Thursday, October 10, 2013

'ಕುಲಕರ್ಣಿ ಮಮ್ಮಿ' ಸನ್ಯಾಸ ತೊಗೋಂಡಳಾ?!.....ಅಕಟಕಟಾ!

ಭಾಳ ದಿವಸ ಆದ ಮ್ಯಾಲೆ ಕರೀಂ ಸಿಕ್ಕಿದ್ದ.

ಸಲಾಂ ಸಾಬ್, ಅಂದ ಕರೀಂ.

ವಾಲೇ ಕುಮ್ ಸಲಾಂ ಕರೀಮಾ. ಏನಪಾ ಸುದ್ದಿ? - ಅಂತ ಕೇಳಿದೆ.

ಸಾಬ್! ನಿಮಗೆ ಗೊತ್ತು ಕ್ಯಾ, ಕುಲಕರ್ಣಿ ಮಮ್ಮಿ ಸನ್ಯಾಸ ತೊಗೊಂಡು ಬಿಟ್ಟಿದೆ?! ಹಾಂ! ಹಾಂ! - ಅಂತ ಏನೋ ದೊಡ್ಡ ನಿಗೂಢ ರಹಸ್ಯ ಹೇಳಿದಾಂಗ ಹೇಳಿದ ಕರೀಮಾ.

ಯಾವ ಕುಲಕರ್ಣಿ ಅವರ ಅವ್ವಾ ಸನ್ಯಾಸ ತೊಗೊಂಡ್ರು? ಹಾಂ? - ಅಂತ ಕೇಳಿದೆ.

ಕುಲಕರ್ಣಿ ಮಮ್ಮಿ ಅಂದ್ರ ಯಾರೋ ಕುಲಕರ್ಣಿ mummy ಅಂತ ನಾ ತಿಳಕೊಂಡೆ. ನಮ್ಮ ಕಾಲದಾಗೆಲ್ಲ ಮುಂದವರದವರು ಅಥವಾ ಮುಂದುವರದೇವಿ ಅಂತ ತಿಳಕೊಂಡವರು ತಾಯಿಗೆ ಮಮ್ಮಿ ಅಂತಿದ್ದರು.

ಏನ ಹಚ್ಚಿಯೋ ಕರೀಂ?! ನಮಗ ಎಷ್ಟು ಮಂದಿ ಕುಲಕರ್ಣಿ ಗೊತ್ತು ಇದ್ದಾರ. ಎಷ್ಟು ಮಂದಿ ಕುಲಕರ್ಣಿ ಮಮ್ಮಿ ಅಂದ್ರ ತಾಯಂದಿರು ನಮಗ ಮಾತೃ ಸಮಾನ. ಅವರ್ಯಾರೂ ಸಂಸಾರ ಬಿಟ್ಟು ಸನ್ಯಾಸ ತೊಗೊಂಡಿರಲಿಕ್ಕೆ ಇಲ್ಲ ಬಿಡು. ಏನೇನರೆ ಹೇಳ್ತೀ ನೋಡು. ಹಾಪಾ! - ಅಂತ ಹೇಳಿದೆ.

ಸಾಬ್!!! ಕುಲಕರ್ಣಿ ಮಮ್ಮಿ ಸಾಬ್!! ಕುಲಕರ್ಣಿ ಮಮ್ಮಿ!!! ಯಾವದೇ ಕುಲಕರ್ಣಿ ಅವರ ಅಮ್ಮೀಜಾನ ಅಲ್ಲ ಸಾಬ್. ಹುಡುಗಿ ಸಾಬ್ ಹುಡುಗಿ. ಕುಲಕರ್ಣಿ ಮಮ್ಮಿ ಅನ್ನೋ ಲಡಿಕಿ ಸಾಬ್! ಅದು ಸನ್ಯಾಸ ತೊಗೊಂಡು ಬಿಟ್ಟಿದೆ, ಅಂತ ಕರೀಮ ಅಲವತ್ತುಕೊಂಡ.

ಒಹೋ! ಇದು ಆ ತರಹದ ಮಮ್ಮಿ. ಧಾರವಾಡ ಕಡೆ ಹುಡುಗ ಹುಡುಗ್ಯಾರ ಹೆಸರಿಗೆ ಏನೇನೋ ಸೇರಿಸಿ ಕಲಾವತಿಗೆ ಕಲ್ಲಿ, ಕಲ್ಪನಾಗ ಕಪ್ಪಿ,  ಮಮತಾಗ ಮಮ್ಮಿ  ಅಂತ ಶಾರ್ಟ್ ಮಾಡಿ ಕರಿತಾರ. ಇದು ಹಾಂಗ ಆದ ಮಮ್ಮಿ ಉರ್ಫ್ ಮಮತಾ ಅಂತ ಗೊತ್ತಾತು.

ಕರೀಮಾ...ನಮ್ಮ ಪರಿಚಯದೊಳಗ ಮಮತಾ ಅಂತ ಹುಡುಗ್ಯಾರು ಇದ್ದರು. ಆದ್ರ ಕುಲಕರ್ಣಿ ಅನ್ನೋ ಅಡ್ಡಹೆಸರಿನ ಯಾವದೇ ಮಮತಾ ಉರ್ಫ್ ಮಮ್ಮಿ ಇರಲಿಲ್ಲ ಬಿಡಪಾ. ಹಾಂಗಿದ್ದಾಗ ಯಾವ ಕುಲಕರ್ಣಿ ಮಮ್ಮಿ ಸನ್ಯಾಸ ತೊಗೊಂಡಳೋ ಮಾರಾಯಾ!? - ಅಂತ ಕೇಳಿದೆ.

ಅವಳೇ ಸಾಬ್, ಅವಳೇ 'ಭೋಲಿ ಭಾಲಿ ಲಡಿಕಿ'. ಅಕಿನೇ ಸನ್ಯಾಸ ತೊಗೊಂಡಿದೆ, ಅಂದ ಕರೀಮ.

ಇವನೋ ಇವನ ಕನ್ನಡ ಭಾಷಾನೋ! ದೇವರಿಗೇ ಪ್ರೀತಿ! ಹುಡುಗಿ ತೊಗೊಂಡಿದೆ ಅಂತ ನಪುಂಸಕ ಲಿಂಗ ಹಚ್ಚಿ ಮಾತಾಡ್ತಾನ. ಲಿಂಗದ ಬಗ್ಗೆ ಮಾತ್ರ ಕರೀಮನ  ಜೋಡಿ ಮಾತಾಡೇಬಾರದು. ಅದು ಕೆಲಸಿಲ್ಲ ಅಂತ ಕಟ್ಟಿರುವಿ ಎಲ್ಲೆಲ್ಲೋ ಬಿಟಗೊಂಡು, ಆ ಮ್ಯಾಲೆ ಅದು ಕಡಿಬಾರದ ಜಗಾ ಒಳಗ ಕಡಿದಾಗ ಜಿಗದು ಜಿಗದು ಒದ್ಯಾಡಿದಾಂಗ! ಇವನ ಜೋಡಿ ಲಿಂಗದ ಸುದ್ದಿ ಬ್ಯಾಡ. ಅದು ವ್ಯಾಕರಣದ ಲಿಂಗನೇ ಇರಲಿ ಅಥವಾ.....

ಈ ಸನ್ಯಾಸ ತೊಗೊಂಡ ಕುಲಕರ್ಣಿ ಮಮ್ಮಿ ಭೋಲಿ ಭಾಲಿ ಲಡಿಕಿ ಅಂದ್ರ ಭಾಳ ಸಂಭಾವಿತ ಇದ್ದಳು ಏನು? ಹಾಂಗಾಗಿ ಯಾವದೋ ಸನ್ಯಾಸಿ ಅಕಿಗೆ ಮೋಡಿ ಮಾಡಿ ಅಕಿನ್ನೂ ಸನ್ಯಾಸಿ ಮಾಡಿ ಬಿಟ್ಟ ಏನು? ಭಾಳ ಅನ್ಯಾಯ ಆತು. ಲಗ್ನ ಆಗಿತ್ತೇನು ಅಕಿದು? ಯಾಕ ಕೇಳಿದೆ ಅಂದ್ರ ಇಕಿ ಏನೋ ಸನ್ಯಾಸಿ ಆಗಿ ಅಲಖ್ ನಿರಂಜನ್ ಅಂತ ಹೊಂಟು ಹೋದಾಳು. ಗಂಡಾ ಮಕ್ಕಳ ಗತಿ? ಅವರ ಕೈಯಾಗ ಚಿಪ್ಪು ಬಂತಲ್ಲೋ! - ಅಂತ ಸಂತಾಪ ವ್ಯಕ್ತಪಡಿಸಿದೆ.

ಸಾಬ್!!!! 'ಭೋಲಿ ಭಾಲಿ ಲಡಿಕಿ' ಅಂದ್ರೆ ಕುಲಕರ್ಣಿ ಮಮ್ಮಿ ಅಲ್ಲಾ ಸಾಬ್! ಅಕಿ ಆ 'ಭೋಲಿ ಭಾಲಿ ಲಡಿಕಿ' ಹಾಡಿಗೆ ಡಾನ್ಸ್ ಮಾಡಿದ್ದಳು ಸಾಬ್! - ಅಂತ ಮತ್ತೂ ತಲಿ ಕೆಡಿಸಿಬಿಟ್ಟ.

ಹಾಂ!? 'ಭೋಲಿ ಭಾಲಿ ಲಡಿಕಿ' ಅನ್ನೋದು ಹಾಡs? ಯಪ್ಪಾ! ಆ ಹಾಡಿಗೆ ಯಾವ ಕುಲಕರ್ಣಿ ಮಮ್ಮಿ ಡಾನ್ಸ್ ಮಾಡಿದ್ದಳೋ ಮಾರಾಯ? ಯಾರ ಜೋಡಿ? ನಿನ್ನ ಜೋಡಿ? - ಅಂತ ಕೇಳಿದೆ.

ಅಕ್ಷಯ ಕುಮಾರ್ ಜೋಡಿ ಕುಲಕರ್ಣಿ ಮಮ್ಮಿ ಡಾನ್ಸ್ ಮಾಡಿದ್ದಳು ಸಾಬ್. ನೋಡಿಲ್ಲ ಕ್ಯಾ? - ಅಂತ ಮತ್ತೂ ಒಂದು ಹೊಸಾ ಕ್ಯಾರೆಕ್ಟರ್ ಹಾಕಿ ಬಿಟ್ಟ.

ಈಗ ಈ ಅಕ್ಷಂತಿ ಕುಮಾರ್ ಯಾರಪಾ? ಅಕ್ಷಂತಿ ಕುಮಾರ ಅಂತ ಹೆಸರು ಅದ ಅಂದ ಮ್ಯಾಲೆ ಆವಾ ನನಗ ಅನ್ನಿಸೋಮಟ್ಟಿಗೆ ಹೊಸೆಲ್ಲಾಪುರ ಕಡೆ ಅವನೇ ಇರಬೇಕು. ಯಾರಲೇ ಆವಾ ಅಕ್ಷಂತಿ ಕುಮಾರಾ? ದೊಡ್ಡ ಅಕ್ಷಂತಿ ಹಚ್ಚಿಗೋತ್ತಾನ ಏನು? ಆಚಾರ್ರು ಏನು? ಮತ್ತ ಅವಂಗ ಅಕ್ಷಂತಿ ಕುಮಾರ್ ಆಚಾರ್ ಅನ್ನಬೇಕೋ ಬ್ಯಾಡೋ? ಹಾಂ? ಅದೇನು ಆ ಅಕ್ಷಂತಿ ಆಚಾರೀ ಕುಲಕರ್ಣಿ ಮಮ್ಮಿ ಜೋಡಿ ಡಾನ್ಸ್ ಮಾಡಿದ? ಅದಕ್ಕೇನು ಈಗ? - ಅಂತ ಕೇಳಿದೆ.

ಸಾಬ್!!! ಅಕ್ಷಂತಿ ಕುಮಾರ ಅಲ್ಲಾ ಸಾಬ್!!! ಅಕ್ಷಯ ಕುಮಾರ್!!! ಅಕ್ಷಯ ಕುಮಾರ್!!! ಅವನು ಪಂಜಾಬಿ ಮುಂಡಾ ಸಾಬ್!!! - ಅಂದ ಕರೀಮ.

ಏನಲೇ ಹಾಪಾ!? ಅಕ್ಷಂತಿ ಕುಮಾರಾ ಅಂತೀ! ಆ ಮ್ಯಾಲೆ ಪಂಜಾಬಿ ಮುಂಡೆ ಅಂತಿ! ಎಲ್ಲಾ ವಿಚಿತ್ರ ಅದ. ಕುಲಕರ್ಣಿ ಮಮ್ಮಿ ಅಕ್ಷಯ ಕೌರ್ ಅನ್ನೋ ಪಂಜಾಬಿ widow ಅಂದ್ರ ಮುಂಡೆ ಜೋಡಿ ಡಾನ್ಸ್ ಮಾಡಿದಳಾ? ಏನೇನೋ ಹೇಳ್ತೀಪಾ. ವಿಚಿತ್ರ ಅದಲ್ಲಾ. ಮುಂದ? - ಅಂತ ಕೇಳಿದೆ.

ಸಾಬ್!!! ಪಂಜಾಬಿ ಮುಂಡಾ ಅಂದ್ರೆ ಪಂಜಾಬಿ ಹುಡುಗ ಅಂತ. ನಿಮಗೆ ಕುಲಕರ್ಣಿ ಮಮ್ಮಿ ಅಂದ್ರೆ ಯಾರು ಅಂತ ತಿಳೀತಾ ಇಲ್ಲ. ಅದಕ್ಕೆ ನಾನು clue ಮೇಲೆ clue ಕೊಟ್ಟರೆ ಏನೇನೋ ಕೇಳ್ತೀರಿ, ಅಂತ ಕರೀಮ ಹೇಳಿದ.

ಹಾಂಗss? ಈಗ ಧಾರವಾಡ ಒಳಗಾ ಭಾಳ ಇಂಜಿನಿಯರಿಂಗ್, ಡೆಂಟಲ್, ಮೆಂಟಲ್, ಮೆಡಿಕಲ್ ಎಲ್ಲಾ ಕಾಲೇಜ್ ಅವು ಇವು ಬಂದು ಈ ಪಂಜಾಬಿ ಮುಂಡಾಗಳು, ಹರ್ಯಾಣಾದ ಗುಂಡಾಗಳು, ಉತ್ತರ ಪ್ರದೇಶದ ಬಯ್ಯಾಗಳು, ತಮಿಳ ತಂಬಿಗಳು, ಆಂಧ್ರದ ಗುಲ್ಟಿಗಳು, ಅವರು ಇವರು ಬಂದು ಪಾಪ ನಮ್ಮ ಲೋಕಲ್ ಕುಲಕರ್ಣಿ ಮಮ್ಮಿ ಅಂತಹ ಹುಡಿಗ್ಯಾರಿಗೆ ಮಂಗ್ಯಾ ಮಾಡ್ಲಿಕತ್ತಾರ. ನಾಕೈದ ವರ್ಷ ಚೈನೀ ಮಾಡಿ ಅವರು ವಾಪಸ್ ಪಂಜಾಬಿಗೆ, ಅವರ ಊರಿಗೆ ಹೋಗಿ ಬಿಡ್ತಾರ. ಪಾಪ ಕುಲಕರ್ಣಿ ಮಮ್ಮಿ ಅಂತಹವರು ಈ ಮುಂಡಾ ಗುಂಡಾಗಳ ಗುಂಗಿನ್ಯಾಗ ಮಾನಸಿಕ್ ಆಗಿ ಆಮ್ಯಾಲೆ ಪಾಪ ಸನ್ಯಾಸ ತೊಗೋತ್ತಾರ. ಇಕಿದೂ ಅದೇ ಕೇಸ್ ಏನು? ಆದರೂ ಈ ಕುಲಕರ್ಣಿ ಮಮ್ಮಿ ಯಾರೋ? ತಿಳಿವಲ್ಲತು - ಅಂತ ಹೇಳಿದೆ.

ಸಾಬ್ ನಿಮ್ಮದು ಎಂತಾ ದಡ್ಡ ಖೋಪಡೀ ಸಾಬ್? ಇರಲಿ ಕುಲಕರ್ಣಿ ಮಮ್ಮಿ ಬಗ್ಗೆ ಇನ್ನೊಂದು clue ಕೊಡೋಣ ನಿಮಗೆ. ಮಸ್ತ ಐಟಂ ಗರ್ಲ್ ಅಂತಾ  ಬ್ಯಾರೆ ಭಾಳ ಫೇಮಸ್ ಆಗಿದ್ದಳು. ಗೊತ್ತು ಕ್ಯಾ? - ಅಂತ ಕುಲಕರ್ಣಿ ಮಮ್ಮಿಯ ತಿಳಿಯದಿದ್ದ ಇನ್ನೊಂದು ರೂಪದ ಬಗ್ಗೆ ಹೇಳಿಬಿಟ್ಟ.

ಹಾಂ!!?? ಈ ಕುಲಕರ್ಣಿ ಮಮ್ಮಿ ಕ್ಯಾಬರೆ ಡಾನ್ಸ್ ಬ್ಯಾರೆ ಮಾಡತಿದ್ದಳಾ? ಭಾಳ ಜಾಬಾದ ಇದ್ದಾಳ ಅನ್ನು. ಎಲ್ಲೆ ಲೇಡೀಸ್ ಹಾಸ್ಟೆಲ್ ಒಳಗ ಹಾಸ್ಟೆಲ್ ಡೇ ಸೆಲೆಬ್ರೇಶನ್ ಗೆ ಕ್ಯಾಬರೆ ಡಾನ್ಸ್ ಹೊಡೆದಿದ್ದಳು ಏನು? ಅಥವಾ ಕ್ಯಾಬರೆ, ಐಟಂ ನಂಬರ್, ಎಲ್ಲಾ ಕೇವಲ ಹುಡುಗುರಿಗೆ ಮಾತ್ರ ಅಂತ ಹೇಳಿ, ಸೀದಾ KCD ಗುಡ್ಡಾ ಇಳಿದು ಬಂದು, ಸೀದಾ ಉದಯಾ ಬಾಯ್ಸ್ ಹಾಸ್ಟೆಲ್ ಒಳಗೇ ಕ್ಯಾಬರೆ ಹೊಡೆದು ಬಿಟ್ಟಿದ್ದಳೋ? ಹಾಂ? ಹಾಂ? - ಅಂತ ಕೇಳಿದೆ.

ಹೋಗ್ಗೋ ನಿಮ್ಮಾ!!! ಹಾಪ್ ಸಾಬ್!!! ನಿಮಗೆ ಕುಲಕರ್ಣಿ ಮಮ್ಮಿ ಅಂದ್ರೆ ಯಾರು ಅಂತ ತಿಳೀತಾ ಇಲ್ಲ ನೋಡಿ. ಏನು ಮಾಡೋದು? ಹ್ಯಾಂಗೆ ಹೇಳೋದು? ಹಾಂ? ಹಾಂ? ಕುಲಕರ್ಣಿ ಮಮ್ಮಿ ಸನ್ಯಾಸಿ ಆದ ಇಂಟರೆಸ್ಟಿಂಗ್ ವಿಷಯ ಹೇಳೋಣ ಅಂದ್ರೆ ನಿಮಗೆ ಕುಲಕರ್ಣಿ ಮಮ್ಮಿ ಯಾರು ಅಂತ ಗುರ್ತು ಮಾಡಿಸೋದರಲ್ಲೇ ನನ್ನ ಆಧಾ ಜಿಂದಗಿ ಖಾಲಿ ಆಗ್ತಾ ಇದೆ. ಏನು ಮಾಡೋಣ? - ಅಂತ ತಲಿ ಹಿಡಕೊಂಡು ಕೂತ ಕರೀಂ.

ಕುಲಕರ್ಣಿ ಮಮ್ಮಿದು ಲಗ್ನ ಆಗ್ಯದ ಏನು? ಲಗ್ನದ ನಂತರ ಅಕಿ ಅಡ್ಡಹೆಸರು ಚೇಂಜ್ ಆಗಿರಬೇಕಲ್ಲಾ. ಏನು ಅಕಿ ಗಂಡನ ಮನಿ ಅಡ್ಡಹೆಸರು? - ಅಂತ ಕೇಳಿದೆ. 

ಅಕಿ ಕುಲಕರ್ಣಿ ಮಮ್ಮಿದು ನೆನಪ ಆಗಲಿಲ್ಲ ಅಂದ್ರೂ ಆಕಸ್ಮಾತ ಅಕಿ ಗಂಡ ಭಾಳ ಫೇಮಸ್ ಇದ್ದರ ಅವಂದಾರ ಕನೆಕ್ಷನ್ ಹಚ್ಚಿ ಅದರ ಮೂಲಕ ಈ ಕುಖ್ಯಾತ ಕುಲಕರ್ಣಿ ಮಮ್ಮಿ ಅಂದ್ರ ಯಾರು ಅಂತ ನೋಡೋಣ ಅಂತ ನಮ್ಮ ವಿಚಾರ.

ಶಾದಿ ಆಗಿದೆ ಅಂತೇ ಸಾಬ್. ಗಂಡಾದು ಹೆಸರು ಏನೋ ಗಾಯ್ಸಾಮಿ ಅಂತೆ ನೋಡಿ. ಏನಾರು ತಿಳೀತು ಕ್ಯಾ? ಹಾಂ? - ಅಂತ ಕೇಳಿದ.

ಏನು ಗಂಡನ ಅಡ್ಡಹೆಸರು ಗಾಯ್ಸಾಮಿ ಅಂತನೇ? ಏನಲೇ ಇದು ಅವನೇ ಸಾಮಿ ಅವನ ಹೆಂಡ್ತಿ ಇಕಿ ಕುಲಕರ್ಣಿ ಮಮ್ಮಿ ಸನ್ಯಾಸಿ. ಮಸ್ತ ಅದ ತೊಗೋ ಕಾಂಬಿನೇಶನ್. ಗಾಯ್ಸಾಮಿ ಅಂದ್ರ ಏನಲೇ? - ಅಂತ ಕೇಳಿದೆ.

ಗಾಯ್ಸಾಮಿ ಸಾಬ್. ಗಾಯ್ ಅಂದ್ರೆ ಆಕಳಾ ಮತ್ಲಬ್ ಅಂಗ್ರೇಜೀ ಮೇ cow. ಅದರ ಮುಂದೆ ಸ್ವಾಮಿ. ಈಗ ತಿಳೀತು ಕ್ಯಾ? - ಅಂತ ಹೇಳಿದ ಕರೀಂ.

ಅಂದ್ರ ಗೋಸ್ವಾಮಿ ಏನ್ರೀ!? ಅಕಿ ಗಂಡನ ಅಡ್ಡಹೆಸರು ಗೋಸ್ವಾಮಿ ಏನು? ಗೋಸ್ವಾಮಿ ಅಂದ್ರ ಅಸ್ಸಾಂ ಕಡೆ ಬ್ರಾಹ್ಮಣರು. ಸಿನೆಮಾ ಆಕ್ಟರ್ ಮನೋಜ್ ಕುಮಾರ್ ಇದ್ದ ನೋಡ್ರೀ. ಆವಾ ಗೋಸ್ವಾಮಿ. ಅವನ ಮಗಾ ಕುಣಾಲ್ ಗೋಸ್ವಾಮಿ. ಅವರ ಪೈಕಿ ಯಾರನ್ನಾರ ಲಗ್ನಾ ಮಾಡಿಕೊಂಡಳು ಏನು ನಮ್ಮ ಕುಲಕರ್ಣಿ ಮಮ್ಮಿ? ಅವರು ಹೆಸರಾಗಷ್ಟೇ ಸ್ವಾಮಿ ಇಟ್ಟುಗೊಳ್ಳೋ ಗೋಸ್ವಾಮಿಗಳು. ಈಗ ಸುಬ್ರಮಣ್ಯಮ್ ಸ್ವಾಮಿ ಇದ್ದಾರ. ಅವರು ಸ್ವಾಮಿ ಏನು? ಅಲ್ಲ. ಹಾಂಗೇ ಈ ಗೋಸ್ವಾಮಿಗಳೂ ಸಹ. ಅವರನ್ನ ಮದ್ವಿ ಆದ್ರಾ ಕುಲಕರ್ಣಿ ಮಮ್ಮಿ ಯಾಕ ಸನ್ಯಾಸಿ ಆಗಲಿಕ್ಕೆ ಹೊಂಟಾಳರೀ? - ಅಂತ ಕೇಳಿದೆ.

ಹಾಂ! ಕರೆಕ್ಟ್. ಗೋಸ್ವಾಮಿ. ಅದೇ ಕುಲಕರ್ಣಿ ಮಮ್ಮಿ ಗಂಡನ ಮನಿ ಅಡ್ಡಹೆಸರು. ಆದ್ರೆ ಮನೋಜ್ ಕುಮಾರ ಮಗ ಕುಣಾಲ್ ಗೋಸ್ವಾಮಿ ಜೊತೆ ಅಲ್ಲ ನಮ್ಮ ಕುಲಕರ್ಣಿ ಮಮ್ಮಿ ಶಾದಿ ಮಾಡಿಕೊಂಡಿದ್ದು. ಬೇರೆ ಗೋಸ್ವಾಮಿ ಜೊತೆ - ಅಂದ ಕರೀಂ.

ಮತ್ತೆ ಯಾವ ಗೋಸ್ವಾಮಿ ಜೋಡಿ ಮದ್ವೀ ಮಾಡಿಕೊಂಡಳು ಕುಲಕರ್ಣಿ ಮಮ್ಮಿ? ಎಲ್ಲೆ ಇರ್ತಾನ ಅಕಿ ಗಂಡ ಗೋಸ್ವಾಮಿ? - ಅಂತ ಕೇಳಿದೆ.

ಅದು ಯಾರೋ ವಿಕ್ಕಿ ಗೋಸ್ವಾಮಿ ಅಂತೆ ನೋಡಿ. ದುಬೈನಲ್ಲಿ ಇದ್ದಾ ಅಂತೆ. ಈಗ ಎಲ್ಲಾ ಕೂಡಿ ಫ್ಯಾಮಿಲಿ ಕೀನ್ಯಾಗೋ ಎಲ್ಲೋ ಶಿಫ್ಟ್ ಮಾಡಿದೇವೆ ಅಂತ ಮಮ್ಮಿ ಹೇಳ್ತಾ ಇದ್ದಳು ನೋಡಿ ಸಾಬ್ - ಅಂದ ಕರೀಂ.

ಇಷ್ಟೆಲ್ಲಾ ಆದ ಮ್ಯಾಲೆ ತಲಿಯೊಳಗ ಏನೋ ಟ್ಯೂಬ್ ಲೈಟ್ ಹತ್ತಿತು.

ಸಾಬ್ರಾ.....ನೀವು ಕುಲಕರ್ಣಿ ಮಮ್ಮಿ, ಕುಲಕರ್ಣಿ ಮಮ್ಮಿ ಅನ್ನಾಕಿ ಮಾಜಿ ಬಾಲಿವುಡ್ ಸಿಕ್ಕಾಪಟ್ಟೆ ಖತರ್ನಾಕ್ ಹೀರೋಯಿನ್ ಮಮತಾ ಕುಲಕರ್ಣಿ ಏನ್ರೀ? - ಅಂತ ಕೇಳಿದೆ.

ಯಾ ಖುದಾ! ಇದನ್ನ ತಿಳಿದುಕೊಳ್ಳಲಿಕ್ಕೆ ನಿಮಗೆ ಇಷ್ಟೊತ್ತು ಬೇಕಾತಾ!? ಏನು ಬಡ್ಡು ತಲಿ ನಿಮ್ಮದು! ಅಕಿ ಹಾಡಿದ ಹಾಡು, ಮಾಡಿದ ಡಾನ್ಸ್ ಬಗ್ಗೆ ಹೇಳಿದೆ. ನಿಮಗೆ ತಿಳಿಲಿಲ್ಲ. ಈಗ ತಿಳೀತಲ್ಲ ಸಾಕು ಬಿಡೀ - ಅಂತ ಕರೀಂ ನನ್ನ ಮ್ಯಾಲೆ ಎಲ್ಲಾ ತಪ್ಪು ಹೊರೆಸಿದ.

ಸಾಬ್ರಾ!!! ಕೂಡ್ರೀ ಸುಮ್ಮ! ಮಮತಾ ಕುಲಕರ್ಣಿ, ಹಿಂದಿ ಸಿನಿಮಾ ಹೀರೋಯಿನ್, ಸನ್ಯಾಸಿ ಆಗ್ಯಾಳ ಅಂತ ಮೊದಲೇ ಹೇಳಿದ್ದರೆ ನಮಗೆ ಕೇವಲ ಗೊತ್ತಾಗೋದೇನು ಬಂತು ನಿಮಗೆ ಗೊತ್ತಿರದಿದ್ದ ಸುದ್ದಿ ಎಲ್ಲಾ ನಾವೇ ಮಸ್ತಾಗಿ ಹೇಳ್ತಿದ್ದಿವಿ. ಅದನ್ನು ಬಿಟ್ಟು ಕುಲಕರ್ಣಿ ಮಮ್ಮಿ, ಕುಲಕರ್ಣಿ ಮಮ್ಮಿ ಅಂತ ಹುಚ್ಚರ ಹಾಪರ ಗತೆ ಹೇಳಿಕೋತ್ತ ಕೂತು, ನನ್ನ ಎಲ್ಲಾ ಕಡೆ ಒಡ್ಯಾಡಿಸಿ, ಕೊಂಕಣ ಸುತ್ತಿಸಿ ಮೈಲಾರಕ್ಕ ತೊಗೊಂಡು ಬಂದಿ. ಮಂಗ್ಯಾನಿಕೆ ಕರೀಂ! - ಅಂತ ಬೈದೆ.

ನಿಮಗೆ ಗೊತ್ತಿತ್ತು ಕ್ಯಾ ಕುಲಕರ್ಣಿ ಮಮ್ಮಿ ಸನ್ಯಾಸಿ ಆಗಿದ್ದು? ಭಾರೀ ಇದ್ದೀರಿ ಬಿಡ್ರೀ - ಅಂತ ಹೇಳಿದ ಕರೀಮಾ.

ಯೋಗಿನಿ ಮಮತಾ ಕುಲಕರ್ಣಿ
ಗೊತ್ತಿಲ್ಲದ ಏನು? ಎಲ್ಲಾ ಪೇಪರ್ ಒಳಗಾ ಬಂದಿತ್ತು. ಅಕಿ ಮಮತಾ ಕುಲಕರ್ಣಿ ಯಾರೋ ವಿಕ್ಕಿ ಗೋಸ್ವಾಮಿ ಅನ್ನೋವನ್ನ ಲಗ್ನಾ ಮಾಡಿಕೊಂಡು ಬಾಲಿವುಡ್ ಬಿಟ್ಟು ದುಬೈ ಒಳಗ ಸೆಟಲ್ ಆಗಿದ್ದಳು. ಅಲ್ಲೆ ಏನೋ ತೊಂದ್ರೀ ಆಗಿ ಅಕಿ ಗಂಡಾ ಗೋಸ್ವಾಮಿ ಜೈಲಿಗೆ ಹೋದ. ಜೇಲಿಂದ ಹೊರಗ ಬಂದ ಮ್ಯಾಲೆ ಇಬ್ಬರೂ ಕೀನ್ಯಾಕ್ಕ ಹೋಗಿ ಸೆಟಲ್ ಆಗ್ಯಾರ. ನಡು ಇಕಿಗೆ ಅಧ್ಯಾತ್ಮದ ಬಗ್ಗೆ ಸೆಳತ ಶುರು ಆತು. ಯಾವದೋ ಗುರುಗಳನ್ನ ಹಿಡಕೊಂಡು ಹಿಮಾಲಯಕ್ಕ ಹೋಗಿ ಸಾಧನಾ ಮಾಡಿ ಬಂದಾಳ ಅಂತ ಮಮತಾ ಕುಲಕರ್ಣಿ ಅನ್ನೋ ಮಾಜಿ ಸುಂದರಿ. ಇಷ್ಟು ಅದ ನೋಡಪಾ ಸುದ್ದಿ - ಅಂತ ಹೇಳಿದೆ.

ಹೌದು ಕ್ಯಾ?! - ಅಂತ ಸಾಬ್ರು ಇಷ್ಟು ದೊಡ್ಡ ಬಾಯಿ ತೆಗೆದರು.

ಹ್ಞೂ...ಆ ಸುದ್ದಿಗೆ ಸಂಬಂಧಿಸಿದ ಕೆಲವು ಲಿಂಕ್ ಗಳನ್ನ ಕೆಳಗ ಹಾಕೇನಿ. ಓದಿಕೋ ಟೈಮ್ ಸಿಕ್ಕಾಗ, ಅಂತ ಹೇಳಿ ಖುದಾ ಹಾಫಿಜ್ ಹೇಳಿ ಬಂದೆ.

ಸಿನೆಮಾ ತಾರೆ  ಮಮತಾ ಕುಲಕರ್ಣಿ ಸನ್ಯಾಸಿ ಆದ್ರಾ ಯಾರೋ ಧಾರವಾಡ ಹುಡುಗಿ ಕುಲಕರ್ಣಿ ಮಮ್ಮಿನೇ ಸನ್ಯಾಸ ತೊಗೋಂಡಳೋ ಅನ್ನೋ ಹಾಂಗ ಹೇಳ್ತಾನ ಹಾಪ್ ಸಾಬಾ!

** Mamta Kulkarni’s Life, Another Dirty Picture in Making

** Mamata Kulkarni, the yogini

** ಭೋಲಿ ಭಾಲಿ ಲಡಿಕಿ

** ಮಮತಾ ಕುಲಕರ್ಣಿಯ ಒಂದು ಹಳೆಯ ಫೇಮಸ್ ಐಟಂ ನಂಬರ್.....ಕೋಯೀ ಆಯೇ ತೊ ಲೇ ಜಾಯೇ!

Tuesday, October 08, 2013

ಒಂದೇ ಬಣ್ಣದ ಚಡ್ಡಿಗಳ ಕಥೆ....ವ್ಯಥೆ!

ಮೊನ್ನೆ ಚೀಪ್ಯಾನ ಮನಿಗೆ ಹೋಗಿದ್ದೆ. ರೂಪಾ ವೈನಿ ಇರಲಿಲ್ಲ.

ಎಲ್ಲೆ ಹೋಗ್ಯಾರಪಾ ರೂಪಾ ವೈನಿ? ಇದ್ದರ ಒಂದು ಕಪ್ ಚಹಾ ಆದರೂ ಸಿಗತಿತ್ತು, ಅಂತ ಚೀಪ್ಯಾನ ಕೇಳಿದೆ.

(ಚಹಾ) ಕುಡಕ ಸೂಳಿಮಗನs!!! ಬರೀ ಚಹಾದ ಮ್ಯಾಲೆ ಚಹಾ ಕುಡಿಯೋದು, ಒಂದರ ಮ್ಯಾಲೊಂದು ಚೀಟಿ ಹರದು ಹರದು ಗುಟಕಾ ಬಾಯಾಗ ತುಂಬಿಕೊಳ್ಳೋದು. ಇದು ಎರಡು ಬಿಟ್ಟು ಬ್ಯಾರೆ ಏನರೆ ಮಾಡ್ತೀ ಏನಲೇ ನೀನು? - ಅಂತ ಕೇಳಿ ಬಿಟ್ಟ ಮಂಗ್ಯಾ ಸೂಳಿಮಗ ನಮ್ಮ ಖಾಸ್ ದೋಸ್ತಾ! ಸೂಡ್ಲಿ ತಂದು!

ಲೇ.....ಮಂಗ್ಯಾನಿಕೆ ಚೀಪ್ಯಾ! ನಿನಗ ಚಹಾ ಸಹಿತ ಮಾಡಲಿಕ್ಕೆ ಬರೋದಿಲ್ಲ ಅಂತ ಗೊತ್ತ ಅದ ನನಗ. ಅದಕ್ಕ ನನಗ ಇಲ್ಲದ್ದು ಅದು ಇದು ಅಂತ ಹೇಳಲಿಕತ್ತಿ ನೀ. ನೀ ಏನು ಮಾಡೋದು ಬ್ಯಾಡ. ಅಡಗಿಮನಿಯೊಳಗ ಎಲ್ಲೆಲ್ಲೆ ಏನವ ಅನ್ನೋದನ್ನ ತೋರಿಸು. ನಾನೇ ಚಹಾ ಮಾಡಿ, ನಿನಗೂ ಕುಡಿಸಿ, ನಾನೂ ಕುಡಿತೇನಿ. ನಾ ಚಹಾ ಕುಡಕ ಹೌದು ನೋಡಪಾ. ತಾಸಿಗೆ ಎರಡು ಸರೆ ಚಹಾ ಆಗಲೇ ಬೇಕು. ಅಂದ್ರ ತಲಿ ಓಡತದ. ಇಲ್ಲಂದ್ರ ಇಲ್ಲ, ಅಂತ ಹೇಳಿದೆ.

ಅಡಿಗಿಮನಿಗೆ ಹೋಗಿ, ಬಾಳಿ ತೋಟದಾಗ ದಾಂಧಲೆ ಎಬ್ಬಿಸೋ ಮಂಗ್ಯಾಗೋಳ ಗತೆ ಫುಲ್ ರಾಡಿ ಎಬ್ಬಿಸಿ, ಗ್ಯಾಸ್ ಮ್ಯಾಲೆ ಸಕ್ಕರಿ ಚಲ್ಲಿ, ಸಕ್ಕರಿ ಸುಟ್ಟು, ಕೆಟ್ಟ ವಾಸನಿ ಎಬ್ಬಿಸಿ, ಅಂತೂ ಇಂತೂ ಎರಡು ಕಪ್ ಚಹಾದಂತಾ ಏನೋ ಒಂದು ತರಹದ ಸಿಹಿ ನೀರು ಮಾಡಿಕೊಂಡು ಕುಡದು ಹೊರಗ ಬಂದ್ವೀ.

ಹೊರಗ ಬಂದು, ಚೀಟಿ ಹರದ ಬಾಯಾಗ ಗುಟಕಾ ಹೆಟ್ಟಿಕೊಳ್ಳಬೇಕು ಅನ್ನೋದ್ರಾಗ ರೂಪಾ ವೈನಿ ಎಂಟ್ರೀ ಕೊಟ್ಟರು. ಹಿಂದ ಮುಂದ ಅವರ ಕನ್ಯಾರತ್ನಗಳಾದ ಕುಂತಿ ನಿಂತಿ  ಕಾಲ್ಕಾಲಾಗ ಅಡ್ಡ ಬಂದುಕೋತ್ತ, ಅವ್ವನ ಕಡೆ ಬೈಸೀಕೋತ್ತ ಬಂದವು. ಎಲ್ಲಾರೂ ಪ್ಯಾಟಿಗೆ ಹೋಗಿ ಏನೇನೋ ಖರೀದಿ ಮಾಡಿಕೊಂಡು ಬಂದ ಖುಶಿ ಒಳಗ ಇದ್ದರು.

ಹ್ಞೂ.....ತೊಗೊರೀ ನಿಮ್ಮುವು. ಫುಲ್ ಹಾಪ್ ಡಜನ್ ಅವ. ನೋಡ್ಕೊರೀ, ಅಂತ ಹೇಳಿಕೋತ್ತ ರೂಪಾ ವೈನಿ ಚೀಪ್ಯಾನ ಕೈಯಾಗ ಒಂದು ಪ್ಯಾಕೆಟ್ ತುರುಕಿದರು.

ಪ್ಯಾಕೆಟ್ ಒಳಗ ಏನು ಅದನೋ ಏನೋ?!

ಚೀಪ್ಯಾ ಪ್ಯಾಕೆಟ್ ಬಗ್ಗಿಸಿ, ಅಗಲ ಮಾಡಿ, ಅದರ ಒಳಗ ಕೈ ಹಾಕಿ, ಆ ಕಡೆ ಈ ಕಡೆ ಮಾಡಿ, ಕಣ್ಣು ಹತ್ತಿರ ತೊಗೊಂಡು ಹೋಗಿ ನೋಡಿ, ಹಾಂ!!!!!!! ಅಯ್ಯೋ!!! ಹೋಗ್ಗೋ!! , ಅಂತ ಹೈ ವೋಲ್ಟೇಜ್ ಶಾಕ್ ಹೊಡೆಸಿಕೊಂಡವರ ಹಾಂಗ ಚೀತ್ಕಾರ ಮಾಡಿದ.

ಆವಾ ಮಾಡಿದ ಚೀತ್ಕಾರಕ್ಕ ಎಲ್ಲಾರೂ ಬೆಚ್ಚಿ ಬಿದ್ದರು. ಬಾಜೂ ಮನಿ ಬೋಡ ತಲಿ ಕೆಂಪ ಮಡಿ ಸೀರಿ ಭಾಗೀರಥಿ ಬಾಯಾರು ಕೈಯಾಗ ತುಳಸಿ ತೀರ್ಥದ ತಾಮ್ರದ ಚಂಬು ಹಿಡಕೊಂಡು, ಜಪಮಾಲಿ ಮ್ಯಾಲೆ ಜಪಾ ಮಾಡಿಕೋತ್ತ, ರಾಯರ ಮಠಕ್ಕ ಹೊಂಟವರು ಚೀಪ್ಯಾ ಹಾಕಿದ ಚೀತ್ಕಾರಕ್ಕ ಎದಿ ಒಡದು ಹಾರ್ಟ್ ಅಟ್ಯಾಕ್ ಆದವರಾಂಗ ಎದಿ ಹಿಡಕೊಂಡು ಬಿದ್ದು ಕೂತರು. ಕೈಯ್ಯಾಗಿನ ತುಳಸಿ ತೀರ್ಥದ ತಂಬಿಗಿ ಟಣ್ ಟಣ್ ಸೌಂಡ್ ಮಾಡಿಕೋತ್ತ ಉರಳಿಕೋತ್ತ ಹೋತು.

ಪಾಪಿ ಮುಂಡೆ ಗಂಡಗ ಏನಾತ ರೂಪಾ? ಸಾಯೋ ಪರಿ ಹೊಯ್ಕೊಂಡ ಆ ಖೋಡಿ ನಿನ್ನ ಗಂಡ. ಆವಾ ಚೀರೋ ಪರಿ ಕೇಳಿ ನನ್ನ ಎದಿ ಧಸಕ್ಕ್ ಅಂತು, ಅಂತ ರೂಪಾ ವೈನಿಗೆ ಭಾಗೀರಥಿ ಬಾಯಾರು ಬೈದು ಕೇಳಿದರು.

ಮುತ್ತೈದಿ ಆದ ರೂಪಾ ವೈನಿಗೆ ಅಕಿ ಗಂಡ ಚೀಪ್ಯಾಗ ಈ ಬೋಡ ತಲಿ ಮುದುಕಿ ಮುಂಡೆ ಗಂಡ ಅಂದಿದ್ದು ಕಸಿವಿಸಿ ಆತು. ಆದರೂ ಅವೆಲ್ಲಾ ಬ್ರಾಹ್ಮರ ಬೈಗಳ. ಅವಕ್ಕೆಲ್ಲಾ ಏನೂ ಅರ್ಥ ಇರೋದಿಲ್ಲ ಅಂತ ಸುಧಾರಿಸ್ಕೊಂಡು ಕೆಟ್ಟ ಕಣ್ಣಿಲೆ ಚೀಪ್ಯಾನ ಕಡೆ ನೋಡಿದರು. ನೀವೇ ಹೇಳ್ರೀ ಅವರಿಗೆ. ಯಾಕ ಆ ಪರಿ ಚೀರಿದಿರಿ ಅಂತ, ಅನ್ನೋದನ್ನ ಮಾತಾಡದೇ ಹೇಳಿದರು ರೂಪಾ ವೈನಿ.

ಚೀಪ್ಯಾ ಏನೂ ಮಾತಾಡಲಿಲ್ಲ. ಮತ್ತ ಮತ್ತ ಕೈಯ್ಯಾಗ ಹೆಂಡ್ತಿ ಹಿಡಿಸಿದ ಪ್ಯಾಕೆಟ್ ನೋಡಿಕೋತ್ತ ಕೂತ.

ಏನು ಇದ್ದಿಯೋ ಪಾಪ ಮುಂಡೆ ಗಂಡ ಶ್ರೀಪಾದಾ? ನೋಡ್ಕೊಂಡು ಚೀರು. ಸಣ್ಣವ ಇದ್ದಾಗಿಂದ ಚೀರೋದು ಒಂದು ಮಸ್ತ ಕಲತೀ ನೋಡು. ಚೀರಿ ಚೀರೇ ಸಣ್ಣವ ಇದ್ದಾಗೇ ನಿಮ್ಮ ಅವ್ವನ್ನ ನುಂಗಿದ್ದಿ. ಈಗ ನನ್ನ ನುಂಗವಾ ಇದ್ದಿ ಏನು? ಹಾಂಗರೆ ಆಗಿ ಸಾವು ಬಂದರೆ ಸಾಕಪಾ. ದೇವರು ಕರೆಸಿಕೊಳ್ಳವಲ್ಲ,  ಅಂತ ಅನ್ಕೋತ್ತ ಮುದುಕಿ ಭಾಗೀರಥಿ ಬಾಯಾರು, ರಾಮಾ, ಕೃಷ್ಣಾ, ನನ್ನ ಸೊಂಟ ಹೋತೋ! ಗುರುವೇ ಸದ್ಗುರುವೇ! ಪರಮಾತ್ಮಾ! ಅಂತ ಹ್ಯಾಂಗೋ ಮಾಡಿ ಮ್ಯಾಲೆ ಎದ್ದು, ಸಾವರಿಸಿಕೊಂಡು, ಬಿದ್ದ ತಂಬಿಗಿ ಎತ್ತಿಕೊಂಡು, ತೀರ್ಥ ಎಲ್ಲಾ ಚೆಲ್ಲಿ ಹೋತೋ ಅಥವಾ ಉಳದದೋ ಅಂತ ನೋಡಿತು. ಪಾಪ ಏನೂ ತೀರ್ಥ ಉಳಿದಿರಲಿಲ್ಲ ಅಂತ ಅನ್ನಸ್ತದ. ಮತ್ತ ತುಳಸಿ ಎಲಿ ಹಾಕಿ ಹೊಸಾ ತುಳಸಿ ತೀರ್ಥ ಮಾಡಿಕೋಬೇಕಲ್ಲ ಅನ್ನೋ ಸಂಕಟ ಭಾಗೀರಥಿ ಬಾಯಾರ ಮಸಡಿ ಮ್ಯಾಲೆ ಮೂಡಿತು.

ಏನಿಲ್ಲರೀ ಭಾಗೂ ಮಾಂಶಿ. ತಪ್ಪಾತು. ಕ್ಷಮಾ ಮಾಡ್ರೀ, ಅಂತ ಚೀಪ್ಯಾ ಈ ಮುದುಕಿ ಹೋದ್ರ ಸಾಕು ಅನ್ನೋ ಹಾಂಗ ಹೇಳಿದ.

ಭಾಗೂ ಮಾಂಶಿ!!!!! ಅಲ್ಲಾ ಪಾಪ ನೆಡಿಲಿಕ್ಕೂ ತ್ರಾಸ ಪಡೋ ಮುದುಕಿಗೆ ಭಾಗೂ ಮಾಂಶಿ ಅಂತಾನ! ನಗು ಬಂತು! ಆದರ ಇಲ್ಲೆ ಭಾಗೂ ಅಂದ್ರ ಓಡೋದು ಅಲ್ಲ ಭಾಗೀರತಿ ಬಾಯಿ ಭಾಗೂ ಮಾಂಶಿ ಆಗ್ಯಾಳ ಅಷ್ಟ ಅಂತ.

ಭಾಗೀರಥಿ ಬಾಯಾರು ಆ ಕಡೆ ಹೋಗಿದ್ದ ಹೋಗಿದ್ದು ರೂಪಾ ವೈನಿ ಚೀಪ್ಯಾನ ಕೈ ತೊಗೊಂಡರು.

ಯಾಕ್ರೀ ಆ ಪರಿ ಚೀರಿದಿರಿ? ಏನು ಆತು? ಕೇಳಿದವರ ಎದಿ ಓಡಿಬೇಕು ಹಾಂಗ ಚೀರ್ತೀರಿ ನೋಡ್ರೀ! - ಅಂತ ವೈನಿ ಕೇಳಿದರು.

ಅಲ್ಲ...ಅಲ್ಲ...ಅದು ಅದು......ಅಂತ ಚೀಪ್ಯಾ as usual ತಡಬಡಿಸಿದ.

ಏನು?!! - ಅಂತ ರೂಪಾ ವೈನಿ ಪ್ರಶ್ನಾರ್ಥಕ ಚಿನ್ಹೆ ಹಾಕಿ ನಿಂತರು.

ಏನೋ ಮೀಯಾ ಬೀವಿ ನಡುವಿನ ಖಾಸಂ ಖಾಸ್ ಬಾತ್ ಅದ. ನಾ ದೋಸ್ತ್ ಬ್ಯಾರೆ ಇದ್ದೇನಿ. ನನ್ನ ಮುಂದ ಮಾತಾಡಲೋ ಬ್ಯಾಡೋ ಅಂತ ಚೀಪ್ಯಾ ಸ್ವಲ್ಪ hesitate ಮಾಡಿದ. ನನ್ನ ಮಾರಿ ನೋಡಿದ. ಹೆಂಡ್ತೀ ಮಾರಿ ನೋಡಿದ.

ಏನ್ ಪಿಕಿ ಪಿಕಿ ನೋಡ್ತೀರಿ? ಯಾರು? ಬ್ಯಾರೆ ಯಾರಿಲ್ಲ. ನಿಮ್ಮ ದೋಸ್ತ ಮತ್ತ ನನ್ನ ಪ್ರೀತಿ ಮೈದ್ನಾ ಮಂಗೇಶ ಇದ್ದಾನ.  ಅವನ ಮುಂದ ಏನು ನಿಮಗ ಹೇಳಲಿಕ್ಕೆ? ಹಾಂ? ಹೇಳ್ರೀ.... ಯಾಕ ಆ ಪರೀ ಚೀರಿ  ಎಲ್ಲಾರದ್ದೂ ಎದಿ ಒಡಿದಿರಿ ಅಂತ. ಏನು ಅಂಥಾದ್ದು ಆತು ಆ ಪ್ಯಾಕೆಟ್ ಒಳಗ ನೋಡಿದ ಕೂಡಲೇ? ಹೇಳ್ರೀ ನಿಮ್ಮಾ.....ಅ....ಆ..ಅ...- ಅಂತ ಹೇಳಿ ವೈನಿ ಚೀಪ್ಯಾಗ ಸರೀತ್ನಾಗಿ ಝಾಡಿಸೇ ಬಿಟ್ಟರು.

ಅಲ್ಲ...ಅಲ್ಲ..ಪ್ಯಾಕೆಟ್ ಒಳಗ ನೋಡಿದರ ಅರ್ಧಾ ಡಜನ್ ಅಂಡರ್ವೇರ್ ಚಡ್ಡಿ ತಂದಿ....ಆದ್ರಾ..... ಅಂತ ಚೀಪ್ಯಾ ಏನೋ ಆಕ್ಷೇಪಣೆ ಅದ ಅನ್ನೋವರಾಂಗ ನಿಲ್ಲಿಸಿದ.

ಹೌದು...ಬೇಕು ಅಂತ ನೀವಂತೂ ಹೇಳಲಿಲ್ಲ. ನೀವು  ಹೇಳೋದು ಏನು ಬಂತು? ನಾನೇ ನೋಡ್ತೇನಿ ಅಲ್ಲಾ. ನಿಮ್ಮ ಎಲ್ಲಾ ಚಡ್ಡಿ ಹರದು ಹರದು ಮಚ್ಚರದಾನಿ ಹಾಂಗ ಜಾಳಗಿ ಜಾಳಗಿ ಆಗಿ ಬಿಟ್ಟಾವ. ಎಲ್ಲರೆ ಧೋತ್ರದ ಮರಿಯೊಳಗ ನಿಮ್ಮ ಚಡ್ಡಿ ದರ್ಶನ ಆತು ಅಂದ್ರ ಮಚ್ಚರದಾನಿ ಒಳಗಿನ ಗುಂಗಾಡು ಕಂಡಂಗ ಎಲ್ಲಾರಿಗೂ ಎಲ್ಲಾದರ ಧರ್ಮ ಧರ್ಶನ ಆಗಿ ಬಿಡತದ. ನಿಮಗಂತೂ ಖಬರ್ ಇರಂಗಿಲ್ಲ. ಹೀಂಗs ಹರಕಾ ಪರಕಾ ತೂತು ಬಿದ್ದ ಚಡ್ಡಿ ಹಾಕ್ಕೊಂಡೇ ಪೂಜಾಕ್ಕ ಕೂತೆ, ಮುತ್ತೈದೆಯರ ಮುಂದ ಹೋಗಿ ಪ್ರಸಾದ ಕೊಟ್ಟೆ, ಅದನ್ನು ಮಾಡಿದೆ ಇದನ್ನು ಮಾಡಿದೆ ಮಾಡ್ತೀರಿ. ನನಗೇ ನಾಚಿಗಿ ಬರ್ತದ. ಅದಕ್ಕೆ ಧರ್ಮ ಪತ್ನಿಯಾದ ನನ್ನ ಧರ್ಮಕ್ಕ ಕರ್ಮಕ್ಕ ನಾನೇ ನೋಡಿ, ಇನ್ನೂ ಹೀಂಗ ಬಿಟ್ಟರ ಮತ್ತೂ ದೊಡ್ಡ ದೊಡ್ಡ ತೂತು ಬಿದ್ದು ಏನೇನೋ ಹೊರಗ ಬಂದು ಭುಸ್ ಭುಸ್ ಅಂದಾವು ಅಂತ ಹೇಳಿ ಒಂದು ಅರ್ಧಾ ಡಜನ್  ತಂದು ಬಿಟ್ಟೆ. ಸೋವಿ ಒಳಗ ಸಿಕ್ಕಿತು. ಇನ್ನು ಐದು ವರ್ಷ ಅಂಡರ್ವೇರ್ ಚಡ್ಡಿ ಬೇಕು ಅಂತ ಕೇಳಬಾರದು ನೋಡ್ರೀ ಮತ್ತ, ಅಂತ ಹೇಳಿ ರೂಪಾ ವೈನಿ ಚೀಪ್ಯಾನ ಶಿಥಿಲವಾಗಿದ್ದ ಶಿಲಾಯುಗದ ಕಾಲದ ಅಂಡರ್ವೇರ್ ಚಡ್ಡಿಗಳನ್ನು ಬದಲಾಯಿಸಲಿಕ್ಕೆ ಬ್ಯಾರೆ ಚಡ್ಡಿ ತಂದು ಕೊಟ್ಟರು ಅಂತ ಹೇಳಿದ್ರು.

ರೂಪಾ.....ರೂಪಾ....ಹಳೆ ಚಡ್ಡಿ ಭಾಳ ಏನೂ ಹಳೇವು ಆಗಿದ್ದಿಲ್ಲ ಬಿಡು. ಏನೋ ಅಲ್ಲಲ್ಲೆ ಸ್ವಲ್ಪ ಸಣ್ಣು ಸಣ್ಣು ತೂತು ಬಿದ್ದಂಗ ಬಿದ್ದಿದ್ದವು. ಡಾಂಬರ್ ಗುಳಿಗಿ ಹಾಕಿ ಇಟ್ಟಿದ್ದರ ಆಗ್ತಿತ್ತು, ಅಂತ ಚೀಪ್ಯಾ ಇಷ್ಟೆಲ್ಲಾ ರೊಕ್ಕಾ ಖರ್ಚು ಮಾಡಿ ಅರ್ಧಾ ಡಜನ್ ಗಟ್ಟಲೆ ಚಡ್ಡಿ ತರೋದರ ಬದಲೀ ಒಂದಿಷ್ಟು ಡಾಂಬರ್ ಗುಳಿಗಿ ತಂದು ಚಡ್ಡಿ ಆ ಕೆಟ್ಟ ವಾಸನಿ ಗುಳಿಗಿ ಮ್ಯಾಲೆ ಒಗದು ಬಿಟ್ಟಿದ್ದರ ಜೊಂಡಿಗ್ಯಾ, ಜಿರಲಿ, ಜರಿ ಅದು ಇದು ಹುಳ ಹಪ್ಪಡಿ ಕಡದು ತೂತು ಬಿಳೋದು ಕಮ್ಮಿ ಆಗ್ತಿತ್ತು ಅಂತ ಲೆಕ್ಕ ಹಾಕಿದ. ನಾವೆಲ್ಲಾ ಮಿಡ್ಲ್ ಕ್ಲಾಸ್ ಮಂದಿ ನೋಡ್ರೀ. ಹೀಂಗ ಸ್ವಲ ಸೇವಿಂಗ್ ಬಗ್ಗೆ ವಿಚಾರ ಮಾಡಲಿಲ್ಲ ಅಂದ್ರ ತಿಂಗಳದ ಕೊನಿಯಾಗ ಕೈಯಾಗ ಬರೆ ಠಣ್ ಠಣ್ ಗೋಪಾಲ ನೋಡ್ರೀ.

ಬ್ಯಾಡರಿಪಾ ಬ್ಯಾಡ! ನಿಮಗ ದೊಡ್ಡ ನಮಸ್ಕಾರ! ಆ ಡಾಂಬರ್ ಗುಳಿಗಿ ಮಾತ್ರ ನಿಮ್ಮ ಚಡ್ಡಿ ಸುತ್ತಾ ಮುತ್ತಾ ನಾ ಇಡಾಕಿ ಅಲ್ಲ.
ನೀವೇನೋ ಆ ಕೆಟ್ಟ ವಾಸನಿ ಚಡ್ಡಿ ಹಾಕ್ಕೊಂಡು ದಿನಾ ಪೂರ್ತಿ ಅಲ್ಲೆ ಇಲ್ಲೆ ಅಡ್ಯಾಡಿ ಬಿಡ್ತೀರಿ. ರಾತ್ರಿ ನನ್ನ ಪರಿಸ್ಥಿತಿ ಅಂದ್ರ.....ಅಂದ್ರ....ಅಂದ್ರ  - ಅಂತ ವೈನಿ ಮಾತು ಅರ್ಧಾಕ್ಕೆ ನಿಲ್ಲಿಸಿ ಬಿಟ್ಟರು. ಚೀಪ್ಯಾ ಮೀಸಿ ಕೆಳಗೇ ನಕ್ಕು ಕಿಡಿಗೇಡಿ ಹಾಂಗ ರೂಪಾ ವೈನಿ ಕಡೆ ನೋಡಿದ. ಇಬ್ಬರೂ ಏನೋ ಕೇವಲ ಪತಿ ಪತ್ನಿಯರಿಗೆ ಮಾತ್ರ ತಿಳಿಯೋ ಸಿಗ್ನಲ್ ಕೊಟ್ಟುಗೊಂಡು ಏನೇನೋ ಅರ್ಥ ಕಂಡುಕೊಂಡು ನಕ್ಕರು. ಏನೋ ಏನೋ! ಯಾರಿಗೆ ಗೊತ್ತು?

ಅಲ್ಲರೀ ವೈನಿ.....ಚೀಪ್ಯಾ ಹೇಳಿದ್ರಾಗ ಏನು ತಪ್ಪದ? ಅವನ ಅಂಡರ್ವೇರ್ ಚಡ್ಡಿ ಡಾಂಬರ್ ಗುಳಿಗಿ ವಾಸನಿ ಹೊಡದರ ನಿಮಗೇನ್ರೀ? ನೀವೇನು ಅವನ ಚಡ್ಡಿ ಒಗಿತೀರಿ ಏನು? ಇಲ್ಲ. ಅವನೇ ಒಕ್ಕೊತ್ತಾನ ಇಲ್ಲ ಹೆಚ್ಚಂದ್ರ ಬೂಬುಗ ಹಾಕ್ತಾನ. ಹಾಂಗಿದ್ದಾಗ ಅವನ ಚಡ್ಡಿ ಡಾಂಬರ್ ಗುಳಿಗಿ ವಾಸನಿ ಹೊಡೆದರ ನಿಮಗೇನ್ರೀ? - ಅಂತ ಕೇಳಿಬಿಟ್ಟೆ. ರೊಕ್ಕಾ ಉಳಸೋಣ ಅನ್ನೋ ನಮ್ಮ ದೋಸ್ತನ ಐಡಿಯಾ ಈ ವೈನಿ ಹೀಂಗ ತೆಗೆದು ಹಾಕಿದ್ದು ಸೇರಲಿಲ್ಲ ಬಿಡ್ರೀ.

ಗಪ್ಪ ಕೂಡೋ ಮಂಗೇಶ್! ನಿನಗೆಲ್ಲಾ ಅವು ತಿಳಿಯಂಗಿಲ್ಲ - ಅಂತ ಚೀಪ್ಯಾ, ರೂಪಾ ವೈನಿ ಇಬ್ಬರೂ ಹೊಯ್ಕೊಂಡರು. ಇಬ್ಬರೂ ತುಂಟ ನಗೆ ನಕ್ಕಿದ್ದು ನಾ ಮಿಸ್ ಮಾಡಲಿಲ್ಲ ಬಿಡ್ರೀ. ಏನೋ ಅದ ಬಿಡ್ರೀ! ;)

ಇಬ್ಬರೂ ಕೂಡೆ ಗಪ್ಪ್ ಕೂಡೋ ಅಂತ ಆಜ್ಞಾ ಮಾಡ್ಲೀಕತ್ತಾರ ಅಂದ್ರ ಗಪ್ಪ್ ಕೂಡೋದೇ ಒಳ್ಳೇದು ಅಂತ ಗಪ್ಪ್ ಆದೆ. ಆದರೂ ಗಂಡನ ಚಡ್ಡಿ ಡಾಂಬರ್ ಗುಳಿಗಿ ವಾಸನಿ ಆದ್ರ ಹೆಂಡತಿಗೇನು ತಾಪತ್ರಯ ಅಂತ ಇನ್ನೂ ತಿಳಿಲಿಲ್ಲ.

ಶ್ರೀಪಾದ ರಾವ್!! ಈಗರ ಹೇಳ್ರೀ. ನಾ ತಂದ ಅರ್ಧಾ ಡಜನ್ ಚಡ್ಡಿ ನೋಡಿದ ಕೂಡಲೇ ಯಾಕ ಹಾಂಗ ಚಿಟ್ಟಂತ ಚೀರಿಕೊಂಡು ಎಲ್ಲಾರ ಎದಿ ಒಡಿದಿರಿ ಅಂತ. ಹೇಳ್ರೀ! ಹೇಳ್ರೀ! - ಅಂತ ರೂಪಾ ವೈನಿ ಒರಿಜಿನಲ್ ಟಾಪಿಕ್ ಗೆ ಬಂದ್ರು.

ಮತ್ತೇನಾ ರೂಪಾ?! ತರೋದು ತಂದಿ ಅರ್ಧಾ ಡಜನ್ ಚಡ್ಡಿ. ಎಲ್ಲಾ ಒಂದೇ ಬಣ್ಣದ್ದು ತಂದು ಬಿಟ್ಟಿಯಲ್ಲಾ! ಹೀಂಗ ಮಾಡೋದು ಏನು? ಹಾಂ? - ಅಂತ ಚೀಪ್ಯಾ ಹೇಳಿದ.

ಹಾಂ! - ರೂಪಾ ವೈನಿ ಒಂದು ಕ್ಷಣ ಆವಾಕ್ಕ ಆಗಿ ಥಂಡಾ ಹೊಡೆದರು.

ಏನ್ರೀ!!???? ನಿಮ್ಮಂತ ಕಾಮಣ್ಣಗ ಕಾಮನಬಿಲ್ಲಿನ ಏಳು ಬಣ್ಣದ ಹಾಂಗ ಏಳು ಬ್ಯಾರೆ ಬ್ಯಾರೆ ಬಣ್ಣದ ಚಡ್ಡಿ ತಂದು ಕೊಡಬೇಕಾಗಿತ್ತೇನು? ರೀ....ಒಂದು ನೆನಪ ಇರಲೀ.....ನೀವೇನು ಸೂಪರ್ ಮ್ಯಾನ್ ಅಥವಾ ಸ್ಪೈಡರ್ ಮ್ಯಾನ್ ಅಲ್ಲ. ತಿಳೀತ? ಹಾಂ? ಹಾಂ? - ಅಂತ ದಭಾಯಿಸಿದರು ವೈನಿ.

ಒಂದೇ ಬಣ್ಣದ ಚಡ್ಡಿಗೆ ಮತ್ತ ಆ ಸೂಪರ್ ಮ್ಯಾನ್ ಗೆ ಸ್ಪೈಡೆರ್  ಮ್ಯಾನ್ ಗೆ ಏನು ಸಂಬಂಧನೇ ರೂಪಾ? - ಅಂತ ಹೈರಾಣ ಆಗಿ ಚೀಪ್ಯಾ ಕೇಳಿದ.

ರೀ.....ಶ್ರೀಪಾದ್ ರಾವ್.....ಆವಾ ಸೂಪರ್ ಮ್ಯಾನ್ ಆವಾ ಸ್ಪೈಡರ್ ಮ್ಯಾನ್ ಎಲ್ಲಾ ಚಡ್ಡಿ ಪ್ಯಾಂಟ್ ಹೊರಗ ಹಾಕ್ಕೊತ್ತಾರ. ಹಾಂಗಾಗಿ ಅವರಿಗೆ ಬ್ಯಾರೆ ಬ್ಯಾರೆ ಬಣ್ಣದ ಚಡ್ಡಿ ಬೇಕು ಅಂದ್ರ ಓಕೆ. ನಾವೆಲ್ಲಾ ಒಳಗ ಹಾಕ್ಕೋತ್ತೇವಿ ನೋಡ್ರೀ ಹಾಂಗಾಗಿ ನಮಗ ಒಂದೇ ಬಣ್ಣದ್ದು ಓಕೆ. ತಿಳೀತ ನಿಮ್ಮ ಧಡ್ಡ ತಲಿಗೆ ಈಗ? ಹಾಂ? ಹಾಂ? - ಅಂತ ಕೇಳಿದರು ವೈನೀ.

ಏನ್ರೀ ವೈನಿ? ಏನು ಸೂಪರ್ ಏನು ಸ್ಪೈಡೆರ್? ಮಜಾ ಅದಲ್ಲರೀ! ಹಾಂ? - ಅಂತ ಕೇಳಿದೆ.

ಮಂಗೇಶ ಮಾಮಾ.....ಸೂಪರ್ ಮ್ಯಾನ್, ಊಪರ್ ಚಡ್ಡಿ...ಏ ಮ್ಯಾನ್ ತೋ ಏಕದಂ ಸೂಪರ್ ಹೈ ಕ್ಯೂಂಕಿ ಇಸ್ಕಿ ಚಡ್ಡಿ ಇಸ್ಕಿ ಪ್ಯಾಂಟ್ ಕೆ ಊಪರ್ ಹೈ....ಅಂತ ಚೀಪ್ಯಾನ ಸಣ್ಣ ಹುಡುಗಿ ನಿಂತಿ ಹೇಳಿದಳು. ಏನ ಜೋರ್ ಅದ ಈ ಹುಡುಗಿ! ಕೆಟ್ಟ ಹುಡುಗಿ ಈಗೇ ಎಲ್ಲಾ ಕಲ್ತು ಬಿಟ್ಟದ.



ಹ್ಞೂ....ಈಗ ಹೇಳ್ರೀ ಶ್ರೀಪಾದ ರಾವ್....ಹೇಳ್ರೀ.....ಒಂದೇ ಬಣ್ಣದ ಆರು ಚಡ್ಡಿ ತಂದ್ರ ನಿಮಗ ಏನು ತೊಂದ್ರೀ ಆತು ಅಂತ? ಹಾಂ? ಹಾಂ? - ಅಂತ ರೂಪಾ ವೈನಿ ಮೊದಲಿನ ವಿಷಯಕ್ಕೇ ಬಂದರು. ಹಂಗೆಲ್ಲಾ ಬಿಡೊ ಪೈಕಿ ಅಲ್ಲ ಅವರು.

ಅಲ್ಲ ರೂಪಾ....ನಾ ಒಂದೇ ಬಣ್ಣದ ಚಡ್ಡಿ ಹಾಕ್ಕೊಳ್ಳೋದು ನೋಡಿದ ಬ್ಯಾರೆ ಮಂದಿ ಇವಾ ಚಡ್ಡಿ ಬದಲೇ ಮಾಡೋದಿಲ್ಲ. ಹೇಶಿ ಮಂಗ್ಯಾನ ಮಗ. ದಿನಾ ಚಡ್ಡಿ ಬದಲು ಮಾಡದ ಹೇಶಿ. ಈ ಹೇಶಿನ ಹೀಂಗ ಅಂದ ಮ್ಯಾಲೆ ಇನ್ನು 'ಹೇಶಿ ಮನಿ ದ್ವಾಶಿ' ಹ್ಯಾಂಗೋ?! ಮ್ಯಾಲಿಂದ ನೋಡಿದರ ರಿಗ್ವೇದಿ ಬ್ರಾಹ್ಮಣ ಅದು ಇದು ಅಂತ ಹೇಳಿಕೋತ್ತ ಅಡ್ಯಾಡತಾನ. ಚಡ್ಡಿ ಬದಲು ಮಾಡದ ಬರಬಾರದ ರೋಗ ಬಂದು ರೋಗ್ವೇದಿ ಬ್ರಾಹ್ಮಣ ಅಂದಾರು. ಅದಕ್ಕ ಕೇಳಿದೆ ಯಾಕ ಒಂದೇ ಬಣ್ಣದ ಚಡ್ಡಿ ತೊಗೊಂಡು ಬಂದೀ ಅಂತ? ತಿಳೀತ? - ಅಂತ ಕೇಳಿದ ಚೀಪ್ಯಾ. ತನ್ನ ಚೀರಾಣಕ್ಕ ಫುಲ್ ವಿವರಣೆ ಕೊಟ್ಟ.

ಘಾತ ಮಾಡಿಕೊಂಡ! ಚೀಪ್ಯಾ ಅನಾಹುತ ಮಾಡಿಕೊಂಡ!

ವೈನಿ ಒಮ್ಮೆಲೇ ಗಾಯಗೊಂಡ ಸಿಂಹಿಣಿ ಹಾಂಗ ಹೂಂಕಾರ ಹಾಕಿದರು.

ಏನಂದ್ರೀ???!!!! ಇನ್ನೊಮ್ಮೆ ಹೇಳ್ರೀ!!! ಹೇಳ್ರೀ!!! - ಅಂತ ಇಲ್ಲದ ಹೂಂಕಾರ ಹಾಕಿದರು ರೂಪಾ ವೈನಿ.

ಅವರು ಹಾಕಿದ ಎಕ್ಸಟ್ರಾ ಸ್ಟ್ರಾಂಗ್ ಹೂಂಕಾರದಿಂದ ಚೀಪ್ಯಾ ಇನ್ನೂ ಸ್ವಲ್ಪ ಜಾಸ್ತಿನೇ ಘಾಬರಿ ಆದ. ತಾನು ಮೊದಲು ಮಾಡಿಕೊಂಡ ತಪ್ಪಿನ ಅರಿವು ಆಗಲೇ ಇಲ್ಲ. ಅರಿವೇ ಗುರು. ಅರಿವೇ ಇಲ್ಲದಿದ್ದ ಮ್ಯಾಲೆ ಗುರು ಎಲ್ಲಿಂದ. ಗುರು ಹಾಳಾಗಿ ಹೋಗಲಿ ಬಿಡ್ರೀ. ಮುಂದ ಗುರ್ರ್ ಅನಕೋತ್ತ ಧರ್ಮಪತ್ನಿ ನಿಂತಾಳ. ಕರ್ಮ! ಕರ್ಮ!

ಅದೇ.....ದಿನಾ ಒಂದೇ ಬಣ್ಣದ ಚಡ್ಡಿ ಹಾಕಿಕೊಂಡರ 'ನೋಡಿದವರು' ಇವಾ ಚಡ್ಡಿ ಬದಲು ಮಾಡೋದೇ ಇಲ್ಲ. ಹೇಶಿ ಅಂತಾರ ಅಂತ ಹೇಳಿದೆ ರೂಪಾ. ಏನು ತಪ್ಪು ಅಂದೆ? - ಅಂತ ಫುಲ್ ಇನ್ನೊಂಸೆಂಟ್ ಆಗಿ ಕೇಳಿದ ಚೀಪ್ಯಾ.

ಇದನ್ನು ಕೇಳಿದ ರೂಪಾ ವೈನಿ ಈ ಸಾರೆ ಸಿಟ್ಟಿನಿಂದ ಸೀದಾ ಚಾವಣಿಗೆ ಹೋಗಿ ಡಿಕ್ಕಿ ಹೊಡೆದರು. Hit the ceiling ಅಂತಾರಲ್ಲ ಹಾಂಗ.

ನನ್ನ ಬಿಟ್ಟು ನಿಮ್ಮಅಂಡರ್ವೇರ್ ಚಡ್ಡಿ ಬ್ಯಾರೆ ಯಾರ್ರೀ ನೋಡತಾರ? ಯಾರನ್ನ ಇಟಗೊಂಡೀರೀ ಹೇಳ್ರೀ? ಯಾರ ಅಕಿ ನನ್ನ ಸವತಿ?ಹಾಂ? ಹಾಂ? - ಅನಕೋತ್ತ ರೂಪಾ ವೈನಿ ಬಂದವರೇ ಚೀಪ್ಯಾನ ಎದಿ ಮ್ಯಾಲೆ ದಬಾ ದಬಾ ಗುದ್ದಿಕೋತ್ತ, ಹೇಳ್ರೀ ಹೇಳ್ರೀ ಯಾರನ್ನ ಇಟಗೊಂಡೀರೀ ಅಂತ. ಹೇಳಿ ಸಾಯರಿ(?).  ಕೇಳಿ ನಾನೇ ಸತ್ತು ಹೋಗ್ತೀನಿ. ಅಕಿಗೇ ನಿಮ್ಮ ಚಡ್ಡಿ ಮತ್ತೊಂದು ತೋರಿಸಿಕೊಂಡು ಆರಾಮ್ ಇರ್ರೀ. ನನಗ ಎಂತೆಂತಾ ವರಾ ಬಂದಿದ್ದವು. ಎಲ್ಲಾ ಅಮೇರಿಕಾ ಇಂಗ್ಲಂಡ ಆ ಲಂಡ್ ಈ ಲಂಡ್ ಅನ್ನೋ ದೇಶದ ಚೊಲೋ ಚೊಲೋ ವರಗಳು. ಎಲ್ಲಾ ಬಿಟ್ಟು ನಿಮ್ಮನ್ನ ಮಾಡಿಕೊಂಡು ಕೂತೆ. ಎರಡು ಮಕ್ಕಳಾ ಮಾಡಿದ ಮ್ಯಾಲ ಈಗ ಬ್ಯಾರೆ ಅಕಿಗೆ ಚಡ್ಡಿ ತೋರಿಸಲಿಕ್ಕೆ ಹೊಂಟೀರಲ್ಲ?! ಅಕಿ ನೋಡ್ತಾಳ ಅಂತ ಬ್ಯಾರೆ ಬ್ಯಾರೆ ಬಣ್ಣದ ಚಡ್ಡಿ ಬೇಕು ಅಂತೀರಲ್ಲ, ಅಂತ ಅನ್ನೋದ್ರಾಗ ರೂಪಾ ವೈನಿ ಕಣ್ಣಾಗ ಗಂಗಾ, ಯಮುನಾ, ಸರಸ್ವತೀ, ಕಾವೇರಿ, ಘಟಪ್ರಭಾ, ಮಲಪ್ರಭಾ ಎಲ್ಲಾ ನದಿಗಳು ಹರಿಲಿಕ್ಕೆ ಶುರು ಆದವು. ತನ್ನ ಗಂಡನ ಚಡ್ಡಿ ಇನ್ನೊಬ್ಬಾಕಿ ನೋಡಿರಬಹುದು ಎಂದು ಊಹಾ ಮಾಡಿಕೊಂಡು ಆದ ಶಾಕ್ ಒಳಗ ಚೀಪ್ಯಾನ ಎದಿ ಮ್ಯಾಲೆ ದಬಾ ದಬಾ ಗುದ್ದಲಿಕತ್ತಿದ್ದ ರೂಪಾ ವೈನಿ ಕೈ ತೆಗಿಯದೆ ಹಾಂಗೆ ಕೈ ಚೀಪ್ಯಾನ ಅಂಗಿ ಮ್ಯಾಲೆ ಕೆಳಗ ಎಳಕೋತ್ತ ಕುಸಿದು ಬಿದ್ದರು. ರೂಪಾ ವೈನಿ ದೊಡ್ಡ ಗಾತ್ರದ ಬಾಡಿ ಆ ರೀತಿಯೊಳಗ ಕುಸಿದು ಬೀಳೂವಾಗ ಚೀಪ್ಯಾನ ಅಂಗಿಯ ಅಷ್ಟೂ ಗುಂಡಿ ಪಟ್ ಪಟ್ ಅಂತ ಹರಿದು ಹೋದವು. ಇನ್ನು ಗುಂಡಿ ಬ್ಯಾರೆ ಹಚ್ಚಿಸಿಕೊಳ್ಳೋ ಗಂಡಾ ಗುಂಡಿ ಕೆಲಸ ಪಾಪ ಚೀಪ್ಯಾಗ. ಹೋಗ್ಗೋ. ಕುಸಿದು ಬೀಳುತ್ತಿದ್ದ ವೈನಿ ಕೈಯಾಗ ಲುಂಗಿ ಸಿಕ್ಕು, ಅದೂ ಸಹಿತ ಕಳೆದು ಹೋದೀತು ಅಂತ ಹೆದರಿದ ಚೀಪ್ಯಾ ಹಿಂದ ಜಿಗಿದ. ರೂಪಾ ವೈನಿಗೆ ಇವಾ ಹೀಂಗ ಜಿಗಿದು ಹಿಂದ ಸರಿಯೋದು ನೋಡಿ ಈವಾ ಚೀಪ್ಯಾ ರೂಪಾ ವೈನಿನೇ ನೋಡಿ ಅಸಹ್ಯದಿಂದ ದೂರ ಸರಿಲಿಕತ್ತಾನ ಅಂತ ಅನ್ನಿಸಿ ಅವರು ಇನ್ನೂ ಜೋರಾಗಿ ಗೊಳೋ ಅಂತ ಅಳಲಿಕತ್ತರು.

ಚೀಪ್ಯಾಗ ಈಗ ಜ್ಞಾನೋದಯ ಆತು. ತಾನು ಏನೋ ಮಾತಿಗೆ ಒಂದೇ ಬಣ್ಣದ ಚಡ್ಡಿ ನೋಡಿದವರು ತಪ್ಪು ತಿಳ್ಕೋತ್ತಾರ ಅಂತ ಹೇಳಿದ್ದು ಎಷ್ಟು ತಪ್ಪು ಕಲ್ಪನಾ ಕೊಡಬಹುದು ಹೆಂಡತಿಗೆ ಅಂತ ತಿಳಿದು ತಲಿ ತಲಿ ಚಚ್ಚಿಕೊಂಡ. ಗಂಡನ ಚಡ್ಡಿ ತನ್ನ ಬಿಟ್ಟು ಬ್ಯಾರೆ ಯಾರೂ ನೋಡಬಾರದು ಅನ್ನೋದು ಎಲ್ಲಾ ಹೆಂಡತಿಯರ ದೊಡ್ಡ ಆಶಾ ಇರ್ತದ. ಮತ್ತ ಅದು ಎಲ್ಲರೆ ಬ್ಯಾರೆ ಯಾರರ ನೋಡಿಬಿಟ್ಟರು ಅಂದ್ರ ಅವರಿಗೆ ತಲಿಯೊಳಗ ಇಲ್ಲದ ಹಾಳುವರಿ ವಿಚಾರ ಬಂದು ಅವರಿಗೆ ಏನೇನೋ ಸಂಶಯ ಬಂದು ಬಿಡ್ತದ ಅಂತ.

ರೂಪಾ......ರೂಪಾ.....ಏನ ನೀನು? ನಾ ಏನೋ ಮಾತಿಗೆ ನನ್ನ ಒಂದೇ ಬಣ್ಣದ ಚಡ್ಡಿಗಳನ್ನ ಯಾರೋ ನೋಡ್ತಾರ ಅಂದ್ರ ನೀ ಯಾರೋ ಬ್ಯಾರೆ ಹೆಂಗಸೇ ನೋಡತಾಳ ಅಂತ ಏನೇನೋ ಊಹಾ ಮಾಡಿಕೊಂಡು, ನಾ ನಿನ್ನ ಬಿಟ್ಟು ಯಾರನ್ನರೆ ಇಟ್ಟುಕೊಂಡೇನೀ ಅಂತ ಏನೇನೋ ತಪ್ಪತಪ್ಪ ವಿಚಾರ ಮಾಡಿ, ಏನೇನೋ ತಲಿಗೆ ಹಚ್ಚಿಗೊಂಡು, ಅಳಕೋತ್ತ ಕೂತಿ ನೋಡು. ಅಳೋದು ನಿಲ್ಲಿಸಿ ಸ್ವಲ್ಪ ನಗು ನೋಡೋಣ? ಒಂದೇ ಬಣ್ಣದ ಚಡ್ಡಿ ಇದ್ದರ ಏನಾತು? ನಾ ಮ್ಯಾಲಿಂದ ಪ್ಯಾಂಟ್ ಹಾಕ್ಕೊತ್ತೇನಿ. ಯಾರಿಗೂ ಒಳಗಿಂದು ಒಂದೇ ಬಣ್ಣದ ಚಡ್ಡಿ ಅಂತ ಗೊತ್ತಾಗೋದೇ ಇಲ್ಲ. ಏಳೇಳು. ಹೀಂಗೆಲ್ಲಾ ತಲಿ ಕೆಡಿಸ್ಕೊಂಡು, ಮನಸ್ಸು ಕೆಡಿಸ್ಕೋಬ್ಯಾಡ, ಅಂತ ಚೀಪ್ಯಾ ಏನೇನೋ ಸಮಾಧಾನ ಮಾಡಲಿಕ್ಕೆ ನೋಡಿದ.

ವೈನಿ ಇನ್ನೂ ಸ್ವಲ್ಪ ಬಿಕ್ಕಿ ಬಿಕ್ಕಿ ಅಳಕೋತ್ತನ ಸೀರಿ ಸೆರಗೀಲೇ ಕಣ್ಣು ಒರಸಿಕೊಂಡರು. ಜೋರಾಗಿ ಮೂಗು ಬ್ಯಾರೆ ಸೇದಿ ಬಿಟ್ಟರು. ಇಷ್!

ಏನೋ ಜಗಳಾ ಮುಗೀತು ಅನ್ನೋದ್ರಾಗ ದೊಡ್ಡ ಹುಡುಗಿ ಕುಂತಿ ಬತ್ತಿ ಇಟ್ಟಳು.

ಅಣ್ಣಾ....ನಿಮ್ಮ ಚಡ್ಡಿ ಎಲ್ಲಾ ಬೂಬು ಒಗಿತಾಳ. ಅಕಿಗೆ ಅನ್ನಿಸಬಹುದು ನೀವು ಚಡ್ಡಿ ಬದಲೀ ಮಾಡೋದಿಲ್ಲ ಅಂತ. ಒಂದೇ ಬಣ್ಣದ ಚಡ್ಡಿ ಒಗಿಲಿಕ್ಕೆ ಹಾಕ್ತೀರಿ ಅಂತ, ಅಂತ ಕುಂತಿ ಇಲ್ಲದ ಅಧಿಕ ಪ್ರಸಂಗಿತನ ಮಾಡಿದಳು.

ಈಗ ನಾನು ಮಧ್ಯ ಪ್ರವೇಶಿಸಲಿಲ್ಲ ಅಂದ್ರ ರೂಪಾ ವೈನಿ ಚೀಪ್ಯಾಗ ಮತ್ತ ಕೆಲಸದ ಬೂಬೂಗ ಇಲ್ಲದ ಸಂಬಂಧ ಹಚ್ಚಿ ಇನ್ನೂ ದೊಡ್ಡ ರಾಮಾಯಣ ಮಾಡ್ತಾರ ಅಂತ ಜೋರಾಗಿ ಫುಲ್ ಕಾನ್ಫಿಡೆನ್ಸ್ ನಿಂದ ಹೇಳಿದೆ.

ಹುಚ್ಚ ಖೋಡಿ ಕುಂತಿ ತಂದು!!! ಸ್ವಲರೆ ಬುದ್ಧಿ ಬ್ಯಾಡ ನಿನಗ? ಹಾಂ? ಅಲ್ಲ ಹುಚ್ಚಿ... ಚಡ್ಡಿ ಬದಲೀ ಮಾಡದಿದ್ದರ ನಿಮ್ಮಪ್ಪಾ ಒಗಿಲಿಕ್ಕೆ ಯಾಕ ಹಾಕತಿದ್ದಾ? ಮತ್ತ ಯಾರು ಯಾವ ಬಣ್ಣದ ಅರವೀ ಒಗಿಲಿಕ್ಕೆ ಹಾಕ್ಯಾರ ಅಂತ ನೋಡಿಕೋತ್ತ ಕೂಡಲಿಕ್ಕೆ ಬೂಬುಗ ಬರೆ ನಿಮ್ಮನಿ ಕೆಲಸ ಒಂದೇ ಅಲ್ಲ ತಿಳೀತ? ರೂಪಾ ವೈನಿ.....ನಿಮಗ ಕೈ ಮತ್ತೊಂದು ಮುಗಿದು ಕೇಳಿಕೋತ್ತೇನಿ. ಕೆಲಸದ ಬೂಬು ನಿಮ್ಮ ಪತಿದೇವರ ಚಡ್ಡಿ ನೋಡ್ತಾಳ ಅಂತ ಮಾತ್ರ ಮನಸ್ಸಿನ್ಯಾಗ ಹಾಕ್ಕೊಂಡು ಮತ್ತೊಂದು ಅವಗಢ ಮಾಡಿಕೋಬ್ಯಾಡ್ರೀ, ಅಂತ ಅದನ್ನ ಅಷ್ಟಕ್ಕ ನಿಲ್ಲಿಸಿದೆ.

ಮಂಗೇಶ....ನಮ್ಮನಿಯವರದ್ದು ಒಂದೇ ಅಲ್ಲ ಅನ್ನಲಿಕ್ಕೆ ನಿಂದೂ ಚಡ್ಡಿ ಬೂಬು ನೋಡ್ತಾಳೇನು? ಅಂತ ಕೇಳಿ ಬಿಟ್ಟರು ವೈನಿ. ತನ್ನ ಗಂಡನದು ಒಂದೇ ಅಲ್ಲ ಇನ್ನೂ ನಾಕ ಐದ ಮಂದಿ ಗಂಡಸೂರ ಚಡ್ಡಿ ಬೂಬು  ನೋಡಿಬಿಟ್ಟರೆ ತೊಂದ್ರೀ ಇಲ್ಲ ಅನ್ನೋ ಹಾಂಗ. ಹೋಗ್ಗೋ!

ರೀ ವೈನಿ....ನಮ್ಮನಿಗೆ ಬೂಬು, ಗೂಳವ್ವ ಅವರು ಇವರು ಯಾರೂ ಕೆಲಸಕ್ಕ ಮತ್ತೊಂದಕ್ಕ ಬರೋದಿಲ್ಲ. ನೀವು ಸುಮ್ಮ ಕೂಡ್ರೀ. ಮತ್ತೆ ಎಲ್ಲರ ಊರ ತುಂಬಾ ಬೂಬು ಮಂಗೇಶನ ಚಡ್ಡಿ ನೋಡ್ತಾಳ ಅಂತ ಹೇಳಿಕೊಂಡು ಬಂದು ಗಿಂದೀರಿ. ಆ ಮ್ಯಾಲೆ ಮಠಕ್ಕ ಹೋಗಲಿಕ್ಕೆ ನಮಗ ತೊಂದ್ರೀ ಆಗ್ತದ. ಒಳ್ಳೆ ವೈನಿ ನೀವು!! ಆ...ಆ...ಆ.... - ಅಂತ ಹೇಳಿದೆ. ನಮ್ಮ ವಸ್ತ್ರಾ ಎಲ್ಲಾ ನಾವೇ ಒಕ್ಕೋತ್ತೇವಿ. ಎಲ್ಲಿ ಬೂಬು ನೋಡೋದು!

ಯಾರೂ ನೋಡಂಗಿಲ್ಲ, ಏನೂ ತಿಳಕೊಳ್ಳಂಗಿಲ್ಲ ಅಂದ್ರ ನೀ ಒಂದೇ ಬಣ್ಣದ ಚಡ್ಡಿ ಹಾಕ್ಕೊತ್ತಿ ಏನು ಮಂಗೇಶ? ಅಲ್ಲಾ ಮಾತಿಗೆ ಕೇಳಿದೆ ಅಷ್ಟ, ಅಂತ ಇಲ್ಲದ ಉಸಾಬರಿ ಮಾಡಿದ್ರು ವೈನಿ. ಸಿಟ್ಟು ಬಂತು ನನಗ.

ನಿಮಗ ಬ್ಯಾರೆ ಕೆಲಸ ಇಲ್ಲ ನೋಡ್ರೀ ವೈನೀ. ಸೋವಿಯಾಗ ಸಿಗ್ತಾವ ಅಂತ ಒಂದೇ ಬಣ್ಣದ ಚಡ್ಡಿ ತರೋರು ನೀವು. ಒಂದೇ ಬಣ್ಣದ ಚಡ್ಡಿ ಹಾಕಿಕೊಂಡಿದ್ದನ್ನ ಯಾರರ ನೋಡಿದರೆ (?) ಚಡ್ಡಿ ಬದಲು ಮಾಡೋದಿಲ್ಲ ಅಂತ ತಿಳ್ಕೊಂಡು ಮಾನಸಿಕ ಆಗಿ ಏನೇನೋ ಅನ್ನವ ನಿಮ್ಮ ಗಂಡ, ಗಂಡನ ಚಡ್ಡಿ ಬ್ಯಾರೋ ಯಾರೋ ನೋಡಿದರು ಅಂದ್ರ ನೋಡಿದಾಕಿ ಅವರ ಉಪಪತ್ನಿನೇ ಇರಬೇಕು ಅಂತ ತಲಿ ಕೆಡಿಸಿಕೊಂಡು, ಗಂಡನ ಎದಿ ಮ್ಯಾಲೆ ದಬಾ ದಬಾ ಗುದ್ದಿ, ಅಂಗಿ ಗುಂಡಿ ಹರದು ಗಂಡಾಗುಂಡಿ ಮಾಡಿದವರು ನೀವು, ಗಂಡ ಹಾಕ್ಕೊಂಡ ಚಡ್ಡಿ ಹೆಂಡ್ತೀ ಬಿಟ್ಟು ಬ್ಯಾರೆ ಯಾರೂ ನೋಡಂಗಿಲ್ಲ ಅಂದ್ರ, ಅರವೀ ಒಗೆಯೋ ಬೂಬು ನೋಡ್ತಾಳ ಅಂತ ಇಲ್ಲದ ಕಿತಬಿ ಮಾಡೋ ನಿಮ್ಮ ಕನ್ಯಾರತ್ನ ಕುಂತಿ, ಇಂತವರ ನಡುವೆ ಸಿಕ್ಕೊಂಡು ನಾ ಫುಲ್ ಹಾಪ್ ಆಗಿ ಬಿಟ್ಟೇನಿ ನೋಡ್ರೀ. ಇನ್ನು ಒಂದು ನಿಮಿಷ ನಾ ಇಲ್ಲೆ ಇದ್ದರ ಅಂಗಿ ಚೊಣ್ಣ ಎಲ್ಲ ಹರಕೊಂಡು, ಕಳಕೊಂಡು 'ಭಲೇ ಹುಚ್ಚ' ಸಿನೆಮಾದಾಗಿನ ಹುಚ್ಚನ ಹಾಂಗೆ ಓಡಿ ಹೋಗಬೇಕಾಗ್ತದ ನೋಡ್ರೀ. ನನ್ನ ಬಿಡ್ರೀ.....ಪ್ಲೀಸ್! ಅಂತ ಕೈಮುಗಿದು ಕೇಳಿಕೊಂಡೆ.

ಹಾಳಾಗಿ ಹೋಗು! - ಅಂತ ನನ್ನ ಡಿಸ್ಮಿಸ್ ಮಾಡಿದರು ವೈನಿ.

ರೀ....ಅವು ಹೊಸಾ ಚಡ್ಡಿ ಎಲ್ಲಾ ಈ ಕಡೆ ಕೊಡ್ರೀ. ಹೊಸಾವು ಅಂತ ಹಾಂಗೆ ಸೀದಾ ಹಾಕಿಕೊಂಡು ಕೂತೀರಿ. ಒಂದು ಸಲಾ ನೀರಾಗ ಹಾಕಿ ಬಿಡ್ತೇನಿ. ಆ ಮ್ಯಾಲೆ ಹಾಕಿಕೊಂಡೀರಿ ಅಂತ. ತಿಳೀತ? - ಅಂತ ಹೇಳಿಕೋತ್ತ ವೈನಿ ಚೀಪ್ಯಾನ ಕೈಯಾಗಿನ ಚಡ್ಡಿಗಳ ಪ್ಯಾಕೆಟ್ ಇಸಿದುಕೊಂಡರು.

ಯಾಕ? ಯಾಕ? ಮಸ್ತ ಏಕದಂ ಹೊಸಾವು ಅವ. ನೀರಾಗ ಯಾಕ ಹಾಕ್ತೀ? ಹಾಂ? ಹಾಂ? - ಅಂತ ಕೇಳಿದ ಚೀಪ್ಯಾ.

ರೀ!!! ನಿಮಗ ಸ್ವಲ್ಪರ ಕಾಮನ್ ಸೆನ್ಸ್ ಅದ ಏನ್ರೀ? ಆ ಅಂಗಡಿಯೊಳಗ ಎಷ್ಟು ಮಂದಿ ಹೆಂಗಸೂರು, ಗಂಡಸೂರು ಆ ಚಡ್ಡಿಗಳನ್ನ ಮುಟ್ಟಿ ಮುಟ್ಟಿ ನೋಡಿ ಬ್ಯಾಡ ಅಂತ ವಾಪಸ್ ಬಿಟ್ಟು ಹೋಗಿರ್ತಾರೋ ಏನೋ. ಅವರ ಕೈಯಾಗ ಏನೇನು ಹತ್ತಿರ್ತದೋ ಏನೋ? ಅದಕ್ಕ ಒಂದು ಸರೆ ನೀರಾಗ ಹಾಕಿ ಬಿಡ್ತೇನಿ ಅಂದೆ. ಯಾರರೆ ಆಗ ಮಾತ್ರ ಬ್ಯಾಡಗೀ ಮೆಣಸಿನಕಾಯಿ ಕುಟ್ಟಿ ಬಂದು, ಕೆಂಪ ಮೆಣಸಿನಕಾಯಿ ಕೆಟ್ಟ ಖಾರದ ಪುಡಿ ಹತ್ತಿದ ಕೈಯಾಗಿಂದ ಇವೇ ಚಡ್ಡಿ ಮುಟ್ಟಿ ನೋಡಿ, ಬ್ಯಾಡ ಅಂತ  ಇಟ್ಟು ಹೋಗಿದ್ದನ್ನ ನಾ ತಂದಿದ್ದೆ ಅಂದ್ರ ಏನು ಮಾಡ್ತೀರಿ? ಆ ಪರಿ ಖಾರಪುಡಿ ಹತ್ತಿದ ಚಡ್ಡಿ ಹಾಕಿಕೊಂಡರ ಏನು ಆಗ್ತದ ಹೇಳ್ರೀ? ಹಾಂ? ಹಾಂ? - ಅಂತ ಗಂಡನ ಬಗ್ಗೆ ಭಾರಿ ಕಾಳಜಿ ವಹಿಸೋಹಾಂಗ ರೂಪಾ ವೈನಿ ಹೇಳಿದರು.

ಏನಾಗ್ತದ? - ಅಂತ ಯಬಡನ ಹಾಂಗ ಚೀಪ್ಯಾ ಕೇಳಿದ.

ಅಯ್ಯೋ!!!ಏನಾಗ್ತದ ಅಂತ ತಿಳ್ಕೊಬೇಕು ಅಂದ್ರ ಒಂದು ತಾಸು ಬ್ಯಾಡಗಿ ಖಾರ ಪುಡಿಯೊಳಗ ಬೆರಳು ಹೆಟ್ಟಿಕೊಂಡು ಕೂಡ್ರೀ. ಬೆರಳಿಗೆ ಏನು ಉರಿ ಆಗ್ತದ ಅದರ ಹತ್ತು ಪಟ್ಟು ಉರಿ 'ಅದಕ್ಕ' ಆಗ್ತದ. ನಿಮ್ಮವ್ವ ಅಂದ್ರ ನಮ್ಮ ಅತ್ತಿ ನಿಮಗ ಪ್ಯಾಟಿಂದ ತಂದ ಚಡ್ಡಿ ನೀರಿಗೆ ಹಾಕದೇ ಹಾಂಗೇ ನಿಮಗ ಹಾಕ್ಕೊಳ್ಳಿಕ್ಕೆ ಬಿಟ್ಟಿದ್ದಕ್ಕ ನಿಮ್ಮ 'ಅದರ' ಪರಿಸ್ಥಿತಿ ಹೀಂಗ ಅದ, ಅಂತ ವೈನಿ ಒಂದು ತರಹ ಗೂಡಾರ್ಥದಲ್ಲಿ ಹೇಳಿದರು. 'ಅದರ' ಪರಿಸ್ಥಿತಿ ಅಂದ್ರ!!!!???? ಬರೆ ಕೋಡ್ ಲ್ಯಾಂಗ್ವೇಜ್ ಒಳಗ ಮಾತಾಡ್ತಾರ ಗಂಡಾ ಹೆಂಡತಿ.

ನೀನು ನಮ್ಮ ಅವ್ವನ ಸುದ್ದಿಗೆ ಬರ ಬ್ಯಾಡ ! -ಅಂತ ಚೀಪ್ಯಾ ಹೊಸಾ ಜಗಳಕ್ಕ ರೆಡಿ ಆದ.

ನನಗ ಬ್ಯಾರೆ ಕೆಲಸ ಅದ. ನೀರಾಗ ಹಾಕಿ ಒಣಾ ಹಾಕಿರ್ತೆನಿ. ನಾಳಿಂದ ಇವಾ ಚಡ್ಡಿ ಹಾಕಿಕೊಳ್ಳರೀ ಮತ್ತ. ಆ ತೂತು ಬಿದ್ದ ಮಚ್ಚರದಾನಿ ಚಡ್ಡಿ ಹಾಕ್ಕೊಂಡು ಅಡ್ಯಾಡಬ್ಯಾಡ್ರೀ, ಅಂತ ತಾಕೀತು ಮಾಡಿ ವೈನಿ ಹೋದರು.

ಇನ್ನೊಂದು ಜಗಳ ಶುರು ಆಗಲಿಲ್ಲ ಅಂತ ಖಾತ್ರಿ ಮಾಡಿಕೊಂಡು ನಾ ವಾಪಸ್ ಬಂದೆ.

Saturday, October 05, 2013

ಗಿಳಿಯು ಪಂಜರದೊಳಗಿಲ್ಲ.....

ಶ್ರೀಮತಿ ಗಿಳಿಯೂರ....ಅಲ್ಲಲ್ಲ.... ಈಗ ಶ್ರೀಮತಿ ಅನ್ನಲಿಕ್ಕೆ ಬರೋದಿಲ್ಲ ಯಾಕ ಅಂದ್ರ ಎರಡು ದಿವಸದ ಹಿಂದ ಮಾತ್ರ ಅವರ ಗಂಡ, ಮಾಜಿ ಖ್ಯಾತ ವೈದ್ಯ ಡಾ. ಗಿಳಿಯೂರ ಹೋಗಿ ಬಿಟ್ಟರು. ಹೋಗಿ ಬಿಟ್ಟರು ಅಂದ್ರ ದೇವರ ಕಡೆ ಹೋಗಿ ಬಿಟ್ಟರು. ಹಾಂಗಾಗಿ ಅವರ ಹೆಂಡತಿಗೆ ಶ್ರೀಮತಿ ಅನ್ನಲಿಕ್ಕೆ ಬರೋದಿಲ್ಲ ಅಂತ ಅನ್ನಸ್ತದ. ಮದ್ವಿ ಆಗದವರಿಗೆ ಕುಮಾರಿ, ಮದ್ವಿ ಆದವರಿಗೆ ಶ್ರೀಮತಿ, ಪತಿಯನ್ನು ಕಳಕೊಂಡವರಿಗೆ ಏನಂತಾರೋ ಏನೋ? ಅದಕ್ಕೇ ಸಿಂಪಲ್ ಆಗಿ Ms. ಗಿಳಿಯೂರ್ ಅಂದು ಬಿಡೋಣ.

ಡಾ. ಗಿಳಿಯೂರ ಅವರ ಸಾವು ಗಿಳಿ ರೂಪದಾಗೇ ಬಂದಿದ್ದು ಮಾತ್ರ ಭಾಳ ಆಶ್ಚರ್ಯ ನೋಡ್ರೀ. ಅವರ ಮನಿತನದಾಗ ಮೊದಲಿಂದಲೂ ಗಿಳಿ ಆವ. ಗಿಳಿ ಸಾಕ್ತಾರ ಅಂತ ಗಿಳಿಯೂರ ಅಂತ ಹೆಸರು ಬಂತೋ ಅಥವಾ ಗಿಳಿಯೂರ ಅಂತ ಹೆಸರು ಇರೋದಕ್ಕ ಗಿಳಿ ಸಾಕ್ತಾರೋ ಗೊತ್ತಿಲ್ಲ.

ಡಾ. ಗಿಳಿಯೂರ ಅವರ ಮನಿ ಒಳಗ ಇರೋ ಗಿಳಿ ಮಸ್ತ ಇತ್ತು. ಎಲ್ಲಾ ಮಾತು ಮಸ್ತ ಮಾತಾಡ್ತಿತ್ತು. ಆದ್ರ ಅಧಿಕ ಪ್ರಸಂಗಿ ಇತ್ತು. ಯಾರು ಬಂದಾಗ ಏನು ಮಾತಾಡ್ಬೇಕು ಅಂತ ಗೊತ್ತಿಲ್ಲ ಆ ಹುಚ್ಚ ಖೋಡಿ ಗಿಳಿಗೆ. ನಿಮಗ ಒಂದು ಘಟನೆ ಹೇಳ್ತೆನೀ ಆ ಹುಚ್ಚ ಖೋಡಿ ಗಿಳಿ ಬಗ್ಗೆ. ಎಲೆಕ್ಷನ್ ಟೈಮ್ ಇತ್ತು. ವಡ್ಡರ ಓಣಿ ಸ್ಲಂ ಮಂದಿ ಎಲ್ಲಾ ಫುಲ್ ಕಾಂಗ್ರೆಸ್ ಪಾರ್ಟಿ. ಅವರು, ಕಾಂಗ್ರೆಸ್ಸಿಗೆ ಓಟು. ಜನತಾ ಪಾರ್ಟಿಗೆ ಬೂಟು, ಅಂತ ಓಣಿ ತುಂಬ ಒದರಿಕೋತ್ತ ಹೋಗ್ತಿದ್ದರು. ಹೇಳಿ ಕೇಳಿ ಬ್ರಾಹ್ಮಣರ ಓಣಿ. ಎಲ್ಲಾ ಜನತಾ ಪಾರ್ಟಿಗೆ ಓಟು ಹಾಕವರೇ. ಆದ್ರ ಹಂದಿ ಹಿಡಿಯೋ ವಡ್ಡರ ಮಂದಿ ಎದುರು ಹಾಕಿಕೊಂಡು ಜಗಳಾ ಮಾಡೋ ದಮ್ಮ ಇಲ್ಲ. ಅದಕ್ಕ ಹಂದಿ ಹಿಡಿಯೋ ಮಂದಿ - ಜನತಾ ಪಾರ್ಟಿಗೆ ಬೂಟು - ಅಂತ ಅಂದ್ರ ಅಂದುಕೊಳ್ಳಲಿ ಅಂತ ಬಿಟ್ಟಿದ್ದರು. ಈ ಗಿಳಿ ಅದನ್ನ ಮಸ್ತ ಬಾಯಿಪಾಠ ಮಾಡಿ ಬಿಟ್ಟಿತ್ತು. ಒಮ್ಮೆ ಜನತಾ ಪಾರ್ಟಿ ಅಭ್ಯರ್ಥಿ ಯಾರೋ ಡಾ. ಗಿಳಿಯೂರ ಅವರ ಮನಿಗೆ ಬಂದಿದ್ದರು. ಹೇಳಿ ಕೇಳಿ ಊರಿಗೆ ದೊಡ್ಡ ಡಾಕ್ಟರ್. ಅವರು ತಮ್ಮ ಕಡೆ ಬರೋ ಎಲ್ಲಾ ಪೇಷಂಟ್ ಮಂದಿಗೆ ಒಂದು ಮಾತು ಜನತಾ ಪಾರ್ಟಿ ಅವರ ಪರವಾಗಿ ಹೇಳಿದರ ಮಸ್ತ ಪ್ರಚಾರ ಆಗ್ತದ ಅಂತ ಜನತಾ ಪಾರ್ಟಿ ಕ್ಯಾಂಡಿಡೇಟ್ ಅವರ ಆಶಾ. ಅವರು ಬಂದು ಕೂತ ಕೂಡಲೇ ಗಿಳಿ ಶುರು ಮಾಡಿತು ನೋಡ್ರೀ.....ಕಾಂಗ್ರೆಸ್ಸಿಗೆ ಓಟು. ಜನತಾ ಪಾರ್ಟಿಗೆ ಬೂಟು. ಕಾಂಗ್ರೆಸ್ಸಿಗೆ ಓಟು. ಜನತಾ ಪಾರ್ಟಿಗೆ ಬೂಟು. ಕಾಂಗ್ರೆಸ್ಸಿಗೆ ಓಟು. ಜನತಾ ಪಾರ್ಟಿಗೆ ಬೂಟು.....ಹಿಡದು ಬಿಡದ ಗಿಳಿ ಒದರಲಿಕ್ಕೆ ಹತ್ತಿ ಬಿಡ್ತು!!! ಸೂಡ್ಲಿ ಗಿಳಿ!!!!  ಡಾ. ಗಿಳಿಯೂರ ಅವರಿಗೆ ಭಾಳ ಅಂದ್ರ ಭಾಳ embarrassment ಆಗಿ ಅವರ ಪರಿಸ್ಥಿತಿ ಬ್ಯಾಡ. ಚುಪ್!ಚುಪ್!ಗಪ್!ಗಪ್! ಅಂತ ಡಾ.ಗಿಳಿಯೂರ ಹೇಳೇ ಹೇಳಿದರು. ಮಾತು ಕೇಳಲಿಕ್ಕೆ ಅದೇನು ನಾಯಿ ಏನು? ಅಲ್ಲ. ಗಿಳಿ ಅದು. ಅದು ಮತ್ತ ಮತ್ತ ಕಾಂಗ್ರೆಸ್ಸಿಗೆ ಓಟು, ಜನತಾ ಪಾರ್ಟಿಗೆ ಬೂಟು ಅಂತ ಅಂದು ಅಂದು ಆ ಜನತಾ ಪಾರ್ಟಿ ಕ್ಯಾಂಡಿಡೇಟ್ ಫುಲ್ ಹೈರಾಣ ಆಗಿ ಒಂದು ದೊಡ್ಡ ನಮಸ್ಕಾರ ಹಾಕಿ ಕೆಟ್ಟ ಮಸಡಿ ಮಾಡಿಕೊಂಡು, ಡಾಕ್ಟರ್ ಸಾಹೇಬರ, ನೀವು ಹೇಳದ್ದನ್ನ ನಿಮ್ಮ ಗಿಳಿ ಎಲ್ಲಾ ಹೇಳಿಬಿಡ್ತು. ಭಾಳ ಖುಷಿ ಆತು ಕೇಳಿ. ಬರ್ತೆನ್ರೀ ಅಂತ ಹೇಳಿ ಹೋಗಿಬಿಟ್ಟ. ಡಾ. ಗಿಳಿಯೂರ, ಅದು ಇದು....ನಿಲ್ಲರೀ..... ಅಂತ ಏನೋ ಹೇಳಲಿಕ್ಕೆ ಹೋದರು. ಆದ್ರ ಜನತಾ ಪಾರ್ಟಿ ಕ್ಯಾಂಡಿಡೇಟ್ ಇವರೆಲ್ಲ ಕಾಂಗ್ರೆಸ್ ಮಂದಿ ಅಂತ ತಿಳಕೊಂಡು ಹೋಗಿ ಬಿಟ್ಟ.

ಮತ್ತೊಂದು ಗಿಳಿ ಅಧಿಕ ಪ್ರಸಂಗ ಅಂದ್ರ ಇದು. ಡಾ. ಗಿಳಿಯೂರ ಅವರ ಮರಿಮಗ ಇನ್ನೂ ಎರಡನೇ ಕ್ಲಾಸ್. ಅವಂಗ ಮುಂಜಾನೆ ಸಾಲಿ ಇರ್ತದ. ಅಷ್ಟು ಲಗೂ ಏನು ಸ್ನಾನ ಮಾಡಿಸೋದು ಅಂತ ಹಾಂಗೇ ಮಾರಿ ತೊಳಿಸಿ ಕಳಿಸಿರ್ತಾರ. ವಾಪಸ್ ಬಂದ ಮ್ಯಾಲೆ ಸ್ನಾನ ಮಾಡಿಸಿದರ ಆತು ಅಂತ ಹೇಳಿ. ಅವಂಗೋ! ಸಾಲಿಯಿಂದ  ವಾಪಾಸ್ ಬಂದ ಮ್ಯಾಲೆ ಸ್ನಾನ ಬಿಡ್ರೀ ಊಟ ಮಾಡಲಿಕ್ಕೆ ಟೈಮ್ ಇರೋದಿಲ್ಲ. ಹೋಗಿ ಕ್ರಿಕೆಟ್ ಆಡೋದರ ಬಗ್ಗೆನೇ ಲಕ್ಷ. ಆವಾ ಅಂತೂ ಸ್ನಾನ ಮಾಡಂಗಿಲ್ಲ. ಗಡಿಬಿಡಿ ಒಳಗ ಊಟ ಮಾಡಿದವನೇ ಬ್ಯಾಟ್ ತೊಗೊಂಡು ಓಡಿ ಹೋದಾ ಅಂದ್ರ ಆವಾ ಸಂಜಿ ಮುಂದ ದೀಪಾ ಹಚ್ಚೋ ಟೈಮ್ ಗೆ ವಾಪಸ್ ಬರೋದು. ಬಂದ ಕೂಡಲೇ, ಅಜ್ಜಿ ಹಶಿವಿ, ಅಂತಾನ. ಆ ಪರಿ ಹಸಕೊಂಡು ಬಂದ ಹುಡುಗ್ಗ ಏನು ಸ್ನಾನ ಮಾಡು ಅಂತ ಹೇಳೋದು ಅಂತ, ಸ್ನಾನ ಅಂತೂ ಮಾಡಿಲ್ಲ, ಒಳಗಿನ ಚಡ್ಡಿ ಆದರೂ ಬದಲೀ ಮಾಡಿಕೋ ಹೇಶಿ, ಅಂತ ಹೇಳಿ ಪ್ರೀತಿಯಿಂದ ಅಜ್ಜಿ ಚಡ್ಡಿ ಬನಿಯನ್ ತಂದು ಕೊಡ್ತಾರ. ಅಜ್ಜಿ ಮುಂದನೇ ವಸ್ತ್ರಾ ಕಳದು ಚಡ್ಡಿ ಬನಿಯನ್ ಬದಲೀ ಮಾಡಿ, ಊಟ ಗಬಾ ಗಬಾ ಮಾಡೋದ್ರೋಳಗ ಹುಡಗನಿಗೆ ಫುಲ್ ನಿದ್ದಿ. ವಾರಕ್ಕ ಒಂದೋ ಎರಡೋ ದಿವಸ ಹಿಡದು ಸ್ನಾನ ಮಾಡಸ್ತಾರ ಬಿಡ್ರೀ. ಆ ಗಿಳಿ ಸಹಿತ - ಸ್ನಾನ ಅಂತೂ ಮಾಡಿಲ್ಲ. ಒಳಗಿನ ಚಡ್ಡಿ ಆದರೂ ಬದಲೀ ಮಾಡಿಕೋ ಹೇಶಿ - ಅನ್ನೋದನ್ನ ಮಸ್ತ ಕಲ್ತದ. ಯಾವಾಗ ಅದನ್ನ ಅನ್ನಬೇಕು? ಗೆಸ್ ಮಾಡ್ರೀ. ಡಾ. ಗಿಳಿಯೂರ ಅವರ ಮನಿಗೆ ಯಾರೋ ದೊಡ್ಡ ಸ್ಮಾರ್ತ ಮಠದ ಸ್ವಾಮಿಗಳು ಪಾದಪೂಜಾಕ್ಕ ಅಂತ ಬಂದರ, ಅವರ ಬಂದು ಕೂಡೋ ತಡಾ ಇಲ್ಲ, ಈ ಹುಚ್ಚ ಖೋಡಿ ಗಿಳಿ - ಸ್ನಾನ ಅಂತೂ ಮಾಡಿಲ್ಲ. ಒಳಗಿನ ಚಡ್ಡಿ ಆದರೂ ಬದಲೀ ಮಾಡಿಕೋ ಹೇಶಿ. ಸ್ನಾನ ಅಂತೂ ಮಾಡಿಲ್ಲ. ಒಳಗಿನ ಚಡ್ಡಿ ಆದರೂ ಬದಲೀ ಮಾಡಿಕೋ ಹೇಶಿ. ಸ್ನಾನ ಅಂತೂ ಮಾಡಿಲ್ಲ. ಒಳಗಿನ ಚಡ್ಡಿ ಆದರೂ ಬದಲೀ ಮಾಡಿಕೋ ಹೇಶಿ - ಅಂತ ಒಂದೇ ಸವನ ಚೀರಿ ಸ್ವಾಮಿಗಳು ಸಿಟ್ಟಿಗೆದ್ದು ಹೋಗಿ ಬಿಟ್ಟರು. ಇಂತಾ ಖತರ್ನಾಕ ಗಿಳಿ ಅದ ನೋಡ್ರೀ ಈ ಡಾ. ಗಿಳಿಯೂರ ಅವರ ಮನಿಯೊಳಗ.

ಆದರೂ ಮನಿಯೊಳಗ ಇರೋ ಎಲ್ಲಾ ಮಂದಿಗೆ ಆ ಗಿಳಿ ಅಂದ್ರ ಪಂಚ ಪ್ರಾಣ. ಆ ಗಿಳಿಗೆ ಭಾಳ ಅಂದ್ರ ಭಾಳ ಸಲಿಗಿ ಕೊಟ್ಟಾರ. ಅದರ ರೆಕ್ಕಿ ಆಗಾಗ ಕತ್ತಿರಿಸಿ ಹಾಕ್ತಾರ. ಭಾಳ ನಾಜೂಕ ಆಗಿ ಸರ್ಜರಿ ಮಾಡಿದಂಗ ಕತ್ತರಿಸ್ತಾರ. ಯಾಕ ಅಂದ್ರ ಗಿಳಿಯನ್ನ ಎಲ್ಲಾ ಟೈಮ್ ಪಂಜರದಾಗ ಇಡಲಿಕ್ಕೆ ಮನಸ್ಸು ಇಲ್ಲ ಅವರಿಗೆ. ರೆಕ್ಕಿ ಕತ್ತರಿಸಿ ಇಟ್ಟರ ಹಾರಲಿಕ್ಕೆ ಆಗೋದಿಲ್ಲ. ಮತ್ತ ಸಾಕಿದ ಗಿಳಿ ಆಗಿದ್ದರಿಂದ ಅಲ್ಲೇ ಸುತ್ತಾ ಮುತ್ತಾ ಅಡ್ಯಾಡಿಕೋತ್ತ, ಮನಿ ಮಂದಿ ಹೆಗಲ ಮ್ಯಾಲೆ ಬಂದು ಕೂತುಗೋತ್ತ, ಮಂಗ್ಯಾನಾಟಾ ಮಾಡಿಕೋತ್ತ ಇರ್ತದ. ಬೇಕಂದಾಗ ಹಿಡದು ಪಂಜರ ಒಳಗ ಹಾಕಬಹುದು.

ಈ ಗಿಳಿ ರೆಕ್ಕಿ ಅಂದ್ರ ನಮ್ಮ ಕೂದಲ ಇದ್ದಂಗ. ತಿಂಗಳಾ ತಿಂಗಳಾ ಬೆಳಿತಾವ. ಹಜಾಮತಿ ಮಾಡಿಸಬೇಕು. ಅದು ಏನು ಆಗಿತ್ತೋ ಏನೋ ಈ ತಿಂಗಳ. ಡಾ. ಗಿಳಿಯೂರ ಅವರಿಗೂ ಭಾಳ ವಯಸ್ಸು ಆಗಿತ್ತು ನೋಡ್ರೀ. ಮರ್ತು ಬಿಟ್ಟಿದ್ದರು ಅಂತ ಕಾಣಸ್ತದ ಗಿಳಿ ರೆಕ್ಕಿ ಕಟ್ ಮಾಡೋದು. ಹಾಂಗಾಗಿ ಒಂದು ದಿವಸ ಗಿಳಿ ಪಂಜರಾ ತೆಗೆದು ಬಿಟ್ಟ ಕೂಡಲೇ ಸ್ವಲ್ಪ ಜಾಸ್ತಿ ಎತ್ತರ ಹಾರಿ, ಅಲ್ಲೇ ಕಂಪೌಡ್ ಒಳಗ ಇರೋ ಗಿಡದ ಮ್ಯಾಲೆ ಹೋಗಿ ಕೂತು ಬಿಡ್ತು. ಆ ಗಿಳಿಗೆ ಹಾರಿ ಗೀರಿ ಗೊತ್ತೇ ಇಲ್ಲ. ರೆಕ್ಕಿ ಕತ್ತರಿಸಿ ಇಟ್ಟಿದ್ದರ ಅದಕ್ಕ ಇಷ್ಟು ಎತ್ತರ ದೂರ ಹಾರಲಿಕ್ಕೆ ಆಗ್ತಿದ್ದೇ ಇಲ್ಲ. ಈಗೂ ರೆಕ್ಕಿ ಫುಲ್ ಇರಲಿಲ್ಲ ಅಂತ ಹೇಳಿ ಭಾಳ ದೂರ, ಎತ್ತರ ಹಾರ್ಲಿಕ್ಕೆ ಆಗಲೇ ಇಲ್ಲ ಆ ಗಿಳಿಗೆ.



ಗಿಳಿಗೆ ಡಾ. ಗಿಳಿಯೂರ ಏನೇನೋ ಮಾಡಿ ಕರೆದರು. ಮೊದಲೇ ಹೇಳೇನಲ್ಲ. ಅದು ಗಿಳಿ, ನಾಯಿ ಅಲ್ಲ ಮಾತು ಕೇಳಲಿಕ್ಕೆ ಅಂತ. ಅದು ಕೆಳಗ ಬರಲೇ ಇಲ್ಲ. ಬದಲಿಗೆ ಡಾಕ್ಟರ ಹ್ಯಾಂಗ ಕರೀತಾರ ಹಾಂಗೇ ವಾಪಾಸ್ ಅಂದು ಅವರನ್ನ ಅಣಗಿಸಿಕೋತ್ತ ಕೂತಿತ್ತು ಗಿಡದ ಟೊಂಗಿ ಮ್ಯಾಲೆ.

ಈಗ ಡಾಕ್ಟರ ಗಿಳಿಯೂರ ಅವರಿಗೆ ಕಾಳಜಿ ಶುರು ಆತು. ಪಾಪ ಮೊದಲೇ ಹಾರಿಲಿಕ್ಕೆ ಬರದ ಗಿಳಿ. ಬಾವುಗ, ಗಿಡುಗ, ಹದ್ದು ಏನರೆ ಬಂದು, ಆ ಪಾಪದ ಗಿಳಿ ಮ್ಯಾಲೆ ದಾಳಿ ಮಾಡಿ, ಆರಾಮಾಗಿ ಗಿಳಿ ಅವರ ಊಟಕ್ಕ ತೊಗೊಂಡು ಹೋದ್ರ ಅಂತ ಚಿಂತಿ ಆತು. ಗಿಳಿಯೂರ ಮನಿತನದಾಗ ಯಾವದೇ ಗಿಳಿ ಹಂಗೆಲ್ಲಾ ಸತ್ತಿದ್ದು ಇಲ್ಲವೇ ಇಲ್ಲ. ಎಲ್ಲಾ ಸಹಜ ಆಗೇ ಸತ್ತಾವ. ಗಿಳಿಗೆ ಏನರೆ ಅಸಹಜ ಸಾವು ಬಂದ್ರ ಮಹಾ ಅಪಶಕುನ ಅಂತ ಗಿಳಿಯೂರ ಮಂದಿ ನಂಬ್ತಾರ.

ಮಹಾದೇವಾ! ಇಲ್ಲೆ ಬಾರೋ - ಅಂತ ಡಾಕ್ಟರ ಗಿಳಿಯೂರ ತಮ್ಮ ಆಳನ್ನು ಕರೆದರು.

ಏನ್ರೀ ಸಾಹೇಬರ? ಅಂತ ಮಹಾದೇವ ಬಂದ.

ಆ ಏಣಿ ತೊಗೊಂಡು ಬಂದು ಹಾಕಪಾ, ಅಂದರು ಡಾಕ್ಟರ ಗಿಳಿಯೂರ.

ಆ ಏಣಿ ಹತ್ತಿ ಹೋಗಿ ಗಿಡದ ಮ್ಯಾಲೆ ಕೂತ ಗಿಳಿ ಹಿಡಕೊಂಡು ಬರೋ ಪ್ಲಾನ್ ಇತ್ತು ಅಂತ ಯಾರಿಗೂ ಗೊತ್ತಿಲ್ಲ.

ಆಳು ಮಹಾದೇವ ಬಂದು, ಏಣಿ ಹಚ್ಚಿ, ತಾನೇ ಹತ್ತಲಿಕ್ಕೆ ಹೊಂಟ. ಬ್ಯಾಡ ಅಂತ ಡಾಕ್ಟರ ಅವನನ್ನ ತಡೆದರು.

ಅವರಿಗೆ ಗೊತ್ತದ. ಆ ಗಿಳಿ ಎಷ್ಟು ಜಾಬಾದ ಅದ ಅಂತ. ಮನಿ ಮಂದಿ ಕೈಯ್ಯಾಗ ಬಂದ್ರ ಬಂತು. ಇವಾ ಆಳು ಹಿಡಿಲಿಕ್ಕೆ ಹೋಗಿ, ಆ ಗಿಳಿ ಮತ್ತ ದೂರ ಹಾರಿ ಹೋಗಿ ಲಫಡಾ ಆಗೋದು ಬ್ಯಾಡ ಅಂತ ಹೇಳಿ ಡಾಕ್ಟರ ಯಾರೂ ಊಹಾ ಮಾಡದಂತಹ ಒಂದು ಕೆಲಸಾ ಮಾಡಲಿಕ್ಕೆ ಹೊಂಟು ಬಿಟ್ಟರು!!!

ಸುಮಾರು ಎಂಬತ್ತು ವರ್ಷದ ಡಾಕ್ಟರ ತಾವೇ ಏಣಿ ಹತ್ತಲಿಕ್ಕೆ ಹೊಂಟರು!!! ಅದೇ ಅವರು ಮಾಡಿದ ದೊಡ್ಡ ತಪ್ಪು.

ಮಹಾದೇವ ಆಳು ಎಷ್ಟ ಬ್ಯಾಡ ಬ್ಯಾಡ ಅಂದ. ಆದರೂ ಡಾಕ್ಟರ ಕೇಳಲೇ ಇಲ್ಲ. ಆಳು ಏನು ಮಾಡಿಯಾನು? ಜ್ವಾಕಿರೀ ಸಾಹೇಬ್ರಾ, ಅಂತ ಹೇಳಿದ. ನೀ ಏಣಿ ಸರಿ ಮಾಡಿ ಹಾಕಿ, ಕೆಳಗ ಘಟ್ಟೆ ಹಿಡಕೊಂಡು ನಿಲ್ಲೋ! ಅಂತ ಸ್ವಲ್ಪ ಜೋರು ಮಾಡಿ ಡಾಕ್ಟರ ತಮ್ಮ ದೊಡ್ಡ ಗಾತ್ರದ ವೃದ್ಧ ದೇಹವನ್ನು ಒಂದೊಂದೇ ಮೆಟ್ಟಿಲು ಹತ್ತಿಕೋತ್ತ, ಬುಸು ಬುಸು ಶ್ವಾಸಾ ಬಿಟ್ಟುಗೋತ್ತ, ಸಿಕ್ಕಾಪಟ್ಟೆ ನೋವನ್ನು ಹ್ಯಾಂಗೋ ಅನುಭವಿಸುತ್ತ ಅಂತೂ ಇಂತೂ ಆ ಸೂಡ್ಲಿ ಗಿಳಿ ಇದ್ದ ಗಿಡದ ಟೊಂಗಿ ಬಾಜೂಕ ಬಂದು ನಿಂತರು ಅಂತ ಆತು. ಅವರು ಸುಧಾರಿಸಿಕೊಳ್ಳಲಿಕ್ಕೆ ಅಂತ ಬಿಟ್ಟ ಒಂದು ಉಸಿರಿನಿಂದ ಆ ಗಿಳಿಗೆ ಏನೋ ಕಚಗುಳಿ ಇಟ್ಟಂಗ ಆಗಿರಬೇಕು. ಏನೋ ಅಪದ್ಧ ಮಾತಾಡಿಕೋತ್ತ ಅದೇ ಗಿಡದ ಅದೇ ಟೊಂಗಿಯ ಸ್ವಲ್ಪ ಬಾಜೂಕ್ಕ ಹೋಗಿ ಕೂತು ಬಿಡ್ತು ಗಿಳಿ. ಡಾಕ್ಟರ ಗಿಳಿಯನ್ನ ಹಿಡಿಲಿಕ್ಕೆ ಕೈ ಚಾಚಿದರು. ಸಿಗಲಿಲ್ಲ. ಇನ್ನು ಎಲ್ಲೆ ಮತ್ತ ಪೂರ್ತಿ ಕೆಳಗ ಇಳಿದು, ಏಣಿ ಜಗಾ ಚೇಂಜ್ ಮಾಡಿ, ಮತ್ತ ಹತ್ತೋದು ಅಂತ ವಿಚಾರ ಮಾಡಿದ ಡಾಕ್ಟರ ಗಿಳಿ ಹಿಡಿಲಿಕ್ಕೆ ಸ್ವಲ್ಪ ಬಾಜೂಕ ಬಗ್ಗಿದರು. ಉದ್ದ ಕೈ ಚಾಚಿದರು. ಆತು ಅನಾಹುತ!!

ಜೋಲಿ ತಪ್ಪಿತೋ ಪಾಪ ಅವರಿಗೆ ಅಥವಾ ಏಣಿ ಜಾರಿತೋ ಗೊತ್ತಿಲ್ಲ. ಡಾಕ್ಟರ್ ಮಾತ್ರ ಧಪ್ಪ ಅಂತ ಅಷ್ಟು ಮ್ಯಾಲಿಂದ ಕೆಳಗ ಬಿದ್ದು ಬಿಟ್ಟರು!!!!

ಎಂದೂ ದೂರ ಹಾರದ ಅವರ ಗಿಳಿ ಮಾತ್ರ ಅವತ್ತು ಮಾತ್ರ ಡಾಕ್ಟರ ಗಿಳಿಯೂರ ಕೆಳಗ ಬೀಳೋ ತಡಾ ಇಲ್ಲ - ಗಿಳಿಯು ಪಂಜರದೊಳಗಿಲ್ಲ. ಗಿಳಿಯು ಪಂಜರದೊಳಗಿಲ್ಲ - ಅಂತ ಹಾಡು ಹಾಡಿಕೋತ್ತ ಪುರ್ರ್ ಅಂತ ಹಾರಿ ಹೋಗಿಬಿಡ್ತು. ಪ್ರಾಣ ಪಕ್ಷಿ ಹಾರಿ ಹೋಗೋದು ಅಂತ ಒಂದು ಮಾತ ಅದ. ಈ ಕಡೆ ಬಿದ್ದ ಹೊಡೆತಕ್ಕ ಮತ್ತ ವಯಸ್ಸೂ ಇರಬಹುದು, ಡಾಕ್ಟರ ಪ್ರಾಣ ಪಕ್ಷಿ ಸಹಿತ ಹಾರಿದರ ಅದನ್ನ ಸಾಂಕೇತಿಕವಾಗಿ ಹೇಳೋ ಹಾಂಗ ಗಿಳಿ ಹಾರಿ ಹೋತೋ ಅಂತ ಅನ್ನಿಸ್ತು.

ಈ ರೀತಿಯಾಗಿ ಗಿಳಿಯೂರ ಎಂಬ ಡಾಕ್ಟರಗೆ ಸಾವು ಅವರ ಪ್ರೀತಿಯ ಗಿಳಿ ರೂಪದಲ್ಲಿ ಬಂದು ಬಿಡ್ತು.

ಸತ್ತವರು ಸತ್ತು ಹೋದರು. ಇದ್ದವರು ಎಲ್ಲಾ ಮಾಡಬೇಕಲ್ಲ. ಹೇಳಿ ಕೇಳಿ ಊರಿಗೆ ಭಾಳ ದೊಡ್ಡ ವ್ಯಕ್ತಿ ಡಾ. ಗಿಳಿಯೂರ. ಸುದ್ದಿ ಊರ ತುಂಬಾ ಮಿಂಚಿನ ಹಾಂಗ ಹರಡಿತು. ಎಲ್ಲಾ ಮಂದಿ ಬಂದು ಕೂಡಲಿಕತ್ತರು. ಗಿಳಿಯೂರ ಡಾಕ್ಟರ ಹೆಂಡತಿ ಭಾಳ ತೂಕದ ಹೆಂಗಸು ಅವರು. ಬಂದವರನ್ನು ಭಾಳ graceful ಆಗಿ receive ಮಾಡಿಕೊಂಡು ಅವರ ಸಂತಾಪಗಳಿಗೆ ಥ್ಯಾಂಕ್ಸ್ ಹೇಳಿದರು. ಈ ಕಡೆ ಮನಿ ಮಂದಿ ಡಾಕ್ಟರ ಅವರ ಶವ ಸಂಸ್ಕಾರಕ್ಕ ತಯಾರಿ ಮಾಡಿಕೊಳ್ಳಲಿಕ್ಕೆ ಹತ್ತಿದರು.

ಎಲ್ಲರ ಸಹಾಯ ಸಹಕಾರದಿಂದ ಡಾಕ್ಟರ ಗಿಳಿಯೂರ ಅವರ ದೇಹಕ್ಕ ಅಗ್ನಿ ಸಂಸ್ಕಾರ ಆತು. ಆ ಗಿಳಿ ನೋಡ್ರೀ! ಸ್ಮಶಾನಕ್ಕೂ ಹಾರಿ ಬಂದಿತ್ತು. ಆ ಸ್ಮಶಾನದ ಒಂದು ಗಿಡದ ಮ್ಯಾಲೆ ಕೂತು ಮತ್ತ ಅದೇ ಹಾಡು - ಗಿಳಿಯು ಪಂಜರದೊಳಗಿಲ್ಲ....ಗಿಳಿಯು ಪಂಜರದೊಳಗಿಲ್ಲ!!!! ಏನು ಅಂತೀನಿ? ಆ ಗಿಳಿ ಮೈಯ್ಯಾಗ ಏನರೆ ದೆವ್ವ ಹೊಕ್ಕಿತ್ತ?! ಗೊತ್ತಿಲ್ಲ.

ಗಿಳಿಯೂರ್ ಡಾಕ್ಟರ ಹೆಂಡತಿ ಎಲ್ಲಾ ಕೆಲಸಾ ಮುಗಿಸಿ, ಬಂದಿದ್ದ ಬಂಧು ಬಳಗದವರನ್ನೆಲ್ಲ ಕಳಿಸಿ, ಕೆಲಸದ ಮಂದಿಗೆ ಎಲ್ಲಾ ರಜಾ, ಇನಾಮು ಇತ್ಯಾದಿ ಕೊಟ್ಟು, ಬಂದು ಇನ್ನೇನು ಮಲ್ಕೊಬೇಕು ಅನ್ನೋದ್ರಾಗ ಯಾರೋ ಬಾಗಲಾ ಬಡದರು. ಯಾರು ಇರಬಹುದು ಈ ಅಪರಾತ್ರಿಯಾಗ ಅಂತ ವಿಚಾರ ಮಾಡಿದರು ಮಿಸೆಸ್ ಗಿಳಿಯೂರ್. ಅದೂ ರಾತ್ರಿ ಒಂದರ ಮ್ಯಾಲೆ ಆಗ್ಯದ. ಈ ಹೊತ್ತಿನ್ಯಾಗ ಯಾರು ಅಂತ ವಿಚಾರ ಮಾಡಿದರು. ಅವರೇನು ಅಂಜಲಿಲ್ಲ. ಯಾಕಂದ್ರ ಎಲ್ಲಾ ಸೇಫ್ ಅದ ನಮ್ಮ ಕಡೆ. ಮತ್ತ ಅವರು ಭಾಳ ಘಟ್ಟಿಗಿತ್ತಿ ಬಿಡ್ರೀ. ಗಂಡನ ಸಾವನ್ನೇ ಅವರು ಭಾಳ ಧೈರ್ಯದಿಂದ ಫೇಸ್ ಮಾಡಿದವರು.

ಎಲ್ಲಾ ಕೆಲಸದವರು ಅವರು ಇವರು ಹೋಗಿ ಬಿಟ್ಟಿದ್ದರು. ಗಿಳಿಯೂರ್ ಡಾಕ್ಟರ ಹೆಂಡತಿ ಮನಿಯೊಳಗ ಒಬ್ಬರೇ. ಹಾಸಿಗಿ ಮ್ಯಾಲೆ ಅಡ್ಡ ಆದವರು ಎದ್ದು ಹೋಗಿ, ಬಾಗಲದ ಹಿಂದ ನಿಂತು, ಯಾರು? ಅಂತ ಕೇಳಿದರು. ನಾನೇ! ಅಂತ ಬಂತು ಗಂಡು ಧ್ವನಿ. ಮತ್ತ ಕೇಳಿದರು, ಯಾರು? ಅಂತ. ಮತ್ತ, ನಾನೇ, ಅಂತ ಉತ್ತರ ಬಂತು. ನಾನೇ ಅನ್ನಲಿಕ್ಕೆ ಇವನ ಹೆಸರೇ ನಾನೇ ಅದನೋ ಅಂತ ಉಪೇಂದ್ರನ ಮೂವಿ ಕ್ಯಾರಕ್ಟರ್ 'ನಾನು' ನೆನಪಾದ. ಆದರೆ 'ನಾನೇ' ಅನ್ನೋದರ ಹಿಂದಿನ ಧ್ವನಿಯಲ್ಲಿ ಇದ್ದ ತುಂಟತನ ಯಾಕೋ ಪರಿಚಯ ಇದ್ದಂಗ ಅನ್ನಿಸ್ತು. Ms. ಗಿಳಿಯೂರ ಸಹ ಹೇಳಿ ಕೇಳಿ ಧಾಡಿಸಿ ಗಟ್ಟಿಗಿತ್ತಿ. ಯಾರ ಇವಾ ಮಂಗ್ಯಾ ಅಂತ ನೋಡೇ ಬಿಡೋಣ ಅಂತ ಬಾಗಲಾ ತೆಗೆದರು.

ದೆವ್ವದ ಹಾಂಗ ನಿಂತಿದ್ದ!!!

ಆ ಹೊತ್ತಿನ್ಯಾಗ ಅವನ್ನ ನೋಡಿ ಗಿಳಿಯೂರ ಮೇಡಂ ಫುಲ್ ದಂಗು ಹೊಡೆದರು.

ಬಾ ಹೋಗೋಣ! ಈಗೇ ಬಾ!! ನಡಿ ನನ್ನ ಜೋಡಿ - ಅಂದಾ ಆವ. ಹೇಳೋದು ನೋಡಿದರ ನಿನ್ನ ಮ್ಯಾಲೆ ನನಗ ಫುಲ್ ಹಕ್ಕು ಅದ, ದೂಸರಾ ಮಾತಾಡದ ಬಾ ಅನ್ನೋ ಹಾಂಗ ಇತ್ತು.

ಹಾಂ?!!!! ಎಲ್ಲಿಗೆ? ಅದೂ ಈ ಹೊತ್ತಿನ್ಯಾಗ. ನಮ್ಮ ಮನಿಯವರು ಇವತ್ತ ಮಾತ್ರ ತೀರಿ ಕೊಂಡಾರ. ನೀನೂ ಬಂದಿದ್ದಿ ಅವರ ಸ್ಮಶಾನ ಯಾತ್ರಾಕ್ಕ. ದೂರಿಂದ ನೋಡಿದೆ ನಾನು. ನನ್ನ ಜೀವಾ ತಿನ್ನಲಿಕ್ಕೆ ಇವಾ ಯಾಕ ಬಂದಾನ ಅಂತ ಅಂದುಕೊಂಡೆ. ನೀನು ಅವರ ಗೆಳಯಾ ಅಥವಾ ಪೇಷಂಟ್ ಏನೂ ಇರಲಿಲ್ಲ. ಯಾಕ ಬಂದಿದ್ದಿ? ಈಗ ಯಾಕ ಬಂದೀ? ಪ್ಲೀಸ್ ಜೀವಾ ತಿನ್ನಬ್ಯಾಡ. ಹೋಗು! - ಅಂತ ಕೇಳಿಕೊಂಡರು ಗಿಳಿಯೂರ್ ಮೇಡಂ.

ಇಲ್ಲ ನೀ ಬೇಕ ಬೇಕ. ಇವತ್ತು ಅಲ್ಲದಿದ್ದರ ಇನ್ನೊಂದು ದಿನ. ಇನ್ನೊಂದು ವರ್ಷ. ಐವತ್ತು ವರ್ಷ ಕಾದೇನಿ. ಸಿಕ್ಕೇ ಸಿಗ್ತೀ. ಗ್ಯಾರಂಟಿ! ಬೇಕಾದ್ರ ಬರದು ಇಟ್ಟುಗೋ!! - ಅಂತ ಹೇಳಿ ಆ ದೆವ್ವದ ಟೈಪ್ ಆದ್ಮಿ ಉದ್ದ ಉದ್ದ ಕಾಲು ಹಾಕಿಕೋತ್ತ ಹೋಗಿ ಬಿಟ್ಟ. ಹೋಗೋವಾಗ ಗೇಟ ಬಾಗ್ಲಾ ಹಾಕೋದರ ಬದಲೀ ಹೀರೋ ಗತೆ ಒದ್ದ. ಪರ್ಫೆಕ್ಟ್ ಆಗಿ ಒದ್ದ. ಒಂದ ಇಂಚ್ ಹಿಂದ ಮುಂದ ಆಗದ ಗೇಟ್ ಬಾಗಿಲ ಬಂದ್ ಆತು.

Ms. ಗಿಳಿಯೂರ ಮಾತ್ರ ದೆವ್ವ ಬಡಕೊಂಡವರಂಗ ಬಾಗಲದಾಗ ನಿಂತೇ ಇದ್ದರು.

ಗಿಳಿಯೂರ ಮೇಡಂ ಸುಮಾರು ಐವತ್ತು ವರ್ಷದ ಹಿಂದಿನ ಫ್ಲಾಶ್ ಬ್ಯಾಕ್ ಹೋದರು.

ಮುಂದೇನಾತು?!!!!!

ಮುಂದೇನಾತು ಅಂತ ತಿಳಕೊಳ್ಳಲಿಕ್ಕೆ ಕೂಲಂಬಿಯಾ ದೇಶದ ನೋಬೆಲ್ ಪ್ರಶಸ್ತಿ ವಿಜೇತ ಲೇಖಕ ಗ್ಯಾಬ್ರಿಯೆಲ್ ಗಾರ್ಸಿಯಾ ಮಾರ್ಕ್ವೇಜ್  ಬರದಂತಹ ಸ್ಪಾನಿಶ್ ಭಾಷೆಯಲ್ಲಿ ಇರುವ 'El amor en los tiempos del cólera' ಕಾದಂಬರಿ ಓದಬೇಕು. ಅದು ಇಂಗ್ಲಿಷ್ ಒಳಗ 'Love in the time of cholera' ಅಂತ ಅನುವಾದ ಆಗಿದೆ. ಕನ್ನಡದ ಬರಹಗಾರ ರವಿ ಬೆಳೆಗೆರೆ ಅದನ್ನ 'ಮಾಂಡೋವಿ' ಅಂತ ೧೯೯೬ ಒಳಗ ಕನ್ನಡಕ್ಕೂ ತಂದಿದ್ದಾರೆ. ಅದು ಅನುವಾದ ಅಲ್ಲ. ಅದು ಒಂದು ಟೈಪ್ ರೂಪಾಂತರ ಅಂತ ಅನ್ನಬಹುದು. ಯಾಕಂದ್ರ ಮೂಲ ಕಥೆ ನಡೆಯೋದು ಎಲ್ಲೋ ಕ್ಯಾರಿಬ್ಬಿಯನ್ ಸಮುದ್ರದ ತಟದ ಯಾವದೋ ದೇಶದಲ್ಲಿ. 'ಮಾಂಡೋವಿ' ಅನ್ನೋ ರೂಪಾಂತರದಲ್ಲಿ ರವಿ ಬೆಳೆಗೆರೆ ಬಳ್ಳಾರಿ ಸುತ್ತ ಮುತ್ತ ನಡಿಯೋ ಕಥೆ ಹಾಂಗ ಬರದಾರ. ಎರಡೂ ಉತ್ತಮ ಪುಸ್ತಕಗಳು.

ಗಿಳಿ ಹಿಡಿಯಲು ಹೋಗಿ ಡಾಕ್ಟರ ಸಾಯುವ ಘಟನೆಯಿಂದ ಕಾದಂಬರಿ ಒಂದು ತರಹದ ಟ್ವಿಸ್ಟ್ ತೆಗೆದುಕೊಳ್ಳುತ್ತದೆ. ಹಾಂಗಾಗಿ ಆ ಮುಖ್ಯ ಘಟನೆಯನ್ನು ನಮ್ಮ ಧಾರವಾಡ ಭಾಷಾ ಒಳಗ ತರಲಿಕ್ಕೆ ಸ್ವಲ್ಪ ನಮ್ಮ ಸ್ವಂತದ ಮಸಾಲಿ ಹಾಕಿ ಬರೆದಿದ್ದು ಇದು.

** 'Love in the time of cholera' PDF version is here.