Thursday, February 27, 2014

ಟಂಕ'ಸಾಲಿ'ಯೇ ಇಲ್ಲದ ಸಾಲಿಯೊಂದು ಸಾಲಿಯೇ ಕೃಷ್ಣಾ!

ದಿವಂಗತ ಶ್ರೀ ಟಂಕಸಾಲಿ ಸರ್ (ಚಿತ್ರ ಕೃಪೆ: ಸುರೇಶ ಮೇಟಿ)
ಧಾರವಾಡದಲ್ಲಿ ನಮಗೆ ಮಾಧ್ಯಮಿಕ ಶಾಲೆಯಲ್ಲಿ ಸಮಾಜ ಶಾಸ್ತ್ರದ ಶಿಕ್ಷಕರಾಗಿದ್ದ ಶ್ರೀ ಹಣಮಂತ ರಾವ್ ಟಂಕಸಾಲಿ ಗುರುಗಳು ಇದೇ ಫೆಬ್ರುವರಿ ಇಪ್ಪತ್ತೇಳರಂದು ಧಾರವಾಡದಲ್ಲಿ ನಿಧನರಾದ ಸುದ್ದಿ ಬಂದಿದೆ. ಅವರಿಗೊಂದು ಶ್ರದ್ಧಾಂಜಲಿ ಮಾದರಿಯಲ್ಲಿ ಕೆಲವು ಹಳೆಯ ನೆನಪುಗಳನ್ನು ಗೀಚಿದ್ದರ ಪರಿಣಾಮ ಈ ಲೇಖನ.

ಟಂಕಸಾಲಿ ಸರ್ ಉರ್ಫ್ ಪ್ರೀತಿಯ ಟಿಂಕು ಸರ್, ಟಿಂಕು ಮಾಸ್ತರ್, ಟಿಂಕು ಹೋಗಿಬಿಟ್ಟರಂತ. ಏನು ಪುಣ್ಯಾ ಮಾಡಿದ್ದರಪಾ! ಶಿವರಾತ್ರಿ ಅಂತಹ ಪುಣ್ಯ ದಿನದಂದೇ ಹೋಗಿ ಬಿಟ್ಟರು. ಸೀದಾ ಕೈಲಾಸಕ್ಕೆ ತೊಗೋ. ನಂತರ ಬೇಕಾದ್ರ ವೈಕುಂಠಕ್ಕ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ......ನಡ್ರೀ ಶುರು ಮಾಡೋಣ.

'ಬೋರ್ನವಿಟಾ ಭಯಂಕರ' ಟಂಕಸಾಲಿ ಸರ್: ಬೋರ್ನವಿಟಾ ಕುಡಿದವರು ಇರಬಹುದು. ಅಥವಾ ಮುಷ್ಠಿಗಟ್ಟಲೆ ಬೋರ್ನವಿಟಾ ಸೀದಾ ಡಬ್ಬಿಂದನೇ ಮುಕ್ಕಿ, ಮ್ಯಾಲಿಂದ ಅರ್ಧಾ ಲೀಟರ್ ಹಾಲು ಕುಡಿದು, ತಮ್ಮದೇ ರೀತಿಯಲ್ಲಿ ಬೋರ್ನವಿಟಾ ಎಂಜಾಯ್ ಮಾಡಿದ ನಮ್ಮಂತ ವಿಚಿತ್ರ ಮಂದಿಯೂ ಇರಬಹುದು. ನಾವೆಲ್ಲಾ ಬೋರ್ನವಿಟಾ ಕುಡಿದಿದ್ದು ಹಾಂಗೇ ಬಿಡ್ರೀ. ಎಲ್ಲಿ ಮಾಡಿಕೋತ್ತ ಕೂಡೋದು? ಆದ್ರ ಬೋರ್ನವಿಟಾ ಓದಿ, ಇತರರಿಗೂ ಓದಿಸಿದವರು ಯಾರರೆ ಇದ್ದರೆ ಅದು ಟಂಕಸಾಲಿ ಸರ್ ಮಾತ್ರ.

ಹಾಂ!! ಬೋರ್ನವಿಟಾ ಕುಡಿಯೋದು, ತಿನ್ನೋದು, ಮುಕ್ಕೋದು ಬಿಟ್ಟು ಬೋರ್ನವಿಟಾ ಓದಿಬಿಟ್ಟರಾ ಟಂಕಸಾಲಿ ಸರ್? ಬರೆ ಓದಿದ್ದೊಂದೇ ಅಲ್ಲದೆ ಓದಿಸಿಯೂ ಬಿಟ್ಟರಾ? ಎಂತಾ ಮಾಸ್ತರಪಾ ಇವರು? ಅಂತ ಎಲ್ಲಾರೂ ಹೌಹಾರಬಹುದು.

ಅದೇನಾಗಿತ್ತು ಅಂದ್ರ.......

೧೯೮೦ ಇಸ್ವೀ ಟೈಮ್. ನಮ್ಮ ಅಣ್ಣ ಸಹಿತ ಅದೇ ಸಾಲಿ ಒಳಗ ಟಂಕಸಾಲಿ ಮಾಸ್ತರ್ ಶಿಷ್ಯಾ. ಅವರ ಪೆಟ್ ಶಿಷ್ಯಾ. ಮಾಸ್ತರ್ ಮಂದಿ ಪೆಟ್ ಪ್ರಾಣಿ, ಪಕ್ಷಿ ಸಾಕಂಗಿಲ್ಲ. ಶಿಷ್ಯರನ್ನೇ ಪೆಟ್ ಮಾಡಿಕೊಂಡು ಬಿಡ್ತಾರ. ಅದು ಅವರ ಧರ್ಮ. ಮತ್ತ ಪೆಟ್ ಆದವರ ಕರ್ಮ.

ಹೀಂಗ ಇರೋವಾಗ, ಟಂಕಸಾಲಿ ಮಾಸ್ತರ್ ಬೋರ್ನವಿಟಾ ಕಂಪನಿಯವರ ಒಂದು ಯೋಜನೆ ಅದ ಅನ್ನೋದನ್ನ ಕಂಡು ಹಿಡಿದಿದ್ದರು. ಬೋರ್ನವಿಟಾ ಕಂಪನಿ ಅದು ಏನೋ encyclopedia ತರಹದ ಪುಸ್ತಕ ಪ್ರಕಟ ಮಾಡ್ತಿತ್ತು. ಹೆಸರು ನೆನಪಿಲ್ಲ. ಬೋರ್ನವಿಟಾ ನಾಲೆಜ್ ಬ್ಯಾಂಕ್ ಅಂತ ಹೆಸರಿತ್ತಾ? ಅಂತ ಏನೋ ನೆನಪು. ನಾಕೋ ಐದೋ ಬೋರ್ನವಿಟಾ ಡಬ್ಬಿ wrapper ಕಳಿಸಿಕೊಟ್ಟರೆ ಒಂದು ಪುಸ್ತಕಾ ಕಳಸ್ತಿದ್ದರು. ಹೊರಗ ರೆಗ್ಯುಲರ್ ಪುಸ್ತಕ ಅಂಗಡಿ ಒಳಗ ಆ ಪುಸ್ತಕಾ ಸಿಗ್ತಿದ್ದಿಲ್ಲ. ಅದೇನೋ ಭಾರಿ ಮಸ್ತ ಪುಸ್ತಕ ಅಂತ. ಸಾಲಿ ಪರೀಕ್ಷಾ ಒಂದೇ ಸಾಕಾಗಿಲ್ಲ ಅಂತ ಅದು ಇದು ಅಂತ ಹಾಳುವರಿ (?) ಪರೀಕ್ಷಾ ಎಲ್ಲಾ ಬರೆದು, ಯಾವ್ಯಾವದೋ ಅದು ಇದು ಕ್ವಿಜ್ ಇತ್ಯಾದಿಗಳಿಗೆ ಹೋಗಿ, prize ಹೊಡಕೊಂಡು ಬರೋ ಶಾಣ್ಯಾ ಮಂದಿಗೆ ಭಾರಿ ಉಪಯೋಗ ಆಗ್ತಿದ್ದುವಂತ ಆ ಪುಸ್ತಕಗಳು. ಅದನ್ನ ಟಂಕಸಾಲಿ ಮಾಸ್ತರ್ ಕಂಡು ಹಿಡಿದಿದ್ದರು.

ಈಗ ಪುಸ್ತಕ ತರಸೋದು ಹ್ಯಾಂಗ? ಟಂಕಸಾಲಿ ಮಾಸ್ತರ್ ಸುತ್ತ ಒಂದು ನಾಕು ಐದು ಮಂದಿ ಶಾಣ್ಯಾ(?) ಹುಡುಗುರ ಗುಂಪು ಇರ್ತಿತ್ತು. ಅವರಿಗೆಲ್ಲಾ ಸರ್ ಈ ಸ್ಕೀಮ್ ವಿವರಿಸಿದರು. ಒಂದು ಸಿಸ್ಟಮ್ಯಾಟಿಕ್ ಪ್ಲಾನ್ ಹಾಕಿ ಯಾರು ಎಷ್ಟೆಷ್ಟು ಬೋರ್ನವಿಟಾ ಕುಡಿದು, ಯಾರ್ಯಾರು ಯಾವ ಯಾವ ಬುಕ್ ತರಿಸಬೇಕು ಅಂತ ಹೇಳಿ ಪ್ಲಾನ್ ಮಾಡಿ, ಒಂದು ನಾಲ್ಕೈದು ತಿಂಗಳದಾಗ ಒಬ್ಬ ಟಂಕಸಾಲಿ ಮಾಸ್ತರು ಮತ್ತ  ಅವರ ಶಿಷ್ಯರು ಕೂಡಿ ಎಲ್ಲಾ ಪುಸ್ತಕಾ ತರಿಸಿಕೊಂಡರು. ಎಷ್ಟು ಬೋರ್ನವಿಟಾ ಕುಡಿದು ಯಾರ್ಯಾರು ಎಷ್ಟೆಷ್ಟು ಸ್ಟ್ರಾಂಗ್ ಆದರೋ ಗೊತ್ತಿಲ್ಲ. ಬೋರ್ನವಿಟಾ ಕಂಪನಿಗೆ ದೊಡ್ಡ ಲಾಭ. ಪುಸ್ತಕ ಮಸ್ತ ಓದಿ, ಭಟ್ಟರ ಸಾಲಿ ಹುಡುಗುರು ರಾಜ್ಯ ಮಟ್ಟದ ಎಲ್ಲಾ ಕ್ವಿಜ್ ಅದು ಇದು ಸ್ಪರ್ಧೆ ಎಲ್ಲಾ ಕ್ಲೀನ್ ಸ್ವೀಪ್ ಮಾಡಿಕೊಂಡು ಬಂದಿದ್ದರು. ಬಾಕಿ ಸಾಲಿಗಳಿಗೆ ಬರೇ ಚಿಪ್ಪು ಅಷ್ಟೇ. ಬಾಕಿ ಸಾಲಿ ಮಾಸ್ತರುಗಳಿಗೆ ಟಂಕಸಾಲಿ ಮಾಸ್ತರ್ ತಲಿ ಎಲ್ಲೆ ಇರಬೇಕು? ಹೀಗೆ ಬೋರ್ನವಿಟಾ ಪುಸ್ತಕ ಉಪಯೋಗಿಸಿ ಭಯಂಕರ ಕ್ವಿಜ್ ಪಡೆ ತಯಾರು ಮಾಡಿದ್ದು ಟಂಕಸಾಲಿ ಸರ್ ಹಿರಿಮೆ.

ನಮ್ಮ ಅಣ್ಣ ಸಾಲಿ ಬಿಟ್ಟು ಎಷ್ಟೋ ವರ್ಷಗಳ ನಂತರ ಸಹಿತ ಟಂಕಸಾಲಿ ಸರ್ ನನ್ನ ಆಗಾಗ ಹಿಡಿದು, ಏ ಹೆಗಡೆ, ನಿಮ್ಮನಿಯಾಗ ಆ ಪುಸ್ತಕ ಇರಬೇಕು ನೋಡು, ಸ್ವಲ್ಪ ತಂದು ಕೊಡು, ಅಂತ ಹೇಳಿದ್ದು, ಅದರ ಪ್ರಕಾರ ಅವರಿಗೆ ತಂದು ಕೊಟ್ಟಿದ್ದು, ಅದನ್ನ ಉಪಯೋಗಿಸಿಕೊಂಡು ಅವರು ಹಲವಾರು ತಲೆಮಾರುಗಳ ವಿದ್ಯಾರ್ಥಿಗಳನ್ನ ಎಲ್ಲಾ ತರಹದ ಕ್ವಿಜ್ ಇತ್ಯಾದಿಗಳಿಗೆ ತಯಾರು ಮಾಡಿದ್ದು ಗೊತ್ತದ. ಕಲಿಸಬೇಕಾದ ಪಠ್ಯವನ್ನೇ ಸರಿಯಾಗಿ ಕಲಿಸುವ ಶಿಕ್ಷಕರು ಕಡಿಮೆ. ಅಂತಾದ್ರಾಗ ಎಲ್ಲೆಲ್ಲಿದೋ ಪುಸ್ತಕ, ಅವು ಎಲ್ಲೆ ಸಿಗ್ತಾವ, ಅವನ್ನು ಹ್ಯಾಂಗೆ ತರಿಸಬೇಕು, ತರಿಸಿದ ಮ್ಯಾಲೆ ಅವನ್ನ ಹ್ಯಾಂಗೆ ಉಪಯೋಗ ಮಾಡಿಕೊಂಡು, ಒಂದು ಕಿಲ್ಲರ್ ಕ್ವಿಜ್ ಟೀಮ್ ತಯಾರ್ ಮಾಡಿ, ಎಲ್ಲಾ ಪ್ರೈಸ್ ಹೊಡಿಬೇಕು ಅಂತ ಏನೆಲ್ಲಾ ಸ್ಕೀಮ್ ಹಾಕಿದ ಟಂಕಸಾಲಿ ಮಾಸ್ತರ್ ಸಿಂಪ್ಲಿ ಗ್ರೇಟ್! ಮಸ್ತ ತಲಿ ಇಟ್ಟಿದ್ದರು.

ಅಧ್ಯಾಪನದ ಜೊತೆ ಸತತ ಅಧ್ಯಯನ ಮಾಡಿದವರು ಟಂಕಸಾಲಿ ಸರ್. ನಾ ಅಂತೂ ಅವರನ್ನ ಪುಸ್ತಕ, ಯಾವದರೆ ಮ್ಯಾಗಜಿನ್ ಇಲ್ಲದೆ ನೋಡೇ ಇಲ್ಲ. ಯಾವದೋ ಪುಸ್ತಕ, ಯಾವದೋ ಮ್ಯಾಗಜಿನ್ ಸದಾ ಓದುತ್ತಲೇ ಇರ್ತಿದ್ದರು. ಆ ತರಹ ಅವರು ಮಾಡಿದ ಅಧ್ಯಯನ ಮತ್ತ ಅವರ ಪಾಂಡಿತ್ಯ ಅವರು ಕ್ಲಾಸ್ ತೊಗೊಳ್ಳೋವಾಗ ಕಂಡು ಬರ್ತಿತ್ತು. ದೇಶ ವಿದೇಶದ ಸುದ್ದಿ, ಸಂಗತಿ ಎಲ್ಲಾ ಮಸ್ತ ಹೇಳ್ತಿದ್ದರು. ಪಠ್ಯ ಪುಸ್ತಕ ರೆಫರ್ ಗಿಫರ್ ಮಾಡೋ ಪೈಕಿನೆ ಅಲ್ಲ ಸರ್. ಎಲ್ಲಾ ಸೀದಾ ಅವರ ಮೆದುಳಿಂದ ನಮ್ಮ ತಲಿಗೆ. ಯಾಕಂದ್ರ ನಮ್ಮಲ್ಲಿ ಎಲ್ಲರಿಗೆ ಮೆದುಳು ಇರಲಿಲ್ಲ. ತಲಿ ಇತ್ತು.

ನಮಗೆ ಅವರು ಕಲಿಸಿದ್ದು ಒಂದೇ ವರ್ಷ. ಹತ್ತನೇತ್ತಾ ಹಿಸ್ಟರಿ ಅಷ್ಟೇ. ಸಿವಿಕ್ಸ್ ಕೂಡ ಕಲಿಸಿದ್ದರಾ? ನೆನಪಿಲ್ಲ. ಜಿಯಾಗ್ರಫಿ ಮಾತ್ರ ಬೇರೆಯವರು.

ಬ್ಯಾರೆ ಯಾರಿಗಾದರೂ ಪುಸ್ತಕಾ ಎರವು ಕೊಡಬೇಕು ಅಂದ್ರ ಎದಿ ಡವಾಡವಾ ಅಂತಿತ್ತು. ಯಾಕಂದ್ರ ಒಮ್ಮೆ ಪುಸ್ತಕ ಕೊಟ್ಟ ಮ್ಯಾಲೆ ವಾಪಸ್ ಬರೋದು ಗ್ಯಾರಂಟೀ ಇರಲಿಲ್ಲ. ಸಾವಿರ ಸರೆ, ಪುಸ್ತಕ ಓದಿ ಆತೇನ್ರೀ? ಅಂತ ಕೇಳಿದ ಮ್ಯಾಲೆ ಏನೋ ದುರ್ದಾನ ತೆಗೆದುಕೊಂಡವರ ಹಾಂಗ ಪುಸ್ತಕಾ ವಾಪಾಸ್ ಕೊಟ್ಟವರು, ಕೊಡದೇ ಕೈ ಎತ್ತಿದವರೂ ಎಲ್ಲ ಇದ್ದಾರ. ಆದ್ರ ಟಂಕಸಾಲಿ ಸರ್ ಮಾತ್ರ ಹಾಂಗಲ್ಲ. ಅವರಿಗೆ ನಮ್ಮ ಮನಿಯೊಳಗ ಒಂದು ದೊಡ್ಡ ಪ್ರೈವೇಟ್ ಲೈಬ್ರರಿ ಅದ ಅಂತ ಗೊತ್ತಿತ್ತು. ಬೇಕಾದಾಗ ಪುಸ್ತಕಾ ಕೇಳಿ ತರಿಸ್ಕೋತ್ತಿದ್ದರು. ಕೆಲಸ ಮುಗದ ಮ್ಯಾಲೆ ತಪ್ಪದೆ ವಾಪಸ್ ಕೊಡ್ತಿದ್ದರು. ನಮ್ಮ ಮನಿಯಾಗಿನ ಎಷ್ಟೋ ಪುಸ್ತಕ ನಮ್ಮ ದೋಸ್ತರು, ನಮ್ಮ ಸೀನಿಯರ್ ಕೈಯ್ಯಾಗ ನೋಡೇನಿ. ಅದೆಲ್ಲಾ ವಾಯಾ ಟಂಕಸಾಲಿ ಸರ್. ಅವರ ಮೂಲಕ ಹೋಗಿದ್ದೆ ಛೋಲೋ ಆತು. ಅದಕ್ಕೇ ಎಲ್ಲಾ ವಾಪಾಸ್ ಬಂದವು. ಟಂಕಸಾಲಿ ಸರ್ ಮಸ್ತ ಪುಸ್ತಕ ಕೊಟ್ಟಾರಲೇ, ಅಂತ ಯಾರೋ ಎಲ್ಲೋ ಹೇಳಿಕೊಂಡು ಅಡ್ಯಾಡುತಿದ್ದರೆ, ಹೌದೇನಲೇ? ಟಂಕಸಾಲಿ ಸರ್ ಕೊಟ್ಟಾರಾ? ಹಾಂಗಾ? ಓದು ಓದು, ಅಂತ ನಮ್ಮದೇ ಪುಸ್ತಕ ಮಂದಿ ಕೈಯಲ್ಲಿ ನೋಡಿ ನಕ್ಕಿದ್ದು ನೆನಪಿದೆ ಬಿಡಿ.

ಮಾಸ್ತರ್ ಮಂದಿಯಲ್ಲಿ ಸಿಕ್ಕಾಪಟ್ಟೆ ಪುಸ್ತಕ ಓದಿಕೊಂಡವರು ಅಂದ್ರೆ ಒಬ್ಬರು ಟಂಕಸಾಲಿ ಸರ್. ಇನ್ನೊಬ್ಬರು ನಮ್ಮ ಗಣಿತಲೋಕದ ದಿವಂಗತ ದೇಶಪಾಂಡೆ ಸರ್. ಟಂಕಸಾಲಿ ಸರ್ ಮನಿ ಹೊಕ್ಕಿ ಅವರ ಲೈಬ್ರರಿ ನೋಡಿಲ್ಲ. ಸಾಕಷ್ಟು ದೊಡ್ಡದೇ ಇದ್ದೀತು. ದೇಶಪಾಂಡೆ ಸರ್ ಲೈಬ್ರರಿ ಮಾತ್ರ ಓದವರಿಗೆ ಸ್ವರ್ಗ.

ಕ್ರಿಕೆಟ್ ಕಿಟ್ಟೆಂಬ ದ್ರೌಪದಿ ಸೀರಿ: ಆವತ್ತು ಒಂದಿನ ನಾನು ಮತ್ತ ನನ್ನ ಖಾಸ್ ದೋಸ್ತ ಅರವಿಂದ ಪಾಟೀಲ ಇಬ್ಬರೂ ಪ್ರೇಯರ್ ಆದ ನಂತರ ಹೆಡ್ ಮಾಸ್ತರ್ ಕಡೆ ಬೈಸಿಕೊಂಡು ಕ್ಲಾಸಿಗೆ ಬರ್ಲಿಕತ್ತಿದ್ದಿವಿ. ಹಿಂದಿನ ದಿವಸ ನಾಕೋ ಐದೋ ಪೀರಿಯಡ್ ಆದ ಮ್ಯಾಲೆ ಮನಿಗೆ ಓಡಿ ಹೋಗಿದ್ದಿವಿ. ಅದಕ್ಕ ಮರು ದಿವಸ ಹಿಡಿದು, ಬೈದು ಕಳಿಸಿದ್ದರು.

ಲೇ ಅರವ್ಯಾ, ಅಂತ ಅರವಿಂದನ ಕರದೆ. ಬೈಸಿಕೊಂಡ ಬಂದ ಸಿಟ್ಟು ಅವನ ಕರೆದ ದನಿಯೊಳಗಿತ್ತು.

ಏನ್ ಮಹೇಶಾ? ಅಂದ ಅರವ್ಯಾ. ಆವಾ ಏನೇ ಆಗಲೀ, ಏನೇ ಹೋಗ್ಲೀ, ಎಮ್ಮೆ ನಿನಗೆ ಸಾಟಿ ಇಲ್ಲ ಅನ್ನೋ ಹಾಂಗ ಯಾವಾಗಲೂ ನಕ್ಕೋತ್ತ ನಗಿಸಿಕೋತ್ತ ಇರವಾ. ಜಾಲಿ ಫೆಲೋ.

ಅರವ್ಯಾ, ಒಂದು ಕೆಲಸಾ ಮಾಡಬೇಕಲೇ. ನಾವೆಲ್ಲರ ವಾರಕ್ಕ ಮೂರೋ, ನಾಕೋ, ಐದೋ ಸರೆನೋ ಐದಾರ್ ಪೀರಿಯಡ್ ಆದ ಮ್ಯಾಲೆ ಎದ್ದು ಮನಿಗೆ ಓಡಿ ಹೋದ್ರ ಹಾಕ್ಕೊಂಡು ಬೈತಾರ. ಒಮ್ಮೊಮ್ಮೆ ಕೆಲೊ ಮಂದಿಗೆ ಕಡತ ಸಹಿತ ಬೀಳ್ತಾವ. ಆದ್ರ ಇದೇ ಮಾಸ್ತರ್ ಮಂದಿ ಪೀರಿಯಡ್ ಗೆ ಹತ್ತು, ಹದಿನೈದು, ಮೂವತ್ತು ನಿಮಿಷ ತಡಾ ಆಗಿ, ಒಮ್ಮೊಮ್ಮೆ ಪೀರಿಯಡ್ ಮುಗಿಲಿಕ್ಕೆ ಇನ್ನು ಐದೇ ನಿಮಿಷ ಇದ್ದಾಗ ಬಂದಾಗ ನಾವೇನರೇ ಅಂತೇವಿ ಏನು? ಅಂತೇವಿ ಏನು ಹೇಳಲೇ ಮಗನೇ? ಪಾಪ, ಮಾಸ್ತರು, ಟೀಚರು, ಏನೋ ಲೇಟ್ ಆತು, ಅದಕ್ಕಾ ತಡಾ ಮಾಡಿ ಬಂದಾರ ಅಂತ ಸುಮ್ಮ ಇರ್ತೇವಿ. ಇವರಿಗೂ ಮಾಡೋಣ ತಡೀಲೇ, ಅಂತ ಒಂದು ಸ್ಕೆಚ್ ಹಾಕೋ ಹಾಂಗ ಹೇಳಿದೆ.

ಮಾಸ್ತರು ಟೀಚರು ಲೇಟ್ ಆಗಿ ಬಂದ್ರ ನಮಗ ಛೋಲೋನೇ ಆಗಿತ್ತು. ಗದ್ದಲಾ ಹಾಕಿಕೋತ್ತ ಕೂಡಲಿಕ್ಕೆ. ಆದ್ರ ಈಗ ಒಂದು ಇಶ್ಯೂ ಅಂತ ಮಾಡಿ ಅವರಿಗೇ ಉಲ್ಟಾ ಹೊಡಿಬೇಕಿತ್ತಲ್ಲಾ? ಅದಕ್ಕ ಅಂತ ಹೇಳಿ ಏನೋ ಒಂದು ಇಶ್ಯೂ.

ಏನು ಮಾಡೋಣಂತಿ ಮಹೇಶಾ? ಅಂದ ಅರವ್ಯಾ.

ನಮ್ಮ ಚಿತ್ರ ವಿಚಿತ್ರ ಆಲೋಚನೆಗಳನ್ನು ಅವತ್ತಿಂದ ಇವತ್ತಿನ ತನಕ ಕೇಳಿ, ಸಹಿಸಿಕೊಂಡು, ಕೆಲವೊಂದನ್ನು ಆಚರಣೆಯಲ್ಲಿ ತರಲು ಸಹಕರಿಸಿದ ಕೆಲವೇ ಕೆಲವು ಮಿತ್ರರಲ್ಲಿ ಈ ಅರವಿಂದ ಪಾಟೀಲ ಅಗ್ರಗಣ್ಯ.

ನೋಡಲೇ ಅರವ್ಯಾ ಸಿಂಪಲ್. ನಾಳಿಂದ ಅವನೌನ್ ಯಾವದೇ ಟೀಚರ್ ಮಾಸ್ತರ್ ಕ್ಲಾಸಿಗೆ ಬರೋದು ಐದು ಮಿನಿಟ್ ಲೇಟ್ ಆತು ಅಂದ್ರ ನಾನು, ನೀನು, ಆವಾ ಭಟ್ಟಾ, ಗಲಗಲಿ, ಬೇಕಾದ್ರ ಕರ್ಜಗ್ಯಾ, ಕಟೀರಾ, ಮತ್ತ ಯಾರರ ಬೇಕಂದ್ರ ಅವರು ಎಲ್ಲ ಕೂಡಿ ಹೋಗಿ, ಪೀರಿಯಡ್ಡಿಗೆ ಲೇಟ್ ಮಾಡಿದ ಮಾಸ್ತರ್ ಟೀಚರ್ ಹುಡುಕಿಕೊಂಡು ಹೊಂಟು ಬಿಡೋಣ. ಮೊದಲು ಹೋಗಿ ಆಫೀಸ್ ಒಳಗ ಚೆಕ್ ಮಾಡೋದು. ಲೇಟ್ ಆದ ಮಾಸ್ತರ್ ಟೀಚರ್ ರಜಾ ಮ್ಯಾಲೆ ಇದ್ದಾರ ಅಂದ್ರ ಆ ಮಾತು ಬ್ಯಾರೆ. ಏನರೆ ಸಾಲಿಗೆ ಬಂದು ಕ್ಲಾಸಿಗೆ ಪಿರಿಯಡ್ ತೊಗೊಳ್ಳಿಕ್ಕೆ ಲೇಟ್ ಮಾಡ್ಯಾರ ಅಂದ್ರ ಸಾಲಿ ಪೂರಾ ಹುಡುಕಿ, ಅವರನ್ನ ಕಾಡಿ ಬೇಡಿ ಕ್ಲಾಸಿಗೆ ಕರಕೊಂಡು ಬರೋದು ನೋಡಲೇ. ಏನಂತೀ? ಅಂತ ಕೇಳಿದೆ.

ಹೀಂಗ ಮಾಡೋಣ ಅಂತೀ? ಅಂತ ಅರವ್ಯಾ ಕೇಳಿದ. ದೊಡ್ಡ ಕ್ವೆಶ್ಚನ್ ಮಾರ್ಕ್ ಒಗೆದ.

ನಾನು ಹಾ!! ಹಾ!! ಅಂತ ರಕ್ಕಸ ನಗೆ ನಕ್ಕೆ. ಆವಾಗ ಅವಂಗ ಗೊತ್ತಾತು ನಮ್ಮ ಪ್ಲಾನಿನ ಹಿಂದಿನ ಮರ್ಮ.

ಮಹೇಶಾ ಮಸ್ತ ಐತಿ ಐಡಿಯಾ. ಪೀರಿಯಡ್ಡಿಗೆ ತಡಾ ಮಾಡಿದ ಮಾಸ್ತರ್, ಟೀಚರ್ ಹುಡುಕಾಕ ಅಂತ ಹೇಳಿ ಸಾಲಿ ತುಂಬಾ ಅಡ್ಯಾಡೋದು. ಯಾರರ ಹಿಡಿದು, ಯಾಕ ಅಡ್ಯಾಡಾಕ ಹತ್ತೀರಿ? ಅಂತ ಕೇಳಿದರ, ಈ ಮಾಸ್ತರ್ ಹುಡುಕಾಕ ಹೊಂಟೇವ್ರೀ, ಈ ಟೀಚರ್ ಹುಡುಕಾಕ ಹೊಂಟೇವ್ರೀ ಅಂತ ಹೇಳಿ ಚೌಕ ಗುಳಿಗಿ ಉಳ್ಳಿಸಿಬಿಡೋದು. ಆ ನೆವದಾಗಾರಾ ಸಾಲಿ ತುಂಬಾ ಒಂದೀಟು ಅಡ್ಯಾಡಿ ಬಂದಂಗ ಆಕ್ಕೈತಿ. ಬರ್ರಿ, ಬರ್ರಿ, ಕ್ಲಾಸಿಗೆ ತಡಾ ಆಗೈತಿ ಅಂತ ಹೇಳಿ ಮಾಸ್ತರ್ ಟೀಚರಿಗೆ ಕಾಡಿದಂಗೂ ಅಕ್ಕೈತಿ. ಇದೇ ಹೌದಿಲ್ಲ ನಿನ್ನ ಪ್ಲಾನ್? ಯಪ್ಪಾ!!! ಹೋಗ್ಗೋ!!! ಮಸ್ತ ಬತ್ತಿ ಇಟ್ಟಿಯಲ್ಲಪಾ!!!ಹಾ!! ಹಾ!! ಅಂತ ಅವನೂ ಯಕ್ಕಾ ಮಕ್ಕಾ ನಕ್ಕಾ. ನಾವಿಬ್ಬರು ಯಿನ್ & ಯಾಂಗ್ ಇದ್ದಂಗ. ನಾ ಅರ್ಧಾ ಹೇಳಿದರ ಉಳಿದ ಅರ್ಧಾ ಆವಾ ಪೂರ್ಣ ಮಾಡ್ತಿದ್ದ.

ಈ ಪ್ಲಾನಿಗೆ ಮೊದಲ ಬಲಿ ಆದವರು ಅವರೇ ಟಂಕಸಾಲಿ ಸರ್!

೧೯೮೭ ಜುಲೈ, ಆಗಸ್ಟ್ ಅಂತ ನೆನಪು. ನಾವು ಆಗ SSLC. ಆವತ್ತು ಮಧ್ಯಾನದ ಸೂಟಿ ಆದ ನಂತರ ಟಂಕಸಾಲಿ ಸರ್ ಹಿಸ್ಟರಿ ಪಿರಿಯಡ್ ಇತ್ತು ಅಂತ ನೆನಪು. ನಾರ್ಮಲಿ ಸರ್ ಎಂದೂ ಲೇಟ್ ಮಾಡಿದವರೇ ಅಲ್ಲ. ಐದು ನಿಮಿಷದೊಳಗೆ ಕ್ಲಾಸಿಗೆ ಹಾಜರ್ ಆಗಿ, ಶುರು ಮಾಡೇ ಬಿಡ್ತಿದ್ದರು. ಅವತ್ತು ಏನೋ ಲೇಟ್ ಆಗಿತ್ತು.

ಅವತ್ತು ಏನು ಆಗಿತ್ತು ಅಂದ್ರ ನಮ್ಮ ಸಾಲಿಗೆ ಹೊಸಾ ಕ್ರಿಕೆಟ್ ಕಿಟ್ ಬಂದು ಬಿಟ್ಟಿತ್ತು. ದೊಡ್ಡ ಘಟನೆ ಅದು. ಭಟ್ಟರ ಸಾಲಿಗೆ ಒಂದು ಹೊಚ್ಚ ಹೊಸಾ ಕ್ರಿಕೆಟ್ ಕಿಟ್ ಬರೋದು ಅಂದ್ರ ಸಣ್ಣ ಮಾತಲ್ಲ. ಆ ಕಾಲದಲ್ಲೇ ಅದಕ್ಕೆ ಮೂರು ನಾಕು ಸಾವಿರ ರೂಪಾಯಿ ಮ್ಯಾಲೆ ಇತ್ತು. ಅಂತಾ ಕ್ರಿಕೆಟ್ ಕಿಟ್ಟು ಬಂದು ಬಿಟ್ಟದ. ಇನ್ನು ಎಲ್ಲಾ ಬಿಚ್ಚಿ ತೆಗೆದು ನೋಡಬೇಕು. ಅಯ್ಯೋ! ಕ್ರಿಕೆಟ್ ಕಿಟ್ ಮ್ಯಾಲಿನ ಜಿಪ್ಪರ್ ತೆಗೆದು, ಮ್ಯಾಲಿನ ಚೀಲಾ ಬಿಚ್ಚಿ, ಒಳಗ ಏನದ ಅಂತ ನೋಡಬೇಕು ಅಂತ ಅಷ್ಟೇ!

ಮತ್ತ ನಮ್ಮ ಟಂಕಸಾಲಿ ಸರ್ ದೊಡ್ಡ ಕ್ರಿಕೆಟ್ ಪ್ಲೇಯರ್. ಅವರಿಗೆ ಸ್ವಲ್ಪ epilepsy ಅಂತ ಆರೋಗ್ಯದ ತೊಂದರೆ ಇತ್ತು. ಅದಕ್ಕೇ ಅವರಿಗೆ ದೊಡ್ಡ ಮಟ್ಟದ ಕ್ರಿಕೆಟ್ ಆಡಲಿಕ್ಕೆ ಆಗಲಿಲ್ಲ. ಇಲ್ಲಂದ್ರ ಕಮ್ಮಿ ಕಮ್ಮಿ ಅಂದ್ರೂ ರಣಜಿಯಾದ್ರೂ ಆಡೇ ಆಡ್ತಿದ್ದರು ಅಂತ ಅವರ ಕ್ರಿಕೆಟ್ ಆಟದ ಪ್ರಾವಿಣ್ಯತೆ ಬಲ್ಲವರ ಅಂಬೋಣ. ಇರಬಹದು ಬಿಡ್ರೀ.

ನಮ್ಮ ಸಾಲಿಯ ಸೆಂಟ್ರಲ್ ಹಾಲಿನಲ್ಲಿ ಕ್ರಿಕೆಟ್ ಕಿಟ್ಟನ್ನು ಮತ್ತೊಬ್ಬ ಕ್ರಿಕೆಟ್ ಪ್ರೇಮಿ ಮಾಸ್ತರ್ ಎಂ. ಎ. ಸಿದ್ಧಾಂತಿ ಸರ್ ಬಿಚ್ಚುತ್ತಿದ್ದರು. ಇತರ ಕ್ರೀಡಾಪ್ರೇಮಿ ಶಿಕ್ಷಕರಾದ ಪಟೇಲ್ ಸರ್, ಕಟ್ಟಿ ಸರ್ ಇತ್ಯಾದಿ ನೋಡುತ್ತಿದ್ದರು. ಟಂಕಸಾಲಿ ಸರ್ ಸಹಿತ ಅದನ್ನ ಆಸಕ್ತಿಯಿಂದ ನೋಡುತ್ತಿದ್ದರು. ಸಿದ್ಧಾಂತಿ ಸರ್ ಒಂದೊಂದೆ ಬ್ಯಾಟು, ಪ್ಯಾಡು, ಅದು ಇದು ತೆಗೆದು ತೆಗೆದು ಕೊಟ್ಟಂಗೆ ಇವರೆಲ್ಲ ಅದನ್ನ ಮುಟ್ಟಿ ಮುಟ್ಟಿ, ನೋಡಿ ನೋಡಿ, ಮಸ್ತ ಅದ, ಮಸ್ತ ಅದ, ಅಂತ ತಲಿ ಆಡಸ್ತಿದ್ದರು.

ಪಿರಿಯಡ್ ಶುರು ಆಗಿ ಐದು ನಿಮಿಷದ ಮ್ಯಾಲೆ ಆಗಿ ಬಿಟ್ಟಿತ್ತು. ನೋಡಿದರ ಟಂಕಸಾಲಿ ಸರ್ ಇಲ್ಲೆ ಕಿಟ್ ಬಿಚ್ಚೋದನ್ನ ನೋಡಿಕೋತ್ತ ನಿಂತಾರ. ಅವರನ್ನ ಅದೆಂಗ ಹಾಂಗೆ ಬಿಡಲಿಕ್ಕೆ ಬರ್ತದ? ಹೋಗಿ ಕೊಕ್ಕಿ ಹಾಕಲಿಕ್ಕೇ ಬೇಕು. ಬರ್ರಿ ಸರ್ರ್! ಬರ್ರಿ ಸರ್ರ್! ಯಾವಾಗ ಬರ್ತೀರಿ? ಸರ್! ಸರ್! ಅಂತ ಸರ್ ಜೀವಾ ತಿನ್ನಲಿಕ್ಕೇ ಬೇಕು.

ಹೋದ್ವೀ. ಹೋಗಿ, ಸರ್! ಅಂತ ಒಂದು ಮಾತು ಹೇಳಿ ನಿಂತ್ವಿ.

ಏನು? ಅನ್ನೋ ಲುಕ್ ಕೊಟ್ಟರು ಸರ್.

ಸರ್ರ್! ನಿಮ್ಮ ಪಿರಿಯಡ್ ಅದರೀ ಸರ್!...... ಅಂತ ಹೇಳಿದೆ.

ಹಾಂ!! ಬಂದೆ. ಈಗ ಬಂದೆ. ಹೋಗ್ರೀ,  ಅಂತ ಸರ್ ನಮ್ಮನ್ನೆಲ್ಲಾ ಬ್ರಷ್ ಆಫ್ ಮಾಡೋ ಹಾಂಗ ಹೇಳಿದರು. ಸರ್ ಕ್ರಿಕೆಟ್ ಕಿಟ್ ಬಿಚ್ಚೋದನ್ನ ಎಷ್ಟು ತನ್ಮಯತೆಯಿಂದ ನೋಡ್ಲಿಕತ್ತಿದ್ದರು ಅಂದ್ರ ಇವರು ಇವತ್ತು ಪಿರಿಯಡ್ ಗೆ ಕೈ  ಎತ್ತತಾರ ಅಂತ ಅನ್ನಿಸಿತು.

ಹೂನ್ರೀ ಸರ್ರ್! ಅಂತ ಅಷ್ಟೇ ಹೇಳಿ ಹೊರಳಿ ಬಂದ್ವಿ. ಬಂದು ಕೂತು ನಮ್ಮ ರೆಗ್ಯುಲರ್ ಹರಟಿ, ಹುಚ್ಚರ ಗತೆ ನಗುವ ಕಾರ್ಯಕ್ರಮ ಮುಂದುವರಿಸಿದಿವಿ.

ಐದು ನಿಮಿಷ ಆತು. ಹತ್ತು ನಿಮಿಷಾತು. ಸರ್ ಬರಲೇ ಇಲ್ಲ. ಇನ್ನೂ ಕ್ರಿಕೆಟ್ ಕಿಟ್ ಬಿಚ್ಚೋದು ಮುಗಿದಿದ್ದಿಲ್ಲ ಅಂತ ಕಾಣ್ತದ. ಮತ್ತೊಮ್ಮೆ ಹೋಗಿ ಕಾಡಿ ಪೀಡಿಸಿ ಬರಬೇಕು.

ಮತ್ತ ಹೋದ್ವೀ. ನಡು ಸಿಕ್ಕು, ಎಲ್ಲೆ ಹೊಂಟೀರಿ? ಅಂತ ಕೇಳಿದ ಮಂದಿಗೆ ರೆಡಿ ಉತ್ತರಾ, ಅದು ಟಂಕಸಾಲಿ ಸರ್ ಅಲ್ಲೆ (ಕಿಟ್) ಬಿಚ್ಚೋದನ್ನ ನೋಡಿಕೋತ್ತ ನಿಂತಾರ್ರಿ ಟೀಚರ್. ಹೋಗಿ ಕರಕೊಂಡು ಬರೋಣ ಅಂತ ಹೇಳಿ, ಅಂತ ಹೇಳೋದ್ರಾಗ ನಮಗೆ ನಗು ತಡಕೊಳ್ಳಲಿಕ್ಕೆ ಆಗ್ತಿದ್ದಿಲ್ಲ. ಏನೋ ಹೇಳಿ ಓಡೋದು.

ಮತ್ತ ಸರ್ ಮುಂದ ಹೋಗಿ ನಿಂತಿವಿ. ಅದೆಂತಾ ಕ್ರಿಕೆಟ್ ಕಿಟ್ಟೋ ಏನೋ? ಇನ್ನೂ ಒಳಗ ಕೈ ಹಾಕಿ ಹಾಕಿ ಸಾಮಾನು ತೆಕ್ಕೋತ್ತಲೇ ಇದ್ದರು. ಎಮ್.ಎ. ಸಿದ್ಧಾಂತಿ ಸರ್ ತೆಗೆದು ಕೊಟ್ಟಂಗೆ ಕೊಟ್ಟಂಗೆ ಬಾಕಿ ಮಂದಿ ಕೈಯ್ಯಾಗ ಆ ಸಾಮಾನು.  ಒಳ್ಳೆ ಅಕ್ಷಯ ಪಾತ್ರೆ ತರಹದ ಕಿಟ್. ಎಷ್ಟು ತೆಗೆದರೂ ಖಾಲಿ ಆಗ್ಲಿಕತ್ತಿದ್ದಿಲ್ಲ. ಯಾರಿಗೆ ಗೊತ್ತು, ಎರಡು ಮೂರು ಕಿಟ್ ಒಂದೇ ಸಲಕ್ಕೆ ಖರೀದಿ ಮಾಡಿ ಬಿಟ್ಟಿದ್ದರೋ ಏನೋ?

ಸರ್! ಬರ್ರಿ, ಅಂತ ಅನ್ನಬೇಕು ಅನ್ನೋದ್ರಾಗ ಕಟ್ಟಿ ಸರ್ ಕೈಯಾಗ ಒಂದು ಅಪರೂಪದ 'ಸಾಮಾನು' ಇತ್ತು. ಅದನ್ನ ನೋಡಿದ ನಮ್ಮ ಜೋಡಿ ಬಂದಿದ್ದ ಕಿಡಿಗೇಡಿ ಒಬ್ಬವ ಒಂದು ಸಿಕ್ಕಾಪಟ್ಟೆ ಖತರ್ನಾಕ್ ಜೋಕ್ ಹೊಡೆದ. ಸಿಕ್ಕಾಪಟ್ಟೆ ನಗು ಬಂತು. ಟಂಕಸಾಲಿ ಸರ್ ಮಾರಿ ನೋಡಿಕೋತ್ತ ಅವರ ಜೋಡಿ ಮಾತಾಡಬೇಕಿತ್ತು ಅಂತ ಹೇಳಿ ಹ್ಯಾಂಗೋ ಮಾಡಿ ನಗು ತಡಕೊಂಡೆ. ಅದು ಕಟ್ಟಿ ಸರ್ ಕೈಯಾಗ ಅದೇನು ಕ್ರಿಕೆಟ್ 'ಸಾಮಾನು' ಇತ್ತು, ಅದು ಏನು ಜೋಕ್ ಅದೆಲ್ಲ ಬ್ಯಾಡ. ಗೊತ್ತಾಗವರಿಗೆ ಅದು ಏನು 'ಸಾಮಾನು' ಅಂತ ಗೊತ್ತಾಗ್ತದ. 'ಸಾಮಾನು' ಗೊತ್ತಾದರ ಜೋಕ್ ಸಹಿತ ಗೊತ್ತಾಗ್ತದ.

ಮತ್ತ ಮೊದಲಿನ ಹಾಂಗೆ ಮಾಡಿದಿವಿ.

ಸರ್! ನಿಮ್ಮ ಪಿರಿಯಡ್ ಅದರೀ.................ಅಂತ ಎಳದೆ.

ಸರ್ ಅವರಿಗೆ ಕ್ರಿಕೆಟ್ ಕಿಟ್ ನೋಡೋ ಸಂಭ್ರಮ. ಕರಡಿ ಪೂಜಿ ಒಳಗ ಶಿವನ್ನ ಬಿಟ್ಟಂಗ....ಅಲ್ಲಲ್ಲ....ಶಿವಪೂಜಿ ಒಳಗ ಕರಡಿ ಬಿಟ್ಟಂಗ ನಾವು ಒಂದಿಷ್ಟು ಮಂದಿ ಹೋಗಿ, ಪಿರಿಯಡ್ ಅದ ಬರ್ರಿ! ಬರ್ರಿ! ಅಂತ ಕಾಡ್ಲಿಕತ್ತುಬಿಟ್ಟೇವಿ. ಸೂಡ್ಲಿ! ಪಿಶಾಚಿ ಅಂತಹ ಸ್ಟೂಡೆಂಟ್ಸ್.

ಟಂಕಸಾಲಿ ಸರ್ ಭಾಳ ಶಾಂತ ಸ್ವಭಾವದವರು. ಬೈತಿದ್ದಿಲ್ಲ.

ಬರ್ತೇನೋ ಮಾರಾಯಾ! ಈಗ ಬಂದೇ ಬಿಟ್ಟೆ. ಹೋಗ್ರೀ, ಅಂತ ಹೇಳಿ ಮತ್ತ ಓಡಿಸಿದರು.

ಏ! ಈ ಟಿಂಕು ಬರ್ತೇನಿ ಬರ್ತೇನಿ ಅಂತ ಬರೆ ಚೌಕ ಉಳ್ಳಸಾಕ ಹತ್ಯಾನ್ರಲೇ!!! ಹಾ!!! ಹಾ!! ಅಂತ ಅವರಿಗೆ ಕೇಳಿಸದಾಂಗ ನಕ್ಕೋತ್ತ ನಮ್ಮ 10th A ಕ್ಲಾಸಿಗೆ ಬಂದು ಕೂತ್ವಿ.

ಕ್ಲಾಸಿಗೆ ಬಂದು ಕಟ್ಟಿ ಸರ್ ಕೈಯ್ಯಾಗ ಇದ್ದ ಆ ಕ್ರಿಕೆಟ್ 'ಸಾಮಾನು' ನೆನೆಸಿಕೊಂಡು ನೆನಿಸಿಕೊಂಡು, ಎಲ್ಲಾ ಕಡೆ ತಟ್ಟಿಕೊಂಡು ನಕ್ಕು ನಕ್ಕು, ಕಣ್ಣಾಗ ನೀರು ಬಂದು ಬಿಟ್ಟಿತ್ತು. ಕಟ್ಟಿ ಸರ್ ಅಂದ್ರ ಯಂಗ್ & ಡ್ಯಾಶಿಂಗ್ ಮಾಸ್ತರ್. ಇನ್ನೂ ೨೮-೨೯ ವರ್ಷದ handsome ಮಾಸ್ತರು. ಅಂತವರ ಕೈಯಾಗ ಆ ಕ್ರಿಕೆಟ್ 'ಸಾಮಾನು' ನೋಡಿ ನಾವು ಮಂಗ್ಯಾನಿಕೆಗಳು ಯಾಕ್ ನಕ್ಕಿದ್ದಿವಿ? ಆವಾಗ ನಮಗ ನಗಲಿಕ್ಕೆ ಕಾರಣ ಅದು ಇದು ಬೇಕಾಗಿಯೇ ಇರಲಿಲ್ಲ. ಜಸ್ಟ್ ಬಿ ಹ್ಯಾಪಿ! ಹ್ಯಾಪಿಲಿ ಹಾಪ್ ಮಂದಿ ಎಲ್ಲಾ ನಾವು.

ಕಟ್ಟಿ ಸರ್ ಮ್ಯಾಲಿನ ಜೋಕ್ ಮತ್ತ ಮತ್ತ ಕೇಳಿ ನಕ್ಕು ಮುಗಿಸೋದ್ರಾಗ ಮತ್ತ ಹದಿನೈದು ನಿಮಿಷ ಆತು. ಅಂದ್ರ ಟಂಕಸಾಲಿ ಸರ್ ಪಿರಿಯಡ್ ಅರ್ಧಾಕ್ಕಿಂತ ಹೆಚ್ಚು ಮುಗಿದೇ ಹೋಗಿತ್ತು. ಇನ್ನೂ ಸರ್ ಪತ್ತೇನೇ ಇಲ್ಲ. ನಾವು ಬಿಡೋ ಪೈಕಿ ಅಲ್ಲವೇ ಅಲ್ಲ. ಕೈ ತೊಳಕೊಂಡೇ ಹಿಂದ ಬಿದ್ದವರು.

ಏ!!! ನಡ್ರಿಲೇ! ಟಿಂಕು ಮಾಸ್ತರ (ಕಿಟ್) ಬಿಚ್ಚೋದು, ನೋಡೋದು ಎಲ್ಲ ಇನ್ನೂ ಮುಗಿದಂಗ ಇಲ್ಲ. ಮತ್ತ ಹೋಗಿ ಕಡ್ಡಿ ಹಾಕೋಣ ನಡೀರಿಲೇ, ಅಂತ ಹೇಳಿ ಮತ್ತ ಹೋದ್ವೀ. ಅದೇ ನಾಲ್ಕೈದು ಜನರ ಗುಂಪು.

ಯಪ್ಪಾ!! ಅದೇನು ಇತ್ತೋ ಆ ಕ್ರಿಕೆಟ್ ಕಿಟ್ ಒಳಗ!!!! ಸ್ಕೂಲ್ ಹಾಲ್ ಒಳಗ ಅದನ್ನ ನಡು ಇಟ್ಟುಕೊಂಡು ಅದೇನು ತೆಗೆದು ತೆಗೆದು ಗುಡ್ಡಿ ಹಾಕ್ಲಿಕತ್ತಿದ್ದರೋ ದೇವರಿಗೇ ಗೊತ್ತು.

ಟಂಕಸಾಲಿ ಸರ್ ಅವರಿಂದ ಸ್ವಲ್ಪ ದೂರ ಇದ್ದಾಗ ಒಬ್ಬ ಕಿಡಿಗೇಡಿ ಇನ್ನೊಂದು ಬಾಂಬ್ ಹಾಕೇ ಬಿಟ್ಟ.

ಮಹೇಶಾ!!! ಆ ಕಿಟ್ ಆ ಪರಿ ಖಾಲಿ ಮಾಡಿದರೂ ಅದು ಖಾಲಿ ಅಗವಲ್ಲತು. ಅದನ್ನ ನೋಡಿದರ ನಿನಗೇನು ನೆನಪಾಗ್ತದ ಹೇಳು? ಅಂತ ಹೇಳಿ ಒಂದು ಬತ್ತಿ ಇಟ್ಟ. ಅವನ ಮಾರಿ ಮ್ಯಾಲಿನ ನಗು ನೋಡಿದ್ರ ಈ ಹಾಪ್ಸೂಳಿಮಗ ಏನೋ ಒಂದು ದೊಡ್ಡ ಜೋಕ್ ಹೊಡಿಯವ ಇದ್ದಾನ ಅಂತ ಖರೆ ಅಂದ್ರೂ ಗೊತ್ತಾತು.

ಏನಲೇ? ಏನ್ ಹಚ್ಚಿ? ಅಂತ ಕೇಳಿದೆ.

ಅವನೌನ್! ಒಂದು ತಾಸಿಂದ ಆ ಕ್ರಿಕೆಟ್ ಕಿಟ್ ಬಿಚ್ಚಲಿಕತ್ಯಾರ. ಇನ್ನೂ ಖಾಲಿ ಆಗವಲ್ಲತು. ಎಲ್ಲರೆ ನಮ್ಮ ಸಾಲಿ ಮಂದಿ ದ್ರೌಪದಿ ಕ್ರಿಕೆಟ್ ಕಿಟ್ ತಂದಾರೇನು ಅಂತ ನನಗ ಡೌಟ್ ನೋಡಪಾ, ಅಂತ ಭಾಳ ಇನ್ನೋಸೆಂಟ್ ಆಗಿ ಹೇಳಿದ.

ಏನು!! ದ್ರೌಪದಿ ಕಿಟ್ಟ? ಅಂದ್ರಾ? ಅಂತ ಕೇಳಿದೆ.

ದ್ರೌಪದಿ ಸೀರಿ, ನೆನಪಾತ? ಅದನ್ನ ಕೌರವರು ಎಷ್ಟೇ ಉಚ್ಚಿದರೂ ಅದು ಉಚ್ಚಲೇ ಇಲ್ಲ. ಅಕಿದು ಒಂದು ಸೀರಿ ಕಳದಾಂಗ ಮತ್ತೊಂದು ಬಂದೇ ಬರ್ತಿತ್ತು. ಈ ಕ್ರಿಕೆಟ್ ಕಿಟ್ ಒಂದೋ ಅಕ್ಷಯ ಪಾತ್ರೆ ಇರಬೇಕು. ಇಲ್ಲಂದ್ರ ದ್ರೌಪದಿ ಸೀರಿನೇ ಇರಬೇಕು. ಇಲ್ಲಂದ್ರ ಏನೋ ಇದು? ಒಂದು ತಾಸಿಂದ ಆ ಕಿಟ್ ಒಳಗಿಂದ ಸಾಮಾನು ತೆಗೆದೇ ತೆಗೆಲಿಕತ್ತಾರ ಇನ್ನೂ ಖಾಲಿ ಆಗವಲ್ಲತು, ಅಂದು ಬಿಟ್ಟ.

ಯಪ್ಪಾ!!! ಅವಾ ಹೇಳಿದ ರೀತಿ, ಆ ಡೈಲಾಗ್ ಡೆಲಿವರಿ, ಆ ಟೈಮಿಂಗ್ ಎಲ್ಲ ಕೂಡಿ ಸುತ್ತಾ ಮುತ್ತಾ ಸರ್ ಅವರು ಇವರು ಇದ್ದಾರ ಅನ್ನೋದರ ಖಬರು ಸಹ ಇಲ್ಲದೆ ಹಾಕ್ಕೊಂಡು ಖೀ!!!!ಖೀ!!! ಅಂತ ಎಲ್ಲಾ ಬಿಚ್ಚಿ ನಕ್ಕು ಬಿಟ್ಟಿವಿ. ಭಿಡೆ ಬಿಟ್ಟು ನಕ್ಕು ಬಿಟ್ಟಿವಿ. ಎಂ.ಎ. ಸಿದ್ಧಾಂತಿ ಸರ್ ಬಂದು ಹಾಕ್ಕೊಂಡು ಒದ್ದು ಬಿಟ್ಟಾರು ಅಂತ ಲಕ್ಷ ಸಹಿತ ಇಲ್ಲದೆ ನಕ್ಕಿದ್ದಿವಿ. ಯಪ್ಪಾ! ಆ ಪರಿ ನಕ್ಕಿದ್ದು ನೆನಪಿಲ್ಲ ಬಿಡ್ರೀ ಆ ಮ್ಯಾಲೆ.

ಹಾಂಗ ಹುಚ್ಚರ ಗತೆ ನಕ್ಕೊತ್ತನೇ ಟಂಕಸಾಲಿ ಸರ್ ಹತ್ತಿರ ಹೋಗಿ ಸಲಾಂ ಹೊಡಿ ಬೇಕು ಅನ್ನೋದ್ರಾಗ, ಸರ್ ಅವರೇ, ಈ ಶನಿಗಳು ಬಿಡೋ ಪೈಕಿ ಅಲ್ಲ, ಅಂತ ಹೇಳಿ, ಕಿಟ್ ಬಿಟ್ಟು ಬರಲಿಕ್ಕೆ ಮನಸ್ಸು ಇಲ್ಲದೆ, ಸಣ್ಣ ಮಾರಿ ಮಾಡಿಕೊಂಡು ನಮ್ಮ ಜೋಡಿನೇ ಬಂದ್ರು. ಕಟ್ಟಿ ಮಾಸ್ತರ್ ಮಾತ್ರ ಇನ್ನೂ ಆ 'ಸಾಮಾನು' ಕೈಯಲ್ಲಿ ಹಿಡಕೊಂಡೇ ನಿಂತಿದ್ದರು. ಅದು ಆ ತಿಂಗಳ ಮುಗಿಯದ ಜೋಕ್.

ಹೀಗೆ ಈ ಪರಿ ತನ್ಮಯತೆಯಿಂದ ಕ್ರಿಕೆಟ್ ಕಿಟ್ ನೋಡುತ್ತಿದ್ದ ಟಂಕಸಾಲಿ ಸರ್ ಅವರಿಗೆ ಕಾಟ ಕೊಟ್ಟು ಕೊಟ್ಟು ಕರಕೊಂಡು ಬಂದಾಗ ಪಿರಿಯಡ್ ಮುಗಿಯಲಿಕ್ಕೆ ಹತ್ತು ಭಾಳ ಅಂದ್ರ ಹದಿನೈದು ಮಿನಿಟ್ ಇತ್ತು. ಅಷ್ಟೇ.

ಮಹೇಶಾ!!! ಈಗ ನೋಡಾ!!! ನೋಡಾ! ರಾಜಾsssssssssssss ರಾಮ್ಮೋಹನ್ ರಾಯ್ ಅಂತಾರ ನೋಡಾ ಸರ್! ಬೇಕಾದ್ರ ಬೆಟ್ಟ ಕಟ್ ನೀ! ಅಂದಾ...ಅಂದಾ.... ಅಂದಲೇ ಟಿಂಕು ಅಂದಾ ...... ರಾಜಾsssssssssssss ರಾಮ್ಮೋಹನ್ ರಾಯ್, ಅಂತ ಒಬ್ಬ ಕಿಡಿಗೇಡಿ ಪೂರ್ತಿ ಪೀಛೆ ಮುಡ್ ಮಾಡಿ ಹೇಳಿ ನಕ್ಕಾ. ಭಾರಿ ಜೋಕ್ ಅದು.

ಟಂಕಸಾಲಿ ಸರ್ ಅವರು ಬ್ರಹ್ಮ ಸಮಾಜದ ಸ್ಥಾಪಕ ರಾಜಾ ರಾಮಮೋಹನ್ ರಾಯ್ ಅನ್ನುವನ ಹೆಸರನ್ನ ಅವರ ಟ್ರೇಡ್ ಮಾರ್ಕ್ ರೀತಿಯಲ್ಲಿ ರಾಜಾssssss ಅಂತ ಫುಲ್ ಎಳೆದು, ಒಮ್ಮೆಲೆ ಬ್ರೇಕ್ ಹಾಕಿ, ಫಾಸ್ಟ್ ಆಗಿ, ರಾಮ್ಮೋಹನ್ ಅಂತ ಎಲ್ಲಾ ಕೂಡಿಸಿ ರಾಯ್ ಸೇರಿಸಿ ರಾಜಾsssssssssssss ರಾಮ್ಮೋಹನ್ ರಾಯ್ ಅಂತ ಅಂದು ಬಿಡ್ತಿದ್ದರು. ಎಲ್ಲರದಲ್ಲೂ ಏನೇನನ್ನೋ ಕಂಡು ಎಲ್ಲದಕ್ಕೂ ನಗುವ ನಮ್ಮ ಹಾಪರ ಗ್ಯಾಂಗಿಗೆ ಅದೊಂದು ದೊಡ್ಡ ಮನರಂಜನೆ. ರಕ್ಕಸ ರಂಜನೆ.

ರಾಜಾsssssssssssss ರಾಮ್ಮೋಹನ್ ರಾಯ್!!!! ಅಂತ ಸರ್ ಅಂದೇ ಬಿಟ್ಟರು.

ಹೋಗ್ಗೋ!!!!

ನಾನು, ಭಟ್ಟಾ, ಅರವ್ಯಾ, ಬಾಜೂಕಿನ ಜಯ-ವಿಜಯರಾದ ಕಟೀರಾ, ಮುದಗಲ್ಲಾ, ಆ ಕಡೆಯಿಂದ ಜಗದೀಶ ಪಾಟೀಲಾ, ಮತ್ತೂ ಆ ಕಡೆಯಿಂದ ಖತರ್ನಾಕ್ ದ್ರೌಪದಿ ಸೀರಿ ಜೋಕಿನ ಕರ್ಜಗಿ, ಸುಮಾರು ಮುಂದೇ ಕೂತಿದ್ದ ಗಲಗಲಿ ಎಲ್ಲರೂ ನಗಲು ಶುರು ಮಾಡಿ, ಬಾಕಿ ಸುಮಾರು ಜನರೂ ನಗಲು ಶುರು ಮಾಡಿದ್ದಕ್ಕೆ ಸರ್ ಒಂದು ಕ್ಷಣ ದಂಗಾದರು. 10th A class ಅಂದ್ರೆ ಹಾಂಗೆ. very unpredictable.

ಟಂಕಸಾಲಿ ಸರ್ ಸಣ್ಣ ಪುಟ್ಟದ್ದಕ್ಕೆಲ್ಲ ತಲಿ ಬಿಸಿ ಮಾಡಿಕೊಳ್ಳುತ್ತಲೇ ಇರಲಿಲ್ಲ. ಮತ್ತ ಅದೇ ಹೊತ್ತಿಗೆ ಪಿರಿಯಡ್ ಸಹ ಮುಗೀತು ಅಂತ ಘಂಟಿ ಸಹಿತ ಹೊಡಿತು. ಟಂಕಸಾಲಿ ಸರ್ ಸಹಿತ, ಮಂಗ್ಯಾನಿಕೆ ಹುಡುಗುರು, ಅಂತ ಹೇಳಿ ಎದ್ದು ಹೋದರು.

ನಾವು ಮಾತ್ರ ಹತ್ತನೆ ಕ್ಲಾಸ್ ಮುಗಿಯೋ ತನಕಾ ಆ ದ್ರೌಪದಿ ಸೀರಿ ತರಹದ ಕ್ರಿಕೆಟ್ ಕಿಟ್ಟು, 'ಸಾಮಾನು' ಹಿಡಕೊಂಡು ನಿಂತಿದ್ದ ಕಟ್ಟಿ ಸರ್, ಕಿಟ್ ಬಿಚ್ಚಿ ಒಳಗಿದ್ದಿದ್ದನ್ನ ಮುಟ್ಟಿ ಮುಟ್ಟಿ ನೋಡುತ್ತಿದ್ದ ಟಂಕಸಾಲಿ ಸರ್, ಅವರನ್ನ ನಾವು ಹೋಗಿ ಕಾಡಿ ಕಾಡಿ ಕರಕೊಂಡು ಬಂದಿದ್ದು, ನಂತರದ ರಾಜಾsssssssssssss ರಾಮ್ಮೋಹನ್ ರಾಯ್ ಅಂದಿದ್ದು, ಇತ್ಯಾದಿಗಳ ಮೇಲೆ ನಕ್ಕಿದ್ದೆ ನಕ್ಕಿದ್ದು.

ಹೆಂಗಸೂರು ಮಾತ್ರ ಯಾಕ ಚಹಾ ಎಲಿ ಹರಿತಾರ್ರೀ?: ಪ್ರತಿ ವರ್ಷ ನವೆಂಬರ್ ಡಿಸೆಂಬರ್  ತಿಂಗಳಲ್ಲಿ BEd ಮಾಡುತ್ತಿದ್ದ ಸ್ಟೂಡೆಂಟ್ಸ್ ಪಾಠ ಮಾಡೋದನ್ನ ಪ್ರಾಕ್ಟೀಸ್ ಮಾಡಲು ಸಾಲಿಗೆ ಬರ್ತಿದ್ದರು. ಎರಡು ತಿಂಗಳು ಅವರದ್ದೇ ಪಾಠ. ರೆಗ್ಯುಲರ್ ಮಾಸ್ತರ್ ಮಂದಿ ಕೂತು ಅವರ performance ನೋಡಿ ಅವರಿಗೆ ಮಾರ್ಕ್ಸ್ ಹಾಕಿದರ ಆತು.

9th ಸ್ಟ್ಯಾಂಡರ್ಡ್. ೧೯೮೬. ಆವಾಗ ಟಂಕಸಾಲಿ ಸರ್ ನಮಗ ಕಲಸ್ತಿದ್ದಿಲ್ಲ. ಆದ್ರ ನಮಗ ಕಲಿಸಲು ಬಂದಿದ್ದ ಇಬ್ಬರು BEd ಟ್ರೈನಿ ಟೀಚರಗಳನ್ನು ನೋಡಿ, ಮಾರ್ಕ್ಸ್ ಹಾಕೋ ಕೆಲಸ ಅವರದ್ದೇ ಆಗಿತ್ತು. ಅದಕ್ಕೇ ಬಂದು ಕೂಡ್ತಿದ್ದರು.

ಆವಾಗ ಬಂದ ಇಬ್ಬರು BEd ಟ್ರೈನಿ ಮಾಸ್ತರಣಿಯರಲ್ಲಿ ಒಬ್ಬರನ್ನ ಮರೆಯೋ ಹಾಗೇ ಇಲ್ಲ. ಅವರೇ ಹಿರೇಮಠ ಟೀಚರ್. ಒಂದು ಟೈಪ್ ಭಾಳ ಛಂದ ಇದ್ದರು. ಎತ್ತರಕ್ಕ, ಟುಮ್ ಟುಮ್ ಆಗಿ, ಮಸ್ತಾಗಿ ಬಾಬ್ ಕಟ್ ಮಾಡಿಸಿಕೊಂಡು, ಛಂದ ಛಂದ ಸೀರಿ ಉಟಕೊಂಡು, ಸ್ವಲ್ಪ ಜಾಸ್ತಿಯೇ ಅನ್ನಿಸುವಷ್ಟು ಶೃಂಗಾರ ಮಾಡಿಕೊಂಡು ಬಂದು ಎಲ್ಲರ ಕಣ್ಣು ತಂಪು ಮಾಡ್ತಿದ್ದರು. ಛಂದ ಇದ್ದ ಮ್ಯಾಲೆ ಕ್ಲಾಸ್ ಹ್ಯಾಂಗ ತೊಗೊಂಡ್ರೂ ಓಕೆ. ಹಾಂಗಾಗಿ ಅವರು ಕ್ಲಾಸ್ ತೊಗೊಳ್ಳೋವಾಗ ಅವರಿಗೆ ಏನೂ ಜಾಸ್ತಿ ಗೋಳು ಹೊಯ್ಕೊತ್ತಿದ್ದಿಲ್ಲ. ಬಾಬ್ ಕಟ್ ಮಾಡಿಸಿದ ಕೂದಲಾ ಆ ಕಡೆ ಈ ಕಡೆ ಹಾರಿಸ್ಕೋತ್ತ, ನಡು ನಡು ಹೀ!! ಹೀ!! ಅಂತ ಛಂದ ನಕ್ಕೋತ್ತ, ಜಿಯಾಗ್ರಫಿ ಪಾಠ ಮಾಡ್ತಿದ್ದ ಹಿರೇಮಠ ಮೇಡಂ ನೋಡೋದೇ ಒಂದು ಛಂದ. 'ಮೈ ಹೂ ನಾ' ಅನ್ನೋ ಸಿನೆಮಾ ಒಳಗ ಸುಶ್ಮಿತಾ ಸೇನ್ ಒಬ್ಬಾಕಿ ಟೀಚರ್ ಪಾತ್ರ ಮಾಡ್ಯಾಳ ನೋಡ್ರೀ, ಥೇಟ್ ಹಾಂಗೆ ನಮಗ ಆವಾಗ ಹಿರೇಮಠ ಮೇಡಂ ಅಂದ್ರ.

ಇನ್ನೊಬ್ಬ ಟ್ರೈನಿ ಟೀಚರ್ ಹಿರೇಮಠ ಟೀಚರ್ ಅವರಿಗೆ ಫುಲ್ ಉಲ್ಟಾ. ಹಿರೇಮಠ ಟೀಚರ್ ಎಷ್ಟು gregarious ಇದ್ದರೋ ಅದರ ಉಲ್ಟಾ ಇದ್ದರು ಇನ್ನೊಬ್ಬರು ಟೀಚರ್. ಪಾಪ! ಸಿಂಪಲ್ ಅಂದ್ರ ಸಿಂಪಲ್. ಮತ್ತ ಭಾಳ ಮೃದು ಅಂದ್ರ ಮೃದು. ಘಟ್ಟೆಯಾಗಿ ಮಾತು ಸಹಿತ ಆಡ್ತಿದ್ದಿಲ್ಲ. ಅಂತವರು ಕೆಟ್ಟ ಕೆಟ್ಟ ಉಡಾಳರು ತುಂಬಿದ್ದ 9th A ಕ್ಲಾಸ್ ಒಳಗ ಅವರ BEd ಕ್ಲಾಸ್ ತೊಗೋಬೇಕು. ಅವರು ಹೇಳಿದ್ದಕ್ಕೊಮ್ಮೆ ನಗುವ ಮಂಗ್ಯಾನಿಕೆಗಳು. ಇಲ್ಲದ ಸಲ್ಲದ ಪ್ರಶ್ನೆ ಕೇಳಿ ಕಾಡೋ ಹುಚ್ಚರು. ಒಮ್ಮೊಮ್ಮೆ ಹಿರೇಮಠ ಮೇಡಂ ಅರ್ಧಾ ಕ್ಲಾಸ್ ತೊಗೊಂಡ್ರ ಉಳಿದ ಅರ್ಧಾ ಕ್ಲಾಸ್ ಈ ಇನ್ನೊಬ್ಬರು ಮೇಡಂ ತೊಗೊತ್ತಿದ್ದರು. ಚಂದನೆ ಹಿರೇಮಠ ಮೇಡಂ ಅವರನ್ನು ಬಾಯಿ ಮತ್ತೊಂದು ಎಲ್ಲ ಬಿಟ್ಟು ನೋಡಿಕೋತ್ತ ಕೂಡುತ್ತಿದ್ದ ನಾವು ಅವರ ಟೈಮ್ ಒಳಗ ಹಾಕದ ಗದ್ದಲಾ ಎಲ್ಲ ಕೂಡಿಸಿ ಇನ್ನೊಬ್ಬ ಬಡಪಾಯಿ ಟೀಚರ್ ಪಿರಿಯಡ್ ಒಳಗ ಡಬಲ್ ಗದ್ದಲಾ ಹಾಕಿ ಅವರ ಜೀವಾ ತಿಂದು ಬಿಡ್ತಿದ್ದಿವಿ. ಆ BEd ಟ್ರೈನಿ ಟೀಚರ್ ಕ್ಲಾಸ್ ಒಳಗ ಕೊನೇಗೆ ಯಾವಾಗಲೂ ಪ್ರಶ್ನೆ ಉತ್ತರ ಅಂತ ಒಂದು ಭಾಗ ಇದ್ದೇ ಇರ್ತಿತ್ತು. ಏನೇನೋ ಪ್ರಶ್ನೆ ಕೇಳಿ ತಲಿ ತಿನ್ನೋದು. ಒಮ್ಮೊಮ್ಮೆ ಅದು ಯಾವ ಮಟ್ಟಕ್ಕ ಹೋಗ್ತಿತ್ತು ಅಂದ್ರ, ತಮ್ಮ ಕ್ಲಾಸ್ ಅಲ್ಲದೇ ಇದ್ದರೂ ಹಿರೇಮಠ ಮೇಡಂ ಅವರೇ ಎದ್ದು ನಿಂತು, ಚಂದಾಗಿ ನಕ್ಕು, ಎಲ್ಲರನ್ನೂ ಒಂದು ತರಹಾ hypnotize ಮಾಡಿ, ನಮ್ಮನ್ನೆಲ್ಲಾ ಅಷ್ಟರ ಮಟ್ಟಿಗೆ ಹಾಪ್ ಮಾಡಿ, ಏನೋ ಒಂದು ಉತ್ತರಾ ಕೊಟ್ಟು, ಅವರ ಗೆಳತಿಯನ್ನ ಬಚಾವ ಮಾಡ್ತಿದ್ದರು. ಹಿರೇಮಠ ಮೇಡಂಗೆ ಒಂದು ತರಹ indirect ಲೈನ್ ಹೊಡೆಯುತ್ತಿದ್ದ ಕಿಡಿಗೇಡಿಗಳೆಲ್ಲ, ಹಿರೇಮಠ ಹೇಳ್ಯಾಳ, ಸುಮ್ಮ ಕೂಡ್ರೀಲೆ, ಅಂತ ಏನೋ ಒಂದು ತರಹದ ಮಾಂಡವಳಿ ಮಾಡಿ ಸುಮ್ಮನಿರ್ತಿದ್ದರು. BEd ಟ್ರೈನಿ ಟೀಚರಗಳ ಕ್ಲಾಸ್ ನೋಡಿ, ಮಾರ್ಕ್ಸ್ ಕೊಟ್ಟು ಹೋಗಲು ಬಂದು ಕೂತಿರುತ್ತಿದ್ದ ಟಂಕಸಾಲಿ ಸರ್ ಇದ್ಯಾವದರ ಮಧ್ಯೆ ಬರದೆ, ಏನರೆ ಮಾಡಿಕೊಂಡು ಹಾಳಾಗಿ ಹೋಗ್ರೀ, ಅಂತ ನಮ್ಮ ಪಾಲಿಗೆ ನಮ್ಮನ್ನ ಬಿಟ್ಟು, ಏನೋ ಓದಿಕೋತ್ತ ಇದ್ದು ಬಿಡ್ತಿದ್ದರು.

ನಮ್ಮ ಕಾಲದ ಒಂಬತ್ತನೆ ಕ್ಲಾಸಿನ ಭೂಗೋಲ ಓದಿದ್ದು ಯಾರಿಗಾದರೂ ನೆನಪಿದ್ದರೆ ಅದರಲ್ಲಿ ಚಹಾ ಮತ್ತು ಕಾಫಿ ಬೆಳೆಯ ಬಗ್ಗೆ
ಒಂದೋ ಎರಡೋ ಚಾಪ್ಟರ್ ಇತ್ತು. ಅರೇಬಿಕಾ, ರೋಬುಸ್ಟಾ ಎಂಬ ಕಾಫಿ ಬೀಜಗಳು ಅದು ಇದು ಅಂತ. ಚಹಾ ಬೆಳೆ ಬಗ್ಗೆ ಹೆಚ್ಚಿನ ಮಾಹಿತಿ. ಯಾಕಂದ್ರ ಭಾರತ ಅತಿ ಹೆಚ್ಚು ಚಹಾ ಬೆಳೆಯುವ ದೇಶ.

ಆ ಚಹಾ ಮ್ಯಾಲಿನ ಚಾಪ್ಟರ್ ಒಳಗ ಒಂದು ವಾಕ್ಯ ಅತಿ ಸಹಜ ಅನ್ನೋ ಹಾಂಗ ಬಂದು ಬಿಟ್ಟಿತ್ತು. ಅದು ಹ್ಯಾಂಗ ಇತ್ತು ಅಂದ್ರ....Tea leaves are almost exclusively picked by women. Hence, tea gardens employ a large number of women......ಸುಮಾರು ಹೀಂಗ ಇತ್ತು. ಸ್ವಲ್ಪ ಹೆಚ್ಚು ಕಮ್ಮಿ ಇತ್ತು. ಅರ್ಥ ಅದೇ.

ಆ ಇನ್ನೊಬ್ಬರು ಟ್ರೈನಿ ಟೀಚರ್ ಅವತ್ತು ಆ ಚಹಾದ ಮೇಲಿನ ಚಾಪ್ಟರ್ ಕವರ್ ಮಾಡಿ ಮುಗಿಸಿದ್ದರು. ಈಗ ಅಂತ್ಯದ ಹದಿನೈದು ಮಿನಿಟ್ ಪ್ರಶ್ನೆ ಉತ್ತರ. ಕಿಡಿಗೇಡಿ ಪ್ರಶ್ನೆ ಕೇಳಲಿಕ್ಕೆ 9th A ಕ್ಲಾಸಿನ ಕಿಡಿಗೇಡಿಗಳು ಯಾವಾಗಲೂ ತಯಾರ. ಅದೂ ಕೆಟ್ಟ ಬೋರ್ ಬರೊ ಹಾಂಗ ಪಾಠ ಹೇಳಿ ಮುಗಿಸ್ಯಾರ. ಇವರಿಗೆ ಮಾಡಲಿಕ್ಕೇ ಬೇಕು ಅಂತ ಹೇಳಿ ಒಂದಿಷ್ಟು ಮಂದಿ ಜನರಲ್ ಕರಿಯಪ್ಪಗಳು ತಯಾರಾದರು. ಜನರಲ್ ನಾಲೆಜ್ ಉಪಯೋಗಿಸಿ ಏನೇನೋ ಪ್ರಶ್ನೆ ಕೇಳವರಿಗೆ ಜನರಲ್ ಕರಿಯಪ್ಪಾ ಅಂತ ಹೆಸರು.

Any questions? ಅಂತ ಪಾಠ ಮಾಡಿ ಹೈರಾಣ ಆಗಿದ್ದ ಆ ಟ್ರೈನಿ ಟೀಚರ್ ಕೇಳಿದರು.

ನಮ್ಮ underground network ಒಳಗ ಆಗಲೇ ಸಂದೇಶಗಳು ಹರಿದಾಡಿ, ಯಾವ 'ಸಿಗಿಸೋ' ಪ್ರಶ್ನೆ ಕೇಳಬೇಕು ಅಂತ ಡಿಸೈಡ್ ಮಾಡಿ ಆಗಿತ್ತು. ಮುಂದೆ ಆಗೋದನ್ನು ಊಹಿಸಿಕೊಂಡು ನಗಲಿಕ್ಕೆ ರೆಡಿ ಆಗಿ ಕೂತಿದ್ದಿವಿ. ನಮ್ಮ ಮುಂದೆ, ಹುಡುಗಿಯರ ಸೆಕ್ಷನ್ ಒಳಗ, ಲಾಸ್ಟ್ ಬೆಂಚಿನಲ್ಲಿ ಕೂತಿದ್ದ ಸುಶ್ಮಿತಾ ಸೇನ್ ಮಾದರಿಯ ಹಿರೇಮಠ ಟೀಚರ್ ಹಿಂದ ತಿರುಗಿ, ತಮ್ಮ usual ಬ್ಯೂಟಿಫುಲ್ ಸ್ಮೈಲ್ ಕೊಟ್ಟು, what are you going to ask yaar? tell no? ಅಂದಿದ್ದರು. ಏನು ಪ್ರಶ್ನೆ ಕೇಳಬಹುದು ಅಂತ ಅವರಿಗೆ ಕೆಟ್ಟ ಕುತೂಹಲ ಒಂದು ಕಡೆ. ತಮ್ಮ ಗೆಳತಿಗೆ ಏನು ಕೇಳಿ ಕಾಡವರು ಇದ್ದಾರ ಅಂತ tension ಇನ್ನೊಂದು ಕಡೆ. ನಾವು ಏನೂ ಹೇಳಲಿಲ್ಲ. Wait & Watch ಅಂತ ಲುಕ್ ಕೊಟ್ಟು ಸುಮ್ಮನಾದ್ವಿ. ಆಗೆ ಆಗೆ ದೇಖೋ ಹೋತಾ ಹೈ ಕ್ಯಾ!

ಟೀಚರ್! ಅಂತ ಒಬ್ಬವ ಕೈ ಎತ್ತಿದಾ. ನಮ್ಮಿಂದಲೇ ತಯಾರಾದ ಒಬ್ಬ ಮುಂದೆ ಕೂತ ಕಿಡಿಗೇಡಿ. ರಾಜಗೋಪಾಲ ಗಲಗಲಿ ಅಂತ ನೆನಪು.

Yes. What is your question? ಅಂತ ಗಡ ಗಡ ನಡಗಿಕೋತ್ತ ಆ ಟ್ರೈನಿ ಟೀಚರ್ ಕೇಳಿದರು.

ಟೀಚರ್! ಚಹಾ ಎಲಿ ಹೆಂಗಸೂರು ಮಾತ್ರ ಯಾಕ ಹರಿತಾರ್ರೀ? ಗಂಡಸೂರು ಯಾಕ ಕೀಳಂಗಿಲ್ಲರಿ? ಗಂಡಸೂರು ಚಹಾ ಎಲಿ ಹರದ್ರ ಏನಾಗ್ತದ್ರೀ? ಅಂತ ಒಂದು ಭಯಂಕರ ಪ್ರಶ್ನೆ ಕೇಳಿದ ಜನರಲ್ ಕರಿಯಪ್ಪ ನಮ್ಮ ಕಡೆ ನೋಡಿ, ಹ್ಯಾಂಗ ಕೇಳಿದೆ? ಅಂತ ಕಣ್ಣು ಹೊಡೆದು ಕೂತಾ.

Tea leaves are  almost exclusively picked by women. Hence, tea gardens employ a large number of women ಅಂತ ಏನು ಹೇಳಿದ್ದರು ನೋಡ್ರೀ, ಅದಕ್ಕ ಇವನ ಪ್ರಶ್ನೆ ಅದು!!!!! ನಮ್ಮ ಕ್ಲಾಸಿನ ಜನರಲ್ ಕರಿಯಪ್ಪಗಳು ಪ್ರಶ್ನೆ ಕೇಳಿದರು ಅಂದ್ರ ಎಂತಾ ಜನರಲ್ ನಾಲೆಜ್ ಇದ್ದವರೂ ಸಹಿತ ತಲಿ ಕರಾ ಪರಾ ಅಂತ ಕೆರಕೊಂಡು ಹೋಗಬೇಕು. ಅಂತಾ ಪ್ರಶ್ನೆ ಕೇಳ್ತಿದ್ದರು.

ಈ ಪ್ರಶ್ನೆ ಕೇಳಿ ಆ ಟ್ರೈನಿ ಟೀಚರ್ ಫುಲ್ ಅಂದ್ರ ಫುಲ್ ಥಂಡಾ ಹೊಡೆದರು. ಇಲ್ಲಿ ತನಕಾ absent minded ಆಗಿ ಕೂತಿದ್ದ ಟಂಕಸಾಲಿ ಸರ್ ಸಹಿತ ಈ ಪ್ರಶ್ನೆಯಿಂದ ಫುಲ್ ಹಾಪ್ ಆಗಿ, ಏನಿರಬಹುದು ? ಅಂತ ತಲಿ ಕೆಡಿಸಿಕೊಂಡರು. ಟಂಕಸಾಲಿ ಸರ್ ಆಜನ್ಮ ಬ್ರಹ್ಮಚಾರಿ. ಅಂತವರು ಸಹಿತ, ಚಹಾ ತೋಟದಲ್ಲಿ ಹೆಂಗಸೂರು ಮಾತ್ರ ಯಾಕ ಚಹಾ ಎಲಿ ಹರಿತಾರ, ಗಂಡಸೂರು ಯಾಕ ಹರಿಯಂಗಿಲ್ಲ? ಅನ್ನೋದರ ಬಗ್ಗೆ ತಲಿ ಕೆಡಿಸಿಕೊಂಡು ಬಿಟ್ಟಿದ್ದರು ಅಂತ ಕಾಣಸ್ತದ. ಅಥವಾ ನಾವು ಕಿಡಿಗೇಡಿಗಳು ಹಾಂಗ ತಿಳಕೊಂಡಿವಿ. ಹಿರೇಮಠ ಟೀಚರ್ ಮಾತ್ರ ವಾಪಸ್ ತಿರುಗಿ, ನಮ್ಮ ಬೆಂಚಿನ ಕಡೆ ನೋಡಿ, ಚಂದಾಗಿ ಸ್ಮೈಲ್ ಕೊಟ್ಟು, what stupid question yaar? ಅಂತ ಹೇಳಿ ಮತ್ತ ಕಿಸಿ ಕಿಸಿ ನಕ್ಕು, ಸುಶ್ಮಿತಾ ಸೇನ್ ಫೀಲಿಂಗ್ ಕೊಟ್ಟು, ತಮ್ಮ ಗೆಳತಿ ಏನು ಉತ್ತರಾ ಕೊಟ್ಟಾಳು ಅಂತ ಕುತೂಹಲದಿಂದ ಮುಂದ ನೋಡಿಕೋತ್ತ ಕೂತಳು.

ಲೇ! ಅಕಿ 'ಎಕಿನೋಡರ್ಮಾಟಾ' ಹಿರೇಮಠ ನಿನಗs ಲೈನ್ ಹೊಡಿತಾಳ ನೋಡಲೇ, ಅಂತ ಲಾಸ್ಟ್ ಬೆಂಚಿನಲ್ಲಿ ಕೂತಿದ್ದ ಸುಂದರ ಹುಡುಗನೊಬ್ಬನಿಗೆ ಹಿರೇಮಠ ಟೀಚರ್ ಅವರಿಗೆ ಕೇಳದ ಹಾಗೆ ಕಾಡಿಸಿದ್ದು ಆಯಿತು. ಎಕಿನೋಡರ್ಮಾಟಾ ಅದು ನಾವು ಹಿರೇಮಠ ಟೀಚರ್ ಗೆ ಇಟ್ಟಿದ್ದ ಹೆಸರು. (Echinodermata ಅನ್ನುವ zoology ಪದಕ್ಕೆ 'ಅಕಿನ್ನ ನೋಡೋ ಹಿರೇಮಠಾ' ಅಂತ ಜೋಕ್ ಇತ್ತು. ಹಾಂಗಾಗಿ ಹಿರೇಮಠ ಮೇಡಂ ಅವರಿಗೆ ಎಕಿನೋಡರ್ಮಾಟಾ ಅಂತ ಹೆಸರು)

ಹೆಂಗಸೂರು ಮಾತ್ರ ಯಾಕ ಚಹಾ ಎಲಿ ಹರಿತಾರ? ಗಂಡಸೂರು ಯಾಕ ಹರಿಯಂಗಿಲ್ಲ? ಹರದ್ರ ಏನಾಗ್ತದ್ರೀ? ಅಂತ ಕೇಳಿದ ಪ್ರಶ್ನೆಗೆ ಉತ್ತರ ಬಂದಿರಲಿಲ್ಲ. ಪಾಪ ಅಕಿ ಬಡಪಾಯಿ ಟ್ರೈನಿ ಟೀಚರ್ ಏನು ಹೇಳಲಿ ಅಂತ ತಡಬಡಿಸಲಿಕತ್ತಿದ್ದಳು. ಏನು ಹೇಳಿಯಾಳು ಅಕಿ? ಯಾರಿಗೆ ಗೊತ್ತದ ಉತ್ತರಾ?

You know...you know....ಅಂತ ಎರಡು ಸಾರೆ ಗಂಟಲು ಕ್ಲಿಯರ್ ಮಾಡಿಕೊಂಡಳು. ಉತ್ತರ ಬರಲಿಲ್ಲ.

We don't know teacher, ಅಂತ ಕೋರಸ್ ಉತ್ತರ ಬಂತು. ಹುಚ್ಚರ ನಗಿ ಅದರ ಮ್ಯಾಲೆ. ಹೋಗ್ಗೋ!

You all boys are very naughty, yaar! ಅಂತ ಹಿರೇಮಠ ಟೀಚರ್ ತಿರುಗಿ, ನಮ್ಮ ಕಡೆ ನೋಡಿ, ಚಂದಾಗಿ ನಕ್ಕು ಹೇಳಿದಳು.

ಎಷ್ಟು ಚಂದ ಇದ್ದಾಳ ಮಾರಾಯ ಇಕಿ ಹಿರೇಮಠ. ಇಕಿ BEd ಲಗೂ ಮುಗಿದು, ಮುಂದಿನ ವರ್ಷ ನಮ್ಮ ಸಾಲಿಯೊಳಗೇ ಇಕಿಗೆ ನೌಕರಿ ಹತ್ತಿ, ನಮಗ ಹತ್ತನೇತ್ತಾ ಜಾಗ್ರಫೀ ಇವರೇ ಕಲಿಸೋ ಹಾಂಗ ಆಗ್ಲೀಪಾ ಅಂತ ಸುಮಾರು ಮಂದಿ ದೇವರಲ್ಲಿ ಪ್ರಾರ್ಥನೆ ಮಾಡಿದ್ದರ ಆಶ್ಚರ್ಯ ಇಲ್ಲ.

ಟ್ರೈನಿ ಟೀಚರ್ ಮತ್ತೂ ಘಾಬರಿ ಆದರು. ಚಾಕ್ ಪೀಸ್ ತುಂಡು ತುಂಡು ಮಾಡಿದರು. ಹುಡುಗರು ಮತ್ತ ನಕ್ಕರು. ಅವರಿಗೆ ಮತ್ತೂ tension ಆತು.

I think....I think....only ladies pick tea leaves because.....I think....I think....you know....ladies' hands are very soft....you know....you know....soft hands, tea leaves, no damage to leaves .......ಅಂತ ಏನೋ ಹೇಳಿ ಬಿಟ್ಟರು. ಪಾಪ! ಪೂರ್ತಿ ಕೇಳಲಿಕ್ಕೆ ಆಗಲೇ ಇಲ್ಲ. ಅವರು ladies, soft hands, ಅಂದಿದ್ದೇ ತಡಾ ಎಲ್ಲಾರೂ ಹುಯ್ಯ ಅಂತ ನಕ್ಕಿದ್ದೇ ನಕ್ಕಿದ್ದು. ಪಾಪ ಟ್ರೈನಿ ಟೀಚರ್ ಅವರಿಗೆ ಕೆಟ್ಟ ಅಪಮಾನ ಆದ ಫೀಲಿಂಗ್ ಬಂದು, ಕ್ಲಾಸ್ ಬಿಟ್ಟು ಓಡಿ ಹೋಗಿಯೇ ಬಿಡ್ತಿದ್ದರೋ ಏನೋ, ಅಷ್ಟರಾಗ ಪಿರಿಯಡ್ ಮುಗಿದ ಘಂಟಿ ಸಹಿತ ಹೊಡೆದು, ಅವರು ಕ್ಲಾಸ್ ಬಿಟ್ಟು ಓಡಿ ಹೋಗೇ ಬಿಟ್ಟರು. ಮುಂದೆ ಅವರು ಮತ್ತ ನಮ್ಮ ಕ್ಲಾಸ್ ತೊಗೊಳ್ಳಿಕ್ಕೆ ಬಂದಿದ್ದರಾ? ನೆನಪಿಲ್ಲ.

ladies, soft hands, ಅದು ಇದು ಅಂತ ಕೇಳಿ ನಗುತ್ತಿದ್ದ ನಮ್ಮಲ್ಲಿ ಕೆಲವರು ಹಿರೇಮಠ ಮೇಡಂ ಕಡೆ ನೋಡುತ್ತಿದ್ದರೆ ಕೆಲವರು ಟಂಕಸಾಲಿ ಸರ್  ಕಡೆ ನೋಡಿದಿವಿ.

ಹಿರೇಮಠ ಮೇಡಂ ಫುಲ್ ಕೆಂಪಾಗಿ ಮತ್ತ ಮತ್ತ ಲಾಸ್ಟ್ ಬೆಂಚ್ ಹುಡುಗರ ಕಡೆ ನೋಡಿದರು.

ಇಕಿ ಹಿರೇಮಠ ಯಾಕ ಇಷ್ಟು ಕೆಂಪ ಆದಳೋ ಮಾರಾಯಾ? ಏ ಇವನಾ (ಹೆಸರು ಬೇಡ), ನಿನ್ನೇ ನೋಡಾಕತ್ತಾಳೇ ಅಕಿ. ಲಕ್ಕಿ ಸೂಳಿಮಗನ, ಅಂತ ಹಿರೇಮಠ ಮೇಡಂ ಅವರ ಆಶಿಕ಼್ ಅಂತ designate ಆಗಿದ್ದ ದರವೇಶಿಯೊಬ್ಬನನ್ನ ಎಲ್ಲರೂ ಕಾಡಿಸಿದರು.

ಮತ್ತೆ ಕೆಲವರು ಟಂಕಸಾಲಿ ಸರ್ ಕಡೆ ನೋಡಿದರು. ಅವರೂ ಸಹಿತ ನಕ್ಕೋತ್ತ ಎದ್ದು ಹೊಂಟಿದ್ದರು.

ಟಿಂಕೂ ಸಹಿತ ನಕ್ಕೋತ್ತ ಹೊಂಟಾನೋ!!!! ಯಪ್ಪಾ!!! ಕಾಲಾ ಕೆಟ್ಟತಲೇ!!! ಅಂತ ವಿಕಾರವಾಗಿ ಕೂಗಿದ ಒಬ್ಬ. ಸಾಲಿ ಗದ್ದಲದಾಗ ಎಲ್ಲದೂ ಓಕೆ.

ತೀರಿಹೋದ ಟಂಕಸಾಲಿ ಸರ್ ಅವರಿಗೇ ಆಗಲಿ ಅಥವಾ ನನ್ನ ಮಿತ್ರರಿಗೇ ಆಗಲಿ ಇದು ನೆನಪ ಅದನೋ ಇಲ್ಲೋ ಗೊತ್ತಿಲ್ಲ. ನನಗ ಅಂತೂ ಈ ಘಟನೆ, ಆ 'ಮೈ ಹೂ ನಾ' ಸುಶ್ಮಿತಾ ಸೇನ್ ಮಾದರಿಯ ಸುಂದರಿ ಹಿರೇಮಠ ಟೀಚರ್, ಸ್ತ್ರೀಯರ ಹಸ್ತಗಳು ಮೃದು ಇರುತ್ತವೆ, ಹಾಗಾಗಿಯೇ ಅವರು ಮಾತ್ರ ಚಹಾ ಎಲೆಗಳನ್ನು ಕೀಳುತ್ತಾರೆ ಅಂತ ಅಂದು ಉತ್ತರ ಕೊಟ್ಟ BEd ಟ್ರೈನಿ ಟೀಚರ್ ಎಲ್ಲ ಯಾವಾಗಲೂ ನೆನಪು ಆಗುತ್ತಲೇ ಇರುತ್ತಾರೆ. ಟಂಕಸಾಲಿ ಸರ್ ಸ್ವರ್ಗದಾಗ ಕೂತು ಇದನ್ನ ನೆನಸಿಕೊಂಡು ಮತ್ತೊಮ್ಮೆ ಎಲ್ಲಾ ಬಿಚ್ಚಿ ನಕ್ಕು ಬಿಡಲಿ. ಸಾಲಿಯೊಳಗ ಸರಿಯಾಗಿ ನಕ್ಕಿದ್ದರೋ ಇಲ್ಲೋ ಗೊತ್ತಿಲ್ಲ.

ನಮ್ಮ ಮುತ್ತಜ್ಜಿ ಕೈತುತ್ತು ತಿಂದಿದ್ದ 'ಟಂಕಶಾಲೆ ಹನುಮ': ನಮ್ಮ ಮುತ್ತಜ್ಜಿ (ನಮ್ಮ ತಾಯಿಯವರ ತಾಯಿಯ ತಾಯಿ) ೧೯೪೦ ನೆ ಇಸವಿ ಆಸು ಪಾಸಿನಲ್ಲೇ ಧಾರವಾಡಕ್ಕೆ ಬಂದಿದ್ದರು. ಸಿರ್ಸಿ ಬಿಟ್ಟು ಬಂದು ಬಿಟ್ಟಿದ್ದರು. ನಮ್ಮ ಮುತ್ತಜ್ಜ ಪ್ರಕಾಂಡ ಪಂಡಿತ ಕೃಷ್ಣ ಶಾಸ್ತ್ರಿ ತೀರಿ ಹೋಗಿ, ನಲವತ್ತು ವರ್ಷದ ಆಸು ಪಾಸಿನಲ್ಲೇ ನಮ್ಮ ಮುತ್ತಜ್ಜಿ ವಿಧವೆಯಾಗಿ ಬಿಟ್ಟರು. ಜೊತೆಗೆ ಒಂದು ಬಗಲಕೂಸು ಗಂಡು ಹುಡುಗ. ಇನ್ನೊಂದು ಹನ್ನೆರೆಡು ಹದಿಮೂರು ವರ್ಷದ ಹುಡುಗಿ. ದೊಡ್ಡ ಮಗಳು (ನಮ್ಮ ಅಜ್ಜಿ) ಮದುವೆ ಆಗಿ ಅಲ್ಲೆ ಸಿರ್ಸಿ ಕಡೆ ಇದ್ದರು. ಮುತ್ತಜ್ಜಿಗೆ ಸಿರ್ಸಿ ಕಡೆ ಆಸ್ತಿ ಪಾಸ್ತಿ ಇಲ್ಲ. ಗಂಡ ಕೃಷ್ಣ ಶಾಸ್ತ್ರಿಗೆ ಇದ್ದ ಆಸ್ತಿ ಅಂದ್ರೆ ಅವರ ಪಾಂಡಿತ್ಯ ಅಷ್ಟೇ. ಮೈಸೂರು ಮಹಾರಾಜರ ಆಸ್ಥಾನ ಪಂಡಿತರು, ಅದು ಇದು ಅಂತ ದೊಡ್ಡ ಹೆಸರು ಇತ್ತೇ ವಿನಹ ರೊಕ್ಕಾ ಗಿಕ್ಕಾ ನಾಸ್ತಿ. ಸಿರ್ಸಿ ಕಡೆನೇ ಇದ್ದರೆ, ಬ್ರಾಹ್ಮಣ ವಿಧವೆಯರಿಗೆ ಮಾಡುವ ಕೇಶ ಮುಂಡನ ಮಾಡಿಸಿಕೊಂಡು, ಬ್ರಾಹ್ಮಣ ವಿಧವೆಯರ ನಿಕೃಷ್ಟ ಬಾಳು. ಏನಾದರು ಮಾಡೋಣ ಅಂದ್ರೆ ವಿದ್ಯೆ ಇಲ್ಲ. ಹಣ ಇಲ್ಲ. ಜೊತೆಗೆ ಎರಡು ಚಿಕ್ಕ ಮಕ್ಕಳು ಬೇರೆ. ತನಗೆ ಬಂದ ಗತಿ ಮತ್ತೆ ಯಾರಿಗೂ ಬರುವದು ಬೇಡ ಅಂತ ಹೇಳಿ ನಮ್ಮ ಮುತ್ತಜ್ಜಿ ಅದೇನೋ ಧೈರ್ಯ ಮಾಡಿ ಧಾರವಾಡಕ್ಕೆ ಬಂದು ಬಿಟ್ಟಿದ್ದರು. ಏನರೆ ನೌಕರಿ ಚಾಕರಿ ಮಾಡಿ, ತಮ್ಮ ಮಕ್ಕಳಿಗೆ ಧಾರವಾಡದಲ್ಲಿ ಒಳ್ಳೆ ಶಿಕ್ಷಣ ಕೊಡುವ ಒಳ್ಳೆ ಯೋಚನೆ ಅವರದ್ದು.

ನಮ್ಮ ಮುತ್ತಜ್ಜಿಗೆ ಬರುತ್ತಿದ್ದುದು ಒಳ್ಳೆ ಅಡಿಗೆ ಮಾಡೋ ಕೆಲಸ ಅಷ್ಟೇ. ಹೀಗೆ ಧಾರವಾಡಕ್ಕೆ ಯಾರ ಗುರುತು ಪರಿಚಯ ಇಲ್ಲದೆ ಬಂದು, ಅವರು ಮೊದಲು ಕೆಲ ದಿವಸ ಪಟ್ಟ ಕಷ್ಟ ಅಷ್ಟಿಷ್ಟಲ್ಲ. literally ರಸ್ತೆ ಮೇಲೆ ಇದ್ದ ಹಾಗೆ. ಸ್ವಲ್ಪ ದಿನಗಳ ನಂತರ ಯಾರೋ ಒಬ್ಬ ಮಹನೀಯರು ಕರುಣೆ ತೋರಿಸಿ ತಮ್ಮ ಮನೆಯಲ್ಲಿ ಅಡಿಗೆ ಕೆಲಸಕ್ಕೆ ಇಟ್ಟುಕೊಂಡರು. ಟೆಂಪರರಿ ಆಗಿ ವಸತಿ ಸಹಿತ ಕೊಟ್ಟರು. ಅವರು ಇದೇ ಟಂಕಸಾಲಿ ಮಾಸ್ತರರ ತಂದೆಯವರು. ಟಂಕಸಾಲಿ ಅವರ ಮನೆಯಲ್ಲಿ ಅಡಿಗೆ ಕೆಲಸ ಶುರು ಮಾಡಿ, ಏನೋ ಒಂದು ತರಹದ ಬಾಳು ಕಂಡುಕೊಂಡ ನಮ್ಮ ಮುತ್ತಜ್ಜಿ ಆಮೇಲೆ ಹಿಂದೆ ನೋಡಿದ್ದೇ ಇಲ್ಲ. ಸಿಕ್ಕಾಪಟ್ಟೆ ಒಳ್ಳೆ ಅಡಿಗೆಯವರು, ಒಳ್ಳೆ ಕೆಲಸದವರು ಅಂತ ಹೇಳಿ ಭಾಳ ಫೇಮಸ್ ಆಗಿ, ಮಾಳಮಡ್ಡಿ ಬ್ರಾಹ್ಮಣರಿಗೆ, ಭವಾನಿ ಬಾಯಾರು ಇಲ್ಲ ಅಂದ್ರ ಅಡಿಗೆ ಆಗಂಗೆ ಇಲ್ಲ, ಅನ್ನೋವಷ್ಟು ಫೇಮಸ್ ಆಗಿ ಧಾರವಾಡದಲ್ಲಿ ಒಂದು ನೆಲೆ ಕಂಡುಕೊಂಡರು. ಮಕ್ಕಳು, ಮಮ್ಮಕ್ಕಳು (ನಮ್ಮ ತಾಯಿ ಇತ್ಯಾದಿ), ಮಿಮ್ಮಕ್ಕಳನ್ನ (ನಾವು, ಇತ್ಯಾದಿ) ಪಕ್ಕಾ ಧಾರವಾಡಿಗಳನ್ನಾಗಿ ಬೆಳೆಸಿದರು. ಇದಕ್ಕೆಲ್ಲಾ ಮೊದಲು ಆಸರೆ, ಸಹಾಯ ಕೊಟ್ಟಿದ್ದು ಟಂಕಸಾಲಿ ಸರ್ ಅವರ ಕುಟುಂಬವೇ. ವಿದ್ಯೆ ಕಲಿಸಿದ ಟಂಕಸಾಲಿ ಸರ್ ಅವರಿಗೆ ಹೇಳೋ ಧನ್ಯವಾದ ಒಂದು ಕಡೆ ಆದರೆ ನಮ್ಮ ಕುಟುಂಬಕ್ಕೆ ಧಾರವಾಡದಲ್ಲಿ ಬಾಳು ಕಟ್ಟಿಕೊಳ್ಳಲು ಸಹಕರಿಸಿದ ಇಡೀ ಟಂಕಸಾಲಿ ಕುಟುಂಬಕ್ಕೆ ಹೇಳುವ ಧನ್ಯವಾದವೇ ಇನ್ನೊಂದು. ಒಟ್ಟಿನಲ್ಲಿ ಟಂಕಸಾಲಿಗಳಿಗೆ ಒಂದು ದೊಡ್ಡ ನಮೋ ನಮಃ! ಟಂಕಸಾಲಿ ಸರ್ ಅವರಿಗೆ ಮತ್ತ ಅವರ ಮನಿ ಮಂದಿಗೆ ನಮ್ಮ ಮುತ್ತಜ್ಜಿ ಅಡಿಗಿ ಮಾಡಿ ಹಾಕಿ, ಉಣಿಸಿ, ದೊಡ್ಡ ಮಾಡೋದ್ರಲ್ಲಿ ಒಂದು ಸಣ್ಣ ಪಾಲು ವಹಿಸಿದ್ದರು ಅನ್ನೋದು ನಮಗೆ ಹೆಮ್ಮೆಯ ವಿಷಯ.

ನಮ್ಮ ಅಜ್ಜಿ ( ತಾಯಿಯ ತಾಯಿ) ಏನೂ ಧಾರವಾಡಕ್ಕೆ ಬಂದಿರಲಿಲ್ಲ. ಯಾಕಂದ್ರ ಅವರದ್ದು ಆಗಲೇ ಲಗ್ನಾ ಆಗಿ ಸಿರ್ಸಿ ಕಡೆನೇ ಇದ್ದರು. ಆದರ ಅವರ ತಾಯಿ (ನಮ್ಮ ಮುತ್ತಜ್ಜಿ), ಅವರ ಸಹೋದರ ಸಹೋದರಿಯರು, ಮಕ್ಕಳು (ನಮ್ಮ ತಾಯಿ, ಮಾಮಾ, ಮೌಶಿ, ಇತ್ಯಾದಿ) ಎಲ್ಲ ಧಾರವಾಡದಲ್ಲೇ ಇದ್ದುದರಿಂದ ನಮ್ಮ ಅಜ್ಜಿಗೆ ಧಾರವಾಡ ತವರುಮನೆ.  ಅದಕ್ಕೇ ಆಗಾಗ ಬರ್ತಿದ್ದರು. ಆವಾಗೆಲ್ಲಾ ಟಂಕಸಾಲಿ ಮಾಸ್ತರ್ ಎಲ್ಲ ಸಣ್ಣು ಹುಡುಗುರು. ನಮ್ಮ ಅಜ್ಜಿಯವರಿಗೆಲ್ಲ ಟಂಕಸಾಲಿ ಮಾಸ್ತರ್ ಅಂದ್ರ ಅವರ ಹವ್ಯಕ ಭಾಷೆಯಲ್ಲಿ 'ಟಂಕಶಾಲೆ ಹನುಮ'.

ಆಗಿನ 'ಟಂಕಶಾಲೆ ಹನುಮ' ಈಗ ನಮ್ಮ ಮಾಸ್ತರು ಆಗ್ಯಾರ ಅನ್ನೋದನ್ನ ಕೇಳಿದ್ದ ನಮ್ಮ ಅಜ್ಜಿ, ಆ ಟಂಕಶಾಲೆ ಹನುಮ 'ಮಾಣಿ' ಅದೇ ಶಾಲ್ಯಲ್ಲಿ ಮಾಸ್ತರ್ ಆಗಿಗಿದ್ನಾ ಈಗಾ? ಅದೇ ಶಾಲಿಗೆ ಹೋಗ್ತಿದ್ದ ಅವೆಲ್ಲ. ಯಮ್ಮನೆ ಮಾಣಿ, ಕೂಸ್ಗಳ ಜೊಡಿಯವನೇ ಆಗಿದ್ದ ಆ ಹನುಮಾ ಹೇಳ ಮಾಣಿ. ಈಗ ನಿಂಗಳ ಮಾಸ್ತರ ಹೇಳಿ ಆತು. ಆಗ್ಲಿ. ಒಳ್ಳೇದಾತು, ಅಂತ ಸ್ವಚ್ಚ ಹವ್ಯಕ ಭಾಷೆಯಲ್ಲಿ ಹೇಳಿ ಅಜ್ಜಿ ಟಂಕಸಾಲಿ ಸರ್ ಅವರಿಗೇ ಮಾಣಿ ಅಂದು ಬಿಟ್ಟಿದ್ದರು. ನಮಗೆ ಸರ್ ಆದರೇನು? ನಮ್ಮ ತಾಯಿಗಿಂತ ಒಂದೋ ಎರಡೋ ವರ್ಷ ಹಿರಿಯರಾಗಿದ್ದ ಸರ್ ನಮ್ಮಜ್ಜಿ, ನಮ್ಮ ಮುತ್ತಜ್ಜಿಗೆಲ್ಲ ಮಾಣಿಯೇ! ನಮ್ಮ ಮುತ್ತಜ್ಜಿ ಇದ್ದಿದ್ದರೆ ಏನೆನ್ನುತ್ತಿದ್ದರೋ ಗೊತ್ತಿಲ್ಲ. ಅವರು ನಾವು ಹುಟ್ಟುವ ಮೊದಲೇ ಮೇಲೆ ಹೋಗಿಬಿಟ್ಟಿದ್ದರು. ಹೀಗಾಗಿ ಟಂಕಸಾಲಿ ಮಾಸ್ತರರ ಬಾಲಲೀಲೆಗಳನ್ನು ಕೇಳಿದ್ದು ಅಜ್ಜಿ ಮತ್ತು ಅವರ ವಾರಿಗೆಯವರೇ ಆದ ಇತರೆ ಕುಟುಂಬದ ಸದಸ್ಯರಿಂದ.

ಇತರೆ ವಿವರ: ಟಂಕಸಾಲಿ ಸರ್ ಅವರಿಗೆ ಎಪ್ಪತ್ತೆರಡು ವರ್ಷದ ಆಸು ಪಾಸು ವಯಸ್ಸಾಗಿತ್ತು ಅನ್ನಿಸುತ್ತದೆ. ನಮ್ಮ ತಾಯಿಗಿಂತ ಒಂದೆರೆಡು ವರ್ಷ ಹಿರಿಯರು ಅಂದ್ರೆ ಸುಮಾರು ಅಷ್ಟಿರಬಹುದು. ಅವರು ಕಲಿತದ್ದು ಸಹಿತ ಅದೇ ಕೆ.ಈ. ಬೋರ್ಡ್ ಸಾಲೆಯಲ್ಲಿಯೇ. ನಂತರ BA, BEd ಮಾಡಿಕೊಂಡು ಅಲ್ಲೇ ನೌಕರಿ ಶುರು ಮಾಡಿದ್ದರು. ಹೆಚ್ಚಾಗಿ ಅವರು ಮಾಳಮಡ್ಡಿ ಶಾಲೆಯಲ್ಲೇ ಇದ್ದಿದ್ದು ಜಾಸ್ತಿ.

ಸರ್ ಅಕ್ಕ ಒಬ್ಬಾಕೆ ಚಿಕ್ಕಂದಿನಲ್ಲೇ ತೀರಿ ಹೋಗಿದ್ದಳು. ಆಕೆಗೂ ಅದೇ epilepsy ತೊಂದರೆ. ನಂತರ ಅದು ಸರ್ ಗೆ ಬಂತು. ಒಳ್ಳೆಯ ರೀತಿಯಲ್ಲಿ ಆರೋಗ್ಯ ಕಾದಿಟ್ಟುಕೊಂಡಿದ್ದ ಸರ್ ಫಿಟ್ಸ್ / epilepsy ಎಷ್ಟೋ ಕಂಟ್ರೋಲ್ ಮಾಡಿಟ್ಟುಕೊಂಡಿದ್ದರು. ಆದೊಂದು ಇಲ್ಲದಿದ್ದರೆ ಅವರಿಗಿದ್ದ ಜಾಣತನ, ಬುದ್ಧಿಮತ್ತೆ ನೋಡಿದ್ದರೆ ಅವರು ಎಲ್ಲೋ ದೊಡ್ಡ ಐಎಎಸ್ ಆಫೀಸರ್ ಅಥವಾ ದೊಡ್ಡ ಪ್ರೊಫೆಸರ್ ಆಗೋ material. ಸಾಲೆಯಲ್ಲಿ ಮಾಸ್ತರಾದ್ರೂ ಅವರ outlook ಮಾತ್ರ ಏಕದಂ very scholarly. ಮಾತಾಡುವ ಶೈಲಿ, ಮಾತಾಡುವಾಗ ಸಹಜವಾಗಿ ಹೊರ ಹೊಮ್ಮುತ್ತಿದ್ದ ಪಾಂಡಿತ್ಯ ಯಾವದೇ ಯೂನಿವರ್ಸಿಟಿ ಮಾಸ್ತರಿಗೂ ಕಮ್ಮಿ ಇರಲಿಲ್ಲ.

ಟಂಕಸಾಲಿ ಸರ್ ಅಜೀವ ಬ್ರಹ್ಮಚಾರಿ. ಆರೋಗ್ಯದ ಬಗ್ಗೆ ಸ್ವಲ್ಪ ಚಿಂತೆ ಮತ್ತು ಕಾಳಜಿ ಹೊಂದಿದ್ದ ಅವರು ಮದುವೆ ಸಂಸಾರ ಇತ್ಯಾದಿಗಳಿಂದ ದೂರ ಇದ್ದರು. ಏನೇನೋ ದೊಡ್ಡ ದೊಡ್ಡ ರೋಗ, ರುಜಿನ ಇದ್ದರೂ ಒಂದಲ್ಲ ನಾಕು ಮದುವೆ ಆಗಿ, ಡಜನ್ ಮಕ್ಕಳು ಮಾಡಿ, ಲಗೂನೆ ಗೊಟಕ್ಕ ಅಂದು, ಹೆಂಡತಿ ಮಕ್ಕಳನ್ನು ರೋಡಿಗೆ ತರುವ ಜನರ ಮುಂದೆ ಟಂಕಸಾಲಿ ಸರ್ ತುಂಬ ಎತ್ತರದಲ್ಲಿ ನಿಂತ ಉನ್ನತ ವ್ಯಕ್ತಿಯಾಗಿ ಕಾಣುತ್ತಾರೆ. ತಮಗಿರುವ ಅನಾರೋಗ್ಯದಿಂದ ಒಂದು ಹೆಣ್ಣಿನ ಬಾಳು ಹಾಳಾಗುವ ಚಾನ್ಸೇ ಬೇಡ ಅಂತ ಹೇಳಿ ಅವರು ಬ್ರಹ್ಮಚಾರಿ ಆಗಿಯೇ ಉಳಿದಿದ್ದರು. ಮತ್ತೆ ಯಾವಾಗಲೂ ಆ ಪುಸ್ತಕ, ಈ ಪುಸ್ತಕ, ಈ ಕ್ವಿಜ್ ಸ್ಪರ್ಧೆ, ಆ ಚರ್ಚಾ ಸ್ಪರ್ಧೆ ಅಂತ ಆ ತರಹದ ಚಟುವಟಿಕೆಗಳಲ್ಲಿಯೇ ಮುಳುಗಿರುತ್ತಿದ್ದ ಸರ್ ಒಂದು ತರಹದ ಯೋಗಿಯ ಜೀವನ ಶೈಲಿಗೆ ಹೊಂದಿಕೊಂಡು ಬಿಟ್ಟಿದ್ದರು. ಅವರ ತಮ್ಮನ ಮನೆಯಲ್ಲಿ ಒಂದು ಭಾಗದಲ್ಲಿ ತಮ್ಮದೇ ಲೋಕದಲ್ಲಿ ಸರ್ ಇರುತ್ತಿದ್ದರು ಅಂತ ಕೇಳಿದ್ದು. ನಮ್ಮ ಅಣ್ಣ ತುಂಬಾ ರೆಗ್ಯುಲರ್ ಆಗಿ ಅವರ ಮನೆಗೆ ಹೋಗುತ್ತಿದ್ದ. ನಮ್ಮ ಅಣ್ಣನ ಜೋಡಿ ಎಲ್ಲ ಕಡೆ ಹೋಗಿದ್ದ ನಾವು ಅಲ್ಲೊಂದು ಯಾಕೋ ಹೋಗಿಯೇ ಇರಲಿಲ್ಲ. ಧನ್ಯ ಜೀವಿಯೊಬ್ಬರ ಕುಟೀರ ನೋಡಲೇ ಇಲ್ಲ.

ರಿಟೈರ್ ಆದ ನಂತರ ಸಹ ಸರ್ ಅಲ್ಲಿಯೇ ಮಾಳಮಡ್ಡಿಯಲ್ಲಿಯೇ ಓಡಾಡಿಕೊಂಡು ಇದ್ದರು. ೨೦೧೨ ಡಿಸೆಂಬರ್ ನಲ್ಲಿ ನಮ್ಮ SSLC ಬ್ಯಾಚಿನ ಇಪ್ಪತ್ತೈದನೇ ವರ್ಷದ ಮೆಗಾ ರಿಯೂನಿಯನ್ ಆದಾಗ ಅವರೇ ಮುಖ್ಯ ಅತಿಥಿಯಾಗಿ ಬಂದು, ಒಂದು solid ಭಾಷಣ ಮಾಡಿ, ಬೆಳಗಿಂದ ಸಂಜೆ ತನಕ ಇದ್ದು ಹೋಗಿದ್ದರು. ಬೆಳಗಿಂದ ಸಂಜೆ ತನಕ ಇದ್ದ ಶಿಕ್ಷಕರು ಮೂರೇ ಮೂರು ಜನ. ಟಂಕಸಾಲಿ ಸರ್, ಹೆಗಡೆ ಸರ್, ಚಿಕ್ಕಮಠ ಸರ್.

ಬರೆಯುತ್ತ ಹೋದರೆ ಟಂಕಸಾಲಿ ಸರ್ ಬಗ್ಗೆ ಬರೆಯಲಿಕ್ಕೆ ಬಹಳ ಇದೆ. ಆದರೆ ಎಲ್ಲದಕ್ಕೂ ಒಂದು The End ಹಾಕಲೇ ಬೇಕು ನೋಡ್ರೀ. ಅದಕ್ಕೇ ಇಷ್ಟು ಸಾಕು.

Rest in Peace, ಟಂಕಸಾಲಿ ಸರ್ ಉರ್ಫ್ ಟಿಂಕು ಸರ್!


** ಶೀರ್ಷಿಕೆ - ಟಂಕ'ಸಾಲಿ'ಯೇ ಇಲ್ಲದ ಸಾಲಿಯೊಂದು ಸಾಲಿಯೇ ಕೃಷ್ಣಾ! - ಇದು 'ನೀ ಸಿಗದಾ ಬಾಳೊಂದು ಬಾಳೆ ಕೃಷ್ಣಾ?' ಅನ್ನುವ ಭಾವಗೀತೆಯಿಂದ ಪ್ರೇರಿತ. ಎಂ.ಡಿ. ಪಲ್ಲವಿ ಮನತುಂಬಿ ಹಾಡಿದ್ದಾರೆ ಕೇಳಿ.

** ನಮ್ಮ ಬ್ಯಾಚಿನ ಸಿಲ್ವರ್ ಜುಬಿಲೀ ರಿಯೂನಿಯನ್ (೨೦೧೨, ಡಿಸೆಂಬರ್, ೨೩, ೨೪) ಸಮಾರಂಭದಲ್ಲಿ ಟಂಕಸಾಲಿ ಸರ್ ಮಾಡಿದ್ದ ಭಾಷಣದ ವೀಡಿಯೊ ಕೆಳಗಿದೆ ನೋಡಿ. 

Saturday, February 08, 2014

ಚಿಗರಿ ಸಿಕ್ಕೈತಂತ. ಹೋಗಿ ತರೋಣೇನೋ ಹೀರೋ?

1990 ರ ಜುಲೈ ಮಧ್ಯ ಭಾಗ ಅಂತ ನೆನಪು. ಒಂದು ದಿವಸ ಮಧ್ಯಾನ ತಂದೆಯವರ ಜೋಡಿ ಹುಬ್ಬಳ್ಳಿಗೆ ಹೋಗಿದ್ದೆ. ವೈಶ್ಯ ಬ್ಯಾಂಕ್ ಒಳಗ ಕೆಲಸ ಇತ್ತು. ಆ ಕಾಲದಲ್ಲಂತೂ ಧಾರವಾಡದಲ್ಲಿ ವೈಶ್ಯ ಬ್ಯಾಂಕಿನ ಶಾಖೆ ಇದ್ದಂಗೆ ಇರಲಿಲ್ಲ. ಅದಕ್ಕೆ ಅವತ್ತು ಹುಬ್ಬಳ್ಳಿಗೆ ಪಯಣ. ಹೋಗಿದ್ದು ನಮ್ಮ ನೆರೆಮನೆಯವರಾದ ಸವದತ್ತಿ ಮಲ್ಲಣ್ಣನ ಮಾರುತಿ ಒಮ್ನಿ ವ್ಯಾನಿನಲ್ಲಿ. ಮಲ್ಲಣ್ಣ ಎಲ್ಲೆ ಹೋಗೋದಿರಲೀ, ಆಜು ಬಾಜು ಮಂದಿನ ಕೇಳಿ, ಪ್ರೀತಿಯಿಂದ ಅವರ ಮಾರುತಿ ವ್ಯಾನಿನಲ್ಲಿ ಹತ್ತಿಸಿಕೊಂಡು, ದಾರಿ ತುಂಬ ಅವರದ್ದೇ ಆದ ಸ್ಟೈಲಿನಲ್ಲಿ ಜೋಕ್ ಹೊಡೆಯುತ್ತ, ನಮ್ಮ ಗಮ್ಯಕ್ಕೆ ನಮ್ಮನ್ನು ಮುಟ್ಟಿಸೋ ಮಂದಿ. ಭಾಳ ಆತ್ಮೀಯರು. ಅವತ್ತು ಸಹಿತ ಹಾಂಗೇ ಆತು. ಅವರು ಇಷ್ಟು ಮಸ್ತಾಗಿ ಕರಕೊಂಡು ಹೋಗ್ತೇನಿ ಅನ್ನಲಿಕತ್ತಾಗ ಎಲ್ಲಿ ಬಸ್ ಗಿಸ್ ಹಚ್ಚಿ ಅಂತ ಹೇಳಿ ಅವರ ಜೋಡಿನೇ ಹೋದ್ವಿ. ಮಲ್ಲಣ್ಣ ತಮ್ಮ ಅವ್ವ ಉರ್ಫ್ ಸವದತ್ತಿ ಅಜ್ಜಿ ಕರಕೊಂಡು ಹುಬ್ಬಳ್ಳಿಯ ಪಾಟೀಲ ಪುಟ್ಟಪ್ಪ (ಪಾಪು) ಅವರ ಮನೆಗೆ ಹೊರಟಿದ್ದರು. ಸವದತ್ತಿ ಕುಟುಂಬ, ಪಾಪು ಕುಟುಂಬ ಭಾಳ ಕ್ಲೋಸ್ ಅಂತ. ನಿಮ್ಮ ಕೆಲಸ ಮುಗಿದ ಮ್ಯಾಲೆ ಕೆನರಾ ಹೋಟೆಲ್ ಮುಂದಿಂದ ಒಂದು ಫೋನ್ ಮಾಡ್ರೀ. ಬಂದು ಕರಕೊಂಡು ಹೋಗ್ತೇನಿ. ಎಲ್ಲಾ ಕೂಡೆ ವಾಪಸ್ ಹೋಗೋಣ, ಅಂತ ಹೇಳಿದ್ದರು. ರೌಂಡ್ ಟ್ರಿಪ್ ಅವರೇ sponsor ಮಾಡಿದಂಗೆ. ಆವಾಗ ಮಳಿ ಬ್ಯಾರೆ ಶುರು ಆಗಿತ್ತು. ಬೆಚ್ಚಗೆ ಕಾರೊಳಗೆ ಹೋಗೋದೇ ಮಸ್ತ. ಕೆಟ್ಟ ಕಿಚಿ ಪಿಚಿ ರಾಡಿಯೊಳಗ ಎಲ್ಲಿ ಬಸ್ಸು, ಎಲ್ಲಿ ಆಟೋ? ಜೈ ಮಲ್ಲಣ್ಣ!

ನಮ್ಮ ಕೆಲಸ ಮುಗಿತು ಸುಮಾರು ನಾಕು ಗಂಟೆ ಹೊತ್ತಿಗೆ. NH-4 ಮೇಲೆ ಇರುವ ಕೆನರಾ ಹೋಟೆಲ್ಲಿಗೆ ಬಂದು, ಚಹಾ ಪಹಾ ಕುಡಿದು, ಬಾಜೂ ಇದ್ದ ಫೋನ್ ಬೂತಿನಿಂದ, ಮಲ್ಲಣ್ಣ ಕೊಟ್ಟಿದ್ದ ನಂಬರಿಗೆ ಫೋನ್ ಹಚ್ಚಿ ತಂದೆಯವರ ಕೈಗೆ ಕೊಟ್ಟೆ. ನಮ್ಮ ಕೆಲಸ ಎಲ್ಲ ಮುಗಿದದ. ನೀವು ಯಾವಾಗ ಅಂತ ಹೇಳಿ ಬಂದು ನಮ್ಮನ್ನ ಕರಕೊಂಡು ಹೋಗ್ರೀ. ಗಡಿಬಿಡಿ ಇಲ್ಲ, ಅಂತ ಹೇಳಿ ಇಟ್ಟಿವಿ. ಮಸ್ತ ಜಿಟಿ ಜಿಟಿ ಮಳಿ ನೋಡಿಕೋತ್ತ ನಿಂತಿವಿ. ನಾ ಒಂದು ಜರ್ದಾ ಪಾನ್ ಹೆಟ್ಟಿದೆ. ಮಳಿಗಾಲದಾಗ ಥಂಡಿ ಒಳಗ ಜರ್ದಾ ಪಾನ್ ಮೆಲ್ಲೋದೇ ದೊಡ್ಡ ಸುಖ.

ಸ್ವಲ್ಪ ಹೊತ್ತಿನ್ಯಾಗೇ ಮಲ್ಲಣ್ಣ ತಮ್ಮ ಬಿಳೆ ಮಾರುತಿ ವ್ಯಾನ ತೊಗೊಂಡು ಬರ್ರ ಅಂತ ಬಂದೇ ಬಿಟ್ಟರು. ಅವರು ಮಾಡೋದೆಲ್ಲಾ ಒಂದು ಹೀರೋ ಸ್ಟೈಲಿನಲ್ಲಿಯೇ. ಚಪಾತಿ ಹಿಟ್ಟು ನಾದೋವಾಗ ಹಿಟ್ಟಿನ ಮ್ಯಾಲೆ ಕೈ ರೌಂಡ್ ರೌಂಡ್ ಆಡಿಸಿದಂತೆ ಸ್ಟಿಯರಿಂಗ್ ವೀಲ್ ನಾದಿದಂತೆ ಡ್ರೈವ್ ಮಾಡೋದು ಅವರ ಸ್ಟೈಲ್. ಬಂದು ಗಕ್ಕನೆ ಬ್ರೇಕ್ ಹಾಕಿದರು. ನಾವು ಅವರ ವ್ಯಾನಿನ ಹತ್ತಿರ ಹೋದ್ವಿ. ಹನಿ ಹನಿ ಮಳಿ.

ಡ್ರೈವರ್ ಬಾಜೂಕ ಕೂಡೋದು ಒಂದು ದೊಡ್ಡ privilege. ಆ ಸೀಟು ಖಾಲಿ ಇತ್ತು. ಮಲ್ಲಣ್ಣನ ಅವ್ವ ಹಿಂದ ಕೂತಿದ್ದರು. ನಮ್ಮ ತಂದೆಯವರು, ನಮಸ್ಕಾರ್ರೀ, ನಮಸ್ಕಾರ್ರೀ, ಅನಕೋತ್ತ ಹಿಂದ ಹೋಗಿ ಕೂತರು. ನಾ ಮಲ್ಲಣ್ಣನಿಗೆ ಒಂದು ಸಲ್ಯೂಟ್ ಕೊಟ್ಟು, ಅಜ್ಜಿಗೆ ನಮಸ್ಕಾರ ಗೊಣಗಿ, ಖುಷಿಂದ ಡ್ರೈವರ್ ಬಾಜೂ ಸೀಟಿನ್ಯಾಗ ಕೂತು, ಥ್ಯಾಂಕ್ಸ್ ರೀ! ಅನ್ನೋ ಲುಕ್ ಮಲ್ಲಣ್ಣನಿಗೆ ಕೊಟ್ಟೆ. ವೆಲ್ಕಮ್! ಯು ಆರ್ ವೆಲ್ಕಮ್! ಅನ್ನೋ ಲುಕ್ ಮಲ್ಲಣ್ಣ ಕೊಟ್ಟರು. ವ್ಯಾನಿನ accelerator ರೊಂಯ್ ರೊಂಯ್ ಅಂತ ಒತ್ತಿ ರೈಟ್ ರೈಟ್ ಅನ್ನೋ ರೀತಿಯಲ್ಲಿ ಸಿಗ್ನಲ್ ಕೊಟ್ಟರು ಸವದತ್ತಿ ಮಲ್ಲಣ್ಣ. ಅವರ ಮಾರುತಿ ಓಮ್ನಿ ವ್ಯಾನಿಗೆ ಅವರೇ ಡ್ರೈವರ್, ಕಂಡಕ್ಟರ್ ಎಲ್ಲ.

ಏ ಹೀರೋ! ಅಂದ್ರು ಮಲ್ಲಣ್ಣ. ಕೈ ತಟ್ಟಿ ಅಂದ್ರು. ಏನರೆ ತಟ್ಟದೇ ಅವರು ಮಾತಾಡೋದೇ ಇಲ್ಲ.

ಏನ್ರೀ? ಅಂತ ಕೇಳಿದೆ. ಅವರು ನನ್ನ ಕರೆಯೋದೇ ಹಾಗೆ. ಹೀರೋ. ಹತ್ತು ವರ್ಷದಿಂದ ಪರಿಚಯವಾದ ಮಲ್ಲಣ್ಣ  ಮೈಲು ದೂರದಲ್ಲಿ  ಕಂಡರೂ ಹೀರೋ ಅಂತ ಒದರೇ ಬಿಡ್ತಿದ್ದರು.

ಒಂದು ಚಿಗರಿ ಸಿಕ್ಕೈತಂತ. ಹೋಗಿ ತರೋಣೇನೋ ಹೀರೋ? ಅಂತ ಕೇಳಿದರು ಮಲ್ಲಣ್ಣ.

ಅವರ ಮಾತೇ ಹಾಗೆ. ಒಂದೇ ಹೊಡೆತಕ್ಕೆ ತಿಳಿಯೋದೇ ಇಲ್ಲ.

ಏನ್ರೀ...? ಅಂತ ಕೇಳಿದೆ.

ಚಿಗರಿ, ಸಿಕ್ಕೈತಿ, ತರೋಣೇನು, ಒಂದಕ್ಕೊಂದು ಸೇರಿಸಿದರೂ ಏನು ಅಂತ ಅರ್ಥ ಆಗಲಿಲ್ಲ.

ಹಿಂದಿನ ಸೀಟಿನಲ್ಲಿ ಕುಳಿತಿದ್ದ ಮಲ್ಲಣ್ಣನ ತಾಯಿ ಉರ್ಫ್ ಸವದತ್ತಿ ಅಜ್ಜಿ ಶಂಖಾ ಹೊಡೆದರು.

ಮಲ್ಲಣ್ಣ! ಏ ಮಲ್ಲಣ್ಣ! ಸುಮ್ಮ ಕುಂದ್ರೋ. ಅದೇನು ಚಿಗರಿ ಹುಚ್ಚ ಹಿಡದೈತಿ ನಿನಗ? ಎಲ್ಲಾ ಮುಗಿಸಿ ಈಗ ಮನಿಗೆ ಚಿಗರಿ ಒಂದು ತರವನಾ? ಹಾಂ? ಅಂತ ಅಂದು ಮಲ್ಲಣ್ಣ ಏನೋ ಹೊಸ ಹುಚ್ಚಾಟ ಮಾಡಲು ರೆಡಿ ಆಗಿದ್ದಾರೆ ಅನ್ನೋ ಸೂಚನೆ ಕೊಟ್ಟರು.

ನೀವಾರೇ ಒಂದೀಟ ಹೇಳ್ರೀ ಸರ್ರಾ, ಅನ್ನೋ ರೀತಿಯಲ್ಲಿ ಅವರ ಪಕ್ಕ ಕೂತಿದ್ದ ನಮ್ಮ ತಂದೆಯವರ ಕಡೆ ನೋಡಿದರು. ತಂದೆಯವರು ಏನಂದಾರು? ಮಾತಿಗೊಮ್ಮೆ, ಸರ್ರಾ, ಸರ್ರಾ, ಅಂತ ಅನಕೋತ್ತ, ನಮಸ್ಕಾರ ಹೊಡ್ಕೋತ್ತ, ತಾವು ಹೋಗೋ ಕಡೆ ಎಲ್ಲ, ಬರ್ರಿ ಸರ್ರಾ, ಡ್ರಾಪ್ ಕೊಡತೇನಿ, ಯಾವಾಗ ಬಂದು ವಾಪಸ್ ಕರ್ಕೊಂಡು ಹೋಗ್ಲೀ? ಅಂತ ಬಹಳ ಪ್ರೀತಿಯಿಂದ ಕೇಳುತ್ತ ಒಂದು ತರಹದ ಪ್ರೀತಿಯ ಶಿಷ್ಯ ಈ ಮಲ್ಲಣ್ಣ ನಮ್ಮ ತಂದೆಯವರಿಗೆ. ಮಲ್ಲಣ್ಣನ ಇತರೆ ಹುಚ್ಚಾಟ ನೋಡಿದ್ದರೂ ಈ ಸರದ ಚಿಗರಿ ಹುಚ್ಚಾಟ ಅಂದ್ರ ಏನಂತ ತಂದೆಯವರಿಗೂ ತಿಳಿದಾಂಗ ಇರಲಿಲ್ಲ ಬಿಡ್ರೀ. ಸವದತ್ತಿ ಅಜ್ಜಿ ಉರ್ಫ್ ಮಲ್ಲಣ್ಣನ ತಾಯಿ ಕಡೆ ನೋಡಿ,  ಮಾಡ್ಲೀ ಬಿಡ್ರೀ ಮಲ್ಲಣ್ಣ ಅವರ ಹುಚ್ಚಾಟ, ಅಂತ ದೇಶಾವರಿ ನಗೆ ನಕ್ಕರು. ಶಿಷ್ಯರು ಹತೋಟಿಗೆ ಬರದಿದ್ದಾಗ ಮಾಸ್ತರ್ ಮಂದಿ ಮಾಡೋದೇ ಅಷ್ಟು.

ಇಷ್ಟೆಲ್ಲ ಮಾತುಕತಿ ಆದರೂ, ನನಗ ಈ ಸವದತ್ತಿ ಮಲ್ಲಣ್ಣ ಮೊದಲು ಹೇಳಿದ, ಚಿಗರಿ ಸಿಕ್ಕೈತಿ, ಹೋಗಿ ತರೋಣ, ಅಂದ್ರ ಏನು? ಅಂತನೇ ತಿಳಿದೇ ಸುಮ್ಮ ಕೂತಿದ್ದೆ.

ಏ! ಹೀರೋ! ಅಂತ ಮತ್ತ ಅಂದ್ರು ಮಲ್ಲಣ್ಣ.

ಚಿಗಿರಿಯೋ ಮಾರಾಯ! ಚಿಗರಿ ಮರಿ! ಜಿಂಕಿ ಮರಿ! ಸಿಕ್ಕೈತಿ. ಅಲ್ಲೆ ಗೌಡರ ಮನಿಯಾಗ ಬಂದು ಕುಂತೈತಿ. ಹೋಗ್ತ ತೊಗೊಂಡು ಹೋಗೋಣ? ಹಾಂ? ಅಂದಾಗ ಈ ಮಲ್ಲಣ್ಣ ಮಾತಾಡುತ್ತಿದ್ದುದು ಜಿಂಕೆ ಮರಿ ಬಗ್ಗೆ ಅಂತ ತಿಳೀತು.

ಧಾರವಾಡ ಪ್ರಾಣಿ ಸಂಗ್ರಹಾಲಯದಲ್ಲಿ ಭರಪೂರ ಚಿಗರೆಗಳಿದ್ದವು. ಅದನ್ನು ಬಿಟ್ಟು ಜಿಂಕೆ ನೋಡಿದ್ದು ಯಾವದೋ ಮಠದಲ್ಲಿ ಸ್ವಾಮಿಗಳ ಬಳಿ ಅಂತ ನೆನಪು. ಅದು ಬಿಟ್ಟರೆ ಚಿಗರೆ ನೋಡಿದ್ದೇ ಇಲ್ಲ. ಹಾಂಗಿದ್ದಾಗ ಈ ಮಲ್ಲಣ್ಣ ಅನ್ನೋ ನಮ್ಮ neighbour ಎಲ್ಲೋ ಹೋಗಿ ಚಿಗರಿ ಮರಿ ತರೋಣ ಅನ್ನುತ್ತಿದ್ದಾರೆ. ಏ, ಬ್ಯಾಡ್ರೀ. ನಾ ಬರಂಗಿಲ್ಲರಿ, ಅನ್ನಲಿಕ್ಕೆ ನಮಗೇನು ಹುಚ್ಚೆ? ಹುಚ್ಚಾಟ ಮಾಡುವದರಲ್ಲಿ ಮಲ್ಲಣ್ಣನೇ ನಮಗೆ ಹೀರೋ. ಆಗ ತಾನೇ ಪಿಯೂಸಿ ಮುಗಿಸಿ ಪಿಲಾನಿ ಇಂಜಿನಿಯರಿಂಗ್ ಕಾಲೇಜ್ ಸೇರಲು ಇನ್ನು ಎರಡೇ ವಾರವಿತ್ತು. ಕಳೆದ ಎರಡು ವರ್ಷಗಳಲ್ಲಿ ಸವದತ್ತಿ ಮಲ್ಲಣ್ಣ ಭಾಳ ಕ್ಲೋಸ್ ಆಗಿದ್ದರು. Work hard. Play even harder - ಅನ್ನೋದನ್ನ ಅವರಿಂದ ನೋಡಿ ಕಲಿಯೋ ಹಾಗಿತ್ತು. ಅಷ್ಟು ದಿಲ್ದಾರ ಆದ್ಮಿ ಆವರು. ಕೆಲಸ ಕವಿವಿಯಲ್ಲಿ ಲೈಬ್ರರಿಯನ್ ಅಂತ ಹೇಳಿ. ಅದನ್ನ ಬಿಟ್ಟು ಹಲವು ಕಾರೋಬಾರು ಅವರದು. ಮಾಡದ ಬಿಸಿನೆಸ್ಸು ಇಲ್ಲ. ಲೇಬರ್ ಗುತ್ತಿಗೆ ಅವರ ಸೈಡ್ ಬಿಸಿನೆಸ್ಸ್. ನ್ಯಾಯವಾಗಿ ದುಡಿದೇ ಚಮಕ್ ಚಮಕ್ ಲೈಫ್ ಸ್ಟೈಲ್ ಎಂಜಾಯ್ ಮಾಡೋ ದೌಲತ್ತು ಅವರದ್ದು. ಅದನ್ನೇ ಬೆರಗುಗಣ್ಣಿನಿಂದ ನೋಡಿ, ಲೈಫ್ ಎಂಜಾಯ್ ಮಾಡಿದರೆ ಮಲ್ಲಣ್ಣನ ಹಾಗೆ ಎಂಜಾಯ್ ಮಾಡಬೇಕು ಅನ್ನಿಸುವ ಹಾಗಿದ್ದರು ಅವರು. ಧಾರವಾಡದಲ್ಲಿ ನಮ್ಮ ನೆರೆಮನೆಯವರು. ಅದಕ್ಕಿಂತ ತುಂಬಾ ಆತ್ಮೀಯರು.

ನಡ್ರೀ ಹೋಗೋಣ. ಚಿಗರಿ ಸಿಕ್ಕದ ಅಂದ್ರ ಯಾಕ ಬ್ಯಾಡ? ಅಂದೆ. ಫುಲ್ excitement. ಜೀವಂತ ಚಿಗರಿ ಮರಿ ತರೋದು. ಯಾರಿಗದ ಆ ಭಾಗ್ಯ?

ಸವದತ್ತಿ ಅಜ್ಜಿ ಅವರ ಮಗ  ಮಲ್ಲಣ್ಣನಿಗೆ ಪ್ರೀತಿಯಿಂದನೇ ಬೈಯುತ್ತಿದ್ದರೂ, ಅದನ್ನು ಕೇರ್ ಮಾಡದ ಮಲ್ಲಣ್ಣ ಗಾಡಿ ತಿರುಗಿಸಿದ್ದು ಹಳೆ ಧಾರವಾಡದ ಯಾವದೋ ಮೂಲೆಯ ಕಡೆ. ಸುಮಾರು ಸಂದಿ ಗೊಂದಿ ತಿರುಗಿದ ಮೇಲೆ ಗಾಡಿ ಹೋಗಿ ನಿಂತಿದ್ದು ಒಂದು ದೊಡ್ಡ ಮನೆಯ ಮುಂದೆ. ಹಳೆ ಕಾಲದ್ದು.

ಯಾರೋ ದೊಡ್ಡ ಪೇಟ ಸುತ್ತಿಕೊಂಡಿದ್ದ ಗೌಡರು ಬಂದು, ಬರ್ರಿ, ಬರ್ರಿ ಅಂತ ಬಹಳ ಗೌರವದಿಂದ ಎಲ್ಲರನ್ನೂ ಒಳಗೆ ಕರೆದುಕೊಂಡು ಹೋದರು. ಭರ್ಜರಿ ಇತ್ತು ಮನೆ.

ಎಲ್ಲೈತ್ರೀ ಚಿಗರಿ ಮರಿ? ಅಂತ ಮಲ್ಲಣ್ಣ ತಮ್ಮ ದೊಡ್ಡ ದನಿಯಲ್ಲಿ ಕೇಳಿದರು. ಒಳ್ಳೆ booming ದನಿ ಅವರದ್ದು. ಆರಡಿ ಮೀರಿದ್ದ ದೈತ್ಯಾಕಾರದ ಮಲ್ಲಣ್ಣ ಒಂದು ಆವಾಜ್ ಹಾಕಿದರೆ ಸುಮಾರಿನಂತವರು ಬೆಚ್ಚಿ ಬೀಳಬೇಕು. ಅದು ಅವರ personality.

ಬರ್ರಿ, ಅಂತ ಗೌಡರು ಮಲ್ಲಣ್ಣನನ್ನು ಕರೆದೊಯ್ದದ್ದು ಅವರ ಆಕಳು, ಎಮ್ಮೆ ಕಟ್ಟಿದ್ದ ಕೊಟ್ಟಿಗೆಗೆ. ನಾನೂ ಹಿಂದೆ ಹೋದೆ.

ಹಳೆ ಧಾರವಾಡದಾಗಿನ ಹಳೆ ಮನಿನೇ ಕತ್ತಲಿ ಕತ್ತಲಿ ಇತ್ತು. ಇನ್ನು ದನಾ ಕಟ್ಟೋ ತಬೇಲಾ ಅಂತೂ ಕಗ್ಗತ್ತಲೆ. ಗೌಡರ ಕಡೆಯವರು ಯಾರೋ ಬಾಗಲಾ ತೆಗೆದರು. ಕರ್ರ್! ಅಂತ ಆವಾಜ ಮಾಡಿಕೋತ್ತ ಬಾಗಿಲಾ ತೆಗಿತು. ಒಳಗ ಕಟ್ಟಿದ್ದ ಒಂದಿಷ್ಟು ದನಾ, ಎಮ್ಮಿ, ಎತ್ತು, ಸಣ್ಣ ಕರುಗಳು ಎಲ್ಲ ಯಾರು ಬಂದ್ರಪಾ? ಅಂತ ತಿರುಗಿ ಲುಕ್ ಕೊಟ್ಟವು. ಸುಮಾರು ದೊಡ್ಡದಿತ್ತು ಕೊಟ್ಟಿಗೆ.

ಬರ್ರಿ, ಬರ್ರಿ ಅಂತ ದನಗಳ ಮಧ್ಯೆ ಕರಕೊಂಡು ಹೋದರು ಗೌಡರು ಮತ್ತ ಅವರ ಆಳು ಮಂದಿ.

ಒಂದು ಹತ್ತು ಹೆಜ್ಜೆ ಹಾಕಿದ ಮೇಲೆ ಮೂಲೆಯಲ್ಲಿ ಸುಮಾರು ಒಂದು ಸಣ್ಣ ಕರುವಿನ ಸೈಜಿನ ಪ್ರಾಣಿಯನ್ನು ಬೇರೇನೇ ಕಟ್ಟಿ ಹಾಕಿದ್ದರು. ಕತ್ತಲಿದ್ದರಿಂದ ಸರಿ ಕಾಣುತ್ತಿರಲಿಲ್ಲ. ಗೌಡರು ಆ ಕಡೆ ಇರೋ ಕಿಡಕಿ ತೆಗೆಯಲು ಹೇಳಿದರು. ಆವಾಗ ಕಂಡಿತು!

ಚಿಗರೆ ಮರಿ!!!! ಚುಕ್ಕೆಗಳಿದ್ದ ಜಿಂಕೆ ಮರಿ!!!

so cute! so cute! ಅಂತ ಈಗ ಹಂದಿಮರಿಗಳಂತಹ ಮಂದಿಮರಿಗಳಿಗೆಲ್ಲ ಹೇಳಿ ಹೇಳಿ ಅದರ ಅರ್ಥವೇ ಹೋಗಿ ಬಿಟ್ಟಿದೆ. ಜೀವನದಾಗ ಖರೆ ಅಂದ್ರೂ, so cute, ಅಂತ ಏನರೆ ಅನ್ನಿಸಿದ್ದರೆ ಆ ಚಿಗರೆ ಮರಿ ಒಂದೇ.

ಪಾಪ!!! ಸಣ್ಣ ಮರಿ. ಆಕಳ ಕರುವಿನ ಸೈಜಿಗೆ ಇತ್ತು. ಇನ್ನೂ ಸ್ವಲ್ಪ ಸಣ್ಣ ಸೈಜೇ ಅಂತ ಹೇಳಬಹುದು.

ಮಲ್ಲಣ್ಣನ ಚಿಗರೆ ಮರಿ ಸುಮಾರು ಹೀಂಗೇ ಇತ್ತು. so cute! so sweet!
ಇಷ್ಟೆಲ್ಲ ಜನ ನೋಡಿ ಬೆದರಿತು. ಬೆದರಿದ ಹುಲ್ಲೆ ಅನ್ನೋ literary expression ಅಂದ್ರ ಏನು ಅಂತ ತಿಳೀತು. ಇಷ್ಟೆಲ್ಲ ಮಂದಿ ನೋಡಿ ಚಿಗರಿ ಮರಿ survival instinct ಜಾಗೃತ ಆಗೇ ಆಗಿರ್ತದ. ಹೆದರಿ ಬೆದರಿ ಸ್ವಲ್ಪ ಜಿಗಿದಾಡಿತು. ಸುಸ್ತಾಗಿ ಥರ ಥರ ನಡುಗುತ್ತ, ಪಾಪದ ಕಣ್ಣುಗಳಿಂದ ನೋಡುತ್ತ ನಿಂತು ಬಿಟ್ಟಿತು. ಪಾಪ! ಚಿಗರಿ ಮರಿ!

ಅದು ಏನು ಆಗಿತ್ತು ಅಂದ್ರೆ, ಸ್ವಲ್ಪ ದಿನಗಳ ಹಿಂದೆ ಈ ಚಿಗರೆ ಮರಿ, ಗೌಡರ ಹೊಲದಲ್ಲಿ ಸಿಕ್ಕಿತ್ತಂತೆ. ಮಳೆ ಬಿದ್ದು, ಕರಿ ಮಣ್ಣು ಒಳ್ಳೆ ಫೆವಿಕಾಲ್ ಹಾಂಗೆ ಅಂಟಂಟಾಗಿತ್ತು. ಆ ಭಾಗದಲ್ಲಿ ಇರುವ ಚಿಗರೆಗಳ ಹಿಂಡು ಒಂದು ರಾತ್ರಿ ಅಲ್ಲಿ ಬಂದಿವೆ. ಹೋಗುವ ಸಮಯದಲ್ಲಿ, ನೆಗೆದು ಓಡುತ್ತಿರುವಾಗ, ಈ ಚಿಗರೆ ಮರಿ ಆ ಜಿಗುಟು ಮಣ್ಣಿನಲ್ಲಿ ಸಿಕ್ಕಿಕೊಂಡು ಬಿಟ್ಟಿದೆ. ಹೊರ ಬರಲು ಆಗೇ ಇಲ್ಲ. ಉಳಿದ ಜಿಂಕೆಗಳು ಅದೇನು ಪ್ರಾಣಭೀತಿಯಿಂದ ಓಡಿ ಹೋಗುತ್ತಿದ್ದವೋ ಏನೋ? ಈ ಮರಿಯನ್ನು ಹಾಗೇ ಬಿಟ್ಟು ಹೋಗಿಬಿಟ್ಟಿವೆ. ಪಾಪ! ಹೆಚ್ಚೆಚ್ಚ ಅಂದ್ರೆ ಒಂದು ತಿಂಗಳ ಮರಿ ಅಷ್ಟೇ. ಅದರಕಿಂತ ದೊಡ್ಡದು ಇರಲು ಸಾಧ್ಯವೇ ಇಲ್ಲ ಅಂತ ಗೌಡರು ಹೇಳಿದರು. ಮರುದಿವಸ ಗೌಡರ ಕಣ್ಣಿಗೆ ಬಿದ್ದಿದೆ ಈ ಚಿಗರೆ ಮರಿ. ಏನು ಮಾಡಬೇಕು? ಅಂತ ವಿಚಾರ ಮಾಡಿದ್ದಾರೆ. ಅಲ್ಲೇ ಬಿಟ್ಟರೆ ನಾಯಿ ನರಿಗಳ ಬಾಯಿಗೆ ಸಿಕ್ಕು ಹರೋಹರ ಆಗಲಿಕ್ಕೆ ಜಾಸ್ತಿ ಹೊತ್ತು ಬೇಕಿಲ್ಲ. ರಾತ್ರಿ ಸಿಕ್ಕಿಬಿದ್ದಿದ್ದರಿಂದ ಹೇಗೋ ಬೆಳತನಕ ಬಚಾವ್ ಆಗಿದೆ. ನಾಯಿ ನರಿ ಇಲ್ಲ ಅಂದ್ರೆ ಕಾಗೆ ಹದ್ದುಗಳಿಗೆ ಕುಕ್ಕಿ ಕುಕ್ಕಿ ತಿನ್ನಲು ಪ್ಲೇಟಿನಲ್ಲಿ ಇಟ್ಟುಕೊಟ್ಟಂತೆ ಇದೆ ಅದರ ಹಾಲತ್. ಇನ್ನೊಂದು ಅಂದ್ರೆ ಅರಣ್ಯ ಇಲಾಖೆಯವರಿಗೆ ತಿಳಿಸುವದು. ಅವರು ಯಾವಾಗ ಬರುತ್ತಾರೋ? ಅಲ್ಲಿ ತನಕಾ ಗದ್ದೆಯಲ್ಲಿ ಆ ಚಿಗರೆ ಮರಿ ಕಾದು ಕೂಡಲು ಗೌಡರಿಗೆ ಬೇರೆ ಕೆಲಸ ಇದೆ. ಹಾಗಾಗಿ ಆಳುಗಳಿಗೆ ಹೇಳಿ, ಹಳ್ಳಿಯಲ್ಲಿದ್ದ ತಮ್ಮ ಮನೆಗೆ ಆ ಮರಿಯನ್ನು ಸಾಗಿಸಿದ್ದರು. ಅದೆಲ್ಲಿ ಮಲ್ಲಣ್ಣನಿಗೆ ಆ ಸುದ್ದಿ ಗೊತ್ತಾತೋ ಅಥವಾ ಗೌಡರಿಗೆ ಮಲ್ಲಣ್ಣನ ನೆನಪಾತೋ, ಒಟ್ಟಿನಲ್ಲಿ ಮಲ್ಲಣ್ಣನಿಗೆ ಬುಲಾವಾ ಹೋಗಿದೆ. ಚಿಗರಿ ಸಿಕ್ಕೈತಿ. ಬಂದು ತೊಗೊಂಡು ಹೋಗ್ರೀ. ಅದಕ್ಕೇ ನಾವು ಈಗ ಬಂದು ಈ ಚಿಗರಿ ಮರಿ ಮುಂದೆ ನಿಂತು ನೋಡುತ್ತಿದ್ದೇವೆ. ಮಲ್ಲಣ್ಣ network ಅಂದ್ರೆ ಆ ಮಟ್ಟದ್ದು.

ಇಷ್ಟೆಲ್ಲ ಸುದ್ದಿ ಹೇಳಿ, ಕೇಳಿ ಆಗುವಷ್ಟರಲ್ಲಿ ಚಿಗರಿ ಮರಿಯ tension ಕಮ್ಮಿ ಆಗಿ, ಅದು ಶಾಂತ ಆಗಿ, ಎಲ್ಲರನ್ನೂ ತನ್ನ ಚಿಗರೆ ಕಣ್ಣು (ಹರಿಣಾಕ್ಷಿ) ಇಷ್ಟಗಲ ಬಿಟ್ಟುಕೊಂಡು ಪಿಳಿ ಪಿಳಿ ನೋಡುತ್ತ ನಿಂತಿತ್ತು. so cute! ಅದನ್ನು ತಂದಾಗಿಂದ ಅದರ ದೇಖರೇಕಿ ಮಾಡಿದ್ದ ಗೌಡರ ಆಳು ಹತ್ತಿರ ಹೋದರೆ, ಅವನ ಕೈ ಮೈ ನೆಕ್ಕಿ ಬಿಡ್ತು. ಪಾಪ! ಈಗ so sweet!

ಮಲ್ಲಣ್ಣ ಡಿಸೈಡ್ ಮಾಡೇ ಬಿಟ್ಟರು. ಈ ಚಿಗರಿ ಮರಿ ಮನಿಗೆ ತೊಗೊಂಡು ಹೋಗಿ ಪೆಟ್ ಅಂತ ಇಟ್ಟುಕೊಳ್ಳಲಿಕ್ಕೇ ಬೇಕು. ಸಾಧಾರಣ ಮಂದಿ ಯಾರೂ ಕಾಡು ಪ್ರಾಣಿಯನ್ನ ಮನಿಯೊಳಗೆ ಪೆಟ್ ಅಂತ ಇಟ್ಟುಕೊಳ್ಳೋ ವಿಚಾರ ಮಾಡೋದಿಲ್ಲ. ಆದ್ರ ಮಲ್ಲಣ್ಣ ಸಾಮಾನ್ಯ ಅಲ್ಲ. ಕಾಡು ಪ್ರಾಣಿ ಹಿಡಿದು ಮನಿಯೊಳಗ ಇಟ್ಟುಕೊಂಡಿದ್ದು ಅರಣ್ಯ ಇಲಾಖೆಯವರಿಗೆ ಗೊತ್ತಾತು ಅಂದ್ರ ಬಂದು ಕೇಸ್ ಹಾಕಿ, ರೊಕ್ಕಾ ತಿಂದು, ಪ್ರಾಣಿನೂ ತೊಗೊಂಡು ಹೋಗ್ತಾರ. ಮಲ್ಲಣ್ಣ ಬಿಡ್ರೀ. ಪೋಲಿಸರೂ, ಪೋದ್ದಾರರೂ, ಫಾರೆಸ್ಟ್ ಎಲ್ಲ ಅವರ ದೋಸ್ತರೇ. ಮಠದಾಗ ಚಿಗರಿ ಇಟಗೋಳ್ಳಾಕ ಕೊಡ್ತೀರಿ. ನಾ ಚಿಗರಿ ಸಾಕಿಕೊಂಡ್ರ ಏನ್ರೀ ನಿಮಗ? ಹಾಂ? ಅಂತ ದೊಡ್ಡ ಆವಾಜ್ ಹಾಕಿ, ಅವರಿಗೆಲ್ಲ ಕೊಡುವ ಕಾಣಿಕೆ ಕೊಟ್ಟು, ಸಂಜೆಯ ತೀರ್ಥ ಪ್ರಸಾದದ ವ್ಯವಸ್ಥೆ ಮಾಡಿ, ಇಂತದ್ದನ್ನೆಲ್ಲ ದಕ್ಕಿಸಿಕೊಳ್ಳುವದು ಅವರಿಗೆ ಯಾರೂ ಹೇಳಿ ಕೊಡಬೇಕಾಗಿಯೇ ಇರಲಿಲ್ಲ. ಆ ಲೆವೆಲ್ಲಿಗೆ ಅವರಿಗೆ ತಾಕತ್ತು ಇತ್ತು ಬಿಡ್ರೀ.

ಕಾಡು ಚಿಗರಿ ತಂದು ಮನಿಯೊಳಗ ಸಾಕೋ ವಿಚಾರ ಮಾಡಿದರು ಅಂದ್ರ ಇದೆಂತ ಹುಚ್ಚಾಟದ ವಿಚಾರ ಅಂತ ನಿಮಗ ಅನ್ನಿಸಿಬಹುದು. ನಮ್ಮ ಪ್ರೀತಿಯ ಮಲ್ಲಣ್ಣನ ವಿಚಿತ್ರ ಹುಚ್ಚಾಟಗಳ ಬಗ್ಗೆ ಬರೆದರೆ ಅದೇ ಒಂದು ದೊಡ್ಡ ಪುಸ್ತಕ ಆಗಿಬಿಡ್ತದ. ಸಂಕ್ಷಿಪ್ತವಾಗಿ ಹೇಳತೇನಿ ಅವರ ಕೆಲೊ ಹುಚ್ಚಾಟಗಳನ್ನ. ತಿಳಿದಿದ್ದು ನೆನಪಿದ್ದಿದ್ದು ಮಾತ್ರ. ಇದರ ಹತ್ತು ಪಟ್ಟು ಊಹಾ ಮಾಡಿಕೊಳ್ಳಿರಿ. ಅಂದ್ರ ನಿಮಗ ಐಡಿಯಾ ಬರ್ತದ ಸವದತ್ತಿ ಮಲ್ಲಣ್ಣ ಅನ್ನೋ ದಿಲ್ದಾರ್ ಆದ್ಮಿ ಬಗ್ಗೆ.

ಆಗ ಅವರ ಹತ್ತು ವರ್ಷದ ಮಗನಿಗೆ ಸುಮಾರು ಆವ ಎಂಟು ವರ್ಷದವ ಇದ್ದಾಗಿಂದ ಮಾರುತಿ ವ್ಯಾನ್ ಹೊಡಿಲಿಕ್ಕೆ ಕಲಿಸಿ ಬಿಟ್ಟಿದ್ದರು! ಮಸ್ತ ಹೊಡಿತಿದ್ದ. ಬಾಜು ಇವರು ಕೂತರು ಅಂದ್ರ ಅವರ ಮಗ ಆರಾಮ ಅಂದ್ರ ಆರಾಮ ಎಂತಾ ಟ್ರಾಫಿಕ್ ಇದ್ದರೂ ಗಾಡಿ ಹೊಡಿತಿದ್ದ. ಅದು ಅವರು ಅಪ್ಪ ಮಗ ಇದ್ದಾಗ ಮಾತ್ರ ಮಾಡ್ತಿದ್ದ ಹುಚ್ಚಾಟ. ಮಂದಿ ಕೂಡಿಸ್ಕೊಂಡು ಹೊಂಟಾಗ ಇವರೇ ಡ್ರೈವ್ ಮಾಡ್ತಿದ್ದರು. ಇಂತಹ ಮಗನ ಕಡೆ ಮುಂಬೈದಿಂದ ಬೆಂಗಳೂರು ವರೆಗೆ ಡ್ರೈವ್ ಮಾಡಿಸಿ, ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಒಳಗ ಒಂದು ದೇಶದ ಮಟ್ಟದ ಗಿನ್ನೆಸ್ ದಾಖಲೆ ಮಾಡಿಬಿಡಬೇಕು ಅಂತ ಹುಚ್ಚು. ಅವರ ಮಿತ್ರನೇ ಆದ ಧಾರವಾಡದ ಸಾರಿಗೆ ಆಫೀಸರ್ ಮಲ್ಲಣ್ಣನಿಗೆ ಬೈದು ಈ ಹುಚ್ಚಿಂದ ಬಿಡಿಸಬೇಕಾತು.

ನಂತರದ ಹುಚ್ಚು ಅಂದ್ರ ದಾವಣಗೆರೆ ಬೆಣ್ಣೆ ದೋಸೆ ಧಾರವಾಡಕ್ಕೆ ತರಬೇಕು ಅಂತ. ಎಲ್ಲೋ ಹೋಗಿ, ಯಾವದೋ ಬೆಣ್ಣೆ ದೋಸೆ ಅಡಿಗಿ ಭಟ್ಟನನ್ನು ಹಿಡಕೊಂಡು ಬಂದು, ಅಲ್ಲೆ ವಿದ್ಯಾಗಿರಿಯೊಳಗ, ಹೈವೇ ಮ್ಯಾಲೆ ಒಂದು ಬೆಣ್ಣೆ ದೋಸೆ ಹೋಟೆಲ್ ತೆಗೆದೇ ಬಿಟ್ಟರು. ಅದು ಏನೋ ಎಂತೋ? ಬೆಣ್ಣಿ ದ್ವಾಸಿ ತಿಂದವರು ಕೆಟ್ಟ ಮಾರಿ ಮಾಡಿಕೊಂಡು ಹೊರಗೆ ಬಂದು ಆ ಹೋಟೆಲ್ ಬರಕತ್ತಾಗಲೇ ಇಲ್ಲ. ಭಟ್ಟನ ಕಡೆ ಕೇಳಿದರೆ, ಮಾರಾಯ್ರೇ! ಈ ಬೆಣ್ಣೆಯೇ ಸರಿ ಇಲ್ಲ. ಅದಕ್ಕೆ ಜನಕ್ಕೆ ಈ ದ್ವಾಸೆ ಸೇರೋದಿಲ್ಲ ಅಂದು ಬಿಟ್ಟ. ನಿನ್ನಾಪನಾ ಭಟ್ಟಾ! ನಿನಗ ಚಂದಾಗಿ ದಾವಣಗೆರೆ ಬೆಣ್ಣಿ ದ್ವಾಸಿ ಮಾಡಾಕ ಬರಂಗಿಲ್ಲ ಅಂದ್ರ ಬೆಣ್ಣಿಗೆ ಯಾಕ ಏನೇನರೆ ಅಂತೀಲೇ ಮಂಗ್ಯಾನಿಕೆ? ಅಂತ ಭಟ್ಟನ ಬುರುಡೆಗೆ ಕೊಟ್ಟು, ಅವ ಓಡಿ ಹೋಗಿ, ಮಲ್ಲಣ್ಣನ ಬೆಣ್ಣೆ ದೋಸೆ ಹೋಟೆಲ್ ಲಗೂನೆ ಮುಚ್ಚಿತ್ತು. ಆ ಮ್ಯಾಲೆ ಬೆಣ್ಣೆ ದೋಸೆ ಹೋಟೆಲ್ ನೆಡಸಿದ್ದನ್ನ ಒಂದು ದೊಡ್ಡ ಜೋಕ್ ಮಾಡಿ, ಎಲ್ಲರ ಎದುರು ಹೇಳಿ, ತಮ್ಮನ್ನು ತಾವೇ ಜೋಕ್ ಮಾಡಿಕೊಂಡು, ದೊಡ್ಡ ಸೈಜಿನ laughing ಬುದ್ಧನ ಹಾಗೆ, ಇಡೀ ಮೈ ಗಲ ಗಲ ಅಲುಗಾಡಿಸಿ ನಕ್ಕು ಬಿಟ್ಟರು ಮಲ್ಲಣ್ಣ. ಅದು ಅವರ ದೊಡ್ಡ ಗುಣ. ಸೋಲು ಗೆಲವು ಎಲ್ಲ ಒಂದೇ. ಎಲ್ಲದರಲ್ಲೂ ಹಾಸ್ಯ ಕಂಡು ನಕ್ಕು ನಗಿಸಿಬಿಡೋದು. ದೊಡ್ಡ ಗುಣ.

ಮುಂದಿನದು ತೀರ ಇತ್ತೀಚಿನ ದಿನಗಳ ಹುಚ್ಚು. ಅದು ಏನು ತಲಿಯಾಗ ಬಂತೋ ಏನೋ! ಒಂದು ಐವತ್ತು ಸಾವಿರ ರೂಪಾಯಿ ಖರ್ಚು ಮಾಡಿ, ಹುಯ್ಯ ಅಂತ ಒಂದಿಷ್ಟು ಕನ್ನಡ ಪುಸ್ತಕ ಖರೀದಿ ಮಾಡಿ, ಮೊಬೈಲ್ ಲೈಬ್ರರಿ ಶುರು ಮಾಡಿಬಿಟ್ಟರು. ವಾರದ ಒಂದು ದಿವಸ ಮುಂಜಾನೆ ಎಲ್ಲ ಪುಸ್ತಕ ವ್ಯಾನಿನೊಳಗ ಹಾಕಿಕೊಂಡು ಹೋಗೋದು, ಕರ್ನಾಟಕ ಯೂನಿವರ್ಸಿಟಿ ಕ್ಯಾಂಪಸ್ಸಿನ ಕೂಟಿನಲ್ಲಿ ಒಂದು ಝಮಖಾನ ಹಾಸಿ, ಪುಸ್ತಕ ಹರಡಿಕೊಂಡು ಕೂಡೋದು. ಯಾರು ಬೇಕಾದರೂ ಬಂದು ಒಂದೋ ಎರಡೋ ಪುಸ್ತಕ ಒಯ್ಯಬಹುದು. ನೀವು ಯಾರು ಅಂತ ಮಲ್ಲಣ್ಣ ಕೇಳಂಗಿಲ್ಲ. ಮುಂದಿನ ವಾರ ಅದೇ ಟೈಮಿಗೆ ಅಲ್ಲೇ ಮಲ್ಲಣ್ಣ ಮತ್ತೆ ಬರುತ್ತಾರೆ. ಆವಾಗ ಪುಸ್ತಕ ತಿರುಗಿ ಕೊಟ್ಟು ಬೇಕಾಗಿದ್ದನ್ನ ಮತ್ತೆ ತೊಗೊಂಡು ಹೋಗಬಹುದು. ಹೆಸರು ವಿಳಾಸ ಅದೆಲ್ಲ ಮಲ್ಲಣ್ಣನಿಗೆ ಬೇಕೇ ಇಲ್ಲ. ಹೇಳಿ ಕೇಳಿ ಲೈಬ್ರರಿಯನ್ ಅವರು. ರಿಟೈರ್ ಆದ ಮ್ಯಾಲೆ ಕನ್ನಡದ ಸೇವೆ ಮಾಡಿದ್ದು ಹೀಗೆ. ಈ ತರಹ ಯಾರೂ ಲೈಬ್ರರಿ ನೆಡಸಿರಲಿಕ್ಕೆ ಇಲ್ಲ. ಅಷ್ಟು ನಂಬಿಕೆ ಜನರ ಮೇಲೆ. ಇನ್ನು ಎಲ್ಲೋ ಒಬ್ಬರೋ ಇಬ್ಬರೋ ಪುಸ್ತಕ ತೊಗೊಂಡು ಹೋಗಿ ತಂದು ಕೊಡಲಿಲ್ಲ ಅಂದ್ರೆ ಹೋಗ್ಲಿ ಬಿಡು ಅನ್ನೋ ದೊಡ್ಡ ಮನಸ್ಸು.

ಪ್ರೀತಿಯ ಹುಂಬತನಕ್ಕೆ ಮಲ್ಲಣ್ಣ ಮತ್ತೊಂದು ಹೆಸರು. ೧೯೮೬ ರಲ್ಲಿ ಶೃಂಗೇರಿ ಸ್ವಾಮಿಗಳು ಬಂದಾಗ ಅವರ ಪೂಜೆಗೆ ಬೇಕಾಗುವ ಹೂವುಗಳನ್ನು ತರುವ ಕೆಲಸ ನಮ್ಮ ತಂದೆ ಮಲ್ಲಣ್ಣನಿಗೆ ಹಚ್ಚಿದ್ದರು. ಮುಂಜಾನೆ ನಸುಕಿನಲ್ಲಿ ಒಂದು ಲಾರಿ ತುಂಬಾ ಹೂವು ತಂದು ಮಲ್ಲಣ್ಣ ಸ್ವಾಮಿಗಳ ಮುಂದೆ ಕೂತು ಬಿಟ್ಟಿದ್ದರು. ಎಲ್ಲರಿಗೂ ಘಾಬರಿ. ಏನಪಾ ಈ ಮನುಷ್ಯಾ ಸ್ವಾಮಿಗಳ ಪೂಜೆಗೆ ಹೂವು ತಂದಿದ್ದಾರೋ ಅಥವಾ ಹೂವುಗಳಲ್ಲೇ ಸ್ವಾಮಿಗಳನ್ನ ಮುಚ್ಚಿ ಹಾಕಿ ಬಿಡೋ ಪ್ಲಾನ್ ಏನರೆ ಅದ ಏನು ಇವರದ್ದು ಅಂತ? ಅದಕ್ಕೆ ಅವರಿಗೆ ರಾಮಭಕ್ತ ಹನುಮಂತ ಅಂತ ತಂದೆಯವರು ಪ್ರೀತಿಯಿಂದ ಹೆಸರು ಇಟ್ಟಿದ್ದರು. ಹನುಮಂತ ಸಂಜೀವಿನಿ ಬೇರು ತೊಗೊಂಡು ಬಾ ಅಂದ್ರ ಈಡೀ ಗುಡ್ಡಾ ಕಿತ್ತುಕೊಂಡ ಬಂದ ಲೆವೆಲ್ಲಿನಲ್ಲಿ ಮಲ್ಲಣ್ಣನ ಕೆಲಸ. ಏನ್ರೀ ಮಲ್ಲಣ್ಣ ಪೂಜಿಗೆ ಅಂದ್ರ ಎಷ್ಟು ಹೂವು ತಂದು ಬಿಟ್ಟೀರಿ? ಅಂತ ಕೇಳಿದರೆ, ನನಗೇನ ಗೊತ್ತರೀ ಸರ್ರಾ ನಿಮ್ಮ ಸ್ವಾಮಿಗಳ ಬಗ್ಗೆ? ಅದೂ ಇಬ್ಬಿಬ್ಬರು ಸ್ವಾಮಿಗಳು ಬಂದು ಕುಂತಾರ. ಪೂಜಿಗೆ ಹುವ್ವಾ ಕಮ್ಮಿ ಬೀಳಬಾರದು ನೋಡ್ರೀ. ಅದಕ್ಕೇ ಒಂದೀಟ ಜಾಸ್ತಿ ತಂದು ಬಿಟ್ಟೆರೀ, ಅಂದು ಮತ್ತೆ laughing ಬುದ್ಧನ ಗಲ ಗಲ ನಗೆ ನಕ್ಕಿದ್ದರು ಮಲ್ಲಣ್ಣ. ಸ್ವಾಮಿಗಳು ಇದ್ದ ಅಷ್ಟೂ ದಿವಸವೂ ಮುಂಜಾನೆ ಬರೋಬ್ಬರಿ ನಾಕೋ ಐದೋ ಘಂಟೆಗೆ ಹೂವಿನ ಬುಟ್ಟಿ ಹಿಡಕೊಂಡು ಹೋಗಿ ಕೂತು ಬಿಡ್ತಿದ್ದರು ಮಲ್ಲಣ್ಣ. ಅದು ಅವರ ಕಾರ್ಯನಿಷ್ಠೆಗೆ ಒಂದು ಉದಾಹರಣೆ. ಯಾವಾಗ ಮಲ್ಕೋತ್ತಿದ್ದರೋ, ಯಾವಾಗ ಎದ್ದು ಹೂವು ಹುಡಿಕಿಕೊಂಡು ಹೋಗಿ ತರ್ತಿದ್ದರೋ ಗೊತ್ತಿಲ್ಲ. ಬಂದವರು ಬ್ರಾಹ್ಮ್ಮರ ಸ್ವಾಮಿಗಳು. ಪೂಜೆಗೆ ಹೂವು ತಂದು ಕೊಟ್ಟವರು ಮಲ್ಲಣ್ಣ ಲಿಂಗಾಯಿತ. ಜಾತಿ ಪಾತಿ ಅದೆಲ್ಲ ಅವರ ಹತ್ತಿರ ಸುಳಿದಿದ್ದೇ ಇಲ್ಲ.

ಆ ಕಾಲದಲ್ಲೇ ಅವರು ಯೂರೋಪಿನ ಯಾವದೋ ಒಂದು ಲಾಟರಿ ಆಡುವದನ್ನ ಕಲಿತುಬಿಟ್ಟಿದ್ದರು. ಅದರ ಬಗ್ಗೆ ಪೂರ್ತಿ ಮಾಹಿತಿ ಹೇಗೋ ಮಾಡಿ ತೆಗೆದು ಬಿಟ್ಟಿದ್ದರು. ಹಾಕಿದ ದುಡ್ಡಿಗೆ ಲಾಸಿಲ್ಲ ಅನ್ನೋ ರೀತಿಯಲ್ಲಿ ಒಂದು ಪದ್ಧತಿ ಮಾಡಿಕೊಂಡು, ಕಮ್ಮಿ ಕಮ್ಮಿ ಅಂದ್ರೂ ಮೂವತ್ತು ಪೆರ್ಸೆಂಟ್ ಲಾಭ ಮಾಡಿಕೊಳ್ಳುತ್ತಿದ್ದರು. ನಮಗೂ ಆಡು ಅಂತ ಇವತ್ತಿಗೂ ಹೇಳುತ್ತಿರುತ್ತಾರೆ. ಅದೇನೋ ಲಾಟರಿಯಂತೆ. ದುಡ್ಡು ಲಾಸ್ ಆಗುವದೇ ಇಲ್ಲವಂತೆ. ಕೇವಲ ಕರ್ನಾಟಕ ಭಾಗ್ಯಲಕ್ಷ್ಮಿ ಲಾಟರಿ ಟಿಕೆಟ್ ತೊಗೊಂಡ ನಾವು ಅವೆಲ್ಲಗಳಿಂದ ದೂರ ಇದ್ದೇವೆ.

ಅವರ ಹೆಸರು ಮಲ್ಲಿಕಾರ್ಜುನ. ಆದರೆ ಸರ್ವರಿಗೂ ಅವರು ಮಲ್ಲಣ್ಣ. ಮಲ್ಲಿಕಾರ್ಜುನ ಅಂದ್ರ ಅವರಿಗೇ ಗೊತ್ತಾಗ್ತದೋ ಇಲ್ಲೋ ಅಷ್ಟರಮಟ್ಟಿಗೆ ಸವದತ್ತಿ ಮಲ್ಲಣ್ಣ ಅಂತೇ ಅವರು ಫೇಮಸ್. ಮಲ್ಲಣ್ಣ ನಮಗೆ ಭಾಳ ಸೇರಿದ್ದು ಅವರ ದಿಲ್ದಾರ ಲೈಫ್ ಸ್ಟೈಲಿನಿಂದ. ಆರಡಿ ಎತ್ತರದ ಆಜಾನುಬಾಹು. ದೊಡ್ಡ ಶರೀರ. ಸಣ್ಣ ಗುಡಾಣದಂತಹ ಗೌರವಯುಕ್ತ ಹೊಟ್ಟೆ. ತಲೆ ಮೇಲೆ ದೊಡ್ಡ ಕುದರೆ ಲಾಳಾಕಾರದ ಬಕ್ಕ ಬಾಲ್ಡ್ ಸ್ಪಾಟ್. ಉಳಿದ ಕಡೆ ದಟ್ಟ ಗುಂಗರು ಕೂದಲ. ಅದಕ್ಕೆ ತರೇವಾರಿ ಬಣ್ಣ. ಕೆಲವೊಮ್ಮೆ ಬಿಳೆ ಬಣ್ಣ ಕೂಡ ಹೊಡೆದುಬಿಡ್ತಾರೆ ಅಂತ ನಮ್ಮ ಜೋಕ್. ಮಸ್ತ ಶೋಕಿವಾಲ. ಮುದಕ ಅಂಕಲ್ಲುಗಳು ಹಾಕಿದಂತೆ ಮಲ್ಲಣ್ಣ ಡ್ರೆಸ್ ಹಾಕಿದ್ದು ಎಂದೂ ಇಲ್ಲವೇ ಇಲ್ಲ. ಯಾವಾಗಲೂ ಜಗ್ ಮಗ್ ಜಗ್ ಮಗ್ ಡ್ರೆಸ್. ಬಾಕಿ ಮಧ್ಯವಯಸ್ಕರೆಲ್ಲ ಹೊಟ್ಟೆ ಮೇಲೆ ಪ್ಯಾಂಟ್ ನಿಲ್ಲದೆ ನಿಮಿಷಕ್ಕೊಮ್ಮೆ ಪ್ಯಾಂಟ್ ಮೇಲೆತ್ತಿಕೊಳ್ಳುತ್ತಿದ್ದರೆ, ಮಲ್ಲಣ್ಣ ಆ ಕಾಲದಲ್ಲೇ ಮ್ಯಾಚಿಂಗ್ suspenders ತಂದುಕೊಂಡು ಹಾಕಿಕೊಂಡು ಬಿಟ್ಟಿದ್ದರು. ತಲೆ ಮೇಲೆ ಆಗಾಗ ಒಂದು ಕ್ಯಾಪ್. ಮೂಗಿನ ಮೇಲೆ ಬಂದು ಕೂತ ಒಂದು ಇಂಪೋರ್ಟೆಡ್ ಕನ್ನಡಕ. ಸೇದಬೇಕು ಅಂದ್ರೆ ಸ್ಟೈಲಿಶ್ ಪೈಪ್. ಸ್ಟೈಲ್ ಮಾಡೋದು ಅಂದರೆ ಅವರನ್ನ ನೋಡಿ ಕಲಿಯಬೇಕು. ಏನರೆ ಅವರ ವಸ್ತ್ರ ನೋಡಿ, ಏನ್ರೀ ಮಲ್ಲಣ್ಣ ಭಾರಿ ಅದ ಅಲ್ಲರೀ ನಿಮ್ಮ ಡ್ರೆಸ್? ಅಂದು ಬಿಟ್ಟರೆ ಮುಗೀತು ಅಷ್ಟೇ. ನಡಿಯೋ ಹೀರೋ, ಮನ್ನೆ ಬೆಳಗಾವ ಹೋದಾಗ ತೊಗೊಂಡೆ ಈ ಜೀನ್ಸ್ ಪ್ಯಾಂಟ್, ನಡಿ ನಾಳೆ ಹೋಗಿ ಬಂದು ಬಿಡೋಣ, ನಿನಗೂ ಒಂದು ನಾಕು ಕೊಡಿಸಿ ಒಗೆದು ಬಿಡ್ತೇನಿ, ಅಂತ ಹೇಳಿ ಮರುದಿವಸದ ಶಾಪಿಂಗ್ ಟ್ರಿಪ್ ಗೆ ಮಲ್ಲಣ್ಣ ತಯಾರು. ಅವರು ಹಾಕ್ಕೊಂಡಿದ್ದ ಜಾಕೆಟ್ ಒಂದನ್ನ ಹೊಗಳಿ, ಅವರು ಅದನ್ನ ಬಲವಂತದಿಂದ ನನಗೇ ಕೊಟ್ಟು, ಧಾರವಾಡ ಥಂಡಿಯಲ್ಲಿಯೂ ಆ ಜಾಕೆಟ್ ಹಾಕಿಕೊಂಡರೆ ಬೆವರು ಬಂದು, ಏ ಮಲ್ಲಣ್ಣ! ಈ ಜಾಕೆಟ್ ಧಾರವಾಡಕ್ಕ ಭಾಳ ಧಪ್ಪ ಆತ್ರೀ, ಅಂತ ಹೇಳಿ ಅವರಿಗೆ ಹಿಂತಿರುಗಿಸುವದರಲ್ಲಿ ಸಾಕೋ ಬೇಕಾಗಿ ಹೋಗಿತ್ತು. ಅಷ್ಟು ಪ್ರೀತಿ, ದೊಡ್ಡ ಮನಸ್ಸು ಅವರದ್ದು.

ಇಂತಹ ಹುಚ್ಚಾಟಗಳನ್ನೆಲ್ಲಾ ಮಾಡಿದ್ದ ಮಲ್ಲಣ್ಣ ಚಿಗರೆ ಮರಿ ತಂದು ಸಾಕಲು ಹೊರಟಿದ್ದರು ಅಂದ್ರೆ ಅದೇನು ಮಹಾ? ಚಿಗರೆ ಸಾಕಿದ ಹುಚ್ಚಾಟಕ್ಕೆ ಒಂದು background ಇರಲಿ ಅಂತ ಮಲ್ಲಣ್ಣನ ಬಗ್ಗೆ, ಅವರ personality ಬಗ್ಗೆ ಬರಿಬೇಕಾತು.

ಅಂತೂ ಇಂತೂ ಚಿಗರಿ ತೊಂಗೊಂಡು ಹೋಗೋದು ಅಂತ ಆತು. ಗೌಡರು ಅವರ ಆಳುಗಳಿಗೆ ಚಿಗರಿ ರೆಡಿ ಮಾಡಲಿಕ್ಕೆ ಹೇಳಿದರು. ಸವದತ್ತಿ ಮಲ್ಲಣ್ಣ, ಗೌಡರು ದೊಡ್ಡ ದನಿಯೊಳಗ ಏನೋ ಮಾತಾಡಿಕೋತ್ತ, ಒಬ್ಬರ ಡುಬ್ಬದ ಮೇಲೆ ಇನ್ನೊಬ್ಬರು ಪ್ರೀತಿಯಿಂದ ಹೊಡ್ಕೋತ್ತ, ಕೊಟ್ಟಿಗೆಯಿಂದ ಹೊರಗ ಬಂದ್ರು. ಹಿಂದ ನಾವು.

ಹೊರಗ ಬಂದು, ಮತ್ತೊಂದು ರೌಂಡ್ ಚಹಾ ಕುಡಿದು, ಹೊರಡಲಿಕ್ಕೆ ಎದ್ದಿವಿ. ಅಷ್ಟರಾಗ ಗೌಡರ ಆಳುಗಳು ಏನೇನೋ ಸಾಹಸ ಮಾಡಿ ಆ ಚಿಗರಿ ಮರಿಯನ್ನ ಒಂದು ಹಗ್ಗ ಕಟ್ಟಿ ಹ್ಯಾಂಗೋ ಮಾಡಿ ತಂದು ಮಾರುತಿ ವ್ಯಾನಿನ ಮುಂದ ನಿಲ್ಲಿಸಿದ್ದರು. ಹಗ್ಗಾ ಕಟ್ಟಿ ಕರ್ಕೊಂಡು ಬರಲಿಕ್ಕೆ ಅದೇನು ಆಕಳ ಕರಾ ಏನು? ಜಿಗಿದಾಡಿ ಬಿಡ್ತು. ಅದಕ್ಕ, ಅವನೌನ್, ಅಂತ ಹೇಳಿ, ಆ ಆಳುಮಗ ಕೊನೆಯ ಕೆಲೊ ಹೆಜ್ಜೆ ಅದನ್ನ ಎತ್ತಿಕೊಂಡೇ ಬಂದುಬಿಟ್ಟ. ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು, ಅನ್ನೋ ಹಾಂಗ ಕೂತಿತ್ತು ಚಿಗರಿ ಮರಿ. so cute!

ಮೊದಲು ದೊಡ್ಡವರು ಒಳಗ ಕೂತರು. ನಾನು, ಮಲ್ಲಣ್ಣ, ಆಳುಗಳು ಎಲ್ಲ ಕೂಡಿ ಚಿಗರಿ ಮರಿಯನ್ನ ಮಾರುತಿ ವ್ಯಾನಿನ ಹಿಂದೆ ಇರುವ ಡಿಕ್ಕಿ ಅಂತಹ ಸಣ್ಣ ಜಾಗದಲ್ಲಿ ಹಾಕಿ, ಬಾಗಲಾ ಬಂದು ಮಾಡಿದಿವಿ. ಹೋಗ್ಗೋ!!! ಆ ಚಿಗರಿ ಮರಿ ಕೆಟ್ಟ ಹೆದರಿ, ಇದೆಲ್ಲಿ ಡಬ್ಬಿ ಒಳಗ ನನ್ನ ಕೂಡಿ ಹಾಕಿದರೋ, ಅಂತ ತಿಳಕೊಂಡು ಅಷ್ಟೇ ಸಣ್ಣ ಜಾಗಾದಾಗ ಫುಲ್ ಡಿಸ್ಕೋ, ಭಾಂಗ್ರಾ, ಎಲ್ಲಾ ಡಾನ್ಸ್ ಮಾಡಿ, ವ್ಯಾನಿನ ಮ್ಯಾಲಿನ ರೂಫಿಗೆ ಬಡಕೊಂಡು, ರಾಮಾ, ರಾಮಾ! ಬ್ಯಾಡಾ!

ಹಿಂದಿನ ಸೀಟಿನಲ್ಲಿ ಕೂತಿದ್ದ ಸವದತ್ತಿ ಅಜ್ಜಿ ಮತ್ತ ಶಂಖಾ ಹೊಡೆದರು.

ಏ! ಮಲ್ಲಣ್ಣ! ನಿನ್ನ ಚಿಗರಿ ಹಿಡಕೋಳೋ! ಅಂತ.

ಅಲ್ಲ ಮಲ್ಲಣ್ಣ ಪಾಪ ಗಾಡಿ ಹೊಡಿತಾರೋ ಅಥವಾ ಹಿಂದ ಕೂತು ಚಿಗರಿ ಹಿಡ್ಕೊತ್ತಾರೋ?

ಮಲ್ಲಣ್ಣ ನನ್ನ ಕಡೆ ನೋಡಿದರು.

ಹೀರೋ! ಹಿಂದ ಹೋಗಿ ಚಿಗರಿ ಹಿಡಕೊಂಡು ಕುಂದ್ರಲ್ಲಾ? ಇಲ್ಲ ಅಂದ್ರ ಅದು ಜಿಗಿದಾಡಿ, ಜಿಗಿದಾಡಿ ವ್ಯಾನ ಮುರದ ಒಗದೇ ಬಿಡತೈತಿ, ಅಂದ್ರು ಮಲ್ಲಣ್ಣ.

ಹೀಗೆ ಚಿಗರಿ ಹ್ಯಾಂಡ್ಲರ್ ಅಂತ ನಮಗೆ ಪದವಿ ಪ್ರಧಾನ ಮಾಡಿದರು ಮಲ್ಲಣ್ಣ.

ಹಿಂದ ಹೋಗಿ, ಮಾರುತಿ ವ್ಯಾನಿನ ಬಾಗಿಲಾ ತೆಗೆದಿವಿ. ಭಾಳ ಕೇರ್ಫುಲ್ ಆಗಿ. ಎಲ್ಲರೆ ಚಿಗರಿ ಮರಿ ಚಂಗನೆ ಜಿಗಿದು ಓಡಿ ಹೋತು ಅಂದ್ರ ಅಷ್ಟೇ ಮತ್ತ. ಅದರ ಹಿಂದ ಹಳೆ ಧಾರವಾಡ ತುಂಬಾ ನಾವೆಲ್ಲಾ ಓಡಬೇಕು.

ಕಾರಿನ ಡಿಕ್ಕಿ ಬಾಗಿಲಾ ತೆಗೆದ ಕೂಡಲೇ ಚಿಗರಿ ಓಡಿ ಹೋಗಲಿಕ್ಕೆ ರೆಡಿ ಇತ್ತು. ಸ್ವಲ್ಪೇ ಬಾಗಿಲಾ ತೆಗೆದು ಈಗ ನನ್ನ ಒಳಗ ದೂಕಿದರು. ಬೇಬಿ ಚಿಗರಿ ವಾಸನಿ ಮೂಗಿಗೆ ಈಗ ಸರಿ ಬಂತು. ಮಸ್ತ ಇತ್ತು. ಕಸ್ತೂರಿ ಮೃಗ ಅಲ್ಲ. ಆದರೂ ಚಿಗರಿ ವಾಸನಿ ಬೆಷ್ಟ.

ಇದ್ದ ಜಾಗಾದಾಗ ಹ್ಯಾಂಗೋ ಹೋಗಿ ಸೆಟಲ್ ಆದೆ. ಚಿಗರಿ ನಾನು ಕೂಡಿ ಅಲ್ಲೆ ಮಿಸುಕಾಡಲಿಕ್ಕೆ ಜಗಾ ಇರಲಿಲ್ಲ. ಚಿಗರಿ ಇನ್ನೆಲ್ಲಿಂದ ಜಿಗಿದಾಡೀತು? ಅದೂ ಸಹ ಸುಮ್ಮನೇ ಸೆಟಲ್ ಆತು. ಅದಕ್ಕ ಸೇರಲೀ ಬಿಡಲೀ, ನನ್ನ ಬಾಜೂಕೇ ಸೆಟಲ್ ಆತು. ನಾಯಿ ಮೈದಡವಿದಾಂಗ ಅದರ ಮೈಮ್ಯಾಲೆ ಕೈಯಾಡಿಸಿಕೋತ್ತ, ಅದರ ಕಿವಿ ಮೈಲ್ಡ್ ಆಗಿ ಜಕ್ಕೋತ್ತ ಕೂತೆ. ಮಲ್ಲಣ್ಣ ಮುಂದೆ ಡ್ರೈವರ್ ಸೀಟ್ ಒಳಗ ಸ್ಥಾಪಿತರಾಗಿ, ರೈಟ್ ರೈಟ್, ಅಂದು ಮನಿ ಕಡೆ ಗಾಡಿ ತಿರುಗಿಸಿದರು.

ದಾರಿಯೊಳಗೂ ಚಿಗರಿ ಒಂದೆರಡು ಸಲೆ ಮಿಸುಕಾಡಲಿಕ್ಕೆ ನೋಡಿತು. ಘಟ್ಟೆ ಅಪ್ಪಿ ಹಿಡಕೊಂಡು ಬಿಟ್ಟೆ. ಮಸ್ತ ಅಂದ್ರ ಮಸ್ತ ಫೀಲಿಂಗ್ ಚಿಗರಿ ಅಪ್ಪಿಕೊಳ್ಳೋದು. ಅದಕ್ಕೇ ಇರಬೇಕು ಭಗವದ್ಗೀತಾ ಒಳಗ ಸಹಿತ ಕೃಷ್ಣ ಹೇಳಿಬಿಟ್ಟಾನ. ಧ್ಯಾನಕ್ಕ ಕೂಡವರು ಚಿಗರಿ ಚರ್ಮದ ಮ್ಯಾಲೆ ಕೂಡ್ರಿ, ಅಂತ. ಸಂಸಾರಿಗಳಿಗೆ ಚಿಗರೆ ಚರ್ಮ, ಸನ್ಯಾಸಿಗಳಿಗೆ ಹುಲಿ ಚರ್ಮ ಅಂತ ಹೇಳಲಾಗಿದೆ. ವಿಪರೀತ ತಾಮಸಿಕ, ರಾಜಸಿಕ ಗುಣಗಳಿರುವ ಸಂಸಾರಿಗಳಲ್ಲಿ ಚಿಗರೆ ಚರ್ಮ ಸಾತ್ವಿಕ ಮನೋಭಾವ ಹುಟ್ಟಲು ಸಹಾಯ ಮಾಡುತ್ತದೆ. ಕೇವಲ ಸಾತ್ವಿಕ ಭಾವ ಮಾತ್ರ ಇದ್ದು, ಜಗತ್ತನ್ನೇ ಬಿಟ್ಟಿರುವ ಸನ್ಯಾಸಿಗಳಲ್ಲಿ ಹುಲಿ ಚರ್ಮ ತಕ್ಕ ಮಟ್ಟಿನ ರಾಜಸಿಕ ಮನೋಭಾವ ಹುಟ್ಟಿಸುತ್ತದೆ. ಸನ್ಯಾಸಿಗಳಲ್ಲಿ ಸ್ವಲ್ಪ ಮಟ್ಟಿನ ರಾಜಸಿಕ ಭಾವ ಬರಲಿಲ್ಲ ಅಂದ್ರ ಅವರು ಜಗತ್ತಿನ ಉದ್ಧಾರ ಮಾಡೋದು ಹ್ಯಾಂಗ? ಮತ್ತ ಇದಕೆಲ್ಲಾ ಸೈಂಟಿಫಿಕ್ ವಿವರಣೆ ಸಹಿತ ಅವ. ಇಂಟರ್ನೆಟ್ ಮ್ಯಾಲೆ ಎಲ್ಲ ಮಾಹಿತಿ  ಸಿಗ್ತಾವ ಆಸಕ್ತರಿಗೆ.

ದಾರಿಯೊಳಗ ನನ್ನ ತಲಿಯೊಳಗ ವಿಚಾರ ಅಂದ್ರ, ಈ ಮಲ್ಲಣ್ಣ, ಮನಿಗೆ ತೊಗೊಂಡು ಹೋಗಿ, ಚಿಗರಿ ಎಲ್ಲೆ ಇಡವರು ಇದ್ದಾರ? ನಾಯಿ ಹಾಂಗ ಹೊರಗ ಕಟ್ಟಿ ಹಾಕಲಿಕ್ಕೆ ಸಾಧ್ಯವೇ ಇಲ್ಲ. ಬ್ಯಾರೆ ನಾಯಿ ಬಂದು, ಕಾಂಪೌಂಡ್ ಜಿಗಿದು ಬಂದು, ಕಡಿದು ಕೊಂದು ಹೋಗ್ತಾವ. ಮನಿಯೊಳಗ ಇಟ್ಟುಕೊಳ್ಳಲಿಕ್ಕೆ ಸಾಧ್ಯ ಇಲ್ಲ. ಅದರ ಮ್ಯಾಲೆ ಮನಿಯೊಳಗ ಅವರ ಕೆಟ್ಟ ಒದರೋ ಒಂದು ಛೋಟ್ಯಾ ಪಮೇರಿಯನ್ ನಾಯಿ ಸಹಾ ಅದ. ಎಲ್ಲೆ ಇಡವರು ಇವರು ಚಿಗರಿ? ಅಂತ ತಲ್ಯಾಗ ಬಂತು. ಮಲ್ಲಣ್ಣ ಅದಕೆಲ್ಲಾ ಒಂದು ಪ್ಲಾನ್ ಮಾಡಿಕೊಂಡೇ ಚಿಗರಿ ತರೋ ನಿರ್ಧಾರ ಮಾಡಿದ್ದರು. ಅದು  ಆ ಮೇಲೆ ಗೊತ್ತಾತು. ಸಾವಿರ ದಂಧೆ ಮಾಡಿದ್ದ ಮಲ್ಲಣ್ಣ ಎಲ್ಲ ಪ್ಲಾನ್ ಮಾಡೇ ಮಾಡ್ತಾರ.

ಮನಿ ಬಂತು. ಮೊದಲು ನಮ್ಮ ಮನಿ ಮುಂದ ನಮ್ಮ ತಂದೆಯವರನ್ನ ಇಳಿಸಿ, ಮುಂದ ಒಂದು ನೂರು ಫೀಟ್ ದೂರದಲ್ಲಿದ್ದ ಮಲ್ಲಣ್ಣನ ಸವದತ್ತಿ ನಿವಾಸದ ಮುಂದ ಗಾಡಿ ನಿಲ್ಲಿಸಿದಿವಿ. ನಾನು ಚಿಗರಿ ಕೊರಳಿಗೆ ಕಟ್ಟಿದ ಹಗ್ಗ ಘಟ್ಟೆ ಹಿಡಕೊಂಡೆ.

ಹೀರೋ! ಚಿಗರಿ ಘಟ್ಟೆ ಹಿಡ್ಕೊಳೋ ಮಾರಾಯ! ಅಂತ ಅನಕೋತ್ತ ಮಲ್ಲಣ್ಣ ಹಿಂದಿನ ಡಿಕ್ಕಿ ತೆಗಿಲಿಕ್ಕೆ ಬಂದ್ರು.

ಏನ ಹುಚ್ಚ ಅದಾನ ಇವಾ, ಅಂತ ಮಗನ ಬೈಕೋತ್ತ ಸವದತ್ತಿ ಅಜ್ಜಿ ಇಳಿದು ಹೋದರು. ಆ ತಾಯಿ ಈ ಮಗನ ಅದೆಷ್ಟು ಹುಚ್ಚಾಟ ನೋಡಿದ್ದರೋ?

ಮಲ್ಲಣ್ಣ ಬಂದು ವ್ಯಾನಿನ ಹಿಂದಿನ ಡಿಕ್ಕಿ ಬಾಗಿಲಾ ತೆಗೆದರು. ಈ ಸರೆ ಯಾಕೋ ಚಿಗರಿ ಓಡಿ ಹೋಗೋ ಪ್ರಯತ್ನ ಮಾಡಲಿಲ್ಲ. ಅದಕ್ಕ ಅನಿಸಿರಬೇಕು, ಇನ್ನೆಲ್ಲಿ ಓಡಲಿ? ನಮ್ಮ ನಸೀಬದಾಗ ಇನ್ನು ಈ ಮಂದಿ ಜೋಡಿನೇ ಇರೋದು ಅದನೋ ಏನೋ? ಅಂತ ತಿಳಕೊಂಡು ಮಳ್ಳ ಮಾರಿ ಮಾಡಿಕೊಂಡು, ಪಿಕಿ ಪಿಕಿ ಕಣ್ಣು ಪಿಳಿಕಿಸುತ್ತ ಕೂತಿತ್ತು.

ಈ ಚಿಗರಿ ಮರಿ ನೆಡಿಸಿಕೊಂಡು ಹೋಗೋದೆಲ್ಲಾ ಆಗೋ ಮಾತಲ್ಲ ಅಂತ ಹೇಳಿ ಮಲ್ಲಣ್ಣ ಚಿಗರಿ ಮರಿ ಎತ್ತಿಕೊಂಡೇ ಬಿಟ್ಟರು. ಮತ್ತ, ಅಮ್ಮಾ ನಿನ್ನ ತೋಳಿನಲ್ಲಿ ಕಂದ ನಾನು, ಲುಕ್ ಕೊಟಗೋತ್ತ ಚಿಗರಿ ಕೂತಿತ್ತು. ಸೇಫ್ಟಿಗೆ ಅಂತ ಹೇಳಿ ನಾ ಹಗ್ಗಾ ಹಿಡಕೊಂಡಿದ್ದೆ. ಮಲ್ಲಣ್ಣ ಈ ಚಿಗರಿ ಮರಿ ತೊಗೊಂಡು ಹೋಗಿ ಎಲ್ಲೆ ಇಡವರು ಇದ್ದಾರ ಅಂತನೇ ಕುತೂಹಲ.

ದೊಡ್ಡ ಸೈಜಿನ ಮಲ್ಲಣ್ಣ ಸಣ್ಣ ಸೈಜಿನ ಚಿಗರೆ ಮರಿ ತೊಗೊಂಡು ಹೋಗಿ ಇಟ್ಟಿದ್ದು ಸೀದಾ ಅವರ ಮನೆ ಮೇಲಿನ terrace ಮೇಲೆ. ಎಲ್ಲಾ ವಿಚಾರ ಮಾಡಿಯೇ ಮಲ್ಲಣ್ಣ ಚಿಗರಿ ಮರಿ ತಂದಿದ್ದರು. ಅವರ terrace ಒಂದು ತರಹದ ಗ್ರೀನ್ ಹೌಸ್ ಇದ್ದಂಗೆ ಇತ್ತು. ಸುತ್ತಲೂ ಜಾಳಗಿ ಹಾಕಿಸಿದ್ದರು. ಬಳ್ಳಿ ಹಬ್ಬಿಸಿದ್ದರು. ಎಲ್ಲಾರ ಮನಿ ಬೋಳು terrace ಅಲ್ಲ. ಒಂದು ರೀತಿ ಒಳಗ ಚೊಲೋನೇ ಆತು. ಜಿಗರಿಗೆ ಮಸ್ತ. ಅಟ್ಟದ ಮ್ಯಾಲಿನ ಗ್ವಾಡಿ ಜಿಗದು ಕೆಳಗ ಬೀಳ್ತದ ಅಂತ ಹೆದರಿಕೆ ಇಲ್ಲ. ಫುಲ್ ಸೇಫ್ಟಿ. ಅಲ್ಲೆ ತೊಗೊಂಡು ಹೋಗಿ, ಒಂದು ಮೂಲ್ಯಾಗ ಒಂದಿಷ್ಟು ಹುಲ್ಲು, ನೀರು ಇಟ್ಟು, ಚಿಗರಿ ಅಲ್ಲೆ ಬಿಟ್ಟು ಬಿಟ್ಟಿವಿ. ಆಪರೇಷನ್ ಚಿಗರಿ ಮರಿ, ಮೊದಲನೇ ಭಾಗ ಹೀಂಗ ಮುಗಿದಿತ್ತು. ಚಿಗರಿ ಮರಿ ಅಲ್ಲೆ ಅಟ್ಟದ ಮ್ಯಾಲೆ ಬಿಟ್ಟು ಬರಲಿಕ್ಕೆ ಮನಸ್ಸೇ ಇರಲಿಲ್ಲ. ಆ ತಂಪು ತಂಪು ಜಿಟಿ ಜಿಟಿ ಮಳಿ ಹವಾ, ಹಸಿರು ಹಸಿರಾದ ಮಲ್ಲಣ್ಣನ ಮನಿ ಅಟ್ಟ, ಚಂದ ಚಿಗರಿ ಮರಿ, ಸ್ವರ್ಗಕ್ಕೇ ಗುಂಡು ಹೊಡಿ ಅಂದ ಸರ್ವಜ್ಞ.

ಮಲ್ಲಣ್ಣ ನಮ್ಮ ಏರಿಯಾಕ್ಕ ಬಂದು ಹತ್ತು ವರ್ಷದ ಮ್ಯಾಲೆ ಆಗಿತ್ತು. ನಾ ಅವರ ಮನಿಗೆ ಹೋಗಿದ್ದು ಭಾಳ ಕಮ್ಮಿ. ಅದೂ ಕಳೆದ ಎರಡು ವರ್ಷದಾಗ, ನಮ್ಮ ಮನಿಗೆ ಫೋನ್ ಬಂದ ಮ್ಯಾಲೆ, ಎಲ್ಲೋ ವಾರಕ್ಕ ಒಂದೋ ಎರಡೋ ಸರೆ, ಮಲ್ಲಣ್ಣನಿಗೆ ಫೋನ್ ಬಂದ್ರ ಮೆಸೇಜ್ ಕೊಟ್ಟು ಬರಲಿಕ್ಕೆ ಹೋಗ್ತಿದ್ದೆ ಅಷ್ಟೇ. ಅದೂ ಮೆಸೇಜ್ ಕೊಟ್ಟು ಬಂದು ಬಿಡ್ತಿದ್ದೆ. ಅವರ ಜೋಡಿ ಹರಟಿ ಇತ್ಯಾದಿ ಎಲ್ಲ ನಮ್ಮ ಮನಿಗೆ ಅವರು ಬಂದಾಗ ಮಾತ್ರ. ಅವರು ಬರತಿದ್ದರು. ದಿನಾ ಸಂಜಿ. ಒಂದೋ ಎರಡೋ ಫೋನ್ ಮಾಡಲಿಕ್ಕೆ. ಮಾಡಿ, ದೊಡ್ಡ ದನಿ ಒಳಗ ಹರಟಿ ಹೊಡದು, ನಗಿಸಿ ಹೋಗ್ತಿದ್ದರು.

ಈಗ ಮಲ್ಲಣ್ಣನ ಮನಿಗೆ ಪದೇ ಪದೇ ಹೋಗಬೇಕು ಅಂತ ಭಾಳ ಅನ್ನಿಸಿಲಿಕತ್ತುಬಿಡ್ತು. ಯಾಕಂದ್ರ ಅಲ್ಲೆ ಚಿಗರಿ ಮರಿ ಅದ. ಚಿಗರಿ ಹುಚ್ಚು ಹತ್ತಿ ಬಿಡ್ತು. ನಮ್ಮ ಮನಿಗೆ ಚಿಗರಿ ತರೋಣ ಅಂದ್ರ ನಮ್ಮ ಮನಿಯಾಗ ನಾಯಿ ಅದ. ಬ್ಯಾಡ. ಅದು ಡೇಂಜರ್. ಅದಕ್ಕ ಅಲ್ಲೇ ಮಲ್ಲಣ್ಣನ ಮನಿಗೇ ಹೋಗಿ ಚಿಗರಿ ಜೋಡಿ ಆಡಿ ಬರೋದು ಬೆಟರ್ ಅಂತ ಹೇಳಿ, ಪದೇ ಪದೇ ಮಲ್ಲಣ್ಣನ ಮನಿಗೆ ಹೋಗಲಿಕ್ಕೆ ಶುರು ಮಾಡಿದೆ. ಹೋದ್ರ ಒಂದೆರಡು ತಾಸು ಸೀದಾ ಅಟ್ಟಾ ಹತ್ತಿ ಬಿಡೋದು. ನಜರ್ ಕೆ ಸಾಮನೇ, ಜಿ(ಚಿ)ಗರ್ ಕೆ ಪಾಸ್, ಕೋಯಿ ರೆಹತಾ ಹೈ, ವೋ ಹೊ ಚಿಗರಿ ಚಿಗರಿ!

ಚಿಗರಿ ತಂದ ಮರುದಿವಸ ಮತ್ತ ಮಲ್ಲಣ್ಣನ ಮನಿಗೆ ಹೋದೆ. ಅವರು ಇರಲಿಲ್ಲ. ಅವರೇ ಇರಬೇಕು ಅಂತ ಏನೂ ಇರಲಿಲ್ಲ. ಎದುರಿಗೆ ಅವರ ಮಗ ಸಿದ್ದು ಕಂಡ. ಚಿಗರಿ, ಅಂತ ಅನ್ನೋದ್ರಾಗ ಅವರ ಅಟ್ಟದ ಬಾಗಿಲಿಗೆ ಹಾಕಿದ ಕೀಲಿಕೈ ತಂದು ಕೈಯ್ಯಾಗ ಇಟ್ಟ. ಥ್ಯಾಂಕ್ಸ್ ಅಂತ ಹೇಳಿ ಸೀದಾ ಅಟ್ಟ ಹತ್ತಿ, ಭಾಳ ಜಾಗರೂಕತೆಯಿಂದ ಬಾಗಿಲಾ ಸ್ವಲ್ಪೇ ತೆಗದೆ. ಎಲ್ಲರೆ ಚಿಗರಿ ಜಿಗಿದು ಓಡಿ ಬಿಟ್ಟರ ಅಂತ tension. ಮಲ್ಲಣ್ಣ ಬ್ಯಾರೆ ಮನಿಯಾಗ ಇಲ್ಲ.

ಚಿಗರಿ ಮೂಲ್ಯಾಗ ಕೂತಿತ್ತು. ನನ್ನ ನೋಡಿ ಘಾಬರಿ ಬಿದ್ದು, ಇದ್ದ ಜಾಗಾದಲ್ಲೇ ಚಂಗ ಚಂಗ ಅಂತ ಜಿಗಿದು ಡಾನ್ಸ್ ಮಾಡ್ತು. ಹೆದರಿಕಿ ಅದಕ್ಕ. ಪಾಪ! ಅದು ಯಾವದೋ ಉಪನಿಷತ್ತಿನ್ಯಾಗ ಹೇಳಿದಂಗ, ಜಿಗಿದು ಜಿಗಿದು ಸುಸ್ತಾಗಿ ಅಲ್ಲೇ ತಳ ಊರಿತು. ಮುಗಿತೇನು ನಿಂದು ಹುಚ್ಚಾಟ? ಅನ್ನೋ ಲುಕ್ ಕೊಟ್ಟೆ. ಪ್ರೀತಿ ಮಾಡಲಿಕ್ಕೆ ಬಂದ್ರ, ತಿನಲಿಕ್ಕೆ ಬಂದೆನೋ ಅನ್ನೋ ಹಾಂಗ ಯಾಕ ಮಾಡ್ತೀ ಮೈ ಡಿಯರ್ ಚಿಗರಿ ಮರಿ? ಅಂತ ಪ್ಯಾರಿ ಪ್ಯಾರಿ ಮಾಡಿಕೋತ್ತ ಹತ್ತಿರ ಹೋದೆ. ಈ ಸರೆ ಬಂದು ಗುದ್ದಿ ಬಿಡ್ತು. ಸಣ್ಣ ಮರಿ ಇತ್ತು ಓಕೆ. ದೊಡ್ಡ ಚಿಗರಿ ಬಂದು ಗುದ್ದಿ ಬಿಟ್ಟರೆ, ಜಗ್ಗೇಶ ಹೇಳಿದಾಂಗ, ಜನರೇಟರ್ ಜಾಮ್ ಆಗೋ ರಿಸ್ಕ್ ಇರ್ತದ.

ಪ್ರೀತಿ ಮಾಡಲಿಕ್ಕೆ ಬಂದ್ರ ಬಂದು ಗುದ್ದತಿ ಏನಲೇ ಚಿಗರಿ ಮಂಗ್ಯಾನಿಕೆ? ಅಂತ ಹೇಳಿ ಹಿಡಕೊಂಡು ಬಿಟ್ಟೆ. ಒಮ್ಮೆ ನಮ್ಮ ಕೈಯಾಗ ಸಿಕ್ಕಿದ ಚಿಗರಿಗೆ ಗೊತ್ತಾತು, ಈ ಹಾಪಾ ಬಿಡೋ ಪೈಕಿ ಅಲ್ಲ ಅಂತ. ಸುಮ್ಮನ ಮಂಗ್ಯಾನ ಮಾರಿ ಮಾಡಿಕೊಂಡು, ಪಿಳಿ ಪಿಳಿ ನೋಡಿಕೋತ್ತ ಕೂತು ಬಿಡ್ತು. ಹಾಕ್ಕೊಂಡು ಮುದ್ಯಾಡಿ ಬಿಟ್ಟೆ. ಏ ಸಾಕ್ ಬಿಡಲೇ, ಅನ್ನೋ ಹಾಂಗ ಚಿಗರಿ ಮಾರಿ ಆ ಕಡೆ ತಿರಗಿಸ್ತು. ಆ ಪರಿ ಪ್ರೀತಿ ಮಾಡಿಸಿಕೊಳ್ಳಲಿಕ್ಕೆ ಅದು ನಾಯಿ ಅಲ್ಲ. ಅಷ್ಟು ಪ್ರೀತಿ ಮಾಡಿಬಿಟ್ಟರೆ ನಾಯಿ ಸಂತೋಷ ತಡಿಲಾಗದೆ ಸತ್ತೇ ಹೋಗ್ತಾವ. ಆದ್ರ ಇದು ಚಿಗರಿ. ಹಾಪ್ ಕಾಡು ಚಿಗರಿ. ಅದನ್ನ ನಾಯಿ ಹಾಂಗ ಪ್ರೀತಿ ಮಾಡಲಿಕ್ಕೆ ಬರೋದಿಲ್ಲ ಅಂತ ಗೊತ್ತಾತು. ಅದಕ್ಕೆ ಅದನ್ನ ಬಿಟ್ಟೆ. ಚಿಗರಿ ಚಂಗ ಅಂತ ಹಾರಿ ತನ್ನ ಮೂಲಿಗೆ ಹೋಗಿ ಕೂತುಬಿಡ್ತು. ಗಟ ಗಟ ಅಂತ ನೀರು ಕುಡೀತು. ಅಬ್ಬಾ! ಈ ಹುಚ್ಚ ಮನುಷ್ಯಾನಿಂದ ಬಿಡುಗಡೆ ಆತು ಅನ್ನೋ ರೀತಿಯಲ್ಲಿ ನೀರು ಕುಡೀತು. ನಾ ಮತ್ತ ಅದನ್ನ ಹಿಡಿಲಿಕ್ಕೆ ಹೋಗಲಿಲ್ಲ. ಸುಮ್ಮನೆ ನೋಡಿಕೋತ್ತ ನಿಂತೆ. ಅಷ್ಟರಾಗ ಯಾರೋ ಬಾಗಿಲಾ ಬಡಿದರು. ಏ ಹೀರೋ! ಏನು ಮಾಡಾಕತ್ತಿಯೋ? ಚಿಗರಿ ಹುಚ್ಚು ಮಸ್ತ ಹಿಡಿದಂಗೈತಿ ನಿನಗ, ಅಂತ ಅನ್ಕೋತ್ತ ಮಲ್ಲಣ್ಣ ಬಂದರು. ಎಲ್ಲಾ ನಿಮ್ಮ ಕೃಪೆ, ಆಶೀರ್ವಾದ ಅನ್ನೋ ರೀತಿಯಲ್ಲಿ ತಲಿ ಬಗ್ಗಿಸಿ ಸಲಾಮ್ ಹೊಡದೆ. ಅವರು ಚಿಗರಿ ಹತ್ತಿರ ಹೋದ್ರ, ಮೊದಲು ಆವಾ ಒಬ್ಬನೇ ಹಾಪ ಇದ್ದ. ಈಗ ಇಬ್ಬರು ಹಾಪರು. ಎಲ್ಲಿಂದ ಬಂದಾರಪಾ ಈ ಮಂದಿ? ಜೀವಾ ತಿನ್ನಲಿಕ್ಕೆ ಅನ್ನೋ ಹಾಂಗ ಚಿಗರಿ ಮತ್ತ ಎದ್ದು ತನ್ನ ಜಿಗಿದಾಟ ಶುರು ಮಾಡೇ ಬಿಡ್ತು. ಪಾಪ ಅದು ಇನ್ನೂ ಮಂದಿಗೆ ಹೊಂದಿಕೊಂಡಿರಲಿಲ್ಲ. ಪಾಪ ಚಿಗರಿ!

ದಿನಾ ಒಂದು ಎರಡು ತಾಸು ಮಲ್ಲಣ್ಣನ ಅಟ್ಟದ ಮ್ಯಾಲೆ ಚಿಗರಿ ಜೋಡಿ ಪರ್ಸನಲ್ ಟೈಮ್ ಈಗ. ಏನು ಮಲ್ಲಣ್ಣನ ಮನಿಗೆ ಜೋರ್ ಹೊಂಟೀ? ಅದೂ ಅಷ್ಟೊತ್ತು? ಅಲ್ಲೇ ಇದ್ದು ಬಿಡು, ಅಂತ ಅಮ್ಮ ಬೈದರು. ಯಾರ ಮನಿಗೂ ಹೋಗು ಅಂದರೂ ಹೋಗದ ನಾವು ಇದ್ದಕಿದ್ದಂತೆ ಮಲ್ಲಣ್ಣನ ಮನಿಯಾಗ ಅಷ್ಟೊತ್ತು ಇರೋದು ನೋಡಿ ಕೇಳಿದ್ದು ಸಹಜ ಇತ್ತು ಬಿಡ್ರೀ. ಏ! ನೀ ಸುಮ್ಮನಿರು. ಚಿಗರಿ ಅದ ಅಂತ ಹೋಗ್ತೇನಿ,ಅಂತ ಹೇಳಿ ಅವರ ಬಾಯಿ ಮುಚ್ಚಿಸಿ ಪ್ರತಿದಿನ ಮುಂಜಾನೆ ಮಧ್ಯಾನ ಮಲ್ಲಣ್ಣನ ಮನಿಗೆ ಚಿಗರಿ ಜೋಡಿ ಪ್ಯಾರ ಮೊಹಬ್ಬತ್ ಮಾಡಲಿಕ್ಕೆ ಹೋಗಿದ್ದೇ ಹೋಗಿದ್ದು. ಅದೂ ಇನ್ನು ಎರಡೇ ವಾರದಾಗ ಧಾರವಾಡ ಬಿಟ್ಟು ಪಿಲಾನಿಗೆ ಹೋಗೋ ಟೈಮ್ ಬ್ಯಾರೆ ಬಂದು ಬಿಡ್ತದ. ನಂತರ ಬರೋದು ನಾಕು ತಿಂಗಳ ಆದ ಮ್ಯಾಲೇ. ಹೋಗೋದ್ರಾಗ ಎಷ್ಟು ಆಗ್ತಿದ ಅಷ್ಟು ಚಿಗರಿ ಜೋಡಿ ವೇಳೆ ಕಳಿದು ಬಿಡಬೇಕು ಅಂತ ನಮ್ಮ ಇರಾದಾ.

ಹೀಂಗ ಚಿಗರಿ ಜೋಡಿ ವೇಳ್ಯಾ ಕಳಿಯೋದ್ರಾಗ ಎರಡು ವಾರ ಮುಗಿದು ಬಿಡ್ತು. ಆಗಸ್ಟ್ ಒಂದೋ ಎರಡೋ ತಾರೀಕಿಗೆ ಪಿಲಾನಿಗೆ ಹೋಗೋ ಟೈಮ್ ಬಂದು ಬಿಡ್ತು. ಮನಿ ಬಿಟ್ಟು ಹೋಗಲಿಕ್ಕೆ ಏನೂ ಬೇಜಾರ ಇರಲಿಲ್ಲ ಬಿಡ್ರೀ. ಆ ಪರಿ ಮನಿಗೆ, ಮನಿ ಮಂದಿಗೆ ಗೂಟಾ ಹೊಡಕೊಂಡು ಕೂತವರು ನಾವು ಅಲ್ಲೇ ಅಲ್ಲ. ಮತ್ತ ಯಾರೂ ಹೋಗು ಅಂತ ಹೇಳಿರಲಿಲ್ಲ. ಎಲ್ಲಾ ನಮ್ಮದೇ ನಿರ್ಧಾರ. ಆದ್ರ ಒಂದಕ್ಕೆ ಮಾತ್ರ prepare ಆಗಿರಲಿಲ್ಲ. ಈ ಚಿಗರಿ ಮರಿ ನಮ್ಮ ಲೈಫ್ ಒಳಗ ಬಂದು ಭಾಳ ಕಾಡಿ ಬಿಡ್ತು. ಅದನ್ನ ಬಿಟ್ಟು ಹೋಗಲಿಕ್ಕೆ ಮಾತ್ರ ಭಾಳ ಕೆಟ್ಟ ಅನ್ನಿಸ್ತು. ಧಾರವಾಡ ಬಿಟ್ಟು ಹೋಗಬೇಕಾದ್ರ ಮಿಸ್ ಮಾಡಿಕೊಂಡಿದ್ದು ಏನರೆ ಇದ್ದರ ಒಂದು ಆ ಚಿಗರಿ ಮರಿ, ಇನ್ನೊಂದು ನಮ್ಮ ಭೀಮ್ಯಾನ ಚುಟ್ಟಾ ಅಂಗಡಿ. ಅವೆರೆಡು ಭಾಳ ಮಿಸ್ ಆದವು. ಏನು ಮಾಡಲಿಕ್ಕೆ ಬರ್ತದ?

ಧಾರವಾಡ ಬಿಡೋ ದಿವಸ ಸಹಿತ ಒಂದೆರಡು ತಾಸು ಚಿಗರಿ ಪ್ರೀತಿ ಮಾಡಿ ಬಂದಿದ್ದೆ. ಈಗ ಸುಮಾರು ಹೊಂದಿಕೊಂಡಿತ್ತು ಚಿಗರಿ. ಮೊದಲಿನ ಗತೆ ಹುಚ್ಚು ಬಿದ್ದು ಜಿಗಿದಾಟ ಮಾಡ್ತಿರಲಿಲ್ಲ. ಯಾರೋ ಹುಚ್ಚ ಬರ್ತಾನ. ಬಂದು ಉಸಿರುಗಟ್ಟೋ ಹಾಂಗ ಅಪ್ಪಿ, ಮುದ್ದಾಡಿ, ತ್ರಾಸು ಕೊಟ್ಟು ಹೋಗ್ತಾನ. ಏನು ಕಾಡ್ತಾನಪಾ ಇವಾ, ಅಂತ ಆ ಚಿಗರಿ ಪಾಪ ನಮ್ಮ ಜೋಡಿ ಹೊಂದಿಕೊಂಡು ಹೊಂಟಿತ್ತು. ಅಷ್ಟೊತ್ತಿಗೆ ನಮಗೂ ಸಹಿತ ಚಿಗರಿಗೆ ನಾಯಿ ಗತೆ physical ಟಚ್ ಅಷ್ಟು ಸೇರೋದಿಲ್ಲ, ದೂರದಿಂದ ನಮಸ್ಕಾರ ನಮಸ್ಕಾರ ಅಂದ್ರೇ ಅದಕ್ಕ ಸೇರ್ತದ ಅಂತ ಹೇಳಿ ಬರೆ ದೂರಿಂದ ನೋಡಿ ಬರ್ತಿದ್ದೆ. ಆದ್ರ ಅದು ಎಷ್ಟು ಚಂದ ಇತ್ತು ಅಂದ್ರ ನೋಡಿದಾಗೊಮ್ಮೆ ಅದನ್ನ ಅಪ್ಪಿ, ಪಚ್ ಪಚ್ ಅಂತ ಒಂದೆರೆಡು ಪಪ್ಪಿ ಕೊಡದೇ ಬರಲಿಕ್ಕೆ ಮನಸ್ಸೇ ಬರ್ತಿರಲಿಲ್ಲ.

ಇಲ್ಲದ ಮನಸ್ಸಿಂದ ಧಾರವಾಡ ಬಿಟ್ಟು ಹೋಗಬೇಕಾತು. ಇರಲಿ ಮುಂದಿನ ಸರೆ ಸೆಮೆಸ್ಟರ್ ರಜಾ ಒಳಗ ಬಂದಾಗ ಚಿಗರಿ ಕರಕೊಂಡು ಎಲ್ಲರೆ ಹಳ್ಳಿಗೆ ಹೋಗಿ ಬಿಡೋಣ. ಆರಾಮ ಇದ್ದು ಬರೋಣ ಅಂತ ನಮಗೆ ನಾವೇ ಹೇಳಿಕೊಂಡು ಪಿಲಾನಿಗೆ ಹೋಗಿ ಬಿಟ್ಟೆ. good bye ಚಿಗರಿ ಮರಿ!

ಪಿಲಾನಿಗೆ ಹೋಗಿ, ಸೆಟಲ್ ಆಗಿ, ವಾರಕ್ಕೊಂದು ಪೋಸ್ಟ್ ಕಾರ್ಡ್ ಬರಿಯೋ ಪದ್ಧತಿ ಹಾಕಿಕೊಂಡೆ. ಎಲ್ಲ ಹಾಸ್ಟೆಲ್ ಹುಡುಗರ ಪದ್ಧತಿ ಅದು. ನಾನು ಕ್ಷೇಮ. ನೀವು ಕ್ಷೇಮ. ಅಷ್ಟೇ. ಆದ್ರ ಈಗ ಚಿಗರಿ ನೆನಪು ಭಾಳ ಆಗ್ತಿತ್ತು. ಹಾಂಗಾಗಿ ಪತ್ರದಾಗ ಮನಿ ಮಂದಿಗೆ ಹ್ಯಾಂಗಿದ್ದೀರಿ ಅಂತ ಕೇಳೋ ಮೊದಲೇ ಮಲ್ಲಣ್ಣನ ಚಿಗರಿ ಹ್ಯಾಂಗ ಅದ ಅಂತ ಕೇಳೋದು ರೂಢಿ ಆತು. ಆದ್ರ ಅದನ್ನ ಭಾಳ ದಿನ ಕೇಳೋ ಪ್ರಸಂಗ ಬರಲೇ ಇಲ್ಲ.

ನನಗ ನೆನಪು ಇರೋ ಮಟ್ಟಿಗೆ, ಧಾರವಾಡದಿಂದ ಬಂದ ಮೊದಲನೇ ಪತ್ರದೊಳಗೇ ತಾಯಿಯವರು ಬರೆದಿದ್ದರು. ಮಲ್ಲಣ್ಣನ ಚಿಗರಿ ಮರಿ ಸತ್ತು ಹೋತು ಅಂತ. ದೊಡ್ಡ ಶಾಕ್! ನಂಬಲಿಕ್ಕೆ ಆಗಲಿಲ್ಲ. ಒಂದೇ ತಿಂಗಳದಾಗ ಸತ್ತು ಹೋತಾ? ದೇವರೇ ನೀ ಎಷ್ಟು ಕ್ರೂರಿ ಮಾರಾಯಾ? ಅಂತ ಅಂದುಕೊಂಡೆ. ಪಾಪ ಆ ಚಿಗರಿಗೆ ಏನೋ intestinal infection ಆಗಿ, ಸಿಕ್ಕಾಪಟ್ಟೆ dehydrate ಆಗಿ, veterinary ಡಾಕ್ಟರ treatment ಏನೂ ಫಲ ಕೊಡದೇ, ನಮ್ಮ ಪ್ರೀತಿ ಚಿಗರಿ ಮರಿ ಸತ್ತು ಹೋಗಿತ್ತು. ಭಾಳ ಅಂದ್ರ ಭಾಳ ಸಂಕಟ ಆತು. ಆ ಮ್ಯಾಲೆ ಆ ತರಹದ ಸಂಕಟ ಆಗಿಲ್ಲ. ಆಗೋದು ಮಾತ್ರ ಬ್ಯಾಡ. ಆ ಪರಿ attachment ಬಂದು ಬಿಟ್ಟಿತ್ತು ಆ ಚಿಗರಿ ಮರಿ ಮ್ಯಾಲೆ. ಅದೂ ಕೇವಲ ಎರಡೇ ವಾರದಲ್ಲಿ. ಎರಡೇ ವಾರದಲ್ಲಿ ಕಳೆದ ಕೆಲವೇ ಘಂಟೆಗಳಲ್ಲಿ ಆ ರೀತಿಯ ಗಾಢ ಅನುಬಂಧ ಆ ಚಿಗರಿ ಮರಿ ಜೋಡಿ. ಯಾವ ಜನ್ಮದಾಗ ನಮ್ಮ ಆಪ್ತ ಮಿತ್ರ ಆಗಿತ್ತೋ ಏನೋ?

ಮಲ್ಲಣ್ಣನಿಗೆ ಹಾಕ್ಕೊಂಡು ಬೈಯ್ಯಿ. ಚಿಗರಿ ಮರಿ ಸರಿ ನೋಡಿಕೊಳ್ಳಲಿಲ್ಲ ಅವರು. ನಾ ಬಿಟ್ಟು ಬಂದಾಗ ಎಷ್ಟು ಮಸ್ತ ಇತ್ತು. ಅದೆಂಗ ಇದ್ದಕ್ಕಿದ್ದಂಗ ಸತ್ತು ಹೋತು? ಅಂತ ಮುಂದಿನ ಪತ್ರದಲ್ಲಿ ತಾಯಿಯವರಿಗೆ ಬರೆದಿದ್ದೆ. ಮಲ್ಲಣ್ಣನಿಗೆ ಪ್ರೀತಿಯಿಂದ ಬೈದು ಬಾ ಅನ್ನೋದರ ಹಿಂದೆ ಇದ್ದಿದ್ದು ಒಂದು ತರಹದ ವಿಷಾದ, ಸಂಕಟ ಮತ್ತು frustration ಮಾತ್ರ. ಏನರೆ ಬೇಕಾಗಿದ್ದು ಕುಲಗೆಟ್ಟು ಹೋದರೆ ಹತ್ತಿರದ ಆಪ್ತರಿಗೆ ಒಂದು ರೀತಿಯೊಳಗ ಬೈತೇವಿ ನೋಡ್ರೀ, ಆ ತರಹದ ಫೀಲಿಂಗ್. ಇಲ್ಲಂದ್ರ ಪ್ರೀತಿ ಮಲ್ಲಣ್ಣನಿಗೆ ಯಾಕ ಬೈಯ್ಯೋಣ?

ತಾಯಿಯವರು ಮಲ್ಲಣ್ಣನಿಗೆ, ನೋಡ್ರೀ ನಿಮ್ಮ ಹೀರೋ ಏನಂತ ಬರದಾನ ಅಂತ. ನೀವು ಚಿಗರಿ ಮರಿ ಸರಿ ಮಾಡಿ ನೋಡಿಕೊಳ್ಳಲಿಲ್ಲ ಅಂತ. ಅದಕ್ಕ ನಾನು ನಿಮಗ ಬೈಬೇಕಂತ. ಬೈಲೇನು ನಿಮಗ? ಹಾಂ? ಅಂತ ತಾಯಿಯವರು ನಗುತ್ತಲೇ ಕೇಳಿದ್ದಕ್ಕೆ ಮಲ್ಲಣ್ಣ ಏನು ಅನ್ನಬೇಕು? ಆಕ್ಕಾರ, ನನಗೇನು ಬೈತೀರೀ? ಆ ಹೀರೋಗೇ ಹಾಕ್ಕೊಂಡು ಬೈರೀ. ಆ ಚಿಗರಿ ಮರಿ ತಂದಾಗಿಂದ ಅದರ ಜೋಡಿ ಹೆಚ್ಚಿಗಿ ಹೊತ್ತು ಇದ್ದವರು ಯಾರು? ಅವನೇ. ಅದನ್ನ ಆ ಪರಿ ಮುದ್ದು ಮಾಡಿ, ಒಮ್ಮಲೆ ಬಿಟ್ಟು ಹೋಗಿ ಬಿಟ್ಟ. ಅದಕ್ಕ ಆ ಚಿಗರಿ ಮನಸ್ಸಿಗೆ ಹಚ್ಚಿಕೊಂಡು, ಮಾನಸಿಕ್ ಆಗಿ, ಬ್ಯಾನಿ ತಂದುಕೊಂಡು ಸತ್ತು ಹೋತು. ಯಾಕ ಚಿಗರಿ ಬಿಟ್ಟು ಅಷ್ಟು ದೂರ ಹೋಗಿ ಕುಂತಾನ? ಅದನ್ನ ಕೇಳ್ರೀ. ಕೇಳಿ ಅವಂಗ ಬೈರೀ. ಒಳ್ಳೆ ಹೀರೋ. ಒಳ್ಳೆ ಹೀರೋನ ಅವ್ವ ನೀವು, ಅಂತ ದೊಡ್ಡ ದನಿಯಲ್ಲಿ ಆವಾಜ್ ಹಾಕಿ, ಗಲ ಗಲ ನಕ್ಕು ಹೋಗಿದ್ದರು ಮಲ್ಲಣ್ಣ. ಅದನ್ನ ತಾಯಿಯವರು ಮುಂದಿಂದ ಪತ್ರದಲ್ಲಿ ಯಥಾವತ್ತಾಗಿ ಬರೆದು, ಹೀಗೂ ಇರಬಹುದಾ? ಅಂತ ಅನ್ನಿಸಿತ್ತು. ನಮ್ಮನ್ನು ಅಷ್ಟೊಂದು ಮಿಸ್ ಮಾಡಿಕೊಂಡು ನಮ್ಮ ಪ್ರೀತಿಯ ಚಿಗರೆ ಮರಿ ಸತ್ತು ಹೋಯಿತಾ? ಛೆ! ಇರಲಿಕಿಲ್ಲ. ಏನೇ ಇರಲಿ, ಭಾಳ ದೊಡ್ಡ ಲಾಸ್ ಆಗಿದ್ದು ಮಾತ್ರ ಹೌದು. ಮುಂದೆ ಆರೇ ತಿಂಗಳಲ್ಲಿ ಹತ್ತು ವರ್ಷದಿಂದ ಇದ್ದ ಸಾಕಿದ ನಾಯಿ ಸಹಿತ ಸತ್ತು ಹೋಯಿತು. ಸುಮಾರು ಅದೇ ರೀತಿಯ intestinal infection ಆಗಿ. ಚಿಗರೆ ಸಾವಿನಿಂದ ಒಂದು ತರಹದ numbness ಬಂದು ಬಿಟ್ಟಿತ್ತಾ? ಗೊತ್ತಿಲ್ಲ. ಯಾಕೋ ಏನೋ ಮುದಿಯಾದ ನಾಯಿ ಸತ್ತು ಹೋಯಿತು ಅಂತ ತಿಳಿದಾಗ, ಒಂದು ಕ್ಷಣ ಪಾಪ ಅನ್ನಿಸಿ ಅದು ಅಷ್ಟಕ್ಕೇ ಮುಗಿದುಹೋಯಿತು. ಆದರೆ ಚಿಗರೆ ಮರಿ ಸತ್ತ ದುಃಖ? ಅದು ನಿರಂತರ.

ಚಿಗರಿ ಶೋಕಂ ನಿರಂತರಂ. ಪುತ್ರ ಶೋಕಂ ನಿರಂತರಂ ಅಂದ ಹಾಗೆ.

ಆ ಚಿಗರಿ ಮರಿಯೊಂದಿಗೆ ಇದ್ದ ಒಂದು ಫೋಟೋ ಸಹಿತ ಇಲ್ಲ. ಅದೇ ದೊಡ್ಡ ಆಶ್ಚರ್ಯ. ಯಾಕೆಂದ್ರೆ ಮಲ್ಲಣ್ಣನ ಹಾಬಿ ಅಂದ್ರೆ ಫೋಟೋ ತೆಗೆಯೋದು. ಅವರನ್ನ ಮೊದಲು ಸಲ ನೋಡಿದ್ದೇ ಕೊರಳಲ್ಲಿ ಕ್ಯಾಮೆರಾ ಹಾಕಿಕೊಂಡ ಅವತಾರದಲ್ಲಿ. ಕಂಡಾಗೊಮ್ಮೆ, ಏ ಹೀರೋ! ನಿಂದ್ರೋ, ಒಂದು ಫೋಟೋ ಹೊಡಿತೀನಿ, ಅಂತ ಹೇಳಿ, ಎಂತಾ ಕೆಟ್ಟ ರೂಪದಲ್ಲಿ ಇದ್ದರೂ ಒಂದು ಫೋಟೋ ಹೊಡೆದು, ಅದನ್ನ develop ಮಾಡಿದ ಮ್ಯಾಲೆ ಮನಿಗೆ ಬಂದು ಒಂದು ಕಾಪಿ ಕೊಟ್ಟು ಹೋದವರು ಮಲ್ಲಣ್ಣ. ಅಂತವರು ಸಹಿತ ಫೋಟೋ ತೆಗಿಲಿಲ್ಲ ಅನ್ನೋದೇ ಆಶ್ಚರ್ಯ. ಮತ್ತ ಆವಾಗ ನನಗೇ ಸುಮಾರು ಫೋಟೋ ತೆಗೆಯೋ ಹುಚ್ಚಿತ್ತು. ಅಮೇರಿಕಾದಿಂದ ಅಣ್ಣ ತಂದು ಕೊಟ್ಟಿದ್ದ  ಒಳ್ಳೆ Nikon ಕ್ಯಾಮೆರಾ ಇತ್ತು. ಸುಮಾರು ಫೋಟೋ ಅಲ್ಲಿ ಇಲ್ಲಿ ತೆಗೆದಿದ್ದೆ. ಯಾಕೋ ಏನೋ ಚಿಗರಿ ಜೋಡಿ ಮಾತ್ರ ಫೋಟೋ ತೆಗಿಸಿಕೊಳ್ಳಲೇ ಇಲ್ಲ. ಯಾವದೇ ಫೋಟೋ ಇಲ್ಲ ಅಂತ ಇನ್ನೂ ತನಕಾ ಅನ್ನಿಸಿಲ್ಲ. ಕೆಲವೊಂದು  ಬಹಳ ಬೇಕಾಗಿದ್ದ ಫೋಟೋ ಕಳೆದು ಹೋದಾಗೂ ಇಷ್ಟು ಬೇಸರವಾಗಿಲ್ಲ. ಆದ್ರೆ ನಮ್ಮ ಪ್ರೀತಿ ಚಿಗರಿ ಮರಿ ಜೋಡಿ ಇದ್ದ ಒಂದೇ ಒಂದು ಫೋಟೋ ಇಲ್ಲ ಅನ್ನೋದು ಮಾತ್ರ ಆಗಾಗ ಕೊರೆಯುತ್ತಲೇ ಇರುತ್ತದೆ. ಏನು ಮಾಡೋದು? ಮನದಲ್ಲಿ ಇದೆ. ಅಷ್ಟೇ ಸಾಕು.

ಇಂತದ್ದೆಲ್ಲಾ ಹುಚ್ಚಾಟ ಮಾಡಲು ಅನುವು ಮಾಡಿಕೊಟ್ಟಿದ್ದ ಸವದತ್ತಿ ಮಲ್ಲಣ್ಣನಿಗೆ ಸಹಿತ ಅರವತ್ತರ ಮೇಲಾಗಿ ಹೋಗಿದೆ. ಹಾಗಂತ ಹುಚ್ಚಾಟಗಳು, ವಿಚಿತ್ರ ಪ್ರಯೋಗಗಳು ಮಾತ್ರ ಕಮ್ಮಿ ಆಗಿಲ್ಲ. ಈಗಿತ್ತಲಾಗೆ ಏನೋ ಕಿಡ್ನಿ ಬ್ಯಾನಿ ಅಂತ ಹಾಸಿಗೆ ಹಿಡಿದು ಮಲಗಿಬಿಟ್ಟಿದ್ದಾರೆ ಮಲ್ಲಣ್ಣ. ಅವರು ಬೇಗ ಚೇತರಿಸಿಕೊಳ್ಳಲಿ. ಮತ್ತೆ ಹೊಸ ಹುಚ್ಚಾಟಗಳಿಗೆ ತೆರೆದುಕೊಳ್ಳಲಿ ಅಂತನೇ ನಮ್ಮ ಆಶಯ. ನೀವೂ ಸಹಿತ ಮಲ್ಲಣ್ಣನನ್ನು ಬಲ್ಲವರಾದರೆ ಒಂದು ಪ್ರಾರ್ಥನೆ ಅವರ ಹೆಸರಲ್ಲಿ ಮಾಡಿ ಬಿಡಿ.

(30 December 2014: ಮಲ್ಲಣ್ಣ ನಿಧನರಾದರು ಅಂತ ತಿಳಿಸಲು ತುಂಬಾ ವಿಷಾದವೆನಿಸುತ್ತದೆ. RIP, ಮಲ್ಲಣ್ಣ)

Tuesday, February 04, 2014

ದುಬೈ ಅನಸಕ್ಕನ ಜೋಡಿ ಆಖರೀ ಪತ್ರ ಮಿತ್ರತ್ವ (ಪತ್ರ ಮಿತ್ರರ ಪ್ರಪಂಚದಲ್ಲಿ. ಭಾಗ - ೪)

(ಮೊದಲಿನ ಭಾಗ - , , ಇಲ್ಲಿವೆ. ಓದಿ)

ಮುಂದೆ ಪತ್ರ ಮಿತ್ರ (ಮಿತ್ರೆ) ಆಗಿದ್ದು ಬರೋಬ್ಬರಿ ಏಳು ವರ್ಷಗಳ ನಂತರ. ಅಂದರೆ ೧೯೯೭ ನಲ್ಲಿ. ಅದೂ ಅಮೇರಿಕಾಕ್ಕೆ ಬಂದ ಮೇಲೆ. ಆವಾಗ ಪತ್ರ ಮಿತ್ರತ್ವದ ಹೊಸ ಆಯಾಮವೊಂದು ಹೊರಹೊಮ್ಮುತ್ತಿತ್ತು. ಶುದ್ಧ ಅಂಚೆಯಲ್ಲಿ ಪತ್ರ ಬರೆಯುವದು ಹೋಗಿ ಮಿಂಚಂಚೆ (e-mail) ಮೂಲಕ ಪತ್ರ ವ್ಯವಹಾರ ಮಾಡಿ ಪತ್ರ ಮಿತ್ರತ್ವ ಮಾಡುವದು.

ಅಮೇರಿಕಾಕ್ಕೆ ಬಂದಿದ್ದು ೧೯೯೭ ರ ಜುಲೈ ತಿಂಗಳಲ್ಲಿ. ಮೊದಲ ಪ್ರಾಜೆಕ್ಟ್ ಸಿಕ್ಕಿದ್ದು ಬಾಸ್ಟನ್ ನಗರದ ಆಸು ಪಾಸು. ಆತಪಾ ನಡಿ ಅಂತ ಟೆಂಪೊರರಿ ಆಗಿ ಎರಡು ವಾರ ಉಳಿದಿದ್ದ ವಾಷಿಂಗ್ಟನ್ ಡಿ.ಸಿ ನಗರ ಬಿಟ್ಟು ಬಾಸ್ಟನ್ನಿಗೆ ಬಂದರೆ ಕೆಟ್ಟ ಗವ್ವ್ ಅನ್ನೋ ಬೋರ್ (boredom). ನಮ್ಮ ಕಡೆ ಕಾರಿಲ್ಲ. ಕಾರಿಲ್ಲ ಅಂದ್ರ ಅಮೇರಿಕಾದಲ್ಲಿ ಕಾಲೇ ಇಲ್ಲ. ಲೈಫೇ ಇಲ್ಲ. ನಾಸ್ತಿ ಲೈಫ್. ಒಂದು apartment ಭಾಡಿಗಿ ಹಿಡಿದು, ಮನಿ ಅಂತ ಮಾಡಿದರ ಮನಿಯೊಳಗ ಟೀವಿ ಇಲ್ಲವೇ ಇಲ್ಲ. ಯಾಕಿಲ್ಲ ಅಂದ್ರ ರೊಕ್ಕನೇ ಇಲ್ಲ. ಇದ್ದ ಬಿದ್ದ ಇಂಡಿಯಾದಿಂದ ತಂದಿದ್ದ ರೊಕ್ಕ, ಪಗಾರ ಅಡ್ವಾನ್ಸ್ ಇತ್ಯಾದಿ ಮನಿ ಡೆಪಾಸಿಟ್ ಅದಕ್ಕ ಇದಕ್ಕ ಖರ್ಚ ಆಗಿ, ರೊಕ್ಕಕ್ಕ ಹಪಾಹಪಿ. ಪುಣ್ಯಕ್ಕೆ ತಿಂಗಳಿಗೆ ಎರಡು ಸರೆ ಪಗಾರ ಇಲ್ಲೆ. ಇನ್ನು ಪಗಾರ ಬಂದು, ಪ್ರತಿ ಪಗಾರ ಒಳಗ ಉಳಿದ ರೊಕ್ಕದಾಗ ಟೀವಿ, ಕಾರು, ಮತ್ತೊಂದು, ಇತ್ಯಾದಿ ತೊಗೋಬೇಕು. ಮೊದಲು ಡ್ರೈವಿಂಗ್ ಲೈಸೆನ್ಸ್ ಮಾಡಿಸಬೇಕು. ಅದಕ್ಕ ಮೊದಲು ಡ್ರೈವಿಂಗ್ ಕ್ಲಾಸಿಗೆ ಹೋಗಿ ಡ್ರೈವಿಂಗ್ ಕಲಿಬೇಕು. ಇದೆಲ್ಲದರ ನಡುವೆ ಕೆಲಸಾ ಬ್ಯಾರೆ ಮಾಡಬೇಕು. Welcome to the land of opportunities. Welcome to the land of milk and honey. ಅಲ್ಲಿ ತನಕ ಲೈಫ್ ಒಳಗ ಎಲ್ಲ ಆರಾಮ ಸಿಕ್ಕವರಿಗೆ ಮೊದಲು ಸಲ ಕಷ್ಟ ಪಡಬೇಕು ಅಂದ್ರ ಕೆಟ್ಟ ಬೋರ್! ಮತ್ತ ಬೋರ್!

ಹೀಂಗಾಗಿ ಮನಿಗೆ ಬಂದ್ರ ಕೆಟ್ಟ ಬೋರ್. ಒಂದು ವಾಕ್ಮನ್ ಇತ್ತು ಮತ್ತು ತಂದಿದ್ದ ಒಂದಿಪ್ಪತ್ತು ಕ್ಯಾಸೆಟ್ಟು ಇದ್ದವು. ಅವನ್ನೇ ಕೇಳಿ ಕೇಳಿ ಬೋರ್. ಜೊತೆಗೆ ತಂದಂತಹ ಒಂದೆರಡು ಪುಸ್ತಕ ಇತ್ತು. ಅವನ್ನೇ ಓದಿ ಓದಿ ಬಾಯಿಪಾಠ ಆಗಿಹೋತು. ರೂಂ ಮೇಟ್ ಆಗೋ ಬೆಂಗಳೂರು ಮಾಣಿಯೊಬ್ಬ, ಮನಿಯೊಳಗ ಸಾಮಾನು ಇಟ್ಟು, ಒಂದು ತಿಂಗಳ ಸೂಟಿ ಮ್ಯಾಲೆ ಇಂಡಿಯಾಕ್ಕೆ ಹೋಗಿಬಿಟ್ಟಿದ್ದ. ಆವಾ ಮತ್ತ ವಾಪಸ್ ಬಂದು ಬ್ಯಾರೆ ಕಡೆ ಓಡವ ಇದ್ದ. ಹಾಂಗಾಗಿ ನಾವೇ ನಾವು. ಕಾರಿಲ್ಲದ ಲೈಫೊಂದು ಲೈಫೇ ಕೃಷ್ಣಾ? ಅಂತ 'ನೀ ಸಿಗದ ಬಾಳೊಂದು ಬಾಳೇ ಕೃಷ್ಣಾ?' ಧಾಟಿಯೊಳಗ ಹಾಡಿಕೋತ್ತ ತಲಿ ಮ್ಯಾಲೆ ಕೈ ಹೊತ್ತುಕೊಂಡು ಕೂಡಬೇಕ? ಇಲ್ಲ. ಏನರೆ ಜುಗಾಡ್ ಮಾಡಬೇಕು ಟೈಮ್ ಪಾಸ್ ಮಾಡಲಿಕ್ಕೆ. ಬೋರ್ವೆಲ್ ಭಾಳ ಹೊಡೆದರ ಎಲ್ಲಾ ಕಡೆ ಬೋರೇ ಬೋರು.

ಆವಾಗ ಇದ್ದ ದೊಡ್ಡ ಆಫೀಸ್ benefit ಅಂದ್ರ ಬಿಟ್ಟಿ high speed ಇಂಟರ್ನೆಟ್. ಮನಿಯೊಳಗ ಕಂಪ್ಯೂಟರ್, ಇಂಟರ್ನೆಟ್ ಇತ್ಯಾದಿ ಅಷ್ಟು ಬಂದಿದ್ದಿಲ್ಲ. ಕಂಪ್ಯೂಟರ್ ಇನ್ನೂ ಭಾಳ ತುಟ್ಟಿನೇ ಇತ್ತು ಆವಾಗ. ಮತ್ತ ನಮ್ಮ priority ಒಳಗ ಕಂಪ್ಯೂಟರ್, ಇಂಟರ್ನೆಟ್ ಎಲ್ಲ ಭಾಳ ಕೆಳಗ ಇದ್ದವು. ಹಾಂಗಾಗಿ ಕೆಲಸ ಇರಲಿ ಬಿಡಲಿ, ಪ್ರತಿ ದಿನ ಮ್ಯಾಕ್ಸಿಮಮ್ ಟೈಮ್ ಆಫೀಸ್ ಒಳಗ ಇರೋದು. ವೀಕ್ ಎಂಡ್ ಸಹಿತ ಆಫೀಸ್ ಗೆ ಹೋಗಿ ಕೂತು ಬಿಡೋದು. ಹ್ಯಾಂಗೂ ಹೋಗೋದು ಬರೋದು ಟ್ಯಾಕ್ಸಿ. ದಿನಕ್ಕ ಅದೊಂದು ಇಪ್ಪತ್ತು ಡಾಲರ್. ವೀಕೆಂಡ್ ಮನಿಯೊಳಗ ಕೂತರೆ ನಲವತ್ತು ಡಾಲರ್ ಉಳಿದೀತು. ಏನು ಮಾಡೋದು? ಡಾಲರ್ ತಿನ್ನಬೇಕ? ಡಾಲರ್ ನೋಟ್ ನಮ್ಮ ತಲಿ ಮ್ಯಾಲೆ ನಾವೇ ಸುರುವಿಕೊಂಡು ಮುಜರಾ ಡಾನ್ಸ್ ಮಾಡಬೇಕ? ಅಂತ ಹೇಳಿ ವೀಕೆಂಡ್ ಸಹಿತ ಆಫೀಸ್ ಗೆ ಹೋಗಿ ಕೂಡೋದು. ಇಂಟರ್ನೆಟ್ ಬ್ರೌಸ್ ಮಾಡಿದ್ದೆ ಮಾಡಿದ್ದು. ಕೇವಲ ಸೇಫ್ ಸೈಟ್ ಮಾತ್ರ. ಆಫೀಸ್ ಕಂಪ್ಯೂಟರ್ ಮ್ಯಾಲೆ ಎಲ್ಲೆಲ್ಲರೆ ಹೋಗಿ, ಸಿಕ್ಕೊಂಡು ಬಿದ್ದು, ನೌಕರಿ ಢಂ ಅಂದ್ರ ಅಂತ ಅದೊಂದು ಚಿಂತಿ. ಹಾಂಗಾಗಿ ಎಲ್ಲ ನ್ಯೂಸ್ ಪೇಪರ್, ಎಲ್ಲ ಮ್ಯಾಗಜಿನ್, ಎಲ್ಲ ಯೂನಿವರ್ಸಿಟಿ ವೆಬ್ ಸೈಟ್, ಎಲ್ಲ ದೊಡ್ಡ ದೊಡ್ಡ ಕಂಪನಿಗಳ ವೆಬ್ ಸೈಟ್, ಇತ್ಯಾದಿ ಇತ್ಯಾದಿ. ಮತ್ತ ಆಫೀಸ್ ಒಳಗ ಚಹಾ, ಕಾಫಿ ಎಲ್ಲ ಫ್ರೀ. ನಾವೇ ಮಾಡಿಕೊಂಡು ಎಷ್ಟು ಬೇಕೋ ಅಷ್ಟು ಕುಡಿಬಹುದು. ಬಾಜೂಕೆ subway sandwich ಅಂಗಡಿ. ಲೈಫ್ ಆರಾಮ. ಒಂದು ರೀತಿಯಲ್ಲಿ.

ಬಿಟ್ಟಿ ಇಂಟರ್ನೆಟ್ ಇದ್ದರೂ ಎಷ್ಟಂತ browse ಮಾಡೋದು? ಏನು ಮಾಡೋದು? ಅಂತ ವಿಚಾರ ಮಾಡಿದಾಗ ಮತ್ತ ನೆನಪಾದದ್ದು ಅದೇ. ಪತ್ರ ಮಿತ್ರರು.

ಆವಾಗ ಇನ್ನೂ ಗೂಗಲ್ ಇರಲಿಲ್ಲ. ಏಳೆಂಟು ಲಡಕಾಸಿ ಸರ್ಚ್ ಇಂಜಿನ್ ಇದ್ದವು. ನಾವು lycos ಅನ್ನೋದನ್ನ ಉಪಯೋಗಿಸುತ್ತಿದ್ದಿವಿ ಅಂತ ನೆನಪು. ಅದರಾಗ pen friend ಅಂತ ಹೇಳಿ ಒಂದು ಸರ್ಚ್ ಕೊಟ್ಟೆ. ವಾಹ್! ಸುಮಾರು ಲಿಂಕಗಳು ಬಂದವು.

pen friendship ಸಹಿತ ಈಗ ಬದಲಾಗಿತ್ತು. ಈಗ cyber pen friendship ಶುರು ಆಗಿತ್ತು. ಕಾಗದದ ಮೇಲೆ ಪತ್ರ ಬರಿಯೋ ಯುಗ ಹೋಗಿ email, chatting ಮೇಲೆ ಪತ್ರ ಮಿತ್ರರು.

ಯಾವದೋ ಒಂದು cyber pen friendship ವೆಬ್ ಸೈಟಿಗೆ ಹೋಗಿ, ರಿಜಿಸ್ಟರ್ ಮಾಡಿ, ಹುಡುಕಿದೆ. ಜಗ್ಗಿ ಮಂದಿದು ವಿವರ ಬಂತು. ಎಲ್ಲಾ ಫ್ರೀ. ಏನೂ ರೊಕಿಲ್ಲ ಪಕ್ಕಿಲ್ಲ. ಆದ್ರ ಎಲ್ಲ ಪತ್ರ ವ್ಯವಹಾರ ಆ website ಮೂಲಕವೇ. ನಿಮ್ಮ email address ಅವರಿಗೆ ತಿಳಿಸಂಗಿಲ್ಲ. ಅವರದ್ದು ನಿಮಗಿಲ್ಲ. ಪತ್ರ ಮಿತ್ರ ಆದ ಮ್ಯಾಲೆ ನೀವು ಏನರೆ ಮಾಡಿಕೊಳ್ಳಿರಿ. ಅಲ್ಲಿ ತನಕ ನಿಮ್ಮ ವಯಕ್ತಿಕ ವಿವರ ಕಾಪಾಡೋದು ಅವರ ಕೆಲಸ.

ಎಲ್ಲಿಂದ ಪತ್ರ ಮಿತ್ರರನ್ನ ಹುಡುಕೋಣ? ಮಾರಿಷಸ್ ಆಗಿತ್ತು. ಅದು ಬ್ಯಾಡ. ದುಬೈದಾಗ ಹುಡುಕಿಬಿಡೋಣ ಅಂತ ಹೇಳಿ ನೋಡಿದಾಗ ಕಂಡಾಕಿ ಆನ್ಸೆಟ್ಟ (Annsette, Anisette) ಅನ್ನಾಕಿ. ಆ website ಪೂರ್ತಿ ಹೆಸರು ಕೊಡ್ತಿದ್ದಿಲ್ಲ. ಫೋಟೋ ಇಲ್ಲ. ಅವೆಲ್ಲ ಆ ಮ್ಯಾಲೆ ಬಂದಿದ್ದು. ಇಕಿ ಮತ್ತೆಲ್ಲರ ದುಬೈದಾಗ ಇರೊ ಅನುಸೂಯಾ ಅನ್ನಾಕಿ ಆನ್ಸೆಟ್ಟ ಅಂತ ಹೆಸರು ಇಟ್ಟುಕೊಂಡು ಬಿಟ್ಟಾಳೋ ಹ್ಯಾಂಗ ಅಂತ ಸಂಶಯ. ಏನರೆ ಇರಲಿ ಅಂತ ಬಿಟ್ಟೆ.

ಎಲ್ಲ ದೇಶ ಬಿಟ್ಟು ದುಬೈದಾಗ ಯಾಕ ಪತ್ರ ಮಿತ್ರಳನ್ನ ಹುಡುಕಿದೆ? ಅಯ್ಯೋ! ಈ ಅಮೇರಿಕಾ ವರ್ಕ್ ಔಟ್ ಆಗಲಿಲ್ಲ ಅಂದ್ರ ಮುಂದ ದುಬೈದಾಗ ನೌಕರಿ ಮಾಡೋಣ ಅಂತ ಒಂದು ಪ್ಲಾನಿತ್ತು. ಅಮೇರಿಕಾಕ್ಕ ಬಂದು ಕೇವಲ ಒಂದು ತಿಂಗಳಾಗಿತ್ತು. ಇಲ್ಲಿ ಆಫೀಸಿನಲ್ಲಿ ಇದ್ದ ದೇಸಿ ಮಂದಿಯ ದೈನೇಸಿ ಮಸಡಿ ನೋಡಿದ್ರ ಎಲ್ಲರೂ ಯಾವಾಗಲೂ ಏನೋ ಒಂದು tension ಒಳಗ ಇದ್ದಂಗ ಕಾಣ್ತಿತ್ತು. ಮಾರಿ ನೋಡಿಯೂ ಮಾತಾಡಿಸದೇ, ಮಾತಾಡಿಸೋದು ದೂರ ಹೋಗ್ಲಿ, ಇಲ್ಲಿ ಮಂದಿ ಗತೆ at least ಹಾಯ್, ಹಲೋ ಸಹಿತ ಇಲ್ಲದೆ ಗಂಟ ಮಾರಿ ಹಾಕಿ welcome(?) ಮಾಡಿದವರು ನಮ್ಮದೇ ದೇಶದ ಮಂದಿ. ಒಬ್ಬವ ಹೊಸಾ ಕಂಪ್ಯೂಟರ್ ಕೂಲಿ ಬಂದಾ ಅಂದ್ರ ಎಲ್ಲೆ ತಮ್ಮ ಅನ್ನಾನೇ ಕದಿಲಿಕ್ಕೆ ಬಂದನೋ ಅನ್ನೋ ರೀತಿಯಲ್ಲಿ ನೋಡೋದು. ಆವಾಗ ಪರಿಸ್ಥಿತಿ ಹಾಂಗೆ ಇತ್ತು. ಆವಾಗ ಅಮೇರಿಕಾದಲ್ಲಿ ನಡೆದಿದ್ದ IT boom ಅನ್ನುವ ಹುಚ್ಚ ಮುಂಡೆ ಮದುವೆಯಲ್ಲಿ ಉಂಡು, ೨೦೦೧ ರಲ್ಲಿ ಡಾಟ್ ಕಾಮ್ ಬಬಲ್ ಎಂಬ ತಿರುಕನ ಕನಸಿನ ಗುಳ್ಳೆ ಒಡೆದು ಬರ್ಸ್ಟ್ ಆಗಿ, ಕಂಪ್ಯೂಟರ್ ಕೂಲಿ ಹೆಸರಲ್ಲಿ ಬಂದಿದ್ದ ಕಾಂಜಿ ಪೀಂಜಿಗಳೆಲ್ಲ ಖಾಲಿ ಆದ ಮ್ಯಾಲೆ, ಅಂತಹ ದೇಸಿಗಳಿಂದ ಮುಕ್ತಿ. ಹೈದರಾಬಾದಿನ ಪಾನ್ ಅಂಗಡಿಯವರೆಲ್ಲ H1-B ವೀಸಾ ಮ್ಯಾಲೆ ಕಂಪ್ಯೂಟರ್ ಕೂಲಿಗಳು ಅಂತ ಹೇಳಿಕೋತ್ತ ಬಂದು, ಎಲ್ಲೆಲ್ಲೊ ಏನೇನೋ ರಾಡಿ ಎಬ್ಬಿಸಿ, ಇಲ್ಲಿ ಮಂದಿ ಎಲ್ಲ ಕಂಪ್ಯೂಟರ್ ಕೂಲಿ ನಾಲಿ ಮಾಡವರನ್ನು ಒಂದು ತರಹ ನೋಡುವ ಹಾಂಗ ಆಗಿತ್ತು. ಮಾತೆತ್ತಿದರೆ ಅಷ್ಟು ರೊಕ್ಕಾ, ಈ ವೀಸಾ, ಆ ಗ್ರೀನಕಾರ್ಡ್, ಆ ಬಾಡಿ ಶಾಪ್ಪರ್, ಈ consultant, ಅದು ಇದು ಅಂತ ಮಾತು. ಇಂತವರ ನಡುವೆ ಈ ದೇಶದಾಗ ಎಷ್ಟು ದಿವಸ ಇರ್ತೇವೋ ಅಂತ ಅನ್ನಿಸಿತ್ತು. ಆ ಮೇಲೆ ಒಳ್ಳೆವರೂ ಭಾಳ ಜನ ಸಿಕ್ಕಿ, ದೇಸಿಗಳ ಬಗ್ಗೆ ನಮ್ಮ stereotyped ಇಮೇಜ್ ತಪ್ಪು ಅಂತ ಗೊತ್ತಾಗಿ, ಎಲ್ಲ workout ಆಗಿದ್ದಕ್ಕೇ, ಹದಿನಾರು ವರ್ಷದಿಂದ ಇಲ್ಲೇ ಗೂಟಾ ಹೊಡಕೊಂಡು ಕೂತಿದ್ದು. ಇಲ್ಲಂದ್ರ ಸೇರದಿದ್ದನ್ನ ಝಾಡಿಸಿ ಒದ್ದು, ಎದ್ದು ಬರೋದು ದೊಡ್ಡ ಮಾತೇ? ಹಾಂಗಾಗಿ ಇಲ್ಲಿಂದ ತಂಬು ಕಿತ್ತಿಕೊಂಡು, ಝೇಂಡಾ ಎತ್ತಿಕೊಂಡು ಹೋಗೋದು ಬಂತು ಅಂದ್ರ ಅಂತ ಹೇಳಿ ದುಬೈ ಪ್ಲಾನ್. ಅದಕ್ಕ ಅಲ್ಲೊಂದು ಪತ್ರ ಮಿತ್ರ ಇದ್ದರ ಚೊಲೊ ಅಂತ ದೂರಾಲೋಚನೆ.

ಅಕಿ ಹೆಸರು ಆನ್ಸೆಟ್ಟ. ನಮ್ಮ ಬಳಗದಾಗ ಒಬ್ಬ ಹಿರಿಯ ಮಹಿಳೆಯ ಹೆಸರು ಅನಸೂಯಾ. ಅವರು ಎಲ್ಲರಿಗೆ ಅನಸಕ್ಕ, ಅನಸತ್ತೆ ಎಲ್ಲ. ಮನಸ್ಸಿನ್ಯಾಗ ಇಕಿಗೆ ದುಬೈ ಅನಸಕ್ಕ, ಅನಸತ್ತೆ ಅಂತ ಜೋಕ್ ಮಾಡಿಕೋತ್ತ ಒಂದು intro ಪತ್ರಾ email ಬರೆದು ಒಗದೆ. ಆಗೇನು ಎಲ್ಲರೂ ಎಲ್ಲಾ ಟೈಮ್ ಇಂಟರ್ನೆಟ್ ಮ್ಯಾಲೆ ಇರ್ತಿರಲಿಲ್ಲ. ಎಲ್ಲೋ ದಿವಸಕ್ಕ ಒಂದು ಬಾರಿಯೋ, ವಾರಕ್ಕ ಎರಡು ಬಾರಿಯೋ, ಕಂಪ್ಯೂಟರ್ ಹಚ್ಚಿ, ಇಂಟರ್ನೆಟ್ ಹತ್ತಿ, ತಮ್ಮ ಈಮೇಲ್ ಆಮೇಲ್ ಎಲ್ಲ ಡೌನ್ಲೋಡ್ ಮಾಡಿಕೊಳ್ಳತಿದ್ದರು ಅಷ್ಟೇ. ಹಾಂಗಾಗಿ ಈ ಅನಸಕ್ಕ ಅನ್ನಾಕಿ ಉತ್ತರ ಬರಲಿಕ್ಕೆ ಟೈಮ್ ಅದ ತೊಗೊ ಅಂತ ಹೇಳಿ, ಸೈಬರ್ ಪತ್ರ ಮಿತ್ರತ್ವದ ಇನ್ನೊಂದು ರೂಪವಾದ ಚಾಟಿಂಗ್ ನೋಡೋಣ ಅಂತ ಹೋದೆ. ಸಿಕ್ಕಾಪಟ್ಟೆ ಚಾಟ್ ರೂಮುಗಳು ಇದ್ದವು ಇಂಟರ್ನೆಟ್ ಮ್ಯಾಲೆ. ಬ್ಯಾರೆ ಬ್ಯಾರೆ ಟಾಪಿಕ್ ಮೇಲೆ ಚಾಟ್ ರೂಂ. ಎಲ್ಲೋ ಒಂದೋ ಎರಡೋ ಚಾಟ್ ರೂಂ ಎಂಟ್ರಿ ಮಾಡಿ ನೋಡಿದೆ. ಎಲ್ಲ ಕಡೆ ಒಂದು already existing cabal ಇತ್ತು. ಮೊದಲಿಂದ ಆ ಚಾಟ್ ರೂಂಗಳಲ್ಲಿ ಹರಟೆ ಮತ್ತೊಂದು ಹೊಡ್ಕೋತ್ತ ಇದ್ದ ಜನ. ಅಂತವರ ಗುಂಪಿನಲ್ಲಿ ಸೇರೋದು ಕಷ್ಟ. ಸೇರಿದರೂ ಗುಂಪಿನಲ್ಲಿ ಗೋವಿಂದನಾಗೋದರಲ್ಲಿ ಸಂಶಯ ಇಲ್ಲ. ಯಾರಿಗೆ ಬೇಕು ಅದು ಅಂತ ಹೇಳಿ ಚಾಟಿಂಗಿಗೆ ಒಂದು ದೊಡ್ಡ ನಮಸ್ಕಾರ ಹಾಕಿದೆ. ಮುಂದೆಂದೂ ಆ ಚಾಟ್ ರೂಂ ಒಳಗ ಕೂತು ಚಾಟ್ ಮಾಡಿದ್ದು ಇಲ್ಲೇ ಇಲ್ಲ. ಅದರ ಇವತ್ತಿನ ರೂಪವಾದ ಫೇಸಬುಕ್ಕಿನ ಕೆಲವು ಗ್ರುಪ್ಪುಗಳಲ್ಲಿ ಹರಟೆ ಹೊಡೆದು ಬಿಟ್ಟಿದ್ದಾಯಿತು.

ದುಬೈ ಅನಸಕ್ಕನ ಉತ್ತರ ಬರಲಿಕ್ಕೆ ಸುಮಾರು ದಿವಸ ಆತು. ಅಲ್ಲಿಯ ತನಕಾ ಇಂಟರ್ನೆಟ್ ಮ್ಯಾಲೆ ಎಲ್ಲಾ ಕಡೆ ಬ್ರೌಸ್ ಮಾಡಿ ಜನರಲ್ ನಾಲೇಜ್ ಭಾಳ ಜಾಸ್ತಿ ಮಾಡಿಕೊಂಡು, ಉಪಯೋಗಿಲ್ಲದ ಎಲ್ಲ ಮಾಹಿತಿ ಎಲ್ಲ ಸಂಗ್ರಹಿಸಿ ಆತು. ಅಷ್ಟರಾಗ ದುಬೈ ಅನಸಕ್ಕ ಪತ್ರ ಬರೆದಳು. ಅಂದ್ರ ಒಂದು ರಿಪ್ಲೈ ಕೊಟ್ಟಳು via ಆ ಪೆನ್ ಫ್ರೆಂಡ್ ವೆಬ್ ಸೈಟ್ ಮೂಲಕ.

ಅಕಿ ಅನಸಕ್ಕನ ನೋಡಿದರ ಅಕಿ ದುಬೈದಾಗ ಹೆಂಗಸೂರ ಹೇರ್ ಕಟಿಂಗ್ ಮಾಡುವ ಹೇರ್ ಡ್ರೆಸ್ಸರ್! ಅದೂ ಮೇರಾ ಭಾರತ ಮಹಾನ್ ದೇಶದ ಕೇರಳದಿಂದ ಹೋದ ಮಲೆಯಾಳಿ ಕ್ರಿಶ್ಚಿಯನ್ ಹುಡುಗಿ. ಹೋಗ್ಗೋ!!! ಬೆಂಗಳೂರಿನ ಇಂದಿರಾ ನಗರದ ಮಲೆಯಾಳಿ ನರಸಮ್ಮಗಳು ನೆನಪಾದರು. ECG ಮಾಡೋವಾಗ ಮಲೆಯಾಳಿಗಳು ಮನೆಹಾಳಿಯರ ತರಹ man handle ಮಾಡಿದ್ದು ನೆನಪಾತು. ಈಗ ದುಬೈ ಮಲೆಯಾಳಿ ಕಟಿಂಗ್ ಕುಂಬಾರಿ ಜೋಡಿ ಪತ್ರ ಮಿತ್ರತ್ವ. ಶಂಭೋ ಶಂಕರ!!! ಏನೇನು ಡಿಸೈನರ್ ಡಿಸೈನರ್ ಪತ್ರ ಮಿತ್ರರನ್ನ ನಮಗ ಗಂಟ ಹಾಕ್ತೀಪಾ ದೇವರಾ! ಹಾಂ? ಸರ್ದಾರ್ಜೀ ಅಲ್ಲದ ಬಳ್ಳಾರಿ ಸಿಂಗಾ, ಅಡ್ರೆಸ್ಸಿಗೇ ಇಲ್ಲದ ರತಿ ಅಗ್ನಿಹೋತ್ರಿ, ಬೋರ್ ಹೊಡೆದ ನರೇಂದ್ರ, ಮಕ್ಕಳ ಕಳ್ಳನ ಲುಕ್ಕಿದ್ದ ಆಸ್ಸಾಮಿನ ಸಪನ್ ಕುಮಾರ, ಕಳೆದು ಹೋದ ಮಾರಿಷಸ್ ಲಲಿತಾ, ಈಗ ಈ ಮಲೆಯಾಳಿ ಹುಡುಗಿ. 'ರಾತ್ರಿ ಮಲಗಿದಾಗ ಒಂದು ಗಂಡಾ, ಬೆಳಿಗ್ಗೆ ಎದ್ದಾಗ ನಾಕು ಗಂಡಾ' ಅನ್ನೋ ಮಲೆಯಾಳಿ ಜೋಕ್ ನೆನಪು ಆತು ಈ ದುಬೈ ಅನಸಕ್ಕ ಸಿಕ್ಕ ಕೂಡಲೇ. ಅದು ಮಲೆಯಾಳಿಗಳು ಕನ್ನಡ ಮಾತಾಡೋ ರೀತಿ. ಗಂಟಾ ಅನ್ನಲಿಕ್ಕೆ ಗಂಡಾ ಅಂದು ಆದ ಆವಾಂತರ.

ಆದರೂ ಇರಲಿ ಅಂತ ಒಂದೆರಡು ಪತ್ರಾ ಬರದೆ ನಮ್ಮ ದುಬೈ ಅನಸಕ್ಕ ಎಂಬ ಮಲೆಯಾಳಿ ಹುಡುಗಿಗೆ. ಏನೋ ಅಷ್ಟೋ ಇಷ್ಟೋ ಮಾಹಿತಿ ಕೊಟ್ಟಳು. ಇಲ್ಲದ ಸಲ್ಲದ ಜೋಕ್ ಎಲ್ಲೋ ಇಂಟರ್ನೆಟ್ ಮ್ಯಾಲಿಂದ ಎತ್ತೆತ್ತಿ ಒಗಿತಿದ್ದಳು. ಅದು ಅಕಿಗೆ ಚಟ. ಅದು ನಮಗ ಬರಂಗಿಲ್ಲೇನು? ಅಂತ ಹೇಳಿ ನಾನೂ ಇಂಟರ್ನೆಟ್ ಮ್ಯಾಲೆ ಸಿಕ್ಕ ಎಲ್ಲಾ ಜೋಕ್ಸ್ wholesale ಒಳಗ ಅಕಿಗೆ ಕಳಸ್ತಿದ್ದೆ. ಆ ಮ್ಯಾಲೆ ನನಗೇ ಬೋರ್ ಬಂತು. ಬರೋದು ಸಹಜ ಇತ್ತು. ಆವಾಗ ಈ 'ಬೋರ್' ಅನ್ನೋದರ ಮೂಲ ನಮ್ಮಲ್ಲೇ ಇರ್ತದ ಅಂತ ಗೊತ್ತು ಇರಲಿಲ್ಲ. ಹಾಂಗಾಗಿ ಎಲ್ಲ ಕಡೆ ಬೋರ್ವೆಲ್ ಹೊಡೆದು, ಹೊಡೆದ ಕಡೆಯೆಲ್ಲ ಬೋರಿನ ಬುಗ್ಗೆ ಉಕ್ಕಿ ಉಕ್ಕಿ ಭೋರ್ಗರೆದು ಸಿಕ್ಕಾಪಟ್ಟೆ ಬೋರ್. ಭಂ ಭಂ ಬೋರೆ ಶಂಕರ್!

ಯಾರರ ಆವಾಗ ಅಮೇರಿಕಾದ ಲೈಬ್ರರಿ ತೋರಿಸಿ ಬಿಟ್ಟಿದ್ದರೆ ಇದೆಲ್ಲ ಫಜೀತಿ ಇರ್ತಿದ್ದೇ ಇಲ್ಲ. ಓದಲಿಕ್ಕೆ ಪುಸ್ತಕ, ಅಡೆತಡೆ ಇಲ್ಲದ ಚಾ ಕಾಫೀ ಸರಬರಾಜು, ದವಡೆಯಲ್ಲಿ ಜಡಿದಿಟ್ಟುಕೊಳ್ಳಲಿಕ್ಕೆ ಗುಟಕಾ, ಕವಳ ಇಷ್ಟು ಇದ್ದು ಬಿಟ್ಟರೆ ನಮಗೆ ಏನೂ ಬೇಕಾಗಿರಲಿಲ್ಲ, ಯಾರೂ ಬೇಕಾಗಿಯೇ ಇರಲಿಲ್ಲ. ಚಾ, ಕಾಫಿ, ಗುಟಕಾ ಹ್ಯಾಂಗೋ ವ್ಯವಸ್ಥೆ ಮಾಡಿಕೊಂಡಿದ್ದೆ. ಆದ್ರ ಅಮೇರಿಕಾದ ಲೈಬ್ರರಿಗಳ ಪರಿಚಯ ಆಗಿ, ಹೋಗಿ ಬಂದು ಮಾಡಲಿಕ್ಕೆ, ಮತ್ತೆ ಅದೇ ತೊಂದ್ರಿ, ಕಾರ್ ಕಾರ್, ಇರಲೇ ಇಲ್ಲ. ಕಾರಿಲ್ಲ ಅಂದ್ರ ಕಾರುಬಾರೇ ಬಂದ್. ಫುಲ್ ಬಂದ್.

ಈ ದುಬೈ ಅನಸಕ್ಕನ ಜೋಡಿ ಕಾಟಾಚಾರಕ್ಕ ಪತ್ರ ಮಿತ್ರತ್ವ ನಡೀತಾ ಇದ್ದಾಗೆ ಡ್ರೈವರ್ ಲೈಸೆನ್ಸ್ ಬಂತು. ಎರಡು ತಿಂಗಳ ಪಗಾರ್ ಒಳಗ 'ಸಾಕಷ್ಟು' ರೊಕ್ಕ ಉಳಿದು ಮನಿಗೆ ಒಂದು ಹೊಸಾ ತೋಶಿಬಾ ಟೀವಿ, ಒಂದು ಹೊಸಾ ಸಾಮ್ಸಂಗ್  VCR ಬಂತು, ಕೇಬಲ್ ಬಂತು. ಇಂಡಿಯನ್ ಅಂಗಡಿ ಒಳಗ ಸಿಗುತ್ತಿದ್ದ ಹಿಂದಿ ಸಿನಿಮಾ ವೀಡಿಯೊ ಕ್ಯಾಸೆಟ್ಟು ತಂದು, ಒಂದಾದ ಮೇಲೊಂದು ಸಿನಿಮಾ ನಿರಂತರ ನೋಡೋದ್ರಿಂದ ಬೋರ್ ಹೊಡೆಯೋದು ಹೋತು. ನಂತರ ಕಾರಿಗೆ deposit ಕೊಡೋವಷ್ಟು ರೊಕ್ಕ ಉಳಿದು, ಉಳಿದ ರೊಕ್ಕ ಫೈನಾನ್ಸ್ ಮಾಡಿಸಿ, ಒಂದು ಹೊಸಾ ಸೆಕೆಂಡ್ ಹ್ಯಾಂಡ್ ಕಾರ್ ತೊಗೊಳ್ಳೋ ಹೊತ್ತಿಗೆ ದುಬೈ ಅನಸಕ್ಕನಿಗೆ ನಾನು, ನನಗ ಅಕಿ ಫುಲ್ ಬೋರ್ ಆಗಿ ಅದೂ ಒಂದು ಪತ್ರ ಮಿತ್ರತ್ವ ಮುಗೀತು. ಕಾರ್ ತೊಗೊಂಡ ಒಂದೇ ವರ್ಷದಲ್ಲಿ ಹದಿನೆಂಟು ಸಾವಿರ ಮೈಲ್ ಹೊಡೆದು, ಅರ್ಧಾ ಅಮೇರಿಕಾ ಎಲ್ಲಾ ಕಡೆ ಅಡ್ಯಾಡಿ ಬರೋದ್ರಾಗ ಪತ್ರ ಮಿತ್ರ? ಹಾಂ? ಏನು ಹಾಂಗಂದ್ರ? ಅಂತ ಕೇಳೋ ಹಾಂಗ ಆಗಿತ್ತು. ಒಳ್ಳೆ ಕ್ವಾಲಿಟಿ ಕಾರು, ಎಂಬತ್ತೊಂಬತ್ತು ಸೆಂಟಿಗೆ ಒಂದು ಗ್ಯಾಲನ್ ಪೆಟ್ರೋಲ್. ಕೂತು ಗಾಡಿ ಹೊಡಿಲಿಕ್ಕೆ ಬೆನ್ನು ಒಂದು ಘಟ್ಟೆ ಇದ್ದರೆ ಎಷ್ಟು ಬೇಕಾದಷ್ಟು ತಿರುಗಿರಿ!

ಅದೇ ಕೊನೆ. ಆ ಮೇಲೆ ಪತ್ರ ಮಿತ್ರರು ಅಂತ ಸ್ಪೆಷಲ್ಲಾಗಿ ಮಾಡಿಕೊಳ್ಳಲಿಕ್ಕೆ ಹೋಗಿಲ್ಲ. ಎಲ್ಲೋ ಭೆಟ್ಟಿ ಆದವರು, ಹ್ಯಾಂಗೋ ಗುರ್ತು ಆದವರು ಆಗಾಗ email ಅದು ಇದು ಮಾಡ್ತಾ ಇರ್ತಾರ. ನಾವೂ ಮಾಡ್ತಾ ಇರ್ತೇವಿ. ಈಗಿನ ಪತ್ರ ಮಿತ್ರತ್ವ ಅಂದ್ರೆ ಅಷ್ಟೇ.

(ಮುಗಿಯಿತು)

ದುಬೈ

Saturday, February 01, 2014

ಇಂಟರ್ನ್ಯಾಷನಲ್ ಪತ್ರ ಮಿತ್ರೆ (ಪತ್ರ ಮಿತ್ರರ ಪ್ರಪಂಚದಲ್ಲಿ. ಭಾಗ - ೩)

(ಭಾಗ - ೧, ಭಾಗ -೨ ಇಲ್ಲಿವೆ) 

ಪತ್ರ ಮಿತ್ರತ್ವದ ಮುಂದಿನ ಭಾಗ ಶುರು ಆಗೋದು ರಾಜಸ್ಥಾನದ ಪಿಲಾನಿಯಲ್ಲಿ. fast forward to 1990 October. BITS, Pilani ನಮ್ಮ ಇಂಜಿನಿಯರಿಂಗ್ ಕಾಲೇಜು.

ಮೊಟ್ಟ ಮೊದಲನೇ ಸೆಮೆಸ್ಟರಿನ ಒಂದು ದಿವಸ ಹಾಸ್ಟೆಲ್ ಮೆಸ್ಸಿನಲ್ಲಿ ಮಧ್ಯಾನ ಊಟಕ್ಕೆ ಕೂತಿದ್ದೆ. ಮುಂದೆ ಬಂದು ಕೂತವ ಒಬ್ಬ ಸೀನಿಯರ್ ಹುಡುಗ. ಗೊತ್ತು ಇದ್ದವನೇ. ಗೊತ್ತು ಇರಲಿಲ್ಲ ಅಂದ್ರ ಹೆಂಗ? ಎರಡು ತಿಂಗಳು ರಾಗ್ಗಿಂಗ್ (Ragging) ಏನು ಪುಗಸಟ್ಟೆ ಮಾಡಿಸಿಕೊಂಡೇವೇನು? ಎಲ್ಲ ಸೀನಿಯರ್ ಹುಡುಗರದು ಅಷ್ಟಿಷ್ಟರೆ ಗೊತ್ತಾಗಲಿ ಅಂತ ಹೇಳಿ ಮಾಡೋದೇ ರಾಗ್ಗಿಂಗ್. ಮತ್ತ ಪಿಲಾನಿ ಒಳಗ ಆಗಸ್ಟ್ ಮೊದಲ ವಾರದಲ್ಲಿ ಶುರು ಆದ ರಾಗ್ಗಿಂಗ್ ಸೆಪ್ಟೆಂಬರ್ ಕೊನೆ ವಾರಕ್ಕ ಮುಗಿದು, ಅಕ್ಟೋಬರ್ ಮೊದಲ ವಾರದಲ್ಲಿ freshers' welcome ಆತು ಅಂದ್ರ, ರಾಗ್ಗಿಂಗ್ ಎಲ್ಲ ಮುಗಿದು, ಸೀನಿಯರ್ ಮಂದಿ ಜೋಡಿ ಫುಲ್ ಭಾಯಿ, ಭಾಯಿ. ಖರೆ ದೋಸ್ತರು ಅಲ್ಲಿಂದ. ಎಲ್ಲಾ ಶಿಸ್ತುಬದ್ಧ ಪಿಲಾನಿಯೊಳಗ.

ಮುಂದ ಕೂತಿದ್ದ ಸೀನಿಯರ್ ಒಂದು ಮೂರ್ನಾಕು ಪತ್ರಾ ಹರಡಿಕೊಂಡು, ಅವನ್ನ ಓದಿಕೋತ್ತ, ಹುಚ್ಚರ ಗತೆ ನಕ್ಕೋತ್ತ, ಊಟ ಶುರು ಮಾಡಿದ. ಪತ್ರದ ಮೇಲಿನ ಸ್ಟ್ಯಾಂಪುಗಳನ್ನ ನೋಡಿದರ ಗೊತ್ತಾತು ಇವೆಲ್ಲ ಎಲ್ಲೋ ಬೇರೆ ಬೇರೆ ದೇಶದಿಂದ ಬಂದ ಪತ್ರಗಳು ಅಂತ. ಎಲ್ಲೋ ಅವನ ಫ್ಯಾಮಿಲಿ ವಿದೇಶದಾಗ ಇರಬಹುದು ಅಂತ ಮಾಡಿದೆ. ಸುಮಾರು ಮಂದಿ NRI ವಿದ್ಯಾರ್ಥಿಗಳು ಇದ್ದರು ಪಿಲಾನಿಯೊಳಗ.

ಏನ್ ಹೀರೋ, ಭಾಳ ಪತ್ರ, ಅದೂ ಎಲ್ಲಾ ಇಂಪೋರ್ಟೆಡ್ ಪತ್ರ, ಬಂದಂಗ ಅವಲ್ಲಾ? ಅಂತ ಕೇಳಿದೆ.

ಹೌದೋ ಮಾರಾಯಾ, ಎಲ್ಲಾ ನನ್ನ ಪೆನ್ ಫ್ರೆಂಡ್ಸ್ ನೋಡು. ಒಂದು ಹತ್ತು ಮಂದಿ ಇದ್ದಾರ. ಬೇರೆ ಬೇರೆ ದೇಶದೊಳಗ, ಅಂದು ಬಿಟ್ಟ.

ಕ್ಯಾಂಪಸ್ಸಿನಲ್ಲಿದ್ದ ಹನ್ನೆರಡು ಹಾಸ್ಟೆಲುಗಳಲ್ಲಿ ಸುಮಾರು ನಾಲ್ಕು ಸಾವಿರ ವಿದ್ಯಾರ್ಥಿಗಳು ಇದ್ದ ಪಿಲಾನಿ ಕ್ಯಾಂಪಸ್ ಒಳಗ ಪ್ರತಿ ರೂಂ ರೂಂ ಅಡ್ಯಾಡಿ, ಪತ್ರ ಡೆಲಿವರಿ ಮಾಡೋದು ಅಂದ್ರ ಅಂಚೆ ಮಂದಿಗೆ ಭಾಳ ಬೇಜಾರ ಕೆಲಸ. ಮ್ಯಾಲೆ ಹತ್ತು, ಕೆಳಗ ಇಳಿ, ರೂಂ ಬಾಗಲದ ಕೆಳಗ ಪತ್ರಾ ದುಗಿಸು, ಮನಿ ಆರ್ಡರ್ ಬಂದಿಲ್ಲೋ ಮಾರಾಯಾ ನಿಂದು, ಅಂತ ಸಾವಿರ ಮಂದಿಗೆ ಉತ್ತರ ಕೊಡು, ಇದೆಲ್ಲ ಎಲ್ಲಿ ಉಸಾಬರಿ ಅಂತ ಹೇಳಿ ಅಂಚೆ ಮಂದಿ ಸುಮ್ಮನ ಮಧ್ಯಾನ ಊಟದ ಟೈಮಿಗೆ ಹಾಸ್ಟೆಲ್ ಮೆಸ್ಸ್ ಮುಂದ ಬಂದು ಕೂತು ಬಿಡ್ತಿದ್ದರು. ಸುಮಾರು ೮೦% ಪತ್ರ ಎಲ್ಲ ಅಲ್ಲೇ ಬಟವಡೆ  ಆಗಿ ಅವರ ಕೆಲಸ ಕಮ್ಮಿ ಆಗ್ತಿತ್ತು. ಈ ಸೀನಿಯರ್ ಸಹಿತ ಮೆಸ್ಸಿನ ಮುಂದ ಕೂತಿದ್ದ ಅಂಚೆಯವನ  ಕಡೆ ಪತ್ರಗಳ ಬಂಪರ್ ಬೆಳೆ ಹೊಡಕೊಂಡು ಬಂದು ಕೂತಿದ್ದ.

ಹೋಗ್ಗೋ!! ಇವನೂ ಮತ್ತ ಪೆನ್ ಫ್ರೆಂಡ್ಸ್ ಅಂದು ಮೂರು ವರ್ಷದಿಂದ dormant ಆಗಿ ಕೂತಿದ್ದ ಪತ್ರ ಮಿತ್ರ ಎಂಬ ಭೂತ ಮತ್ತ ಜೀವಂತ ಆತು. ಮತ್ತ ತಲಿ ಒಳಗ ಅದೇ ಗುಂಗಿ ಹುಳ.

ಕರ್ನಾಟಕದಲ್ಲಿ ಲೋಕಲ್ ಬಳ್ಳಾರಿ, ಬೆಂಗಳೂರಿನ ಪತ್ರ ಮಿತ್ರರನ್ನ ಮಾಡಿಕೊಂಡು ಅವರಿಗೆ ಎಳ್ಳು ನೀರು ಬಿಟ್ಟಿದ್ದೆ. ಮುಂದೆ ದೂರದ ಆಸ್ಸಾಮಿನ ಮನುಷ್ಯಾನ ಒಬ್ಬವನ ಜೋಡಿ ಪತ್ರ ಮಿತ್ರತ್ವ ಕೂಡ ಮಾಡಿ ಅದೂ ಢಂ ಅಂದು ಹೋಗಿತ್ತು. ಇನ್ನೂ ಮಾಡದೇ ಇದ್ದಿದ್ದು ಅಂದ್ರ ವಿದೇಶದ international ಪತ್ರ ಮಿತ್ರರನ್ನ ಮಾಡಿಕೊಂಡಿರಲಿಲ್ಲ. ಈಗ ಅದನ್ನ ಮಾಡಬೇಕು. ಅರ್ಜೆಂಟಾಗಿ ಒಂದು ವಿದೇಶೀ ಪತ್ರ ಮಿತ್ರ ಬೇಕೇ ಬೇಕು. ಈಗೇ ಬೇಕು.

ದೋಸ್ತಾ, ಈ international ಪೆನ್ ಫ್ರೆಂಡ್ಸ್ ಹ್ಯಾಂಗೋ ಮಾಡಿಕೊಳ್ಳೋದು? ಅಂತ ಕೇಳಿದೆ. ಆ ಸೀನಿಯರ್ ಹೆಸರು ಮನೀಶ್ ಅಂತ ನೆನಪು.

ಉತ್ತರ ಹೇಳಲಿಕ್ಕೆ ಆವಾ ಗಡಿಬಿಡಿ ಒಳಗ ಇದ್ದ. ಪತ್ರ ಓದಬೇಕೋ, ಊಟ ಮಾಡಬೇಕೋ, ಲಗೂನ ಊಟ ಮುಗಿಸಿ ಮಧ್ಯಾನದ ಒಂದು ಘಂಟೆ ಕ್ಲಾಸಿಗೆ ಓಡಬೇಕೋ ಅನ್ನೋದರಲ್ಲಿ ಬಿಜಿ ಇದ್ದ ಸೀನಿಯರ್ ಮನೀಶ್ ನನ್ನ ಮೂಲಭೂತ ಪ್ರಶ್ನೆಗೆ ಉತ್ತರ ಹ್ಯಾಂಗ ಗಡಿಬಿಡಿಯೊಳಗ ಹೇಳಿಯಾನು?

ಯಾರ್ ಮಹೇಶ್, ಒಂದು ಕೆಲಸ ಮಾಡು. ರಾತ್ರಿ ನನ್ನ ರೂಮಿಗೆ ಬಂದು ಬಿಡು. ನಿನಗ international ಪತ್ರ ಮಿತ್ರ ಹ್ಯಾಂಗ ಹುಡಕಬೇಕು ಅನ್ನೋದರ ಬಗ್ಗೆ ಫುಲ್ ಮಾಹಿತಿ ಕೊಡ್ತೇನ್ತಿ. ರೂಂ ನಂಬರ್ ಗೊತ್ತದಲ್ಲಾ? ಗಾಂಧಿ, T-wing, facing Insti?  ರಾತ್ರಿ ಒಂಬತ್ತರ ಮ್ಯಾಲೆ ಬಂದುಬಿಡು. ಈಗ ನಾ ಕ್ಲಾಸಿಗೆ ಹೋಗಬೇಕು, ಅಂದ. ಹೂನಪಾ, ಹೋಗು. ರಾತ್ರಿ ಭೆಟ್ಟಿ ಆಗ್ತೇನಿ, ಅಂದೆ. ಗಾಂಧಿ ಭವನ ಅವನ ಹಾಸ್ಟೆಲ್. ನಮ್ಮ ಹಾಸ್ಟೆಲ್ ಕೃಷ್ಣಾ ಭವನದ ಬಾಜೂ. T-wing ಅಂದ್ರ ನಡುವಿನ ವಿಂಗ್. facing Insti ಅಂದ್ರ ಇನ್ಸ್ಟಿಟ್ಯೂಟಿನ ಮೇನ್ ಬಿಲ್ಡಿಂಗ್ ಕಡೆ ಮುಖ ಮಾಡಿದ್ದು ಅಂತ. ಎಲ್ಲ ಪಿಲಾನಿ ಭಾಷಾ. Pilani lingo.

ರಾತ್ರಿ ಹೇಳಿದ ಟೈಮಿಗೆ ಹೋದೆ. ಫುಲ್ ಹಾಸ್ಟೆಲ್ ಖಾಲಿ ಹೊಡಿತಿತ್ತು. ಮರುದಿವಸ ಯಾರಿಗೂ ಯಾವದೂ ಟೆಸ್ಟ್ ಇರಲಿಲ್ಲ ಅಂತ ಕಾಣಿಸ್ತದ. ಎಲ್ಲಾ ಚೈನಿ ಹೊಡಿಲಿಕ್ಕೆ ಹೋಗಿದ್ದರು. ಭೂತ ಬಂಗಲೆ ಗತೆ ಗವ್ವ ಅಂತಿತ್ತು ಹಾಸ್ಟೆಲ್. ಮೆಟ್ಟಿಲ ಹತ್ತಿ, ಮ್ಯಾಲೆ ಹೋಗಿ, ಅಂತೂ ಇಂತೂ T-wing ಮುಟ್ಟಿ, ಈ ಮನೀಶನ ರೂಂ ಬಾಗಿಲಾ ಬಡದೆ.

Yes, Come in, ಅಂದಾ.

ಒಳಗ ರಾಕ್ ಮ್ಯೂಸಿಕ್ ಹೊಯ್ಕೊತ್ತಿತ್ತು. ಇವಾ ಗಾಳಿಯೊಳಗ ಗಿಟಾರ್ ಬಾರ್ಸಿಕೋತ್ತ ಕೂತಿದ್ದ. The bugger was jamming! ಅದೇನು ಗಾಳಿಯೊಳಗ ಗಿಟಾರ್ ಬಾರಿಸ್ತಾರಪಾ ಈ ಮಂದಿ? ಅಂತ ಅನ್ನಿಸ್ತು. ಈ ವೇಷ ಧಾರವಾಡದಲ್ಲಿ ನೋಡಿರಲಿಲ್ಲ.

ಓ! ನೀನಾ? ಪೆನ್ ಫ್ರೆಂಡ್ ಬೇಕಾಗಿರೋ ಜೂನಿಯರ್. ಬಾರಪಾ ಬಾ. ರಾಗಿಂಗ್ ಮುಗಿದ ಮ್ಯಾಲೆ ಫಸ್ಟ್ ಟೈಮ್ ಬರ್ಲೀಕತ್ತಿ. ಬಲಗಾಲು ಮುಂದಿಟ್ಟು ಒಳಗ ಬಾ, ಅಂತ ಹೇಳಿ, ಜೋಕ್ ಹೊಡದು, ಡುಬ್ಬದ ಮ್ಯಾಲೆ ಕುಟ್ಟಿ ಸೀನಿಯರ್ ಸ್ವಾಗತ ಮಾಡಿದ.

ಅವನ ರೂಮೇನೂ ಹೊಸದಿರಲಿಲ್ಲ. ಮೊದಲಿನ ಎರಡು ತಿಂಗಳು ಬೇಕಾದಷ್ಟು ಸರೆ ಆ ರೂಮಿನ್ಯಾಗ ಕೂತು ಎಲ್ಲ ಸೀನಿಯರ್ ಮಂದಿಗೆ ಬೇಕಾದಷ್ಟು ನೋಟ್ಸ್ ಕಾಪಿ ಮಾಡಿಕೊಟ್ಟು, ಅವರ ಕಡೆ ಕಾಡಿಸಿಕೊಂಡು, ಅವರಿಗೆ ಚಹಾ, ಸಿಗರೇಟು ಇತ್ಯಾದಿ ತಂದು ಕೊಟ್ಟು ಚಾಕರಿ ಮಾಡಿ ಎಲ್ಲ ಗೊತ್ತಿತ್ತು. ಆ ಸಮಯ ರಾಗಿಂಗ್ ಮಯ. ಆದರ ಈಗ ಅದೆಲ್ಲಾ ಮುಗಿದು ಫ್ರೆಂಡ್ಸ್ ಅಷ್ಟೇ.

international ಪತ್ರ ಮಿತ್ರ ಬೇಕು ಅಂದ್ರ ಇಪ್ಪತ್ತೈದು ರುಪಾಯಿ ಆಗ್ತದ ನೋಡಪಾ, ಅಂದು ಬಿಟ್ಟ ಮನೀಶ್. 'ಅನಂತನ ಆವಾಂತರ' ಸಿನೆಮಾದಾಗ ಡಾ. ಎಸ್.ಎಸ್. ಉಳ್ಳಾಗಡ್ಡಿ ಗುಳಿಗಿ ಪುಡಿ ಕೊಟ್ಟು, ಒಂದು ನೂರು ರೂಪಾಯಿ, ಅಂದಂಗ ಕೇಳಿಸ್ತು.

ಹಾಂ! ಇಪ್ಪತ್ತೈದು ರುಪಾಯಿ! ಅದೂ ೧೯೯೦ ರಲ್ಲಿ. ದೊಡ್ಡ ಮೊತ್ತ. ಎರಡು T-Series ಕ್ಯಾಸೆಟ್ ಬರ್ತಿತ್ತು. ಸುಮಾರು ಹತ್ತು ಜರ್ದಾ ಪಾನ್ ಅದೂ ನವರತ್ನ ಕಿಮಾಮ್ ಹಾಕಿದ್ದು ಬರ್ತಿದ್ದವು. ಇನ್ನೂ ಏನೇನೋ ಬರ್ತಿದ್ದವು. ಅಂತಾದ್ರಲ್ಲಿ ಪತ್ರ ಮಿತ್ರರ ಬಗ್ಗೆ ನಮ್ಮದು ತಗಡು ಹಿಸ್ಟರಿ. ಇನ್ನೂ ತನಕ ಒಂದೂ ಬರಕತ್ತಾಗಿಲ್ಲ. ಅದರ ಸಲುವಾಗಿ ಇಪ್ಪತ್ತೈದು ರುಪಾಯಿ ಬಡಿಬೇಕಾ? ಅಂತ ವಿಚಾರ ಬಂತು.

ಏ....ಮಾರಾಯಾ! ಇದು ನನ್ನ ಕಮಿಷನ್ ಅಲ್ಲ ಮಾರಾಯ. ಇದರಾಗ ಒಂದು ಪೈಸಾ ಸಹಿತ ನನಗ ಅಲ್ಲ, ಅಂತ ಹೇಳಿ ಮನೀಶ್ ಅಲ್ಲೆಲ್ಲೋ ದೂರದ ದೇಶ ನೆದರ್ಲ್ಯಾಂಡ್ ಒಳಗ ಇರೋ 'ಇಂಟರ್ನ್ಯಾಷನಲ್ ಸೊಸೈಟಿ ಆಫ್ ಪೆನ್ ಫ್ರೆಂಡ್ಸ್' ಅಂತ ಏನೋ ಹೆಸರಿರುವ ಸಂಸ್ಥೆ ಬಗ್ಗೆ ವಿವರ ನೀಡಲಿಕ್ಕೆ ಶುರು ಮಾಡಿದ.

ನೋಡು, ಈ ಫಾರ್ಮ್ ತೊಗೊ. ಸರಿ ಮಾಡಿ ತುಂಬು. ನಿನಗ ಯಾವ ತರಹದ ಪೆನ್ ಫ್ರೆಂಡ್ ಬೇಕು ಅನ್ನೋದಕ್ಕ ಸುಮಾರು ಹದಿನೈದು ಇಪ್ಪತ್ತು criteria ಅವ. ಸರಿ ಮಾಡಿ ತುಂಬಿ, ಇಪ್ಪತ್ತೈದು ರುಪಾಯಿಗೆ international postal coupons ಇಟ್ಟು, ಏರ್ ಮೇಲ್ ಒಳಗ ಕಳಿಸಿಬಿಡು. ಅವರ ಕಡೆ ದೊಡ್ಡ database ಇರ್ತದ. ನಿನಗೆ ತಕ್ಕ ಪೆನ್ ಫ್ರೆಂಡ್ ಸೆಲೆಕ್ಟ್ ಮಾಡಿ ಕಳಸ್ತಾರ. ಆಕಸ್ಮಾತ workout ಆಗಲಿಲ್ಲ ಅಂದ್ರ ಮುಂದ ಐದು ಮಂದಿ ತನಕಾ ಕಳಿಸ್ತಾರ. ಎಲ್ಲಾ ಇಪ್ಪತ್ತೈದು ರುಪಾಯಿ ಒಳಗ ಬಂತು, ಅಂತ ಹೇಳಿ ಆ ಇಂಟರ್ನ್ಯಾಷನಲ್ ಸಂಸ್ಥೆಯನ್ನ ಫುಲ್ ಸೆಲ್ ಮಾಡಿ ಬಿಟ್ಟ.

ವರ್ಕ್ ಔಟ್ ಆಗಲಿಲ್ಲ ಅಂದ್ರ ಏನು ಮಾಡೋದು? ಮುಂದಿನ ಪೆನ್ ಫ್ರೆಂಡ್ ಕಳಿಸಿರಿ ಅಂತ ಹೇಳಲಿಕ್ಕೆ ಏನು procedure? ಅದು ಇದು ಕೇಳಲಿಕ್ಕೆ ಶುರು ಮಾಡಿದೆ.

ಥಾಂಬಾ! ಅಂದ ಮನೀಶ್.

ವರ್ಕ್ ಔಟ್ ಆಗಲಿಲ್ಲ ಅಂದ್ರ ಬಂದ ಹೇಳಪಾ! ಆವಾಗ ನೋಡೋಣ. ನಾ ಇನ್ನೂ ಮೂರು ವರ್ಷ ಈ ಸುಡುಗಾಡಿನ್ಯಾಗ ಮಣ್ಣು ಹೊರವ ಇದ್ದೇನಿ. ಎಲ್ಲೂ ಓಡಿ ಹೊಂಟಿಲ್ಲ. ಇದು customized ಮಾರಾಯಾ. ನೀ ಎಲ್ಲೋ, ಯಾವದೋ ಮ್ಯಾಗಜಿನ್ ಒಳಗ, ಯಾರನ್ನೋ ನೋಡಿ, ಅವರಿಗೆ ಪತ್ರ ಬರದಂಗ ಅಲ್ಲ. ಮ್ಯಾಚ್ ಮಾಡೋದು ಕಂಪ್ಯೂಟರ್. ತಾಯಿಗೆ ತಕ್ಕ ಮಗಾ ಇದ್ದಂಗ, ದೇವರಿಗೆ ತಕ್ಕ ಪೂಜಾರಿ ಇದ್ದಂಗ, ಒಬ್ಬ ಯಬಡಂಗೆ ಬರೋಬ್ಬರಿ ಇನ್ನೊಬ್ಬ ಯಬಡನನ್ನ (ಅಥವಾ ಯಬಡಳನ್ನ) ಪತ್ರ ಮಿತ್ರ ಅಂತ ಹುಡುಕಿ ಕೊಡ್ತದ. ಹಾಂಗಾಗೆ ಅವರು guarantee ಕೊಡೋದು. ಈ ಪತ್ರ ಮಿತ್ರತ್ವ ಬರಕತ್ತ ಆಗ್ತದ ಮಾರಾಯ, ಅಂತ ಹೇಳಿದ. ಆಶ್ವಾಸನೆ ಕೊಟ್ಟ.

ಆವಾ ಕೊಟ್ಟ ಫಾರ್ಮ್ ತೊಗೊಂಡು ಬಂದು ತುಂಬಿದೆ. ಅಮೇರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಅಲ್ಲೆಲ್ಲ ಪೆನ್ ಫ್ರೆಂಡ್ ಮಾಡಿಕೊಂಡರ ಏನು ಮಜಾ? ಅಲ್ಲೆಲ್ಲ ಬೇಕಾದಷ್ಟು ಮಂದಿ ಬಳಗದವರು, ಗೊತ್ತಿದ್ದವರು ಇದ್ದೇ ಇದ್ದಾರ. ಅವರಿಂದ ಪತ್ರ ಅದು ಇದು ಬಂದಕೋತ್ತೇ ಇರ್ತದ. ಈ ಇಂಟರ್ನ್ಯಾಷನಲ್ ಪೆನ್ ಫ್ರೆಂಡ್ ಎಲ್ಲರೆ ಯಾರೂ ಕೇಳರಿಯದ ದೇಶಗಳಿಂದ ಹುಡಕಬೇಕು ಅಂತ ಹೇಳಿ, ಜಗತ್ತಿನ ಅಟ್ಲಾಸ್ ಹರವಿಕೊಂಡು, exotic ಜಗಗಳಾದ ಮಾರಿಷಸ್, ಸೀಷೆಲ್ಸ್, ಬರ್ಮುಡಾ, ಗಯಾನಾ, ಫಿಜಿ, ಸುರಿನಾಮ್, ಘಾನಾ, ಐವರಿ ಕೋಸ್ಟ್, ಅದು ಇದು ಅಂತ ಒಂದಿಷ್ಟು ದೇಶಗಳನ್ನ ಒಂದು ಆರ್ಡರ್ ಒಳಗ ಲಿಸ್ಟ್ ಮಾಡಿದೆ. ಮತ್ತ ವಯಸ್ಸಿನ ರೇಂಜ್ ಕೊಟ್ಟೆ. ಇಂಗ್ಲೀಷ್ ಕಡ್ಡಾಯವಾಗಿ ಬರಬೇಕು ಅಂತ ಹೇಳಿದೆ. ಅದಿಲ್ಲ ಅಂದ್ರ ಎಲ್ಲರೆ ಮೂಲ್ಯಾಗಿನ ಆಫ್ರಿಕಾದ ದೇಶದಿಂದ ಸ್ವಾಹಿಲಿ, ಕಿನ್ಯಾರವಾಂಡಾ ಭಾಷಾ ಮಾತಾಡಿಕೋತ್ತ ಯಾರರೆ ಬಂದ್ರ ನನ್ನ ಇಪ್ಪತ್ತೈದು ರೂಪಾಯಿ ಢಂ ಅಂತಿತ್ತು.

ಎಲ್ಲಾ ಫಾರಂ ತುಂಬಿ, ಇಪತ್ತೈದು ರೂಪಾಯಿಗೆ ಇಂಟರ್ನ್ಯಾಷನಲ್ ಪೋಸ್ಟಲ್ ಕೂಪನ್ ತೊಗೊಂಡು, ಎಲ್ಲಾ ಒಂದು ಪ್ಯಾಕೆಟ್ ಮಾಡಿ, ನೆದೆರ್ಲ್ಯಾಂಡಿಗೆ ಏರಮೇಲ್ ಒಳಗ ಕಳಿಸಿದೆ. ಪೋಸ್ಟೇಜ್ ಅಂತ ಹೇಳಿ ಮತ್ತೂ ಒಂದು ಹತ್ತು ಹನ್ನೆರೆಡು ರೂಪಾಯಿ. ಹೋಗ್ಗೋ! ಭಾಳ ತುಟ್ಟಿ ಆತು ಇದು. ಆದ್ರ ಒಳ್ಳೆ ಕ್ವಾಲಿಟಿಯ, ನಮ್ಮ ಅಭಿರುಚಿಗೆ ಹೊಂದುವಂತಹ ಪತ್ರ ಮಿತ್ರ ಬೇಕು ಅಂದ್ರ ಖರ್ಚ ಮಾಡಲಿಕ್ಕೇ ಬೇಕು. ಹಿಂದ ಬಿಟ್ಟಿ ಪತ್ರಿಕೆಗಳಲ್ಲಿ ಸಿಕ್ಕವರು ಬರಕತ್ತಾಗಲೇ ಇಲ್ಲ. ನೋಡೋಣ ಅಂತ ಹೇಳಿ, ಹೊಟ್ಟಿ ಬಟ್ಟಿ ಕಟ್ಟಿ, ಎಲ್ಲಾ ಕೂಡಿ ಒಂದು ನಲವತ್ತು ರೂಪಾಯಿ ಢಂ ಅನ್ನಿಸಿಬಿಟ್ಟೆ. ಆ ತಿಂಗಳ ಪಾಕೆಟ್ ಮನಿಯಿಂದ ಅಷ್ಟಕ್ಕ ಖೋತಾ ಆತು. ನಾವೇ ಹಾಕಿಕೊಂಡ ಬಜೆಟ್. ಒಂದೆರಡು ಬೇಕಾಗಿದ್ದ ಮ್ಯೂಸಿಕ್ ಕ್ಯಾಸೆಟ್ ತೊಗೊಳ್ಳೋದು ತಡಾ ಆತು. ಒಂದು ನಾಕು ಶನಿವಾರ ಸಂಜಿ ಮುಂದ ಹಾಕುತ್ತಿದ್ದ ವಾರದ 'ಒಂದೇ' ಜರ್ದಾ ಪಾನ್ ಹಾಕೋದನ್ನ ಬಿಡಬೇಕಾತು. ನಲವತ್ತು ರೂಪಾಯಿ ದೊಡ್ಡ ಬಲಿಯನ್ನೇ ತೊಗೊಂಡು ಬಿಡ್ತು. (ಪಿಯೂಸಿ ಕಾಲದಿಂದ ಇದ್ದ ವಾರದ ಒಂದೇ ಜರ್ದಾ ಪಾನ್  ಡಿಗ್ರಿ ಮುಗಿಯೋ ಹೊತ್ತಿಗೆ ದಿನಕ್ಕ ಎರಡೋ ಮೂರೋ ನಾಕೋ ಐದೋ ಆರೋ ಆಗಿ, ಲೆಕ್ಕ ತಪ್ಪಿ ಹೋಗಿ, ತಾಸಿಗೊಮ್ಮೆ ಹಾಸ್ಟೇಲಿಂದ ಮೈಲು ದೂರವಿದ್ದ ಪಾನ್ ಶಾಪಿಗೆ ಓಡಲಾಗದೆ, ಸದಾ ಜೊತೆಗಿಟ್ಟುಕೊಳ್ಳಬಹುದಾದ ಗುಟ್ಕಾ ಚೀಟಿನೇ ಸರಿಯೆಂದು, ಗುಟಕಾಕ್ಕ ಶಿಫ್ಟ್ ಆಗಿ, ಪೂರ್ಣ ಪ್ರಮಾಣದ ಗುಟಕಾ ಗಿರಾಕಿ ಆಗಿ ಪಿಲಾನಿಯಿಂದ ಹೊರಬಿದ್ದದ್ದು ಡಿಗ್ರಿ ಜೊತೆಗೆ ಬಂದ ಬೋನಸ್. ನಂತರ ಎಲ್ಲಾ ಬಿಟ್ಟಾತು. ಆ ಮಾತ ಬ್ಯಾರೆ:))

ಸುಮಾರು ಒಂದು ತಿಂಗಳಾದ ಮೇಲೆ ಆ ನೆದೆರ್ಲ್ಯಾಂಡ್ ಸಂಸ್ಥೆಯಿಂದ ಒಂದು ಪ್ಯಾಕೆಟ್ ಬಂತು. ಲಗೂ ಲಗೂ ಓಪನ್ ಮಾಡಿದೆ.

'ಲಲಿತಾ ಡೂಲಾರ್' ಎಂಬ ಮಾರಿಷಸ್ ಹುಡುಗಿಯನ್ನ ನಿಮಗೆ ಕೊಡಲಾಗಿದೆ ಅಂತ ಬರದಿತ್ತು. ಅಯ್ಯೋ! ಪತ್ರ ಮಿತ್ರೆ ಅಂತ ಕೊಡಲಾಗಿದೆ ಅಂತ ಅಷ್ಟೇ!

ಲಲಿತಾ - ನಮ್ಮಮ್ಮನ ಹೆಸರಿನ ಹುಡುಗಿ. ಅಯ್ಯೋ ಇಕಿ ಜೋಡಿನೂ ನಮ್ಮ ಅಮ್ಮನ ಜೋಡಿ ಆದಂಗ ದಿನಾ ಜಗಳಾ ಶುರು ಆದ್ರ ಕಷ್ಟ ಅಂತ ಅನ್ನಿಸ್ತು. ಏ ಹೆಸರು ಅಷ್ಟೇ ಒಂದೇ ಅಂದ ಮಾತ್ರಕ್ಕ ಇಡೀ ಕುಂಡಲಿ ಒಂದೇ ಇರ್ತದೇನು? ಹಾಂಗೆಲ್ಲಾ ವಿಚಾರ ಮಾಡೋದು ತಪ್ಪು ಅಂತ ಹೇಳಿ ಬಿಟ್ಟೆ.

ಆ ನೆದರ್ಲ್ಯಾಂಡ ಸಂಸ್ಥೆಯವರು ಎಲ್ಲಾ ವಿವರ ಇಟ್ಟಿದ್ದರು. ಮತ್ತ ಪತ್ರ ಮಿತ್ರತ್ವವನ್ನ ಹ್ಯಾಂಗ ಶುರು ಮಾಡಬೇಕು, ಹ್ಯಾಂಗ ಬೆಳಸಬೇಕು ಅದು ಇದು ಎಲ್ಲ ಮಸ್ತ ವಿವರಿಸಿ ಒಂದು ಸಣ್ಣ ಪುಸ್ತಕ ಸಹಿತ ಇಟ್ಟಿದ್ದರು.

ಮಾರಿಷಸ್ ದೇಶದ ಪತ್ರ ಮಿತ್ರೆ ಸಿಕ್ಕಿದ್ದು ಒಂದು ತರಹ ಖುಷಿನೇ ಆತು. ಮೊದಲಿಂದ ಒಂದು ತರಹದ ಕುತೂಹಲ ಹುಟ್ಟಿಸಿದ ದೇಶ ಅದು. ಮೊದಲೇ ದ್ವೀಪ ದೇಶಗಳು ಅಂದ್ರ ಸಿಕ್ಕಾಪಟ್ಟೆ attraction. ಅದರಲ್ಲೂ ಮಾರಿಷಸ್ ಒಳಗ ಭಾರತೀಯ ಮೂಲದವರದೇ ಕಾರೋಬಾರು. ಎಲ್ಲ ಬ್ರಿಟಿಷರ ಕಾಲದಲ್ಲಿ ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡಲು ಹೋದ ಜನ. ಬಿಹಾರಿಗಳು, ಉತ್ತರ ಪ್ರದೇಶದವರು, ತಮಿಳರು ಎಲ್ಲ ಸುಮಾರು ನೂರು ವರ್ಷದ ಮೇಲಿಂದ ಅಲ್ಲೇ ಸೆಟಲ್ ಆಗಿ, ಅಲ್ಲಿಯವರೇ ಆಗಿ ಏನೋ ಒಂದು ತರಹದ ಮಜಾ ಸಂಸ್ಕೃತಿ ಮಾಡಿಕೊಂಡಾರ, ಅದು, ಇದು ಅಂತ ಓದಿದ್ದೆ. ಅಲ್ಲಿರುವ ಡೋಡೋ ಪಕ್ಷಿ ಅತ್ಯಂತ ಕಡಿಮೆ ಕಾಲದಲ್ಲಿ extinct ಆದ ಪಕ್ಷಿ ಅಂತ ಪ್ರಸಿದ್ಧ ಆಗಿತ್ತು. ಪಾಪ ಅದು ಹಾರಲಿಕ್ಕೆ ಬರದ ಬಾತುಕೋಳಿಯಂತಹ ಪಕ್ಷಿ. ಪೋರ್ಚುಗೀಸರು, ಡಚ್ಚರು, ಫ್ರೆಂಚರು ಬಂದಿದ್ದೇ ಬಂದಿದ್ದು, ಎಲ್ಲಾ ಹೊಡೆದು ತಿಂದು ಮುಗಿಸಿಬಿಟ್ಟಿದ್ದರು. ಬ್ರಿಟೀಷರು ಅವರನ್ನ ಓಡಿಸಿ ಮಾರಿಷಸ್ ತಮ್ಮ ಕೈಯಾಗ ತೊಗೊಳ್ಳೋ ಹೊತ್ತಿಗೆ ಡೋಡೋ ಪಕ್ಷಿ ಹೋಗ್ಲಿ ಅದರ ರೆಕ್ಕಿ ಪುಕ್ಕಾ ಸಹಿತ ನಿರ್ನಾಮ ಆಗಿ ಹೋಗಿತ್ತು. ಪಾಪ ಡೋಡೋ!

ಲಲಿತಾ ಡೂಲಾರ್ ಅನ್ನೋ ಹೆಸರಿಂದನೇ ಗೊತ್ತಾತು, ಇದೂ ಸಹಿತ ಯಾವದೋ ಇಂಡಿಯನ್ ಮೂಲದ ಹುಡುಗಿ ಅಂತ. ಅಕಿ ಅಜ್ಜನೋ, ಮುತ್ತಜ್ಜನೋ, ಗುಡು ಗುಡು ತಾತಾನೋ, ಗಡ ಗಡ ಮುತ್ಯಾನೋ ಹೆಚ್ಚಾಗಿ ಬಿಹಾರೋ ಎಲ್ಲಿಂದನೋ ಬಂದು, ಮಾರಿಷಸ್ ಒಳಗ ಕೂಲಿ ನಾಲಿ ಮಾಡಿ ಉದ್ಧಾರ ಆಗಿರಬೇಕು ಅಂತ ಅನ್ನಿಸ್ತು.

ಮತ್ತೇನು? ಲಲಿತಾ ಡೂಲಾರ್ಗೆ ಒಂದು introductory ಲೆಟರ್ ಬರದೆ. ಬರೆದು airmail ಒಳಗ ಹಾಕಿದೆ. ಅಕಿ ಏನೋ ಕಂಪ್ಯೂಟರ ಡಿಪ್ಲೋಮಾ ಮಾಡಿಕೋತ್ತ ಇದ್ದಳು ಅಂತ ನೆನಪು. ಸುಮಾರು ಕಲ್ತಾಕಿ ಇದ್ದಂಗ ಇದ್ದಾಳ. ದೇವರಾ ಇಕಿಗೆ ಸ್ವಲ್ಪ  ಜನರಲ್ ನಾಲೆಜ್ (GK) ಇದ್ದು, ಜಗತ್ತಿನ ಆಗುಹೋಗುಗಳ ಬಗ್ಗೆ ಇಂಟರೆಸ್ಟಿಂಗ್ ಆಗಿ ಪತ್ರದೊಳಗ ಚರ್ಚೆ ಮಾಡಲಿಕ್ಕೆ ಬರೋವಷ್ಟು ಬುದ್ಧಿ ಇರುವಂಗ ಮಾಡಪಾ. ಇಲ್ಲಂದ್ರ ನನಗ ಮೊದಲೇ ಮಂದಿ ಲಗೂ ಬೋರ್ ಹೊಡಿತಾರ. ಅದರಾಗೂ GK ಇಲ್ಲದವರು, ಕೂಪ ಮಂಡೂಕಗಳು ಭಾಳ ಅಂದ್ರ ಭಾಳ ಬೋರ್. ಹಾಂಗೆನರ ಆದ್ರ ನನ್ನ ನಾಲ್ವತ್ತು ರೂಪಾಯಿ ಢಂ ಅಂದು ಹೋಗ್ತದ ಅಂತ ಕೇಳಿಕೊಂಡೆ. ಶಕ್ತಿ ಕಪೂರ್ ಗತೆ, ಆವ್! ಲಲೀತಾ..... ಅಂತ ಮಾತ್ರ ಅನ್ನಲಿಲ್ಲ. ಮಾರಿಷಸ್ ಮಂದಿ ಎಲ್ಲ ಸಿಕ್ಕಾಪಟ್ಟೆ ಬಾಲಿವುಡ್ ಫ್ಯಾನ್ಸ್. ಅಯ್ಯೋ ಎಲ್ಲೆ ಶಕ್ತಿ ಕಪೂರ್ ಮಾದರಿಯ ವಿಲನ್ ಗಂಟು ಬಿದ್ದ ಅಂತ ಅಕಿ ವಾಪಸ್ ಬರಿದಿದ್ದರ? ನಾಲ್ವತ್ತು ರೂಪಾಯಿ ಢಂ.

ಸುಮಾರು ಒಂದು ತಿಂಗಳು ಆದ ಮ್ಯಾಲೆ ಲಲಿತಾ ತಿರುಗಿ ಉತ್ತರಾ ಬರೆದಳು. ಪತ್ರದ ಜೋಡಿ ಮಾರಿಷಸ್ ನನಗ ಭಾಳ ಸೇರ್ತದ ಅಂತ ಹೇಳಿ ಒಂದು ಐದಾರು ಪಿಕ್ಚರ್ ಪೋಸ್ಟ್ ಕಾರ್ಡ್ ಇಟ್ಟಿದ್ದಳು. ಭಾಳ ಅಂದ್ರ ಭಾಳ ಚಂದ ಇದ್ದವು. ಮುಂದ ಅವನ್ನ ದೀಪಾವಳಿ ಗ್ರೀಟಿಂಗ್ ಅಂತ ಹೇಳಿ ಕೆಲೊ ಮಂದಿಗೆ ಕಳಿಸಿದ್ದೆ. ನೋಡಿದವರು ಒಬ್ಬರು, ಇದು ಗೋಕರ್ಣ ಬೀಚ್ ಏನು? ಅಂತ ಕೇಳಿ ಆ ಪುಣ್ಯಾತ್ಮರಿಗೆ ಇನ್ನು ಎಂದೂ ಇಂತಹ ಹೊರದೇಶದ ಗ್ರೀಟಿಂಗ್ ಕಾರ್ಡ್ ಕಳಿಸಿ ವೇಸ್ಟ್ ಮಾಡಬಾರದು ಅಂತ ನಿರ್ಧಾರ ಮಾಡಿದೆ. ಮಾರಿಷಸನ ಯಾವದೋ ಒಂದು ಬೀಚ್ ಅಂತ ಬರಕೊಂಡು ಅದ. ಹಂತಾದ್ರಾಗ ಗೋಕರ್ಣ ಬೀಚ್ ಅಂತ ಗೋಕರ್ಣ ನೋಡಿದ ಕ್ವಾಣನ ಹಾಂಗ ಕೇಳ್ತಾರ ಅಂದ್ರ ಏನ್ರೀ?!

ಅಕಿಗೆ ಇಂಡಿಯಾ ಬಗ್ಗೆ ಸಿಕ್ಕಾಪಟ್ಟೆ ಕುತೂಹಲ ಇತ್ತು. ಹೇಳಿ ಕೇಳಿ ಅವರ ಮೂಲ ಎಲ್ಲ ಇಲ್ಲೇ. ಮನಿ ಮಂದಿಯಿಂದ ಇಂಡಿಯಾ ಬಗ್ಗೆ ಕೇಳಿ ಕೇಳಿ, ಆದರ ಪ್ರತ್ಯಕ್ಷ ಎಂದೂ ನೋಡದೆ, ಏನೇನೋ ತಲಿ ಕೆಡಿಸಿಕೊಂಡು, ಹಾಂಗಾಗಿ ಸುಮಾರು ಪ್ರಶ್ನೆ ಕೇಳಿದ್ದಳು. ಎಲ್ಲ ಪ್ರಶ್ನೆಗಳಿಗೆ ಫುಲ್ ಉತ್ತರಾ ಬರಕೋತ್ತ ಹೋದರ ಒಂದು ದೊಡ್ಡ ಪುಸ್ತಕ ಆಗಿ ಬಿಡ್ತದ ಅಂತ ಹೇಳಿ ಅಕಿಗೆ installment ಒಳಗ ಹೇಳತೇನಿ ಅಂದೆ.

ನಿಮ್ಮ ದೇಶದ ಕಾಶ್ಮೀರ ದೇವರೇ ಮಾಡ್ಯಾನಂತ. ಹೌದೇನು? ಭಾಳ ಚಂದ ಅದ ಅಂತ. ಹೌದಾ? ನೀ ನೋಡೀ? ಅಲ್ಲೋ ಉತ್ತರ ಭಾರತದಾಗ ಇರ್ತೀ ಅಂತೀ ಮತ್ತಾ ಕಾಶ್ಮೀರ ನೋಡಿಲ್ಲ? ಪಿಲಾನಿಂದ ಕಾಶ್ಮೀರ ಎಷ್ಟು ದೂರ? ಅಂತ ಏನೇನೋ ಪ್ರಶ್ನೆ ಅಕಿದು. ಮಾರಿಷಸ್ ಅನ್ನೋ ಸಣ್ಣ ದೇಶದಾಗ ಇದ್ದವರಿಗೆ ಭಾರತದ ಉದ್ದ ಅಗಲ ಎಲ್ಲೆ ಅರಿವಿಗೆ ಬರಬೇಕು. ಮಾರಿಷಸ್ ಉತ್ತರದಿಂದ ದಕ್ಷಿಣಕ್ಕೆ ಹೆಚ್ಚ ಅಂದ್ರ ಒಂದು ಎಂಬತ್ತು ಕಿಲೋಮೀಟರ್. ಅಗಲ ಇನ್ನೊಂದು ಐವತ್ತು ಕಿಲೋಮೀಟರು. ಒಂದು ದಿವಸದಾಗ ಇಡೀ ದೇಶ ಸುತ್ತಿ ಬರಬಹುದು. ಹಾಂಗಾಗಿ ಅಕಿ ಕೇಳಿದ್ದು ಮಜಾ ಅನ್ನಿಸ್ತೇ ಹೊರತು ಸಾಕಪಾ ಇಕಿ ಸಹವಾಸ ಅನ್ನಿಸಲಿಲ್ಲ.

ನನ್ನ ಉತ್ತರದೊಳಗ ಕಾಶ್ಮೀರ ಬಗ್ಗೆ ಒಂದು aerogram ಒಳಗ ಎಷ್ಟು ಹಿಡಿಸಲಿಕ್ಕೆ ಸಾಧ್ಯವೋ ಅಷ್ಟು ಬರೆದು ಒಂದು ರಿಪ್ಲೈ ಝಾಡಿಸಿದೆ. ಅಕಿ ಪಾಪ ಮಾರಿಷಸ್ ಪಿಕ್ಚರ್ ಪೋಸ್ಟ್ ಕಾರ್ಡ್ ಕಳಿಸಿದ್ದಳು. ನಾ ಎಲ್ಲಿಂದ ಕಾಶ್ಮೀರದ ಫೋಟೋ ಕಳಿಸಲಿ? ಪಿಲಾನಿ ಒಳಗ ಹುಡುಕಿದರ ಪಿಲಾನಿ ಕ್ಯಾಂಪಸ್ಸಿನ ಚಂದ ಚಂದ ಪಿಕ್ಚರ್ ಪೋಸ್ಟ್ ಕಾರ್ಡ್ ಸಿಗ್ತಿತ್ತೇ ವಿನಹ ಕಾಶ್ಮೀರ ಅದು ಇದು ಸಿಗ್ತಿದ್ದಿಲ್ಲ.

ಅಕಿ ಲಲಿತಾ ಏನೋ ಖಟಿ ಪಿಟಿ ಮಾಡಿ, ಪಿಲಾನಿ ಅನ್ನೋದು ರಾಜಸ್ಥಾನ ಒಳಗ ಅದ, ಅಲ್ಲೆ ಜೈಪುರ್, ಜೈಸಲ್ಮೇರ್, ಉದಯ್ ಪುರ ಇತ್ಯಾದಿ ಅವ ಅನ್ನೋದನ್ನ ಹ್ಯಾಂಗೋ ಪತ್ತೆ ಮಾಡಿ, ಮುಂದಿನ ಪತ್ರದೊಳಗ ಅವುಗಳ ಬಗ್ಗೆ ಕೇಳಿ, ಅವೆಲ್ಲಾ ನಿನಗ ಹತ್ತಿರ ಇರಬಹುದಲ್ಲಾ? ನೋಡಿ ಏನು? ಅಂತ ಕೇಳಿ ಬಿಟ್ಟಳು. ಯವ್ವಾ ಬೇ! ನಿನಗ ಪೆನ್ ಫ್ರೆಂಡ್ ಅಲ್ಲ ಟೂರಿಸ್ಟ್ ಗೈಡ್ ಬೇಕಾಗಿತ್ತು ನೋಡು. ನಾ ಸಿಕ್ಕೊಂಡೆ. ನಾ ಪಿಲಾನಿಗೆ ಬಂದು ಇನ್ನೂ ಒಂದು ಸೆಮೆಸ್ಟರ್ ಸಹಿತ ಆಗಿಲ್ಲ. ಬಂದಾಗಿಂದ ಬರೇ ಕ್ಲಾಸು, ಟೆಸ್ಟು, ಅದು, ಇದು ಅಂತ ಬರೇ ಅದ ಆಗ್ಯದ. ಎಲ್ಲಿ ಜೈಪುರ್ ಹಚ್ಚಿ? ಎಲ್ಲಿ ಉದಯಪುರ್ ಹಚ್ಚಿ? ಸೆಮೆಸ್ಟರ್ ಮುಗಿಸಿ ಧಾರವಾಡಕ್ಕ ಹೋಗಿ, ಮೂರು ವಾರ ಆರಾಮ್ ಇದ್ದು ಬಂದರ ಸಾಕಾಗ್ಯದ. ಎಲ್ಲಿ ಜೈಪುರ್ ಹಚ್ಚಿ ಬೇ? ಅಂತ ಬರೆಯೋಹಾಂಗ ಆಗಿತ್ತು. ಹಾಂಗ ಬರಿಲಿಲ್ಲ. ತಿಳಿದ ಮಟ್ಟಿಗೆ ಬರೆದು, ಬರೆ ಜೈಪುರ ಇತ್ಯಾದಿ ಮಾತ್ರ ಅಲ್ಲ, ರಾಜಸ್ಥಾನ ಒಳಗ ರಣಥಂಬೋರ್ ಅಂತ ಸಹಿತ ಅದ. ಅಲ್ಲೆ ಹುಲಿ ಸಹಿತ ಅವ. ಗರ್ರ್! ಅನ್ನೋ ಖರೆ ಹುಲಿ ಅಂತ ಹೇಳಿದೆ. ಹುಲಿ ಕೇಳಿದ ಮ್ಯಾಲೆ ಎಲ್ಲರ ಹುಡುಗಿ distract ಆಗಿ ನನ್ನ ಟೂರಿಸ್ಟ್ ಗೈಡ್ ತರಹ ಪ್ರಶ್ನೆ ಮಾಡೋದು ಬಿಡ್ತಾಳೋ ಏನೋ ಅಂತ ವಿಚಾರ.

ಪಿಲಾನಿ ಒಳಗ ಇದ್ದಾಗ ಪತ್ರ ಮಿತ್ರತ್ವಕ್ಕ ಇನ್ನೊಂದು complication ಅಂದ್ರ ವರ್ಷಕ್ಕ ಎರಡು ಸರೆ ಬರೋ ಸೆಮೆಸ್ಟರ್ ರಜಾ. ರಜಾ ಟೈಮ್ ಒಳಗ ಬಂದ ಪತ್ರಗಳು ಎಷ್ಟೋ ಕಳೆದು ಹೋಗ್ತಿದ್ದವು ಅಂತ ಪ್ರತೀತಿ ಇತ್ತು. ಹುಡುಗುರು ಊರಿಗೆ ಹೋಗ್ಯಾರ ಅಂದ್ರೇನಾತು? ಪೋಸ್ಟ್ ಮ್ಯಾನ್ ಮಂದಿ ರೂಮಿಗೆ ಬಂದು ಪತ್ರಾ ಒಗೆದು ಹೋಗಬೇಕು. ಒಂದು ಸೆಮೆಸ್ಟರ್ ರಜಾ ಕೆಟ್ಟ ಥಂಡಿ ಟೈಮ್ ಒಳಗ ಬಂದ್ರ ಇನ್ನೊಂದು ಕೆಟ್ಟ ಬ್ಯಾಸಿಗಿ ಟೈಮ್ ಒಳಗ. ಆ ಕೆಟ್ಟ ಥಂಡಿ, ಬಿಸಿಲಿನ್ಯಾಗ ಎಲ್ಲಿ ಇಲ್ಲದ ಸ್ಟೂಡೆಂಟಗಳ ಪತ್ರ ಬಟವಾಡೆ ಮಾಡಿಕೋತ್ತ ಇರೋದು ಅಂತ ರಜಾ ಟೈಮ್ ನಲ್ಲಿ ಬಂದ ಭಾಳ ಪತ್ರಗಳಿಗೆ ಅಂಚೆ ಮಂದಿ ಏನೋ ಒಂದು ಗತಿ ಕಾಣಿಸಿಬಿಡ್ತಿದ್ದರು ಅಂತ ಪತ್ರ ಕಳೆದುಕೊಂಡವರ complaint. ಹಾಂಗಾಗಿ ನಮ್ಮ ಪತ್ರ ಮಿತ್ರಳಿಗೆ ಬರೋಬ್ಬರಿ ಒಂದು ಟೈಮ್ ಟೇಬಲ್ ಮಾಡಿಕೊಟ್ಟು, ಈ ಟೈಮ್ ಒಳಗ ಪತ್ರಾ ಬರಿ ಬ್ಯಾಡಾ, ಬರದ್ರ ಮುಟ್ಟೋದಿಲ್ಲ ಅಂತ ಹೇಳಿದೆ. ಎಷ್ಟು ತಿಳೀತೋ ಬಿಡ್ತೋ? ಸೂಟಿಯೊಳಗ ಪತ್ರ ಯಾವದೂ ಮಿಸ್ ಆದಂಗ ಇಲ್ಲ.

ಮುಂದಿನ complication ಅಂದ್ರ ಬ್ಯಾಸಿಗಿ ದೊಡ್ಡ ಸೂಟಿ. ಮೇ ತಿಂಗಳ ಕೊನೇ ವಾರದಿಂದ ಜುಲೈ ತಿಂಗಳ  ಕೊನೇ ವಾರದ ವರೆಗೆ. ಆವಾಗ ನಮ್ಮ ಮುಕ್ಕಾಂ ಧಾರವಾಡ. ಅದಕ್ಕ ಆ ಟೈಮ್ ಒಳಗ ಪತ್ರ ಬರಿಬೇಕು ಅಂದ್ರ ಧಾರವಾಡ ಪತಾ ಕೊಟ್ಟೆ. ಅಕಿ ಹಾಪ್ ಆಗಿ ಬಿಟ್ಟಿರಬೇಕು. ಏನಪಾ ಇವಂದು? ಎಷ್ಟು ಅಡ್ರೆಸ್ ಅವ? ಆ ಸೂಟಿಯೊಳಗ ನಾ ಮೂರು ನಾಕು ವಾರ ಚೈನಿ ಹೊಡಿಲಿಕ್ಕೆ ಮೈಸೂರಿಗೆ ಬ್ಯಾರೆ ಹೋಗಿ ಕೂತಿದ್ದೆ. ಮೈಸೂರಿನ ಅಡ್ರೆಸ್ ಸಹಿತ  ಕೊಟ್ಟು ಬಿಟ್ಟಿದ್ದರ ಅಕಿ ಹಾಪ್ ಆಗೋದು ಗ್ಯಾರಂಟೀ ಇತ್ತು. ಬ್ಯಾಡ ಬಿಡು, ಪತ್ರ ಬಂದಿದ್ದರ ಧಾರವಾಡ ಒಳಗ ಬಂದು ಬಿದ್ದಿರ್ತದ, ಹೋಗಿ ಓದಿದರರ ಆತು ಅಂತ ಹೇಳಿ ಮತ್ತೂ complicated ಮಾಡಲಿಲ್ಲ.

ಪಿಲಾನಿ ಒಳಗೇ ಇದ್ದರೂ, ಎರಡನೇ ವರ್ಷ ಹಾಸ್ಟೆಲ್ ಅದೇ ಉಳಿದರೂ ರೂಂ ನಂಬರ್ ಚೇಂಜ್ ಆಗ್ತಿತ್ತು. ಅದೊಂದು ಮತ್ತೊಂದು complication. ಅದಕ್ಕ ಬ್ಯಾಸಿಗೆ ಸೂಟಿ ಕೊನೇ ಪತ್ರದಾಗ ಅಕಿಗೆ ಬರದೆ, ಮುಂದಿನ ಪತ್ರದಾಗ ಒಂದು ಸಣ್ಣ ಚೇಂಜ್ ಮಾಡು. ರೂಮ ನಂಬರ್ ೨೪೫ ರ ಬದಲೀ ೨೦೩ ಬರಿ ಅಂತ ಹೇಳಿದೆ. ಇಲ್ಲಂದ್ರ ಪತ್ರ ಎಲ್ಲೋ ಹೋಗಿ, ಫಾರಿನ್ ಸ್ಟ್ಯಾಂಪ್ ಅದ ಅಂತ ಹೇಳಿ, ಯಾರರೆ ಸ್ಟ್ಯಾಂಪ್ ಕಲೆಕ್ಟ್ ಮಾಡೋ ಹಾಪನಿಗೆ ಸಿಕ್ಕು, ಆವಾ ನನಗ ಪತ್ರಾ ಕೊಡಲೇ ಇಲ್ಲ ಅಂದ್ರ ಗೋವಿಂದಾ ಗೋವಿಂದ!

ಇದೆಲ್ಲ ಒಂದು ಪತ್ರದಾಗ ಬರದ ಮ್ಯಾಲೆ ಅಕಿ ಧಾರವಾಡದ ಬಗ್ಗೆ ಕೇಳಿದಳು. ಧಾರವಾಡ ಎಲ್ಲದ? ಹೋಗಲಿಕ್ಕೆ ಎಷ್ಟು ಹೊತ್ತು ಹಿಡಿತದ? ಅದು ಇದು ಅಂತ. ನಾ ಹೇಳಿದೆ, ನೋಡವಾ, ಪಿಲಾನಿ ರಾತ್ರಿ ಬಿಟ್ಟು, ಕೆಟ್ಟ ಗತಿಗೆಟ್ಟು ಹೋದ ರಾಜಸ್ಥಾನ ಅಥವಾ ಹರಿಯಾಣಾ ರೋಡವೇಸ್ ಬಸ್ಸಿನ್ಯಾಗ ಬೆನ್ನು ಮುರಕೊಂಡು, ಎಲ್ಲಾ ನಟ್ಟು ಬೋಲ್ಟು ಲೂಸ್ ಮಾಡಿಕೊಂಡು ಮುಂಜಾನೆ ದೆಲ್ಲಿಗೆ ಬಂದು ಮುಟ್ಟತೇವಿ. ಅಲ್ಲೆ ಇಳಿದು ಹಜರತ್ ನಿಜಾಮುದ್ದೀನ ರೈಲ್ವೆ ಸ್ಟೇಷನ್ ಗೆ ಬಂದು ಒಂದು ಎಂಟು ತಾಸು ನೊಣ ಹೊಡಿತೇವಿ. ಅಲ್ಲಿಂದ ಮಧ್ಯಾನ ಸುಮಾರು ಎರಡು ಘಂಟೇಕ್ಕ ನಿಜಾಮುದ್ದೀನ-ಗೋವಾ express ಟ್ರೈನ್ ಹಿಡಿತೇವಿ. ಮರುದಿವಸ ರಾತ್ರಿ ಹತ್ತು ಘಂಟೇಕ್ಕ ಮೀರಜ್ ಮುಟ್ಟತೇವಿ. ಅಲ್ಲೆ ಮತ್ತ ಟ್ರೈನ್ ಚೇಂಜ್ ಮಾಡಿ, ಎಲ್ಲ ಸರಿ ಹೋದ್ರ, ಮುಂಜಾನೆ ಸುಮಾರು ಆರೂವರಿಗೆ ಧಾರವಾಡ. ಅಂದ್ರ ಪಿಲಾನಿ ಬಿಟ್ಟು ಸುಮಾರು ಐವತ್ತೈದು ತಾಸಿನ ನಂತರ ಮನಿ ಮುಟ್ಟತೇನಿ. ಎರಡು ದಿವಸದ ಮ್ಯಾಲೆ, ಅಂತ ಬರದೆ. ಅಷ್ಟೊತ್ತು ಬೇಕಾ!? ಅಂತ ಅಕಿ ಕೇಳಿದ ಸ್ಟೈಲ್ ನೋಡಿದರ ಐವತ್ತೈದು ತಾಸಿನ್ಯಾಗ ಇಡೀ ಮಾರಿಷಸ್ ದೇಶವನ್ನೇ ಐದು ಸರೆ ರೌಂಡ್ ಹಾಕಿ ಬರಬಹದು ಅನ್ನೋ ರೀತಿಯೊಳಗ ಹೇಳಿದಳು. ಅಷ್ಟು ಸಣ್ಣ ದೇಶದಾಗ ಇದ್ದು, ಗುಂಯ್ ಅಂತ ಕಾರು ಹತ್ತಿಕೊಂಡು ಹೋಗವರಿಗೆ ನಮ್ಮ ಮಲ್ಟಿಪಲ್ ದಿನಗಳ ಟ್ರೈನ್ ಜರ್ನೀ ಎಲ್ಲಿಂದ ಗೊತ್ತಾಗಬೇಕು? ಏನೋಪ್ಪಾ? ನೀವೆಲ್ಲಾ ಭಾಳ ದೂರ ದೂರ ಅಡ್ಯಾಡತೀರಿ ಅಂತ ಹೇಳಿ ಸುಮ್ಮನಾದಳು ಲಲಿತಾ.

೧೯೯೧ ಬ್ಯಾಸಿಗಿ ಸೂಟಿಗೆ ಮೊದಲ ವರ್ಷ ಮುಗಿಸಿ ಬಂದ್ರ ಇಲ್ಲೆ ಧಾರವಾಡ ಒಳಗ ಇದ್ದ ಫ್ರೆಂಡ್ಸ್ ಅವರ ಪರೀಕ್ಷಾ ಅದು ಇದು ಅಂತ ಬಿಜಿ ಇದ್ದರು. ಅದೇ ಟೈಮ್ ಒಳಗ ರಾಜೀವ್ ಗಾಂಧಿ ಒಬ್ಬವ ಮ್ಯಾಲೆ ಹೋಗಿ, ಎಲೆಕ್ಷನ್ ಎಲ್ಲ ಮುಂದ ಹೋಗಿ, ಕವಿವಿ ಹುಡುಗರ ಪರೀಕ್ಷಾ ಎಲ್ಲ ಎತ್ತರ ಪತ್ತರ ಆಗಿ, ನಾ ಮಸ್ತ ರಜಾ ಎಂಜಾಯ್ ಮಾಡೋ ಮೂಡಿನ್ಯಾಗ ಇದ್ದರ ಇವರ ಪರೀಕ್ಷಾ ತಯಾರಿ. ಧಾರವಾಡ ಬೋರ್ ಬಂತು. ನಡಿ ಮೈಸೂರಿಗೆ ಹೋಗಿ ಬರೋಣ, ಹ್ಯಾಂಗೂ ಅಲ್ಲೆ ಒಬ್ಬ ಬ್ಯಾಚುಲರ್ ಕಸಿನ್ ಮಾತ್ರ ನೌಕರಿ ಹಿಡದು, ಮನಿ ಮಾಡಿ, ಮಸ್ತ ಮಸ್ತಿ ಮಾಡಿಕೋತ್ತ ಇದ್ದಾನ. ಬಿಟ್ಟಿ ಲಾಡ್ಜಿಂಗ್ ಸಿಗ್ತದ ಸಾಕು. ಒಂದೆರಡು ವಾರ ದಿನ ಪೂರ್ತಿ ಮೈಸೂರ ಅಡ್ಯಾಡೋಣ. ಸಂಜಿ, ವೀಕೆಂಡ್ ಎಲ್ಲ ಕಸಿನ್ ಜೋಡಿ ಮಸ್ತ ಚೈನಿ ಮಾಡೋಣ ಅಂತ ಹೇಳಿ, ಮೈಸೂರಿಗೆ ಹೋಗಿಬಿಟ್ಟೆ.

ಅಲ್ಲೆ ಮೈಸೂರಿಗೆ ಹೋದ ಮ್ಯಾಲೆ ವಿಶ್ವ ಪ್ರಸಿದ್ಧ ಪ್ರಾಣಿ ಸಂಗ್ರಹಾಲಯ (zoo) ಹೋಗಲಿಲ್ಲ ಅಂದ್ರ ಹ್ಯಾಂಗ? ಒಂದು ದಿವಸ ಝೂದಿಂದ ಹೊರಗ ಬರೋವಾಗ, ಪಿಕ್ಚರ್ ಪೋಸ್ಟ್ ಕಾರ್ಡ್ ಮಾರವರು ಕಂಡರು. ನನ್ನ ಮಾರಿಷಸ್ ಪತ್ರ ಮಿತ್ರೆ ಲಲಿತಾ ಪ್ರತಿ ಪತ್ರದಾಗ ಮಾರಿಷಸ್ ದೇಶದ ಚಂದ ಚಂದ ಪಿಕ್ಚರ್ ಕಾರ್ಡ್ ಇಟ್ಟಿರ್ತಾಳ, ನಾವೂ ನಮ್ಮ ದೇಶದ ಝೂ ಪಿಕ್ಚರ್ ಕಾರ್ಡ್ ಇಟ್ಟು ಕಳಿಸೋಣ ಅಂತ ಹೇಳಿ ಒಂದು ಸೆಟ್ ಖರೀದಿ ಮಾಡಿದೆ. ಎಂಟೋ ಹತ್ತೋ ಕಾರ್ಡಿನ ಒಂದು ಸೆಟ್. ಒಂದು ಐದಾರ ರೂಪಾಯಿ. ತುಟ್ಟಿನೇ ಆತು. ಆದ್ರ ನಾ ಅಕಿಗೆ ಒಂದೂ ಪಿಕ್ಚರ್ ಪೋಸ್ಟ್ ಕಾರ್ಡ್ ಕಳಿಸೇ ಇಲ್ಲ ಅಂತ ಹೇಳಿ ತೊಗೊಂಡೆ.

ಎಲ್ಲಾ ಪಿಕ್ಚರ್ ಪೋಸ್ಟ್ ಕಾರ್ಡ್ ನೋಡಿದೆ. ಚೊಲೊ ಇದ್ದವು. ಮೈಸೂರ ಝೂನ್ಯಾಗಿನ ಬ್ಯಾರೆ ಬ್ಯಾರೆ ಪ್ರಾಣಿಗಳವು. ಗೋರಿಲ್ಲಾದ ಕಾರ್ಡ್ ಮಾತ್ರ ಭಾಳ ಅಸಡ್ಡಾಳ ಇತ್ತು. ಆ ಗೋರಿಲ್ಲಾ 'ಏನೋ ಖಾಸಗೀ ಸಂತೋಷದ ಕೆಲಸ' (?) ಅಕೇಲಾ ಮಾಡಿಕೋತ್ತ ಇದ್ದಿದ್ದನ್ನ ಕಿಡಿಗೇಡಿ ಫೋಟೋಗ್ರಾಫರ್ ಮಸ್ತ ಫೋಟೋ ಹೊಡೆದು ಬಿಟ್ಟಿದ್ದ. ಛೀ! ಅದೊಂದನ್ನ ಮಾತ್ರ ತೆಗೆದು ಬ್ಯಾರೆ ಕಾರ್ಡ್ ನಮ್ಮ ಪತ್ರ ಮಿತ್ರಳಿಗೆ ಕಳಿಸಬೇಕು. ಆ ಹೊಲಸ್ ಗೋರಿಲ್ಲಾ ಕಾರ್ಡ್ ಕಳಿಸಿದರ ಅಕಿ ಪತ್ರ ಮಿತ್ರತ್ವಕ್ಕ ಒಂದು ದೊಡ್ಡ ನಮಸ್ಕಾರ ಗ್ಯಾರಂಟೀ ಹೊಡಿತಾಳ ಅಂತ ತಿಳದು, ಮನಿಸ್ಸಿನ್ಯಾಗೇ ನೋಟ್ ಮಾಡಿಕೊಂಡೆ - ಈ ಕಾರ್ಡ್ ಮಾತ್ರ ತೆಗದೇ, ಉಳಿದ ಕಾರ್ಡ್ ಮಾತ್ರ ಕಳಿಸಬೇಕು ಅಂತ. ಮನಸ್ಸಿನ್ಯಾಗ ಮಾಡಿಕೊಂಡ ನೋಟ್ಸ್ ಮತ್ತ ನೀರಿನ ಮ್ಯಾಲೆ ಬರೆದ ಬರಹ ಎರಡೂ ಒಂದೇ ಅಂತ ಆವತ್ತಿಗೆ ಗೊತ್ತಿರಲಿಲ್ಲ. ಗೊತ್ತಾಗಲಿಕ್ಕೆ ಒಂದು ಸಣ್ಣ ಲಫಡಾ ಆಗಬೇಕಾತು.

ಎರಡು ಮೂರು ವಾರ ಮೈಸೂರ ಒಳಗ ಮಸ್ತಿ ಮಾಡಿ ವಾಪಸ್ ಬಂದ್ರ ಧಾರವಾಡ ಒಳಗ ಮಾರಿಷಸ್ ನಿಂದ ಲಲಿತಾ ಬರೆದ ಪತ್ರ ಬಂದು ಕೂತಿತ್ತು. ಶಬಾಶ್! ಹುಡುಗಿಗೆ ತಲಿ ಅದ. ಯಾವ ಟೈಮ್ ಒಳಗ ಎಲ್ಲೆ ಪತ್ರ ಬರಿ ಬೇಕು ಅಂತ ನಾ ಹ್ಯಾಂಗೆಂಗ ಹೇಳೇನಿ ಅದರ ಪ್ರಕಾರ ಬರಿತಾಳ. ವೆರಿ ಗುಡ್.

ಈ ಸರೆ ತನ್ನ ಪತ್ರದಾಗ ಅಕಿ ತನ್ನ ಒಂದು ಫೋಟೋ ಇಟ್ಟಿದ್ದಳು. ಘಾಗ್ರಾ ಚೋಲಿ ಹಾಕಿಕೊಂಡು, ಕೈಯಾಗ ಕೋಲು ಹಿಡಕೊಂಡು ಹೊಂಟಿದ್ದ ಫೋಟೋ. ನವರಾತ್ರಿ ದಾಂಡಿಯಾಕ್ಕ ಹೊಂಟಿರಬೇಕು. ಮುಂದಿನ ಪತ್ರದಾಗ ಕೇಳಬೇಕು. ನನಗೂ ಫೋಟೋ ಕಳಿಸಲು ಹೇಳಿದಳು. ಇದ್ದರ ಮಾತ್ರ. ಯಾಕಿಲ್ಲ? ಪಿಯೂಸಿ ಸೆಕೆಂಡ್ ಇಯರ್ ಒಳಗ ಒಂದು passport ಸೈಜಿನ ಫೋಟೋ ತೆಗೆಸಿದ್ದೆ. ಸಾಲಿ ಸ್ಟುಡಿಯೋ ಒಳಗ. ಅದು ಇದು ಅಪ್ಲಿಕೇಶನ್ ಗೆ ಹಚ್ಚಲಿಕ್ಕೆ ಅಂತ. ನಂತರ ಐದು ವರ್ಷ ಎಲ್ಲಾ ಕಡೆ ಅದೇ ಫೋಟೋ. ಬ್ಯಾರೆ ಫೋಟೋ ತೆಗಿಸೇ ಇಲ್ಲ. ಬೇಕಾದಾಗ  ಸಾಲಿ ಫೋಟೋ ಸ್ಟುಡಿಯೋಕ್ಕ ಹೋಗೋದು, ಅವಂಗ  ನಂಬರ್ ಕೊಡೋದು, ಹತ್ತೋ ಇಪ್ಪತ್ತೋ ಕಾಪಿ ಅಂತ ಹೇಳಿ ತರೋದು. ಅದೇ ಒಂದು ಮಗ್ ಶಾಟ್ ಫೋಟೋ ಕಳಿಸಿದರಾತು ಅಂತ ಬಿಟ್ಟೆ.

ಪತ್ರ ಬರದೆ. ಸ್ವಲ್ಪ ಮೈಸೂರ ಬಗ್ಗೆ ಬರೆದೆ. ಅಕಿಗೆ ಹ್ಯಾಂಗೂ ಎಲ್ಲ ಸ್ಥಳಗಳ ಬಗ್ಗೆ ಸಿಕ್ಕಾಪಟ್ಟೆ ಆಸಕ್ತಿ. ಹಾಂಗಾಗಿ ಮೈಸೂರು, ಮಹಾರಾಜರು, ಅರಮನೆ, ಅದು, ಇದು ಅಂತ ಎಲ್ಲ ಕೊರೆದು, ಮೈಸೂರ್ ಝೂ ಪಿಕ್ಚರ್ ಪೋಸ್ಟ್ ಕಾರ್ಡ್ ಎಲ್ಲ ಇಟ್ಟು, ನಂದು ಒಂದು ಕರಿ ಬಿಳಿ passport ಫೋಟೋ ಇಟ್ಟು, ಪತ್ರಾ ಹಾಕಿಬಿಟ್ಟೆ. ಈ ಸರೆ postage ಸುಮಾರ್ ಆತು. ವಜ್ಜಾ ಆಗಿತ್ತು ಪತ್ರ.

1989 ರಲ್ಲಿ ತೆಗೆಸಿದ್ದ passport ಫೋಟೋ. ಮುಂದೆ ಐದು ವರ್ಷ ಬ್ಯಾರೆ ಫೋಟೋ ಇಲ್ಲ.

ಹೋಗ್ಗೋ!!!! ಪತ್ರಾ ಹಾಕಿ ಒಂದೆರಡು ದಿವಸ ಆದ ಮ್ಯಾಲೆ ನೆನಪ ಆತು. ಆ ಮೈಸೂರ್ ಝೂ ಫೋಟೋಗಳಲ್ಲಿ ಹೊಲಸ್ ಗೋರಿಲ್ಲಾ ಫೋಟೋ ತೆಗೆದು ಉಳಿದ ಫೋಟೋ ಮಾತ್ರ ಕಳಿಸಬೇಕಾಗಿತ್ತು. ಮರೆತು ಬಿಟ್ಟಿದ್ದೆ. ಆತು ಇನ್ನು. ಇಕಿ ಒಂದೋ ಪತ್ರ ಮಿತ್ರತ್ವ ಬಿಟ್ಟು ಓಡಿ ಹೋಗ್ತಾಳ. ಇಲ್ಲ ಹಾಕ್ಕೊಂಡು ಬೈದು ಪತ್ರಾ ಬರಿತಾಳ. ಅಷ್ಟೇ. ಛೆ! ಅಷ್ಟು ನೆನಪು ಮಾಡಿ ಇಟ್ಟಿದ್ದೆ. ಆ ಫೋಟೋ ತೆಗೆದು ಬಾಕಿದನ್ನ ಮಾತ್ರ ಕಳಿಸಬೇಕು ಅಂತ. ಈಗ ನೋಡಿದರ ಅದನ್ನ ಮರೆತು ಫುಲ್ ಎಲ್ಲಾ ಕಳಿಸಿಬಿಟ್ಟೆ ಅಂತ.

ಅಷ್ಟರಾಗ ೧೯೯೧ ಜುಲೈ ತಿಂಗಳ ಕೊನೇ ವಾರ ಬಂತು. ವಾಪಸ್ ಹೋಗೋ ಟೈಮ್. ಧಾರವಾಡದಾಗ ಮಸ್ತ ಮಳಿಗಾಲ. ತಂಪು ತಂಪು ಹವಾ. ಎರಡು ತಿಂಗಳು ಚೈನಿ ಹೊಡೆದ ಮ್ಯಾಲೆ ಈಗ ವಾಪಾಸ್ ಹೋಗೋದು ಅಂದ್ರ ಕೆಟ್ಟ ಬ್ಯಾಸರಾ. ಅದೂ ಪಿಲಾನಿ ಕೆಟ್ಟ ಬಿಸಿಲು ನೆನಿಸಿಕೊಂಡರ, ರಾಮಾ ರಾಮಾ! ಗತಿ ಇಲ್ಲ. ಇನ್ನು ಮೂರು ವರ್ಷ ಅಷ್ಟೇ, ಅಂತ ಹೇಳಿ ಮತ್ತ ನಿಜಾಮುದ್ದೀನ್ express ಹಿಡಿದು, ಧಾರವಾಡದಿಂದ ಇದ್ದ ಇನ್ನು ಇಬ್ಬರು ಸೀನಿಯರ್ಸ್, ದಾಂಡೇಲಿಯಿಂದ ಒಬ್ಬವ ಸೀನಿಯರ್ ಎಲ್ಲ ಕೂಡಿ ಹೊಂಟಿವಿ. ಪುಣೆ, ಮನ್ಮಾಡ ಊರಾಗೂ ಒಂದಿಷ್ಟು ಜನ ಅದೇ ಟ್ರೇನ್ ಹತ್ತಿ ಪಿಲಾನಿ ತನಕಾ ಮಸ್ತ ಕಂಪನಿ ಸಿಗಿತ್ತು. ಯಾವತ್ತೂ ಮಿಸ್ ಆಗಿಲ್ಲ ಇದು.

ಪಿಲಾನಿಗೆ ಹೋಗಿ, ಬ್ಯಾರೆ ರೂಮಿಗೆ ಶಿಫ್ಟ್ ಆಗಿ, ಸೆಟಲ್ ಆಗಿ, ಸೆಕೆಂಡ್ ಇಯರ್ ಶುರು ಮಾಡಿ ಆತು. ಈಗ ನಾವೇ ಸೀನಿಯರ್ ಮಂದಿ. ರಾಗ್ಗಿಂಗ್ ಮಾಡಲಿಲ್ಲ ಅಂದ್ರ ಹ್ಯಾಂಗ? ಹಾಂಗಾಗಿ ಅದರೊಳಗ ಬಿಜಿ ಆಗಿ ಎಲ್ಲಾ ಮರೆತು ಬಿಟ್ಟೆ.

ಸುಮಾರು ದಿವಸ ಆದ ಮ್ಯಾಲೆ ಒಬ್ಬ ಜೂನಿಯರ್ ರೂಮಿಗೆ ಬಂದ. ಒಂದು ಪತ್ರಾ ಕೊಟ್ಟು, ಆಶಬುರಕ ಮಾರಿ ಮಾಡಿಕೊಂಡು ನಿಂತ. ಏನಲೇ ಮಂಗ್ಯಾನಿಕೆ? ಅನ್ನೋ ಲುಕ್ ಕೊಟ್ಟೆ. ಸರ್, ಪತ್ರ ನಿಮ್ಮದೇ. ಪೋಸ್ಟ್ ಮನ್ ಮೆಸ್ಸ್ ಮುಂದ ಇದ್ದ. ನಾ ಕೊಡತೇನಿ ಅಂತ ಹೇಳಿ ಇಸಕೊಂಡು ಬಂದೆ. ನನಗ ಸ್ಟ್ಯಾಂಪ್ ಬೇಕ್ರೀ. ಕೊಡ್ರೀ ಸರ್ರಾ, ಅಂತ ಹೇಳಿ ಭಿಕ್ಷುಕರ ಲುಕ್ ಕೊಟ್ಟಾ. ರಾಗ್ಗಿಂಗ್ ಟೈಮ್ ಒಳಗ ಸೀನಿಯರ್ ಮಂದಿಗೆ ಸರ್ ಅನ್ನಬೇಕು. ಅದು ನಿಯಮ. ಅದಕ್ಕ ಅಂದಿದ್ದ. ಹೋಗ್ಗೋ!!! ಮಂಗ್ಯಾನಿಕೆ!!! ಸ್ಟ್ಯಾಂಪ್ ಬೇಕ? ತೊಗೋ. ಹೋಗು. ಚೈನಿ ಮಾಡು ಹೋಗು, ಅಂತ ಹೇಳಿ, ಕತ್ತರಿಯಿಂದ ಮಾರಿಷಸ್ ಸ್ಟ್ಯಾಂಪ್ ಕತ್ತರಿಸಿ ಕೊಟ್ಟೆ. ಹುಡುಗ ಫುಲ್ ಖುಷ್. ಏನರೆ ಕೆಲಸ ಅದ ಏನ್ರೀ ಸರ್ರಾ? ಅಂತ ಕೇಳಿ ಬಿಟ್ಟ. ಇನ್ನೂ ರಾಗ್ಗಿಂಗ್ ಪಿರಿಯಡ್ ಮುಗಿದಿದ್ದಿಲ್ಲ. ಏನಿಲ್ಲ ಹೋಗಲೇ, ಅಂತ ಹೇಳಿ, ಇನ್ನೂ ಒಂದಿಷ್ಟು ಸ್ಟ್ಯಾಂಪ್ ಹಳೆ ಪತ್ರಗಳಿಂದ ಕತ್ತರಿಸಿ ಕೊಟ್ಟು ಕಳಿಸಿದೆ. ಆವಾ ಭಾಳ ದೂರ ಹೋಗಲಿಲ್ಲ. ನನ್ನ ಬಾಜು ರೂಮಿನವ ಅವನ್ನ ಹಿಡದು, ಡಾನ್ಸ್ ಮಾಡಲೇ ಮಂಗ್ಯಾನಿಕೆ, ಅಂತ ರಾಗ್ಗಿಂಗ್ ಶುರು ಮಾಡಿದ. ಡಾನ್ಸ್ ನೋಡಲಿಕ್ಕೆ ನನ್ನೂ ಕರೆದ. ನನಗ ಪತ್ರ ಓದಬೇಕಾಗಿತ್ತು ಅಂತ ಹೇಳಿ ನೀವು ರಾಗ್ಗಿಂಗ್ ಮಾಡ್ರಿಪಾ. ನನಗ ಬ್ಯಾರೆ ಕೆಲಸ ಅದ ಅಂತ ಹೇಳಿ ಲಲಿತಾನ ಪತ್ರ ಓದಲಿಕ್ಕೆ ಶುರು ಮಾಡಿದೆ. ಸ್ಟ್ಯಾಂಪ್ ಆಶಬುರಕ ಹುಡುಗ ಪುಣ್ಯಕ್ಕ ಪತ್ರಾ ತಂದಾರೆ ಕೊಟ್ಟ. ಪತ್ರಾ ಹರಿದು ಒಗೆದು, ಸ್ಟ್ಯಾಂಪ್ ಇಟ್ಟುಕೊಂಡಿದ್ದ ಅಂದ್ರಾ? ಏ! ಜೂನಿಯರ್ ಹುಡುಗುರು, ಅದೂ ರಾಗ್ಗಿಂಗ್ ಟೈಮ್ ಒಳಗ ಹಂಗೆಲ್ಲಾ ಮಾಡೋದಿಲ್ಲ. ಯಾಕಂದ್ರ ಆ ಮ್ಯಾಲೆ ಸಿಕ್ಕೊಂಡು ಬಿದ್ದರು ಅಂದ್ರ ಜಾತಿಯಿಂದ ಹೊರಗ ಹಾಕಿಸಿಕೊಂಡಷ್ಟು ಕಷ್ಟ ಪಡ್ತಾರ. ಅದಕ್ಕೇ ಎಲ್ಲರೂ ಎಲ್ಲಾ ಮುಚ್ಚಿಕೊಂಡು ರಾಗ್ಗಿಂಗ್ ಇತ್ಯಾದಿ ಮಾಡಿಸಿಕೊಳ್ಳೋದು.

ಪುಣ್ಯಕ್ಕ ಅಕಿ ಲಲಿತಾ ಆ ಗೋರಿಲ್ಲಾ ಫೋಟೋ ನೋಡಿ offend ಆಗಿರಲಿಲ್ಲ. ಅದರ ಬಗ್ಗೆ ಏನೂ ಬರಿದಿರಲಿಲ್ಲ. ಎಲ್ಲಾ ಫೋಟೋ ಮಸ್ತ ಅವ ಅಂತ ಹೇಳಿದ್ದಳು. ಏನು ಬರೆ ಕರಿ ಬಿಳಿ ಸಣ್ಣ ಫೋಟೋ ಕಳಿಸಿ? ಕಲರ್ ಫೋಟೋ ಇಲ್ಲ ನಿಂದು? ಅಂತ ಕೇಳಿದ್ದಳು. ಮತ್ತ ಅಕಿ ಫೋಟೋ ನೋಡಿ ನಾನು, ಏನವಾ ಎಲ್ಲೇ ದಾಂಡಿಯಾ ಆಡಲಿಕ್ಕೆ ಹೊಂಟಿದ್ದಿ ಏನು? ಅಂತ ಕೇಳಿದ್ದೆ ನೋಡ್ರೀ, ಅದಕ್ಕ ಅಕಿ, ಇಲ್ಲೋ ಮಾರಾಯಾ, ನಮ್ಮ ಕಾಂಪೌಂಡ್ ಒಳಗ ಹಿಂದ ಒಂದು ನಮ್ಮದೇ ಗುಡಿ ಅದ. ಅಲ್ಲೆ ಕೃಷ್ಣನ ಪೂಜಾ ಮಾಡಲಿಕ್ಕೆ ಹೊಂಟಾಗ ತೆಗೆದ ಫೋಟೋ ಅಂದಳು. ಏನಪಾ ವಿಚಿತ್ರ ಇದು? ಮಾರಿಷಸ್ ಒಳಗ ಕೃಷ್ಣನ ಪೂಜಾ ಮಾಡಲಿಕ್ಕೆ ಹೋಗವರು ಕೋಲಾಟದ ಕೋಲು ಯಾಕ ತೊಗೊಂಡು ಹೋಗ್ತಾರ? ಅಂತ ತಿಳಿಲಿಲ್ಲ. ಕೃಷನಿಗೆ ಪೂಜಾ ಮಾಡಲಿಕ್ಕೆ ಹೋಗಿದ್ದಳೋ ಅಥವಾ ಕೃಷ್ಣ ಅನ್ನೋ ಹುಡುಗನಿಗೆ ಬಾರಿಸಲಿಕ್ಕೆ ಹೋಗಿದ್ದಳೋ? ಅಂತ ಸಂಶಯ ಬಂತು. ಕೇಳಲಿಲ್ಲ.

ಏನು ಲಕ್ಕಿ ಮಂದಿ ಇವರು ಲಲಿತಾ ಪಿಲಿತಾ ಅನ್ನೋ ಮಾರಿಷಸ್ ಮಂದಿ? ಹಾಂ? ಮನಿ ಮುಂದ ಸಮುದ್ರ. ರೌಂಡ್ ಹೊಡಿಲಿಕ್ಕೆ ಒಂದು ಮೋಟಾರ್ ಬೋಟ್. ಅಡ್ಯಾಡಲಿಕ್ಕೆ ಇಕಿ ಫ್ಯಾಮಿಲಿ ಒಳಗ ಮೂರೋ ನಾಕೋ ಟೊಯೋಟಾ ಕಾರ್ ಅವ ಅಂತ. ಇಕಿ ಕಡೆ ಒಂದು ಮೊಪೆಡ್. ಮನಿ ಹಿಂದ ದೊಡ್ಡ ಕಾಂಪೌಂಡ್ ಒಳಗ ಸ್ವಂತ ಗುಡಿ. ಸರ್ಕಾರನೇ ಅಕಿಗೆ ಪುಕ್ಕಟ್ಟೆ ಏನೋ ಡಿಪ್ಲೊಮಾ ಮಾಡಸ್ಲಿಕತ್ತದ ಅಂತ. ಮ್ಯಾಲೆ ಏನೋ stipend ಸಹಿತ ಕೊಡ್ತದ ಅಂತ. ಏನು ಅದೃಷ್ಟಶಾಲಿಗಳು ಅಂತೇನಿ? ಹಾಂ? ಲಕ್ಕಿ ಮಂದಿ ಬಿಡ್ರೀಪಾ ಈ ಮಾರಿಷಸ್ ಮಂದಿ. ಆರಾಮ ಇದ್ದಾರ. ಯಾವದೇ ಚಿಂತಿ ಇಲ್ಲ ಗಿಂತಿ ಇಲ್ಲ. ಅಷ್ಟು ಚಂದ ದೇಶದಾಗ ಆರಾಮ ಇದ್ದಾರ. ಪುಣ್ಯಾ ಮಾಡಿ ಪಡಕೊಂಡು ಬಂದಿರಬೇಕು ಬಿಡ್ರೀ ಅಂತ ಉಸ್ಸ್ ಅಂತ ನಿಟ್ಟುಸಿರು ಬಿಟ್ಟು, ಇನ್ನು ಮೂರ್ನಾಕ ವಾರ ಆದ ಮ್ಯಾಲೆ ಇಕಿಗೊಂದು ರಿಪ್ಲೈ ಬರಿಬೇಕು ಅಂತ ನನ್ನ ಡೈರಿ ಒಳಗ ನೋಟ್ ಮಾಡಿಕೊಂಡು ಇಟ್ಟೆ.

ಹೀಂಗ  ಮಾರಿಷಸ್ ಕೋಲಾಟದ ಕೋಲು ಹಿಡಿದಿದ್ದ ಹುಡುಗಿ ಜೋಡಿ ಪತ್ರ ವ್ಯವಹಾರ ಸೀದಾ ಸರಳ ನೆಡದಿತ್ತು. ನಮ್ಮ ದೋಸ್ತಿಗೆ ಒಂದು ವರ್ಷ ಆತು ಹೇಳಿ ಒಂದು ಫೋಟೋ ಬುಕ್ ಕಳಿಸಿದ್ದಳು ಅಕಿ. ಮತ್ತ ಮಾರಿಷಸ್ ಬಗ್ಗೆನೇ. ಮಸ್ತ ಇತ್ತು. ಒಂದು ವರ್ಷ ಆಗಿ ಹೋತಾ? ನಂಬಿಕಿ ಬರಲಿಲ್ಲ. ಯಾಕಂದ್ರ ನಂದು ಯಾವದೇ ಪತ್ರ ಮಿತ್ರತ್ವ ನಾಕು ತಿಂಗಳ ಮ್ಯಾಲೆ ಮುಂದ ಹೋಗಿರಲೇ ಇಲ್ಲ. ಇಕಿ ಜೋಡಿ ಒಂದು ವರ್ಷ ಯಾಕಾತು ಅಂತ ನೋಡಿದರ ಪತ್ರ ಬರೆದಿದ್ದು ಕಮ್ಮಿ. ಎಲ್ಲೋ ಎರಡು ಮೂರು ತಿಂಗಳಿಗೆ ಒಂದು. ಹಾಂಗಾಗಿ ಏನೋ ನೆಡದದ. ಇನ್ನೂ ಬೋರ್ ಬಂದಿಲ್ಲ. ಓಕೆ ಅಂತ ಹೇಳಿ ಆವಾಗ ಈವಾಗ ಪತ್ರ ಬರಕೋತ್ತ ಇದ್ದೆ.

ನಮ್ಮ ಪತ್ರ ಮಿತ್ರತ್ವಕ್ಕ almost ಎರಡು ವರ್ಷ ಆಗಲಿಕ್ಕೆ ಬಂದಾಗ ಲಲಿತಾ ಪತ್ರ ಬರೆದು ಅಕಿ ಲಗ್ನ ಗೊತ್ತಾಗ್ಯದ ಅಂದಳು. ಮತ್ತ ಅಕಿ ಮುಂದ ಹ್ಯಾಂಗ ಅಂತ ನೋಡಿ, ಪತ್ರ ವ್ಯವಹಾರ ಮಾಡಬೇಕೋ ಬ್ಯಾಡೋ ಅಂತ ವಿಚಾರ ಮಾಡಾಕಿ ಅಂತ ಹೇಳಿದಳು. ನನಗ, ನೀ ಪತ್ರ ಬರಿಬ್ಯಾಡ ಸದ್ಯಕ್ಕ ಯಾಕಂದ್ರ ನನ್ನ ಅಡ್ರೆಸ್, ಅಡ್ಡಹೆಸರು ಎಲ್ಲಾ ಚೇಂಜ್ ಆಗೋದು ಅದ, ಈ ಮದವಿ ಅದೂ ಇದರ ಗದ್ದಲ ಮುಗಿದ ಮ್ಯಾಲೆ ನಾನೇ ನಿನಗ ಬರೆದರೂ ಬರೆದೆ. ಬರಿಲಿಲ್ಲ ಅಂದ್ರ ಮುಗೀತು ಅಂತ ತಿಳಕೋ ಅಂತ ಹೇಳಿದ್ದಳು. ಓಕೆ ಅಂತ ಸುಮ್ಮನಾದೆ. ಪಾಪ ಹುಡುಗಿ. ಗಂಡ ಎಂಬ ಗಂಡು ಪ್ರಾಣಿ ಬೋನಿಗೆ ಹೊಂಟದ ಚಿಗರಿ. ಬದುಕಿ ಬಂದ್ರ ಪತ್ರಾ ಬರಿತದ ತೊಗೊ ಅಂತ ಹೇಳಿ ಸುಮ್ಮನಾದೆ. ಅಷ್ಟರಾಗ ನಮ್ಮ ಸೆಕೆಂಡ್ ಇಯರ್ ಮುಗೀತು. ಮತ್ತ ಬ್ಯಾಸಿಗಿ ಸೂಟಿ. ೧೯೯೨ ಮೇ. ಎರಡೆನೇ ವರ್ಷ ಆದ ಮ್ಯಾಲೆ ಒಂದು industrial internship ಇರ್ತಿತ್ತು. ನನಗ ತಮಿಳುನಾಡಿನ ಟ್ರಿಚಿಗೆ (ತಿರುಚಿರನಾಪಳ್ಳಿ) ಹಾಕಿದ್ದರು. ಧಾರವಾಡ ಒಳಗ ಇರಲಿಕ್ಕೆ ಸಿಕ್ಕಿದ್ದು ಮೊದಲು ಒಂದು ವಾರ, ಕೊನೆಗೆ ಒಂದು ವಾರ. ಬಾಕಿ ಬ್ಯಾಸಿಗಿ ಸೂಟಿ ಎಲ್ಲ ಟ್ರಿಚಿ ಒಳಗ. ಪಿಲಾನಿ ಅಂದ್ರ ಕತ್ತಿ ದುಡಿತ. ಪೂರ್ತಿ ರಜಾ ಸಹಿತ ಇಲ್ಲ. ಹೋಗ್ಗೋ!

ಬ್ಯಾಸಿಗಿ ಸೂಟಿ ಮುಗಿಸಿ ಬಂದ್ರ ಮೂರನೇ ವರ್ಷಕ್ಕ ಹಾಸ್ಟೆಲ್ ಸಹಿತ ಬ್ಯಾರೆ. ಇಕಿ ಎಲ್ಲರೆ ಹಾಪ್ ಲಲಿತಾ ಹಳೆ ಪತಾಕ್ಕ ಪತ್ರ ಬರೆದಿದ್ದರ ಅದು ಹಳೆ ರೂಮಿಗೆ ಹೋಗಿರ್ತದ ಅಂತ ಹೇಳಿ ನನ್ನ ಹಳೆ ರೂಮಿಗೆ ಹೋಗಿ, ಅಲ್ಲಿದ್ದ ಜೂನಿಯರ್ ಒಬ್ಬವಂಗ ಹೇಳಿ ಬಂದಿದ್ದೆ. ಹೀಂಗ ಮಾರಾಯಾ, ನನಗ ಯಾವದರೆ ಪತ್ರ ಬಂದ್ರ ತಂದು ಕೊಡು ಅಂತ ಹೇಳಿ. ಆವಾ ಒಳ್ಳೆ ಫ್ರೆಂಡೇ ಇದ್ದ.  ಬಂದರ ತಂದು ಕೊಡೋದ್ರಾಗ ಏನ ಸಂಶಯ ಇರಲಿಲ್ಲ. ಸಂಶಯ ಏನಿದ್ರೂ ಕುಮಾರಿಯಿಂದ ಶ್ರೀಮತಿ ಆದ ಲಲಿತಾ ಅನ್ನಾಕಿ ಪತ್ರಾ ಬರಿತಾಳೋ ಇಲ್ಲೋ ಅನ್ನೋದರ ಬಗ್ಗೆನೇ.

ಮೂರನೇ ವರ್ಷ ಅದು ಇದು ಹೆಚ್ಚಿನ ಅಭ್ಯಾಸ ಅಂತ ಹೇಳಿ ನಾವೂ ಬಿಜಿ ಆಗಿ ಬಿಟ್ಟಿವಿ. ಸುಮಾರು ಮೂರ್ನಾಕು ತಿಂಗಳಾದ್ರೂ ಇಕಿ ಪತ್ರ ಬರದಿದ್ದು ನೋಡಿ, ಓಹೋ ಬಾಯಾರು ಗೃಹ ಗೃಹಸ್ಥಿ ಒಳಗ ಮುಳುಗಿ ಹೋಗ್ಯಾರ, ಇರ್ಲಿ ಬಿಡು ಅಂತ ಬಿಟ್ಟಿವಿ. ಹೀಂಗ ಒಂದು ಒಳ್ಳೆ ಪತ್ರ ಮಿತ್ರತ್ವ ಮುಗಿದಿತ್ತು. ಮುಂದ ಎಷ್ಟು ದಿವಸ ನೆಡಿತಿತ್ತೋ ಗೊತ್ತಿಲ್ಲ. ಆದ್ರ ಸುಮಾರು ಬರಕತ್ತಾಗಿತ್ತು ಬಿಡ್ರೀ. ಮುಗಿತು ಅಂತ ಏನೂ ಬ್ಯಾಸರ ಇರಲಿಲ್ಲ. ಆತು ಅಂತ ಖುಶಿ ಇತ್ತು.

ಮತ್ತ ಇನ್ನೊಬ್ಬ ಪತ್ರ ಮಿತ್ರನ್ನ ಹುಡಕಲಿಕ್ಕೆ ಅಷ್ಟು ಆಸಕ್ತಿ ಇರಲಿಲ್ಲ. ಮೂರನೇ ವರ್ಷ ಅಂದ್ರ almost ಡಿಗ್ರಿ ಮುಗದಂಗ. ಆದರೂ international ಪೆನ್ ಫ್ರೆಂಡ್ ಕೊಡಿಸಿದ್ದ ಮನೀಶ್ ಮತ್ತ ನೆನಪಾದ. ಆವಾ ಹೇಳಿದ್ದ, ಆಕಸ್ಮಾತ ಒಂದು ವರ್ಕ್ ಔಟ್ ಆಗಲಿಲ್ಲ ಅಂದ್ರ ಇನ್ನೊಂದು ಕೊಡ್ತಾರ ಅಂತ. ಮುಂದಿನ ಸರೆ ಆವಾ ಕಂಡ್ರ ಕೇಳಬೇಕು ಅಂತ. ಮನೀಶ್ ಸಿಕ್ಕಾಗ ಕೇಳಿದರ ಅದು ಕೇವಲ ಒಂದು ವರ್ಷದೊಳಗ ಮಾತ್ರ ಲಾಗೂ ಆಗ್ತದ ಅಂದು ಬಿಟ್ಟ. ಬೇಕಾದ್ರ ಮತ್ತ ಇಪ್ಪತ್ತೈದು ರೂಪಾಯಿ ಬಡದು ಹೊಸಾ ಪೆನ್ ಫ್ರೆಂಡ್ ಮಾಡಿಕೊ ಅಂದ. ಸಾಕಪಾ ಸಾಕು. ಈ international ಪತ್ರ ಮಿತ್ರರು ಭಾಳ ತುಟ್ಟಿ ಅಂತ ಹೇಳಿ ಅಷ್ಟಕ್ಕೇ ಬಿಟ್ಟೆ.

ಇನ್ನು ಮುಂದಿನ ಮತ್ತು ಕೊನೆಯ formal ಪತ್ರ ಮಿತ್ರ(ತ್ರೆ) ಆಗಿದ್ದು ಬರೋಬ್ಬರಿ ಐದು ವರ್ಷದ ನಂತರ. ೧೯೯೭ ರಲ್ಲಿ. ಅದರದ್ದೇ ಒಂದು ಕಥೆ. ಮುಂದಿನ ಭಾಗದಲ್ಲಿ.

(ಸಶೇಷ. ಮುಂದುವರಿಯಲಿದೆ) (ಮುಂದಿನ ಭಾಗ ಇಲ್ಲಿದೆ)

* ಇವತ್ತಿನ ಪ್ರಜಾವಾಣಿಯಲ್ಲಿ, ಲೇಖಕ ನಾಗತಿಹಳ್ಳಿ ಮಾರಿಷಸ್ ಮೇಲೆ ಬರೆದಿದ್ದಾರೆ ಓದಿಕೊಳ್ಳಿ.

ಮಾರಿಷಸ್