Sunday, January 20, 2013

ಮಂಗಳಮುಖಿಯೊಬ್ಬಳ ಆತ್ಮಚರಿತೆ


ಒಂದಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಯಾರಾದರು ಗಿರಾಕಿ ಸಿಕ್ಕಾರಾ ಅಂತ ನೋಡುತ್ತ ನಿಂತಿದ್ದೆ. ಒಂದು ಪೋಲೀಸ್ ವ್ಯಾನ್ ಬಂದು ಬಿಟ್ಟಿತು. ಏನಾಯಿತು ಅಂತ ತಿಳಿಯುವದರಲ್ಲಿ ಪೋಲೀಸ್ ಒಬ್ಬ ನನ್ನನ್ನು ಒಳಗೆ ತಳ್ಳಿದ್ದ. ವ್ಯಾನ್ ಹೊರಟಿತ್ತು ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಶನ್ ಗೆ.

ಏನು ಜೋರ್ ದಂಧಾ ಮಾಡ್ತೀಯಾ? ಎಲ್ಲಿಂದ ಬಂದೆ? - ಅಂತ ಕೇಳಿದ ಪೊಲೀಸ್.

ಅಯ್ಯೋ....ಸಾಮಿ....ನಾವು ತಮಿಳ್ನಾಡಿಂದ ಬಂದವವರು. ಇನ್ನೊಮ್ಮೆ ಈಕಡೆ ಬರಾಕಿಲ್ಲ. ಬಿಟ್ಬಿಡಿ ಸಾಮಿ - ಅಂತ ಅಂಗಾಲಾಚಿ ಕೇಳಿಕೊಂಡೆ.

ಥತ್ ನಿನ್ನಾ....ನೀನು ಖೋಜಾನಾ? - ಅಂತ ಕೇಳಿದ ಪೊಲೀಸನ ದನಿಯಲ್ಲಿ ಅಸಹ್ಯ ತುಂಬಿದ ತಿರಸ್ಕಾರವಿತ್ತು.

ಹೌದು....ಸಾಮಿ....ನಾವು ಪೊಟ್ಟೈಗಳು. ಅಂದ್ರೆ ನಿಮ್ಮ ಪ್ರಕಾರ ಖೋಜಾಗಳು. ಹಿಜರಾ ಅಂತ ಕೂಡ ಅಂತಾರೆ - ಅಂದು ಸುಮ್ಮನಾದೆ.

ಹಂ....ಓಕೆ....ಓಕೆ...ದರಿದ್ರ ಮುಂಡೇವಾ. ಇಲ್ಲೇಕೆ ಬಂದು ದಂಧಾ ಮಾಡುತ್ತೀರಿ? ನಿಮ್ಮ ಕೊಂಗರ ನಾಡಿನಲ್ಲೇ ಇದ್ದು ಮಾಡಬಹುದಲ್ಲ? ನಮಗೆ ತಲೆ ಬಿಸಿ ನಿಮ್ಮಿಂದ. ಅಲ್ಲಲ್ಲಿ ಹೋಗೋದು. ಕಾಸ್ ಕೇಳೋದು. ಕೊಟ್ಟಿಲ್ಲ ಅಂದ್ರೆ ಲಂಗಾ ಎತ್ತಿ ಎಲ್ಲರಿಗೆ ಅಸಹ್ಯ ಮಾಡೋದು. ಇದೇ ಆಗೋಯ್ತು ನಿಮ್ಮದು. ನಮ್ಮ ದೊಡ್ಡ ಸಾಹೇಬರು ನಂತರ ಬರ್ತಾರೆ. ಅವರು ಬಂದ ಮ್ಯಾಲೆ ನಿನ್ನ ಬಿಡೋದಾ ಇಲ್ಲವ ಅಂತ ವಿಚಾರ ಮಾಡ್ತಾರೆ. ಅಲ್ಲಿ ತನಕ ಇಲ್ಲೇ ಬಿದ್ದಿರು. ಖೋಜಾ ನನ್ಮಗನೇ....- ಅಂದ ಪೋಲೀಸಪ್ಪ ಗಾಯಬ್ ಆದ.

ಸುಮ್ಮನೆ ಪೋಲೀಸ್ ಸ್ಟೇಶನ್ ನಲ್ಲಿ ಕೂತಿದ್ದೆ. ರಾತ್ರಿಯಾದ ಮ್ಯಾಲೆ ಯಾರ್ಯಾರೋ ಬಂದರು. ಹೋದರು. ಬಿಡುವ ಸೂಚನೆ ಕಾಣಲಿಲ್ಲ.

ನಂತರ ಬಂದ ನೋಡಿ ಒಬ್ಬ ಕಿರಾತಕ ಪೋಲೀಸ್ ಪೇದೆ.

ಬಂದವನೇ ನನಗೆ ನಾಕು ಹಾಕಿದ. ಒದ್ದ. ನಾನು ಕಿರುಚಿತ್ತಿದ್ದರೆ ಅವನಿಗೇನೋ ಆನಂದ.

ನಡಿ - ಅಂದ.

ಎಲ್ಲಿ ಸಾರ್? - ಅಂತ ಕೇಳಿದೆ.

ನಡಿಯೋ....ಹಲ್ಕಾ ನನ್ಮಗನೇ....- ಅಂದವನೇ ಆ ಕಡೆ ತಳ್ಳಿದ.

ಆ ಕಡೆ ಲಾಕಪ್ ಇತ್ತು. ಒಳಗೆ ಒಬ್ಬ ಕೊರಮ ಇದ್ದಂಗೆ ಇದ್ದ ಕೈದಿಯಿದ್ದ.

ಅವನಿಗೆ ನನ್ನ ಆರ್ಪಣೆ ಮಾಡಿ ಬಿಡುತ್ತಾನ? ಅಂತ ಚಿಂತೆ ಆಯಿತು. ಲಾಕಪ್ ನಲ್ಲಿ ಇದ್ದ ಕೈದಿಗಳು ಕಾಸ್ ಕೊಟ್ಟರೆ ಅವರಿಗೆ ಸಕಲ ಸೌಲಭ್ಯ ಪೊಲೀಸರು ಒದಗಿಸುತ್ತಾರೆ ಎಂಬುದು ಗೊತ್ತಿತ್ತು.

ಬಿಚ್ಚು ಬಟ್ಟೆ - ಅಂದ ಪೋಲೀಸ್ ಪೇದೆ.

ಸಾರ್...ಸಾರ್....ಬೇಡ ಸಾರ್....- ಅಂತ ಬೇಡಿಕೊಂಡೆ.

ನಿನ್ನಮ್ಮನ್ ......ಬಟ್ಟೆ ಬಿಚ್ಚು ಅಂದ್ರೆ ಬಿಚ್ಚತಾ ಇರ್ಬೇಕು. ಇಲ್ಲಾಂದ್ರೆ ನೋಡಿಲ್ಲಿ. ಲಾಠಿ. ಚುಚ್ಚಬಾರದ ಜಾಗದಲ್ಲಿ ಚುಚ್ಚಿ ಬಿಡ್ತೀನಿ. ಅಷ್ಟೇ. ತಿಳೀತಾ? - ಅಂದ ಪೇದೆ ಫುಲ್ ಆವಾಜ್ ಹಾಕಿದ.

ಮುಂದೆ ಲಾಕಪ್. ಅಲ್ಲಿದ್ದ ಕೈದಿ ಬಿಟ್ಟ ಕಣ್ಣು ಬಿಡದೆ ನೋಡುತ್ತಿದ್ದ.

ಬೇರೆ ವಿಧಿಯಿಲ್ಲದೆ ಬಟ್ಟೆ ಕಳಚಿದೆ. ಫುಲ್ ಕಳಚಿದೆ. ಒಂದೂ ಬಟ್ಟೆ ಮೈಮೇಲೆ ಇರಲಿಲ್ಲ.

ಥತ್....ಹೊಲಸ್ ನನ್ಮಗನೇ....ಗಂಡಸಾಗಿ ಹುಟ್ಟಿ, "ಅದನ್ನೇ" ಕಟ್ ಮಾಡಿಸ್ಕೊಂಡು ಖೋಜಾ ಆಗಿದಿಯಲ್ಲೋ? ಕರ್ಮ....ಕರ್ಮ....ದಂಧಾ ಹೇಗೆ? ಬ್ಯಾಕ್ ಡೋರಾ ? - ಅಂದ ಪೇದೆ ಗಹಗಹಿಸಿ ನಕ್ಕ.

ಹ್ಯಾಂಗೆ ಅನ್ನುವಂತೆ ಲಾಕಪ್ ಒಳಗೆ ಇದ್ದ ಕೈದಿಯ ಕಡೆ ನೋಡಿದ ಪೇದೆ.

ಪೇದೆಗೆ ಇಲ್ಲದ ಮಾನ ಮರ್ಯಾದೆ ಒಳಗಿದ್ದ ಕಳ್ಳನಿಗೆ ಇದೆ ಅನ್ನಿಸಿತು. ನನ್ನ ಯಾತನೆ ನೋಡಲಾಗದೆ ಆ ಕೈದಿ ಮೋರೆ ಆ ಕಡೆ ತಿರಿಗಿಸಿಕೊಂಡ.

ತನ್ನ ಲಾಠಿಯಿಂದ ಮುಟ್ಟಬಾರದ ಜಾಗ (ಅಂದ್ರೆ ಮರ್ಮಾಂಗ ಎಲ್ಲ) ಎಲ್ಲ ತಿವಿದು, ತಿವಿದು ಮುಟ್ಟಿದ ಪೇದೆ, ವಿಕೃತ ಆನಂದ ಅನುಭವಿಸಿ, ಬಟ್ಟೆ ಹಾಕ್ಕೋ, ಅಂತ ಹೇಳಿ ಹೋದ.

ಇಷ್ಟಕ್ಕೆ ಮುಗೀತಲ್ಲ, ಅಂತ ಸಮಾಧಾನ ಪಟ್ಟೆ.

ಲಾಕಪ್ ಕಡೆ ನೋಡಿದರೆ, ಕೈದಿಯ ಕಣ್ಣಲ್ಲಿ ಒಂದು ತರಹದ ವಿಷಾದವೋ, ದುಃಖವೋ ಅನ್ನುವಂತಹ ಭಾವನೆ. ಗೊತ್ತಾಗಲಿಲ್ಲ.

ಮರುದಿವಸ ಕೋರ್ಟಿಗೆ ಅಂತ ಕರ್ಕೊಂಡು ಹೋದರು. ದಾರಿಯಲ್ಲೇ ಕಾಸು ಕಿತ್ತುಕೊಂಡು, ಓಡು ನನ್ಮಗನೇ, ಅಂತ ಬೈದು ಓಡಿಸಿದರು. ಬದುಕಿದೆಯಾ ಬಡ ಜೀವವೇ ಅಂತ ಅಂದುಕೊಂಡು ನಮ್ಮ ಹೈದರಾಬಾದಿ ಹಮಾಮ್ ಗೆ ಬಂದು ಮುಟ್ಟಿದೆ. ನಮ್ಮ ಗುರುವನ್ನು ಅಪ್ಪಿಕೊಂಡು ಗೊಳೋ ಅಂತ ಅತ್ತೆ. ಗುರು ಸಂತೈಸಿದರು.

ಹೀಗಂತ ತಮ್ಮ ಆತ್ಮಕಥೆಯಂತಿರುವ - Truth about Me: A Hijra Life Story - ಪುಸ್ತಕದಲ್ಲಿ ಬರೆಯುತ್ತ ಹೋಗುವವರು ರೇವತಿ ಅಲಿಯಾಸ್ ದೊರೈಸಾಮಿ.

ಹುಟ್ಟಿದ್ದು ಗಂಡಿನ ದೇಹ ಹೊತ್ತು. ಬೆಳೆದಂತೆ ಒಳಗಿನ ಭಾವನೆಗಳು, ಸಂವೇದನೆಗಳು ಎಲ್ಲ ಪೂರ್ತಿ ಹೆಣ್ಣಿನವು. ಇದು ದೊರೈಸಾಮಿಯ ದ್ವಂದ್ವ. ದೇಹ ಮನಸ್ಸು ಹೊಂದಿಕೊಳ್ಳದೆ ತಲೆ ಮೊಸರು ಗಡಿಗೆ. ಹೆಣ್ಣಿನ ರೀತಿಯಲ್ಲಿ ವಸ್ತ್ರ ಹಾಕುವಾಸೆ, ಗಂಡಿನ ಕಂಡರೆ ಏನೇನೋ ಆಸೆ. ಆದ್ರೆ ಈಡೇರಿಸಿಕೊಳ್ಳುವದು ಹೇಗೆ? ಮನಸ್ಸಿದ್ದಲ್ಲಿ ಮಾರ್ಗವಿದೆ. ಹಿಜರಾಗಳು ಇದ್ದಾರೆ. ಅವರದೇ ಆದ ಸಂಸ್ಕೃತಿಯಿದೆ. ಮನೆಗಳಿವೆ. ಪರಂಪರೆಯಿದೆ. ಎಲ್ಲ ಇದೆ. ಮತ್ತೇನು? ದೊರೈಸಾಮಿ ಮನೆ ಬಿಟ್ಟು ಓಡಿ ಬಿಡುತ್ತಾನೆ.

ಮೊದಲು ತಮಿಳ್ನಾಡಿನ ಹಿಜಾರಗಳ ಸಂಗ್ತಿಗೆ, ನಂತರ ಡೆಲ್ಲಿಗೆ, ನಂತ್ರ ಮುಂಬೈಗೆ ಹೋಗುವ ದೊರೈಸಾಮಿಗೆ ಮುಂಬೈನಲ್ಲಿ ಒಬ್ಬ ಹಿಜರಾ ಗುರು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಲು ಮುಂದಾಗುತ್ತಾರೆ.

ಆದ್ರೆ ಪರಿಪೂರ್ಣ ಹಿಜ್ರಾ ಆಗಬೇಕು ಅಂದ್ರೆ "ಆಪರೇಶನ್" ಆಗಬೇಕು. ಗಂಡಸ್ತನದ ಬಾಹ್ಯದ ಕುರುಹು ಯಾವದೇ ಮಾರ್ಕ್ ಬಿಡದೆ ಹೋಗಿ ಬಿಡಬೇಕು. ಅದಕ್ಕೆ ಇರುವ ವಿಧಾನ ಅಂದ್ರೆ ಎರಡೇ. ಒಂದೋ ಇನ್ನೊಬ್ಬ ಪಳಗಿದ ಹಿಜರಾ ತರಕಾರಿ ಕತ್ತರಿಸುವ ಕತ್ತಿಯಿಂದ, ಯಾವದೇ ಅರವಳಿಕೆ ಇಲ್ಲದೆ ಮಾಡುವ ದೇಸಿ ಆಪರೇಶನ್. ಇಲ್ಲವೋ ಪಳಗಿದ ಸರ್ಜನ್ ಮಾಡುವ ಆಪರೇಶನ್. ಯಾವದು ಸರಿ ದೊರೈಸಾಮಿಗೆ?

ದೊರೈಸಾಮಿಯ ಸೂಕ್ಷ್ಮ ಸ್ವಭಾವ ನೋಡಿದ ಗುರುವಿಗೆ ಅನ್ನಿಸುತ್ತದೆ, ಈ ಪ್ರಾಣಿ ದೇಸಿ ಆಪರೇಶನ್ ತಡೆದುಕೊಳ್ಳಲಾರ. ಇವನಿಗೆ ನುರಿತ ಸರ್ಜನ್ ಮಾಡುವ ಆಪರೇಷನ್ನೇ ಸರಿ.

ಹಾಗಾಗಿ ಒಂದಿಷ್ಟು ಕಾಸು ಕೊಟ್ಟು ದೊರೈಸಾಮಿಯನ್ನು ತಮಿಳ್ನಾಡಿನ ಒಬ್ಬ ಡಾಕ್ಟರ್ ಹತ್ತಿರ ಕಳಿಸಲಾಗುತ್ತದೆ. ಆ ಡಾಕ್ಟರ್ ಲಿಂಗ ಕತ್ತರಿಸುವ ಆಪರೇಶನ್ ಮಾಡುವ ಸ್ಪೆಷಲಿಸ್ಟ್. ಎಷ್ಟೋ ಜನರಿಗೆ ಮಾಡಿ ಹಿಜರಾ ಸ್ಪೆಷಲಿಸ್ಟ್ ಅಂತಲೇ ಫೇಮಸ್ ಆಗಿದ್ದನಂತೆ. ಆದ್ರೆ ಎಲ್ಲವೂ ಗುಪ್ತ ಗುಪ್ತ.

ಒಟ್ಟಿನಲ್ಲಿ ಲಿಂಗ ಕತ್ತರಿಸ್ಕೊಂಡು ಬಂದ ದೊರೈಸಾಮಿ ರೇವತಿಯಾಗಿ ಚಲಾವಣೆಗೆ ಬರುತ್ತಾಳೆ.

ಹಿಜರಾಗಳಿಗೆ ಅವರದ್ದೇ ಆದ ಒಂದು ಸಂಸ್ಕೃತಿಯಿದೆ. ಅವರದ್ದೇ ಆದ ಪಂಗಡಗಳಿವೆ. ಗುರುಗಳಿದ್ದಾರೆ. ಶಿಷ್ಯ ಪರಂಪರೆಯಿದೆ. ರೀತಿ ರೀವಾಜುಗಳಿವೆ. ಅದೆಲ್ಲವನ್ನೂ ಬರೆಯುತ್ತಾರೆ ರೇವತಿ ತಮ್ಮ ಆತ್ಮ ಕಥೆಯಲ್ಲಿ.

ಗಂಡಿನ ದೇಹದಲ್ಲಿ ಹೆಣ್ಣಾಗಿ ಬದುಕಲಾಗದೆ ಲಿಂಗ ಕತ್ತರಿಸ್ಕೊಂಡು ಹಿಜರಾ ಅಂತ ಆಗಿದ್ದು ಏನೋ ಆಯಿತು. ಆದ್ರೆ ಮುಂದಿನ ಜೀವನ ಹೇಗಿತ್ತು? ಗುರು ಶಿಷ್ಯ ಪರಂಪರೆ ನಿಭಾಯಿಸಲು ಆಯಿತಾ? ಕುಟುಂಬ ಕೊಟ್ಟ ಕಷ್ಟಗಳೇನು? ಪ್ರೊಫೆಶನಲ್ ಹಜಾರ್ಡ್ಸ್ (professional hazards) ಏನು? ಈ ತರಹದ ಜನರಿಗೆ ಜೀವನ ಸಂಗಾತಿ ಸಿಗುತ್ತಾನ ಹೇಗೆ?

ಇದೆಲ್ಲ ಪ್ರಶ್ನೆಗಳಿಗೆ ತಮ್ಮ ಜೀವನದ ಕಥೆಯ ಮೂಲಕ ಒಂದು ಉತ್ತರ ಕೊಡುವ ಪ್ರಯತ್ನ ಮಾಡಿದ್ದಾರೆ ರೇವತಿ ಉರ್ಫ್ ದೊರೈಸಾಮಿ.

ಲೈಂಗಿಕ ಅಲ್ಪಸಂಖ್ಯಾತರು ಅಂದು ಗುರುತಿಸಿಕೊಂಡು, ಸಂಗಮ ಅನ್ನುವ ಸಂಸ್ಥೆ ಮಾಡಿಕೊಂಡು, ತಮ್ಮ ಹಕ್ಕುಗಳಿಗೆ ಬಡಿದಾಡುತ್ತಿದ್ದಾರೆ ರೇವತಿ ಮತ್ತು ಅವರ ಸಂಗಡಿಗರು.

ಇತ್ತೀಚಿಗೆ ಓದಿದ ಪುಸ್ತಕಗಳಲ್ಲಿ ತುಂಬ ಮನಕಲಕಿದ ಪುಸ್ತಕ ಅಂದ್ರೆ ಇದೇ ಇರಬೇಕು. ಇಷ್ಟವಾದಲ್ಲಿ ಓದಿ.

ಹಿಜರಾಗಳಿಗೆ ಮಂಗಳಮುಖಿ ಅಂತ 'ಗೌರವಾನ್ವಿತ' ಹೆಸರು ಕನ್ನಡದಲ್ಲಿ ಯಾರೋ ಕೊಟ್ಟಿದ್ದಾರೆ.

ತಮಿಳಿನಲ್ಲಿ ಅರವಾಣಿ (ಅರವನ್ ಅನ್ನುವ ಅರ್ಜುನನ ಮಗನ ಹೆಂಡತಿಯರು) ಅಂತ ಒಳ್ಳೆಯ ಹೆಸರನ್ನು ಅಲ್ಲಿನ ಪೋಲೀಸ್ ಅಧಿಕಾರಿಯೊಬ್ಬರು ಕೊಟ್ಟಿದ್ದಾರಂತೆ. ಹಿಜರಾಗಳು ತಾವು ಅರವನ್ ಹೆಂಡತಿಯರು ಅಂತ ಭಾವಿಸುತ್ತಾರೆ. ಅರವನ್ ಅರ್ಜುನ ಮತ್ತು ನಾಗಲೋಕದ ರಾಜಕುಮಾರಿಯ ಮಗ. ಮಹಾಭಾರತ ಯುದ್ಧದಲ್ಲಿ ಪಾಂಡವರಿಗೆ ಗೆಲುವಾಗಲಿ ಅಂತ ಸ್ವಂತ ತನ್ನನ್ನೇ ತಾನು ಬಲಿಕೊಟ್ಟ ಧೀರ.

ಪುಸ್ತಕ ಓದಿ ಮುಗಿಸಿದಾಗ ಮಂಗಳಮುಖಿಯರೊಂದಿಗೆ ನನ್ನ ಅನುಭವಗಳು ನೆನಪಿಗೆ ಬಂದವು.

೧೯೯೦-೯೪ ರಾಜಸ್ಥಾನದ ಪಿಲಾನಿಯಲ್ಲಿ ಓದುತ್ತಿದ್ದ ಟೈಮ್. ಡೆಲ್ಲಿಗೆ ಹೋಗಿ ಅಲ್ಲಿಂದ ಹೋಗಬೇಕು. ಧಾರವಾಡದಿಂದ ಡೆಲ್ಲಿಗೆ ಹೋಗುವದು ವಯಾ ಪುಣೆ. ಪುಣೆ ರೇಲ್ವೆ ಸ್ಟೇಶನ್ ನಲ್ಲಿ ಒಬ್ಬ ದೈತ್ಯನಂತಹ ಮಂಗಳಮುಖಿ. ಎರಡು ರುಪಾಯಿಗಿಂತ ಕಡಿಮೆ ಕೊಟ್ಟವರಿಗೆ ಕೆಟ್ಟದಾಗಿ ಬಯ್ಯುತ್ತಿದ್ದ. ಹಾಗಾಗಿ ಆ ಪುಣ್ಯಾತ್ಮನಿಗೆ ತಪ್ಪದೇ ಎರಡು ರೂಪಾಯಿ ಕೊಟ್ಟು ಕೈ ಮುಗಿಯುತ್ತಿದ್ದೆ. ನಾಕು ವರ್ಷದಲ್ಲಿ ಹದಿನಾರು ಸಲ ಪುಣೆ ಮೇಲೆ ಹೋಗಿರಬಹುದು. ಮೊದಲು ಮೂರು ವರ್ಷ ಕಂಡ ಆ ಮಂಗಳಮುಖಿ ನಂತರ ಕಾಣಲಿಲ್ಲ. ಎಲ್ಲಿ ಹೋದನೋ/ ಹೋದಳೋ?

ಮುಂದೆ ೧೯೯೫ ಟೈಮ್ನಲ್ಲಿ ಬೆಂಗಳೂರ್ ಇಂದಿರಾನಗರದಲ್ಲಿ ಒಂದು ಸಣ್ಣ ಸ್ಟಾರ್ಟ್ ಅಪ್ (start up) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯ. ಒಂದು ದಿವಸ ಮಂಗಳಮುಖಿಯರ ಒಂದು ಹಿಂಡು ನಮ್ಮ ಆಫೀಸಿಗೆ ದಾಳಿ ಮಾಡಿಯೇ ಬಿಟ್ಟಿತು. ಇದ್ದ ಒಬ್ಬ ಸಣಕಲು ಸೆಕ್ಯೂರಿಟಿಯವನನ್ನು ಪಕ್ಕಕ್ಕೆ ತಳ್ಳಿದ ಅವರು ಸೀದಾ ಹೋಗಿದ್ದು CEO ಕ್ಯಾಬಿನ್ಗೆ.

CEO ಫುಲ್ ಹೈರಾಣ್.

ಕಾಸ್ ಕೊಡಯ್ಯಾ - ಅಂತ ಡಿಮ್ಯಾಂಡ್ ಮಾಡಿದೆ ಮಂಗಳಮುಖಿಯರ ಗುಂಪು.

CEO ಗೆ ಪೂರ್ತಿ ಉರಿದಿದೆ. ಸಿಟ್ಟು ಬಂದಿದೆ. ಉಗಿದಿದ್ದಾನೆ. ಹೋಗಿ, ಹೋಗಿ, ಅಂದಿದ್ದಾನೆ.

ಮಂಗಳಮುಖಿಯರಿಗೆ ಹೀಗೆ ಅನ್ನಿಸಿಕೊಳ್ಳುವದು ಹೊಸದಾ? ಅವರಿಗೆ ಕಾಸ್ ವಸೂಲಿ ಮಾಡುವ ರೀತಿ ಗೊತ್ತಿಲ್ಲವಾ?

ಲಂಗ, ಸೀರೆ, ಮತ್ತೊಂದು ಮೊಣಕಾಲ ಮೇಲೆ ಎತ್ತಿದವರೇ ಸರ್ವಾಂಗ ಪ್ರದರ್ಶನ ಮಾಡುತ್ತಾ CEO ಚೇಂಬರ್ ನಲ್ಲಿ ಅವರ ಹಿಜರಾ ಡ್ಯಾನ್ಸ್ ಮಾಡಿಯೇ ಬಿಟ್ಟರು. ಜೊತೆಗೆ ಹಿಜರಾ ಚಪ್ಪಾಳೆ, ಕ್ಯಾಕೆ ಹಾಕಿದ ನಗು ಬೇರೆ. CEO  ಚೇಂಬರ್ ಬಿಟ್ಟು ಹೊರಗೆ ಓಡಿದ. ನಂತರ ಬೇರೆ ಯಾರೋ ಕಾಸು ಅದು ಇದು ಕೊಟ್ಟು ಒಟ್ಟಿನಲ್ಲಿ ಅವರನ್ನು ಸಾಗಹಾಕಿದರು.

ಹೋದ ವರ್ಷ ಬೆಂಗಳೂರಿನ RT ನಗರದಲ್ಲಿರುವ ಕಾಫೀ ಡೇ ಗೆ ಹೋದರೆ, ಒಬ್ಬ ಮಂಗಳಮುಖಿ ಬಾಗಿಲು ತೆಗೆದು, ನಮಸ್ಕಾರ ಎಂದು ಸ್ವಾಗತ ಕೋರಬೇಕೆ?!! ಏನಪ್ಪಾ ಇದು? ಕಾಫೀ ಡೇ ಇವರನ್ನು ಸ್ವಾಗತಕಾರಿಣಿಯರು ಅಂತ ಇಟ್ಟುಕೊಂಡಿದೆಯೋ ಹೇಗೆ? ಅಂತ ಸಂಶಯ ಬಂತು. ಇಲ್ಲ. ಪೈಸಾ ವಸೂಲಿಗೆ ಬಂದವಳು ಇರಬೇಕು.

ನಾನಾ ಪಾಟೇಕರ್ ಮಂಗಳಮುಖಿಯೊಂದಿಗೆ ಇರುವ ಒಂದು ಕಾಮೆಡಿ ಸೀನ್ ನೋಡಿ..... 

Monday, November 26, 2012

Winey ಆದ ವೈನಿ

ಶನಿವಾರ ಮುಂಜಾನೆ ಮುಂಜಾನೆ ಫೋನ್ ಟ್ರೋಯ್  ಟ್ರೋಯ ಅಂತು.

ಯಾರಪಾ? ಶನಿವಾರ ಮುಂಜಾನೆ ಮುಂಜಾನೆ ಫೋನ್ ಮಾಡಿದ ಶನಿ ಅಂತ ನೋಡಿದೆ. 

ಅರ್ರೇ !!! ನನ್ನ ದೋಸ್ತ ಚೀಪ್ಯಾ. ಅವನ ಶ್ರೀಪಾದ ಖಂಡುರಾವ್ ಡಕ್ಕನೆಕರ್. 

ಯಾಕ ಇಷ್ಟು ಲಗೂನ ಫೋನ್ ಮಾಡ್ಯಾನ? 

ಆವಾ ಮತ್ತ ಅವನ ಹೆಂಡ್ತಿ ರೂಪಾ ವೈನಿ ಇಬ್ಬರೂ ಪ್ರತಿ ಶನಿವಾರ ಸಪ್ತಾಪುರ ಹನುಮಪ್ಪನ ಗುಡಿಗೆ ಹೋಗಿರ್ತಾರ ಈ ಹೊತ್ತಿನ್ಯಾಗ. ಇವತ್ತ ಹೋಗಿಲ್ಲೇನು ಹಾಂಗಿದ್ರಾ?

ಹೀಂಗ ಭಾಳ ಪ್ರಶ್ನೆ ಬಂದವು.

ಇರಲಿ, ನೋಡೋಣ ಅಂತ ಫೋನ್ ಎತ್ತಿ ಹಲೋ ಅನ್ನೂದ ತಡ, ಆಕಡಿಂದ ಚೀಪ್ಯಾ ಹೊಯ್ಕೊಳ್ಳೋದು ಕೇಳಿಸ್ತು.

ಏ!!!!ಇವನ!!!!ಅದು...ಅದು....ಇಕಿ ಕುಡುದು ಕೂತಾಳೋ! ಲಗೂನ ಬಾರೋ ದೋಸ್ತ. ಅಯ್ಯೋ!!!! ನಾ ಸತ್ತೆ!!!!, ಅಂತ ಚೀಪ್ಯಾ ಹೇಳ್ಕೊತ್ತ ಇದ್ದಾಗ ಏನೋ ಆ ಕಡೆ ಧಡ್ ಅಂತ ಸದ್ದ ಬ್ಯಾರೆ ಆತು. ಬಿದ್ದಿರಬೇಕು ಗಜ್ಜು ಯಾರಿಗೋ.

ಏನ ಚೀಪ್ಯಾ? ಏನಾತೋ? ಸ್ವಲ್ಪ ಸಮಾಧಾನದಿಂದ ಹೇಳು, ಅಂತ ಹೇಳಿದೆ.

ಏನ ಸುದ್ದಿನ ಇಲ್ಲ. ಆ ಕಡೆ ಪಿನ್ಡರಾಪ್(pin drop) ಸೈಲೆನ್ಸ್.

ಚೀಪ್ಯಾ?ಚೀಪ್ಯಾ? ಇದ್ದಿಯೇನೋ? ಯಾರು ಏನು ಕುಡದರು?, ಅಂತ ಮತ್ತ ಕೇಳಿದೆ.

ಇಕಿನನೋ. ನಿಮ್ಮ ರೂಪಾ ವೈನಿ, ಅಂತ ಹೇಳಿದ ಚೀಪ್ಯಾ ಮಾತ ನಿಲ್ಲಿಸಿದ.

ಏನು!!?? ರೂಪಾ ವೈನಿ ವಿಷಾ ಕುಡದಾರ? ವೈನಿ!!........ವೈನಿ!!....ಯಾಕ್ರೀ ಹಿಂಗ ಮಾಡಿದ್ರೀ? ಚೀಪ್ಯಾ!! ಚೀಪ್ಯಾ!! ವೈನಿ ಹೋಗಿ ಬಿಟ್ರೇನೋ? ಪಾಪ....ಪಾಪ....ಆದರೂ ಮುತ್ತೈದಿ ಸಾವು ತಂದಕೊಂಡರು ಬಿಡು.....ವೈನಿ....ವೈನಿ......, ಅಂತ ನಾನೂ ಫೋನಿನ್ಯಾಗ ಸ್ವಲ್ಪ ದುಃಖ ವ್ಯಕ್ತ ಪಡಿಸಿದೆ.

ಲೇ....ಹುಸ್ಸೂಳೆಮಗನ....ವಿಷಾ ಕುಡದಿಲ್ಲೋ ನಮ್ಮಪ್ಪಾ. ಮತ್ತ ಸತ್ತಿಲ್ಲ. ಅಂತಾ ಲಕಿ ನಾ ಇಲ್ಲಪಾ. ನನಗೆಲ್ಲೆ ಅಂತಾ ಅದೃಷ್ಟ? ಸತ್ತ ಮ್ಯಾಲೂ ದೆವ್ವ ಆಗಿ ಕಾಡೋ ಪೈಕಿ ನಿಮ್ಮ ವೈನಿ. ಎಣ್ಣಿ ಕುಡಕೊಂಡ ಕೂತಾಳೋ. ಕುಡದ ಹಾಪ್ ಆಗಿ ಕೂತು ಬಿಟ್ಟಾಳ. ನೀ ಬಂದ್ರ ಅಕಿನ್ನ ಹಿಡಿಬೋದು ಅಂತ ಆಶಾ ಅದ, ಅಂದಾ ಚೀಪ್ಯಾ.

ಎಣ್ಣಿ ಕುಡದ ಕೂತಾಳ ವೈನಿ? ಏನು "ಅಯಿಲ್ ಪುಲ್ಲಿಂಗ್"(oil pulling) ಅನ್ನೋ ಚಿಕಿತ್ಸಾ ಶುರು ಮಾಡ್ಯಾರ ಏನು ವೈನಿ? ಮುಂಜಾನೆ ಎದ್ದ ಕೂಡಲೇ ಮುಖಾ ತೊಳಿಯೋಕಿಂತ ಮೊದಲು ಒಂದು ಚಮ್ಮಚ ಒಳ್ಳೆಣ್ಣಿ ಬಾಯಾಗ ಹಾಕ್ಕೊಂಡು, ಬಾಯ್ತುಂಬಾ ಓಡಾಡಿಸಿ, ಉಗಳಿದ್ರಾ ಭಾಳ ಚೊಲೋ ಅಂತ ಹೆಲ್ತಿಗೆ. ಮನ್ನೆ  "ಲಂಕೇಶ್ ಪತ್ರಿಕೆ" ಒಳಗೂ ಬಂದಿತ್ತು, ಅಂತ ನಾ ಹೇಳಿದೆ.

ಏ!!!!ಏನ್ ಪುಲ್ಲಿಂಗ ಹಚ್ಚಿ? ನಿಮ್ಮ ವೈನಿ ಅನ್ನಲಿಕತ್ತೇನಿ, ಪುಲ್ಲಿಂಗ ಅನ್ತಿಯಲ್ಲಲೇ ಹಾಪಾ. ಅಕಿ ಏನಿದ್ರೂ ಸ್ತ್ರೀಲಿಂಗ. ಸ್ತ್ರೀಲಿಂಗಕ್ಕ ಅಪವಾದನಾ ಇರಬಹುದು ಅಕಿ. ಆದರೂ ಗವರ್ನಮೆಂಟ್ ಪ್ರಕಾರ್ ಅಕಿ ಸ್ತ್ರೀಲಿಂಗ. ಹಾಂಗಿದ್ದಾಗ ಆಯಿಲ್ ಮಾಡೋ ಪುಲ್ಲಿಂಗ ಅದು ಇದು ಅಂತಿಯಲ್ಲೋ! ಥತ್ ನಿನ್ನ. ಲಗೂನ ಬಾರೋ. ಇಕಿನ ಹಿಡಿಲಿಕ್ಕೆ ಆಗವಲ್ಲದು, ಅಂತ ಮತ್ತ ಹೇಳಿದ ಚೀಪ್ಯಾ.

ಚೀಪ್ಯಾ ಭಾಳ್  ಟೆನ್ಷನ್ ಒಳಗ ಇದ್ದಾಂಗ ಅನ್ನಿಸ್ತು. ಅದಕ್ಕ ನಾ ಆಯಿಲ್ ಪುಲ್ಲಿಂಗ್ (oil pulling) ಚಿಕಿತ್ಸಾ ಅಂದ್ರಾ, ಹೆಂಡ್ತಿ ಸ್ತ್ರೀಲಿಂಗ ಅಂತಾನ. ಹಾಪಾ. ಬರೇ ಹೆಸರಿಗೆ ಮಾತ್ರ ಸ್ತ್ರೀಲಿಂಗ. ಸ್ತ್ರೀಲಿಂಗಕ್ಕ ಅವಮಾನ ಅಂತಾನ. ಪಾಪ! ರೂಪಾ ವೈನಿಗೆ ಅಂಥಾ ರೂಪಾ ಇರಲಿಕ್ಕೆ ಇಲ್ಲ. ಹಂಗಂತ ಗವರ್ನಮೆಂಟ್ ಸ್ತ್ರೀಲಿಂಗ ಅಂತ ಅನ್ನೋದ? ಇವಾ ಏನ ಮಹಾ ಚಂದ ಇದ್ದಾನೋ ಆಚಾರಿ! ಅದು ಇದು ಅಂತಾನ. ಏನೋ ಬ್ಯಾರೇನ ಕಾರಣ ಇರಬೇಕು ಅನ್ನಿಸ್ತು.

ಮತ್ತೆಂತಾ ಎಣ್ಣಿ ತೊಗೊಂಡಾರೋ ವೈನಿ? ಏನು ಜುಲಾಬಿಗೆ ಅಂತ ಹರಳೆಣ್ಣಿ ಅಥವಾ ಔಡಲ ಎಣ್ಣಿ ತೊಗೊಂಡು ಕೂತಾರ ಏನು? ಅದು ಒಳ್ಳೇದೋ. ವರ್ಷಕ್ಕ ಒಂದೆರೆಡು ಸಲ ಹರಳೆಣ್ಣಿ ತೊಗೊಂಡು, ಸಿಸ್ಟಮ್ ಸ್ವಚ್ಛ ಮಾಡ್ಕೊಂಡ್ರ ಭಾಳ್ ಚೊಲೋ. ಅದಕ್ಕ ನೀ ಯಾಕ್ ಚಿಟಿ ಚಿಟಿ ಚೀರ್ಲಿಕತ್ತಿಯೋ ನಮ್ಮಪ್ಪಾ?, ಅಂತ ಕೇಳಿದೆ.

ಹೋಗ್ಗೋ ನಿನ್ನ. ಎಲ್ಲಿ ಹರಳೆಣ್ಣಿ ಹಚ್ಚಿ. ನಿಮ್ಮ ರೂಪಾ ವೈನಿ ಮಸಡಿ ಯಾವಾಗಲೂ ಹರಳೆಣ್ಣಿ ಕುಡದವರಾಂಗ ಇರ್ತದ. ಆ ಎಣ್ಣಿ ಯಾವದೂ ಅಲ್ಲ. ಲಗೂನ ಬಾರೋ ದೋಸ್ತಾ. ಹಿಡಿಲಿಕ್ಕೆ ಆಗವಲ್ಲದು ಇಕಿನ. ಇಕಿ ಎಣ್ಣಿ ಕುಡದು ಯಾವ ಯಾವ್ದೋ ಭಾಷಾದಾಗ, ಏನೇನೋ ಮಾತಾಡ್ಲಿಕತ್ತಾಳ. ನೀ ಬಾರಪಾ. ಇಲ್ಲಂದ್ರಾ ನನಗ ಮೆಂಟಲ್ ಹಾಸ್ಪಿಟಲ್ ಗೆ ಫೋನ್ ಮಾಡೋ ಪರಿಸ್ಥಿತಿ ಬರ್ತದ ನೋಡೋ. ನಮ್ಮ ಮನಿತನದ ಮರ್ಯಾದಿ ಹೋಗ್ತದೋ. ನನಗ ಇಬ್ಬರು ಹೆಣ್ಣ್ಮಕ್ಕಳು ಇದ್ದಾರೋ. ಅವ್ವಾ ಮೆಂಟಲ್ ಹಾಸ್ಪಿಟಲ್ ಗೆ ಹೋಗಿ ಬಂದಾಕಿ ಅಂದ್ರಾ ಯಾರು ಅವರನ್ನ ಯಾರು ಮದ್ವಿ ಮಾಡ್ಕೊತ್ತಾರೋ? ಬಾರೋ. ಬಾರೋ, ಅಂತ ಭಾಳ ಅಂಗಾಲಾಚಿ ಬೇಡಿಕೊಂಡ ನಮ್ಮ ದೋಸ್ತ ಚೀಪ್ಯಾ.

ಮತ್ತೂ ಜಟಿಲ ಆಗುತ್ತಲೇ ಹೋತು. ಯಾವ ಎಣ್ಣಿ ತೊಗೊಂಡು ಕೂತಿರಬಹದು ರೂಪಾ ವೈನಿ?

ಚೀಪ್ಯಾ, ಚಿಂತಿ ಮಾಡಬ್ಯಾಡ ನೀ. ನಾ ಬಂದ ಬಿಟ್ಟೆ. ನಂದು ಧೋತ್ರಾ ಸುಮಾರ ಒಣಿಗ್ಯದ. ಅದರ ಮ್ಯಾಲೆ ಒಂದು ಸ್ವಲ್ಪ ಗರಂ ಇಸ್ತ್ರೀ ತಿಕ್ಕಿ, ಪೂರ್ತಿ ಒಣಿಗಿಸಿಕೊಂಡು ಹೊಂಟ ಬಿಡ್ತೇನಿ. ಓಕೆ ಏನಪಾ? ಆದ್ರಾ ಒಂದು ಮಾತು ಹೇಳೋ. ಯಾವ ಎಣ್ಣಿ ಅಂತ, ಅಂತ ಕೇಳಿದೆ.

ನಾವು ಶನಿವಾರ ಹನುಮಪ್ಪನ ವೃತಾ ಅಂತಾ ಹೇಳಿ ಇಡೀ ದಿವಸ ಧೋತ್ರಾ ಮಾತ್ರ ಧರಿಸ್ತೇವಿ. ಏನೋ ನಮ್ಮ ಮನಿ ಪದ್ಧತಿ. ನಾವೂ ನಡಸಬೇಕಲ್ಲ. ಅದಕ್ಕ. 

ಏ, ಒಳಗ ಅಂಡರ್ವೇರ್ ಇರ್ತದ್ರೀ. ಬರೇ ಧೋತ್ರಾ ಅಂದ್ರ ಶನಿವಾರ ಪ್ಯಾಂಟ್ ಹಾಕಂಗಿಲ್ಲ ಅಂತ. ಅಷ್ಟ. ಮತ್ತ ಏನರ ಏನರ ಊಹಾ ಮಾಡಿಕೊಂಡು ಕಾಡಿಸಬ್ಯಾಡ್ರೀ. ಈಗ ಹೇಳೇನಿ.

ಎಣ್ಣಿ ಅಂದ್ರಾ...ಅಂದ್ರಾ...ಶೆರೆ ಕುಡ್ಕೊಂಡು ಕೂತಾಳೋ. ನಿಮ್ಮ ರೂಪಾ ವೈನಿ ಒಂದು ಫುಲ್ ಬಾಟಲ್ ವೈನ್ ಕುಡದು ಕೂತಾಳೋ. ಅದ ಎಣ್ಣಿ. ಹೊಟ್ಟಿಯೊಳಗ ಹೋದ ಪರಮಾತ್ಮಾ ಏನೇನೋ ಮಾತಾಡ್ಸ್ಲಿಕತ್ತಾನ. ಅದ ಕಂಟ್ರೋಲಿಗೆ ಬರ್ವಲ್ಲದು. ಓಣಿ ಮಂದಿ ಎಲ್ಲಾ ಹಣಿಕಿ ಹಣಿಕಿ ನೋಡಿ, ಕಿಸಿ ಕಿಸಿ ನಗ್ಲಿಕತ್ತಾರ. ಬಾರೋ!!!!, ಅಂತ ಅಂದಾ ಚೀಪ್ಯಾ.

ಹೋಗ್ಗೋ ನಿನ್ನ, ಚೀಪ್ಯಾ. ರೂಪಾ ವೈನಿ ವೈನ್ ಕುಡದು ಖರೇನಾ winey ಆಗ್ಯಾರ ಅಂತ ಆತು. ನಾ ಬಂದಾ ಬಿಟ್ಟೆ. ಹಿಂಗ ಪರಿಸ್ಥಿತಿ ಅದ ಅಂದಾ ಮ್ಯಾಲೆ ನಾ ಧೋತ್ರಾ ಒಣಗಿಸಿಕೋತ್ತ ಕೂಡಂಗಿಲ್ಲ. ಹ್ಯಾಂಗೂ ಇವತ್ತು ನಂದು ಉಪವಾಸ ಅದ. ಹಶಿ ಧೋತ್ರಾ ಇದ್ದರೂ ಏನ ಡೇಂಜರ್ ಇಲ್ಲ. ಅದನ್ನಾ ಉಟ್ಟಗೋಂಡವನ ಬಂದ ಬಿಡ್ತೇನಿ. ನೀ ಏನ ಚಿಂತಿ ಮಾಡ ಬ್ಯಾಡ. ಓಕೆ? ಓಕೆ?, ಅಂತ ಹೇಳಿ ಸ್ವಲ್ಪ ಧೈರ್ಯ ಕೊಟ್ಟು ಫೋನ್ ಇಟ್ಟೆ.

ಹಸಿ ಧೋತ್ರ ಹಸಿ ಬಟ್ಟಿ ಯಾಕ ಹಾಕ್ಕೋಬಾರದು ಅಂತ ಮತ್ತ ಯಾವಾಗರ ಹೇಳತೇನಿ. ಈಗ ಟೈಮಿಲ್ಲ.

ಧೋತ್ರಾ ಉಟ್ಟಗೋಂಡು, ಮ್ಯಾಲೆ ಜುಬ್ಬಾ, ತಲಿ ಮ್ಯಾಲೆ ಕರಿ ಟೊಪ್ಪಿಗಿ ಹಾಕ್ಕೊಂಡು, ಓಲ್ಡ್ ಲ್ಯಾಮ್ಬ್ರೆಟ್ಟಾ ಸ್ಕೂಟರ್ ಹತ್ತಿ ಚೀಪ್ಯಾನ ಮನಿಗೆ ಬಂದು ಮುಟ್ಟಿದೆ ಅಂತ ಆತು.

ಪಡಸಾಲ್ಯಾಗ ಕೂತಿದ್ರು ವೈನಿ. ಬಾಜೂಕ ಚೀಪ್ಯಾ ಪಾಪದ ಲುಕ್ ಕೊಟ್ಟಗೋತ್ತ ನಿಂತಿದ್ದ.

ನಮಸ್ಕಾರ ವೈನಿ. ಹ್ಯಾಂಗಿದ್ದೀರಿ? ಎಲ್ಲಾ ಆರಾಮ ಏನು?, ಅಂತ ಕೇಳಿದೆ.

ರೂಪಾ ವೈನಿ ಗಹಗಹಿಸಿ ನಕ್ಕರು. ಚಾವಣಿ ಹಾರಿ ಹೋಗು ಹಾಂಗ ನಕ್ಕರು. 

ಪಕ್ಕದ ಮನಿ ಫಣಿಯಮ್ಮ ತಮ್ಮ ಬೋಡ ತಲಿ ಮ್ಯಾಲೆ ಕೆಂಪ ಸೀರಿ ಸೆರಗ ಸರಿ ಮಾಡ್ಕೋತ್ತನ ಕಿಸಿ ಕಿಸಿ ನಕ್ಕರು. ಸಂಡಾಸಕ್ಕ ಹೊಂಟಿದ್ದರು ಅಂತ ಅನ್ನಸ್ತದ. ಸೊಕ್ಕು ನೋಡ್ರೀ. 

ಬಾರೋ...ಮಂಗ್ಯಾ....ಮಂಗೇಶ್....ಬಾರಪಾ ನನ್ನ ಪ್ರೀತಿ ಮೈದುನಾ....ಏ ಮಂಗ್ಯಾ...ಅಂದವರಾ ಅವನೌನ್ ಬಾಯಾಗ ಬೆಟ್ಟ ಹೆಟ್ಟಿ ಸೀಟಿ ಹೊಡದ ವೈನಿ ಮತ್ತ ಪೆಕಪೆಕಾ ಅಂತ ನಕ್ಕರು.

ನಾ ಫುಲ್ ದಂಗಾದೆ! ಏನು ಬ್ರಾಹ್ಮರ ಮುತ್ತೈದಿ ವೈನಿ ರೆಡ್ ಲೈಟ್ ಮಂದಿ ಗತೆ ಸೀಟಿ ಹೊಡೆಯೋದು ಅಂದ್ರಾ!!!!ಶಿವ ಶಿವಾ!

ಒಹೋ! ವೈನಿ ಮ್ಯಾಲೆ ವೈನಿನ ಪ್ರಭಾವ ಜೋರ್ ಆದಂಗ ಅದ ಅಂತ ಅನ್ನಿಸ್ತು. ಸ್ಟ್ರಾಂಗ್ ವೈನ್ ಇರಬೇಕು. ಮತ್ತ ಮುಂಜಾನೆ ನಾಷ್ಟಾ ಬ್ಯಾರೆ ಆಗಿಲ್ಲ ಹೆಚ್ಚಾಗಿ. ಹಸಿದ ಹೊಟ್ಟಿಯೊಳಗ ಫುಲ್ ಬಾಟಲ್ ಎತ್ತಿ ಬಿಟ್ಟಾರ. ಅದಕ್ಕ ಮಸ್ತ ಕಿಕ್ ಕೊಟ್ಟು ವೈನಿ ಪರಿಸ್ಥಿತಿ ಹಿಂಗ ಆಗ್ಯದ ಅಂತ ಅನ್ನಿಸ್ತು.

ರೀ...ವೈನಿ.....ನಾನು ಮಹೇಶ. ಮಂಗೇಶ ನನ್ನ ಕಸಿನ್. ಯಾಕ? ಗುರ್ತು ಹತ್ತಲಿಲ್ಲ ಏನು?, ಅಂತ ಕೇಳಿದೆ.

ರೂಪಾ ವೈನಿ ಮತ್ತ ನಕ್ಕರು. ವಿಕಾರವಾಗಿ ತೊಡಿ ತಟ್ಟಿ ತಟ್ಟಿ ನಕ್ಕರು.

ಏ....ಗೊತ್ತಾತೋ. ಆದ್ರಾ ನಿನಗ ಒಂದು ಮಾತ ಗೊತ್ತದ ಏನು? ನಿನಗ ನಾವು ಮಂಗ್ಯಾ ಅಂತೇವಿ. ಎಂದರಾ ಕನ್ನಡಿ ಒಳಗ ಮಸಡಿ ನೋಡಿಕೊಂಡಿಯೇನು? ಹೆಸರು ಮಹೇಶ. ಮಂಗೇಶ ಇದ್ದಾಂಗ ಇದ್ದಿ. ಅದೂ ದೊಡ್ಡ ಸೈಜಿನ ಹೊನಗ್ಯಾ ಮಂಗ್ಯಾ, ಅಂದ ವೈನಿ ನಕ್ಕೋತ್ತನ, ಅಲ್ಲೇನ್ರೀ ಶ್ರೀಪಾದ ರಾವ್?, ಅಂತ ಅಕಿ ಗಂಡ ಉರ್ಫ್ ಚೀಪ್ಯಾನ ಕೇಳಿದಳು.

ಆವಾ ಏನು ಅಂದಾನ? ಬೆಬ್ಬೆ...ಬೆಬ್ಬೆ..ಅಂದಾ.

ಶೆರೆ ಕುಡದವರು ಸುಳ್ಳು ಹೇಳಂಗಿಲ್ಲ ನೋಡ್ರೀ. ನಮ್ಮ ರೂಪಾ ವೈನಿ ಸಹಿತ ನನ್ನ ಮ್ಯಾಲಿನ ಖರೆ ಫೀಲಿಂಗ್ ಏನು ಅಂತ ಹೇಳಿಯೇ ಬಿಟ್ಟಳು. ಭಾಳ ಏನೂ ಬೇಜಾರ ಆಗಲಿಲ್ಲ. ಹೊನಗ್ಯಾ ಹಾಂಗ ಇದ್ದಿದ್ದು ಖರೆ. ಅದರ ಮ್ಯಾಲೆ ಮಂಗ್ಯಾನ ತರಹ ಕಂಡ್ರ ನಾವೇನ ಮಾಡೋಣ?

ಏನ ವೈನಿ? ಯಾಕೋ ಮುಂಜಾನೆ ಮುಂಜಾನೆ ಫುಲ್ ಮೂಡಿನ್ಯಾಗ ಬಂದೀರಿ? ಏನು ವಿಶೇಷಾ?, ಅಂತ ಕೇಳಿದೆ.

ಏನಿಲ್ಲೋ ಮಂಗೇಶ. ಅಲ್ಲಲ್ಲ ಮಹೇಶ. ನಿನ್ನೆ ನಿಮ್ಮ ದೋಸ್ತ ಕರೀಂ ಬಂದಿದ್ದ. ಏನೋ ಒಂದು ಬಾಟಲ್ ಕೊಟ್ಟು ಇವರಿಗೆ ಕೊಡ್ರೀ ಅಂದಾ. ಏನೋ ಇದು? ಅಂತ ಕೇಳಿದೆ. ಅವಾ ಕರೀಂ, ಏನಿಲ್ಲ ಒಂದಿಷ್ಟು ಇಂಪೋರ್ಟೆಡ್ ದ್ರಾಕ್ಷಾ ರಸಾ ಅಂತ ಹೇಳಿ ಕೊಟ್ಟು ಹೋಗಿದ್ದ. ಇವತ್ತು ಮುಂಜಾನೆ ನೆನಪಾತು. ಅದಕ್ಕ ಚಾ ಕುಡಿಯೋಕಿಂತ ಮೊದಲು ಒಂದು ಸ್ವಲ್ಪ ಫ್ರುಟ್ ಜೂಸ್ ಕುಡಿಯೋಣ  ಅಂತ ಕುಡದೆ. ಏನಪಾ! ಮಸ್ತ ರುಚಿ ಇತ್ತು. ಸ್ವಲ್ಪ ಒಗರು ಒಗರು ಇತ್ತು. ಸ್ವಲ್ಪ ಉಪ್ಪಿನಕಾಯಿ ನಾಲಿಗ್ಗೆ ಹಚ್ಚಿಕೊಂಡೆ ನೋಡು ಇವನ, ಏನ ಮಸ್ತ ಟೇಸ್ಟ್ ಬಂತು ಅಂತಿ. ಹಾಂಗ ಪಾವ್ ಶೇರ್ ಉಪ್ಪಿನಕಾಯಿ ನಂಜಕೋತ್ತ  ಪೂರ್ತಿ ಬಾಟಲ್ ಕುಡಿದು ಬಿಟ್ಟೆ ಏನಪಾ. ಏನು ಮಸ್ತ ಅದನೋ!, ಅನ್ನುತ್ತ ವೈನಿ winey ಹ್ಯಾಂಗ ಆದ್ರು ಅನ್ನೋದನ್ನ ತಿಳಿಸಿದರು.

ಒಟ್ಟಿನ್ಯಾಗ ವೈನಿ ಫುಲ್ ಬಾಟಲ್ ವೈನ್ ಕುಡದು ವೈನಿ winey ಆಗಿ ಬಿಟ್ಟಿದ್ದರು.

ಚೀಪ್ಯಾನ ಈ ಕಡೆ ಕರದೆ. ಬಂದಾ.

ಚೀಪ್ಯಾ....ವೈನಿ ಗಿಚ್ಚಾಗಿ, ಕರೀಂ ನಿನಗ ಅಂತ ತಂದು ಕೊಟ್ಟ, ವೈನ್ ಕುಡದು ಫುಲ್ ಚಿತ್ತ ಆಗಿ ಬಿಟ್ಟಾರ. ಏನ ಚಿಂತಿ ಮಾಡು ಕಾರಣ ಇಲ್ಲ. ವೈನೀನ ಇರಿಟೇಟ್ ಮಾಡಬ್ಯಾಡ. ಈಗ ಅವರಿಗೆ ಮಂಪರು ಬಂದು ಸ್ವಲ್ಪ ಹೊತ್ತು ಮಲ್ಕೊತ್ತಾರ. ಮಲ್ಕೊಳ್ಳಲಿ. ಎದ್ದ ಮ್ಯಾಲೆ ಚಾ ಕಾಫಿ ಕುಡಿಸು. ಎಲ್ಲಾ ಸರಿ ಆಗ್ತದ, ಅಂತ ಹೇಳಿದೆ.

ಖರೇನಾ ಸರಿ ಆಗ್ತದ ಏನು? ಮೆಂಟಲ್ ಹಾಸ್ಪಿಟಲ್ ಗೆ ಹಾಕೋದು ಬ್ಯಾಡ ಹೌದಿಲ್ಲೋ?, ಅಂತ ಡಬಲ್ ಖಾತ್ರಿ ಮಾಡಿಕೊಂಡ ಚೀಪ್ಯಾ.

ಏ...ಚಿಂತಿ ಬ್ಯಾಡೋ. ನೋಡಲ್ಲೇ....ಅಲ್ಲೇ ವೈನಿ ಅಡ್ಡಾಗೇ ಬಿಟ್ಟರು. ಒಂದು ಕೌದಿನೋ, ದುಪ್ಪಟಿನೋ ತಂದು ಹೊದಸು. ಇನ್ನ ನಾಕ ತಾಸ್ ಏಳಂಗಿಲ್ಲ ಅಕಿ, ಅಂತ ಹೇಳಿದೆ.

ಚೀಪ್ಯಾ ದುಪ್ಪಟಿ ತರಲಿಕ್ಕೆ ಅಂತ ಒಳಗ ಹೊಂಟಾ.

ಅಣ್ಣಾ!!! ನಮಗ ಹಶಿವಿ. ಏನಾರಾ ತಿನ್ನಲಿಕ್ಕೆ ಕೊಡು. ಅವ್ವಾ ಯಾಕ ಹೀಂಗ ಮಲ್ಕೊಂಡಾಳ?, ಅಂತ ಕೇಳಿದ್ರು ಚೀಪ್ಯಾನ ಇಬ್ಬರು ಕನ್ಯಾರತ್ನಗಳು.

ಚೀಪ್ಯಾಗ ಎಲ್ಲಿಂದ ಸಿಟ್ಟು ಬಂತೋ ಗೊತ್ತಿಲ್ಲ.

ನಿಮ್ಮೌರಾ!!!!ಎಲ್ಲಾ ನಿಮ್ಮ ಅವ್ವನಿಂದ. ಇವತ್ತ ಶನಿವಾರ. ಉಪವಾಸ. ಓಡ್ರೀ. ಓಡ್ರೀ, ಅಂತ ಚೀರಿಬಿಟ್ಟ ಪಿತಾಶ್ರೀ ಚೀಪ್ಯಾ.

ಪಾಪ! frustration ಒಳಗ ಬಂದ ಆದ್ಮಿ ಇನ್ನೇನು ಮಾಡಿಯಾನು?

ಒಟ್ಟಿನಲ್ಲಿ ನಮ್ಮ ದೋಸ್ತ ಕರೀಂ ಸಾಬ್ ಚೀಪ್ಯಾಗ ಅಂತ ತಂದು ಕೊಟ್ಟಿದ್ದ ವೈನ್ ರೂಪಾ ವೈನಿಯವರ ಪಾಲಾಗಿ ವೈನಿ ಖರೇನಾ winey ಆಗಿದ್ದು ಮಾತ್ರ.....ಏನು ದುರಂತ ಅಂತೀರೇನು?

** ಚೀಪ್ಯಾ, ರೂಪಾ ವೈನಿ ಅವರ ಪಾತ್ರ ಪರಿಚಯಕ್ಕಾಗಿ ಓದಿ - ಟಗರ್ಮಂಗೋಲಿ!

** oil pulling  - http://oilpulling.com/

Tuesday, November 20, 2012

ಸಿಟ್ಟಿಗೆದ್ದ (ಮಾಜಿ) ಗಂಡ, ಸತ್ತುಬಿದ್ದ ಮಿಂಡ...ಕೆನಡಿ ಹತ್ಯೆಯ ಬಗ್ಗೆ ಹೊಸ ಮಾಹಿತಿ

ಆತ ಜಗದೇಕ ವೀರ. ಆಕೆ ಅತಿಲೋಕ ಸುಂದರಿ. ಇಬ್ಬರೂ ಕೂಡಿ ಕೇಕೆ ಹೊಡೆಯುತ್ತಿದ್ದರೆ, ಅಮೇರಿಕಾದ ಶ್ವೇತಭವನದ ತುಂಬಾ ಅದೇ ಮಾರ್ದನಿಸುತ್ತಿತ್ತು.

ಅವರಿಬ್ಬರೂ ಆಗಾಗ ಭೆಟ್ಟಿಯಾಗಿ, ಸಾಹಿತ್ಯ, ಕಲೆ ಅದು ಇದು ಎಲ್ಲಾ ಚರ್ಚೆ ಮತ್ತೊಂದು ಮಾಡಿ, ನಂತರ ಒಂದು ಫೈನಲ್ ಅನ್ನುವ ಹಾಗೆ ಕಾಮಕೇಳಿಯ ಒಂದು ಸೆಷನ್ ಕೂಡ ಮಾಡಿ ಮುಗಿಸುತ್ತಿದ್ದುದು ಹಳೆ ಮಾತಾಗಿತ್ತು. ಆದರೆ ಆವತ್ತಿನ ಸೆಷನ್ನಿಗೆ ಬೇರೆಯ ಮಹತ್ವವೇ ಇತ್ತು.

ಆಕೆ ಅವನಿಗಾಗಿಯೇ ಸ್ಪೆಷಲ್ LSD ಎಂಬ ಮಾದಕ ದ್ರವ್ಯ ದೂರದ ಬಾಸ್ಟನ್ ನಗರದಿಂದ, LSD ಪಿತಾಮಹ ಎಂದೇ ಖ್ಯಾತರಾಗಿದ್ದ ಹಾರ್ವಡ್ ಯುನಿವರ್ಸಿಟಿಯ ಡಾ. ಟಿಮೊತಿ ಲೀರಿ ಅವರಿಂದಲೇ ಇಬ್ಬರಿಗೆ ಸಾಕಾಗುವಷ್ಟು ತಂದು ಬಿಟ್ಟಿದ್ದಳು!!!!! ಅದರ ಉಪಯೋಗ ಮಾಡುವದು ಹೇಗೆ, ನಂತರ ಏನು, ಎಲ್ಲ ಸರಿಯಾಗಿ ಕೇಳಿಯೇ ಬಂದಿದ್ದಳು. ಈಗ ಇಬ್ಬರೂ ಮಸ್ತಾಗಿ LSD ಏರಿಸಿ, ಚಿತ್ತಾಗಿ,  ಮೈಗೆ ಮೈ ಹೊಸೆಯುತ್ತಿದ್ದರೆ,  ಈ ಸರಿಯ ಸುಖವೇ ಬೇರೆ ಇತ್ತು. ಎಲ್ಲೋ ಬೇರೆ ಲೋಕಕ್ಕೆ ತೇಲಿ ಹೋದ ಅನುಭವ.

ಹೀಗೆ ಸಾಹೇಬರು ಮತ್ತು ಅವರ ಡವ್ವು ಶ್ವೇತ ಭವನದಲ್ಲಿ ಜಂಗಿ ಚಕ್ಕ ಜಂಗಿ ಚಿಕ್ಕ ಮಾಡುತ್ತಿದ್ದರೆ, ಅಲ್ಲೇ ಪಕ್ಕದಲ್ಲಿ ಅನತಿ ದೂರದಲ್ಲಿ ಇದ್ದ CIA ಹೆಡ್ ಕ್ವಾರ್ಟರ್ ನಲ್ಲಿ ಕೂತಿದ್ದ ಒಬ್ಬ ಆದ್ಮಿ ನಖಶಿಕಾಂತ ಉರಿಯುತ್ತಿದ್ದ. ಯಾಕಂದ್ರೆ ಆಕೆ ಆತನ ಮಾಜಿ ಪತ್ನಿ. ಡೈವೋರ್ಸ್ ಆಗಿತ್ತು. ಆದರೂ ಹಳೆ ಮಾಲು. ಒಂದು ಕಾಲದಲ್ಲಿ ತಾನು ಸಹಸ್ರಾರು ಮಂದಿಯನ್ನು ಸೋಲಿಸಿ ಗೆದ್ದಿದ್ದು. ಆಕೆ ಈಗ ಮಾಜಿ ಪತ್ನಿಯೇ ಆದರೂ ತನ್ನ ಒಂದು ಕಾಲದ ಹಳೆ ಪ್ರತಿಸ್ಪರ್ಧಿ ಆಕೆಯನ್ನು ಈಗ ಪಟಾಯಿಸಿಕೊಂಡು, ಶ್ವೇತಭವನದಲ್ಲಿ ಕೇಕೆ ಹೊಡೆಯುತ್ತ, ಬಗ್ಗಿಸಿ ಬಾರಿಸುತ್ತಿರುವದು ಸಹಿಸುವ ಮಾತಾಗಿರಲಿಲ್ಲ. ಕುದ್ದು ಹೋದ ಮಾಜಿ ಪತಿ. ಸಿಕ್ಕರೆ ಆಕೆಯ ಹೊಸ ಆಶಿಕ್ ಗೆ ಮುಹೂರ್ತ ಇಡುವ ನಿರ್ಧಾರ ಮನಸ್ಸಿನಲ್ಲೇ ಮಾಡಿದ. ಅವನಿಗೇನು ಗೊತ್ತಿತ್ತು ಅಂತಹದೊಂದು ಅವಕಾಶ ಬೇಗನೆ ಸಿಗಲಿದೆ ಅಂತ.

LSD ಮಸ್ತಾಗಿ ಹೊಡೆದು ಜಮ್ಮ ಚಕ್ಕ ಮಾಡುತ್ತಿದ್ದವರು ಆ ಕಾಲದ ಅಧ್ಯಕ್ಷ ಜಾನ್ ಕೆನಡಿ. ಅವರ ಅವತ್ತಿನ ಆ ಟೈಮ್ ನ ಕರ್ಮಪತ್ನಿ ಮೇರಿ ಪಿಂಚೊಟ ಮೇಯರ್ ಎಂಬ ಅತಿಲೋಕ ಸುಂದರಿ. ಆಕೆಯ ಮಾಜಿ ಪತಿ CIA ಬೇಹುಗಾರಿಕೆ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು, ಸಾಕಷ್ಟು ಪ್ರಳಯಾಂತಕ ಎಂದು ಹೆಸರು ಗಳಿಸಿದ್ದ ಕಾರ್ಡ್ ಮೆಯೇರ್ ಎಂಬಾತ. ಸ್ವಲ್ಪ ವರ್ಷಗಳ ಹಿಂದೆ ಇರಾನಿನಲ್ಲಿ ಸರಕಾರ ಬದಲಾವಣೆ ಟೈಮ್ನಲ್ಲಿ ಆತ ಮಾಡಿದ್ದ ಕರಾಮತ್ತಿಗೆ ಎಲ್ಲರೂ ತಲೆದೂಗಿದ್ದರು.

JFK ಮತ್ತು ಮೇರಿ ಪಿನ್ಚೋಟ್ 
ಮೇರಿ  ಪಿಂಚೊಟ ಸಿಕ್ಕಾಪಟ್ಟೆ ಪ್ರತಿಭಾಶಾಲಿ. ದೊಡ್ಡ ಶ್ರೀಮಂತ ಮನೆತನದದ ಹುಡುಗಿ. ಆ ಕಾಲದಲ್ಲೇ ಖ್ಯಾತ ವಸ್ಸಾರ್ ಕಾಲೇಜಿನಿಂದ ಬಿಎ ಮಾಡಿಕೊಂಡಿದ್ದಳು. ಸಾಕಷ್ಟು ಕವನ ಬರೆದು ಎಲ್ಲರಿಂದ ವಾಹ್ ವಾಹ್ ಅನ್ನಿಸಿಕೊಂಡಿದ್ದಳು. ಕೆನಡಿ ಅವರ ಪತ್ನಿ ಜಾಕಿ ಕೆನಡಿ ಸಹ ವಸ್ಸಾರ್ ಕಾಲೇಜಿನಲ್ಲೇ ಓದುತ್ತಿದ್ದಳು. ಮೇರಿಗಿಂತ 1-2 ವರ್ಷ ಸೀನಿಯರ್.

ಮೇರಿ ವಸ್ಸಾರ್ ನಲ್ಲಿ ಓದುತ್ತಿದ್ದಾಗಲೇ ವಾರಾಂತ್ಯಗಳಲ್ಲಿ ಎಲ್ಲ ಹುಡುಗಿಯರಂತೆ ಬಾಸ್ಟನ್ ನಗರಕ್ಕೆ ಓಡುತ್ತಿದ್ದಳು. ಅಥವಾ ಹುಡುಗರ ದಂಡಿಗೆ ದಂಡೇ ಬಂದು, ನಮ್ಮ ಕಾರಲ್ಲಿ ಬಾರಮ್ಮ, ಅಂತ ಒಬ್ಬರ ಮೇಲೆ ಒಬ್ಬರು ಪೈಪೋಟಿಯಿಂದ ಡೇಟಿಂಗ್ ಗೆ ಕರೆಯುತ್ತಿದ್ದರು. ಸುಂದರಿಯ ನಸೀಬ್ ಮಸ್ತ ಇತ್ತು. ಬಾಸ್ಟನ್ ನಗರ ಅಂದ್ರೆ ಸುಮಾರು 65-70 ಯುನಿವರ್ಸಿಟಿ, ಕಾಲೇಜುಗಳಿಂದ ತುಂಬಿದ ಸ್ಥಳ. ಜಗತ್ತಿನಲ್ಲಿಯೇ ಸೆಕಂಡ್ ಬಿಗ್ಗೆಸ್ಟ್ ಸ್ಟೂಡೆಂಟ್ ಪಾಪ್ಯುಲೇಶನ್ ಇರೋದು ಅಂದ್ರೆ ಬಾಸ್ಟನ್ ನಗರದ ಸುತ್ತ ಮುತ್ತ. ಮೊದಲನೇ ಸ್ಥಾನ ಜಪಾನಿನ ಟೋಕಿಯೋ ಅಂತೆ. ಅಲ್ಲೆಷ್ಟು ಕಾಲೇಜುಗಳಿವೆಯೋ?!

ಕೆನಡಿ ಸಾಹೇಬರೂ ಅಲ್ಲೇ ಹಾರ್ವರ್ಡ್ ನಲ್ಲಿ ಓದುತ್ತಿದ್ದರಲ್ಲ. ಅಲ್ಲೇ ಆವಾಗಲೇ ಕಾಳು ಹಾಕಿದ್ದರು ಅಂತ ಅನ್ನಿಸುತ್ತದೆ. ಆಗಲೇ ಪರಿಚಯವಂತೂ ಇತ್ತು. ಆದ್ರೆ ಇಂದೊಬ್ಬಾಕೆ, ನಾಳೆ ಇನ್ನೊಬ್ಬಾಕೆ, ಹಾಲಿವುಡ್ ಮಾಲು ಬೆಟರ್ ಅಂತ ಅನ್ನುತ್ತಿದ್ದ ಸ್ವಲ್ಪ ರಫ್ ಅಂಡ್ ಟಫ್ ಕೆನಡಿಗಳ  ಪಾಲಿಗೆ ಮೇರಿ ಸ್ವಲ್ಪ ಡೆಲಿಕೇಟ ಕಂಡಿರಬೇಕು. ಅದಕ್ಕೇ ವರ್ಕ್ ಔಟ್ ಆಗಿರಲಿಲ್ಲ ಅಂತ ಅನ್ನಿಸುತ್ತದೆ.

ಇನ್ನು ಕಾರ್ಡ್ ಮೇಯರ್. ಮಹಾನ್ ಪ್ರತಿಭಾವಂತ. ಯೇಲ್, ಹಾರ್ವರ್ಡ್ ಗಳಲ್ಲಿ ಓದಿದ್ದ. ಎಲ್ಲರೂ ಹೋದಂತೆ ಎರಡನೇ ಮಹಾ ಯುದ್ಧದಲ್ಲಿ ಹೋರಾಡಿ, ಸತ್ತು ಸತ್ತು ಬದುಕಿ ಬಂದಿದ್ದ. ಒಂದು ಕಣ್ಣು ಹೋಗಿತ್ತು. ಗಾಜಿನ ಕಣ್ಣು ಹಾಕಿಕೊಂಡಿದ್ದ. ಆದರೂ ಭಾಳ ಸ್ಮಾರ್ಟ್ ಇದ್ದ. ಆ ಪರಿ ಯುದ್ಧ ಮಾಡಿ ಸಾವನ್ನು ಗೆದ್ದು ಬಂದವನಿಗೆ ಮೇರಿ ಬಿದ್ದಿದ್ದಳು. ಪ್ಯಾರ್ ಗೆ ಆಗಿ ಬಿಟ್ಟೈತೆ ಆಗಿ, ಮನೆಯವರೂ ಒಪ್ಪಿ, ಶಾದಿ ಮಾಡಿ ಆಗಿತ್ತು. ಮಸ್ತ ಖುಷಿಯಿಂದಲೇ ಇದ್ದರು ಕಪಲ್ಸ್. ಮೊದಲಿನ ಸ್ವಲ್ಪ ದಿವಸ.

ಮುಂದೆ ಕಾರ್ಡ್ ಮೇಯರ್ CIA ಸೇರಿದ. ಫ್ರಾಂಕ್ ವೈಸ್ನರ ಎಂಬ ಹಿರಿ ತಲೆಯೊಬ್ಬ ಇವನನ್ನು ತನ್ನ ಶಿಷ್ಯನನ್ನಾಗಿ ತೆಗೆದುಕೊಂಡು ಮಸ್ತ ಮೇಲೆ ತಂದು ಬಿಟ್ಟ. ಖತರ್ನಾಕ ಕೆಲಸಗಳನ್ನು ನೀಟಾಗಿ ಮಾಡಿ, ಬಂಡವಾಳಶಾಹಿಗಳಿಗೆ ದೇಶಗಳಿಗೆ ದೇಶಗಳನ್ನೇ ಬೋಳಿಸಿ ಕಾಸು ಮಾಡಿ ಕೊಟ್ಟ ಸಿಐಎ ಮಂದಿಗಳಲ್ಲಿ ಇವನೂ ಫೇಮಸ್ ಆಗಿ, ಕೆಲಸ ಆಗ ಬೇಕು ಅಂದ್ರೆ ಕಾರ್ಡ್ ಮೇಯರ್ ಗೆ ಹೇಳಬೇಕು, ಅನ್ನುವಷ್ಟು ಪ್ರಖ್ಯಾತಿ ಬಂತು.

ಮನೆ ಕಡೆ ಪರಿಸ್ಥಿತಿ ಹಳ್ಳ ಹಿಡಿಯುತ್ತಿತ್ತು. ರಹಸ್ಯ ಕಾರ್ಯಾಚರಣೆಗಳು, ಅದಕ್ಕೇ ಇರುವ ಪಾರ್ಟಿಗಳು, ಅಲ್ಲಿ ಚಿತ್ರ ವಿಚಿತ್ರ ಜನರೊಂದಿಗೆ ಬೆರೆಯುವದು, ವಿಪರೀತ ಕುಡಿತ ಎಲ್ಲ ಶುರುವಾಗತೊಡಗಿತು. ಪತ್ನಿ ಮೇರಿಯ ತಲೆ ಕೆಡತೊಡಗಿತು. ಚಿಕ್ಕ ಮಗನೊಬ್ಬ ಕಾರಿಗೆ ಸಿಕ್ಕು ಸತ್ತು ಹೋದ. ಪಾಪ! ಮತ್ತೆ 1960 ಟೈಮ್. ಎಲ್ಲ ಕಡೆ ಫೆಮಿನಿಸಂ. ಸ್ತ್ರೀಯರಿಗೆ ಫುಲ್ ಲಿಬರಲಿಸಂ ಬೇಕು. ತಿಂದು, ಕುಡಿದು, ಸೇದಿ, ಮಲಗಿ ಎಂಜಾಯ್ ಮಾಡಿ ಅಂತ ಉಪದೇಶ ಎಲ್ಲ ಮಹಿಳೆಯರಿಗೆ. ಮೇರಿಯ ತಲೆ ಕೆಟ್ಟು ನಪರ ಏಳಲು ಇನ್ನೇನು ಬೇಕು?

ಕಾರ್ಡ್ ಮೇಯರ್ ಗೆ ಡೈವೋರ್ಸ್ ಕೊಟ್ಟೇ ಬಿಟ್ಟಳು. ಇವನೂ ಬಿಟ್ಟೇ ಬಿಟ್ಟ. ದೊಡ್ಡ ಖತರ್ನಾಕ್ ಅಧಿಕಾರಿಯಾಗಿದ್ದ ಅವನಿಗೆ ದಿನದ ಮಟ್ಟಿಗೆ ಗುಂಡು, ತುಂಡಿನ ಚಿಂತೆ ಇರಲಿಲ್ಲ. ಶ್ರೀಮಂತರು ಸಪ್ಲೈ ಮಾಡುತ್ತಿದ್ದರು.

ಹೀಗೆ ಕಾರ್ಡ್ ಮೇಯರ್ ನನ್ನು ಬಿಟ್ಟ ಮೇರಿಗೆ ವಯಸ್ಸಾದರೂ ಎಷ್ಟು ಮಹಾ? 33-34 ವರ್ಷ. ಅಲ್ಲೇ ವಾಷಿಂಗಟನ್  ಸಮೀಪ ಒಂದು ಚಿಕ್ಕ ಮನೆ ತೆಗೆದುಕೊಂಡು ಮೇರಿ ತಾನು, ತನ್ನ ಚಿತ್ರಕಲೆ, ಸಾಹಿತ್ಯ, ದೊಡ್ಡ ಜನರ ಪಾರ್ಟಿಗಳು, ದೊಡ್ಡ ದೊಡ್ಡ ಚಿಂತಕರ ಸಂಗಡ ಚಿಂತನೆ ಮಾಡುತ್ತ ಒಂದು ಲೆವೆಲ್ ನಲ್ಲಿ ಆರಾಮ್ ಇದ್ದಳು.

ಅಂತಹದೇ ಯಾವದೋ ಪಾರ್ಟಿಯಲ್ಲಿಯೇ ಕೆನಡಿ ಸಾಹೇಬರು ಸಿಕ್ಕಿದ್ದರು. ಮತ್ತೆ ಗಾಳ ಹಾಕಿ ಕಾಳು ಹಾಕಿದರು. ಈ ಸಲ ಬಿತ್ತು ಮೀನು. ಸುಂದರ ಮೀನು. ಅಫೇರ್ ಶುರು ಆಗಿಯೇ ಹೋಯಿತು.

ಕೆನಡಿ ಅವರ ಬಿಸ್ತರ್ ಗರಂ ಮಾಡಿ ಹೋದ ಮಹಿಳೆಯರ ಲೆಕ್ಕವಿಲ್ಲ. ಮರ್ಲಿನ್ ಮುನ್ರೋ ಎಂಬ ಮಹಾನ್ ನಟಿಯಿಂದ ಹಿಡಿದು ಸಾಮ್ ಜಿಯಾಂಕಾನ ಎಂಬಾ ಖತರ್ನಾಕ್ ಮಾಫಿಯಾ ದೊರೆಯ ಸಖಿ ಜೂಡೀ ಏಕ್ಸಿನರ್ ಕೂಡ ಕೆನಡಿಯವರ ಮೋಹಕ್ಕೆ ಒಳಗಾಗಿ, ಎಲ್ಲ ಸೇವೆ ಮಾಡಿ, ಧನ್ಯಾತಾ ಭಾವ ಫೀಲ್ ಮಾಡಿಕೊಳ್ಳುತ್ತ ಹೋಗಿದ್ದರು. ಅದು ಕೆನಡಿ ಕೆಪಾಸಿಟಿ. ಬನ್ನಿ ಇವರೇ, ಅನ್ನುತ್ತಲೇ ಮಂಚ ಹತ್ತಿಸುವ ಕಲೆ ಅವರಿಂದ ನೋಡಿ ಕಲಿಯಬೇಕು.

ಆದ್ರೆ ಕೆನಡಿ ಮತ್ತು ಮೇರಿ ಪಿಂಚೊಟ ಮಧ್ಯೆ ಇದ್ದ ಅಫೇರ್ ಗೆ ಒಂದು ಸ್ಟೇಟಸ್ ಇತ್ತು. ಕೇವಲ ತೀಟೆ ಹೆಚ್ಚಿದಾಗೊಮ್ಮೆ ಮಂಚದಲ್ಲಿ ಗುದುಮುರುಗಿ ಹಾಕಿ ಹುಸ್ ಹುಸ್ ಅನ್ನೋದಲ್ಲ ಅದು. ಸಿಕ್ಕಾಪಟ್ಟೆ ಓದಿಕೊಂಡಿದ್ದರು ಇಬ್ಬರೂ. ಇಬ್ಬರೂ ಏನೇನೋ ಬರೆದಿದ್ದರು. ಸಾಹಿತ್ಯ, ಚಿತ್ರಕಲೆ, ಸಂಗೀತದಲ್ಲಿ ಆಸಕ್ತಿ ಅಪಾರ. ಕೆನಡಿ ಅವರನ್ನು ಒಂದು ತರಹದಲ್ಲಿ ಅರ್ಥ ಮಾಡಿಕೊಂಡ ಗೆಳತಿ ಇದ್ದರೆ ಅದು ಮೇರಿ ಪಿನ್ಚೋಟ್ ಅನ್ನುವ ಹಾಗಿತ್ತು. ಒಂದು ತರಹದ ವಾರ್ಮ್ತ್ ಇತ್ತು.

ಹೀಗೇ ನಡೆದಿದ್ದರೆ ಚೆನ್ನಾಗಿತ್ತು. ಆದ್ರೆ ಗ್ರಹಚಾರ.

ಕೆನಡಿ ಏನೇ ಇರಲಿ ಒಂದು ರೀತಿಯಿಂದ ಶಾಂತಿ ಪ್ರಿಯ. ವಿಶ್ವಶಾಂತಿ, ಎಲ್ಲರಿಗೆ ಸರಿಯಾದ ಸ್ಥಾನ ಮಾನ, ಅಸಮಾನತೆ ದೂರ ಮಾಡುವದು, ಆ ಪರಿ ದುಡ್ಡು ಸೈನ್ಯದ ಮೇಲೆ ಹಾಕಿ, ಯಾವ್ಯಾವದೋ ದೇಶದ ಮೇಲೆ ಸುಮ್ಮ ಸುಮ್ಮನೆ ಯುದ್ಧ ಮಾಡಿ, ವಿನಾಕಾರಣ ಜನರನ್ನು ಕೊಂದು ಪಾಪ ಕಟ್ಟಿಕೊಳ್ಳುವದು  ಅವರಿಗೆ ಬೇಕಿರಲಿಲ್ಲ. ಈ ನೀತಿಯೇ ಅವರಿಗೆ ಮುಳುವಾಯಿತಾ? ಹೌದೆನ್ನುತ್ತಾರೆ ಕೆನಡಿ ಬಗ್ಗೆ ಗೊತ್ತು ಇರುವವರು.

ಕ್ಯೂಬಾದಲ್ಲಿ ಬಂದು ಕೂತಿದ್ದ ಕ್ಯಾಸ್ಟ್ರೋ ಎಂಬ ಕಮ್ಯುನಿಸ್ಟನನ್ನು ಓಡಿಸುವದು ಹೂವು ಎತ್ತಿಟ್ಟಂತೆ ಅಮೆರಿಕಾದ ಸೈನ್ಯಕ್ಕೆ. ಅಷ್ಟು ಸುಲಭ. ಅವನನ್ನ ಓಡಿಸಿ, ನಮ್ಮ ಹಡಬೆ ದಂಧೆ ನಡೆಸಲು ಮೊದಲಿನಂತೆ ಅವಕಾಶ ಮಾಡಿ ಕೊಡಿ ಅಂದ್ರೆ, ಬ್ಯಾಡ್ರೋ, ಅಲ್ಲಿ ರಶಿಯಾದ ಕ್ರುಸ್ಚೇವ್ ಮೂರನೇ ಮಹಾ ಯುದ್ಧ ಶುರು ಮಾಡುತ್ತಾನೆ, ಅಂತ ಸುಮ್ಮನಾಗಿಸಿದರು ಕೆನಡಿ. ಹಡಬೆ ದಂಧೆ ಜನ, ಮುಖ್ಯವಾಗಿ ಮಾಫಿಯಾ ಜನ, ಕೊತ ಕೊತ ಕುದ್ದರು.

ರೀ, ಪ್ರೆಸಿಡೆಂಟ್ ಸಾಹೇಬ್ರೆ, ವಿಯೆಟ್ನಾಂ ಮೇಲೆ ಯುದ್ಧ ಶುರು ಮಾಡ್ರಿ. ಅದಕ್ಕೆ ಬೇಕಾದ ಅಸ್ತ್ರ ಶಸ್ತ್ರ ಒದಗಿಸಿ, ಒಂದಕ್ಕೆ ಎರಡು ರೇಟ್ ಹಾಕಿ, ಜನ ಸಾಮಾನ್ಯರ ಮುಂಡಾಯಿಸಿ, ಕಾಸು ಮಾಡಿಕೊಳ್ಳೋಣ, ಅಂದ್ರೆ ಅದಕ್ಕೂ ಬೇಡ ಅಂದ್ರು. ದೊಡ್ಡ ದೊಡ್ಡ ಕಂಪನಿಯ ಮಾಲೀಕರು ಕುದ್ದು ಹೋದರು.

ರೀ, ಸ್ವಾಮೀ, ನಮ್ಮ ಮಾಫಿಯಾ ರೊಕ್ಕಾ, ಸಹಾಯ ತೊಗೊಂಡ ಆರಿಸಿ ಬಂದೀರಿ. ಈಗ ನಿಮ್ಮ ತಮ್ಮ ಬಾಬಿ ಕೆನಡಿನ ಅಟಾರ್ನೀ ಜನರಲ್ ಮಾಡೀರಿ. ಅವಾ ಹುಸ್ಸೂಳೆಮಗ ನಮ್ಮ ಬುಡದಾಗ ಬಗಣಿ ಗೂಟ ಬಡಿದು, ನಮ್ಮ ಬಾಸ್ ಕಾರ್ಲೋಸ್ ಮಾರ್ಸೆಲ್ಲೋ ಅವರನ್ನ ದೇಶಾ ಬಿಟ್ಟು ಗಡಿಪಾರ್ ಮಾಡಿ ಬಿಟ್ಟಾನ್. ಇದು ಸರಿ ಅಲ್ಲ ನೋಡ್ರೀ. ಹಿಂಗಾ ಆದ್ರಾ ಮುಂದ ಏನಾರಾ ಆತ ಅಂದ್ರಾ ನೋಡ್ಕೊರೀ ಮತ್ತ, ಅಂತ ಮಾಫಿಯಾ ಮಂದಿ ಗುಟುರು ಹಾಕಿದರೆ, ಹುಳ್ಳನೆ ಮಳ್ಳ ನಗೆ ನಕ್ಕು, ಮಾಫಿಯಾ ಡಾನ್ ಒಬ್ಬಾತನ ಡವ್ವನ್ನೇ ಪಟಾಯಿಸಿ, ಆಕೆಗೆ ಹೊಟ್ಟೆ ಮುಂದೆ ಬರಿಸಿ, ಅದರಪ್ಪ ನೀನಾಗಪ್ಪ ಸ್ಯಾಮ್, ಅಂತ ಅನ್ನೋ ಛಾತಿ ಅವರಲ್ಲಿತ್ತು. ಸ್ಯಾಮ್ ಜಿಯಾಂಕಾನ ಉರಿದು ಹೋಗಿದ್ದ. ಬಗರ್ ಹುಕುಂ ಜಮೀನಿನಲ್ಲಿ ಮನೆ ಕಟ್ಟೋಕೆ ಬಿಟ್ಟರೆ, ಮನೆ ಕಟ್ಟಿ ಇನ್ನೊಬ್ಬರ ಹತ್ರ ಗೃಹಪ್ರವೇಶ ಮಾಡಿ, ಅಂದ್ರೆ ಹೇಗೆ ಆಗುತ್ತೆ ನೋಡಿ ಆ ಫೀಲಿಂಗ್ ಬಂದಿರಬೇಕು ಚಿಕ್ಯಾಗೋದ ಆ ಮಾಫಿಯಾ ದೊರೆಗೆ.

ಇನ್ನು ಕ್ಯೂಬಾದ ಹಂದಿ ಕೊಲ್ಲಿ ಕಾರ್ಯಾಚರಣೆ ಹೊಲಗೇರಿ ಎಬ್ಬಿಸಿದ ಅಂತ ಸಿಟ್ಟಿಗೆದ್ದು ಆ ಕಾಲದ ಸಿಐಎ ಮುಖ್ಯಸ್ಥ ಅಲೆನ್ ಡಲ್ಲೆಸ್ ಮತ್ತು ಅವನ ಖಾಸಮ್ ಖಾಸ್ ದೊಡ್ಡ ತಲೆಗಳನ್ನು ಮುಲಾಜಿಲ್ಲದೆ ಮನೆಗೆ ಕಳಿಸಿ ಬಿಟ್ಟಿದ್ದರು. ಸಿಐಎ ಒಳಗೆ ದೊಡ್ಡ ಪ್ರಮಾಣದ ಅಸಮಾಧಾನ, ಸಿಟ್ಟು, ದ್ವೇಷ ಶುರುವಾಗಿತ್ತು. ಜನರಾರಿಸಿದ ಪ್ರೆಸಿಡೆಂಟ್ ಗಳನ್ನು ಗೊಂಬೆಯಂತೆ ಆಡಿಸಿದ್ದು ಸಿಐಎ ಮತ್ತು ಸೈನ್ಯ. ಈಗ ಇವರು ಬಂದು ಎಲ್ಲ ಸ್ಕ್ರೂ ಟೈಟ್ ಮಾಡುತ್ತಿದ್ದಾರೆ. ಉರಿದಿತ್ತು ಅಲ್ಲಿಯ ಮಂದಿಗೆ.

ಹೀಗೆ ಎಲ್ಲ ತರಹದ ಪಾವರಫುಲ್ ಜನರನ್ನು ಎದುರು ಹಾಕಿಕೊಂಡ ಕೆನಡಿ ಹತ್ಯೆಗೆ ಮುಹೂರ್ತ ಇಡಲು ಇದೇ ಜನಗಳು ಶುರು ಮಾಡಿದ್ದರಲ್ಲಿ ಏನು ವಿಶೇಷವಿದೆ?

ಮಾಫಿಯಾ ಕಾಸು ಕೊಡುತ್ತೇನೆ ಅಂದಿತು. ದೊಡ್ಡ ದೊಡ್ಡ ಬಂಡವಾಳಶಾಹಿಗಳು ಏನೇನೋ ಲೆಕ್ಕಾಚಾರ ಮಾಡಿ, ಈ ಯಪ್ಪಾ ಹೋದರೇ ಒಳ್ಳೇದು, ಅಂತ ಏನೇನೋ ಡೀಲ್ ಮಾಡಿ, ಓಕೆ ಕೊಟ್ಟರು. ಮುಂದೆ ಬರಬಹುದಾದ ಆಡಳಿತ ವ್ಯವಸ್ಥೆ, ಕೆನಡಿ ಹೋಗಿ ನಾವು ಬಂದ್ರೆ, ವಿಯೆಟ್ನಾಂ ಮೇಲೆ ಯುದ್ಧ ಫುಲ್ ಶುರು, ಬೇಕಾದಷ್ಟು ಕಾಸ್ ಮಾಡ್ಕೊಳ್ಳಿ ಅಂದು ಬಿಟ್ಟಿತು. ಎಲ್ಲಾ ವರ್ಕ್ ಔಟ್ ಆಯಿತು. ಕಾನೂನು, ಪೋಲಿಸ್, ತನಿಕೆ ಎಲ್ಲ ಒಂದು ಲೆವೆಲ್ ನಲ್ಲಿ ಒಳಗೆ ಹಾಕಿಕೊಂಡ ಷಡ್ಯಂತ್ರದ ಗುಂಪು ಡೀಟೇಲ್ ಪ್ಲಾನಿಂಗ್ ಶುರು ಮಾಡಿಯೇ ಬಿಟ್ಟಿತು. ಕೆನಡಿ ಹತ್ಯೆಗೆ ಕ್ಷಣಗಣನೆ ಶುರು ಆಗಿಯೇ ಬಿಟ್ಟಿತು.

ಕೆನಡಿ ಹತ್ಯೆಯ ಬಗ್ಗೆ ಸ್ವಲ್ಪ ಗೊತ್ತಿದ್ದವರಿಗೂ ಸಹ ಗೊತ್ತಿರುವ ಸಂಗತಿ ಅಂದ್ರೆ ಓಸ್ವಾಲ್ಡ್ ಅನ್ನುವ ಆದ್ಮಿಯನ್ನು ಹಂತಕ ಅಂತ ತೋರಿಸಿದ್ದು ಬರಿ ಓಳು ಅಂತ. ಯಾವದೋ ಒಂದು ತಗಡು ಬಂದೂಕು ಇಟ್ಟುಗೊಂಡು, ಅಷ್ಟು ಸಣ್ಣ ಸಮಯದಲ್ಲಿ 3-4 ಗುಂಡು ಅಷ್ಟು ಕರಾರುವಕ್ಕಾಗಿ ಹಾರಿಸಿ ಕೆನಡಿ ಬುರುಡೆ ಬಿಚ್ಚಲು ಸಾಧ್ಯವೇ ಇರಲಿಲ್ಲ ಎಂಬುದು ತುಂಬ ಹಿಂದೆಯೇ ಜನಜನಿತವಾದ ಸಂಗತಿ.

ಹಾಗಾದರೆ ಅಷ್ಟು ಕರಾರುವಕ್ಕಾಗಿ ಗುರಿಯಿಟ್ಟು ಚಲಿಸುತ್ತಿರುವ ವಾಹನದಲ್ಲಿರುವ ಮನುಷ್ಯನ ಬುರುಡೆ ಬಿಚ್ಚಲು ಸಿಕ್ಕಾಪಟ್ಟೆ ಸ್ಕಿಲ್ ಇರುವ ಗುರಿಕಾರ ಬೇಕು. ಎಲ್ಲಿಂದ ತರುವದು? ಯಾರು ತಂದು ಕೊಟ್ಟಾರು?

ಕಿತಾಪತಿಗಳು ಬೇಕು ಅಂದ್ರೆ ಪೋಲೀಸರ ಹತ್ತಿರವೇ ಹೋಗಬೇಕು. ಅವರಿಗೇ ಗೊತ್ತು ಇದೆಲ್ಲ. ಫ್ರೆಂಚ್ ಮಾಫಿಯಾದ ಸೇವೆಯಲ್ಲಿ ಅಂತಹ ನುರಿತ ಗುರಿಕಾರರು ಇದ್ದರು. ಕಾಸು ಕೊಟ್ಟರೆ ಏನೂ ಕೇಳದೆ ಕೆಲಸ ಮಾಡಿ ಕೊಟ್ಟು ಹೋಗುವ ಜನ. ಸಿಐಎ ಮಂದಿ ಕಾಂಗೋದ ನಾಯಕ ಲುಮುಂಬಾ ಎನ್ನುವನಿಗೆ ಸ್ವರ್ಗದ ದಾರಿ ತೋರಿಸಿತ್ತು ನೋಡಿ, ಅದಕ್ಕೆ ಕೆಲೊ ಜನ ಇದೇ ಭಾಡಿಗೆ ಗುರಿಕಾರರನ್ನು ಕಳಿಸಿತ್ತು. ಈಗ ಕೆನಡಿ ಸಾಹೇಬರ ಅವಸಾನಕ್ಕೂ ಅವರನ್ನೇ ಕರೆಯಿಸಿದರೆ ಹೇಗೆ? ಎಂಬ ಯೋಚನೆ ಬಂತು ಪ್ಲಾನಿಂಗ ಮಾಡುತ್ತಾ ಕುಳಿತಿದ್ದವರಿಗೆ.

ಅಂತಹ ಫ್ರೆಂಚ್ ಹಂತಕರು ಗೊತ್ತಿದ್ದದ್ದು ಯಾರಿಗೆ?

ಆವಾಗ ನೆನಪು ಆದವನೇ - ಕಾರ್ಡ್ ಮೇಯರ್. ತನ್ನ ಮಾಜಿ ಹೆಂಡತಿಯನ್ನು ಪಟಾಯಿಸಿದ್ದಾನೆ ಅಂತ ಕೆನಡಿ ಮೇಲೆ ಮೊದಲೇ ಕುದಿಯುತ್ತಿದ್ದ. ಮಸ್ತ ಅವಕಾಶ ಸಿಕ್ಕಿ ಬಿಟ್ಟಿತು. ಕಾರ್ಡ್ ಮೇಯರ್ ಪದ್ಮಾಸನ ಹಾಕಿ ಕಾರ್ಯಾಚರಣೆಗೆ ಕುಳಿತು ಬಿಟ್ಟ. ಅವನಿಗೆ ಅದನ್ನು ವಹಿಸಿದ ದೊಡ್ಡ ಮಂದಿ ಬೇರೆ ಬೇರೆ ವಿಷಯಗಳ ಬಗ್ಗೆ ಪ್ಲಾನಿಂಗ ಮುಂದು ವರಿಸಿದರು.

ಹೀಗೆ ಕ್ರುದ್ಧ ಮಾಜಿ ಪತಿಯೊಬ್ಬ ತನ್ನ ಮಾಜಿ ಪತ್ನಿಯ ಪ್ರಿಯಕರನಿಗೆ ಸ್ಕೀಮ್ ಹಾಕಿ ಬಿಟ್ಟನಾ?

ಹೌದು ಅನ್ನುತ್ತದೆ ಈಗ ತಾನೇ ಬಂದಿರುವ ಒಂದು ಹೊಸ ಪುಸ್ತಕ.  ಪುಸ್ತಕದ ಹೆಸರು - Bond of Secrecy: My Life with CIA Spy and Watergate Conspirator E. Howard Hunt.

ಹೊವರ್ಡ್ ಹಂಟ್ ಎಂಬ ಮಾಜಿ ಸಿಐಎ ಅಧಿಕಾರಿ ಸಾಯುವ ಮೊದಲು ತನ್ನ ಮಗನಿಗೆ ಹೇಳಿದ ಮಾತುಗಳ ಮೇಲೆ ಬರೆದಿರುವ ಪುಸ್ತಕ. ಬರೆದಿರುವನು ಅವನ ಮಗ ಸೇಂಟ್ ಜಾನ್ ಹಂಟ್.

ಹೊವರ್ಡ್ ಹಂಟ್ - ಜಾನ್ ಕೆನಡಿ ಹತ್ಯೆ, ಅವರ ತಮ್ಮ ರಾಬರ್ಟ್ ಕೆನಡಿ ಹತ್ಯೆ, ಪ್ರೆಸಿಡೆಂಟ್ ರಿಚರ್ಡ್ ನಿಕ್ಸನ್ ಅವರ ಪದವಿ ಕಳೆದ ವಾಟರ್ ಗೇಟ್ ಹಗರಣಗಳಲ್ಲಿ ಎದ್ದು ಕಾಣುವ ಸಿಐಎ ಅಧಿಕಾರಿ. ಕೆಲವು ಕಡೆ ಅವನೇ ಮುಖ್ಯ ರೂವಾರಿ ಅನ್ನುವ ಹಾಗೆ ಬಿಂಬಿತವಾಗಿದೆ. ಇದ್ದರೂ ಇರಬಹುದು.

ಒಟ್ಟಿನಲ್ಲಿ 1963 ನವೆಂಬರ್ 22 ರಂದು ಕೆನಡಿ ಹತರಾದರು. ಓಸ್ವಾಲ್ಡ್ ಕೊಂದ ಅಂತ ತಿಪ್ಪೆ ಸಾರಿಸಲಾಯಿತು. ಅವನನ್ನೇ ಇನ್ನೊಬ್ಬವ ಜ್ಯಾಕ್ ರೂಬಿ ಅನ್ನುವವ ಕೊಂದು ಬಿಟ್ಟ. ಒಟ್ಟಿನಲ್ಲಿ ಜನರ ಕಿವಿಯಲ್ಲಿ ಹೂವು ಇಟ್ಟ ದೊಡ್ಡ ಮಂದಿ, ಪೆಕಪಕನೆ ನಕ್ಕು, ಬಕ್ರಾ ಮಂದಿ, ಮಂಗ್ಯಾ ಮಾಡೋದು ಎಷ್ಟು ಸುಲಭ ಸಿವಾ, ಅಂತ ತಮ್ಮ ರೊಕ್ಕಾ ಮಾಡುವ ಕಾರಭಾರ್ ಮುಂದುವರಿಸಿದರು.

ಮುಂದಿನ ವರ್ಷ 1964 ರಲ್ಲಿ ಕೆನಡಿ ಪ್ರೇಯಸಿ ಮೇರಿಯನ್ನು ಒಬ್ಬ ಕರಿಯ ಕೊಂದುಬಿಟ್ಟ. ಮಟ ಮಟ ಮಧ್ಯಾನ್ಹ ವಾಕಿಂಗ್ ಹೋಗುತ್ತಿದ್ದಳು. ಒಬ್ಬ ಬಂದವನೇ ನಾಕಾರು ಗುಂಡು ಹಾಕಿ ಹೋಗಿ ಬಿಟ್ಟ. ಸ್ಥಳದಲ್ಲೇ ಸುಂದರಿ ಆಂಟಿ ಖಲಾಸ್.

ಈ ಕಡೆ ಯಾರೋ ಒಬ್ಬ ಬಡಪಾಯಿ ಕೇಸಿನಲ್ಲಿ ಫಿಟ್ ಆಗುತ್ತಿದ್ದರೆ ಸಿಐಎ ಕೌಂಟರ್ ಎಸ್ಪಿಯೋನೆಜ್ ಉನ್ನತ ಅಧಿಕಾರಿ, ಮಹಾ ವಿಕ್ಷಿಪ್ತ, ಜಿಮ್ ಅಂಗಲಟನ್ ಅನ್ನುವವ ಮೇರಿಯ ಮನೆಯ ಬೀಗ ಮುರಿದು ಆಕೆಯ ರಹಸ್ಯ ಡೈರಿಯೊಂದನ್ನು ಹುಡುಕುತ್ತಿದ್ದ. ಅಷ್ಟರಲ್ಲಿ ಮೇರಿಯ ತಂಗಿ ಗಂಡ "ವಾಷಿಂಗಟನ್ ಪೋಸ್ಟ್" ಸಂಪಾದಕ ಬೆನ್ ಬ್ರಾಡ್ಲೀ ಕೂಡ ಅಲ್ಲಿ ಬಂದು ಬಿಟ್ಟ. ಇಬ್ಬರೂ ಮಳ್ಳ ನಗೆ ನಕ್ಕರು. ಇಬ್ಬರಿಗೂ ಗೊತ್ತಿತ್ತು ಮೇರಿ ಹತ್ಯೆಯ ಹಿಂದಿನ ಸಂಚು. ಇದನ್ನು ಬಯಲು ಮಾಡಿದವ ಮತ್ತೊಬ್ಬ ಸಿಐಎ ಅಧಿಕಾರಿ ವಿಸ್ತಾರ್ ಜಾನಿ ಅನ್ನುವನ ಮಗ ಪೀಟರ್ ಜಾನಿ. ಅವನೂ ಒಂದು ಪುಸ್ತಕ ಬರೆದಿದ್ದಾನೆ. ಲಿಂಕ್ ಕೆಳಗಿದೆ. ಓದಿ ನೋಡಿ.

ಅಬ್ಬಾ!!! ಕೆನಡಿ ಸಹೋದರರ ಹತ್ಯೆಗಳು, ಅವನ್ನು ಮುಚ್ಚಲು ಮಾಡಿದ ಅಸಂಖ್ಯಾತ ಹತ್ಯೆಗಳು ಲೆಕ್ಕವಿಲ್ಲದಷ್ಟು.

ಮುಂದೆ ವಿಚಿತ್ರ ನೋಡಿ. ಕಾರ್ಡ್ ಮೇಯರ್ ಅನ್ನುವ ಮೇರಿ ಪಿಂಚೊಟಳ ಮಾಜಿ ಗಂಡ ಸಾಯುವ ಮೊದಲು, ಮೇರಿಯನ್ನು ಕೊಂದವರು ಯಾರು?, ಅಂತ ಕೇಳಿದರೆ, ಅವರೇ ಸಿಐಎ ಮಂದಿ, ಕೆನಡಿಯನ್ನು ಕೊಂದವರು. ಅವರೇ ಮೇರಿಯನ್ನು ಕೊಂದರು, ಅಂದುಬಿಟ್ಟ.

ದೇವರೇ!!!! ಯಾವ ಯಾವ ಯಾವ ಹುತ್ತದಲ್ಲಿ ಯಾವ ಯಾವ ಹಾವುಗಳಿವಿಯೋ?????

ಇದ್ರಲ್ಲಿ ಎಷ್ಟು ನಿಜ? ಎಷ್ಟು ನಿಜದಿಂದ ಸ್ವಲ್ಪ ದೂರ, ತುಂಬಾ ದೂರ? ಯಾರಿಗೆ ಗೊತ್ತು.

ಮುಂದಿನ ವರ್ಷ ಕೆನಡಿ ಹತ್ಯೆಯಾಗಿ ಬರೋಬ್ಬರಿ 50 ವರ್ಷ. ನೀರು ಮತ್ತಷ್ಟು ಬಗ್ಗಡವಾಗುತ್ತಿದೆಯೇ ವಿನಹ ಪೂರ್ಣ ಸತ್ಯ ಹೊರ ಬರುತ್ತಿಲ್ಲ.


ಹೆಚ್ಚಿನ ಮಾಹಿತಿಗೆ:

- JFK ಹತ್ಯೆ

- ಮೇರಿ ಪಿನ್ಚೋಟ್ ಮೇಯರ್  

- Mary's Mosaic: The CIA Conspiracy to Murder John F. Kennedy, Mary Pinchot Meyer, and Their Vision for World Peace

- A Very Private Woman: The Life and Unsolved Murder of Presidential Mistress Mary Meyer

- LSD ಎಂಬ ಮಾದಕ ದ್ರವ್ಯ 

Tuesday, November 06, 2012

ಸೂಪರ್ ಸೋಮಾಲಿಯೊಬ್ಬಳ ಸತ್ಯಕಥೆ


ಅಯ್ಯೋ ಬಿಡ್ರೀ. ನಮ್ಮ ಸೋಮಾಲಿಯಾದಲ್ಲಿ ಮಹಿಳೆಯರ ಮೇಲೆ ಆಗೋ ಲೈಂಗಿಕ ದೌರ್ಜನ್ಯದ ಮುಂದೆ ಬೇರೆ ಕಡೆ ಆಗೋದೆಲ್ಲ ಏನೂ ಅಲ್ಲ ಬಿಡಿ. ನಿಮ್ಮೂರಲ್ಲಿ ರಶ್ ಬಸ್ಸಿನಲ್ಲೋ, ಟ್ರೇನಿನಲ್ಲೋ ಯಾರೋ ಮೈಗೆ ಮೈ ಹೊಸೆದಾನು. ಇನ್ನೊಬ್ಬವ ಅಂಡು ಚಿಗುಟಿಯಾನು. ಮತ್ತೊಬ್ಬ ವಿಕೃತ ಎದೆ ಮೇಲೆ ಕೈ ಆಡಿಸಿಯಾನು. ಇನ್ನೊಬ್ಬ ಯಾರೂ ಸುತ್ತ ಮುತ್ತ ಇಲ್ಲ ಅಂದ್ರೆ ವಿಕೃತ ಸನ್ನೆ ಮಾಡಿ ಬಾ ಅಂದಾನು. ಒಬ್ಬನಿಗೆ ಚಪ್ಪಲಿಯಲ್ಲಿ ನಾಕು ಕೊಡ್ತೀರಿ. ಇನ್ನೊಬ್ಬನಿಗೆ ಕಪಾಳಕ್ಕೆ ಕೊಡ್ತೀರಿ. ಸುತ್ತ ಮುತ್ತ ಇರೋ ಜನ ಕೂಡ ನಿಮ್ಮ ಬೆಂಬಲಕ್ಕೆ ಬಂದು, ಅವರೂ ನಾಕು ಧರ್ಮದೇಟು ಹಾಕಿ, ನೀವು ಎಷ್ಟೋ ಮಟ್ಟಿಗೆ ಸೇಫ್. ನಮ್ಮ ಸೋಮಾಲಿಯಾದಲ್ಲಿ ಮಾತ್ರ ಮಹಿಳೆಯರ ಮೇಲೆ ಆಗುವ ಅತ್ಯಾಚಾರ ಏನಿದೆಯಲ್ಲ ಅದು ಘೋರ. ಘನ ಘೋರ.

ಮೊದಲೇ ಸಿಕ್ಕಾಪಟ್ಟೆ ಪುರುಷ ಪ್ರಧಾನ ಸಮಾಜ. ಸಿಕ್ಕಾಪಟ್ಟೆ ಮಹಿಳೆಯರ ಶೋಷಣೆ. ಏನೇ ಗೆದ್ದರೂ, ಏನೇ ಸೋತರೂ ಕಡೆಗೆ ಯಾರೋ ಪಾಪದ ಮಹಿಳೆ ಮೇಲೆ ಸಿಕ್ಕಾಪಟ್ಟೆ ದೌರ್ಜನ್ಯ ಮಾಡದಿದ್ದರೆ ದುಷ್ಟ ಬುದ್ಧಿಯ ಗಂಡಸರಿಗೆ ಸಮಾಧಾನವಿಲ್ಲ. ಮತ್ತೆ ನಮ್ಮ ಸಂಸ್ಕೃತಿಯಲ್ಲಿ ಆಳವಾಗಿ ಇರುವ ಒಂದು ಭಾವನೆ ಅಂದರೆ - ಹೆಣ್ಣು ಭೋಗದ ವಸ್ತು ಅಂತ. ಅದರ ಮೇಲೆ ಕಮ್ಮಿ ಶಿಕ್ಷಣ. ಒಂದು ತರಹದ ಅದುಮಿಟ್ಟ (repressed) ಸಮಾಜ. ಹಾಂಗಾಗಿ ಹೆಂಗಸರ ಮೇಲೆ ಆಗುವ ದೌರ್ಜನ್ಯ ಸಿಕ್ಕಾಪಟ್ಟೆ ಕ್ರೌರ್ಯಭರಿತ ಮತ್ತು ಹೇಳಲು ಕೇಳಲು ಸಹ ಕಷ್ಟ.

ಇದರ ಮೇಲೆ ಸಿಕ್ಕಾಪಟ್ಟೆ ಪಂಗಡಗಳು. ಅವರಲ್ಲೇ ಜಗಳ. ಹೊಡೆದಾಟ. ಸೋತವರ ಗಂಡಸರೆಲ್ಲರನ್ನೂ ಕೊಂದು, ಹೆಂಗಸರನ್ನು ಗೆದ್ದವರ ಹಾರೆಮ್ ಗೆ ಭರ್ತಿ ಮಾಡುವದು ಪದ್ಧತಿ. ಅದು ಹಣೆಬರಹ ಅಂತ ಒಪ್ಪಿಕೊಂಡು ಇರುವ ಮಹಿಳೆಯರೇ ಹೆಚ್ಚು.

ಇನ್ನೂ ಮದುವೆ ಆಗದ ಹುಡುಗಿಯರ ಕಥೆ ಕೇಳಲೇ ಬೇಡಿ. ಅವರ ಮೇಲೆಯೇ ಬಲಾತ್ಕಾರ ಆದರೂ ಅದಕ್ಕೂ ಅವರೇ ಹೊಣೆ. ಇದೆಲ್ಲಿಯ ನ್ಯಾಯವೋ? ಗೊತ್ತಿಲ್ಲ. ಎಲ್ಲದಕ್ಕೂ ಒಂದು ಧಾರ್ಮಿಕ ಮುದ್ರೆ ಹಾಕಿ ತಿಪ್ಪೆ ಸಾರಿಸಿ ಬಿಡುವ ಹಿರಿಯರು, ಧಾರ್ಮಿಕ ಮುಖಂಡರು. ಇದೆಲ್ಲ ಅಲ್ಲಾಹುವಿನ ಖುಷಿಗಂತೆ.

ಹೀಗೆ ಇರುವಾಗ, ನಾವು ಮಹಿಳೆಯರು ನಮ್ಮನ್ನು ಬಚಾವ್ ಮಾಡಿಕೊಳ್ಳುವ ತಂತ್ರಗಳೇ ಬೇರೆ ಇರುತ್ತವೆ. ಪಶ್ಚಿಮದ ದೇಶಗಳಲ್ಲಿ ಸ್ತ್ರೀಯರು ರಕ್ಷಣೆಗೆ ಪೆಪ್ಪರ್ ಸ್ಪ್ರೇ(pepper spray) ಇಟ್ಟುಕೊಳ್ಳುತ್ತಾರೆ. ಮತ್ತೇನೋ ಮಾಡುತ್ತಾರೆ. ನಾವು ಸೋಮಾಲಿಯಾ ಎಂಬ ಬಡ ದೇಶದವರು. ನಾವೇನು ಮಾಡೋಣ? ನಮ್ಮದು  do-or-die ಪರಿಸ್ಥಿತಿ. ಯಾಕೆಂದ್ರೆ ಹುಡುಗಿ ಬಲಾತ್ಕಾರಕ್ಕೆ ಒಳಗಾದರೆ, ಮತ್ತೆ ಒಳಗಾದ ನಂತರ ಬದುಕಿ ಉಳಿದರೆ ಸಮಾಜ ಅವಳನ್ನು ಅಂತ್ಯಂತ ಕ್ರೂರ ರೀತಿಯಲ್ಲಿ ನಡೆಸಿಕೊಂಡು ಅಣು ಅಣುವಾಗಿ ಕೊಲ್ಲುತ್ತದೆ. ಅದಕ್ಕಿಂತ do-or-die ಫೈಟ್ ಮಾಡಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುವದು ಬೆಟರ್. ಗೆದ್ದರೆ ಬದುಕಲು ಒಂದು ಚಾನ್ಸ್. ಇಲ್ಲಾಂದ್ರೆ ಅಲ್ಲಾಕೋ ಪ್ಯಾರೆ.

ನಮ್ಮ ಅಜ್ಜಿ ಹೇಳಿ ಕೊಟ್ಟಿದ್ದ ಟೆಕ್ನಿಕ್ ಇದು. ಈ ಟೆಕ್ನಿಕ್ ಎಲ್ಲ ಹುಡುಗಿಯರಿಗೂ ಬುದ್ಧಿ ಬಂದಾಗಿಂದ ಹೇಳಿ ಕೊಡಲಾಗುತ್ತದೆ. ಹುಡುಗಿಯರಿಗೆ ಕನಸಲ್ಲೂ ಇದೆ ಕಂಡು, ಅಲ್ಲೇ ಪ್ರಾಕ್ಟಿಸ್.

ನೋಡು ಮೊಮ್ಮಗಳೇ....ಯಾರಾದರು ಬಂದು ನಿನ್ನ ಬಲಾತ್ಕಾರಕ್ಕೆ ಯತ್ನಿಸಿದರು ಅಂದುಕೋ. ಮೊದಲು ಅಲ್ಲಾಹುವಿನ ಹೆಸರು ತೆಗೆದುಕೊಂಡು, ಏನೂ ಮಾಡದೇ ಇರುವಂತೆ ಕೇಳಿಕೋ. ಅಂಗಾಲಾಚಿ ಬೇಡಿಕೋ. ಪರಿಪರಿಯಾಗಿ ಬೇಡಿಕೋ. ಕಾಲಿಗೆ ಬಿದ್ದು ಉಳ್ಳಾಡಿ ಉಳ್ಳಾಡಿ  ಕೇಳಿಕೋ. ಒಮ್ಮೊಮ್ಮೆ ಅಲ್ಲಾಹುವಿನ ಹೆಸರು ಕೇಳಿದಾಕ್ಷಣ ಕಾಮಾಂಧರ ಹುಚ್ಚು ಇಳಿದು ಏನೂ ಮಾಡದೆ ನಿಮ್ಮನ್ನು ಬಿಟ್ಟು ಬಿಡುವ ಚಾನ್ಸ್ ಇರುತ್ತದೆ. ಹಾಗೆ ಆಗಲಿ ಅಂತಾನೇ ದೇವರಲ್ಲಿ ಕೇಳಿಕೋ. ಇದಕ್ಕೆ ಬಗ್ಗಲಿಲ್ಲ ಅಂದ್ರೆ, ನೆಕ್ಸ್ಟ್ do-or-die ಫೈಟ್. ಟೆಕ್ನಿಕ್ ಇಷ್ಟೇ. ಮಿಂಚಿನ ವೇಗದಲ್ಲಿ ಅವನ ಕಡೆ ನುಗ್ಗು. ಅವನ ಸರೋಂಗ್ (ಲುಂಗಿ) ಎತ್ತೇ ಬಿಡು. ಎತ್ತಿದಾಕ್ಷಣ ಅವನ ತೊಡೆ ಮಧ್ಯೆ ಕೈ ಹಾಕಿ, ವೃಷಣಗಳ ಹಿಡಿದೇ ಬಿಡು. ಉಕ್ಕಿನ ಗ್ರಿಪ್ಪಲ್ಲಿ ಹಿಡಿದು, ಇದ್ದಷ್ಟೂ ಕಸು ಹಾಕಿ ಒತ್ತೇ ಬಿಡು. ಎರಡೂ ಕೈ, ಇದ್ದಷ್ಟೂ ಬಲ ಉಪಯೋಗಿಸು. ಗಂಡಸು ಕಾಡು ಮೃಗದಂತಾಗುತ್ತಾನೆ. ನೋವಿನಿಂದ ಅಬ್ಬರಿಸುತ್ತಾನೆ. ಒದೆಯುತ್ತಾನೆ. ಹೊಡೆಯುತ್ತಾನೆ. ನಿನ್ನ ತಲೆ ಬೊಂಡ ಒಡೆದಾನು. ಏನೇ ಆಗಲಿ ಉಕ್ಕಿನ ಹಿಡಿತ ತಪ್ಪಿಸದಿರು. ಹಿಡಿದದ್ದು ಬಿಟ್ಟಿಯೋ? ಅಮುಕೋದ ನಿಲ್ಲಿಸಿದೆಯೋ? ಸತ್ತೆ ಅಂತ ತಿಳಿ. ನೀನು ಸರಿಯಾಗಿ ಮಾಡಿದ್ದೇ ಹೌದಾದರೆ ಕೆಲವೇ ಕೆಲವು ನಿಮಿಷಗಳಲ್ಲಿ ಗಂಡು ನೋವು ತಡೆಯಲಾರದೆ ಪ್ರಜ್ಞೆ ತಪ್ಪುತ್ತಾನೆ. ಎಷ್ಟೋ ಸಲ ಗಂಡು ಗುಂಡು ಹಾರಿಸಿಯಾನು. ಕತ್ತಿಯಿಂದ ತಿವಿದಾನು. ನೆನಪಿರಲಿ ಬಲಾತ್ಕಾರ ಮಾಡಿಸಿಕೊಂಡ ಹೆಣ್ಣಿನ ಸ್ಥಿತಿ ಏನು ಅಂತ. ಅದಕ್ಕಿಂತ ಸಾಯುವದೇ ಒಳ್ಳೇದು. ಅದಕ್ಕೇ ಈ ಟೆಕ್ನಿಕ್. ತಿಳಿಯಿತಾ ಮೊಮ್ಮಗಳೇ? ತಲೆತಲಾಂತರಗಳಿಂದ ಇದೇ ನಮ್ಮ ಲಾಸ್ಟ್ ರೆಸಾರ್ಟ್ ಅನ್ನುವಂತ ಟೆಕ್ನಿಕ್. ವರ್ಕ್ ಕೂಡ ಆಗುತ್ತದೆ ಸರಿಯಾಗಿ ಮಾಡಿದರೆ! ಸಂಶಯ ಬೇಡ.

ಹೀಗಂತ ಸೀದಾ ಸೀದಾ ಯಾವದೇ ಉತ್ಪ್ರೇಕ್ಷೆ (exaggeration) ಇಲ್ಲದೆ ಬರೆಯುತ್ತ ಹೋಗುವವರು ಅಯಾನ್ ಹರ್ಸಿ ಅಲಿ ಎಂಬ ಸೋಮಾಲಿ ಮಹಿಳೆ.

ಅವರ ಆತ್ಮಕಥೆ 'Infidel' ಎಂಬ ಪುಸ್ತಕ.

ಮೈ ಗಾಡ್! ಓದಿಯೇ ತಿಳಿಯಬೇಕು ಸೋಮಾಲಿಯದ ಜನರ ಬವಣೆ. ಕಳೆದ ಸರಿ ಸುಮಾರು 35-40 ವರ್ಷದಿಂದ ನಡೆಯುತ್ತಿರುವ ಸಿವಿಲ್ ವಾರ್. ಭೀಕರ ಬರಗಾಲ. ಡಜನ್ಗಟ್ಟಲೆ ಪಂಗಡಗಳು. ಅವರಲ್ಲೇ ಜಗಳ. ಹಿಂಸೆ. ಶಿಕ್ಷಣ ಇಲ್ಲ. ಧರ್ಮಾಂಧತೆ. ಒಂದಾ, ಎರಡಾ?!!!!

ಇಂತಹದರಲ್ಲಿ ಮುಂದಿನ ಪೀಳಿಗೆಗಳಿಗೆ ಆಸೆಯ ನಕ್ಷತ್ರದಂತೆ ಎದ್ದು ಬರುವವರು ಲೇಖಕಿ - ಅಯಾನ್ ಹರ್ಸಿ ಅಲಿ.

ಅವರ ಲೈಫೇನೂ ಸ್ಮೂತ್ ಇರಲಿಲ್ಲ. ಪರದೇಶದಲ್ಲಿ ಓದಿ ಬಂದ ತಂದೆ ರಾಜಕೀಯ ಮುಖಂಡ. ವಿರೋಧ ಪಕ್ಷ. ಸರ್ವಾಧಿಕಾರಿ ಸಯ್ಯದ್ ಬ್ಯಾರೆಯ ವಿರುದ್ಧ ಹೋರಾಟ. ಬಂಧನ. ಹೇಗೋ ತಪ್ಪಿಸಿಕೊಂಡು ಓಡಿ ಪಕ್ಕದ ಇಥಿಯೋಪಿಯ, ಕೀನ್ಯಾ ದಲ್ಲಿ ನಿರಾಶ್ರಿತ್ರರ ಜೀವನ. ಅಲ್ಲಿಯೂ ಸೋಮಾಲಿ ಸಮಾಜದ ಉಸಿರುಗಟ್ಟುವ ವಾತಾವರಣ.

ಇಂತಹ ವಾತಾವರಣದಲ್ಲಿ ಲೇಖಕಿ ಮತ್ತು ಆಕೆಯ ಒಬ್ಬ ಅಣ್ಣ ಮತ್ತು ತಂಗಿ ಬೆಳೆಯುತ್ತಾರೆ. ಅಬ್ಬಾ!! ಆ ಮಕ್ಕಳು ಅನುಭವಿಸಿದ ಅನುಭವ ಓದುತ್ತ ಹೋದರೆ, ಮೈ ಗಾಡ್! ಏನು ಹೇಳಬೇಕೋ ತಿಳಿಯುವದಿಲ್ಲ. ಕೆಲವೊಂದು ಮಾತ್ರ ತುಂಬಾ ಗ್ರಾಫಿಕ್ ಇವೆ. ಲೇಖಕಿ ಹೇಳೇ ಬಿಡುತ್ತಾರೆ. ಇದ್ದದ್ದು ಇದ್ದಾಂಗೆ ಹೇಳಿದ್ದೇನೆ. ರೋಚಕ ಅಥವಾ ಭೀಭತ್ಸ ಮಾಡುವ ಇರಾದೆ ಇಲ್ಲ. ಇಷ್ಟು ಓದಿದ ಮೇಲೆ ಆದರೂ ನಮ್ಮ ಜನ ಎಚ್ಚೆತ್ತುಕೊಂಡು ಏನು ಬದಲಾಗ ಬೇಕೋ ಬದಲಾದಾರಾ ಅಂತ ಅವರ ಆಸೆ.

ಮುಂದೆ ಬಲವಂತದ ಮದುವೆಗೆ ಒಳಗಾಗುವ ಲೇಖಕಿ ಕೀನ್ಯಾ ಬಿಟ್ಟು ಓಡುತ್ತಾರೆ. ಅದೇ ಒಂದು ರೋಚಕ ಗಾಥೆ. ಹೇಗೋ ಮಾಡಿ ಹಾಲಂಡ್ ತಲಪುತ್ತಾರೆ. ಅಲ್ಲಿ ಮೊದಲು ನಿರಾಶ್ರಿತರಾಗಿ ಜೀವನ. ನಂತರ ಚಿಕ್ಕಪುಟ್ಟ ಕೆಲಸ. ಸುಮಾರು ದಿನಗಳ ನಂತರ ಅವರಿಗೆ ಅಲ್ಲಿ ರಾಜಕೀಯ ಸಂತ್ರಸ್ತರು ಅಂತ ವಲಸೆ ಪರ್ಮಿಟ್ ಸಿಕ್ಕು ಓದಲು ಶುರು ಮಾಡುತ್ತಾರೆ. ಪಾಲಿಟಿಕಲ್ ಸೈನ್ಸ್ ನಲ್ಲಿ ಓದಿ, ಗಮನಾರ್ಹ ಲೇಖನಗಳನ್ನು ಬರೆದು, ಸಿಕ್ಕಾಪಟ್ಟೆ ಭಾಷಣ ಬಿಗಿದು, ಹಾಲಂಡಿನ ರಾಜಕೀಯ ಮುತ್ಸದ್ದಿಗಳ, ಚಿಂತಕರ ಕಣ್ಣಿಗೆ ಬಿದ್ದು ಭಲೇ ಭಲೇ ಅಂತ ಅನ್ನಿಸಿಕೊಳ್ಳುತ್ತಾರೆ. ಅಷ್ಟರಲ್ಲಿ ಅವರಿಗೆ ಹಾಲಂಡಿನ ಪೌರತ್ವ ಕೂಡ ಸಿಗುತ್ತದೆ.

ಇವರ ಕಥೆ, ಇವರು ಮಾಡಿಧ ಸಾಧನೆಗಳನ್ನು ಗಮನಿಸಿದ ಕೆಲವು ಸಮಾನಮನಸ್ಕ ನಾಯಕರು ಇವರನ್ನು ಚುನಾವಣೆಗೆ ನಿಲ್ಲುವಂತೆ ಹೇಳುತ್ತಾರೆ. ನಿಂತು ಗೆದ್ದೇ ಬಿಡುತ್ತಾರೆ ಅಯಾನ್ ಹರ್ಸೀ ಅಲಿ!!!! ಕೆಲವೇ ವರ್ಷಗಳ ಹಿಂದೆ ಕೀನ್ಯಾದ ಕೊಳಗೇರಿಗಳಲ್ಲಿ ಇದ್ದವರು ಈಗ ಹಾಲಂಡಿನ ಪಾರ್ಲಿಮೆಂಟ್ ಮೆಂಬರ್.

ಬೇರೆ ಯಾರೋ ಆಗಿದ್ದರೆ ಗ್ರೀನ್ ಕಾರ್ಡ್ ಸಿಕ್ಕಿತು, ಪೌರತ್ವ ಸಿಕ್ಕತು, ಒಳ್ಳೆ ಸರ್ಕಾರಿ ನೌಕರಿ, ಮತ್ತೇನು ಬೇಕು? ಆರಾಮ ಇದ್ದು ಬಿಡೋಣ ಅಂತ ಹಳೆಯದ್ದೆಲ್ಲ ಮರೆತು ಇದ್ದು ಬಿಡುತ್ತಿದ್ದರೋ ಏನೋ? ಆದ್ರೆ ಹುಟ್ಟು ಹೋರಾಟಗಾರ್ತಿಯಾದ ಇವರು ಹಾಗೆ ಹೇಗೆ ಮಾಡಿಯಾರು?

ಆಗಲೇ ಸಿಗುತ್ತಾನೆ ವ್ಯಾನ್ ಗೋ ಎಂಬ ಒಬ್ಬ ಪಿರ್ಕೀ ಫಿಲಂ ಮೇಕರ್. ಇಬ್ಬರೂ ಕೂಡಿ ಧರ್ಮಾಂಧತೆಯ ಬಗ್ಗೆ Submission ಎಂಬ ಒಂದು ಚಿಕ್ಕ ಸಿನೆಮಾ ಮಾಡೇ ಬಿಡುತ್ತಾರೆ. ಸಿನೆಮಾ ರಿಲೀಸ್ ಆದ ತಕ್ಷಣ ಇಡೀ ಜಗತ್ತು, ಅದರಲ್ಲೂ ಅರಬ್ ಮುಸ್ಲಿಂ ಜಗತ್ತೇ ಫುಲ್ ತಲ್ಲಣವಾಗಿ ಬಿಡುತ್ತದೆ. ಇಬ್ಬರ ಮೇಲೂ ಫತ್ವಾ ಮೇಲೆ ಫತ್ವಾ. ತಲೆ ತೆಗದೇ  ಬಿಡಿ. ಕೊಂದೇ ಬಿಡಿ ಅಂತ.

ಆ ಪಿರ್ಕಿ ಫಿಲಂ ಮೇಕರ್ ನಸೀಬ್ ಖರಾಬಿತ್ತು. ಯಾವದೋ ಒಬ್ಬ ಮೊರೊಕ್ಕೋ ದೇಶದ ಧರ್ಮಾಂಧ ಹಾಲಂಡ್ ವಲಸಿಗ, ಯಾವದೇ ರಕ್ಷಣೆ ಇಲ್ಲದೆ ಬಿಂದಾಸ್ ಓಡಾಡುತ್ತಿದ್ದ ಅವನನ್ನು ಹಿಡಿದು ಕೊಂದೇ ಬಿಟ್ಟ. ಮತ್ತೆ ಬೇರೆಯವರಿಗೆ ಒಂದು ಪಾಠ ಅನ್ನುವಂತೆ ಒಂದು ಕಠಾರಿ ಅವನ ಎದೆಯಲ್ಲಿ ಹುಗಿಸಿ ಹೋಗಿದ್ದ. ಸತ್ಯದ ಒಂದು ಮುಖ ತೋರಿಸಿದವರಿಗೆ ಸಿಕ್ಕ ಬಹುಮಾನ.

ಪುಣ್ಯಕ್ಕೆ ಅಯಾನ್ ಹರ್ಸಿ ಅಲಿ ಮಾತ್ರ ಸಾಕಷ್ಟು ರಕ್ಷಣೆ ಇಟ್ಟುಗೊಂಡು ತಿಂಗಳು ಎರಡು ತಿಂಗಳಿಗೊಮ್ಮೆ ಮನೆ ಬದಲು ಮಾಡುತ್ತ ತಮ್ಮ ಕಾಳಗ ಮುಂದುವರೆಸಿದ್ದಾರೆ. ಅದೆಂದೂ ಮುಗಿಯದ ಕಾಳಗ. ಸೋಮಾಲಿಯ, ಅಲ್ಲಿನ ಜನ ಇತ್ಯಾದಿಗಳ ಬಗ್ಗೆ ಅವರಿಗೆ ಇರುವ ಕಾಳಜಿ ಮಾತ್ರ ಏನೂ ಕಮ್ಮಿ ಆಗಿಲ್ಲ. ಜಾಸ್ತಿನೇ ಆಗಿರಬಹುದು.

ತಣ್ಣನೆಯ ಮನಸಿಟ್ಟುಕೊಂಡು ಓದಿದರೆ ಒಂದು ಒಳ್ಳೆ ಪುಸ್ತಕ. ಕೆಲವು ಕಡೆ ತುಂಬಾ ಡಾರ್ಕ್ ಶೇಡ್ಸ್ ಅನ್ನುವಂತ ಘಟನೆ ಬರುತ್ತವೆ. ಸಿಕ್ಕಾಪಟ್ಟೆ ಕಳವಳ, ಚಡಪಡಿಕೆ, ತುಮುಲ, ನೋವು, trauma ಆದೀತು. ಜೋಕೆ.

Monday, October 29, 2012

ಹಂದಿ ಕೊಲ್ಲಿಯಲ್ಲಿ ಹಡಾಗತಿ. ಫೀಡೆಲ್ ಕ್ಯಾಸ್ಟ್ರೋಗೆ ಗುಂಡು....ಬಿದ್ದೇ ಬಿಟ್ಟಿತ್ತು.

ಕ್ಯೂಬಾದಲ್ಲಿ ಹೊಲಗೇರಿ ಎದ್ದು ಹೋಗಿತ್ತು. ಫೀಡೆಲ್ ಕಾಸ್ಟ್ರೋ ಎಂಬ ಕಮ್ಯುನಿಸ್ಟ್ ಕ್ರಾಂತಿಕಾರಿ ಬತಿಸ್ತಾ ಎಂಬ ಸರ್ವಾಧಿಕಾರಿಯನ್ನು ಓಡಿಸಿ ಕಮ್ಯುನಿಸ್ಟ್ ರಾಜ್ಯ ಸ್ಥಾಪಿಸುವದರಲ್ಲಿ ನಿರತನಾಗಿದ್ದ. ಅಮೇರಿಕಾದ ಫ್ಲೋರಿಡಾ ಕಡಲ್ತೀರದಿಂದ ಕೇವಲ 90 ಮೈಲಿ ದೂರದಲ್ಲಿರುವ ಕ್ಯೂಬಾದಲ್ಲಿ ಕಮ್ಯುನಿಸ್ಟ್ ರಾಜ್ಯ?!!!!! ಬಂಡವಾಳಶಾಹಿಗಳಿಗೆ ನುಂಗಲಾರದ ತುತ್ತು.

ಕಾಸ್ಟ್ರೋ ಬರುವ ಮೊದಲು ಕ್ಯೂಬಾ ಅಂದ್ರೆ 'ಪಾಪಗಳ ದ್ವೀಪ'. ತಿನ್ನಬಾರದ್ದು ತಿಂದು, ಕುಡಿಯಬಾರದ್ದು ಕುಡಿದು, ಸೇದಬಾರದ್ದು ಸೇದಿ, ಮಾಡಬಾರದ್ದು ಮಾಡಿ ಬರುವ ಎಲ್ಲ ತರಹದ ಅವಕಾಶ. ಹೇರಳ ಅವಕಾಶ. ಕ್ಯಾಸಿನೋಗಳಿದ್ದವು, ಕ್ಯಾಬರೆಗಳಿದ್ದವು. ಎಲ್ಲಾ ತರಹದ ವಿಕೃತಿಗಳಿಗೆ ಫುಲ್ ಅನುಮತಿ. ಕಾಸ್ ಒಂದು ಇದ್ದರೆ ಸಾಕು. ಮಾಫಿಯಾ ಸಿಕ್ಕಾಪಟ್ಟೆ ದುಡ್ಡು ಹಾಕಿತ್ತು. ಮೊದಲಿನ ಬತಿಸ್ತಾಗೆ ಇಷ್ಟು ಅಂತ ಕಟ್ ಹೋಗುತ್ತಿತ್ತು. ಅವನು ತನ್ನ ಜನರನ್ನು ಹಿಡಿದು ಚಿತ್ರಹಿಂಸೆ ಮಾಡುತ್ತಾ, ಹೆದರಿಸುತ್ತ ಒಂದು ತರಹದ ನರಕ ಸೃಷ್ಟಿ ಮಾಡಿಟ್ಟುಕೊಂಡಿದ್ದ. ಫ್ಲೋರಿಡಾದಿಂದ ಕೆಲವೇ ನಿಮಿಷಗಳ ವಿಮಾನ ಪಯಣ. ಇಲ್ಲಾ 1-2 ಘಂಟೆಗಳ ಬೋಟ್ ಪಯಣ.

ಕಾಸ್ಟ್ರೋ ಬಂದಿದ್ದು ಹಡಬೆ ದಂಧೆ ಮಾಡುವವರ ಗಂಟಲಲ್ಲಿ ಮುಳ್ಳು ಸಿಕ್ಕಿಕೊಂಡಂಗಾಗಿತ್ತು. ಅವನೇನು ದೊಡ್ಡ ಸುಬಗನಲ್ಲ. ಆದರೂ ಕಮ್ಯುನಿಸ್ಟ್, ಕಾಮ್ರೇಡ್ ಅಂತೆಲ್ಲಾ ಭೊಂಗು ಬಿಟ್ಟು, ಕ್ಯಾಸಿನೋ ಇತ್ಯಾದಿಗಳ ಮೇಲೆ ಒಂದು ತರಹದ ನಿರ್ಬಂಧ ಹೇರಿದ್ದ. ಜಾಸ್ತಿ ಕಾಸು ಕೇಳುತ್ತಿದ್ದ. ಕೆಲವೊಂದು ವಿಕೃತಿಗಳಾದ ಬಾಲ್ಯ ವೇಶ್ಯಾವೃತ್ತಿ, ಲೈವ್ ಸೆಕ್ಸ್ ಶೋ ಇತ್ಯಾದಿಗಳನ್ನು ಬಂದ್ ಮಾಡಿಸಿದ್ದ. ಸುಮಾರು ಏಳಡಿ ಮೇಲೆ ಎತ್ತರವಿದ್ದು ಜಂಬೋ ಎಂದೇ ಫೇಮಸ್ ಆಗಿದ್ದ ನೀಗ್ರೋ ಸೆಕ್ಸ್ ಶೋ ಸ್ಪೆಷಲಿಸ್ಟ ಒಬ್ಬ ಕ್ಯೂಬಾ ಬಿಟ್ಟು ಓಡಿದ್ದ. ಒಟ್ಟಿನಲ್ಲಿ ಮಜಾ ಹೋಗಿತ್ತು. ಎಲ್ಲಾ ಸಪ್ಪೆ ಸಪ್ಪೆ.

ಅದಕ್ಕೇ ಕಾಸ್ಟ್ರೋನನ್ನು ಹ್ಯಾಂಗಾರೂ ಮಾಡಿ ಓಡಿಸಿ ಅಂತ ಅಮೇರಿಕಾದ ಸರಕಾರದ ಮೇಲೆ ಪ್ರೆಶರ್. ಅದೂ ದೊಡ್ಡ ದೊಡ್ಡ ದುಡ್ಡಿರುವ ಕುಳಗಳೇ ಪ್ರೆಶರ್ ಹಾಕತೊಡಗಿದ್ದರು. ಅವರದೇ ಕಾಸಿಂದ ಆರಿಸಿ ಬಂದಿದ್ದ ಜನರು ಇನ್ನೇನು ಮಾಡಿಯಾರು? "ಹ್ಞೂ.....ಸೀಕ್ರೆಟ್ ಆಗಿ ಏನಾರು ಮಾಡಿಕೊಳ್ಳಿ. ಡೈರೆಕ್ಟ್ ಆಗಿ ಅಮೇರಿಕಾ ಕ್ಯೂಬಾ ಮೇಲೆ ಏನೂ ಮಾಡಲು ಸಾಧ್ಯವಿಲ್ಲ. ಯಾಕೆಂದ್ರೆ, ಕ್ಯೂಬಾ ಮೇಲೆ ಅಮೇರಿಕಾ ದಾಳಿ ಮಾಡಿದರೆ, ಅಲ್ಲಿ ಬರ್ಲಿನ್ ನಲ್ಲಿ ಸೋವಿಯೆಟ್ ಯೂನಿಯನ್ ಪಶ್ಚಿಮ ಜರ್ಮನಿಯ ಮೇಲೆ ದಾಳಿ ಮಾಡುತ್ತದೆ. ಅದೆಲ್ಲ ದೊಡ್ಡ ತಲೆನೋವು. ಹೇಗೂ ಕ್ಯೂಬಾ ಬಿಟ್ಟು ಓಡಿ ಬಂದ ಸಾಕಷ್ಟು ಜನರಿದ್ದಾರೆ. ಅವರದೇ ಒಂದು ಗೆರಿಲ್ಲಾ ಪಡೆ ಮಾಡಿ, ತರಬೇತಿ ಕೊಟ್ಟು, ಕ್ಯೂಬಾದೊಳಗೆ ನುಗ್ಗಿಸಿ. ಅವರೇ ಕ್ಯಾಸ್ಟ್ರೋನನ್ನು ಓಡಿಸಿ, ದ್ವೀಪ  ಗೆದ್ದುಕೊಂಡರೆ, ಅಮೇರಿಕಾ ಅವರ ಸರ್ಕಾರವನ್ನು ಮಾನ್ಯ ಮಾಡುತ್ತದೆ," ಅಂದ ಆ ಕಾಲದ ಅಧ್ಯಕ್ಷರಾದ ಐಸೆನ್ಹೊವರ್ ಸಾಹೇಬರು ಮುಗುಮ್ಮಾಗಿ ಹೇಳಿ ತಮ್ಮ ಎರಡನೇ ಅವಧಿ ಮುಗಿದು ಪೆನಶನ್ ಸಿಕ್ಕರೆ ಸಾಕಪ್ಪ ಅಂತ ಕೂತಿದ್ದರು.

ಐಸೆನ್ಹೊವರ್ ಸಾಹೇಬರು ಹೋದರು. ಜಾನ್ ಕೆನಡಿ ಬಂದು ಕೂತರು. ಅವರಿಗೆ ಹಿಂದಿನ ಸರ್ಕಾರದ ಕಾರಸ್ತಾನ ಎಲ್ಲ ಸರಿಯಾಗಿ ಗೊತ್ತಿರಲಿಲ್ಲ. ಕಮ್ಯುನಿಸ್ಟ ಕಾಸ್ಟ್ರೋ ಹೋದರೆ ಹೋಗಲಿ ಅಂತ ಅವರೂ ಗೆರಿಲ್ಲಾ ಪಿರಿಲ್ಲಾ ಮಾಡಿಕೊಳ್ಳಿ ಅಂತ ಬಿಟ್ಟಿದ್ದರು.

ಈ ಕಡೆ ಕ್ಯೂಬಾ ಬಿಟ್ಟು ಓಡಿ ಬಂದಿದ್ದ ಜನರಿಗೆ ನಿಕಾರಾಗುವಾ ದೇಶದ ರಹಸ್ಯ ಶಿಬಿರಗಳಲ್ಲಿ ತರಬೇತಿ ನೀಡಲಾಗುತ್ತಿತ್ತು. ಸುಮಾರು ತರಬೇತಿಯ ನಂತರ 1961 ರ ಆದಿ ಭಾಗದಲ್ಲಿ ಈ ಗೆರಿಲ್ಲಾಗಳನ್ನು ಕ್ಯೂಬಾದೊಳಗೆ ನುಗ್ಗಿಸುವದು ಅಂತ ತೀರ್ಮಾನ ಮಾಡಲಾಯಿತು. ತರಬೇತಿ ಕೊಟ್ಟವರಿಗೆ ಆ ಕಾರ್ಯಾಚರಣೆ ಪೂರ್ತಿ ಯಶಸ್ವಿ ಆಗುವ ಬಗ್ಗೆ ಖಾತ್ರಿ ಇರಲಿಲ್ಲ. ಆದ್ರೆ ಪೂರ್ತಿ ಹದಗೆಟ್ಟು ಹೋದರೆ, ಕೆನಡಿ ಅವರ ಮೇಲೆ ಒತ್ತಡ ತಂದು, ಅಮೇರಿಕಾ ಡೈರೆಕ್ಟ್ ಆಗಿ ಯುದ್ಧದೊಳಗೆ ತೊಡಗುವಂತೆ ಮಾಡಿದರಾಯಿತು ಎಂಬ ಕುತಂತ್ರಿ ಬುದ್ಧಿ ಕೆಲ ಸರ್ಕಾರಿ ಪಟ್ಟಭದ್ರ ಹಿತಾಸಕ್ತಿಗಳದು.

ಕ್ಯೂಬಾದ ಗೆರಿಲ್ಲಾಗಳನ್ನು ಅಮೇರಿಕಾ ನುಗ್ಗಿಸಿದ್ದು 'ಹಂದಿ ಕೊಲ್ಲಿ' (bay of pigs) ಎಂಬ ಜಾಗದಲ್ಲಿ. ರಾಜಧಾನಿ ಹವಾನಾ ಸಮೀಪ ಹೆಚ್ಚಿನ ಸೈನಿಕ ಬಲ ಇರುತ್ತದೆ. ಹಾಗಾಗಿ ಸ್ವಲ್ಪ ನಿರ್ಜನ ಪ್ರದೇಶ ದಾಳಿಗೆ ಬೆಟರ್. ಅಲ್ಲಿ ಹೋಗಿ ಲ್ಯಾಂಡ್ ಆದ ಮೇಲೆ ಒಂದೊಂದೇ ಜಾಗ ವಶಪಡಿಸಿಕೊಳ್ಳುತ್ತ ಹೋಗುವದು ಗೆರಿಲ್ಲಾಗಳ ಪ್ಲಾನ್.

ಕ್ಯಾಸ್ಟ್ರೋ ಏನು ಕಡಿಮೆ ಪ್ರಚಂಡನೇ? ಅವನ ಗೂಢಚಾರರು ಫ್ಲೋರಿಡಾದ ತುಂಬೆಲ್ಲ ಹರಡಿದ್ದರು. ಗೆರಿಲ್ಲಾಗಳಲ್ಲೇ ಹಲವಾರು ಒಡಕು ಬಾಯಿಯ ಜನರಿದ್ದರು. ಅವರಲ್ಲೇ ಕಚ್ಚಾಟ. ಕುಡಿದ ಮತ್ತಿನಲ್ಲಿ ಸಣ್ಣ ಪ್ರಮಾಣದ ಹಿಂಟ್ಸ ಕೊಟ್ಟಿದ್ದರು. ಸೋವಿಯೆಟ್ ಯೂನಿಯನ್ ಸಹ ಮಾಹಿತಿ ಸಂಗ್ರಹಣೆ ಮಾಡಿ ಕೊಟ್ಟಿತ್ತು. ಕಾಸ್ಟ್ರೋ ಮತ್ತು ಅವನ ಪಡೆಗಳು ಸನ್ನದ್ಧವಾಗಿ ಕೂತಿದ್ದರು. ಬಕರಾಗಳು ಬಂದು ಬಲೆಗೆ ಬೀಳಲಿ ಅಂತ.

ಗೆರಿಲ್ಲಾಗಳು ಬಂದು ಹಂದಿ ಕೊಲ್ಲಿಯ ಬಳಿ ಇಳಿದರು. ಕ್ಯೂಬಾದ ಚಿಕ್ಕ ವಾಯುಪಡೆ ಅವರನ್ನು ಇಲ್ಲದಂತೆ ಅಟ್ಟಿಸಿಕೊಂಡು ಓಡಾಡಿಸಿತು. ಮೇಲಿಂದ ಗನ್ ಶಿಪ್ಸ್ ಗುಂಡಿನ ಮಳೆಗರೆಯುತ್ತಾ ಗೆರಿಲ್ಲಾಗಳನ್ನು ಓಡಿಸುತ್ತಿದ್ದರೆ, ಗೆರಿಲ್ಲಾಗಳು ಓಡುತ್ತಾ, ಕ್ಯಾಸ್ಟ್ರೋ ಸರಿಯಾಗಿ ನಿಲ್ಲಿಸಿದ್ದ ಸ್ನೈಪರ್ ಗಳ ಗುಂಡು ತಿಂದು ನೆಲಕ್ಕೆ ಉರಳುತ್ತಿದ್ದರು. ಇತ್ತ ಕಡೆ ಅಮೇರಿಕಾದಲ್ಲಿ ಕಾರ್ಯಾಚರಣೆ ಕುಲಗೆಟ್ಟು ಹೋಗಿದ್ದರ ಬಗ್ಗೆ ಮಾಹಿತಿ ಬರುತ್ತಿದ್ದಂತೆ, ಪ್ರೆಸಿಡೆಂಟ್ ಕೆನಡಿ ಅವರ ಮೇಲೆ ಪ್ರೆಶರ್ ಹಾಕುವ ಕಾರ್ಯ ಆರಂಭವಾಯಿತು. ಆದ್ರೆ ಕೆನಡಿ ಅವರಿಗೆ ಅಮೇರಿಕಾದ ವಾಯುಪಡೆ ಕಳಿಸಿ ಮೂರನೇ ಮಹಾಯುದ್ಧ ಶುರು ಮಾಡುವ ದರ್ದು ಇರಲಿಲ್ಲ. ಅದಕ್ಕಿಂತ ಹೆಚ್ಚಾಗಿ ತಮ್ಮನ್ನು ಕತ್ತಲೆಯಲ್ಲಿಟ್ಟು, ಈಗ ಒಮ್ಮೆಲೇ ವಾಯುಪಡೆ ಡಿಮಾಂಡ್ ಮಾಡುತ್ತಿದ್ದ CIA ಅಧಿಕಾರಿಗಳ ಮೇಲೆ ಸಿಕ್ಕಾಪಟ್ಟೆ ಎಗರಾಡಿ ಬಿಟ್ಟರು ಕೆನಡಿ. ಸುಮಾರು ಹಿರಿ ತಲೆಗಳು ಮನೆಗೆ ಹೋದವು.

ಕಾಸ್ಟ್ರೋನ ಪಡೆಗಳು ಗೆರಿಲ್ಲಾಗಳನ್ನು ಹಿಡಿದು ಬಡಿಯುತ್ತಿದ್ದರೆ, ತರಗೆಲೆಗಳಂತೆ ನೆಲಕ್ಕೆ ಬೀಳುತ್ತಿದ್ದರು ಗೆರಿಲ್ಲಾಗಳು. ಅಮೇರಿಕಾದಿಂದ ಸಹಾಯ ಬರುವದಿಲ್ಲ ಎಂದು ಗೊತ್ತಾದಂತೆ ಸುಮಾರು ಜನ ಶರಣಾಗತೊಡಗಿದರು. ಕೆಲವರು ಮಾತ್ರ ಫೈಟ್ ಟು ಫಿನಿಶ್ ಎಂಬಂತೆ ಹೋರಾಡುತ್ತಲೇ ಇದ್ದರು.

ಅಂತವರಲ್ಲಿ ಒಬ್ಬವ ಹ್ಯಾರಿ ವಿಲಿಯಮ್ಸ್. ಮೂಲತ ಅವನು ಒಬ್ಬ ಚನ್ನಾಗಿ ಕಲಿತ ಮೈನಿಂಗ್ ಇಂಜಿನಿಯರ್. ಕ್ಯೂಬಾದಲ್ಲಿ ಹಾಯಾಗಿದ್ದ. ಕಾಸ್ಟ್ರೋ ಅವನಿಗೆ ಗೊತ್ತು ಸಹ. ಆದರೂ ಕ್ಯಾಸ್ಟ್ರೋ ಒಳ್ಳೆ ದೋಸ್ತನೇ ಹೊರತು ಒಳ್ಳೆ ಆಡಳಿತಗಾರನಲ್ಲ ಎಂದು ಹ್ಯಾರಿ ವಿಲಿಯಮ್ಸ್ ನಂಬಿದ್ದ. ಅದಕ್ಕೇ ಕ್ಯೂಬಾ ಬಿಟ್ಟು ಓಡಿ  ಬಂದು ಫ್ಲೋರಿಡಾದಲ್ಲಿ ಸೆಟಲ್ ಆಗಿದ್ದ. ಕ್ಯಾಸ್ಟ್ರೋ ವಿರುದ್ಧದ ಚಟುವಟಿಕೆಗಳಲ್ಲಿ ತುಂಬಾ ತೊಡಗಿಸಿಕೊಂಡಿದ್ದ.

ಇಂತಹ ಹ್ಯಾರಿ ವಿಲಿಯಮ್ಸ್ ಮಾತ್ರ ಗುಂಡು ಹಾರಿಸುತ್ತಲೇ ಇದ್ದ. ಅವನಿಗೇ  ಸುಮಾರು ಗುಂಡುಗಳು ಬಿದ್ದಿದ್ದವು. ರಕ್ತ ಹರಿಯುತ್ತಿತ್ತು. ನಿಧಾನವಾಗಿ ಪ್ರಜ್ಞೆ ತಪ್ಪುತ್ತಿತ್ತು. ಪೂರ್ತಿ ಪ್ರಜ್ಞೆ ತಪ್ಪುವ ಮೊದಲು ಮಾಡಿದ ಆಖರೀ ಕೆಲಸವೆಂದರೆ ತನ್ನ ಪಿಸ್ತೂಲಿನಲ್ಲಿ ಗುಂಡುಗಳು ಇವೆಯೋ ಇಲ್ಲವೋ ಅಂತ ನೋಡಿಕೊಂಡಿದ್ದು. ಇದೆ ಅಂತ ಖಚಿತ ಮಾಡಿಕೊಂಡೇ ಪಿಸ್ತೂಲ್ ಸೊಂಟದಲ್ಲಿ ಸಿಗಿಸಿಕೊಂಡ ಹ್ಯಾರಿ ವಿಲಿಯಮ್ಸ್ ಪ್ರಜ್ಞೆ ತಪ್ಪಿ ಬಿದ್ದ.

ಎಷ್ಟೇ ಅಂದ್ರೂ ಯುದ್ಧ ಕೈದಿಗಳು. ಸ್ವಲ್ಪಾದರೂ ಮಾನವೀಯತೆ ತೋರಿಸಲೇ ಬೇಕು. ಅದಕ್ಕೇ ಗಾಯಾಳುಗಳನ್ನು ಹವಾನಾದ ಆಸ್ಪತ್ರೆಗೆ ಸಾಗಿಸಲಾಯಿತು. ಅಂತವರಲ್ಲಿ ಹ್ಯಾರಿ ವಿಲಿಯಮ್ಸ್ ಕೂಡ ಇದ್ದ. 

ಸ್ವಲ್ಪ ದಿವಸದ ನಂತರ ಹ್ಯಾರಿ ವಿಲಿಯಮ್ಸ್ ಗೆ  ಪ್ರಜ್ಞೆ ಬಂತು. ಬಾಡಿ ಪೂರ್ತಿ ಲ್ಯಾಪ್ಸ್ ಆಗಿತ್ತು. ಏನೇನೋ ಮುರಿದು, ಏನೇನೋ ಹರಿದು, ಒಟ್ಟಿನಲ್ಲಿ ಎಕ್ಕುಟ್ಟಿ ಹೋಗಿದ್ದ. ಜೀವಂತ ಶವ ಅಷ್ಟೇ. ಅಂತಾದ್ರಲ್ಲೂ ಹೇಗೋ ಮಾಡಿ ಪಿಸ್ತೂಲ್ ತಡವಿಕೊಂಡ ಹ್ಯಾರಿ ವಿಲಿಯಮ್ಸ್. ಕ್ಯಾಸ್ಟ್ರೋ ಸಿಕ್ಕರೆ ಗುಂಡು ಹಾಕಿಯೇ ಬಿಡಬೇಕು ಅಂತ ಹಲ್ಲು ಕಡಿದ. 

ಯಾರ ಅದೃಷ್ಟಕ್ಕೋ ಅಥವಾ ದುರಾದೃಷ್ಟಕ್ಕೋ ಒಂದಿನ ಫೀಡೆಲ್ ಕ್ಯಾಸ್ಟ್ರೋ ಆಸ್ಪತ್ರೆಗೆ ಬಂದೇ ಬಿಟ್ಟ. ಗಾಯಾಳುಗಳಲ್ಲಿ ಅವನ ಹಳೆ ಮಿತ್ರರಿದ್ದರು. ಅವನ ಅನುಚರರ ಬಂಧುಗಳಿದ್ದರು. ಮತ್ತೆ ಗಾಯಾಳುಗಳನ್ನು ಒತ್ತೆಯಿಟ್ಟುಕೊಂಡು ಅಮೇರಿಕಾದಿಂದ ಕಾಸ್ ಎತ್ತುವ ಪ್ಲಾನ್ ಕೂಡ ಇದ್ದಂಗೆ ಇತ್ತು.

ಕ್ಯಾಸ್ಟ್ರೋ ತನ್ನ ಹಸಿರು ಬಣ್ಣದ ಮಿಲಿಟರಿ ಯುನಿಫಾರ್ಮ್ ಧರಿಸಿ, ಬಾಯಲ್ಲಿ ತನ್ನ ಟ್ರೇಡ್ ಮಾರ್ಕ್ ಸಿಗಾರ್ ಕಚ್ಚಿಕೊಂಡು, ಗಡ್ಡ ಕೆರೆಯುತ್ತಾ, ದೊಡ್ಡ ದನಿಯಲ್ಲಿ ಕಮ್ಯೂನಿಸ್ಟ್, ಕಾಮ್ರೇಡ್ ಅದು ಇದು ಅನ್ನುತ್ತ ಬಂದ. ಅವನ ಹಿಂದೆ ಅವನ ಅನುಚರರು. 

ಆಸ್ಪತ್ರೆಯಲ್ಲಿದ್ದ ಗಾಯಾಳುಗಳಿಗೆ ಹಲೋ, ಹಾಯ್ ಅನ್ನುತ್ತ ಕೈ ಕುಲುಕುತ್ತ ಬಂದ ಕ್ಯಾಸ್ಟ್ರೋ. ಹ್ಯಾರಿ ವಿಲಿಯಮ್ಸ್ ಮಲಗಿದ್ದ ಹಾಸಿಗೆಯ ಪಕ್ಕ ಬಂದು ಒಂದು ಕ್ಷಣ ಜಾಸ್ತಿಯೇ ನಿಂತ. ಹಳೆ ಕಾಲದ ದೋಸ್ತಿ. ಕಲೆತ ಕಣ್ಣುಗಳು ಏನೇನು ಮಾತಾಡಿಕೊಂಡವೋ?

ಆ ಪರಿ ಗಾಯಗೊಂಡಿದ್ದರೂ ಹ್ಯಾರಿ ವಿಲಿಯಮ್ಸ್ ಕೊತ ಕೊತ ಕುದ್ದುಹೋದ. ಅದೆಲ್ಲಿಂದ ಶಕ್ತಿ ತಂದನೋ? ಅಡಗಿಸಿ ಇಟ್ಟುಕೊಂಡಿದ್ದ ಪಿಸ್ತೂಲ್ ತೆಗೆದವನೇ, ಟ್ರಿಗರ್ ಒತ್ತೇ ಬಿಟ್ಟ!!!

ರಿವಾಲ್ವರ್ ಚೇಂಬರ್ ಕ್ಲಿಕ್, ಕ್ಲಿಕ್, ಕ್ಲಿಕ್ ಅಂದಿತೇ ವಿನಹಾ ಗೋಲಿ ಹಾರಲೇ ಇಲ್ಲ. ಕೇವಲ ಎರಡು ಮೂರು ಅಡಿ ದೂರದಲ್ಲಿ ನಿಂತಿದ್ದ ಕ್ಯಾಸ್ಟ್ರೋ ಕಣ್ಣಲ್ಲಿ ಭೀತಿಯೋ, ಆಶ್ಚರ್ಯವೋ, ಮತ್ತೇನು ಭಾವವೋ ಗೊತ್ತಿಲ್ಲ. ತಕ್ಷಣ ಕ್ಯಾಸ್ಟ್ರೋನ ಅಂಗರಕ್ಷಕರು ಪಿಸ್ತೂಲ್ ವಶಪಡಿಸಿಕೊಂಡಿದ್ದರು. ಹ್ಯಾರಿ ವಿಲಿಯಮ್ಸ್ ಮಾತ್ರ ಹತಾಶೆಯಿಂದ ಹಾಸಿಗೆ ಗುದ್ದುತ್ತಾ, ಪರಿತಪಿಸುತ್ತಾ ಮಗ್ಗುಲು ಬದಲಾಯಿಸಿದ. ತಾನೇ ಗುಂಡು ತುಂಬಿಸಿ ರೆಡಿ ಇಟ್ಟಿದ್ದ ಪಿಸ್ತೂಲ್ ಕೈಕೊಟ್ಟಿತಲ್ಲ. ಛೆ!!ಛೆ!! ಅವನ ವಿಷಾದಕ್ಕೆ ಎಲ್ಲೆ ಇರಲಿಲ್ಲ.

ಆಗಿದ್ದು ಇಷ್ಟೇ. ಆ ಪರಿ ಗಾಯಗೊಂಡಿದ್ದ ಹ್ಯಾರಿ ವಿಲಿಯಮ್ಸ್ ಕಡೆ ಪೂರ್ತಿ ತುಂಬಿದ ಪಿಸ್ತೂಲ್ ನೋಡಿದ ಅವನ ಗೆಳೆಯನೊಬ್ಬ ಗುಂಡು ತೆಗೆದು ಖಾಲಿ ಪಿಸ್ತೂಲ್ ಇಟ್ಟು  ಬಿಟ್ಟಿದ್ದ. ಆ ಗೆಳಯನಿಗೆ ಒಂದೇ ಅನುಮಾನ- ಈ ಪರಿ ಗಾಯಗೊಂಡಿರುವ ಹ್ಯಾರಿ ವಿಲಿಯಮ್ಸ್ ಆತ್ಮಹತ್ಯೆ ಮಾಡಿಕೊಳ್ಳಲು ಎಂದೇ ತುಂಬಿದ ಪಿಸ್ತೂಲ್ ಇಟ್ಟುಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡುಬಿಡುತ್ತಿದ್ದನೋ  ಏನೋ? ಅಷ್ಟರಲ್ಲಿ ಪ್ರಜ್ಞೆ ತಪ್ಪಿಹೋಗಿದೆ. ಇನ್ನು ಆಸ್ಪತ್ರೆಯಲ್ಲಿ ಪ್ರಜ್ಞೆ ಬಂದಾಕ್ಷಣ ಇದೇ ಪಿಸ್ತೂಲಿನಿಂದ ಕೊಂದುಕೊಂಡಾನು - ಅಂತ ಸ್ನೇಹಿತನ ಮೇಲಿನ ಕಾಳಜಿಯಿಂದ ಗುಂಡು ತೆಗೆದು ಇಟ್ಟು ಬಿಟ್ಟಿದ್ದ ಆ ಗೆಳೆಯ!!!!

ಒಟ್ಟಿನಲ್ಲಿ ಕ್ಯಾಸ್ಟ್ರೋ ಬಚಾವಾಗಿದ್ದ. ಕ್ಯಾಸ್ಟ್ರೋ ಮೇಲೆ ಆದ ಹತ್ಯಾ ಪ್ರಯತ್ನಗಳಿಗೆ ಲೆಕ್ಕವಿಲ್ಲ. ಅದರಲ್ಲಿ ಇದೂ ಒಂದು ಸೇರಿ ಹೋಯಿತು. ಆದ್ರೆ ಇದಕ್ಕೆ ಬೇರೆಯದೇ ಒಂದು ಮಹತ್ವ ಬಂದು ಬಿಟ್ಟಿತು. 

ಮುಂದೆ ಎರಡೇ ವರ್ಷಗಳಲ್ಲಿ ಪ್ರೆಸಿಡೆಂಟ್ ಜಾನ್ ಕೆನಡಿ ಗುಂಡು ತಿಂದು ಸತ್ತು ಹೋದರು. ಈಗ ಹೊರಬರುತ್ತಿರುವ ಮಾಹಿತಿಗಳ ಪ್ರಕಾರ - ಕ್ಯೂಬಾದ ಗೆರಿಲ್ಲಾಗಳೇ ಅವರು ಹಂದಿ ಕೊಲ್ಲಿಯಲ್ಲಿ ಸಹಾಯ ಮಾಡಲಿಲ್ಲ ಎಂಬ ಸಿಟ್ಟಿನಿಂದ ಅವರನ್ನು ಶೂಟ್ ಮಾಡಿ ಬಿಟ್ಟರು - ಅಂತ. ಕೆನಡಿಗೆ ಗುಂಡು ಅವರೇ ಹೊಡೆದಿದ್ದರೂ ಷಡ್ಯಂತ್ರ ಮಾತ್ರ ದೊಡ್ಡದಿತ್ತು. ಹಿಂದಿನ ಸೂತ್ರಗಳನ್ನು ಎಳೆದವರು ಬೇರೆಯವರೇ ಇದ್ದರು.

ಕೋಟೆ ಕಟ್ಟಿ ಮೆರೆದವರೆಲ್ಲ ಏನಾದರೋ? ಅಂತ ಅಮೇರಿಕಾದ ಅಧ್ಯಕ್ಷರುಗಳನ್ನು ಹಂಗಿಸುತ್ತಾ ಕ್ಯಾಸ್ಟ್ರೋ ಇಂದಿಗೂ ಆರಾಮ ಇದ್ದಾನೆ.


** ಬರೆದಿರುವ ಮಾಹಿತಿ ಹಲವಾರು ಪುಸ್ತಕಗಳಿಂದ ಆರಿಸಿ ಬರೆದಿದ್ದು. Lamar Waldron ಎಂಬವರು ಕ್ಯೂಬಾ, ಕೆನಡಿ ಹತ್ಯೆ, ನಿಕ್ಸನ್ ರಾಜಿನಾಮೆ ಕುರಿತಂತೆ ಹಲವಾರು ಒಳ್ಳೆಯ ಪುಸ್ತಕ ಬರೆದಿದ್ದಾರೆ. ಅವುಗಳಲ್ಲಿ ಸಿಕ್ಕ ಮಾಹಿತಿ.

**  ಹಡಾಗತಿ = fiasco