Monday, June 29, 2015

ನೀರು ತಂದು ಕುಡಿಸೋ ಅಂದರೆ ಲಿಮ್ಕಾ ತಂದು ಕುಡಿಸಿದ ಮಿತ್ರನೊಬ್ಬನ ನೆನಪಲ್ಲಿ...

ಸಚಿನ್ ತೆಂಡೂಲ್ಕರ್ ಜೊತೆ ಮಿತ್ರ ಗಿರೀಶ್ ಕಾಮತ್

ಪುರಾತನ ಆತ್ಮೀಯ ಮಿತ್ರ ಗಿರೀಶ್ ಕಾಮತ್ ಬೆಂಗಳೂರಿನಲ್ಲಿ ರಸ್ತೆ ಅಪಘಾತವೊಂದರಲ್ಲಿ ನಿಧನನಾಗಿದ್ದಾನೆ. ಅವನ ನೆನಪಲ್ಲಿ ಈ ಲೇಖನ.

ಇಸ್ವೀ ೧೯೮೫, ನವೆಂಬರ್ ಅಥವಾ ಡಿಸೆಂಬರ್ ಅಂತ ನೆನಪಿದೆ. ನಾವು ಎಂಟನೆಯ ಕ್ಲಾಸ್. ಆವತ್ತು ಶನಿವಾರ. ಶಾಲೆ ಮುಂಜಾನೆ ಅರ್ಧ ದಿವಸ ಅಷ್ಟೇ. ಹನ್ನೊಂದೂವರೆ ಹೊತ್ತಿಗೆ ಶಾಲೆ ಬಿಟ್ಟಿತು. ಮಧ್ಯಾನದಿಂದ ಹಿಡಿದು ಸಂಜೆಯಾಗುವ ತನಕ ಗಿಚ್ಚಾಗಿ ಬ್ಯಾಡ್ಮಿಂಟನ್ ಆಡಬೇಕು. ಅದು ನಮ್ಮ ಆವತ್ತಿನ ಪ್ಲಾನ್. ಹಾಗಂತ ದೋಸ್ತ ಲಂಬ್ಯಾ ಉರ್ಫ್ ಸಂದೀಪ್ ಪಾಟೀಲನ ಜೊತೆ ಮಾತಾಡಿ, ಎಲ್ಲಿ ನಮ್ಮ ಭಟ್ಟರ ಶಾಲೆ ಕೋರ್ಟಿನಲ್ಲಿ ಆಡುವದೋ, KCD ಕೋರ್ಟಿನಲ್ಲಿ ಆಡುವದೋ ಅಥವಾ KUD ಜಿಮಕಾನಾ ಕೋರ್ಟಿನಲ್ಲಿ ಆಡುವದೋ ಅಂತ ಕೇಳೋಣ ಅಂತ, 'ಲೇ, ಲಂಬ್ಯಾ, ಇವತ್ತ ಮಧ್ಯಾನ ಎಲ್ಲಲೇ???' ಅನ್ನುವಷ್ಟರಲ್ಲಿ ಲಂಬ್ಯಾ ಬಾಂಬ್ ಹಾಕಿಬಿಟ್ಟ. 'ಮಹೇಶಾ, ಇವತ್ತು ಮಧ್ಯಾನ ಬಾಸೆಲ್ ಮಿಷನ್ ಸಾಲಿ ಜೋಡಿ ಕ್ರಿಕೆಟ್ ಮ್ಯಾಚ್ ಕೊಟ್ಟುಬಿಟ್ಟೇನಿ. ನೀನೂ ಬಂದುಬಿಡು. ಲಗೂನೆ ಹೋಗಿ ಊಟ ಮುಗಿಸಿ ಬಂದೇಬಿಡು.......' ಅಂತ ಹೇಳುತ್ತ ಉಳಿದ ಹತ್ತು ಆಟಗಾರರ ಜುಗಾಡ್ ಮಾಡುವತ್ತ ಗಮನ ಹರಿಸಿದ. ಆಗ ಅರ್ಥವಾಯಿತು. ಈ ಪುಣ್ಯಾತ್ಮ ಲಂಬ್ಯಾ ಯಾವಾಗಲೋ ಮ್ಯಾಚ್ ಕೊಟ್ಟುಬಿಟ್ಟಿದ್ದಾನೆ. ಕಮಿಟ್ ಆಗಿಬಿಟ್ಟಿದ್ದಾನೆ. ನಂತರ ಫುಲ್ ಮರೆತುಬಿಟ್ಟಿದ್ದಾನೆ. ಶನಿವಾರ ಮಧ್ಯಾನ ಶಾಲೆ ಗೇಟಿನಲ್ಲಿ ಬಾಸೆಲ್ ಮಿಷನ್ ಶಾಲೆಯ ಟೀಮು ಪೂರ್ತಿ ಸನ್ನದ್ಧವಾಗಿ ಪ್ರತ್ಯಕ್ಷವಾದಾಗಲೇ ಇವನಿಗೆ ಮ್ಯಾಚಿನ ನೆನಪಾಗಿದೆ. ಹೇಳಿ ಕೇಳಿ ಅವನೇ ಕ್ಯಾಪ್ಟನ್ ಮತ್ತು ಟಾಪ್ ಪ್ಲೇಯರ್. ಅದಕ್ಕೇ ತರಾತುರಿಯಲ್ಲಿ ಒಂದು ಟೀಮ್ ಒಟ್ಟು ಕೂಡಿಸಲು ಓಡಾಡುತ್ತಿದ್ದಾನೆ, ಒದ್ದಾಡುತ್ತಿದ್ದಾನೆ. ಹಾಗಾಗಿ ಬ್ಯಾಟ್ ಹಿಡಿಯಲು, ಬಾಲ್ ಒಗೆಯಲು ಬಂದ ಎಲ್ಲರಿಗೂ 'ಊಟ ಮಾಡಿ ಬಂದುಬಿಡ್ರೀ,' ಅಂತ ಆಫರ್ ಕೊಡುತ್ತ, ಆಫರ್ ಕೊಟ್ಟ ಇಪ್ಪತ್ತು, ಮೂವತ್ತು ಮಂದಿಯಲ್ಲಿ ಕಮ್ಮಿ ಕಮ್ಮಿ ಎಂಟೊಂಬತ್ತು ಜನ ಬಂದರೂ ಸಾಕು. 'ನಮ್ಮ ಕಡೆ ಹನ್ನೊಂದು ಮಂದಿ ಆಗಿಲ್ಲಲೇ ರಾಜ್ಯಾ. ಎಂಟ ಮಂದಿ ಅದೇವಿ. ಸಾಕು. ಆಡೋಣ ನಡ್ರೀ,' ಅಂತ ಎದುರು ಪಾರ್ಟಿಯ ಕ್ಯಾಪ್ಟನ್ ರಾಜೇಶ್ ಪಾಟೀಲ್ ಉರ್ಫ್ ಮಾಳಮಡ್ಡಿಯ ಗಿಡ್ಡ ರಾಜ್ಯಾನ ಜೊತೆಗೆ ಏನೋ ಒಂದು ತರಹದ ಮಾಂಡವಲಿ ಮಾಡುವ ಸ್ಕೆಚ್ ಹಾಕಿದ್ದ ಅಂತ ಕಾಣುತ್ತದೆ ನಮ್ಮ ಕ್ಯಾಪ್ಟನ್ ಲಂಬ್ಯಾ. ನಮ್ಮ ದೋಸ್ತ ಕ್ಯಾಪ್ಟನ್ ಲಂಬ್ಯಾ ಅಂದರೆ ಹಿಂಗೇ!

ಅದೊಂದು ಆರು ತಿಂಗಳು ಕ್ರಿಕೆಟ್ ಎಲ್ಲರಿಗೂ ಮರ್ತೇ ಹೋಗಿತ್ತು. ಆಗ ಎಲ್ಲರಿಗೂ ಬ್ಯಾಡ್ಮಿಂಟನ್ ಹುಚ್ಚು. ಹುಡುಗರು, ಹುಡುಗಿಯರು ಎಲ್ಲರೂ ಗಿಚ್ಚಾಗಿ ಬ್ಯಾಡ್ಮಿಂಟನ್ ಆಡಿದವರೇ. ಮಾಸ್ತರರು, ಮಾಸ್ತರಣಿಯರು ಸಹ ತಲಬು ತಡೆಯಲಾಗದೇ ನಮ್ಮ ಹತ್ತಿರ ರಾಕೆಟ್, ಶಟಲ್ ಕಾಕ್ ತೆಗೆದುಕೊಂಡು ಆಡಿದ್ದೇ ಆಡಿದ್ದು. ಮಾಸ್ತರುಗಳು ಪ್ಯಾಂಟ್ ಎತ್ತಿ, ಮಡಚಿ ಹಾಪ್ ಪ್ಯಾಂಟ್ ಮಾಡ್ಕೊಂಡು ಆಡಿದರೆ, ಮಾಸ್ತರಣಿಯರು ಸೀರೆ ಎತ್ತಿ ಸೊಂಟಕ್ಕೆ ಸಿಗಿಸಿಕೊಂಡು ಆಡಿದ್ದೇ ಆಡಿದ್ದು. ಹೀಗೆ ಬ್ಯಾಡ್ಮಿಂಟನ್ ಗುಂಗಿನಲ್ಲಿ ಕ್ರಿಕೆಟ್ ಅನ್ನುವದು ಮರ್ತೇ ಹೋಗಿದ್ದಾಗ ಒಂದು ಕ್ರಿಕೆಟ್ ಮ್ಯಾಚ್ ಅಚಾನಕ್ ಬಂದುಬಿಟ್ಟಿದೆ. ಪ್ರಾಕ್ಟೀಸ್ ಇಲ್ಲ. ಆದರೂ ಆಡಬೇಕು. ಕ್ಯಾಪ್ಟನ್ ಲಂಬ್ಯಾ ಮಾತು ಕೊಟ್ಟುಬಿಟ್ಟಿದ್ದಾನೆ. ಕೊಟ್ಟ ಮಾತು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾನೆ. ವಿರುದ್ಧ ಟೀಂ ಬಾಗಿಲಲ್ಲಿ ಬಂದು ನಿಂತಿದೆ. ಈಗ ಶಸ್ತ್ರ ತ್ಯಜಿಸಿ ಹೋಗಲಿಕ್ಕೆ ನಾವು ಹೇಳಿಕೇಳಿ ಕೆ.ಇ. ಬೋರ್ಡ್ ಶಾಲೆ ವಿದ್ಯಾರ್ಥಿಗಳು. ಅಂದರೆ ಏನು? ನಮ್ಮ ಹೈಸಿಯೆತ್ತೇನು? ನಮ್ಮ ಕ್ರಿಕೆಟ್ ಕಾಬೀಲಿಯತ್ತೇನು? ಬಂದದ್ದೆಲ್ಲ ಬರಲಿ ಅಂತ ಮ್ಯಾಚ್ ಆಡಲು ರೆಡಿ ಆದೆವು. ಗಡಿಬಿಡಿಯಲ್ಲಿ ಮನೆ ಕಡೆ ಹೊರಟೆವು. ಊಟ ಮಾಡಿ ಲಗೂನೆ ವಾಪಸ್ ಬರಬೇಕಿತ್ತು.

ಸರಿ ಮನೆಗೆ ಬಂದೆ. ನೋಡಿದರೆ ಮನೆಯಲ್ಲಿ ದುಬೈನಿಂದ ಹಿಂತಿರುಗಿದ ಬಂಧುಗಳು. ಅವರ ಅಚಾನಕ್ ವಿಸಿಟ್. ಹಾಗಾಗಿ ಅಮ್ಮನ ಅಡಿಗೆ ಸ್ವಲ್ಪ ತಡ. ನಮಗೋ ಲಗೂನೆ ಒಂದಿಷ್ಟು ಮುಕ್ಕಿ, ಕಬಳಿಸಿ, ಕಿಟ್ ಎತ್ತಿಕೊಂಡು, ವಾಪಸ್ ಶಾಲೆ ಮೈದಾನಕ್ಕೆ ಓಡಬೇಕು. ಇಲ್ಲಿ ನೋಡಿದರೆ ಅಮ್ಮ ಬಂದ ನೆಂಟರ ಖಾತಿರ್ದಾರಿ ಮಾಡುತ್ತ, ಜೊತೆಗೆ ಸ್ವಲ್ಪ ವಿಶೇಷ ಅನ್ನಿಸುವಂತಹ elaborate ಅಡಿಗೆಯಲ್ಲಿ ನಿರತಳು. 'ಏ, ಲಗೂ ಊಟಕ್ಕ ಹಾಕ. ನನಗ ಮ್ಯಾಚ್ ಅದ. ಲಗೂ, ಲಗೂ...... ಟೈಮ್ ಇಲ್ಲ. ಲಗೂ ಊಟಕ್ಕ ಹಾಕಬೇ!' ಅಂತ ಅಮ್ಮನಿಗೆ ಒಂದು ಆವಾಜ್ ಹಾಕಿ, ಬಂದ ನೆಂಟರಿಗೊಂದು ನಮಸ್ಕಾರ, ದುಬೈನಿಂದ ಗಿಫ್ಟ್ ತಂದುಕೊಟ್ಟಿದ್ದಕ್ಕೆ ಒಂದು ಥ್ಯಾಂಕ್ಸ್ ಹೇಳಿ ಬಟ್ಟೆ ಬದಲಾಯಿಸಲು ಹೋದೆ. ಯುನಿಫಾರ್ಮ್ ಬಿಳಿ ಅಂಗಿಯಂತೂ ಇತ್ತು. ಖಾಕಿ ಪ್ಯಾಂಟ್ ಬಿಚ್ಚಿ ಬಿಳಿಯ ಪ್ಯಾಂಟ್ ಏರಿಸಿಕೊಂಡು ಹೋದರೆ ಆಯಿತು. ಅದೆಲ್ಲ ಬೇಕು ಅಂತ ಏನೂ ಇರಲಿಲ್ಲ. ಏನೋ ಮಹಾ ಕ್ರಿಕೆಟ್ ಆಡುವವರಂತೆ ಹೊಲಿಸಿದ ಬಿಳಿಯ ಪ್ಯಾಂಟ್ ಇದ್ದಾಗ ಹಾಕಿಕೊಳ್ಳಲಿಕ್ಕೆ ಏನು ಧಾಡಿ? ಅಂತ ನಮ್ಮ ವಿಚಾರ. ಬಾಸೆಲ್ ಮಿಷನ್ ಶಾಲೆ ಮಂದಿಗಂತೂ ಶನಿವಾರ ವೈಟ್ ಡ್ರೆಸ್ ದಿವಸ. ಹಾಗಾಗಿ ಅವರೆಲ್ಲ ಬರೋಬ್ಬರಿ ವೈಟ್ ಡ್ರೆಸ್ ಹಾಕಿಕೊಂಡೇ ಬಂದಿದ್ದರು. ನಾವೇ ಭಟ್ಟರ ಶಾಲೆ ಮಂದಿ, ಧೋತ್ರ ಒಂದು ಉಟ್ಟುಕೊಂಡು ಕ್ರಿಕೆಟ್ ಆಡದಿದ್ದರೆ ಅದೇ ದೊಡ್ಡ ಮಾತು. ಬಾಕಿ ಎಲ್ಲಾ ಡ್ರೆಸ್ ಓಕೆ.

'ಏ! ಆತೇನss ಊಟಕ್ಕ? ನನಗ ಹೋಗಬೇಕು. ಎಲ್ಲೆ ಊಟ??? ಲಗೂ, ಲಗೂ!' ಅಂತ ಮತ್ತ ನನ್ನ ಗಡಿಬಿಡಿ. 'ಏನಿದ್ದಿಯೋ ನೀನು? ಮೊದಲು ಹೇಳಂಗಿಲ್ಲ ಬಿಡಂಗಿಲ್ಲ. ಒಮ್ಮೆಲೇ ಬಂದು ಹಿಂಗ ಹುಚ್ಚರ ಗತೆ ಗಡಿಬಿಡಿ ಮಾಡ್ತಿ. ಸ್ವಲ್ಪ ತಡಿ. ನನಗ ಭಾಳ ಕೆಲಸ ಅದ,' ಅಂತ ಅಮ್ಮನ ವಿವರಣೆ. ಅದೆಲ್ಲ ನಮಗೆ ತಿಳಿದರೆ ತಾನೇ? ನಮ್ಮ ಗಡಿಬಿಡಿ ಮಾಡುವದು, ಅಮ್ಮನನ್ನು ಕಾಡುವದು ನಡದೇ ಇತ್ತು. ಕಾಟ ತಡಿಯಲಾಗದ ಅಮ್ಮ, 'ಏನು ಜೀವಾ ತಿಂತಿ ಮಾರಾಯಾ? ಹೂಂ. ಕೈಕಾಲ್ಮುಖ ಆದರೂ ತೊಳ್ಕೊಂಡು ಬಂದು ಕೂಡ್ತಿಯೋ ಅಥವಾ........? ಜೀವಾ ತಿಂದು ತಿಂದು ಹಾಕ್ತಾನ!!!' ಅನ್ನುತ್ತ ಅಮ್ಮ ತುರ್ತಿನಲ್ಲಿ ನಮ್ಮ ಊಟಕ್ಕೆ ಏನೋ ಒಂದು ಜುಗಾಡ್ ಮಾಡಲು ಮುಂದಾದರು. ನಮಗೂ ತಿಮಿರು. ಸುಮ್ಮನಿರಲಿಲ್ಲ. 'ನಿನ್ನ ಜೀವಾ ತಿಂದರ ಹೊಟ್ಟಿ ಏನೂ ತುಂಬಂಗಿಲ್ಲ. ಈಗ ಬಂದೆ. ಲಗೂ ಲಗೂ ರೆಡಿ ಮಾಡು,' ಅಂತ ಹೇಳಿ ಹೊರಟೆ. ಅದು ಬಿಡಿ ಅಮ್ಮ ಮಗನ ಪ್ರತಿದಿನದ ಜಗಳ. ಅದು ಎಂದೂ ಮುಗಿಯದ ಪ್ರೀತಿಯ ಜಗಳ ಅಂತ ಅಮ್ಮನ ಮಾತು. ಏನೋ ಗೊತ್ತಿಲ್ಲ.

ಕೈಕಾಲ್ಮುಖ ಎಲ್ಲ ತಣ್ಣಗೆ ಮಾಡಿಕೊಂಡು ಬಂದು ಕೂಡುವ ಹೊತ್ತಿಗೆ ನಾಲ್ಕು ಬಿಸಿ ಬಿಸಿ ಚಪಾತಿ, ಗಡಿಬಿಡಿಯಲ್ಲಿ ಹೆಂಗೋ ಮಾಡಿಮುಗಿಸಿದ್ದ ಒಂದು ಪಲ್ಯಾ ಎಲ್ಲ ತಯಾರಿತ್ತು. ಮೇಲಿಂದ ಒಂದಿಷ್ಟು ಖರೇ ತುಪ್ಪ. ಮೇಡ್ ಇನ್ ಸಿರ್ಸಿ. ನಮ್ಮ ಅಜ್ಜಿ ಉರ್ಫ್ ಅಮ್ಮನ ಅಮ್ಮ ಮುದ್ದು ಮಮ್ಮಗನಿಗೆ ಅಂತ ಮಾಡಿ ಕಳಿಸುತ್ತಿದ್ದರು. ಇಷ್ಟೆಲ್ಲ ಇದ್ದರೂ ನಮಗೆ ಅಮ್ಮನ ಜೀವ ಇನ್ನೊಂದಿಷ್ಟು ತಿನ್ನಲಿಲ್ಲ ಅಂದರೆ ಸಮಾಧಾನವಿಲ್ಲ. 'ಏನು ದರಿದ್ರ ಪಲ್ಯಾ ಇದು? ಹೋಗಿ ಹೋಗಿ ಬೆಂಡಿಕಾಯಿ ಪಲ್ಯಾ ಮಾಡಿ. ಸವತಿಕಾಯಿದು ಮಾಡಲಿಕ್ಕೆ ಏನು ಧಾಡಿಯಾಗಿತ್ತು ನಿನಗ?' ಅಂತ ಇಲ್ಲದ ಕಿರಿಕ್ ನಮ್ಮದು. ಸವತೆಕಾಯಿಯದೇ ಮಾಡಿದ್ದರೆ ಬದನೆಕಾಯಿದು ಯಾಕೆ ಮಾಡಿಲ್ಲ ಅಂತ ಕೇಳುತ್ತಿದ್ದೆ ಅನ್ನುವದರಲ್ಲಿ ಯಾರಿಗೂ ಡೌಟ್ ಇಲ್ಲ. ಅಲ್ಲಿಗೆ ಅಮ್ಮನ ಆವತ್ತಿನ ಸಹನೆಯ ಲಿಮಿಟ್ ಮುಟ್ಟಿತ್ತು. 'ನೋಡು, ಬೇಕಾದ್ರ ತಿನ್ನು. ಇಲ್ಲಾ ಬಿಡು. ನನಗ ಭಾಳ ಕೆಲಸ ಅದ,'  ಅಂತ ಹೇಳಿದ ಅಮ್ಮನ ಮಾತು ಆಖ್ರೀ ಫೈಸ್ಲಾ ಅಂತ ಗೊತ್ತಾಯಿತು. ಇನ್ನು ನಾವು ಏನೇ ಮನ್ಮಾನಿ ಮಾಡುತ್ತಾ ಕುಳಿತರೂ ಯಾರೂ ಏನೂ ಭಾವ ಕೊಡುವದಿಲ್ಲ ಅಂತ ತಿಳಿದು, ಅದರೂ ಇನ್ನಷ್ಟು ಸೊಕ್ಕು ಹಾರಿಸಿಯೇ ಊಟ ಮಾಡಬೇಕು ಅಂತ ಹೇಳಿ, 'ದರಿದ್ರ ಪಲ್ಯಾ ಮಾಡಿ. ಸಕ್ಕರಿ ಪುಡಿಯಾದರೂ ಕೊಡು ಇತ್ಲಾಗ. ನಿನ್ನ ಪಲ್ಯಾ ನೀನೇ ತಿಂದ್ಕೋ,' ಅಂತ ಅವಾಜ್ ಹಾಕಿ, ಅಮ್ಮ ತಲೆ ಚಚ್ಚಿಕೊಳ್ಳುತ್ತ ಕೊಟ್ಟ ಸಕ್ಕರೆ ಪುಡಿಯಲ್ಲಿ ಪಾವಶೇರ್ ಸಕ್ಕರೆ ಪುಡಿಗೆ ತುಪ್ಪ ಬರೋಬ್ಬರಿ ಮಿಕ್ಸ್ ಮಾಡಿ, ನಾಕು ಚಪಾತಿ ಗುಳುಂ ಮಾಡುವ ಹೊತ್ತಿಗೆ ಅಮ್ಮ ಪಾವ್ ಲೀಟರ್ ಬಿಸಿ ಹಾಲು ತಂದು ಇಟ್ಟಳು. 'ಪೂರ್ತಿ ಊಟಂತೂ ಮಾಡಿಲ್ಲ. ಒಂದಿಷ್ಟು ಹಾಲು ಕುಡಿದು ಹೋಗು. ಏನು ಮಾಡತಿಯೋ, ಎಲ್ಲೆ ಹೋಗತಿಯೋ ಏನೋ??' ಅಂದಳು. ಅಮ್ಮನ ಕಾಳಜಿ. ಎಲ್ಲ ತಿಂದು, ಕುಡಿದು, 'ವಾತಾಪಿ ಜೀರ್ಣೋ ಭವ' ಅನ್ನುವ ಮಾದರಿಯಲ್ಲಿ ಎದ್ದು ಬಂದಾಯಿತು. ಕ್ರಿಕೆಟ್ ಕಿಟ್ ರೆಡಿ ಇತ್ತು. ನಡ್ರೀ ಮತ್ತ ಶಾಲೆ ಗ್ರೌಂಡಿಗೆ.

ಇಷ್ಟೆಲ್ಲಾ ಗಡಿಬಿಡಿಯಲ್ಲಿ ಊಟ ಮುಗಿಸಿ, ಮ್ಯಾಚ್ ಇದೆ ಅಂತ ಓಡಿ ಬಂದರೆ ನಮ್ಮ ಟೀಮ್ ರೆಡಿ ಆಗಿರಲೇ ಇಲ್ಲ. ಗ್ರೌಂಡಿನಲ್ಲಿ ಕ್ಯಾಪ್ಟನ್ ಲಂಬ್ಯಾ ಇದ್ದ. ಮತ್ತೊಂದು ನಾಲ್ಕಾರು ಜನ ಇದ್ದರು. ಹನ್ನೊಂದು ಜನರ ತಂಡಕ್ಕೆ ಕಮ್ಮಿ ಕಮ್ಮಿ ಅಂದರೂ ಇನ್ನೂ ನಾಲ್ಕಾರು ಜನ ಬೇಕಾಗಿತ್ತು. ಟೈಮ್ ಸುಮಾರು ಮಧ್ಯಾನ ಒಂದೂವರೆ. ಎದುರಾಳಿ ಪಾರ್ಟಿ ಬಾಸೆಲ್ ಮಿಷನ್ ಜನರ ಮುಖ ನೋಡಿದರೆ ನಮ್ಮ ಬಗ್ಗೆ ಒಂದು contemptuous ಲುಕ್. 'ಏನು ದರಿದ್ರ ಮಂದಿಲೇ ಈ ಕೆ ಬೋರ್ಡ್ ಸಾಲಿ ಮಂದಿ? ನಾವು ಬಂದು ಕೂತು ದೀಡ ತಾಸ್ ಮ್ಯಾಲೆ ಆತು. ಇನ್ನೂ ಇವರ ಟೀಮ್ ರೆಡಿ ಆಗವಲ್ಲತು,' ಅನ್ನುವ ಲುಕ್ ಅವರ ಮುಖದ ಮೇಲೆ.

ಮತ್ತೊಂದು ಹತ್ತು ಹದಿನೈದು ನಿಮಿಷ ಕಾದ ನಂತರ ನಮ್ಮ ಇನ್ನೂ ಇಬ್ಬರು ಆಟಗಾರರು ಬಂದರು. ಆಗ ಸುಮಾರು ಒಂಬತ್ತು ಜನ ಆದಂಗೆ ಆಯಿತು. ಅಷ್ಟು ಸಾಕು ಅಂತ ಹೇಳಿ ಟಾಸ್ ಮಾಡಲು ನಮ್ಮ ಕ್ಯಾಪ್ಟನ್ ಲಂಬ್ಯಾ ಮತ್ತು ಅವರ ಕ್ಯಾಪ್ಟನ್ ಗಿಡ್ಡ ರಾಜ್ಯಾ ಹೋದರು. ಯಾರು ಟಾಸ್ ಗೆದ್ದರೋ ಗೊತ್ತಿಲ್ಲ. ಒಟ್ಟಿನಲ್ಲಿ ನಮಗೆ ಬ್ಯಾಟಿಂಗ್ ಬಂತು. ಒಳ್ಳೆಯದೇ ಆಯಿತು. ಇನ್ನೂ ಸ್ವಲ್ಪ ಹೊತ್ತಿನಲ್ಲಿ ಇನ್ನೊಂದಿಬ್ಬರು ಆಟಗಾರರು ಬಂದು ಮುಟ್ಟಿಕೊಳ್ಳುತ್ತಾರೆ. ಎಲ್ಲ ಸರಿಯಾಗುತ್ತದೆ ಅಂತ ಅಂದುಕೊಂಡೆವು.

ಮೊದಲೇ ಹೇಳಿದಂತೆ ಆ ವರ್ಷ ಎಲ್ಲರಿಗೂ ಬ್ಯಾಡ್ಮಿಂಟನ್ ಹುಚ್ಚು. ಕ್ರಿಕೆಟ್ ಪ್ರಾಕ್ಟೀಸ್ ಇಲ್ಲವೇ ಇಲ್ಲ. ಮೇಲಿಂದ ಲೆದರ್ ಬಾಲ್ ಬೇರೆ. ಅಷ್ಟೇ ಮತ್ತೆ. ಒಬ್ಬರ ನಂತರ ಒಬ್ಬ ಬ್ಯಾಟ್ಸಮನ್ ಪಟಪಟ ಅಂತ ಔಟ್ ಆಗಿಹೋದರು. ಹತ್ತು ರನ್ ಆಗುವಷ್ಟರಲ್ಲಿ ನನ್ನನ್ನೂ ಹಿಡಿದು ನಾಲ್ಕು ಜನ ಔಟ್. ಮುಂದೆ ಹೆಂಗೋ ಮಿಡ್ಲ್ ಆರ್ಡರ್ ಮಂದಿ, ಅದರಲ್ಲೂ ಕ್ಯಾಪ್ಟನ್ ಲಂಬ್ಯಾ, ಒಂದಿಷ್ಟು ರನ್ ಸ್ಕೋರ್ ಮಾಡಿ ಸುಮಾರು ನಲವತ್ತು ನಲವತ್ತೈದು ರನ್ ಆಗುವಷ್ಟರಲ್ಲಿ ನಮ್ಮ ಇನ್ನಿಂಗ್ಸ್ ಮುಗಿಯಿತು. ಶಿವಾಯ ನಮಃ. ನಮ್ಮ ಎದುರಾಳಿಗಳು ಬೌಲಿಂಗ್ ಮಾಡಿದ ರೀತಿಯಲ್ಲಿಯೇ ಬ್ಯಾಟಿಂಗ್ ಸಹ ಮಾಡಿಬಿಟ್ಟರೆ ಒಂದು ಏಳೆಂಟು ಓವರುಗಳಲ್ಲಿ ನಮ್ಮನ್ನು ಸೋಲಿಸಿ, ಮನೆ ಕಡೆ ಹೊರಡುತ್ತಾರೆ ಅಂತ ಅನ್ನಿಸಿಬಿಟ್ಟಿತ್ತು. ಗೆಲ್ಲುವ ಚಾನ್ಸ್ ಭಾಳ ಕಮ್ಮಿ ಅನ್ನಿಸಿತ್ತು. ಡಿಫೆಂಡ್ ಮಾಡಲು ಸಾಧ್ಯವಿಲ್ಲದ ಸ್ಕೋರ್ ಅನ್ನಿಸಿದರೂ ಫೀಲ್ಡಿಂಗ್ ಮಾಡಲೇಬೇಕು. ದರಿದ್ರ. ಕರ್ಮ. ಕೆಟ್ಟ ಬಿಸಿಲು ಬೇರೆ.

ಸರಿ. ಬಾಸೆಲ್ ಮಿಷನ್ ಮಂದಿಯ ಬ್ಯಾಟಿಂಗ್ ಶುರುವಾಯಿತು. ಎಲ್ಲ ಒಳ್ಳೆ ಫಾರ್ಮಿನಲ್ಲಿ ಇದ್ದವರೇ. ಹತ್ತು ಹದಿನೈದು ರನ್ ಬೇಗ ಬೇಗ ಸ್ಕೋರ್ ಮಾಡಿಬಿಟ್ಟರು. ನಮ್ಮವರ ಬೌಲಿಂಗ್, ಫೀಲ್ಡಿಂಗ್ ಎಲ್ಲ ದೇವರಿಗೇ ಪ್ರೀತಿ. ವಿಕೆಟ್ ಲಾಸ್ ಇಲ್ಲದೇ ಗೆದ್ದು ಬಿಡುತ್ತಿದ್ದರೋ ಏನೋ. ಏನೋ ಪೊರಪಾಟಿನಲ್ಲಿ ಒಂದರೆಡು ವಿಕೆಟ್ ಬಿದ್ದುಬಿಟ್ಟವು. ನಂತರ ಅವರು ತುಂಬಾ careful ಆಗಿ ಆಡುತ್ತ, ಅಲ್ಲಿ ಇಲ್ಲಿ ಒಂದು ಎರಡು ರನ್ ಕದಿಯುತ್ತ ಹೊರಟಿದ್ದರು.

ಕೆಟ್ಟ ಬಿಸಿಲು. ಸಿಕ್ಕಾಪಟ್ಟೆ ದಾಹ. ನೀರಡಿಕೆ. ನೀರಿಲ್ಲ. ಲೆಗ್ ಸೈಡ್ ನಲ್ಲಿ ನನ್ನ ಫೀಲ್ಡಿಂಗ್. ದೂರದಲ್ಲಿ ನಿಂತಿದ್ದೆ. ಕೆಟ್ಟ ಬೋರ್. ನಮ್ಮ ಕಡೆ ಬಾಲಂತೂ ಬರುತ್ತಿರಲಿಲ್ಲ. ಅದೇ ಒಳ್ಳೆಯದು. ಫೀಲ್ಡಿಂಗ್ ರೂಢಿಯೇ ತಪ್ಪಿಹೋಗಿತ್ತು ಅಂದೆನಲ್ಲ. ಅದರೂ ಆ ಬಾಸೆಲ್ ಮಿಷನ್ ಮುಂಡೆ ಮಕ್ಕಳು ನಮ್ಮನ್ನು ಸೋಲಿಸುವವರೆಗೆ ಈ ಗಧಾ ಮಜದೂರಿ ಫೀಲ್ಡಿಂಗ್ ಮಾಡಲೇಬೇಕು. ನಮಗೆ ತುರ್ತಾಗಿ ಬೇಕಾಗಿರುವದು ಒಂದಿಷ್ಟು ನೀರು. ದಾಹ ದಾಹ. ಎಲ್ಲರೂ ಭಕ್ತಿಯಿಂದ ಆಡುತ್ತಿರುವಾಗ ನಾವೊಬ್ಬರೇ ನೀರು ಕುಡಿಯಲು ಹೇಗೆ ಹೋಗೋಣ? ಅದೂ ನಮ್ಮ ಭಟ್ಟರ ಶಾಲೆಯ ಹಾವು, ಹಾವರಾಣಿ ಬಿದ್ದ ನೀರಿನ ಟಂಕಿಯಲ್ಲಿ ಶನಿವಾರ ಮಧ್ಯಾನ ನೀರು ಇರುತ್ತದೆಯೋ ಇಲ್ಲವೋ. ಯಾವನಿಗೆ ಗೊತ್ತು?

ಹೀಗೆ ನೀರಿಗಾಗಿ ದಾಹ ದಾಹ ಅಂತ ಚಡಪಡಿಸುತ್ತಿರುವಾಗ ಒಂದು ಆಕೃತಿ ಕಣ್ಣಿಗೆ ಬಿತ್ತು. ಅದು ಸೈಕಲ್ ಮೇಲೆ ಗ್ರೌಂಡ್ ಸುತ್ತುತ್ತಿತ್ತು. ಆ ಕಾಲದ ಕ್ರಿಕೆಟ್ ಮ್ಯಾಚ್ ಅಂದರೆ ಏನು ಕೇಳುತ್ತೀರಿ! ಗ್ರೌಂಡಿನ ಒಂದು ಮೂಲೆಯಲ್ಲಿ ಯಾರೋ ಎಮ್ಮೆ ಮೇಯಿಸಿಕೊಂಡು ಇದ್ದರೆ, ಇನ್ನೊಂದು ಮೂಲೆಯಲ್ಲಿ ಹಂದಿಗಳು ತಿಪ್ಪೆ ಕೆದರಿಕೊಂಡು ಇರುತ್ತಿದ್ದವು. ಇನ್ನು ಗ್ರೌಂಡಿನ ತುಂಬಾ ಆಟಗಾರರು ಮಾತ್ರವಲ್ಲದೇ ಎಲ್ಲಾ ತರಹದ ಜನರೂ ಇರುತ್ತಿದ್ದರು. ಸೈಕಲ್ ಇದ್ದವರು ಸೈಕಲ್ ಹೊಡೆಯುತ್ತಿದ್ದರು. ನಮ್ಮ ಕಡೆಯವರಾದದರೆ ಸೈಕಲ್ ಮೇಲೆ ಬಂದು ಉದ್ರಿ ಉಪದೇಶ ಮಾಡಿ, ಎದುರಾಳಿಗಳ ಸ್ಕೋರ್ ಇತ್ಯಾದಿ ತಿಳಿಸಿ ಹೋಗುತ್ತಿದ್ದರು.

ಆಗ ಸೈಕಲ್ ಹೊಡೆಯುತ್ತ ಬಂದವ ಕಾಮ್ಯಾ ಉರ್ಫ್ ಕಾಮ ಉರ್ಫ್ ಕಾಮತ್ ಉರ್ಫ್ ಗಿರೀಶ್ ಕಾಮತ್. ನಮ್ಮ ಕ್ಲಾಸ್ಮೇಟ್. ಗೆಳೆಯ. ಮ್ಯಾಚ್ ನೋಡಲು ಬಂದಿದ್ದ ಅಂತ ಕಾಣುತ್ತದೆ. ಅಥವಾ ಯಾರೂ ಬರದಿದ್ದರೆ ಇವನನ್ನೇ ಹಾಕಿಕೊಂಡು ಆಡಿದರಾಯಿತು ಅಂತ ಕ್ಯಾಪ್ಟನ್ ಲಂಬ್ಯಾನೇ ಎಲ್ಲಿ ಇವನನ್ನೂ ಕೂಡ ಕರೆದಿದ್ದನೋ ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ಅಂದು ಗಿರೀಶ್ ಕಾಮತ್ ಉರ್ಫ್ ಕಾಮ್ಯಾ ಅಲ್ಲಿಗೆ ಬಂದಿದ್ದಾನೆ. ಸೈಕಲ್ ಹೊಡೆಯುತ್ತ, ತನ್ನ ಮಿತ್ರರನ್ನು ಮಾತಾಡಿಸುತ್ತ ಕ್ರಿಕೆಟ್ ಆಟ ನೋಡುತ್ತಿದ್ದಾನೆ.

ನಾನು ಫೀಲ್ಡಿಂಗ್ ಮಾಡುತ್ತಿದ್ದ ಕಡೆಗೂ ಬಂದ. ನನಗೆ ವಿಶ್ ಮಾಡುವವನಂತೆ ಅವನ characteristic ಭೋಲಾ, ಮುಗ್ಧ, ಮಳ್ಳು ನಗೆ ನಕ್ಕ.

'ಲೇ, ಕಾಮ್ಯಾ, ಬಾರಲೇ ಇಲ್ಲೆ. ಸ್ವಲ್ಪ ಬಾರಲೇ' ಅಂತ ಕರೆದೆ.

'ಏನ್ ಮಹೇಶಾ?' ಅಂತ ಕೇಳುತ್ತ, ಸೈಕಲ್ ಆಕಡೆ ಈಕಡೆ ವಾಲಿಸಿ ಹೊಡೆಯುತ್ತ ಬಂದ.

'ಕಾಮ್ಯಾ, ಭಾಳ ನೀರಡಿಕಿಲೇ. ಕೆಟ್ಟ ಆಸ್ರ ಆಗ್ಯದ. ಎಲ್ಲಿಂದರೆ ಒಂದಿಷ್ಟು ನೀರು ತಂದು ಕುಡಿಸೋ ಮಾರಾಯಾ. ಪ್ಲೀಸ್ ಲೇ,' ಅಂತ ಕೇಳಿಕೊಂಡೇಬಿಟ್ಟೆ. ಅಷ್ಟು ದಾಹ.

ಕಾಮತ್ ಒಂದು ಕ್ಷಣ ದಂಗಾದ. ಯಾತಕ್ಕೋ ಕರೆದಿರಬೇಕು ಅಂತ ಬಂದರೆ ನಮ್ಮಿಂದ ನೀರಿಗಾಗಿ ಡಿಮ್ಯಾಂಡ್. ಏನು ಮಾಡಬೇಕು ಅಂತ ತಿಳಿಯಲಿಲ್ಲ ಅವನಿಗೆ. ಮತ್ತೆ ಎಲ್ಲಿಂದ ನೀರು ತರಬೇಕು? ಹೇಗೆ ತರಬೇಕು? ಕೈ ಬೊಗಸೆಯಲ್ಲಿ ನೀರು ತಂದು ಕುಡಿಸಬೇಕೇ? ಹಾಂ? ಕೆಟ್ಟ confusion ಪಾಪ ಅವನಿಗೆ. ಏನೋ ಹೇಳಿ, ಸೈಕಲ್ ಎತ್ತಿಕೊಂಡು ಹೋದ. ಅಷ್ಟರಲ್ಲಿ ಮತ್ತೊಂದು ವಿಕೆಟ್ ಸಹಿತ ಬಿತ್ತು. ಕಾಮತ್ ನಾಪತ್ತೆಯಾಗಿದ್ದನ್ನು ನಾನು ಗಮನಿಸಲಿಲ್ಲ. ಮ್ಯಾಚ್ ಮತ್ತೆ ರೋಚಕ ಘಟ್ಟಕ್ಕೆ ಬಂದಿತ್ತು. ದಾಹ ತಾತ್ಕಾಲಿಕವಾಗಿ ಮರೆತಿತ್ತು. ಕ್ಯಾಪ್ಟನ್ ಲಂಬ್ಯಾ ಫುಲ್ ಫೈಟ್ ಕೊಡುವವನ ಹಾಗೆ ಏನೇನೋ strategy ಉಪಯೋಗಿಸತೊಡಗಿದ್ದ. ಮತ್ತೆ ಅದು ನಮ್ಮ ಹೋಂ ಪಿಚ್. ಚಿತ್ರ ವಿಚಿತ್ರವಾಗಿ ವರ್ತಿಸಲು ಶುರು ಮಾಡಿರಬೇಕು. ವಿಕೆಟ್ ನಷ್ಟವಿಲ್ಲದೆ ಗೆಲ್ಲುವ ಹಾಗೆ ಬ್ಯಾಟಿಂಗ್ ಮಾಡುತ್ತಿದ್ದ ಎದುರಾಳಿಗಳು ಈಗ defensive ಆಗಿದ್ದರು.

ಕಾಮತನಿಗೆ ನೀರು ತಂದು ಕುಡಿಸುವಂತೆ ಹೇಳಿದ್ದೆ ನಿಜ. ಮರ್ತೇ ಬಿಟ್ಟಿದ್ದೆ. ಆಟದ adrenaline rush ಹಾಗೇ ಇರುತ್ತದೆ. ಆ ಕ್ಷಣದ excitement ಒಂದಿಷ್ಟು ಹೊತ್ತು ಎಲ್ಲವನ್ನೂ ಮರೆಸಿಬಿಡುತ್ತದೆ. ಆದ್ರೆ ಆ ನನ್ನ ಕೋರಿಕೆಯನ್ನು ಕಾಮತ್ ಮರೆತಿರಲಿಲ್ಲ.

ಸ್ವಲ್ಪ ಸಮಯದ ನಂತರ ಮತ್ತೆ ದೂರದಲ್ಲಿ ತನ್ನ ಸೈಕಲ್ ಮೇಲೆ ಕಾಮತ್ ಪ್ರತ್ಯಕ್ಷನಾದ. ಒಂದೇ ಕೈಯಲ್ಲಿ ಸೈಕಲ್ ಹೊಡೆದುಕೊಂಡು ಬರುತ್ತಿದ್ದ. ಮತ್ತೊಂದು ಕೈಯಲ್ಲಿ ಏನೋ ಇತ್ತು. ಹತ್ತಿರ ಬಂದಾಗ ಏನೋ ಬಾಟಲಿ ತರಹದ್ದು ಏನೋ ಕಂಡಿತು. 'ವೆರಿ ಗುಡ್. ಹುಡುಗ ನೀರು ತಂದಿದ್ದಾನೆ. ಅದಕ್ಕೆ ಬಾಟಲಿಯನ್ನೂ ಸಹ ಎಲ್ಲಿಂದಲೋ ಜುಗಾಡ್ ಮಾಡಿಕೊಂಡು ಬಂದಿದ್ದಾನೆ. ವೆರಿ ಗುಡ್,' ಅಂದುಕೊಂಡು, ಕಾಮತ್ ತಂದು ಕುಡಿಸಲಿರುವ ಜೀವಜಲಕ್ಕೆ ತುಂಬ ಬೇಚೈನಿಯಿಂದ ಕಾಯುತ್ತಿದ್ದೆ.

ಕಾಮತ್ ನೀರು ತಂದಿರಲಿಲ್ಲ. ದುಬಾರಿ ಸಾಫ್ಟ್ ಡ್ರಿಂಕ್ ಲಿಮ್ಕಾ ತಂದುಬಿಟ್ಟಿದ್ದ! ನೀರು ಹುಡುಕಿಕೊಂಡು ಶಾಲೆ ತುಂಬಾ ಅಲೆದಿರಬೇಕು. ಎಲ್ಲೂ ಸಿಕ್ಕಿಲ್ಲ. ಐಡಿಯಾ ಮಾಡಿದ್ದಾನೆ. ಸೀದಾ ಅಲ್ಲೇ ಹತ್ತಿರವಿದ್ದ ಬೃಂದಾವನ ಹೋಟೆಲ್ಲಿಗೆ ಹೋಗಿದ್ದಾನೆ. ಅಲ್ಲೇ ಮಾಳಮಡ್ಡಿ ಕೆನರಾ ಬ್ಯಾಂಕ್ ಮುಂದೆ ಇತ್ತು. ಅದು ಈ ಕಾಮತ್ ಪೈಕಿಯವರದೇ. ಅಲ್ಲಿಂದ ನೀರು ತರುವದು ಕಷ್ಟ. ಯಾಕೆಂದರೆ ಆವಾಗೆಲ್ಲ ಮಿನರಲ್ ವಾಟರ್ ಬಾಟಲಿ ಇರಲಿಲ್ಲ. ಹಾಗಾಗಿ ಹೆಂಗೋ ಮಾಡಿ ಒಂದು ಲಿಮ್ಕಾ ಸಂಪಾದಿಸಿಬಿಟ್ಟಿದ್ದಾನೆ. ಬಾಟಲಿ ಓಪನ್ ಮಾಡಿಸಿಕೊಂಡವನೇ, ಒಂದು ಕೈಯಲ್ಲಿ ಲಿಮ್ಕಾ ಬಾಟಲಿ ಹಿಡಿದುಕೊಂಡು, ಸೈಕಲ್ ಬ್ಯಾಲೆನ್ಸ್ ಮಾಡಿಕೊಂಡು ಬಂದು, ನನ್ನ ಮುಂದೆ ಪ್ರತ್ಯಕ್ಷನಾಗಿ ನೀರು ಕೇಳಿದರೆ ಲಿಮ್ಕಾ ಕುಡಿಸುತ್ತಿದ್ದಾನೆ. ಏನನ್ನೋಣ ಇದಕ್ಕೆ? ಅದೇನು ಪ್ರೀತಿಯೋ? ಆತ್ಮೀಯತೆಯೋ? ಅಥವಾ ನೀರು ತಂದುಕೊಡುತ್ತೇನೆ ಅಂತ ಹೇಳಿ ಬಂದುಬಿಟ್ಟಿದ್ದೇನೆ ಈಗ ಆ ಮಾತು ಉಳಿಸಿಕೊಳ್ಳಲೇಬೇಕು. ಅದಕ್ಕೆ ನೀರಲ್ಲದಿದ್ದರೆ ಮತ್ತೇನಾದರೂ ಕುಡಿಸಲೇಬೇಕು ಅನ್ನುವ commitment ತರಹದ ಭಾವನೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಆ ಲಿಮ್ಕಾ ಜೀವನದಲ್ಲೇ ಕುಡಿದ ಬೆಸ್ಟ್ ಸಾಫ್ಟ್ ಡ್ರಿಂಕ್. ಯಾಕೆಂದರೆ ಅದರಲ್ಲಿ ಕಾಮತನ ಗೆಳೆತನ, ಪ್ರೀತಿ, ಆತ್ಮೀಯತೆ, ಮತ್ತೆ ಏನೇನೋ ಎಲ್ಲ ಕೂಡಿತ್ತು. ನಮಗೆ ಅವನ್ನೆಲ್ಲ ಕಾವ್ಯಾತ್ಮಕವಾಗಿ, ಭಾವುಕತೆಯಿಂದ ಹೇಳಲಿಕ್ಕೆ ಬರಲಿಕ್ಕಿಲ್ಲ. ಆದರೆ, 'ನೀರು ತಂದು ಕುಡಿಸೋ ಅಂದರೆ ಲಿಮ್ಕಾ ತಂದು ಕುಡಿಸಿದ,' ಕಾಮತ್ ಮಾತ್ರ ನೆನಪಾಗುತ್ತಲೇ ಇರುತ್ತಾನೆ. ಸದಾ.

ಸರಿ, ಆ ಲಿಮ್ಕಾ ಪ್ರಭಾವವೋ ಏನೋ ಗೊತ್ತಿಲ್ಲ. ಏನೇನೋ strategy ಮಾಡುತ್ತಿದ್ದ ಕ್ಯಾಪ್ಟನ್ ಲಂಬ್ಯಾ ನನಗೂ ಬೌಲಿಂಗ್ ಮಾಡು ಅಂದ. ಸರಿ ಅಂತ ಏನೋ ಒಂದು ತರಹದಲ್ಲಿ ಮಾಡಿದೆ. ಎರಡು ಓವರಿನಲ್ಲಿ ಎರಡು ವಿಕೆಟ್. ಈಗ ಮ್ಯಾಚ್ ರೋಚಕ ಘಟ್ಟಕ್ಕೆ ಬಂದು ತಲುಪಿತ್ತು. ವಿರುದ್ಧ ಪಾರ್ಟಿಗೆ 'ಸುಲಿದ ಬಾಳೆಹಣ್ಣು' ಅಂತ ತಿಳಿದ ಮ್ಯಾಚ್ ಈಗ ಯಾರಿಗಾದರೂ ಹೋಗಬಹುದಿತ್ತು. ವಿರುದ್ಧ ಪಾರ್ಟಿಗೆ ಇನ್ನೂ ಹದಿನೈದೂ ಚಿಲ್ಲರೆ ರನ್ ಮಾಡಬೇಕಿದೆ. ವಿಕೆಟ್ ಉಳಿದಿದ್ದು ಎರಡೋ ಮೂರೋ ಅಷ್ಟೇ. ಈಗ ಅವರ ಮೇಲೆ ಫುಲ್ ಪ್ರೆಷರ್. ನಮಗೆ ಹೋಂ ಪಿಚ್ ಅಂತ ಫುಲ್ ಸಪೋರ್ಟ್ ಮತ್ತು ಹುರುಪು ಬೇರೆ. ಕ್ಯಾಪ್ಟನ್ ಲಂಬ್ಯಾ ಮತ್ತೆ ಯಾರಿಗೋ ಬೌಲಿಂಗ್ ಕೊಟ್ಟ. ಅದೂ ಅಪರೂಪಕ್ಕೆ ಬೌಲಿಂಗ್ ಮಾಡುವ ಆಸಾಮಿಗೆ. ಅವನು ಲಿಮ್ಕಾ ಕುಡಿದಿರಲಿಲ್ಲ. ಆದರೂ ಎರಡು ವಿಕೆಟ್ ಕಿತ್ತೇಬಿಟ್ಟ. ಹಾಕ್ಕ! ಈಗ ಅವರ ಹತ್ತಿರ ಉಳಿದದ್ದು ಒಂದೇ ವಿಕೆಟ್. ಇನ್ನೂ ಕಮ್ಮಿ ಕಮ್ಮಿ ಅಂದರೂ ಹತ್ತು ರನ್ ತೆಗೆಯಬೇಕು. ಸಿಕ್ಕಾಪಟ್ಟೆ ಪ್ರೆಷರ್. ಕ್ಯಾಪ್ಟನ್ ಲಂಬ್ಯಾ ಮತ್ತೆ ಬೌಲಿಂಗ್ ಮಾಡಿ ಸ್ಟಂಪ್ ಹಾರಿಸಿಯೇಬಿಟ್ಟ. ಲಾಸ್ಟ್ ವಿಕೆಟ್ ತೆಗೆದೇಬಿಟ್ಟ. ಗೆದ್ದಿದ್ದೆವು. 'ಸೋತೆವು, no hopes,' ಅನ್ನುವಂತಹ ಮ್ಯಾಚ್ ಗೆದ್ದಿದ್ದೆವು.

ಕಾಮತ್ ತಂದುಕೊಟ್ಟು, ಕುಡಿಸಿದ್ದ ಲಿಮ್ಕಾನೇ ಎಲ್ಲದಕ್ಕೂ ಕಾರಣ ಅಂತ ನಮ್ಮ ನಂಬಿಕೆ. ಪುಣ್ಯಾತ್ಮ ತಂದುಕೊಟ್ಟ ಲಿಮ್ಕಾವನ್ನಂತೂ ಗಟಗಟ ಕುಡಿದು ಮುಗಿಸಿದ್ದೆ. ಆದರೂ ತೀರದ ದಾಹ. 'ಇದೇ ಬಾಟ್ಲ್ಯಾಗ ಇನ್ನೊಂದಿಷ್ಟು ನೀರು ತುಂಬಿಸ್ಕೊಂಡು ಬಾರಲೇ ಕಾಮ್ಯಾ,' ಅಂತ ಕೇಳಿಕೊಂಡಿದ್ದೆ. ನೀರು ತಂದು ಕುಡಿಸಿದ್ದ ಅಂತ ನೆನಪು. ನೀರು ಕುಡಿಸಿದವ ಎಲ್ಲೇ ಇರಲಿ ತಣ್ಣಗಿರಲಿ ಶಿವಾ!

ಈ ಸದರಿ ಕಾಮತ್ ನಮಗೆ ಜೊತೆಯಾಗಿದ್ದು ಎಂಟನೆಯ ಕ್ಲಾಸಿನಲ್ಲಿ. ಎಲ್ಲೋ ದಕ್ಷಿಣ ಕನ್ನಡದ ಕಡೆಯಿಂದ ಬಂದಿದ್ದ ಅಂತ ನೆನಪು. ಅವರ ಕುಟುಂಬದವರು ಮಾಳಮಡ್ಡಿಯ ಬೃಂದಾವನ ಹೋಟೆಲ್ಲನ್ನು ನಡೆಸಲು ತೆಗೆದುಕೊಂಡಿದ್ದರು. ಅದಕ್ಕೇ ಧಾರವಾಡಕ್ಕೆ ಬಂದಿದ್ದರು. ಅದಕ್ಕೇ ಇವನು ನಮ್ಮ ಶಾಲೆಗೆ ಬಂದವ ಅಂತ ನೆನಪು.

ಕಾಮತ್ ಉರ್ಫ್ ಕಾಮ್ಯಾ ಮುಗ್ಧ ಅಂದರೆ ಅಷ್ಟು ಮುಗ್ಧ. ಸರಳ ಜೀವಿ. ಎಲ್ಲರಿಗೂ ಸ್ನೇಹಿತ. ಎಲ್ಲರಿಗೂ ಕೆಲವು ಕಾಮತ್ ನಂತಹ ಸ್ನೇಹಿತರು ಇದ್ದೇ ಇರುತ್ತಾರೆ. ಎಲ್ಲರೂ ಅವರನ್ನು ಕಿಚಾಯಿಸುತ್ತಾರೆ, ಕಾಲೆಳೆಯುತ್ತಾರೆ, ಚೇಷ್ಟೆ ಮಾಡುತ್ತಾರೆ, ಅವರ ಮೇಲೆ ತರಹ ತರಹದ ಜೋಕ್ಸ್ ಮಾಡುತ್ತಾರೆ. ಅವರು ಮಾತ್ರ ಎಲ್ಲವನ್ನೂ ನಗುನಗುತ್ತ ಸಹಿಸಿಕೊಂಡು, ಬೇಕಾದರೆ ತಾವೂ ತಮ್ಮ ಮೇಲೆಯೇ ಒಂದಿಷ್ಟು ಜೋಕ್ಸ್ ಮಾಡಿಕೊಂಡು ಎಲ್ಲರಿಗೂ ಬೇಕಾದವರಾಗಿ ಇರುತ್ತಾರೆ. ಅಂತಹ ಆಸಾಮಿ ಈ ಕಾಮ್ಯಾ ಉರ್ಫ್ ಕಾಮತ್.

ಕಾಮತನಿಗೆ ಎಲ್ಲರೂ ಬೇಕು ಅಂದೆನಲ್ಲ. ಅವನ ಎತ್ತರದ (height) ಪ್ರಕಾರ ಅವನಿಗೆ ಸುಮಾರು ಮುಂದೆ ಎಲ್ಲೋ ಡೆಸ್ಕ್, ಬೆಂಚ್ ಸಿಕ್ಕಿತ್ತು. ನಾವೊಂದಿಷ್ಟು 'ಉಡಾಳ' ಮಂದಿಯದು ಹಿಂದಿನ ಬೆಂಚು. ನಮ್ಮ ಹರಟೆ, ಜೋಕ್ಸ್, ಗದ್ದಲ ಎಲ್ಲ ನಿರಂತರ. ಆಗಾಗ ನಮ್ಮ ವಲಯಕ್ಕೂ ಭೆಟ್ಟಿ ಕೊಡುತ್ತಿದ್ದ ಕಾಮತ್. ಸುಖಾಸುಮ್ಮನೆ ಬಿಟ್ಟಿಯಲ್ಲಿ ಕಾಡಿಸಿಕೊಂಡು, ನಮ್ಮ ಜೋಕುಗಳಿಗೆ ಬಲಿಯಾಗಿ, 'ಏನು ಇದ್ದೀರಿಲೇಪಾ?? ಬರೇ ಇದss ಆತು ನಿಮ್ಮದು. ಕಾಡಿಸಿಕೊಳ್ಳಾಕ ನಾ ಒಬ್ಬವ ಸಿಕ್ಕೇನಿ ನೋಡು,' ಅಂತ ಒಂದು ತರಹದ ಅಮಾಯಕ ಲುಕ್ ಕೊಟ್ಟು ಈ ಪುಣ್ಯಾತ್ಮ ತನ್ನ ಡೆಸ್ಕಿಗೆ ವಾಪಸ್ ಹೋಗುತ್ತಿದ್ದರೆ, 'ಏ, ಕಾಮ, ಬಾರಲೇ. ಇಷ್ಟ ಲಗೂ ಎದ್ದು ಹೋದರ ಹ್ಯಾಂಗ? ಈಗ ಮಾತ್ರ absentee ಪಿರಿಯಡ್ ಶುರು ಆಗ್ಯದ. ಬಾರಲೇ ಕಾಮಾ,' ಅಂತ ಇಲ್ಲದ ಗೋಳು ಹೊಯ್ದುಕೊಳ್ಳುತ್ತಿದ್ದರು ಹಿಂದಿನ ಬೆಂಚಿನ ಮಂದಿ. ಮತ್ತೆ ಬೇಜಾರಾದಾಗೊಮ್ಮೆ ಕಾಮತ್ ವಾಪಸ್ ಬರುತ್ತಿದ್ದ. ಮತ್ತೆ ಅದೇ ಜೋಕ್ಸ್, ಅದೇ ನಗು, ಅದೇ ಭೋಳೆತನ.

ಎಂಟು, ಒಂಬತ್ತನೇ ಕ್ಲಾಸ್ ಹಾಗೆ ನಡೆದಿತ್ತು. ಹತ್ತನೇ ಕ್ಲಾಸಿನಲ್ಲಿ ಕಾಮತನ ಕುಟುಂಬ ಧಾರವಾಡ ಬಿಟ್ಟು ಬೇರೆ ಕಡೆ ಹೋಯಿತು. ಬೃಂದಾವನ ಹೋಟೆಲ್ಲನ್ನು ಬೇರೆ ಯಾರಿಗೋ ವಹಿಸಿಕೊಟ್ಟು ಹೋದರು. ಹತ್ತನೇ ಕ್ಲಾಸ್ ಓದುತ್ತಿದ್ದ ಮಗನ ಓದಿಗೆ ಭಂಗ ಬರುವದು ಬೇಡ ಅಂತ ಇವನನ್ನು ಧಾರವಾಡದಲ್ಲೇ ಬಿಟ್ಟು ಹೋಗಿದ್ದರು ಅಂತ ನೆನಪು. ಒಟ್ಟಿನಲ್ಲಿ ಹತ್ತನೇ ಕ್ಲಾಸಿನಲ್ಲೂ ನಮ್ಮ ಜೊತೆಗೇ ಇದ್ದ. ಆದರೆ ಈಗ ಕಾಮತ್ ಬೇರೆ ಕಡೆ ಮನೆ ಶಿಫ್ಟ್ ಮಾಡಿದ್ದ. ಅಲ್ಲಿ ಸ್ವಂತ ರೂಂ ಮಾಡಿಕೊಂಡಿದ್ದನೋ ಅಥವಾ ಸಂಬಂಧಿಕರ ಮನೆಯಲ್ಲಿ ಇದ್ದನೋ ನೆನಪಿಲ್ಲ. ನಮ್ಮ ಬ್ಯಾಚಿನ ಅಪ್ರತಿಮ ಸುಂದರಿಯೊಬ್ಬಳು ಕೂಡ ಅದೇ ಕಂಪೌಂಡಿನಲ್ಲಿ ಇರಬೇಕೇ! ಸರಿಯಾಯಿತು. ಕಾಮತನನ್ನು ರೇಗಿಸಲು, ಚುಡಾಯಿಸಲು ಮತ್ತೊಂದು ವಿಷಯ. ಇವನು ತೀರ ಮುಗ್ಧ. ಆಕೆ ಡೆಡ್ಲಿ ಸುಂದರಿಯಾದರೂ ತೀರ ಸಭ್ಯಳು. ಆದರೆ ಕಾಡಿಸುವವರಿಗೆ ಏನು? ಎಲ್ಲ ಓಕೆ.

ಮತ್ತೆ ಈ ಕಾಮತ್ ಪುಣ್ಯಾತ್ಮನೋ ಒಳ್ಳೆ ಬಾಡಿ ಗಾರ್ಡನಂತೆ ಆ ಸುಂದರಿ ಮತ್ತೆ ಆಕೆಯ ಸಖಿಯರ ಹಿಂದೆ ಸೈಕಲ್ ಹೊಡೆದುಕೊಂಡು ಬರುತ್ತಿದ್ದ. ಮುಂದೆ ಸೈಕಲ್ ಹೊಡೆದುಕೊಂಡು ಬರುತ್ತಿದ್ದ ಅವು ನಾಲ್ಕಾರು ಹುಡುಗಿಯರು. ಹಿಂದೆ ಎತ್ತರ ಪತ್ತರ ಸೈಕಲ್ ಹೊಡೆದುಕೊಂಡು ಬರುತ್ತಿದ್ದ ಈ ಕಾಮತ್. ಅವರೆಲ್ಲರ ಹಿಂದೆ ಮತ್ತೊಬ್ಬ. ಅವನು ಯಾರು ಅಂದರೆ ಈ ಕಾಮತ್ ಮತ್ತು ಆ ಸುಂದರಿ ಇಬ್ಬರಿಗೂ ಮನೆ ಭಾಡಿಗೆ ಕೊಟ್ಟವರ ಮೊಮ್ಮಗ. ಅವನೂ ನಮ್ಮ ಕ್ಲಾಸ್ಮೇಟ್. ಶಿವನೇ ಶಂಭುಲಿಂಗ!

ಹೀಗೆ ಹತ್ತನೆಯ ಕ್ಲಾಸಿನಲ್ಲಿ ನಮ್ಮ ಬ್ಯಾಚಿನ ಡೆಡ್ಲಿ ಸುಂದರಿಯ ನೇಬರ್ (neighbor) ಆಗುವ ಭಾಗ್ಯ ಪಡೆದುಕೊಂಡ ಕಾಮತ್ ಸಿಕ್ಕ ಅಂದರೆ ಹಿಡಿದು ರೇಗಿಸಿದ್ದೇ ರೇಗಿಸಿದ್ದು. ಪಾಪ ಬಡಪಾಯಿ. ನಮ್ಮ ಜೊತೆಗೆಲ್ಲ ಬಂದು, ಕೂತು, ಮಾತಾಡಿ, ನಾವು ಹೊಡೆಯುತ್ತಿದ್ದ ಏನೇನೋ ಹರಟೆಗಳಲ್ಲಿ ಭಾಗಿಯಾಗಲಿಕ್ಕೆ ಆಗದಿದ್ದರೂ ಅದನ್ನು ಕೇಳಿಯಾದರೂ ಹೋಗಬೇಕು ಅಂತ ಅವನ ಆಸೆ. ನಮ್ಮ ಗ್ಯಾಂಗಿಗೋ ಈ ಕಾಮತನನ್ನು ನೋಡಿದ ಕೂಡಲೇ ಆ ಸುಂದರಿಯದೇ ಧ್ಯಾನ. 'ಲೇ, ಕಾಮ್ಯಾ, ಜೋರಾತಲ್ಲಲೇ ನಿಂದು. ಹೋಗಿ ಹೋಗಿ ಮಸ್ತ ಮನಿ ಹಿಡದಿ ನೋಡಲೇ. ಏನಂತಾಳ ಹೀರೋಯಿನ್? ನಿಂಜೋಡಿ ಮಾತಾಡಿದಳು ಏನು? ಇಲ್ಲಾ? ಬರೇ ಸ್ಮೈಲ್ ಕೊಟ್ಟಳು??? ನೀ ಏನು ಕೊಟ್ಟಿ??? ಹಾಂ?'  ಅಂತ ಬರೇ ಇದೇ ಮಾತು. ಹೆವಿ ಮಷ್ಕಿರಿ. 'ಏನ್ರಿಲೇ ನೀವು??? ನನ್ನ ನೋಡಿದ ಕೂಡಲೇ ಬರೇ ಅಕಿ ಬಗ್ಗೆನೇ ಮಾತಾಡ್ತೀರಲ್ಲಾ?' ಅಂತ ಅವನ ರೋಧನ. 'ನಿನ್ನ ನೋಡಿದರೂ ಅಕಿನೇ ನೆನಪಾಗ್ತಾಳ. ಅಕಿನ್ನ ನೋಡಿದರೂ ಅಕಿನೇ ನೆನಪಾಗ್ತಾಳ. ಏನಪಾ ಕಾಮ್ಯಾ?? ನೀ ಒಟ್ಟೇ ನೆನಪ ಆಗೋದೇ ಇಲ್ಲಲೇ ಕಾಮ್ಯಾ! ಏನು ನಸೀಬಲೇ ನಿಂದು?! ಹೋಗಿ ಹೋಗಿ ಅಕಿ ಮನಿ ಕಾಂಪೌಂಡ್ ಒಳಗ ಹೋಗಿ ಕೂತುಬಿಟ್ಟಿಯಲ್ಲಲೇ. ಲಕ್ಕಿ ನೋಡಲೇ ನೀ!' ಅಂತ ಕಾಡಿಸಿದ್ದೇ ಕಾಡಿಸಿದ್ದು. ಅವನೂ ಎಂಜಾಯ್ ಮಾಡುವಷ್ಟು ಮಾಡಿ, 'ಬರೇ ಹಲ್ಕಟ್ ಇದ್ದೀರಿ ನೋಡ್ರಿಲೇ!' ಅಂತ ಪ್ರೀತಿಯಿಂದ ಬೈದುಕೊಳ್ಳುತ್ತ ತನ್ನ ಡೆಸ್ಕಿನತ್ತ ನಡೆದರೆ ಯಾರೋ ಒಬ್ಬವ ಕಿಡಿಗೇಡಿ husky ಧ್ವನಿಯಲ್ಲಿ 'ಏ ಕಾಮ, ಕಾಮ, ಕಾsssಮ,' ಅಂತ ಕೂಗುತ್ತಿದ್ದ.  ಆಗಲೇ ಕಾಶಿನಾಥನ ಪರಮ ಪೋಲಿ ಸಿನೆಮಾ 'ಅನಂತನ ಆವಾಂತರ' ಕೂಡ ಬಂದಿತ್ತು. ಅದರಲ್ಲಿ 'ಕಾಮ, ಕಾಮ' ಅನ್ನುವದನ್ನು ವಿಚಿತ್ರ ರೀತಿಯಲ್ಲಿ ಹೇಳುವದನ್ನು ನೋಡಿ ಕಲಿತುಬಂದಿದ್ದ ಕಿಡಿಗೇಡಿಗಳು ಅದನ್ನು ಪಾಪದ ಕಾಮತನಿಗೆ ಅನ್ನಬೇಕೇ? ಅದೇ ಪೋಲಿ ಮೂವಿಯಲ್ಲಿ 'ಕಮಾನ್ ಕಮಾನ್ ಕಾಮಣ್ಣ' ಅನ್ನುವ ಒಂದು ಹಾಡು ಸಹ ಇತ್ತು. ಅದನ್ನೂ ಸಹ ಕಾಮತನ ಮೇಲೆ ಉಪಯೋಗಿಸಿದ್ದರೇ? ಇವತ್ತು ನೆನಪಿಲ್ಲ ಬಿಡಿ. ಯಾಕೆಂದರೆ ನಾವು ಆ ಅನಾಹುತ ಮೂವಿ ನೋಡಿದ್ದು ಭಾಳ ವರ್ಷಗಳ ನಂತರ.

'ಮಹೇಶಾss, ಇವನ ಅಡ್ಡಹೆಸರಾಗss 'ಕಾಮ' ಐತಿ. ಬಾಜೂಕೇ ಅಕಿ ಡೆಡ್ಲಿ ಸುಂದರಿ ಮನಿ. ಹೀಂಗಿದ್ದಾಗ ಈ ಕಾಮ್ಯಾನ ಪರಿಸ್ಥಿತಿ ಏನಾಗಿರಬಹುದು???' ಅಂತ ಖಾಸಗಿ ಜೋಕ್ ಮಾಡಿದ ದೋಸ್ತನ ಹೆಸರನ್ನು ನಾನಂತೂ ಇವತ್ತು ಹೇಳುವದಿಲ್ಲ. ನಮ್ಮಲ್ಲಿ ಏನೇ ಜೋಕಿದ್ದರೂ ಎಲ್ಲ ಓಕೆ. ಅಷ್ಟು ಕ್ಲೋಸ್ ನಾವೆಲ್ಲಾ ಲಾಸ್ಟ್ ಬೆಂಚ್ ಫ್ರೆಂಡ್ಸ್.

೧೯೮೮ ರಲ್ಲಿ ಹತ್ತನೇ ಕ್ಲಾಸ್ ಮುಗಿದ ಮೇಲೆ ಕಾಮತ್ ಧಾರವಾಡ ಬಿಟ್ಟ. ಹೆಚ್ಚಾಗಿ ದಕ್ಷಿಣ ಕನ್ನಡದ ಕಡೆ ಇದ್ದ ಕುಟುಂಬ ಸೇರಿಕೊಂಡ ಅಂತ ನೆನಪು. ಆಮೇಲೆ ಎಷ್ಟೋ ವರ್ಷ ಟಚ್ ಇರಲೇ ಇಲ್ಲ. ೨೦೧೧ ವರೆಗೆ. ೨೦೧೧ ರಲ್ಲಿ ಫೇಸ್ಬುಕ್ ಅಕೌಂಟ್ ತೆಗೆದು ಕೂತಾಗ ಕಾಮ್ಯಾ ಕಂಡುಬಂದ. ಬೆಂಗಳೂರಿನಲ್ಲಿ ಒಂದು ದೊಡ್ಡ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದ. ಫೈನಾನ್ಸ್ ವಿಭಾಗದಲ್ಲಿ. ಆ ಹೋಟೆಲ್ಲಿಗೆ ಭೇಟಿ ಕೊಟ್ಟಿದ್ದ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಜೊತೆ ಸ್ಮಾರ್ಟಾಗಿ ನಿಂತ ಫೋಟೋ ಹಾಕಿದ್ದ ಕಾಮ್ಯಾನಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದೆ. ಹಿಂದೆಂದೋ ಲಿಮ್ಕಾ ಕುಡಿಸಿದ ಗೆಳೆಯನ ಜೊತೆಗೆ ದೋಸ್ತಿ ತುರ್ತಾಗಿ ಬೇಕಾಗಿತ್ತು. ಫೇಸ್ಬುಕ್ ಫ್ರೆಂಡ್ ಆದವನಿಗೆ ಒಂದಿಷ್ಟು ಕಾಡಿಸಿ ಮಷ್ಕಿರಿ ಮಾಡಿದ್ದೆ. ನಮ್ಮ ೧೯೮೮ ರ ಶಾಲೆ ಬ್ಯಾಚಿನ ಫೇಸ್ಬುಕ್ ಗ್ರುಪ್ಪಿಗೆ ನನ್ನನ್ನು ಸೇರಿಸಿದವನೇ ಅವನು. ಅವನು ಸೇರಿಸಿರದಿದ್ದರೆ ನನಗೆ ಅಂಥದ್ದೊಂದು ಗ್ರೂಪ್ ಇರುವದೂ ಗೊತ್ತಾಗುತ್ತಿರಲಿಲ್ಲ. ಅನೇಕಾನೇಕ ಸಹಪಾಠಿಗಳ ಮರು ಪರಿಚಯ ಕೂಡ ಆಗುತ್ತಿರಲಿಲ್ಲ. ಅದಕ್ಕೆಲ್ಲ ಒಂದು ದೊಡ್ಡ ಥ್ಯಾಂಕ್ಸ್ ಕಾಮತನಿಗೆ.

೧೯೮೮ ರ ನಂತರ ಕಾಮತ್ ಭೆಟ್ಟಿಯಾಗಿದ್ದು ೨೦೧೨ ರಲ್ಲಿ. ೨೦೧೨ ಡಿಸೆಂಬರ್. ನಮ್ಮ SSLC ಬ್ಯಾಚಿನ ೨೫ ನೇ ವರ್ಷದ ರಜತಮಹೋತ್ಸವ ಸಮಾರಂಭ. ಧಾರವಾಡದಲ್ಲಿ ದೊಡ್ಡ ಪ್ರಮಾಣದಲ್ಲಿ ಆಚರಿಸಿದೆವು. ಧಾರವಾಡದ ದೋಸ್ತರೆಲ್ಲರೂ ಕೂಡಿ ಸಿಕ್ಕಾಪಟ್ಟೆ ಶ್ರಮವಹಿಸಿ ಒಂದು ಖತರ್ನಾಕ್ ಸಮಾರಂಭ ಏರ್ಪಡಿಸಿದ್ದರು. ಎಲ್ಲ ಕಡೆಯಿಂದ ಸುಮಾರು ೧೫೦-೧೭೫ ಜನ ಬಂದಿದ್ದರು. ಬೆಂಗಳೂರಿಂದ ಕಾಮತ್ ಸಹಿತ ಬಂದಿದ್ದ. ಅದೇ ದಿನಗಳಲ್ಲಿ ಅವನ ಚಿಕ್ಕ ವಯಸ್ಸಿನ ಮಗಳ ನೃತ್ಯದ ಒಂದು ಮುಖ್ಯ ಸಮಾರಂಭ ಕೂಡ ಬೆಂಗಳೂರಿನಲ್ಲಿ ಇತ್ತು. ಆದರೆ ಹಳೆಯ ದೋಸ್ತರನ್ನು ಭೆಟ್ಟಿಯಾಗುವ ಅವಕಾಶ ಮತ್ತೆ ಸಿಗದು ಅಂದುಕೊಂಡ ಕಾಮತ್ ಬಂದೇಬಿಟ್ಟಿದ್ದ. That was simply great. He had put his school friends ahead of his own family.

ಸರಿ. ಮೊದಲ ದಿವಸದ ಸಮಾರಂಭ ಶಾಲೆಯಲ್ಲಿ ಮಸ್ತಾಗಿ ಆಯಿತು. ಹಳೆಯ ಗುರುವೃಂದಕ್ಕೆ ನಮನ, ಸತ್ಕಾರ ಎಲ್ಲ ಸಲ್ಲಿಸಿ, ಹಳೆಯ ಮಿತ್ರರನ್ನು, ಅವರ ಕುಟುಂಬ ವರ್ಗದವರನ್ನು ಎಲ್ಲ ಭೆಟ್ಟಿಮಾಡಿ, ಸಂತಸಪಟ್ಟಿದ್ದು ಆಯಿತು. ಇನ್ನು ಸಂಜೆ ಪ್ರೋಗ್ರಾಂ. ಮತ್ತೇನು? ಪಾರ್ಟಿ. ಅಷ್ಟೇ.

ಶಾಲೆಯ ಸಮಾರಂಭ ಮುಗಿಸಿ, ಸಂಜೆ ಮನೆಗೆ ಬಂದು, ಒಂದು ರೌಂಡ್ ಫ್ರೆಶ್ ಆಗುವ ಪುರಸತ್ತಿಲ್ಲ ಮನೆ ಬಾಗಿಲಲ್ಲಿ ಗಾಡಿ ತಂದು ನಿಲ್ಲಿಸಿದವ ನಮ್ಮ ಹೀರೋ ಅಜೇಯ್ ಕುಲಕರ್ಣಿ. ಅವನ ಕಾರಿನಲ್ಲಿ ಪಯಣ. ದಾರಿಯಲ್ಲಿ ಮಿತ್ರ ಬೀಎಂ ಗಿರೀಶನನ್ನೂ ಪಿಕಪ್ ಮಾಡಿದ್ದಾಯಿತು. ನಂತರ ಸೀದಾ ಹೋಗಿದ್ದು 'ಕರ್ನಾಟಕ ಭವನ' ಹೋಟೆಲ್ಲಿಗೆ. ಅಲ್ಲಿದ್ದ ಮತ್ತೊಬ್ಬ ಖಾಸ್ ದೋಸ್ತ ಅರುಣ ಭಟ್ಟನನ್ನು ಪಿಕಪ್ ಮಾಡಬೇಕಿತ್ತು. ಅಲ್ಲಿ ಮತ್ತೆ ಕಂಡ ಈ ಕಾಮತ್.

ಆವತ್ತು ಬೆಳಿಗ್ಗೆ ಧಾರವಾಡಕ್ಕೆ ಬಂದು ಮುಟ್ಟಿದ್ದ ಕಾಮತ್ ಯಾವದೋ ಸಂಬಂಧಿಕರ ಮನೆಯಲ್ಲಿ ಸ್ನಾನ ಮುಗಿಸಿ ಸೀದಾ ಶಾಲೆಯ ಸಮಾರಂಭಕ್ಕೆ ಬಂದುಬಿಟ್ಟಿದ್ದ. ರಾತ್ರಿಯ ರೂಮಿನ ಬುಕಿಂಗ್ ಆಗಿರಲಿಲ್ಲ. ಕಾಮತನ ಖಾಸ್ ದೋಸ್ತ್ ಅರುಣ ಭಟ್ಟ ತಾನಿರುವ ಜಾಗಕ್ಕೇ ಕರೆದುಕೊಂಡುಹೋಗಿದ್ದ. ನಾವು ಭಟ್ಟನನ್ನು ಪಿಕಪ್ ಮಾಡಲು 'ಕರ್ನಾಟಕ ಭವನ'ಕ್ಕೆ ಹೋದರೆ ಅಲ್ಲಿ ಈ ಕಾಮತ್ ಕೂಡ ಸಿಕ್ಕ. ಪಾರ್ಟಿ ಮಾಡಲು ಹೊರಟವರು ನಾವು. ಜಾಸ್ತಿ ಜನ ದೋಸ್ತರು ಸಿಕ್ಕರೆ ಒಳ್ಳೆಯದೇ. 'ನೀನೂ ಬಾರಲೇ ಕಾಮ್ಯಾ,' ಅಂತ ಅವನನ್ನೂ ಕರೆದುಕೊಂಡೇ ಹೊರೆಟೆವು.

ಅಷ್ಟರಲ್ಲಿ ಕಾಮತನಿಗೂ ರೂಂ ಸಿಕ್ಕು, ಅವನು ರೂಮಿಗೆ ಹೋಗಿ ಸಾಮಾನಿಟ್ಟು ಬಂದ. ಕಾಮತ್ ಮತ್ತು ಭಟ್ ಒಂದು ಕಾರಲ್ಲಿ. ನಾವು ಮತ್ತೊಂದರಲ್ಲಿ. ಗಾಡಿ ತಿರುಗಿಸಿದ್ದು ಹಳೆ NH - ೪ ಮೇಲಿರುವ Ozone ಎಂಬ ಬಾರ್ & ರೆಸ್ಟೋರೆಂಟ್ ಕಡೆಗೆ. ಅದು ಅಜೇಯನ ಸೆಲೆಕ್ಷನ್. ಹೋದ ಮೇಲೆ ಗೊತ್ತಾಯಿತು ಎಂತಹ ಸಕತ್ choice ಅಂತ. ಮಾವಿನ ತೋಪಿನಲ್ಲಿರುವ ಒಳ್ಳೆ ರೆಸ್ಟೋರೆಂಟ್. ಒಳ ಹೋಗಿ ನೋಡಿದರೆ ಮತ್ತೊಂದು ದೋಸ್ತರ ಗುಂಪು ಆವಾಗಲೇ ಅಲ್ಲಿ ಸೇರಿತ್ತು. ಪಾನಕ, ಕೋಸಂಬರಿ ಎಲ್ಲ ಬಂದು ಟೇಬಲ್ ಮೇಲೆ ಕೂತಿತ್ತು. ನಾವೂ ಕೂಡ ಹೋಗಿ ಸೇರಿಕೊಂಡು, ಗಿಚ್ಚಾಗಿ ಪಾರ್ಟಿ ಶುರುಮಾಡಿಕೊಂಡೆವು.

ಜೋರಾಗಿ ಪಾರ್ಟಿ ನಡೆಯಿತು. ಇಪ್ಪತ್ತೈದು ವರ್ಷಗಳ ನಂತರ ಸೇರಿರುವ ಮಿತ್ರರು ಅಂದರೆ ಕೇಳಬೇಕೇ? ಒಂದೆರೆಡು ಪೆಗ್ ಒಳಗೆ ಹೋದ ನಂತರ ಕಾಮತ್ ಕೂಡ ಸಡಿಲವಾಗತೊಡಗಿದ್ದ. ಮೂಡಿಗೆ ಬಂದಿದ್ದ. ಆವಾಗ ನಾನು ಭಾಳ ಮಿಸ್ ಮಾಡಿಕೊಂಡಿದ್ದು ನನ್ನ ಹಳೆ ಲಾಸ್ಟ್ ಬೆಂಚ್ ದೋಸ್ತರಾದ ಅರವಿಂದ ಪಾಟೀಲ, ಮನೋಜ್ ಕರಜಗಿ, ಅಶ್ವಿನ್ ಕಟೀರಾ, ಮಹೇಶ್ ಮುದಗಲ್, ಗಲಗಲಿ ಮುಂತಾದ ಮಿತ್ರರನ್ನು. ಅವರೆಲ್ಲ ಇದ್ದರೆ ಇನ್ನೂ ಮಜಾ ಬರುತ್ತಿತ್ತು. ಕಾಮತ್ ಮೂಡಿಗೆ ಬಂದಾಗ ಅವರೆಲ್ಲ ಇದ್ದರೆ ಹಳೆಯ ನೆನಪುಗಳನ್ನು ಇನ್ನೂ ತಾಜಾ ಮಾಡಿಕೊಂಡು, ಮೊದಲಿನ ಹಾಗೆ, ಅನಂತನ ಆವಾಂತರ ಶೈಲಿಯಲ್ಲಿ 'ಕಾಮ, ಕಾಮ, ಕಾssಮ,' ಅಂತ ಮೂಡಿಗೆ ಬರುತ್ತಿದ್ದ ಕಾಮತನನ್ನು ರೇಗಿಸಿ, ಹಳೆಯ ಡೆಡ್ಲಿ ಸುಂದರಿಯನ್ನು ಮತ್ತೆ ನೆನಪಿಸಿ ಮತ್ತೂ ಒಂದಿಷ್ಟು ಕಿಚಾಯಿಸಬಹುದಿತ್ತು. ಆದರೆ ಅವರ್ಯಾರೂ ಇರಲೇ ಇಲ್ಲ. ಕೆಲವರು reunion ಗೇ ಬಂದಿರಲಿಲ್ಲ. ಇನ್ನೂ ಕೆಲವರು ಪಾರ್ಟಿಗೆ ಬಂದಿರಲಿಲ್ಲ.

ಮೂಡಿಗೆ ಬಂದ ಕಾಮತ್ ಮಜಾ ಮಜಾ ಸುದ್ದಿ ಹೇಳಿದ. ಅದೂ ನಾನು ಕೂಡ ಪ್ರಾಂಪ್ಟ್ ಮಾಡಿದೆ ನೋಡಿ. ಅವನು ಕೆಲಸ ಮಾಡುತ್ತಿದ್ದುದು ಒಂದು ದೊಡ್ಡ ಪಂಚತಾರಾ ಹೋಟೆಲ್ಲಿನಲ್ಲಿ. ಅಲ್ಲಿ ಆದ ಕೆಲವು ಲಫಡಾ ಕಾರ್ನಾಮೆಗಳು ನನಗೆ ಗೊತ್ತಿದ್ದವು. ಕನ್ನಡದ ಟ್ಯಾಬ್ಲಾಯ್ಡ್ ಪತ್ರಿಕೆಗಳ ಮೂಲಕ. ಅವುಗಳ ಬಗ್ಗೆ ಸುಮ್ಮನೆ ಕೆದಕಿಕೊಂಡೆ. ಯಾರಿಗೂ ಗೊತ್ತಿಲ್ಲದಂತಹ ಕೆಲವು ಮಾಹಿತಿಗಳನ್ನು ಕಾಮತ್ ಅಂದು ಹೊರಹಾಕಿದ್ದ. ಕೆಲವು ನಟ ನಟಿಯರು ಆ ಹೋಟೆಲ್ಲಿನಲ್ಲಿ ಮಾಡಿಕೊಂಡ ಲಫಡಾಗಳ ಬಗ್ಗೆ ನನಗೆ ಓದಿ ಗೊತ್ತಿತ್ತು. ಅಲ್ಲೇ ಕೆಲಸ ಮಾಡುತ್ತಿದ್ದ ಕಾಮತನಿಗೆ ಅದರ ಹತ್ತು ಪಟ್ಟು ಮಾಹಿತಿ ಗೊತ್ತಿತ್ತು. ಒಂದು ಹತ್ತು ಕಥೆ ಬರೆಯಬಹುದು ಅವನು ಕೊಟ್ಟ ಮಾಹಿತಿಯಿಂದ. ಮುಂದೆ ಎಂದದಾರೂ ಆ ಮಾಹಿತಿಗಳ ಮೇಲೆ ಕಥೆ ಬರೆದರೆ ಕಾಮತನಿಗೆ ಕ್ರೆಡಿಟ್ ಕೊಡಲೇಬೇಕು. ಜರೂರ್ ಕೊಡೋಣ.

ರಾತ್ರಿ ಜಬರ್ದಸ್ತ್ ಪಾರ್ಟಿ ನಡೆಯಿತು. ನಾನು ಯಾವ ಹೊತ್ತಿಗೆ ಮನೆ ಮುಟ್ಟಿಕೊಂಡೆನೋ ನೆನಪಿಲ್ಲ. ಮನೆ ಮುಟ್ಟಿಸಿದವ ಮಾತ್ರ ಅಜೇಯ್ ಕುಲಕರ್ಣಿ. ಥ್ಯಾಂಕ್ಸ್!

ಮರುದಿವಸ ಕೂಡ ನಮ್ಮ ರಿಯೂನಿಯನ್ ಕಾರ್ಯಕ್ರಮ ಇತ್ತು. ಸಂಜೆ ಧಾರವಾಡ ಸಮೀಪದ ಮಯೂರ್ ರೆಸಾರ್ಟ್ ನಲ್ಲಿ ಪಾರ್ಟಿ. ದಿನ ಪೂರ್ತಿ ಫ್ರೀ. ಬೆಳಿಗ್ಗೆ ಅರುಣ ಭಟ್ ಮನೆಗೆ ಬಂದಿದ್ದ. ನನ್ನ ಅವನ ಸ್ನೇಹಕ್ಕಿಂತ ಅವರ ಕುಟುಂಬ ಮತ್ತು ನಮ್ಮ ಕುಟುಂಬಗಳ ಸ್ನೇಹ ತುಂಬ ಹಳೆಯದು. ಭಟ್ಟನ ಅಜ್ಜ ಐತಾಳರು ನಮ್ಮ ತಂದೆಯವರಿಗೆ ಗುರುಗಳು. ಭಟ್ಟನ ಅಜ್ಜಿ ನಮಗೆ ಲೋಕಲ್ ಅಜ್ಜಿ. ಹಾಗಾಗಿ ಮನೆಗೆ ಬಂದಿದ್ದ ಭಟ್ಟ. ಭಟ್ಟನ ಜೊತೆಗೆ ಕಾಮತ್ ಕೂಡ ಬಂದಿದ್ದ. ಮಾತಾಡುತ್ತ ಕೂತೆವು.

ಶಾಲಾ ದಿವಸಗಳಲ್ಲಿ ಒಂದು ಸಾರೆ ನಮ್ಮ ಮನೆಗೆ ಬಂದಿದ್ದನ್ನು ಕಾಮತ್ ನೆನಪಿಸಿಕೊಂಡ. ಆವಾಗ ನಮ್ಮ ಅಮ್ಮ ಮಾಡಿಕೊಟ್ಟ ಕಾಫಿ ಕೂಡ ನೆನಪಿಸಿಕೊಂಡ. 'ಆವಾಗಿನ ಕಾಫೀ ಸಹಿತ ನೆನಪಿಟ್ಟಿಯಾ ನೀನು? ಈಗ ಇನ್ನೊಮ್ಮೆ ಕಾಫಿನೇ ಮಾಡಿಕೊಡ್ತೇನಿ. ಕುಡಿದು ಹೋಗಿಯಂತ,' ಅಂತ ಹೇಳಿದ ಅಮ್ಮನ ಅಕ್ಕರೆಯಿಂದ ಭಟ್ಟ, ಕಾಮತ್ ಎಲ್ಲ ಫುಲ್ ಖುಷ್.

ಸಂಜೆ ಆರರಿಂದ ಮಯೂರ್ ರೆಸಾರ್ಟ್ ನಲ್ಲಿ ನಮ್ಮ ಪಾರ್ಟಿ. ಕಾಮತನಿಗೆ ಅಂದು ರಾತ್ರಿಯೇ ವಾಪಸ್ ಬೆಂಗಳೂರಿಗೆ ಹೋಗಬೇಕಿತ್ತು. ಆದರೂ ಸುಮಾರು ಒಂಬತ್ತು ಘಂಟೆವರೆಗೆ ಇದ್ದ. ಪಾರ್ಟಿ, ಹಾಡು, ನೃತ್ಯ ಎಲ್ಲ ಶುರುವಾಗಿದ್ದೇ ನಂತರ. ಅದನ್ನೆಲ್ಲ ಮಿಸ್ ಮಾಡಿಕೊಂಡ. ನಾವೂ ಅವನನ್ನು ಮಿಸ್ ಮಾಡಿಕೊಂಡೆವು. ಎಲ್ಲರಿಗೂ ಗುಡ್ ಬೈ ಹೇಳಿ ಬೆಂಗಳೂರ್ ಬಸ್ ಹತ್ತಿದ ಕಾಮತ್. ಅದೇ ಕೊನೆ. ನಮ್ಮ ಪಾರ್ಟಿ ರಾತ್ರಿ ಎರಡು ಘಂಟೆ ತನಕ ನಡೆಯಿತು. ಧಾರವಾಡದ ಡಾನ್, ನಮ್ಮ ಮಿತ್ರ, ಜಂಗಣ್ಣವರ ಎಲ್ಲರ ಖಾತಿರ್ದಾರಿ ಮಾಡಿದ. ಬಾರ್ ಬಂದಾದ ಮೇಲೂ, 'ಲೇ, ಜಂಗ್ಯಾ, ಇನ್ನೂ ಬಿಯರ್ ಬೇಕಲೇ. ತರಿಸೋ ಮಾರಾಯಾ' ಅಂತ ನಮ್ಮಂತವರು ರೋಧಿಸಿದರೆ, 'ಒಂದೇ ಮಿನಿಟ್ ಅಣ್ಣಾ. ತರಿಸೇಬಿಟ್ಟೆ. ಎಂಜಾಯ್ ಮಾಡು ನೀ!' ಅಂದ ಡಾನ್ ಜಂಗಣ್ಣವರ ಬರೋಬ್ಬರಿ 'ತೀರ್ಥ'ಯಾತ್ರೆ ಮಾಡಿಸಿದ್ದ. ಕಾಮತ್ ಎಲ್ಲೋ ಬಸ್ಸಿನಲ್ಲಿ ಕೂತಿರಬೇಕು ಆ ಹೊತ್ತಿನಲ್ಲಿ. ಎಷ್ಟು ಮಿಸ್ ಮಾಡಿಕೊಂಡನೋ. ನಾವೂ ಅಷ್ಟೇ ಮಿಸ್ ಮಾಡಿಕೊಂಡೆವು.

ನಂತರ ಫೋನ್ ನಲ್ಲಿ ಟಚ್ ಇತ್ತು. ೨೦೧೩, ೨೦೧೪ ಡಿಸೆಂಬರ್ ನಲ್ಲಿ informal reunion ಗಳನ್ನು ಮಾಡಿದಾಗ ಧಾರವಾಡಕ್ಕೆ ಬರಲಾಗದಿದ್ದಕ್ಕೆ ತುಂಬಾ ಫೀಲ್ ಮಾಡಿಕೊಂಡಿದ್ದ. We also missed you, Kamat!

ಕೆಲವು ತಿಂಗಳ ಹಿಂದೆ ಸಹಜವಾಗಿ ಫೋನ್ ಮಾಡಿದ್ದೆ. ಬೆಂಗಳೂರಿನಲ್ಲಿ ಕೆಂಗೇರಿ ಕಡೆ ಒಂದು ಫ್ಲಾಟ್ ತೆಗೆದುಕೊಂಡೆ ಅಂದ. 'ನಿನ್ನ ಕೆಲಸದ ಜಾಗಕ್ಕೆ ಅದು ತುಂಬಾ ದೂರವಲ್ಲವೇ?' ಅಂತ ಕೇಳಿದೆ. 'ದೂರ ಹೌದು. ಆದರೆ ಪತ್ನಿಗೆ, ಮಕ್ಕಳಿಗೆ ಎಲ್ಲ ಅನುಕೂಲವಾಗುತ್ತದೆ. ಅವರ ಕಂಫರ್ಟ್ ಮುಖ್ಯ. ನನ್ನದೇನು? ಮ್ಯಾನೇಜ್ ಮಾಡುತ್ತೇನೆ. ನನ್ನ ಹತ್ತಿರ ಬೈಕಿದೆ. It's OK,' ಅಂದ. What a devoted family man! ಅಂತ ಅನ್ನಿಸಿತ್ತು. ಮನದಲ್ಲೇ ಒಂದು hats off ಹೇಳಿ ಸಂಭಾಷಣೆ ಮುಗಿಸಿದ್ದೆ.

ನಂತರವೂ ಒಂದೆರೆಡು ಸಲ ಮಾತಾಡಿದ್ದೆ. ಈ ವರ್ಷ ಅಯ್ಯಪ್ಪ ಮಾಲೆ ಹಾಕಿದ್ದ. ವ್ರತ ಮುಗಿಸಿಬಂದ ಮೇಲೋ ಅಥವಾ ಅಲ್ಲಿಗೆ ಹೋಗುತ್ತಿರುವಾಗಲೋ ಫೋನ್ ಮಾಡಿದ್ದೆ. ಅಯ್ಯಪ್ಪನ ಮಾಲೆ ವ್ರತವನ್ನು ಯಶಸ್ವಿಯಾಗಿ ಮುಗಿಸಿದ್ದಕ್ಕೆ ಅಭಿನಂದಿಸಿದ್ದೆ. ಅದೇ ಕೊನೆ ಬಾರಿ ಮಾತಾಡಿದ್ದು ಅಂತ ಕಾಣುತ್ತದೆ. ಹೊಸ ಫ್ಲಾಟಿನ ಗೃಹಪ್ರವೇಶಕ್ಕೆ ಎಲ್ಲರನ್ನೂ ಆಹ್ವಾನಿಸಿದ್ದ. ನಂತರ ಬೆಂಗಳೂರಿನ ಲೋಕಲ್ ಮಂದಿ ಮಾಡಿದ ಕಾರ್ಯಕ್ರಮಗಳಲ್ಲೂ ಅವನ ಫೋಟೋ ನೋಡಿದ್ದೆ. ಖುಷಿಪಟ್ಟಿದ್ದೆ.

ಮೊನ್ನೆ ಮಾತ್ರ ತನ್ನ ನಲವತ್ತಮೂರನೆಯ ಜನ್ಮದಿನ ಆಚರಿಸಿಕೊಂಡಿದ್ದ. ಆದರೆ ಇವತ್ತು ಇಲ್ಲ. ಬೆಂಗಳೂರಿನಲ್ಲಿ ಆದ ರಸ್ತೆ ಅಪಘಾತವೊಂದರಲ್ಲಿ ಕಾಮತ್ ಮೃತನಾಗಿದ್ದಾನೆ. ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.

ಮೊನ್ನೆ ರಾತ್ರಿ ಸುಮಾರು ೯.೩೦ ರ ಹೊತ್ತಿಗೆ ಆಫೀಸ್ ಕೆಲಸ ಮುಗಿಸಿ ಬೈಕಿನಲ್ಲಿ ಮನೆಗೆ ಹೊರಟಿದ್ದಾನೆ. ಮನೆ ಹತ್ತಿರ ಬಂದಾಗ ಕೆಂಗೇರಿಯಲ್ಲಿ ಹಿಂದಿನಿಂದ ಟಿಪ್ಪರ್ ಲಾರಿ ಬಂದು ಅಪ್ಪಳಿಸಿದೆ. ಗಾಯಗೊಂಡವನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ದುರಾದೃಷ್ಟ. ಕಾಮತ್ ಬದುಕುಳಿಯಲಿಲ್ಲ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ, ಮೈ ಫ್ರೆಂಡ್, ಕಾಮತ್!

ನಮಗೆ ಯಾರಿಗೂ ಸುದ್ದಿ ಗೊತ್ತಿರಲಿಲ್ಲ. ಅವನ ಪರಿಚಿತರಾರೋ ಕಾಮತನ ಫೇಸ್ಬುಕ್ ವಾಲ್ ಮೇಲೆ ಒಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಅದನ್ನು ನೋಡಿದ ನಮ್ಮ ಮತ್ತೊಬ್ಬ ಕ್ಲಾಸ್ಮೇಟ್ ಅದನ್ನು ನಮ್ಮ ಸ್ಕೂಲ್ ಫೇಸ್ಬುಕ್ ಗುಂಪಿನಲ್ಲಿ ಹಂಚಿಕೊಂಡಿದ್ದಾರೆ. ಕಾಮತನಿಗೆ ಭಾಳ ಕ್ಲೋಸ್ ಆಗಿದ್ದ ಅರುಣ ಭಟ್ಟನನ್ನು ಸಂಪರ್ಕಿಸಿದ್ದಾರೆ. ಭಟ್ಟನಿಗೂ ಮಾಹಿತಿಯಿಲ್ಲ. ಏನೇ ಇರಲಿ ಅಂತ ಕಾಮತನ ಮೊಬೈಲ್ ನಂಬರಿಗೇ ಫೋನ್ ಮಾಡಿದ್ದಾನೆ ಭಟ್. ಫೋನ್ ಎತ್ತಿದಾಕೆ ಕಾಮತನ ಧರ್ಮಪತ್ನಿ. ತಣ್ಣಗೆ ಹೇಳಿದ್ದಾಳೆ, 'ನಿಮ್ಮ ಮಿತ್ರ ಇನ್ನಿಲ್ಲ!' ಅಂತ. ಅದೇನು ಸಂಯಮ, ಅದೇನು fortitude ಆಕೆಯದು! ಅದಕ್ಕೊಂದು ಸಲಾಂ!

ಕಾಮತ್ ತೀರಿಹೋಗಿದ್ದಾನೆ ಅಂತ ಹೀಗೆ ಖಾತ್ರಿಯಾಗಿದೆ. ನಾವಿಲ್ಲಿ ಮುಂಜಾನೆ ಎದ್ದು ಬಂದು FB ಮೇಲೆ ನೋಡಿದರೆ ಇಷ್ಟು ಸುದ್ದಿ. ಕಾಮತ್ ಏನೋ ಹೋಗಿಬಿಟ್ಟ. ಆದರೆ ನೆನಪುಗಳು ಮತ್ತು ನೋವು??? ಅದು ನಿರಂತರ.

ಹೇಳಲು ಕೇಳಲು ಏನೂ ಉಳಿದಿಲ್ಲ. ಕಾಮತನ ಆತ್ಮಕ್ಕೆ ಶಾಂತಿ ಸಿಗಲಿ. ಅವನ ಕುಟುಂಬಕ್ಕೆ ಅವನ ಸಾವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಅವರಿಗೆ ಎಲ್ಲ ಒಳ್ಳೆಯದಾಗಲಿ. ಇದು ಎಲ್ಲ ದೋಸ್ತರ ಹಾರೈಕೆ.

Kamat, miss you man. May your soul rest in peace!

ಮಯೂರ್ ರೆಸಾರ್ಟ್ ನಲ್ಲಿ ಕಾಮತ್ . ಇದೇ ಕೊನೆ. ನಂತರ ಭೆಟ್ಟಿಯಾಗಲೇ ಇಲ್ಲ! :(

Thursday, June 25, 2015

ನರಹರಿ ಆಪರೇಷನ್ : ೧೯೭೫ ರ ಎಮರ್ಜೆನ್ಸಿಯ ಒಂದು ಅತಿರೇಕ

೧೯೭೫ ರಲ್ಲಿ ಇಂದಿರಾ ಗಾಂಧಿ ಎಮರ್ಜೆನ್ಸಿ ಜಾರಿಗೊಳಿಸಿದ್ದು ಎಲ್ಲರಿಗೂ ಗೊತ್ತು. ಆ ಸಮಯದಲ್ಲಿ ಭಾರತದ ದೊಡ್ಡ ಸಮಸ್ಯೆ ಅಂದರೆ ಜನಸಂಖ್ಯಾ ಸ್ಪೋಟ. ಅದರ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡವ ಇಂದಿರಾ ಗಾಂಧಿಯ ಮಗ ಸಂಜಯ ಗಾಂಧಿ. ಹೇಗಾದರೂ ಮಾಡಿ ಜನಸಂಖ್ಯೆ ಕಡಿಮೆ ಮಾಡಲೇಬೇಕು. ಏನು ಮಾಡಬೇಕು? ಅಂತ ವಿಚಾರ ಮಾಡಿದ. ಅವನಿಗೇ ಆ ಖತರ್ನಾಕ್ ವಿಚಾರ ಬಂತೋ ಅಥವಾ ಅವನ ಸುತ್ತಲಿದ್ದ ಮನೆಹಾಳ ಜನರಲ್ಲಿ ಯಾರಾದರೂ ಆ ಐಡಿಯಾ ಕೊಟ್ಟರೋ ಗೊತ್ತಿಲ್ಲ. ನಿರ್ಧರಿಸಿಯೇ ಬಿಟ್ಟ. ನರಮಾನವರೆಲ್ಲರ ನರ ಕಟ್ ಮಾಡಿ ನರಸತ್ತ ಮಾನವರನ್ನಾಗಿ ಮಾಡಿಬಿಡಬೇಕು. ಎಲ್ಲರಿಗೂ ನರಹರಿ ಆಪರೇಷನ್ ಮಾಡಿಸಿಯೇಬಿಡಬೇಕು. ಜನರನ್ನು ಸಂತಾನಹರಣ ಚಿಕಿತ್ಸೆಗೆ ಒಳಪಡಿಸಬೇಕು. ತಿಂಗಳಿಗೆ ಇಷ್ಟು ಅಂತ ಸಂತಾನಹರಣ ಚಿಕಿತ್ಸೆ ಆಗಲೇಬೇಕು. ಅಷ್ಟಾದರೆ ಸಾಕು. ಆಸ್ಥಾನದ ಸಂಖ್ಯಾಶಾಸ್ತ್ರಜ್ಞರು ಪೊಕಳೆ ಹೊಡೆದಂತೆ ಮುಂದಿನ ತಲೆಮಾರುಗಳಲ್ಲಿ ಜನಸಂಖೆ ಕಮ್ಮಿಯಾಗುತ್ತಲೇ ಹೋಗುತ್ತದೆ. ಇದು ಅವನ ದೊಡ್ಡ ತಲೆಯಿಂದ ಹೊರಹೊಮ್ಮಿದ ಬ್ರಿಲಿಯಂಟ್ ಐಡಿಯಾ!

ಇಂತದೊಂದು ಐಡಿಯಾ ಬಂದಿದ್ದೇ ಬಂದಿದ್ದು, ಎಲ್ಲ ಅಧಿಕಾರಿಗಳಿಗೆ ಬರೋಬ್ಬರಿ ಸಂದೇಶ ಹೋಯಿತು. ಹೇಳಿ ಕೇಳಿ ಎಮರ್ಜೆನ್ಸಿ ಸಮಯ. ಕಾಯ್ದೆ ಕಾನೂನು ಎಲ್ಲ ಮೂಲೆ ಸೇರಿದ್ದವು. ಮುದ್ದಿನ ಕಿರಿಯ ಮಗ ಸಂಜಯ ಗಾಂಧಿಯಂತೂ ಅಮ್ಮ ಇಂದಿರಾ ಗಾಂಧಿಯ ದೊಡ್ಡ ಬಲಹೀನತೆ. ಅವನು ಏನೇ ಮಾಡಿದರೂ ಆಕೆ ಸುಮ್ಮನಿರುತ್ತಿದ್ದಳು. ಮತ್ತೆ ಶುದ್ದ ಮೊಂಡನೀತ. ಅಮ್ಮ ಹೇಳಿದರೆ ಕೇಳೋ ಪೈಕಿಯೂ ಅಲ್ಲ. 'ಸರಿ, ಏನಾದರೂ ಮಾಡಿಕೊಂಡು, ಹಾಳಾಗಿ ಹೋಗು,' ಅಂತ ಎಮರ್ಜೆನ್ಸಿಯ ಇತರೆ ತಲೆನೋವುಗಳನ್ನು ವಿಚಾರಿಸಿಕೊಳ್ಳಲು ಹೋದರು ಅವರು. ಈಕಡೆ ಸಂಜಯ ಗಾಂಧಿಯ ಅಂಧಾದುಂಧಿ ಶುರುವಾಯಿತು.

ಎಲ್ಲ ಜಿಲ್ಲೆಗಳಿಗೆ ಖಡಕ್ ಕೋಟಾ. ಮತ್ತೆ ಪದೇ ಪದೇ ಪ್ರಗತಿಯ ಪರಿಶೀಲನೆ. ಹಾಕಿದ್ದ ಕೋಟಾಕ್ಕೆ ತಕ್ಕಂತೆ ಸಂತಾನಹರಣ ಚಿಕಿತ್ಸೆಗಳು ಆದವೋ, ಭಾಳ ಒಳ್ಳೆಯದು. ಎಲ್ಲರಿಗೂ ಇನಾಮು ಇತ್ಯಾದಿ. ಟಾರ್ಗೆಟ್ ರೀಚ್ ಆಗಲಿಲ್ಲವೋ ಗ್ರಹಚಾರ ವಕ್ಕರಿಸಿಕೊಳ್ಳುತ್ತಿತ್ತು. ಸಂಜಯ ಗಾಂಧಿಯಿಂದ, ಅವನ ಚೇಲಾಗಳಿಂದ ಅಧಿಕಾರಿಗಳಿಗೆ ಬರೋಬ್ಬರಿ ಬೆಂಡು. ಹಾಗೆ ಬೆಂಡೆತ್ತಿಸಿಕೊಳ್ಳುವದು ಯಾವನಿಗೆ ಬೇಕು ಅಂತ ಅಂದುಕೊಂಡ ಅಧಿಕಾರಶಾಹಿ ಇಲ್ಲದ ಅತಿರೇಕಗಳಿಗೆ ಇಳಿದು ಬಿಟ್ಟಿತು. ಅದೇ ದೊಡ್ಡ ದುರಂತ.

ಮೇಲಿಂದ ಬಂದಿದ್ದ ಟಾರ್ಗೆಟ್ ಮುಟ್ಟಲೇಬೇಕು ಅಂತ ಅಧಿಕಾರಶಾಹಿ ಜನರಿಗೆ ಏನೇನೋ ಆಮಿಷ ಒಡ್ಡಿತು. ಆದರೂ ಹೆಚ್ಚಿನ ಗಂಡಸರು, ಹೆಂಗಸರು ಮುಂದೆ ಬರಲೇ ಇಲ್ಲ. ಮುಖ್ಯವಾಗಿ ಜನರಿಗೆ ತಿಳುವಳಿಕೆ ಇರಲಿಲ್ಲ. ತಪ್ಪು ಮಾಹಿತಿಯೇ ಜಾಸ್ತಿಯಿತ್ತು. ಸಂತಾನಹರಣ ಚಿಕಿತ್ಸೆಯಿಂದ ಶಕ್ತಿ ಕಮ್ಮಿಯಾಗುತ್ತದೆ. ಹೊಲಗದ್ದೆಗಳಲ್ಲಿ ಕೆಲಸ ಮಾಡಲು ಆಗುವದಿಲ್ಲ. ಇನ್ನಿತರ ಏನೇನೋ ಆರೋಗ್ಯದ ತೊಂದರೆಗಳು ಬರುತ್ತವೆ. ಅದು, ಇದು ಅಂತೆಲ್ಲ ತಪ್ಪು ಮಾಹಿತಿ ಮತ್ತು ಆತಂಕ. ಹೀಗೆಲ್ಲ ಏನೇನೋ ಕೇಳಿದ್ದ ಮಂದಿ ಬರಲೇ ಇಲ್ಲ. ಬದಲಾಗಿ ನರ ಕಟ್ ಮಾಡುವ ಆಪರೇಷನ್ ಎಂದೇ ಜನಜನಿತವಾಗಿದ್ದ ಸಂತಾನಹರಣ ಚಿಕಿತ್ಸೆಗೆ ನರಹರಿ ಆಪರೇಷನ್ ಅಂತ ಜೋಕ್ ಮಾಡಿಕೊಂಡು ಇದ್ದರು. ಮುಂದೆ ಜರುಗಲಿರುವ ಭೀಕರ ಪರಿಣಾಮಗಳನ್ನು ಆ ಅಮಾಯಕರು ಊಹಿಸಿರಲಿಕ್ಕಿಲ್ಲ ಬಿಡಿ.

ಯಾವಾಗ ಟಾರ್ಗೆಟ್ ರೀಚ್ ಆಗಲಿಲ್ಲವೋ ಆಗ ಶುರುವಾಯಿತು ಮುಂದಿನ ಕಾರ್ಯಾಚರಣೆ. ಹಳ್ಳಿಗಳ ಮೇಲೆ ಶುದ್ಧ ಗೂಂಡಾ ಪಡೆಯ ರೈಡ್. ಡಾಕ್ಟರುಗಳು ಹೋಗಿ ಒಂದು ಶಿಬಿರ ಸೆಟಪ್ ಮಾಡಿಕೊಳ್ಳುತ್ತಿದ್ದರು. ಪೊಲೀಸರು, ಗೂಂಡಾಗಳು ಕೂಡಿ ಸುತ್ತಲಿನ ಗ್ರಾಮಗಳ ಮೇಲೆ ರೈಡ್ ಮಾಡುತ್ತಿದ್ದರು. ಕೈಗೆ ಸಿಕ್ಕ ಗಂಡಸರು, ಹೆಂಗಸರನ್ನು ಪ್ರಾಣಿಗಳಂತೆ ಹಿಡಿಹಿಡಿದು ಎಳೆದುಕೊಂಡು ಬರುತ್ತಿದ್ದರು. ಟಾರ್ಗೆಟ್ ಬಹಳ ದೊಡ್ಡದಿದ್ದು, ಬಹಳ ಕಡಿಮೆ ಆಪರೇಷನ್ ಆಗಿದ್ದರೆ ಸಣ್ಣ ಮಕ್ಕಳನ್ನೂ ಹಿಡಿದುಕೊಂಡು ಬಂದೇಬಿಡುತ್ತಿದ್ದರು. ನಂತರ ನಡೆಯುತ್ತಿದ್ದುದು ಶುದ್ಧ ಅತ್ಯಾಚಾರ. ಬಲವಂತದ ಶಸ್ತ್ರಚಿಕಿತ್ಸೆ. ನಂತರ ಆ ಅಮಾಯಕರ ಅಂಡಿನ ಮೇಲೆ ಒದ್ದು ವಾಪಸ್ ಕಳಿಸುವ ಮೊದಲು ಒಂದಿಷ್ಟು ರೊಕ್ಕ, ಹಣ್ಣು ಇತ್ಯಾದಿ. ಅದು ಆಪರೇಷನ್ ಮಾಡಿಸಿಕೊಂಡಿದ್ದಕ್ಕೆ ಸರ್ಕಾರದ ಪರವಾಗಿ ಪ್ರೋತ್ಸಾಹದ ರೂಪದ ಇನಾಮು. ಅದರಲ್ಲಿ ಎಷ್ಟು ಈ ಕಳ್ಳರ ಕಿಸೆ ಸೇರಿತೋ ಗೊತ್ತಿಲ್ಲ.

ಇಂತಹ ವೈಪರೀತ್ಯಕ್ಕೆ ಬಲಿಯಾದವರಲ್ಲಿ ಇನ್ನೂ ಸಂತಾನ ಬೇಕೆಂದುಕೊಂಡವರು, ವಿವಾಹವೇ ಆಗದ ಹುಡುಗ ಹುಡುಗಿಯರು ಎಲ್ಲರೂ ಇದ್ದರು. ಕೆಲವೊಂದು ಕಡೆ ಎಲ್ಲಿಯ ತನಕ ರಾಡಾ ಆಗಿತ್ತು ಅಂದರೆ ಇನ್ನೂ ಪ್ರಾಯಕ್ಕೇ ಬರದ ಹುಡುಗ ಹುಡುಗಿಯರ ಸಂತಾನಹರಣ ಚಿಕಿತ್ಸೆ ಕೂಡ ಆಗಿಹೋಗಿತ್ತು. ಒಟ್ಟಿನಲ್ಲಿ ಸರ್ಕಾರಿ ದಸ್ತಾವೇಜಿನಲ್ಲಿ ದಾಖಲಾಗಬೇಕು. ಟಾರ್ಗೆಟ್ ಮುಟ್ಟಬೇಕು. ಮಾಹಿತಿ ಸಂಜಯ ಗಾಂಧಿಗೆ ಹೋಗಬೇಕು. ಮೋಗ್ಯಾಂಬೋ ಖುಷ್ ಆಗಬೇಕು.

ಉತ್ತರದ ರಾಜ್ಯಗಳಲ್ಲಿ ಮತ್ತು ಬಿಹಾರದಲ್ಲಿ ಇಂತಹ ವೈಪರೀತ್ಯಗಳು ತುಂಬಾ ಆದವು. ಈ ಅಂಧಾದುಂಧಿ ಪರಾಕಾಷ್ಠೆ ಮುಟ್ಟಿದಾಗ ಯಾರೋ ಇದನ್ನು ಇಂದಿರಾ ಗಾಂಧಿಯ ಕಿವಿಯಲ್ಲೂ ಹಾಕಿದರು. ಮುದ್ದಿನ ಮಗ ಸಂಜಯ ಗಾಂಧಿಯ ವಿರುದ್ಧ ಆಕೆ ಏನನ್ನೂ ಕೇಳಲು ಇಷ್ಟಪಡುತ್ತಿದ್ದಿಲ್ಲ. ಆದರೆ ಯಾವಾಗ ಆಕೆಯ ಖಾಸಂ ಖಾಸ್ ಮಂದಿ ಮತ್ತೆ ಮತ್ತೆ ಹೇಳತೊಡಗಿದರೋ ಮತ್ತೆ ಅದಕ್ಕೂ ಮುಖ್ಯವಾಗಿ ಯಾವಾಗ ಈ ಬಲವಂತದ ಸಂತಾನಹರಣ ಶಸ್ತ್ರಚಿಕಿತ್ಸೆ ಮುಂದಿನ ಚುನಾವಣೆ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಅಂತ ಆಕೆಯ ಸುತ್ತ ನೆರೆದಿರುತ್ತಿದ್ದ ಕಾಶ್ಮೀರಿ ಕಬಾಲ್ (cabal) ಹೇಳತೊಡಗಿತೋ ಆಗ ಇಂದಿರಾ ಎಚ್ಚೆತ್ತುಕೊಂಡರು. ಸಂಜಯ ಗಾಂಧಿಯನ್ನು ನೇರವಾಗಿ ತರಾಟೆಗೆ ತೆಗೆದುಕೊಳ್ಳಲಿಲ್ಲ. ಮಾತೃಹೃದಯ ಒಪ್ಪಲಿಲ್ಲ. ಆದರೆ ತಾವೇ ಖುದ್ದಾಗಿ ಆಜ್ಞೆ ಹೊರಡಿಸಿದರು. ಬಲಾತ್ಕಾರವಾಗಿ ಯಾರಿಗೂ ಏನೂ ಮಾಡಬಾರದು ಅಂತ ಖಡಕ್ ಆಜ್ಞೆ ಮಾಡಿದರು. ಮಾಡಿದರೆ ಎಚ್ಚರಿಕೆ ಅಂತ ವಾರ್ನಿಂಗ್ ಬೇರೆ ಕೊಟ್ಟರು. ಸಂಜಯ ಗಾಂಧಿಯ ಪುಂಡ ಪಟಾಲಮ್ಮಿನಲ್ಲಿದ್ದು, ನರಹರಿ ಆಪರೇಷನ್ ರೂವಾರಿಗಳಾಗಿದ್ದ ಮರಿ ಪುಡಾರಿಗಳನ್ನು ಕರೆಕರೆದು ಬೆಂಡೆತ್ತಿದರು. ಅಂತೂ ಹೀಗೆಲ್ಲ ಮಾಡಿ ಸಂಜಯ ಗಾಂಧಿಯ ಮನ್ಮಾನಿಯನ್ನು indirect ಆಗಿ ಬಂದ್ ಮಾಡಿಸಿದ್ದರು. ಸಂಜಯ ಗಾಂಧಿ ಒಂದಿಷ್ಟು ಸಿಡಿಮಿಡಿಗೊಂಡ. ಅಮ್ಮನ ಜೊತೆ ಒಂದಿಷ್ಟು ಧುಸುಮುಸು ಮಾಡಿದ. ಇದೊಂದು ವಿಷಯದಲ್ಲಿ ಅಮ್ಮ ಅವನ ಮಾತು ಕೇಳಲಿಲ್ಲ. ಆದರೆ ತುಂಬಾ ತಡವಾಗಿ ಈ ಕ್ರಮ ಕೈಗೊಂಡಿದ್ದರು ಇಂದಿರಾ ಗಾಂಧಿ. ಬೇಕಾದಷ್ಟು ಡ್ಯಾಮೇಜ್ ಆಗಿಹೋಗಿತ್ತು. ಆಗಲೇ ಮಂದಿ ನಿರ್ಧರಿಸಿದ್ದರು, 'ಸಂಜಯ ಗಾಂಧಿಯೆಂಬ ಈ ನರಹರಿಗೆ ಮತ್ತು ಅಲ್ಲಿಯವರೆಗೆ ದುರ್ಗೆಯ ಪ್ರತಿರೂಪ ಅಂತ ಆರಾಧಿಸುತ್ತಿದ್ದ ಅವನ ಅಮ್ಮ ಇಂದಿರಾ ಗಾಂಧಿಗೆ ಮುಂದಿನ ಚುನಾವಣೆಯಲ್ಲಿ ಒಂದು ಗತಿ ಕಾಣಿಸಬೇಕು,' ಅಂತ. ಹಾಗೆಯೇ ಆಯಿತು. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಯಿತು. ಸಂತಾನ ಭಾಗ್ಯ ಕಳೆದುಕೊಂಡು, ಅವರ ಪ್ರಕಾರ ತೀವ್ರ ನಿಶ್ಶಕ್ತಿ ಅನುಭವಿಸುತ್ತಿದ್ದ ಉತ್ತರದ ಕಡೆಯ ಹಳ್ಳಿಯ ಮಂದಿ ಹೋಲ್ಸೇಲಿನಲ್ಲಿ ಕಾಂಗ್ರೆಸ್ ವಿರುದ್ಧ ವೋಟು ಹಾಕಿದ್ದರು. ಕಾಂಗ್ರೆಸ್ ಮಕಾಡೆಯಾಗಿ ಲಂಬಾ ಲಂಬಾ ಮಲಗಿಬಿಟ್ಟಿತ್ತು. ಅಮ್ಮ, ಮಗ ಇಬ್ಬರೂ ಸೋತಿದ್ದರು. ಅಮ್ಮ ಹಿಂದಿನ ಅಪರಾಧವೊಂದರಲ್ಲಿ ಸಾಂಕೇತಿಕವಾಗಿ ಜೈಲಿಗೂ ಹೋಗಿಬಂದಳು. ಒಂದು ಕಾಲದಲ್ಲಿ ಇಂದಿರಾ ಗಾಂಧಿಯ ಕೂದಲು ಕೊಂಕಿದ್ದರೂ ಇಡೀ ಭಾರತ ಹೊತ್ತಿಕೊಳ್ಳುತ್ತಿತ್ತು. ಈಗ ಒಂದು ತರಹದ ಜಿಗುಪ್ಸೆ, ನಿರುಮ್ಮಳ ಅಷ್ಟೇ.

ಸಂಜಯ ಗಾಂಧಿಯ ಜೊತೆ ಡೂನ್ ಸ್ಕೂಲಿನಲ್ಲಿ ಓದಿದ್ದ, ಅವನ ಮಿತ್ರರಾಗಿದ್ದ ಪತ್ರಕರ್ತ ವಿನೋದ್ ಮೆಹ್ತಾ ಬರೆದ ಪುಸ್ತಕದಲ್ಲಿ ಒಂದು ಮಾತು ಹೇಳುತ್ತಾರೆ. ಅದು ಜೋಕೋ ಅಥವಾ ನಿಜವೋ ಗೊತ್ತಿಲ್ಲ. ಸಂತಾನಹರಣ ಚಿಕಿತ್ಸೆಗೆ ಜನರನ್ನು ಎತ್ತಾಕಿಕೊಂಡು ಹೋಗಲು ಗೂಂಡಾ ಪಡೆ ಹಳ್ಳಿಗಳನ್ನು ರೈಡ್ ಮಾಡುತ್ತಿತ್ತು ಅಂತ ಹೇಳಿದೆ ನೋಡಿ. ಒಂದು ಸಲ ಏನೋ ಮಿಸ್ಟೇಕ್ ಆಗಿ ಮೊದಲೊಂದು ಸಲ ರೈಡ್ ಮಾಡಿದ್ದ ಹಳ್ಳಿಯನ್ನೇ ಮತ್ತೆ ರೈಡ್ ಮಾಡಿದ್ದರು. ಸಾಮಾನ್ಯವಾಗಿ ಇವರು ಬರುತ್ತಿದ್ದಂತೆ ಭಯಭೀತರಾದ ಜನರು, 'ನರ ಉಳಿದರೆ ಸಾಕು ನಾರಾಯಣ,' ಅನ್ನುವ ಮಾದರಿಯಲ್ಲಿ, ಬಿದ್ದಾಕಿ ಕಾಡುಮೇಡಿಗೆ ಓಡುತ್ತಿದ್ದರು. ಆ ಹಳ್ಳಿಯ ಜನರು ಮಾತ್ರ ಎಲ್ಲವನ್ನೂ ದೇವರಿಗೆ ಬಿಟ್ಟವರಂತೆ ಶಿವಾಯ ನಮಃ ಅನ್ನುವ ರೀತಿಯಲ್ಲಿ ಕಟ್ಟೆ ಮೇಲೆ ಕೂತೇ ಇದ್ದರು. ಬೀಡಿ ಸೇದುತ್ತ, ಎಲೆಯಡಿಕೆ ಜಗಿಯುತ್ತ ಕೂತೇ ಇದ್ದರು. ಗೂಂಡಾಗಳು ಬರುತ್ತಿರುವದನ್ನು ನೋಡಿದ ಒಬ್ಬ ಹಿರಿಯ ಯಜಮಾನ ತನ್ನ ಗಾವಟಿ ಹಿಂದಿಯಲ್ಲಿ ಹೇಳಿದನಂತೆ - 'ಹೋದ ಸಲ ಬಂದವರು ಫೋನಿನ ತಾರು ಕಟ್ ಮಾಡಿಹೋಗಿದ್ದರು. ಈಸಲ ಏನು ಹ್ಯಾಂಡ್ ಸೆಟ್ಟನ್ನೇ  ಒಯ್ಯಲು ಬಂದಿದ್ದಾರೆಯೋ ಹೇಗೆ?????' ಹಾಗಂತ ಹೇಳಲಿಲ್ಲ ಗೂಂಡಾಗಳ ಮುಂದೆ. ಹೇಳಿಕೇಳಿ ಶುದ್ಧ ಗೂಂಡಾಗಳು. ಸಿಟ್ಟಿಗೆದ್ದು ಹ್ಯಾಂಡ್ ಸೆಟ್ಟನ್ನೇ ಒಯ್ದುಬಿಟ್ಟರೆ ದೊಡ್ಡ ಕಷ್ಟ ಅಂತ ಹೇಳಿ, 'ನಮ್ದೂಕೆ ನರಹರಿ ಆಪರೇಷನ್ ಆಗಿಬಿಟ್ಟೈತೆ ಸ್ವಾಮೀ. ಮತ್ತೊಮ್ಮೆ ಯಾಕೆ? ಬಿಟ್ಟುಬಿಡಿ. ಹೆಂಗೋ ಬದುಕಿಕೊಳ್ಳುತ್ತೀವಿ,' ಅಂತ ನಮಸ್ಕಾರ ಹೇಳಿ ಕಳಿಸಿದ್ದರು.

ಎಮರ್ಜೆನ್ಸಿಗೆ ನಲವತ್ತು ವರ್ಷ ಅಂತ ಎಲ್ಲ ಕಡೆ ಸುದ್ದಿ. ಇದೆಲ್ಲ ನೆನಪಾಯಿತು.

ಪೂರಕ ಮಾಹಿತಿಗೆ:

The Sanjay Story: From Anand Bhavan to Amethi by Vinod Mehta

The Red Sari : A Dramatized Biography of Sonia Gandhi by Javier Moro



ಎಮರ್ಜೆನ್ಸಿ ಎಂಬ ಕರಾಳ ಕಾಲ

೧೯೭೫ ರಲ್ಲಿ ಇಂದಿರಾ ಗಾಂಧಿ ಜಾರಿಗೊಳಿಸಿದ್ದ ಎಮರ್ಜೆನ್ಸಿಗೆ ಇವತ್ತು ನಲವತ್ತು ವರ್ಷಗಳಂತೆ.

ಎಮರ್ಜೆನ್ಸಿ ಅಂದಕೂಡಲೇ ಮೊದಲು ನೆನಪಿಗೆ ಬರುವವರು ನಮ್ಮ ಧಾರವಾಡದ ಶಾನಬಾಗ್ ಪ್ರೊಫೆಸರ್. ಅವರ ಬಗ್ಗೆ ಹಿಂದೊಂದು ಲೇಖನ ಬರೆದಿದ್ದೆ. ಇಂದಿರಾ ಗಾಂಧಿ ಕೊಟ್ಟಿದ್ದ ಹೊಡೆತ, ಕಿರುಕುಳ ತಾಳಲಾಗದೇ RSS ನ ಘಟಾನುಗಟಿಗಳಾದ  ದೇವರಸ್, ವಾಜಪೇಯಿ ಮುಂತಾದವರೇ ಆಗಿನ ಸರ್ಕಾರಕ್ಕೆ ಮುಚ್ಚಳಿಕೆ ಪತ್ರ ಬರೆದುಕೊಟ್ಟು, ಸೆರೆಯಿಂದ ಹೊರಬರಲು ಏನೋ ಒಂದು ತರಹದ ಸಂಧಾನಕ್ಕೆ ಪ್ರಯತ್ನ ಮಾಡುತ್ತಿದ್ದರು. ಹಾಗಿರುವಾಗ ಪರಿಸ್ಥಿತಿಯೊಂದಿಗೆ ಯಾವದೇ ತರಹದ ಹೊಂದಾಣಿಕೆ ಮಾಡಿಕೊಳ್ಳದೇ, 'ಬಂದದ್ದೆಲ್ಲ ಬರಲಿ.....' ಅಂತ ಎಲ್ಲವನ್ನೂ ಎದುರಿಸಿ, ಯಶಸ್ವಿಯಾಗಿ ಒಂದು ವರ್ಷದ ಕಾರಾಗ್ರಹವಾಸದ ನಂತರ ಅಂತರ್ಸ್ಥೈರ್ಯವನ್ನು ಜಾಸ್ತಿ ಮಾಡಿಕೊಂಡೇ ಹೊರಗೆ ಬಂದಿದ್ದರು ಪ್ರೊ. ಶಾನಬಾಗ್. ಅವರು ಅದೆಲ್ಲ, ಅಷ್ಟೆಲ್ಲ ಕಷ್ಟ ಕೋಟಲೆ ಅನುಭವಿಸಿದ್ದು ತಾವು ನಂಬಿದ ಮೌಲ್ಯಗಳಿಗಾಗಿ ಮತ್ತು ತಮ್ಮ ಧ್ಯೇಯಗಳಿಗಾಗಿ. ಶಾನಬಾಗ್ ಪ್ರೊಫೆಸರ್ ಕುರಿತಾದ ಲೇಖನ ಇಲ್ಲಿದೆ.

ಖ್ಯಾತ ವಕೀಲ, ಸಂವಿಧಾನ ತಜ್ಞ, ರಾಮ್ ಜೇಠಮಲಾನಿ ಕೂಡ ನೆನಪಾಗುತ್ತಾರೆ. ಅಮೇರಿಕಾದಿಂದ political asylum ಪಡೆದುಕೊಂಡ ಮೊತ್ತ ಮೊದಲ ಭಾರತೀಯ ಅವರು. ಎಮರ್ಜೆನ್ಸಿಯಲ್ಲಿ ಇಂದಿರಾ ಗಾಂಧಿ ವಿರುದ್ಧ ಹಚ್ಚಿ ಬಡಿದಾಡುತ್ತಿದ್ದರು. ಒಂದು ಹಂತದಲ್ಲಿ ಕಾಂಗ್ರೆಸ್ ಗೂಂಡಾ ಪಡೆ ತುಂಬಾ ಕಾಟ ಕೊಡತೊಡಗಿತು. ಅಲ್ಲೇ ಇದ್ದರೆ ಜೀವಕ್ಕೇ ಅಪಾಯ ಅಂತ ಹೆಂಗೋ ಮಾಡಿ ದೇಶ ಬಿಟ್ಟು ಅಮೇರಿಕಾಗೆ ಹಾರಿದರು. political asylum ಕೋಟಾದಲ್ಲಿ ವೀಸಾ ಪಡೆದುಕೊಂಡು ಅಮೇರಿಕಾದಿಂದಲೇ ಎಮರ್ಜೆನ್ಸಿ ವಿರುದ್ಧ ಹೋರಾಟ ಮಾಡಿದ್ದರು, ತಮ್ಮ ಬರವಣಿಗೆ ಮತ್ತು ಭಾಷಣಗಳ ಮೂಲಕ. ತಮ್ಮ ಜೀವನದಲ್ಲಿ ಎರಡನೇ ಬಾರಿಗೆ ನಿರಾಶಿತ್ರರಾಗಿದ್ದರು ರಾಮ್ ಜೇಠಮಲಾನಿ. ೧೯೪೭ ರಲ್ಲಿ ಸ್ವಾತಂತ್ರ ಸಮಯದಲ್ಲಿ ಭಾರತ ಇಬ್ಭಾಗವಾದಾಗ ಪಾಕಿಸ್ತಾನದ ಕರಾಚಿ ಬಿಟ್ಟು ಬರಬೇಕಾದಂತಹ ಪರಿಸ್ಥಿತಿ ಬಂದಿತ್ತು. ಆಗ ಎಮರ್ಜೆನ್ಸಿ ಸಮಯದಲ್ಲಿ ಮತ್ತೊಮ್ಮೆ ನಿರಾಶಿತ್ರರಾಗಿದ್ದರು. ಈಗ ತೊಂಬತ್ತೊಂದು ವರ್ಷ ಅವರಿಗೆ. ಇಂದಿಗೂ establishment ವಿರುದ್ಧ ಅವರ ಹೋರಾಟ ನಡೆದೇ ಇರುತ್ತದೆ. ಮೊನ್ನಿತ್ತಲಾಗೆ ಪ್ರಧಾನಿ ಮೋದಿಗೆ 'ಗುರ್!' ಅಂದಿದ್ದಾರೆ.

ನೆನಪಾಗುವವರಲ್ಲಿ ಡಾ. ಸುಬ್ರಮಣಿಯನ್ ಸ್ವಾಮಿ ಮತ್ತೊಬ್ಬರು. ಅವರೂ ಎಮರ್ಜೆನ್ಸಿ ಸಮಯದಲ್ಲಿ ಅಮೇರಿಕಾದಿಂದಲೇ ಚಟುವಟಿಕೆ ನಡೆಸಿದ್ದರು. ಆದರೆ ಡಾ. ಸ್ವಾಮಿ ಒಂದು ಚಾಲೆಂಜ್ ತೆಗೆದುಕೊಂಡಿದ್ದರು. 'ಏನೇ ಆಗಲಿ, ಸಂಸತ್ ಅಧಿವೇಶನದ ಸಮಯಕ್ಕೆ ಸರಿಯಾಗಿ ಭಾರತಕ್ಕೆ ಹೋಗಿ, ಸಂಸತ್ತಿನಲ್ಲಿ ಭಾಷಣ ಮಾಡೇಮಾಡುತ್ತೇನೆ,' - ಇದು ಅವರ ಸಂಕಲ್ಪ. ಎಲ್ಲ ಕಡೆ ಅವರನ್ನು, ಅವರಂತಹ ಇತರೆ ಭೂಗತರಾಗಿದ್ದ ಜನರನ್ನು ಹಿಡಿದು ಒಳಗೆ ಹಾಕಲು ಇಡೀ ವ್ಯವಸ್ಥೆ ಕಾಯುತ್ತಿತ್ತು. ಅದು ಹೇಗೋ ಮಾಡಿ ದೆಹಲಿ ತಲುಪಿದರು. ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಮೂಲಕ ಯಾವದೇ ತೊಂದರೆಯಿಲ್ಲದೆ ಪಾಸಾಗಿ ಹೋಗುತ್ತೇನೆ ಅಂತ ಅವರಿಗೆ ಯಾವದೇ ನಂಬಿಕೆ ಇರಲಿಲ್ಲ. ಅದರೂ ಸಿಕ್ಕಾಪಟ್ಟೆ ತಲೆಯಿರುವ ಆಸಾಮಿ ಸ್ವಾಮಿ. ಆಗ ತುಂಬಾ ಪಾಪ್ಯುಲರ್ ಆಗಿದ್ದ ಯುವ ಕಾಂಗ್ರೆಸ್ ಜನರ ಹಾಗೆ ಶಾಲು ಧರಿಸಿ ಹೊರಗೆ ಬಂದರು. ಜುಬ್ಬಾ ಪೈಜಾಮಾ ಅಂತೂ ಅವರಂತೆಯೇ ಹಾಕಿದ್ದರು. ಗತ್ತಿನಿಂದ ನಡೆದು ಬಂದರು. ಸಂಜಯ ಗಾಂಧಿ ಮತ್ತು ಅವನ ಯುವ ಕಾಂಗ್ರೆಸ್ ಫುಲ್ ಹವಾ ಮಡಗಿದ್ದ ಕಾಲವದು. ಯುವ ಕಾಂಗ್ರೆಸ್ ಮಂದಿಯನ್ನು ಯಾರೂ ತಡವಿಕೊಳ್ಳುತ್ತಿರಲಿಲ್ಲ. ಯುವ ಕಾಂಗ್ರೆಸ್ ಮಂದಿಯ ಗೆಟಪ್ಪಿನಲ್ಲಿ ಕಂಡ ಸ್ವಾಮಿಯವರನ್ನೂ ಸಹ ಯಾವದೋ ಯುವ ಕಾಂಗ್ರೆಸ್ ಮುಖಂಡನೇ ಇರಬೇಕು ಅಂತ ಊಹಿಸಿ, ಯಾವದೇ ಚೆಕ್ ಮಾಡುವದು ದೂರ ಉಳಿಯಿತು, ಪಾಸ್ಪೋರ್ಟ್ ಸಹ ಸ್ಟ್ಯಾಂಪ್ ಮಾಡದೇ ಹೊರಗೆ ಹೋಗಲು ಬಿಟ್ಟುಬಿಟ್ಟಿದ್ದರಂತೆ. ಹಾಗೆ ಹೊರಗೆ ಬಂದ ಸ್ವಾಮಿ, ಎಲ್ಲರ ಕಣ್ಣು ತಪ್ಪಿಸಿ ದೆಹಲಿಯಲ್ಲಿ ಎಲ್ಲೋ ಉಳಿದಿದ್ದರು. ಮುಂದೆ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಭಾಷಣ ಮಾಡಿದರೋ ಇಲ್ಲವೋ ನೆನಪಿಲ್ಲ. ಅವರ ಈ ಸಾಹಸವನ್ನು ಯಾವದೋ youtube ವೀಡಿಯೊ ಕ್ಲಿಪ್ ನಲ್ಲಿ ನೋಡಿದ, ಕೇಳಿದ ನೆನಪು. ಹೆಚ್ಚಾಗಿ 'ಆಪ್ ಕಿ ಅದಾಲತ್' ಪ್ರೊಗ್ರಾಮ್ ಇರಬೇಕು.

ಎಮರ್ಜೆನ್ಸಿಗೆ ನಲವತ್ತು ವರ್ಷ ಅಂದಾಗ ಇವಿಷ್ಟು ನೆನಪಾದವು. ಇನ್ನೂ ಒಂದಿಷ್ಟು ಕ್ರೌರ್ಯ, ಪೋಲೀಸರ ಅತಿರೇಕಗಳು, ಸಂಜಯ ಗಾಂಧಿ ಮತ್ತು ಅವನ ಪಟಾಲಂ ಹಾಕಿದ ದಾಂಧಲೆ ಮತ್ತೆ ಏನೇನೋ ಸಹ ನೆನಪಾದವು. ಅವೆಲ್ಲವುಗಳ ಬಗ್ಗೆ ಇವತ್ತಿಗೆ ಬೇಕಾದಷ್ಟು ಮಾಹಿತಿ ಸಿಗುತ್ತದೆ. 'When governments fear the people, there is liberty. When the people fear the government, there is tyranny,' ಅಂತ ಅಮೇರಿಕಾದ ಮಾಜಿ ಅಧ್ಯಕ್ಷ, ತತ್ವಜಾನಿ ಥಾಮಸ್ ಜೆಫರ್ಸನ್ ಹೇಳಿದ್ದು ಬರೋಬ್ಬರಿ ಅನಿಸುತ್ತದೆ.

Saturday, June 20, 2015

ಭೂತ ಚೇಷ್ಟೆ, ಪ್ರೇತ ಪ್ರಾರಬ್ಧ......ಎಲ್ಲೆಲ್ಲೋ ಕೇಳಿದ ಕಥೆಗಳು


ಕಥೆ - ೧

ಆಕೆ ಕನ್ನಡಿ ನೋಡುವದನ್ನು ಬಿಟ್ಟು ಸುಮಾರು ವರ್ಷಗಳೇ ಆಗಿಹೋಗಿವೆ. ಅದಕ್ಕೆ ಕಾರಣ ಕೇಳಿದರೆ ಆಕೆ ಕಾರಣ ಹೇಳುತ್ತಾಳೆ. ಒಂದು ವಿಚಿತ್ರ ಕಾರಣ. ಆಕೆಗೆ ಕನ್ನಡಿಯಲ್ಲಿ ಆಕೆಯ ಜೊತೆಗೆ ಇನ್ನೊಬ್ಬಾಕೆ ಸಹಿತ ಕಾಣುತ್ತಾಳೆ! ಕೇವಲ ಕಾಣುವದೊಂದೇ ಅಲ್ಲ, ಇವಳ ಕುತ್ತಿಗೆ ಸಹಿತ ಹಿಚುಕಿಬಿಡುತ್ತಾಳೆ! ಹಾಗಾಗಿ ಈಕೆಗೆ ಕನ್ನಡಿಯಲ್ಲಿ ತನ್ನ ಮುಖ ನೋಡಿಕೊಳ್ಳುವದು ಅಂದರೆ ಪರಮ ಭೀತಿ. ಇವಳ ಹೆಣ್ಣುಮಕ್ಕಳು ತಲೆ ಬಾಚಿ, ಜಡೆ ಹಾಕಿ ಸಿಂಗಾರ ಮಾಡುತ್ತಾರೆ. ಮಾಡಿದ ಬಳಿಕ, ಮುಖ ನೋಡಲು ಕನ್ನಡಿ ಕೊಟ್ಟರೆ ಈಕೆ ಕಿಟಾರನೆ ಚೀರುತ್ತಾಳೆ, 'ಬ್ಯಾಡಾ! ಬ್ಯಾಡಾ! ಮುಲ್ಲಾ ಬಾಯಿ ಕಾಣಿಸ್ತಾಳ. ನನ್ನ ಕುತ್ತಿಗಿ ಹಿಚಕ್ತಾಳ!' ಇವಳು ಬ್ಯಾಡ ಬ್ಯಾಡ ಅನ್ನುತ್ತ ಕೈಗಳನ್ನು ಎತ್ತರ ಪತ್ತರ ಆಡಿಸುವ ಅಬ್ಬರಕ್ಕೆ ಎಷ್ಟೋ ಕನ್ನಡಿಗಳು ಬಿದ್ದು ಒಡೆದು ಹೋಗಿವೆ. ಕನ್ನಡಿ ಚೂರುಗಳಲ್ಲೂ ಈಕೆಗೆ ಎಂದೋ ಸತ್ತು ಹೋದ ಮುಲ್ಲಾ ಬಾಯಿಯೇ ಕಾಣುತ್ತಾಳೆ. ಮತ್ತೆ ಕುತ್ತಿಗೆ ಒತ್ತಿ ಕೊಲ್ಲಲು ಬರುತ್ತಾಳೆ. ಈಕೆ ಚೀರುತ್ತಾ ಓಡುತ್ತಾಳೆ. ಎಷ್ಟೋ ಬಾರಿ ಕನ್ನಡಿ ಕಾಜಿನ ಚೂರುಗಳ ಮೇಲೆ ಕಾಲೂರಿ, ಗಾಜು ಕಾಲು ಕತ್ತರಿಸಿ, ರಕ್ತ ಹರಿದರೂ ಈಕೆಗೆ ಪರಿವೆಯಿರುವದಿಲ್ಲ. ಯಾಕೆಂದರೆ ಮುಲ್ಲಾ ಬಾಯಿಯ ಹೆದರಿಕೆ ಅಷ್ಟಿದೆ.

ಕನ್ನಡಿಯಲ್ಲಿ ಮಾತ್ರ ಮುಲ್ಲಾ ಬಾಯಿಯ ದೆವ್ವ ಈಕೆಗೆ ಕಾಣುತ್ತದೆ. ಹಾಗಂತ ಬೇರೆ ಕಡೆ, ಅಂದರೆ ಕಿಡಕಿ ಗಾಜಿನಲ್ಲಿ ಇತ್ಯಾದಿ, ಪ್ರತಿಬಿಂಬ ಮೂಡಿದಲ್ಲೆಲ್ಲ ಕಾಣುವದಿಲ್ಲ. ಅದೇ ದೊಡ್ಡ ಪುಣ್ಯ. ಇಲ್ಲವಾದರೆ ಅಷ್ಟೇ ಮತ್ತೆ.

ಈ ನಿಗೂಢ ಮುಲ್ಲಾ ಬಾಯಿ ಯಾರು ಅಂತ ನೋಡುತ್ತ ಹೋದರೆ ಅವಳು ಈಕೆಯ ಪಕ್ಕದ ಮನೆಯಾಕೆ. ಆಕೆಯ ಗಂಡನೋ! ಪರಮ ಲಂಪಟ. ದೊಡ್ಡ ಹುದ್ದೆಯಲ್ಲಿದ್ದಾನೆ. ಅದೂ ಸರಿಯಾಗಿ ಗಿಂಬಳ ಮೇಯಲಾಗುವಂತಹ ಫಲವತ್ತಾದ ಹುದ್ದೆ. ಮೇಲಿಂದ ಪಠಾಣ. ಲಂಬಾ ಚೌಡಾ ಪಠಾಣ. ಈಕೆಯ ಮನೆ ಪಕ್ಕ ಬಂದು ವಕ್ಕರಿಸಿದ್ದೇ ವಕ್ಕರಿಸಿದ್ದು ಎರಡು ದಾಂಪತ್ಯ ಎಕ್ಕುಟ್ಟಿ ಹೋದವು. ಈಕೆ ಪಠಾಣನಲ್ಲಿ ಅನುರಕ್ತಳಾಗಿಬಿಟ್ಟಳು. ಅವನೋ ದೊಡ್ಡ ಲಂಪಟ. ಸಿಕ್ಕದ್ದೇ ಸಿಕ್ಕಿದ್ದು ಅಂತ ಜಮ್ಮ ಚಕ್ಕಾ ಮಾಡೇಬಿಟ್ಟ. ಇವರ ನಡುವಿನ ಲಫಡಾ ಮುಲ್ಲಾ ಬಾಯಿಗೂ ಗೊತ್ತಾಯಿತು. ಆಕೆಯೇನೂ ಸುಬಗಳಲ್ಲ ಬಿಡಿ. ಆಕೆಗೂ ಊರ ತುಂಬಾ ಗೆಣೆಕಾರರು ಇದ್ದೇ ಇದ್ದರು. ಆದರೂ ಗಂಡ ಪಕ್ಕದ ಮನೆ ಸುಪನಾತಗಿತ್ತಿ ಜೊತೆ ಸರಸ ಶುರುವಿಟ್ಟುಕೊಂಡಿದ್ದಾನೆ ಅಂತ ಗಂಡ ಪಠಾಣನ ಜೊತೆ ಜಗಳ ಶುರು ಹಚ್ಚಿಕೊಂಡಳು. ದಿನವೂ ಶರಂಪರ ಜಗಳ.

ಒಂದು ದಿನ ಅದೇ ರೀತಿ ಜಗಳವಾಗುತ್ತಿತ್ತು ಪಠಾಣ ಮತ್ತು ಮುಲ್ಲಾ ಬಾಯಿಯ ನಡುವೆ. ಸಿಟ್ಟಿನಲ್ಲಿ ಒಂದೇಟು ಹಾಕಿದ. ಕಾನ್ಪಟ್ಟಿ ಕೆಳಗೆ ಸೆನ್ಸಿಟಿವ್ ಜಾಗದಲ್ಲಿ ಎಲ್ಲೋ ಬರೋಬ್ಬರಿ ಏಟು ಬಿದ್ದಿರಬೇಕು. 'ಯಾ ಖುದಾ!' ಅಂತ ಆಖ್ರೀ ಚೀಕ್ ಚೀರಿದ ಮುಲ್ಲಾ ಬಾಯಿ ಅಲ್ಲಾಕೋ ಪ್ಯಾರೆ ಆಗಿಬಿಟ್ಟಳು. ಅಂದರೆ ಮಟಾಶ್! ಸತ್ತೇಹೋದಳು.

ಗಂಡ ಪಠಾಣ ಹೇಳಿ ಕೇಳಿ ದೊಡ್ಡ ಸಾಹೇಬ. ಎಷ್ಟೆಷ್ಟೋ ರೊಕ್ಕ ಖರ್ಚು ಮಾಡಿ ಕೊಲೆ ಕೇಸನ್ನು ಸಹಜ ಸಾವು ಅಂತ ತಿಪ್ಪೆ ಸಾರಿಸಿಬಿಟ್ಟ. ರಂಗೋಲಿ ಸಹ ಹಾಕಿಬಿಟ್ಟ. ನಿರುಮ್ಮಳನಾಗಿ ನಿಟ್ಟುಸಿರು ಬಿಟ್ಟ.

ಮುಲ್ಲಾ ಬಾಯಿ ಹೋಗಿದ್ದೇ ಹೋಗಿದ್ದು ಈಕೆಗೆ ಕನ್ನಡಿಯಲ್ಲಿ ಆಕೆ ಕಂಡುಬರುತ್ತಾಳೆ. ಎಲ್ಲರ ಪಾಲಿಗೆ ಮುಲ್ಲಾ ಬಾಯಿ ಖಲಾಸ್. ಆದರೆ ಈಕೆಯ ಕನ್ನಡಿಯಲ್ಲಿ ಮಾತ್ರ ಸದಾ ಜೀವಂತ. ಇದೆಲ್ಲ ಆಗಿ ಈಗ ಇಪ್ಪತ್ತು ವರ್ಷಗಳ ಮೇಲಾಗಿ ಹೋಯಿತು. ಆವತ್ತಿಂದ ಕನ್ನಡಿ ನೋಡದ ಈಕೆಗೂ ಈಗ ಸುಮಾರು ಅರವತ್ತರ ಮೇಲೆ. ಪಠಾಣ ಸಾಹೇಬ ಮಾತ್ರ ಮುಲ್ಲಾ ಬಾಯಿ ತೀರಿ ಹೋದ ಒಂದೇ ವರ್ಷದಲ್ಲಿ ಮತ್ತೊಂದು ಮದುವೆ ಮಾಡಿಕೊಂಡು, ಒಂದೆರೆಡು ಮಗೂ ಸಹಿತ ಮಾಡಿಕೊಂಡು ಆರಾಮ್ ಇದ್ದಾನೆ. ಅವನಿಗೆ ಈಗ ಎಪ್ಪತ್ತರ ಮೇಲೆ. ಸಣ್ಣ ವಯಸ್ಸಿನ ಎರಡನೇ ಬೇಗಂ ಎಲ್ಲಿ ಬೇಲಿ ಹಾರುತ್ತಾಳೋ ಅಂತ ಚಿಂತೆ ಅವನಿಗೆ. ಆದರೆ ಆಕೆ ಒಳ್ಳೆಯವಳು. ಮಕ್ಕಳನ್ನು ಸಂಬಾಳಿಸಿಕೊಂಡು, ಅವುಗಳ ದೇಖರೇಖಿ ಮಾಡುತ್ತ ಬ್ಯುಸಿ ಇದ್ದಾಳೆ.

ಈಕಡೆ ಪಠಾಣನ ಹಳೆ ರಖಾವು ಕನ್ನಡಿಯೆಂದರೆ ದೂರ ಜಿಗಿಯುತ್ತಾಳೆ. ಪಠಾಣ ಸದಾ ಕರಿ ಕನ್ನಡಕ ಗಾಗಲ್ಸ್ ಹಾಕಿರುತ್ತಾನೆ. ಅದರಲ್ಲೂ ತನ್ನ ಪ್ರತಿಬಿಂಬವನ್ನೇ ಕಾಣುತ್ತಾಳೆ. ಕನ್ನಡಿಯಲ್ಲದ ಕಾರಣ ಅಲ್ಲಿ ಮುಲ್ಲಾ ಬಾಯಿ ಕಂಡುಬರುವದಿಲ್ಲ. ನಿರಾಳವಾಗಿ, 'ಸಲಾಂ!' ಅನ್ನುತ್ತಾಳೆ. ಹಳೆಯ ಗರ್ಮಿ, ಮಷ್ಕಿರಿ ನೆನಿಸಿಕೊಂಡ ಪಠಾಣ, 'ವಾಲೈಕುಂ ಸಲಾಂ!' ಅಂದು ತುಂಟ ನಗೆ ಬೀರುತ್ತಾನೆ. ಗೋರಿಯಲ್ಲಿ ಮಲಗಿರುವ ಮುಲ್ಲಾ ಬಾಯಿಯ ಆತ್ಮ ಆಚೀಚೆ ಹೊರಳುತ್ತದೆ. ಎದ್ದು ಕನ್ನಡಿಯಲ್ಲಿ ಬಂದು ಕೂಡುತ್ತದೆ. ಈಕೆ ಕನ್ನಡಿ ನೋಡುವದನ್ನು ಬಿಟ್ಟಿದ್ದಾಳೆ ಅಂತ ಮುಲ್ಲಾ ಬಾಯಿಯ ಆತ್ಮಕ್ಕೆ ಗೊತ್ತಿಲ್ಲವೇ?!

ಕಥೆ - ೨

ಆತ ಮಧ್ಯಮವರ್ಗದ ಆದಮೀ. ಜೀವನ ಪೂರ್ತಿ ಮೊದಲು ಸೈಕಲ್, ನಂತರ ಮೊಪೆಡ್, ನಂತರ ಸ್ಕೂಟರ್ ಹೊಡೆದ. ರಿಟೈರ್ ಆಗುವ ಹೊತ್ತಿಗೆ ಸ್ಕೂಟರ್ ಮಾರಿದ. ಅಷ್ಟೆಲ್ಲ ವಯಸ್ಸಾದ ಮೇಲೆ ಸ್ಕೂಟರ್ ಬೇಡ ಅಂತ ಹೇಳಿದ್ದರು ಮಕ್ಕಳು. ಮಕ್ಕಳು ಸುಮ್ಮನೇ ಹೇಳಲಿಲ್ಲ. ಒಳ್ಳೆ ಕೆಲಸದಲ್ಲಿದ್ದರು. ವಿದೇಶದಲ್ಲಿದ್ದರು. ಅಪ್ಪನಿಗೆ ಒಂದು ಕಾರ್ ಕೊಡಿಸಲು ಮುಂದಾದರು. ಅಪ್ಪನಿಗೆ ಮೊದಲು ಕಾರ್ ಚಾಲನೆ ಮಾಡುವದನ್ನು ಕಲಿಯಲು ಹೇಳಿದರು. ಕಾರ್ ಚಾಲನೆ ಮಾಡುವ ಕೋರ್ಸಿಗೆ ಸೇರಿಕೊಂಡ. ಒಂದು ತಿಂಗಳಲ್ಲಿ ಕಾರ್ ಬಿಡುವದನ್ನು ಕಲಿತ. ಅಷ್ಟರಲ್ಲಿ ಮಗ ರೊಕ್ಕ ಕಳಿಸಿದ್ದ. ಕಾರ್ ಕೊಳ್ಳಲು ಹೋದ.

ಫುಲ್ ಕ್ಯಾಶ್ ಕೊಟ್ಟು ಕಾರ್ ಖರೀದಿ ಮಾಡಿದ. ತಾಪಡ್ತೋಪ್ ಡೆಲಿವರಿ ಸಿಕ್ಕೇಬಿಟ್ಟಿತು. ಕೀಲಿ ತೆಗೆದುಕೊಂಡು ಬಂದು ಕಾರಲ್ಲಿ ಕೂತ. ಗಾಡಿ ಸ್ಟಾರ್ಟ್ ಮಾಡಿದ. ಸುತ್ತ ಮುತ್ತ ನೋಡಿದ. ಕಾರ್ ಮಾರಿದ್ದ ಡೀಲರಶಿಪ್ ಮನುಷ್ಯ ಹೆಬ್ಬೆರಳನ್ನು ನಿಗರಿಸಿ, 'ಓಕೆ' ಅಂದ. ಸೈಡ್ ಮಿರರ್ ಎರಡನ್ನೂ ಸರಿಯಾಗಿ ಅಡ್ಜಸ್ಟ್ ಮಾಡಿಕೊಂಡ. ಮುಖದ ಮುಂದೆ, ತಲೆ ಮೇಲಿರುವ rear view ಮಿರರ್ ಸಹ ಸರಿಮಾಡಿಕೊಳ್ಳೋಣ ಅಂತ ಅಡ್ಜಸ್ಟ್ ಮಾಡಿಕೊಳ್ಳತೊಡಗಿದ. ಅದರಲ್ಲಿ ಏನು ಕಂಡಿತೋ ಏನೋ! ಭೂತ ದರ್ಶನವಾದವನಂತೆ ಬೆದರಿದ. ಬೆಚ್ಚಿದ. ಚಿಟ್ಟನೆ ಚೀರಿದ. ಅದ್ಯಾವದೋ ಮಾಯೆಯಲ್ಲಿ ಕಾರಿನ ಆಕ್ಸಿಲರೇಟರ್ ಒತ್ತೇಬಿಟ್ಟ. ಹೊಚ್ಚ ಹೊಸ ಕಾರು. ಬಾಣದಂತೆ ಮುಂದೆ ಚಿಮ್ಮಿತು. ಹೆದ್ದಾರಿಯಲ್ಲಿ ಹಾಗೆ ಚಿಮ್ಮಿದ್ದರೆ ಓಕೆ. ಇದು ಆದದ್ದು ಕಾರ್ ಡೀಲರಶಿಪ್ ಆವರಣದಲ್ಲಿ. ಚಿಮ್ಮಿದ ಇವನ ಕಾರು ಮುಂದೆ ಸಾಲಾಗಿ ನಿಲ್ಲಿಸಿದ್ದ ಹೊಚ್ಚ ಹೊಸ ಕಾರುಗಳಿಗೆ ಹೋಗಿ ಅಪ್ಪಳಿಸಿತು. ಚೈನ್ ರಿಯಾಕ್ಷನ್ ಮಾದರಿಯಲ್ಲಿ ಅವು ಒಂದಕ್ಕೊಂದು ಜಜ್ಜಿಕೊಂಡು ಸುಮಾರು ಆರೇಳು ಕಾರುಗಳು ಮಟಾಶ್! ಅದ್ಯಾವ ಸ್ಪೀಡಿನಲ್ಲಿ ಡಿಕ್ಕಿ ಹೊಡೆದಿದ್ದ ಅಂದರೆ ಇವನ ಮುಖ ಹೋಗಿ ಸ್ಟಿಯರಿಂಗ್ ವ್ಹೀಲ್ ಮೇಲೆ ಕೂತಿತ್ತು. ಈ ಆದಮೀ ಫುಲ್ ಬೇಹೋಶ್! ಪ್ರಜ್ಞೆ ಕಳೆದುಕೊಂಡಿದ್ದ.

ಇವನಿಗೆ ಒಂದು ಕಾರ್ ಮಾರಿ ಆರೇಳು ಕಾರುಗಳಿಗೆ ಸುಕಾಸುಮ್ಮನೆ ನುಕ್ಸಾನ್ ಮಾಡಿಸಿಕೊಂಡ ಡೀಲರ್ ಮಂದಿ ತಲೆ ತಲೆ ಚಚ್ಚಿಕೊಳ್ಳುತ್ತ ಇವನ ಗಾಡಿ ಹತ್ತಿರ ಬಂದರು. ಒಳಗೆ ಇವನು ಪ್ರಜ್ಞೆ ತಪ್ಪಿ ಬಿದ್ದಿದ್ದ. ಹಾರ್ನ್ ಒಂದೇ ಸಮನೆ ಕರ್ಕಶವಾಗಿ ಊಳಿಡುತ್ತಿತ್ತು. ಕಿಡಕಿ ಒಡೆದು ಬಾಗಿಲು ತೆಗೆದರು. ಮುಖದ ಮೇಲೆ ನೀರು ಗೊಜ್ಜಿ ಎಬ್ಬಿಸಿದರು. ಎದ್ದ. ಎದ್ದವನೇ, 'ಅಯ್ಯೋ! ನನ್ನ ಬಚಾವ್ ಮಾಡ್ರೀ! ಅಕಿ ನನಗ ವಿಷಾ ಕೊಟ್ಟು ಕೊಲ್ಲಾಕ ಬಂದಾಳ್ರೀ! ಕಾರಿನ ಕನ್ನಡಿಯಾಗ ಕಾಣ್ತಾಳ್ರೀ!' ಅಂತ ಚೀರಿದವನೇ, ಕಾರಿಂದ ಹೊರಗೆ ಬಂದವನೇ ದಡ ದಡ ನಡೆದು ಹೊರಟುಬಿಟ್ಟ. ರಸ್ತೆ ಕ್ರಾಸ್ ಮಾಡಿದ. ಸಿಟಿ ಬಸ್ ಸ್ಟಾಪಿನಲ್ಲಿ ನಿಂತ. ಬಸ್ ಬಂತು. ಹತ್ತಿದವನೇ ಗಾಯಬ್ ಆಗಿಬಿಟ್ಟ. ಕಾರ್ ಡೀಲರಶಿಪ್ಪಿನ ಮಂದಿ ಮಾತ್ರ ಬಾಯಿ ಬಿಟ್ಟುಕೊಂಡು ನೋಡುತ್ತ ನಿಂತಿದ್ದರು.

ಫುಲ್ ಕ್ಯಾಶ್ ಕೊಟ್ಟು ಕಾರ್ ತೆಗೆದುಕೊಂಡ ದೊಡ್ಡ ಶ್ರೀಮಂತ ಗಿರಾಕಿ ಅಂದುಕೊಂಡರೆ ಚಿತ್ರ ವಿಚಿತ್ರ ಘಟನೆಗಳು ನಡೆದುಹೋಗಿದ್ದವು. ಬಂದಾಗ ಎಲ್ಲ ಸರಿಯಿದ್ದ ಗಿರಾಕಿ, ಕಾರಿನ ರಿಯರ್ ವ್ಯೂ ಕನ್ನಡಿಯಲ್ಲಿ ದೆವ್ವ(?) ಕಂಡು ಬೆಚ್ಚಿಬಿದ್ದು, ಎತ್ತರ ಪತ್ತರ ಗಾಡಿ ಚಲಾಯಿಸಿ, ತಾನೂ ಅಪಘಾತ ಮಾಡಿಕೊಂಡು, ಆರೇಳು ಕಾರುಗಳನ್ನೂ ಟೋಟಲ್ ಸ್ಕ್ರಾಪ್ ಮಾಡಿ, ಜೀವ ಉಳಿಸಿಕೊಳ್ಳಲು ಓಡುವವರಂತೆ ಓಡಿಹೋಗಿಬಿಟ್ಟ. 'ಅಯ್ಯೋ ಕರ್ಮವೇ!' ಅಂದುಕೊಳ್ಳುತ್ತ ಅಲ್ಲಿ ಆಗಿದ್ದ ರಾಡಿಯನ್ನು ಸ್ವಚ್ಚ ಮಾಡುವತ್ತ ಗಮನ ಹರಿಸಿದರು.

ಅವನಿಗೆ ಕಾರ್ ರಿಯರ್ ವ್ಯೂ ಕನ್ನಡಿಯಲ್ಲಿ ಯಾರು ಕಂಡಿದ್ದರು? ವಿಷ ಕೊಡಲು ಯಾರು ಬಂದಿದ್ದರು? ಕೇಳಿದರೆ ಅವನಲ್ಲಿ ಉತ್ತರವಿಲ್ಲ. ಜನರಿಗೆ ಗೊತ್ತು. ಅವರು ಆಡಿಕೊಂಡರು - ಮೊದಲ ಹೆಂಡತಿಗೆ ತುಂಬ ತೊಂದರೆ ಕೊಡುತ್ತಿದ್ದ. ಮಾತಿಗೊಮ್ಮೆ ವಿಷ ತೆಗೆದುಕೊಂಡು ಸಾಯಿ ಅನ್ನುತ್ತಿದ್ದ. ಒಂದು ದಿವಸ ಅದೇನಾಯಿತೋ? ಇವನ ಕಾಟ ತಾಳದ ಆಕೆಯೇ ವಿಷ ಕುಡಿದು ಸತ್ತಳೋ ಅಥವಾ ಇವನೇ ಆಕೆಯ ಬಾಯಿಯನ್ನು ಬಲವಂತವಾಗಿ ತೆಗೆಯಿಸಿ ವಿಷ ಕುಡಿಸಿಬಿಟ್ಟನೋ ಗೊತ್ತಿಲ್ಲ. ಒಟ್ಟಿನಲ್ಲಿ ವಿಷ ತೆಗೆದುಕೊಂಡು ಸತ್ತಳು. ವಶೀಲಿ ಹಚ್ಚಿ, ಪೊಲೀಸರಿಗೆ ರೊಕ್ಕ ಕೊಟ್ಟು, ಆತ್ಮಹತ್ಯೆ ಅಂತ ತಿಪ್ಪೆ ಸಾರಿಸಿದ. ಬಚಾವಾದ.

ಇದೆಲ್ಲ ಭಾಳ ಹಳೆಯ ಮಾತು. ಅದಾದ ನಂತರ ಮತ್ತೊಂದು ಮದುವೆ ಇತ್ಯಾದಿ ಮಾಡಿಕೊಂಡು ಆರಾಮ್ ಇದ್ದ. ಅದೇನು ಕರ್ಮವೋ ಏನೋ. ಈಗ ಹೊಸ ಕಾರು ತೆಗೆದುಕೊಳ್ಳುವಾಗ ಹಳೆಯ ಹೆಂಡತಿಯ ದೆವ್ವ ಕಾರ್ ಕನ್ನಡಿಯಲ್ಲಿ ಪ್ರತ್ಯಕ್ಷವಾಗಿಬಿಟ್ಟಿದೆ. ಇವನಿಗೇ ವಿಷ ಕೊಡಲು ಬಂದುಬಿಟ್ಟಿದೆ. ಶಿವನೇ ಶಂಭುಲಿಂಗ!

ಮುಂದೆ ಎಂದೂ ಅವನು ಮತ್ತೊಂದು ಕಾರ್ ಕೊಳ್ಳಲಿಲ್ಲ. ಕೊಳ್ಳುವದು ದೂರದ ಮಾತು. ಕಾರಿನಲ್ಲಿ ಕೂರಲೂ ಹೆದರಿಕೆ. ಯಾಕೆಂದರೆ ಎಲ್ಲ ಕಾರಿನಲ್ಲಿ ರಿಯರ್ ವ್ಯೂ ಕನ್ನಡಿ ಇದ್ದೇ ಇರುತ್ತದೆ. ಕಾರು ಯಾವದೇ ಇರಲಿ, ಇವನಿಗೆ ಅದರ ರಿಯರ್ ವ್ಯೂ ಕನ್ನಡಿಯಲ್ಲಿ ಮೊದಲ ಹೆಂಡತಿ ಕಂಡುಬರುತ್ತಾಳೆ. ಆಕೆಯ ಕೈಯಲ್ಲಿ ವಿಷದ ಬಾಟಲಿ. 'ರೀ! ತೊಗೊರೀ! ಕುಡಿರೀ! ನಾನೇ ಕುಡಿಸಲಿ ಏನು ನಿಮಗ????' ಅನ್ನುತ್ತಾಳೆ. ಇವನು ಮುಖ ಮುಚ್ಚಿಕೊಂಡು No!! ಅಂತ ಚೀರುತ್ತಾನೆ. ಇವನು ಕುಳಿತ ಕಾರಿನ ರಿಯರ್ ವ್ಯೂ ಕನ್ನಡಿ ಮೇಲೆ ಡ್ರೈವರ್ ತನ್ನ ಕರ್ಚೀಪ್ ಮುಚ್ಚುತ್ತಾನೆ. ಬುರ್ಕಾ ಧರಿಸಿದ ಕನ್ನಡಿಯಲ್ಲಿ ದೆವ್ವ ಕಾಣುವದಿಲ್ಲ. 'ಸರ್ರಾ! ಕನ್ನಡಿ ವಸ್ತ್ರದಾಗ ಮುಚ್ಚಿದೆ. ಕಣ್ಣು ಬಿಟ್ಟು ಆರಾಮ್ ಕೂಡ್ರಿ,' ಅಂತ ಡ್ರೈವರ್ ಅಂದ ಮೇಲೆಯೇ ಈತ ಕಣ್ಣು ಬಿಡುತ್ತಾನೆ. ಪ್ಯಾಂಟಿನ ಹಿಪ್ಪಾಕೇಟಿನಿಂದ ಸಣ್ಣ ಫ್ಲಾಸ್ಕ್ ತೆಗೆದು ಒಂದೆರೆಡು ಗುಟುಕು ರಮ್ ಕುಡಿಯುತ್ತಾನೆ. ಗಂಟಲು ಸುಡುತ್ತ ಇಳಿವ ದ್ರವ ಎಷ್ಟೋ ನೆಮ್ಮದಿ ನೀಡುತ್ತದೆ.

ಕಥೆ -೩

ಆಕೆ ಮೆಡಿಕಲ್ ಕಾಲೇಜ್ ವಿದ್ಯಾರ್ಥಿನಿ. ಹಾಸ್ಟೆಲ್ಲಿನಲ್ಲಿ ಇರುತ್ತಾಳೆ. ದೊಡ್ಡ ಪ್ರಮಾಣದ ಡೊನೇಷನ್ ಕೊಟ್ಟಿದ್ದಕ್ಕೆ ಸೀಟು ಸಿಕ್ಕಿದೆ. ರೊಕ್ಕ ಮಾಡುವ ಕಾಲೇಜ್. ಹಾಸ್ಟೆಲ್ ಪೂರ್ತಿ ತಗಡು. ಒಂದು ರೂಮಿನಲ್ಲಿ ನಾಲ್ಕು ಹುಡುಗಿಯರು. ಇವಳು ಮತ್ತು ಉಳಿದ ಮೂರು ಜನ. ಇವಳ ರೂಂಮೇಟ್ಸ್ ಶುಕ್ರವಾರ ರಾತ್ರಿ ಮಾತ್ರ ಈಕೆಯನ್ನು ರೂಮಿನಿಂದ ಮುದ್ದಾಂ ಓಡಿಸುತ್ತಾರೆ. ಈಕೆ ಸ್ಟೇರ್ ಕೇಸ್ (staircase) ಕೆಳಗಿರುವ ಚಿಕ್ಕ ಗೂಡಿನಲ್ಲಿ ರಾತ್ರೆ ಕಳೆಯುತ್ತಾಳೆ. ಏಕೆ?!

ಮೆಡಿಕಲ್ ಕಾಲೇಜ್ ಸೇರಿದ ಈಕೆಯ ತಲೆಯಲ್ಲಿ ಅದೇನು ಬಂತೋ ಏನೋ ಗೊತ್ತಿಲ್ಲ. ಪ್ರತಿ ಶುಕ್ರವಾರ ರಾತ್ರಿ ಈಕೆ ಪೂರ್ತಿ ಬದಲಾಗತೊಡಗಿದಳು. ಆತ್ಮವೊಂದರ ಆಹ್ವಾಹನೆ ಮಾಡಲು ಶುರು ಹಚ್ಚಿಕೊಂಡುಬಿಟ್ಟಳು. ಅದೆಲ್ಲಿಂದಲೋ ಒಂದು ವೀಜಾ (Ouija) ಬೋರ್ಡ್ ತಂದಳು. ಅದರ ಮೇಲೆ ಒಂದು ನಾಣ್ಯ ಇಡುತ್ತಾಳೆ. ಆತ್ಮವನ್ನು ಆಹ್ವಾನಿಸುತ್ತಾಳೆ. ಈಕೆ ಕರೆದ ಆತ್ಮ ಬಂದು, ತನ್ನ ಶಕ್ತಿಯಿಂದ ನಾಣ್ಯವನ್ನು ವೀಜಾ ಬೋರ್ಡ್ ಮೇಲೆ ಹಿಂದೆ ಮುಂದೆ ಮಾಡುತ್ತದೆ. ಅದರಲ್ಲಿ ಏನೋ ಸಂದೇಶ ಇರುತ್ತದೆ. ಈಕೆಗೆ ಅದು ತಿಳಿಯುತ್ತದೆ. ಹಾಗಂತ ಈಕೆ ಭಾವಿಸಿದ್ದಾಳೆ.

ಇವಳ ಇಂತಹ ಖತರ್ನಾಕ್ ಮಂಗ್ಯಾನಾಟ ನೋಡಿದ ಉಳಿದ ರೂಂಮೇಟ್ಸ್ ಫುಲ್ ಥಂಡಾ ಹೊಡೆದು ಆಕೆಯನ್ನು ಶುಕ್ರವಾರ ರಾತ್ರಿ ರೂಮಿನಿಂದ ಓಡಿಸಿಬಿಡುತ್ತಾರೆ. ಏನು ಮಾಡುವದು? ವಾರ್ಡನ್ ಮೇಡಂ ಅವರಿಗೆ ಇಂತಹ ಹುಚ್ಚಾಟ ತಿಳಿದರೆ ಹಾಸ್ಟೆಲ್ಲಿನಿಂದಲೇ ಓಡಿಸಿಬಿಡುತ್ತಾರೆ. ಹಾಗಾಗಿ ಮುಚ್ಚಿಕೊಂಡು, ತನ್ನ ವೀಜಾ ಬೋರ್ಡ್ ಇತರ ಸಲಕರಣೆ ಎತ್ತಿಕೊಂಡು, ರೂಂ ಬಿಟ್ಟು ಹೊರಗೆಬಂದು, staircase ಕೆಳಗೆ ಕೂಡುತ್ತಾಳೆ. ರಾತ್ರಿ ಪೂರ್ತಿ ಆತ್ಮವನ್ನು ಆಹ್ವಾನಿಸುತ್ತಾಳೆ. ನಡುವೆ ಚಿತ್ರ ವಿಚಿತ್ರವಾಗಿ ವರ್ತಿಸುತ್ತಾಳೆ. ಪುಣ್ಯಕ್ಕೆ ಯಾರೂ ಅದನ್ನು ನೋಡಿಲ್ಲ. ನೋಡಿದ್ದರೆ ಅಷ್ಟೇ ಮತ್ತೆ. ಒಂದೋ ಅವರು ಹುಚ್ಚರಾಗಿಬಿಡುತ್ತಿದ್ದರು. ಇಲ್ಲಾ ಈಕೆಯನ್ನು ಮೆಡಿಕಲ್ ಕಾಲೇಜಿನಿಂದ ಓಡಿಸಿ ಮೆಂಟಲ್ ಹಾಸ್ಪಿಟಲಗೆ ಹಾಕಿ ಬರುತ್ತಿದ್ದರು.

ಇಷ್ಟಕ್ಕೂ ಆಕೆ ಯಾರ ಆತ್ಮವನ್ನು ಆಹ್ವಾನಿಸುತ್ತಿದ್ದಳು? ಆಕೆ ಕರೆಯುತ್ತಿದ್ದುದು ಅವಳ ಪುರಾತನ ಪ್ರೇಮಿಯ ಆತ್ಮವನ್ನು. ಪುರಾತನ ಪ್ರೇಮಿಯೋ ಅಥವಾ ಪುರಾತನ ಕಾಮಿಯೋ? ಪಿಯೂಸಿಯಲ್ಲೇ ಒಬ್ಬನ ಜೊತೆ ಲಫಡಾ ಶುರುಮಾಡಿಕೊಂಡಿದ್ದಳು. ಹೇಳಿ ಕೇಳಿ ಮಾಡರ್ನ್ ಹುಡುಗಿ. ಅಷ್ಟೇ ಮಾಡರ್ನ್ ತಂದೆ ತಾಯಿ. ಎಲ್ಲ ಓಕೆ. ಫುಲ್ ಬಿಂದಾಸ್. ಗೆಣೆಕಾರ ತುಂಬಾ ಶ್ರೀಮಂತ. ಆವಾಗಲೇ ಸ್ವಂತದ ಕಾರ್ ಮಡಗಿದ್ದ. ಒಮ್ಮೆ ಈಕೆಯನ್ನು ಎಲ್ಲೋ ಟ್ರಿಪ್ಪಿಗೆ ಕರೆದುಕೊಂಡು ಹೋಗಿದ್ದಾನೆ. ಬರುವಾಗ ಎಲ್ಲೋ ನಿರ್ಜನ ಪ್ರದೇಶ ಬಂದಾಗ ಇಬ್ಬರಿಗೂ ಮೂಡ್ ಬಂದುಬಿಟ್ಟಿದೆ. ಬಟ್ಟೆ ಬಿಚ್ಚಿ ಎಸೆದವರೇ ಕಾರಿನಲ್ಲೇ ಮನ್ಮಥ ಕ್ರೀಡೆ ಶುರು ಮಾಡಿಕೊಂಡುಬಿಟ್ಟಿದ್ದಾರೆ. ಆತ ಕಾರ್ ಟೇಪ್ ರೆಕಾರ್ಡರನ ರೆಕಾರ್ಡ್ ಬಟನ್ ಒತ್ತಿಬಿಟ್ಟಿದ್ದಾನೆ. ಆಗೆಲ್ಲ ಸ್ಮಾರ್ಟ್ ಫೋನ್ ಇರಲಿಲ್ಲ ನೋಡಿ. ಹಾಗಾಗಿ MMS, ವೀಡಿಯೊ ಮಾಡಿಕೊಂಡಿಲ್ಲ ಈಗಿನವರ ಹಾಗೆ. ವೀಡಿಯೊ ಇಲ್ಲದಿದ್ದರೂ ಪ್ರಥಮ ಅನುಭವದ, ಮೊದಲ ಪಾಪದ ಸುಖದ ನರಳುವಿಕೆಯಾದರೂ ರೆಕಾರ್ಡ್ ಆಗಲಿ ಅಂತ ಟೇಪ್ ಮಾಡಿಕೊಂಡಿದ್ದಾರೆ. ಅಷ್ಟರಲ್ಲಿ ಯಾರೋ ಹಳ್ಳಿ ಜನ ನೋಡಿದ್ದಾರೆ. ಇನ್ನಷ್ಟು ಮಂದಿಯನ್ನು ಸೇರಿಸಿದ್ದಾರೆ. ಗದ್ದಲ ಮಾಡಿ, ಇಬ್ಬರನ್ನೂ ಹೊರಗೆ ಕರೆಯಿಸಿ, ಇಬ್ಬರಿಗೂ ಎರಡೆರೆಡು ತಟ್ಟಿ, ಬುದ್ಧಿ ಹೇಳಿ ಅಲ್ಲಿಂದ ಓಡಿಸಿದ್ದಾರೆ. ಇಷ್ಟಾಗಿದೆ.

ಇದಾದ ಮುಂದೆ ಸ್ವಲ್ಪ ದಿವಸದಲ್ಲಿ ಈಕೆಯ ಗೆಣೆಕಾರ ಮತ್ತೆ ಗಾಡಿ ಓಡಿಸಿಕೊಂಡು ಹೋಗಿದ್ದಾನೆ. ಜೊತೆಗೆ ಈಕೆ ಇರಲಿಲ್ಲ. ಪುಣ್ಯ. ಜೊತೆಗೆ ಮತ್ತೊಬ್ಬ ದೋಸ್ತನನ್ನು ಕರೆದುಕೊಂಡು ಹೋಗಿದ್ದಾನೆ. ಎಲ್ಲರೂ ಚಟ ಭಯಂಕರರು. ಎಲ್ಲೋ ಗಿಚ್ಚಾಗಿ ಪಾರ್ಟಿ ಮಾಡಿದ್ದಾರೆ. ಆ ಪರಿ ಎಣ್ಣೆ ಹಾಕಿದ ನಂತರ ಅಮಲಿನಲ್ಲಿ, ತಿಮಿರಿನಲ್ಲಿ ಸಿಕ್ಕಾಪಟ್ಟೆ ಸ್ಪೀಡಿನಲ್ಲಿ ಗಾಡಿ ಓಡಿಸಿಕೊಂಡು ಬಂದಿದ್ದಾರೆ. ಅದೂ ಹಳೆ ಕಾಲದ NH - 4. ಸಣ್ಣ ರಸ್ತೆ. ಓವರ್ಟೇಕ್ ಮಾಡಲು ಹೋಗಿದ್ದಾನೆ. ಮುಂದಿಂದ ಮತ್ತೊಂದು ಲಾರಿ ಬಂದಿದೆ. ಡೆಲಿಕೇಟ್ ಮಾರುತಿ ಕಾರು ಹೋಗಿ ಅಪ್ಪಳಿಸಿ ಇಬ್ಬರೂ ಮಟಾಶ್! ಸ್ಪಾಟ್ ಡೆಡ್! ಕಾರು ಯಾವ ರೀತಿಯಾಗಿತ್ತು ಅಂದರೆ ಅದನ್ನು ಸೀದಾ ಮೋಡ್ಕಾಕ್ಕೇ (scrap) ಕಳಿಸಿಬಿಟ್ಟರು.

ಹೀಗೆ ಸತ್ತ ಮಾಜಿ ಪ್ರಿಯಕರನ ಆತ್ಮವನ್ನು ಈಕೆ ಆಹ್ವಾನಿಸುತ್ತಾಳೆ. ಅದನ್ನು ಯಾವಾಗ ಶುರು ಮಾಡಿದಳು ಗೊತ್ತಿಲ್ಲ. ಒಟ್ಟಿನಲ್ಲಿ ಮೆಡಿಕಲ್ ಕಾಲೇಜಿಗೆ ಹೋದಾಗ ಬಾಕಿ ರೂಂಮೇಟ್ಸ್ ನೋಡಿ  ಥಂಡಾ ಹೊಡೆದಾಗ ಸುದ್ದಿಯಾಗಿದೆ.

ಅವಳು ಈಗಲೂ ಆತನ ಆತ್ಮವನ್ನು ಆಹ್ವಾನಿಸುತ್ತಾಳೆಯೇ? ಗೊತ್ತಿಲ್ಲ. ಕೇಳೋಣ ಅಂದರೆ ಇವತ್ತು ಆಕೆ ದೊಡ್ಡ ಡಾಕ್ಟರಿಣಿ ಬಾಯಿ!

ಕಥೆ - ೪

'ಬಗ್ಗಿ ನೋಡಿದರೆ ಬಾಳು ಬಂಗಾರ,' ಅಂತ ಕನ್ನಡದ ತುಂಟ ನಟ ಜಗ್ಗೇಶನ ಡೈಲಾಗ್. ಜೀವನ ಪೂರ್ತಿ ಬಗ್ಗಬಾರದಲ್ಲೆಲ್ಲ ಬಗ್ಗಿ, ನೋಡಬಾರದ್ದನ್ನು ನೋಡಿ, ಮಾಡಬಾರದ್ದನ್ನು ಮಾಡಿಬಿಟ್ಟ ಮಹನೀಯರೊಬ್ಬರು ಭಾವಿಯನ್ನು ಮಾತ್ರ ಬಗ್ಗಿ ನೋಡುವದಿಲ್ಲ. ಮೊದಲು ಭಾವಿಯನ್ನೂ ಸಹಿತ ಬಗ್ಗಿ ನೋಡುತ್ತಿದ್ದರು. ಒಮ್ಮೆ ಭಾವಿಯ ಪಕ್ಕದಲ್ಲೇ ಎಚ್ಚರ ತಪ್ಪಿ ಬಿದ್ದಿದ್ದರು. ಅಂದಿನಿಂದ ಭಾವಿಯಲ್ಲಿ ಬಗ್ಗಿ ನೋಡುವದು ದೂರ ಉಳಿಯಿತು. ಭಾವಿಯ ಸಮೀಪ ಸಹಿತ ಹೋಗುವದಿಲ್ಲ ಅವರು.

ಒಮ್ಮೆ ಸ್ನಾನ ಮಾಡಲು ಭಾವಿ ಕಡೆ ಹೋದರು. ಸಹಜವಾಗಿ ಬಗ್ಗಿ ನೋಡಿದರು. ಅಲ್ಲಿ ಏನು ಕಂಡುಬಂತೋ ಏನೋ, 'ಏ!!! ಏ!!!! ನೀನು!!!! ನೀ ಇಲ್ಲ್ಯಾಂಗ???!' ಅನ್ನುತ್ತ ಭೀಕರವಾಗಿ ಚೀರಿದವರೇ ತಿರುಗಿ ಓಡಲು ನೋಡಿದರು. ಉಟ್ಟುಕೊಂಡಿದ್ದ ಧೋತ್ರ ಅಡ್ಡ ಬಂತು. ಮುಕ್ಕರಿಸಿ ಬಿದ್ದರು. ಬಿದ್ದವರೇ ಪ್ರಜ್ಞೆ ಕಳೆದುಕೊಂಡರು. ನಂತರ ಯಾರೋ ನೋಡಿ, ನೀರು ಗೊಜ್ಜಿ, ಎಬ್ಬಿಸಿಕೊಂಡು ಬಂದು ಮನೆ ಮುಟ್ಟಿಸಿದ್ದರು. ಅದೇ ಕೊನೆ. ನಂತರ ಭಾವಿ ಕಡೆ ಹೋದರೆ ಕೇಳಿ.

ಭಾವಿಯಲ್ಲಿ ಬಗ್ಗಿ ನೋಡಿದರೆ ಏನು ಕಾಣುತ್ತದೆ? ಅದಕ್ಯಾಕೆ ಇವರು ಅಷ್ಟು ಹೆದರುತ್ತಾರೆ? ಯಾವದೋ ಪಾನ ಗೋಷ್ಠಿಯಲ್ಲಿದ್ದಾಗ ಅವರೇ ಹೇಳಿದ್ದರಂತೆ. ಅದೇ ಸುದ್ದಿಯಾಗಿದೆ. 'ಮಾರಾಯಾ! ಯಾವದೇ ಭಾವಿ ಬಗ್ಗಿ ನೋಡಿದರೆ ಮುಗೀತು ನನ್ನ ಕಥಿ. ಭಾವಿ ತಳದಿಂದ ನನ್ನ ಮೊದಲ ಹೆಂಡತಿ ಛಂಗ್ ಅಂತ ಜಿಗಿದು ಬಂದು ನನ್ನ ಕುತ್ತಿಗಿ ಹಿಡಿತಾಳ ನೋಡು. ಭಾವ್ಯಾಗ ಬಿದ್ದು ಸತ್ತಾಕಿ ಅಕಿ. ಆದ್ರ ನನ್ನ ಕಾಡ್ತಾಳ ನೋಡೋ!'

ಭಾವಿಯಲ್ಲಿ ಆಕೆಯೇ ಬಿದ್ದು ಸತ್ತಳೋ ಅಥವಾ.........?? ಹಳೆ ಜನ ಹೇಳುವ ಪ್ರಕಾರ ಈ ಪುಣ್ಯಾತ್ಮ ಮತ್ತು ಇವನ ಅವ್ವ ಕೂಡಿ ಮೊದಲ ಹೆಂಡತಿಯನ್ನು ಮನೆಯಲ್ಲೇ ಮನಗಂಡ ಬಡಿದ್ದಾರೆ. ಇವರ ಸೈಜೋ. ಕೇಳಲೇಬೇಡಿ. ದೊಡ್ಡ ಹೊನಗ್ಯಾ ಸೈಜ್. ಅಮ್ಮ ಮತ್ತು ಮಗನ ಕೈಯಲ್ಲಿ ಬರೋಬ್ಬರಿ ನಾದಿಸಿಕೊಂಡ ಆಕೆ 'ಶಿವಾಯ ನಮಃ!' ಆಗಿಹೋಗಿದ್ದಾಳೆ. ಶಿವನ ಪಾದ ಸೇರಿಕೊಂಡಿದ್ದಾಳೆ. ಮುಂಜ್ಮುಂಜಾನೆ ಹೊತ್ತು. ಬಡಿಸಿಕೊಂಡು ಸತ್ತವಳ ಹೆಣವನ್ನು ಅಮ್ಮ, ಮಗ ಎತ್ತಿಕೊಂಡು ಬಂದವರೇ ಢಂ ಅಂತ ಭಾವಿಯಲ್ಲಿ ಒಗೆದಿದ್ದಾರೆ. ಅಷ್ಟು ಮಾಡಿದ ನಂತರ ಇವರ ಅವ್ವ ಬಾಯ್ಬಾಯಿ ಬಡೆದುಕೊಂಡು, 'ನನ್ನ ಸೊಸಿ ಭಾವಿ ಜಿಗದಳೋ! ಯಾರರೆ ಬರ್ರಿ. ಅಕಿನ್ನ ಕಾಪಾಡ್ರೀ. ಯಾಕ ಭಾವಿಗೆ ಜಿಗದಿ ನಮ್ಮವ್ವಾ???' ಅಂತ ಬೊಬ್ಬೆ ಹೊಡೆದಿದ್ದಾಳೆ. ಈಕಡೆ ಮಗ ಎಲ್ಲ ಅಡ್ಜಸ್ಟ್ ಮಾಡಿದ್ದಾನೆ. ಮತ್ತೊಮ್ಮೆ ಭಾವಿಗೆ ಬಿದ್ದು ಸೆಲ್ಫ್ ಸುಯಿಸೈಡ್ ಅಂತ ತಿಪ್ಪೆ ಸಾರಿಸಲಾಗಿದೆ. 

ಭಾವಿಯಲ್ಲಿ ಬಗ್ಗಿ ನೋಡಿದಾಗ ಛಂಗ್ ಅಂತ ಜಿಗಿದು ಬರುತ್ತಿದ್ದ ಹಳೆ ಹೆಂಡತಿಯ ದೆವ್ವ ಇವನೊಬ್ಬನನ್ನೇ ಕಾಡುತ್ತಿದ್ದಳೋ ಅಥವಾ ಇವನ ತಾಯಿಯನ್ನೂ ಕಾಡುತ್ತಿದ್ದಳೋ? ಕೇಳೋಣ ಅಂದರೆ ಇಬ್ಬರೂ ಶಿವಾಯ ನಮಃ!
***

ಇವೆಲ್ಲ ಎಲ್ಲೆಲ್ಲೋ ಕೇಳಿದ ಕಥೆಗಳು. ಇವುಗಳ ಸತ್ಯಾಸತ್ಯತೆ ಬಗ್ಗೆ ಯಾವದೇ ಗ್ಯಾರಂಟಿ ಇರುವದಿಲ್ಲ. ಕಥೆ ಹೇಳಿದವರಿಗೆಲ್ಲ ದೊಡ್ಡ ಧನ್ಯವಾದ.