Saturday, July 16, 2016

Big slide in engg admission: 135 courses shut in 5 years

Wrote this post after reading this article - Big slide in engg admission: 135 courses shut in 5 years

Why do you need so many engineering branches at the undergraduate level????

Ideally, only branches that should be taught and taught really well at the UG level are - civil, mechanical, chemical, electrical. And maybe metallurgy & mining. All other branches such as instrumentation, biomedical engineering, polymer engineering, environmental engineering, software engineering, etc. etc. are better suited for PG level specialization.

Electrical engineering should cover electronics and computer engineering (hardware) as well.

Computer science can be taught as a science faculty with ability take electives from other branches as needed. Most of the computer science (theoretical part) is anyway heavy duty maths. Profs with strong math background make good CS teachers. We had many such profs.

And bring back 5 years engineering course. It was so till 1981 or so. I think my brother's batch 82-86 was the first batch to have a 4 years engineering course.

And make one year of the 5 years an industrial internship year. Students have to work as trainees in a company. Whether you make it one full year at the end or six months after the third year and another six months after the fourth year, can be deliberated.

Keep all other courses such microelectronics, VLSI, Biomed, info systems, instrumentation etc. as PG level courses or as UG electives. In UG, teach good quality problem solving and basic engineering in depth. What we have now is only superficial engineering education and no wonder students are so miserably qualified to join the workforce.

Not my original thoughts. My father has had these views for more than 50+ years. He seems to be right!

Friday, July 15, 2016

ಹೆಸರಾಗೇನೈತಿ? ಇರೋದೆಲ್ಲಾ ಅಡ್ಡಹೆಸರಿನಾಗೇ ಐತಿ....

ಇಂಗ್ಲಿಷ್ ನಾಟಕಕಾರ ವಿಲಿಯಂ ಶೇಕ್ಸಪಿಯರ್ ಉತ್ತರ ಕರ್ನಾಟಕದ ಕಡೆ, ನಮ್ಮ ಧಾರವಾಡ ಕಡೆ ಬಂದು ಹೋಗಿದ್ದ ಅಂತ ಕಾಣಸ್ತದ.

ಹಾಂಗಾಗೇ 'ಹೆಸರಲ್ಲೇನಿದೆ?' (What's in a name?) ಅಂತ ಕೇಳಿದನೇ ಹೊರತು 'ಅಡ್ಡಹೆಸರಿನಲ್ಲೇನಿದೆ?' (What's in a surname?) ಅಂತ ಕೇಳಲಿಲ್ಲ. ಹಾಂಗೆನಾದರೂ ಕೇಳಿದ್ದರ ಅಂವಾ ವಾಪಸ್ ಹೋಗೋದರ ಬಗ್ಗೆ ಖಾತ್ರಿ ಇರಲಿಲ್ಲ. ನಮ್ಮ ಊರ ಕಡೆ ಬಂದು 'ಸರ್ ನೇಮ್' ಬಗ್ಗೆ ಮಾತಾಡಿದರೆ ಸರ್ (ತಲೆ) ಉಳಿತದ ಏನ್ರೀ??!!

ಅವಂಗೂ ಗೊತ್ತು. ಶಾಣ್ಯಾ. ನಮ್ಮ ಕಡೆ ಇರೋದಷ್ಟೂ ಅಡ್ಡಹೆಸರಿನಲ್ಲಿಯೇ ಹೊರತೂ ಹೆಸರಿನಲ್ಲಿ ಅಲ್ಲ ಅಂತ. Everything is in surname only, Sir. ಸರ್ ನೇಮಿನಲ್ಲೇ ಸರ್ವವೂ ಇರೋದು.

ಆಹಾ! ಆಹಾ! ಎಂತೆಂತಾ ಕಲರ್ಫುಲ್, ರಂಗ್ರಂಗೀನ್, ಡಿಸೈನರ್ ಡಿಸೈನರ್ ಅಡ್ಡಹೆಸರುಗಳು ನಮ್ಮ ಕಡೆ! ಅತೀ ಸ್ವಾರಸ್ಯಕರ ಮತ್ತು ವಿಶಿಷ್ಟ.

ನಮ್ಮ ಕಡೆಯ ವಿಶಿಷ್ಟ ಅಡ್ಡಹೆಸರುಗಳನ್ನು ಕೇಳಿ, ಗೌರವಿಸಿ, ಆನಂದಿಸಿ. ಅಪಹಾಸ್ಯ, ಕುಹಕ, ವ್ಯಂಗ್ಯ ಬೇಡ. at least ಅಡ್ಡಹೆಸರುಗಳ ಬಗ್ಗೆ. 

ಅಪಹಾಸ್ಯ, ಕುಹಕ, ವ್ಯಂಗ್ಯ ಯಾಕ ಬ್ಯಾಡ ಅಂದೆ ಅಂದ್ರ ನಮ್ಮ ಕಡೆ ಹುಡುಗಿ ಒಬ್ಬಳು, 'ಅಡ್ನಾಡಿ ಅಡ್ಡಹೆಸರಿನ ವರಾ ತೋರಿಸಿದರ ನಾ ಲಗ್ನಾ ಮಾಡಿಕೊಂಬಾಕಿ ಅಲ್ಲ!' ಅಂತ ಕಂಡೀಷನ್ ಒಗೆದು ಕೂತುಬಿಟ್ಟಾಳ. 

ಆ ಪುಣ್ಯಾತ್ಮಿಗೆ ನಾನೇ ಹೇಳಿದೆ, 'ನೋಡವಾ, ಅಡ್ಡಹೆಸರು, ಹೆಸರು ಅಂತ ಹೇಳಿಕೋತ್ತ ಕೂಡಬ್ಯಾಡ. ಅಡ್ಡಹೆಸರು is just ಅಡ್ಡಹೆಸರು. ಬೀಜ ಗಣಿತದಾಗ ಬೀಜ ಇದ್ದಂಗ. ತಿಳಿತs?'

'ಬೀಜ ಗಣಿತದಾಗ ಬೀಜ?? ಏನು ಹಾಂಗಂದ್ರ ಮಾಮಾ? ಏನೇನರೇ ಹುಚ್ಚು ಹುಚ್ಚು ಮಾತಾಡಬ್ಯಾಡ. ನಮ್ಮವ್ವನ, 'ಲಗ್ನಾ ಮಾಡಿಕೋ, ಲಗ್ನಾ ಮಾಡಿಕೋ,' ಇದೇ ಉಪದೇಶ ಕೇಳಿ ನನ್ನ ತಲಿ ಮೊದಲs ಕೆಟ್ಟದ. ನೀ ನನ್ನ ಕೆಟ್ಟು ಮೊಸರ ಗಡಿಗಿ ಆದ ತಲಿ ಕಡೆದು ಲಸ್ಸಿ ಮಾಡಿ ಇಡಬ್ಯಾಡ ಮಾರಾಯಾ!' ಅಂತ ವಾರ್ನಿಂಗ್ ಕೊಟ್ಟಳು. 

'ಬೀಜ ಗಣಿತದಾಗ ಬೀಜ ಅಂದ್ರ ಮತ್ತೇನೂ ಅಲ್ಲವಾ. ಬೀಜ ಗಣಿತದಾಗ ಬೀಜ ಅಂದ್ರ x, y, z ಅಂತ ಸಮೀಕರಣದಾಗ ಹೆಸರು ಇಡೋದಿಲ್ಲೇನವಾ? ಹಾಂಗೇ ಇವು ಅಡ್ಡಹೆಸರು. x, y, z ಇದ್ದಂಗ. ಅದಕ್ಯಾಕ ಅಷ್ಟು ತಲಿ ಕೆಡಿಸಿಕೋತ್ತಿ ನಮ್ಮವ್ವಾ?' ಅಂದು convince ಮಾಡಲಿಕ್ಕೆ ನೋಡಿದೆ.

'ಈಗ ಸಮೀರಣ ಅಂದ್ರ ಯಾರು. ನೀನೂ ನನಗ ವರ ಹುಡುಕ್ಲಿಕತ್ತಿಯೇನು? ನಮ್ಮವ್ವಾ ಎಲ್ಲರಿಗೂ ಅದೇ ಕೆಲಸ ಹಚ್ಯಾಳ. ಎಲ್ಲಿ ತನಕಾ ಅಂದ್ರ ನಮ್ಮ ಬೂಬು ಸುದಾ ಭಾಂಡೆ ತಿಕ್ಕೋದು ಬಿಟ್ಟು ನನಗ ವರಾ ಹುಡ್ಕೋತ್ತ ಊರೂರು ಅಡ್ಯಾಡ್ಲಿಕತ್ತದ. ಏ ನಿನ್ನ! ಹೋಗೋ!' ಅಂದಳು. 

ಹಾಪ್ ಹುಡುಗಿ! ಸಮೀಕರಣ ಅಂದರೆ ಸಮೀರಣ ಅನ್ನುತ್ತದೆ. 'ಕನ್ನಡ ಮೀಡಿಯಂ ಸಾಲಿಗೆ ಹಾಕವಾ,' ಅಂತ ಅವರ ಅವ್ವಗ ಬಡಕೊಂಡೆ. ಎಲ್ಲಿ ಕೇಳಬೇಕು? ಈಗ ಇತ್ಲಾಗ ಕನ್ನಡವೂ ಸರಿ ಬರೋದಿಲ್ಲಾ ಅತ್ಲಾಗ ಇಂಗ್ಲೀಷ್ ಸಹಾ ಸರಿ ಬರೋದಿಲ್ಲಾ. ಎಲ್ಲಾ ಅಷ್ಟೇ ಈ ಟಸ್ ಪುಸ್ ಇಂಗ್ಲೀಷ್ ಮೀಡಿಯಂ ಮಂದಿದು.

'ಸಮೀರಣ ಅಲ್ಲವಾ. ಸಮೀಕರಣ. ಅಂದ್ರ equation. ಅಡ್ಡಹೆಸರು ಅಂದ್ರ equation ದಾಗ x, y, z ಇದ್ದಂಗ. ಅದನ್ನೇ ಹೇಳಿದೆ. x, y, z ಬದಲಿ a,b,c  ಅಂತ ಬರೆದುಕೊಂಡು ಫಾರ್ಮುಲಾ ಹಚ್ಚಿದರೂ ನಡಿತದ. ತಿಳಿತೇನವಾ? ಅಡ್ಡಹೆಸರು ಒಮ್ಮೊಮ್ಮೆ ಅಡ್ನಾಡಿ ಅನ್ನಿಸಬಹುದು. ಹೆಸರೇ ಅಡ್ಡಹೆಸರು ನೋಡು. ಉದ್ದಹೆಸರು ಅಲ್ಲ ನೋಡು. ಹಾಂಗಾಗಿ ಅಡ್ಡಹೆಸರು ಒಮ್ಮೊಮ್ಮೆ ಅಡ್ನಾಡಿ ಅನ್ನಿಸಬಹದು. ಅಸಡ್ಡಾಳ ಅನ್ನಿಸಬಹದು. ಏನವಾ?' ಅಂತ ವಿವರಿಸಿದೆ. 

'ಮಾಮಾ, ಅದು ಬ್ಯಾರೆ. ಇದು ಬ್ಯಾರೆ. ಅಡ್ಡಹೆಸರು ಒಮ್ಮೆ ಬಿತ್ತು ಅಂದ್ರ ನಂತ್ರ ಏನೂ ಮಾಡಲಿಕ್ಕೆ ಬರಂಗಿಲ್ಲ. x, y, z ಬದಲಿ a,b,c ಹಚ್ಚಿದಷ್ಟು ಸರಳ ಅಲ್ಲ ಅದು. ತಿಳಿತs??' ಅಂತ ರಿವರ್ಸ್ ಬಾರಿಸಿದಳು. 

ತಡಿ ಇಕಿ ತಲಿಗೆ ಬರೋಬ್ಬರಿ ಶಿಕಾಕಾಯಿ ಸೋಪ್ ಹಚ್ಚಿಯೇ ಬ್ರೈನ್ ವಾಷ್ ಮಾಡಬೇಕು ಅಂತ ಹೊಸಾ ಧಾಟಿಯೊಳಗ ಮಾತಾಡ್ಲಿಕ್ಕೆ ಶುರು ಮಾಡಿದೆ. 

'ವರನ್ನ ಅಡ್ಡಹೆಸರು ನಿನಗ ಸೇರಿ ಬರಲಿಲ್ಲ ಅಂದ್ರ ಒಂದು ಕೆಲಸ ಮಾಡಬಹದು ನೋಡವಾ.......' ಅಂದೆ. 

'ಏನದು???'

'ಹೆಸರು ಬದಲಿ ಮಾಡಿಕೊಂಡಂಗ ಅಡ್ಡಹೆಸರನ್ನು ಬದಲಿ ಮಾಡಿಕೊಳ್ಳೋದು. ಹೆಂಗೂ ಲಗ್ನಾದ ಮ್ಯಾಲೆ ಅತ್ತಿ ಮನಿಯವರು ನಿನ್ನ ಹೆಸರು ಬದ್ಲಿ ಮಾಡ್ತಾರ. ನೀ ಒಂದು ಕಂಡೀಷನ್  ಒಗಿ ಬೇಕಾದ್ರ. 'ನೀವು ನಿಮ್ಮ ಅಡ್ಡಹೆಸರು ಚೇಂಜ್ ಮಾಡಿಕೊಂಬೋದಾದ್ರ ಮಾತ್ರ ನಾನು ನನ್ನ ಹೆಸರು ಚೇಂಜ್ ಮಾಡಿಕೊಳ್ಳಲಿಕ್ಕೆ ಒಪ್ಪಾಕಿ. ಇಲ್ಲಂದ್ರ ಇಲ್ಲ,' ಅಂತ ಖಡಕ್ ಆಗಿ ಹೇಳಿಬಿಡು. ಲಗ್ನನಂತೂ ಆಗಿಹೋಗಿರ್ತದ. ಏನೂ ಮಾಡಲಿಕ್ಕೆ ಬರಂಗಿಲ್ಲ. ಒಪ್ಪಿಕೊಂಡರೂ ಒಪ್ಪಿಕೊಂಡ್ರು. ಯಾರಿಗೆ ಗೊತ್ತು? ಮತ್ತ ಒಪ್ಪಬೇಕಾದವರು ಯಾರು? ನಿನ್ನ ಗಂಡ. ಆಗೋ ಭವಿಷ್ಯದ ಗಂಡ. ಅಡ್ನಾಡಿ ಅಡ್ಡಹೆಸರಿನ ಯಬಡ. ಹೊಸದಾಗಿ ಮದ್ವಿಯಾದ ಗಂಡು ಮುಂಡೆಗಂಡರಂತೂ ಮತ್ತೂ ಯಬಡ ಆಗಿಬಿಟ್ಟಿರತಾವ. ಖಬರೇ ಇರಂಗಿಲ್ಲ. ಹನಿಮೂನಿನ್ಯಾಗ ಹೆಂಡ್ತಿ ಹೇಳಿದ್ದಕ್ಕೆಲ್ಲ ಹೂಂ ಹೂಂ ಅಂತ ನಾಗಪ್ಪಾ ಪುಂಗಿಗೆ ತಲಿ ಅಲ್ಲಾಡಿಸಿದ ಹಾಂಗ ಅಲ್ಲಾಡಿಸಿಕೋತ್ತ ಕೂತಿರ್ತಾವ. ಭುಸ್ ಅನ್ನೋದು ಮರ್ತೇ ಹೋಗಿರ್ತದ. ಹನಿಮೂನ್ ಗಾಡ್ ಪ್ರಾಮಿಸ್ ಅಂತ ಹೇಳಿ ಪ್ರಾಮಿಸ್ ತೊಗೊಂಡು ಬಿಡು. ಒಮ್ಮೆ ಪ್ರಾಮಿಸ್ ಕೊಟ್ಟಾ ಅಂದ ಮ್ಯಾಲೆ ಮುಗೀತು. ಅಷ್ಟೇ. ನಂತ್ರ ನೀ ಹೇಳಿದ ಅಡ್ಡಹೆಸರಿಗೆ ಚೇಂಜ್ ಮಾಡಿಸಿಬಿಡ್ತಾನ. ಸಾಕಲ್ಲಾ? ಮತ್ತೇನು ಬೇಕವಾ? ಒಂದೆರೆಡು ತಲೆಮಾರು ಮುಗಿದ ಮ್ಯಾಲೆ ಹಳೇ ಅಡ್ನಾಡಿ ಅಡ್ಡಹೆಸರು ಯಾರಿಗೂ ನೆನಪ ಇರೋದಿಲ್ಲಾ. ಗೊತ್ತಾತ?' ಅಂತ ಫಿಟ್ಟಿಂಗ್ ಇಟ್ಟೆ. ಸಂಯುಕ್ತ ಕರ್ನಾಟಕ ಪೇಪರಿನ್ಯಾಗ ಬರೇ 'ಹೆಸರನಲ್ಲಿ ಬದಲಾವಣೆ' ಅಂತ ಓದಿ ಓದಿ ಸಾಕಾಗಿಬಿಟ್ಟದ. ನಮ್ಮ ಹುಡುಗಿ ಕಾಲದಾಗಾದರೂ 'ಅಡ್ಡಹೆಸರಿನಲ್ಲಿ ಬದಲಾವಣೆ' ಅಂತ ಬಂದ್ರೂ ಬರಬಹುದು. ನಾನೇ ನಿಂತು ಮಾಡಿಸಿಕೊಡತೇನಿ ಬೇಕಾದ್ರ. 

ಈ ಫಿಟ್ಟಿಂಗ್ ಕೇಳಿ ನಮ್ಮ ಹುಡುಗಿ ಯಾವದೋ ವಿಚಿತ್ರ ಮೂಡಿಗೆ ಹೋತು. ಐಡಿಯಾ ಲೈಕ್ ಆತು ಅಂತ ಕಾಣಿಸ್ತದ. 

'ಮಾಮಾ, ನಿನ್ನ ಐಡಿಯಾ ಏನೋ ಒಂದು ತರಾ ಮಜಾ ಅದ. ಆದ್ರ workout ಆಗ್ತದ ಅಂತಿಯೇನು? ಅಕಸ್ಮಾತ workout ಆದ್ರೂ ಯಾವ ಅಡ್ಡಹೆಸರಿಗೆ ಬದಲಾಯಿಸೋದು???' ಅಂದಳು. 

ಇಷ್ಟು reciprocate ಮಾಡಿದಳು ಅಂದ್ರ ಕಬ್ಬಿಣ ಕಾದದ. ಈಗೇ ಹತೋಡಾ ಹೊಡಿಬೇಕು. ಶೋಲೆ ಸಿನೇಮಾದ ಸೀನ್ ನೆನಪಿಲ್ಲೇನ್ರೀ? ಠಾಕೂರ್ ಏನಂತಾನ? ಲೋಹಾ ಗರಮ್ ಹೈ. ಹತೋಡಾ ಮಾರ್ ದೋ. ಯಾವ ಲೋಹಾ ಗರಂ ಇತ್ತೋ? ಯಾರು ಹತೋಡಾ ಹೊಡೆದರೋ? ನಂತರ ನೋಡಿದ್ರ ಅರ್ಧಾ ಕುಂಡಿ ಕಾಣೋ ಹಾಂಗ ಡ್ರೆಸ್ ಹಾಕಿಕೊಂಡು ಬಂದ ಹೆಲೆನ್ ಮಾತ್ರ 'ಮೆಹಬೂಬಾ ಮೆಹಬೂಬಾ' ಅಂತ ಮಸ್ತ ಕ್ಯಾಬರೆ ಡ್ಯಾನ್ಸ್ ಹೊಡೆದಳು ನೋಡ್ರಿ. 

ನಾನೂ 'ಮೆಹಬೂಬಾ ಮೆಹಬೂಬಾ' ಅಂತ ಡ್ಯಾನ್ಸ್ ಹೊಡೆಯೋಣ.... ಛೀ... ಛೀ ಅಲ್ಲಲ್ಲ..... ಹತೋಡಾ ಹೊಡೆಯೋಣ ಅಂತ ವಿಚಾರ ಮಾಡಿದೆ. 

'ಹಾಂಗ ಕೇಳವಾ ಮಗಳs! ಕೇಳು ಹಾಂಗ! ನಿನಗ ಯಾವ ತರಹದ ಅಡ್ಡಹೆಸರು ಬೇಕು? ಡಿಸೈನರ್ ಡಿಸೈನರ್ ಅಡ್ಡಹೆಸರು suggest ಮಾಡ್ತೇನಿ,' ಅಂದೆ. 

'ನೀನೇ ಹೇಳ ಮಾಮಾ. ಎಲ್ಲಾ ನಿನಗ ಗೊತ್ತಿದ್ದಂಗ ಅದ,' ಅಂದಳು. ಆಲಸಿ ಪರಮಿ. ಈಗಲೇ ಇಷ್ಟು ಆಲಸಿ. ಅತ್ತಿಮನಿಗೆ ಹೋದ ಮ್ಯಾಲೆ ಮುಂದೇನೋ?? 

'ಸಿಂಪಲ್ಲಾಗಿ ಶರ್ಮಾ, ಪಂಡಿತ್, ಶಾಸ್ತ್ರಿ, ವರ್ಮಾ ಅಂತ ಯಾವದಾದರೊಂದು ಅಡ್ಡಹೆಸರು select ಮಾಡಿಬಿಡು. ಇವೆಲ್ಲಾ universal ಅಡ್ಡಹೆಸರು. ನಮ್ಮ ದೇಶದ ಎಲ್ಲಾ ಕಡೆ ಇರ್ತಾವ. ಯಾವದು ಸೇರ್ತು ನಿನಗ?' ಅಂದೆ. 

'ಅಯ್ಯೋ ಮಾಮಾ!' ಅಂತ ಬೋಂಗಾ ಹೊಡೆದಳು. ನನಗ ಘಾಬ್ರಿ ಆತು. 

'ಯಾಕವಾ? ಏನಾತು? ಯಾವದೂ ಅಡ್ಡಹೆಸರು ಸೇರಲಿಲ್ಲ? ಇರಲಿ ತೊಗೋ. ಬ್ಯಾರೆ ವಿಚಾರ ಮಾಡೋಣಂತ. ಶಂಖಾ ಯಾಕ ಹೊಡಿತಿ?' ಅಂತ ಕೇಳಿದೆ. 

'ಏ, ಸುಮ್ಮ ಕೂಡ ಮಾಮಾ. ಏನೋ ಹೇಳ್ತಾನ ಅಂದ್ರ ಮತ್ತ ಹೋಗಿ ಹೋಗಿ ಅವೇ ಹಳೆ ಶರ್ಮಾ, ಪಂಡಿತ್, ಶಾಸ್ತ್ರಿ, ವರ್ಮಾ ಅನ್ಕೋತ್ತ,' ಅಂತ ನನಗs ಝಾಡಿಸಿದಳು. 

'ಯಾಕ!?' ಅಂತ ಕೇಳಿದೆ. 

'ಈ ಶರ್ಮಾ, ಪಂಡಿತ್, ಶಾಸ್ತ್ರಿ, ವರ್ಮಾ ಇವೆಲ್ಲಾ ಇಷ್ಟು ಕಾಮನ್ ಆಗಿಹೋಗ್ಯಾವಲ್ಲಾ ಅಂದ್ರ ಅಷ್ಟು ಕಾಮನ್ ಆಗಿಹೋಗ್ಯಾವ. ಅಡ್ನಾಡಿ ಅಡ್ಡಹೆಸರನ್ನ ಶರ್ಮಾ, ಗಿರ್ಮಾ, ಅದು, ಇದು ಅಂತ ಬದಲಿ ಮಾಡಿಕೊಂಡ್ರ ನಂತ್ರ ಭಾಳ ತ್ರಾಸು ಪಡೋದಾಗ್ತಾದ. ಗೊತ್ತದ ಏನು? ಹಾಂ??' ಅಂತ ಕೇಳಿದಳು. 

'ಏನ? ಏನ ತ್ರಾಸು ಪಡೋದಾಗ್ತದ? ಹಾಂ?' ಅಂತ ನಾನೂ ಸ್ವಲ್ಪ rise ಆಗಿಯೇ ಕೇಳಿದೆ. ಇನ್ನೂ ಚೋಟುದ್ದದ ಹುಡುಗಿ ನನಗs ಉಪದೇಶ ಮಾಡ್ಲಿಕತ್ತದ. ಅದೂ ಉಪದೇಶ ಸಹಸ್ರಿ ಮಾಡ್ಲಿಕತ್ತದ. 

'ಈ ಶರ್ಮಾ, ಗಿರ್ಮಾ, ಪಂಡಿತ್, ಗಿಂಡಿತ್, ಶಾಸ್ತ್ರಿ, ಇಸ್ತ್ರಿ, ಅದು ಇದು ಅಂತ ಅಡ್ಡಹೆಸರು ಬದಲು ಮಾಡಿಕೊಂಡ್ರ ಅಮೇರಿಕಾದಾಗ ಹಿಡಿದು ಚಡ್ಡಿ ಕಳಿತಾರಂತ. ಗೊತ್ತೇನು? ಮತ್ತ ನಾನೂ ಆ ಕಡೆನೇ ಹೋಗಿ ಸೆಟಲ್ ಆಗಬೇಕು ಅಂತ ಮಾಡೇನಿ ನೋಡು. ಎಲ್ಲರೆ ಮುಂದ ಮಾಡಿಕೊಳ್ಳೋ ನನ್ನ ಯಬಡ ಗಂಡ ನನ್ನ ಮಾತು ಕೇಳಿ ತನ್ನ ಅಸಡ್ಡಾಳ ಅಡ್ಡಹೆಸರನ್ನು ಇಂತಾ ಕಾಮನ್ ಅಡ್ಡಹೆಸರಿಗೆ ಬದಲು ಮಾಡಿಕೊಂಡಾ ಅಂದ್ರ ಅಷ್ಟೇ ಮತ್ತ. ಅಮೇರಿಕಾದಾಗ ಹಿಡಿದು ಬೆಂಡ್ ಎತ್ತತಾರ ನಮಗ. ಏ, ಹೋಗ ಮಾಮಾ. ಏನಂತ ಐಡಿಯಾ ಕೊಡ್ತೀ?' ಅಂತ ಏನೋ ವಿಚಿತ್ರವಾಗಿ ಹೇಳಿದಳು. 

ಅಡ್ಡಹೆಸರು ಬದಲಿ ಮಾಡಿಕೊಂಡವರನ್ನ ಅಮೇರಿಕಾದಾಗ ಹಿಡಿದು ಚಡ್ಡಿ ಕಳಿತಾರ? ಯಾಕ? ಚಡ್ಡಿ ಕಳಿಯೋದು ಅಂದ್ರ ನಮ್ಮ ಧಾರವಾಡ ಭಾಷೆಯಲ್ಲಿ ಕಷ್ಟಕ್ಕೆ ಸಿಲುಕಿಸೋದು, red hand ಆಗಿ ಹಿಡಿಯೋದು ಅಂತ ಕೂಡ ಅರ್ಥ ಇದೆ. ಗೊತ್ತಾಯ್ತಾ? ನನ್ಮಗಂದ್! ಚಡ್ಡಿ ಕಳೆಯೋದು ಅಂದ್ರೆ ಚಡ್ಡಿ ಬಿಚ್ಚೋದು ಅಲ್ಲಾ ಅಂತ ಎಲ್ಲರಿಗೂ ಗೊತ್ತಾಗ್ಬೇಕ್! ಅಷ್ಟೇ! ಅಂತ ಹುಚ್ಚಾ ವೆಂಕಟ್ ಶೈಲಿಯಲ್ಲಿ ಡೈಲಾಗ್ ಒಂದು ಮೂಡಿ ಬಂತು.

'ಅಲಲಲಾ, ಏನು ಮಾತಾಡ್ತೀಯವ್ವಾ? ಅಡ್ಡಹೆಸರು ಬದಲಿ ಮಾಡಿಕೊಂಡ್ರ ಅಮೇರಿಕಾದಾಗ ಏನು ಮಾಡ್ತಾರ?'  ಅಂತ ಕೇಳಿದೆ. 

'ನೋಡ ಮಾಮಾ. ನಮ್ಮ ಕಡೆ ಇರೋ ಜವಾರಿ ಅಡ್ನಾಡಿ ಅಡ್ಡಹೆಸರಿನ ಹುಚ್ಚಡೂಗಳು ಶರ್ಮಾ, ಪಂಡಿತ್, ಅದು ಇದು ಅಂತ ಅಡ್ಡಹೆಸರು ಬದಲಿ ಮಾಡಿಕೊಂಡು ಅಲ್ಲಿ ಹೋಗ್ತಾರ? ಹೋಗ್ತಾರೋ ಇಲ್ಲೋ?'

'ಹೂಂ ಹೋಗ್ತಾರವಾ. ಮುಂದ? ಏನು ತೊಂದ್ರಿ ಬರ್ತದ ಅದನ್ನು ಹೇಳು ಮಾರಾಳ.'

'ಅಲ್ಲೆ green card ಮಾಡಿಸೋವಾಗ ಎಲ್ಲಾ ಡಾಕ್ಯುಮೆಂಟ್ಸ್ ತೆಕ್ಕೊಂಡು ಕೂಡ್ತಾರ. ಯಾರು ಹೇಳು?'

'ಯಾರು???'

'ಮತ್ತ ಯಾರು ಅಂತ ಕೇಳ್ತಿಯಲ್ಲಾ ಮಾಮಾ?? ಅವರೇ ಅಮೇರಿಕಾದ green card ಕೊಡೋ ಆಫೀಸರ್ ಮಂದಿ,' ಅಂದಳು ನಮ್ಮ ಹುಡುಗಿ. 

'ಮುಂದ??'

'ಎಲ್ಲಾ ಡಿಟೇಲ್ ಆಗಿ ಚೆಕ್ ಮಾಡ್ತಾರ. ನೀವು ಶರ್ಮಾ, ಚರ್ಮಾ ಅಂತ ಕಾಮನ್ ಅಡ್ಡಹೆಸರು ಹೆಸರು ಇಟ್ಟುಗೊಂಡು ಹೋದರಂತೂ ಮುಗಿದs ಹೋತು. ರವಗಾಜ್ (magnifying glass) ಹಾಕಿಕೊಂಡು ನೋಡ್ತಾರ. 'ನೀವು ಏನೇನೋ ಅಡ್ನಾಡಿ ಅಡ್ಡಹೆಸರು ಇದ್ದವರು ಅದೆಂಗ ಶರ್ಮಾ, ಚರ್ಮಾ, ಪಂಡಿತ್, ಗಿಂಡಿತ್, ಅದು ಇದು ಆದ್ರೀ?? ಹಾಂ??' ಅಂತ ಫುಲ್ ತನಿಖಾ ಮಾಡ್ತಾರ. ಗೊತ್ತದೇನು???' ಅಂತ ಫುಲ್ ವಿವರಣೆ ಕೊಟ್ಟಳು. 

'ಮಾಡ್ಲೆಲ್ಲಾ. ಅದಕ್ಕೇನು? 'ಅದು ಹೀಂಗ್ರೀ ಸರ್.... ನಮ್ಮ ಅಡ್ಡೆಸರು ಮೊದಲು ಬ್ಯಾರೆ ಇತ್ತು. ಈಗ ಬ್ಯಾರೆ ಆದ. ಎಲ್ಲಾ ಕಾನೂನು ಬದ್ಧ ಮಾಡಿಸೇವಿ. ನೀವ ನೋಡ್ರಿ. ನಮ್ಮ ಕಡೆ 'ಸಂಯುಕ್ತ ಕರ್ನಾಟಕ' ಪೇಪರ್ ಒಳಗ ಹಾಕಿಸಿದ ನೋಟಿಸ್ ಕಾಪಿ ಸುದಾ ಅದ.. ' ಅಂತ ಹೇಳೋದು. ವಿವರಣೆ ಕೊಡೋದು. ಅದಕ್ಕೇನು ತಕರಾರು ತೆಗಿತಾರ ಅವರು? ಹೆಸರು, ಅಡ್ಡಹೆಸರು ಬದಲು ಮಾಡಿಕೊಂಡವರು ಏನು ಖೂನಿ ಮಾಡಿರ್ತಾರೋ ಅಥವಾ ಹೊಡೆದಾಟ ಮಾಡಿರ್ತಾರೋ? ಒಳ್ಳೆ ಮಾತಾತವಾ ನಿಂದು.....' ಅಂದೆ. ನಮ್ಮ ಮಂದಿ ಅಡ್ಡಹೆಸರು ಚೇಂಜ್ ಮಾಡಿಕೊಂಡ್ರ ಅಮೇರಿಕಾ ಮಂದಿಗೇನು? ಅವರಿಗ್ಯಾಕ ಚಿಂತಿ?

'ಮಾಮಾ, ಅದು ಹಾಂಗಲ್ಲಾ. ಅವರೇನು ಹೇಳ್ತಾರ ಅಂದ್ರ, 'ನೀವು ಶರ್ಮಾ ಅಂತ ಅಡ್ಡಹೆಸರು ಇರಬೇಕು ಅಂದ್ರ ಅಷ್ಟೂ ಕಾಗದಾ ಪತ್ರಾ ಅದೇ ಹೆಸರಿನ್ಯಾಗ ಮಾಡಿಕೊಂಡು ಬರ್ರಿ. ಇಲ್ಲಾ ನಿಮ್ಮ ಮೂಲ ದಾಖಲೆಯೊಳಗ ಏನು ಅಡ್ಡಹೆಸರು ಅದನೋ ಅದೇ ಹೆಸರಾಗ green card ತೊಗೋರಿ. ಏನು ಮಾಡವರು ನೀವು?' ಅಂತ ಆಖ್ರೀ ಸವಾಲ್ ಒಗಿತಾರ ಅವರು. ತಿಳಿತಾ??' ಅಂದಳು ಹುಡುಗಿ. 

'ಹಾಂಗss????'  ಅಂತ ಊದ್ದಕ ಎಳೆದೆ. 

'ಮತ್ತ? ಈ ಅಡ್ನಾಡಿ ಅಡ್ಡಹೆಸರಿನ ಮಂದಿಯ ಹಳೆ ಕಾಗದಾ ಪತ್ರಾ ಎಲ್ಲಾ ಅಡ್ನಾಡಿ ಅಡ್ಡಹೆಸರಿನ್ಯಾಗೇ ಇರ್ತಾವ. ಯಾವಾಗೋ ತಲಿ ಬಂದಾಗ ಶರ್ಮಾ, ಪಂಡಿತ್, ಶಾಸ್ತ್ರಿ, ವರ್ಮಾ ಅಂತ ಏನೇನೋ ಮಾಡಿಕೊಂಡಿರ್ತಾರ. ಈಗ ಅಮೇರಿಕಾದ ಆಫೀಸರ್ ಮಂದಿ, 'ಹೋಗಿ ಎಲ್ಲಾ ಕಾಗದಾ ಪತ್ರಾ ತಿದ್ದಿಸಿಕೊಂಡು, ಎಲ್ಲಾದ್ರಾಗೂ ನಿಮ್ಮ ಹೊಸಾ ಅಡ್ಡಹೆಸರು ಹಾಕಿಸಿಕೊಂಡು, attest ಮಾಡಿಸಿಕೊಂಡು ಬರ್ರಿ,' ಅಂದಾಗ ಸುಸ್ತಾಗಿ ಮಕ್ಕೊಂಡು ಬಿಡ್ತಾರ. ಗೊತ್ತದಯೇನು? ಹಾಂ??' ಅಂತ ಎಲ್ಲ ಡಿಟೈಲ್ ಆಗಿ ಹೇಳಿದಳು. ಚೋಟುದ್ದದ ಹುಡುಗಿಗೆ ಎಲ್ಲಾ ಗೊತ್ತದ ನೋಡ್ರಿ. 

'ಹೀಂಗೆಲ್ಲಾ ಇರ್ತದ ಅಂತಾತು. ಅಡ್ಡಹೆಸರು ಬದಲಾಯಿಸಿಕೊಂಡರೂ ಸುಖಾ ಇಲ್ಲ ಅಂತಾತು. ಸುಡುಗಾಡು ಅಮೇರಿಕಾ ಬಿಡು. ಇಲ್ಲೇ ಮಸ್ತ ಹಾಂಗಿದ್ರ. ಅಲ್ಲಾ? ಒಂದು ಕಡೆ ಶರ್ಮಾ, ಮತ್ತೊಂದು ಕಡೆ ಅಡ್ನಾಡಿ ಅಡ್ಡಹೆಸರು, ಮತ್ತೊಂದು ಕಡೆ ಬರೇ initials ಎಲ್ಲಾ ನಡಿತದ. ಅಲ್ಲಾ? ಇರಲಿ. ಇದೆಲ್ಲಾ ನಿನಗ ಹ್ಯಾಂಗ ಗೊತ್ತಾತವಾ?' ಅಂತ ಕೇಳಿದೆ. 

'ನನ್ನ ಗೆಳತಿ ಒಬ್ಬಾಕಿ ಜವಾರಿ ಶರ್ಮಾ ಅನ್ನೋವನ್ನ ಲಗ್ನಾ ಮಾಡಿಕೊಂಡಳು. ಅಕಿಗೂ ಅಡ್ನಾಡಿ ಅಡ್ಡಹೆಸರಿನ ಗಂಡ ಹರ್ಗೀಸ್ ಬ್ಯಾಡ ಅಂತಿತ್ತು. ಶರ್ಮಾ ಅಂತ ಮಾಡಿಸಿದಳು. ಹನಿಮೂನ್ ಪ್ರಾಮಿಸ್ ಮಾಡಿಬಿಟ್ಟಿದ್ದ ಅಕಿ ಗಂಡಾ ದೂಸರಾ ಮಾತಾಡದೇ ಶರ್ಮಾ ಅಂತ ಅಡ್ಡಹೆಸರು ಬದಲು ಮಾಡಿಸಿಕೊಂಡ. ಎಲ್ಲಾರ ಕಡೆ ತನ್ನ ಹೊಸಾ ಅಡ್ಡಹೆಸರು ಶರ್ಮಾ ಅಂದ. ಮಂದಿ ಕುಂಡಿ ತಟ್ಟಿಕೊಂಡು ನಕ್ಕರು. ಇಬ್ಬರೂ ಅಮೇರಿಕಾಕ್ಕ ಹೋದರು. ಅಲ್ಲೆ ಹೋದಮ್ಯಾಲೆ ಹೀಂಗಾತು. green card ಕೊಡೋ ಮುಂದ ಹಾಕ್ಕೊಂಡು ಸತಾಯಿಸಿಬಿಟ್ಟರು. ಸಾಕಾಗಿ ಹೋತು. ಹಾಳಾಗಿ ಹೋಗಲಿ ಶರ್ಮಾ ಅಂತ ಹೇಳಿ ತಮ್ಮ ಮೊದಲಿನ ಅಡ್ಡಹೆಸರಿಗೇ ಬಂದಾರ . ಕೆಟ್ಟ ಅಸಹ್ಯ ಅಡ್ಡಹೆಸರು. ಕೇಳಿದ್ರ ನನಗ ವಾಕರಕಿ ಬರ್ತದ. ಅದೇ ಹೆಸರಾಗs ಫೇಸ್ಬುಕ್ ಮ್ಯಾಲೆ ಕಂಡಳು. ನನಗ ಘಾತ ಆತು. 'ಯಾಕಲೇ ಹೀಂಗಾತು? ವಾಪಸ್ ಅಡ್ನಾಡಿ ಅಡ್ಡಹೆಸರಿಗೇ ವಾಪಸ್ ಬಂದಾ ನಿನ್ನ ಗಂಡಾ?' ಅಂತ ಕೇಳಿದೆ ಅಕಿ ಕಡೆ. ಕಣ್ಣೀರು ಹಾಕ್ಕೋತ್ತ ಎಲ್ಲಾ ಹೇಳಿದಳು ಮಾಮಾ. ಆವಾಗ ಎಲ್ಲಾ ಗೊತ್ತಾತು ನೋಡು,' ಅಂದಳು ನಮ್ಮ ಹುಡುಗಿ. 

'ಭಾಳ ಶಾಣ್ಯಾ ಇದ್ದಿ ಬಿಡವಾ. ಎಲ್ಲಾ ಈಗೇ ಮಾಹಿತಿ ಇಟ್ಟಿ. ನಿನಗ ಒಳ್ಳೇ ಅಡ್ಡಹೆಸರಿನ ಗಂಡನೇ ಸಿಗಲಿ ಅಂತ ದೇವರ ಕಡೆ ಪ್ರಾರ್ಥನಾ ಮಾಡತೇನಿ. ಆತೇನವಾ?' ಅಂದೆ. 

'ಅಷ್ಟು ಮಾಡು ಸಾಕು ಮಾಮಾ. ಅದು ಬಿಟ್ಟು ನನಗ ವರಾ ಗಿರಾ ಅಂತ ಹುಡುಕಲಿಕ್ಕೆ ಶುರು ಮಾಡಿದಿ ಅಂದ್ರ ನೋಡ್ಕೋ ಮತ್ತ!' ಅಂತ ಬೆರಳು ಹೀಂಗ ಹೀಂಗ ಹಿಂದ ಮುಂದ ಮಾಡಿ ವಾರ್ನಿಂಗ್ ಕೊಟ್ಟಳು. 

ಅಕಟಕಟಾ!

Saturday, July 02, 2016

American revolution to French revolution

Did the American revolution (war of independence) instigate the French revolution?

There are some facts to support the possibility. The French, who supported the US against Britain, were in serious debt and that eventually lead to the French revolution.

That's how true revolutions are and should be. Inspiring. One revolution leading to another. A single torch lighting many torches, one after another.

>>
The French spent 1.3 billion livres (about £56 million). Their total national debt was £187 million, which they could not easily finance; over half the French national revenue went to debt service in the 1780s. The debt crisis became a major enabling factor of the French Revolution as the government could not raise taxes without public approval
<<

America may also choose to extend a small amount of gratitude to an Indian prince, Tipu Sultan, who took on British in India around the same time, possibly at the behest of French to inflict more damages to the worldwide interests of the British. French, Spain, Netherlands dragged Britain into war at many places around the world and hence the British could not focus on fighting the American revolutionaries alone. Their focus and might was scattered and they suffered a bitter defeat and thus the sweet independence of this great country was achieved.

Sadly, Tipu Sultan, who was promised French help when he took on British did not get it in time and died on the battlefield and the kingdom of Mysore came under the British rule. That might have been a small solace to the British after getting hammered by US revolutionaries and their allies in various parts of the world.

Happy independence day, July 4th.

Friday, July 01, 2016

ವಿಶ್ವ ವೈದ್ಯರ ದಿನದಂದು ಹೀಗೊಂದಿಷ್ಟು ಡಾಕ್ಟರ್ ಮಂದಿ ನೆನಪಾದರು.....

ಜುಲೈ ೧, ವಿಶ್ವ ವೈದ್ಯರ ದಿವಸವಂತೆ. ಭಾರತದಲ್ಲಂತೂ ಹೌದು. ಇಲ್ಲಿ ನಮ್ಮ ಅಮೇರಿಕಾದಲ್ಲಿ ಮಾರ್ಚ್ ೩೦ ರಂದು ವಿಶ್ವ ವೈದ್ಯರ ದಿವಸ ಆಚರಿಸುತ್ತಾರೆ.

ವೈದ್ಯೋ ನಾರಾಯಣೋ ಹರಿಃ - ಸತ್ಯವಾದ ಮಾತು. ಹುಟ್ಟಿದಾಗಿಂದ ಇಲ್ಲಿಯವರೆಗೆ ಅದೆಷ್ಟು ಮಂದಿ ವೈದ್ಯರು ಈ ನಮ್ಮ ಬಾಡಿಯನ್ನು, ಮಂಡೆಯನ್ನು ಕಾಪಾಡಿದರೋ ಏನೋ. ನೂರಾರು ಮಂದಿ. ಅವರಲ್ಲಿ ನೆನಪಾದ ಕೆಲವು ಮಂದಿಯನ್ನು ನೆನೆಯೋಣ. ಕೃತಜ್ಞತೆ ಅರ್ಪಿಸೋಣ. ಒಂದಿಷ್ಟು ಹಳೆಯ ನೆನಪುಗಳನ್ನು ಮೆಲಕು ಹಾಕೋಣ ಅಂತ.

****

ಅಮ್ಮನನ್ನು ಜತನದಿಂದ ಹೆರಿಗೆ ಮಾಡಿಸಿ ನಮ್ಮ ಹುಟ್ಟಿಗೆ ಕಾರಣರಾದವರು ಧಾರವಾಡದ ಅಂದಿನ ಖ್ಯಾತ ಪ್ರಸೂತಿ ತಜ್ಞ  ಡಾಕ್ಟರ್ ಕಮಲಾಪುರ ಅವರು. ಮಾಳಮಡ್ಡಿಯಲ್ಲಿದ್ದ ಅವರ ಆಸ್ಪತ್ರೆಯಲ್ಲಿಯೇ ನಮ್ಮ ಅಭೂತಪೂರ್ವ ಜನನ. ಅಭೂತಪೂರ್ವ ಜನನ ಯಾಕೆಂದರೆ ನಾವು ಹುಟ್ಟಿದಾಗ ನಮ್ಮ ತೂಕ ಬರೋಬ್ಬರಿ ಹನ್ನೊಂದು ಪೌಂಡ್. ಅಂದರೆ ಐದು ಕೇಜಿ. ಹೊಸ ದಾಖಲೆ ಕಮಲಾಪುರ ಆಸ್ಪತ್ರೆ ಮಟ್ಟಿಗೆ. ಅದಕ್ಕೇ ಅಭೂತಪೂರ್ವ ಜನನ ಅಂದಿದ್ದು. ಅಂತದ್ದೊಂದು ದೈತ್ಯ ರೂಪದ ಕೂಸನ್ನು ಆ ಡಾಕ್ಟರಾಗಲಿ, ಅಲ್ಲಿಯ ನರ್ಸುಗಳಾಗಲೀ ಹಿಂದೆಂದೂ ನೋಡಿಯೇ ಇರಲಿಲ್ಲ. 'ಏನ್ರೀ ಇದು ಇಂತಾ ಹೊನಗ್ಯಾ ಕೂಸು???' ಅಂತ ನಮ್ಮನ್ನು ಎತ್ತಿಕೊಂಡ ಕಮಲಾಪುರ ಡಾಕ್ಟರ ಅಮ್ಮನ ಕಡೆ ನೋಡಿದರೆ ಅಷ್ಟೇ. ದೈತ್ಯ ಕೂಸನ್ನು ಹೆತ್ತು ಸುಸ್ತಾಗಿ ನಮೋ ನಮಃ ಅಂತ ಮಲ್ಕೊಂಡು ಬಿಟ್ಟಿದ್ದರು ಅಮ್ಮ. ಅಂತಹ ಹೊನಗ್ಯಾ ಸೈಜಿನ ನಮ್ಮಂತವರನ್ನು ಹೊತ್ತು, ಹೆತ್ತು, ಹಡೆಯೋದು ಅಂದ್ರೆ ಸಾಮಾನ್ಯವೇ????

ಹೀಗೆ ಹುಟ್ಟುಹುಟ್ಟುತ್ತಲೇ ದಾಖಲೆ ಬರೆದೇ ಹುಟ್ಟಿದ್ದ ನಮ್ಮ ಮೇಲೆ ಕಮಲಾಪುರ ಡಾಕ್ಟರಿಗೆ ಏನೋ ಪ್ರೀತಿ. ಬಾಲ್ಯದಲ್ಲಿ ಅವರ ಮನೆಗೆ ಹೋದಾಗೊಮ್ಮೆ, 'ನಮ್ಮ ಹೊನಗ್ಯಾ ಕೂಸು,' ಅಂತಲೇ ಪ್ರೀತಿಯಿಂದ ತಲೆ ಸವರಿ ಮಾತಾಡಿಸಿದ್ದು ಇನ್ನೂ ನೆನಪಿದೆ ಬಿಡಿ. ಅವರಿಗೂ ಆಗಲೇ ತುಂಬಾ ವಯಸ್ಸಾಗಿತ್ತು. ನಮಗೆ ಐದಾರು ವರ್ಷವಾಗುವಷ್ಟರಲ್ಲಿ ಅವರೂ ನಿಧನರಾಗಿದ್ದರು.

ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ಕಾಣು ಅನ್ನುವಂತೆ ಮುಂದೆ ದೈತ್ಯಾಕಾರವಾಗಿ ಬೆಳೆಯುವ ಆದ್ಮಿಯನ್ನು ಹೊನಗ್ಯಾಕಾರದ ಕೂಸಿನಲ್ಲಿ ಕಾಣು. ಆ ಮಾತು ನಿಜವಾಗಿ ಈಗ ಇರುವ ದೈತ್ಯಾಕಾರವನ್ನು ಸಂಬಾಳಿಸಿಕೊಂಡು ಹೋದರೆ ಸಾಕಾಗಿದೆ.

****

ಪುರಾತನ ಕಾಲದ ಉಪಾಧ್ಯೆ ಡಾಕ್ಟರ್ ನಮ್ಮ ತಂದೆಯವರ ಡಾಕ್ಟರ್. ಉಪಾಧ್ಯೆ ಪ್ರಾಕ್ಟೀಸ್ ಬಿಡುವ ಮೊದಲು ಮಾಳಮಡ್ಡಿಯ ಡಾ. ಜೀ.ಟಿ. ಪಾಟೀಲ್ ಎಂಬ ಡಾಕ್ಟರ್ ಒಬ್ಬರನ್ನು ಪರಿಚಯಿಸಿದ್ದರು. ಅಂದಿನಿಂದ ಅವರೇ ನಮಗೆ ಫ್ಯಾಮಿಲಿ ಡಾಕ್ಟರ್.

(ಹಿಂದಿನ ವರ್ಷ ಇದೇ ದಿನ ಉಪಾಧ್ಯೆ ಡಾಕ್ಟರ್ ಬಗ್ಗೆ ಬರೆದಿದ್ದ ಲೇಖನ ಇಲ್ಲಿದೆ.)

ಜೀ.ಟಿ. ಪಾಟೀಲ್ ಡಾಕ್ಟರ್ ಬಗ್ಗೆ ಬರೆಯುತ್ತ ಹೋದರೆ ಒಂದು ನಾಲ್ಕು ಪುಸ್ತಕ ಬರೆಯಬಹುದು. ತುಂಬಾ ಒಳ್ಳೆಯ ಮನಸ್ಸಿನ ಡಾಕ್ಟರ್. ಆದ್ರೆ ರಫ್ ಅಂಡ್ ಟಫ್ ಅನ್ನುವ ರೀತಿಯಲ್ಲಿ ಅವರ ಖಡಕ್ ಟ್ರೀಟ್ಮೆಂಟ್. ಎಲ್ಲೋ ಸೈನ್ಯದಲ್ಲಿ ಸೈನಿಕರನ್ನು ಯುದ್ಧಭೂಮಿಯ ಮೇಲೆಯೇ ಚಿಕಿತ್ಸೆ ಮಾಡುತ್ತಿದ್ದಾರೋ ಅನ್ನುವ ಮಾದರಿಯಲ್ಲಿ ಅವರ ಚಿಕಿತ್ಸೆ. ಅವರ ಇಂಜೆಕ್ಷನ್ ಅಂದ್ರೆ ಭಯಾನಕ. ಆಗೆಲ್ಲ ಇಂಜೆಕ್ಷನ್ ಔಷಧಿ ಗಾಜಿನ ಬಾಟಲಿಗಳಲ್ಲಿ ಬರುತ್ತಿತ್ತು. ಮೇಲೆ ಒಂದು ರಬ್ಬರ್ ಬಿರಡೆ ಇರುತ್ತಿತ್ತು. ಇಂಜೆಕ್ಷನ್ ಸೂಜಿಯನ್ನು ಸೀದಾ ಆ ರಬ್ಬರ್ ಬಿರಡೆಯ ಮೂಲಕ ನುಗ್ಗಿಸಿ, ಔಷಧಿ ಎಳೆದುಕೊಂಡು, ದಪ್ಪನೆಯ ಸೂಜಿ ಬದಲಾಯಿಸಿ, ಸಣ್ಣನೆಯ ಸೂಜಿ ಹಾಕಿಕೊಂಡು, ತುಂಬಾ ನಾಜೂಕಿನಿಂದ ಇಂಜೆಕ್ಷನ್ ಕೊಟ್ಟರೂ ಸಾಕಷ್ಟು ನೋಯುತ್ತಿತ್ತು. ಪಾಟೀಲ್ ಡಾಕ್ಟರಿಗೆ ಅದೆಲ್ಲ ನಾಜೂಕು ಇಲ್ಲವೇ ಇಲ್ಲ. ಔಷಧಿ ಎಳೆದುಕೊಂಡ ದಪ್ಪ ಸೂಜಿ ಬದಲು ಮಾಡುತ್ತಲೇ ಇರಲಿಲ್ಲ. ಅದರಲ್ಲೇ ಚುಚ್ಚಿಬಿಡುತ್ತಿದ್ದರು. ಯಪ್ಪಾ! ಸಾಯುವ ಮಾದರಿಯಲ್ಲಿ ನೋವು. ಹುಟ್ಟುವಾಗ ಐದು ಕೇಜಿಯ ಬೇಬಿ ಆಗಿದ್ದರೂ ನಂತರ ಬಡಕಲಾಟಿಯಾಗಿ ಬದಲಾಗಿ ರಟ್ಟೆಯಲ್ಲಿ ಮಾಂಸವೇ ಇರದ ನಮಗೆ ಅವರ ಖತರ್ನಾಕ್ ಇಂಜೆಕ್ಷನ್ ಅಂದರೆ ಜೀವ ಹೋದ ಅನುಭವ. ಅಪ್ಪ, ಅಣ್ಣ ಕೈಕಾಲು ಹಿಡಿದುಕೊಂಡರೆ ಯಮದೂತನ ಪರ್ಸನಾಲಿಟಿ ಇದ್ದ ಪಾಟೀಲ್ ಡಾಕ್ಟರ್ ರಟ್ಟೆಗೆ ಇಂಜೆಕ್ಷನ್ ನುಗ್ಗಿಸುತ್ತಿದ್ದರು. ನಾವು ಲಬೋ! ಲಬೋ! ಲಬೋ! ಅಂತ ಹೊತ್ತಲ್ಲದ ಹೊತ್ತಿನಲ್ಲಿ ಹೋಳಿ ಹುಣ್ಣಿಮೆ ಕೂಗು ಹಾಕುತ್ತಿದ್ದೆವು. ಉಳಿದವರು ಹಲಗೆಯನ್ನು ಬಾರಿಸುತ್ತಿದ್ದರು. ನಮಗೇ ಬಾರಿಸುತ್ತಿದ್ದರು.

ಬಾಲ್ಯದಲ್ಲಿ ಎಂಟು ವರ್ಷಗಳಾಗುವವರೆಗೆ ಪಾಟೀಲ್ ಡಾಕ್ಟರ ಇದ್ದಿದ್ದು ನಮ್ಮ ಬಾಲಲೀಲೆಗಳನ್ನು ಅದೆಷ್ಟೋ ಮಟ್ಟಿಗೆ ನಿಯಂತ್ರಿಸಲು ಮನೆ ಮಂದಿಗೆ ಸಹಾಯವಾಗಿರಬೇಕು ಬಿಡಿ. 'ಭಾಳ ನೀರಾಗ ಆಡಬ್ಯಾಡ. ಜ್ವರಾ ಬಂತು ಅಂದ್ರ ಮತ್ತ ಇಂಜೆಕ್ಷನ್ ಕೊಡ್ತಾರ ನೋಡು ಡಾಕ್ಟರ್ ಜೀಟಿ ಪಾಟೀಲರು,' ಅಂದರೆ ಸಾಕು. ನೀರಾಟ ತಾಪಡ್ತೋಪ್ ನಿಲ್ಲುತ್ತಿತ್ತು. ಮಧ್ಯಾನ ನಿದ್ದೆ ಮಾಡದೇ ಬಿಸಿಲಲ್ಲಿ ಬೀದಿ ತಿರುಗಲು ಹೊಂಟರೆ ಮತ್ತೆ ಅದೇ ರೀತಿ ಹೆದರಿಕೆ. ಅವರ ಇಂಜೆಕ್ಷನ್ ಅಂತೂ ಬಿಡಿ. ಕೊಡುತ್ತಿದ್ದ mixture ಔಷಧಿ ಕೂಡ ಡೆಡ್ಲಿ ಆಗಿರುತ್ತಿತ್ತು. ಕಹಿ ಅಂದರೆ ಅಷ್ಟು ಕಹಿ. ಕುಡಿಯಲು ಆಗುತ್ತಲೇ ಇರುತ್ತಿರಲಿಲ್ಲ. ನಾವು ಹಾಗೆ ಸುಮ್ಮನೆ ಕುಡಿಯುತ್ತಲೂ ಇರಲಿಲ್ಲ. ರುಚಿರುಚಿಯಾದ ಊಟ ಮಾಡಲೂ ಹಟ ಮಾಡುವವರು ನಾವು. ಇನ್ನು ಆ ಕೆಟ್ಟ ಕಹಿ ಔಷಧಿ ಕುಡಿಯುತ್ತೆವೆಯೇ? ಸಾಧ್ಯವೇ ಇಲ್ಲ. ಮತ್ತೆ ಟಾರ್ಚರ್ ಸೆಶನ್. ಮನೆ ಮಂದಿ ಕೈಕಾಲು ಹಿಡಿದು ಮಲಗಿಸುತ್ತಿದ್ದರು. ಅಪ್ಪ ಮೂಗು ಹಿಡಿಯುತ್ತಿದ್ದ. ಮೂಗು ಹಿಡಿದ ತಕ್ಷಣ ಬಾಯಿ ಅಗಲಕ್ಕೆ ಓಂ ಅನ್ನುವ ಹಾಗೆ ಬಿಡುತ್ತಿತ್ತು. ಅಮ್ಮ ಬಾಯಿಗೆ ಕೆಟ್ಟ ಕಹಿ ಔಷಧ ಹೊಯ್ಯುತ್ತಿದ್ದಳು. ರಾಮ ರಾಮ!

ಮಕ್ಕಳಿಗೆ ಟೈಫಾಯಿಡ್, ಕಾಲರಾ ಬರದೇ ಇರಲಿ ಅಂತ ಪ್ರತಿ ವರ್ಷ ವ್ಯಾಕ್ಸೀನ್ ತೆಗೆದುಕೊಳ್ಳುವದು ಪದ್ಧತಿ. ಯಾಕೆಂದರೆ ತಂದೆಯವರು MSc ಮಾಡುತ್ತಿರುವಾಗ ಅಂತಿಮ ಪರೀಕ್ಷೆ ಸಮಯಕ್ಕೆ ಟೈಫಾಯಿಡ್ ಆಗಿ ಒಂದು ವರ್ಷ ಕಳೆದುಕೊಂಡಿದ್ದರು. ಹಾಗಾಗಿ ಮಕ್ಕಳಿಗೆ ಪ್ರತಿ ವರ್ಷ ಖಾಯಂ ವ್ಯಾಕ್ಸೀನ್. ಆ ವ್ಯಾಕ್ಸೀನ್ ಹಾಕಿಸಿಕೊಂಡ ನಂತರ ಸಣ್ಣ ಜ್ವರ ಬರುತ್ತದೆ. ದೇಹ ರೋಗನಿರೋಧಕ ಶಕ್ತಿಯನ್ನು ತಯಾರಿಸುತ್ತಿರುವಾಗ ಬರುವ ಜ್ವರ ಅಂತ ಹೇಳಿದ್ದರು. ಮೇಲಿಂದ ಇವರೋ ದಬ್ಬಣ ಚುಚ್ಚಿದಾಂಗೆ ಚುಚ್ಚುತ್ತಾರೆ. ವ್ಯಾಕ್ಸೀನ್ ತೆಗೆದುಕೊಂಡ ನಂತರ ಒಂದು ವಾರ ಬೇಕಾಗುತ್ತಿತ್ತು ಸುಧಾರಿಸಿಕೊಳ್ಳಲಿಕ್ಕೆ. ಟೈಫಾಯಿಡ್, ಕಾಲರಾ ಬಂದರೆ ಮೂರ್ನಾಲ್ಕು ತಿಂಗಳು ಬೇಕಾಗುತ್ತದೆ ಪೂರ್ತಿ ಗುಣಮುಖರಾಗಲು. ಹಾಗಾಗಿ ವ್ಯಾಕ್ಸೀನ್ ತೆಗೆದುಕೊಳ್ಳುವದರಲ್ಲಿ ಶಾಣ್ಯಾತನವಿತ್ತು.

ಒಮ್ಮೆ ನಮ್ಮ ಮಾಳಮಡ್ಡಿಯ ನೆರೆಹೊರೆಯವರಾದ ಹುದ್ದಾರರ ಮನೆಗೆ ಹೋಗಿದ್ದೆವು. ದಾಂಡೇಲಿಗೆ ಪರೀಕ್ಷಾ ಕೆಲಸಕ್ಕೆ ಹೋಗಿದ್ದ ತಂದೆಯವರಿಗೆ ಒಂದು ಒಂದು ಟ್ರಂಕ್ ಕಾಲ್ ಮಾಡಬೇಕಿತ್ತು. ಫೋನ್ ಇದ್ದಿದ್ದು ಹುದ್ದಾರ ಅವರ ಮನೆಯಲ್ಲಿ ಮಾತ್ರ. ಅಮ್ಮನ ಜೊತೆ ಅಲ್ಲಿ ಹೋದರೆ ಸುಮ್ಮನಿರುವ ಪೈಕಿಯೇ ನಾನು? ನಾನೇ ಅವರ ಮನೆ ಯಬಡ ನಾಯಿಯನ್ನು ರೇಗಿಸಿದೆನೋ ಅಥವಾ ಅದಾಗೇ ರೈಸ್ ಆಗಿಬಿಡ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಕಾಲಿಗೆ ಬಾಯಿ ಹಾಕಿಯೇಬಿಡ್ತು. ಜಾಸ್ತಿ ಏನೂ ಕಚ್ಚಲಿಲ್ಲ. ಸ್ವಲ್ಪ ಹಲ್ಲು ತಾಗಿತು ಅಷ್ಟೇ. ಹುದ್ದಾರ ಮಾಮಿ ಸುಣ್ಣ ಮತ್ತು ಬೆಲ್ಲ ತಿಕ್ಕಿ ಕಳಿಸಿದ್ದರು. ನಾಯಿ ಕಚ್ಚಿದ ನಂತರ ಸುಣ್ಣ ಮತ್ತು ಬೆಲ್ಲ ಹಚ್ಚಿಕೊಳ್ಳಬೇಕು ಅಂತ ಹೊಸ ವಿಷಯ ಗೊತ್ತಾಗಿದ್ದು ಆವಾಗೇ.

ಈಗ ಬಂತಲ್ಲ ದೊಡ್ಡ ಗಂಡಾಂತರ. ನಾಯಿ ಕಚ್ಚಿದರೆ ಹದಿನಾಲ್ಕು ಇಂಜೆಕ್ಷನ್ ತೆಗೆದುಕೊಳ್ಳಬೇಕು. ಅದೂ ಹೊಟ್ಟೆ ಮೇಲೆ ಹೊಕ್ಕುಳ ಸುತ್ತ ಕೊಡುತ್ತಾರೆ. ಯಮನೋವು ಅಂತ ಕೇಳಿದ್ದೆ. ಅದನ್ನು ಡಾಕ್ಟರ್ ಜೀಟಿ ಪಾಟೀಲರ ಕೈಯಲ್ಲಿ ತೆಗೆದುಕೊಳ್ಳುವದನ್ನು ಊಹಿಸಿಕೊಂಡರೆ ಎಲ್ಲೆಲ್ಲೋ ಏನೇನೋ ಆಗತೊಡಗಿತು. ತೆಗೆದುಕೊಳ್ಳಲಿಲ್ಲ ಅಂದರೆ ನಾಯಿ ಹುಚ್ಚು ಹಿಡಿದರೆ ಅಂತ ಮತ್ತೊಂದು ತರಹದ ಹೆದರಿಕೆ. ಹಾಗಾಗಿ ಏನೋ ಧೈರ್ಯಮಾಡಿ ಹೋದೆ. ಜೀಟಿ ಪಾಟೀಲ್ ಎಲ್ಲ ಚೆಕ್ ಮಾಡಿ, ನಾಯಿಯ ವಿವರಣೆ ಕೇಳಿ, ಏನೂ ಬೇಡ ಅಂತ ಹೇಳಿದರು. ಬದುಕಿದೆಯಾ ಬಡಜೀವವೇ ಅಂತ ಹೇಳಿ ಬಂದೆ. ಅದೇ ಕೊನೆ. ಮುಂದೆ ನಾಯಿಗಳಿಗೆ ಬಾಲ ಗೀಲ ಎಳೆದು ಎಂದೂ ರೇಗಿಸಿಲ್ಲ.

****

ಎಲ್ಲ ಡಾಕ್ಟರುಗಳೂ ಜೀಟಿ ಪಾಟೀಲರ ಹಾಗೆ ರಫ್ ಅಂಡ್ ಟಫ್ ಇರುವದಿಲ್ಲ, ಕೆಲವರು ನಾಜೂಕಾಗಿಯೂ ಇರುತ್ತಾರೆ ಅಂತ ತಿಳಿಯಲಿಕ್ಕೆ ಒಮ್ಮೆ ಪಾಟೀಲ್ ಡಾಕ್ಟರ್ ರಜೆ ಹಾಕಿ ಎಲ್ಲೋ ಹೋಗಬೇಕಾಯಿತು. ಆವಾಗಲೇ ಜಡ್ಡು ಬಿದ್ದೆ. ಆವಾಗ ಬಂದವರು ಕಮಲಾಪುರ ಡಾಕ್ಟರ್  ಬಾಯಿ. ಲೇಡಿ ಡಾಕ್ಟರ್. ನಮ್ಮನ್ನು ಈ ಭೂಮಿಗೆ ತಂದ ಪುರಾತನ ಕಮಲಾಪುರ ಡಾಕ್ಟರ್ ಅವರ ಸೊಸೆ. ಅವರು ಚೈಲ್ಡ್ ಸ್ಪೆಷಲಿಸ್ಟ್ ಆಗಿದ್ದರೇ? ನೆನಪಿಲ್ಲ. ತುಂಬಾ ಒಳ್ಳೆ ಡಾಕ್ಟರ್. ಅವರು ಕೊಡುತ್ತಿದ್ದ ಇಂಜೆಕ್ಷನ್ ಜೀಟಿ ಪಾಟೀಲರು ಕೊಡುತ್ತಿದ್ದ ಇಂಜೆಕ್ಷನ್ ನೋವಿನ ೧೦% ಸಹಿತ ಆಗುತ್ತಿರಲಿಲ್ಲ. ಮತ್ತೆ ಎಲ್ಲಿ ಕೊಬ್ಬು ಜಾಸ್ತಿ ಇದೆಯೋ ಅಲ್ಲಿಯೇ ಕೊಡುತ್ತಿದ್ದರು. ತಿಕ ಕೊಬ್ಬು ಇರುವದು ಯಾವದಕ್ಕೆ ಉಪಯೋಗವಾಗದಿದ್ದರೂ ಇಂಜೆಕ್ಷನ್ ತೆಗೆದುಕೊಳ್ಳಲು ಮಾತ್ರ ಸಹಾಯಕಾರಿ. ರಟ್ಟೆಯಲ್ಲಿ ಬಲವಿರಬೇಕು. ಇಲ್ಲವಾದರೆ ತಿಕದಲ್ಲಿ ಕೊಬ್ಬಿರಬೇಕು. ಎರಡರಲ್ಲಿ ಒಂದಾದರೂ ಇದ್ದರೆ ಇಂಜೆಕ್ಷನ್ ತೆಗೆದುಕೊಳ್ಳಲು ಸಹಾಯಕಾರಿ ಅಂತ ಅರ್ಥ.

ಮತ್ತೆ ಕಮಲಾಪುರ ಡಾಕ್ಟರಿಣಿ ಬಾಯಿ ಕೊಡುತ್ತಿದ್ದ ಔಷಧಿ ಸಹ ಸಿಹಿಯಾಗಿರುತ್ತಿತ್ತು. ಮೂಗು ಹಿಡಿಯುವದು, ಬಾಯಿ ತೆಗೆಸುವದು ಯಾವದೂ ಬೇಕಾಗುತ್ತಿರಲಿಲ್ಲ. ಖುದ್ದಾಗಿ ಕೇಳಿ ಇಸಿದುಕೊಂಡು ಕುಡಿಯುತ್ತಿದ್ದೆ. ಇವರೇ ನಮ್ಮ ಖಾಯಂ ಡಾಕ್ಟರಿಣಿ ಆಗಿದ್ದರೆ ಎಷ್ಟು ಒಳ್ಳೆಯದಿತ್ತು ಅಂತ ಅನ್ನಿಸಿತ್ತು. ಆದರೆ ಜೀಟಿ ಪಾಟೀಲರು ತಂದೆಯವರಿಗೆ ತುಂಬಾ ಖಾಸ್ ದೋಸ್ತರು. ಹೀಗಾಗಿ ಆಗಾಗ ನರಕ ಸದೃಶ ಅವರ ದವಾಖಾನೆಯ ದರ್ಶನವಾಗುತ್ತಿತ್ತು. ಆದರೆ ಅದು ಕಹಿ ಔಷಧಿಗೇ ಜಾಸ್ತಿ ನಿಲ್ಲುತ್ತಿತ್ತು. ಹೆಚ್ಚಿನ ಇಂಜೆಕ್ಷನ್ ತೆಗೆದುಕೊಳ್ಳುವ ಪರಿಸ್ಥಿತಿ ಬರಲಿಲ್ಲ. ಅದೇ ದೊಡ್ಡ ನಸೀಬ್.

(ಹಿಂದಿನ ವರ್ಷ ಬರೆದಿದ್ದ ಲೇಖನವೊಂದರಲ್ಲಿ ಜೀಟಿ ಪಾಟೀಲ ಡಾಕ್ಟರ್, ಕಮಲಾಪುರ ಡಾಕ್ಟರ್ ಬಾಯಿ ಬಗ್ಗೆ ಪ್ರಸ್ತಾಪಿಸಿದ್ದೆ. ಇಲ್ಲಿದೆ ಆ ಲೇಖನ.)

****

ಎಲ್ಲ ವೈದ್ಯರಿಗೆ ವಿಶ್ವ ವೈದ್ಯ ದಿವಸದ ಶುಭಕಾಮನೆಗಳು, ಶುಭಾಶಯಗಳು.

ಮುಂದಿನ ವರ್ಷ ಮತ್ತೊಂದಿಷ್ಟು ವೈದ್ಯರನ್ನು ನೆನೆಯೋಣ.

ಹಾದರಗಿತ್ತಿ ಹಜಾಮತಿ

ಮಾಧವ ಅಂದು ಬೆಳಗಿನಿಂದಲೇ ಕುಡಿಯಲು ಆರಂಭಿಸಿದ್ದ. ಕುಡಿಯಲು ಆರಂಭಿಸಿದ್ದ ಅನ್ನಲಿಕ್ಕೆ ಯಾವಾಗ ಕುಡಿಯುವದನ್ನು ನಿಲ್ಲಿಸಿದ್ದ? ಅವನಿಗೇ ಮರೆತುಹೋಗಿದೆ. ಹಿಂದಿನ ರಾತ್ರಿ ಎಂದಿನಂತೆ ಬಾರಿನಲ್ಲಿ ಕಂಠಪೂರ್ತಿ ಕುಡಿದಿದ್ದ. ಅದು ದಿನದ ಅಭ್ಯಾಸ. ಗೆಳೆಯರು ಮನೆ ಮುಟ್ಟಿಸಿ ಹೋಗಿದ್ದರು. ಕುಡುಕ ಗೆಳೆಯರು ಅಷ್ಟಾದರೂ ಮಾಡುತ್ತಾರೆ. ತಾವೇ ನಶೆ ಏರಿ ಜೋಲಿ ಹೊಡೆದು ಗಟಾರಕ್ಕೆ ಬೀಳುವ ಸ್ಥಿತಿಯಲ್ಲಿದ್ದರೂ ಇವನನ್ನು ಮನೆಗೆ ಮುಟ್ಟಿಸದೇ ಹೋಗುವದಿಲ್ಲ. ಇದ್ದವರಲ್ಲಿಯೇ ಸ್ವಲ್ಪ ಮಾಲ್ದಾರ್ ರೊಕ್ಕದ ಆದ್ಮಿ ಇವನು. ಬಾರಿನ ಬಿಲ್ ಕೊಟ್ಟಿರುತ್ತಾನೆ. ಋಣ ಬಿದ್ದಿರುತ್ತದೆ. ಅದಕ್ಕಾಗಿ ಮನೆ ಮುಟ್ಟಿಸಿರುತ್ತಾರೆ. ಕುಡಿದು ಫುಲ್ ಔಟಾದ ಇವನನ್ನು ಮನೆಯ ಮುಂದಿನ ಬಾಗಿಲಿಗೆ ಆನಿಸಿ ಹೋಗಿರುತ್ತಾರೆ. ಬಾಗಿಲಿಗೆ ಅಕ್ಕಿ ಮೂಟೆಯಂತೆ ಆನಿಕೊಂಡಿರುತ್ತದೆ ಇವನ ದೇಹ. ಬಾಗಿಲು ತಟ್ಟಿ, ಮಾಧವನ ಹೆಂಡತಿ ವೀಣಾಳನ್ನು ಎಬ್ಬಿಸಿ, ಈ ಪುಣ್ಯಾತ್ಮನನ್ನು ಮನೆಯೊಳಕ್ಕೆ ತಳ್ಳುವ ಜುರ್ರತ್ ಯಾರೂ ಮಾಡುವದಿಲ್ಲ. ಯಾರಿಗೆ ಬೇಕು ಆ ನಡು ರಾತ್ರಿಯಲ್ಲಿ ಪೂಜ್ಯ ವೈನಿಯಾದ ವೀಣಾ ವೈನಿಯಿಂದ 'ಪೂಜೆ' ಮಾಡಿಸಿಕೊಳ್ಳುವ ಒಳ್ಳೆ ನಸೀಬು!? ಮಾಧವನಿಗಂತೂ ಮೈಮೇಲೆ ಹೋಶ್ ಇರುವದಿಲ್ಲ. ಬಾಗಿಲಿಗೆ ಆನಿಕೊಂಡೇ ನಿದ್ದೆ ಹೋಗಿರುತ್ತಾನೆ ಆ ಕುಡುಕ.

ಹಿಂದಿನ ದಿನವೂ ಹಾಗೆಯೇ ಆಗಿತ್ತು. ಬೆಳಿಗ್ಗೆ ಐದೂವರೆ ಹೊತ್ತಿಗೆ ಹಾಲಿನ ಪ್ಯಾಕೆಟ್ ಎತ್ತಿಕೊಳ್ಳಲು ಮುಂದಿನ ಬಾಗಿಲು ತೆಗೆದಿದ್ದಳು ವೀಣಾ. ಬಾಗಿಲು ತೆರೆದಂತೆ ಬಾಗಿಲಿಗೆ ಆನಿಕೊಂಡಿದ್ದ ಗಂಡ ಪ್ರಾಣಿ ಉಧೋ ಅಂತ ಹೊಸ್ತಿಲ ಮೇಲೆ ಪವಡಿಸಿಬಿಟ್ಟಿತು. 'ಕರ್ಮ! ಕರ್ಮ!' ಅಂತ ಹಣೆ ಹಣೆ ತಟ್ಟಿಕೊಳ್ಳುತ್ತ ಮಾಧವನ ಬಾಡಿಯನ್ನು ಎಳೆದು ಒಳಗೆ ಹಾಕಿದ್ದಳು. ಹಾಲಿನ ಪಾಕೇಟುಗಳನ್ನು ಗಡಿಬಿಡಿಯಲ್ಲಿ ಒಳಗೆ ತಂದುಕೊಂಡು ಬಾಗಿಲು ಮುಚ್ಚಿದ್ದಳು. 'ಓಣಿ ಜನರ ಮುಂದೆ ಮಾನ ಕಳೆಯುತ್ತಾನೆ! ಪ್ರಾರಬ್ಧ!' ಅಂದುಕೊಳ್ಳುತ್ತ ಒಳಗೆ ಹೋದಳು. ಮಾಧವನಿಗೆ ಕೊಂಚ ಎಚ್ಚರವಾಯಿತು. ಬಾಗಿಲಲ್ಲಿ ಕಾಲು ಒರೆಸುವ ಡೋರ್ ಮ್ಯಾಟ್ ಮೇಲೆ ಪವಡಿಸಿದ್ದೇನೆ ಅಂತ ಅರಿವಾಗಿ, ಹೇಗೋ ಮಾಡಿ ಮೇಲೆ ಎದ್ದು, ಹೋಗಿ ಬೆಡ್ರೂಮ್ ಸೇರಿಕೊಂಡು ಶಿವಾಯ ನಮಃ ಅಂತ ನಿದ್ದೆ ಹೋದ.

ಹೀಗೆ ನಿದ್ದೆ ಹೋದವ ಸುಮಾರು ಹನ್ನೊಂದು ಘಂಟೆ ಹೊತ್ತಿಗೆ ಎದ್ದ. ಎದ್ದ ಕೂಡಲೇ ಮತ್ತೆ ನೆನಪಾಯಿತು. ಚಹಾ ಅಲ್ಲ. ಎಣ್ಣೆ. ಹೇಗೂ ಮನೆಯಲ್ಲೂ ಸ್ಟಾಕ್ ಇಟ್ಟಿರುತ್ತಾನಲ್ಲ. ಅಲ್ಲೇ ಬೆಡ್ ರೂಮಿನಲ್ಲಿಯೇ ತೀರ್ಥ ಸೇವನೆ ಶುರು ಹಚ್ಚಿಕೊಂಡ. ಕೈಯಲ್ಲಿ ಟೀವಿ ರಿಮೋಟ್. ಅನ್ಯಮನಸ್ಕನಾಗಿ ಚಾನೆಲ್ ಬದಲಾಯಿಸುತ್ತ ಎಣ್ಣೆ ಗುಟುಕರಿಸುತ್ತ ಕೂತಿದ್ದ. ನಡುವೆ ಹೋಗಿ ಅಡುಗೆಮನೆಯಿಂದ ಮೆಲುಕಾಡಲು ಅಂತ ಒಂದಿಷ್ಟು ಚೂಡಾ ತಂದುಕೊಂಡ. ಮತ್ತೆ ಎಣ್ಣೆ ಸೇವನೆ ಮುಂದುವರೆಸಿದ. ಗಂಡನ ಕುಡಿತದಿಂದ ಇವತ್ತೂ ಕಿರಿಕಿರಿ ಅನುಭವಿಸುತ್ತಿದ್ದ ಪತ್ನಿ ಪಾತ್ರೆಗಳನ್ನು ಡಬಾ ಡಬಾ  ಅಂತ ಡಮರು ಬಾರಿಸುತ್ತ ಅಡಿಗೆಮನೆ ಕಡೆ ಕೆಲಸ ನಡೆಸಿದ್ದಳು. ಅವಳ ಪಾತ್ರೆಗಳ ಡಮರು ಆವಾಜ್ ಕಮ್ಮಿಯಾಗಲಿ ಅಂತ ಇವನು ಟೀವಿ ಆವಾಜನ್ನು ಜಾಸ್ತಿ ಮಾಡಿದ. ಮತ್ತೊಂದು ಪೆಗ್ ಎತ್ತಿದ. ಎಷ್ಟು ಪೆಗ್ಗುಗಳನ್ನು ಹಾಕಿದ್ದಾನೆ ಅಂತ ಅವನಿಗೆ ನೆನಪಿರಲಿಲ್ಲ. ಬೇಕಾಗೂ ಇರಲಿಲ್ಲ. ಘಂಟೆ ಸುಮಾರು ಮಧ್ಯಾಹ್ನ ಎರಡು ಘಂಟೆ. ಮುಖವನ್ನೂ ತೊಳೆಯದೇ ಎದ್ದವನೇ ಕುಡಿಯುತ್ತ ಕುಳಿತಿದ್ದಾನೆ.

ಕಾಲಿಂಗ್ ಬೆಲ್ ಸದ್ದಾಯಿತು. ಹೆಂಡತಿ ಹೋಗಿ ಬಾಗಿಲು ತೆಗೆಯುತ್ತಾಳೋ ಅಂತ ನೋಡಿದ. ಅವಳು ಅಡುಗೆಮನೆಯಿಂದ ಕದಲುವ ಲಕ್ಷಣ ಕಾಣಲಿಲ್ಲ. ಹೊರಗಿಂದ ಮತ್ತೆ ಮತ್ತೆ ಕಾಲಿಂಗ್ ಬೆಲ್ ಬಾರಿಸಿದರು. ಕಾಲಿಂಗ್ ಬೆಲ್ಲಿನ ಕರ್ಕಶ ಮೊರೆತ ಕೇಳಲಾಗದೇ ಕುಡುಕ ಕಾಳಿಂಗ ಎದ್ದ. ಅರೆಬರೆ ಬಿಚ್ಚಿದ್ದ ಲುಂಗಿಯನ್ನು ಗುಡಾಣ ಮಾದರಿಯ ಹೊಟ್ಟೆ ಮೇಲೆ ಕಟ್ಟಿದ. ಮೇಲೇನೂ ಬಟ್ಟೆ ಹಾಕಿರಲಿಲ್ಲ. ಅಲ್ಲೇ ಇದ್ದ ಸಣ್ಣ ಟಾವೆಲ್ ತರಹದ್ದನ್ನು ಹೊದ್ದುಕೊಂಡು, ವಿಕಾರವಾಗಿ ಆಕಳಿಸುತ್ತ ಬಾಗಿಲು ತೆಗೆಯಲು ಹೋದ.

ಬಾಗಿಲು ತೆಗೆದರೆ ಕಂಡವರು ಮಾಮಿ. ಒಂದು ತರಹದ embarrassment ಫೀಲ್ ಆಯಿತು. ಸರಿಯಾಗಿ ಬಾಯಿಬಿಟ್ಟು, 'ಬರ್ರಿ, ಒಳಗ ಬರ್ರಿ, ಮಾಮಿ,' ಅನ್ನಲೂ ಸಂಕೋಚ. ಬಾಯಿ ಬಿಟ್ಟರೆ ಅವನ ಗಬ್ಬು ನಾತ ಅವನಿಗೇ ಹೊಡೆಯುತ್ತಿದೆ. ಕುಡುಕರ ದೊಡ್ಡ ಪ್ರಾಬ್ಲೆಮ್ ಅದು. ರಾತ್ರಿ ಕುಡಿಯುವಾಗ ಜೊತೆಗೆ ಚಾಕಣಾ ಪಾಕಣಾ ಅಂತ ಏನೇನು ತಿಂದಿರುತ್ತಾರೋ ಏನೋ. ಎಲ್ಲದರ ಜೊತೆ ಭರ್ಜರಿ ಉಳ್ಳಾಗಡ್ಡೆ, ಬಳ್ಳೊಳ್ಳಿ ಮೆದ್ದಿರುತ್ತಾರೆ. ಹೆಂಡದ ಜೊತೆ ಸಿಕ್ಕಾಪಟ್ಟೆ ರುಚಿಯಾಗಿರುತ್ತದೆ. ಅಡ್ಡಾದಿಡ್ಡಿ ಕುಡಿದಿರುತ್ತಾರೆ. ಆ ಮದ್ಯ ಇನ್ನೂ ಹೊಟ್ಟೆಯಲ್ಲಿಯೇ ಕುಲುಕಾಡುತ್ತಿರುತ್ತದೆ. ರಾತ್ರಿ ಹಲ್ಲು ಗಿಲ್ಲು ತಿಕ್ಕಿ ಮಲಗುವ ಅಭ್ಯಾಸ ಕುಡುಕರಿಗೆ ಇರುವದಿಲ್ಲ. ಯಾವಾಗ ನಿದ್ದೆಗೆ ಬಿದ್ದಿರುತ್ತಾರೆ ಅಂತಲೇ ಗೊತ್ತಿರುವದಿಲ್ಲ. ಹಾಗಿರುವಾಗ ನೆನಪಿಟ್ಟುಕೊಂಡು ಹಲ್ಲು ಗಿಲ್ಲು ತಿಕ್ಕಿ ಮಲಗೋದು ಸಾಧ್ಯವೇ? ಬಾರಿನಿಂದ ಹೊರ ಬೀಳುವಾಗ ಉಳ್ಳಾಗಡ್ಡೆ, ಬಳ್ಳೊಳ್ಳಿ, ಹೆಂಡದ ದುರ್ವಾಸನೆಯೆಲ್ಲ ಹೋಗಲಿ ಅಂತ ಗುಟ್ಕಾವನ್ನೋ, ಜರ್ದಾ ಪಾನನ್ನೋ ಹಾಕಿಕೊಂಡು ಬಂದಿರುತ್ತಾರೆ. ಅದರದ್ದು ಮತ್ತೊಂದು ತರಹದ ದುರ್ವಾಸನೆ. ಹೀಗೆ ಎಲ್ಲ ಕೂಡಿ ಕುಡುಕರಿಗೆ ಬೆಳಿಗ್ಗೆ ಎದ್ದಾಗ ಅವರ ದುರ್ವಾಸನೆ ಅವರಿಗೇ ಅಸಹನೀಯವಾಗಿರುತ್ತದೆ. ಬೇರೆ ಯಾರಾದರೂ ಆ ದುರ್ವಾಸನೆ ಭರಿಸಿದರೆ ಎಚ್ಚರ ತಪ್ಪಿ ಬೀಳಬೇಕು. ಆ ಮಾದರಿಯ ಪರಿಸರ ಮಾಲಿನ್ಯ.

ಮಾಧವ ಅದೇನೇ ಸಣ್ಣ ಧ್ವನಿಯಲ್ಲಿ, ಮುಖಕ್ಕೆ ಟಾವೆಲ್ ಮುಚ್ಚಿಕೊಂಡು ಮಾಮಿಯನ್ನು ಸ್ವಾಗತಿಸಿದರೂ ಕುಡುಕರ ಕೆಟ್ಟ ದುರ್ವಾಸನೆ ಮಾಮಿಯ ಮೂಗಿಗೂ ಅಡರಿತು. ಮೂಗು ಸಿಂಡರಿಸಿ ಒಂದು ತರಹದ ಲುಕ್ ಕೊಟ್ಟರು. ತನ್ನ ಕಣ್ಣಲ್ಲೇ ಮಾಧವ ಮತ್ತೂ ಸಣ್ಣವನಾಗಿಹೋದ. ಅವನ ಅಮ್ಮನ ಖಾಸ್ ಗೆಳತಿ ಮಾಮಿ. ಸಣ್ಣವನಿದ್ದಾಗಿನಿಂದ ಅವರ ಮುಂದೆಯೇ ಬೆಳೆದವನು ಇವನು. ಅಂತಹ ಮಾಮಿಯ ಮುಂದೆ ತಿರುಪೆ ಎತ್ತುವವನ ಅವತಾರದಲ್ಲಿ ನಿಂತಿದ್ದಾನೆ. ಅಪರೂಪಕ್ಕೆ ತನ್ನ ಮೇಲೆಯೇ ತನಗೆ ಅಸಹ್ಯ ಮೂಡಿತು.

ದೂರ ಸರಿದು ಒಳಗೆ ನಡೆದ. ದೂರದಿಂದಲೇ, 'ಬರ್ರಿ, ಬರ್ರಿ. ಒಳಗ ಬರ್ರಿ. ಕೂಡ್ರಿ. ಒಂದೇ ಮಿನಿಟ್. ಸ್ನಾನ ಮುಗಿಸಿ ಬಂದೇಬಿಡ್ತೇನಿ,' ಅಂದವನೇ ಬಚ್ಚಲಿನತ್ತ ಓಡಿದ. ಮಾಮಿ ಬಂದಿದ್ದಕ್ಕೆ ಸ್ನಾನದ ಯೋಗ ಬಂದಿತ್ತು. ಇಲ್ಲವಾದರೆ ಕುಡಿದು ಕುಡಿದು ಚಿತ್ತಾಗಿ ಮತ್ತೆ ಅಲ್ಲೇ ನಿದ್ದೆ ಹೋಗಿಬಿಡುತ್ತಿದ್ದ. ಸಂಜೆ ಏಳೋ ಎಂಟೋ ಘಂಟೆಗೆ ಎಚ್ಚರವಾಗುತ್ತಿತ್ತು. ಮತ್ತೆ ಸಂಜೆಯ ತೀರ್ಥಯಾತ್ರೆಗೆ ಸಜ್ಜಾಗುತ್ತಿದ್ದ.

ಸ್ನಾನಕ್ಕೆ ಹೋಗುವ ಮುನ್ನ, 'ಏ, ವೀಣಾ. ಮಾಮಿ ಬಂದಾರ ನೋಡು. ನಾ ಬರ್ತೇನಿ ಸ್ನಾನ ಮಾಡಿ,' ಅಂತ ಹೇಳಿ ಹೋದ.

'ಮೊದಲೇ ಇವನದು ಈ ಅವತಾರ. ಅದೇ ಅವತಾರದಲ್ಲಿ ಹೋಗಿ ಮನೆಗೆ ಬಂದ ಅತಿಥಿಗಳ ಕಣ್ಣಿಗೆ ಬಿದ್ದಿದ್ದಾನೆ. ಈಗ ನಾನು ಹೋಗಿ ಅವರ ಮುಂದೆ ಕೂತು ಮಾತಾಡಬೇಕು. ನನಗೂ ಕೆಟ್ಟ ಅವಮಾನ. ಎಲ್ಲ ಇವನ ಕಾಲದಲ್ಲಿ. ಇವನ ಕುಡಿತದ ಕಾಲದಲ್ಲಿ. ಅಯ್ಯೋ ನನ್ನ ಕರ್ಮವೇ!' ಅಂತ ಮನದಲ್ಲೇ ಅಂದುಕೊಳ್ಳುತ್ತ ವೀಣಾ ಅಡುಗೆಮನೆಯಿಂದ ಹೊರಗೆ ಬಂದಳು. ಮಾಮಿಯ ಜೊತೆ ಮಾತುಕತೆಗೆ ಕೂತಳು. ಹಾಗೆ ಸುಮ್ಮನೆ ಟೈಂಪಾಸ್ ಮಾತುಕತೆ ಗಂಡ ಸ್ನಾನ ಮುಗಿಸಿ ಬರುವತನಕ.

ಬಂದು ಕೂತ ವೀಣಾ ಮಾಮಿಯ ಜೊತೆ ಅದು ಇದು ಮಾತಾಡಿದಳು. ತಲೆ ಮೇಲೆ ಸೆರಗು ಮುಚ್ಚಿಗೊಂಡು ಕೂತಿದ್ದಳು. ಇನ್ನೂ ಮೂವತ್ತರ ಹರೆಯದ ಯುವತಿ ಅದು ಏಕೆ ಹಾಗೆ ತಲೆ ಮೇಲೆ ಸೆರಗು ಮುಚ್ಚಿಕೊಂಡು ಕೂತಿದ್ದಾಳೆ ಅಂತ ಮಾಮಿಗೆ ಅಚ್ಚರಿಯಾಯಿತು. ವೀಣಾಳಲ್ಲಿ ಏನೋ ಬದಲಾವಣೆ ಆದಂತೆ ಕಂಡುಬಂತು. ಇನ್ನೇನು ಕೇಳಬೇಕು ಅನ್ನುವಷ್ಟರಲ್ಲಿ ಸ್ನಾನ ಮುಗಿಸಿದ ಮಾಧವ ಶುದ್ಧ ಬಟ್ಟೆ ಧರಿಸಿ, ಇನ್ನೂ ಒದ್ದೆಯಾಗಿದ್ದ ತಲೆಯನ್ನು ಒರೆಸಿಕೊಳ್ಳುತ್ತ ಮತ್ತೆ ಎಂಟ್ರಿ ಕೊಟ್ಟ.

'ಏನು ಮಾಮಿ? ಭಾಳ ಅಪರೂಪ. ಮಾಮಾ ಆರಾಮರೀ? ಮತ್ತರೀ??' ಅಂತ ಕೇಳಿದ. ಹಾಗೆ ಕೇಳುವದರಲ್ಲಿಯೇ ಮಾಮಿ ಬಂದ ಕೆಲಸದ ಬಗ್ಗೆಯೂ ವಿಚಾರಿಸಿಕೊಂಡಿದ್ದ.

ಸ್ನಾನ ಮಾಡಿ ಬಂದರೂ ಗಬ್ಬು ವಾಸನೆ ಹೋಗಿರಲಿಲ್ಲ. ಕುಡಿದ, ತಿಂದ ವಾಸನೆ ಏನು ಕೇವಲ ಬಾಯಿಗೆ ಮಾತ್ರ ಅಂಟಿಕೊಂಡಿರುತ್ತದೆಯೇ? ಅದು ಸೀದಾ ರಕ್ತ ಸೇರಿರುತ್ತದೆ. ಹಾಗಾಗಿಯೇ ಉಸಿರಾಡಿದಾಗೊಮ್ಮೆ ಗಬ್ಬು ನಾತ. ಅದು ದೇಹದಿಂದ ಪೂರ್ತಿ ನಿಕಾಲಿಯಾಗುವರೆಗೂ ವಾಯು ಮಾಲಿನ್ಯ. ಹಾಗಾಗಿಯೇ ಉಳ್ಳಾಗಡ್ಡೆ, ಬಳ್ಳೊಳ್ಳಿ ತಿಂದ ಮೇಲೆ ಮತ್ತು ಹೆಂಡ ಕುಡಿದ ಮೇಲೆ ಅದೇನೇ ಗಜಂ ನಿಂತರೂ, ಅದೆಷ್ಟೇ ಹಲ್ಲುಜ್ಜಿದರೂ, ಅದೆಷ್ಟೇ ಮಾಣಿಕ್ಚಂದ ಗುಟ್ಕಾ ಹಾಕಿಕೊಂಡರೂ ಗಬ್ಬು ವಾಸನೆ ಹೋಗುವದಿಲ್ಲ. ಮಾಧವನ ಕೇಸಿನಲ್ಲೂ ಅದೇ ಆಗಿತ್ತು.

'ಎಲ್ಲಾ ಆರಾಮ್ ಮಾಧವಾ. ಒಂದು ಒಳ್ಳೆ ಕೆಲಸಕ್ಕೆ ಚಂದಾ ಕೂಡಿಸಲಿಕತ್ತೇನಿ. ನಿನ್ನ ಕಡೆನೂ ಕೇಳೋಣ ಅಂತ ಬಂದೆ. ಕೈಲಾದಷ್ಟು ಕೊಟ್ಟು ಸಹಾಯ ಮಾಡಪಾ. ಒಳ್ಳೆ ಕೆಲಸ. ಅಷ್ಟು ಇಷ್ಟು ಅಂತಿಲ್ಲ. ಎಷ್ಟು ಮನಸ್ಸಿಗೆ ಬರ್ತದ ಅಷ್ಟು,' ಅಂದು ಫಿಟ್ಟಿಂಗ್ ಇಟ್ಟರು. ಮಾಮಿಯ ಸಮಾಜ ಸೇವೆಯ ಬಗ್ಗೆ ಎಲ್ಲರಿಗೂ ಗೊತ್ತು. ಒಂದಾದಮೇಲೊಂದು ಒಳ್ಳೆ ಕೆಲಸಗಳಿಗೆ ಆದಷ್ಟು ರೊಕ್ಕ ಸಂಗ್ರಹಿಸಿ ಕೊಡುತ್ತಿರುತ್ತಾರೆ. ತಾವೂ ಕೊಡುತ್ತಾರೆ. ಮತ್ತೆ ಮಂದಿಯ ಜೊತೆ ಒಳ್ಳೆ ಸಂಪರ್ಕ ಮಡಗಿದ್ದಾರೆ. ಊರ ಮಂದಿಯ ಜೊತೆ ಒಳ್ಳೆ ಬಾಂಧವ್ಯ ಇದೆ. ಮತ್ತೆ ಹಿರಿಯರು. ಹಾಗಾಗಿ ಮಾಧವನಿಗೆ ಕೊಡದೇ ಇರಲು ಕಾರಣವಿಲ್ಲ. ಮತ್ತೆ ಅವರದ್ದೂ ದೊಡ್ಡ ಮನೆತನವೇ. ಒಳ್ಳೆ ಕೆಲಸಗಳಿಗೆ ದಾನ ಧರ್ಮ ಮಾಡಿದವರೇ. ಹಾಗಾಗಿ ಮಾಮಿಗೆ ಒಂದಿಷ್ಟು ರೊಕ್ಕ ತಂದುಕೊಡಲು ಮಾಧವ ಒಳಗೆ ಹೋದ. ಒಂದಿಷ್ಟು ನೋಟು ಹಿಡಿದುಕೊಂಡು ಬಂದು ಮಾಮಿಗೆ ಕೊಟ್ಟು ಕೈಮುಗಿದ. ಮಾಮಿ ರಸೀದಿ ಬರೆದು ಕೊಟ್ಟರು. ಭರ್ಜರಿ ಥಾಂಕ್ಸ್ ಹೇಳಿದರು.

ರೊಕ್ಕ ಸಿಕ್ಕಿತು ಅಂತ ಹಾಗೇ ಸೀದಾ ಎದ್ದು ಹೋಗಲಿಕ್ಕೆ ಆಗುತ್ತದೆಯೇ? ಹಾಗೆ ಮಾಡಿದರೆ ಸ್ನೇಹಕ್ಕೆ, ಬಾಂಧವ್ಯಕ್ಕೆ ಕೊಡಲಿಯೇಟು ಬಿದ್ದಂತೆಯೇ. ಮುಂದಿನ ಸಲ ಚಂದಾ ಕೇಳಲು ಬಂದಾಗ, 'ಮುಂದ ಹೋಗ್ರೀ!' ಅಂತ ಹೇಳಿ ಗೇಟು ಬಾಗಿಲನ್ನು ಮುಚ್ಚುತ್ತಾರೆ. ಹಾಗಾಗಿ ಸುಮ್ಮನೆ ಒಂದಿಷ್ಟು ಮಾತಾಡುತ್ತ ಕೂತರು.

ಮಾಧವನ ಪತ್ನಿ ವೀಣಾ ಏನೋ ಒಂದು ತರಹದಲ್ಲಿ ಬದಲಾಗಿದ್ದು ನೆನಪಾಯಿತು. ಕೇಳಬೇಕೆನ್ನಿಸಿತು.

'ಏನು ವೀಣಾ? ಏನೋ ಬದಲಾದಂಗ ಅದಲ್ಲಾ? ಏನು? ತಿಳಿವಲ್ತು? ತಲಿ ಮ್ಯಾಲ ಸೆರಗು ಯಾಕ?' ಅಂತ ಮಾಮಿ ಸಹಜವಾಗಿ ಕೇಳಿದರು.

ವೀಣಾ ಒಂದು ಕ್ಷಣ confuse ಆದ ಲುಕ್ ಕೊಟ್ಟಳು. ಹೇಳಲೋ ಬೇಡವೋ ಅನ್ನುವ ವಿಚಾರ ಮಾಡಿದಳು. ಆಕೆ ಹೇಳುವ ಜರೂರತ್ತೇ ಬರಲಿಲ್ಲ. ಮಾಮಿಯ innocent ಪ್ರಶ್ನೆ ಕೇಳಿದ ಮಾಧವ ಸ್ಪೋಟಗೊಂಡಿದ್ದ. ಮೊದಲೇ ಸಿಕ್ಕಾಪಟ್ಟೆ ಕುಡಿದು ಕೂತಿದ್ದ. ಅದೆಲ್ಲಿತ್ತೋ ಹೆಂಡತಿ ಮೇಲಿನ ಸಿಟ್ಟು. ಸ್ಫೋಟ. ದೊಡ್ಡ ಸ್ಫೋಟ. ಅದೇ ಆಯಿತು.

'ನೋಡ್ರಿ! ನೋಡ್ರಿ! ಮಾಮಿ. ಇಕಿ ಏನು ಮಾಡಿಕೊಂಡು ಕೂತಾಳ ಅಂತ. ನೀವೇ ನೋಡ್ರಿ!' ಅಂತ ವಿಕಾರವಾಗಿ ಒದರಿದವನೇ ಹೆಂಡತಿಯ ಬುರುಡೆ ಮೇಲಿದ್ದ ಸೆರಗು ಕಿತ್ತುಬಿಟ್ಟ. ತಲೆ ಮೇಲಿನ ಸೆರಗು ಸರಿದದ್ದೇ ಸರಿದದ್ದು ವೀಣಾಳ ಹೊಸ ರೂಪದ ವಿಶ್ವದರ್ಶನವಾಯಿತು.

ಸದಾ ಉದ್ದ ಕೂದಲಿನಿಂದ ನಾಗವೇಣಿಯಂತೆ ಸುಶೋಭಿಸುತ್ತಿದ್ದ ವೀಣಾ ಬಾಬ್ ಕಟ್ ಮಾಡಿಸಿದ್ದಳು. ಹಾಗಾಗಿ ಹೊಸ ಲುಕ್.

ಸಾಂದರ್ಭಿಕ ಚಿತ್ರ

'ಹೊಸಾ ಹೇರ್ ಸ್ಟೈಲ್ ಏನವಾ? ಛಂದ ಕಾಣಸ್ತಿ ತೊಗೋ. ಛಂದ ಇದ್ದಿ. ಹಾಂಗಾಗಿ ಏನು ಮಾಡಿದರೂ ಎಲ್ಲಾ ಒಪ್ತದ,' ಅಂತ ತಮಗೆ ಅನಿಸಿದ್ದನ್ನು ಪ್ರಾಮಾಣಿಕವಾಗಿ ಹೇಳಿಬಿಟ್ಟರು ಮಾಮಿ.

ಅದನ್ನು ಕೇಳಿದ ಮಾಧವ ಮತ್ತೂ ಉರಿದುಕೊಂಡ. ಹೆಂಡತಿ ಬಾಬ್ ಕಟ್ ಮಾಡಿಸಿಬಿಟ್ಟಿದ್ದಾಳೆ ಅಂತ ಸಿಕ್ಕಾಪಟ್ಟೆ ಸಿಟ್ಟು ಬಂದಿತ್ತು. ತನ್ನನ್ನು ಒಂದು ಮಾತೂ ಕೇಳದೇ ಮಾಡಿಸಿದ್ದು ಕೆಟ್ಟ ಕೋಪ ತರಿಸಿತ್ತು. ಕೇಳಿದ್ದರೆ ಇವನು ಬೇಡ ಅನ್ನುತ್ತಿದ್ದ ಅನ್ನುವದರಲ್ಲಿ ಸಂಶಯವಿಲ್ಲ ಬಿಡಿ.

'ಇನ್ನು ಮುಗೀತು ಬಿಡ್ರಿ ಮಾಮಿ. ನೀವು ಬ್ಯಾರೆ ಒಪ್ಪಿಗೆ ಕೊಟ್ಟುಬಿಟ್ಟಿರಿ. ಇನ್ನು ಇಕಿನ್ನ ಹಿಡಿಲಿಕ್ಕೆ ಸಾಧ್ಯ ಇಲ್ಲ ಬಿಡ್ರೀ. ನೀವು ಹಿರಿಯರು, ಇಕಿ 'ಹಾದರಗಿತ್ತಿ ಹಜಾಮತಿ' ನೋಡಿ ಸ್ವಲ್ಪ ಬುದ್ಧಿ ಹೇಳ್ತೀರೋ ಅಂತ ನಾ ವಿಚಾರ ಮಾಡಿದ್ರ ನೀವೂ ಸಹ ಅಕಿನ್ನ ವಹಿಸಿಕೊಂಡು ಹೋಗೋದ? ಹಾಂ? ಏನು ಮಾಮಿ ನೀವು?' ಅಂತ ಮಾಮಿಯ ಮೇಲೂ ಆಕ್ಷೇಪಣೆ ತೋರಿಸಿದ.

'ಏ, ಸುಮ್ಮನಿರೋ ಸಾಕು. ಏನಾತೀಗ? ಇನ್ನೂ ಸಣ್ಣಾಕಿದ್ದಾಳ ಅಕಿ. ನಡಿತದ. ನಮ್ಮ ವಯಸ್ಸಿನ ಮುದುಕಿಯರೇ ಏನೇನೋ ಹೊಸಾ ಹೊಸಾ ಫ್ಯಾಷನ್ ಮಾಡ್ತಾವ ಈಗ. ನಿನ್ನ ಹೆಂಡ್ತಿ ಮಾಡಿದರೇನಾತು? ಛಂದ ಕಾಣಿಸ್ತಾಳ ತೊಗೋ!' ಅಂತ ಹೇಳಿದ ಮಾಮಿಯ ಮಾತು ಮಾಧವನಿಗೆ ಗಾಯದ ಮೇಲೆ ಬರೋಬ್ಬರಿ ಉಪ್ಪು ಸವರಿದಂತಾಯಿತು.

'ಏ, ಏನು ಹಚ್ಚೀರಿ ಮಾಮಿ? ನಮ್ಮ ಮನಿತನದಾಗ ಹೆಂಗಸೂರು ಕೂದಲಕ್ಕ ಕತ್ತರಿ ಮುಟ್ಟಿಸೋದು ಯಾವಾಗ ಹೇಳ್ರೀ?' ಅಂತ ಕೇಳಿದ. ಮುಂದುವರೆದು ಅವನೇ ಹೇಳಿದ, 'ಗಂಡ ಸತ್ತಾಗ ತಲಿ ಬೋಳಿಸಿಕೊಳ್ಳತಾರ ನೋಡ್ರಿ. ಆವಾಗ. ಇಕಿನ್ನ ನೋಡ್ರಿ. ನಾ ಜೀವಂತ ಇದ್ದಾಗ ಹೋಗಿ ತಲಿ ಬೋಳಿಸಿಕೊಂಡು ಬಂದಾಳ. ಹಾದರಗಿತ್ತಿ ಹಜಾಮತಿ ಮಾಡಿಸಿಕೊಂಡು ಬಂದಾಳ,' ಅನ್ನುವಷ್ಟರಲ್ಲಿ ಸಿಕ್ಕಾಪಟ್ಟೆ ಸಿಟ್ಟು ಬಂದು ತಡೆದುಕೊಳ್ಳಲು ಆಗಲೇ ಇಲ್ಲ.

'ಹಾದರಗಿತ್ತಿ ಹಜಾಮತಿ ಮಾಡಿಸಿಕೊಂಡು ಬರ್ತೀ? ಹಾಂ? ಮತ್ತೊಮ್ಮೆ ಮಾಡಿಸಿಕೊಂಡು ಬರ್ತೀ? ಬರ್ತೀ?' ಅಂತ ವಿಕಾರವಾಗಿ ಚೀರುತ್ತ ಹೆಂಡತಿಯ ಬುರುಡೆಗೆ ಎರಡು ಫಟ್ ಫಟ್ ಅಂತ ಕೊಟ್ಟೇಬಿಟ್ಟ. ಅಲ್ಲಿಗೆ ಗಂಡ ಹೆಂಡತಿಯ ಜಗಳ ತಾರಕಕ್ಕೆ ಮುಟ್ಟಿತ್ತು.

ಬುರುಡೆಗೆ ಏಟು ತಿಂದ ವೀಣಾ ಕೊಂಯ್ ಅಂತ ಅಳುವ ರಾಗ ಶುರು ಮಾಡಿದಳು. ಇವರಿಬ್ಬರ ಜಗಳವನ್ನು ಪರಿಹರಿಸಿ ಸಮಾಧಾನ ಮಾಡುವ ಕೆಲಸ ಮಾಮಿಗೆ. ಚಂದಾ ವಸೂಲಿ ಮಾಡಿ ಹೋಗೋಣ ಅಂತ ಬಂದರೆ ಇಲ್ಲದ ತಲೆಬಿಸಿ.

'ಏ, ಮಾಧವಾ! ಏನೋ ಇದು? ಹೀಂಗ ಮಾಡ್ತಾರೇನು ಯಾರಾದರೂ? ಇದು ಸರಿ ಅಲ್ಲ ನೋಡು. ಅಕಿ ಬಾಬ್ ಕಟ್ ಮಾಡಿಸಿಕೊಂಡು ಬಂದಿದ್ದು ನಿನಗ ಸೇರಿಲ್ಲ. ಆತು. ತಿಳಿಸಿ ಹೇಳೋದು ಬಿಟ್ಟು  ಅಕಿಗೆ ಹೀಂಗ ಹೊಲಸ್ ಹೊಲಸ್ ಬೈಕೋತ್ತ ಹೆಂಡತಿಗೆ ಹೊಡಿತಿಯಲ್ಲೋ? ಇದು ಸರಿಯೇನೋ?' ಅಂತ ಜಬರಿಸಿ ಕೇಳಿದರು ಮಾಮಿ. ಕೇಳಲು ಅವರಿಗೆ ಹಕ್ಕಿದೆ. ಮಾತೃಸಮಾನರು.

'ಮತ್ತೇನ್ರೀ ಮಾಮಿ? ನಮ್ಮ ಮನಿತನದ ಬಗ್ಗೆ ನಿಮಗ ಗೊತ್ತದನೋ ಇಲ್ಲೋ? ನಮ್ಮ ಮನಿಯಾಗ ಎಷ್ಟು ಮಡಿ, ಮೈಲಿಗಿ, ಆಚಾರ, ಪದ್ಧತಿ, ಸಂಪ್ರದಾಯ ಎಲ್ಲ ಅವ ಅಂತ ಗೊತ್ತದನೋ ಇಲ್ಲೋ? ಹಾಂಗಿದ್ದಾಗ ಇಕಿ ಹೀಂಗ ಹೋಗಿ ತಲಿ ಬೋಳಿಸಿಕೊಂಡು ಬರೋದು ಸರಿ ಏನ್ರೀ?' ಅಂತ ಮಾಮಿಗೆ ರಿವರ್ಸ್ ಬಾರಿಸಿದ.

ಸಣ್ಣ ಬ್ರೇಕ್ ತೆಗೆದುಕೊಂಡು ಮುಂದುವರೆಸಿದ. 'ನಿಮ್ಮ ಗೆಳತಿ ಅಂದ್ರ ನಮ್ಮವ್ವಾ ಈಗ ಇದ್ದಿದ್ದರ ಇಕಿ ಈ ಹಾದರಗಿತ್ತಿ ಹಜಾಮತಿ ಅವತಾರ ನೋಡಿ ಎದಿ ಒಡದು ಸಾಯ್ತಿದ್ದಳು. ಪುಣ್ಯಾ ಮಾಡಿದ್ದಳು. ಇಕಿ ಹಾದರಗಿತ್ತಿ ಹಜಾಮತಿ ಅವತಾರ ನೋಡೋಕಿಂತ ಮೊದಲೇ ಕಣ್ಣು ಮುಚ್ಚಿದಳು. ನನ್ನ ಕರ್ಮ. ಈಗ ನಾ ನೋಡ್ಕೋತ್ತ ಕೂಡಬೇಕಾಗ್ಯದ. ಏನು ಕರ್ಮ ರೀ? ಇಕಿಗೆ ಬೈಬ್ಯಾಡ, ಹೊಡಿಬ್ಯಾಡ ಅಂತೀರಿ. ಮತ್ತೇನು ಇಕಿನ್ನ ಪೂಜಾ ಮಾಡ್ಲ್ಯಾ? ಮಹಾಲಕ್ಷ್ಮಿ ಕಳೆಯಿರುವ ಹೆಣ್ಣುಮಕ್ಕಳು ಇರುವ ಮನಿತನ ನಮ್ಮದು. ಅಂತಾದ್ರಾಗ ಇಕಿ ನೋಡ್ರಿ ಹೀಂಗ ಅವತಾರ ಮಾಡಿಕೊಂಡು ಕೂತಾಳ!' ಅಂತ ಫುಲ್ ಆವಾಜ್ ಹಾಕಿದ.

'ಅಲ್ಲಪಾ ಮಾಧವಾ. ನಿನ್ನ ಕಡೆ ಈ ಮಾತು ಕೇಳಬಾರದು ಅಂದುಕೊಂಡಿದ್ದೆ. ಆದ್ರ ಈಗ ಕೇಳಲೇಬೇಕಾಗ್ಯದ. ಒಂದು ಮಾತು ಕೇಳಲೇನು?' ಅಂತ ಸಣ್ಣ ಪೀಠಿಕೆ ಇಟ್ಟರು ಮಾಮಿ.

'ಏ, ಮುದ್ದಾಂ ಕೇಳ್ರಿ ಮಾಮಿ. ನಮ್ಮ ಅವ್ವಾ ಹೋದಾಗಿನಿಂದ ನೀವೇ ನಮಗ ಮಾಮಿ, ಅವ್ವಾ ಎಲ್ಲಾ,' ಅಂತ ಮಾಧವನೂ ಸ್ವಲ್ಪ ಸೆಂಟಿ ಆದ. ಹಿರಿಯರಾದ ಮಾಮಿಗೆ ದಬಾಯಿಸಿದ್ದನಲ್ಲ? ಅವನಿಗೇ ಬೇಜಾರಿಯಿತೇನೋ? ಅದಕ್ಕೇ ಸ್ವಲ್ಪ ಸಾಫ್ಟ್ ಟಚ್ ಬಂತು ಮಾತಿನಲ್ಲಿ.

'ಅಲ್ಲಾ, ನಿಮ್ಮದು ಅಂತಾ ಮನೆತನ ಇಂತಾ ಮನೆತನ ಅಂತ ದೊಡ್ಡ ಭಾಷಣ ಮಾಡಿದಿ. ಎಲ್ಲಾ ಒಪ್ಕೋತ್ತೇನಿ. ಅದರ ಬಗ್ಗೆ ದೂಸರಾ ಮಾತೇ ಇಲ್ಲ. ನಿಮ್ಮದು ಖರೇನೇ ದೊಡ್ಡ ಮನೆತನ. ಮಡಿ, ಮೈಲಿಗಿ, ಆಚಾರ, ವಿಚಾರ, ಸಂಪ್ರದಾಯ, ಪದ್ಧತಿ ಎಲ್ಲಾ ಭಾಳ ಜಾಸ್ತಿ. ಎಲ್ಲಾ ಖರೆ. ಭಾಳ ಗೌರವ ಇತ್ತು. ಈಗೂ ಆದ...... ' ಅಂತ ಸಣ್ಣ ಬ್ರೇಕ್ ತೆಗೆದುಕೊಂಡರು ಮಾಮಿ.

ಎಲ್ಲ ಕಿವಿಯಾಗಿದ್ದ ಮಾಧವ, 'ಮುಂದ ಹೇಳ್ರೀ,' ಅನ್ನುವ ಲುಕ್ ಕೊಟ್ಟ.

'ಅಂಥಾ ದೊಡ್ಡ ಮನಿತನದ ಹಿರಿಯ ಮಗಾ ನೀನು. ಹೌದಿಲ್ಲೋ? ಅಂಥಾ ದೊಡ್ಡ ಮನಿತನದ ಹಿರಿಯ ಮಗ. ಅಷ್ಟು ದೊಡ್ಡ ಮಂದಿ ಮಗಾ. ನೀನು ನಾ ಬಂದಾಗ ಇದ್ದ ಅವತಾರ ಸರಿ ಇತ್ತೇನಪಾ? ಯಾವ ಅವತಾರದಾಗಿದ್ದಿ? ಸ್ವಲ್ಪ ನೆನಪು ಮಾಡ್ಕೋ. ಹಗಲು ಹೊತ್ತಿನಾಗೇ ಕಂಠಮಟ ಕುಡಿದು ಕೂತಿದ್ದಿ? ಅದು ಸರಿನ? ನಿನ್ನ ಹೀಂಗ ಕೇಳಿ ನಿನ್ನ ಮನಸ್ಸಿಗೆ ಬ್ಯಾಸರಾ ಮಾಡ್ಬೇಕು ಅಂತಲ್ಲ. ಸಂಕಟ ಆತೋ. ಗೆಳತಿ ಮಗನ್ನ ಆ ಅವತಾರದಾಗ ನೋಡಿ ಸಂಕಟ ಆತೋ. ಅದಕ್ಕೇ ಕೇಳಿದೆ. ಏನಪಾ? ನೀ ಮಾಡಿದ್ದು ಸರಿಯೇನೋ? ಆ ಕುಡಿತಕ್ಕ, ಮೋಜಿಗೆ, ಮಸ್ತಿಗೆ ಒಂದು ಲಿಮಿಟ್ ಇಲ್ಲೇನಪಾ? ಹಾಂ? ಹೀಂಗ ಮಾಡಿದ್ರ ಹ್ಯಾಂಗ???' ಅಂತ ಫುಲ್ ಇಟ್ಟರು. ಬರೋಬ್ಬರಿ ಗಜ್ಜು ಕೊಟ್ಟರು.

ಮಾಧವ ಏನು ಹೇಳಿಯಾನು? ತಪ್ಪು ಮಾಡಿಕೊಂಡು ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಮೇಲಿಂದ ಹೆಂಡತಿಯ ತಪ್ಪು ಎತ್ತಿ ತೋರಿಸಲು ಹೋಗಿ ತಾನೇ ವಾಪಸ್ ಗಜ್ಜು ತಿಂದಿದ್ದಾನೆ. ಬೇರೆಯವರು ಅವನ ಕುಡಿತದ ಬಗ್ಗೆ ಮಾತಾಡಿಬಿಟ್ಟಿದ್ದಾರೆ. ಅದೂ ಅವನ ಮನೆಗೇ ಬಂದು. ಅದೂ ಚಂದಾ ವಸೂಲಿ ಮಾಡಿದ ಮೇಲೆ. ಬಿಟ್ಟಿಯಲ್ಲಿ ಗಜ್ಜು. ಶಿವಾಯ ನಮಃ!

ಕೂತಲ್ಲೇ ಮಾಧವ ಮಿಸುಗಿದ. ಆಕಡೆ ಈಕಡೆ ನೋಡಿದ. ಏನು ಹೇಳಲಿ ಅಂತ ತಿಳಿಯಲಿಲ್ಲ. ಏನೋ ಒಂದು ಹೇಳಲು ಹೋದ. 'ಮಾಮಿ, ಅದು ಏನಂದ್ರ, ಏನಂದ್ರ,' ಅಂತ ಏನೋ ವಿವರಣೆ ಕೊಡಲು ಹೋದ. ಮಾಮಿ ಮಾತಾಡಲಿಲ್ಲ. ಸುಮ್ಮನೆ ಕೈಯೆತ್ತಿ, 'ಸಾಕು, ಏನೂ ಹೇಳುವ ಜರೂರತ್ತಿಲ್ಲ. ಏನೇ ಸಬೂಬು ಕೊಟ್ಟರೂ ನಂಬಲು ಯಾರೂ ಕಿವಿ ಮೇಲೆ ಹೂವು ಇಟ್ಟುಕೊಂಡಿಲ್ಲ,' ಅನ್ನುವ ಲುಕ್ ಕೊಟ್ಟರು. ಅದೇನೂ ಜಾಸ್ತಿ ಚುಚ್ಚಲಿಲ್ಲ ಅವನಿಗೆ. ಆದರೆ ಹೆಂಡತಿಯ ಲುಕ್ ಮತ್ತೆ ವಿಪರೀತವಾಗಿ ಚುಚ್ಚಿತು. ಮಾಮಿ ಇವನನ್ನು ಪಾಂಗಿತವಾಗಿ ವಿಚಾರಿಸಿಕೊಳ್ಳುತ್ತಿದ್ದಾಗ, 'ಹೌದು. ಹೌದು. ಬರೋಬ್ಬರಿ. ಇನ್ನೂ ಹೇಳ್ರೀ. ಇನ್ನೊಂದಿಷ್ಟು ಬಯ್ಯಿರಿ,' ಅನ್ನುವ ರೀತಿಯಲ್ಲಿ ಹೆಂಡತಿ ತಲೆ ಕುಣಿಸುತ್ತ ಕೂತಿದ್ದು ವಿಪರೀತವಾಗಿ ಕೆರಳಿಸಿತ್ತು. ಮತ್ತೊಮ್ಮೆ ಹೆಂಡತಿ ಕಡೆ ನೋಡಿದ. ಆಕೆಯ ಮುಖದಲ್ಲಿ ಕುಹಕ. ಇತ್ತೋ ಇಲ್ಲವೋ ಗೊತ್ತಿಲ್ಲ. ಇವನಿಗಂತೂ ಕಂಡಿತು. ಕೆಟ್ಟ ಕೋಪ ಕಿಬ್ಬೊಟ್ಟೆಯಾಳದಿಂದ ಸೀದಾ ತೋಳಿಗೇ ಬಂತು.

'ಮಾಮಿ ನನಗ ಬೈದು ಬುದ್ಧಿ ಹೇಳಲಿಕತ್ತರ ಕೂತು ನನ್ನ ಅಣಗಸ್ತೀ? ನನ್ನ ಟಿಂಗಲ್ ಮಾಡ್ತೀ? ಹಾದರಗಿತ್ತಿ ಹಜಾಮತಿ ಮಾಡಿಸಿಕೊಂಡು ಬಂದ ಮ್ಯಾಲೆ ಸೊಕ್ಕು ಹೆಚ್ಚಾಗ್ಯದ ನಿನಗ? ನನ್ನ ಅಣಗಸ್ತೀ? ಗಂಡ ನಾನು ಜೀವಂತ ಇದ್ದಾಗೇ ತಲಿ ಬೋಳಿಸಿಕೊಂಡು ಬಂದಿದ್ದು ಒಂದೇ ಅಲ್ಲ ಮ್ಯಾಲಿಂದ ಗಂಡಗೇ ಅಣಗಸ್ತೀ?' ಅಂತ ವಿಚಿತ್ರವಾಗಿ ಹೂಂಕರಿಸುತ್ತ ಹೋದವನೇ ಹೆಂಡತಿಯನ್ನು ಎಬ್ಬಿಸಿ, ರಫ್ ಆಗಿ ಎಳೆದು, ಬಗ್ಗಿಸಿ, ಬೆನ್ನ ಮೇಲೆ ರಪಾ ರಪಾ ಅಂತ ನಾಲ್ಕು ಹಾಕೇಬಿಟ್ಟ. ಸಿಟ್ಟು ಇಳಿದಿರಲಿಲ್ಲ. 'ತಲಿ ಬೋಳಿಸಿಕೊಳ್ಳಲಿಕ್ಕೆ ಹೋದಾಕಿ ಪೂರ್ತಿ ತಲಿ ಬೋಳಿಸಿಕೊಂಡು ಬರಬೇಕಾಗಿತ್ತು? ಯಾರರೆ ಕೇಳಿದ್ರ, 'ನನ್ನ ಗಂಡ ಸತ್ತಾನ. ಅದಕ್ಕೇ ತಲಿ ಬೋಳಿಸಿಕೊಂಡೇನಿ' ಅಂತ ಹೇಳಬಹುದಿತ್ತಲ್ಲ? ನಾ ಹ್ಯಾಂಗೂ ನಿನ್ನ ಪಾಲಿಗೆ ಸತ್ತೇಹೋಗೇನಿ? ಅಲ್ಲಾ? ಅಲ್ಲಾ? ಹಾದರಗಿತ್ತಿ,' ಅಂತ ಕೆಟ್ಟದಾಗಿ ಬೈಯುತ್ತ ಮತ್ತೂ ನಾಲ್ಕು ಬಿಟ್ಟ.

'ನಾ ಸಾಯ್ತೇನ್ರೀ. ಖರೆ ಅಂದ್ರೂ ಸಾಯ್ತೇನ್ರೀ,' ಅಂತ ಚೀರುತ್ತ ವೀಣಾ ಒಳಗೆ ಅಡುಗೆಮನೆ ಕಡೆ ಓಡಿದಳು.

'ಸಾಯಿ. ಸತ್ತು ಹೋಗು. ಪೀಡಾ ಕಳೀತು ಅಂತ ತಿಳಿತೇನಿ. ರಂಡಿ ತಂದು. ಸೂಡ್ಲಿ,' ಅಂತ ಕೆಟ್ಟದಾಗಿ ಬೈಯುತ್ತ ಮಾಧವ ಖುರ್ಚಿ ಮೇಲೆ ಕುಸಿದ. ಮೊದಲೇ ದೊಡ್ಡ ದೇಹ. ಅದಕ್ಕೆ ವ್ಯಾಯಾಮ ಇಲ್ಲ. ಹಲವಾರು ಬೇನೆಗಳ ಬೀಡು ಅದು. ಅಂತಹ ಬರ್ಬಾದ್ ದೇಹವನ್ನು ಹೆಂಡತಿ ಮೇಲೆ ಕೂಗಾಡಿ, ಆಕೆಯನ್ನು ಬಡಿದು ವಿಪರೀತವಾಗಿ ದಣಿಸಿಬಿಟ್ಟಿದ್ದ. ಸುಸ್ತಾಗಿತ್ತು. 'ಭುಸ್! ಭುಸ್!' ಅಂತ ಶ್ವಾಸ ಬಿಡುತ್ತ ಕುಸಿದು ಕುಳಿತ.

ಒಳಗೆ ಹೋಗಿದ್ದ ವೀಣಾ ಮತ್ತೆ ವಾಪಸ್ ಪ್ರತ್ಯಕ್ಷಳಾಗಿದ್ದಳು. ಖರಾಬ್ ಸೀನ್. ಕೈಯಲ್ಲಿ ಒಂದು ಚಾಕು. ತರಕಾರಿ ಹೆಚ್ಚುವ ಚಾಕು. ಏನೋ ಹಡಾಗತಿ ಮಾಡಿಕೊಳ್ಳಲು ಹೊರಟಿದ್ದಾಳೆ ಅನ್ನುವ ಖಡಕ್ ನಿರ್ಧಾರದ ಭಾವನೆ ಮುಖದ ಮೇಲೆ. ನೋಡಿದ ಮಾಮಿ ದಂಗು ಹೊಡೆದರು.

'ಏನ ವೀಣಾ ಇದು? ಏನಿದು ಕೈಯಾಗ? ಯಾಕ?' ಅಂತ ಏನೋ ಅಂದರು. ಗಾಬರಿಯಾಗಿ ಮಾತೇ ಸರಿಯಾಗಿ ಹೊರಡಲಿಲ್ಲ.

'ಸಾಯ್ತೇನ್ರೀ. ನಾ ಸತ್ತು ಹೋಗ್ತೇನಿ. ಸಾಕಾಗಿ ಹೋಗ್ಯದ ನನಗೂ. ಇವರ ಕುಡಿತ, ಚಟ, ಬೈಯ್ಯೋದು, ಹೊಡೆಯೋದು, ಎಲ್ಲಾ ಸಹಿಸ್ಕೊಂಡು ಸಾಕಾಗಿ ಹೋಗ್ಯದ. ಈಗ ಸತ್ತೇಹೋಗ್ತೇನಿ. ನಿಮ್ಮ ಮುಂದs ಚಾಕು ಹಾಕಿಕೊಂಡು ಸತ್ತೇಹೋಗ್ತೇನಿ,' ಅಂತ ಅಬ್ಬರಿಸಿದಳು ವೀಣಾ.

'ಅಯ್ಯೋ! ಮಾಧವಾ! ಅಕಿಗೊಂದು ಮಾತು ಹೇಳೋ. ಸಿಟ್ಟಿನ ಕೈಯಾಗ ಬುದ್ಧಿ ಕೊಟ್ಟು ಏನರೆ ಮಾಡಿಕೊಂಡಾಳು ಅಕಿ. ಒಂದು ಮಾತು ಹೇಳೋ. ನಿನ್ನ ಕಟ್ಟಿಗೊಂಡ ಹೆಂಡ್ತಿ ಅಕಿ. ಸಾಯೋತನಕಾ ಬೇಕು. ಹೇಳೋ. ಹೇಳೋ,' ಅಂತ ಮಾಮಿ ಶಂಖ ಹೊಡೆದರು.

ಮಾಧವನಿಗೆ ಉಢಾಫೆ.

'ಏ, ನೀವು ಸುಮ್ಮ ಕೂಡ್ರೀ ಮಾಮಿ. ಇಕಿ ನೌಟಂಕಿ ಯಾವಾಗೂ ಇರೋದೇ. ಇದೇನೂ ಮೊದಲನೇ ಸಲ ಅಲ್ಲ. ನಾ ಏನರೆ ಹೇಳಿದ ಕೂಡಲೇ ಅಕಿ ಬಾಯಿಂದ ಬರೋ ಮಾತು ಅಂದ್ರ ಇದೇ. ಸತ್ತು ಹೋಗ್ತೇನಿ. ಸಾಕಾಗಿಬಿಟ್ಟದ. ಬರೇ ಡ್ರಾಮಾ ಬಾಜಿ. ಅಷ್ಟೇ. ಬರೇ ಡ್ರಾಮಾ. ನಾ ಎಲ್ಲಾ ಬೇಕಾದಷ್ಟು ಸಲೆ ನೋಡಿಬಿಟ್ಟೇನಿ,' ಅಂತ ಲೈಟಾಗಿ ಮಾತಾಡಿದ ಮಾಧವ. ಹೆಂಡತಿ ಕಡೆ ಒಂದು ಖರಾಬ್ ಲುಕ್ ಕೊಟ್ಟು, 'ನಾಟಕ ಸಾಕು. ಚಾಕು ಒಳಗಿಟ್ಟು ಬಾ. ನಿನ್ನ ಆಮೇಲೆ ನೋಡಿಕೊಳ್ಳುತ್ತೇನೆ,' ಅನ್ನುವ brush off ಮಾಡಿದ ಲುಕ್ ಕೊಟ್ಟ. ಅಷ್ಟೇ ಸಾಕಾಯಿತು ವೀಣಾಳಿಗೆ.

'ಈ ಸಲ ಖರೇನೇ ಸಾಯಕಿ ನಾ. ಖರೇನೇ ಸಾಯಾಕಿ. ಸತ್ತುಹೋಗಾಕಿ!' ಅಂತ ಹುಚ್ಚಿಯಂತೆ ಅಬ್ಬರಿಸುತ್ತ, ಮೈಮೇಲೆ ದೆವ್ವ ಬಂದಂತಾಡಿದ ವೀಣಾ ಚಾಕುವಿನಿಂದ ಚುಚ್ಚಿಕೊಂಡೇಬಿಟ್ಟಳು. ಮಟಾಷ್! ರಕ್ತ ಬಳಬಳ ಅಂತ ಹರಿಯತೊಡಗಿತು.

ಮಾಧವ ಮಾತ್ರ ಫುಲ್  ಕೂಲಾಗಿ ಕೂತಿದ್ದ.

'ಏ! ಡಾಕ್ಟರಿಗೆ ಫೋನ್ ಮಾಡೋ! ಆಂಬುಲೆನ್ಸಿಗೆ ಫೋನ್ ಮಾಡೋ! ಉಳಿಸಿಕೊಳ್ಳೋಣ. ಚಾಕು ಹಾಕಿಕೊಂಡಳು. ಲಗೂ ಫೋನ್ ಮಾಡೋ,' ಅಂತ ಮಾಮಿ ಬೊಬ್ಬೆ ಹೊಡೆದರು. ಚಾಕು ಹೆಟ್ಟಿಕೊಂಡು ನೆಲದ ಮೇಲೆ ಬಿದ್ದಿದ್ದ ವೀಣಾಳ ತಲೆಯನ್ನು ತಮ್ಮ ತೊಡೆ ಮೇಲೆ ಇಟ್ಟುಕೊಂಡು ವಾತ್ಸಲ್ಯದಿಂದ ನೇವರಿಸುತ್ತ, 'ಎಂತಾ ಕೆಲಸ ಮಾಡಿಕೊಂಡಿ ವೀಣಾ? ಹ್ಯಾಂಗದ ಈಗ? ಈಗ ಆಂಬುಲೆನ್ಸ್ ಬರ್ತದ. ಹಾಸ್ಪಿಟಲ್ಲಿಗೆ ಹೋಗೋಣಂತ. ಅಲ್ಲಿ ತನಕಾ ಜೀವಾ ಹಿಡ್ಕೋ ಮಾರಾಳ,' ಅಂತ ಏನೇನೋ ಸಮಾಧಾನ ಮಾಡುತ್ತ, 'ಏ, ಮಾಧವಾ! ಫೋನ್ ಮಾಡಿದಿ ಏನೋ? ಲಗೂ ಮಾಡೋ! ಇಕಿ ಜೀವಾ ಉಳಿಸಿಕೊಳ್ಳೋ. ನಿನಗ ಕೈ ಮುಗಿದು ಕೇಳಿಕೊಳ್ಳತೇನಿ. ಲಗೂ ಫೋನ್ ಮಾಡೋ,' ಅಂತ ಮಾಧವನನ್ನು ಅವಸರಿಸಿದರು.

ಮಾಧವ ಯಾರಿಗೋ ಫೋನ್ ಮಾಡಿದ. 'ನಿನ್ನ ಗೆಳತಿ ಮತ್ತ ಚಾಕು ಹೆಟ್ಟಿಕೊಂಡು ಕೂತಾಳ. ಬಂದು ನೋಡಿ ಹೋಗು. ಎಂಥಾ ಡಾಕ್ಟರ್ ನೀ? ಅಕಿಗೆ ಈ ಸಲ ಬಂದಾಕಿ ಸರಿ ಮಾಡಿ ಹೇಳಿ ಹೋಗು. ಎಲ್ಲಿ ಚುಚ್ಚಿಕೊಂಡ್ರ ಪ್ರಾಣ ಹೋಗ್ತದ ಅಂತ. ಪ್ರತಿ ಸಲೆ ಬರೇ ನಾಟಕ ನಡದದ. ಒಮ್ಮೆ ಕೈಗೆ ಚುಚ್ಚಿಕೊಂಡೆ. ಮತ್ತೊಮ್ಮೆ ಕಾಲಿಗೆ ಚುಚ್ಚಿಕೊಂಡೆ. ಇವತ್ತು ಹೋಗಿ ಹೋಗಿ ತೊಡಿಗೆ ಚುಚ್ಚಿಕೊಂಡು ಚೀರಾಡ್ಲಿಕತ್ತಾಳ. ಹ್ಯಾಂಗ ಸಾಯ್ಬೇಕು ಅನ್ನೋದನ್ನ ಹೇಳಿಹೋಗು ನಿಮ್ಮ ಗೆಳತಿಗೆ. ಬಾ ಲಗೂ. ರಕ್ತಾ ಸೋರಿಸಿಕೋತ್ತ ಕೂತಾಳ ಹೇಶಿ,' ಅಂತ ಹೇಳಿ ಫೋನಿಟ್ಟ. ಡಾಕ್ಟರಿಗೆ ಫೋನ್ ಮಾಡಿ ವಿನಂತಿ ಮಾಡಿಕೊಂಡನೋ ಅಥವಾ ಆವಾಜ್ ಹಾಕಿದನೋ ಅಂದುಕೊಂಡರು ಮಾಮಿ.

'ಮಾಮಿ, ನೀವು ಎದ್ದು ಬರ್ರಿ ಈಕಡೆ. ಅಕಿಗೆ ಏನೂ ಆಗಿಲ್ಲ. ಸುಮ್ಮನೇ ಸಾಯೋ ನಾಟಕ. ಇದು ಮೊದಲನೇ ಸಲ ಅಲ್ಲ. ಮಾತಿಗೊಮ್ಮೆ ಅಕಿ ಕೈಯಾಗ ಚಾಕು ಬರ್ತದ. ಕಾಯಿಪಲ್ಲೆ ಕಮ್ಮಿ ಹೆಚ್ಚತಾಳ. ಜಾಸ್ತಿ ತನ್ನ ತಾನೇ ಹೆಚ್ಚಿಕೊಳ್ಳತಾಳ. ಬರೇ ಡ್ರಾಮಾ ಬಾಜಿ. ಸಾಯ್ತೇನಿ, ಸಾಯ್ತೇನಿ ಅಂತ ರಂಪಾಟ. ಸಾಯೋದಿಲ್ಲ ಬಿಡೋದಿಲ್ಲ. ಇವತ್ತು ನೀವು ಬಂದೀರಿ ಅಂತ ಸ್ಪೆಷಲ್ ಎಫ್ಫೆಕ್ಟ್. ಹೋಗಿ ಹೋಗಿ ತೊಡಿಗೆ ಚಾಕು ಚುಚ್ಚಿಕೊಂಡು ಕೂತದ ಹುಚ್ಚು ಖೋಡಿ. ಅಕಿನ್ನ ಅಲ್ಲೇ ಬಿಟ್ಟು ಎದ್ದು ಬರ್ರಿ ನೀವು ಈಕಡೆ. ಈಗ ಬರ್ತಾಳ ಅಕಿ ಗೆಳತಿ. ಡಾಕ್ಟರಿಣಿಬಾಯಿ. ಬಂದು ಬ್ಯಾಂಡೇಜ್ ಮಾಡ್ತಾಳ. ಇಬ್ಬರೂ ಕೂಡಿ ನನಗೇ ಶಾಪಾ ಹಾಕ್ತಾರ. ಅಕಿ ಬಂದ ಕೂಡಲೇ ನಾನೂ ಹೊಂಟೆ. ನನಗೂ ಸಾಕಾಗಿ ಬಿಟ್ಟದ ಇಕಿ ಕಾಲದಾಗ,' ಅಂದ ಮಾಧವ. ಎಲ್ಲಿಗೆ ಹೋಗುತ್ತಾನೆ ಅಂತ ಕೇಳುವ ಜರೂರತ್ತಿರಲಿಲ್ಲ. ಮತ್ತೆಲ್ಲಿಗೆ? ಮನೆಯಲ್ಲಿ ಆದ ಲಫಡಾದಿಂದ ತಲೆ ಕೆಟ್ಟಿದೆ. ಬಾರಿಗೆ ಸ್ವಲ್ಪ ಬೇಗನೆ ಹೋಗುವ ವಿಚಾರದಲ್ಲಿದ್ದಾನೆ.

'ಮಾಮಿ, ನೀವೂ ಹೊಂಡ್ರಿ. ನಮ್ಮ ದರಿದ್ರ ಸಂಸಾರದಾಗ ಇದೆಲ್ಲಾ ಇದ್ದಿದ್ದೆ. ಅಲ್ಲಿ ಮನಿಯಾಗ ಮಾಮಾ ಒಬ್ಬರೇ ಇರಬೇಕು. ಮಧ್ಯಾಹ್ನ ಚಹಾದ ಹೊತ್ತಾತು. ಮನಿಗೆ ಹೋಗಿ ಮಾಮಾಗ ಚಹಾ ಮಾಡಿ ಕೊಡ್ರಿ. ನಮಸ್ಕಾರ ಹೇಳ್ರಿ. ಬಂದು ಭೆಟ್ಟಿಯಾಗತೇನಿ ನಾನು. ಏ! ಅಕಿನ್ನ ಅಲ್ಲೇ ಒಗೆದು ಎದ್ದು ಬರ್ರಿ. ಏನು ಜುಲ್ಮಿ ಮಾಡಿಕೋತ್ತ  ಕೂತೀರಿ ಅಕಿನ್ನ? ಡ್ರಾಮಾ ಕ್ವೀನ್ ಅಕಿ!' ಅಂದ ಮಾಧವ.

ಅಷ್ಟರಲ್ಲಿ ಯಾರೋ ಕಾಲಿಂಗ್ ಬೆಲ್ ಒತ್ತಿದರು. ಮಾಧವನೇ ಹೋಗಿ ಬಾಗಿಲು ತೆಗೆದ. ಡಾಕ್ಟರಿಣಿಬಾಯಿ ನಿಂತಿದ್ದಳು. ಮಾಧವನನ್ನು ಕಡೆಗಣಿಸಿ ಒಂದು ಲುಕ್ ಕೊಟ್ಟು, 'ಇದು ಸರಿಯಲ್ಲ' ಅನ್ನುವಂತೆ ತಲೆಯಾಡಿಸಿದಳು.

ಮಾಮಿ ಕಂಡಳು. ಎಲ್ಲ ಪರಿಚಿತರೇ. 'ನಮಸ್ಕಾರ್ರಿ, ಮಾಮಿ. ಆರಾಮರೀ?' ಅಂತ ಮಾಮಿಯನ್ನು ಕೂಡ ವಿಚಾರಿಕೊಂಡಳು ಡಾಕ್ಟರಿಣಿಬಾಯಿ. ಮಾಮಿ ದಂಗಾಗಿ ನಿಂತಿದ್ದರು.

'ಏನಲೇ ವೀಣಿ? ಏನಿದು ಅವತಾರ? ಈ ಸಲೆ ಎಲ್ಲೆ ಹೊಲಿಗೆ ಹಾಕೋದು ಅದ? ಏನಲೇ ಇದು? ಮಾತಿಗೊಮ್ಮೆ ಚಾಕು ಚುಚ್ಚಿಕೊಳ್ಳತಿಯಲ್ಲಲೇ??? ಹಾಂ?' ಅನ್ನುತ್ತ ಗೆಳತಿಯ ಶುಶ್ರೂಷೆಗೆ ನಿಂತಳು.

ಮಾಮಿ ಎದ್ದು ಹೊರಟರು. ಆಗ ತಾನೇ ಎಂಟ್ರಿ ಕೊಟ್ಟಿದ್ದ ಡಾಕ್ಟರಿಣಿಬಾಯಿಯ ಹತ್ತಿರವೂ ಚಂದಾ ವಸೂಲಿ ಮಾಡಲೇ ಅಂತ ವಿಚಾರ ಮಾಡಿದರು. ಬೇಡ ಅಂತ ಬಿಟ್ಟರು. ಎದ್ದು ತಮ್ಮ ಸಾಮಾನು ಸರಂಜಾಮು ಹೊಂದಿಸಿಕೊಂಡು ಎಲ್ಲರಿಗೂ ಹೇಳಿ ಹೊರಟರು.

ಮಾಧವ ವೀಣಾರ ಮನೆ ಬಿಟ್ಟು ಹೊರಗೆ ಬಿದ್ದಿದ್ದರೋ ಇಲ್ಲವೋ ಎದುರಿಗೇ ಕಂಡಿತು - 'ಅಪ್ಸರಾ ಬ್ಯೂಟಿ ಪಾರ್ಲರ್'.

ವೀಣಾ ತನ್ನ 'ಹಾದರಗಿತ್ತಿ ಹಜಾಮತಿ'.... ಛೀ.... ಛೀ... ಅಲ್ಲಲ್ಲ.... ಬಾಬ್ ಕಟ್ ಅಲ್ಲಿಯೇ ಮಾಡಿಸಿದ್ದಳೇ? ಅನ್ನುವ ವಿಚಾರ ಮಾಮಿಯ ಮನದಲ್ಲಿ ಮೂಡಿತೇ?

ಗೊತ್ತಿಲ್ಲ. ಕೇಳಬೇಕು.