Sunday, May 17, 2015

ಮನಃಶಾಸ್ತ್ರಜ್ಞೆಯ ಮನದಾಳದಲ್ಲಿ......(A psychological thriller)

ಸಾರಾಂಶ: ಅಮೇರಿಕಾದಲ್ಲಿ ಉನ್ನತ ವ್ಯಾಸಂಗ ಮಾಡಿ, ಮನಃಶಾಸ್ತ್ರದಲ್ಲಿ ಪ್ರಾವಿಣ್ಯತೆ, ದೊಡ್ಡ ಮಟ್ಟದ ಮನ್ನಣೆ ಎಲ್ಲ ಪಡೆದುಕೊಂಡ ಡಾ. ಮಾನಸಿ ಕುಲಕರ್ಣಿ ಧಾರವಾಡಕ್ಕೆ ಮರಳುತ್ತಾಳೆ. ಅಂದಿನಿಂದ ಆಕೆಯ ಜೀವನದಲ್ಲಿ ಅತಿ ವಿಚಿತ್ರವೆನ್ನಿಸುವಂತಹ ಘಟನೆಗಳು ಸಂಭವಿಸಲು ಶುರುವಾಗುತ್ತವೆ. ಎರಡು ಕೊಲೆಗಳೂ ನಡೆದುಹೋಗುತ್ತವೆ. ಅವಿವಾಹಿತೆ ಮಾನಸಿಯ ಜೀವನದಲ್ಲಿ ಆಗ ಆಚಾನಕ್ ಆಗಿ ಪ್ರವೇಶಿಸುತ್ತಾನೆ ಪ್ಲೇಬಾಯ್ ಕೋಮಲ್. ಅವರಿಬ್ಬರ ನಡುವೆ ಒಂದು ತರಹದ ಸಂಬಂಧ ಏರ್ಪಟ್ಟು ಕೋಮಲ್ ಆ ವಿಚಿತ್ರ ಘಟನೆಗಳ ಬಗ್ಗೆ ತನ್ನದೇ ರೀತಿಯಲ್ಲಿ ತನಿಖೆ ಶುರುಮಾಡುತ್ತಾನೆ. ಕೋಮಲನಿಗೆ ರಹಸ್ಯ ತಿಳಿದಾಗ ಕಥೆ ವಿಚಿತ್ರ ತಿರುವು ಪಡೆದುಕೊಳ್ಳುತ್ತದೆ. ಧಾರವಾಡದ ಪರಿಸರದಲ್ಲಿ ಅನಾವರಣಗೊಳ್ಳುವ ಸೈಕಲಾಜಿಕಲ್ ಥ್ರಿಲ್ಲರ್ ಮಾದರಿಯ ಒಂದು ಮಿನಿ ಕಾದಂಬರಿ.

(PDF version ಬೇಕಾದರೆ ಇಲ್ಲಿಂದ download ಮಾಡಿಕೊಳ್ಳಿ.)

ಭಾಗ - ೧

ಡಾ. ಮಾನಸಿ ಕುಲಕರ್ಣಿ ಧಾರವಾಡದ ಜೈಲಿನಿಂದ ಹೊರಬಿದ್ದಳು. ಕೊಲೆ ಆರೋಪಿಯೊಬ್ಬನ ಮಾನಸಿಕ ಸ್ಥಿತಿಗತಿಗಳನ್ನು ಅಭ್ಯಸಿಸಿ ಸರ್ಕಾರಿ ವಕೀಲರಿಗೆ ವರದಿ ಕೊಡಬೇಕಾಗಿತ್ತು. ಕೊಲೆ ಆರೋಪಿಯನ್ನು ಭೆಟ್ಟಿ ಮಾಡಿ, ಅವನನ್ನು ಹಲವಾರು ತರಹದ ಪರೀಕ್ಷೆಗಳಿಗೆ ಒಳಪಡಿಸಿ, ಕೆಲವು ಪ್ರಶ್ನಾವಳಿಗಳನ್ನು ಅವನ ಉತ್ತರಗಳಿಂದ ತುಂಬಿಸಿಕೊಂಡು, ವಿವರವಾದ ನೋಟ್ಸ್ ಮಾಡಿಕೊಂಡು ಹೊರಬಂದಳು. ಇದಕ್ಕೆ ಅನುವು ಮಾಡಿಕೊಟ್ಟಿದ್ದ ಜೈಲ್ ಅಧಿಕಾರಿಗಳಿಗೆ ವಂದನೆ ಅರ್ಪಿಸಿ ಹೊರಟಳು. ಆಕೆ ಕೆಲಸ ಮಾಡುತ್ತಿದ್ದ ಧಾರವಾಡದ ಮಾನಸಿಕ ಚಿಕಿತ್ಸಾಲಯ ಜೈಲಿಗೆ ಹತ್ತಿರವೇ ಇದೆ. ಅಲ್ಲಿಂದ ಹೊರಟಾಕೆ ಹತ್ತು ನಿಮಿಷದಲ್ಲಿ ಡ್ರೈವ್ ಮಾಡಿಕೊಂಡು ಬಂದು ತನ್ನ ಕಚೇರಿ ತಲುಪಿದಳು.

ಕಚೇರಿ ತಲುಪಿದವಳೇ, ಒಂದು ಡಿಜಿಟಲ್ ವಾಯ್ಸ್ ರೆಕಾರ್ಡರ್ ತೆಗೆದು, ಆ ಕೊಲೆ ಆರೋಪಿಯ ಮನಸ್ಥಿತಿಯ ಬಗ್ಗೆ ವಿವರವಾದ ವರದಿಯನ್ನು ರೆಕಾರ್ಡ್ ಮಾಡಿದಳು. ರೆಕಾರ್ಡ್ ಮಾಡಿದ ವರದಿಯನ್ನು ಕಂಪ್ಯೂಟರ್ ಮೂಲಕ ಸರ್ಕಾರಿ ವಕೀಲರಿಗೆ ಕಳಿಸಿದಳು. ಅವರ ಸಹಾಯಕರು ಅದನ್ನು ಕಾನೂನು ಪ್ರಕ್ರಿಯೆ ಹೇಗೆ ಬೇಕೋ ಹಾಗೆ ಬರೆದು, ದಾಖಲಾತಿ ಸಿದ್ಧಪಡಿಸಿಕೊಳ್ಳುತಾರೆ. ಇಲ್ಲಿಗೆ ಡಾ. ಮಾನಸಿ ಕುಲಕರ್ಣಿಯ ಕೆಲಸ ಮುಗಿಯಿತು. ಮುಂದೆ ಎಂದಾದರೂ ನ್ಯಾಯಾಲಯಕ್ಕೆ ಸಾಕ್ಷಿ ನುಡಿಯಲೋ ಅಥವಾ ಮತ್ಯಾವದಕ್ಕೋ ಕರೆದರೆ ಹೋಗಬೇಕಾದೀತು. ಧಾರವಾಡದ ಮಾನಸಿಕ ಚಿಕಿತ್ಸಾಲಯದಲ್ಲಿ 'ವ್ಯಕ್ತಿತ್ವ ದೋಷಗಳು' (personality disorders) ಎಂಬ ವಿಭಾಗದ ಮುಖ್ಯಸ್ಥೆ ಡಾ. ಮಾನಸಿ. ಆ ವಿಷಯದಲ್ಲಿ ಆಕೆಗೆ ಸಾಕಷ್ಟು ಪರಿಣಿತಿ, ಅಂತರಾಷ್ಟ್ರೀಯ ಮನ್ನಣೆ ಎಲ್ಲ ಇದೆ. ಕರ್ನಾಟಕ ವಿಶ್ವವಿದ್ಯಾಲಯದ ಮನಃಶಾಸ್ತ್ರ ವಿಭಾಗದಲ್ಲಿ ಅತಿಥಿ ಪ್ರಾಧ್ಯಾಪಕಿ ಕೂಡ.

ಕೆಲಸ ಮುಗಿಸಿದ ಮಾನಸಿ ವೇಳೆ ನೋಡಿದಳು. ಸಂಜೆ ಆರರ ಹೊತ್ತು. ಮನೆಗೆ ಹೊರಡುವ ಸಮಯ. ತನ್ನ ಸಾಮಾನು, ಕೆಲವು ಪುಸ್ತಕ, ಮನೆಯಲ್ಲಿ ಅಭ್ಯಾಸ ಮಾಡಬೇಕಿರುವ ಫೈಲುಗಳು ಇತ್ಯಾದಿಗಳನ್ನು ಜೋಡಿಸಿಕೊಂಡಳು. ಕಂಪ್ಯೂಟರ್ ಆಫ್ ಮಾಡಿದಳು. ಹೊರಡುತ್ತ ಕಿಟಕಿ ಗಾಜಿನಲ್ಲಿ ತನ್ನ ಪ್ರತಿಬಿಂಬ ನೋಡಿಕೊಂಡು, ಮುಂಗುರುಳು ಸರಿಮಾಡಿಕೊಂಡು, ತನ್ನ ಪ್ರತಿಬಿಂಬಕ್ಕೆ ತಾನೇ, 'bye, bye, see you tomorrow,' ಅಂತ ಹೇಳಿ, ಒಂದು ದೊಡ್ಡ ಸ್ಮೈಲ್ ಕೊಟ್ಟು, ದೀಪ ಆರಿಸಿ, ಬಾಗಿಲು ಮುಚ್ಚಿಕೊಂಡು ಹೊರಟಳು. ಬೀಗ ತಂತಾನೇ ಬಿತ್ತು. ಎಳೆದು ಖಾತ್ರಿ ಮಾಡಿಕೊಂಡಳು.

ಕಚೇರಿಯಿಂದ ಹೊರಬಿದ್ದು, ಕಾರ್ ಪಾರ್ಕಿಗೆ ಬಂದು, ಮತ್ತೆ ತನ್ನ ಮಾರುತಿ ಕಾರ್ ಹೊರತೆಗೆದಳು. ಸಣ್ಣದಾಗಿ ಮಳೆ ಶುರುವಾಯಿತು. ಮಳೆಯಲ್ಲಿ ಡ್ರೈವ್ ಮಾಡುವದು ಅಂದರೆ ಮಾನಸಿಗೆ ತುಂಬ ಖುಶಿ. ಮೆಲುದನಿಯ ಸಂಗೀತ ಕೇಳುತ್ತ ನಿಧಾನಕ್ಕೆ ಮನೆ ಕಡೆ ಕಾರ್ ತಿರುಗಿಸಿದಳು. ಧಾರವಾಡದ ರೈಲ್ವೆ ಸ್ಟೇಷನ್ ಹತ್ತಿರದ ಗೋಪಾಲಪುರ ಬಡಾವಣೆಯಲ್ಲಿ ಆಕೆಯ ಮನೆ. ಸುಮಾರು ಆರೇಳು ಕಿಲೋಮೀಟರ ದೂರ. ಅರ್ಧ ಗಂಟೆ ಬೇಕು. ಅದೂ ಮಳೆ ಬೇರೆ ಇತ್ತು. ಸ್ವಲ್ಪ ಜಾಸ್ತಿ ಸಮಯ ಬೇಕಾಯಿತು.

ಡ್ರೈವ್ ಮಾಡಿಕೊಂಡು ಬಂದು ಮನೆ ಮುಟ್ಟಿದಳು. ಹಳೆ ಕಾಲದ ಬಂಗಲೆ ದೊಡ್ಡ ಕಾಂಪೌಂಡಿನಲ್ಲಿ ನಿಂತಿತ್ತು. ಮಾವಿನ ತೋಪಿನ ಮಧ್ಯೆ ಇದ್ದ ದೊಡ್ಡ ಬಂಗಲೆ. ಹಳೆ ಕಾಲದ ಹಂಚಿನ ಬಂಗಲೆ. ಇವೆಲ್ಲ ಆ ಬಂಗಲೆಗೆ ಒಂದು ತರಹದ ಭೂತ ಬಂಗಲೆಯ ಲುಕ್ ತಂದು ಕೊಟ್ಟಿದ್ದವು. ಕಾರ್ ಒಳಬರುವ ಗೇಟ್ ತೆಗೆದೇ ಇತ್ತು. ಮಾನಸಿ ಬರುವ ಹೊತ್ತು ಅಂತ ಕೆಲಸದವಳು ತೆಗೆದಿಟ್ಟಿರುತ್ತಾಳೆ.

ಮಾನಸಿ ಕಾರನ್ನು ಬಂಗಲೆಯ ಮುಂಬಾಗಿಲಿನ ಮುಂದೆ ಇದ್ದಂತಹ ಪೋರ್ಟಿಕೋದಲ್ಲಿ ನಿಲ್ಲಿಸಿದಳು. ಕಾರಿಂದ ಇಳಿಯುತ್ತಿದ್ದಂತೆಯೇ ಆಕೆಯ ಎರಡು ನಾಯಿಗಳು ಬಂದು ಸ್ವಾಗತಿಸಿದವು. ಪ್ರೀತಿಯಿಂದ ಮೈಮೇಲೆ ಹಾರಲು ಬಂದವನ್ನು ತಡೆದಳು ಮಾನಸಿ. ಮನೆಯ ಕೆಲಸದಾಕೆ ಪದ್ಮಾವತಿ ಬಾಯಿ ಬಂದು ಬಾಗಿಲು ತೆಗೆದಳು. ಆಕೆ ವಿಧವೆ. ಮಡಿ ಹೆಂಗಸು. ವಯಸ್ಸು ಸುಮಾರು ಐವತ್ತಿರಬೇಕು. ಎಷ್ಟೋ ವರ್ಷದಿಂದ ಮಾನಸಿ ಮನೆಯಲ್ಲೇ ಕೆಲಸ ಮಾಡಿಕೊಂಡಿದ್ದಾಳೆ. ಎಂದಿನಂತೆ ಮಾನಸಿಗೆ ಸಂಜೆಯ ಚಹಾ ತರಲು ಒಳಗೆ ಹೋದಳು ಪದ್ಮಾವತಿ.

ಹೊರಗೆ ಮಳೆ ಜೋರಾಯಿತು. ಕಿಟಕಿ ಬಾಗಿಲೊಂದು ಧಡ್ ಅಂತ ಬಡಿದುಕೊಂಡಿತು. ಅದನ್ನು ಮುಚ್ಚಲು ಅಂತ ಎದ್ದಳು ಮಾನಸಿ. ಮನೆ ಹಿಂದೆ ಸ್ವಲ್ಪ ದೂರದಲ್ಲಿದ್ದ ಚಿಕ್ಕ ಔಟ್ ಹೌಸಿನ ಕಿಟಕಿಯಲ್ಲಿ ಕಂಡವನು ಆಕೆಯ ಚಿಕ್ಕಪ್ಪ ಕಿಟ್ಟಿ ಕಾಕಾ. ಅವನೊಬ್ಬ ದೊಡ್ಡ ವಿಕ್ಷಿಪ್ತ ಮನುಷ್ಯ. ವಯಸ್ಸು ಸುಮಾರು ಎಪ್ಪತ್ತು ವರ್ಷದ ಹತ್ತಿರ. ಆತ ನಿವೃತ್ತ ಇಂಗ್ಲೀಷ್ ಪ್ರೊಫೆಸರ್. ಇಡೀ ದಿವಸ ಇನ್ನೂ ಶೇಕ್ಸಪಿಯರನ ನಾಟಕದ ಗುಂಗಿನಲ್ಲೇ ಇರುತ್ತಾನೆ. ಬ್ರಹ್ಮಚಾರಿ. ಮಳೆ ಬರುತ್ತಿದೆ ಅಂತ ಅವನೂ ಆತನ ಕುಟೀರದ ಕಿಟಕಿ ಮುಚ್ಚಲು ಎದ್ದಿದ್ದ. ತೆರೆದಿದ್ದ ಕಿಟಕಿಯಲ್ಲಿ ಇಣುಕಿದ್ದ. ದೂರದಲ್ಲಿ ಕಂಡ ಮಾನಸಿಯನ್ನು ನೋಡಿ ಒಂದು ತರಹವಾಗಿ ನಕ್ಕು, ಕೈ ಬೀಸಿದ. 'ನಮ್ಮ ಕಿಟ್ಟಿ ಕಾಕಾ,' ಅಂದುಕೊಂಡ ಮಾನಸಿ ಸಹಿತ ಕೈಬೀಸಿ ಕಿಟಕಿ ಮುಚ್ಚಿ ಬಂದು ಕೂತಳು. ಪದ್ಮಾವತಿ ಬಾಯಿ ಚಹಾ, ಬಿಸ್ಕೀಟ್ ತಂದಳು.

ನಾಯಿಗಳಿಗೆ ಒಂದೊಂದು ಬಿಸ್ಕೀಟ್ ಹಾಕಿ, ತಾನು ಚಹಾದ ಕಪ್ಪೆತ್ತಿಕೊಂಡು, ಪೇಪರ್ ಮೇಲೆ ಕಣ್ಣಾಡಿಸುತ್ತ ಚಹಾ ಹೀರಿದಳು ಮಾನಸಿ. ಅಷ್ಟರಲ್ಲಿ ಪದ್ಮಾವತಿ ಬಾಯಿ ಮತ್ತೆ ಬಂದು ಮುಂದೆ ನಿಂತಳು. 'ಏನು?' ಅನ್ನುವಂತೆ ನೋಡಿದಳು ಮಾನಸಿ. ಪದ್ಮಾವತಿ ಬಾಯಿ ಏನೋ ಒಂದು ವಸ್ತು ತೋರಿಸಿದಳು. 'ಸರಿ, ಟೇಬಲ್ ಮೇಲೆ ಇಡು. ನಂತರ ನೋಡುತ್ತೇನೆ,' ಅಂತ ಹೇಳಿದ ಮಾನಸಿ ಚಹಾ ಕುಡಿಯುತ್ತ ಪೇಪರ್ ಓದುವದರಲ್ಲಿ ಮಗ್ನಳಾದಳು.

ಚಹಾ ಮುಗಿಯಿತು. ಪೇಪರ್ ಮುಗಿದಿತ್ತೋ ಇಲ್ಲವೋ ಗೊತ್ತಿಲ್ಲ. ಅಷ್ಟರಲ್ಲಿ ಮಾನಸಿ ಸಾಕಿದ್ದ ಎರಡು ಬೆಕ್ಕುಗಳಲ್ಲಿ ಒಂದು ಬಂದು ಆಕೆಯ ಕಾಲಿಗೆ ಮೈ ತಿಕ್ಕತೊಡಗಿತು. ಯಾಕೋ ಒಂದು ತರಹದ ಆಶ್ಚರ್ಯವಾಯಿತು ಮಾನಸಿಗೆ. ಯಾಕೆಂದರೆ ಸಾಕಿದ ಎರಡೂ ಬೆಕ್ಕು ಬಂದು ಆ ರೀತಿ ಮಾಡುವದು ರೂಢಿ. ಆದರೆ ಆವತ್ತು ಒಂದೇ ಬೆಕ್ಕು ಬಂತು. ಆವಾಗ ನೆನಪಾಯಿತು ಮಾನಸಿಗೆ, 'ಮತ್ತೊಂದು ಬೆಕ್ಕನ್ನು ಎರಡು, ಮೂರು ದಿವಸಗಳಿಂದ ನೋಡೇ ಇಲ್ಲ,' ಅಂತ. 'ಎಲ್ಲಿ ಹೋಯಿತೋ ಏನೋ?' ಅಂದುಕೊಂಡಳು ಮಾನಸಿ. ಅಷ್ಟರಲ್ಲಿ ಪದ್ಮಾವತಿ ಬಾಯಿ ಟೇಬಲ್ ಮೇಲಿಟ್ಟು ಹೋಗಿದ್ದ ವಸ್ತು ಕಣ್ಣಿಗೆ ಬಿತ್ತು. 'ಏನದು?' ಅಂತ ನೋಡೋಣ ಅಂತ ಎದ್ದಳು. ಬೆಕ್ಕು ಹಿಂಬಾಲಿಸಿತು. ಸ್ವಲ್ಪ ದೂರದಲ್ಲಿ ಕುಳಿತಿದ್ದ ಎರಡೂ ನಾಯಿಗಳು ಮುಖವೆತ್ತಿ ನೋಡಿದವು. ಮತ್ತೂ ಎರಡು ಬಿಸ್ಕೀಟ್ ಉಳಿದಿದ್ದು ನೆನಪಾಯಿತು ಮಾನಸಿಗೆ. ಅವನ್ನು ನಾಯಿಗಳಿಗೆ ಎಸೆದೆಳು. ಮೇಜಿನತ್ತ ಬಂದಳು.

ಮೇಜಿನ ಮೇಲೆ ಕೆಲಸದ ಪದ್ಮಾವತಿ ಬಾಯಿ ಇಟ್ಟು ಹೋಗಿದ್ದು ಒಂದು ರಟ್ಟಿನ ಪೆಟ್ಟಿಗೆ. ಬೂಟಿನ ಬಾಕ್ಸಿಗಿಂತ ಸುಮಾರು ಎರಡು ಪಟ್ಟು ದೊಡ್ಡದಿತ್ತು. ಬ್ರೌನ್ ಪೇಪರ್ ಸುತ್ತಿ ಒಳ್ಳೆ ಪ್ಯಾಕೇಜಿಂಗ್ ಮಾಡಲಾಗಿತ್ತು. ಏನೋ ಸಾಮಾನು ಕುರಿಯರ್ ಮೂಲಕ ಬಂದಿರಬೇಕು ಅಂತ ಅಂದುಕೊಂಡಳು. ಪುಸ್ತಕಗಳೇ ಇರಬೇಕು. ಆಗಾಗ ಪುಸ್ತಕಗಳನ್ನು ತರಿಸುತ್ತಿರುತ್ತಾಳೆ ಮಾನಸಿ. ಅವೇ ಇರಬೇಕು ಅಂತ ಅಂದುಕೊಂಡಳು.

ಪಾರ್ಸೆಲ್ ಎತ್ತಿ ನೋಡಿದಳು. ಸುಮಾರು ಒಜ್ಜೆಯಾಗಿತ್ತು. ಎಲ್ಲಿಂದ ಬಂದಿದೆ, ಯಾರು ಕಳಿಸಿದ್ದಾರೆ ಅಂತ ಏನೂ ಮಾಹಿತಿ ಇರಲಿಲ್ಲ. ಮತ್ತೆ ಕುರಿಯರ್ ನಲ್ಲಿ ಬರದೇ ಸಾದಾ ಅಂಚೆಯಲ್ಲಿ ಬಂದಿತ್ತು. ಮೇಲೆ ಸುಮಾರು ಅಂಚೆಚೀಟಿ ಹಚ್ಚಿತ್ತು. ಎಲ್ಲಿಂದ ಬಂದಿರಬಹುದು, ಯಾವಾಗ ಅಂಚೆಗೆ ಹಾಕಲ್ಪಟ್ಟಿರಬಹುದು ಅಂತ ನೋಡೋಣ ಅಂತ ಪೋಸ್ಟ್ ಮೊಹರು ಹುಡುಕಿದರೆ ಅದು ತೀರ ಮಸುಕು ಮಸುಕಾಗಿ ಮೂಡಿತ್ತು. 'ಈ ಪೋಸ್ಟ್ ಆಫೀಸಿನವರು ಮೊಹರು ಹೊಡೆಯುವದು ಯಾವ ಚಂದಕ್ಕೋ? ಏನೂ ಮಾಹಿತಿ ಗೊತ್ತಾಗುವದಿಲ್ಲ,' ಅಂದುಕೊಂಡಳು. 'ಇರಲಿ, ನೋಡೋಣ,' ಅಂದುಕೊಂಡು ಪಾರ್ಸಲ್ ಬಿಚ್ಚಲು ಶುರುಮಾಡಿದಳು.

ಎರಡು ಸುತ್ತಿನ ಬ್ರೌನ್ ಪೇಪರ್ ಹೊದಿಕೆ ಇತ್ತು. ಅವನ್ನು ತೆಗೆದಾಗ ಒಂದು ರಟ್ಟಿನ ಡಬ್ಬಿ ಕಂಡು ಬಂತು. ಅದನ್ನು ದಾರ ಕಟ್ಟಿ, ಟೇಪ್ ಅಂಟಿಸಿ ಮುಚ್ಚಲಾಗಿತ್ತು. ಕತ್ತರಿ ತಂದುಕೊಂಡು ದಾರ ಕತ್ತರಿಸಿದಳು. ಟೇಪ್ ಕಿತ್ತು ಹಾಕಿದಳು. ಆ ರಟ್ಟಿನ ಡಬ್ಬಿಯ ಮುಚ್ಚಳ ತೆಗೆಯೋಣ ಅನ್ನುವಷ್ಟರಲ್ಲಿ ಮೂಗಿಗೆ ರಪ್ ಅಂತ ಏನೋ ವಾಸನೆ ತುಂಬಾ ಸ್ಟ್ರಾಂಗಾಗಿ ಹೊಡೆಯಿತು. ಆಕೆಗೆ ತುಂಬ ಪರಿಚಿತವಾದ ವಾಸನೆ. ಮಾನಸಿಕ ಚಿಕಿತ್ಸಾಲಯವಾದರೇನು? ಅಲ್ಲೂ ಪ್ರಯೋಗಾಲಯಗಳಿರುತ್ತವೆ ಅಲ್ಲವೇ? ಫಾರ್ಮಾಲಿನ್ ದ್ರಾವಣ ಬಹಳ ಉಪಯೋಗಿಸುತ್ತಾರೆ. ಮಾನಸಿಗೆ ಅದಕ್ಕೇ ತಕ್ಷಣ ನೆನಪಾಯಿತು ಅದು ಫಾರ್ಮಾಲಿನ್ ವಾಸನೆ ಅಂತ. ಜೊತೆಗೆ ತುಂಬ ಆಶ್ಚರ್ಯವೂ ಆಯಿತು.

ರಟ್ಟಿನ ಡಬ್ಬಿಯ ಮುಚ್ಚಳ ತೆಗೆದಳು ಮಾನಸಿ. ಒಳಗೆ ಇನ್ನೊಂದು ಡಬ್ಬಿ ಇತ್ತು. ಅದನ್ನೂ ಸಹ ಬ್ರೌನ್ ಪೇಪರಿನಿಂದ ಸುತ್ತಲಾಗಿತ್ತು. ಪಕ್ಕದಲ್ಲಿ ಒಂದು ಗಿಂಡಿ ಆಕಾರದ ಬಾಟಲಿಯಂತಹದ್ದು ಸಹ ಇತ್ತು. ಅದನ್ನೂ ಬ್ರೌನ್ ಪೇಪರಿನಲ್ಲಿ ಸುತ್ತಿಡಲಾಗಿತ್ತು. 'ಅರೇ! ಇದೇನೋ ವಿಶೇಷವಾಗಿದೆಯಲ್ಲ? ಪುಸ್ತಕಗಳು ಬಂದಿರಬಹುದು ಅಂದುಕೊಂಡರೆ ಏನೋ ಬೇರೆನೇ ಬಂದಿದೆ,' ಅಂತ ಆಶ್ಚರ್ಯಪಡುತ್ತ, ಒಳಗಿದ್ದ ಡಬ್ಬಿಗೆ ಸುತ್ತಿದ್ದ ದಾರ, ಬ್ರೌನ್ ಪೇಪರ್ ಬಿಚ್ಚತೊಡಗಿದಳು. ಫಾರ್ಮಾಲಿನ್ ವಾಸನೆ ಮತ್ತೂ ಜೋರಾಗಿ ಮೂಗಿಗೆ ರಾಚಿತು. ಕಾಲಿಗೆ ಅಡರಿಕೊಂಡಿದ್ದ ಬೆಕ್ಕು ವಿಕಾರವಾಗಿ ಮ್ಯಾಂವ್ ಅಂದಿತು. ಅನತಿ ದೂರದಲ್ಲಿ ಮಲಗಿದ್ದ ನಾಯಿಗಳು ತಲೆಯತ್ತಿ, ಮೂಗು ಮುಂದೆ ಚಾಚಿ, ಬಂದ ಹೊಸ ವಾಸನೆಯನ್ನು ಘ್ರಾಣಿಸಿದವು.

ಚಿಕ್ಕ ಪೆಟ್ಟಿಗೆಗೆ ಸುತ್ತಿದ್ದ ಬ್ರೌನ್ ಪೇಪರ್ ಕವರ್ ತೆಗೆದೆರೆ ಒಳಗಿದ್ದಿದ್ದು ಒಂದು ಗಾಜಿನ ಪೆಟ್ಟಿಗೆ. ಅದರೊಳಗೆ ಏನೋ ಒಂದು ವಸ್ತುವನ್ನು ಒಂದು ಪೀಠದ ಮೇಲೆ ಕೂಡಿಸಿದಂತೆ ಇತ್ತು. ಮಬ್ಬುಗತ್ತಲಿನಲ್ಲಿ ಸರಿಯಾಗಿ ಕಾಣಲಿಲ್ಲ. ಸಂಜೆ ಏಳು ಘಂಟೆ ಹೊತ್ತು. ಸರಿಯಾಗಿ ಕಾಣಲಿ ಅಂತ ದೊಡ್ಡ ದೀಪ ಹಾಕಿದಳು ಮಾನಸಿ. ಪ್ರಖರವಾದ ದೀಪದಲ್ಲಿ ಕಂಡ ದೃಶ್ಯ ಭೀಕರವಾಗಿತ್ತು.



ಮಾನಸಿ ಸಾಕಿದ್ದ ಬೆಕ್ಕು ಗಾಜಿನ ಪೆಟ್ಟಿಗೆಯಲ್ಲಿ ಕೂತಿತ್ತು! ಜೀವ ಇರಲಿಲ್ಲ ಅಷ್ಟೇ!

ಬೇಟೆಯಾಡಿದ ಪ್ರಾಣಿಗಳನ್ನು ಶಿಸ್ತು ಬದ್ಧವಾಗಿ ಸ್ವಚ್ಚ ಮಾಡಿ, ರಾಸಾಯಿನಿಕಗಳಿಂದ ಸಂಸ್ಕರಿಸಿ, ಒಳಗಿನ ಅಂಗಾಂಗಗಳನ್ನೆಲ್ಲ ತೆಗೆದು, ಏನೋ ತುಂಬಿ, ಕಣ್ಣುಗುಡ್ಡೆಗಳಿಗೆ ಗಾಜಿನ ಗೋಲಿ ಹಾಕಿ, ಮರದ ಪೀಠದ ಮೇಲಿಟ್ಟು ತಯಾರು ಮಾಡಿಕೊಡುತ್ತಾರೆ. ಅದಕ್ಕೆ taxidermy ಅನ್ನುತ್ತಾರೆ. ಅದನ್ನು ಬೇಟೆಗಾರರು ಹೆಮ್ಮೆಯಿಂದ ಮನೆಗೆ ತಂದು ಸ್ಥಾಪಿಸಿಕೊಳ್ಳುತ್ತಾರೆ. ಅವು ತುಂಬ ಜೀವಂತ ಪ್ರಾಣಿಗಳಂತೆಯೇ ಕಾಣುತ್ತವೆ. ಅಷ್ಟು ನೈಜವಾಗಿ ಕಾಣುವಂತೆ taxidermist ಎಂಬ ಕುಶಲಕರ್ಮಿಗಳು ಕೆಲಸ ಮಾಡುತ್ತಾರೆ.

ಯಾರೋ ಮಾನಸಿ ಸಾಕಿದ್ದ ಬೆಕ್ಕನ್ನು ಕದ್ದಿದ್ದರು. ಕೊಂದಿದ್ದರು. taxidermy ಮಾಡಿಬಿಟ್ಟಿದ್ದರು.

ಬೆಕ್ಕನ್ನು ಒಂದು ಚಿಕ್ಕ ಪೀಠದ ಮೇಲೆ ಸ್ಥಾಪಿಸಿ, ಅದನ್ನು ಒಂದು ಗಾಜಿನ ಪೆಟ್ಟಿಗೆಯಲ್ಲಿ ನೀಟಾಗಿ ಇಟ್ಟು, ಕಳಿಸಿಬಿಟ್ಟಿದ್ದರು. It was a professional taxidermist job. ಗಾಜಿನ ಪೆಟ್ಟಿಗೆಯೊಳಗಿಂದ ಮಾನಸಿಯ ಬೆಕ್ಕು ಕಣ್ಣು ಕೆಕ್ಕರಿಸಿ ನೋಡುತ್ತಿತ್ತು. ಬಾಲ ನಿಮಿರಿ ನಿಂತಿತ್ತು. ಅದು ಗಾಜಿನ ಪೆಟ್ಟಿಗೆಯಲ್ಲಿ ಇರಲಿಲ್ಲ ಅಂದರೆ ಅದು ಸತ್ತಿದೆ ಅಂತ ಹೇಳಲು ಸಾಧ್ಯವೇ ಇರಲಿಲ್ಲ. ಬೆಕ್ಕನ್ನು ಕೊಂದ ನಂತರ ಅಷ್ಟು ಚೆನ್ನಾಗಿ ಸಂಸ್ಕರಿಸಿ ಕಳಿಸಿಬಿಟ್ಟಿದ್ದರು.

ಭೀಕರತೆಯ ಅರಿವಾದ ಮಾನಸಿ ಕಿಟಾರನೇ ಕಿರುಚಿದಳು. ಸತ್ತ ಬೆಕ್ಕನ್ನು ಹೊಂದಿದ್ದ ಗಾಜಿನ ಪೆಟ್ಟಿಗೆ ಕೈಯಿಂದ ಕೆಳಗೆ ಬಿತ್ತು. ಬಿದ್ದು ಠಳ್ ಅಂತ ದೊಡ್ಡ ಶಬ್ದ ಮಾಡುತ್ತ ಒಡೆಯಿತು. ಕಾಲಿನಡಿಯಲ್ಲಿದ್ದ ಮತ್ತೊಂದು ಬೆಕ್ಕಿನ ಪಕ್ಕವೇ ಬಿತ್ತು. ಬೆಕ್ಕು ಘಾಬರಿಯಿಂದ ಆಕಡೆ ಹಾರಿತು. ನಾಯಿಗಳು ಏನಾಯಿತೋ ಏನೋ ಎಂಬಂತೆ ಒಂದು ಸಲ 'ಭವ್!' ಅಂತ ಕೂಗಿ ಅಚ್ಚರಿಯಿಂದ ಕುತ್ತಿಗೆಯೆತ್ತಿ ನೋಡುತ್ತ ಕುಳಿತವು. ಎದ್ದು ಬಂದು ಸೂಕ್ಷ್ಮವಾಗಿ ಪರೀಕ್ಷೆ ಮಾಡುತ್ತಿದ್ದವೋ ಏನೋ. 'Don't move, you doggies. Stay put there,' ಅಂತ ಮಾನಸಿ ಮಾಡಿದ ಆಜ್ಞೆ ಪಾಲಿಸಿದವು. ಜೀವದಿಂದಿದ್ದ ಮನೆಯ ಮತ್ತೊಂದು ಬೆಕ್ಕಿಗೆ ಮಾತ್ರ ತಿಳಿಯಿತೋ ಏನೋ ಗೊತ್ತಿಲ್ಲ. ಮತ್ತೊಮ್ಮೆ ವಿಕಾರವಾಗಿ ಮ್ಯಾಂವ್ ಅಂತ ಅರಚಿತು. ಮೊದಲೇ ಭೂತ ಬಂಗಲೆ ವಾತಾವರಣ. ಯಾರೋ ಸತ್ತ ಬೆಕ್ಕನ್ನು ಬೇರೆ ಸಂಸ್ಕರಿಸಿ ಕಳಿಸಿಬಿಟ್ಟಿದ್ದಾರೆ. ಮತ್ತೂ ಭಯಾನಕ ಅನ್ನಿಸುವಂತಹ ವಾತಾವರಣ ಸೃಷ್ಟಿಯಾಯಿತು.

ಕೆಳಗೆ ಬಿದ್ದಿದ್ದ ಸತ್ತ ಬೆಕ್ಕಿನ ಕಡೆ ನೋಡಿದಳು ಮಾನಸಿ. ಸ್ವಲ್ಪ ಆಚೀಚೆ ಸರಿದಳು. ನೆಲ ಸ್ವಲ್ಪ ಅದುರಿತು. ಸತ್ತ ಬೆಕ್ಕಿನ ಕಣ್ಣುಗಳ ಜಾಗದಲ್ಲಿ ಹಾಕಿದ್ದ ಗಾಜಿನ ಗೋಲಿಗಳು ಕಣ್ಣುಗಳಲ್ಲಿ ಗರಗರ ಅಂತ ತಿರುಗಿದವು. ಪ್ರಖರ ದೀಪದ ಪ್ರಕಾಶ ಅವುಗಳ ಮೇಲೆ ಬಿದ್ದು ವಿಚಿತ್ರವಾಗಿ ಪ್ರತಿಫಲಿಸಿ ವಿಕಾರವಾಗಿ ಕಂಡಿತು. ನೋಡಿದರೆ ಹೆದರಬೇಕು, ಹೌಹಾರಬೇಕು ಹಾಗೆ. ಮಾನಸಿ ಮತ್ತೂ ಗಾಭರಿಯಾದಳು. ಹೇಗೋ ಮಾಡಿ ಸಂಬಾಳಿಸಿಕೊಂಡಳು.

ಪಾರ್ಸೆಲ್ ನಲ್ಲಿ ಮತ್ತೊಂದು ಸಾಮಾನು ಇತ್ತಲ್ಲ. ಅದನ್ನೂ ತೆಗೆದು ನೋಡೋಣ ಅಂತ ಹೊರಟಳು. ಒಂದರಲ್ಲಿ ಸತ್ತ ಬೆಕ್ಕಿನ ಸಂಸ್ಕರಿತ ದೇಹವಿತ್ತು. ಇನ್ನೊಂದರಲ್ಲಿ ಏನಿದೆಯೋ ಏನೋ ಅಂತ ಅಂದುಕೊಳ್ಳುತ್ತ, ಸುತ್ತಿದ್ದ ಬ್ರೌನ್ ಪೇಪರ್ ಹರಿಯುತ್ತ ನಿಧಾನವಾಗಿ ತೆಗೆಯಲು ಆರಂಭಿಸಿದಳು. ಫಾರ್ಮಾಲಿನ್ ಘಾಟು ಮತ್ತೂ ಜೋರಾಗಿ ಬಂತು. ಒಂದು ಗಾಜಿನ ಭರಣಿ ಕಂಡು ಬಂತು. ಪ್ರಯೋಗಶಾಲೆಗಳಲ್ಲಿ ಪ್ರಾಣಿಗಳನ್ನು, ಅವುಗಳ ಭಾಗಗಳನ್ನು ಸಂಗ್ರಹಿಸಿ ಇಡುವ ತರಹದ ಗಾಜಿನ ಭರಣಿ. ಬಿಗಿಯಾಗಿ ಸೀಲ್ ಆಗಿತ್ತು. ಆದರೂ ಫಾರ್ಮಾಲಿನ್ ಘಾಟು ಅಷ್ಟು ಜೋರಾಗಿ ಬರುತ್ತಿತ್ತು. ಏನಂತ ನೋಡಲು ಗಾಜಿನ ಭರಣಿಯನ್ನು ಟೇಬಲ್ ಮೇಲೆ ಇಟ್ಟಳು ಮಾನಸಿ. ಎತ್ತಿ ನೋಡುವ ಧೈರ್ಯವಿರಲಿಲ್ಲ. ಮತ್ತೇನೋ ಬೀಭತ್ಸವಾಗಿ ಕಂಡು, ಕೈಯಿಂದ ಕಳಚಿಬಿದ್ದು, ಎಲ್ಲಿಯಾದರೂ ಮತ್ತೆ ಬಿದ್ದು ಒಡೆದೀತು ಅಂತ ಹೆದರಿಕೆ.

ಗಾಜಿನ ಭರಣಿಯನ್ನು ಟೇಬಲ್ ಮೇಲೆ ಆಕಡೆ ಇಟ್ಟು, ಟೇಬಲ್ ಲ್ಯಾಂಪ್ ಅದುಮಿದಳು. 'ಫಕ್!' ಅಂತ ಬೆಳಕಾಯಿತು. ಆ ಬೆಳಕಿನಲ್ಲಿ ಕಂಡ ದೃಶ್ಯ ಭೀಕರವಾಗಿತ್ತು. ಯಾವದೋ ಪ್ರಾಣಿಯ ಒಳ ಅಂಗಾಂಗಗಳನ್ನು ನೀಟಾಗಿ ತೆಗೆದು, ಫಾರ್ಮಾಲಿನ್ ದ್ರವದಲ್ಲಿ ಮುಳುಗಿಸಿ, ಗ್ಲಾಸಿನ ಭರಣಿಯನ್ನು ಸೀಲ್ ಮಾಡಿದ್ದರು. ದೊಡ್ಡ ಕರುಳು ಮುದ್ದೆ ಮುದ್ದೆಯಾಗಿ ಕೂತಿತ್ತು. ಮೆದುಳು, ಹೃದಯ ಇತ್ಯಾದಿ ತೇಲುತ್ತಿದ್ದವು. ಅಲ್ಲಲ್ಲಿ ರಕ್ತದ ಕಲೆಯೂ ಇತ್ತು. ಎರಡು ಕಣ್ಣು ಗುಡ್ಡೆಗಳು ಗಾಜಿನ ಭರಣಿಯ ಗೋಡೆಗೆ ಅಂಟಿಕೊಂಡಿದ್ದವು. ಅವನ್ನು ನೋಡಿದ ತಕ್ಷಣ ಮಾನಸಿಗೆ ತಿಳಿದೇ ಹೋಯಿತು. ಫಾರ್ಮಾಲಿನ್ ಒಳಗೆ ಇದ್ದಿದ್ದು ತನ್ನ ಬೆಕ್ಕಿನ ಅಂಗಾಂಗಗಳೇ ಅಂತ. ಆಕೆಯ ಪ್ರೀತಿಯ ಬೆಕ್ಕಿನ ಕಣ್ಣುಗಳು, 'ಇನ್ನು ನಾನಿಲ್ಲ. ನನ್ನ ಜನ್ಮ ಮುಗಿಯಿತು,' ಅಂತ ಸಾರಿ ಸಾರಿ ಹೇಳುತ್ತಿದ್ದವು. ಯಾರೋ ಆಕೆಯ ಬೆಕ್ಕನ್ನು ಅಪಹರಿಸಿಕೊಂಡು ಹೋಗಿ, ಕೊಂದು, ಒಳ್ಳೆ ಕಸಬುದಾರರ ಹಾಗೆ ಪರಿಷ್ಕರಿಸಿ, ರಾಸಾಯಿನಿಕಗಳನ್ನು ಉಪಯೋಗಿಸಿ, ಬರೋಬ್ಬರಿ taxidermist ಕುಸುರಿ ಮಾಡಿ, ಸತ್ತ ಬೆಕ್ಕು ಮತ್ತು ಅದರ ಅಂಗಾಂಗಗಳನ್ನು ಆಕೆಗೇ ಪಾರ್ಸೆಲ್ ಮಾಡಿಬಿಟ್ಟಿದ್ದರು. ಇಷ್ಟೆಲ್ಲ ಅರ್ಥವಾಗುವ ಹೊತ್ತಿಗೆ ಮಾನಸಿ ಥರ ಥರ ಕಂಪಿಸುತ್ತಿದ್ದಳು. ಮತ್ತೊಂದು ಭೀಕರ ಚೀತ್ಕಾರ ಆಕೆಗೆ ಗೊತ್ತಿಲ್ಲದಂತೆಯೇ ಆಕೆಯ ಗಂಟಲಿನಿಂದ ಹೊರಬಿತ್ತು.

ಅದನ್ನು ಕೇಳಿದ ಮನೆಕೆಲಸದ ಪದ್ಮಾವತಿಬಾಯಿ ಈ ಕಡೆ ಬಂದಳು. ಆಕೆಗೆ ದೂರದಿಂದ ಏನೂ ಸರಿಯಾಗಿ ಕಾಣಲಿಲ್ಲ. ಹತ್ತಿರ ಬಂದು ನೋಡಿದಾಕೆ ಮಾನಸಿಯನ್ನು ನೋಡಿ, 'ಏನು?' ಅನ್ನುವ ರೀತಿಯಲ್ಲಿ ನೋಡಿದಳು. ಮಾನಸಿ ಮುಖದ ಮೇಲೆ ಪ್ರೇತ ಕಳೆ. ಆಕೆ ಮಾತಾಡಲಿಲ್ಲ. ಸುಮ್ಮನೆ ಕೆಳಗೆ ಬಿದ್ದಿದ್ದ ಬೆಕ್ಕಿನತ್ತ ಕೈ ತೋರಿಸಿದಳು. ಪದ್ಮಾವತಿ ಬಾಯಿ ಹತ್ತಿರ ಬಂದು, ಕೆಳಕ್ಕೆ ಕೂತು, ಮುಂದೆ ಬಗ್ಗಿ ನೋಡಿದಳು. ಬೆಕ್ಕಿನ ಕಣ್ಣಿಗೆ ಹಾಕಿದ್ದ ರಂಗೀನ್ ಗಾಜಿನ ಗುಂಡುಗಳು ಗರಗರ ಅಂತ ತಿರುಗಿದವು. ಆಗ ಪದ್ಮಾವತಿ ಬಾಯಿಗೆ ಅರ್ಥವಾಗಿರಬೇಕು ಆಕೆ ನೋಡುತ್ತಿದ್ದುದು ತಾನು ದಿನವೂ ಅನ್ನ ಹಾಲು ಹಾಕುತ್ತಿದ್ದ ಬೆಕ್ಕು ಅಂತ. 'ಅವಯ್ಯಾ! ಯಾರು ಈ ಬೆಕ್ಕಿನ ಕೊಂದು ಹೀಂಗ ಮಾಡಿ ಕಳಿಸ್ಯಾರ ಮಾನಸೀ? ಏನಿದು ಘೋರ!?' ಅಂತ ಜೋರಾಗಿ ಕೂಗಿದವಳೇ, ಕುಳಿತ ಕುಕ್ಕರುಗಾಲಿನ ಭಂಗಿಯಲ್ಲಿಯೇ ಹಿಂದೆ ಸರಿಯುತ್ತ ಸರಿಯತ್ತ ಬಿದ್ದೇ ಬಿಟ್ಟಳು. ಮಾನಸಿಯೇ ಹೋಗಿ ಆಸರೆ ಕೊಟ್ಟು ಎಬ್ಬಿಸಿದಳು. ಪೂರ್ತಿ ಭೀತಳಾಗಿದ್ದ ಪದ್ಮಾವತಿಬಾಯಿ ಏನೇನೋ ಬಡಬಡಿಸುತ್ತಿದ್ದಳು.

ಮಾನಸಿ ತಡಮಾಡಲಿಲ್ಲ. ಸೀದಾ ಪೋಲೀಸ್ ಕಂಟ್ರೋಲ್ ರೂಮಿನ ನೂರು (೧೦೦) ನಂಬರಿಗೆ ಫೋನ್ ಮಾಡಿದಳು. ಸಿಕ್ಕಾಪಟ್ಟೆ ಘಾಬರಿಯಾಗಿದ್ದಳು. 'ಸಾಕಿದ ಬೆಕ್ಕು ಸತ್ತಿದೆ. ಶವವಾಗಿ ಬಂದಿದೆ. ಒಳಗಿನ ಅಂಗಾಂಗಗಳನ್ನು ಫಾರ್ಮಾಲಿನ್ ದ್ರಾವಣದಲ್ಲಿ ತುಂಬಿ ಕಳಿಸಿದ್ದಾರೆ...... ' ಅಂತೆಲ್ಲ ಬಿಡಿಬಿಡಿಯಾಗಿ ಹೇಳಿದಳು. ಆಕೆಯ ಕರೆ ಸ್ವೀಕರಿಸಿದ್ದ ಪೋಲೀಸನಿಗೆ ತಲೆಬುಡ ತಿಳಿಯಲಿಲ್ಲ. ಮನೆಯಲ್ಲಿ ಸಾಕಿದ್ದ ಬೆಕ್ಕು ಸತ್ತರೆ ಯಾರಾದರೂ ಪೋಲೀಸರಿಗೆ ಫೋನು ಮಾಡುತ್ತಾರೆಯೇ? ಹಾಗೆಂದುಕೊಂಡು ಮಾನಸಿಯನ್ನು ಸಾಗಹಾಕಲು ನೋಡಿದ. ಏನೋ ಅವನಿಗೆ ಸ್ವಲ್ಪ ತಾಳ್ಮೆಯಿತ್ತು ಅಂತ ಕಾಣುತ್ತದೆ. ಮಾನಸಿ ಹೇಳಿದ್ದು ಕೇಳುತ್ತ ಹೋದಂತೆ ಅವನೂ ಆಶ್ಚರ್ಯಪಡತೊಡಗಿದ. ಏನೋ ವಿಚಿತ್ರ ಕೇಸೇ ಇರಬೇಕು ಅಂತ ಅವನಿಗೆ ಮನದಟ್ಟಾಯಿತು. 'ಬೇಗನೆ ಪೋಲೀಸ್ ತಂಡವನ್ನು ಕಳಿಸುತ್ತೇನೆ. ಅರ್ಧ ಗಂಟೆಯಲ್ಲಿ ಬರಲಿಲ್ಲ ಅಂದರೆ ಮತ್ತೆ ಫೋನ್ ಮಾಡಿ,' ಅಂತ ಹೇಳಿ ತನ್ನ ಮೊಬೈಲ್ ನಂಬರ್ ಬೇರೆ ಕೊಟ್ಟ. ಕರೆ ಕಟ್ ಮಾಡಿದ.

ಈಕಡೆ ಮಾನಸಿ ಆಘಾತದಿಂದ ಸೋಫಾ ಮೇಲೆ ಕುಸಿದಳು. ಜೀವಂತ ಇದ್ದ ಮತ್ತೊಂದು ಬೆಕ್ಕು ಸತ್ತ ಬೆಕ್ಕಿನ ಮುಂದೆ ಕೂತು ಏನೋ ನೋಡುತ್ತಿತ್ತು. ಪಾಪದ ಪ್ರಾಣಿ. ಅದಕ್ಕೆ ಸರಿಯಾಗಿ ಅರ್ಥವಾಗುತ್ತಿಲ್ಲ. ತನ್ನ ಜೊತೆಗಾರ ಬೆಕ್ಕು ಚಿಣ್ಣಾಟಕ್ಕೆ ಬರದೇ, ಹಾಗೇಕೆ ಪೀಠದ ಮೇಲೆ ಕೂತಿದೆ ಅಂತ ತಿಳಿಯದೇ frustrated ಆಗಿ ಅದಕ್ಕೆ ತನ್ನ ಪಂಜಾದಿಂದ ಹೊಡೆಯಿತು. ಪೀಠಕ್ಕೆ ಫಿಕ್ಸ್ ಆಗಿದ್ದ ಬೆಕ್ಕು ಹಿಂದೆ ಮುಂದೆ ಆಯಿತೇ ವಿನಃ ಜೀವ ತುಂಬಿಕೊಂಡು ಎದ್ದು ಬರಲಿಲ್ಲ. ಮನೆ ಬೆಕ್ಕು ಕೆಟ್ಟ ವಿಕಾರವಾಗಿ ಕರ್ಕಶವಾಗಿ ಮ್ಯಾಂವ್! ಅಂತು. ಮೊದಲೇ ಆಘಾತದಿಂದ ತಲೆ ಚಿಟ್ಟು ಹಿಡಿದಿದ್ದ ಮಾನಸಿ ಎದ್ದು ಹೋಗಿ, ಬೆಕ್ಕಿಗೆ ಗದರಿಸಿ, ಎತ್ತಿಕೊಂಡು ಬಂದಳು. ಆ ಬೆಕ್ಕನ್ನು ಕೆಲಸದ ಪದ್ಮಾವತಿಗೆ ಕೊಟ್ಟು, ಅದನ್ನು ಬೇರೆ ಯಾವದಾದರೂ ಕೋಣೆಯಲ್ಲಿ ಕೂಡಿ ಇಡುವಂತೆ ಹೇಳಿದಳು. ಮತ್ತೆ ಸೋಫಾದ ಮೇಲೆ ಕುಸಿದಳು. ತಮ್ಮ ಒಡತಿ ಆಘಾತಗೊಂಡಿದ್ದಾಳೆ ಅಂತ ನಾಯಿಗಳಿಗೆ ತಿಳಿಯಿತು. ಎದ್ದು ಬಂದು ಟಿಪಿಕಲ್ ನಾಯಿ ಪ್ರೀತಿ ಮಾಡಿದವು. ಅವುಗಳ ತಲೆ ಮೇಲೆ ಕೈಯಾಡಿಸುತ್ತ ಮಾನಸಿ ಒಂದು ತರಹದ ಆರಾಮದಾಯಕ ಫೀಲಿಂಗ್ ಅನುಭವಿಸಿದಳು. ಹಾಗೆಯೇ ಕಣ್ಣು ಮುಚ್ಚಿದಳು. ಪದ್ಮಾವತಿ ಬಂದು ನಿಂತಳು. ಕಣ್ಣು ಮುಚ್ಚಿದ್ದ ಮಾನಸಿಯನ್ನು ಎಬ್ಬಿಸಲು, ಮಾತಾಡಿಸಲು ಹೋಗಲಿಲ್ಲ. ಪೀಠದ ಮೇಲೆ ಸ್ಥಾಪಿತಿವಾಗಿದ್ದ ಬೆಕ್ಕಿನ ಕಡೆ ನೋಡಿದಳು. ಕಣ್ಣಲ್ಲಿ ಕೂಡಿಸಿದ್ದ ಗಾಜಿನ ಬುರುಡೆ ಮತ್ತೆ ಫಳಫಳ ಅಂತ ಹೊಳೆದು ವಿಚಿತ್ರವಾಗಿ ತಿರುಗಿದವು. ಭಯದಿಂದ ಪದ್ಮಾವತಿಯ ಹೃದಯ ಬಾಯಿಗೆ ಬಂತು. ಅಷ್ಟರಲ್ಲಿ ಯಾರೋ ಕಾಲಿಂಗ್ ಬೆಲ್ ಒತ್ತಿದರು. ಮೊದಲೇ ಹೆದರಿದ್ದ ಪದ್ಮಾವತಿ ಬಾಯಿ ಚಿಟಾರನೆ ಚೀರಿದಳು. ಮಾನಸಿ ಭಯದಿಂದ ಕಣ್ಣು ಬಿಟ್ಟಳು. ಪದ್ಮಾವತಿ ಬಾಯಿ ನಡುಗುತ್ತ ಮನೆ ಬಾಗಿಲಿನತ್ತ ಕೈ ತೋರಿಸಿದಳು. ಮತ್ತೊಮ್ಮೆ ಕರೆಗಂಟೆ ಕರ್ಕಶವಾಗಿ ಶಬ್ದ ಮಾಡಿತು. ಮಾನಸಿ ಎದ್ದು ಬಾಗಿಲಿನತ್ತ ನಡೆದಳು. ಬಾಗಿಲು ತೆಗೆಯುವ ಮುನ್ನ ಕಿಂಡಿಯಿಂದ ನೋಡಿದಳು. ಪೊಲೀಸರು ನಿಂತಿದ್ದರು. ಒಂದು ತರಹ ನಿರುಮ್ಮಳ ಅನ್ನಿಸಿತು ಮಾನಸಿಗೆ. ಬಾಗಿಲು ತೆಗೆದಳು.

ಧಾರವಾಡದ ಪೋಲೀಸ್ ಇನ್ಸಪೆಕ್ಟರ್ ವಿನಯ್ ಖಲಸ್ಕರ್ ನಿಂತಿದ್ದ. ಜೊತೆಗೆ ಒಂದಿಬ್ಬರು ಪೇದೆಗಳು, ಒಂದು ಮಹಿಳಾ ಪೇದೆ ಇತ್ಯಾದಿ ನಿಂತಿದ್ದರು. ಅವನೇ ತನ್ನನ್ನು ತಾನು ಪರಿಚಯಿಸಿಕೊಂಡ. ಅವನ ಹೆಸರು ಕೇಳಿದ್ದಳು ಮಾನಸಿ. ಆಕೆಯೂ ತನ್ನ ಪರಿಚಯ ಹೇಳಿಕೊಂಡಳು. ತಾನು ಧಾರವಾಡ ಮಾನಸಿಕ ಚಿಕಿತ್ಸಾಲಯದಲ್ಲಿ 'Personality Disorders' ವಿಭಾಗದ ಮುಖ್ಯಸ್ಥೆ ಅಂತ ಹೇಳಿದಳು. ಇನ್ಸಪೆಕ್ಟರ್ ಆಕೆಯ ಬಗ್ಗೆ, ಆಕೆ ಕೆಲವು ಕೊಲೆ ಆರೋಪಿಗಳ ಬಗ್ಗೆ ಮಾಡಿದ್ದ ಅದ್ಭುತ ಅನ್ನಿಸುವತಂಹ psychological profiling ಕೆಲಸಗಳ ಬಗ್ಗೆ ಕೇಳಿದ್ದ. ಹೀಗಾಗಿ ಒಂದು ತರಹದ ಪರಿಚಯ ಇತ್ತು. ಮಾನಸಿ ಎಲ್ಲ ಪೋಲೀಸರನ್ನು ಒಳಗೆ ಆಹ್ವಾನಿಸಿದಳು. ಮಳೆಯಲ್ಲಿ ಬಂದಿದ್ದ ಪೋಲೀಸರ ಬೂಟು ಮಣ್ಣಾಗಿದ್ದವು. ಒಳಗೆ ಬರಲು ಹಿಂದೆ ಮುಂದೆ ನೋಡಿದರು. 'ಯಾವದೇ ತೊಂದರೆಯಿಲ್ಲ. ಒಳಗೆ ಬರಬಹುದು,' ಅನ್ನುವ ರೀತಿಯಲ್ಲಿ ಮಾನಸಿ ತಲೆಯಾಡಿಸಿ ಒಳಗೆ ಕರೆದಳು. ಪದ್ಮಾವತಿ ಬಾಯಿಯತ್ತ ನೋಡಿ, ಒಳಗೆ ಹೋಗಿ ಚಹಾ ಮಾಡು ಅನ್ನುವ ರೀತಿಯಲ್ಲಿ ಸಂಜ್ಞೆ ಮಾಡಿದಳು.

ಇನ್ಸಪೆಕ್ಟರ್ ಖಲಸ್ಕರ್ ಎಲ್ಲ ವಿಷಯ ಕೇಳುತ್ತ ಹೋದ. ನೋಟ್ಸ್ ಮಾಡಿಕೊಂಡ. ಸಾಕಿದ ಬೆಕ್ಕೊಂದನ್ನು ಅಪಹರಿಸಿ, ಅದನ್ನು ಅಷ್ಟು ಪದ್ಧತಿ ಪ್ರಕಾರ ಶಿಸ್ತುಬದ್ಧವಾಗಿ ಕೊಂದು, ಸಂಸ್ಕರಿಸಿ ಪ್ಯಾಕ್ ಮಾಡಿ, ಮಾಲಿಕರಿಗೇ ವಾಪಸ್ ಕಳಿಸಿದ ಕೇಸ್ ಅವನ ಜೀವನದಲ್ಲೇ ಬಂದಿರಲಿಲ್ಲ. ಬರುವದು ದೂರ ಉಳಿಯಿತು. ಅಂತಹ ಕೇಸ್ ಬಗ್ಗೆ ಆತ ಕೇಳಿರಲೇ ಇಲ್ಲ. ವಿಚಿತ್ರ ವಿಕ್ಷಿಪ್ತ ಅನ್ನಿಸುವಂತಹ ಭಾವನೆ ಅವನ ಮುಖದ ಮೇಲೆ, ಅವನ ಜೊತೆ ಬಂದಿದ್ದ ಇತರ ಪೋಲೀಸರ ಮುಖದೆ ಮೇಲೆ ರಾರಾಜಿಸುತ್ತಿತ್ತು.

ಅಷ್ಟರಲ್ಲಿ ಪದ್ಮಾವತಿ ಬಾಯಿ ಎಲ್ಲರಿಗೂ ಚಹಾ ತಂದಳು. ಚಹಾ ಸ್ವೀಕರಿಸಲು ಪೊಲೀಸರು ಹಿಂದೆ ಮುಂದೆ ನೋಡಿದರು. ಹೀಗೆ ತನಿಖೆ ಮಾಡಲು ಹೋದಾಗ ಚಹಾ ಪಹಾ ಕೊಟ್ಟು ಉಪಚರಿಸಿದ ಜನ ತುಂಬ ಕಮ್ಮಿ. ಹಾಗಾಗಿ ಪೊಲೀಸರಿಗೆ ಸ್ವಲ್ಪ ಸಂಕೋಚವಾಯಿತು. ಮಾನಸಿ ತಾನೂ ಒಂದು ಕಪ್ಪು ಚಹಾ ತೆಗೆದುಕೊಂಡು, 'ಪ್ಲೀಸ್, ತೆಗೆದುಕೊಳ್ಳಿ ಎಲ್ಲರೂ,' ಅಂತ ಸ್ವಲ್ಪ ಆಗ್ರಹ ಮಾಡಿದಳು. ಆಗ ಎಲ್ಲರೂ ಚಹಾ ತೆಗೆದುಕೊಂಡರು.

ಇನ್ನೇನು ಇನ್ಸಪೆಕ್ಟರ್ ಖಲಸ್ಕರ್ ಚಹಾ ಕುಡಿಯಬೇಕು ಅನ್ನುವಷ್ಟರಲ್ಲಿ ಸ್ವಲ್ಪ ದೂರದಿಂದ ಯಾರೋ ವಿಚಿತ್ರವಾಗಿ ಕೂಗಿದಂತೆ ಕೇಳಿ ಬಂತು. ಒಂದು ಕ್ಷಣ ಎಲ್ಲರೂ ಅಪ್ರತಿಭರಾದರು. ಗಾಬರಿಯಾದ ಇನ್ಸಪೆಕ್ಟರ್ ಎದ್ದು ನಿಂತ. ಮಾನಸಿ ಮುಖದಲ್ಲಿ ಒಂದು ತರಹದ ನಗೆ ಮೂಡಿತು. 'ಚಿಂತೆ ಬೇಡ ಇನ್ಸಪೆಕ್ಟರ್. ಅದು ನಮ್ಮ ಚಿಕ್ಕಪ್ಪ. ಮನೆ ಹಿಂದೆ ಔಟ್ ಹೌಸಿನಲ್ಲಿ ಒಬ್ಬರೇ ಇರುತ್ತಾರೆ. ಆಗಾಗ ಜೋರಾಗಿ ಶೇಕ್ಸಪಿಯರನ ನಾಟಕಗಳನ್ನು ಪಾಠ ಮಾಡಲು ಶುರುಮಾಡಿಬಿಡುತ್ತಾರೆ. ಮೊದಲು ಇಂಗ್ಲೀಶ್ ಪ್ರೊಫೆಸರ್ ಆಗಿದ್ದರು ನೋಡಿ. ಮತ್ತೆ ಒಬ್ಬರೇ ಇರುತ್ತಾರೆ. ನೀವು ಈ ಏರಿಯಾಕ್ಕೆ ಬಂದರೆ ಆಗಾಗ ಅವರ ದೊಡ್ಡ ದನಿಯ ಭಾಷಣ ನಿಮಗೆ ಕೇಳುತ್ತದೆ. ತುಂಬ ಪಾಪದವರು. ಸ್ವಲ್ಪ ವಿಲಕ್ಷಣ ವ್ಯಕ್ತಿತ್ವದವರು ಅಷ್ಟೇ. ಯಾರಿಗೂ ತೊಂದರೆ ಕೊಡುವವರಲ್ಲ. ಅವರ ಬಗ್ಗೆ ಚಿಂತೆ ಬೇಡ. ನೀವೆಲ್ಲ ಚಹಾ ತೆಗೆದುಕೊಳ್ಳಿ. ಈ ಬೆಕ್ಕಿನ ಸಾವಿನ ಬಗ್ಗೆ ಏನಾದರೂ ಕೇಳುವದಿದ್ದರೆ ಕೇಳಿ,' ಅಂತ ಹೇಳಿದಳು ಮಾನಸಿ.

ಎದ್ದು ನಿಂತಿದ್ದ ಇನ್ಸಪೆಕ್ಟರ್ ಕೆಳಗೆ ಕೂತು, ತಲೆ ಬಗ್ಗಿಸಿ ಚಹಾ ಹೀರತೊಡಗಿದ. ಹುಚ್ಚರಾಸ್ಪತ್ರೆಯ ದೊಡ್ಡ ಮನಃಶಾಸ್ತ್ರಜ್ಞೆ ಡಾ. ಮಾನಸಿ ಕುಲಕರ್ಣಿ. ಆಕೆಯ ಚಿಕ್ಕಪ್ಪ ಬ್ರಹ್ಮಚಾರಿ ನಿವೃತ್ತ ಇಂಗ್ಲೀಷ್ ಪ್ರೊಫೆಸರ್. ಯಾವ್ಯಾವಾಗಲೋ ಹುಚ್ಚನಂತೆ ದೊಡ್ಡ ದನಿಯಲ್ಲಿ ಪಾಠ ಮಾಡುತ್ತಾನೆ. ಈಕೆಗೆ ಯಾರೋ ಬೆಕ್ಕು ಕೊಂದು ಕಳಿಸಿಬಿಡುತ್ತಾರೆ. ಮನೆ ನೋಡಿದರೆ ದೊಡ್ಡ ಭೂತ ಬಂಗಲೆ. ಸುತ್ತಲೂ ಗವ್ವೆನ್ನುವ ಮೌನ. ಮಳೆ ಬೇರೆ. ಕಾಂಪೌಂಡ್ ತುಂಬಾ ದೊಡ್ಡ ದೊಡ್ಡ  ಮಾವಿನ ಮರಗಳು. ಪಾಚಿ ಹತ್ತಿದ ಗೋಡೆಗಳು. ಎಲ್ಲ ವಿಚಿತ್ರ ಅನ್ನಿಸಿತು ಇನ್ಸಪೆಕ್ಟರನಿಗೆ. ಮತ್ತೆ ಮನೆಯಲ್ಲಿ ಇರುವವರು ಕೇವಲ ಇಬ್ಬರೇ. ಒಬ್ಬಳು ಮಾನಸಿ. ಇನ್ನೊಬ್ಬಳು ಕೆಲಸದ ಹೆಂಗಸು ಪದ್ಮಾವತಿ. ಮಾನಸಿಗೆ ಸುಮಾರು ಮೂವತ್ತೈದು ವರ್ಷಗಳು ಇರಬಹುದು ಅಂತ ಆತನ ಲೆಕ್ಕಾಚಾರ. ವಿಚಾರಣೆ ಸಮಯದಲ್ಲಿ ಕೇಳಿದರೆ ಅವಿವಾಹಿತೆ ಅಂದಳು. ಸ್ವಲ್ಪ ಆಶ್ಚರ್ಯಗೊಂಡ ಇನ್ಸಪೆಕ್ಟರ್. ನೋಡಲು ಇಷ್ಟು ಅಂದವಾಗಿರುವ, ಅಷ್ಟು ಪ್ರಸಿದ್ಧ ಮಾನಸಿಕ ಡಾಕ್ಟರ್ ಇನ್ನೂ ಅವಿವಾಹಿತೆಯೇ? ಏಕಿರಬಹದು? ಅಂತ ವಿಚಾರ ಮಾಡಿದ.

ಹೇಳಲು, ಕೇಳಲು ಮತ್ತೇನೂ ಹೆಚ್ಚು ಇರಲಿಲ್ಲ. ತನಿಖೆಗೆ ಅಂತ ಎಲ್ಲವನ್ನೂ ಸಂಗ್ರಹಿಸಿಕೊಂಡ. ಅದಕ್ಕೆ ಮೊದಲು ಮಾನಸಿ ತನ್ನ ಮೊಬೈಲ್ ಫೋನಿನ ಕೆಮರಾದಲ್ಲಿ ತನ್ನ ಸತ್ತ ಬೆಕ್ಕಿನ, ಅಂಗಾಂಗ ತುಂಬಿದ್ದ ಗಾಜಿನ ಭರಣಿಯ, ಎಲ್ಲದರ ಚಿತ್ರ ತೆಗೆದುಕೊಂಡಳು. ಒಂದು ತರಹದ ಪಂಚನಾಮೆ ಮಾಡಿದ ಪೊಲೀಸರು ಒಂದು ರಸೀದಿ ತರಹದ್ದನ್ನು ಕೊಟ್ಟರು. ಮತ್ತೂ ಒಂದಿಷ್ಟು ಕಾಗದಗಳಿಗೆ ಏನೇನೋ ಸಹಿ ಹಾಕಿಸಿಕೊಂಡು, ಮಾನಸಿಗೆ ಒಂದು ಪ್ರತಿ ಕೊಟ್ಟು ಹೊರಡಲು ತಯಾರಾದರು. ಮಾನಸಿ ತಾನಾಗೇ ತನ್ನ ಮೊಬೈಲ್ ನಂಬರ್ ಕೊಟ್ಟಳು. ಯಾವಾಗ ಏನೇ ವಿಷಯವಿದ್ದರೂ ಫೋನ್ ಮಾಡಲು ಕೇಳಿಕೊಂಡಳು. ಇನ್ಸಪೆಕ್ಟರ್ ಖಲಸ್ಕರ್ ಧನ್ಯವಾದ ಹೇಳಿದ. ಪೊಲೀಸರು ಮನೆಯಿಂದ ಹೊರಡಲು ಅನುವಾದರು. ಆಕಡೆಯಿಂದ ಮತ್ತೆ ಮಾನಸಿಯ ಚಿಕ್ಕಪ್ಪ ಪ್ರೊಫೆಸರ್ ಸಾಹೇಬರ ಇಂಗ್ಲೀಶ್ ಲೆಕ್ಚರ್ ಶುರುವಾಯಿತು. ಮಾನಸಿ ನಕ್ಕು, 'ಇವತ್ತು ನಮ್ಮ ಚಿಕ್ಕಪ್ಪ ಭಾಳ ಒಳ್ಳೆ ಮೂಡಿನಲ್ಲಿ ಇದ್ದಾರೆ ಅಂತ ಕಾಣುತ್ತದೆ. ಇಲ್ಲವಾದರೆ ಸಂಜೆ ಅವರು ಸ್ವಲ ಸೈಲೆಂಟ್,' ಅಂದು ಟೈಮ್ ನೋಡಿದಳು. ರಾತ್ರಿ ಎಂಟೂವರೆ ಹೊತ್ತು. ಆವಾಗ ನೆನಪಾಯಿತು ಚಿಕ್ಕಪ್ಪನಿಗೆ ಊಟ ಕಳಿಸುವದನ್ನು ಮರೆತದ್ದು. ಮನೆಯಲ್ಲಿ ಇಷ್ಟೊಂದು ಲಫಡಾ ಆಗಿದ್ದಕ್ಕೆ ಸಂಜೆ ಏಳಕ್ಕೆ ಬರೋಬ್ಬರಿ ಕಳಿಸುತ್ತಿದ್ದ ರಾತ್ರಿಯ ಊಟ ಹೋಗಿಯೇ ಇರಲಿಲ್ಲ. ಅದಕ್ಕೇ ಮುದುಕ ಜೋರಾಗಿ ಕೂಗುತ್ತಿದ್ದಾನೇನೋ ಅಂದುಕೊಂಡಳು. 'ಪದ್ದಕ್ಕಾ, ಕಾಕಾಗ ಊಟ ಕಳಿಸೋದನ್ನ ಮರೆತಂಗದ. ಲಗೂನೆ ಕೊಟ್ಟು ಬರ್ರಿ,' ಅಂದಳು. ಪದ್ಮಾವತಿ ಬಾಯಿ ಊಟ ಕಳಿಸುವದನ್ನು ಮರೆತಿದ್ದಕ್ಕೆ ಹಣೆ ಹಣೆ ತಟ್ಟಿಕೊಳ್ಳುತ್ತ ಊಟವನ್ನು ಕಳಿಸಲು ಒಳಗೆ ಹೋದಳು. ಈಕಡೆ ಮತ್ತೊಮ್ಮೆ ಥ್ಯಾಂಕ್ಸ್ ಹೇಳಿದ ಇನ್ಸಪೆಕ್ಟರ್ ವಿನಯ್ ಖಲಸ್ಕರ್ ತನ್ನ ಪೊಲೀಸ ತಂಡವನ್ನು ಕರೆದುಕೊಂಡು ಹೊರಗೆ ಬಂದ. ಪೋರ್ಟಿಕೋದಲ್ಲಿ ಪೋಲೀಸ್ ಜೀಪ್ ನಿಂತಿತ್ತು. ಡ್ರೈವರ್ ಮಾತ್ರ ಒಳಗೆ ಬಂದಿರಲಿಲ್ಲ. ಪೋಲೀಸ್ ತಂಡ ಹೊರಗೆ ಬಂದ ಕೂಡಲೇ, ಸೇದುತ್ತಿದ್ದ ಬೀಡಿಯನ್ನು ನೆಲಕ್ಕೆ ಹೊಸಕಿ, ಗಾಡಿ ಚಾಲೂ ಮಾಡಿದ ಡ್ರೈವರ್. ಒಂದರೆಡು ಬಾರಿ ಖೆಮ್ಮಿದ ಗಾಡಿ ಜೀವ ಪಡೆಯಿತು. ಪೊಲೀಸರೆಲ್ಲ ಒಳಗೆ ಹೋಗಿ ಕೂತರು. ಮಾನಸಿ ಬಾಗಿಲಲ್ಲೇ ನಿಂತಿದ್ದಳು. ಆವತ್ತು ಶುದ್ಧ ಬಿಳಿಯ ಸೀರೆ ಉಟ್ಟು ಆಫೀಸಿಗೆ ಹೋಗಿದ್ದಳು. ಮನೆಗೆ ಬಂದ ನಂತರ ಸೀರೆ ಕೂಡ ಬದಲಾಯಿಸಿರಲಿಲ್ಲ. ಅಷ್ಟರಲ್ಲಿ ಇಷ್ಟೆಲ್ಲ ಆಗಿಹೋಗಿತ್ತು. ಈಗ ದೊಡ್ಡ ಮನೆಯ ಹೆಬ್ಬಾಗಿಲಿನಲ್ಲಿ, ಬಿಳಿ ಸೀರೆಯುಟ್ಟ, ಎತ್ತರದ ನಿಲುವಿನ ಮಾನಸಿ ಗಂಭೀರವದನೆಯಾಗಿ ನಿಂತಿದ್ದಳು. ಮೇಲೆ ಚಿಕ್ಕ ದೀಪ ಉರಿಯುತ್ತಿತ್ತು. ಹೊರಡುವ ಮುನ್ನ ಇನ್ಸಪೆಕ್ಟರ್ ಖಲಸ್ಕರ್ ಮತ್ತೆ ಮಾನಸಿಯತ್ತ ನೋಡಿದ. ಆಕಾಶದಲ್ಲಿ ಮಿಂಚೊಂದು ಫಳಕ್ ಅಂತ ಹೊಳೆಯಿತು. ಖಡ್ ಖಡ್ ಖಡಾಲ್ ಅಂತ ಅದರ ಹಿಂದೆಯೇ ದೊಡ್ಡ ಗುಡುಗು. ಮಿಂಚಿನ ಬೆಳಕಿನಲ್ಲಿ ಬಿಳಿಯ ಸೀರೆ ಉಟ್ಟು ನಿಂತಿದ್ದ ಮಾನಸಿಯ ಮುಖ ಸಳಕ್ ಅಂತ ಹೊಳೆಯಿತು. ಆಕೆಯ ಮುಖದ ಮೇಲೆ ಒಂದು ತರಹದ ಬೇರೆಯೇ ಭಾವನೆ ಬಂದಂಗೆ ಕಂಡಿತು ಇನ್ಸಪೆಕ್ಟರ್ ಖಲಸ್ಕರನಿಗೆ. ಮುಖದ ಮೇಲೆ ವಿಚಿತ್ರ ಭಾವನೆ ಹೊತ್ತು, ಬಿಳೆ ಸೀರೆ ಉಟ್ಟು ನಿಂತಿದ್ದ ಮಾನಸಿಯನ್ನು ನೋಡಿ, ಎಂದೋ ಕೇಳಿದ್ದ ಮೋಹಿನಿ ಕಥೆ ನೆನಪಾಗಿ, ಬೆನ್ನುಹುರಿಯಲ್ಲಿ ಒಂತರದ ಹೆದರಿಕೆ ನುಗ್ಗಿ ಬಂತು. ಡ್ರೈವರನಿಗೆ ಹೊರಡಲು ಹೇಳಿದ. ಆಖರೀ ಸಲ ಅನ್ನುವಂತೆ ಒಂದು ಬಾರಿ ಮಾನಸಿಯತ್ತ ನೋಡಿ, ತಲೆ ಕುಣಿಸಿ, ಧನ್ಯವಾದ ಹೇಳಿದ. ಮಾನಸಿ ನಕ್ಕಳು. ಆ ನಗು ಬೇರೆಯೇ ತರಹದ್ದಾಗಿತ್ತು. ಮೊದಲಿನ ರೀತಿ ಸಹಜವಾಗಿರಲಿಲ್ಲ ಅಂತ ಅನ್ನಿಸಿತು ಇನ್ಸಪೆಕ್ಟರ್ ಖಲಸಕರನಿಗೆ.

ಜೀಪು ಮಾನಸಿಯ ಕಾಂಪೌಂಡಿನಿಂದ ಹೊರಬೀಳುತ್ತಿದ್ದಂತೆಯೇ ಖಲಸ್ಕರ್ ತನ್ನ ಮೊಬೈಲ್ ತೆಗೆದು ಫೋನ್ ಮಾಡತೊಡಗಿದ. ತನಗೆ ಪರಿಚಯವಿದ್ದ ಕ್ರೈಂ ವರದಿಗಾರರಿಗೆಲ್ಲ ಫೋನ್ ಮಾಡಿ, ನ್ಯೂ ಪ್ರಭಾತ್ ಬಾರಿಗೆ ಬರಲು ಹೇಳಲಾರಂಭಿಸಿದ. ಒಂದು ಅತಿ ವಿಚಿತ್ರ ಕೇಸಿನ ಬಗ್ಗೆ ಖತರ್ನಾಕ್ ಮಾಹಿತಿ ಕೊಡುತ್ತೇನೆ ಅಂದ. ಅಂತದ್ದಕ್ಕೇ ಕಾಯುತ್ತಿದ್ದ ಕ್ರೈಂ ವರದಿಗಾರರು ನ್ಯೂ ಪ್ರಭಾತ್ ಬಾರ್ & ರೆಸ್ಟಾರಂಟಿನತ್ತ ಹೊರಟರು. ಈ ಕಡೆ ಪೋಲೀಸ್ ಜೀಪ್ ಮರೆಯಾಗುತ್ತಿದ್ದನ್ನೇ ಗಮನಿಸಿದ ಡಾ. ಮಾನಸಿ ಬಾಗಿಲು ಮುಚ್ಚಿಕೊಂಡು ಮನೆಯೊಳಕ್ಕೆ ಬಂದಳು. ಆಹೊತ್ತಿಗೆ ಆಕೆಯ ಚಿಕ್ಕಪ್ಪನ ಇಂಗ್ಲೀಷ್ ಪಾಠ ಮುಗಿದಿತ್ತು. ಎಲ್ಲ ಕಡೆ ಗವ್ವೆನ್ನುವ ಮೌನ. ದೊಡ್ಡ ಕಂಪೌಂಡಿನ ಮೂಲೆಯಲ್ಲೆಲ್ಲೋ ಏನೋ ಶಬ್ದವಾಯಿತು. ನಾಯಿಗಳಿಗೆ ಏನೋ ಸೂಟು ಹತ್ತಿರಬೇಕು. ಬೊಗಳುತ್ತ ಹೊರಗೆ ಓಡಿದವು. ನೋಡಿದರೆ ಮಾನಸಿ ಚಿಕ್ಕಪ್ಪ ಟಾಯ್ಲೆಟ್ ಕಡೆಗೆ ಹೊರಟಿದ್ದ. ಹಳೆ ಕಾಲದ ಪದ್ಧತಿ. ಅವನು ಉಪಯೋಗಿಸುತ್ತಿದ್ದ ಟಾಯ್ಲೆಟ್ ಮನೆಯ ಹೊರಗೆ ತುಂಬ ಹಿಂದೆ ಇತ್ತು. ಬ್ಯಾಟರಿ ಬಿಟ್ಟುಕೊಂಡು ಹೊರಟಿದ್ದ ವೃದ್ಧ ಕಿಟ್ಟಿ ಕಾಕಾ. ಆವಾಗಲೇ ಏನೋ ಗರಬರ ಸದ್ದಾಯಿತು. ಅದಕ್ಕೇ ನಾಯಿಗಳು ಓಡಿದವು. 'ಅಯ್ಯೋ, ಹೋಗುತ್ತಿರುವವ ಒಡತಿಯ ಕಾಕಾ. ಮನೆಯವನೇ,' ಅಂತ ಸುಮ್ಮನೆ ತಿರುಗಿ ಬಂದವು. ಮಾನಸಿಯ ಸುತ್ತ ಮುತ್ತ ಓಡಾಡಿದವು. 'ಊಟ ಮಾಡೋಣವೇ?' ಅನ್ನುವಂತೆ ನೋಡಿದಳು ಕೆಲಸದ ಪದ್ಮಾವತಿ. ಗಾಜಿನ ಬಾಟಲಿಯಲ್ಲಿದ್ದ ತನ್ನ ಪ್ರೀತಿಯ ಬೆಕ್ಕಿನ ಅಂಗಾಂಗಗಳನ್ನು ನೆನಸಿಕೊಂಡು ಮಾನಸಿಯ ಹೊಟ್ಟೆ ತೊಳೆಸಿತು. ಊಟದ ಮೂಡೇ ಹೋಗಿಬಿಟ್ಟಿತ್ತು. ಊಟ ಬೇಡ ಅನ್ನುವಂತೆ ನೋಡಿ ಮಹಡಿ ಹತ್ತಿದಳು. ಕಡೆಗೊಂದು ಗ್ಲಾಸು ಬಿಸಿ ಹಾಲು ಕೊಟ್ಟು ಬಂದರಾಯಿತು ಅಂತ ಪದ್ಮಾವತಿ ಬಾಯಿ ತಾನು ಊಟ ಮಾಡಲು ಒಳಗೆ ಹೋದಳು. ಮೇಲೆ ತನ್ನ ಕೋಣೆ ಸೇರಿಕೊಂಡ ಮಾನಸಿ ವಸ್ತ್ರ ಬದಲಿಸಿ, ಮಂಚದ ಮೇಲೆ ಅಂಗಾತ ಮಲಗಿದಳು. ಸೂರು ದಿಟ್ಟಿಸುತ್ತ ಉಳಿದಳು.

ಈ ಕಡೆ ಪೋಲೀಸ್ ಸಾಹೇಬ ವಿನಯ್ ಖಲಸ್ಕರ್ ಬಾರ್ ಸೇರಿಕೊಂಡ. ಎಲ್ಲ ಕ್ರೈಂ ವರದಿಗಾರರು ಅವನು ಬರುವದನ್ನೇ ಕಾಯುತ್ತಿದ್ದರು. ಎಲ್ಲರಿಗೆ ಒಂದು ರೌಂಡ್ ಡ್ರಿಂಕ್ಸ್ ಹೇಳಿದ ಇನ್ಸಪೆಕ್ಟರ್ ವಿವರವಾಗಿ ಸುದ್ದಿ ಹೇಳತೊಡಗಿದ. ಕ್ರೈಂ ವರದಿಗಾರರು ಎಲ್ಲ ಬರೆದುಕೊಂಡರು. ಎಲ್ಲ ಪತ್ರಿಕೆಗಳು ಆಖ್ರೀ ಮುದ್ರಣಕ್ಕೆ ಹೋಗಲಿಕ್ಕೆ ಒಂದೋ ಎರಡೋ ಘಂಟೆ ಇತ್ತು ಅಷ್ಟೇ. ಲೋಕಲ್ ಆವೃತ್ತಿಯಲ್ಲಿ ಮುಖಪುಟದಲ್ಲಿ ಹಾಕಬೇಕಾದ ರೋಚಕ ಸುದ್ದಿ ಇದು. ಇನ್ಸಪೆಕ್ಟರ್ ಹೇಳುತ್ತಿದ್ದ ಸುದ್ದಿ ಕೇಳುತ್ತಲೇ ಕೆಲವರು ತಮ್ಮ ತಮ್ಮ ಸುದ್ದಿಮನೆಗಳಿಗೆ SMS ಮಾಡಿ ಮುಖಪುಟದಲ್ಲಿ ಜಾಗ ಖಾಲಿ ಇಡಲೇಬೇಕೆಂದು ಆಗ್ರಹಿಸತೊಡಗಿದ್ದರು. ವರದಿಯೊಂದಿಗೆ ಮಾನಸಿಯ ಫೋಟೋ ಸಹಿತ ಇದ್ದರೆ ಒಳ್ಳೇದು ಅಂದರು. ಒಬ್ಬ ಖತರ್ನಾಕ್ ವರದಿಗಾರ, 'ಇಂಟರ್ನೆಟ್ ನಲ್ಲಿ ಸಿಗಬಹುದು. ಹುಡುಕಿ ರೆಡಿ ಮಾಡಿ ಇಡಿ,' ಅಂತ ಅಂತ ಖತರ್ನಾಕ್ ಐಡಿಯಾ ಕೂಡ ಕೊಟ್ಟ. ಮತ್ತೊಬ್ಬ ರಾತ್ರಿಯಾಗಿದ್ದರೂ ಫೋಟೋಗ್ರಾಫರ್ ಒಬ್ಬನನ್ನು ಕಳುಹಿಸಿ, ಮಾನಸಿಯ ಮನೆಯ ಫೋಟೋ ತೆಗೆದುಕೊಂಡು ಬರಲು ಹೇಳಿದ. ಇನ್ಸಪೆಕ್ಟರ್ ಹೇಳಿದ ಕಥೆ ಕೇಳಿ, ಗಡಿಬಿಡಿಯಲ್ಲಿ ಡ್ರಿಂಕ್ ಮುಗಿಸಿ, ಸುದ್ದಿ ಬರೆಯಲು ಓಡಿದರು ವರದಿಗಾರರು. ಪೊಲೀಸರು ಆ ಘಟನೆ ಬಗ್ಗೆ ಮಾತಾಡುತ್ತ, ತನಿಖೆ ಹೇಗೆ ಮುಂದುವರೆಸಬೇಕು ಅನ್ನುವದರ ಬಗ್ಗೆ ಯೋಚಿಸತೊಡಗಿದರು.

ಪದ್ಮಾವತಿ ಬಾಯಿ ತಂದುಕೊಟ್ಟ ಹಾಲು ಕುಡಿದ ಮಾನಸಿ ದೀಪ ಆರಿಸುವ ಮುನ್ನ ವೇಳೆ ನೋಡಿದಳು. ರಾತ್ರಿ ಹತ್ತೂವರೆ. ಆಕೆ ಅಷ್ಟು ಬೇಗ ಮಲಗುವದೇ ಇಲ್ಲ. ಏನಾದರೂ ಓದುತ್ತ ರಾತ್ರಿ ಹನ್ನೆರಡು ಘಂಟೆ ಹೊತ್ತಿಗೆ ಮಲಗುವದು ರೂಢಿ. ಇವತ್ತು ಓದುವ ಮೂಡೇ ಇರಲಿಲ್ಲ. ಅದಕ್ಕೇ ದೀಪ ಆರಿಸಿ ಕಣ್ಣು ಮುಚ್ಚಿದಳು. ಬೆಕ್ಕು ಬಂದು ಹಾಸಿಗೆ ಹತ್ತಿತು. ಅದಕ್ಕೆ ಮಾನಸಿಯ ಪಕ್ಕ ಮಲಗಿಯೇ ರೂಢಿ. ನಾಯಿಗಳಿಗೆ ಆ ಭಾಗ್ಯವಿಲ್ಲ. ಅವೂ ಸಹ ಆಕೆಯ ಬೆಡ್ರೂಮಿನಲ್ಲೇ ಮಲಗುತ್ತವೆ. ನೆಲದ ಮೇಲೆ ಹಾಸಿದ ಕಾರ್ಪೆಟ್ ಮೇಲೆ, ಮಾನಸಿ ಮಂಚದ ಕೆಳಗೆ.

ಮಾನಸಿ ಕಣ್ಣು ಮುಚ್ಚುವದಕ್ಕೂ ಕಿಟ್ಟಿ ಕಾಕಾನ ಶೇಕ್ಸಪಿಯರ್ ಪಾಠ ಮತ್ತೊಮ್ಮೆ ಶುರುವಾಗುವದಕ್ಕೂ ಸರಿಯಾಯಿತು. 'ಇದು ಸುಧಾರಿಸೋ ಪೈಕಿಯಲ್ಲ, ಹುಚ್ಚ ಕಾಕಾ,' ಅಂತ ನಕ್ಕ ಮಾನಸಿ, ಕಿವಿಗೆ ಹತ್ತಿ ಇಟ್ಟುಕೊಂಡು, ಮುಖದ ಮೇಲೊಂದು ಮೆತ್ತನೆ ದಿಂಬು ಒತ್ತಿಕೊಂಡು ಮಲಗಿದಳು. ಎಷ್ಟೋ ಹೊತ್ತಿನ ತನಕ ಮುದುಕನ ಇಂಗ್ಲೀಷ್ ಪಾಠ ಕೇಳುತ್ತಲೇ ಇತ್ತು.

ಭಾಗ - ೨

'ಮ್ಯಾಂವ್ ಮ್ಯಾಂವ್ ಪಾರ್ಸಲ್', 'ಬೆಕ್ಕು ಕೊಂದು ಪೀಠದ ಮೇಲಿಟ್ಟು ಕಳಿಸಿದ ದುರುಳರು', 'ಮನಃಶಾಸ್ತ್ರಜ್ಞೆಗೆ ಮನೋವಿಕಾರಿಗಳ ವಿಚಿತ್ರ ಗಿಫ್ಟ್', ಹೀಗೆ ಬೇರೆ ಬೇರೆ ಶೀರ್ಷಿಕೆಗಳ ಅಡಿಯಲ್ಲಿ ಮರುದಿವಸ ಸುದ್ದಿ ಪ್ರಕಟವಾಯಿತು. ಎಲ್ಲ ಪತ್ರಿಕೆಗಳ ಮುಖಪುಟದಲ್ಲಿ ಅದೇ ಸುದ್ದಿ. ಕೇವಲ ಎರಡೇ ಪತ್ರಿಕೆಗಳು ಡಾ.ಮಾನಸಿಯ ಭಾವ ಚಿತ್ರವನ್ನು ಇಂಟರ್ನೆಟ್ ನಿಂದ ಎತ್ತಿದ್ದವು. ಒಂದು ಆಕೆಯ ಪಾಸ್ಪೋರ್ಟ್ ಸೈಜಿನ ಚಿತ್ರ, ಇತ್ತೀಚಿನದು. ಅದನ್ನು ಆಕೆ ಕೆಲಸ ಮಾಡುತ್ತಿದ್ದ ಸಂಸ್ಥೆಯ ವೆಬ್ ಸೈಟಿನಿಂದ ಎತ್ತಿದ್ದರು. ಮತ್ತೊಂದು ಆಕೆ ಅಮೇರಿಕಾದಲ್ಲಿ ಯಾವದೋ ಪ್ರಶಸ್ತಿ ಪಡೆಯುತ್ತಿದ್ದಾಗ ತೆಗೆದಿದ್ದ ಚಿತ್ರ. ಕಮ್ಮಿ ಕಮ್ಮಿ ಅಂದರೂ ಎರಡು ವರ್ಷ ಹಳೆಯದು. ಒಂದು ಪತ್ರಿಕೆ ರಾತ್ರಿ ಕತ್ತಲಲ್ಲಿ, ಗಡಿಬಿಡಿಯಲ್ಲಿ ತೆಗೆದ ಆಕೆಯ ಮನೆಯ ಫೋಟೋ ಸಹಿತ ಹಾಕಿತ್ತು. ಫೋಟೋಗಳಲ್ಲಿ ಸಹಜ ಸುಂದರಿ ಮಾನಸಿ ಸುಂದರಿಯಾಗಿಯೇ ಮೂಡಿ ಬಂದಿದ್ದಳು. ಭೂತ ಬಂಗಲೆಯಂತಹ ಆಕೆಯ ಮನೆ ಮತ್ತೂ ಖರಾಬಾಗಿ ಮೂಡಿ ಬಂದು ಭಯಾನಕ ಸ್ಟೋರಿಗೆ ಮತ್ತೊಂದಿಷ್ಟು ಭೀಕರತೆಯನ್ನು ತಂದುಕೊಟ್ಟಿತ್ತು.

ಕೋಮಲ್ ಜಾತ್ರಾವಳಿ ತನ್ನ ಮುಂಜಾನೆ ಜಾಗಿಂಗ್ ಮುಗಿಸಿಬಂದ. ಹೊರಗಿನ ಲಾನ್ ಮೇಲೆ ಹಾಕಿದ್ದ ಚೇರ್ ಮೇಲೆ ಕೂತ. ಎದುರಿನ ಟೇಬಲ್ ಮೇಲೆ ನೀರು, ಚಹಾ ಎಲ್ಲ ರೆಡಿಯಾಗಿಯೇ ಇತ್ತು. ಟಾವೇಲಿನಿಂದ ಬೆವರು ಒರೆಸಿಕೊಳ್ಳುತ್ತ, ತಲೆಗೆ ಹಾಕಿಕೊಂಡಿದ್ದ ಹೆಡ್ ಬ್ಯಾಂಡ್ ತೆಗೆದಿಟ್ಟ. ನೀರು ಕುಡಿಯುತ್ತ ಟೇಬಲ್ ಮೇಲಿದ್ದ ನಾಲ್ಕಾರು ಪತ್ರಿಕೆಗಳಲ್ಲಿ ಒಂದನ್ನು ಎತ್ತಿಕೊಂಡ. ಮುಖಪುಟದ ಸುದ್ದಿ ಓದಿದವ ಒಂದು ಸರ್ತಿ ಬೆಚ್ಚಿಬಿದ್ದ. ಮರುಕ್ಷಣದಲ್ಲೇ ಅದಾಗಿ ಅದಾಗೇ ತುಟಿ ಮೇಲೆ ನಾಲಿಗೆ ಸವರಿತು. ಸುಂದರಿಯರನ್ನು ನೋಡಿದಾಕ್ಷಣ ಅದು ಅವನ ಸಹಜ ಪ್ರತಿಕ್ರಿಯೆ. ಒಂದು ತರಹದ instinct ಆಗಿಹೋಗಿದೆ.

ಕೋಮಲ್ ಜಾತ್ರಾವಳಿ ಅಂದರೆ ಧಾರವಾಡ ಮಟ್ಟಿಗೆ ದೊಡ್ಡ ಪ್ಲೇಬಾಯ್, ಡೆಬೋನೈರ್, ಕ್ಯಾಸನೋವಾ, ಮನ್ಮಥ, ಕಾಮಣ್ಣ ಎಲ್ಲದರ ಹದವಾದ ಮಿಶ್ರಣ. ಅಪ್ಪ ಮಾಡಿಟ್ಟ ದೊಡ್ಡ ಬಿಸಿನೆಸ್ ಅದರ ಪಾಡಿಗೆ ಅದು ನಡೆಯುತ್ತದೆ. ಮನೆ ಕಡೆ ಹೆಂಡತಿ ಎಲ್ಲ ತೂಗಿಸಿಕೊಂಡು ಹೋಗುತ್ತಾಳೆ. ಇವನು ಬೇಟೆಯಾಡುತ್ತಾನೆ. ಲೇಡಿ ಕಿಲ್ಲರ್. ನೋಡಲು ಸುರಸುಂದರಾಂಗ. ಎತ್ತರ ಆರಡಿ ಮೂರಿಂಚು. ನೋಡಲು ಪಾಕಿಸ್ತಾನದ ಕ್ರಿಕೆಟರ್ ಇಮ್ರಾನ್ ಖಾನ್ ಇದ್ದಂಗೆ ಇದ್ದಾನೆ. ಅದೇ ಹರವಾದ ಎದೆ, ಅತಿ ಸಣ್ಣ ಸೊಂಟ, ಅಗಲವಾದ ಭುಜಗಳು, ನೀಳವಾದ ಕಾಲುಗಳು, ಉದ್ದವಾದ ಭುಜದವರೆಗೆ ಬರುವ ಕೂದಲು. ವಯಸ್ಸು ಸುಮಾರು ಮೂವತ್ತೇಳು ವರ್ಷ. ವಿದ್ಯಾಭ್ಯಾಸ ಬಿಎ ಡಿಗ್ರಿ. ತಂದೆ ದಿನಕರ ಜಾತ್ರಾವಳಿ ದೊಡ್ಡ ಬಿಸಿನೆಸ್ ಮ್ಯಾಗ್ನೆಟ್. ಸಣ್ಣ ಪ್ರಮಾಣದ ರಾಜಕೀಯ ಮುಖಂಡರೂ ಸಹ. ಕೋಮಲ್ ಓದಿದ್ದು ಕಮ್ಮಿಯಾದರೂ ಸಾಹಿತ್ಯ, ಸಂಗೀತ, ಇತ್ಯಾದಿಗಳಲ್ಲಿ ಸಿಕ್ಕಾಪಟ್ಟೆ ಆಸಕ್ತಿ ಮತ್ತು ಜ್ಞಾನ ಹೊಂದಿದ್ದಾನೆ. ಯಾವದೇ ವಿಷಯದ ಬಗ್ಗೆ ರಸವತ್ತಾಗಿ ಮಾತಾಡಬಲ್ಲ. ನೋಡಲು ಅಷ್ಟು ಚಂದವಿದ್ದು, ರಸವತ್ತಾಗಿ ಮಾತಾಡುತ್ತಾನೆ ಅಂದರೆ ಮುಗಿದೇ ಹೋಯಿತು. ಅದಕ್ಕೇ ಅವನು ಧಾರವಾಡದ ಲವರ್ ಬಾಯ್ ಅಂತಲೇ ಖ್ಯಾತ.

ಕ್ರಿಕೆಟರ್ ಇಮ್ರಾನ್ ಖಾನ್ (ಕೋಮಲ್ ಜಾತ್ರಾವಳಿ ಸುಮಾರು ಹೀಗೇ ಇದ್ದಾನೆ)

ಸುಮಾರು ಹನ್ನೆರೆಡು-ಹದಿಮೂರು ಗೆಳತಿಯರಿದ್ದಾರೆ ಕೋಮಲನಿಗೆ. ಎಲ್ಲರೂ ಖಾಂದಾನಿ ಮಹಿಳೆಯರೇ. ಅವರಲ್ಲಿ ಕೆಲವರು ಪತಿಯನ್ನು ಬಿಟ್ಟವರು. ಇನ್ನು ಕೆಲವರು ಪತಿಯನ್ನು ಮೂಲೆಗೆ ತಳ್ಳಿ ನಮ್ಮ ಲವರ್ ಬಾಯ್ ಜೊತೆ ಖುಲ್ಲಂ ಖುಲ್ಲಾ ಅಫೇರ್ ಇಟ್ಟುಕೊಂಡ ಲಿಬರಲ್ ಮಾದರಿಯ ಮಂದಿ. ಇನ್ನು ಕೆಲವರು ಸಣ್ಣ ವಯಸ್ಸಿನ ವಿಧವೆಯರು. ಹೆಚ್ಚಿನವರು ಶಾಲೆ, ಕಾಲೇಜ್ ಶಿಕ್ಷಕಿ ಮತ್ತು ಪ್ರೊಫೆಸರ್ ಮಂದಿ. ಕೆಲವರು ಸರ್ಕಾರಿ ಉದ್ಯೋಗಿಗಳು. ಗೆಳತಿಯರ ಜೊತೆ ಕೋಮಲ್ ಸಾಹೇಬರದ್ದು ಭಾಳ sophisticated ಅನ್ನುವಂತಹ ಸಂಬಂಧ. ಆ ಕಾರಣಕ್ಕೇ ಅವನಿಗೆ ಒಂದು ತರಹದ ಗೌರವ ಇದೆ.

ಡಾ. ಮಾನಸಿಯ ಮನೆಯಲ್ಲಿ ಇಂತದೊಂದು ಖತರ್ನಾಕ್ ಘಟನೆಯಾಗಿದೆ ಅಂತ ಓದಿದ ಕೋಮಲ್ ಮಾನಸಿ ಬಗ್ಗೆ ನೆನಪುಮಾಡಿಕೊಳ್ಳತೊಡಗಿದ. ಅವನಿಗಿಂತ ಮೂರ್ನಾಕು ವರ್ಷ ಚಿಕ್ಕವಳು ಆಕೆ. ಕುಟುಂಬಗಳ ಮಧ್ಯೆ ಪರಿಚಯವೂ ಇತ್ತು. ಒಂದೇ ಮಾಧ್ವ ಮಠಕ್ಕೆ ಸೇರಿದವರು. ಮತ್ತೆ ಮಾನಸಿಯ ತಂದೆ ಪ್ರೊ. ಪಾಂಡುರಂಗಾಚಾರ್ ಕುಲಕರ್ಣಿ ತುಂಬ ಪ್ರತಿಭಾನ್ವಿತರು. ಅವರೂ ಸಹ ಮನಃಶಾಸ್ತ್ರದ ಪ್ರಾಧ್ಯಾಪಕರೇ ಆಗಿದ್ದರು. ಈಗ ಕೆಲವೇ ತಿಂಗಳ ಹಿಂದೆ ಅವರು, ಅವರ ಧರ್ಮಪತ್ನಿ ಗಂಗಾಬಾಯಿ ತೀರಿಹೋದರು.

ಪ್ರೊ. ಪಾಂಡುರಂಗಾಚಾರ್ ಕುಲಕರ್ಣಿ ಮತ್ತು ಗಂಗಾಬಾಯಿ ದಂಪತಿಗಳಿಗೆ ಎಷ್ಟೋ ವರ್ಷಗಳವರೆಗೆ ಮಕ್ಕಳೇ ಇರಲಿಲ್ಲ. ಪ್ರೊಫೆಸರ್ ಸಾಹೇಬರು ನಲವತ್ತು ದಾಟಿದ ಮೇಲೆ ಒಂದು ಹೆಣ್ಣುಮಗು ಹುಟ್ಟಿತು. ಅವಳೇ ಮಾನಸಿ. ತಂದೆ ಹೇಳಿ ಕೇಳಿ ಮನಃಶಾಸ್ತ್ರದ ಪ್ರೊಫೆಸರ್. ಮಾನಸಿ ಅಂತ ಹೆಸರಿಟ್ಟುಬಿಟ್ಟರು. ಆವತ್ತು ಅವರಿಗೆ ಗೊತ್ತಿರಲಿಕ್ಕೆ ಇಲ್ಲ ಬಿಡಿ, ಒಂದು ದಿವಸ ಆ ಹುಡುಗಿ ಸಹಿತ ಪ್ರಸಿದ್ಧ ಮನಃಶಾಸ್ತ್ರಜ್ಞೆಯಾಗಿ ತಯಾರಾಗುತ್ತಾಳೆ ಅಂತ.

ಅಪ್ಪ ಅಮ್ಮನ ಎಲ್ಲ ಒಳ್ಳೆ ಗುಣಗಳನ್ನು ಬರೋಬ್ಬರಿ ಪಡೆದುಕೊಂಡು ಬಂದಿದ್ದಳು ಮಾನಸಿ. ಅಮ್ಮ ಗಂಗಾಬಾಯಿ ರೂಪದ ಖನಿ. ತಂದೆ ಕೂಡ ಎತ್ತರಕ್ಕೆ ತುಂಬ ಸ್ಪುರದ್ರೂಪಿಯಾಗಿದ್ದರು. ಹಾಗಾಗಿ ಮಾನಸಿ ಕೂಡ ಎತ್ತರಕ್ಕೆ ಕೆಂಪಕೆಂಪಗೆ ನೋಡಲು ಮುದ್ದುಮುದ್ದಾಗಿದ್ದಳು. ಬಾಲ್ಯದಲ್ಲಿ ಎಲ್ಲ ಸಹಜವಾಗಿಯೇ ಇತ್ತು. ಅಷ್ಟೇ ಹುಡುಗಿ ಮಾನಸಿ ಸ್ವಲ್ಪ ಅಂತರ್ಮುಖಿ. ಜಾಸ್ತಿ ಮಾತುಕತೆಯಿಲ್ಲ. ಗೆಳತಿಯರೂ ಅಷ್ಟಕಷ್ಟೇ. ಬಹಳ ಕಮ್ಮಿ. ಆಕೆಗೆ ತಾನಾಯಿತು, ತನ್ನ ಪುಸ್ತಕಗಳಾಯಿತು, ತನ್ನ ಚಿತ್ರಕಲೆಯಾಯಿತು. ಅದು ಬಿಟ್ಟರೆ ಮನೆ ಹತ್ತಿರದಲ್ಲೇ ರೈಲ್ವೆ ಸ್ಟೇಷನ್ ಇತ್ತು. ತಾಸುಗಟ್ಟಲೆ ಅಲ್ಲಿ ಹೋಗಿ ಕೂತುಬಿಡುತ್ತಿದ್ದಳು.

ಮಾನಸಿ ಓದಿನಲ್ಲಿ ಸಿಕ್ಕಾಪಟ್ಟೆ ಪ್ರತಿಭಾವಂತೆ. ತಂದೆಯಿಂದ ಬಂದಿರಬೇಕು ಪ್ರತಿಭೆ ಅಂದುಕೊಂಡರು ಎಲ್ಲರೂ. ಇರಬಹುದು ಬಿಡಿ. ಪ್ರೊ. ಪಾಂಡುರಂಗಾಚಾರ್ ಕುಲಕರ್ಣಿ ಕೂಡ ಎಲ್ಲ ಕಡೆ ರಾಂಕ್ ಪಡೆದಿದ್ದರು. ಮಗಳು ಮಾನಸಿ ಕೂಡ ಯಾವಾಗಲೂ ಮೊದಲನೇ ರಾಂಕ್ ಬರುತ್ತ, ಎಲ್ಲ ತರಹದ ಸ್ಪರ್ಧೆಗಳಲ್ಲಿ ಬಹುಮಾನ ಗೆಲ್ಲುತ್ತ ಶಿಕ್ಷಕರ ಹೆಮ್ಮೆಯ ವಿದ್ಯಾರ್ಥಿನಿಯಾಗಿ ತಯಾರಾಗುತ್ತಿದ್ದಳು.

ಹತ್ತನೇ ತರಗತಿಗೆ ಬರುವ ಹೊತ್ತಿಗೆ ಮಾನಸಿ beauty with brains ಅಂತಲೇ ಖ್ಯಾತಳಾಗಿ ಹೋದಳು. ನೋಡಿದರೆ ಹಳೆ ಕಾಲದ ಚಿತ್ರತಾರೆ ಸುಲಕ್ಷಣಾ ಪಂಡಿತ್ ಕಂಡಂಗೆ ಕಾಣುತ್ತಿದ್ದಳು. ಎಲ್ಲರೂ ಹಾಗೆಂದರೆ ಈಕೆಗೆ ಮಾತ್ರ ಸಿನಿಮಾ, ನಟಿಯರು ಇತ್ಯಾದಿಗಳ ಬಗ್ಗೆ ಖಬರೇ ಇಲ್ಲ. ಹತ್ತನೇ ಕ್ಲಾಸಿನ ಪರೀಕ್ಷೆ ಮುಗಿಸುವ ಹೊತ್ತಿಗೆ ಮಾನಸಿ ಬರೋಬ್ಬರಿ ಐದಡಿ ಒಂಬತ್ತು ಇಂಚಿನ ಅಪರೂಪದ ಸುಂದರಿ. ಸರಳ ಸುಂದರಿ. ಮೇಕ್ಅಪ್ ಗೀಕಪ್ ಕೇಳಲೇಬೇಡಿ. ಅದರ ಬಗ್ಗೆಯೆಲ್ಲ ಆಕೆ ತಲೆಕೆಡಿಸಿಕೊಂಡಿದ್ದೇ ಇಲ್ಲ. ಹಿಂದೆ ಬಿದ್ದ ಪಡ್ಡೆ ಹುಡುಗರು ಅವರೇ ಬೋರಾಗಿ ಕಾಡುವದನ್ನು ಬಿಟ್ಟರು. ಅವರು ಹಿಂದೆ ಬಿದ್ದಿದ್ದು, ನಂತರ ಬಿಟ್ಟಿದ್ದು ಯಾವದೂ ಆಕೆಗೆ ಗೊತ್ತಿಲ್ಲ. ಅಷ್ಟೊತ್ತಿಗೆ ಆಕೆ ಕೂಡ ಮನಃಶಾಸ್ತ್ರವನ್ನೇ ತಿಂದುಂಡು ಉಟ್ಟು ಅದರಲ್ಲೇ ಮುಂದುವರಿಯಬೇಕು, ಸಂಶೋಧನೆ ಮಾಡಬೇಕು ಅಂತ ನಿರ್ಧರಿಸಿಯಾಗಿತ್ತು.

ನಟಿ ಸುಲಕ್ಷಣಾ ಪಂಡಿತ್ (ಮಾನಸಿ ಸ್ವಲ್ಪ ಹೀಗೇ ಇದ್ದಾಳೆ )

ಹತ್ತನೆ ತರಗತಿಗೆ ಬರುವ ಹೊತ್ತಿಗೆ ಮಾನಸಿ ಸಿಕ್ಕಾಪಟ್ಟೆ ಸೈಕಾಲಜಿ ಪುಸ್ತಕಗಳನ್ನು ಓದಿ ಮುಗಿಸಿದ್ದಳು. ಹೇಳಿಕೇಳಿ ತಂದೆಯೇ ಸೈಕಾಲಜಿ ಪ್ರೊಫೆಸರ್. ಮನೆಯಲ್ಲೇ ದೊಡ್ಡ ಲೈಬ್ರರಿ ಇತ್ತು. ಇವಳು ಮೊದಲೇ ಪುಸ್ತಕದ ಹುಳು. 'ಮಗಳು ತಮ್ಮ ಹಾಗೆಯೇ ಮನಃಶಾಸ್ತ್ರದಲ್ಲಿ ತುಂಬ ಆಸಕ್ತಿ ಬೆಳೆಸಿಕೊಳ್ಳುತ್ತಿದ್ದಾಳೆ,' ಅಂತ ಖುಷಿಯಾದ ತಂದೆ ಕೂಡ ಅವಳ ಆಸಕ್ತಿಗೆ ನೀರೆರೆಯುತ್ತ ಹೋದರು. ಮಾನಸಿ ತಂದೆ ಜೊತೆ ಏನೇನೋ ಚರ್ಚಿಸುತ್ತಿದ್ದಳು. ಲೈಬ್ರರಿಯಿಂದ ಹೆಚ್ಚಿನ ಪುಸ್ತಕಗಳನ್ನು ತರಿಸಿಕೊಂಡು ಓದುತ್ತಿದ್ದಳು. ಹತ್ತನೇ ತರಗತಿ ಮುಗಿಯುವವ ಹೊತ್ತಿಗೆ ಸೈಕಾಲಜಿಯಲ್ಲಿ ಎಂಎ ಓದಿದವರಕಿಂತ ಹೆಚ್ಚಿನ ಜ್ಞಾನ ಆಕೆ ಪಡೆದುಕೊಂಡಿದ್ದಳು ಅಂತ ಪ್ರೊಫೆಸರ್ ಸಾಹೇಬರ ಅಭಿಪ್ರಾಯ.

ಹತ್ತನೇ ತರಗತಿ ಪರೀಕ್ಷೆ ಮುಗಿಯಿತು. ಆಕೆ ರಾಜ್ಯಕ್ಕೆ ಒಂದು ಉನ್ನತ ಸ್ಥಾನ ಪಡೆಯುವದರ ಬಗ್ಗೆ ಮಾನಸಿಯ ಶಿಕ್ಷಕರಿಗೆ ಯಾವದೇ ಸಂಶಯವಿರಲೇ ಇಲ್ಲ. ಅಷ್ಟು ಜಾಣೆ ಆಕೆ. ಫಲಿತಾಂಶ ಬಂತು. ಇಡೀ ರಾಜ್ಯಕ್ಕೆ ಮೊದಲನೇ ಸ್ಥಾನ ಮಾನಸಿ ಪಡೆದುಕೊಂಡಿದ್ದಳು. ಎಲ್ಲರೂ ಸಿಕ್ಕಾಪಟ್ಟೆ ಸಂತೋಷಪಟ್ಟರೆ ಮಾನಸಿ ಮಾತ್ರ ನಿರ್ಭಾವುಕಳು. ರಿಸಲ್ಟ್ ಬಂದ ಸಂಜೆ ಸಂಯುಕ್ತ ಕರ್ನಾಟಕದ ವರದಿಗಾರ ಮನೆಗೆ ಬಂದಿದ್ದ. ಮೊದಲ ಸ್ಥಾನ ಬಾಚಿಕೊಂಡ ವಿಜೇತೆಯ ಸಂದರ್ಶನ ಮಾಡಿ ಒಂದು ಫೋಟೋ ತೆಗೆದುಕೊಂಡು ಹೋಗಲಿಕ್ಕೆ.

ಪ್ರಥಮ ರಾಂಕ್ ಬಂದಿದ್ದಕ್ಕೆ ಮನೆಯಲ್ಲಿ ಮಧ್ಯಾನ ವಿಶೇಷ ಊಟವಾಗಿತ್ತು. ಒಂದಿಬ್ಬರು ಆಪ್ತೇಷ್ಟರು ಬಂದಿದ್ದರು. ಗಡದ್ದ ಊಟ ಮಾಡಿ, ಯಾವದೋ ಪುಸ್ತಕ ಓದುತ್ತಿದ್ದ ಮಾನಸಿ ನಿದ್ದೆಗೆ ಜಾರಿದ್ದಳು. ಸಂಜೆ ಹೊತ್ತಿಗೆ ಚಹಾ ಕುಡಿಯಲು ಕರೆದಾಗಲೇ ಎಚ್ಚರ. ಎಂದಿನಂತೆ ಮುಖ ತೊಳೆದು, ಕೂದಲು ಬಾಚಿಕೊಂಡು, ಬಿಂದಿ ಇಟ್ಟುಕೊಂಡು, ಕನ್ನಡಿಯಲ್ಲಿನ ಪ್ರತಿಬಿಂಬಕ್ಕೆ ಒಂದು ಸ್ಮೈಲ್ ಕೊಟ್ಟು ಕೆಳಗೆ ಬಂದರೆ ವರದಿಗಾರ ಕೂತಿದ್ದ. ಅವನಿಗೆ ಪೇಢಾ, ಚಹಾದ ಸತ್ಕಾರ ಮಾಡಿದ್ದರು ಪ್ರೊ. ಕುಲಕರ್ಣಿ. ರಾಂಕ್ ಬಂದವರ ಮನೆಗೆ ಹೋದರೆ ಧಾರವಾಡ ಪೇಢೆ ಕೊಡಲಿಲ್ಲ ಅಂದರೆ ಹೇಗೆ?

ವರದಿಗಾರನಿಗೆ ನಮಸ್ಕಾರ ಹೇಳಿ ಮಾತಾಡಲು ಕುಳಿತಳು ಮಾನಸಿ. ವರದಿಗಾರ ಏನೇನೋ ಕೇಳಿದ. ಅಪರೂಪಕ್ಕೆ ಎಲ್ಲೋ ಒಮ್ಮೆ ಯಶಸ್ಸು ಸಾಧಿಸಿದವರು ಮಾತಾಡುವದು ತುಂಬ ಜಾಸ್ತಿ. ಈ ಹುಡುಗಿಯೂ ಸಿಕ್ಕಾಪಟ್ಟೆ ಕೊರೆದಾಳು ಅಂತ ಪೆನ್ನು, ಪ್ಯಾಡು ತಯಾರು ಮಾಡಿಕೊಂಡೇ ಕೂತಿದ್ದ. ಮಾನಸಿ ಹೇಳಿದ್ದು ಇಷ್ಟೇ. 'ಶಾಲೆಯವರು ಮಾಡಿದ ಪರೀಕ್ಷೆಗಳಲ್ಲಿ ಸಹ ಸುಮಾರು ಇಷ್ಟೇ ಅಂಕಗಳು ಬರುತ್ತಿದ್ದವು. ಅಷ್ಟು ಅಂಕಗಳಿಗೆ ರಾಜ್ಯಕ್ಕೇ ಪ್ರಥಮ ರಾಂಕ್ ಬಂದಿದೆ. ಸಂತೋಷವಾಗಿದೆ. ಅಷ್ಟೇ. ಮತ್ತೇನೂ ಜಾಸ್ತಿ ಹೇಳಲಾರೆ,' ಅಂದವಳೇ ಒಂದು ಸುಂದರ ನಗೆ ಸೂಸಿದಳು. ಮುಗಿಯಿತು ಅನ್ನುವ ಹಾಗೆ ಏಳಲು ತಯಾರಾದಳು. ವರದಿಗಾರನೂ ಖುಷ್. 'ನಿಮ್ಮ ಫೋಟೋ ಬೇಕು. ಕ್ಯಾಮೆರಾ ಇದೆ. ಇಲ್ಲೇ ತೆಗೆದುಕೊಳ್ಳಬಹುದು. ನೀನು ಬೇಕಾದರೆ ಹೋಗಿ ತಯಾರಾಗಿ ಬಾರಮ್ಮ. ನಾನು ಕಾಯುತ್ತೇನೆ,' ಅಂದ ವರದಿಗಾರ. 'ಫೋಟೋಕ್ಕೂ ಸಹ ರೆಡಿ,' ಅಂದ ಮಾನಸಿ, ಧರಿಸಿದ್ದ ಪರಕಾರ ಪೋಲ್ಕಾವನ್ನೇ ಸ್ವಲ್ಪ ಸರಿಮಾಡಿಕೊಂಡು, ಮುಂಗುರುಳು ಸ್ವಲ್ಪ ಹಿಂದೆ ಮುಂದೆ ಮಾಡಿಕೊಂಡು, ಸ್ವಲ್ಪ ಪಕ್ಕಕ್ಕೆ ಸರಿದು, ಸೆಟೆದು ಕೂತು, ಒಂದು ಭಯಂಕರ ಸ್ಮೈಲ್ ಕೊಟ್ಟಳು. ವರದಿಗಾರ ಚಕಿತನಾದ. ರಾಂಕ್ ಬಂದವರು, ಅದೂ ಹುಡುಗಿಯರ ಮನೆಗೆ ಹೋದರೆ ಫೋಟೋ ತೆಗೆಯಲು ತಾಸುಗಟ್ಟಲೇ ಕಾಯಬೇಕು. ಯಾಕೆಂದರೆ ಅವರ ಸಿಂಗಾರವೇ ಮುಗಿಯುವದಿಲ್ಲ. ಯಾರಿಗೆ ಬೇಕು ಆ ಉಸಾಬರಿ ಅಂತ ಅದಕ್ಕೇ ಶಾಲೆಯಿಂದಲೇ ಪಾಸ್ಪೋರ್ಟ್ ಫೋಟೋ ಎತ್ತಿ ಬಿಡುತ್ತಿದ್ದರು. ಈಕೆಯ ಮನೆಗೆ ಬಂದರೆ ಇದ್ದ ಸ್ಥಿತಿಯಲ್ಲಿಯೇ ಫೋಟೋ ತೆಗೆದುಕೊಳ್ಳಿ ಅನ್ನುತ್ತಿದ್ದಾಳೆ. 'ಅಜೀಬ್ ವಿಚಿತ್ರ ಹುಡುಗಿ,' ಅಂದುಕೊಂಡ ವರದಿಗಾರ ಫೋಟೋ ತೆಗೆದುಕೊಂಡ. ಮತ್ತೊಮ್ಮೆ ಅಭಿನಂದನೆ ಸಲ್ಲಿಸಿ, ಧನ್ಯವಾದ ಹೇಳಿ ಹೊರಟ.

ಮಾನಸಿ ಕುಲಕರ್ಣಿ, SSLC ಪ್ರಥಮ ರಾಂಕ್ ವಿಜೇತೆ ಬಗ್ಗೆ ಮರುದಿನ ಪೇಪರಿನಲ್ಲಿ ಚಿಕ್ಕ ಚೊಕ್ಕ ಲೇಖನ. ಶಾಲೆಯ ಶಿಕ್ಷಕರು ಒಂದಿಷ್ಟು ಒಳ್ಳೆ ಮಾತು ಹೇಳಿದ್ದರು. ಪಾಲಕರು ಒಂದಿಷ್ಟು ಖುಷಿ ಪಟ್ಟಿದ್ದರು. ಮಾನಸಿಯಂತೂ ಏನು ಹೇಳಿದ್ದಳು ಅಂತ ಗೊತ್ತೇ ಇದೆ. ಜೊತೆಗೆ ಆಕೆಯ ಫೋಟೋ. 'ವಾವ್! beauty with brains. ಥೇಟ್ ನಟಿ ಸುಲಕ್ಷಣಾ ಪಂಡಿತ್ ಇದ್ದ ಹಾಗೇ ಇದ್ದಾಳೆ,' ಅಂತ ಮಂದಿ ಅಂದುಕೊಂಡರು. ಅದು ಮಾನಸಿ ಮನೆಯವರ ಕಿವಿಗೂ ಬಿತ್ತು. 'ಎಷ್ಟು ಛಂದ ಇದ್ದೀ ನಮ್ಮವ್ವಾ ಮಾನಸೀ. ಅಷ್ಟೇ ಎಷ್ಟು ಎತ್ತರ ಇದ್ದೀ ಮಾರಾಳ? ನಿನಗ ಎಲ್ಲಿಂದ ನಿನಗಿಂತ ಎತ್ತರದ ಹುಡುಗನ್ನ ಹುಡುಕೋಣ?' ಅನ್ನುತ್ತ ಮನೆಯಲ್ಲಿದ್ದ ವೃದ್ಧ ಅಜ್ಜಿಯೊಂದು ಲಟಿಕೆ ಮುರಿದು ಮಾನಸಿಯ ದೃಷ್ಟಿ ತೆಗೆದಿದ್ದಳು. ಮಾನಸಿ ಮಾತ್ರ ಯಾವದೋ ಮನಃಶಾಸ್ತ್ರದ ಪುಸ್ತಕ ಹಿಡಿದುಕೊಂಡೇ ಕೂತಿದ್ದಳು. ಪ್ರಥಮ ರಾಂಕ್ ಬಂದಿದ್ದು, ಮಂದಿ ಸಿಕ್ಕಾಪಟ್ಟೆ ಹೊಗಳಿದ್ದು, ಮೆದುಳಿರುವ ಸುಂದರಿ ಅಂತ ಹೇಳಿದ್ದು ಎಲ್ಲ ಆಕೆ ಮೇಲೆ ಏನೂ ಪ್ರಭಾವ ಬೀರಲೇ ಇಲ್ಲ. ಒಂದು ದೃಷ್ಟಿಯಲ್ಲಿ ನೋಡಿದರೆ ಸ್ಥಿತಪ್ರಜ್ಞೆ ಆಕೆ.

ಇಂತಿರ್ಪ ಮಾನಸಿ ಮನೆಯಲ್ಲಿ ಒಂದು ದೊಡ್ಡ ಅವಗಢ ಆಗಿದೆ ಅಂತ ಪೇಪರಿನಲ್ಲಿ ಓದಿದ ಪ್ಲೇಬಾಯ್ ಕೋಮಲ್ ಜಾತ್ರಾವಳಿಗೆ ಇದೆಲ್ಲ ನೆನಪಾಯಿತು. ಮಾನಸಿ SSLC ಮುಗಿಸಿದಾಗ ಆತ ಬಿಎ ಎರಡನೇ ವರ್ಷದಲ್ಲಿದ್ದ. ಮಾನಸಿಯ ತಂದೆ ಅವನ ಗುರುಗಳು. ಮತ್ತೆ ಪ್ಲೇಬಾಯ್ ಜಾತ್ರಾವಳಿಯ ಕಣ್ಣಿಗೆ ಬೀಳದ ಸುಂದರಿಯರೇ ಇರಲಿಲ್ಲ. ಆದರೆ ಮಾನಸಿ ಪುಸ್ತಕದ ಹುಳು ಅಂತ ತಿಳಿದಿದ್ದ ಜಾತ್ರಾವಳಿ ಸಹೋದರರು ಆಕೆಯ ಸುದ್ದಿಗೇ ಹೋಗಿರಲಿಲ್ಲ. ಮತ್ತೆ ಜಾತ್ರಾವಳಿಗೆ ಕಂಪನಿ ಕೊಡಲು ಕರ್ನಾಟಕ ಕಾಲೇಜಿನಲ್ಲಿಯೇ ಬೇಕಾದಷ್ಟು ಜನ ಫಾಸ್ಟ್ ಸುಂದರಿಯರಿದ್ದರು. ಹಾಗಿದ್ದಾಗ ಹೈಸ್ಕೂಲಿನ ಚಿಣ್ಣ ಹುಡುಗಿಯನ್ನು ಯಾಕೆ ಹುಡುಕಿಕೊಂಡು ಹೋದಾನು ಕೋಮಲ್ ಜಾತ್ರಾವಳಿ?

ಮಾನಸಿಯ ಹಿಂದಿನ ದಿನಗಳ ಬಗ್ಗೆ ಇದೆಲ್ಲ ಯೋಚನೆ ಮಾಡುತ್ತ, ಚಹಾ ಹೀರುತ್ತ ಕೂತ ಕೋಮಲ್ ಜಾತ್ರಾವಳಿ. ಅವನ ಮೊಬೈಲ್ ಫೋನ್ ರಿಂಗಾಯಿತು. ಕಾಲರ್ ಐಡಿ ನೋಡಿದ ಕೋಮಲ್ ಪೋಲಿ ನಗೆ ನಕ್ಕ. 'ಹಾ! ಹಾ! ಗೆಳತಿ ಫೋನ್. ಇವತ್ತು ಶನಿವಾರ. ಶಾಲೆ ಹಾಫ್ ಡೇ. ಮಧ್ಯಾನ ಮನೆಗೆ ಬಾ ಅಂತ ಹೇಳಲು ಫೋನ್ ಮಾಡಿರಬೇಕು. ನನಗೂ ಆಕೆಯ ನೆನಪಾಗುತ್ತಿತ್ತು,' ಅಂದುಕೊಂಡವ, ಮಧ್ಯಾನದ excitement ಊಹಿಸಿಕೊಂಡು, ತೊಡೆ ಉಜ್ಜಿಕೊಂಡು ಫೋನಲ್ಲಿ ಹಲೋ ಅಂದ. ಫೋನ್ ಮಾಡಿದಾಕೆ ಒಬ್ಬ ಶಿಕ್ಷಕಿ. ವಿವಾಹಿತೆ. ಅಪರೂಪದ ಸುಂದರಿ. ಅದು ಏನು ಕರ್ಮವೋ ಗೊತ್ತಿಲ್ಲ. ಆದರೆ ಕೋಮಲ್ ಜಾತ್ರಾವಳಿಯ ಮಾಯೆಯಲ್ಲಿ ಸಿಕ್ಕಿಬಿಟ್ಟಿದ್ದಾಳೆ. ಖುಲ್ಲಂ ಖುಲ್ಲಾ ಅಫೇರ್ ಇಟ್ಟುಕೊಂಡುಬಿಟ್ಟಿದ್ದಾಳೆ. ಆಕೆಯ ಗಂಡನಿಗೂ ಎಲ್ಲ ಗೊತ್ತು. ಏನೂ ಮಾಡುವ ಹಾಗಿಲ್ಲ. ಆತನೂ ಶಿಕ್ಷಕನೇ. ಅದೇನೋ ಈಕೆಯ ಸೌಂದರ್ಯ ನೋಡಿ ಮದುವೆಯಾಗಿದ್ದ.  ಈಕೆಯ ಮನೆಯವರು 'ಈಕೆ ಆಗಲೇ ಸುಮಾರು ಗೆಣೆಕಾರರನನ್ನು ಹಿಡಿದು ಬಿಟ್ಟು ಮಾಡಿದ್ದಾಳೆ. ಹಾಗೇ ಬಿಟ್ಟರೆ ಮಾರ್ಯಾದೆ ಹೋದೀತು,' ಅಂತ ಹೇಳಿ, ಅವನಿಗೆ ಕಟ್ಟಿ, ಕೈತೊಳೆದುಕೊಂಡಿದ್ದರು. ಆಕೆಗೆ ಅವನು ಸ್ವಲ್ಪವೂ ಇಷ್ಟವಿರಲಿಲ್ಲ. ಏನು ಮಾಡುವದು? ಸ್ವಲ್ಪ ದಿವಸ ಸಂಸಾರ ಮಾಡುವಷ್ಟರಲ್ಲಿ ಕೋಮಲ್ ಜಾತ್ರಾವಳಿ ಎಲ್ಲೋ ತಗಲಾಕಿಕೊಂಡಿದ್ದ. ಕಿವಿ ಹತ್ತಿರ ಬಾಯಿ ತಂದು, ಕುತ್ತಿಗೆಗೆ ಬಿಸಿಯುಸಿರು ಬಿಡುತ್ತ, 'ವಿಜಯಾ ಮೇಡಂ, ಎಷ್ಟು ಛಂದ ಇದ್ದೀರೀ? ಯಾವಾಗ ಕೂಡಿ ನಾಟಕ ಮಾಡೋಣ?' ಅಂದಿದ್ದ ಕೋಮಲ್. ಯಾವದೋ ನಾಟಕದ ಸಂಬಂಧ ಇಬ್ಬರದೂ ಭೆಟ್ಟಿಯಾಗಿತ್ತು. ಕುತ್ತಿಗೆ ಮೇಲೆ ಸುರಸುಂದರಾಂಗ ಕೋಮಲ್ ಜಾತ್ರಾವಳಿಯ ಬಿಸಿಯುಸಿರನ್ನು ಸೋಕಿಸಿಕೊಂಡಿದ್ದ ಆಕೆ ಕರ್ಪೂರದ ಗೊಂಬೆಯಂತೆ ಕರಗಿ ಕರಗಿ ಹೋಗಿದ್ದಳು. ಮುಂದೆ ಕೆಲವೇ ದಿವಸಗಳಲ್ಲಿ ಕೋಮಲ್ ಜಾತ್ರಾವಳಿಗೆ ಸರ್ವಸ್ವವನ್ನೂ ಅರ್ಪಿಸಿಕೊಂಡಿದ್ದಳು. ಬೇರೊಬ್ಬನೊಂದಿಗೆ ಮದುವೆಯಾಗಿ ಹನಿಮೂನಿಗೆ ಹೋಗುವ ಮೊದಲೇ ಕೋಮಲ್ ಜಾತ್ರಾವಳಿ ರುಚಿ ನೋಡಿ, ಚಪ್ಪರಿಸಿ, 'ಡಾರ್ಲಿಂಗ್ ನಾನೇ ಬರಲೇನು ಹನಿಮೂನಿಗೆ?' ಅಂತ ತುಂಟತನ ಮಾಡಿದ್ದ. ನಕ್ಕು ಅವನನ್ನು ತಳ್ಳಿ ಹೋಗಿದ್ದಳು ವಿಜಯಾ ಟೀಚರ್. ನಂತರ ಶುರುವಾದದ್ದೇ ಅವರ ಖುಲ್ಲಂ ಖುಲ್ಲಾ ಅಫೇರ್. ಸೀದಾ ಮನೆಗೇ ಕರೆದುಬಿಡುತ್ತಿದ್ದಳು. ಕೋಮಲ್ ಬಂದು ಮನೆ ಮುಂದೆ ಗಾಡಿ ಹಚ್ಚಿದ ಅಂದರೆ ಆಕೆಯ ಅಧಿಕೃತ ಗಂಡ ಮನೆಯಿಂದ ಹೊರ ಬಂದು ಗಿಡಗಳಿಗೆ ನೀರು ಹಾಕುವ ಕೆಲಸ ಶುರು ಮಾಡುತ್ತಿದ್ದ. ಸುತ್ತಮುತ್ತಲಿನ ಮಂದಿಗೆ ಅದೇ ಜೋಕು. 'ಮಾಸ್ತರ್ರು ಗಿಡಕ್ಕೆ ನೀರು ಬಿಟಗೋತ್ತ ನಿಂತಾರ ಅಂದ್ರ ಜಾತ್ರಾವಳಿ ಕೋಮ್ಯಾ ಒಳಗ ಸಂಗೀತ ಕಚೇರಿ ನಡೆಸ್ಯಾನ ಮಸ್ತಾಗಿ' ಅಂತ. ಇದೆಲ್ಲ ಆ ಮಾಸ್ತರಣಿಗೆ, ಕೋಮಲಗೆ ಎಲ್ಲ ಗೊತ್ತಿತ್ತು. ಕೆಲವು ಸಂಬಂಧಗಳೇ ಹಾಗೆ. ಎಲ್ಲವನ್ನೂ ಮೀರಿ ಬೆಳೆದುಬಿಟ್ಟಿರುತ್ತವೆ. ಇದೆಲ್ಲ ನೆನಪಾಯಿತು ಕೋಮಲ್ ಜಾತ್ರಾವಳಿಗೆ ಆಕೆಯ ಫೋನ್ ನೋಡಿ. ಒಂದು ನಿಮಿಷ ಮಾತಾಡಿ, ಮಧ್ಯಾನ ಬರುತ್ತೇನೆ ಅಂದ. ಯಾವದೋ ಹೊಸ ನಾಟಕದ ಬಗ್ಗೆ ಮಾತಾಡುವದಿದೆ ಅಂದಳು. ತನ್ನ ಹತ್ತಿರ ಆ ನಾಟಕ ಇದೆ ಅಂದ ಕೋಮಲ್. ಮಾಸ್ತರಿಣಿ ಸಿಕ್ಕಾಪಟ್ಟೆ excite ಆಗಿಬಿಟ್ಟಳು. ಅದೇ ಕೋಮಲ್ ಜಾತ್ರಾವಳಿ ಎಂಬ ಪ್ಲೇಬಾಯ್ ಮನುಷ್ಯನ ಸ್ಪೆಷಾಲಿಟಿ. ಎಲ್ಲ ಕಡೆ ಕಲೆ, ಸಾಹಿತ್ಯ, ಸಂಗೀತದ ಟಚ್. ಕೋಮಲ್ ಜಾತ್ರಾವಳಿಯ ಜೊತೆ ಅಫೇರ್ ಅಂದ ಮಾತ್ರಕ್ಕೆ ಕೇವಲ ಹಸಿಬಿಸಿ ಕಾಮ ಮಾತ್ರ ಅಲ್ಲ. ಆಲ್ಲವೇ ಅಲ್ಲ.

ಡಾ. ಮಾನಸಿ ಆವತ್ತು ಪ್ಲೇಬಾಯ್ ಕೋಮಲ್ ಜಾತ್ರಾವಳಿಯ ಮನದಲ್ಲಿ ನಿಂತುಬಿಟ್ಟಳು. ಈಗಿತ್ತಲಾಗೆ ಆಕೆಯನ್ನು ಯಾವಾಗ ನೋಡಿದ್ದೆ ಅಂತ ನೆನಪು ಮಾಡಿಕೊಂಡ. ನೆನಪಾಯಿತು. ಎರಡು ಮೂರು ತಿಂಗಳ ಹಿಂದೆ ಯಾವದೋ ರೋಟರಿ ಕ್ಲಬ್ಬಿನ ಸಮಾರಂಭದದಲ್ಲಿ ಇಬ್ಬರೂ ವೇದಿಕೆ ಹಂಚಿಕೊಂಡಿದ್ದರು. ಮಾನಸಿ ಅಮೇರಿಕಾದಿಂದ ಧಾರವಾಡಕ್ಕೆ ಹಿಂತಿರುಗಿ ಬಂದು ಸುಮಾರು ಎರಡು ವರ್ಷವಾಗಿತ್ತು. ಆ ಸಮಾರಂಭದಲ್ಲಿ ಅವರಿಬ್ಬರೂ ಜಾಸ್ತಿ ಮಾತಾಡಿರಲಿಲ್ಲ. ಸುಮ್ಮನೆ ಹಲೋ ಹಾಯ್ ಅಂದಿದ್ದರು. ಮಾನಸಿಗೆ ಕೋಮಲ್ ಯಾರು ಅಂತ ಗೊತ್ತಿತ್ತು. ಕೋಮಲನಿಗೂ ಅಷ್ಟೇ.

ಮಾನಸಿಯ ನೆನಪಲ್ಲೇ ಕೋಮಲ್ ಸ್ನಾನ, ನಾಷ್ಟಾ ಎಲ್ಲ ಮುಗಿಸಿದ. ಬಿಸಿನೆಸ್ ಅದರ ಪಾಡಿಗೆ ಅದು ನಡೆಯುತ್ತಿರುತ್ತದೆ. ತಮ್ಮ ಸುಂದರೇಶ ಹೋಗಿರುತ್ತಾನೆ. ಅಣ್ಣ ಕೋಮಲನ ಭಕ್ತ ಅವನು. ಅವನೂ ಸಣ್ಣ ಪ್ರಮಾಣದ ಪ್ಲೇಬಾಯ್. ಅಣ್ಣನಿಗೆ ಗೆಳತಿಯರು ಹೆಚ್ಚಾದರೆ ತಮ್ಮನಿಗೆ ಕೊಡುತ್ತಾನೆ. ಆದರೆ ತಮ್ಮ ಸುಂದರೇಶ ಅಣ್ಣ ಕೋಮಲನಷ್ಟು ಜಾಬಾದ್ ಅಲ್ಲ. ಹಾಗಾಗಿ ಈಕಡೆ ಅಣ್ಣ ಕೋಮಲ್ ಹೊಸ ಹೊಸ ಮಾಲು ಹುಡುಕಿಕೊಂಡು ಓಡಾಡುತ್ತಿದ್ದರೆ ತಮ್ಮ ಸುಂದರೇಶ್ ಕೂತು ಬಿಸಿನೆಸ್ ನೋಡುತ್ತಾನೆ. ತಂದೆ ದಿನಕರ ಉಸ್ತುವಾರಿ ನೋಡುತ್ತಾರೆ.

ಮಧ್ಯಾನದ ಹೊತ್ತಿಗೆ ತನ್ನ ದುಬಾರಿ ಕಾರಿನಲ್ಲಿ ಕೋಮಲ್ ತನ್ನ ಆವತ್ತಿನ ಗೆಳತಿ ವಿಜಯಾ ಟೀಚರ್ ಮನೆ ಕಡೆ ಹೊರಟ. ಏನೂ ಭಿಡೆ ಗಿಡೆ ಇಲ್ಲ. ಹೋಗಿ ಕಾಲಿಂಗ್ ಬೆಲ್ ಒತ್ತಿದ. ಸೋಡಾ ಗ್ಲಾಸ್ ಹಾಕಿಕೊಂಡು ಬಂದು ಬಾಗಿಲು ತೆಗೆದವ ವಿಜಯಾ ಟೀಚರ್ ಗಂಡ. ಬಡಪಾಯಿ. ಮಾತಾಡಲಿಲ್ಲ. ಆತ ಗಾರ್ಡನ್ನಿಗೆ ನೀರು ಹಾಕುವ ಕೆಲಸಕ್ಕೆ ತಯಾರಾದ. ಇನ್ನು ಎರಡು ಮೂರು ಘಂಟೆ ಅವನಿಗೆ ಅದೇ ಕೆಲಸ.

ಹಿಂದೆಯೇ ವಿಜಯಾ ಟೀಚರ್ ಬಂದಳು. 'ಆಹಾ, ಎಷ್ಟು ಸುಂದರಿ ಈಕೆ!' ಅಂದುಕೊಂಡ ಕೋಮಲ್. ಸೀದಾ ಆಕೆಯ ಹಿಂದೆ ಆಕೆಯ ಬೆಡ್ರೂಮಿಗೆ ನುಗ್ಗಿ, ಆಕೆಯ ಮಂಚದ ಮೇಲೆ ಅಸಡಾ ಬಸಡಾ ಬಿದ್ದುಕೊಂಡ. ವಿಜಯಾ ಟೀಚರ್ ಪಕ್ಕಕ್ಕೆ ಬಂದು ಕೂತಳು. ಆಕೆಯ ಕೂದಲುಗಳೊಂದಿಗೆ ಸ್ವಲ ಆಡಿದ. ಆಕೆಗೆ ಕಚಗುಳಿಯಾಗುವಂತೆ ಎಲ್ಲೆಲ್ಲೋ ಕೈಬಿಟ್ಟ. ಆಕೆ ಹುಸಿಕೋಪದಿಂದ ಮುನಿದು ಮಾತಾಡಿದಳು. ಕಿಟಕಿ ಪಕ್ಕದಿಂದ ಯಾರೋ ಸಣ್ಣಗೆ ಕೆಮ್ಮಿದಂತಾಯಿತು. ಅಲ್ಲೇ ನೀರು ಹಾಕುತ್ತಿದ್ದ ಮಾಸ್ತರರಿಗೆ ಹೊಟ್ಟೆಯಲ್ಲಿ ಖಾರ ಕುಟ್ಟಿದಂತಾಗಿರಬೇಕು. 'ಏ ನಿಮ್ಮ! ಏನ್ರೀ ನೀವು? ಇಲ್ಯಾಕ ಬಂದು ನಿಂತೀರಿ? ಅಷ್ಟು ದೊಡ್ಡ ಗಾರ್ಡನ್ ಅದ. ಬ್ಯಾರೆ ಕಡೆ ಹೋಗಿ ನೀರು ಹಾಕ್ರೀ,' ಅಂತ ವಿಜಯಾ ಟೀಚರ್ ಬಡಪಾಯಿ ಗಂಡನಿಗೆ ಝಾಡಿಸಿದಳು. ಕಿಡಕಿ ಧಡ್ ಅಂತ ಹಾಕಿದಳು. ಏರ್ ಕಂಡೀಶನ್ ಆನ್ ಮಾಡಿದಳು. ಗಂಡ ನೀರಿನ ಪೈಪ್ ಎಳೆಯುತ್ತ ಆಕಡೆ ಎಲ್ಲೋ ಹೋದ.

ಕೋಮಲ್ ಜಾತ್ರಾವಳಿ ಮತ್ತು ವಿಜಯಾ ಟೀಚರ್ ಹೊಸ ನಾಟಕದ ಬಗ್ಗೆ ಏನೇನೋ ಮಾತಾಡಿದರು. ಮಾತಿನ ಮಧ್ಯೆ ಹೇಗೋ ಮತ್ತೆ ಮಾನಸಿ, ಆಕೆಯ ಮನೆಯಲ್ಲಿ ಹಿಂದಿನ ದಿನ ನಡೆದ ವಿಚಿತ್ರ ಘಟನೆ ಚರ್ಚೆಗೆ ಬಂತು. 'ಅಯ್ಯೋ, ಅವಳು ನನ್ನ ಕ್ಲಾಸ್ಮೇಟ್ ಮಾರಾಯ,' ಅಂದುಬಿಟ್ಟಳು ವಿಜಯಾ ಟೀಚರ್. ಕೋಮಲ್ ಜಾತ್ರಾವಳಿ ಈಗ ಮಾನಸಿ ಬಗ್ಗೆ ತಿಳಿಯಲು ಮತ್ತೂ ಉತ್ಸುಕನಾದ. ವಿಜಯಾ ಟೀಚರಿಗೆ ಮಾನಸಿ ಬಗ್ಗೆ ಮಾತಾಡಲು ಅಷ್ಟೇನೂ ಆಸಕ್ತಿ ಇರಲಿಲ್ಲ. ಗೆಳತಿಯರಲ್ಲಿ ಹೇಗೆ ಆಸಕ್ತಿ ಹುಟ್ಟಿಸಬೇಕು ಅಂತ ಕೋಮಲನಿಗೆ ಬರೋಬ್ಬರಿ ಗೊತ್ತು. ಒಂದಿಷ್ಟು ಬರೋಬ್ಬರಿ ಪ್ಯಾರ್ ಮೊಹಬ್ಬತ್ ಮಾಡಿದ ನೋಡಿ. ವಿಜಯಾ ಟೀಚರ್ ಮೊದಲು ಸಿಕ್ಕಾಪಟ್ಟೆ ಗರಂ ಆಗಿ, ಕುದುರೆಯಂತೆ ಕೆನೆದು, ನೆಗೆದು ನೆಗೆದು, ಉತ್ಕರ್ಷಕ್ಕೆ ಹೋಗಿ, ಕೋಮಲನ ಎದೆ ಮೇಲೆ ಕುಸಿದವಳೇ, ಸಂತೃಪ್ತಿಯ ಬಿಸಿಯುಸಿರು ಬಿಡುತ್ತ, 'ಎಲ್ಲ ಹೇಳತೇನಿ ಡಾರ್ಲಿಂಗ್!' ಅಂತ ಉನ್ಮಾದಿಂದ ಕೂಗುತ್ತಿದ್ದಂತೆ ನೀರು ಹಾಕುತ್ತಿದ್ದ ಮಾಸ್ತರನ ಪೈಪಿನಿಂದ ನೀರು ಒಮ್ಮೆಲೇ ಭೋರ್ಗರೆಯಿತು. 'ಆಹ್! ಆಹ್! ಓಹ್! I am coming ಕೋಮಲ್ ಡಾರ್ಲಿಂಗ್,' ಅನ್ನುತ್ತ ವಿಜಯಾ ಟೀಚರ್ ಕೋಮಲ್ ಜಾತ್ರಾವಳಿಯಲ್ಲಿ ಒಂದಾದಳು.

ಇಬ್ಬರೂ ಬಟ್ಟೆ ಧರಿಸಿದರು. ಕೋಮಲ್ ಮಾನಸಿ ಬಗ್ಗೆ ಅರಿಯಲು ಉತ್ಸುಕನಾಗಿ ಕೂತ. ಅವನ ಎದೆಯಲ್ಲಿ ತನ್ನ ತಲೆಯಿಟ್ಟು ಅವನ ಕೈ ಸವರುತ್ತ ವಿಜಯಾ ಟೀಚರ್ ಮಾನಸಿಯ ಹಿಂದಿನ ಲೈಫಿನ ಬಗ್ಗೆ ಹೇಳತೊಡಗಿದರು.

'ಮಾನಸಿ ಹತ್ತನೇ ತರಗತಿಯಲ್ಲಿ ಇಡೀ ರಾಜ್ಯಕ್ಕೇ ಪ್ರಥಮ ಸ್ಥಾನ ಬಂದಿದ್ದು ಗೊತ್ತೇ ಇದೆ. ಎಲ್ಲರೂ ಈಕೆಯೂ ಸಹ ವಿಜ್ಞಾನ ತೆಗೆದುಕೊಂಡು ಮುಂದೆ ಡಾಕ್ಟರ ಅಥವಾ ಇಂಜಿನಿಯರ್ ಆಗುತ್ತಾಳೆ ಅಂದರೆ ಈ ಮಾನಸಿ ತಾನು ಕಲೆ (arts) ತೆಗೆದುಕೊಳ್ಳುತ್ತೇನೆ ಅಂತ ಹೇಳಿ ದೊಡ್ಡ ಬಾಂಬೇ ಹಾಕಿಬಿಟ್ಟಳು. 'ಫಸ್ಟ್ ರಾಂಕ್ ಬಂದ ಹುಡುಗಿ ಆರ್ಟ್ಸ್ ತೊಗೋತ್ತದ ಅಂತ!' ಅಂತ ಎಲ್ಲರೂ ಆಶ್ಚರ್ಯಪಟ್ಟರು. ಯಾಕೆ ಅಂತ ಕೇಳಿದರೆ ಆಕೆಗೆ ಮನಃಶಾಸ್ತ್ರ ತುಂಬ ಇಷ್ಟವೆಂದೂ, ಅದರಲ್ಲೇ ಉನ್ನತ ವಿದ್ಯಾಭ್ಯಾಸ ಮಾಡಬೇಕು ಅಂದಳು. ಮನಃಶಾಸ್ತ್ರದಲ್ಲಿ ಉನ್ನತ ಅಧ್ಯಯನವನ್ನು MBBS ನಂತರವೂ ಮಾಡಬಹುದು ಅಂದರೆ ಮಾನಸಿಗೆ ಆಗಲೇ ಸೈಕಾಲಜಿಸ್ಟ್ ಮತ್ತು ಸೈಕಿಯಾಟ್ರಿಸ್ಟ್ ನಡುವಿನ ವ್ಯತ್ಯಾಸ ಬರೋಬ್ಬರಿ ಗೊತ್ತಿತ್ತು. ಮನಸ್ಸನ್ನು ದೇಹದಂತೆ ನೋಡಿ, ದೇಹದಂತೆಯೇ ಅಭ್ಯಸಿಸಿ, ದೇಹದಂತೆಯೇ ಚಿಕಿತ್ಸೆ ಮಾಡುವ ಸೈಕಿಯಾಟ್ರಿಯಲ್ಲಿ ಆಕೆಗೆ ಆಸಕ್ತಿ ಇರಲಿಲ್ಲ. ಆಕೆಯ ಆಸಕ್ತಿ ಏನಿದ್ದರೂ ಶುದ್ಧ ಮನಃಶಾಸ್ತ್ರ ಅಂದರೆ ಸೈಕಾಲಜಿಯಲ್ಲಿ. ಅದಕ್ಕೇ ಆರ್ಟ್ಸ್ ತೆಗೆದುಕೊಂಡು ಮುಂದೆ ಸೈಕಾಲಜಿಯಲ್ಲಿ ಉನ್ನತ ಅಧ್ಯಯನ ಮಾಡುತ್ತೇನೆ ಅಂದಳು. ತಂದೆಯೇ ಖುದ್ದ ಸೈಕಾಲಜಿ ಪ್ರೊಫೆಸರ್. ಮಗಳ ಆಯ್ಕೆಯನ್ನು ಸಂಪೂರ್ಣವಾಗಿ ಬೆಂಬಲಿಸಿದರು. ತಂದೆ ಕೆಲಸ ಮಾಡುತ್ತಿದ್ದ ಕರ್ನಾಟಕ ಕಾಲೇಜನ್ನೇ ಸೇರಿದಳು. ನಾನೂ ಆರ್ಟ್ಸ್ ಸೇರಿದೆ. ಶಾಲೆಯಿಂದಲೂ ಆಕೆ ನನ್ನ ಕ್ಲಾಸ್ಮೇಟ್. ಭಾಳ ಕ್ಲೋಸ್ ಫ್ರೆಂಡ್ ಅಲ್ಲ. ಆಕೆ ಯಾವಾಗಲೂ ಸ್ವಲ್ಪ ಜಾಸ್ತಿನೇ ಅಂತರ್ಮುಖಿ. ತಾನಾಯಿತು, ತನ್ನ ಓದಾಯಿತು. ಜಾಸ್ತಿ ಯಾರ ಜೊತೆ ಮಾತುಕತೆ ಇಲ್ಲ,' ಅಂತ ವಿಜಯಾ ಟೀಚರ್ ತಮ್ಮ ಗೆಳತಿಯಾದ ಮಾನಸಿ ಕುಲಕರ್ಣಿ ಬಗ್ಗೆ ಹೇಳಿದಳು. ಕೋಮಲ್ ಜಾತ್ರಾವಳಿ ಗಮನವಿಟ್ಟು ಕೇಳುತ್ತಿದ್ದ.

ಕಥೆ ಕೇಳುತ್ತ ಕೇಳುತ್ತ ಕೋಮಲ್ ಎಲ್ಲೋ ಸರಿಯಾಗಿ ಗಿಂಡಿದ. 'you naughty boy!' ಅಂತ ಹುಸಿಮುನಿಸಿನಿಂದ ಚೀರುತ್ತ, ಶಾಕ್ ಹೊಡೆಸಿಕೊಂಡವಳಂತೆ ಜಿಗಿದಳು ವಿಜಯಾ ಟೀಚರ್. 'ಅಲ್ಲಾ, ಮಾನಸಿ ಕಥೆ ಹೇಳೋದು ನಿಲ್ಲಿಸಿಬಿಟ್ಟೆ. ಎಲ್ಲಿ ಚಾರ್ಜ್ ಮುಗಿಯಿತೇನೋ ಅಂತ ರಿಚಾರ್ಜ್ ಮಾಡಿದೆ ಜಾನೇಮನ್,' ಅನ್ನುತ್ತ ಕೋಮಲ್ ಲೊಚಲೊಚಾ ಅಂತ ಖತರ್ನಾಕ್ ಕಿಸ್ ಹೊಡೆದುಬಿಟ್ಟ. ಫುಲ್ ಕರಗಿದ ವಿಜಯಾ ಟೀಚರ್ ಮಾನಸಿ ಕಥೆ ಮುಂದುವರೆಸಿದಳು. ಆಕಡೆ ಆಕೆಯ ಗಂಡ ಒಂದು ಸರೆ ಟೈಮ್ ನೋಡಿದ. 'ಬಂದು ಇನ್ನೂ ಕೇವಲ ಒಂದೇ ಘಂಟೆಯಾಗಿದೆ. ಯಾವಾಗ ಕಳಚಿಕೊಳ್ಳುತ್ತಾನೋ ಈ ಪುಣ್ಯಾತ್ಮ?' ಅಂತ frustrated ಪತಿಯಾಗಿ ಗಿಚ್ಚಾಗಿ ನೀರು ಹಾಯಿಸಿತೊಡಗಿದ. ಈ ಪುಣ್ಯಾತ್ಮ ನೀರು ಹಾಕುವ ಅಬ್ಬರಕ್ಕೆ ಎಷ್ಟೋ ಗಿಡಗಳು ಕೊಳೆತೇ ಹೋಗುತ್ತಿದ್ದವು. ಆದರೂ ಹಾಕಬೇಕು. ಅದು ಬೇಗಂಳ ಆಜ್ಞೆ. ಕರ್ಮ.

'ಮಾನಸಿ ಪಿಯೂಸಿ ಎರಡನೇ ವರ್ಷದಲ್ಲೂ ಕಲಾ ವಿಭಾಗದಲ್ಲಿ ಇಡೀ ರಾಜ್ಯಕ್ಕೇ ಪ್ರಥಮ ರಾಂಕ್ ಬಂದಳು. ಅದು ನಿರೀಕ್ಷಿತವೇ ಆಗಿತ್ತು. ಆಕೆ ಮಾತ್ರ ತಣ್ಣಗೆ ಇದ್ದಳು. ಮುಂದೆ ಬಿಎ ಡಿಗ್ರಿಗೆ ಸೇರಿದಳು. ಆಗಲೇ ಆಕೆ ಸೈಕಾಲಜಿಯಲ್ಲಿ ಸಿಕ್ಕಾಪಟ್ಟೆ ಅಧ್ಯಯನ ಮಾಡಿಬಿಟ್ಟಿದ್ದಳು. ಎಷ್ಟೋ ಜನ ಸೈಕಾಲಜಿ ಮಾಸ್ತರುಗಳಿಗೂ ಆಕೆಯಷ್ಟು ಗೊತ್ತಿರಲಿಲ್ಲ. ಡಿಗ್ರಿ ಮಾಡುತ್ತಿರುವಾಗಲೇ ದೇಶ ವಿದೇಶದಿಂದ ಪ್ರಕಟವಾಗುತ್ತಿದ್ದ ಪ್ರಬಂಧ ಎಲ್ಲ ಓದಿ ಮುಗಿಸಿಬಿಡುತ್ತಿದ್ದಳು. ಮತ್ತೇನು? ಬಿಎ ಪದವಿಯ ಅಷ್ಟೂ ಬಂಗಾರದ ಪದಕ ಆಕೆಯೇ ಗೆದ್ದಳು. ಆಕೆ ಗೋಲ್ಡನ್ ಗರ್ಲ್. ನಾನೂ ಹೋಗಿದ್ದೆ ಘಟಿಕೋತ್ಸವಕ್ಕೆ. ಅಬ್ಬಾ! ಎಷ್ಟು ಚಂದಾಗಿ ಕಾಣುತ್ತಿದ್ದಳು ಮಾರಾಯಾ. ಬಂಗಾರದ ಪದಕಗಳ ಮಾಲೆ ಧರಿಸಿದ ನಟಿ ಸುಲಕ್ಷಣಾ ಪಂಡಿತ್ ಮಾದರಿ ಕಾಣುತ್ತಿದ್ದಳು,' ಅಂತ ಹೇಳಿದ ವಿಜಯಾ ಟೀಚರ್ ಕೋಮಲ್ ಜಾತ್ರಾವಳಿಯ ಮುಖ ನೋಡಿದಳು. ಅವನ ಸುಂದರ ಮುಖ ನೋಡಿದಾಕ್ಷಣ ಅದೇನು ಮೂಡು ಬಂತೋ ಏನೋ ಹಾಕ್ಕೊಂಡು ಲೊಚಲೊಚ ಅಂತ ಮುತ್ತಿಟ್ಟು, ಅವನ ತುಂಬಿದ ಕೆಳತುಟಿಯನ್ನು ಕಟ್ ಅಂತ ಕಡಿದಳು. ಆಕೆಗೆ ಉನ್ಮಾದ ಜಾಸ್ತಿಯಾದಾಗ ಕಂಡಲ್ಲಿ ಕಡಿಯುವ ತಲುಬು. ಒಳ್ಳೆ ರಸಪೂರಿ ಮಾವಿನ ಹಣ್ಣಿನನಂತೆ ಇರುವ ಕೋಮಲ್ ಸಿಕ್ಕಾಗ ಬಿಟ್ಟಾಳೆಯೇ?

'ಹಾಯ್! ಹಾಯ್! ಓಹ್! ಡಾರ್ಲಿಂಗ್! ಎಷ್ಟು ಜೋರಾಗಿ ಕಡಿದುಬಿಟ್ಟೇ?' ಅಂತ ಕೋಮಲ್ ಪೇಚಾಡಿಕೊಂಡ. ಮೊದಲೇ ಡಜನ್ನುಗಟ್ಟಲೇ ಸಖಿಯರಿರುವ ಮನುಷ್ಯ. ಅದೆಷ್ಟು ಸಲ, ಅದೆಷ್ಟು ಜನ, ಎಲ್ಲೆಲ್ಲಿ ಕಡಿದು ಕಡಿದು ಕೊಲ್ಲುತ್ತಾರೋ ಏನೋ? ಆದರೂ ಹಾಗೆ ಕಚ್ಚಿಸಿಕೊಳ್ಳುವದರಲ್ಲೂ ಏನೋ ಒಂದು ತರಹದ ಸುಖವಿದೆ.

'ಮುಂದೇನಾತು ಡಾರ್ಲಿಂಗ್? ಬಿಎ ಮುಗಿಸಿದ ಮಾನಸಿ ಏನು ಮಾಡಿದಳು?' ಅಂತ ಕೇಳಿದ ಕೋಮಲ್.

'ಮಾನಸಿ ಎಂಎ ಡಿಗ್ರಿ ಸೇರಿದಳು. ನಾನು ಈ ಸೋಡಾ ಗ್ಲಾಸ್ ಮಾಸ್ತರನ ಮದುವೆಯಾದೆ. ನಂತರ ನಿನ್ನ ಹಿಡಿದುಕೊಂಡೆ,' ಅಂತ ಒಂದು ತರಹದ ಬೇಜಾರು ಮಾಡಿಕೊಂಡ ವಿಜಯಾ ಟೀಚರ್ ಮಾತು ಮುಂದುವರೆಸಿದಳು, 'ನನಗೆ ಆವಾಗ ಮಾನಸಿ ಜೊತೆ ಡೈರೆಕ್ಟ್ ಕಾಂಟಾಕ್ಟ್ ಇರಲಿಲ್ಲ. ಉಳಿದ ಗೆಳತಿಯರಲ್ಲಿ ಕೆಲವರು ಎಂಎ ಕೋರ್ಸಿಗೆ ಸೇರಿದ್ದರು. ಅವರು ಹೇಳುತ್ತಿದ್ದರು ಆಕೆಯ ಬಗ್ಗೆ ಸುದ್ದಿ. ಬಿಎ ಮುಗಿಯುವ ಹೊತ್ತಿಗೆ ಮಾನಸಿಗೆ ತನ್ನ ಭವಿಷ್ಯದ ಬಗ್ಗೆ ಒಂದು ಸ್ಪಷ್ಟ ಕಲ್ಪನೆ ಬಂದಿತ್ತು. ಸೈಕಾಲಜಿಯಲ್ಲಿ ಯಾವ ವಿಷಯದಲ್ಲಿ ಹೆಚ್ಚಿನ ಪರಿಣಿತಿ ಸಾಧಿಸಬೇಕು ಅಂತ ಸಾಲಿಡ್ ಐಡಿಯಾ ಬಂದಿತ್ತು. ಆಕೆ ಆಯ್ದುಕೊಂಡಿದ್ದ ವಿಷಯ ಅದೇನೋ personality disorders ಅಂತೆ. ನಾನು ಅದರ ಹೆಸರು ಕೇಳಿದ್ದೆ. ಯಾಕೆಂದರೆ ನಂದೂ ಸಹ ಸೈಕಾಲಜಿ ಮೈನರ್ ನೋಡು. ಮಾನಸಿ ಎಂಎ ಮಾಡುತ್ತಿರುವಾಗಲೇ ಆ ವಿಷಯದ ಬಗ್ಗೆ ಸಾಕಷ್ಟು ಓದಿಕೊಂಡಿದ್ದಳು. ರಜೆಯಲ್ಲಿ ಬೆಂಗಳೂರಿನ ನಿಮ್ಹಾನ್ಸ್, ಅಲ್ಲಿ ಇಲ್ಲಿ ಹೋಗಿ ಪ್ರಾಜೆಕ್ಟ್ ಮಾಡಿಬಂದಿದ್ದಳು. ಆಗಲೇ ಯಾರೋ ಆಕೆಗೆ ಅಮೇರಿಕಾದ ಕೋಲಂಬಿಯಾ ಯುನಿವರ್ಸಿಟಿಯ ಸೈಕಾಲಜಿಯ ಖ್ಯಾತ ಪ್ರೊಫೆಸರ್ ಹೆಂಡರ್ಸನ್ ಅವರ ಬಗ್ಗೆ ಹೇಳಿದ್ದರು. ಆತ personality disorders ವಿಷಯದಲ್ಲಿ ವಿಶ್ವಪ್ರಸಿದ್ಧ ಅಂತೆ. ಮಾನಸಿ ಸುಮ್ಮನೆ ಅವನ ಜೊತೆ ಪತ್ರ ವ್ಯವಹಾರ ಶುರುವಿಟ್ಟುಕೊಂಡಳು. ಮಾನಸಿ ಕೇಳುತ್ತಿದ್ದ ಪ್ರಶ್ನೆಗಳಿಂದ, ಆಕೆ ಬರೆದು ಕಳಿಸುತ್ತಿದ್ದ ಪ್ರಬಂಧಗಳಿಂದ ಪ್ರೊಫೆಸರ್ ಹೆಂಡರ್ಸನ್ ತುಂಬ ಇಂಪ್ರೆಸ್ ಆಗಿದ್ದ. 'PhD ಮಾಡಲು ಇಲ್ಲೇ ಬಾ. ಪೂರ್ತಿ ಸ್ಕಾಲರ್ಷಿಪ್, ಸ್ಟೈಪೆಂಡ್ ಎಲ್ಲ ಕೊಡುತ್ತೇನೆ. ನೀನು ಅರ್ಧ PhD ಆಗಲೇ ಮುಗಿಸಿಯೇಬಿಟ್ಟಿದ್ದಿಯಾ. ಅಷ್ಟು ಬ್ರಿಲಿಯಂಟ್ ಆಗಿವೆ ನಿನ್ನ ಪ್ರಬಂಧಗಳು. ಬಾ ಇಲ್ಲಿ. Personality Disorders ಮೇಲೆ ಹಿಂದೆಂದೂ ಆಗಿರದ ಸಂಶೋಧನೆ ಮಾಡೋಣವಂತೆ,' ಅಂತ ಓಪನ್ ಆಹ್ವಾನ ಕೊಟ್ಟೇಬಿಟ್ಟ ಪ್ರೊಫೆಸರ್ ಹೆಂಡರ್ಸನ್. ಇಷ್ಟಾದ ಮೇಲೆ ಮಾನಸಿ ಇನ್ನೂ ಉತ್ಸಾಹದಿಂದ ಓದತೊಡಗಿದಳು. ಈಗ ಒಂದು ಹೆಚ್ಚಿನ ಒತ್ತಡ ಕೂಡ ಇತ್ತು. ಅಷ್ಟು ದೊಡ್ಡ ಪ್ರೊಫೆಸರ್ ಹೆಂಡರ್ಸನ್ ಕೆಳಗೆ ಕೆಲಸ ಮಾಡಬೇಕು. ಅವರಿಟ್ಟಿರುವ ವಿಶ್ವಾಸ ಉಳಿಸಿಕೊಳ್ಳಲೇಬೇಕು ಅಂತ ಮತ್ತೂ ಸಿಕ್ಕಾಪಟ್ಟೆ ಓದಿ, ಓದಿ, ಟೈಮ್ ಸಿಕ್ಕಾಗೆಲ್ಲ ಧಾರವಾಡ ಮೆಂಟಲ್ ಹಾಸ್ಪಿಟಲಿನಲ್ಲಿ ಕೆಲಸ ಮಾಡಿ ಮಾಡಿ, personality disorders ವಿಷಯದಲ್ಲಿ ಸಾಕಷ್ಟು ನೈಪುಣ್ಯತೆ ಪಡೆದುಕೊಂಡಳು. ಮುಂದೆ ಎಂಎ ಮುಗಿಯಿತು. ಎಣಿಸಿದಂತೆ ಎಲ್ಲ ಬಂಗಾರದ ಪದಕ ಮತ್ತೊಮ್ಮೆ ಬಾಚಿಕೊಂಡಳು ಸುಂದರಿ. ಮತ್ತೊಮ್ಮೆ ಗೋಲ್ಡನ್ ಗರ್ಲ್ ಆದಳು. ಅಮೇರಿಕಾಕ್ಕೆ ಹೊರಟು ನಿಂತಳು. ಒಂದೆರೆಡು ಕಡೆ ಆಕೆಗೆ ಸನ್ಮಾನವೂ ಆಗಿತ್ತು. ನಾನೂ ಹೋಗಿದ್ದೆ. ಹಳೆ ಗೆಳತಿ ಎಂಬ ಪ್ರೀತಿಯಿಂದಲೇ ಮಾತಾಡಿಸಿದ್ದಳು. ಅದೇ ಕೊನೆ. ನಂತರ ಟಚ್ ಇಲ್ಲ. ಈಗ ಒಂದೆರೆಡು ವರ್ಷದ ಹಿಂದೆ ಅಮೇರಿಕಾ ಬಿಟ್ಟು ವಾಪಸ್ ಧಾರವಾಡಕ್ಕೆ ಬಂದು ನೆಲೆಸಿದ್ದಾಳಂತೆ. ಮೆಂಟಲ್ ಹಾಸ್ಪಿಟಲಿನಲ್ಲಿ ಕೆಲಸ, ಯುನಿವರ್ಸಿಟಿಯಲ್ಲಿ ವಿಸಿಟಿಂಗ್ ಪ್ರೊಫೆಸರ್ ಅಂತೆಲ್ಲ ಬ್ಯುಸಿ ಇದ್ದಳು ಅಂತ ಕೇಳಿದ್ದೆ. ಅಷ್ಟೇ. ಈಗ ನೋಡಿದರೆ ಯಾರೋ ಆಕೆಯ ಬೆಕ್ಕನ್ನು ಕೊಂದು, ಬರೋಬ್ಬರಿ ಪ್ರೊಫೆಷನಲ್ taxidermy ಮಾಡಿ ಕಳಿಸಿಬಿಟ್ಟಿದ್ದಾರೆ ಅಂತಾಯಿತು. ಏನು ಕಥೆಯೋ ಏನೋ?' ಅಂತ ಮಾನಸಿಯ ಜೀವನದ ಕಥೆ ಹೇಳಿ ಮುಗಿಸಿದಳು ವಿಜಯಾ ಟೀಚರ್.

ಅಷ್ಟರಲ್ಲಿ ಕೋಮಲ್ ಜಾತ್ರಾವಳಿಯ ಫೋನ್ ರಿಂಗಾಯಿತು. ನೋಡಿದರೆ ಮತ್ತೊಬ್ಬ ಗೆಳತಿ. 'ಅಯ್ಯೋ! ಶಿವನೇ! ಕಾಪಾಡು ತಂದೆ!' ಅಂತ ಮನದಲ್ಲೇ ಅಂದುಕೊಂಡ ಕೋಮಲ್ ಫೋನ್ ಎತ್ತಿದ. ಅದೇ ಕೋರಿಕೆ. 'ಯಾವಾಗ ಸಿಗೋಣ? ಭಾಳ ದಿವಸ ಆತು. ನಮ್ಮನಿಯವರು ಟೂರ್ ಹೊಂಟಾರ. ಬಂದು ಇಲ್ಲೇ ಇದ್ದುಬಿಡಲ್ಲ ಡಾರ್ಲಿಂಗ್?' ಅಂತ ಮತ್ತೊಬ್ಬ ಗೆಳತಿಯ ಆಗ್ರಹ. ಏನೋ ಹೇಳಿದ ಕೋಮಲ್ ಫೋನ್ ಕಟ್ ಮಾಡಿದ. ವೇಳೆ ನೋಡಿದ. ಸಂಜೆ ಸುಮಾರು ಐದಾಗುತ್ತ ಬಂದಿತ್ತು. ಮನೆಗೆ ಹೋಗಿ, ಜಾಗಿಂಗ್ ಮಾಡಲು ಹೊರಡುವ ಹೊತ್ತು. ಮುಂಜಾನೆ ಮತ್ತು ಸಂಜೆಯ ಜಾಗಿಂಗ್ ಎಂದೂ ತಪ್ಪಿಸಿದವನೇ ಅಲ್ಲ ಕೋಮಲ್. ಅದಕ್ಕೇ ಅಷ್ಟು ಮಸ್ತಾಗಿ ಬಾಡಿ ಮಡಗಿದ್ದಾನೆ. ದಿನಕ್ಕೆ ಕಮ್ಮಿ ಕಮ್ಮಿ ಅಂದರೂ ಆರೆಂಟು ಕಿಲೋಮೀಟರ ಓಡೇ ಓಡುತ್ತಾನೆ.

ವಿಜಯಾ ಟೀಚರ್ ತೆಕ್ಕೆಯಿಂದ ಬಿಡಿಸಿಕೊಂಡು ಎದ್ದು ಬಂದ ಕೋಮಲ್. 'ನಾಟಕದ ಬಗ್ಗೆ ಜಾಸ್ತಿ ಏನೂ ಮಾತಾಡಲೇ ಇಲ್ಲ. ಈಗ ಮಾತಾಡೋಣ ಬಾ,' ಅಂತ ಕರೆದಳು ವಿಜಯಾ ಟೀಚರ್. ಆ ನಾಟಕ ಆತನಿಗೆ ಬರೋಬ್ಬರಿ ಗೊತ್ತೆಂದೂ, ಚಿಂತೆ ಮಾಡುವ ಕಾರಣ ಇಲ್ಲ ಅಂತ ಹೇಳಿದ ಕೋಮಲ್ ಮತ್ತೊಮ್ಮೆ ಎಲ್ಲೆಲ್ಲೊ ಬರೋಬ್ಬರಿ ಗಿಂಡಿ, ಹಿಂಡಿ, ಮತ್ತೊಂದಿಷ್ಟು ಕಿಸ್ ಹೊಡೆದ. ಕಣ್ಣು ಮುಚ್ಚಿದ ವಿಜಯಾ ಟೀಚರ್ ಫುಲ್ ಖುಷ್. ಮನಸ್ಸಿಲ್ಲದ ಮನಸ್ಸಿನಿಂದ ಕೋಮಲನನ್ನು ಬಿಟ್ಟಳು. ಹೊರಗೆ ಬಂದು ಬಾಗಿಲು ತೆಗೆದೆರೆ ಆಕೆಯ ಗಂಡ ನೀರು ಹಾಕುವದನ್ನು ಮುಗಿಸಿ, ಪೈಪ್ ಸುತ್ತುತ್ತ ನಿಂತಿದ್ದ. ಅವನಿಗೂ ಒಂದು flying salute ಕೊಟ್ಟ ಕೋಮಲ್. ಬಿಕನಾಸಿ ಗಂಡ ದಪ್ಪ ಸೋಡಾ ಗ್ಲಾಸಿನ ಹಿಂದಿನಿಂದ ಕೆಟ್ಟ ಖರಾಬಾಗಿ ನೋಡಿದ. 'ಆಕಳು ಸಾಕಿದ್ದು ನಾನು. ಹಾಲು ಈ ನನ್ಮಗ ಕುಡಿತಾನೆ. ಅದೂ ಫುಲ್ ಓಸಿ ಬಿಟ್ಟಿ,' ಅಂತ ಉರಿದುಕೊಂಡ. ಪಾಪ! ಬಡಪಾಯಿ ಗಂಡ. ಘಟವಾಣಿ ಹೆಂಡತಿ. ಒಳ್ಳೆ ಕಾಂಬಿನೇಶನ್.

ವಿಜಯಾ ಟೀಚರ್ ಮನೆಯಿಂದ ಕಾರೆತ್ತಿ ಮನೆ ಕಡೆ ಹೊರಟ ಕೋಮಲ್. ಓಪನ್ ಟಾಪ್ ಕಾರಿನಲ್ಲಿ ಬಂದಿದ್ದ. ಒಂದೆರೆಡು ಹನಿ ಮಳೆ ಬಿತ್ತು. ಟಾಪ್ ಏರಿಸಿದ. ಮನೆ ಕಡೆ ಡ್ರೈವ್ ಮಾಡಿದ. ದಾರಿಯಲ್ಲಿ ಯಾವದೋ ಒಂದು ಕಾರ್ ಎದುರಾಯಿತು. ಡ್ರೈವ್ ಮಾಡುತ್ತಿದ್ದಾಕೆ ಒಬ್ಬ ಸುಂದರ ಮಹಿಳೆ. 'ಈಕೆ ಮಾನಸಿ ಇರಬಹುದೇ?' ಅಂತ ಅನ್ನಿಸಿತು. ಕೋಮಲ್ ಮುಖದ ಮೇಲೆ ಒಂದು ನಗು ಮೂಡಿತು. 'ಯಾಕೋ ಸಿಕ್ಕಾಪಟ್ಟೆ ಮಾನಸಿ ಗುಂಗು,' ಅನ್ನುತ್ತ ಮನೆ ಮುಟ್ಟಿದ.

ಭಾಗ - ೩

ಆವತ್ತೊಂದು ದಿನ ರಾತ್ರಿ ಸುಮಾರು ಹತ್ತು ಘಂಟೆ ಸಮಯ. ಮಾನಸಿಯ ಚಿಕ್ಕಪ್ಪ ಕಿಟ್ಟಿ ಕಾಕಾ ಕುಟೀರದಂತಹ ತನ್ನ ಔಟ್ ಹೌಸಿನಲ್ಲಿ ಏನೋ ಓದುತ್ತ ಕೂತಿದ್ದ. ಏನೋ ಅಂದರೆ ಆಂಗ್ಲ ಸಾಹಿತ್ಯ. ಅವನು ಮಾಡುವದು ಎರಡೇ ಕೆಲಸ. ಒಂದು ಓದುತ್ತಾನೆ. ಓದಿದ್ದು ಬೋರಾದಾಗ ಜೋರಾಗಿ ಪಾಠ ಮಾಡುತ್ತಾನೆ. ಅಷ್ಟೇ. ಯಾವದೋ ತಮಾಷೆ ಪುಸ್ತಕ ಇರಬೇಕು. ಜೋರಾಗಿ ನಗುತ್ತ, ತೊಡೆ ತಟ್ಟಿ ತಟ್ಟಿ ನಗುತ್ತ ಓದುತ್ತಿದ್ದ ಕಿಟ್ಟಿ ಕಾಕಾ. ಮುಂದೆ ಚಿಕ್ಕ ಕಪ್ಪಿನಲ್ಲಿ ಚಹಾ ಇತ್ತು. ಸಂಜೆ ಊಟ ತಂದುಕೊಟ್ಟಾಗ, ಒಂದು ಥರ್ಮಾಸಿನಲ್ಲಿ ಚಹಾ ಸಹಿತ ತುಂಬಿಸಿ ತಂದು ಇಟ್ಟಿರುತ್ತಾಳೆ ಕೆಲಸದ ಪದ್ಮಾವತಿ.

ಮಾನಸಿಯ ದೊಡ್ಡ ಮನೆಯ ಒಂದು ಮೂಲೆಯಲ್ಲಿ ಒಂದು ಸಣ್ಣ ಶೆಡ್ಡು ಇದೆ. ಎಲ್ಲ ತರಹದ ಉಪಕರಣಗಳನ್ನು ಅದರಲ್ಲಿ ಇಟ್ಟಿದ್ದಾರೆ. ಗುದ್ದಲಿ, ಸಲಿಕೆ, ಪಿಕಾಸಿ, ಕೊಡಲಿ, ಇತ್ಯಾದಿ. ಕೆಲಸದವರು ಬಂದಾಗ ಬೇಕಾಗುವ ಎಲ್ಲ ತರಹದ ಉಪಕರಣಗಳು. ಮೊನ್ನೆ ಮೊನ್ನೆ ಮಾತ್ರ ಕೊಡಲಿಗೆ ಹೊಸ ಕಾವು ಹಾಕಿಸಿ, ಬರೋಬ್ಬರಿ ಹರಿತ ಮಾಡಿಸಿ ತಂದಿಟ್ಟಿದ್ದಾನೆ ಕೆಲಸ ದ್ಯಾಮಪ್ಪ.

ಯಾರೋ ಆ ಉಪಕರಣಗಳನ್ನು ಇಟ್ಟಿದ್ದ ಶೆಡ್ ಕಡೆ ಬಂದರು. ಶಿಸ್ತಾಗಿ ಚಾವಿ ಉಪಯೋಗಿಸಿಯೇ ಕೀಲಿ ತೆಗೆದರು. ಒಳಗೆ ಕಗ್ಗತ್ತಲು. ಲೈಟ್ ಮಾತ್ರ ಹಾಕಲಿಲ್ಲ. ಬ್ಯಾಟರಿ ಬೆಳಕಿನಲ್ಲಿ ಬರೋಬ್ಬರಿ ಕೊಡಲಿಯೊಂದನ್ನೇ ಆಯ್ದುಕೊಂಡರು. ಬ್ಯಾಟರಿ ಬೆಳಕಿನಲ್ಲಿ ಹೊಸದಾಗಿ ಹರಿತ ಮಾಡಿದ್ದ ಕೊಡಲಿ ಅಲಗು ಫಳಫಳ ಹೊಳೆಯಿತು. ಕೊಡಲಿ ಎತ್ತಿಕೊಂಡವರು ಕೊಡಲಿ ಅಲಗಿನ ಗುಂಟ ಬೆರಳಾಡಿಸಿದರು. ಸಿಕ್ಕಾಪಟ್ಟೆ ಹರಿತವಾಗಿತ್ತು. ಆದರೆ ಬೆರಳು ಕತ್ತರಿಸಿ ರಕ್ತ ಬರಲಿಲ್ಲ. ಯಾಕೆಂದರೆ ಅವರು ಕೈಗೆ ರಬ್ಬರ್ ಗ್ಲೋವ್ಸ್ (gloves) ಹಾಕಿಕೊಂಡಿದ್ದರು.

ಕೈಯಲ್ಲಿ ಕೊಡಲಿಯನ್ನು  ತೆಗೆದುಕೊಂಡ ಆಕೃತಿ ಜಾಸ್ತಿ ಶಬ್ದ ಮಾಡದೇ ಶೆಡ್ಡಿನ ಬಾಗಿಲು ಹಾಕಿತು. ಕಂಪೌಂಡಿನ ಹಿಂದೆ ಇದ್ದ ನಿವೃತ್ತ ಪ್ರೊಫೆಸರ್ ಕಿಟ್ಟಿ ಕಾಕಾನ ಕುಟೀರದತ್ತ ಹೊರಟಿತು. ಅಲ್ಲಿಗೆ ಹೋಗಲು ಸುಮಾರು ಒಂದು ನೂರು ಹೆಜ್ಜೆ ಹಾಕಬೇಕು. ಮಾವಿನ ಗಿಡಗಳ ಮಧ್ಯೆ ಕೊಡಲಿ ಹಿಡಿಕೊಂಡು ನಡೆಯುತ್ತಿದ್ದ ಆ ಆಕೃತಿ. ನೋಡಿದವರು ಬೆಚ್ಚಿ ಬೀಳಬೇಕು. ಆದರೆ ಎಲ್ಲರೂ  ಮಲಗಿದ್ದರು. ಎಲ್ಲ ಕಡೆ ನಿಶ್ಶಬ್ದ.

ಕಿಟ್ಟಿ ಕಾಕಾನ ಕುಟೀರದ ಮುಂದೆ ನಿಂತ ಆಕೃತಿ ಮೆಲ್ಲನೆ ಬಾಗಿಲು ತಟ್ಟಿತು. ಪುಸ್ತಕ ಓದುತ್ತ ಸಿಕ್ಕಾಪಟ್ಟೆ ತಲ್ಲಿನನಾಗಿದ್ದ ಕಿಟ್ಟಿ ಕಾಕಾಗೆ ಒಮ್ಮೆಲೇ ರಸಭಂಗವಾದಂತಾಯಿತು. ಒಮ್ಮೆ ಟೈಮ್ ನೋಡಿದ. ಸುಮಾರು ರಾತ್ರಿ ಹತ್ತೂವರೆಯ ಸಮಯ. ಕಿಡಕಿಯಿಂದ ಮೂಲ ಮನೆಯ ಮಾನಸಿಯ ಕೋಣೆಯ ಕಡೆ ನೋಡಿದ. ಮಾನಸಿಯ ರೂಮಿನಲ್ಲಿ ಲೈಟ್ ಉರಿಯುತ್ತಿರಲಿಲ್ಲ. ಒಂದು ತರಹದ ಆಶ್ಚರ್ಯವಾಯಿತು ಕಿಟ್ಟಿ ಕಾಕಾಗೆ. 'ಇಷ್ಟು ಬೇಗ ಮಲಗಿದಳೇ ಮಾನಸಿ? ಅಥವಾ ಎಲ್ಲಾದರೂ ಟೂರ್ ಮೇಲೆ ಹೋಗಿದ್ದಾಳೋ? ಟೂರ್ ಮೇಲೆ ಹೋಗುವದಾರೆ ತನಗೆ ಒಂದು ಮಾತು ಹೇಳೇ ಹೋಗುತ್ತದೆ ಆ ಹುಡುಗಿ. ಇರಲಿ ಬೇಗ ಮಲಗಿರಬೇಕು,' ಅಂತ ಅಂದುಕೊಂಡ ಕಿಟ್ಟಿ ಕಾಕಾ ಬಾಗಿಲ ತೆಗೆಯೋಣ ಅಂತ ಎದ್ದ. ಒಮ್ಮೊಮ್ಮೆ ನಾಯಿಗಳೂ ಸಹ ಬಂದು ಬಾಗಿಲು ಕೆರೆಯುತ್ತವೆ. ಅವಕ್ಕೇನು? ಇಡೀ ಕಂಪೌಂಡ್ ತುಂಬ ತಿರುಗಾಡುತ್ತ ಇರುತ್ತವೆ. ಇಲ್ಲಿ ಒಬ್ಬ ಮನುಷ್ಯ ಇರುತ್ತಾನೆ ಅಂತ ಗೊತ್ತು. ಅದಕ್ಕೇ ಆಗಾಗ ಬಂದು ಚೆಕ್ ಮಾಡುತ್ತವೆ. ಕಿಟ್ಟಿ ಕಾಕಾ ನಾಯಿಯನ್ನು ಅಷ್ಟು ಇಷ್ಟಪಡುವದಿಲ್ಲ ಅಂತ ನಾಯಿಗಳಿಗೆ ಗೊತ್ತಿಲ್ಲ. ಅದಕ್ಕೇ ಆಗಾಗ ವಿಸಿಟ್ ಕೊಟ್ಟು ಹೋಗುತ್ತಿರುತ್ತವೆ. ನಾಯಿಗಳೇ ಬಂದು ಬಾಗಿಲು ಕೆರೆಯುತ್ತಿರಬೇಕು ಅಂತ ಅಂದುಕೊಂಡ ಕಿಟ್ಟಿ ಕಾಕಾ.

ಟೇಬಲ್ ಮೇಲೆ ಪುಸ್ತಕವಿಟ್ಟ ಕಿಟ್ಟಿ ಕಾಕಾ ಎದ್ದ. ನಡು ಬಾಗಿತ್ತು. ಬಗ್ಗಿ ಬಂದೇ ಬಾಗಿಲು ತೆಗೆದು, 'ಯಾರು?' ಅನ್ನುತ್ತ, ಕನ್ನಡಕ ಮೇಲೆ ಎತ್ತಿದ. ಮುಂದೆ ನಿಂತ ಆಕೃತಿ ಮಾತಾಡಲಿಲ್ಲ. ಕೊಡಲಿಯಿಂದ ಒಂದೇ ಏಟು ಬರೋಬ್ಬರಿ ಹಾಕಿತು. ಅದೂ ಸರಿ ತಲೆ ಬುರುಡೆಗೆ. ಬುರುಡೆ ಬಿಚ್ಚೇ ಹೋಯಿತು. ಕಾಕಾನ ಗಂಟಲಿನಾಳದಿಂದ ಎದ್ದ ಕೂಗು ಹೊರಗೆ ಬರಲೇ ಇಲ್ಲ. ಕಿಟ್ಟಿ ಕಾಕಾ ಫಿನಿಶ್!

ಕೊಡಲಿಯನ್ನು ಕೋಣೆಯ ಒಳಗೆ ಬಿಸಾಡಿದ ಆಕೃತಿ ದೀಪ ಆರಿಸಿತು. ಬಾಗಿಲು ಮುಂದೆ ಮಾಡಿಕೊಂಡಿತು. ಏನೂ ಆಗಿಲ್ಲ ಅನ್ನುವ ಹಾಗೆ ಅಲ್ಲಿಂದ ಜಾಗ ಖಾಲಿ ಮಾಡಿತು. ಅದೃಷ್ಯವಾಗುವ ಮುನ್ನ ಕೈಗೆ ಧರಿಸಿದ್ದ ತನ್ನ ಹಸಿರು ಬಣ್ಣದ ಗ್ಲೋವ್ಸ್ ಗಳನ್ನು ಮಾತ್ರ ಕಿತ್ತು ಬಿಸಾಡಿತು.

ಮರುದಿನ ಮುಂಜಾನೆ ಸುಮಾರು ಆರೂವರೆ ಹೊತ್ತಿಗೆ ಚಹಾ ತೆಗೆದುಕೊಂಡು ಹೋದಳು ಕೆಲಸದ ಪದ್ಮಾವತಿ. ದಿನಾ ಅಷ್ಟೊತ್ತಿಗೆ ಚಹಾ ಕೊಡುವದು ಪದ್ಧತಿ. ಈಕಡೆ ಮಾನಸಿ ಕೂಡ ತನ್ನ ಧ್ಯಾನ, ಯೋಗ ಮುಗಿಸಿ, ಕೆಳಗೆ ಬಂದು, ಟೀವಿ ನೋಡುತ್ತ ಚಹಾ ಹೀರುತ್ತಿದ್ದಳು.

ಪದ್ಮಾವತಿಬಾಯಿ, 'ಕಾಕಾ, ಕಾಕಾ,' ಅನ್ನುತ್ತ ಬಾಗಿಲು ಬಡಿದಳು. ಬಾಗಿಲು ನಿಧಾನವಾಗಿ ಹಿಂದೆ ಹೋಯಿತು. 'ಅಯ್ಯ! ಇವರss! ಒಳಗಿಂದ ಚಿಲಕಾ ಸುದೇ ಹಾಕಿಕೊಳ್ಳದೇ ಹಾಂಗೇ ಮಲ್ಕೊಂಡುಬಿಟ್ಟಿದ್ದರು ಅಂತ ಕಾಣಿಸ್ತದ,' ಅನ್ನುತ್ತ ಒಳಗೆ ಇಣುಕಿದಳು ಪದ್ಮಾವತಿ. ಕಿಟ್ಟಿ ಕಾಕಾ ನೆಲಕ್ಕೆ ಬಿದ್ದಿದ್ದ. ತಲೆಯಲ್ಲಿ ಕೊಡಲಿ ನೆಟ್ಟಿತ್ತು. ರಕ್ತ ಮಡುಗಟ್ಟಿತ್ತು. ನೋಡಿದ ಪದ್ಮಾವತಿಬಾಯಿಯ ಕೈಯಿಂದ ಚಹಾದ ಕಪ್ಪು ಕೆಳಗೆ ಬಿದ್ದು ಚೂರುಚೂರಾಯಿತು. 'ಮಾನಸಿ! ಮಾನಸಿ! ನೋಡು ಬಾ ಇಲ್ಲೆ. ಘಾತ ಆಗ್ಯದ. ಕಿಟ್ಟಿ ಕಾಕಾಗ ಯಾರೋ ಖೂನ್ ಮಾಡ್ಯಾರ,' ಅಂತ ಹೇಳುತ್ತ,  ಜೋರಾಗಿ ಕೂಗುತ್ತ ಪದ್ಮಾವತಿ ಮನೆಕಡೆ ಓಡಿಬಂದಳು. ಅದನ್ನು ಕೇಳಿದ ಮಾನಸಿ, ಚಹಾ ಕಪ್ಪು ಕೆಳಗಿಟ್ಟು, ಟೀವಿ ಆಫ್ ಮಾಡಿ, ಹಿತ್ತಿಲ ಬಾಗಿಲ ಕಡೆಗೆ ಧಾವಿಸಿ ಬಂದಳು. ಭೂತವನ್ನು ನೋಡಿ ಬಂದಳೋ ಎನ್ನುವ ಲುಕ್ ಕೊಡುತ್ತಿದ್ದ ಪದ್ಮಾವತಿಬಾಯಿ ಏನೋ ಹೇಳಲು ಪ್ರಯತ್ನಿಸುತ್ತಿದ್ದಳು. ಮಾತು ಮಾತ್ರ ಹೊರಬರುತ್ತಿರಲಿಲ್ಲ. ಕಿಟ್ಟಿ ಕಾಕಾನ ಕುಟೀರದ ಕಡೆ ಕೈತೋರಿಸಿ ಏನೋ ಹೇಳಿದಳು. ಬಾಯಿ ಮೇಲೆ ಕೆಳಗೆ ಹೋಯಿತೇ ವಿನಃ ಆವಾಜ್ ಹೊರಬೀಳಲೇ ಇಲ್ಲ. ನೋಡೋಣ ಅಂತ ಮಾನಸಿ ಆಕಡೆ ಹೊರಟಳು. ಎರಡು ನಾಯಿಗಳು ಮುಂದೆ ಹೊರಟವು. ಆವತ್ತು ಆಕೆಗೆ ಅದೇನೆನ್ನಿಸಿತೋ ಏನೋ. ನಾಯಿಗಳಿಗೆ ಹಿಂದೆ ಬರುವಂತೆ ಆಜ್ಞೆ ಮಾಡಿದಳು ಮಾನಸಿ. ವಿಚಿತ್ರವಾಗಿ ನೋಡಿದವು ನಾಯಿಗಳು. ಆದರೆ ಆಜ್ಞೆ ಪಾಲಿಸಿ ಹಿಂದೇ ಉಳಿದವು.

ಮಾನಸಿ ಕಿಟ್ಟಿ ಕಾಕಾನ ಕುಟೀರ ಹೋಗಿ ಮುಟ್ಟಿದಳು. ಒಳಗೆ ನೋಡುವ ಮೊದಲು ಒಮ್ಮೆ ತಿರುಗಿ ಪದ್ಮಾವತಿ ಕಡೆ ನೋಡಿದಳು. ಆಕೆ, 'ನೋಡು, ನೀನೇ ನೋಡು!' ಅನ್ನುವ ಮಾದರಿಯಲ್ಲಿ ಸನ್ನೆ ಮಾಡಿದಳು. ನಾಯಿಗಳು ಹಿಂದೇ ಇದ್ದವು. ಒಳಗೆ ನೋಡಿದ ಮಾನಸಿ ಬೆಚ್ಚಿಬಿದ್ದಳು. ಈಗ ಪೂರ್ತಿ ಬೆಳಕಾಗಿತ್ತು. ಕಿಟ್ಟಿ ಕಾಕಾನ ನಿರ್ಜೀವ ದೇಹ ಬರೋಬ್ಬರಿ ಅಡ್ಡಬಿದ್ದಿತ್ತು. ಸತ್ತಿದ್ದಾನೋ ಜೀವಂತವಿದ್ದಾನೋ ಅನ್ನುವ ಪ್ರಶ್ನೆಯೇ ಇರಲಿಲ್ಲ.

ಬೆಚ್ಚಿಬಿದ್ದು ಥಂಡಾ ಹೊಡೆದಿದ್ದ ಮಾನಸಿ ಹೇಗೋ ಮಾಡಿ ಸಾವರಿಸಿಕೊಂಡು ಬಾಗಿಲನ್ನು ಮುಂದೆ ಮಾಡಿ, ದಾಪುಗಾಲಿಡುತ್ತ ಮನೆ ಕಡೆ ಬಂದಳು. ಮೊದಲು ಮಾಡಿದ ಕೆಲಸವೆಂದರೆ ಮತ್ತೆ ಪೋಲೀಸ್ ಕಂಟ್ರೋಲ್ ರೂಮಿಗೆ ಫೋನ್ ಮಾಡಿದ್ದು. ಅದೇ ಮತ್ತೆ ೧೦೦ ನಂಬರ್. 'ಮರ್ಡರ್ ಆಗಿದೆ' ಅಂದಿದ್ದೇ ಅಂದಿದ್ದು ಕಂಟ್ರೋಲ್ ರೂಮಿನ ಪೇದೆ ಹೆಚ್ಚು ವಿವರ ಕೇಳಲೇ ಇಲ್ಲ. ವಿಳಾಸ ತೆಗೆದುಕೊಂಡವ ಫೋನ್ ಇಟ್ಟೇಬಿಟ್ಟ. ಮೊನ್ನೆ ಸತ್ತ ಬೆಕ್ಕು ಪಾರ್ಸೆಲ್ ಬಂದಿದೆ ಅಂದಾಗ ತಾಸುಗಟ್ಟಲೇ ವಿವರ ಕೇಳಿದ ಮಂದಿ ಇವತ್ತು ಮನುಷ್ಯನ ಮರ್ಡರ್ ಆಗಿದೆ ಅಂದಾಕ್ಷಣ ಹೇಗೆ ಫಟಾಫಟ್ ಅಂತ ಕೆಲಸಕ್ಕೆ ಇಳಿದರು ನೋಡಿ ಅಂತ
ಅಂದುಕೊಂಡ ಮಾನಸಿ ಫೋನ್ ಇಟ್ಟಳು. ತಲೆಯತ್ತಿ ನೋಡಿದರೆ ಗಡಗಡ ನಡುಗುತ್ತ ನಿಂತಿದ್ದ ಪದ್ಮಾವತಿ ಕಂಡಳು. ನಾಷ್ಟಾ ತರಲೇ ಅಂತ ಕೇಳಿದಳು. ಬೇಡ ಎಂದಳು ಮಾನಸಿ. ಆಕೆಗೆ ಆಗಲೇ ಗೊತ್ತಾಗಿತ್ತು ಇವತ್ತು ರಜೆ ಹಾಕಲೇಬೇಕಾಗುತ್ತದೆ ಅಂತ. ಅದಕ್ಕೆ ತನ್ನ ಕಚೇರಿಗೆ ಫೋನ್ ಮಾಡಿ, ರಜೆ ಮೇಲೆ ಹೋಗುತ್ತಿರುವದಾಗಿ ಹೇಳಿದಳು. ಸಹಜವಾಗಿ ಕಾರಣ ಕೇಳಿದ್ದಕ್ಕೆ ಏನೋ ಸಬೂಬು ಹೇಳಿ ಫೋನಿಟ್ಟಳು. ಯಾಕೋ ತಲೆ ಸಿಡಿಯಲಾರಂಭಿಸಿತು. ಪದ್ಮಾವತಿಗೆ ಮತ್ತೊಂದು ಕಪ್ಪು ಚಹಾ ತರಲು ಹೇಳಿ, ಸೋಫಾದ ಮೇಲೆ ಕುಸಿದಳು. ನಾಯಿಗಳು ಬಂದು, ಮೈ ಹೊಸೆದು ಪ್ರೀತಿ ಮಾಡಿದವು.

ಹತ್ತೇ ನಿಮಿಷ. ಪೊಲೀಸರು ಬಂದೇ ಬಿಟ್ಟರು. ಧಾರವಾಡದಂತಹ ಶಾಂತ ಊರಲ್ಲಿ ಮರ್ಡರ್ ಆಗುವದು ಅಂದರೆ ಸಿಕ್ಕಾಪಟ್ಟೆ ದೊಡ್ಡ ಮಾತು. ಹತ್ತು ವರ್ಷಕ್ಕೆ ಒಂದೋ ಎರಡೋ ಆದರೆ ಅದೇ ದೊಡ್ಡದು. ಮರ್ಡರ್ ಅಂತ ಕೇಳಿದಾಕ್ಷಣ ಪೊಲೀಸರು ಸ್ವಲ್ಪ ಜಾಸ್ತಿ ಸಂಖ್ಯೆಯಲ್ಲೇ ಬಂದಿದ್ದರು. ಮೊದಲು ಬಂದಿದ್ದ ಇನ್ಸಪೆಕ್ಟರ್ ವಿನಯ್ ಖಲಸ್ಕರನೇ ಬಂದಿದ್ದ. ಅವನ ಮೇಲಿನ ಕೆಲ ಸಾಹೇಬರುಗಳೂ ಬಂದಿದ್ದರು.

ಪೋಲೀಸರ ಕೆಲಸ ನಡೆಯುತ್ತಿತ್ತು. ಅಧಿಕಾರಿಗಳು ಮಾನಸಿ ಮತ್ತು ಕೆಲಸದ ಪದ್ಮಾವತಿಬಾಯಿಯನ್ನು ಏನೇನೋ ಕೇಳುತ್ತಿದ್ದರು. ಟಿಪಿಕಲ್ ಪೋಲೀಸ್ ತನಿಖೆ. ಯಾರನ್ನೂ ಕಡೆಗಣಿಸುವಂತಿಲ್ಲ. ನಂತರ ಸತ್ತುಹೋದ ಕಿಟ್ಟಿ ಕಾಕಾನ ಬಗ್ಗೆ ಕೇಳಿದರು. ಮಾನಸಿ ಸಂಕ್ಷಿಪ್ತವಾಗಿ ಹೇಳಿದಳು. ಕಿಟ್ಟಿ ಕಾಕಾ ಉರ್ಫ್ ಕೃಷ್ಣಾಚಾರ್ಯ ಕುಲಕರ್ಣಿ ಆಕೆಯ ತಂದೆಯ ಕಿರೀ ತಮ್ಮ. ಬ್ರಹ್ಮಚಾರಿ. ಮಹಾರಾಷ್ಟ್ರದ ಸಾಂಗ್ಲೀ ಕಡೆ ಇಂಗ್ಲೀಷ್ ಮಾಸ್ತರಿಕೆ ಮಾಡಿಕೊಂಡಿದ್ದ. ವಯಸ್ಸು ಸುಮಾರು ಐವತ್ತು ಹತ್ತಿತ್ತರ ಬಂದಾಗ ವಾಲಂಟರಿ ರಿಟೈರ್ಮೆಂಟ್ ತೆಗೆದುಕೊಂಡು ವಾಪಸ್ ಧಾರವಾಡಕ್ಕೆ ಬಂದುಬಿಟ್ಟ. ಮಾನಸಿಯ ಕುಟುಂಬ ಸಂತೋಷವನ್ನೇಪಟ್ಟಿತ್ತು. ಮೊದಲೇ ಚಿಕ್ಕ ಕುಟುಂಬ. ಮತ್ತೊಬ್ಬರು ಬಂದು ಸೇರಿಕೊಳ್ಳುತ್ತಾರೆ ಅಂದರೆ ಖುಷಿಯೇ. ಆ ಕಿಟ್ಟಿ ಕಾಕಾನೋ ಮಹಾ ವಿಕ್ಷಿಪ್ತ. ಕೆಟ್ಟ ಮನುಷ್ಯನಲ್ಲ ಆದರೆ ಒಂದು ತರಹದ ಮೂಡಿ ಮನುಷ್ಯ. ತನ್ನದೇ ಆದ ಲೋಕದಲ್ಲಿ ಇರುತ್ತಾನೆ. 'ದೊಡ್ಡ ಮನೆಯಿದೆ. ಮನೆಯಲ್ಲಿ ಆರಾಮ್ ಇರಪ್ಪಾ,' ಅಂದರೆ ಮನೆಯ ಹಿಂದೆ, ಸ್ವಲ್ಪ ದೂರದಲ್ಲಿ, ಒಂದು ಮೂಲೆಯಲ್ಲಿ ಇದ್ದ ಸುಂದರ ಕುಟೀರದಂತಹ ಚಿಕ್ಕ ಔಟ್ ಹೌಸಿನ ಮೇಲೆಯೇ ಅವನ ಕಣ್ಣು. ಒಂದು ಕಾಲದಲ್ಲಿ ಅಲ್ಲೇ ಇದ್ದು ಓದುತ್ತಿದ್ದನಂತೆ. 'ಅಲ್ಲೇ ಹೋಗಿ ಇದ್ದುಬಿಡುತ್ತೇನೆ,' ಅಂದ. 'ಸರಿ ಮಾರಾಯ ಹಾಗೇ ಮಾಡು. ಊಟ ತಿಂಡಿಯಾದರೂ ನಮ್ಮ ಜೊತೆ ಮಾಡು,' ಅಂದಿದ್ದರು ಮಾನಸಿಯ ತಂದೆ. ಅವರು ಇರುವ ತನಕ ಅಷ್ಟಕ್ಕಾದರೂ ಮೂಲ ಮನೆ ಕಡೆ ಬಂದು ಹೋಗಿ ಮಾಡುತ್ತಿದ್ದ. ಈಗ ಕೆಲವು ತಿಂಗಳ ಹಿಂದೆ ಮೊದಲು ಮಾನಸಿಯ ತಂದೆ, ನಂತರ ಕೆಲವೇ ದಿನಗಳಲ್ಲಿ ಮಾನಸಿಯ ತಾಯಿ ತೀರಿ ಹೋದ ಮೇಲೆ ಆ ಪುಣ್ಯಾತ್ಮ ಮೂಲ ಮನೆಯತ್ತ ಬರುವದನ್ನೇ ನಿಲ್ಲಿಸಿಬಿಟ್ಟ. ಊಟ, ತಿಂಡಿ, ಚಹಾ ಎಲ್ಲಾ ಅಲ್ಲಿಗೇ ಸರಬರಾಜಾಗುತ್ತಿತ್ತು. ಯಾವಾಗಾದರೂ ಕಿಟಕಿಯಲ್ಲಿ ಕಂಡಾಗ ಮಾನಸಿ ಮತ್ತು ಅವನು ಕೈ ಬೀಸಿ ಹಲೋ, ಹಾಯ್ ಹೇಳುತ್ತಿದ್ದರು ಅಷ್ಟೇ. ಇನ್ನು ಮಾನಸಿ ಎಲ್ಲಿಯಾದರೂ ಊರು ಬಿಟ್ಟು ಟೂರ್ ಮೇಲೆ ಹೋಗುವದಿದ್ದರೆ ಮಾತ್ರ ಪದ್ಧತಿಯಂತೆ, ಸಂಪ್ರದಾಯದಂತೆ, ಅವನ ಕುಟೀರದ ತನಕ ಹೋಗಿ, ಒಂದೆರೆಡು ನಿಮಿಷ ಸಹಜ ಮಾತಾಡಿ, ತನ್ನ ಟೂರಿನ ವಿವರ ಹೇಳಿ, ನಮಸ್ಕಾರ ಮಾಡಿ ಬರುತ್ತಿದ್ದಳು. ನಂತರ ಬರುವಾಗ ನೆನಪಿಟ್ಟು ಏನೋ ಸಣ್ಣ ಸಾಮಾನು ಗಿಫ್ಟ್ ಅಂತ ತಂದುಕೊಡುತ್ತಿದ್ದಳು. ಕಿಟ್ಟಿ ಕಾಕಾ ಅಂತದ್ದನ್ನೆಲ್ಲ ತುಂಬ ಇಷ್ಟಪಡುತ್ತಿದ್ದ. ಮಾನಸಿಯ ತಲೆ ಮೇಲೆ ಪ್ರೀತಿಯಿಂದ ಕೈಯಾಡಿಸಿ, ಏನೇನೋ ಹಳೆ ಕಥೆ, ಮಾನಸಿ ಚಿಕ್ಕ ಮಗುವಾಗಿದ್ದಾಗಿನ ಕಥೆ ಎಲ್ಲ ಹೇಳಿ ಸಂತೋಷಪಡುತ್ತಿದ್ದ.

ಪೊಲೀಸರು ಎಲ್ಲ ಕೇಳಿದರು. ನೋಟ್ಸ್ ಮಾಡಿಕೊಂಡರು. ಕೊಲೆಯಾಗಿದ್ದ ಜಾಗದಲ್ಲಿ ಏನೇನೋ ಹುಡುಕಿದರು. ಏನೇನೋ ಸಂಗ್ರಹಿಸಿದರು. ಸಿಕ್ಕ ಬೆರಳಚ್ಚುಗಳನ್ನು ಸಂಗ್ರಹಿಸಿದರು. ಮತ್ತೆ ಮನೆಯವರ, ಕೆಲಸದವರ ಎಲ್ಲರ ಬೆರಳಚ್ಚು ತೆಗೆದುಕೊಂಡರು. ಅಧಿಕಾರಿಗಳಿಗೆ ಆಗಲೇ ಅನ್ನಿಸತೊಡಗಿತ್ತು, 'ಈ ಕೊಲೆ ಕೇಸ್ ಬಗೆಹರಿಸುವದು ಕಷ್ಟ,' ಅಂತ. ಕಿಟ್ಟಿ ಕಾಕಾ ಒಬ್ಬ ವೃದ್ಧ. ಸಾಯಲು ಅನೇಕ ಕಾರಣಗಳಿದ್ದವು. ವಯಸ್ಸೇ ದೊಡ್ಡ ಕಾರಣ. ಆದ್ರೆ ಕೊಲೆಯಾಗಿ ಸಾಯಲು ಯಾವದೇ ಕಾರಣ ಕಂಡು ಬರಲಿಲ್ಲ. ಕೊಲೆ ಅಂತ ಆದರೆ ಮೊದಲು ನೋಡುವದು ಉದ್ದೇಶ (motive). ನಂತರ ನೋಡುವದು ಫಲಾನುಭವಿಗಳು (beneficiaries) ಯಾರು ಅಂತ. ಫಲಾನುಭವಿಯಂತೂ ಮಾನಸಿಯೇ. ಯಾಕೆಂದರೆ ಆ ಕುಟುಂಬಕ್ಕೆ ಅವಳೇ ಕೊನೆಯ ಕೊಂಡಿ. ಕಿಟ್ಟಿ ಕಾಕಾ ಏನೂ ಮಹಾ ಆಸ್ತಿ ಪಾಸ್ತಿ ಬಿಟ್ಟಿರಲಿಲ್ಲ. ಮತ್ತೆ ಮಾನಸಿಗೆ ಯಾಕೆ ಬೇಕು ಚಿಲ್ಲರೆ ಆಸ್ತಿ ಪಾಸ್ತಿ? ಆಕೆಯೇ ಬೇಕಾದಷ್ಟು ದುಡಿಯುತ್ತಾಳೆ. ಅಮೇರಿಕಾದಲ್ಲಿ ಇದ್ದು ಮಾಡಿಕೊಂಡು ಬಂದಿದ್ದ ದುಡ್ಡೂ ಇದೆ. ಬಂಗಲೆ ಎಲ್ಲ ಅವಳ ಹೆಸರಲ್ಲೇ ಇದೆ. ಈ ಕೊಲೆ ಕೇಸಿನ ತನಿಖೆ ಹೇಗೆ ಮಾಡಬೇಕು ಅಂತ ತಲೆ ಕೆಡಿಸಿಕೊಂಡರು ಪೊಲೀಸರು. ಇನ್ನು ಪೋಲೀಸ್ ನಾಯಿ ಕರೆಸೋಣ ಅಂದರೆ ಅದು ಬೆಳಗಾವಿಯಿಂದ ಬರಬೇಕು. ಅದಕ್ಕೆ ಎಷ್ಟೋ ದಿವಸದ ವೇಟಿಂಗ್ ಸಹ ಇದೆ. ಅಷ್ಟಾದ ನಂತರ ಆ ನಾಯಿ ಬಂದು ಮನೆಯವರನ್ನೇ ಮೂಸುತ್ತದೆ. ಯಾಕೆಂದರೆ ಅವರೇ ಸತ್ತವನ ಸಂಪರ್ಕದಲ್ಲಿದ್ದವರು. ಅದೊಂದರ ಮೇಲೆಯೇ ಅವರನ್ನು ಎಳೆದುಕೊಂಡು ಹೋಗಿ, ಲಾಕಪ್ಪಿನಲ್ಲಿ ಹಾಕಿ ಬರೋಬ್ಬರಿ ರುಬ್ಬಿ, ಅವರು ಕೊಲೆ ಮಾಡದಿದ್ದರೂ ಅವರ ತಲೆಗೆ ಕಟ್ಟಲಿಕ್ಕೆ ಅವರು ಯಾರೋ ಅಬ್ಬೇಪಾರಿಗಳಲ್ಲ. ಊರಿನ ಗಣ್ಯರು. ಹಾಗಾಗಿ ಇದು ದೊಡ್ಡ ತಲೆಬಿಸಿಯೇ ಆಯಿತು ಪೊಲೀಸರಿಗೆ.

ಪೋಲೀಸರ ಕೆಲಸ ಮುಗಿಯುವ ಹೊತ್ತಿಗೆ ಸಂಜೆಯಾಯಿತು. ಹೆಣವನ್ನು ಪೋಸ್ಟ್ ಮಾರ್ಟಂಗೆ ಸಾಗಿಸಿದ್ದಾಯಿತು. ಅದೆಲ್ಲ ಮುಗಿದು, ಈಗ ಬಂದು ಹೆಣ ಒಯ್ಯಬಹುದು ಅಂತ ಮೆಸೇಜ್ ಬಂತು. ಅಲ್ಲೇ ಶೀತಾಗಾರದಲ್ಲೇ ಇಡಿ ಅಂತ ಹೇಳಿದಳು ಮಾನಸಿ. ದೂರದ ಮುಂಬೈಯಿಂದ ಆಕೆಯ ಕಸಿನ್ ಒಬ್ಬ ಬರಬೇಕಿದ್ದ. ಆ ಕುಲದ ಗಂಡು ಸಂತಾನ ಅಂದರೆ ಅವನೇ. ಮಾನಸಿಯ ತಂದೆ ತಾಯಿಯರ ಅಂತ್ಯಕ್ರಿಯೆ ಎಲ್ಲ ಅವನೇ ಬಂದು ನಡೆಸಿಕೊಟ್ಟು ಹೋಗಿದ್ದ. ಈಗ ಸಹ ಆವನೇ ಬಂದು ಎಲ್ಲ ಮಾಡಿಕೊಟ್ಟು ಹೋಗಬೇಕು. ಬರುತ್ತಾನೆ. ಟೈಮ್ ಬೇಕು ಅಷ್ಟೇ.

ಕಾಟಾಚಾರಕ್ಕೆ ಅಂತ ಏನೋ ಒಂದು ಊಟ ಅಂತ ಮಾಡಿ ತನ್ನ ಕೋಣೆ ಹೊಕ್ಕಳು ಮಾನಸಿ. ನಾಯಿಗಳು ಎರಡೂ ಹಿಂಬಾಲಿಸಿ ಬಂದವು. ಬೆಕ್ಕು? ಅದೆಲ್ಲಿ ಹೋಯಿತು. ಈಗ ಒಂದು ಸ್ವಲ್ಪ ದಿವಸದ ಹಿಂದೆ ಅದರ ಜೊತೆಗಾರ ಬೆಕ್ಕು ಸತ್ತು ಹೋದ ನಂತರ ಅದನ್ನು ಕಂಡೇ ಇಲ್ಲ. ಈ ಬೆಕ್ಕನ್ನೂ ಕೂಡ ಅಪಹರಿಸಿಬಿಟ್ಟರೇ? ಅದನ್ನು ಊಹಿಸಿಕೊಂಡರೇ ಮಾನಸಿಗೆ ಹೃದಯ ಕಿತ್ತು ಬಾಯಿಗೆ ಬಂತು. 'ಪದ್ದಕ್ಕಾ! ಪದ್ದಕ್ಕಾ!' ಅಂತ ಕೂಗುತ್ತ, ಮಹಡಿ ಮೆಟ್ಟಿಲು ಇಳಿದು ಕೆಳಗೆ ಬಂದಳು. ಅದೇ ಬೆಕ್ಕಿಗೆ ಹಾಲು ಅನ್ನ ಹಾಕುತ್ತಿದ್ದ ಪದ್ದಕ್ಕ ತಲೆ ಎತ್ತಿ ನೋಡಿದಳು. ಬೆಕ್ಕನ್ನು ಕಂಡು ಮಾನಸಿಗೆ ಒಂದು ದೊಡ್ಡ ರಿಲೀಫ್. 'ಸಂಗಾತಿಯನ್ನು ಕಳೆದುಕೊಂಡು, ಬೇಜಾರಾಗಿ ದೇವದಾಸ್ ಆಗಿದೆ ಅಂತ ಕಾಣುತ್ತದೆ. ಅದಕ್ಕೇ ಹೆಚ್ಚು ಕಾಣಿಸಿಕೊಂಡಿಲ್ಲ,' ಅಂತ ತನಗೆ ತಾನೇ ಹೇಳಿಕೊಂಡು, ವಾಪಸ್ ತನ್ನ ಬೆಡ್ ರೂಮಿಗೆ ಹೋದಳು. ಅರ್ಧ ದಾರಿಗೆ ಬಂದು, ಮಹಡಿ ಸ್ಟೇರ್ ಕೇಸ್ ಮೇಲೆ ನಿಂತು, ಒಡತಿಯನ್ನು ವಿಚಿತ್ರವಾಗಿ ನೋಡುತ್ತಿದ್ದ ನಾಯಿಗಳೂ ಸಹ, 'ಸದ್ಯಕ್ಕೆ ಏನೂ ಪ್ರಾಬ್ಲಮ್ ಇಲ್ಲ. ಆರಾಮಾಗಿ ಹೋಗಿ ತಾಚಿಕೊಳ್ಳಬಹುದು,' ಅನ್ನುವ ರೀತಿಯಲ್ಲಿ, ಖುಷಿಯಿಂದ ಬಾಲ ಅಲ್ಲಾಡಿಸುತ್ತ, ಮಾನಸಿಯ ಕಾಲ್ಕಾಲಿಗೆ ಅಡ್ಡ ಬರುತ್ತ, ಆಕೆಯಿಂದ ಪ್ರೀತಿಯಿಂದ ಬೈಸಿಕೊಳ್ಳುತ್ತ, ಮತ್ತಿಷ್ಟು ಖುಷಿಯಾಗಿ ಬೆಡ್ರೂಮ್ ಸೇರಿಕೊಂಡವು.

ಮಾನಸಿ ಹಾಸಿಗೆ ಮೇಲೆ ಅಡ್ಡಾದಳು. ರಾತ್ರಿ ಕೇವಲ ಒಂಬತ್ತು ಘಂಟೆ. ಎಂದಿಗಿಂತ ಬೇಗನೆ ಊಟ ಮುಗಿದಿತ್ತು. ಓದೋಣ ಅಂತ ಯಾವದೋ ಪುಸ್ತಕ ತೆಗೆದಳು. ಯಾಕೋ ಓದಲಾಗಲಿಲ್ಲ. ಮಗ್ಗುಲು ಬದಲಿಸಿದಾಗ ನಾಯಿಗಳು ನೋಡಿ, 'ಏನು ಮೇಡಂ?' ಅನ್ನುವ ಲುಕ್ ಕೊಟ್ಟವು. ಅವುಗಳನ್ನು ನೋಡಿ ಮಾನಸಿಗೆ ಒಂದು ತರಹದ ಅಕ್ಕರೆ ಬಂತು. ಆಕೆಗೆ ಮೊದಲಿಂದಲೂ ಪ್ರಾಣಿಗಳು ಅಂದರೆ ತುಂಬ ಪ್ರೀತಿ. ಆದರೆ ಸಂಪ್ರದಾಯಸ್ಥ ಮಾಧ್ವರ ಮನೆ. ತಂದೆ ತಾಯಿ ಇರುವವರೆಗೆ ಪ್ರಾಣಿಗಳನ್ನು ಇಟ್ಟುಕೊಳ್ಳುವ ಹಾಗೆ ಇರಲಿಲ್ಲ. ಮಾನಸಿ ನ್ಯೂಯಾರ್ಕಿನಲ್ಲಿ ಸುಮಾರು ಎಂಟು ವರ್ಷ ಇದ್ದಾಗ, ಆಕೆಯ ಜೊತೆಗೆ ಒಂದು ಬೆಕ್ಕು ಸದಾ ಇತ್ತು.  ಬರುವಾಗ ಆಕೆಯ ರೂಂ ಮೇಟ್ ಅದನ್ನು ತಾನೇ ಇಟ್ಟುಕೊಂಡಿದ್ದಳು. ಧಾರವಾಡಕ್ಕೆ ಬಂದ ಸ್ವಲ್ಪೇ ದಿವಸದಲ್ಲಿ ಮೊದಲು ತಂದೆ ತೀರಿಹೋದರು. ವಯಸ್ಸಾಗಿತ್ತು. ಸುಮಾರು ಎಂಬತ್ತು ವರ್ಷ. ಸ್ವಲ್ಪೇ ದಿವಸದಲ್ಲಿ ತಾಯಿ ಸಹಿತ ಹೋದಳು. ವಯಸ್ಸು ಮೂವತ್ತರ ಮೇಲಾಗಿ ಹೋದರೂ ಪ್ರೀತಿಯ ಒಬ್ಬೇ ಒಬ್ಬ ಮಗಳಿಗೆ ಮದುವೆಯೇ ಆಗಲಿಲ್ಲ ಅಂತ ಮೊದಲಿಂದ ಕೊರಗುತ್ತಿತ್ತು ಆ ತಾಯಿ ಜೀವ. ಪತಿದೇವರು ಬೇರೆ ಹೋಗಿಬಿಟ್ಟರು. ಎಲ್ಲ ಕೂಡಿ ಆಕೆ ಕೂಡ ತೀರಿಹೋದಳು. ನಂತರವೇ ಮಾನಸಿ ಗಿಚ್ಚಾಗಿ ಪ್ರಾಣಿಗಳನ್ನು ತಂದು ಸಾಕಿಕೊಂಡಿದ್ದು. ಎರಡು ಪರ್ಷಿಯನ್ ಬೆಕ್ಕು, ಎರಡು ಲ್ಯಾಬ್ರಡಾರ್ ನಾಯಿ ತಂದೇಬಿಟ್ಟಳು. ಕಿಟ್ಟಿ ಕಾಕಾ ಒಬ್ಬನೇ ಒಂದು ತರಹ ನೋಡಿದ್ದ. ಹಳೆಯ ಸಂಪ್ರದಾಯದ ಕೊನೇ ಲಿಂಕು ಅವನು. ಆದರೆ ಅವನು ಬೇರೆಯೇ ಇರುತ್ತಿದ್ದ. ತೊಂದರೆಯಿರಲಿಲ್ಲ. ಒಂದು ವರ್ಷದಲ್ಲಿ ಬೆಕ್ಕು, ನಾಯಿಗಳ ಜೊತೆ ಅದೆಷ್ಟು ಸಂತೋಷಪಟ್ಟಿದ್ದಳು ಮಾನಸಿ. ತಂದೆ ತಾಯಿಯರ ಸಾವಿನ ದುಃಖ ಮರೆಸಲು ತುಂಬ ಸಹಾಯ ಮಾಡಿದ್ದವು ಆ ಮೂಕ ಪ್ರಾಣಿಗಳು.

ಹಿಡಿದಿದ್ದ ಪುಸ್ತಕ ಓದಲಾಗಲಿಲ್ಲ. ಅದನ್ನು ಪಕ್ಕಕ್ಕಿಟ್ಟ ಮಾನಸಿ ಮೇಲೆ ನೋಡುತ್ತ ನೋಡುತ್ತ ಫ್ಲಾಶ್ ಬ್ಯಾಕಿಗೆ ಹೋದಳು. ಈಗ ಎರಡು ವರ್ಷದ ಹಿಂದೆ ಭಾರತಕ್ಕೆ  ವಾಪಸ್ ಬರುವ ನಿರ್ಧಾರ ತೆಗೆದುಕೊಂಡಿದ್ದಳು. ಅಮೇರಿಕಾಗೆ ಹೋಗಿ ಬರೋಬ್ಬರಿ ಎಂಟು ವರ್ಷವಾಗಿತ್ತು. ರೆಕಾರ್ಡ್ ಟೈಮ್ ಅನ್ನುವ ಹಾಗೆ ಕೇವಲ ಮೂರೇ ಮೂರು ವರ್ಷದಲ್ಲಿ PhD ಮುಗಿಸಿದ್ದಳು. ಕೋಲಂಬಿಯಾದಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ, ಮನಃಶಾಸ್ತ್ರದ ದಿಗ್ಗಜ ಹೆಂಡರ್ಸನ್ ಅವರ ಕೆಳಗೆ ಅಷ್ಟು ಬೇಗ PhD ಮುಗಿಸಿದ್ದು, ಅದೂ personality disorders ಎಂಬ ವಿಷಯದಲ್ಲಿ ಮಾಡಿದ್ದು, ಭಯಂಕರ ದೊಡ್ಡ ಮಾತು. PhD ಮುಗಿಯುವ ಹೊತ್ತಿಗೆ ಅನೇಕ ವಿಶ್ವವಿದ್ಯಾಲಯಗಳಿಂದ, ಮನಃಶಾಸ್ತ್ರದಲ್ಲಿ advanced research ಮಾಡುತ್ತಿದ್ದ ಆಸ್ಪತ್ರೆಗಳಿಂದ, ಕೆಲವು ಸರಕಾರಿ ಸಂಸ್ಥೆಗಳಿಂದ ಮಾನಸಿಗೆ ಬೇಕಾದಷ್ಟು ಕೆಲಸದ ಆಫರ್ ಬಂದಿದ್ದವು. PhD ಮಾಡುತ್ತಿದ್ದ ಮೂರು ವರ್ಷಗಳಲ್ಲಿ ಆಕೆ ಮತ್ತು ಆಕೆಯ ಗೈಡ್ ಹೆಂಡರ್ಸನ್ ಸಿಕ್ಕಾಪಟ್ಟೆ ಪ್ರಬಂಧ ಪ್ರಕಟಿಸಿ, ಬಹಳ ಮನ್ನಣೆ ಪಡೆದು, ಇಬ್ಬರೂ ಹೆಸರುವಾಸಿಯಾಗಿದ್ದರು. ಆದರೆ ಮಾನಸಿ ಮೊದಲಿಂದಲೂ ಸ್ವಲ್ಪ ಬೇರೆಯೇ ತರಹದ ಹುಡುಗಿ. ಆಕೆ ಹೋಗಿ ಹೋಗಿ ಆಯ್ಕೆ ಮಾಡಿಕೊಂಡಿದ್ದು ಒಬ್ಬ ಖ್ಯಾತ ಕ್ರಿಮಿನಲ್ ವಕೀಲರು ಆಫರ್ ಮಾಡಿದ್ದ ನೌಕರಿ. ಅವರು ದೊಡ್ಡ ಕ್ರಿಮಿನಲ್ ವಕೀಲರು. ಕೊಲೆ ಕೇಸುಗಳನ್ನು ಗೆಲ್ಲುವುದೇ ಅವರ ಸ್ಪೆಷಾಲಿಟಿ. ಎಷ್ಟೋ ಕೊಲೆ ಕೇಸುಗಳನ್ನು insanity defense ಉಪಯೋಗಿಸಿಯೇ ಗೆದ್ದಿದ್ದರು ಅಥವಾ ಶಿಕ್ಷೆಯನ್ನು ಬಹಳ ಕಮ್ಮಿ ಮಾಡಿಸಿದ್ದರು. ಒಬ್ಬ ವ್ಯಕ್ತಿ ತನ್ನ ಮೇಲೆ ನಿಯಂತ್ರಣ ಕಳೆದುಕೊಂಡು, ಒಂದು ರೀತಿಯ ಉನ್ಮತ್ತ ಸ್ಥಿತಿಯಲ್ಲಿ ಇದ್ದಾಗ ಕೊಲೆ ಮಾಡಿದ ಅಂತ insanity defense ಉಪಯೋಗಿಸಿ ಸಾಬೀತು ಮಾಡಲು ಸಾಧ್ಯವಾದರೆ ಅವರಿಗೆ ಭಾಳ ಖುಷಿ. ಅದೇ ಕಾರಣಕ್ಕೆ ಅವರಿಗೆ ಒಳ್ಳೆ ಸೈಕಾಲಜಿಸ್ಟ್ ಒಬ್ಬನ(ಳ) ಜರೂರತ್ತಿತ್ತು. ಮಾನಸಿ ಪ್ರಕಟಿಸಿದ್ದ ಎಲ್ಲ ಪ್ರಬಂಧ ಓದಿದ್ದರು ಅವರು. ಆರೋಪಿಯಲ್ಲಿ personality disorders ಇದೆ ಅಂತ ಸಾಬೀತು ಮಾಡಿದರೆ insanity defense ಮತ್ತೂ ಸರಳ. ಹಾಗಾಗಿ ಸೀದಾ ಮಾನಸಿಯ ಗೈಡ್ ಪ್ರೊಫೆಸರ್ ಹೆಂಡರ್ಸನ್ ಅವರನ್ನೇ ಹಿಡಿದು ಮಾನಸಿಯನ್ನು ಕ್ಯಾಚ್ ಹಾಕಿದ್ದರು. ದೊಡ್ಡ ಕ್ರಿಮಿನಲ್ ವಕೀಲನಿಗೆ ಕೊಡುವಷ್ಟೇ ಸಂಬಳ ಆಫರ್ ಮಾಡಿದ್ದರು. ದುಡ್ಡಿಗಿಂತ ಆ ಕೆಲಸದಲ್ಲಿ ಸಿಗಬಹುದಾದ ಥ್ರಿಲ್ ಮಾನಸಿಯನ್ನು ತುಂಬ ಆಕರ್ಷಿಸಿತ್ತು. ಅದಕ್ಕೇ ಆ ಕೆಲಸವನ್ನೇ ಸೇರಿದ್ದಳು.

ಐದು ವರ್ಷ ಅದೆಷ್ಟು ಜನ ಕೊಲೆ ಪಾತಕಿಗಳನ್ನು ಭೆಟ್ಟಿಯಾಗಿದ್ದಳೋ ಏನೋ. 'ಎಷ್ಟೋ ಜನ ಕೊಲೆ ಆಪಾದಿತರ ಸರಿಯಾದ psychological profiling ಮಾಡುವದೇ ಇಲ್ಲ. ಮಾಡಿದರೂ ರೂಟೀನ್ ಆಗಿ ಮಾಡಿ, ಮಾಡಿದ ಶಾಸ್ತ್ರ ಮುಗಿಸಿಬಿಡುತ್ತಾರೆ. ಅದರಲ್ಲೂ personality disorders ಬಗ್ಗೆ ಯಾರೂ ಜಾಸ್ತಿ ವಿಚಾರ ಮಾಡುವದೇ ಇಲ್ಲ. ಎಷ್ಟೋ ಜನ ಕೊಲೆ ಆಪಾದಿತರು split personality, multiple personality disorders ಮುಂತಾದವುಗಳಿಂದ ಬಳಲುತ್ತಿರುತ್ತಾರೆ. ಒಳ್ಳೆ ವಕೀಲರು ಸಿಕ್ಕು, ಒಳ್ಳೆ ಸೈಕಾಲಜಿಸ್ಟ್ ಸಿಕ್ಕು, ಒಳ್ಳೆ ತರಹ ಡಿಫೆಂಡ್ ಮಾಡಿ, ಸರ್ಕಾರಿ ವಕೀಲರು, ಸರ್ಕಾರಿ ಸೈಕಾಲಜಿಸ್ಟ್ ಮಂಡಿಸಿದ ವಾದವನ್ನು ಬರೋಬ್ಬರಿ ತಪ್ಪು ಅಂತ ಪ್ರತಿವಾದ ಮಾಡಿ, ಪುರಾವೆ ಕೊಟ್ಟು, ಹನ್ನೆರೆಡು ಸಾಮಾನ್ಯ ಜನರ ಜ್ಯೂರಿಗೆ ಅರ್ಥ ಮಾಡಿಸಿ, ಅವರಿಗೆ ಹೌದು ಅನ್ನಿಸಿದರೆ ಮಾತ್ರ ಆರೋಪಿ ಖುಲಾಸೆಯಾಗುತ್ತಾನೆ. ನಾನು ಇಷ್ಟೆಲ್ಲಾ ಕಲಿತಿದ್ದು ಒಂದಿಷ್ಟು ಮಂದಿಯನ್ನು ಗಲ್ಲು ಶಿಕ್ಷೆಯಿಂದ ಬಚಾವ್ ಮಾಡಿತಲ್ಲಾ. ಅದೇ ದೊಡ್ಡ ಸಾಧನೆ,' ಅಂತ ಆಗಾಗ ಅನ್ನಿಸುತ್ತಿತ್ತು ಮಾನಸಿಗೆ.

ಒಮ್ಮೆಯಂತೂ ಒಂದು ಕೊಲೆ ಕೇಸಿನಿಂದ ಮುಕ್ತಿ ಪಡೆದ ಒಬ್ಬ ಆರೋಪಿ ಮಾನಸಿಯನ್ನು ಅಪ್ಪಿ, ಮುದ್ದಾಡಿ, ಲೊಚಲೊಚ ಅಂತ ಮುಖದ ತುಂಬೆಲ್ಲ ಪಪ್ಪಿ ಕೊಟ್ಟುಬಿಟ್ಟಿದ್ದ. ಅದನ್ನು ನೆನಪಿಸಿಕೊಂಡು ಮಾನಸಿಯ ಮುಖ ಕೆಂಪಾಯಿತು. ಮೈ ಬಿಸಿಯಾಯಿತು. ಇನ್ನೂ ಮೂವತ್ತನಾಲ್ಕು ಮೂವತ್ತೈದರ ಹರೆಯ ಆಕೆಗೆ. ಹಾಗೆ ಆಗುವದು ಸಹಜ. ಆವತ್ತು ಕೋರ್ಟಿನಲ್ಲಿ, ಆ ಕೇಸಿನಲ್ಲಿ ಮಾನಸಿ ಸಾಕ್ಷಿ ಹೇಳಬೇಕಾಗಿತ್ತು. ಮಾನಸಿ ಸಿಕ್ಕಾಪಟ್ಟೆ effective ಆಗಿ ತನ್ನ ರಿಪೋರ್ಟ್ ಮಂಡಿಸಿದಳು. ಜೊತೆಗೆ ವಕೀಲರೂ ಸಹ ಅಲ್ಲಲ್ಲಿ ತಮ್ಮ ಪಾಯಿಂಟ್ ಹಾಕುತ್ತಿದ್ದರು. ಆ ಕೊಲೆಯ ಆರೋಪಿ ಹೇಗೆ multiple personality disorder ಪೀಡಿತ, ಹೇಗೆ ಬೇರೆಯೇ personality ಅವನ ಮೇಲೆ ಆಹ್ವಾನಗೊಂಡಾಗ, ಅದರ effect ನಲ್ಲಿ ಇದ್ದಾಗ ಕೊಲೆ ಮಾಡಿದ್ದ ಅಂತ ಹೇಳುತ್ತ ಹೇಳುತ್ತ ಮಾನಸಿ ಮಾಸ್ಟರ್ ಸ್ಟ್ರೋಕ್ ಅನ್ನುವಂತಹ ಒಂದು ಖತರ್ನಾಕ್ ಕಾರ್ನಾಮೆ ಮಾಡಿಬಿಟ್ಟಿದ್ದಳು. ಆ ಕೋರ್ಟಿನಲ್ಲಿಯೇ, ಎಲ್ಲರ ಮುಂದೆಯೇ ಆ ಆರೋಪಿ ಮತ್ತೊಂದು personality ಗೆ ಬದಲಾಗುತ್ತಿರುವದನ್ನು ತೋರಿಸಿದ್ದಳು. ಅದು ನಟನೆಯಾಗಿರಲು ಸಾಧ್ಯವೇ ಇರಲಿಲ್ಲ. ಸರಕಾರಿ ಸೈಕಾಲಜಿಸ್ಟ್ ಸಹಿತ ಬಾಯಿಬಿಟ್ಟು ನೋಡುತ್ತ ಕುಳಿತಿದ್ದ. 'unbelievable!' ಅಂತ ಉದ್ಗರಿಸಿದ್ದ. ಅವನಲ್ಲಿಯೇ ಅಡಗಿದ್ದ ಬೇರೆಯೇ personality ಹಿಡಿತದಲ್ಲಿ ಬಂದ ಆರೋಪಿ, ಹಲ್ಲು ಕಡಿಯುತ್ತ, ಚಿತ್ರ ವಿಚಿತ್ರ ರೂಪ ತೋರುತ್ತ ಒಂತರಾ ಮಾಡುತ್ತಿದ್ದರೆ ಎಲ್ಲರೂ ದಂಗಾಗಿದ್ದರು. ಅದು ಮಾನಸಿ ಮತ್ತು ವಕೀಲರು ತೆಗೆದುಕೊಂಡಿದ್ದ calculated risk ಆಗಿತ್ತು. ಬೇಕೆಂದಾಗ ಮತ್ತೊಂದು personality ಕರೆಸುವದು ಸಾಮಾನ್ಯವಾಗಿ ಸಾಧ್ಯವೇ ಇಲ್ಲ. ಆದರೆ ಏನೇನೋ advanced psychological technique ಉಪಯೋಗಿಸಿದ್ದ ಮಾನಸಿ ತನ್ನ ಕೆಲವು ಸಂಶೋಧನೆಗಳನ್ನು ಪ್ರಯೋಗಶಾಲೆಯಿಂದ ಸೀದಾ ಕೋರ್ಟ್ ರೂಮಿಗೇ ತಂದುಬಿಟ್ಟಿದ್ದಳು. ಮತ್ತೊಂದು personality ಆಹ್ವಾನಿಸುವದು ಒಂದು ಕಡೆಯಾದರೆ, ಅದನ್ನು ನಿಯಂತ್ರಿಸಿ, ವಾಪಸ್ ಕಳಿಸಿ, ಏನೂ ಹಾನಿಯಾಗದಂತೆ ನೋಡಿಕೊಳ್ಳುವದು ಮತ್ತೂ ದೊಡ್ಡ ಜವಾಬ್ದಾರಿ. ಮತ್ತೆ ಇದು ಉಲ್ಟಾ ಹೊಡೆಯುವ ಸಾಧ್ಯತೆ ಕೂಡ ಇತ್ತು. insanity defense ಅಂತ ಹೇಳಿಕೊಂಡು ಹೋಗಿ, ಹುಚ್ಚು ಹಿಡಿಸಬಹುದು, ಮತ್ತೊಂದು personality ಯನ್ನು on demand ಕರೆಸಬಹುದು ಅಂದರೆ ತನಿಖೆ ಬೇರೆ ದಿಕ್ಕಿಗೂ ಹೋಗಬಹುದು. ಅವನ್ನೆಲ್ಲ ತನ್ನ ಜೊತೆ ವಕೀಲರು, ಗುರು ಹೆಂಡರ್ಸನ್, ವೈದ್ಯರು ಎಲ್ಲರ ಜೊತೆ ಚರ್ಚೆ ಮಾಡಿಯೇ ಅಂತದ್ದೊಂದು ಖತರ್ನಾಕ್ ಸ್ಕೀಮ್ ಹಾಕಿದ್ದಳು ಮಾನಸಿ. ಅದರಲ್ಲಿ ಗೆದ್ದು ದೊಡ್ಡ ಹೆಸರು ಸಂಪಾದಿಸಿದ್ದಳು. ಅದೇ ಕೊಲೆ ಆರೋಪಿಯೇ ಮುಕ್ತನಾದ ನಂತರ ಕೊರ್ಟಿನಲ್ಲಿಯೇ ಮಾನಸಿಯನ್ನು ಅಪ್ಪಿಕೊಂಡು ಮುತ್ತಿನ ಮಳೆಗರಿದಿದ್ದ. ಎಲ್ಲ ಆಸೆ ಕಳೆದುಕೊಂಡು ಗಲ್ಲು ಏರಲು ಸಿದ್ಧನಾಗಿ ಕೂತಿದ್ದವನನ್ನು ಬದುಕಿಕೊಂಡು ಬಂದ ಮಾನಸಿಯನ್ನು ಹಿರಿ ಅಕ್ಕನೋ, ತಾಯಿಯೋ ಅನ್ನುವಂತೆ ಬಿಗಿದಪ್ಪಿ ಆತ ಚುಂಬಿಸಿರಬಹುದು ಅನ್ನಿ. ಆದರೆ ಮಾನಸಿ ಮಾತ್ರ ಬೆಂಕಿಯಂತೆ ಕಾದು ಹೋಗಿದ್ದಳು. ಹರೆಯ ಬಂದ ನಂತರದ ಮೊದಲ ಪುರುಷ ಸ್ಪರ್ಶ. ಅದೂ ಸುಮಾರು ಆರೂವರೆ ಅಡಿ ಎತ್ತರ, ನೂರಾ ಇಪ್ಪತ್ತು ಕೇಜಿ ತೂಗುತ್ತಿದ್ದ ಕರಿಯನೊಬ್ಬ ಆಪರಿ ಬಿಗಿದಪ್ಪಿ, ಚುಂಬಿಸಿ, ಏನೇನೋ ಹೇಳಲು ಹೋಗಿ, ಏನೂ ಹೇಳಲಾಗದೇ ಕಣ್ಣೀರು ಹಾಕುತ್ತ, ಅವನ ಬಿಸಿಯುಸಿರಿನಲ್ಲಿ ಮಾನಸಿಯ ಇಡೀ ದೇಹವನ್ನೇ ಕುಲುಮೆಯಲ್ಲಿಟ್ಟು ಹೊತ್ತಿಸಿಬಿಟ್ಟಿದ್ದ. ಅದೆಲ್ಲ ಯಾಕೋ ಈಗ ನೆನಪಾಗಿ ಮತ್ತೆ ಅದೇ ರೀತಿಯಲ್ಲಿ ಮೈ ಬೆಚ್ಚಗಾಯಿತು. ರೋಮ್ಯಾಂಟಿಕ್ ಮೂಡಿಗೆ ಹೋದಳು ಮಾನಸಿ.

'ಅಯ್ಯೋ ಮಾರಾಳ! ಈ ಪರಿ ಛಂದ, ಈ ಪರಿ ಶಾಣ್ಯಾ, ಮ್ಯಾಲಿಂದ ಈ ಪರಿ ಎತ್ತರ. ನಿನಗ ಎಲ್ಲಿಂದ ಹುಡುಗನ್ನ ಹುಡುಕೋಣ ಮಾರಾಳ???' ಅಂತ ತಾಯಿಯದು ಸದಾ ವಾರಾತ. ಅದು ಶುರುವಾಗಿದ್ದು ಹತ್ತನೇ ತರಗತಿ ಮುಗಿದ ಹೊತ್ತಿಗೆ. ಆ ತಾಯಿ ಸಾಯುವವರೆಗೂ ಅದೇ ಚಿಂತೆಯಲ್ಲೇ ಸತ್ತಳು.

ಮಾನಸಿಯ ಮನೆಯವರು ಸಂಪ್ರದಾಯಸ್ತರೇನೋ ನಿಜ. ಆದರೆ ಅಷ್ಟು ಮೇಧಾವಿ ಮಗಳಿಗೆ ಇಪ್ಪತ್ತು ವರ್ಷಕ್ಕೆ ಮದುವೆ ಮಾಡಿ, ಅಷ್ಟೆಲ್ಲ ಜಾಣ್ಮೆಯಿದ್ದ ಹುಡುಗಿಯ ಜೀವನ ವ್ಯರ್ಥ ಮಾಡುವ ಮಂದಿ ಅಲ್ಲ ಅವರು. ಮಗಳ ಮದುವೆ ತಡವಾಗುತ್ತಿದೆ ಅಂತ ಚಿಂತೆಯೇನೋ ಇತ್ತು. ಆದರೆ ವಾಸ್ತವಿಕತೆಯೂ ಗೊತ್ತಿತ್ತು. ಅಮೇರಿಕಾದಲ್ಲಿ ಇದ್ದಾಗಲೇ ಅಲ್ಲೇ ಇದ್ದ ತಮ್ಮ ಜಾತಿಯ ಕೆಲವು ಹುಡುಗರನ್ನು ಮಾನಸಿಗೆ ಭೆಟ್ಟಿ ಮಾಡಿಸಿದ್ದರು. ಎಲ್ಲೂ ಹೊಂದಿ ಬಂದಿರಲಿಲ್ಲ. ರೂಪ, ವಿದ್ಯೆ, ದೊಡ್ಡ  ದೈಹಿಕ ವ್ಯಕ್ತಿತ್ವ, ಸಿಕ್ಕಾಪಟ್ಟೆ ದೊಡ್ಡ ಆದಾಯವಿದ್ದ ಮಹಿಳೆಯಿಂದ ಸಾಮಾನ್ಯ ಜನ ದೂರವೇ ಉಳಿದರು. ಅದು ಅವರ ಕೀಳರಿಮೆ. ಮತ್ತೆ ಕೆಲವರನ್ನು ಮಾನಸಿಯೇ ಬೇಡ ಅಂದಳು. ಒಟ್ಟಿನಲ್ಲಿ ಮದುವೆ ಆಗಲೇ ಇಲ್ಲ. ಆಕೆಯೂ ಸಿಕ್ಕಾಪಟ್ಟೆ ಬ್ಯುಸಿ ಇದ್ದಳು. ಸಿಕ್ಕಾಪಟ್ಟೆ ಕೆಲಸ. ಮೇಲಿಂದ ಅಂತರ್ಮುಖಿ ಬೇರೆ. ಜನರು ಬೇಡವೂ ಬೇಡ. ಅಲ್ಲಿದ್ದಾಗ ಬೆಕ್ಕು ಇತ್ತು. ಈಗಂತಲೂ ನಾಯಿ, ಬೆಕ್ಕು ಎಲ್ಲ ಇವೆ. ಯಾರಿಗೆ ಬೇಕು ಸಂಸಾರ ತಾಪತ್ರಯ? ಅಂತ ಆಕೆ ಹಾಯಾಗಿಯೇ ಇದ್ದಳು.

ನ್ಯೂಯಾರ್ಕಿನಲ್ಲಿ ಜೀವನ ಆರಾಮಾಗೇ ನಡೆಯುತ್ತಿತ್ತು. ಯಾಕೋ ದೇಶದ ಕಡೆಯ ಸೆಳೆತ ಆರಂಭವಾಯಿತು. ಅದೂ ಹುಟ್ಟೂರಾದ ಧಾರವಾಡದ ಸೆಳೆತ. ಮತ್ತೆ ತಂದೆತಾಯಿಗಳಿಗೆ ಒಬ್ಬಳೇ ಮಗಳು ಬೇರೆ. ಹಾಗಾಗಿ ಧಾರವಾಡಕ್ಕೇ ಹೋಗಿ ನೆಲೆಸಿಬಿಡಬೇಕು ಅಂತ ಗಂಭೀರವಾಗಿಯೇ ಯೋಚನೆ ಮಾಡತೊಡಗಿದಳು. ವೃತ್ತಿ ದೃಷ್ಟಿಯಿಂದ ಹಿನ್ನಡೆ ಅಂತ ಗೊತ್ತೇ ಇತ್ತು. ಆದರೂ ಈಗ ಇಂಟರ್ನೆಟ್ ಅದು ಇದು ಅಂತ ಬೇಕಾದಷ್ಟು ಸಂಪರ್ಕ ಬಂದಿದೆ. ಗುರು ಹೆಂಡರ್ಸನ್ ಅಂತೂ ಯಾವಾಗ ಬೇಕಾದರೂ ಬಂದು ನಾಲ್ಕು-ಆರು ತಿಂಗಳು ಉಳಿದು ಹೋಗು ಅಂತ ಹೇಳೇ ಇದ್ದಾರೆ. ಮತ್ತೆ ಧಾರವಾಡದಲ್ಲೇ ಇದ್ದರೂ ಭಾರತದ ಬೇರೆ ಬೇರೆ ಮನಃಶಾಸ್ತ್ರದ ಸಂಸ್ಥೆಗಳೊಂದಿಗೆ ವ್ಯವಹರಿಸುತ್ತ ಹೆಚ್ಚಿನ ಸಂಶೋಧನೆ ಮಾಡಲೂ ಆಗುತ್ತದೆ. ಏನೇನೋ justification ಕೊಟ್ಟುಕೊಂಡಳು. ವಾಪಸ್ ಹೋಗಬೇಕು ಅಂತ ನಿರ್ಧಾರ ಮಾಡಿದ ಮೇಲೆ ಮನಸ್ಸಿಗೆ convince ಮಾಡಲೇಬೇಕಲ್ಲ. ಅದಕ್ಕೆ ಸರಿಯಾಗಿ ಸಮಾಧಾನ ಹೇಳಲೇಬೇಕಲ್ಲ. ಒಂದು ವರ್ಷ ವಿಚಾರ ಮಾಡಿ ಅಂತೂ ಇಂತೂ ಭಾರತಕ್ಕೆ ಬರುವ ನಿರ್ಧಾರ ಮಾಡಿದಳು ಮಾನಸಿ. ಕರ್ನಾಟಕ ವಿಶ್ವವಿದ್ಯಾಲಯ ಮಾಸ್ತರಿಕೆ ಕೆಲಸ ಕೊಡಲು ಮುದ್ದಾಂ ರೆಡಿ ಇತ್ತು. ಆದರೆ ಮಾನಸಿಗೆ ಪೂರ್ತಿ ಟೀಚಿಂಗ್ ಗಿಂತ ಆಸ್ಪತ್ರೆ, ಸಂಶೋಧನಾ ಸಂಸ್ಥೆಯ ವಾತಾವರಣ ಇಷ್ಟ. ಆ ಹೊತ್ತಿನ ಧಾರವಾಡದ ಮಾನಸಿಕ ಚಿಕಿತ್ಸಾಲಯದ ಡೈರೆಕ್ಟರ್ ಮಾನಸಿಯನ್ನು ಮೊದಲಿಂದ ಬಲ್ಲವರಾಗಿದ್ದರು. ಆಕೆಯ ಬಗ್ಗೆ ಬಹಳ ಅಭಿಮಾನ, ಪ್ರೀತಿ ಹೊಂದಿದ್ದರು. ಅದು ಏನೇನೋ influence ಮಾಡಿ, personality disorders ವಿಷಯಕ್ಕೇ ಅಂತಲೇ ಒಂದು ಬೇರೆಯದೇ ವಿಭಾಗಕ್ಕೆ ಅನುಮತಿ, ಗ್ರಾಂಟ್ ಇತ್ಯಾದಿ ತಂದುಕೊಂಡು ಮಾನಸಿಗೆ ಬರಲು ಅನುವು ಮಾಡಿಕೊಟ್ಟಿದ್ದರು. ಅಷ್ಟಾದ ನಂತರವೇ ಮಾನಸಿ ಅಮೇರಿಕಾ ಬಿಟ್ಟುಬಂದಿದ್ದು. ನಡುವೆ ಒಂದೆರೆಡು ಬಾರಿ ರಜೆಗೆ ಬಂದು ಹೋಗಿದ್ದಳು. ಎಂಟು ವರ್ಷದ ನಂತರ ಖಾಯಂ ಆಗಿ ವಾಪಸ್ ಬಂದಳು.

ಮಗಳು ವಾಪಸ್ ಬಂದಳು, ಧಾರವಾಡದಲ್ಲೇ ನೆಲೆ ನಿಂತಳು ಅಂತ ವೃದ್ಧ ತಂದೆ, ತಾಯಿ, ಕಾಕಾ ಎಲ್ಲರಿಗೂ ಖುಷಿಯೋ ಖುಷಿ. ತಾಯಿಗೆ ಮಗಳ ಮದುವೆ ಮಾಡುವ ಚಿಂತೆ. ಮೊದಲು ಸಿಕ್ಕಾಪಟ್ಟೆ ವಿದ್ಯೆ, ಬುದ್ಧಿ, ರೂಪ, ಎತ್ತರ ಮಾತ್ರ ಮದುವೆಗೆ ಅಡ್ಡಿ ಅಂದರೆ ಈಗ ಮತ್ತೊಂದಿಷ್ಟು ಹೊಸ ಹೊಸ ತೊಂದರೆಗಳು. ಹುಡುಗ ಧಾರವಾಡದಲ್ಲೇ ಇರಬೇಕು. ಏಕೆಂದರೆ ಧಾರವಾಡ ಬಿಟ್ಟು ಬೇರೆಲ್ಲೋ ಗಂಡನ ಮನೆಗೆ ಹೋಗಲು ಮಾನಸಿ ಹರ್ಗೀಸ್ ತಯಾರಿಲ್ಲ. ಮತ್ತೆ ಆಕೆಗೆ ವಯಸ್ಸು ಮೂವತ್ತೆರೆಡು. ಧಾರವಾಡದಂತಹ ಸಣ್ಣ ಊರಲ್ಲಿ ಎಲ್ಲಿಂದ ಸಿಗಬೇಕು ವರ? ಯಾರ್ಯಾರೋ ತಿರಬೋಕಿ ಬ್ರೋಕರುಗಳು ಯಾರ್ಯಾರೋ ಯಬಡೇಶಿ ವರಗಳ ಜಾತಕ, ಸಂಬಂಧ ತಂದಿದ್ದರು. ತಂದೆ ಪ್ರೊ. ಕುಲಕರ್ಣಿ ನೋಡಿ ನಕ್ಕರೆ, ತಾಯಿ ತಲೆ ತಲೆ ಚಚ್ಚಿಕೊಂಡು, ಬೈದು, ಸರಿ ಹೊಂದಲ್ಲ ಅಂತ ಹೇಳಿ ವಾಪಸ್ ಕಳಿಸಿದ್ದರು. ಹೀಗೆಲ್ಲ ಆಗಿ ಮಾನಸಿಗೆ ಕಂಕಣ ಭಾಗ್ಯ ಕೂಡಿ ಬಂದಿರಲಿಲ್ಲ. ಹಾಗೆಯೇ ಕಾಲ ಸರಿಯುತ್ತಿತ್ತು. ತಾನು, ತನ್ನ ಕೆಲಸ, ಅತಿಥಿ ಪ್ರಾಧ್ಯಾಪಕಿ ಕೆಲಸ, ಅಲ್ಲಿ ಇಲ್ಲಿ ಸೆಮಿನಾರ್, ಕಾನ್ಫರೆನ್ಸ್, ಅದು ಇದು ಅಂತ ಮಾನಸಿ ಹಾಯಾಗಿದ್ದಳು. ಪ್ರಾಣಿ ತಂದು ಇಟ್ಟುಕೊಳ್ಳೋಣ ಅಂದರೆ ತಂದೆ, ತಾಯಿ ಕಟ್ಟರ್ ಬ್ರಾಹ್ಮಣರು. ನಾಯಿ, ಬೆಕ್ಕು ವರ್ಜ್ಯ. ಹೋಗಲಿ ಬಿಡು ಅಂತ ಮಾನಸಿಯೂ ಜಾಸ್ತಿ ತಲೆ ಕೆಡಿಸಿಕೊಂಡಿರಲಿಲ್ಲ. ಮೊದಲು ಪ್ರೊ. ಕುಲಕರ್ಣಿ ತೀರಿಹೋದರು. ನಂತರ ಕೆಲವೇ ದಿವಸಗಳಲ್ಲಿ ತಾಯಿ ಅವರನ್ನು ಹಿಂಬಾಲಿಸಿದಳು. ದುಃಖವೇನೋ ಆಯಿತು. ಆದರೇನು ಮಾಡಲಿಕ್ಕೆ ಬರುತ್ತದೆ? ವಯಸ್ಸಾಗಿತ್ತು. ಏನೂ ತೊಂದರೆ ಇಲ್ಲದೇ ಸುಖವಾಗಿ ಸಾವು ಬಂತು ಅಂತ ಸಮಾಧಾನ ಮಾಡಿಕೊಂಡಳು. ತುರಂತ ಹೋಗಿ ಬೆಕ್ಕು, ನಾಯಿಗಳನ್ನು ತಂದುಕೊಂಡು ಆರಾಮ ಇದ್ದಳು ಮಾನಸಿ.

ಹೀಗೆ ಹಿಂದಿನ ಜೀವನದ ಒಂದು ಝಳಕ್ ಕಣ್ಣ ಮುಂದೆ ಬಂದು ಹೋಯಿತು. ಪಕ್ಕಕ್ಕೆ ತಿರುಗಿ ನೋಡಿದರೆ ಗಡಿಯಾರ ರಾತ್ರಿ ಮೂರು ಅಂತ ತೋರಿಸುತ್ತಿತ್ತು. ಯಾಕೋ ಸ್ವಲ್ಪ ಚಳಿ ಜಾಸ್ತಿಯಾಗಿದೆ ಅನ್ನಿಸಿತು. ಕಿಡಕಿ ಮುಚ್ಚೋಣ ಅಂತ ಎದ್ದು ಕಿಡಕಿ ಕಡೆ ಬಂದಳು. ಕಿಡಕಿಯಿಂದ ಕಿಟ್ಟಿ ಕಾಕಾನ ಕುಟೀರ ಕಾಣಿಸಿತು. ಈಗ ಅದೊಂದು ಖಾಲಿ ಕುಟೀರ. ಒಳಗೆ ಇದ್ದವ ದಾರುಣವಾಗಿ ಕೊಲೆಯಾಗಿ ಹೋಗಿದ್ದಾನೆ ಅಂತ ನೆನಪಿಸಿಕೊಂಡರೆ ಒಂದು ತರಹದ ಭಯ, ದುಃಖ ಎರಡೂ ಆಯಿತು. ಕುಟೀರದಲ್ಲೊಂದು ಚಿಕ್ಕ ಬಲ್ಬು ಉರಿಯುತ್ತಿತ್ತು. 'ಅರೇ, ಯಾರೂ ಇಲ್ಲ. ಅದೆಂಗೆ ಬಲ್ಬು ಉರಿಯುತ್ತಿದೆ?' ಅಂತ ಯೋಚನೆ ಮಾಡಿದಳು ಮಾನಸಿ. ಹೋಗಿ ಚೆಕ್ ಮಾಡಿ ಬರಲೇ ಅಂದುಕೊಂಡಳು. ಬೇಡ ಅಂತ ಹೇಳಿಕೊಂಡಳು. ಪೊಲೀಸರು ಸೀಲ್ ಮಾಡಿ ಹೋಗಿದ್ದಾರೆ. ತಾನು ಹೋಗಿ, ಚೆಕ್ ಮಾಡಿ, ಬಲ್ಬ್ ಆಫ್ ಮಾಡಿ ಬರುವದು ತಪ್ಪಾಗುತ್ತದೆ ಅಂತ ಅಂದುಕೊಂಡಳು. ಹೋಗಿ ಬರಲು ಹೆದರಿಕೆ ಅಂತೇನೂ ಅನ್ನಿಸಲಿಲ್ಲ. ಒಂದು ತರಹದ ಏನೋ ಬೇರೆಯೇ ಭಾವನೆ ಬಂತು. ಯಾವ ತರಹದ ಭಾವನೆ ಅಂತ ಹೇಳುವದು ಕಷ್ಟ. ಕಿಡಕಿ ಮುಚ್ಚಿ ಬಂದು ಮಲಗಿದಳು. ದೀಪ ಆರಿಸಿದರೆ ಸತ್ತ ಕಿಟ್ಟಿ ಕಾಕಾ ಎಂದಿನಂತೆ ತಲೆ ಮೇಲೆ ಪ್ರೀತಿಯಿಂದ ಕೈಯಾಡಿಸಿದಂತಾಯಿತು. ನಿದ್ದೆ ಬಂತು.

ಈ ಕಡೆ ಮಾನಸಿ ಮಲಗಿದರೆ ಪತ್ರಿಕೆಗಳಲ್ಲಿ ಕೆಲಸ ಮಾಡುವವರು ನಿದ್ದೆಗೆಟ್ಟಿದ್ದರು. ಧಾರವಾಡದಲ್ಲಿ  ಹಿಂದೆಂದೂ ಕೇಳರಿಯದಂತಹ ಮರ್ಡರ್ ಆಗಿಹೋಗಿತ್ತು. ಕೃಷ್ಣಾಚಾರ್ಯ ಕುಲಕರ್ಣಿ ಯಾರು? ಏನು ಮಾಡುತ್ತಿದ್ದ? ಯಾಕೆ ಕೊಲೆಯಾಗಿರಬಹುದು? ಸ್ವಲ್ಪೇ ದಿವಸದ ಹಿಂದೆ ಅವನ ಅಣ್ಣನ ಮಗಳು ಡಾ. ಮಾನಸಿ ಕುಲಕರ್ಣಿಯ ಬೆಕ್ಕನ್ನು ಕೊಂದು, ಕ್ಲೀನ್ ಮಾಡಿ, ತುಂಬಿ, ಪೀಠದ ಮೇಲಿಟ್ಟು, ಪಾರ್ಸೆಲ್ ಮಾಡಿ ಕಳಿಸಿದ್ದರು. ಈಗ ಈತನ ಮರ್ಡರ್. ಏನಾದರೂ ಸಂಬಂಧವಿದೆಯೇ? ಅಂತೆಲ್ಲ ಏನೇನೋ ಊಹೆ ಮಾಡಿ, ಬಟ್ಟೆ ಹಾವು ಬಿಟ್ಟು, ಕೊಲೆ ವರದಿ ಬರೆದಿದ್ದೇ ಬರೆದಿದ್ದು. ಬರೆದಿದ್ದು ಮುಗಿಯುತ್ತಲೇ ಇರಲಿಲ್ಲ. ಇನ್ನೇನು ಪೇಪರ್ ಅಚ್ಚಿಗೆ ಹೋಗಲೇಬೇಕು ಅಂತಾದಾಗ ಒಂದು ಲಾಸ್ಟ್ ಖಡಕ್ ಚಹಾ ಕುಡಿದು ವರದಿ ಮುಗಿಸಿ, ಕಂಪೋಸರ್ ಕೈಯಲ್ಲಿ ಕೊಟ್ಟು, ಮನೆ ಹಾದಿ ಹಿಡಿದಿದ್ದರು ವರದಿಗಾರರು. ದಿನಪೂರ್ತಿ ನಿದ್ದೆ ಅವರಿಗೆ ಇನ್ನು. ಮತ್ತೆ ಸಂಜೆ ಹೋಗಿ ಫಾಲೋ ಅಪ್ ಮಾಡಬೇಕು ಅಂತ ಮನಸ್ಸಿನಲ್ಲೇ ನೋಟ್ ಹಾಕಿಕೊಂಡ ವರದಿಗಾರರು ನಿದ್ದೆ ಹೋದರು.

ಭಾಗ - ೪ 

ನಿದ್ದೆ ಮಾಡುತ್ತಿರುವವರು, ಈಗ ತಾನೇ ನಿದ್ದೆ ಹೋಗುತ್ತಿರುವವರು ಎಲ್ಲ ಒಂದು ಕಡೆಯಾದರೆ ಈಕಡೆ ಒಬ್ಬ ನಿದ್ದೆಯಿಂದ ಎದ್ದ ಕೂಡ. ಅವನೇ ಪ್ಲೇಬಾಯ್ ಕೋಮಲ್ ಜಾತ್ರಾವಳಿ. ಬೆಳಿಗ್ಗೆ ಐದಕ್ಕೆ ಎದ್ದೇ ಬಿಡುತ್ತಾನೆ. ರಾತ್ರಿ ಎಷ್ಟೇ ಲೇಟಾಗಿ ಮಲಗಿದರೂ ಸರಿ. ಬೆಳಿಗ್ಗೆ ಮಾತ್ರ ಐದಕ್ಕೆ ರೆಡಿ. ಯಾಕೆಂದರೆ ಅವನಿಗೆ ಓಡುವದೇ ಹವ್ಯಾಸ, ಚಟ, ವ್ಯಾಯಾಮ ಎಲ್ಲ. ಐದಕ್ಕೆ ಮನೆ ಬಿಟ್ಟ ಅಂದರೆ ಬರೋಬ್ಬರಿ ಎರಡು ತಾಸು ಓಡುತ್ತಾನೆ. ಅದೂ ಸುಮಾರು ವೇಗವಾಗಿಯೇ ಓಡುತ್ತಾನೆ. ಸಿಕ್ಕಾಪಟ್ಟೆ ಮಸ್ತ ವ್ಯಾಯಾಮವಾಗುತ್ತದೆ. ಹಾಗಾಗಿಯೇ ಅವನು ಈಗಲೂ ಆ ಮಾದರಿಯ ಬಾಡಿ ಮೆಂಟೇನ್ ಮಾಡಿದ್ದಾನೆ. ಈಗಲೂ ಹದಿವಯಸ್ಸಿನ ಅನೇಕ ಹುಡುಗಿಯರ ಮೊದಲ ಕ್ರಶ್ ಅವನೇ. ಅಷ್ಟು ಪುರುಷಸಿಂಹ manly ಈ ಕೋಮಲ್ ಜಾತ್ರಾವಳಿ.

ಕೋಮಲ್ ಮನೆ ಬಿಟ್ಟು ಹೊರಬಿದ್ದ. ನಿಧಾನವಾಗಿ ಓಡುವ ಪೇಸ್ ಹೆಚ್ಚಿಸಿಕೊಂಡ. ನಂತರ ಇಪ್ಪತ್ತು ನಿಮಿಷದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನ ಒಂದು ಮೂಲೆಯಲ್ಲಿರುವ ಅತಿಥಿ ಗೃಹದ ಹತ್ತಿರ ಬಂದು ತಲುಪಿದ. ಅಲ್ಲಿನ ಅದ್ಭುತ ಸೀನರಿ ನೋಡಲು ಒಂದು ನಿಮಿಷ ನಿಂತ. ಆಗಲೇ ಪೇಪರ್ ಹಾಕುವ ಹುಡುಗರು ಸೈಕಲ್ ಮೇಲೆ ಪೇಪರ್ ತುಂಬಿಕೊಂಡು ಬರುತ್ತಿದ್ದರು. ಆವತ್ತು ಆವರಿಗೆ ಸಿಕ್ಕಾಪಟ್ಟೆ ಉಮೇದಿ. ದೊಡ್ಡ ಕೊಲೆಯ ಸುದ್ದಿ ಇದೆ. ಹಾಗಾಗಿ ಒಂದ್ನಾಲ್ಕು ಪೇಪರ್ ಜಾಸ್ತಿಯೇ ಮಾರಾಟವಾಗುತ್ತವೆ. ಭಾಳ ಡಿಮ್ಯಾಂಡ್ ಬಂದರೆ ಜಾಸ್ತಿ ಬೆಲೆಗೂ ಮಾರಿ ರೊಕ್ಕ ಮಾಡಿಕೊಳ್ಳಬಹುದು. ಅದೇ ಯೋಚನೆಯಲ್ಲಿ ಪೇಪರ್ ಹುಡುಗ ಗಡಿಬಿಡಿಯಲ್ಲಿ ಯೂನಿವರ್ಸಿಟಿ ಗೆಸ್ಟ್ ಹೌಸ್ ಕಡೆ ಬರುತ್ತಿದ್ದ. ಅಲ್ಲಿ ಪೇಪರ್ ಹಾಕುವದಿತ್ತು. ಅಲ್ಲೇ ಅವನಿಗೆ ಕೋಮಲ್ ಜಾತ್ರಾವಳಿ ಕಂಡ. ಗಿರಾಕಿ ಸಿಕ್ಕಿತು ಅಂದುಕೊಂಡ. 'ಸರ್ರಾ, ಪೇಪರ್ ಬೇಕೇನ್ರೀ? ದೊಡ್ಡ ಮರ್ಡರ್ ಸುದ್ದಿ ಬಂದೈತಿ ನೋಡ್ರೀ. ಮನ್ನೆ ಬೆಕ್ಕು ಕೊಂದು ಕಳಿಸಿದ್ದರು. ಈಗ ಅಕಿ ಕಾಕಾನ್ನೇ ಖೂನ್ ಮಾಡಿ ಒಗೆದುಬಿಟ್ಟಾರ ನೋಡ್ರೀ. ತೊಗೊರೀ ಸರ್ರಾ. ಬರೇ ಐದು ರೂಪಾಯಿ,' ಅಂತ ಸಹಜವಾಗಿ ಹೇಳಿದ ಪೇಪರ್ ಹುಡುಗ. ಸುದ್ದಿ ಕೇಳಿದ ಕೋಮಲ್ ಒಮ್ಮೆಲೇ ಥಂಡಾ ಹೊಡೆದ. ಅವನಿಗೆ ಮರ್ಡರ್ ಸುದ್ದಿ ಗೊತ್ತೇ ಇರಲಿಲ್ಲ. ಊರಲ್ಲಿ ಇದ್ದನೋ ಇಲ್ಲವೋ ಅಥವಾ ಯಾವ ಸಖಿಯೊಂದಿಗೆ ಏನು ನಾಟಕ, ಡಾನ್ಸ್ ಮಾಡುತ್ತ ಕಳೆದುಹೋಗಿದ್ದನೋ ಗೊತ್ತಿಲ್ಲ. 'ಹಾಂ! ಮಾನಸಿ ಕುಲಕರ್ಣಿ ಮನೆಯಲ್ಲಿ ಖೂನೇ?' ಅಂದುಕೊಳ್ಳುತ್ತ, ರೊಕ್ಕ ಕೊಟ್ಟು ಒಂದು ಪೇಪರ್ ತೆಗೆದುಕೊಂಡ. ಓದತೊಡಗಿದ. ಓದುತ್ತ ಓದುತ್ತ ಅದರಲ್ಲೇ ಫುಲ್ ಕಳೆದುಹೋದ. ಒಂದು ನಿಮಿಷ ನಿಸರ್ಗ ಆಸ್ವಾದಿಸಲು ಅಂತ ನಿಂತವ ಅರ್ಧಗಂಟೆ ಪೇಪರ್ ಓದುತ್ತ ನಿಂತುಬಿಟ್ಟ. ಪೇಪರ್ ಓದಿ, ಕೊಲೆಯ ಎಲ್ಲ ವಿವರ ತಿಳಿದುಕೊಂಡು, 'ಹಾಂ!' ಅನ್ನಬೇಕು ಅನ್ನುವಷ್ಟರಲ್ಲಿ ಯೂನಿವರ್ಸಿಟಿಯ ದೊಡ್ಡ ಘಂಟೆ ಢಣ್! ಢಣ್! ಅಂತ ಆರು ಬಾರಿ ಸದ್ದು ಮಾಡಿತು. 'ಅರೇ, ಇವತ್ತು ಓಡಿದ್ದು ಕಮ್ಮಿಯಾಯಿತು. ಇರಲಿ ಸಂಜೆ ಜಾಸ್ತಿ ಓಡೋಣ,' ಅಂದುಕೊಂಡು ಓಟ ಮುಂದುವರೆಸಿದ.

ಓಟ ಮುಗಿಸಿ ಮನೆಗೆ ಮರಳುವ ಮುನ್ನ ಮಾನಸಿ ಮನೆ ಮುಂದಿನಿಂದಲೇ ಯಾಕೆ ಬರಬಾರದು ಅಂತ ಅನ್ನಿಸಿತು. ಹಿಂದಿ ಪ್ರಚಾರ ಸಭಾದ ಗುಡ್ಡ ಇಳಿದವ ಸೀದಾ ರೈಲ್ವೆ ಸ್ಟೇಷನ್ ರೋಡ್ ಗುಂಟ ಓಡತೊಡಗಿದ. ಕರ್ನಾಟಕ ಕಾಲೇಜಿನ ಸ್ಟಾಫ್ ಕ್ವಾರ್ಟರ್ಸ ಎಲ್ಲ ಅದೇ ರೋಡಿನಲ್ಲಿ ಇವೆ. ರೈಲ್ವೆ ಸ್ಟೇಷನ್ ಗಿಂತ ಮೊದಲು ಸಿಗುವ ಕ್ರಾಸಿನಲ್ಲಿ ಎಡಕ್ಕೆ ತಿರುಗಿ, ಒಂದು ನಾಲ್ಕು ಹೆಜ್ಜೆ ಓಡಿ, ಬಲಕ್ಕೆ ತಿರುಗಿದರೆ ಧುತ್ತ ಅಂತ ಎದುರಿಗೆ ಬಂತು ಮಾನಸಿಯ ಭೂತ ಬಂಗಲೆಯಂತಹ ಮನೆ. ಓಡುವದನ್ನು ನಿಧಾನ ಮಾಡಿ ಸಾವಕಾಶ ನಡೆಯತೊಡಗಿದ. ಮನೆಯ ಕಡೆ ನೋಡುತ್ತ ನಡೆಯತೊಡಗಿದ. ಒಂದು ತರಹದ ಮಂಜು ಮುಸುಕಿತ್ತು. ಮನೆಯ ಮಹಡಿ ಮೇಲಿಂದ ಒಂದು ಕಿಡಕಿ ತೆರೆಯಿತು. ಕೋಮಲ್ ಗಮನಿಸಲಿಲ್ಲ. ಅದೇ ಹೊತ್ತಿಗೆ ಎದ್ದ ಮಾನಸಿ, ರೂಢಿಯಂತೆ ಕಿಡಕಿ ತೆಗೆದಳು. ರಸ್ತೆಯಲ್ಲಿ ಹೊರಟಿದ್ದ ಕೋಮಲನನ್ನು ಆಕೆ ನೋಡಲಿಲ್ಲ. ನೋಡಿದರೂ ಯಾರೋ ಸಹಜ ಮಾರ್ನಿಂಗ್ ವಾಕಿಂಗ್, ಜಾಗಿಂಗ್ ಮಾಡುತ್ತಿದ್ದಾರೆ ಅಂತ ಅಂದುಕೊಂಡಿರಬೇಕು. ಆದರೆ ಮುಂದೆ ಕೆಲವೇ ದಿವಸಗಳಲ್ಲಿ ಕೋಮಲ್ ಮತ್ತು ಮಾನಸಿ ಒಂದು ವಿಚಿತ್ರ ಸನ್ನಿವೇಶದಲ್ಲಿ ಭೆಟ್ಟಿಯಾಗುವವರಿದ್ದಾರೆ ಮತ್ತು ಆ ಭೇಟಿ ಇಬ್ಬರ ಜೀವನಗಳಿಗೂ ಒಂದು ವಿಚಿತ್ರ ತಿರುವು ತಂದುಕೊಡಲಿದೆ ಅಂತ ಮಾನಸಿಗೂ ಗೊತ್ತಿರಲಿಲ್ಲ. ಕೋಮಲ್ ಜಾತ್ರಾವಳಿಗೂ ಗೊತ್ತಿರಲಿಲ್ಲ.

ಭಾಗ - ೫ 

ಯಾಕೋ ಏನೋ ಗೊತ್ತಿಲ್ಲ. ಕೋಮಲ್ ಜಾತ್ರಾವಳಿಗೆ ಸದಾ ಮಾನಸಿಯದೇ ಧ್ಯಾನ. ಮೊದಲೇ ಸುಂದರ ಸ್ತ್ರೀಯರ ಮೇಲೆ ಒಂದು ಕಣ್ಣು ಸದಾ ಇದ್ದೇ ಇರುತ್ತಿತ್ತು. ಎಷ್ಟೇ ಗೆಳತಿಯರಿದ್ದರೂ ಹೊಸ ಹೊಸ ಗೆಳತಿಯರನ್ನು ಮಾಡಿಕೊಳ್ಳಲಿಲ್ಲ ಅಂದರೆ ಅವನಿಗೆ ಸಮಾಧಾನವಿಲ್ಲ. ಈಗಿತ್ತಲಾಗೆ ಕೋಮಲ್ ಮಾನಸಿಯನ್ನು ಬರೋಬ್ಬರಿ ನೋಡಿರಲೂ ಇಲ್ಲ. ಆದರೆ ಈಗಿತ್ತಲಾಗೆ ಆಕೆಯ ಮನೆಯಲ್ಲಿ, ಆಕೆಯ ಜೀವನದಲ್ಲಿ ಆದ ಎರಡು ವಿಚಿತ್ರ ಘಟನೆಗಳು ಆಕೆಯನ್ನು ಕೋಮಲನ ಚಿತ್ತದ foreground ಗೆ ತಂದು ನಿಲ್ಲಿಸಿದ್ದವು. ಮತ್ತಿತರ ಕೆಲವು ಸುಂದರಿಯರು background ಗೆ ಹೋಗಿ ಸ್ಥಾಪಿತರಾದರು. 'ಮಾನಸಿಯನ್ನು ಹೇಗೆ ಪರಿಚಯ ಮಾಡಿಕೊಂಡು ಪಟಾಯಿಸಲಿ?' ಅಂತ ಸದಾ ಅದೇ ಗುಂಗಿನಲ್ಲೇ ಇರತೊಡಗಿದ ಕೋಮಲ್. ಅಂತದ್ದೊಂದು ಅವಕಾಶ ಸಹ ಅತ್ಯಂತ ವಿಚಿತ್ರ ರೀತಿಯಲ್ಲಿ ಒದಗಿ ಬರಲಿದೆ ಅಂತ ಕೋಮಲ್ ಕನಸು ಮನಸಿನಲ್ಲಿಯೂ ಎಣಿಸಿರಲಿಲ್ಲ. ಮಾನಸಿ ಹೇಳಿ ಕೇಳಿ ದೊಡ್ಡ ಸೈಕಾಲಜಿಸ್ಟ್. ಅದನ್ನೇ ಉಂಡುಟ್ಟು ಜೀವಿಸುವಾಕೆ. ಆಕೆ ಆಕಸ್ಮಾತ ಸಿಕ್ಕು, ಮಾತಾಡಲು ಶುರು ಮಾಡಿದರೆ ತನಗೂ ಸ್ವಲ್ಪ ಸೈಕಾಲಜಿ ಗೊತ್ತಿದ್ದರೆ ಒಳ್ಳೆಯದು ಅಂತ ಕೋಮಲ್ ಸೈಕಾಲಜಿಯ ಬಗ್ಗೆ  ಸ್ವಲ್ಪ ಓದಿ, ತಿಳಿದುಕೊಳ್ಳಬೇಕು ಅಂತ ಮಾಡಿದ. ಅವನೂ ಬಿಎ ಡಿಗ್ರಿ ಸಮಯದಲ್ಲಿ ಸೈಕಾಲಜಿಯನ್ನು ಮೈನರ್ ಅಂತ ಓದಿದವನೇ. ಅದೆಲ್ಲ ಎಂದೋ ಮರೆತು ಹೋಗಿತ್ತು.

ಈಗ ಕೋಮಲ್ ದಿನಾ ಮಾನಸಿ ಮನೆಯ ಮುಂದೆ ಓಡತೊಡಗಿದ. ಜಾಗಿಂಗ್ ಅಂತೂ ಮಾಡೇ ಮಾಡಬೇಕು. ಎಲ್ಲಿ ಮಾಡಿದರೆ ಏನು ಸಿವಾ? ಅಂತ ಹೇಳಿ ಬೆಳಿಗ್ಗೆ ಎರಡು ತಾಸಿನಲ್ಲಿ ಒಂದು ಸಲ, ಎರಡು ಸಲ ಆಕೆಯ ಮನೆ ಮುಂದೆ ಆರಾಮವಾಗಿ ಜಾಗಿಂಗ್ ಮಾಡುತ್ತಿದ್ದ. ಮತ್ತೆ ಸಂಜೆ ಜಾಗಿಂಗ್ ಹೊರಟಾಗಲೂ ಅಷ್ಟೇ. ಅಷ್ಟೆಲ್ಲ ಹಾಜರಿ ಹಾಕಿದರೂ ಎಂದೂ ಮಾನಸಿ ಕಂಡುಬರಲಿಲ್ಲ. ಎಂದೋ ಒಂದು ದಿವಸ ಕೆಂಪು ಸೀರೆ ಉಟ್ಟಿದ್ದ ಬೋಳು ತಲೆ ಪದ್ಮಾವತಿಬಾಯಿ ಮುಂಜಾನೆ ಮುಂಜಾನೆಯೇ ಕಂಡು, 'ಥತ್! ಅಪಶಕುನ, ಅಪಶಕುನ,' ಅಂತ ಅಂದುಕೊಂಡಿದ್ದ ಕೋಮಲ್. ಎಷ್ಟೇ ಮುಂದುವರೆದರೂ ಕೆಲವೊಂದು ಪೂರ್ವಾಗ್ರಹಗಳು ಹೋಗುವದಿಲ್ಲ ನೋಡಿ.

ಅದೊಂದು ರವಿವಾರ. ಕೋಮಲ್ ಜಾತ್ರಾವಳಿಗೆ ಬರೋಬ್ಬರಿ ನೆನಪಿದೆ. ಜಾಗಿಂಗ್ ಹೊರಡುವದು ಸ್ವಲ್ಪ ಲೇಟ್ ಆಗಿತ್ತು. ತನ್ನ ರೆಗ್ಯುಲರ್ ಜಾಗಿಂಗ್ ಮುಗಿಸಿ, ಮಾನಸಿಯ ಮನೆ ಮುಂದೆ ಹಾದು ಬರುತ್ತಿರುವಾಗ ಸುಮಾರು ಬೆಳಿಗ್ಗೆ ಎಂಟೂ ಕಾಲು ಘಂಟೆ. ಒಳ್ಳೆ ತಿಳಿ ಬಿಸಿಲಿತ್ತು. ಹಿಂದಿನ ದಿನವೇ ಮಳೆ ಬಿದ್ದು ಹೋಗಿದ್ದಕ್ಕೆ ಎಲ್ಲ ಕಡೆ ಮಣ್ಣು ಕೆಂಪು ಕೆಂಪಾಗಿತ್ತು. ಅಕಾಲ ಮಳೆಗೆ ಮಾವಿನ ಹೂಗಳೆಲ್ಲ ಉದುರಿ ಹೋಗಿದ್ದವು. ಮರಗಳ ಕೆಳಗೆ ಬಿಳಿಯ ಚಿತ್ತಾರ.

'ಡೀನೋ, ಡೀನೋ,' ಅಂತ ಯಾರೋ ಜೋರಾಗಿ ಕೂಗುತ್ತಿದ್ದರು. ಮಾನಸಿಯ ಮನೆಯ ಕಡೆಯಿಂದಲೇ ಬಂತು ಆ ಧ್ವನಿ. ಕೋಮಲ್ ಜಾತ್ರಾವಳಿಯ ಕಿಮಿ ನಿಮಿರಿದವು. 'ಇಷ್ಟು ದಿವಸ ಚಕ್ಕರ್ ಹೊಡೆದರೂ ಮಾನಸಿ ಕಂಡೇ ಇರಲಿಲ್ಲ. ಇವತ್ತು ಕೇಳುತ್ತಿರುವ ಧ್ವನಿ ಅವಳದ್ದೇ ಇರಬಹುದೇ? ಏನು ನಾಯಿಗೆ ಊಟ ಹಾಕಲು ಕರೆಯುತ್ತಿದ್ದಾಳೋ ಹೇಗೆ?' ಅಂತ ಅಂದುಕೊಂಡ ಕೋಮಲ್. ಆದರೆ ಯಾವದೇ ಲೇಡಿ ಫಿಗರ್ ಕಣ್ಣಿಗೆ ಬೀಳಲಿಲ್ಲ.

ಮುಂದಿನ ಕ್ಷಣ ಕೇಳಿದ್ದು ಒಂದು ಭೀಕರ, ಬೀಭತ್ಸ, ಭಯಂಕರ ಚೀತ್ಕಾರ. ಸಂಶಯವೇ ಬೇಡ. ಮೊದಲಿನ ಹೆಣ್ಣಿನ ಧ್ವನಿಯೇ. ಒಂದು ನಿಮಿಷದ ಹಿಂದೆ ಏನನ್ನೋ ಕರೆಯುತ್ತಿದ್ದ ಅದೇ ಸುಂದರ ಹೆಣ್ಣು ಧ್ವನಿ ಈಗ, 'Oh! My God! Oh! My God! I can't believe it,' ಅಂತ ಕೂಗುತ್ತ, 'Somebody please come here. Help! Help!' ಅಂತ ಸಹಾಯಕ್ಕೆ ಅಂಗಾಲಾಚುತ್ತಿದೆ. ಇದನ್ನು ಕೇಳಿದ ಕೋಮಲ್ ಒಂದು ಕ್ಷಣ ಅಪ್ರತಿಭನಾದ. ಥಂಡಾ ಹೊಡೆದ. ಚೇತರಿಸಿಕೊಂಡ. 'ವಿಚಾರ ಮಾಡುವದು ಸಾಕು. ಮೊದಲು ಸಹಾಯ ಮಾಡು. ಓಡು,' ಅಂತ ಹೇಳಿದ ಮೆದುಳು ಆಫ್ ಆಗಿ, reflexes ಕೋಮಲನ ಮುಂದಿನ ಹೆಜ್ಜೆ ನಿರ್ಧರಿಸಿದವು. ಹಿಂದೆ ಮುಂದೆ ನೋಡದೇ ಕೋಮಲ್ ಮಾನಸಿಯ ಕಂಪೌಂಡ್ ಒಳಗೆ ಓಡಿದ. ಗೇಟಿನಿಂದ ಸುಮಾರು ಒಳಗೆ ಇತ್ತು ಮನೆ. ಮಾವಿನ ಮರಗಳ ಮಧ್ಯೆ ಓಡುತ್ತ, ಧ್ವನಿಯನ್ನು ಹಿಂಬಾಲಿಸುತ್ತ ಓಡಿದ ಕೋಮಲ್. ಬಂಗಲೆಯ ಹಿಂಭಾಗದಿಂದ ಹೆಣ್ಣಿನ ಧ್ವನಿ ಸಹಾಯಕ್ಕೆ ಕೂಗುತ್ತಿತ್ತು. ಆಕಡೆ ಕೋಮಲ್ ಓಡಿದ. ಜಾಸ್ತಿ ಓಡುವದು ಬೇಕಾಗಲೇ ಇಲ್ಲ. ಮಾನಸಿ ಸಹ ಅದೇ ದಾರಿಯಲ್ಲಿ ಓಡಿ ಬರುತ್ತಿದ್ದಳು.

ಈಗ ಸುಂದರಿಯ ದರ್ಶನವಾಯಿತು. ತಿಳಿ ಗುಲಾಬಿ ಬಣ್ಣದ ನೈಟಿ ಧರಿಸಿದ್ದಳು ಸುಂದರಿ. ಅಂತಹ ಸಂದರ್ಭದಲ್ಲೂ ಕೋಮಲನ x-ray ಕಣ್ಣುಗಳು ಕ್ಷಣಮಾತ್ರದಲ್ಲಿ ಆಕೆಯನ್ನು ಫುಲ್ ಸ್ಕ್ಯಾನ್ ಮಾಡಿಬಿಟ್ಟವು. 'Wow! What a beauty!' ಅಂದುಕೊಂಡ ಕೋಮಲ್ ನಿಂತ. ಅಷ್ಟರಲ್ಲಿ ಈ ಕಡೆ ಓಡಿ ಬರುತ್ತಿದ್ದ ಮಾನಸಿ ಮುಂದೆ ಓಡುತ್ತ, ಆದರೆ ಹಿಂದೆ ನೋಡುತ್ತ ಬರುತ್ತಿದ್ದಾಕೆ ಇನ್ನೇನು ನಿಂತಿದ್ದ ಕೋಮಲಗೆ ಡಿಕ್ಕಿ ಹೊಡದೇ ಬಿಡುತ್ತಾಳೆ ಅನ್ನುವಷ್ಟರಲ್ಲಿ ಕೋಮಲ್ ಬರೋಬ್ಬರಿ position ತೆಗೆದುಕೊಂಡು ನಿಂತ. ಆಕೆ ಡಿಕ್ಕಿ ಹೊಡೆದರೆ ಬೀಳಬಾರದು ಆದರೆ ಹುಡುಗಿ ಮಾತ್ರ ತನ್ನ ತೋಳಲ್ಲಿ ಬಂಧಿಯಾಗಬೇಕು. ಮೊದಲಾಡುವ ಮಾತುಗಳಲ್ಲೇ ಮಾನಸಿಯನ್ನು ಕ್ಯಾಚ್ ಹಾಕಬೇಕು ಅನ್ನುವ ಸ್ಕೀಮ್ ಅದಾಗಿಯೇ ಮೂಡಿ ಬಂತು ಕೋಮಲನ ಮನದಲ್ಲಿ.

'Help, Help,' ಅಂತ ಕೂಗುತ್ತ, ಹಿಂದೆ ದೆವ್ವ ಅಟ್ಟಿಸಿಕೊಂಡು ಬರುತ್ತಿದೆಯೋ ಅಂತ ಹಿಂದಿಂದೆ ನೋಡುತ್ತ, ಹುಚ್ಚಿಯಂತೆ ಓಡಿ ಬರುತ್ತಿದ್ದ ಮಾನಸಿ ಸೀದಾ ಕೋಮಲನ ವಿಶಾಲವಾದ ಎದೆಯಲ್ಲಿ ಲೀನವಾದಳು. ಅದೆಷ್ಟು ಮಂದಿ ಸುಂದರಿಯರು ಅವನ ಎದೆಯಲ್ಲಿ ಲೀನವಾಗಿ ಕಳೆದು ಹೋಗಿದ್ದರೋ ಏನೋ. ಆದರೆ ಇವಳು ಮಾನಸಿ. ಐದಡಿ ಒಂಬತ್ತು ಇಂಚು. ತೂಕವೂ ಬರೋಬ್ಬರಿ ಇದೆ. ದೊಡ್ಡ ಸೈಜಿನ ಸುಂದರಿ. ಅಂತಹ ಫಿಗರ್ ಒಂದು ಬಂದು ಡಿಕ್ಕಿ ಹೊಡೆದ ಅಬ್ಬರಕ್ಕೆ ಕೋಮಲನಂತಹ ಆರಡಿ ಮೂರಿಂಚಿನ, ತೊಂಬತ್ತು ಕೇಜಿಯ ಪೈಲ್ವಾನ ಕೂಡ ಒಂದು ಬಾರಿ ಅಲ್ಲಾಡಿ ಹೋದ. ಒದ್ದೆ ನೆಲದ ಮೇಲೆ ಕಾಲು ಜಾರಿತು. ಸ್ವಲ್ಪ ತಪ್ಪಿದ್ದರೆ ಇಬ್ಬರೂ ನೆಲದ ಮೇಲೆ ಡೈವ್ ಹೊಡೆಯಬೇಕಾಗುತ್ತಿತ್ತು. ಹೇಗೋ ಬ್ಯಾಲೆನ್ಸ್ ಮಾಡಿದ ಕೋಮಲ್, ಆಕೆಯನ್ನು ಸರಿಯಾಗೇ ತಬ್ಬಿದ. ತಬ್ಬಿದ ಅಂತ ಅನ್ನಿಸಬಾರದು ಆದರೆ ಗರ್ಮಿ ಮಾತ್ರ ಬರೋಬ್ಬರಿ ಹೋಗಿ ಮುಟ್ಟಬೇಕು. ಹಾಗೆ ತಬ್ಬಿದ. ಮಾನಸಿ ಒಂದು ಕ್ಷಣ ಪೂರ್ತಿ ಕಂಗಾಲಾದಳು. ಏನೋ ನೋಡಿ ಆಕೆ ವಿಪರೀತ ಹೆದರಿ, ಜೀವ ಉಳಿಸಿಕೊಂಡರೆ ಸಾಕು ಅಂತ ಓಡಿ ಬರುತ್ತಿದ್ದರೆ ಈಗ ಏನಾಗಿದೆ ಅಂತಲೇ ತಿಳಿಯಲಿಲ್ಲ ಆಕೆಗೆ. ಮುಂದೆ ಯಾರು ನಿಂತಿದ್ದಾರೆ? ಏನಾಗುತ್ತಿದೆ? ಅಂತ ತಿಳಿಯುವದರ ಮೊದಲೇ ಬ್ರೈನ್ ಸ್ವಿಚ್ ಆಫ್ ಆಯಿತು. ಕೋಮಲನ ಎದೆ ಮೇಲೆ ಒರಗಿದ್ದ ಮಾನಸಿ ಹಾಗೇ ಕಣ್ಣು ಮುಚ್ಚಿದಳು. ಆಕೆಯ ದೇಹ, ಮನಸ್ಸು ತಾತ್ಕಾಲಿಕವಾಗಿ ಶಟ್ ಆಫ್ ಆಗಿತ್ತು. 'ಅರೇ ಇಸ್ಕಿ! ಬಂದು ಡಿಕ್ಕಿ ಹೊಡೆದವಳನ್ನು ಮಾತಾಡಿಸಿ, ಸಮಾಧಾನ ಮಾಡೋಣ ಅಂದುಕೊಂಡರೆ ಪೂರ್ತಿ ಔಟೇ ಆಗಿಬಿಟ್ಟಳಲ್ಲ ಈಕೆ! ಏನು ಮಾಡುವದು ಈಗ?' ಅಂತ ಕೋಮಲ್ ಆಚೀಚೆ ನೋಡುತ್ತಿರುವಾಗ, ಒಂದು ಆಕೃತಿ ಮೂಡಿ ಬಂತು. ಕೆಲಸದ ಪದ್ಮಾವತಿ ಸೀನಿಗೆ ಎಂಟ್ರಿ ಕೊಟ್ಟಳು. ಮಾನಸಿಯನ್ನು ಪುರುಷನೊಬ್ಬನ ತೆಕ್ಕೆಯಲ್ಲಿ ನೋಡಿದ ಆಕೆ ಘಾಬರಿಯಾದಳು. 'ನೀರು ತನ್ನಿ! ಬೇಗ! ಬೇಗ!' ಅಂತ ಕೋಮಲ್ ನಿಂತಲ್ಲಿಂದಲೇ ಕೂಗಿ ಹೇಳಿದ. ಓಡಿದ ಪದ್ಮಾವತಿಬಾಯಿ ತನ್ನ ಮಡಿ ತಾಂಬ್ರದ ಚೊಂಬು ಹಿಡಿದುಕೊಂಡು ಓಡಿ ಬಂದಳು. ಕೋಮಲನ ಮುಂದೆ ಹಿಡಿದಳು. ಮಾನಸಿಯನ್ನು ಎದೆಗೆ ಒರಗಿಸಿಕೊಂಡೇ ನಿಧಾನವಾಗಿ ಕೋಮಲ್ ಬಗ್ಗಿದ. ತುದಿಗಾಲ ಮೇಲೆ ನಾಜೂಕಾಗಿ ಕೂತ. ಮಾನಸಿಯ ತಲೆಯನ್ನು ನಾಜೂಕಾಗಿ ತನ್ನ ಎಡ ತೊಡೆಯ ಮೇಲೆ ಬ್ಯಾಲೆನ್ಸ್ ಮಾಡಿ ಇಟ್ಟುಕೊಂಡ. ಆಕೆಯ ಗುಲಾಬಿ ಬಣ್ಣದ ನೈಟಿಯನ್ನು ಮಾತ್ರ ಕೆಂಪು ಮಣ್ಣಿನ ರಾಡಿಯಿಂದ ಪೂರ್ತಿಯಾಗಿ ರಕ್ಷಿಸಲಾಗಲಿಲ್ಲ. ಅದಕ್ಕೆ 'ಗೋಲಿ ಮಾರೋ' ಅಂದುಕೊಂಡ ಕೋಮಲ್ ಪದ್ಮಾವತಿ ಕೊಟ್ಟ ತಾಂಬ್ರದ ಚೊಂಬು ತೆಗೆದುಕೊಂಡ. ನೀರಿನಲ್ಲಿ ತುಳಸಿ ಎಲೆಗಳು ತೇಲುತ್ತಿದ್ದವು. 'ಓಹೋ! ಇದು ಬೋಡಮ್ಮನ ಟ್ರೇಡ್ ಮಾರ್ಕ್ ಚೊಂಬು!' ಅಂತ ಅಂದುಕೊಂಡು, ನೀರು ಕೈಗೆ ಹಾಕಿಕೊಂಡು, ಮಾನಸಿಯ ಸುಂದರ ವದನದ ಮೇಲೆ ಚಿಮುಕಿಸಿದ. ಎರಡು ಬಾರಿ ಚಿಮುಕಿಸಬೇಕಾಯಿತು. ಆಗ ಮಾನಸಿ ನಿಧಾನವಾಗಿ ಕಣ್ಣು ತೆಗೆದಳು. ಪೂರ್ತಿ confuse ಆಗಿದ್ದಳು. 'ಮಾನಸಿ ಮೇಡಂ, ಏನಾಯಿತು? ಆಪರಿ ಕೂಗುತ್ತ, ಏನೋ ಕಂಡು ಹೆದರಿ ಓಡಿ ಬರುತ್ತಿದ್ದಿರಿ? ಏನಾಯಿತು?' ಅಂತ ಕೇಳಿದ ಕೋಮಲ್. ನಿಧಾನವಾಗಿ ಎದ್ದು ನಿಂತ. ಮಾನಸಿಯನ್ನು ಬಿಡಲಿಲ್ಲ. ಆಕೆಗೂ ಅಂತಹ ಕಠಿಣ ಸಂದರ್ಭದಲ್ಲಿ ಸಿಕ್ಕ ಆಸರೆ ಹಾಯೆನಿಸರಬೇಕು. ಅದಕ್ಕೆ ಆಕೆಯೂ ಅವನಿಗೆ ಆನಿಕೊಂಡೇ ಎದ್ದು ನಿಂತಳು. ಎದ್ದು ನಿಂತ ಬಳಿಕ ಸ್ವಲ್ಪ ದೂರ ಸರಿದಳು. ಮತ್ತೆ ತಲೆ ತಿರುಗಿ ಬಿದ್ದಾಳು ಅಂತ ಆಧಾರ ಕೊಡಲು ಕೋಮಲ್ ಸರಿಯಾದ ಪೊಸಿಶನ್ ತೆಗೆದುಕೊಂಡೇ ನಿಂತಿದ್ದ.

ಆಘಾತದಿಂದ ಕೊಂಚ ಚೇತರಿಸಿಕೊಂಡ ಮಾನಸಿ ಮತ್ತೊಮ್ಮೆ distress ಮೋಡಿಗೆ ಹೋದಳು. ಸ್ವಲ್ಪ ನಿರಾಳವಾಗಿದ್ದ ಮುಖದ ಮೇಲೆ ಆತಂಕ ಮತ್ತೆ ಮೂಡಿ ಬಂತು. ಒಮ್ಮೆಲೇ ಕೋಮಲನ ಕೈಹಿಡಿದು ಎಳೆಯುತ್ತ, 'ಮಿಸ್ಟರ್, ಬನ್ನಿ, ಬನ್ನಿ, ಪ್ಲೀಸ್ ಬನ್ನಿ,' ಅಂತ ಕರೆಯುತ್ತ, ಮನೆಯ ಹಿಂದುಗಡೆ ಕರೆದುಕೊಂಡು ಹೊರಟುಬಿಟ್ಟಳು. 'ಅರೇ! ಇದೇನಾಗುತ್ತಿದೆ?' ಅಂತ ಒಂದು ಕ್ಷಣ ವಿಚಾರ ಮಾಡಿದ ಕೋಮಲ್. ಆದರೆ ಜಾಸ್ತಿ ಏನೂ ಕೇಳದೇ ಆಕೆಯ ಹಿಂದೆ ಹೋದ. ಕಂಪೌಂಡಿನ ಹಿಂದಿನ ಭಾಗಕ್ಕೆ ಕರೆದುಕೊಂಡು ಹೋದಳು. ಅಲ್ಲಿ ಬಟ್ಟೆ ಒಣ ಹಾಕಲಿಕ್ಕೆ ಒಂದಿಷ್ಟು ಹಗ್ಗ ಇದ್ದವು. ಅಲ್ಲಲ್ಲಿ ಕಟ್ಟಿಗೆಯ ಗೂಟ ಹುಗಿದು ಅವಕ್ಕೆ ಹಗ್ಗ ಕಟ್ಟಿದ್ದರು. ಎಲ್ಲರ ಮನೆಯಲ್ಲಿ ಇರುವಂತೆ. ಏನೂ ವಿಶೇಷ ಕಾಣಲಿಲ್ಲ. ಆಗ ಮಾನಸಿ, 'ಅಲ್ಲಿ ನೋಡಿ. ನನ್ನ ಪ್ರೀತಿಯ ಡೀನೋ!' ಅಂತ ಅರಚಿದಳು. ಆವಾಗ ಕೋಮಲ್ ಜಾತ್ರವಳಿಯ ದೃಷ್ಟಿ ಬರೋಬ್ಬರಿ ಹೋಗಿ ನೆಟ್ಟಿತು. ದೃಶ್ಯ ಬಹಳ ಖರಾಬಾಗಿತ್ತು.

ಒಂದು ನಾಯಿಯನ್ನು ಎರಡು ಗೂಟಗಳ ಮಧ್ಯೆ ಅಗಲಗಲ ಸಿಗಿದು ಕಟ್ಟಿಬಿಟ್ಟಿದ್ದರು. ನಾಯಿಯ ಕಳೇಬರ ಗಾಳಿಯಲ್ಲಿ. ಮುಂದಿನ ಎರಡು ಕಾಲುಗಳನ್ನು ಮೇಲೆ ಕಟ್ಟಿದ್ದರೆ, ಕೆಳಗಿನ ಎರಡು ಕಾಲುಗಳನ್ನು ಕೆಳಗೆ. ಮಾನಸಿ ಮತ್ತು ಕೋಮಲ್ ನಿಂತ ಕಡೆಯಿಂದ ನಾಯಿಯ ಹಿಂಭಾಗವಷ್ಟೇ ಕಾಣುತ್ತಿತ್ತು. ಕೋಮಲ್ ಮುಖದ ಮೇಲೆ ಪೂರ್ತಿ ಆತಂಕ. ಏನಾಗಿದೆ ಅಂತ ಕೋಮಲನಿಗೆ ಅರಿವಾಯಿತು. ಅದೇ ಹೊತ್ತಿಗೆ ಮಾನಸಿ ಕೈ ಹಿಡಿದು ಮೆಲ್ಲಗೆ ಎಳೆದಳು. 'ಆ ಕಡೆ ಹೋಗೋಣ, ಬನ್ನಿ,' ಅನ್ನುವ ರೀತಿಯಲ್ಲಿ ನೋಡಿದಳು. ಮಾತುಗಳಿಗೆ ಅವಕಾಶವಿಲ್ಲ. ಉಪಯೋಗವೂ ಇಲ್ಲ. ಮಾನಸಿ ಮುಂದೆ ನಡೆದಳು. ಕೋಮಲ್ ಹಿಂಬಾಲಿಸಿದ. ಮಾನಸಿ ನಡೆಯುವ ರೀತಿಯನ್ನೇ ಕೋಮಲ್ ಗಮನಿಸಿದ. ಏನು ಕಂಡನೋ ಏನೋ, ಏನು ನೆನಪಾಯಿತೋ ಏನೋ, ಅಂತಹ ಸಂದರ್ಭದಲ್ಲೂ ಕೋಮಲ್ ಮುಖದ ಮೇಲೆ ಒಂದು ತುಂಟ ನಗೆ ಮೂಡಿತು. 'ಮಕ್ಕಳೇ, ನನ್ನ ಸ್ಪೆಷಾಲಿಟಿ ಏನು ಗೊತ್ತದೆ ಏನು? ಹುಡುಗಿ ಹ್ಯಾಂಗ ನೆಡಿತಾಳ ಅನ್ನೋದನ್ನು ನೋಡಿಯೇ ನಾ ಹೇಳಬಲ್ಲೆ ಅವಳು ವರ್ಜಿನ್ ಹೌದೋ ಅಲ್ಲೋ ಅಂತ' ಹಾಗಂತ ಕೊಚ್ಚಿಕೊಳ್ಳುತ್ತಿದ್ದ ತನ್ನ ಬಡಾಯಿ ನೆನಪಿಗೆ ಬಂತು ಕೋಮಲಗೆ. ಮಾನಸಿಯನ್ನು ನೋಡಿ ಅಂದುಕೊಂಡ, 'ಸಂಶಯವೇ ಇಲ್ಲ. ಈಕೆಯೊಂದು ಶುದ್ಧ ಕನ್ಯಾ ರತ್ನ. pure virgin!' ಅಷ್ಟರಲ್ಲಿ ಒಂದು ಇಪ್ಪತ್ತು ಹೆಜ್ಜೆ ನಡೆದು ಬಂದಿದ್ದರು. ಈಗ ಕಂಡಿತು ನಾಯಿಯ ಮತ್ತೊಂದು ದೃಶ್ಯ. ಎರಡು ಗೂಟಗಳ ನಡುವೆ ಕಟ್ಟಿಹಾಕುವ ಮೊದಲು ನಾಯಿಯನ್ನು ನಟ್ಟ ನಡುವೆ ಬರೋಬ್ಬರಿ ಸಿಗಿದಿದ್ದರು. ಒಳ್ಳೆ ಗರಗಸದಿಂದ ಮೇಲಿಂದ ಕೆಳಗಿನವರೆಗೆ ನೀಟಾಗಿ ಮರದ ದಿಮ್ಮಿಯೊಂದನ್ನು ಸೀಳಿದಂತೆ. ಅಷ್ಟು ಖರಾಬಾಗಿ ಸೀಳಿದ್ದರೂ ನಾಯಿಯ ಮುಖ ಮಾತ್ರ ಪ್ರಶಾಂತವಾಗಿತ್ತು. ಕೋಮಲ್ ಮತ್ತೂ ಹತ್ತಿರ ಹೋಗಲಿಲ್ಲ. ಮುಖ ಕಿವುಚಿದ. ಮುಖ ಆಕಡೆ ತಿರುಗಿಸಿದ. ಪ್ರೀತಿಯ ನಾಯಿಗೆ ಆ ಗತಿ ಬಂದಿದ್ದು ನೋಡಿದ ಮಾನಸಿ ಮತ್ತೆ ಬಿಕ್ಕಳಿಸಿದಳು. ಕೋಮಲ್ ಆತ್ಮೀಯತೆಯಿಂದ ಬೆನ್ನು ತಟ್ಟಿದ. ಮಾನಸಿಗೆ ಏನಾಯಿತೋ ಏನೋ ಮತ್ತೊಮ್ಮೆ ಕೋಮಲನ ಎದೆಯಲ್ಲಿ ಮುಖ ನುಗ್ಗಿಸಿಯೇ ಬಿಟ್ಟಳು. ಗಂಡಿನ ಆ ಗಂಧ, ಆಗತಾನೆ ಕುದುರೆಯಂತೆ ಓಡಿ ಹರಿಸಿದ್ದ ಬೆವರಿನ ಗಂಧ ಎಲ್ಲ ಕೂಡಿ ಏನೋ ಒಂದು ತರಹದ ಸೆಳೆತ ಮೂಡಿಸಿದ್ದವು ಮಾನಸಿಯಲ್ಲಿ. ಒಂದು ತರಹದ ಹಾಯ್ ಅನ್ನುವ ನಿರುಮ್ಮಳ ಅಲ್ಲಿ ಸಿಗುತ್ತಿತ್ತು. ಅವನ್ನೇ ಮತ್ತೆ ಮತ್ತೆ ಬೇಡುತ್ತಿತ್ತು ಮಾನಸಿಯ ಮನಸ್ಸು. ಘಾಸಿಗೊಂಡಿದ್ದ ದೇಹ, ಮನಸ್ಸು ಹತೋಟಿ ಕಳೆದುಕೊಳ್ಳುವಂತೆ ಮಾನಸಿಯೂ ಸಹ ಹತೋಟಿ ಕಳೆದುಕೊಂಡು, ತನಗೆ ಅರಿವಿಲ್ಲದಂತೆಯೇ ಕೋಮಲನಿಗೆ ಫಿದಾ ಆಗುತ್ತಿದ್ದಳೇ?

ಅಲ್ಲಿಯೇ ನಿಂತು ಮಾಡುವದು ಏನೂ ಇಲ್ಲ ಅಂತ ಅಂದುಕೊಂಡ ಕೋಮಲ್ ನಿಂತಲ್ಲೇ ಸ್ವಲ್ಪ ಮಿಸುಕಾಡಿದ. ಅವನ ಹರವಾದ ಎದೆಗೆ ಆನಿಕೊಂಡು, ಅಪರೂಪಕ್ಕೆ ಸಿಕ್ಕ ಪುರುಷ ಸಂಗದ ಮಜಾ ತೆಗೆದುಕೊಳ್ಳುತ್ತಿದ್ದ ಮಾನಸಿ ಈ ಲೋಕಕ್ಕೆ ಬಂದಳು. ಒಂದು ತರಹ ಮುಜುಗರ ಪಟ್ಟಳು. ದೂರ ಸರಿದಳು. 'ಬನ್ನಿ, ಮನೆ ಒಳಗೆ ಹೋಗಿ ಮಾತಾಡೋಣ,' ಅಂತ ಕರೆದಳು. 'ನಾನು, ಕೋಮಲ್ ಜಾತ್ರಾವಳಿ. ದಿನಕರ ಜಾತ್ರಾವಳಿ ಅವರ ಮಗ. ನನ್ನ ಪರಿಚಯ ನಿಮಗೆ ಇಲ್ಲ ಅಂತ ಕಾಣಿಸುತ್ತದೆ. ನೀವು ಚಿಕ್ಕವರಿದ್ದಾಗ ನಾವೆಲ್ಲಾ ಒಂದೇ ಶಾಲೆ, ಕಾಲೇಜಿಗೆ ಹೋದವರು. ನಿಮಗಿಂತ ಮೂರ್ನಾಕು ವರ್ಷಕ್ಕೆ ಸೀನಿಯರ್ ನಾನು. ನೀವು ಅಮೇರಿಕಾದಿಂದ ವಾಪಸ್ ಬಂದಿದ್ದು ಕೇಳಿದ್ದೆ. ರೋಟರಿ ಕ್ಲಬ್ಬಿನ ಸಮಾರಂಭವೊಂದರಲ್ಲಿ ನೋಡಿದ ನೆನಪು. ನಿಮಗೆ ನನ್ನದು ನೆನಪಾಯಿತೋ ಇಲ್ಲವೋ ಗೊತ್ತಿಲ್ಲ. ಮುಂಜಾನೆ ಜಾಗಿಂಗ್ ಮುಗಿಸಿ ಬರುತ್ತಿದ್ದೆ. ನೀವು ಕೂಗಿಕೊಳ್ಳುವದು ಕೇಳಿತು. ಏನಾಯಿತೋ ಅಂತ ಘಾಬರಿಪಟ್ಟು ಬಂದು ನೋಡಿದೆ....... ' ಅಂತ ತನ್ನ ಪರಿಚಯ, ತಾನು ಆಕೆಯ ಬಂಗಲೆಯ ಕಂಪೌಂಡ್ ಹೊಕ್ಕಲು ಕಾರಣ ಎಲ್ಲ ಹೇಳಿಕೊಂಡ ಕೋಮಲ್. ಆಕೆ ತಪ್ಪು ತಿಳಿಯದಿರಲಿ ಅಂತ ಅಷ್ಟೇ. ಮಾನಸಿ ಮಾತಾಡಲಿಲ್ಲ. 'ಎಲ್ಲ ತಿಳಿಯಿತು. ಬನ್ನಿ,' ಅನ್ನುವ ರೀತಿಯಲ್ಲಿ ತಲೆಯಾಡಿಸಿದಳು. ಮನೆಯ ಮುಂದಿನ ಬಾಗಿಲಿನತ್ತ ನಡೆದಳು. ಕೋಮಲ್ ಹಿಂಬಾಲಿಸಿದ. ಸುತ್ತ ಮುತ್ತ ನೋಡುತ್ತಾ ನಡೆದ. ಎಲ್ಲ ಕಡೆ ಗವ್ವೆನ್ನುವ ಮೌನ. ಸಾಕಷ್ಟು ಬೆಳಕಿದ್ದರೂ ಕಂಪೌಂಡ್ ತುಂಬಾ ಇರುವ ಮಾವಿನ ಮರಗಳಿಂದ ಒಂದು ತರಹದ ಕತ್ತಲೆ. ಅದೂ ಸಹ ಒಂದು ತರಹದ ಖತರ್ನಾಕ್ 'ರಾವ್ ರಾವ್' ಫೀಲಿಂಗ್ ತಂದುಕೊಡುತ್ತಿತ್ತು.

ಮಾನಸಿ ಮತ್ತು ಕೋಮಲ್ ಮನೆಯೊಳಗೆ ಬಂದು ಕೂತರು. ಪದ್ಮಾವತಿಬಾಯಿ ಚಹಾ ತಂದುಕೊಟ್ಟಳು. ಓಡಿ ಸಾಕಷ್ಟು ಬೆವತಿದ್ದ ಕೋಮಲ್ ನೀರು ಕೇಳಿದ. ಒಂದು ಗ್ಲಾಸ್ ನೀರು ತಂದುಕೊಟ್ಟವಳಿಗೆ ಒಂದು ದೊಡ್ಡ ಪಾತ್ರೆಯಲ್ಲಿಯೇ ನೀರು ತಂದುಕೊಡಲು ಕೇಳಿದ. ಮರುಮಾತಾಡದೇ ಹೋಗಿ, ಫ್ರಿಜ್ಜಿನಿಂದ ದೊಡ್ಡ ಬಾಟಲಿ ತಂದು ಮುಂದೆ ಇಟ್ಟಳು ಪದ್ಮಾವತಿಬಾಯಿ. ಗಟ ಗಟ ಅಂತ ಅಷ್ಟೂ ನೀರು ಕುಡಿದ ಕೋಮಲ್. ಒಂದಿಷ್ಟು ನೀರನ್ನು ತಲೆಗೆ ಸುರಿದುಕೊಂಡು, 'ಹಾಯ್!' ಅಂತ ಅದರ ತಂಪನ್ನು ಎಂಜಾಯ್ ಮಾಡಿ, ತನ್ನ ಕೂದಲನ್ನು ಹಿಂದೆ ಎಳೆದುಕೊಂಡ. ಎಲ್ಲವನ್ನೂ ಒಂದು ತರಹ ಕದ್ದು ನೋಡುತ್ತಿದ್ದ ಮಾನಸಿ ಅಂದುಕೊಂಡಳು, 'ಎಷ್ಟು ಅಂದವಾಗಿದ್ದಾನೆ! ಯಾವದೋ ಹಾಲಿವುಡ್ ಹೀರೋ ನೆನಪಾಗುತ್ತಿದ್ದಾನೆ. ಹೆಸರು ನೆನಪಿಗೆ ಬರುತ್ತಿಲ್ಲ ಅಷ್ಟೇ.' ನೀರು ಕುಡಿದು ಮುಗಿಸಿದ ಕೋಮಲ್ ಚಹಾ ಎತ್ತಿಕೊಳ್ಳಲು ಈಕಡೆ ತಿರುಗಿ, ಮಾನಸಿ ಕಡೆ ಕೂಡ ನೋಡಿದ. ಕಣ್ಣು ಕಣ್ಣು ಕಲೆತವು. ಮಾನಸಿ ಒಂದು ತರಹ ನಾಚಿಗೆ ಪಟ್ಟುಕೊಂಡ ರೀತಿಯಲ್ಲಿ ತಲೆ ಆಕಡೆ ತಿರುಗಿಸಿ, ತನ್ನ ಮೊಬೈಲ್ ಮೇಲೆ ಯಾರದೋ ನಂಬರ್ ಒತ್ತತೊಡಗಿದಳು. ಆಕಡೆ ಇನ್ಸಪೆಕ್ಟರ್ ಖಲಸ್ಕರನ ಫೋನ್ ರಿಂಗಾಯಿತು. ಮಾನಸಿ ಎಲ್ಲ ವಿಷಯ ಹೇಳಿದಳು. ಕೋಮಲ್ ಕೇಳುತ್ತ ಚಹಾ ಹೀರಿದ. 'ಬೆಕ್ಕು ಕೊಂದು ಪಾರ್ಸೆಲ್ ಕಳಿಸಿದ್ದಾಯಿತು. ಕಿಟ್ಟಿ ಕಾಕಾ ಎಂಬ ಪ್ರೊಫೆಸರ್ ಒಬ್ಬನನ್ನು ಕೊಂದಾಯಿತು. ಈಗ ನಾಯಿಯನ್ನು ಸೀಳಿ ಗೂಟಕ್ಕೆ ಬಿಗಿದು ಹೋಗಿದ್ದಾರೆ. ಏನ್ರೀ ಇದು? ಧಾರವಾಡದಂತಹ ನೆಮ್ಮದಿ ಊರಲ್ಲಿ ಒಂದು ತಿಂಗಳಲ್ಲಿ ಇಂತಹ ಮೂರು ಕೇಸ್ ಆಗಿ, ಯಾವದರಲ್ಲೂ ಏನೂ ತನಿಖೆ ಮಾಡಲಾಗದೇ, ಯಾವದೇ ಸುಳಿವು ಸಿಗದೇ ಒದ್ದಾಡುತ್ತಿದ್ದೇವೆ. ಏನು ಮಾಡೋಣ? ನಮ್ಮ ಕರ್ಮ,' ಅಂದುಕೊಂಡ ಖಲಸ್ಕರ್. ಮಾನಸಿ ಹೇಳಿದ್ದು ಕೇಳಿಸಿಕೊಂಡ. ಕೆಲವೇ ನಿಮಿಷದಲ್ಲಿ ಬರುತ್ತೇನೆ ಅಂತ ಹೇಳಿಟ್ಟ ಫೋನ್.

ಮಾನಸಿ, ಕೋಮಲ್ ಜಾಸ್ತಿ ಮಾತಾಡಲಿಲ್ಲ. ಸುಮ್ಮನೆ ಕೂತು ಚಹಾ ಮುಗಿಸಿದರು. ಪದ್ಮಾವತಿ ಒಂದೆರೆಡು ಸಲ ಆಚೀಚೆ ಓಡಾಡಿದಳು. ಆಕೆಗೆ ಕೋಮಲ್ ಬಗ್ಗೆ ಗೊತ್ತಿಲ್ಲ. ಒಂದೆರೆಡು ಸಾರಿ ಆಕೆಯೂ ಕೋಮಲನನ್ನು ಸ್ಕ್ಯಾನಿಂಗ್ ಮಾಡಿದಳು. 'ಯಾರೋ ಏನೋ? ತುಂಬಾ ಚೆನ್ನಾಗಿದ್ದಾನೆ. ನಮ್ಮ ಮಾನಸಿಗೆ ತಕ್ಕ ಜೋಡಿ. ಮಾನಸಿ ಒಳ್ಳೆ ಮೂಡಿನಲ್ಲಿದ್ದಾಗ ಸಾವಕಾಶವಾಗಿ ಹಾವು ಬಿಟ್ಟು, ಎಲ್ಲ ಮಾಹಿತಿ ತೆಗೆಯಬೇಕು. ನಮ್ಮ ಹುಡುಗಿಗೆ ಒಂದು ತಕ್ಕ ಹುಡುಗ ಸಿಕ್ಕರೆ ಭಾಳ ಛಲೋ!' ಅನ್ನುವ ಮಮತೆ ಉಕ್ಕಿ ಬಂತು.

ಹೇಳಿದಂತೆ ಹತ್ತೇ ನಿಮಿಷದಲ್ಲಿ ಹಾಜರಾದ ಇನ್ಸಪೆಕ್ಟರ್ ಖಲಸ್ಕರ್. ಮಾನಸಿ ಮನೆಯಲ್ಲಿ ಕೋಮಲ್ ಜಾತ್ರಾವಳಿಯನ್ನು ನೋಡಿ ಒಂದು ಸಲ ಆಶ್ಚರ್ಯವಾಯಿತು ಅವನಿಗೆ. ಕೋಮಲ್ ಅವನಿಗೆ ಒಳ್ಳೆ ಪರಿಚಿತ. ಕೋಮಲನೇ ಎಲ್ಲ ವಿಷಯ ಹೇಳಿದ. ಕೇಳಿದ ಇನ್ಸಪೆಕ್ಟರ್ ಏನೂ ಮಾತಾಡಲಿಲ್ಲ. 'ಹಂ! ಹಂ!' ಅಂತ ಸುಮ್ಮನೆ ಹಂಕರಿಸಿದ. ಫೋನ್ ತೆಗೆದು ಕಂಟ್ರೋಲ್ ರೂಮಿಗೆ ಮಾಹಿತಿ ಕೊಟ್ಟ. ಮತ್ತೊಂದಿಷ್ಟು ಪೋಲೀಸರನ್ನು, ಇತರೆ ಸಿಬ್ಬಂದಿಯನ್ನು ಕಳಿಸಲು ಹೇಳಿದ. ಇದು ಮೂರನೇ ಘಟನೆ. ಅವರು ಬಂದು, ಪಂಚನಾಮೆ ಮಾಡಿ, ನಾಯಿ ಕಳೇಬರ ತೆಗೆದುಕೊಂಡು ಹೋಗಿ, ಪಶುವೈದ್ಯರಿಂದ autopsy ಮಾಡಿಸಿ, ಏನೇನೋ ಕೆಲಸ ಮಾಡಬೇಕು. ಮಾಡುತ್ತಾರೆ. ಅವಕ್ಕೆಲ್ಲ ಖಲಸ್ಕರ್ ಇಲ್ಲಿ ಇರಬೇಕು ಅಂತಿಲ್ಲ. ಮತ್ತೆ ಇಡೀ ಧಾರವಾಡ ವೃತ್ತಕ್ಕೇ ಆತ ಇನ್ಸಪೆಕ್ಟರ್. ಸಾವಿರ ಕೆಲಸ. ಈ ಮಾನಸಿ ಮೇಡಂ ಮನೆಯಲ್ಲಿ ಆಗುತ್ತಿರುವ ವಿಚಿತ್ರ ಘಟನೆಗಳ ಬಗ್ಗೆ SP ಸಾಹೇಬರ ಹತ್ತಿರ ಚರ್ಚೆ ಬೇಗ ಮಾಡಬೇಕು. ಏನೂ ಸುಳಿವು ಸಿಗುತ್ತಿಲ್ಲ. ಎಷ್ಟು ದಿವಸ ಅಂತ ಕತ್ತಲಲ್ಲಿ ತಡಕಾಡುವದು? ಒಂದೋ ಕೇಸ್ ಮುಚ್ಚಿ ಬಿ ರಿಪೋರ್ಟ್ ಹಾಕಬೇಕು. ಆದರೆ ದೊಡ್ಡ ಮಂದಿ. ನಂತರ ಆಕ್ಷೇಪಣೆ ತೆಗೆದರೆ ಮರ್ಯಾದೆ ಹೋಗುತ್ತದೆ. ಅದಕ್ಕೇ SP ಸಾಹೇಬರ ಜೊತೆ ಮಾತಾಡಿಯೇ ಮುಂದಿನ ಪ್ಲಾನ್ ಮಾಡಬೇಕು ಅಂತ ಮನಸ್ಸಿನಲ್ಲೇ ನೋಟ್ ಮಾಡಿಕೊಂಡ ಖಲಸ್ಕರ್.

ಪಂಚನಾಮೆ ಮಾಡುವ ಪೊಲೀಸರು, ಬೆರಳಚ್ಚು ತೆಗೆಯುವ ಮಂದಿ, ನಾಯಿಯ ಹೆಣ ಎತ್ತಿ ಪಶು ಚಿಕಿತ್ಸಾಲಯಕ್ಕೆ ಸಾಗಿಸುವ ಮಂದಿ ಎಲ್ಲ ಬಂದರು. ಖಲಸ್ಕರ್ ಎದ್ದು ಹೊರಟ. ಕೋಮಲ್ ಎದ್ದು ಕೈಕುಲಿಕಿದ. 'ಬಹಳ ದಿವಸವಾಯಿತು ಇನ್ಸಪೆಕ್ಟರ್ ಸಾಹೇಬರೇ. ಬೇಗ ಭೇಟಿ ಮಾಡಬೇಕು. ಪಾರ್ಟಿನೇ ಆಗಿಲ್ಲ ಈಗಿತ್ತಲಾಗೆ. ಯಾವಾಗ ಫ್ರೀ ಅಂತ ತಿಳಿಸಿ,' ಅಂತ ಕೋಮಲ್ ಖಲಸ್ಕರನ ಬೆನ್ನು ತಟ್ಟಿ ಹೇಳಿದ. ಇಬ್ಬರ ನಡುವೆ ಒಳ್ಳೆ ಗೆಳೆತನ, ಆತ್ಮೀಯತೆ ಎಲ್ಲ ಇದ್ದ ಹಾಗಿದೆ ಅಂದುಕೊಂಡಳು ಮಾನಸಿ. 'ಮುದ್ದಾಂ, ಮುದ್ದಾಂ. ಫೋನ್ ಮಾಡಿ ಹೇಳ್ತೀನಿ,' ಅಂತ ಆಶ್ವಾಸನೆ ಕೊಟ್ಟ ಖಲಸ್ಕರ್, ಕೋಮಲನ ಭುಜ ತಟ್ಟಿ, ಹೊರಟು ನಿಂತ.

ಕೋಮಲ್ ಸಹಿತ ಹೊರಡಲು ಅಣಿಯಾದ. ಮಾನಸಿಗೆ ಧೈರ್ಯ ಹೇಳಿದ. ಮನೆಗೆ ಬರುವಂತೆ ಆಹ್ವಾನ ನೀಡಿದ. ಮಾನಸಿ ಸಹಿತ ಕೋಮಲನ ತಂದೆ ದಿನಕರ ಜಾತ್ರಾವಳಿಯವರನ್ನು ನೆನಪಿಸಿಕೊಂಡು, ಅವರ ಬಗ್ಗೆ ವಿಚಾರಿಸಿಕೊಂಡಳು. ಅವರು ಆಕೆಯ ತಂದೆಯ ಆತ್ಮೀಯರೂ, ಮಾನಸಿ ಮೇಲೆ ತುಂಬಾ ಅಭಿಮಾನ, ಪ್ರೀತಿ ಎಲ್ಲ ಇಟ್ಟುಕೊಂಡವರು ಅಂತ ಹೇಳಿದಳು. ಒಮ್ಮೆ ಬಂದು ಮುದ್ದಾಂ ಭೆಟ್ಟಿಯಾಗುವದಾಗಿ ಹೇಳಿದಳು. ಕೋಮಲ್ ಜೊತೆ ಮತ್ತೆ ಕನೆಕ್ಟ್ ಆಗಿದ್ದರ ಬಗ್ಗೆ ಏನೋ ಒಂದು ತರಹದ ಹರ್ಷ, excitement ವ್ಯಕ್ತಪಡಿಸಿ, ಮತ್ತೆ ಮುದ್ದಾಂ ಭೆಟ್ಟಿಯಾಗೋಣ ಅಂತ ಹೇಳಿದಳು. ಕೋಮಲ್ ಹೊರಟು ನಿಂತ. ಬಾಗಿಲ ತನಕ ಹೋದವ ಒಮ್ಮೆ ತಿರುಗಿ ನೋಡಿದ. ಅವನು ತಿರುಗಿ ನೋಡುತ್ತಾನೆ ಅಂತ ಮಾನಸಿ ನಿರೀಕ್ಷಿಸಿರಲಿಲ್ಲ. ನಾಚಿದಳು. ಅವನು ಮುಗುಳ್ನಕ್ಕ. 'ಕೋಮಲ್, ಒಂದು ನಿಮಿಷ,' ಅಂದ ಮಾನಸಿ ಮೇಜಿನ ಕೆಳಗಿನ ಡ್ರಾವರಿನಿಂದ ಏನೋ ತೆಗೆದಳು. ತಂದು ಕೋಮಲ್ ಕೈಯಲ್ಲಿಟ್ಟಳು. ಅದು ಆಕೆಯ ವಿಸಿಟಿಂಗ್ ಕಾರ್ಡ್. ಆಕೆಯ ಎಲ್ಲ ಫೋನ್ ನಂಬರ್ ಅದರಲ್ಲಿದ್ದವು. ಕೋಮಲನ ಮುಖ ಅರಳಿತು. 'ಮುಂದೆ ಜರೂರ್ ಫೋನ್  ಮಾಡು. ಆಗಾಗ ಮಾಡುತ್ತಲೇ ಇರು,' ಅನ್ನುವ ಸಂದೇಶ ಅದರಲ್ಲಿ ಅಡಗಿತ್ತು ಅಂತ ಅರಿಯಲಾರದಷ್ಟು ದಡ್ಡನಲ್ಲ ಕೋಮಲ್. ಒಳೊಳಗೇ ಹಿಗ್ಗಿ ಹೀರೇಕಾಯಿಯಾದ. ಒಂದು ಕಾಗದದ ತುಣುಕಿನ ಮೇಲೆ ತನ್ನ ಮೊಬೈಲ್ ನಂಬರ್ ಗೀಚಿ ಕೊಟ್ಟ ಕೋಮಲ್ ಸುಂದರ ನಗೆ ನಕ್ಕ. ಕೋಮಲ್ ನಂಬರ್ ಕೊಟ್ಟ ಅಂತ ಮಾನಸಿ ಸಹಿತ ಫುಲ್ ಖುಷ್. ಆಕೆಯೂ ಒಂದು ತರವಾಗಿ ನಕ್ಕಳು. ಅದರಲ್ಲಿ ಆಸೆ, ಕೃತಜ್ಞತೆ, ದೇಹದ ಗರ್ಮಿ ಎಲ್ಲ ಕೂಡಿತ್ತು.

ಈಕಡೆ ಕೋಮಲ್ ಹೊರಟರೆ ಆಕಡೆ ನಾಯಿ ಡೀನೋನ ಹೆಣವನ್ನು ತಳ್ಳುಗಾಡಿಯಲ್ಲಿ ಹಾಕಿಕೊಂಡು ಒಯ್ಯುತ್ತಿದ್ದರು. ಅದನ್ನು ನೋಡಲಾಗದೇ ಮಾನಸಿ ಆಕಡೆ ಮುಖ ತಿರುಗಿಸಿದಳು. ದುಃಖದಿಂದ ಬಿಕ್ಕಿದಳು. 'I am terribly sorry for your loss, Manasi,' ಅಂದ ಕೋಮಲ್ ಜಾಗಿಂಗ್ ಮಾಡುತ್ತ ಅಲ್ಲಿಂದ ಮರೆಯಾದ.

ಭಾಗ - ೬ 

ಮುಂದೆ ಸ್ವಲ್ಪ ದಿವಸ ಎಲ್ಲ ಸಹಜವಾಗಿ ನಡೆದಿತ್ತು. ಆಫೀಸ್, ಮನೆ ಅಂತ ಮೊದಲಿನಂತೆ ಓಡಾಡಿಕೊಂಡಿದ್ದಳು ಮಾನಸಿ. ಪದ್ಮಾವತಿಬಾಯಿಯ ಸಹೋದರ ಸತ್ತುಹೋದ ಅಂತ ಆಕೆ ಒಂದು ವಾರ ರಜೆ ಹಾಕಿ  ವಿಜಾಪುರ ಕಡೆ ಹೋಗಿದ್ದಳು. ಹಾಗಾಗಿ ಅಡಿಗೆಯದೇ ತೊಂದರೆ. ಮಾನಸಿಗೆ ಅಡಿಗೆ ಬರುವದಿಲ್ಲವೆಂದಲ್ಲ. ಒಬ್ಬಳಿಗೇ ಮಾಡಿಕೊಳ್ಳಲು ಬೇಜಾರು. ಅಂತಹ ಜನರಿಗೆಂದೇ ಮನೆ ಅಡಿಗೆಯನ್ನು ಜನರಿಗೆ ತಲುಪಿಸುವಂತಹ ವ್ಯವಸ್ಥೆ ಈಗ ಧಾರವಾಡದಲ್ಲಿ ಶುರುವಾಗಿದ್ದು ಆಕೆಗೆ ಗೊತ್ತಿತ್ತು. ಅದನ್ನು ಪ್ರಯತ್ನಿಸಿ ನೋಡೋಣ ಅಂತ ವಿಚಾರ ಮಾಡಿದಳು.

ಒಂದು ದಿವಸ ಆಫೀಸಿನಿಂದ ಬರುವಾಗ ಹಿಂದಿ ಪ್ರಚಾರ ಸಭಾದ ಗುಡ್ಡ ಇಳಿದ ನಂತರ ಗಾಡಿಯನ್ನು ರಸ್ತೆ ಬದಿಗೆ ನಿಲ್ಲಿಸಿ, ಮನೆಗೆ ಊಟ ಡೆಲಿವರಿ ಮಾಡುವವರ ಸಣ್ಣ ಆಫೀಸ್ ಹೊಕ್ಕಳು. ಅವರು ವಿವರ ಬರೆದುಕೊಂಡು ಕಳಿಸಿಕೊಡುವದಾಗಿ ಹೇಳಿದರು. ರಾತ್ರೆ ಊಟ ಒಂದು ಅಷ್ಟೇ. ಮಧ್ಯಾನ ಆಫೀಸಿನ ಕೆಫೆಟೇರಿಯಾ ಊಟ. ಬೆಳಿಗ್ಗೆ ಚಹಾದ ಜೊತೆ ಬ್ರೆಡ್ಡು, ಬನ್ನು ಏನಾದರೂ ಇದ್ದರೆ ಸಾಕು.

ಅವರಿಗೆ ಊಟ ಕಳಿಸಿ ಅಂತ ಹೇಳಿ ಸಂಜೆ ಮನೆಗೆ ಬಂದು ಮುಟ್ಟಿದಳು. ನಾಯಿ, ಬೆಕ್ಕು ಬಂದು ಅಮರಿಕೊಂಡು ಪ್ರೀತಿ ಮಾಡಿದವು. ಅವಕ್ಕೂ ಈಗ ಒಂದು ಥರ. ನಾಯಿ, ಬೆಕ್ಕು ಎರಡೂ ತಮ್ಮ ತಮ್ಮ ಸಂಗಾತಿಗಳನ್ನು ಕಳೆದುಕೊಂಡು ಒಂದು ತರಹ ಮಂಕಾಗಿಬಿಟ್ಟಿವೆ. ಒಂದೇ ತಾಯಿಗೆ ಹುಟ್ಟಿದ್ದ ಮರಿಗಳು ಅವು. ಬೇರೆ ನಾಯಿ, ಬೆಕ್ಕು ತಂದರೂ ಮೊದಲಿನ ಸಂಬಂಧ ಬರಲು ಸಾಧ್ಯವೇ ಇಲ್ಲ. 'ಎಂತಾ ಕೆಲಸ ಮಾಡಿದರು? ಮಾಡಿದವರು ಅದೆಷ್ಟು ಕ್ರೂರಿಗಳು ಇರಬಹುದು?' ಅಂತೆಲ್ಲ ವಿಚಾರ ಮಾಡುತ್ತ, ಏನೋ ಓದುತ್ತ ಕುಳಿತಳು ಮಾನಸಿ. ಸ್ವಲ್ಪ ಸಮಯದ ನಂತರ ಎದ್ದು ತನ್ನ ಕೋಣೆ ಸೇರಿಕೊಂಡು, ಬಟ್ಟೆ ಬದಲಾಯಿಸಿ, ಮಂಚದ ಮೇಲೆ ಅಡ್ಡಾಗಿ ಏನೋ ಓದತೊಡಗಿದಳು.

ರಾತ್ರಿ ಎಂಟು ಘಂಟೆ ಹೊತ್ತಿಗೆ ಮೊಬೈಲ್ ಫೋನ್ ರಿಂಗಾಯಿತು. ಎತ್ತಿದರೆ ಆಕಡೆಯಿಂದ ಊಟದ ಡೆಲಿವರಿ ಮನುಷ್ಯ ಮಾತಾಡುತ್ತಿದ್ದ. ಊಟ ತಂದಿರುವದಾಗಿಯೂ, ಮನೆ ಎದುರಿಗೆ ಬಂದು ನಿಂತಿರುವದಾಗಿಯೂ ಹೇಳಿದ. 'ಸರಿ, ಒಂದು ನಿಮಿಷ ಬಂದೆ,' ಅಂದ ಮಾನಸಿ ಕೆಳಗೆ ಇಳಿದು ಬಂದಳು. ಬಾಗಿಲ ಸಂದಿಯಲ್ಲಿ ಇಣುಕಿ ನೋಡಿದರೆ ಅವನು ಬೆನ್ನು ಹಾಕಿ ನಿಂತಿದ್ದ. ಒಂದು ಸಲ ವಿಚಿತ್ರವೆನಿಸಿತು. ಬಾಗಿಲು ತೆಗೆಯಲೋ ಬೇಡವೋ ಅಂತ ವಿಚಾರ ಮಾಡಿದಳು. ಒಂದು ಐಡಿಯಾ ಹೊಳೆಯಿತು. ಮೊಬೈಲ್ ಫೋನಿನಿಂದ ಆಗ ತಾನೇ ಬಂದಿದ್ದ ನಂಬರಿಗೆ ರೀಡೈಲ್(redial) ಒತ್ತಿದಳು. ಬಾಗಿಲಿಗೆ ಬೆನ್ನು ಹಾಕಿ ನಿಂತಿದ್ದ ವ್ಯಕ್ತಿಯೇ ಫೋನ್ ಎತ್ತಿದ. ಹಲೋ ಅಂದ. 'ಇವನು ಊಟ ಡೆಲಿವರಿ ಮಾಡಲು ಬಂದವನೇ. ಸಂಶಯ ಪಡುವ ಜರೂರತ್ತಿಲ್ಲ,' ಅಂದುಕೊಂಡ ಮಾನಸಿ ಬಾಗಿಲು ತೆಗೆದಳು. ಬಾಗಿಲು ತೆಗೆಯುತ್ತಿದ್ದಂತೆಯೇ ಆ ವ್ಯಕ್ತಿ ಕೂಡ ಈಕಡೆ ತಿರುಗಿದ. ಅವನ ಮುಖ ನೋಡಿದ ಮಾನಸಿ  ಹೌಹಾರಿದಳು. ಹೃದಯ ಲೆಕ್ಕ ತಪ್ಪಿ ಬಡಿಯಿತು. ಮೈತುಂಬ ಮೃದಂಗ ಬಾರಿಸಿದಂತಾಯಿತು. ಎದುರಿಗೆ ಕೋಮಲ್ ಜಾತ್ರಾವಳಿ ನಿಂತಿದ್ದ. ಅವನ ಕೈಯಲ್ಲಿ ಊಟವಿತ್ತು.

'ಹಾಯ್! ಕೋಮಲ್, ಏನಿದು ಆಶ್ಚರ್ಯ? ನೀನು? ಅದೂ ಊಟದ ಜೊತೆ?' ಅಂತ ಕೇಳಿದಳು ಮಾನಸಿ. ಕೋಮಲ್ ನಕ್ಕ. ಗಲ್ಲದಲ್ಲಿ ಗುಳಿ ಬಿದ್ದವು. ಅವನ್ನು ನೋಡಿದ ಮಾನಸಿ ಆ ಗುಳಿಗಳಲ್ಲಿ ತಾನೇ ಬಿದ್ದು, ತರೇವಾರಿ ಭಾವನೆಗಳ ಸುಳಿಯಲ್ಲಿ ಕಳೆದುಹೋದಳು. ನಾಯಿ ಸತ್ತಾಗ ಅಚಾನಕ್ ಆಗಿ ಕೋಮಲ್ ಭೆಟ್ಟಿಯಾಗಿದ್ದ. ನಂತರ ಸುದ್ದಿಯೇ ಇರಲಿಲ್ಲ. ಫೋನೂ ಮಾಡಿರಲಿಲ್ಲ. ಬೆಳಿಗ್ಗೆ ಎದ್ದು ಕಿಡಕಿ ಹತ್ತಿರ ಬಂದು ನಿಂತು ನೋಡಿದಾಗಲೂ ಜಾಗಿಂಗ್ ಮಾಡುವ ಮುಂಜಾನೆಯ ಮನ್ಮಥ ಎಲ್ಲೂ ಕಂಡಿರಲಿಲ್ಲ. ಈಗ ಅಚಾನಕ್ ಊಟ ಹಿಡಿದುಕೊಂಡು ಬಂದುಬಿಟ್ಟಿದ್ದಾನೆ. Funny guy ಅಂದುಕೊಂಡಳು ಮಾನಸಿ.

'ಏನಿಲ್ಲ ಮಾನಸಿ. ಅಲ್ಲೇ ಪಕ್ಕದಲ್ಲಿ ನನ್ನದೊಂದು ಚಿಕ್ಕ ಆಫೀಸ್ ಇದೆ. ನೀನು ಬಂದಿದ್ದನ್ನು ನೋಡಿದೆ. ಆಗಲೇ ಮಾತಾಡಿಸೋಣ ಅಂದರೆ ಎದುರಿಗೆ ದೊಡ್ಡ ಗಿರಾಕಿ ಕೂತು ಏನೋ ವ್ಯಾಪಾರದ ಬಗ್ಗೆ ಮಾತಾಡುತ್ತಿದ್ದರು. ನಂತರ ಹೋಗಿ ಊಟ ಸಪ್ಲೈ ಮಾಡುವ ಮಂದಿ ಜೊತೆ ಮಾತಾಡಿದೆ. ಅದೂ ನನ್ನ ದೋಸ್ತಂದೇ. ಅವರ ಕಡೆ ಹುಡುಗ ಊಟ ಕೊಡಲು ಹೊರಟಿದ್ದ. 'ಇಲ್ಲಿ ಕೊಡಪ್ಪಾ. ಆಕೆ ನನ್ನ ಸ್ನೇಹಿತೆ. ಮತ್ತೆ ಆಕೆಯನ್ನು ಮಾತಾಡಿಸದೇ ಭಾಳ ದಿವಸಗಳಾಗಿ ಹೋದವು. ಮತ್ತೆ ಆಕೆ ಮನೆ ನನ್ನ ಮನೆ ಹಾದಿಯಲ್ಲಿಯೇ ಇದೆ. ನಾನೇ ಕೊಡುತ್ತೇನೆ,' ಅಂದೆ. ಕೊಟ್ಟರು. ತಂದೆ. ತೊಗೊಳ್ಳಿ ಮೇಡಂ,' ಅಂತ ನಾಟಕೀಯವಾಗಿ ಹೇಳಿದ ಕೋಮಲ್ ಬರೋಬ್ಬರಿ ಗಾಳ ಹಾಕಿದ್ದ. ಅವನ ಹಾಸ್ಯ ಪ್ರಜ್ಞೆ ಅಂದರೆ ಮಹಾ ಖತರ್ನಾಕ್. ಅದು ಮಹಿಳೆಯರು ಇಷ್ಟಪಡುವ ಗುಣಗಳಲ್ಲಿ ಟಾಪ್ ಗುಣ ಅಂತ ಅವನಿಗೆ ಗೊತ್ತು. ಅದೆಷ್ಟು ಮೈದಾನ್ ಮಾರ್ ಅಂದರೆ ಪಟಾಯಿಸಿ, ಬಾರಿಸಿ ಬಂದಿಲ್ಲ ಅವನು.

ಮಾನಸಿ ಮನಸ್ಸು ಬಿಚ್ಚಿ ನಕ್ಕಳು. 'ಸುಂದರಿ, ಅದ್ಭುತ ಸುಂದರಿ,' ಅಂದುಕೊಂಡ ಕೋಮಲ್. ಒಳಗೆ ಕರೆದಳು ಮಾನಸಿ. ಕೋಮಲ್ ಬಂದು ಕೂತ. ಊಟ ಇಸಿದುಕೊಂಡ ಮಾನಸಿ ಅದನ್ನು ಒಳಗಿಟ್ಟು ಬಂದಳು. ಕೋಮಲನಿಗೆ ಟೀ, ಕಾಫಿ ಕೇಳಿದಳು. ಊಟದ ಹೊತ್ತು ಏನೂ ಬೇಡ ಅಂದ. ಅವನು ಆಕೆಯ ಕ್ಷೇಮ ವಿಚಾರಿಸಿ ಹೊರಡಲು ಎದ್ದ. ಮಾನಸಿಯೇ ಇನ್ನೂ ಸ್ವಲ್ಪ ಹೊತ್ತು ಕುಳಿತು ನಂತರ ಹೋಗು ಅಂದಳು. ಸುಂದರಿಯರ ಸಂಗದಲ್ಲಿ ಯುಗಯುಗಾಂತರಗಳನ್ನೇ ಕಳೆಯಲು ರೆಡಿ ಆತ. ಕೂತು ಅದು ಇದು ಹರಟೆ ಹೊಡೆದ. ಮಾನಸಿಯನ್ನು ಫುಲ್ ಎಂಗೇಜ್ ಮಾಡಿದ. ಮಾನಸಿಗೂ ಅದು ತುಂಬ ಇಷ್ಟವಾಯಿತು. ಬಹಳ ಜನ ಆಕೆಗೆ ಬೇಗ ಬೋರ್ ಅನ್ನಿಸತೊಡಗುತ್ತಾರೆ. ಆದರೆ ಕೋಮಲ್ ಹಾಗಲ್ಲ. ಎಲ್ಲ ವಿಷಯದ ಮೇಲೆ ಮಾತಾಡಬಲ್ಲ. ಇನ್ನೊಬ್ಬರು ಹೇಳಿದ ವಿಷಯಗಳನ್ನು ಆಸಕ್ತಿಯಿಂದ ಕೇಳಬಲ್ಲ. ಅದಕ್ಕೇ ಆಕೆಗೆ ಇಷ್ಟವಾಗಿಬಿಟ್ಟ ಕೋಮಲ್.

ಮತ್ತೆ ಹೊರಡಲು ಎದ್ದ ಕೋಮಲ್. ಮಾನಸಿ ಮನಸ್ಸಿನಲ್ಲಿ ಅದೇನು ಭಾವನೆಗಳು ಕುಣಿಯುತ್ತಿದ್ದವೋ ಏನೋ. ತಾನು ಕುಳಿತಿದ್ದ ಖುರ್ಚಿಯಿಂದ ಎದ್ದು ಬಂದು ಒಮ್ಮೆಲೇ ಕೋಮಲ್ ಕೈ ಹಿಡಿದುಕೊಂಡು, 'ಇನ್ನೂ ಸ್ವಲ್ಪ ಹೊತ್ತು ಇದ್ದು ಹೋಗು ಕೋಮಲ್, ಪ್ಲೀಸ್,' ಅಂದವಳೇ ಕಣ್ಣಲ್ಲಿ ಕಣ್ಣಿಟ್ಟು ನೋಡಿಬಿಟ್ಟಳು. ಆ ನೋಟ ಕೋಮಲನಂತಹ ಪ್ಲೇಬಾಯ್ ಸುಂದರನಿಗೆ ಚಿರಪರಿಚಿತ. ಮಂಚ ಹತ್ತಿಸುವ ಮುನ್ನ ಲಂಚ ಕೊಡುವ ನೋಟ ಅದು. ಆ ನೋಟದ ಬಗ್ಗೆ ಅವನಿಗೆ ಯಾವ ಸಂಶಯವೇ ಇಲ್ಲ. ಆದರೆ ತುಂಬಾ ಸಂಪ್ರದಾಯಸ್ತೆ ಮತ್ತು reserved ಅನ್ನಿಸುವಂತಹ ಮಾನಸಿ ಇಷ್ಟು ಬೇಗ ಈ ಲೆವೆಲ್ಲಿಗೆ ಬಂದು ಮುಟ್ಟುತ್ತಾಳೆ ಅಂತ ಅವನು ಕನಸಿನಲ್ಲಿಯೂ ಎಣಿಸಿರಲಿಲ್ಲ. ಆಕೆಯನ್ನು ವಶಪಡಿಸಿಕೊಳ್ಳಬೇಕು ಅಂತ ಯೋಚನೆಯಿತ್ತು ನಿಜ. ಆದರೆ ಅದಕ್ಕೆ ತುಂಬಾ ಸಹನೆ ಬೇಕು, ವೇಳೆ ಬೇಕು, ಏನೇನೋ ಸ್ಕೀಮ್ ಹಾಕಬೇಕು, ಎಲ್ಲ ಮಾಡಿದ ಮೇಲೂ ಅವೆಲ್ಲ ಹಿಟ್ ಅಂಡ್ ಮಿಸ್ ಇದ್ದ ಹಾಗೆ. ಇಲ್ಲಿ ನೋಡಿದರೆ ಈಕೆಯೇ ಮೈಮೇಲೆ ಬಿದ್ದು ಬರುತ್ತಿದ್ದಾಳೆ. ಯಾಕೆ ಹೀಗೆ? ಅಂತ ಕೇಳಿಕೊಂಡ ಕೋಮಲ್. ಆವಾಗ ನೆನಪಾಯಿತು. ಹೇಳಿ, ಕೇಳಿ ಇನ್ನೂ ಕನ್ಯೆ. ಮೂವತ್ತು ದಾಟಿದ ಕನ್ಯೆ. ಈಗ ತಾನು ಕಾಮಣ್ಣ ಕಂಡುಬಿಟ್ಟಿದ್ದೇನೆ. ಮತ್ತೆ ಆಕೆಯೂ ಈಗ ಫ್ರೀ ಬರ್ಡ್. ತಂದೆ ತಾಯಿ ಇಲ್ಲ. ಅಮೇರಿಕಾದಲ್ಲಿ ಎಂಟತ್ತು ವರ್ಷ ಕಳೆದು ಬಂದವಳು. ಮತ್ತೆ ಹಾರ್ಮೋನುಗಳು. ಹಾರ್ಮೋನುಗಳು ಹಾರ್ಮೋನಿಯಂ ಬಾರಿಸಲು ಶುರು ಮಾಡಿಬಿಟ್ಟರೆ ಹುಲುಮಾನವರು ಏನು ಮಾಡಿಯಾರು? ಬಂದದ್ದೆಲ್ಲಾ ಬರಲಿ. ಸುಂದರಿಯ ದಯೆಯೊಂದಿರಲಿ ಅಂತ ಕೂತೇ ಬಿಟ್ಟ ಕೋಮಲ್. ಕೋಮಲ್ ತನ್ನ ಕೋರಿಕೆ ಮನ್ನಿಸಿದ ಅಂತ ಮಾನಸಿ ಖುಷಿ ಖುಷಿಯಾದಳು. ಅದು ಮುಖದ ಮೇಲೆ ಕಂಡುಬಂತು.

'ಕೋಮಲ್, ಇಲ್ಲೇ ಊಟ ಮಾಡಬಹುದಲ್ಲ? ಒಬ್ಬಳೇ ಊಟ ಮಾಡಲು ನನಗೆ ಬೋರ್. ಆವತ್ತೇ ಅಂದುಕೊಂಡಿದ್ದೆ ನಿನ್ನನ್ನು ಟಿಫಿನ್ನಿಗೆ ಅಥವಾ ಊಟಕ್ಕೆ ಕರೆಯಬೇಕು ಅಂತ. ಆಗಿರಲೇ ಇಲ್ಲ. ಇವತ್ತು ನೀನೇ ಊಟ ಸಹಿತ ತಂದಿದ್ದೀಯಾ. ಊಟ ಮಾಡೋಣವೇ?' ಅಂತ ಆಹ್ವಾನ ಬೇರೆ ಕೊಟ್ಟುಬಿಟ್ಟಳು ಮಾನಸಿ. ಕೋಮಲ್ ಒಳೊಳಗೇ ಸಂಭ್ರಮಿಸಿದ. ತೋರಿಕೆಗೆ, 'ಬೇಡ, ಬೇಡ. ಮನೆಯಲ್ಲಿ ಕಾಯುತ್ತಿರುತ್ತಾರೆ,' ಅಂತ ಭೋಂಗು ಬಿಟ್ಟ. ಮಾನಸಿ ಅದಕ್ಕೆಲ್ಲ ರೆಡಿಯಾಗಿಯೇ ಇದ್ದಳು. 'ದಿನಕರ ಕಾಕಾಗೆ ಫೋನ್ ಹಚ್ಚು. ನಾನೇ ಮಾತಾಡುತ್ತೇನೆ. ನಿಮ್ಮ ಮಗ ಕೋಮಲ್ ಇಲ್ಲೇ ಇದ್ದಾನೆ. ನಂತರ ಬರುತ್ತಾನೆ ಅಂತ ಹೇಳುತ್ತೇನೆ,' ಅಂದುಬಿಟ್ಟಳು ಮಾನಸಿ. 'ಅರೇ ಇಸ್ಕಿ! ಹೋಗಿ ಹೋಗಿ ತಂದೆಯೊಂದಿಗೆ ಮಾತಾಡುತ್ತೇನೆ ಅನ್ನುತ್ತಾಳೆ. ತನಗೆ ಮದುವೆಯಾಗಿದೆ, ಮಕ್ಕಳಿವೆ ಅಂತ ಈಕೆಗೆ ಗೊತ್ತಿಲ್ಲವೇ?' ಅಂತ ಅಂದುಕೊಂಡ ಕೋಮಲ್. ಮತ್ತೆ ಹೆಂಡತಿಗೇ ಫೋನ್ ಮಾಡುತ್ತೇನೆ ಅಂದರೆ ಕಷ್ಟ ಅಂತ ಸುಮ್ಮನೆ ಕೂತು, 'ಆಯಿತು ಇವತ್ತಿನ ಊಟ ನಿಮ್ಮ ಜೊತೆ,' ಅಂದು, 'ಮತ್ತೇನಾದರೂ ಆಜ್ಞೆ ಇದೆಯೇ ರಾಣಿ ಸಾಹೇಬಾ?' ಅಂತ ಶುದ್ಧ ನೌಟಂಕಿ ಮಾಡಿದ. ಮಾನಸಿ ಬಿದ್ದು ಬಿದ್ದು ನಕ್ಕಳು. 'ಹಸೀ ತೋ ಫಸೀ' ಅಂದರೆ 'ನಕ್ಕಳು ಅಂದರೆ ಬಿದ್ದಳು' ಅನ್ನುವ ನಾಣ್ನುಡಿಯಲ್ಲಿ ಪೂರ್ತಿ ನಂಬಿಕೆ ಇಟ್ಟವ ಕೋಮಲ್.

ಮುಂದೆ ಆಗಿದ್ದನ್ನು ಮಾತ್ರ ಕೋಮಲ್ ನಿಜವಾಗಿಯೂ ನಿರೀಕ್ಷೆ ಮಾಡಿರಲೇ ಇಲ್ಲ. ಎದ್ದು ಹೋದ ಮಾನಸಿ ಎರಡು ವೈನ್ ಗ್ಲಾಸು ಮತ್ತು ಒಂದು ದೊಡ್ಡ ವೈನ್ ಬಾಟಲಿಯೊಂದಿಗೆ ಹಾಜರಾಗಿಬಿಟ್ಟಳು. ನೋಡಿದ ಕೋಮಲ್ ಇಷ್ಟಗಲಕ್ಕೆ ಕಣ್ಣು ಬಿಟ್ಟರೆ ಆಕೆ ಕಣ್ಣು ಹೊಡೆದು ತುಂಟ ನಗೆ ನಕ್ಕಳು. ಮಾತಾಡದೇ ಗ್ಲಾಸುಗಳಲ್ಲಿ ವೈನ್ ಸುರಿದಳು. ಒಂದು ಕೋಮಲ್ ಕೈಯಲ್ಲಿ ಇಟ್ಟಳು. ಮತ್ತೊಂದು ತಾನು ತೆಗೆದುಕೊಂಡು, ಚಿಯರ್ಸ್, ಅಂದಳು. ಕೋಮಲ್ ಯಂತ್ರಮಾನವನಂತೆ ಕ್ರಿಯೆ ಮಾಡುತ್ತ ಹೋದ. ಆಕೆ ಕಿಲಕಿಲ ಅಂತ ನಕ್ಕಾಗಲೇ ಆತ ಮರಳಿ ಈ ಲೋಕಕ್ಕೆ ಬಂದ.

'ಏನು ಮಾನಸಿ? ಏನು ವಿಶೇಷ? ನೀನು? ವೈನ್? ಇದೆಲ್ಲ?....... ' ಅಂತ ಏನೇನೋ ಅಂದ. ಮಾತು ಹೇಗೇಗೋ ಹೊರಬಂತು. ಮಾನಸಿ ನಕ್ಕಳು. 'ಏನಿದು ಕೋಮಲ್? ವೈನ್ ಗ್ಲಾಸ್ ಇನ್ನೂ ಕೈಯಲ್ಲೇ ಇದೆ. ಒಂದು ಹನಿಯೂ ಕುಡಿದಿಲ್ಲ. ಈಗಲೇ ಮಾತು ಹೀಗೆ? ಹಾಂ?' ಅಂತ ಬಿದ್ದು ಬಿದ್ದು ನಕ್ಕಳು. ಕೋಮಲ್ ಒಂದು ತರಹದ embarrassment ಅನುಭವಿಸುತ್ತಿದ್ದರೆ ಮಾನಸಿಗೆ ಏನೋ ಮಜಾ.

ಸುಧಾರಿಸಿಕೊಂಡ ಕೋಮಲ್ ಹೇಳಿದ, 'ಏನಿಲ್ಲ. ಒಮ್ಮೆಲೇ ಊಟಕ್ಕೆ ನಿಲ್ಲಿಸಿಕೊಂಡೆ. ಒಮ್ಮೆಲೇ ವೈನ್ ತಂದುಬಿಟ್ಟೆ. ನೀನು, ನಿಮ್ಮ ಮನೆಯವರೆಲ್ಲ ಸಂಪ್ರದಾಯಸ್ತರು ಅಂತ ಕೇಳಿದ್ದೆ. ಅದಕ್ಕೇ ಒಂದು ಸಲ ಆಶ್ಚರ್ಯವಾಯಿತು. But, I tell you Manasi, a little bit of wine is good for health' ಅಂತ ಝಾಡಿಸಿದ. ರೆಡ್ ವೈನ್, ವೈಟ್ ವೈನ್ ಬಗ್ಗೆ ಸಣ್ಣ ಉಪನ್ಯಾಸ ಬೇರೆ ಕೊಟ್ಟ. ಮಾನಸಿ ತನ್ಮಯಳಾಗಿ ಕೇಳಿದಳು. 'ಈ ಮನುಷ್ಯನಿಗೆ ಗೊತ್ತಿರದ ವಿಷಯ ಇಲ್ಲವೇ ಇಲ್ಲ. ಎಲ್ಲದರ ಬಗ್ಗೆ ಎಷ್ಟು ಚನ್ನಾಗಿ ತಿಳಿದುಕೊಂಡಿದ್ದಾನೆ. ಮತ್ತೆ ಎಷ್ಟು ಮಜವಾಗಿ ಮಾತಾಡುತ್ತಾನೆ. He is too good,' ಅಂತ ಮನಸ್ಸಿನಲ್ಲಿಯೇ ಅವನ ಜೊತೆಗೆ ತನ್ನನ್ನು ಕಲ್ಪಿಸಿಕೊಂಡು ಏನೇನೋ ತರತರಹದ ಫೀಲಿಂಗ್ ಅನುಭವಿಸಿದಳು. ಒಗರು ಒಗರಾದ ವೈನ್ ಒಳಗೆ ಸೇರಿದಾಗ ಇಂತಹ ಫೀಲಿಂಗ್ಸ್ ಬಂದರೆ ಅಷ್ಟೇ. ಎಲ್ಲೆಲ್ಲೋ ಏನೇನೋ ಕಚಗುಳಿ ಇಟ್ಟಂತಾಯಿತು. ಎದ್ದು ಹೋಗಿ ಮ್ಯೂಸಿಕ್ ಸಿಸ್ಟಮ್ ಆನ್ ಮಾಡಿದಳು. ಮೆಲ್ಲನೆಯ ಸಂಗೀತ ತೇಲಿ ಬಂತು. ತಂಗಾಳಿ ಬೀಸಿ ಬಂತು. ಎದ್ದು ಹೋಗಿ ಕಿಟಿಕಿ ಹಾಕಿದಳು. ಪರದೆ ಸರಿಸಿದಳು. ಇನ್ನು ಪರದೆ ಹಿಂದೆ ಏನು ನಡೆದರೂ ಯಾರಿಗೂ ಕಾಣುವದಿಲ್ಲ.

ಇಬ್ಬರು ಸಹೃದಯಿಗಳ ಮಧ್ಯೆ ತರಂಗಾಂತರ ಮ್ಯಾಚ್ ಆಗಿ, ಜೊತೆಗೆ ಒಂದಿಷ್ಟು ಒಳ್ಳೆ ವೈನ್ ಇದ್ದರೆ ಅಷ್ಟೇ ಮತ್ತೆ. ಇಲ್ಲೂ ಅದೇ ಆಯಿತು. ಕೋಮಲ್, ಮಾನಸಿ ಏನೇನೋ ಸುದ್ದಿ ಹೇಳಿದರು, ಕೇಳಿದರು. ಶಾಲೆಯ, ಕಾಲೇಜಿನ, ಹಳೆಯ ದಿನಗಳನ್ನು ನೆನಪಿಸಿಕೊಂಡು ನಕ್ಕೇ ನಕ್ಕರು. ಕೋಮಲ್ ಅಮೇರಿಕಾದ ಮಾನಸಿಯ ಲೈಫಿನ ಬಗ್ಗೆ ಒಳ್ಳೊಳ್ಳೆ ಪ್ರಶ್ನೆ ಕೇಳಿದ. ಧಾರವಾಡಕ್ಕೆ ಬಂದು ಎರಡು ವರ್ಷಗಳಲ್ಲಿ ಅಂತಹ ಸಮಂಜಸ ಅನ್ನುವಂತಹ ಪ್ರಶ್ನೆ ಯಾರೂ ಕೇಳಿರಲೇ ಇಲ್ಲ. ಕೋಮಲ್ ಮಾನಸಿಯ ಮನಸ್ಸಿನ ವೀಣೆಯನ್ನು ಬರೋಬ್ಬರಿ ಶ್ರುತಿ ಮಾಡುತ್ತಿದ್ದ. ಮುಂದೆ ರಾತ್ರಿಯಿಡೀ ವೀಣೆ ಬಾರಿಸಬೇಕಾಗಬಹುದು ಅಂತ ಅವನಿಗೆ ತುಂಬ ಜೋರಾಗಿ intuition ಬರತೊಡಗಿತ್ತು. ಆಯ್ತ ವೇಳೆಯಲ್ಲಿ ವೀಣೆ ಟ್ಯೂನ್ ಮಾಡುತ್ತಾ ಕೂಡಲಿಕ್ಕೆ ಆಗುವದಿಲ್ಲ ಅಂತ ಅವನಿಗೆ ಹೇಳಿಕೊಡಬೇಕೇ? ಅದೆಷ್ಟು ಮಂದಿಯ ವೀಣೆ ಟ್ಯೂನ್ ಮಾಡಿ ವೀಣೆ ಬಾರಿಸಿದ ವೀಣೆ ಶೇಷಣ್ಣನೋ ಕೋಮಲ್. ಮಾನಸಿಯನ್ನು ಬರೋಬ್ಬರಿ ಟ್ಯೂನ್ ಮಾಡುತ್ತಾ ಕೂತ. ಆಕೆಯ ವೈನ್ ಗ್ಲಾಸ್ ಖಾಲಿಯಾದಂತೆ ಮತ್ತೆ ಮತ್ತೆ ತುಂಬಿಸುತ್ತಾ ಹೋದ. ಆವತ್ತಿನ ಮಾಹೋಲೇ ಹಾಗೆ ಇತ್ತು. ರೋಮ್ಯಾಂಟಿಕ್ ಮತ್ತು ಸಕತ್ ಅವಕಾಶ. ಪದ್ಮಾವತಿಬಾಯಿ ಕೂಡ ಮನೆಯಲ್ಲಿ ಇಲ್ಲ. ಮಾನಸಿ ಕೂಡ ಸ್ವಲ್ಪ ಮೈಚಳಿ ಬಿಟ್ಟೇ ಕೋಮಲ್ ಜೊತೆ ಫ್ಲರ್ಟಿಂಗ್ ಶುರು ಮಾಡಿಕೊಂಡಿದ್ದಳು. ಎರಡು ಗ್ಲಾಸ್ ವೈನ್ ಒಳಗೆ ಹೋದ ನಂತರ ಚಳಿ, ನಾಚಿಗೆ ಎಲ್ಲ ಬಿಟ್ಟು ಹೋಯಿತು. ಕಬ್ಬಿಣ ಸರಿ ಕಾದಿದೆ ಅಂತ ಕೋಮಲನಂತಹ ಮಾಹಿರ್ ಆದ್ಮಿಗೆ ಯಾರೂ ಹೇಳಿಕೊಡುವ ಜರೂರತ್ತೇ ಇಲ್ಲ. ಅವನೂ ಆಟದ notch ಒಂದು ಸುತ್ತು ಏರಿಸಿದ. ಅಲ್ಲಲ್ಲಿ ಒಂದೆರೆಡು ಪೋಲಿ ಜೋಕ್ಸ್ ಹೇಳಿದ. ವೈನಿನಿಂದ ಸಡಿಲವಾಗಿದ್ದ ಮಾನಸಿ ಮೊದಮೊದಲು ಸ್ವಲ್ಪ ನಾಚಿಕೊಂಡರೂ ನಂತರ ಯಾವದೇ ಭಿಡೆಯಿಲ್ಲದೇ ನಕ್ಕಳು. ಸಕತ್ ಎಂಜಾಯ್ ಮಾಡಿದಳು. ಹೊತ್ತು ಹೋಗಿದ್ದೇ ತಿಳಿಯಲಿಲ್ಲ.

ಟೈಮ್ ನೋಡಿದರೆ ರಾತ್ರಿ ಹನ್ನೊಂದು ಘಂಟೆ. ಊಟ ಮಾಡಿಲ್ಲ. ಎದುರಿಗಿದ್ದ ವೈನ್ ಬಾಟಲಿ ಸುಮಾರು ಖಾಲಿ. ಚೂರು ಉಳಿದಿತ್ತು. ಬರೋಬ್ಬರಿ ಮತ್ತೇರಿದ್ದ ಮಾನಸಿ ಬಾಟಲಿಯನ್ನೇ ಎತ್ತಿ, ಕೊನೆಯ ಒಂದೆರೆಡು ಹನಿ ಸಹಿತ ಕುಡಿದುಬಿಟ್ಟಳು. ಹಾಗೆ ಮಾಡಿದ್ದು ಆಕೆಗೇ ತುಂಬಾ ಮಜಾ ಅನ್ನಿಸಿರಬೇಕು. ಬಿದ್ದು ಬಿದ್ದು ನಕ್ಕಳು. ತೊಡೆ ತಟ್ಟಿಕೊಂಡು ತಟ್ಟಿಕೊಂಡು ನಕ್ಕಳು. ಕೋಮಲ್ ನೋಡುತ್ತಾ ಕುಳಿತ. ತುಟಿಯಂಚಿನಲ್ಲಿ ನಕ್ಕ. 'ಮಾನಸಿ, ಊಟ? ಮಾಡೋಣವೇ?' ಅಂದ. 'ಸರಿ, ಸರಿ, ಮಾಡೋಣ. ಸ್ವಲ್ಪ ಬಿಸಿ ಮಾಡಿಬಿಡುತ್ತೇನೆ,' ಅಂತ ಎದ್ದಳು ಮಾನಸಿ. ಮೂರು ತಾಸಿನಿಂದ ಕೂತಲ್ಲೇ ಕೂತು ಒಂದು ದೊಡ್ಡ ಬಾಟಲಿ ವೈನ್ ಮುಗಿಸಿದವಳು ಆಕೆ. ಎದ್ದ ಕೂಡಲೇ ಜೋಲಿ ಹೊಡೆಯಿತು. ಇದನ್ನು expect ಮಾಡಿದ್ದ ಕೋಮಲ್ ಸರಿಯಾದ ಸಮಯಕ್ಕೆ ಎದ್ದು ಹೋಗಿ ಆಸರೆ ಕೊಟ್ಟ. ನೃತ್ಯದ ಕೊನೆಯಲ್ಲಿ ಸ್ತ್ರೀ ಪುರುಷನ ತೆಕ್ಕೆಯಲ್ಲಿ ಬಂದು ಬಿದ್ದು ನಾಟ್ಯ ಮುಗಿಯುತ್ತದೆ ನೋಡಿ ಆ ಮಾದರಿಯಲ್ಲಿತ್ತು ಕೋಮಲ್ ಮಾನಸಿಯನ್ನು ಹಿಡಿದ ಭಂಗಿ. ಥ್ಯಾಂಕ್ಸ್ ಹೇಳಿದ ಮಾನಸಿ, ಕೋಮಲನ ಮುಖ ಕೈಯಲ್ಲಿ ತೆಗೆದುಕೊಂಡವಳೇ, ಲೊಚ ಲೊಚ ಅಂತ ಮುಖದ ತುಂಬಾ ಪಪ್ಪಿ ಕೊಟ್ಟುಬಿಟ್ಟಳು. ಒಗರು ವೈನ್ ವಾಸನೆ, ಆಕೆ ಹಚ್ಚಿಕೊಂಡಿದ್ದ ಲೈಟ್ ಸುಂಗಂಧ ಮತ್ತು ಸಹಜ ದೇಹದ ಗಂಧ ಎಲ್ಲ ಕೂಡಿ ಕೋಮಲನಲ್ಲಿಯೂ ಕಾಮದ ಕಾಳ್ಗಿಚ್ಚು ಹೊತ್ತಿಕೊಂಡಿತು. ಆದರೆ ಅವನು ಪರಿಣಿತ. ಸದ್ಯಕ್ಕೆ ಸುಮ್ಮನೆ ಇದ್ದ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ತೋರಿಸಿಬಿಟ್ಟರೆ ನಂತರ ಏನೂ ಮಜಾ ಉಳಿಯುವದೇ ಇಲ್ಲ. ಹಾಗೇ ಬಿಡಬೇಕು. ಪ್ರತಿಕ್ರಿಯೆ ಸಿಗದೇ ಕ್ರಿಯೆ ಮಾಡಿದವರು ಮತ್ತೂ ಉನ್ಮತ್ತರಾಗಬೇಕು, ಹುಚ್ಚರಾಗಬೇಕು. ಆಗ ನಾವು ಮೈದಾನಕ್ಕೆ ಇಳಿದು, ಮೈದಾನದಿಂದ ಹೊರಗೆ ಹೋಗಿ ಬೀಳುವಂತೆ ಬಾರಿಸಿಬಿಡಬೇಕು. ಅದಕ್ಕೇ ತಾನೇ ಮೈದಾನ್ ಮಾರನಾ ಅನ್ನುವದು? ಇದೆಲ್ಲ ಕೋಮಲನಿಗೆ ಹೇಳಿಕೊಡಬೇಕೇ?

ಮಾನಸಿಗೆ ಆಸರೆಯಾಗಿ ಅಡುಗೆಮನೆಗೆ ಹೋದ. ಜೋಲಿ ಹೊಡೆದು ಬಿದ್ದುಗಿದ್ದಾಳು ಅಂತ ಹಿಡಿದುಕೊಂಡೇ ಇದ್ದ. ಬಿಡಲು ನೋಡಿದ. ಆಕೆಯೇ ಇವನ ಕೈಗಳನ್ನು ಸೊಂಟದ ಸುತ್ತ ಸುತ್ತಿಕೊಂಡು, ಅವನ ಎರಡೂ ಕೈಗಳನ್ನು ಜೋಡಿಸಿಕೊಂಡು, ಕೂಡಿದ ಕೈಗಳ ಮೇಲೆ ಮೆತ್ತಗೆ ಒಂದು ಏಟು ಕೊಟ್ಟು, ಗಹಗಹಸಿ ನಕ್ಕಳು. ಸೊಂಟದ ಸುತ್ತ ಸುತ್ತಿರುವ ಕೈಗಳನ್ನು ಬಿಚ್ಚಿದರೆ ನೋಡು ಅನ್ನುವ ರೀತಿಯಲ್ಲಿ ಹುಸಿಯೇಟು ಕೊಟ್ಟಳು. ಅದೇ ಭಂಗಿಯಲ್ಲಿಯೇ ಇಬ್ಬರೂ ಅಡಿಗೆ ಮನೆ ತುಂಬಾ ಓಡಾಡಿದರು. ಅಡಿಗೆ ಬಿಸಿಯಾಯಿತು. ಎಲ್ಲವನ್ನೂ ಪಕ್ಕದ ಡೈನಿಂಗ್ ರೂಮಿನ ಟೇಬಲ್ ಮೇಲೆ ಹೋಗಿ ಹೊಂದಿಸಿಟ್ಟ ಕೋಮಲ್. ಮಾನಸಿ ಕೂಡ ಅಲ್ಲಿಲ್ಲಿ ಓಡಾಡಿ, ಬಟ್ಟಲು, ಚಮಚೆ ಅದು ಇದು ಹೊಂದಿಸಿದಳು. ಊಟಕ್ಕೆ ಎಲ್ಲ ರೆಡಿಯಾಯಿತು. ಕೂಡೋಣ ಅನ್ನುವಷ್ಟರಲ್ಲಿ ಮಾನಸಿ ಎಲ್ಲೋ ಮಾಯ. 'ಎಲ್ಲಿ ಹೋದಳಪ್ಪಾ ಇವಳು?' ಅನ್ನುವಷ್ಟರಲ್ಲಿ, 'ಟಂಟಣಾ!' ಅನ್ನುತ್ತ ಮಾನಸಿ ಹಾಜರ್. ಕೈಯಲ್ಲಿ ಮತ್ತೊಂದು ವೈನಿನ ದೊಡ್ಡ ಬಾಟಲಿ. 'ಶಿವನೇ! ಇವತ್ತು ಈಕೆ ಎಷ್ಟು ವೈನ್ ಕುಡಿಯುವಾಕೆ ಇದ್ದಾಳೆ? ಜಾಸ್ತಿ ಕುಡಿದು ಖಬರಿಲ್ಲದೇ ಮಲಗಿಬಿಟ್ಟರೆ ಕಷ್ಟ. ನಂತರ ಪಲ್ಲಂಗಾರೋಹಣ ಮಾಡುವದು ಹೇಗೆ? ಈಕೆಯ ಮೂವತ್ತೂ ಚಿಲ್ಲರೆ ವಯಸ್ಸಿನ ಕನ್ಯತ್ವಕ್ಕೆ ಬಿಡುಗಡೆ ಕೊಡುವದು ಹೇಗೆ?' ಅಂತ ಚಿಂತೆಯಾಯಿತು ಕೋಮಲನಿಗೆ.

ಮತ್ತೆ ಎರಡು ಗ್ಲಾಸಿಗೆ ವೈನ್ ಬಗ್ಗಿಸಿದ ಮಾನಸಿ, ಚೀಯರ್ಸ್ ಮಾಡಿ, ಊಟಕ್ಕೆ ಕುಳಿತಳು. ಕೋಮಲ್ ಕೂಡ ಕೂತ. ರುಚಿರುಚಿ ಮಾಡಿಕೊಂಡು ಊಟ ಮುಗಿಸಿದರು. ಅಷ್ಟು ವೈನ್ ಬಿದ್ದ ಮೇಲೆ ಎಲ್ಲ ರುಚಿಯೇ. ಅದೂ ಮನೆ ಹೊರಗಿಂದ ಬಂದ ಊಟ. ಉಪ್ಪು, ಖಾರ ಸ್ವಲ್ಪ ಜಾಸ್ತಿಯೇ ಹಾಕಿರುತ್ತಾರೆ. ಎಣ್ಣೆ ಹಾಕಿದ ನಂತರ ಮಸ್ತಾಗಿರುತ್ತದೆ ರುಚಿ ರುಚಿ ಮಾಡಿಕೊಂಡು ಮೆಲ್ಲಲು ಅಂತಹ ಊಟ.

ಊಟ ಮುಗಿಸಿ, ಬೇಗ ಬೇಗ ಪಾತ್ರೆಗಳನ್ನು ಸಿಂಕಿಗೆ ತುಂಬಿ, ಮತ್ತೆ ಹಾಲಿಗೆ ಬಂದು ಕೂತರು ಕೋಮಲ್ ಮತ್ತು ಮಾನಸಿ. ಅಡಿಕೆ, ಯಾಲಕ್ಕಿ ಇತ್ಯಾದಿ ತುಂಬಿದ್ದ ಸಣ್ಣ ಟ್ರೇ ಒಂದನ್ನು ತಂದ ಮಾನಸಿ ಟೇಬಲ್ ಮೇಲೆ ಇಟ್ಟಳು. ಇಬ್ಬರೂ ಅಡಿಕೆ ಅದು ಇದು ಬಾಯಿಗೆಸೆದುಕೊಂಡು ಮುಖ ಮುಖ ನೋಡುತ್ತ ಕುಳಿತರು. ಮಾತಾಡಲಿಲ್ಲ. ಜಾಸ್ತಿ ಹೊತ್ತು ಮೌನ ಉಳಿಯಲಿಲ್ಲ. ಇಬ್ಬರೂ ಒಮ್ಮೆಲೇ ನಕ್ಕು ಬಿಟ್ಟರು. ತಡೆದಿಟ್ಟ ಡ್ಯಾಮಿನ ನೀರು ಡ್ಯಾಮನ್ನೇ ಒಡೆದುಕೊಂಡು ಬಂದರೆ ಹೇಗಿರುತ್ತದೆ ನೋಡಿ ಆ ತರಹದ ನಗು. ಘಂಟೆ ನೋಡಿದರೆ ಸುಮಾರು ಹನ್ನೆರೆಡು. ಮುಂದಿನ ಹೆಜ್ಜೆಗಳ ಬಗ್ಗೆ ಕೋಮಲನಿಗೆ ಬರೋಬ್ಬರಿ ಅರಿವಿತ್ತು. ತನ್ನ ಗೇಮ್ ಶುರು ಮಾಡಿಕೊಂಡ.

'ಮಾನಸಿ, ನಾನು ಇನ್ನು ಹೊರಡುತ್ತೇನೆ. ನೀನೂ ಹೋಗಿ ಮಲಗು. ಎಲ್ಲಿ  ನಿನ್ನ ಬೆಡ್ರೂಮ್? ಮಲಗಿಸಿ, ಬಾಗಿಲು ಎಳೆದುಕೊಂಡು ಹೋಗುತ್ತೇನೆ. ಮತ್ತೆ ಬೆಡ್ರೂಮಿಗೆ ಹೋಗುವಾಗ ನೀನೆಲ್ಲಿಯಾದರೂ ಬಿದ್ದರೆ ಕಷ್ಟ,' ಅಂದು ತುಂಟ ನಗೆ ನಕ್ಕ. ಆ ನಗೆಯಲ್ಲಿನ ಹಲವಾರು ಅರ್ಥಗಳು ಯಾರಿಗೆ ಅರ್ಥ ಆಗಬೇಕೋ ಅವರಿಗೆ ಆಗೇ ಆಗುತ್ತವೆ ಅಂತ ಕೋಮಲನಿಗೆ ಗೊತ್ತು.

'ಅದೇನೂ ಬೇಡ. I am perfectly fine. Thanks for the nice company, Komal. We should do this more often. ನೀನು ಹೊರಡು,' ಅಂದಳು ಮಾನಸಿ.

'No, No, ಬೆಡ್ರೂಮಿನಲ್ಲಿ ಮಲಗಿಸಿಯೇ ಹೋಗುವವನು ನಾನು. If something happens later, I won't be able to forgive myself,' ಅಂತ ಫುಲ್ ಸೆಂಟಿಮೆಂಟಲ್ ಫಿಟ್ಟಿಂಗ್ ಇಟ್ಟ ಕೋಮಲ್. ಮಾನಸಿಗೂ ಬೇಕಾಗಿದ್ದು ಅದೇ ತಾನೇ? ಆದರೆ ಹೇಗೆ ಬೇಕು ಅಂತ ಹೇಳಿಯಾಳು? ಹೆಂಗಸರ ಬೇಕು ಅಂದರೆ ಬೇಡ, ಬೇಡ ಅಂದರೆ ಬೇಕು ಅನ್ನುವ ವಿಚಿತ್ರ ಮಾತುಗಳಿಗೆ ಹೊಸ ಭಾಷ್ಯ ಬರೆದವನು ಈ ಭಯಂಕರ ಕೋಮಲ್.

'ಸರಿ, ಬಾ. ನನ್ನ ಬೆಡ್ರೂಮ್ ಮೇಲಿದೆ. ನಂತರ ಕೆಳಗೆ ಬಂದು, ದೀಪ ಆರಿಸಿ, ಬಾಗಿಲು ಎಳೆದುಕೊಂಡು ಹೋಗು. It will lock behind you,' ಅಂದ ಮಾನಸಿ ಎದ್ದಳು. ಜೋಲಿ ಹೊಡೆದಳು. ಕೋಮಲ್ ಬಂದು ಹಿಡಿದು ಅಪ್ಪಲಿ ಅಂತ ಆಸೆ. ಕೋಮಲ್ ಆಸೆ ಪೂರೈಸಿದ.

ಸ್ವಲ್ಪ ಜಾಸ್ತಿ ಬಿಗಿಯಾಗಿಯೇ ಆಸರೆ ಕೊಟ್ಟು, ಮಾನಸಿಯ ಕಿವಿಯ ಹಿಂದೆ, ಕತ್ತಿನ ಮೇಲೆ ಬಿಸಿಯುಸಿರು ಬಿಡುತ್ತ, ಭುಜ ಒತ್ತುತ್ತ, ನಿಧಾನವಾಗಿ ಮಹಡಿ ಮೆಟ್ಟಿಲು ಹತ್ತಿಸಿದ ಕೋಮಲ್. ಬೆಡ್ರೂಮ್ ಮುಟ್ಟುವ ಹೊತ್ತಿಗೆ ಇಬ್ಬರ ಮೈಯೂ ಬರೋಬ್ಬರಿ ಕಾದಿತ್ತು. ಹಾಗಂತ ಕೋಮಲನಿಗೆ ಖಾತ್ರಿಯಿತ್ತು. ಮಾನಸಿಗೆ ಬೇರೇನೂ ಅರಿವಿರಲಿಲ್ಲ. 'ಸಿಕ್ಕಿದ್ದಾನೆ. ರಾತ್ರಿಯೆಲ್ಲ ಬೇಕು. ಬೇಕೇ ಬೇಕು,' ಅನ್ನುವದೊಂದೇ ಆಕೆಯ ವಿಚಾರ. ಕಾಮ ಕುಂಡಲಿನಿ ಶಕ್ತಿಯಂತೆ ಎದ್ದು ಸೀದಾ ನೆತ್ತಿಗೇರಿಬಿಟ್ಟಿತ್ತು.

ಇಬ್ಬರೂ ಮಾನಸಿಯ ಬೆಡ್ರೂಮಿನೊಳಗೆ ಹೊಕ್ಕರು. ಆಕೆಯ ಬೆಡ್ರೂಮನ್ನು ತುಂಬಾ tasteful ಆಗಿ ಸಿಂಗರಿಸಿದ್ದಳು ಮಾನಸಿ. 'ಒಳ್ಳೆ ಟೇಸ್ಟ್ ಇದೆ ಈಕೆಗೆ. ಸಕತ್ತಾಗಿದೆ ರೂಮು. ಒಳ್ಳೊಳ್ಳೆ ಆರ್ಟ್ ಪೀಸ್ ಸಹಿತ ಇಟ್ಟುಕೊಂಡಿದ್ದಾಳೆ,' ಅಂದುಕೊಂಡು ಆಕೆಯ ದೊಡ್ಡ ಸೈಜಿನ ಹಾಸಿಗೆಯ ಹತ್ತಿರ ಬಂದ ಕೋಮಲ್. ಮಂಚದ ಕೆಳಗಿಂದ ಒಂದು ಬೆಕ್ಕು, ನಾಯಿ ಎದ್ದು ಬಂದವು. ಒಂದು ಕ್ಷಣ ಬೆಚ್ಚಿದ ಕೋಮಲ್. ಅವನ್ನು ನೋಡಿದ ಮಾನಸಿಗೆ ಮಜಾ ಅನ್ನಿಸಿತು.  'my darlings' ಅಂದವಳೇ ಪೆಕಪೆಕಾ ಅಂತ ನಕ್ಕು, ತನ್ನ ಸೊಂಟದ ಸುತ್ತ ಸುತ್ತಿಕೊಂಡಿದ್ದ ಕೋಮಲನ ಕೈಗಳನ್ನು ಮತ್ತೂ ಬಿಗಿಮಾಡಿಕೊಂಡು, 'ಘಟ್ಟಿಯಾಗಿ ಹಿಡ್ಕೋ ಮಾರಾಯಾ. ಬಿಟ್ಟರೆ ಬಿದ್ದೇನು!' ಅಂತ ಅಂದವಳೇ ಕೋಮಲನ ಮುಂಗೈ ಮೇಲೆ 'ಫಟ್' ಅಂತ ಒಂದು ಏಟು ಕೊಟ್ಟಳು. ಅವನು 'ಹಾಯ್!' ಅಂತ ನೋವಾದಂತೆ ನೌಟಂಕಿ ಮಾಡಿದ.

ಮಾನಸಿಯನ್ನು ಮೆಲ್ಲಗೆ ಹಾಸಿಗೆ ಮೇಲೆ ಮಲಗಿಸಿದ ಕೋಮಲ್. ಹೊದಿಕೆ ಕಾಲಿನ ಮೇಲೆ ಹೊದಿಸಿದ. ಆಕೆಯನ್ನು ಬಿಟ್ಟು, ಈಕಡೆ ಬರಬೇಕು ಅನ್ನುವಷ್ಟರಲ್ಲಿ ಮೈಮೇಲೆ ದೆವ್ವ ಬಂದಂತೆ ಉನ್ಮತ್ತಳಾದ ಮಾನಸಿ ಧಗ್ಗನೆ ಎದ್ದು, ಕೋಮಲನ್ನು ಹಾಸಿಗೆಗೆ ಎಳೆದು ಬಿಟ್ಟಳು. ಇದಕ್ಕೇ ಕಾಯುತ್ತಿದ್ದ ಕೋಮಲ್. ಹೀಗೆಯೇ ಆಗುತ್ತದೆ ಅಂತ ಅವನಿಗೆ ಗೊತ್ತಿತ್ತು. ಮುಂದೇನು ಮಾಡಬೇಕು ಅಂತಲೂ ಗೊತ್ತಿತ್ತು. 'ಬೇಡ, ಮಾನಸಿ. ಮನೆಗೆ ಹೋಗಬೇಕು. ನೀನೂ ಮಲಗು. ಗುಡ್ ನೈಟ್,' ಅಂತ ಹೇಳಿ ಕೊಸರಿಸಿದ. ಆಕೆ ಬಿಟ್ಟಾಳೆಯೇ? ಮೊದಲೇ ಐದಡಿ ಒಂಬತ್ತು ಇಂಚಿನ ದೊಡ್ಡ ಪರ್ಸನಾಲಿಟಿಯ ಹೆಣ್ಣು ಆಕೆ. ಒಳಗಿಂದ ಕೆರಳಿದ ಕಾಮಾಗ್ನಿ ಬೇರೆ. ಜೊತೆಗೆ ನೆತ್ತಿಗೇರಿದ ಒಂದೂವರೆ ಬಾಟಲಿ ವೈನ್. ಎದುರಿಗೆ ಮೊದಲು ನೋಡಿದಾಗಿಂದ ಮನಸ್ಸನ್ನು ಆವರಿಸಿಕೊಂಡ ಮನ್ಮಥ. ಕೈಗೆ ಸಿಕ್ಕವ, ಬೇಡ ಹೋಗುತ್ತಿದ್ದೇನೆ ಅನ್ನುತ್ತಿದ್ದಾನೆ. ಬಿಡಲಿಕ್ಕೆ ಅವಳಿಗೇನು ಹುಚ್ಚೇ? 'ಏ ಕೋಮಲ್, come on!' ಅಂದವಳೇ ಜೋರಾಗಿ ಎಳೆದಳು. ಇಷ್ಟು ಆಹ್ವಾನ ಸಾಕಾಯಿತು ಕೋಮಲನಿಗೆ. ಕಾಡಿನಲ್ಲಿ ಕಡಿದ ಮರ ಧರೆಗೆ ಉರುಳುವಂತೆ ಆಕೆಯ ಪಕ್ಕ ಉರುಳಿದ. ಅವನಿಗೆ ಗೊತ್ತು ಮಾನಸಿಗೆ ಇದು ಮೊದಲ ಅನುಭವ ಅಂತ. ಅದರ ಬಗ್ಗೆ ಆತನಿಗೆ ಶತಪ್ರತಿಶತ ಖಾತ್ರಿಯಿತ್ತು. ಅದಕ್ಕೇ ಮಾನಸಿಗೆ ಫುಲ್ ಚಾರ್ಜ್ ಕೊಟ್ಟು ಆಕೆಯ ಅಡಿಯಾಳಾದ. ಮಾನಸಿ ಫುಲ್ ಫಾರ್ಮಿಗೆ ಬಂದು ಬಿಟ್ಟಳು.

ಮುಂದೆ ರಾತ್ರಿಯಿಡೀ ನಡೆದಿದ್ದು ಕಾಮ ಯಜ್ಞ. ಮಾನಸಿ ಕೈಯಲ್ಲಿ ಹೊಸ ಆಟಿಕೆ. ಜೀವನದಲ್ಲೇ ನೋಡದಿದ್ದಂತಹ ಆಟಿಕೆ. ಅದರ ಜೊತೆ ಹೇಗೆ ಆಡಬೇಕು ಅಂತಲೂ ಸರಿಯಾಗಿ ಗೊತ್ತಿಲ್ಲ. ಗೊತ್ತಿದ್ದರೂ ಕೇವಲ theoretical ಜ್ಞಾನ. ಕೋಮಲ್ ನಗುತ್ತ, ಆಕೆಯ ಹುಚ್ಚಾಟಗಳಿಗೆ ಸಹಕರಿಸುತ್ತ ಕೂತಿದ್ದ. 'ಏ, ಕೋಮಲ್, ಆಟ ಕಲಿಸಿಕೊಡೋ. ಪ್ಲೀಸ್!' ಅಂತ ಆಕೆ ಗೋಗರೆದಾಗಲೇ ಆತ ಚಾರ್ಜ್ ತೆಗೆದುಕೊಂಡ. ಆಟದ ಒಂದೊಂದೇ ಹಂತವನ್ನು ಕಲಿಸುತ್ತ ಬಂದ. ಮಾನಸಿ ಕೆಲವೊಂದು ಹಂತ ಬಿಟ್ಟು ಬರಲು ಸಿದ್ದವೇ ಇರಲಿಲ್ಲ. ಚಿಕ್ಕ ಮಗುವಿನಂತೆ ಆಕೆಯನ್ನು ರಮಿಸುತ್ತ, ಹೊಸ ಹೊಸ ರುಚಿ ತೋರಿಸುತ್ತ, ಆಕೆಯಲ್ಲಿ ಮತ್ತೂ ಹೆಚ್ಚಿನ ಕುತೂಹಲ ಹುಟ್ಟಿಸುತ್ತ ಸುಖದ ಚರಸೀಮೆಗೆ ಕರೆದೊಯ್ದ. ಬೆಳಗಿನ ಜಾವದ ಹೊತ್ತಿಗೆ ಮಾನಸಿ ಕನ್ಯೆಯಾಗಿ ಉಳಿದಿರಲಿಲ್ಲ. 'ಕಳೆದುಕೊಳ್ಳುವದರಲ್ಲೂ ಅದೆಂತಾ ಸುಖ ಹರಿಯೇ!' ಅಂತ ಹರಿನಾಮ ಸ್ಮರಣೆ ಮಾಡುತ್ತ ಮಾನಸಿ ನಿದ್ರೆಗೆ ಜಾರುತ್ತಿದ್ದರೆ ಕೋಮಲ್ ವಿಜಯದ ನಗೆ ಬೀರುತ್ತ ತನ್ನ ಡೈರಿಯಲ್ಲಿ ಮತ್ತೊಂದು ಎಂಟ್ರಿ ಮಾಡಿಕೊಂಡ. ಎದ್ದು ಬಟ್ಟೆ ಧರಿಸಿ, ಮಲಗಿದ ಮಾನಸಿಯನ್ನು ಸರಿಮಾಡಿ ಮಲಗಿಸಿ, ನೀಟಾಗಿ ಹೊದಿಕೆ ಹೊದಿಸಿ, ತಲೆ ಕೆಳಗೆ ದಿಂಬು ಕೊಟ್ಟ. ರೂಂ ಬಿಟ್ಟು ಹೊರಟರೆ ರೂಮಿನ ಒಂದು ಮೂಲೆಯಲ್ಲಿ ಮಲಗಿದ್ದ ನಾಯಿ ಮುಖವೆತ್ತಿ ನೋಡಿತು. 'ಶೇಮ್, ಶೇಮ್, ಪಪ್ಪಿ ಶೇಮ್. ನಾನು ಇಲ್ಲೇ ಇದ್ದೆ. ನನ್ನ ಮುಂದೇ ಎಲ್ಲ ಮಾಡಿ ಮುಗಿಸಿಬಿಟ್ಟಿರಿ. ಶೇಮ್, ಶೇಮ್, ಪಪ್ಪಿ ಶೇಮ್,' ಅಂತ ಕುಹಕವಾಡಿದಂತೆ ನಾಯಿ ಮುಖದ ಮೇಲೆ ಭಾವನೆ. ಹಾಗಂತ ಅಂದುಕೊಂಡ ಕೋಮಲ್ ನಕ್ಕ. 'ನಾಯಿ ಮುಂಡೇದೇ! ಶಟ್ ಅಪ್. ಇನ್ನು ಮುಂದೆ ಭಾಳ ಸಲ ಇಂತಹ ಆಟ ಇಲ್ಲಿ ನಡೆಯುತ್ತಲೇ ಇರುತ್ತದೆ. ನೋಡುತ್ತಾ ಜೊಲ್ಲು ಸುರಿಸುತ್ತ ಇರು ನೀನು ನಾಯಿ ಮುಂಡೇದೇ!' ಅಂದವನೇ ಜಿಗಿಜಿಗಿಯುತ್ತ ಮೆಟ್ಟಿಲಿಳಿದು ಬಂದ. ಹಾಲಿನಲ್ಲಿ ದೀಪ ಉರಿಯುತ್ತಲೇ ಇತ್ತು. ಘಂಟೆ ಬೆಳಿಗ್ಗೆ ನಾಕೂ ಮುಕ್ಕಾಲು. ಮನೆಗೆ ಹೋಗಿ, ಬಟ್ಟೆ ಬದಲಾಯಿಸಿ, ಜಾಗಿಂಗ್ ಹೋಗಲು ಸರಿಯಾಗುತ್ತದೆ ಅಂದುಕೊಂಡ ಕೋಮಲ್. ಮಾನಸಿಯ ಮನೆ ಹೊರಗೆ ಬಂದು ಬಾಗಿಲು ಎಳೆದುಕೊಂಡ. 'ಕಳಕ್' ಅಂತ ಸದ್ದಿನೊಂದಿಗೆ ಲಾಕ್ ಬಿತ್ತು. ಮತ್ತೊಂದು ಮೈದಾನ್ ಮಾರ್ ಖುಷಿಯಲ್ಲಿ ಸಣ್ಣಗೆ ಸಿಳ್ಳೆ ಹೊಡೆಯುತ್ತ, ಮಾವಿನ ಗಿಡಗಳ ಮಧ್ಯೆ ನಡೆಯುತ್ತ ಹೋಗಿ, ರಸ್ತೆ ಮೇಲೆ ನಿಲ್ಲಿಸಿ ಬಂದಿದ್ದ ಕಾರ್ ಸೇರಿಕೊಂಡ. ಕೀಲಿ ಹಾಕಿ ತಿರುವಿದ ತಕ್ಷಣ ಚಾಟಿ ಬಾರಿಸಿದ ಕುದುರೆ ಕೆನೆದಂತೆ ಕಾರು ನೆಗೆಯಿತು. ಕಾರಿನ ಹೆಡ್ ಲೈಟ್ಸ್ ಒಮ್ಮೆಲೇ ಹತ್ತಿಕೊಂಡವು. ಅವುಗಳ ಪ್ರಖರತೆಯಲ್ಲಿ ಕೊಂಚ ದೂರದಲ್ಲಿ ನಿಂತ ಪೋಲೀಸ್ ಜೀಪನ್ನು ನೋಡಿದ ಕೋಮಲ್ ಒಂದು ಕ್ಷಣ ಅಧೀರನಾದ. ನಂತರ ಪೋಲೀಸರ ಜೊತೆ ತನ್ನ ಯಾವ ಲೆವಲ್ಲಿನ ಡೀಲಿಂಗ್ ಇದೆ ಅನ್ನುವದು ನೆನಪಾಯಿತು. ಮತ್ತೆ ತಾನು ಯಾವದೇ ತಪ್ಪು ಮಾಡಲು ಬಂದಿಲ್ಲ ಅನ್ನುವದು ಗೊತ್ತಿತ್ತು. ಕೇಳಿದರೆ ಹೇಳುತ್ತೇನೆ. ಪಲ್ಲಂಗ ಹತ್ತಲು ಬಂದಿದ್ದೆ. ಏನೀಗ? ತನ್ನ ಪಲ್ಲಂಗ ಪುರಾಣ ಎಲ್ಲರಿಗೂ ಗೊತ್ತಿದ್ದದ್ದೇ. ಕೋಮಲ್ ಮನೆ ಕಡೆ ಗಾಡಿ ತಿರುಗಿಸಿದ. ಈಕಡೆ ಅರೆ ನಿದ್ದೆಯಲ್ಲಿ ಮಾನಸಿ ಮಗ್ಗುಲು ಬದಲಿಸಿದಳು. 'ಕೋಮಲ್, ಡಾರ್ಲಿಂಗ್. ನೀನು ಬೇಕು!' ಅಂತ ಕನವರಿಸಿದಳು. ವೈನಿನ ಮತ್ತು ಮತ್ತೆ ನಿದ್ದೆಗೆ ನೂಕಿತು. ಮಾನಸಿ ಎದ್ದಾಗ ಬರೋಬ್ಬರಿ ಒಂಬತ್ತು ಘಂಟೆ. ಅದೂ ನಾಯಿ ಸಿಕ್ಕಾಪಟ್ಟೆ ಹಸಿವಾಗಿ, ಕುಂಯ್!ಕುಂಯ್! ಅಂದು, ಸೀದಾ ಮಂಚಕ್ಕೇ ಹಾರಿ, ಒಡತಿಯನ್ನು ಎಬ್ಬಿಸಿತ್ತು. ಆಗಲೇ ಆಕೆ ಎದ್ದಿದ್ದು. ರಾತ್ರಿ ಆಗಿದ್ದೆಲ್ಲ ಎಷ್ಟು ನೆನಪಿತ್ತೋ ಇಲ್ಲವೋ ಗೊತ್ತಿಲ್ಲ. ಮುಖದ ಮೇಲೆ ನಗುವಂತೂ ಇತ್ತು. ಮೈ ಹೂವಿನಷ್ಟು ಹಗುರವಾಗಿತ್ತು.

ಭಾಗ - ೭

ಮುಂದೆ ಮಾನಸಿ ಮತ್ತು ಕೋಮಲ್ ಜಾತ್ರಾವಳಿ ಮಧ್ಯೆ ಒಂದು ತರಹದ ವಿಚಿತ್ರ ಸಂಬಂಧ ಬೆಳೆದುಬಿಟ್ಟಿತು. ಕೋಮಲನಿಗೆ ಅನೇಕ ಗೆಳತಿಯರಿದ್ದರು. ಆದರೆ ಅವಿವಾಹಿತೆ ಯಾರೂ ಇರಲಿಲ್ಲ. ಮಾನಸಿಯೇ ಮೊದಲ ಅವಿವಾಹಿತೆ. ಮತ್ತೆ ಅವರಿಬ್ಬರ ನಡುವೆ ಹಸಿಬಿಸಿ ಕಾಮ, ಚರ್ಚೆ, ಸಮಾನ ಆಸಕ್ತಿಗಳನ್ನು ಮೀರಿದ ಒಂದು ಸಂಬಂಧ ಬೆಳೆಯುತ್ತ ಹೋಯಿತು. ಇಬ್ಬರೂ ಖುಷಿಖುಷಿಯಾಗೇ ಇದ್ದರು. ತನ್ನ ಅನೇಕ ಗೆಳತಿಯರನ್ನು ಕೋಮಲ್ ತನ್ನ ತಮ್ಮ ಸುಂದರೇಶನಿಗೆ ಸಾಗಹಾಕಿದ. ಹೆಚ್ಚಿನ ಸಮಯ ಮಾನಸಿ ಜೊತೆಗೇ ಕಳೆಯತೊಡಗಿದ. ಜನ ಮಾತಾಡಿಕೊಂಡರು. ಪದ್ಮಾವತಿಬಾಯಿ ತಲೆ ಆಚೀಚೆ ಅಲ್ಲಾಡಿಸಿ, 'ಇದು ನಿಜವಾಗಿಯೂ ಆಗುತ್ತಿದೆಯೇ?' ಅಂತ ತನ್ನನ್ನು ತಾನೇ ಕೇಳಿಕೊಂಡಳು. ಮಾನಸಿಯನ್ನು ಕೇಳುವ ಧೈರ್ಯ ಮಾಡಲಿಲ್ಲ. ಕೇಳಲು ಮುಂದೆ ಆಕೆ ಬಹಳ ದಿನ ಉಳಿಯಲೂ ಇಲ್ಲ. ಪದ್ಮಾವತಿ ಭಯಾನಕವಾಗಿ ಕೊಲೆಯಾಗಿ ಹೋದಳು.

ಪದ್ಮಾವತಿಬಾಯಿ ಒಂದು ರಾತ್ರಿ ಸುಮಾರು ಹತ್ತೂವರೆ ಹೊತ್ತಿಗೆ ಮಾನಸಿಗೆ ಹಾಲು ಕೊಟ್ಟು ಬರಲು ಆಕೆಯ ಕೋಣೆಗೆ ಹೋದಳು. ಮಾನಸಿ ಕೋಣೆಯಲ್ಲಿ ಇರಲಿಲ್ಲ. ಬಾತ್ರೂಮಿನಲ್ಲಿ ಇರಬಹುದು ಅಂದುಕೊಂಡು ಹಾಲಿನ ಗ್ಲಾಸ್ ಟೇಬಲ್ ಮೇಲಿಟ್ಟು ಬಂದಳು. ಬಂದು ಸಣ್ಣ ಪುಟ್ಟ ಕೆಲಸ ಮುಗಿಸಿದಳು. ಮಲಗುವ ಮುನ್ನ ದೇಹಬಾಧೆ ತೀರಿಸಿಕೊಳ್ಳಲು ಶೌಚಾಲಯದ ಕಡೆ ಹೊರಟಳು. ಮಾನಸಿಯೇನೋ ಅಮೇರಿಕಾದಿಂದ ಬರುವ ಮೊದಲೇ, ಕರಾರು ಹಾಕಿಸಿ, ತನ್ನ ಕೋಣೆಗೇ ತಾಕಿ attached ಬಾತ್ರೂಂ & ಟಾಯ್ಲೆಟ್ ಮಾಡಿಸಿಕೊಂಡಿದ್ದಳು. ಪ್ರೊ.ಕುಲಕರ್ಣಿ ಸಂಪ್ರದಾಯಸ್ತರಾಗಿದ್ದರೂ ಮಗಳ ಬೇಡಿಕೆಗೆ ಒಪ್ಪಿಕೊಂಡು, ಆಕೆಯ ರೂಮಿನ renovation ಮಾಡಿಸಿ, attached ಬಾತ್ರೂಂ, ಟಾಯ್ಲೆಟ್ ಕಟ್ಟಿಸಿ ರೆಡಿ ಮಾಡಿ ಇಟ್ಟಿದ್ದರು. ಅದು ಆಕೆಗೇ ಮಾತ್ರ. ಬಾಕಿ ಮಂದಿಯೆಲ್ಲ ಹಳೆ ಪದ್ಧತಿ ಪ್ರಕಾರ, ಮನೆ ಹಿಂದೆ ಸುಮಾರು ಅರ್ಧ ಫರ್ಲಾಂಗೇ ದೂರವಿದ್ದ, ಮನೆಯಿಂದ ಪ್ರತ್ಯೇಕವಿದ್ದ ಶೌಚಾಲಯಗಳನ್ನೇ ಬಳಸುತ್ತಿದ್ದರು. ಹಳೇ ಪದ್ಧತಿ ಅದು. ಮಡಿ ಹೆಂಗಸು ಪದ್ಮಾವತಿ ಕೂಡ ಅಲ್ಲೇ ಹೊರಟಿದ್ದಳು. ಕತ್ತಲು ದಟ್ಟವಾಗಿತ್ತು. ಕೈಯಲ್ಲಿ ಬ್ಯಾಟರಿ ಇತ್ತು. ಒಳಗಿನ ಶೆಲ್ಲುಗಳು ವೀಕ್ ಆಗಿದ್ದವು ಅಂತ ಕಾಣುತ್ತದೆ. ಒಂದು ಕೈಯಲ್ಲಿ ಪ್ಲಾಸ್ಟಿಕ್ ಚೊಂಬು ಹಿಡಿದುಕೊಂಡು, ಮತ್ತೊಂದು ಕೈಯಲ್ಲಿ ಬ್ಯಾಟರಿ ಹಿಡಿದುಕೊಂಡು, ಆಗಾಗ ಬ್ಯಾಟರಿ ಹಿಂಬಾಗ ಕುಟ್ಟುತ್ತ, ಬೆಳಕು ಮಾಡಿಕೊಳ್ಳುತ್ತ, 'ಹರಿಯೇ! ಹರಿಯೇ!' ಅನ್ನುತ್ತ ಹೊರಟಿತ್ತು ಮಡಿ ಅಮ್ಮ ಪದ್ಮಾವತಿಬಾಯಿ.

ಆಕೆಯ ಹಿಂದೆ ಏನೋ ಕರಪರ ಸದ್ದಾಯಿತು. ಉದುರಿ ಬಿದ್ದ ಎಲೆಗಳ ಮೇಲೆ ಏನೋ ಹರಿದಾಡಿರಬೇಕು ಅಂತ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಮುಂದೆ ನಡೆದಳು ಪದ್ಮಾವತಿ.

ಹಿಂದಿನಿಂದ ಯಾರೋ 'ಏ! ಏ!' ಅಂತ ಕರೆದರು. ಒಮ್ಮೆ ಬೆಚ್ಚಿದಳು ಪದ್ಮಾವತಿ. ಆಕೆ ಎಲ್ಲರಿಗೂ ಪ್ರೀತಿಯ ಪದ್ದಕ್ಕ. ಹಾಗಿದ್ದಾಗ ಇದ್ಯಾರು ಏ! ಏ! ಅಂತ ಕರೆಯುತ್ತಿರುವವರು? ತಿರುಗಿ ನೋಡಿದರೆ ಕೆಲವೇ ಅಡಿಗಳ ಅಂತರದಲ್ಲಿ ಒಂದು ಆಕೃತಿ ನಿಂತಿತ್ತು . ಆಕೃತಿ ಪದ್ಮಾವತಿಯತ್ತ ಧಾವಿಸಿ ಬಂತು.

'ಏ! ಯಾರು? ಯಾರದು?' ಅಂತ ಬ್ಯಾಟರಿ ಎತ್ತಿದಳು. ಅಷ್ಟರಲ್ಲಿ ಆಕೃತಿ ಪದ್ಮಾವತಿಯ ಮುಖದ ಮುಂದೇ ಬಂದು ನಿಂತಿತ್ತು. ಬ್ಯಾಟರಿ ಬೆಳಕಿನಲ್ಲಿ ಆ ಆಕೃತಿಯ ಮುಖ ಕಂಡಿತು. ನೋಡಿದ ಪದ್ಮಾವತಿಯ ಮುಖದ ಮೇಲೆ ಒಂದು ವಿಚಿತ್ರ ಭಾವನೆ. ಒಂದು ಭಾವನೆ ಅಲ್ಲ. ಹಲವಾರು ಭಾವನೆಗಳ ಸಮ್ಮಿಶ್ರಣ. ಮುಂದೆ ಎಲ್ಲ ಕತ್ತಲು. ಕಗ್ಗತ್ತಲು.

ಪದ್ಮಾವತಿ ಮುಂದೆ ಧುತ್ತೆಂದು ಪ್ರತ್ಯಕ್ಷವಾಗಿದ್ದ ಆಕೃತಿ ರಬ್ಬರ್ ಪೈಪ್ ಒಂದನ್ನು ತೆಗೆಯಿತು. ಮಿಂಚಿನ ವೇಗದಲ್ಲಿ ಪದ್ಮಾವತಿ ಕೊರಳಿಗೆ ಸುತ್ತಿಬಿಟ್ಟಿತು. ಉರುಳು ಹಾಕಿತು. ಕುತ್ತಿಗೆ ಹಿಚುಕಿತು. ಪದ್ಮಾವತಿ ಮೊದಲೇ ಸಣ್ಣ ಶರೀರದ ಅಜ್ಜಿ. ಮತ್ತೆ ವಾರಕ್ಕೆ ಮೂರೋ ನಾಲ್ಕೋ ಬಾರಿಯೋ ಉಪವಾಸ, ಒಪ್ಪತ್ತು ಅಂತ ಹೇಳಿ, ಮತ್ತೂ ತೆಳ್ಳಗೆ ಕಡ್ಡಿಯಂತೆ ಆಗಿದ್ದಳು. ಆ ದೊಡ್ಡ ಸೈಜಿನ ಆಕೃತಿಗೆ ಆಕೆ ಸಾಟಿಯೇ ಅಲ್ಲ. 'ಕಾಪಾಡು ಹರಿಯೇ! ನನಗ ಹೀಂಗ ಸಾವು ಬರ್ತದ ಅಂತ ಗೊತ್ತಿರಲಿಲ್ಲ ಹರಿಯೇ,' ಅಂತ ಹೇಳಲು ಪ್ರಯತ್ನಿಸಿದಳು. ಕುತ್ತಿಗೆಗೆ ಪೈಪ್ ಬಿಗಿದಿದ್ದ ಕಾರಣ ಧ್ವನಿ ಹೊರಬೀಳಲಿಲ್ಲ. ಒಂದೆರೆಡು ಬಾರಿ ಜರ್ಕ್ ಹೊಡೆದ ಪದ್ಮಾವತಿಯ ದೇಹ ನಿತ್ರಾಣವಾಯಿತು. ಪ್ರಾಣಪಕ್ಷಿ ಹಾರಿತೋ ಎಂಬಂತೆ ಎಲ್ಲಿಂದಲೋ ಒಂದು ಹಕ್ಕಿ ರೆಕ್ಕೆ ಫಡಫಡಿಸಿ ಹಾರಿತು. ಕೆಲಸ ಮುಗಿಯಿತು ಅನ್ನುವ ರೀತಿಯಲ್ಲಿ ಆ ಆಕೃತಿ ಕುತ್ತಿಗೆಗೆ ಸುತ್ತಿದ್ದ ಪೈಪ್ ತೆಗೆದು ಬಿಸಾಡಿತು. ದಾಪುಗಾಲಿಡುತ್ತ ಅಲ್ಲಿಂದ ಮಾಯವಾಯಿತು. ಕೈಗೆ ಹಾಕಿದ gloves ಕಿತ್ತೆಸೆಯಿತು. ಮತ್ತೆ ಅವೇ ಹಸಿರು ಬಣ್ಣದ gloves.

ಮರುದಿವಸ ಮಾನಸಿ ಬೆಳಿಗ್ಗೆ ಆರಕ್ಕೆ ಎದ್ದಳು. 'ಅರೇ! ಪದ್ದಕ್ಕ ಎಲ್ಲಿ? ಅವಳೇ ಚಹಾ ತಂದು, ಮಾನಸೀ ಮಾನಸೀ ಅಂತ ಪ್ರೀತಿಯಿಂದ ತಲೆ ಸವರಿ ಎಬ್ಬಿಸುತ್ತಾಳೆ. ಆಗಲೇ ತಾನೇ ಎಚ್ಚರವಾಗುವದು? ಇವತ್ತು ಅವಳೂ ಇಲ್ಲ. ಚಹಾನೂ ಇಲ್ಲ. ಏನಿದು ವಿಚಿತ್ರ? ಎಲ್ಲಿ ಜಡ್ಡು ಬಂದು ಮಲಗಿಬಿಟ್ಟಳೋ ಹೇಗೆ? ಮನ್ನಿತ್ತಲಾಗೆ ಅಣ್ಣನ ಮನೆಗೆ ಹೋಗಿ ಬಂದಾಕೆ ಮೊದಲು ಜ್ವರ ಅಂದಳು. ರೆಸ್ಟ್ ತೆಗೆದುಕೋ ಮಾರಾಯ್ತೀ ಅಂದರೆ ಕೇಳದೇ ಹಪ್ಪಳ, ಸಂಡಿಗೆ ಹಾಕುತ್ತ ಕುಳಿತಳು. ಈಗ ಜೋರಾಗಿ ಜ್ವರ ಬಂದು ಏಳಲೂ ಆಗಿಲ್ಲ ಅಂತ ಕಾಣುತ್ತದೆ,' ಅಂತ ವಿಚಾರ ಮಾಡುತ್ತ ಕಿಟಕಿ ಕಡೆ ಹೋಗಿ ಪರದೆ ಸರಿಸಿದಳು. ಜಾಗಿಂಗ್ ಮಾಡುತ್ತ ಹೋಗುತ್ತಿದ್ದ ಕೋಮಲ್ ಕಂಡ. ಮನಸ್ಸು ಏಕ್ದಂ ಉಲ್ಲಾಸಗೊಂಡು, ಎದೆಯಲ್ಲಿ ಸಾವಿರ ಶಹನಾಯಿಗಳು ಒಮ್ಮೆಲೇ ಮೊರೆದಂತಾಯಿತು. 'ಶಹನಾಯಿ ಹಾಳಾಗಿ ಹೋಗಲಿ. ನಾನು ನಾಯಿ ಇಲ್ಲೇ ಇದ್ದೇನೆ,' ಅಂತ ನಾಯಿ ಎದ್ದು ಬಂದು ಕೈ ನೆಕ್ಕಿತು. 'ಕೋಮಲ್! ಕೋಮಲ್!' ಅಂತ ಜೋರಾಗಿ ಕೂಗಿದಳು ಮಾನಸಿ. ಸಾಕಷ್ಟು ಜೋರಾಗಿಯೇ ಕೂಗಿದ್ದಳು. ಕೋಮಲನಿಗೆ ಕೇಳಿಸಿತು. ನೋಡಿ ಕೈಯಾಡಿಸಿದ. ಒಂದು ಫ್ಲೈಯಿಂಗ್ ಕಿಸ್ ಸಹಿತ ಕೊಟ್ಟ. ಕೊಟ್ಟ ಮೇಲೆ ಯಾರಾದರೂ ನೋಡಿದರೋ ಏನೋ ಅಂತ ಸುತ್ತ ಮುತ್ತ ನೋಡಿದ. ಯಾರೂ ನೋಡಿರಲಿಲ್ಲ. 'ಬಾ! ಬಾ! ಒಂದು ನಿಮಿಷ ಬಂದು ಹೋಗು,' ಅನ್ನುವಂತೆ ಸನ್ನೆ ಮಾಡಿದಳು ಮಾನಸಿ. 'ಈಗ ಬೇಡ,' ಅನ್ನುವಂತೆ ವಾಪಸ್ ಸನ್ನೆ ಮಾಡಿ, ಹೊರಡಲು ಮುಂದಾದ ಕೋಮಲ್. 'ಬರಲೇಬೇಕು,' ಅನ್ನುವಂತೆ ಕಟ್ಟಾಜ್ಞೆ ಮಾಡಿದಂತೆ ಮುಖ ಊದಿಸಿ ಸನ್ನೆ ಮಾಡಿದಳು. ಇನ್ನು ಒಳಗೆ ಹೋಗಿ, ಒಂದು ರೌಂಡ್ ಚಹಾ ಕುಡಿದು, ಮುಂಜಾನೆಯ ಪ್ರೀತಿಯ ಒಂದು ಡೋಸ್ ಕೊಟ್ಟ ಹೊರತೂ ಇದು ಬಿಡುವ ಕೇಸಲ್ಲ ಅಂತ ಕೋಮಲನಿಗೆ ಗೊತ್ತಾಯಿತು. ಕಾಂಪೌಂಡ್ ಒಳಗೆ ಬಂದು, ಮಾವಿನ ಮರಗಳ ಮಧ್ಯೆ ಜಾಗಿಂಗ್ ಮಾಡುತ್ತ ಬಂದು ಮುಟ್ಟಿದ. ಅಷ್ಟರಲ್ಲಿ ಮಾನಸಿಯೇ ಕೆಳಗೆ ಬಂದು, ಬಾಗಿಲು ತೆಗೆದು, ಕೋಮಲನನ್ನು ಒಳಕ್ಕೆ ಕರೆದಳು. ಬಾಗಿಲು ತೆಗೆದಿದ್ದು ತನಗೆ ಹೊರಗೆ ಹೋಗಲು ಅಂತ ತಿಳಿದ ನಾಯಿ ಹೊರಗೆ ಓಡಿತು.

ಕೋಮಲ್ ಒಳಗೆ ಬಂದು ಕೂತ. ಮಾನಸಿ ಸಹಿತ ಕೂತು, 'ಪದ್ದಕ್ಕಾ, ಪದ್ದಕ್ಕಾ' ಅಂತ ಕರೆದಳು. ಉತ್ತರ ಬರಲಿಲ್ಲ. ಹೊರಗೆ ಹೋದ ನಾಯಿ ಮಾತ್ರ ವಿಚಿತ್ರವಾಗಿ ಕೂಗತೊಡಗಿತ್ತು. ಗಾಬರಿಗೊಂಡ ಮಾನಸಿ ಎದ್ದು ಹಿತ್ತಲ ಕಡೆ ಓಡಿದಳು. ನಂತರ ಕೇಳಿದ್ದು ಮಾನಸಿಯ ಕೂಗು. ಕಿಟಾರನೆ ಕಿರುಚಿದಳು. 'ಪದ್ದಕ್ಕಾ!'

ಮಾನಸಿ ಕೂಗಿದ್ದನ್ನು ಕೇಳಿದ ಕೋಮಲ್ ಎದ್ದು ಬಿದ್ದು ಓಡಿ ಬಂದ. ನೋಡಿದರೆ ಮಾನಸಿ ಹುಚ್ಚಿಯಂತೆ ಕಿರುಚುತ್ತಿದ್ದಳು. ಎದುರಿಗೆ ಪದ್ಮಾವತಿಯ ಹೆಣವಿತ್ತು. ನಾಯಿ ವಿಕಾರವಾಗಿ ಊಳಿಡುತ್ತಿತ್ತು.

ಕೋಮಲ್ ಫೋನ್ ಎತ್ತಿದವನೇ ಫೋನ್ ಮಾಡಿದ್ದು ಸೀದಾ ಇನ್ಸಪೆಕ್ಟರ್ ಖಲಸ್ಕರನಿಗೆ. ಹಿಂದಿನ ದಿನ ರಾತ್ರಿ ಮಾತ್ರ ಪಾರ್ಟಿಯಲ್ಲಿ ಇಬ್ಬರೂ ಸೇರಿದ್ದರು. ಸಾಕಷ್ಟು ಹರಟೆಯಾಗಿತ್ತು. ಮಾನಸಿ, ಆಕೆಯ ಮನೆಯಲ್ಲಿ ಸಂಭವಿಸುತ್ತಿರುವಂತಹ ಚಿತ್ರ ವಿಚಿತ್ರ ಘಟನೆಗಳು ಎಲ್ಲದರ ಬಗ್ಗೆ ಚರ್ಚೆಯಾಗಿತ್ತು. ಹಾಗಿದ್ದಾಗ ಬೆಳಿಗ್ಗೆ ಬೆಳಿಗ್ಗೆಯೇ ಯಾಕೆ ಫೋನ್ ಮಾಡುತ್ತಿದ್ದಾನೆ ಕೋಮಲ್ ಅಂತ ತಿಳಿಯಲಿಲ್ಲ ಖಲಸ್ಕರಗೆ. ಫೋನ್ ಎತ್ತಿ, 'ಹಲೋ!' ಅಂದ. ಮುಂದೆ ಮಾತಾಡಲಿಲ್ಲ. ಎಲ್ಲ ಕೇಳಿಸಿಕೊಂಡ ಮೇಲೆ ಖಲಸ್ಕರ್ ಕಡೆಯಿಂದ ಹೊರಟಿದ್ದು ಒಂದೇ ಮಾತು - 'ಅಲ್ಲೇ ಇರು. ಈಗ ಬಂದೆ. ಈ ಹುಚ್ಚರ ಡಾಕ್ಟರ್ ಬಾಯಿದು ಲಫಡಾ ಭಾಳ ಕಾಂಪ್ಲಿಕೇಟೆಡ್ ಆತಲ್ಲೋ!?'

ಮತ್ತೇ ಅದೇ ಗೋಳು. ಪಂಚನಾಮೆ, ಪರೀಕ್ಷೆ, ಹೇಳಿಕೆ, ಅದರ ಒಂದು ಕಾಪಿ ಮಾನಸಿಗೆ, ಬೆರಳಚ್ಚು ಸಂಗ್ರಹ, ಪೋಸ್ಟ್ ಮಾರ್ಟಂ ಮಾಡಲು ಹೆಣ ಕಳಿಸುವದು. ಹೆಣ ಏನು ಮಾಡುವದು? ಅದು ಮುಖ್ಯ ಪ್ರಶ್ನೆ. ಪದ್ಮಾವತಿಗೆ ಸಂಬಂಧಿಕರು ಇದ್ದರು. ಅದೂ ಧಾರವಾಡದಲ್ಲೇ ಇದ್ದರು. ಆಸ್ಪತ್ರೆಯಿಂದ ಸೀದಾ ತಾವೇ ತೆಗೆದುಕೊಂಡು ಹೋಗಿ ಎಲ್ಲ ಮಾಡಿ ಮುಗಿಸುತ್ತೇವೆ ಅಂತ ಹೇಳಿದರು. ಕೈ ಕೈ ಹೊಸೆಯುತ್ತ ನಿಂತರು. ಇವರ ಹತ್ತಿರ ರೊಕ್ಕವಿಲ್ಲ ಅಂತ ಮಾನಸಿಗೆ ತಿಳಿಯಿತು. ಹೋಗಿ ಒಳಗಿಂದ ಒಂದಿಷ್ಟು ಸಾವಿರ ತಂದು ಅವರ ಕೈಯಲ್ಲಿ ಇಟ್ಟು, ಕೈ ಮುಗಿದಳು. ತಾನು ಹುಟ್ಟಿದಾಗಿಂದ ತನ್ನನ್ನು ಸಾಕಿ ಸಲುಹಿದ್ದ ಪದ್ದಕ್ಕನನ್ನು ನೆನಪಿಸಿಕೊಂಡು ಕಣ್ಣಾಲಿಗಳಲ್ಲಿ ನೀರಾಡಿತು. 'ಅಷ್ಟು ಒಳ್ಳೆ ಹೆಂಗಸಿಗೆ ಎಂತಾ ಸಾವು ಹರಿಯೇ?' ಅನ್ನುವ ಹಾಗೆ ಆಕಾಶದ ಕಡೆ ನೋಡಿದಳು. ಯಾವದೋ ಯೋಚನೆಯಲ್ಲಿ ಮುಳುಗಿದಳು. ಕೋಮಲ್ ಮೆಲ್ಲಗೆ ಕೈ ಮುಟ್ಟಿದ. 'ಏನು?' ಅಂತ ನೋಡಿದರೆ, ಪೊಲೀಸರು ಕರೆಯುತ್ತಿದ್ದಾರೆ ಅಂತ ಹೇಳಿದ. ಅದೇನೋ ಪಂಚನಾಮೆ ದಾಖಲೆಗಳಿಗೆ ಸಹಿ ಹಾಕುವದಿತ್ತು. ಹಾಕಿ ಬಂದಳು. ಎಲ್ಲರೂ ಹೊರಟು ನಿಂತರು. ಮನೆ ಖಾಲಿ ಖಾಲಿ. ಅಂತಹ ವಾಡೆಯಂತಹ ಭೂತ ಬಂಗಲೆಯಲ್ಲಿ ಇನ್ನು ಮುಂದೆ ಮಾನಸಿ ಒಂಟಿ. ಜೊತೆಗೆ ಉಳಿದಿರುವ ಒಂದು ನಾಯಿ, ಒಂದು ಬೆಕ್ಕು. ಹಗಲಲ್ಲಿ ಒಂದಿಬ್ಬರು ಕೆಲಸದವರು ಬಂದು ಕೆಲಸ ಮಾಡಿ ಹೋಗುತ್ತಾರೆ. ಅದು ಬಿಟ್ಟರೆ ಕುಲಕರ್ಣಿ ಕಂಪೌಂಡ್ ಮೊದಲಿನಗಿಂತಲೂ ನಿರ್ಜನ, ನಿರ್ಮಾನುಷ. ಆಗಲೇ ಎರಡು ಪ್ರಾಣಿಗಳ ಮತ್ತು ಎರಡು ಮನುಷ್ಯರ ಬರ್ಬರ ಹತ್ಯೆ ಬೇರೆ ಆಗಿಹೋಗಿದೆ. ಆಗಷ್ಟೇ 'ಖೂನಿ ಮಹಲ್' ಅನ್ನುವ ಹೆಸರಿನ ಹಿಂದಿ ಹಾರರ್ ಸಿನೆಮಾ ಕೂಡ ಬಂದಿತ್ತು. ಸಾಕಷ್ಟು ಪ್ರಸಿದ್ಧವೂ ಆಗಿತ್ತು. ಧಾರವಾಡದ ಜನರ ಬಾಯಲ್ಲಿ ಮಾನಸಿಯ ಬಂಗಲೆ ಖೂನಿ ಮಹಲ್ ಆಗಿಹೋಯಿತು. ಯಾರ್ಯಾರೋ ಬಂದು, ಬಂಗಲೆ ಹೊರಗೆ ನಿಂತು, ಅಚ್ಚರಿಯಿಂದ ನೋಡುತ್ತಿದ್ದರು. ಏನೂ ಕಾಣದೇ, ಸುಮ್ಮನೆ ಹೋಗುತ್ತಿದ್ದರು. ಎಷ್ಟೋ ಬಾರಿ ಮಾನಸಿಯೇ ಅಂತವರನ್ನು ಕಿಡಕಿಯಿಂದ ನೋಡಿದ್ದಳು. ಸಹಜವಾಗಿ ಪರದೆ ಸರಿಸಿ, ಕಿಟಕಿ ತೆಗೆದರೆ ಅಥವಾ ಮುಚ್ಚಿದರೆ ಭೂತ ದರ್ಶನವಾದಂತೆ ಓಡಿ ಹೋದವರನ್ನು ನೋಡಿ ಮಾನಸಿ, 'No hope for such idiots,' ಅಂತ ಅಂದುಕೊಂಡು, ನಕ್ಕು, ಸುಮ್ಮನಾಗಿದ್ದಳು.

ಭಾಗ - ೮ 

ಪದ್ದಕ್ಕ ಉರ್ಫ್ ಪದ್ಮಾವತಿಬಾಯಿ ಹೋಗಿದ್ದೇ ಹೋಗಿದ್ದು ಮಾನಸಿಗೆ ಊಟಕ್ಕೆ ತೊಂದರೆಯಾಯಿತು. ಬೇರೆ ಅಡಿಗೆಯವರನ್ನು ಹುಡುಕಲು ಹೇಳಿದ್ದಳು. ಸರಿಯಾಗಿ ಸಿಗಲಿಲ್ಲ. ಕೆಲವರು ಈಕೆಗೆ ಸರಿಯಾಗಲಿಲ್ಲ. ಮತ್ತೆ ಮಾನಸಿಯ ಬಂಗಲೆಗೆ 'ಖೂನಿ ಮಹಲ್' ಅಂತ ಬೇರೆ ಅಪಖ್ಯಾತಿ ಬಂದುಬಿಟ್ಟಿತ್ತು ನೋಡಿ. ಕೆಲವರು ಹೆದರಿ, ಆ ಮನೆಯ ಸುದ್ದಿಯೇ ಬೇಡ ಅಂತ ಕಳಚಿಕೊಂಡರು. ದಿನದಲ್ಲಿ ಬಂದು ಪಾತ್ರೆ, ವಸ್ತ್ರ, ಕಸ, ಇತ್ಯಾದಿ ಕೆಲಸ ಮಾಡಿಹೋಗುತ್ತಿದ್ದ ಕೆಲಸದವಳು, ಕಂಪೌಂಡಿನ ಹುಲ್ಲು ಅದು ಇದು ಸವರಿ ಸ್ವಚ್ಚವಾಗಿ ಇಡುತ್ತಿದ್ದ ಗಂಡಾಳು ಕೆಲಸ ಬಿಟ್ಟು ಹೋಗಿರಲಿಲ್ಲ. ಅದೇ ದೊಡ್ಡ ಪುಣ್ಯ. 'ಪಾಪ, ಮೂಕ ಪ್ರಾಣಿಗಳು,' ಅಂತ ಆವರೇ ನಾಯಿ, ಬೆಕ್ಕಿಗೆ ಊಟ ಹಾಕಿಕೊಂಡು, ಅಮ್ಮಾವರು ಅಂದರೆ ಮಾನಸಿ ಸಂಜೆ ಬರುವ ತನಕ ಇದ್ದು ಹೋಗುತ್ತಿದ್ದರು. ಸದ್ಯಕ್ಕೆ ಇವರಾದರೂ ಇದ್ದಾರಲ್ಲ ಅಂತ ಮಾನಸಿ ಅವರಿಗೆ ಕೃತಜ್ಞಳಾಗಿದ್ದಳು. ಪಗಾರ್ ಹೆಚ್ಚಿಸಿದ್ದಳು.

ಸದ್ಯದ ಮಟ್ಟಿಗೆ ಊಟಕ್ಕೆ ಮನೆಗೆ ಊಟ ಕಳಿಸುತ್ತಿದ್ದ ಹೋಂ ಡೆಲಿವರಿ ಸರ್ವೀಸನ್ನೇ ನೆಚ್ಚಿಕೊಂಡಳು. ಹೆಚ್ಚಾಗಿ ಕೋಮಲನೇ ಊಟ ತರುತ್ತಿದ್ದ. ಅವನ ಆಫೀಸ್ ಪಕ್ಕವೇ ಇತ್ತು ಊಟ ಕಳಿಸುವವರ ಮನೆ. ಈ ಕಾರಣದಿಂದ ಮಾನಸಿ ಮತ್ತು ಕೋಮಲರ ನಡುವಿನ ಸಂಬಂಧ ಮತ್ತೂ ಘಟ್ಟಿಯಾಗುತ್ತಲೇ ಹೋಯಿತು. ಸಾಕಷ್ಟು ವೈನ್ ಬಾಟಲಿಗಳೂ ಖಾಲಿಯಾದವು. ಅಮೇರಿಕಾದಲ್ಲಿ ಇದ್ದಾಗ ರಾತ್ರಿ ಊಟದ ಜೊತೆ ಒಂದು ಗ್ಲಾಸ್ ರೆಡ್ ವೈನ್ ಅಂತ ಅಭ್ಯಾಸ ಇಟ್ಟುಕೊಂಡಿದ್ದಳು ಮಾನಸಿ. ಧಾರವಾಡಕ್ಕೆ ಮರಳಿದ ನಂತರ ಅದರ ಸುದ್ದಿಗೆ ಹೋಗಿರಲಿಲ್ಲ. ಆವತ್ತು ಕೋಮಲ್ ಮೊದಲ ಬಾರಿಗೆ ರಾತ್ರಿ ಊಟ ತಂದಾಗ ವೈನ್ ಬೇಕು ಅನ್ನಿಸಿತ್ತು. ವೈನ್ ಕುಡಿಯುತ್ತ, ಸುಂದರಾಂಗ ಕೋಮಲ್ ಜೊತೆ ರಾತ್ರಿ ಪೂರ್ತಿ ಮಾತಾಡಿ, ಏನೇನೋ ಮಾಡಬೇಕು ಅನ್ನಿಸಿತ್ತು. ಆದೇ ಪ್ರಕಾರ ಆಗಿ ಕೂಡ ಹೋಗಿತ್ತು. ಆವತ್ತಿನಿಂದ ರಾತ್ರಿ ವೈನ್ ಅಭ್ಯಾಸ ಶುರುವಾಗಿತ್ತು. ಒಬ್ಬಳೇ ಇದ್ದರೆ ಒಂದೇ ಗ್ಲಾಸ್. ಜೊತೆಗೆ ಕಂಪನಿ ಕೊಡಲು ಕೋಮಲ್ ಇದ್ದರೆ ಲೆಕ್ಕವಿಲ್ಲ. ಒಳ್ಳೆ ವೈನ್ ಕೂಡ ಸಿಗುತ್ತಿತ್ತು. ವೈನ್ ಗುಂಡಾದರೆ ಕೋಮಲ್ ಸಿಡಿಗುಂಡು. ಬರೋಬ್ಬರಿ ಲೋಡ್ ಮಾಡಿಕೊಂಡು ಕಾಮದ ಕೋವಿ ಹಾರಿಸುತ್ತಿದ್ದ ಕೋಮಲ್. ಮಾನಸಿಗೆ ಅವನ ಕೋವಿಯಿಂದ ಎಷ್ಟು ಗುಂಡು ಹಾರಿದರೂ ಕಮ್ಮಿಯೇ. ಇಪ್ಪತ್ತು ವರ್ಷ ಮಜವಿಲ್ಲದೇ ಕಳೆದ ಜವಾನಿಯ ಕಿಮ್ಮತ್ತನ್ನು ಬೇಗಬೇಗ ವಸೂಲಿ ಮಾಡಬೇಕಿತ್ತು ಆಕೆಗೆ.

ಅದೇ ರೀತಿ ಒಂದು ದಿನ ರಾತ್ರಿ ಕೋಮಲ್ ಊಟ ತೆಗೆದುಕೊಂಡು ಬಂದ. ರಾತ್ರಿ ಸುಮಾರು ಎಂಟು ಘಂಟೆ. ಕಾಲಿಂಗ್ ಬೆಲ್ ಮಾಡಿ ನಿಂತ. ಏನೂ ಉತ್ತರ ಬರಲಿಲ್ಲ. 'ಅರೇ, ಮಾನಸಿ ಇನ್ನೂ ಮನೆಗೆ ಬಂದಿಲ್ಲವೇ?' ಅಂತ ಅಂದುಕೊಂಡ. ಅವನಿಗೇ ಅಂತನೇ ಒಂದು ಡೂಪ್ಲಿಕೇಟ್ ಕೀ ಮಾಡಿಸಿಕೊಟ್ಟಿದ್ದಳು ಮಾನಸಿ. ಅದನ್ನು ಉಪಯೋಗಿಸಿ ಬಾಗಿಲು ತೆಗೆದ. ಒಳಗೆ ಪೂರ್ತಿ ಕಗ್ಗತ್ತಲು. 'ಸರಿ. ಮಾನಸಿ ಎಲ್ಲೋ ಹೋಗಿರಬೇಕು. ಊಟ ಇಟ್ಟು ಹೋದರಾಯಿತು. ನಂತರ ಫೋನ್ ಮಾಡಿದರಾಯಿತು,' ಅಂತ ಹೇಳಿ ಬಾಗಿಲ ಪಕ್ಕದಲ್ಲೇ ಇದ್ದ ಟೇಬಲ್ ಮೇಲೆ ಊಟದ ಕ್ಯಾರಿಯರ್ ಇಟ್ಟ. ವಾಪಸ್ ತಿರುಗಿ ಹೋಗಲು ಅಣಿಯಾದ. ಆಗ ಅವನ ಎದೆ ಧಸಕ್ ಅನ್ನುವಂತಹ ಒಂದು ದೃಶ್ಯ ಕಣ್ಣಿಗೆ ಬಿತ್ತು. ಮನೆಯ ಹಿಂದಿನ ಬಾಗಿಲಿನಿಂದ ಒಂದು ಆಕೃತಿ ಒಳಗೆ ನಡೆದು ಬರುತ್ತಿತ್ತು. ಕತ್ತಲಿತ್ತು. ಹಾಗಾಗಿ ಆ ಆಕೃತಿಗೆ ಕೋಮಲ್ ಕಾಣಲಿಲ್ಲ. ಅದರ ಕೈಯಲ್ಲಿ ಒಂದು ಚಿಕ್ಕ ಬ್ಯಾಟರಿ ಇತ್ತು. ಕೇವಲ ಹೆಜ್ಜೆ ಮುಂದಿನ ಹಾದಿ ಕಾಣುವಷ್ಟು ಮಾತ್ರ ಬೆಳಕು ಬೀರುತ್ತ ಬಂದ ಆ ಆಕೃತಿ ಹಿಂದಿನ ಬಾಗಿಲು ಮುಚ್ಚಿತು. ಉದ್ದನೆಯ ನಿಲುವಂಗಿ ತರಹದ್ದು ಹಾಕಿತ್ತು. ಕೋಮಲ್ ಗಡಗಡ ನಡುಗುತ್ತ ಬಾಗಿಲ ಪಕ್ಕದಲ್ಲಿದ್ದ ಒಂದು ದೊಡ್ಡ ಬುಕ್ ಶೆಲ್ಫ್ ಸಂದಿಯಲ್ಲಿ ನಿಂತಿದ್ದ. ಮುಂದಿನ ಬಾಗಿಲು ಒಂಚೂರೇ ಚೂರು ತೆಗೆದಿದ್ದು ಆ ಆಕೃತಿಯ ಗಮನಕ್ಕೆ ಬರಲಿಲ್ಲ. ಕೋಮಲ್ ಅಂತೂ ಕಾಣಲೇ ಇಲ್ಲ. ಸೈಲೆಂಟ್ ಆಗಿ ನಿಂತಿದ್ದ ಕೋಮಲ್ ಅ ಆಕೃತಿಯ ಮುಂದಿನ ಹೆಜ್ಜೆಗಳನ್ನು ಗಮನಿಸುತ್ತಿದ್ದ.

ಹಾಲಿನ ಮಧ್ಯ ಬಂದ ಆಕೃತಿ ಕೋಮಲ್ ನಿಂತಿದ್ದ ಜಾಗದಿಂದ ಸುಮಾರು ಇಪ್ಪತ್ತು ಅಡಿ ದೂರದಲ್ಲಿ ನಿಂತಿತು. ಡಾರ್ಕ್ ಬಣ್ಣದ ನಿಲುವಂಗಿ ಧರಿಸಿತ್ತು. ತಲೆ ಮುಚ್ಚುವ ಹಾಗೆ ಹೂಡಿ (hoodie) ಹಾಕಿಕೊಂಡಿತ್ತು. ಹೆಚ್ಚಿನದು ಕಾಣಲಿಲ್ಲ. ಆಕೃತಿ ಮಹಡಿಗೆ ಹತ್ತುವ ಸ್ಟೇರ್ ಕೇಸ್ (staircase) ಬುಡದಲ್ಲಿ ನಿಂತಿತು. 'ಹತ್ತಿ ಮೇಲೆ ಹೋಗಬೇಕೋ? ಅಥವಾ ಬೇರೇನೋ ಮಾಡಬೇಕೋ?' ಅಂತ ವಿಚಾರ ಮಾಡುವವರ ಹಾಗೆ ನಿಂತಿತು. 'ದೇವರೇ, ಆ ಆಕೃತಿ ಲೈಟ್ ಮಾತ್ರ ಹಾಕದೇ ಇರಲಿ. ಲೈಟ್ ಹಾಕಿದರೆ ನನ್ನ ಕಥೆ ಮುಗಿಯಿತು,' ಅಂತ ಮನಸ್ಸಿನಲ್ಲೇ ದೇವರ ಸ್ಮರಿಸಿದ ಕೋಮಲ್. 'ಆ ಆಕೃತಿ ಒಂದು ವೇಳೆ ಮೇಲೆ ಹೋದರೆ? ಅಲ್ಲಿ ಅಕಸ್ಮಾತ ಮಾನಸಿ ಇದ್ದರೆ ಏನು ಗತಿ? ಅಥವಾ ಮಾನಸಿಗೆ ಆಗಲೇ ಏನಾದರೂ ಮಾಡಿಯೇ ಬಿಟ್ಟಿದೆಯೋ ಏನೋ ಆ ಆಕೃತಿ? ಈಗ ಮಾತ್ರ ಹಿತ್ತಿಲ ಕಡೆಯಿಂದ ಬಂತು. ಎಲ್ಲಿ ಹೆಣ ಒಗೆದು ಬಂತೋ ಏನೋ? ಯಾರಿಗೆ ಗೊತ್ತು?' ಅಂತ ಯೋಚಿಸುತ್ತ, ಥರಥರ ನಡುಗುತ್ತ ನಿಂತಿದ್ದ ಕೋಮಲ್. ಮಹಡಿಗೇ ಹೋಗುವ ವಿಚಾರ ಮಾಡಿತು ಆಕೃತಿ. ಈಗ ಇನ್ನೂ ಆಶ್ಚರ್ಯವೆನ್ನಿಸುವಂತಹ ಒಂದು ಘಟನೆ ನಡೆಯಿತು. ಆ ಆಕೃತಿ ವಿಚಿತ್ರ ಕೀರಲು ದನಿಯಲ್ಲಿ ಸಣ್ಣಗೆ ಏನೋ ಗುಣುಗತೊಡಗಿತು. ಯಾವದೋ ಹಿಂದಿ ಹಾಡು. ಯಾವದು ಅಂತ ಕೋಮಲಗೆ ನೆನಪಾಗಲಿಲ್ಲ. ಎರಡೂ ಕೈಗಳನ್ನೂ ಉದ್ದಕ್ಕೆ ಚಾಚಿದ ಆ ಆಕೃತಿ, ಹಾಡು ಗುಣುಗುತ್ತ, ಒಂದೆರೆಡು ಸಾರಿ ರೌಂಡ್ ರೌಂಡ್ ಹೊಡೆಯಿತು. ಅದರ ಕೈಯಲ್ಲಿದ್ದ ಚಿಕ್ಕ ಬ್ಯಾಟರಿಯ ಬೆಳಕು ಎಲ್ಲೆಲ್ಲೋ ಬಿದ್ದು, ಚಿತ್ರ ವಿಚಿತ್ರ ನೆರಳುಗಳು ಮೂಡಿದವು. ಪುಣ್ಯಕ್ಕೆ ಕೋಮಲ್ ಮೇಲೆ ಬೆಳಕು ಬೀಳಲಿಲ್ಲ. ರೌಂಡ್ ರೌಂಡ್ ಹೊಡೆಯುವದನ್ನು ನಿಲ್ಲಿಸಿದ ಆ ಆಕೃತಿ, ಕೈಚಾಚಿಕೊಂಡೇ, ಹಾಡು ಗುಣುಗುತ್ತಲೇ, ಒಂದೊಂದೇ ಮೆಟ್ಟಿಲು ಹತ್ತತೊಡಗಿತು. bookshelf  ಹಿಂದೆ ಅವಿತಿದ್ದ ಕೋಮಲ್ ನೋಡುತ್ತಲೇ ಇದ್ದ. ಮಹಡಿ ಹತ್ತಿದ ಆ ಆಕೃತಿ ಮಾಯವಾಯಿತು. ಅದು ಮಾನಸಿಯ ರೂಂ ಹೊಕ್ಕಿತೋ? ಅಥವಾ ಮಹಡಿ ಮೇಲಿದ್ದ ಇನ್ನೂ ಆರು ರೂಮುಗಳ ಪೈಕಿ ಯಾವದನ್ನಾದರೂ ಹೊಕ್ಕಿತೋ? ಅಂತ ಕೋಮಲ್ ಜಾಸ್ತಿ ವಿಚಾರ ಮಾಡಲಿಲ್ಲ. ಆ ಆಕೃತಿಯ ಕಡೆಗಿಂದ ಫುಲ್ ಸೈಲೆನ್ಸ್. ಏನೂ ಶಬ್ದ ಬರಲಿಲ್ಲ. ಚಿಕ್ಕ ಬ್ಯಾಟರಿ ಟಾರ್ಚಿನ ಬೆಳಕು ಏನೂ ಕಾಣಲಿಲ್ಲ. ಅಷ್ಟರಲ್ಲಿ ಕೋಮಲನ ಫೋನ್ ರಿಂಗಾಯಿತು. ಜೀವವೇ ಹೋದ ಅನುಭವ ಕೋಮಲನಿಗೆ. ಪುಣ್ಯಕ್ಕೆ ಫೋನ್ ಸೈಲೆಂಟ್ ವೈಬ್ರೇಶನ್ ಮೋಡಿನಲ್ಲಿತ್ತು. ಕಿಸೆಯಲ್ಲಿ ಗಡಗಡ ಅಂತ ಅಲುಗಾಡಿತು. ಚಿಕ್ಕ ಬೆಳಕು ಮೂಡಿಸಿತು. ಏನೂ ಅನಾಹುತವಾಗಲಿಲ್ಲ. ಕೋಮಲ್ ಮತ್ತೂ ಕೆಲ ಕ್ಷಣ ಸುಮ್ಮನೇ ಕಾದ. ಎಲ್ಲ ಸೈಲೆಂಟ್ ಆಗಿದೆ ಅಂತ ಖಾತ್ರಿಯಾದ ಮೇಲೆ ಬುಕ್ ಶೆಲ್ಫ್ ಹಿಂದಿನಿಂದ ಈಚೆ ಬಂದ. ಎರಡು ಹೆಜ್ಜೆ ಹಾಕಿ ಬಾಗಿಲ ಹತ್ತಿರ ಸರಿದ. ಮೆಲ್ಲಗೆ ಬಾಗಿಲು ಸರಿಸಿದ. ಮನೆ ಹೊರಗೆ ಬಂದ. ಮೆತ್ತಗೆ ಬಾಗಿಲು ಹಾಕಿದ. 'ಕ್ಲಿಕ್' ಅಂತ ಲಾಕ್ ಬಿತ್ತು. ಆಗಿದ್ದು ಚಿಕ್ಕ ಶಬ್ದ. ಆದರೂ ಆ ಭೂತ ಬಂಗಲೆಯ ನಿಶ್ಶಬ್ದ ವಾತಾವರಣದಲ್ಲಿ ಸಾಕಷ್ಟು ಜೋರಾಗಿಯೇ ಶಬ್ದವಾಯಿತು ಅಂತ ಕೋಮಲನ ನಂಬಿಕೆ. ಹಾಳಾಗಿ ಹೋಗಲಿ ಅಂತ ಹೊರಗೆ ಬಂದ. ಕಾರ್ ರಸ್ತೆಯಲ್ಲಿಯೇ ನಿಲ್ಲಿಸಿ ಬಂದಿದ್ದ. ಒಂದು ರೀತಿ ಒಳ್ಳೆಯದೇ ಆಯಿತು. ಇಲ್ಲವಾದರೆ ಮನೆ ಮುಂದಿನ ಪೊರ್ಟಿಕೋದಲ್ಲಿ ಕಾರ್ ಸ್ಟಾರ್ಟ್ ಮಾಡಿದ ಶಬ್ದ ಮೇಲೆ ಹೋಗಿದ್ದ ಆಕೃತಿಗೆ ಕೇಳೇ ಕೇಳುತ್ತಿತ್ತು. ಕೇಳಿದ್ದರೆ ಏನಾಗುತ್ತಿತ್ತೋ ಏನೋ? ಮೇಲೆ ಹೋಗಿದ್ದ ಆ ಆಕೃತಿ ಕೆಳಗೆ ಬಂದು ಕೋಮಲನನ್ನು ಆಟಕಾಯಿಸಿಕೊಳ್ಳುತ್ತಿತ್ತೇ? ಅದನ್ನು ನೆನೆಸಿಕೊಂಡೇ ಕೋಮಲನ ಬೆನ್ನ ಮೇಲೆ ಮಂಜುಗಡ್ಡೆ ಹರಿದಾಡಿದಂತಾಯಿತು. ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ರಸ್ತೆ ಕಡೆ ಹೊರಟ. ರಸ್ತೆ ತಲುಪಲು ಕಮ್ಮಿ ಕಮ್ಮಿ ಅಂದರೂ ನೂರಿನ್ನೂರು ಹೆಜ್ಜೆ ಹಾಕಬೇಕು. ಕತ್ತಲಿದೆ. ಒಳ್ಳೆಯದೇ. ಮಾವಿನ ಗಿಡಗಳ ಸಂದಿಯಲ್ಲಿ ಏನೂ ಕಾಣುವದೂ ಇಲ್ಲ. 'ದೇವರೇ, ಹೇಗಾದರೂ ಮಾಡಿ ರಸ್ತೆ ತಲುಪಿಸಿ, ಕಾರಿನಲ್ಲಿ ಕೂಡಿಸಿ, ಮನೆ ತಲುಪಿಸಿಬಿಡು ತಂದೇ!' ಅಂತ ಅವರ ಕುಲದೇವರಾದ ನರಸಿಂಹನನ್ನು ಬೇಡಿಕೊಂಡ ಕೋಮಲ್ ನಿಧಾನಕ್ಕೆ ರಸ್ತೆ ಕಡೆ ಹೊರಟ. ಇನ್ನೇನು ಕಾಂಪೌಂಡ್ ದಾಟಿ, ರಸ್ತೆ ತಲುಪಿಯೇ ಬಿಟ್ಟ ಅನ್ನುವಷ್ಟರಲ್ಲಿ ಮಾವಿನ ಗಿಡದ ಮೇಲಿನಿಂದ ಏನೋ ಸದ್ದಾಯಿತು. ಕೋಮಲ್ ಘಾಬರಿಯಾದ. ಮರದಿಂದ ಯಾವ ಭೂತ, ಪ್ರೇತ ಇಳಿದು ಬರಲಿದೆಯೋ ಅಂತ ಹೆದರಿ ನಿಂತ. ಏನೋ ಅಳಿಲೋ ಪಳಿಲೋ ಇರಬೇಕು. ಅಲ್ಲೇ ಮರೆಯಾಯಿತು. ನಾಲ್ಕು ದೊಡ್ಡ ದೊಡ್ಡ ಹೆಜ್ಜೆ ಹಾಕಿದವನೇ ಕೋಮಲ್ ಕಾರ್ ಸೇರಿಕೊಂಡ. ಚಾವಿ ಚುಚ್ಚಿ ಸ್ಟಾರ್ಟ್ ಮಾಡಿದ. ಯಾವಾಗಲೂ ಒಂದೇ ಹೊಡೆತಕ್ಕೆ ಸ್ಟಾರ್ಟ್ ಆಗುವ ಕಾರ್ ಆವತ್ತು ಯಾಕೋ ಕರ್ರ್!ಕರ್ರ್! ಅಂತು. 'ಶಿವನೇ, ಎಲ್ಲಿ ದೆವ್ವ ಬ್ಯಾಟರಿ ಅಷ್ಟೂ discharge ಮಾಡಿಹಾಕಿಬಿಟ್ಟಿತೋ ಏನೋ? ಮುಂದೆ ಗತಿ?' ಅಂತ ಸಿಕ್ಕಾಪಟ್ಟೆ tension ಮಾಡಿಕೊಂಡ. ಹಕ್ಕಿಯೊಂದು ವಿಕಾರವಾಗಿ ಕೂಗಿತು. ದೇವರನ್ನು ನೆನೆಯುತ್ತ ಕೋಮಲ್ ಮತ್ತೊಮ್ಮೆ ಕೀಲಿ ತಿರುವಿದ. ಕಾರ್ ಚಂಗನೆ ಸ್ಟಾರ್ಟ್ ಆಯಿತು. ಸಿಕ್ಕಾಪಟ್ಟೆ ಹೆದರಿದ್ದ ಕೋಮಲ್ ಯಾವ ವೇಗದಲ್ಲಿ ಕಾರು ಓಡಿಸಿದ ಅಂದರೆ ತನ್ನ ಮನೆಯ ಕಾಂಪೌಂಡ್ ಒಳಗೆ ಬರುತ್ತಿದ್ದಾಗಲೇ ಕಾರನ್ನು ಪೋರ್ಟಿಕೋದ ಗೋಡೆಗೆ ಟಚ್ ಮಾಡಿಕೊಂಡುಬಿಟ್ಟ. ದೊಡ್ಡ ಶಬ್ದವಾಯಿತು. ಹೆಂಡತಿ, ಮಕ್ಕಳು, ತಮ್ಮ ಸುಂದರೇಶ್ ಎಲ್ಲ ಓಡಿ ಬಂದು ನೋಡಿದರು. ಮುಖದ ಮೇಲೆ ಪ್ರೇತ ಕಳೆ ಹೊತ್ತ ಕೋಮಲ್ ಗಾಡಿಯಿಂದ ಇಳಿದು ಬಂದ. 'ಏನಾಯಿತು? ಯಾಕೆ ಹೀಗಿದ್ದೀರಿ? ಎಲ್ಲ ಆರೋಗ್ಯ ತಾನೇ?' ಅಂತ ಕೇಳಿದ ಹೆಂಡತಿಯ ಮೇಲೆ ಸಿಡುಕಿದ. ಸೀದಾ ತನ್ನ ಕೋಣೆಯತ್ತ ನಡೆದ. ಅಲ್ಲೇ ಕೂತಿದ್ದ ಮನೆಯ ಹಿರಿಯ ದಿನಕರ್ ಜಾತ್ರಾವಳಿ, 'ಏನಾಯಿತು ಅವನಿಗೆ?' ಅನ್ನುವ ರೀತಿಯಲ್ಲಿ ಸೊಸೆಯತ್ತ ನೋಡಿದರು. 'ಏನೂ ಗೊತ್ತಿಲ್ಲ,' ಅನ್ನುವಂತೆ ಆಕೆ ತಲೆಯಾಡಿಸಿದಳು. 'ಹೂಂ! ಹೂಂ!' ಅಂತ ಹೂಂಕರಿಸಿದ ಮನೆ ಹಿರಿಯ ತಮ್ಮ ಪತ್ರಿಕೆಯಲ್ಲಿ ಮಗ್ನರಾದರು.

ಮಾನಸಿಯ ಮನೆಗೆ ಹೋಗಿ, ಆ ವಿಚಿತ್ರ ಆಕೃತಿ, ಅದರ ವಿಚಿತ್ರ ವರ್ತನೆ ಇತ್ಯಾದಿಗಳನ್ನು ಹತ್ತಿರದಿಂದ ನೋಡಿ ಬಂದಿದ್ದ ಕೋಮಲ್ ಯಾವ ಪರಿ ಹೆದರಿದ್ದ ಅಂದರೆ ಸೀದಾ ಕೋಣೆ ಸೇರಿ, ಮುಸುಕು ಹಾಕಿ ಮಲಗಿಬಿಟ್ಟ. ಮಾತ್ರ ಮಲಗಿದ್ದನೋ ಇಲ್ಲವೋ ಮಾನಸಿ ಫೋನ್ ಮಾಡಿದ್ದಳು. ಫೋನ್ ಸೈಲೆಂಟ್ ಮೋಡಿನಲ್ಲಿತ್ತು. ಮುಸುಕು ಹಾಕಿ ಮಲಗಿಬಿಟ್ಟಿದ್ದ ಕೋಮಲಗೆ ಅದು ಗೊತ್ತಾಗಲೂ ಇಲ್ಲ. ಮಾನಸಿ ಮತ್ತೆರೆಡು ಬಾರಿ ಫೋನ್ ಮಾಡಿದಳು. ಏನೂ ಉತ್ತರ ಬರಲಿಲ್ಲ. 'ಅರೇ ಇಸ್ಕಿ! ಯಾವಾಗ ಬಂದು, ಊಟ ಇಟ್ಟು, ಓಡಿ ಹೋದ ಇವನು? ನಾನು ಮನೆಯಲ್ಲೇ ಇದ್ದೆ. ಸಂಜೆ ಬಂದಾಗಿನಿಂದ ಮನೆಯಲ್ಲೇ ಇದ್ದೆ. ಈ ಪುಣ್ಯಾತ್ಮ ಯಾವ ಮಾಯೆಯಲ್ಲಿ ಬಂದು ಊಟವಿಟ್ಟು ಹೋಗಿಬಿಟ್ಟ? ಹಾಂ? ಈಗ ನೋಡಿದರೆ ಫೋನಿಗೆ ಸಿಗುತ್ತಿಲ್ಲ!' ಅಂದುಕೊಂಡಳು ಮಾನಸಿ. ಕೋಮಲ್ ಫೋನ್ ಎತ್ತದೇ ಇದ್ದಿದ್ದು ಒಳ್ಳೆಯದೇ ಆಯಿತು. ಇಲ್ಲವಾದರೆ ವಿಷಯ ತಿಳಿದಿದ್ದರೆ ಅವನಿಗೆ ಹುಚ್ಚೇ ಹಿಡಿಯುತ್ತಿತ್ತು. 'ತಾನು ಊಟ ಕೊಡಲು ಹೋದಾಗ ಆ ವಿಚಿತ್ರ ಆಕೃತಿಯೊಂದೇ ಅಲ್ಲ ಮಾನಸಿ ಸಹ ಮನೆಯಲ್ಲಿದ್ದಳು,' ಅಂತ ಅವನಿಗೆ ಆ ರಾತ್ರಿ ತಿಳಿದಿದ್ದರೆ ತಲೆ ಕೆಟ್ಟು ನಿಜವಾಗಿ ಹುಚ್ಚು ಹಿಡಿದು ಡಾ. ಮಾನಸಿಯ ಪೇಷಂಟ್ ಆಗೇಬಿಡುತ್ತಿದ್ದ.

ಮಾನಸಿ ಊಟ ಮುಗಿಸಿದಳು. ಪಾತ್ರೆ ಸಿಂಕಿಗೆ ತುಂಬಿ, ಕೆಳಗೆ ಎಲ್ಲ ಬಾಗಿಲು ಬಂದಾಗಿವೆ ಅಂತ ಖಾತ್ರಿ ಮಾಡಿಕೊಂಡು, ಎಲ್ಲ ದೀಪ ಆರಿಸಿ, ಮಹಡಿ ಹತ್ತಿ ತನ್ನ ಕೋಣೆ ಸೇರಿದಳು. ಎಂದಿನಂತೆ ಯಾವದೋ ಪುಸ್ತಕ ಓದುತ್ತ ಮಲಗಿದಳು. ಬೆಕ್ಕು ಟಣ್ಣ ಅಂತ ಹಾರಿಬಂದು ಆಕೆಯ ಮಗ್ಗುಲಲ್ಲಿ ಸೇರಿಕೊಂಡಿತು. ಮಾನಸಿ ನಿದ್ರೆಗೆ ಜಾರಿದಳು. ಆಕೆ ಒಂದು ವಿಷಯ ಆ ರಾತ್ರಿ ಗಮನಿಸಿರಲಿಲ್ಲ. ಯಾವಾಗಲೂ ಅದೇ ರೂಮಿನಲ್ಲಿ ಕಾರ್ಪೆಟ್ ಮೇಲೆ ಮಲಗಿರುತ್ತಿದ್ದ ನಾಯಿ ಅಂದು ಅಲ್ಲಿ ಇರಲಿಲ್ಲ!

ಮಾನಸಿ ಬೆಳಿಗ್ಗೆ ಎದ್ದು ಯಥಾಪ್ರಕಾರ ಕಿಡಕಿ ಬಳಿ ಬಂದು ನಿಂತಳು. ಪರದೆ ಸರಿಸಿದಳು. ಜಾಗಿಂಗ್ ಮಾಡುತ್ತಿದ್ದ ಕೋಮಲ್ ಕಾಣಲಿಲ್ಲ. ಪ್ರತಿ ದಿವಸ ಕಾಣುತ್ತಾನೆ ಅಂತಲ್ಲ. ಆದರೂ ಏನೋ ಆಸೆ. ಕಾರ್ಪೆಟ್ ಕಡೆ ಗಮನ ಹೋಯಿತು. ನಾಯಿ ಜೋರೋ ಕಾಣಲಿಲ್ಲ. 'ಅರೇ ಇಸ್ಕಿ! ಎಲ್ಲಿ ಹೋದ ನನ್ನ ಮುದ್ದು ಜೋರೋ? ಎಂದೂ ಹಾಗೆ ಬೇಗ ಎದ್ದು ಅಲ್ಲಿಲ್ಲಿ ಹೋಗಿದ್ದೇ ಇಲ್ಲ,' ಅಂದುಕೊಳ್ಳುತ್ತ, 'ಜೋರೋ! ಜೋರೋ! where are you? are you hungry my baby?' ಅಂತ ಕರೆಯುತ್ತ ಮಹಡಿ ಇಳಿದು ಕೆಳಗೆ ಬಂದಳು. ನಾಯಿ ಜೋರೋನ ಸುಳಿವೇ ಇಲ್ಲ. 'ದೊಡ್ಡ ಕಂಪೌಂಡ್. ಎಲ್ಲೋ ಸುತ್ತಲು ಹೋಗಿರಬೇಕು. ಬರುತ್ತಾನೆ. ಅಷ್ಟರಲ್ಲಿ ಚಹಾ ಮಾಡಿಕೊಂಡು ಬರೋಣ,' ಅಂದುಕೊಂಡು, ಅಡಿಗೆ ಮನೆ ಹೊಕ್ಕು, ಚಹಾಕ್ಕೆ ನೀರಿಟ್ಟಳು. ಜೋರೋ ಮಾತ್ರ ಬರಲಿಲ್ಲ.

ಚಹಾ ಮಾಡಿಕೊಂಡು ಬಂದಳು. ಬೆಕ್ಕಿಗೆ ಊಟ ಹಾಕಿದಳು. ಪತ್ರಿಕೆ ಓದುತ್ತ ಕುಳಿತಳು. ಕೋಮಲ್ ನೆನಪಾದ. 'ಇಷ್ಟೊತ್ತಿಗೆ ಜಾಗಿಂಗ್ ಮುಗಿಸಿ ಬಂದಿರಬೇಕು ಸಾಹೇಬರು,' ಅಂದುಕೊಂಡು ಅವನಿಗೆ ಫೋನ್ ಮಾಡಿದಳು. ನಿನ್ನೆ ರಾತ್ರಿ ಫೋನ್ ರಿಂಗಾದರೂ ಆಗುತ್ತಿತ್ತು. ಈಗ switched off! 'ರಾತ್ರಿ ಎಲ್ಲೋ ಜೋರ್ ಪಾರ್ಟಿ ಮಾಡಿ ಬಂದಿರಬೇಕು ಸಾಹೇಬರು. ಮಲಗಲಿ ಬಿಡು,' ಅಂತ ಬಿಟ್ಟಳು. ಆಕೆಗೇನು ಗೊತ್ತು? ನಿನ್ನೆ ರಾತ್ರಿ ಆಕೆಯ ಭೂತ ಬಂಗಲೆಯಲ್ಲಿ ಭೂತದಂತಹ ವಿಚಿತ್ರ ಆಕೃತಿಯ ದರ್ಶನ ಮಾಡಿ, ಸ್ವಲ್ಪದರಲ್ಲೇ ತಪ್ಪಿಸಿಕೊಂಡುಹೋಗಿದ್ದ ಕೋಮಲನಿಗೆ ಜೋರ್ ಜ್ವರ ಅಂತ. ನೂರಾ ಎರಡರ ಮೇಲೆ ಜ್ವರ. ಮತ್ತೆ ಏನೇನೋ ಬಡಬಡಿಸುತ್ತಿದ್ದ. ಮನೆ ಮಂದಿ ಚಿಂತಾಕ್ರಾಂತರಾಗಿ, ಆಸ್ಪತ್ರೆಗೆ ಸೇರಿಸಿದರೇ ಒಳ್ಳೆಯದೋ ಏನೋ ಅಂತ ವಿಚಾರ ಮಾಡುತ್ತಿದ್ದರು. ಹೆಂಡತಿ ಫೋನ್ ಆಫ್ ಮಾಡಿಟ್ಟಿದ್ದಳು.

ಸ್ನಾನ, ನಾಷ್ಟಾ ಮುಗಿಸಿದ ಮಾನಸಿ ಆಫೀಸಿಗೆ ಹೊರಡೋಣ ಅಂತ ರೆಡಿ ಆದಳು. ಮುಂದೆ ಸ್ವಲ್ಪ ಹೊತ್ತಿಗೆ ಕೆಲಸದ ಗಂಗವ್ವ, ದ್ಯಾಮಪ್ಪ ಬರುತ್ತಾರೆ. ಗಂಗವ್ವ ಪಾತ್ರೆ, ಬಟ್ಟೆ, ಅದು ಇದು ಮಾಡಿದರೆ, ದ್ಯಾಮಪ್ಪ ಹೊರಗಿನ ಸಫಾಯಿ, ಕಳೆ ಕೀಳುವದು, ಮಾವಿನ ಮರಗಳ ವಾಗೈತಿ ಮಾಡುತ್ತಾನೆ. ಕೀಲಿ ಅವರ ಬಳಿಯೂ ಇದೆ. ಆದರೆ ಮತ್ತೆ ನಾಯಿ ಜೋರೋ ನೆನಪಾದ. 'ಎಲ್ಲಿ ಹೋದ ಇವನು? ಇಷ್ಟೊತ್ತು ಮನೆ ಬಿಟ್ಟು, ನನ್ನ ಬಿಟ್ಟು ಹೋಗಿದ್ದು ಇಲ್ಲವೇ ಇಲ್ಲ. ಸದಾ ಬೆಡ್ ರೂಮಿನ ಕಾರ್ಪೆಟ್ ಮೇಲೆ ಧ್ಯಾನ ಮಾಡುತ್ತ ಮಲಗಿರುತ್ತಿದ್ದ ಜೋರೋ ಎಲ್ಲಿ ಹೋದ? ಒಂದು ಸಲ ಇಡೀ ಕಂಪೌಂಡ್ ಅಡ್ಯಾಡಿ ನೋಡಿ ಬರಲೇ?' ಅಂದುಕೊಂಡ ಮಾನಸಿ ಹಿಂದಿನ ಬಾಗಿಲಿಂದ ಹೊರಗೆ ಬಿದ್ದಳು. ಕಣ್ಣಿಗೆ ಬಿತ್ತು ಭೀಕರ ದೃಶ್ಯ.

ಜೋರೋ ಸಹಿತ ಮೊದಲಿನ ನಾಯಿ ಡೀನೋನ ರೀತಿಯಲ್ಲೇ ಅವಸಾನಕ್ಕೆ ಈಡಾಗಿದ್ದ. ಜೋರೋ ನಾಯಿಯನ್ನೂ ಸಹ ಸಿಗಿದು, ಗೂಟಗಳ ಮಧ್ಯೆ ಕಟ್ಟಿದ್ದರು. 'ಜೋರೋ! my baby!' ಅಂತ ಕೂಗಿದಳು ಮಾನಸಿ. ಯಾರೂ ಸ್ಪಂದಿಸಿ ಬರಲಿಲ್ಲ. ಹಿಂದೆ ಡೀನೋ ನಾಯಿಯನ್ನು ಇದೇ ಸ್ಥಿತಿಯಲ್ಲಿ ಕಂಡು ಕೂಗಿಕೊಂಡಾಗ ಕೋಮಲ್ ಓಡಿಬಂದಿದ್ದ. ಈಗ ಯಾರೂ ಬರಲಿಲ್ಲ. ಥರಥರ ನಡುಗುತ್ತ ಮನೆಯೊಳಕ್ಕೆ ವಾಪಸ್ ಬಂದಳು ಮಾನಸಿ.

ಮತ್ತೆ ಕಷ್ಟಕ್ಕೆ ಸಿಕ್ಕಾಕಿಕೊಂಡಿದ್ದಳು. ಮೊದಲು ನೆನಪಾದವನು ಕೋಮಲ್. ಫೋನ್ ಮಾಡಿದಳು. ಫೋನ್ switched off. ತಮ್ಮ ಸುಂದರೇಶನ ನಂಬರ್ ಇತ್ತು. ಅವನ ಪರಿಚಯವನ್ನೂ ತಕ್ಕ ಮಟ್ಟಿಗೆ ಮಾಡಿಸಿದ್ದ ಕೋಮಲ್. ಅವನ ನಂಬರಿಗೆ ಫೋನ್ ಮಾಡಿದಳು. ಎಷ್ಟೋ ರಿಂಗಾದ ಮೇಲೆ ಎತ್ತಿದ. ತನ್ನ ಪರಿಚಯ ಹೇಳಿಕೊಂಡಳು ಮಾನಸಿ. ಸ್ವಲ್ಪ ಹೊತ್ತು ಬೇಕಾಯಿತು ಸುಂದರೇಶನಿಗೆ ಆಕೆ ಯಾರು ಅಂತ ತಿಳಿಯಲು. ತಿಳಿದ ನಂತರ, 'ಹಾಂ! ಹಾಂ! ಹೇಳಿ?' ಅಂದ. ಕೋಮಲ್ ಬಗ್ಗೆ ಕೇಳಿದಳು ಮಾನಸಿ. 'ಅಣ್ಣನಿಗೆ ಆರಾಮ್ ಇಲ್ಲ. ಸಿಕ್ಕಾಪಟ್ಟೆ ಹೈ ಫೀವರ್,'  ಅಂದ ಸುಂದರೇಶ್. ಸರಿ ಅಂತ ಹೇಳಿ ಫೋನ್ ಇಟ್ಟಳು ಮಾನಸಿ.

ಮುಂದೆ ಫೋನ್ ಮಾಡಿದ್ದು ಮತ್ತೆ ಅದೇ ಪೊಲೀಸಪ್ಪನಿಗೆ. ಇನ್ಸಪೆಕ್ಟರ್ ಖಲಸ್ಕರ್. ಆಕೆಯ ಫೋನ್ ಅಂತ ಕಾಲರ್ ಐಡಿಯಲ್ಲಿ ನೋಡಿದ ಖಲಸ್ಕರ್, 'ಯಪ್ಪಾ! ಮತ್ತ ಫೋನ್ ಮಾಡಿದಳೋ ಇಕಿ. ಈಗ ಏನು ಹಾದಸಾ ಆಗೈತೋ ಏನೋ? ಹುಚ್ಚರ ಡಾಕ್ಟರ ಅಕಿ. ಆದ್ರ ಹುಚ್ಚು ಮಾತ್ರ ನಮಗ ಹಿಡಿಸಾಕ ಹತ್ಯಾಳ ನೋಡ್ರೀ!' ಅಂದುಕೊಳ್ಳುತ್ತ ಫೋನ್ ಎತ್ತಿದ. ಅಂದುಕೊಂಡಂತೇ ಆಗಿತ್ತು. ಮತ್ತೊಂದು ನಾಯಿ ಸಹ ದೇವರ ಪಾದ ಸೇರಿತ್ತು. ಈಗ ಖಲಸ್ಕರನಿಗೆ ಮಾನಸಿ ಮನೆಯಲ್ಲಿ ಆಗುತ್ತಿದ್ದ ಅವಗಢಗಳ ಬಗ್ಗೆ ಒಂದು ತರಹದ ಜಿಗುಪ್ಸೆ ಬಂದುಬಿಟ್ಟಿತ್ತು. 'ಈ ಚಿತ್ರ ವಿಚಿತ್ರ ಸಾವುಗಳ ಸರಣಿ ಯಾವಾಗ ಮುಗಿಯತ್ತದೆಯೋ ತಂದೆ?' ಅನ್ನುತ್ತ ಗೋಡೆಗೆ ಹಾಕಿದ್ದ ಸಾಯಿ ಬಾಬಾ ಫೋಟೋ ನೋಡಿದ. ಫೋಟೋದಲ್ಲಿ ನಗುತ್ತಿದ್ದ ಬಾಬಾ ಎಂದಿನಂತೆ ಆಶೀರ್ವಾದ ಮಾಡಿದ.

ಮುಂದೆ ಸ್ವಲ್ಪ ಹೊತ್ತಿನಲ್ಲಿ ಮಾನಸಿಯ ಖೂನಿ ಮಹಲ್ ಮುಂದೆ ಪೋಲೀಸರ ಜಮಾವಣೆ. ಅವರಿಗೆ ಇದು ಸೆಕೆಂಡ್ ನಾಯಿ ಮರ್ಡರ್ ಕೇಸ್. ಮೊದಲು ಮಾಡಿದಂತೆಯೇ ಎಲ್ಲ ಮಾಡಿ ಮುಗಿಸಿದರು. ಬೇಗ ಮುಗಿಯಿತು. ಹನ್ನೊಂದು ಘಂಟೆ ಹೊತ್ತಿಗೆ ಕಂಪೌಂಡ್ ಎಲ್ಲ ಖಾಲಿ. ಕೆಲಸದ ಗಂಗವ್ವ, ದ್ಯಾಮಪ್ಪ ಮಾತ್ರ ದಂಗಾಗಿ ನಿಂತಿದ್ದರು. ಮಾನಸಿ ಮತ್ತೊಂದು ರಜೆ ಒಗಾಯಿಸಿ ತನ್ನ ಕೋಣೆ ಸೇರಿಕೊಂಡಳು. ಕೋಮಲ್ ಬಹಳ ನೆನಪಾದ. ಆದ್ರೆ ಸಿಕ್ಕಾಪಟ್ಟೆ ಜ್ವರ ಬಂದು ಮಲಗಿದ್ದಾನೆ ಅಂತ ಗೊತ್ತಿತ್ತು. ಅದಕ್ಕೇ ಸುಮ್ಮನೆ ಮಲಗಿದ್ದಳು. ರಾತ್ರಿ ಊಟ ಕಳಿಸುವ ಮಂದಿಗೆ ಮಧ್ಯಾನದ ಊಟ ಸಹಿತ ಕಳಿಸುವಂತೆ ಫೋನ್ ಮಾಡಿ ಹೇಳಿದಳು. ಅವರಿಗೇನು? ಖುಷಿಯಿಂದ ಒಪ್ಪಿಕೊಂಡರು. ಮಾನಸಿ ಆಚೆ ತಿರುಗಿದಳು. ಬೆಕ್ಕು 'ಮ್ಯಾಂವ್!' ಅಂತು. 'ನಾನೇ ಲಾಸ್ಟ್ ಉಳಿದಿದ್ದು. ಒಂದು ಬೆಕ್ಕು, ಎರಡು ನಾಯಿ ಆಗಲೇ ಮಟಾಶ್! ನನ್ನ ಬಾರಿ ಎಂದೋ?' ಅನ್ನುವ ಹಾಗಿತ್ತು ಅದು ಮ್ಯಾಂವ್ ಅಂದ ಪರಿ. ಮಾನಸಿ ನಕ್ಕಳು. ನಗುವಿನ ಹಿಂದಿನ ಅರ್ಥ ಆಕೆಗೆ ಮಾತ್ರ ಗೊತ್ತು. ಬೆಕ್ಕಿಗೆ ಗೊತ್ತಾಗಲಿಲ್ಲ.

ಭಾಗ - ೯

ಸುಮಾರು ಒಂದು ವಾರ ಜ್ವರದಲ್ಲಿ ಬೆಂದ ಕೋಮಲ್ ಜಾತ್ರಾವಳಿ ಚೇತರಿಸಿಕೊಂಡ. ಮಾನಸಿ ಅವನನ್ನು ಬಹಳ ಮಿಸ್ ಮಾಡಿಕೊಂಡಳು. ಪರಸ್ಪರ ಪರಿಚಯವಾಗಿ, ಒಂದು ವಿಲಕ್ಷಣ ಸಂಬಂಧ  ಬೆಳೆಸಿಕೊಂಡ ಮೇಲೆ ಅವರಿಬ್ಬರೂ almost ಪ್ರತಿ ದಿವಸ ಭೆಟ್ಟಿಯಾಗುತ್ತಿದ್ದರು. ಈಗ ಒಂದು ವಾರ ಫುಲ್ ಮಿಸ್ಸಿಂಗ್. ಆಕಡೆ ಕೋಮಲ್ ಜ್ವರದಲ್ಲಿ ಬೆಂದರೆ ಈಕಡೆ ಮಾನಸಿ ವಿರಹದಲ್ಲಿ ಬೆಂದಳು.

ಒಂದು ವಾರದ ನಂತರ ಕೋಮಲ್ ಮೊದಲಿನ ಸ್ಥಿತಿಗೆ ಬಂದ. ಅವನೂ ಮಾನಸಿಯನ್ನು ತುಂಬ ಮಿಸ್ ಮಾಡಿಕೊಂಡಿದ್ದ. ಬೇರೆಯೆಲ್ಲ ಗೆಳತಿಯರೇ ಒಂದು ತೂಕವಾದರೆ ಮಾನಸಿಯೇ ಒಂದು ತೂಕ. ಕೋಮಲ್ ಸಹಿತ ಅವಳನ್ನು ಭಾಳ ಹಚ್ಚಿಕೊಳ್ಳತೊಡಗಿದ್ದ. ಹಾಗಾಗಿಯೇ ಆಕೆಯ ಮನೆಯಲ್ಲಿ ಚಿತ್ರ ವಿಚಿತ್ರ ಘಟನೆಗಳು ನಡೆಯುತ್ತಿದ್ದರೂ, ಆಕೆಯ ಮನೆಗೆ ಹೋದಾಗ ವಿಚಿತ್ರ ಖತರ್ನಾಕ್ ಭೂತ ಸದೃಶ ಆಕೃತಿಯೊಂದರ ಜೊತೆ ಮುಲಾಖಾತ್ ಆಗಿದ್ದರೂ ಆಕೆಯ ಸೆಳೆತ ಕಮ್ಮಿಯಾಗಲಿಲ್ಲ. ಆಕೆಯ ಜೊತೆಗೆ ಏನೋ ಒಂದು ನಿಗೂಢ ರಹಸ್ಯ ಬೆಸೆದುಕೊಂಡಿದೆ ಅಂತ ಅನ್ನಿಸತೊಡಗಿತು ಕೋಮಲ್ ಜಾತ್ರಾವಳಿಗೆ. ಆ ರಹಸ್ಯವನ್ನು ಕಂಡು ಹಿಡಿದರೆ ಈಗ ಆಗುತ್ತಿರುವ, ಮುಂದೆ ಆಗಲಿರುವ ಎಲ್ಲ ಘೋರ ಅವಗಢಗಳಿಂದ ಮುಕ್ತಿ ಸಿಗಬಹುದೋ ಏನೋ ಅಂತ ಅಂದುಕೊಂಡ ಕೋಮಲ್. ಅದಕ್ಕೆ ಒಂದು ಸ್ಕೀಮ್ ಹಾಕಿದ. ಆಗ ನೆನಪಾದರು ಪರಮ ಪೂಜ್ಯ ಪ್ರೊ. ಹೆಗಡೆ.

ಏನೋ ವಿಚಾರ ಮಾಡಿ ಮಾನಸಿಗೆ ಫೋನ್ ಮಾಡಿದ ಕೋಮಲ್. ಆಗ ಮಾನಸಿ ಆಫೀಸಿನಲ್ಲಿ ಇದ್ದಳು. ಯಾವದೋ ಹುಚ್ಚ ಪೇಷಂಟ್ ಒಬ್ಬನಿಗೆ ಶಾಕ್ ಟ್ರೀಟ್ಮೆಂಟ್ ಕೊಡುತ್ತಿದ್ದಳು. ಆಗೇ ಫೋನ್ ರಿಂಗಾಗಿ ಬಿಡಬೇಕೇ? ಸಾಮಾನ್ಯವಾಗಿ ಅಂತ ವೇಳೆ ಆಕೆ ಫೋನ್ ತೆಗೆಯುವದಿಲ್ಲ. 'ಅರ್ಜೆಂಟ್ ಕಾಲ್ ಇದೆ. ನಾನು ಮಾತಾಡಲೇ ಬೇಕು. ನೀವು ಮುಂದುವರೆಸಿ,' ಅಂತ ಜೊತೆಗಿದ್ದವರಿಗೆ ಹೇಳಿದವಳೇ, 'ಹಲೋ! ಕೋಮಲ್ ಡಾರ್ಲಿಂಗ್! ಈಗ ಹೇಗಿದೆ? ಏನು ಆಪರಿ ಜ್ವರ? ಅದೂ ಒಂದು ವಾರ?' ಅಂತ ಕೋಮಲನ ಕುಶಲ ವಿಚಾರಿಸಿಕೊಂಡಳು. ಕೋಮಲ್ ಜಾಸ್ತಿ ಏನೂ ಮಾತಾಡಲಿಲ್ಲ. 'ಸಂಜೆ ಸಿಗ್ತೀನಿ. ನಾನೇ ಊಟ ಪಿಕಪ್ ಮಾಡಿಕೊಂಡು ತರ್ತೀನಿ. ರಾತ್ರಿ ಜೊತೆಯೇ ಇರ್ತೀನಿ,' ಅಂದು ಫೋನ್ ಇಟ್ಟ. ಮಾನಸಿ ಹಕ್ಕಿಯಾದಳು. ಖುಷಿಯಿಂದ ಭಾವಾಕಾಶದಲ್ಲಿ ಹಾರಾಡಿದಳು. ಸಂಜೆ ಆಗಲು ಇನ್ನೂ ಕಮ್ಮಿ ಕಮ್ಮಿ ಅಂದರೂ ಎಂಟು ಘಂಟೆ ಇತ್ತು. ಬೇಗ ಬೇಗ ಸಮಯ ಸರಿಯಬಾರದೇ ಅನ್ನಿಸಿತು. ವೈನ್ ಇದೆಯೋ ಇಲ್ಲವೋ ಅಂತ ವಿಚಾರ ಬಂತು. ಸಂಜೆ ಹೋಗುವಾಗ ಪ್ರೊ. ಗಿರಿ ಅವರ ಮನೆಗೆ ಹೋಗಬೇಕು ಅಂತ ನೋಟ್ ಮಾಡಿಕೊಂಡಳು. ಪ್ರೊ. ಗಿರಿ ಆಕೆಯ ಸಹೋದ್ಯೋಗಿ. ಮೊನ್ನೆ ಅಮೇರಿಕಾದಿಂದ ಬಂದರು. ಅವರ ಜೊತೆ ಮಾನಸಿಯ ಗುರು ಪ್ರೊ. ಹೆಂಡರ್ಸನ್ ತಮ್ಮ ಪ್ರೀತಿಯ ಶಿಷ್ಯೆಗೆ ಅಂತ ಒಂದು ಕೇಸ್ ವೈನ್ ಕಳಿಸಿದ್ದರು. ಸಂಜೆ ಗಿರಿ ಅವರ ಮನೆಗೆ ಹೋಗಿ, ಅವರ ಇಬ್ಬರು ಅವಳಿ ಜವಳಿ ಮಕ್ಕಳ ಜೊತೆ ಸ್ವಲ್ಪ ಸಮಯ ಕಳೆದು, ವೈನ್ ಪಿಕಪ್ ಮಾಡಿ ಮನೆಗೆ ಹೋದರಾಯಿತು. ಸಂಜೆ ಕೋಮಲ್ ಡಾರ್ಲಿಂಗ್ ಬರುತ್ತಾನೆ. ನಂತರ ಎಲ್ಲವೂ 'ಈ ಸಮಯ. ಆನಂದಮಯ,' ಹೀಗೆಲ್ಲ ವಿಚಾರ ಮಾಡಿದ ಮಾನಸಿಯ ಮೈಯಲ್ಲಿ ಕಾಮಣ್ಣ ಎಂಟ್ರಿ ಕೊಟ್ಟ. ಬೆಂಕಿ ಹಚ್ಚಿಬಿಟ್ಟ. ಸೀದಾ ಬಾತ್ರೂಮಿಗೆ ಹೋದ ಮಾನಸಿ, ಮುಖಕ್ಕೆ ಒಂದಿಷ್ಟು ತಣ್ಣೀರು ಗೊಜ್ಜಿಕೊಂಡಳು. ಎಷ್ಟೋ ಹಾಯೆನಿಸಿತು.

ಸಂಜೆ ಏಳಕ್ಕೆಲ್ಲ ಮಾನಸಿ ಮನೆ ಮುಟ್ಟಿಕೊಂಡಳು. ಪ್ರೊ. ಹೆಂಡರ್ಸನ್ ಒಂದು ಡಜನ್ ವೈನ್ ಬಾಟಲಿ ಕಳಿಸಿದ್ದರು. ಅದೂ ಮಾನಸಿಯ ಪ್ರೀತಿಯ ವೈನ್ ಗಳನ್ನು ಆರಿಸಿ ಆರಿಸಿ ಕಳಿಸಿದ್ದರು. 'ಬೇಗ ವಾಪಸ್ ಬಾ. ಎಷ್ಟೊಂದು ಸಂಶೋಧನೆ ಮಾಡಬಹದು. missing you and your brains,' ಅಂತ ಬರೆದಿದ್ದ ಒಂದು ಚಿಕ್ಕ ಕಾರ್ಡ್ ಸಹಿತ ಇಟ್ಟಿದ್ದರು. ಗುರುವಿನ ಮೇಲೆ ಮಾನಸಿಗೆ ಪ್ರೀತಿ, ಗೌರವ ತುಂಬಿ ಬಂತು. ಟೈಮ್ ನೋಡಿದರೆ ಏಳೂವರೆ. ಎಂಟಕ್ಕೆ ಕೋಮಲ್ ಬಂದೇಬಿಡುತ್ತಾನೆ. ಒಂದು ವಾರದ ನಂತರ ಭೆಟ್ಟಿಯಾಗಲಿಕ್ಕಿದೆ. ಬೇಗ ಸ್ನಾನ ಮುಗಿಸಿ ಬಂದೇ ಬಿಡಬೇಕು ಅಂತ ಅಂದುಕೊಂಡ ಮಾನಸಿ ವೈನ್ ಫ್ರಿಜ್ ಒಳಗೆ ಇಟ್ಟು, ಸ್ನಾನಕ್ಕೆ ಹೋದಳು. ಸ್ನಾನ ಮುಗಿಸಿ, ತಿಳಿ ಜಾಂಬಳಿ ಬಣ್ಣದ ನೈಟಿ ಧರಿಸಿ ತಯಾರಾಗಿ ಬಂದು ಹಾಲಿನಲ್ಲಿ ಕೂತಳು. ಕರೆಗಂಟೆ ಸದ್ದಾಯಿತು. 'ಕೋಮಲ್! you are here!' ಅಂತ ಉದ್ಗರಿಸುತ್ತ ಹೋಗಿ ಬಾಗಿಲು ತೆಗೆದಳು. ಎದುರಿಗೆ ಕೋಮಲ್. ಒಂದು ವಾರದ ಜ್ವರ ಬರೋಬ್ಬರಿ ಕಾಡಿತ್ತು ಅಂತ ಕಾಣುತ್ತದೆ. ಐದಾರು ಕೇಜಿ ಕಮ್ಮಿಯಾಗಿಹೋಗಿದ್ದ ಸುರಸುಂದರಾಂಗ. ಅವನ ಕುತ್ತಿಗೆಗೆ ಜೋತು ಬಿದ್ದಳು ಮಾನಸಿ. ಜ್ವರದಿಂದ ಸುಸ್ತಾಗಿದ್ದ ಆತ ಬಳ್ಳಿಯಂತೆ ಬಾಗಿದ.

ಕೋಮಲ್ ಬಂದು ಕೂತ. ಮಾನಸಿ ವೈನ್ ತಂದಳು. ಕೋಮಲ್ ಬೇಡ ಎಂದ. ಜ್ವರದಿಂದ ಬಾಯಿ ರುಚಿ ಕೆಟ್ಟಿದೆ ಅಂದ. ಮಾನಸಿಗೆ ನೀನು ಬೇಕಾದರೆ ತೊಗೋ ಅಂದ. ಮಾನಸಿ ಒಂದು ಕ್ಷಣ ಪೆಚ್ಚಾದಳು. ಕೋಮಲ್ ಬರುತ್ತಾನೆ, ಗಿಚ್ಚಾಗಿ ಪಾರ್ಟಿ ಮಾಡಬಹದು ಅಂದುಕೊಂಡರೆ ಈ ಪುಣ್ಯಾತ್ಮನಿಗೆ ಮೂಡೇ ಇಲ್ಲ. ಇರಲಿ ಬಿಡು, ಅಂದುಕೊಂಡು ತನಗೆ ಒಂದು ಗ್ಲಾಸ್ ವೈನ್ ಬಗ್ಗಿಸಿಕೊಂಡಳು. ಕ್ಯಾಲಿಫೋರ್ನಿಯಾದ ಸುನೋಮಾ ವೈನ್. ಮಾನಸಿಯ ಫೇವರಿಟ್. ಅದನ್ನು ನೆನಪಿಟ್ಟೇ ಪ್ರೊ. ಹೆಂಡರ್ಸನ್ ಕಳಿಸಿದ್ದರು. ವೈನಿನ ವಾಸನೆ, ರುಚಿ ಎರಡನ್ನೂ ಕಣ್ಣ್ಮುಚ್ಚಿ ಆಸ್ವಾದಿಸಿದಳು ಮಾನಸಿ. ಕೋಮಲ್ ಕಂಪನಿ ಕೊಡಲೇ ಇಲ್ಲ. ಜಾಸ್ತಿ ಮಜಾ ಬರಲೇ ಇಲ್ಲ.

ಸ್ವಲ್ಪ ಹೊತ್ತಿನ ನಂತರ ಊಟಕ್ಕೆ ಎದ್ದರು. ಮಾನಸಿಯೇನೋ ಬರೋಬ್ಬರಿ ಊಟ ಕತ್ತರಿಸಿದಳು. ಮೂರು ಗ್ಲಾಸ್ ವೈನ್ ಕುಡಿದ ನಂತರ ಹಸಿವೆ ಕೆರಳಿತ್ತು. ಜ್ವರದಿಂದ ಬಾಯಿ ರುಚಿ ಕೆಟ್ಟಿದ್ದ ಕೋಮಲ್ ಕೋಳಿಯ ಹಾಗೆ ಅನ್ನ ಕೆದರಿದ. ಅವನ ಹಾಲತ್ ಅರಿತಿದ್ದ ಮಾನಸಿ ಜಾಸ್ತಿ ಒತ್ತಾಯ ಮಾಡಲಿಲ್ಲ.

ಊಟ ಮುಗಿಸಿ ಬೆಡ್ ರೂಂ ಸೇರಿಕೊಂಡರು. ಕೋಮಲನ ಅಂದಿನ ಹಾಲತ್ ನೋಡಿಯೇ ಮಾನಸಿಗೆ ಗೊತ್ತಾಗಿ ಹೋಗಿತ್ತು, ಇವತ್ತು ಏನೂ ಸಾಧ್ಯವಿಲ್ಲ ಅಂತ.  ಸುಮ್ಮನೇ ಇಬ್ಬರೂ ಮಂಚದ ಮೇಲೆ ಬಿದ್ದುಕೊಂಡರು. 'ಯಾಕೆ ಡಾರ್ಲಿಂಗ್, ಸಡನ್ನಾಗಿ ಜಡ್ಡು ಬಿದ್ದೆ? ಏನಾಯಿತು?' ಅಂತ ಕೇಳಿದಳು ಮಾನಸಿ. ಕೋಮಲ್ ಜ್ವರ ಬಂದ ಹಿಂದಿನ ದಿವಸದ ಘಟನೆ ನೆನಪಿಸಿಕೊಂಡ. ಆಕೆಯ ಮನೆಗೆ ಬಂದಿದ್ದು, ವಿಚಿತ್ರ ಆಕೃತಿಯೊಂದನ್ನು ಕಂಡಿದ್ದು, ಆ ವಿಚಿತ್ರ ಆಕೃತಿಯ ಕಣ್ಣಿಗೆ ಬೀಳುವದರಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದು ಎಲ್ಲ ನೆನಪಾಯಿತು. ಆದರೆ ಮಾನಸಿಗೆ ಹೇಳಲಿಲ್ಲ. ಏನೋ ವಿಷಯ ಬದಲಾಯಿಸಿದ. ತೀರಿ ಹೋದ ನಾಯಿ ಜೋರೋನ ಬಗ್ಗೆ ಸಂತಾಪ ವ್ಯಕ್ತಪಡಿಸಿದ. ಪ್ರೀತಿಯ ನಾಯಿ ಜೋರೋನ ನೆನಪಿಸಿಕೊಂಡ ಮಾನಸಿ ಕಣ್ಣಲ್ಲಿ ನೀರು. ಕೋಮಲ ಆಕೆಯ ಕಣ್ಣುಗಳನ್ನು ಚುಂಬಿಸಿದ. ಉಪ್ಪುಪ್ಪಾದ ಕಣ್ಣೀರು ಕುಡಿದ. ಮಾನಸಿ ಫುಲ್ ಫಿದಾ. 'ಎಷ್ಟು ಮಗುವಿನ ಮನಸ್ಸು ಈ ಕೋಮಲನದು?' ಅಂತ ಅಂದುಕೊಂಡಳು.

ಕೋಮಲ್ ಒಂದು ಸ್ಕೀಮ್ ಹಾಕಿಕೊಂಡೇ ಬಂದಿದ್ದ. 'ಡಾರ್ಲಿಂಗ್, ನಿನ್ನ ಹುಟ್ಟಿದ ದಿನಾಂಕ ಹೇಳು? ಇಸ್ವೀ ೧೯೭೨? ಹೌದು ತಾನೇ? ಮತ್ತೆ ಟೈಮ್?' ಅಂತ ಕೇಳಿದ. 'ಯಾಕೆ ಡಾರ್ಲಿಂಗ್, ನನ್ನ ಜಾತಕ ಹಾಕಿಸುತ್ತೀಯಾ? ಈ ಮಾನಸಿ ಜೀವನದಲ್ಲಿ ಇನ್ನೇನೇನು ಘನಘೋರ ಘಟನೆಗಳು ನಡೆಯಲಿವೆ ಅಂತ ಜ್ಯೋತಿಷಿಗಳ ಹತ್ತಿರ ಕೇಳುತ್ತೀಯಾ? ಹಾಂ? tell me,' ಅಂತ ಸುಮ್ಮನೆ ಸವಾಲ್ ಹೊಡೆದಳು ಮಾನಸಿ. 'ಅರೇ ಇಸ್ಕೀ! ಇದೆಂಗೆ ಇವಳಿಗೆ ಗೊತ್ತಾಯಿತು?' ಅಂತ ಅಚ್ಚರಿಪಟ್ಟ ಕೋಮಲ್. 'ಇಲ್ಲ ಡಾರ್ಲಿಂಗ್, ನಿನ್ನ birthday ಗೆ ಬರೋಬ್ಬರಿ ಟೈಮಿಗೆ ವಿಶ್ ಮಾಡೋಣ ಅಂತ. ಅಷ್ಟೇ,' ಅಂತ ಭೋಂಗು ಬಿಟ್ಟ. 'ಅಷ್ಟೇನೇ ಡಾರ್ಲಿಂಗ್? ಹಾಗಿದ್ದರೆ here you go,' ಅಂದ ಮಾನಸಿ ತನ್ನ ಜನ್ಮ ದಿನ, ಜನ್ಮ ವೇಳೆ ಬರೋಬ್ಬರಿ ಹೇಳಿದಳು.  ಎದ್ದು ಬಾತ್ರೂಮ್ ಕಡೆ ನಡೆದಳು. ಇದೇ ಅವಕಾಶ ಅಂತ ಲಗುಬಗನೆ ಕೋಮಲ್ ಆಕೆಯ ಜನ್ಮ ವಿವರಗಳನ್ನು ನೋಟ್ ಮಾಡಿಕೊಂಡ. ಜನ್ಮದ ವಿವರ ಇಲ್ಲ ಅಂದರೆ ಪ್ರೊ. ಹೆಗಡೆ ಕುಂಡಲಿ ಹಾಕುವದೇ ಇಲ್ಲ.

ಮಾನಸಿ ಬಾತ್ರೂಮಿನಿಂದ ಬರುವ ಹೊತ್ತಿಗೆ ಕೋಮಲ್ ಫುಲ್ ಫ್ಲಾಟಾಗಿ ಗೊರ ಗೊರ ಅಂತ ಗೊರಕೆ ಹೊಡೆಯುತ್ತ ನಿದ್ದೆ ಹೋಗಿದ್ದ. 'ಅಯ್ಯೋ! ಪಾಪ ನನ್ನ ಬೇಬಿ! ಒಂದು ವಾರದ ಜ್ವರದಿಂದ ಸುಸ್ತಾಗಿ ಹೋಗಿದೆ. ಓಕೆ. ಗುಡ್ ನೈಟ್. ಸ್ವೀಟ್ ಡ್ರೀಮ್ಸ್. ಮಲ್ಕೋ ರಾಜಾ,' ಅನ್ನುತ್ತ, ಕೋಮಲ್ ಹಣೆಗೆ ಒಂದು ಮುತ್ತು ಕೊಟ್ಟಳು. ಸಾಕಾಗಲಿಲ್ಲ ಅಂತ ಅನ್ನಿಸಿತು. ಕೋಮಲನ ಮುಖ ಕೈಯಲ್ಲಿ ತೆಗೆದುಕೊಂಡು ಲೊಚಲೊಚಾ ಅಂತ ಒದ್ದೆ ಒದ್ದೆಯಾಗಿ ಕಿಸ್ ಹೊಡೆದಳು. ಕೋಮಲನಿಗೆ ಖಬರೇ ಇಲ್ಲ. ವಾರ ಪೂರ್ತಿ ನೂರಾ ಎರಡು ಡಿಗ್ರಿ ಜ್ವರದಲ್ಲಿ ಬಳಲಿದ್ದ ಆತ ನಿದ್ರೆಗೆ ಶರಣಾಗಿದ್ದ. 

ಭಾಗ - ೧೦ 

ಮರುದಿನ ಮುಂಜಾನೆ ಮಾನಸಿ ಎದ್ದಾಗ ಪಕ್ಕದಲ್ಲಿ ಕೋಮಲ್ ಇರಲೇ ಇಲ್ಲ. ಕಿಡಕಿ ಸರಿಸಿ ನೋಡಿದರೆ ಜಾಗಿಂಗ್ ಮಾಡುತ್ತ ರಸ್ತೆಯಲ್ಲಿ ಹೋಗುತ್ತಿರುವ ಕೋಮಲ್ ಕಾಣಲಿಲ್ಲ. ಮೈಮುರಿದ ಮಾನಸಿಗೆ ಸಾಥ್ ಎಂಬಂತೆ ಬೆಕ್ಕು 'ಮ್ಯಾಂವ್!' ಅಂತು. 'At least ಬೆಕ್ಕಾದರೂ ಇದೆ. That's a good sign,' ಅಂದುಕೊಂಡ ಮಾನಸಿ ಚಹಾ ಮಾಡಲು ಕೆಳಗಿಳಿದು ಹೋದಳು.

ಆಕಡೆ ಆವತ್ತು ಕೋಮಲ್ ಜಾಗಿಂಗಿಗೆ ಹೋಗಲಿಲ್ಲ. ಮುಂಜಾನೆ ಏಳು ಘಂಟೆ ಆಗುವದನ್ನೇ ಕಾಯುತ್ತಿದ್ದ. ಏಳು ಘಂಟೆ ಮೊದಲು ಪ್ರೊ. ಹೆಗಡೆ ಅವರಿಗೆ ಫೋನ್ ಮಾಡಿದರೆ ಉಪಯೋಗವಿಲ್ಲ. ತಮ್ಮ ಮುಂಜಾನೆಯ ಪೂಜೆ, ಪುನಸ್ಕಾರ, ಧ್ಯಾನದಲ್ಲಿ ಮಗ್ನ ಅವರು. ಬರೋಬ್ಬರಿ ಏಳು ಘಂಟೆಗೆ ಫೋನ್ ಮಾಡಿದ. 'ಹೇಳಿ, ಕೋಮಲ್. ಹೇಗಿದ್ದೀರಿ? ನಿಮ್ಮ ತಂದೆ ದಿನಕರ್ ಸಾಹೇಬರು ಹೇಗಿದ್ದಾರೆ?' ಅಂತ ಕೇಳಿದರು ಪ್ರೊ. ಹೆಗಡೆ. 'ನಮಸ್ಕಾರ ಸರ್! ಎಲ್ಲ ಆರಾಮ್. ಅರ್ಜೆಂಟ್ ಆಗಿ ನಿಮ್ಮನ್ನು ಬಂದು ನೋಡಬೇಕಿತ್ತು,' ಅಂದ ಕೋಮಲ್. ಪ್ರೊ. ಹೆಗಡೆ ಆಕಡೆ ತಮ್ಮ ಕ್ಯಾಲೆಂಡರ್ ನೋಡಿದರು. 'ಸರಿ, ಒಂಬತ್ತು ಘಂಟೆಗೆ ಬಂದು ಬಿಡಿ ಕೋಮಲ್,' ಅಂದರು. 'ಥ್ಯಾಂಕ್ಸ್ ಸರ್!' ಅಂದ ಕೋಮಲ್ ಫೋನಿಟ್ಟ.

ಬರೋಬ್ಬರಿ ಒಂಬತ್ತು ಘಂಟೆಗೆ ಪ್ರೊ.ಹೆಗಡೆ ಅವರ ಮನೆ ಮುಂದೆ ಹಾಜರಾದ ಕೋಮಲ್. ಅದೇ ಏರಿಯಾದಲ್ಲಿ ಅವನ ಗೆಳತಿ ಒಬ್ಬಾಕೆ ಸಹಿತ ಇದ್ದಾಳೆ. ಆಕೆ ಎಲ್ಲಿಯಾದರೂ ನೋಡಿದರೆ ಕಷ್ಟ ಅಂದುಕೊಂಡು ಭರಕ್ಕನೇ ಪ್ರೊ. ಹೆಗಡೆ ಅವರ ಮನೆಯೊಳಗೆ ತೂರಿಕೊಂಡ ಕೋಮಲ್. ಪ್ರೊ. ಹೆಗಡೆಯೇ ಬಂದು ಸ್ವಾಗತಿಸಿದರು. ತಮ್ಮ ಚೇಂಬರಿಗೆ ಕರೆದೊಯ್ದರು.

'ಸರ್! ಒಂದು ಸಹಾಯ ಬೇಕಾಗಿತ್ತು. ಆದರೆ ಭಾಳ confidential ಸರ್!' ಅಂದ ಕೋಮಲ್ ಪ್ರೊ. ಹೆಗಡೆ ಅವರ ಮುಖ ನೋಡಿದ.

'ಹೇಳಿ ಕೋಮಲ್. ಏನು ಅಂತ ಹೇಳಿ?' ಅಂದರು ಪ್ರೊ. ಹೆಗಡೆ.

ಅವರ ಮುಂದೆ ಒಂದು ಜನ್ಮ ದಿನಾಂಕ ಮತ್ತು ಜನ್ಮ ವೇಳೆ ಇಟ್ಟ ಕೋಮಲ್ ಸುಮ್ಮನಾದ.

'ಯಾರದ್ದು ಇದು ಕೋಮಲ್? ಹೆಸರು ಹೇಳಿ. ಕುಲಗೋತ್ರ ಹೇಳಿ,' ಅಂದರು ಪ್ರೊ. ಹೆಗಡೆ.

'ಸರ್ ಅದೇ ಪ್ರಾಬ್ಲಮ್ ಬಂದಿರುವದು. ಹೆಸರು ಹೇಳುವ ಹಾಗಿಲ್ಲ. ಹೇಗೋ ಮಾಡಿ ಅವರ ಜನ್ಮದ ಡಾಟಾ ತಂದಿದ್ದೇನೆ. ಕುಂಡಲಿ ಹಾಕಿ, ಫಲ ಹೇಳಿ ಸರ್!' ಅಂದ ಕೋಮಲ್ ಕೈಮುಗಿದ. ಮುಖದಲ್ಲಿ ಫುಲ್ ದೈನ್ಯತೆ.

ಪ್ರೊ. ಹೆಗಡೆ ಕೋಮಲನ ಮುಖ ದಿಟ್ಟಿಸಿ ನೋಡಿದರು. ತಮ್ಮ ಆತ್ಮೀಯ ಮಿತ್ರ ದಿನಕರ್ ಜಾತ್ರಾವಳಿ ನೆನಪಾದರು. ಆತ ಮಾಡಿದ ಸಹಾಯಗಳು ನೆನಪಾದವು. ಮುಂದೆ ಕೂತಿದ್ದಾನೆ ಅಂತಹ ಮಿತ್ರನ ಮಗ. ಅದೂ ಇಂತಹ ದೈನೇಸಿ ಸ್ಥಿತಿಯಲ್ಲಿ. ಇವನಿಗೆ ಸಹಾಯ ಮಾಡಲೇಬೇಕು ಅಂತ ನಿರ್ಧರಿಸಿದರು. ಹೆಸರು, ಕುಲ, ಗೋತ್ರ ಹೇಳದೇ ಜಾತಕ ಹಾಕಿ ಅಂದವರನ್ನು, 'ನೀವು ನಾಳೆ ಸತ್ತ ಎಮ್ಮೆ ಜಾತಕ ಹಾಕಿ ಅಂತ ಸಹ ಬರ್ತೀರಿ. ಓಡಿ ಇಲ್ಲಿಂದ,' ಅಂತ ಓಡಿಸಿದ್ದು ನೆನಪಾದರೂ, ಕೋಮಲನ ಅಪ್ಪ ದಿನಕರ್ ಜಾತ್ರಾವಳಿಯನ್ನು ನೆನಪು ಮಾಡಿಕೊಂಡು ಜಾತಕ ಹಾಕತೊಡಗಿದರು. ಅವರ ಮುಂದಿದ್ದ ಲ್ಯಾಪ್ ಟಾಪ್ ಕಂಪ್ಯೂಟರ್ ಮೇಲೆ ಜಾತಕ ಮೂಡಿ ಬಂತು. ಜಾತಕ ನೋಡಿದ ಪ್ರೊ. ಹೆಗಡೆ ಒಂದು ಕ್ಷಣ ದಿಗ್ಭ್ರಾಂತರಾಗಿ, ದಂಗಾಗಿ, 'ಓಂ ನಮೋ ನಾರಾಯಣ! ಹೊಸಾಕುಳಿ ಲಕ್ಷ್ಮಿನಾರಾಯಣ! ಎಂತ ಜಾತಕ ತೋರಿಸಿಬಿಟ್ಟೇ ತಂದೇ?!' ಅಂತ ಉದ್ಗರಿಸಿದರು. ಮತ್ತೊಮ್ಮೆ ಡಾಟಾ ಫೀಡ್ ಮಾಡಿದರು. ಕಂಪ್ಯೂಟರ್ ಮತ್ತೆ ಅದೇ ಜಾತಕ ಉಗುಳಿತು. ಕೋಮಲ್ 'ಹ್ಯಾಂ???' ಅನ್ನುವಂತೆ ನೋಡಿದ. ಪ್ರೊ. ಹೆಗಡೆ ಮಾತಾಡಲಿಲ್ಲ. ತುಂಬಾ unexpected ಅನ್ನುವಂತೆ ತಮ್ಮ ಖುರ್ಚಿ ಬಿಟ್ಟು ಎದ್ದರು. 'ಒಂದು ನಿಮಿಷ ಕೋಮಲ್. ಕೂತಿರಿ. ಹೀಗೆ ಹೋಗಿ ಹಾಗೆ ಬಂದೆ. please wait,' ಅಂದವರೇ ಸೀದಾ ದೇವರ ಮನೆಗೆ ಹೋದರು. ಒಂದು ರೂಪಾಯಿಯ ಐದು ನಾಣ್ಯಗಳನ್ನು ಮುಡಿಪಿನ ರೂಪದಲ್ಲಿ ಕಟ್ಟಿದರು. ಅದನ್ನು ದೇವರ ಪೀಠದ ಮುಂದೆ ಇಟ್ಟರು. ಕೈಮುಗಿದು ನಿಂತರು. 'ದೇವರೇ, ಇದೆಂತಾ ಜಾತಕ ನನ್ನ ಮುಂದೆ ತಂದು ಇರಿಸಿದ್ದೀಯಾ? ಒಂದು ಜಾತಕದಲ್ಲಿ ಒಂದು ಆತ್ಮದ ಕರ್ಮಫಲ ಕಂಡುಬರುವದು ಸಾಮಾನ್ಯ. ಅಂತದ್ದರಲ್ಲಿ ಎರಡು ಮೂರು ಆತ್ಮಗಳ ಕರ್ಮಗಳು ಒಂದೇ ದೇಹದಲ್ಲಿ ಹೊಕ್ಕಿರುವಂತೆ ಇರುವ ವ್ಯಕ್ತಿಯ ಜಾತಕವನ್ನು ನನ್ನ ಮುಂದೆ ಬರುವಂತೆ ಮಾಡಿದೆಯಲ್ಲ ತಂದೆಯೇ! ಏನು ಮಾಡಲಿ ಈಗ? ಯಾವ ತರಹದ ಫಲ ಹೇಳಲಿ?' ಅಂತ ದೇವರನ್ನು ಪ್ರಾರ್ಥಿಸಿದರು ಪ್ರೊ. ಹೆಗಡೆ. ಪ್ರಾರ್ಥಿಸಿ ವಾಪಸ್ ಬಂದು ಕೋಮಲ್ ಮುಂದೆ ಕೂತರು.

'ಹೇಳಿ ಕೋಮಲ್! ಯಾವ ರೀತಿಯಿಂದ ವಿಚಾರ ಮಾಡಲಿ? ಏನು ತೊಂದರೆ ಇದೆ?' ಅಂತ ಕೇಳಿದರು ಪ್ರೊ. ಹೆಗಡೆ.

'ಸರ್, ಇವರ ಮನೆಯಲ್ಲಿ ಚಿತ್ರ ವಿಚಿತ್ರ ಅನ್ನಿಸುವಂತಹ ಘಟನೆಗಳು ನಡೆಯುತ್ತಿವೆ ಸರ್. ಏನೂ ಅರ್ಥವಾಗುತ್ತಿಲ್ಲ. ನಮ್ಮ ಆತ್ಮೀಯ ಸ್ನೇಹಿತರು ಅವರು. ತುಂಬಾ ಒಳ್ಳೆಯವರು. ಅವರಿಗೆ ಯಾಕೆ ಹೀಗೆ ತೊಂದರೆಗಳು ಬರುತ್ತಿವೆ? ಏನು ಪರಿಹಾರ? ಅಂತ ಹೇಳಿ ಸರ್,' ಅಂತ ಕೋಮಲ್ ವಿನಂತಿಸಿದ.

ತಮ್ಮ ಕಂಪ್ಯೂಟರ್ ಮೇಲೆ ಮೂಡಿದ್ದ ಜಾತಕ ನೋಡುತ್ತ ಪ್ರೊ. ಹೆಗಡೆ ಡೀಪ್ ಥಿಂಕಿಂಗ್ ಮೋಡಿಗೆ ಹೋದರು. ತಮ್ಮ ಎಲ್ಲಾ ಗುರುಗಳನ್ನೂ, ಆರಾಧ್ಯ ದೇವರುಗಳನ್ನೂ ಆಹ್ವಾನಿಸಿದರು. ಕೃಪೆ ಕೋರಿದರು. ಇಂತಹ ಫಲ ಹಿಂದೆಂದೂ ಹೇಳಿರಲಿಲ್ಲ.

'ನೋಡಿ ಕೋಮಲ್, ಒಂದು ವಿಷಯ. ಈ ಜಾತಕದ ವ್ಯಕ್ತಿ ಅನೇಕಾನೇಕ ತೊಂದರೆಗಳನ್ನು ಅನುಭವಿಸುತ್ತಿರುವದು ನಿಜ. ಅದು ಎದ್ದು ಕಾಣುತ್ತಿದೆ. ಆದರೆ ಒಂದು ಮಾತು ಸಹಿತ ನಿಜ. ಅವರ ತೊಂದರೆಗಳಿಗೆ ಅವರೇ ಜವಾಬ್ದಾರರು. ಇದರಕಿಂತ ಹೆಚ್ಚು ಹೇಳಲು ಸಾಧ್ಯವಿಲ್ಲ. ಶಾಸ್ತ್ರದ ಅನುಮತಿಯೂ ಇಲ್ಲ. ಇವರ ಕುಲ, ಗೋತ್ರ, ಹೆಸರು ಎಲ್ಲ ಹೇಳಿದರೆ ವಿಚಾರ ಮಾಡಬಹದು. ಏನೋ ನಮ್ಮ ದಿನಕರ್ ಜಾತ್ರಾವಳಿ ಅವರ ಮಗ ಕೋಮಲ್ ಅಂತ ಹೇಳಿ ನನ್ನ 'ಸತ್ತೆಮ್ಮೆ ಜಾತಕಕ್ಕೆ ಫಲ ಹೇಳುವದಿಲ್ಲ' ಅನ್ನುವ ನಿಯಮವನ್ನು ಮೀರಿ ಫಲ ಹೇಳಿದೆ. ಇಷ್ಟೇ ಸಾಧ್ಯ. ಕೋಮಲ್ ಆದರೆ ಒಂದು ಮಾತು,' ಅಂದ ಪ್ರೊ. ಹೆಗಡೆ ಮಾತು ನಿಲ್ಲಿಸಿದರು.

'ಏನು ಸರ್? ಹೇಳಿ?' ಅಂತ ಕಾತುರದಿಂದ ಕೇಳಿದ ಕೋಮಲ್.

'ಯಾಕೋ ಏನೋ ಗೊತ್ತಿಲ್ಲ ಕೋಮಲ್. ನಿಮ್ಮದೂ ಜಾತಕ ನೋಡಬೇಕು ಅನ್ನಿಸುತ್ತಿದೆ. ವೇಳೆ ಮಾಡಿಕೊಂಡು ಬನ್ನಿ. ನಿಮಗೆ ಈಗ ಸುಮಾರು ನಲವತ್ತರ ಸನಿಹ ವಯಸ್ಸು. ಅಲ್ಲವೇ? ನಿಮಗೆ ಈ ಸಮಯದಲ್ಲಿ ಒಂದು ಗಂಡಾಂತರ ಇದೆ ಅಂತ ನೆನಪು. ಸಮಯ ಮಾಡಿಕೊಂಡು ಬನ್ನಿ. ಎಲ್ಲ ವಿವರವಾಗಿ ನೋಡೋಣ. ಏನಾದರೂ ಶಾಂತಿ ಗೀಂತಿ ಬೇಕಾದರೆ ಮಾಡಿಸೋಣ. ಬನ್ನಿ. ಆದರೆ ಈ ಜಾತಕದವರಿಗೆ ಎಚ್ಚರಿಕೆಯಿಂದ ಇರಲು ಹೇಳಿ. ಅವರ ಎಲ್ಲ ತೊಂದರೆಗಳಿಗೆ ಕಾರಣ ಅವರೇ, ಅವರೇ!' ಅಂತ ಹೇಳಿದ ಪ್ರೊ. ಹೆಗಡೆ ತಮ್ಮ ರುದ್ರಾಕ್ಷಿ ಮಾಲೆಯನ್ನು ಒತ್ತಿಕೊಳ್ಳುತ್ತ ಎದ್ದರು. ಕೋಮಲ್ ಸಹಿತ ಎದ್ದ. ಬಗ್ಗಿ ನಮಸ್ಕಾರ ಸಹಿತ ಮಾಡಿದ. ಹೊರಟು ನಿಂತ. ಒಳ್ಳೆದಾಗಲಿ ಅಂತ ಆಶೀರ್ವಾದ ಮಾಡಿ ಕಳಿಸಿದರು ಪ್ರೊ. ಹೆಗಡೆ. ನಂತರ ಹೋಗಿ ದೀರ್ಘ ಪೂಜೆಯಲ್ಲಿ ಕುಳಿತರು. ಮಹಾ ಮೃತ್ಯುಂಜಯ ಮಂತ್ರ ಜಪಿಸಿದರು. ತಮ್ಮ ಸಲುವಾಗಿ ಅಲ್ಲ. ತಮ್ಮ ಮಿತ್ರ ದಿನಕರ್ ಜಾತ್ರಾವಳಿಯ ಮಗ ಕೋಮಲ್ ಜಾತ್ರಾವಳಿಗಾಗಿ. ಅಂತದ್ದೇನು ಕಂಡಿತ್ತು ಪ್ರೊ. ಹೆಗಡೆ ಅವರಿಗೆ??

ಭಾಗ - ೧೧

ಪ್ರೊ. ಹೆಗಡೆ ಅವರ ಮನೆಯಿಂದ ಹೊರಟ ಕೋಮಲ್. 'ನೋಡಿ ಕೋಮಲ್. ಒಂದು ವಿಷಯ. ಈ ಜಾತಕದ ವ್ಯಕ್ತಿ ಅನೇಕಾನೇಕ ತೊಂದರೆಗಳನ್ನು ಅನುಭವಿಸುತ್ತಿರುವದು ನಿಜ. ಅದು ಎದ್ದು ಕಾಣುತ್ತಿದೆ. ಆದರೆ ಒಂದು ಮಾತು ನಿಜ. ಅವರ ತೊಂದರೆಗಳಿಗೆ ಅವರೇ ಜವಾಬ್ದಾರರು,' ಅನ್ನುವ ಪ್ರೊ. ಹೆಗಡೆ ಅವರ ಮಾತುಗಳು ಮತ್ತೆ ಮತ್ತೆ ನೆನಪಿಗೆ ಬರುತ್ತಿದ್ದವು. ಪ್ರೊ. ಹೆಗಡೆ ಹೇಳಿದರು ಅಂದರೆ ಅಷ್ಟೇ ಮತ್ತೆ. ದೂಸರಾ ಮಾತೇ ಇಲ್ಲ. ಪ್ರೊ. ಹೆಗಡೆ ಹೇಳಿದ್ದರ ಮಾತಿನ ಅರ್ಥವೇನು? ಅಂತ ವಿಚಾರ ಮಾಡಿದ ಕೋಮಲ್. ಏನೋ ಒಂದು ಐಡಿಯಾ ತಲೆಯಲ್ಲಿ ಬಂತು. ಮಾನಸಿಗೆ ಫೋನ್ ಮಾಡಿದ. ಒಂದೇ ರಿಂಗಿಗೆ ಫೋನ್ ಎತ್ತಿದಳು ಮಾನಸಿ. 'ಸಂಜೆ ಫ್ರೀ ಏನು?' ಅಂತ ಕೇಳಿದ ಕೋಮಲ್. 'yes! of course! any time for you darling,' ಅಂತ ಮಾತಿನಲ್ಲೇ ಒದ್ದೆಯಾದಳು ಆಕೆ. 'ಸರಿ ಸಂಜೆ ಸಿಗೋಣ,' ಅಂತ ಹೇಳಿ ಫೋನ್ ಕಟ್ ಮಾಡಿದ ಕೋಮಲ್.

ಬರೋಬ್ಬರಿ ಎಂಟು ಘಂಟೆಗೆ ಊಟದ ಜೊತೆ ಹಾಜರಾದ ಕೋಮಲ್. ಅವನಿಗೇ ಕಾಯುತ್ತಿದ್ದಳು ಮಾನಸಿ. ಆದರೆ ರೋಮ್ಯಾಂಟಿಕ್ ಮೂಡಿರಲಿಲ್ಲ. ಆಕೆಯ ತಿಂಗಳ 'ಆ ದಿನಗಳು' ಅವು. ಬಹಳ ಮೊದಲಾಗಿದ್ದರೆ ಕಟ್ಟರ್ ಸಂಪ್ರದಾಯಸ್ಥರ ಮನೆ ಪದ್ಧತಿ ಪ್ರಕಾರ ಹೊರಗೆ ಕೂಡಬೇಕಿತ್ತು. ಈಗ ಹೊರಗೆ ಒಳಗೆ ಎಲ್ಲ ಒಂದೇ. ಆದರೆ ಕಾಮಕೇಳಿಗೆ ಮೂಡಿಲ್ಲ ಅಷ್ಟೇ. ಅದು ಕೋಮಲನಿಗೂ ಗೊತ್ತು ಬಿಡಿ.

ಇಬ್ಬರೂ ಊಟ ಮುಗಿಸಿದರು. ವೈನ್ ಇಲ್ಲ. 'ಡಾರ್ಲಿಂಗ್, ನಾನು ನಾಡಿದ್ದು ದಿಲ್ಲಿಗೆ ಹೋಗಬೇಕು. ಒಂದು conference ಇದೆ. ಇಲ್ಲಿಂದ ಬೆಳಗಾವಿಗೆ ಹೋಗಿ ಅಲ್ಲಿಂದ ವಿಮಾನದಲ್ಲಿ ಮುಂಬೈ. ಅಲ್ಲಿಂದ ದಿಲ್ಲಿ. ಒಂದು ವಾರದ conference. ಮುಂದಿನವಾರ ಇಷ್ಟೊತ್ತಿಗೆ ವಾಪಸ್,' ಅಂದಳು ಮಾನಸಿ. 'ಓಹ್! ಸೋ ನೈಸ್! ನಾನೇ ನಿನ್ನ ಡ್ರಾಪ್ ಮಾಡುತ್ತೀನಿ ಮತ್ತೆ ಪಿಕಪ್ ಸಹಿತ ಮಾಡುತ್ತೀನಿ. ಓಕೆ?' ಅಂದ ಕೋಮಲ್. 'ಥ್ಯಾಂಕ್ಸ್ ಸೋ ಮಚ್ ಡಾರ್ಲಿಂಗ್' ಅಂದ ಮಾನಸಿ ಪಚಪಚಾ ಅಂತ ಕಿಸ್ ಮಾಡಿದಳು. ಕೋಮಲನಿಗೆ ಏನೋ ಒಂದು ಐಡಿಯಾ ಹೊಳೆಯಿತು. ಅದರ ಬಗ್ಗೆ ವಿಚಾರ ಮಾಡುತ್ತ ಹೋದಂತೆ ಮೈ ಜುಮ್ ಅಂತು.

ವಾಪಸ್ ಹೊರಡಲು ಎದ್ದ ಕೋಮಲ್. ತನ್ನ ಪರಿಸ್ಥಿತಿ ಬಗ್ಗೆ ಅರಿವಿದ್ದ ಮಾನಸಿ ಅವನಿಗೆ ಹೋಗದಿರುವಂತೆ ಒತ್ತಾಯ ಮಾಡಲಿಲ್ಲ. ಬೇರೆ ದಿನಗಳಲ್ಲಿ ಆಗಿದ್ದರೆ, 'ರಾತ್ರಿ ಇಲ್ಲೇ ಇರು ಡಾರ್ಲಿಂಗ್,' ಅಂತ ಮುದ್ದಾಂ ಒತ್ತಾಯಿಸುತ್ತಿದ್ದಳು. ಮತ್ತೆ ಹೋಗಬೇಕಾಗಿರುವ conference ಗೆ ಕೆಲವು ತಯಾರಿ ಸಹ ಮಾಡಿಕೊಳ್ಳಬೇಕಾಗಿತ್ತು. ಒಂದು ಸಾರೆ ಕೋಮಲನ ಕುತ್ತಿಗೆಗೆ ಜೋತು ಬಿದ್ದು, ಮತ್ತೊಂದು ಸಲ ಪಪ್ಪಿ ಕೊಟ್ಟು, ಗುಡ್ ನೈಟ್ ಹೇಳಿದಳು. ಕೋಮಲ್ ಜಾಗ ಖಾಲಿ ಮಾಡಿದ.

ಆಕೆಯ ಮನೆಯಿಂದ ಹೊರಬಿದ್ದ ಕೋಮಲ್ ಕಾರಿನಲ್ಲಿ ಕೂತು ಒಂದು ನಿಮಿಷ ವಿಚಾರ ಮಾಡಿದ. 'ನಾನು ಮಾಡಲು ಹೊರಟಿರುವದು ಸರಿಯೇ?' ಅಂತ ಮತ್ತೆ ಮತ್ತೆ ಕೇಳಿಕೊಂಡ. ಮಾನಸಿಯ ಜೀವನದಲ್ಲಿ ಹಿಂದಿನ ಕೆಲವೇ ತಿಂಗಳಲ್ಲಿ ಆಗಿಹೋದ ಭೀಕರ, ವಿಚಿತ್ರ ಘಟನೆಗಳು ನೆನಪಾದವು. 'ಯಾವ ದುಷ್ಟರು, ಯಾಕೆ ಅವನ್ನೆಲ್ಲ ಮಾಡುತ್ತಿದ್ದಾರೋ ಏನೋ? ಅವರ ಮುಂದಿನ ಟಾರ್ಗೆಟ್ ಯಾರು? ಅಕಸ್ಮಾತ ಮುಂದಿನ ಟಾರ್ಗೆಟ್ ಮಾನಸಿಯೇ ಆದರೆ ಏನು ಗತಿ? ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಮತ್ತೆ ಪ್ರೊ. ಹೆಗಡೆ ಹೇಳಿದ ಮಾತುಗಳು ಕಿವಿಯಲ್ಲಿ ಘಂಟೆ ಬಾರಿಸಿದಂತೆ ಮೊಳಗಿದವು - 'ಅವರ ಕಷ್ಟಗಳಿಗೆ ಅವರೇ ಜವಾಬ್ದಾರರು'. ಆ ಜೋತಿಷ್ಯವಾಣಿಯ ಗೂಢಾರ್ಥ ಅರಿಯಬೇಕು ಅಂದರೆ ಈ ಕೆಲಸ ಮಾಡಲೇಬೇಕು. ಮಾನಸಿಯನ್ನು ಮುಂದಾಗುವ ತೊಂದರೆಗಳಿಂದ ಕಾಪಾಡಲು ಈ ಕೆಲಸ ಮಾಡಲೇಬೇಕು,' ಅಂತ ತನಗೆ ತಾನೇ ಹೇಳಿಕೊಂಡ ಕೋಮಲ್. ಒಂದು ಸಲ ಮಾನಸಿಯ ಬಂಗಲೆಯತ್ತ ನೋಡಿದ. ಕತ್ತಲಲ್ಲಿ ಭೂತದಂತೆ ಎದ್ದು ನಿಂತ ಬಂಗಲೆ. ಮಾನಸಿ ರೂಮಿನಲ್ಲಿ ಮಾತ್ರ ಒಂದು ಲೈಟ್ ಉರಿಯುತ್ತಿತ್ತು. ಕೋಮಲ್ ಮನೆ ಕಡೆ ಕಾರು ತಿರುಗಿಸಿದ.

ಅಲ್ಲಿಂದ ಕೋಮಲ್ ಮನೆಗೆ ಹೋಗಲಿಲ್ಲ. ಊರ ಹೊರಗಿನ ರೆಸಾರ್ಟ್ ಒಂದರ ಬಾರಿಗೆ ಹೋಗಿ ಒಂದು ಮೂಲೆಯಲ್ಲಿ ಕೂತ. ಒಂದು ಫೋನ್ ಮಾಡಿದ. ಮುಂದಿನ ಅರ್ಧ ಘಂಟೆಯಲ್ಲಿ ಒಂದು ವ್ಯಕ್ತಿ ಅವನ ಮುಂದೆ ಹಾಜರಿತ್ತು. ಆ ವ್ಯಕ್ತಿ ರಿಟೈರ್ಡ್ ಮೇಜರ್ ನಿತಿನ್ ಶಾನಬಾಗ್. ಮೊದಲು ಸೈನ್ಯದಲ್ಲಿದ್ದ. ಈಗ ಹುಬ್ಬಳ್ಳಿ - ಧಾರವಾಡ ಏರಿಯಾದಲ್ಲಿ ಖಾಸಗಿ ಪತ್ತೇದಾರ (private detective) ಅಂತ ತನ್ನದೇ ಒಂದು ಏಜನ್ಸಿ ಮಾಡಿಕೊಂಡು ಖಾಸಗಿ ತನಿಖೆ, surveillance, remote monitoring, ಇತ್ಯಾದಿ ಕೆಲಸ ಮಾಡಿಕೊಡುತ್ತಾನೆ. ಒಳ್ಳೆ ತಂಡ ಇಟ್ಟಿದ್ದಾನೆ. ಎಲ್ಲಕಿಂತ ಹೆಚ್ಚಾಗಿ ೧೦೦ % ರಹಸ್ಯ, confidentiality ಕಾಪಾಡುತ್ತಾನೆ. ತನ್ನ ವೃತ್ತಿಗೆ ಅಷ್ಟು ನಿಷ್ಠ ಅವನು.

'ಒಂದು ಕೆಲಸವಿದೆ. ಒಂದು ಮನೆಯಲ್ಲಿ ಒಂದಿಷ್ಟು ರಹಸ್ಯ hidden ಕ್ಯಾಮೆರಾ ಫಿಟ್ ಮಾಡಬೇಕು. ಅವು capture ಮಾಡುವ ವೀಡಿಯೊ ಫೀಡ್ಸ ಎಲ್ಲ ಒಂದು ಡಿಸ್ಕ್ ಮೇಲೆ ಬಂದು ಸಂಗ್ರಹವಾಗಬೇಕು. ಕ್ಯಾಮೆರಾ ಫಿಟ್ ಮಾಡಿದ್ದಾರೆ, ರೆಕಾರ್ಡ್ ಆಗುತ್ತಿದೆ ಅಂತ ಯಾರಿಗೂ ಗೊತ್ತಾಗಬಾರದು. ಡಿಸ್ಕ್ ಇರುವ ಜಾಗವಂತೂ ಗೊತ್ತೇ ಆಗಬಾರದು. ಡಿಸ್ಕ್ ಪೂರ್ತಿ encrypted ಇರಬೇಕು. password ಕೊಟ್ಟರೆ ಮಾತ್ರ ಮನೆಯಲ್ಲಿ ಆದ ಘಟನೆಗಳನ್ನು ನೋಡಲು ಸಾಧ್ಯವಾಗಬೇಕು. ಅಂತಹ ಸಿಸ್ಟಮ್ ಹಾಕಿಸಿಕೊಡಲು ಸಾಧ್ಯವೇ? ಕೆಲಸ ಭಾಳ ಅರ್ಜೆಂಟ್ ಮತ್ತು highly sensitive,' ಅಂತ ತನ್ನ ಕೋರಿಕೆ ತಿಳಿಸಿದ ಕೋಮಲ್.

'hidden ಕ್ಯಾಮೆರಾ ಹಾಕಿಸಿಕೊಡುವದು ದೊಡ್ಡ ಮಾತಲ್ಲ. ಆದರೆ ಅದಕ್ಕೆ ಬೇಕಾದ ತಂತ್ರಜ್ಞರು ಬೆಂಗಳೂರಿಂದ ಬರಬೇಕು. ಅರ್ಜೆಂಟ್ ಬೇಕು ಅಂದರೆ ರೇಟ್ ಜಾಸ್ತಿಯಾಗುತ್ತದೆ. ಬಾಕಿ ಎಲ್ಲ ಮಾಡಿಸಿಕೊಡಬಹುದು. confidentiality ಬಗ್ಗೆ ಚಿಂತೆ ಬೇಡವೇ ಬೇಡ,' ಅಂತ ಹೇಳಿದ ಖಾಸಗಿ ಪತ್ತೇದಾರ ನಿತಿನ್ ಶಾನಬಾಗ್.

'ರೊಕ್ಕದ ಬಗ್ಗೆ ವಿಚಾರ ಮಾಡುವದು ಬೇಡ. ಇವತ್ತಿಂದ ಮೂರನೇ ದಿವಸವೇ ಕೆಲಸವಾಗಬೇಕು. ಅವತ್ತೇ ಒಂದು ದಿವಸ ಆ ಮನೆಯಲ್ಲಿ ಯಾರೂ ಇರುವದಿಲ್ಲ. Get your man from Bangalore ASAP,' ಅಂತ ಹೇಳಿದ ಕೋಮಲ್.

'ಸರಿ. ನಾನು ಎಲ್ಲ ವ್ಯವಸ್ಥೆ ಮಾಡುತ್ತೇನೆ. ಎರಡು ದಿನ ಬಿಟ್ಟು ಬೆಳಗಿನ ಬೆಂಗಳೂರು - ಹುಬ್ಬಳ್ಳಿ ಫ್ಲೈಟಿಗೆ ಬರುತ್ತಾನೆ ನಮ್ಮ ಮನುಷ್ಯ. ನಾನೇ ಹೋಗಿ ಅವನನ್ನು ಕರೆದುಕೊಂಡು ಬಂದು ನಿಮಗೆ ಫೋನ್ ಮಾಡುತ್ತೇನೆ. ಮುಂದೆ ನಿಮಗೆ ಬಿಟ್ಟಿದ್ದು. ಲೆಕ್ಕ ಎಲ್ಲ ಆಮೇಲೆ ಸೆಟಲ್ ಮಾಡೋಣ. ಯಾರು? ಯಾರ ಮನೆ? ಇದೆಲ್ಲ ಯಾರಿಗೂ ಗೊತ್ತಾಗುವದಿಲ್ಲ. ಬೆಂಗಳೂರಿಂದ ಬರುವ ಮನುಷ್ಯ ಮೊದಲು ಇಂಟೆಲಿಜೆನ್ಸ್ ಬ್ಯೂರೋನಲ್ಲಿದ್ದ. ಅಪ್ಪಟ ಕಸಬುದಾರ. ಪರ್ಫೆಕ್ಟ್ ಕೆಲಸ ಮಾಡಿಕೊಟ್ಟು, ನಿಮಗೆ ಒಂದು ಬರೋಬ್ಬರಿ ಟ್ರೇನಿಂಗ ಸಹ ಕೊಟ್ಟು ಹೋಗುತ್ತಾನೆ. Don't worry, Komal sir. Everything will be taken care of,' ಅಂತ ಫುಲ್ ಆಶ್ವಾಸನೆ ಕೊಟ್ಟ ಪತ್ತೇದಾರ ಎದ್ದ. ಕೋಮಲನ ಕೈಕುಲುಕಿ ಹೊರಟ.

ರಾತ್ರಿ ಸುಮಾರು ಹನ್ನೆರೆಡು ಘಂಟೆ. ತನ್ನ ಮುಂದಿದ್ದ ಡ್ರಿಂಕ್ ಮುಗಿಸಿದ ಕೋಮಲ್ ಸಹಿತ ಎದ್ದ. ಆದರೆ ಮತ್ತೆ ಕೂತ. ಅಚಾನಕ್ ಆಗಿ ತಲೆಯಲ್ಲಿ ಒಂದು ಪ್ರಶ್ನೆ ಎದ್ದುಬಿಟ್ಟಿತು. 'ಮಾನಸಿ ದಿಲ್ಲಿಗೆ ಹೋದರೂ ಆಕೆಯ ಮನೆಯ ದೇಖರೇಖಿ ನೋಡಲು ಕೆಲಸದ ಗಂಗವ್ವ ಮತ್ತು ದ್ಯಾಮಪ್ಪ ದಿನವೂ ಬರುತ್ತಾರೆ. ಬೆಳಗಿಂದ ಸಂಜೆ ತನಕ ಅಲ್ಲೇ ಇರುತ್ತಾರೆ. ಅವರಿದ್ದಾಗ ಹೇಗೆ ಆಕೆಯ ಮನೆ ಹೊಕ್ಕು ರಹಸ್ಯ ಕೆಮೆರಾ ಹಾಕುವದು? ಅವರು ಆಕ್ಷೇಪ ಏನೂ ಮಾಡಲಿಕ್ಕಿಲ್ಲ. ಆದರೆ ಅವರಿಗೆ ತಿಳಿದರೆ ನಾಳೆ ಮಾನಸಿಗೆ ತಿಳಿಯಬಹುದು. ಮತ್ತೊಬ್ಬರಿಗೆ ತಿಳಿಯಬಹುದು. ಆಕೆಯ ಮನೆಯಲ್ಲಿ ಅಂತಹ ಖತರ್ನಾಕ್ ಕಾರ್ನಾಮೆ ಮಾಡುತ್ತಿರುವ ದುಷ್ಟ ಮಂದಿಗೂ ತಿಳಿಯಬಹುದು. ಅದು ತಿಳಿದರೆ ಅವರು ಬೇರೆ ರೀತಿಯಲ್ಲಿ ಮಾನಸಿಗೆ ತೊಂದರೆ ಕೊಡಬಹುದು. ಹಾಗಾಗಿ ಆ ಇಬ್ಬರು ಕೆಲಸದವರನ್ನು ಆ ಒಂದು ದಿನದ ಮಟ್ಟಿಗೆ ಹೇಗೆ ಮಾನಸಿಯ ಬಂಗಲೆಯಿಂದ ದೂರವಿಡುವದು?' ಅಂತ ಕೋಮಲನಿಗೆ ಭಾಳ ಚಿಂತೆಯಾಯಿತು. ಈ ಸಮಸ್ಯೆಗೆ ಉತ್ತರ ಸಿಗಲಿಲ್ಲ ಅಂದರೆ ಮತ್ತೆ ನಿತಿನ್ ಶಾನಬಾಗಗೆ ಫೋನ್ ಮಾಡಿ, ಪ್ರಾಜೆಕ್ಟ್ ಕ್ಯಾನ್ಸಲ್ ಮಾಡು ಅಂತ ಹೇಳಬೇಕಾಗುತ್ತದೆ. ಒಂದು ಪೈಸೆ ಅಡ್ವಾನ್ಸ್ ಸಹ ತೆಗೆದುಕೊಳ್ಳದೇ ಕೇವಲ ವಿಶ್ವಾಸದ ಮೇಲೆ ಅಷ್ಟು ದೊಡ್ಡ ಪ್ರಾಜೆಕ್ಟ್ ಒಪ್ಪಿಕೊಂಡು ಹೋಗಿದ್ದಾನೆ. ಅವನು ಎದುರಿಗೆ ಇದ್ದಾಗಲೇ ಈ ಪ್ರಾಬ್ಲಮ್ ತಲೆಗೆ ಹೊಳೆದಿದ್ದರೆ ಏನೋ ಮಾಡಬಹುದಿತ್ತು. ಈಗ ಹೊಳೆಯಿತು. ಏನು ಮಾಡೋಣ?' ಅಂತ ತುಂಬಾ ಆತಂಕಪಟ್ಟ ಕೋಮಲ್. ಪೇಚಾಡಿದ.

ಮನೆಗೆ ಹೊರಡಲು ಎದ್ದವ ಮತ್ತೆ ಕೂತ. ಅದನ್ನು ನೋಡಿದ ವೇಟರ್ ಬಂದು, 'ಸರ್, ಮತ್ತೇನಾದರೂ ಬೇಕೇ? ಬಾರ್ ಮುಚ್ಚಲಿದೆ. ಲಾಸ್ಟ್ ಆರ್ಡರ್ ಇದ್ದರೆ ಹೇಳಿ ಸಾರ್,' ಅಂದ. 'ಒಂದು ಡಬಲ್ ಸ್ಕಾಚ್ ಆನ್ ರಾಕ್ಸ್,' ಅಂತ ಹೇಳಿದ ಕೋಮಲ್ ಈಗ ತಾನೇ ಮನಸ್ಸಿನಲ್ಲಿ ಎದ್ದಿದ್ದ ಪ್ರಶ್ನೆ ಬಗ್ಗೆ ಯೋಚಿಸುತ್ತ ಕೂತ. ವೇಟರ್ ಅವನ ಡ್ರಿಂಕ್ ತಂದಿಟ್ಟ. ಒಂದು ಸಿಪ್ ತೆಗೆದುಕೊಂಡ ಕೋಮಲ್. ಗಂಟಲನ್ನು ಸುಡುತ್ತ ದ್ರವ ಹೊಟ್ಟೆಗೆ ಇಳಿಯಿತು. ಮೆದುಳಿನ ಯಾವದೋ ಕೀಲುಗಳು, ಚಕ್ರಗಳು ಹೇಗೇಗೋ ತಿರುಗಿರಬೇಕು. ಒಂದು ಖತರ್ನಾಕ್ ಐಡಿಯಾ ಕೋಮಲ್ ತಲೆಗೆ ಬಂದೇ ಬಿಟ್ಟಿತು. 'That's it. ಕೆಲಸಕ್ಕೆ ಬರುವ ಗಂಗವ್ವ ಮತ್ತು ದ್ಯಾಮಪ್ಪನ ಪ್ರಾಬ್ಲಮ್ ಬಗೆಹರಿಯಿತು. ಅದನ್ನು ಮಾನಸಿಯೇ ಬಗೆಹರಿಸಿಕೊಡುತ್ತಾಳೆ. Thank God!' ಅಂತ ಹೇಳಿದವನೇ, ಉಳಿದ ಡ್ರಿಂಕ್ ಒಂದೇ ಗುಕ್ಕಿಗೆ ಕುಡಿದ. ಬಿಲ್ಲಿಗೆ ವೇಟ್ ಮಾಡಲಿಲ್ಲ. ಎದ್ದು ಸೀದಾ ಕೌಂಟರಗೆ ಬಂದ. ಗಲ್ಲಾದ ಮೇಲೆ ಕೂತಿದ್ದ ಶೆಟ್ಟಿ ನೋಡಿ ನಕ್ಕ. ನಮಸ್ಕಾರ ಹೇಳಿದ. ಅಲ್ಲೇ ಲೆಕ್ಕ ಚುಕ್ತಾ ಮಾಡಿದ ಕೋಮಲ್ ಮನೆ ಕಡೆ ಹೊರಟ. ಸುಮಾರು ರಾತ್ರಿ ಒಂದು ಘಂಟೆ. ಕೋಮಲ್ ಪೂರ್ತಿ ನಿರಾಳನಾಗಿದ್ದ. ಎಲ್ಲವನ್ನೂ ನಿಪಟಾಯಿಸಿದ್ದರ ಬಗ್ಗೆ ಒಂದು ಹೆಮ್ಮೆ, ಸಮಾಧಾನ ಎಲ್ಲ ಇತ್ತು. ಅದೇ ಮೂಡಿನಲ್ಲಿ ಕಾರ್ ಸ್ವಲ್ಪ ಜಾಸ್ತಿ ಜೋರಾಗೇ ಓಡಿಸಿ ಮನೆ ತಲುಪಿದ. ಮತ್ತೆ ಬೆಳಿಗ್ಗೆ ಐದಕ್ಕೇ ಎದ್ದು ಜಾಗಿಂಗ್ ಮಾಡಲು ಹೋಗಬೇಕು.

ಭಾಗ - ೧೨

ಎರಡು ದಿನಗಳ ನಂತರ ಬರೋಬ್ಬರಿ ಮುಂಜಾನೆ ಒಂಬತ್ತು ಘಂಟೆಗೆ ಮಾನಸಿಯ ಮನೆ ಮುಂದೆ ಕೋಮಲ್ ಹಾಜರ್. ಮಾನಸಿ ಸಹಿತ ದೆಹಲಿಗೆ ಹೋಗಲು ಎಲ್ಲ ತಯಾರಾಗಿ ಕೂತಿದ್ದಳು. ಬೆಳಗಾವಿಯಿಂದ ಮಧ್ಯಾನ ಹನ್ನೆರೆಡು ಘಂಟೆಗೆ ಫ್ಲೈಟ್ ಇತ್ತು. ಧಾರವಾಡದಿಂದ ಒಂದು ಘಂಟೆ ಹೆಚ್ಚೆಂದರೆ ಒಂದೂವರೆ ಘಂಟೆ ಸಾಕು ಬೆಳಗಾವಿಯ ಸಾಂಬ್ರಾ ಏರ್ಪೋರ್ಟ್ ಮುಟ್ಟಿಕೊಳ್ಳಲು.

ಮಾನಸಿ ತನ್ನ ಬ್ಯಾಗುಗಳನ್ನು ಹಿಡಿದುಕೊಂಡು ಮನೆಯಿಂದ ಹೊರಗೆ ಬಿದ್ದಳು. ಬಾಗಿಲು ಹಾಕೋಣ ಅನ್ನುವ ಹೊತ್ತಿಗೆ ಬೆಕ್ಕು ತಾನೂ ಹೊರಗೆ ಬರಲು ರೆಡಿ ಆಗಿತ್ತು. 'ನೀನು ಒಳಗೇ ಇರು. ಒಂದು ವಾರ ನೀನು ಒಬ್ಬನೇ. ಗಂಗವ್ವ, ದ್ಯಾಮಪ್ಪ ಇರುತ್ತಾರೆ. ಮನೆ ಬಿಟ್ಟು ಹೊರಗೆ ಮಾತ್ರ ಹೋಗಬೇಡ,' ಅಂತ ಚಿಕ್ಕ ಮಕ್ಕಳಿಗೆ ಹೇಳುವ ಹಾಗೆ ಹೇಳಿ, ಬೆಕ್ಕನ್ನು ಕಾಲಿನಿಂದ ಮೆತ್ತಗೆ ಒಳಗೆ ತಳ್ಳಿ, ಬಾಗಿಲು ಎಳೆದುಕೊಂಡಳು ಮಾನಸಿ. ಕೋಮಲ್ ಅಷ್ಟರಲ್ಲಿ ಆಕೆಯ ಸಾಮಾನುಗಳನ್ನು ಡಿಕ್ಕಿಯಲ್ಲಿ ಇಡುತ್ತಿದ್ದ. ಅವನಿಗೆ ಒಂದು ಥ್ಯಾಂಕ್ಸ್ ಹೇಳಿದ ಮಾನಸಿ ಮುಂದಿನ ಸೀಟಿನಲ್ಲಿ ಆಸೀನಳಾದಳು. 'ಹೊರಡೋಣವೇ?' ಅನ್ನುವ ಹಾಗೆ ಕಣ್ಣು ಹೊಡೆದ ಕೋಮಲ್. ಆಕೆ ಅವನ ಕೈ ಚೂಟಿದಳು. 'ಹಾಯ್!' ಅಂತ ಸುಮ್ಮನೆ ನೌಟಂಕಿ ಮಾಡಿದ ಕೋಮಲ್ ಗಾಡಿ ಸ್ಟಾರ್ಟ್ ಮಾಡಿ, ಪೋರ್ಟಿಕೋದಿಂದ ಹೊರಗೆ ಬಂದ. ಗೇಟಿನ ಹತ್ತಿರ ಬಂದಾಗ ಕೆಲಸದ ಗಂಗವ್ವ ಮತ್ತು ದ್ಯಾಮಪ್ಪ ಕಂಡರು. ಕೋಮಲ್ ಗಾಡಿ ನಿಲ್ಲಿಸಿದ. ತನ್ನ ಮತ್ತು ಮಾನಸಿ ಕಡೆಗಿನ ಕಿಟಕಿ ಗಾಜುಗಳನ್ನು ಇಳಿಸಿದ. ಮಾನಸಿ ಮತ್ತೊಮ್ಮೆ ಗಂಗವ್ವ ಮತ್ತು ದ್ಯಾಮಪ್ಪರಿಗೆ ಊರಿಗೆ ಹೋಗುತ್ತಿರುವದಾಗಿಯೂ, ಮನೆ ಕಡೆ ಕಾಳಜಿ ವಹಿಸಿ, ಬೆಕ್ಕಿನ ಜೋಪಾನ ಮಾಡಿ, ಅಂತೆಲ್ಲ ಹೇಳಿದಳು. ಅವರು, 'ಹೂಂನ್ರೀ ಅವ್ವಾರ. ನೀವು ಏನೂ ಕಾಳಜಿ ಮಾಡಬ್ಯಾಡ್ರೀ. ಆರಾಮ್ ಹೋಗಿ ಬರ್ರಿ,' ಅಂತ ಹೇಳಿ ಮನೆ ಕಡೆ ಹೊರಟರು. ಈಗ ಕೋಮಲ್ ತನ್ನ ಗೇಮ್ ಶುರುಮಾಡಿಕೊಂಡ. 'ಏ ದ್ಯಾಮಪ್ಪಾ, ಏ ಗಂಗವ್ವಾ, ಒಂದು ಮಿನೀಟ್. ಸ್ವಲ್ಪ ಬರ್ರಿ ಇಲ್ಲಿ,' ಅಂತ ಕರೆದ. ಒಂದೆರೆಡು ಹೆಜ್ಜೆ ಮುಂದೆ ಹೋದವರು ವಾಪಸ್ ಬಂದರು. 'ಏನು? ಅವರನ್ನು ಯಾಕೆ ಕರೆದೆ?' ಅನ್ನುವ ಹಾಗೆ ಮಾನಸಿ ನೋಡಿದಳು. 'ಮಾನಸಿ, ಮೊದಲೇ ಹೇಳಬೇಕು ಅಂದುಕೊಂಡಿದ್ದೆ. ಮರೆತೇಬಿಟ್ಟೆ. ಈಗ ಇವರನ್ನು ನೋಡಿದ ನಂತರ ನೆನಪಾಯಿತು. ನಾಳೆ ಒಂದು ದಿವಸದ ಮಟ್ಟಿಗೆ ಇವರನ್ನು ನನ್ನ ತೋಟದ ಕೆಲಸಕ್ಕೆ ಕರೆದುಕೊಂಡು ಹೋಗಲೇ? ನನ್ನ ತೋಟದಲ್ಲಿ ದೊಡ್ಡ ಮಟ್ಟದ ಕಾಮಗಾರಿ ನಡೆಯುತ್ತಿದೆ. ಆದರೆ ಕೆಲಸದವರ ಕೊರತೆ. ಇನ್ನು ಎರಡು ದಿವಸದಲ್ಲಿ ಗೊಬ್ಬರದ ಕೆಲಸ ಮುಗಿಯಲೇಬೇಕು. ಇವರಿಬ್ಬರು ನಾಳೆ ಒಂದು ದಿವಸ ಬಂದು ಸಹಾಯ ಮಾಡಿದರೂ ಸಾಕು. ಎಷ್ಟೋ ಉಪಕಾರವಾಗುತ್ತದೆ,' ಅಂತ ಸಹಜವಾಗಿ ಕೇಳಿಕೊಂಡ. ಒಪ್ಪದೇ ಇರಲು ಮಾನಸಿಗೆ ಕಾರಣ ಇರಲಿಲ್ಲ. ಬೆಕ್ಕಿಗೆ ಕೋಮಲ್ ಊಟ ಹಾಕಿದರೂ ಓಕೆ. ಬೆಳಿಗ್ಗೆ, ಸಂಜೆ ಎರಡು ಹೊತ್ತು. ಕೋಮಲ್ ಬಳಿ ಕೀಲಿ ಅಂತೂ ಇದೆ. ಮಾನಸಿ, 'ಸರಿ, ಓಕೆ,' ಅಂತ ಒಪ್ಪಿದಳು. 'ಗಂಗವ್ವಾ, ದ್ಯಾಮಪ್ಪಾ ನಾಳೆ ಒಂದು ಕೆಲಸಾ ಮಾಡ್ರೀ. ಇಲ್ಲೆ ಬರೋದು ಬ್ಯಾಡ. ಅಲ್ಲೆ ಯೂನಿವರ್ಸಿಟಿ ಆಕಡೆ, ಕ್ಯಾರಕೊಪ್ಪದ ಸಮೀಪ ನಮ್ಮ ತ್ವಾಟ ಐತಿ. ಗೊತ್ತಿರಬೇಕಲ್ಲ? ಅಲ್ಲೇ ಹೋಗಿಬಿಡ್ರೀ. ಅಲ್ಲೆ ನಮ್ಮ ಯಲ್ಲಪ್ಪ ಮೇಸ್ತ್ರಿ ಏನು ಕೆಲಸ ಅಂತ ಹೇಳ್ತಾನ. ಅಷ್ಟು ಮಾಡಿಕೊಟ್ಟುಬಿಡ್ರೀಪಾ. ಭಾಳ ಸಹಾಯ ಆಕ್ಕೈತಿ. ಸರಿನಾ?' ಅಂತ ಕೇಳಿದ. ಅವರಿಗೇನು? ಎಲ್ಲ ಓಕೆ. ಮತ್ತೆ ಇನ್ನೂ ಹತ್ತಿರವೇ ಆಯಿತು. ಅವರ ಹಳ್ಳಿಯಿಂದ ಪೂರ್ತಿ ಧಾರವಾಡ ಶಹರದೊಳಗೆ ಬರುವ ಜರೂರತ್ತೂ ಇಲ್ಲ. ಆದರೆ ಮಾಲ್ಕಿನ್ ಮಾನಸಿಯ ಅನುಮತಿಗಾಗಿ ಆಕೆಯ ಕಡೆ ನೋಡಿದರು. ಆಕೆ, 'ಸರಿ, ಇಬ್ಬರೂ ಇವರ ಕೆಲಸ ಮಾಡಿಕೊಡ್ರೀ,' ಅನ್ನುವಂತೆ ತಲೆಯಾಡಿಸಿದಳು. ಕೋಮಲ್ ಇಬ್ಬರ ಕೈಯಲ್ಲೂ ಒಂದಿಷ್ಟು ಕಾಸು ತುರುಕಿದ. ಮರುದಿನ ಬೆಕ್ಕಿನ ಜೋಪಾನ ತಾನು ಮಾಡುವದಾಗಿ ಹೇಳಿದ. ಇಬ್ಬರಿಗೂ ಮತ್ತೊಮ್ಮೆ ನೆನಪು ಮಾಡಿದ. ತಪ್ಪಿಸಬಾರದು ಅಂತ ಹೇಳಿದ. ಸರಿ, ಅಂತ ತಲೆಯಾಡಿಸಿದ ಗಂಗವ್ವ, ದ್ಯಾಮಪ್ಪ ಕಾಸು ಎಣಿಸುತ್ತ, ಬೆಳಿಗ್ಗೆ ಬೆಳಿಗ್ಗೆ ಆದ ಅನಿರೀಕ್ಷಿತ ಧನಲಾಭದಿಂದ ಖುಷ್ ಆಗಿ, ಮಾನಸಿಯ ಬಂಗಲೆ ಕಡೆ ನಡೆದರು. 'ಡಾರ್ಲಿಂಗ್, ಒಂದು ನಿಮಿಷ. ನಮ್ಮ ಮೇಸ್ತ್ರಿಗೆ ಫೋನ್ ಮಾಡಿ ಹೇಳಿಬಿಡುತ್ತೇನೆ. ಒಂದೇ ನಿಮಿಷ,' ಅಂದ ಕೋಮಲ್ ಫೋನ್ ಮಾಡಿದ. ಮೇಸ್ತ್ರಿ ಯಲ್ಲಪ್ಪನಿಗೆ ವಿಷಯ ತಿಳಿಸಿದ. ಮರುದಿನ ಇಬ್ಬರು ಎಕ್ಸಟ್ರಾ ಕೆಲಸದವರನ್ನು ಕಳಿಸುತ್ತಿರುವದಾಗಿ ಹೇಳಿದ. ಅಷ್ಟು ಹೇಳಿ ಫೋನಿಟ್ಟ. ಮಾನಸಿ ಕಡೆ ನೋಡಿ ಕಣ್ಣುಗಳಲ್ಲೇ ಥ್ಯಾಂಕ್ಸ್ ಹೇಳಿದ. ಮ್ಯೂಸಿಕ್ ಪ್ಲೇಯರ್ ಆನ್ ಮಾಡಿದ. ಪಂಕಜ್ ಉದಾಸನ ಮೃದುವಾದ ದನಿಯಲ್ಲಿ ಗಝಲ್ ಒಂದು ತೇಲಿ ಬಂತು. ಅದನ್ನು ಕೇಳುತ್ತ, ಒಳ್ಳೆ comfortable ವೇಗದಲ್ಲಿ ಬೆಳಗಾವಿ ಕಡೆ ಕಾರು ತಿರುಗಿಸಿದ ಕೋಮಲ್.

ಬೆಳಗಾವಿಯ ಸಾಂಬ್ರಾ ಏರ್ಪೋರ್ಟ್ ಮುಟ್ಟಿಕೊಂಡರು. ಮಾನಸಿ ಒಳಗೆ ಹೋಗಿ, ಚೆಕ್ ಇನ್ ಮಾಡಿದಳು. ಫ್ಲೈಟ್ ವೇಳೆಗೆ ಸರಿಯಾಗಿ ಬರಲಿದೆ ಅಂತ ಖಾತ್ರಿ ಮಾಡಿಕೊಂಡ ಮೇಲೆ ಹೊರಗೆ ನಿಂತಿದ್ದ ಕೋಮಲನಿಗೆ ಒಂದು ಫೋನ್ ಮಾಡಿದಳು. ವಾಪಸ್ ಹೊರಡು ಅಂದಳು. 'ಸರಿ, ಏನಾದರೂ ಹೆಚ್ಚು ಕಮ್ಮಿ ಆದರೆ ಫೋನ್ ಮಾಡು. ಮತ್ತೆ ಮುಂದಿನ ವಾರ ಬಂದು ಪಿಕಪ್ ಮಾಡುತ್ತೇನೆ. ಹ್ಯಾಪಿ ಜರ್ನಿ,' ಅಂದ ಕೋಮಲ್ ಫೋನಿನಲ್ಲೇ ಪಚ್ಪಚ್ ಅಂತ ಪಪ್ಪಿ ಕೊಟ್ಟ. ಮಾನಸಿಯ ಮುಖ ಕೆಂಪಾಗಿ ಮುಗುಳ್ನಕ್ಕಳು. ಅದನ್ನು ನೋಡಿದ ಎದುರಿಗೆ ಬೋರ್ಡಿಂಗ್ ಪಾಸ್ ಕೊಡುತ್ತಿದ್ದ ಮಹಿಳೆ ಕೂಡ ಸಹಜವಾಗಿ ನಕ್ಕಳು. ಈಕಡೆ ಕೋಮಲ್ ಗಾಡಿಯೆತ್ತಿದ. ಶರವೇಗದಲ್ಲಿ ಧಾರವಾಡ ಕಡೆ ಸಾಗಿಬಂದ. ಮರುದಿವಸ ಬಹಳ ಮಹತ್ವದ ದಿವಸವಾಗಿತ್ತು. ಪತ್ತೇದಾರ ನಿತಿನ್ ಶಾನಬಾಗ್ ಪೈಕಿಯ ಮನುಷ್ಯ ಬೆಂಗಳೂರಿಂದ ಬರುವವನಿದ್ದ. ನಾಳೆಯೇ ಮಾನಸಿಯ ಭೂತ ಬಂಗಲೆ ತುಂಬೆಲ್ಲ ರಹಸ್ಯ ಹಿಡನ್ ಕ್ಯಾಮೆರಾಗಳನ್ನು install ಮಾಡಬೇಕಿತ್ತು. ಅದರ ಎಲ್ಲಾ ತಯಾರಿ ಮಾಡಿಮುಗಿಸಿದ್ದ ಕೋಮಲ್. ಕೆಲಸದ ಗಂಗವ್ವ, ದ್ಯಾಮಪ್ಪರನ್ನು ಮಾನಸಿ ಮನೆಯಿಂದ ನಾಳೆ ಮಟ್ಟಿಗೆ ದೂರವಿಡಬೇಕಾಗಿತ್ತು. ಅದನ್ನು ಮಾನಸಿಯನ್ನು ಒಪ್ಪಿಸಿಯೇ, ಯಾವದೇ ಸಂಶಯ ಬರದಂತೆ ಮಾಡಿಮುಗಿಸಿದ್ದ ಕೋಮಲ್. ಧಾರವಾಡಕ್ಕೆ ಬಂದು ಮುಟ್ಟಿಕೊಂಡ. ಫೋನ್ ರಿಂಗಾಯಿತು. ನೋಡಿದರೆ ಮತ್ತೊಬ್ಬ ಸಖಿ. ಮಧ್ಯಾನ ಬಾ ಅನ್ನುತ್ತಾಳೆ. ಮೂಡ್ ಇಲ್ಲ. ಕೋಮಲ್ ಫೋನ್ ಎತ್ತಲೇ ಇಲ್ಲ. ಆಕೆ ಮತ್ತೆರೆಡು ಬಾರಿ ಫೋನ್ ಮಾಡಿ ಸುಮ್ಮನಾಗುತ್ತಾಳೆ. ಇಲ್ಲ ತಮ್ಮ ಸುಂದರೇಶನಿಗೆ ಫೋನ್ ಮಾಡುತ್ತಾಳೆ. ಮಾನಸಿ ಸಿಕ್ಕಾಗಿನಿಂದ ಸುಂದರೇಶನಿಗೆ ಡಿಮ್ಯಾಂಡ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಯಾಕೆಂದರೆ ಕೋಮಲ್ ಅಷ್ಟು ಬ್ಯುಸಿ ಈಗ. ಮಾನಸಿ ಜೊತೆಗಿನ ಅಫೇರ್ ಅಷ್ಟು ಗಾಢವಾಗತೊಡಗಿದೆ.

ಭಾಗ - ೧೩

ಮರುದಿನ ಬೆಳಿಗ್ಗೆ ಜಾಗಿಂಗ್ ಮುಗಿಸಿಬಂದ ಕೋಮಲ್ ಕೂತಲ್ಲಿ ಕೂಡಲಾರ. ಅಷ್ಟು restless. ಸುಮಾರು ಹತ್ತೂವರೆ ಹೊತ್ತಿಗೆ ಬೆಂಗಳೂರಿಂದ ಹುಬ್ಬಳ್ಳಿಗೆ ಬರುವ ವಿಮಾನ ಲ್ಯಾಂಡ್ ಆಗುತ್ತದೆ. on time ಇದೆ ಅಂತ ಇಂಟರ್ನೆಟ್ ಮೇಲೆ ನೋಡಿದ್ದ. ಸುಮಾರು ಒಂಬತ್ತು ಘಂಟೆ ಹೊತ್ತಿಗೆ ಮೇಸ್ತ್ರಿ ಯಲ್ಲಪ್ಪನಿಗೆ ಫೋನ್ ಮಾಡಿದ. ಫೋನಲ್ಲಿ ಸಿಕ್ಕ ಯಲ್ಲಪ್ಪ, ಗಂಗವ್ವ ಮತ್ತು ದ್ಯಾಮಪ್ಪ ಇಬ್ಬರೂ ತೋಟದ ಕೆಲಸಕ್ಕೆ ಬಂದಿದ್ದಾರೆ ಅಂತ ಹೇಳಿದ. ಅದನ್ನು ಕೇಳಿದ ಕೋಮಲ್ ನಿರಾಳನಾದ. ಇನ್ನು ಬೆಕ್ಕಿನ ವಾಗೈತಿ. ಅದನ್ನು ಮೊದಲೇ ನಿಪಟಾಯಿಸಿ ಬಂದಿದ್ದ. ಬೆಳಿಗ್ಗೆ ಜಾಗಿಂಗ್ ಮುಗಿಸಿಬರುವಾಗಲೇ ಮಾನಸಿಯ ಮನೆ ಹೊಕ್ಕಿದ್ದ. ಬಾಗಿಲಲ್ಲೇ ಕಾದಿತ್ತು ಬೆಕ್ಕು. ಒಳಗೆ ಹೋದ. ಅಡುಗೆಮನೆ ಫ್ರಿಜ್ ಒಳಗಿಂದ ಅನ್ನ, ಹಾಲು ತೆಗೆದುಕೊಂಡು ಬಂದವನೇ ಬೆಕ್ಕಿನ ತಟ್ಟೆಗೆ ಸುರಿದು, ಹಿಂತಿರುಗಿ ಕೂಡ ನೋಡದೇ ಬಾಗಿಲು ಎಳೆದುಕೊಂಡು ಬಂದುಬಿಟ್ಟಿದ್ದ. ಅಲ್ಲಿಗೆ ಆ ಕೆಲಸ ಮುಗಿದಿತ್ತು.

ಬರೋಬ್ಬರಿ ಹನ್ನೊಂದು ಘಂಟೆಗೆ ಫೋನ್ ರಿಂಗಾಯಿತು. ಪತ್ತೇದಾರ ನಿತಿನ್ ಶಾನಬಾಗ್ ಫೋನ್ ಮಾಡಿದ್ದ. 'ಬೆಂಗಳೂರಿನಿಂದ ನಮ್ಮ ಮನುಷ್ಯ ಬಂದಿದ್ದಾನೆ. ಈಗ ಪಿಕಪ್ ಮಾಡಿದೆ. ಇನ್ನು ಅರ್ಧಗಂಟೆಯಲ್ಲಿ ಧಾರವಾಡ ಟೋಲ್ ನಾಕಾ ಹತ್ತಿರ ನಿಮಗೆ handover ಮಾಡುತ್ತೇನೆ. ಮುಂದೆ ನಿಮಗೆ ಬಿಟ್ಟಿದ್ದು. ಆತ ರಾತ್ರಿ ಫ್ಲೈಟಿಗೆ ವಾಪಸ್ ಹೋಗುತ್ತಾನೆ. ಕೆಲಸ ಮುಗಿದ ತಕ್ಷಣ ಫೋನ್ ಮಾಡಿ. ಮತ್ತೆ ಟೋಲ್ ನಾಕಾ ಹತ್ತಿರವೇ ಬಂದು ನಮ್ಮ ಆದಮಿಯನ್ನು ಪಿಕಪ್ ಮಾಡಿ, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಮುಟ್ಟಿಸುತ್ತೇನೆ. ಪ್ರಾಜೆಕ್ಟಿನ ಟೋಟಲ್ ಖರ್ಚು ಸುಮಾರು ಮೂರು ಲಕ್ಷ ಚಿಲ್ಲರೆ. ಮೂರು ಕೊಡಿ ಸಾಕು,' ಅಂತ ಗುಂಡು ಹೊಡೆದಂತೆ ಹೇಳಿದ ಮಾಜಿ ಮೇಜರ್ ಫೋನಿಟ್ಟ.

ಈಗ ಕೋಮಲ್ ಫುಲ್ excited. ಮೂರು ಲಕ್ಷ. ಗೋಲಿ ಮಾರೋ ರೊಕ್ಕಕ್ಕೆ. ಒಮ್ಮೆ ಮಾನಸಿ ಮನೆ ತುಂಬ ರಹಸ್ಯ ಕ್ಯಾಮೆರಾಗಳ installation ಆಗಿಬಿಟ್ಟರೆ ಸಾಕು. ನಂತರ ವಾರಕ್ಕೆ ಒಂದೋ ಎರಡೋ ಬಾರಿ ವೀಡಿಯೊ ಫೀಡ್ ಇರುವ ಡಿಸ್ಕ್ ತೆಗೆದು ನೋಡುತ್ತ ಹೋದರೆ ಎಲ್ಲ ಗೊತ್ತಾಗುತ್ತದೆ. ಆಗ ರಹಸ್ಯ, ಏನಾದರೂ ಇದ್ದರೆ, ಎಲ್ಲ ಹೊರಗೆ ಬರುತ್ತದೆ. ಕೋಮಲ್ ಟೋಲ್ ನಾಕಾ ಕಡೆ ಹೊರಡಲು ಸಿದ್ಧನಾದ. ಅಲ್ಲಿಗೆ ಹೋಗಲು ಒಂದು ಹದಿನೈದು ನಿಮಿಷ ಸಾಕು.

ಕೋಮಲ್ ಡ್ರೈವ್ ಮಾಡಿಕೊಂಡು ಹೋಗಿ ಟೋಲ್ ನಾಕಾ ಮುಟ್ಟಿದ. NH - ೪ ಹೆದ್ದಾರಿಯ ಮೇಲೇ ಇದೆ. ಕಾಯುವದು ಬೇಕಾಗಲೇ ಇಲ್ಲ. ನಿತಿನ್ ಶಾನಬಾಗ್ ಹಾಜರ್. ಅವನ ಕಾರಿನಿಂದ ಒಬ್ಬ ಮನುಷ್ಯ ದೊಡ್ಡ ಕಿಟ್ ಬ್ಯಾಗ್ ಹಿಡಿದುಕೊಂಡು ಇಳಿದ. 'ಇವನೇ ಅವನು,' ಅನ್ನುವಂತೆ ಕೈತೋರಿಸಿದ ನಿತಿನ್ ಶಾನಬಾಗ್ ದೂಸರಾ ಮಾತಾಡದೆ ಅಲ್ಲಿಂದ ಗಾಡಿ ಬಿಟ್ಟ. ಬೆಂಗಳೂರಿಂದ ಬಂದಿದ್ದ ತಂತ್ರಜ್ಞ ಕೋಮಲ್ ಕಾರಿನ ಪಕ್ಕ ಬಂದು ನಿಂತ. ಕೋಮಲ್ ಡೋರ್ unlock ಮಾಡಿದ. ಹಿಂದಿನ ಡಿಕ್ಕಿ ತೆಗೆಯಿರಿ ಅನ್ನುವ ಹಾಗೆ ಸಂಜ್ಞೆ ಮಾಡಿದ ಆ ಮನುಷ್ಯ. ಕೋಮಲ್ ಡಿಕ್ಕಿ ತೆಗೆಯುವ ಬಟನ್ ಒತ್ತಿದ. ತೆರೆದ ಡಿಕ್ಕಿಯಲ್ಲಿ ತನ್ನ ಕಿಟ್ ಬ್ಯಾಗಿಟ್ಟ ಅವನು ಬಂದು ಕೋಮಲ್ ಪಕ್ಕ ಕೂತ. ಮಾತು, ಪರಿಚಯ ಕೇಳಬೇಡಿ. ಕಣ್ಣಿಗೆ ಹಾಕಿದ್ದ ಕಪ್ಪು ಕನ್ನಡಕ ಕೂಡ ತೆಗೆಯಲಿಲ್ಲ ಆತ. ಕೋಮಲ್ ಅರ್ಥ ಮಾಡಿಕೊಂಡ. ಪರಮ ನಿಗೂಢ ಇಂಟೆಲಿಜೆನ್ಸ್ ಬ್ಯೂರೋದ ಮಾಜಿ ಅಧಿಕಾರಿ. ಜೀವನ ಪೂರ್ತಿ ಮಾಡಿದ್ದು ಕತ್ತಲ ಕೆಲಸ. ಅದಕ್ಕೇ ಹೀಗಿದ್ದಾನೆ.

'ಒಂದು ವಿಷಯ ಸರ್. ಸೀದಾ ಆ ಮನೆಗೆ ಹೋಗುವದು ಬೇಡ. ಸುಮ್ಮನೆ ಆ ಏರಿಯಾದ ಒಂದು ರೌಂಡ್ ಹಾಕಿಸಿ. ನಂತರ ಆ ಮನೆಯಿಂದ ಒಂದು ಅರ್ಧ ಕಿಲೋಮೀಟರು ದೂರ ಗಾಡಿ ನಿಲ್ಲಿಸಿ. ನಾನು ಹೋಗಿ ಒಂದು ರೌಂಡ್ surveillance ಮಾಡುತ್ತೇನೆ. ಏನೂ ಡೇಂಜರ್, ಸಂಶಯಾಸ್ಪದ ಇಲ್ಲ ಅಂದರೆ ಮನೆ ಹೊಕ್ಕೋಣ,' ಅಂದು ಮುಗುಮ್ಮಾಗಿ ಹೇಳಿದ ಅವನು. ಕೋಮಲನಿಗೆ ಒಂದು ವಿಷಯ ಬರೋಬ್ಬರಿ ಗೊತ್ತು. ಶುದ್ದ ಕಸುಬುದಾರರ ಜೊತೆ ಎಂದೂ ವಾದ ಮಾಡಬಾರದು. ಅವರಿಗೆ ಬರೋಬ್ಬರಿ ಗೊತ್ತಿರುತ್ತದೆ ತಾವು ಏನು ಮಾಡುತ್ತಿದ್ದೇವೆ ಅಂತ. ದೂಸರಾ ಮಾತಾಡದೆ ಕೋಮಲ್ ಗಾಡಿ ಎತ್ತಿದ. ಗೋಪಾಲಪುರ ಬಡಾವಣೆಯ ಒಂದು ಸುತ್ತು ಹಾಕಿಸಿದ. ಮಾನಸಿಯ ಮನೆ ಮುಂದೆ ಬಂದಾಗ, 'ಇದೇ ಟಾರ್ಗೆಟ್!' ಅನ್ನುವಂತೆ ಸಂಜ್ಞೆ ಮಾಡಿ ತೋರಿಸಿದ. ಪಕ್ಕದಲ್ಲಿ ಕೂತವ ಸರಿ ಅಂತ ತಲೆಯಾಡಿಸಿದ. ಒಂದು ಅರ್ಧ ಗಂಟೆ, ಎರಡು ಮೂರು ರೌಂಡ್ ಹಾಕಿದ ಮೇಲೆ ಗಾಡಿ ನಿಲ್ಲಿಸಲು ಹೇಳಿದ ಆ ಮನುಷ್ಯ. ಹೇಳಿದಷ್ಟು ಮಾಡಿದ ಕೋಮಲ್ ಗಾಡಿ ನಿಲ್ಲಿಸಿದ. ರೈಲ್ವೆ ಸ್ಟೇಷನ್ ಪಕ್ಕದ ನೀಲಗಿರಿ ತೋಪಿನ ಅಂಚಿನಲ್ಲಿ ಬಂದು ನಿಂತಿದ್ದರು ಅವರು. 'ಒಂದು ಕೆಲಸ ಮಾಡಿ. ನಾನು ಇಲ್ಲಿ ಇಳಿದು, ನೀಲಗಿರಿ ತೋಪಿನ ಮೂಲಕ ಹೋಗುತ್ತೇನೆ. ಅಲ್ಲಿ ಕಾಣುವ ಕಾಲುದಾರಿ ಸೀದಾ ಆ ಮನೆಯ ಹಿಂಬಾಗಕ್ಕೆ ಹೋಗುತ್ತದೆ. ನಾನು ಅಲ್ಲಿ ಸೇರಿಕೊಂಡು, ಆ ಕಂಪೌಂಡಿನ ಒಂದು ರೌಂಡ್ ಹಾಕಿ, ಎಲ್ಲ ಸೇಫ್ ಇದೆ ಅಂದ ಮೇಲೆ ನಿಮಗೆ ಒಂದು ಮಿಸ್ ಕಾಲ್ ಕೊಡುತ್ತೇನೆ. ಆಗ ಹೊರಟು ಬನ್ನಿ. ಎಲ್ಲಿ ನಿಮ್ಮ ನಂಬರ್ ಕೊಡಿ,' ಅಂದ. ಅವನ professionalism ನೋಡಿದ ಕೋಮಲ್ ಫುಲ್ impress ಆದ. ತನ್ನ ಕಾರ್ಡ್ ಅವನ ಕೈಯಲ್ಲಿಟ್ಟ. 'ಹಾಂ! ಒಂದು ಮಾತು. ನೀವು ಎಂಟ್ರಿ ಕೊಟ್ಟ ನಂತರ. ನನಗೆ ಒಂದು ಮಿಸ್ ಕಾಲ್ ಕೊಡಿ. ಆ ಮನೆಯ ಸುತ್ತ ಮುತ್ತ ಯಾವದೋ ಮೂಲೆಯಲ್ಲಿ ಅವಿತಿಟ್ಟುಕೊಂಡಿರುತ್ತೇನೆ. ನೀವು ಒಳಗೆ ಬಂದ ಮೇಲೆ ಯಾವದಾದರೂ ಪಕ್ಕದ ಬಾಗಿಲು, ಅಥವಾ ಹಿತ್ತಿಲ ಬಾಗಿಲ ಮೂಲಕ ಒಳಗೆ ಬರುತ್ತೇನೆ. ಅಲ್ಲಿಂದ ಕೆಲಸ ಶುರು. Any questions, sir?' ಅಂತ ಕೇಳಿದ. ಕೋಮಲ್, 'ಏನೂ ಇಲ್ಲ,' ಅನ್ನುವಂತೆ ಸುಮ್ಮನೆ ತಲೆಯಾಡಿಸಿದ. ಕಾರಿಂದ ಹೊರಬಿದ್ದ ಆ ಮನುಷ್ಯ ಒಮ್ಮೆ ಸುತ್ತಲಿನ ಮಾಹೋಲ್ ಗಮನಿಸಿದ. ಎಲ್ಲ ಸೇಫ್ ಅಂತ ಖಾತ್ರಿ ಮಾಡಿಕೊಂಡು, ನೀಲಗಿರಿ ತೋಪಿನಲ್ಲಿ ಇಳಿದು, ಕಾಲುದಾರಿಯಲ್ಲಿ ಮರೆಯಾದ. ಕೋಮಲ್ ಅಚ್ಚರಿಯಿಂದ ನೋಡುತ್ತ ಕುಳಿತ. ಅದರಲ್ಲೇ ತಲ್ಲೀನನಾಗಿದ್ದ. ಯಾರೋ ಕಾರಿನ ಕಿಡಕಿಯ ಮೇಲೆ ಕಟ ಕಟ ಅಂತ ಬಡಿದರು. ಧಡಕ್! ಅಂತ ಒಮ್ಮೆಲೇ ತನ್ನ ಲಹರಿಯಿಂದ ಹೊರಬಂದ ಕೋಮಲ್. ನೋಡಿದರೆ ಯಾರೋ ಭಿಕ್ಷುಕ. ಕೈಯೆತ್ತಿ, ಎತ್ತಿ ಬೇಡುತ್ತಿದ್ದ. ಕಾಟ ತಪ್ಪಿದರೆ ಸಾಕು ಅಂತ ಕಿಡಕಿ ಇಳಿಸಿ, ಒಂದು ಐದು ರೂಪಾಯಿ ಕೊಟ್ಟ. ಅವನು ಹೋದ. ಮತ್ತೆ ಯಾರಾದರೂ ಬಂದು ತೊಂದರೆ ಕೊಡದೇ ಇರಲಿ ಅಂತ ಕೇಳಿಕೊಂಡ ಕೋಮಲ್. ಅಷ್ಟರಲ್ಲಿ ಫೋನ್ ರಿಂಗಾಯಿತು. ಮಿಸ್ ಕಾಲ್. ಮೊದಲ ಸಿಗ್ನಲ್. ಕೋಮಲ್ ಗಾಡಿ ಸ್ಟಾರ್ಟ್ ಮಾಡಿದ. ನಿಧಾನವಾಗಿ ಮಾನಸಿಯ ಬಂಗಲೆಯತ್ತ ಗಾಡಿ ತಿರುಗಿಸಿದ. ಘಂಟೆ ಬರೋಬ್ಬರಿ ಮಧ್ಯಾನ ಹನ್ನೆರೆಡು.

ಮಾನಸಿಯ ಬಂಗಲೆ ಮುಟ್ಟಿದ ಕೋಮಲ್ ಪೊರ್ಟಿಕೋದಲ್ಲಿ ಗಾಡಿ ನಿಲ್ಲಿಸಿದ. ಎಲ್ಲ ನಿಶ್ಶಬ್ದವಾಗಿತ್ತು. ಸಂಜೆ ತನಕ ಹಾಗೇ ಇದ್ದುಬಿಟ್ಟರೆ ಸಾಕು ಅಂದುಕೊಳ್ಳುತ್ತ, ಎದುರಿನ ಬಾಗಿಲಿನಿಂದ ಒಳ ಹೊಕ್ಕು ಬಾಗಿಲು ಹಾಕಿದ. ಬೆಕ್ಕು ಬಂದು ಕಾಲಿಗೆ ಅಡರಿತು. ಕೋಮಲ್ ಏನೂ ಭಾವ್ ಕೊಡಲಿಲ್ಲ. ಅದು ಸುಮ್ಮನೆ ಮಹಡಿ ಹತ್ತಿತು. ಮನೆಯೊಳಗೆ ಎಲ್ಲ ಓಕೆ ಅಂದುಕೊಂಡ ಕೋಮಲ್ ಆ ಮನುಷ್ಯನಿಗೆ ಮಿಸ್ ಕಾಲ್ ಕೊಟ್ಟ. ಯಾವ ಬಾಗಿಲು ತೆಗೆಯಬೇಕು ಅಂತ ಗೊತ್ತಾಗಲಿಲ್ಲ. ಮೊದಲು ಹಿಂದಿನ ಬಾಗಿಲು ತೆಗೆದು ನಿಂತ. ಯಾವದೋ ಮರದ ಮೂಲೆಯಲ್ಲಿ ಅಡಗಿದ್ದ ಆ ಮನುಷ್ಯ ಚಂಗನೆ ಹಾರಿ ಬಂದು ಮನೆಯೊಳಕ್ಕೆ ಸೇರಿಕೊಂಡ. ಬಾಗಿಲು ಹಾಕಿದ.

ರಹಸ್ಯ ಕ್ಯಾಮೆರಾ ಹಾಕಲು ಬಂದಿದ್ದ ಮನುಷ್ಯ ಮನೆಯ ಒಳಭಾಗವನ್ನು ಒಂದು ಸಾರೆ ಸಮಗ್ರವಾಗಿ ನೋಡಿದ. ಮಹಡಿ ಹತ್ತಿ ಹೋದ. ಎಲ್ಲ ನೋಡಿದ. ಮಾನಸಿಯ ಬೆಡ್ರೂಮ್ ಒಂದನ್ನು ಬಿಟ್ಟರೆ ಉಳಿದ ಐದೂ ರೂಮುಗಳಿಗೆ ಬೀಗ ಹಾಕಿದ್ದರು. ಕೆಳಗೂ ಅಷ್ಟೇ.

ಮಹಡಿಯಿಂದ ಕೆಳಗಿಳಿದು ಬಂದ ಮನುಷ್ಯ,' ಬೀಗ ಹಾಕಿರುವ ರೂಮುಗಳ ಚಾವಿ ಇದೆಯೇನು?' ಅಂತ ಕೇಳಿದ. ಕೋಮಲ್ ಹತ್ತಿರ ಮೇನ್ ಡೋರ್ ಚಾವಿ ಮಾತ್ರ ಇತ್ತು. ಇಲ್ಲ ಅನ್ನುವಂತೆ ತಲೆಯಾಡಿಸಿದ. 'ಸರಿ, ದೊಡ್ಡ ಕೆಲಸವೇನೂ ಅಲ್ಲ. ಎಲ್ಲ ಕಡೆ ರಹಸ್ಯ ಕ್ಯಾಮೆರಾ ಹಾಕಬಹುದು. ಅವನ್ನು ಅಡಗಿಸಿಡಲು ಹಳೆ ಮನೆಗಳು ತುಂಬಾ ಅನುಕೂಲ. ಅದೃಷ್ಟಕ್ಕೆ ಈ ಮನೆ ಅದಕ್ಕೆ ಹೇಳಿಮಾಡಿಸಿದ ಹಾಗೆ ಇದೆ. ಮನೆ ಹೊರಗೂ ಒಂದಿಷ್ಟು ಕ್ಯಾಮೆರಾ ಹಾಕಿ ಬಿಡುತ್ತೇನೆ. ಎಲ್ಲ wireless ಕ್ಯಾಮೆರಾಗಳು. wireless ಮುಖಾಂತರ ಒಂದು ಸೆಂಟ್ರಲ್ ಯೂನಿಟ್ಟಿಗೆ ವೀಡಿಯೊ ಫೀಡ್ ಕಳಿಸುತ್ತವೆ. ಅಲ್ಲಿ ಎಲ್ಲ ರೆಕಾರ್ಡ್ ಆಗಿರುತ್ತದೆ. ಬೇಕಾದಾಗ ಡಿಸ್ಕ್ ತೆಗೆದುಕೊಂಡು ನೋಡಬಹುದು. ಆ ಸೆಂಟ್ರಲ್ ಯೂನಿಟ್ ಕೂಡ ಚಿಕ್ಕದೇ. ಒಂದು ಸಣ್ಣ ಟೇಪ್ ರೆಕಾರ್ಡರ್ ಸೈಜಿನದು. ಅದನ್ನು ಮುಚ್ಚಿಡಲು ಒಳ್ಳೆಯ ಜಾಗ ಅಂದರೆ ಹಿಂದಿರುವ ಶೌಚಾಲಯ. ಮತ್ತೆ ಹಿಂದಿರುವ ಶೌಚಾಲಯದಲ್ಲಿ ಎತ್ತರದಲ್ಲಿ ಒಂದು ಹಕ್ಕಿ ಗೂಡು ಇದೆ. ಖಾಲಿ ಇದೆ. ಅಲ್ಲಿ ಸೆಂಟ್ರಲ್ ಯೂನಿಟ್ ಇಡೋಣ. ಯಾರಿಗೂ ಗೊತ್ತಾಗುವದಿಲ್ಲ. ಓಕೆ?' ಅಂತ ತನ್ನ ಯೋಜನೆಯನ್ನು ವಿವರಿಸಿದ. ಕೋಮಲ್ ಸರಿ ಅನ್ನುವಂತೆ ತಲೆ ಕುಣಿಸಿದ. 'ಹೋಗಿ, ನಿಮ್ಮ ಕಾರಿಂದ ನನ್ನ ಕಿಟ್ ಬ್ಯಾಗ್ ತನ್ನಿ,' ಅಂದು ತನ್ನ ಕೆಲಸಕ್ಕೆ ರೆಡಿಯಾದ.

ಕೋಮಲ್ ನಿಧಾನಕ್ಕೆ ಬಾಗಿಲು ತೆಗೆದು ನೋಡಿದ. ಹೊರಗೆ ರಣಬಿಸಿಲು ಕಾಯುತ್ತಿತ್ತು. ಯಾರೂ ಕಾಣಲಿಲ್ಲ. ಬೇಗಬೇಗನೆ ಹೊರಗೆ ಬಂದು, ಕಾರ್ ಡಿಕ್ಕಿಯಿಂದ ಆ ಮನುಷ್ಯನ ಕಿಟ್ ಬ್ಯಾಗ್ ತೆಗೆದುಕೊಂಡು ಬಂದ.

ಈಗ ರಹಸ್ಯ ಕ್ಯಾಮೆರಾ ಹಾಕುವ ಕಾರ್ಯಾಚರಣೆ ಶುರುವಾಯಿತು. ಶೆಡ್ಡಿನಿಂದ ಒಂದು ಏಣಿ ತಂದುಕೊಂಡ ಆ ಮನುಷ್ಯ. ಬ್ಯಾಗಿನಿಂದ ಹಲವಾರು ಅತಿ ಸಣ್ಣ ಸಣ್ಣ ಕ್ಯಾಮೆರಾಗಳನ್ನು ತೆಗೆದು ಅವುಗಳ ಸ್ವಿಚ್ ಆನ್ ಮಾಡುತ್ತ ಹೋದ. ಅವನ ಒಂದು ಚಿಕ್ಕ ಟೀವಿ ಆನ್ ಮಾಡಿದ. ಕ್ಯಾಮೆರಾಗಳು ಆಗಲೇ ವೀಡಿಯೊ ಫೀಡ್ ಬಿತ್ತರಿಸಲು ಶುರು ಮಾಡಿಬಿಟ್ಟಿದ್ದವು. ಬೇರೆ ಬೇರೆ ಚಾನೆಲ್ ನಲ್ಲಿ ಬೇರೆ ಬೇರೆ ಕ್ಯಾಮೆರಾಗಳ ಫೀಡ್. ಎಲ್ಲ ಸರಿ ಇದೆ ಅನ್ನುವಂತೆ ತಲೆಯಾಡಿಸಿದ ಅವನು. ಕೋಮಲ್ ಮಾತ್ರ ಅಚ್ಚರಿಯಿಂದ ನೋಡುತ್ತ ನಿಂತ.

ಎಲ್ಲ ಕಡೆ ಕ್ಯಾಮೆರಾಗಳನ್ನು ಅಡಗಿಸಿಡುತ್ತ ಹೊರಟ ಆ ಮನುಷ್ಯ. ಮೊದಲೇ ಅಷ್ಟು ಚಿಕ್ಕ ಚಿಕ್ಕ ಕ್ಯಾಮೆರಾಗಳು. ಹಳೆ ಕಾಲದ ಮನೆ. ಬ್ಯಾಟರಿ ಬಿಟ್ಟು ನೋಡಿದರೂ ಆ ಕ್ಯಾಮೆರಾಗಳನ್ನು ಕಂಡುಹಿಡಿಯುವದು ಕಷ್ಟ. ಗೋಡೆಯ ಬಿರುಕಿನಲ್ಲಿ, ಮರದ  ತೊಲೆಯ ನೈಸರ್ಗಿಕ ಬಿರುಕಿನಲ್ಲಿ ಎಲ್ಲ ಕಡೆ ರಹಸ್ಯ ಕ್ಯಾಮೆರಾಗಳು ಸ್ಥಾಪಿತವಾದವು. ಬೀಗ ಹಾಕಿದ್ದ ಕೋಣೆಗಳನ್ನು ಬಿಟ್ಟು ಎಲ್ಲ ಕಡೆ, ಪರ್ಫೆಕ್ಟ್ ಜಾಗ ನೋಡಿ ನೋಡಿ, ಮ್ಯಾಕ್ಸಿಮಮ್ ಕವರೇಜ್ ಬರುವ ಹಾಗೆ install ಮಾಡುತ್ತ ಹೋದ. ಮೇಲೆ ಮಾನಸಿಯ ಬೆಡ್ರೂಮಿಗೆ ತಾಗಿಕೊಂಡಿದ್ದ ಬಾತ್ರೂಮ್ ಒಳಗೂ ನಾಲ್ಕು ಕ್ಯಾಮೆರಾ ಇಡಲೇ? ಅಂತ ಕೇಳಿದ. ಬೇಡ ಅಂದ ಕೋಮಲ್. 'ಸರಿ ಒಂದು ನಾಲ್ಕು ಎಕ್ಸಟ್ರಾ ಕ್ಯಾಮೆರಾ ನಿಮಗೇ ಕೊಟ್ಟು ಹೋಗಿರ್ತೀನಿ. ಮುಂದೆ ಬೇಕಾದರೆ ಉಪಯೋಗಿಸಿಕೊಳ್ಳಿ. install ಮಾಡುವದು ತುಂಬ ಸುಲಭ. ಜಸ್ಟ್ ಆನ್ ಮಾಡಿ, ಎಲ್ಲಿ ಬೇಕೆಂದಲ್ಲಿ ಹುಗಿಸಿಬಿಟ್ಟರೆ ಮುಗಿಯಿತು. ಎಲ್ಲವೂ ಒಂದೇ ಸೆಂಟ್ರಲ್ ಯೂನಿಟ್ಟಿಗೆ ವೀಡಿಯೊ ಫೀಡ್ ಕಳಿಸುವಂತೆ ಪ್ರೊಗ್ರಾಮ್ ಆಗಲೇ ಮಾಡಿಟ್ಟಿದ್ದಾರೆ,' ಅಂತ ಹೇಳಿದ. ಕೋಮಲ್ ಸರಿ ಅನ್ನುವ ರೀತಿಯಲ್ಲಿ ತಲೆ ಕುಣಿಸಿದ.

ಮನೆ ಒಳಗಿನ ಕಾಮಗಾರಿ ಮುಗಿಯಿತು. ಇನ್ನು ಮನೆ ಹೊರಗೆ ಒಂದು ಹತ್ತು ಕ್ಯಾಮೆರಾ ಫಿಕ್ಸ್ ಮಾಡಿಬಿಟ್ಟರೆ ಪ್ರಾಜೆಕ್ಟ್ ಫಿನಿಶ್. ಆ ಮನುಷ್ಯ ಹಿತ್ತಿಲ ಬಾಗಿಲಿನಿಂದ ಮನೆ ಹೊರಗೆ ಬಿದ್ದ. ಮೊದಲೇ ಎಲ್ಲ ನೋಡಿಕೊಂಡಿದ್ದ ಅಂತ ಕಾಣುತ್ತದೆ. ಚಕಚಕನೆ ಹೋಗಿ ಅಲ್ಲಲ್ಲಿ ಕ್ಯಾಮೆರಾ ಹುಗಿಸಿಟ್ಟು ಒಳಗೆ ಬಂದ.

ಈಗ ಸೆಂಟ್ರಲ್ ಯೂನಿಟ್ಟನ್ನು ಸೆಟಪ್ ಮಾಡುತ್ತ ಕುಳಿತ. ಕೋಮಲನಿಗೆ ಹೇಗೆ ಆಪರೇಟ್ ಮಾಡುವದು ಅಂತ ತೋರಿಸಿದ. ಒಂದು ಬಟನ್ ಒತ್ತಿದ. ಒಂದು ಸೀಡಿ ಹೊರಗೆ ಹಾಕಿತು ಆ ಮಷೀನ್. ಸುತ್ತ ಮುತ್ತ ನೋಡಿದ. ಅಲ್ಲೇ ಕಂಡಿತು ದೊಡ್ಡ ಟೀವಿ ಮತ್ತು ಕೆಳಗಿದ್ದ ಡಿವಿಡಿ ಪ್ಲೇಯರ್. ಟೀವಿ, ಡಿವಿಡಿ ಆನ್ ಮಾಡಿದ ಆ ಮನುಷ್ಯ ಸೀಡಿಯನ್ನು ಡಿವಿಡಿ ಪ್ಲೇಯರ್ ಒಳಗೆ ತುರುಕಿದ. ಟೀವಿ ಮೇಲೆ password? ಅಂತ ಬಂತು. ರಿಮೋಟ್ ಕಂಟ್ರೋಲ್ ತೆಗೆದುಕೊಂಡು ಏನೋ ಒತ್ತಿದ. ಆಗ ಡಿಸ್ಕ್ ಆಪರೇಟ್ ಆಯಿತು. password ಬರೆದಿದ್ದ ಕಾಗದವನ್ನು ಕೋಮಲ್ ಕೈಗೆ ಕೊಟ್ಟು, 'ಎಲ್ಲ ಅರ್ಥವಾಯಿತೇ?' ಅಂತ ಕೇಳಿದ. ಕೋಮಲ್ ಸಹಿತ ಟ್ರಯಲ್ ಮಾಡಿ ನೋಡಿದ. ಎಲ್ಲ ತಿಳಿಯಿತು ಅಂತ ಹೇಳಿದ. ಅದರ ಬಗ್ಗೆ ಮತ್ತೂ ಒಂದಿಷ್ಟು ವಿವರಣೆ ಕೊಟ್ಟ ಆ ಮನುಷ್ಯ.

'ಸರಿ, ನೀವು ಇಲ್ಲೇ ಇರಿ. ನಾನು ಈ ಸೆಂಟ್ರಲ್ ಯೂನಿಟ್ಟನ್ನು ಅಲ್ಲಿ ಹಿಂದಿರುವ ಶೌಚಾಲಯದಲ್ಲಿ ಅಡಗಿಸಿಟ್ಟು ಬರುತ್ತೇನೆ. ನಂತರ ನಿಮ್ಮನ್ನು ಕರೆದುಕೊಂಡು ಹೋಗಿ, ತೋರಿಸ್ಕೊಂಡು ಬರುತ್ತೇನೆ,' ಅಂದವನೇ ಸೆಂಟ್ರಲ್ ಯೂನಿಟ್ ತೆಗೆದುಕೊಂಡು, ಹಿತ್ತಿಲ ಬಾಗಿಲಿನಿಂದ ಹೊರಗೆ ಬಿದ್ದ. ಬೇಗಬೇಗನೆ ನಡೆಯುತ್ತ ಹೋಗಿ ಶೌಚಾಲಯ ಸೇರಿಕೊಂಡ. ದೂರದಿಂದ ಎಲ್ಲವನ್ನೂ ಗಮನಿಸುತಿದ್ದ ಕೋಮಲ್ ಅವನ ಕಾರ್ಯಕ್ಷಮತೆ ಮೆಚ್ಚಿ, ಮನಸ್ಸಿನಲ್ಲೇ hats off ಅಂದುಕೊಂಡ. ಪ್ರಶಂಸಿಸಿದ.

ಹತ್ತು ನಿಮಿಷದಲ್ಲಿ ಮತ್ತೆ ವಾಪಸ್ ಆ ಮನುಷ್ಯ ಹಾಜರ್. 'ನೋಡಿ, ಈ ಕ್ಯಾಮೆರಾಗಳಲ್ಲಿ ತುಂಬ ವರ್ಷ ಬಾಳಿಕೆ  ಬರುವ ಬ್ಯಾಟರಿ ಇವೆ. ಅವುಗಳ ಬಗ್ಗೆ ಚಿಂತೆ ಬೇಡ. ಆದರೆ ಅಲ್ಲಿ ಹಿಂದೆ ಶೌಚಾಲಯದಲ್ಲಿ ಇಟ್ಟಿರುವ ಯೂನಿಟ್ ಬ್ಯಾಟರಿ ಒಂದು ತಿಂಗಳು ಬರುತ್ತದೆ ಅಷ್ಟೇ. ಅದನ್ನು ಮಾತ್ರ ತಿಂಗಳಿಗೆ ಒಂದು ಸಾರಿ ಬದಲಾಯಿಸಲು ಮರೆಯಬೇಡಿ. ಬ್ಯಾಟರಿ ಖಾಲಿಯಾದರೆ ದೊಡ್ಡ ಅನಾಹುತವೇನೂ ಆಗುವದಿಲ್ಲ. ವೀಡಿಯೊ ಫೀಡ್ ರೆಕಾರ್ಡಿಂಗ್ ಆಗುವದಿಲ್ಲ ಅಷ್ಟೇ. ಪುನಃ ಬ್ಯಾಟರಿ ಹಾಕಿದ ಮೇಲೆ ರೆಕಾರ್ಡಿಂಗ್ ಆರಂಭವಾಗುತ್ತದೆ. ಆ ಯೂನಿಟ್ಟಿನಲ್ಲಿ ಹತ್ತು ಡಿಸ್ಕ್ ಇವೆ. ನೀವು ನೋಡಿಯಾದ ನಂತರ ಡಿಸ್ಕ್ ಅದರಲ್ಲೇ ವಾಪಸ್ ತಳ್ಳಿ. ಬೇಕಾದರೆ ಕಾಪಿ ಮಾಡಿಟ್ಟುಕೊಳ್ಳಿ. ಇಷ್ಟೇ. ಬಹಳ ಸಿಂಪಲ್. ಅಲ್ಲವೇ?' ಅಂದ ಆ ಮನುಷ್ಯ. ಕೋಮಲ್ ಹೌದು ಅನ್ನುವಂತೆ ತಲೆಯಾಡಿಸಿದ.

'ಸರಿ, ಈಗ ಮುಂದಿನ ಕೆಲಸ. ನಿಮಗೆ ಸೆಂಟ್ರಲ್ ಯೂನಿಟ್ ಎಲ್ಲಿದೆ ಅಂತ ತೋರಿಸಬೇಕು. ನಾನು ಮೊದಲು ಹೋಗುತ್ತೇನೆ. ಮಿಸ್ ಕಾಲ್ ಕೊಡುತ್ತೇನೆ. ನಂತರ ನೀವು ಬನ್ನಿ. ಓಕೆ?' ಅಂದವ ಸೀದಾ ಹಿಂದಿನ ಬಾಗಿಲಿಂದ ಹೊರಗೆ ಹೋದ. ಎರಡು ನಿಮಿಷದಲ್ಲಿ ಕೋಮಲ್ ಫೋನಿಗೆ ಮಿಸ್ ಕಾಲ್ ಬಂತು. ಕೋಮಲ್ ಕೂಡ ಆಕಡೆ ಹೊರಟ.

ಹಳೆ ಕಾಲದ ಶೌಚಾಲಯಗಳು. ಎರಡು ಬಚ್ಚಲು. ಎರಡು ಸಂಡಾಸ್. ಅವುಗಳ ಮುಂದೆ ನಿಂತಿದ್ದ ಕೋಮಲ್. 'ಇಲ್ಲಿ!' ಅಂತ ಒಂದೇ ಮಾತು ಕೇಳಿತು. ಆಕಡೆ ತಿರುಗಿ ನೋಡಿದ. ಮೊದಲ ಬಚ್ಚಲಿನ ಬಾಗಿಲು ಕೊಂಚ ಸರಿಯಿತು. ಕೋಮಲ್ ಒಳಗೆ ಹೊಕ್ಕ. ಪೂರ್ತಿ ಕಗ್ಗತ್ತಲು. ಆ ಮನುಷ್ಯನ ಕೈಯಲ್ಲಿ ಒಂದು ಟಾರ್ಚ್ ಇತ್ತು. ಒತ್ತಿದ. ಪ್ರಖರ ಬೆಳಕು. ಸೂರಿನ ಕೆಳಗೆ, ಪಕಾಸಿ ಹಿಂದೆ ಇದ್ದ ಹಕ್ಕಿ ಗೂಡಲ್ಲಿ ಕೂತಿತ್ತು ಆ ಸೆಂಟ್ರಲ್ ಯೂನಿಟ್. ಬ್ಯಾಟರಿ ಬೆಳಕಲ್ಲೇ ಕೋಮಲ್ ಕೈಯಲ್ಲಿ ಟ್ರಯಲ್ ಮಾಡಿಸಿದ. ಬಟನ್ ಒತ್ತಿದ ಕೂಡಲೇ ಒಂದು ಡಿಸ್ಕ್ ಹೊರಗೆ ಬಂತು. 'ಎಲ್ಲ ಸರಿಯಾಗಿದೆ. ಅಲ್ಲವೇ?' ಅನ್ನುವಂತೆ ತಲೆಯಾಡಿಸಿ ಕೇಳಿದ ಆತ. ಕೋಮಲ್ ಕೂಡ ಒಪ್ಪಿದ. 'ಸರಿ ನೀವು ಹೊರಡಿ. ಮತ್ತೊಮ್ಮೆ ಎಲ್ಲ ಚೆಕ್ ಮಾಡಿ. ನಾನು ಬರುತ್ತೇನೆ,' ಅಂದು ಕೋಮಲನನ್ನು ಹೊರಗೆ ಕಳಿಸಿದ. ಕೋಮಲ್ ಬೇಗಬೇಗ ನಡೆದು ಬಂದು ಮನೆ ತಲುಪಿಕೊಂಡ. ವೇಳೆ ಸುಮಾರು ಮಧ್ಯಾನದ ಮೂರೂವರೆ. ಈ ಕಾಮಗಾರಿ ಅಬ್ಬರದಲ್ಲಿ ಊಟ ಮರೆತೇ ಹೋಗಿತ್ತು. ಈಗ ಹೊಟ್ಟೆ ಸ್ವಲ್ಪ ಚುರುಗುಟ್ಟಿತು. ಅಷ್ಟರಲ್ಲಿ ಆ ಮನುಷ್ಯನೂ ಬಂದು ಮನೆ ಒಳಕ್ಕೆ ಸೇರಿಕೊಂಡ.

ಆ ಮನುಷ್ಯ  ತನ್ನ ಕಿಟ್ ಬ್ಯಾಗ್ ಒಳಗೆ ಸಾಮಾನು ತುಂಬಿಕೊಂಡ. ಏನೂ ಬಿಟ್ಟಿಲ್ಲ ಅಂತ ಮತ್ತೆ ಮತ್ತೆ ಚೆಕ್ ಮಾಡಿಕೊಂಡ. ಏಣಿ ತೆಗೆದುಕೊಂಡು ಹೋಗಿ ಶೆಡ್ ಒಳಗೆ ಇಟ್ಟು ಬಂದ. ಪ್ರಾಮಿಸ್ ಮಾಡಿದಂತೆ ಒಂದಿಷ್ಟು ಎಕ್ಸಟ್ರಾ ಕ್ಯಾಮೆರಾ ಕೋಮಲನಿಗೆ ಕೊಟ್ಟ. ಕಿಟ್ ಬ್ಯಾಗನ್ನು ಕಾರ್ ಒಳಗೆ ಇಟ್ಟು ಬರುವಂತೆ ಹೇಳಿದ. ಕೋಮಲ್ ಅಷ್ಟು ಮಾಡಿ ವಾಪಸ್ ಬಂದ.

'alright! ಕೆಲಸ ಮುಗಿಯಿತು. ಈಗ ಮತ್ತೆ ವಾಪಸ್ ಹೋಗುವ ಸ್ಕೀಮ್. ಈಗ ಫುಲ್ ಉಲ್ಟಾ. ನೀವು ಮೊದಲು ಹೊರಡಿ. ಮೊದಲು ನಿಂತಿದ್ದ ನೀಲಗೀರಿ ತೋಪಿನ ಪಕ್ಕ ಹೋಗಿ ಮುಟ್ಟಿಕೊಳ್ಳಿ. ನನಗೆ ಒಂದು ಮಿಸ್ ಕಾಲ್ ಕೊಡಿ. ನಾನು ಮತ್ತೆ ಅದೇ ಕಾಲುದಾರಿಯಿಂದ ಬಂದು ಮುಟ್ಟುತ್ತೇನೆ. ಅಷ್ಟೇ ಈ ಸಲ ನಾನು ಮುಂದಿನ ಬಾಗಿಲಿನಿಂದಲೇ exit ಆಗಬೇಕು. ಯಾಕೆಂದರೆ ಹಿಂದಿನ ಬಾಗಿಲು ಆಟೋಮ್ಯಾಟಿಕ್ ಲಾಕ್ ಆಗುವದಿಲ್ಲ. ನೋ ಪ್ರಾಬ್ಲಮ್. ಸರಿ ನೀವು ಹೊರಡಿ. ಅಷ್ಟೇ ಅಲ್ಲಿ ನೀಲಿಗಿರಿ ತೋಪಿನ ಜಾಗದಲ್ಲಿ ಯಾರೂ ಇರಬಾರದು. ಯಾರಾದರೂ ಇದ್ದರೆ ಮಾತ್ರ ಮಿಸ್ ಕಾಲ್ ಕೊಡಬೇಡಿ. I rather wait here than being seen by anyone else there. OK, sir?' ಅಂತ ಖಡಕ್ ಸೂಚನೆ ಕೊಟ್ಟ ಆ ಮನುಷ್ಯ.

ಆ ಸೂಚನೆ ಪ್ರಕಾರ ಕೋಮಲ್ ಮಾನಸಿಯ ಮನೆಯಿಂದ ಹೊರಟ. ಎಲ್ಲ ನಿರ್ಜನ, ನಿಶ್ಶಬ್ದವಾಗಿತ್ತು. ನೀಲಗಿರಿ ತೋಪಿನ ಪಕ್ಕದ ಜಾಗ ತಲುಪಿದ ಕೋಮಲ್. ಅಲ್ಲೂ ಎಲ್ಲ ನಿರ್ಜವಾಗಿತ್ತು. ತೋಪಿನ ಒಂದು ಮೂಲೆಯಲ್ಲಿ ಯಾರೋ ಎಮ್ಮೆ ಮೇಯಿಸಿಕೊಂಡಿದ್ದರು. ಅದು ಓಕೆ. ಫೋನ್ ತೆಗೆದ ಕೋಮಲ್ ಮಿಸ್ ಕಾಲ್ ಕೊಟ್ಟು ಕೂತ. ಮುಂದಿನ ಎರಡು ನಿಮಿಷದಲ್ಲಿ ಆ ಆಸಾಮಿ ಹಾಜರ್. ಕಾರಿನ ಒಳಗೆ ಬಂದು ಕೂತ. 'ಸರಿ, ನೀವು ಕಾರ್ ಸ್ಟಾರ್ಟ್ ಮಾಡಿ. ನಾನು ನಿತಿನ್ ಅವರಿಗೆ ಫೋನ್ ಮಾಡಿ ಪಿಕಪ್ ಮಾಡಲು ಹೇಳುತ್ತೇನೆ,' ಅನ್ನುತ್ತ ಫೋನ್ ಮಾಡತೊಡಗಿದ. 'ಅರೇ ಇವನ! ಕೆಲಸ ಮುಗಿಯಿತು. ಹೋಗಿ ಊಟ ಮಾಡೋಣ ಅಂತ ಹೇಳೋಣ ಅಂದರೆ ವಾಪಾಸ್ ಹೋಗುತ್ತೇನೆ ಅನ್ನುತ್ತಿದ್ದಾನಲ್ಲ ಈ ಆಸಾಮಿ?!' ಅಂತ ಅಂದುಕೊಂಡ ಕೋಮಲ್. ಆದರೆ ತಕ್ಷಣ ನೆನಪಾಯಿತು. ಇವನು ಮಾಜಿ ಬೇಹುಗಾರ. ಹಾಗೆಲ್ಲ ಎಲ್ಲರ ಜೊತೆ ಬೇರೆಯುವವನೇ ಅಲ್ಲ. ಎಲ್ಲ ರಹಸ್ಯ ಮತ್ತು ನಿಗೂಢ ಅವರ ಕೆಲಸ.

ಟೋಲ್ ನಾಕಾ ಮುಟ್ಟಿ ಹತ್ತು ನಿಮಿಷದ ಒಳಗೆ ನಿತಿನ್ ಶಾನಬಾಗ್ ಹಾಜರಾದ. ಕೋಮಲ್ ಜೊತೆ ಒಂದು ಮಾತೂ ಆಡದೇ, ಡಿಕ್ಕಿಯಿಂದ ತನ್ನ ಕಿಟ್ ಬ್ಯಾಗ್ ತೆಗೆದುಕೊಂಡು ಹೋಗಿ ನಿತಿನ್ ಶಾನಬಾಗನ ಕಾರಲ್ಲಿ ಕೂತ ಆ ಮನುಷ್ಯ. ನಿತಿನ್ ಶಾನಬಾಗ್ ಕೋಮಲ್ ಕಡೆ ಕೈಯಾಡಿಸಿ, ಮತ್ತೆ ಸಿಗೋಣ, ಅನ್ನುತ್ತ ಹುಬ್ಬಳ್ಳಿ ಕಡೆ ಕಾರು ತಿರುಗಿಸಿದ. ಕೋಮಲ್ ಊರ ಹೊರಗಿನ ರೆಸಾರ್ಟ್ ಕಡೆ ಗಾಡಿ ತಿರುಗಿಸಿದ. ಸಂಜೆಯಂತೂ ಅಲ್ಲಿ ಪಾರ್ಟಿ ಇದೆ. ಈಗೇ ಹೋಗಿ ಒಂದಿಷ್ಟು ಬ್ಯಾಡ್ಮಿಂಟನ್ ಆಡಿ, ಒಂದಿಷ್ಟು ಈಜು ಹೊಡೆದು relax ಮಾಡೋಣ ಅಂತ ಅವನ ವಿಚಾರ. ರಹಸ್ಯ ಕ್ಯಾಮೆರಾ ಕಾಮಗಾರಿ ಯಾವದೇ ಅಡ್ಡಿಯಿಲ್ಲದೇ ಮುಗಿದಿದ್ದಕ್ಕೆ ಒಂದು ತರಹದ ನಿರುಮ್ಮಳ ಕೋಮಲನಿಗೆ.

ಭಾಗ - ೧೪ 

ಮುಂದೆ ಒಂದು ವಾರ ಮಾನಸಿ ಇರಲಿಲ್ಲ. ಕೋಮಲ್ ಮಾತ್ರ ಫುಲ್ ಬ್ಯುಸಿ. ಎಷ್ಟೋ ಜನ ಹಳೆ ಗೆಳತಿಯರಿಗೆ ತಿಂಗಳಾನುಗಟ್ಟಲೇ ಅವನು ಸಿಕ್ಕಿರಲೇ ಇಲ್ಲ. ಈಗ ಎಲ್ಲರನ್ನೂ ಸಂತೃಪ್ತಗೊಳಿಸಿದ. ವಿಜಯಾ ಟೀಚರ್ ಮನೆ ಕಡೆ ಹೋಗದೇ ಬಹಳ ತಿಂಗಳುಗಳಾಗಿ ಹೋಗಿದ್ದವು. ಹೋಗಿ ಬಂದ. ವಿಜಯಾ ಟೀಚರ್ ಗಂಡ ಭಾಳ ಅಪರೂಪಕ್ಕೆ ಗಿಡಗಳಿಗೆ ನೀರು ಹಾಕುವ ಸೌಭಾಗ್ಯ ಪಡೆದುಕೊಂಡ.

ಪ್ಲಾನ್ ಪ್ರಕಾರ ಮುಂದಿನ ವಾರ ಮಾನಸಿ ದೆಹಲಿಯಿಂದ ವಾಪಸ್ ಬಂದಳು. ಕೋಮಲ್ ಬೆಳಗಾವಿಗೆ ಹೋಗಿ ಪಿಕಪ್ ಮಾಡಿಕೊಂಡು ಬಂದ. ಮಾನಸಿ ಬಹಳ ಉಲ್ಲಾಸಿತಳಾಗಿದ್ದಳು. ಅದಕ್ಕೆ ಕಾರಣಗಳೂ ಇದ್ದವು. ಆ conference ನಲ್ಲಿ ಆಕೆಯ ಪರಮಗುರು ಪ್ರೊ. ಹೆಂಡರ್ಸನ್ ಭೆಟ್ಟಿಯಾಗಿದ್ದರು. ಪರಮ ಗುರುವಿನ ಸನ್ನಿಧಿಯಲ್ಲಿ ಒಂದು ವಾರ ಕಳೆಯುವ ಸೌಭಾಗ್ಯ. ಮತ್ತೆ ಮಾನಸಿಗೆ ಒಂದು ದೊಡ್ಡ ಅವಾರ್ಡ್ ಕೂಡ ಬಂದಿತ್ತು. ಹಾಗಾಗಿ ತುಂಬ ಸಂತೋಷದಲ್ಲಿದ್ದಳು ಮಾನಸಿ. ಪರಮಗುರು ಪ್ರೊ. ಹೆಂಡರ್ಸನ್ ಅವರನ್ನು ಧಾರವಾಡಕ್ಕೆ ಬರುವಂತೆ ತುಂಬ ಕೇಳಿಕೊಂಡಳು. ಆದರೆ ಅವರಿಗೆ ವೇಳೆ ಇರಲಿಲ್ಲ. ತಮ್ಮ ಶಿಷ್ಯೆಯ ಊರಿಗೆ ಬರಲು ಅವರಿಗೆ ಇಷ್ಟವೇನೋ ಇತ್ತು. ಆದರೆ ಅವರದೇ ಆದ ಅನಿವಾರ್ಯತೆಗಳೂ ಇದ್ದವು. ಹಾಗಾಗಿ, 'Sorry, my dear. May be next time,' ಅಂದು ಹರಸಿ, ನ್ಯೂಯಾರ್ಕ್ ಫ್ಲೈಟ್ ಹತ್ತಿದ್ದರು ಅವರು. 'ಕೋಮಲ್ ನಿನಗೆ ಗೊತ್ತೇ? ಒಮ್ಮೆ ಪರಮಗುರು ಪ್ರೊ. ಹೆಂಡರ್ಸನ್ ಅವರನ್ನು ಧಾರವಾಡಕ್ಕೆ ಕರೆಯಿಸಿಕೊಂಡು, ನಮ್ಮ ಮನೆಯಲ್ಲೇ ಒಂದಿಷ್ಟು ದಿವಸ ಉಳಿಸಿಕೊಳ್ಳಬೇಕು. ನಮ್ಮ ಕರ್ನಾಟಕ ಕಾಲೇಜ್, ಕರ್ನಾಟಕ ಯೂನಿವರ್ಸಿಟಿ ಹುಡುಗರು, ಮಾಸ್ತರರು ಎಲ್ಲ ಅಂತಹ ಮಹಾನ್ ಮೇಧಾವಿಯಿಂದ ಪಾಠ ಕೇಳಬೇಕು. ಅದೇ ನನ್ನ ಆಸೆ!' ಅಂತ ತನ್ನ ಕಣ್ಣುಗಳನ್ನು ಅರಳಿಸಿ ಹೇಳಿದ್ದರು. ಮೊದಲೇ ಅಷ್ಟು ಅಗಲವಾದ ಕಣ್ಣುಗಳು. ಅರಳಿಸಿಬಿಟ್ಟರೆ ಅಷ್ಟೇ ಮತ್ತೆ. ಕೋಮಲ್ ಅವುಗಳಲ್ಲೇ ಕಳೆದುಹೋದ.

ಕೋಮಲ್ ಮಾನಸಿಯನ್ನು ಮನೆಗೆ ಡ್ರಾಪ್ ಮಾಡಿದ. ತಾನೂ ಒಳಗೆ ಬಂದ. ಕೋಮಲ್ ರಹಸ್ಯ ಕ್ಯಾಮೆರಾ ಹಾಕಿಸಿದ ನಂತರ ಮಾನಸಿ ಮೊದಲ ಬಾರಿಗೆ ಆಕೆಯ ಬಂಗಲೆಯೊಳಗೆ ಕಾಲಿಟ್ಟಿದ್ದಳು. ಕೋಮಲನಿಗೆ ಒಳಗಿಂದಲೇ ಒಂದು ತರಹದ ಪುಕುಪುಕಿ. ಆಕಸ್ಮಾತ ಮಾನಸಿ ಎಲ್ಲಿಯಾದರೂ ರಹಸ್ಯ ಕ್ಯಾಮೆರಾ ಕಂಡು ಹಿಡಿದುಬಿಟ್ಟರೆ ಏನು ಗತಿ ಅಂತ. ಆ ಕಾಮಗಾರಿ ಮಾಡಿಕೊಟ್ಟಿದ್ದ ಮನುಷ್ಯ ಗ್ಯಾರಂಟಿ ಕೊಟ್ಟಿದ್ದ. 'ಸಾಮಾನ್ಯ ಜನರಿಗೆ ಇದನ್ನು ಕಂಡುಹಿಡಿಯಲು ಸಾಧ್ಯವೇ ಇಲ್ಲ. ಸ್ಪೆಷಲ್ ಸ್ವೀಪಿಂಗ್ ಸಲಕರಣೆ ತಂದರೆ ಮಾತ್ರ ಹುಡುಕಲು ಸಾಧ್ಯ. ಅಕಸ್ಮಾತ ಈ ಮನೆಯ ಮಂದಿ ಬೇರೆ ಯಾರನ್ನಾದರೂ ಕರೆಸುತ್ತಿದ್ದಾರೆ ಅಂತ ಸಂಶಯ ಬಂದರೆ ಒಂದು ಮಾತು ಹೇಳಿ. ನಾನೇ ಬಂದು ಎಲ್ಲ ಕ್ಯಾಮೆರಾ ತೆಗೆದು, ಕ್ಲೀನ್ ಮಾಡಿಕೊಟ್ಟು ಹೋಗುತ್ತೇನೆ. Otherwise there is absolutely no reason to worry. Nobody can find these tiny devices,' ಅಂತ ಭಾಳ ವಿಶ್ವಾಸದಿಂದಲೇ ಹೇಳಿ ಹೋಗಿದ್ದ.

ಸ್ವಲ್ಪ ಹೊತ್ತು ಮಾತಾಡಿ, ಸಂಜೆ ಸಿಗೋಣ, ಅಂತ ಹೇಳಿದ ಕೋಮಲ್ ಜಾಗ ಖಾಲಿ ಮಾಡಿದ. ಮನೆಯಲ್ಲಿ ಗಂಗವ್ವ ಮತ್ತು ದ್ಯಾಮಪ್ಪ ಕೆಲಸ ಮಾಡಿಕೊಂಡಿದ್ದರು. ಅವರಿಗೆ ಅಂತ ಏನೋ ಗಿಫ್ಟ್ ತಂದಿದ್ದಳು ಮಾನಸಿ. ಕೊಟ್ಟಳು. ಇಬ್ಬರೂ ಭಾಳ ಖುಷಿಯಾಗಿ ತಮ್ಮ ಅವ್ವಾರಾದ ಮಾನಸಿಯನ್ನು ಹರಸಿದರು. ಬೆಕ್ಕನ್ನು ಜಾಸ್ತಿಯೇ ಪ್ರೀತಿ ಮಾಡಿದಳು. ಬೆಕ್ಕಿಗೆ ಮಾತು ಬಂದಿದ್ದರೆ ಕೋಮಲ್ ಅನ್ನುವ ಭಾಡ್ಕೋವ್ ಒಂದು ದಿನ ಸಂಜೆ ತನಗೆ ಊಟ ಹಾಕಲೇ ಇಲ್ಲ ಅಂತ ಹೇಳುತ್ತಿತೋ ಏನೋ. ಯಾಕೆಂದರೆ ರಹಸ್ಯ ಕ್ಯಾಮೆರಾ install ಮಾಡುವ ದಿವಸ ಬೆಕ್ಕಿಗೆ ಸಂಜೆ ಊಟ ಹಾಕುವದನ್ನೇ ಆತ ಮರೆತಿದ್ದ ಅವನು. ಆದರೆ ಸಂಜೆ ಊಟಕ್ಕೆ ಲಂಗಣ ಮಾಡಿಸಿಕೊಂಡಿದ್ದ ಬೆಕ್ಕು ಮರೆತಿರಲಿಲ್ಲ. ಪಾಪ ಹೇಳಲಿಕ್ಕೆ ಬಾಯಿಯಿಲ್ಲ ಅದಕ್ಕೆ. ಕೋಮಲನಿಗೆ ಮಾತ್ರ ಅದರ ನೆನಪೇ ಇಲ್ಲ. In fact ಅವನಿಗೆ ರಹಸ್ಯ ಕ್ಯಾಮೆರಾ ಬಗ್ಗೆ ಕೂಡ ಜಾಸ್ತಿ ನೆನಪಿರಲಿಲ್ಲ. ಮಾನಸಿ ಇಲ್ಲದಾಗ ಬಾಕಿ ಸಖಿಯರು ಅಷ್ಟು ಆವರಿಸಿಕೊಂಡುಬಿಟ್ಟಿದ್ದರು. 

ದೆಹಲಿಯಲ್ಲಿ ದೊಡ್ಡ ಅವಾರ್ಡ್ ಪಡೆದುಕೊಂಡು ಮರಳಿದ ಮಾನಸಿಗೆ ಧಾರವಾಡ ತುಂಬಾ ಸನ್ಮಾನವೋ ಸನ್ಮಾನ.  ಆಕೆ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಸನ್ಮಾನ ಮಾಡಿದರು. ಕರ್ನಾಟಕ ಯೂನಿವರ್ಸಿಟಿ ಸನ್ಮಾನ ಮಾಡಿ, ಒಂದು ಉಪನ್ಯಾಸ ಏರ್ಪಡಿಸಿತು. ಮತ್ತೆ ಬೇರೆ ಬೇರೆ ಸಂಘ ಸಂಸ್ಥೆಗಳೂ ಸಹ ಸನ್ಮಾನ ಮಾಡಿದವು. ಪೇಪರ್ ತುಂಬೆಲ್ಲ ಆಕೆಯದೇ ಸುದ್ದಿ. ಸುಮಾರು ಆರು ತಿಂಗಳಿಂದ ಆಕೆಯ ಬಗ್ಗೆ, ಆಕೆಯ ಮನೆಯಲ್ಲಿ ಆಗುತ್ತಿದ್ದ ವಿಲಕ್ಷಣ ಘಟನೆಗಳ, ಕೊಲೆಗಳ ಬಗ್ಗೆಯೇ ಸುದ್ದಿ ಬರೆದಿದ್ದ ವರದಿಗಾರರಿಗೆ ಬೇರೆಯೇ ತರಹದ ಸುದ್ದಿ ಬರೆಯುವ ಅವಕಾಶ. ಒಂದಿಬ್ಬರು ಆಕೆಯ ಸಂದರ್ಶನ ಕೂಡ ಮಾಡಿದ್ದರು. ಅಷ್ಟೇ ಆಕೆಯ ಕೆಲಸದ ಸ್ಥಳದಲ್ಲಿ ಮಾಡಿದ್ದರೇ ವಿನಃ ಆಕೆಯ ಖೂನಿ ಮಹಲ್ ಮನೆಗೆ ಹೋಗುವ ಧೈರ್ಯ ಯಾರೂ ತೋರಿಸಿರಲಿಲ್ಲ.

ಒಟ್ಟಿನಲ್ಲಿ positive limelight ನಲ್ಲಿ ಬಂದ ಮಾನಸಿ ಅದನ್ನು ಎಂಜಾಯ್ ಮಾಡುತ್ತಿದ್ದಳು. SSLC ಯಲ್ಲಿ, BA, MA ಯಲ್ಲಿ ರಾಂಕ್ ಬಂದಾಗ, ಗೋಲ್ಡ್ ಮೆಡಲ್ ಪಡೆದುಕೊಂಡಾಗ ಇದೇ ತರಹದ ಪ್ರಚಾರ ಸಿಕ್ಕಿತ್ತು. ಧಾರವಾಡಕ್ಕೆ ಬಂದ ಎರಡೇ ವರ್ಷದಲ್ಲಿ ಮತ್ತೆ ಮಾನಸಿ ಮಿಂಚಿದ್ದಳು.

ಆಗ ಒಂದು ಲಫಡಾ ಆಯಿತು. ದೆಹಲಿಯಿಂದ ವಾಪಸ್ ಬಂದ ಎರಡೇ ದಿವಸದಲ್ಲಿ ಅವಳ ಬೆಕ್ಕು ಮಾಯವಾಯಿತು. ಮಾಯವಾಗಿ ಆಗಲೇ ಎರಡು ದಿವಸ ಆಗಿಹೋಗಿದೆ. ಎಲ್ಲಿ ಮೊದಲಿನ ಬೆಕ್ಕಿನಂತೆ ಇದೂ ಕೂಡ ಪಾರ್ಸೆಲ್ ಆಗಿ ವಾಪಸ್ ಬರಲಿದೆಯೇನೋ ಅಂತ ಮಾನಸಿ ಆತಂಕಗೊಂಡಿದ್ದಾಳೆ. ಊಟ ಸೇರುತ್ತಿಲ್ಲ. ನಿದ್ರೆ ಬರುತ್ತಿಲ್ಲ. ಹೇಳಿಕೊಳ್ಳೋಣ ಅಂದರೆ ಕೋಮಲ್ ಬೆಂಗಳೂರಿಗೆ ಹೋಗಿದ್ದಾನೆ. ಏನೋ ಬಿಸಿನೆಸ್ ಮೀಟಿಂಗ್ ಅಂತೆ. ತುಂಬ ಬ್ಯುಸಿ ಅವನು. ನಾಡಿದ್ದು ಬರುತ್ತಾನೆ. ಅಲ್ಲಿಯವರೆಗೆ ಮಾನಸಿಗೆ ತೀವ್ರ ಚಡಪಡಿಕೆ. ಅದನ್ನು ಕೇಳಬೇಡಿ.

ಭಾಗ - ೧೫ 

ಕೋಮಲ್ ಬೆಂಗಳೂರಿಂದ ವಾಪಸ್ ಬಂದ. ಹುಬ್ಬಳ್ಳಿಯಲ್ಲಿ ಫ್ಲೈಟ್ ಇಳಿದಿದ್ದನೋ ಇಲ್ಲವೋ ಅಷ್ಟರಲ್ಲಿ ಬಂತು ಮಾನಸಿಯ ಫೋನ್. ಬೆಂಗಳೂರಿನಲ್ಲಿ ಇದ್ದಾಗಲೂ ಫೋನ್ ಮಾಡಿದ್ದಳು. ಫೋನ್ ಎತ್ತಲು ಆಗಿರಲಿಲ್ಲ. ಭಾಳ ಬ್ಯುಸಿ ಇದ್ದ. ಈಗ ಎತ್ತಿದ. 'Yes, darling. ಈಗ ಮಾತ್ರ ಲ್ಯಾಂಡ್ ಆದೆ. ಸಂಜೆ ಸಿಗೋಣ,' ಅಂದ. 'ಕೋssಮಲ್!' ಅಂದ ಮಾನಸಿ ಮುಂದೆ ಮಾತಾಡಲಿಲ್ಲ. ನಂತರ ಕೇಳಿದ್ದು ಆಕೆಯ 'ಹೋ!' ಅನ್ನುವ ಅಳು. ಕೋಮಲ್ ಘಾಬರಿಯಾದ. 'ಫೋನ್ ಮಾಡಿ, ಮಾತಾಡದೇ ಅಳುತ್ತಾಳೆ ಅಂದರೆ ಏನರ್ಥ? ಏನೋ ಲಫಡಾ ಜರೂರ್ ಆಗಿದೆ. ಆದರೆ ಲಫಡಾ ಆಗಲು ಉಳಿದವರು ಯಾರು? ಮಾನಸಿ ಒಬ್ಬಳು ಮಾತ್ರ. ಅವಳೇ ಮಾತಾಡುತ್ತಿದ್ದಾಳೆ. ಹಾಗಿದ್ದರೆ ಯಾರಿಗೆ ಏನಾಗಿರಬಹುದು? What could be wrong??' ಅಂತ ಯೋಚಿಸಿದ ಕೋಮಲ್. ಕೋಮಲ್ ಪ್ಲೇನಿನಿಂದ ಇಳಿದು, ಲಗೇಜ್ ಕಲೆಕ್ಟ್ ಮಾಡಿಕೊಳ್ಳುವವರೆಗೂ ಮಾನಸಿ ಅಳುತ್ತಲೇ ಇದ್ದಳು. ಕೋಮಲ್ ಸುಮ್ಮನೆ ಉಳಿದ. ಅತ್ತು ಅತ್ತು ಸಾಕಾದ ಮಾನಸಿ ಬಾಂಬ್ ಹಾಕಿದಳು. 'ಕೋಮಲ್, ನನ್ನ ಬೆಕ್ಕು ಕಾಣುತ್ತಿಲ್ಲ. ಸುಮಾರು ಐದು ದಿವಸಗಳಿಂದ ಅದು ಕಂಡೇ ಇಲ್ಲ. ನನಗೆ ಭಾಳ ಹೆದರಿಕೆಯಾಗುತ್ತಿದೆ. ಎಲ್ಲಿ ಮತ್ತೆ ಆ ಬೆಕ್ಕನ್ನೂ ಕೊಂದು, ಪಾರ್ಸೆಲ್ ಮಾಡಿ ಕಳಿಸುತ್ತಾರೋ ಏನೋ? I am devastated Komal!' ಅದನ್ನು ಕೇಳಿದ ಕೋಮಲ್ ಬೆಚ್ಚಿಬಿದ್ದ. 'ಹಾಂ?! ಕೊನೆಗೆ ಉಳಿದುಕೊಂಡಿದ್ದ ಆಖರೀ ಬೆಕ್ಕು ಕೂಡ ಗಾಯಬ್ ಆಯಿತೇ?' ಅಂದುಕೊಂಡವನಿಗೆ ನೆನಪಾಗಿದ್ದು ಮಾನಸಿ ಮನೆ ತುಂಬ ಅಡಗಿಸಿಟ್ಟಿದ್ದ ರಹಸ್ಯ ಕ್ಯಾಮೆರಾಗಳು. ಇವತ್ತೇ ಹೋಗಿ, ಡಿಸ್ಕ್ ತೆಗೆದು ನೋಡೇಬಿಡಬೇಕು. ಯಾರಾದರೂ ಬೆಕ್ಕು ಕದ್ದಿದ್ದೇ ಹೌದಾದರೆ ಆ ಖದೀಮರು ಕಂಡೇ ಕಾಣುತ್ತಾರೆ. I am going to kill those bastards' ಅಂದುಕೊಂಡ ಕೋಮಲ್ ಹುಬ್ಬಳ್ಳಿ ಏರ್ಪೋರ್ಟ್ ನಿಂದ ಹೊರಗೆ ಬಂದ. ತಮ್ಮ ಸುಂದರೇಶ್ ಕರೆದುಕೊಂಡು ಹೋಗಲು ಬಂದಿದ್ದ. ತಮ್ಮನ ಭುಜ ತಟ್ಟಿ, ಕಾರಲ್ಲಿ ಹೋಗಿ ಕೂತ ಕೋಮಲ್. ಫೋನ್ ರಿಂಗಾಯಿತು. ನೋಡಿದರೆ ವಿಜಯಾ ಟೀಚರ್. ಕೋಮಲ್ ಫೋನ್ ಎತ್ತಲಿಲ್ಲ. ಅವನಿಗೆ ಒಂದೇ ಧ್ಯಾನ. ಮಾನಸಿಯ ಮನೆಗೆ ಹೋಗಿ ಬೇಗನೆ ಡಿಸ್ಕ್ ತೆಗೆದುಕೊಂಡು  ಬಂದು ನೋಡಬೇಕು. ಮಾನಸಿಯ ಬೆಕ್ಕಿನ ಕಣ್ಮರೆ ಹಿಂದಿನ ರಹಸ್ಯ ಪತ್ತೆ ಹಚ್ಚಬೇಕು. ಐಡಿಯಾ ಏನೋ ಭಾಳ ಚೆನ್ನಾಗಿತ್ತು. ಆದರೆ ರಹಸ್ಯ ಕ್ಯಾಮೆರಾಗಳು ಸಂಗ್ರಹಿಸಿದ್ದ ವೀಡಿಯೊ ನೋಡಲು ಕೋಮಲ್ ತಯಾರಿದ್ದನೇ? ನೋಡಲಿರುವ ದೃಶ್ಯಗಳನ್ನು ಅರಗಿಸಿಕೊಳ್ಳವ ತಾಕತ್ತು ಇತ್ತೇ? ಅಂತಹ ಪ್ರಶ್ನೆಗಳು ಕೋಮಲ್ ಮನದಲ್ಲಿ ಅಂದು ಮೂಡಲಿಲ್ಲ. ತಮ್ಮ ಸುಂದರೇಶ್ ಬೈಪಾಸ್ ರೋಡಿನ ಮೂಲಕ ಧಾರವಾಡ ಕಡೆ ಗಾಡಿ ಓಡಿಸಿದ. ಕೋಮಲ್ ಸೀಟನ್ನು ಹಿಂದೆ ತಳ್ಳಿಕೊಂಡು, ಕಣ್ಣು ಮುಚ್ಚಿದ. ಕಣ್ಣ ಮುಂದೆ ಮಾನಸಿಯ ಬೆಕ್ಕು ಬಂದು ಅದರ ಪಂಜಾದಿಂದ ಮುಖಕ್ಕೆ ಪರಚಿದಂತಾಯಿತು. 'ಏ! ಏ! ದೂರ ಹೋಗು!' ಅನ್ನುವಂತೆ ಮುಖದ ಮುಂದೆ ಕೈ ಅತ್ತಿತ್ತ ಅಲ್ಲಾಡಿಸಿದ. ಡ್ರೈವ್ ಮಾಡುತ್ತಿದ್ದ ಸುಂದರೇಶ್ ನಕ್ಕ. 'ಅಣ್ಣ ಎಲ್ಲೋ ಹಗಲುಗನಸು ಕಾಣುತ್ತಿದ್ದಾನೆ!' ಅಂದುಕೊಳ್ಳುತ್ತ ಆಕ್ಸಿಲರೇಟರ್ ದಬಾಯಿಸಿ ಒತ್ತಿದ. ಪಕ್ಕದಲ್ಲಿ ನುಗ್ಗಿಕೆರೆ ಹನುಮಪ್ಪನ ಗುಡಿ ಕಾಣಿಸಿತು. ಸುಂದರೇಶ್ ನಮಸ್ಕಾರ ಮಾಡಿದ. ಕಣ್ಣು ಮುಚ್ಚಿದ್ದ ಕೋಮಲ್ ಅದನ್ನು ನೋಡಲಿಲ್ಲ. ನಮಸ್ಕಾರ ಮಾಡಲಿಲ್ಲ. ಅಂತಹ ಶಕ್ತಿಶಾಲಿ ದೇವರಾದ ನುಗ್ಗಿಕೆರೆ ಹನುಮಪ್ಪನಿಗೆ ನಮಸ್ಕಾರ ಮಾಡಿದ್ದರೆ ಮುಂದಾಗುವ fatal ಅವಗಢದಿಂದ ಬಚಾವಾಗುತ್ತಿದ್ದನೋ ಏನೋ. ಗೊತ್ತಿಲ್ಲ. ಎಲ್ಲ ವಿಧಿ ಲೀಲೆ.

ಭಾಗ - ೧೬

ಮನೆ ಮುಂದೆ ಗಾಡಿ ಬಂದು ನಿಂತು, 'ಅಣ್ಣಾ, ಅಣ್ಣಾ, ಮನೆ ಬಂತು. ಏಳು,' ಅಂತ ತಮ್ಮ ಸುಂದರೇಶ್ ಭುಜ ಹಿಡಿದು ಅಲುಗಾಡಿಸಿದಾಗಲೇ ಕೋಮಲನಿಗೆ ಎಚ್ಚರ. 'ಒಳ್ಳೆ ಜೊಂಪು ಹತ್ತಿತ್ತು,' ಅನ್ನುತ್ತ ಇಳಿದ. ಮನೆ ಹೊಕ್ಕು, ತನ್ನ ಬೆಡ್ರೂಮ್ ಸೇರಿಕೊಂಡ. ಅಲ್ಲಿಗೇ ಚಹಾ ತಂದು ಕೊಟ್ಟಳು ಹೆಂಡತಿ. 'ಇವಳು ಎಷ್ಟು ಒಳ್ಳೆಯವಳು. ಎಷ್ಟು ಅಮಾಯಕಳು,' ಅಂದುಕೊಂಡ ಕೋಮಲ್. ಚಹಾ ಕುಡಿದು ಸ್ನಾನಕ್ಕೆ ಹೋದ. ಶಾವರಿನಿಂದ ಬಿಸಿ ನೀರು ಹಿತವಾಗಿ ಬೀಳುತ್ತಿದ್ದರೆ ಕೋಮಲ್ ಮುಂದಿನ ಹೆಜ್ಜೆ ಬಗ್ಗೆ ವಿಚಾರ ಮಾಡತೊಡಗಿದ. 'ಈಗಲೇ ಮಾನಸಿ ಮನೆಗೆ ಹೋಗಿ ಡಿಸ್ಕ್ ತೆಗೆದುಕೊಂಡು ಬಂದು ನೋಡಿಬಿಡಲೇ? ಅಥವಾ ಸಂಜೆ ಹೋದಾಗ ತರಲೇ? ರಾತ್ರಿಯಲ್ಲಿ ಮನೆ ಹಿಂದೆ ಇರುವ ಶೌಚಾಲಯದ ಹತ್ತಿರ ಹೋಗುವದು ಕಷ್ಟ. ಮತ್ತೆ ಮಾನಸಿ ಬೇರೆ ಇರುತ್ತಾಳೆ. ಅದೆಲ್ಲ ಕಷ್ಟದ ಕೆಲಸ. ಈಗೇ ಹೋಗಿ ಬಂದುಬಿಡಬೇಕು. ಆದರೆ ಅಲ್ಲಿ ಈಗ ಕೆಲಸದ ಗಂಗವ್ವ, ದ್ಯಾಮಪ್ಪ ಇದ್ದರೂ ಇರಬಹದು. ಅವರನ್ನು ಹೇಗಾದರೂ ಸಂಬಾಳಿಸಿದರೆ ಆಯಿತು. ಅಷ್ಟು ದೊಡ್ಡ ಮನೆಯಲ್ಲಿ, ಕಾಂಪೌಂಡಿನಲ್ಲಿ ಒಮ್ಮೊಮ್ಮೆ ಯಾರಾದರೂ ಬಂದು ಹೋಗಿ ಮಾಡಿದ್ದು ಇದ್ದವರಿಗೇ ಗೊತ್ತಾಗುವದಿಲ್ಲ. ಹಾಗಾಗಿ ಈಗಲೇ ಹೋಗಿಬರಬೇಕು. ಮಾನಸಿಯಂತೂ ಆಕೆಯ ಕೆಲಸದಲ್ಲಿ ಇರುತ್ತಾಳೆ. ಆಕೆ ಸಂಜೆ ವಾಪಸ್ ಬರುವಷ್ಟರಲ್ಲಿ ಕೆಲಸ ಮುಗಿಸಬೇಕು,' ಅಂದುಕೊಂಡ. ಬೇಗ ಬೇಗ ಸ್ನಾನ ಮುಗಿಸಿದ.  ಬಟ್ಟೆ ಹಾಕಿಕೊಂಡು ಟೈಮ್ ನೋಡಿದ. ಮಧ್ಯಾನ ಒಂದೂವರೆ.

ಮನೆಯಿಂದ ಹೊರಬಿದ್ದ ಕೋಮಲ್ ಗಾಡಿಯನ್ನು ಸೀದಾ ಮಾನಸಿಯ ಮನೆ ಕಡೆ ತಿರುಗಿಸಿದ. ಗಾಡಿಯನ್ನು ರಸ್ತೆಯಲ್ಲೇ ಬಿಟ್ಟು, ಒಳಗೆ ನಡೆದು ಹೋಗೋಣವೋ ಅಥವಾ ಡ್ರೈವ್ ಮಾಡಿಕೊಂಡು ಹೋಗಿ ಪೊರ್ಟಿಕೋದಲ್ಲಿ ನಿಲ್ಲಿಸೋಣವೋ ಅಂತ ವಿಚಾರ ಮಾಡಿದ. ಗಂಗವ್ವ, ದ್ಯಾಮಪ್ಪ ಒಂದು ವೇಳೆ ಇದ್ದರೆ ಗಾಡಿ ಶಬ್ದ ಕೇಳಿ ಬಂದುಬಿಡುತ್ತಾರೆ. ಗಾಡಿ ರಸ್ತೆಯಲ್ಲೇ ಹಚ್ಚಿ ಹೋದರೆ ಅವರ ಕಣ್ಣಿಗೆ ಬೀಳದೇ ಕೆಲಸ ಮುಗಿಸಿಕೊಂಡು ಬರಬಹುದು ಅಂತ ಯೋಚಿಸಿ ಗಾಡಿ ಹೊರಗೇ ಬಿಟ್ಟ. ಜಾಗರೂಕತೆಯಿಂದ, ಆಚೀಚೆ ನೋಡುತ್ತ, ಮಾವಿನ ಮರಗಳ ಮಧ್ಯದ ಕಾಲು ಹಾದಿಯಲ್ಲಿ ಮಾನಸಿಯ ಮನೆಯ ಕಡೆ ನಡೆದ. ಪ್ರತಿ ಕೆಲವು ಹೆಜ್ಜೆಗಳ ನಂತರ ನಿಂತು, 'ಯಾರಾದರೂ ಇದ್ದಾರೇನೋ?' ಅಂತ ನೋಡುತ್ತಿದ್ದ. ಯಾರೂ ಕಣ್ಣಿಗೆ ಬೀಳಲಿಲ್ಲ.

ಮಾನಸಿಯ ಬಂಗಲೆಯ ಮುಂಬಾಗಿಲಿನ ಮುಂದೆ ಬಂದು ನಿಂತಿದ್ದ ಕೋಮಲ್. ಆದರೆ ತನ್ನ ಹತ್ತಿರವಿದ್ದ ಡೂಪ್ಲಿಕೇಟ್ ಕೀಲಿಯಿಂದ ಬಾಗಿಲು ತೆಗೆದು ಒಳಗೆ ಹೋಗಲಿಲ್ಲ. ಎಡಕ್ಕೆ ಹೋಗಿ, ಮನೆಯನ್ನು ಸುತ್ತಿ, ಹಿಂದಿದ್ದ ಶೌಚಾಲಯಗಳ ಕಡೆ ನಡೆದ. ಸುತ್ತ ಮುತ್ತ ಮತ್ತೆ ಮತ್ತೆ ನೋಡುತ್ತ ಹೆಜ್ಜೆ ಹಾಕಿದ. ಯಾರೂ ಕಾಣಲಿಲ್ಲ. ಎಲ್ಲ ಕಡೆ ಪೂರ್ತಿ ನಿರ್ಮಾನುಷ, ನಿರ್ಜನ, ನಿಶ್ಶಬ್ದ ವಾತಾವರಣ.

ತುಂಬ ಜಾಗರೂಕನಾಗಿ ಮೊದಲ ಬಚ್ಚಲಮನೆಯ ಬಾಗಿಲು ನೂಕಿದ ಕೋಮಲ್. ಒಳಗೆ ಕತ್ತಲಿತ್ತು. ಇವನ ಹತ್ತಿರ ಬ್ಯಾಟರಿ ಇರಲಿಲ್ಲ. ಎರಡೂ ಬಾಗಿಲು ಪೂರ್ತಿ ತೆಗೆದ. ಹಳೆ ಕಾಲದ ಬಾಗಿಲು. ಬಹಳ ದಿನಗಳಿಂದ ಉಪಯೋಗ ಮಾಡಿಲ್ಲ. ಬಾಗಿಲಿನ ಹಿಂಜುಗಳಿಗೆ ಎಣ್ಣೆ ಬಿಟ್ಟು ಯಾವ ಜಮಾನಾ ಆಗಿಹೋಗಿತ್ತೋ ಏನೋ. ಕರ್ರ್! ಅಂತ ಶಬ್ದ ಮಾಡುತ್ತ ಬಾಗಿಲು ತೆಗೆಯಿತು. 'ಛೇ! ಎಷ್ಟು ದೊಡ್ಡ ಶಬ್ದ ಮಾಡುತ್ತದೆ ಈ ಬಾಗಿಲು. ಮುಂದಿನ ಸಲ ಬ್ಯಾಟರಿ ಮರೆಯದೇ ತರಬೇಕು,' ಅಂದುಕೊಂಡ. ಮೊಬೈಲ್ ಫೋನಿನಲ್ಲಿಯೂ ಬ್ಯಾಟರಿ ಇರುತ್ತದೆ ಅನ್ನುವದು ನೆನಪಿಗೆ ಬರಲೇ ಇಲ್ಲ. ಎರಡೂ ಬಾಗಿಲನ್ನು ಪೂರ್ತಿ ತೆಗೆದ ನಂತರ ಒಳಗೆ ಬೇಕಾದಷ್ಟು ಬೆಳಕಾಯಿತು. ಹೋಗಿ ಹಕ್ಕಿ ಗೂಡನ್ನು ಆಚೀಚೆ ಸರಿಸಿದ. ಸೆಂಟ್ರಲ್ ಯೂನಿಟ್ಟಿನ ಬಟನ್ ಒತ್ತಿದ. ಮತ್ತೆ ಮತ್ತೆ ಒತ್ತಿದ. ಹತ್ತೂ ಡಿಸ್ಕುಗಳು ಒಂದೊಂದಾಗಿ ಹೊರಗೆ ಬಂದವು. 'ಇವನ್ನು ಮತ್ತೆ ವಾಪಸ್ ಹಾಕಿ ಹೋಗಬೇಕು. ಇಲ್ಲವಾದರೆ ರೆಕಾರ್ಡ್ ಆಗುವದೇ ಇಲ್ಲ,' ಅಂತ ತನಗೆ ತಾನೇ ನೆನಪುಮಾಡಿಕೊಂಡು, ಹಕ್ಕಿ ಗೂಡನ್ನು ಮುಚ್ಚಿ, ಡಿಸ್ಕುಗಳನ್ನು ಅಂಗಿಯಲ್ಲಿ ಮುಚ್ಚಿಕೊಂಡು ಹೊರಬಿದ್ದ. ಬಾಗಿಲು ಮುಚ್ಚಿದ. ಮತ್ತೆ ಅದೇ ಕರ್ರ್! ಶಬ್ದ. 'ಇದಕ್ಕೆ ಒಂದಿಷ್ಟು ಕೀಲಿನೆಣ್ಣೆ ಹಾಕಬೇಕು,' ಅಂತ ಮತ್ತೊಂದು ನೋಟ್ ಮಾಡಿಕೊಂಡ.

ಪುರಾತನ ಶೌಚಾಲಯದ ಮೆಟ್ಟಿಲ ಮೇಲೆ ನಿಂತು ಒಂದು ಸಲ ಎಲ್ಲ ಕಡೆ ಕಣ್ಣಾಯಿಸಿದ. ಯಾರೂ ಕಂಡು ಬರಲಿಲ್ಲ. ಕೆಲಸದ ಗಂಗವ್ವ, ದ್ಯಾಮಪ್ಪ ಇವತ್ತು ಕೆಲಸಕ್ಕೆ ಬಂದಿರಲಿಕ್ಕೆ ಇಲ್ಲ ಅಂದುಕೊಂಡ. ಒಳ್ಳೆಯದೇ ಆಯಿತು. ಮುಂದಿನ ಪ್ರಶ್ನೆ ಮನಸ್ಸಿನಲ್ಲಿ ಉದ್ಭವಿಸಿತು. 'ಈ ಹತ್ತೂ ಡಿಸ್ಕುಗಳನ್ನು ಮನೆಗೆ ತೆಗೆದುಕೊಂಡು ಹೋಗಿ ನೋಡುವದೋ ಅಥವಾ.....' ಮನೆಗೆ ಹೋಗಿ ನೋಡಬಹುದು. ಏನೂ ತೊಂದರೆ ಇಲ್ಲ. ಆದರೆ ಅವನ್ನು ಮತ್ತೆ ವಾಪಸ್ ಮಾಡಲು ನಾಳೆ ಬರಬೇಕು. ನಾಳೆ ಬಂದಾಗ ಕೆಲಸದವರು ಇದ್ದರೆ ದೊಡ್ಡ ಕಷ್ಟ. ಹೇಗೂ ಮಾನಸಿ ಮನೆಯ ಚಾವಿ ಇದೆ. ಮನೆಯಲ್ಲಿ ಯಾರೂ ಇಲ್ಲ. ಮಾನಸಿ ಮನೆಯ ಡಿವಿಡಿ ಪ್ಲೇಯರ್ ಒಳಗೆ ಹಾಕಿ ನೋಡಿದರಾಯಿತು. ಸಮಯ ಎರಡು ಘಂಟೆ ಮಾತ್ರ. ಮಾನಸಿಯಂತೂ ಸಂಜೆ ಆರರ ಮೊದಲು ಮನೆಗೆ ವಾಪಸ್ ಬರುವದಿಲ್ಲ. ಎಲ್ಲ ಡಿಸ್ಕ್ ನೋಡಿ, ಯಾವದಾದರೂ ಡಿಸ್ಕಿನಲ್ಲಿ ಉಪಯುಕ್ತ ಮಾಹಿತಿ ಸಿಕ್ಕರೆ ಅದನ್ನು ಮಾತ್ರ ಮನೆಗೆ ತೆಗೆದುಕೊಂಡು ಹೋದರಾಯಿತು. ಉಳಿದವನ್ನು ಮತ್ತೆ ಅದೇ ಸೆಂಟ್ರಲ್ ಯೂನಿಟ್ ಒಳಗೆ ಹಾಕಿ ಜಾಗ ಖಾಲಿ ಮಾಡಿದರಾಯಿತು. ಹೆಚ್ಚು ಹೊತ್ತು ರೆಕಾರ್ಡಿಂಗ್ ಕೂಡ ನಿಲ್ಲುವದಿಲ್ಲ. ಎಲ್ಲ ಡಿಸ್ಕ್ ಮನೆಗೆ ತೆದುಕೊಂಡು ಹೋಗಿ, ಡಿಸ್ಕುಗಳನ್ನು ಮರಳಿ ಹಾಕುವ ಮೊದಲೇ ಏನಾದರೂ ಲಫಡಾ ನಡೆದರೆ ಏನೂ ರೆಕಾರ್ಡ್ ಆಗುವದಿಲ್ಲ. ಅದು ದೊಡ್ಡ ರಿಸ್ಕ್. ಅದಕ್ಕೇ ಮಾನಸಿ ಮನೆಯಲ್ಲೇ ಕೂತು ಬೇಗ ಬೇಗ ಅಷ್ಟೂ ಡಿಸ್ಕ್ ನೋಡಿಬಿಡಬೇಕು, ಅಂತ ನಿರ್ಧರಿಸಿ, ಮಾನಸಿ ಮನೆಯತ್ತ ನಡೆಯತೊಡಗಿದ. ಎದೆ ಮಾತ್ರ ಧಕ್ ಧಕ್! ಮಾನಸಿಯ ಬಂಗಲೆಗೆ ರಹಸ್ಯ ಕ್ಯಾಮೆರಾ ಹಾಕಿದ ಮೇಲೆ ಮೊದಲ ಬಾರಿಗೆ ವೀಡಿಯೊ ರೆಕಾರ್ಡಿಂಗ್ ನೋಡುವವನಿದ್ದ. ಏನೇನು ಕಾಣಲಿದೆಯೋ? ದೇವರಿಗೇ ಗೊತ್ತು.

ಮಾನಸಿಯ ಬಂಗಲೆಯ ಮುಂಬಾಗಿಲಿನ ಮುಂದೆ ನಿಂತು ಒಮ್ಮೆ ತಲೆಯೆತ್ತಿ ನೋಡಿ ಒಂದು ಸ್ಮೈಲ್ ಕೊಟ್ಟ. ಟಾಟಾ ಮಾಡಿದ. ಅವನಿಗೆ ಗೊತ್ತು ಅಲ್ಲೊಂದು ರಹಸ್ಯ ಕ್ಯಾಮೆರಾ ಹುದುಗಿದೆ ಅಂತ. ಏನುಪಯೋಗ? ಅಲ್ಲಿದ್ದ ಕ್ಯಾಮೆರಾ ಕೋಮಲನನ್ನು ಸೆರೆಹಿಡಿಯಿತು. ರೆಕಾರ್ಡ್ ಆಗಲಿಲ್ಲ ಅಷ್ಟೇ. ಯಾಕೆಂದರೆ ಎಲ್ಲ ಡಿಸ್ಕುಗಳು ಕೋಮಲನ ಕೈಯಲ್ಲೇ ಇದ್ದವು.

ಭಾಗ - ೧೭

ಹೇಗೂ ಡೂಪ್ಲಿಕೇಟ್ ಕೀ ಇತ್ತು.  ಅದನ್ನು ಬಳಸಿಕೊಂಡು ಕೋಮಲ್ ಮಾನಸಿ ಬಂಗಲೆಯೊಳಗೆ ಹೊಕ್ಕ. ಒಳಗೆ ಗವ್ವೆನ್ನುವ ಮೌನ. ನಿಶ್ಶಬ್ದ. ಮೊದಲಾದರೆ ಬೆಕ್ಕಾದರೂ ಬಂದು ಕಾಲಿಗೆ ಅಡರುತ್ತಿತ್ತು. ಈಗ ಅದೇ ಇಲ್ಲ. ಡಿಸ್ಕು ಹಾಕಿ ನೋಡಬೇಕು. ಅದರಲ್ಲಿ ಆ ಬೆಕ್ಕು ಎಲ್ಲಿಯಾದರೂ ಕಾಣುತ್ತದೆಯೋ ಏನೋ?

ಹಾಲಿನಲ್ಲಿದ್ದ ಟೀವಿ, ಡಿವಿಡಿ ಆನ್ ಮಾಡಿದ ಕೋಮಲ್. ಡಿಸ್ಕುಗಳ ಮೇಲೆ ಸರಣಿಯಾಗಿ ೧, ೨, ೩ ಅಂತ ಸಂಖೆ ಇತ್ತು. ಮೊದಲಿಂದ ನೋಡೋಣ ಅಂತ ಮೊದಲನೇ ಡಿಸ್ಕ್ ಒಳಗೆ ತಳ್ಳಿದ. password ಕೇಳಿತು. ಅದು ಆಗಲೇ ಅವನಿಗೆ by-heart ಆಗಿತ್ತು. password ಒತ್ತಿದ. ಡಿಸ್ಕ್ ಪ್ಲೇ ಆಯಿತು. ರಹಸ್ಯ ಕ್ಯಾಮೆರಾಗಳು ಸೆರೆಹಿಡಿದಿದ್ದ ದೃಶ್ಯಗಳು ಪರದೆ ಮೇಲೆ ಮೂಡಿಬರತೊಡಗಿದವು. ಅವನ್ನು ನೋಡುತ್ತ ಕುಳಿತ ಕೋಮಲ್.

ಮೊದಮೊದಲು ಮಜಾ ಅನ್ನಿಸಿತು. ಹದಿನೈದು ನಿಮಿಷಗಳ ನಂತರ ಕೆಟ್ಟ ಬೋರ್ ಅನ್ನಿಸಿತು. ಅದೆಷ್ಟು ಕ್ಯಾಮೆರಾ install ಮಾಡಿದ್ದನೋ ಆ ಪುಣ್ಯಾತ್ಮ! ಕಂಪೌಂಡಿನ ಒಳಗಿನ, ಹೊರಗಿನ ಅಷ್ಟೂ ವಿವರಗಳೂ ದಾಖಲಾಗಿಬಿಟ್ಟಿವೆ. ಮಾವಿನ ಮರದ ಮೇಲೆ ಕೆಳಗೆ ಹತ್ತಿ ಇಳಿದು ಮಾಡುತ್ತಿರುವ ಅಳಿಲು, ಮಾವಿನ ಮರದ ಬುಡಕ್ಕೇ ಉಚ್ಚೆ ಹೊಯ್ಯುತ್ತಿರುವ ದ್ಯಾಮಪ್ಪ, ದೇವರ ಪೀಠದ ಮುಂದೆ ಮೂಗಿನಲ್ಲಿ ಬೆಟ್ಟು ಹಾಕಿ ಪೆರಟುತ್ತಿರುವ ಗಂಗವ್ವ ಎಲ್ಲರೂ ಅದರಲ್ಲಿ ಸೆರೆಸಿಕ್ಕುಬಿಟ್ಟಿದ್ದಾರೆ. ಎಲ್ಲ ವಿವರವಾಗಿ ನೋಡುತ್ತ ಹೋದರೆ ಅಷ್ಟೇ ಮತ್ತೆ. ರಾತ್ರಿ ಕಳೆದು ಬೆಳಗಾಗುತ್ತದೆ. ಟೈಮ್ ಬೇರೆ ಮಧ್ಯಾನ ಎರಡೂವರೆ ಘಂಟೆ. ಬೇಗಬೇಗ ನೋಡಿ ಮುಗಿಸಬೇಕು ಅಂತ ವಿಚಾರ ಮಾಡಿದ. ಫಾಸ್ಟ್ ಫಾರ್ವರ್ಡ್ ಮಾಡುತ್ತ ಹೋದ. ಒಂದಾದಮೇಲೊಂದು ಡಿಸ್ಕ್ ಹಾಕುತ್ತ ಹೋದ.

ಐದನೆಯದೋ ಆರನೆಯದೋ ಡಿಸ್ಕ್ ನೋಡಲು ಶುರುಮಾಡಿದ. ಮೊದಮೊದಲು ಸಿಕ್ಕಾಪಟ್ಟೆ ಬೋರಾಗಿಯೇ ಶುರುವಾಯಿತು. ಸೋಫಾದ ಮೇಲೆ ಕಾಲು ಚಾಚಿಕೊಂಡು ಮಲಗಿದಂತೆ ಕೂತಿದ್ದ ಕೋಮಲ್ ಅನ್ಯಮನಸ್ಕನಾಗಿ ನೋಡುತ್ತಿದ್ದ. ಫಾಸ್ಟ್ ಫಾರ್ವರ್ಡ್ ಮಾಡಿಕೊಂಡು ಹೊರಟಿದ್ದ. ಏನೋ ಕಂಡಿತು! ಸಟಕ್ ಅಂತ ಎದ್ದು ಕೂತ. ಟೀವಿ ಮೇಲೆ ಮೂಡಿದ್ದು ಅದೇ ಆಕೃತಿ. ಅದನ್ನು ಕೋಮಲ್ ಹೇಗೆ ಮರೆತಾನು!? ಆವತ್ತು ರಾತ್ರಿ ಊಟ ಕೊಡಲು ಬಂದಿದ್ದ. ಮಾನಸಿ ಇರಲಿಲ್ಲ. ಊಟ ಇಟ್ಟು ಹೋಗೋಣ ಅನ್ನುವಷ್ಟರಲ್ಲಿ ಒಂದು ಆಕೃತಿ ಹಿಂದಿನ ಬಾಗಿಲಿಂದ ಎಂಟ್ರಿ ಕೊಟ್ಟಿತ್ತು. ಉದ್ದನೆ ನಿಲುವಂಗಿ ಹಾಕಿತ್ತು. ತಲೆ ಮುಚ್ಚುವ hoodie ಬೇರೆ. ಚಿತ್ರ ವಿಚಿತ್ರವಾಗಿ ಹಾಡು ಗುಣುಗುತ್ತ, ರೌಂಡ್ ರೌಂಡ್ ಕುಣಿಕುಣಿದು, ಮಹಡಿ ಹತ್ತಿ ಮಾಯವಾಗಿತ್ತು. bookshelf  ಹಿಂದೆ ಬಚ್ಚಿಟ್ಟುಕೊಂಡು ನಿಂತಿದ್ದ ಕೋಮಲ್ ಹೇಗೋ ಆ ಆಕೃತಿಯ ಕಣ್ಣಿಗೆ ಬೀಳದೇ ಬಚಾವಾಗಿ ಬಂದಿದ್ದ. ಮರುದಿವಸವೇ ಮಾನಸಿಯ ಮತ್ತೊಂದು ನಾಯಿ ಜೋರೋ ಸಿಗಿದು ಹಾಕಿದ ಸ್ಥಿತಿಯಲ್ಲಿ ಸತ್ತು ಬಿದ್ದಿತ್ತು. ಕೋಮಲ್ ವಾರಗಟ್ಟಲೇ ಜ್ವರ ಬಂದು ಮಲಗಿದ್ದ. ಅದಕ್ಕೆಲ್ಲ ಕಾರಣ ಅದೇ ಆ ನಿಗೂಢ ಆಕೃತಿ. ಅದು ಈಗ ಮತ್ತೆ ಮಾನಸಿಯ ಮನೆಯಲ್ಲಿ ಹಾಕಿದ ರಹಸ್ಯ ಕ್ಯಾಮೆರಾದಲ್ಲಿ ದಾಖಲಾಗಿದೆ.

ಸಿಕ್ಕಾಪಟ್ಟೆ excite ಆದ ಕೋಮಲ್ ಎದ್ದು ಕೂತು, ಗಮನವಿಟ್ಟು ವೀಡಿಯೊ ಫೀಡ್ ನೋಡತೊಡಗಿದ. ಬೇರೆ ಬೇರೆ ಕ್ಯಾಮರಾಗಳಿಂದ ರೆಕಾರ್ಡ್ ಆಗಿದ್ದ ವೀಡಿಯೊ ಫೀಡುಗಳು ಟೀವಿ ಪರದೆಯನ್ನು ಚಿಕ್ಕ ಚಿಕ್ಕ ವಿಭಾಗ ಮಾಡಿಕೊಂಡು ಅದರಲ್ಲಿ ತೋರಿಬರುತ್ತಿದವು. ಕೇವಲ ಆ ವಿಚಿತ್ರ ಆಕೃತಿಯ ಫೀಡ್ ಇದ್ದ ಕ್ಯಾಮರಾಗಳ ಮೇಲೆ ಫೋಕಸ್ ಮಾಡುವಂತೆ ಬಟನ್ ಒತ್ತಿದ. ಬೇರೆಯೆಲ್ಲ ಉಪಯೋಗವಿಲ್ಲದ ವೀಡಿಯೊ ಫೀಡುಗಳು ಪರದೆಯಿಂದ ಕಳಚಿಕೊಂಡವು. ಬಾಯಿ ಬಿಟ್ಟುಕೊಂಡು ಟೀವಿ ನೋಡತೊಡಗಿದ ಕೋಮಲ್.

ಮಹಡಿಯಿಂದ ಇಳಿದು ಬಂತು ಆ ಆಕೃತಿ. ಮತ್ತೆ ಅದೇ ವೇಷ. ಮುಖ ಕಾಣುತ್ತಿಲ್ಲ. ಬೆಳಕು ಸಹ ಬಹಳ ಕಮ್ಮಿ ಇದೆ. ರಾತ್ರಿಯ ರೆಕಾರ್ಡಿಂಗ್ ಇರಬೇಕು. ಮಹಡಿಯಿಂದ ಕೆಳಗೆ ಬಂದ ಆಕೃತಿ ಮೆಟ್ಟಿಲ ಮುಂದೆ ನಿಂತು ಮತ್ತೆ ಅದೇ ತರಹದ ರೌಂಡ್ ರೌಂಡ್ ಡಾನ್ಸ್ ಮಾಡಿತು. ವಾಲ್ಯೂಮ್ ಸ್ವಲ್ಪ ಜಾಸ್ತಿ ಕೊಟ್ಟ. ಅದೇ ಹಾಡು. ಅದೇ ಸಣ್ಣ ಕೀರಲು ದನಿಯಲ್ಲಿ ಗುಣುಗುತ್ತ ಹಾಡಿ, ಹಾಡಿ ಕುಣಿಯಿತು. ಅಷ್ಟರಲ್ಲಿ ಮಾನಸಿಯ ಬೆಕ್ಕು ಬಂತು. 'Oh my God! That's it. ಪಾಪ ಬೆಕ್ಕು. ಸೀದಾ ಅಲ್ಲಿಗೇ ಬಂತು. shit!' ಅಂತ ಅಂದುಕೊಂಡ. ಮುಂದೇನು ಆಗಲಿದೆಯೋ ಅನ್ನುವವದರ ಬಗ್ಗೆ ಕೆಟ್ಟ ಕುತೂಹಲ, ಆತಂಕ ಎಲ್ಲ.

ಕಾಲಿನ ಹತ್ತಿರ ಬಂದ ಬೆಕ್ಕನ್ನು ಬಗ್ಗಿ ಎತ್ತಿಕೊಂಡಿತು ಆ ಆಕೃತಿ. ಬೆಕ್ಕನ್ನು ಎತ್ತಿಕೊಂಡೇ, ಕುಣಿಕುಣಿಯುತ್ತ ಮರೆಯಾಯಿತು ಆಕೃತಿ. ಹೆಚ್ಚಾಗಿ ಬೇರೆ ಕ್ಯಾಮೆರಾದಲ್ಲಿ ಮುಂದಿನ ಸೀನ್ ಇರಬೇಕು ಅಂದುಕೊಂಡ ಕೋಮಲ್ ಝೂಮ್ ಔಟ್ ಮಾಡಿದ. ಎಲ್ಲ ಕ್ಯಾಮೆರಾಗಳ ವೀಡಿಯೊ ಫೀಡ್ಸ ಮತ್ತೆ ಪರದೆ ತುಂಬ ಮೂಡಿದವು. ಮತ್ತೊಂದು ಕ್ಯಾಮೆರಾ ಈಗ ಆ ಆಕೃತಿಯನ್ನು ಟ್ರ್ಯಾಕ್ ಮಾಡತೊಡಗಿತ್ತು. ಅದನ್ನು ಫೋಕಸ್ ಮಾಡಿದ ಕೋಮಲ್.

ಬೆಕ್ಕನ್ನು ಎತ್ತಿಕೊಂಡು, ನಿಧಾನವಾಗಿ ಡಾನ್ಸ್ ಮಾಡುತ್ತ ಆ ಆಕೃತಿ ಅಡಿಗೆ ಮನೆ ಸೇರಿಕೊಂಡಿತು. ಕೋಮಲ್ ಈಗ ಅಡಿಗೆ ಮನೆಯಲ್ಲಿ ಇಟ್ಟಿದ್ದ ನಾಲ್ಕೂ ಕ್ಯಾಮೆರಾಗಳ ಫೀಡ್ ಗಳನ್ನು ಮುಂದೆ ತಂದ. ಎಲ್ಲ ಬರೋಬ್ಬರಿ ಕಾಣುತ್ತಿತ್ತು.

ಬೆಕ್ಕು ಆಕೃತಿಯ ಕೈಯಲ್ಲೇ ಇತ್ತು. ಒಂದು ನಿಮಿಷ ಅದನ್ನು ನೆಲಕ್ಕೆ ಬಿಟ್ಟಿತು ಆ ಆಕೃತಿ. ಒಂದು ದೊಡ್ಡ ಪ್ರೆಷರ್ ಕುಕ್ಕರ್ ತೆಗೆದು ಗ್ಯಾಸ್ ಒಲೆ ಮೇಲೆ ಇಟ್ಟಿತು. 'ಇಷ್ಟು ದೊಡ್ಡ ಕುಕ್ಕರ್ ಯಾಕೆ? ಅದರಲ್ಲಿ ಇಪ್ಪತ್ತು ಜನರಿಗೆ ಸಾಕಾಗುವಷ್ಟು ಅಡಿಗೆ ಮಾಡಬಹುದು. ಏನು ಮಾಡುತ್ತಿದೆ ಈ ಆಕೃತಿ?' ಅಂತ ದಂಗಾದ ಕೋಮಲ್. ಗ್ಯಾಸ್ ಹೊತ್ತಿಸಿದ ನಂತರ ಅದರಲ್ಲಿ ಸಾಕಷ್ಟು ನೀರು ತುಂಬಿತು. ಕುಕ್ಕರ್ ಗೆ ಮುಚ್ಚುವ ಕವರ್, ವಿಸಲ್ (whistle) ಎಲ್ಲವನ್ನೂ ಸರಿಯಾಗಿ ಜೋಡಿಸಿಕೊಂಡಿತು. ಮುಂದೆ ಏನು ಮಾಡಿತು ಅನ್ನುವದನ್ನು ನೋಡಿದ ಕೋಮಲನಿಗೆ ಹೊಟ್ಟೆ ತೊಳೆಸಿತು. ವಾಂತಿ ಉಬ್ಬಳಿಸಿ ಬಂತು. ಪುಣ್ಯಕ್ಕೆ ಊಟ ಮಾಡಿರಲಿಲ್ಲ. ಬಾಯಿ ಮೇಲೆ ಕೈಯಿಟ್ಟು ಅದುಮಿಕೊಂಡ. ಮುಂದೆ ನೋಡಿದ.

ಕಾಲ ಕೆಳಗೆ ಸುತ್ತಾಡಿಕೊಂಡಿದ್ದ ಬೆಕ್ಕನ್ನು ಎತ್ತಿತು ಆ ಆಕೃತಿ. ಬೆಕ್ಕಿನ ಮೈಮೇಲೆ ಕೈಯಾಡಿಸಿತು. ಮರುಕ್ಷಣ ಬೆಕ್ಕನ್ನು ಗ್ಯಾಸ್ ಸ್ಟವ್ ಮೇಲಿದ್ದ ಕುಕ್ಕರಿನಲ್ಲಿ ಇಟ್ಟುಬಿಟ್ಟಿತು. ಬೆಕ್ಕು ಮತ್ತು ನೀರು. ಕೇಳಬೇಕೇ? ಬೆಕ್ಕು ಹೊರಗೆ ಹಾರಲು ನೋಡಿತು. ಕುಕ್ಕರಿನಲ್ಲಿ ಬೆಕ್ಕನ್ನು ಅದುಮಿ ಹಿಡಿದ ಆ ಆಕೃತಿ, ಬೆಕ್ಕಿನ ಯಾವ ಪ್ರತಿಭಟನೆಗಳನ್ನೂ ಲೆಕ್ಕಿಸದೇ, ಕುಕ್ಕರ್ ಮುಚ್ಚಳ ಮುಚ್ಚಿ, ಅದನ್ನು ಬರೋಬ್ಬರಿ ತಿರುವಿ ಸರಿಯಾಗಿ ಬಂದ್ ಮಾಡೇಬಿಟ್ಟಿತು. ಮೇಲಿಂದ ವಿಸಲ್ ಕೂಡ ಇಟ್ಟು, ಚಪ್ಪಾಳೆ ಕೂಡ ಹೊಡದೇಬಿಟ್ಟಿತು. ಬೆಕ್ಕು ಕುಕ್ಕರಿನಲ್ಲಿ ಬೇಯುಲಾರಂಭಿಸಿತು.

'oh my god! ಆ ಆಕೃತಿ ಬಂದು, ಇಲ್ಲೇ ಮಾನಸಿ ಬೆಕ್ಕನ್ನು ಜೀವಂತವಾಗಿಯೇ ಬೇಯಿಸಿಬಿಟ್ಟಿತೇ!? oh my god!' ಅಂತ ಕೋಮಲ್ ಕೈಯಲ್ಲಿ ಮುಖ ಮುಚ್ಚಿಕೊಂಡು ರೋಧಿಸಿದ. ಆದರೆ ವೀಡಿಯೊ ಇನ್ನೂ ಇದೆ ಅಂತ ನೆನಪಾಯಿತು. ತಲೆಯೆತ್ತಿ ನೋಡುತ್ತ ಉಳಿದ.

ಸುಮ್ಮನೆ ಕುಕ್ಕರ್ ಮುಂದೆ ನಿಂತಿತ್ತು ಆ ಆಕೃತಿ. ಆಗಾಗ ಕೈಗಳನ್ನು ಅಗಲಕ್ಕೆ ಚಾಚಿ, ಏನೋ ಮಣಮಣ ಗುಣುಗುತ್ತ ರೌಂಡ್ ರೌಂಡ್ ತಿರುಗುತ್ತಿತು. ಕುಕ್ಕರ್ ಮೊದಲನೇ ವಿಸಲ್ ಹೊಡೆಯಿತು. ಆ ಆಕೃತಿ ವಿಕೃತವಾಗಿ ಚಪ್ಪಾಳೆ ಹೊಡೆದು, ಜಿಗಿಜಿಗಿದು ಸಂಭ್ರಮಿಸಿತು. 'ಯಪ್ಪಾ! ಇದೆಂತಾ ವಿಕೃತಿ? ಇದೆಂತಾ ಕ್ರೌರ್ಯ? ಅದೂ ಒಂದು ಮೂಕ ಪ್ರಾಣಿಯ ಮೇಲೆ. ಎಷ್ಟು sadistic ಮನೋಭಾವ!'  ಅಂತ ಅಂದುಕೊಂಡ ಕೋಮಲ್. ಕುಕ್ಕರ್ ಮತ್ತೊಂದು ಸಿಳ್ಳೆ ಹೊಡೆಯಿತು. ಆ ಆಕೃತಿಯ ಉನ್ಮಾದ ಜಾಸ್ತಿಯಾಯಿತು. ಮತ್ತೂ ಜೋರ್ಜೋರಾಗಿ ರೌಂಡ್ ರೌಂಡ್ ಕುಣಿಯತೊಡಗಿತು. 'ಛೇ! ಇಷ್ಟೆಲ್ಲ ಕ್ಯಾಮೆರಾ ಇವೆ. ಮುಖ ಮಾತ್ರ ಒಂದರಲ್ಲೂ ಕಾಣುತ್ತಿಲ್ಲ. ಎಷ್ಟು ಲಕ್ಕಿ ಇರಬೇಕು ಆ ಆಕೃತಿ. hoodie ಯಲ್ಲಿ ಮುಖ ಮುಚ್ಚಿದೆ ನಿಜ. ಆದರೆ ಒಂದಾದರೂ ಕ್ಯಾಮೆರಾದಲ್ಲಿ ಅದರ ಮುಖ ಕಾಣಬಾರದೇ? ಅಥವಾ ಮುಖ ಎಲ್ಲಿಯಾದರೂ ಕಂಡಿದ್ದನ್ನು ತಾನು ಮಿಸ್ ಮಾಡಿಕೊಂಡೆನೇ?' ಅಂತ ಸಂಶಯ ಬಂತು ಕೋಮಲನಿಗೆ. ಮತ್ತೆ ಝೂಮ್ ಔಟ್ ಮಾಡಿದ. ಎಲ್ಲ ಕ್ಯಾಮೆರಾಗಳ ಫೀಡುಗಳು ಚಿಕ್ಕ ಚಿಕ್ಕ ಚೌಕಗಳಲ್ಲಿ ಮೂಡಿ ಬಂದವು. ಎಲ್ಲಿಯೂ ಆ ಆಕೃತಿಯ ಮುಖ ಮಾತ್ರ ಕಾಣಲಿಲ್ಲ. ಝೂಮ್ ಇನ್ ಮಾಡಿದ ಕೋಮಲ್ ಮತ್ತೆ ಅಡಿಗೆ ಮನೆ ಕ್ಯಾಮೆರಾಗಳ ಫೀಡ್ ನೋಡತೊಡಗಿದ.

ಪ್ರೆಷರ್ ಕುಕ್ಕರ್ ಒಂದರಮೇಲೊಂದರಂತೆ ಸಿಳ್ಳೆ ಹೊಡೆಯುತ್ತಲೇ ಇತ್ತು. ಒಂದೊಂದು ಸಿಳ್ಳೆ ಹೊಡೆದಾಗಲೂ ಆ ಆಕೃತಿಯ ಉನ್ಮಾದ ಜಾಸ್ತಿಯಾಗುತ್ತಲೇ ಇತ್ತು. ತಿರುಗಿ ತಿರುಗಿ ಕುಣಿಯುವದು ಜೋರಾಗತೊಡಗಿತು. 'ಏ! ಮೊದಲು ಗ್ಯಾಸ್ ಸ್ಟೋವ್ ಆಫ್ ಮಾಡು. ಇಲ್ಲವಾದರೆ ಕುಕ್ಕರ್ ಬ್ಲಾಸ್ಟ್ ಆಯಿತು ಅಂದರೆ ಬೆಕ್ಕಿನ ಜೊತೆ ನೀನೂ ಮಟಾಶ್!' ಅಂತ ಜೋರಾಗಿ ಕೂಗಿ ಹೇಳಿದ ಕೋಮಲ್. ಸಿನೆಮಾ ನೋಡುತ್ತಿರುವಾಗ, ಪೂರ್ತಿ ತಲ್ಲೀನರಾದ ಜನ ಸಿನಿಮಾ ಹೀರೋಗೇ ಡೈಲಾಗ್ ಹೊಡೆಯುತ್ತಿರುತ್ತಾರೆ ನೋಡಿ. ಆ ರೀತಿಯಲ್ಲಿ.

ಕುಕ್ಕರ್ ಸಿಳ್ಳೆ ಹೊಡೆಯುತ್ತಲೇ ಹೋಯಿತು. ಒಂದು ಹಂತದಲ್ಲಿ ಆ ಆಕೃತಿಯ ಉನ್ಮಾದ ಕಮ್ಮಿಯಾಯಿತು. ಗ್ಯಾಸ್ ಸ್ಟವ್ ಆಫ್ ಮಾಡಿತು. ಈಗ ನಿಧಾನವಾಗಿ ಅಡಿಗೆ ಮನೆ ಸುತ್ತ ಮುತ್ತ ಓಡಾಡತೊಡಗಿತು. ಒಂದು ಬಾರಿ ಕುಕ್ಕರ್ whistle ಎತ್ತಲು ನೋಡಿತು. 'ಭುಸ್!' ಅಂತ ಶಬ್ದವಾಯಿತು. ಅಷ್ಟು ಸಿಳ್ಳೆ ಹೊಡೆದಿವೆ. ಒಳಗೆ ಅದೆಷ್ಟು ಒತ್ತಡವಿದೆಯೋ ಏನೋ? ಅದು ತಣ್ಣಗಾಗಲು ಇನ್ನೂ ಬಹಳ ಹೊತ್ತು ಬೇಕು. ಅಲ್ಲಿಯ ತನಕ ಕುಕ್ಕರ್ ಮುಚ್ಚಳ ತೆಗೆಯಲು ಸಾಧ್ಯವಿಲ್ಲ. ಜೀವಂತ ಬೆಕ್ಕನ್ನು ಬೇಯಿಸಿದೆ ಆ ಆಕೃತಿ. ಮುಂದೇನು ಮಾಡುತ್ತದೆ? ಅದನ್ನು ತಿನ್ನುತ್ತದೆಯೇ? ಅಥವಾ...... ಅಂತ ಜಿಜ್ಞಾಸೆ ಕೋಮಲ್ ಮನದಲ್ಲಿ. ಆ ಆಕೃತಿ ಮಾತ್ರ ಅಡಿಗೆ ಮನೆ ಉದ್ದಗಲಕ್ಕೂ ಓಡಾಡಿಕೊಂಡಿತ್ತು, ಕುಕ್ಕರ್ ತಣ್ಣಗಾಗುವದನ್ನೇ ಕಾಯುತ್ತ.

ಸುಮಾರು ಹೊತ್ತು ಅದೇ ನಡೆಯಿತು. ಒಂದೆರೆಡು ಬಾರಿ ಕುಕ್ಕರ್ ವಿಸೆಲ್ ಸ್ವಲ್ಪ ಎತ್ತಿ ನೋಡಿತು. ಇನ್ನೂ ತಣ್ಣಗಾಗಿರಲಿಲ್ಲ. ಮತ್ತೆ ಭುಸ್ ಅಂತ ಆವಿ ಬಂತು. ಆ ಆಕೃತಿಯ ಸಹನೆ ಕಮ್ಮಿಯಾಗತೊಡಗಿತು. ಕುಕ್ಕರ್ ಎತ್ತಿಕೊಂಡು ಹೋಗಿದ್ದೇ ಅಡಿಗೆ ಮನೆ ಸಿಂಕಿನಲ್ಲಿ ಇಟ್ಟಿತು. ಬಿಸಿ ಕುಕ್ಕರ್ ಮೇಲೆ ಜೋರಾಗಿ ಭಸ್! ಅಂತ ತಣ್ಣೀರು ಬಿಟ್ಟಿತು. ಫ್ರಿಜ್ ಓಪನ್ ಮಾಡಿತು. ಇದ್ದ ಬಿದ್ದ ಎಲ್ಲ ಐಸ್ ಕ್ಯೂಬ್ ತಂದು ಬಿಸಿ ಕುಕ್ಕರ್ ಮೇಲೆ ಪೇರೆಸಿತು. ನೋಡುತ್ತಿದ್ದ ಕೋಮಲ್ ಅಚ್ಚರಿಪಟ್ಟ. 'ಸಿಕ್ಕಾಪಟ್ಟೆ ತಲೆ ಇಟ್ಟಿದೆ. ಬೇಗ ತಂಪು ಮಾಡಬೇಕು ಅಂತ ಏನೆಲ್ಲಾ ಆಟ ಆಡುತ್ತಿದೆ. ಮನೆಯಲ್ಲಿ ಹೆಂಡತಿಗೆ ಈ ಟೆಕ್ನಿಕ್ ಹೇಳಿ ಕೊಡಬೇಕು. 'ಅಯ್ಯೋ! ಕುಕ್ಕರ್ ಇನ್ನೂ ಆರೇ ಇಲ್ಲ, ಆರೇ ಇಲ್ಲ,' ಅಂತ ಪೇಚಾಡುತ್ತಿರುತ್ತಾಳೆ,' ಅಂತ ಅಂದುಕೊಂಡ ಕೋಮಲ್.

ಅಷ್ಟೆಲ್ಲ ಮಾಡಿದ ಆ ಆಕೃತಿ ಮತ್ತೆ ಕುಕ್ಕರ್ ವಿಸೆಲ್ ಎತ್ತಿ ನೋಡಿತು. ಈಗ ಅದು ನಿಜವಾಗಿಯೂ ತಣ್ಣಗಾಗಿತ್ತು. ವಿಸೆಲ್ ತೆಗೆದು ಪಕ್ಕಕ್ಕೆ ಇಟ್ಟಿತು. ಜತನದಿಂದ ಕುಕ್ಕರ್ ಮುಚ್ಚಳ ತೆಗೆಯಿತು. ಒಳಗೆ ಬೆಕ್ಕು ಬರೋಬ್ಬರಿ ಬೆಂದು ಸತ್ತು ಮಲಗಿತ್ತು. ಅದನ್ನು ಆ ಸ್ಥಿತಿಯಲ್ಲಿ ನೋಡಿದ ಆ ಆಕೃತಿ ವಿಚಿತ್ರ ಉನ್ಮಾದದಿಂದ ಒಂದು ತರಹದ ಸಿಳ್ಳೆ ನಮೂನಿಯ ಕೇಕೆ ಹಾಕಿತು. ಮತ್ತೆ ಸ್ವಲ್ಪ ವಿಚಿತ್ರವಾಗಿ ಕುಣಿಯಿತು. ಒಂದು ರಹಸ್ಯ ಕ್ಯಾಮೆರಾ ಗ್ಯಾಸ್ ಸ್ಟೋವ್ ಮೇಲೆಯೇ ಇತ್ತು. ಅದರಿಂದ ಬರುತ್ತಿದ್ದ ಫೀಡ್ ನಲ್ಲಿ ಬೆಕ್ಕು ಬರೋಬ್ಬರಿ ಮೂಡಿ ಬಂದಿತ್ತು. ಯಾಕೋ ಕಣ್ಣು ಮುಚ್ಚಿಯೇ ಬೆಕ್ಕು ಬೆಂದು ಹೋಗಿತ್ತು.

ಈಗ ಆ ಆಕೃತಿ ಮುಂದಿನ ಕೆಲಸಕ್ಕೆ ಅಣಿಯಾಯಿತು. ಬೆಂದ ಬೆಕ್ಕು ಇದ್ದ ಕುಕ್ಕರ್ ತೆಗೆದುಕೊಂಡು ಅಡಿಗೆ ಮನೆಯಿಂದ ಹೊರಗೆ ಬಂತು. ಬೇರೆ ಕ್ಯಾಮರಾ ಈಗ ಟ್ರ್ಯಾಕ್ ಮಾಡುತ್ತಿತ್ತು. ಅದರ ಮೇಲೆ ಕೋಮಲ್ ಫೋಕಸ್ ಮಾಡಿದ. ಕುಕ್ಕರ್ ಹಿಡಿದುಕೊಂಡ ಆಕೃತಿ ಹಿತ್ತಿಲ ಬಾಗಿಲ ಮೂಲಕ ಮನೆಯಿಂದ ಹೊರಬಿತ್ತು. ಹೊರಬಿದ್ದ ನಂತರ ಎಲ್ಲಿ ಹೋಯಿತು ಅಂತ ಟ್ರ್ಯಾಕ್ ಮಾಡಲು ಯಾವದೂ ಕ್ಯಾಮರಾ ಇರಲಿಲ್ಲ ಅಂತ ಕಾಣುತ್ತದೆ. ವೀಡಿಯೊ ಫೀಡಿನಿಂದ ಕಾಣೆಯಾಯಿತು ಆ ಆಕೃತಿ. ಕೋಮಲ್ ಝೂಮ್ ಔಟ್ ಮಾಡಿದ. ಅಳವಡಿಸಿದ್ದ ಎಲ್ಲ ಕ್ಯಾಮೆರಾಗಳ ಫೀಡುಗಳು ಒಮ್ಮೆಲೇ ತೆರೆ ಮೇಲೆ ಬಂದವು. ಯಾವದರಲ್ಲಿಯೂ ಆ ಆಕೃತಿ ಕಂಡು ಬರಲಿಲ್ಲ. 'ಛೇ! ಹೀಗಾಗುತ್ತದೆ ಅಂತ ಗೊತ್ತಿದ್ದರೆ ಮನೆ ಹೊರಗಡೆ ಇನ್ನೂ ಒಂದಿಷ್ಟು ಕ್ಯಾಮರಾ ಹಾಕಿಸಬಹುದಿತ್ತು. ಮೊದಲೇ ಅಷ್ಟು ದೊಡ್ಡ ಕಾಂಪೌಂಡ್. ಆ ಸತ್ತ ಬೆಕ್ಕನ್ನು ಏನು ಮಾಡಿತೋ ಆ ಆಕೃತಿ. ಯಾವದೇ ಕ್ಯಾಮರಾ ಅದನ್ನು ಟ್ರ್ಯಾಕ್ ಮಾಡಿಲ್ಲ. ಇರಲಿ. ಮತ್ತೆ ಮನೆಯೊಳಗೆ ವಾಪಸ್ ಬಂದೇ ಬರುತ್ತದೆ ಆ ಆಕೃತಿ. ಮತ್ತೆ ಕ್ಯಾಮರಾ ಕಣ್ಣಿಗೆ ಬಿದ್ದೇಬೀಳುತ್ತದೆ. ಆವಾಗಲಾದರೂ ಮುಖದ ಚಹರಾಪಟ್ಟಿ ಕಂಡರೆ ಸಾಕು,' ಅಂತ ಅಂದುಕೊಂಡ ಕೋಮಲ್ ಸ್ವಲ್ಪ ಫಾಸ್ಟ್ ಫಾರ್ವರ್ಡ್ ಮಾಡಿದ. ಆಗ ಒಂದು ಕ್ಯಾಮೆರಾದಲ್ಲಿ ಆ ಆಕೃತಿ ಮತ್ತೆ ಪ್ರತ್ಯಕ್ಷವಾಯಿತು. ಅಷ್ಟರಲ್ಲಿ ಮತ್ತೂ ಎರಡು ಕ್ಯಾಮೆರಾಗಳು ಅದನ್ನು ಟ್ರ್ಯಾಕ್ ಮಾಡಲು ಆರಂಭಿಸಿದ್ದವು. ಆ ಎಲ್ಲ ಕ್ಯಾಮೆರಾಗಳ ವೀಡಿಯೊ ಫೀಡನ್ನು ಕೋಮಲ್ ಫೋಕಸ್ ಮಾಡಿದ.

ವಾಪಸ್ ಬರುತ್ತಿದ್ದ ಆಕೃತಿ ಕೈಯಲ್ಲಿ ಕುಕ್ಕರ್ ಜರೂರ್ ಇತ್ತು. ಆದರೆ ಅದರಲ್ಲಿ ಬೆಕ್ಕು ಇತ್ತೇ ಇಲ್ಲವೇ ಕಾಣಲಿಲ್ಲ. ಹೆಚ್ಚಾಗಿ ಹೊರಗೆಲ್ಲೋ ಎಸೆದು ಬಂದಿರಬೇಕು. ಎಸೆದು ಬಂದಿದ್ದರೆ ಕಣ್ಣಿಗೆ ಬೀಳುತ್ತಿತ್ತು. ಆ ಖತರ್ನಾಕ್ ಆಕೃತಿ ಬೆಂದ ಬೆಕ್ಕಿನ ದೇಹವನ್ನು ಎಲ್ಲೋ ಹೂತೇ ಬಂದಿರಬೇಕು. ಹಾಗಾಗಿ ಬೆಕ್ಕು ಕಾಣೆಯಾದಾಗಿನಿಂದ ಒಟ್ಟೇ ಪತ್ತೆಯಿಲ್ಲ. ಅಷ್ಟು ದೊಡ್ಡ ಕಾಂಪೌಂಡಿನಲ್ಲಿ ಎಲ್ಲಿ ಹುಗಿದು ಬಂದಿದೆಯೋ ಏನೋ ಅಂದುಕೊಂಡ ಕೋಮಲ್.

ಅಷ್ಟರಲ್ಲಿ ಆ ಆಕೃತಿ ಹಿತ್ತಿಲ ಬಾಗಿಲ ಬುಡಕ್ಕೆ ಬಂದು ನಿಂತಿತು. ಮುಖ ಮಾತ್ರ ಯಾವ ಕ್ಯಾಮೆರಾದಲ್ಲೂ ಕಣ್ಣಿಗೆ ಬಿದ್ದಿರಲಿಲ್ಲ. ಹಿತ್ತಿಲ ಬಾಗಿಲ ಹೊಸಲಿನ ಮೇಲೆ ಇನ್ನೇನು ಕಾಲಿಡಬೇಕು ಅನ್ನುವಷ್ಟರಲ್ಲಿ ಏನೋ ಫ್ಲಾಶ್ ಆಯಿತು. ಏನೋ ದೊಡ್ಡ ಶಬ್ದ ಕೇಳಿತು. ಅದು ಗುಡುಗಿನ ಶಬ್ದ. ವೀಡಿಯೊನಲ್ಲಿ ಬರೋಬ್ಬರಿ ರೆಕಾರ್ಡ್ ಆಗಿತ್ತು. ಫ್ಲಾಶ್ ಆಗಿ ಮೂಡಿದ್ದು ಮಿಂಚೇ ಇರಬೇಕು. ಯಾಕೋ ಏನೋ ಒಂದು ಕ್ಷಣ ಆ ಆಕೃತಿ ಮುಖವೆತ್ತಿ ಆಕಾಶದ ಕಡೆ ನೋಡಿತು. ಹಿತ್ತಿಲ ಬಾಗಿಲ ಮೇಲೆ ಅಳವಡಿಸಿದ್ದ ರಹಸ್ಯ ಕ್ಯಾಮೆರಾ ಈಗ ಆ ಆಕೃತಿಯ ಚಹರೆಯನ್ನು ಬರೋಬ್ಬರಿ ಸೆರೆಹಿಡಿದಿತ್ತು. ಮಿಂಚು ನೈಸರ್ಗಿಕ ಫ್ಲಾಶ್ ನಂತೆ ಕೆಲಸ ಮಾಡಿ ವೀಡಿಯೊ ಭಾಳ ಸ್ಪಷ್ಟವಾಗಿ ಬಂದಿತ್ತು. ಆಕೃತಿಯ ಮುಖ ನೋಡಿದ ಕೋಮಲ್ ಬೆಚ್ಚಿಬಿದ್ದ. ನಿಜವಾಗಿಯೂ ಬಿದ್ದ. ಪುಣ್ಯಕ್ಕೆ ಸೋಫಾ ಮೇಲೆ ಬಿದ್ದ. ಬಿದ್ದವ ವೀಡಿಯೊ pause ಮಾಡಿದ. ಆಕೃತಿಯ ಮುಖ ಸರಿಯಾಗಿ ಮೂಡಿತ್ತು. ಅದು ಮಾನಸಿಯ ಮುಖವಾಗಿತ್ತು. ಆ ನಿಗೂಢ ಆಕೃತಿ ಬೇರೆ ಯಾರೂ ಆಗಿರಲಿಲ್ಲ ಮಾನಸಿಯೇ ಆಗಿದ್ದಳು. ಕೋಮಲ್ ಅದನ್ನು ನೋಡುತ್ತ ಕೂತೇ ಇದ್ದ.

ಭಾಗ - ೧೮

ರಹಸ್ಯ ಕ್ಯಾಮೆರಾಗಳು ಮಾಡಿದ್ದ ವೀಡಿಯೊ ರೆಕಾರ್ಡಿಂಗ್ ನಲ್ಲಿ ಮಾನಸಿಯನ್ನು ನೋಡಿದ ಕೋಮಲ್ ದೊಡ್ಡ ಮಟ್ಟದ ಆಘಾತಕ್ಕೆ ಒಳಗಾದ. ಇದು ಹೇಗೆ ಸಾಧ್ಯ? ಅಂತ ತನ್ನನ್ನು ತಾನೇ ಮತ್ತೆ ಮತ್ತೆ ಕೇಳಿಕೊಂಡ. ತನ್ನ ಬೆಕ್ಕನ್ನು ತಾನೇ ಕುಕ್ಕರಿನಲ್ಲಿ ಬೇಯಿಸಿ ಕೊಲ್ಲುತ್ತಾಳೆ ಅಂದರೆ ಏನರ್ಥ? ಅಂದರೆ ಹಿಂದಾದ ವಿಚಿತ್ರ ಹತ್ಯೆಗಳಿಗೂ ಮಾನಸಿಗೂ ಇರಬಹುದಾದ ಸಂಬಂಧಗಳನ್ನು ಊಹಿಸಿಕೊಂಡರೆ ಅದು ಭಯಾನಕ. ಮಾನಸಿಯೇ ಮೊದಲ ಬೆಕ್ಕನ್ನು ಕೊಂದು, ತಾನೇ ಬರೋಬ್ಬರಿ ಸಂಸ್ಕರಿಸಿ, taxidermy ಮಾಡಿ, ತನಗೆ ತಾನೇ ಪಾರ್ಸೆಲ್ ಮಾಡಿಕೊಂಡಿದ್ದಳೇ? ಕಿಟ್ಟಿ ಕಾಕಾನ ಬುರುಡೆಯನ್ನು ಕೊಡಲಿಯಿಂದ ಬಿಚ್ಚಿ ಮಾನಸಿಯೇ ಕೊಂದಳೇ? ತನ್ನ ನಾಯಿಗಳನ್ನು ತಾನೇ ಸಿಗಿದು ಕೊಂದು ಗೂಟಗಳ ಮಧ್ಯೆ ಕಟ್ಟಿದಳೇ? ಪದ್ಮಾವತಿಬಾಯಿಯ ಕೊರಳಿಗೆ ರಬ್ಬರ್ ಪೈಪ್ ಸುತ್ತಿ, ಉಸಿರುಗಟ್ಟಿಸಿ ಮಾನಸಿಯೇ ಕೊಂದಳೇ? ಅದೆಲ್ಲ ಹೇಗೆ ಸಾಧ್ಯ? ಎಷ್ಟು ಒಳ್ಳೆ ಮನಸ್ಸಿನ, ಒಳ್ಳೆ ಹೃದಯ ಹುಡುಗಿ ಆಕೆ. ಆಕೆ ಹಾಗೆ ಮಾಡುತ್ತಾಳೆ ಅಂದರೆ ನಂಬಲು ಸಾಧ್ಯವಿಲ್ಲ. ಆದ್ರೆ ಸ್ಪಷ್ಟ ಸಾಕ್ಷಿ ಕಣ್ಣಿಗೆ ರಾಚುತ್ತಿದೆ. ಏನಿದರ ಗೂಢಾರ್ಥ?

'Oh! my god!' ಅಂತ ಉದ್ಗರಿಸಿದ ಕೋಮಲ್. ಹಳೆಯ ಘಟನೆಯೊಂದು ನೆನಪಾಯಿತು. ಒಮ್ಮೆ ಮಾನಸಿ ಮತ್ತು ಕೋಮಲ್ ಲಲ್ಲೆಗರಿಯುತ್ತ ಮಾನಸಿಯ ಅಮೇರಿಕಾದ ಫೋಟೋ ಅಲ್ಬಮ್ ನೋಡುತ್ತ ಕುಳಿತಿದ್ದರು. ಅಮೇರಿಕಾದಲ್ಲಿ ಮಾನಸಿ ಯಾವದೋ ಒಂದು ಸ್ಥಳಕ್ಕೆ ಹೋಗಿದ್ದಳು. ಅಲ್ಲಿ ಕಾನೂನುಬದ್ಧ ಬೇಟೆಗೆ ಅವಕಾಶವಿತ್ತು. ಬೇಟೆಯಾಡಿದ ಪ್ರಾಣಿಗಳನ್ನು taxidermy ಸಹಿತ ಮಾಡಿಕೊಡುವ ಸೌಲಭ್ಯವಿತ್ತು. taxidermy ಕಲಿಸುವ ಒಂದು ಶಾಲೆಯೂ ಅಲ್ಲಿತ್ತು. 'ನನ್ನ ಫ್ರೆಂಡ್ಸ್ ಕೆಲವರು ಅಲ್ಲಿ ಸುಮ್ಮನೆ ತಮಾಷೆಗೆ ಅಂತ taxidermy ಮಾಡುವ ಸಣ್ಣ ಸಣ್ಣ ಕೋರ್ಸ್ ಸಹಿತ ಮಾಡಿದ್ದರು. ನಾನು ಮಾತ್ರ ಮಾಡಲಿಲ್ಲಪ್ಪ. ಆ ಪ್ರಾಣಿಗಳನ್ನು ಕೊಂದು, ಅವನ್ನು ಬಗೆದು, ಕ್ಲೀನ್ ಮಾಡಿ, ಸಂಸ್ಕರಿಸಿ...... ರಾಮ ರಾಮ. ಅವೆಲ್ಲ ನನ್ನ ಹತ್ತಿರ ಸಾಧ್ಯವೇ ಇಲ್ಲ. ಆದರೆ ನನ್ನ ಫ್ರೆಂಡ್ಸ್ ಮಾತ್ರ ಚಿಕ್ಕ ಪ್ರಾಣಿಗಳಾದ ಅಳಿಲು, ಬಾಬ್ ಕ್ಯಾಟ್ (bob cat) ಇತ್ಯಾದಿಗಳನ್ನು ಬೇಟೆಯಾಡಿ, ಅವನ್ನು ಅಲ್ಲಿಯೇ ಸಂಸ್ಕರಿಸಿ, taxidermy ಮಾಡಿದ್ದರು. ಒಂದು ವಾರ ಅಲ್ಲಿಯೇ ಇದ್ದೆವು. ಸಕತ್ ಸ್ಕೀಯಿಂಗ್ ಮಾಡಿದ್ದೆವು,' ಅಂತ ಹೇಳಿದ್ದಳು ಮಾನಸಿ. ಆಕೆಯೇನೋ ಹೇಳಿದ್ದಳು ಆಕೆ taxidermy ಕಲಿತಿಲ್ಲ, ತನ್ನ ಹತ್ತಿರ ಅದೆಲ್ಲ ಸಾಧ್ಯವಿಲ್ಲ ಅಂತ. ಯಾರಿಗೆ ಗೊತ್ತು? ಆಕೆಯ ತಲೆ ಎಷ್ಟು ಸರಿ ಇದೆಯೋ ಏನೋ? ಆಕೆಗೆ ಯಾವದು ನೆನಪು ಇರುತ್ತದೆಯೋ ಯಾವುದನ್ನು ಮರೆಯುತ್ತಾಳೋ ದೇವರಿಗೆ ಗೊತ್ತು. ಹೆಚ್ಚಾಗಿ ಆಕೆಯೂ ಅಲ್ಲಿ taxidermy ಕಲಿತಿರಬೇಕು. ಅದನ್ನೇ ಉಪಯೋಗಿಸಿ ಮೊದಲ ಬೆಕ್ಕನ್ನು ಕೊಂದ ನಂತರ ಸಂಸ್ಕರಿಸಿರಬೇಕು. ಹುಡುಕಿದರೆ ಎಲ್ಲ ಸಾಕ್ಷಿ ಸಿಗುತ್ತದೆ. ಅದನ್ನು ಆಮೇಲೆ ಮಾಡೋಣ, ಅಂತ ಅಂದುಕೊಂಡ ಕೋಮಲ್. ಮತ್ತೂ ಭೀತನಾದ.

ಮಾಡಲು ಇನ್ನೇನೂ ಉಳಿದಿರಲಿಲ್ಲ. ಮಾನಸಿ ಯಾವದೋ ಕಾರಣಕ್ಕೆ ಬೇರೆಯೇ ವ್ಯಕ್ತಿಯಾಗಿ ಬದಲಾಗುತ್ತಾಳೆ. ಆ ಸಮಯದಲ್ಲಿ ಊಹಿಸಲೂ ಸಾಧ್ಯವಿಲ್ಲದಂತಹ ಕೆಲಸಗಳನ್ನು ಮಾಡಿಬಿಡುತ್ತಾಳೆ. ನಂತರ ಮಾಮೂಲಿ ಸ್ಥಿತಿಗೆ ಬಂದಾಗ ಆಕೆಗೆ ಮೊದಲಿನದೂ ಏನೂ ನೆನಪೇ ಇರುವದಿಲ್ಲ. ಇದೇ ಒಂದು ವಿವರಣೆ ಸಾಧ್ಯ ಆಕೆ ಮಾಡುತ್ತಿರುವ ಕಾರ್ನಾಮೆಗಳನ್ನು ನೋಡಿದರೆ. ಮುಂದೆ ಬಹಳ ಎಚ್ಚರಿಕೆಯಿಂದ ಇರಬೇಕು. ಇದಕ್ಕೆ ಏನೋ ಒಂದು ರೀತಿಯ ಪರಿಹಾರ ಕಂಡುಹಿಡಿಯಲೇಬೇಕು. ಪ್ರೊ. ಹೆಗಡೆ ಹೇಳಿದ್ದ ಭವಿಷ್ಯವಾಣಿ ಮತ್ತೆ ಕಹಳೆ ತರಹ ಮೊಳಗಿತು ಅವನ ಮನಸ್ಸಿನಲ್ಲಿ. ಬರೋಬ್ಬರಿ ಹೇಳಿದ್ದರು - ಈ ಜಾತಕದ ವ್ಯಕ್ತಿ ಅನೇಕಾನೇಕ ತೊಂದರೆಗಳನ್ನು ಅನುಭವಿಸುತ್ತಿರುವದು ನಿಜ. ಅದು ಎದ್ದು ಕಾಣುತ್ತಿದೆ. ಆದರೆ ಒಂದು ಮಾತು ಸಹಿತ ನಿಜ. ಅವರ ತೊಂದರೆಗಳಿಗೆ ಅವರೇ ಜವಾಬ್ದಾರರು.

ಆಚೀಚೆ ನೋಡಿದ. ಮೂಲೆಯಲ್ಲಿ ಮೇಜಿನ ಮೇಲೆ ದೆಹಲಿಯಲ್ಲಿ ಮಾನಸಿಗೆ ಬಂದ ಪ್ರಶಸ್ತಿಯ ದೊಡ್ಡ ಫಲಕ ಕಂಡಿತು. ಅದರ ಮೇಲೆ ಕೆತ್ತಿದ್ದ ಬರಹ ತುಂಬಾ ಸಾಂದರ್ಭಿಕವಾಗಿತ್ತು. Dr. Manasi Kulkarni. International expert in the field of PERSONALITY DISORDERS. ಅದರಲ್ಲಿದ್ದ ಕೆಳಗಿನ ಚಿತ್ರ ಉಳಿದ ಎಲ್ಲ ವಿಷಯವನ್ನು ಸಾಂಕೇತಿಕವಾಗಿ ಹೇಳಿತು.



ಕೋಮಲನಿಗೆ ಏನೋ ಫ್ಲಾಶ್ ಆಯಿತು. ಮತ್ತೊಮ್ಮೆ 'Oh! my god!' ಅಂತ ಉದ್ಗರಿಸಿದ. ದೇವರೇ, ಇವಳು ಮಾನಸಿ personality disorders ಅಂದರೆ ವ್ಯಕ್ತಿತ್ವ ನ್ಯೂನ್ಯತೆ ಎನ್ನುವ ವಿಷಯದಲ್ಲಿ ದೊಡ್ಡ ಪರಿಣಿತೆ. ನೋಡಿದರೆ ಇವಳಿಗೇ ದೊಡ್ಡ ತೊಂದರೆಯಿದೆ. ಸಂಶಯವೇ ಇಲ್ಲ. ಮಾನಸಿಗೇ split personality ಅಥವಾ multiple personality disorder ಅನ್ನುವಂತಹ ಯಾವದೋ ತೊಂದರೆ ಜರೂರ್ ಇದೆ. ಅದಕ್ಕೇ ಹೀಗೆಲ್ಲ ಆಗುತ್ತಿದೆ. ಇದೇ ಸತ್ಯ, ಅಂದುಕೊಂಡ ಕೋಮಲ್. ಅವನಿಗೆ ಅವನೇ ಕೊಟ್ಟುಕೊಂಡ ವಿವರಣೆಯಿಂದ ಅವನೇ ಬೆಚ್ಚಿಬಿದ್ದ.

ಸರಿ, ಮುಂದೇನು? ಅಂತ ಯೋಚಿಸಿದ. ಎಲ್ಲ ಡಿಸ್ಕುಗಳನ್ನು ಮನೆಗೇ ಒಯ್ದರಾಯಿತು. ಒಂದು ಕಾಪಿ ಮಾಡಿಕೊಂಡು ಬಂದರಾಯಿತು. ಡಿಸ್ಕುಗಳನ್ನು ವಾಪಸ್ ಸೆಂಟ್ರಲ್ ಯೂನಿಟ್ ಒಳಗೆ ಸೇರಿಸುವ ಬಗ್ಗೆ ನಂತರ ಯೋಚಿಸೋಣ ಅಂದುಕೊಂಡ.

ಟೀವಿ ಆಫ್ ಮಾಡೋಣ ಅಂದುಕೊಂಡ. ಡಿವಿಡಿ pause ಆಗಿಯೇ ಇತ್ತು. ಪರದೆ ಮೇಲೆ ವಿಚಿತ್ರ ಆಕೃತಿಯ ರೂಪದಲ್ಲಿದ್ದ ಮಾನಸಿ ಚಿತ್ರ ಹಾಗೇ ಇತ್ತು. ಅಷ್ಟರಲ್ಲಿ ಹಿಂದಿನಿಂದ ಯಾರೋ ಗೊಗ್ಗರು ದನಿಯಲ್ಲಿ 'hands up!' ಅಂತ ಆಜ್ಞೆ ಮಾಡಿದರು. ದಂಗಾದ ಕೋಮಲ್ ಹಿಂತಿರುಗಿ ನೋಡಿದ. ಅದೇ ನಿಲುವಂಗಿ, ತಲೆ ಮುಚ್ಚಿದ hoodie ಧರಿಸಿದ್ದ ಆಕೃತಿ ಮಹಡಿ ಮೆಟ್ಟಿಲ ಮೇಲೆ ಬಂದು ನಿಂತಿತ್ತು. ಕೈಯಲ್ಲಿ ಪಿಸ್ತೂಲ್ ಇತ್ತು. ಮಾನಸಿ ಮತ್ತೊಂದು ಅವತಾರದಲ್ಲಿ ಪ್ರತ್ಯಕ್ಷಳಾಗಿದ್ದಳು. ಚಹರಾಪಟ್ಟಿ, ಧ್ವನಿ ಎಲ್ಲ ಬದಲಾಗಿತ್ತು. ಏನು ಮಾಡಬೇಕು ಅಂತ ತಿಳಿಯದ ಕೋಮಲ್ ಕಂಗಾಲಾದ.

ಭಾಗ - ೧೯

ಮಾನಸಿಯನ್ನು ಆ ಅವತಾರದಲ್ಲಿ ನೋಡಿದ ಕೋಮಲನಿಗೆ ಮಾತೇ ಹೊರಡಲಿಲ್ಲ. ನಾಲಿಗೆ ಪೂರ್ತಿ ಒಣಗಿ ಹೋಗಿತ್ತು. ಅದರೂ ಮಾತಾಡಲು ಪ್ರಯತ್ನಿಸಿದ. 'ಮಾನಸಿ, ನಾನು, ಕೋಮಲ್. ನನ್ನ ಪರಿಚಯ ಸಿಗಲಿಲ್ಲವೇ? ಬಾ ಕೂಡು. ಎಲ್ಲ ಆರಾಮ್ ಮಾತಾಡೋಣ,' ಅಂತ ತೊದಲಿ ತೊದಲಿ ಹೇಳುವಷ್ಟರಲ್ಲಿ ಸಾಕೋ ಬೇಕಾಯಿತು.

ಬೇರೆಯೇ ವ್ಯಕ್ತಿತ್ವ ಮಾನಸಿಯ ದೇಹವನ್ನು ಆವರಿಸಿಕೊಂಡಿತ್ತು. ಆ ವ್ಯಕ್ತಿತ್ವದ ಮಾನಸಿಕ ಲೋಕದಲ್ಲಿ ಕೋಮಲ್ ಯಾರು ಅಂತನೇ ಗೊತ್ತಿಲ್ಲ. ಕನ್ನಡವೂ ಗೊತ್ತಿಲ್ಲ. ಧಾರವಾಡವೂ ಗೊತ್ತಿಲ್ಲ. ಅದು ಒಂದು ಪೂರ್ತಿ ಬೇರೆಯೇ ಲೋಕ. ಯಾವದು ಅದು? ಅದನ್ನು ಮಾನಸಿಯೇ ಹೇಳಬೇಕು. ಆಕೆ ಹೇಳಲಿಲ್ಲ. ವಿಕಾರವಾಗಿ ನಕ್ಕಳು. ಕೊನೆಯ ಎರಡು ಮೆಟ್ಟಿಲು ಇಳಿದು ಬಂದಳು. ಕೋಮಲನಿಂದ ಒಂದು ಹತ್ತಡಿ ದೂರದಲ್ಲಿ ನಿಂತಿದ್ದಳು.

ಆಕೆ ತನ್ನ ಪಾಡಿಗೆ ತಾನು ಸಣ್ಣಗೆ ಹಾಡು ಗುಣುಗುತ್ತ, ರೌಂಡ್ ರೌಂಡ್ ಡಾನ್ಸ್ ಮಾಡಿದಳು. ಪಿಸ್ತೂಲ್ ಮಾತ್ರ ಬರೋಬ್ಬರಿ ಹಿಡಿದಿದ್ದಳು. ಒಂದು ಕ್ಷಣಕ್ಕಿಂತ ಹೆಚ್ಚು ಹೊತ್ತು ಕೋಮಲ್ ಮೇಲೆ ಇಟ್ಟಿದ್ದ ದೃಷ್ಟಿ ತೆಗೆಯಲಿಲ್ಲ.

ಕೋಮಲ್ ಮತ್ತೆ, 'ಮಾನಸಿ, ಮಾನಸಿ. ನನ್ನ ಮಾತು ಕೇಳು' ಅಂದ. ಆಕೆ ಏನೂ ತಿಳಿಯದವರ 'ಹ್ಯಾಂ??' ಅನ್ನುವ ಲುಕ್ ಕೊಟ್ಟು ಕೆಕ್ಕರಿಸಿ ನೋಡಿದಳು. ಕೋಮಲ್ ಕಂಪಿಸಿದ.

ಅಷ್ಟರಲ್ಲಿ ಮಾನಸಿಯ ಗಮನ ಟೀವಿ ಪರದೆ ಮೇಲೆ ಹರಿಯಿತು. ಕಿಟಾರನೆ ಕಿರುಚಿದಳು. ಟೀವಿ ಪರದೆ ಮೇಲೆ ಆಕೆಯೇ ಕಾಣುತ್ತಿದ್ದಳು. ಅದನ್ನು ನೋಡಿದ ಮಾನಸಿಯ ಚಿತ್ತದಲ್ಲಿ ವಾಸವಾಗಿದ್ದ ಬಹು ವ್ಯಕ್ತಿತ್ವಗಳ (multiple personalities) ಮಧ್ಯೆ ಯಾವದೋ ತರಹದ ಕಾಳಗ ಶುರುವಾಗಿರಬೇಕು. ಅದನ್ನು ತಡೆಯಲು ಸಾಧ್ಯವಿಲ್ಲ, ತಲೆ ಸಿಡಿದೇ ಹೋಗುತ್ತದೆಯೋ ಎಂಬಂತೆ ತಲೆ ಹಿಡಿದುಕೊಂಡು ತಲೆಯನ್ನು ರಭಸವಾಗಿ ಆಚೀಚೆ ತುಂಬಾ violent ಆಗಿ ಅಲ್ಲಾಡಿಸಿದಳು. ಆಕೆಯ ಮುಖದ ಚಹರಾಪಟ್ಟಿ ಚಿತ್ರ ವಿಚಿತ್ರವಾಗಿ ಬದಲಾಗುತ್ತಿತ್ತು. ಮುಖ ಅಕರಾಳ ವಿಕರಾಳವಾಗಿ ತಿರುಚಿಕೊಳ್ಳತೊಡಗಿತು. ತುಟಿ ಮೇಲೆ ಸರಿದು ಹಲ್ಲುಗಳು ವಿಕಾರವಾಗಿ ಹೊರಬಂದವು. ಆ ರೀತಿಯ ಭಯಾನಕ ಬದಲಾವಣೆಗಳನ್ನು ನೋಡುತ್ತಿದ್ದ ಕೋಮಲ್ ಫುಲ್ ದಂಗಾಗಿದ್ದ. ಅಷ್ಟು ಸುಂದರ ಮಾನಸಿ ಅವನ ಮುಂದೆಯೇ ಅಷ್ಟು ಭಯಾನಕವಾಗಿ ಬದಲಾಗಿದ್ದಳು. ಟೀವಿ ಪರದೆ ಮೇಲೆ ತನ್ನದೇ ದೃಶ್ಯ ನೋಡಿದಾಕ್ಷಣ ಏನೋ ಮನಸ್ಸಿನಲ್ಲಿ ಕ್ಲಿಕ್ ಆಗಿ, ಹುದುಗಿದ್ದ ಎಲ್ಲ personalities ಒಮ್ಮೆಲೇ ಆ ಹೆಣ್ಣಿನ ಒಂದು ದೇಹವನ್ನು ಆಕ್ರಮಿಸಿ, 'ನಾನು ಮುಖ್ಯ!ನಾನು ಮುಖ್ಯ!' ಅಂತ ತಮ್ಮಲ್ಲೇ ಹೊಡೆದಾಟ ಆರಂಭಿಸಿದ್ದವು. ಅದಕ್ಕೇ ಮುಖ ಆಪರಿ ವಿಕಾರವಾಗಿ ತಿರುಚಿಕೊಳ್ಳತೊಡಗಿತ್ತು. ತುಂಬಾ ಹಿಂಸೆಯಾಗುತ್ತಿತ್ತು. ಒಂದು ಮಾನವ ದೇಹ ಅಷ್ಟೊಂದು ವ್ಯಕ್ತಿತ್ವಗಳು ಒಮ್ಮೆಲೇ ಆಟಕಾಯಿಸಿಕೊಂಡರೆ ಹೇಗೆ ಭರಿಸಿಕೊಂಡೀತು?

ಮಾನಸಿ ಹುಚ್ಚಿಯಂತೆ ಚೀರತೊಡಗಿದಳು. ಆಕೆಗೆ ಕೋಮಲ್ ಮೇಲೆ ಲಕ್ಷ್ಯವೇ ಇರಲಿಲ್ಲ. ತಲೆ ಸಿಡಿದೇ ಹೋಗುತ್ತದೆಯೋ ಏನೋ ಎಂಬಂತೆ ತಲೆ ಹಿಡಿದುಕೊಂಡು ಕುಣಿಯುತ್ತಿದ್ದಳು. ಪಿಸ್ತೂಲು ಕೈಯಲ್ಲೇ ಇತ್ತು. ತಲೆಗೆ ತಾಕಿಕೊಂಡೇ ಇತ್ತು. 'ದೇವರೇ, ಪಿಸ್ತೂಲ್ ತಲೆಗೇ ಇಟ್ಟುಕೊಂಡಿದ್ದಾಳೆ. ಅದು ಆಕೆಗೆ ಗೊತ್ತೇ ಇಲ್ಲ. ಅಕಸ್ಮಾತ ಎಲ್ಲಿಯಾದರೂ ಫೈರ್ ಆದರೆ ಅಷ್ಟೇ!' ಅಂತ ಅಂತಹ ಸಂದರ್ಭದಲ್ಲೂ ಆತಂಕಪಟ್ಟ ಕೋಮಲ್.

'ಢಂ!' ಅಂತ ಗರ್ಜಿಸಿತು ಪಿಸ್ತೂಲ್. ಎಲ್ಲಿ ತನಗೇ ಗುಂಡು ಹೊಡೆದಳೋ ಅಂತ ಹೆದರಿದ ಕೋಮಲ್ ಕಣ್ಣು ಮುಚ್ಚಿದ. ಒಂದು ಕ್ಷಣದ ನಂತರ ಸತ್ತಿಲ್ಲ ಅಂತ ಖಾತ್ರಿಯಾದ ಮೇಲೆ ಕಣ್ಣು ಬಿಟ್ಟ. ಒಮ್ಮೆ ಜೋರಾಗಿ ಕೂಗಿದ ಮಾನಸಿ ಏಕ್ದಂ ಸ್ಥಬ್ಧಳಾದಳು. ದೇಹ ನೆಲಕ್ಕೆ ಉರುಳತೊಡಗಿತ್ತು. ಕೋಮಲ್ ಅಂದುಕೊಂಡಂತೆಯೇ ಆಗಿ ಹೋಗಿತ್ತು. ಪೊರಪಾಟಿನಲ್ಲಿ ಪಿಸ್ತೂಲ್ ಫೈರ್ ಆಗಿತ್ತು. ಗುಂಡು ತಲೆಯನ್ನು ಸೀಳಿಕೊಂಡು ಹೋಗಿತ್ತು. ಮಾನಸಿ ಫಿನಿಶ್. ಮುಖ ಮಾತ್ರ ಹಾಗೆಯೇ ಚಿತ್ರವಿಚಿತ್ರವಾಗಿ ತಿರುಚಿಕೊಂಡೇ ಇತ್ತು.  ಕೋಮಲ್ ವಿಗ್ರಹದಂತೆ ನಿಂತೇ ಇದ್ದ. ಎಷ್ಟೊತ್ತು ಹಾಗೆ ನಿಂತಿದ್ದ ಅಂತ ಅವನಿಗೇ ಗೊತ್ತಿರಲಿಲ್ಲ.

ಆಗ ಕೋಮಲನ ಫೋನ್ ರಿಂಗಾಯಿತು. ನೋಡಿದರೆ ಪ್ರೊ. ಹೆಗಡೆ. 'ಕೋಮಲ್, ಕೋಮಲ್ ಎಲ್ಲಿದ್ದೀರಿ? ಹೇಗಿದ್ದೀರಿ? ಈಗ ಮಾತ್ರ ಸಂಜೆಯ ಪೂಜೆಗೆ ಕೂತಿದ್ದೆ. ನಿಮ್ಮ ನೆನಪಾಯಿತು. ಸರಿ, ನಂತರ ಪೋನ್ ಮಾಡೋಣ ಅಂತ ವಿಚಾರ ಮಾಡಿದೆ. ಆದ್ರೆ ಪೂಜೆ ಮುಂದುವರಿಸಲು ಆಗಲೇ ಇಲ್ಲ ಕೋಮಲ್. ನೀವು ಯಾಕೋ ದೊಡ್ಡ ಸಂಕಷ್ಟದಲ್ಲಿ ಸಿಕ್ಕಾಕಿಕೊಂಡಿರಬೇಕು ಅಂತ ಅನ್ನಿಸಿತು. Are you alright my boy?' ಅಂತ ತುಂಬ ಆತಂಕದಿಂದ, ಪಿತೃವಾತ್ಸಲ್ಯದಿಂದ ಕೇಳಿದರು ಪ್ರೊ. ಹೆಗಡೆ. 'ಸರ್, ಏನು ಟೈಮಿಂಗ್ ನಿಮ್ಮದು? ದೊಡ್ಡ ಕಂಟಕದಿಂದ ಪಾರಾಗಿ ಬಂದೆ. ಕಳೆದ ಸಲ ಬಂದಾಗಲೇ ಹೇಳಿದ್ದಿರಿ ಏನೋ ಗಂಡಾಂತರ ಇದೆ ಅಂತ. ಮಾತು ನಿಜವಾಯಿತು ಸರ್. ಏನೋ ದೇವರ ಮತ್ತು ನಿಮ್ಮಂತವರ ಆಶೀರ್ವಾದ. ಅದಕ್ಕೇ ಬಚಾವ್. ಉಳಿದ ಸುದ್ದಿ ಎಲ್ಲ ಆಮೇಲೆ ಹೇಳ್ತೀನಿ ಸರ್. ಹೇಳೋದೇನು? ಇನ್ನು ಒಂದು ವರ್ಷ ನನ್ನದೇ ಸುದ್ದಿ ನೋಡಿ ಎಲ್ಲ ಕಡೆ. ನಮಸ್ಕಾರ ಸರ್,' ಅಂದ ಕೋಮಲ್. 'ಶುಭಮಸ್ತು! ಮಂಗಳವಾಗಲಿ. ಬೇಗ ಬಂದು ಕಾಣು,' ಅಂತ ಆಶೀರ್ವದಿಸಿದ ಪ್ರೊ. ಹೆಗಡೆ ಫೋನಿಟ್ಟರು. ಕೋಮಲ್ ಸುರಕ್ಷಿತವಾಗಿದ್ದಾನೆ ಅಂತ ತಿಳಿದು ನಿರಾಳರಾಗಿ ತಮ್ಮ ಸಂಜೆಯ ಪೂಜೆ ಶುರು ಹಚ್ಚಿಕೊಂಡರು. ಮತ್ತದೇ ಮೃತ್ಯು ನಿವಾರಕ ಮಂತ್ರ, ಮಹಾ ಮೃತ್ಯುಂಜಯ ಮಂತ್ರ - ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ। ಊರ್ವಾರುಕಮಿವ ಬಂಧನಾನ್ ಮೃತ್ಯೋರ್ಮೂಕ್ಷಿಯ ಮಾ ಮೃತಾತ್।।

ದೊಡ್ಡ ಕಂಟಕದಿಂದ ಪಾರಾದ ನಂತರ ಹಿತೈಷಿ ಪ್ರೊ.ಹೆಗಡೆ ಅವರ ಜೊತೆ ಮಾತಾಡಿ ಮುಗಿಸಿದ ಮೇಲೆ ಕೋಮಲನಿಗೆ ಮುಂದೆ ಏನು ಮಾಡಬೇಕು ಅಂತ ಬರೋಬ್ಬರಿ ಸೂಚಿಸಿತು. ಫೋನ್ ಮಾಡಿದ. ಆ ಕಡೆಯಿಂದ ಇನ್ಸಪೆಕ್ಟರ್ ಖಲಸ್ಕರ್, 'ಏನು ಕೋಮಲ್ ಭಾಯ್? ಏನು ಸುದ್ದಿ? ಬೆಂಗಳೂರಿಗೆ ಹೋಗಿ ಬಂದಿರಂತೆ? ನಾನು ಹೇಳಿದ್ದ ಮಾಲಿನ ಕಡೆ ಹೋಗಲಿಲ್ಲವಂತೆ? ಮನ್ನೆ ಫೋನ್ ಮಾಡಿದಾಗ ಹೇಳಿದಳು. ಯಾಕೆ ಇಷ್ಟವಾಗಲಿಲ್ಲವಾ?' ಅಂತ ಸುಮ್ಮನೆ ಮಷ್ಕಿರಿ ಮಾಡಿದ. 'ವಿನಯ್, ಈಗಿಂದೀಗಲೇ ಮಾನಸಿ ಮನೆ ಕಡೆ ಹೊರಟು ಬನ್ನಿ. ಮಾನಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ!' ಅಂದ. ಕೇಳಿದ ಖಲಸ್ಕರ್ ಫುಲ್ ದಂಗು. 'ಏನು?!' ಅಂತ ಇಡೀ ಠಾಣೆಗೆ ಕೇಳುವಂತೆ ಕೂಗಿದ. ಎಲ್ಲರೂ ಬೆಚ್ಚಿ ಅವನ ಕಡೆ ನೋಡಿದರು. 'ಅರ್ಜೆಂಟ್, ಅರ್ಜೆಂಟ್. ಎಲ್ಲರೂ ಹುಚ್ಚರ ಡಾಕ್ಟರಬಾಯಿ ಮನೆ ಕಡೆ ಹೊಂಡಿ. ದೊಡ್ಡ ಲಫಡಾ ಆಗಿದೆ. ಈ ಸಲ ಹುಚ್ಚರ ಡಾಕ್ಟರಬಾಯಿಯೇ ಸತ್ತು ಹೋಗಿದ್ದಾಳೆ. ಸುಯಿಸೈಡ್ ಕೇಸ್. ಕ್ವಿಕ್, ಕ್ವಿಕ್!' ಅಂತ ಆರ್ಡರ್ ಮಾಡುತ್ತ, ಕಂಟ್ರೋಲ್ ರೂಮಿಗೆ ಮೆಸೇಜ್ ಮುಟ್ಟಿಸಿದ. ಎಲ್ಲ ಪೊಲೀಸರೂ ಅದನ್ನು ಕೇಳಿದರು. ಸುದ್ದಿ ಕೇಳಿದ SP, DSP ಮಟ್ಟದ ದೊಡ್ಡ ದೊಡ್ಡ ಅಧಿಕಾರಿಗಳೆಲ್ಲ ಮಾನಸಿ ಮನೆ ಕಡೆ ದೌಡಾಯಿಸಿದರು.

ಭಾಗ - ೨೦

ಮುಂದೇ ಸ್ವಲ್ಪೇ ಸಮಯದಲ್ಲಿ ಮಾನಸಿಯ ಬಂಗಲೆ ಪೊಲೀಸರಿಂದ ತುಂಬಿಹೋಯಿತು. ಊರ ತುಂಬಾ ಸುದ್ದಿ ಹರಡಿತ್ತು. ಪತ್ರಿಕೆಗಳ ವರದಿಗಾರರೂ ಬಂದು ಮುಕುರಿದ್ದರು. ಎಲ್ಲರನ್ನೂ ನಿಯಂತ್ರಿಸಲೆಂದೇ ಒಂದರೆಡು ಪೋಲೀಸ್ ಪ್ಲಟೂನ್ ಕರೆಸಲಾಯಿತು.

ಬಂದ ಪೋಲೀಸ್ ಅಧಿಕಾರಿಗಳಿಗೆ ಎಲ್ಲ ವಿವರಗಳನ್ನೂ ಕೊಟ್ಟ ಕೋಮಲ್. ಎಲ್ಲದಕ್ಕೂ ಬರೋಬ್ಬರಿ ಸಾಕ್ಷಿ ಸಹ ಸಿಕ್ಕಿತ್ತು. ಪೊಲೀಸರು ತಮ್ಮ ಕೆಲಸ ಮುಂದುವರೆಸಿದರು.

ಕೋಮಲ್ ಅಲ್ಲೇ ಉಳಿದ. ಸಂಜೆ ಏಳರ ಹೊತ್ತು. ಕೋಮಲ್ ಮನಸ್ಸಿನಲ್ಲಿ ಒಂದು ಪ್ರಶ್ನೆ ಮತ್ತೆ ಮೂಡಿತು. ಆದಿನ ಮೊದಲ ಬಾರಿಗೆ ಮಾನಸಿ ಧುತ್ತೆಂದು ಪ್ರತ್ಯಕ್ಷವಾದಾಗ ಅನ್ನಿಸಿದ್ದು, 'ಅರೇ! ಇವತ್ತು ಮಾನಸಿ ಮನೆಯಲ್ಲಿ ಹೇಗೆ? ಮತ್ತೆ ಮನೆಯಲ್ಲಿದ್ದರೆ ಮನೆ ಮುಂದೆ ಪೋರ್ಟಿಕೋದಲ್ಲಿ ಕಾರು ಕಾಣಬೇಕಿತ್ತು. ಕಾರು ಇರಲೇ ಇಲ್ಲ. ಹಾಗಿದ್ದರೆ ಕಾರ್ ಎಲ್ಲಿ ಹೋಯಿತು?' ಈ ಪ್ರಶ್ನೆಗೆ ಮಾತ್ರ ಉತ್ತರ ಸಿಕ್ಕಿರಲಿಲ್ಲ.

ಇನ್ಸಪೆಕ್ಟರ್ ಖಲಸ್ಕರ್ ಬಂದ. ಕೋಮಲನ ಭುಜದ ಮೇಲೆ ಕೈಯಿಟ್ಟು ನಿಂತ. ಏನೋ ಹೇಳಲು ಹೊರಟ. ತುಂಬ ಭಾವುಕನಾಗಿದ್ದ. ಮಾತಾಡಲು ಆಗಲಿಲ್ಲ. ಕೋಮಲ್ ಅವನ ಕೈಗಳನ್ನು ಆತ್ಮೀಯವಾಗಿ ಒತ್ತಿ, 'It's OK my friend. It's OK,' ಅನ್ನುವಂತೆ ನೋಡಿದ. ಕಣ್ಣಲ್ಲೇ, 'ಥ್ಯಾಂಕ್ಸ್' ಹೇಳಿದ ಇನ್ಸಪೆಕ್ಟರ್ ಖಲಸ್ಕರ್.

ಆಗ ಕೋಮಲ್ ತನ್ನ ಮನಸ್ಸಿನಲ್ಲಿ ಕೊರೆಯುತ್ತಿದ್ದ ಸಂದೇಹವನ್ನು ಖಲಸ್ಕರ್ ಜೊತೆ ಹಂಚಿಕೊಂಡ. 'ಓ ಅದಾ? ಮಾನಸಿ ಡಾಕ್ಟರ್ ಕಾರಿನಲ್ಲೇ ಆಫೀಸಿಗೆ ಹೊರಟಿದ್ದಳು. ಮಾರ್ಗದಲ್ಲಿ ಕಾರು ಕೆಟ್ಟು ನಿಂತಿತು. ಗ್ಯಾರೇಜಿಗೆ ಫೋನ್ ಮಾಡಿದ್ದಾಳೆ. ರಸ್ತೆ ಪಕ್ಕ ನಿಂತ ಕಾರನ್ನು ತೆಗೆದುಕೊಂಡು ಹೋಗುವಂತೆ ಹೇಳಿದ್ದಾಳೆ. ಅಲ್ಲಿಂದ ಆಟೋ ಮಾಡಿಕೊಂಡು ಮನೆಗೆ ಬಂದಿದ್ದಾಳೆ. ಆದರೆ ಆಟೋ ಮಾಡಿಕೊಂಡು ಮನೆಗೆ ಯಾಕೆ ಬಂದಳು? ಆಫೀಸಿಗೆ ಯಾಕೆ ಹೋಗಲಿಲ್ಲ? ಅದಕ್ಕೆ ಉತ್ತರ ನಮ್ಮ ಕಡೆ ಇಲ್ಲ. ಉತ್ತರ ಕೊಡಬಹುದಾದ ಮಾನಸಿಯೂ ಇಲ್ಲ. ಇದೆಲ್ಲ ವಿವರ ನಾವು ಆಗಲೇ ತೆಗೆದಾಯಿತು. ಕಾರ್ ತೆಗೆದುಕೊಂಡ ಹೋದ ಗ್ಯಾರೇಜ್ ಓನರ್, ಮನೆಗೆ ತಂದು ಬಿಟ್ಟು ಹೋದ ಆಟೋ ಡ್ರೈವರ್ ಎಲ್ಲ ಹೇಳಿಕೆ ಕೊಟ್ಟಿದ್ದಾರೆ. ಎಲ್ಲ ಬರೋಬ್ಬರಿ ತಾಳೆಯಾಗುತ್ತಿವೆ,' ಅಂತ ಹೇಳಿದ ಖಲಸ್ಕರ್, ಆ ಮಧ್ಯಾನ ಮಾನಸಿ ಮನೆಯಲ್ಲಿದ್ದ ಕಾರಣ ವಿವರಿಸಿದ್ದ. ಸಂದೇಹ ನಿವಾರಿಸಿದ್ದ.

ಮನೆ ಕಡೆ ಹೋಗೋಣ ಅಂತ ಕೋಮಲ್ ಎದ್ದ. ಖಲಸ್ಕರ್ ತಡೆದ. 'ಕೋಮಲ್, ಇನ್ನೂ ಸ್ವಲ್ಪ ಹೊತ್ತಾಗಲಿ. ಹೊರಗಡೆ ಮೀಡಿಯಾ ತುಂಬಾ ಇದೆ. ಸುಮ್ಮನೆ ಉಪದ್ರವ. ಕತ್ತಲಾದ ನಂತರ ನಾನೇ ಹೋಗಿ ನಿನ್ನನ್ನು ಬಿಟ್ಟು ಬರುತ್ತೇನೆ. ಮನೆಗೆ ಹೋಗದೇ ಎಲ್ಲಾದರೂ ರೆಸಾರ್ಟಿಗೆ ಹೋಗಿ ಒಂದೆರೆಡು ವಾರವಿದ್ದು, ಮೀಡಿಯಾ ಹೀಟ್ ಕಮ್ಮಿಯಾದ ಮೇಲೆ ಬಂದರೆ ಒಳ್ಳೇದು. ಅಥವಾ ಮನೆಗೇ ಹೋಗುವೆ ಅಂದರೂ ಸರಿ. ಅಷ್ಟೇ ಮನೆ ಹತ್ತಿರ ಕೂಡ ಮೀಡಿಯಾ ಇದೆ. ಇಲ್ಲಿಯಷ್ಟು ಇಲ್ಲ. ಇನ್ನೂ ಒಂದು ಘಂಟೆ ವೇಟ್ ಮಾಡು. ಪ್ಲೀಸ್,' ಅಂತ ಕೇಳಿಕೊಂಡ. ಇನ್ಸಪೆಕ್ಟರ್ ಖಲಸ್ಕರ್ ಹೇಳಿದ್ದರಲ್ಲಿ ಏನೂ ತಪ್ಪಿಲ್ಲ ಅಂತನ್ನಿಸಿತು ಕೋಮಲನಿಗೆ. ವೇಟ್ ಮಾಡುತ್ತ ಸುಮ್ಮನೆ ಏನೋ ಯೋಚಿಸುತ್ತ ಕೂತ.

'ಮಾನಸಿಗೆ multiple personality disorder ಅನ್ನುವ ಮಾನಸಿಕ ವೈಪರೀತ್ಯ ಇದ್ದಿದ್ದಂತೂ ನಿಜ. ಆದರೆ ಅವಳಿಗೆ ಹೇಗೆ ಬಂತು ಅದು?' ಅಂತ ಕೋಮಲ್ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಿತು. 'ಚಿಕ್ಕಂದಿನಲ್ಲಿ ಮಕ್ಕಳು ಲೈಂಗಿಕ ಶೋಷಣೆಗೆ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದರೆ ಮುಂದೆ ಈ ತರಹದ ತೊಂದರೆಗೆ ಒಳಗಾಗುತ್ತಾರೆ' ಅಂತ ಎಲ್ಲೋ ಓದಿದ್ದು ನೆನಪಿಗೆ ಬಂತು. ಒಮ್ಮೆಲೇ ಮಾನಸಿಯ ಚಿಕ್ಕಪ್ಪ ಬ್ರಹ್ಮಚಾರಿ ಕಿಟ್ಟಿ ಕಾಕಾ ನೆನಪಾದ. ಅವನೇ ಏನಾದರೂ ಮಾನಸಿಯನ್ನು ಚಿಕ್ಕಂದಿನಲ್ಲಿ ಲೈಂಗಿಕವಾಗಿ ಶೋಷಣೆ ಮಾಡಿದ್ದನೇ? ದೌರ್ಜನ್ಯ ಮಾಡಿದ್ದನೇ? ಅದಕ್ಕೇ ಮಾನಸಿ ಈ ತರಹದ personality disorder ಗೆ ತುತ್ತಾದಳೇ? ಹಾಗಾಗಿರುವ ಸಾಧ್ಯತೆಗಳನ್ನು ಊಹಿಸಿಕೊಂಡರೆ, ಮಾನಸಿ ಚಿಕ್ಕಂದಿನಲ್ಲಿ ಸಹಿಸಿರಬಹುದಾದ ನೋವುಗಳನ್ನು ಊಹಿಸಿಕೊಂಡರೆ, ಮೂಕವೇದನೆಯನ್ನು ಊಹಿಸಿಕೊಂಡರೆ........My God! ಆದರೆ ಮಾನಸಿ ಚಿಕ್ಕಪ್ಪ ಮೊದಲು ಕೆಲಸ ಮಾಡಿಕೊಂಡು ಬೇರೆ ಎಲ್ಲೋ ಇದ್ದ. ಐವತ್ತು ವರ್ಷದ ಸಮೀಪ ಬಂದಾಗ ಧಾರವಾಡಕ್ಕೆ ಬಂದು ನೆಲೆಸಿದ್ದ ಅಂತ  ಮಾನಸಿ ಹೇಳಿದ್ದಳು ಅಂತ ನೆನಪು. ಆವಾಗ ಮಾನಸಿಗೆಷ್ಟು ವರ್ಷ ವಯಸ್ಸಿರಬಹುದು? ಆವಾಗಿಂದ ತನ್ನ ಚೇಷ್ಟೆ ಶುರು ಮಾಡಿಕೊಂಡಿದ್ದನೇ ಕಿಟ್ಟಿ ಕಾಕಾ? ಅಂತ ಯಾವದೋ ರೀತಿಯಲ್ಲಿ ಕೋಮಲನ ವಿಚಾರ ಲಹರಿ ಹರಿಯಿತು. 'ಹಾಗೆಲ್ಲಾ ಸುಮ್ಮಸುಮ್ಮನೆ ಏನೇನೋ ಸಂಶಯ ಪಡಬಾರದು,' ಅಂತ ತನಗೆ ತಾನೇ ಹೇಳಿಕೊಂಡ. ಆದರೆ ಇದೆಲ್ಲೆದರ ಹಿಂದೆ ಕಿಟ್ಟಿ ಕಾಕಾನ ಕರಾಮತ್ತು ಇರುವ ಬಗ್ಗೆ ಅವನಿಗೆ ತುಂಬ ಸಂದೇಹ. ಅದಕ್ಕೇ ಕಿಟ್ಟಿ ಕಾಕಾನನ್ನು ಮಾನಸಿ ಸಾಯಿಸಿದಳೇ? ಅರೇ ಹಾಗಾದರೆ what about ಪದ್ಮಾವತಿಬಾಯಿ?? ಕಿಟ್ಟಿ ಕಾಕಾ ಬ್ರಹ್ಮಚಾರಿಯಾದರೆ ಪದ್ಮಾವತಿ ವಿಧವೆ. ಅದೂ ತುಂಬ ಚಿಕ್ಕ ವಯಸ್ಸಿನಲ್ಲೇ ವಿಧವೆಯಾದಳಂತೆ. ಚಿಕ್ಕ ವಯಸ್ಸಿನ ವಿಧವೆ ಅಂದರೆ ಭಾಳ ಡೇಂಜರ್. ಉಕ್ಕಿ ಬರುತ್ತಿದ್ದ ಕಾಮನೆಗಳನ್ನು ಅದುಮಿಡಲಾಗದ ಪದ್ಮಾವತಿಬಾಯಿ ಮಾನಸಿಯನ್ನು ಲೈಂಗಿಕವಾಗಿ ಶೋಷಣೆ ಮಾಡಿದಳೇ? ಅಥವಾ ವಿಧವೆ ಪದ್ಮಾವತಿ ಮತ್ತು ಬ್ರಹ್ಮಚಾರಿ ಕಿಟ್ಟಿ ಕಾಕಾ ನಡುವೆಯೇನಾದರೂ ಲಫಡಾ ಇತ್ತೇ? ಅದರ ಒಂದು ಅಂಗವಾಗಿ ಮಾನಸಿಯನ್ನು ಶೋಷಣೆ ಮಾಡಲಾಯಿತೇ? ಹೀಗೆ ಏನೇನೋ ಚಿತ್ರ ವಿಚಿತ್ರ ಆಲೋಚನೆಗಳು ಗೋಜಲು ಗೋಜಲಾಗಿ ಕೋಮಲನ ಮನಸ್ಸಿಗೆ ಬಂದವು. ತಲೆಯೆಂದರೆ ಕಡೆದ ಮೊಸರು ಗಡಿಗೆಯಂತಾಯಿತು. ಮುಖ ಮುಚ್ಚಿಕೊಂಡು ಕೂತ. ಪ್ರೇಯಸಿ ರೂಪದಲ್ಲಿ ಮಾನಸಿ ನೆನಪಾದಳು. ದುಃಖ ಉಮ್ಮಳಿಸಿ ಬಂತು. ಬಿಕ್ಕಿ ಬಿಕ್ಕಿ ಅತ್ತ. ಯಾರೋ ತಣ್ಣಗೆ ಹೆಗಲ ಮೇಲೆ ಕೈಯಿಟ್ಟರು. ನೋಡಿದರೆ ಇನ್ಸಪೆಕ್ಟರ್ ಖಲಸ್ಕರ್ ನಿಂತಿದ್ದ. 'ನಡೆ ಹೋಗೋಣ,' ಅನ್ನುವಂತೆ ನೋಡಿದ. ಕೋಮಲ್ ಎದ್ದ. ಪೋಲೀಸರ ಬಂದೋಬಸ್ತಿನಲ್ಲಿ ಕೋಮಲ್ ಹೋಗಿ ಪೋಲೀಸ್ ಜೀಪಿನಲ್ಲಿ ತೂರಿಕೊಂಡ. ಹೇಗೋ ಮೀಡಿಯಾದಿಂದ ಎಸ್ಕೇಪ್ ಆದ. 'ಎಲ್ಲಿಗೆ?' ಅಂದ ಖಲಸ್ಕರ್. 'ಮನೆ' ಅಂದ ಕೋಮಲ್ ಕಣ್ಣು ಮುಚ್ಚಿದ. ಸಮಯ ರಾತ್ರಿ ಒಂಬತ್ತು ಘಂಟೆ. ಹಿಂದಿನ ಏಳೆಂಟು ತಾಸಿನಲ್ಲಿ ಅದೆಷ್ಟು ಜನರ ಜೀವನ ಪೂರ್ತಿ ಬದಲಾಗಿ ಹೋಯಿತು ಅನ್ನುವ ವಿಚಾರ ಬಂತು. ಎಲ್ಲರೂ ನೆನಪಾದರು. ಒಬ್ಬರು ನೆನಪಾಗಲಿಲ್ಲ. ಯಾಕೆಂದರೆ ಅವರ ಪರಿಚಯ ಕೋಮಲನಿಗೆ ಇರಲಿಲ್ಲ. ಅವರ ಬಗ್ಗೆ ಮಾನಸಿಯಿಂದ ಭಾಳ ಕೇಳಿದ್ದ. ಅವರೇ ಆಕೆಯ ಪರಮ ಗುರು ಪ್ರೊ. ಹೆಂಡರ್ಸನ್!

ಮನೆಗೆ ಬಂದು ಮುಟ್ಟಿಕೊಂಡ ಕೋಮಲ್. ಅಷ್ಟೊತ್ತಿಗೆ ಎಲ್ಲರಿಗೂ ಸುದ್ದಿ ತಿಳಿದಿತ್ತು. ಪತಿ ಸುರಕ್ಷಿತವಾಗಿ ಬಂದು ಮನೆ ಮುಟ್ಟಿದ ಅಂತ ಹೆಂಡತಿ ತಾಳಿ ಕಣ್ಣಿಗೆ ಒತ್ತಿಕೊಂಡಳು. ತಂದೆಗೆ ಹೋಗಿ ನಮಸ್ಕರಿಸಿದ ಕೋಮಲ್. ಮನೆ ಹಿರಿಯ ದಿನಕರ್ ಜಾತ್ರಾವಳಿ ಒಂದೇ ಮಾತು ಹೇಳಿದರು - 'ಪ್ರೊ. ಹೆಗಡೆ ಪ್ರಸಾದ ಕೊಟ್ಟು ಕಳಿಸಿದ್ದಾರೆ. ಸ್ನಾನ ಮಾಡಿ, ಒಂದು ಹತ್ತು ಗಾಯತ್ರಿ ಮಂತ್ರ ಹೇಳಿದ ನಂತರ ಮುದ್ದಾಂ ತೆಗೆದುಕೋ. ರೆಸ್ಟ್ ಮಾಡು ಕೋಮಲ್.' ಮನೆ ಹಿರಿಯನ ಮುಖದಲ್ಲಿ ಮನೆತನದ ಕುಲದೀಪಕ ಆರಿಹೊಗದೇ ಉಳಿದುಕೊಂಡ ಅನ್ನುವ ನೆಮ್ಮದಿ, ದೇವರೆಡೆಗೆ ಕೃತಜ್ಞತಾ ಭಾವ.

ಭಾಗ - ೨೧

ಮಾನಸಿಯ ವಿಚಿತ್ರ ಬದುಕು, ವಿಚಿತ್ರ ಸಾವು, ಸಾವಿಗೆ ಸಂಭವನೀಯ ಕಾರಣವಾದ multiple personality disorder ಎಲ್ಲದರ ಬಗ್ಗೆ ದೇಶ ವಿದೇಶದ ಎಲ್ಲ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದ್ದವು. ಮಾನಸಿಯ ಪರಮ ಗುರು ಪ್ರೊ. ಹೆಂಡರ್ಸನ್ ಸಹ ಅವನ್ನು ಓದಿದರು. ಓದಿ ಅವರಿಗೆ ದುಃಖವಾಗಲಿಲ್ಲ. ಬದಲಿಗೆ ವಿಪರೀತ ಸಂತೋಷವಾಯಿತು. 'I have succeeded. I have succeeded. I have managed to induce multiple personality disorder on demand. We did it Manasi. We did it Manasi. Rest in peace, my dear' ಅನ್ನುತ್ತ ಅವರೂ ರೌಂಡ್ ರೌಂಡ್ ಕುಣಿಯತೊಡಗಿದರು. ಅದನ್ನು ಯಾರೂ ನೋಡಲಿಲ್ಲ. ಕೋಮಲ್ ನೋಡಿದ್ದರೆ ಅಲ್ಲೇ ತಿರ್ಮಾನಿಸಿಯೇ ಬಿಡುತ್ತಿದ್ದ - 'ಇವನಿಗೂ multiple personality disorder ಗ್ಯಾರಂಟೀ ಇದೆ.'

ಅಮೇರಿಕಾದಲ್ಲಿದ್ದ ಎಂಟು ವರ್ಷ ಪ್ರೊ. ಹೆಂಡರ್ಸನ್ ಮತ್ತು ಮಾನಸಿ ಕೂಡಿ ಖತರ್ನಾಕ್  ಪ್ರಯೋಗಗಳನ್ನು ಮಾಡಿದ್ದರು. ಅವಳಿಗೇ ಗೊತ್ತಾಗದಂತೆ ಪ್ರೊ. ಹೆಂಡರ್ಸನ್ ಮಾನಸಿಯ ವ್ಯಕ್ತಿತ್ವವನ್ನು ಒಡೆದು ಚೂರು ಚೂರು ಮಾಡಿದ್ದರು. ಆ ಪ್ರಯೋಗದ ಯಶಸ್ಸಿನ ಬಗ್ಗೆ ಅವರಿಗೇ ಖಾತ್ರಿಯಿರಲಿಲ್ಲ. ಬೇಕು ಅಂದಾಗ ಇಷ್ಟಪಟ್ಟ ವ್ಯಕ್ತಿತ್ವ ಬಂದು ದೇಹದಲ್ಲಿ ಸ್ಥಾಪಿತವಾಗಬೇಕು. ಅದನ್ನು ಸಾಧಿಸಬೇಕು ಅಂತನ್ನುವದು ಅವರ ಪರಮೋದ್ದೇಶ. ಪ್ರಯೋಗಗಳು ಪೂರ್ತಿ ಮುಗಿಯುವ ಮೊದಲೇ ಮಾನಸಿ ಬೇರೆ ಭಾರತಕ್ಕೆ ತಿರುಗಿ ಹೊರಟು ನಿಂತಿದ್ದಳು. ಪ್ರಯೋಗಗಳನ್ನು ಮುಂದುವರಿಸಲೇ ಬೇಕಾಗಿತ್ತು. ಅ ಕಾರಣಕ್ಕೇ ಮಾನಸಿಗೆ ಆಗಾಗ ಫೋನ್ ಮಾಡಿ, ಏನೇನೋ ಟೆಕ್ನಿಕ್ ಉಪಯೋಗಿಸಿ, ಮಾನಸಿಯಲ್ಲಿ ರೂಪಿಸಿದ್ದ ಬಹು ವ್ಯಕ್ತಿತ್ವಗಳನ್ನು ಎಬ್ಬಿಸಿಲು ಪ್ರಯತ್ನ ಮಾಡುತ್ತಿದ್ದರು. ಅವರು ಹಾಗೆ ಮಾಡಿದಾಗೆಲ್ಲ ಮಾನಸಿ ಬೇರೆಯೇ ವ್ಯಕ್ತಿಯಾಗಿ, ಆವಾಗ ತಲೆಗೆ ಏನು ಬಂತೋ ಅದನ್ನು ಮಾಡಿ ಬರುತ್ತಿದ್ದಳು. ಅದೆಷ್ಟು personality ಮಾಡಿ ಮಾಡಿ ಆಕೆಯನ್ನು ವಿಭಜಿಸಿ ಹಾಕಿದ್ದರೋ ಆಕೆಯ ಗುರು. ಅವುಗಳಲ್ಲಿ ಎಷ್ಟು ವ್ಯಕ್ತಿತ್ವಗಳು ತುಂಬಾ ಹಿಂಸಾತ್ಮಕ (violent ) ಇದ್ದವೋ ಏನೋ. ಒಟ್ಟಿನಲ್ಲಿ ಪ್ರೊ. ಹೆಂಡರ್ಸನ್ ಅವರ ಖತರ್ನಾಕ್ ಪ್ರಯೋಗಗಳು ಯಶಸ್ವಿಯಾಗಿದ್ದವು. ಆದರೆ ಅದಕ್ಕೆ ಮಾನಸಿ ಬಲಿಯಾಗಿದ್ದಳು.

ಮಾನಸಿ ಅಮೇರಿಕನ್ ಮೇಡ್ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಸತ್ತಿದ್ದಳು. ಅವಳಲ್ಲಿ ಯಾವದೇ ಗನ್ ಲೈಸೆನ್ಸ್ ಇರಲೇ ಇಲ್ಲ. ಗನ್ನೂ ಇರಲಿಲ್ಲ. ಹಾಗಾದರೆ ಆಕೆಗೆ ಆ ಗನ್ ಯಾರು ಕೊಟ್ಟರು? ಅಂತ ಪೊಲೀಸರು ತುಂಬ ತಲೆ ಕೆಡಿಸಿಕೊಂಡರು. ಅದಕ್ಕೆ ಮಾತ್ರ ಇನ್ನೂವರೆಗೆ ಉತ್ತರ ಸಿಕ್ಕಿಲ್ಲ. ಸಿಗುವದೂ ಇಲ್ಲ. ಯಾಕೆಂದರೆ ಅದನ್ನು ಪ್ರೊ. ಹೆಂಡರ್ಸನ್ ಮಾನಸಿಗೆ ಕೊಟ್ಟಿದ್ದರು. ದೆಹಲಿಯಲ್ಲಿ conference ನಲ್ಲಿ ಸಿಕ್ಕಾಗ ಕೊಟ್ಟಿದ್ದರು. 'ನಿನ್ನ ಜೀವನದಲ್ಲಿ ಏನೇನೋ ಅವಗಢಗಳು ಆಗುತ್ತಿವೆ ಮಾನಸಿ. ನಿನ್ನ ಅಂಕಲ್, ಕೆಲಸದಾಕೆಯ ಕೊಲೆಯಾಯಿತು. ನಾಯಿ ಬೆಕ್ಕುಗಳ ಹತ್ಯೆ ಸಹಿತ ಆಗಿದೆ. I am really worried about your safety. Keep it,' ಅಂತ ಹೇಳಿ ಒಂದು ಚಿಕ್ಕ ಗನ್ ಕೊಟ್ಟಿದ್ದರು. ಗುರು ಕೊಟ್ಟ ಕಾಣಿಕೆ, ಇಲ್ಲವೆನ್ನಲು ಆಗುತ್ತದೆಯೇ? ನಂತರ ಲೈಸೆನ್ಸ್ ಮಾಡಿಸಿಕೊಂಡು ಇಟ್ಟುಕೊಂಡರಾಯಿತು ಅಂತ ವಿಚಾರ ಮಾಡಿದ್ದಳು ಮಾನಸಿ.

ಆದಿನ ಕಾರ್ ಕೆಟ್ಟುನಿಂತ ನಂತರ ಮಧ್ಯಾನ ಮಾನಸಿ ಆಫೀಸಿಗೆ ಹೋಗದೇ ಮನೆಗೆ ಬಂದು ಕೂತಿದ್ದಳು. ಆಗ ಬಂತು ಗುರುವಿನ ಫೋನ್. ಆಗ ಅವಳಲ್ಲಿ ಯಾವದೋ ಒಂದು personality ಎದ್ದಿತ್ತು. ಆ ವ್ಯಕ್ತಿತ್ವದ ಹತೋಟಿಯಲ್ಲಿದ್ದ ಮಾನಸಿ ಗನ್ ತೆಗೆದುಕೊಂಡು ಏನು ಮಾಡುವಳಿದ್ದಳೋ ಗೊತ್ತಿಲ್ಲ. ಅದೇ ಸಮಯದಲ್ಲಿ ಕೋಮಲ್ ಬಂದು ಒಂದಕ್ಕೆರೆಡು ಆಗಿಹೋಗಿತ್ತು. ಒಟ್ಟಿನಲ್ಲಿ ಮಾನಸಿಯ ದೇಹ, ಮೆದಳು ಒಂದೇ ಸಲ ಬಂದು ವಕ್ಕರಿಸಿದ multiple personalities ಗಳನ್ನು ಭರಿಸಲಾಗದೇ ಶಟ್ ಆಫ್ ಮಾಡಿಕೊಂಡು ಬೈ ಬೈ ಹೇಳಿದ್ದವು. ಅದೇ ಆಕೆಯ ಸಾವು.

ಮಾನಸಿಯ ಸಾವಿನ ಬಗ್ಗೆ ಬಂದ ಎಲ್ಲ ವರದಿಗಳನ್ನು, ವಿವರಗಳನ್ನು ಹೆಕ್ಕಿ ಹೆಕ್ಕಿ ಒಂದು ಫೈಲ್ ಮಾಡತೊಡಗಿದರು ಪ್ರೊ. ಹೆಂಡರ್ಸನ್. ಅವರಿಗೆ ಈಗ ದೊಡ್ಡ ಹುರುಪು. ದೊಡ್ಡ ಮೊತ್ತದ ಸಂಶೋಧನೆ ಗ್ರಾಂಟ್ ಕೇಳಿ ಒಂದು ಪ್ರಪೋಸಲ್ ಕಳಿಸುವವರು ಇದ್ದಾರೆ. ಅದಕ್ಕೆ ಎಲ್ಲ ವಿವರ ಬೇಕು. ದೊಡ್ಡ ಮೊತ್ತದ ಗ್ರಾಂಟ್ ಬಂದರೆ ಮಾನಸಿಯಂತಹ ಹತ್ತು ವಿದ್ಯಾರ್ಥಿಗಳನ್ನು ತೆಗೆದುಕೊಂಡು ಮತ್ತೇ ತಮ್ಮ ಪ್ರಯೋಗಗಳನ್ನು ಮುಂದುವರೆಸುತ್ತಾರೆ  ಪ್ರೊ. ಹೆಂಡರ್ಸನ್. ಮತ್ತೆ ಅದೇ ಪ್ರಯೋಗ - ತಮ್ಮ ಕೆಳಗೆ ಕೆಲಸ ಮಾಡುವ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಒಡೆದು, ಮಲ್ಟಿಪಲ್ ಪರ್ಸನಾಲಿಟಿಗಳನ್ನು ಸೃಷ್ಟಿಸಿ, ಏನೇನೋ ಪ್ರಯೋಗ ಮಾಡುವದು.

ಪ್ರೊ. ಹೆಂಡರ್ಸನ್  ಯಾಕೆ ಹಾಗೆ ಮಾಡುತ್ತಾರೆ? ಅವರಿಗೇಕೆ multiple personality disorders ಬಗ್ಗೆ ಅಷ್ಟು ಆಸಕ್ತಿ? ಹುಚ್ಚು? ಈ ಪ್ರಶ್ನೆಗೆ ಅವರ ಹತ್ತಿರ ಉತ್ತರವಿಲ್ಲ. ಅದು ಅವರ ಪರಮಗುರುವಿಗೆ ಮಾತ್ರ ಗೊತ್ತು. ಅವರ ಪರಮಗುರು ಒಂದು ಕಾಲದಲ್ಲಿ ಇದೇ ಪ್ರೊ. ಹೆಂಡರ್ಸನ್ ಅವರ ಮೇಲೆ ಇದೇ ಪ್ರಯೋಗ ಮಾಡಿಬಿಟ್ಟಿದ್ದಾರೆ. ಅದು ಪ್ರೊ. ಹೆಂಡರ್ಸನ್ ಅವರ ಸಾಮಾನ್ಯ ವ್ಯಕ್ತಿತ್ವಕ್ಕೆ ಗೊತ್ತಿಲ್ಲ. ಆದರೆ ಅವರ ಉಳಿದ ವ್ಯಕ್ತಿತ್ವಗಳಿಗೆ ಗೊತ್ತಿವೆ. ಅದಕ್ಕೇ ಪ್ರೊ. ಹೆಂಡರ್ಸನ್ ತಮ್ಮ ಪ್ರಯೋಗಗಳನ್ನು ಮುಂದುವರೆಸಿದ್ದಾರೆ. ಅವರೂ ಸಹ ಮಲ್ಟಿಪಲ್ ಪರ್ಸನಾಲಿಟಿ ಡಿಸ್ಆರ್ಡರ್ ಪೀಡಿತರೇ!

****************

ವಿ. ಸೂ: ಇದೊಂದು ಕಾಲ್ಪನಿಕ ಕಥೆ. ಯಾವದೇ ವ್ಯಕ್ತಿಗಳಿಗಾದರೂ ಅಥವಾ ಯಾವದೇ ನೈಜ ಘಟನೆಗಳಿಗಾದರೂ ಸಾಮ್ಯತೆ ಕಂಡುಬಂದಲ್ಲಿ ಅದು ಶುದ್ಧ ಕಾಕತಾಳೀಯವಷ್ಟೇ.

****************

ಸ್ಪೂರ್ತಿ: ಒಂದು ಹಾಲಿವುಡ್ ಸಿನೆಮಾದಲ್ಲಿ ಸಿಕ್ಕ ಕಥೆಯ ಎಳೆಯೊಂದು ಇದಕ್ಕೆ ಸ್ಪೂರ್ತಿ. ಬರೆಯುತ್ತ ಹೋದಂತೆ ಈ ಕಥೆ ಬೇರೇನೇ ಆಯಿತು. ಆ ಮಾತು ಬೇರೆ. ಸಿನಿಮಾ ಹೆಸರನ್ನು ಜರೂರ್ ಹಾಕುತ್ತೇನೆ. ಒಂದು ವಾರದ ನಂತರ. ಯಾರಿಗಾದರೂ ಆ ಸಿನಿಮಾ ಹೆಸರು ಗೊತ್ತಿರಬಹುದೇನೋ ಅಂತ ಕುತೂಹಲ. ನಿಮಗೆ ಗೊತ್ತಿದ್ದರೆ ಒಂದು ಕಾಮೆಂಟ್ ಹಾಕಿ. ಧನ್ಯವಾದ.
-- Never Talk to Strangers ಅನ್ನುವ ಚಿತ್ರದಿಂದ ಕಥೆಯ ಎಳೆಯನ್ನು ಎತ್ತಿದ್ದು.

****************

ಇಂಟರ್ನೆಟ್ ನಿಂದ ಎತ್ತಿ, ಉಪಯೋಗಿಸಿದ ಫೋಟೋಗಳ ಕಾಪಿ ರೈಟ್ಸ್ ಎಲ್ಲ ಫೋಟೋಗಳ ಮಾಲೀಕರಿಗೆ ಸೇರಿದ್ದು.

****************

(ಕಾಗುಣಿತ, ವ್ಯಾಕರಣ ದೋಷಗಳನ್ನು ಮತ್ತೆ ಮತ್ತೆ ಓದಿ ತಿದ್ದುಪಡಿ ಮಾಡುತ್ತೇನೆ. ಮಾಡಿದ್ದೇನೆ. ಇನ್ನೂ ತಿದ್ದುತ್ತಿದ್ದೇನೆ. ಸದ್ಯಕ್ಕೆ ಅವುಗಳನ್ನು ಕ್ಷಮಿಸಿ, ತಪ್ಪುಗಳನ್ನು ತಿದ್ದಿಕೊಂಡು ಓದಿ. ಸುಮಾರು ೨೫,೦೦೦ ಪದಗಳಿರುವ ಮಿನಿ ಕಾದಂಬರಿ. ಹಾಗಾಗಿ ದೋಷಗಳನ್ನು ತಿದ್ದಲು ಸಮಯ ಬೇಕು. ಧನ್ಯವಾದಗಳು.)