Tuesday, August 06, 2024

ಮಾದಕ ನಟಿಗೆ ಮಾದಕ ವಸ್ತುಗಳ ಪ್ರಕರಣದಲ್ಲಿ ಮುಕ್ತಿ...

ಮಮತಾ ಕುಲಕರ್ಣಿ ಎನ್ನುವ ಪುರಾತನ ಬಾಲಿವುಡ್ ನಟಿಗೆ ಮುಂಬೈನ ಠಾಣೆ ನ್ಯಾಯಾಲಯದಲ್ಲಿ ದಾಖಲಾಗಿದ್ದ ಮಾದಕ ವಸ್ತು ಪ್ರಕರಣದಲ್ಲಿ ಉನ್ನತ ನ್ಯಾಯಾಲಯ (ಹೈಕೋರ್ಟ್) ಮುಕ್ತಿ ನೀಡಿದೆ. 

ಮಮತಾ ಕುಲಕರ್ಣಿ...ಆಕೆಯ ಸೌಂದರ್ಯ, ಬಿನ್ನಾಣ, ಮತ್ತೊಂದು ನೋಡಿ ಅದು ಯಾರು ಅವಳಿಗೆ ಮಾದಕ ನಟಿ ಎಂದು ಬಿರುದು ಕೊಟ್ಟರೋ! ಯಾವ ಶುಭ ಮುಹೂರ್ತದಲ್ಲಿ ಕೊಟ್ಟರೋ! ಮಾದಕತೆ ಅಂತೂ ಇತ್ತು. ಅದು ಸಾಕಾಗಲಿಲ್ಲ ಎಂದು ಈ ಮಮತಾ ಕುಲಕರ್ಣಿ ಮಾದಕ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಕಳ್ಳಸಾಗಾಣಿಕೆ ಮಾಡುವ ಅಂತರರಾಷ್ಟ್ರೀಯ ಮಾಫಿಯಾ ಕಿಲಾಡಿ ವಿಕಿ ಗೋಸ್ವಾಮಿ ಜೊತೆ ಸೇರಿಕೊಂಡು ಇವಳ ಮೇಲೂ ಮಾದಕ ವಸ್ತುಗಳ ಆರೋಪ ಇರುವುದು ಇಂದು ನಿನ್ನೆಯದಲ್ಲ. 

ವರಿಷ್ಠ ಸಿನೆಮಾ ಪತ್ರಕರ್ತೆ ಆಮ್ರಪಾಲಿ ಶರ್ಮಾ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಮಮತಾ ಕುಲಕರ್ಣಿ ಬಗ್ಗೆ ನಾಲ್ಕು ಭಾಗಗಳ ಕಾರ್ಯಕ್ರಮ ಮಾಡಿದ್ದಾರೆ. ಅನೇಕ ಹೊಸ ವಿಷಯಗಳು ತಿಳಿದವು. ಆ ಮಾಹಿತಿಗಳನ್ನು ಕೂಡ ಈ ಲೇಖನದಲ್ಲಿ ಹಾಕಿದ್ದೇನೆ. ಹುಡುಕಿದರೆ ಇಂಟರ್ನೆಟ್ ಮೇಲೆ ಈ ಎಲ್ಲ ವಿಷಯ ಇದೆ. ಆಮ್ರಪಾಲಿ ಶರ್ಮಾ ಎಲ್ಲವನ್ನೂ ಕ್ರೋಢಿಕರಿಸಿ ಕೊಟ್ಟಿದ್ದಾರೆ.

ಈಗ ಸುಮಾರು ಏಳೆಂಟು ವರ್ಷಗಳ ಹಿಂದೆ ಮಹಾರಾಷ್ಟ್ರದ ಠಾಣೆಯ ಪೊಲೀಸರು ಸೊಲ್ಲಾಪುರ ಮೂಲದ ಔಷಧಿ ತಯಾರಿಸುವ ಕಂಪನಿಯೊಂದರ ಬಗ್ಗೆ ಮಾದಕ ವಸ್ತುಗಳ ತಯಾರಿಕೆಗೆ ಬೇಕಾಗುವ ಕಚ್ಚಾ ಸಾಮಗ್ರಿ ತಯಾರಿಸಿ ಪರದೇಶಕ್ಕೆ ಸಾಗಿಸುವ ಹುನ್ನಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು. ಭಾರತದಲ್ಲೇ ಇದ್ದ ಸುಮಾರು ಜನರನ್ನು ಬಂಧಿಸಿ ಒಳಗೆ ಕೂಡ ತಳ್ಳಿದ್ದರು. ಇದೇ ಪ್ರಕರಣದಲ್ಲಿ ಆಫ್ರಿಕಾದ ಕೀನ್ಯಾದಲ್ಲಿ ನೆಲೆಸಿದ್ದಾಳೆ ಎಂದು ಹೇಳಲಾದ ಮಾಜಿ ಬಾಲಿವುಡ್ ನಟಿ ಮಮತಾ ಕುಲಕರ್ಣಿ ಮತ್ತು ಆಕೆಯ ಪತಿ ಎಂದು ಹೇಳಲಾದ ವಿಕಿ ಗೋಸ್ವಾಮಿಯನ್ನೂ ಆರೋಪಿ ಎಂದು ಹೆಸರಿಸಲಾಗಿತ್ತು. ಅವರ ಬಂಧನಕ್ಕಾಗಿ ರೆಡ್ ಕಾರ್ನರ್ ನೋಟೀಸ್ ಇತ್ಯಾದಿ ಹೊರಡಿಸಿದ್ದರೂ ಪತ್ತೆಯಾಗಿರಲಿಲ್ಲ. 

ಇದರ ಮಧ್ಯೆ ವಿಕಿ ಗೋಸ್ವಾಮಿಯನ್ನು ಅಮೇರಿಕಾದ ಮಾದಕ ವಸ್ತು ನಿರೋಧಕ ದಳದವರು ಎತ್ತಾಕಿಕೊಂಡು ಹೋದರು. ಕೀನ್ಯಾದ ಆಕಾಶಾ ಸಹೋದರರು ಮಾಡುತ್ತಿದ್ದ ಬೃಹತ್ ಪ್ರಮಾಣದ ಮಾದಕವಸ್ತು ಕಳ್ಳಸಾಗಾಣಿಕೆ ದಂಧೆಯನ್ನು ಮಟ್ಟ ಹಾಕಲೇಬೇಕು ಎಂದು ನಿರ್ಧರಿಸಿದ್ದ ಅಮೆರಿಕದವರು ಕೀನ್ಯಾ ಸರ್ಕಾರದ ಬುರುಡೆಗೆ ಬಂದೂಕಿಟ್ಟು ಆಕಾಶಾ ಸಹೋದರರು ಮತ್ತು ಅವರ ಅತ್ಯಂತ ನಿಕಟವರ್ತಿಯಾಗಿದ್ದ ಗೋಸ್ವಾಮಿಯನ್ನು ಎತ್ತಾಕಿಕೊಂಡು ಅಮೆರಿಕಕ್ಕೆ ತೆಗೆದುಕೊಂಡು ಹೋದರು. ಆ ಪ್ರಕರಣ ಅಮೇರಿಕಾದಲ್ಲಿ ನಡೆಯುತ್ತಲಿದೆ. ಗೋಸ್ವಾಮಿ ಸರ್ಕಾರದ ಪರವಾಗಿ ಮಾಫಿ ಸಾಕ್ಷಿದಾರನಾಗಿ ಆಕಾಶಾ ಸಹೋದರರಿಗೆ ಕೈಯೆತ್ತಿದ್ದಾನೆ ಎಂದು ಓದಿದ ನೆನಪು. ಒಟ್ಟಿನಲ್ಲಿ ಅಮೆರಿಕದಲ್ಲೇ ಇದ್ದಾನೆ. ಸ್ವಲ್ಪ ರಿಯಾಯತಿ ಕೊಟ್ಟಿರಬೇಕು. ಅವನು ದುಬೈ ಮತ್ತಿತರ ಕಡೆ ಜೈಲಿನಲ್ಲಿದ್ದು ಏಳು ಕೆರೆಗಳ ನೀರು ಕುಡಿದು ಬಂದವ. ಏನೋ ಜುಗಾಡ್ ಮಾಡಿಕೊಂಡಿರುತ್ತಾನೆ ಬಿಡಿ.

ಅಮೆರಿಕದವರು ಕೀನ್ಯಾದ ಡ್ರಗ್ ಕಳ್ಳಸಾಗಾಣಿಕೆ ಮಾಡುವವರ ಮೇಲೆ ಮುರಿದುಕೊಂಡು ಬಿದ್ದಾಗ ಮಮತಾ ಕುಲಕರ್ಣಿಯನ್ನೂ ವಿಚಾರಣೆಗೆ ಒಳಪಡಿಸಿದ್ದರು. ಆದರೆ ಎತ್ತಾಕಿಕೊಂಡು ಹೋಗಲಿಲ್ಲ.

ಮಹಾರಾಷ್ಟ್ರದ ಠಾಣೆ ಪೊಲೀಸರು, ನ್ಯಾಯಾಲಯ ಅದೆಷ್ಟೇ ನೋಟೀಸ್, ಸಮನ್ಸ್ ಕೊಟ್ಟರೂ ಮಮತಾ ಕ್ಯಾರೇ ಎನ್ನಲಿಲ್ಲ. ಕೀನ್ಯಾ ಬಿಟ್ಟು ಕದಲಲಿಲ್ಲ. ಆಗ ಆಕೆಯ ಭಾರತದಲ್ಲಿರುವ ಆಸ್ತಿ ಪಾಸ್ತಿಗಳನ್ನು ತಾತ್ಕಾಲಿಕವಾಗಿ ಜಪ್ತಿ ಮಾಡುವ ಪ್ರಕ್ರಿಯೆ ಆರಂಭವಾಯಿತು. ಮುಂಬೈನಲ್ಲಿ ಆಕೆಯ ಹೆಸರನಲ್ಲಿ ಇದ್ದ ಮೂರ್ನಾಲ್ಕು ಫ್ಲ್ಯಾಟುಗಳಿಗೆ ಬೀಗಮುದ್ರೆ ಬಿತ್ತು. ಬ್ಯಾಂಕ್ ಖಾತೆಗಳು ಮುಚ್ಚಿಕೊಂಡವು. ಒಟ್ಟಿನಲ್ಲಿ ದೂರ ಕುಳಿತವಳ ಮೂಗು ಹಿಡಿದು ಬಾಯಿ ತೆರೆಸುವ ತಂತ್ರ.

ಯಾವಾಗ ಬ್ಯಾಂಕ್ ಖಾತೆಗಳು ಮುಚ್ಚಿಕೊಂಡವೋ ಆಗ ದೂರದಿಂದಲೇ ಬಾಯ್ಬಾಯಿ ಬಡಿದುಕೊಂಡು ಕೇಸ್ ನಡೆಸಲು ವಕೀಲರನ್ನು ನೇಮಕ ಮಾಡಿಕೊಂಡಳು ಮಮತಾ ಕುಲಕರ್ಣಿ. ಕೋಟಿ ಕೋಟಿ ರೂಪಾಯಿಗಳು ಇದ್ದರೂ ಇಲ್ಲದಂತೆ ಆಗಿಬಿಟ್ಟಿತು. ಆಕೆ ಅಲ್ಲಿ ದೂರದ ಕೀನ್ಯಾದ ಮೊಂಬಾಸಾ ಶಹರದ ಸಮುದ್ರ ತೀರದ ಬಂಗಲೆಯಲ್ಲಿ ಆರಾಮಾಗಿದ್ದರೂ ಮುಂಬೈನಲ್ಲಿ ಖರ್ಚುಗಳು ಇದ್ದವು. ತಂದೆ ತಾಯಿ ಇದ್ದಂತಿಲ್ಲ. ಇಬ್ಬರು ಸಹೋದರಿಯರು ಇದ್ದಾರೆ. ಅದರಲ್ಲಿ ಒಬ್ಬಳಿಗೆ ಆರೋಗ್ಯದ ಸಮಸ್ಯೆ. ಚಿಕಿತ್ಸೆಗೆ ದುಡ್ಡು ಇವಳೇ ಕೊಡಬೇಕು. ಆ ಇಬ್ಬರು ಸಹೋದರಿಯರೂ ಕೂಡ ಮಮತಾಳ ಹಾದಿಯಲ್ಲೇ ನಟಿಯರಾಗಲು ಪ್ರಯತ್ನಿಸಿದರೂ ಜಾಸ್ತಿ ಏನೂ ಗಿಟ್ಟಿದ ಹಾಗೆ ಕಾಣುವುದಿಲ್ಲ. ಹಾಗಾಗಿ ಹಿರಿಯಕ್ಕ ಮಮತಾಳೇ ಖರ್ಚಿಗೆ ಕಾಸು ಕೊಡಬೇಕು. ಪುಣ್ಯಕ್ಕೆ ಹಿರಿಯಕ್ಕನ ಇತರೆ ಚಾಳಿಗಳು ಮನೆಮಂದಿಗೆಲ್ಲ ಇದ್ದಂತಿಲ್ಲ.

ಮಮತಾ ತನ್ನ ಮೇಲಿನ ಪ್ರಕರಣವನ್ನು ರದ್ದು ಪಡಿಸುವಂತೆ ಹೈಕೋರ್ಟಿಗೆ ಮೊರೆ ಹೋಗಿದ್ದಳು. ಅವಳ ಮೇಲೆ ಮಾದಕವಸ್ತು ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಕೆಳಗಿನ ನ್ಯಾಯಾಲಯದಲ್ಲಿ ದಾಖಲಾಗಿರುವ ಆರೋಪಪಟ್ಟಿಯನ್ನು (chargesheet) ಓದಿ, ಅವಳ ವಕೀಲರ ವಾದವನ್ನು ಆಲಿಸಿ, ಮಮತಾಳ ಮೇಲೆ ಆರೋಪ ಮಾಡಲು ಬೇಕಾದ ಸಾಕ್ಷಿಗಳನ್ನು ಕೊಟ್ಟಿಲ್ಲ ಎಂದು ಅವಳ ಮೇಲಿನ ದೂರನ್ನೇ ಖಾರಿಜ್ ಮಾಡಿದೆ ಹೈಕೋರ್ಟ್. FIR has been quashed. ಅಂದರೆ ಕೆಳಗಿನ ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ ಪ್ರಕರಣದಿಂದ ಇವಳ ಹೆಸರನ್ನು ಕೈಬಿಡಲಾಗುತ್ತದೆ. ಇನ್ನು ಇದಕ್ಕೆ ವಿರೋಧವಾಗಿ ಸರಕಾರ ಸುಪ್ರೀಂ ಕೋರ್ಟಿಗೆ ಹೋದರೆ ನೋಡಬೇಕು. ಅಲ್ಲಿಯವರೆಗೆ ಮಮತಾ ನಿರಾಳ. ಇನ್ನು ಜಪ್ತಿ ಮಾಡಿರುವ ಫ್ಲ್ಯಾಟುಗಳು, ಮುಚ್ಚಿಕೊಂಡಿರುವ ಬ್ಯಾಂಕ್ ಖಾತೆಗಳು ಯಾವಾಗ ಮುಕ್ತಿಗೊಂಡು, ಕಾಸು ಕೈಗೆ ಬಂದು, ಅಕ್ಕ ತಂಗಿಯರ ಯೋಗಕ್ಷೇಮ ವಿಚಾರಿಸಿಕೊಳ್ಳಲು ಆಗುತ್ತದೆಯೋ ಗೊತ್ತಿಲ್ಲ. ಆಗಬಹುದು ಸದ್ಯದಲ್ಲೇ.

ಹೇಳಿಕೇಳಿ ಮಾಜಿ ಚಿತ್ರನಟಿ. ಸಾಕಷ್ಟು ದುಡ್ಡು ಕಾಸಿದೆ. ಕೇಸ್ ಜಡಿದರೆ ಏನಾದರೂ ಗಿಟ್ಟೀತೋ ಎನ್ನುವ ಹುನ್ನಾರದಲ್ಲಿ ಸಾಕ್ಷಿ ಇಲ್ಲದಿದ್ದರೂ ಕೇಸ್ ಜಡಿದರೋ ಗೊತ್ತಿಲ್ಲ. ಮತ್ತೊಬ್ಬ ಮರಾಠಿ ನಟಿ ಶ್ರದ್ಧಾ ಮೆಂಗಳೆ ಮೇಲೆ ಕೂಡ ಬೇರೆ ತರಹದ ಕೇಸ್ ಜಡಿದಿದ್ದರು. ಜಡಿದವರು ಮತ್ತದೇ ಠಾಣೆ ಪೊಲೀಸರೇ. ಜಡಿಯುವುದರ ಮೇಲ್ವಿಚಾರಣೆಯನ್ನು ನೋಡಿದವರು ಮತ್ತದೇ ವಿವಾದಾತ್ಮಕ ಕಮಿಷನರ್ ಸಾಹೇಬರೇ. ಅದೇ ಮುಕೇಶ್ ಅಂಬಾನಿ ಮನೆ ಮುಂದೆ ಬಾಂಬಿಟ್ಟ ಪ್ರಕರಣದಲ್ಲಿ ಸಿಕ್ಕಾಕಿಕೊಂಡು, ಬೇರೆಯೆಲ್ಲರನ್ನೂ ಸಿಕ್ಕಿಸಿ, ತಾವು ಹೊರಗೆ ಬಂದ ಪರಂಬೀರ್ ಸಿಂಗ್ ಎನ್ನುವ ಹೈ ಪ್ರೊಫೈಲ್ ಪೊಲೀಸ್ ಅಧಿಕಾರಿ. ಈಗ ನಿವೃತ್ತರಾಗಿದ್ದಾರೆ. ಶ್ರದ್ಧಾ ಮೆಂಗಳೆ ಎಂಬ ನಟಿಗೆ ಜಾಮೀನು ಭಾಗ್ಯವೂ ಸಿಕ್ಕಿರಲಿಲ್ಲ. ಹಸುಗೂಸಿನ ತಾಯಿಯಾಗಿದ್ದ ಆಕೆ ಗಂಡನ ಜೊತೆ ಅದ್ಯಾರೋ ದೊಡ್ಡ ಐಎಎಸ್ ಅಧಿಕಾರಿಯನ್ನು ಬ್ಲಾಕ್ಮೇಲ್ / ಹನಿಟ್ರಾಪ್ ಮಾಡಲು ಹೋಗಿದ್ದಳು ಎನ್ನುವ ಆರೋಪಕ್ಕೆ ಸಿಲುಕಿದ್ದಳು. ಅವಳು ಮತ್ತು ಖಾಸಗಿ ಪತ್ತೇದಾರಿ ಕೆಲಸ ಮಾಡುವ ಆಕೆಯ ಗಂಡನ ಮೇಲೆ ಸಾಕಷ್ಟು ಬ್ಲಾಕ್ಮೇಲ್ ಆರೋಪಗಳು ಇದ್ದವು. ಈ ಬಾರಿ ದೊಡ್ಡ ಐಎಎಸ್ ಅಧಿಕಾರಿಗೆ ಸ್ಕೀಮ್ ಹಾಕಿದ್ದರು. ಆತನೂ ಏಳು ಕೆರೆ ನೀರು ಕುಡಿದ ಆಸಾಮಿಯೇ. ತನ್ನ ವ್ಯಾಪಕ ಸಂಪರ್ಕಗಳನ್ನು ಉಪಯೋಗಿಸಿದ. ಬ್ಲಾಕ್ಮೇಲ್ ಮಾಡುವವರಿಗೆ ಏಕೆ ದುಡ್ಡು ಕೊಡಲಿ? ಅದನ್ನೇ ಬೇರೆಯದಕ್ಕೆ ಖರ್ಚು ಮಾಡಿ ಈ ಬ್ಲಾಕ್ಮೇಲ್ ದಂಪತಿಗಳಿಗೆ ಒಂದು ಗತಿ ಕಾಣಿಸುತ್ತೇನೆ ಎಂದು ಪಣತೊಟ್ಟ ಪರಿಣಾಮ ಕೇಸ್ ಬಿತ್ತು. ಸಾದಾ ಕೇಸ್ ಸಾಲದ್ದಕ್ಕೆ ಡಾನ್ ರವಿ ಪೂಜಾರಿ ಬೇರೆ ಫೋನ್ ಮಾಡಿ ಆ ನಟಿಯ ಪರವಾಗಿ ಬೆದರಿಕೆ ಹಾಕಿದ ಎಂದು ಕೂಡ ಸೇರಿಸಿ, ಆಕೆ ಅತಿ ಕಠಿಣ ಮಕೋಕಾ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ ಒಳಗೆ ಹೋಗಿದ್ದಳು. ಎರಡು ಮೂರು ವರ್ಷದ ನಂತರ ಕೇಸಿನಿಂದಲೇ ಖುಲಾಸೆ. ಈ ಮಧ್ಯದಲ್ಲಿ ರವಿ ಪೂಜಾರಿಯನ್ನು ಆಫ್ರಿಕಾದಿಂದ ಎತ್ತಾಕಿಕೊಂಡು ಬಂದರು. ಮಮತಾ ಏನಾದರೂ ಇಲ್ಲೇ ಇದ್ದರೆ ಇಂತಹದೇ ಗತಿಯಾಗುತ್ತಿತ್ತೋ ಏನೋ. ನಮ್ಮಲ್ಲಿ ಕಾನೂನು ಪ್ರಕ್ರಿಯೆ ಹೇಗೆ ಅಂದರೆ process becomes the punishment. 

ಮಮತಾ ಕುಲಕರ್ಣಿಯ ಮೂಲ ಹೆಸರು ಪದ್ಮಾವತಿ ಕುಲಕರ್ಣಿ. ಅವಳೇ ಹೇಳಿಕೊಂಡಂತೆ ಅತ್ಯಂತ ಸಂಪ್ರದಾಯಸ್ಥ ಮರಾಠಿ ಕೊಂಕಣಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದವಳು. ತಂದೆ RTO ಅಧಿಕಾರಿ. ಅವಳ ತಾಯಿಗೆ ತಾನು ಚಿತ್ರನಟಿಯಾಗಬೇಕು ಎನ್ನುವ ಆಸೆ ಇತ್ತಂತೆ. ಆಗೆಲ್ಲ ಮಹಿಳೆಯರಿಗೆ ತುಂಬಾ ಕಟ್ಟುಪಾಡು ಇರುತ್ತಿತ್ತು. ಹದಿನಾರು ಹದಿನೆಂಟು ವರ್ಷಕ್ಕೆಲ್ಲ ಮದುವೆಯಾಗಿ ನಂತರ ಬೇಗನೆ ಮಕ್ಕಳಾಗಿ ಪತಿ, ಮಕ್ಕಳು, ಕುಟುಂಬ ಎಂದು ಅದೆಷ್ಟು ಸುಂದರಿಯರ ನಟಿಯಾಗುವ ಕನಸು ಕಮರಿ ಹೋಗಿತ್ತೋ. ಹೇಮಾಮಾಲಿನಿಯ ತಾಯಿ, ದುರಂತ ಅಂತ್ಯ ಕಂಡ ದಿವ್ಯಾ ಭಾರತಿಯ ತಾಯಿ ಎಲ್ಲ ಅದೇ ವರ್ಗಕ್ಕೆ ಸೇರಿದವರು. ಅವರ ಮಕ್ಕಳಿಗೆ ನಟಿಯಾಗಬೇಕು ಎಂದು ಅದೆಷ್ಟು ಆಸೆಯಿತ್ತೋ ಗೊತ್ತಿಲ್ಲ ಆದರೆ ತಾಯಿಯಂದಿಯರಿಗೆ ಮಾತ್ರ ಆ ಆಸೆ ಉತ್ಕಟವಾಗಿತ್ತು. ಹಾಗಾಗಿಯೇ ಮಕ್ಕಳ ಹಿಂದೆ ಕೈತೊಳೆದು ಕೊಂಡು ನಟಿಯಾಗು ಎಂದು ಹಿಂದೆ ಬಿದ್ದಿದ್ದರು. ಅದೃಷ್ಟವಿದ್ದವರು ಆದರು. ಇಲ್ಲದವರು ದುರಂತ ಅಂತ್ಯ ಕಂಡರು.

ಮಮತಾಳಿಗೆ ದೇವದತ್ತವಾದ ಸೌಂದರ್ಯವಿತ್ತು. ತಂದೆ RTO ಅಧಿಕಾರಿಯಾಗಿದ್ದರಿಂದ ಅನೇಕ ಸಿನೆಮಾ ಜನರ ಪರಿಚಯವಿತ್ತು. RTO ಬಹು ಮುಖ್ಯವಾದ ಹುದ್ದೆ. ಅನೇಕ ಸಿನೆಮಾ ದೊಡ್ಡ ಮಂದಿ ಇವಳ  ತಂದೆಯ ಸಹಾಯ ತೆಗೆದುಕೊಂಡಿದ್ದರೋ ಏನೋ. ಹಾಗಾಗಿ ಮಮತಾ ನಟಿಯಾಗಲು ಸಹಾಯ ಮಾಡಿರಬಹುದು. ತಾಯಿಗೆ ಅಷ್ಟು ಸಾಕಾಯಿತು. ಮಗಳನ್ನು ಬರೋಬ್ಬರಿ ತಯಾರ್ ಮಾಡಿದಳು. ಅಪ್ರತಿಮ ಸೌಂದರ್ಯ, ತಕ್ಕಮಟ್ಟಿನ ನಟನೆ ಎಲ್ಲ ಇತ್ತು. ಮಮತಾ ಆರಂಭದಲ್ಲಿ ತೆಲುಗಿನಲ್ಲಿ ಯಶಸ್ವಿಯಾದಳು. ಹಿಂದಿ ಚಿತ್ರರಂಗದ ಗಮನ ಸೆಳೆದಳು. ೧೯೯೦ ರ ದಶಕದಲ್ಲಿ ದೊಡ್ಡ ದೊಡ್ಡ ಹಿಟ್ ಚಿತ್ರಗಳನ್ನು ಕೊಟ್ಟಳು. ಐಟಂ ಹಾಡುಗಳ ನರ್ತಕಿಯಾಗಿ ತನ್ನ ಮಾದಕತೆಯಿಂದ ಬೇಕಾದ ಬೇಡವಾದ ಎಲ್ಲರ ಗಮನವನ್ನೂ ಸೆಳೆದಳು.

ಚಿತ್ರಗಳಲ್ಲಿ ಸಾಕಷ್ಟು ಬೋಲ್ಡಾಗಿ ನಟಿಸುತ್ತಿದ್ದ ನಟಿ ಮಮತಾ ಮತ್ತೂ 'ಎದೆ'ಗಾರಿಕೆ ತೋರಿಸುವ ಕೆಲಸಕ್ಕೆ ಇಳಿದುಬಿಟ್ಟಳು. ಸ್ಟಾರ್ ಡಸ್ಟ್ ಎನ್ನುವ ಅತ್ಯಂತ ಜನಪ್ರಿಯ ಸಿನೆಮಾ ಮಾಸಪತ್ರಿಕೆಯ ಮುಖಪುಟಕ್ಕೆ ತೆರೆದೆದೆಯ (topless)  ಪೋಸ್ ಕೊಟ್ಟುಬಿಟ್ಟಳು. ೧೯೯೦ ರ ಕಾಲದಲ್ಲಿ ಅದು ಬಹಳ ಸ್ಪೋಟಕ ವಿಷಯ. ಕಾಟಾಚಾರಕ್ಕೆ ಕೈಗಳಿಂದ ಎದೆ ಮುಚ್ಚಿಕೊಂಡಂತೆ ಮಾಡಿಕೊಂಡು ತನ್ನ ಅಮೂಲ್ಯ 'ಆಸ್ತಿಗಳ' ಪುಕ್ಕಟೆ ಧರ್ಮದರ್ಶನ ಮಾಡಿಸಿ ಮಾದಕ ನೋಟ ಬೀರಿದ್ದ ಮಮತಾಳ ಫೋಟೋ ಹೊಂದಿದ್ದ ಪತ್ರಿಕೆಯ ಆ ಸಂಚಿಕೆ ದಾಖಲೆ ಮಾರಾಟ ಕಂಡಿತ್ತು. 

ಹಾಗೆ ಫೋಟೋ ಹಾಕಿದ್ದಕ್ಕೆ ಆ ಪತ್ರಿಕೆ ಮೇಲೆ, ಪೋಸ್ ಕೊಟ್ಟಿದ್ದ ಮಮತಾ ಮೇಲೆ ಅಶ್ಲೀಲತೆ ಪ್ರದರ್ಶನ ಮಾಡಿದ್ದಕ್ಕೆ ಕೇಸ್ ಕೂಡ ಬಿದ್ದಿತ್ತು. ಎಷ್ಟೋ ವರ್ಷಗಳ ನಂತರ ಕ್ಷಮೆಯಾಚನೆ ಮಾಡಿದ್ದಕ್ಕೆ ಸಾಂಕೇತಿಕ ದಂಡ ಹಾಕಿ ಹಾಳಾಗಿ ಹೋಗು ಅಂದು ಬಿಟ್ಟು ಕಳಿಸಿತ್ತು ನ್ಯಾಯಾಲಯ.

ಆ ಪ್ರಚೋದಾತ್ಮಕ ಫೋಟೋ ನೋಡಿ ನಿದ್ದೆ ಬಿಟ್ಟು ಎದ್ದು ಕುಳಿತಿದ್ದು ದೇಶದ ಯುವಜನತೆ. ಆದರೆ ವಿಶೇಷ ಆಸಕ್ತಿ ತೆಗೆದುಕೊಂಡು ಠಣಾಂಗ್ ಎಂದು ತಾನಿದ್ದ ಐಷಾರಾಮಿ ಹಡಗಿನಲ್ಲೇ ಜಿಗಿದು ಕುಳಿತು ಕಾಮಾಸಕ್ತಿಯಿಂದ ಕನಲಿದವ ಭೂಗತಲೋಕದ ಡಾನ್ ಛೋಟಾ ರಾಜನ್. ಆಗ ಛೋಟಾ ರಾಜನ್ ಎಲ್ಲಿದ್ದ?? ೧೯೯೩ ರ  ಮುಂಬೈ ಸ್ಪೋಟದ ನಂತರ ದಾವೂದ್ ಇಬ್ರಾಹಿಂ ಗ್ಯಾಂಗಿನಿಂದ ಹೊರಬಂದಿದ್ದ ಛೋಟಾ ರಾಜನ್ ದುಬೈ ಬಿಟ್ಟು ಓಡಿದ್ದ. ಶತ್ರುಗಳಿಂದ ಕಾಪಾಡಿಕೊಳ್ಳಲು ಕೆಲ ಕಾಲ ಮಲೇಷ್ಯಾ ದೇಶದ ಹೊರಗೆ ಅಂತರರಾಷ್ಟ್ರೀಯ ಸಮುದ್ರದಲ್ಲಿ ಲಂಗರು ಹಾಕಿದ್ದ ಐಷಾರಾಮಿ ಹಡಗೊಂದರಲ್ಲಿ ಆತ ನೆಲೆಸಿದ್ದ. ಆತನನ್ನು ತಮ್ಮ ಕಾರ್ಯಗಳಿಗೆ ಬಳಸಿಕೊಳ್ಳಬೇಕು ಎಂದು ಯೋಜನೆ ಹಾಕಿದ್ದ ದೇಶ ವಿದೇಶಗಳ ಬೇಹುಗಾರಿಕೆ ಸಂಸ್ಥೆಗಳು ಆತನಿಗೆ ಆ ಸೌಭಾಗ್ಯ ಮತ್ತು ಸೌಕರ್ಯ ಕರುಣಿಸಿದ್ದವು ಎನ್ನುವ ಸುದ್ದಿ ಇತ್ತು.

ಭಾರತ ಮೂಲದ ಭೂಗತಲೋಕದ ಕುಳಗಳಿಗೆ ಧರ್ಮಪತ್ನಿಯರು ಯಾರಿದ್ದರೂ ಕರ್ಮಪತ್ನಿಯರು ಮಾತ್ರ ಬಾಲಿವುಡ್ಡಿನ ನಟಿಯರೇ ಆಗಬೇಕು. ದುಡ್ಡು ತಳ್ಳು ತಮಾಷೆ ನೋಡು. ಒಂದು ಸಿನೆಮಾದಲ್ಲಿ ಅವಕಾಶ, ಎಲ್ಲೋ ಸಿಕ್ಕಿ ಬಿದ್ದಿರುವ ದುಡ್ಡಿನ ವಸೂಲಿ, ಬೇರೆ ಗೂಂಡಾಗಳು, ರಾಜಕಾರಣಿಗಳು, ಪೊಲೀಸರಿಂದ ಉಪಟಳ ತಪ್ಪಿಸಿ...ಹೀಗೆ ಹಲವಾರು ಕಾರಣ ಹೇಳಿಕೊಂಡು ನಟಿಯರು ಭೂಗತ ಜಗತ್ತಿನ ಖದೀಮರಿಗೆ ಹತ್ತಿರವಾಗುತ್ತಿದ್ದರು. ಇನ್ನು ಕೆಲವರು ಶುದ್ಧ ಆಸೆಬುರುಕಿಯರು. ಅವರಿಗೆ ದೊಡ್ಡ ದೊಡ್ಡ ಅರಬ್ ಶ್ರೀಮಂತರಿಗೆ ಕೇಳಿದ್ದೆಲ್ಲ ಕೊಟ್ಟು, ಎಲ್ಲ ರೀತಿಯಲ್ಲಿ ಸೇವೆ ಮಾಡಿ ಭಯಂಕರ ರೊಕ್ಕ ಮಾಡಿಕೊಳ್ಳಬೇಕು. ಇರುವ ನಾಲ್ಕು ದಿನಗಳ ಯವ್ವನದಲ್ಲಿ ಸಿಕ್ಕಾಪಟ್ಟೆ ದುಡಿದುಬಿಡಬೇಕು ಎನ್ನುವ ಇರಾದೆ. ಹೇಗೂ ಅರಬ್ ಶ್ರೀಮಂತರು ಮತ್ತು ದುಬೈನಲ್ಲಿ ನೆಲೆಸಿರುವ ಡಾನ್ ಗಳು ಖಾಸಮ್ ಖಾಸ್ ಗೆಣೆಕಾರರು. ಹೀಗೆ ಬೇರೆ ಬೇರೆ ಕಾರಣಗಳಿಗೆ ದುಬೈನಲ್ಲಿ ಮಂಚ ಹತ್ತಿ ಬಂದವರು ಅನೇಕ ನಟಿಯರು. 

ಲಂಚ ಮಂಚ ಸ್ಕೀಮಿನ ಫಲಾನುಭವಿಗಳು ಅನೇಕರಾದರೂ ಹೆಸರು ಕೆಲವರದ್ದು ಮಾತ್ರ ಹೊರಗೆ ಬಂದಿದೆ. ಮಂದಾಕಿನಿ ದಾವೂದನ ಮಾಲು. ನಗ್ಮಾ, ಸೋನಿಕಾ ಗಿಲ್ ಅವನ ತಮ್ಮ ಅನೀಸ್ ಇಬ್ರಾಹಿಮ್ಮನ ಮಾಲುಗಳು. ಮೋನಿಕಾ ಬೇಡಿ ಮತ್ತೊಬ್ಬ ಪಾತಕಿ ಅಬು ಸಲೇಮನ ಮಾಲು. ಹೀನಾ ಕೌಸರ್ ಡ್ರಗ್ ಲಾರ್ಡ್ ಇಕ್ಬಾಲ್ ಮಿರ್ಚಿಯ ಅಧಿಕೃತ ಪತ್ನಿ. ಸೋನಾ ಎಂಬ ನಟಿ ಸ್ಮಗ್ಲರ್ ಹಾಜಿ ಮಸ್ತಾನನ ಪತ್ನಿ. ಶೈಲಾ ಎನ್ನುವ ನಟಿ ಇರ್ಫಾನ್ ಗೋಗಾ ಎನ್ನುವ ಕಿಡ್ನಾಪಿಂಗ್ ಕಿಂಗ್ ಪತ್ನಿ. ದುಬೈನಲ್ಲಿ ಹೋಟೆಲ್ ನಡೆಸುತ್ತಿದ್ದ ಸೋನಿಕಾ ಗಿಲ್ ಮತ್ತು ಕಲ್ಪನಾ ಐಯ್ಯರ್ ಎಂಬ ಮಾಜಿ ನಟಿಯರಿಗೆ ಹೋಟೆಲ್ ಹಾಕಿ ಕೊಟ್ಟವ ಅನಿಸ್ ಇಬ್ರಾಹಿಂ ಎನ್ನುವ ಗುಸುಗುಸು. ಹೀಗೆ ಒಬ್ಬಬ್ಬ ಡಾನ್ ಗಳ ಒಂದೋ ಎರಡೋ ಮಾಲುಗಳ ಹೆಸರುಗಳು ಮಾತ್ರ ಹೊರಗೆ ಬಂದಿವೆ. ಆದರೆ ಇಂಟರ್ನೆಟ್ ಸಮುದ್ರದ ಆಳದಲ್ಲಿ ಬಲೆ ಹಾಕಿ ಹುಡುಕುತ್ತಾ ಹೋದರೆ ಇನ್ನೂ ಅನೇಕ ನಟ ನಟಿಯರು ಇವತ್ತಿಗೂ ಬೇರೆ ಬೇರೆ ಪಾತಕಿಗಳ ಸೇವೆಯಲ್ಲಿ ಇದ್ದಾರೆ ಎನ್ನುವ ಮಾಹಿತಿ ಸಿಗುತ್ತದೆ. 

ಬಾಲಿವುಡ್ ನಟಿಯರು, ಭಾರತದ ಹೈಟೆಕ್ ವೇಶ್ಯೆಯರು ವಿಶ್ವದ ತುಂಬೆಲ್ಲಾ ಅದೆಷ್ಟು ಜನಪ್ರಿಯರು ಎಂದರೆ ದೂರದ ಆಫ್ರಿಕಾದ ನೈಜೇರಿಯಾದ ಪರಮ ಕ್ರೂರಿ ಸರ್ವಾಧಿಕಾರಿ ಸಾನಿ ಅಬಾಚಾ ಸತ್ತು ಬಿದ್ದಾಗ ಅವನ ಜೊತೆಯಲ್ಲಿ ಇದ್ದವರೂ ನಮ್ಮ ಸುಂದರಿಯರೇ ಆಗಿದ್ದರ ಬಗ್ಗೆ ಏನು ಹೇಳೋಣ?? ಹೆಮ್ಮೆ ಪಡೋಣವೇ??? ಸ್ಪೋಟಕ ವಿಷಯವೆಂದರೆ ನಾಲ್ಕಾರು ಭಾರತೀಯ ಬೆಲೆವೆಣ್ಣುಗಳ ಮಧ್ಯೆ ಕಾಮೋತ್ತೇಜಕ ಮಾತ್ರೆಗಳನ್ನು ತೆಗೆದುಕೊಂಡು ಜಿಗಿಜಿಗಿದು ಪೌರುಷ ಮೆರೆಯುತ್ತಿದ್ದ ಸರ್ವಾಧಿಕಾರಿ ಸಾನಿ ಅಬಾಚಾ ಒಮ್ಮೆಲೇ ಠಾ ಎಂದು ಉದ್ಗರಿಸಿ ಸತ್ತುಹೋಗಿದ್ದು. ಬೆಲೆವೆಣ್ಣುಗಳ ಮೂಲಕ ಅವನಿಗೆ ವಿಷಪ್ರಾಶನ ಮಾಡಿಸಿದರೇ?  ಅದರ ಉಸ್ತುವಾರಿಯನ್ನು ಇಸ್ರೇಲಿ ಬೇಹುಗಾರಿಕೆ ಸಂಸ್ಥೆ ವಹಿಸಿಕೊಂಡಿತ್ತೇ?? ಅದರ ಹಿಂದಿನ ಕಾರಣ ಅಬಾಚಾ ಗಳಿಸಿದ್ದ ಹಲವಾರು ಬಿಲಿಯನ್ ಡಾಲರುಗಳ ಅಕ್ರಮ ಸಂಪತ್ತಿತ್ತೇ?? ಹೀಗೆ ಅನೇಕ ಕುತೂಹಲಕಾರಿ ಅಂಶಗಳಿವೆ. ಮತ್ತೊಮ್ಮೆ ಅದರ ಬಗ್ಗೆ ಬರೆಯೋಣ. ನಮ್ಮ ಬೆಲೆವೆಣ್ಣುಗಳ ಜನಪ್ರಿಯತೆ ಬೇಡಿಕೆ ಎಲ್ಲ ಕಡೆ ಹೇಗೆಲ್ಲಾ ಇತ್ತು ಎನ್ನುವ ಮಾತಿಗೆ ಹೇಳಿದ್ದು. ಇಂತಹದೇ ವರ್ಗಕ್ಕೆ ಸೇರಿದವಳು ಮಾಜಿ ಮಿಸ್ ಇಂಡಿಯಾ ಪಮೇಲಾ ಚೌಧರಿ ಉರ್ಫ್ ಪಮೇಲಾ ಬೋರ್ಡೆಸ್. ಅವಳ ವ್ಯಾಪ್ತಿ ಲಿಬಿಯಾದ ಸರ್ವಾಧಿಕಾರಿ ಗಡಾಫಿವರೆಗೂ ಇತ್ತು. 

ಮಮತಾ ಕುಲಕರ್ಣಿಯ ವಿಷಯಕ್ಕೆ ಮರಳಿದರೆ...ಭಯಂಕರ 'ಎದೆ'ಗಾರಿಕೆ ತೋರಿಸಿ ತೆರೆದೆದೆಯ ದರ್ಶನ ಮಾಡಿಸಿದ ಮಮತಾ ಕುಲಕರ್ಣಿ ಕಾರಣದಿಂದ ಪೂರ್ತಿ ಹುಚ್ಚನಾದವ ಡಾನ್ ಛೋಟಾ ರಾಜನ್. ಅವಳನ್ನು ಅನುಭವಿಸಲೇಬೇಕು ಎಂದುಕೊಂಡು ಬಾಲಿವುಡ್ಡಿನಲ್ಲಿ ತನ್ನ ಸೂತ್ರಗಳನ್ನು ಎಳೆಯತೊಡಗಿದ. ದಾವೂದ್ ಇಬ್ರಾಹಿಂನ ರೊಕ್ಕವನ್ನು ಬಾಲಿವುಡ್ಡಿನಲ್ಲಿ ಸಂಬಾಳಿಸುತ್ತಿದ್ದ ಮುಕೇಶ್ ದುಗ್ಗಲ್ ಎಂಬ ನಿರ್ಮಾಪಕ ಕಮ್ ನಿರ್ದೇಶಕನನ್ನು ತನ್ನತ್ತ ಸೆಳೆಯಲು ನೋಡಿದ. ಅದರಲ್ಲಿ ತಕ್ಕಮಟ್ಟಿಗೆ ಯಶಸ್ವಿ ಕೂಡ ಆದ. ಆ ದುಗ್ಗಲ್ ಪುಣ್ಯಾತ್ಮ ಮಮತಾ ಕುಲಕರ್ಣಿಯನ್ನು ಛೋಟಾ ರಾಜನ್ ನಿಗೆ ಅರ್ಪಿಸಿದನೇ?? ಗೊತ್ತಿಲ್ಲ. ಇನ್ನೊಬ್ಬ ನಟಿ ಮೋನಿಕಾ ಬೇಡಿಯನ್ನು ಅಬು ಸಲೇಮನಿಗೆ ನಂಟು ಮಾಡಿ ಕೊಟ್ಟವ ಮಾತ್ರ ಅವನೇ ಎಂದು ದಾಖಲಾಗಿದೆ. ಮುಕೇಶ್ ದುಗ್ಗಲ್ ಬೇಗನೆ ಶಿವನ ಪಾದ ಸೇರಿಕೊಂಡ. ಇತ್ತ ದಾವೂದನ ರೊಕ್ಕವನ್ನೂ ತೆಗೆದುಕೊಳ್ಳುತ್ತಾ ಅತ್ತ ಕಡೆ ಛೋಟಾ ರಾಜನ್ನನಿಗೂ ಸೇವೆ ಮಾಡುತ್ತಾ ಇರುವ ವಿಷಯ ದಾವೂದ್ ಗ್ಯಾಂಗಿಗೆ ತಿಳಿಯಲು ಜಾಸ್ತಿ ವೇಳೆ ಹಿಡಿಯಲಿಲ್ಲ. ಅವನನ್ನು "ಎತ್ತಿಬಿಡಿ" ಎಂದು ಆಜ್ಞೆ ಮಾಡಿಬಿಟ್ಟ ಛೋಟಾ ಶಕೀಲ್. ಮುಕೇಶ್ ದುಗ್ಗಲ್ ಮಾಫಿಯಾ ಗುಂಡಿಗೆ ಬಲಿಯಾದ. ಇದೇ ರೀತಿ ದಿನೇಶ್ ಆನಂದ ಎನ್ನುವ ನಟ ಜೀವ ಕಳೆದುಕೊಂಡ. ಸೂಪರ್ ಸ್ಟಾರ್ ನಟಿಯರ ಕಾರ್ಯದರ್ಶಿ ಅಜಿತ್ ದೇವಾನಿ ಗುಂಡಿಗೆ ಬಲಿಯಾದ. ಅವನು ಒಂದು ಕಾಲದಲ್ಲಿ ಮಂದಾಕಿನಿ (ಅದೇ ದಾವೂದ್ ಇಬ್ರಾಹಿಂ ಕುಖ್ಯಾತಿಯ) ಮತ್ತು ನಟಿ ಮನಿಷಾ ಕೊಯಿಲಾರಾಳ ಸಿನೆಮಾ ಕರಿಯರ್ ಸಂಬಾಳಿಸಿದ ವ್ಯಕ್ತಿ. ಅಜಿತ್ ದೇವಾನಿಯ ಹತ್ಯೆ ನಟಿ ಮನಿಷಾ ಕೊಯಿರಾಲಾ ಕೊಟ್ಟ ಸುಪಾರಿಯಾಗಿತ್ತೇ ಎನ್ನುವ ಗುಲ್ಲು ಎದ್ದಿತ್ತು. ಏಕೆಂದರೆ ವಿದೇಶದಿಂದ ಬಂಧಿಸಿ ತಂದಿದ್ದ ಭೂಗತ ಪಾತಕಿ ಅಬು ಸಲೇಮನನ್ನು ಮಂಪರು ಪರೀಕ್ಷೆಗೆ ಗುರಿಪಡಿಸಿದಾಗ ಆತ ಕಾರಿಕೊಂಡಿದ್ದ ಅನೇಕ ಭಯಾನಕ ವಿಷಯಗಳಲ್ಲಿ ಅದೂ ಒಂದಾಗಿತ್ತು. ಮನಿಷಾ ಅನೀಸ್ ಇಬ್ರಾಹಿಂನಿಗೆ ತನ್ನ ಕಾರ್ಯದರ್ಶಿ ದೇವಾನಿ ದುಡ್ಡು ನುಂಗಿದ್ದಾನೆ ಎಂದು ದೂರು ಕೊಟ್ಟಿದ್ದಳು. ಅನೀಸ್ ದೇವಾನಿಯನ್ನು ಎತ್ತಿಸಿಬಿಟ್ಟ ಎಂದಿದ್ದ ಮಂಪರಿನಲ್ಲಿದ್ದ ಅಬು ಸಲೇಮ್.  ಅದಕ್ಕೆ ಪೂರಕವೆಂಬಂತೆ ಆಕೆಯನ್ನು ಯಾರೂ ಏನೂ ಕೇಳಿಯೇ ಇರಲಿಲ್ಲ. ಆದರೂ "ನಾನವಳಲ್ಲ, ನಾನವಳಲ್ಲ" ಎಂದು ಅಳುತ್ತಾ ಮನಿಷಾ ಏಕೆ ಅಂದಿನ ಮುಂಬೈ ಪೊಲೀಸ್ ಕಮಿಷನರನ್ನು ಭೇಟಿಯಾದಳು? ಮುಂದೆ ಕೆಲವೇ ದಿನಗಳಲ್ಲಿ ಆ ಕಮಿಷನರ್ ಎತ್ತಂಗಡಿ ಆಗಿದ್ದು ಕಾಕತಾಳೀಯವೇ ಎನ್ನುವ ಸಂಶಯ ಕಾಡಿತ್ತು. ಆದರೆ ಅಜಿತ್ ದೇವಾನಿ ಹತ್ಯೆಯ ತನಿಖೆ ಮಾಡಿದ ಪೊಲೀಸರು ಮನಿಷಾ ಕೊಯಿರಾಲಾಳಿಗೆ ಕ್ಲೀನ್ ಚಿಟ್ ಕೊಟ್ಟುಬಿಟ್ಟಿದ್ದರಿಂದ ಆಕೆ ಬಚಾವು. ಯಾರೂ ಏನೂ ಹೇಳುವಂತಿಲ್ಲ.

ಡಾನ್ ಛೋಟಾ ರಾಜನ್ನನ ಅವಿರತ ಪ್ರಯತ್ನದಿಂದ ಮಮತಾ ಛೋಟಾ ರಾಜನ್ ಮಾಲು ಎಂದು ಬಾಲಿವುಡ್ ತುಂಬಾ ಗುಸುಗುಸು. ಹೆಚ್ಚಿನ ವಿವರಗಳಾಗಲೀ ಫೋಟೋಗಳಾಗಲೀ ಸಿಕ್ಕಿಲ್ಲ. 

ಬಾಲಿವುಡ್ಡಿನಲ್ಲಿ ಮಮತಾಳ ಜನಪ್ರಿಯತೆ ಇಳಿಮುಖವಾಗತೊಡಗಿದಾಗ ಒಂದು ಲಫಡಾ ಆಗಿ ಬಹಳ ದೊಡ್ಡ ಸುದ್ದಿ ಮಾಡಿತು. ರಾಜಕುಮಾರ್ ಸಂತೋಷಿ...ಬಾಲಿವುಡ್ಡಿನ ದೊಡ್ಡ ನಿರ್ದೇಶಕ, ನಿರ್ಮಾಪಕ. ಅನೇಕರನ್ನು ನಟ ನಟಿಯರನ್ನಾಗಿ ಮಾಡಿದ ಮತ್ತು ತನಗೆ ಬಗ್ಗದವರನ್ನು ಸದೆಬಡಿದ ಖ್ಯಾತಿ ಕುಖ್ಯಾತಿ ಎರಡೂ ಇರುವ ದೊಡ್ಡ ಮನುಷ್ಯ. ಇಂತಹ ದೊಡ್ಡ ಮನುಷ್ಯ "ಚೈನಾ ಗೇಟ್" ಎನ್ನುವ ದೊಡ್ಡ ಬಜೆಟ್ಟಿನ ಚಿತ್ರಕ್ಕೆ ಕೈಹಾಕಿದ. ಮಮತಾ ಕುಲಕರ್ಣಿಯನ್ನು ಪ್ರಮುಖ ಪಾತ್ರಕ್ಕೆ ಆಯ್ಕೆ ಮಾಡಿದ್ದ. ಮಧ್ಯೆ ಈ ಸಂತೋಷಿ ಮತ್ತು ಮಮತಾ ಮಧ್ಯೆ ಏನೋ ಕಿರಿಕ್ ಆಯಿತು. ಮಮತಾಳನ್ನು ಚಿತ್ರದಿಂದ ತೆಗೆದುಬಿಟ್ಟ. ಇವಳು ಇಲ್ಲದ ಗದ್ದಲ ಎಬ್ಬಿಸಿದಳು. "ನಿರ್ಮಾಪಕ ಸಂತೋಷಿ ನನ್ನ ಬಲಾತ್ಕಾರಕ್ಕೆ ಪ್ರಯತ್ನಿಸಿದ್ದ. ನಾನು ವಿರೋಧಿಸಿದೆ. ಪ್ರತಿಕಾರವೆಂಬಂತೆ ಸಿನೆಮಾದಿಂದ ತೆಗೆದಿದ್ದಾನೆ," ಎಂದು ಮಮತಾ ಆರೋಪ ಮಾಡಿದಳು. ಆದರೆ ಅದೆಲ್ಲೂ ಹೋಗಲಿಲ್ಲ. ತಣ್ಣಗಾಯಿತು. ಸಂತೋಷಿ ಕ್ಯಾರೇ ಮಾಡದೇ ಊರ್ಮಿಳಾ ಮಾತೊಂಡಕರ್ ಎನ್ನುವ ಮತ್ತೊಬ್ಬ ನಟಿಯೊಂದಿಗೆ ಚಿತ್ರ ಮುಂದುವರೆಸಿದ.

ಆಗ ಬಂತು ನೋಡಿ ಸಂತೋಷಿಗೆ ಒಂದು ಫೋನ್ ಕಾಲ್. ಫೋನ್ ಎತ್ತಿದ ಸಂತೋಷಿಯ ಮುಖದಲ್ಲಿ ಸಂತೋಷ ಮಾಯವಾಗಿ ಮುಖ ಕಪ್ಪಿಟ್ಟಿತು. ಆಕಡೆಯಿಂದ ಡಾನ್ ಛೋಟಾ ರಾಜನ್ ಅಬ್ಬರಿಸುತ್ತಿದ್ದ. ಮುಂಬೈ ಭೂಗತ ಲೋಕದ ಭಯಂಕರ ಬೈಗಳನ್ನು ಬರೋಬ್ಬರಿ ಪೂಜೆಗೆ ಹೂವಿನಂತೆ ಎರಚುತ್ತಾ ಅಬ್ಬರಿಸುತ್ತಿದ್ದ. ಥಂಡಾ ಹೊಡೆದು ಮೈಯೆಲ್ಲಾ ಬೆವರಿದ ಸಂತೋಷಿ, "ಓಕೆ ನಾನಾ ಭಾಯ್. ಎಲ್ಲ ನೀವು ಹೇಳಿದ ತರಹವೇ ಆಗುತ್ತದೆ," ಎಂದು ಉಸುರಿ ಫೋನಿಡುವಾಗ ಥರ ಥರ ಕಂಪಿಸುತ್ತಿದ್ದ. ಮುಕೇಶ್ ದುಗ್ಗಲ್, ದಿನೇಶ ಆನಂದ, ಅಜಿತ್ ದೇವಾನಿ, ಗುಲಶನ್ ಕುಮಾರ್, ಜಾವೇದ್ ಸಿದ್ದಿಕಿ, ಅಶ್ರಫ್ ಪಟೇಲ್, ತಾಕಿಯುದ್ದೀನ್ ವಾಹಿದ್ ಮುಂತಾದ ಭೂಗತರ ಗುಂಡುಗಳಿಗೆ ಬಲಿಯಾದ ಬಾಲಿವುಡ್ ಮತ್ತು ಬಿಸಿನೆಸ್ ಜನರ ಪ್ರೇತಾತ್ಮಗಳು ಸಂತೋಷಿಯನ್ನು ಸುತ್ತುವರೆದು ಕೀ ಕೀ ಎನ್ನುತ್ತಾ ಮೆದುಳಿಗೇ ಕೈಹಾಕಿದಂತೆ ಭಾಸವಾಯಿತು. ಡಾನ್ ಛೋಟಾ ರಾಜನ್ ಮಾತು ಕೇಳದಿದ್ದರೆ ತಾನೂ ಭೂಗತರ ಗುಂಡುಗಳಿಗೆ ಬಲಿಯಾಗಿ ಆ ಪ್ರೇತಾತ್ಮಗಳ ಜೊತೆ ಸೇರಿ ಕೀ ಕೀ ಎನ್ನಬೇಕಾದೀತು ಎಂದವನೇ ಮಮತಾಳಿಗೆ ಬರಲು ಹೇಳಿಕಳಿಸಿದ ಸಂತೋಷಿ.

ಅತಿ ಆಶ್ಚರ್ಯವೆಂಬಂತೆ "ಚೈನಾ ಗೇಟ್" ಚಿತ್ರದಿಂದ ಗೇಟ್ ಪಾಸ್ ಪಡೆದು ಹೊರಗೆ ಹೋಗಿದ್ದ ಮಮತಾ ಮತ್ತೆ ಚಿತ್ರ ತಂಡಕ್ಕೆ ಮರಳಿ ಸೇರಿಕೊಂಡಳು. ಚಿತ್ರೀಕರಣದಲ್ಲಿ ಭಾಗವಹಿಸಿದಳು. ಆಕೆಯ ಭೂಗತಲೋಕದ ಗೆಳೆಯ ಛೋಟಾ ರಾಜನ್ ನಿಂದ ಬರೋಬ್ಬರಿ ಬೆಂಡೆತ್ತಿಸಿಕೊಂಡಿದ್ದ ಸಂತೋಷಿ ಕಮಕ್ ಕಿಮಕ್ ಅನ್ನದೇ ಚಿತ್ರೀಕರಣ ಮುಗಿಸಿಕೊಟ್ಟ. ಆದರೆ ಎಡಿಟಿಂಗ್ ಸಮಯದಲ್ಲಿ ಕತ್ತರಿ ಹಿಡಿದು ಕೂತ ಸಂತೋಷಿ ಮಮತಾ ಇದ್ದ ಸೀನ್ ಗಳನ್ನು ಯದ್ವಾ ತದ್ವಾ ಕತ್ತರಿಸಿ ಮಮತಾಳ ಪಾತ್ರವನ್ನು ಯಾರೋ ಯಃಕಶ್ಚಿತ ಎಕ್ಸಟ್ರಾ ನಟಿಯ ಪಾತ್ರಕ್ಕೆ ಇಳಿಸಿಬಿಟ್ಟ. ಆ ರೀತಿ ಸೇಡು ತೀರಿಸಿಕೊಂಡ. ಮತ್ತೊಬ್ಬ ನಟಿ ಊರ್ಮಿಳಾ ಮಾತೋಂಡ್ಕರ್ ಸಿಕ್ಕಾಪಟ್ಟೆ ಸ್ಕೋಪ್ ಪಡೆದುಬಿಟ್ಟಳು. ತುಂಬಾ ಜನಪ್ರಿಯವಾದ "ಛಮ್ಮಾ ಛಮ್ಮಾ" ಹಾಡು ಅವಳ ಪಾಲಾಗಿತ್ತು. ಇದೆಲ್ಲ ಮಮತಾಳಿಗೆ ಯಾವಾಗ ತಿಳಿಯಿತೋ ಗೊತ್ತಿಲ್ಲ. ಆದರೆ ಆಗ ಛೋಟಾ ರಾಜನ್ ಮತ್ತೆ ಈ ವಿಷಯದಲ್ಲಿ ತಲೆ ಹಾಕಿದಂತೆ ಕಂಡು ಬರಲಿಲ್ಲ. ಮತ್ತೆ ಎಲ್ಲ ನಿರ್ಮಾಪಕರಂತೆ ಸಂತೋಷಿ ಕೂಡ ಹೊಸ ಚಿತ್ರ ಮುಗಿದ ಬಳಿಕ ಎಲ್ಲ ಡಾನ್ ಗಳಿಗೆ ಕೊಡುವಷ್ಟು ಕಪ್ಪು ಕಾಣಿಕೆ, ತಪ್ಪು ಕಾಣಿಕೆ ಇತ್ಯಾದಿ ಕೊಟ್ಟು ಕೈಮುಗಿದು ಸಾಷ್ಟಾಂಗ ಕೂಡ ಹಾಕಿಬಿಟ್ಟಿದ್ದ. ತಾನಿದ್ದಲ್ಲಿಗೆ ಎಂದೋ ಬಂದು ಕೆಲವು ಬಾರಿ ಹಾಸಿಗೆ ಬೆಚ್ಚಗೆ ಮಾಡಿ ಸುಖ ಕೊಟ್ಟು ಹೋಗಿದ್ದ ಮಮತಾಳಿಗೆ ರಾಜನ್ ಹೆಚ್ಚಿಗೆ ಮತ್ತೇನೂ ಮಾಡಲಿಲ್ಲ. "ಚೈನಾ ಗೇಟ್" ಚಿತ್ರ ತುಂಬಾ ಯಶಸ್ವಿಯಾಯಿತು. ತನ್ನ ಮಹತ್ವ ಕಮ್ಮಿಯಾಗಿದ್ದು ಕಂಡು ಮಮತಾ ಕೊತಕೊತ ಕುದ್ದುಕೊಂಡಳು ಬಿಟ್ಟರೆ ಮತ್ತೇನೂ ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ.

ಛೋಟಾ ರಾಜನ್ನನ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ ನಿರ್ಮಾಪಕ ಸಂತೋಷಿ ಶಿಸ್ತುಬದ್ಧವಾಗಿ ಮಮತಾಳ ಸಿನಿಮಾ ವೃತ್ತಿಜೀವನಕ್ಕೆ ಕೊಡಲಿಯಿಟ್ಟ. ದಾವೂದ್ ಇಬ್ರಾಹಿಂನ ಮಾಲು ಮಂದಾಕಿನಿ. ಆಕೆಯನ್ನು ಹಾಕಿಕೊಂಡರೆ ಯಾವಾಗ ಏನು ತಲೆನೋವು ಬರುತ್ತದೆ ಗೊತ್ತಿಲ್ಲ. ಸುಮ್ಮನೇ ಏಕೆ ಸಮಸ್ಯೆಯನ್ನು ಕರೆಸಿಕೊಳ್ಳಬೇಕು ಎಂದು ಬಾಲಿವುಡ್ ಮಂದಿ ಮಂದಾಕಿನಿ, ಹಾಗೆಯೇ ಮೋನಿಕಾ ಬೇಡಿ, ಮುಂತಾದ ಭೂಗತರ ಗೆಳತಿಯರನ್ನು avoid ಮಾಡುತ್ತಿದ್ದರೋ ಅದೇ ಮಮತಾಳಿಗೂ ಆಯಿತು. ಅವಕಾಶಗಳು ಪೂರ್ತಿ ಒಣಗಿ ಹೋಗತೊಡಗಿದವು. ಬಾಲಿವುಡ್ ಒಳಗೇ ಮತ್ತೊಂದು ಮಾಫಿಯಾ ಇದೆ. ನಿರ್ಮಾಪಕ ನಿರ್ದೇಶಕರ ಸಾಫ್ಟ್ ಮಾಫಿಯಾ. ಅದು ತುಂಬಾ ಬಲಿಷ್ಠವಾಗಿದೆ ಮತ್ತು ಅವರೊಡನೆ ಅವರು ಹೇಳಿದ ರೀತಿಯಲ್ಲಿ ಹೊಂದಾಣಿಕೆ (compromise) ಮಾಡಿಕೊಳ್ಳದಿದ್ದರೆ ಯಾರ ಭವಿಷ್ಯವನ್ನು ಬೇಕಾದರೂ ಅವರು ಮುರಿದು ಎಸೆಯಬಲ್ಲರು ಎಂದು ಗೊತ್ತಾಗುವ ಹೊತ್ತಿಗೆ ಮಮತಾ ಬಾಲಿವುಡ್ಡಿಗೆ ಸಂಪೂರ್ಣವಾಗಿ ಅಪ್ರಸ್ತುತಳೂ ಮತ್ತು ಅಪಥ್ಯವೂ ಆಗಿದ್ದು ದುರಂತ.

2000 ಇಸ್ವಿಯಲ್ಲಿ ಥಾಯ್ಲೆಂಡಿನ ಬ್ಯಾಂಕಾಕ್ ನಲ್ಲಿ ದಾವೂದ್ ಇಬ್ರಾಹಿಂ ಕಡೆಯವರು ಮಾಡಿದ ಹತ್ಯಾ ಪ್ರಯತ್ನದಲ್ಲಿ ಗುಂಡೇಟು ತಿಂದರೂ ಪವಾಡ ಸದೃಶ್ಯ ರೀತಿಯಲ್ಲಿ ಬಚಾವಾದ ಡಾನ್ ಛೋಟಾ ರಾಜನ್ ದೇಶ ವಿದೇಶಗಳ ಬೇಹುಗಾರಿಕೆ ಸಂಸ್ಥೆಗಳ ಸಹಾಯದಿಂದ ಇರಾನಿನಲ್ಲಿ ನೆಲೆಗೊಂಡ. ತೀವ್ರ ಮಧುಮೇಹಿಯಾಗಿದ್ದ ಆತ ಗುಂಡೇಟಿನಿಂದ ಆದ ಗಾಯಗಳಿಂದ ಚೇತರಿಸಿಕೊಳ್ಳಲು ತುಂಬಾ ಸಮಯ ಬೇಕಾಯಿತು. ಮತ್ತೆ ವೈಯಕ್ತಿಕ ಸುರಕ್ಷೆ ತುಂಬಾ ಮುಖ್ಯವಾಗಿತ್ತು. ಹಾಗಾಗಿ ಹೊರಗಿನ ಜನರ ಸಂಪರ್ಕ ಕಡಿದುಕೊಂಡ. ಭೂಗತಲೋಕವನ್ನು ಕಂಪ್ಯೂಟರ್ ಮತ್ತು ಫೋನ್ ಮೂಲಕ ಸಂಬಾಳಿಸತೊಡಗಿದ. ಇರಾನಿನಲ್ಲಿ ಆತನ ಮನೆ ಕೆಲಸ ಮಾಡಿಕೊಂಡಿದ್ದ ಮಹಿಳೆಯನ್ನೇ ಶಾದಿ ಮಾಡಿಕೊಂಡು ಅವಳಿಗೊಂದು ಮಗುವನ್ನೂ ಕರುಣಿಸಿಬಿಟ್ಟ. ಮಮತಾ ಮುಂತಾದ ಬಾಲಿವುಡ್ಡಿನ ಮಾಲೆಲ್ಲ ಆತನಿಗೆ ಹಳೆಯ ಸರಕಾಗಿಹೋಗಿತ್ತು.

ಈ ಸಮಯದಲ್ಲಿ ಮಮತಾಳಿಗೆ ಗಂಟು ಬಿದ್ದವ ದುಬೈನಲ್ಲಿ ಕುಳಿತು ಮೇಲ್ನೋಟಕ್ಕೆ ಎಂಪೈರ್ ಹೋಟೆಲ್ ಸಮೂಹದ ಮಾಲೀಕ ಎಂದು ಪೋಸ್ ಕೊಡುತ್ತಾ ದೊಡ್ಡ ಮಟ್ಟದ ಡ್ರಗ್ ದಂಧೆ ಮಾಡುತ್ತಿದ್ದ ವಿಕಿ ಗೋಸ್ವಾಮಿ. ಆತ ಎಂದಿನಿಂದಲೋ ಇವಳ ಫ್ಯಾನ್ ಆಗಿದ್ದನಂತೆ. ಅಷ್ಟೇ ಮೊದಲು  ಚಾನ್ಸ್ ಸಿಗಲಿಲ್ಲ. ಅವನ ಅಪ್ಪನಂತಹ ಡಾನ್ ಛೋಟಾ ರಾಜನ್ ಮಮತಾಳನ್ನು exclusive ಆಗಿ ಕಬ್ಜಾ ಮಾಡಿಕೊಂಡು ಕೂತಿದ್ದ. ಸಿಂಹದ ಮಾಲಿಗೆ ನಾಯಿ ನರಿ ಬಾಯಿ ಹಾಕುವುದಿಲ್ಲ. ಸಿಂಹ ತಿಂದು ಮುಗಿಸಿ ದೂರ ಹೋದ ನಂತರ ಅಪಾಯವಿಲ್ಲ ಎಂದಾಗ ಮಾತ್ರ ಅವು ಉಳಿದ ಬಳಿದ ಚೂರು ಪಾರಿಗೆ ಜೊಲ್ಲು ಸುರಿಸುತ್ತ ಬರುತ್ತವೆ. ವಿಕಿ ಗೋಸ್ವಾಮಿಯದು ಇದೇ ಪರಿಸ್ಥಿತಿ.

ಸಂತೋಷಿ ಹಾಕಿದ ಸ್ಕೆಚ್ ನಿಂದ ಒಂದು ರೀತಿಯಲ್ಲಿ ಬಾಲಿವುಡ್ಡಿನಿಂದ ಬಹಿಷ್ಕಾರ ಹಾಕಿಸಿಕೊಂಡು ಓತ್ಲಾ ಹೊಡೆಯುತ್ತಾ ಖಾಲಿ ಕೂತಿದ್ದ ಮಮತಾಳಿಗೆ ದುಬೈನಿಂದ ಬಿಟ್ಟೂ ಬಿಡದೆ ಫೋನ್ ಮಾಡುತ್ತಿದ್ದ ಗೋಸ್ವಾಮಿ ಅವಳನ್ನು ಪಟಾಯಿಸಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಗೋಸ್ವಾಮಿಯ ಜೊತೆಗಿರಲು 2002 ರ ಹೊತ್ತಿಗೆ ಮಮತಾ ದುಬೈಗೆ ಶಿಫ್ಟ್ ಆದಳು. ಚಿತ್ರರಂಗದಿಂದ ಸಂಪೂರ್ಣವಾಗಿ ಮಾಯವಾದಳು. ಅವಳ ಬಗ್ಗೆ ಹೆಚ್ಚಿನ ಮಾಹಿತಿ ಆಗ ಕೇಳಿದರೂ ಸಿಗುತ್ತಿರಲಿಲ್ಲ.

ದುಬೈಗೆ ಶಿಫ್ಟ್ ಆಗುವ ಮೊದಲು ಮುಂಬೈನಲ್ಲಿ ಮತ್ತೊಂದು ಲಫಡಾ ಮಾಡಿಕೊಂಡಳು ಮಮತಾ ಕುಲಕರ್ಣಿ. 

ಒಂದು ದಿನ ರಾತ್ರಿ ಕೆಲವರು ಒಬ್ಬ ಯುವತಿಯನ್ನು ಕರೆದುಕೊಂಡು ಮತ್ತು ನಾಲ್ಕಾರು ಯುವಕರನ್ನು ಎಳೆದುಕೊಂಡು ಓಶಿವಾರಾ ಪೊಲೀಸ್ ಠಾಣೆಗೆ ಬಂದರು. ಯಾವುದೋ ಟ್ರಾಫಿಕ್ ಸಿಗ್ನಲ್ ಒಂದರಲ್ಲಿ ಒಂದು ಕಾರ್ ನಿಂತಿತ್ತು. ಅಚಾನಕ್ಕಾಗಿ ಅದರಿಂದ ಕಾಪಾಡಿ!! ಕಾಪಾಡಿ!! ಎನ್ನುವ ಮಹಿಳೆಯ ಮೊರೆ ಕೇಳಿಬಂತು. "ನನ್ನನ್ನು ಕಾಪಾಡಿ! ಕಿಡ್ನ್ಯಾಪ್ ಮಾಡುತ್ತಿದ್ದಾರೆ. ಕಾಪಾಡಿ!" ಎಂದು ಮಹಿಳೆ ಕಷ್ಟಪಟ್ಟು ಹೇಗೋ ಮಾಡಿ ಕಾರಿನ ಕಿಟಕಿಯಿಂದ ಬೊಬ್ಬೆ ಹಾಕುತ್ತಿದ್ದಳು. ಒಳಗಿದ್ದ ದಾಂಡಿಗರು ಅವಳನ್ನು ಬಲವಂತದಿಂದ ಸುಮ್ಮನಿರಿಸಿ ಅಲ್ಲಿಂದ ಪರಾರಿಯಾಗಲು ನೋಡಿದರು. ಸುತ್ತುವರೆದ ಜನ ಬಿಡಲಿಲ್ಲ. ವಾಡಿಕೆಯಂತೆ ನಾಲ್ಕು ಧರ್ಮದೇಟು ಕೊಟ್ಟಿರಬಹುದು. ಎಲ್ಲರನ್ನೂ ಕರೆದುಕೊಂಡು ಓಶಿವಾರ ಠಾಣೆಗೆ ಬಂದು ಪೊಲೀಸರಿಗೆ ಒಪ್ಪಿಸಿದರು.

ಹಾಗೆ ಬೊಬ್ಬೆ ಹಾಕಿದ್ದ ಹುಡುಗಿ ಮಮತಾ ಕುಲಕರ್ಣಿ ಆಗಿದ್ದಳು. ತನಿಖೆಗೆ ಇಳಿದ ಪೊಲೀಸರು ಮೀಸೆ ಕೆಳಗೆ ಮುಸಿಮುಸಿ ನಕ್ಕರು. ಅಂತಹ ಅದೆಷ್ಟು ಡ್ರಾಮಾ ಅವರು ನೋಡಿಬಿಟ್ಟಿದ್ದರೋ. ಅದು ಕಿಡ್ನ್ಯಾಪ್ ಪ್ರಕರಣವೂ ಅಲ್ಲ ಎಂತ ಮಣ್ಣೂ ಅಲ್ಲ ಎಂಬುದು ನುರಿತ ಪೊಲೀಸರಿಗೆ ಕ್ಷಣಾರ್ಧದಲ್ಲಿ ತಿಳಿಯಿತು. ಅದೊಂದು ಆ ತರಹದ "ಬುಕಿಂಗ್" ಪ್ರಕರಣವಾಗಿತ್ತು ಅಷ್ಟೇ. ವ್ಯವಹಾರ ಕುದುರಿಸಿದ್ದ ಯುವಕರ ತಂಡ ಮಜಾ ಮಾಡಲು ಆಕೆಯನ್ನು ಕರೆದುಕೊಂಡು ಹೊರಟಿದ್ದರು. ಮಧ್ಯೆ ಎಲ್ಲೋ ಕೊಡು ತೆಗೆದುಕೊಳ್ಳುವ ಲೆಕ್ಕಾಚಾರ workout ಆಗಿಲ್ಲ. ರೊಕ್ಕ ವಾಪಸ್ ಕೊಟ್ಟು ರೈಟ್ ಹೇಳು ಅಂದಿರಬೇಕು ಅವರು. ರೊಕ್ಕವನ್ನು ಹಡಪ್ ಸ್ವಾಹಾ ಮಾಡಿ ಓಡೋಣ ಎಂದು ಕಿಡ್ನ್ಯಾಪ್ ಎಂದು ಸುಳ್ಳು ಬೊಬ್ಬೆ ಹೊಡೆದಳು ಎಂದು ಯುವಕರು ಅಂಬೋ ಅಂದಾಗ ಪೊಲೀಸರಿಗೆ ನಂಬದೇ ಇರಲು ಕಾರಣವೇ ಇರಲಿಲ್ಲ. ಹೈಟೆಕ್ ವೇಶ್ಯಾವೃತ್ತಿ ಬಹಳ ಸಾಮಾನ್ಯವಾಗಿತ್ತು. ಅನೇಕ ಚಿತ್ರತಾರೆಯರು, ಮಾಡೆಲ್ ಗಳು, ಇತರರು ತುಂಬಾ ರೂಟೀನ್ ಆಗಿ ಅದರಲ್ಲಿ ತೊಡಗಿಸಿಕೊಂಡಿದ್ದರು. ರೊಕ್ಕದ ವಿಷಯಕ್ಕೆ ರಂಪಾಟ ಇತ್ಯಾದಿ ಸಹಜವಾಗಿತ್ತು. ಪೊಲೀಸರು ಅದೇನು ಮಾಡಿದರೋ ಗೊತ್ತಿಲ್ಲ. ಆದರೆ ಮಮತಾ ಕೂಡ ಆ ದಂಧೆಗೆ ಇಳಿದಿದ್ದಾಳಂತೆ ಅನ್ನುವ ಸುದ್ದಿ ಗುಸುಗುಸು ಹಬ್ಬಿ ಏನಾದರೂ ಚೂರು ಪಾರು ಮರ್ಯಾದೆ ಉಳಿದಿದ್ದರೆ ಅದೂ ಕೂಡ ಮಾಯವಾಯಿತು. ಇದೇ ಸಮಯದಲ್ಲಿ ಗೋಸ್ವಾಮಿ ಬೇರೆ ಗಂಟು ಬಿದ್ದು ಬಾ ಬಾ ಎಂದು ಕರೆಯುತ್ತಿದ್ದ. ಗಂಟು ಮೂಟೆ ಕಟ್ಟಿದ ಮಮತಾ ದುಬೈಗೆ ಹಾರಿದಳು. ಸಿನಿಮಾ ಕರಿಯರ್ ಮುಗಿದಿತ್ತು. ಮಾದಕ ಸುಂದರಿಯ ಅಸಲಿ ಮಾದಕ ದುನಿಯಾ ಶುರುವಾಗಲಿತ್ತು, ವಿಕಿ ಗೋಸ್ವಾಮಿ ಎಂಬ ಡ್ರಗ್ ದೊರೆಯ ಸಾಂಗತ್ಯ ಮತ್ತು ಸಾರಥ್ಯದಲ್ಲಿ.

ದುಬೈಗೆ ಹೋಗಿ ಗೋಸ್ವಾಮಿಯ ಜೊತೆ ಸೆಟಲ್ ಆದೆ ಅನ್ನುವಷ್ಟರಲ್ಲಿ ದುಬೈ ಸರ್ಕಾರ ಗೋಸ್ವಾಮಿಯನ್ನು ಡ್ರಗ್ ಸಾಗಾಣಿಕೆ ಆರೋಪದಡಿ ಬಂಧಿಸಿ ಹದಿನೈದೋ ಇಪ್ಪತ್ತೋ ವರ್ಷದ ಸೆರೆವಾಸದ ಶಿಕ್ಷೆ ವಿಧಿಸಿ ಒಳಗೆ ತಳ್ಳಿತು. ಅಮೇರಿಕಾದಲ್ಲಿ ಆದ ೯/೧೧ ರ ದುರಂತದ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಸಮೀಕರಣಗಳು ಬದಲಾದವು. ಅಮೆರಿಕದವರು ತಾವೇ ಪೋಷಿಸಿಕೊಂಡು ಬಂದಿದ್ದ ಉಗ್ರರು , ಡ್ರಗ್ ದಂಧೆಯವರು ಮುಂತಾದವರ ಮೇಲೆ ಅವರದ್ದೇ ಕಾರಣಕ್ಕೆ ಮುರಿದುಕೊಂಡು ಬಿದ್ದು ಸದೆಬಡಿಯತೊಡಗಿದರು. ಗೋಸ್ವಾಮಿ ಏಕೆ ಒಳಗೆ ಹೋದ ಎಂಬುದು ಸ್ಪಷ್ಟವಿಲ್ಲ. ಆದರೆ ದಾವೂದ್ ಮತ್ತು ಇತರೆ ಮುಸ್ಲಿಂ ಡ್ರಗ್ ಸಿಂಡಿಕೇಟ್ ಗಳೊಂದಿಗೆ ಸಂಬಂಧ ಹಳಸಿತ್ತು ಎಂದು ಕಾಣುತ್ತದೆ. ಮತ್ತೆ ಮೇಲಿಂದ ಹಿಂದೂ ಬೇರೆ. ಸಾಫ್ಟ್ ಟಾರ್ಗೆಟ್. ಹಾಗಾಗಿ ಬಡಿದು ಒಳಗೆ ಕಳಿಸಿರಬೇಕು. ಅದೆಷ್ಟು ಬಾರಿ ಕೊಲ್ಲಿ ರಾಷ್ಟ್ರಗಳಲ್ಲಿ ಬೇರೆ ಬೇರೆ ಮುಸ್ಲಿಂ ಮಾಫಿಯಾ ದೊರೆಗಳು, ಡ್ರಗ್ ಲಾರ್ಡುಗಳು ಬೇರೆ ಬೇರೆ ಕಾರಣಕ್ಕೆ ಬಂಧಿತರಾಗಿಲ್ಲ. ತಮ್ಮ ತಮ್ಮಲ್ಲೇ ಏನೋ ಸಂಧಾನ ಮಾಡಿಕೊಳ್ಳುತ್ತಾರೆ. ತಾವು ಡ್ರಗ್ ದಂಧೆಯನ್ನು ಯಾವದೇ ಕಾರಣಕ್ಕೂ ನಡೆಯಲು ಬಿಡುವುದಿಲ್ಲ ಎಂದು ತೋರಿಸಿಕೊಳ್ಳಲು ತಮ್ಮ ಅವಕೃಪೆಗೆ ಪಾತ್ರರಾದವರನ್ನು ಗೋಸ್ವಾಮಿಯ ಹಾಗೆ ಬಡಿದು ಒಳಗೆ ತಳ್ಳುತ್ತಾರೆ. ಒಟ್ಟಿನಲ್ಲಿ ಮಮತಾಳ ಗೆಣೆಕಾರ ಗೋಸ್ವಾಮಿ ಒಳಗೆ ಹೋದ. 

ದುಬೈನಲ್ಲೇ ಇದ್ದ ಮಮತಾ ಗೋಸ್ವಾಮಿಯ ಹೋಟೆಲ್ ಮತ್ತಿತರ ಕಾನೂನುಬದ್ಧ ದಂಧೆಗಳನ್ನು ಸಂಬಾಳಿಸಿಕೊಂಡು ಇದ್ದಳಂತೆ. ನಡುವೆ ಒಮ್ಮೆ ಭಾರತದಲ್ಲಿ ನಡೆವ ಅಪರೂಪದ ಕುಂಭ ಮೇಳದಲ್ಲಿ ಕಂಡು ಬಂದಳು ಅಂತಲೂ ಸುದ್ದಿ ಇತ್ತು. ಮುಂದೆ ಮಮತಾಳೇ ಹೇಳಿಕೊಂಡಂತೆ ಹಿಮಾಲಯದಲ್ಲಿ ದೀಕ್ಷೆ ತೆಗೆದುಕೊಂಡು ಅಧ್ಯಾತ್ಮ ಸಾಧನೆ ಮಾಡಿದಳಂತೆ. Autobiography of a Yogini ಎನ್ನುವ ಪುಸ್ತಕ ಕೂಡ ಬರೆದಿದ್ದಾಳೆ. ಹುಡುಕಿದರೆ ಅದರ ಸಾಫ್ಟ್ ಕಾಪಿ ನಿಮಗೆ ಈಗಲೂ ಇಂಟರ್ನೆಟ್ ಮೇಲೆ ಸಿಗಬಹುದು. ಅದೊಂದು ಸ್ವಪ್ರಕಾಶಿತ e-book ಎಂದು ನನಗೆ ನೆನಪು. ಓದಲು ಸಾಧ್ಯವೇ ಇಲ್ಲದ ಹಾಗಿದೆ. ಮುದ್ರಣದೋಷಗಳು ತುಂಬಿ ತುಳುಕುತ್ತಿವೆ. ಹಾಗಾಗಿ ಈಗ ಹತ್ತಾರು ವರ್ಷಗಳ ಹಿಂದೆ ಬಿಟ್ಟಿ ಸಿಕ್ಕ ಪುಸ್ತಕವನ್ನು ಓದಲಾಗದೆ ಸೋಲೊಪ್ಪಿಕೊಂಡಿದ್ದೆ. ಈಗ ಮತ್ತೊಮ್ಮೆ ಓದಲು ಪ್ರಯತ್ನಿಸಿ ನೋಡಬೇಕು. 

ಮುಸ್ಲಿಂ ಧರ್ಮಕ್ಕೆ ಮತಾಂತರವಾದರೆ ಜೈಲಿನಿಂದ ಬೇಗ ಮುಕ್ತಿ ಸಿಗುತ್ತದೆ ಎಂದು ಯಾರೋ ಗೋಸ್ವಾಮಿಗೆ ಐಡಿಯಾ ಕೊಟ್ಟರು. ಮತಾಂತರದ ಕರಾರುಗಳು ಏನಿದ್ದವೋ ಗೊತ್ತಿಲ್ಲ. ಮಮತಾ ಕುಲಕರ್ಣಿ ಮತ್ತು ಗೋಸ್ವಾಮಿ ಇಬ್ಬರೂ ಇಸ್ಲಾಮ್ ಧರ್ಮಕ್ಕೆ ಮತಾಂತರಗೊಂಡು ವಿವಾಹವಾದರು. ಅದು ಕೇವಲ ಶಿಕ್ಷೆ ಕಡಿಮೆ ಮಾಡಿಸಿಕೊಂಡು ಜೈಲಿನಿಂದ ಹೊರಬರಲು ಎಂದು ಸುದ್ದಿ. 

ಆಗಲೇ ಗೋಸ್ವಾಮಿ ಹಲವಾರು ವರ್ಷ ದುಬೈ ಜೈಲಿನಲ್ಲಿ ಕಳೆದಿದ್ದ. ಮೇಲಿಂದ ಇಸ್ಲಾಂ ಕೂಡ ಸ್ವೀಕರಿಸಿದ. ಅದೂ ಮಮತಾಳ ಜೊತೆ. ಮತ್ತೆ ಬೇರೆಲ್ಲ ಏನೇನೋ ಸಮೀಕರಣಗಳು ವರ್ಕೌಟ್ ಆಗಿರಲೇ ಬೇಕು. ಅವೆಲ್ಲದರ ಫಲಶ್ರುತಿ ಎಂಬಂತೆ ದುಬೈ ಜೈಲಿನಿಂದ ಬಿಡುಗಡೆ ಹೊಂದಿದ.

ಗೋಸ್ವಾಮಿ ಆಫ್ರಿಕಾದ ತುಂಬೆಲ್ಲಾ ಮೊದಲಿಂದಲೂ ವ್ಯಾಪಕವಾಗಿ ಡ್ರಗ್ ದಂಧೆ ಮಾಡಿಕೊಂಡಿದ್ದ. ಆಫ್ರಿಕಾದ ಬೇರೆ ಬೇರೆ ದೇಶಗಳಲ್ಲಿ ಆತನ ನೆಲೆ, ಸಹಚರರು ಎಲ್ಲ ಇದ್ದರು. ಕೀನ್ಯಾ ದೇಶವನ್ನು ಆಯ್ಕೆ ಮಾಡಿಕೊಂಡು ಅಲ್ಲಿನ ಸಮುದ್ರ ತೀರದ ಮೊಂಬಾಸಾ ನಗರಕ್ಕೆ ಗೋಸ್ವಾಮಿ ಮತ್ತು ಮಮತಾ ಹಾರಿದರು. ಮಾಡಿಟ್ಟುಕೊಂಡಿದ್ದ ದುಡ್ಡು ಭರಪೂರ ಇರಬೇಕು. ಸಮುದ್ರ ತಟದಲ್ಲಿ ವಿಲ್ಲಾ ಖರೀದಿಸಿ ಹೊಸ ಜೀವನ ಶುರು ಮಾಡಿದರು. 

ಗೋಸ್ವಾಮಿ ಹಳೆ ಚಾಳಿ ಬಿಡಲಿಲ್ಲ. ಬುದ್ಧಿ ಬಂದಾಗಿನಿಂದ ಆತನಿಗೆ ಗೊತ್ತಿದ್ದದ್ದು ಒಂದೇ ಉದ್ಯೋಗ. ಅದೇ ಡ್ರಗ್ ದಂಧೆ. ಗುಜರಾತಿನ ಪೊಲೀಸ್ ಅಧಿಕಾರಿಯೊಬ್ಬನ ಮಗ ಮಾಡಿದ್ದು ಅದೊಂದೇ ದಂಧೆ. ಬೀದಿಯಲ್ಲಿ ಡ್ರಗ್ ಮಾರಿಕೊಂಡಿದ್ದವ ದಾವೂದ್, ಛೋಟಾ ರಾಜನ್, ಇಕ್ಬಾಲ್ ಮಿರ್ಚಿ ಮುಂತಾದವರ ಆಶ್ರಯದಲ್ಲಿ ದೊಡ್ಡ ಡ್ರಗ್ ಕುಳವಾಗಿದ್ದ. ಜಗತ್ತಿನ ಎಲ್ಲ ಕಡೆ ವ್ಯಾಪಕವಾಗಿ ಸಂಪರ್ಕಗಳನ್ನು ಬೆಳೆಸಿಕೊಂಡ. 

ಕೀನ್ಯಾದಲ್ಲಿ ಡ್ರಗ್ ದಂಧೆಗೆ ಇಬ್ಬರು ಅಪ್ಪಂದಿರು. ಒಂದು ಆಕಾಶಾ ಸಹೋದರರ ಗ್ಯಾಂಗ್. ಮತ್ತೊಂದು ಭಾರತ ಮೂಲದವನು ಎಂದು ಹೇಳಲಾದ ಅಲಿ ಪುಂಜಾನಿ ಎಂಬಾತನ ಗ್ಯಾಂಗ್. ಅಲಿ ಪುಂಜಾನಿಯೂ ಬಾಲಿವುಡ್ ನಟಿಯರ ಹುಚ್ಚು ಹತ್ತಿಸಿಕೊಂಡವನೇ. ಒಂದು ಕಾಲದಲ್ಲಿ ಸಾಕಷ್ಟು ಮಿಂಚಿದ್ದ ಕಿಮ್ ಶರ್ಮಾ ಎಂಬ ನಟಿಯನ್ನು ಮದುವೆಯಾಗಿ ಕೀನ್ಯಾದಲ್ಲಿ ನೆಲೆಸಿದ್ದ. ಬೇರೆ ಹಕ್ಕಿ ಸಿಕ್ಕ ಮೇಲೆ ಕಿಮ್ ಶರ್ಮಾಳಿಗೆ ಸೋಡಾ ಚೀಟಿ(ವಿಚ್ಛೇದನ) ಕೊಟ್ಟ. ಮಂಗ್ಯಾ ಆದ ಕಿಮ್ ಶರ್ಮಾ ವಾಪಸ್ ಬಂದು ಬಾಲಿವುಡ್ಡಿನಲ್ಲಿ ಆಂಟಿ , ಅಜ್ಜಿ ಪಾತ್ರ ಹುಡುಕುತ್ತಿದ್ದಳು. ಹಾಗೆಯೇ ತಲೆಮಾಸಿದ ಆಸಾಮಿಗಳೊಡನೆ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಾ ಚಾಲ್ತಿಯಲ್ಲಿರುವ ಪ್ರಯತ್ನ ಮಾಡುತ್ತಿದ್ದಳು. ನಾಲ್ಕಾರು ಮದುವೆ ವಿಚ್ಛೇದನ ಎಲ್ಲ ಕಂಡ ಒಂದು ಕಾಲದ ಟೆನಿಸ್ ಪಟು ಲೀಯಾಂಡರ್ ಫೇಸ್ ಜೊತೆ ಆಕೆ ಠಳಾಯಿಸಿದ್ದು ಕೊನೆಯ ಬಾರಿಗೆ ಸುದ್ದಿ ಮಾಡಿತ್ತು.

ಕೀನ್ಯಾದಲ್ಲಿ ಆಕಾಶಾ ಸಹೋದರರು ಮತ್ತು ಅಲಿ ಪುಂಜಾನಿ ನಡುವೆ ಡ್ರಗ್ ದಂಧೆಯ ಕುರಿತಾಗಿ ವೈಷಮ್ಯವಿತ್ತು. ಒಮ್ಮೆ ನೈಟ್ ಕ್ಲಬ್ ಒಂದರಲ್ಲಿ ಒಬ್ಬರಿಗೊಬ್ಬರು ಎದುರಾದಾಗ ಗುಂಡುಗಳು ಹಾರಿ ಅಂಗರಕ್ಷಕರು ಗಾಯಗೊಂಡಿದ್ದರು. ಆಗ ಆಕಾಶಾ ಸಹೋದರರ ಜೊತೆ ಗೋಸ್ವಾಮಿಯೂ ಇದ್ದ.

ಮುಂದೆ ಅಮೇರಿಕಾದ ಮಾದಕ ವಸ್ತು ನಿಗ್ರಹ ದಳ ದಾಳಿ ಮಾಡಿ ಆಕಾಶಾ ಸಹೋದರರು ಮತ್ತು ಗೋಸ್ವಾಮಿಯನ್ನು ಎತ್ತಾಕಿಕೊಂಡು ಅಮೆರಿಕಕ್ಕೆ ಕರೆದುಕೊಂಡು ಹೋಗಿ ಕೇಸ್ ನಡೆಸುತ್ತಿದೆ. ಅದೇ ಸಮಯದಲ್ಲಿ ಅಲಿ ಪುಂಜಾನಿ ಭಾರತಕ್ಕೆ ಹಾರಿ ಬಂದು ಮುಂಬೈನ ಆಸ್ಪತ್ರೆಯೊಂದರಲ್ಲಿ ಮಲಗಿದ್ದ. ಅವನಿಗೇನು ನಿಜವಾದ ಆರೋಗ್ಯದ ತೊಂದರೆಯೋ ಅಥವಾ ಕಾನೂನಿನಿಂದ ಮತ್ತು ವೈರಿಗಳಿಂದ ಬಚಾವ್ ಆಗಲು ಹಾಕಿದ್ದ ಸ್ಕೀಮೋ ಗೊತ್ತಿಲ್ಲ. 

ಗೋಸ್ವಾಮಿಯನ್ನು ಅಮೆರಿಕಾಕ್ಕೆ ಎಳೆದೊಯ್ದ ಮೇಲೆ ಮಮತಾ ಕೀನ್ಯಾದಲ್ಲೇ ಇದ್ದಳು. ಕೀನ್ಯಾದಲ್ಲಿ ಆಕೆಯ ಸಂದರ್ಶನ ಮಾಡಿದ್ದ ಪತ್ರಕರ್ತೆ ಶೀಲಾ ರಾವಲ್ ಅವರಿಗೆ ವಿವರವಾದ ವಿಡಿಯೋ ಸಂದರ್ಶನ ಕೊಟ್ಟಿದ್ದಳು. ಪರಮಾತ್ಮನನ್ನು ಸಾಕ್ಷಾತ್ಕಾರ ಮಾಡಿಕೊಂಡ ಸಾಧ್ವಿಯ ರೂಪದಲ್ಲಿ ಮಾತಾಡಿದ್ದಳು. ಅಧ್ಯಾತ್ಮದ ಮಾತುಗಳು ಕೇಳಲು ಚೆನ್ನಾಗಿತ್ತು.

ನಂತರ ಆಗಿದ್ದೇ ೨೦೧೬ ರ ಸೊಲ್ಲಾಪುರ ಡ್ರಗ್ ಪ್ರಕರಣ. ಅದರಲ್ಲಿ ಪೊಲೀಸರು ಆಕೆಯನ್ನೂ ಸೇರಿಸಿದ್ದರು. ಈಗ ಅದೇ ಪ್ರಕರಣದಲ್ಲಿ ನ್ಯಾಯಾಲಯ ಸದ್ಯಕ್ಕಂತೂ ಮುಕ್ತಿ ಕೊಟ್ಟಿದೆ. ಆದರೂ ಮಮತಾ ಮಾತ್ರ ಭಾರತಕ್ಕೆ ಬರಲಿಕ್ಕಿಲ್ಲ. ಬಂದರೆ ಸುಖಾಸುಮ್ಮನೆ ತೊಂದರೆ ಕೊಟ್ಟಾರು ಎನ್ನುವ ಆತಂಕ ಅನೇಕ ಹಾಲಿ ಮಾಜಿ ಕುಖ್ಯಾತರಲ್ಲಿದೆ. ಅದರಲ್ಲಿ ತಪ್ಪೂ ಇಲ್ಲ. ಸಿಕ್ಕಷ್ಟು ರೊಕ್ಕ ಗುಂಜಿಬಿಡೋಣ ಎಂದು ದುಷ್ಟ ವಿಚಾರಮಾಡುವ ಅಧಿಕಾರಶಾಹಿ ರಕ್ತಪಿಪಾಸುಗಳಿಗೆ ನಮ್ಮಲ್ಲಿ ಕೊರತೆ ಏನಿಲ್ಲ. ವ್ಯವಸ್ಥೆಯೇ ಹಾಗಿದೆ.

ಈಗ ಮನೆ ಮಠಕ್ಕೆ ಹಾಕಿದ್ದ ಬೀಗಮುದ್ರೆ ತೆರವಾಗಿವೆ. ಬ್ಯಾಂಕ್ ಖಾತೆಗಳು ಚಾಲೂ ಆಗಿವೆ. ಅಕ್ಕ ತಂಗಿಯರ ಜವಾಬ್ದಾರಿ ಇದೆ ಎಂದು ಕೋರ್ಟ್ ಅರ್ಜಿಯಲ್ಲಿ ಹಾಕಿಕೊಂಡಿದ್ದಳು. ಅದನ್ನೆಲ್ಲ ನಿಭಾಯಿಸಿಕೊಂಡು ಎಲ್ಲಿದ್ದರೂ ಆರಾಮಾಗಿರಲಿ. Every saint has a past and every sinner has a future ಎನ್ನುವ ಮಾತೇ ಇದೆಯೆಲ್ಲ. ಅದೇ ರೀತಿ ಮಮತಾ ಕುಲಕರ್ಣಿಯ ಇಲ್ಲಿನ ವರೆಗಿನ ಜೀವನ. ಮುಂದೆ ನೋಡಬೇಕು. ಶುಭಮಸ್ತು ಎಂದು ಹಾರೈಸಲೇನು ಅಡ್ಡಿ. ಅಲ್ಲವೇ?

ಮಮತಾ ಕುಲಕರ್ಣಿ ಬಗ್ಗೆ ಈ ಹಿಂದೆ ಬರೆದಿದ್ದ ಲೇಖನಗಳು ಕೆಳಗಿವೆ.

'ಕುಲಕರ್ಣಿ ಮಮ್ಮಿ' ಸನ್ಯಾಸ ತೊಗೋಂಡಳಾ?!.....ಅಕಟಕಟಾ!

ಡ್ರಗ್ ಮಾಫಿಯಾಕ್ಕೆ ಮರ್ಮಾಘಾತ ಕೊಟ್ಟ ಅಮೇರಿಕಾದ DEA

ಅಪರಾಧ ಲೋಕದ ದೇವಪಿತೃಗಳು. ಭಾರತಕ್ಕೆ ತುಂಬಾ ಬೇಕಾಗಿರುವ ಕುಖ್ಯಾತರೊಂದಿಗೆ ಮುಖಾಮುಖಿ

Mamta Kulkarni, Vicky Goswami complete saga summarized for the uninitiated

2 comments:

sunaath said...

ತುಂಬ ದುಃಖವಾಗುತ್ತದೆ ಈ ಹೆಣ್ಣುಮಕ್ಕಳ ಬಗೆಗೆ ಓದಲು. ಮಹತ್ವಾಕಾಂಕ್ಷೆ ತಪ್ಪಲ್ಲ; ಆದರೆ ತನ್ನ ಮಹತ್ವಾಕಾಂಕ್ಷೆಯನ್ನು ಪೂರೈಸಿಕೊಳ್ಳಲು ಹೆಣ್ಣುಮಗುವು ಶೋಷಣೆಗೆ ಒಳಗಾಗಬೇಕಾಗುತ್ತದಲ್ಲ ಎನ್ನುವುದೇ ದುಃಖದ ಸಂಗತಿ. ಕೊನೆಗೊಮ್ಮೆ ನೀವು ಹೇಳುವಂತೆ, ಈ ಹೆಣ್ಣುಮಕ್ಕಳು ಇನ್ನಾದರೂ ನೆಮ್ಮದಿಯಿಂದ ಇರಲಿ ಎಂದು ದೇವರಲ್ಲಿ ಬೇಡಿಕೊಳ್ಳಬೇಕಷ್ಟೆ!

Mahesh Hegade said...

ಸುನಾಥ್ ಸರ್, ನಿಮ್ಮ ಕಾಮೆಂಟಿಗೆ ಧನ್ಯವಾದ.