Saturday, March 28, 2015

ನಿನ್ನ ಎರಡೂ ಮಕ್ಕಳಿಗೆ ಮುಂಜವಿ ಮಾಡಿಬಿಡು. ಎಲ್ಲ ಸಮಸ್ಯೆ ಪರಿಹಾರ ಆಗಿಬಿಡ್ತದ!


ಮೊನ್ನೆ ಅಪರೂಪಕ್ಕೆ ಒಬ್ಬ ಪುರಾತನ ಗೆಳತಿ ಸಿಕ್ಕಿದ್ದಳು. ಎಲ್ಲೆ ಅಂತೀರಿ ಏನು? ಅಲ್ಲೇ ಧಾರವಾಡದ ಮಾಳಮಡ್ಡಿ ರಾಮಚಂದ್ರನ ಅಂಗಡ್ಯಾಗ ಕಾಯಿಪಲ್ಲೆ ಆರಿಸಿಕೋತ್ತ, ಚೌಕಾಶಿ ಮಾಡಿಕೋತ್ತ, ಬುಟ್ಟಿ ತುಂಬಿಸಿಕೋತ್ತ ನಿಂತಿದ್ದಳು.

ಭೆಟ್ಟಿಯಾದ ಮೇಲೆ ಉಭಯ ಕುಶಲೋಪರಿ ಎಲ್ಲಾ ಆತು.

'ಯಾವಾಗ ಬಂದಿ? ಎಷ್ಟು ದಿವಸ ಇರೋದು?' ಅಂತ ಕೇಳಿದಳು.

'ಬಂದು ಒಂದೆರೆಡು ವಾರ ಆತು ನೋಡವಾ. ಇಲ್ಲೇ ಖಾಯಂ ಇನ್ನು. ರಿಟೈರ್ ಆಗಿಬಿಟ್ಟೆ ನೋಡವಾ,' ಅಂದೆ.

'ನೀ ಯಾವಾಗ ಕೆಲಸಾ ಮಾಡಿ ಮಾರಾಯಾ ರಿಟೈರ್ ಆದೆ ಅಂತ ಹೇಳಲಿಕ್ಕೆ!?' ಅನ್ನೋ ಲುಕ್ ಕೊಟ್ಟಳು. ಆದ್ರೆ ಬಾಯಿ ಬಿಟ್ಟು ಹೇಳಲಿಲ್ಲ. ಹೇಳಿ ಕೇಳಿ ಸಂಸ್ಕಾರವಂತ ಮನಿತನದ ಹುಡುಗಿ.

'ಮತ್ತ? ಮುಂದ? ಏನು ಮಾಡ್ತೀ ಈಗ? ಇಡೀ ದಿವಸ ಮನಿಯಾಗ?' ಅಂತ ಕೇಳಿದಳು.

'ಏನಿಲ್ಲ. ಫುಲ್ ಟೈಮ್ ರೀಡರ್ ಮತ್ತು ಪಾರ್ಟ್ ಟೈಮ್ ರೈಟರ್ ನೋಡವಾ. ಅದರ ಜೋಡಿ ಸಮಾಜ ಸೇವಾ ಅಂತ ಏನೋ ಮಾಡ್ತೇನಿ,' ಅಂದೆ.

'ನೀನು!? ಸಮಾಜ ಸೇವಾ!? ನಂಬಲಿಕ್ಕೆ ಸಾಧ್ಯ ಇಲ್ಲ. ಏನಪಾ ಮಾಡ್ತೀ ಸಮಾಜ ಸೇವಾ?' ಅಂತ ಕೇಳಿದಳು. ಎಷ್ಟಂತ ಅಕಿ ತಡಕೊಂಡಾಳು? ಏನರೆ ಟಾಂಟ್ ಹೊಡಿಲಿಕ್ಕೇ ಬೇಕು ನೋಡ್ರೀ. ನಮಗೇನು ಫರಕ್ ಇಲ್ಲ. ಕ್ವಾಣದ ಚರ್ಮದ ಮಂದಿ ನಾವು.

'ಸಮಾಜ ಸೇವಾ ಅಂದ್ರ ಲೈಫ್ ಕೋಚ್ ಅಂತ ಮುಫ್ತಿನ್ಯಾಗ ಅಂದ್ರ ಫ್ರೀ ಒಳಗ ಮಂದಿಗೆ ಸಲಹೆ ಸೂಚನೆ ಉಚಿತವಾಗಿ ಕೊಡತೇನಿ ನೋಡವಾ. ಮಂದಿ ಏನೇನೋ ಪ್ರಾಬ್ಲಮ್ ಹೇಳಿಕೋತ್ತ ಬರತಾರ. ನಾನು ಭಾಳ ಅಲ್ಲದಿದ್ದರೂ ಸ್ವಲ್ಪರೆ ದುನಿಯಾ ನೋಡೇನಿ ನೋಡು. ನಮ್ಮ ಅನುಭವ, ಕಲಿತ ಅಲ್ಪ ಸ್ವಲ್ಪ ಜ್ಞಾನ ಉಪಯೋಗಿಸಿ ಏನೇನೋ ಸಲಹಾ ಕೊಡತೇನಿ ನೋಡವಾ. ಎಲ್ಲಕ್ಕಿಂತ ಹೆಚ್ಚಾಗಿ ಫುಲ್ ಲಕ್ಷ್ಯವಿಟ್ಟು ಮಂದಿ ಏನು ಹೇಳ್ತಾರ ಅಂತ ಸುಮ್ಮ ಕೂತು ಕೇಳತೇನಿ. ಅದೇ ಭಾಳ ಮುಖ್ಯ ಅಂತ ನಮ್ಮ ಕಡೆ ಬಂದವರು ಹೇಳ್ತಾರ. ನಡು ನಡು ಅಡ್ಡ ಬಾಯಿ ಹಾಕದೇ, ನನ್ನ ಗತೆ ಲಕ್ಷ್ಯ ಕೊಟ್ಟು ಕೇಳವರೇ ಸಿಗೋದಿಲ್ಲ ಅಂತ ಆತು. ಎಷ್ಟೋ ಸರೆ ನಮ್ಮ ಕಡೆ ಅವರ ತೊಂದ್ರಿ ತಾಪತ್ರಯ ಹೇಳಿಕೋತ್ತ ಇರ್ತಾರ. ಆವಾಗಲೇ ಅವರಿಗೇ ಅವರ ತೊಂದ್ರಿಗೆ ಉತ್ತರ ಸಿಕ್ಕುಬಿಡ್ತದ. ಇದೇ ಸಮಾಜ ಸೇವಾ ಮಾಡ್ಕೋತ್ತ ಇದ್ದೇನಿ,' ಅಂದೆ.

'ಅಲಲಲಲಾ! ಭಾರಿ ಆತಲ್ಲೋ. ಮೊದಲು ನೋಡಿದರೆ ನೀನೇ ಒಂದು ದೊಡ್ಡ ತೊಂದ್ರಿ ಮತ್ತ ತಾಪತ್ರಯ ಇದ್ದಂಗ ಇದ್ದಿ. ಈಗ ನೋಡಿದರೆ ಮಂದಿ ಪ್ರಾಬ್ಲಮ್ ಬಗೆಹರಿಸಿಬಿಡ್ತಿ ಅಂತಾತು. ಹೀಂಗರೆ ಮಾಡಿ ಒಂದಿಷ್ಟು ಪುಣ್ಯಾ ಕಟ್ಕೊ!' ಅಂದು ಬಿಟ್ಟಳು. ಅಕಟಕಟ!

'ನಿನಗೂ ಏನರೆ ಪ್ರಾಬ್ಲಮ್ ಇದ್ದರೆ ಮುದ್ದಾಂ ಬಾ ಮಾರಾಳ. ಏನೂ ಭಿಡೆ ಮಾಡಿಕೋಬ್ಯಾಡ. ಏನೇ ಇದ್ದರೂ ಬಗೆಹರಿಸಿಕೊಡೋಣ. ನಮ್ಮನಿ ಗೊತ್ತದಲ್ಲಾ ಎಲ್ಲದ ಅಂತ? ಮೊದಲೆಲ್ಲಿತ್ತೋ ಅಲ್ಲೇ ಅದ. ನಾ ಅಷ್ಟೇ ಔಟ್ ಹೌಸ್ ಒಳಗ ಇರ್ತೇನಿ. ಮನಿ ಹಿಂದೇ ಅದ. ಸೀದಾ ಅಲ್ಲಿಗೇ ಬಂದುಬಿಡು. ತಿಳೀತ???' ಅಂತ ಹೇಳಿದೆ.

'ಮನಿಯಾಗ ಇರದೇ ಔಟ್ ಹೌಸ್ ಒಳಗ ಯಾಕ ಇರ್ತೀ? ಮನಿಯಿಂದ ಹೊರಗ ಹಾಕ್ಯಾರ? ಒದ್ದು ಓಡಿಸ್ಯಾರ ಏನು???' ಅಂತ ಕೇಳಿಬಿಟ್ಟಳು.

'ಛೆ! ಛೆ! ನನಗ ಒಂಬತ್ತನೇತ್ತಾ ಇದ್ದಾಗಿಂದ ನಮ್ಮ ಮನಿ ಔಟ್ ಹೌಸ್ ಒಳಗ ಒಬ್ಬನೇ ಇದ್ದು ರೂಢಿ ಆಗಿ ಬಿಟ್ಟದ. ಒಂದು ಟೈಪ್ ಕುಟೀರದ ಹಾಂಗ ಅದ. ನನ್ನದೇ ಆದ ಪ್ರತ್ಯೇಕ ಔಟ್ ಹೌಸ್. ಅದಕ್ಕೇ ಅಲ್ಲೇ ಇರ್ತೇನಿ. ಊಟ, ತಿಂಡಿ, ಅದಕ್ಕ ಇದಕ್ಕ ಮಾತ್ರ ಮನಿ ಕಡೆ ಬರ್ತೇನಿ. ತಲಿ ಓಡಬೇಕು ಅಂದ್ರ ಏಕಾಂತ ಬೇಕು ನೋಡವಾ. ಗದ್ದಲದಾಗ ಅವೆಲ್ಲ ಆಗೋದಿಲ್ಲ,' ಅಂತ ನಮ್ಮ ಒಂಟಿ ಗೂಬೆ ಅಸ್ತಿತ್ವಕ್ಕೆ ಒಂದು ವಿವರಣೆ ಕೊಟ್ಟೆ.

ಅಷ್ಟರಾಗ ಅಕಿ ಕಾಯಿಪಲ್ಲೆ ತೊಗೊಳ್ಳೋ ಕೆಲಸ ಮುಗಿತು. ನಮಗ ಕೆಲಸ ಇರಲಿಲ್ಲ. ಇಕಿ ಕಂಡಳು ಅಂತ ನಾ ಅಲ್ಲೆ ಬ್ರೇಕ್ ಹಾಕಿದ್ದೆ. ಇಕಿ ಹೊಂಟಳು ಅಂತ ನಾನೂ ಹೊಂಟೆ. ಅಕಿ ಜೋಡಿ ಅಲ್ಲ ಮತ್ತ. ಅಕಿ ಬ್ಯಾರೆ ಕಡೆ ಹೋದಳು. ನಾ ಪ್ಯಾಟಿ ಕಡೆ ಒಂದು ರೌಂಡ್ ಹಾಕಲಿಕ್ಕೆ ಹೊಂಟೆ.

ಇದಾದ ಮ್ಯಾಲೆ ಮರ್ತು ಬಿಟ್ಟಿದ್ದೆ.

ಸ್ವಲ್ಪ ದಿವಸ ಆದ ಮ್ಯಾಲೆ ಒಂದು ದಿವಸ, 'ಮಂಗೇಶಾ! ಮಂಗೇಶಾ!' ಅಂತ ಒದರಿಕೋತ್ತ ಯಾರೋ ಮನಿ ಬಾಜೂಕಿಂದ ಬರಲಿಕತ್ತಿದ್ದರು. ನೋಡಿದರೆ ಇಕಿನೇ. ಆವತ್ತು ಕಾಯಿಪಲ್ಲೆ ಅಂಗಡ್ಯಾಗ ಸಿಕ್ಕ ಪುರಾತನ ಗೆಳತಿ. ಅಕಿ ಹಿಂದೆ ಒಂದು ಬುಶ್ ಶರ್ಟ್ ಹಾಕ್ಕೊಂಡು, ಅದನ್ನ ಮುಂದೆ ಮಾತ್ರ ಇನ್ ಶರ್ಟ್  ಮಾಡಿಕೊಂಡು, ಹಿಂದೆ ಹಾಂಗೇ ಬಿಟ್ಟುಕೊಂಡು, ಕೋಲು ಬಸವನ ಹಾಂಗೆ ತಲಿ ಕುಣಿಸುತ್ತ ಒಂದು ಗಂಡು ಆದಮೀ ಸಹ ಬರುತ್ತಿತ್ತು. ಡೌಟೇ ಬ್ಯಾಡ. ಅಕಿ ಗಂಡನೇ ಇರಬೇಕು. ಇಷ್ಟೆಲ್ಲ ಆಗೋದ್ರಾಗ ನನ್ನ ಔಟ್ ಹೌಸ್ ಮುಂದೇ ಬಂದು ಬಿಟ್ಟರು.

'ಬರ್ರಿ! ಬರ್ರಿ! ಏನು ಈಕಡೆ? ಬರ್ರಿ! ಬರ್ರಿ ಕೂಡ್ರಿ. ಔಟ್ ಹೌಸ್ ಸಣ್ಣದು ಅದ. ಭಾಳ ಸ್ವಚ್ಚ ಏನೂ ಇಲ್ಲ. ಸ್ವಲ್ಪ ಅಡ್ಜಸ್ಟ್ ಮಾಡಿಕೊಂಡು ಕೂತು ಬಿಡ್ರೀ,' ಅಂತ ಹೇಳಿದೆ.

'ಇವರು ಯಾರವಾ? ನಿಮ್ಮನಿಯವರು ಏನು?' ಅಂತ ಕೇಳಿದೆ. ಅಕಿ 'ಹೌದು' ಅಂದಳು. 'ಒಳ್ಳೇದು, ಒಳ್ಳೇದು, ಕೂಡ್ರೀ. ನಿಮ್ಮ ಪ್ಯಾಂಟ್ ಭಾಳ್ ಟೈಟ್ ಅದ ಏನ್ರೀ ಸರ್? ನೆಲಕ್ಕ ಕೂಡಲಿಕ್ಕೆ ಆಗ್ತದೋ ಇಲ್ಲೋ? ಖುರ್ಚಿ ತರಿಸಲಿ ಏನು?' ಅಂತ ಇಲ್ಲದ ಉಪಚಾರ ಮಾಡಿದೆ. ನಮ್ಮದೇನೂ ತೊಂದ್ರಿ ಇಲ್ಲ ಬಿಡ್ರೀ. ನಾವು ಲುಂಗಿ ಮಂದಿ. ನೆಲದ ಮ್ಯಾಲೆ ಆರಾಮ್ ಕೂತು ಬಿಡ್ತೇವಿ. ಅಷ್ಟೇ ಮುಂದೆ 'ಪಂಚಾಂಗ' ಮುಚ್ಚಿಕೊಂಡು ಕೂಡೋದನ್ನ ಮರಿಬಾರದು ಅಷ್ಟೇ. ಅಕಿಯಂತೂ ಸೀರಿ ಗಿರಾಕಿ. ಅಕಿನೂ ಆರಾಮ ನೆಲಕ್ಕ ಕೂಡ್ತಾಳ. ಏನರೆ ಪ್ರಾಬ್ಲಮ್ ಇದ್ದರೆ ಅಕಿ ಗಂಡಂದೇ. ಆವಾ ಪ್ಯಾಂಟ್ ಗಿರಾಕಿ. ಅವನೂ ಹ್ಯಾಂಗೋ ಮಾಡಿ ಕೆಳಗೇ ಕೂತ. ಅವನ ಪ್ಯಾಂಟೇನೂ ಪರ್ರ್! ಪರ್ರ್! ಅಂತ ಸೀಳು ಬಿಟ್ಟ ಸೌಂಡ್ ಬರಲಿಲ್ಲ ಅಂದ ಮ್ಯಾಲೆ ಓಕೆ.

'ಏನು ತೊಗೋತ್ತೀರಿ? ಚಹಾ, ಕಾಫಿ, ಬೋರ್ನ್ವಿಟಾ, ಹಾರ್ಲಿಕ್ಸ್, ಥಮ್ಸ್ ಅಪ್, ತುಮ್ಸ್ ಅಪ್, ಲಿಮ್ಕಾ, ಗಿಮ್ಕಾ???' ಅಂತ ಕೇಳಿದೆ. ಯಾವದನ್ನೂ ಕೊಡುವ ಪರಿಸ್ಥಿತಿ ಒಳಗ ಇರಲಿಲ್ಲ. ಚಹಾ, ಕಾಫಿ ಮಾಡಿಕೊಡಬಹುದಾದ ನಮ್ಮ ಅಮ್ಮ ಅವರಮ್ಮನ ತಿಥಿಗೆ ಅಂತ ಊರಿಗೆ ರೈಟ್ ಹೇಳಿಬಿಟ್ಟಿದ್ದರು. ಮತ್ತ ಇದ್ದ ಥಮ್ಸ್ ಅಪ್ ಎಲ್ಲಾ ಹಳೆ ಮಂಗ್ಯಾ ರಮ್ ಜೋಡಿ ಹಾಕಿಕೊಂಡು ಕುಡಿದಾಗಿತ್ತು. ಲಿಮ್ಕಾ ಸ್ಮಿರ್ನಾಫ್ ವೋಡ್ಕಾ ಜೊತೆ ಹರೋಹರ ಅಂದು ಬಿಟ್ಟಿತ್ತು.

'ಏನೂ ಬ್ಯಾಡ. ಎಲ್ಲಾ ಮುಗಿಸಿಕೊಂಡೇ ಬಂದೇವಿ,' ಅಂತ ಹೇಳಿದಳು. ಹಾಂಗೇ ಹೇಳಬೇಕು. ಮತ್ತ ಮತ್ತ ಕೇಳಿದರೆ ಮಾತ್ರ ಏನರೆ ಬೇಕು ಅಂತ ಹೇಳಬೇಕು. ಅದು ಪದ್ಧತಿ. ಅಲ್ಲಾ?

'ಏನು ಬಂದಿದ್ದು? ಏನು ಸೇವಾ ಮಾಡ್ಲೀ?' ಅಂತ ಕೇಳಿದೆ.

'ಒಂದು ದೊಡ್ಡ ಪ್ರಾಬ್ಲಮ್ ಆಗಿಬಿಟ್ಟದ ಮಾರಾಯಾ. ಏನರೆ ಸಲಹಾ ಕೊಡ್ತಿಯೇನೋ ಅಂತ ಆಶಾ ನೋಡಪಾ!' ಅಂದಳು ಗೆಳತಿ.

'ಏನು? ಹೇಳವಾ. ಭಿಡೆ ಬಿಟ್ಟು, ಎಲ್ಲಾ ಬಿಚ್ಚಿ ಹೇಳಿಬಿಡು,' ಅಂತ ಹೇಳಿದೆ. ಅವರಿಗೂ ಹೇಳಿಕೊಳ್ಳಲಿಕ್ಕೆ ಫ್ರೀ ಅನ್ನಿಸಬೇಕು ನೋಡ್ರೀ.

'ಹ್ಯಾಂ??? ಎಲ್ಲಾ ಬಿಚ್ಚಿ????? ಅಂದ್ರ???' ಅಂತ ಒಂದು ತರಹ ರಾಂಗ್ ಆಗಿ ಕೇಳಿದಳು.

'ಅಂದ್ರ ಎಲ್ಲಾ ಅಂದ್ರ ಫುಲ್ ಬಿಚ್ಚಿ ಅಂದ್ರ ಮನಸ್ಸು ಬಿಚ್ಚಿ ಹೇಳಿಕೊಂಡು ಬಿಡು ಅಂತ. ಮತ್ತೇನಿಲ್ಲ,' ಅಂತ ಹೇಳಿ ದೇಶಾವರಿ ನಗೆ ನಕ್ಕೆ.

'ಹಾಂಗ ಹೇಳೋ ನಮ್ಮಪ್ಪಾ. 'ಎಲ್ಲಾ ಬಿಚ್ಚಿ ಹೇಳು' ಅನ್ನೋದನ್ನ ಕೇಳಿ ಒಂದು ಸರ್ತೇಕ್ ಎದಿ ಧಸಕ್ ಅಂದಿತ್ತು,' ಅಂತ ಅವಳೇ ಹೇಳಿಕೊಂಡಳು. ಪಕ್ಕದಲ್ಲಿ ಅಕಿ ಗಂಡ ಅನ್ನೋ ಪ್ರಾಣಿ ಇದು ಯಾವದರ ಖಬರೇ ಇಲ್ಲದೇ ಮೊಬೈಲ್ ಒಳಗ ಹಾವು ಏಣಿ ಆಟ ಆಡಿಕೋತ್ತ ಕೂತಿತ್ತು. ಅಯ್ಯೋ ಇವನ ಮನಿಕಾಯಾ! ಏನು ಪರಿಸ್ಥಿತಿ ಅಂತೇನಿ? ಇಕಿ ಹೆಂಡತಿ ನೋಡಿದರೆ ಏನೋ ದೊಡ್ಡ ಪ್ರಾಬ್ಲಮ್ ಅದ ಅಂತ ಹೇಳಿಕೊಳ್ಳಲಿಕ್ಕೆ ಬಂದಾಳ. ಅಕಿ ಗಂಡನ್ನ ನೋಡಿದರೆ ಯಾವದೇ ಚಿಂತೆಯಿಲ್ಲದವನ ಹಾಂಗ ಗೇಮ್ ಆಡಿಕೋತ್ತ ಕೂತಾನ. ಸುಖ ಪುರುಷ ಅನ್ನಬೇಕೋ ಅಥವಾ ಖಬರಗೇಡಿ ಅನ್ನಬೇಕೋ ತಿಳಿಲಿಲ್ಲ.

'ನನ್ನ ಇಬ್ಬರು ಮಕ್ಕಳದ್ದೇ ದೊಡ್ಡ ಪ್ರಾಬ್ಲಮ್ ಆಗಿಬಿಟ್ಟದ ನೋಡಪಾ!' ಅಂದಳು.

'ಎಷ್ಟು ವಯಸ್ಸು ಮಕ್ಕಳಿಗೆ?' ಅಂತ ಕೇಳಿದೆ.

'ಹದಿಮೂರು, ಹದಿನಾಲ್ಕು,' ಅಂತ ಹೇಳಿದಳು.

'ಹಾಂ! ನಾ ಅಂದುಕೊಂಡೆ. thirteen, fourteen. ಟೀನ್ ಏಜ್. ಹದಿ ವಯಸ್ಸು. ಟೀನ್ ಏಜ್ ಒಳಗ ಎಲ್ಲಾ ಮಕ್ಕಳದ್ದೂ ಪ್ರಾಬ್ಲಮ್ ಇರೋದೇ ನೋಡವಾ. ಏನು ಮಾಡಲಿಕ್ಕೆ ಬರ್ತದ? ಅವು ಮೈಯಾಗಿನ ಹಾರ್ಮೋನ್ ಏನು ಇರ್ತಾವ ನೋಡು ಅವು ಸಿಕ್ಕಾಪಟ್ಟೆ ಹಾರ್ಮೋನಿಯಂ ಬಾರಿಸಲಿಕ್ಕೆ ಶುರು ಮಾಡಿಬಿಡ್ತಾವ. ಮಕ್ಕಳು ಮಂಗ್ಯಾನ ಗತೆ ಮಾಡ್ತಾವ. ನಿಮ್ಮಂತಾ ತಂದೆ ತಾಯಿ ನೀವೆಲ್ಲಾ ಆ ವಯಸ್ಸಿನ್ಯಾಗ ಏನೇನು ಬಾಲಲೀಲೆಗಳನ್ನು ಮಾಡಿದ್ದಿರಿ ಅಂತ ನೆನೆಸಿಕೋಬೇಕು. ನಿಮ್ಮ ಖಟಿಪಿಟಿ ಎಲ್ಲ ನಿಮ್ಮ ತಂದೆ ತಾಯಿ ಹ್ಯಾಂಗ ಸಹಿಸಿಕೊಂಡು ನಿಮ್ಮನ್ನೆಲ್ಲಾ ದೊಡ್ಡವರನ್ನಾಗಿ ಮಾಡಿದರು ಅಂತ ತಿಳ್ಕೊಂಡು ನಿಮ್ಮ ಮಕ್ಕಳನ್ನೂ ಹಾಂಗೇ ದೊಡ್ಡವರನ್ನಾಗಿ ಮಾಡಬೇಕು ನೋಡವಾ,' ಅಂತ ಹಾಗೇ ಜನರಲ್ ಸಮಾಧಾನ ಹೇಳಿದೆ.

'ಇಲ್ಲೋ ಮಾರಾಯ ನನ್ನ ಮಕ್ಕಳದ್ದು ಉಪದ್ರವ ಭಾಳ ಆಗ್ಯದ. ನಿನಗ ಹೇಳತೇನಿ ನೋಡು. ಪ್ರತಿ ಮಾತಿಗೆ ಉಲ್ಟಾ ಮಾತಾಡ್ತಾವ ನೋಡು. ಜಗಳ ಬರೇ ಜಗಳ. ಮನಿಯೊಳಗ ಮೂರೂ ಹೊತ್ತು ಜಗಳ. ಅಪ್ಪ ಅಂದ್ರ ಬೆಪ್ಪ. ಮತ್ತ ನಾ ಅವ್ವಾ ಅಂದ್ರ ದೆವ್ವಾ ಆಗಿಬಿಟ್ಟೇನಿ. ಸಾಕಾಗಿ ಹೋಗ್ಯದ ಮಾರಾಯ. ಬರೇ ನಮ್ಮ ಜೋಡಿ ಒಂದೇ ಜಗಳಾಡ್ತಾರ ಅಂದ್ರ ಅದೊಂದು ಮಾತು ಬ್ಯಾರೆ. ಅಡಗಿ ಮಾಡಾಕಿ ಜೋಡಿ, ಕೆಲಸಕ್ಕೆ ಬರವರ ಜೋಡಿ ಎಲ್ಲಾರ ಜೋಡಿ ಜಗಳ ನೋಡಪಾ ನನ್ನ ಮಕ್ಕಳದ್ದು. ಮನ್ನೆ ಅಂತೂ ಅಡಗಿ ಮಾಡಾಕಿ ಮಾರಿಗೇ ಪ್ಲೇಟ್ ಒಗೆದು ಬಿಟ್ಟವು ನೋಡು ನನ್ನ ಮಕ್ಕಳು. ಅದೇನೋ ಅಡಿಗಿ ರುಚಿ ಆಗಿದ್ದಿಲ್ಲಂತ. ಪಾಪ ಅಕಿ ಮಡಿ ಫಣಿಯಮ್ಮ ಅತ್ತಗೋತ್ತ, ಕಣ್ಣೀರು ಹಾಕಿಕೋತ್ತ ಹೋತು ನೋಡಪಾ. ಅದೂ ಶುಕ್ರವಾರ. ಏನರೆ ಮುತ್ತೈದೆ ಕಣ್ಣಾಗ ಶುಕ್ರವಾರ ಹಾಂಗ ಕಣ್ಣೀರು ಹಾಕಿ ಕಳಿಸಿದ್ದರೆ ಎಂತಾ ದೊಡ್ಡ ಪಾಪ ಆಗ್ತಿತ್ತು ಅಂತ ನೆನಿಸ್ಕೊಂಡ್ರ ಎದಿ ಢವ್ ಅಂತದ. ಪುಣ್ಯಕ್ಕೆ ಅಕಿ ಮಡಿಯಾಕಿ. ಕೆಂಪ ಸೀರಿ ಕೇಸ್. ಅಕಿ ನಮ್ಮ ನೌಕರಿನೇ ಬಿಟ್ಟು ಹೋದಳು ನೋಡಪಾ. ಈಗ ನಾನೇ ಎಲ್ಲ ಕೆಲಸ ಮಾಡಬೇಕು. ನನ್ನ ಎರಡು ಕ್ವಾಣ ಮಕ್ಕಳು ಒಂದು ಕಡ್ಡಿ ಕೆಲಸ ಅಂತೂ ಮಾಡೋದಿಲ್ಲ. ಮ್ಯಾಲಿಂದ ಜಗಳ, ಬೈಗಳ. ಸಾಕಾಗಿ ಹೋಗ್ಯದ ನೋಡಪಾ. ಏನರೆ ಸಲಹಾ ಕೊಡ್ತಿಯೇನೋ ಅಂತ ಬಂದೇವಿ ನೋಡಪಾ!' ಅಂದು ಅಂಬೋ ಎಂದಳು ಗೆಳತಿ.

'ನೀವೇನಂತೀರಿ ಸರ್? ನಿಮ್ಮ ಮನಿಯವರು ಇಷ್ಟೆಲ್ಲಾ ಹೇಳ್ತಾರ. ಮಕ್ಕಳದ್ದು ಇಷ್ಟೆಲ್ಲಾ ಪ್ರಾಬ್ಲಮ್ ಅದನ? ಹಾಂ?' ಅಂತ ಮೊಬೈಲ್ ಮ್ಯಾಲೆ ಹಾವು ಏಣಿ ಗೇಮ್ ಆಡಿಕೋತ್ತ ಕೂತಿದ್ದ ಅಕಿ ಗಂಡನ್ನ ಕೇಳಿದೆ.

ಗೇಮ್ ನಿಂದ ತಲಿ ಎತ್ತಿ, 'ಹ್ಯಾಂ??????' ಅನ್ನೋ ಹಾಂಗ ನೋಡಿದ. ಈ ಕಡೆ ಖಬರೇ ಇಲ್ಲ ಅವಂಗ. ಒಂದು ಅನಾಹುತ ಪ್ರಶ್ನೆ ಕೇಳಿಬಿಟ್ಟ.

'ಅದೇನೋ ಹಾರ್ಮೋನಿಯಂ ಅಂದ್ರಲ್ಲಾ? ನಮ್ಮ ಮಕ್ಕಳನ್ನು ಹಾರ್ಮೋನಿಯಂ ಕ್ಲಾಸಿಗೆ ಹಾಕೋಣ ಅಂತೀರೇನು? ಯಾರ ಕಡೆ? ಗೋಪಾಳಪುರದ ಪಂಡಿತ್ ವಸಂತ್ ಕನಕಾಪುರ ಅವರ ಕಡೆ ಕ್ಲಾಸಿಗೆ ಹಚ್ಚಿ ಬರ್ಲಾ?' ಅಂತ ಕೇಳಿಬಿಟ್ಟ. ಅವಂದೂ ಇರಲಿ ಅಂತ ಇಟ್ಟು ಬಿಟ್ಟ. ಇಡ್ಲಿ ಗಿರಾಕಿ. ಸೂಡ್ಲಿ ತಂದು.

ನಾನು 'ಹದಿವಯಸ್ಸಿನ್ಯಾಗ ಹಾರ್ಮೋನುಗಳು ಹಾರ್ಮೋನಿಯಂ ಬಾರಸ್ತಾವ' ಅನ್ನೋದನ್ನ ಹ್ಯಾಂಗೆಂಗೋ ಕೇಳಿ, ಏನೇನೋ ಅರ್ಥ ಮಾಡಿಕೊಂಡು, ಅನಾಹುತ ಪ್ರಶ್ನೆ ಕೇಳಿಬಿಟ್ಟಿದ್ದ ಅಕಿ ಗಂಡ. ಎಂತೆಂತಾ ಮಂದಿ ಇರ್ತಾರಪಾ ಈ ಜಗತ್ತಿನಲ್ಲಿ! ಇಂತಾ ಖಬರಗೇಡಿ ಮಂದಿ ಸಹಿತ ಸಂಸಾರ ಮಾಡ್ತಾರಂತ. ಶಿವನೇ ಶಂಭುಲಿಂಗ.

'ಏ ಇಕಿನ. ಒಂದು ಕೆಲಸಾ ಮಾಡು,' ಅಂದೆ.

'ಏನು???' ಅಂತ ಕೇಳಿದಳು.

'ಸ್ವಲ್ಪ ಕುಂಡ್ಲಿ ತೋರಿಸು. ತಂದಿರಬೇಕಲ್ಲಾ????' ಅಂತ ಕೇಳಿ ನನ್ನ ಪಂಚಾಂಗ ಹುಡಕಲಿಕ್ಕೆ ಶುರು ಮಾಡಿದೆ. ಪಂಚಾಂಗ ಸಿಗವಲ್ಲತು. ಪಂಚಾಂಗ ಎಲ್ಲೋ ಪಂಚೆಯಲ್ಲಿ ಕಳೆದು ಹೋಗಿರ್ತದ. ಅಥವಾ ಪಂಚಾಂಗದ ಮ್ಯಾಲೇ ನಾ ಕೂತು ಬಿಟ್ಟೇನೋ ಏನೋ????

'ಏನಂದೀ?!! ಏನು ತೋರಿಸಲೀ???' ಅಂತ ಹೂಂಕರಿಸಿದಳು.

ನಾನು ನನ್ನ ಪಂಚಾಂಗ ಹುಡುಕುದ್ರಾಗ ಬ್ಯುಸಿ ಇದ್ದೆ. ಇಕಿ ಕಡೆ ಗಮನ ಕೊಡದೇ, ಮತ್ತ ಮತ್ತ, 'ಕುಂಡ್ಲಿ, ಕುಂಡ್ಲಿ. ಲಗೂ ಲಗೂ ಕುಂಡ್ಲಿ ತೆಗೆದು ತೋರಿಸು,' ಅಂದು ಪಂಚಾಂಗ ಹುಡುಕೋದನ್ನ ಮುಂದುವರೆಸಿದೆ.

'ಏ!!!! ಏನು ಮಾತಾಡ್ತೀಯೋ ಹುಚ್ಚಾ! ಏ!!!' ಅಂತ ಅನ್ಕೋತ್ತ ಮೈ ಮ್ಯಾಲೇ ಏರಿ ಬಂದು ಬಿಟ್ಟಳು. ಇಕಿ ಏರಿ ಬಂದ ಅಬ್ಬರಕ್ಕೆ, ತುದಿಗಾಲ ಮ್ಯಾಲೆ ಕೂತು, ನನ್ನ ಪಂಚಾಂಗ ಹುಡುಕುತ್ತಿದ್ದ ನಾನು ಮುಂದ ಮುಕ್ಕರಿಸಿ ಬಿದ್ದುಬಿಟ್ಟೆ. ಶಿವಾಯ ನಮಃ ಅನ್ನೋ ಹಾಂಗ ಅಕಿ ಮಡಿಲಾಗ ಹೋಗಿ ನನ್ನ ತಲಿ ಕೂತು ಬಿಡ್ತು. ಅದು ಅಕಿ ಮತ್ತ ನಾನು ಎದರಾ ಬದರಾ ನೆಲದ ಮ್ಯಾಲೆ ಕೂತು ಮಾತಾಡ್ಲಿಕತ್ತಿದ್ದಿವಿ ನೋಡ್ರೀ. ಅದೂ ಪಂಚಾಂಗ ಹುಡಕಲಿಕ್ಕೆ ಬಗ್ಗಿದ್ದೆ ನೋಡ್ರೀ. ಇಕಿ ಒಮ್ಮಲೆ 'ಏ!' ಅಂತ ಚೀರ್ಕೊತ್ತ ಬರೋ ತನಕಾ ಘಾಬರಿ ಆಗಿ, ಮುಂದೆ ಮುಕ್ಕರಿಸಿ ಬಿದ್ದು, 'ಅಮ್ಮಾ ನಿನ್ನ ಮಡಿಲಿನಲ್ಲಿ ಕಂದ ನಾನು' ಆಗಿ ಹೋತು. ಅಕಿ ಸೀರಿಯಿಂದ ಒಗ್ಗರಣಿ ವಾಸನಿ ಘಂ ಅಂತ ಮೂಗಿಗೆ ಬಡೀತು. ಡೌಟೇ ಇಲ್ಲ! ಬರೋಕಿಂತ ಮೊದಲು ಸಾರಿಗೆ ಖಮ್ ಅಂತ ಒಗ್ಗರಣಿ ಹಾಕೇ ಬಂದಾಳ. ಬರೆ ಛಂದ ಸೀರಿ ಉಟಗೊಂಡು ಬಂದುಬಿಟ್ಟರೆ ಆತೇನು? ಏನು ಮಾಡಲಿಕ್ಕೆ ಬರ್ತದ? ಅವು ನಮ್ಮ ದೇಸಿ ಮಸಾಲಿ ವಾಸನಿ ಬಟ್ಟೆಗೆ ಹಿಡಕೊಂಡು ಬಿಡ್ತಾವ ನೋಡ್ರೀ. ಏನೂ ಮಾಡಲಿಕ್ಕೆ ಬರೋದಿಲ್ಲ. ನಮಗಂತೂ ಅಷ್ಟು ಖಮ್ ಅನ್ನುವ ಸಾರು, ಜೋಡಿ ಬಿಸಿ ಅನ್ನ, ಹಪ್ಪಳ, ಸಂಡಿಗಿ ಉಣ್ಣೋ ನಸೀಬ್ ಅಂತೂ ಇಲ್ಲ. ಹ್ಯಾಂಗೂ ಇಕಿ ಮ್ಯಾಲೆ ಬಿದ್ದಾಗ್ಯದ. ಖಮ್ ಅನ್ನೋ ಸಾರಿನ ವಾಸನಿಯಾದರೂ ಮಸ್ತ ಕುಡಕೊಂಡು ಬರೋಣ ಅಂತ ಹೇಳಿ, ಅಕಿ ಮ್ಯಾಲೆ ಬಿದ್ದವ ಹಾಗೇ ಒಂದೆರೆಡು ಕ್ಷಣ ಜಾಸ್ತಿಯೇ ಅಕಿ ಮಡಿಲಾಗ ತಲಿ ಇಟ್ಟು, ಆಮ್ಯಾಲೆ ಎತ್ತಿ, ಅಂದ್ರ ನನ್ನ ತಲಿ ಮಾತ್ರ ಎತ್ತಿ ಅಂತ, ಈಕಡೆ ತಂದು ಸುಧಾರಿಸಿಕೊಂಡೆ ನೋಡ್ರೀ.

ಬಾಜೂಕೇ ಅಕಿ ಗಂಡ ಪ್ರಾಣಿ ಕೂತದ. ಅದಕಂತೂ ಖಬರೇ ಇಲ್ಲ. ಅದು ತನ್ನ ಹಾವು ಏಣಿ ಆಟದಾಗ ಫುಲ್ ಮಗ್ನ. ಇಲ್ಲಿ ಹೆಂಡತಿ ಮಡಿಲಾಗ ಯಾರದ್ದೋ ತಲಿ ಬಂದು ಸ್ಥಾಪನಾ ಆದ ಖಬರೂ ಇಲ್ಲ. ನಾನೇ ಗಡಿಬಿಡಿಯಾಗ ಸುಧಾರಿಸಿಕೊಂಡು, ಎದ್ದು, ಬರೋಬ್ಬರಿ ಕೂತೆ.

'ಏ! ಏನಾತ? ಆ ಪರಿ ಒದರೀದಿ? ನಾ ಏನಂದೆ? ಕುಂಡ್ಲಿ, ಜನ್ಮ ಕುಂಡ್ಲಿ, ಜಾತಕ, ಹೊರೋಸ್ಕೊಪ್, ಅದನ್ನ ತೋರಿಸು ಅಂದೆ. ಅದಕ ಹಾಂಗ್ಯಾಕ ಚೀರಿಕೋತ್ತ, ಕೈಯೆತ್ತಿ, ಹೊಡಿಲಿಕ್ಕೆ ಬಂದಿ??? ಹಾಂ?' ಅಂತ ಕೇಳಿದೆ.

'ಕುಂಡಲಿ ಅಂದ್ಯಾ? ನನಗ ಏನೋ ಅಂದಂಗ ಕೇಳಿತು,' ಅಂತ ರಾಗಾ ಎಳದಾಕಿನೇ, 'ಸ್ವಲ್ಪ ಸರೀತ್ನಾಗಿ ಮಾತಾಡು. ಮೊದಲಿಂದ ಆ ಹುಚ್ಚ ಸುನೀಲ್ ಶೆಟ್ಟಿ ಗತೆ ಹಕಲಾ ಮಾತಾಡ್ತಿ. ಮ್ಯಾಲಿಂದ ಸದಾ ಎಲಿ ಅಡಕಿ, ಗುಟ್ಕಾ ಅದು ಇದು ತಿಂದು ತಿಂದು, ನಾಲಿಗಿ ದಪ್ಪಾಗಿ ಒಟ್ಟ ಹೊಳ್ಳವಲ್ತು. ಕುಂಡ್ಲಿ ಅನ್ನೋವಾಗ ಆ 'ಲ' ವತ್ತನ್ನ ಬರೋಬ್ಬರಿ ಹೇಳು. ಇಲ್ಲ ಅಂದ್ರ ಕೆಟ್ಟ ಅರ್ಥ ಬರ್ತದ. ಹುಚ್ಚನ್ನ ತಂದು,' ಅಂತ ಬೈದಳು.

'ಓಹೋ! ಇದು ನಾ ಕುಂಡ್ಲಿ ಅಂದಾಗ ಅಕಿಗೆ 'ಕುಂ' ನಂತರ ಬರುವ 'ಡಿ' ನಂತರದ 'ಲ'ಕಾರ ಕೇಳೇ ಇಲ್ಲ ಅಂತ ಕಾಣಿಸ್ತದ. ಅದಕ್ಕೇ ಅಪಾರ್ಥ ಮಾಡಿಕೊಂಡು ಚೀರ್ಲಿಕತ್ತಿದ್ದಳು. ಹುಚ್ಚಿ!'  ಅಂತ ಅರ್ಥ ಮಾಡಿಕೊಂಡೆ. ವಿವರಿಸಿ ಹೇಳೋಣ ಅಂತ ಮಾಡಿದೆ. ನೋಡಿದರೆ ಅಕಿದು 'ತುಲಾ' ರಾಶಿ. 'ಏ! ಹುಚ್ಚಿ! ನಿಂದು ತುಲಾ ರಾಶಿ. ಅದಕ್ಕೇ ನೋಡು ನೀ ಸರಿಯಾಗಿ ಕೇಳಿಸಿಕೊಳ್ಳದೇ ಬೈಲಿಕ್ಕೆ ಬರ್ತಿ,' ಅಂತ. 'ನಾ ತುಲಾ ರಾಶಿ ಅನ್ನೋದು, ಅಕಿಗೆ ಆ ತುಲಾಕ್ಕ ಒಂದು 'ಲ' ವತ್ತು ಜಾಸ್ತಿನೇ ಕೊಟ್ಟಂಗ ಅನ್ನಿಸಿ, ಏನೋ ಬೇರೆನೇ ಕೇಳಿಸಿ, ಮತ್ತೇನೋ ಅಪಾರ್ಥ ಆಗೋದು, ಯಾವದೂ ಬ್ಯಾಡೇ ಬ್ಯಾಡ,' ಅಂತ ಹೇಳಿ ಸುಮ್ಮನಾದೆ.

'ಕುಂಡ್ಲಿನೇ? ಯಾರುವು? ನನ್ನ ಮಕ್ಕಳದ್ದೇ? ಅದ್ಯಾಕ ಬೇಕು?' ಅಂತ ಕೇಳಿದಳು.

'ಮತ್ತ? ಕುಂಡಲಿ ತಂದಿಲ್ಲ ಅಂದ್ರ ನಿಮ್ಮ ರೇಶನ್ ಕಾರ್ಡ್ ತಂದಿಯೇನು? ಅಥವಾ ತೊರಗಲ್ಲಮಠನ ಅಂಗಡಿಯ ಕಿರಾಣಿ ಪಟ್ಟಿ ತಂದಿಯೋ? ಏನು ಮಬ್ಬರಾಂಗ ಕೇಳ್ತಿ?' ಅಂತ ಝಾಡಿಸಿದೆ.

'ಅದೇನು ನಿನ್ನ ಮುಂದ ಇರೋದು? ಅಷ್ಟ ದೊಡ್ಡ ಪೆಟ್ಟಿಗೆ. ಒಳ್ಳೆ ಬಾಳು ಹಜಾಮನ ಹಡಪದ ಪೆಟ್ಟಿಗೆ ಸೈಜಿನದು ಅದ. ಏನದು?' ಅಂತ ನನಗೇ ಜೋರು ಮಾಡಿಬಿಟ್ಟಳು.

'ಏ ಇದ? ಇದು ನನ್ನ ಲ್ಯಾಪ್ ಟಾಪ್ ಕಂಪ್ಯೂಟರ್. ಯಾಕ?' ಅಂತ ಕೇಳಿದೆ.

'ಲ್ಯಾಪ್ ಟಾಪ್ ಕಂಪ್ಯೂಟರ್ ಅಂತ ಹೇಳಿದಿ ನೋಡು ಭಾಳ ಚೊಲೋ ಆತು. ಎಲ್ಲೆ ಮೊದಲು ನೀ ಬ್ರಾಹ್ಮಂಡರವ ಆಗಿ ಈಗ ಹಜಾಮತಿ ಕೆಲಸ ಶುರು ಮಾಡಿಯೇನೋ ಅಂತ ಮಾಡಿದ್ದೆ ನಿನ್ನ ಮುಂದಿರೋ ಹಡಪದ ಪೆಟ್ಟಿಗೆ ಸೈಜಿನ ಸಾಮಾನು ನೋಡಿ. ಆ ಲ್ಯಾಪ್ ಟಾಪ್ ಕಂಪ್ಯೂಟರ್ ಇದ್ದು ಏನು ಉಪಯೋಗ? ತೆಗೆದು ಒಲಿಗೆ ಹಾಕಿ, ಉರಿ ಹಚ್ಚಿ, ನೀರು ಕಾಯಿಸಿಕೊಂಡು ಸ್ನಾನಾ ಮಾಡಲಿಕ್ಕೆ? ಹಾಂ?' ಅಂತ ನನಗೇ ಜಬರಿಸಿದಳು. ಜೋರ ಅದ ಈ ಆಂಟಿ ಫೋರ್ಸ್!

'ಏ! ಯಾಕ? ಏನಾತು? ನನಗ, ನನ್ನ ಲ್ಯಾಪ್ ಟಾಪಿಗೆ ಯಾಕ ಬೈತೀ?' ಅಂತ ಕೇಳಿದೆ.

'ಮತ್ತೇನು? ಲ್ಯಾಪ್ ಟಾಪ್ ಒಳಗ ಕುಂಡಲಿ ಹಾಕಿ, ನೋಡಿ, ನಮ್ಮ ತೊಂದ್ರಿಗೆ ಪರಿಹಾರ ಹೇಳಲಿಕ್ಕೆ ಬರೋದಿಲ್ಲ? ಏನು ತಲಿ ಇಟ್ಟೀಪಾ? ಎಲ್ಲಾ ವೇಸ್ಟ್!' ಅಂದಳು ಅಕಿ.

ಕರೆಕ್ಟ್ ಹೇಳಿದಳು. ಲ್ಯಾಪ್ ಟಾಪ್ ಒಳಗ ಇಕಿ ಮಕ್ಕಳ ಡಾಟಾ ಫೀಡ್ ಮಾಡಿ, ಕುಂಡಲಿ ತೆಗೆದು, ನೋಡಿ, ಪರಿಹಾರ ಹೇಳಿಬಿಡೋಣ. ಅದೇ ಕರೆಕ್ಟ್ ಅನ್ನಿಸ್ತು.

'ಖರೆ ನೋಡು! ನನಗ ಅದು ಹೊಳಿಲೇ ಇಲ್ಲ. ಹಾಂಗೇ ಮಾಡೋಣ,' ಅಂದೆ.

'ಎಲ್ಲಿ ಹೊಳಿಬೇಕು? ಲ್ಯಾಪ್ ಟಾಪ್ ಮ್ಯಾಲೆ ಬರೇ ಯಾರ್ಯಾರದ್ದೋ ಮಂದಿ ಜೋಡಿ ಹೊಲಸ್ ಹೊಲಸ್ ಚಾಟಿಂಗ್ ಒಂದು ಮಾಡಲಿಕ್ಕೆ ಬರ್ತದ ಮಂಗ್ಯಾಗ. ಅದು ಬಿಟ್ಟು ಏನರೆ ಒಳ್ಳೆ ಕೆಲಸಕ್ಕೂ ಅದನ್ನ ಉಪಯೋಗಿಸೋಣ ಅನ್ನೋ ತಲಿ ಎಲ್ಲಿಂದ ಬರಬೇಕು?' ಅಂತ ಅಕಿ ಸಣ್ಣ ದನಿಯಲ್ಲಿ ಗೊಣಗಿದಳು. ನನಗ ಕೇಳಿಸ್ತು. ಮತ್ತ ಯಾವಾಗಾದ್ರೂ ಇಡೋಣ ಇಕಿಗೆ ರಿವರ್ಸ್ ಫಿಟ್ಟಿಂಗ್ ಅಂತ ಅಂದುಕೊಂಡೆ.ಅಷ್ಟಕ್ಕೇ ಬಿಟ್ಟೆ.

'ಹೂಂ! ನಿನ್ನ ಮಕ್ಕಳ ಜನ್ಮ ದಿನಾಂಕ, ಹುಟ್ಟಿದ ಟೈಮ್ ಹೇಳಿಬಿಡು, ಸಾಕು,' ಅಂದೆ.

ಅಕಿ ಹೇಳಿದಳು. ಜನ್ಮ ಸ್ಥಳ ಅಂತೂ ಗೊತ್ತೇ ಅದ. ಧಾರವಾಡ. ತವರು ಮನಿ, ಗಂಡನ ಮನಿ ಎರಡೂ ಒಂದೇ ಊರಲ್ಲಿ ಇರುವ 'ಪುಣ್ಯ' ಮಾಡಿರುವವರಲ್ಲಿ ಈಕೆ ಕೂಡ ಒಬ್ಬಳು.

ಅಕಿ ಕೊಟ್ಟ ಅಕಿ ಮಕ್ಕಳ ಡಾಟಾ ಕಂಪ್ಯೂಟರ್ ಒಳಗ ಫೀಡ್ ಮಾಡಿದೆ. ಚಕ್ ಅಂತ ಕುಂಡಲಿ ತಯಾರಾಗಿ ಬಂದವು. 'ವಾಹ್! ಕುಂಡಲಿ ತಯಾರಾಗೇ ಬಿಟ್ಟವು. ಈ ಸಾಫ್ಟ್ವೇರ್ ಮಂದಿ ಏನೇನು ಸಾಧಿಸಿಬಿಟ್ಟಾರ ನೋಡು. ಇದಿಲ್ಲ ಅಂದ್ರ ಕೈಯಾಗ ಕುಂಡಲಿ ಹಾಕಬೇಕು ಅಂದ್ರ ಕಮ್ಮಿ ಕಮ್ಮಿ ಅಂದ್ರೂ ಒಂದು ಅರ್ಧಾ ತಾಸಾದರೂ ಬೇಕಾಗ್ತಿತ್ತು' ಅಂತ ಹೇಳಿದೆ.

'ಏ! ಅದೆಂಗ ಕುಂಡಲಿ ಹಾಕಿದಿ? ಮಕ್ಕಳ ಹೆಸರು ಬ್ಯಾಡಾ?' ಅಂತ ಕೇಳಿದಳು ಅಕಿ.

'What's in a name!' ಅಂತ ಶೇಕಪ್ಪ ಅಯ್ಯರ್ ಅಂದ್ರ ಶೇಕ್ಸಪಿಯರನ ವಾಕ್ಯ ಹೇಳಿ, 'ಹೆಸರು ತೊಗೊಂಡು ಹೆಸರು ಬ್ಯಾಳಿ ಪಾಯಸ ಮಾಡಿಕೊಂಡು ಕುಡಿ. ಏನೂ ಬೇಕಾಗಿಲ್ಲ. ನಿನ್ನ ಮಕ್ಕಳಿಗೆ x ಮತ್ತು y ಅಂತ ಹೆಸರು ಕೊಟ್ಟೇನಿ. ಅದು ಓಕೆ. ಎಂತೆಂತಾ ದೊಡ್ಡ ದೊಡ್ಡ ಸಮೀಕರಣಗಳನ್ನೇ x, y ಅಂತ ಹೇಳಿ, ಬಿಡಿಸಿ, solve ಮಾಡಿ ಒಗೆದು, ಡಿಗ್ರಿ ಮ್ಯಾಲೆ ಡಿಗ್ರಿ ತೊಗೊಂಡು ಬಂದೇನಿ. ಇನ್ನು ಕುಂಡಲಿ ಒಳಗ ಹೆಸರು ಇದ್ದರೇನು ಬಿಟ್ಟರೇನು? ಎಲ್ಲಾ ಓಕೆ,'  ಅಂತ ದೊಡ್ಡದಾಗಿ ಮೀಟರ್ ಹೊಡೆದೆ.

'ಏನರೆ ಮಾಡ್ಕೋ! ಒಟ್ಟ ನನ್ನ ಮಕ್ಕಳ ಸಮಸ್ಯಾಕ್ಕ ಒಂದು ಸಮಾಧಾನ ಹೇಳು. ಲಗೂ ಹೇಳೋ!' ಅಂತ ಅಕಿ ಗಡಿಬಿಡಿ ಮಾಡಿದಳು.

'ಸ್ವಲ್ಪ ತಡಿ ಮಾರಾಳ. ಕಂಪ್ಯೂಟರನಾಗಿಂದ ಕುಂಡಲಿ ಭರ್ ಅಂತ ಬಂತು ಅಂತ prediction ಹೇಳಲಿಕ್ಕೆ ಸ್ವಲ್ಪ ಟೈಮ್ ಬೇಕು,' ಅಂತ ಹೇಳಿ ಡೀಟೇಲ್ ಆಗಿ ಅಕಿ ಎರಡೂ ಮಕ್ಕಳ ಕುಂಡಲಿ ನೋಡಿದೆ. ಎರಡರಲ್ಲೂ ಗುರು ಬಲ ಭಾಳ ಮಸ್ತ ಇತ್ತು. ಮತ್ತ ವಯಸ್ಸೂ ಸರಿ ಇತ್ತು.

'ಏ ಇಕಿನ ಒಂದು ಕೆಲಸಾ ಮಾಡು,' ಅಂದೆ.

'ಏನು ಅಂತ ಹೇಳೋ ಮಾರಾಯಾ. ಈ ಮಕ್ಕಳ ಪೀಡಾ ಕಳೆದು ಹೋಗ್ತದ ಅಂದ್ರ ಒಂದಲ್ಲ ಹತ್ತು ಕೆಲಸಾ ಬೇಕಾದರೂ ಮಾಡ್ತೇನಿ. ಹೇಳು. ಲಗೂ ಹೇಳು,' ಅಂತ ಅಕಿ ಬೊಂಬಡಾ ಬಾರಿಸಿದಳು. ಪಾಪ! ಮಕ್ಕಳ ಕಾರಣದಿಂದ ಬಹಳ ತ್ರಾಸಿನಾಗ ಇದ್ದಾಳ ನಮ್ಮ ಪುರಾತನ ಗೆಳತಿ.

ನಾನೂ ಮತ್ತ ನನ್ನ ಡೀಪ್ ಥಿಂಕಿಂಗ್ ಮೋಡಿಗೆ ಹೋದೆ. ನೋಡ್ರೀ ಜ್ಯೋತಿಷ್ಯ ಅನ್ನೋದು ಒಂದು ವೇದಾಂಗ. ವೇದಗಳನ್ನು, ಅದರಲ್ಲಿರುವ ಮಂತ್ರಗಳನ್ನು ಪಠಿಸುವಾಗ ಇರುವ ಶ್ರದ್ಧೆ ಭವಿಷ್ಯ ನುಡಿಬೇಕಾದ್ರ ಸಹ ಇರಬೇಕು. ಗಡಿಬಿಡಿಯೊಳಗ ಏನೋ ಹೇಳಿದ್ರ ಜ್ಯೋತಿಷ್ಯದ ಮೂಲ ಪುರುಷ ಪರಾಶರ ಮೆಚ್ಚೋದಿಲ್ಲ. ಯಾವ ಪರಾಶರ? ಅಂತ ಕೇಳಿದ್ರ, ಬಾಲಿವುಡ್ಡಿನ ದೀಪಕ ಪರಾಶರನೂ ಅಲ್ಲ, ದೊಡ್ಡ ವಕೀಲ ಪರಾಶರನ್ ಕೂಡ ಅಲ್ಲ ಅಂತ ತಿಳಿದುಕೊಳ್ಳಿ. ಎಂತೆಂತಹ ಮಂದಿ ಗಂಟು ಬೀಳ್ತಾರಾಪಾ!?

'ನೋಡು ಒಂದು ಕೆಲಸಾ ಮಾಡು,' ಅಂತ ಮತ್ತೆ ಅಂದೆ. ಮಾತು ನಿಲ್ಲಿಸಿದೆ. ಅಕಿ 'ಲಗೂ ಹೇಳಿ ಸಾಯಿ' ಅನ್ನೋ ಲುಕ್ ಕೊಟ್ಟಳು. ನಾ ಏನೋ ಹೇಳಲಿಕ್ಕೆ ರೆಡಿ ಆಗಿದ್ದೆ. ಆದ್ರ ಕೇವಲ ಅಕಿ ಒಬ್ಬಾಕಿನೇ ಕೇಳಿದರೆ ಏನು ಉಪಯೋಗ? ಅಕಿ ಗಂಡನೂ ಕೇಳಬೇಕು. ಅವರು ಇಬ್ಬರೂ ಕೂಡೇ ನಾವು ಕೊಡುವ ಜ್ಯೋತಿಷ್ಯ ಆಧಾರಿತ ಸಮಾಧಾನವನ್ನು ಜಾರಿಗೆ ತಂದು, ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬೇಕು.

'ಸರ್ರಾ! ಒಂದು ನಿಮಿಷ. ಸ್ವಲ್ಪ ಈ ಕಡೆ ಲಕ್ಷ್ಯ ಕೊಡ್ತೀರಿ ಏನು?' ಅಂತ ಅಕಿ ಗಂಡಗ ಪ್ರಾಂಪ್ಟ್ ಮಾಡಿದೆ. ಆ ಹಾಪ್ ಸೂಳೆಮಗ ಇನ್ನೂ ಅವನ ಹಾವು-ಏಣಿ ಆಟ ಮುಗಿಸವಲ್ಲ. ಇಕಿ ನಮ್ಮ ಗೆಳತಿ ಅಕಿ ಮೊಣಕೈ ತೊಗೊಂಡು ಹೋಗಿ ಅವನ ಪಕ್ಕೆಲಿಬಿನ್ಯಾಗ ಹೆಟ್ಟಿದಳು ನೋಡ್ರೀ. 'ಅವ್ವಾ! ಏನ ನೀನು????' ಅಂತ ನೋವಿನಾಗ ಅನಕೋತ್ತ ಈ ಕಡೆ ಲಕ್ಷ್ಯ ಕೊಟ್ಟ ಅಕಿ ಗಂಡ. ಗಮನ ಕೊಡದ ಗಂಡಂದಿರ ಗಮನ ಹ್ಯಾಂಗೆ ಬರೋಬ್ಬರಿ ಸೆಳೆಯಬೇಕು ಅಂತ ಹೆಂಗಸೂರಿಗೆ ಗೊತ್ತಿರ್ತದ.

'ನೋಡವಾ, ನೋಡ್ರೀ ಸರ್! ಒಂದು ಕೆಲಸಾ ಮಾಡಿ ಬಿಡ್ರೀ! ನಾ ನಿಮ್ಮ ಇಬ್ಬರೂ ಮಕ್ಕಳ ಕುಂಡಲಿ ಡೀಟೇಲ್ ಆಗಿ ನೋಡಿದೆ. ನೋಡಿಯೇ ಇದನ್ನ ಹೇಳಲಿಕತ್ತೇನಿ. ಒಂದು ಕೆಲಸಾ ಮಾಡೇ ಬಿಡ್ರೀ. ಮಾಡ್ತೀರಿ?' ಅಂತ ಮಾತು ನಿಲ್ಲಿಸಿದೆ.

'ಏ! ಬರೇ ಇದ ಆತು. ಲಗೂ ಹೇಳು. ಇಲ್ಲಂದ್ರ ಮತ್ತ ನಮ್ಮನಿಯವರು ಅವರ ಮೊಬೈಲ್ ನ್ಯಾಗ ಹಾವು ಏಣಿ ಆಟ ಶುರು ಮಾಡಿದರು ಅಂದ್ರ ಕಷ್ಟ. ಲಗೂ ಹೇಳೋ. ಏನು ಮಾಡಬೇಕು? ಅಂತ' ಅಂದಳು ಅವಳು.

'ಇಬ್ಬರೂ ಮಕ್ಕಳಿಗೆ ಮುಂಜವಿ (ಉಪನಯನ) ಮಾಡಿ ಬಿಡ್ರೀ! ಎಲ್ಲಾ ಸರಿಯಾಗಿಬಿಡ್ತದ. ಸಂಶಯನೇ ಬ್ಯಾಡ. ಮುಂಜವಿ ಮಾಡಿ ಒಂದು ವರ್ಷದ ನಂತರ ನನಗ ಬಂದು ಹೇಳ್ರೀ. ನಿಮ್ಮ ಸಮಸ್ಯಾ ಪರಿಹಾರ ಆಗ್ಯದೋ ಇಲ್ಲೋ ಅಂತ' ಹಾಗಂತ ಫುಲ್ ವಿಶ್ವಾಸದಿಂದ ಹೇಳಿದೆ. ಅದರಾಗ ಏನದ? ಕುಂಡಲಿ ಒಳಗ ಬರೋಬ್ಬರಿ ಕಾಣಸ್ಲಿಕತ್ತದ. ಗುರು ಬಲ ಅದ. ವಯಸ್ಸೂ ಸರಿ ಅದ. ಮತ್ತೇನು? ಶಾಸ್ತ್ರೋಕ್ತವಾಗಿ ಮುಂಜವಿ ಮಾಡಿ, ಬ್ರಹ್ಮೋಪದೇಶ ಕೊಟ್ಟು, ಮಕ್ಕಳಿಗೆ ದಿನಕ್ಕೆ ಎರಡು ಹೊತ್ತು ಸಂಧ್ಯಾವಂದನೆ ಮಾಡಲಿಕ್ಕೆ ಕೂಡಿಸಿಬಿಟ್ಟರೆ ಎಲ್ಲಾ ಸಮಸ್ಯೆ ಪರಿಹಾರ ಆಗೇಬಿಡ್ತಾವ.

'ಹಾಂ!!!! ಏನಂದೀ????? ಏನಂದೀ?????' ಅಂತ ದೆವ್ವ ನೋಡಿಬಿಟ್ಟಳೋ, ಅಥವಾ ನಾ ಎಲ್ಲರೆ ಇಕಿಗೆ 'ಮಾಟ ಮಾಡಿಸಿರಿ, ಮಂತ್ರ ಮಾಡಿಸಿರಿ, ಪ್ರಾಣಿಬಲಿ ಕೊಡ್ರೀ, ನರಬಲಿ ಕೊಡ್ರೀ' ಅಂತ ಹೇಳಿದೆನೋ ಅನ್ನೋಹಾಂಗ ಸಿಕ್ಕಾಪಟ್ಟೆ ಆಶ್ಚರ್ಯ, ಘಾತ ಆದವರಂಗ ಒದರಿಬಿಟ್ಟಳು. ಅಕಿ ಗಂಡ ಮಾತ್ರ ಏನೋ ಒಂದು ತರಹದಾಗ ತಲಿ ಆಕಡೆ ಈಕಡೆ ಆಡಿಸುತ್ತ, ನನ್ನನ್ನು ಅಪಹಾಸ್ಯ ಮಾಡುವ ರೀತಿಯಲ್ಲಿ ನಗುತ್ತ, ಮತ್ತ ತನ್ನ ಹಾವು ಏಣಿ ಆಟಕ್ಕೆ ಹೋಗಿಬಿಟ್ಟ.

'ಯಾಕ? ಏನಾತು? ನಾ ಹೇಳಿದ್ರಾಗ ಏನರೆ ತಪ್ಪು ಅದ ಏನು?' ಅಂತ ನನಗೇ ಸಂಶಯ ಬಂತು. ಮತ್ತ ಮತ್ತ ಚೆಕ್ ಮಾಡಿದೆ. ಡಬಲ್ ಚೆಕ್ ಮಾಡಿದೆ. ಎಲ್ಲ ಬರೋಬ್ಬರಿ ಅದ. ಇಬ್ಬರೂ ಮಕ್ಕಳ ಮುಂಜವಿಗೆ ಸರಿಯಾದ ಟೈಮ್. ಮುಂಜವಿ ಮಾಡಿಬಿಡ್ರೀ ಅಂದ್ರ ಇಕಿ ಯಾಕ ಇಷ್ಟು ರಾಂಗ್ ಅಗಲಿಕತ್ತಾಳ? ಅಂತ ತಿಳಿಲಿಲ್ಲ ನನಗ. ಹೆಚ್ಚಿನ ವಿವರೆಣೆ ಕೊಡೋಣ ಅಂತ ಮುಂದುವರೆಸಿದೆ.

'ನೋಡು, ನೀವು ವೈಷ್ಣವ ಮಂದಿ. ಅದರಾಗೂ ಆಚಾರ್ ಮಂದಿ. ನೀವು ನಿಮ್ಮ ಮಕ್ಕಳ ತಲಿ ಸ್ವಚ್ಚ ಬೋಳಿಸಿ, ದೊಡ್ಡ ಸೈಜಿನ ಚಂಡಿಕಿ ಇಡಿಸಿಯೇ ಮುಂಜವಿ ಮಾಡಬೇಕು ನೋಡವಾ. ಆಮ್ಯಾಲೆ ಇನ್ನೊಂದು ಮಾತು. ಮುಂಜವಿ ಹುಡುಗುರ ಬೋಳ ತಲಿ ಮ್ಯಾಲೆ ಕೆಂಪ ಬಣ್ಣದಾಗ ಸ್ವಸ್ತಿಕಾ ಬರಿತಾರ ನೋಡು. ಅದನ್ನ ಯಾರರೆ ಖಡಕ್ ಬ್ರಹ್ಮಚಾರಿ ಬರೆದರ ಅದು ಮುಂಜವಿ ವಟುಗಳಿಗೆ ಮುಂದ ಭಾಳ ಛಲೋ ಆಗ್ತದ ಅಂತ ಪ್ರತೀತಿ. ಬೇಕಾದ್ರ ನಿನ್ನ ಮಕ್ಕಳ ಬೋಳ ತಲಿ ಮ್ಯಾಲೆ, ಸ್ವಸ್ತಿಕಾ ಪೇಂಟ್  ಹೊಡಿಲಿಕ್ಕೆ ನಾ ಬರ್ತೇನಿ ನೋಡು. ನನಗ ಮುಂಜವಿ ವಟುಗಳ ಬೋಳ ತಲಿ ಮ್ಯಾಲೆ, ನನ್ನ ವಾಟರ್ ಕಲರ್ ಮಾಡೋ ಬ್ರಶ್ ಒಳಗ ಪೇಂಟ್ ಹೊಡೆಯೋದು ಅಂದ್ರ ಭಾಳ ಸೇರ್ತದ ನೋಡು. ಮತ್ತ ಅದು ಪುಣ್ಯದ ಕೆಲಸ ಬ್ಯಾರೆ. ನಮ್ಮ ನಲವತ್ತೂ ಚಿಲ್ಲರೆ ವರ್ಷಗಳ ಸಾಧನೆ, ಬ್ರಹ್ಮಚರ್ಯದ ಬೆನಿಫಿಟ್ ಎಲ್ಲ ನಿನ್ನ ಮಕ್ಕಳಿಗೂ ಸಿಕ್ಕು, ಲಗೂನೆ ಎಲ್ಲ ಸಮಸ್ಯೆ ಪರಿಹಾರ ಆಗ್ತದ. ಇದರಾಗ ಡೌಟ್ ಬ್ಯಾಡೇ ಬ್ಯಾಡ. ಅಷ್ಟೇ ನೀ ನನಗ ಭಾಳ ಮೊದಲೇ ತಿಳಿಸಬೇಕು. ಇಡೀ ಊರಾಗ ಇರೋ ಆಚಾರಿ ಅಂದ್ರ ಬ್ರಹ್ಮಚಾರಿ ನಾ ಒಬ್ಬನೇ ನೋಡು. ಮುಂಜವಿ ಸೀಸನ್ ಒಳಗ ಭಾಳ ಬ್ಯುಸಿ ಇರ್ತೇನಿ. ದಿನಕ್ಕೆ ಅರ್ಧಾ ಡಜನ್ ಮುಂಜವಿ ವಟುಗಳ ಬೋಳ ತಲಿ ಮ್ಯಾಲೆ ಸ್ವಸ್ತಿಕಾ ಪೇಂಟ್ ಹೊಡೆದು ಬಂದ ದಿನಗಳೂ ಅವ ನೋಡವಾ. ಅಷ್ಟು ಡಿಮ್ಯಾಂಡ್ ಅದ ನನಗ. ಎಲ್ಲೆ ಸಿಗಬೇಕು ಈ ಬೋಕಡ್ ಛಾಪ್ ಮಂದಿಗೆ ನನ್ನಂತಾ ಖಡಕ್ ಬ್ರಹ್ಮಚಾರಿ? ಹಾಂ?' ಅಂತ ಉದ್ದಾಗಿ ಇಟ್ಟುಬಿಟ್ಟೆ.

ಅಕಿ ನನ್ನ ಮಾರಿನೇ ನೋಡ್ಕೋತ್ತ ಕೂತುಬಿಟ್ಟಿದ್ದಳು. ಒಂದು ತರಹ ಸಂಮೋಹಿನಿಗೆ ಒಳಗಾಗಿ ಬಿಟ್ಟಿದ್ದಳು. ಎಲ್ಲರೆ ನನ್ನನ್ನು ಅಷ್ಟು ದಿಟ್ಟಿಸಿ ಪಿಕಿ ಪಿಕಿ ನೋಡಿ ಇಕಿ ಎಲ್ಲೆ hypnotize ಆಗಿಬಿಟ್ಟಳೋ ಅಂತ ಸಂಶಯ ಬಂತು. ಅಕಿ ಮಾರಿ ಮುಂದ ಕೈಯಾಡಿಸಿದೆ. ಆವಾಗ ಎಚ್ಚರಾತು ಅಕಿಗೆ. ಫುಲ್ ಆವಾಜ್ ಹಾಕೇ ಬಿಟ್ಟಳು.

'ಏನಂತ ಪರಿಹಾರ ಹೇಳ್ತಿಯೋ ನಮ್ಮಪ್ಪಾ? ಹುಚ್ಚ ಹುಚ್ಚ ಇದ್ದಿ ನೋಡು. ಏನೋ ದೇಶ ಸುತ್ತಿ, ಕೋಶ ಓದಿ ಮತ್ತ ವಾಪಸ್ ಧಾರವಾಡಕ್ಕೆ ಬಂದು ಕೂತಿ ಅಂತ ಮಾಡಿದರೆ ಮೊದಲಿನ ಹಾಪ್ ಇದ್ದಂಗೇ ಇದ್ದಿ ನೋಡು. ಇನ್ನೂ ಜಾಸ್ತಿ ಹಾಪ್ ಆಗಿ. ಮುಂಜವಿ ಮಾಡಲೇ? ನನ್ನ ಮಕ್ಕಳ ಮುಂಜವಿ ಮಾಡಲೇ? ಹಾಂ?' ಅಂತ ಅಬ್ಬರಿಸಿದಳು.

'ಯಾಕ!? ನಿನ್ನ ಮಕ್ಕಳ ಮುಂಜವಿ ಮಾಡಿಬಿಟ್ಟೀರಿ ಏನು? ಆಗಿಬಿಟ್ಟದ? ಮುಂಜವಿ ಆಗಿದ್ದರೆ ನನ್ನ ಕಡೆ ಇಬ್ಬರನ್ನೂ ದಿನಾ ಕಳಿಸಿಬಿಡು. ಅದು ಅವರಿಗೆ ಗಾಯತ್ರಿ ಮಂತ್ರದ ಉಪದೇಶ ಬರೋಬ್ಬರಿ ಆಗಿಲ್ಲ ಅಂತ ಅನ್ನಸ್ತದ. ನಾ ಎಲ್ಲಾ ಮಂತ್ರ ಬರೋಬ್ಬರಿ ಹೇಳಿಕೊಟ್ಟು, ಅವರ ಯಂತ್ರ ಏನರೆ ಬರ್ಬಾದ ಆಗಿದ್ದರೆ ಅದನ್ನೂ ಸರಿ ಮಾಡಿಸಿ ಕಳಿಸಿಬಿಡ್ತೇನಿ. ಒಮ್ಮೆ ಮೂಗು ಹಿಡಕೊಂಡು, ನೂರಾ ಎಂಟು ಗಾಯತ್ರಿ ಮಂತ್ರ ಶುರುಮಾಡಿಕೊಂಡರು ನಿನ್ನ ಮಕ್ಕಳು ಅಂದ್ರ ನಿನ್ನ ಪ್ರಾಬ್ಲಮ್ ಎಲ್ಲಾ ಪರಿಹಾರ ಆಗೇ ಬಿಟ್ಟವು ಅಂತ ತಿಳ್ಕೋ ನೀ. ಸಂಶಯವೇ ಬ್ಯಾಡ,' ಅಂತ ಹೇಳಿದೆ.

'ಅಯ್ಯೋ!!! ಏನಾಗ್ಯದೋ ನಿನಗ???? ನಾ ಹೇಳೋದನ್ನ ಮೊದಲು ಕೇಳು. ಆತುರಗೇಡಿ. ಏಳ್ರಾಗ ಹುಟ್ಟಿದವರಾಂಗ ಮಾಡಬೇಡ,' ಅಂದು ಥಾಂಬ ಥಾಂಬ ಅಂದಳು.

'ಏನು? ಹೇಳು. ನಾ ಗಪ್ಪ ಕೂತು ಕೇಳತೇನಿ. ಹೇಳು' ಅಂದೆ.

'ನನಗ ಎರಡೂ ಹೆಣ್ಣಮಕ್ಕಳು. ಹುಡುಗಿಯರು. ಒಬ್ಬಾಕಿಗೆ ಹದಿನಾಲ್ಕು. ಸಣ್ಣಾಕಿಗೆ ಹದಿಮೂರು. ಅವರದ್ದೇ ಸಮಸ್ಯಾ ಆಗ್ಯದ. ಅದನ್ನ ಹೇಳಿ, ನಿನ್ನ ಕಡೆ ಏನರೆ ಪರಿಹಾರ ಕೇಳಿ ಹೋಗೋಣ ಅಂದ್ರ ಅವರ ಮುಂಜವಿ ಮಾಡು ಅಂತಿಯಲ್ಲ ಮಾರಾಯಾ??? ಏನು ಹೇಳೋಣ?' ಅಂತ ಅಕಿ ಹಣಿ ಹಣಿ ಘಟ್ಟಿಸಿಕೊಂಡಳು.

ಹ್ಯಾಂ? ಇದೆಂಗ ಹೀಂಗಾತು? ಗಜಬ್ ಹೋಯಿ ಗವಾ! ಅಕಟಕಟಾ!!!!!

'ಮೊದಲೇ ಹೇಳಬೇಕೋ ಬ್ಯಾಡೋ???? ನಿನ್ನುವು ಎರಡೂ ಹೆಣ್ಣು ಅಂತ. ಮೊದಲು ಹೇಳದೇ ಈಗ ಬೈತಿಯಲ್ಲಾ??? ಹಾಂ?' ಅಂತ ನಾನೇ ರಿವರ್ಸ್ ಬಾರಿಸಿಬಿಟ್ಟೆ. ಅದೇನೋ ಅಂತಾರಲ್ಲ. Offense is the best defense. ಹಾಂಗ.

'ಹೇಳಲಿಕ್ಕೆ ಎಲ್ಲಿ ಕೊಟ್ಟಿ ನೀನು? ನನಗ ಮಾತಾಡಲಿಕ್ಕೆ ಬಿಟ್ಟರಲ್ಲಾ? ಹಾಂ? ಕುಂಡಲಿ ಹಾಕೋವಾಗ ಮಕ್ಕಳ ಹೆಸರು ಹೇಳತೇನಿ ಅಂದೆ. ನೀ ಏನಂದೀ? ಅದೇನೋ ದೊಡ್ಡ ಶೇಕ್ಸಪಿಯರ್ ಹೇಳಿದ ಅಂತ What's in a name ಅಂತ ಡೌಲು ಬಡಕೋತ್ತ, ಅದೇನೋ x, y ಅಂತ ಹೆಸರು ಇಟ್ಟಗೊಂಡು ಕುಂಡಲಿ ಮಾಡಿ ಇಲ್ಲದ್ದು ಸಲ್ಲದ್ದನ್ನ ಹೇಳಿಬಿಟ್ಟಿ. ಹುಚ್ಚ! ದೊಡ್ಡ ಹುಚ್ಚ! ನೀನು ದೊಡ್ಡ ಹಾಪ್ ಇದ್ದಿ ಅಂತ ಗೊತ್ತಿದ್ದರೂ ನಿನ್ನ ಕಡೆ ನನ್ನ ಸಮಸ್ಯಾಕ್ಕ ಪರಿಹಾರ ಕೇಳಲಿಕ್ಕೆ ಬಂದಾಕಿ ನಾನು. ನನಗೇ ಬುದ್ಧಿ ಇಲ್ಲ ನೋಡು,' ಅಂತ ಹೇಳಿದ ಅಕಿ ಮತ್ತೆ ಮತ್ತೆ ಹಣಿ ಹಣಿ ತಟ್ಟಿಕೊಂಡಳು. ಅಕಿ ಗಂಡ ಮಿಸಿ ಕೆಳಗ ನಕ್ಕೋತ್ತ ತನ್ನ ಹಾವು ಏಣಿ ಆಟ ಮುಂದುವರೆಸಿದ್ದ. ಹಾಪ್ ಸೂಳೆಮಗ.

'ನಿನ್ನ ಎರಡೂ ಮಕ್ಕಳು ಹೆಣ್ಣು ಆದರೇನು? ನಿನ್ನ ಸಮಸ್ಯೆಗೆ ಪರಿಹಾರ ಮಾತ್ರ ಮುಂಜವಿನೇ ನೋಡವಾ. ಮುಂಜವಿ ಮಾಡೋದು ಬಿಟ್ಟು ಬ್ಯಾರೆ ಪರಿಹಾರ ಇಲ್ಲ,' ಅಂತ ಹೇಳೇಬಿಟ್ಟೆ. ಇಕಿ ಮುಂದ ನಾ ತಪ್ಪು ಮಾಡಿದೆ ಅಂತ ಹ್ಯಾಂಗ ಒಪ್ಪಿಕೊಳ್ಳಲಿ?

'ಅಯ್ಯೋ! ಹೆಣ್ಣು ಹುಡುಗಿಯರಿಗೆ ಯಾರರ ಮುಂಜವಿ ಮಾಡ್ತಾರೇನು? ನಿಂದು ತಲಿ ಪೂರ್ತಿ ಕೆಟ್ಟದ ಏನು? ಹಾಂ?' ಅಂತ ಆವಾಜ್ ಹಾಕಿದಳು.

'ಮುಂಜವಿ ಮಾಡಬೇಕು. ಆದರೆ ನಿನ್ನ ಹೆಣ್ಣುಮಕ್ಕಳಿಗೆ ಅಲ್ಲ!' ಅಂತ ಒಂದು ಬಾಂಬ್ ಒಗೆದೆ.

'ಮತ್ತ ಯಾರಿಗೆ ಮುಂಜವಿ ಮಾಡಬೇಕು? ನಿನಗೇ ಇನ್ನೊಂದು ಸಲ ಮುಂಜವಿ ಮಾಡಬೇಕೇನು? ಯಾರಿಗೆ ಗೊತ್ತು? ನಿಂದು ಮುಂಜವಿ ಆಗ್ಯದೋ ಇಲ್ಲೋ ದೇವರಿಗೇ ಗೊತ್ತು. ಆಗಿಲ್ಲ ಅಂತ ಕಾಣಸ್ತದ. ಅದಕ್ಕೇ ಹುಚ್ಚುಚ್ಚರೆ ಏನೇನೋ ಅಂತಿ' ಅಂದು ಬಿಟ್ಟಳು.

'ಮುಂಜವಿ ಮಾಡಬೇಕು. ನಿನ್ನ ಹೆಣ್ಣುಮಕ್ಕಳಿಗೆ ಅಲ್ಲ. ಹೆಣ್ಣುಮಕ್ಕಳಿಗೆ ಮುಂಜವಿ ಮಾಡಲಿಕ್ಕೆ ನಮ್ಮ ಶಾಸ್ತ್ರದಾಗ ಅವಕಾಶ ಇಲ್ಲ. ಆದ್ರ ನೀನು ಒಂದು ನಾಲ್ಕು ಯೋಗ್ಯ ಬ್ರಾಹ್ಮಣ ವಟುಗಳ ಮುಂಜವಿ sponsor ಮಾಡಿ, ಎಲ್ಲಾ ಖರ್ಚೂ ವಹಿಸಿಕೊಂಡು, ನನ್ನ ಕಡೆನೇ ಅವರ ಬೋಳು ತಲಿ ಮ್ಯಾಲೆ ಸ್ವಸ್ತಿಕಾ ಪೇಂಟ್ ಮಾಡಿಸಿಬಿಟ್ಟಿ ಅಂದ್ರ ನಿನ್ನ ಮಕ್ಕಳ ಪ್ರಾಬ್ಲಮ್ ಎಲ್ಲ ಪರಿಹಾರ ಆಗಿಬಿಡ್ತದ. ಇದು ಶಂಬರ್ ಟಕಾ ಖರೆ! ಸೋಲಾ ಆಣೆ ಖರೆ!' ಅಂತ ಹೇಳಿಬಿಟ್ಟೆ.

'ಅದೆಂಗ ನನ್ನ ಸಮಸ್ಯೆ ಪರಿಹಾರ ಆಗ್ತದ? ಯಾರ್ಯಾರದ್ದೋ ಮುಂಜವಿ ನಾ ಖರ್ಚು ಕೊಟ್ಟು ಮಾಡಿಸಲಿಕ್ಕೆ ನನಗ ತಲಿ ಕೆಟ್ಟದ ಏನು? ಮುಂಜವಿಗೆ ಏನು ಕಮ್ಮಿ ಖರ್ಚು ಬರ್ತದ ಏನು? ನನ್ನ ಇಬ್ಬರು ಹೆಣ್ಣುಮಕ್ಕಳ ಲಗ್ನದ ಖರ್ಚಿಗಾಗಿ ರೊಕ್ಕಾ ಕೂಡಿಸಿ ಇಡಲಿಕ್ಕೇ ನನಗ ಭಾಳ ತೊಂದ್ರಿಯದ. ಅಂತಾದ್ರಾಗ ಯಾರ್ಯಾರದ್ದೋ ಮುಂಜವಿ ಮಾಡಿಸಿದರೆ ನನ್ನ ಹೆಣ್ಣುಮಕ್ಕಳ ಸಮಸ್ಯೆ ಪರಿಹಾರ ಆಗ್ತದ ಅಂತ ಏನೇನೋ ಹೇಳ್ತಿಯಲ್ಲಾ? ಹಾಂ?' ಅಂತ ಬೈದಳು.

'ನೋಡು ಅದು ಹೀಂಗ ವರ್ಕ್ ಔಟ್ ಆಗ್ತದ. ನಿನಗ ಇಬ್ಬರು ಹೆಣ್ಣುಮಕ್ಕಳು. ಭಾಳ ತ್ರಾಸು ಕೊಡ್ತಾರ. ಜೀವಾ ತಿಂತಾರ. ಆದ್ರ ಅವರಿಗೆ ಮುಂಜವಿ ಮಾಡಿಸಿ, ಮೂಗು ಹಿಡಿಸಿ, ಸಂಧ್ಯಾವಂದನೆಗೆ ಕೂಡಿಸಲಿಕ್ಕೆ ಆಗೋದಿಲ್ಲ. ಹೆಚ್ಚಂದ್ರ ಕಡಿಗ್ಯಾಗ ಆದಾಗ ಮನಿ ಹೊರಗ ಕೂಡಿಸಬಹುದು ಅಷ್ಟೇ. ಅದಕ್ಕೇ ಬ್ಯಾರೆ ವಟುಗಳಿಗೆ ಮುಂಜವಿ ಮಾಡಿಬಿಡೋದು. ಆದ್ರ ಅವರಿಗೆ ಮೊದಲೇ ಹೇಳಿಬಿಡೋದು, 'ನೋಡ್ರೀಪಾ, ನಿಮ್ಮ ನೂರಾ ಎಂಟು ಗಾಯತ್ರಿ ಮಂತ್ರದಾಗ ಐವತ್ತು ಪರ್ಸೆಂಟ್ ನಮ್ಮ ಹುಡುಗಿಯರ ಲೆಕ್ಕಕ್ಕೆ ನೋಡ್ರೀ' ಅಂತ. ನಾಕು ಮಂದಿ ವಟುಗಳು ಶೇಕಡಾ ಐವತ್ತು ಕೊಟ್ಟರು ಅಂದ್ರ ಎರಡು ಫುಲ್ ಆತು. ಆತೋ ಇಲ್ಲೋ? ಅದು ನಿನ್ನ ಎರಡು ಹೆಣ್ಣುಮಕ್ಕಳ ಖಾತಾದಾಗ ಜಮಾ ಆಗ್ತದ. ಅದರ ಫಲ ನಿನಗ ಸಿಗ್ತದ. ನಿನ್ನ ಹೆಣ್ಣುಮಕ್ಕಳು ಮಾರಮ್ಮ, ಕಾಳಮ್ಮನ ಅವತಾರ ಬಿಟ್ಟು ಒಳ್ಳೆ ಲಕ್ಷ್ಮಿ, ಸರಸ್ವತಿಯಂತಹ ಸಾತ್ವಿಕ ದೇವಿಯರಾಗಿ ಬದಲಾಗಿಬಿಡ್ತಾರ. ಒಟ್ಟಿನಾಗ ಮುಂಜವಿ ಮಾಡೋದೇ ಒಂದು ಪರಿಹಾರ ನೋಡವಾ. ಅದನ್ನ ಬಿಟ್ಟು ನಿನ್ನ ಮಕ್ಕಳ ಸಮಸ್ಯೆಗೆ ಬ್ಯಾರೆ ಪರಿಹಾರ ಇಲ್ಲವೇ ಇಲ್ಲ' ಅಂತ ದೊಡ್ಡ ಓಳು ಬಿಟ್ಟೆ.

'ಹಾಂಗಂತೀ?????' ಅಂತ ದೊಡ್ಡದಾಗಿ ಓಂ ಅಂತ ಬಾಯಿ ತೆಗೆದಳು.

'ಹೌದು! ಅದೇ ಒಂದು ದಾರಿ. ನೀನು ಒಂದು ಕೆಲಸ ಮಾಡು. ನಾಕು ಒಳ್ಳೆ, ಯೋಗ್ಯ ಬ್ರಾಹ್ಮಣ ವಟುಗಳನ್ನ ಹುಡುಕು. ಅದೂ ನಿಮ್ಮ ಹಾಂಗೇ ವೈಷ್ಣವ ಆಚಾರ್ ಇರಬೇಕು ಆ ವಟುಗಳು. ನೀ ಮತ್ತೆಲ್ಲೆರ ಪಟ್ಟೆಗಾರ ಮಂದಿ, ಚಮಗಾರ್ ಮಂದಿ ಒಳಗ ವಟು ಹುಡಿಕಿಕೊಂಡು ಬಂದು ಗಿಂದಿ ಎಲ್ಲರೆ. ವೈಷ್ಣವ ಬ್ರಾಹ್ಮಣರೇ ಬೇಕು. ಸ್ಮಾರ್ತರೂ ಸಹ ನಡೆಯೋದಿಲ್ಲ. ತಿಳೀತಾ? ನಂತರ ನನಗ ಒಂದು ಮಾತು ತಿಳಿಸು. ಮುಂಜವಿಗೆ ಮುಹೂರ್ತ ನೋಡೇಬಿಡೋಣ. ನಾನೇ ನಿಂತು ಮಾಡಿಸಿಬಿಡ್ತೇನಿ ಆ ನಾಲ್ಕು ಬಡ ವಟುಗಳ ಮುಂಜವಿ. ಖರ್ಚು ಮಾತ್ರ ನಿಂದು ನೋಡವಾ. ನೀ ರೊಕ್ಕಾ ಒಂದು ತಯಾರ್ ಇಟ್ಟುಕೊಂಡುಬಿಡು. ಒಂದು ಕೆಲಸ ಮಾಡು. ರೊಕ್ಕಾ ನನ್ನ ಕೈಯಾಗ ಕೊಟ್ಟುಬಿಡು. ಒಂದು ಮುಂಜವಿಗೆ ಕಮ್ಮಿ ಕಮ್ಮಿ ಅಂದರೂ ಒಂದೂವರಿ ಲಕ್ಷ ರೂಪಾಯಿ ಬೇಕು ನೋಡವಾ. ನಿನಗ ಅಂತ ಡಿಸ್ಕೌಂಟ್. ಕೇವಲ ಒಂದು ಲಕ್ಷ. ನಾಕು ವಟುಗಳ ಮುಂಜವಿಗೆ ನಾಲ್ಕು ಲಕ್ಷ ರೂಪಾಯಿ ನನ್ನ ಕೈಯಾಗ ಕೊಟ್ಟುಬಿಡು. ನಾನು ಎಲ್ಲ ಅವರ ಮುಂಜವಿ, ಅದರ ಜೊತೆಗಿನ ಗಾಯತ್ರಿ ಮಂತ್ರದ ಫಿಫ್ಟಿ ಪರ್ಸೆಂಟ್ ಡೀಲ್ ಎಲ್ಲಾ ಮುಗಿಸಿಕೊಡ್ತೇನಿ. ಇನ್ನೂ ಒಂದು ಮಾತು. ವಟುಗಳ ಹುಡುಕೋ ಕೆಲಸ ನಿನ್ನ ಕಡೆ ಆಗೋದಿಲ್ಲ. ಅದನ್ನೂ ನಾನೇ ಮಾಡಿಕೊಡ್ತೇನಿ. ನನ್ನ ಸಮಾಜಸೇವೆ ಅಂದ್ಕೋ. ನೀನು ಲಗೂನೆ ನಾಲ್ಕು ಲಕ್ಷಕ್ಕೆ ವ್ಯವಸ್ಥೆ ಒಂದು ಮಾಡಿಬಿಡು ಮಾರಾಳ. ಬಾಕಿ ಎಲ್ಲ ನಾನು ನೋಡಿಕೋತ್ತೇನಿ,' ಅಂತ ಹೇಳಿಬಿಟ್ಟೆ.

ಇಕಿ ನಾಲ್ಕು ಲಕ್ಷ ರೂಪಾಯಿ ತಂದು ನನ್ನ ಕೈಯಾಗ ಇಟ್ಟಳು ಅಂದ್ರ, ಅಲ್ಲೆ ಮಾಳಮಡ್ಡಿ ವನವಾಸಿ ರಾಮದೇವರ ಗುಡಿಯಾಗ ಆಗುವ ಉಚಿತ ಸಾಮೂಹಿಕ ಉಪನಯನದಾಗ ನಾಲ್ಕು ಮಂದಿ ವಟುಗಳನ್ನ ಹಿಡಿದು, ಅವರ ಕೈಯಾಗ ತಲಾ ಒಂದೊಂದು ನೂರು ರೂಪಾಯಿ ಕೊಟ್ಟು, 'ಹೋಗಿ ಮಜಾ ಮಾಡ್ರೋ ನಿಮ್ಮಾಪ್ರಾ. ನಿಮ್ಮ ಸಂಧ್ಯಾವಂದನೆ ಒಳಗ ನಮ್ಮ ಇಬ್ಬರು ಹುಡುಗಿಯರಿಗೆ ಫಿಫ್ಟಿ ಪರ್ಸೆಂಟ್ ಕೊಟ್ಟು ಬಿಡ್ರೋ' ಅಂತ ಡೀಲ್ ಕುದರಿಸಿಬಿಡತೇನಿ. ಉಳಿದ ರೊಕ್ಕಾ? ಗೆಳತಿ ರೊಕ್ಕಾ ನಮ್ಮ ಜಾತ್ರಿ. ಯಾರದ್ದೋ ರೊಕ್ಕಾ ಯಲ್ಲಮ್ಮನ ಜಾತ್ರಿ ಇದ್ದಂಗೆ. ಮೊದಲೇ ನಮ್ಮ ಕಡೆ ರೊಕ್ಕಿಲ್ಲ. ಕೆಲಸ? ಜೀವನದಲ್ಲೇ ಮಾಡಿಲ್ಲ. ಯಾರಿಗದ, ಯಾರಿಗಿಲ್ಲ ಈ ಭ್ಯಾಗ್ಯ? ಹೀಗೆಲ್ಲ ವಿಚಾರ ಮಾಡುತ್ತ, ಮನಸ್ಸಿನ್ಯಾಗೇ ಮಂಡಗಿ ತಿನಕೋತ್ತ ಕೂತಿದ್ದೆ. ಅದೂ ಹಾಲು, ತುಪ್ಪದ ಜೋಡಿ.ಮನಸ್ಸಿನ್ಯಾಗ ತಿನ್ನೋದು ಅಂದ ಮ್ಯಾಲೆ ಜಿಪುಣತನ ಯಾಕೆ? ಹೌದಿಲ್ಲೋ?

'ಸರಿ! ಎಲ್ಲ ವಿಚಾರ ಮಾಡಿ ತಿಳಸ್ತೇನಿ. ಇನ್ನೂ ನಾಕು ಮಂದಿ ಕಡೆ ಕೇಳಿ ಏನು ಅಂತ ಒಂದು ಡಿಸಿಷನ್ ತೊಗೋತ್ತೇನಿ ನೋಡಪಾ' ಅಂತ ಅಂದಾಕಿನೇ ತನ್ನ ಗಂಡನ್ನ ಎಬ್ಬಿಸಿಕೊಂಡು ಹೋಗಿಬಿಟ್ಟಳು.

ಅಕಿ ನಾಲ್ಕು ಲಕ್ಷ ರೂಪಾಯಿ ತಂದು ನನ್ನ ಕೈಯಾಗ ಇಡ್ತಾಳೋ? ಇಲ್ಲೋ?

ಗೊತ್ತಿಲ್ಲ. ಕಾಲವೇ ಎಲ್ಲ ಹೇಳಲಿದೆ.

ನಿಮ್ಮ ಬೀಗರು LTTE ಪೈಕಿಯಂತ ಸುದ್ದಿ. ಹೌದೇನ್ರೀ????


೧೯೯೧ ರ ಮಾತು. ಅದೂ ೧೯೯೧, ಮೇ ತಿಂಗಳಲ್ಲಿ ಆದ ರಾಜೀವ್ ಗಾಂಧಿ ಹತ್ಯೆ ನಂತರದ ಮಾತು. ಎಲ್ಲ ಕಡೆ ಅದೇ ಸುದ್ದಿ. LTTE ತಮಿಳ ಉಗ್ರರು ರಾಜೀವ್ ಗಾಂಧಿ ಹತ್ಯೆ ಮಾಡಿದರು ಅಂತ. ಎಲ್ಲ ಕಡೆ, ಎಲ್ಲ ಪೊಲೀಸರೂ ಅವರನ್ನೇ ಹುಡುಕುತ್ತಿದ್ದರು. ಎಲ್ಲಿ ತನಕ ಅಂದರೆ ತಮಿಳರು ಅಂದ್ರೆ LTTE, LTTE  ಅಂದರೆ ತಮಿಳು ಅನ್ನುವ ಹಾಗೆ ಆಗಿಬಿಟ್ಟಿತ್ತು. ನಮ್ಮ ಧಾರವಾಡದಲ್ಲೋ ಇದ್ದಿದ್ದು, ಆ ಕಾಲದಲ್ಲಿ, ಹೆಚ್ಚೆಂದರೆ ಒಂದು ಮೂರು ನಾಲ್ಕು ತಮಿಳ ಕುಟುಂಬಗಳು. ಹೆಸರಿಗೆ ಮಾತ್ರ ತಮಿಳರು ಅಷ್ಟೇ. ಅದೆಷ್ಟೋ ವರ್ಷಗಳಿಂದ ಧಾರವಾಡದಲ್ಲಿ ಸೆಟಲ್ ಆಗಿ, ಶುದ್ಧ ಧಾರವಾಡಿಗಳೇ ಆಗಿಹೋಗಿದ್ದರು. ಬೆಂಗಳೂರು ಕೊಂಗರ ಬಿಂಕ, ಬಿಗುಮಾನ, ಭಾಷಾ ದುರಭಿಮಾನ, superiority complex ಇತ್ಯಾದಿ ಕೇಳಲೇ ಬೇಡಿ. ಅಷ್ಟು ಒಳ್ಳೆ ಕೊಂಗರು ಆ ಕಾಲದ ನಮ್ಮ ಧಾರವಾಡದ ತಮಿಳರು. ಆದರೇನು ಮಾಡೋಣ? ರಾಜೀವ್ ಗಾಂಧಿ ಕೊಂದವರು LTTE. ಅವರು ತಮಿಳರು. ಅದೂ ನಾಪತ್ತೆಯಾಗಿದ್ದಾರೆ. ದೇಶದ ಯಾವ ಮೂಲೆಯಲ್ಲಿ, ಯಾವ ತಮಿಳರು ಅವರಿಗೆ ಆಶ್ರಯ ಕೊಟ್ಟಿದ್ದಾರೋ ಏನೋ. ಹಾಗಂತ ಹೇಳಿ ಎಲ್ಲ ಕಡೆ ತಮಿಳು ಜನರ ಮೇಲೆ ಪೋಲೀಸರ ಕಣ್ಣು. ನಮ್ಮ ಧಾರವಾಡ ಪೊಲೀಸರು ಸಹ ಇದ್ದ ಬಿದ್ದ ನಾಲ್ಕಾರು ತಮಿಳು ಕುಟುಂಬಗಳ ಮೇಲೆ ಕಣ್ಣಿಟ್ಟಿದ್ದರು ಅಂತ ಸುದ್ದಿ ಅಂತೂ ಇತ್ತು. ಎಷ್ಟು ನಿಜವೋ, ಎಷ್ಟು ಗಾಳಿ ಸುದ್ದಿಯೋ ಗೊತ್ತಿಲ್ಲ. ನಮ್ಮ ಪಾಲಿಗಂತೂ ಅದು ದೊಡ್ಡ ಜೋಕ್. ಯಾಕೆಂದರೆ ಯಾರ್ಯಾರ ಮೇಲೆ ಕಣ್ಣಿಟ್ಟಿದ್ದರು ಅಂತ ಹೇಳುತ್ತಿದ್ದರೋ ಅವರೆಲ್ಲ ನಮಗೆ ಒಳ್ಳೆ ಪರಿಚಯ ಇದ್ದವರೇ. ಕೆಲವರು ದೊಡ್ಡ ದೊಡ್ಡ ನಾಮದ ಅಯ್ಯಂಗಾರರು. ಉಳಿದವರು ಮೈತುಂಬ ಭಸ್ಮ ಬಳಿದುಕೊಳ್ಳುವ ಅಯ್ಯರುಗಳು. ಯಾರೂ LTTE ಟೈಪಿನ ಜನ ಅಲ್ಲವೇ ಅಲ್ಲ. ಒಟ್ಟಿನಲ್ಲಿ ದೇಶದ ಎಲ್ಲ ಕಡೆ ತಮಿಳರ ಬಗ್ಗೆ ತಪ್ಪು ತಿಳುವಳಿಕೆ ಇದ್ದಂತೆ ನಮ್ಮ ಊರಲ್ಲೂ ಸಹ. ಅದೂ ಮತ್ತೆ ಮಾಹಿತಿಗೆ ತುಂಬ ಅಭಾವವಿದ್ದ ಕಾಲ. ಧಾರವಾಡ ತಮಿಳರೂ ಸಹ LTTE ನೇ, ಎಲ್ಲ ತಮಿಳರೂ LTTE ನೇ ಅನ್ನುವ ನಂಬಿಕೆ ಬಲವಾಗಿ ಬೇರೂರಿಬಿಟ್ಟಿತ್ತು.

ಇದೇ ಸಮಯದಲ್ಲಿ ಧಾರವಾಡದಲ್ಲಿ ನಮ್ಮ ಅಕ್ಕನಂತಹ ಹುಡುಗಿ ಒಬ್ಬಾಕೆ ತಮಿಳ ಹುಡುಗನನ್ನು ಲವ್ ಮಾಡಿ, ಮನೆಗೆ ಕರೆದುಕೊಂಡು ಬಂದು ಬಿಡಬೇಕೇ????? ಆಕೆಯೋ ಭಯಂಕರ ಪ್ರತಿಭಾವಂತೆ. ರಾಂಕ್ ಹೋಲ್ಡರ್. ಮತ್ತೆ ಸುಂದರಿ ಕೂಡ. ಎಲ್ಲೆಲ್ಲೋ ದೊಡ್ಡ ದೊಡ್ಡ ಕಾಲೇಜ್, ಯೂನಿವರ್ಸಿಟಿಯಲ್ಲಿ ಓದಿ, ದೊಡ್ಡ ದೊಡ್ಡ ಕೆಲಸ ಹಿಡಿದು, ಎಲ್ಲೋ ಪರದೇಶದಲ್ಲಿ ನೌಕರಿ ಚಾಕರಿ ಮಾಡಿಕೊಂಡಿದ್ದಳು. ಅಲ್ಲೇ ಯಾರೋ ತಮಿಳ ಮನ್ಮಥ ಸಿಕ್ಕುಬಿಟ್ಟಿದ್ದ. ಲವ್ ಮಾಡೇಬಿಟ್ಟಿದ್ದಳು. ಲವ್ ಮಾಡೋದೇನು ಬಂತು? ಲವ್ ಅನ್ನೋದು ಅದೇನೋ ಅದಾಗೇ ಆಗಿಹೋಗುತ್ತದೆಯಂತೆ. ಹಾಗಂತ ಮಾಡಿದವರ ಅಂಬೋಣ. ಇರಲಿ. ಈ ಪುಣ್ಯಾತ್ಗಿತ್ತಿಯೂ ಲವ್ ಮಾಡಿ, ಆ ತಮಿಳನನ್ನೇ ಮದುವೆಯಾಗುವದಾಗಿ ಹೇಳೇಬಿಟ್ಟಳು. ಮನೆಯವರೂ ಸಹ ದೊಡ್ಡ ಮನಸ್ಸಿನವರೇ. ಅವರೂ ದೇಶ ವಿದೇಶ ಎಲ್ಲ ನೋಡಿ ಬಂದವರೇ. ಅದರೂ ಜಾತಿ, ಪಾತಿ, ಸಂಸ್ಕೃತಿ ಎಲ್ಲ ಇರುತ್ತದೆ ನೋಡಿ. ಹೋಗಲಿ ನಮ್ಮ ಕನ್ನಡದವರೇ ಅಂದರೆ ಮಾತು ಬೇರೆ. ಹೇಗೋ ಮ್ಯಾನೇಜ್ ಮಾಡಬಹುದು. ಹೋಗಿ ಹೋಗಿ ಎಲ್ಲಿಯದೋ ಮೂಲೆಯ ತಮಿಳನನ್ನು ಅಳಿಯ ಅಂತ ಮನೆ ಮಂದಿ ಒಪ್ಪಿಕೊಂಡರೂ ರಿಶ್ತೇದಾರ ಮಂದಿಗೆ, ಸಂಬಂಧಿಕರಿಗೆ convince ಮಾಡುವದು ಹೇಗೆ? ಅದೇ ದೊಡ್ಡ ಚಿಂತೆ. ಆದರೂ ಮಗಳ ಸುಖ ಸಂತೋಷವೇ ಮುಖ್ಯ. ಮಾಡಬಾರದ ಕೆಲಸ ಏನೂ ಮಾಡಿಲ್ಲ. 'ಪ್ಯಾರ್ ಗೆ ಆಗಿ ಬುಟ್ಟೈತೆ. ಓ! ನಮ್ದೂಕೆ ಕೊಂಗನ್ನ ಜೋಡಿ ಪ್ಯಾರ್ ಗೆ ಆಗಿ ಬುಟ್ಟೈತೆ. ರೊಟ್ಟಿ, ಎಣಗಾಯಿ ಪಲ್ಯಾ ಸೇರ್ತಾ ಇಲ್ಲ ನಮ್ಮದೂಕೆ. ಅನ್ನ ಸಾಂಬಾರ್ ಸೇರ್ತಾ ಐತೆ ನಮ್ದೂಕೆ. ಜಲ್ದೀ ಶಾದಿ ಮಾಡ್ಕೋಬೇಕಾಗೈತೆ. ಹಾಯ್! ಹಾಯ್! ಪ್ಯಾರ್ ಗೆ ಆಗಿ ಬುಟ್ಟೈತೆ' ಅಂತ ಒಂದೇ ವಾರಾತ ಮಗಳದ್ದು. ಸರಿ ಅಂತ ಎಲ್ಲ ಒಪ್ಪಿದರು. ಕೊಂಗನಂತೂ ಎಲ್ಲ ಒಪ್ಪಿಸಿಕೊಂಡೇ ಬಂದಿದ್ದ ಅಂತ ಕಾಣುತ್ತದೆ. ಎಲ್ಲ ನಿಶ್ಚಯವಾಗಿ, ಆಮಂತ್ರಣ ಪತ್ರಿಕೆ ಪ್ರಿಂಟ್ ಆಗಿ ಬಂತು. ಹಾಗೆಯೇ ಒಂದು ಸುದ್ದಿ ಸಹಿತ ಹಬ್ಬಿಬಿಟ್ಟಿತು. ಅದೇನು ಸಾಮಾನ್ಯ ಸುದ್ದಿಯೇ? ಖತರ್ನಾಕ್ ಸುದ್ದಿ - ಅವರ ಬೀಗರು LTTE ಪೈಕಿಯಂತೆ!

ಶಿವ ಶಿವಾ! ಅದ್ಯಾರು ಅವರ ಬೀಗರಿಗೂ ಮತ್ತೆ LTTE ಮಂದಿಗೂ ಲಿಂಕ್ ಮಾಡಿಬಿಟ್ಟರೋ ಗೊತ್ತಿಲ್ಲ. ವಾತಾವರಣವೇ ಹಾಗಿತ್ತು ನೋಡಿ. ಯಾರೋ ಹೋಗಿ ಹಬ್ಬಿಸುವ ಜರೂರತ್ತೇ ಬರಲಿಲ್ಲ. 'ಅವರ ಬೀಗರು LTTE ಪೈಕಿಯಂತೆ' ಅನ್ನುವ ಸುದ್ದಿ ಮಾತ್ರ ಬರೋಬ್ಬರಿ ಹಬ್ಬಿಬಿಟ್ಟಿತು. ಮತ್ತೆ ನಾವು ಧಾರವಾಡ ಮಂದಿ. ಶುದ್ಧ ಜವಾರಿ. ಭಿಡೆ ಗಿಡೆ ಇಲ್ಲವೇ ಇಲ್ಲ. ಏಕ್ ಮಾರ್ ದೋ ತುಕಡಾ ತರಹದ ಭಾಷೆ. ಧಪ್ಪ ಇದ್ದವರಿಗೆ 'ಢಬ್ಬ ಸೂಳಿಮಗನೇ! ಯಾಪರಿ ಉಬ್ಬಿಯಲ್ಲಲೇ!?', ತೆಳ್ಳಗೆ ಇದ್ದವರಿಗೆ ಯಾವದೇ ಮುಲಾಜಿಲ್ಲದೆ ಕೊಳಕ, ಕೊಳಕಿ ಅಂದುಬಿಡೋದು. privacy ಗೌರವಿಸುವದು, political correctness ಎಲ್ಲ ಗೊತ್ತೇ ಇಲ್ಲ. ಇದ್ದದ್ದನ್ನು ಇದ್ದ ಹಾಗೆ ಹೇಳಿಬಿಡೋದು. ಆಮ್ಯಾಲೆ ಬೇಕಾದ್ರೆ sorry ಕೇಳಿ ಕೇಳಿ ಅವರು ಓಕೆ ಅನ್ನುವ ತನಕ ಕಾಡೋದು. ಅದೆಲ್ಲ ನಮ್ಮ ಧಾರವಾಡದ 'ಆತ್ಮೀಯ' ಸಂಸ್ಕೃತಿ. ಎಲ್ಲ ಕಡೆ ಹಾಗೆಯೇ ಬಿಡಿ.

'ಅವರ ಬೀಗರು LTTE ಪೈಕಿಯಂತೆ!'  ಅನ್ನುವ ಸುದ್ದಿ ಎಲ್ಲಿಯ ತನಕ ಹಬ್ಬಿತು ಅಂದ್ರೆ ಅವರು ಹೋದಲ್ಲಿ ಬಂದಲ್ಲಿ, ನಿಂದ್ರಿಸಿ, ಕುಂದ್ರಿಸಿ ಮಂದಿ ಅವರನ್ನು ಕೇಳುತ್ತಿದ್ದುದು ಒಂದೇ ಪ್ರಶ್ನೆ - ನಿಮ್ಮ ಬೀಗರು LTTE ಪೈಕಿಯಂತ ಸುದ್ದಿ. ಹೌದೇನ್ರೀ???? 'ಅಲ್ಲ. ಅಲ್ಲ. ಅವರು ತಮಿಳು ಮಂದಿ ಹೌದು. ಆದ್ರ LTTE ಪೈಕಿಯಲ್ಲ' ಅಂತ ಇವರು ಹೇಳಿದರೆ ನಂಬಲು ಮಾತ್ರ ಯಾರೂ ತಯಾರಿಲ್ಲ. follow up ಅನ್ನುವಂತೆ, ಮತ್ತೆ ಪ್ರಲಾಪ - 'ಮೊನ್ನೆ ರಾಜೀವ್ ಗಾಂಧಿಗೆ ಹೆಟ್ಟಿ ಹೋದವರು ಅವರೇ LTTE ನೋಡ್ರೀ. ಅದಕ್ಕೇ ಕೇಳಿದೆ, ಎಲ್ಲಿ ನಿಮ್ಮ ಬೀಗರೂ ಸಹ LTTE ಪೈಕಿಯೇನೋ ಅಂತ. ಅಲ್ಲ ಅಂದ್ರ ಭಾಳ ಬೇಷ್ ಆತ ಬಿಡ್ರೀ.'

ಲಗ್ನ ಪತ್ರಿಕೆ ಕೊಡಲು ಹೋದಾಗಲೂ ಅದೇ ಪ್ರಶ್ನೆ, ಮುಂದೆ ಮದುವೆ ಎಲ್ಲೋ ಕೊಂಗರ ನಾಡಿನಲ್ಲಿ ಆಗಿ, ಮುಂದೆ ಧಾರವಾಡದಲ್ಲಿ reception ಒಳಗೂ ಅದೇ ಪ್ರಶ್ನೆ. ಸಾಕಾಗಿ ಹೋಯಿತು ಅವರಿಗೆ. ಇತ್ತೀಚಿಗೆ ನಿಧನರಾಗುವ ತನಕ ಇನ್ನೂ ಇದೇ ಪ್ರಶ್ನೆಗೆ ಉತ್ತರ ಕೊಡುತ್ತ ತಲೆ ಕೆಟ್ಟು ಹಾಪಾಗಿ ಹೋಗಿದ್ದರು ನಮ್ಮ ಆಪ್ತರು. ಮತ್ತೆ ಈಗ ಒಂದು ಐದಾರು ವರ್ಷದ ಹಿಂದೆ LTTE ನಿರ್ನಾಮ ಮಾಡಿದ್ದು ದೊಡ್ಡ ಸುದ್ದಿಯಾಯಿತು ನೋಡಿ. ಆವಾಗ ಹಳೆ ಸುದ್ದಿ ಮತ್ತೆ ನೆನಪಾಗಿ, ಪಾಪದ ವೃದ್ಧ ದಂಪತಿಗೆ ಮತ್ತೆ ಅದೇ ಪ್ರಶ್ನೆ - ನಿಮ್ಮ ಬೀಗರು LTTE ಪೈಕಿಯಂತ ಸುದ್ದಿ. ಹೌದೇನ್ರೀ????

ಇಷ್ಟೆಲ್ಲ ಬರೆದರೂ ಅಕ್ಕನಂತಹ ಹುಡುಗಿಯ ಪರಿಚಯ ನನಗೆ ಇಲ್ಲ. ನೋಡಿಯೂ ಇಲ್ಲ. ರಾಂಕ್ ಬಂದಾಗ ಪತ್ರಿಕೆಯಲ್ಲಿ ನೋಡಿ ಸಂತೋಷಪಟ್ಟು, ಆಕೆಯ ಸಾಧನೆಗಳಿಂದ inspire ಆಗಿದ್ದು ಮಾತ್ರ ಸೋಲಾ ಆಣಾ ಖರೆ. ಅವರೆಲ್ಲ ಆರಾಮ ಇರಲಿ.

Friday, March 27, 2015

ರಾಮ ನವಮಿ

ರಾಮ ನವಮಿ ಶುಭಾಶಯಗಳು.

'ಪಾನಕ', 'ಕೋಸಂಬರಿ' ಎಲ್ಲ ಬರೋಬ್ಬರಿ ತೊಗೊಂಡುಬಿಡ್ರೀ! ;) ಸಮಾರಾಧನೆ ಚೊಲೋ ಆಗ್ಲಿ. ಸಂದಿಯೊಳಗ ಸಮಾರಾಧ್ನಿ ಅಲ್ಲ ಮತ್ತ!

ಅಯ್ಯೋ! ಮಾವಿನಕಾಯಿ ಪಾನಕ, ಹೆಸರುಬ್ಯಾಳಿ ಕೋಸಂಬರಿ ಅಂದೆ ಅಷ್ಟೇ. ನೀವು ರಾಮ ನವಮಿ ಮಸ್ತ ವೀಕೆಂಡ್ ಬಂದದ ಅಂತ ಬೇರೇನೇ ತರಹದ 'ಪಾನಕ', ಬೇರೇನೇ ತರಹದ 'ಕೋಸಂಬರಿ' ಅಂತ ತಿಳ್ಕೊಂಡು ಆಹಾ! ಊಹೂ! ಅಂತ ಯಾಕ ಅಷ್ಟು ಸಂತೋಷದಿಂದ ಮುಲುಗುತ್ತಿದ್ದಿರೋ ಏನೋ! ;)

ಒಂದಿಷ್ಟು ಬರೋಬ್ಬರಿ ಪಾನಕ, ಕೋಸಂಬರಿ ಸೇವನೆ ಆದ ಮ್ಯಾಲೆ ಕೆಳಗಿನ ಶ್ಲೋಕ ೧೦೮ ಬಾರಿ ಹೇಳಿ, ಬೇಕಾದ್ರ ಡ್ಯಾನ್ಸ್ ಸಹ ಮಾಡಿಬಿಟ್ಟರೆ ರಾಮ ನವಮಿ ಸಮಾಪ್ತ.

ರಾಮ್ ರಾಮ್ ಸಬ್ ಕರೇ
ದಶರಥ ಕರೇ ನ ಕೋಯಿ
ರಾಮ್ ರಾಮ್ ಸಬ್ ಕರೇ
ದಶರಥ ಕರೇ ನ ಕೋಯಿ
ಜೋ ದಶರಥ ಕಸರತ್ ನ ಕರೇ ತೋ ರಾಮ ಕಹಾನ್ ಸೇ ಹೋಯಿ!

ಇಲ್ಲೆ ದಶರಥ್ ಕಸರತ್ ಮಾಡಿದ ಅಂದ್ರ ಭಾಳ ಕಷ್ಟ ಪಟ್ಟು ಪುತ್ರ ಕಾಮೇಷ್ಟಿ ಯಾಗ ಮಾಡಿ ರಾಮನನ್ನು ಪಡಕೊಂಡ ಅಂತ ಅರ್ಥ. ಅಪಾರ್ಥ ಬೇಡ! ;)

Thursday, March 26, 2015

ಗೋಲು, ಓಳು, ಗೋಳು


ವರ್ಷದ ಆರಂಭದಲ್ಲೊಮ್ಮೆ ಓಳು ಬಿಟ್ಟು, 'ಗೋಲು ಸೆಟ್ ಮಾಡಿ. ಗೋಲು ಸೆಟ್ ಮಾಡಿ' ಅಂತ ಗೋಳು ಹೊಯ್ಕೊಳ್ಳುತ್ತಾರೆ. (Goal setting)

ಗೋಲು ಸೆಟ್ ಮಾಡಿ, ಅವನ್ನೆಲ್ಲ meet, exceed ಮಾಡಿದರೂ, ನಂತರ ಓಳು ಬಿಟ್ಟು, ಮಾಲು (ಮತ್ಲಬ್ ರೊಕ್ಕಾ, ರೋಕಡಾ) ಕೊಡದೇ ಗೋಲುಮಾಲ್ ಮಾಡೋದೇ ಕಾರ್ಪೊರೇಟ್ performance management ಫಂಡಾ!

ಅದರಲ್ಲೂ SMART (ಸ್ಮಾರ್ತ) ಗೋಲುಗಳಂತೆ. Specific, Measurable, Attainable, Realistic, Time-bound ಇರಬೇಕಂತೆ ಸೆಟ್ ಮಾಡೋ ಗೋಲುಗಳು.

ಏನು ಸ್ಮಾರ್ತ ಗೋಲೋ? ಏನು ಮಾಧ್ವರ ಗೋಲೋ? ಏನು ಅಯ್ಯಂಗಾರರ ಗೋಲೋ? ಗೋಳೋ ಗೋಳು. ಒಟ್ಟಿನಲ್ಲಿ ಒಂದಿಷ್ಟು ಗೀಚಿ, ಬಾಸ್ ಅದಕ್ಕೆ ಅವನ ಮುದ್ರೆ, ಭಸ್ಮ, ನಾಮ ಹಾಕಿ ಇಟ್ಟ ಅಂದರೆ ಅದನ್ನ ಮತ್ತೆ ನೋಡೋದು ಮುಂದಿನ ವರ್ಷವೇ. performance appraisal ಟೈಮ್ ನಲ್ಲಿ.

ನಿಮ್ಮಲ್ಲೂ ಇದೇ ಗೋಲಾ? ಇದೇ ಗೋಳಾ?

Saturday, March 14, 2015

ಮಾಲು ಸಕತ್ತಾಗೈತೆ! ರಾತ್ರಿಗೆ ನನ್ನ ಬಳಿ ಕಳಿಸಿಬಿಡು...ಡಾನ್ ಅಬು ಸಲೇಂ ಕಥನ



ಆ ಒಂದು ಮಾತು ಕೇಳಿದ ಮುಂಬೈನ ಪುರಾತನ ಅಂಡರ್ವರ್ಲ್ಡ್ ಡಾನ್ ಅಬು ಸಲೇಂ ದಂಗಾಗಿ ಹೋದ. ಅಪ್ರತಿಭನಾದ.

'ಮಾಲು ಸಕತ್ತಾಗೈತೆ! ರಾತ್ರಿಗೆ ನನ್ನ ಬಳಿ ಕಳಿಸಿಬಿಡು,' ಅಂತ ಅಬು ಸಲೇಂಗೆ ಆಜ್ಞೆ ತರಹ ಹುಕುಂ ಮಾಡಿದವನೇ 'ಅವನು' ಹಿಂತಿರುಗಿ ಸಹ ನೋಡದೇ ಹೋಗಿಬಿಟ್ಟ.

ಅದೊಂದು ಮಾತು ಮಾತ್ರ 'ಅವನು' ಹೇಳಲೇಬಾರದಾಗಿತ್ತು. ಆದ್ರೆ ಹೇಳಿಬಿಟ್ಟ.

ಹೀಗೆ 'ರಾತ್ರಿಗೆ ಮಾಲು ಕಳಿಸು' ಅಂತ ಹೇಳಿ ಹೋದ 'ಅವನು' ಯಾರೋ ಅಬ್ಬೇಪಾರಿಯಲ್ಲ. ಡಾನ್ ಅನೀಸ್ ಇಬ್ರಾಹಿಂ. ಬಿಗ್ ಡಿ ಅಂದ್ರೆ ದಾವೂದ್ ಇಬ್ರಾಹಿಮ್ಮನ ಖಾಸ ತಮ್ಮ. ಡಿ ಕಂಪನಿಗೆ ದಾವೂದ್ CEO ಆದರೆ ಈ ಅನೀಸ್ COO ಇದ್ದಂತೆ.

ಸುಮಾರು ೧೯೯೮-೯೯ ರ ಮಾತಿರಬಹುದು. ಅಬು ಸಲೇಂ ದುಬೈನಲ್ಲಿದ್ದ. ದಾವೂದ್, ಅನೀಸ್ ಮತ್ತಿತರ ಡಿ ಕಂಪನಿ ಮಂದಿ ಕರಾಚಿಯಿಂದಲೇ ಜಾಸ್ತಿ ಆಪರೇಟ್ ಮಾಡುತ್ತಿದ್ದರು. ಆದರೇನು ಮಾಡುವದು? ಮೋಜು, ಮಸ್ತಿ ಮಾಡಬೇಕು ಅಂದಾಗೆಲ್ಲ ದುಬೈಗೆ ಬಂದು ಹೋಗುತ್ತಿದ್ದರು. ಪಾಕಿಸ್ತಾನದ ಕರಾಚಿಯಿಂದ ಅರಬ್ ಕೊಲ್ಲಿ ಶಹರಗಳಾದ ದುಬೈ, ಬಹರೇನ್, ಅಬು ದಾಭಿ, ಶಾರ್ಜಾ, ದೋಹಾ, ಜೆಡ್ಡಾ ಎಲ್ಲ ಎಷ್ಟು ದೂರ? ಬೆಳಿಗ್ಗೆ ಕರಾಚಿ ಬಿಟ್ಟರೆ ಎಲ್ಲ ಸುತ್ತಾಡಿ, ಎಲ್ಲ ಕಡೆ ತಮ್ಮ ದಂಧೆಯ ವಿವರ ವಿಚಾರಿಸ್ಕೊಂಡು, ಸಂಜೆ ಬಂದು ಕರಾಚಿ ಮನೆ ಮುಟ್ಟಿಕೊಳ್ಳುತ್ತಿದ್ದ COO ಅನೀಸ್ ಇಬ್ರಾಹಿಮ್.

ಅಬು ಸಲೇಂ ಹೇಳಿ ಕೇಳಿ ಅನೀಸ್ ಇಬ್ರಾಹಿಮ್ಮನ ಖಾಸ ಬಂಟ. ೧೯೯೩ ರಲ್ಲಿ ಮುಂಬೈ ಸ್ಪೋಟಗಳ ನಂತರ, ಇನ್ನೂ ಮುಂಬೈನಲ್ಲೇ ಇದ್ದರೆ, ಅಬು ಸಲೇಂನನ್ನು ಪೊಲೀಸರು ಹಿಡಿದು, ಬಾರಿಸಿ, ಮಟ್ಟ ಹಾಕುತ್ತಾರೆ ಅನ್ನುವದು ಖಾತ್ರಿಯಾದ ನಂತರ, ಅನೀಸ್ ಇಬ್ರಾಹಿಂನೇ ಖುದ್ದಾಗಿ ನೇಪಾಳದ ಮೂಲಕ ಅಬು ಸಲೇಂನನ್ನು ದುಬೈಗೆ ಹಾರಿಸಿಕೊಂಡಿದ್ದ.

ಡಿ 'ಕಂಪನಿ' ಅಂತ ಸುಮ್ಮನೆ ಹೇಳುವದಿಲ್ಲ ನೋಡಿ. ಅದಕ್ಕೊಂದು ಬರೋಬ್ಬರಿ ಕಾರ್ಪೊರೇಟ್ ಗಾಂಭೀರ್ಯ ತಂದು ಕೊಟ್ಟ ಕೀರ್ತಿ ಬಿಗ್ ಡಿ ದಾವೂದನಿಗೇ ಸೇರಬೇಕು. ತಾನು CEO. ತಮ್ಮ ಅನೀಸ್ COO. ಛೋಟಾ ಶಕೀಲನಿಗೆ ಮುಂಬೈ ವ್ಯವಹಾರ. ಕ್ರಿಕೆಟ್ ಬೆಟ್ಟಿಂಗ್, ಬೆಂಗಳೂರು, ಮಂಗಳೂರು ಇತ್ಯಾದಿ ನೋಡಿಕೊಳ್ಳುವ ಜವಾಬ್ದಾರಿ ಶರದ್ ಅಣ್ಣಾ ಶೆಟ್ಟಿಗೆ, ಇನ್ನು ಬಾಲಿವುಡ್ಡಿನ ಸಂಪೂರ್ಣ ಉಸ್ತುವಾರಿ ಅಬು ಸಲೇಂನ ಸುಪರ್ದಿಯಲ್ಲಿ. ಹೀಗೆ ಬರೋಬ್ಬರಿ ಆರ್ಗನೈಜೇಷನ್ ಮಾಡಿಹಾಕಿದ್ದ ಡಾನ್ ದಾವೂದ್. ಎಲ್ಲಿ MBA ಓದಿ ಬಂದಿದ್ದನೋ?!

ಅಂಡರ್ವರ್ಲ್ಡ್ ಡಾನ್ ಗಳಿಗೆ ಮತ್ತೆ ಬಾಲಿವುಡ್ಡಿನ ನಟಿಯರಿಗೆ ಅದೇನು ಸಂಬಂಧವೋ. ಬೇರೆ ಬೇರೆ ಕಾರಣಗಳಿಗೆ ಡಾನ್ ಗಳಿಗೆ ಹತ್ತಿರವಾದ ಅನೇಕ ತಾರೆಯರಿದ್ದರು. ಡಾನ್ ಗಳ ಮೂಲಕ ಬಾಲಿವುಡ್ಡಿನ ಯಶಸ್ಸಿನ ಏಣಿ ಹತ್ತಲು ಹಾತೊರೆಯುತ್ತಿದ್ದವರು. ಡಾನ್ ಗಳೂ ಸಹಿತ ಬರೋಬ್ಬರಿ 'ಏನೆಲ್ಲಾ' ವಸೂಲಿ ಮಾಡಬೇಕೋ ಅದನ್ನೆಲ್ಲ ಬರೋಬ್ಬರಿ ವಸೂಲಿ ಮಾಡಿಯೇ, ತಾರೆಯರಿಗೆ ಏನು ಬೇಕೋ ಅದನ್ನು ಮಾಡಿಕೊಡುತ್ತಿದ್ದರು. ಒಬ್ಬಳಿಗೆ ಯಾರೋ ನಿರ್ಮಾಪಕ ತೊಂದರೆ ಕೊಟ್ಟರೆ, ಇನ್ನೊಬ್ಬಳ ಕಾರ್ಯದರ್ಶಿ ರೊಕ್ಕ ಗುಳುಂ ಮಾಡಿರುತ್ತಿದ್ದ. ಮತ್ತೊಬ್ಬಳಿಗೆ ಹೀರೋ ಯಾರೋ ತೊಂದ್ರೆ ಕೊಡುತ್ತಿದ್ದ. ಇನ್ನೊಬ್ಬಳಿಗೆ ದಕ್ಷಿಣದ ಯಾರೋ ನಿರ್ಮಾಪಕನಿಂದ ಎಷ್ಟೋ ದುಡ್ಡು ಅಡ್ವಾನ್ಸ್ ಅಂತ ಪಡೆದು ಈಗ ಆತನ ಸಿನೆಮಾಗೆ ಕೈಯೆತ್ತಿದ್ದರೂ ಅಡ್ವಾನ್ಸ್ ರೊಕ್ಕ ವಾಪಸ್ ಕೊಡುವ ಮನಸ್ಸಿಲ್ಲ. ಮತ್ತೊಬ್ಬಳಿಗೆ ಒಬ್ಬ ಸ್ಟಾರ್ ನಿರ್ದೇಶಕನ ಬ್ಯಾನರ್ ಅಡಿ ಕೆಲಸ ಬೇಕು. ಹೀಗೆ ತರೇವಾರಿ ಗೋಳು ಹೇಳಿಕೊಂಡು ಬಂದು, ಡಾನ್ ಗಳ ಚಿತ್ರ ವಿಚಿತ್ರವಾದ ಪಾಶಗಳಲ್ಲಿ ಬಿದ್ದು (ಸುಖದಿಂದ) ನರಳುತ್ತಿತ್ತು ಬಾಲಿವುಡ್ ನಟಿಮಣಿಯರ ದಂಡು. ಡಾನ್ ಗಳಿಗೂ ಸಹ ಅದೇ ಬೇಕು. ಒಂದು ಸಲ ಫೋನ್ ಮಾಡಿ ಅಬ್ಬರಿಸಿದರೆ ಕೆಲಸವಾಗುತ್ತದೆ. ಅಷ್ಟು ಮಾತ್ರಕ್ಕೆ ಈ ಕಡೆ ಬಾಲಿವುಡ್ ಪರಮ ಸುಂದರಿ ದೂಸರಾ ಮಾತಾಡದೇ ಮಂಚ ಹತ್ತಿ ಲಂಚ ಕೊಡುತ್ತಾಳೆ. ಯಾರಿಗಿದೆ ಯಾರಿಗಿಲ್ಲ ಈ ಭಾಗ್ಯ? ಈ ಮಂಚ, ಲಂಚ ಭಾಗ್ಯದ ಸ್ಕೀಮಿನಡಿಯಲ್ಲಿ ದುಬೈನಲ್ಲಿ, ಕರಾಚಿಯಲ್ಲಿ, ಸೌದಿಯ ಜೆಡ್ಡಾ, ರಿಯಾದಿನಲ್ಲಿ 'ಮೈ ದಾನ' (ಅರ್ಥಾತ್ ಮಾಂಸ ದಂಧೆ) ಮಾಡಿ ಬಂದ ದೊಡ್ಡ ದೊಡ್ಡ ನಟಿಯರ ಪಟ್ಟಿ ನೋಡಿಬಿಟ್ಟರೆ ಬೆಚ್ಚಿ ಬೀಳಬೇಕು.

ಪೂರ್ತಿ ಬಾಲಿವುಡ್ ಅಬು ಸಲೇಂನ ಕೈಯಲ್ಲಿತ್ತು ನೋಡಿ. ಅದಕ್ಕೇ ನಟಿಮಣಿಯರೆಲ್ಲ ಅವನ ಮೂಲಕವೇ ಇತರೆ ಡಾನ್ ಗಳಿಗೆ ಆಹುತಿಯಾಗುತ್ತಿದ್ದರು. ಬೇರೆ ಬೇರೆ ಡಾನ್ ಗಳ ಖಯಾಲಿ ನೋಡಿ, ಬರೋಬ್ಬರಿ ಅವರ ಟೇಸ್ಟ್ ಗೆ ಹೊಂದುವಂತಹ ಹಕ್ಕಿಗಳನ್ನು ಕರೆಯಿಸಿ, ಮಂಚ ಹತ್ತಿಸುವದರಲ್ಲಿ ಅಬು ಸಲೇಂ ಸಿಕ್ಕಾಪಟ್ಟೆ ಫೇಮಸ್. ಅತ್ತ ಕರಾಚಿಯಿಂದ 'ಸಲೇಂ ಮಿಯ್ಯಾ, ಬದನ್ ದುಖ್ ರಹಾ ಹೈ. ಖುಚ್ ಮಾಲಿಶ್ ಕಾ ಇನ್ತೆಜಾಂ ಕರೋ' ಅಂತ ದಾವೂದನೋ, ಅನೀಸನೋ ಮೈಮುರಿದರು, ಮುಲುಗಿದರು ಅಂದ್ರೆ ಅದು ಅಬು ಸಲೇಂಗೆ ಆಜ್ಞೆ ಇದ್ದಂತೆ. ಮರುಕ್ಷಣವೇ ಮುಂಬೈಗೆ ಫೋನ್ ಹಚ್ಚಿ ಬಾಲಿವುಡ್ಡಿನ ತನ್ನ ಖಾಸ್ ಅಮೃತಾಂಜನಿ ತಲೆಹಿಡುಕ ಜನರ ಹತ್ತಿರ ಮಾತಾಡುತ್ತಿದ್ದ. ಮೈಮುರಿದು, ಆಕಳಿಸಿದ್ದ ಡಾನ್ ಗಳ ಆವತ್ತಿನ, ಆಹೊತ್ತಿನ ಜರೂರತ್ತಿಗೆ ತಕ್ಕ ಸುಂದರಿಯರು ಕೆಲವೇ ಘಂಟೆಗಳಲ್ಲಿ ಮುಂಬೈನಿಂದ ದುಬೈ ವಿಮಾನ ಹತ್ತುತ್ತಿದ್ದರು. ಒಮ್ಮೊಮ್ಮೆ ಕರಾಚಿ ಡಾನ್ ಗಳೇ ದುಬೈಗೆ ಬರುತ್ತಿದ್ದರು. ಎಷ್ಟೋ ಸಲ ಈ ಸುಂದರಿಯರೇ ಕರಾಚಿಗೆ ಹೋಗಿ ಬಿಡುತ್ತಿದ್ದರು. ದುಬೈ ಏರ್ಪೋರ್ಟ್ ನಲ್ಲಿ ಒಬ್ಬ ಬಂದು ಅವರ ಪಾಸ್ಪೋರ್ಟ್ ಸಂಗ್ರಹಿಸಿಕೊಂಡು ಹೋಗಿ ಬಿಡುತ್ತಿದ್ದ. ಕರಾಚಿಗೆ ಕನೆಕ್ಷನ್ ಫ್ಲೈಟ್ ಹಿಡಿದು ಹೋದರೆ ಪಾಸ್ಪೋರ್ಟ್, ವೀಸಾ ಯಾವದೇ ಜರೂರತ್ತಿಲ್ಲದೆ ಅವರನ್ನು ಹೊರಗಿಂದಲೇ ಕರೆದುಕೊಂಡು ಹೋಗಿ ಸೀದಾ ಡಾನ್ ತೆಕ್ಕೆಗೇ ತಳ್ಳುವ ವ್ಯವಸ್ಥೆ ಇತ್ತು. ಬಿಗ್ ಡಿ ದಾವೂದ್ ಇಬ್ರಾಹಿಂ ಅಂದ್ರೆ ಸಾಮಾನ್ಯನೇ? ಡಾನ್ ನನ್ನು ಬರೋಬ್ಬರಿ ಖುಷ್ ಮಾಡಿ, ಆತ ಕೊಟ್ಟ ಬಿಂಗಲಾಟಿ ಗಿಫ್ಟು, ರೊಕ್ಕ, ಬಾಲಿವುಡ್ ಕೆರಿಯರ್ ಬಗ್ಗೆ ಕೊಟ್ಟ ಏನೇನೋ ಆಶ್ವಾಸನೆಗಳು ಎಲ್ಲ ಕಲೆಕ್ಟ್ ಮಾಡಿಕೊಂಡು, ವಾಪಸ್ ಮತ್ತೆ ದುಬೈ ಮೂಲಕ ಭಾರತಕ್ಕೆ. ದುಬೈ ಏರ್ಪೋರ್ಟ್ ನಲ್ಲಿ ಮತ್ತೆ ಅದೇ ಆದ್ಮಿ ಸಿಗುತ್ತಿದ್ದ. ದುಬೈ ಏರ್ಪೋರ್ಟ್ ಸ್ಟ್ಯಾಂಪ್ ಹಾಕಿಕೊಟ್ಟಿದ್ದ ಪಾಸ್ಪೋರ್ಟ್ ಕೊಡುತ್ತಿದ್ದ. ದುಬೈಗೆ ಹೋಗಿ ಬಂದೆ ಅಂತ ಭೋಂಗು ಬಿಡಲಿಕ್ಕೆ ಬೇಕಲ್ಲ?

(ಅನೇಕ ನಟ ನಟಿಯರು, ಉದ್ಯಮಿಗಳು, ಇದೇ ರೀತಿಯಲ್ಲಿ, ಯಾವದೇ ದಾಖಲೆ ಇಲ್ಲದೆ ಕರಾಚಿಗೆ ಹೋಗಿ, ದಾವೂದನನ್ನು ಭೆಟ್ಟಿಯಾಗಿದ್ದು ಜಾಗತಿಕ ಬೇಹುಗಾರಿಕೆ ಸಂಸ್ಥೆಗಳಿಗೆ (CIA, Mossad, R&AW, MI6, IB) ಬರೋಬ್ಬರಿ ಗೊತ್ತಿದೆ. ಇದರ ಬಗ್ಗೆ ಭಾಳ ಹಿಂದೆ Outlook ಪತ್ರಿಕೆಯಲ್ಲಿ ಒಂದು ವರದಿಯೂ ಬಂದಿತ್ತು. ಹುಡುಕಿ ಓದಿ.)

ಆವತ್ತು ಅನೀಸ್ ಇಬ್ರಾಹಿಮ್ ಯಾಕೋ ದುಬೈಗೆ ಬಂದಿದ್ದ. ಅಬು ಸಲೇಂನ ಜೊತೆಗೆ ಒಂದು ಸುಂದರ 'ಹಕ್ಕಿ' ಇರುವದನ್ನು ಕಂಡ. ಆಕೆ ಯಾರು ಅಂತ ಅನೀಸನಿಗೆ ಗೊತ್ತಾಯಿತೇ? ಅದು ಗೊತ್ತಿಲ್ಲ. ಆದರೆ ಆಕೆ ಮೇಲೆ ಮನಸ್ಸು ಮಾತ್ರ ಬಂದುಬಿಡ್ತು. ಆ ರಾತ್ರಿಗೆ ಆಕೆ ಬೇಕೇ ಬೇಕು ಅನ್ನಿಸಿಬಿಡ್ತು. ಬೇಕು ಅಂದ ಮೇಲೆ ಬೇಕೇ ಬೇಕು. ರಾತ್ರಿಗೆ ಕೋಟಿಗಟ್ಟಲೆ ರೊಕ್ಕ ಕೊಟ್ಟು ಸುಖ ಅನುಭವಿಸಿದ ಮಹನೀಯರು ಅವರೆಲ್ಲ. ಹೇಳಿ ಕೇಳಿ ಹಡಬೆ ರೊಕ್ಕ. ಅದಕ್ಕೇ ಮುಲಾಜಿಲ್ಲದೆ ಹೇಳೇ ಬಿಟ್ಟ ಅನೀಸ್, 'ಮಾಲು ಸಕತ್ತಾಗೈತೆ. ರಾತ್ರಿಗೆ ನನ್ನ ಬಳಿ ಕಳಿಸಿಬಿಡು' ಅಂತ.

ಅಂದು ಅಬು ಸಲೇಂ ಜೊತೆ ಇದ್ದಾಕೆ ನಟಿ ಮೋನಿಕಾ ಬೇಡಿ! ಅವಳ ಮೇಲೆಯೇ ಬಿದ್ದಿತ್ತು ಡಾನ್ ಅನೀಸ್ ಇಬ್ರಾಹಿಂನ ಹದ್ದಿನ ಕಣ್ಣು.

ಮೋನಿಕಾ ಬೇಡಿ. ಮೂಲತ ಪಂಜಾಬಿ ಮೂಲದ ಸಿಖ್ ಯುವತಿ. ತಂದೆ ಡಾಕ್ಟರ್. ರೊಕ್ಕ ಮಾಡುವ ತಲಬು ಬಂತು. ಪಂಜಾಬ್ ಬಿಟ್ಟು, ಕುಟುಂಬದೊಂದಿಗೆ ಸೀದಾ ನಾರ್ವೆ ದೇಶಕ್ಕೆ  ಹೋಗಿ, ಟಿಂಬರ್ ಬಿಸಿನೆಸ್ ಮಾಡಿ ಸಿಕ್ಕಾಪಟ್ಟೆ ಶ್ರೀಮಂತರಾಗಿಬಿಟ್ಟರು. ಅವರ ಮಗಳೇ ಈ ಮೋನಿಕಾ ಬೇಡಿ. ಒಳ್ಳೆ ರೀತಿಯಲ್ಲಿ ಓದಿಕೊಂಡಿದ್ದ ಈಕೆಗೆ ಬಾಲಿವುಡ್ಡಿನ ಹುಚ್ಚು ಹತ್ತಿಬಿಟ್ಟಿತು. ಮನೆ ಮಂದಿ ಎಷ್ಟೇ ಬೇಡ ಅಂದರೂ ಒಂದು ದಿವಸ ಸುಮಾರು ೧೯೯೫ ರ ಹೊತ್ತಿಗೆ ಪೆಟ್ಟಿಗೆ ಕಟ್ಟಿಕೊಂಡು ಮುಂಬೈಗೆ ಬಂದು ಇಳಿದೇ ಬಿಟ್ಟಳು.

ಯಾವದೇ ಸ್ಟಾರ್ ಹಿನ್ನೆಲೆ ಇಲ್ಲದೆ ಬಾಲಿವುಡ್ಡಿನಲ್ಲಿ ಅವಕಾಶ ಸಿಗಲು ಅದೇನು ಹಲ್ವಾನೇ? ಮತ್ತೆ ಈ ಮೋನಿಕಾ ಏನೂ ಸುರ ಸುಂದರಿಯೂ ಅಲ್ಲ. ಸಿಕ್ಕಾಪಟ್ಟೆ ಒಳ್ಳೆ ನಟಿಯೂ ಅಲ್ಲ. ಯವ್ವನ ಇತ್ತು. ಪಂಜಾಬಿಯಾಗಿದ್ದಕ್ಕೆ ಸ್ವಲ್ಪ ಜಾಸ್ತಿಯೇ buxom babe ತರಹ ಇದ್ದಳು.

ಬಾಲಿವುಡ್ಡಿನಲ್ಲಿ ಅವಕಾಶ ಹುಡುಕಿಕೊಂಡು ಚಪ್ಪಲಿ ಸವೆಸಿದವಳಿಗೆ ಸಿಕ್ಕವ ಮುಕೇಶ ದುಗ್ಗಲ್ ಎನ್ನುವ ತಲೆಮಾಸಿದ ಒಬ್ಬ ನಿರ್ಮಾಪಕ. ಹೀಗೆ ಅವಕಾಶ ಹುಡುಕಿಕೊಂಡು ಬರುವವರನ್ನು ಪಟಾಯಿಸಿ, ಅವರಿಂದ ಬಿಟ್ಟಿ ಕೆಲಸ, ಕಾಸು ಇತ್ಯಾದಿ ಕಿತ್ತಿ, ಸಾಧ್ಯವಾದರೆ ಏನೋ ಒಂದು ಅವಕಾಶ ಕೊಟ್ಟು, ಮಾಫಿಯಾ ಮಂದಿಯ ರೊಕ್ಕ ಹಾಕಿ, ತಗಡು ಬಿ, ಸಿ ಕ್ಲಾಸಿನ ಸಿನೆಮಾ ಮಾಡಿ ರೊಕ್ಕ ಮಾಡಿಕೊಳ್ಳುತ್ತಿದ್ದ ಪಿರ್ಕಿ ಆ ದುಗ್ಗಲ್. ಅಂತಹ ಮುಕೇಶ ದುಗ್ಗಲನ ಕೈಗೆ ಸಿಕ್ಕಿಬಿದ್ದಳು ಮೋನಿಕಾ. ಅದೇನೇನು ಕರಾರು ಪತ್ರಗಳ ಮೇಲೆ ಸಹಿ ಹಾಕಿಸ್ಕೊಂಡನೋ ಗೊತ್ತಿಲ್ಲ. ನಂತರ ಈಕೆಗೆ ಆ ಕರಾರು ಪತ್ರ ಹಿಡಿದುಕೊಂಡು ತುಂಬ ಕಾಡತೊಡಗಿದ. ಈಕೆಯನ್ನು ಹಾಕಿಕೊಂಡು ಒಂದೋ ಎರಡೋ ಮೂವಿಯೇನೋ ಮಾಡಿದ. ಎಲ್ಲ ತೋಪು. ಈಕೆ ಬೇರೆ ಅವಕಾಶ ಹುಡುಕಿಕೊಂಡು ಹೊರಟರೆ, ಕಾಂಟ್ರಾಕ್ಟ್ ಪತ್ರ ತೋರಿಸಿ, you are locked in with me for two years, ಅಂದು ಬಿಡುತ್ತಿದ್ದ. ಒಟ್ಟಿನಲ್ಲಿ ಕಿರಿಕ್ ಪಾರ್ಟಿ. ಕೇವಲ ಈ ತರಹದ್ದೊಂದೇ ಕಾಟ ಕೊಡುತ್ತಿದ್ದನೋ ಅಥವಾ ಬೇರೆ ರೀತಿಯಿಂದ ಸಹ ಹುರಿದು ಮುಕ್ಕುತ್ತಿದ್ದನೋ ಗೊತ್ತಿಲ್ಲ. ಒಟ್ಟಿನಲ್ಲಿ ಮುಕೇಶ್ ದುಗ್ಗಲ್ ಕೈಗೆ ಸಿಕ್ಕ ಮೋನಿಕಾ ಬೇಡಿ ಹೈರಾಣಾಗಿ ಹೋಗಿದ್ದಳು.

ಮುಕೇಶ್ ದುಗ್ಗಲ್ - ಈ ಕಡೆ ಡಿ ಕಂಪನಿಯ ಡಾನ್ ಛೋಟಾ ಶಕೀಲನಿಂದಲೂ ರೊಕ್ಕ ತೊಗೊಂಡು ಮೂವಿ ಮಾಡುತ್ತಿದ್ದ. ಆ ಕಡೆ ದಾವೂದನ ಪರಮ ವೈರಿ ಛೋಟಾ ರಾಜನ್ ಜೊತೆ ಕೂಡ ಸಂಪರ್ಕ ಇಟ್ಟುಕೊಂಡಿದ್ದ. ಅದೇನೋ ಲಫಡಾ ಆಯಿತು. ಸಿಟ್ಟಿಗೆದ್ದ ಛೋಟಾ ಶಕೀಲ್ ಸುಪಾರಿ ಕೊಟ್ಟೇ ಬಿಟ್ಟ. ಉಸಕೋ ಖತಂ ಕರ್ ಡಾಲೋ! ೧೯೯೫ ರಲ್ಲಿ ಶಕೀಲ್ ಕಳಿಸಿದ್ದ ಶಾರ್ಪ್ ಶೂಟರ್ ಗಳು ಮುಕೇಶ್ ದುಗ್ಗಲ್ ನನ್ನು ಕೊಂದೇ ಬಿಟ್ಟರು. ಈ ಕಿಲ್ಲಿಂಗ್ ಕೀರ್ತಿ ಮಾತ್ರ ಅಬು ಸಲೇಂಗೆ ಹೋಯಿತು. ದುಗ್ಗಲ್ ಸಾವಿನಿಂದ ಮೋನಿಕಾ ಬೇಡಿ ಮಾತ್ರ, 'ದೊಡ್ಡ ಉಪದ್ರವ ಕಳೆಯಿತು' ಅಂತ ನಿರುಮ್ಮಳವಾದಳು. ಡಾನ್ ಅಬು ಸಲೇಂಗೆ ಅಂದೇ ಆಕೆ ಫುಲ್ ಫಿದಾ! ಯಾಕೆಂದರೆ ಬಾಲಿವುಡ್ ತುಂಬ ಡಾನ್ ಅಬು ಸಲೇಂ ಮುಕೇಶ್ ದುಗ್ಗಲನನ್ನು ಉಡಾಯಿಸಿಬಿಟ್ಟ ಅಂತ ಸುದ್ದಿಯಾಗಿತ್ತು ನೋಡಿ. ಅದಕ್ಕೆ.

ಅದೇ ಸಮಯಕ್ಕೆ ದುಬೈಗೆ ರವಾನಿಸಲ್ಪಟ್ಟಿದ್ದ ಸುಂದರಿಯರ ಗುಂಪಿನಲ್ಲಿ ಮೋನಿಕಾ ಬೇಡಿಯೂ ಇದ್ದಳು. ಆವಾಗಲೇ ಆಕೆ ಬಿದ್ದಳು ನೋಡಿ ಡಾನ್ ಅಬು ಸಲೇಂನ ಕಣ್ಣಿಗೆ. ಆ ಹೊತ್ತಿಗಾಗಲೇ ಡಾನ್ ಅಬು ಸಲೇಂ ದೊಡ್ಡ ಪ್ಲೇಬಾಯ್ ಅಂತ ಕುಖ್ಯಾತನಾಗಿದ್ದ. ಮ್ಯೂಸಿಕ್ ಮುಘಲ್ ಗುಲ್ಷನ್ ಕುಮಾರ್ ಹತ್ಯೆ ಅವನಿಗೆ ದೊಡ್ಡ ಮಟ್ಟದ ಕುಖ್ಯಾತಿ ತಂದು ಕೊಟ್ಟಿತ್ತು. ದೊಡ್ಡ ನಿರ್ಮಾಪಕ ರಾಜೀವ್ ರಾಯ್ ಮೇಲೆ ಗುಂಡು ಹಾರಿಸಿದ್ದರು ಅಬು ಸಲೇಂ ಬಂಟರು. ಬಕ್ಕ ತಲೆಯ ರಾಜೀವ್ ರೈ ತನ್ನ ಹೆಂಡತಿ, ಒಂದು ಕಾಲದ 'ಓಯ್ ಓಯ್' ನಟಿ ಸೋನಂಳನ್ನು ಕರೆದುಕೊಂಡು, ಮುಂಬೈ ಅಂಡರ್ವರ್ಲ್ಡ್ ಕಾಟವೇ ಬೇಡ ಅಂತ ಲಂಡನ್ ಸೇರಿಕೊಂಡಿದ್ದ. ಹೃತಿಕ್ ರೋಶನ್  ಅಪ್ಪ ರಾಕೇಶ್ ರೋಶನ್ ಸಹ ಒಂದು ಗುಂಡು ತಿಂದು, 'ಭಾಯಿ, ನೀ ಹೇಳಿದ ಹಾಗೆಯೇ ಕೇಳ್ತಿನೀ. ನನ್ನ ಮತ್ತು ನನ್ನ ಮಗ ಹೃತಿಕನನ್ನು ಬಿಟ್ಟು ಬಿಡೋ' ಅಂತ ಅಂಗಾಲಾಚಿದ್ದ. ಆತನ ಮಾವ, ಪುರಾತನ ಬಾಲಿವುಡ್ ಕುಳ, ಓಂ ಪ್ರಕಾಶ್, ಖುದ್ದಾಗಿ ಡಿ ಕಂಪನಿ ಜೊತೆ ಮಾತಾಡಿ ಅಳಿಯನ ಜೀವದ ಡೀಲ್ ಕುದರಿಸಿಕೊಂಡಿದ್ದ. ಹೀಗೆಲ್ಲ ಮಾಡಿ ಸಿಕ್ಕಾಪಟ್ಟೆ ಹವಾ ಎಬ್ಬಿಸಿದ್ದ ಅಬು ಸಲೇಂ ಅಂದರೆ ಬಾಲಿವುಡ್ ನಟ ನಟಿಯರಿಗೆ ಒಂದು ದೊಡ್ಡ ಅಚ್ಚರಿ ಮತ್ತು ಭಯ. ಅದನ್ನೇ ಉಪಯೋಗಿಸಿಕೊಂಡು ಬಾಲಿವುಡ್ ನಟಿಯರು ಮತ್ತು ಅಬು ಸಲೇಂ ತುಂಬ ಕ್ಲೋಸ್ ಆಗಿಬಿಟ್ಟರು. ಡಾನ್ ಅಬು ಸಲೇಂ ಮಂಚ ಹತ್ತಿಸಿದ ನಟಿಯರು, ಬ್ಯೂಟಿ ಕ್ವೀನ್ ಗಳ ಲೆಕ್ಕವಿಲ್ಲ. ೨೦೦೫ ರಲ್ಲಿ ಪೋರ್ಚುಗಾಲ್ ದೇಶದಿಂದ ಬಂಧಿತನಾಗಿ ಬಂದ ನಂತರ ಡಾನ್ ಅಬು ಸಲೇಂನನ್ನು ಮಂಪರು ಪರೀಕ್ಷೆಗೆ (narco analysis) ಒಳಪಡಿಸಲಾಗಿತ್ತು. ಆವಾಗ ಆ ಪುಣ್ಯಾತ್ಮ ಬಾಯಿಬಿಟ್ಟ ನಟರು, ನಟಿಯರು, ಪೋಲೀಸ್ ಅಧಿಕಾರಿಗಳು, ರಾಜಕಾರಣಿಗಳು, ಅವರಿಗೆ ಅವನು ಮಾಡಿದ್ದ ಸೇವೆ, ಅವನಿಂದ ಸಪ್ಲೈ ಆಗಿದ್ದ ನಟಿಯರು ಮಾಡಿದ್ದ ಸೇವೆ ಎಲ್ಲವನ್ನೂ ಬಕ ಬಕ ಅಂತ ಕಾರಿಕೊಂಡಿದ್ದ. ಆ ಮಂಪರು ಪರೀಕ್ಷೆಯ ಟೇಪ್ ಪೂರ್ತಿ ಔಟ್ ಆದರೆ ಅದೆಷ್ಟು ಮಂದಿಯ ಪತಲೂನ್ ಡೀಲಾ ಆಗಿ ಸೊಂಟದಿಂದ ಕೆಳಗೆ ಇಳಿಯುತ್ತದೆಯೋ ಗೊತ್ತಿಲ್ಲ.

ಮೋನಿಕಾ ಬೇಡಿ ಅಬು ಸಲೇಂನ ಲೈಫಿನಲ್ಲಿ ಬರುವ ಮೊದಲು ಅದೆಷ್ಟು ನಟ ನಟಿಯರು ಬಂದು ಹೋಗಿದ್ದರೋ ಗೊತ್ತಿಲ್ಲ. ಅದು ಯಾಕೋ ಗೊತ್ತಿಲ್ಲ. ಅಬು ಸಲೇಂ ಮತ್ತು ಮೋನಿಕಾ ಬೇಡಿ ನಡುವೆ ಕೇವಲ ಮಂಚದ ವ್ಯವಹಾರ ಮಾತ್ರ ಇರಲಿಲ್ಲ. 'ಪ್ಯಾರ್ ಗೆ ಆಗಿ ಬುಟ್ಟೈತೆ' ಸಹ ಆಗಿ ಬಿಟ್ಟಿತು. ಅದೇ ಆಗಿದ್ದು ಲಫಡಾ. ಅಂಡರ್ವರ್ಲ್ಡ್ ಡಾನ್ ಮಂದಿ ಎಂದೂ ಹಾಗೆಲ್ಲ ಸಿನೆಮಾ ನಟಿಯರೊಂದಿಗೆ ಪ್ರೀತಿ, ಪ್ರೇಮ ಇತ್ಯಾದಿ ಮಾಡಿದ್ದೇ ಇಲ್ಲ. ಎಲ್ಲ ಟೆಂಪರರಿ ತಾತ್ಕಾಲಿಕ ಸೆಟಪ್ ಅಷ್ಟೇ. ಹೆಚ್ಚೆಂದರೆ ನಾಲ್ಕಾರು ತಿಂಗಳ ವ್ಯವಹಾರ. ಇನ್ನು ಡಾನ್ ಗಳು ಗರ್ಭ ನಿರೋಧಕ ಇತ್ಯಾದಿ ಧರಿಸುವದಿಲ್ಲ. ಅದೆಷ್ಟೋ ಡಾನ್ ಗಳ  ಮತ್ತು ನಟಿಯರ ನಾಜಾಯಿಸ್ (illegitimate) ಮಕ್ಕಳು ಇಂದಿಗೂ ಇವೆ ಅಂತ ಗುಡುಗುತ್ತಾರೆ 'Sword of Truth' ಅನ್ನುವ ರೈಟ್ ವಿಂಗ್ ವೆಬ್ ಸೈಟ್ ಒಂದಕ್ಕೆ ಬರೆಯುತ್ತಿದ್ದ ಖಡಕ್ ಅಂಕಣಕಾರ್ತಿ ಆದಿತಿ ಚತುರ್ವೇದಿ. 'ಅದೆಷ್ಟು ಬಾಲಿವುಡ್ ನಟಿಯರು ಮಾಫಿಯಾ ಡಾನ್ ಗಳ ಬೀಜ ಬಿತ್ತಿಸಿಕೊಂಡು, ಅದರ ಫಲ ಹೊತ್ತು, ಅಬಾರ್ಶನ್ ಮಾಡಿಸಿಕೊಂಡಿಲ್ಲ?' ಅಂತ ಸೀದಾ ಸೀದಾ ಅನ್ನುತ್ತಾರೆ ಆಕೆ. (ಹುಡುಕಿ ನೋಡಿ, ಸಿಕ್ಕೀತು ಆ ವೆಬ್ ಸೈಟ್ - Sword of Truth)

ಒಟ್ಟಿನಲ್ಲಿ ಡಾನ್ ಅಬು ಸಲೇಂ ಮತ್ತು ಮೋನಿಕಾ ಬೇಡಿ ಮಧ್ಯೆ ಬಾಲಿವುಡ್ ವ್ಯವಹಾರ ಮೀರಿದ ಪ್ರೀತಿ, ಪ್ರೇಮ ಬೆಳೆದು ಬಿಟ್ಟಿತ್ತು. ಆಗಲೇ ಅಬು ಸಲೇಂ ಮದುವೆಯಾಗಿ ಒಂದೋ ಎರಡೋ ಮಕ್ಕಳ ತಂದೆ!

ಹೀಗೆಲ್ಲ ಇದ್ದಾಗ ಬಾಸ್ ಅನೀಸ್ ಇಬ್ರಾಹಿಂ ತುಂಬ insensitive ಆಗಿ, 'ಮಾಲು ಸಕತ್ತಾಗೈತೆ! ರಾತ್ರಿಗೆ ನನ್ನ ಬಳಿ ಕಳಿಸಿಬಿಡು' ಅಂದು ಬಿಟ್ಟ. ಅದರ ಹಿಂದಿನ ಹಿಕ್ಮತ್ತು ಏನು?

ಯಾಕೋ ಏನೋ ಅನೀಸ್ ಇಬ್ರಾಹಿಮ್ ಮತ್ತು ಅಬು ಸಲೇಂ ಮಧ್ಯೆ ಸಂಬಂಧ ಹಳಸುತ್ತ ಬಂದಿತ್ತು. ಕಾರಣ ಅನೇಕ. ಮುಂಬೈನಲ್ಲಿ ಅಬು ಸಲೇಂ ಅಂದ್ರೆ ಡಾನ್ ಗಳ ಚಹಾ ತಂದುಕೊಂಡುವ ಹುಡುಗ. ಆದರೆ ದುಬೈಗೆ ಬಂದು, ಬಾಲಿವುಡ್ಡಿನ ಮೇಲೆ ತನ್ನದೇ ಆದ ಅಧಿಪತ್ಯ ಸಾಧಿಸಿ, ಒಂದು ಲೆವೆಲ್ ಗೆ ಬಂದ ಅಬು ಸಲೇಂನ ಸ್ಟೇಟಸ್ ಬೇರೆಯೇ. ಆದರೆ ದಾವೂದ್ ಸಹೋದರರು ಅದನ್ನೆಲ್ಲ ಗಮನಿಸಲೇ ಇಲ್ಲ. ಒಂದು ಕಾಲದಲ್ಲಿ ಚಹಾ ತಂದುಕೊಡುತ್ತಿದ್ದವ ಇವತ್ತು ಬಾಲಿವುಡ್ ಇಡೀ ಆಕ್ರಮಿಸಿ, ಕೋಟಿಗಟ್ಟಲೆ ರೊಕ್ಕ ತಂದುಕೊಡುತ್ತಿದ್ದರೂ ಆತನನ್ನು ಅದೇ ರೀತಿ ನೋಡಿದರು. ಎಲ್ಲಿಯವರೆಗೆ ಅಂದರೆ ಡಾನ್ ಗಳ ಹೆಂಡತಿಯರೂ ಸಹ ಅಬು ಸಲೇಂನ ಅಧಿಕೃತ ಪತ್ನಿ ಸಮೀರಾಳನ್ನು ಅದೇ ರೀತಿ ನೋಡತೊಡಗಿದ್ದರು. ಡಾನ್ ಅಬು ಸಲೇಂ ತುಂಬ ಸಹಿಸಿಕೊಂಡ. ಆದರೆ ಎಂದು ಒಂದು ದಿವಸ ಬಾಸ್ ಅನೀಸ್ ಇಬ್ರಾಹಿಂ ತನ್ನ ಪ್ರಿಯತಮೆ ಮೋನಿಕಾಳನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತ, 'ರಾತ್ರಿಗೆ ಕಳಿಸಿಬಿಡು' ಅಂದನೋ ಅವತ್ತೇ ಅಬು ಸಲೇಂ ನಿರ್ಧಾರ ಮಾಡಿಯೇಬಿಟ್ಟ. ಡಿ ಕಂಪನಿ ಬಿಟ್ಟು ಹೊರಡಲೇ ಬೇಕು. ಒಂದು ಸ್ವಂತ ನೆಲೆ ಕಂಡುಕೊಳ್ಳಲೇ ಬೇಕು ಅಂತ.

ಮುಂದೇನು? ಇಂತಹ ಹೊತ್ತಿಗೆ ಎಂದೇ ಎಲ್ಲ ಸಿದ್ಧ ಮಾಡಿಕೊಂಡಿದ್ದ ಅಬು ಸಲೇಂ ಸೈಲೆಂಟ್ ಆಗಿ ಕುಟುಂಬ ಸಮೇತ ಸೌತ್ ಆಫ್ರಿಕಾಕ್ಕೆ ಹಾರಿಬಿಟ್ಟ. ಅಲ್ಲಿದ್ದು ಕೆಲ ತಿಂಗಳ ನಂತರ ಅಮೇರಿಕಾಗೆ ಹಾರಿಬಿಟ್ಟ. ಅದು ಹೆಚ್ಚಾಗಿ ೨೦೦೦ ಇರಬೇಕು. ಅಮೇರಿಕಾದಲ್ಲಿ ಇದ್ದಷ್ಟು ದಿವಸ ಮೆರದೇ ಮೆರೆದ. ೯/೧೧ ದುರಂತ ಒಂದು ಆಯಿತು ನೋಡಿ. ಅದು ಆದದ್ದೇ ಆದದ್ದು ಅಮೇರಿಕಾ ಎಲ್ಲ ತರಹದ ಅಂಡರ್ವರ್ಲ್ಡ್, ಟೆರರಿಸ್ಟ್ ಮಂದಿ ಮೇಲೆ ಮುರಕೊಂಡು ಬಿತ್ತು. ಅಮೇರಿಕಾದಲ್ಲೇ ಇದ್ದರೆ ಡೇಂಜರ್ ಅಂದವನೇ ಮೋನಿಕಾ ಬೇಡಿ ಜೊತೆ ಡಾನ್ ಅಬು ಸಲೇಂ ಪೋರ್ಚುಗಾಲ್ ದೇಶಕ್ಕೆ ಹಾರಿಬಿಟ್ಟ. ಅಲ್ಲಿ ಏನೋ ಒಂದು ತರಹ ಅಜ್ಞಾತವಾಸದಲ್ಲಿದ್ದ. ಗ್ಯಾಂಗ್ ಬಿಟ್ಟು ಓಡಿ ಹೋದ ಅಂತ ಸಿಟ್ಟಿಗೆದ್ದಿದ್ದ ಡಿ ಕಂಪನಿಯೇ ಅವನ ವಾಸನೆ ಹಿಡಿದು ಪೊಲೀಸರಿಗೆ ಟಿಪ್ ಕೊಟ್ಟು ಅರೆಸ್ಟ್ ಮಾಡಿಸಿತು ಅನ್ನುತ್ತಾರೆ ಕೆಲವರು. ಇನ್ನು ಕೆಲವು ಜನ, 'ಭಾರತದ ಕೋರಿಕೆಯಾದ ದಾವೂದನ handover ಅಂತೂ ಸಾಧ್ಯವಿಲ್ಲ. ಚಿಕ್ಕ ಪುಟ್ಟ ಡಾನ್ ಒಬ್ಬನನ್ನಾದರೂ ಹಿಡಿದು ಕೊಟ್ಟು ಭಾರತವನ್ನು ಖುಷ್ ಮಾಡೋಣ' ಅಂತ ಅಮೇರಿಕಾ ತನ್ನ FBI ಮೂಲಕ, ಪೋರ್ಚುಗೀಸ್ ಸರ್ಕಾರದ ಮೇಲೆ ಒತ್ತಡ ಹಾಕಿ ಡಾನ್ ಅಬು ಸಲೇಂನನ್ನು ಅರೆಸ್ಟ್ ಮಾಡಿಸಿ, ಭಾರತಕ್ಕೆ ಸಾಗಹಾಕಿತು ಅನ್ನುತ್ತಾರೆ. ಯಾವದೋ ನಿಜವೋ?

ಒಟ್ಟಿನಲ್ಲಿ ಡಾನ್ ಮತ್ತು ಅವನ ಡವ್ ಮೋನಿಕಾ ಬೇಡಿಯನ್ನು ೨೦೦೫ ರಲ್ಲಿ ಪೋರ್ಚುಗಲ್ ದೇಶದ ರಾಜಧಾನಿ ಲಿಸ್ಬನ್ ತುಂಬಾ ಅಟ್ಟಾಡಿಸಿಕೊಂಡು ಓಡಾಡಿಸಿ ಹಿಡಿದು ಭಾರತಕ್ಕೆ ತರಲಾಯಿತು. ತಂದವರು CBI. ಅರೆಸ್ಟ್ ಆದ ಡಾನ್ ಕೇಳಿದ್ದು ಒಂದೇ ಮಾತು, 'ನೀವು ಮುಂಬೈ ಕ್ರೈಂ ಬ್ರಾಂಚಿನವರೇ?' ಅಂತ. 'ಅಲ್ಲ. ಯಾಕೆ? ನಾವು CBI' ಅಂದರೆ ಡಾನ್, 'ಒಳ್ಳೇದು. ಮುಂಬೈ ಕ್ರೈಂ ಬ್ರಾಂಚ್ ಆಗಿದ್ದರೆ ಭಾರತದಲ್ಲಿ ಇಳಿದಾಕ್ಷಣ ಎನ್ಕೌಂಟರ್ ಮಾಡಿಯಾರು ಅಂತ ಹೆದರಿಕೆ' ಅಂದುಬಿಟ್ಟ. ಹಾಗೆ ಹೇಳಲು ಕಾರಣವೂ ಇತ್ತು. ಯಾಕೆಂದರೆ ಈ ಪುಣ್ಯಾತ್ಮನೇ ಮುಂಬೈ ಪೋಲೀಸಿನಲ್ಲಿದ್ದ ತನ್ನ ಖಾಸ್ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳಿಗೆ 'ಹರಕೆ ಕುರಿ'ಗಳನ್ನು ಕಳಿಸುತ್ತಿದ್ದ. ಇಷ್ಟು ಎನ್ಕೌಂಟರ್ ಆಗಲೇ ಬೇಕು. ಅದಕ್ಕೆ ಜನ ಬೇಕು. ಎಲ್ಲಿಂದ ಬರಬೇಕು? ದುಬೈನಲ್ಲಿ ಕೂತಿದ್ದ ಅಬು ಸಲೇಂಗೆ ಫೋನ್ ಮಾಡುತ್ತಿದ್ದರು ಕೆಲ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳು. ಅವರ ಜೊತೆಗಿನ ಡೀಲ್ ಪ್ರಕಾರ, ತನ್ನ ಊರಾದ ಉತ್ತರ ಪ್ರದೇಶದ ಅಜಮ್ ಘರ್ ನಿಂದ, ಐದೋ ಹತ್ತೋ ಸಾವಿರವೋ ರುಪಾಯಿ ಕೊಟ್ಟು ಶಾರ್ಪ್ ಶೂಟರ್ ಕರೆಸುತ್ತಿದ್ದ ಸಲೇಂ. ಅವರಿಗೆ ಆರ್ಡರ್ ಬರುತ್ತಿತ್ತು, 'ಇಂತಹ ನಟ / ನಟಿ ಮನೆ ಮುಂದೆ ಹೋಗಿ, ಘೋಡಾ (ಗನ್) ಹಿಡಿದುಕೊಂಡು ಶೋ ಕೊಡಿ' ಅಂತ. ಅದೇ ಸಮಯಕ್ಕೆ ಸರಿಯಾಗಿ ಎನ್ಕೌಂಟರ್ ಸ್ಪೆಷಲಿಸ್ಟ್ ಪೋಲೀಸ್ ಮಂದಿಗೆ ಸಹ ಮೆಸೇಜ್ ಹೋಗುತ್ತಿತ್ತು. 'ಹೋಗಿ, ಎನ್ಕೌಂಟರ್ ಮಾಡಿ,' ಅಂತ. ಅವರು ಹೋಗಿ ಎನ್ಕೌಂಟರ್ ಮಾಡಿ, ದೊಡ್ಡ ಹಲ್ಲಾ ಗುಲ್ಲಾ. ಇದೆಲ್ಲ ನೋಡಿದ ಸಿನೆಮಾ ಮಂದಿ ಚಡ್ಡಿಯೊಳಗೆ ಒಂದಾ ಎರಡಾ ಮಾಡಿಕೊಳ್ಳುತ್ತಿದ್ದರು. ಭೀತಿಯೇ ಅಂಡರ್ವರ್ಲ್ಡ್ ಮೂಲವಯ್ಯ. ಅಬು ಸಲೇಂನ ಬ್ರಾಂಡ್ ವ್ಯಾಲ್ಯೂ ಮತ್ತಿಷ್ಟು ಏರುತ್ತಿತ್ತು.  'ಮನೆ ಮುಂದೆನೇ ಭಾಯಿಯ ಶಾರ್ಪ್ ಶೂಟರುಗಳು ಸುಳಿದಾಡುತ್ತಿದ್ದರು. ಟೈಮಿಗೆ ಸರಿಯಾಗಿ ಪೊಲೀಸರು ಬಂದು ಎನ್ಕೌಂಟರ್ ಮಾಡಿದ್ದಕ್ಕೆ ಬಚಾವ್ ' ಅಂತ ಜನ ನಿಟ್ಟುಸಿರು ಬಿಟ್ಟರೆ ಡಾನ್ ಮತ್ತೂ ಖಾಕಿ ಕದೀಮ ಎನ್ಕೌಂಟರ್ ಸ್ಪೆಷಲಿಸ್ಟ್ ತಟ್ಟಿಕೊಂಡು ನಗುತ್ತಿದ್ದರು. ಅಬು ಸಲೇಂನಿಗೆ ಬರೋಬ್ಬರಿ ರೊಕ್ಕ ಸಂದಾಯವಾಗುತ್ತಿತ್ತು. ಪೊಲೀಸರಿಗೂ ಸಹ. ಇವರ ದಂಧೆ ಮಧ್ಯೆ ಜಾನ್ ಕಳೆದುಕೊಂಡವರು ಮಾತ್ರ ಅಜಮ್ ಘರ್ ದ ಹುಚ್ಚ ಯುವಕರು. ಅದೂ ಕೇವಲ ಐದೋ ಹತ್ತೋ ಸಾವಿರಕ್ಕೆ.

ಅದೆಲ್ಲ ಇರಲಿ. ಆದರೆ ಆ ಹೊತ್ತಿನಲ್ಲಿ, ಆ ನಿಂತ ಮೆಟ್ಟಿನಲ್ಲಿ, ಡಾನ್ ಅನೀಸ್ ಇಬ್ರಾಹಿಂ, ಅದೂ ಬಾಸ್, 'ಹುಡುಗಿ ಕಳಿಸು. ಇವತ್ತು ರಾತ್ರಿಗೆ,' ಅಂದಾಗ ಅಬು ಸಲೇಂ ಏನು ಮಾಡಿದ? ತನ್ನ ಪ್ರಿಯತಮೆಯನ್ನು ಕಳಿಸಿದನೇ? ಆಕೆ ಹೋದಳೇ? ಡಾನ್ ಅನೀಸ್ ಇಬ್ರಾಹಿಂನ ಬಿಸ್ತರ್ ಗರಂ ಮಾಡಿದಳೇ? ಗೊತ್ತಿಲ್ಲ. ಅವಕ್ಕೆಲ್ಲ ಉತ್ತರ ಕೇವಲ ಅವರೇ ಕೊಟ್ಟಾರು. ಅಬು ಸಲೇಂ ಮತ್ತು ಮೋನಿಕಾ ಬೇಡಿ.

* ಇದೇ ಪುಸ್ತಕ ಆಧರಿಸಿ ಬರೆದಿದ್ದ ಮತ್ತೊಂದು ಬ್ಲಾಗ್ ಪೋಸ್ಟ್. ನಾನು ಅಬು ಸಲೇಂ! (ಅಂಡರ್ವರ್ಲ್ಡ್ ಡಾನ್ ಒಬ್ಬನ ಕಥನ)

Thursday, March 12, 2015

BITS, Pilani & SHITS, Dharwad.

IIT ಬಂತು ಕರ್ನಾಟಕಕ್ಕೆ. ಹೊಡಿರಿ ಹಲಗಿ. ಆದ್ರ ನಮ್ಮ ಧಾರವಾಡಕ್ಕೆ ಬರ್ತದೋ ಇಲ್ಲೋ? ಅದೇ ದೊಡ್ಡ ಚಿಂತಿ.

'ನಿಮ್ಮೌನ್, ಬರಲಿಲ್ಲ ಅಂದ್ರ ಹೋಗ್ಲಿ ಬಿಡಲೇ. ಇಷ್ಟು ಮಂದಿ ದೊಡ್ಡ ಮಂದಿ ಇದ್ದಾರ. ಒಂದು ಅಂತರಾಷ್ಟ್ರೀಯ ಮಟ್ಟದ ಖಾಸಗಿ ಕಾಲೇಜ್ ಮಾಡಲಿ ನೋಡೋಣ,' ಅಂದೆ. ಚಾಲೆಂಜ್ ಒಗೆದೆ.

'ಹಾಂಗಂತೀ????' ಅಂತ ದೊಡ್ಡದಾಗಿ ಓಂ ಅಂತ ಬಾಯಿ ಬಿಟ್ಟವನು ನಮ್ಮ ಖಾಸ್ ದೋಸ್ತ.

'ಹೌದಲೇ, ಅವನೌನ್. ದೊಡ್ಡ ಉದ್ಯಮಿ ಬಿರ್ಲಾ ಇದ್ದಾನಲ್ಲಾ? ಆವಾ ರಾಜಸ್ಥಾನದ ಪಿಲಾನಿ, ಬಿಹಾರದ ರಾಂಚಿ ಅಂತಹ ಕುಗ್ರಾಮಗಳಲ್ಲಿ BITS, Pilani ಮತ್ತು BIT, Ranchi ಅಂತಹ ಜಾಗತಿಕ ಮಟ್ಟದ ಒಳ್ಳೆ ಖಾಸಗಿ ಯೂನಿವರ್ಸಿಟಿ ಸ್ಥಾಪನಾ ಮಾಡ್ತಾನ ಅಂದ್ರ ಧಾರವಾಡ ಮಂದಿಗೇನು ಧಾಡಿ? ಬೇಕಾದಷ್ಟು ಮಂದಿ ಟಾಟಾ, ಬಿರ್ಲಾ ಇದ್ದಾರ ಧಾರವಾಡ ಹುಬ್ಬಳ್ಳಿ ಒಳಗ. ಮಾಡಲಿಕ್ಕೆ ಏನು ಧಾಡಿ?????' ಅಂತ ಒಂದು ಚಾಲೆಂಜ್ ಒಗೆದೆ.

'ಅದೇನೋ ಖರೆ ನೋಡು. ನೀನೇ ಒಂದು ಅಂತಹ ಒಂದು ಕಾಲೇಜ್ ಮಾಡಬಹುದಲ್ಲ????? ಯಾಕ ಮಾಡಬಾರದು??? ಏನಂತೀ?' ಅಂತ ನಮಗೇ ಒಂದು ರಿವರ್ಸ್ ಬತ್ತಿ ಇಟ್ಟ ದೋಸ್ತ.

'ಮಾಡ್ತಿದ್ನೋ. ಮಾಡೇ ಬಿಡ್ತಿದ್ದೆ. ಒಂದೇ ಒಂದು ಒಂದು ಪ್ರಾಬ್ಲಮ್ ಅದ ನೋಡಪಾ,' ಅಂತ ಹೇಳಿದೆ.

'ಏನಪಾ? ಏನು ನಿನ್ನ ಪ್ರಾಬ್ಲಮ್? ನಿನ್ನ ಕಡೆ ಏನು ರೊಕ್ಕ ಇಲ್ಲೋ? ಅಥವಾ ಬಂದು ಮಾಸ್ತರಕಿ ಮಾಡೋ ತಾಕತ್ತಿಲ್ಲೋ???? ತಲಿ ಇಲ್ಲೋ? ಹಾಂ??' ಅಂದ ದೋಸ್ತ.

'ಅದು ನಾನು ಅಂತಹ ಕಾಲೇಜ್ ಧಾರವಾಡ ಒಳಗ ಓಪನ್ ಮಾಡಿದ್ರೆ ಹೆಸರಿನದೇ ಒಂದು ದೊಡ್ಡ ಪ್ರಾಬ್ಲಮ್ ನೋಡಪಾ' ಅಂತ ಹೇಳಿದೆ.

'ಯಾಕ? ನಿನ್ನ ಕಾಲೇಜಿಗೆ ಏನಂತ ಹೆಸರು ಇಡವಾ ನೀ???' ಅಂತ ಒಂದು ದೊಡ್ಡ ಕ್ವೆಶ್ಚನ್ ಮಾರ್ಕ್ ಒಗೆದ.

'ನಾ ಏನೆರೆ ಧಾರವಾಡ ಒಳಗ ಇಂಜಿನಿಯರಿಂಗ್ ಕಾಲೇಜ್ ಓಪನ್ ಮಾಡಿದರೆ ಅದರ ಹೆಸರು 'SHITS, Dharwad,' ಅಂತ ಇಡತೇನಿ ನೋಡಪಾ. ಈ ಹೆಸರು ಕೇಳಿದ ಮಂದಿ ನನ್ನ ಹಾಕ್ಕೊಂಡು ಒದಿತಾರ. ನನ್ನ ಕಾಲೇಜಿಗೆ ಯಾರೂ ಬರೋದೇ ಇಲ್ಲ. ಶಾಣ್ಯಾ ಹುಡುಗರು ಬರೋದು ದೂರ ಉಳಿತು. ನಾನೇ ಅವರಿಗೆ ಡೊನೇಷನ್ ಕೊಡತೇನಿ ಅಂದ್ರೂ ಬರೋದಿಲ್ಲ ನೋಡಪಾ,' ಅಂತ ನನ್ನ ದುಃಖ ತೋಡಿಕೊಂಡೆ.

'ಏನದು ಅಸಹ್ಯ SHITS, Dharwad ಅಂತ ಹೆಸರು ಇಡ್ತೀ????? ಬ್ಯಾರೆ ಹೆಸರಿಲ್ಲಾ????' ಅಂತ ಕೆಟ್ಟ ಮಾರಿ ಮಾಡಿ ಕೇಳಿದ ದೋಸ್ತ.

'ಅಲ್ಲಲೇ 'BITS, Pilani' ಮಾದರಿಯ ದೊಡ್ಡ ಮಟ್ಟದ, ಒಳ್ಳೆ ಪ್ರಸಿದ್ಧ ಸಂಸ್ಥೆ ಹಾಂಗೆನೇ 'SHITS, Dharwad' ಅಂತ ಹೆಸರು ಇಟ್ಟರೆ ಏನೇನೋ ಅಂತಿಯಲ್ಲಲೇ ಹಾಪಾ!' ಅಂತ ಬೈದೆ.

'ಏನದು ಕೆಟ್ಟ ಅಸಹ್ಯ SHITS, Dharwad????' ಅಂತ ಮತ್ತೆ ಕೇಳಿದ ದೋಸ್ತ.

'ಈಗ ನೀ ಹೇಳಪಾ BITS, Pilani ಅಂದ್ರೇನು????' ಅಂತ ಕೇಳಿದೆ.

'ಗೊತ್ತದ. ನಮಗ ಅಷ್ಟೂ ಗೊತ್ತಿಲ್ಲ ಅಂತ ತಿಳ್ಕೋಬ್ಯಾಡ. ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್. ಬಿರ್ಲಾ ಅವರ ಹುಟ್ಟೂರಾದ ರಾಜಸ್ಥಾನದ ಪಿಲಾನಿ ಒಳಗ ಅವರು ಸ್ಥಾಪಿಸಿದ್ದು. ಹೌದೋ ಅಲ್ಲೋ????' ಅಂತ ಕೇಳಿದ ದೋಸ್ತ.

ಅಲಲಲಾ! ಭಾರೀ ತಲಿ ಇಟ್ಟಾನ. ಕರೆಕ್ಟ್ ಹೇಳಿದ.

'SHITS, Dharwad ಅಂದ್ರ ನಂದೂ ಹಾಂಗ ಮಾರಾಯಾ. ಸೇಮ್ ಅದೇ. ಪಿಲಾನಿ ಒಳಗ ಬಿರ್ಲಾ. ಇಲ್ಲೆ ಧಾರವಾಡ ಒಳಗ ಹೆಗಡೆ ಅಂದ್ರ ನಾನು. ಮತ್ತ ನಮ್ಮ ಜಾತಿ ಬಾಂಧವರು,' ಅಂತ ಹೇಳಿದೆ.

'ಏನು????? ಏನರ್ಥ?????' ಅಂತ ಹೂಂಕರಿಸಿದ.

'SHITS, Dharwad ಅಂದ್ರ ಶ್ರೀ ಹೆಗಡೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್, ಧಾರವಾಡ (Shri Hegade Institute of Technology & Science, Dharwad urf SHITS, Dharwad) ಅಂತ. ಹ್ಯಾಂಗದ??????????' ಅಂತ ಕೇಳಿದೆ.

BITS, Pilani. SHITS, Dharwad!!!!!!!! ಏಕ್ದಂ ಮಸ್ತ ಅದ.

ನಮ್ಮ ದೋಸ್ತ ಮೂರ್ಚೆ ಹೋದವ ಇನ್ನೂ ಎದ್ದಿಲ್ಲ.

ನಿಮ್ಮ ಮಕ್ಕಳನ್ನು ನಮ್ಮ SHITS, Dharwad ಇಂಜಿನಿಯರಿಂಗ್ ಕಾಲೇಜಿಗೆ ಕಳಸ್ತೀರಿ?????? ನಾನೇ ಎಲ್ಲಾ ಅಲ್ಲಿ. ಬರೋಬ್ಬರಿ ಟ್ರೇನಿಂಗ್ ಕೊಡತೇನಿ. ಏಕ್ದಂ ನನ್ನ ಗತೆ ತಯಾರ್ ಆಗಿಬಿಡ್ತಾರ. ಪ್ಯೂರ್ ಮೆರಿಟ್ ಮ್ಯಾಲೆ. ಡೊನೇಷನ್, ಕ್ಯಾಪಿಟೇಶನ್ ಇಲ್ಲ. ;)

ತೊಗೊಂಡಿದಿರಾ ಸಾರ್??????

ಅದೊಂದು ದಿವಸ ರಾತ್ರಿ ಬೆಂಗಳೂರಲ್ಲಿ ವಾಹನ ಚಾಲಕರ ತಪಾಸಣೆ ನಡೆಯುತ್ತಿತ್ತು. ಕುಡಿದು ವಾಹನ ಚಾಲನೆ ಮಾಡುತ್ತಿದ್ದವರನ್ನು ಹಿಡಿಯಲು.

ನಮ್ಮ ಸಾಹೇಬರೂ ಬರುತ್ತಿದ್ದರು. ಅವರ ಕಾರಲ್ಲಿ. ಪಕ್ಕದಲ್ಲಿ ಸ್ನೇಹಿತ ಒಬ್ಬನಿದ್ದ. ಪೋಲೀಸ್ ತಡೆದು ನಿಲ್ಲಿಸಿದ. ಕಿಡಕಿ ಗ್ಲಾಸ್ ಇಳಿಸಿದ.

'ಸಾರ್, ತಗೊಂಡಿದಿರಾ??????' ಅಂತ ಕೇಳಿದ ಪೋಲೀಸ್.

'ಏನು?' ಅಂದರು ಇವರು.

'ಡ್ರಿಂಕ್ಸ್ ಸಾರ್. ಎಣ್ಣೆ. ತಗೊಂಡಿದಿರಾ?' ಅಂತ ಹೇಳಿದ ಪೋಲೀಸ್.

'ಹೌದು. ತಗೊಂಡಿದಿನಿ. ಏನು ಈವಾಗ?' ಖಡಕ್ ಹೇಳಿದರು ಇವರು.

ಪೋಲೀಸ್ ಒಂದು ಕ್ಷಣ ಫುಲ್ ಥಂಡಾ. 'ಏನಪ್ಪಾ ಇವರು???! 'ಡ್ರಿಂಕ್ಸ್ ತೊಗೊಂಡಿದಿರಾ?' ಅಂತ ಕೇಳಿದ್ರೆ, ರಾಜಾರೋಷವಾಗಿ, 'ಹೌದು,' ಅಂತಾರೆ. ಎಂತಾ ಗಿರಾಕಿ ಸಿಕ್ಕಿದರಪ್ಪಾ ಇವತ್ತು!' ಅಂತ ಅಂದುಕೊಂಡ ಪೋಲೀಸ್.

'ಸರ್, ಒಂದು ಕ್ಷಣ ಬಾಯಿ ಓಪನ್ ಮಾಡ್ಬಿಟ್ಟು ಓಂ ಅನ್ನಿ' ಅಂದ ಪೋಲೀಸ್.

'ಯಾಕೆ?' ಅಂತ ಕೇಳಿದರು ಇವರು.

ಅದು breath analyzer ಇತ್ಯಾದಿ ಸಲಕರಣೆಗಳು ಇಲ್ಲದ ಕಾಲ. ಭಾಳ ಹಿಂದಲ್ಲ. ೨೦೦೦ ಹೊತ್ತಿಗೆ. ಸಂಶಯ ಬಂದವರ ಬಾಯಿ ತೆಗೆಯಿಸಿ, ಮೂಸಿ ನೋಡಿ, ಕುಡಿದಿದ್ದಾರೋ ಇಲ್ಲವೋ ಅಂತ ಕಂಡು ಹಿಡಿಯುವ ಕರ್ಮ ಪೊಲೀಸರಿಗೆ. ಯಪ್ಪಾ! ತಾವು ಹಿಡಿದು ಬಾಯಿ ತೆಗೆಸಿದೆವ ಮಾಣಿಕ್ ಚಂದನ್ನೋ, ರಜನಿ ಗಂಧಾವನ್ನೋ, ಫೈರ್ ಗುಟ್ಕಾವನ್ನೋ ಹಾಕಿ ಸ್ವಲ್ಪ ಸುವಾಸನೆ ಹೊಡೆಯುತ್ತಿರಲಪ್ಪಾ ದೇವರೇ ಅಂತ ಬೇಡಿಕೊಳ್ಳುತ್ತಿದ್ದರು ಪೊಲೀಸರು. ಹಾಗಿತ್ತು ಪರಿಸ್ಥಿತಿ.

ಪೋಲೀಸ್ ಹೇಳಿದಂತೆ ಈ ವಯ್ಯಾ, ಕಾರಿನ ಕಿಡಕಿಯ ಪೂರ್ತಿ ಗಾಜು ಇಳಿಸಿ, ಮುಖ ಹೊರಗೆ ಹಾಕಿ, ಬಾಯಿ ಇಷ್ಟು ದೊಡ್ಡದಾಗಿ ತೆಗೆದು, ಓಂ ಅಂದರು. ಹತ್ತಿರ ಬಂದ ಪೋಲೀಸ್ ಮೂಸಿ ನೋಡಿ ಮುಖ ಒಂದು ತರಹ 'ಹೀಂಗೆ' ಮಾಡಿದ. ಹೀಂಗೆ ಅಂದರೆ ಹಾಂಗೆ. ಯಾಕೆ? ನೀವೇ ಊಹಿಸಿ. ಕಾಲ್ಗೇಟ ಇಸ್ತೇಮಾಲ್ ಮಾಡಿ. ಹಲ್ಲು ತಿಕ್ಕಲು.

'ಸಾರ್, ಏನು ಜೋಕ್ ಮಾಡ್ತಿದ್ದಿರಾ???? ಕೇಳಿದ್ರೆ ತೊಗೊಂಡೆ ಅಂತೀರಿ. ಏನೂ 'ಆ' ವಾಸನೆನೇ ಇಲ್ಲ. ನಿಜ ಹೇಳಿ ಸಾರ್' ಅಂದ ಪೋಲೀಸ್. He was exasperated!

'ಅಯ್ಯೋ ನಿಮ್ಮ! ನಿಜವಾಗಲೂ ತೊಗೊಂಡಿದಿನಿ ಕಣ್ರೀ! ನಮ್ಮಪ್ಪನಾಣೆ' ಅಂತ ಹೇಳಿದರು ಇವರು.

ಪೊಲೀಸನ ತಲೆ ಕೆಟ್ಟು ಹೋಯಿತು. ಇನ್ನೂ ಹೆಚ್ಚಿಗೆ ತನಿಖೆ ಮಾಡುತ್ತ ಇದ್ದರೆ ತಲೆ ಒಡೆದೇ ಹೋದಿತು ಅಂದುಕೊಂಡು, 'ಹೋಗಿ ಸಾರ್! ಸುಮ್ಮನೆ ಹೋಗಿ! ಸುಮ್ಮನೆ ಇಲ್ಲದ ಗಾಂಚಾಲಿ ಮಾಡ್ಬೇಡಿ!' ಅಂದು, ಬಿಟ್ಟು ಕಳಿಸಿದ. ಇವರು ಮ್ಯಾಲೆ ಒತ್ತಿ, ಕೆಳಗೆ ಹಾಕಿ, ಎತ್ತಿದರು. ಆಯ್ಯೋ ಮ್ಯಾಲೆ ಗ್ಲಾಸ್ ಏರಿಸೋ ಬಟನ್ ಒತ್ತಿ, ಕೆಳಗೆ ಗೇರ್ ಹಾಕಿ, ಗಾಡಿ ಎತ್ತಿದರು ಅಂತ. ಅಷ್ಟೇ. ಅಲ್ಲಿಂದ ಜಾಗ ಖಾಲಿ ಮಾಡಿದರು.

ಪಕ್ಕದಲ್ಲಿದ್ದ ದೋಸ್ತನಿಗೆ ಸಿಕ್ಕಾಪಟ್ಟೆ ಆಶ್ಚರ್ಯ. ಕೇಳೇ ಬಿಟ್ಟ.

'ಏನಯ್ಯಾ ಅದು? ಪೋಲೀಸ್ ಕೇಳಿದರೆ ತೊಗೊಂಡೆ ಅಂದೆ. ಎಲ್ಲಿ ತೊಗೊಂಡೆ? ಏನು ತೊಗೊಂಡೆ?' ಅಂತ ಕೇಳಿದ ದೋಸ್ತ.

'ಪೋಲೀಸ್ ಕೇಳಿದ್ದು ಏನು? 'ಡ್ರಿಂಕ್ಸ್ ತೊಂಗೊಡಿದಿರಾ?' ಅಂತ. ನಾನು ನಿಜಾನೇ ಹೇಳಿದೆ' ಅಂದ್ರು ಇವರು.

'ಏನು ನಿಜಾ ಹೇಳಿದೆ??????????' ಅಂತ ಕೇಳಿದ ದೋಸ್ತ.

ಇವರು ಮರು ಮಾತಾಡಲಿಲ್ಲ. ಸೀಟಿನ ಕೆಳಗಿಂದ ಏನೋ ತೆಗೆದು ತೋರಿಸಿದರು.

ಏನು ತೋರಿಸಿದರು ಅಂದ್ರೆ ದೊಡ್ಡ ಕಂಭಾ. ದೊಡ್ಡ ಬಾಟಲಿ. ದೊಡ್ಡ ಎಣ್ಣೆ ಬಾಟಲಿ.

ಮನೆಗೆ ಹೋಗಿ ಹಾಕೋಣ ಅಂತ ಎಣ್ಣೆ ಬಾಟಲಿ 'ತೆಗೆದುಕೊಂಡು' ಹೊರಟಿದ್ದರು. ನಡುವೆ ಪೋಲೀಸ್ ಹಿಡಿದು, 'ತೊಗೊಂಡ್ರಾ???' ಅಂತ ಕೇಳಿದ. ಎಣ್ಣೆ ಬಾಟಲಿ 'ತೊಗೊಂಡಿದ್ದು' ನಿಜವಾಗಿತ್ತು. ಅದನ್ನೇ ಹೇಳಿದ್ದರು. ಹೇಳಿ ಕೇಳಿ ಹಾಸ್ಯ ನಟ. ಎಲ್ಲ ಕಡೆ ಕಾಮಿಡಿಯೋ ಕಾಮಿಡಿ.

ಈ ಜೋಕ್ ಹೇಳಿದ್ದು ಸಾಧು ಕೋಕಿಲ. ಅವರದ್ದೇ ಕಿತಾಪತಿಯಂತೆ ಅದು. ;)

ನೀತಿ: ಎಣ್ಣೆ 'ತೊಗೊಂಡ' ನಂತರವೂ ಗಾಡಿ ಚಲಾಯಿಸಬಹುದು. ಎಣ್ಣೆ ಹಾಕಿದ ನಂತರ ಚಲಾಯಿಸಬಾರದು. ಅಷ್ಟೇ! :)

ಮೂಲ: ಹಲವಾರು ವರ್ಷಗಳ ಹಿಂದಿನ 'ಹಾಯ್ ಬೆಂಗಳೂರು'.

ಸಾಧು ಕೋಕಿಲಾ

Sunday, March 08, 2015

ಸ್ತ್ರೀ ದ್ವೇಷಿ vs. ಪುರುಷ ದ್ವೇಷಿ

'ನೀನು ಸ್ತ್ರೀ ದ್ವೇಷಿ (misogynist) ಕಣೋ' ಅಂದಳು ಆಕೆ. ಅಂದಾಕೆ ಹಳೆ ಗೆಳತಿ.

ಸಿಟ್ಟು ಬಂತು. ಸಂಯಮ ಮೀರುತ್ತಿತ್ತು. ಸುಮ್ಮ ಸುಮ್ಮನೆ ಹೀಗೆಲ್ಲ ಅಂದ್ರೆ ಮತ್ತೆ???????

'ಯಾಕೆ?' ಅಂದೆ.

'ಮತ್ತೇನು???? ನಿರ್ಭಯಾ ಪ್ರಕರಣದ ಡಾಕ್ಯುಮೆಂಟರಿ ಬಂದ ನಂತರ ನಿನ್ನ FB ಪೋಸ್ಟ್ ನೋಡಿದರೆ ಸಾಕು. ಎಲ್ಲ ಗೊತ್ತಾಗುತ್ತೆ,' ಅಂದು ಪೆಕಪೆಕಾ ಅಂತ ನಕ್ಕಳು.

ಬಾಯಿ ತುದಿಗೆ ಬಂದಿತ್ತು, ಅಂದು ಬಿಡೋಣ ಅಂತ. ಆದರೆ ಹೇಳಲಿಲ್ಲ. ಅದೇ ವ್ಯತ್ಯಾಸ ತಾನೇ? ನಮ್ಮ ಮತ್ತೆ ಅವರ ನಡುವೆ.

'ಹುಚ್ಚಿ! ನಾನು ಮಿಸೋಜೈನಿಸ್ಟ್ ಅಂತ ಆದ್ರೆ ನೀನು ನಿಜವಾಗಲೂ ಮಿಸಾಂಡ್ರಿಸ್ಟ್!!! (misandrist = ಪುರುಷ ದ್ವೇಷಿ)' ಅನ್ನೋಣ ಅನ್ನಿಸಿತ್ತು. ಹಾಗೆ ಅನ್ನೋದನ್ನ ಹೇಗೋ ತಡೆದುಕೊಂಡೆ. misogynist ಇದಕ್ಕೆ ಬರೋಬ್ಬರಿ ವಿರುದ್ಧ ಪದ misandrist ಅಂತ ನಮಗೆ ಗೊತ್ತಿದೆ ಅಂದಾಕ್ಷಣ ಯಾರ್ಯಾರಿಗೋ ಹೇಳಿ ಬಿಡೋಕೆ ಆಗುತ್ತೆಯೇ? ಅದೂ ಹಳೆ ಗೆಳತಿಯೊಬ್ಬಳಿಗೆ????

ಕಂಡ ಕಂಡ ಗಂಡಸರೆನ್ನೆಲ್ಲ 'ಸ್ತ್ರೀ ದ್ವೇಷಿ' ಅನ್ನುವ ಕಾರಣಗಳು ಆಕೆಗೆ ಸದ್ಯಕ್ಕೆಇವೆ ಅಂತ ನನಗೆ ಗೊತ್ತು. ಪ್ರೀತಿಸಿ ಮದುವೆಯಾದ ಗಂಡ. ಇಪ್ಪತ್ತು ವರ್ಷಗಳ ನಂತರ ಈಗ ಮದುವೆ ಫುಲ್ ಬರ್ಬಾದ್ ಆಗಿದೆ. ಅದೇನು ಲಫಡಾನೋ ಗೊತ್ತಿಲ್ಲ. 'ಅವನು ನಾಮ ಹಾಕಿದ್ದಾನೆ' ಅಂತ ಈಕೆ ಅಂದರೆ 'ಇವಳು ವಿಭೂತಿ ಪಟ್ಟಾ ಹೊಡೆದಿದ್ದಾಳೆ' ಅಂತ ಅವನು ಅನ್ನುತ್ತಾನೆ. ಇನ್ನು ಮಕ್ಕಳು? ಟೀವಿಯಲ್ಲಿ ಬರುವ 'ಹೀರೋ' ಒಬ್ಬನನ್ನು ನೋಡಿ 'ಅಪ್ಪಾ, ಅಪ್ಪಾ, there is dad' ಅನ್ನುತ್ತವೆ. ಆ ಹಳೆ, ರಿಟೈರ್ಡ್, ಎಕ್ಕುಟ್ಟಿಹೋದ ಹೀರೋ ಎಂದೋ ಹೀರಿದ್ದ ಮಧು ನೆನಪಿಸಿಕೊಂಡು ಮುಲುಗುತ್ತಾನೆ. ಯಾವದು ನಿಜವೋ??? ಇವರ ಪಂಚಾಯತಿ ಮುಗಿಯುವದಿಲ್ಲ. ಹಾಗಿದ್ದಾಗ ಇವರ ಪುರುಷ, ಸ್ತ್ರೀ ದ್ವೇಷದ ನಡುವೆ ನಮ್ಮಂತವರು ಮಟಾಶ್! ಏನು ಮಾಡೋಣ????

ಏನೋ ಕುಲದೇವರಾದ ಹೊನ್ನಾವರ ಹೊಸಾಕುಳಿ ಲಕ್ಷ್ಮಿನಾರಾಯಣ ಸಹನೆ ಸ್ವಲ್ಪ ಜಾಸ್ತಿಯೇ ಕೊಟ್ಟಿದ್ದಾನೆ. ಆಗಲೇ ಸಿಕ್ಕಾಪಟ್ಟೆ ನೊಂದಿರುವವಳ ಗಾಯಕ್ಕೆ ಮತ್ತೊಂದಿಷ್ಟು ಉಪ್ಪು ತಿಕ್ಕುವ ಮನಸಾಗಲಿಲ್ಲ. ಅದಕ್ಕೇ ಸುಮ್ಮನಿದ್ದೆ. ಅದೂ misogynist ಅನ್ನುವ ಬಿರುದು ಧರಿಸಿ. ಇದು ಹಾಲಾಹಲ ವಿಷಕ್ಕಿಂತ ಜಾಸ್ತಿ ಏನೂ ಅಲ್ಲವಲ್ಲಾ??? ;) ಜೈ ನೀಲಕಂಠ!  ಬಂ ಬಂ ಭೋಲೆನಾಥ! ;)

Misogynist and Misandrist ! :)

:) :)

(ಇದು ಕಥೆ. ಸ್ವಲ್ಪ ನಿಜವೂ ಇದೆ ;))

Saturday, March 07, 2015

ಶಟ್ರೋಸಾಫ್ಟ್ ಟೆಕ್ನಾಲಜೀಸ್ OR ಹಟ್ರೋಸಾಫ್ಟ್ ಟೆಕ್ನಾಲಜೀಸ್ ???



ಒಬ್ಬವ ಹಳೆ ದೋಸ್ತ ಸಿಕ್ಕಿದ್ದ.

'ಏನಲೇ? ಭಾಳ ಅಪರೂಪ? ಹಾಂ?' ಅಂದೆ.

'ಏ  ದೋಸ್ತ, ಹೊಸಾ ನೌಕರಿ ಶುರು ಮಾಡೇನೋ!' ಅಂದ ದೋಸ್ತ.

'ಹೌದಾ? ಕಾಂಗೋ! ಕಾಂಗೋ!' ಅಂದೆ.

ಕಾಂಗೋ ಅಂದ್ರ ಆಫ್ರಿಕಾದ ನಟ್ಟ ನಡು ಇರೋ ದೇಶ ಅಲ್ಲರೀ. congratulations ಅನ್ನೋದರ ಶಾರ್ಟ್ ಫಾರ್ಮ್. ತಿಳೀತ?

'ಯಾವ ಕಂಪನಿ? ಏನು ಹೆಸರು?' ಅಂತ ಕೇಳಿದೆ.

'ಶಟ್ರೋಸಾಫ್ಟ್ ಟೆಕ್ನಾಲಜೀಸ್!' ಅಂದುಬಿಟ್ಟ. ಅಕಟಕಟಾ!

ಏನೇನು ಹೆಸರು ಇಡ್ತಾರಪಾ? ನಮ್ಮ ಕಾಲದಾಗ ಶ್ರೀ ಗಣೇಶ್ ಟ್ರೇಡರ್ಸ್, ಶ್ರೀ ಕಾಳಿಕಾ ಬ್ರದರ್ಸ್ ಹೀಂಗ ಮಂಗಳಕರವಾದ ಹೆಸರು ಇಡತಿದ್ದರು. ಇವರನ್ನ ನೋಡಿದರೆ ಸಾಕು. ಅದೇನೋ IT ಅಂತ. IT ಅಂದ್ರ ನಾನು ಇಟ್ಟಂಗಿ ಟೆಕ್ನಾಲಜಿ ಅಂತ ತಿಳಕೊಂಡಿದ್ದೆ. ನೋಡಿದರೆ ಅದು information technology ಅಂತ. ಒಟ್ಟ ಸುಡಗಾಡು ಒಂದು.

ಹೀಂಗ ಶಟ್ಟ್ರೋಸಾಫ್ಟ್ ಅನ್ನೋ ಕಂಪನಿ ಸೇರಿದ್ದ ದೋಸ್ತ ಒಂದೇ ತಿಂಗಳದಾಗ ಆ ಕಂಪನಿ ಕೆಲಸ ಬಿಟ್ಟುಬಿಟ್ಟ. ಕೆಲಸ ಬಿಟ್ಟಿದ್ದೊಂದೇ ಅಲ್ಲ IT ನೇ ಬಿಟ್ಟುಬಿಟ್ಟ. ಅಷ್ಟು ಸಾಕಾಗಿ ಹೋಗಿತ್ತು ಅವಂಗ. ನನಗ ಭಾಳ ಆಶ್ಚರ್ಯ ಆತು. ಇಷ್ಟು ವೈರಾಗ್ಯ ಬರಲಿಕ್ಕೆ ಏನು ಕಾರಣ ಇರಬಹುದು ಅಂತ.

ಒಂದು ದಿನ ಸಿಕ್ಕ. ಎಲ್ಲೆ ಅಂತೀರಿ? ಅಲ್ಲೇ NP ಒಳಗ. NP ಅಂದ್ರ ನ್ಯೂ ಪ್ರಭಾತ್ ಬಾರ್ & ರೆಸ್ಟೋರಂಟ್ ಅಂತ. ನಮ್ಮ ಊರಿನ ಪ್ರೀಮಿಯಂ ಶೆರೆ ಅಂಗಡಿ. ರೊಕ್ಕ ಇದ್ದಾಗ NP. ಇಲ್ಲಂದ್ರ ಅಂತೂ ಗೊತ್ತೇ ಅದ ಅಲ್ಲ? ಅದೇ ಗ್ವಾಡಿಗೆ ಸುಣ್ಣ ಹೊಡೆಯುವರಿಂದ ಹಿಡಿದು ಕುಂಡಿಗೆ ಸುಣ್ಣ ಹಚ್ಚುವವರ ತನಕ ಎಲ್ಲರೂ ಕುಡಿಯುಲು ಬರುವ ಮಾಳಮಡ್ಡಿಯ ಪ್ರೆಸಿಡೆಂಟ್ ಬಾರ್ & ರೆಸ್ಟೋರಂಟ್.

'ಏನಲೇ ದೋಸ್ತ? ಕೆಲಸ ಬಿಟ್ಟು ಬಿಟ್ಟೀ?' ಅಂತ ಕೇಳಿದೆ.

'ಹೌದಪಾ ಹೌದು! ಬಿಟ್ಟೇ ಬಿಟ್ಟೆ. ಸಾಕಾಗಿ ಹೋತು,' ಅಂದವನೇ ಒಂದು ದೊಡ್ಡ ಡ್ರಿಂಕ್ ಸ್ವಾಹಾ ಮಾಡಿಬಿಟ್ಟ. ಒಮ್ಮೆಲೇ ಅಷ್ಟು ಸ್ವಾಹಾ ಮಾಡಿದರೆ ಮತ್ತೇನು? ಅದೇನು ಕಹಿ ಇರ್ತದೋ ಏನೋ ಗೊತ್ತಿಲ್ಲ. ಕೆಟ್ಟ ಮಾರಿ ಮಾಡಿದ.

'ಯಾಕ? ಏನಾತು? ಭಾರಿ ನೌಕರಿ, ದೊಡ್ಡ ಪಗಾರು, ಆಳು, ಕಾಳು ಅಂತ ಹೇಳಿಕೋತ್ತ ಹೋಗಿದ್ಯಲ್ಲಲೇ? ಹಾಂ? ಇಷ್ಟು ಲಗೂ ಬ್ಯಾಸರಾತ?' ಅಂತ ಕೇಳಿದೆ.

'ಆ ಶಟ್ಟ್ರೋಸಾಫ್ಟ್ ಕಂಪನಿ ಒಳಗ ಎಲ್ಲರೂ ಒಂದು ತರಹದ ಮಂದಿ ನೋಡಪಾ,' ಅಂತ ಹೇಳಿ ಮತ್ತ ಸುಮ್ಮಾದ.

'ಹ್ಯಾಂ????????' ಅಂತ ಫುಲ್ surprise, confuse ಲುಕ್ ಕೊಟ್ಟೆ.

'ಆ ಕಂಪನಿ ಒಳಗ ಇದ್ದವರೆಲ್ಲ ಚಿತ್ರ ವಿಚಿತ್ರ ಹೆಸರಿನ ಶಟ್ಟರುಗಳು. ನನ್ನ ಜೀವನಾ ಹರಾಮ್ ಮಾಡಿಬಿಟ್ಟರು,' ಅಂತ ಗೊಳೋ ಅಂದ.

'ಏನಲೇ ಹಾಂಗಂದ್ರ? ನೀ ಹೇಳಿ ಕೇಳಿ ಯಾಲಕ್ಕಿಶಟ್ಟರ್ ಕಾಲೋನಿ ನಿವಾಸಿ. ಹಾಂಗಿದ್ದಾಗ ಶಟ್ಟರ್ ಅಂದ್ರ ಯಾಕ ತೊಂದ್ರೀ?' ಅಂತ ಕೇಳಿದೆ.

'ನೋಡಪಾ ಆ ಕಂಪನಿ ಒಳಗ ಇರೋ ದೊಡ್ಡ ಮಂದಿ ಎಲ್ಲ ಚಿತ್ರವಿಚಿತ್ರ ಹೆಸರಿನ ಹಾಪಗೋಳು. ಅವರ ಜೋಡಿ ಗುದ್ದಾಡಿ ಗುದ್ದಾಡಿ ಸಾಕಾಗಿ, ಬಿಟ್ಟು ಓಡಿ ಬಂದೆ,' ಅಂತ ಹೇಳಿದ.

ಅಷ್ಟೇ ಅಲ್ಲ ಅವನ ಶಟ್ಟ್ರೋಸಾಫ್ಟ್ ಅನ್ನುವ ಕಂಪನಿ ವೆಬ್ ಸೈಟ್ ತೆಗೆದು ತೋರಿಸಿ ಅದರಾಗ ಮ್ಯಾನೇಜ್ಮೆಂಟ್ ಟೀಂ ತೋರಿಸಿದ .

CEO - ಆನಿಶಟ್ಟರ್
CFO - ಬಗ್ಗಿಶಟ್ಟರ್
COO - ಮಲಗಿಶಟ್ಟರ್
VP Sales - ಕುಂದ್ರಿಶಟ್ಟರ್
VP Products - ನಿಂದ್ರಿಶಟ್ಟರ್

'ಹಾ!! ಹಾ!! ಚಿತ್ರ ವಿಚಿತ್ರ ಹೆಸರಿನ ಶಟ್ಟರುಗಳು ಇದ್ದಾರಲ್ಲಪಾ? ಎಲ್ಲಾ ಶಟ್ಟಿ ಲೋಗ್ ಏನು? ಎಲ್ಲೆ ಮಂಗಳೂರು ಕಡೆ ಮಂದಿ? ಇವರಿಂದ ಏನು ತೊಂದ್ರೀ ನಿನಗ? ಹಾಂ?' ಅಂತ ಕೇಳಿದೆ.

'ಲೇ! ಹುಚ್ಚ ಸೂಳಿ ಮಗನsss! ಅದು ಶಟ್ಟರ್ ಅಲ್ಲಲೇ. ಸರಿ ಮಾಡಿ ಓದು. ನಾನೂ ಹಾಂಗೆ ತಿಳಕೊಂಡು ಆ ದರಿದ್ರ ಕಂಪನಿ ಸೇರಿದ್ದೆ. ನೋಡಿದರೆ ಅದು ಬ್ಯಾರೆನೇ!' ಅಂತ ಬೈದ.

ನೋಡಿದೆ. ಸರಿ ಮಾಡಿ ನೋಡಿದೆ.

ಅಯ್ಯೋ! ಮಹಾ ಮೋಸ ಆಗಿಬಿಟ್ಟದ. ಮರಾ ಮೋಸ. ಸಮೋಸ.

CEO - Ani S Hattar (ಆನಿಶಟ್ಟರ್)
CFO - Baggi S Hattar (ಬಗ್ಗಿಶಟ್ಟರ್)
COO - Malagi S Hattar (ಮಲಗಿಶಟ್ಟರ್)
VP Sales - Kundri S Hattar (ಕುಂದ್ರಿಶಟ್ಟರ್)
VP Products - Nindri S Hattar (ನಿಂದ್ರಿಶಟ್ಟರ್)

'ಹೋಗ್ಗೋ ಇವನೌನಾ!!!!! ಹೋಗಿ ಹೋಗಿ 'ಹಟ್ರಪ್ಪ ಬಗ್ಗಿಸಿಕ್ಯಾರೋ' ಸಂಸ್ಕೃತಿ ಇರುವ ಕಂಪನಿ ಸೇರಿ ಬಿಟ್ಟಿದ್ದಿ  ಅಂತ ಕಾಣಸ್ತದ. ಅಲ್ಲೆಲ್ಲಾ ನಿನ್ನಂತಾ ಸಂಬಾವಿತ, ಸಾಫ್ಟ್ ಮಂದಿ ಬದುಕಿ ಬಾಳೋದು ಭಾಳ ಕಠಿಣ ಅದ ಬಿಡು. ನಿನ್ನ ಹಿಂದ ಮುಂದ ಎಲ್ಲಾ ಬರೋಬ್ಬರಿ ಉಳದದಲ್ಲಾ? ಅಷ್ಟು ಸಾಕು,' ಅಂತ ಹೇಳಿದೆ. 

'ಮುಂದ ಏನು ಮಾಡಲೋ???? ಅದೇ ಚಿಂತಿ' ಅಂದಾ ದೋಸ್ತ.

'ನೋಡಪಾ! ಊಟದ ಚಿಂತಿ ಬ್ಯಾಡ. ಮನಿ ಅಂತೂ ಅದ. ಇನ್ನು ಹೆಂಡ್ತಿ ಮಕ್ಕಳ ಚಿಂತಿ ಅಂತೂ ಬಿಟ್ಟೇ ಬಿಡು' ಅಂತ ಹೇಳಿಬಿಟ್ಟೆ.

'ಏನು ಹಾಂಗಂದ್ರ???????' ಅಂತ ಫುಲ್ ಕ್ವೆಶ್ಚನ್ ಮಾರ್ಕ್ ಒಗೆದು ಬಿಟ್ಟ.

'ನೋಡು,  ಹಣಿ ಮ್ಯಾಲೆ ಗೂಟದ ನಾಮಾ ಉದ್ದಕ ಹಚ್ಚಿಕೊಂಡು ಹೋಗಿ ಉತ್ತರಾದಿ ಮಠದಾಗ ಕೂತರೆ ಊಟ ಅಲ್ಲೇ ಸಿಗ್ತದ. ಅವನೌನ್ ಮೈತುಂಬಾ ಬೂದಿ ಬಳ್ಕೊಂಡು ಹೋಗಿ ಕೂತರ ಶಂಕರ ಮಠದಾಗ ಊಟ ಸಿಗ್ತದ. ಅದರಲ್ಲೇ ಸ್ವಲ್ಪ ಚೇಂಜ್ ಮಾಡಿ ವಿಭೂತಿ ಪಟ್ಟಾ ಹೊಡಕೊಂಡು ಹೋಗಿ, 'ಜ್ಯೋತಿ ಬೆಳಗಿದೆ ಪರಂಜ್ಯೋತಿ ಬೆಳಗಿದೆ' ಅಂತ ಸ್ವಾಮಿಗಳ ಮುಂದ ಹಾಡಿಬಿಟ್ಟರೆ ಮುರಘಾ ಮಠದಲ್ಲಿ ದಾಸೋಹ ತಪ್ಪೋದಿಲ್ಲ. ಇನ್ನೂ ಭಾಳ ಐಡಿಯಾ ಅವ. ಊಟದ ಚಿಂತಿ ಬ್ಯಾಡ ನಿನಗ' ಅಂತ ಹೇಳಿದೆ.

'ಇನ್ನೇನು ಐಡಿಯಾ ಅವಾ?' ಅಂತ ಕೇಳಿದ.

'ಬತ್ತಲೆ ಆಗಿ, ಕೂದಲಾ ಕಿತ್ತುಗೊತ್ತ ಓಡಿಕೋತ್ತ ಹೋದರೆ ಜೈನ ಮಠದಲ್ಲಿ ಊಟ ಗ್ಯಾರಂಟಿ. ಹಾಂಗೆ ಸ್ವಲ್ಪ  ಕ್ರಿಯೇಟಿವ್ ಆದ್ರ ಮಸೀದಿ, ಚರ್ಚ್ ಒಳಗೂ ಬಿರ್ಯಾನಿ, ಕೇಕ್ ಎಲ್ಲಾ ಸಿಗ್ತಾವ ನೋಡಪಾ. ಊಟದ ಚಿಂತಿ ಬ್ಯಾಡಲೇ,' ಅಂತ ಫುಲ್ ಆಶ್ವಾಸನೆ ಕೊಟ್ಟೆ.

'ಹೆಂಡ್ತಿ ಮಕ್ಕಳು????????' ಅಂತ ತಲಿ ಕೆಡಿಸಿಕೊಂಡ.

'ಅದರ ವಿಚಾರ ಬಿಟ್ಟುಬಿಡು ನೀ,' ಅಂದೆ.

'ಅಂದ್ರಾ?????????????????????????'

'ಲೇ! ಹುಚ್ಚ ಸೂಳಿ ಮಗನ! ನೀನೇ ನೌಕರಿ ಇಲ್ಲದ ಅಬ್ಬೇಪಾರಿ. ನಿನ್ನ ಹೆಂಡ್ತಿ ಅಕಿನೇ ನೌಕರಿ ಮಾಡ್ತಾಳ. ಇಲ್ಲಾ ಮಕ್ಕಳನ್ನು ಕರ್ಕೊಂಡು ತವರು ಮನಿಗೆ ರನ್ನಿಂಗ್ ರೇಸ್ ಹಚ್ಚತಾಳ,' ಅಂತ ಹೇಳಿದೆ.

'ಹಾಂಗಂತೀ??????' ಅಂತ ಉದ್ದ ಎಳೆದ.

'ಹೂಂ! ಹಾಂಗsss! ಮೊದಲು ತೀರ್ಥ ಮುಗಿಸು. ಊಟ ಮಾಡೋಣ' ಅಂದೆ.

ಅಷ್ಟರಾಗ ಒಬ್ಬವ ಬಂದು 'ನಮಸ್ಕಾರೀ ಸರ್ರಾ!' ಅಂದ. ಏನೂ ಕೇಳದೇ ಹತ್ತು ರೂಪಾಯಿ ನೋಟು ತೆಗೆದು ಕೈಯಾಗ ಇಟ್ಟೆ. 'ಥ್ಯಾಂಕ್ಸ್ ರೀ ಸರ್ರಾ!' ಅನ್ಕೋತ್ತ ಶೆರೆ ತೊಗೋಳಿಕ್ಕೆ ಹೋತು ಅದು. ಅದು ಗ್ವಾಡಿಗೆ ಸುಣ್ಣಾ ಹೊಡೆಯೋ ಪಾರ್ಟಿ. ಇನ್ನು ಕುಂಡಿಗೆ ಸುಣ್ಣಾ ಹೊಡೆಯೋ ಪಾರ್ಟಿ ಬಂದು, 'ಸರ್ರಾ ನಮಗೂ ಒಂದು ಹತ್ತು ರೂಪಾಯಿ ಕೊಡರಲ್ಲಾ? ಪ್ಲೀಸ್. ನಮಗೂ ಇನ್ನೊಂದು 30 ml ಬೇಕ್ರೀ' ಅನ್ನೋಕಿಂತ ಮೊದಲು ಊಟ ಮುಗಿಸಿ ಓಡೋದು ಒಳ್ಳೇದು.

ಸ್ಪೂರ್ತಿ: ಧಾರವಾಡ ದೋಸ್ತರು ಹೇಳಿದ ಕಥೆಗಳು ;)

Friday, March 06, 2015

ನಾನು ಅಬು ಸಲೇಂ! (ಅಂಡರ್ವರ್ಲ್ಡ್ ಡಾನ್ ಒಬ್ಬನ ಕಥನ)

ಒಂದು ಕಾಲದ ಭೂಗತ ಡಾನ್ ಅಬು ಸಲೇಂಗೆ ಜೀವಾವಧಿ ಶಿಕ್ಷೆ ಕೊನೆಗೆ ಅಂತೂ ಆಗಿದೆ. ಇನ್ನು ಮುಂದೆ ಹೈಕೋರ್ಟ್, ಸುಪ್ರೀಂ ಕೋರ್ಟ್ ಅಂತೆಲ್ಲ ಹೋಗಿ, ಶಿಕ್ಷೆ ಬದಲಾಗಿ ಅಥವಾ ಪೂರ್ತಿ ರದ್ದೇ ಆಗಿಹೋದರೂ ಏನೂ ಆಶ್ಚರ್ಯವಿಲ್ಲ. ಸದ್ಯಕ್ಕಂತೂ ಮುಂಬೈ ಪೋಲೀಸರು ಡಾನ್ ಒಬ್ಬನನ್ನು ಹಣಿದ ಖುಷಿಯಲ್ಲಿದ್ದಾರೆ. ಈ ಹಿಂದೆ ಡಾನ್ ಅರುಣ್ ಗಾವ್ಳಿಯನ್ನು ಹಣಿದು ಜೈಲಿಗೆ ಅಟ್ಟಿತ್ತು ನ್ಯಾಯಾಲಯ. ಅದು ಬಿಟ್ಟರೆ ದೊಡ್ಡ ಮಟ್ಟದ ಡಾನ್ ಗಳನ್ನು, ಅದೂ ವಿದೇಶದಲ್ಲಿ ಕೂತು ದಂಧಾ ಸಂಬಾಳಿಸುತ್ತಿದ್ದ, ಒಂದು ಕಾಲದಲ್ಲಿ ದಾವೂದ ಇಬ್ರಾಹಿಮ್ಮನ ಬಂಟ, ಅದರಲ್ಲೂ ದಾವೂದನ ತಮ್ಮ, ಅತಿ ಖತರ್ನಾಕ್ ಅನೀಸ್ ಇಬ್ರಾಹಿಮ್ಮನ ಏಕ್ದಂ ಖಾಸ್ ಆಗಿದ್ದ ಅಬು ಸಲೇಂನನ್ನು ಹಣಿದಿದ್ದು ಸಣ್ಣ ಮಾತಲ್ಲ. ಅದೂ ಯಾವ ಜಮಾನಾದ ಕೇಸ್ ಅಂದರೆ ೧೯೯೫ ರಲ್ಲಿ ಆದ ಪ್ರದೀಪ್ ಜೈನ್ ಸುಪಾರಿ ಮರ್ಡರ್ ಕೇಸ್. ಮಾಡಿಸಿದ್ದು ೧೯೯೫ ರಲ್ಲಿ. ಮೊದಲು ದುಬೈ, ನಂತರ ಅಮೇರಿಕಾ, ಕೊನೆಗೆ ಪೋರ್ಚುಗಲ್ ನಲ್ಲಿ ಅಡಗಿ ಕುಳಿತಿದ್ದ ಅಬು ಸಲೇಂನನ್ನು ಅಮೇರಿಕಾದ FBI ಸಹಾಯದಿಂದ ಬಂಧಿಸಿ ಮುಂಬೈಗೆ ಎಳೆತಂದಿದ್ದು ೨೦೦೫ ರಲ್ಲಿ. ಹತ್ತು ವರ್ಷದ ಬಳಿಕ. ಈಗ ೨೦೧೫ ರಲ್ಲಿ ಮತ್ತೆ ಬರೋಬ್ಬರಿ ಹತ್ತು ವರ್ಷದ ನಂತರ ಅಪರಾಧಿ ಅಂತ ತೀರ್ಮಾನ ಆಗಿದೆ. ಇನ್ನು ಹತ್ತು ವರ್ಷಗಳ ನಂತರ ಏನು ಕಾದಿದೆಯೋ?

ಅಬು ಸಲೇಂ ಮಾಡಿಸಿದ್ದ ಪ್ರದೀಪ್ ಜೈನ್ ಮರ್ಡರ್ ಕೇಸಿನ ವಿವರ ತೆಗೆದುಕೊಂಡು ಕೂತರೆ ಅದೇ ದೊಡ್ಡ ಕಥೆ. ಅಬು ಸಲೇಂ ಮುಂಬೈಗೆ ಬಂದು ಅನೀಸ್ ಇಬ್ರಾಹಿಮ್ಮನ ಕಣ್ಣಿಗೆ ಬಿದ್ದು ಒಳ್ಳೆ ಕೆಲಸಗಾರ ಅಂತ ಅನ್ನಿಸಿಕೊಂಡಿದ್ದ. ದಾವೂದ್, ಅನೀಸ್ ಇತ್ಯಾದಿ ಇಬ್ರಾಹಿಮ್ಮುಗಳು ೧೯೮೫ ರ ಸುಮಾರಿಗೇ ದುಬೈಗೆ ಹೋಗಿ, ಮಸ್ತಾಗಿ ಕೂತು, ಕ್ರಿಕೆಟ್ ನೋಡುತ್ತ, ಬಾಲಿವುಡ್ ನಟಿಯರನ್ನು ಕರೆಕರೆಸಿಕೊಂಡು, ಮಸ್ತಾಗಿ ಬಾರಿಸುತ್ತ, ಮಜಾ ಮಾಡುತ್ತ ಆರಾಮ ಇದ್ದರು. ಇದೇ ಅಬು ಸಲೇಂ, ಇವನಂತವರೇ ಆದ ಛೋಟಾ ಶಕೀಲ್, ಶರದ್ ಅಣ್ಣಾ ಶೆಟ್ಟಿ, ಛೋಟಾ ರಾಜನ್ ಮುಂತಾದವರು ಮುಂಬೈನಲ್ಲಿದ್ದು ದಂಧೆ ನಡೆಸುತ್ತ, D - ಕಂಪನಿಯ ಝೇಂಡಾ ಊಂಚೆ ರಹೇ ಹಮಾರಾ ಅಂತ ಭಯಂಕರ ಬಿಸಿನೆಸ್ ಮಾಡಿಕೊಂಡಿದ್ದರು.

ಮುಂದೆ ಛೋಟಾ ರಾಜನ್, ಛೋಟಾ ಶಕೀಲ್, ಶರದ್ ಅಣ್ಣಾ ಶೆಟ್ಟಿಯನ್ನು ದಾವೂದ್ ಸುಮಾರು ೧೯೯೦ ರ ಹೊತ್ತಿಗೆ ದುಬೈಗೆ ಕರೆಸಿಕೊಂಡುಬಿಟ್ಟ. ಅಷ್ಟೊತ್ತಿಗೆ ದಾವೂದನ ಸಾಮ್ರಾಜ್ಯ ಸಿಕ್ಕಾಪಟ್ಟೆ ವಿಸ್ತರಿಸಿ, ದುಬೈ ಒಂದು ಕೇಂದ್ರ ಹಬ್ ಆಗಿ, ಅಲ್ಲೇ ಜನ ಜಾಸ್ತಿ ಬೇಕಾಗಿದ್ದರು. ಮತ್ತೆ ದಾವೂದನ ತಮ್ಮಂದಿರಲ್ಲಿ ಅನೀಸ್ ಒಬ್ಬನನ್ನು ಬಿಟ್ಟರೆ ಬಾಕಿ ಯಾರಿಗೂ ಅಂಡರ್ವರ್ಲ್ಡ್ ಗೆ ಬಂದು ಶೈನ್ ಆಗುವ ತಾಕತ್ತು, ತಲೆ ಎರಡೂ ಇರಲಿಲ್ಲ. ಇದ್ದ ತಮ್ಮಂದಿರಾದರೂ ಯಾರು? ಒಬ್ಬ ನೂರಾ. ಅವನಿಗೋ ಬಾಲಿವುಡ್ ಹುಚ್ಚು. ಅಣ್ಣನ ವಶೀಲಿ ಹಚ್ಚಿಕೊಂಡು ಹಿಂದಿ ಸಿನೆಮಾಗಳಿಗೆ ಹಾಡು ಬರೆದುಕೊಂಡಿದ್ದ. ಅದೇ ಅವನ ಹುಚ್ಚು. ಇನ್ನು ಮುಷ್ತಕೀಮ. ಅವನಿಗೆ ಫಿಟ್ಸ್ ಅದು ಇದು ಅಂತ ಕಾಯಿಲೆ. ತಲೆಯೂ ಸ್ವಲ್ಪ ಅಷ್ಟೇ. ದುಬೈನಲ್ಲಿ ಉಂಡಾಡಿ ಗುಂಡನ ಹಾಗೆ ಇದ್ದ. ಇನ್ನೊಬ್ಬವ ಹುಮಾಯುನ್. ಅವನು ಏನೋ ಬೇರೆ ಸಣ್ಣ, ಅಣ್ಣ ಹಾಕಿ ಕೊಟ್ಟಿದ್ದ ದಂಧೆ ಮಾಡಿಕೊಂಡಿದ್ದ. ಮತ್ತೊಬ್ಬವ ಇಕ್ಬಾಲ್. ಅವನು ಸಣ್ಣ ಪ್ರಮಾಣದಲ್ಲಿ ಅಂಡರ್ವರ್ಲ್ಡ್ ನಲ್ಲಿ ಇದ್ದ. ಟ್ರೈನಿ ತರಹ. ಎಲ್ಲರೂ ದುಬೈನಲ್ಲೇ ಇದ್ದರು. ಸಿಕ್ಕಾಪಟ್ಟೆ ಮೀಟರ್ ಇದ್ದ ಹಿರಿಯಣ್ಣ ಶಬ್ಬೀರ್ ಭಾಳ ಹಿಂದೆಯೇ ಗ್ಯಾಂಗ್ ವಾರ್ ನಲ್ಲಿ,  ಗುಂಡು ತಿಂದು ಸತ್ತುಹೋಗಿದ್ದ. ಇವರನ್ನು ಬಿಟ್ಟರೆ ಅಕ್ಕ ಹಸೀನಾ. ಆಕೆ ಮದುವೆಯಾಗಿ ಮುಂಬೈನಲ್ಲೇ ಇದ್ದಳು. ಭಾವ ಇಸ್ಮಾಯಿಲ್ ಪಾರ್ಕರ್ ಅನ್ನುವವನ್ನು indirect ಆಗಿ ದಂಧೆಗೆ ಕೂಡಿಸಿದ್ದ ದಾವೂದ್. ದಾವೂದ್ ವಿರೋಧಿ ಅರುಣ್ ಗೌಳಿ ಅವನನ್ನು ಕೊಂದೇ ಬಿಟ್ಟ. ಯಾಕೆಂದರೆ ದಾವೂದನ ಕಡೆ ಜನ ಅರುಣ್ ಗೌಳಿಯ ಪ್ರೀತಿಯ ತಮ್ಮನನ್ನು ಹುರಿದು ಮುಕ್ಕಿ, ಹಿಂಸಿಸಿ ಕೊಂದಿದ್ದರಲ್ಲ. ಅದಕ್ಕೆ. ಒಟ್ಟಿನಲ್ಲಿ ದಾವೂದನ ಬಿಸಿನೆಸ್ ಬೆಳೆಯುತ್ತಿದ್ದ ರೇಟ್ ಸಿಕ್ಕಾಪಟ್ಟೆ ಇತ್ತು. ಹೀಗಾಗಿ ಆದಷ್ಟೂ ಕುಟುಂಬದವರನ್ನೇ ಇಟ್ಟುಕೊಳ್ಳೋಣ ಅಂತಿದ್ದರೂ ಹೊರಗಿನ ಜನರನ್ನು ಕರೆಸಿಕೊಳ್ಳಲೇ ಬೇಕಾಯಿತು. ಇದೇ ಸ್ಕೀಮಿನಲ್ಲಿ ಮೊದಲ ಬ್ಯಾಚಿನಲ್ಲಿ ದುಬೈಗೆ ಹೋದವರು ಇವರೇ -  ಛೋಟಾ ರಾಜನ್, ಛೋಟಾ ಶಕೀಲ್, ಶರದ್ ಅಣ್ಣಾ ಶೆಟ್ಟಿ.

ಈ ಮೂವರು ದುಬೈಗೆ ಹಾರಿದ್ದೇ ಹಾರಿದ್ದು ಇಲ್ಲಿ ಮುಂಬೈ ಭೂಗತ ಲೋಕದಲ್ಲಿ ಅಬು ಸಲೇಂಗೆ ಪ್ರಮೋಷನ್ ಸಿಕ್ಕಿತು. seniority ಅಂತೂ ಇದ್ದೇ ಇತ್ತು. ಮತ್ತೆ ಅನೀಸ್ ಇಬ್ರಾಹಿಮ್ಮನ ಖಾಸ್ ಬೇರೆ. ಹೀಗಾಗಿ ಸುಮಾರು ೧೯೯೦ - ೧೯೯೩ ರ ವರೆಗೆ ಒಂದು ತರಹದ ಮುಂಬೈನ ಅನಭಿಷಿಕ್ತ ಮಾಫಿಯಾ ದೊರೆಯಂತೆ ಮೆರೆದುಬಿಟ್ಟ ಅಬು ಸಲೇಂ. ಆಗಿನ್ನೂ ಛೋಟಾ ರಾಜನ್ ದಾವೂದನಿಂದ ಬೇರೆಯಾಗಿರಲಿಲ್ಲ. ಇದ್ದ ಸಣ್ಣ ಪುಟ್ಟ ವಿರೋಧಿ ಗುಂಪುಗಳು ಅಂದರೆ ಅಮರ್ ನಾಯಕ್ ಗ್ಯಾಂಗ್, ಅರುಣ್ ಗೌಳಿ ಗ್ಯಾಂಗ್. ಅವರನ್ನೆಲ್ಲ ಭಾರಿ ಸಿಸ್ಟಮ್ಯಾಟಿಕ್ ಆಗಿ ಮಟ್ಟ ಹಾಕುತ್ತಿತ್ತು ದಾವೂದ್ ಗ್ಯಾಂಗ್. ಸರಕಾರ, ಪೊಲೀಸರು ಎಲ್ಲ ಅವರ ಕಿಸೆಯಲ್ಲೇ ಇದ್ದರಲ್ಲ? ಮತ್ತೇನು?

ಅಬು ಸಲೇಂ ಮುಂಬೈನಲ್ಲೇ ಇರುತ್ತಿದ್ದನೋ ಏನೋ. ಆದರೆ ೧೯೯೨ ಡಿಸೆಂಬರ್ ನಲ್ಲಿ ಬಾಬ್ರಿ ಮಸೀದಿ ನೆಲಸಮವಾಯಿತು. ನಂತರ ಮುಂಬೈನಲ್ಲಿ ಸಿಕ್ಕಾಪಟ್ಟೆ ಗಲಭೆಗಳೂ ಆದವು. ಆಗ ಸಂಜತ್ ದತ್ ಎಂಬ ಯಬಡ ಸಿನೆಮಾ ನಟ ತನ್ನ ಸ್ವರಕ್ಷಣೆಗೆ ಅಂತ ಅನೀಸ್ ಇಬ್ರಾಹಿಮ್ಮನಿಗೆ ದಮ್ಮಯ್ಯ ಗುಡ್ಡೆ ಹಾಕಿ, illegal ಆದ, ಮಹಾ ತುಪಾಕಿ AK - 56 ತರಿಸಿಕೊಂಡುಬಿಟ್ಟ. ಅವನ ಅಪ್ಪ ರಾಜಕಾರಣಿ ಸುನೀಲ್ ದತ್ತ ದಂಗೆಯಿಂದ ಸಂತ್ರಸ್ತರಾದ ಜನರ ಸೇವೆ ಅದು ಇದು ಮಾಡಿಕೊಂಡಿದ್ದ. ಅದು ಹಿಂದುಗಳನ್ನು ಕೆರಳಿಸಿತ್ತು. ದತ್ ಕುಟುಂಬಕ್ಕೆ ಸಿಕ್ಕಾಪಟ್ಟೆ ಬೆದರಿಕೆ ಬರುತ್ತಿದ್ದವು. ಸಂಜಯ್ ದತ್ತನ ಅಕ್ಕಂದಿರನ್ನು ರೇಪ್ ಮಾಡುವದಾಗಿ ಎಂದು ಕರೆ ಬಂತೋ, ಅವತ್ತೇ ಸಂಜಯ್ ದತ್ ಬರೋಬ್ಬರಿ ಪೋಲೀಸ್ ಪ್ರೊಟೆಕ್ಷನ್ ತೆಗೆದುಕೊಳ್ಳುವ ಬದಲು ಬೇರೆಯೇ ತರಹದ ಪ್ರೊಟೆಕ್ಷನ್ ಬಗ್ಗೆ ವಿಚಾರ ಮಾಡಿದವನೇ, ಸೀದಾ ಅನೀಸ್ ಇಬ್ರಾಹಿಮ್ಮನಿಗೆ ಫೋನ್ ಹಚ್ಚಿ ಅತ್ತುಬಿಟ್ಟ. ಮೊದಲೇ ಬಂದೂಕುಗಳ ಹುಚ್ಚು ಸಂಜಯ್ ದತ್ತನಿಗೆ. ಈ ಸಲ ದೊಡ್ಡದೇ ಇರಲೀ ಅಂತ 'ಭಾಯಿ, AK - 56 ಕಳಿಸಿಬಿಡು. ಬಾಭಿ ಜಾನ್ ಗೆ ಸಲಾಂ ಹೇಳು. ಮರಿಬೇಡ' ಅಂತ ಇಲ್ಲದ ಮಸ್ಕಾ ಹಚ್ಚೇ ಬಿಟ್ಟ. ಪುಣ್ಯಾತ್ಮನ ಕಾಟ ತಡೆಯಲಾಗದೇ ಅನೀಸ್ ಇಬ್ರಾಹಿಮ್ ಅಬು ಸಲೇಂನಿಗೆ ಫೋನಾಯಿಸಿ, 'ಯೋ! ಹೇಗೂ ದಾಸ್ತಾನು ಮಾಡಿಟ್ಟಿರುವ AK - 56 ಇವೆ. ಒಂದ್ನಾಲ್ಕು ಅವು, ಇನ್ನೊಂದ್ನಾಲ್ಕು ಪಿಸ್ತೂಲ್ ಎಲ್ಲ ತೆಗೆದುಕೊಂಡು ಹೋಗಿ ಕೊಟ್ಟು ಬಾ ಸಂಜಯ್ ದತ್ತನಿಗೆ' ಅಂದು ಬಿಟ್ಟ. ಇದೇ ಅಬು ಸಲೇಂನೇ ಖುದ್ದಾಗಿ ಹೋಗಿ ಸಂಜಯ್ ದತ್ತನಿಗೆ AK - 56 ಕೊಟ್ಟು ಬಂದಿದ್ದ. ಅಬು ಸಲೇಂನಿಗೆ ಸಂಜಯ್ ದತ್ತ್ ಎನ್ನುವ ಆಕಾಲದ ಸೂಪರ್ ಹೀರೋ ಬಗ್ಗೆ ಅದೆಷ್ಟು ಹುಚ್ಚು ಇತ್ತು ಅಂದರೆ ಬಂದೂಕು ಕೊಡಲು ಹೋದವ ಸಂಜಯ್ ದತ್ತನನ್ನು ಮುಟ್ಟಿ ಮುಟ್ಟಿ, ಕೈ ಒತ್ತಿ ಒತ್ತಿ, ಸಿಕ್ಕಾಪಟ್ಟೆ ಅಪ್ಪಿಕೊಂಡು, ತಬ್ಬಿಕೊಂಡು ತನ್ನ hero worship ತೀಟೆ ತೀರ್ಸಿಕೊಂಡು ಬಂದಿದ್ದ. ಅಷ್ಟೆಲ್ಲ ಆದ ಮೇಲೆಯೇ ಅವನು ಬ್ಯಾಗ್ ಬಿಚ್ಚಿ ಬಂದೂಕು ತೋರಿಸಿದ್ದು. ದತ್ತ ಒಂದೋ ಎರಡೋ ಬಂದೂಕು ಇಟ್ಟುಕೊಂಡು, ಉಳಿದವನ್ನು ವಾಪಸ್ ಕಳಿಸಿದ್ದ. ಅಂದು ಹಾಗೆ ಸಂಜಯ್ ದತ್ ನಿಂದ, ಅವನ ಭೇಟಿಯಿಂದ, ಮುಟ್ಟಿ ಮುಟ್ಟಿ ಮಾತಾಡಿಸಿ ಬಂದ ಸಂತೋಷದಿಂದ ಅಬು ಸಲೇಂ ಇಷ್ಟು ಖುಷ್ ಆಗಿದ್ದ ಅಂದರೆ ಮುಂದಿನ ಅದೆಷ್ಟೋ ದಿನ ಸ್ನಾನ ಮಾಡೋದು ದೂರ ಉಳಿಯಿತು, ಕೈ ಸಹ ತೊಳೆಯಲೇ ಇಲ್ಲವಂತೆ. ಇದ್ದಷ್ಟು ದಿವಸ ಇರಲಿ ಸಂಜಯ್ ದತ್ತನ ಟಚಿಂಗ್  ಟಚಿಂಗ್!

ಇದೇ ಅಬು ಸಲೇಂ ಮುಂದೆ ಕೇವಲ ನಾಲ್ಕೈದೇ ವರ್ಷದಲ್ಲಿ ಯಾವ ಪರಿ ಬೆಳೆದು ನಿಂತ ಅಂದರೆ ಬಾಲಿವುಡ್ಡಿನ ಪೂರ್ತಿ ಉಸ್ತುವಾರಿಯನ್ನು ದಾವೂದ್ ಮತ್ತು ಅನೀಸ್ ಅವನಿಗೇ ವಹಿಸಿ, ವಿಜಯೀ ಭವ ಅಂದುಬಿಟ್ಟರು. ಆವತ್ತು ಸಂಜಯ್ ದತ್ತನನ್ನು ಆ ಪರಿ ಆರಾಧಿಸಿ ಹೋಗಿದ್ದ ಅಬು ಸಲೇಂ ಮುಂದೊಂದು ದಿವಸ ದುಬೈನಲ್ಲಿ ಕುಳಿತು ದತ್ತನಿಗೇ ಒಂದು ಧಮಕಿ ಫೋನ್ ಮಾಡಿಬಿಟ್ಟ. ಯಾಕೆಂದರೆ ಸಂದರ್ಭ ಹಾಗಿತ್ತು. ಸೂಪರ್ ಸ್ಟಾರ್ ದತ್ ಒಬ್ಬ ನಟಿ ಜೊತೆ ನಟಿಸಲು ಒಪ್ಪಿರಲಿಲ್ಲ. ಅವನದೂ ಪಾಯಿಂಟ್ ಇತ್ತು. ತಾನು ಸೂಪರ್ ಸ್ಟಾರ್. ಪಕ್ಕ ಸೂಪರ್ ಸ್ಟಾರ್ ಮಟ್ಟದ ನಟಿಯೇ ಬೇಕು. ಈಕೆ ನೋಡಿದರೆ ಯಾರೋ ಅಬ್ಬೇಪಾರಿ. ಒಂದೋ ಎರಡೋ ತಗಡು ತೋಪಾದ ಚಿತ್ರಗಳಲ್ಲಿ, ಕನ್ನಡದಲ್ಲಿ ನಟಿಸಿದ್ದಾಳೆ. ಅಷ್ಟೇ. ಅಂತಾಕೆ ಜೊತೆ ಹೀರೋ ಆಗು ಅಂದ್ರೆ? ಸುಮ್ನೇನಾ? ಆವಾಗ ಬಂತು ನೋಡಿ ಅಬು ಸಲೇಂ ಭಾಯಿಯ ಫೋನ್. ಮುಚ್ಚಿಕೊಂಡು ಒಪ್ಪಿಕೊಂಡ ದತ್. ಯಾರು ಅಂದ್ರಾ  ಆ ನಟಿ? ಅವಳೇ ನಟೋರಿಯಸ್ ಮೋನಿಕಾ ಬೇಡಿ. ಆ ಹೊತ್ತಿಗಾಗಲೇ ಆಕೆ ಅಬು ಸಲೇಂ ಭಾಯಿ ಜೊತೆ ಜಮ್ಮ ಚಕ್ಕ ಎಲ್ಲಾ ಮಾಡಿ, ಡಾನ್ ಭಾಯಿಯ ಮಾಲು ಅಂತ ಚಲಾವಣೆಯಲ್ಲಿ ಇದ್ದಳು. ಅದು ಸಂಜಯ್ ದತ್ತನಿಗೆ ಗೊತ್ತಿತ್ತಾ? ನಮಗೆ ಗೊತ್ತಿಲ್ಲ. ಮೋನಿಕಾ ಬೇಡಿಗೆ ಭಾಬಿ ಭಾಬಿ (ಅತ್ತಿಗೆ) ಅನ್ನುತ್ತ ಸಂಜಯ್ ದತ್ತ್ ಸಿನೆಮಾ ಮಾಡಿಕೊಟ್ಟು ಆವತ್ತಿನ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದ.

ಮುಂದೆ ಬರೋಬ್ಬರಿ ಐದು ವರ್ಷಗಳ ನಂತರ ಇದೇ ಅಬು ಸಲೇಂ ನಟ ಸಂಜಯ್ ದತ್ತನನ್ನು ಉಡಾಯಿಸಿಬಿಡುವಂತೆ ಸುಪಾರಿ ಕೊಟ್ಟುಬಿಟ್ಟ. ಕಾರಣ - ಗದ್ದಾರಿ! ಮಿತ್ರದ್ರೋಹ!

ಆ ಹೊತ್ತಿಗೆ ಅಬು ಸಲೇಂ ದಾವೂದ್ ಕಂಪನಿ ಬಿಟ್ಟು, ತನ್ನದೇ ಸ್ವತಂತ್ರ ಗ್ಯಾಂಗ್ ಮಾಡಿಕೊಂಡು, ಎಲ್ಲಾ ವ್ಯವಹಾರ ಅಮೇರಿಕಾದ ಅಟ್ಲಾಂಟ ನಗರದಿಂದ ನಡೆಸುತ್ತಿದ್ದ. ವಿಚಿತ್ರವೆನಿಸಿದರೂ ಸತ್ಯ. ಪುಣ್ಯಾತ್ಮ ಅಬು ಸಲೇಂ ಅಮೇರಿಕಾಗೆ software ಇಂಜಿನಿಯರ್ ಜನ ಬರುವ H1-B ವೀಸಾದಲ್ಲಿ ಬಂದುಬಿಟ್ಟಿದ್ದ! ಅದೆಲ್ಲ ೨೦೦೦ ಸಮಯ. ಅಮೇರಿಕಾದಲ್ಲಿ ಡಾಟ್ ಕಾಂ ಬೂಮ್ ಅನ್ನುವ ಒಂದು ತರಹದ ಹುಚ್ಚ್ಮುಂಡೆ ಮದುವೆ. ಸಾಫ್ಟ್ವೇರ್ ಇಂಜಿನಿಯರ್ ಅಂತ ಬೋರ್ಡ್ ಹಾಕಿಕೊಂಡು ಎಂತೆಂತವರೋ ಬಂದು ಕೂತಿದ್ದರು. ಅದೇ ರೀತಿ ನಕಲಿ ಹೆಸರಲ್ಲಿ ಪಾಸ್ಪೋರ್ಟ್ ಮಾಡಿಸಿದ್ದ ಅಬು ಸಲೇಂ ಸಹ ಅವನದೇ ಬೇನಾಮಿ IT ಕಂಪನಿಯೊಂದಕ್ಕೆ ಸಾಫ್ಟ್ವೇರ್ ಇಂಜಿನಿಯರ್ ಅಂತ ಹೇಳಿ ಬಂದು ಕೂತಿದ್ದ. ಯಾರಿಗಿದೆ ಯಾರಿಗಿಲ್ಲ ಆ ಭಾಗ್ಯ?

ಸಂಜಯ್ ದತ್ತನಿಗೆ ಎಲ್ಲ ಮಾಫಿಯಾ ಮಂದಿ ಅಂದ್ರೆ ಸಂಬಂಧಿಗಳಿಗಿಂತ ಹೆಚ್ಚು. ೧೯೯೯ -೨೦೦೦ ರ ಮಾತು. ಪುಣ್ಯಾತ್ಮ ಒಮ್ಮೆ ಶಿರಡಿಗೆ, ಸಾಯಿಬಾಬಾನ ದರ್ಶನಕ್ಕೆ ಅಂತ ಹೊರಟವ ಮಧ್ಯೆ ನಾಸಿಕ್ ಪಟ್ಟಣದಲ್ಲಿ ತಂಗಿದ್ದ. ಜೊತೆಗೆ ನಿರ್ಮಾಪಕ ಸಂಜಯ್ ಗುಪ್ತಾ, ನಿರ್ದೇಶಕ ಸಂಜಯ್ ಮಂಜ್ರೇಕರ್ ಇದ್ದರು. ಎಲ್ಲರೂ ಸರಿಯಾಗಿ ಬಕಾರ್ಡಿ ರಮ್ ಸೇವನೆ ಮಾಡಿ ಕೂತಿದ್ದರು. ಏನು ಮೂಡು ಬಂತೋ ಏನೋ. ಸೀದಾ ಕರಾಚಿಯಲ್ಲಿದ್ದ ಛೋಟಾ ಶಕೀಲನಿಗೆ ಫೋನ್ ಮಾಡಿಬಿಟ್ಟ ಸಂಜಯ್ ದತ್. ಛೋಟಾ ಶಕೀಲನನ್ನು ಇಂಪ್ರೆಸ್ ಮಾಡಲೋ ಏನೋ ಗೊತ್ತಿಲ್ಲ. ಅಬು ಸಲೇಂನನ್ನು ಬೈದುಬಿಟ್ಟ. ಯಾಕೆಂದರೆ ಆ ಕಾಲದ ದೊಡ್ಡ ಹೀರೋಯಿನ್ ಒಬ್ಬಳಿಗೆ ಅಬು ಸಲೇಂ ತುಂಬ ತೊಂದರೆ ಕೊಡುತ್ತಿದ್ದಂತೆ. ಸಂಜಯ್ ದತ್ ಜೊತೆಗೆ ಏನೋ ಒಂದು ರೀತಿಯ ವಿಶೇಷ ಸಂಬಂಧ ಹೊಂದಿದ್ದ ಆಕೆ ಎಲ್ಲ ಹೇಳಿಕೊಂಡಿದ್ದಳು. ಗೆಳತಿ ಮುಂದೆ ರೋಪ್  ಜಮಾಯಿಸಲು ತಾನು ಛೋಟಾ ಶಕೀಲ್ ಭಾಯಿ ಜೊತೆ ಮಾತಾಡಿ, ಅಬು ಸಲೇಂನನ್ನೇ ಮುಗಿಸಿಬಿಡುವದಾಗಿ ಭೋಂಗು ಬಿಟ್ಟಿದ್ದ ದತ್. ಅದೇ ಪ್ರಕಾರ ಮಾತೂ ಆಡಿಬಿಟ್ಟ.

ಛೋಟಾ ಶಕೀಲ್ ಬಿಟ್ಟಾನೆಯೇ? ಸರಿಯಾಗಿ ಗಾಳ ಹಾಕಿ ಸಂಜಯ್ ದತ್ ಮೂಲಕ ಅಬು ಸಲೇಂ  ಬಗ್ಗೆ ಎಲ್ಲ ಮಾಹಿತಿ ತೆಗೆದ. ಸಂಜಯ್ ದತ್ ಮತ್ತೆ ಇತರೆ ನಟ ನಟಿಯರು ಪ್ರೊಗ್ರಾಮ್ ಮಾಡಲೆಂದು ಅಮೇರಿಕಾಗೆ ಬಂದಾಗ, ಅಬು ಸಲೇಂನನ್ನ ಮೋಸದಿಂದ ನ್ಯೂಜರ್ಸಿಗೆ ಕರೆಯಿಸಿ, ಕೊಂದು ಹಾಕುವ ಖತರ್ನಾಕ್ ಪ್ಲಾನ್ ಹಾಕಿದ್ದ ಛೋಟಾ ಶಕೀಲ್. ಅದರಲ್ಲಿ ದತ್ ಭಾಗಿಯಾಗಿದ್ದ. ಹಾಗಂತ ನಂಬಿಕೆ ಅಬು ಸಲೇಂನ ತಲೆಯಲ್ಲಿಯಂತೂ ಕೂತು ಬಿಟ್ಟಿತ್ತು. ಛೋಟಾ ಶಕೀಲ್ ಹಾಕಿದ ಸ್ಕೆಚ್ ಹೇಗೋ ಗೊತ್ತಾಗಿ ನ್ಯೂಜರ್ಸಿಗೆ ಬರದೇ ಪ್ರಾಣ ಉಳಿಸಿಕೊಂಡ ಅಬು ಸಲೇಂ. ಆದರೆ ಕೊತ ಕೊತ ಕುದಿಯುತ್ತಿದ್ದ ಡಾನ್ ಅಬು ಸಲೇಂ. ಫೋನ್ ಎತ್ತಿದವನೇ ಮುಂಬೈಗೆ ಫೋನ್ ಮಾಡಿ ಸಂಜಯ್ ದತ್ ಮತ್ತು ಸಂಜಯ್ ಗುಪ್ತಾರ ಸುಪಾರಿ ಕೊಟ್ಟೇ ಬಿಟ್ಟ. ಫಿನಿಶ್! ಖತಂ ಕರ್ ಡಾಲೋ ಸಾಲೊಂಕೋ!

ಅಬು ಸಲೇಂ ಕಳಿಸಿದ್ದ ಸುಪಾರಿ ಹಂತಕರು ಹೋಗಿ ಗೋವಾದಲ್ಲಿ ಹೊಂಚು ಹಾಕಿದ್ದರು. ಯಾಕೆಂದರೆ ಸಂಜಯ್ ದತ್ ಮತ್ತು ಸಂಜಯ್ ಗುಪ್ತಾ ಅಲ್ಲಿಗೆ  ಹೋಗಿದ್ದರು. ಭೂಗತ ಲೋಕ ಮತ್ತು ಬಾಲಿವುಡ್ ಮಧ್ಯೆ ಅದೇನೇನು ತರಹದ ಕಮ್ಯುನಿಕೇಷನ್ ಲಿಂಕುಗಳು ಇರುತ್ತವೋ ಗೊತ್ತಿಲ್ಲ. ಒಟ್ಟಿನಲ್ಲಿ ಸಂಜಯ್ ದತ್ ಗೆ ತನ್ನ ಮೇಲೆ ಜಾರಿ ಮಾಡಲಾಗಿರುವ ಸುಪಾರಿ ಬಗ್ಗೆ ಗೊತ್ತಾಗಿಯೇ ಹೋಯಿತು. ಹೋಟೆಲ್ ರೂಂ ಹೊಕ್ಕಿ, ಒಳಗಿಂದ ಬೋಲ್ಟ್ ಹಾಕಿಕೊಂಡವ ಹೊರಗೆ ಬಂದರೆ ಕೇಳಿ. ಹೇಗೋ ಮಾಡಿ ಅಬು ಸಲೇಂಗೆ ತುಂಬ ಆತ್ಮೀಯನಾದ ಮಿತ್ರನೊಬ್ಬನ ಕಾಂಟಾಕ್ಟ್ ದೊರೆಕಿಸಿಕೊಂಡ ದತ್, ಅವನಿಗೆ ಫೋನ್ ಹಚ್ಚಿ ಗೊಳೋ ಅಂದ. ಅವನು ಎಂತಹ ದೋಸ್ತ ಅಂದ್ರೆ ಅಬು ಸಲೇಂ ಅವನ ಮಾತಿಗೆ ದೂಸರಾ ಹೇಳುವ ಚಾನ್ಸೇ ಇರಲಿಲ್ಲ. ಅದೆಷ್ಟೋ ಕೋಟಿ ರೂಪಾಯಿಗಳಿಗೆ ಮಾಂಡವಳಿ ಸಂಧಾನವಾಯಿತು. ಗೆಳೆಯನ ಮಾತಿಗೆ ಒಪ್ಪಿದ ಅಬು ಸಲೇಂ ಸುಪಾರಿ ವಾಪಸ್ ತೆಗೆದುಕೊಂಡ. ಆದರೂ ದತ್ತನಿಗೆ ಗೋವಾ ಬಿಟ್ಟು ಬರಲು ಅಂಜಿಕೆ. ದೂರ ಅಮೇರಿಕಾದಲ್ಲಿ ಕೂತ ಡಾನ್ ಏನೋ ಸುಪಾರಿ ವಾಪಸ್ ತೆಗೆದುಕೊಂಡ. ಆದರೆ ಅವನ ಬಂಟರು ಅಲ್ಲೇ ಗೋವಾದಲ್ಲಿ ಹೋಟೆಲ್ ಮುಂದೆ ಘೋಡಾ (ಪಿಸ್ತೂಲ್) ಹಿಡಿದುಕೊಂಡು ಜಾಗಿಂಗ್ ಮಾಡುತ್ತಿದ್ದಾರಲ್ಲ? ಅವರಿಗೆ ಅಕಸ್ಮಾತ ಮೆಸೇಜ್ ಬರದೇ, ಮೊದಲಿನ ಅಣತಿಯಂತೆ ಗೇಮ್ ಬಾರಿಸಿಬಿಟ್ಟರೆ? ಖೇಲ್ ಖತಂ ಮಾಡಿಬಿಟ್ಟರೆ? ಅದೆಲ್ಲ ರಿಸ್ಕ್ ಬೇಡವೇ ಬೇಡ ಅಂತ ಮಾಂಡವಳಿ ಮಧ್ಯಸ್ಥಿಕೆ ವಹಿಸಿದ್ದ ಅಬು ಸಲೇಂನ ಗೆಳೆಯನನ್ನೇ ಗೋವಾಕ್ಕೆ ಬಂದು, ಅವನ ಕಾರಿನಲ್ಲೇ ಮುಂಬೈಗೆ ಕರೆದುಕೊಂಡು ಹೋಗುವಂತೆ ದುಂಬಾಲು ಬಿದ್ದು ಬಿಟ್ಟ ಸಂಜಯ ದತ್ತ. ಪಕ್ಕವಾದ್ಯ ನುಡಿಸುತ್ತ ನಡಗುತ್ತ ನಿಂತಿದ್ದವನು ನಿರ್ಮಾಪಕ ಸಂಜಯ್ ಗುಪ್ತಾ. ಇವರ ರಚ್ಚೆ ತಾಳಲಾಗದೇ, ಒಂದಿಷ್ಟು ಹೆಚ್ಚಿಗೆ ಪೇಮೆಂಟ್ ಡಿಮ್ಯಾಂಡ್ ಮಾಡಿದ ಅಬು ಸಲೇಂನ ಗೆಳಯ, ಖುದ್ದಾಗಿ ಬಂದು, ಗೋವಾದಿಂದ ಈ ಇಬ್ಬರನ್ನು ಕರೆದುಕೊಂಡು ಬಂದು, ಸುರಕ್ಷಿತವಾಗಿ ಮುಂಬೈ ಮನೆ ಮುಟ್ಟಿಸಿದ. ಮುಂದೆ ಬರೋಬ್ಬರಿ ರೊಕ್ಕ ಗುಂಜಿದ. ಹೀಗೆ ಒಂದು ಕಾಲದ ಬಾಲಿವುಡ್ಡಿನ ತನ್ನ ಆರಾಧ್ಯದೈವಕ್ಕೇ ಸುಪಾರಿ ಕೊಟ್ಟಿದ್ದ ಖತರ್ನಾಕ್ ಡಾನ್ ಅಬು ಸಲೇಂ.

ಸಂಜಯ್ ದತ್ತನಿಗೆ ಅಬು ಸಲೇಂ ಬಂದೂಕು ಕೊಟ್ಟಿದ್ದ ಅಂತ ಹೇಳುತ್ತ ಹೇಳುತ್ತ ಇದೆಲ್ಲ ನೆನಪಾಯಿತು. ಆವತ್ತು ದತ್ತನಿಗೆ ಗನ್ ಕೊಟ್ಟು ಬಂದಿದ್ದೇ ಬಂದಿದ್ದು. ಮುಂದೆ ಕೆಲವೇ ದಿವಸಗಳಲ್ಲಿ ಮುಂಬೈನಲ್ಲಿ ೧೯೯೩ ರ ಭೀಕರ ಸರಣಿ ಬಾಂಬ್ ಸ್ಪೋಟಗಳು ಆದವು. ಅಬು ಸಲೇಂನಿಗೆ ಸುಳಿವು ಹತ್ತಿತ್ತು. ಇನ್ನು ಮುಂಬೈನಲ್ಲೇ ಇದ್ದರೆ ಪೊಲೀಸರು ಹಿಡಿಯದೇ ಬಿಡುವದಿಲ್ಲ ಅಂದವನೇ ತನ್ನ ಮೂಲ ರಾಜ್ಯ ಉತ್ತರ ಪ್ರದೇಶಕ್ಕೆ ಗಾಡಿ ಹತ್ತಿಬಿಟ್ಟ. ಅಲ್ಲಿಂದ ಪಕ್ಕದ ಬಡಾವಣೆಯಂತೆ ಇರುವ ನೇಪಾಳ ಸೇರಿಕೊಂಡು ಸ್ವಲ್ಪ ರೆಸ್ಟ್ ಮಾಡಿದ. ದಾವೂದ್, ಅನೀಸ್ ತಮ್ಮ ಒಳ್ಳೆ ಕೆಲಸಗಾರನ ಕೈಬಿಡಲಿಲ್ಲ. ೧೯೯೩ ರ ಒಂದು ದಿನ ನೇಪಾಳದ ಖಾಟ್ಮಾಂಡುವಿನಿಂದ ದುಬೈಗೆ ಹಾರಿದ ಅಬು ಸಲೇಂ.

ವಿಮಾನದಲ್ಲಿ ಚಿಕ್ಕ ನಿದ್ದೆ ಮಾಡಿ ಮುಗಿಸಿ, ದುಬೈಲ್ಲಿ ಇಳಿದರೆ ಸ್ವಾಗತಿಸಲು ಬಂದು ನಿಂತವರು ಪುರಾತನ ಮಿತ್ರರು - ಛೋಟಾ ಶಕೀಲ್ ಮತ್ತು ಶರದ್ ಅಣ್ಣಾ ಶೆಟ್ಟಿ. ಏನೋ ಮಿಸ್ ಆದಂತೆ ಕಂಡಿತು ಅಬು ಸಲೇಂಗೆ. ಮತ್ತೊಬ್ಬ ಮಿತ್ರ ಛೋಟಾ ರಾಜನ್ ಯಾಕೆ ಬರಲಿಲ್ಲ  ಅಂತ ವಿಚಾರ ಬಂತೇ? ಗೊತ್ತಿಲ್ಲ. ಯಾಕೋ ಏನೋ ರಾಜನ್ ಇಲ್ಲ ಅಂದುಕೊಂಡ.

ಹೆಚ್ಚಾಗಿ ಅಬು ಸಲೇಂನಿಗೆ ಆವತ್ತು ಗೊತ್ತಿರಲಿಲ್ಲ. ಛೋಟಾ ರಾಜನ್ ದಾವೂದ್ ಗ್ಯಾಂಗಿನಿಂದ ಶೀಘ್ರವೇ ಬೇರೆಯಾಗಿ ಭಾರತದ ಬೇಹುಗಾರಿಕೆ ಸಂಸ್ಥೆಗಳಿಗಾಗಿ ಕೆಲಸ ಶುರುಮಾಡುವನಿದ್ದಾನೆ ಅಂತ. ಮುಂಬೈ ಸ್ಪೋಟದ ರೂವಾರಿ ದಾವೂದ್ ಎಂಬ ಬೆಂಕಿಯೊಂದಿಗೆ ಹೋರಾಡಲು ಮತ್ತೊಂದು ಜ್ವಾಲೆಯ ಜರೂರತ್ತಿತ್ತು. ಛೋಟಾ ಶಕೀಲ್ ತನ್ನ ವಿರುದ್ಧ ದಾವೂದನ ಕಿವಿಯೂದಿ ತಲೆ ಕೆಡಿಸುತ್ತಿದ್ದಾನೆ ಅಂತ ಬೇಸರಗೊಂಡಿದ್ದ ರಾಜನ್ ಅಂತಹದೇ ಒಂದು ಅವಕಾಶಕ್ಕೆ ಕಾಯುತ್ತಿದ್ದ. ಎಂದು ತನ್ನ ವಿರುದ್ಧವೇ ಸುಪಾರಿ ಇಶ್ಯೂ ಆಗಿದೆ ಅನ್ನುವದರ ಸುಳಿವು ಹತ್ತಿತೋ ಅಂದೇ ಅಬುಧಾಬಿಯ ಭಾರತ ದೂತಾವಾಸದ ಎದುರು ಹೋಗಿ ಅಂಬೋ ಅಂದುಬಿಟ್ಟ ರಾಜನ್! ಅಂದೇ D-ಕಂಪನಿ ಒಡೆದಿದ್ದು.

ದುಬೈ ವಿಮಾನ ನಿಲ್ದಾಣದಿಂದ ಸೀದಾ ದಾವೂದನ ಭಯಂಕರ ಲಕ್ಸುರಿ ಬಂಗಲೆ ವೈಟ್ ಹೌಸ್ ಗೆ ಕರೆದುಕೊಂಡು ಹೋದರು ಮಿತ್ರರು. ಆಹೊತ್ತಿಗಾಗಲೇ ದಾವೂದ್ ಮತ್ತು ಸಹೋದರರು ದುಬೈ ಬಿಟ್ಟು ಕರಾಚಿ ಸೇರಿಕೊಂಡಿದ್ದರು. ಮುಂಬೈ ಸ್ಪೋಟದ ನಂತರ ಅವರಿಗೆ ದುಬೈ ಸೇಫ್ ಆಗಿರಲೇ ಇಲ್ಲ.

ಮನೆಗೆ ಬಂದು, ಫ್ರೆಶ್ ಆಗಿ ಈಚೆ ಬಂದರೆ ಫೋನ್ ಮೊರೆಯುತ್ತಿತ್ತು. ಅಬು ಸಲೇಂ ಫೋನ್ ಎತ್ತಿದರೆ ಆ ಕಡೆಯಿಂದ 'ಬರ್ಕುರ್ದಾರ್ ಸಲಾಂ ವಾಲೆಕುಂ. ವೆಲ್ಕಮ್ ಟು ದುಬೈ' ಅಂತ ಅಬ್ಬರಿಸಿದವನು ಕರಾಚಿಯಿಂದ ಮಾತಾಡುತ್ತಿದ್ದ ದಾವೂದನ ತಮ್ಮ ಡಾನ್ ಅನೀಸ್ ಇಬ್ರಾಹಿಂ!

ಹೀಗೆ ದುಬೈಗೆ ಬಂದು ಸೆಟಲ್ ಆದ ಅಬು ಸಲೇಂ ಮಾಡಿದ ಹಾವಳಿಗಳು ಒಂದೇ ಎರಡೇ. ಅದರಲ್ಲಿ ಒಂದು ದೊಡ್ಡ ಪ್ರಕರಣವೇ ಪ್ರದೀಪ್ ಜೈನ್ ಸುಪಾರಿ ಮರ್ಡರ್ ಕೇಸ್. ಅದೇ ಇಂದು ಜೀವಾವಧಿ ಶಿಕ್ಷೆಗೆ ಕಾರಣವಾಗಿದೆ.

* ಎಲ್ಲ ಮಾಹಿತಿ - My Name Is Abu Salem by S. Hussain Zaidi - ಎಂಬ ಪುಸ್ತಕದಿಂದ ಎತ್ತಿದ್ದು.

* ಅಂತ್ಯದ ದುಬೈ ಏರ್ಪೋರ್ಟ್ ಸೀನ್ ಮತ್ತು ನಂತರದ್ದು ನನ್ನ ಊಹೆ.

* ಅಬು ಸಲೇಂ ಬಗ್ಗೆ ಮತ್ತೊಂದು ಬ್ಲಾಗ್ ಪೋಸ್ಟ್ - ಮಾಲು ಸಕತ್ತಾಗೈತೆ! ರಾತ್ರಿಗೆ ನನ್ನ ಬಳಿ ಕಳಿಸಿಬಿಡು...ಡಾನ್ ಅಬು ಸಲೇಂ ಕಥನ

Wednesday, March 04, 2015

ಬಾಳಿ ಹಣ್ಣು ಐತ್ರೀ?


ಕಾಡಿನಾಗಿದ್ದ ಮಂಗ್ಯಾವೊಂದು ನಾಡಿಗೆ ಬಂದು ಸೆಟಲ್ ಆಗಿಬಿಡ್ತು. ನಾಡಿಗೆ ಬಂದು ಸೆಟಲ್ ಏನೋ ಆತು. ಆದರ ಊಟಕ್ಕ ಏನು ಮಾಡೋದು? ಅಲ್ಲೆ ಇಲ್ಲೆ ಅಡ್ಯಾಡ್ತಿತ್ತು. ಮಂದಿ, 'ಪಾಪ ಮಂಗ್ಯಾ!' ಅಂತ ಹೇಳಿ ಬಾಳಿ ಹಣ್ಣು ಕೊಟ್ಟು ಕಳಸ್ತಿದ್ದರು. ಅದೇ ರೂಢಿ ಆಗಿಬಿಡ್ತು ಮಂಗ್ಯಾಗ. ಸಿಕ್ಕ ಕಡೆ ಹೋಗೋದು, 'ಬಾಳಿ ಹಣ್ಣು ಐತ್ರೀ? ಪ್ಲೀಸ್ ಕೊಡ್ರೀ,' ಅಂತ ಕೇಳೋದು. ಇದ್ರಂತೂ ಕೊಟ್ಟೇ ಕೊಡ್ತಾರ. ಇಲ್ಲದಿದ್ದರೂ 'ಪಾಪ ಮಂಗ್ಯಾ' ಅಂತ ಹೊರಗಿಂದ ತರಿಸ್ಯಾದ್ರೂ ಕೊಡ್ತಾರ. ಮಂಗ್ಯಾ ಈ ಪದ್ಧತಿ ರೂಢಿ ಮಾಡಿಕೊಂಡು ಆರಾಮ ಇತ್ತು.

ಒಂದು ದಿವಸ ಮಂಗ್ಯಾ ಒಂದು ಬಾರ್ ಹೊಕ್ಕಿಬಿಡ್ತು. ಪಾಪ ಅದಕ್ಕೇನು ಗೊತ್ತು ಬಾರ್ ಅಂದ್ರೇನು ಅಂತ. ಬಾರಿಗೆ ಹೋಗಿ ಬಾಳಿ ಹಣ್ಣು ಕೇಳೋದು ಅಂದ್ರ ಮಟನ್ ಅಂಗಡಿಗೆ ಹೋಗಿ ಸತ್ನಾರಣ ಪ್ರಸಾದ ಕೇಳಿದಂಗ. ಆದ್ರ ಮಂಗ್ಯಾಗ ಗೊತ್ತಿಲ್ಲ.

ಯಥಾ ಪ್ರಕಾರ 'ಬಾಳಿ ಹಣ್ಣು ಐತ್ರೀ? ಪ್ಲೀಸ್ ಕೊಡ್ರೀ,' ಅಂತ ಕೇಳ್ತು ಮಂಗ್ಯಾ.

'ಇಲ್ಲ. ಮುಂದ ಹೋಗು,' ಅಂದ ಬಾರಿನವ. ಅವಂಗ ರಾತ್ರಿ ಪೂರಾ ಬಾರ್ ಸಂಬಾಳಿಸಿ ಸುಸ್ತಾಗಿ, ಮತ್ತ ಮರುದಿನ ಮಧ್ಯಾನವೇ ಬಾಗಿಲ ತೆಗೆದು, ಬೋಣಿ ಆಗೋದರ ಮೊದಲೇ ಮಂಗ್ಯಾ ಬಂದು ಬಿಟ್ಟಿ ಬಾಳಿ ಹಣ್ಣು ಕೇಳ್ತದ ಅಂತ ಕೆಟ್ಟ irritate ಆತು.

ಹೇಳಿ ಕೇಳಿ ಮಂಗ್ಯಾ. ಹಾಂಗೆಲ್ಲ ಬಿಡೋ ಪೈಕಿನೇ ಅಲ್ಲ. ಮತ್ತ ಕೇಳ್ತು.

'ಬಾಳಿ ಹಣ್ಣು ಐತ್ರೀ? ಪ್ಲೀಸ್ ತರಿಸಿ ಕೊಡ್ರೆಲ್ಲಾ?'

'ಏ! ಇಲ್ಲ. ಬಾಳಿ ಗೀಳಿ ಹಣ್ಣು ಇಲ್ಲ ಅಂತ ಹೇಳಿದ್ದು ತಿಳಿಯೋದಿಲ್ಲ ನಿನಗ? ಹಾಂ? ಮುಂದ ಹೋಗು' ಅಂತ ಜೋರ್ ಮಾಡಿದ ಬಾರಿನವ.

ಅದು ಜಾಬಾದ್ ಮಂಗ್ಯಾ. ಹಾಂಗೆಲ್ಲ ಅಷ್ಟು ಸರಳ ಬಿಡುವ ಪೈಕಿ ಅಲ್ಲವೇ ಅಲ್ಲ. ಮತ್ತ ಅದನ್ನೇ ಕೇಳ್ತು.

'ಬಾಳಿ ಹಣ್ಣು ಐತ್ರೀ? ಪ್ಲೀಸ್ ಕೊಡಸ್ರೀ! ಕೆಟ್ಟ ಹಶಿವ್ಯಾಗೈತಿ!'

ಈಗ ಬಾರಿನ ಯಜಮಾನಗ ಖರೆನೇ ತಲಿ ಕೆಟ್ಟ, ಹಾಪ್ ಆಗಿ, ಕೆಟ್ಟ ಸಿಟ್ಟು ಬಂತು. ಹಾಕ್ಕೊಂಡು ಬೈದುಬಿಟ್ಟ.

'ಹುಚ್ಚ ಮಂಗ್ಯಾ ಸೂಳಿಮಗನ. ಏನ್ ಬಾಳಿ ಹಣ್ಣು ಹಚ್ಚಿಲೇ?? ಇನ್ನೊಮ್ಮೆ 'ಬಾಳಿ ಹಣ್ಣು ಐತ್ರೀ? ಕೊಡಸ್ರೀ' ಅಂತ ಕೇಳಿದ್ರ ಅಷ್ಟೇ ಮತ್ತ. ಬಾಯಾಗಿಂದ ನಿನ್ನ ನಾಲಗಿ ಈಕಡೆ ಎಳದು, ಇದೇ ಟೇಬಲ್ ಮ್ಯಾಲೆ ನಿನ್ನ ನಾಲಗಿ ಇಟ್ಟು,  ಉದ್ದಂದು ಮಳಿ ಹೊಡೆದು ಬಿಡ್ತೇನಿ ನೋಡು. ನಿನ್ನ ನಾಲಿಗಿ ಟೇಬಲ್ಲಿಗೆ ಜಡದೇ ಬಿಡ್ತೇನಿ. ಕಡೇ ವಾರ್ನಿಂಗ್ ಇದು!' ಅಂತ ಅಬ್ಬರಿಸಿಬಿಟ್ಟ.

ಪೆಚ್ಚಾದ ಮಂಗ್ಯಾ ಒಂದು ಕ್ಷಣ ಸುಮ್ಮಾತು. ಮತ್ತ ಕೇಳ್ತು. ಮರಳಿ ಯತ್ನವ ಮಾಡು ಅನ್ನುವ ರೀತಿಯಲ್ಲಿ.

'ಮಳಿ ಐತ್ರೀ!????' ಅಂತ ಕೇಳಿ ಬಿಡ್ತು ಮಂಗ್ಯಾ.

ಈಗ ಬಾರ್ ಮಾಲೀಕ ತಲಿ ಕರಾ ಪರಾ ಅಂತ ಕೆರಕೊಂಡ. 'ಇಷ್ಟೊತ್ತನಕಾ 'ಬಾಳಿ ಹಣ್ಣು ಐತ್ರೀ?' ಅಂತ ತಲಿ ತಿಂದ ಮಂಗ್ಯಾ, ಯಾವಾಗ, 'ಬಾಯಾಗಿಂದ ನಿನ್ನ ನಾಲಗಿ ಎಳೆದು, ಮಳಿ ಜಡಿದು ಬಿಡ್ತೇನಿ' ಅಂದ ಕೂಡಲೇ ಈಗ 'ಮಳಿ ಐತ್ರೀ?' ಅಂತ ಕೇಳಾಕ ಶುರು ಮಾಡಿ ಬಿಟ್ಟೈತಲ್ಲಾ? ಎಂತಾ ಮಂಗ್ಯಾಪಾ ಇದು?' ಅಂತ ಆಶ್ಚರ್ಯ ಆತು.

'ಮಳಿ ಇಲ್ಲ. ಮಳಿ ಎಲ್ಲಿಂದ ಬರಬೇಕಲೇ ಮಂಗ್ಯಾ? ಇದು ಬಾರ್. ಬಡಿಗ್ಯಾನ ಅಂಗಡಿ ಅಲ್ಲ' ಅಂದ ಮಾಲೀಕ. 'ಹೋಗಪಾ ಸಾಕು, ತಲಿ ತಿನ್ನಬ್ಯಾಡ,' ಅನ್ನೋ ಹಾಂಗ ಲುಕ್ ಕೊಟ್ಟ.

'ಅಬ್ಬಾ! ಒಮ್ಮೆ ಹೆದರಿಬಿಟ್ಟಿದ್ದೆ! ನನ್ನ ನಾಲಗಿ ಹೊರಗ ಎಳೆದು, ನಾಲಗಿಗೆ ಮಳಿ ಜಡಿತೇನಿ ಅಂದ ಇವನ ಕಡೆ ಎಲ್ಲರೆ ಖರೆನೇ ಮಳಿ ಐತೋ ಏನೋ ಅಂತ ಹೆದರಿದ್ದೆ. ಮಳಿ ಇಲ್ಲ ಅಂತಾತು. ಬಚಾವ್!' ಅಂತ ರಿಲ್ಯಾಕ್ಸ್ ಆದ ಮಂಗ್ಯಾ ಮತ್ತ ಕೇಳ್ತು.

'ಬಾಳಿ ಹಣ್ಣು ಐತ್ರೀ??????'

:) :)

ಮುಂದೇನಾತು ಗೊತ್ತಿಲ್ಲ. ಬಾರಿನವ ಮಂಗ್ಯಾನ ಕಾಟ ತಡೆದುಕೊಳ್ಳಲಾಗದೇ ಬಾಳಿ ಹಣ್ಣು ತರಿಸಿಕೊಟ್ಟಿರಬಹುದು ಅಂತ ನಮ್ಮ ಆಶಾ. ಯಾರಿಗೊತ್ತ? :)

ಕಲಿತ ನೀತಿ: ಮಂದಿ ಸುಮ್ಮನ ಓಳು ಬಿಡ್ತಿರ್ತಾರು. ಚೌಕ್ ಉಳ್ಳಸ್ತಿರ್ತಾರು. ಅವರು ಹೇಳಿದ್ದನ್ನ ಮತ್ತ ಮತ್ತ ಕೇಳಿ ಪಕ್ಕಾ ಮಾಡಿಕೋಬೇಕು. ಓಳು ಅಂತ ಗೊತ್ತಾದ ಕೂಡಲೇ ಮತ್ತ ಕೇಳಬೇಕು. ಕೇಳಿ ಕೇಳಿ ನಮ್ಮ ಕೆಲಸಾ ಮಾಡಿಸ್ಕೋಬೇಕು. ಕಾರ್ಪೊರೇಟ್ ಜಗತ್ತಿನಲ್ಲಂತೂ ಯಾರನ್ನೇ ಏನೇ ಕೇಳು. No. Can't. Too busy. Swamped. Plate filled to the brim. It's crazy. Crazy busy. Can't do it. Sorry, booked for next 2 weeks. ಬರೇ ಇದೇ ಓಳು. ಅಂತ ಸಂದರ್ಭದಲ್ಲಿ ಈ ಟೆಕ್ನಿಕ್ ಉಪಯೋಗಕ್ಕೆ ಬಂದರೂ ಬರಬಹುದು.

* ಮಳಿ = ಮೊಳೆ, nail
* ನಾಲಿಗಿ = ನಾಲಿಗೆ

ಮೂಲ: ಇಂಗ್ಲೀಶ್ ಜೋಕ್