Wednesday, November 20, 2019

ಬಳ್ಳೊಳ್ಳಿ ಮಹಾತ್ಮೆ

ಬಳ್ಳೊಳ್ಳಿ !! ??

ಹಾಗೆಂದರೆ ಏನ್ರೀ!! ??

ಬಳ್ಳೊಳ್ಳಿ ಉರ್ಫ್ ಬೆಳ್ಳುಳ್ಳಿ.

ನಮ್ಮ ಧಾರವಾಡ ಕಡೆ ಬಳ್ಳೊಳ್ಳಿ ಅನ್ನುತ್ತಾರೆ. ಉಳಿದ ಕಡೆ ಬೆಳ್ಳುಳ್ಳಿ ಅನ್ನುತ್ತಾರೆ. ನಮ್ಮ ಕಡೆ ಉಳ್ಳಾಗಡ್ಡಿ ಎನ್ನುತ್ತಾರೆ. ಉಳಿದ ಕಡೆ ಉಳ್ಳಾಗಡ್ಡೆ, ಈರುಳ್ಳಿ, ನೀರುಳ್ಳಿ ಎನ್ನುತ್ತಾರೆ. ವಿವಿಧ ಪ್ರಾಂತಗಳಲ್ಲಿನ ಕನ್ನಡ ಭಾಷೆಯ ಸೊಬಗನ್ನು ಏನು ಹೇಳೋಣ! ನಾವೇ ಧನ್ಯರು!

ಧಾರವಾಡ ಕಡೆ ಬಳ್ಳೊಳ್ಳಿ ಅನ್ನುತ್ತಾರೆ. ಬಳ್ಳೊಳ್ಳಿ ಅಂತ ಅಡ್ಡಹೆಸರು (surname) ಇರುವವರೂ ಇದ್ದಾರೆ. ೧೯೯೦ ರ ದಶಕದಲ್ಲಿ ವಿಕ್ಕಿ ಬಳ್ಳೊಳ್ಳಿ ಅನ್ನುವ ಖತರ್ನಾಕ್ ಲೋಕಲ್ ಕ್ರಿಕೆಟರ್ ಇದ್ದ ಎಂದು ನೆನಪು. ಭಯಂಕರ ಸ್ಪಿನ್ನರ್. ಅದೆಂತಹ ಭಯಂಕರ ಸ್ಪಿನ್ನರ್ ಅಂದರೆ, 'ವಿಕ್ಕಿ ಬಳ್ಳೊಳ್ಳಿ ಮಾರಕ ಸ್ಪಿನ್ ತಿರುಗುಣಿ ಬೌಲಿಂಗಿಗೆ ಎದುರಾಳಿಗಳು ಧ್ವಂಸ' ಅನ್ನುವಂತಹ ಶೀರ್ಷಿಕೆ ಉಳ್ಳ ಲೇಖನ ನಮ್ಮ ಪ್ರೀತಿಯ ಲೋಕಲ್ ಪತ್ರಿಕೆ ಸಂಕದಲ್ಲಿ (ಸಂಯುಕ್ತ ಕರ್ನಾಟಕ) ಬರುತ್ತಿತ್ತು ಅಂದರೆ ನೀವು ನಂಬಬೇಕು. ಸುದ್ದಿಯ ಆಂತರ್ಯ ಗೊತ್ತಿಲ್ಲದವರು 'ಇದೇನಪ್ಪಾ, ಅಡಿಗೆಗೆ ಬಳಸುವ ಬಳ್ಳೊಳ್ಳಿ ಅದೆಂತಹ ಸ್ಪಿನ್ ಬೌಲಿಂಗ್ ಮಾಡುತ್ತದೆ? ಅದೆಂತಹ ತಿರುಗಣಿ ತಿರುಗಿಸುತ್ತದೆ?' ಎಂದು ಬೆರಗಾಗಬೇಕು. ವಿಕ್ಕಿ ಬಳ್ಳೊಳ್ಳಿ ಬೌಲಿಂಗ್ ವೀರನಾದರೆ ಉದಯ ಕೊಡ್ಲಿ ಅನ್ನುವ ನಾಮಧೇಯದ ಖತರ್ನಾಕ್ ಬ್ಯಾಟ್ಸಮನ್ ಕಮ್ ಕ್ಯಾಪ್ಟನ್ ಇದ್ದ. ಬಳ್ಳೊಳ್ಳಿ ಸ್ಪಿನ್ ಬೌಲಿಂಗ್ ತಿರುಗಣಿಯಿಂದ ಬ್ಯಾಟಿಂಗ್ ಧ್ವಂಸ ಮಾಡಿದರೆ ಉದಯ ಕೊಡ್ಲಿ ಬ್ಯಾಟನ್ನು ಪರಶುರಾಮನ ಕೊಡಲಿಯಂತೆ ಬೀಸಿ ಎದುರಾಳಿಗಳ ಚೆಂಡಿನ ರುಂಡ ಚೆಂಡಾಡಿ ದೊಡ್ಡ ಮೊತ್ತ ಪೇರಿಸಿಡುತ್ತಿದ್ದ. ಆ ಕಾಲದ ಕ್ರಿಕೆಟ್ ಮ್ಯಾಚುಗಳು ಬಹಳೇ ಮಜವಾಗಿರುತ್ತಿದ್ದವು. ಆಗ ಬೇರೇನೂ ಮನರಂಜನೆ ಇರಲಿಲ್ಲ. ಕೊಡ್ಲಿಯ ಬ್ಯಾಟಿಂಗ್ ಮತ್ತು ಬಳ್ಳೊಳ್ಳಿಯ ಬೌಲಿಂಗ್ ನೋಡುವುದೇ ನಮ್ಮಂತಹ ಚಿಣ್ಣರಿಗೆ ಇರುತ್ತಿದ್ದ ಟೈಮ್ ಪಾಸ್.

ನಮಗೆ ಬಳ್ಳೊಳ್ಳಿ ಎಂಬ ತರಕಾರಿಯಯ ರುಚಿ ಗೊತ್ತಾಗಿದ್ದೇ ತುಂಬಾ ತಡವಾಗಿ. ಮನೆಯಲ್ಲಿ ಬಳ್ಳೊಳ್ಳಿಯ ಉಪಯೋಗ ಇರಲಿಲ್ಲ. ಅದೇನೋ ಬ್ರಾಹ್ಮಣರ ಪದ್ಧತಿಯಂತೆ. ಮೂಲ ಮನೆಯಾದ ಹೊನ್ನಾವರ ಮತ್ತು ಸಿರಸಿ ಕಡೆ ಬಳ್ಳೊಳ್ಳಿ, ಉಳ್ಳಾಗಡ್ಡೆ ಪೂರ್ತಿ ನಿಷಿದ್ಧ. 'ಕೆಟ್ಟು ಪಟ್ಟಣ ಸೇರು...' ಮಾದರಿಯಲ್ಲಿ ಧಾರವಾಡ ಸೇರಿಕೊಂಡಿದ್ದ ತಂದೆತಾಯಿಗಳು ಭಾಡಿಗೆ ಮನೆ ಮಾಡಿದ್ದು ಕಟ್ಟರ್ (ವೈಷ್ಣವ) ಬ್ರಾಹ್ಮಣರ ಅಗ್ರಹಾರದಂತಿದ್ದ ಮಾಳಮಡ್ಡಿ ಬಡಾವಣೆಯಲ್ಲಿ. ಅಲ್ಲಿಯೂ ಬಳ್ಳೊಳ್ಳಿ ವರ್ಜ್ಯ.

ಆಗಿನ ಕಾಲದ ಮಾಳಮಡ್ಡಿಯ ಬ್ರಾಹ್ಮಣರು ಅದೆಷ್ಟು ಕರ್ಮಠರಾಗಿದ್ದರು ಅಂದರೆ ನಮ್ಮ ಪಾಲಕರಿಗೆ ಭಾಡಿಗೆಗೆ ಮನೆ ಸಿಗುವುದೇ ಕಷ್ಟವಾಗಿತ್ತಂತೆ.

'ನೀವು ಯಾರು? ಎಲ್ಲಿಯವರು??' ಮನೆ ಮಾಲೀಕರ ಪ್ರಶ್ನೆ.

'ನಾವು ಹೆಗಡೆ ಅಂತ. ಹೊನ್ನಾವರ ಸಿರ್ಸಿ ಕಡೆಯವರು. ನಾವೂ ಬ್ರಾಹ್ಮಣರೇ,' ಎಂದು ಪಾಲಕರ ಉತ್ತರ.

ಮಾಳಮಡ್ಡಿಯೆಂಬ ಅಗ್ರಹಾರದಲ್ಲಿ ಬ್ರಾಹ್ಮಣರನ್ನು ಬಿಟ್ಟು ಬೇರೆಯವರಿಗೆ ಮನೆ ಸಿಗುವುದಿಲ್ಲ ಅಂತ ಗೊತ್ತಿದ್ದ ಕಾರಣ 'ನಾವೂ ಬ್ರಾಹ್ಮಣರೇ. ನಿಮ್ಮವರೇ!' ಎಂದು explicit ಆಗಿ ಹೇಳಬೇಕಾಗಿತ್ತು. ಏಕೆಂದರೆ ನಮ್ಮ ತಂದೆತಾಯಿ ನಮ್ಮ ಮತದ ಸಂಕೇತಗಳಾದ ಭಸ್ಮ ವಿಭೂತಿಗಳನ್ನು ಢಾಳಾಗಿ ಬಳಿದುಕೊಂಡು, ಜನಿವಾರ ಉಡದಾರ ಹೊರಗೆ ಅಲ್ಲಾಡಿಸಿಕೊಂಡು ಹೋಗುತ್ತಿರಲಿಲ್ಲ. ಮಾಳಮಡ್ಡಿಯ ಮೂಲನಿವಾಸಿಗಳ ಹಾಗೆ ಕರಿ ಗೂಟದ ನಾಮ ಗಂಡಸರಿಗೆ, ಕಚ್ಛೆ ಸೀರೆ ಮತ್ತು ಕೆಂಪು ಗೂಟದ ನಾಮ ಹೆಂಗಸರಿಗೆ ಮಾದರಿಯಲ್ಲಿ ಮೇಕ್ಅಪ್ ಮಾಡಿಕೊಂಡು ಹೋಗೋಣ ಅಂದರೆ ನಮ್ಮ ಮತ ಬೇರೆ. ದ್ವೈತಿಗಳ ನಡುವೆ ಅದ್ವೈತಿಗಳು ನಾವು. ಹೀಗಾಗಿ 'ಬ್ರಾಹ್ಮಣ' ಎಂದು ಹೇಳಿಕೊಳ್ಳಬೇಕಾಗುತ್ತಿತ್ತು.

'ಹೊನ್ನಾವರ ಶಿರಸಿ ಅಂದರೆ ಕಾರವಾರ ಕಡೆಯವರೇ? ಕಾರವಾರಿ ಬ್ರಾಹ್ಮಣರೇನು?' ಅಂತ ಮುಂದಿನ ಪ್ರಶ್ನೆ.

'ಕಾರವಾರಿ ಬ್ರಾಹ್ಮಣರು!!' ಎನ್ನುವ ವಿಚಿತ್ರ ಶಬ್ದ ನಮ್ಮ ಪಾಲಕರು ಕೇಳಿದ್ದು ಅದೇ ಮೊದಲಿರಬೇಕು. ನಮ್ಮನ್ನು ಯಾರೂ ಕಾರವಾರಿ ಬ್ರಾಹ್ಮಣರು ಎಂದು ಗುರುತಿಸಿರಲಿಲ್ಲ. ನಮ್ಮ ಪಾಲಕರಿಗೆ ಅರ್ಥವಾಗಿದ್ದೂ ಅಷ್ಟರಲ್ಲೇ ಇರಬೇಕು ಅಂದುಕೊಳ್ಳಿ. ಏನೋ ಸಾಮಾನ್ಯಜ್ಞಾನ ಉಪಯೋಗಿಸಿ ಹೊನ್ನಾವರ ಸಿರ್ಸಿ ಎಲ್ಲ ಅಂದಿನ ಕಾರವಾರ ಜಿಲ್ಲೆಯೊಳಗೆ ಬರುತ್ತಿದ್ದ ಕಾರಣ,

'ಹೌದ್ರಿ. ನಾವು ಕಾರವಾರ ಬ್ರಾಹ್ಮಣರು. ಮನೆ ಭಾಡಿಗೆಗೆ ಬೇಕಾಗಿತ್ತು,' ಎಂದು ಕೇಳಿಕೊಂಡಿದ್ದಾರೆ.

'ಅಯ್ಯ! ಕಾರವಾರಿ ಬ್ರಾಹ್ಮಣರಾ?? ಇಲ್ಲಪ್ಪಾ, ಮನೆ ಕೊಡೋದಿಲ್ಲ! ಹರ್ಗೀಸ್ ಕೊಡೋದಿಲ್ಲ,' ಎಂದು ಹೇಳಿ ಧೋತ್ರ ಎತ್ತಿ ಪೀಛೆಮೂಡ್ ಮಾಡಿ ಹೊರಟರು ಮಾಲೀಕರು.

'ಯಾಕ್ರೀ??' ಎಂದು ಪಾಲಕರ ಆಕ್ಷೇಪ ಭರಿತ ಪ್ರಶ್ನೆ.

'ಕಾರವಾರಿ ಬ್ರಾಹ್ಮಣರು ಮೀನಾ ತಿಂತಾರ. ಅದಕ್ಕೇ ಕೊಡೋದಿಲ್ಲ!' ಅಂದುಬಿಡಬೇಕೇ ಮಾಲೀಕರು.

'ಅಯ್ಯೋ, ನಾವು ಮೀನಾ ಗೀನಾ ತಿನ್ನೋ ಆ ಕೊಂಕಣಿ ಬ್ರಾಹ್ಮಣರು ಅಲ್ಲರೀ. ಸುತಾರಾಂ ಅಲ್ಲರೀ. ನಾವು ಬ್ಯಾರೇನೇ. ನಾವು ಬ್ಯಾರೆ ಬ್ರಾಹ್ಮಣರು,' ಎಂದು ವಿವರಣೆ ಕೊಟ್ಟರು ಪಾಲಕರು.

'ಮೀನಾ ತಿನ್ನೋದಿಲ್ಲಾ?? ಖರೇನೇ ಮೀನಾ ತಿನ್ನೋದಿಲ್ಲಾ?' ಎಂದು ಉಲ್ಟಾ ಪ್ರಶ್ನೆ. ಕೇಳುವ ಪರಿ ಹೇಗಿರುತ್ತಿತ್ತು ಅಂದರೆ ಮೀನಾ ತಿನ್ನೋದಿಲ್ಲಾ ಅಂದ ಮೇಲೆ ಸಿಗಡಿ, ಆಮೆ, ಹಾವು, ಹರಣೆ, ಹಾವ್ರಾಣಿ ಮತ್ತಿತರ ಜಲಚರಗಳನ್ನು ಇತ್ಯಾದಿಗಳನ್ನು ಸ್ವಾಹಾ ಮಾಡುತ್ತೀರೋ ಎಂಬಂತೆ ಇರುತ್ತಿತ್ತು.

'ನಾವು ಹವ್ಯಕ ಬ್ರಾಹ್ಮಣರು. ಶುದ್ಧ ಬ್ರಾಹ್ಮಣರು. ಮೀನಾ ಮತ್ತೊಂದು ದೂರ ಉಳೀತು. ಉಳ್ಳಾಗಡ್ಡಿ ಬಳ್ಳೊಳ್ಳಿ ಸಹ ತಿನ್ನೋದಿಲ್ಲ. ಖರೇ!' ಎಂದು ಒಂದು ಟೈಪಿನ ಆಣೆ ಪ್ರಮಾಣ ಮಾಡಿದ ಮೇಲೆಯೇ ಏನೋ ಒಂದು ಟೈಪಿನ ನಂಬಿಕೆ ಬರುತ್ತಿತ್ತು ಮನೆಯ ಮಾಲೀಕರಿಗೆ. ಮತ್ತೆ ಮೊದಲು ಭಾಡಿಗೆಗೆ ಮನೆ ಕೊಟ್ಟಿದ್ದ ದೇಶಪಾಂಡೆ, ಪಾಟೀಲ ಇತ್ಯಾದಿ ಬ್ರಾಹ್ಮಣ ಮಹನೀಯರ ರೆಫರೆನ್ಸ್ ಕೊಟ್ಟ ಮೇಲೆ ಏನೋ ಒಂದು ರೀತಿಯ ನಂಬಿಗೆ ಬಂದು ಮನೆ ಭಾಡಿಗೆಗೆ ಕೊಟ್ಟರು ಅಂತ ಪಾಲಕರು ಕಥೆ ಹೇಳಿದ್ದರು.

ಇಷ್ಟಾದ ಮೇಲೂ ಮಾಲೀಕರ ಮನೆಯವರೆಲ್ಲ ನಮಗೆ ತುಂಬಾ ಚೆನ್ನಾಗಿ ಹೊಂದಿಕೊಂಡು, ನಾವೂ ಅವರಿಗೆ ಚೆನ್ನಾಗಿ ಹೊಂದಿಕೊಂಡು ಒಂದೇ ಮನೆಯವರ ತರಹ ಆಗಿಹೋದರೂ ಮಾಲೀಕರ ಮನೆಯ ಹಳೆ ಮುದುಕಿಯೊಬ್ಬರಿಗೆ ಮಾತ್ರ ಖಾತ್ರಿಯಾಗಿರಲಿಲ್ಲ. ಆಗಾಗ ಹೇಳುತ್ತಲೇ ಇರುತ್ತಿದ್ದರಂತೆ, 'ಭಾಡ್ಗಿಗೆ ಬಂದವರು ಮೀನಾ ತಿಂತಾರ ಅಂತ ಕಾಣಿಸ್ತದ. ಏನೋ ವಾಸನಿ ಬರ್ತದ!' ಆ ಮುದುಕಿಯ ನಾಸಿಕಕ್ಕೆ ಏನಾಗಿತ್ತೋ ದೇವರಿಗೇ ಗೊತ್ತು. ಪೂರ್ವಗ್ರಹ ಪೀಡಿತ ನಾಸಿಕ. Prejudiced mind ಇದ್ದ ಹಾಗೆ prejudiced nose!

ಹೀಗೆ ಮಾಳಮಡ್ಡಿಯೆಂಬ ಅಗ್ರಹಾರದಲ್ಲಿ ನೆಲೆಸಿದ ನಮಗೆ ಬಳ್ಳೊಳ್ಳಿ ಅಂದರೇನು ಅಂತ ಗೊತ್ತಾಗಲಿಕ್ಕೆ ಭಾಳ ಟೈಮ್ ಹಿಡಿಯಿತು.

ಕೆಲವೊಮ್ಮೆ ಕೆಲವು ಹೋಟೆಲುಗಳಿಗೆ ಹೋದಾಗ ಚಟ್ನಿ ಒಂದು ತರಹದ ಅಡ್ಡ ವಾಸನೆ ಹೊಡೆಯುತ್ತಿತ್ತು. ಕಾಮತ್, ಉಡುಪಿ ಹೋಟೆಲ್ಲುಗಳಲ್ಲಿ ಚಟ್ನಿಗೆ ಆ ಅಡ್ಡ ವಾಸನೆ ಇರುತ್ತಿರಲಿಲ್ಲ. ಖಾನಾವಳಿ ಟೈಪಿನ, ಚಹಾದಂಗಡಿ ಎಂದು ಕರೆಯಿಸಿಕೊಳ್ಳುತ್ತಿದ್ದ, ಅಡ್ಡೆಗಳಲ್ಲಿ ಮಾತ್ರ ಆ ವಾಸನೆ ಬರುತ್ತಿತ್ತು. of course ಭರಿಸಲಾರದಂತಹ ಅಡ್ಡವಾಸನೆಯೇನೂ ಅಲ್ಲ. ಆದರೆ ಇಡ್ಲಿ, ವಡಾ, ದೋಸೆ  ಜೊತೆ ಜಬರ್ದಸ್ತಾಗಿ ಜಡಿಯಬಹುದಾದ ಚಟ್ನಿಗೆ ಆ ವಾಸನೆ ಒಗ್ಗುತ್ತಿರಲಿಲ್ಲ ಅನ್ನಿಸಿತ್ತು. ಗರಂ ಮಸಾಲಾ ಹಾಕಿದ ಬಿರ್ಯಾನಿಗೆ ವೆನಿಲ್ಲಾ ವಾಸನೆ ಬಂದರೆ ಹೇಗೆ!? ಆ ಮಾದರಿಯ ಹೊಂದಾಣಿಕೆ ಆಗದ ಅಡ್ಡವಾಸನೆ!

ಅದು ಏನೆಂದು ವಿಚಾರ ಮಾಡಿದಾಗ ತಿಳಿದಿದ್ದು, ಕೆಲ ಹೊಟೇಲುಗಳಲ್ಲಿ ಚಟ್ನಿಗೆ ಬಳ್ಳೊಳ್ಳಿ ಹಾಕುತ್ತಾರೆ. ಅದೇ ಆ ಅಡ್ಡವಾಸನೆಗೆ ಕಾರಣ.

ಒಮ್ಮೆ ಆ ವಾಸನೆ ತಿಳಿದ ಮೇಲೆ ಎಲ್ಲಾ ಕಡೆ ಅದೇ ವಾಸನೆ ಬರತೊಡಗಿತು. ಅವಲಕ್ಕಿಯಲ್ಲಿ ಬಂತು. ಚುರುಮುರಿಯಲ್ಲಿ ಅಂದರೆ ಮಂಡಕ್ಕಿಯಲ್ಲಿ ಬಂತು. ಸರ್ವಂ ಬಳ್ಳೊಳ್ಳಿ ಮಯಂ.

ಮಾಳಮಡ್ಡಿಯಲ್ಲಿ ಇರುವ ತನಕ ನಮ್ಮ ಮನೆಯಲ್ಲಿ ಬಳ್ಳೊಳ್ಳಿ ವಾಸನೆ ಬಂದಿದ್ದು ನನಗಂತೂ ನೆನಪಿಲ್ಲ. ತತ್ತಿಯ ಆಮ್ಲೆಟ್ ಮಾಡಿಕೊಂಡು ತಿನ್ನುತ್ತಿದ್ದುದು ನೆನಪಿದೆ. ತಂದೆ ತಾಯಿ ಇಬ್ಬರೂ NCC ಗಿರಾಕಿಗಳು. ಹಲವಾರು ವರ್ಷಗಳ ಕಾಲ ಶಾಲೆ ಕಾಲೇಜುಗಳಲ್ಲಿ NCC ಮಾಡಿದ್ದರು. ಹತ್ತಾರು ಕಡೆ ಕ್ಯಾಂಪ್ ಇತ್ಯಾದಿ ಹೋಗಿದ್ದರು. NCC ಜನ ತತ್ತಿಯ ಮಹಾತ್ಮೆಯನ್ನು ಸರಿಯಾಗೇ ಬುರುಡೆಯಲ್ಲಿ ತುಂಬಿದ್ದರು ಎಂದು ಕಾಣುತ್ತದೆ. ಮತ್ತೆ NCC ಆಮ್ಲೆಟ್ ರುಚಿ ತಿಂದೇ ತಿಳಿಯಬೇಕು ಎಂದು ಹೇಳುತ್ತಿದ್ದರು. ನಮ್ಮ ಕಾಲದಲ್ಲಿ NCC ನಾಷ್ಟಾದಲ್ಲಿ ತತ್ತಿ ಪತ್ತಿ ಸಿಗುತ್ತಿರಲಿಲ್ಲ. ಶಾಲೆ ಹತ್ತಿರದ 'ಮಥುರಾ ಭವನ' ಹೋಟೇಲಿನ ತಗಡು ಅವಲಕ್ಕಿ ಪವಲಕ್ಕಿ ಸಿಕ್ಕರೆ ಅದೇ ದೊಡ್ಡ ಮಾತು. NCC ಕ್ಯಾಂಪುಗಳಲ್ಲಿ ಆಮ್ಲೆಟ್, ನಾನ್ವೆಜ್ ಎಲ್ಲ ಸಿಗುತ್ತಿತ್ತಂತೆ. ಕ್ಯಾಂಪಿಗೆ ಹೋದರೆ ಅಸಡ್ಡಾಳ ರೀತಿಯಲ್ಲಿ ಚಿಕ್ಕದಾಗಿ ಮಿಲಿಟರಿ ಹೇರ್ ಕಟಿಂಗ್ ಮಾಡಿಸಿಕೊಳ್ಳಬೇಕಾಗುತ್ತದೆ ಎಂದು ನಾವಂತೂ ಮಿಲಿಟರಿ ಕ್ಯಾಂಪಿಗೆ ಹೋಗಲೇ ಇಲ್ಲ. ಅಂತಹ ಅಸಡ್ಡಾಳ ಕಟಿಂಗ್ ಮಾಡಿಸಿಕೊಂಡು co-ed ಶಾಲೆಯಲ್ಲಿರಲು ಭಯಂಕರ ಮುಜುಗುರ ನಮಗೆ. ಹಾಗಾಗಿ NCC ಕ್ಯಾಂಪಿನ ಆಮ್ಲೆಟ್ಟಿನ ರುಚಿ ಸವಿಯಲಿಲ್ಲ ಬಿಡಿ.

ಮಾಳಮಡ್ಡಿಯಲ್ಲಿ ಮಾಲೀಕರ ಮನೆಯ ಮುದುಕಿ ರಾಯರ ಮಠದ ಕಡೆಯೋ  ಅಥವಾ ಬೇರೆ ಎಲ್ಲೋ ಹೋದಾಗ ಗಡಿಬಿಡಿಯಲ್ಲಿ ಆಮ್ಲೆಟ್ ಮಾಡಿಕೊಂಡು ಸ್ವಾಹಾ ಮಾಡಿದ್ದು ನೆನಪಿದೆ. ಅದೂ  ಎಲ್ಲೋ ತಿಂಗಳಿಗೆ ಒಂದು ಎರಡು  ಬಾರಿ ಮಾತ್ರ. ಆ ಆಮ್ಲೆಟ್ (ಸು)ವಾಸನೆಯನ್ನೇ ಪೊಲೀಸ್ ನಾಯಿಯಂತೆ ಮೂಸಿದ್ದ ಆ ಮುದುಕಿ ನಾವೆಲ್ಲೋ ಮೀನ ಮೊಸಳೆ ಹುರಿದು ಸ್ವಾಹಾ ಮಾಡಿದ್ದೇವೆ ಎಂದುಕೊಂಡಿತ್ತೋ ಏನೋ!? ಗೊತ್ತಿಲ್ಲ.

ಮುಂದೆ ಸ್ವಂತ ಮನೆ ಕಟ್ಟಿಕೊಂಡು ಊರ ಹೊರಗಿನ ಬಡಾವಣೆಗೆ ಬಂದ ಮೇಲೆ ಇವೆಲ್ಲ ಅಡೆತಡೆಗಳು ಇರಲಿಲ್ಲ. ಆದರೆ ಬಳ್ಳೊಳ್ಳಿ ಮಾತ್ರ ಎಂಟ್ರಿ  ಕೊಡಲಿಲ್ಲ. ಆದರೆ ಪ್ರೀತಿಯ ಆಮ್ಲೆಟ್ಟಿಗೆ ಮಾತ್ರ ಯಾವುದೇ ತೊಂದರೆ ಇರಲಿಲ್ಲ. ಶ್ರಾವಣ ಮಾಸದಲ್ಲಿ ಮತ್ತು ಊರ ಕಡೆಯ ಕಟ್ಟರ್ ಜನ ಬಂದಾಗ ಮಾತ್ರ ಮಾತಾಶ್ರೀ ಅವರು ಆಮ್ಲೆಟ್ ಮಾಡುತ್ತಿರಲಿಲ್ಲ. ಆಮ್ಲೆಟ್ ರುಚಿಗೆ ಫಿದಾ ಆಗಿದ್ದ ನಾನು ಎಲ್ಲ ನಿರ್ಬಂಧನೆಗಳನ್ನೂ ಧಿಕ್ಕರಿಸಿ ನಾನೇ ಸ್ವತಃ ಆಮ್ಲೆಟ್ ಮಾಡಿಕೊಂಡು ಸ್ವಾಹಾ ಮಾಡುತ್ತಿದ್ದೆ. ದಿನವೂ ಆಮ್ಲೆಟ್ ಬೇಕೇಬೇಕು! ಬೇಕೆಂದರೆ ಬೇಕೇಬೇಕು! ಶ್ರಾವಣವಾದರೂ ಇರಲಿ. ಆಷಾಢವಾದರೂ ಇರಲಿ. ನಾನು ಕಲಿತ ಮೊದಲ ಮತ್ತು ಪ್ರಾಯಶ ಕೊನೆಯ ಅಡಿಗೆ ಅಂದರೆ ಆಮ್ಲೆಟ್ ಮಾಡುವುದು. ಆಮ್ಲೆಟ್ ಬೇಜಾರಾದರೆ ಎಗ್ ಭುರ್ಜಿ. ಇಲ್ಲವಾದರೆ ಸಿಂಪಲ್ ಬೇಯಿಸಿದ ತತ್ತಿ. ತತ್ತಿಯೊಂದು ಇಷ್ಟವಾಗಿಬಿಟ್ಟರೆ ನಿಮಗೆ ಜೀವನದಲ್ಲಿ ಆಹಾರದ ಮತ್ತು ಪೋಷಕಾಂಶಗಳ ತೊಂದರೆ ಎಂದೂ ಬರುವುದಿಲ್ಲ. ಈ ಮಾತಿಗೆ ನಾವೇ ಸಾಕ್ಷಿ. ನಿಮ್ಮ ಕೊಲೆಸ್ಟ್ರಾಲ್ ಕೊಂಚ ಏರಬಹುದು. ಬಾಕಿ ಮಾಂಸಾಹಾರ ತ್ಯಜಿಸಿ, ದಿನಕ್ಕೆ ೧೫-೨೦ ನಿಮಿಷಗಳ ಸರಳ ವ್ಯಾಯಾಮ ರೂಢಿಸಿಕೊಂಡರೆ ಆ ಪ್ರಾಬ್ಲಮ್ ಸಹಿತ ಇರುವುದಿಲ್ಲ. ಹಾಗಾಗಿ ನಿಶ್ಚಿಂತೆಯಿಂದ ತತ್ತಿಗಳನ್ನು ಸ್ವಾಹಾ ಮಾಡಿ. ನಿಮ್ಮ ಮನೆಯಲ್ಲಿ ಬೆಳೆಯುತ್ತಿರುವ ಮಕ್ಕಳಿದ್ದರೆ ಮುದ್ದಾಂ ತತ್ತಿ ಕೊಡಿ. ಬಿಂದಾಸ್ ಕೊಡಿ. ಹೇಗೆ ಮಸ್ತಾಗಿ ಮಕ್ಕಳು ಅರಳುತ್ತಾರೆ ನೀವೇ ನೋಡಿ. ಸಸ್ಯಾಹಾರಿಗಳ ಆಹಾರದಲ್ಲಿ ಪ್ರೋಟೀನ್ ಅಂಶ ಕಮ್ಮಿ. ಮೊಟ್ಟೆ ಆ ಕೊರತೆಯನ್ನು ನೀಗಿಸಲು ಬೆಸ್ಟ್!

ತತ್ತಿಗಳನ್ನು ತಿಂದರೆ ಭ್ರೂಣಹತ್ಯಾ ದೋಷ ಮತ್ತು ಪಾಪ ಬರುತ್ತದೆಯೇ? ಎನ್ನುವ ಜಿಜ್ಞಾಸೆ ನನ್ನನ್ನೂ ಕಾಡಿದೆ. ಅಂಗಡಿಗಳಲ್ಲಿ ಸಿಗುವ ಫಾರ್ಮ್ ತತ್ತಿಗಳು fertilize ಆಗಿರುವುದೇ ಇಲ್ಲ. ಗಂಡು ಕೋಳಿ ಉರ್ಫ್ ಹುಂಜದ ಸಂಪರ್ಕ ಸಿಕ್ಕರೆ ತಾನೇ fertilize ಆಗುವುದು? ಫಾರ್ಮ್ ಕೋಳಿಗಳು ಹಾಕುವ ತತ್ತಿಗಳು unfertilized. ಅದು ಭ್ರೂಣ ಅಲ್ಲ. ಕೇವಲ ಅಂಡ. ಎಲ್ಲಾದರೂ by chance fertilized ತತ್ತಿ ತಿಂದರೆ ಮಾತ್ರ ಭ್ರೂಣಹತ್ಯಾ ದೋಷ ಸುತ್ತಿಕೊಂಡೀತು. ಅದಕ್ಕೂ ಏನಾದರೂ  ಪರಿಹಾರ ಹುಡುಕೋಣ ಬಿಡಿ. ನಮ್ಮಲ್ಲಿ ಎಲ್ಲ ತಪ್ಪುಗಳನ್ನು ಮಾಡಲೂ ಅವಕಾಶವಿದೆ. ನಂತರ ಪರಿಹಾರ ಮಾಡಿಕೊಳ್ಳಲೂ ಅವಕಾಶವಿದೆ.

ಆದರೆ ಭ್ರೂಣಹತ್ಯೆ ಮಾತ್ರ ಘೋರ ಪಾಪ. ಹಾಗಂತ ಶಾಸ್ತ್ರಗಳು ಹೇಳುತ್ತವೆಯಂತೆ. ಕೋಳಿ ತತ್ತಿಯ ಮಾತು ಬಿಡಿ. ಎಷ್ಟೋ ಜನ ಹೆಂಗಸರು ಬೇರೆ ಬೇರೆ ಕಾರಣಗಳಿಗಾಗಿ ಬಸಿರು ಇಳಿಸಿಕೊಳ್ಳುತ್ತಾರಲ್ಲ, ಅಬಾರ್ಶನ್ ಮಾಡಿಸಿಕೊಳ್ಳುತ್ತಾರಲ್ಲ, ಅದು ಭ್ರೂಣಹತ್ಯಾ ಪಾಪವೆಂದು ಪರಿಗಣಿಸಲ್ಪಡುತ್ತದೆ. ಕೇವಲ ಮಹಿಳೆಯೊಬ್ಬಳಿಗೆ ಮಾತ್ರ ಅಲ್ಲ. ಬೇಡವಾದ ಬಸಿರಿಗೆ ಕಾರಣವಾಗಿರುವ ಬೇವಕೂಫ್ ಭಾಡ್ಕೋವ್ ಗಂಡಸಿಗೂ ಪಾಪ ತಟ್ಟುತ್ತದೆ. ಹೆಚ್ಚಿನ ಪಾಪ ಅವನಿಗೇ ತಟ್ಟಬೇಕು. ಪೇಟೆ ಒಳಗೆ ಪಟೇಲರನ್ನು ತೂರಿಸುವ ಮೊದಲು ಪಟೇಲರಿಗೆ ಪೇಟ ತೊಡಿಸುವ ವ್ಯವಧಾನವೂ ಇಲ್ಲದೆ ಅರ್ಥಾತ್ ಕಾಂಡೊಮ್ ಧರಿಸದೇ ಇನ್ನಿಲ್ಲದ ಗಡಿಬಿಡಿ ಮಾಡಿ ಬೇಡವಾದ ಬಸಿರಿಗೆ ಕಾರಣವಾಗಿಬಿಡುವ ಗಂಡುಮುಡೇಗಂಡರಿಗೆ ಹೆಚ್ಚಿನ ಪಾಪ ತಟ್ಟಬೇಕು. ಇನ್ನು ಕೆಲವು ಯಬಡ ಮಹಿಳೆಯರೂ ಇರುತ್ತಾರೆ. ಸಿನೆಮಾಗಳಲ್ಲಿ ಈ ಸೀನ್ ನೋಡಿರುತ್ತೀರಿ. ಕೆಂಡದಂತೆ ಕಾದಿರುವ ಮಹಿಳೆಯರಿಗೂ ಸಿಕ್ಕಾಪಟ್ಟೆ ಅವಸರ. 'ಅಯ್ಯೋ, ಏನು ಕಾಂಡೋಮ್ ಕಾಂಡೋಮ್ ಅಂತ ಬಡಿದುಕೊಳ್ಳುತ್ತಿ ಮಾರಾಯಾ!? ಎಷ್ಟಂತ ಹುಡುಕುತ್ತೀ? ಇನ್ನೆರೆಡು ದಿನಗಳಲ್ಲೇ ನನಗೆ ಪಿರಿಯಡ್(ಮುಟ್ಟು) ಬರಲಿದೆ. ಬಸಿರು ಗಿಸಿರು ಏನೂ ಆಗಲ್ಲ. ಜಲ್ದಿ ಜಡಾಯಿಸಿಬಿಡು! ಜಲ್ದೀ!' ಎಂದು ಆಹ್ವಾನ ಕೊಟ್ಟುಬಿಡುತ್ತಾರೆ. ಹಾಟ್ ಡೇಟಿಂಗ್ ಮುಗಿಸಿ ಕ್ಲಬ್ಬಿನಿಂದ ಸೀದಾ ಮನೆಗೆ ಆಗಮಿಸಿರುವ, ಮಸ್ತು ಎಣ್ಣೆಯ ಏಟಿನಲ್ಲಿರುವ ಸುಂದರಿಗೆ ಮುಟ್ಟಿನ ಗುಟ್ಟೇ ಮರೆತು ಹೋಗಿರುತ್ತದೆ. ಎರಡು ದಿವಸಗಳಲ್ಲಿ ಬರಲಿರುವುದು ಮುಟ್ಟಲ್ಲ ಬೇರೇನೋ ಡೇಟು ಎನ್ನುವುದು ನಂತರ ಮುಂದಿನ ತಿಂಗಳು ಮುಟ್ಟು ಬರದಿದ್ದಾಗಲೇ ಅರಿವಿಗೆ ಬರುತ್ತದೆ. ಅಷ್ಟರಲ್ಲಿ ಶಿವಾಯ ನಮಃ ಮಾದರಿಯ ಅನಾಹುತ ಆಗಿಹೋಗಿರುತ್ತದೆ. ನಿಮ್ಮವಳ ಮುಟ್ಟು ಮತ್ತು ನಿಮ್ಮ ಸಂಬಳ ತಿಂಗಳು ತಿಂಗಳಿಗೆ ನಿಯಮಿತವಾಗಿ ಬಂದರೇ ಸುಖ. ಇಲ್ಲವಾದರೆ  ಬರದೇ ಇದ್ದ ಎರಡೂ ಸಂದರ್ಭಗಳಲ್ಲಿ 'you are screwed!' ಅನ್ನುವುದು ಮಾತ್ರ ಖಾತ್ರಿ. ಹೀಗೆ ಯಡಬಿಡಂಗಿ ಲಫಡಾದಿಂದಾಗಿ ಬಸಿರು ಕಟ್ಟಿದಾಗ ಇಬ್ಬರೂ ಕೂಡಿ ಬ್ರೂಣಹತ್ಯೆಗೆ ತಯಾರಾಗುತ್ತಾರೆ. ಕಾಂಡೋಮ್ ಸಿಗದ ಮತ್ತು ಧರಿಸದ ಪೊರಪಾಟಿನಲ್ಲಿ ದೊಡ್ಡ ಪಾಪವೊಂದು ಘಟಿಸಿಹೋಗಿರುತ್ತದೆ. ಈಗ ಪಾಪ ಮಾಡದಿದ್ದರೆ ಮುಂದೆ ಪಾಪು ಹೊರಬರುತ್ತದೆ. ಅದು ಮತ್ತೂ ದೊಡ್ಡ ಗೋಳು!

ಅದೆಲ್ಲಾ ಇರಲಿ. ತತ್ತಿ ತಿಂದರೆ ಭ್ರೂಣ ಹತ್ಯಾ ದೋಷ ಬರುತ್ತದೆಯೇ ಎಂದು ತಲೆಯಲ್ಲಿ ವಿಚಾರ ಅಥವಾ ಸಂಶಯ ಬಂದರೆ ಎಂದು ಇಷ್ಟೆಲ್ಲಾ ವಿವರಣೆ ಕೊಡಬೇಕಾಯಿತು.

ಮತ್ತೆ ಬಳ್ಳೊಳ್ಳಿಗೆ ಬರೋಣ.  ಹೊಸ ಮನೆಗೆ ಬಂದ ಮೇಲೆ ಯಾವುದೇ ತರಹದ ಅಡಿಗೆ ಮಾಡಲು ತೊಂದರೆ ಇರಲಿಲ್ಲ. ಯಾವುದೇ ಅಡಿಗೆಯಿಂದ ಏನೇ ವಾಸನೆ ಬಂದರೂ ಅಡ್ಡಿಯಿರಲಿಲ್ಲ. ಅದನ್ನು ಆಸ್ವಾದಿಸಿ 'ಇವರು ಮೀನ ಹುರಿಯುತ್ತಿರಬಹುದೇ!?' ಎಂದು ವಿನಾಕಾರಣ ಮೂಗು ತೂರಿಸುವಂತಹ ಮಾಲೀಕರ ಮುದುಕಿ ಟೈಪಿನ ಜನರೂ ಇರಲಿಲ್ಲ.  ಊರ ಹೊರಗಿನ ಬಡಾವಣೆ. ಜನರೇ ಇರದ ಬಡಾವಣೆ. ಬೆಸ್ಟ್ ಆಯಿತು.

ಯಾವಾಗಲೋ ಒಮ್ಮೆ ಚಳಿಗಾದಲ್ಲಿ ಕೆಟ್ಟ ಚಳಿ ಬಿದ್ದಾಗ ರಾತ್ರಿಯೂಟಕ್ಕೆ ಬಳ್ಳೊಳ್ಳಿ ಒಗ್ಗರಣೆ ಹಾಕಿದ ಪೊಳೆದ್ಯೆ (ಪೋಳಜೆ, ಮಜ್ಜಿಗೆ ಹುಳಿ) ಮಾಡಿದ್ದು ನೆನಪಿದೆ. ನನಗಂತೂ ಹವ್ಯಕರ ಸಾಂಪ್ರದಾಯಿಕ ಅಡಿಗೆಗಳಾದ ಹಸಿ, ಪೊಳೆದ್ಯೆ ಅಂದರೆ ಅಷ್ಟಕಷ್ಟೇ. ನಾವು ಊಟದ ವಿಷಯದಲ್ಲಿ ಶುದ್ಧ ಧಾರವಾಡಿಗಳು. ರೊಟ್ಟಿ, ಚಪಾತಿ, ಪಲ್ಲ್ಯೆ, ಅನ್ನ, ಸಾರು ಮುಖ್ಯವಾಗಿ ಆಮ್ಲೆಟ್ ಇದ್ದರೆ ಸಾಕು. ಹವ್ಯಕರ ಸಾಂಪ್ರದಾಯಿಕ ಅಡಿಗೆಗಳು ಅವರಿಗೇ  ಮುಬಾರಕ್! ನಮಗೆ ಅಷ್ಟೇನೂ ಇಷ್ಟವಲ್ಲ.

ಎಂದೋ ಒಂದು ದಿವಸ ಮುಹೂರ್ತ ನೋಡಿ ಬಳ್ಳೊಳ್ಳಿ ಒಗ್ಗರಣೆ ಹಾಕಿದ ಪೊಳೆದ್ಯೆಯನ್ನು, ಅದೂ ರಾತ್ರಿ ಊಟಕ್ಕೆಂದು ಮಾಡಿದರೆ, ದೊಡ್ಡ ಪ್ರಮಾಣದ ಮಡಿವಂತರೊಬ್ಬರು ಅದೇ ಸಮಯಕ್ಕೆ ಬಂದು ವಕ್ಕರಿಸಬೇಕೇ!? ಶಿವನೇ ಶಂಭುಲಿಂಗ ಆಗಿದ್ದು ನಮ್ಮ ಪಾಲಕರ ಪರಿಸ್ಥಿತಿ.

ಆ ದಿನ ತಡರಾತ್ರಿ ಮನೆಗೆ ಆಗಮಿಸಿದವರು (ವಕ್ಕರಿಸಿದವರು ಅನ್ನಬಾರದು) ದಿವಂಗತ ಶ್ರೀಪಾದ ಶೆಟ್ಟರು. ಶ್ರೀಪಾದ ಶೆಟ್ಟರು ಅಂದರೆ ಮುಗಿಯಿತು. ಧಾರವಾಡದ ಮಟ್ಟಿಗೆ ದೊಡ್ಡ ದೇವರ ಭಕ್ತರು. ತಾವು ಶೆಟ್ಟರಾಗಿದ್ದರೂ ಬ್ರಾಹ್ಮಣರಗಿಂತಲೂ ಹೆಚ್ಚಾಗಿ ಪೂಜೆ ಪುನಸ್ಕಾರ ಮಾಡುವವರು. ಮೇಲಾಗಿ ಶೃಂಗೇರಿ ಮಠದ ದೊಡ್ಡ ಭಕ್ತರು. ಸ್ವಾಮಿಗಳಿಗೆ ತುಂಬಾ ಪ್ರಿಯರಾದವರು. ಅದೆಷ್ಟು ಪ್ರಿಯರು ಅಂದರೆ ಸ್ವಾಮಿಗಳು ಧಾರವಾಡಕ್ಕೆ ಬಂದಾಗ ಶ್ರೀಪಾದ ಶೆಟ್ಟರ ಮನೆಯಲ್ಲೇ ತಂಗುತ್ತಿದ್ದರು. of  course ಸ್ವಾಮಿಗಳು ಬಂದಾಗ ತಂಗಲೆಂದೇ ಬೇರೆ ಮನೆ ಕಟ್ಟಿಸಿಟ್ಟಿದ್ದರು ಶೆಟ್ಟರು. ವಿದ್ಯಾಗಿರಿಯಲ್ಲಿರುವ ಶಂಕರ ಮಠಕ್ಕೆ ಹತ್ತಾರು ಗುಂಟೆ ಜಾಗವನ್ನು ದಾನವಾಗಿ ಕೊಟ್ಟಿದ್ದರು. ಅಲ್ಲಿ ಶಂಕರ ಮಠ ಕಟ್ಟಿದವರು ಇನ್ನೊಬ್ಬ ಶೆಟ್ಟರಾದ ಆರ್. ಎನ್. ಶೆಟ್ಟರು. ಇಬ್ಬರೂ ಶೆಟ್ಟರಿಗೆ ನಮ್ಮ ತಂದೆಯವರು ಅಂದರೆ ತುಂಬಾ ನಂಬಿಕೆ ಮತ್ತು ಪ್ರೀತಿ. ತಂದೆಯವರೂ ಕೂಡ ಅಂತಹ ದೇವತಾ ಕಾರ್ಯಗಳಲ್ಲಿ ತುಂಬಾ ತೊಡಗಿಸಿಕೊಂಡಿದ್ದರು. ಶೆಟ್ಟರುಗಳ ದೇವತಾಕಾರ್ಯಗಳಲ್ಲಿ ತಮ್ಮ ಅಳಿಲುಸೇವೆ ಮಾಡುತ್ತಿದ್ದರು.

ಶಂಕರ ಮಠ ಕಟ್ಟುತ್ತಿರುವಾಗ ಶ್ರೀಪಾದ ಶೆಟ್ಟರು ಪದೇ ಪದೇ ಮನೆಗೆ ಬರುತ್ತಿದ್ದರು. ಒಂದು ರೀತಿಯಲ್ಲಿ ನಮ್ಮ ಮನೆಯವರೇ ಆಗಿಹೋಗಿದ್ದರಿಂದ ಅವರ ವ್ಯಾಪಾರ ವ್ಯವಹಾರ ಮುಗಿಸಿದ ನಂತರ ಸಮಯ ಸಿಕ್ಕಾಗೆಲ್ಲ ಬಂದು ಶಂಕರ ಮಠದ ಬಗ್ಗೆ ಚರ್ಚೆ ಇತ್ಯಾದಿ ಮಾಡುತ್ತಿದ್ದರು.

ಅಂತಹ ಧರ್ಮಭೀರು ಶ್ರೀಪಾದ ಶೆಟ್ಟರು ಮನೆಗೆ ಬಂದರೆ ನಮ್ಮ ಮನೆಯಲ್ಲಿ ಬಳ್ಳೊಳ್ಳಿ ಘಾಟು ಹೊಡೆಯುತ್ತಿರಬೇಕೇ!? ಶಿವಾಯ ನಮಃ!

ಶೆಟ್ಟರು ಏನಾದರೂ ತಪ್ಪು ತಿಳಿದುಕೊಂಡಾರು ಎಂದು ಯೋಚಿಸಿದ ನಮ್ಮ ಮಾತಾಶ್ರೀಯವರು ಅವರು ಆಸನದ ಮೇಲೆ ಕೂಡುವ ಮೊದಲೇ ಕ್ಷಮಾಪಣೆ ಕೇಳಿಕೊಂಡುಬಿಟ್ಟರು. ಸ್ಕೀಮ್ ಅಂದರೆ ಅದು. ತಪ್ಪು ಮಾಡಿದ್ದೀಯಾ ಎಂದು ಬೇರೊಬ್ಬರು ಹೇಳುವ ಮೊದಲೇ ಕ್ಷಮೆ ಕೇಳಿಬಿಡಬೇಕು.

ಶ್ರೀಪಾದ ಶೆಟ್ಟರು ಏನೂ ತಪ್ಪು ತಿಳಿಯಲಿಲ್ಲ. ಆ ರಾತ್ರಿ ಬಿದ್ದಿದ್ದ ಕೆಟ್ಟ ಚಳಿಯಿಂದ ಬಚಾವಾಗಲು ಬಡ ಬ್ರಾಹ್ಮಣರು ಏನೋ ಅಪರೂಪಕ್ಕೆ ಬಳ್ಳೊಳ್ಳಿ ಒಗ್ಗರಣೆ ಹಾಕಿ ಮನೆ ತುಂಬಾ ಘಾಟು ಎಬ್ಬಿಸಿಕೊಂಡುಬಿಟ್ಟಿದ್ದಾರೆ. ದೊಡ್ಡ ತಪ್ಪೇನಲ್ಲ ಎಂದುಕೊಂಡು ಮಾಫ್ ಮಾಡಿದ್ದಾರೆ. ಮತ್ತು ಅಡುಗೆಮನೆಯಿಂದ ದೂರವಿದ್ದ ತಂದೆಯವರ ಕೋಣೆಯಲ್ಲಿ ಸ್ಥಾಪಿತರಾಗಿದ್ದಾರೆ. ಬಳ್ಳೊಳ್ಳಿ ಘಾಟಿನಿಂದ ಬಚಾವಾಗಿದ್ದಾರೆ. ಶೆಟ್ಟರಿಗೆ ಬಳ್ಳೊಳ್ಳಿ ವಾಸನೆಯನ್ನು ಕುಡಿಸಿದ್ದಕ್ಕೆ ಪ್ರಾಯಶ್ಚಿತ ಎನ್ನುವ ಮಾದರಿಯಲ್ಲಿ ಅವರಿಗೆ ಬಿಸಿಬಿಸಿ ಕೇಸರಿ ಹಾಕಿದ ಹಾಲಿನ ಸಮರ್ಪಣೆ ಆಗಿದೆ. ಅಂದು ಎಂದಿಗಿಂತ ಹೆಚ್ಚಿನ ಕೇಸರಿ ಹಾಕಿದ್ದರಲ್ಲಿ ಯಾವುದೇ ಸಂಶಯವಿರಲಿಲ್ಲ. ಶೆಟ್ಟರೂ ಸಹಿತ ಎಂದಿನಂತೆ ಏನೂ ಮುಜುಗುರವಿಲ್ಲದೆ ಬಳ್ಳೊಳ್ಳಿ ಹುರಿದ ಅಡಿಗೆಮನೆಯಿಂದಲೇ ಬಂದಿದ್ದಾದರೂ ಸಾತ್ವಿಕ ಎಂದು ಪರಿಗಣಿಸಲ್ಪಡುವ ಕೇಸರಿ ಹಾಲನ್ನು ಸ್ವೀಕರಿಸಿ ನಮ್ಮನ್ನೆಲ್ಲ ಹರಿಸಿ ಹೋಗಿದ್ದಾರೆ.

ನನಗೆ ನೆನಪಿರುವ ಮಟ್ಟಿಗೆ ಮನೆಯಲ್ಲಿ ಬಳ್ಳೊಳ್ಳಿ ಹೊಗೆ ಹಾಕಿಸಿದ್ದು ಅದೇ ಕೊನೆ. of course ಅದಾದ ಕೆಲವೇ ತಿಂಗಳುಗಳಲ್ಲಿ ನಾನೂ ಸಹ ಇಂಜಿನಿಯರಿಂಗ್ ಮಾಡಲು ಮನೆ ಬಿಟ್ಟು ಕಳಚಿಕೊಂಡೆ. ಮನೆಯಲ್ಲಿ ಪಾಲಕರಿಬ್ಬರೇ. ಏನೇನು ಸಾಹಸಗಳನ್ನು ಮಾಡಿದವೋ ಅವರಿಗೇ ಗೊತ್ತು. ನಾನು ರಜೆಗೆ ಬಂದಾಗಂತೂ ಬಳ್ಳೊಳ್ಳಿಯ ಘಾಟು ಬರಲಿಲ್ಲ.

ಬಳ್ಳೊಳ್ಳಿ ಇರಲಿಲ್ಲ ಅಂದ ಮಾತ್ರಕ್ಕೆ ತಕ್ಕಮಟ್ಟಿನ ಉಳ್ಳಾಗಡ್ಡೆ ಉಪಯೋಗ ಇತ್ತು. ಆದರೆ ಆದೂ ಕಮ್ಮಿ. ಹಬ್ಬಹರಿದಿನಗಳಲ್ಲಿ, ಊರ ಕಡೆಯ ಕಟ್ಟರ್ ಜನ ಆಗಮಿಸಿದಾಗ ಇರುತ್ತಿರಲಿಲ್ಲ. ಈಗಿನ ಜನ ನೋಡಿದರೆ ಉಳ್ಳಾಗಡ್ಡೆ ಇಲ್ಲದೇ ಅಡಿಗೆ ಮಾಡಲಿಕ್ಕೇ ಬರುವದಿಲ್ಲ ಅನ್ನುವ ತರಹ ಆಡುತ್ತಾರೆ. ನೀವು ಗೋಕರ್ಣಕ್ಕೆ ಹೋಗಿ. ಅಥವಾ ಬೇರೆ ಯಾವುದೇ ಪುಣ್ಯಕ್ಷೇತ್ರಗಳಿಗೆ ಹೋಗಿ. ಅಲ್ಲಿನ ಅರ್ಚಕರ ಮನೆಯಲ್ಲಿ ತಂಗಿ. ಆವಾಗ ಗೊತ್ತಾಗುತ್ತದೆ ಉಳ್ಳಾಗಡ್ಡೆ, ಬಳ್ಳೊಳ್ಳಿ ಮತ್ತಿತರ ರಾಜಸಿಕ ತಾಮಸಿಕ ಪದಾರ್ಥಗಳಿಲ್ಲದೆಯೂ ಹೇಗೆ ರುಚಿಕರವಾದ ಅಡಿಗೆ ಮಾಡಬಹುದು ಎಂದು. ಕಳೆದ ವರ್ಷ ದಿವಂಗತರಾದ ಪೂಜ್ಯ ತಂದೆಯವರ ಅಪರಕ್ರಿಯೆಗಳನ್ನು ಮುಗಿಸಲು ಗೋಕರ್ಣದಲ್ಲಿ ವಾರಗಟ್ಟಲೆ ಉಳಿದಿದ್ದೆವು. ಪದ್ಧತಿ ಪ್ರಕಾರ ಊಟ ತಿಂಡಿಯೆಲ್ಲ ನಮ್ಮ ಮನೆತನದ ಪುರೋಹಿತರ ಮನೆಯಲ್ಲೇ. ಅಬ್ಬಾ! ಎಂತಹ ರುಚಿಕರ ಊಟ! of course ಉಪ್ಪು ಮಿಶ್ರಿತ ನೀರಲ್ಲಿ ಬೆಳೆಯುವ ಗೋಕರ್ಣದ ತರಕಾರಿಗೆ ಅದರದ್ದೇ ಆದ ಹೆಚ್ಚಿನ ರುಚಿಯಿದೆ ಬಿಡಿ. ಆದರೂ ಉಳ್ಳಾಗಡ್ಡೆ ಬಳ್ಳೊಳ್ಳಿ ಇಲ್ಲದೆ  ರುಚಿಕಟ್ಟಾದ ಅಡಿಗೆ ಮಾಡುವ ಕಲೆಯನ್ನು ಅಂತಹ ಭಟ್ಟರಿಂದಲೇ ಕಲಿಯಬೇಕು ಬಿಡಿ!

ಮನೆ ಬಿಟ್ಟು ಹೊರಬಂದ ಮೇಲೆ ಬೇರೆ ಬೇರೆ ರೀತಿಯ ತಿಂಡಿ ತೀರ್ಥ ಎಲ್ಲ ಮಾಡಿದ್ದಾಯಿತು. ಉತ್ತರಭಾರತದ ಖಾದ್ಯಪದಾರ್ಥಗಳಲ್ಲಿ ಅದರಲ್ಲೂ ಮೊಗಲಾಯ್ ಖಾದ್ಯಗಳಲ್ಲಿ ಒಂದು ರೀತಿಯ ವಿಶಿಷ್ಟ ವಾಸನೆ ಇರುತ್ತಿತ್ತು. ಮೊದಮೊದಲಿಗೆ ಏನು ಅಂತ ಗೊತ್ತಾಗುತ್ತಿರಲಿಲ್ಲ. ಆಮೇಲೆ ಯಾರೋ ಹೇಳಿದರು, 'ಉತ್ತರ ಭಾರತದ ಎಲ್ಲ ಐಟಮ್ಮುಗಳಲ್ಲಿ ಬಳ್ಳೊಳ್ಳಿ ಮತ್ತು ಶುಂಠಿಯ ಪೇಸ್ಟ್ (garlic ginger paste) ಹಾಕುತ್ತಾರೆ. ಅದಿಲ್ಲದೇ ನಾರ್ತ್ ಇಂಡಿಯನ್ ಐಟೆಮ್ಸ ತಯಾರಾಗುವುದೇ ಇಲ್ಲ. ಅದರದ್ದೇ distinct ವಾಸನೆ ಮತ್ತು ಟೇಸ್ಟ್.'

ಸರಿ. ನಮ್ಮಲ್ಲಿನ ಬಳ್ಳೊಳ್ಳಿ ಹಾಕಿದ ಚಟ್ನಿಯಂತೆ ಅಡ್ಡವಾಸನೆಯೇನೂ ಬರುತ್ತಿಲ್ಲವಲ್ಲ. ಅಲ್ಲಿಗೆ ಎಲ್ಲಾ ಓಕೆ. ಹಾಕಿ ಜಮಾಯಿಸು. ಬರೋಬ್ಬರಿ ಕಟಿ ಗಂಟಲು ಮಟ!

ಬಳ್ಳೊಳ್ಳಿ ಕಡೆ ಗಂಭೀರವಾಗಿ ನೋಡುವ ಸಂದರ್ಭ ಹೋದ ವರ್ಷ ಬಂದು ಒದಗಿತು. ಅದೂ ಒಂದು ವಿಶಿಷ್ಟ ರೀತಿಯಲ್ಲಿ.

ಸೋದರಸಂಬಂಧಿಯ ಪತ್ನಿ ಧಾರವಾಡಕ್ಕೆ ಬಂದಿದ್ದಳು. ನಮಗೆ ಹಿರಿಯಕ್ಕನಂತವಳು. ತುಂಬಾ ಸಲುಗೆ ಇದೆ. ಆಕೆ ಬೆಳಿಗ್ಗೆ ಎದ್ದಾಕ್ಷಣ ಹಸಿ ಬೆಳ್ಳುಳ್ಳಿಯ ಎರಡು ಎಸಳು ತಿನ್ನುತ್ತಿದ್ದಳು. ನೋಡಿ ದಂಗು ಹೊಡೆದವನು ನಾನು.

'ಇದೇನು ಮಾರಾಯ್ತೀ!? ಮೊದಲೇ ದೊಡ್ಡ ಭಟ್ಟರ ಮನೆಯ ಹಿರಿಯ ಸೊಸೆ ನೀನು. ಅಂತವಳು ಇಷ್ಟು ಢಾಳಾಗಿ ಬೆಳ್ಳುಳ್ಳಿ ತಿನ್ನುವುದೇ!? ಶಾಂತಂ!ಪಾಪಂ! ಮುಗಿಯಿತು ಕಥೆ. ಹೋಯಿತು ನಿಮ್ಮ ಭಟ್ಟರ ಧರ್ಮ! ಜಾತಿ ಕೆಟ್ಟುಹೋಯಿತಲ್ಲೇ ಅತ್ತಿಗೆ!' ಎಂದು ತಮಾಷೆ ಮಾಡಿದೆ.

'ಇಲ್ಲ ಮಾರಾಯ. ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದಕ್ಕೇ ಎಲ್ಲ ಕಟ್ಟುಪಾಡುಗಳನ್ನು ಮೀರಿ ಬೆಳ್ಳಂಬೆಳಿಗ್ಗೆ ಹಸಿ ಬಳ್ಳೊಳ್ಳಿ ತಿನ್ನುವ ಅಭ್ಯಾಸ ಮಾಡಿಕೊಂಡಿದ್ದೇವೆ,' ಎಂದಳು.

'ಹಾಂ!? ಆರೋಗ್ಯಕ್ಕೆ ತುಂಬಾ ಒಳ್ಳೆಯದೇ? ಹೇಗೆ??'  ಎಂದು ಚಕಿತನಾಗಿ ಕೇಳಿದೆ.

ಕಥೆ ಹೇಳಿದಳು. ನನ್ನ ಸೋದರಸಂಬಂಧಿ (ಆಕೆಯ ಪತಿ) ಕೊಂಚ ಶೀತ ಥಂಡಿ ಪ್ರಕೃತಿಯವನು. ಕರಾವಳಿಯ ಒಣ ಹವೆಯಲ್ಲಿ ಆರಾಮಾಗೇ ಇದ್ದ. ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ಬಂದ ಮೇಲೆ ಶೀತ ಥಂಡಿ ಜಾಸ್ತಿ ತೊಂದರೆ ಕೊಡತೊಡಗಿತು. ಅದೂ ಈಗಿನ ಕೆಲವು ವರ್ಷಗಳಲ್ಲಿ ಪರಿಸರ ಮಾಲಿನ್ಯ ವಿಪರೀತವಾಗಿ, ಶೀತ ಥಂಡಿ ತೊಂದರೆ ತುಂಬಾ ಉಲ್ಬಣಗೊಂಡು, ಪದೇಪದೇ ಎದೆ ಕಟ್ಟಿ ಉಸಿರಾಟಕ್ಕೆ ತೊಂದರೆ. ವೈದ್ಯರ ಬಳಿ ಹೋದರೆ ಮತ್ತೆ ಅದೇ ಟ್ರೀಟ್ಮೆಂಟ್. inhaler ಉಪಯೋಗಿಸಿ. ಅದು ತಾತ್ಕಾಲಿಕ ಶಮನ. ಎದೆ ಕಟ್ಟಿದಾಗೊಮ್ಮೆ inhaler ಉಪಯೋಗಿಸಬೇಕು. ಮತ್ತೆ ಕೆಲ ಸಮಯದ ನಂತರ ಅದೇ ಪ್ರಾಬ್ಲಮ್. ರಾತ್ರಿ ಎದ್ದು inhaler ಹೆಟ್ಟಿಕೊಳ್ಳಬೇಕು. ಇಲ್ಲವಾದರೆ ನಿದ್ದೆ ಅಸಾಧ್ಯ. ಹೀಗೆ ತುಂಬಾ ಹೈರಾಣಾಗಿ ಹೋದ ನಮ್ಮ ಸೋದರಸಂಬಂಧಿ (cousin). ತಿಂಗಳಿಗೆ ಡಜನ್ ಗಟ್ಟಲೆ inhaler ಬೇಕಾಗತೊಡಗಿತು.

ಆಗ ಯಾರೋ ಬೆಳಿಗ್ಗೆ ಎದ್ದು ಹಸಿ ಬಳ್ಳೊಳ್ಳಿ ತಿನ್ನುವ ಸಲಹೆ ಕೊಟ್ಟರಂತೆ. ಸಲಹೆ ಪಾಲಿಸಲು ಹಿಂದೆ ಮುಂದೆ ನೋಡಿದ. ಮೊದಲೇ ದೊಡ್ಡ ಭಟ್ಟರ ಮನೆತನದವನು. ಇಂಜಿನಿಯರಿಂಗ್ ಮಾಡಿ ಸಾಫ್ಟ್ವೇರ್ ಕರ್ಮಚಾರಿಯಾದರೂ ಇನ್ನೂ ಪೂಜೆ ಪುನಸ್ಕಾರ ಎಲ್ಲ ಮಾಡುವವನು. ಅಧ್ಯಾತ್ಮದಲ್ಲಿ ಹೆಚ್ಚಿನ ಆಸಕ್ತಿ ಉಳ್ಳವನು. ವೇದಾಧ್ಯಯನಕ್ಕೆ ಅನುಕೂಲವಾಗಲಿ ಎಂದು ಬಾಹ್ಯವಾಗಿ ಸಂಸ್ಕೃತ ಪರೀಕ್ಷೆ ಕಟ್ಟಿ ಉನ್ನತ ಶ್ರೇಣಿಯಲ್ಲಿ ಸಂಸ್ಕೃತದಲ್ಲಿ MA ಡಿಗ್ರಿ ಮಾಡಿಕೊಂಡ ಪ್ರತಿಭಾವಂತ. ಪರಿಶುದ್ಧ ಸನ್ಯಾಸಿಯೊಬ್ಬರ ಶಿಷ್ಯನಾಗಿ ಶ್ರದ್ಧೆಯಿಂದ ವೇದೋಪನಿಷತ್ತುಗಳನ್ನು ಅಧ್ಯಯನ ಮಾಡುತ್ತಿರುವ ಸಾಧಕ ಮನುಷ್ಯ. ಹೀಗಾಗಿ ಮುಂಜಾನೆ ಎದ್ದ ಕೂಡಲೇ ಬಳ್ಳೊಳ್ಳಿ ತಿನ್ನಿ ಅನ್ನುವ ಸಲಹೆಯನ್ನು ಪಾಲಿಸಲು ಅವನಿಗೆ ತುಂಬಾ ಇರುಸುಮುರುಸಾಯಿತು.

ಆದರೆ ಆರೋಗ್ಯದ ಪರಿಸ್ಥಿತಿ ಬಹಳ ಖರಾಬಾಗಿತ್ತು. ಆರೋಗ್ಯದ ಮುಂದೆ ಎಲ್ಲ ಗೌಣ. ಹಾಗಾಗಿ ಹೇಗೋ ಮಾಡಿ ಬೆಳ್ಳುಳ್ಳಿ ಸೇವನೆ ಶುರುಮಾಡಿದ. ನಿಯಮಿತವಾಗಿ ಮಾಡಿದ.

ಪರಿಣಾಮ ಮಾತ್ರ ಬೆರಗಾಗುವಂತಿತ್ತು!

ಒಂದೇ ತಿಂಗಳು! ಶೀತ, ಥಂಡಿ, ಎದೆ ಕಟ್ಟುವಿಕೆ ಎಲ್ಲ ಮಾಯ! ಮಂಗಮಾಯ! ಯಾವುದೇ ಬೇರೆ ಔಷಧೋಪಚಾರ ಬೇಕೇ ಆಗಲಿಲ್ಲ. ತನ್ನ ಎಲ್ಲ ಸಮಸ್ಯೆಗಳಿಂದ ಮುಕ್ತ! ಮುಕ್ತ!

ಅವನು ಬೆಳ್ಳುಳ್ಳಿ ಚಿಕಿತ್ಸೆಗೆ ಪೂರ್ತಿ committed. ಆದರೆ ಅವನ ಗುರುಗಳು ಹೇಳಿದರಂತೆ, 'ಭಟ್ಟರೇ, ವೇದಾಧ್ಯಯನ ಮಾಡುವವರಿಗೆ ಬೆಳ್ಳುಳ್ಳಿ ನಿಷಿದ್ಧ. ನಿಮಗೆ ತಿಳಿಯದ ವಿಷಯವೇನೂ ಅಲ್ಲ. ಅದರ ಬಗ್ಗೆ ವಿಚಾರ ಮಾಡಿ. ನಿಮ್ಮ ಸಾಧನೆಗೆ ಆ ರಾಜಸಿಕ ತಾಮಸಿಕ ಪದಾರ್ಥ ಅಡ್ಡಿಯಾಗದಿರಲಿ ಎಂಬುದಿಷ್ಟೇ ನಮ್ಮ ಕಾಳಜಿ.'

ಗುರುಗಳಿಗೆ ಎಲ್ಲ ವಿಷಯವನ್ನೂ ಸಾದ್ಯಂತ ತಿಳಿಸಿದ ಮೇಲೆ ಅವರೂ ಒಪ್ಪಿಕೊಂಡರು. ರುಚಿಗಾಗಿ ಬೆಳ್ಳುಳ್ಳಿ ತಿಂದರೆ, ಅದೂ ಇತಿಮಿತಿ ಮೀರಿ ತಿಂದರೆ ಮಾತ್ರ, ಅದು ತಾಮಸಿಕ, ರಾಜಸಿಕ ಮತ್ತು ಸಾತ್ವಿಕ ಜೀವನಶೈಲಿಗೆ ವಿರುದ್ಧವಾದುದು. ಔಷಧಿಗಾಗಿ ಸೇವಿಸಿದರೆ ಎಲ್ಲ ಓಕೆ. ಬಾರಾ ಖೂನ್ ಮಾಫ್!

ಇದನ್ನು ಕೇಳಿ ನನ್ನ ತಲೆಯಲ್ಲಿ ಬಂದಿದ್ದು ಏನಪ್ಪಾ ಅಂದರೆ ಔಷಧಿ ಅದು ಇದು ಅಂತ ಸಮರ್ಥನೆ ಕೊಟ್ಟುಕೊಂಡು ನಾವೇನೋ ಬೆಳಿಗ್ಗೆ ಬೆಳಿಗ್ಗೆ ಹಸಿ ಬಳ್ಳೊಳ್ಳಿ ತಿಂದು ಬಿಸಿನೀರು ಕುಡಿದು ಕೂತುಬಿಡಬಹದು. ನಮ್ಮ ಸುತ್ತಮುತ್ತಲಿನ ಜನರ ಗತಿ ಏನು ಸ್ವಾಮೀ!? ಬಳ್ಳೊಳ್ಳಿಯ ಉಸಿರಿನ (ಸು)ವಾಸನೆಯನ್ನು ಭರಿಸಬೇಕಾದವರು ಅವರು ತಾನೇ!??

An apple a day keeps the doctor away. A garlic a day keeps everyone away. - ಎಂದು ತಮಾಷೆ ಮಾಡುತ್ತಾರೆ. ದಿನಕ್ಕೊಂದು ಸೇಬು ಸೇವಿಸಿದರೆ ಅದು ವೈದ್ಯರನ್ನು ದೂರವಿಡುತ್ತದೆ. ಹಾಗೆಯೇ ದಿನಕ್ಕೊಂದು ಬೆಳ್ಳುಳ್ಳಿಯನ್ನು ಸೇವಿಸಿದರೆ ಅದು ಎಲ್ಲರನ್ನೂ ದೂರವಿಡುತ್ತದೆ. ವೈದ್ಯರನ್ನೂ ಒಳಗೊಂಡು.

ಅತ್ಯುತ್ತಮ ಔಷಧೀಯ ಗುಣಗಳ ಖನಿಯಾಗಿರುವ ಇಂತಹ ಬಳ್ಳೊಳ್ಳಿಯನ್ನು ಇನ್ನೊಬ್ಬರಿಗೆ ಮುಜುಗುರವಾಗದಂತೆ ಸೇವಿಸುವುದು ಹೇಗೆ?

ಅನೇಕ ಬೆಳ್ಳುಳ್ಳಿಯ capsule, ಮಾತ್ರೆ ಬಂದಿವೆ. ಅವನ್ನು ತೆಗೆದುಕೊಳ್ಳಬಹುದು. ಆದರೆ ಖ್ಯಾತ ವೈದ್ಯ ಡಾ. ಬಿ. ಎಂ. ಹೆಗ್ಡೆ ಹೇಳುತ್ತಾರೆ, 'ಬೆಳ್ಳುಳ್ಳಿಯ ಮಾತ್ರೆ, ಕ್ಯಾಪ್ಸುಲ್ ಉಪಯೋಗಕಾರಿಯಲ್ಲ. ಏಕೆಂದರೆ ಬೆಳ್ಳುಳ್ಳಿಯ ಔಷಧೀಯ ಗುಣಗಳು ಬಿಡುಗಡೆಯಾಗುವುದು ಬೆಳ್ಳುಳ್ಳಿಯನ್ನು ಕಚ್ಚಿದಾಗ ಅದರಿಂದ ಸ್ರವಿಸುವ ರಸದಲ್ಲಿರುವ ರಾಸಾಯನಿಕದಿಂದ. ಮಾತ್ರೆ ಕ್ಯಾಪ್ಸುಲ್ ತೆಗೆದುಕೊಂಡರೆ ಆ ಬೆನಿಫಿಟ್ ಸಿಗುವುದಿಲ್ಲ. ಸುಮ್ಮನೆ ದುಡ್ಡು ದಂಡ. ಔಷಧಿಯ ರೂಪದಲ್ಲಿ ಬೆಳ್ಳುಳ್ಳಿಯನ್ನು ಸೇವಿಸಲೇಬೇಕು ಅಂತಾದರೆ ಹಸಿ ಬೆಳ್ಳುಳ್ಳಿಯನ್ನು ಕಚ್ಚಿ ತಿನ್ನಲೇಬೇಕು. ಬೇರೆ ದಾರಿಯಿಲ್ಲ!'

ಶಿವಾಯ ನಮಃ!!

ಎರಡು ತೊಂದರೆಗಳು. ಒಂದು ಹಸಿ ಬೆಳ್ಳುಳ್ಳಿಯ ಕಮಟು ರುಚಿ ಮತ್ತು ಘಾಟು. ಎಲ್ಲರಿಗೂ ಭರಿಸಲು ಸಾಧ್ಯವಿಲ್ಲ. ಮತ್ತು ಎರಡನೆಯ ತೊಂದರೆಯಂತೂ obvious. ಬೆಳ್ಳುಳ್ಳಿ ಹಾಕಿದ ಪದಾರ್ಥ ಸೇವಿಸಿದ ಮೇಲೆ ಅದೆಷ್ಟೇ ಚೆನ್ನಾಗಿ ಬ್ರಷ್ ಮಾಡಿದ ಮೇಲೂ ಅದರ 'ಸುವಾಸನೆ' ನಿರ್ಮೂಲವಾದ ಬಗ್ಗೆ ಖಾತ್ರಿಯಿರುವದಿಲ್ಲ. 'ನನ್ನ ಬಾಯಿ ಬೆಳ್ಳುಳ್ಳಿ ವಾಸನೆ ಹೊಡೆಯುತ್ತಿಲ್ಲ ತಾನೇ??' ಎಂದು ಕೇಳಿ ಖಾತ್ರಿ ಮಾಡಿಕೊಂಡಾಗಲೇ ಸಮಾಧಾನ. ಬೆಳ್ಳುಳ್ಳಿ ಮತ್ತು ಉಳ್ಳಾಗಡ್ಡೆ ಸೀದಾ ರಕ್ತ ಸೇರಿಬಿಡುತ್ತವೆ. ಏನೇನೋ ಬ್ರಷ್ ಮಾಡಿ, ಯಾಲಕ್ಕಿ ತಿಂದು, ಪಾನ್ ಹಾಕಿ ಬಾಯಿ ವಾಸನೆ ನಿವಾರಿಸಿಕೊಂಡರೂ ಬೆವರಿನ 'ಸುಗಂಧ'ದ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಕಾಗುತ್ತದೆ. ಎರಡು ಸಲ ಸ್ನಾನ ಮಾಡಿಬಿಡಿ. ಬರೋಬ್ಬರಿ ಡಿಯೋಡರೆಂಟ್ ತಿಕ್ಕಿಕೊಳ್ಳಿ. ಅಷ್ಟರಮಟ್ಟಿಗೆ ಸೇಫ್ ಎಂದುಕೊಂಡಿದ್ದೇನೆ.

ಈ ಸಮಸ್ಯೆಗಳಿಗೆ ಒಂದು ಸಮಾಧಾನ ಸಿಕ್ಕಿದೆ. ಅದೇನಪ್ಪಾ ಅಂದರೆ... ಹಸಿ ಬೆಳ್ಳುಳ್ಳಿಯ ಎಸಳುಗಳನ್ನು ಚಿಕ್ಕದಾಗಿ ಕತ್ತರಿಸುವುದು. ನಂತರ ಒಂದು ಗ್ಲಾಸ್ ನೀರಿನೊಂದಿಗೆ ಅದನ್ನು ಮಾತ್ರೆಯಂತೆ ನುಂಗಿಬಿಡುವುದು. ಬೆಳ್ಳುಳ್ಳಿಯ ಎಸಳನ್ನು ಕತ್ತರಿಸುವುದು ಹಲ್ಲಿಂದ ಅಗಿದಿದ್ದಕ್ಕೆ ಸುಮಾರು ಸಮಾನ. ರಸವಂತೂ ಬಿಡುತ್ತದೆ. ರಸದಲ್ಲಿನ ಔಷಧಿಯುಕ್ತ ರಾಸಾಯನಿಕದ ಬೆನಿಫಿಟ್ ಸಿಗುತ್ತದೆ. ಜಗಿಯುವ ಉಸಾಬರಿ ಇಲ್ಲ. ಹಾಗಾಗಿ ಹೋದಲ್ಲೆಲ್ಲಾ ಬಳ್ಳೊಳ್ಳಿಯ (ಸು)ವಾಸನೆ ಹರಡುತ್ತಾ ವಾಯು ಮಾಲಿನ್ಯ ಮಾಡುವ ರಿಸ್ಕೂ ಇಲ್ಲ. ನಂತರ ಬರೋಬ್ಬರಿ ಬ್ರಷ್ ಮಾಡಿ, mouthwash ಹಾಕಿ ಬಾಯಿ ಮುಕ್ಕಳಿಸಿ, ಸ್ನಾನ ಮಾಡಿ, ಡಿಯೋಡರೆಂಟ್ ಬರೋಬ್ಬರಿ ಹೊಡೆದುಕೊಂಡು ಹೋದರೆ ಸಾಮಾನ್ಯ ಸಂದರ್ಭಗಳಲ್ಲಿ ಅಂತೂ ರಿಸ್ಕ್ ಇಲ್ಲ. ನಿಮಗೆ ಇನ್ನೂ intimate ಸಂದರ್ಭಗಳಿವೆ ಅಂದರೆ  ಉದಾಹರಣೆಗೆ dating ಹೋಗಬೇಕು, ಮಾಲು ಪಟಾಯಿಸಬೇಕು, ಕಿಸ್ ಹೊಡೆಯಬೇಕು, ಪಲ್ಲಂಗಾರೋಹಣ ಅಂತೆಲ್ಲಾ ಇದ್ದ ದಿನಗಳಲ್ಲಿ ಬೆಳ್ಳುಳ್ಳಿ ಚಿಕಿತ್ಸೆ ಬಿಡಬೇಕಾಗಬಹುದು.

ಈಗ ಒಂದು ವರ್ಷದಿಂದ ನಾನೂ ಬೆಳ್ಳುಳ್ಳಿ ಚಿಕಿತ್ಸೆ ಆರಂಭಿಸಿದ್ದೇನೆ. ಬೆಳಿಗ್ಗೆ ಎದ್ದಾಕ್ಷಣ ಎರಡು ಅಥವಾ ಮೂರು ಎಸಳುಗಳನ್ನು ಚಿಕ್ಕದಾಗಿ ಕತ್ತರಿಸಿ ನೀರಿನ ಜೊತೆ ನುಂಗಿಬಿಡುವುದು.

ಏನಾದರೂ ಉಪಯೋಗವಾಗಿದೆಯೇ? ಗೊತ್ತಿಲ್ಲ. ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಅದೇನೋ ಬೆಳ್ಳುಳ್ಳಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂದು ಕೇಳಿದ ಕಾರಣ ಶುರು ಮಾಡಿದ್ದು. ದೇವರ ದಯವೋ ಅಥವಾ ಬೆಳ್ಳುಳ್ಳಿಯ ಮಹಾತ್ಮೆಯೋ ಗೊತ್ತಿಲ್ಲ. ವರ್ಷಕ್ಕೆ ಒಂದೆರೆಡು ಬಾರಿ ಆಗುತ್ತಿದ್ದ ಸಣ್ಣ ಪ್ರಮಾಣದ flu ಅಂದರೆ ಜ್ವರ, ಮೈಕೈ ನೋವು, ಗಂಟಲ ನೋವು ಇತ್ಯಾದಿ ಆಗಿಲ್ಲ. ಕೊಂಚ ಆದರೂ ಹಿಂದೆಲ್ಲಾ ಆಗುತ್ತಿದ್ದ ದೊಡ್ಡ ಪ್ರಮಾಣದಲ್ಲಿ ಕಳೆದ ಒಂದು ವರ್ಷದಲ್ಲಿ ಆಗಿಲ್ಲ. ಅದು ಬೆಳ್ಳುಳ್ಳಿ ಚಿಕಿತ್ಸೆ ಪರಿಣಾಮವೋ ಅಥವಾ ಅರಿಶಿಣ ಹಾಕಿದ ಹಾಲಿನ ಪರಿಣಾಮವೋ ಅಥವಾ ವರ್ಷವೂ ತೆಗೆದುಕೊಳ್ಳುವ flu ಚುಚ್ಚುಮದ್ದಿನ ಪರಿಣಾಮವೋ ಗೊತ್ತಿಲ್ಲ.

ಸದ್ಯಕ್ಕಂತೂ ಬೆಳ್ಳುಳ್ಳಿ ಚಿಕಿತ್ಸೆ ಜಾರಿಯಲ್ಲಿರುತ್ತದೆ. ನಾವಂತೂ ಯಾವಾಗಲೂ ಮನೆಯಿಂದಲೇ ಕೆಲಸ ಮಾಡುವವರು. ಜನ ಸಂಪರ್ಕವೇ ಇಲ್ಲ. ಹಾಗಾಗಿ, ಇಷ್ಟೆಲ್ಲಾ preventive ಕ್ರಮ ತೆಗೆದುಕೊಂಡ ಮೇಲೂ, ಎಲ್ಲಾದರೂ ಅಪ್ಪಿ ತಪ್ಪಿ ಬೆಳ್ಳುಳ್ಳಿ (ಸು)ವಾಸನೆ ಹರಡಿದರೆ ಅದರಿಂದ ಯಾರಿಗೂ ತೊಂದರೆಯಿಲ್ಲ. ಸಾಮಾಜಿಕವಾಗಿ ಮಿಳಿತಗೊಳ್ಳಬೇಕಾದ ಸಂದರ್ಭಗಳು ಇದ್ದಾಗ ಹೆಚ್ಚಿನ precautions ತೆಗೆದುಕೊಂಡರಾಯಿತು.

ಬಳ್ಳೊಳ್ಳಿ ಉರ್ಫ್ ಬೆಳ್ಳುಳ್ಳಿ ಮಹಾತ್ಮೆ ಇನ್ನೂ ಬಹಳವಿದೆ. ನೀವೂ ಟ್ರೈ ಮಾಡಿ. ನಿಮ್ಮ ಆರೋಗ್ಯ ವೃದ್ಧಿಸಿದರೆ ಸಾಕು. ಬೇರೆಯವರ ಚಿಂತೆ ನಿಮಗ್ಯಾಕೆ? ಅವರ ಮೂಗು. ಅವರ ಕರ್ಮ. ಮೂಗು ಮುಚ್ಚಿಕೊಂಡು ಹೋಗ್ತಾ ಇರಲಿ ಬಿಡಿ! :)

Wednesday, November 13, 2019

ನಿದ್ದೆ (ಬಾರದಂತೆ ಮಾಡುವ) ಗುಳಿಗೆ

೧೯೮೭, ೮೮ ರ ಮಾತು. SSLC ವರ್ಷದ ಭಯಾನಕ ದಿನಗಳು ಅವು!

'ಮಹೇಶಾss' ಎಂದು ಉದ್ದಕ್ಕೆ ಊದ್ದವಾಗಿ ಕರೆದವನು ನನ್ನ ಖಾಸ್ ದೋಸ್ತ.

ಆ ಪುಣ್ಯಾತ್ಮ ಆ ರೀತಿಯಲ್ಲಿ ಕರೆದ ಅಂದರೆ ಮುಗಿಯಿತು. ಏನೋ ಬ್ರೇಕಿಂಗ್ ನ್ಯೂಸ್ ಕೊಡುವವನು ಇದ್ದಾನೆ ಎಂದು ಗ್ಯಾರಂಟಿ. ಆ ಮನುಷ್ಯನೇ ಹಾಗೆ. ಅವನಿಗೆ ಗೊತ್ತಿಲ್ಲದ ಸುದ್ದಿಯಿಲ್ಲ. ಊರ ಮಂದಿಯೆಲ್ಲರೂ ಅವನ ದೋಸ್ತರೇ. ಅವರ ತಲೆಯೊಳಗೆಲ್ಲ ಕೈ ಹಾಕಿ, ಮಿದುಳನ್ನೆಲ್ಲ ತಿರುವ್ಯಾಡಿ, ಮಾಹಿತಿ ಹೆಕ್ಕಿ, ಭಟ್ಟಿ ಇಳಿಸಿಟ್ಟುಕೊಂಡಿರುತ್ತಿದ್ದ. ಸ್ವಾರಸ್ಯಕರ ಮಾಹಿತಿಯುಳ್ಳ ಅಂತಹ ಖಡಕ್ ಭಟ್ಟಿ ಸಾರಾಯಿಯನ್ನು ನಮಗೆ ಕುಡಿಸುತ್ತಿದ್ದ. ನಂತರ ಅದರದ್ದೇ ಗುಂಗು.

xyz ನಮ್ಮ ಒಬ್ಬ ಸಹಪಾಠಿ. ಹೆಸರು ಬೇಡ ಬಿಡಿ.

'xyz ಅವರ ಅಪ್ಪ ಅವಂಗ ಗುಳಿಗಿ ತಂದು ಕೊಟ್ಟಾನಂತ! ನಿದ್ದಿ ಬರದಾಂಗ ಮಾಡತೈತಿ. ಅಂತಾ ಗುಳಿಗಿ!' ಅಂದುಬಿಟ್ಟ.

'ಏನೂ!!??' ಎಂದು ಉದ್ಗರಿಸಿದೆ.

'ನಿದ್ದಿ ಬರ್ಬಾರ್ದು. ಮಗಾ ಕುಂತ ರಾತ್ರಿಯೆಲ್ಲಾ ಓದ್ಲಿ ಅಂತ ಎಲ್ಲಿಂದಲೋ ಹುಡುಕಿ ತಂದುಕೊಟ್ಟಾನಂತ!' ಅಂದ ನಮ್ಮ ದೋಸ್ತ.

ನಿದ್ದೆ ಬರುವಂತೆ ಮಾಡುವ ನಿದ್ದೆ ಮಾತ್ರೆ ಬಗ್ಗೆ ಕೇಳಿ ಗೊತ್ತಿತ್ತು. ಆಗಿನ ಕಾಲದಲ್ಲಿ ನಿದ್ರೆ ಮಾತ್ರೆ ತೆಗೆದುಕೊಳ್ಳುವವರು ಭಾಳ ಕಮ್ಮಿ ಜನ. ನಿದ್ರೆ ಮಾತ್ರೆ ತೆಗೆದುಕೊಂಡರು ಅಂದರೆ ಆತ್ಮಹತ್ಯೆ ಮಾಡಿಕೊಳ್ಳಲು ತೆಗೆದುಕೊಂಡರು ಎಂದೇ ಅರ್ಥ.

ಹೀಗಿರುವಾಗ ಈ ಪುಣ್ಯಾತ್ಮ ನಿದ್ದೆ ಬಾರದಂತೆ ಮಾಡುವ ಮಾತ್ರೆಗಳೂ ಇರುತ್ತವೆ ಮತ್ತು ನಮ್ಮ ಸಹಪಾಠಿಯ ತಂದೆಯೊಬ್ಬ ಅವನಿಗೆ ಅವನ್ನು ತಂದುಕೊಟ್ಟಿದ್ದಾನೆ ಎಂದು ಹೇಳಿಬಿಟ್ಟ. ದೊಡ್ಡ ಬ್ರೇಕಿಂಗ್ ನ್ಯೂಸ್.

ಅದೋ SSLC ಕಾಲ. ಕೆಟ್ಟ ಬೋರಿಂಗ್ ಸಮಯ. ಅದಕ್ಕಿಂತ ದೊಡ್ಡ ಬೋರಿಂಗ್ ಪರೀಕ್ಷೆ. ವರ್ಷದ ಕೊನೆಗೆ ಒಂದು ದೊಡ್ಡ ಪರೀಕ್ಷೆ. ಅದ್ಯಾವ ಬುದ್ಧಿಮತ್ತೆಯನ್ನು ಪರೀಕ್ಷೆ ಮಾಡುವ ಪರೀಕ್ಷೆಯೋ ಎಂದು ನೋಡಿದರೆ ಅದರ ಕರ್ಮಕ್ಕೆ ಅದೊಂದು ದೊಡ್ಡ ಶಿಕ್ಷೆ ಬಿಟ್ಟರೆ ಏನೂ ಅಲ್ಲ. ೮,೯,೧೦ ತರಗತಿಗಳ ಮೂರು ವರ್ಷಗಳಲ್ಲಿ ಬಾಯಿಪಾಠ ಹೊಡೆದದ್ದನ್ನು (ಕಲಿತದ್ದನ್ನು ಅಲ್ಲ!) ಮೂರು ಘಂಟೆಯ ಆರು ಪರೀಕ್ಷೆಗಳಲ್ಲಿ ಕಕ್ಕಿ ಬರಬೇಕು. ಶಿವನೇ ಶಂಭುಲಿಂಗ!

ಗಣಿತ ಒಂದು ಬಿಟ್ಟರೆ ಮತ್ತೆಲ್ಲ ಭಾಷೆ ಮತ್ತು ವಿಷಯಗಳಲ್ಲಿ ಕಂಠಪಾಠಕ್ಕೆ (rote learning) ಹೆಚ್ಚು ಮಹತ್ವ. ಯಾಕೆಂದರೆ ಕೇಳಿದ ಪ್ರಶ್ನೆಗಳಿಗೆ ಬರೋಬ್ಬರಿ, ಅವರು ನಿರೀಕ್ಷೆ ಮಾಡಿದಂತೆ, ಬರೆದು ಒಗಾಯಿಸಿ ಬರಬೇಕು. ಹಾಗೆ ಬರೆದಾದ ಮೇಲೂ ಒಳ್ಳೆ ಮಾರ್ಕ್ಸ್ ಬರುತ್ತವೆ ಅಂತ ಖಾತ್ರಿಯಿಲ್ಲ.

ಪಠ್ಯ ಬಾಯಿಪಾಠ ಹೊಡೆಯಬೇಕು. ಜೊತೆಗೆ ಮಾಸ್ತರ್ ಮಂದಿ ಕೊಟ್ಟ ನೋಟ್ಸ್ ಇತ್ಯಾದಿ ಕಂಠಪಾಠ ಮಾಡಬೇಕು. ಜೊತೆಗೆ ಆಕಾಲದ ಗೈಡ್ ನಮೂನಿ ಪುಸ್ತಕಗಳಾದ ಮ್ಯಾಗಜಿನ್, ಬಂಧು, ಹದ ಮತ್ತೊಂದು ಮಗದೊಂದು ಎಲ್ಲವನ್ನೂ ಭಟ್ಟಿ ಇಳಿಸಿ ಮೆದುಳಿಗೆ ಇಳಿಸಿಕೊಳ್ಳಬೇಕು. ಕೆಲವರು ಬಾಯಿಪಾಠ ಮಾಡುತ್ತಿದ್ದರು. ಕೆಲವರು ಮತ್ತೆ ಮತ್ತೆ ಬರೆದು ತೆಗೆದು ತೆಗೆದು ತೈದು ಹೈರಾಣಾಗಿ ಹೋಗುತ್ತಿದ್ದರು. ಒಟ್ಟಿನಲ್ಲಿ ಏನೇನೋ ಮಂಗ್ಯಾನಾಟಗಳು SSLC ಎಂಬ ಶೂಲದಿಂದ ಬಚಾವಾಗಲು.

SSLC ಕರ್ಮ ಯಾರಿಗೂ ಬೇಡ ಶಿವನೇ! ಅದಕ್ಕೆ ಹೋಲಿಸಿದರೆ PUC ಎಷ್ಟೋ ಬೆಟರ್. ವಿಜ್ಞಾನದ ವಿಷಯಗಳಲ್ಲಿ ಅಷ್ಟೊಂದು ಕಂಠಪಾಠ ಹೊಡೆಯುವ ಅವಶ್ಯಕತೆ ಬರುತ್ತಿರಲಿಲ್ಲ. ಮತ್ತೆ ವಿಷಯವನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ವಿಷಯವೂ ಇರುತ್ತಿತ್ತು. ಒಳ್ಳೊಳ್ಳೆ ಪುಸ್ತಕಗಳೂ ಸಿಗುತ್ತಿದ್ದವು.

SSLC ವಿಷಯ ಕೇಳಬೇಡಿ. ಯಾವ ಯುದ್ಧ ಯಾವಾಗ ಶುರುವಾಯಿತು? ಯಾವ ಪುಣ್ಯಾತ್ಮ ರಾಜ ಯಾವಾಗ ಗೊಟಕ್ ಅಂದ? ಬೋಳ್ಕಾಳು (ಕರಿಮೆಣಸು) ವ್ಯಾಪಾರಕ್ಕೆ ಬಂದ ಬ್ರಿಟಿಷರು ಹೇಗೆಲ್ಲ ಬೋಳು ಕೆತ್ತಿ ನಮ್ಮ ದೇಶದ ಸಂಪತ್ತನ್ನು ಮುಂಡಾಯಿಸಿಬಿಟ್ಟರು? ಇಂತಹ ಅಸಂಬದ್ಧ ವಿಷಯಗಳಿಗೆಲ್ಲ, ಏಕ್ದಂ ಪಠ್ಯದಲ್ಲಿದಂತೇ, ಬರೆದು ಕಕ್ಕಬೇಕು. ಕರ್ಮ!

ಹೋಗಲಿ ಹೇಗೋ ಮಾಡಿ ಓದೋಣ, ಬಾಯಿಪಾಠ ಹೊಡೆಯೋಣ ಅಂದರೆ ಟೈಮ್ ಎಲ್ಲಿದೆ ಸ್ವಾಮಿ!? ಟೈಮ್! ಶಾಲೆಯಲ್ಲಿಯೇ ಸುಮಾರು ಎಂಟು ತಾಸು ಮೊಳೆ ಹೊಡೆಯುತ್ತಿದ್ದರು. ನಂತರ BSC ಅಂದರೆ Bright Students' Class ಎನ್ನುವ ಮತ್ತೊಂದು ತಾಸಿನ ಹೆಚ್ಚಿನ ಸ್ಕ್ರೂ ಮೊಳೆ, ಅದೂ ದೊಡ್ಡ ಸೈಜಿನದು. ಯಾವ ದಿಕ್ಕಿನಿಂದ ನೋಡಿದರೂ ಆ ಕ್ಲಾಸಿನಿಂದ ಹೊರಬಂದವರಾರೂ ಬ್ರೈಟ್ ಆಗಿ ಕಾಣುತ್ತಿದ್ದಿಲ್ಲ. ಮುಸ್ಸಂಜೆ ಬೆಳಕಿನಲ್ಲಿ, ಕೆಟ್ಟ ಹಸಿವಿನಿಂದ ರಕ್ತದಲ್ಲಿ ಶುಗರ್ ಕಮ್ಮಿಯಾಗಿ ಜೋಲಿ ಹೊಡೆಯುತ್ತಿರುವ ಡಿಮ್ ಹೊಡೆದ ಮಂಗ್ಯಾಗಳಂತೆ ಕಾಣುತ್ತಿದ್ದರು. ನನ್ನ ಪರಿಸ್ಥಿತಿಯಂತೂ ಹಾಗೇ ಇರುತ್ತಿತ್ತು.

ಮುಂಜಾನೆ ಹತ್ತೂವರೇ ಹನ್ನೊಂದರ ಹೊತ್ತಿಗೆ ಶಾಲೆಗೆ ಹೋದರೆ ಸಂಜೆ ಮನೆಗೆ ಬರುವ ತನಕ ಸಂಜೆ ಏಳು ಘಂಟೆ ಮೇಲೆ. ಬಂದು ತಿಂಡಿ ತೀರ್ಥ ಮಾಡಿದ ಮರುಕ್ಷಣವೇ ಕಣ್ಣೆಳೆಯುತ್ತಿದ್ದವು. ನಿದ್ದೆ ಒತ್ತರಿಸಿ ಬರುತ್ತಿತ್ತು. ಹೇಗೋ ಮಾಡಿ ಊಟದ ತನಕ ಎಳೆಯುತ್ತಿದ್ದೆ. ರೇಡಿಯೋ "ವಿವಿಧ ಭಾರತಿ"ಯಲ್ಲಿ ಕನ್ನಡದ ಹಾಡುಗಳು ಬರುತ್ತಿದ್ದವಲ್ಲ. ಸಣ್ಣಗೆ ಹಚ್ಚಿಕೊಂಡು ಅಥವಾ earphone ಕಿವಿಯಲ್ಲಿ ಹೆಟ್ಟಿಕೊಂಡು ಅಂದಿನ homework ಮಾಡಲು ಪ್ರಯತ್ನಿಸುತ್ತಿದ್ದೆ. ಮತ್ತೇ ಅವೇ ಬೋರಿಂಗ್ ವಿಷಯಗಳು. Nylon ಹೆಸರು ಹೇಗೆ ಬಂತು? ಬೆಂಜೀನ್ ಹೇಗೆ ಕಂಡುಹಿಡಿದ? ಇತ್ಯಾದಿ. Nylon ಅಂದರೆ New York London ಎಂದು ಮಾಸ್ತರ್ ಹೇಳಿದ್ದರು. ಆವಾಗ ಕೇಳಿದ್ದನ್ನು ಮತ್ತೆ ಸಂಶೋಧನೆ ಮಾಡಲು ಹೋಗಿಲ್ಲ. ಒಂದನ್ನೊಂದು ಹಿಂಬರ್ಕಿಯಲ್ಲಿ ಭೋಗಿಸುತ್ತಿದ್ದ ಹಾವುಗಳ ಕನಸನ್ನು ಕಂಡ ವಿಜ್ಞಾನಿ ಬೆಂಜೀನಿನ (Benzene) ರಚನೆ ಕಂಡುಹಿಡಿದಿದ್ದನಂತೆ. ಅಷ್ಟು ಖರಾಬಾಗಿ ಮಾಸ್ತರ್ ಹೇಳಿರಲಿಲ್ಲ. ಆದರೆ ಉಡಾಳರು ಮಾತ್ರ, 'ಆ ಹುಚ್ಚ ಸೂಳೆಮಗ ವಿಜ್ಞಾನಿಗೆ ನಾಗಪ್ಪಗಳು (ಹಾವುಗಳು) ಮು*ಳಿ ಹಡು ಕನಸು ಹ್ಯಾಂಗ ಬಿತ್ತಲೇ!?? ಹೋಗ್ಗೋ!' ಎಂದು ಕೇಕೆ ಹೊಡೆಯುತ್ತಿದ್ದುದು ಮಾತ್ರ ಇನ್ನೂ ನಿನ್ನೆ ಮೊನ್ನೆಯಂತೆ ನೆನಪಿದೆ.

ರಾತ್ರಿ ಒಂಬತ್ತರ ಸುಮಾರಿಗೆ ಊಟ ಮುಗಿಸಿ ಮತ್ತೆ ಓದಲು ಕುಳಿತರೆ ಹತ್ತು-ಹತ್ತೂವರೆ ಘಂಟೆ ಹೊತ್ತಿಗೆ ನಿದ್ದೆ ಸಿಕ್ಕಾಪಟ್ಟೆ ಬರುತ್ತಿತ್ತು. ಅದೆಷ್ಟೇ ಕಷ್ಟಪಟ್ಟರೂ ತಲೆ ಹೋಗಿ ಪುಸ್ತಕದ ಮೇಲೆ ಶಿವಾಯ ನಮಃ ಮಾದರಿಯಲ್ಲಿ ಪವಡಿಸಿಬಿಡುತ್ತಿತ್ತು. ಅದರಲ್ಲೇ ಚಿಕ್ಕ ಕನಸು ಬೇರೆ. ಅದರಲ್ಲಿ ಮತ್ತೆ ಹಿಂಬರ್ಕಿ ಹಾವುಗಳು ಕಂಡು ಬಂದಾಗಲೇ ಬೆಚ್ಚಿಬಿದ್ದು ಎದ್ದು ಕೂತು ಓದು ಮುಂದುವರೆಸಬೇಕು. ಹೀಗೆ ನಡೆಯುತ್ತಿತ್ತು ರಾತ್ರಿ ಓದು.

ಚಹಾ, ಕಾಫಿ ಟ್ರೈ ಮಾಡಿ ನೋಡಿಯಾಯಿತು. ನಿದ್ರಾದೇವಿ ಮತ್ತೂ ಚೆನ್ನಾಗಿ ಆವರಿಸಿಕೊಂಡಳು. ಮೈಯೆಲ್ಲಾ ಹಗುರಾಗಿ ಮತ್ತೂ ಒಳ್ಳೆ ನಿದ್ದೆ ಬರುತ್ತಿತ್ತು.

ನಮ್ಮ ಊರ ಕಡೆ ಯಾರೋ ಹೇಳಿದರು, 'ಜರ್ದಾ ಪಾನ್ ಹಾಕಿದರೆ ನಿದ್ರೆ ಬರುವುದಿಲ್ಲ...' ಎಂದು. ನಮ್ಮ ಊರ ಕಡೆ ರಾತ್ರಿಯೆಲ್ಲ ಯಕ್ಷಗಾನ ನಡೆಯುತ್ತದೆ ನೋಡಿ. ಅಲ್ಲಿ ಎಲ್ಲರೂ ಜರ್ದಾ ತಂಬಾಕಿನ ಕವಳ (ಎಲೆಯಡಿಕೆ) ಜಡಿದುಕೊಂಡೇ ಯಕ್ಷಗಾನ ನೋಡುತ್ತಾರೆ. ಪಾತ್ರಧಾರಿಗಳೂ ಕೂಡ ಕವಳ ಜಗಿಯುತ್ತಲೇ ಇರುತ್ತಾರೆ. ರಂಗದ ಮೇಲೆ ಬರುವ ಮೊದಲು ಬಣ್ಣದ ಚೌಕಿ (greenroom) ಮೂಲೆಯಲ್ಲೋ ಕವಳದ ಪಿಚಕಾರಿ ಹಾರಿಸಿ ಬಂದಿರುತ್ತಾರೆ. ರಂಗ ಬಿಟ್ಟು ಇಳಿದುಹೋದವರೇ ಮತ್ತೆ ಚಹಾ ಕುಡಿದು ಕವಳ ಹಾಕುತ್ತಾರೆ. ಮುಂದಿನ ದೃಶ್ಯಕ್ಕೆ ತಯಾರಾಗುತ್ತಾರೆ.

ಸರಿ ಜರ್ದಾ ಕೂಡ ಟ್ರೈ ಮಾಡಿನೋಡಿದ್ದಾಯಿತು. ಪುರಾತನ ದೋಸ್ತ್ ಪಠಾಣನ ಚುಟ್ಟಾ ಅಂಗಡಿಯಿಂದ ಕೊಂಚವೇ ಜರ್ದಾ ತಂದಿಟ್ಟುಕೊಂಡೆ. ರಾತ್ರಿ ಹತ್ತರ ಹೊತ್ತಿಗೆ ಎಲೆಯಡಿಕೆ ಮಾಡಿಕೊಂಡು ಕೊಂಚ ಜರ್ದಾ ಮಿಕ್ಸ್ ಮಾಡಿಕೊಂಡು ಹಾಕಿನೋಡಿದೆ. ಅಷ್ಟೇನೂ ಮಜಾ ಬರಲಿಲ್ಲ. ಇನ್ನೂ ಜರ್ದಾಕ್ಕೆ ಅಂಟಿಕೊಳ್ಳುವ ವಯಸ್ಸಾಗಿರಲಿಲ್ಲ ಅದು ಅನ್ನಿಸುತ್ತದೆ. ರುಚಿ ತಕ್ಕಮಟ್ಟಿಗೆ ಬಂದರೂ ಕವಳವನ್ನು ಕಚಾಪಚಾ ಎಂದು ಅಗಿಯುತ್ತ ಓದಲಾಗುತ್ತಿರಲಿಲ್ಲ. ಅದರಲ್ಲೂ ಆಸಕ್ತಿಯಿಲ್ಲದ ವಿಷಯಗಳನ್ನಂತೂ ರಾತ್ರಿ ಓದಲೇ ಆಗುತ್ತಿರಲಿಲ್ಲ. ಗಣಿತವನ್ನು ಎಷ್ಟಂತ ಓದೋಣ, ಎಷ್ಟಂತ ಅವೇ ಸಮಸ್ಯೆಗಳನ್ನು ಮತ್ತೆ ಮತ್ತೆ ಬಿಡಿಸೋಣ?

ಏನೇ ಮಾಡಿದರೂ ರಾತ್ರಿ ಹನ್ನೊಂದರ ಮೇಲೆ ನಿದ್ದೆ ತಡೆದುಕೊಳ್ಳುವುದು ಸಾಧ್ಯವೇ ಆಗುತ್ತಿರಲಿಲ್ಲ. ಕೆಲವರು ಅಂದರು, 'ಶಾಲೆಯಿಂದ ಬಂದ ತಕ್ಷಣ ನಿದ್ದೆ ಮಾಡಿಬಿಡು. ರಾತ್ರೆ ಎಷ್ಟೋ ಹೊತ್ತಿಗೆ ಎಚ್ಚರವಾಗುತ್ತದೆ. ಆವಾಗ ಎದ್ದು ಬೆಳಗಿನ ತನಕ ಓದಬಹುದು. ಬೆಳಿಗ್ಗೆ ಒಂದು ಸಣ್ಣ ನಿದ್ದೆ ತೆಗೆದರೆ ಸಾಕು.'

ಸರಿ. ಅದನ್ನೂ ಮಾಡಿ ನೋಡಿಯಾಯಿತು. ಅದೂ ಸರಿಯಾಗಲಿಲ್ಲ. ಸಂಜೆ ಏಳಕ್ಕೆ ಮಲಗಿ, ರಾತ್ರಿ ಊಟವಿಲ್ಲದೆ ಹನ್ನೆರೆಡು ಒಂದು ಘಂಟೆಗೆ ಎಚ್ಚರವಾದಾಗ ಎದ್ದು ಬಂದು ಅಡಿಗೆಮನೆಯಲ್ಲಿ ಧಡಂ ಧುಡುಂ ಮಾಡಿ, ಕೈಗೆ ಸಿಕ್ಕಿದ್ದನ್ನು ಮುಕ್ಕಿ ನಂತರ ಓದಬೇಕು. ಯಾರಿಗೆ ಬೇಕ್ರಿ ಆ ಕರ್ಮ? ಮನೆ ಮಂದಿ ಜೊತೆ ಊಟ ಮಾಡಿದರೆ ರುಚಿಯೋ ಪಚಿಯೋ, at least, ಬಿಸಿಬಿಸಿಯಾಗಿಯಾದರೂ ಸಿಗುತ್ತಿತ್ತು. ಬಿಸಿ ಬಿಸಿ ಫುಡ್ ಮಾರಾಯರೇ! ಕಡತ ಅಲ್ಲ! ಬಿಸಿ ಬಿಸಿ ಕಡತ ಕೊಡುವ ಕಾಲ ಎಲ್ಲ ಮುಗಿದಿತ್ತು. ಆಗಲೇ ಆರಡಿ ಎಂಬತ್ತು ಕೇಜಿ ಇದ್ದ ದೈತ್ಯನನ್ನು ತಡವಿಕೊಳ್ಳುವ ಉಪದ್ವಾಪಿತನ ಯಾರೂ ಮಾಡುತ್ತಿರಲಿಲ್ಲ. ಅದೇ ದೊಡ್ಡ ಪುಣ್ಯ!

ಒಟ್ಟಿನಲ್ಲಿ ರಾತ್ರಿಯೆಲ್ಲ ಓದಬೇಕು ಎನ್ನುವ ಇಚ್ಛೆ ಫೇಲ್ ಆಗಿತ್ತು. ಅಷ್ಟೆಲ್ಲ ಓದುವುದು ಏನಿರುತ್ತಿತ್ತೋ ಎಂದುಕೊಂಡರೆ ಅದೂ ಸರಿಯೇ. ನಿಜವಾಗಿ ಏನೂ ಇರುತ್ತಿರಲಿಲ್ಲ. ಆದರೆ ಓದಿದ್ದೆಲ್ಲ ನೆನಪಿರಬೇಕಲ್ಲ. ನನಗೆ ಪಠ್ಯವನ್ನು ಬಿಟ್ಟು ಬೇರೆಲ್ಲಾ ವಿಷಯ ಸಕತ್ತಾಗಿ ನೆನಪಿರುತ್ತಿತ್ತು. ಹಾಗಾಗಿ ಪಠ್ಯವನ್ನು ಮತ್ತೆ ಮತ್ತೆ ಓದಿದ್ದನ್ನೇ ಓದಬೇಕು. ಮತ್ತೆ ಮತ್ತೆ ಅದನ್ನೇ ಬರೆದು ಬರೆದು ತೆಗೆಯಬೇಕು. ಮೆದುಳಿನಲ್ಲಿ ಜಾಗ ಇಲ್ಲದಿದ್ದರೂ ಹೇಗೋ ಮಾಡಿ ಮುಂಬೈನ ಧಾರಾವಿ ಕೊಳಗೇರಿಯಲ್ಲಿ ಮತ್ತೊಂದು ಜೋಪಡಿಯನ್ನು ಫಿಟ್ ಮಾಡಿದಂತೆ ಪಠ್ಯದ ಮಾಹಿತಿಯನ್ನೂ ಫಿಟ್ ಮಾಡಬೇಕು. SSLC ಕರ್ಮಕಾಂಡ.

ಬೆಳಿಗ್ಗೆ ಬೇಗ ಎದ್ದು ಓದೋಣ ಅಂದರೆ ತುಂಬಾ ಬೇಗನೆ ಏಳಬೇಕು. ಅದನ್ನೂ ಮಾಡಿಯಾಯಿತು. ನಾಲ್ಕಕ್ಕೆ ಐದಕ್ಕೆ ಎಲ್ಲ ಎದ್ದು ನೋಡಿಯಾಯಿತು. ಸೊಳ್ಳೆ ಕಾಟ. ಅವನ್ನು ಓಡಿಸಲು ಹಚ್ಚಿದ ಖಚುವಾ ಚಾಪ್ ಸೊಳ್ಳೆಬತ್ತಿಯ ಘಾಟು. ಅದನ್ನೆಲ್ಲ ಕೇರೇ ಮಾಡದ ಧಾರವಾಡದ ಗುಂಗಾಡುಗಳು. ಕ್ಷಣಕ್ಕೊಮ್ಮೆ ಫಟ್ ಫಟ್ ಅಂತ ಸೊಳ್ಳೆ ಹೊಡೆಯುತ್ತ, ಸಾಯುವಾಗ ಅವು ಕಾರಿಕೊಳ್ಳುತ್ತಿದ್ದ  ರಕ್ತವನ್ನು ಕಂಡು ವಾಕರಿಕೆ ಬಂದು, ಅದರ ವಾಸನೆಯನ್ನು 'ಆಸ್ವಾದಿಸಿ' ಹೇಸಿಗೆ ಪಟ್ಟುಕೊಳ್ಳುತ್ತ ಓದುವಷ್ಟರಲ್ಲಿ ಅತ್ಲಾಗೆ ನಿದ್ದೆಯೂ ಇಲ್ಲ, ಇತ್ಲಾಗೆ ಓದೂ ಇಲ್ಲ. ಆರು ಘಂಟೆ ನಂತರ ಎದ್ದರೆ ಸೊಳ್ಳೆಗಳು ಗಾಯಬ್ ಆಗಿರುತ್ತಿದ್ದವು. ಆದರೆ ಬೆಳಗಿನ ಮತ್ತದೇ ನಾಷ್ಟಾ, ಸ್ನಾನ, ಸಂಧ್ಯಾವಂದನೆ (ನೆನಪಾದಾಗ ಅಥವಾ ಬ್ರಾಹ್ಮಣ್ಯ ಅಮ್ಮನ ತಲೆಗೇರಿ ಅಮ್ಮ ಬಾಯ್ಬಾಯಿ ಬಡಿದುಕೊಂಡಾಗ ಅಥವಾ ಜನಿವಾರ ಹರಿದುಹೋದಾಗ ಮಾತ್ರ) .... ಇವುಗಳಲ್ಲಿಯೇ ಟೈಮ್ ಹೋಗುತ್ತಿತ್ತು. ಹತ್ತೂವರೆ ಆಗಿಬಿಡುತ್ತಿತ್ತು. ಮತ್ತೆ ಶಾಲೆಗೆ ಹೋಗು. ಮತ್ತದೇ ಮೊಳೆ. ಮತ್ತದೇ ದೊಡ್ಡ ಮೊಳೆ.

ಹೀಗೆ ನಿದ್ದೆಯ ಕಾರಣದಿಂದ ಜೀವನವೇ ಬೇಸರವಾಗಿಬಿಟ್ಟಾಗ ನಿದ್ದೆ ಬರದಿರುವಂತೆ ಮಾಡುವ ಗುಳಿಗೆ ಇರುತ್ತದೆ ಮತ್ತೆ ಧಾರವಾಡದಲ್ಲೂ ಸಿಗುತ್ತದೆ ಎನ್ನುವ ವಿಷಯ ತಿಳಿದು ಹೊಸದೊಂದು ಆಶಾಕಿರಣ ಮೂಡಿತ್ತು. ಎಲ್ಲ ಮಾಡಿ ಮುಗಿಸಿದ್ದಾಗಿದೆ. ಇದನ್ನೂ ಮಾಡಿನೋಡಬೇಕು ಎಂದುಕೊಂಡೆ.

ಸಹಪಾಠಿಯೊಬ್ಬನ ಅಪ್ಪ ತಂದುಕೊಟ್ಟಿದ್ದ ಎಂದು ಕೇಳಿದ್ದೆ. ಬಹಳ ಜನ ಮಿತ್ರರೂ ಆ ಸುದ್ದಿ ಕೇಳಿರಬಹುದು. ಆದರೆ ಯಾರೂ ಆ ಆಸಾಮಿ ಬಳಿ ಹೋಗಿ, 'ನಿಮ್ಮ ಅಪ್ಪಾರು  ಅದೇನೋ ನಿದ್ದಿ ಬಾರದಂತಹ ಗುಳಿಗಿ ತಂದುಕೊಟ್ಟಾರಂತಲ್ಲಲೇ. ಹೌದೇನು? ಯಾವ ಗುಳಿಗಿ? ಸ್ವಲ್ಪ ಮಾಹಿತಿ ಕೊಡಲ್ಲಾ,' ಎಂದು ಕೇಳಿದ್ದು ಸುಳ್ಳು. ಅಂತಹ ಅಸಡ್ಡಾಳ manners ಇಲ್ಲದ ಮಿತ್ರತ್ವ ಯಾರ ಮಧ್ಯೆಯೂ ಇರಲಿಕ್ಕಿಲ್ಲ ಅಂತ ನನ್ನ ಭಾವನೆ. ಮಾತ್ರೆ ಗುಳಿಗೆ ಎಲ್ಲ ವೈದ್ಯ ಮತ್ತು ರೋಗಿ ನಡುವಿನ ಖಾಸಗಿ ವಿಷಯ.

ಸಹಪಾಠಿಯ ಬಳಿ ಅಂತಹ ವಿಷಯ ಕೇಳಲು ಸಾಧ್ಯವಿರಲಿಲ್ಲ. ಕೇಳಿ ಅವನಿಗೆ awkward ಅನ್ನಿಸಿದರೇ? ಅವನು ಫೀಲ್ ಮಾಡಿಕೊಂಡರೇ? ಅವನಿಗೆ ಬೇಜಾರಾದರೇ? ಹಾಗೆಂದು ಅನ್ನಿಸಿತ್ತು. ಒಮ್ಮೊಮ್ಮೆ ಏನೋ ಪ್ರಶ್ನೆ ಕೇಳಿಬಿಡುತ್ತೇವೆ. reply ಬರುವುದಿಲ್ಲ. reaction ಬರುತ್ತದೆ. ಗೆಳೆತನ ಢಂ ಅಂದುಬಿಟ್ಟರೂ ಆಶ್ಚರ್ಯವಿಲ್ಲ. ಯಾವನಿಗೆ ಬೇಕು ಅದೆಲ್ಲ ಲಫಡಾ!

ಆದರೂ ಆ ನಿದ್ದೆ ಬಾರದಂತೆ ಮಾಡುವ ಮಾತ್ರೆ ಬಗ್ಗೆ ಭಯಂಕರ ಕುತೂಹಲವಂತೂ ಇತ್ತು. ಅಂತಹ ಮಾತ್ರೆ ತೆಗೆದುಕೊಳ್ಳುತ್ತಾನೆ ಎಂದು ಆಪಾದಿಸಿಪಟ್ಟಿದ್ದ ಆ ಸಹಪಾಠಿಯನ್ನು ಗಮನಿಸಿದೆ. ಆತನ ವರ್ತನೆಯಲ್ಲಂತೂ ಏನೂ ದೊಡ್ಡ ಬದಲಾವಣೆ ಕಂಡುಬರಲಿಲ್ಲ. ಭಟ್ಟರ ಶಾಲೆಯ ನೂರಾರು ಹಾಪ್ ವಿದ್ಯಾರ್ಥಿಗಳಲ್ಲಿ ಅವನೂ ಒಬ್ಬ. ಶುದ್ಧ ಯಬಡನ ಹಾಗಿದ್ದ. ಮಾತ್ರೆ ತೆಗೆದುಕೊಂಡಾದ ಮೇಲೂ ಹಾಗೇ ಕಂಡ.

ತಂದೆಯವರ ಜೊತೆ ನಾನು ತುಂಬಾ ಫ್ರೀ. ಅವರೂ ಹಾಗೇ. ಅವರ ಜೊತೆ ಸಾಕಷ್ಟು ಮಾತು ಕತೆ ಎಲ್ಲ ನಡೆಯುತ್ತಿತ್ತು. ಅವರ ಹತ್ತಿರವೇ ಕೇಳಿದೆ. ಹೀಗೆ, ಅದೇನೋ ನಿದ್ದೆ ಬರದಿರುವ ಮಾತ್ರೆ ಇದೆಯಂತೆ. ನಿಮಗೆ ಗೊತ್ತೇ?

'ಹೌದು. ಅದು ನಮ್ಮ ಕಾಲದಲ್ಲೂ ಇತ್ತು. ಆವಾಗಲೇ ಅದನ್ನು ಬ್ಯಾನ್ ಮಾಡಿದ್ದರು ಅಂತ ನೆನಪು. ಅದನ್ನು ತೆಗೆದುಕೊಂಡರೆ ನಿದ್ದೆಯೇನೋ ತಾತ್ಕಾಲಿಕವಾಗಿ ದೂರವಾಗುತ್ತಿತ್ತು. ಆದರೆ ಅಧ್ಯಯನ ಮಾಡಲು ಬೇಕಾಗುವಂತಹ ಏಕಾಗ್ರತೆ ಮಾತ್ರ ಬರುತ್ತಿರಲಿಲ್ಲ. ಎಷ್ಟೋ ದಿನಗಳ ಕಾಲ ಒಂದು ರೀತಿಯ ಅಸಹಜ ಅನ್ನಿಸುತ್ತಿತ್ತು. ಒಮ್ಮೆ ತೆಗೆದುಕೊಂಡವರಾರೂ ಮತ್ತೊಮ್ಮೆ ತೆಗೆದುಕೊಂಡಿದ್ದು ಸುಳ್ಳು. ಗಂಭೀರವಾಗಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಗೊತ್ತಾಗಿಬಿಡುತ್ತಿತ್ತು ಇದು ಉಪಯೋಗವಿಲ್ಲದ ಮಾತ್ರೆ. ಉಪಯೋಗಕ್ಕಿಂತ ತೊಂದರೆಯೇ ಜಾಸ್ತಿಯೆಂದು. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡ. ಸೂರ್ಯೋದಯದಿಂದ ಸೂರ್ಯಾಸ್ತದ ಒಳಗಿನ ಅವಧಿ ಬೇಕಾದಷ್ಟಿದೆ. ಬೆಳಿಗ್ಗೆ ಆರರಿಂದ ರಾತ್ರಿ ಹತ್ತರ ನಡುವೆ ಎಷ್ಟಾಗುತ್ತದೋ ಅಷ್ಟು ಕೆಲಸವನ್ನು, ಯೋಜನಾಬದ್ಧವಾಗಿ, ಮಾಡಿಕೊಳ್ಳಬೇಕು. ಪ್ಲಾನಿಂಗ್ ಮುಖ್ಯ. ಏಕಾಗ್ರತೆ ಮುಖ್ಯ,' ಅಂದರು ತಂದೆಯವರು. ಅವರು ಹಾಗೆಯೇ ಇದ್ದರು. ಬೆಳಿಗ್ಗೆ ಸೂಯೋದಯಕ್ಕೆ ಮೊದಲೇ ಎದ್ದಿರುತ್ತಿದ್ದರು. ಸೂರ್ಯಾಸ್ತದ ನಂತರ ವಿನಾಕಾರಣ ಎಲ್ಲೂ ಹೋಗುತ್ತಿರಲಿಲ್ಲ. ತುಂಬಾ ಶಿಸ್ತಿನ ಜೀವನಶೈಲಿ ಅವರದ್ದು.

ಹೆಚ್ಚಿನ ವಿಷಯ ಗೊತ್ತಾಯಿತು. ತಂದೆಯವರ ಕಾಲದಲ್ಲೇ ಬ್ಯಾನ್ ಮಾಡಲಾಗಿದ್ದ ಮಾತ್ರೆಯಾಗಿದ್ದರೆ ಈಗ ಸಿಗುವ ಚಾನ್ಸ್ ಕಮ್ಮಿ. ಆದರೂ ಸಿಕ್ಕಾಪಟ್ಟೆ curiosity. ಒಮ್ಮೆ ಟ್ರೈ ಮಾಡಿ ನೋಡೇಬಿಡಬೇಕು. ಯಾರಿಗೆ ಗೊತ್ತು ನಮ್ಮ ದೇಹಪ್ರಕೃತಿಗೆ ಒಗ್ಗಿದರೂ ಒಗ್ಗೀತು. ಮಾತ್ರೆ ಸಿಕ್ಕು, ಒಗ್ಗಿಬಿಟ್ಟರೆ ರಾತ್ರಿಯೆಲ್ಲ ವಿದ್ಯಾಯಜ್ಞ ಮಾಡಿಬಿಡಬಹುದು. ವಿದ್ಯಾರ್ಜನೆಯನ್ನು ತಪಸ್ಸಿನಂತೆ ಮಾಡಬೇಕಂತೆ. ತಪಸ್ಸು ಮಾಡುವವರಿಗೆ ರಾತ್ರಿಯಾದರೇನು, ಹಗಲಾದರೇನು? ಅಲ್ಲವೇ?

ಆ ಕಾಲದಲ್ಲಿ ನಮಗೆ ಗೊತ್ತಿದ್ದ ಮೆಡಿಕಲ್ ಅಂಗಡಿಗಳೆಂದರೆ ಮಾಳಮಡ್ಡಿಯಲ್ಲಿದ್ದ 'ಸುಯೇಶ್ ಮೆಡಿಕಲ್ಸ್' ಮತ್ತು ಪೇಟೆಯಲ್ಲಿದ್ದ 'ಕರ್ನಾಟಕ ಫಾರ್ಮಸಿ' ಮತ್ತು 'ಹೆಗಡೆ ಮೆಡಿಕಲ್ಸ್'. ಪೇಟೆ ದೂರ. ಮಾಳಮಡ್ಡಿ ಹತ್ತಿರ.

ಒಂದು ದಿನ ಸಂಜೆ ಮಾಳಮಡ್ಡಿ ಕಡೆ ಹೋದೆ. ಸುಯೇಶ್ ಮೆಡಿಕಲ್ಸ್ ಮೆಟ್ಟಿಲು ಹತ್ತಿದೆ. ನಾಡಕರ್ಣಿ ಬಾಯಿ ಕಂಡರು. ಅವರಿಗೆ ನನ್ನ ಪರಿಚಯ ಸಿಕ್ಕಿರಲಿಕ್ಕಿಲ್ಲ ಎಂದುಕೊಂಡೆ. ಕುಟುಂಬಸ್ನೇಹಿತರೇ ಆದರೂ ಸಣ್ಣವರಿದ್ದಾಗ ನೋಡಿರಬಹುದು ಅಷ್ಟೇ. ಅವರನ್ನು ಮಾತ್ರ ನಾವು ನೋಡಿಕೊಂಡೇ ಬೆಳೆದವರು.

ಔಷಧಿ ಅಂಗಡಿ ನಾಡಕರ್ಣಿ ಬಾಯಿ 'ಏನು? prescription ಎಲ್ಲಿ? ಕೊಡಿ,' ಎನ್ನುವಂತೆ ತಲೆ ಕುಣಿಸಿದರು.

ಏನು ಹೇಳಬೇಕು? What a difficult situation! ಮಾತ್ರೆ ಹೆಸರೇ ಗೊತ್ತಿಲ್ಲ. prescription ಎಲ್ಲಿಂದ ತರೋಣ?

'ಅದು...ಅದು.... ಅದೇನೋ ನಿದ್ದಿ ಬರದಿರುವಂತಹ ಗುಳಿಗಿ ಇರ್ತದಂತಲ್ಲರೀ. ಅದು ಅದರೀ???' ಅನ್ನುವಷ್ಟರಲ್ಲಿ ಸಾಕಾಗಿ ಹೋಗಿತ್ತು. ದೇಹ ಎಂಬುದು ಎಲ್ಲೆಲ್ಲೋ ಹೇಗೇಗೋ ಬೆಂಡಾಗಿ ಹೋಗಿತ್ತು. Sheer embarrassment ಅಂದರೆ ಏನು ಅಂತ ಗೊತ್ತಾಗಿತ್ತು.

ನಾಡಕರ್ಣಿ ಬಾಯಿಗೆ ಏನು ಕೇಳುತ್ತಿದ್ದೇನೆ ಎಂದು ಮೊದಮೊದಲು ಅರ್ಥವಾಗಲೇ ಇಲ್ಲ. ಅಥವಾ ಮಜಾ ತೆಗೆದುಕೊಳ್ಳೋಣ ಅಂತ ಬೇಕಂತಲೇ ಮತ್ತೆ ಮತ್ತೆ 'ಏನು?? ಏನು??' ಎಂದು ಕೊಂಕಣಿ accent ಕನ್ನಡದಲ್ಲಿ ಉಲಿದರೋ ಗೊತ್ತಿಲ್ಲ.

ಅಕ್ಕಪಕ್ಕದಲ್ಲಿ ಜನರಿದ್ದಾರೆ. ಈ ಮೇಡಂ ಬೇರೆ ಮತ್ತೆ ಮತ್ತೆ ಕೇಳುತ್ತಿದ್ದಾರೆ. ನನಗೋ ಏನು ಕೇಳಬೇಕೆಂಬುದೇ ಗೊತ್ತಿಲ್ಲ. ಕರ್ಮ ಮಾರಾಯರೇ!

ಹೇಗೋ ಮಾಡಿ ಮತ್ತೆ ಹೇಳಿದೆ. ಒಂದು ಹಂತದ ನಂತರ ನಾಡಕರ್ಣಿ ಬಾಯಿಗೆ ಅದೆಷ್ಟು ತಿಳಿಯಿತೋ ಬಿಟ್ಟಿತೋ ನನಗೆ ಗೊತ್ತಿಲ್ಲ. ಈ ಅಡ್ನಾಡಿ ಗಿರಾಕಿಯನ್ನು ಸಾಗಹಾಕೋಣ ಅಂದುಕೊಂಡರೋ ಏನೋ ಗೊತ್ತಿಲ್ಲ. 'ಹೇ!!ಹೇ!!' ಎಂದು ಹುಚ್ಚಪ್ಯಾಕಡೂ ನಗೆ ನಕ್ಕು, 'ನಮ್ಮ ಕಡೆ ಅವೆಲ್ಲಾ ಇಲ್ಲ!!ಹೀ!!ಹೀ!!' ಎಂದು ನಕ್ಕರು.

ಅವರಲ್ಲಿ pharmacist ಎಂದು ಕೆಲಸ ಮಾಡಿಕೊಂಡಿದ್ದ ಹೊಂಬಳ ಆಚಾರರ ಕಡೆ ನೋಡಿದರು. ಅವರಿಬ್ಬರೂ ಖುಲ್ಲಾ ಮಾತಾಡಲಿಲ್ಲ ಆದರೂ ಏನೋ ಮಾತಾಡಿಕೊಂಡು ನನ್ನ ಮೇಲೆ ತಮಾಷೆ ಮಾಡಿಕೊಂಡು ನಕ್ಕಂತೆ ನನಗೆ ಅನ್ನಿಸಿತು. ಎಷ್ಟು ನಿಜವೋ ಸುಳ್ಳೋ. ಹೊಂಬಳ ಆಚಾರರೂ ಪರಿಚಯದವರೇ. ಅವರಿಗೂ ನನ್ನ ಗುರುತು ಸಿಕ್ಕಹಾಗಿರಲಿಲ್ಲ. ಗುರುತು ಸಿಕ್ಕು ಲಫಡಾ ಆಗುವ ಮುನ್ನವೇ ಕಳಚಿಕೊಂಡೆ.

ಮಾತ್ರೆ ಮಾತ್ರ ಸಿಗಲಿಲ್ಲ. ಹೋಗಿ ಹೋಗಿ ನಾಡಕರ್ಣಿ ಬಾಯಿಗೆ ಪುಕ್ಕಟೆಯಾಗಿ ತಮಾಷೆ ಮಾಡಿಕೊಂಡು ನಗಲು ಅವಕಾಶಮಾಡಿಕೊಟ್ಟು ಬಂದೆನಲ್ಲಾ ಎಂದು ಬೇಸರವಾಯಿತು. ರಾತ್ರಿ ಮನೆಗೆ ಹೋದ ನಾಡಕರ್ಣಿ ಬಾಯಿ ಕಿಟ್ಟೆಲ್ ಕಾಲೇಜಿನಲ್ಲಿ ಮಾಸ್ತರಿಕೆ ಮಾಡಿಕೊಂಡಿದ್ದ ಅವರ ಗಂಡನ ಎದುರು ಅದೆಷ್ಟು ತಮಾಷೆ ಮಾಡಿಕೊಂಡು ನಕ್ಕಿರಬಹುದು ಎಂದು ಊಹಿಸಿಕೊಂಡರೆ ಕೆಟ್ಟ ಮುಜುಗರ embarrassment. ಶಾಲೆ ಹತ್ತಿರವೇ ಇದ್ದ ಮೆಡಿಕಲ್ ಶಾಪ್. ಇಂತಹ ಯಬಡ ವಿದ್ಯಾರ್ಥಿಗಳು ಅದೆಷ್ಟು ಜನ ಇಂತಹ ಚಿತ್ರವಿಚಿತ್ರ ಮಾತ್ರೆ ಮಣ್ಣು ಮಸಿ ಕೇಳಿಕೊಂಡು ಬರುತ್ತಿದ್ದರೋ? ನಾಡಕರ್ಣಿ ಬಾಯಿಗೆ ಉಚಿತವಾಗಿ ಮನರಂಜನೆ ಕೊಟ್ಟು ಹೋಗುತ್ತಿದ್ದರೋ?

ಒಟ್ಟಿನಲ್ಲಿ ನಿದ್ದೆಯನ್ನು ದೂರಮಾಡುವಂತಹ ಗುಳಿಗೆ ಎಲ್ಲೂ ಸಿಗಲಿಲ್ಲ. ಸಹಪಾಠಿಯನ್ನು ಕೇಳುವ ಧೈರ್ಯವಾಗಲಿಲ್ಲ. ಧೈರ್ಯಕ್ಕಿಂತ ಆ ತರಹದ ಸಲಿಗೆ ಯಾರ ಜೊತೆಗೂ ಬಂದಿಲ್ಲ. ಎಂತಹ ಆಪ್ತ ಮಿತ್ರರೇ ಇರಲಿ ಕೆಲವೊಂದು ವಿಷಯಗಳನ್ನು ಕೇಳಲು ಸಾಧ್ಯವಿಲ್ಲ. ಕೇಳಲೂಬಾರದು. ಹಾಗಂತ ನನ್ನ ಭಾವನೆ. ಅಂತಹ ಇತಿಮಿತಿಗಳನ್ನು ಹಾಕಿಕೊಂಡಾಗ ಮಾತ್ರ ಗೆಳೆತನಗಳು ಬಾಳುತ್ತವೆ. ಕೆಲವು ಜನರನ್ನು ನೋಡಿದ್ದೇನೆ. ಕೊಂಚ ಸಲಿಗೆ ಕೊಟ್ಟರೆ ಸಾಕು ತಲೆ ಮೇಲೆ ಹತ್ತಿ ಕೂಡುತ್ತಾರೆ. ಏನೇನೋ ಕೇಳುತ್ತಾರೆ. ಏನು ಮಾತಾಡುತ್ತಿದ್ದಾರೆ, ಅದರ ಪ್ರಭಾವವೇನಾಗುತ್ತದೆ ಎನ್ನುವ ಖಬರೇ ಇರುವುದಿಲ್ಲ. ಅಂತಹ ಜನರಿಗೆ ಗೆಳೆತನದ ಬಗ್ಗೆ ನೈಜ ಕಾಳಜಿಯೂ ಇರುವುದಿಲ್ಲ. ಬಂದರೆ ಬೆಟ್ಟ ಹೋದರೆ ಜುಟ್ಟ ಮಾದರಿಯಲ್ಲಿ ಅವರ ವರ್ತನೆ. ಅಂತವರನ್ನು ನಿಮ್ಮ ಆಪ್ತವಲಯದಿಂದ ಒದ್ದು ಹೊರಗಾಕಿ. ನಾನಂತೂ ಮುಲಾಜಿಲ್ಲದೆ ಹೇಳಿಬಿಡುತ್ತೇನೆ. ಇಂತಹ ವರ್ತನೆ ಅಸಹ್ಯ. Unacceptable. ತಿದ್ದಿಕೊಂಡು ಇರುವುದಾದರೆ ಇರು. ಇಲ್ಲ ರೈಟ್ ಹೇಳ್ತಾ ಇರು. ನಿಮ್ಮಂತಹ ಮಿತ್ರರು ಬೇಕಿಲ್ಲ.

ಇಷ್ಟೆಲ್ಲಾ ಆದರೂ, ಈಗ ವಿಚಾರ ಮಾಡಿದರೆ, ಆ ಸಹಪಾಠಿ ನಿದ್ದೆ ಬಾರದಿರುವಂತಹ ಮಾತ್ರೆ ತೆಗೆದುಕೊಂಡಿದ್ದನೇ ಎಂಬುದಕ್ಕೆ ಖಚಿತ ಉತ್ತರವಿಲ್ಲ. ಹಾಗಂತ ಸುದ್ದಿ ಹೇಳಿದ್ದ ಮಿತ್ರ ಕೊಂಚ ಮಸಾಲೆ ಹಾಕಿ, ಅದೂ ಜಾಸ್ತಿಯೇ ಮಸಾಲೆ ಹಾಕಿ, ಸುದ್ದಿ ಹೇಳುತ್ತಿದ್ದ ಎಂದು ಆಗ ಗೊತ್ತಿರಲಿಲ್ಲ. ನಂತರ ಗೊತ್ತಾಯಿತು. ಹಾಗಾಗಿ ಆವಾಗಲೂ ಹಾಗೇ ಪಂಟು ಹೊಡೆದಿದ್ದನೇನೋ ಅಂತ ಡೌಟ್. ಕೇಳುವ ಹಾಗಿಲ್ಲ. ಮತ್ತದೇ ನಾವೇ ಹಾಕಿಕೊಂಡ ಲಕ್ಷ್ಮಣ ರೇಖೆ. ಅವನ ಹತ್ತಿರ 'ಲೇ, ನಿಮ್ಮಪ್ಪ ನಿನಗ ನಿದ್ದಿ ಬರದಾಂಗ ಮಾಡು ಗುಳಗಿ ತಂದುಕೊಟ್ಟಾ?' ಎಂದು ಕೇಳುವ ಹಾಗಿಲ್ಲ. ಸುದ್ದಿ ಕೊಟ್ಟವನ ಹತ್ತಿರ, 'ಲೇ, ನೀ ಖರೇ ಸುದ್ದಿ ಹೇಳಿದ್ಯೋ? ಅಥವಾ ಚೌಕ್ ಗುಳಿಗಿ ಉಳ್ಳಸ್ಲಿಕತ್ತಿಯೋ?' ಎಂದೂ ಕೇಳುವಂತಿಲ್ಲ. ನಮ್ಮ ಕಾಲದಲ್ಲಿ ಚೌಕ್ ಗುಳಿಗೆ ಉಳ್ಳಿಸುವುದು ಅಂದರೆ ರೈಲು ಬಿಡುವುದು ಅಂದರೆ ಬುರುಡೆ ಬಿಡುವ ಬುರುಡೆ ಬ್ರಹ್ಮಾಂಡ ಕೋವಿದರು ಬೇಕಾದಷ್ಟು ಜನರಿದ್ದರು. ಹಾಗಾಗಿ ಎಲ್ಲವನ್ನೂ ಸೀದಾ ನಂಬುವಂತಿಲ್ಲ.

ರಾತ್ರಿಯ ನಿದ್ದೆಗೆ ಪರಿಹಾರ ಕೊನೆಗೆ ದೊರೆಯಿತು ಅನ್ನಿ. ಇಷ್ಟವಾದ ವಿಷಯಗಳನ್ನು ಓದುತ್ತ ಕುಳಿತಾಗ ಅಥವಾ ಕಠಿಣವಾದ ಸಮಸ್ಯೆಯೊಂದನ್ನು ಹಿಡಿದು ಕುಳಿತಾಗ ವೇಳೆ ಹೋಗಿದ್ದು ಗೊತ್ತಾಗುತ್ತಲೇ ಇರುತ್ತಿರಲಿಲ್ಲ. ಎಷ್ಟೋ ಹೊತ್ತಿನ ನಂತರ ನೋಡಿದರೆ ಗಡಿಯಾರ ರಾತ್ರಿ ಎರಡು ಮೂರು ನಾಲ್ಕು ಘಂಟೆ ತೋರಿಸಿದ್ದೂ ಇದೆ. ಇಡೀ ರಾತ್ರಿ ಪ್ರಾಜೆಕ್ಟ್ ರಿಪೋರ್ಟ್, ಪೇಪರ್ ಬರೆದು ಮುಗಿಸಿ, ಮರುದಿವಸ ಕೆಲಸವನ್ನೂ ಮಾಡಿ, ಸಂಜೆ ಕ್ಲಾಸಿಗೂ ಹೋಗಿ, ಬಾಕಿ ಉಳಿದ ನಿದ್ದೆಯ ಸ್ಟಾಕನ್ನು ವಾರಾಂತ್ಯದಲ್ಲಿ ದಿನಪೂರ್ತಿ ನಿದ್ದೆ ಹೊಡೆದು ಪರಿಹಾರ ಮಾಡಿಕೊಂಡಿದ್ದೂ ಇದೆ. ಎಲ್ಲ ನಿಮ್ಮ ನಿಮ್ಮ ಇಷ್ಟದ ಮೇಲೆ ಹೋಗುತ್ತದೆ. ಕೆಲವರಿಗೆ ಗಣಿತದ ಪುಸ್ತಕ ಹಿಡಿದರೆ ನಿದ್ದೆ ಬರುತ್ತದೆ. ನಮಗೆ ಇತಿಹಾಸ, ಭೂಗೋಳ ತೆಗೆದೆರೆ ನಿದ್ರೆ ಬರುತ್ತದೆ. ಒಟ್ಟಿನಲ್ಲಿ ಇಷ್ಟವಾದ ವಿಷಯ ತೆಗೆದುಕೊಂಡು ಕೂತರೆ ಓದುವ ಸುಖವೇ ಸುಖ. ಆಗ ನಿದ್ದೆಗೆ ನಿದ್ದೆ ಬಂದಿರುತ್ತದೆ.

ಇಷ್ಟೆಲ್ಲಾ ಹೇಳಿದ ಮೇಲೂ ಆರೋಗ್ಯಕರ ಜೀವನಶೈಲಿ ಎಂದರೆ ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದ ಮಧ್ಯದ ವೇಳೆಯನ್ನು ಸದುಪಯೋಗ ಮಾಡಿಕೊಳ್ಳುವುದು. ಅದು ಎಲ್ಲಕ್ಕಿಂತ ಉತ್ತಮ.

ನಿದ್ದೆಯನ್ನು ಕಮ್ಮಿ ಮಾಡಿ ಜೀವಿಸುತ್ತೇನೆ. ಹಾಗೆ 'ಉಳಿಸಿದ' ಸಮಯವನ್ನು 'ಗಳಿಸಲು' ಬಳಸುತ್ತೇನೆ ಎನ್ನುವುದು ಮೂರ್ಖತನ. ದೇಹಕ್ಕೆ ಚೆನ್ನಾಗಿ ಗೊತ್ತು ಎಷ್ಟು ನಿದ್ದೆ ಬೇಕು ಮತ್ತು ಅದನ್ನು ಹೇಗೆ ತೆಗೆಯಬೇಕು ಎಂದು. ಯಾವಾಗಲೋ ಒಮ್ಮೆ, ಅನಿವಾರ್ಯ ಕಾರಣಗಳಿಗಾಗಿ, ನಿದ್ದೆಗೆ ಖೋತಾ ಮಾಡಿಕೊಂಡರೆ ಓಕೆ. ದೇಹ ಮಾಫ್ ಮಾಡಿ ಸಮಯ ಸಿಕ್ಕಾಗ ನಿದ್ದೆಯ ಕೊರತೆಯನ್ನು ನೀಗಿಸಿಕೊಳ್ಳುತ್ತದೆ. ಪದೇ ಪದೇ ನಿದ್ದೆಗೆ ಖೋತಾ ಮಾಡಿಕೊಂಡರೆ ಆರೋಗ್ಯ ಎಕ್ಕುಟ್ಟಿಹೋಗುವುದರಲ್ಲಿ ದೂಸರಾ ಮಾತೇ ಇಲ್ಲ. ನಿದ್ದೆ ನಿಜವಾಗಿಯೂ ಭಾಗ್ಯ. ಮಲಗಿದಾಕ್ಷಣ ನಿದ್ದೆ ಬಂದುಬಿಟ್ಟರೆ ಅದಕ್ಕಿಂತ ದೊಡ್ಡ ಭಾಗ್ಯ ಮತ್ತೊಂದಿಲ್ಲ!

Friday, September 13, 2019

Puppies available @Dharwad

Update, 4-Nov-2019: All pups have found loving homes. Thanks for your interest and enquiry.

Our neighbor in Dharwad has five puppies available.

3 male and 2 female.

Approximately 7 weeks old. Healthy and well cared for. Looking for loving homes and committed owners.

If you are interested to check out, please e-mail me at maheshuh@gmail.com. I will provide our neighbor's contact details. You can visit and check out the pups.

Pups' mother is Mudhol hound cross breed. Pups, I think, are cross breed of cross breed of Mudhol hound.

Mother dog is one of the friendliest and most loving dogs that I have ever met in my life. She is adorable and so are her pups. This is the second litter.

Hurry! these excellent pups won't last long.

Feel free to share with your friends on FB, WhatsApp etc. Thanks in advance.










ಡ್ರಗ್ ಮಾಫಿಯಾಕ್ಕೆ ಮರ್ಮಾಘಾತ ಕೊಟ್ಟ ಅಮೇರಿಕಾದ DEA

ಅಮೇರಿಕಾದ ಮಾದಕ ವಸ್ತು ನಿಗ್ರಹ ದಳ (DEA - Drug Enforcement Agency) ಖುಷಿಯಲ್ಲಿದೆ. ಕೀನ್ಯಾ ಮೂಲದ ಮಾದಕ ದ್ರವ್ಯಗಳ ಕುಖ್ಯಾತ ಖದೀಮರಿಗೆ ದೊಡ್ಡ ಪ್ರಮಾಣದ ಶಿಕ್ಷೆಯಾಗಿದೆ. ಖತರ್ನಾಕ್ ಆಕಾಶಾ ಸಹೋದರರು ಮೂವತ್ತಕ್ಕೂ ಹೆಚ್ಚು ವರ್ಷಗಳ ಶಿಕ್ಷೆಗೆ ಗುರಿಯಾಗಿ ಜೈಲು ಪಾಲಾಗಿದ್ದಾರೆ.

ಈಗ ಸುಮಾರು ನಾಲ್ಕೈದು ವರ್ಷಗಳ ಹಿಂದೆಯೇ ಕೀನ್ಯಾದಲ್ಲಿ ದೊಡ್ಡ ಮಟ್ಟದ ಸಂಘಟಿತ ದಾಳಿ ಮಾಡಿತ್ತು ಅಮೇರಿಕಾದ DEA ತಂಡ. ಆಗ ಆಕಾಶಾ ಸಹೋದರರ ಜೊತೆ ಒಂದು ಮಹಾ ಇಂಟೆರೆಸ್ಟಿಂಗ್ ಸ್ಟಾರ್ ಜೋಡಿ ಕೂಡ ಸಿಕ್ಕಿಬಿದ್ದಿತ್ತು. ಅದೇ ಬಾಲಿವುಡ್ಡಿನ 'ಮಾದಕ ನಟಿ' ಖ್ಯಾತಿಯ ಮಮತಾ ಕುಲಕರ್ಣಿ ಮತ್ತು ಆಕೆಯ ಪತಿ ವಿಕಿ ಗೋಸ್ವಾಮಿ. ಹೆಸರಿಗೆ ತಕ್ಕಂತೆ 'ಮಾದಕ ನಟಿ' ಮಾದಕ ವಸ್ತುಗಳ ಲಫಡಾದಲ್ಲಿ ಸಿಕ್ಕಾಕಿಕೊಂಡುಬಿದ್ದಿದ್ದು ಕಾಕತಾಳೀಯವಂತೂ ಆಗಿರಲಿಕ್ಕಿಲ್ಲ.

ಮಮತಾ ಕುಲಕರ್ಣಿಯನ್ನು ಏನು ಮಾಡಿದರೋ ಗೊತ್ತಿಲ್ಲ. ಆದರೆ ಆಕೆಯ ಪತಿ ಗೋಸ್ವಾಮಿಯನ್ನು ಮಾತ್ರ ಉಳಿದ ಆರೋಪಿಗಳೊಂದಿಗೆ ಅಮೇರಿಕಾಕ್ಕೆ ಎಳೆದುಕೊಂಡು ಹೋದರು.

ಮುಂದೆ ಸುಮಾರು ವರ್ಷ ಕೇಸ್ ನಡೆದಿದೆ. ಒಂದು ಕಾಲದಲ್ಲಿ ಆಕಾಶಾ ಸಹೋದರರ ನಿಕಟವರ್ತಿಯಾಗಿದ್ದ ಗೋಸ್ವಾಮಿ ತನ್ನ ಹಳೆಯ ದೋಸ್ತುಗಳಿಗೆ Go ಎಂದು ಕೈಯೆತ್ತಿ ಸಂಪೂರ್ಣವಾಗಿ ಸರ್ಕಾರಿ ಸ್ವಾಮಿಯಾಗಿಬಿಟ್ಟಿದ್ದಾನೆ. ಮಾಫಿ ಸಾಕ್ಷಿದಾರನಾಗಿ ಆಕಾಶಾ ಸಹೋದರರ ಪೂರ್ತಿ ಭಾಂಡಾ ಬಿಚ್ಚಿಟ್ಟುಬಿಟ್ಟಿದ್ದಾನೆ. ಪುಣ್ಯಾತ್ಮನ ಹೇಳಿಕೆಗಳಿಂದಾಗಿ ಅರಿಭಯಂಕರ ಆಕಾಶಾ ಸಹೋದರರು ಅಮೇರಿಕಾದ ಜೈಲಿನಲ್ಲಿ ರಾಗಿ ಬೀಸುವಂತಾಗಿದ್ದಾರೆ.

ಮಾಫಿ ಸಾಕ್ಷಿದಾರ ವಿಕಿ ಗೋಸ್ವಾಮಿಯ ಗತಿಯೇನಾಗುತ್ತದೋ? ಅವನಿಗೆ ಯಾವ ತರಹದ ಶಿಕ್ಷೆ ವಿಧಿಸುತ್ತಾರೋ? ಗೊತ್ತಿಲ್ಲ. ಆ ಮನುಷ್ಯ ಹಿಂದೊಮ್ಮೆ ಐದಾರು ವರ್ಷಗಳ ಕಾಲ ದುಬೈ ಜೈಲಿನಲ್ಲಿ ಸರ್ವಿಸ್ ಮಾಡಿ ಬಂದಿದ್ದಾನೆ. ಮತ್ತದೇ ಮಾದಕ ವಸ್ತುಗಳ ಕೇಸಿನಲ್ಲೇ. ದಾವೂದ್ ಇಬ್ರಾಹಿಂನ ಅವಕೃಪೆಗೆ ತುತ್ತಾದ. ಅದಕ್ಕಾಗಿ ಕಾರಸ್ಥಾನ ಮಾಡಿ ಅವನನ್ನು ಜೈಲಿಗೆ ಕಳಿಸಲಾಯಿತು ಎಂದು ಒಂದು ಸಿದ್ಧಾಂತ ಇದೆ. ಡ್ರಗ್ ಕಳ್ಳಸಾಗಾಣಿಕೆದಾರರ ಮೇಲೆ ಹೆಸರಿಗಾದರೂ (ನಾಮ್ ಕೆ ವಾಸ್ತೆ) ಕ್ರಮ ಕೈಗೊಳ್ಳಬೇಕಾಗಿತ್ತು. ಹಿಂದೂ ಧರ್ಮೀಯನನ್ನು ಬಕ್ರಾ ಮಾಡಿ ಕೊಲ್ಲಿ ರಾಷ್ಟ್ರಗಳಲ್ಲಿ ಹಣಿಯುವುದು ಸುಲಭ ಎಂದು ಇವನಿಗಿಂತ ನೂರು ಪಟ್ಟು ದೊಡ್ಡ ಖದೀಮರೆಲ್ಲರನ್ನೂ ಬಿಟ್ಟು ಈ 'ಬಡಪಾಯಿ'ಯನ್ನು ಜೈಲಿಗೆ ಅಟ್ಟಿತು ದುಬೈ ಸರ್ಕಾರ ಅನ್ನುವವರೂ ಇದ್ದಾರೆ.

ದುಬೈನಲ್ಲಿ ಜೈಲಿಗೆ ಹೋದ ಗೋಸ್ವಾಮಿ. ಅದೇ ಸಮಯದಲ್ಲಿ ಮಮತಾ ಕುಲಕರ್ಣಿ ಹಿಮಾಲಯಕ್ಕೆ ಹೋದಳಂತೆ. ಆಕೆಯೇ ಹೇಳಿಕೊಂಡಂತೆ, ಅಲ್ಲಿ ಭಯಂಕರ ತಪಸ್ಸು ಮಾಡಿ, ಆತ್ಮದ ಸಾಕ್ಷಾತ್ಕಾರ ಮಾಡಿಕೊಂಡು ವಾಪಸ್ ಬರುವ ತನಕ ಈ ಕಡೆ ದುಬೈನಲ್ಲಿ ವಿಕಿ ಗೋಸ್ವಾಮಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ. ಮುಸ್ಲಿಂ ಆದರೆ ದುಬೈನಲ್ಲಿ ಜೈಲು ಶಿಕ್ಷೆ ಕಮ್ಮಿಯಾಗುತ್ತದೆ ಎಂದು ತಿಳಿದಿದ್ದ ಆತ ಹಾಗೆ ಮಾಡಿದ್ದರಲ್ಲಿ ದೊಡ್ಡ ಆಶ್ಚರ್ಯವೇನಿಲ್ಲ.

ಜೈಲಿನಿಂದ ಬಿಡುಗಡೆ ಹೊಂದಿದ ಗೋಸ್ವಾಮಿ ಮತ್ತು ಇತ್ತಕಡೆ ಹಿಮಾಲಯದಿಂದ ಏಕ್ದಂ ಸಾಧ್ವಿಯ ರೂಪದಲ್ಲಿ ಹಿಂತಿರುಗಿದ ಮಮತಾ ಕುಲಕರ್ಣಿ ಏನೋ ಒಂದು ತರಹದ ಶಾದಿ ಭಾಗ್ಯ ಮಾಡಿಕೊಂಡು ಆಫ್ರಿಕಾದ ಕೀನ್ಯಾ ದೇಶಕ್ಕೆ ಬಂದು ನೆಲೆಸಿದರು.

ಅಲ್ಲಿ ಆಗಲೇ ಆಕಾಶಾ ಸಹೋದರರು ದೊಡ್ಡ ಮಟ್ಟದ ಕುಖ್ಯಾತಿ ಗಳಿಸಿದ್ದರು. ಅವರ ವಿರೋಧ ಕಟ್ಟಿಕೊಂಡರೆ ಕಷ್ಟ ಎಂದು ತಿಳಿದು ಅವರೊಂದಿಗೆ ಮಾಂಡವಳಿ ಸಂಧಾನ ಮಾಡಿಕೊಂಡ ಗೋಸ್ವಾಮಿ ಡ್ರಗ್ ದಂಧೆಯನ್ನು ಮುಂದುವರೆಸಿದ. ಅವರಿಗೆ ಹೊಸ ಹೊಸ ಸಂಪರ್ಕಗಳನ್ನು ಮಾಡಿಸಿಕೊಟ್ಟ. ಭಾರತದ ಔಷಧಿ ಕಂಪನಿಯಿಂದ ದೊಡ್ಡ ಪ್ರಮಾಣದಲ್ಲಿ ವಸ್ತುಗಳನ್ನು ಆಮದು ಮಾಡಿಕೊಂಡ. ಪಕ್ಕದ ಉಗಾಂಡಾ ದೇಶದ ಅಧ್ಯಕ್ಷನ ತಂಗಿಗೆ ದೊಡ್ಡ ಪ್ರಮಾಣದ ತಾಂಬೂಲ ಬಾಗಿನ ಕೊಟ್ಟು ಆಕೆಯನ್ನೂ ಒಳಗೆ ಹಾಕಿಕೊಂಡ. ಭಾರತದ ದೇಶದಿಂದ ದೊಡ್ಡ ಪ್ರಮಾಣದ ಎಪಿಡ್ರಿನ್ ಎಂಬ ರಾಸಾಯನಿಕ ಟನ್ನುಗಟ್ಟಲೆ ಬಂದು ಉಗಾಂಡಾದಲ್ಲಿ ಇಳಿಯಿತು. ರಾಷ್ಟ್ರಾಧ್ಯಕ್ಷನ ತಂಗಿ ತಾಂಬೂಲ ಉಗುಳಿ, ಪಿಚಕಾರಿ ಹಾರಿಸಿ ಪೆಕಪೆಕನೆ ನಕ್ಕಳು. ಏನಾದರೂ ಮಾಡಿಕೊಳ್ಳಿ. ಟೈಮಿಗೆ ಸರಿಯಾಗಿ ನನ್ನ ಪಾಲಿನ ತಾಂಬೂಲ ತಪ್ಪಿಸಬೇಡಿ ಎಂದು ಹೇಳಿದ ಮೇಡಂ ತನ್ನ ಅಭಯಹಸ್ತ ತೋರಿಸಿದಳು. ಡ್ರಗ್ ಉತ್ಪಾದನೆಗೆ ಗ್ರೀನ್ ಸಿಗ್ನಲ್ ಕೊಟ್ಟಳು. ಖತರ್ನಾಕ್ ಡ್ರಗ್ ಆಗಿರುವ ಮ್ಯಾನ್ಡ್ರಾಕ್ಸ್ ಉತ್ಪಾದನೆ ದೊಡ್ಡ ಪ್ರಮಾಣದಲ್ಲಿ ನಡೆಯಿತು. ವಿಶ್ವದ ತುಂಬೆಲ್ಲಾ ಗೋಸ್ವಾಮಿ ಮತ್ತು ಆಕಾಶಾ ಸಹೋದರರು ಎಬ್ಬಿಸಿದ ಮಾದಕ ದ್ರವ್ಯಗಳ ಘಾಟೋ ಘಾಟು.

ಆಗ ಮುರಿದುಕೊಂಡು ಬಿತ್ತು ನೋಡಿ ಅಮೇರಿಕಾದ DEA. ಸೀದಾ ಹೋದವರೇ ಕೀನ್ಯಾದ ಆಧಿಕಾರಶಾಹಿಯ ತಲೆಗೆ ಬಂದೂಕಿಟ್ಟರು. 'ನಿಮ್ಮ ದೇಶದಲ್ಲಿ ಇಂತಿಂತಹ ಕೇಡಿಗಳಿದ್ದಾರೆ. ಅವರು ನಮಗೆ ಬೇಕು. ಬೇಕೇಬೇಕು. ಸಹಕರಿಸಿದರೆ ಒಳ್ಳೆಯದು. ಇಲ್ಲವಾದರೆ ಗೊತ್ತಲ್ಲ? ನಾವು ಯಾರೆಂದು?? ನಾವು DEA. ಎಲ್ಲಿ ಹೇಗೆ ತಟ್ಟಿದರೆ ಏನು ಹೇಗೆ ಉದುರುತ್ತದೆ ಎಂದು ನಮಗೆ ಬರೋಬ್ಬರಿ ಗೊತ್ತಿದೆ!' ಎಂದು ಧಮ್ಕಿ ಹಾಕಿದರು. ಡ್ರಗ್ ಮಾಫಿಯಾದಿಂದ ಸಾಕಷ್ಟು ಸತ್ಯನಾರಾಯಣ ಪ್ರಸಾದ ಸ್ವೀಕರಿಸಿದ್ದರೂ ಕೀನ್ಯಾದ ಪೊಲೀಸರಿಗೆ ಸಹಕರಿಸುವುದನ್ನು ಬಿಟ್ಟು ಬೇರೆ ಗತಿಯಿರಲಿಲ್ಲ.

೨೦೧೫ ರಲ್ಲಿ ಆದ ದೊಡ್ಡ ಪ್ರಮಾಣದ ದಾಳಿಯಲ್ಲಿ ಆಕಾಶಾ ಸಹೋದರರನ್ನು ಮತ್ತು ಗೋಸ್ವಾಮಿಯನ್ನು ಎತ್ತಾಕಿಕೊಂಡ DEA, ಸ್ಪೆಷಲ್ ವಿಮಾನದಲ್ಲಿ, ಎಲ್ಲ ಖದೀಮರನ್ನು ಅಮೇರಿಕಾಗೆ ಸಾಗಿಸಿತ್ತು. ಈಗ ಕೇಸ್ ಮುಗಿದಿದೆ. ಬಕ್ತಾಶ್ ಮತ್ತು ಇಬ್ರಾಹಿಂ ಎನ್ನುವ ಆಕಾಶಾ ಸಹೋದರರು ಖಾಯಮ್ಮಾಗಿ ಅಮೇರಿಕಾದ ಜೈಲು ಸೇರಿದ್ದಾರೆ. ಗೋಸ್ವಾಮಿ ತನ್ನ ಗತಿಯೇನೋ ಎಂದು ಎದುರು ನೋಡುತ್ತಿದ್ದಾನೆ. ಮಾಫಿ ಸಾಕ್ಷಿದಾರನಾದ ಕಾರಣ ಕಮ್ಮಿ ಶಿಕ್ಷೆ ಕೊಡಬಹುದು. ಯಾರಿಗೆ ಗೊತ್ತು, ನಸೀಬ್ ಛಲೋ ಇದ್ದರೆ ಏನೂ ಶಿಕ್ಷೆ ಕೊಡದೆ ಬಿಟ್ಟು ಕಳಿಸಿದರೂ ಆಶ್ಚರ್ಯವಿಲ್ಲ.

ಈ ಮಧ್ಯೆ ಮಮತಾ ಕುಲಕರ್ಣಿ ಎಲ್ಲಿ? ಆಕೆಯ ಸುದ್ದಿಯೇ ಇಲ್ಲ. ಆಕೆ ಮುಂಬೈಗೆ ಬರುವಂತಿಲ್ಲ. ಅಲ್ಲಿ ಆಕೆಯ ಮೇಲೆ ವಾರಂಟ್ ಇದೆ. DEA ಕೊಟ್ಟ ಮಾಹಿತಿ ಪ್ರಕಾರ ಮಹಾರಾಷ್ಟ್ರ ದ ಸೊಲ್ಲಾಪುರ ಸಮೀಪದ ಔಷಧಿ ಫ್ಯಾಕ್ಟರಿ ಮೇಲೆ ದಾಳಿ ಮಾಡಿದ ಮಹಾರಾಷ್ಟ್ರ ಪೊಲೀಸರು ಟನ್ನುಗಟ್ಟಲೆ ಅಪಾಯಕಾರಿ ರಾಸಾಯನಿಕಗಳನ್ನು ವಶಪಡಿಸಿಕೊಂಡು ಆ ಫ್ಯಾಕ್ಟರಿಗೆ ಬೀಗ ಜಡಿದರಲ್ಲ. ಆ ಕೇಸಿನಲ್ಲಿ ಗೋಸ್ವಾಮಿ ದಂಪತಿಯನ್ನೂ ಆರೋಪಿಗಳು ಎಂದು ತೋರಿಸಲಾಗಿತ್ತು. ಆಗ ಮಾಧ್ಯಮಕ್ಕೆ ಬಂದಿದ್ದ ಮಮತಾ ಕುಲಕರ್ಣಿ ಅದೆಲ್ಲ ತನ್ನ ವಿರುದ್ಧ ಮಾಡಿರುವ ಕಾರಸ್ಥಾನ, ಷಡ್ಯಂತ್ರ ಎಂದು ಹೇಳಿ ಬೊಬ್ಬೆ ಹೊಡೆದು ಹೋದಾಕೆ ನಂತರ ನಾಪತ್ತೆ. ಈಗ ಕೀನ್ಯಾದಲ್ಲಿದ್ದಾಳೋ, ಪೀಣ್ಯಾದಲ್ಲಿದ್ದಾಳೋ? ಯಾರಿಗೆ ಗೊತ್ತು!?

ಇದೇ ಕೇಸಿನಲ್ಲಿ DEA ಮತ್ತು ಕೀನ್ಯಾ ಪೊಲೀಸರಿಂದ ಬಚಾವಾಗಿ ಭಾರತಕ್ಕೆ ಓಡಿ ಬಂದು ಸದ್ಯಕ್ಕೆ ಮುಂಬೈ ಆಸ್ಫತ್ರೆಯಲ್ಲಿ ಮಲಗಿಬಿಟ್ಟಿರುವವನು ಅಲಿ ಪಂಜಾನಿ (ಪುಂಜಾನಿ). ಇವನೂ ಕೀನ್ಯಾ ದೇಶದವನೇ. ಭಾರತೀಯ ಮೂಲದವನು ಎಂದು ಕಾಣಿಸುತ್ತದೆ. ಆಕಾಶಾ ಸೋದರರ ಪಕ್ಕಾ ಪ್ರತಿಸ್ಪರ್ಧಿಯಾಗಿದ್ದವನು ಈ ಪಂಜಾನಿ. ಡ್ರಗ್ ಸಾಮ್ರಾಜ್ಯದ ಮೇಲೆ ಹತೋಟಿ ಸಾಧಿಸುವ ಪೈಪೋಟಿಯಲ್ಲಿ ಈ ಪಂಜಾನಿ ಮತ್ತು ಆಕಾಶಾ ಸಹೋದರರ ಮಧ್ಯೆ ಜಗಳಗಳಾಗಿದ್ದವು. ಒಮ್ಮೆಯಂತೂ ನೈಟ್ ಕ್ಲಬ್ ಒಂದರಲ್ಲಿ ಒಬ್ಬರಿಗೊಬ್ಬರು ಎದುರಾದಾಗ ಬಂದೂಕುಗಳು ಘರ್ಜಿಸಿದ್ದವು. ಗುಂಡುಗಳು ಹಾರಿದ್ದವು. ಪಂಜಾನಿಯ ಅಂಗರಕ್ಷಕ ಗಂಭೀರವಾಗಿ ಗಾಯಗೊಂಡಿದ್ದ.

ಹೀಗಾಗಿ DEA ಆಕಾಶಾ ಸಹೋದರರನ್ನು ಎತ್ತಾಕಿಕೊಂಡು ಹೋದಾಗ ಪಂಜಾನಿ ಸಕತ್ ಖುಷಿ ಪಟ್ಟಿರಬೇಕು. ತನಗಿನ್ನು ಪ್ರತಿಸ್ಪರ್ಧಿಗಳೇ ಇಲ್ಲ ಎಂದು ಮೆರೆಯಲು ಆರಂಭಿಸಿದ್ದಾನೆ. ಎರಡನೇ ಸುತ್ತಿನಲ್ಲಿ DEA ಪಂಜಾನಿಯ ಮೇಲೆಯೇ ಮುರ್ಕೊಂಡು ಬಿದ್ದಿದೆ. ಕೀನ್ಯಾದ ಆಡಳಿತ ವ್ಯವಸ್ಥೆಗೆ ಬರೋಬ್ಬರಿ ಬಿಸ್ಕೀಟ್ ಹಾಕಿದ್ದ ಕಾರಣಕ್ಕೆ ಈ ಮಾಹಿತಿ ಸರಿಯಾದ ಸಮಯಕ್ಕೆ ಪಂಜಾನಿಗೆ ಸಿಕ್ಕಿದೆ. ಪಂಜಾನಿ ಪಂಚೆ ಎತ್ತಿಕೊಂಡು ಕೀನ್ಯಾ ಬಿಟ್ಟು ಓಡಿಬಂದಿದ್ದಾನೆ. ಭಾರತದಲ್ಲಿ ಬಂದು ಮುಂಬೈನ  ಬಾಂದ್ರಾ ಪ್ರದೇಶದ ಆಸ್ಪತ್ರೆಯಲ್ಲಿ ಶಿವನೇ ಶಂಭುಲಿಂಗ ಮಾದರಿಯಲ್ಲಿ ಮಲಗಿಬಿಟ್ಟಿದ್ದಾನೆ. DEA ಮಾತ್ರ ಇಂಟರ್ಪೋಲ್ ನೋಟೀಸ್ ಹೊರಡಿಸಿದೆ. ಅದರ ಬಗ್ಗೆ ಮುಂಬೈ ಪೊಲೀಸರು ಹೆಚ್ಚಿನ ಗಮನ ಹರಿಸಿಲ್ಲವಂತೆ. ಕೇಳಿದರೆ ಪಂಜಾನಿ ಮೇಲೆ ಮುಂಬೈನಲ್ಲಿ ಏನೂ ಕೇಸುಗಳು ಇಲ್ಲ. ಹಾಗಾಗಿ ಏನೂ ಮಾಡುವಂತಿಲ್ಲ ಅಂದರಂತೆ. ಇನ್ನು ಯಾವತ್ತು ತಲೆಕೆಟ್ಟ DEA ಮುಂಬೈ ಪೊಲೀಸರಿಗೆ ತಪರಾಕಿ ಕೊಡುತ್ತದೋ ಗೊತ್ತಿಲ್ಲ. ದೊಡ್ಡ ಮಟ್ಟದಲ್ಲಿ ತಪರಾಕಿ ಬಿದ್ದ ದಿನ ಪಂಜಾನಿಯನ್ನು ಬಂಧಿಸಿ ಅಮೇರಿಕಾಕ್ಕೆ ಕಳಿಸಬಹುದು. ಯಾರಿಗೆ ಗೊತ್ತು, ಅಷ್ಟರಲ್ಲಿ ಈ ಕಳ್ಳ ಪರಮಾತ್ಮ ಭಾರತ ಬಿಟ್ಟು ಮತ್ತೆಲ್ಲಾದರೂ ಗಾಯಬ್ ಆದರೂ ಆದನೇ. ಆದರೆ ಒಮ್ಮೆ DEA ಹಿಂದೆ ಬಿತ್ತು ಅಂದರೆ ಬಚಾವಾಗುವುದು ಕಷ್ಟ.

ಈ ಮಾಫಿಯಾ ಮಂದಿಗೂ ಬಾಲಿವುಡ್ ನಟಿಯರಿಗೂ ಅದೇನು ಸಂಬಂಧವೋ, ಅದೇನು ಆಕರ್ಷಣೆಯೋ ದೇವರೇ ಬಲ್ಲ. ವಿಕಿ ಗೋಸ್ವಾಮಿ ಆಕಾಲದ ಹಾಟ್ ನಟಿ ಮಮತಾ ಕುಲಕರ್ಣಿಯನ್ನು ಮದುವೆಯಾದ. ತಾನೇನು ಕಮ್ಮಿ ಎಂಬಂತೆ ಈ ಅಲಿ ಪಂಜಾನಿ ಸಾಹೇಬರು ಕಿಮ್ ಶರ್ಮಾ ಎಂಬ ನಟಿಯನ್ನು ೨೦೧೦ ಮದುವೆಯಾಗಿ ಕೀನ್ಯಾಕ್ಕೆ ಕರೆದುಕೊಂಡು ಹೋಗಿದ್ದರಂತೆ. ಕಿಮ್ ಶರ್ಮಾ ೨೦೦೦ ರ ಕಾಲದಲ್ಲಿ ಸಾಕಷ್ಟು ದೊಡ್ಡ ನಟಿ. ಕ್ರಿಕೆಟಿಗ ಯುವರಾಜ್ ಸಿಂಗನ ಗೆಳತಿ ಎಂದು ಖ್ಯಾತಳಾಗಿದ್ದವಳು. ಅಲ್ಲಿ ವರ್ಕೌಟ್ ಆಗಲಿಲ್ಲ ಅಂತ ಕಾಣುತ್ತದೆ. ಸಿಕ್ಕ ಪಂಜಾನಿ ಸಾಹೇಬ್ರನ್ನು ವಿವಾಹವಾಗಿ ಕೀನ್ಯಾ ಸೇರಿಕೊಂಡಿದ್ದಳು.

ಆರು ವರ್ಷಗಳ  ಕಾಲ ಸಂಸಾರ ಮಾಡಿದ ನಂತರ ಪಂಜಾನಿ ಬೇರೆ ಯಾರನ್ನೋ ಹುಡುಕಿಕೊಂಡು ಹೋಗಿ ಹೊಸ ಹಕ್ಕಿಯ ಜೊತೆ ಸೆಟಲ್ ಆಗಿಬಿಟ್ಟನಂತೆ. ಹಾಗಾಗಿ ವಿವಾಹ ಸೋಡಾಚೀಟಿಯಲ್ಲಿ ಅಂತ್ಯವಾಗಿದೆ.

ಬರಿಗೈಯಲ್ಲಿ ಠಣ್ ಠಣ್ ಗೋಪಾಲ್ ಆಗಿ, ಕಾಸು ಆಸ್ತಿ ಏನೂ ಇಲ್ಲದೆ ಭಾರತಕ್ಕೆ ಮರಳಿರುವ ಕಿಮ್ ಶರ್ಮಾ ಮುಂಬೈನಲ್ಲಿ ಹೊಸ ಬಾಳನ್ನು ಹುಡುಕಿಕೊಳ್ಳುತ್ತಿದ್ದಾಳೆ. ಬಾಲಿವುಡ್ಡಿನಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಲು ಉಚಿತವಾಗಿ ನಟಿಸಲೂ ರೆಡಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾಳೆ. ಯಾರೂ ಉದ್ಯೋಗ ಕೊಟ್ಟ ಹಾಗೆ ಕಾಣುವುದಿಲ್ಲ. ಜೊತೆಗೊಬ್ಬ ಗೆಣೆಕಾರ ಇರಲಿ ಎಂದು ಯಾರೋ ಹರ್ಷವರ್ಧನ್ ರಾಣೆ ಎನ್ನುವ, ತನಗಿಂತ ಐದು ವರ್ಷ ಚಿಕ್ಕವನಾದ, ಮಾಡೆಲ್ ಜೊತೆ ಡೇಟಿಂಗ್ ಶುರುವಿಟ್ಟುಕೊಂಡಿದ್ದಳು. ಅದೂ ಕೂಡ ಮೊನ್ನೆ ಮಕಾಡೆ ಮಲಗಿ ಅಂತ್ಯಗೊಂಡಿದೆ.

ಕಿಮ್ ಶರ್ಮಾ ಈಗ ಕಿಮಿ ಶರ್ಮಾ ಎನ್ನುವ ಹೆಸರಿನಲ್ಲಿ ಬಾಲಿವುಡ್ಡಿನಲ್ಲಿ ಚಲಾವಣೆಗೊಳ್ಳಲು ಪ್ರಯತ್ನಿಸುತ್ತಿದ್ದಾಳೆ. ಹೆಸರು ಬದಲಾಯಿಸಿಕೊಂಡ ತಕ್ಷಣ ಅದೃಷ್ಟ ಬದಲಾಯಿಸುತ್ತದೆಯೇ? ಕಾದು ನೋಡಬೇಕು.

ಪಂಜಾನಿ DEA ಮಂದಿಯ ಹದ್ದಿನ ದೃಷ್ಟಿಯಲ್ಲಿ ಬರುವ ಮೊದಲೇ ಆತನಿಂದ ದೂರವಾದ ಕಿಮ್ ಶರ್ಮಾ ಒಂದು ರೀತಿಯಲ್ಲಿ ಅದೃಷ್ಟವಂತಳೇ. ಪಂಜಾನಿಯಂತೂ ಅಮೇರಿಕಾದ ಜೈಲಿನಲ್ಲಿ ರಾಗಿ ಬೀಸುವುದು ಗ್ಯಾರಂಟಿ. ಆತನಿಂದ ಮೊದಲೇ ದೂರವಾಗಿ ಆ ಕರ್ಮದಿಂದ ತಪ್ಪಿಸಿಕೊಂಡಿದ್ದಾಳೆ ಕಿಮ್ ಶರ್ಮಾ. ಅಷ್ಟರಮಟ್ಟಿಗೆ ಆಕೆ ಅದೃಷ್ಟವಂತೆ.

ಹೆಚ್ಚಿನ ಮಾಹಿತಿಗೆ:

ಅಲಿ ಪಂಜಾನಿ

ಕಿಮ್ ಶರ್ಮಾ

Mamta Kulkarni, Vicky Goswami complete saga summarized for the uninitiated

ಮಮತಾ ಕುಲಕರ್ಣಿಯ ಸಂದರ್ಶನ (ಪೋಸ್ಟಿನ ಕೊನೆಯಲ್ಲಿದೆ)

'ಕುಲಕರ್ಣಿ ಮಮ್ಮಿ' ಸನ್ಯಾಸ ತೊಗೋಂಡಳಾ?!.....ಅಕಟಕಟಾ!