Tuesday, August 26, 2014

ದಾವೂದ್ ಇಬ್ರಾಹಿಂ ಬರೆದುಕೊಟ್ಟಿದ್ದ ಮಿಲಿಯನ್ ಡಾಲರ್ ಚೆಕ್!

೧೯೯೦ ರ ಸಮಯ. ಸ್ಥಳ ಅಮೇರಿಕಾದ ನ್ಯೂಯಾರ್ಕ್ ನಗರ.

ಆ ಸಮಯದಲ್ಲಿ ಸ್ವಾಮೀಜಿ ನ್ಯೂಯಾರ್ಕಿಗೆ ಬಂದಿದ್ದರು. ಇಂಡಿಯಾದ ಭಾರಿ ತಾಕತ್ತಿರುವ ತಾಂತ್ರಿಕ ಸ್ವಾಮೀಜಿ ಅವರು. ಅವರಿಗೆ ಸಿಕ್ಕಾಪಟ್ಟೆ ದೊಡ್ಡ ಮಟ್ಟದ ಸಂಪರ್ಕಗಳಿದ್ದವು. ಭಾರತದ ರಾಜಕಾರಣಿಗಳಂತೂ ಸ್ವಾಮೀಜಿಯವರ ಪಾದ ತೊಳೆದು, ಅದೇ ನೀರನ್ನು ತೀರ್ಥ ಅಂತ ತೆಗೆದುಕೊಳ್ಳುತಿದ್ದರು. ಹಾಗಂತ ಸ್ವಾಮೀಜಿ ಮತ್ತು ಅವರ ಹಿಂಬಾಲಕರು ಹೇಳುತ್ತಿದ್ದರು. ವಿಶ್ವದ ಎಲ್ಲ ಕಡೆ ದೊಡ್ಡ ಹವಾ ಇತ್ತು ಸ್ವಾಮೀಜಿಯವರದು.

ಹೀಗಿರುವಾಗ ಒಂದು ದಿವಸ ಸ್ವಾಮೀಜಿಯಿದ್ದ ನ್ಯೂಯಾರ್ಕ್ ಫ್ಲಾಟಿಗೆ (ಅಪಾರ್ಟ್ಮೆಂಟಗೆ) ಒಬ್ಬ ಮನುಷ್ಯ ಬಂದ. ನೋಡಿದರೆ ಇಂಡಿಯನ್ ಅಥವಾ ಪಾಕಿಸ್ತಾನಿ ಕಂಡಂಗೆ ಕಾಣುತ್ತಿದ್ದ. ಒಳ್ಳೆ ಕಟ್ಟು ಮಸ್ತಾಗಿದ್ದ.  ಸ್ವಾಮೀಜಿಯವರ ಹಳೆ ಭಕ್ತನಿರಬೇಕು. ಬಂದವನೇ ಸ್ವಾಮೀಜಿಯವರಿಗೆ ದುವಾ, ಸಲಾಂ ಮಾಡಿ ಹೋಗಿಬಿಟ್ಟ.

ಸ್ವಾಮೀಜೀಯವರ ನ್ಯೂಯಾರ್ಕ್ ಫ್ಲಾಟ್ ಒಂದು ನಮೂನಿ ಗಬ್ಬು ವಾಸನೆ ಹೊಡೆಯುತ್ತಿತ್ತು. ಹೋದಲ್ಲೆಲ್ಲ ರಾಡಿ ಎಬ್ಬಿಸಿ, ವಾಸನೆ ಹೊಡೆಸುವದು ಸ್ವಾಮೀಜಿಯವರ ಸ್ಪೆಷಾಲಿಟಿ. ಪೂಜೆ ಪುನಸ್ಕಾರ ಅಂತ ಹೇಳಿ ಅಗರಬತ್ತಿ, ಕರ್ಪೂರ, ಅದು, ಇದು ಅಂತ ಒಂದು ನಮೂನಿ ಪೂಜೆಯ ವಾಸನೆ. ಇನ್ನು ಅಡುಗೆಮನೆ ಕಡೆಯಿಂದ ಮೂರೂ ಹೊತ್ತು ಒಂದಲ್ಲ ಒಂದು ರೀತಿ ಇಂಡಿಯನ್ ಸಾಂಬಾರ್ ವಾಸನೆ. ಇದರ ಮೇಲೆ ಅವರಿಗೇ ವಾಯು ಪ್ರಕೋಪವಾದಾಗೊಮ್ಮೆ ಸ್ವಾಮೀಜಿ ತಮ್ಮ ಕಾವೀ ನಿಲುವಂಗಿ ಹಿಂದೆ ಎತ್ತಿದವರೇ ಡರ್ರಾ ಬರ್ರಾ ಅಂತ ಗ್ಯಾಸ್ ಬಿಟ್ಟೇ ಬಿಡುತ್ತಿದ್ದರು. ಆ ಪರಿ ಬೇಳೆ ಸಾರು, ಬೇಳೆ ಕಿಚಡಿ, ಬೇಳೆ ಸಾಂಬಾರ್ ಅಂತ ಮೂರೂ ಹೊತ್ತು ಮಟ್ಟಸವಾಗಿ ಬೇಳೆ ಕತ್ತರಿಸಿದರೆ ಪರಿಸ್ಥಿತಿ ಮತ್ತೇನಾಗಬೇಕು? ತಾವು ಬಿಟ್ಟ ವಾಯುವೂ ಒಂದು ತರಹ ದಿವ್ಯ ಪ್ರಸಾದ ಅನ್ನುವಂತೆ ಇದ್ದುಬಿಡುತ್ತಿದ್ದರು ಸ್ವಾಮೀಜಿ. ಇದೆಲ್ಲ ಕೂಡಿ ಸ್ವಾಮೀಜಿ ಇದ್ದಲ್ಲಿ ಒಂದು ತರಹ ವಿಚಿತ್ರ ವಾಸನೆ.

ಹೀಗೆ ತರಹ ತರಹ ವಾಸನೆ ಹೊಡೆಯುತ್ತಿದ್ದ ಸ್ವಾಮೀಜಿಯವರ ಫ್ಲಾಟಿನಲ್ಲಿ ಉಳಿಯದೇ ದುಬಾರಿ ಹೋಟೆಲ್ಲಿಗೆ ಹೊರಟು ಬಿಟ್ಟ ಅವನು. ಒಳ್ಳೆ ನಿರ್ಧಾರವನ್ನೇ ತೆಗೆದುಕೊಂಡಿದ್ದ ಅನ್ನಿಸುತ್ತದೆ ಆ ಹಟ್ಟಾ ಕಟ್ಟಾ ಆದಮೀ.

ಅವನು ಆಕಡೆ ಹೋದ ಮೇಲೆ ಕೇಳಿದೆ, 'ಸ್ವಾಮೀಜಿ, ಯಾರ್ರೀ ಅವನು?' ಅಂತ.

'ದಾವೂದ್ ಇಬ್ರಾಹಿಮ್! ಕಿಂಗ್ ಆಫ್ ಗೋಲ್ಡ್. ಕಿಂಗ್ ಆಫ್ ಹವಾಲಾ. ದುಬೈ ಸ್ಮಗ್ಲರುಗಳ ರಾಜ. ನಮ್ಮ ಶಿಷ್ಯ,' ಅಂದ ಸ್ವಾಮೀಜಿ ಗರ್ವದಿಂದ 'ಹ್ಯಾಂಗೆ?!' ಅನ್ನೋ ಲುಕ್ ಕೊಟ್ಟರು.

ದಾವೂದ್ ಇಬ್ರಾಹಿಂ

ನನಗೆ ದಾವೂದ್ ಇಬ್ರಾಹಿಮ್ ಬಗ್ಗೆ ಗೊತ್ತಿರಲಿಲ್ಲ ಬಿಡಿ. ಇದೇ ಮೊದಲ ಸಲ ಅವನ ಹೆಸರು ಕೇಳಿದ್ದು ಮತ್ತೆ ನೋಡಿದ್ದು.

ನಾನು ನಿಜವಾಗಿ ದಂಗು ಹೊಡೆದದ್ದು ಸಂಜೆ ಪಾರ್ಟಿಯೊಂದರಲ್ಲಿ ಈ ದಾವೂದ್ ಇಬಾಹಿಂ ಎಂಬ ಆದ್ಮಿ ನಮ್ಮ ಬಾಸ್ ಅದ್ನಾನ್ ಖಶೋಗೀ ಅವರಿಗೆ ಒಂದು ಚೆಕ್ ಕೊಟ್ಟಾಗ. ಬರೋಬ್ಬರಿ ಒಂದು ಮಿಲಿಯನ್ ಡಾಲರುಗಳಿಗೆ ಚೆಕ್ ಬರೆದು ಕೊಟ್ಟುಬಿಟ್ಟ ದಾವೂದ್ ಇಬ್ರಾಹಿಮ್! ಚೆಕ್ ಕೊಟ್ಟಿದ್ದೊಂದೇ ಅಲ್ಲದೇ 'ಒಪ್ಪಿಸ್ಕೊಳ್ಳಿ, ಸಾರ್,' ಅಂತ ತುಂಬ ವಿನಯದಿಂದ ಕೇಳಿಕೊಂಡ. ಗುರು ದ್ರೋಣಾಚಾರ್ಯರಿಗೆ ಶಿಷ್ಯ ಏಕಲವ್ಯ ಗುರುದಕ್ಷಿಣೆ ಕೊಟ್ಟ ಪರಿಯಲ್ಲಿ ಅದ್ನಾನ್ ಖಶೋಗಿಗೆ ಮಿಲಿಯನ್ ಡಾಲರ್ ಚೆಕ್ ಕೊಟ್ಟಿದ್ದ ದಾವೂದ್. ಅಷ್ಟೊಂದು ಭಕ್ತಿ, ಕೃತಜ್ಞತೆ, ಏನೇನೋ ದಿವ್ಯ ಫೀಲಿಂಗ್ಸ್.

ಸ್ವಾಮೀಜಿ ಮುಗುಳ್ನಗುತ್ತ ನಿಂತಿದ್ದರು. 'ತೊಗೊಳ್ಳಿ. ನಮ್ಮವನೇ,' ಅಂತ ಆಶ್ವಾಸನೆ ಬೇರೆ ಕೊಟ್ಟರು.

ದಿನ ನಿತ್ಯದ ಖರ್ಚಿಗೆ ರೊಕ್ಕದ ತುಂಬ ತೊಂದರೆಯಲ್ಲಿದ್ದ ಆ ಕಾಲದ ಕುಬೇರ ಅದ್ನಾನ್ ಖಶೋಗಿ ಚೆಕ್ ತೆಗೆದುಕೊಂಡು, ತುಂಬಾ ಭಾವುಕರಾಗಿ ದಾವೂದನಿಗೆ ಧನ್ಯವಾದ ಅರ್ಪಿಸಿದರು. ದಾವೂದ್ ಮುಖದಲ್ಲಿ ಧನ್ಯನಾದೆ ಅನ್ನುವ ಭಾವ. ನನಗೆ ಆವತ್ತು ಗೊತ್ತಿರಲಿಲ್ಲ, ಈ ಅದ್ನಾನ್ ಖಶೋಗೀ ಅನ್ನುವ ಶಸ್ತ್ರಾಸ್ತ್ರಗಳ ಅತಿ ದೊಡ್ಡ ದಲ್ಲಾಳಿ ದಾವೂದನಿಗೆ ಮಾದರಿ / ರೋಲ್ ಮಾಡೆಲ್ ಆಗಿದ್ದ ಮತ್ತು ಆಗ ಕೇವಲ ಮಿಲಿಯನ್ ಡಾಲರುಗಳ ಲೆಕ್ಕದಲ್ಲಿ ಆಟ ಆಡುತ್ತಿದ್ದ ದಾವೂದ್ ಇಬ್ರಾಹಿಂ ಒಂದು ದಿವಸ ಖಶೋಗಿಯ ಲೆವೆಲ್ಲಿಗೆ ಬಂದು ಮುಟ್ಟಬೇಕು ಅಥವಾ ಮೀರಬೇಕು ಅಂತ ನಿರ್ಧರಿಸಿದ್ದ ಅಂತ. ಈ ಘಟನೆ  ಮೂಲಕ ಸ್ವಾಮೀಜಿ ದಾವೂದನಿಗೆ ಒಂದು ದೊಡ್ಡ ಪರಿಚಯ ಮಾಡಿಸಿದ್ದರು. ತನ್ನ ರೋಲ್ ಮಾಡೆಲ್, ಗುರುವಲ್ಲದ ಗುರು ಖಶೋಗೀ ಸ್ವಲ್ಪ ರೊಕ್ಕದ ತೊಂದರೆಯಲ್ಲಿ ಇದ್ದಾನೆ ಅಂತ ತಿಳಿದ ದಾವೂದ್ ಹಿಂದೆ ಮುಂದೆ ನೋಡದೇ ಬರೋಬ್ಬರಿ ಒಂದು ಮಿಲಿಯನ್ ಡಾಲರುಗಳಿಗೆ ಚೆಕ್ ಬರೆದುಕೊಟ್ಟುಬಿಟ್ಟಿದ್ದ. ಅರ್ಪಿಸಿಬಿಟ್ಟಿದ್ದ.

ದಾವೂದ್ ಇಬ್ರಾಹಿಂ ತನ್ನ ಗುರು ಅಂತ ಪರಿಗಣಿಸಿ, ಆಪರಿ ಪೂಜನೀಯ ಭಾವದಿಂದ ನೋಡುತ್ತಿದ್ದ ಈ ಅದ್ನಾನ್ ಖಶೋಗೀ ಯಾರು ಅಂದ್ರಾ?

ಅದ್ನಾನ್ ಖಶೋಗಿ

ಅದ್ನಾನ್ ಖಶೋಗೀ - ೧೯೮೦ ರ ದಶಕದ ವಿಶ್ವದ ಅತೀ ಶ್ರೀಮಂತ ವ್ಯಕ್ತಿ. ವೃತ್ತಿಯಿಂದ ಶಸ್ತ್ರಾಸ್ತ್ರಗಳ ದಲ್ಲಾಳಿ. ವ್ಯಾಪಾರಿಯಲ್ಲ ಮತ್ತೆ. ಕೇವಲ ದಲ್ಲಾಳಿ. ಶಸ್ತ್ರಾಸ್ತ್ರ ತಯಾರು ಮಾಡುವವರನ್ನು, ಶಸ್ತಾಸ್ತ್ರ ಬೇಕು ಅಂದವರನ್ನು ಒಂದು ಕಡೆ ತಂದು, ಇಬ್ಬರ ತಲೆಯನ್ನೂ ಸವರಿ, ಬೆಲೆ, ಕಮಿಷನ್, ಲಂಚ, ಮಂಚ, ಇತ್ಯಾದಿಗಳ ಬಗೆಗಿನ ಭಿನ್ನಾಭಿಪ್ರಾಯಗಳನ್ನು ನೈಸಾಗಿ ಬಗೆಹರಿಸಿ, ಡೀಲ್ ಕುದುರಿಸಿಕೊಟ್ಟು, ಮಾರಾಟಗಾರರು, ಗ್ರಾಹಕರು ಶೇಕ್ ಹ್ಯಾಂಡ್ ಮಾಡುವಂತೆ ಡೀಲ್ ಮಾಡಿಸಿ, ಆ ಖರೀದಿ ವ್ಯವಹಾರದ ಒಂದು ಪರ್ಸಂಟೇಜ್ ಮೊತ್ತವನ್ನು ಕಮಿಷನ್ ಅಂತ ಪಡೆದು ರೊಕ್ಕಾ ಮಾಡುತ್ತಿದ್ದ ಭಾರಿ ಕುಳ ಅದ್ನಾನ್ ಖಶೋಗೀ. ಬಿಲಿಯನ್ ಗಟ್ಟಲೆ ಡಾಲರುಗಳ ಲೆಕ್ಕದ ವ್ಯವಹಾರ. ಕಮಿಷನ್ ಕೆಲವು ಶತ ಮಿಲಿಯನ್ ಡಾಲರುಗಳಲ್ಲಿ ಇರುತ್ತಿತ್ತು. ಹೀಗಾಗೇ ಆ ಕಾಲದಲ್ಲೇ ಖಶೋಗೀಯ ಒಟ್ಟು ಸಂಪತ್ತು ಕೆಲವು ಬಿಲಿಯನ್ ಡಾಲರುಗಳಲ್ಲಿತ್ತು. ಅವನ ದಿನದ ಖರ್ಚಿನ ಲೆಕ್ಕವೇ ಬರೋಬ್ಬರಿ ಎರಡೂವರೆ ಲಕ್ಷ ಡಾಲರ್ ಅಂದರೆ ನೀವು ನಂಬಲೇ ಬೇಕು. ವಿಶ್ವದ ದೊಡ್ಡ ದೊಡ್ಡ ಊರುಗಳಲ್ಲಿ ಅರಮನೆಯಂತಹ ಬಂಗಲೆಗಳು, ಆರೋ ಎಂಟೋ ದುಬಾರಿ ಜೆಟ್ ವಿಮಾನಗಳು, ಸಣ್ಣ ಓಡಾಟಕ್ಕೆ ಹೆಲಿಕಾಪ್ಟರುಗಳು, ಐಶಾರಾಮಿ ಹಡಗುಗಳು, ದುಬಾರಿ ಕಾರುಗಳು, ಇವೆಲ್ಲೆದರ ಧೇಕರೇಕಿ ನೋಡಲು ಸಾವಿರಾರು ಮಂದಿ ಕೆಲಸದವರು, ಕುದುರೆ, ಕತ್ತೆ, ನಾಯಿ, ಅದು, ಇದು ಅಂತ ಹೇಳಿ ಖರ್ಚು ಲೆಕ್ಕ ಹಾಕುತ್ತ ಹೋಗಿ ನೋಡಿ, ಲೆಕ್ಕ ಎಲ್ಲ ಸರಿಯಾಗುತ್ತದೆ. ದಿನಕ್ಕೆ ಬರೋಬ್ಬರಿ ಎರಡೂವರೆ ಲಕ್ಷ ಡಾಲರ್. ಅದೂ ಆ ಜಮಾನಾದಲ್ಲಿ. 'ನಬೀಲಾ' ಅನ್ನುವ ಅವನ ಐಶಾರಾಮಿ ಹಡಗಿನಲ್ಲೇ ಜೇಮ್ಸ್ ಬಾಂಡ್ ಮೂವಿಯೊಂದರ ಶೂಟಿಂಗ ಕೂಡ ಆಗಿತ್ತು.

'ಏ! ಬರಿ ದಲ್ಲಾಳಿ ಮಾಡೋ ಅದ್ಯಾರೋ ಖಶೋಗಿಗೆ ಅಷ್ಟೆಲ್ಲ ದುಡ್ಯಾಕೆ ಕೊಡಬೇಕು? ಯಾರು ಕೊಡ್ತಾರೆ?' ಅನ್ನುವದನ್ನ ತಿಳಿಯಬೇಕಾದರೆ ನೀವು ಶಸ್ತ್ರಾಸ್ತ್ರಗಳ ದಂಧೆಯ ಹಿಂದಿನ ಕರಾಳ ಸತ್ಯ ಅರಿಯಬೇಕು. ಶಸ್ತ್ರಾಸ್ತ್ರ ತಯಾರು ಮಾಡುವವರೇನೋ ಇರುತ್ತಾರೆ ಬಿಡಿ. ಆದರೆ ಅವುಗಳ ಉಪಯೋಗ ಮಾಡುವವರು ಹುಟ್ಟಿ, ಬೇಡಿಕೆ ಬರಬೇಕು ಅಂದ್ರೆ ಏನು ಮಾಡಬೇಕು? ಯುದ್ಧ! ಯುದ್ಧ ಮಾಡುವವಂತಹ ಸನ್ನಿವೇಶ ತಯಾರು ಮಾಡುವದು ಅಂದ್ರೆ ಹುಡುಗಾಟವೇ? ಕಂಡಾಪಟ್ಟೆ ದುಡ್ಡು ಖರ್ಚು ಮಾಡಬೇಕು. ಎಲ್ಲ ಸರಿ ಇದ್ದಲ್ಲೂ ಹೋಗಿ, ಕಡ್ಡಿ ಕೊರೆದು ಬೆಂಕಿ ಹಚ್ಚಬೇಕು. ಆಸೆಬುರುಕ ಸರ್ವಾಧಿಕಾರಿಗಳಿಗೆ ಲಂಚ, ಮಂಚ ಎಲ್ಲ ವ್ಯವಸ್ಥೆ ಮಾಡಿ ಪಟಾಯಿಸಬೇಕು. ಹಾಗೇ ಇನ್ನೊಂದು ಕಡೆ ಏನೇನೋ ಆದರ್ಶವಿಟ್ಟುಕೊಂಡು ಹೋರಾಡೋ ವಿರೋಧಿ ಸಂಘಟನೆಗಳಿಗೆ ಮೊದಲು ಬಿಟ್ಟಿ ಅಂತಲೇ ಒಂದಿಷ್ಟು ಶಸ್ತ್ರಾಸ್ತ್ರ ಕೊಟ್ಟು, ರುಚಿ ಹತ್ತಿಸಿ, ಯುದ್ಧ ಶುರು ಆಗೋ ಹಾಗೆ ಮಾಡಬೇಕು. ಹೀಗೆ ಒಂದು ದೊಡ್ಡ ಡೀಲಿಗೆ ದಲ್ಲಾಳಿತನ ಮಾಡೋದು ಅಂದರೆ ಅದೊಂದು turnkey project ಇದ್ದಂತೆ. ಇದಕ್ಕೆಲ್ಲ ವ್ಯಾಪಕ ಸಂಪರ್ಕಬೇಕು. ಇದ್ದ ಸಂಪರ್ಕ ನಿಭಾಯಿಸೋ ಕೌಶಲ್ಯ ಬೇಕು. ಮಾಡಿದ ಡೀಲು ಉಲ್ಟಾ ಹೊಡೆದು, ಕಮಿಷನ್ ಕೊಟ್ಟವರು ಬಂದು ಹಣೆಗೆ ಘೋಡಾ ಇಟ್ಟರೆ ಸಂಬಾಳಿಸೋ ಛಾತಿ ಬೇಕು.  ಅಗತ್ಯ ಬಿದ್ದರೆ ಅವರಿಗಿಂತ ದೊಡ್ಡ ಖತರ್ನಾಕ್ ಮಂದಿ ಹಿಡಿದು ಅವರನ್ನೇ ಖತಂ ಮಾಡಿಸಿಬಿಡುವ ತಲೆ ಬೇಕು. ಒಂದು ದೇಶದ ಸರ್ಕಾರ ಒಪ್ಪಲಿಲ್ಲ ಅಂದರೆ ಸರ್ಕಾರ ಬದಲಾಯಿಸಲಿಕ್ಕೆ ವ್ಯವಸ್ಥೆ ಮಾಡಬೇಕು. ಯಾರೋ ಪ್ರಧಾನಿಯೋ, ಅಧ್ಯಕ್ಷನೋ ಡೀಲಿಗೆ ಒಪ್ಪಲಿಲ್ಲ ಅಂದರೆ covert operators ಹಿಡಿದು ರಾಜಕೀಯ ಹತ್ಯೆ(assassinations) ಸಹಿತ ಮಾಡಿಸಿ, ಸುಳಿವು ಹತ್ತದಂತೆ ಬಚಾವಾಗಬೇಕು. ಇದೆಲ್ಲ ಇದ್ಡಿದ್ದಕ್ಕೆ, ಮಾಡಿಸಿ ಅರಗಿಸಿಕೊಳ್ಳೋ ತಾಕತ್ತು ಇದ್ದಿದ್ದಕ್ಕೇ ಈ ಖಶೋಗೀ ಅನ್ನೋ ಮಹಾನುಭಾವ ಅಷ್ಟು ಫೇಮಸ್ ಆಗಿ, ಎಲ್ಲ ಶಸ್ತ್ರಾಸ್ತ್ರ ತಯಾರಿಕೆ ಕಂಪನಿಗಳಿಗೆ ಅಪ್ಪ, ಅಮ್ಮನಂತೆ ಇದ್ದಿದ್ದು.

ಹಲವಾರು ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್, ಇತರೆ ಸುಂದರಿಯರು ಖಶೋಗಿಯ ಫೋನಿನ ಸ್ಪೀಡ್ ಡೈಲಿನಲ್ಲಿ ಇದ್ದರು. ಮಾಜಿ ಮಿಸ್ ಇಂಡಿಯಾ ಪಮೇಲಾ ಬೋರ್ಡೆಸ್ ಅಂತೂ ಖಶೋಗಿಗೆ ಏಕದಂ ಖಾಸಂ ಖಾಸ್. ಪ್ರತಿ ರಾತ್ರಿಗೆ ಬರೋಬ್ಬರಿ ಹತ್ತು ಸಾವಿರ ಪೌಂಡ್ ಆಕೆಯ ರೇಟ್. ಲಿಬಿಯಾದ ಹುಚ್ಚ ಸರ್ವಾಧಿಕಾರಿ ಗಡಾಫಿ ಜೊತೆ ವ್ಯವಹಾರ ಕುದುರಿಸಲು ಹಚ್ಚಬೇಕಾದ ಅಮೃತಾಂಜನ ಹಚ್ಚಿ, ತಲೆ ತಿಕ್ಕಿ ಬಂದವಳೇ ಆಕೆ. ಅದೊಂದು ಉದಾಹರಣೆ ಅಷ್ಟೇ. ಖಶೋಗಿ ಫೋನ್ ಮಾಡಿದ ಅಂದರೆ ಹಾಲಿವುಡ್, ಬಾಲಿವುಡ್, ಎಲ್ಲ ಕಡೆಯಿಂದ ಆ ಟೈಪಿನ ಸುಂದರಿಯರು ಬಂದು, ಹೇಷಾರವ ಮಾಡುತ್ತ ಪಾರ್ಟಿ ಶುರು ಮಾಡಿಬಿಡುತ್ತಿದ್ದರು. ಎಲ್ಲರ ಕೈಯಲ್ಲಿ ಅಮೃತಾಂಜನ. ಖಶೋಗಿ ತೋರಿಸಿದ ಗಿರಾಕಿಗಳ ಮಂಚ ಹತ್ತುವದಷ್ಟೇ ಅವರ ಕೆಲಸ. ಗಿರಾಕಿಗಳ ಸರ್ವೀಸ್ ಮಾಡಿದ್ದಕ್ಕೆ ಅವರಿಗೆಲ್ಲ ಸಾವಿರ, ಲಕ್ಷ ಡಾಲರುಗಳ ಲೆಕ್ಕದಲ್ಲಿ ನಂತರ ಕಾಣಿಕೆ ಸಂದಾಯವಾಗುತ್ತಿತ್ತು . ಅಂತದ್ದೆಲ್ಲ ಲಂಚ, ಮಂಚ ಇಲ್ಲದೇ ಬಿಲಿಯನ್ ಡಾಲರುಗಳ ಡೀಲ್ ಕುದುರುತ್ತಲೇ ಇರಲಿಲ್ಲ. ಯಾವದಕ್ಕೂ ಇರಲಿ ಅಂತ  ಬೇಹುಗಾರಿಕೆ ಸಂಸ್ಥೆಗಳು ಅಂತಹ ಕಾಮಕೇಳಿಗಳ ವೀಡಿಯೊ ರೆಕಾರ್ಡಿಂಗ್ ರಹಸ್ಯವಾಗಿ ಮಾಡಿಕೊಳ್ಳುತ್ತಿದ್ದವು. ಮುಂದೆ ಆಸಾಮಿಗಳು ಉಲ್ಟಾ ಹೊಡೆದರೆ ಬ್ಲಾಕ್ ಮೇಲ್ ಮಾಡಲು ಬೇಕಾದರೆ ಅಂತ ದೂರಾಲೋಚನೆ!

ಒಂದು ಕಾಲದಲ್ಲಿ ಬಿಲಿಯನ್ ಗಟ್ಟಲೆ ಡಾಲರು ತೂಗುತ್ತಿದ್ದ ಈ ಖಶೋಗೀ ೧೯೯೦ ರ ಆಸುಪಾಸಿನಲ್ಲಿ ಸ್ವಲ್ಪ 'ಅಮ್ಮಾ, ತಾಯಿ' ಲೆವೆಲ್ಲಿಗೆ ಇಳಿದು ಬಿಟ್ಟಿದ್ದ. ಅವನ ಬ್ಯಾಡ್ ಲಕ್ ಖರಾಬಾಗಿತ್ತು. ಹೆಂಡತಿ ಡೈವೋರ್ಸ್ ತೆಗೆದುಕೊಂಡು ಹೋಗಿದ್ದಳು. ಅದು ಇತಿಹಾಸದಲ್ಲೇ ಅತ್ಯಂತ ದುಬಾರಿ ಡೈವೋರ್ಸ್ ಅಂತಲೇ ಫೇಮಸ್ ಆಯಿತು. ಆಕೆಗೆ ಒಂದಿಷ್ಟು ಬಿಲಿಯನ್ ಡಾಲರ್ ಕಾಸು ಕೊಟ್ಟು ಧರ್ಮಪತ್ನಿಯ ಕರ್ಮ ಕಳೆದುಕೊಂಡ ಖಶೋಗೀ ಜೊತೆಗೆ ಅಪಾರ ಸಂಪತ್ತನ್ನೂ ಕಳೆದುಕೊಂಡ. 'ಏ, ಮಕ್ಕಳೂ ಇವೆ. ನಿಂದೇ. ಅವುಗಳ ಖರ್ಚಿಗೆ ಅಂತ ಬೇರೆ ಕಾಸು ಕೊಡಯ್ಯೋ!' ಅಂತ ಹೆಂಡತಿ ಬೊಂಬಡಾ ಬಾರಿಸಿದರೆ, 'ಯಮ್ಮೋ, ಅವು ನನ್ನ ಮಕ್ಕಳಲ್ಲ. ಯಾರೋ ಬ್ರಿಟಿಷ್ ಸಂಸದರ ಜೊತೆ ಮಲಗಿದ್ದಕ್ಕೆ ಆಗಿವೆಯಂತೆ. DNA ಟೆಸ್ಟ್ ಮಾಡ್ಸಾವಾ? ಹಾಂ!?' ಅಂತ ವಾಪಸ್ ರೋಪ್ ಹಾಕಿ, ಆಕೆ ಇವನನ್ನು ಪೂರ್ತಿಯಾಗಿ ತೊಳೆದು, ರಂಗೋಲಿ ಹಾಕಿ ಹೋಗುವದರಿಂದ ತಪ್ಪಿಸಿಕೊಂಡಿದ್ದ ಖಶೋಗಿ. ಅಪ್ರತಿಮ ಸುಂದರಿಯಾಗಿದ್ದ ಆಕೆ ಕೂಡ ಒಮ್ಮೊಮ್ಮೆ ಶಸ್ತ್ರಾಸ್ತ್ರಗಳ ಡೀಲಿನಲ್ಲಿ ಕೀಲಿನೆಣ್ಣೆ (lubricant) ತರಹ ಕೆಲಸ ಮಾಡುತ್ತಿದ್ದಳು. ಒಮ್ಮೆ ಈ ಖಶೋಗಿ ಕಾಂಗೋದ ಸರ್ವಾಧಿಕಾರಿ ಮೊಬುಟು ಜೊತೆ ಏನೋ ಡೀಲ್ ಕುದುರಿಸುತ್ತಿದ್ದ. ಮೊಬುಟುಗೆ ಖಶೋಗಿ ಬೇಗಂ ಮೇಲೆ ಆಸೆ. 'ಸ್ವಲ್ಪ ಕಳಿಸಿ ನಿಮ್ಮ ಬೇಗಂ. ಭಜನೆ ಮಾಡಬೇಕು ಅನ್ನಿಸ್ತಿದೆ,' ಅಂದುಬಿಟ್ಟ ಮೊಬುಟು. ಭಜನೆ ಆಗದಿದ್ದರೆ ಬಿಲಿಯನ್ ಡಾಲರುಗಟ್ಟಲೆ ಡೀಲು ಎಕ್ಕುಟ್ಟಿ ಹೋಗುತ್ತದೆ ಅಂದವನೇ ಖಶೋಗಿ ಹೆಂಡತಿ ಕಡೆ ನೋಡಿದ. ಸನ್ನೆ ಅರಿತ ಬೇಗಂ, 'ಭಜನೆಯೇನು ಪೂರ್ತಿ ಆರಾಧನೆಗೂ ಸಿದ್ಧ,' ಅನ್ನುತ್ತ  ಫಣಂಗನೆ ಮೊಬುಟುನ ತೆಕ್ಕೆಗೆ ಹಾರಿದ ಅಬ್ಬರಕ್ಕೆ ಮೊಬುಟುನ ಪೆಟ್ ಮಂಗ್ಯಾ ಅವನ ಭುಜ ಬಿಟ್ಟು ಹಾರಿತ್ತು. ಕೋಣೆ ಕದವಿಕ್ಕಿಕೊಂಡ ಮೊಬುಟು ಅದೇನು ಭಜನೆ ಮಾಡಿದನೋ ಗೊತ್ತಿಲ್ಲ. ಒಂದು ವಾರದ ನಂತರ ಹೊರಬಂದವ ಶಸ್ತ್ರಾಸ್ತ್ರದ ಖರೀದಿಯ ದೊಡ್ಡದೊಂದು ಕಾಂಟ್ರಾಕ್ಟ್ ಗೆ ಸಹಿ ಹಾಕಿದ್ದ. ಹಲವಾರು ಮಿಲಿಯನ್ ಡಾಲರ್ ಕಮಿಷನ್ ಎಣಿಸುತ್ತ ಬೇಗಂ ಹೊರಗೆ ಬಂದಿದ್ದಳು.

ಮತ್ತೆ ೧೯೮೬ ಆಸುಪಾಸಿನಲ್ಲಿ ಆದ ಇರಾನ್ ಕಾಂಟ್ರಾ ಹಗರಣ ಸಹಿತ ಖಶೋಗಿಗೆ ದೊಡ್ಡ ಹೊಡೆತ ಕೊಟ್ಟಿತ್ತು. ಆಗಿನ ಅಧ್ಯಕ್ಷ ರೀಗನ್ ಸಾಹೇಬರ ನೌಕರಿಯನ್ನು ಕಳದೇ ಬಿಟ್ಟಿದ್ದ ಹಗರಣ ಅದು. ಖಶೋಗಿ ಮೇಲೂ ಕೇಸಾಗಿ, ದೊಡ್ಡ ದೊಡ್ಡ ವಕೀಲರಿಗೆ ಸಿಕ್ಕಾಪಟ್ಟೆ ರೊಕ್ಕಾ ಕೊಟ್ಟು ಖಶೋಗೀ ಸುಸ್ತಾಗಿ ಹೋಗಿದ್ದ. ಸಾಕಷ್ಟು ಆಸ್ತಿಗಳಿದ್ದವು ನಿಜ. ಆದರೆ cash-flow  ತುಂಬ ತೊಂದರೆಯಾಗಿತ್ತು. ಖಶೋಗಿ ಮೇಲೆ ನಂಬಿಕೆಯಿದ್ದ ಜನ, ಅಲ್ಲಿ ಇಲ್ಲಿ, ಆವಾಗ ಈವಾಗ, ಒಂದೋ ಎರಡೋ ಮಿಲಿಯನ್ ಕೈಯಲ್ಲಿಟ್ಟು, ಅದರಿಂದ  ಹೇಗೋ ತನ್ನ ಅದ್ದೂರಿ ಜೀವನ ನಡೆಸಿದ್ದ ಖಶೋಗಿ.

ಇಂತಹ ಸಂದರ್ಭದಲ್ಲೇ ದಾವೂದ್ ಭಾಯಿ ಬಂದು ಒಂದು ಮಿಲಿಯನ್ ಡಾಲರ್ ಚೆಕ್ ಕೈಯ್ಯಲ್ಲಿಟ್ಟು ಒಪ್ಪಿಸಿಕೊಳ್ಳಿ ಅಂದಿದ್ದ. ತಾನು ರೋಲ್ ಮಾಡೆಲ್ ಅಂತ ಅಂದುಕೊಂಡಿದ್ದ ಗುರುವಿನ cash-flow ಕಷ್ಟ ನೋಡಲಾಗಿರಲಿಲ್ಲ ಡಾನ್ ಗೆ.

ದುಬೈ ಬ್ಯಾಂಕಿನ ಮೇಲೆ ತೆಗೆದಿದ್ದ ಆ ಚೆಕ್ಕನ್ನು ಇಲ್ಲಿ ನ್ಯೂಯಾರ್ಕ್ ಬ್ಯಾಂಕಿಗೆ ಹಾಕಿ ಕ್ಯಾಶ್ ತೆಗೆದುಕೊಳ್ಳೋಣ ಅನ್ನುವಷ್ಟರಲ್ಲಿ ಖಶೋಗೀಯ ಮಗ ಲಂಡನ್ನಿಂದ ಬಂದ. ಅವನಿಗೂ ಸುದ್ದಿ ಗೊತ್ತಾಯಿತು. ಹೀಗೆ ಯಾರೋ ದಾವೂದ್ ಇಬ್ರಾಹಿಮ್ ಅನ್ನುವ ಇಂಡಿಯಾ ಮೂಲದ ದುಬೈ ಭೂಗತ ಡಾನ್ ಒಂದು ಮಿಲಿಯನ್ ಡಾಲರಿಗೆ ಚೆಕ್ ಕೊಟ್ಟಿದ್ದಾನೆ ಅಂತ. 'ಯಾರ್ರೀ ಈ ದಾವೂದ್? ಇಲ್ಲಿ ತನಕ ಹೆಸರೇ ಕೇಳಿಲ್ಲ. ಸ್ವಲ್ಪ ವಿಚಾರಿಸಿ ನಂತರ ಚೆಕ್ ಕ್ಯಾಶ್ ಮಾಡುವ ಬಗ್ಗೆ ವಿಚಾರ ಮಾಡಿ,' ಅಂದವನೇ ದಾವೂದನ ಪೂರ್ವಾಪರ ವಿಚಾರಣೆಗೆ ನಿಂತ ಖಶೋಗಿಯ ಮಗ.

ದಾವೂದನ ಪೂರ್ವಾಪರ, ಚೆಕ್ಕಿನ ಹಿನ್ನಲೆ ಇತ್ಯಾದಿಗಳ ಬಗ್ಗೆ ಮಾಹಿತಿ ತೆಗೆಯಲು ವೇಳೆ ಬೇಕು ನೋಡಿ. ನನಗೆ ಹೇಳಿದರು, 'ದಾವೂದನನ್ನು ಕರೆದುಕೊಂಡು ಹೋಗಿ ನ್ಯೂಯಾರ್ಕ್ ಸುತ್ತಾಡಿಸಿಕೊಂಡು ಬಾ,' ಅಂತ. ಸರಿ ಅಂತ ಕರೆದುಕೊಂಡು ಹೋದೆ. ದಾವೂದನಿಗೆ ಇಂಗ್ಲೀಷ್ ಬರುತ್ತಿದ್ದಿಲ್ಲ. ಹೇಗೋ ಮಾಡಿ, ಏನೋ ಒಂದು ತರದಲ್ಲಿ ಸಂಭಾಷಣೆ ಮಾಡಿದೆವು. ಆತ್ಮೀಯರಾಗಿಬಿಟ್ಟೆವು. ರಾತ್ರಿ ದೊಡ್ಡದೊಂದು ರೆಸ್ಟೋರೆಂಟಿನಲ್ಲಿ ಊಟ ಮಾಡಿದೆವು. ಪಕ್ಕಾ ಅರಬರ ಶೈಲಿಯಲ್ಲಿ ನಾನೇ ದಾವೂದನಿಗೆ ಅರಬರಂತೆ ಕೈತುತ್ತು ತಿನ್ನಿಸಿದೆ. ದಾವೂದ್ ಭಾವುಕನಾಗಿ ಭಾಯಿ! ಅಂದ. ನಂತರ ಡಾನ್ಸ್ ಕ್ಲಬ್ ಒಂದಕ್ಕೆ ಹೋದೆವು. ನಾನು ಮತ್ತೆ ನನ್ನ ಹೆಂಡತಿ ಕಿಮ್ ಡಾನ್ಸ್ ಮಾಡುವದನ್ನು ದಾವೂದ್ ಸುಮ್ಮನೆ ನೋಡುತ್ತಾ ಕೂತ. ಮೊದಲ ಬಾರಿಗೆ ನ್ಯೂಯಾರ್ಕಿಗೆ ಬಂದಿದ್ದ ಅವನಿಗೆ ಎಲ್ಲದೂ ಹೊಸತು. ಕಣ್ಣು ಬಿಟ್ಟು ನೋಡುತ್ತಲೇ ಇದ್ದ. 'ನೀನೂ ಡಾನ್ಸ್ ಮಾಡು ಬಾ,' ಅಂದೆ. ಇಂಡಿಯನ್ ಶೈಲಿಯಲ್ಲಿ,' ಇಲ್ಲೇ ಹಾಯಾಗಿದಿನಿ. ನಕ್ಕೋ ಭಾಯಿ ನಕ್ಕೋ' ಅಂದುಬಿಟ್ಟ. 'ಓಕೆ,' ಅಂತ ಬಿಟ್ಟು ನಾನು ಕಿಮ್ ಡಾನ್ಸ್ ಮುಂದುವರಿಸಿದೆವು.

ಎಲ್ಲ ಮುಗಿಸಿ, ದಾವೂದನನ್ನು ಅವನ ಹೋಟೆಲ್ಲಿಗೆ ಬಿಟ್ಟು ಬಂದೆವು. ಅಷ್ಟರಲ್ಲಿ ಇಲ್ಲಿ ದಾವೂದ್ ಕೊಟ್ಟಿದ್ದ ಚೆಕ್ಕಿನ ಬಗ್ಗೆ ಚರ್ಚೆಯೋ ಚರ್ಚೆ. ಅಷ್ಟೊತ್ತಿಗಾಗಲೇ ದಾವೂದ್ ಬಗ್ಗೆ, ಅವನ ವ್ಯವಹಾರಗಳ ಬಗ್ಗೆ ಎಲ್ಲ ಮಾಹಿತಿ ಬಂದಿತ್ತು.

ದುಬೈ ಬ್ಯಾಂಕಿಗೆ ಫೋನ್ ಮಾಡಿ, 'ಹೀಗೆ ದಾವೂದ್ ಇಬ್ರಾಹಿಮ್ ಅಂತ ಒಬ್ಬರು ಒಂದು ಮಿಲಿಯನ್ ಡಾಲರಿಗೆ ಚೆಕ್ ನಿಮ್ಮ ಬ್ಯಾಂಕ್ ಮೇಲೆ ತೆಗೆದು ಕೊಟ್ಟಿದ್ದಾರೆ. ಹೇಗೆ ಅವರು? ರೊಕ್ಕಾ ಗಿಕ್ಕಾ ಇರೋ ಪೈಕೀನಾ ಅಥವಾ ಚೆಕ್ ಹಾಕಿದರೆ ಬೌನ್ಸ್ ಆದೀತೋ?' ಅಂತ ಕೇಳಿದರೆ ಆ ಬ್ಯಾಂಕ್ ಮ್ಯಾನೇಜರ್ ಏನು ಅನ್ನಬೇಕು ಊಹಿಸಿ. 'ದಾವೂದ್ ಸಾಬ್ ಅಂದರೆ ನಮಗೆ ದೇವರು ಇದ್ದಂತೆ. ಅವರ ಬಿಸಿನೆಸ್ಸ್ ಇದೆ ಅಂತ ನಮ್ಮ ಬ್ಯಾಂಕ್ ಇದೆ. ಅವರು ಅಕೌಂಟ್ ಕ್ಲೋಸ್ ಮಾಡಿಕೊಂಡು ಹೋದರೆ ಅಷ್ಟೇ ಮತ್ತೆ. ನಾವೂ ಸಹ  ಬ್ಯಾಂಕ್ ಕ್ಲೋಸ್ ಮಾಡಿಕೊಂಡು ಹೋಗೋದೇ. ಅಷ್ಟು ದೊಡ್ಡ ಕಸ್ಟಮರ್ ಕಣ್ರೀ ಅವರು. ಅವರ ಚೆಕ್ ಬಗ್ಗೆ ಕೇಳ್ತೀರಾ ಅಂದರೆ..... ಥೂ ನಿಮ್ಮ! ಇಡ್ರೀ ಫೋನ್!' ಅಂತ ಬೈದು ಬಿಟ್ಟಿದ್ದ. ಅಷ್ಟು ದೊಡ್ಡ ರೊಕ್ಕದ ಕುಳ. ದುಬೈ ಬ್ಯಾಂಕಿನ ಅಪ್ಪ ಅಮ್ಮ ಎಲ್ಲ ಈ ದಾವೂದ್ ಅಂತ ಗೊತ್ತಾಯಿತು.

ಇದೆಲ್ಲ ಖಾತ್ರಿ ಆದರೂ ಯಾಕೋ ಏನೋ ಅದ್ನಾನ್ ಖಶೋಗಿ ಅವನ ಚೆಕ್ ತೆಗೆದುಕೊಳ್ಳಬಾರದು ಅಂತ ನಿರ್ಧರಿಸಿದರು. ಯಾಕೋ ಏನೋ? ಯಾರೋ ಏನೋ ಹೇಳಿರಬೇಕು. ಏನೋ ಎಚ್ಚರಿಸಿರಬೇಕು. ಅವನ ಚೆಕ್ ತೆಗೆದುಕೊಂಡು, ಕ್ಯಾಶ್ ಮಾಡಿಕೊಂಡರೆ ಮತ್ತೂ ತೊಂದರೆಯಾದೀತು ಅಂತ ಎಚ್ಚರಿಕೆ ನೀಡಿರಬೇಕು. ಆಗಲೇ ಅಮೇರಿಕಾದ ಕಾನೂನುಗಳೊಂದಿಗೆ ತುಂಬ ತೊಂದರೆಯಲ್ಲಿ ಸಿಕ್ಕಾಕಿಕೊಂಡಿದ್ದ ಖಶೋಗಿ ಮತ್ತೂ ಹೆಚ್ಚಿನ ತೊಂದರೆಯಾದೀತು ಅಂತ ದಾವೂದನ ಚೆಕ್ ತೆಗೆದುಕೊಳ್ಳದೇ ಬಿಟ್ಟರೋ  ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ಹೇಗೋ ಒಂದು ರೀತಿಯಲ್ಲಿ, ಏನೋ ಒಂದು ಸಬೂಬು ನೀಡಿ, ಯಾರಿಗೂ ನೋವಾಗದಂತೆ ದಾವೂದನ ಮಿಲಿಯನ್ ಡಾಲರ್ ಚೆಕ್ಕನ್ನು ಅವನಿಗೇ ಹಿಂತಿರುಗಿಸಲಾಯಿತು.

ನಂತರ ದಾವೂದ್ ವಾಪಸ್ ದುಬಾಯಿಗೆ ಹೊರಟ. ನಾನೇ ಹೋಗಿ ಬೀಳ್ಕೊಟ್ಟು ಬಂದೆ. ಆವಾಗ ನನ್ನ ಜೊತೆ ನನ್ನ ಬೇಹುಗಾರಿಕೆ ಗುರು ಮೈಲ್ಸ್ ಕೋಪ್ಲ್ಯಾಂಡ್ ಸಹಿತ ಇದ್ದರು. ಅವರು ಹಳೆಯ ಸಿಐಎ ಬೇಹುಗಾರ. ಅಮೇರಿಕಾದ ಗೂಢಚರ್ಯೆಯ ಪಿತಾಮಹ. ಅವರು ಹೇಳಿದ್ದ ಒಂದು ಖಡಕ್ ಮಾತು ಇನ್ನೂ ಕಿವಿಯಲ್ಲಿ ಮೊಳಗುತ್ತಿದೆ.  'ಲ್ಯಾರಿ, ದಾವೂದನ ಜೊತೆ ಒಳ್ಳೆ ಪರಿಚಯ, ಸಂಪರ್ಕ ಎಲ್ಲ ಮಾಡಿಟ್ಟುಕೋ. ಮುಂದೆ ಬಹಳ ಉಪಯೋಗಕ್ಕೆ ಬರುತ್ತಾನೆ ಈ ಆಸಾಮಿ,' ಅಂದಿದ್ದರು ನನ್ನ ಗುರುವರ್ಯ. 'ಹಾಂ!? ನನಗೇ ಗೊತ್ತಿಲ್ಲದ್ದು ನಿಮಗೆ ಗೊತ್ತಿದೆಯೇ!?' ಅನ್ನುವ ನನ್ನ ಮುಖದ ಮೇಲಿನ ಲುಕ್ ನೋಡಿದ ಮೈಲ್ಸ್ ಕೋಪ್ಲ್ಯಾಂಡ್ ತಲೆಯಾಡಿಸಿದ್ದು ನೋಡಿದರೆ, 'ಮಧ್ಯಪ್ರಾಚ್ಯದಲ್ಲೇ ನನ್ನ ಜೀವನ ಸವೆಸಿ, ಅಲ್ಲಿಯ ಎಲ್ಲ ಕಳ್ಳರು, ಸುಳ್ಳರ ನಾಡಿ ಬಡಿತ ನನಗೆ ಗೊತ್ತಪ್ಪ,' ಅನ್ನುವ ಹಾಗಿತ್ತು. ಸರಿ ಅಂದೆ. 'ಆಗಲೇ ದಾವೂದ್ ಜೊತೆ ಬೇಕಾದಷ್ಟು ಗುರ್ತು, ಪರಿಚಯ ಎಲ್ಲ ಆಗಿದೆ ಸರ್,' ಅಂತ ಹೇಳಿದೆ.

'ಭಾಯಿ, ಲ್ಯಾರಿ ಭಾಯಿ, ನೀವು ದುಬೈಗೆ ಮುದ್ದಾಂ ಬರಲೇ ಬೇಕು. ಬಂದು ನಮ್ಮ ಆತಿಥ್ಯ ಸ್ವೀಕರಿಸಲೇ ಬೇಕು,' ಅಂತ ಅರ್ಧ ಉರ್ದುವಿನಲ್ಲಿ, ಮತ್ತರ್ಧ ಸನ್ನೆ ಭಾಷೆಯಲ್ಲಿ ಹೇಳುತ್ತ, ಸಿಕ್ಕಾಪಟ್ಟೆ ಕೈ ಕುಲುಕುತ್ತ, ಬೆನ್ನು ಚಪ್ಪರಿಸುತ್ತ ದಾವೂದ್ ಆಖ್ರೀ ಬಾರಿಗೊಮ್ಮೆ ಕೈಬೀಸಿ ದುಬೈ ವಿಮಾನ ಹತ್ತಿದ. ನಾನೂ ಕೈಬೀಸಿ ವಾಪಸ್ ಬಂದೆ.

ಮುಂದೆ ದಾವೂದ್ ಏನೇನೋ ಆದ ಅಂತ ಕೇಳಿದೆ. ತುಂಬ ಮಹತ್ವಾಕಾಂಕ್ಷಿಯಾಗಿದ್ದ ಅವನು ಮುಂದೆ ಸಂಪತ್ತಿನಲ್ಲಿ ಬಿಲಿಯನಿಯರ್ ಆಗಿದ್ದೊಂದೇ ಅಲ್ಲದೇ ವಿಶ್ವದಲ್ಲೇ ದೊಡ್ಡ ಭೂಗತ ಡಾನ್ ಅನ್ನಿಸಿಕೊಂಡ ಮತ್ತು ಎಲ್ಲ ವ್ಯವಹಾರದಲ್ಲೂ ತೊಡಗಿಸಿಕೊಂಡ ಅಂತ ಕೇಳಿದೆ. ಈ ಕಡೆ ಒಂದು ರೀತಿಯಲ್ಲಿ ಅದ್ನಾನ್ ಖಶೋಗಿ ರಿಟೈರ್ ಆದರು. ದಾವೂದ್ ಮಾತ್ರ ಎಲ್ಲ ಕ್ಷೇತ್ರದಲ್ಲೂ ಅಧಿಪತ್ಯ ಸಾಗಿಸುತ್ತ ಹೋಗಿದ್ದಾನೆ.

ಹಾಗೆ ನ್ಯೂಯಾರ್ಕಿನಲ್ಲಿ ಭೆಟ್ಟಿಯಾಗಿದ್ದೆ ಕೊನೇ. ನಂತರ ಮತ್ತೆ ದಾವೂದ್ ಜೊತೆ ಭೇಟಿಯಾಗುವ ಸಂದರ್ಭ ಬರಲಿಲ್ಲ.

ಇದೆಲ್ಲ ಚರಿತೆ ಬರೆದುಕೊಂಡವರು ಲ್ಯಾರಿ ಕೋಲ್ಬ್. ಅಮೇರಿಕಾದ ಖಾಸಗೀ ಬೇಹುಗಾರ. ಸಿಐಎ ಸಂಸ್ಥೆಗೂ ಕೆಲಸ ಮಾಡಿದ್ದಾರೆಯಂತೆ. ಕಾಂಟ್ರಾಕ್ಟ್ ತೆಗೆದುಕೊಂಡು ಖತರ್ನಾಕ್ covert operations  ಮಾಡುವ ಸ್ಪೆಷಲಿಸ್ಟ್. ಅವರ ಆತ್ಮಕಥೆಯಂತಿರುವ ಪುಸ್ತಕ - Overworld.  ಅದ್ಭುತ ವಿವರಗಳಿರುವ ಪುಸ್ತಕ. ಅನೇಕಾನೇಕ ಭಾರತದ ರಾಜಕಾರಣಿಗಳು, ಅಧಿಕಾರಿಗಳು, ಎಲ್ಲರ ಜುಟ್ಟು ಹಿಡಿದಿರುವ ಸ್ವಾಮೀಜಿಗಳು, ಅಂಡರ್ವರ್ಲ್ಡ್ ಡಾನ್ಸ್, ಉಗ್ರವಾದಿಗಳು ಎಲ್ಲ ಬಂದು ಹೋಗುತ್ತಾರೆ ಲ್ಯಾರಿ ಕೊಲ್ಬ್ ಹೇಳುವ ಕಥೆಗಳಲ್ಲಿ.

* ಅದ್ನಾನ್ ಖಶೋಗೀ ಬಗ್ಗೆ ಕೆಲವೊಂದು ವಿವರಗಳನ್ನು ಬೇರೆ ಬೇರೆ ಪುಸ್ತಕ, ವೆಬ್ ಸೈಟ್ ಗಳಿಂದ ಆರಿಸಿದ್ದು.

Saturday, August 23, 2014

ಸತ್ಯಾಗ್ರಹ ಮಾಡಿದ್ದ ಅನಂತಮೂರ್ತಿಗಳು

ಸರಿಯಾಗಿ ನೆನಪಿದೆ. ೧೯೯೯, ಸೆಪ್ಟೆಂಬರ್. ಯಾಕೆಂದರೆ ಅದು ಇಲ್ಲಿ ಬಂದ ನಂತರದ ಮೊದಲ ಭಾರತ ಪ್ರವಾಸ. ೧೯೯೭ ರಲ್ಲಿ ಅಮೇರಿಕಾಗೆ ಬಂದಿದ್ದು. ಎಲ್ಲರ ಹಾಗೆ ಎರಡು ವರ್ಷದಲ್ಲಿ ಒಂದಿಷ್ಟು ರಜೆ, ಸ್ವಲ್ಪ ರೊಕ್ಕಾ ಎಲ್ಲ ಒಟ್ಟು ಮಾಡಿಕೊಂಡು ಮೊದಲ 'ಬ್ಯಾಕ್ ಟು ಇಂಡಿಯಾ' ಟ್ರಿಪ್.

ಅಮೇರಿಕಾಗೆ ಹೋಗಿ ಏನು ಮಿಸ್ ಮಾಡಿಕೊಂಡಿದ್ದೆನೋ ಇಲ್ಲವೋ ಗೊತ್ತಿಲ್ಲ. ಕನ್ನಡ ಪತ್ರಿಕೆಗಳನ್ನು ಮಿಸ್ ಮಾಡಿಕೊಂಡಿದ್ದು ಮಾತ್ರ ಹೌದು. ಧಾರವಾಡದಲ್ಲಿ ಇದ್ದಾಗೇ ಇರಬಹುದು, ಬೆಂಗಳೂರಿನಲ್ಲಿ ಇದ್ದಾಗೇ ಇರಬಹುದು. ವಾರಾಂತ್ಯ ಬಂತು ಅಂದರೆ ನಮ್ಮದು ಸ್ಟ್ಯಾಂಡರ್ಡ್ ರೂಟೀನ್. ಪಾನ್ ಬೀಡಾ ಅಂಗಡಿಗಳಲ್ಲಿ ತೂಗು ಹಾಕಿರುವ ಅಷ್ಟೂ ಕನ್ನಡ ಪತ್ರಿಕೆಗಳನ್ನು ತರುವದು. ಶನಿವಾರ, ರವಿವಾರ ಪೂರ್ತಿ ಅವನ್ನು ಓದುವದು. ಆ ಪತ್ರಿಕೆ ಈ ಪತ್ರಿಕೆ ಅಂತ ಭೇದಭಾವ ಇಲ್ಲ. ಎಲ್ಲ ಪತ್ರಿಕೆ. ಲಂಕೇಶ ಪತ್ರಿಕೆ, ವಾರ ಪತ್ರಿಕೆ, ಹಾಯ್ ಬೆಂಗಳೂರು, ಶಿವರಾಜ್ ಕುಮಾರ್ ಪತ್ರಿಕೆ, ಪೋಲಿಸ್ ನ್ಯೂಸ್, ಕ್ರೈಂ ನ್ಯೂಸ್, ಪೋಲೀಸ್ ಪತ್ರಿಕೆ, ಭ್ರೂಣ (ಇತ್ತು ಕಣ್ರೀ ಆ ಹೆಸರಿನ ಒಂದು ಟ್ಯಾಬ್ಲಾಯ್ಡ್ ಪತ್ರಿಕೆ), ಮತ್ತೊಂದು, ಮಗದೊಂದು ಅಂತ. ಎಲ್ಲ ಆ ಕಾಲದಲ್ಲಿ ನಾಲ್ಕೈದು ರೂಪಾಯಿಗೆ ಸಿಗುತ್ತಿದ್ದವು. ಒಂದು ಐವತ್ತು ರೂಪಾಯಿಗೆ ವಾರಾಂತ್ಯಕ್ಕೆ ಸಮೃದ್ಧ ಟ್ಯಾಬ್ಲಾಯ್ಡ್ ಸಾಹಿತ್ಯ. ಜೊತೆಗೆ ಮೆಲ್ಲಲು ಕವಳ, ಗುಟಕಾ, ತಾಸಿಗೊಂದು ಸಲ ಗಂಟಲಲ್ಲಿ ಬಿಟ್ಟುಕೊಳ್ಳಲು ಚಾ, ಕಾಪಿ ಇದ್ದರೆ ಸ್ವರ್ಗಕ್ಕೆ ಗೋಲಿ ಮಾರೋ ಅನ್ನುವ ಹಾಗೆ.

೧೯೯೯ ಸೆಪ್ಟೆಂಬರ್ ನಲ್ಲಿ ಭಾರತಕ್ಕೆ ಬಂದು, ಧಾರವಾಡ ಮುಟ್ಟಿದರೆ ಮತ್ತದೇ ರೂಟೀನ್. ವಾರಾಂತ್ಯ, ವಾರ ಅಂತ ಭೇದವಿಲ್ಲ. ಮೂರು ವಾರದ ರಜಾ ಮೇಲೆ ಬಂದಿದ್ದು. ಅದೂ ಎರಡು ವರ್ಷಗಳ ಬಳಿಕ. ಫುಲ್ ಮಜಾ ಮಾಡಿ. ಮತ್ತೇನು ಅದೇ ಹಳೆಯ ಚಾಳಿ. ಅಂಗಡಿಗೆ ಹೋಗಿ, ಎಲ್ಲ ಪತ್ರಿಕೆ ತಂದು, ಗುಡ್ಡೆ ಹಾಕಿಕೊಂಡು ಓದಿದ್ದೇ ಓದಿದ್ದು. ಮನೆಯೂಟ, ಶುದ್ಧ ಧಾರವಾಡ ಜರ್ದಾ ಕವಳ ಹೆಚ್ಚಿನ ಬೋನಸ್ ಅನ್ನಿ. ಆಹಾ! ಧಾರವಾಡ ಮಳೆಗಾಲದ ಟೈಮಿನಲ್ಲಿ, ಆಫೀಸ್ ಅದು ಇದು ಅನ್ನುವ ತಲೆಬಿಸಿ ಇಲ್ಲದೆ ಟ್ಯಾಬ್ಲಾಯ್ಡ್ ಪತ್ರಿಕೆಗಳ 'ರೋಚಕ ಸಾಹಿತ್ಯ' ಓದುವ ಸುಖ! ಅದು ಅನುಭವಿಸಿದವರಿಗೇ ಗೊತ್ತು. 

ಆವಾಗ ಹಾಗೆ ತಂದುಕೊಂಡಿದ್ದ ಪತ್ರಿಕೆಗಳಲ್ಲಿ ಕಂಡಿದ್ದು 'ಅಗ್ನಿ' ಅನ್ನುವ ಟ್ಯಾಬ್ಲಾಯ್ಡ್ ಪತ್ರಿಕೆ. ಅಲ್ಲಿವರೆಗೆ ಆ ಹೆಸರಿನ ಪತ್ರಿಕೆ ಓದಿರಲಿಲ್ಲ. ಕಂಡಿದ್ದರೆ ತಾನೇ ಓದುವದು. ಹೆಚ್ಚಾಗಿ ನಾವು ಭಾರತ ಬಿಟ್ಟ ಮೇಲೆ ಆರಂಭವಾದ ಟ್ಯಾಬ್ಲಾಯ್ಡ್ ಪತ್ರಿಕೆ ಇರಬೇಕು. ಇರಲಿ ನೋಡೋಣ ಅಂತ ಪುಟ ತಿರುಗಿಸಿದೆ.

ಅರೆ! ಇದು ನಮ್ಮ ಶ್ರೀಧರ್ ಮೂರ್ತಿಯವರ ಪತ್ರಿಕೆ. 'ನಮ್ಮ' ಶ್ರೀಧರ್ ಮೂರ್ತಿ ಅನ್ನಲಿಕ್ಕೆ ಅವರ ಪರಿಚಯ ಇಲ್ಲ. ಆದರೆ ಅವರು ಆಗಲೇ ಸುಧಾರಿತ ಮಾಜಿ ಅಂಡರ್ವರ್ಲ್ಡ್ ಕಿಂಗ್, ಮಾಜಿ ರೌಡಿಯಾದರೂ ಸಾಹಿತ್ಯ, ಸಂಗೀತ ಇತ್ಯಾದಿಗಳಲ್ಲಿ ಆಸಕ್ತಿ ಇರುವ ವ್ಯಕ್ತಿ, ಅದು ಇದು ಅಂತ ಸುಮಾರು ಸುದ್ದಿಯಾಗಿದ್ದರು. ಅಲ್ಲಿ ಇಲ್ಲಿ ಓದಿ ಅವರ ಬಗ್ಗೆ ಗೊತ್ತಿತ್ತು. ಮತ್ತೆ ತುಂಬ ಇಷ್ಟಪಟ್ಟು ಓದುತ್ತಿದ್ದ 'ಹಾಯ್ ಬೆಂಗಳೂರ್' ಪತ್ರಿಕೆಯಲ್ಲಿ ಅವರ ಸುದ್ದಿ ಸುಮಾರು ಬರುತ್ತಿತ್ತು. ಅದರ ಸಂಪಾದಕ ರವಿ ಬೆಳಗೆರೆಯವರ ಒಂದು ಕಾಲದ ಆತ್ಮೀಯ ಸ್ನೇಹಿತರಾಗಿದ್ದವರು ಈ ಶ್ರೀಧರ್. ಮತ್ತೆ ೧೯೯೭ ರಲ್ಲಿ, ನಾನು ಅಮೇರಿಕಾಗೆ ಹೊರಡುವ ಕೆಲವೇ ದಿವಸಗಳ ಮೊದಲು, ಬೆಂಗಳೂರಲ್ಲಿ, ಇದೇ ಶ್ರೀಧರ್ ಮೂರ್ತಿಗಳ ಮೇಲೊಂದು ಹತ್ಯಾ ಪ್ರಯತ್ನವೂ ಆಗಿತ್ತು. ಆವತ್ತು ಕಾರಿನಲ್ಲಿರದ ಶ್ರೀಧರ್ ಮೂರ್ತಿ ಬಚಾವಾಗಿದ್ದರು. ಅವರಂತೆಯೇ ಕಾಣುತ್ತಿದ್ದ ಅವರ ಡ್ರೈವರ್ ಶೀನ ಹಂತಕರ ಗುಂಡಿನ ದಾಳಿಯಲ್ಲಿ ಸತ್ತಿದ್ದ. ಭೂಗತ ಜಗತ್ತನ್ನು ಶ್ರೀಧರ್ ಬಿಟ್ಟಿದ್ದೇವೆ ಅಂದರೂ ಅವರ ಹಳೆ ದುಷ್ಮನ್ನುಗಳು ಬಿಡಬೇಕಲ್ಲ. ಆ ವಿಷಯದಲ್ಲಿ ಆಗಿದ್ದ ಗ್ಯಾಂಗ್ ವಾರ್.

ಇಂತಹ ರೋಚಕ ಹಿನ್ನೆಲೆಯಿದ್ದ ಶ್ರೀಧರ್ ಮೂರ್ತಿ 'ಅಗ್ನಿ' ಅನ್ನುವ ಪತ್ರಿಕೆ ಶುರುಮಾಡಿಕೊಂಡಿದ್ದರು.

ಆ ಸಂಚಿಕೆ ಬಿಚ್ಚಿ ನೋಡಿದರೆ ದೊಡ್ಡ ಸುದ್ದಿಯೇ ಸಾಹಿತಿ ಅನಂತಮೂರ್ತಿಗಳ ಸತ್ಯಾಗ್ರಹದ ಬಗ್ಗೆ.

ಆ ಸಂಚಿಕೆಯಲ್ಲಿ ಓದಿದ ಸುದ್ದಿಯಿಂದ ತಿಳಿದಿದ್ದು ಇಷ್ಟು. ಅಗ್ನಿ ಪತ್ರಿಕೆಯಲ್ಲಿ ಅನಂತಮೂರ್ತಿಗಳ ಬಗ್ಗೆ ಏನೋ ಒಂದು ವರದಿ ಬಂದಿತ್ತಂತೆ. ಏನು ಅಂತ ಸರಿ ನೆನಪಿಲ್ಲ. ಸರ್ಕಾರಿ ಕಾರನ್ನು ತಮ್ಮ ವಯಕ್ತಿಕ ಕೆಲಸಕ್ಕೆ ಉಪಯೋಗಿಸಿಕೊಂಡರು ಅಂತ ಏನೋ ವರದಿ ಅಂತ ಓದಿದ ನೆನಪು. ಅದನ್ನು ಓದಿದ ಅನಂತಮೂರ್ತಿ ತುಂಬ ಕೋಪಗೊಂಡಿದ್ದರು. ಸಮಜಾಯಿಷಿ ಕೊಡಲು ನೋಡಿದರು. 'ನಮ್ಮ ಕಡೆ ನಿಮ್ಮ ಅವ್ಯವಹಾರದ ಬಗ್ಗೆ ಪ್ರೂಫ್ ಇದೆ. ಅದಕ್ಕೇ ಬರೆದಿದ್ದೇವೆ,' ಅಂತ ಪತ್ರಿಕೆಯವರ ಹೇಳಿಕೆ. ಎಲ್ಲರಿಗೆ ಮೇಷ್ಟ್ರಾಗಿದ್ದ ಅನಂತಮೂರ್ತಿಗಳಿಗೆ ಅಗ್ನಿ ಪತ್ರಿಕೆಯ ಸಂಪಾದಕ ಶೀಧರ್ ಅಪರಿಚಿತರೂ ಅಲ್ಲ. ಫೋನ್ ಮಾಡಿ, ಏಕವಚನದಲ್ಲಿ ಪ್ರೀತಿಯಿಂದ ಮಾತಾಡಿ, 'ಅಲ್ಲಪ್ಪಾ, ಶೀಧರ್, ಖಾಯಿಲೆ ಬಿದ್ದ ತಾಯಿ ನೋಡಲು ಹೋದರೆ, ಏನೇನೋ ಬರೆದುಬಿಟ್ಟಿದ್ದಿಯಲ್ಲಪ್ಪಾ. ಇದು ಸರಿನೇ?' ಅಂತ ಅನಂತಮೂರ್ತಿಗಳ ಪ್ರಲಾಪ. 'ಸಾರ್, ನಿಮ್ಮ ತಾಯಿ ಬೇಗ ಹುಶಾರಾಗಲಿ. ವಿಷಯ ಅದಲ್ಲ. ನಮ್ಮ ತಕರಾರು ಇರುವದು ನೀವು ಸರ್ಕಾರಿ ಕಾರ್ ದುರ್ಬಳಕೆ ಮಾಡಿಕೊಂಡಿದ್ದೀರಿ ಅಂತ. ಅದರ ಬಗ್ಗೆ ಹೇಳಿ ಸಾರ್,' ಅಂತ ಸಂಪಾದಕ ಶ್ರೀಧರ್ ಅವರ ರಿವರ್ಸ್ ಆರ್ಗ್ಯುಮೆಂಟ್. ಒಟ್ಟಿನಲ್ಲಿ ಜಗಳ ಬಗೆಹರಿಯಲಿಲ್ಲ ಅಂತ ಕಾಣುತ್ತದೆ.

ಆಗ ನಿರ್ಧಾರ ಮಾಡಿದರು ಅನಂತಮೂರ್ತಿಗಳು - ಅಗ್ನಿ ಪತ್ರಿಕೆ ಕಚೇರಿ ಮುಂದೆ ಕುಟುಂಬ ಸಮೇತ ಸತ್ಯಾಗ್ರಹ ಮಾಡುತ್ತೇನೆ.  'ಸರಿ, ಬಂದು ಮಾಡಿಕೊಳ್ಳಿ,' ಅಂತ ಅಗ್ನಿ ಪತ್ರಿಕೆಯವರು ಹೇಳಿದರು.

ಹೇಳಿದ ದಿವಸ ಪತ್ನಿ, ಮಗನ ಸಂಗಡ ಬಂದ ಅನಂತಮೂರ್ತಿ ಸತ್ಯಾಗ್ರಹಕ್ಕೆ ಕೂತರು. ಎಷ್ಟು ಶಿಸ್ತುಬದ್ಧವಾಗಿ ಬಂದು ಕೂತಿದ್ದರು ಅಂತೀರಿ. ಎಷ್ಟು ಮಟ್ಟಸವಾಗಿ ತಯಾರಿ ಮಾಡಿಕೊಂಡು ಬಂದಿದ್ದರು ಅಂತೀರಿ. ಕುಳಿತುಕೊಳ್ಳಲು ಫೋಲ್ಡಿಂಗ್ ಖುರ್ಚಿಗಳು, ತಿಂಡಿ ತುಂಬಿದ ಟಿಫಿನ್ ಕ್ಯಾರಿಯರ್, ಕಾಫೀ, ಟೀ ಇದ್ದ ಥರ್ಮಾಸ್. ವಾಹ್! ಶಿಸ್ತು ಅಂದರೆ ಅವರನ್ನು ನೋಡಿ ಕಲಿಯಬೇಕು. ವೇಷ ಭೂಷಣ ಅಂತೂ ಬಿಡಿ. ಅವರ ಡ್ರೆಸ್ ಯಾವಾಗಲೂ ಪರ್ಫೆಕ್ಟ್. ಒಂದು ಇಸ್ತ್ರಿ ಗೆರೆ ಆಕಡೆ ಈಕಡೆ ಆಗಿರುವದಿಲ್ಲ. ಇದೆಲ್ಲ ಫೋಟೋ, ವರದಿ ಆವತ್ತು ತಂದಿದ್ದ ಅಗ್ನಿ ಪತ್ರಿಕೆಯಲ್ಲಿತ್ತು.

ಸತ್ಯಾಗ್ರಕ್ಕೆ ಬಂದಾಗ ಅಲ್ಲೂ ಜಗಳವಾಗಿಬಿಡಬೇಕೇ! ಅಗ್ನಿ ಪತ್ರಿಕೆ ವರದಿಯಿಂದ ಅನಂತಮೂರ್ತಿಗಳ ಪುತ್ರ ಶರತ್ ತುಂಬ ಕೋಪಗೊಂಡಿದ್ದರು. ಅನಂತಮೂರ್ತಿಗಳ ಬಗ್ಗೆ ಹಿಂದೆ ವರದಿ ಬರೆದಿದ್ದ ವರದಿಗಾರ ಅಲ್ಲಿ ಕಂಡೇ ಬಿಡಬೇಕೇ! ಬಿಸಿರಕ್ತ ಬೇರೆ. ಅನಂತಮೂರ್ತಿ ಪುತ್ರ ವರದಿಗಾರರಿಗೆ ಏನೋ ಅಂದರು. ಅವರೂ ತಿರುಗಿ ಏನೋ ಅಂದು ಅಲ್ಲೂ ಜಗಳ. ಈಗ ಅಗ್ನಿ ಪತ್ರಿಕೆಯ ಎಲ್ಲರೂ ಹೊರಗೆ ಬಂದು ಒಂದು ತರಹದ ಡಬಲ್ ಸತ್ಯಾಗ್ರಹ.

ಅನಂತಮೂರ್ತಿಗಳು ಅಂದಾಕ್ಷಣ ಯಾವಾಗಲೂ ಈ ಘಟನೆ ನೆನಪಾಗುತ್ತದೆ.

ಅನಂತಮೂರ್ತಿಗಳ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನೆಮ್ಮದಿ ಸಿಗಲಿ.

ಸಾಹಿತಿ ಅನಂತಮೂರ್ತಿಗಳು

Wednesday, August 13, 2014

ಚೂರು ಪಾರು...ಅದು ಇದು

ಶಿಷ್ಯ: ಗುರುಗಳೇ, ನನಗೆ ಜ್ಞಾನೋದಯವಾಗಬೇಕು. ಏನು ಮಾಡಬೇಕು? ಹೇಳಿ.

ಗುರು: (ತುಂಬ ಯೋಚನೆ ಮಾಡಿ ಹೇಳಿದ) ಜ್ಞಾನೋದಯವಾಗಬೇಕು ಅಂದರೆ.......ಸೂರ್ಯೋದಯವಾಗಲು ಏನು ಮಾಡುತ್ತೀಯೋ ಅದನ್ನು ಮಾಡು.

ಶಿಷ್ಯ: ಹಾಂ!? ಸೂರ್ಯೋದಯವಾಗಲು ನಾನು ಏನೂ ಮಾಡಬೇಕಾಗಿಯೇ ಇಲ್ಲ!

ಗುರು: ಜ್ಞಾನೋದಯಕ್ಕೂ ಅಷ್ಟೇ. ಏನೂ ಮಾಡಬೇಕಾಗಿಯೇ ಇಲ್ಲ!

ಶಿಷ್ಯ: ಹಾಗಾದರೆ ಈ ಧ್ಯಾನ, ಯೋಗ ಇತ್ಯಾದಿ ಎಲ್ಲ ಯಾತಕ್ಕೆ?

ಗುರು: ಸೂರ್ಯೋದಯವಾದಾಗ ಅದನ್ನು ನೋಡಲು ಎಚ್ಚರವಿರುವದು ಹೇಗೆ ಮುಖ್ಯವೋ ಹಾಗೇ ಜ್ಞಾನೋದಯವಾದಾಗ ಕೂಡ ಎಚ್ಚರವಿರುವದೂ ಮುಖ್ಯ. ಜ್ಞಾನೋದಯವಾದಾಗ ಎಚ್ಚರವಿರಲು ಅನುಕೂಲವಾದೀತು ಅಂತ ಧ್ಯಾನ, ಯೋಗ ಎಲ್ಲ! ಅಷ್ಟೇ.

***

ಒಬ್ಬನಿಗೆ ಕನ್ನಡಿಯೊಂದರಲ್ಲಿ ತನ್ನನ್ನು ತಾನು ನೋಡಿಕೊಳ್ಳುವ ಮನಸ್ಸಾಯಿತು.
ನೋಡಿದರೆ ಕನ್ನಡಿ ಮೇಲೆ ಧೂಳು ತುಂಬಿತ್ತು.
ತಿಕ್ಕಿ ತಿಕ್ಕಿ ಸ್ವಚ್ಚ ಮಾಡಲು ಪ್ರಾರಂಭಿಸಿದ.
ಅದೆಷ್ಟು ಜನ್ಮದ ಧೂಳಿತ್ತೋ!
ಕನ್ನಡಿಯ ಚೌಕಟ್ಟು (ಫ್ರೇಮ್) ದುರ್ಬಲವಾಗಿ ಹೋಯಿತು. ಲದ್ಡಾಯಿತು. ದೂಳು ಮಾತ್ರ ಇನ್ನೂ ಉಳಿದಿತ್ತು.
ಹೋಗಿ ಹೊಸ ಚೌಕಟ್ಟು ತಂದ. ಕನ್ನಡಿಗೆ ಹಾಕಿಕೊಂಡ.
ಉಜ್ಜಿ ಉಜ್ಜಿ ಸ್ವಚ್ಚಗೊಳಿಸುವದನ್ನ ಮುಂದುವರಿಸಿದ.

ಅರ್ಥ? ಅವರವರ ಭಾವಕ್ಕೆ, ಭಕ್ತಿಗೆ.

***

೯/೧೧ ದಾಳಿಯ ನಂತರ ಅಮೇರಿಕಾ ಆಫ್ಘಾನಿಸ್ತಾನಕ್ಕೆ ಹೋಗಿ ಕೂತಿದ್ದು ಸರಿಯಷ್ಟೇ. ಅಲ್ಲಿ ಹೋಗಿ ತಾಲಿಬಾನು, ಅಲ್ಕೈದಾ, ಲಾಡೆನ್ ಎಲ್ಲರ ಮಾಹಿತಿ ತೆಗೆಯಲು ಪ್ರಾರಂಭಿಸಿದವರು ಅಮೇರಿಕಾದ ಬೇಹುಗಾರಿಕೆ ಸಂಸ್ಥೆ ಸಿಐಎ ಏಜೆಂಟರು.

ಒಬ್ಬ ಅಫ್ಘಾನಿ ಟ್ರೈಬಲ್ ನಾಯಕನ ಬಳಿ ತಾಲಿಬಾನ್ ಬಗ್ಗೆ ಸಾಕಷ್ಟು ಮಾಹಿತಿಯಿದೆ ಅಂತ ಗೊತ್ತಾಯಿತು. ಸಿಐಎ ಏಜೆಂಟಗಳು ಹೋಗಿ, 'ಸಲಾಂ' ಅಂದರು. ಮಾಹಿತಿ ಕೊಡಲು ಕೇಳಿದರು. ಹಿಂದೆ ಮುಂದೆ ನೋಡಿದ. ಗೊತ್ತಾಯಿತು. ಆಸಾಮಿ ಏನೋ ಕೇಳುತ್ತಿದ್ದಾನೆ ಅಂತ. ಏನು ಕೊಡಬೇಕು ಅಂತ ತಿಳಿಯಲಿಲ್ಲ. ದುಡ್ಡು ಕಾಸು ಅವನಿಗೆ ಅವನಿಗೆ ಉಪಯೋಗವಿಲ್ಲ. ಯಾಕೆಂದರೆ ಅವರ ಸಮಾಜದಲ್ಲಿ ರೊಕ್ಕಕ್ಕೆ ಕಿಮ್ಮತ್ತಿಲ್ಲ. ಎಲ್ಲ ದನಗಾಹಿಗಳು.

ಆ ನಾಯಕನಿಗೋ ಸುಮಾರು ವರ್ಷ ವಯಸ್ಸಾಗಿತ್ತು. ಮನೆಯಲ್ಲಿ ನೋಡಿದರೆ ಚಿಕ್ಕ ವಯಸ್ಸಿನ ಮೂರೋ ನಾಕೋ ಬೇಗಂಗಳು ಸುತ್ತ ಮುತ್ತ ಸುಳಿ ಮಿಳಿ ಮಾಡುತ್ತಿದ್ದರು. ನಾಯಕ ಮಾತ್ರ ಸುಸ್ತಾದವನಂತೆ ಕೂತಿರುತ್ತಿದ್ದ.

ಸಿಐಎ ಏಜೆಂಟ್ ತಲೆಯೊಳಗೆ ಏನೋ ಬಂತು. ಕಿಸೆಯಿಂದ ಒಂದಿಷ್ಟು ನೀಲಿ ಗುಳಿಗೆ ತೆಗೆದವನೇ ನಾಯಕನ ಕೈಯಲ್ಲಿ ತುರುಕಿ, ಕಣ್ಣು ಹೊಡೆದು, 'ಖುದಾ ಹಾಫಿಜ್' ಅಂತ ಹೇಳಿ ಹೊರಟು ಬಂದ.

ಸ್ವಲ್ಪ ದಿವಸಗಳ ನಂತರ ಹೋದರೆ ಸುಸ್ತಾಗಿದ್ದ ನಾಯಕ ಎದ್ದು ಥಕಥೈ ಅಂತ ಕುಣಿಯುತ್ತಿದ್ದ. ಕೇಳುವ ಮೊದಲೇ ಸಾಕಷ್ಟು ಮಾಹಿತಿ ಕೊಟ್ಟ. ಮತ್ತೂ ಕೊಡುತ್ತೇನೆ ಅಂದ. ಇನ್ನೂ ಒಂದಿಷ್ಟು ನೀಲಿ ಗುಳಿಗೆ ಇದ್ದರೆ ಕೊಟ್ಟು ಹೋಗಿ ಅಂದ. ನೀಲಿ ಗುಳಿಗೆಯೇ? ತೊಗೊಳ್ಳಿ. ಬೇಕಾದಷ್ಟು ಕೊಡೋಣ ಅಂತ ಹೇಳಿ ಸಿಐಎ ಕೊಟ್ಟಿತು.

ಆ ನೀಲಿ ಗುಳಿಗೆ ಅಫ್ಘಾನಿ ಬುಡಕಟ್ಟು ಜನರಲ್ಲಿ ಅದೆಷ್ಟು ಪ್ರಸಿದ್ಧವಾಯಿತು ಅಂದರೆ ಸಿಐಎ ದೊಡ್ಡ ಮಟ್ಟದಲ್ಲಿ ತರಿಸಿ ತರಿಸಿ ಕೊಡಬೇಕಾಯಿತು. ಗುಳಿಗೆ ಕೊಡಿ, ಮಾಹಿತಿ ತೊಗೊಳ್ಳಿ ಅನ್ನುವ ಪರಿಸ್ಥಿತಿ ಬಂತು.

ಯಾವದಾಗಿತ್ತು ಆ ಗುಳಿಗೆ?

ವಯಾಗ್ರಾ!

***

ಅಮೇರಿಕಾದ ಮಿನ್ನಿಯಾಪೋಲಿಸ್ ನಗರದ ಟಾರ್ಗೆಟ್ ಮಳಿಗೆಯೊಂದಕ್ಕೆ ಒಬ್ಬ ವ್ಯಕ್ತಿ ಆಗಮಿಸಿದ. ದುಮು ದುಮು ಅನ್ನುತ್ತಲೇ ಬಂದ. 'ಓಹೋ! ಕ್ರುದ್ಧ ಗ್ರಾಹಕ. ಏನೋ ಕಿರಿಕ್ ಆಗಿರಬೇಕು. ಇವನನ್ನು ಸಮಾಧಾನ ಮಾಡಬೇಕು,' ಅಂತ ಅಂಗಡಿಯವರಿಗೆ ಅವನ ನೋಡಿಯೇ ತಿಳಿಯಿತು.

'ಹಲೋ ಸಾರ್, ನಿಮಗೆ ಹೇಗೆ ಸಹಾಯ ಮಾಡಲಿ?' ಅಂತ ಕೇಳಿದ ಗ್ರಾಹಕ ಸೇವಾ ವಿಭಾಗದ ಮ್ಯಾನೇಜರ್.

'ಏನ್ರೀ ಇವು? ಹಾಂ!?' ಅಂತ ಅಬ್ಬರಿಸಿದ ಗ್ರಾಹಕ. ಏನೋ ಒಂದಿಷ್ಟು ಕಾಗದ ಮೇನೇಜರನ ಮುಖದ ಮುಂದೆ ಹಿಡಿದ. ತಿವಿದ.

'ಸಾರ್, ಇವು ಕೂಪನ್ನು ಸಾರ್. ಡಿಸ್ಕೌಂಟ್ ಕೂಪನ್ನು. ಇದರಲ್ಲಿ ಏನು ಪ್ರಾಬ್ಲಮ್ ಸಾರ್?' ಅಂತ ಕೇಳಿದ ಮ್ಯಾನೇಜರ್.

'ಅದು ನನಗೂ ಗೊತ್ತುರೀ. ಎಂತಹ ಕೂಪನ್ ಅಂತ ಸ್ವಲ್ಪ ನೋಡಿ!' ಅಂತ ಅಬ್ಬರಿಸಿದ ಗ್ರಾಹಕ.

ಮ್ಯಾನೇಜರ್ ಕೂಪನ್ನುಗಳನ್ನು ತೆಗೆದುಕೊಂಡು ನೋಡಿದ.

'ಸಾರ್, ಇವು ಬಸುರಿ ಹೆಂಗಸರಿಗೆ ಕಳಿಸೋ ಕೂಪನ್ನುಗಳು. ಗರ್ಭ ಧರಿಸಿದ ನಂತರ, ಹೆರಿಗೆ ಸಮಯಕ್ಕೆ, ಹೆರಿಗೆ ನಂತರ ಶಿಶುಗಳಿಗೆ ಬೇಕಾಗೋ ವಸ್ತುಗಳನ್ನು ಕೊಳ್ಳಲು ಡಿಸ್ಕೌಂಟ್ ಕೂಪನ್ನುಗಳು ಸಾರ್,' ಅಂತ innocent ಆಗಿ ಹೇಳಿದ ಅಂಗಡಿಯವ.

'ಸರಿರೀ. ಈ ಕೂಪನ್ಸ್ ಯಾರಿಗೆ ಕಳಿಸುತ್ತಿದ್ದೀರಿ ಅಂತ ಗೊತ್ತೇ? ಹಾಂ!?' ಅಂತ ಅಬ್ಬರಿಸಿದ ಕ್ರುದ್ಧ ಕಸ್ಟಮರ್. ಅವನಿಗೆ ಮತ್ತೂ ಹೆಚ್ಚಿನ ಕಿರಿಕಿರಿ.

'ಯಾರಿಗೆ ಸಾರ್!?' ಅಂತ ಕೇಳಿದ ಮ್ಯಾನೇಜರ್. ಅವನಿಗೇನು ಗೊತ್ತು? ಯಾರಿಗೆ ಹೋಗಿ ಮುಟ್ಟಿದ್ದವೋ ಆ ಬಸುರಿಯರ ಕೂಪನ್ನುಗಳು.

'ರೀ! ಇಂತಹ ಕೂಪನ್ನುಗಳನ್ನು ನನ್ನ ಹದಿನಾರು ವರ್ಷದ ಮಗಳಿಗೆ ಕಳಿಸೋದೇ? ಅವಳಿಗೇನು ಬಸುರಾಗು ಅಂತ ಹೇಳ್ತಾ ಇದ್ದೀರಾ? ಒಳ್ಳೆ ಅಂಗಡಿಯವರು ನೀವು! ಸ್ವಲ್ಪ ನೋಡಿಕೊಂಡು ಯಾರಿಗೆ ಯಾವ ತರಹದ ಕೂಪನ್ ಕಳಿಸಬೇಕು ಅಂತ ಕಾಳಜಿ ವಹಿಸಿ ಕಳಿಸಿ. ತಿಳೀತಾ?' ಅಂತ ಅಬ್ಬರಿಸಿ ಹೊರಟ ಕಸ್ಟಮರ್.

'ಸಾರೀ ಸಾರ್. ಅದೇನೋ ಮಿಸ್ಟೇಕ್ ಆಗಿರಬೇಕು. ಅದಕ್ಕೇ ಬಸುರಿಯರಿಗೆ ಕಳಿಸೋ ಕೂಪನ್ ತಮ್ಮ ಹದಿಹರಿಯದ ಮಗಳಿಗೆ ಹೋಗಿ ಬಿಟ್ಟಿದೆ ಅಂತ ಕಾಣುತ್ತೆ. ವಿಚಾರಿಸ್ತೀನಿ ಸಾರ್. ಮತ್ತೊಮ್ಮೆ ನಮ್ಮ ಟಾರ್ಗೆಟ್ ಮಳಿಗೆ  ಪರವಾಗಿ  ಸಾರೀ ಸಾರ್. ಕ್ಷಮಿಸಿ,' ಅಂತ ಗೊಳೋ ಅಂದ ಮ್ಯಾನೇಜರ್. ತಲೆ ಬಿಸಿಯಾಗಿದ್ದ ಕಸ್ಟಮರನನ್ನು ತಣ್ಣ ಮಾಡಿ ಕಳಿಸಿದ್ದರೆ ಸಾಕಾಗಿತ್ತು ಅವನಿಗೆ.

ಇದಾದ ಸ್ವಲ್ಪ ದಿವಸಗಳ ನಂತರ, ಅಂಗಡಿಯವರ ಪದ್ಧತಿ ಪ್ರಕಾರ ಟಾರ್ಗೆಟ್ ಅಂಗಡಿಯ ಮಾಲೀಕ ಆ ಕಸ್ಟಮರನಿಗೆ ಫೋನ್ ಮಾಡಿದ. ಫೋನ್ ಮಾಡಿ, ಮಾತಾಡಿ, ಕೂಪನ್ ಕಳಿಸಿ ಆದ ಪ್ರಮಾದಕ್ಕೆ ಮತ್ತೊಮ್ಮೆಕ್ಷಮೆ ಕೇಳಿ, ಗ್ರಾಹಕನನ್ನು ಹಿಡಿದಿಟ್ಟುಕೊಳ್ಳುವ ಒಂದು ಪ್ರಯತ್ನ. ಎಲ್ಲ ಅಂಗಡಿಗಳೂ ಮಾಡುತ್ತವೆ ಬಿಡಿ. ಯಾಕೆಂದರೆ ಅವರಿಗೆಲ್ಲ ಗೊತ್ತು ಹೊಸ ಕಸ್ಟಮರ್ ಸಂಪಾದಿಸುವದು ಎಷ್ಟು ಕಷ್ಟದ ಕೆಲಸ ಅಂತ. ಸಂತೃಪ್ತ ಗ್ರಾಹಕರು ಬೆಸ್ಟ್. ಅಸಂತೃಪ್ತ ಗ್ರಾಹಕರು ತುಂಬ ಡೇಂಜರಸ್ ಬಿಸಿನೆಸ್ಸಿಗೆ. ಅದಕ್ಕೇ ಗ್ರಾಹಕ ದೇವೋ ಭವ!

ಫೋನ್ ಮಾಡಿದ.  ಆವತ್ತು ಬಂದಿದ್ದ ಮಂಡೆ ಬಿಸಿ ಕಸ್ಟಮರ್ ಸಿಕ್ಕ. ಮ್ಯಾನೇಜರ್ ಮತ್ತೊಮ್ಮೆ ಕ್ಷಮೆ ಕೇಳಿದ.

'ಮ್ಯಾನೇಜರ್ ಅವರೇ, ಒಂದು ಮಾತು ಹೇಳಬೇಕಿತ್ತು ನಿಮಗೆ. ನನಗೇ ಗೊತ್ತಿಲ್ಲದಂತೆ ನನ್ನ ಮನೆಯಲ್ಲಿ ಒಂದು ಘಟನೆ ನಡೆದಿವೆ ಅಂತ ಈಗ ಗೊತ್ತಾಯಿತು,' ಅಂತ ಒಂದು ತರಹ ಮಳ್ಳನ ದನಿಯಲ್ಲಿ ಹೇಳಿದ ಕಸ್ಟಮರ್.

'ಏನ್ ಸಾರ್?' ಅಂತ ಕೇಳಿದ ಫೋನ್ ಮಾಡಿದ ಮ್ಯಾನೇಜರ್.

'ಅದು ಏನು ಅಂದ್ರೆ, ನನ್ನ ಮಗಳು ಬಸುರಿಯಂತೆ. ಇದೇ ಆಗಸ್ಟ್ ನಲ್ಲಿ ಡೆಲಿವರಿ ಡೇಟ್ ಇದೆಯಂತೆ. ಸರಿಯಾಗಿ ವಿಚಾರ ಮಾಡಿದ ಮೇಲೆ ಬಾಯಿ ಬಿಟ್ಟಳು. ಏನು ಮಾಡೋದು? ಎಲ್ಲ ನಮ್ಮ ಕರ್ಮ. ಈ ಕಾಲದ ಮಕ್ಕಳೇ ಹೀಗೆ. ಅದು ಗೊತ್ತಿಲ್ಲದೇ ಆವತ್ತು ನಿಮ್ಮ ಅಂಗಡಿಗೆ ಬಂದು, ಬಸುರಿಯರಿಗೆ ಕಳಿಸುವ ಕೂಪನ್ನ ಅವಳಿಗೆ ಕಳಿಸಿದ್ದಕ್ಕೆ ನಿಮ್ಮ ಮೇಲೆ ರೇಗಾಡಿಬಿಟ್ಟೆ. ಆವತ್ತು ಕೋಪದಿಂದ ರೇಗಾಡಿದ್ದಕ್ಕೆ ನಿಜವಾಗಿ ನಿಮ್ಮ ಕ್ಷಮೆ ನಾನು ಕೇಳಬೇಕು. ಸಾರೀ! ದಯವಿಟ್ಟು ಕ್ಷಮಿಸಿ' ಅಂತ ಹೇಳಿ ಕಸ್ಟಮರ್ ಫೋನಿಟ್ಟ.

ಮ್ಯಾನೇಜರ್ ಹಾಂ! ಅಂತ ದಂಗು ಹೊಡೆದ.

ಆಗಿದ್ದೇನಾಗಿತ್ತು?

ಟಾರ್ಗೆಟ್ ಕಂಪನಿ ಗ್ರಾಹಕರ ಶಾಪಿಂಗ್ ಡಾಟಾ ಎಲ್ಲ ಸಂಗ್ರಹಿಸಿ, ಅದನ್ನು ತುಂಬಾ ಡೀಪ್ ಆಗಿ ಬೇರೆ ಬೇರೆ ರೀತಿಯಿಂದ ವಿಶ್ಲೇಷಿಸಿ, ಗ್ರಾಹಕರಿಗೆ ಕಾಲಕ್ಕೆ ಸರಿಯಾಗುವಂತಹ ಕೂಪನ್ನುಗಳನ್ನು ಹುಡುಕುವ ಸಾಫ್ಟ್ವೇರ್ ಒಂದನ್ನು ತಯಾರಿಸಿ, ಅದರ ಉಪಯೋಗ ಮಾಡುವದನ್ನು ಆರಂಭಿಸಿತ್ತು. ಆ ಹುಡುಗಿ ಸಹಿತ ಟಾರ್ಗೆಟ್ ಗ್ರಾಹಕಿ. ಅದೇನೇನು ಸಾಮಾನು ಖರೀದಿ ಮಾಡುತ್ತಿದ್ದಳೋ ಏನೋ! ಒಟ್ಟಿನಲ್ಲಿ ಅವಳ ಹಲವಾರು ತಿಂಗಳುಗಳ ಖರೀದಿ ಡಾಟಾವನ್ನು ವಿಶ್ಲೇಷಿಸಿದ ಕಂಪ್ಯೂಟರ್ ಬರೋಬ್ಬರಿ ಹೇಳಿತ್ತು ಅವಳ ಪರಿಸ್ಥಿತಿ ಬಗ್ಗೆ. ಅದಕ್ಕೇ ಸರಿಯಾಗಿ ಅವಳಿಗೆ ಅನುಕೂಲವಾಗುವಂತೆ ಗರ್ಭಿಣಿಯರಿಗೆ,
ಹೊಸ ತಾಯಂದಿರಿಗೆ ಉಪಯೋಗವಾಗುವಂತಹ ಒಂದಿಷ್ಟು ಕೂಪನ್ನುಗಳನ್ನು ಕಳಿಸಿತ್ತು. ಅದು ಅವಳ ತಂದೆಗೆ ಸಿಕ್ಕು ಆವಾಂತರವಾಗಿತ್ತು.

ಇದನ್ನು Data Mining & Predictive Analytics ಅನ್ನುವ ಹೊಸ ವಿಷಯದ, ಮಾಹಿತಿ ತಂತ್ರಜ್ಞಾನದ ಆವಿಷ್ಕಾರದ ವಿಜಯ ಅನ್ನುತ್ತೀರೋ ಅಥವಾ ಮತ್ತೇನೋ ಅನ್ನುತ್ತೀರೋ!? ನಿಮಗೆ ಬಿಟ್ಟದ್ದು.

ಪೂರ್ತಿ ಮಾಹಿತಿಗೆ - http://www.nytimes.com/2012/02/19/magazine/shopping-habits.html?pagewanted=all&_r=0