Wednesday, February 27, 2013

ಬ್ರೋಕರ್ ಭೀಷ್ಮಾಚಾರಿ ಕನ್ಯಾ ಹುಡಕಿದ ಕಥಿ

ಬ್ರೋಕರ್ ಭೀಷ್ಮಾಚಾರಿ

ನಾವೀಗ ಪಾರ್ಟ್ ಟೈಮ್ ಶೇರ್ ಬ್ರೋಕರ್ ಆಗೇವಿ. ಅಂದ್ರ ಸ್ಟಾಕು, ಶೇರು ಅದು ಇದು ಅಂತ ಮಾರೋದು, ತೊಗೊಳ್ಳೋದು ಕೆಲಸ ಸಹಿತ ಸುರು ಮಾಡಿ ಬಿಟ್ಟೇವಿ. ಆಗಾಗ ಹೊಸಾ ಹೊಸಾ ರಾಡಿ ಎಬ್ಬಿಸಲಿಲ್ಲ ಅಂದ್ರ ನಮಗ ಸಮಾಧಾನ ಇರಂಗಿಲ್ಲ. ಅದಕ್ಕ ಈ ಹೊಸ ಕಾರ್ನಾಮಾ.

ನಮ್ಮ ದೋಸ್ತ ಚೀಪ್ಯಾನ ನನ್ನ ಮೊದಲ ಗಿರಾಕಿ. ಯಾವದೋ ಕಂಪನಿ ಶೇರ್ ತೊಗೊ ಅಂತ ಹೇಳಿ ರೊಕ್ಕಾ ಕೊಟ್ಟು ಹೋಗಿದ್ದ. ತೊಗೊಂಡಿದ್ದೆ. ಶೇರ್ ಸರ್ಟಿಫಿಕೆಟ್ ಬಂದವು. ಮನಿಗೆ ಹೋಗಿ ಕೊಟ್ಟು ಬರೋಣ ಅಂತ ಚೀಪ್ಯಾನ ಮನಿ ಕಡೆ ಹೊಂಟೆ.

ಅವತ್ತು ಮತ್ತ ಶನಿವಾರ. ನಮ್ಮ ಧೋತ್ರದ ದಿನ. ಅಂದ್ರ ನಾವು ಶನಿವಾರ ಕೇವಲ ಧೋತ್ರಾ ಮಾತ್ರ ಉಡತೇವಿ. ಬಾಕಿ ಎಲ್ಲಾ ಇರ್ತದ. ಪ್ಯಾಂಟ್ ಬದಲಿ ಧೋತ್ರ. ಬುಶರ್ಟ್ ಬದಲೀ ಜುಬ್ಬಾ. ಕ್ಯಾಪ್ ಬದಲೀ ಕರಿ ಟೊಪ್ಪಿಗಿ. ಏನೋ ಮನಿತನದ ಪದ್ಧತಿ. ನಾವೂ ಮುಂದು ವರಿಸ್ಕೊಂಡು ಹೋಗಬೇಕಲ್ಲ?

ಚೀಪ್ಯಾನ ಮನಿಗೆ ಹೋದೆ. ಬಾಗಿಲಾ ಹಾಕಿತ್ತು. ಬಡದೆ. ಮತ್ತ ಮತ್ತ ಬಡದೆ.

ಭಾಳ ಹೊತ್ತು ಆದ ಮ್ಯಾಲೆ ಒಳಗಿಂದ, ಯಾರು? ಅನ್ನೋ ದನಿ ಕೇಳಿ ಬಂತು. ಯಾವದೋ ಪ್ರಾಣಿ ಗೊಗ್ಗರ ದನಿ ಇದ್ದಂಗ ಇತ್ತು. ಚೀಪ್ಯಾ, ಅವನ ಹೆಂಡ್ತಿ ರೂಪಾ ವೈನಿ, ಅವನ ಇಬ್ಬರು ಕನ್ಯಾ ರತ್ನಗಳ ದನಿ ನನಗ ಗೊತ್ತದ. ಯಾರೋ ಬ್ಯಾರೆದವರದ್ದ ದನಿ. ಮತ್ತ ಚೀಪ್ಯಾನ ಮನಿಗೆ ಎಲ್ಲೆರೆ ಕಳ್ಳರು ಗಿಳ್ಳರು ಹೊಕ್ಕಾರೇನೋ ಅಂತ ಸಂಶಯ ಬಂತು.

ಅಷ್ಟರಾಗ ಒಬ್ಬರು ಸುಮಾರು ಎಪ್ಪತ್ತು ವರ್ಷ ಆಗಿರಬಹುದಾದ ಅಜ್ಜಿ ಅಂತಹವರು ಬಾಗಿಲಾ ತೆಗೆದರು. ನೋಡಿದ ಕೂಡಲೇ ಗೊತ್ತಾಗುವಂತಹ ಸಕೇಶಿ ಫಣಿಯಮ್ಮ. ಅಂದ್ರ ಮಾಡರ್ನ್ ವಿಡೋ.

ಯಾರು ನೀನು? ಏನು ಬೇಕಾಗಿತ್ತು? - ಅಂತ ಕೇಳಿದರು.

ನಾನು ಹೀಂಗ, ಶೇರ್ ಬ್ರೋಕರ್, ಶ್ರೀಪಾದ್ ರಾವ್ ಅವರ ಶೇರ್ ಸರ್ಟಿಫಿಕೆಟ್ ಕೊಟ್ಟು ಹೋಗೋಣ ಅಂತ ಬಂದಿದ್ದೆ, ಅಂತ ಹೇಳಿದೆ.

ಅವರು ಯಾರೂ ಮನ್ಯಾಗ ಇಲ್ಲ. ಪೂರ್ತಿ ಕುಟುಂಬ ಹರಕಿ ತೀರಿಸಲಿಕ್ಕೆ ಪಂಡರಾಪುರಕ್ಕ ಹೋಗ್ಯದ. ನನಗ ಕೊಟ್ಟು ಹೋಗಪಾ ಅದೇನಿದ್ದರೂ, ಅಂತ ಹೇಳಿದ್ರು ಅಜ್ಜಿ.

ನೀವು ಯಾರು? - ಅಂತ ಕೇಳಿದೆ.

ನಾನ? ನಾನು ರಾಧಾ ಬಾಯಿ. ನಿಮ್ಮ ರೂಪಾ ವೈನಿ ಅಜ್ಜಿ. ಮನಿ ನೋಡಿಕೊಳ್ಳಲಿಕ್ಕೆ ಹೊಸಾ ಎಲ್ಲಾಪುರದಿಂದ ಬಂದು ಇದ್ದೇನಿ ನೋಡಪಾ. ನೀ ಯಾರಂದಿ? ಏನು ಮಾಡ್ತೀ ಅಂದಿ? - ಅಂತ ಕೇಳಿದರು ಅಜ್ಜಿ.

ಓಹೋ ..... ಹೋ ... ಹೋ .... ರಾಧಜ್ಜಿ ಅಂದ್ರ ನೀವ ಏನು? ಕೇಳಿದ್ದೆ ನಿಮ್ಮ ಬಗ್ಗೆ. ನೋಡೋ ಸೌಭಾಗ್ಯ ಇವತ್ತು ಸಿಗ್ತು. ನಾನು ಶೇರ್ ಬ್ರೋಕರ್ ಕೆಲಸ ಮಾಡ್ತೆನ್ರೀ, ಅಂತ ಹೇಳಿ ನಮಸ್ಕಾರ ಮಾಡಿದೆ.

ಚೊಲೋ ಇರಪಾ, ಅಂತ ಆಶೀರ್ವಾದ ಮಾಡಿದರು ಅಜ್ಜಿ.

ಅಂದ್ರ ನೀನು ಮದುವೀ ಮಾಡಿಸೋ ಬ್ರೋಕರ್ ಏನು? ಇವರ ಮನಿಯಾಗ ಯಾರಿಗೆ ಲಗ್ನಾ ಮಾಡಿಸಲಿಕ್ಕೆ ಬಂದಿ? ಕುಂಡಲಿ ಕೊಟ್ಟು ಹೋಗಲಿಕ್ಕೆ ಬಂದಿಯಾ? ಯಾರಿಗೆ ಏನು ನೋಡಬೇಕು? ಕನ್ಯಾನೋ? ವರಾನೋ?- ಅಂತ ಕೇಳಿಯೇ ಬಿಟ್ಟರು ಅಜ್ಜಿ.

ರೀ ಅಜ್ಜಿ, ನಾ ಮದುವೀ ಮಾಡಿಸೋ ಬ್ರೋಕರ್ ಅಲ್ಲರೀ. ಶೇರ್ ಸ್ಟಾಕು ಬ್ರೋಕರ್. ಕುಂಡಲಿ ಅಲ್ಲ, ಶೇರ್ ಸರ್ಟಿಫಿಕೇಟ್ ಕೊಟ್ಟು ಹೋಗಲಿಕ್ಕೆ ಬಂದಿದ್ದೆ, ಅಂತ ಮತ್ತ ಫುಲ್ ವಿವರಣೆ ಕೊಟ್ಟೆ. ಅಜ್ಜಿ ಕಿವಿ ವಯಸ್ಸಿಗೆ ಅನುಗುಣವಾಗಿ ಸ್ವಲ್ಪ ಕೆಪ್ಪ ಆಗಿರಬೇಕು. ಮತ್ತ ಫುಲ್ ಕ್ಯಾಶ್ ಒಳಗ ಡೀಲ್ ಮಾಡೋ ಮಂದಿಗೆ ಶೇರು ಸ್ಟಾಕು ಗೊತ್ತಿರಲಿಕ್ಕೆ ಇಲ್ಲ. 

ಏನು!!!!!?????? ಮನುಷಾರಿಗೆ ಒಂದ ಅಲ್ಲ, ಶೇರ್ ಅಂದ್ರ ಸಿಂಹ ಹುಲಿಗೆ ಸಹಿತ ಮದುವೀ ಮಾಡಸ್ತೀಯ ನೀನು? ಏನು ಸರ್ಟಿಫಿಕೇಟ್? ಲಗ್ನಾನೂ ಮಾಡಿಸಿ, ಲಗ್ನದ ಸರ್ಟಿಫಿಕೇಟ್ ಸಹಿತ ಕೊಡಸ್ತೀಯ? ಬಾರೋ ಬಾ. ಕೂಡೋ ಕೂಡು. ನಿನ್ನಂತವನನ್ನ ಹುಡಕಲಿಕ್ಕತ್ತಿದ್ದೆ, ಅಂತ ಹೇಳಿಕೋತ್ತ ರಾಧಜ್ಜಿ ಜುಲ್ಮೀ ಮಾಡಿ ಕೂಡಿಸಿಕೊಂಡೇ ಬಿಟ್ಟರು.

ಮತ್ತ ಮತ್ತ ನಾ ಸ್ಟಾಕ್ ಬ್ರೋಕರ್, ಮ್ಯಾರೇಜ್ ಬ್ರೋಕರ್ ಅಲ್ಲ  ಅಂತ ಹೇಳೋ ಪ್ರಯತ್ನ ಮಾಡಿದೆ. ಆದ್ರ ಕಿವಿ ಶೆಡ್ಡು ಆಗಿದ್ದ ಅವರ ಮ್ಯಾಲೆ ಏನೂ ಪ್ರಭಾವ ಬೀರಲಿಲ್ಲ. ನಮ್ಮ ಧೋತ್ರ, ಕರಿ ಟೊಪ್ಪಿಗಿ ಗೆಟಪ್ ಸಹಿತ ನಾ ಖರೇನಾ ಮ್ಯಾರೇಜ್ ಬ್ರೋಕರ್  ಅಂತ ಅಜ್ಜಿನ ಕನ್ವಿನ್ಸ್ ಮಾಡಿ ಬಿಡ್ತು. ಸೂಡ್ಲಿ. ಅಜ್ಜಿ ಉಂಡಿ, ಅವಲಕ್ಕಿ, ಚಾ ಬ್ಯಾರೆ ಕೊಡತೇನಿ ಅಂತ ಆಶಾ ಬ್ಯಾರೆ ತೋರಿಸಿ ಬಿಟ್ಟರು. ಅಜ್ಜಿ ಕಥಿ ಕೇಳಕೊತ್ತ ಮಜಾ ತೊಗೊಳ್ಳೋಣ ಅಂತ ಕೂತ ಬಿಟ್ಟೆ.

ನನಗ ಮೂರು ಮಂದಿ ಗಂಡು ಮಮ್ಮಕ್ಕಳಿದ್ದಾರೋ.... ಅವರಿಗೆ ಒಂದೊಂದು ಕನ್ಯಾ ಹುಡುಕಿ ಕೊಡುವಂತಹ ಬ್ರೋಕರ್ ಭೀಷ್ಮಾಚಾರಿ ನೀನ ಆಗಿ ಬಿಡೋ. ನಿನಗ ಪುಣ್ಯಾ ಬರ್ತದ, ಅಂತ ಹೇಳಿಕೋತ್ತ ಚಾ ನಾಷ್ಟಾ ತರಲಿಕ್ಕೆ ಒಳಗ ಹೋದರು ಅಜ್ಜಿ.

ಏನಿದು? ನನಗ ಬ್ರೋಕರ್ ಭೀಷ್ಮಾಚಾರಿ ಅನ್ನಲಿಕತ್ತಾರ? ಯಾಕ? ಬರೆ ಕಿವಿ ಅಷ್ಟ ಅಲ್ಲ, ತಲಿನೂ ಕೆಟ್ಟದ ಹ್ಯಾಂಗ ಅಜ್ಜಿದು?
ಅಂತ ಸಂಶಯ ಬಂತು.

ದೊಡ್ಡ ಮೊಮ್ಮಗ ಭೀಮಸೇನ. ಒಳ್ಳೆ ಕೆಲಸದಾಗ ಇದ್ದಾನ. ಮೊದಲು ಸಣ್ಣ ಕೆಲಸದಾಗ ಇದ್ದ. ಈಗ ಎರಡು ಮೂರು  ಪ್ರಮೋಷನ್ ಬಂದು, ಕೆಲಸನೂ ಪಕ್ಕಾ ಆಗಿ, ಮಸ್ತ ಸೆಟಲ್ ಆಗಿ ಬಿಟ್ಟಾನ, ಅಂದ್ರು ಅಜ್ಜಿ.

ನಾವು ಮದ್ವಿ ಬ್ರೋಕರ್ ಇಲ್ಲದಿದ್ದರ ಏನಾತು? ಒಳ್ಳೆ ಸೆಟಲ್ ಇದ್ದ ಹುಡುಗ ಇದ್ದರ ಪ್ರಯತ್ನ ಮಾಡೋಣಂತ. ಮುಂದ ನಾವೂ  ಅದ ಧಂಧಾ ಮಾಡಬೇಕಾದೀತು ಅಂತ ವಿಚಾರ ಮಾಡಿದೆ. ಅಜ್ಜಿ ಕಥಿ ಕೇಳೋಣ ಅಂತ ನಿರ್ಧಾರ ಮಾಡಿದೆ.

ಎಲ್ಲೆ ಕೆಲಸ ಅಜ್ಜಿ, ಭೀಮಸೇನ್ ರಾವ್ ಅನ್ನೋ ನಿಮ್ಮ ದೊಡ್ಡ ಮೊಮ್ಮಗಂದು? ಅಂತ ಕೇಳಿದೆ.

ಆವ ಅಲ್ಲೇ ಸಿರ್ಸಿ ಹತ್ರ ನಮ್ಮ ಸ್ವಾಧಿ ಮಠ  ಅದ ನೋಡು, ಅಲ್ಲೆ ದೊಡ್ಡ ಪೋಸ್ಟ್ ಒಳಗ ಇದ್ದಾನ, ಅಂದ್ರು ಅಜ್ಜಿ.

ಓಹೋ.... ಏನು ಮಠದ ಮ್ಯಾನೇಜರ್ ಅಂದ್ರ ಇವರ ಏನು? ಚೊಲೊ ಪಗಾರ್ ಇರಬೇಕಲ್ಲ? - ಅಂತ ಕೇಳಿದೆ.

ಏ.... ಮ್ಯಾನೇಜರ್ ಗೀನೆಜರ್ ಎಲ್ಲಾ ಸಣ್ಣು ಸಣ್ಣು ಕೆಲಸ. ಮತ್ತ ಮಠಕ್ಕ ದೂರದ ಕೆಲಸ. ಇವಾ ಇನ್ನೂ ಭಾಳ ಹತ್ರದ ದೊಡ್ಡ ಕೆಲಸಾ ಮಾಡ್ತಾನ, ಅಂತ ಅಜ್ಜಿ ಏನೋ ದೊಡ್ಡ ಸುದ್ದಿ ಅದ ಅನ್ನೋ ಲುಕ್ ಕೊಟ್ಟರು.

ಏನು ಕೆಲಸ ರೀ ಹಾಂಗಿದ್ರಾ? ಸ್ವಾಮಿಗಳ ಕಾರ್ ಡ್ರೈವರ್ ಏನು ಮತ್ತ? - ಅಂತ ಕೇಳಿದೆ.

ಇಲ್ಲೋ.... ಅದು ದೊಡ್ಡ ಕಥಿ. ನಿನಗ ಹಯಗ್ರೀವ ಆಚಾರ್ ಗೊತ್ತೇನು? ಸಿರ್ಸಿ ಕಡೆ ಯಾರೋ ಒಬ್ಬಾಕಿ ಸ್ಮಾರ್ತರಾಕಿ ಭಾಳ ಸ್ಮಾರ್ಟ್ ಆಗಿ ಖರೆ ಆಕಳ ತುಪ್ಪಾ, ಗೋಡಂಬಿ ಹಾಕಿ ರುಚಿ ರುಚಿ ಹಯಗ್ರೀವ ಮಾಡಿ ಕೊಟ್ಟಳು ಅಂತ ಅಕಿನ್ನ ಇಟ್ಟಗೊಂಡು, ಅಲ್ಲೇ ಸ್ವಾಧಿ ಮಠದ ಕಡೆ ಸೆಟಲ್ ಆಗ್ಯಾರ ನೋಡು. ಅವರ ಏಕ್ದಂ ಖಾಸ್ ಶಿಷ್ಯಾ ನನ್ನ ಮೊಮ್ಮಗ, ಅಂದ್ರು ಅಜ್ಜಿ.

ಓಹೋ.... ಹಯಗ್ರೀವಾಚಾರ್!!! ಅವರದ್ದು ಯಾರಿಗೆ ಗೊತ್ತಿಲ್ಲ ಬಿಡ್ರೀ. ದೊಡ್ಡ ಬಿಂದಿಗಿ ಆಚಾರ ಮನಿತನ ಅವರದ್ದು. ಅವರು ಒಂದು ತರಹಾ ಧೀರೇಂದ್ರ  ಬ್ರಹ್ಮಚಾರಿ ಇದ್ದಂಗ. ಎಲ್ಲಾ ದೊಡ್ಡ ದೊಡ್ಡ ಮಂದಿ ಸಹವಾಸ. ಮೋಜು ಮಸ್ತಿ. ಭಾರಿ ದಿಲ್ದಾರ್ ಮನುಷ್ಯಾ ಅವರು. ಅವರ ಕೆಳಗ ಏನು ಕೆಲಸ ನಿಮ್ಮ ಮಮ್ಮಗಂದು? - ಅಂತ ಕೇಳಿದೆ.

ಹಾಂ....ಕರೆಕ್ಟ್ ಹೇಳಿದಿ. ಮೊದಲು ಬಿಂದಿಗಿ ಆಚಾರ್ರಿಗೆ ಸ್ನಾನಕ್ಕ ನೂರಾರು ಬಿಂದಿಗಿ ನೀರು ಸಪ್ಲೈ ಮಾಡೋ ಸಣ್ಣ ಕೆಲಸಕ್ಕ ಸೇರಿಕೊಂಡಿದ್ದ. ನೀರ ಜೊತಿ ಆಚಾರ್ರಿಗೆ ಬೀರ ಸಹಿತ ಬಿಂದಿಗಿ ಬಿಂದಿಗಿ ಕೊಟ್ಟನಂತ. ಆಚಾರ್ರು ಭಾಳ ಖುಷ್ ಆಗಿ ಪ್ರಮೋಷನ್ ಕೊಟ್ಟರು. ಅದು ಮೊದಲನೇ ಪ್ರಮೋಷನ್. ಒಂದಾ ವರ್ಷದಾಗ ಪ್ರಮೋಷನ್ ಸಿಕ್ಕ್ಯದ ಅವಂಗ, ಅಂದ್ರು ಅಜ್ಜಿ.

ಮತ್ತ, ಖತರ್ನಾಕ್ ಆಚಾರ್ರಿಗೆ ತಿಂಡಿ ತೀರ್ಥ ಮಸ್ತ ಸಪ್ಲೈ ಮಾಡ್ಯಾನ ಅಂದ್ರ ಪ್ರಮೋಷನ್ ಒಂದ ಏನು, ಏನೇನೋ ಸಿಕ್ಕಿಬಿಡ್ತದ.

ಪ್ರಮೋಷನ್ ಆದ ಮ್ಯಾಲೆ ಸ್ವಾಧಿ ಮಠದ ಕಟ್ಟಿ ಮ್ಯಾಲೆ ಆಚಾರ್ರು ಕೂತರು ಅಂದ್ರ ತಲಿ ಮ್ಯಾಲೆ ಭರ್ರ್ ಭರ್ರ್ ಅಂತ ನೂರಾರು ಬಿಂದಿಗಿ ನೀರು ಹೊಯ್ಯೋ ಕೆಲಸಕ್ಕ ಪ್ರಮೋಷನ್ ಸಿಕ್ಕಿತು. ಮೊದಲು ಬರೆ ನೀರು ತುಂಬಿ ತುಂಬಿ ಕೊಡ್ತಿದ್ದ. ಈಗ ಬ್ಯಾರೆ ಮಂದಿ ತುಂಬಿ ತುಂಬಿ ಕೊಡ್ತಾರ. ನಮ್ಮ ಭೀಮಸೇನ ಆಚಾರ್ರ ತಲಿ ಮ್ಯಾಲೆ ಹೊಯ್ಯತಾನ. ಆ ಕೆಲಸ ಒಂದ ವರ್ಷಾ ಮಾಡಿದ. ಹಯಗ್ರೀವ ಆಚಾರ್ರು ಮತ್ತ ಪ್ರಮೋಷನ್ ಕೊಟ್ಟರು. ಈಗಂತೂ ಆಚಾರ್ರಿಗೆ ಏಕ್ದಂ ಖಾಸಮ್ ಖಾಸ್, ಅಂತ ನಿಲ್ಲಿಸಿದರು ರಾಧಜ್ಜಿ.

ವಾರೇ.... ವಾಹ್ .. ಭಾರಿ ಪದೋನ್ನತಿ ಬಿಡ್ರೀ. ಭಾಳ ಶಾಣ್ಯಾ(???) ಇರಬೇಕು ನಿಮ್ಮ ಮೊಮ್ಮಗ. ಈಗ ಏನು ಕೆಲಸ? ಲಾಸ್ಟ್ ಪ್ರಮೋಷನ್ ಆದ ಮ್ಯಾಲೆ? - ಅಂತ ಕೇಳಿದೆ.

ಹಯಗ್ರೀವ ಆಚಾರ್ರು ಇಲ್ಲೇ ಧಾರವಾಡ ಒಳಗ ಹೊಸ ಎಲ್ಲಾಪುರ ಒಳಗ ಇದ್ದಾಗ ಅವರಿಗೆ ತಿಂಡಿ ತೀರ್ಥ ಎಲ್ಲಾ ಸರಿ ಆಗ್ತಿದ್ದಿಲ್ಲ. ತುಪ್ಪ ಅಂತು ಪ್ಯೂರ್ ಸಿಗ್ತಿದ್ದೇ ಇಲ್ಲ. ಮತ್ತ ಸುತ್ತ ಮುತ್ತ ಎಲ್ಲ ಕಟ್ಟರ್ ಆಚಾರ್ ಮಂದಿ. ಹಾಂಗಾಗಿ ಆಚಾರು ತೆಳ್ಳಗ ಇದ್ದರು. ಸಿರ್ಸಿ ಕಡೆ ಹೋದರು ನೋಡು. ಅವರ ದೇಹ ಭಾಳ ಬದಲಾಗಿ ಹೋತು. ಆ ಸ್ಮಾರ್ತರಾಕಿ ಗೊಂಬಿ ಅಂತ ಹುಡುಗಿ ಗೋಡಂಬಿ, ಮಸ್ತ ಆಕಳ ತುಪ್ಪಾ ಹಾಕಿ ಹಾಕಿ, ಹಯಗ್ರೀವಾ ಮಾಡಿ ಮಾಡಿ, ತಿನ್ನಿಸಿ ತಿನ್ನಿಸಿ, ನಮ್ಮ ಭೀಮಸೇನ ಸಪ್ಲೈ ಮಾಡಿದ ಬಿಯರ್ ಕುಡಿದು ಕುಡಿದು ಆಚಾರ್ರು ಅಸಾಧ್ಯ ಮೈ ಬಿಟ್ಟು ಬಿಟ್ಟರು. ಹೊಟ್ಟಿ ಅಂತೂ ಕೇಳ ಬ್ಯಾಡ. ಅಂತಾ ದೊಡ್ಡ ಹೊಟ್ಟಿ ಬಂದು ಬಿಟ್ಟದ. ಹಾಂಗಾಗಿ ನಮ್ಮ ಭೀಮಸೇನಗ ತಮ್ಮ ಪರ್ಸನಲ್ ಅಸಿಸ್ಟೆಂಟ್ ಅಂತ ಅಪಾಯಿಂಟ್ ಮಾಡಿಕೊಂಡು ಬಿಟ್ಟರು, ಅಂದ್ರು ಅಜ್ಜಿ.

ಭಾರಿ ಆತ ಬಿಡ್ರೀ. ಹಯಗ್ರೀವ ಆಚಾರ್ರ ಪರ್ಸನಲ್ ಅಸಿಸ್ಟೆಂಟ್ ಅಂದ್ರ ಸ್ವಾಮಿಗಳಿಗೆ ಎರಡ ಹೆಜ್ಜಿ ದೂರ. ಈಗೇನು ಕೆಲಸ ನಿಮ್ಮ ಭೀಮಸೇನ್ ರಾವ್ ಅವರದ್ದು? ಅಂತ ಕೇಳಿದೆ.

ಹೇಳಿದೆ ನೋಡು, ಹಯಗ್ರೀವ ಆಚಾರ್ರ್ರಿಗೆ ಭಾಳ ಮೈ ಮತ್ತ ಹೊಟ್ಟಿ ಬಂದು ಬಿಟ್ಟದ ಅಂತ. ಅವರಿಗೆ ಈಗ ಬೆನ್ನು ತುರಿಸಿದರ ಹಿಂದ ಕೈ ಹಾಕಿ ಕೆರಕೊಳ್ಳಿಕ್ಕೆ ತುರಿಸಿಕೊಳ್ಳಲಿಕ್ಕೆ ಆಗೋದಿಲ್ಲ. ಆ ಪರಿಸ್ಥಿತಿ ಬಂದು ಬಿಟ್ಟದ. ನಮ್ಮ ಮೊಮ್ಮಗ ಈಗ ಫುಲ್ ಟೈಮ್ ಅವರ ಬೆನ್ನು ತುರಿಸಿಕೊಡೋ ತುರ್ಕೀ ಆಫಿಸರ್ ಆಗಿ ಬಿಟ್ಟಾನ, ಅಂದ್ರು ರಾಧಜ್ಜಿ. 

ಯಾವಾಗಲೂ ಆಚಾರ್ರ ಬೆನ್ನ ಹಿಂದ ಇರ್ತಾನ. ಬೆನ್ನು ತುರಿಸಿದ ಕೂಡಲೇ ಆಚಾರ್ರು ಹೊಟ್ಟಿ ಗಲಗಲ ಅಂತ ಅಲುಗಾಡಿಸಿ, ಸ್ಮೈಲಿಂಗ್ ಬುದ್ಧನ ಹಾಂಗ ಡಾನ್ಸ್ ಮಾಡ್ತಾರ. ನಮ್ಮ ಭೀಮಸೇನ ಭಕ್ತಿಯಿಂದ ಬೆನ್ನು ತುರಿಸಿ ಕೊಡ್ತಾನ. ಮಸ್ತ ಪಗಾರ್ ಅದ. ಊಟ ತಿಂಡಿ ಎಲ್ಲಾ ಅಂತೂ ಮಠದಾಗ ಫ್ರೀ. ಮ್ಯಾಲಿಂದ ದಕ್ಷಿಣಿ ಅದು ಇದು ಬರ್ತದ, ಅಂತ ಅಜ್ಜಿ ಮಾತು ನಿಲ್ಲಿಸಿ ತಮ್ಮ ಬೆನ್ನು ತುರಿಸೋ ತುರ್ಕೀ ಆಫಿಸರ್ ಮೊಮ್ಮಗನ ಬಗ್ಗೆ ಭಾಳ ಹೆಮ್ಮೆ ಪಟ್ಟುಕೊಂಡರು.

ಸ್ಮೈಲಿಂಗ್ ಬುದ್ಧನ ಗಲಗಲ ಹೊಟ್ಟಿ ಡಾನ್ಸ್ 

ನಮ್ಮ ಭೀಮಸೇನಂಗ ಒಂದು ಕನ್ಯಾ ಹುಡುಕಿ ಕೊಡೋ ಬ್ರೋಕರ್ ಭೀಷ್ಮಾಚಾರಿ. ಪುಣ್ಯಾ ಬರ್ತದ, ಅಂದ್ರು ರಾಧಜ್ಜಿ.

ನೋಡು ಬೇಕಾದ್ರ, ನೀನು ಕನ್ಯಾ ಮನಿಯವರಿಗೆ ಹೇಳಲಿಕ್ಕೂ ಅಡ್ಡಿಲ್ಲ. ಹುಡುಗಿಗೆ ಅಣ್ಣ ತಮ್ಮ ಯಾರರ ಇದ್ದು, ಅವರಿಗೆ ನೌಕರಿ ಇಲ್ಲದ ಇದ್ದರ, ನಮ್ಮ ಭೀಮಸೇನ ನೌಕರೀ ಸಹಿತ ಕೊಡಸ್ತಾನಂತ. ಚೊಲೊ ನೌಕರೀ ಅಲ್ಲೇ ಮಠದಾಗ ಕೊಡಿಸಿ ಬಿಡ್ತಾನ. ನೋಡು ಯಾವದರ ಬಡವರ ಮನಿ ಹುಡುಗಿ ಸಿಕ್ಕರ. ಇಡೀ ಕುಟುಂಬ ಉದ್ಧಾರ ಆಗಿ ಹೋಗ್ತದ ನಮ್ಮ ಭೀಮಸೇನನ ಲಗ್ನಾ ಮಾಡಿಕೊಂಡ್ರಾ. ಯಾರರ ಕನ್ಯಾ ಅದ ಏನೋ ನಿನ್ನ ನಜರಿನ್ಯಾಗ? - ಅಂತ ಕೇಳಿದ್ರು ರಾಧಜ್ಜಿ.

ಇದು ಏನೋ ಇಂಟೆರೆಸ್ಟಿಂಗ್ ಕೇಸ್ ಇದ್ದಂಗ ಅನ್ನಿಸ್ತು. ಹುಡುಗಿ ಸಿಕ್ಕರ ಹುಡುಗಿ ಅಣ್ಣ ತಮ್ಮಗ ನೌಕರಿ ಬ್ಯಾರೆ ಕೊಡಸ್ತಾನಂತ ವರ ಮಹಾಶಯ. ಏನ ನೌಕರೀ ಇರಬಹುದು????!!!!!

ಏನ ನೌಕರೀ? ಚೊಲೊ ಐಡಿಯಾ ಅದ ಬಿಡ್ರೀ. ಇಂತಾ ಹುಡುಗ್ಗ ಕನ್ಯಾ ಹುಡುಕೋದೇನು ದೊಡ್ಡ ಮಾತು? ಹೇಳ್ರೀ ಏನ ನೌಕರಿ ಅಂತ, ಅಂದು ಕಾದು ಕೂತೆ.

ನಮ್ಮ ಭೀಮಸೇನ ಸಹಿತ ಸಿರ್ಸಿ ಸ್ವಾಧಿ ಮಠದ ಕಡೆ ಹೋಗಿ ಕಡಿಮಿ ಕಡಿಮಿ ಅಂದ್ರೂ ಇಪ್ಪತ್ತೈದು ವರ್ಷದ ಮ್ಯಾಲೆ ಆಗಿ ಹೋತು. ಹಯಗ್ರೀವ ಆಚಾರ್ರರ ಸೇವಾ ಮಾಡಿಕೋತ್ತ ಮಾಡಿಕೋತ್ತ, ಅಲ್ಲೇ ಸುತ್ತಾ ಮುತ್ತಾ ಸ್ಮಾರ್ತ ಹುಡುಗ್ಯಾರು ಖರೆ ಆಕಳ ತುಪ್ಪಾ, ಗೋಡಂಬಿ ಹಾಕಿ ಮಾಡಿಕೊಟ್ಟ ಹಯಗ್ರೀವ ದಿನಕ್ಕ ನಾಕ್ನಾಕ ಸಾರೆ ಗುಳುಂ ಗುಳುಂ ಮಾಡಿಕೋತ್ತ, ಬಿಯರ್ ಅದು ಇದು ಕುಡಿದು ನಮ್ಮ ಮೊಮ್ಮಗ ಸಹಿತ ಮಸ್ತ ಮೈ ಬಿಟ್ಟು ಬಿಟ್ಟಾನ. ಹೊಟ್ಟಿ ಅಂತೂ ಬಿಡು. ಸುಮಾರ್ರು ಆಚಾರ್ರ ಸೈಜಿಗೇ ಬಂದು ಬಿಟ್ಟದ. ಪರಿಸ್ಥಿತಿ ಹೀಂಗ ಆಗಿ ಬಿಟ್ಟದ ಅಂದ್ರ, ಇವಂಗೂ ಬೆನ್ನು ತುರಿಸಿಕೊಳ್ಳಲಿಕ್ಕೆ ಆಗವಲ್ಲದು. ಅದಕ್ಕ ಅವನೂ ಸಹಿತ ತನ್ನ ಬೆನ್ನು ತುರಿಸಿಕೊಡಬಲ್ಲ ಒಬ್ಬ ಕೆಲಸದವನ್ನ ಹುಡಕಲಿಕತ್ತೇನಿ ಅಂತ ಹೇಳ್ಯಾನ. ಕನ್ಯಾ ಸಿಕ್ಕತು ಅಂದ್ರ ಹುಡುಗಿ ಅಣ್ಣ ತಮ್ಮ ಯಾರಿಗಾರ ಆ ನೌಕರಿ ಬೇಕಂದ್ರ ಕೊಟ್ಟ ಬಿಡ್ತಾನ. ಏನಂತಿ? ಯಾರರ ಕನ್ಯಾ ಇದ್ದಾರೇನೋ ಬ್ರೋಕರ್? - ಅಂದ್ರು ಅಜ್ಜಿ.

ನೋಡೋಣ ತೋಗೊಳ್ಳರೀ ಅಜ್ಜಿ. ಇಂತಾ ಒಳ್ಳೆ ಕೆಲಸ, ಹಯಗ್ರೀವ ಆಚಾರ್ರ ಅವರಂತ ರೆಫರೆನ್ಸ್, ಮತ್ತ ತನ್ನ ಹೆಂಡ್ತಿ ಅಣ್ಣಾ ತಮ್ಮಗ ಕೆಲಸ  ಸಹಿತ ಕೊಡಿಸಬಲ್ಲೆ ಅನ್ನೋ ದಿಲ್ದಾರ ವರಾ ಎಲ್ಲೇ ಸಿಗ್ತಾವ್ರೀ? ಕಪಿಗಳು ಕ್ಯೂ ಹಚ್ಚಿ ನಿಲ್ತಾರ. ನೋಡ್ರೀ ಬೇಕಾದ್ರ. ನಾ ಹೊಂದೋ ಹಂತಾ ಕನ್ಯಾ ಸಿಕ್ಕ ಕೂಡಲೇ ತಿಳಿಸೇ ಬಿಡ್ತೇನಿ. ಓಕೆ? - ಅಂತ ಕಳಚಿಕೊಳ್ಳೋ ಪ್ರಯತ್ನ ಮಾಡಿದೆ. ಅಜ್ಜಿ ಭಾಳ ತಲಿ ತಿನ್ನಲಿಕತ್ತಿದ್ದರು. 

ಏ.... ಹಲ್ಕಟ್ ಬ್ರೋಕರ್!!!ನಿಲ್ಲೋ!!! ಏನಂದಿ ನಮ್ಮ ಭಿಮಸೇನಗ ಕಪಿ ಅಂದ್ರ ಮಂಗ್ಯಾನ್ನ ತಂದು ಕಟ್ಟತೀಯ? ಹಾಕ್ತೇನಿ ನೋಡು ಒಂದು!!! ನೀನು ಶೇರ್ ಬ್ರೋಕರ್ ಇರಬಹುದು. ಸಿಂಹ ಹುಲಿ ಕಾಡಹಂದಿ ಮುಳ್ಳುಹಂದಿ ಮಂಗ್ಯಾ ಸಿಂಗಳೀಕ ಎಲ್ಲಾದಕ್ಕೂ ಲಗ್ನ, ಕೂಡುವಳಿ ಮತ್ತೊಂದು ಮಗದೊಂದು ರಿಷ್ತಾ ಮಾಡಿಸಿ ಕಮಿಷನ್ ಸ್ವಾಹಾ ಮಾಡತಿರಬಹುದು. ಆದ್ರ ನಮ್ಮ ಮಮ್ಮಗಂಗ ಮಾತ್ರ ಶುದ್ಧ ಬ್ರಾಹ್ಮ್ರ ಅದೂ ನಮ್ಮ ಆಚಾರ್ರ ಹುಡುಗಿನ ಬೇಕು. ತಿಳಿತೋ  ಇಲ್ಲೋ? ಹಾಕ್ತೇನಿ ನೋಡು. ಕಪಿ ಅಂತ ಕಪಿ, ಅಂದು ಅಜ್ಜಿ ಚಿಟಿ ಚಿಟಿ ಚೀರಿಕೋತ್ತ ನನಗ ಮೈಲ್ಡ್ ಆಗಿ ಝಾಡಿಸಿದರು. 

ರೀ..... ಅಜ್ಜಿ.... ಕಪಿ ಅಂದ್ರ ಶಾರ್ಟ್ ಆಗಿ ಕನ್ಯಾ ಪಿತೃಗಳು ಅಂತ. ಅಂದ್ರ ಹುಡುಗಿ ಮನಿ ಮಂದಿ ಅಂತ. ನಿಮ್ಮ ಮಮ್ಮಗಂಗ ಕಪಿ ಲೈನ್ ಹಚ್ಚತಾವು ಅಂದ್ರ ಭಾಳ ಮಂದಿ ಕನ್ಯಾ ಪಿತೃಗಳು ಲೈನ್ ಹಚ್ಚಿ ನಮ್ಮ ಹುಡುಗಿಗೆ ನೋಡ್ರೀ, ನಮ್ಮ ಹುಡುಗಿಗೆ ನೋಡ್ರೀ ಅಂತ ದುಂಬಾಲು ಬೀಳ್ತಾವ ಅಂತ. ಅಷ್ಟ ಮಂದಿ ಬಂದು ಮನಿ  ಮುಂದ ಲೈನ್ ಹಚ್ಚಿದರ,  ಸಸಾರ ಆಗಿ ಕಪಿ ನಂಬರ್ ಒಂದು ಬರ್ರಿ. ನಿಮ್ಮ ಮಂಗ್ಯಾ ಅಲ್ಲಲ್ಲ ಕನ್ಯಾ ತೋರಸ್ರೀ. ನೆಕ್ಸ್ಟ್ ಕಪಿ ನಂಬರ್ ಎರಡು ಬರ್ರೀ. ಲಗೂ. ಹಾಂ ಹಾಂ .... ಲಗೂನ ತೋರಿಸಿ ಮುಂದ ಹೋಗ್ತ ಇರಬೇಕು, ಅಂತ ಅನ್ನಲಿಕ್ಕೆ, ಮ್ಯಾನೇಜ್ ಮಾಡಲಿಕ್ಕೆ ಈಜಿ ಆಗ್ತದ ನೋಡ್ರೀ. ಅದಕ್ಕ ಕಪಿ ಅಂತ ಶಾರ್ಟ್ ಮಾಡಿ ಅಂದೆ. ಏ..... ನಿಮ್ಮ ಮಮ್ಮಗ ಭೀಮಸೇನ ಆಚಾರ್ರಿಗೆ ದ್ರೌಪದಿ ಅಂತಾ ಕನ್ಯಾ ಹುಡಿಕೇ ಬಿಡೋದು ಬಿಡ್ರೀ, ಅಂತ ಫುಲ್ ಆಶ್ವಾಸನೆ ಕೊಟ್ಟೆ.

ಅಯ್ಯೋ.... ದ್ರೌಪದಿ ಹಂತಾಕಿ ಮಾತ್ರ ಬ್ಯಾಡಪ್ಪೋ ಬ್ಯಾಡ, ಅಂತ ರಾಧಜ್ಜಿ ಜೋರಾಗಿ ಶಂಖಾ ಹೊಡೆದರು.

ಯಾಕ್ರೀ ಅಜ್ಜಿ? ದ್ರೌಪದಿ ಹಂತ್ರಾಕಿ ಯಾಕ ಬ್ಯಾಡ? ಭಾಳ ಚಂದ ಇದ್ದಳು. ಮಹಾಭಾರತ್ ಸೀರಿಯಲ್ ನೋಡಿಲ್ಲ? ರೂಪಾ ಗಂಗೂಲಿ? ನೀವು ರೂಪಾ ಅನ್ನೋ ಹೆಸರಿಂದ ಹೆದರಿದರಿ ಏನು? ನಿಮ್ಮ ಮೊಮ್ಮಗಳು ರೂಪಾ ವೈನಿ ಏನೂ ಅಷ್ಟ ಚಂದ ಇಲ್ಲ. ಸರಕಾರೀ ಸ್ತ್ರೀಲಿಂಗ ಇದ್ದಂಗ ಇದ್ದಾಳ. ಇನ್ನೆಲ್ಯಾರ ಮತ್ತೊಬ್ಬಾಕಿ ರೂಪಾ ಉರ್ಫ್ ದ್ರೌಪದಿ ಅನ್ನೋ ಇನ್ನೊಂದು ಸರಕಾರೀ ಸ್ತ್ರೀಲಿಂಗ ತಂದು ನಮ್ಮ ಹುಡ್ಗಂಗ ಕಟ್ಟಿ ಬಿಟ್ಟಾರು ಅಂತ ಏನು ನಿಮ್ಮ ಚಿಂತಿ? - ಅಂತ ಕೇಳಿದೆ.

ಇಲ್ಲಪಾ.... ದ್ರೌಪದಿ ಅಂದ್ರ ಪಾಂಚಾಲಿ. ಎಲ್ಲೆರೆ ಲಗ್ನ ಆದ ಮ್ಯಾಲೆ ನಮ್ಮ ಭೀಮಸೇನ್ ಒಬ್ಬವ ಸಾಕಾಗಿಲ್ಲ ಅಂತ ಇನ್ನೊಂದು ನಾಕ ಮಂದಿ ಹುಡುಕಿಕೊಂಡು ಹೊಂಟು ಬಿಟ್ಟಳು ಅಂದ್ರ, ನಮ್ಮ ಭೀಮಸೇನ ಲಬೋ ಲಬೋ ಅಂತ ಶಂಖಾ ಹೊಡಕೋತ್ತ  ಸ್ವಾಧಿ ಸುತ್ತ ಮುತ್ತಾ ಇರೋ ಅಡಿವಿಯೊಳಗ ವನವಾಸ ಮಾಡಬೇಕಾದೀತು. ಅವೆಲ್ಲಾ ಬ್ಯಾಡ. ಭೀಮಸೇನಗ ಸಿಂಗಲ್ ಗಂಡ ಇರೋ ಹಂತಾ ಹೆಂಡ್ತೀ ಯಾರ ಇರಲಿಲ್ಲ ಏನೋ? ಮಹಾಭಾರತ ಸ್ವಲ್ಪ ನೆನಪ ಮಾಡಿ ಹೇಳು, ಅಂದ್ರು ಅಜ್ಜಿ.

ಹಾಂ.... ಒಬ್ಬಾಕಿ ಇದ್ದಳು ನೋಡ್ರೀ. ಅಕಿನ ಹಿಡಿಂಬಿ. ಅಕಿ ಹಂತವರು ನೆಡಿತದ ಏನು? ಅಕಿ ಮಾತ್ರ ಬರೆ ಭಿಮಸೇನನ್ನ ಮಾತ್ರ ಕಡೀ ತನಕ ಲವ್ ಮಾಡಿದಳು. ಒಂದ ಅಂದ್ರ ಅಕಿ ಭಾಳ ಕರ್ರಗ ಸಿಕ್ಕಾಪಟ್ಟೇ ಧಪ್ಪ ಲಠ್ಠ ಇದ್ದಳು. ರಾಕ್ಷಸರ ಪೈಕಿ ನೋಡ್ರೀ. ಅದಕ್ಕ. ನೆಡಿತದ ಏನು ನಿಮಗ ಆ ಟೈಪ್ ಕನ್ಯಾ? - ಅಂತ ಕೇಳಿದೆ.

ನೆಡಿತದ.... ಒಟ್ಟಿನ್ಯಾಗ ಒಳ್ಳೆ ಮನಿತನ ಇರಬೇಕು. ರಾಕ್ಷಸ ಕನ್ಯಾ ಇದ್ದರೂ ಓಕೆ. ಆದ್ರ ಒಟ್ಟ ಮನುಷ್ಯಾ ಇರಬೇಕು. ಲಗೂನ ಹುಡುಕೋ ಬ್ರೋಕರ್, ಅಂದ್ರು ಅಜ್ಜಿ.

ಇನ್ನೂ ಇಬ್ಬರು ಮಮ್ಮಕ್ಕಳು ತಯಾರ್ ಇದ್ದಾರ. ಅವರದ್ದೂ ಎಲ್ಲ ಹೇಳಿ ಬಿಡಲಿ ಏನು? ಮೂರು ಮಂದಿದೂ ಕೂಡೆ ನೋಡಿಬಿಡು ಕನ್ಯಾ. ಕನ್ಯಾಕ್ಕೂ ಸಸಾರ. ಅಣ್ಣ ಸೇರಲಿಲ್ಲ ಅಂದ್ರ ತಮ್ಮ. ನಮ್ಮ ಹುಡುಗುರಿಗೂ ಈಸಿ. ಅಕ್ಕ ಅಲ್ಲದಿದ್ದರ ತಂಗಿ. ಏನಂತಿ? - ಅಂದ್ರು ಅಜ್ಜಿ.

ಇವತ್ತು ಅಜ್ಜಿ ಬಿಡು ಹಾಂಗ ಕಾಣೋದಿಲ್ಲ. 

ಭೀಮಸೇನನ ಬೆನ್ನಿಗೆ ಹುಟ್ಟಿದವನ ರಾಮಕೃಷ್ಣ. ಆವಾ ಇಲ್ಲೇ ಧಾರವಾಡ ಒಳಗ  ಮಸ್ತ ಸೆಟಲ್ ಇದ್ದಾನ. ಒಳ್ಳೆ ನೌಕರಿ ಒಳಗ ಇದ್ದಾನ. ರಾಮಕೃಷ್ಣನ ಬೆನ್ನಿಗೆ ಹುಟ್ಟಿದವನ ಸುಧನ್ವ. ಅವಾ ಪುಣೆದಾಗಾ ರೀಸೆಸ್(!) ಮಾಡ್ತಾನ. ರೀಸೆಸ್ ಮಾಡ್ಲಿಕತ್ತು ಸುಮಾರು ವರ್ಷ ಆತು. ಆದರೂ ಮುಗಿವಲ್ಲತು. ಕೈಯಾಗ ತೊಗೊಂಡು ಬಿಟ್ಟೇನಿ, ರೀಸೆಸ್ ಮಾಡಿ ಮುಗಿಸೇ ಬರವಾ ಅಂತ ಕೂತು ಬಿಟ್ಟಾನ. ಮೊನ್ನೆ ಬಂದಿದ್ದ ಸುಧನ್ವ ಪುಣೆಯಿಂದ. ಐದು ವರ್ಷದ ಮ್ಯಾಲೆ ಬಂದಿದ್ದ. ಅದೇನು ರೀಸೆಸ್ಸೋ ಏನೋ? ಅದಕ್ಕ ಈ ಸರೆ ತಾನು ಐದು ವರ್ಷದಿಂದ ಮಾಡಿದ ರೀಸೆಸ್ ಒಂದು ಚೀಲದಾಗ ತುಂಬಿಕೊಂಡು ತಂದಿದ್ದ. ತೆಗೆದು ನೋಡಿದ್ರ ಒಂದು ಪುಸ್ತಕ. ಇವನ ಬರೆದಾನಂತ. ಲಗೂನ ಡಿಗ್ರಿ ಸಿಕ್ಕ ಬಿಡ್ತದ ಅಂತ. ರೀಸೆಸ್ ಮಾಡಿ ಮುಗಿಸದ ಕೂಡಲೇ ಅವಂದು ಲಗ್ನ, ಅಂದ್ರು ಅಜ್ಜಿ.

ಏನ್ರೀ ಅಜ್ಜಿ? ಅದೆಂತಾ ರೀಸೆಸ್ ರೀ? ಅದೂ ಐದು ವರ್ಷದಿಂದ ರೀಸೆಸ್ ಮಾಡ್ಲಿಕತ್ತಾರ ಮತ್ತ ಅದರ ಮ್ಯಾಲೆ ಪುಸ್ತಕ ಬ್ಯಾರೆ ಬರದಾನ ನಿಮ್ಮ ಮಮ್ಮಗ ಅಂದ್ರ, ಯಾಕ ಅವರಿಗೆ ಕಿಡ್ನೀ ಫೇಲ್ ಆಗಿ ಡಯಾಲಿಸಿಸ್ ಮ್ಯಾಲೆ ಪುಣೇದಾಗ ದವಾಖಾನಿಯೋಳಗ ಇಟ್ಟಿರಿ ಏನು? ಅದಕ್ಕ ಅಷ್ಟು ರೀಸೆಸ್ಸ್ ಮಾಡ್ಲಿಕತ್ತಾನ ಅನ್ನಸ್ತದ.  ಕಿಡ್ನಿ ಫೇಲ್ ಆದ ಮಂದಿಗೆ ಯಾರು ಕನ್ಯಾ ಕೊಡ್ತಾರ್ರೀ? ಆದರೂ ಏನರ ಭಾನಗಡಿ ಮಾಡಿ ಒಂದು ಕನ್ಯಾ ಹಿಡದು ತಂದು ಕಟ್ಟೇ ಬಿಡೋಣ ತಡೀರಿ. ಚಿಂತಿ ಬ್ಯಾಡ, ಅಂದೆ ನಾನು.

ಏ!!!!!!! ಅಪಶಕುನ ಮುಂಡೆ ಗಂಡ ಬ್ರೋಕರ್!! ಸೂಡ್ಲಿ !!! ನಮ್ಮ ಸಣ್ಣ ಮೊಮ್ಮಗ ಸುಧನ್ವಾಚಾರಿ ಪುಣೆ ಯೂನಿವರ್ಸಿಟಿ ಒಳಗ ರೀಸೆಸ್ಸ್ ಮಾಡ್ಲಿಕತ್ತಾನ ಅಂದ್ರ ಕಿಡ್ನಿ ಫೇಲ್ ಅನ್ತಿಯಲ್ಲೋ.  ಅನಿಷ್ಟ ರಂಡ ಮುಂಡೆ ಗಂಡ. ರೀಸೆಸ್ಸ್ ಅಂದ್ರ ಸಂಶೋಧನೆ. ತಿಳೀತ? ಮ್ಯಾಟ್ರಿಕ್ ಪಾಸು ಆಗಿಯೋ ಇಲ್ಲೋ? ಇಲ್ಲ ಅನ್ನಸ್ತದ.  ಅದಕ್ಕ ನೀ ಜನಕ್ಕ ದನಕ್ಕ ಮದ್ವಿ ಮಾಡ್ಸೋ  ಬ್ರೋಕರ್ ಆಗಿ. ಹಾಳಾದವನ. ದನಾ ಕಾಯಿ, ಅಂತ ಅಜ್ಜಿ ಬೈದರು.

ಈಗ ಗೊತ್ತಾತು. ಅಜ್ಜಿ ರಿಸರ್ಚ್ ಗೆ ರೀಸೆಸ್ಸ್ ಅಂದು ಎಲ್ಲಾ ಗೊಂದಲಾ ಎಬ್ಬಿಸಿದ್ದರು. ಇರಲಿ ಇದೇನೋ ಒಳ್ಳೆ ಕ್ಯಾಂಡಿಡೇಟ್ ಇದ್ದಂಗ ಅದ. ನಡುವಿನ ಮಮ್ಮಗ ರಾಮಕೃಷ್ಣ ಆಚಾರಿ ಬಗ್ಗೆ ಕೇಳೋಣ. ಇಲ್ಲೇ ಸೆಟಲ್ ಆಗ್ಯಾನ ಅಂತಾರ. ಏನ ಮಾಡ್ತಾನೋ ಏನೋ?

ರೀ ಅಜ್ಜಿ.... ಈಗ ಗೊತ್ತಾತು. ನಾ ಬರೇ ಮ್ಯಾಟ್ರಿಕ್ ಅಲ್ಲಾ ಎಂಎ ಸಹಿತ ಮಾಡಿಕೊಂಡೇನಿ. ಉಲ್ಟಾ ಸೀದಾ ಏನರ ಅನ್ನಬ್ಯಾಡ್ರೀ. ಏನೋ ಪಾಪ ಹಿರೇ ಮಂದಿ ಅಂತ ಬಿಟ್ಟರ ಏನೇನೋ ಬೈತಿರಲ್ಲಾ? ಹಾಂ? ಈಗ ನಿಮ್ಮ ರಾಮಕೃಷ್ಣ ಬಗ್ಗೆ ಹೇಳ್ರೀ ಸ್ವಲ್ಪ, ಅಂತ ಸ್ವಲ್ಪ ಸಿಟ್ಟಿಲೆ ಹೇಳಿದೆ.

ಅಯ್ಯೋ.... ಬ್ರೋಕರ್ ಭೀಷ್ಮಾಚಾರ್ರ, ಶಟಗೊಂಡ್ರೀ?  ಎಮ್ಮಿ ಕಟ್ಟಿಗೊಂಡೀರಿ ಏನು? ಏನು ಮಾಡಲಿಕ್ಕೆ ಬರ್ತದ? ಭಾಳ ತುಟ್ಟಿಯ ದಿನಗಳು. ನಿಮಗಂತೂ ನಮ್ಮ ಮಮ್ಮಕ್ಕಳ ಹಾಂಗ ನೌಕರೀ ಚಾಕ್ರೀ ಇದ್ದಂಗ ಇಲ್ಲ. ಮ್ಯಾಲಿಂದ  ಸಂಸಾರ. ಅದಕ್ಕ ಈ ಲಗ್ನದ ಬ್ರೋಕರ್ಕೀ, ಎಮ್ಮಿ ಸಾಕೋದು, ಹಾಲ ಮಾರೋದು ಏನೇನೋ ಮಾಡಿಕೊಂಡು ಜೀವನಾ ಮಾಡ್ಲೀಕತ್ತೀರಿ ಅನ್ನಸ್ತದ. ನಂಬಿದವರನ್ನ ದೇವರು ಕೈ ಬಿಡಂಗಿಲ್ಲ. ಹಾಂ.... ಏನ್ ಕೇಳಿದ್ರೀ? ನಮ್ಮ ರಾಮಕೃಷ್ಣನ  ಬಗ್ಗೆ.... ಹೇಳ್ತೀನಿ  ತಡೀರಿ. ಸ್ವಲ್ಪ ಬಚ್ಚಲಕ್ಕ ಹೋಗಿ ಬಂದು ಬಿಡ್ತೇನಿ. ಭಾಳ ಹೊತ್ತಾತು ಮಾತಾಡಿಕೋತ್ತ ಕೂತು. ಸ್ವಲ್ಪ ಪ್ರೆಸರ್ ಬಂದು ಬಿಟ್ಟದ. ವತ್ರಾ.... ಅನ್ನಕೋತ್ತ ಹುಚ್ಚ ಹಾಪ್, ಕಿವಿ ತಗಡ ಆದ ಅಜ್ಜಿ ಎದ್ದು ಹೋತು.

ಎಂಎ ಡಿಗ್ರಿ ಮಾಡ್ಕೊಂಡೇನಿ ಅಂದ್ರ ಎಮ್ಮಿ ಕಟ್ಟಿಯೇನು? ಅಂತ ಹಾಪರ ಗತೆ ಕೇಳತದ ಸೂಡ್ಲಿ ಮುದುಕಿ. ಲಗೂನ ಇನ್ನೊಬ್ಬವನ ಕಥಿ ಕೇಳಿಕೊಂಡು, ಅಂಡು ತಟ್ಟಿ ಪೆಕಪೆಕಾ ಅಂತ ನಕ್ಕೊತ್ತ, ಲಗೂನ ಜಾಗ ಖಾಲಿ ಮಾಡಬೇಕು.

ವಾಪಸ್ ಬಂತು ಅಜ್ಜಿ. ಹಲ್ಕಾ ಆಗಿ.

ರಾಮಕೃಷ್ಣ ಇಲ್ಲೇ ಸಿನೆಮಾ ಥೀಯೇಟರ್ ಒಳಗ ಕೆಲಸ ಮಾಡ್ತಾನ. ಮನಿಯೊಳಗ ಇರತಾನ. ಅಪ್ಪ ಅವ್ವನ ಜೊತಿ. ಬಾಕಿ ಇಬ್ಬರೂ ದೂರ ಇದ್ದಾರ ನೋಡು. ಅದಕ್ಕ ಇವ ಮನಿಯೊಳಗ ಇರ್ತಾನ. ಒಳ್ಳೆ ಕೆಲಸ ಅದ ಅವಂಗ ಸಿನಿಮಾ ಥೇಟರ್ ಒಳಗ. ಅದ ಮಂಗ...ಲಾ ಥೇಟರ್ ಒಳಗ. ಮಾಲಕರಿಗೆ ಇವ ಅಂದ್ರ ಅಷ್ಟು ಕೇವಲ, ಅಂದ್ರು ಅಜ್ಜಿ.

ಏನು ಮಂಗಳಾ ಥೇಟರ್ ಒಳಗ ಟಿಕೆಟ್ ಮಾರೋ ಕೆಲಸನೋ? ಅಥವಾ ಬಾಗಲದಾಗ ಟಿಕೆಟ್ ಹರಿಯೋ ಕೆಲಸನೋ? ಅಂತ ಸ್ವಲ್ಪ ಕುಹಕದಿಂದ ಕೇಳಿದೆ. 

ಒಬ್ಬ ಅಣ್ಣ ಸ್ವಾಧಿ ಮಠದದಾಗ ದೊಡ್ಡ ಆಚಾರ್ರ ಬೆನ್ನು ಕೆರೆಯವ. ಇನ್ನೊಬ್ಬ ತಮ್ಮ  ರೀಸೆಸ್ ಮಾಡವ. ಅಂತವರ ನಡುವಿನವ ಸಿನಿಮಾ ಥೇಟರ್ ಒಳಗ ಇನ್ನೆಂತಾ ಕೆಲಸಾ ಮಾಡಿಯಾನು ಅಂತ ಅಸಡ್ಡೆ.

ಏ..... ಮಳ್ಳ ಮುಂಡೆ ಗಂಡ ಬ್ರೋಕರ್. ಏನಂತ ತಿಳದೀ ನಮ್ಮ ರಾಮಕ್ರಿಷ್ಣಂಗ? ಹಾಂ? ಚಾಸ್ಟಿ ಏನು? ನಮ್ಮ ಹುಡುಗ್ಗ ಮಂಗಳಾ ಥೇಟರ್ ಒಳಗಾ ಬ್ಯಾಟರಿ ತೋರ್ಸೀ ತೋರ್ಸೀ ಮಂದಿ ಸೀಟ್ ಮ್ಯಾಲೆ ಕೂಡಸ್ತಾನ. ಅದ ಅವಂದು ಕೆಲಸ. ಮಾಲಕರಿಗೆ ಭಾಳ ರೊಕ್ಕಾ ಸೇವ್ ಮಾಡಿ ಕೊಟ್ಟಾನ. ಅದಕ್ಕ ಅವರೂ ಸಹ ಖುಷ್ ಆಗಿ ಮಸ್ತ ಬೋನಸ್ ಅದು ಇದು ಕೊಟ್ಟಾರ. ಎಲ್ಲಾ ಮೂವಿ ಪುಕ್ಕಟ ನೋಡಿ ಬಿಡ್ತಾನ. ಮುಂದ ಲಗ್ನ ಆದ ಮ್ಯಾಲೆ ಹೆಂಡ್ತೀ ಕಂಪ್ಲೇಂಟ್ ಮಾಡೋ ಹಾಂಗ ಇಲ್ಲ. ರಿಲೀಸ್ ಆಗದೇ ಇರೋ ಸಿನಿಮಾ ಸಹಿತ ತೋರಿಸಿ ಬಿಡ್ತಾನ. ಹಾಂಗ ಇದ್ದಾನ. ಬ್ಯಾಟರಿ ಅಂತೂ ಇಷ್ಟ ಚಂದ ಬಿಡ್ತಾನ ಅಂದ್ರ ಮನ್ನೆ ನಮ್ಮ ಬಾಜೂ ಮನಿ ಪದ್ದಕ್ಕಾ ಸಿನಿಮಾ ನೋಡಿ ಬಂದವರು ಎರಡು ದಿವಸ ಕಣ್ಣು ಬಿಡಲಿಲ್ಲ. ಅಷ್ಟ ಮಸ್ತ ಬ್ಯಾಟರಿ ಬಿಡ್ತಾನ, ಅಂತ ಹೇಳಿ ರಾಧಜ್ಜಿ ತಮ್ಮ ಮಮ್ಮಗನ್ನ ಎರ್ರಾ ಬಿರ್ರಿ ಹೊಗಳಿ ಬಿಟ್ಟರು. 

ಬ್ಯಾಟರಿ ಬ್ರಹ್ಮಚಾರಿ ರಾಮಕೃಷ್ಣ ಆಚಾರಿ.

ಹಾಂಗ? ಹ್ಯಾಂಗ ಬ್ಯಾಟರಿ ಬಿಡ್ತಾನ ಅಂತ ಹೇಳಿದ್ರು ನಿಮ್ಮ ಬಾಜೂ ಮನಿ ಪದ್ದಕ್ಕ? - ಅಂತ ಕೇಳಿದೆ ಅಜ್ಜಿನ್ನ.

ನಿಮ್ಮ ರಾಮಕೃಷ್ಣ ಏನು ಪ್ರಖರವಾಗಿ ಬ್ಯಾಟರಿ ಬಿಡ್ತಾನ್ರೀ ರಾಧಾಬಾಯಾರ? ನನ್ನ ನೋಡಿದವನ ಪದ್ದಾ ಮಾಮಿ ಪದ್ದಾ ಮಾಮಿ .... ಸಿನಿಮಾಕ್ಕ ಬಂದೀರಿ? ಅಂತ ಅನ್ನಕೋತ್ತ ಸೀದಾ ಕಣ್ಣಿಗೆ ಬಿಟ್ಟ ನೋಡ್ರೀ ಬ್ಯಾಟರಿ. ಮೂರ್ ತಾಸ ಸಿನಿಮಾ ಹೋಗ್ಲೀ ನಂತರ ಎರಡು ದಿವಸ ಕಣ್ಣು ಬಿಡಲಿಕ್ಕೆ ಆಗಲಿಲ್ಲ. ಆ ಪರಿ ಬ್ಯಾಟರಿ ಬಿಡ್ತಾನ ನಿಮ್ಮ ಹುಡಗ. ಅದೂ ಎಂತಾ ಬ್ಯಾಟರಿ ಇಟ್ಟಾನ ಅಂತೀರಿ? ದೊಡ್ಡ ಹೊನಗ್ಯಾ ಸೈಜಿಂದು. ರಾತ್ರಿ ಶಿಕಾರಿ ಮಾಡಲಿಕ್ಕೆ ಹೋಗವರು ಹಿಡಕೊಂಡು ಹೋಗಿ ಪ್ರಾಣಿ ಕಣ್ಣಿಗೆ ಬಿಡ್ತಾರಲ್ಲ, ಹಂತಾದ್ದು. ಹೀಂಗ ಬ್ಯಾಟರಿ ಬಿಟ್ಟು ಬಿಟ್ಟು ಎಷ್ಟು ಮಂದಿ ಕುಡ್ಡ ಮಾಡಿ ಹಾಕ್ಯದೋ ಪಾಪಿ ಮುಂಡೇದು. ಸ್ವಲ್ಪ ನೋಡಿಕೊಂಡು ಬ್ಯಾಟರಿ ಮಸಡಿ ಮ್ಯಾಲೆ ಬಿಡಲಿಕ್ಕೆ ಹೇಳ್ರೀ.  ಮಂದಿ ಏಕ್ದಂ ಕಣ್ಣು ಕಾಣದ ಕತ್ತಲಿ ಥೇಟರ್ ಒಳಗ ಬಿದ್ದು ನಡ ಗಿಡ ಬುಡ ಮತ್ತೊಂದು ಮುರಕೊಂಡು ಏನಾರಾ ಆದ್ರಾ? - ಅಂತ ಹೇಳಿದರಂತ ಪಕ್ಕದ ಮನಿ ಪದ್ದಕ್ಕ ರಾಧಜ್ಜಿಗೆ.

ಹೋಗ್ಗೋ ರಾಧಜ್ಜಿ!!!!ಭಾರಿ ಇದ್ದಾನ ಅಂತ ಕಾಣಸ್ತದ ನಿಮ್ಮ ನಡುವಿನ ಈ ಮೊಮ್ಮಗ ರಾಮಕೃಷ್ಣ. ಅದೇನ ಎಲ್ಲಾ ಬಿಟ್ಟು ಮಂಗಳಾ ಥೇಟರ್ ಒಳಗ ಯಾಕ ನೌಕರಿಗೆ ಸೇರಿಕೊಂಡ? ಏನ ಖಾಸ ಅದ ಆ ಥೇಟರ್ ಒಳಗ? ನೋಡಿದ್ರ ಸೀಟ್ ತುಂಬಾ ತಗಣಿ ತುಂಬ್ಯಾವ. ಎಷ್ಟೆಷ್ಟೋ ಚೊಲೊ ಚೊಲೊ ಥೇಟರ್ ಅವ ಅಲ್ಲಾ? ಕೆಲಸ ಅಂತೂ ಬ್ಯಾಟರಿ ಬಿಡೋದ ಹೊರತು ಮತ್ತೇನೂ ಇಲ್ಲ. ಯಾಕ ಯಾಕ ಮಂಗಳಾ ಥೇಟರ್? - ಅಂತ ಕೇಳಿದೆ.

ಏ.... ಆ ಮಂಗಳಾ ಥೇಟರ್ ಒಳಗ ದೀಪ ಸರಿ ಇಲ್ಲ. ಜಾಸ್ತಿ ಬ್ಯಾಟರಿ ಸೆಲ್ ಖರ್ಚ ಆಗ್ತಿದ್ದವಂತ ನಮ್ಮ ರಾಮಕೃಷ್ಣ ಬರೋಕಿಂತ ಮೊದಲು. ಬ್ಯಾಟರಿ ಸೆಲ್ ಖರೀದಿ ಮಾಡಿ ಮಾಡಿ ಮಾಲಕರು ದಿವಾಳಿ ತೆಗಿಲಿಕ್ಕೆ ಹೊಂಟಿದ್ದರು. ಯಾಕಂದ್ರ ಮೊದಲಿದ್ದವ ಸೀಟಿಗೆ ಬ್ಯಾಟರಿ ಬಿಟ್ಟು, ಅಲ್ಲೆ ಹೋಗಿ ಕೂಡ್ರಿ, ಇಲ್ಲೆ ಬಂದು ಕೂಡ್ರಿ ಅಂತಿದ್ದ. ಮಂದಿ, ಇನ್ನೊಮ್ಮೆ ಬ್ಯಾಟರಿ ತೋರಿಸಪಾ, ಇನ್ನೊಮ್ಮೆ ತೋರಿಸಪಾ, ಅಂದು ಅಂದು ಸಿಕ್ಕಾಪಟ್ಟೆ ಬ್ಯಾಟರಿ ಸೆಲ್ ಖರ್ಚ ಆಗಿ ಹೋಗತಿದ್ದವು. ನಮ್ಮ ರಾಮಕೃಷ್ಣ ಏನು ನೌಕರಿ ಶುರು ಮಾಡಿದ ನೋಡು, ಸೀದಾ ಮಂದಿ ಮಾರಿಗೇ ಅದೂ ಡೈರೆಕ್ಟ್ ಕಣ್ಣಿಗೆ ಬ್ಯಾಟರಿ ಬಿಡಲಿಕ್ಕೆ ಹತ್ತಿಬಿಟ್ಟ. ಮಂದಿ ಫುಲ್ ಕುಡ್ಡ ಆಗಿ, ಸಾಕು ಬ್ಯಾಟರಿ ಬಿಡೋದು, ಬಂದ್ ಮಾಡ ಹುಸ್ಸೂಳೆಮಗನ, ಅಂತ ಅಂದು ಕತ್ತಲದಾಗ ಅವರಾಗಿ ಅವರ ಸೀಟ್ ಹುಡುಕಿಕೊಳ್ಳಲಿಕ್ಕೆ ಶುರು ಮಾಡಿದ್ರು. ಬ್ಯಾಟರಿ ಸೆಲ್ ಖರ್ಚ ಆಗೋದು ಕಮ್ಮಿ ಆತು. ಥೇಟರ್ ಮತ್ತ ಲಾಭದಾಗ ಬಂತು. ಅದಕ್ಕ ಮಾಲಿಕರೂ ಸಹ ಖುಷ್ ಆಗಿ ನಮ್ಮ ರಾಮಕೃಷ್ಣ ಗ ಒಟ್ಟ ಬಿಟ್ಟ ಕೊಡಂಗಿಲ್ಲ. ತಿಳೀತ? - ಅಂತ ಬ್ಯಾಟರಿ ಬ್ರಹ್ಮಚಾರಿ ಹ್ಯಾಂಗ ಮಾಲಿಕರ ಏಕ್ದಂ ಖಾಸಮ್ ಖಾಸ್ ಆದ ಅಂತ ಹೇಳಿದ್ರು ರಾಧಜ್ಜಿ.

ಭಾರಿ ಇದ್ದಾರ ಬಿಡ್ರೀ ನಿಮ್ಮ ಮೂರು ಮಂದಿ ಮಮ್ಮಕ್ಕಳು. ಇವರನ್ನ ಲಗ್ನ ಆಗೋರು ಭಾಳ ಪುಣ್ಯಾ ಮಾಡಿರಬೇಕು. ಹುಡುಕೋಣ ಬಿಡ್ರೀ. ಇಂತಾ ಪುರುಷ ರತ್ನಗಳಿಗೆ ಏಕ್ದಂ ಮಸ್ತ ಕನ್ಯಾ ರತ್ನಗಳ ಕಾದಿರ್ತಾವ. ನಾ ಬರಲಿ ಅಜ್ಜಿ? - ಅಂತ ಅಪ್ಪಣೆ ಕೇಳಿದೆ.

ಏ..... ಬ್ರೋಕರ್. ಒಂದು ಮಾತು. ನಿನ್ನ ಮದಿವಿ ಯಾರ ಮಾಡಿದ್ರು? - ಅಂತ ಕೇಳಿದ್ರು ಅಜ್ಜಿ.

ಹೇ .... ಹೇ .... ಅಜ್ಜಿ ನಾ ಲಗ್ನಾ ಗಿಗ್ನಾ ಮಾಡಿಕೊಂಡೇ ಇಲ್ಲರೀ. ಆರಾಮ ಬಿಂದಾಸ ಬ್ರಹ್ಮಚಾರಿ ನಾವು. ಹೀಂಗ ಏನೋ ಸೇವಾಕ್ಕ ಅಂತ ಮದ್ವೀ ಬ್ರೋಕರ್ ಗಿರಿ ಮತ್ತೊಂದು ಮಾಡಿಕೊಂಡು ಇದ್ದೇವಿ ನೋಡ್ರೀ, ಅಂತ ನಾ ಹೇಳಿದೆ.

ಕಲ್ಸೂಳಿಮಗನ !!!!ಸ್ವಂತಕ್ಕ ಒಂದು ನೌಕರಿ ಇಲ್ಲ. ಒಂದು ಚಾಕರಿ ಇಲ್ಲ. ಚೋಕ್ರೀ ಅಂತೂ ಇಲ್ಲೇ ಇಲ್ಲ. ಅದರ ಮ್ಯಾಲೆ ಲಗ್ನದ ಬ್ರೋಕರ್ ದಂಧಾ ಮಾಡಲಿಕ್ಕೆ ಹೊಂಟೀ ಅಲ್ಲೋ? ಪಾಪ ಅನ್ನಸ್ತದ. ಈ ಧಂಧೆ ಒಳಗ ನಿನಗ ರೊಕ್ಕಾ ಹುಟ್ಟುದಿಲ್ಲೋ. ಎಮ್ಮಿ ಕಟ್ಟಿದಿ. ಇನ್ನು ಬೇಕಾದ್ರ ಹಂದಿ ಗಿಂದಿನೂ ಸಾಕು. ಈ ಮದ್ವಿ ಬ್ರೋಕರ್ ದಂಧಾ ನಿನಗ ಹೇಳಿದ್ದು ಅಲ್ಲೋ ಭೀಷ್ಮಾಚಾರಿ, ಅಂದ ಅಜ್ಜಿ ಸಂತಾಪ ವ್ಯಕ್ತ ಪಡಿಸಿದರು.

ಹಾಂಗೇನೂ ಇಲ್ಲ ಬಿಡ್ರೀ ಅಜ್ಜಿ. ಎಷ್ಟೋ ಮಂದಿ ಕುರಿ ಕೋಳಿ ದನ ಕಡಿಯವರು ಒಟ್ಟ ನಾನ್ವೆಜ್ ತಿನ್ನಂಗಿಲ್ಲ. ಎಷ್ಟೋ ಮಂದಿ ಶೆರೆ ಭಟ್ಟಿ ಇಳಿಸವರು ಒಟ್ಟ ಶೆರೆ ಕುಡಿಯಂಗಿಲ್ಲ. ಹಾಂಗ ನಾವೂ. ಮತ್ತ ನಮ್ಮ ಪರಮ ಪೂಜ್ಯ ಸ್ವಾಮಿಗಳು ಸಹಿತ ಮದವಿ ಗಿದವಿ ಏನೂ ಆಗದ ಅದರ ಬಗ್ಗೆ ಎಲ್ಲ ತಿಳ್ಕೊಂಡು ಬಿಟ್ಟಿದ್ದರು. ಗೊತ್ತಿರಬೇಕಲ್ಲ ನಿಮಗ? - ಅಂತ ಅಜ್ಜಿ ಕಾಲು ಎಳೆದೆ. ಇಲ್ಲಿ ತನಕ ಎಳಕೊಂಡು ಬಂದೇನಿ, ಇನ್ನೂ ಒಂದಿಷ್ಟು ಕ್ಲೈಮಾಕ್ಸ್ ಗೆ ತೊಗೊಂಡು ಹೋಗಿ, ಅಜ್ಜಿ ಕಡೆ ಚಿಟಿ ಚಿಟಿ ಚೀರಿಸಿ, ಅಕಿ ಬಿಪಿ ಶುಗರ್ ಹೆಚ್ಚ ಮಾಡಿಸೇ ಮನಿಗೆ ಹೋಗುದು.

ನಿನ್ನ ತಲಿ. ಏನಂತ ಉದಾಹರಣೆ ಕೊಡ್ತೀ? ಮಾಂಸಾ ಕಡಿಯವರಂತ. ಶೆರೆ ಮಾರವರಂತ. ಅವರೂ ಮತ್ತ ಮದ್ವಿ ಬ್ರೋಕರ್ ಎಲ್ಲಾ ಒಂದ ಏನು? ಏನು ಹೋಲಿಕಿ ಮಾಡ್ತಿಯೋ ಅಸಡ್ಡಾಳ ಮುಂಡೇದ? ಮತ್ತ ಯಾವ ಸ್ವಾಮಿಗಳ ಬಗ್ಗೆ ಹೇಳಲಿಕತ್ತಿ? ಲಗ್ನ ಆಗದನ ಎಲ್ಲಾ ಕಲಿತು ಬಿಟ್ಟಾರಂತ? ಯಾವ ಕಳ್ಳ ಸ್ವಾಮೀ ಅವರು? ಹಾಂ? ಹಾಂ? - ಅಂತ ಅಜ್ಜಿ ಕೇಳಿದರು.

ಅವರರಿ ಅಜ್ಜಿ. ನಮ್ಮ ಪರಮ ಪೂಜ್ಯ ಆದಿ ಶಂಕರಾಚಾರ್ಯರು. ಅವರು ಪರಕಾಯ ಪ್ರವೇಶ ಮಾಡಿ ಮೂರ್ಮೂರ ಮಂದಿ ರಾಣಿಯರಿಗೆ ಒಂದ ಸಲಕ್ಕ ಪ್ರೀತಿ ಮತ್ತೊಂದು ಎಲ್ಲಾ ಮಾಡಿ ಬಂದಿದ್ದು ನಿಮಗ ಗೊತ್ತಿರಬೇಕಲ್ಲ? ಅವರ ನಮಗ ಆದರ್ಶ, ಅಂತ ಹೇಳಿ ಕುಹಕದ ನಗಿ ನಕ್ಕೆ.

ಅಂದ್ರ ನೀ ನಮ್ಮ ಪೈಕಿ ಅಲ್ಲ? ನಿಂಬಿ ಹುಳಿ ಸ್ಮಾರ್ತ ಏನು? ಹೇಳೋ!! ಹೇಳೋ!! ಮೈಲಿಗಿ ಮುಂಡೇದ, ಪೀಡಿ ಮುಂಡೇದ, ನಾಯಿ ಮುಂಡೇದ, ಅನಿಷ್ಟ ಮುಂಡೇದ, ದೆವ್ವ ಮುಂಡೇದ  ಅಂತ ಅಜ್ಜಿ ಸಾವಕಾಶ ಗರಂ ಆದರು. ಮುಂಡೆವಾಡಿ ಅನ್ನೋ ಊರಾಗೂ ಸಹ  ಅಷ್ಟು ಮುಂದಿ ಮುಂಡ್ಯಾರು ಇದ್ದಾರೋ ಇಲ್ಲೋ ಗೊತ್ತಿಲ್ಲ. 

ಏ.... ನಾ ನಿಂಬಿ ಹುಳಿ ಬ್ರಾಹ್ಮಣ ಅಲ್ಲ ಬಿಡ್ರೀ. ನಾನು ಅಪ್ಪೆ ಹುಳಿ ಬ್ರಾಹ್ಮಣ, ಅಂದು ಅಜ್ಜಿಗೆ ಟಾಂಗ ಕೊಟ್ಟೆ. 

ಮಜ್ಜಿಗಿ ಹುಳಿ ಗೊತ್ತದ. ಆದ್ರ ಏನಿದು ಅಪ್ಪೆ ಹುಳಿ? ಮತ್ತೇನು ಅಪ್ಪೆ ಹುಳಿ ಹಣಿಗೆ ಹಚ್ಚಗೊತ್ತಿ ಏನು ದರಿದ್ರವನ? - ಅಂತ ಅಜ್ಜಿ ಝಾಡಿಸಿದರು. 

ನಗು ಬಂತು. ಅಪ್ಪೇ ಹುಳಿ ಹವ್ಯಕರ ಟ್ರೇಡ್ ಮಾರ್ಕ್ ಡಿಶ್. 

ಹೌದ್ರೀ ಅಜ್ಜಿ. ನಾ ಹವ್ಯಕ ಬ್ರಾಹ್ಮಣ. ಸಿರ್ಸಿ ಕಡೆ ಮನುಷ್ಯಾ. ಹ್ಯಾಂಗಿತ್ತು ಜೋಕ್? ಹ್ಯಾಂಗ ಮಂಗ್ಯಾ ಆದ್ರೀ? ಹಾಂ?ಹಾಂ? - ಅಂದು ಕಣ್ಣು ಹೊಡೆದು ಸೀಟಿ ಹೊಡದ ಬಿಟ್ಟೆ.

ಅಯ್ಯೋ!!!!ಮಹಾ ಮೈಲಿಗಿ ಮಾಡಿ ಬಿಟ್ಟಿ ಅಲ್ಲೋ!!!!!ಸಿರ್ಸಿ ಕಡೆ ಅಂದ್ರ ಮೀನಾ ತಿನ್ನೋ ಕಾರವಾರಿ ಬ್ರಾಹ್ಮಣ ಏನು? ನನಗ ನಿನ್ನ ಹಣಿ ಮ್ಯಾಲೆ ಗೂಟದ ನಾಮ ಇಲ್ಲದ್ದು ನೋಡಿಯೇ ತಿಳಿಬೇಕಿತ್ತು ನೀ ನಮ್ಮ ಪೈಕಿ ಅಲ್ಲ ಅಂತ. ನನ್ನ ಬುದ್ಧಿ ಎಲ್ಲೋ ನಿನ್ನ ಎಮ್ಮಿ ಗತೆ ಹುಲ್ಲು ಮೇಯಲಿಕ್ಕೆ ಹೋಗಿತ್ತು. ಗೊತ್ತ ಆಗಲಿಲ್ಲ. ಅನಿಷ್ಟ ಮೈಲಿಗಿ ಮುಂಡೆ ಗಂಡನ್ನ ಮನಿಯೊಳಗ ಕರದು, ಚಾ ಕೊಟ್ಟು, ನಮ್ಮ ಮೊಮ್ಮಕ್ಕಳಿಗೆ ಕನ್ಯಾ ಹುಡುಕಿ ಕೊಡೋ ಅನ್ನಲಿಕತ್ತೇನಿ. ನೀ ಸ್ಮಾರ್ತ ಮುಂಡೆ ಗಂಡ ನಮ್ಮ ಹುಡುಗುರಿಗೆ ಕನ್ಯಾ ತೋರಿಸಿ ಲಗ್ನಾ ಮಾಡೋದು ದೂರ ಉಳಿತು. ನಿಮ್ಮ ಶಂಕಾರಾಚಾರ್ಯರ ಹಾಂಗ ದೆವ್ವದಾಂಗ ಪರಕಾಯ ಪ್ರವೇಶ ಅದು ಇದು ಮಾಡೋದು ಕಲಿಸಿ, ದೆವ್ವಗಳ ಹಾಂಗ ಸಂಸಾರ ಮಾಡೋದನ್ನ ಕಲಿಸೋ ಪೈಕಿ ನೀ. ಜಗಾ ಖಾಲಿ ಮಾಡು. ಇಲ್ಲ ಪೊಲೀಸರಿಗೆ ಫೋನ್ ಮಾಡ್ತೇನಿ. ಕಸಬರಿಗಿಲೇ ಹಾಕ್ಲೇನು ನಾಕು? ಹಾಂ?ಹಾಂ? - ಅಂತ ಅಜ್ಜಿ ಸುತ್ತಾ ಮುತ್ತಾ ಕಸಬರಿಗಿ ಹುಡಕಲಿಕ್ಕೆ ಶುರು ಮಾಡಿದ್ರು.

ಅಜ್ಜಿಗೆ ಕಾಡ್ಸಿದ್ದು ಸಾಕು. ಮತ್ತೆಲ್ಲೆರೆ ಅಜ್ಜಿ ಭಾಳ ರೈಸ್ ಆಗಿ ಗೊಟಕ್ ಅಂದ್ರ ನಮಗ ಬ್ರಹ್ಮಹತ್ಯಾ ದೋಷ ಬರಬಾರದು ಅಂತ ಲಗೂ ಲಗೂ ಮನಿ ಹೊರಗ ಬಂದೆ.

ಅಜ್ಜಿಯ ಸಹಸ್ರನಾಮಾರ್ಚನೆ ಹಿಂದ ಬಂತು.

ಅಜ್ಜಿ..... ಲಗೂನ ನಿಮ್ಮ ಮಮ್ಮಕ್ಕಳ ಕುಂಡಿ ಅಲ್ಲಲ್ಲ ಕುಂಡಲಿ, ಮಂಗ್ಯಾನ ಮಸಡಿ ಮಾಡಿ ತೆಗಿಸ್ಕೊಂಡಿರೋ ಬ್ಲಾಕ್ ಅಂಡ್ ವೈಟ್ ಫೋಟೋ ಮತ್ತ ನಮ್ಮ ಬ್ರೋಕರ್ ಬೋಣಿಗಿ ರೊಕ್ಕಾ ಎಲ್ಲಾ ಲಗೂನ ಕಳಿಸಿ ಕೊಟ್ಟು ಬಿಡ್ರೀ. ಅವು ಬಂದ ಮುಟ್ಟಿದ ಕೂಡಲೇ ನಾವು ಕನ್ಯಾ ಹುಡಕಲಿಕ್ಕೆ ಕಚ್ಚಿ ಕಟ್ಟಿಕೊಂಡು, ಅದನ್ನ ಎಷ್ಟಕ್ಕ ಬೇಕೋ ಅಷ್ಟು ಎತ್ತರಕ್ಕ ಎತ್ತಿಕೊಂಡು, ಸಮರೋಪಾದಿಯಲ್ಲಿ, ಪದ್ಧತಿ ಪ್ರಕಾರನ ಹುಡುಕಿ, ನಿಮ್ಮ ಮಮ್ಮಕ್ಕಳ ಬ್ರಹ್ಮಸೆರೆ ಬಿಡಿಸಲಿಲ್ಲ ಅಂದ್ರ ನನ್ನ ಹೆಸರ ಬ್ರೋಕರ್ ಭೀಷ್ಮಾಚಾರಿ ಅಲ್ಲ ನೋಡ್ರೀ - ಅಂತ ಹೇಳಿ ಸ್ಕೂಟರ್ ಹತ್ತಿ ಬಿಟ್ಟೆ.

ಹಾಳಾಗಿ ಹೋಗು!!! ಅದಾಗು ಇದಾಗು!!! ಸೂಡ್ಲಿ. ಹುಗೀಲಿ. ಹೆಣಾ ಎತ್ತಲಿ - ಅಂತ ಅಜ್ಜಿ ತಮ್ಮ ಸಹಸ್ರ ನಾಮಾರ್ಚನೆ ಮುಂದುವರಿಸಿಯೇ ಇದ್ದರು. 


** ಬಾಳೇಸರ ವಿನಾಯಕ ಎಂಬ ಸಿರ್ಸಿ ಕಡೆ ಹಾಸ್ಯ ಕಲಾವಿದರೊಬ್ಬರು ಒಂದು ಚಿಕ್ಕ ಪ್ರಹಸನ ಮಾಡಿದ್ದರು. ಅದರಲ್ಲಿ ಕೂಡ ಹೀಗೆ ಮೂರು ಜನ ಬೇಕಾರ್ ಹವ್ಯಕ ಮಂದಿಗೆ ಹುಡುಗಿ ಹುಡ್ಕೋ ಪ್ರಯತ್ನದ ಬಗ್ಗೆ ಹಾಸ್ಯ ಇತ್ತು. ಅದು ಪೂರ್ತಿ ನಮ್ಮ ಹವ್ಯಕ ಭಾಷೆಯಲ್ಲಿ ಇತ್ತು. ಅದರಿಂದ ಕೆಲವು ಅಂಶ ಆರಿಸಿಕೊಂಡು, ಧಾರವಾಡಕ್ಕೆ ಹೊಂದುವ ಹಾಗೆ ಅಳವಡಿಸಿಕೊಂಡು, ಮತ್ತೆ ನನ್ನದೂ ಒಂದಿಷ್ಟು ಮಸಾಲೆ ಹಾಕಿ ಬರೆದಿದ್ದು ಇದು. ಬಾಳೇಸರ ವಿನಾಯಕ ಅವರ ಪ್ರಹಸನ ಸ್ಪೂರ್ತಿ ಅಂತು ಹೌದು. ನಂದೂ ಒಂದಿಷ್ಟು ಹೆಚ್ಚಿಗೆ ಇದೆ. ಅವರಿಗೆ ಒಂದು ಥ್ಯಾಂಕ್ಸ್. 

** ಆದಿ ಶಂಕರರ ಪರಕಾಯ ಪ್ರವೇಶದ  ವಿವರ ಇಲ್ಲಿದೆ. ಎರಡನೇಯ ಪ್ಯಾರಾ ಓದಿ.

** ಪರಕಾಯ ಪ್ರವೇಶದ ಬಗ್ಗೆ ಹಿಂದೆ ಬರೆದ ಬ್ಲಾಗ್ ಪೋಸ್ಟ್ ಇದು. ಆಸಕ್ತರು  ಓದಬಹದು.  

Monday, February 25, 2013

ಅಲೋಪತಿ ವಯಾಗ್ರಾ, ನ್ಯಾಚುರೋಪತಿ ನೈಯಾಗ್ರಾ.

ದಿನಾ ಸಂಜಿ ನಮ್ಮ ರುಟೀನ್ ಸೇಮ್. ಭೀಮ್ಯಾನ್ ಚುಟ್ಟಾ ಅಂಗಡಿ ಮುಂದ ನಿಂತಿದ್ದೆ. ಗುರುವಾರ ಅವತ್ತು. ರಾಯರ ವಾರ. ನಮಗೇನ ಫರಕ್ಕ್ ಇಲ್ಲ. ಸಂಜಿ ಮುಂದ ಮಾವಾ ಬೇಕ ಬೇಕ.

ಸಂಜಿ ಮುಂದ ಅಲ್ಲೆ ನಿಂತ್ರ ಭಾಳ ಮಂದಿ ಭೆಟ್ಟಿ ಆಗ್ತಾರ. ಎಲ್ಲರಿಗೂ ನಮಸ್ಕಾರ, ಹಾಪ್ ನಮಸ್ಕಾರ ಹಾಕ್ಕೋತ್ತ, ಮಾವಾ ರಾಡಿ ಪಿಚಕ್ ಪಿಚಕ್ ಅಂತ ಪಿಚಕಾರಿ ಹಾರಿಸ್ಕೋತ್ತ ನಿಲ್ಲೋದ್ರಾಗ ಇರೊ ಸುಖಾನ ಬ್ಯಾರೆ.

ನಾರ್ಮಲೀ ಗುರುವಾರ ಸಂಜಿ ಮುಂದ ರೂಪಾ ವೈನಿ ಸಿಗ್ತಾರ. ರಾಯರ ಮಠಕ್ಕ ಹೊಂಟಿರ್ತಾರ. ಜೊತಿಗೆ ನಮ್ಮ ದೋಸ್ತ ಅವರ ಗಂಡ ಚೀಪ್ಯಾ ಇರಂಗಿಲ್ಲ. ಅದಕ್ಕ ಅವರೂ ಒಂದು ಮೌನ ನಮಸ್ಕಾರ ಗೋಣು ಬಗ್ಗಿಸಿ ಹಾಕಿದಂಗ ಮಾಡಿ ಮಠಕ್ಕ ಹೋಗ್ತಿರ್ತಾರ.

ಇವತ್ತು ಮಾತ್ರ ದೊಡ್ಡ ಆಶ್ಚರ್ಯ. ವೈನಿ ಜೊತಿಗೆ ಚೀಪ್ಯಾ ಸಹಿತ ಇದ್ದ. ಇವತ್ತೇನು ಇವಂಗ ರಜಾ ಅದನೋ ಏನೋ? ಅಂತ ಡೌಟ್ ಬಂತು. ಯಾವದೂ ರಜಾ ನೆನಪಾಗಲಿಲ್ಲ. ಮತ್ತೇನರ ಮನಿ ಕೆಲಸದ ಸಲುವಾಗಿ ಹೆಂಡ್ತಿ ಕಡೆ ಬೈಸ್ಕೊಂಡು ಕ್ಯಾಶುವಲ್ ಲೀವ್ ಹಾಕಿರಬೇಕು. ಲಗೂನ ಕೆಲಸ ಮುಗಿಸಿರಬೇಕು ಅಥವಾ ಸರಿ ಪ್ಲಾನ್ ಮಾಡಿಕೊಳ್ಳದ  ಕೆಲಸ ಅರ್ಧಕ್ಕ ಗೋಕರ್ಣ ಹಜಾಮತಿ ಮಾಡಿ ಮುಗಿಸಿರಬೇಕು. ಅದಕ್ಕ ವೈನಿ ಅವನ್ನೂ ಕಟ್ಟಿಕೊಂಡು ರಾಯರ ಮಠಕ್ಕ ಹೊಂಟಾರ. ನಮ್ಮ ಚೀಪ್ಯಾ ಗುಡಿ ಗುಂಡಾರ ಜಾಸ್ತಿ ಹೋಗಂಗಿಲ್ಲ ಅಂತ ರೂಪಾ ವೈನಿ ಕಂಪ್ಲೇಂಟ್. ಅವಾ ಬರೆ 'ತೀರ್ಥ'ಯಾತ್ರಾ ಮಾಡ್ತಾನ ಅಂತ ವೈನಿ ಒಮ್ಮೊಮ್ಮೆ 'ದಂಡ'ಯಾತ್ರಾ ಮಾಡ್ತಾರ ಅವನ ಮ್ಯಾಲೆ.

ನಮಸ್ಕಾರ,  ವೈನಿ, ಚೀಪ್ಯಾ. ಏನು? ದಂಪತಿ ಇಬ್ಬರೂ ಕೂಡಿ ರಾಯರ ಮಠಕ್ಕ ಹೊಂಟಾಂಗ ಅದ. ಯಾಕ ಚೀಪ್ಯಾ ಇವತ್ತು ಡ್ಯೂಟಿ ಇಲ್ಲ ನಿನಗ? ಡ್ಯೂಟಿ ಇದ್ದರ ನೀ ಸಂಜಿ ಏಳರ ಮೊದಲು ಬರೋದಿಲ್ಲ. ಏನಿವತ್ತು? - ಅಂತ ಕೇಳಿದೆ.

ಏ ಮಂಗೇಶಿ. ಅಲ್ಲಲ್ಲ ನನ್ನ ಪ್ರೀತಿ ಮೈದುನ ಮಹೇಶಿ. ನಿಮ್ಮ ಗೆಳಯ ಉರ್ಫ್ ಚೀಪ್ಯಾ ಮಹಾರಾಜರು ಯಾವದೋ ನ್ಯಾಚುರೋಪತಿ ಡಾಕ್ಟರ್ ಕಡೆ ಹೋಗವರು ಇದ್ದರಂತ. ಇವತ್ತ ಅಪಾಯಿಂಟ್ಮೆಂಟ್ ಕೊಟ್ಟಿದ್ದ ಆ ನ್ಯಾಚುರೋಪತಿ ಡಾಕ್ಟರ್. ಅದಕ್ಕ ರಜಾ ಹಾಕಿದರು ನೋಡಪಾ, ಅಂದ ವೈನಿ ಒಂದು ಸಣ್ಣ ಬ್ರೇಕ್ ತೊಗೊಂಡ್ರು.

ಮುಂದ ನೀವ ಹೇಳ್ರೀ ಅನ್ನೋ ಲುಕ್ ಬ್ಯಾರೆ ಕೊಟ್ಟರು ರೂಪಾ ವೈನಿ  ನಮ್ಮ ಚೀಪ್ಯಾಗ. ಆವಾ ಅಡಗತ್ತರಿ ಒಳಗ ಸಿಕ್ಕ ಅಡಕಿ ಹೋಳ ಆದಂಗ ಅಗಿದ್ದ.

ಏನಾತೋ ಚೀಪ್ಯಾ? ಅಲೋಪತಿ ಬಿಟ್ಟು ನ್ಯಾಚುರೋಪತಿ ಚಾಲೂ ಮಾಡಿದಿ ಏನು? ಯಾಕ? ಅಲೋಪತಿ ವೈಯಾಗ್ರಾ ಉಪಯೋಗ ಆಗಲಿಲ್ಲ ಏನು? ಏನಲೇ ನಿನ್ನ ಕಥಿ? ನ್ಯಾಚುರಲ್ ಇದ್ದ ಪತಿಗೇ ನ್ಯಾಚುರೋಪತಿ. ಶಬಾಶ್! ತಥ್ ನಿನ್ನ. ಎಲ್ಲೆ ಹೊಂಟಿ ನ್ಯಾಚುರೋಪತಿ ಟ್ರೀಟ್ಮೆಂಟ್ ಗೆ? ಎಲ್ಲೆ ನಮ್ಮ ಖತರ್ನಾಕ್ ಡಾ. ಎಸ್.ಎಸ್. ಉಳ್ಳಾಗಡ್ಡಿ ಕಡೆ ಏನು ಮತ್ತ?, ಅಂತ ಸ್ವಲ್ಪ ಕಾಡಿಸೋ ಸ್ಟೈಲಿನ್ಯಾಗ ಅಂದೆ.

ಸುಮ್ಮನಿರೋ ಸುಮ್ಮನಿರೋ ಅನ್ನೋ ಸಿಗ್ನಲ್ ಕೊಟ್ಟಂಗ ಚೀಪ್ಯಾ ಕಣ್ಣ ಸನ್ನಿ ಮಾಡಿದ.

ನಾ ಏನೋ ಸುಮ್ಮನಾದೆ. ಆದ್ರ ನಮ್ಮ ರೂಪಾ ವೈನಿ ಭಾಳ ಶಾಣ್ಯಾ. ಕಿವಿ ಭಾಳ ಸೂಕ್ಷ್ಮ. ಏನು ನಾವು ಅಕಿ ಕೇಳಬಾರದು ಅಂತ ಅಂದ್ಕೊತ್ತೇವಿ ಅದನ್ನ ಮುದ್ದಾಂ ಕೇಳೇ ಬಿಡ್ತಾಳ. ಕೇಳೇ ಬಿಟ್ಟಳು. ಸಣ್ಣ ಅನಾಹುತ ಮಾಡೇ ಬಿಟ್ಟಳು.

ಏನ್ರೀ ಶ್ರೀಪಾದ್ ರಾವ್? ಏನು ಅದು ವೈಯಾಗ್ರಾ? ಯಾಕ ಅದನ್ನ ತೊಗೊಳ್ಳಿಕತ್ತೀರಿ?- ಅಂತ ಚೀಪ್ಯಾನ್ನ ಸ್ವಲ್ಪ ಜಬರಿಸಿ ಕೇಳಿದಳು.

ನೋಡ ಇಕಿನ................... ವೈಯಾಗ್ರ ಅಂದ್ರ ಅಂದ್ರ, ಅಂತ ಚೀಪ್ಯಾ ತೊದಲಿದ. ಗಂಡ ಪ್ರಾಣಿಯಾಗಿ ಹ್ಯಾಂಗ ಹೇಳ್ಯಾನು? ಪಾಪ ಅವ.

ನನಗೋ ಸಿಕ್ಕಾಪಟ್ಟೆ ನಗಿ.

ನನ್ನ ಕಡೆ ನೋಡಿ, ಬಚಾವ್ ಮಾಡಲೇ ಮಗನ, ಅನ್ನೋ ಲುಕ್ ಕೊಟ್ಟ ಚೀಪ್ಯಾ.

ಚೀಪ್ಯಾ ಬ್ಬೆ ಬ್ಬೆ ಅಂತ ತೊದಲೋದು ನೋಡಿ ರೂಪಾ ವೈನಿಗೆ ಮತ್ತೂ ಸಂಶಯ ಜಾಸ್ತಿ ಆತು.

ಏನ್ರೀ ಅದು? ಹೇಳಲಿಕ್ಕೆ ಏನು ಧಾಡಿ ನಿಮಗ? ಏನದು ವೈಯಾಗ್ರಾ? ನನಗ ಗೊತ್ತಿಲ್ಲದಾಂಗ ಅದೇನು ಔಷಧ ತೊಗೋಳಲಿಕ್ಕೆ ಶುರು ಮಾಡಿರಿ? ಹಾಂ? ಹಾಂ?, ಅಂತ ಸರೀತ್ನಾಗಿ ದಬಾಯಿಸೇ ಬಿಟ್ಟಳು ರೂಪಾ ವೈನಿ.

ಚೀಪ್ಯಾ ಮಂಗ್ಯಾನ್ ಮಾರಿ ಮಾಡಿಕೊಂಡು ನನ್ನ ಕಡೆ ನೋಡಿದ.

ರೀ ವೈನಿ! ಅದು ನೈಯಾಗ್ರಾ ಅಂತ್ರೀ. ನೀವೆಲ್ಲೋ ತಪ್ಪಾಗಿ ವೈಯಾಗ್ರಾ ಅಂತ ಕೇಳಿಸಿಕೊಂಡ್ರೀ ಅಂತ ಅನ್ನಸ್ತದ. ಅದು ನಮ್ಮ ಚವ್ಯನಪ್ರಾಶ ಶಕ್ತಿವರ್ಧಕ ಟಾನಿಕ್ ಇದ್ದಂಗ ನೋಡ್ರೀ. ಅಲ್ಲೆಲ್ಲೋ ಅಮೇರಿಕಾದ ನೈಯಾಗ್ರಾ ಜಲಪಾತದ ಸುತ್ತಾ ಮುತ್ತಾ ಇರೋ ಗಿಡಮೂಲಿಕೆಗಳಿಂದ ಮಾಡಿದ ಒಂದು ರೀತಿ ಔಷಧ. ಅಶಕ್ತತಾ, ನಿಶ್ಶಕ್ತಿ ಮತ್ತೊಂದು ಅಂತ ಕೆಲೊ ಮಂದಿ ಏಳಲಾಗದಾಂಗ ಮಲ್ಕೊಂಡು ಬಿಟ್ಟಿರ್ತಾರ ನೋಡ್ರೀ, ಅವರನ್ನ ಬಡಿದೆಬ್ಬಿಸುವ ನವತಾರುಣ್ಯದ ಔಷಧ. ಒಮ್ಮೆ ಎದ್ದರು ಅಂದ್ರ ಅವರು ಬಾರಿಸು ಕನ್ನಡ ಡಿಂಡಿಮ ಅನ್ನೋ ಹಾಂಗ ಏನರ ಒಂದನ್ನ ಡಿಂಡಿಮ ಬಾರಿಸಿದ ಹಾಂಗ ಬಾರಿಸಿದ ಹೊರತು ಮತ್ತ ಮಲಕೊಳ್ಳೋದೇ ಇಲ್ಲ. ಅಂತಹ ಔಷಧ, ಅಂತ ಉದ್ದಾಗಿ ಓಳು ಬಿಟ್ಟೆ. ಚೌಕ್ ಉಳ್ಳಿಸಿದೆ. ಮುಂದಿನದು ದೇವರಿಗೆ ಬಿಟ್ಟೆ. 

ಆದ್ರ ವೈನಿ ನಂಬಿದ್ರೋ ಇಲ್ಲೋ ಅಂತ ಡೌಟ್ ಇತ್ತು. ಯಾಕಂದ್ರ ಅವರನ್ನ ಫುಲ್ ಹಾದಿ ತಪ್ಪಿಸಬೇಕಿತ್ತು. ಇಲ್ಲಂದ್ರ ಎಲ್ಲೆರೆ ವಯಾಗ್ರಾ ಅಂತ ಗೂಗಲ್ ಮಾಡಿ, ಅದು ಏನಂತ ತಿಳ್ಕೊಂಡು, ನಂತರ ನಮ್ಮ ಚೀಪ್ಯಾನ್ನ ಹಾಕ್ಕೊಂಡು ಕಟಿಯೋದು ಬ್ಯಾಡ. 

ವೈನಿ ನಂಬಿದರು ಅಂತ ಕಾಣಸ್ತದ. ದೇವರ ದಯೆ. 

ಹಾಂಗ? ಇಷ್ಟ ಹೇಳಲಿಕ್ಕೆ ಏನು ಧಾಡಿ ಆಗಿತ್ತರಿ ನಿಮಗ ಶ್ರೀಪಾದ್ ರಾವ್? ಎಲ್ಲಾ ಕೆಲಸಕ್ಕೂ ನಿಮ್ಮ ಗೆಳ್ಯಾನ ಮಸಡಿ ನೋಡ್ತೀರಿ. ಲಗ್ನದಾಗೂ ಹೀಂಗ ಮಾಡಿದ್ರು ಅಲ್ಲೇನೋ ಮಂಗೇಶ್? ಅಲ್ಲಲ್ಲ ಮಹೇಶ್? ಕರಿಮಣಿ ಕಟ್ಟುವಾಗ ಹೆದರಿ ಕೆಳಗ ಒಗದಿದ್ದರು. ನೀನ ಎತ್ತಿ ಕೊಟ್ಟಿದ್ದಿ. ಅಲ್ಲ? - ಅಂತ ಚೀಪ್ಯಾಗ ವೈನಿ ಬೈದರು.

ಹೌದೋ ಇವರಿಗೆ ಭಾಳ ನಿಶ್ಶಕ್ತಿ ಆಗಿ ಬಿಟ್ಟದ. ಆ ನೈಯಾಗ್ರಾ ಔಶಧ ತೊಗೊಂಡ ಮ್ಯಾಲ್ಯಾರ ಅದು ಕಮ್ಮಿ ಆಗಿ ಇವರು  ಎದ್ದು ನಿಂತ್ರ ಸಾಕ ನೋಡಪಾ. ಆದ್ರ ಬಾರ್ಸೋದು ಮಾತ್ರ ಬ್ಯಾಡ ನೋಡು, ಅಂದ್ರು ವೈನಿ.

ಅಬ್ಬಾ!!!!ವೈನಿಗೆ ನಾವು ಬಿಟ್ಟ ಓಳು ತಿಳಿದಿಲ್ಲ. ಫುಲ್ ನಂಬಿ ಬಿಟ್ಟಾರ ಅಂತ ಒಂದು ತರಹದ ರಿಲೀಫ್ ಆತು.

ವೈನಿ ಏನು ಬಾರ್ಸೋದು ಬ್ಯಾಡ ಅಂದ್ರೀ? ಯಾಕ ನಿಮ್ಮದು ಏನರ ಧಾರ್ಮಿಕ ವ್ರತ ನೆಡದದ ಏನು? ಈಗೇನ ಶ್ರಾವಣ ಮಾಸ ಅಲ್ಲಲಾ. ಹಾಂ? ಹಾಂ? - ಅಂತ ಕೇಳಿದೆ.

ಹ್ಯಾಂಗೂ ವೈನಿ ತಲಿಗೆ ನಮ್ಮ ಮಾತಿನ ಧಾಟಿ  ಹೋಗಿಲ್ಲ. ಒಂದಿಷ್ಟು ಕಿತಬಿ ಉಲ್ಟಾ ಸೀದಾ ಮಾತಾಡಿ ಮಜಾ ತೊಗೊಳ್ಳೋಣ ಅಂತ ನಮ್ಮ ಕೆಟ್ಟ ಬುದ್ಧಿ.

ನನ್ನ ವ್ರತಕ್ಕೂ ಅವರು ನೈಯಾಗ್ರಾ ತೊಗೊಂಡು ಬಾರ್ಸೋದಕ್ಕೂ ಏನು ಸಂಬಂಧ? ಈಗ ನೀನೂ ಅವರ ಗತೆ ಹಾಪ್ ಆದಿ ಏನೋ ಮಹೇಶ್? ಏನೇನೋ ತಲಿ ಬುಡ ಇಲ್ಲದ ಮಾತಾಡ್ಲಿಕತ್ತಿ. ಬಾಯಾಗ ಜಡಕೊಂಡ ಆ ದರಿದ್ರ ಮಾವಾ ಜಾಸ್ತಿ ಕಿಕ್ ಕೊಡ್ತೋ ಹ್ಯಾಂಗ? - ಅಂದ್ರು ವೈನಿ. ಬೈದರು ಸ್ವಲ್ಪ.

ಅಲ್ಲ ವೈನಿ, ನೀವು ಬಾರ್ಸೋದು ಬ್ಯಾಡ ಅಂದ್ರೀ ಅದಕ್ಕ ಕೇಳಿದೆ. ನಿಮ್ಮದು ಏನರ ವ್ರತಾ ಗಿತಾ ನೆಡದದೋ ಹ್ಯಾಂಗ ಅಂತ? ಅಷ್ಟರೀ. ಮತ್ತೇನಿಲ್ಲ, ಅಂತ ಹೇಳಿ ಸಮಾಧಾನ ಮಾಡಿದೆ.

ಅಯ್ಯೋ ನಮ್ಮಪ್ಪ. ಏನೂ ವ್ರತಾ ಗಿತಾ ಇಲ್ಲಪಾ. ಈಗ ಸ್ವಲ್ಪ ವರ್ಷದ ಹಿಂದ ರಾತ್ರಿ ನಿದ್ದಿ ಬರಲಿಲ್ಲ ಅಂದ್ರ ಎದ್ದು ತಬಲಾ ಬಾರ್ಸಿಕೋತ್ತ ಕೂತು ಬಿಡ್ತಿದ್ದರು ನಮ್ಮನಿಯವರು. ಈಗ ಮತ್ತೆಲ್ಲರ ಆ ಸುಡುಗಾಡು ನೈಯಾಗ್ರಾ ಗುಳುಗಿ ತೊಗೊಂಡ ಮ್ಯಾಲೆ, ಮತ್ತ ಎಲ್ಲರ ಆ ಹಳೆ ತಬಲಾ ಬಾರ್ಸೋ ತಲಬು ಎದ್ದು, ಮತ್ತ ಅಪರಾತ್ರ್ಯಾಗ ಬಾರಿಸಿಕೋತ್ತ ಕೂತರ ಅಂತ ಚಿಂತಿ ನನಗ. ನನ್ನ ನಿದ್ದಿ, ಮಂದಿ ನಿದ್ದಿ ಕೆಡಸೋದು ಅಂದ್ರ ಮಹಾ ಪ್ರೀತಿ ಇವರಿಗೆ, ಅಂದ್ರು ವೈನಿ.

ಏ....ಈ ಸರೆ ಬಾರ್ಸೋದು ಬ್ಯಾರೇನ ಅದ ಬಿಡ್ರೀ ವೈನಿ. ಏನಂತಿಲೇ ಚೀಪ್ಯಾ? - ಅಂತ ಚೀಪ್ಯಾಗ ಅವನ ಹೆಂಡ್ತೀಗೆ ಕಾಣದ ಹಾಂಗ ಕಣ್ಣು ಹೊಡದ ಕೇಳಿದೆ. 

ಹೀರೋ ಸೂಳೆಮಗ ಚೀಪ್ಯಾ ಖುಷ್ ಆಗಿ ಹೀ.... ಹೀ.... ಅಂತ ನಾಚಿಕೋತ್ತ ನಕ್ಕ.

ನಿಮಗ ಈಗ ಹೇಳೇನಿ ನೋಡ್ರೀ ಶ್ರೀಪಾದ ರಾವ್!!! ಆ ಸುಡುಗಾಡ್ ನೈಯಾಗ್ರಾ ತೊಗೊಂಡು, ರಾತ್ರಿ ಅಪರಾತ್ರಿ ಎದ್ದು ಮತ್ತ ಬಾರಸ್ತೇನಿ ಅದು ಇದು ಅಂತ ಶುರು ಮಾಡಿದ್ರ ನೋಡ್ಕೊರೀ ಮತ್ತ. ನಾನ ಎದ್ದು ನಿಮಗ ಸರೀತ್ನಾಗಿ ಬಾರ್ಸ ಬಾರದ ಕಡೆ ಎಲ್ಲಾ ಬಾರ್ಸೀ ಬಿಡ್ತೇನಿ. ಬಾಸುಂಡಿ ಬರೋ ಹಾಂಗ ಬಾರ್ಸಿ ಬಿಡ್ತೇನಿ. ಹುಷಾರ್! ನಿಮಗ ಎಚ್ಚರಾಗಿ ಏನ ಎದ್ದರೂ ಸುಮ್ಮನ ಕೂಡ್ರಿ. ಕೂತು ಜಪಾ ಮಾಡ್ರೀ. ಅದು ಬಿಟ್ಟು  ಬಾರ್ಸೋಣ ಬಾರಾ ಬಾರ್ಸೋಣ ಬಾರಾ ಅಂತ ಕುಣಿಯೋಣ ಬಾರಾ ಕುಣಿಯೋಣ ಬಾರಾ ಧಾಟಿಯೊಳಗ ಹಾಡು ಗೀಡು ಶುರು ಮಾಡಿದ್ರ,  ನಿಮ್ಮನ್ನ ಬಾರ್ಸಿ ಬಾರ್ಸಿ ಬಾರ್ಸಿಲೋನಾಕ್ಕ ಕಳಿಸಿ ಬಿಡ್ತೇನಿ. ತಿಳಿತ? - ಅಂತ ಫುಲ್ ಪವರ್ಫುಲ್ ಧಮಕಿ ಕೊಟ್ಟೇ ಬಿಟ್ಟರು ರೂಪಾ ವೈನಿ.

ಏನ ಬಿಡ್ರೀ ವೈನಿ ನೀವರೆ? ಪಾಪ ಹೀಂಗ ಧಮಕಿ ಹಾಕೋದ ನಮ್ಮ ಚೀಪ್ಯಾಗ? ಪದ್ಧತಿ ಅಲ್ಲ ಬಿಡ್ರೀ. ಅದೂ ರಾಯರ ಮಠಕ್ಕ ಕರ್ಕೊಂಡು ಹೋಗೋ ಮುಂದ, ಅಂತ ಅಂದು ನಾ ಧಮಕಿ ಎಫೆಕ್ಟ್ ಸ್ವಲ್ಪ ಕಡಿಮಿ ಮಾಡಲಿಕ್ಕೆ ನೋಡಿದೆ.

ನೈಯಾಗ್ರಾ ತೊಗೊಂಡ ಮ್ಯಾಲೆ ಏನೇನು ಆಗಬಹುದು ಅನ್ನೋದನ್ನ ಮನಸ್ಸಿನ್ಯಾಗ ಕಲ್ಪನಾ ಮಾಡಿಕೊಂಡ ಚೀಪ್ಯಾ ಮೂಡಿನ್ಯಾಗ ಬಂದು ಬಿಟ್ಟಿದ್ದ.

ನಾ ಬಾರ್ಸವನಾ.... ನಾ ಬಾರಿಸಿ ಬಿಡವನಾ.... ನಾ ಬಗ್ಗಿಸಿ ಬಗ್ಗಿಸಿ ಬಾರಿಸಿ ಬಿಡವನ, ಅಂತ ರಾಗವಾಗಿ ಹಾಡ್ಲಿಕತ್ತಿಬಿಟ್ಟ ಹಾಪ್ಸೂಳೆಮಗ ಚೀಪ್ಯಾ. ಅದೂ ಸ್ಟೇಶನ್ ರೋಡಿನ್ಯಾಗ. ಭೀಮ್ಯಾನ್ ಅಂಗಡಿ ಮುಂದ ಸೇರಿದ್ದ ಪಡ್ಡೆ ಹುಡುಗರೆಲ್ಲ ಪುಗಸಟ್ಟೆ ಮಜಾ ತೊಗೊಂಡ್ರು. ರೂಪಾ ವೈನಿಗೆ ಸ್ವಲ್ಪ ಇರುಸು ಮುರುಸಾತು.

ಅಯ್ಯೋ ಶ್ರೀಪಾದ್ ರಾವ್!!!! ಏ ಸುಮ್ನರ್ರೀ!!!! ಸಂತಿಯೊಳಗ ಸೀರಿ ಬಿಚ್ಚು ಕೆಲಸ ಮಾಡ್ಲಿಕತ್ತೀರಿ ನೋಡ್ರೀ. ನಿಮಗಂತೂ ನಾಚಿಗಿ, ಮಾನ, ಮರ್ಯಾದಿ ಇಲ್ಲ. ಮನಿತನದ ಮಾನ ಮರ್ಯಾದಿ ಕಳೀಲಿಕತ್ತೀರಿ. ಸುಮ್ಮಾಗ್ರೀ. ರಾತ್ರಿ ಎದ್ದರ ಕೂಡ್ರೀ ನೋಡ್ತೇನಿ. ನಾನ ಮೊದಲು ನಿಮಗ ಬಾರಿಸಿ ಬಾರಿಸಿ ಬಾರ್ಸಿಲೋನಾಕ್ಕ ಹೋಗಿ ಬೀಳು ಹಾಂಗ ಮಾಡ್ತೇನಿ, ಅಂತ ಸಿಟ್ಟಿನಿಂದ ಫೈನಲ್ ವಾರ್ನಿಂಗ್ ಕೊಟ್ಟರು ವೈನಿ.

ರೀ ವೈನಿ!!!ನನ್ನ ನಿಮ್ಮ ಪ್ರೀತಿ ಮೈದುನ ಅಂತ ಮ್ಯಾಲಿಂದ ಮ್ಯಾಲೆ ಅಂತೀರಿ. ನಾ ಒಂದು ಮಾತು ಹೇಳಲಿ  ಏನು? ನೀವು ತಪ್ಪು ತಿಳ್ಕೊಳೋದಿಲ್ಲ ಅಂದ್ರ ಮಾತ್ರ. ಹೇಳಲಿ ಏನು? - ಅಂತ ಹೇಳಿದೆ.

ಹ್ಞೂ.... ಹೇಳೋ ಮಂಗ್ಯಾನ್ ಮಸಡಿ ಮಂಗೇಶಿ. ನಿಮ್ಮ ಗೆಳಯ ಹಾಪ್ ಚೀಪ್ಯಾ ಏನ ಮಾಡಿದರೂ ಅವರನ್ನ ವಹಿಸಿಕೊಂಡು ಬಂದ ಬಿಡ್ತೀ. ಒತಿಕಾಟಕ್ಕ ಬೇಲಿ ಸಾಕ್ಷಿ. ಲಗೂನ ಹೇಳು. ಇಲ್ಲೆ ಹುಚ್ಚರ ಗತೆ ನಿನ್ನಂತ ಬೇಕಾರ್ ಆದ್ಮಿ ಜೊತಿ ಮಾತಾಡಿಕೋತ್ತ ನಿಂತೇವಿ. ಇಲ್ಲಂದ್ರ ಇಷ್ಟು ಹೊತ್ತಿಗೆ ಮಠಕ್ಕ ಹೋಗಿ ವಾಪಸ್ ಮನಿ ಸೇರಿಕೋತ್ತಿದ್ದಿವಿ. ಹ್ಞೂ ..... ಹೇಳು... ಹೇಳು, ಅಂತ ವೈನಿ ಅರ್ಜೆಂಟ್ ಮಾಡಿದರು.

ನೋಡ್ರೀ ವೈನಿ, ಈ ಸರೆ ಏನರೆ ನೈಯಾಗ್ರಾ ಗುಳುಗಿ ತೊಗೊಂಡು ಚೀಪ್ಯಾ ರಾತ್ರಿ ಏಳಬಾರದ ಟೈಮ್ ನ್ಯಾಗ್ ಎದ್ದು, ಬಾರ್ಸೋಣ ಬಾರಾ ಬಾರ್ಸೋಣ ಬಾರಾ ಅಂತ ನಿಮ್ಮನ್ನ ಕರಿಲೀಕತ್ತರ ನೀವು ಸ್ವಲ್ಪ ಸಹಕರಿಸಿರಿ. ನಂತರ ನೀವ ಅವನ್ನ ಎಬ್ಬಿಸಿ, ರೀ ಶ್ರೀಪಾದ್ ರಾವ್ ಪ್ಲೀಸ್ ಬಾರಿಸಿರಿ. ಪ್ಲೀಸ್ ರೀ ಅಂತ ನೀವ ಅವನ್ನ ಕಾಡ್ತೀರಿ. ಹಾಂಗ ಇರ್ತದ ಆ ನೈಯಾಗ್ರ ಜಲಪಾತದ ಸುತ್ತಾ ಮುತ್ತಾ ಇರೋ ಗಿಡ ಮೂಲಿಕೆಗಳಿಂದ ಮಾಡಿದ ನೈಯಾಗ್ರ ಔಷದ. ಒಂದು ಅವಕಾಶ ಕೊಟ್ಟು ನೋಡ್ರೀ ನಮ್ಮ ಚೀಪ್ಯಾಗ. ಪ್ಲೀಸ್ ರೀ ವೈನಿ, ಅಂತ ಹೇಳಿದೆ.

ಏನು ಸಹಕರಿಸಬೇಕೋ ಬೇವಕೂಫಾ? ರಾತ್ರಿ ಎದ್ದು ನಿಮ್ಮ ಚೀಪ್ಯಾ ಬಾರಿಸ್ತಾರಂತ ಅದಕ್ಕ ನಾ ಸಹಕರಿಸಬೇಕಂತ. ಅವರು ಹಿಂದಿನ ಹಾಂಗ ತಲಬು ಎದ್ದು ತಬಲಾ ಬಾರ್ಸಲಿಕತ್ತರ, ನಾ  ಏನು ತಾಳ  ಹಾಕ್ಕೋತ್ತ ಕೂಡ್ಲಿ ಏನು? ಆದರೂ ನೀ ನನ್ನ ಪ್ರೀತಿಯ ಮೈದುನ ಇಷ್ಟು ಜುಲ್ಮೀ ಮಾಡಿ ಹೇಳಿ ಅಂದ ಮ್ಯಾಲೆ ನೋಡೋಣ ಏನ ಇವರು ಕಿಸಿಯವರು ಇದ್ದಾರ ನಿಮ್ಮ ದೋಸ್ತ ಚೀಪ್ಯಾ ಉರ್ಫ್ ನಮ್ಮ ಸ್ವಾಮಿ ಶ್ರೀಪಾದ್ ರಾವ್, ಅಂದ್ರು ವೈನಿ tentatively ಓಕೆ ಅಂದ್ರು. 

ಚೀಪ್ಯಾ..... ನೋಡಲೇ ಎಲ್ಲಾ ಸೆಟ್ ಮಾಡಿ ಕೊಟ್ಟೇನಿ. ಜಾ ಕೆ ಮೈದಾನ್ ಮಾರೋ ಜೀ.  ವಿಜಯೀ ಭವ, ಅಂತ ಕಣ್ಣ ಹೊಡೆದು ಬೆಸ್ಟ್ ವಿಷಸ್ ಹೇಳಿದೆ.

ಬಾರಿಸು ಕನ್ನಡ ಡಿಂಡಿಮವ.... ಓ ಕರ್ನಾಟಕ ಹೃದಯ ಶಿವ.... ಬಾರಿಸೋಣ ಬಾರಾ ಬಾರಿಸೋಣ ಬಾರಾ ಅಂತ ಅಲ್ಲೇ ಮತ್ತ ಡಾನ್ಸ್ ಮಾಡಿಕೋತ್ತ ಖುಷಿಂದ ಕುಣಿಲಿಕತ್ತ ಚೀಪ್ಯಾ.

ಹತ್ತ ಸರೆ ಥ್ಯಾಂಕ್ಸ್ ಪಾ ದೋಸ್ತ ಥ್ಯಾಂಕ್ಸ್ ಪಾ ದೋಸ್ತ ಅಂದ ಚೀಪ್ಯಾ

ಚೀಪ್ಯಾನ ಹತ್ತರ ಕರದೆ. ಬಂದ.

ಲೇ....ಮಂಗ್ಯಾನ್ ಕೆ.... ಭಾಳ ಖುಷ್ ಆಗಬ್ಯಾಡ. ಹೋಗಿ ಹೋಗಿ ಡಾ. ಎಸ್. ಎಸ್. ಉಳ್ಳಾಗಡ್ಡಿ ಕಡೆ ಔಷಧ ತೊಗೊಂಡು ಬಂದಿ. ಅದು ವರ್ಕ ಆಗೋದು ಖರೆ ಇಲ್ಲ. ಸುಮ್ಮನ ರಾತ್ರಿ ವೈನಿ ಎಬ್ಬಿಸಿ ಬೈಸ್ಕೊಬ್ಯಾಡ. ಅವರ ಕಡೆ ಕಟಿಸಿಕೊಂಡು ನಾದಿಸ್ಕೋಬ್ಯಾಡ. ಅವರಿಗೆ ಸಿಟ್ಟು ಬಂದು ಬಾರ್ಸಿ ಒತ್ತಾ ಒದ್ದರ ಸೀದಾ ಟಿಕೆಟ್ ಇಲ್ಲದ ಬಾರ್ಸಿಲೋನಾಕ್ಕ ಹೋಗಿ ಬಿದ್ದು ಎದ್ದು  ಬರ್ತೀ. ನೋಡ್ಕೋ ಮತ್ತ. ಜ್ವಾಕಿಪಾ  ಜ್ವಾಕಿ, ಅಂತ ವಾರ್ನಿಂಗ್ ಕೊಟ್ಟೆ.

ದೋಸ್ತ ನೀ ಚಿಂತಿ ಮಾಡಬ್ಯಾಡ. ಉಳ್ಳಾಗಡ್ಡಿ ಡಾಕ್ಟರ್ ಫುಲ್ ಗ್ಯಾರಂಟೀ ಕೊಟ್ಟಾನೋ, ಅಂದ ಚೀಪ್ಯಾ.

ಹಾಂಗಿದ್ರಾ ಹೋಗಿ ಬಾ. ಒಳ್ಳೆದಾಗಲಿ, ಅಂದೆ. 

ಏ ಭೀಮು, ಅಂತ ನಮ್ಮ ಪಾನವಾಲಾ ಭೀಮುಗ ಕರದೆ.

ಭೀಮು ಅವನ ಅಂಗಡಿ ಮುಂದ ತೂಗು ಹಾಕಿದ್ದ ಮ್ಯಾಗಜೀನ್ಸ್ ಸ್ವಲ್ಪ ಆ ಕಡೆ ಈ ಕಡೆ ಸರಿಸ್ಕೊಂಡು ಮಾರಿ ಹೊರಗ ಹಾಕಿದ.

ಏನ್ರೀ ಸರ್ರ? ಮತ್ತೇನು ಬೇಕು? ಪಾನೋ? ಮತ್ತೊಂದು ಮಾವಾನೋ? - ಅಂತ ಕೇಳಿದ.

ಭೀಮು ಇಲ್ನೋಡು. ನಮ್ಮ ಚೀಪ್ಯಾ ಸಾಹೇಬ್ರೀಗೆ ಒಂದು 'ಸ್ಪೆಶಲ್' ಅಂದ್ರ ಅದ ಸ್ಪೆಶಲ್ ಪಾನ್ ಮಾಡಪಾ. ಸ್ಪೆಶಲ್ ಅಂದ್ರ ತಿಳಿತೋ ಇಲ್ಲೋ? ಮಹಾ ಸ್ಪೆಶಲ್, ಅಂತ ಕಣ್ಣ ಹೊಡದೆ.

ಓಹೋ ..... ಅದು ಅದು... ಗೊತ್ತಾತ ಬಿಡ್ರೀ. ಫೇಮಸ್ 'ಪಲ್ಲಂಗ್ ತೋಡ್' ಪಾನ್, ಅಂತ ಮೀಸಿ ಕೆಳಗ ನಕ್ಕೋತ್ತ ಭೀಮು ಪಾನ್ ಮಾಡ್ಲಿಕತ್ತಿದ. ಪಾನ್ ಮಾಡಿ ಪುಡಿಕಿ ಕಟ್ಟಿ ಕೊಟ್ಟ.

ಚೀಪ್ಯಾ.... ನಿನ್ನ ಉಳ್ಳಾಗಡ್ಡಿ ಡಾಕ್ಟರ್ ಕೊಟ್ಟ ನೈಯಾಗ್ರಾ ಗುಳಗಿ ಕೆಲಸಾ ಮಾಡ್ತದೋ ಇಲ್ಲೋ ಗೊತ್ತಿಲ್ಲ.  ಆದ್ರ ಈ ಪಾನ್ ಮಾತ್ರ ಗ್ಯಾರಂಟೀ ಮಾಡ್ತದ ನೋಡಪಾ, ಅಂದು ಅವಂಗ ಪಾನ್ ಕೊಟ್ಟೆ.

ಮಸ್ತಾತೋ ದೋಸ್ತಾ!!!ಡಬಲ್ ಎಫೆಕ್ಟ್. ಗುಳಗಿದು ಮತ್ತ ಪಾನಿಂದು. ಥ್ಯಾಂಕ್ಸ್ ಮಾರಾಯ. ಥ್ಯಾಂಕ್ಸ್ ಮಾರಾಯ, ಅಂತ ಭಾಳ ಥಾಂಕ್ಸ್ ಹೇಳಿದ ಚೀಪ್ಯಾ.

ಹ್ಮಂ... ನಡಿ ನಡಿ. ಹೋಗುವಾಗ ಎಲ್ಲರ ಬಡಗ್ಯಾ (ಕಾರ್ಪೆಂಟರ್) ಸಿಕ್ಕರ ಹೇಳಿಯೇ ಹೋಗಿಬಿಡು. ನಾಳೆ ಮಂಚಾ ರಿಪೇರ್ ಮಾಡಲಿಕ್ಕೆ ಬೇಕಾದೀತು, ಅಂತ ಕಣ್ಣ ಹೊಡದ ಹೇಳಿದೆ.

ಯಾಕ? - ಅಂತ ಪಕ್ಕಾ ಯಬಡೇಶಿ  ಹಾಂಗ ಕೇಳಿದ ಚೀಪ್ಯಾ. 

ನನಗೂ ಉರೀತು. ಗುಳಗಿ  ತೊಗೊಂಡವನ್ನ ವೈನಿಗೆ ಓಳು ಬಿಟ್ಟು ಏನೇನೋ ಹೇಳಿ ಬಚಾವ ಮಾಡಿದೆ. ಬಾರಿಸಲಿಕ್ಕೆ ಮಧ್ಯರಾತ್ರಿ ಎದ್ದರ ರಿವರ್ಸ್ ಇವಂಗ ಎಕ್ಕಾ ಮಕ್ಕಾ ಬಾರಿಸಿ ಬಾರ್ಸಿಲೋನಾಕ್ಕ ಒದ್ದು ಓಡಸ್ತೇನಿ ಅಂದ ರೂಪಾ ವೈನಿಗೆ ಹ್ಯಾಂಗೋ ಮಾಡಿ ಸಮಾಧಾನ ಮಾಡಿ, ನಮ್ಮ ಚೀಪ್ಯಾ ಎದ್ದು ಬಾರಿಸೋಣ ಬಾರಾ ಅಂದ್ರ ಸಹಕರಿಸಿ ಅಂತ ಹೇಳಿ ಫುಲ್ ಸ್ಟೇಜ್ ಸೆಟ್ ಮಾಡಿ ಕೊಟ್ಟೆ. ಮ್ಯಾಲೆ ಸ್ಪೆಶಲ್ ಪಲ್ಲಂಗ್ ತೋಡ್ ಪಾನ್, ನೂರೈವತ್ತು ರುಪೆ ಕೊಟ್ಟು ಮಾಡಿಸಿಕೊಟ್ಟು, ಇದನ್ನೂ ಹಾಕಪಾ ಅಂತ ಸಲಹೆ ಕೂಡ ಕೊಟ್ಟೆ. ಯಾವದಕ್ಕೂ ಇರಲಿ ಅಂತ ಹೇಳಿ  ಕಾರ್ಪೆಂಟರ್ ಗೂ ಮಾತಾಡ್ಸಿ ಹೋಗಿ ಬಿಡೋ ಅಂತ ಗೈಡೆನ್ಸ್ ಕೂಡ ಕೊಟ್ಟೆ.

ಇಷ್ಟೆಲ್ಲಾ ಸ್ಟೆಪ್ ಬೈ ಸ್ಟೆಪ್ ಹೇಳಿಕೊಟ್ಟರೂ ಕೊನಿಗೆ ಇಷ್ಟ ದೊಡ್ಡ ಬಾಯಿ ಬಿಟ್ಟುಗೊಂಡು, ಯಾಕ?, ಅಂದ ನೋಡ್ರೀ.... ಯಾರಿಗೆ ಉರಿಯಂಗಿಲ್ಲ. ಎಷ್ಟಂತ ಸ್ಟುಪಿಡ್ ಮಂದಿ ಸಹಿಸಿಕೊಳ್ಳೋದು?

ಲೇ ಚೀಪ್ಯಾ..... ಹುಸ್ಸೂಳೆಮಗನ.... ಬಡಗ್ಯಾನ ಯಾಕ ಮೊದಲ ಬುಕ್ ಮಾಡಿಕೋ ಅಂದೇ ಅಂದ್ರ ಆ ಬಡಿಗ್ಯಾಗ ಬ್ಯಾರೆ ಉದ್ಯೋಗ ಇಲ್ಲ ನೋಡು. ಉದ್ಯೋಗಿಲ್ಲದ ಬಡಿಗ್ಯಾ ಏನೋ ಕೆತ್ತಿದನಂತ. ನಿಂದೂ ಕೆತ್ತತಾನ ತೊಗೋ. ಹೋಗಲೇ. ಹೇಳಿದ್ದು ಒಂದರ ಅರ್ಥ ಆದ್ರ? ಸಾಧ್ಯನ ಇಲ್ಲ. ಏನ್ ಬಡ್ಡಿ ತಲಿ ಇಟ್ಟಿಯೋ?- ಅಂತ ಬೈದು ನಾ ಹೊಂಟೆ.

ಏ, ದೋಸ್ತ, ಶಟಗೋಬ್ಯಾಡೋ. ಆತಪಾ ಪಾನ್ ಹಾಕೋ ಮೊದಲು ಕಾರ್ಪೆಂಟರ್ ಗೂ ಹೇಳೇ ಬಿಡ್ತೇನಿ. ಆತೇನಪಾ? - ಅಂದ ಚೀಪ್ಯಾ.

ಆದ್ರ ಇದಕ್ಕ 'ಪಲ್ಲಂಗ ತೋಡ್ ಪಾನ್' ಅಂತ ಯಾಕಂತಾರ?, ಅಂತ ಕೇಳಿದ.

ಏನ್ ಹೇಳೋದು? ಇಂತಾ ಮಂದಿಗೆ. ತಲಿನ ಇಲ್ಲ. ಮಂಗ್ಯಾ ಮಾಡೋಣ ತಡಿ ಅಂತ ಏನೋ ಹೇಳಿದೆ. ಹಾಪಾ ಕೇಳಿದ. ಭಕ್ತಿಯಿಂದ ಭಕ್ತ ಕುಂಬಾರ  ಕೇಳಿದಂಗ ಬಾಯಿ ಬಿಟ್ಟುಗೊಂಡು ಕೇಳಿದ. 

ಪಲ್ಲಂಗ ಅಂದ್ರ ಲವಂಗ ಇದ್ದಂಗ. ಸಾದಾ ಪಾನಿಗೆ ಮ್ಯಾಲೆ ಲವಂಗ ಚುಚ್ಚಿರ್ತಾರ ನೋಡು. ಇದಕ್ಕ ಲವಂಗದ ಅಣ್ಣ ಹಾಂಗ ಇರೋ ಪಲ್ಲಂಗ ಅನ್ನೋದನ್ನ ಚುಚ್ಚಿರ್ತಾರ. ಅದಕ್ಕ ಪಲ್ಲಂಗ. ಮತ್ತ ಪಾನ್ ಹಾಕಿ ಅದನ್ನ ಕಚಾ ಪಚಾ ತಿನ್ನುವಾಗ ಪಲ್ಲಂಗ  ಮುರೀತದ ನೋಡು ಅದಕ್ಕ ಪಲ್ಲಂಗ ತೋಡ್ ಅಂತ. ಸಾಕ್ ಹೋಗು. ಅಷ್ಟ ನೆನಪಿಡು. ಪಾನ್ ಮಾತ್ರ ನೀನ ತಿನ್ನು.  ವೈನಿ ಏನರ ಪಾನ್ ತಿಂದ್ರ ನಿನ್ನ ಗತಿ ಅಷ್ಟ ಮತ್ತ, ಅಂತ ಹೇಳಿ ಈ ಸಲೆ ನಾ ಖರೇನ ಅಲ್ಲಿಂದ ಜಾಗಾ ಖಾಲಿ ಮಾಡಿದೆ.

ಚೀಪ್ಯಾ ಮಾತ್ರ ಪಾನ್ ಮ್ಯಾಲಿಂದ ಕೆಳಗ ನೋಡಿಕೋತ್ತ ನಿಂತಿದ್ದ.

ಹಿಂದ ಇದ್ದ ರೂಪ ವೈನಿ ಒಂದು ಗುಟುರು ಹಾಕಿದರು.

ಹೊಂಡ್ರೀ ಇನ್ನು.  ಎಷ್ಟೊತ್ತು?, ಅಂದ್ರು ವೈನಿ.

ಚೀಪ್ಯಾ ಹೊಂಟ. ಮುಂದೇನೋ? 

ದಿ ಎಂಡ್!

** ಚೀಪ್ಯಾ, ರೂಪಾ ವೈನಿ ಅವರ ಪಾತ್ರ ಪರಿಚಯಕ್ಕಾಗಿ ಓದಿ - ಟಗರ್ಮಂಗೋಲಿ!

Friday, February 01, 2013

ಗೌಡಾ

ಕರೀಂ ಮತ್ತ ಸಿಕ್ಕಿದ್ದ.

ಸಾಬ್.....ನಮ್ಮದು ಬೇಗಂ ಲೌಡಾ (!) ತಂದುಕೊಂಡುಬಿಟ್ಟಿದೆ - ಅಂದ ಕರೀಂ ಉಸ್ಸಪ್ಪಾ ಅಂತ ಹಸಿರ ಶಾಲಿಂದ ಬಕ್ಕ ತಲಿ ಒರೆಸಿಕೊಂಡು ಸ್ವಲ್ಪ ಹಗುರಾದ.

ಸಾಬ್ರಾ!!!!! - ಅಂತ ಚೀರಿದೆ.

ಕ್ಯಾ ಸಾಬ್.....ನಮ್ಮದು ತಲಿ ಇಲ್ಲೆ ಬಾರಾ ಆಣಾ ಆದ್ರೆ, ಮತ್ತೂ ಚೀರಿ ನಮ್ಮದೂಕೆ ತಲಿ ತೇರಾ ಆಣಾ ಯಾಕೆ ಮಾಡ್ತೀರಿ? - ಅಂತ ಕೊಂಚ ಅಸಹನೆಯಿಂದ ಹೇಳಿದ ಕರೀಂ ಒಂದು ಜರ್ದಾ ಪಾನ್ ಒಳಗ ಹೆಟ್ಟಿಗೊಂಡ. ಬಾಯಿಯೊಳಗ ಹೆಟ್ಟಿಗೊಂಡ. ಮತ್ತೆಲ್ಲೂ ಅಲ್ಲ.

ಮತ್ತೇನ್ರೀ.....????? ಹಿಂದ ಮುಂದ ನೋಡ್ಕೊಳ್ಳದ, ಶುಕ್ರವಾರ ದಿನ ಎಲ್ಲಾ ಹೆಂಗಸೂರು ಮಹಾಲಕ್ಷ್ಮಿ ವಾರ ಅನಕೋತ್ತ, ಬಾಗೀನ  ಅದು ಇದು ಅಂತ ಏನೇನೋ ಕೊಟ್ಟು ಏನೇನೋ ತಂದುಕೊಂಡ್ರಾ, ನಿಮ್ಮ ಬೇಗಂ, ಅಯ್ಯೋ ನಾ ಹೇಳಲಾರೆ, "ಅದನ್ನ" ತಂದುಕೊಂಡಾಳ, ಅಂತ ಹೇಳ್ತೀರಲ್ಲಾ? ಚೀರದ ಮತ್ತೇನು ಮಾಡ್ಬೇಕು? ಶಾಂತಂ, ಪಾಪಂ - ಅಂದು ಗಲ್ಲಾ ಗಲ್ಲಾ ಬಡಕೊಂಡೆ.

ನಾ ಗಲ್ಲಾ ಬಡುಕೊಂಡ್ರ ಮಂಗ್ಯಾನ್ ಕೆ ಕರೀಂ ಅಂಡು ತಟ್ಟಿಕೊಂಡು ಪೆಕ ಪೆಕಾ,  ಕೆರಾ ಪೆರಾ ಅಂತ ನಕ್ಕ. ನಗು ಅಬ್ಬರದೊಳಗ ಜರ್ದಾ ಪಾನ್ ಪಿಚಕಾರಿ ಸಹಿತ ಹಾರಿತು. ಇಶ್! ಕೆಂಪ ರಾಮ ರಾಡಿ.

ಸಾಬ್....ನಿಮ್ಮದು ಕಿವಿ ಸಚ್ಚಿ ಮೆ ಬರ್ಬಾದ್ ಆಗಿದೆ. ನಾವು ಅಂದಿದ್ದು ಗೌಡಾ ಅಂತಾ. ನಿಮಗೆ ಅದು ಲೌಡಾ ಅಂತಾ ಕೇಳಿದ್ರೆ ನಾವೇನು ಮಾಡೋಣಾ? - ಅಂದ ಕರೀಂ ಮತ್ತೂ ನಕ್ಕ.

ಯಾಕ ಹೀಂಗಾಗ್ತದ? ಆವಾ ಹೇಳೋ ಸ್ಟೈಲೋ ಏನೋ? ಗೊತ್ತಿಲ್ಲ. ಬರೆ ಮನಿಹಾಳ ಶಬ್ದನ ಕೇಳ್ತಾವ.

ಓಹೋ! ಗೌಡನ್ನ ಕರ್ಕೊಂಡು ಬಂದ್ರ ನಿಮ್ಮ ಬೇಗಂ? ಯಾಕ?- ಅಂತ ಕೇಳಿದೆ.

ಅಯ್ಯೋ....ಗೌಡನ್ನ ಕರ್ಕೊಂಡು ಬರಲಿಲ್ಲ ಸಾಬ್. ಗೌಡಾನ ತೊಗೊಂಡು ಬಂದ್ರು - ಅಂದ ಕರೀಂ.

ಇವಂಗ ಮೊದಲ ಕನ್ನಡ ಸರಿ ಬರಂಗಿಲ್ಲ. ಹಿಂದೊಮ್ಮೆ ಹೆಂಡ್ತೀಗೆ ಮಿಠಾಯಿ ತಿನ್ನಸ್ತೇನಿ ಅನ್ನೋದಕ್ಕ ಮಿಠಾಯಿ ಸಿಗಸ್ತೇನಿ ಅಂದಿದ್ದ. ಹೀಂಗ ಇರೋ ಇವನ ಕನ್ನಡಕ್ಕ ನಾವ ಹೊಂದ್ಕೊಬೇಕು.

ಅಲ್ಲ...ಗೌಡನ್ನ ಕರ್ಕೊಂಡು ಬರಲಿಕ್ಕೆ ನಿಮ್ಮ ಬೇಗಂ ಅವರದ್ದು ಅಡಕಿ ತ್ವಾಟ ಅದ ಏನು? - ಅಂತ ಕೇಳಿದೆ.

ಅಯ್ಯೋ ಸಾಬ್....ನಿಮಗೆ ಸುಬೆ ಸುಬೆ ಚಾಯ್ ನಾಷ್ಟಾ ಆಗಿಲ್ಲ ಕ್ಯಾ? ನಮ್ಮ ಬೇಗಂ ಗೌಡಾನ ತೊಗೊಂಡು ಬರೋದಕ್ಕೂ ಅಡಿಕಿ ತ್ವಾಟಕ್ಕೂ ಏನು ಸಂಬಂಧ? ಕುಚ್ ಭೀ ಬೋಲ್ತಾ ಹಾಪ್ ಸಾಬ್ - ಅಂದ ಕರೀಂ. ಸ್ವಲ್ಪ ಇರಿಟೇಟ್ ಆಗಿದ್ದ.

ಅಲ್ಲರೀ ಸಾಬ್ರಾ...ಅಡಿಕಿ ತ್ವಾಟಕ್ಕ ಭಾಳ ನಮ್ಮನಿ ಗೌಡಗುಳು ಬರ್ತಾರ. ಅಡಕಿ ಕೊನೆ ಕೊಯ್ಯೋ ಕೊನೆ ಗೌಡ. ತ್ವಾಟಕ್ಕ ಮಣ್ಣು ಹಾಕೋ ಮಣ್ಣು ಗೌಡ. ಗೊಬ್ಬರದ ಗುಂಡಿ ಖಾಲಿ ಮಾಡ್ಸೋ ಗುತ್ತಗಿ ಹಿಡಿಯೋ ಜಿ.ಜಿ.ಗೌಡ. ಮತ್ತ ತಂಡದ ಶೇರುಗಾರ ಗೌಡ. ಹೀಂಗ ಎಲ್ಲಾ ತರಹದ ಆಳುಗಳು ಒಂದಲ್ಲ ಒಂದು ತರಹದ ಗೌಡಗಳೇ ನೋಡ್ರೀ. ಅದಕ್ಕ ಕೇಳಿದೆ. ಯಾವ ನಮೂನಿ ಗೌಡನ್ನ ನಿಮ್ಮ ಮಿಸೆಸ್ ಕರ್ಕೊಂಡು ಬಂದಾರ ಅಂತ? ತಿಳೀತ? - ಅಂತ ಕೇಳಿದೆ.

ಜಿ ಜಿ ಗೌಡಾ ಅಂದ್ರೆ ಸಾಬ್? - ಅಂತ ಕೇಳಿದ ಕರೀಂ.

ಅಷ್ಟು ಮಂದಿ ಅಡಿಕಿ ಗೌಡರ ಬಗ್ಗೆ ಹೇಳಿದರ ಅದೊಂದ ಅವನ  ತಲಿಯೊಳಗ ನಿಂತದ - ಜಿ ಜಿ ಗೌಡಾ.

ಅದರೀ....ಜಿ ಜಿ ಗೌಡಾ ಅಂದ್ರ ಗೊಬ್ಬರ ಗುಂಡಿ ಗೌಡಾ ಅಂತ. ಶಾರ್ಟ್ ಮಾಡಿ ಹೇಳ್ತೇವಿ. ಅಷ್ಟ. - ಅಂದೆ.

ಈ ಪೈಕಿ ಯಾವದೇ ಗೌಡ ಅಲ್ಲ ಬಿಡಿ ಸಾಬ್. ಮುಂದೆ ಗೆಸ್ ಮಾಡಿ ನೋಡೋಣ. ಏನು ಭಾಳಾ ಹೋಶಿಯಾರ್ ಅಂತಾ ತಿಳಕೊಂಡೀರಿ ಕ್ಯಾ? ಗೆಸ್ ಮಾಡಿ. ಮಾಡಿ - ಅಂದ ಕರೀಂ. ಚಾಲೆಂಜ್ ಮಾಡಿದ. 

ಹಾಂಗ? ಮತ್ಯಾವ ಗೌಡಾ ಇರಬಹುದು? ಅಂತ ವಿಚಾರ ಮಾಡಿದೆ.

ಅಡಿಕಿ ತ್ವಾಟದ ಗೌಡಗೋಳು ಅಲ್ಲಾ ಅಂದ್ರ, ಮತ್ತೇನು ರಾಜಕೀಯದ ಗೌಡರೇನ್ರೀ ಸಾಬ್ರಾ? ಅಂದ್ರ ದೇವೇಗೌಡ, ಮಾದೇಗೌಡ, ಹುಚ್ಚ ಮಾಸ್ತಿ ಗೌಡ, ಚಿಗರೆ ಮಾಚಿ ಗೌಡ, ನಾಗೇಗೌಡ ಅಂತ ದೊಡ್ಡ ದೊಡ್ಡ ರಾಜಕೀಯ ಮುಖಂಡರು ಗೌಡ ಅನ್ನೊ ಹೆಸರೀಲೆ ಇದ್ದರು. ಅವರ ಪೈಕಿ ಯಾರನ್ನಾರ ಕರ್ಕೊಂಡು ಬಂದಾರೇನು? ಯಾಕ? - ಅಂತ ಕೇಳಿದೆ.

ಅಯ್ಯೋ....ಇಲ್ಲ ಸಾಬ್. ಮತ್ತೆ ಗಲತ್ ಜವಾಬ್. ಇದು ಆದಮೀ ಗೌಡಾ ಅಲ್ಲವೇ ಅಲ್ಲ. ಸಮಝೆ ಕ್ಯಾ? - ಅಂತ ನಿಗೂಢ ಲುಕ್ ಕೊಟ್ಟ ಕರೀಂ.

ಮತ್ತೆಂತಾ ಗೌಡಾ? ನೀನ ಹೇಳಪಾ. ಭಾಳ ಶಾಣ್ಯಾ ಆಗಿ. ಏನೇನೋ ಕೊಸ್ಚನ್ ಕೇಳಿ ಮಂಗ್ಯಾ ಮಾಡ್ತೀ. ಹಾಂ...ಹಾಂ...- ಅಂದು ಶರಣು ಶರಣಾರ್ಥಿ ಪೋಸಿನ್ಯಾಗ ನಿಂತೆ.

ಸಾಬ್...ಗೌಡಾ ಅಂದ್ರೆ ಹರಿನರಿ ಡಾಕ್ಟರೇಟ್. ಸಮಝೆ ಕ್ಯಾ? - ಅಂದ ಕರೀಂ ಮತ್ತೊಂದು ಹೊಸ ಬಾಂಬ್ ಹಾಕಿದ.

ಹರಿನರಿ ಡಾಕ್ಟರೇಟ್!!!!!?????

ಅಂದ್ರ ಏನು? ನಿಮ್ಮ ಬೇಗಂ ಹರಿಗೂ ನರಿಗೂ ಔಷಧ ಕೊಡೋ ಡಾಕ್ಟರ್ ಆಗ್ಯಾರ ಏನು? ಇಷ್ಟ ಲಗೂ? ಒಂದೊಂದಕ್ಕ ಕಮ್ಮಿ ಕಮ್ಮಿ ಅಂದ್ರೂ ಐದು ಐದು ವರ್ಷ ಬೇಕು. ಹ್ಯಾಂಗ ಇಷ್ಟು ಲಗು ಡಾಕ್ಟರ್ ಆದರು? - ಅಂತ ಫುಲ್ ಕಂಫ್ಯೂಸ್ ಆಗಿ ಕೇಳಿದೆ.

ಅಯ್ಯೋ....ಜನದ್ದು ದನದ್ದು ಡಾಕ್ಟರ್ ಅಲ್ಲ ಸಾಬ್. ಗೌಡಾ ಅಂದ್ರೆ ಒಂದು ತರಹರದ ಡಾಕ್ಟರ್ ಹೌದು. ಆದ್ರೆ ದವಾ ಕೊಟ್ಟು ಇಲಾಜ್ ಮಾಡೋ ಡಾಕ್ಟರ್ ಅಲ್ಲ - ಅಂದ ಕರೀಂ.

ಅದಲ್ಲ ಅಂದ್ರ, ದುವಾ ಮಾಡಿ ಇಲಾಜ್ ಮಾಡೋ ಡಾಕ್ಟರ್ ಏನು? ನಿಮ್ಮ ಹೆಂಡ್ತೀ ನಿಮ್ಮ ಪದ್ಧತಿ ಪ್ರಕಾರ ಪೂಜಾ ಅದು ಇದು ಮಾಡೋ ಭಡ್ತೀ ಆಗ್ಯಾರೇನೂ ? - ಅಂತ ಕೇಳಿದೆ.

ಇಲ್ಲಾ ಸಾಬ್....ನಿಮಗೆ ತಿಳಿಯೋದಿಲ್ಲ. ಗೌಡಾ ಅಂದ್ರೆ ಒಂದು ತರಹದ ಇಜ್ಜತವಾಲಾ ಡಾಕ್ಟರೇಟ್. ಅದಕ್ಕೆ ಏನೋ ಗುರವ್ವಂದು ಡಾಕ್ಟರೇಟ್ ಅಂತಾರಂತೆ. ಅದಕ್ಕೆ ಶಾರ್ಟ್ ಆಗಿ ಗೌಡಾ ಅಂತ ಹೇಳ್ತಾರೆ. ನಿಮಗೆ ತಿಳದೀತು ಅಂತ ಹಾಗೆ ಅಂದ್ರೆ, ಏನೇನೋ ಇಲ್ಲದ ಕಹಾನಿ ಹೇಳ್ತೀರಿ. ಇದ್ದ ಅಕಲ್ ಎಲ್ಲಾ ಎಲ್ಲಿ ಗಾಯಬ್ ಆತು ಸಾಬ್? - ಅಂದು ಅಣಕಿಸಿದ ಕರೀಂ.

ಹಾಂ?!!!!ಗುರವ್ವಂದು ಡಾಕ್ಟರೇಟ್!!! ಅಂದ್ರ? ಇನ್ನು ಮುಂದ ಲಿಂಗವ್ವಂದು, ಮಂಗವ್ವಂದು ಅಂತ ಎಲ್ಲಾ ಬ್ಯಾರೆ ಬ್ಯಾರೆ ಮಂದಿ ಡಾಕ್ಟರೇಟ್ ಸಹಿತ ಬರ್ತಾವೇನು? ಅಂತ ಸಂಶಯ ಬಂತು.

ಏನೋ ಹೊಳಿತು. ಇಜ್ಜತವಾಲಾ ಡಾಕ್ಟರೇಟ್. ಇಜ್ಜತ್ ಅಂದ್ರ.....ಗೌರವ. ಗೌರವ ಡಾಕ್ಟರೇಟ್. ಅಂದ್ರ....ಗೌಡಾ!!!!!! ಅಂದ್ರ ಆನರರಿ (honorary) ಡಾಕ್ಟರೇಟ್. ಇವ ಹರಿನರಿ ಅಂದಾನ. ಏನೂ ಹೊಸದಲ್ಲ. ಅವನ ಕನ್ನಡ ಇಂಗ್ಲಿಶ್ ಎಲ್ಲ ಭಾಳ ತುಟ್ಟಿ.

ಸಾಬ್ರ....ನಿಮ್ಮ ಮಿಸೆಸ್ ಗೌರವ ಡಾಕ್ಟರೇಟ್ ತಂದುಕೊಂಡಾರ? ಅದಕ್ಕ ಗೌಡಾ, ಹರಿನರಿ ಡಾಕ್ಟರೇಟ್, ಇಜ್ಜತವಾಲ ಡಾಕ್ಟರೇಟ್ ಅಂತ ಏನೇನೋ ಅನ್ತೀರಲ್ಲರೀ. ಏನ್ರೀ? ಅವರು ಅಲ್ಲೆ  ಡಾಕ್ಟರೇಟ್ ಅದು ಇದು ತೊಗೊಂಡರ ನಿಮ್ಮ ಅಕಲ್ ಎಲ್ಲೆ ಹೊಂಟದ ದನಾ ಕಾಯಲಿಕ್ಕೆ? ಸರೀತ್ನಾಗಿ ಕನ್ನಡ ಸಹಿತ ಮಾತಾಡೋದಿಲ್ಲ ನೀವು - ಅಂತ ಕಾಡಸಿದೆ.

ಸಾಬ್....ನಮಗೇನು ಗೊತ್ತು ಸಾಬ್? ಯಾವದೋ ಪತ್ರಿಕೆಯಲ್ಲಿ  "ಮೆಹರುನ್ನೀಸಾ ಬೇಗಂ ತಂದುಕೊಂಡ ಗೌಡಾ" ಅಂತ ಬಂದಿತ್ತು ಸಾಬ್. ನಾವು ಕೇಳಿದ್ದಕ್ಕೆ, ನಮ್ಮ ಬೇಗಂ, ಅವರಿಗೆ ಯಾವದೋ ಯೂನಿವರ್ಸಿಟಿ ಆಕಿಗೆ ಇಜ್ಜತವಾಲಾ ಡಾಕ್ಟರೇಟ್ ಕೊಟ್ಟಿದೆ, ಅಂತ ಹೇಳಿದಳು ಸಾಬ್ - ಅಂತ ಹೇಳಿದ ಕರೀಂ ಅವನ ಹಾಪ್ ಬೇಗಂಗೆ ಗೌಡಾ ಹ್ಯಾಂಗ ಸಿಕ್ಕಿತು ಅನ್ನೋದನ್ನ ಹೇಳಿದ.

ಅಲ್ಲ ಸಾಬ್ರ...ಗೌಡಾ ನಾರ್ಮಲೀ ದೊಡ್ಡ ದೊಡ್ಡ ಕೆಲಸ ಮಾಡಿದ ಮಂದಿಗೆ ಯೂನಿವರ್ಸಿಟಿಗಳು ಅವಾಗೇ ಕೊಟ್ಟು ತಮ್ಮ ಗೌರವ ಹೆಚ್ಚು ಮಾಡಿಕೊಳ್ಳತಾವ. ಹಾಂಗಿರೋವಾಗ ನಿಮ್ಮ ಹೆಂಡ್ರು ಗೌಡಾ ತಂದುಕೊಂಡ್ರು ಅಂದ್ರ ಏನು ಅರ್ಥ? - ಅಂತ ಕೇಳಿದೆ.

ಹೌದು ಸಾಬ್....ನಮ್ಮದೂಕೆ ೫ ಲಕ್ಷ ರೂಪಾಯಿ ಮುಂಡಾಯಿಸಿ ಅವಳು ಗೌಡಾ ತಂದುಕೊಂಡಿದ್ದಾಳೆ - ಅಂದ ಕರೀಂ ಒಂದು ದೊಡ್ಡ ನುಕ್ಸಾನ್ ಆದ ಬಗ್ಗೆ ವಿಷಾದ ಭಾವದಿಂದ ಹೇಳಿದ. 

ಹೋಗ್ಗೋ ನಿಮ್ಮ!!!! ರೊಕ್ಕಾ ಕೊಟ್ಟು ಗೌಡಾ ತಂದುಕೊಂಡ್ರ? ಯಾವ ಯೂನಿವರ್ಸಿಟಿಯಿಂದ? ಚೊಲೋ ರೆಪ್ಯೂಟೆಡ್ ಯೂನಿವರ್ಸಿಟಿ ಯಾವದೂ ಹಾಂಗ ಕೊಡೋದಿಲ್ಲ. ಹಾಂ ಹಾಂ? - ಅಂತ ಕೇಳಿದೆ.

ಸಾಬ್....ನಮ್ಮದು ಬೇಗಂ ಆಫ್ಘಾನಿಸ್ತಾನದ TITS ಅನ್ನೋ ಯೂನಿವರ್ಸಿಟಿಯಿಂದ ಗೌಡಾ ತಂದುಕೊಂಡಿದ್ದಾಳೆ - ಅಂದ ಕರೀಂ ಮತ್ತೊಂದು ಬಾಂಬ್ ಹಾಕಿದ.

ಶಂಭೋ ಶಂಕರ!!!!ಶಿವಾ ಶಿವಾ!!! ನೀನು ಗೌಡಾ ಅಂದಿದ್ದು ನನಗ ಲೌಡಾ ಅಂತ ಕೇಳಿದ್ದು ಈ TITS ಯೂನಿವರ್ಸಿಟಿ ಮಹಿಮೆ ಇರಬೇಕು ನೋಡು. ಅಸಡ್ಡಾಳ್ ಡಿಗ್ರೀ, ಅಸಡ್ಡಾಳ್ ಯೂನಿವರ್ಸಿಟಿ ಹೆಸರು. ಛೀ...ಛೀ....ಅಸಹ್ಯ.....TITS ಅಂತ ಯಾವ ಯೂನಿವರ್ಸಿಟಿ ಹೆಸರು ಇರ್ತದೋ? - ಅಂತ ಹೇಳಿದೆ.

ಕರೀಂ ತನ್ನ ಸ್ಮಾರ್ಟ್ ಫೋನ್ ತೆಗೆದವನ ಏನೇನೋ ಕುಟುಕುಟು ಕುಟ್ಟಿ TITS ಯೂನಿವರ್ಸಿಟಿ ವೆಬ್ ಸೈಟ್ ತೋರ್ಸೇ ಬಿಟ್ಟ.

ತಾಲಿಬಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನೊಲೊಜಿ & ಸಾಯಿನ್ಸ್ (TITS) ಅಂತ ಒಂದು ಆಫ್ಘಾನಿಸ್ತಾನದ ಯುನಿವರ್ಸಿಟಿ ನನ್ನ ಮಸಡಿ ಮುಂದ ರಾರಾಜಿಸುತ್ತಿತ್ತು. 

ಏನು ಸಾಬ್? TITS ಅಂದ್ರೆ ಏನು ಪ್ರಾಬ್ಲೆಮ್? ನೀವೂ ಸಹಿತ TITS ನಿಂದಾನೇ ಡಿಗ್ರಿ ಮಾಡಿದ್ದು. ಅಲ್ಲಾ?  - ಅಂದ ಕರೀಂ.

ಇಲ್ಲೋ ಪುಣ್ಯಾತ್ಮಾ ...ನಾ ಡಿಗ್ರಿ ಮಾಡಿದ್ದು BITS ನಲ್ಲಿ ಮಾರಾಯಾ. TITS ಅಲ್ಲ - ಅಂತ ವಿವರಣೆ ಕೊಟ್ಟೆ.

TITS, BITS ಎಲ್ಲಾ ಒಂದೇ ಅನ್ನೋ ಲುಕ್ ಕೊಟ್ಟ ಕರೀಂ. ನಮ್ಮ ಕರ್ಮ.

ಮತ್ತ ಒಂದೆರಡು ಲಿಂಕ್ ವತ್ತಿ ಅವನ ಬೇಗಂ ಡಿಗ್ರಿ ತೊಗೊಳ್ಳೋ ಫೋಟೋ ತೋರ್ಸೀದಾ. ಯಾರೋ ಪಠಾಣಿ ಸೂಟ್ ಹಾಕಿ ಕೊಂಡಿದ್ದ ದೊಡ್ಡ ದೊಡ್ಡ ಗಡ್ಡದ ತಾಲಿಬಾನ್ ಮೌಲವೀ ಅಂತಹ  ಮಂದಿ ಫುಲ್ ಪರ್ದಾದಿಂದ ಕವರ್ ಆಗಿದ್ದ ಆಕಾರ ಒಂದಕ್ಕ ಡಿಗ್ರಿ ಹಂತಾದ್ದೇನೋ ಕೊಡಲಿಕತ್ತಿದ್ದರು.

ಸಾಬ್ರಾ...ಯಾವಾಗ ಹೋಗಿ ಬಂದ್ರೀ ಅಫ್ಘಾನಿಸ್ತಾನಕ್ಕ? ಅಥವಾ ಬೇಗಂ ಒಬ್ಬರ ಹೋಗಿ ಡಿಗ್ರಿ ತೊಗೊಂಡು ಬಂದರೋ? ಅಲ್ಲಿಗೆ ಹೋಗೋದು ಭಾಳ ಕಠಿಣ ಅಂತ ಕೇಳೇನಿ. ಏನ್ ಕಥಿ? - ಅಂತ ಕೇಳಿದೆ.

ಯಾರೂ ಹೋಗಿಲ್ಲ ಸಾಬ್. ರೊಕ್ಕಾ ದುಬೈಗೆ ಹವಾಲಾ ಮೂಲಕ ಕಳಸಿದ್ವಿ. ಅಲ್ಲಿ ನಮ್ಮ ಮಾಮೂಜಾನ್ ಛೋಟಾ ವಕೀಲ್ ಇದ್ದಾರೆ ನೋಡಿ. ಅವರು ತಾಲಿಬಾನ್ ಮಂದಿಗೆ ರೊಕ್ಕಾ ಹೋಗಿ ಮುಟ್ಟುವ ಹಾಗೆ ಮಾಡಿದ್ರು. ನಮ್ಮ ಬೇಗಂಗೆ ಗೌಡಾ ಪೋಸ್ಟಲ್ಲಿ ಬಂತು. ರಿಜಿಸ್ಟರ್ಡ್ ಪೋಸ್ಟ್ ಮತ್ತೆ  - ಅಂತ ತಣ್ಣಗ ಹೇಳಿದ ಕರೀಂ.

ಮತ್ತ ನಿಮ್ಮ ಹೆಂಡ್ತಿ ಡಿಗ್ರಿ ತೊಗೊಳ್ಳೋ ಫೋಟೋ? ಅದೂ ವೆಬ್ ಸೈಟಿನ್ಯಾಗ? ಹ್ಯಾಂಗ ಬಂತ್ರೀ? - ಅಂತ ಕೇಳಿದೆ.

ಸಾಬ್ ಅವರದ್ದು ಒಂದು ಸ್ಟ್ಯಾಂಡರ್ಡ್ ಫೋಟೋ ಇರ್ತದೆ. ಫುಲ್ ಪರ್ದಾ ಹಾಕಿಕೊಂಡ ಯಾವದೋ ಒಂದು ಬೇಗಂ ಡಿಗ್ರಿ ತೊಗೊಳ್ಳೋ ಫೋಟೋ ಇರ್ತದೆ. ಹೊಸಾ ಹೊಸಾ ಗೌಡಾ ಕೊಟ್ಟ ಹಾಗೆ, ಅದೇ ಫೋಟೋ ಕಾಪಿ ಮಾಡೋದು ಮತ್ತೆ ಹೆಸರು ಚೇಂಜ್ ಮಾಡ್ಬಿಟ್ಟಿ ವೆಬ್ ಸೈಟಲ್ಲಿ ಹಾಕಿ ಬಿಡೋದು. ಫುಲ್ ಪರ್ದಾ ಇರ್ತದೆ. ಎಲ್ಲಾ ಒಂದೇ ತರಹ ಕಾಣ್ತಾರೆ. ಪರ್ದಾ ಪಾಶ್ ಮಾಡೋರು ಯಾರು? ಗೌಡಾ ತೊಗೊಂಡವರು ತಮಗೆ ಹ್ಯಾಗೆ ಬೇಕು ಹಾಗೆ ರೈಲು ಬಿಟ್ಟುಗೊಂಡು, ಬ್ಹೊಂಗು ಹೊಡೆದುಕೊಂಡು ಇರಬಹದು. ಹ್ಯಾಗೆ ಇದೆ ನಮ್ಮ ಬೇಗಂ ಗೌಡಾ ಕಮಾಲ್? ನಿಮ್ಮ ಕಡೆ ಐತೆ ಕ್ಯಾ ಡಾಕ್ಟರೇಟ್ ಡಿಗ್ರಿ? ಎಷ್ಟೆಷ್ಟೋ ವರ್ಷ ಓದ್ಬಿಟ್ಟಿ ಬರೇ ಮಾಸ್ತರ್ ಡಿಗ್ರಿ ಮಾಡ್ಕೊಂಡ್ರೀ. ನಮ್ಮದು ಬೇಗಂ ನೋಡಿ ಹೇಗೆ ಗೌಡಾ ಆಗಿದೆ ಅಂತಾ? - ಅಂದ ಕರೀಂ.

ಮಾಸ್ತರ್ ಡಿಗ್ರೀ ಅಲ್ಲೋ ಪುಣ್ಯಾತ್ಮಾ. ಮಾಸ್ಟರ್ ಡಿಗ್ರೀ ಅನ್ನೋ - ಅಂತ ನನ್ನ ಡಿಗ್ರಿಯ ಸ್ವಲ್ಪ ಮರ್ಯಾದೆ ಉಳಿಸಿಕೊಳ್ಳೋ ಪ್ರಯತ್ನ ಮಾಡಿದೆ.

ಈಗ ನಮ್ಮ ಕರೀಂ ಅಂದ್ರ ಬರೇ ಕರೀಂ ಅಲ್ಲ. ಹಸ್ಬಂಡ್ ಆಫ್ ಡಾ!! ಮೆಹರುನ್ನೀಸಾ ಬೇಗಂ.

* ನನಗೆ ತಿಳಿದ ಮಟ್ಟಿಗೆ ಗೌರವ ಡಾಕ್ಟರೇಟ್ ಅನ್ನು ಗೌಡಾ ಅಂತ ಮೊದಲ ಬಾರಿಗೆ ಶಾರ್ಟ್ ಮಾಡಿ, ಬೇಕಾಬಿಟ್ಟಿ ಗೌಡಾ ಕೊಡುವ ಯೂನಿವರ್ಸಿಟಿಗಳನ್ನು ಮತ್ತು ದುಡ್ಡು ಕೊಟ್ಟು ಗೌಡಾ ಖರೀದಿ ಮಾಡುವ ಜನರನ್ನು ಟೀಕಿಸಿದವರು ಪತ್ರಕರ್ತ ವಿಶ್ವೇಶ್ವರ ಭಟ್ಟರು.