಿತು. ಅಧ್ಯಕ್ಷ ಕಾರ್ಟರ್ ತಮ್ಮ ಆಪ್ತರೊಂದಿಗೆ ಸಮಾಲೋಚನೆ ನಡೆಸಿದರು. ಕಾರ್ಯಾಚರಣೆಯನ್ನು ಅಲ್ಲಿಗೇ ನಿಲ್ಲಿಸುವುದು ಸೂಕ್ತ ಎಂದು ನಿರ್ಧರಿಸಿದರು. ಆ ಆಜ್ಞೆ ಸೈನ್ಯಕ್ಕೆ ತಲುಪಿತು.

ಇರಾನಿನ ಮರಭೂಮಿಯ ರಹಸ್ಯ ಸ್ಥಳದಲ್ಲಿ ಆಗಲೇ ಕೆಲವು ಹೆಲಿಕಾಪ್ಟರುಗಳು, ಇಂಧನ ಮರುಭರ್ತಿ ಮಾಡುವ ವಿಮಾನ ಮೊದಲೇ ಬಂದು ಇಳಿದಿದ್ದವಲ್ಲ. ಈಗ ಎಲ್ಲವೂ ತುರ್ತಾಗಿ ಅಲ್ಲಿಂದ ನಿರ್ಗಮಿಸಬೇಕಾಗಿತ್ತು. ಗಡಿಬಿಡಿಯಲ್ಲಿ ಏನು ಪೊರಪಾಟಾಯಿತೋ, ಹೆಲಿಕಾಪ್ಟರೊಂದು ಇಂಧನ ಮರುಭರ್ತಿ ಮಾಡುವ ವಿಮಾನಕ್ಕೆ ಡಿಕ್ಕಿ ಹೊಡೆಯಿತು. ಮೊದಲೇ ಪೂರ್ತಿ ಇಂಧನ ತುಂಬಿದ್ದ ವಿಮಾನ. ದೊಡ್ಡ ಸ್ಪೋಟವಾಯಿತು. ವಾಯುಸೇನೆಯ ಐದು ಮತ್ತು ಭೂಸೇನೆಯ ಮೂವರು ಸೈನಿಕರು ಆ ದುರ್ಘಟನೆಯಲ್ಲಿ ಮೃತರಾದರು. 

ಈ ವಿಫಲ ಕಾರ್ಯಾಚರಣೆಯಿಂದ ರಕ್ಷಣಾ ಇಲಾಖೆ ಅನೇಕ ಮಹತ್ವದ ಪಾಠಗಳನ್ನು ಕಲಿತು ಅನೇಕ ಸುಧಾರಣೆಗಳನ್ನು ಮಾಡಿಕೊಂಡಿತು. ಸೇನೆಯ ವಿವಿಧ ವಿಭಾಗಗಳ ಮಧ್ಯೆ ಸಮನ್ವಯತೆಯ ಕೊರತೆ ಎದ್ದು ಕಂಡಿತ್ತು. ಅದನ್ನು ನಿವಾರಿಸಲು ಒಂದು ವಿಶೇಷ ಜಂಟಿ ಕಮಾಂಡನ್ನು ಸ್ಥಾಪಿಸಲಾಯಿತು. ಅದೇ JSOC - Joint Special Operations Command. ಇದನ್ನು ಕ್ರಮಬದ್ಧವಾಗಿ ಅಭಿವೃದ್ಧಿಪಡಿಸಿ, ಸುಮಾರು ನಲವತ್ತು ವರ್ಷಗಳ ನಂತರ ಈಗ ಎಲ್ಲ ವಿಶೇಷ ಸೇನಾ ಕಾರ್ಯಾಚರಣೆಗಳು ಇದರ ಅಡಿಯಲ್ಲೇ ನಡೆಯುತ್ತವೆ. ಪ್ರತಿಯೊಂದು ಕಾರ್ಮೋಡಕ್ಕೂ ಬೆಳ್ಳಿಗೆರೆಯೊಂದು ಇರುತ್ತದೆಯಂತೆ. ಆ ರೀತಿಯಲ್ಲಿಆಪರೇಷನ್ ಈಗಲ್ ಕ್ಲಾ ದಾರುಣವಾಗಿ ವಿಫಲವಾದರೂ JSOC ಸ್ಥಾಪನೆಗೆ ಕಾರಣವಾಗಿದ್ದಕ್ಕೆ ಸಮಾಧಾನ ಪಡಬೇಕು.

ಮಾಹಿತಿ ಆಧಾರ : US Army Airborne & Special Operations Museum 

2 comments:

sunaath said...

ಗುರೂ,
"ಬಹಾದ್ದೂರ ಗಂಡು" ಚಲನಚಿತ್ರದ ಒಂದು ಹಾಡು ನೆನಪಾಗುತ್ತದೆ:
"ಕೋಟೆ ಕಟ್ಟಿ ಮೆರೆದೋರೆಲ್ಲಾ ಏನಾದರು?
ಮೀಸೆ ತಿರುವಿ ಕುಣಿದೊರೆಲ್ಲಾ ಮಣ್ಣಾದರು!"

Mahesh Hegade said...

ಒಳ್ಳೆಯ ಹಾಡು...ಮ್ಯಾಚ್ ಆಗುತ್ತದೆ...ಥ್ಯಾಂಕ್ಸ್ ಸರ್.