Sunday, January 27, 2019

ಅಜ್ಞಾನದ ಆಳ

ಒಬ್ಬ ಮನುಷ್ಯನಿಗೆ 'ಅವನೊಂದು ಇಲಿ' ಎನ್ನುವ ಭಾವನೆ ಮನಸ್ಸಿನಲ್ಲಿ ಮೂಡಿತು. ಅದೇ ಭಾವನೆ ಬೆಳೆಯುತ್ತ ಹೋಗಿ ಭ್ರಾಂತಿಯಾಗಿ, ಭ್ರಮೆಯಾಗಿಹೋಯಿತು. ಮನುಷ್ಯ ಫುಲ್ ಮಾನಸಿಕ ರೋಗಿಯಾಗಿಹೋದ. 'ನಾನೊಂದು ಇಲಿ' ಎನ್ನುವ (ತಪ್ಪು)ನಂಬಿಕೆಯಲ್ಲೇ ಕೊರಗತೊಡಗಿದ.

ಯಾರ್ಯಾರೋ ವೈದ್ಯರಿಗೆ ತೋರಿಸಿದರು. ಏನೇನೋ ಚಿಕಿತ್ಸೆ ಮಾಡಿಸಿದರು. ಏನೂ ಪ್ರಯೋಜನವಾಗಲಿಲ್ಲ. 'ನಾನೊಂದು ಇಲಿ. ನಾನೊಂದು ಇಲಿ,' ಎನ್ನುತ್ತಲೇ ಇರುತ್ತಿದ್ದ. ಎಲ್ಲರಿಗೂ ಇವನ ಈ ವರ್ತನೆಯಿಂದ ಮಹಾ ಕಿರಿಕಿರಿ.

ಕೊನೆಗೊಮ್ಮೆ ದೇವರಂತೆ ಹೊಸ ವೈದ್ಯರೊಬ್ಬರು ಸಿಕ್ಕರು. ಅವರು ಏನೇನೋ ಹೊಸ ಹೊಸ ಚಿಕಿತ್ಸೆ ಮಾಡಿದರು. ಅಂತೂ ಇಂತೂ ಸರಿಹೋದ. 'ನಾನೊಂದು ಇಲಿ' ಎನ್ನುವ ಭಾವನೆ ಮನಸ್ಸಿನಿಂದ ದೂರವಾಯಿತು. ಎಲ್ಲರೂ ನಿರಾಳರಾಗಿ ದೊಡ್ಡ ನಿಟ್ಟುಸಿರೊಂದನ್ನು ಬಿಟ್ಟರು. ವೈದ್ಯರನ್ನೂ ಹಿಡಿದು.

ಈ 'ಇಲಿ ಗಿರಾಕಿ' ತಲೆ ರಿಪೇರಿಯಾದ ಮೇಲೆ ಆಸ್ಪತ್ರೆಯಿಂದ ಬಿಡುಗಡೆಗೊಂಡ. ಮನೆ ಕಡೆ ನಡೆದ.

ಸ್ವಲ್ಪೇ ಹೊತ್ತಿನಲ್ಲಿ ವಾಪಸ್ ಓಡಿಬಂದ. ತುರ್ತಾಗಿ ವೈದ್ಯರನ್ನು ನೋಡಬೇಕು ಅಂದ. ಅವನಿಗೋ ಫುಲ್ ಧಾವಂತ. ಡಿಸ್ಚಾರ್ಜ್ ಆಗಿದ್ದ ಪೇಷಂಟ್ ಮತ್ತೆ ಬಂದಿದ್ದಾನೆ ಎಂದು ತಿಳಿದ ವೈದ್ಯರೂ ಬೇಗ ಓಡಿ ಓಡಿ ಬಂದರು.

'ಏನ್ರೀ?? ಮತ್ತೆ ಬಂದ್ರಿ? ಏನು ಸಮಸ್ಯೆ?' ಎಂದು ಕೇಳಿದರು ವೈದ್ಯರು.

'ಡಾಕ್ಟರ್, ಅದು... ' ಎಂದು ಎಳೆದ.

'ನೀವು ಇಲಿ ಅಲ್ಲ! ನೀವು ಇಲಿ ಅಲ್ಲವೇ ಅಲ್ಲ! ನೀವು ಮನುಷ್ಯರು. ಶುದ್ಧ ಮನುಷ್ಯರು. ಅದರ ಬಗ್ಗೆ ಸಂಶಯ ಬೇಡ. ಹೋಗಿ ಬನ್ನಿ,' ಎಂದು ಸಾಗಹಾಕಲು ನೋಡಿದರು ವೈದ್ಯರು.

'ಅದು ಸರಿ ಡಾಕ್ಟರ್. ನಾನು ಇಲಿ ಅಲ್ಲ ಅಂತ ಪೂರ್ತಿಯಾಗಿ ಮನವರಿಕೆಯಾಗಿದೆ. ಆದರೆ...' ಎಂದು ನಿಲ್ಲಿಸಿದ.

'ನೀವು ಇಲಿಯಲ್ಲ ಅಂತ ಮನವರಿಕೆಯಾಗಿದೆ ಅಂದ ಮೇಲೆ ಮತ್ತೇನ್ರೀ ನಿಮ್ಮ ಪ್ರಾಬ್ಲೆಮ್ಮು??' ಎಂದು ಕೊಂಚ ಅಸಹನೆಯಿಂದ ಪ್ರಶ್ನಿಸಿದರು ಡಾಕ್ಟರ್. ಇಂತಹ ರೋಗಿಗಳಿಂದ ಡಾಕ್ಟರ್ ಮಂದಿ ಮಾನಸಿಕ ರೋಗಿಗಳಾಗಿಬಿಡುತ್ತಾರೆ.

'ನಾನು ಇಲಿಯಲ್ಲ ಎಂದು ನನಗೆ ಗೊತ್ತಾಗಿದೆ. ಆದರೆ ಆ ವಿಷಯ ಪಕ್ಕದ ಮನೆ ಬೆಕ್ಕಿಗೆ ಗೊತ್ತಾಗಬೇಕಲ್ಲ? ಅದು ಅಲ್ಲೇ ನಿಂತಿತ್ತು. ನಾನು ಇನ್ನೂ ಇಲಿಯಂದೇ ಭಾವಿಸಿ ಮೈಮೇಲೆ ಎರಗೀತು ಅನ್ನೋ ಭಯ ಡಾಕ್ಟರ್!' ಎಂದು ಗೊಳೋ ಎಂದು ಅತ್ತ.

'ಸಿಸ್ಟರ್! ಬಾಯ್ಸ್! ಯಾರಿದ್ದೀರಿ ಅಲ್ಲಿ?? ಇವನನ್ನು ಮತ್ತೊಮ್ಮೆ ಅಡ್ಮಿಟ್ ಮಾಡಿಕೊಳ್ಳಿ! ಅರ್ಜೆಂಟ್' ಎಂದು ಚೀರುತ್ತಾ ಡಾಕ್ಟರ್ ಬೇಹೋಶ್ ಆದರು.

ನೀತಿ: ನಮ್ಮ ಅಜ್ಞಾನದ ಆಳ ಅಂದರೆ ಹೀಗಿರುತ್ತದೆ. ಅಷ್ಟು ಸುಲಭವಾಗಿ ದೂರವಾಗುವುದಿಲ್ಲ. ಅಜ್ಞಾನ ಪದರುಗಳಲ್ಲಿ(layers) ಇರುತ್ತದೆ. ಒಂದು ಪದರು ಕಳೆದ ಎಷ್ಟೋ ಕಾಲದ ನಂತರ ಮತ್ತೊಂದು ಪದರು ಬರುತ್ತದೆ. ಭಾವಿ ಅಗೆಯುವಾಗ ಎಷ್ಟೋ ಅಡಿಗಳ ನಂತರ ಒಂದು ಬಂಡೆ ಬರುತ್ತದೆ. ಅದನ್ನು ಅಗೆದು ತೆಗೆದೋ ಅಥವಾ ಸ್ಪೋಟಿಸಿ ತೆಗೆದೋ ಅಗೆಯುವುದನ್ನು ಮುಂದುವರೆಸುತ್ತೀರಿ. ಮತ್ತೆ ಎಷ್ಟೋ ಅಡಿಗಳ ನಂತರ ಮತ್ತೊಂದು ಬಂಡೆ ಬರುತ್ತದೆ. ಅದನ್ನೂ ತೆಗೆದು ಮುಂದುವರೆದು, ಅಂತಹ ಎಷ್ಟೋ ಬಂಡೆಗಳನ್ನು ತೆಗೆದು ಹಾಕಿದ ಮೇಲೆ ನೀರು ಸಿಗುತ್ತದೆ. ಅಜ್ಞಾನದ ನಿವಾರಣೆಯೂ ಹಾಗೆಯೇ. ಅದಕ್ಕಾಗಿಯೇ ಲೆಕ್ಕವಿಲ್ಲದಷ್ಟು ಜನ್ಮಗಳಿರುವುದು. Take your own time! ಅಷ್ಟೇ ಅಜ್ಞಾನದ ಮೊದಲ ಪದರು ನಿವಾರಣೆಯಾದ ತಕ್ಷಣ ಸಂಪೂರ್ಣ ಜ್ಞಾನ ಬಂತು ಅಂತ ಭಾವಿಸದಿದ್ದರೆ ಬಚಾವು. ಇಲ್ಲವಾದರೆ 'ಇಲಿ ಅಲ್ಲ' ಅನ್ನುವ ಭಾವನೆ ಹೋದರೂ ಪಕ್ಕದ ಮನೆ ಬೆಕ್ಕಿಗೆ 'ನಾನು ಇಲಿಯಲ್ಲ' ಎಂದು ಗೊತ್ತಿದಿದೆಯೋ ಇಲ್ಲವೋ ಅನ್ನುವ (ತಪ್ಪು) ಭಾವನೆ ಬರುತ್ತದೆ. ಅದೂ ನಿವಾರಣೆ ಆಯಿತು ಅಂದಿಟ್ಟುಕೊಳ್ಳಿ. ಮನೆಯಲ್ಲಿರುವ ಇಲಿ ಹಿಡಿಯಲು ಇಟ್ಟಿರುವ ಬೋನಿಗೆ 'ನಾನೊಂದು ಇಲಿ' ಆನ್ನಿಸಿಬಿಟ್ಟರೆ ಏನು ಗತಿ? ಇಲಿ ಪಾಷಾಣಕ್ಕೆ ಗೊತ್ತಾಗುತ್ತದೆಯೇ ನಾನು ಮನುಷ್ಯ ಎಂದು??? ಹೀಗೇ ಒಂದಾದ ಮೇಲೊಂದು ಅಜ್ಞಾನದ ಪದರುಗಳು ಅನಾವರಣಗೊಳ್ಳುತ್ತಲೇ ಹೋಗುತ್ತವೆ. ಅವಕ್ಕೆ ಬೇರೆ ಬೇರೆ ತರಹದ 'ಜ್ಞಾನ' ಚಿಕಿತ್ಸೆ ಬೇಕಾಗುತ್ತದೆ.

ಆದಿ ಶಂಕರರು 'ವಿವೇಕ ಚೂಡಾಮಣಿ' ಎನ್ನುವ ಗ್ರಂಥ ಬರೆದಿದ್ದಾರೆ. ಸ್ವಾಮಿ ಚಿನ್ಮಯಾನಂದರು ಅದರ ಮೇಲೆ ಇಂಗ್ಲೀಷಿನಲ್ಲಿ ಭಾಷ್ಯ ಬರೆದಿದ್ದಾರೆ. ಅದರಲ್ಲಿ ಈ ಉದಾಹರಣೆ ಸಿಕ್ಕಿತು.

ಏನೋ ಓದಿದಾಗ, ಏನೋ ಕೇಳಿದಾಗ, ಏನೋ ಹೊಳೆದಾಗ, 'ಆಹಾ! ಈಗ ಪರಿಹಾರ ಸಿಕ್ಕಿತು' ಅನ್ನಿಸಿದಾಗ 'ಇದು ಎಷ್ಟನೇ ಪದರಿನ ಅಜ್ಞಾನ ಇರಬಹುದು? ಸಂಪೂರ್ಣ ಜ್ಞಾನಕ್ಕೆ ಇನ್ನೆಷ್ಟು ಮೆಟ್ಟಿಲು?' ಎಂದು ಆಲೋಚಿಸುವ ವಿವೇಕ ಬಂದರೆ ಅದೇ ದೊಡ್ಡ ಭಾಗ್ಯ. ಅದರ ಬದಲಾಗಿ ಮೊದಲನೇ ಸಲ ವಿವೇಕ ಉದಯವಾದಾಗಲೇ ಸಂಪೂರ್ಣ ಜ್ಞಾನ ಬಂತು ಅಂತ ತಿಳಿದರೆ ಮತ್ತೊಮ್ಮೆ ಆಸ್ಪತ್ರೆಗೆ ಅಡ್ಮಿಟ್ ಆಗಿ ಚಿಕಿತ್ಸೆ ತೆಗೆದುಕೊಳ್ಳಬೇಕಾದೀತು! :)

ಈ ಸಂಸ್ಕಾರಗಳು ಅನ್ನುವವು ಅಜ್ಞಾನದ ಅಭಿವ್ಯಕ್ತಿಗಳು (manifestations). ಹಾಗಾಗಿಯೇ ಆಳವಾಗಿ ಬೇರೂರಿರುವ ಸಂಸ್ಕಾರಗಳು ಅಷ್ಟು ಬೇಗವಾಗಿ ನಿವಾರಣೆಯಾಗುವದಿಲ್ಲ. ಆಗಿವೆ ಅನ್ನಿಸಿದರೂ ಮುಂದೆ ಎಷ್ಟೋ ವರ್ಷಗಳ ನಂತರ ಮತ್ತೆ ಅಭಿವ್ಯಕ್ತವಾಗಿ ಮತ್ತೆ ಕಿರಿಕಿರಿ ಕೊಡಲಾರಂಭಿಸುತ್ತವೆ. ಮತ್ತೊಂದು ಬಂಡೆ ಬಂತು ಎಂದರ್ಥ.

ಎಷ್ಟೋ ಸಂಸ್ಕಾರಗಳು ವ್ಯಸನಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಒಂದು ವ್ಯಸನ ಬಿಟ್ಟರೂ ಅದೇ ಮತ್ತೆ ಎಷ್ಟೋ ವರ್ಷಗಳ ಮತ್ತೆ ಕಾಣಿಸಿಕೊಳ್ಳುತ್ತದೆ. ಕಾರಣ ಮತ್ತೆ ಇದೇ. ಕೆಲವರು ಅದೆಷ್ಟು ಬಾರಿ ಸಿಗರೇಟ್ ಸೇದುವುದನ್ನು ಬಿಟ್ಟು ಮತ್ತೆ ಹಿಡಿದುಕೊಂಡಿರುತ್ತಾರೋ!

https://www.amazon.in/Vivekachudamani-Swami-Chinmayananda/dp/B077PS778F/ref=sr_1_1?ie=UTF8&qid=1548611986&sr=8-1&keywords=vivekachoodamani+swami+chinmayananda

Thursday, January 24, 2019

ಶೇಖ್ ಸಾಹೇಬರ ರಹಸ್ಯ ಡವ್ವು!

ಅವನೊಬ್ಬ ಇಸ್ರೇಲಿಗಳಿಗೆ ದೊಡ್ಡ ತಲೆನೋವಾಗಿಹೋಗಿದ್ದ.ಅವನೇ ಶೇಖ್ ಯಾಸಿನ್. ಹಮಾಸ್ ಎನ್ನುವ ಪ್ಯಾಲೆಸ್ತೇನಿ ಉಗ್ರಗಾಮಿ ಸಂಘಟನೆಯೊಂದರ ಸಂಸ್ಥಾಪಕರಲ್ಲಿ ಒಬ್ಬ. ಮುಖ್ಯ ಸಂಸ್ಥಾಪಕ ಅಂದರೂ ಅಡ್ಡಿಯಿಲ್ಲ.

ಹಮಾಸ್ - ಮೊದಲಿಂದಲೂ ಹಿಂಸಾಚಾರವನ್ನೇ ಮುಂದಿಟ್ಟುಕೊಂಡು ಇಸ್ರೇಲಿಗೆ ತೊಂದರೆ ಕೊಟ್ಟ ಉಗ್ರಗಾಮಿ ಸಂಘಟನೆ. ಅದೂ ಎಂತಹ ಹಿಂಸಾಚಾರ ಅಂತೀರಿ? ಭೀಕರ ಆತ್ಮಹತ್ಯಾ ದಾಳಿಗಳು. ಹಿಂದೆಂದೂ ಆಗಿರದಂತಹ ಆತ್ಮಹತ್ಯಾ ದಾಳಿಗಳಿಗೆ ಇಸ್ರೇಲಿಗಳು ತತ್ತರಿಸಿಹೋಗಿದ್ದರು. ಸರ್ಕಸ್ ಟೆಂಟಿನಂತಹ ದಿರುಸು ಧರಿಸಿ, ಫುಲ್ ಬುರ್ಖಾ ಹಾಕಿಕೊಂಡು ಬಸ್ ಹತ್ತಿದವರು ಗಂಡಸರೋ ಹೆಂಗಸರೋ ಗೊತ್ತಿಲ್ಲ. ತೀರಾ ಬಟ್ಟೆ ಬಿಚ್ಚಿಸಿ ಚೆಕ್ ಮಾಡುವ ಪದ್ಧತಿ ಇನ್ನೂ ಬಂದಿರಲಿಲ್ಲ. ಅಷ್ಟರ ಮಟ್ಟಿಗೆ ಎಲ್ಲ ಹಿಂಸಾಚಾರಗಳ ಮಧ್ಯೆಯೂ ಇಸ್ರೇಲಿಗಳು ಸಭ್ಯತೆ ಕಾದುಕೊಂಡಿದ್ದರು. ತೊಂದರೆ ಬಂದಿದ್ದು ಯಾವಾಗ ಈ ಟೆಂಟ್ ಬಟ್ಟೆ ಮತ್ತು ಬುರ್ಖಾ ಮಂದಿ ಢಮ್! ಎಂದು ಸ್ಪೋಟಿಸಿಕೊಂಡು, ಇಡೀ ಬಸ್ಸಿಗೆ ಬಸ್ಸನ್ನೇ ಆಹುತಿ ತೆಗೆದುಕೊಂಡು, ನಾಲ್ಕಾರು ಡಜನ್ ಜನರನ್ನು ಸಾರಾಸಗಟಾಗಿ ಕೊಂದಾಗ. ಅತೀ ಕಮ್ಮಿ ಬಂಡವಾಳ ಆದರೆ ಅತೀ ಹೆಚ್ಚಿನ ಧಮಾಕಾ ಅಂದರೆ ಆತ್ಮಹತ್ಯಾ ದಾಳಿ. ಗಾಜಾ ಪಟ್ಟಿಯಲ್ಲಿನ ಪಾನ್ ಬೀಡಿ ದುಕಾನುಗಳಲ್ಲೆಲ್ಲ ಸುಯಿಸೈಡ್ ಬೆಲ್ಟ್ ಬಾಂಬುಗಳು ಬಿಟ್ಟಿಯಾಗಿ ಸಿಕ್ಕು, ಕಂಡಕಂಡ ಅಂಡೆಪಿರ್ಕಿಗಳೆಲ್ಲ ಅವನ್ನು ಸೊಂಟಕ್ಕೆ ಸುತ್ತಿಕೊಂಡು ಇಸ್ರೇಲ್ ಬಸ್ ಹತ್ತುತ್ತಿದ್ದರು. ಮಾರ್ಗ ಮಧ್ಯೆ ಬಸ್ ಫುಲ್ ರಶ್ ಆಗಿದ್ದಾಗ ಅಲ್ಲಾ ಹೋ ಅಕ್ಬರ್ ಅಂದವರೇ.....ಮುಂದೆ ಫುಲ್ ಮಟಾಷ್!

ಯಾವಾಗ ಪರಿಸ್ಥಿತಿ ಹದ್ದು ಮೀರತೊಡಗಿತೋ ಇಸ್ರೇಲಿನ ಆಂತರಿಕ ಭದ್ರತಾ ಸಂಸ್ಥೆ 'ಶಬಾಕ್' ಬೇರೆ ವಿಧಿಯಿಲ್ಲದೇ ಸೀದಾ ಹೋಗಿ ಶೇಖ್ ಯಾಸೀನನನ್ನೇ ಎತ್ತಾಕಿಕೊಂಡು ಬಂದಿತು. ಅಕ್ಷರಷ 'ಎತ್ತಾಕಿಕೊಂಡೇ' ಬಂತು. ಯಾಕೆಂದರೆ ಅವನು 'ಚಕ್ರಪೀಠಾಧಿಪತಿ'. ಚಕ್ರವಿರುವ ತಳ್ಳುಗಾಡಿ ಖುರ್ಚಿಯಲ್ಲಿಯೇ ಅವನ ಫುಲ್ ಜೀವನ. ವಿಕಲಾಂಗ. Quadriplegic. ಆದರೆ ಬಾಯಿ ಮಾತ್ರ ಬೊಂಬಾಯಿ. ಅದ್ಯಾವ ರೀತಿಯಲ್ಲಿ ಪ್ರವಚನ ಮಾಡುತ್ತಿದ್ದ ಅಂದರೆ ತಕ್ಕಮಟ್ಟಿನ ವಿದ್ಯಾವಂತರೂ ಸಹ ಫುಲ್ brainwash ಆಗಿ, ಸುಯಿಸೈಡ್ ಬೆಲ್ಟ್ ಬಾಂಬ್ ಖರೀದಿಗೆ ಹೊರಟುಬಿಡುತ್ತಿದ್ದರು. ಅಷ್ಟು effective ಆಗಿ ಮಸೀದಿಗಳಲ್ಲಿ firebrand ಪ್ರವಚನ ನೀಡುತ್ತಿದ್ದ. ಕುಳಿತಲ್ಲಿಂದಲೇ ಬೆಂಕಿಯುಗುಳುತ್ತಿದ್ದ. ಮಹಾ ಡೇಂಜರ್ ಮನುಷ್ಯ.

https://upload.wikimedia.org/wikipedia/en/e/ee/Ahmed_Yassin.JPG
ಶೇಖ್ ಯಾಸಿನ್
ಖತರ್ನಾಕ್ ಶಬಾಕ್ ಪೊಲೀಸರು ಈ  ವಯ್ಯನನ್ನು ಎತ್ತಾಕಿಕೊಂಡು ಬಂದರು ಸರಿ. ಆದರೆ ಇವನನ್ನು ಹಾಕ್ಕೊಂಡು ರುಬ್ಬೋಣ, ಬರೋಬ್ಬರಿ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಕೊಟ್ಟು ಬಾಯಿಬಿಡಿಸೋಣ ಅಂದರೆ ಇವನೋ ವಿಕಲಾಂಗ. ಥರ್ಡ್ ಡಿಗ್ರಿ ಕೊಡೋದು ದೂರದ ಮಾತು. ಶಬಾಕ್ ಎನ್ನುವ ಖತರ್ನಾಕ್ ಪೊಲೀಸ್ ಘಟಕದ ಸಾಮಾನ್ಯ ಪೇದೆಯೊಬ್ಬ ಒಂದೇ ಒಂದು ಏಟು ಬರೋಬ್ಬರಿ ಕೊಟ್ಟರೂ ಸಾಕು. ಈ ಚಕ್ರಪೀಠಾಧಿಪತಿ ವಿಕಲಾಂಗ ಅಲ್ಲಾ ಕೋ ಪ್ಯಾರೇ ಆಗಿಬಿಡುತ್ತಿದ್ದ. ಅಷ್ಟು ಅಶಕ್ತ ಮತ್ತು ಬಲಹೀನ. ಮತ್ತೆ ಆ firebrand ಇಮಾಮ್ ಶೇಖ್ ಯಾಸೀನ್ ಏನಾದರೂ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಲಾಕಪ್ ಡೆತ್ ಆಗಿ ಸತ್ತ ಅಂದರೆ ಮುಗಿಯಿತು. ಇಡೀ ಪ್ಯಾಲೆಸ್ಟೈನ್ ಹೊತ್ತಿ ಉರಿದು, ಇಸ್ರೇಲಿನ ಸೆರಗಿನ ಕೆಂಡ ದಾವಾಗ್ನಿಯಾಗಿ, ಇಸ್ರೇಲಿನ ಸುಡಬಾರದ ಜಾಗವೆಲ್ಲ ಸುಟ್ಟು, ದೊಡ್ಡ ರಾಜಕಾರಣಿಗಳ ಖುರ್ಚಿಗೆ ಆಪತ್ತು ಬರುತ್ತಿತ್ತು. ಹಾಗಾಗಿ ಎತ್ತಾಕಿಕೊಂಡು ಬಂದರೂ ಈ prize catch ಅನ್ನುವಂತಹ ಶೇಖ್ ಯಾಸೀನ್ ಎಂಬ ಗಿರಾಕಿಯನ್ನು ಅತ್ಯಮೂಲ್ಯ ವಸ್ತುವಿನಂತೆ ಕಾಪಾಡಿಕೊಳ್ಳಬೇಕಿತ್ತು. ಆದರೆ ಬಾಯಿ ಕೂಡ ಬಿಡಿಸಬೇಕಿತ್ತು. ಅವನಿಗೇ ಗೊತ್ತು ಮುಂದೆ ಎಷ್ಟು ಆತ್ಮಹತ್ಯಾ ದಾಳಿಗಳು ಆಗಲಿವೆ, ಯಾವಾಗ ಆಗಲಿವೆ, ಎಲ್ಲಿ ಆಗಲಿವೆ, ಯಾರು ಮಾಡಲಿದ್ದಾರೆ ಎಲ್ಲ. ಎಲ್ಲವನ್ನೂ ತನ್ನ ಭಯಂಕರ ಬುರುಡೆಯಲ್ಲಿ ಅದುಮಿಟ್ಟುಕೊಂಡು ಕುಳಿತಿದ್ದ ಭಡವ. ಅವನಿಗೂ ಗೊತ್ತು ತನಗೆ ಯಾರೂ ಏನೂ ಮಾಡುವಂತಿಲ್ಲ ಎಂದು. ಸತ್ತು ಹುತಾತ್ಮನಾಗಿ ಜನರನ್ನು ಮತ್ತಿಷ್ಟು ಮತಾಂಧರನ್ನಾಗಿ ಮಾಡುವ ಉಮೇದಿ ಬೇರೆ.

ಶಬಾಕ್ ಪೊಲೀಸರು ಹೇಗೆ ಇವನ ಬಾಯಿಬಿಡಿಸಬೇಕು ಎಂದು ತಲೆ ಮೇಲೆ ಕೈಹೊತ್ತು ಕುಳಿತಾಗ ಒಬ್ಬ ಹಿರಿಯ ಅಧಿಕಾರಿಗೆ ಏನೋ ನೆನಪಾಯಿತು. 'Yes! That should do it!' ಅಂದವರೇ ತಮ್ಮ ಸಹಾಯಕನನ್ನು ಕರೆದರು. ಏನೋ ಸೂಚನೆ ಕೊಟ್ಟರು. ಅವರ ಸೂಚನೆ ಪ್ರಕಾರ ಸಹಾಯಕ ಹೋಗಿ ಏನೋ ವಸ್ತುವನ್ನು ತಂದು ಕೊಟ್ಟ. ಮುಂದಿನ ಸುತ್ತಿನ ವಿಚಾರಣೆಗೆ ತಯಾರಾದರು.

ಕುಳಿತಿದ್ದ ಚಕ್ರಪೀಠದ ಸಮೇತ ಶೇಖ್ ಸಾಬ್ರನ್ನು ಒರಟಾಗಿ ಎತ್ತಿದ ಯಮಕಿಂಕರರಂತಹ ಪೊಲೀಸರು ಅವನನ್ನು interrogation ಕೋಣೆಯಲ್ಲಿ ಒಗೆದು ಬಂದರು. ಹಿಂದೆಯೇ ಹೋದರು ಆ ಹಿರಿಯ ಅಧಿಕಾರಿ. ಅವರ ಹಿಂದೆಯೇ ಹೋಗಿದ್ದು ಒಂದು ಟೀವಿ ಮತ್ತು ಒಂದು ವಿಡಿಯೋ ಪ್ಲೇಯರ್.  ಅವರ ಕೈಯಲ್ಲಿ 'ಏನೋ' ಇತ್ತು.

ಶೇಖ್ ಸಾಬನ ಮುಂದೆಯೇ ಒಂದು ಖುರ್ಚಿ ಹಾಕಿಕೊಂಡು ಕುಳಿತರು ಆ ಹಿರಿಯ ಅಧಿಕಾರಿ.

'ಶೇಖ್ ಸಾಬ್ರೇ, ನೀವಂತೂ ಕೇಳಿದ ಪ್ರಶ್ನೆಗಳಿಗೆ ಒಂದಕ್ಕೂ ಉತ್ತರ ಕೊಡುತ್ತಿಲ್ಲ. ನಮ್ಮ 'ಭಾಷೆ'ಯಲ್ಲಿ ನಿಮ್ಮನ್ನು ಮಾತಾಡಿಸೋಣ ಅಂದ್ರೆ ಒಂದೇ ಏಟಿಗೆ ಹುತಾತ್ಮರಾಗಿಬಿಡುತ್ತೀರಿ. ಹಾಗಾಗಿ ಬೇರೆ ವಿಧಿಯಿಲ್ಲ...' ಎಂದು ಪೀಠಿಕೆ ಇಟ್ಟವರೇ ತಮ್ಮ ಕೈಯಲ್ಲಿದ್ದ ಸಾಮಾನನ್ನು ತೆಗೆದು ವಿಡಿಯೋ ಪ್ಲೇಯರ್ ಒಳಗೆ ತುರುಕಿದರು. ಅದೊಂದು ವಿಡಿಯೋ ಕ್ಯಾಸೆಟ್ಟಾಗಿತ್ತು. ಪ್ಲೇ ಒತ್ತಿ ಕೂತರು.

'ಶೇಖ್ ಸಾಬ್ರೇ, ಲಾಕಪ್ಪಿನಲ್ಲಿ ಕೂತು ನಿಮಗೆ ಬೋರಾಗಿರಬಹುದು. ನೋಡಿ ಎಂಜಾಯ್ ಮಾಡಿ. ನೀವು ಒಪ್ಪಿದರೆ ಇದನ್ನು ನಿಮ್ಮ ಏರಿಯಾದ ಕೇಬಲ್ ಆಪರೇಟರ್ ಗೆ ಕೊಡೋಣ ಅಂದುಕೊಂಡಿದ್ದೇನೆ. ನಿಮ್ಮ ಹಿಂಬಾಲಕರೂ ನೋಡಿದರೆ ಚೆನ್ನ. ಯಾವುದಕ್ಕೂ ನೀವು ಮೊದಲು ನೋಡಿ,' ಅಂದರು.

ವಿಡಿಯೋ ಮೂಲಕ ಟೀವಿ ಮೇಲೆ ಮೂಡಿಬಂದ ದೃಶ್ಯ ನೋಡಿದ ವಿಕಲಾಂಗ ಶೇಖ್ ಯಾಸಿನ್ ತಳ್ಳುಗಾಡಿ ಖುರ್ಚಿಯಿಂದ ಫಣಂಗನೇ ಮಂಗ್ಯಾನ ಮಾದರಿಯಲ್ಲಿ ಹಾರಿಯೇ ಬಿಡುತ್ತಿದ್ದನೇನೋ. ಆದರೆ ಫುಲ್ ಲ್ಯಾಪ್ಸ್ ಕೇಸ್. ಕುಳಿತಲ್ಲೇ ಕನಲಿದ. ಭಯಂಕರ ಮುಜುಗರ ಅನುಭವಿಸುತ್ತ ಮಿಡುಕಿದ. ನಸುಗುನ್ನಿಯಂತೆ ಮುಲುಗಿದ. ಅವಮಾನದಲ್ಲಿ ತಲೆತಗ್ಗಿಸಿ, 'ಸಾಕು ನಿಲ್ಲಿಸಿ. ಏನು ಕೇಳಬೇಕೋ ಕೇಳಿ. ಪ್ಲೀಸ್ ವಿಡಿಯೋ ಬಂದ್ ಮಾಡಿ!' ಎಂದು ಅಂಬೋ ಅಂದ.

ಅರೇ ಇಸ್ಕಿ! ಏನೇ ಒತ್ತಡ ಹಾಕಿ ಏನೇ ಕೇಳಿದರೂ ಅಸಡ್ಡೆಯಿಂದ ನಗುತ್ತ ಕುಳಿತವ ಯಾವುದೋ ಒಂದು ವಿಡಿಯೋ ನೋಡಿದ ಕೂಡಲೇ ಪೂರ್ತಿ ಕರಗಿಹೋಗಿ ಬೇಕಾಗಿದ್ದನ್ನು ಕೇಳಿ ಎಲ್ಲ ಹೇಳುತ್ತೇನೆ ಎನ್ನುವ ಲೆವೆಲ್ಲಿಗೆ ಬಂದದ್ದು ಹೇಗೆ!?

ಆ ವೀಡಿಯೋದಲ್ಲಿ ಶೇಖ್ ಸಾಬನ ರಾಸಲೀಲೆ ದಾಖಲಾಗಿತ್ತು. ಮಸೀದಿಗಳಲ್ಲಿ ಯದ್ವಾತದ್ವಾ ಆಚಾರ ಹೇಳುತ್ತಿದ್ದ ಇದೇ ಪುಣ್ಯಾತ್ಮ ತನ್ನ ವೈಯಕ್ತಿಕ ಜೀವನದಲ್ಲಿ ಮಾತ್ರ ಯಥೇಚ್ಛವಾಗಿ ಬದ್ನೇಕಾಯಿ ತಿನ್ನುತ್ತಾನೆ ಮತ್ತು ತಿನ್ನಿಸುತ್ತಾನೆ ಎಂದು ಇವನ ಪ್ರವಚನ ಕೇಳುವ ಮಂದಿಗೆ ಗೊತ್ತಾಗಿಬಿಟ್ಟರೆ ಅಷ್ಟೇ ಮತ್ತೆ. ಮುಗಿಯಿತು ಇವನ ಕಥೆ. ಗಾಜಾ ಪಟ್ಟಿ ಉದ್ದಕ್ಕೂ ನಾಯಿಯಂತೆ ಅಟ್ಟಾಡಿಸಿಕೊಂಡು ಓಡ್ಯಾಡಿಸಿ ಕಲ್ಲಿಂದ ಹೊಡೆದು ಸಾಯಿಸುತ್ತಿದ್ದರು. ಅಥವಾ ಮತ್ತೂ ತಲೆ ಕೆಟ್ಟರೆ ಸುಯಿಸೈಡ್ ಬೆಲ್ಟ್ ಬಾಂಬ್ ಕಟ್ಟಿಕೊಂಡು ಇವನನ್ನೇ ಅಪ್ಪಿಕೊಂಡು ಸ್ಪೋಟಿಸಿಕೊಂಡುಬಿಡುತ್ತಿದ್ದರು. ಅಷ್ಟು ಖರಾಬಾಗಿತ್ತು ಶೇಖ್ ಸಾಬನ ರಾಸಲೀಲೆ.

ಶೇಖ್ ಯಾಸೀನ್ ಸಾಬ್ರು ವಿಕಲಾಂಗರೇನೋ ನಿಜ. ಆದರೆ ನಪುಂಸಕರಲ್ಲ ನೋಡಿ. ಮೇಲಿಂದ ಭಿಕ್ಷೆಯ ಫುಡ್ಡು. ಹಾಗಾಗಿ ಉಪ್ಪು ಹುಳಿ ಖಾರ ವಸಿ ಜಾಸ್ತಿನೇ ತಿನ್ನುತ್ತಿದ್ದರು. ಇವರ ಮೇಲಿನ ಭಕ್ತಿಯಿಂದ ಜನ ತರೇವಾರಿ ತಿಂಡಿ ತಿನ್ನಿಸಿ, ಊಟ ಉಣ್ಣಿಸಿ ಸಾಹೇಬರು ಕೊಂಚ ಜಾಸ್ತಿಯೇ 'ಉಛಲ್ ಕೂದ್' ಮಾಡುತ್ತಿದ್ದರು. ಆದರೇನು ಮಾಡುವುದು ಹೆಂಡತಿ / ಗೆಳತಿ ಯಾರೂ ಇರಲಿಲ್ಲ. ಆದರೆ ಜಾಸ್ತಿ ದಿವಸ ಸುಖದ ವ್ಯತ್ಯಯ ಆಗಲೇ ಇಲ್ಲ ಸಾಬರಿಗೆ.

ಅವಳು ಯಾರೋ ಗಾಜಾ ಪಟ್ಟಿಯ ಸುಂದರಿ. ಶೇಖ್ ಸಾಬರ ಬೆಂಕಿಯುಗುಳುವ ಪ್ರವಚನಗಳಿಂದ ಅವಳೂ ಪ್ರಭಾವಿತಳೇ. ತನ್ನದೇ ರೀತಿಯಲ್ಲಿ ಪ್ಯಾಲೆಸ್ಟೈನ್ ಸಂಗ್ರಾಮಕ್ಕೆ ತನ್ನ 'ಸೇವೆ' ಸಲ್ಲಿಸುತ್ತಿದ್ದಳು. ಅವರವರ ಭಾವಕ್ಕೆ, ಅವರವರ ಭಕ್ತಿಗೆ ತಕ್ಕಂತೆ ಸೇವೆ ನೋಡಿ.

'ಪಾಪ ಶೇಖ್ ಸಾಬ್ರು! ಅದೆಷ್ಟು ಕಷ್ಟ ಪಟ್ಟು ಪ್ರವಚನ ಮಾಡುತ್ತಾರೆ. ಎಲ್ಲವನ್ನೂ ಹಮಾಸ್ ಸಂಘಟನೆಗೆ ಅರ್ಪಿಸಿಕೊಂಡುಬಿಟ್ಟಿದ್ದಾರೆ. ಮನೆಯಲ್ಲೊಂದು ಹೆಣ್ಣು ಜೀವಕ್ಕೆ ಗತಿಯಿಲ್ಲ. ಪಾಪ ಶೇಖ್ ಸಾಬ್ರು...' ಎಂದುಕೊಂಡಳೋ ಏನೋ. ಶೇಖ್ ಸಾಬ್ರ ಮನೆಕೆಲಸ ಮಾಡುವ ನೆಪದಲ್ಲಿ ವಾರದಲ್ಲಿ ಒಂದೆರೆಡು ದಿನ ಮಧ್ಯಾಹ್ನ ಬರುತ್ತಿದ್ದಳು. ಜಾಡೂ ಪೋಛಾ ಮಾಡಿ, ಭಾಂಡಿ ಗಿಂಡಿ ತಿಕ್ಕಿ, ಬಟ್ಟೆ ಗಿಟ್ಟೆ ಒಗೆದುಕೊಟ್ಟು, ಶೇಖ್ ಸಾಬ್ರ ಬಿಸ್ತರ್ ಗಿಸ್ತರ್ ಬರೋಬ್ಬರಿ ಮಾಡಿ ಹೋಗುತ್ತಿದ್ದಳು. ಆಪ್ತ ಸಹಾಯಕಿ ಮಾದರಿಯಲ್ಲಿ.

ಅದೇನು ಶೇಖ್ ಸಾಬ್ರ ಮೇಲೆ ಅವಳಿಗೇ ಅನುರಾಗ ಹುಟ್ಟಿತೋ ಅಥವಾ ಚಕ್ರಪೀಠದ ಮೇಲೆ ಕುಳಿತೇ ಶೇಖ್ ಸಾಹೇಬ್ರು ಅವಳಿಗೆ 'ಆವ್,ಆವ್' ಎಂದು 'ಆವ್ ರೇ' ಕಾಳು ಹಾಕಿದರೋ ಗೊತ್ತಿಲ್ಲ. ಆದರೆ ಸಂಬಂಧ ಮಾತ್ರ ಮುಂದಿನ ಹಂತಕ್ಕೆ ಹೋಗಿಬಿಟ್ಟಿತು.

ಶೇಖ್ ಸಾಬರಂತೂ ವಿಕಲಾಂಗರು. ಸುಂದರಿಯೇ ಮೈಮೇಲೆ ಬಿದ್ದು ಬರಬೇಕೇ ವಿನಃ ಇವರು ಅದೆಷ್ಟೇ ಇಷ್ಟಪಟ್ಟರೂ ಅದೆಷ್ಟೇ ಕಷ್ಟಪಟ್ಟರೂ ಹಾರಲಾರರು, ಜಿಗಿಯಲಾರರು, ಬಾರಿಸಲಾರರು. ಎಲ್ಲ ಸುಂದರಿಯ ಕೈಯಲ್ಲಿ. ಆಕೆ ಅಳಿಲುಸೇವೆ ಮಾಡುತ್ತೇನೆ ಎಂದಿರಬೇಕು. ಇವರು ಏನೆಂದುಕೊಂಡರೋ. ಇವರ ಅಳಿಲು. ಆಕೆಯ ಸೇವೆ. ಯಾ ಅಲ್ಲಾ!

ಮನೆ ಕೆಲಸ ಮುಗಿಸಿದ ಸುಂದರಿ ತಾನೂ ವಿವಸ್ತ್ರಳಾಗಿ, ಶೇಖ್ ಸಾಬ್ರನ್ನೂ ವಿವಸ್ತ್ರಗೊಳಿಸಿ, ಮಲಗಿಸಿ, ಲಾಲಿ ಜೋಗುಳ ಹಾಡಿ, 'ಸೇವೆ' ಎಲ್ಲ ಮಾಡಿ, ತಾನೂ ಪವಿತ್ರಳಾಗಿ ಸಾಬ್ರನ್ನೂ ಖುಷ್ ಮಾಡುತ್ತಿದ್ದಳು. ಅವರಿಗೆ ಗೊತ್ತಿಲ್ಲದ ವಿಷಯವೆಂದರೆ ಆಗಲೇ ಎಲ್ಲವನ್ನೂ under surveillance ಇಟ್ಟಿದ್ದ ಇಸ್ರೇಲಿನ ಶಬಾಕ್ ಎಲ್ಲವನ್ನೂ ರಹಸ್ಯವಾಗಿ ವಿಡಿಯೋ ಮಾಡುತ್ತಿತ್ತು. ಮತ್ತೆ ಅವೆಲ್ಲ ಅತ್ಯಂತ ಕ್ರಮಬದ್ಧವಾಗಿ ಶೇಕ್ ಸಾಬ್ರ ಮೇಲೆ ಮಡಗಿದ್ದ ಮಾಸ್ಟರ್ ಫೈಲ್ ನಲ್ಲಿ ದಾಖಲಾಗುತ್ತಿದ್ದವು.

ಈಗ ಅದೇ ರಾಸಲೀಲೆಯ ಒಂದು ಝಳಕ್ ತೋರಿಸಿದ್ದರು. ಅದನ್ನು ನೋಡಿದ ಶೇಖ್ ಸಾಬ್ರು ಬೆಚ್ಚಿಬಿದ್ದು, ಮೆತ್ತಗಾಗಿ, ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ತಯಾರಾಗಿದ್ದರು. ಇಲ್ಲವಾದರೆ ವೀಡಿಯೊ ಪಬ್ಲಿಕ್ ಆಗಿಬಿಟ್ಟರೆ ಅಷ್ಟೇ ಮತ್ತೆ. ಹುಚ್ಚು ನಾಯಿಯಂತೆ ಹೊಡೆದು ಕೊಲ್ಲುತ್ತಾರೆ. ಬೇರೆ ಯಾರೋ ಏನೇನೋ ಸೇವೆ ಮಾಡಿಸಿಕೊಂಡಿದ್ದರೆ 'ಹೋಗಲಿ ಬಿಡಿ. ವಿಕಲಾಂಗನಾದರೆ ಏನಂತೆ, ಹಡಬಿಟ್ಟಿ ಮನಸ್ಸು ಕೇಳಬೇಕಲ್ಲ. ಹೋಗಲಿ ಬಿಡಿ,' ಎಂದು ನಗಣ್ಯ ಮಾಡುತ್ತಿದ್ದರೋ ಏನೋ. ಆದರೆ ಇವನೋ ದೊಡ್ಡ ಇಮಾಮ್ ಸಾಬ್. ಊರಿಗೆಲ್ಲ ಪಾವಿತ್ರ್ಯತೆಯ ಉಪದೇಶ ಮಾಡಿಕೊಂಡು ತಿರುಗಿ, ಆದರ ಮೇಲೆಯೇ ದಾನ ಎತ್ತಿ ತನ್ನ ಚಾಯ್ ಪಾನಿಗೆ ವ್ಯವಸ್ಥೆ ಮಾಡಿಕೊಂಡ ಗಡವ. ಇಂತವ ವೇದಾಂತ ಹೇಳಿ ಬದನೆಕಾಯಿ ತಿನ್ನುತ್ತಾನೆ ಅಂದರೆ ಮಂದಿ ಸಿಟ್ಟಿಗೆದ್ದು ಸಿಗಿದಾಕುತ್ತಿದ್ದರು ಅಷ್ಟೇ.

ಹೀಗೆ ಯುಕ್ತಿಯಿಂದ ಶೇಕ್ ಸಾಬ್ರ ಬಾಯಿ ಬಿಡಿಸಿತ್ತು ಇಸ್ರೇಲಿನ ತನಿಖಾ ಸಂಸ್ಥೆ ಶಬಾಕ್. ಎಂದೋ ಮಾಡಿದ್ದ ವಿಡಿಯೋ ಅಂದು ಆಯ್ತ ವೇಳೆಗೆ ನೆನಪಾಗಿ ಬರೋಬ್ಬರಿ ಉಪಯೋಗಕ್ಕೆ ಬಂದಿತ್ತು.

ಶೇಖ್ ಸಾಬ್ರನ್ನು ಬರೋಬ್ಬರಿ ವಿಚಾರಣೆ ಮಾಡಿ, ಎಲ್ಲ ಮಾಹಿತಿಯನ್ನು ಬರೋಬ್ಬರಿ ಗುಂಜಿ, ಸಾಬ್ರನ್ನು ಬರೋಬ್ಬರಿ ಹಿಂಡಿ ಹಿಪ್ಪೆ ಮಾಡಿ ಜೈಲಿಗೆ ಅಟ್ಟಿತು ಇಸ್ರೇಲ್. ಜೈಲಿನಲ್ಲಿ ಕೊಳೆಯುತ್ತಲೇ ಹಮಾಸ್ ಉಗ್ರರಿಗೆ ರಹಸ್ಯ ಸಂದೇಶಗಳನ್ನು ರವಾನಿಸುತ್ತ ಉಗ್ರಗ್ರಾಮಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಲೇ ಇದ್ದ ಶೇಖ್ ಯಾಸೀನ್. ಆದರೆ ಸುಂದರಿಯ 'ಸೇವೆ' ಮಾತ್ರ ತಪ್ಪಿಹೋಗಿತ್ತು. ಪಾಪ ಸಾಬ್ರು! ಅದಿದ್ದರೆ ಇನ್ನೂ ಜಬರ್ದಾಸ್ತಾಗಿ ಅಗ್ನಿಯುಗುಳುತ್ತಿದ್ದರೇನೋ!

ಜೀವನ ಪರ್ಯಂತ ಜೇಲಿಗೆ ಹಾಕಿತ್ತು ಇಸ್ರೇಲ್. ಆದರೆ ಶೇಖ್ ಸಾಬ್ರ ಲಕ್ ಅಂದರೆ ಲಕ್. ಭಯಂಕರ ಅದೃಷ್ಟ. ಜೇಲಿನಿಂದ ಬಿಡುಗಡೆಯಾಗುವಂತಹ ಒಂದು ಸನ್ನಿವೇಶ ಅಚಾನಕ್ ಆಗಿ ಸೃಷ್ಟಿಯಾಗಿಬಿಡಬೇಕೇ!? ಅದೂ ಇಸ್ರೇಲ್ ಮಾಡಿಕೊಂಡ ಸ್ವಯಂಕೃತ ಅಪರಾಧದಿಂದಾಗಿ. ಅದರಲ್ಲೂ ಮಹಾನ್ ಖತರ್ನಾಕ್ ಬೇಹುಗಾರಿಕೆ ಸಂಸ್ಥೆ ಮೊಸ್ಸಾದ್ ಮಾಡಿಕೊಂಡ ಒಂದು ಲಫಡಾ ಶೇಖ್ ಯಾಸೀನ್ ಬಿಡುಗಡೆಯಾಗುವಂತೆ ಮಾಡಿದ್ದು ಒಂದು ವಿಚಿತ್ರ. Total irony.

೧೯೯೭ ರಲ್ಲಿ ಹಮಾಸ್ ಉಗ್ರರಿಗೆ ಒಂದು ಖಡಕ್ ಸಂದೇಶ ಮುಟ್ಟಿಸಬೇಕೆಂದುಕೊಂಡ ಇಸ್ರೇಲ್ ಹಮಾಸ್ ಮುಖಂಡ ಖಾಲಿದ್ ಮೇಷಾಲ್ ಮೇಲೆ ಮರಣಶಾಸನ ಜಾರಿ ಮಾಡಿತು. ಎಂದಿನಂತೆ ಅದರ ಜವಾಬ್ದಾರಿ ಹೋಗಿದ್ದು ಮೊಸ್ಸಾದ್ ಎಂಬ ಖತರ್ನಾಕ್ ಬೇಹುಗಾರಿಕೆ ಸಂಸ್ಥೆಗೆ. ಅಂದಿನ ಮೊಸ್ಸಾದ್ ಮುಖ್ಯಸ್ಥ ಡ್ಯಾನಿ ಯಟೋಮ್ ಆ ಕಾರ್ಯಾಚರಣೆ ತುಂಬಾ ಕಷ್ಟಕರವಾಗಿದೆ ಮತ್ತು ತುಂಬಾ ರಿಸ್ಕಿ ಎಂದು ಪ್ರಧಾನಿ ನೇತನ್ಯಾಹು ಅವರಿಗೆ ಪರಿಪರಿಯಾಗಿ ಹೇಳಿದರು. ಸದ್ಯಕ್ಕೆ ಖಾಲಿದ್ ಮೇಶಾಲನ ಗೇಮ್ ಬಾರಿಸುವುದು ಬೇಡ, ಮುಂದೆ ನೋಡೋಣ ಎಂದು ಹೇಳಿದರು. ಖಡಕ್ ಪ್ರಧಾನಿ ನೆತಾನ್ಯಾಹೂಗೆ ಸಹನೆ ಕಮ್ಮಿ. ಖುದ್ ಟಾಪ್ ಕಮಾಂಡೋ ಆಗಿದ್ದ ಅವರು ಅಂತಹ ಹಲವಾರು ಕಾರ್ಯಾಚರಣೆ ಮಾಡಿದ್ದರು. ವಿಮಾನ ಅಪಹರಣಕಾರರ ಗೇಮ್ ಖುದ್ದಾಗಿ ಬಾರಿಸಿದ್ದರು. ಹಮಾಸ್ ಮಾಡುತ್ತಿದ್ದ ಆತ್ಮಹತ್ಯಾ ದಾಳಿಗಳಲ್ಲಿ ತುಂಬಾ ಜನ ಇಸ್ರೇಲಿಗಳು ಭಸ್ಮವಾಗುತ್ತಿದ್ದರು. ಪ್ರಧಾನಿ ಮೇಲೆ ಇನ್ನಿಲ್ಲದ ಒತ್ತಡ. ಏನಾದರೂ ಮಾಡಲೇಬೇಕಿತ್ತು. ಇಸ್ರೇಲ್ ನೋಡಿಕೊಂಡು ಸುಮ್ಮನಿರಲ್ಲ ಎನ್ನುವ ಖಡಕ್ ಸಂದೇಶ ಉಗ್ರರಿಗೆ ರವಾನೆಯಾಗಲೇಬೇಕಿತ್ತು. ಒಂದು ದೊಡ್ಡ ಬಲಿ ಕೇಳುತ್ತಿತ್ತು ಇಸ್ರೇಲ್ ಜನತೆ. ಹಾಗಾಗಿ ತಮ್ಮ ಮೊಸ್ಸಾದ್ ಮುಖ್ಯಸ್ಥನ ಮಾತು ಕೇಳಲಿಲ್ಲ ಅವರು.

ಖಾಲೆದ್ ಮೇಷಾಲನನ್ನು ಕೊಲ್ಲಲು ಹಾಕಿದ್ದ ಸ್ಕೆಚ್ ಗಬ್ಬೆದ್ದುಹೋಯಿತು. ಪಕ್ಕದ ಜೋರ್ಡಾನ್ ದೇಶದ ರಾಜಧಾನಿ ಅಮ್ಮಾನ್ ನಗರದಲ್ಲಿ ಆಫೀಸ್ ಮಾಡಿಕೊಂಡಿದ್ದ ಖಾಲೆದ್ ಮೇಷಾಲ್ ಮೊಸ್ಸಾದ್ ಹಂತಕರಿಂದ ಬಚಾವಾಗಿಬಿಟ್ಟ. ಅದಕ್ಕಿಂತ ಹೆಚ್ಚಾಗಿ ಮೊಸ್ಸಾದ್ ಹಂತಕರು ಸಿಕ್ಕಾಕಿಕೊಂಡುಬಿಟ್ಟರು. ಇಸ್ರೇಲಿಗೆ ದೊಡ್ಡ ಮಟ್ಟದ ಮುಜುಗರ. Big embarrassment. ಪಕ್ಕದಲ್ಲಿದ್ದ ಎಲ್ಲ ಅರಬ್ ರಾಷ್ಟ್ರಗಳು ವೈರಿ ದೇಶಗಳು. ಇದ್ದುದರಲ್ಲಿಯೇ ಜೋರ್ಡಾನ್ ಸ್ನೇಹದ ಹಸ್ತ ಚಾಚಿತ್ತು. ಏನೇನೋ ಒಪ್ಪಂದ ಮಾಡಿಕೊಂಡಿತ್ತು. ತನ್ನ ದೇಶದಲ್ಲಿ ಹತ್ಯೆ ಮಾಡುವಂತಿಲ್ಲ, ಗೇಮ್ ಬಾರಿಸುವಂತಿಲ್ಲ ಅಂತೆಲ್ಲ ಒಪ್ಪಂದ ಇತ್ತು. ಹೀಗೆಲ್ಲ ಇರುವಾಗ ಇಸ್ರೇಲ್ ತನ್ನ ದೇಶದಲ್ಲಿ ಗೇಮ್ ಬಾರಿಸಲು ನೋಡಿದ್ದು ದೊಡ್ಡ ಪ್ರಮಾಣದ ಮಿತ್ರದ್ರೋಹ ಅಂತ ಅಲ್ಲಿನ ಅಧ್ಯಕ್ಷ / ರಾಜ ಬೋಡು ತಲೆಯ ಕಿಂಗ್ ಹುಸೇನ್ ದೊಡ್ಡ ಪ್ರಮಾಣದಲ್ಲಿ ರಚ್ಛೆ ಹಿಡಿದು ಕೂತರು. ಸೀದಾ ಶ್ವೇತಭವನಕ್ಕೇ ಫೋನ್ ಹಚ್ಚಿ ಅಧ್ಯಕ್ಷ ಬಿಲ್ ಕ್ಲಿಂಟನ್ ಸಾಹೇಬರ ಮುಂದೆ ಗೊಳೋ ಎಂದರು. ಆಗ ಅದು ಕೇವಲ ಇಸ್ರೇಲಿನ ಸಮಸ್ಯೆಯಾಗಿ ಉಳಿಯಲಿಲ್ಲ.

ಬಿಲ್ ಕ್ಲಿಂಟನ್ ಸಾಹೇಬರಿಗೆ ಇದೆಲ್ಲ ಮಂಡೆಬಿಸಿ ಬೇಕಾಗಿಯೇ ಇರಲಿಲ್ಲ. ಎರಡನೇ ಅವಧಿಯಲ್ಲಿ ಸಕತ್ ಮಜಾ ಮಾಡಿಕೊಂಡು ಸಿಕ್ಕಸಿಕ್ಕ ಸುಂದರಿಯರ ಬ್ಯಾಂಡ್ ಬಾರಿಸಿಕೊಂಡು ಆರಾಮಾಗಿ ಇರೋಣ ಅಂದರೆ ಇಸ್ರೇಲ್ ಮತ್ತು ಜೋರ್ಡಾನ್ ಮಧ್ಯೆ ರಾಮರಾಡಿ. 'ಸಂಧಾನ ಮಾಡಿಕೊಂಡು ಎಲ್ಲ ಬಗೆಹರಿಸಿಕೊಳ್ಳಿ!' ಎಂದು ಇಸ್ರೇಲಿನ ಪ್ರಧಾನಿ ನೆತನ್ಯಾಹು ಅವರಿಗೆ ಕಟ್ಟಾಜ್ಞೆ ಮಾಡಿದ ಬಿಲ್ ಕ್ಲಿಂಟನ್ ತಮ್ಮ ಅಂದಿನ ಸಖಿ ಮೋನಿಕಾ ಲೆವಿನ್ಸ್ಕಿಯನ್ನು ಹುಡುಕುತ್ತ ಕಳೆದುಹೋದರು. ನೆತನ್ಯಾಹು ಅವರ ವಿವರಣೆ ಕೇಳಲು ಅವರಿಗೆ ಟೈಮ್ ಇರಲಿಲ್ಲ. ಮೂಡ್ ಕೂಡ ಇರಲಿಲ್ಲ.

(ಖಾಲೆದ್ ಮೇಷಾಲ್ ಹತ್ಯಾಪ್ರಯತ್ನದ ಬಗ್ಗೆ, ಅದರ ವೈಫಲ್ಯದ ಬಗ್ಗೆ ಮೊದಲೊಮ್ಮೆ ವಿವರವಾಗಿ ಬರೆದಿದ್ದೆ. ಇಲ್ಲಿದೆ. ಆಸಕ್ತರು ಓದಬಹುದು.)

ಬರೋಬ್ಬರಿ ವಸೂಲಿ ಮಾಡುವಂತೆ ಬಾಕಿ ಎಲ್ಲ ಅರಬ್ ದೇಶಗಳು ಜೋರ್ಡಾನ್ ದೊರೆ ಹುಸೇನರ ಬೋಳು ತಲೆಯನ್ನು ಬರೋಬ್ಬರಿ ತಿಕ್ಕಿದವು. ದೊಡ್ಡ ಮಟ್ಟದ ಡಿಮ್ಯಾಂಡ್ ಇಟ್ಟುಕೊಂಡು ಕೂತಿದ್ದರು ಅವರು. He wanted his pound of flesh and more!

ಮೊತ್ತ ಮೊದಲ ಡಿಮ್ಯಾಂಡ್ - ಖಾಲೆದ್ ಮೇಷಾಲ್ ಮೇಲೆ ಪ್ರಯೋಗಿಸಲಾದ ರಹಸ್ಯ ವಿಷಕ್ಕೆ ಪ್ರತಿಮದ್ದನ್ನು (antidote) ತುರ್ತಾಗಿ ಕಳಿಸಬೇಕು. ಜೊತೆಗೆ ನುರಿತ ಇಸ್ರೇಲಿ ವೈದ್ಯರೂ ಸಹ. At any cost, ಖಾಲೆದ್ ಮೇಷಾಲ್ ಉಳಿಯಲೇಬೇಕು. ಸೆಕೆಂಡ್ ಡಿಮ್ಯಾಂಡ್ - ಜೇಲಿನಲ್ಲಿರುವ ಹಮಾಸ್ ಸಂಸ್ಥಾಪಕ ಶೇಖ್ ಯಾಸೀನರನ್ನು ಬಿಡುಗಡೆ ಮಾಡಬೇಕು ಮತ್ತು ಸುರಕ್ಷಿತವಾಗಿ ಜೋರ್ಡಾನ್ ದೇಶಕ್ಕೆ ತಲುಪಿಸಬೇಕು. ಮೂರನೇ ಡಿಮ್ಯಾಂಡ್ - ನೂರಾರು ಜನ ಹಮಾಸ್ ಉಗ್ರರನ್ನು ಜೇಲಿನಿಂದ ಬಿಡುಗಡೆ ಮಾಡಬೇಕು.

ಇಸ್ರೇಲಿಗೆ ಬೇರೆ ಗತಿ ಇರಲಿಲ್ಲ. ಎಲ್ಲ ಡಿಮ್ಯಾಂಡ್ ಒಪ್ಪಿಕೊಂಡಿತು. ಖದೀಮ ಶೇಖ್ ಯಾಸೀನನನ್ನು ಆತನ ಚಕ್ರಪೀಠದ ಸಮೇತ ಹೆಲಿಕಾಪ್ಟರಿನಲ್ಲಿ ಕುಳ್ಳಿರಿಸಿ ಜೋರ್ಡನ್ ದೇಶಕ್ಕೆ ಕಳುಹಿಸಿಕೊಟ್ಟರು. ಬಿಟ್ಟಿ ಹೆಲಿಕಾಪ್ಟರಿನಲ್ಲಿ ಗಾಜಾ ಪಟ್ಟಿಯ ತನ್ನ ಜನರಿಗೆ ಕೈಬೀಸುತ್ತ ಶೇಖ್ ಯಾಸೀನ್ ಹಾರಿಹೋಗುತ್ತಿದ್ದರೆ ಇತ್ತ ಕಡೆ ಪ್ರಧಾನಿ ನೆತನ್ಯಾಹು ಹಣೆ ಹಣೆ ಚಚ್ಚಿಕೊಂಡರು. ಹಾಕಿದ್ದ ಸ್ಕೆಚ್ ತಪ್ಪಿತ್ತು. ಗೇಮ್ ಬಾರಿಸಲಾಗಿರಲಿಲ್ಲ. ಆದರೆ ಮೊಸ್ಸಾದ್ ಡೈರೆಕ್ಟರ್ ಡ್ಯಾನಿ ಯಟೋಮ್ ನೌಕರಿಗೆ ಮಾತ್ರ ಬ್ಯಾಂಡ್ ಬಾರಿಸಿದ್ದರು ನೆತನ್ಯಾಹು. ಹೊಸ ಮೊಸ್ಸಾದ್ ಡೈರೆಕ್ಟರ್ ಎಫ್ರೆಮ್ ಹಾಲಿವೀ ಬಂದು ಕುಳಿತರು. ಖುರ್ಚಿ ಮೇಲೆ ಕೂಡುವ ಮೊದಲೇ ವಿಷಕ್ಕೆ ತಕ್ಕ ಪ್ರತಿಮದ್ದನ್ನು ಹಿಡಿದುಕೊಂಡು ಜೋರ್ಡನ್ ದೇಶಕ್ಕೆ ಓಡುವ ಕರ್ಮ ಅವರದ್ದು. ಪಾಪ. ಮೊಸ್ಸಾದ್ ಎಂಬ ಖತರ್ನಾಕ್ ಸಂಸ್ಥೆಯ ಡೈರೆಕ್ಟರ್ ಒಳ್ಳೆ ಜವಾನನಾಗಿ ಹೋಗಿದ್ದ. ಟೈಮ್ ಖರಾಬ್ ಇದ್ದರೆ ನೋಡಿ ಹೀಗೆಲ್ಲ ಆಗುತ್ತದೆ.

ಇಸ್ರೇಲಿಗಳಿಗೆ ಠೇoಗಾ ತೋರಿಸಿ, ಅವರನ್ನು ಅಣಗಿಸುತ್ತ,ಅವರದ್ದೇ ಹೆಲಿಕಾಪ್ಟರಿನಲ್ಲಿ ಹಾರಿಹೋಗಿದ್ದ ಶೇಖ್ ಯಾಸೀನ್ ಪಕ್ಕದ ಜೋರ್ಡಾನ್ ದೇಶದಲ್ಲಿ ಸಿಕ್ಕಾಪಟ್ಟೆ ಚಮಕಾಯಿಸಿದ. ಅಲ್ಲವನಿಗೆ ಫುಲ್ ರಾಜೋಪಚಾರ. ಖುದ್ದು ಸಿಕ್ಕಾಪಟ್ಟೆ ರಸಿಕರಾಗಿದ್ದ ಜೋರ್ಡನ್ ದೇಶದ ರಾಜ ಕಿಂಗ್ ಹುಸೇನ್ ಶೇಖ್ ಸಾಬ್ರ 'ಸೇವೆ'ಗಾಗಿ ಗೆಳತಿಯರನ್ನೂ ಸರಬರಾಜು ಮಾಡಿದ್ದರೆ? ಗೊತ್ತಿಲ್ಲ. ಜೋರ್ಡಾನಿನ ರಾಜ ಕಿಂಗ್ ಹುಸೇನರ ರಸಿಕತೆ legendary. ಅದನ್ನೇ ದಾಳವಾಗಿ ಬಳಸಿಕೊಂಡಿದ್ದ ಅಮೇರಿಕಾದ ಬೇಹುಗಾರಿಕೆ ಸಂಸ್ಥೆ ಸಿಐಎ ಕಿಂಗ್ ಹುಸೇನರಿಗೆ ಹಾಲಿವುಡ್ ನಟಿಯರನ್ನು ತಲೆಹಿಡಿಹಿಡಿದೇ ಅವರನ್ನು ಫುಲ್ compromise ಮಾಡಿತ್ತು. ಒಳ್ಳೆ ಅಮೇರಿಕನ್ ಏಜೆಂಟರಂತೆ ಕಿಂಗ್ ಹುಸೇನ್ ಆಗಲು ಕಾರಣ ಅದೇ. ಅವರ ರಾಸಲೀಲೆಗಳ ಗುಟ್ಟುಗಳೆಲ್ಲ ಸಿಐಎಗೆ  ಗೊತ್ತಿದ್ದವು. ಹಾಲಿವುಡ್ ನಟಿಯೊಬ್ಬಳಿಗೆ ಕಿಂಗ್ ಹುಸೇನ್ ಕರುಣಿಸಿದ ನಾಜಾಯಿಸ್(illegitimate) ಮಗನೊಬ್ಬ ಮುಂದೊಂದು ದಿನ ಹುಚ್ಚು ನೆತ್ತಿಗೇರಿ ಅಮ್ಮನನ್ನೇ ಕೊಂದುಬಿಟ್ಟ. ಅದೆಲ್ಲ ದೊಡ್ಡ ಕಥೆ. ಮುಂದೊಮ್ಮೆ ಬರೆಯೋಣ.

ಎಲ್ಲ ತರಹದ ರಾಜೋಪಚಾರದಿಂದ ಸಿಕ್ಕಾಪಟ್ಟೆ excite ಆದ ಶೇಖ್ ಯಾಸೀನ್ ಜೋರ್ಡಾನಿನಲ್ಲಿ ಕುಳಿತೇ ಸಿಕ್ಕಾಪಟ್ಟೆ ಪ್ರವಚನ ಕೊಟ್ಟ. ಅವನ ಪ್ರವಚನದ ಕ್ಯಾಸೆಟ್ಟುಗಳು ಅರಬ್ ದೇಶಗಳ ತುಂಬೆಲ್ಲ ಸಿಕ್ಕಾಪಟ್ಟೆ ಬಿಕರಿಯಾದವು. ಹಮಾಸ್ ಕೊಪ್ಪರಿಗೆ ತುಂಬಿತು. ಗಾಜಾ ಪಟ್ಟಿಯ ಅರಬ್ ಜನ ಇಸ್ರೇಲಿನ ವಿರುದ್ಧದ ದ್ವೇಷದ ಅಫೀಮಿನ ಅಮಲಲ್ಲಿ ಮತ್ತಿಷ್ಟು ಸುಯಿಸೈಡ್ ಬಾಂಬಿಂಗ್ ಮಾಡತೊಡಗಿದರು. ಶೇಖ್ ಯಾಸೀನ್ ಎಂಬ ಪೀಡೆ ಪಕ್ಕದ ದೇಶದಲ್ಲಿ ಕುಳಿತು ಇಸ್ರೇಲಿಗೆ ಮತ್ತೆ ಕಾಟ ಕೊಡತೊಡಗಿತು.

ಮುಂದೆ ಸ್ವಲ್ಪ ವರ್ಷಗಳ ನಂತರ ಜೋರ್ಡನ್ ಮತ್ತು ಹಮಾಸ್ ಮಧ್ಯೆ ಸಂಬಂಧ ಹಳಸಿತು. ಕಿಂಗ್ ಹುಸೇನ್ ಸಾಹೇಬರ ಖಾಲಿ ಬುರುಡೆಗೆ ಅಮೇರಿಕಾ ಬಿಸಿನೀರು ಕಾಯಿಸಿತು. 'ನಿಮ್ಮ ದೇಶದಿಂದ ಹಮಾಸ್ ಉಗ್ರರನ್ನು ಮುಲಾಜಿಲ್ಲದೆ ಹೊರಗಟ್ಟಿ,' ಎನ್ನುವ ಕಟ್ಟಾಜ್ಞೆ ಮಾಡಿತು. ಅಮೇರಿಕಾದ ಮಾತು ಕೇಳದಿದ್ದರೆ ಬುಡಕ್ಕೇ ಬಂದೀತು ಎಂದು ಥಂಡಾ ಹೊಡೆದ ಹುಸೇನ್ ಸಾಹೇಬರು ಹೇಳಿದಷ್ಟು ಮಾಡಿ ಸಲ್ಯೂಟ್ ಹೊಡೆದರು.  ಜೋರ್ಡಾನ್ ಬಿಟ್ಟ ಹಮಾಸ್ ಉಗ್ರರು ಮೊದಲು ಈಜಿಪ್ಟ್, ನಂತರ ಸಿರಿಯಾ, ನಂತರ ಕತಾರ್ ದೇಶಕ್ಕೆ ಹೋಗಿ ಕುಳಿತರು. ಎಲ್ಲಿ ಕುಳಿತರೇನು? ಇಸ್ರೇಲ್ ಪಕ್ಕದ ಪ್ಯಾಲೆಸ್ಟೈನ್ ಗಾಜಾ ಪಟ್ಟಿಯಲ್ಲಿ ತಮ್ಮ ಶಿಷ್ಯರ ಮೂಲಕ ಭಯೋತ್ಪಾದನೆಯನ್ನು ಮುಂದುವರೆಸಿದ್ದರು.

ಗಾಜಾ ಪಟ್ಟಿ....ಮಾತೃಭೂಮಿ. ಸ್ವರ್ಗಾದಪೀ ಗರೀಯಸೀ... ಸ್ವರ್ಗಕ್ಕಿಂತ ಹೆಚ್ಚು. ದೂರ ಕುಳಿತ ಶೇಖ್ ಯಾಸೀನ್ ಸಾಬ್ರಿಗೂ ಹಾಗೇ ಅನ್ನಿಸಿರಲೂ ಸಾಕು. ಗಾಜಾ ಪಟ್ಟಿಗೆ ಹಿಂತಿರುಗಬೇಕು ಎಂದು ಹಪಹಪಿಸತೊಡಗಿದರು. ಮೊದಲಿನ ಗೆಳತಿ, ಆಕೆಯ ಸೇವೆ ನೆನಪಾಗಿರಲೂ ಸಾಕು. ಯಾರಿಗೆ ಗೊತ್ತು? ಒಟ್ಟಿನಲ್ಲಿ ೨೦೦೧-೨೦೦೨ ರ ಆಸುಪಾಸಿನಲ್ಲಿ ಮತ್ತೆ ಗಾಜಾ ಪಟ್ಟಿಯಲ್ಲಿ ಪ್ರತ್ಯಕ್ಷನಾದ ಶೇಖ್ ಯಾಸೀನ್. ಮತ್ತದೇ ಚಕ್ರಪೀಠಾಧಿಪತಿ, ಕಾಲಿನಲ್ಲಿ ತೋರಿಸಿದ್ದನ್ನು ಪ್ರಸಾದಂತೆ ಸ್ವೀಕರಿಸಿ ಕೆಲಸ ಮಾಡುವ ಶಿಷ್ಯವೃಂದ, ಮಾತೃಭೂಮಿಯ ಘಮಲು! ದ್ವೇಷದ ಅಮಲು! ಒಟ್ಟಿನಲ್ಲಿ ಹಾಯಾಗಿದ್ದರು ಶೇಖ್ ಯಾಸೀನ್ ಸಾಬ್ರು. ಪ್ರವಚನಗಳ ಮೂಲಕ ಇಸ್ರೇಲ್ ವಿರುದ್ಧ ಬೆಂಕಿಯುಗುಳುವ ಕೆಲಸ ಮಾತ್ರ ನಿರಂತರ.

'ಮತ್ತೆ ಬಂದು ವಕ್ಕರಿಸಿಕೊಂಡಿತೇ ಈ ಪಿಶಾಚಿ!' ಎಂದು ಅಂದುಕೊಂಡರು ಇಸ್ರೇಲಿಗಳು. ಆದರೆ ಆಗ ಮಾತ್ರ ಅಮೇರಿಕಾದಲ್ಲಿ ೯/೧೧ ಅನಾಹುತ ಆಗಿಹೋಗಿತ್ತು. ಅಮೇರಿಕಾ ಅಫ್ಘಾನಿಸ್ತಾನ್ ಮೇಲೆ ಮೊದಲು ನಂತರ ಇರಾಕ್ ಮೇಲೆ ಮುರಿದುಕೊಂಡು ಬಿತ್ತು. ಪಕ್ಕವಾದ್ಯ ನುಡಿಸಿದ್ದು ಇಸ್ರೇಲ್. ಇರಾಕಿನ ನಿರ್ನಾಮ, ಅದರಲ್ಲೂ ಸದ್ದಾಮ್ ಹುಸೇನ್ ಎಂಬ ಬದ್ಧ ವೈರಿಯ ನಿರ್ನಾಮ, ಇಸ್ರೇಲಿನ ಅಂದಿನ ಮುಖ್ಯ ಆದ್ಯತೆಯಾಗಿತ್ತು. ಪಕ್ಕದ ಗಾಜಾ ಪಟ್ಟಿಯಲ್ಲಿ ಶೇಖ್ ಯಾಸೀನ್ ಮತ್ತು ಆತನ ಶಿಷ್ಯರು ಹಾವಳಿ ಮಾಡಿಕೊಂಡಿದ್ದರೂ ಕೊಂಚ ನಿರ್ಲಕ್ಷ್ಯ ಮಾಡಿತ್ತು ಇಸ್ರೇಲ್.

೨೦೦೩-೨೦೦೪ ರಲ್ಲಿ ಹಮಾಸ್ ಹಾವಳಿ ತುಂಬಾ ಜಾಸ್ತಿಯಾಯಿತು. ಡಿಸೆಂಬರ್ ೨೦೦೩ ರಲ್ಲಿ ಸದ್ದಾಮ್ ಹುಸೇನ್ ಕೂಡ ಸಿಕ್ಕಿಬಿದ್ದ. ಅಲ್ಲಿಗೆ ಇಸ್ರೇಲಿನ ಆ ಸಮಸ್ಯೆ ಮುಗಿಯಿತು. ಆಗ ಹಮಾಸ್ ಕಡೆ ಗಮನ ತಿರುಗಿಸಿತು ನೋಡಿ ಇಸ್ರೇಲ್! ಪರಶಿವ ತನ್ನ ಮೂರನೇ ಕಣ್ಣು ಬಿಟ್ಟ! ಎದುರಿಗೆ ಬಂದ ಕಾಮಣ್ಣಗಳೆಲ್ಲ ಭಸ್ಮವಾಗಿಹೋದರು! ಹಮಾಸ್ ಮುಖಂಡರ ವಿರುದ್ಧ ಮರಣಶಾಸನ wholesale ಆಗಿ ಜಾರಿಯಾಯಿತು. ಇಸ್ರೇಲ್ ರಕ್ಷಣಾವ್ಯವಸ್ಥೆಗೆ ಒಂದೇ ವಾಕ್ಯದ ಖಡಕ್ ಆಜ್ಞೆ - wipe out the entire leadership of Hamas in the Gaza strip! ಹಮಾಸ್ ಸಂಘಟನೆಯ ನಾಯಕವೃಂದವನ್ನು 'ತೆಗೆದುಬಿಡಿ' ಎನ್ನುವ blanket authorization!

ಇದಕ್ಕೇ ಕಾದು ಕುಳಿತಿತ್ತು ಇಸ್ರೇಲಿನ ಸೈನ್ಯ. ಮೊದಲು ಹೋದವ ಸಾಲಾ ಶೆಹಾದೆ ಎಂಬ ಕಿರಾತಕ. ಹಮಾಸ್ ಸಂಸ್ಥಾಪಕರಲ್ಲಿ ಒಬ್ಬ. ಗಾಜಾ ಪಟ್ಟಿ ಎಂಬ ಕೊಳೆಗೇರಿಯಲ್ಲಿ ಮೂರಂತಸ್ತಿನ ಭವ್ಯ ಮನೆ ಕಟ್ಟಿಕೊಂಡು, ಎರಡು ಮೂರು ಹೆಂಡತಿ ಮಕ್ಕಳ ಜೊತೆ ಹಾಯಾಗಿದ್ದ. ಆತ ಶೇಖ್ ಯಾಸೀನನ ಬಲಗೈ ಬಂಟ. ವಾರಕ್ಕೊಂದು ಆತ್ಮಹತ್ಯಾ ದಾಳಿ ಮಾಡಿಸಲಿಲ್ಲ ಅಂದರೆ ಅವನಿಗೆ ಉಂಡನ್ನ ಅರಗುತ್ತಿರಲಿಲ್ಲ.

ಇಸ್ರೇಲಿ ವಾಯುಸೇನೆಯ ವಿಮಾನವೊಂದು precision ಬಾಂಬಿಂಗ್ ಮಾಡಿತು ನೋಡಿ. JDAM ಎನ್ನುವ ಮಹಾಶಕ್ತಿಶಾಲಿ ಬಾಂಬೊಂದು ಬಿದ್ದ ಅಬ್ಬರಕ್ಕೆ ಕುಟುಂಬ ಸಮೇತ ಸಾಲಾ ಶೆಹಾದೆ ಪಾತಾಳ ಸೇರಿಕೊಂಡ. ಅಲ್ಲೊಂದು ಮೂರಂತಸ್ತಿನ ಆಲೀಶಾನ್ ಮಹಲಿತ್ತು ಎನ್ನುವುದಕ್ಕೆ ಯಾವುದೇ ಕುರುಹು ಪುರಾವೆ ಉಳಿದಿರಲಿಲ್ಲ. ಕೊಳೆಗೇರಿ ನಡುವೆ ಎಲ್ಲ ಸೇರಿಹೋಗಿತ್ತು. ಸಾಲಾ ಶೆಹಾದೆ ಎನ್ನುವ ಘಟಸರ್ಪದ ಪೂರ್ತಿ ವಂಶ ನಿರ್ನಾಮವಾಗಿತ್ತು. ಹಾವೊಂದನ್ನೇ ಕೊಲ್ಲಬಾರದು. ಹುತ್ತವನ್ನು ನೆಲಸಮ ಮಾಡಿ ಹುತ್ತದಲ್ಲಿರುವ ಮೊಟ್ಟೆ , ಮರಿ ಎಲ್ಲವನ್ನೂ ನಾಶಮಾಡಬೇಕಂತೆ. ಅದನ್ನೇ ಮಾಡಿತ್ತು ಇಸ್ರೇಲ್.

ನಂತರದ ಬಾರಿಯೇ ಶೇಖ್ ಯಾಸೀನನದ್ದು. ಅವನಿಗೆ ಗೊತ್ತಾಗಿಯೇ ಹೋಗಿತ್ತು ತನ್ನ ಆಯುಷ್ಯ ಕೂಡ ಮುಗಿದಿದೆ ಎಂದು. ಆದರೆ ಹುಂಬ. ಅವರೆಲ್ಲರೂ ಹುಂಬರೇ. ಇಲ್ಲವಾದರೆ ಉಗ್ರರಾಗುತ್ತಾರೆಯೇ??

ತನ್ನ ಮೇಲೆಯೂ ಇಸ್ರೇಲ್ ವಿಮಾನದ ಮೂಲಕ ಬಾಂಬ್ ಹಾಕಲಿದೆ ಎಂದು ಅಂದಾಜಿಸಿದ. ತಕ್ಕಮಟ್ಟಿಗಿನ precaution ತೆಗೆದುಕೊಂಡ. ಮನೆ ಪಕ್ಕದ ಮಸೀದಿಗೆ ಹೋಗುವದಿದ್ದರೂ ಎರಡು ಮೂರು ವಾಹನ ಬದಲಾಯಿಸುತ್ತಿದ್ದ. ಹೋಗುವಾಗ ವಾಹನದಲ್ಲಿ ಹೋಗುತ್ತಿದ್ದ. ಬರುವಾಗ ವಾಹನ ಖಾಲಿ ಇರುತ್ತಿತ್ತು. ವಿಕಲಾಂಗನನ್ನು ಕಂಬಳಿಯಲ್ಲಿ ಮುಚ್ಚಿ ಎತ್ತಿಕೊಂಡು ಬಂದು ಮನೆ ಸೇರಿಸುತ್ತಿದ್ದರು ಶಿಷ್ಯರು. ಖಾಲಿ ವಾಹನದ ಮೇಲೆ ಬೇಕಾದರೆ ಇಸ್ರೇಲ್ ಬಾಂಬ್ ಹಾಕಿಕೊಳ್ಳಲಿ ಎನ್ನುವ ಸ್ಕೀಮ್.

ಇಸ್ರೇಲ್ ರಹಸ್ಯವಾಗಿ ಎಲ್ಲವನ್ನೂ ಗಮನಿಸುತ್ತಿತ್ತು. ಶೇಖ್ ಯಾಸೀನನ್ನು ಯಾಮಾರಿಸಲು ಎಂದೇ ತಲೆಮೇಲೆ ನಾಲ್ಕಾರು F-೧೫ ವಿಮಾನಗಳು ಹಾರಾಡಿಕೊಂಡಿರುವಂತೆ ಮಾಡಿತ್ತು. ಅವಕ್ಕೆ ಬೇರೆ ಕೆಲಸವಿಲ್ಲ. ಇಸ್ರೇಲಿನಿಂದ ಗಾಜಾ ಪಟ್ಟಿಗೆ ತಿರುಗಾ ಮುರುಗಾ ಟ್ರಿಪ್ ಹೊಡೆಯುವುದೇ ಕೆಲಸ. ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಬಾಂಬ್ ಹಾಕಬಹುದು.

ಶೇಖ್ ಯಾಸೀನ್ ಮತ್ತು ಸಂಗಡಿಗರು ಗಮನಿಸದ ಸಂಗತಿಯೊಂದಿತ್ತು. ಆಗಾಗ ಗಾಜಾ ಪಟ್ಟಿಯೊಳಗೆ ಪುಸಕ್ಕನೆ ನುಸುಳಿ ವಾಪಸ್ ಹೋಗಿಬಿಡುತ್ತಿದ್ದ ಅಪಾಚೆ ಹೆಲಿಕ್ಯಾಪ್ಟರಗಳು. ಈಕಡೆ ಶೇಖ್ ಯಾಸೀನ್ ತಂಡದ ಗಮನ ಪೂರ್ತಿ ತಲೆ ಮೇಲೆ ಹಾರಾಡುವ ವಿಮಾನಗಳ ಮೇಲಿದ್ದರೆ ಗಡಿಯಾಚೆಯಿಂದಲೇ ಮಾನಿಟರ್ ಮಾಡುತ್ತಿದ್ದ ಅಪಾಚೆ ಹೆಲಿಕ್ಯಾಪ್ಟರಗಳ ಬಗ್ಗೆ ಉಗ್ರರ ಗಮನ ಹೋಗಿರಲಿಲ್ಲ.

ಒಂದು ದಿವಸ ಬೆಳಗಿನ ಜಾವದಲ್ಲಿ ಶೇಖ್ ಯಾಸೀನ್ ಮಸೀದಿಯಲ್ಲಿ ಪ್ರಾರ್ಥನೆ ಮತ್ತು ಪ್ರವಚನ ಮುಗಿಸಿದ. ಆಕಾಶದಲ್ಲಿ ಇಸ್ರೇಲಿ ಯುದ್ಧವಿಮಾನ ಎಂದಿನಂತೆ buzz ಮಾಡಿಕೊಂಡು ಹಾರಿಕೊಂಡಿತ್ತು. ವ್ಯಾನಿನೊಳಗೆ ತಳ್ಳುಗಾಳಿಯ ಖುರ್ಚಿಯೊಂದಿಗೆ ಶೇಖ್ ಸಾಬ್ರನ್ನು ಹತ್ತಿಸಲಾಯಿತು. ಅಷ್ಟೇ ಪಕ್ಕದ ಬಾಗಿಲಿಂದ ಶೇಖ್ ಸಾಬ್ರನ್ನು ಇಳಿಸಿಕೊಂಡು ಕಂಬಳಿಯಲ್ಲಿ ಸುತ್ತಲಾಯಿತು. ವ್ಯಾನ್ ಶೇಖ್ ಸಾಹೇಬರ ಮನೆ ಕಡೆ ಹೊರಟಿತು. ಬಾಂಬ್ ಬಿದ್ದರೆ ವ್ಯಾನ್ ಭಸ್ಮವಾಗಬೇಕು. ಜೊತೆಗೆ ಶೇಖ್ ಯಾಸೀನ್ ಕೂಡ ಹೋದ ಎಂದು ಇಸ್ರೇಲಿಗಳು ಅಂದುಕೊಳ್ಳಬೇಕು. ಆದರೆ ಕಂಬಳಿಯ ಹೊದಿಕೆಯಲ್ಲಿ ಶಿಷ್ಯರ ಭುಜದ ಮೇಲೆ ರಹಸ್ಯವಾಗಿ ಹೋಗುತ್ತಿದ್ದ ಶೇಖ್ ಯಾಸೀನ್ ಮಾತ್ರ ಸುರಕ್ಷಿತವಾಗಿರಬೇಕು. ಹಾಗಂತ ಹಮಾಸ್ ಉಗ್ರರ ಪ್ಲಾನ್. ತಮ್ಮನ್ನು ತಾವು ಬಹಳ ಶಾಣ್ಯಾ ಅಂತ ತಿಳಿದಿರಬೇಕು.

ವ್ಯಾನ್ ಮುಂದೆ ಹೋಯಿತು. ನಸುಗತ್ತಲಲ್ಲಿ ಕಂಬಳಿಯಲ್ಲಿ ಸುತ್ತಿದ್ದ ವಿಕಲಾಂಗ ಶೇಖ್ ಸಾಬನನ್ನು ನಾಲ್ಕಾರು ಜನ ಹಮಾಸ್ ಉಗ್ರರು ಹೊತ್ತು ಚಕಚಕನೆ ಅವನ ಮನೆಯತ್ತ ಸಾಗುತ್ತಿದ್ದರು. ಮನೆ ಮುಟ್ಟಿಕೊಂಡರೆ ಅಷ್ಟರಮಟ್ಟಿಗೆ ಬಚಾವು.

ಗಡಿ ಪಕ್ಕದಲ್ಲಿ ಇದೆಲ್ಲವನ್ನೂ ಗಮನಿಸುತ್ತಿದ್ದ ಅಪಾಚೆ ಹೆಲಿಕ್ಯಾಪ್ಟರ್ ಬೇಟೆಗೆ ತಯಾರಾದವು. ಗಾಜಾ ಪಟ್ಟಿಯೊಳಗೆ ಬರುವ ಜರೂರತ್ತೇ ಬರಲಿಲ್ಲ. ಕೋಳಿಯಂತೆ ನೆಲದಿಂದ ಕೆಲವೇ ಅಡಿ ಮೇಲೆ ಹಾರಿದವು. ಅಷ್ಟೇ elevation ಬೇಕಾಗಿದ್ದು. ಶೇಖ್ ಸಾಬ್ರನ್ನು ಕಂಬಳಿಯಲ್ಲಿ ಸುತ್ತಿ ಹೊತ್ತುಕೊಂಡು ಓಡುತ್ತಿದ್ದ ಹಮಾಸ್ ಉಗ್ರರನ್ನು ತಮ್ಮ ತೋಪಿನ ಗುರಿಯ ಸ್ಕೋಪಿನಲ್ಲಿ ತೆಗೆದುಕೊಂಡು ಬಟನ್ ಒತ್ತಿದ್ದೆ ಕೊನೆ. ನಾಲ್ಕಾರು hellfire ಎಂಬ ನರಕಸದೃಶ ಮಿಸೈಲುಗಳು ಕ್ಷಣಾರ್ಧದಲ್ಲಿ ಹಮಾಸ್ ಉಗ್ರರನ್ನು ಭಸ್ಮ ಮಾಡಿದ್ದವು. ಸದಾ ಬೆಂಕಿಯುಗುಳುವ ಪ್ರವಚನ ಮಾಡಿಕೊಂಡಿದ್ದ ವಿಕಲಾಂಗ ಉಗ್ರ ಶೇಕ್ ಯಾಸೀನ್ ಭಸ್ಮವಾಗಿದ್ದ. ಹೀಗೆ ಅವನ ಕಥೆ ಮುಗಿದಿತ್ತು.

ನಂತರ ಹಮಾಸ್ ಅಧ್ಯಕ್ಷ ಸ್ಥಾನಕ್ಕೆ ಬಂದವ ಡಾ. ರಂಟೀಸಿ. ವೃತ್ತಿಯಿಂದ ದೊಡ್ಡ ಡಾಕ್ಟರ್. ವಿದೇಶದಲ್ಲಿದ್ದು ಓದಿದ್ದ. ಸಾಕಷ್ಟು ರೊಕ್ಕ ಮಾಡಿಕೊಂಡು ಬಂದು ಗಾಜಾ ಪಟ್ಟಿಯಲ್ಲಿ ದೊಡ್ಡ ಉಗ್ರನಾಗಿದ್ದ. ಶೇಕ್ ಯಾಸೀನ್ ಸತ್ತ ನಂತರ ತೆರವಾದ ಸ್ಥಾನಕ್ಕೆ ಬಂದು ಕೂತ. ಸಾಯುತ್ತೇನೆ ಅಂತ ಗೊತ್ತಿತ್ತು. ಆದರೆ ಅಷ್ಟು ಬೇಗ ಸಾಯುತ್ತೇನೆ ಅಂತ ಗೊತ್ತಿರಲಿಲ್ಲ. ಶೇಖ್ ಯಾಸೀನ್ ಹತ್ಯೆಯ ಸೂತಕ ಇನ್ನೂ ಮುಗಿದಿರಲಿಲ್ಲ. ರಂಟೀಸಿ ಕೂಡ ಬೇಗ ಹೋಗಲಿ ಎಂದುಕೊಂಡ ಇಸ್ರೇಲ್ ಮತ್ತೆ ಹೆಲಿಕ್ಯಾಪ್ಟರ್ ದಾಳಿ ಮಾಡಿತು. ಈ ಸಲ ಗಾಜಾ ಪಟ್ಟಿಯೊಳಗೇ ನುಗ್ಗಿಬಂದ ಅಪಾಚೆ ಹೆಲಿಕಾಪ್ಟರುಗಳು ಗಲ್ಲಿ ಗಲ್ಲಿಗಳಲ್ಲಿ ಡಾ. ರಂಟೀಸಿಯ ಕಾರವಾನನ್ನು ಅಟ್ಟಿಸಿಕೊಂಡು ಹೋದವು. ಎಷ್ಟಂತ ಓಡಿಯಾರು ಉಗ್ರರು? ರಂಟೀಸಿ ಮತ್ತು ಅವನ ಜೊತೆಗಾರರು ಇದ್ದ ಕಾರವಾನ್ ಸ್ಕೋಪಿನಲ್ಲಿ ಬಂದಿದ್ದೆ ಕೊನೆ. ಮುಂದೆ ಮತ್ತೆ ಹೆಸರಿಗೆ ತಕ್ಕಂತೆ ನರಕದರ್ಶನ ಮಾಡಿಸುವ hellfire ಮಿಸೈಲ್ ಮಾತಾಡಿದವು. ನಾಲ್ಕಾರು ವಾಹನಗಳಿದ್ದ ಡಾ. ರಂಟೀಸಿಯ ಪೂರಾ ಕ್ಯಾರವಾನ್ ಭಸ್ಮ! ಫುಲ್ ರಾಖ್!

ಹೀಗೆ ಹಮಾಸ್ ಸಂಘಟನೆಯ ಗಾಜಾಪಟ್ಟಿಯಲ್ಲಿದ್ದ ಉಗ್ರರ ಹಿರಿತಲೆಗಳೆಲ್ಲ ೨೦೦೪ ಇಸ್ವಿಯ ಮಧ್ಯಭಾಗದ ಒಂದೆರೆಡು ತಿಂಗಳಲ್ಲಿ ಪೂರ್ತಿಯಾಗಿ ನಿರ್ನಾಮವಾಗಿ ಹೋದರು. Entire local leadership was wiped out!

ಪರಿಸ್ಥಿತಿ ತಕ್ಕಮಟ್ಟಿಗೆ ಹತೋಟಿಗೆ ಬಂತು. ಆತ್ಮಹತ್ಯಾ ದಾಳಿಗಳು ಅದೆಷ್ಟೋ ಕಮ್ಮಿಯಾದವು. ಜೋರ್ಡನ್ ದೇಶದಲ್ಲಿ ಮೊಸ್ಸಾದ್ ಹತ್ಯಾ ಪ್ರಯತ್ನ ವಿಫಲವಾಗಿ ಪವಾಡಸದೃಶವೆಂಬಂತೆ ಬಚಾವಾಗಿದ್ದ ಖಾಲೆದ್ ಮಿಶಾಲನಿಗೆ ಹಮಾಸ್ ಮುಖ್ಯಸ್ಥನ ಪಟ್ಟ ಕಟ್ಟಲಾಯಿತು. ಕತಾರ್ ದೇಶದಲ್ಲಿದ್ದ ಮೇಷಾಲ್ ಭದ್ರತೆ ಹೆಚ್ಚಿಸಿಕೊಂಡ. ಇಸ್ರೇಲಿಗಳು ಅಲ್ಲೂ ಬಂದು ಗೇಮ್ ಬಾರಿಸಿಯಾರು ಎನ್ನುವ ಭಯ ಅವನಿಗೆ.

ಮುಖ್ಯ ಮಾಹಿತಿ ಆಧಾರ: Rise and Kill First: The Secret History of Israel's Targeted Assassinations by Ronen Bergman

https://images-na.ssl-images-amazon.com/images/I/51JR8YeLk7L._SX327_BO1,204,203,200_.jpg


೮೦೦ ಪುಟಗಳ ಸಮೃದ್ಧ ಓದು. ಶುರುವಾತಿನಿಂದ ಇಸ್ರೇಲ್ ಮಾಡಿದ ಎಲ್ಲ ರಹಸ್ಯ ಕಾರ್ಯಾಚರಣೆಗಳ ಬಗ್ಗೆ ಸಮಗ್ರ ಮಾಹಿತಿ ಒಂದೇ ಪುಸ್ತಕದಲ್ಲಿ ಬೇಕೆಂದೆರೆ ಈ ಪುಸ್ತಕ ಓದಿ. Good starting point. Of course, there are many other books describing individual covert operation in greater detail.

Sunday, October 14, 2018

ಒಂದು ಡೆಬಿಟ್ ಕಾರ್ಡ್ ಕಥೆ

ಭಾರತ ದೇಶ ತುಂಬಾ ವೇಗವಾಗಿ ಮುಂದುವರೆಯುತ್ತಿದೆ. ಇಪ್ಪತ್ತು ವರ್ಷಕ್ಕೂ ಹಿಂದೆ ದೇಶ ಬಿಟ್ಟು ಬಂದಂತಹ ನಮ್ಮಂತಹ ಬುಡ್ಡಾ NRI  ಮಂದಿ ಅಲ್ಲಿನ ವೇಗಕ್ಕೆ, ಬದಲಾವಣೆಗಳಿಗೆ ಕರೆಂಟ್ ಹೊಡೆದ ಕಬ್ಬೆಕ್ಕಿನಂತೆ ಕಂಗಾಲಾಗಿಬಿಡುತ್ತೇವೆ. ಅಲ್ಲೆಲ್ಲ ಈಗ ತುಂಬಾ ಫಾಸ್ಟ್ ಲೈಫ್. ಕೈಯಲ್ಲೊಂದು ಸ್ಮಾರ್ಟ್ ಫೋನ್, ಕಿಸೆಯಲ್ಲಿ ಡೆಬಿಟ್ ಕಾರ್ಡ್, online banking ಇರಲಿಲ್ಲ ಅಂದರೆ ಭಾರತದಲ್ಲಿ ಇಳಿದಾಕ್ಷಣ ನೀವು ಥೇಟ್ ಕರೆಂಟ್ ಹೊಡೆದ ಕಬ್ಬೇಕ್ಕೆ. ಖರೇ ಮಂಗ್ಯಾ.

ಡೆಬಿಟ್ ಕಾರ್ಡ್ ಮತ್ತು online banking ಅವಶ್ಯಕತೆ ಎರಡು ವರ್ಷಗಳ ಹಿಂದೆಯೇ ಕಂಡುಬಂದಿತ್ತು. ನಮ್ಮ ಅನೇಕ ಸ್ಥಳೀಯ, ಅಂದರೆ ಅಮೇರಿಕಾ ಮೂಲದ, ಕ್ರೆಡಿಟ್ ಕಾರ್ಡುಗಳು ಭಾರತದ ವ್ಯವಹಾರಗಳಿಗೆ ಪಾಸ್ ಆಗುತ್ತಲೇ ಇರಲಿಲ್ಲ. ಪಾಸಾದರೂ ಎಲ್ಲಿಯಾದರೋ fraud ವ್ಯವಹಾರ ಇರಬಹುದೇನೋ ಅಂತ ಇಲ್ಲಿನ ಬ್ಯಾಂಕುಗಳು ಕೊಕ್ಕೆ ಹಾಕಿಟ್ಟಿರುತ್ತಿದ್ದವು. ಇಲ್ಲಿನ ಬ್ಯಾಂಕುಗಳಿಗೆ ಫೋನ್ ಮಾಡಿ, 'ಸ್ವಾಮೀ, ಭಾರತದಲ್ಲಿ ಕೊಂಚ ಖರ್ಚಿದೆ. ನೀವು ಹಾಕಿಟ್ಟಿರುವ ಕೊಕ್ಕೆ ಕೊಂಚ ಸರಿಸಿ, ವ್ಯವಹಾರಕ್ಕೆ ಅನುವು ಮಾಡಿಕೊಟ್ಟರೆ ಆಭಾರಿ,' ಅಂದು ಕೊಕ್ಕೆ ತೆಗೆಸಿಕೊಳ್ಳಬೇಕು. ಇವರು ಇಲ್ಲಿ ಕೊಕ್ಕೆ ತೆಗಿಯುವ ತನಕ ಅಲ್ಲಿರುವ ಡೀಲ್ ಮುಗಿದಿರುತ್ತವೆ. ವಿಮಾನ ದರಗಳು ಏರಿರುತ್ತವೆ, ಬೇಕಾದ ಪುಸ್ತಕಗಳ ಸ್ಟಾಕ್ ಮುಗಿದಿರುತ್ತದೆ. ಇಷ್ಟಾದ ಮೇಲೂ ವಿದೇಶಿ ವಿನಿಮಯದ ದರ ಬ್ಯಾಂಕಿಗೆ ಅನುಕೂಲವಾಗಿರುವಂತೆ ನೋಡಿಕೊಂಡು ನಮಗೆ ಟೊಪ್ಪಿಗೆ ಹಾಕಿರುತ್ತಾರೆ. ಮೇಲಿಂದ ವಿದೇಶಿ ವ್ಯವಹಾರ ಎಂದು ಹೆಚ್ಚಿನ ಶುಲ್ಕ ಬೇರೆ. ಅದು ಈಗ ಎಷ್ಟೋ ಕಮ್ಮಿಯಾಗಿದೆ. ಎಷ್ಟೋ ವರ್ಷಗಳ ಕಾಲ ಇಲ್ಲಿಂದ ರೈಲ್ವೆ ಟಿಕೆಟ್ ಬುಕ್ ಮಾಡಲು ಸಾಧ್ಯವೇ ಆಗುತ್ತಿರಲಿಲ್ಲ. ಭಾರತದ ಸಂಬಂಧಿಗಳನ್ನು ಹಿಡಿದು, ಅವರಿಗೆ ತ್ರಾಸು ಕೊಟ್ಟು ಬುಕ್ ಮಾಡಿಸಿಕೊಳ್ಳಬೇಕಾಗುತ್ತಿತ್ತು.

ಇದೆಲ್ಲಾ ಅನುಭವಿಸಿದ ಮೇಲೆ ಅನ್ನಿಸಿದ್ದು ನಾವೂ ಒಂದು ಭಾರತೀಯ ಡೆಬಿಟ್ ಕಾರ್ಡ್ ಮತ್ತು online banking ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು. ಸ್ಥಳೀಯ ಖರ್ಚುಗಳಿಗೆ ಅನುಕೂಲವಾಗುತ್ತದೆ ಎನ್ನುವ ವಿಚಾರ.

ಹಿಂದಿನ ವರ್ಷ ಡೆಬಿಟ್ ಕಾರ್ಡ್ ಮಾಡಿಸಿಕೊಂಡೆ. ನಾನು ಜೀವನದಲ್ಲಿ ಕಂಡ ಮೊತ್ತ ಮೊದಲ ಬ್ಯಾಂಕ್ ಅಂದರೆ ಧಾರವಾಡದ ಮಾಳಮಡ್ಡಿಯ ಕೆನರಾ ಬ್ಯಾಂಕ್. ಅಲ್ಲಿಯೇ ಹೋದೆ. ಜೊತೆಗೆ ತಂದೆಯವರೂ ಇದ್ದರು. ಅವರು ಆ ಬ್ಯಾಂಕಿನ ಶಾಖೆಯ ಅತಿ ಹಿರಿಯ ಗ್ರಾಹಕ ಇರಬಹುದೇನೋ. ಅವರಿಗೆ ಈಗ ೮೪ ವರ್ಷ. ಸರಿ ಸುಮಾರು ಅರವತ್ನಾಲ್ಕು ವರ್ಷಗಳಿಂದ ಧಾರವಾಡದಲ್ಲಿ ಇದ್ದಾರೆ. ಮಾಳಮಡ್ಡಿಯ ಕೆನರಾ ಬ್ಯಾಂಕ್ ತೆರದಾಗಿನಿಂದ ಅದರ ಖಾಯಂ ಗ್ರಾಹಕರು. ಮಾಳಮಡ್ಡಿಯ ಕೆನರಾ ಬ್ಯಾಂಕ್ ಮಂದಿ ಸಹ ಅವರನ್ನೂ ಅಷ್ಟೇ ಒಳ್ಳೆ ರೀತಿಯಲ್ಲಿ ನೋಡಿಕೊಂಡು preferred customer ಅನ್ನುವ ಹಾಗೆ ನಡೆಸಿಕೊಂಡಿದ್ದಾರೆ. ಹಾಗಾಗಿ ಮಾಳಮಡ್ಡಿ ಕೆನರಾ ಬ್ಯಾಂಕ್ ಜೊತೆ ಅದೇನೋ ಅವಿನಾಭಾವ ಸಂಬಂಧ.

ಹೋದೆ. ಮ್ಯಾನೇಜರ್ ಮೇಡಂ ಸೀದಾ ಚೇಂಬರಿನಲ್ಲೇ ಕೂಡಿಸಿಕೊಂಡು, ತಾವೇ ಎಲ್ಲ ಅರ್ಜಿ ತುಂಬಿ, ಸಹಿ ತೆಗೆದುಕೊಂಡು, ಟೇಬಲ್ ಮೇಲಿರುವ ಬೆಲ್ ಕಿರ್ರನೆ ಬಾರಿಸಿ, ಚಪರಾಸಿಯನ್ನು ಕರೆದು, 'ಡೆಬಿಟ್ ಕಾರ್ಡ್. ಹೆಗಡೆ ಸರ್ ಅಕೌಂಟಿಗೆ. ಅರ್ಜೆಂಟ್ ಮಾಡಲಿಕ್ಕೆ ಹೇಳು,' ಎಂದು ಹೇಳಿ, 'ಹೇಳಿ ಸರ್. ಮತ್ತೇನು ಮಾಡಿಕೊಡೋಣ?' ಅಂದಾಗ ತಂದೆಯವರು ನನ್ನ ಕಡೆ ನೋಡಿ, 'ಹೆಂಗೆ? ನೋಡು ಹೇಗಿದೆ ನಮಗೆ ಸಿಗುವ customer service??' ಎಂದು ಹೆಮ್ಮೆಯಿಂದ ಕೇಳಿದಂತಾಯಿತು. 'ಶಭಾಷ್!' ಅಂದುಕೊಂಡೆ. ನಾವು ಮ್ಯಾನೇಜರ್ ರೂಮಿನ ತಣ್ಣನೆ AC ಕೋಣೆಯಲ್ಲಿ ಕುಳಿತು ಮ್ಯಾನೇಜರ್ ಜೊತೆ ಮಾತಾಡುತ್ತ ಕುಳಿತಾಗ ನಮ್ಮ ಡೆಬಿಟ್ ಕಾರ್ಡ್ ತಯಾರಾಗುತ್ತಿತ್ತು. ಉಳಿದ ಎಷ್ಟೋ ಗ್ರಾಹಕರು ವಿವಿಧ ಸೇವೆಗಳಿಗಾಗಿ ಅತ್ತಿಂದಿತ್ತ ಓಡಾಡುತ್ತ, ಬೈಯುತ್ತ, ಬೈಸಿಕೊಳ್ಳುತ್ತ, ಬೆವರು ಸುರಿಸುತ್ತ ಹೈರಾಣಾಗುತ್ತಿದ್ದರು. ನಮ್ಮ ನಸೀಬ್ ಒಳ್ಳೆದಿತ್ತು.

ಡೆಬಿಟ್ ಕಾರ್ಡ್ ಬಂತು. online banking ಸಹ activate ಮಾಡಿದ್ದೇವೆ. ಮನೆಗೆ ಹೋಗಿ ಸೆಟಪ್ ಮಾಡಿಕೊಳ್ಳಿ ಅಂದರು. ಧನ್ಯವಾದ ಅರ್ಪಿಸಿ ಬಂದೆವು.

ರೈಲ್ವೆ ಸ್ಟೇಷನ್ ಮುಂದಿರುವ ಏಟಿಎಂ ನಲ್ಲಿ ರೊಕ್ಕ ತೆಗೆದು ಡೆಬಿಟ್ ಕಾರ್ಡಿನ ಶುಭಾರಂಭ ಮಾಡಿಯಾಯಿತು. ಆನ್ಲೈನ್ ಬ್ಯಾಂಕಿಂಗ್ ಕೂಡ ಕೆಲಸ ಮಾಡಿತು. ಆದರೆ transaction enable ಆಗಿರಲಿಲ್ಲ. ಎಷ್ಟು ರೊಕ್ಕ ಇದೆ ಎಂದು ತೋರಿಸುತ್ತಿತ್ತೇ ವಿನಃ ರೊಕ್ಕವನ್ನು transfer ಮಾಡಲಿಕ್ಕೆ ಆಗುತಿರಲಿಲ್ಲ. ಅರ್ಧಂಬರ್ಧ ಮಾಡಿದ್ದರು ಅಂತ ಕಾಣುತ್ತದೆ. ನಮ್ಮ ಧಾರವಾಡ ಗೋಕರ್ಣಕ್ಕೆ ಜಾಸ್ತಿ ದೂರವಿಲ್ಲ ನೋಡಿ. ಹಾಗಾಗಿ ಹೆಚ್ಚಿನ ಕೆಲಸಗಳೆಲ್ಲ ಗೋಕರ್ಣ ಹಜಾಮತಿ ತರಹದ ಕಾಮಗಾರಿಗಳೇ. ಮೊದಲನೇ ಸಲವೇ ಎಲ್ಲವೂ ಸುಸೂತ್ರವಾಗಿ ಕೆಲಸ ಮಾಡುವದು ಬಹಳ ಕಮ್ಮಿ.

ನಂತರ ಎಲ್ಲೂ ಡೆಬಿಟ್ ಕಾರ್ಡ್ ಉಪಯೋಗಿಸಲಿಲ್ಲ. ವಾಪಸ್ ಬಂದೆ. ಬಂದು ಎಷ್ಟೋ ತಿಂಗಳುಗಳ ಬಳಿಕ ಮತ್ತೆ ಭಾರತದ ಪ್ರವಾಸದ ತಯಾರಿ ಶುರುವಾಯಿತು. ಡೆಬಿಟ್ ಕಾರ್ಡ್ ಉಪಯೋಗಿಸೋಣ ಅಂತ ವಿಚಾರ ಮಾಡಿದೆ. ಆನ್ಲೈನ್ ಬ್ಯಾಂಕಿಂಗ್ ಅಂತೂ ವರ್ಕ್ ಮಾಡುತ್ತಿರಲಿಲ್ಲ. ಮತ್ತೆ ಬ್ಯಾಂಕಿಗೆ ಹೋಗಿ ಸರಿ ಮಾಡಿಸಿಕೊಂಡಿರಲಿಲ್ಲ. ಹೇಗೂ ಡೆಬಿಟ್ ಕಾರ್ಡ್ ಇದೆಯಲ್ಲ. ಸಾಕು. ಅದನ್ನೇ ಉಪಯೋಗಿಸಿಕೊಂಡಿರೋಣ ಅಂತ ಬಿಟ್ಟಿದ್ದೆ.

online shopping ಮಾಡುವದಿತ್ತು. ಡೆಬಿಟ್ ಕಾರ್ಡ್ ವಿವರ ತುಂಬಿ online ವ್ಯವಹಾರ ಮಾಡಿದೆ. OTP ಹಾಕಿ ಎಂದಿತು. OTP !!?? ಏನೂ?? one time password. ನೋಡಿದರೆ OTP ತಂದೆಯವರ ಮೊಬೈಲಿಗೆ ಹೋಗಿತ್ತು. ಅವರೇ ಫೋನ್ ಮಾಡುತ್ತಿದ್ದರೇನೋ. ನನಗೆ ಗಡಿಬಿಡಿ. ಫೋನ್ ಮಾಡಿ, 'OTP ಹೇಳ್ರಿ. ಲಗೂ ಹೇಳ್ರಿ!' ಎಂದು ಗಡಿಬಿಡಿ ಮಾಡಿದೆ. ನಾನೆಷ್ಟೇ ಆತುರಗೇಡಿ ತರಹ ವರ್ತಿಸಿದರೂ ಅವರು ತಣ್ಣಗೇ OTP ಹೇಳಿದರು. ಹಾಕಿದೆ. ಅಬ್ಬಾ! ವರ್ಕ್ ಆಯಿತು.

ಇದೊಳ್ಳೆ ಕಿರಿಕಿರಿ ಆಯಿತಲ್ಲ ಮಾರಾಯರೆ. ನಾನು ಅಮೇರಿಕಾದಲ್ಲಿ ಕುಳಿತು ಡೆಬಿಟ್ ಕಾರ್ಡ್ ಉಪಯೋಗಿಸಿದರೆ OTP ಭಾರತದಲ್ಲಿರುವ ತಂದೆಯವರ ಮೊಬೈಲಿಗೆ ಹೋಗುತ್ತದೆ. ಅದು ಸಹಜವಿತ್ತು ಬಿಡಿ. ಅದು ಜಂಟಿ ಖಾತೆ. ಅವರ ಖಾತೆಗೆ ನಾನು ತಗಲಾಕಿಕೊಂಡಿದ್ದೆ. ಹಾಗಾಗಿ ಮೊಬೈಲ್ ವಿವರ ಎಲ್ಲ ಅವರದ್ದೇ ಇತ್ತು.

'ರೀ, ಪಿತಾಜಿ, ಆ ಮಾಳಮಡ್ಡಿ ಬ್ಯಾಂಕಿಗೆ ಹೋಗಿ ಒಟಿಪಿ ನನ್ನ USA ನಂಬರಿಗೆ ಬರುವ ಹಾಗೆ ಮಾಡಿಸಿಕೊಂಡು ಬನ್ನಿ,' ಎಂದು ಒಂದು ರಿಕ್ವೆಸ್ಟ್ ಇಟ್ಟೆ. ರಿಕ್ವೆಸ್ಟ್ ಕಮ್ಮಿ ಆಜ್ಞೆ ಜಾಸ್ತಿ ಎನ್ನಿ.

ಮುಂದಿನ ಸಲ ಬ್ಯಾಂಕಿಗೆ ಹೋದಾಗ ಮ್ಯಾನೇಜರ್ ಹತ್ತಿರ ವಿನಂತಿ ಮಾಡಿದ್ದಾರೆ. ನನ್ನ USA ನಂಬರಿಗೆ OTP ಬರುವ ಹಾಗೆ ಮಾಡಿಕೊಡಲು ಕೇಳಿದ್ದಾರೆ.

ಅದಕ್ಕೊಂದು ತೊಡಕು. ಅದೇನು ಅಂದರೆ  ಅದು ಡೊಮೆಸ್ಟಿಕ್ ಖಾತೆ. ಭಾರತೀಯ ಪೌರರಿಗೆ ಮಾತ್ರ. ಹಾಗಾಗಿ ಕೇವಲ ಭಾರತದ ನಂಬರುಗಳಿಗೆ ಮಾತ್ರ OTP ಕಳಿಸಬಹುದಂತೆ. NRI ಖಾತೆ ಮಾಡಿಸಿಕೊಂಡರೆ ಮಾತ್ರ ಇಂಟರ್ನ್ಯಾಷನಲ್ ನಂಬರುಗಳಿಗೆ OTP ಕಳಿಸಬಹುದಂತೆ. ಭಾರಿ ಲಾಜಿಕ್. ಆದರೆ ಬರೋಬ್ಬರಿ ಲಾಜಿಕ್.

NRI ಗಳು ಭಾರತೀಯ ಪೌರತ್ವ ಹೊಂದಿರುವ ಜನರೊಂದಿಗೆ ಜಂಟಿಯಾಗಿ ಡೊಮೆಸ್ಟಿಕ್ ಖಾತೆ ಮಾಡಿಕೊಳ್ಳಬಹುದು. ಹಾಗಾಗಿಯೇ ನನಗೆ ತಂದೆಯವರೊಂದಿಗೆ ಜಂಟಿ ಖಾತೆ ಕೊಟ್ಟಿದ್ದು ಮತ್ತು ಡೆಬಿಟ್ ಕಾರ್ಡ್ ಕೊಟ್ಟಿದ್ದು. ಆದರೆ OTP ಮಾತ್ರ ನನ್ನ ನಂಬರಿಗೆ ಕಳಿಸಲಾಗುವದಿಲ್ಲ.

ವಿವರವಂತೂ ತಿಳಿಯಿತು. ಪರಿಹಾರ ಸಿಗಲಿಲ್ಲ.

ಮುಂದಿನ ಎಲ್ಲ ವ್ಯವಹಾರಗಳನ್ನು ಅದೇ ಮಾದರಿಯಲ್ಲಿ ಮಾಡಿದೆ. ಆ ಪ್ರವಾಸದ ಲೋಕಲ್ ವಿಮಾನಯಾನ, ನಾನು ಧಾರವಾಡ ತಲುಪುವ ಸಮಯಕ್ಕೆ ಸರಿಯಾಗಿ ಬಂದು ಬಿದ್ದಿರಬೇಕಾದ ಡಜನ್ ಪುಸ್ತಕಗಳು, ಪ್ಲೇನ್ ಹಾರದಿದ್ದರೆ ಬ್ಯಾಕಪ್ ಅಂತ ಟ್ರೈನ್ ಟಿಕೆಟ್ ಎಲ್ಲವನ್ನೂ ಡೆಬಿಟ್ ಕಾರ್ಡ್ ಉಪಯೋಗಿಸಿಯೇ ಬುಕ್ ಮಾಡಿದೆ. ಇಲ್ಲಿಂದ ಕಂಪ್ಯೂಟರ್ನಲ್ಲಿ ಹಾಕುವದು. ಭಾರತಕ್ಕೆ ಫೋನ್ ಮಾಡಿ, 'OTP ಬಂದಿರಬೇಕು ನೋಡಿ. ಬೇಗ ಹೇಳಿ,' ಎಂದು OTP ಪಡೆದು ಕೆಲಸ ಮುಗಿಸಿಕೊಂಡಿದ್ದು. ಕೊಂಕಣ ಸುತ್ತಿ ಮೈಲಾರಕ್ಕೆ ಹೋದ ಮಾದರಿಯಾದರೂ ಕೆಲಸವಾಯಿತು.

ಇಷ್ಟಕ್ಕೇ ಬ್ಯಾಂಕಿಂಗ್ ಕಥೆ ಮುಗಿಯಲಿಲ್ಲ. ಮುಂದೊಂದು ದಿವಸ ನನ್ನ USA ನಂಬರಿಗೇ  OTP ಬರುವ ಹಾಗೆ ಮಾಡಿಕೊಂಡೆ. ಅದೊಂದು ಮಹಾ ಸಂಗ್ರಾಮವೇ ಆಯಿತೆನ್ನಿ. ದೊಡ್ಡ comedy of errors. ಅದರ ಬಗ್ಗೆ ಮತ್ತೊಮ್ಮೆ ಬರೆಯೋಣ.

Tuesday, July 17, 2018

ಉಳಿದವರು ಕಂಡಂತೆ...

ವಿಶ್ವಾದ್ಯಂತ ಜನರಲ್ಲಿ ಖಿನ್ನತೆ (depression) ಜಾಸ್ತಿಯಾಗುತ್ತಿದೆಯಂತೆ. ಸಾಮಾಜಿಕ ಜಾಲತಾಣಗಳಾದಂತಹ Facebook, Instagram, Twitter, WhatsApp ಇತ್ಯಾದಿಗಳ ವ್ಯಾಪಕ ಬಳಕೆ (ದುರ್ಬಳಕೆ) ಕೂಡ ಇದಕ್ಕೆ ಕಾರಣವಿರಬಹುದು ಎನ್ನುತ್ತಾರೆ ಕೆಲ ಸಂಶೋಧಕರು. ಅವರು ಕೊಡುವ ಕಾರಣ ಏನೆಂದರೆ ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಜನರು ತಮ್ಮ ನಿಜ ಜೀವನವನ್ನು ಇನ್ನೊಬ್ಬರ ಕಾಲ್ಪನಿಕ ಜೀವನದೊಂದಿಗೆ ಹೋಲಿಸಿಕೊಂಡು ಕೊರಗುತ್ತಾರೆ. ಅದೇ ಖಿನ್ನತೆಗೆ ಗುರಿಮಾಡುತ್ತದೆ. ಇಂದೊಂದು ತರಹದ self-inflicted injury. ತಮ್ಮ ಕಾಲ ಮೇಲೆ ತಾವೇ ಕೊಡಲಿಯಿಂದ ಹೊಡೆದುಕೊಂಡಂತೆ.

ಎಲ್ಲರ ಜೀವನದಲ್ಲೂ ಏಳುಬೀಳುಗಳು ಇದ್ದೇ ಇರುತ್ತವೆ. ಸಂಸಾರದಲ್ಲಿ ಇರುವ ಕಾರಣದಿಂದ ಕಿರಿಕಿರಿ, ಲಫಡಾ ಎಲ್ಲ ಇದ್ದೇ ಇರುತ್ತವೆ. ಆದರೆ ಇವನ್ನೆಲ್ಲ ಯಾರೂ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಳ್ಳುವದಿಲ್ಲ. ಏನಿದ್ದರೂ ತಮ್ಮ ಜೀವನ ಏಕ್ದಂ ಸೂಪರ್ ಇದೆ ಅನ್ನುವ ಹಾಗೆ ಪೋಸ್ಟ್, ಫೋಟೋ ಹಾಕಿಕೊಳ್ಳುತ್ತಾರೆ. ಅದರಲ್ಲಿ ತಪ್ಪೇನೂ ಇಲ್ಲ. Always best face and best foot forward. ಒಳಗೆ ಹರಿದು ಜಾಳಿಜಾಳಿಯಾಗಿರುವ ಅಂಡರ್ವೇರ್ ಮತ್ತು ಬನಿಯನ್ ಹಾಕಿದ್ದರೂ ಮೇಲಿಂದ ದುಬಾರಿ ಅರ್ಮಾನಿ ಸೂಟ್ ಹಾಕಿಕೊಂಡ ಮಾದರಿ.

ಉದಾಹರಣೆಗೆ, ಪ್ರೊಫೈಲ್ ಫೋಟೋಗಳ ಮಿಥ್ಯೆ. ಫ್ಯಾಮಿಲಿ ಪ್ಯಾಕ್ ಹೊಟ್ಟೆ ಬಂದಿರುವ ಪುಣ್ಯಾತ್ಮ ಉಸಿರುಗಟ್ಟಿ ಸತ್ತೇಹೋಗುವಂತಾದರೂ ಹೊಟ್ಟೆ ಒಳಗೆಳೆದುಕೊಂಡು ಸಿಕ್ಸ್ ಪ್ಯಾಕ್ ಇದೆಯೇನೋ ಎಂಬಂತೆ ಬಿಂಬಿಸಿಕೊಳ್ಳುವ ವಿಫಲ ಯತ್ನ ಮಾಡುತ್ತಾನೆ. ಬೋಳು ತಲೆ ಬೋಡ ಮತ್ತೇನೋ ಮಾಡುತ್ತಾನೆ. ಕೆಲ ಹೆಂಗಸರು ಇಡೀ ಮುಖ ಮುಚ್ಚುವ ಗಾಗಲ್ ಹಾಕಿರುತ್ತಾರೆ. ಅದರ ಬದಲಿ ಬುರ್ಕಾ ಬೆಟರ್. ಫಿಗರ್ ಕೆಟ್ಟುಹೋದವರು ಮುಖದ ಫೋಟೋ ಹಾಕುತ್ತಾರೆ. ಮುಖ ಸುಟ್ಟುಹೋದವರು ಫಿಗರ್ ಫೋಟೋ ಹಾಕಿಕೊಳ್ಳುತ್ತಾರೆ. ಫೋಟೋ ಶಾಪ್ ಮಾಡುತ್ತಾರೆ. ಒಟ್ಟಿನಲ್ಲಿ ಪೂರ್ತಿ ಮೇಕ್ಅಪ್ ಮಾಡಿಯೇ ಫೇಸ್ಬುಕ್ ಮೇಲೆ ಬಿಟ್ಟಿರುತ್ತಾರೆ.

ಗಂಡ ಹೆಂಡತಿ ಸಂಬಂಧ ಎಕ್ಕುಟ್ಟಿಹೋಗಿರುತ್ತದೆ. ಆದರೂ 20 years of togetherness ಅಂತ ಹಾಕಿಕೊಂಡು ಸಂಭ್ರಮಿಸುತ್ತಾರೆ. ಎಂತಾ ಆದರ್ಶ ದಂಪತಿಗಳು ಎಂದು ನೋಡಿದವರು ಅಂದುಕೊಳ್ಳಬೇಕು. ನೋಡಿದವರು ಹಾಗೇ ಕಲ್ಪಿಸಿಕೊಂಡು ಕೊರಗುತ್ತಾರೆ ಕೂಡ. ಇವರೂ ಅಷ್ಟೇ. ಇನ್ನೊಬ್ಬರನ್ನು ನೋಡಿ ಒಂದೋ ಕೊರಗುತ್ತಾರೆ ಇಲ್ಲ ಕರುಬುತ್ತಾರೆ. ಕೊರಗುವದು (brooding) ಮತ್ತು ಕರುಬುವದು (jealousy) ಎರಡೂ ಮಾನಸಿಕ ಸ್ವಾಸ್ಥ್ಯಕ್ಕೆ ಹಾನಿಕಾರಕ.

ಹೀಗೆ ನಮ್ಮ ನಿಜಜೀವನವನ್ನು (ನಾವೇ ಕಲ್ಪಿಸಿಕೊಂಡ) ಇನ್ನೊಬ್ಬರ ಕಾಲ್ಪನಿಕ ಜೀವನದೊಂದಿಗೆ ಹೋಲಿಕೆ ಮಾಡಿಕೊಂಡು ಖಿನ್ನತೆಗೊಳಗಾಗುತ್ತೇವೆ.

ನನಗೇ ಆದ ಒಂದು ವಿಚಿತ್ರ ಅನುಭವ ಕೇಳಿ.

ಆ ದಿನ ರವೀಂದ್ರನಾಥ ಟಾಗೋರರ ಬಗ್ಗೆ ಇಂಟರ್ನೆಟ್ ಮೇಲೆ ಏನೋ ಹುಡುಕುತ್ತಿದ್ದೆ. ಯಾಕೋ ಗೊತ್ತಿಲ್ಲ, ಅಂಜಲಿ ಎಂಬ ಹೆಸರು ನೆನಪಾಗಬೇಕೇ?

ಯಾವ ಅಂಜಲಿ?

ಯಾವ ಅಂಜಲಿ ಅಂತ ನನಗೂ ಗೊತ್ತಿಲ್ಲ. ಈಗ ಸುಮಾರು ಮೂರು ವರ್ಷದ ಹಿಂದೆ ಫೇಸ್ಬುಕ್ ಮೇಲೆ ಕಣ್ಣಿಗೆ ಬಿದ್ದ ಹೆಸರು ಅದು. ಅದು ಯಾವ ಆಧಾರದ ಮೇಲೆ ಫೇಸ್ಬುಕ್ ಆಕೆಯ ಪ್ರೊಫೈಲ್ ನನಗೆ ತೋರಿಸುತ್ತಿತ್ತೋ ಗೊತ್ತಿಲ್ಲ. ನಮಗಿಬ್ಬರಿಗೆ ಯಾವ ಸಾಮಾನ್ಯ ಸ್ನೇಹಿತರೂ ಇರಲಿಲ್ಲ. ಯಾವುದೇ ಸಾಮ್ಯತೆ ಇರಲಿಲ್ಲ. ಆದರೂ ಫೇಸ್ಬುಕ್ ಮಾತ್ರ ಆಗಾಗ ಅಂಜಲಿಯ ಪ್ರೊಫೈಲ್ ತೋರಿಸುತ್ತಿತ್ತು. ಬಲಭಾಗದ ಅಂಚಿನಲ್ಲಿ You may know this person ಅಂತ ಬಿಟ್ಟಿ ಸಲಹೆ ಕೊಡುತ್ತದಲ್ಲ? ಆ ಜಾಗದಲ್ಲಿ.

ಕಂಪ್ಯೂಟರ್ ಮುಂದೆ ಸದಾ ಸ್ಥಾಪಿತರಾಗಿರುವ ಜನರಿಗೆ ಇರುವ (ಕೆಟ್ಟ) ಚಾಳಿ ನಮಗೂ ಇತ್ತು. ಅದೇನೆಂದರೆ ಕಂಡಿದ್ದನ್ನೆಲ್ಲ ಗೂಗಲ್ ಒಳಗೆ ತುರುಕಿ ಏನು ಹೊರಬರುತ್ತದೆ ಎಂದು ನೋಡುವದು.

ಈ ಅಂಜಲಿಯ ಪೂರ್ಣ ಹೆಸರನ್ನೂ ಗೂಗಲ್ ಒಳಗೆ ಹಾಕಿ ನೋಡಿದೆ. ಬಂದವಲ್ಲ ಢಾಳಾಗಿ ಒಂದಿಷ್ಟು ಲಿಂಕುಗಳು. ನೋಡಿದರೆ ಆಕೆ ದೊಡ್ಡ ವೃತ್ತಿಪರೆ. ತನ್ನ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿ ವೃತ್ತಿ ಮಾಡಿಕೊಂಡಿರುವಾಕೆ. ಒಳ್ಳೇದು. ಮತ್ತೊಂದಿಷ್ಟು ಲಿಂಕುಗಳು ಎಲ್ಲೋ ಶಾದಿ.ಕಾಂ, ಬರ್ಬಾದಿ.ಕಾಂ ಮಾದರಿಯ ವೈವಾಹಿಕ ವೆಬ್ ಸೈಟುಗಳಾಗಿದ್ದವು. ಅಲ್ಲಿ ಕ್ಲಿಕ್ ಮಾಡಿದರೆ ಮೊದಲು ನೋಂದಣಿ ಮಾಡಿಕೊಳ್ಳಿ ನಂತರ ಆಕೆಯ ವಿವರ ತೋರಿಸುತ್ತೇವೆ ಅಂದರು. ಅದು ಕಾಮನ್. ನಾವು ಅದೆಷ್ಟೇ ಬೇಕಾರ್ (ನಿರುದ್ಯೋಗಿ) ಇದ್ದರೂ ಅಷ್ಟೆಲ್ಲ ಬೇಕಾರ್ ಅಲ್ಲ ತೊಗೊಳ್ಳಿ. ಕೆಟ್ಟ ಕುತೂಹಲಕ್ಕೆ ಎಂದು ಶಾದಿ. ಕಾಂ ನಲ್ಲಿ ರಿಜಿಸ್ಟರ್ ಮಾಡಲೇ? ನಮಗೇನು ಹುಚ್ಚೇ? ಅಷ್ಟೆಲ್ಲಾ ಹಾಪರಲ್ಲ ಬಿಡಿ ನಾವು.

'ಓಹೋ! ಈ ಅಂಜಲಿ ಮೇಡಂ ಇನ್ನೂ ವಿವಾಹವಾಗಿರದ ಮಹಿಳೆ. ಆಗಲೇ expiration date ಸಮೀಪಿಸುತ್ತಿದೆ. ತುರ್ತಾಗಿ ವಿವಾಹವಾಗಬೇಕು ಎಂದು ಹಲವಾರು ವೈವಾಹಿಕ ಜಾಲತಾಣಗಳಲ್ಲಿ ಪ್ರೊಫೈಲ್ ಹಾಕಿದ್ದಾರೆ. ಒಳ್ಳೆದಾಗಲಿ,' ಎಂದು ತಿಳಿದು, ಶುಭ ಹಾರೈಸಿ ಅಷ್ಟಕ್ಕೇ ಬಿಟ್ಟೆ. ಆದರೆ ಫೇಸ್ಬುಕ್ ಮೇಲೆ ಕಂಡಾಗೊಮ್ಮೆ ಪ್ರೊಫೈಲ್ ನೋಡುತ್ತಿದ್ದೆ. ಆಕೆಯೇನೂ ಜಾಸ್ತಿ update ಮಾಡುತ್ತಿರಲಿಲ್ಲ. ಅಥವಾ ನಾನು ಆಕೆಯ  ಫ್ರೆಂಡ್ ಇರದ ಕಾರಣ ನನಗೆ ಆವು ಕಾಣಿಸುತ್ತಿರಲಿಲ್ಲವೋ ಏನೋ. ಯಾರಿಗೆ ಗೊತ್ತು?

೨೦೧೬ ರ ಮಧ್ಯಭಾಗದಲ್ಲಿ ನಾನು ಫೇಸ್ಬುಕ್ಕಿಗೆ ಒಂದು ದೊಡ್ಡ ನಮಸ್ಕಾರ ಹಾಕಿದೆ. ಸೋಶಿಯಲ್ ಮೀಡಿಯಾ ಬೋರಾಗಿತ್ತು. ಮೊದಲಿನ ಆಸಕ್ತಿ ಇರಲಿಲ್ಲ. ಎಷ್ಟೋ ದಿನ ಲಾಗಿನ್ ಮಾಡಲಿಲ್ಲ. ಫೇಸ್ಬುಕ್ ಮೇಲೆ ಸದಾ ಸಂಪರ್ಕದಲ್ಲಿರುತ್ತಿದ್ದ ಮಿತ್ರರು ಅವರ ಸಂದೇಶಗಳಿಗೆ ನನ್ನಿಂದ ಉತ್ತರ ಬಾರದಿದ್ದಾಗ ಕಳವಳಪಟ್ಟುಕೊಂಡು ಫೋನ್ ಮಾಡಿದರು. ಇಮೇಲ್ ಮಾಡಿದರು. ಕಾಳಜಿಯಿಂದ ವಿಚಾರಿಸಿಕೊಂಡರು. ಫೇಸ್ಬುಕ್ ಪ್ರೊಫೈಲ್ ಇಟ್ಟುಕೊಂಡು ಆಗಾಗ ನೋಡಲಿಲ್ಲ ಅಂದರೆ ಉಳಿದವರಿಗೆ ವಿನಾಕಾರಣ ಆತಂಕ ಮತ್ತು ತೊಂದರೆ ಎಂದುಕೊಂಡು ಪ್ರೊಫೈಲ್ ನಿಷ್ಕ್ರಿಯಗೊಳಿಸಿದೆ. ಕೆಲವು ತಿಂಗಳ ನಂತರ ಯಾವುದೋ ಕಾರಣಕ್ಕೆ ತಾತ್ಕಾಲಿಕವಾಗಿ ಮತ್ತೆ activate ಮಾಡಿದೆ. ಕೊಂಚ ಅತ್ತಿತ್ತ ನೋಡುವಷ್ಟರಲ್ಲಿ ಪಕ್ಕದಲ್ಲಿ ಮತ್ತೆ ಈ ಅಂಜಲಿಯೇ ಕಾಣಬೇಕೇ!? ಆಕೆಯ ಪ್ರೊಫೈಲ್ ಕ್ಲಿಕ್ ಮಾಡಿದರೆ ದೊಡ್ಡ ಮಟ್ಟದ ಅಪ್ಡೇಟ್ ಕಾಣುತ್ತಿತ್ತು.

ಹೊಸ ಪ್ರೊಫೈಲ್ ಫೋಟೋ ರಾರಾಜಿಸುತ್ತಿತ್ತು. ಪಕ್ಕದಲ್ಲಿ ಜೊತೆಗೊಬ್ಬ ಸರ್ದಾರ್ಜೀ, ಸಿಖ್ಖರ ಪೇಟ ಧರಿಸಿ ಸ್ಮೈಲ್ ಕೊಟ್ಟು ನಿಂತಿದ್ದ. ಇಬ್ಬರ ಬೆರಳುಗಳಲ್ಲೂ ಉಂಗುರ ಫಳಫಳ. engagement ring, wedding ring ಬಂದಾಗಿತ್ತು. ಶಿವಾಯ ನಮಃ! ಮದುವೆಯಾಗಿತ್ತು. ಪಕ್ಕದಲ್ಲಿದ್ದ ಸರ್ದಾರ್ಜಿ ಪ್ರೊಫೈಲ್ ಟ್ಯಾಗ್ ಆಗಿತ್ತು. ಕ್ಲಿಕ್ ಮಾಡಿದರೆ ಯಾರೋ ಹರ್ಮಿನ್ದರ್ ಸಿಂಗ್ ಅನ್ನುವವನ ಪ್ರೊಫೈಲ್ ಗೆ ಹೋಯಿತು. ಅಲ್ಲಿ ನೋಡಿದರೆ ಕ್ಲೀನ್ ಕಿಟ್ಟಪ್ಪ ಸರ್ದಾರ್ಜೀ. ತಲೆ ಅದಾಗೇ ಬೋಳಾಗಿಬಿಟ್ಟಿದೆ. ಗಡ್ಡ ಇವನು ಬೋಳಿಸಿದ್ದಾನೆ. ಮದುವೆಗಾಗಿ ಫುಲ್ ರೂಪಾಂತರ. ಬೋಳು ತಲೆ ಮೇಲೆ ಪಗಡಿ ಕಟ್ಟಿದ್ದ. ಗಡ್ಡ ಬಿಟ್ಟಿದ್ದನೋ ಅಥವಾ ಅದೂ ನಕಲಿಯೋ ಗೊತ್ತಿಲ್ಲ. ಒಟ್ಟಿನಲ್ಲಿ ಮದುವೆಗಾಗಿ ಸಿಖ್ ಆಗಿದ್ದ. ಈ ಅಂಜಲಿಯೇನೂ ಜಾಸ್ತಿ ಬದಲಾಗಿರಲಿಲ್ಲ. ಕನ್ನಡಕ ಹೋಗಿತ್ತು. ಮೇಕ್ಅಪ್ ಭರ್ಜರಿಯಾಗಿತ್ತು. ಒಳ್ಳೆ ಜೋಡಿ. ಒಳ್ಳೆದಾಗಲಿ ಎಂದು ಹಾರೈಸಿ ಬಂದೆ.

ಮುಂದೆ ಕೆಲವೇ ದಿವಸಗಳ ನಂತರ ಫೇಸ್ಬುಕ್ ಪ್ರೊಫೈಲ್ ಫುಲ್ ಡಿಲೀಟ್ ಮಾಡಿಬಿಟ್ಟೆ. ಶಾಶ್ವತವಾಗಿ ಡಿಲೀಟ್.  ಅಲ್ಲಿಗೆ ಐದು ವರ್ಷಗಳ ಫೇಸ್ಬುಕ್ ಸಾಂಗತ್ಯಕ್ಕೆ ಅಂತಿಮ ಮಂಗಳ ಹಾಡಿದೆ. ಬೋರಾಗಿತ್ತು. ಸಾಕಷ್ಟು ಸಮಯ ವ್ಯರ್ಥವಾಗುತ್ತಿತ್ತು. ಬಹಳ ಮೊದಲೇ ತ್ಯಜಿಸಬೇಕು ಎಂದಿತ್ತು. ಅದೇನೋ ಅಂತಾರಲ್ಲ...ಎಲ್ಲದಕ್ಕೂ ಕಾಲ ಕೂಡಿ ಬರಬೇಕು. ಒಟ್ಟಿನಲ್ಲಿ ಫೇಸ್ಬುಕ್ ಎನ್ನುವ ಸಂಸ್ಕಾರ ಮುಗಿದಾಕ್ಷಣ ಆ ವ್ಯಸನ ತಂತಾನೇ ಬಿಟ್ಟುಹೋಯಿತು. ಎಲ್ಲ ವ್ಯಸನಗಳಿಗೂ ಜನ್ಮಾದಿಜನ್ಮಗಳಿಂದ ಸಂಚಿತವಾಗಿರುವ ಕರ್ಮಸಂಸ್ಕಾರಗಳೇ ಕಾರಣ. ಅವು ಖರ್ಚಾದಂತೆ ವ್ಯಸನಗಳೂ ಕಳಚಿಕೊಳ್ಳುತ್ತವೆ.

Fast forward. ಅದಾದ ಎರಡು ವರ್ಷಗಳ ನಂತರ. ಮೊನ್ನೆ ರವೀಂದ್ರನಾಥ ಟಾಗೋರರ ಬಗ್ಗೆ ಏನೋ ಹುಡುಕುತ್ತಿದ್ದಾಗ ಮತ್ತೆ ಅಂಜಲಿ ನೆನಪಾದಳು. ನೋಡೋಣ ಅಂದರೆ ಈಗ ಫೇಸ್ಬುಕ್ ಅಕೌಂಟ್ ಇಲ್ಲ. ಗೂಗಲ್ ಸರ್ಚ್ ಕೊಟ್ಟರೆ ಮತ್ತೆ ಅವೇ ಹಳೇ ಮಾಹಿತಿ.

ಆಗ ತುಂಬಾ ವಿಚಿತ್ರವೆನ್ನಿಸುವಂತೆ ಒಂದು ಐಡಿಯಾ ಬಂತು. ಆಕೆ ಮತ್ತು ಆಕೆಯ ಪತಿ ಇಬ್ಬರ ಹೆಸರನ್ನೂ ಕೂಡಿ ಗೂಗಲ್ ಒಳಗೆ ಸರ್ಚ್ ಕೊಟ್ಟೆ ನೋಡಿ. ಆಶ್ಚರ್ಯ! ಪರಮಾಶ್ಚರ್ಯ! ಒಂದು ಲಿಂಕ್ ಇಲ್ಲಿನ ಕೋರ್ಟ್ ಒಂದರ ಜಾಲತಾಣಕ್ಕೆ ಕರೆದೊಯ್ಯಿತು. ಅಲ್ಲಿ ನೋಡಿದರೆ ಅದೊಂದು ಡೈವೋರ್ಸ್ ಕೇಸ್. ಕುತೂಹಲದಿಂದ ನೋಡಿದರೆ ಇವರದ್ದೇ ಕೇಸ್. ಡೌಟೇ ಇಲ್ಲ. ಮದುವೆಯಾದ ಎರಡೇ ತಿಂಗಳಿಗೆ ಡೈವೋರ್ಸ್. ಶಿವಾಯ ನಮಃ. ಡೈವೋರ್ಸ್ ಕೊಟ್ಟವ ಗಂಡ. ಮತ್ತೆ ಹೆಚ್ಚಿನ ಗಲಾಟೆಯಿಲ್ಲದ ಕಾರಣ ಕೆಲವೇ ತಿಂಗಳುಗಳಲ್ಲಿ ಡೈವೋರ್ಸ್ ಮಂಜೂರ್ ಕೂಡ ಆಗಿಬಿಟ್ಟಿದೆ.

ಮೊನ್ನೆ ಎರಡು ವರ್ಷಗಳ ಬಳಿಕ ಅಂಜಲಿ ನೆನಪಾದಾಗ ನನ್ನ ಕಲ್ಪನೆ ಹೇಗಿತ್ತು? ಎರಡು ವರ್ಷದ ಹಿಂದಿನ ಕಲ್ಪನೆಯೇ ಇತ್ತು. ಮಕ್ಕಳು ಮರಿ ಕೂಡ ಆಗಿರಬಹುದೇ ಎನ್ನುವ ಒಂದಿಷ್ಟು ಹೆಚ್ಚಿನ ಕಲ್ಪನೆ, ಕುತೂಹಲ. ಎಲ್ಲ ಧನಾತ್ಮಕ ಕಲ್ಪನೆ. ನೀವೇ ನೋಡಿ. ಬೇರೋಬ್ಬರ ಕಲ್ಪಿತ ಜೀವನದ ಬಗ್ಗೆ ಧನಾತ್ಮಕ ಕಲ್ಪನೆಗಳೇ ಇರುತ್ತವೆ. ನಮ್ಮ ಜೀವನದ ಬಗ್ಗೆ ಮಾತ್ರ ಋಣಾತ್ಮಕ ಕಲ್ಪನೆಗಳು, ಕೊರತೆಗಳು ಗೋಚರಿಸುತ್ತವೆ. ಆದರೆ ವಾಸ್ತವಿಕತೆ ಬೇರೆಯೇ ಇತ್ತು. ಈಗ ಮೊದಲಿನ ಹಾಗೆ ನಾನು ಗೂಗಲ್ ಮೇಲೆ ಅಷ್ಟೆಲ್ಲ ಹುಡುಕಲು ಹೋಗುವದಿಲ್ಲ. ಆದಿನ  ಅದೇನು ಪಾಠ ಕಲಿಸಬೇಕೆಂದುಕೊಂಡಿತ್ತೋ ವಿಧಿ. ವಿಚಿತ್ರ ರೀತಿಯಲ್ಲಿ ಗೂಗಲ್ ಸರ್ಚ್ ಮಾಡಿಸಿತು. ಡೈವೋರ್ಸ್ ನ್ಯಾಯಾಲಯದ ಜಾಲತಾಣಕ್ಕೆ ಕರೆದೊಯ್ಯಿತು. ವಿಷಯ ತಿಳಿಯಿತು. ಕಲ್ಪನೆ ನುಚ್ಚುನೂರಾಗಿ ವಾಸ್ತವಿಕತೆ ತಿಳಿಯಿತು.

ಅಂಜಲಿಯ ಅದೆಷ್ಟು ಜನ ಪರಿಚಿತರು ಆಕೆಯ ಫೇಸ್ಬುಕ್ ಪ್ರೊಫೈಲ್ ನೋಡಿ ಏನೇನೋ ಕಲ್ಪಿಸಿಕೊಂಡು ಅದೆಷ್ಟು ಕರುಬಿ ಅದೆಷ್ಟು ಖಿನ್ನತೆಗೆ ಒಳಗಾಗಿದ್ದರೋ.

www.unicourt.com - ಇಲ್ಲಿ ಸರ್ಚ್ ಮಾಡಿಬಿಟ್ಟರೆ ಅಮೇರಿಕಾದಲ್ಲಿ ಯಾರ ಮೇಲೆ ಯಾವ ಕೇಸಿದ್ದರೂ ಮಾಹಿತಿ ಸಿಕ್ಕಿಬಿಡುತ್ತದೆ. ನಂತರ ಆ ಆ ಕೋರ್ಟುಗಳ ಜಾಲತಾಣಗಳಿಗೆ ಹೋಗಿಬಿಟ್ಟರೆ ಎಲ್ಲರ ಜನ್ಮಕುಂಡಲಿ ಬೆರಳತುದಿಯಲ್ಲಿ. ಹಾಗೆಂದ ಮಾತ್ರಕ್ಕೆ ಎಲ್ಲರ ವೈಯಕ್ತಿಕ ಜೀವನದ ರಾಮರಾಡಿಯೆಲ್ಲವನ್ನೂ ಹಾಕಿಬಿಟ್ಟಿರುತ್ತಾರೆ ಎಂದಲ್ಲ. ಸಾರ್ವಜನಿಕವಾಗಿ ಏನೆಲ್ಲಾ ಮಾಹಿತಿ ಹಾಕಬಹುದೋ ಅದನ್ನೆಲ್ಲ ಹಾಕಿರುತ್ತಾರೆ. ಕೆಲವೊಂದು ಹೆಚ್ಚಿನ ಮಾಹಿತಿಯನ್ನು ಶುಲ್ಕ ಕೊಟ್ಟು ಪಡೆಯಬಹುದು. ಆದರೆ ಗಂಡಹೆಂಡಿರ ಮಧ್ಯದ ಬೆಡ್ರೂಮ್ ಬೊಗಳೆ, ರಗಳೆ, ಕಿಚೆನ್ ಕಹಳೆ, ನಗ್ನ ನಗಾರಿ ಇತ್ಯಾದಿಗಳ ಮಾಹಿತಿ ಸಿಗುವದಿಲ್ಲ. ಅವೆಲ್ಲ ಕೋರ್ಟಿಗೆ ಬೇಕಾಗೂ ಇಲ್ಲ. ನಿಮ್ಮ ಮಾಹಿತಿಗೆ ಹೇಳಿದೆ ಅಷ್ಟೇ! :)

ನನ್ನ ಹೆಸರನ್ನೂ ಸರ್ಚ್ ಕೊಟ್ಟು ನೋಡಿದೆ. ಏನೂ ಮಾಹಿತಿ ಬರಲಿಲ್ಲ. ನಂದೂ ಒಂದು ಕೇಸ್ ಇತ್ತಲ್ಲ. ಹಳೆಯ ಕೇಸು. ಅಯ್ಯೋ! ಆ ತರಹದ ಕೇಸ್ ಅಲ್ಲ ಮಾರಾಯರೇ. ಚಿಂತೆ ಬೇಡ. ಈಗ ಇಪ್ಪತ್ತು ವರ್ಷಗಳ ಹಿಂದೆ ವಿಮಾನದ ಟಿಕೆಟ್ ವಿಷಯದಲ್ಲಿ ಗಾಂಚಾಲಿ ಮಾಡಿದ್ದ ಟ್ರಾವೆಲ್ ಏಜೆಂಟ್ ಒಬ್ಬಾಕೆಯನ್ನು small claims ಕೋರ್ಟಿಗೆ ಎಳೆದು, ನಾನೇ ವಕೀಲಿಕೆಯನ್ನೂ ಮಾಡಿ, ಪರಿಹಾರ ವಸೂಲಿ ಮಾಡಿದ್ದೆ. ಮತ್ತೆಲ್ಲಾದರೂ ಆ ಕೇಸ್ ಕೂಡ ಇಂಟರ್ನೆಟ್ ಮೇಲೆ ಬಂದಿದೆಯೋ ಎನ್ನುವ ಕುತೂಹಲ ಇತ್ತು. ಬಂದಿಲ್ಲ. ಅಂತದ್ದೆಲ್ಲಾ ಚುಲ್ಟು ಕೇಸ್ ಮಾಹಿತಿ ಅಲ್ಲಿ ಇರುವದಿಲ್ಲ ಎಂದು ಕಾಣಿಸುತ್ತದೆ. ಆ ಕೇಸು, ನನ್ನ ಕಾನೂನು ಹೋರಾಟ, ಇತ್ಯಾದಿಗಳ ಬಗ್ಗೆ ಮತ್ತೊಮ್ಮೆ ಬರೆಯೋಣ ಬಿಡಿ. ಬರೋಬ್ಬರಿ ಕಾನೂನಿನ ಗೂಟ ಜಡಿದಿದ್ದೆ ಆ ಹರಾಮಿ ಟ್ರಾವೆಲ್ ಏಜೆಂಟ್ ಗೆ!

ಅವೆಲ್ಲ ಇರಲಿ. ಸಾಮಾಜಿಕ ಜಾಲತಾಣಗಳ ಬಗ್ಗೆ, ಅವುಗಳಿಂದ ಆಗುತ್ತಿರುವ ಹಾನಿಗಳ ಬಗ್ಗೆ ನನ್ನ ಮೇಲೆ ತುಂಬಾ ಪ್ರಭಾವ ಬೀರಿದವರು ಪ್ರೊಫೆಸರ್  ಕ್ಯಾಲ್ ನ್ಯೂಪೋರ್ಟ್. ಅದ್ಭುತ ಚಿಂತಕ. Original thinker.

ಈ ಸಾಮಾಜಿಕ ಜಾಲತಾಣಗಳ ವಿವೇಚನಾರಹಿತ ದುರ್ಬಳಕೆ ನಿಲ್ಲದೇ ಹೋದರೆ ಒಂದು ಮಾತ್ರ ಗ್ಯಾರಂಟಿ - we will be a society of smart phones but dumb people. Guided missiles in the hands of misguided people.

ಪ್ರೊಫೆಸರ್ ನ್ಯೂಪೋರ್ಟ್ ಅವರ ಒಂದು ಅದ್ಭುತ ಭಾಷಣ - Why you should quit social media

ಸಾಮಾಜಿಕ ಜಾಲತಾಣಗಳಿಂದ ಉಪಯೋಗಗಳೂ ಇವೆ. ಆದರೆ ಹಾನಿಗಳೇ ಜಾಸ್ತಿ. ಹಾಗಾಗಿ ಸೋಶಿಯಲ್ ಮೀಡಿಯಾ ಉಪಯೋಗಿಸಲೇಬೇಕು ಅಂತಾದರೆ ವಿವೇಕ ಇರಲಿ. ಪ್ರಜ್ಞೆ ಕಳೆದುಹೋಗದಿರಲಿ.

ಹಿಂದೊಮ್ಮೆ ಬರೆದಿದ್ದ ಲೇಖನ. ಧಾರವಾಡ ಮಂದಿ ಭಾಳ ಮೆಚ್ಚಿದ್ದರು! :)

ಆನೆಯ ಮೇಲೆ ಅಂಬಾರಿ ಕಂಡೆ. ಅಂಬಾರಿ ಒಳಗೆ ಕುಂಬಾರಿ ಕಂಡೆ.....ಫೇಸ್ಬುಕ್ ಪ್ರೊಫೈಲ್ ಫೋಟೋ ಪುರಾಣ

Monday, July 16, 2018

ನಮ್ಮ ಜೀವನವೇ ಬೆಸ್ಟ್... ನಮಗೆ ನಮ್ಮ ಜೀವನವೇ ಬೆಸ್ಟ್

ಎಲ್ಲೋ ಓದಿದ ನೆನಪು. ಅದರ ತಿರುಳೇನೆಂದರೆ -  ನಾವು ನಮ್ಮ ನಮ್ಮ ಸಮಸ್ಯೆಗಳ ಬಗ್ಗೆ ಎಷ್ಟೇ ತಲೆಬಿಸಿ ಮಾಡಿಕೊಂಡರೂ ಇನ್ನೊಬ್ಬರ ಸಮಸ್ಯೆಯ ಆಳ ತಿಳಿದರೆ, 'ಅವರ ಸಮಸ್ಯೆಗೆ ಹೋಲಿಸಿಕೊಂಡರೆ ನಮ್ಮದೇ ಎಷ್ಟೋ ಮೇಲು,' ಅಂದುಕೊಳ್ಳುತ್ತೇವೆ.

ನಾವೆಲ್ಲಾ ನಮ್ಮ ನಮ್ಮ ಸಮಸ್ಯೆಗಳನ್ನು ಒಂದೊಂದಾಗಿ ಕಾಗದದ ಚೀಟಿಗಳ ಮೇಲೆ ಬರೆದು ಒಂದು ಪಾತ್ರೆಯಲ್ಲಿ ಹಾಕಿದೆವು ಎಂದಿಟ್ಟುಕೊಳ್ಳಿ. ನಂತರ random ಆಗಿ ಕೈಗೆ ಬಂದ ಚೀಟಿ ಎತ್ತಿಕೊಳ್ಳಿ. ಅದರಲ್ಲಿ ಬರೆದಿರುವ ಸಮಸ್ಯೆ ಓದಿ. ನಂತರ ನಿರ್ಧರಿಸಿ - ಸದ್ಯಕ್ಕೆ ನಿಮಗಿರುವ ಸಮಸ್ಯೆ 'ಒಳ್ಳೆಯದೋ' ಅಥವಾ ಬೇರೊಬ್ಬರ ಸಮಸ್ಯೆ ಒಳ್ಳೆಯದೋ? ಶತಪ್ರತಿಶತ ಖಾತ್ರಿ, ನೀವು ಕೈಗೆ ಬಂದ ಚೀಟಿಯನ್ನು ಮರಳಿಸುತ್ತೀರಿ. ನಿಮ್ಮದೇ ಸಮಸ್ಯೆ ಬರೆದ ಚೀಟಿ ಸಿಗುವವರೆಗೂ ಒಂದಾದಮೇಲೊಂದು ಚೀಟಿಯನ್ನು ತೆಗೆದು, ಓದಿ, ಮತ್ತೆ ವಾಪಸ್ ಮಾಡುತ್ತಲೇ ಇರುತ್ತೀರಿ. ಬೇರೋಬ್ಬರ ಸಮಸ್ಯೆಗಳನ್ನು ತಿಳಿದಾಗ ನಮ್ಮ ಸಮಸ್ಯೆಗಳೇ ಎಷ್ಟೋ ಮೇಲು ಎಂದೆನಿಸಿಬಿಡುತ್ತವೆ.

ಬೇರೆಯವರ ಬದುಕನ್ನು ನೋಡಿ ಒಮ್ಮೊಮ್ಮೆ ಅಂದುಕೊಂಡಿರುತ್ತೇವೆ, 'ಆಹಾ! ಎಷ್ಟು ಅದೃಷ್ಟಶಾಲಿಗಳು!' ಎಂದು. ಅವರ ಬಾಹ್ಯ ಜೀವನವೊಂದೇ ನಮಗೆ ಕಂಡಿರುತ್ತದೆ. ಅವರ ಜೀವನ ನಮ್ಮದಾಗಿದ್ದರೆ ಎಷ್ಟು ಚೆನ್ನಾಗಿತ್ತಲ್ಲವೇ ಎಂದು ಅನ್ನಿಸುತ್ತದೆ.

ಆದರೆ...

ಕೆಳಗಿನ ಕಥೆ ಓದಿ.

ಸತ್ಯ ನಾಡೆಲ್ಲಾ. ಹೆಚ್ಚಾಗಿ ಎಲ್ಲರೂ ಇವರ ಹೆಸರು ಕೇಳಿರುತ್ತಾರೆ. ಕೊಂಚ ತಿಳಿದಿರುತ್ತಾರೆ ಕೂಡ. ಜಗತ್ತಿನ ಅತಿ ದೊಡ್ಡ ಸಾಫ್ಟ್ವೇರ್ ಕಂಪನಿಯಾದ ಮೈಕ್ರೋಸಾಫ್ಟ್ ಕಂಪನಿಯ ಮುಖ್ಯಸ್ಥ (CEO). ವಯಸ್ಸು ಐವತ್ತು ವರ್ಷಗಳು ಮಾತ್ರ. ವಾರ್ಷಿಕ ವೇತನ ಇಪ್ಪತ್ತು ಮಿಲಿಯನ್ ಡಾಲರ್. ಅಂದರೆ ಸುಮಾರು ೧೪೦ ಕೋಟಿ ರೂಪಾಯಿಗಳು. ಒಟ್ಟು ಆಸ್ತಿ ಸಾವಿರಾರು ಕೋಟಿ. ತುಂಬಾ ಯಶಸ್ವಿಯಾಗಿರುವ  ಮುಖ್ಯ ನಿರ್ವಾಹಣಾಧಿಕಾರಿ ಎಂದೆನಿಸಿಕೊಂಡಿದ್ದಾರೆ. ಮಣಿಪಾಲ ಮತ್ತು ವಿಸ್ಕಾನ್ಸಿಸ್ ವಿಶ್ವವಿದ್ಯಾಲಯಗಳಲ್ಲಿ ಓದಿ, ಮೈಕ್ರೋಸಾಫ್ಟ್ ಕಂಪನಿಯಲ್ಲಿ ಹಂತಹಂತವಾಗಿ ಮೇಲೆ ಬಂದು, ವಿಪರೀತ ಸ್ಪರ್ಧೆಯ ನಡುವೆಯೂ CEO ಎಂದು ಆಯ್ಕೆಯಾದ ಮಹಾನ್ ಪ್ರತಿಭಾವಂತ. ಭಾರತೀಯ ಸಂಜಾತರಾದ್ದರಿಂದ, ಎಲ್ಲ ರೀತಿಯ ಪಕ್ಷಪಾತಗಳ ನಡುವೆಯೂ, ಈ ಮಟ್ಟದ ಯಶಸ್ಸನ್ನು ಗಳಿಸಲು ಪಟ್ಟಿರಬಹುದಾದ ಪರಿಶ್ರಮ ಅಗಾಧ.

ಇವರದು ಸುಖೀ ಸಂಸಾರ. ಕುಟುಂಬಸ್ನೇಹಿತರ ಪುತ್ರಿ, ಬಾಲ್ಯಸ್ನೇಹಿತೆ ಅನುಪಮಾ ಇವರ ಪತ್ನಿ. ಮೂರು ಮಕ್ಕಳು. ಅಮೇರಿಕಾದ ಸಿಯಾಟಲ್ ನಗರದಲ್ಲಿ ಅರಮನೆಯಂತಹ ಬಂಗಲೆಯಲ್ಲಿ ವಾಸವಾಗಿದ್ದಾರೆ.

ಇಷ್ಟೇ ಮಾಹಿತಿ ತಿಳಿದರೆ 'ಲೈಫ್ ಅಂದರೆ ಹೀಗಿರಬೇಕು. ಅವರ ಲೈಫ್ ನಮಗಿರಬಾರದಿತ್ತೇ?' ಎಂದು ಜನ ಅಂದುಕೊಳ್ಳಬಹುದು.

'ಸತ್ಯ ನಾಡೆಲ್ಲಾ ತರಹದ ಜನರಿಗೆ ಎಂತಹ ಸಮಸ್ಯೆಗಳು ಮಾರಾಯ್ರೇ? ಸಮಸ್ಯೆಗಳೆಲ್ಲ ನಮ್ಮಂತವರಿಗೇ ನೋಡಿ. ಎಲ್ಲಾ ಪಡೆದುಕೊಂಡು ಬಂದಿರಬೇಕು,' ಎಂದು ನಿಡುಸುಯ್ಯಬಹುದು.

ಈಗ ಕೇಳಿ...

ಸತ್ಯರ ಹಿರಿಯ ಮಗನಿಗೆ ಈಗ ೨೧ ವರ್ಷ. ಅವನು ವಿಕಲಾಂಗ. ಗಾಲಿಚಕ್ರದ ಖುರ್ಚಿಯಲ್ಲೇ ಅವನ ಜೀವನ. ಅವನು ಎಲ್ಲ ಅಂಗಾಂಗಳ ಸ್ವಾಧೀನ ಕಳೆದುಕೊಂಡಿರುವ Quadriplegic.

ಸತ್ಯರ ಪುತ್ರಿಯೊಬ್ಬಳಿಗೆ ಏನೋ ಬೌದ್ಧಿಕ ಸಮಸ್ಯೆ. Learning disability.

ಈಗ ವಿಚಾರ ಮಾಡಿ. ವರ್ಷಕ್ಕೆ ೧೪೦ ಕೋಟಿ ಸಂಬಳದ ದೊಡ್ಡ ಹುದ್ದೆ, ಸಾವಿರಾರು ಕೋಟಿಯ ಅಸ್ತಿ ಎಲ್ಲ ಸಿಗುತ್ತದೆ. ಆದರೆ ಪ್ಯಾಕೇಜ್ ಡೀಲ್ ಎಂಬಂತೆ ಇವೆಲ್ಲಾ ಸಮಸ್ಯೆಗಳೂ ಜೊತೆಗೆ ಬರುತ್ತವೆ ಎಂತಾದರೆ ನಿಮ್ಮ ಸದ್ಯದ ಜೀವನವನ್ನು ಬದಲಾಯಿಸಿಕೊಳ್ಳುವಿರೇ???

ಸತ್ಯರ ಜೀವನದ ಬಗ್ಗೆ ನನಗೂ ಜಾಸ್ತಿ ಗೊತ್ತಿರಲಿಲ್ಲ. ಸತ್ಯ ನಾಡೆಲ್ಲಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಂಚಿಕೊಂಡಿದ್ದು ಕಮ್ಮಿ. ಅವರು ತಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸುತ್ತಾರೆ. ಉಳಿದವರೂ ಗೌರವಿಸಬೇಕು. ಆದರೆ ತಮ್ಮ ಜೀವನದ ಸವಾಲುಗಳ ಬಗ್ಗೆ ಮತ್ತು ಅವುಗಳನ್ನು ಎದುರಿಸಿ ಗೆದ್ದ ಹಾದಿಯ ಬಗ್ಗೆ ಮಾಹಿತಿ ಹಂಚಿಕೊಂಡರೆ ಬೇರೆಯವರಿಗೂ ಕೂಡ ಜೀವನವನ್ನು ಎದುರಿಸಲು ಬೇಕಾಗುವ ಧೈರ್ಯ, ಸ್ಥೈರ್ಯ ಸಿಗಬಹುದು ಎನ್ನುವ ಸದುದ್ದೇಶದಿಂದ ಸತ್ಯ ಮತ್ತು ಅವರ ಪತ್ನಿ ಅನು ಎಲ್ಲವನ್ನೂ ಬಿಚ್ಚಿ ಹೇಳಿಕೊಂಡಿದ್ದಾರೆ. ಅದಕ್ಕೊಂದು ಸಲಾಂ! ಪೂರ್ತಿ ಲೇಖನ ಕೆಳಗಿನ ಲಿಂಕಿನಲ್ಲಿದೆ. ತುಂಬಾ ಸ್ಪೂರ್ತಿದಾಯಕವಾಗಿದೆ. ಜೀವನ್ಮುಖಿಯಾಗಿದೆ. ಓದಿ.

Satya and Anu Nadella Open Up About Their Family Life 

For the first time ever, the Microsoft CEO and his wife share honest truths about raising three kids with unexpected challenges and lots of joy.

ಸತ್ಯರಂತಹ ಜನ ಯಾವುದನ್ನೂ ಸಮಸ್ಯೆ ಎಂದು ಭಾವಿಸುವದೇ ಇಲ್ಲ. ಎಲ್ಲವನ್ನೂ ಅವಕಾಶ ಅಥವಾ ಸವಾಲು ಎಂದು ಸ್ವೀಕರಿಸಿ ಯಶಸ್ವಿಯಾಗುತ್ತಾರೆ. ಅದೇ ಅವರ ಖಾಸಿಯತ್ತು.

ಸತ್ಯ ನಾಡೆಲ್ಲಾ  'Hit Refresh' ಎನ್ನುವ ತಮ್ಮ ಜೀವನಾನುಭವಗಳ ಪುಸ್ತಕವನ್ನು ಬರೆದುಕೊಂಡಿದ್ದಾರೆ. ಇನ್ನೂ ಓದಿಲ್ಲ. ಮುಂದೆ ಓದಬೇಕು.

ಒಟ್ಟಿನಲ್ಲಿ ನಮ್ಮ ನಮ್ಮ ಲೈಫ್ ನಮಗೇ ಹೇಳಿಮಾಡಿಸಿದ್ದು ನೋಡಿ.

Nobody's burden is even one gram more than they can carry but not one gram less either.