Monday, September 23, 2019

YouTube Channels...

Following are some of my favorite YouTube Channels.

Will be updated as I discover new interesting channels.

Feel free to add yours in the comments.

* ಅಗ್ನಿ ಶ್ರೀಧರ್
 
* Akash Banerjee

* Al Jazeera English 

* Anubhavananda Saraswati

* BBC News

* Ben Felix

* Crime Tak

* ET Now 

* Mirror Now

* Moneylife News Bites

* Nitin Bhatia

* ORF

* PGurus

* Punya Prasun Bajpai

* ರವಿ ಬೆಳಗೆರೆ

* ಸಂವಾದ  

* Veena Srivani

Friday, September 13, 2019

Puppies available @Dharwad

Update, 4-Nov-2019: All pups have found loving homes. Thanks for your interest and enquiry.

Our neighbor in Dharwad has five puppies available.

3 male and 2 female.

Approximately 7 weeks old. Healthy and well cared for. Looking for loving homes and committed owners.

If you are interested to check out, please e-mail me at maheshuh@gmail.com. I will provide our neighbor's contact details. You can visit and check out the pups.

Pups' mother is Mudhol hound cross breed. Pups, I think, are cross breed of cross breed of Mudhol hound.

Mother dog is one of the friendliest and most loving dogs that I have ever met in my life. She is adorable and so are her pups. This is the second litter.

Hurry! these excellent pups won't last long.

Feel free to share with your friends on FB, WhatsApp etc. Thanks in advance.










ಡ್ರಗ್ ಮಾಫಿಯಾಕ್ಕೆ ಮರ್ಮಾಘಾತ ಕೊಟ್ಟ ಅಮೇರಿಕಾದ DEA

ಅಮೇರಿಕಾದ ಮಾದಕ ವಸ್ತು ನಿಗ್ರಹ ದಳ (DEA - Drug Enforcement Agency) ಖುಷಿಯಲ್ಲಿದೆ. ಕೀನ್ಯಾ ಮೂಲದ ಮಾದಕ ದ್ರವ್ಯಗಳ ಕುಖ್ಯಾತ ಖದೀಮರಿಗೆ ದೊಡ್ಡ ಪ್ರಮಾಣದ ಶಿಕ್ಷೆಯಾಗಿದೆ. ಖತರ್ನಾಕ್ ಆಕಾಶಾ ಸಹೋದರರು ಮೂವತ್ತಕ್ಕೂ ಹೆಚ್ಚು ವರ್ಷಗಳ ಶಿಕ್ಷೆಗೆ ಗುರಿಯಾಗಿ ಜೈಲು ಪಾಲಾಗಿದ್ದಾರೆ.

ಈಗ ಸುಮಾರು ನಾಲ್ಕೈದು ವರ್ಷಗಳ ಹಿಂದೆಯೇ ಕೀನ್ಯಾದಲ್ಲಿ ದೊಡ್ಡ ಮಟ್ಟದ ಸಂಘಟಿತ ದಾಳಿ ಮಾಡಿತ್ತು ಅಮೇರಿಕಾದ DEA ತಂಡ. ಆಗ ಆಕಾಶಾ ಸಹೋದರರ ಜೊತೆ ಒಂದು ಮಹಾ ಇಂಟೆರೆಸ್ಟಿಂಗ್ ಸ್ಟಾರ್ ಜೋಡಿ ಕೂಡ ಸಿಕ್ಕಿಬಿದ್ದಿತ್ತು. ಅದೇ ಬಾಲಿವುಡ್ಡಿನ 'ಮಾದಕ ನಟಿ' ಖ್ಯಾತಿಯ ಮಮತಾ ಕುಲಕರ್ಣಿ ಮತ್ತು ಆಕೆಯ ಪತಿ ವಿಕಿ ಗೋಸ್ವಾಮಿ. ಹೆಸರಿಗೆ ತಕ್ಕಂತೆ 'ಮಾದಕ ನಟಿ' ಮಾದಕ ವಸ್ತುಗಳ ಲಫಡಾದಲ್ಲಿ ಸಿಕ್ಕಾಕಿಕೊಂಡುಬಿದ್ದಿದ್ದು ಕಾಕತಾಳೀಯವಂತೂ ಆಗಿರಲಿಕ್ಕಿಲ್ಲ.

ಮಮತಾ ಕುಲಕರ್ಣಿಯನ್ನು ಏನು ಮಾಡಿದರೋ ಗೊತ್ತಿಲ್ಲ. ಆದರೆ ಆಕೆಯ ಪತಿ ಗೋಸ್ವಾಮಿಯನ್ನು ಮಾತ್ರ ಉಳಿದ ಆರೋಪಿಗಳೊಂದಿಗೆ ಅಮೇರಿಕಾಕ್ಕೆ ಎಳೆದುಕೊಂಡು ಹೋದರು.

ಮುಂದೆ ಸುಮಾರು ವರ್ಷ ಕೇಸ್ ನಡೆದಿದೆ. ಒಂದು ಕಾಲದಲ್ಲಿ ಆಕಾಶಾ ಸಹೋದರರ ನಿಕಟವರ್ತಿಯಾಗಿದ್ದ ಗೋಸ್ವಾಮಿ ತನ್ನ ಹಳೆಯ ದೋಸ್ತುಗಳಿಗೆ Go ಎಂದು ಕೈಯೆತ್ತಿ ಸಂಪೂರ್ಣವಾಗಿ ಸರ್ಕಾರಿ ಸ್ವಾಮಿಯಾಗಿಬಿಟ್ಟಿದ್ದಾನೆ. ಮಾಫಿ ಸಾಕ್ಷಿದಾರನಾಗಿ ಆಕಾಶಾ ಸಹೋದರರ ಪೂರ್ತಿ ಭಾಂಡಾ ಬಿಚ್ಚಿಟ್ಟುಬಿಟ್ಟಿದ್ದಾನೆ. ಪುಣ್ಯಾತ್ಮನ ಹೇಳಿಕೆಗಳಿಂದಾಗಿ ಅರಿಭಯಂಕರ ಆಕಾಶಾ ಸಹೋದರರು ಅಮೇರಿಕಾದ ಜೈಲಿನಲ್ಲಿ ರಾಗಿ ಬೀಸುವಂತಾಗಿದ್ದಾರೆ.

ಮಾಫಿ ಸಾಕ್ಷಿದಾರ ವಿಕಿ ಗೋಸ್ವಾಮಿಯ ಗತಿಯೇನಾಗುತ್ತದೋ? ಅವನಿಗೆ ಯಾವ ತರಹದ ಶಿಕ್ಷೆ ವಿಧಿಸುತ್ತಾರೋ? ಗೊತ್ತಿಲ್ಲ. ಆ ಮನುಷ್ಯ ಹಿಂದೊಮ್ಮೆ ಐದಾರು ವರ್ಷಗಳ ಕಾಲ ದುಬೈ ಜೈಲಿನಲ್ಲಿ ಸರ್ವಿಸ್ ಮಾಡಿ ಬಂದಿದ್ದಾನೆ. ಮತ್ತದೇ ಮಾದಕ ವಸ್ತುಗಳ ಕೇಸಿನಲ್ಲೇ. ದಾವೂದ್ ಇಬ್ರಾಹಿಂನ ಅವಕೃಪೆಗೆ ತುತ್ತಾದ. ಅದಕ್ಕಾಗಿ ಕಾರಸ್ಥಾನ ಮಾಡಿ ಅವನನ್ನು ಜೈಲಿಗೆ ಕಳಿಸಲಾಯಿತು ಎಂದು ಒಂದು ಸಿದ್ಧಾಂತ ಇದೆ. ಡ್ರಗ್ ಕಳ್ಳಸಾಗಾಣಿಕೆದಾರರ ಮೇಲೆ ಹೆಸರಿಗಾದರೂ (ನಾಮ್ ಕೆ ವಾಸ್ತೆ) ಕ್ರಮ ಕೈಗೊಳ್ಳಬೇಕಾಗಿತ್ತು. ಹಿಂದೂ ಧರ್ಮೀಯನನ್ನು ಬಕ್ರಾ ಮಾಡಿ ಕೊಲ್ಲಿ ರಾಷ್ಟ್ರಗಳಲ್ಲಿ ಹಣಿಯುವುದು ಸುಲಭ ಎಂದು ಇವನಿಗಿಂತ ನೂರು ಪಟ್ಟು ದೊಡ್ಡ ಖದೀಮರೆಲ್ಲರನ್ನೂ ಬಿಟ್ಟು ಈ 'ಬಡಪಾಯಿ'ಯನ್ನು ಜೈಲಿಗೆ ಅಟ್ಟಿತು ದುಬೈ ಸರ್ಕಾರ ಅನ್ನುವವರೂ ಇದ್ದಾರೆ.

ದುಬೈನಲ್ಲಿ ಜೈಲಿಗೆ ಹೋದ ಗೋಸ್ವಾಮಿ. ಅದೇ ಸಮಯದಲ್ಲಿ ಮಮತಾ ಕುಲಕರ್ಣಿ ಹಿಮಾಲಯಕ್ಕೆ ಹೋದಳಂತೆ. ಆಕೆಯೇ ಹೇಳಿಕೊಂಡಂತೆ, ಅಲ್ಲಿ ಭಯಂಕರ ತಪಸ್ಸು ಮಾಡಿ, ಆತ್ಮದ ಸಾಕ್ಷಾತ್ಕಾರ ಮಾಡಿಕೊಂಡು ವಾಪಸ್ ಬರುವ ತನಕ ಈ ಕಡೆ ದುಬೈನಲ್ಲಿ ವಿಕಿ ಗೋಸ್ವಾಮಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ. ಮುಸ್ಲಿಂ ಆದರೆ ದುಬೈನಲ್ಲಿ ಜೈಲು ಶಿಕ್ಷೆ ಕಮ್ಮಿಯಾಗುತ್ತದೆ ಎಂದು ತಿಳಿದಿದ್ದ ಆತ ಹಾಗೆ ಮಾಡಿದ್ದರಲ್ಲಿ ದೊಡ್ಡ ಆಶ್ಚರ್ಯವೇನಿಲ್ಲ.

ಜೈಲಿನಿಂದ ಬಿಡುಗಡೆ ಹೊಂದಿದ ಗೋಸ್ವಾಮಿ ಮತ್ತು ಇತ್ತಕಡೆ ಹಿಮಾಲಯದಿಂದ ಏಕ್ದಂ ಸಾಧ್ವಿಯ ರೂಪದಲ್ಲಿ ಹಿಂತಿರುಗಿದ ಮಮತಾ ಕುಲಕರ್ಣಿ ಏನೋ ಒಂದು ತರಹದ ಶಾದಿ ಭಾಗ್ಯ ಮಾಡಿಕೊಂಡು ಆಫ್ರಿಕಾದ ಕೀನ್ಯಾ ದೇಶಕ್ಕೆ ಬಂದು ನೆಲೆಸಿದರು.

ಅಲ್ಲಿ ಆಗಲೇ ಆಕಾಶಾ ಸಹೋದರರು ದೊಡ್ಡ ಮಟ್ಟದ ಕುಖ್ಯಾತಿ ಗಳಿಸಿದ್ದರು. ಅವರ ವಿರೋಧ ಕಟ್ಟಿಕೊಂಡರೆ ಕಷ್ಟ ಎಂದು ತಿಳಿದು ಅವರೊಂದಿಗೆ ಮಾಂಡವಳಿ ಸಂಧಾನ ಮಾಡಿಕೊಂಡ ಗೋಸ್ವಾಮಿ ಡ್ರಗ್ ದಂಧೆಯನ್ನು ಮುಂದುವರೆಸಿದ. ಅವರಿಗೆ ಹೊಸ ಹೊಸ ಸಂಪರ್ಕಗಳನ್ನು ಮಾಡಿಸಿಕೊಟ್ಟ. ಭಾರತದ ಔಷಧಿ ಕಂಪನಿಯಿಂದ ದೊಡ್ಡ ಪ್ರಮಾಣದಲ್ಲಿ ವಸ್ತುಗಳನ್ನು ಆಮದು ಮಾಡಿಕೊಂಡ. ಪಕ್ಕದ ಉಗಾಂಡಾ ದೇಶದ ಅಧ್ಯಕ್ಷನ ತಂಗಿಗೆ ದೊಡ್ಡ ಪ್ರಮಾಣದ ತಾಂಬೂಲ ಬಾಗಿನ ಕೊಟ್ಟು ಆಕೆಯನ್ನೂ ಒಳಗೆ ಹಾಕಿಕೊಂಡ. ಭಾರತದ ದೇಶದಿಂದ ದೊಡ್ಡ ಪ್ರಮಾಣದ ಎಪಿಡ್ರಿನ್ ಎಂಬ ರಾಸಾಯನಿಕ ಟನ್ನುಗಟ್ಟಲೆ ಬಂದು ಉಗಾಂಡಾದಲ್ಲಿ ಇಳಿಯಿತು. ರಾಷ್ಟ್ರಾಧ್ಯಕ್ಷನ ತಂಗಿ ತಾಂಬೂಲ ಉಗುಳಿ, ಪಿಚಕಾರಿ ಹಾರಿಸಿ ಪೆಕಪೆಕನೆ ನಕ್ಕಳು. ಏನಾದರೂ ಮಾಡಿಕೊಳ್ಳಿ. ಟೈಮಿಗೆ ಸರಿಯಾಗಿ ನನ್ನ ಪಾಲಿನ ತಾಂಬೂಲ ತಪ್ಪಿಸಬೇಡಿ ಎಂದು ಹೇಳಿದ ಮೇಡಂ ತನ್ನ ಅಭಯಹಸ್ತ ತೋರಿಸಿದಳು. ಡ್ರಗ್ ಉತ್ಪಾದನೆಗೆ ಗ್ರೀನ್ ಸಿಗ್ನಲ್ ಕೊಟ್ಟಳು. ಖತರ್ನಾಕ್ ಡ್ರಗ್ ಆಗಿರುವ ಮ್ಯಾನ್ಡ್ರಾಕ್ಸ್ ಉತ್ಪಾದನೆ ದೊಡ್ಡ ಪ್ರಮಾಣದಲ್ಲಿ ನಡೆಯಿತು. ವಿಶ್ವದ ತುಂಬೆಲ್ಲಾ ಗೋಸ್ವಾಮಿ ಮತ್ತು ಆಕಾಶಾ ಸಹೋದರರು ಎಬ್ಬಿಸಿದ ಮಾದಕ ದ್ರವ್ಯಗಳ ಘಾಟೋ ಘಾಟು.

ಆಗ ಮುರಿದುಕೊಂಡು ಬಿತ್ತು ನೋಡಿ ಅಮೇರಿಕಾದ DEA. ಸೀದಾ ಹೋದವರೇ ಕೀನ್ಯಾದ ಆಧಿಕಾರಶಾಹಿಯ ತಲೆಗೆ ಬಂದೂಕಿಟ್ಟರು. 'ನಿಮ್ಮ ದೇಶದಲ್ಲಿ ಇಂತಿಂತಹ ಕೇಡಿಗಳಿದ್ದಾರೆ. ಅವರು ನಮಗೆ ಬೇಕು. ಬೇಕೇಬೇಕು. ಸಹಕರಿಸಿದರೆ ಒಳ್ಳೆಯದು. ಇಲ್ಲವಾದರೆ ಗೊತ್ತಲ್ಲ? ನಾವು ಯಾರೆಂದು?? ನಾವು DEA. ಎಲ್ಲಿ ಹೇಗೆ ತಟ್ಟಿದರೆ ಏನು ಹೇಗೆ ಉದುರುತ್ತದೆ ಎಂದು ನಮಗೆ ಬರೋಬ್ಬರಿ ಗೊತ್ತಿದೆ!' ಎಂದು ಧಮ್ಕಿ ಹಾಕಿದರು. ಡ್ರಗ್ ಮಾಫಿಯಾದಿಂದ ಸಾಕಷ್ಟು ಸತ್ಯನಾರಾಯಣ ಪ್ರಸಾದ ಸ್ವೀಕರಿಸಿದ್ದರೂ ಕೀನ್ಯಾದ ಪೊಲೀಸರಿಗೆ ಸಹಕರಿಸುವುದನ್ನು ಬಿಟ್ಟು ಬೇರೆ ಗತಿಯಿರಲಿಲ್ಲ.

೨೦೧೫ ರಲ್ಲಿ ಆದ ದೊಡ್ಡ ಪ್ರಮಾಣದ ದಾಳಿಯಲ್ಲಿ ಆಕಾಶಾ ಸಹೋದರರನ್ನು ಮತ್ತು ಗೋಸ್ವಾಮಿಯನ್ನು ಎತ್ತಾಕಿಕೊಂಡ DEA, ಸ್ಪೆಷಲ್ ವಿಮಾನದಲ್ಲಿ, ಎಲ್ಲ ಖದೀಮರನ್ನು ಅಮೇರಿಕಾಗೆ ಸಾಗಿಸಿತ್ತು. ಈಗ ಕೇಸ್ ಮುಗಿದಿದೆ. ಬಕ್ತಾಶ್ ಮತ್ತು ಇಬ್ರಾಹಿಂ ಎನ್ನುವ ಆಕಾಶಾ ಸಹೋದರರು ಖಾಯಮ್ಮಾಗಿ ಅಮೇರಿಕಾದ ಜೈಲು ಸೇರಿದ್ದಾರೆ. ಗೋಸ್ವಾಮಿ ತನ್ನ ಗತಿಯೇನೋ ಎಂದು ಎದುರು ನೋಡುತ್ತಿದ್ದಾನೆ. ಮಾಫಿ ಸಾಕ್ಷಿದಾರನಾದ ಕಾರಣ ಕಮ್ಮಿ ಶಿಕ್ಷೆ ಕೊಡಬಹುದು. ಯಾರಿಗೆ ಗೊತ್ತು, ನಸೀಬ್ ಛಲೋ ಇದ್ದರೆ ಏನೂ ಶಿಕ್ಷೆ ಕೊಡದೆ ಬಿಟ್ಟು ಕಳಿಸಿದರೂ ಆಶ್ಚರ್ಯವಿಲ್ಲ.

ಈ ಮಧ್ಯೆ ಮಮತಾ ಕುಲಕರ್ಣಿ ಎಲ್ಲಿ? ಆಕೆಯ ಸುದ್ದಿಯೇ ಇಲ್ಲ. ಆಕೆ ಮುಂಬೈಗೆ ಬರುವಂತಿಲ್ಲ. ಅಲ್ಲಿ ಆಕೆಯ ಮೇಲೆ ವಾರಂಟ್ ಇದೆ. DEA ಕೊಟ್ಟ ಮಾಹಿತಿ ಪ್ರಕಾರ ಮಹಾರಾಷ್ಟ್ರ ದ ಸೊಲ್ಲಾಪುರ ಸಮೀಪದ ಔಷಧಿ ಫ್ಯಾಕ್ಟರಿ ಮೇಲೆ ದಾಳಿ ಮಾಡಿದ ಮಹಾರಾಷ್ಟ್ರ ಪೊಲೀಸರು ಟನ್ನುಗಟ್ಟಲೆ ಅಪಾಯಕಾರಿ ರಾಸಾಯನಿಕಗಳನ್ನು ವಶಪಡಿಸಿಕೊಂಡು ಆ ಫ್ಯಾಕ್ಟರಿಗೆ ಬೀಗ ಜಡಿದರಲ್ಲ. ಆ ಕೇಸಿನಲ್ಲಿ ಗೋಸ್ವಾಮಿ ದಂಪತಿಯನ್ನೂ ಆರೋಪಿಗಳು ಎಂದು ತೋರಿಸಲಾಗಿತ್ತು. ಆಗ ಮಾಧ್ಯಮಕ್ಕೆ ಬಂದಿದ್ದ ಮಮತಾ ಕುಲಕರ್ಣಿ ಅದೆಲ್ಲ ತನ್ನ ವಿರುದ್ಧ ಮಾಡಿರುವ ಕಾರಸ್ಥಾನ, ಷಡ್ಯಂತ್ರ ಎಂದು ಹೇಳಿ ಬೊಬ್ಬೆ ಹೊಡೆದು ಹೋದಾಕೆ ನಂತರ ನಾಪತ್ತೆ. ಈಗ ಕೀನ್ಯಾದಲ್ಲಿದ್ದಾಳೋ, ಪೀಣ್ಯಾದಲ್ಲಿದ್ದಾಳೋ? ಯಾರಿಗೆ ಗೊತ್ತು!?

ಇದೇ ಕೇಸಿನಲ್ಲಿ DEA ಮತ್ತು ಕೀನ್ಯಾ ಪೊಲೀಸರಿಂದ ಬಚಾವಾಗಿ ಭಾರತಕ್ಕೆ ಓಡಿ ಬಂದು ಸದ್ಯಕ್ಕೆ ಮುಂಬೈ ಆಸ್ಫತ್ರೆಯಲ್ಲಿ ಮಲಗಿಬಿಟ್ಟಿರುವವನು ಅಲಿ ಪಂಜಾನಿ (ಪುಂಜಾನಿ). ಇವನೂ ಕೀನ್ಯಾ ದೇಶದವನೇ. ಭಾರತೀಯ ಮೂಲದವನು ಎಂದು ಕಾಣಿಸುತ್ತದೆ. ಆಕಾಶಾ ಸೋದರರ ಪಕ್ಕಾ ಪ್ರತಿಸ್ಪರ್ಧಿಯಾಗಿದ್ದವನು ಈ ಪಂಜಾನಿ. ಡ್ರಗ್ ಸಾಮ್ರಾಜ್ಯದ ಮೇಲೆ ಹತೋಟಿ ಸಾಧಿಸುವ ಪೈಪೋಟಿಯಲ್ಲಿ ಈ ಪಂಜಾನಿ ಮತ್ತು ಆಕಾಶಾ ಸಹೋದರರ ಮಧ್ಯೆ ಜಗಳಗಳಾಗಿದ್ದವು. ಒಮ್ಮೆಯಂತೂ ನೈಟ್ ಕ್ಲಬ್ ಒಂದರಲ್ಲಿ ಒಬ್ಬರಿಗೊಬ್ಬರು ಎದುರಾದಾಗ ಬಂದೂಕುಗಳು ಘರ್ಜಿಸಿದ್ದವು. ಗುಂಡುಗಳು ಹಾರಿದ್ದವು. ಪಂಜಾನಿಯ ಅಂಗರಕ್ಷಕ ಗಂಭೀರವಾಗಿ ಗಾಯಗೊಂಡಿದ್ದ.

ಹೀಗಾಗಿ DEA ಆಕಾಶಾ ಸಹೋದರರನ್ನು ಎತ್ತಾಕಿಕೊಂಡು ಹೋದಾಗ ಪಂಜಾನಿ ಸಕತ್ ಖುಷಿ ಪಟ್ಟಿರಬೇಕು. ತನಗಿನ್ನು ಪ್ರತಿಸ್ಪರ್ಧಿಗಳೇ ಇಲ್ಲ ಎಂದು ಮೆರೆಯಲು ಆರಂಭಿಸಿದ್ದಾನೆ. ಎರಡನೇ ಸುತ್ತಿನಲ್ಲಿ DEA ಪಂಜಾನಿಯ ಮೇಲೆಯೇ ಮುರ್ಕೊಂಡು ಬಿದ್ದಿದೆ. ಕೀನ್ಯಾದ ಆಡಳಿತ ವ್ಯವಸ್ಥೆಗೆ ಬರೋಬ್ಬರಿ ಬಿಸ್ಕೀಟ್ ಹಾಕಿದ್ದ ಕಾರಣಕ್ಕೆ ಈ ಮಾಹಿತಿ ಸರಿಯಾದ ಸಮಯಕ್ಕೆ ಪಂಜಾನಿಗೆ ಸಿಕ್ಕಿದೆ. ಪಂಜಾನಿ ಪಂಚೆ ಎತ್ತಿಕೊಂಡು ಕೀನ್ಯಾ ಬಿಟ್ಟು ಓಡಿಬಂದಿದ್ದಾನೆ. ಭಾರತದಲ್ಲಿ ಬಂದು ಮುಂಬೈನ  ಬಾಂದ್ರಾ ಪ್ರದೇಶದ ಆಸ್ಪತ್ರೆಯಲ್ಲಿ ಶಿವನೇ ಶಂಭುಲಿಂಗ ಮಾದರಿಯಲ್ಲಿ ಮಲಗಿಬಿಟ್ಟಿದ್ದಾನೆ. DEA ಮಾತ್ರ ಇಂಟರ್ಪೋಲ್ ನೋಟೀಸ್ ಹೊರಡಿಸಿದೆ. ಅದರ ಬಗ್ಗೆ ಮುಂಬೈ ಪೊಲೀಸರು ಹೆಚ್ಚಿನ ಗಮನ ಹರಿಸಿಲ್ಲವಂತೆ. ಕೇಳಿದರೆ ಪಂಜಾನಿ ಮೇಲೆ ಮುಂಬೈನಲ್ಲಿ ಏನೂ ಕೇಸುಗಳು ಇಲ್ಲ. ಹಾಗಾಗಿ ಏನೂ ಮಾಡುವಂತಿಲ್ಲ ಅಂದರಂತೆ. ಇನ್ನು ಯಾವತ್ತು ತಲೆಕೆಟ್ಟ DEA ಮುಂಬೈ ಪೊಲೀಸರಿಗೆ ತಪರಾಕಿ ಕೊಡುತ್ತದೋ ಗೊತ್ತಿಲ್ಲ. ದೊಡ್ಡ ಮಟ್ಟದಲ್ಲಿ ತಪರಾಕಿ ಬಿದ್ದ ದಿನ ಪಂಜಾನಿಯನ್ನು ಬಂಧಿಸಿ ಅಮೇರಿಕಾಕ್ಕೆ ಕಳಿಸಬಹುದು. ಯಾರಿಗೆ ಗೊತ್ತು, ಅಷ್ಟರಲ್ಲಿ ಈ ಕಳ್ಳ ಪರಮಾತ್ಮ ಭಾರತ ಬಿಟ್ಟು ಮತ್ತೆಲ್ಲಾದರೂ ಗಾಯಬ್ ಆದರೂ ಆದನೇ. ಆದರೆ ಒಮ್ಮೆ DEA ಹಿಂದೆ ಬಿತ್ತು ಅಂದರೆ ಬಚಾವಾಗುವುದು ಕಷ್ಟ.

ಈ ಮಾಫಿಯಾ ಮಂದಿಗೂ ಬಾಲಿವುಡ್ ನಟಿಯರಿಗೂ ಅದೇನು ಸಂಬಂಧವೋ, ಅದೇನು ಆಕರ್ಷಣೆಯೋ ದೇವರೇ ಬಲ್ಲ. ವಿಕಿ ಗೋಸ್ವಾಮಿ ಆಕಾಲದ ಹಾಟ್ ನಟಿ ಮಮತಾ ಕುಲಕರ್ಣಿಯನ್ನು ಮದುವೆಯಾದ. ತಾನೇನು ಕಮ್ಮಿ ಎಂಬಂತೆ ಈ ಅಲಿ ಪಂಜಾನಿ ಸಾಹೇಬರು ಕಿಮ್ ಶರ್ಮಾ ಎಂಬ ನಟಿಯನ್ನು ೨೦೧೦ ಮದುವೆಯಾಗಿ ಕೀನ್ಯಾಕ್ಕೆ ಕರೆದುಕೊಂಡು ಹೋಗಿದ್ದರಂತೆ. ಕಿಮ್ ಶರ್ಮಾ ೨೦೦೦ ರ ಕಾಲದಲ್ಲಿ ಸಾಕಷ್ಟು ದೊಡ್ಡ ನಟಿ. ಕ್ರಿಕೆಟಿಗ ಯುವರಾಜ್ ಸಿಂಗನ ಗೆಳತಿ ಎಂದು ಖ್ಯಾತಳಾಗಿದ್ದವಳು. ಅಲ್ಲಿ ವರ್ಕೌಟ್ ಆಗಲಿಲ್ಲ ಅಂತ ಕಾಣುತ್ತದೆ. ಸಿಕ್ಕ ಪಂಜಾನಿ ಸಾಹೇಬ್ರನ್ನು ವಿವಾಹವಾಗಿ ಕೀನ್ಯಾ ಸೇರಿಕೊಂಡಿದ್ದಳು.

ಆರು ವರ್ಷಗಳ  ಕಾಲ ಸಂಸಾರ ಮಾಡಿದ ನಂತರ ಪಂಜಾನಿ ಬೇರೆ ಯಾರನ್ನೋ ಹುಡುಕಿಕೊಂಡು ಹೋಗಿ ಹೊಸ ಹಕ್ಕಿಯ ಜೊತೆ ಸೆಟಲ್ ಆಗಿಬಿಟ್ಟನಂತೆ. ಹಾಗಾಗಿ ವಿವಾಹ ಸೋಡಾಚೀಟಿಯಲ್ಲಿ ಅಂತ್ಯವಾಗಿದೆ.

ಬರಿಗೈಯಲ್ಲಿ ಠಣ್ ಠಣ್ ಗೋಪಾಲ್ ಆಗಿ, ಕಾಸು ಆಸ್ತಿ ಏನೂ ಇಲ್ಲದೆ ಭಾರತಕ್ಕೆ ಮರಳಿರುವ ಕಿಮ್ ಶರ್ಮಾ ಮುಂಬೈನಲ್ಲಿ ಹೊಸ ಬಾಳನ್ನು ಹುಡುಕಿಕೊಳ್ಳುತ್ತಿದ್ದಾಳೆ. ಬಾಲಿವುಡ್ಡಿನಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಲು ಉಚಿತವಾಗಿ ನಟಿಸಲೂ ರೆಡಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾಳೆ. ಯಾರೂ ಉದ್ಯೋಗ ಕೊಟ್ಟ ಹಾಗೆ ಕಾಣುವುದಿಲ್ಲ. ಜೊತೆಗೊಬ್ಬ ಗೆಣೆಕಾರ ಇರಲಿ ಎಂದು ಯಾರೋ ಹರ್ಷವರ್ಧನ್ ರಾಣೆ ಎನ್ನುವ, ತನಗಿಂತ ಐದು ವರ್ಷ ಚಿಕ್ಕವನಾದ, ಮಾಡೆಲ್ ಜೊತೆ ಡೇಟಿಂಗ್ ಶುರುವಿಟ್ಟುಕೊಂಡಿದ್ದಳು. ಅದೂ ಕೂಡ ಮೊನ್ನೆ ಮಕಾಡೆ ಮಲಗಿ ಅಂತ್ಯಗೊಂಡಿದೆ.

ಕಿಮ್ ಶರ್ಮಾ ಈಗ ಕಿಮಿ ಶರ್ಮಾ ಎನ್ನುವ ಹೆಸರಿನಲ್ಲಿ ಬಾಲಿವುಡ್ಡಿನಲ್ಲಿ ಚಲಾವಣೆಗೊಳ್ಳಲು ಪ್ರಯತ್ನಿಸುತ್ತಿದ್ದಾಳೆ. ಹೆಸರು ಬದಲಾಯಿಸಿಕೊಂಡ ತಕ್ಷಣ ಅದೃಷ್ಟ ಬದಲಾಯಿಸುತ್ತದೆಯೇ? ಕಾದು ನೋಡಬೇಕು.

ಪಂಜಾನಿ DEA ಮಂದಿಯ ಹದ್ದಿನ ದೃಷ್ಟಿಯಲ್ಲಿ ಬರುವ ಮೊದಲೇ ಆತನಿಂದ ದೂರವಾದ ಕಿಮ್ ಶರ್ಮಾ ಒಂದು ರೀತಿಯಲ್ಲಿ ಅದೃಷ್ಟವಂತಳೇ. ಪಂಜಾನಿಯಂತೂ ಅಮೇರಿಕಾದ ಜೈಲಿನಲ್ಲಿ ರಾಗಿ ಬೀಸುವುದು ಗ್ಯಾರಂಟಿ. ಆತನಿಂದ ಮೊದಲೇ ದೂರವಾಗಿ ಆ ಕರ್ಮದಿಂದ ತಪ್ಪಿಸಿಕೊಂಡಿದ್ದಾಳೆ ಕಿಮ್ ಶರ್ಮಾ. ಅಷ್ಟರಮಟ್ಟಿಗೆ ಆಕೆ ಅದೃಷ್ಟವಂತೆ.

ಹೆಚ್ಚಿನ ಮಾಹಿತಿಗೆ:

ಅಲಿ ಪಂಜಾನಿ

ಕಿಮ್ ಶರ್ಮಾ

Mamta Kulkarni, Vicky Goswami complete saga summarized for the uninitiated

ಮಮತಾ ಕುಲಕರ್ಣಿಯ ಸಂದರ್ಶನ (ಪೋಸ್ಟಿನ ಕೊನೆಯಲ್ಲಿದೆ)

'ಕುಲಕರ್ಣಿ ಮಮ್ಮಿ' ಸನ್ಯಾಸ ತೊಗೋಂಡಳಾ?!.....ಅಕಟಕಟಾ!

Thursday, September 12, 2019

ಬನವಾಸಿ

'ಎಂಥಾ ಹುಡುಗರಪ್ಪಾ!? ಹಾಂ!? ಜನರಲ್ ನಾಲೆಜ್, ಕಾಮನ್ ಸೆನ್ಸ್ ಕೇಳಬ್ಯಾಡ. ಸರಳ ವಿಷಯ ಸಹಿತ ಗೊತ್ತಿರೋದಿಲ್ಲಾ! ಯಬಡ ಹುಡುಗರು!' ಅನ್ನುತ್ತ ಅಮ್ಮ ಎಂಟ್ರಿ ಕೊಟ್ಟರು.

೧೯೯೦ ರ ಸಮಯ. ಆಗ ಕೆಲವು ವರ್ಷಗಳ ಕಾಲ ನಮ್ಮ ತಾಯಿಯವರು ಮಾಸ್ತರಣಿ ಅವತಾರ ತಾಳಿದ್ದರು. ನಾನೂ ಊರು ಬಿಟ್ಟಿದ್ದೆ. ಊರಲ್ಲಿ ಇರುವ ತನಕ ಎಲ್ಲರಿಗೂ ನನ್ನನ್ನು ಸಂಬಾಳಿಸುವುದರಲ್ಲಿಯೇ ಸಮಯ ಸಾಕಾಗುತ್ತಿರಲಿಲ್ಲ. ನಾನು ಊರು ಬಿಟ್ಟಿದ್ದೇ ಬಿಟ್ಟಿದ್ದು ಅಮ್ಮ ಫುಲ್ ಫ್ರೀ.  ಅವರಿಗೆ ಮೊದಲಿಂದಲೂ ಸಮಾಜಸೇವೆ ಬಗ್ಗೆ ಆಸಕ್ತಿ. ಮಾಸ್ತರಿಕೆ ಕೂಡ ಇಷ್ಟದ ವಿಷಯವೇ. ಈಗ ಅವೆಲ್ಲ ತಲುಬುಗಳನ್ನು ತೀರಿಸಿಕೊಳ್ಳಲು ಸದವಕಾಶ.

ಹೋಗಿ ಹೋಗಿ ಅಂಧ ವಿದ್ಯಾರ್ಥಿಗಳಿಗೆ ಪಾಠ ಮಾಡುವ ಮಾಸ್ತರಣಿ ಆದರು. ಅದ್ಯಾರೋ ಮಹನೀಯರು ಒಂದಿಬ್ಬರು ಅಂಧ ವಿದ್ಯಾರ್ಥಿಗಳನ್ನು ಪರಿಚಯ ಮಾಡಿ ಕೊಟ್ಟಿದ್ದರು. ಕಾಲೇಜು ಓದುವ ವಿದ್ಯಾರ್ಥಿಗಳು. ಅವರಿಗೆ ಪಾಠ ಓದಿ ಹೇಳಬೇಕು. ಆ ಪಾಪದ ವಿದ್ಯಾರ್ಥಿಗಳು ಇವರು ಓದಿದ್ದನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ಅವನ್ನೇ ಮತ್ತೆ ಮತ್ತೆ ಕೇಳಿ ಕೇಳಿ ಅಭ್ಯಾಸ ಮಾಡಿಕೊಳ್ಳುತ್ತಿದ್ದರು. ಕೊನೆಗೆ ಪರೀಕ್ಷೆಯಲ್ಲಿ ಅವರ ಪರವಾಗಿ ಅವರ ಸಹಾಯಕರು ಉತ್ತರ ಬರೆದುಕೊಡುತ್ತಿದ್ದರು. ನಿವೃತ್ತ ಶಿಕ್ಷಿಕಿಯಾಗಿದ್ದ ನಮ್ಮ ನೆರೆಯವರಾದ ಉಪಾಧ್ಯೆ ಟೀಚರ್ ಮತ್ತು ಅಮ್ಮ ಕೂಡಿ ಜಂಟಿ ಮಾಸ್ತರಿಕೆ ಮಾಡುವ ಮೂಲಕ ಸಮಾಜ ಸೇವೆ ಮಾಡುತ್ತಿದ್ದರು.

ಅವತ್ತು ಏನಾಗಿತ್ತು ಅಂದರೆ...ಆ ಅಂಧ ವಿದ್ಯಾರ್ಥಿಗಳಿಗೆ ಪರೀಕ್ಷೆ ತಯಾರಿ ಮಾಡಿಸುತ್ತಿದ್ದರು. 'ಬನವಾಸಿ ಎಲ್ಲಿದೆ?' ಎಂದು ಪ್ರಶ್ನೆ ಕೇಳಿದ್ದಾರೆ. ಉತ್ತರ ಹೇಳಲು ಅವರು ತಡವಡಿಸಿದ್ದಾರೆ. ತಪ್ಪು ಉತ್ತರ ಹೇಳಿದ್ದಾರೆ.

'ಎಂಥಾ ಹುಡುಗುರೋ ನೀವು?! ಬನವಾಸಿ ನಮ್ಮ ಉತ್ತರ ಕನ್ನಡ ಜಿಲ್ಲಾದೊಳಗ ಇಲ್ಲೇನರೋ? ಅಷ್ಟೂ ಗೊತ್ತಿಲ್ಲ? ಹಿಂಗಾದ್ರ ಹೆಂಗ? ಎಷ್ಟು ಸರೆ ಹೇಳಿಕೊಟ್ಟೇನಿ? ಹಾಸ್ಟೆಲ್ಲಿನಾಗ ಕೂತು ಟೇಪ್ ರೆಕಾರ್ಡರಿನಾಗ ಪಾಠ ಕೇಳ್ತೀರೋ ಅಥವಾ ಸಿನಿಮಾ ಹಾಡು ಕೇಳಿಕೊತ್ತ ಕೂಡ್ತೀರೋ? ಹಾಂ!' ಅಂತ ಬರೋಬ್ಬರಿ ಮಾಸ್ತರಣಿ ಸ್ಟೈಲಿನಲ್ಲಿ ಬೆಂಡ್ ಎತ್ತಿದ್ದಾರೆ.

ಪಾಪ ಆ ಅಂಧ ವಿದ್ಯಾರ್ಥಿಗಳು ಟೇಪ್ ರೆಕಾರ್ಡರನ್ನು ಹಂಚಿಕೊಳ್ಳುತ್ತಿದ್ದರು. ಅದೂ ಯಾವುದೋ ಜಮಾನಾದ ಡಬ್ಬಾ ಟೇಪ್ ರೆಕಾರ್ಡರ್. ಸಮಾಜಸೇವೆಯ ಜೊತೆ ಕೊಂಚ ದಾನ ಧರ್ಮವೂ ಇರಲಿ ಎಂದು ಮನೆಯಲ್ಲಿ ಧೂಳು ತಿನ್ನುತ್ತಾ ಕೂತಿದ್ದ ಎರಡು ವಾಕ್ಮನ್ (ಸಣ್ಣ ಟೇಪ್ ರೆಕಾರ್ಡರ್) ಗಳನ್ನು ಅವರಿಗೆ ಕೊಟ್ಟಿದ್ದರು. ಅದೂ ಹೆಡ್ ಫೋನ್ ಇದ್ದವು. ನನ್ನ ಕಡೆ ಮೂರ್ನಾಲ್ಕು ವಾಕ್ಮನ್ ಇದ್ದವಲ್ಲ? ಅದು ವಾಕ್ಮನ್ ಜಮಾನಾ. ಅಮೇರಿಕಾದಲ್ಲಿದ್ದ ಅಣ್ಣ ಒಂದಾದಮೇಲೊಂದರಂತೆ, 'ಇದು ನಿನಗೆ!' ಅಂತ ಪ್ರೀತಿಯಿಂದ ತಂದುಕೊಟ್ಟಿದ್ದ ಸೋನಿ ವಾಕ್ಮನ್ನುಗಳು. ನನಗೂ ಎಲ್ಲರಂತೇ ಎರಡೇ ಕಿವಿ. ಹಾಗಾಗಿ ಒಂದೇ ವಾಕ್ಮನ್ ಸಾಕಾಗಿತ್ತು. ಇದ್ದುದರಲ್ಲಿಯೇ ಆಗಿನ ಕಾಲದ ಅತ್ಯಾಧುನಿಕ ಮಾಡೆಲ್ ಒಂದೆರೆಡನ್ನು ಇಟ್ಟುಕೊಂಡು ಉಳಿದವನ್ನು ಅಂಧರಿಬ್ಬರಿಗೆ ದಾನ ಮಾಡಿದ್ದಾಗಿತ್ತು. ಹಾಗಂತ ನೆನಪು. ದಾನ ಮಾಡಿದ್ದೆವೋ ಅಥವಾ ಉಪಯೋಗಿಸಿ ವಾಪಸ್ ಕೊಡಿ ಅಂದಿದ್ದೆವೋ ನೆನಪಿಲ್ಲ.

ವಾರಗಟ್ಟಲೆ, ವಾರಕ್ಕೆ ಘಂಟೆಗಟ್ಟಲೆ ಪಾಠ ಮಾಡಿ, ಅವನ್ನು ರೆಕಾರ್ಡ್ ಮಾಡಿಸಿ, ಕೇಳಲು ವಾಕ್ಮನ್ ಕೊಟ್ಟು, ಪಾಠಕ್ಕೆ ಬಂದವರಿಗೆ, ಅದೂ ಪಾಪ ಅಂಧರು ಅಂತ, ಜಾಸ್ತೀನೇ ಜುಲುಮೆ ಮಾಡಿ ತಿಂಡಿ ತೀರ್ಥ ಮಾಡಿಸಿಯಾದ ಮೇಲೂ ಈ ಹುಡುಗರು ಓದುವ ಈ ಛಂದಕ್ಕೆ ಅಮ್ಮ disappoint ಆಗಿದ್ದರು. ಇಷ್ಟೆಲ್ಲಾ ಮಾಡಿದ ಮೇಲೂ ಸರಳವಾದ ಪ್ರಶ್ನೆ 'ಬನವಾಸಿ ಎಲ್ಲಿದೆ?' ಎಂದು ಕೇಳಿದರೆ ಬೆಬ್ಬೆ ಬೆಬ್ಬೆ ಅಂದಾಗ ಆದ ದೊಡ್ಡ ಪ್ರಮಾಣದ disappointment.

ಹೀಗೆ ಪಾಠ ಮುಗಿಸಿ, ಬನವಾಸಿ ವಿಷಯದಲ್ಲಿ ತಲೆ ಕೆಡಿಸಿಕೊಂಡು, ಯಬಡ ವಿದ್ಯಾರ್ಥಿಗಳ ನಾಮಾರ್ಚನೆ ಮಾಡುತ್ತಾ ಅಮ್ಮ ಮನೆಗೆ ಬಂದರೆ ಅಲ್ಲಿ ನಾನಿದ್ದೆ. ಮೂರು ವಾರಗಳ ಸೆಮಿಸ್ಟರ್ ರಜೆಗೆಂದು ಮನೆಗೆ ಬಂದು ಸ್ಥಾಪಿತನಾಗಿದ್ದೆ.

'ಬನವಾಸಿನೇ? ಎಲ್ಲದ ಅದು? ನಿನಗ ಗೊತ್ತದಯೇನು??' ಎಂದು ಅಮ್ಮನನ್ನೇ ರೈಸ್ ಮಾಡಿಸಿದೆ.

'ಏ, ಏನಂತ ಕೇಳ್ತೀ? ನನಗ ಗೊತ್ತಿಲ್ಲೇನು? ನಮ್ಮ ಜಿಲ್ಲಾ ಉತ್ತರ ಕನ್ನಡದಾಗ ಅದ. ನಮ್ಮ ಸಿರ್ಸಿ ತಾಲೂಕಿನಾಗೇ ಅದ,' ಅಂದರು ಅಮ್ಮ.

ಬನವಾಸಿ ಸಿರ್ಸಿ ಸೀಮೆಯ ಹೆಮ್ಮೆಯ ತಾಣ. ಅಮ್ಮನ ಸೋದರಮಾವನ ಹೆಂಡತಿಯ ತವರೂರು ಬೇರೆ. ಅಮ್ಮನೇ ಒಮ್ಮೆ ನನ್ನನ್ನು ಅಲ್ಲಿಗೆ ಕರೆದೊಯ್ದಿದ್ದರು. ೧೯೮೩ ರಲ್ಲಿ. ವರದಾ ನದಿಯ ದಂಡೆ ಮೇಲಿರುವ ಸುಂದರ ಊರು. ದೊಡ್ಡ ಹಳ್ಳಿ. Very beautiful place.

'ಇದಕ್ಕೇ ನೋಡು ನೀ ಅಮ್ಮ ಅಲ್ಲ ಮಳ್ಳಮ್ಮ ಅನ್ನೋದು! ಬನವಾಸಿ ಉತ್ತರ ಕನ್ನಡ ಜಿಲ್ಲಾದಾಗ ಅದನೇ? ಬಾ ಇಲ್ಲೆ ಸ್ವಲ್ಪ,' ಎಂದು ಮನೆಯ ಹಾಲಿನ ಗೋಡೆಯ ಮೇಲೆ ಎಷ್ಟೋ ವರ್ಷಗಳಿಂದ ರಾರಾಜಿಸುತ್ತಿದ್ದ ಕರ್ನಾಟಕ ರಾಜ್ಯದ ಭೂಪಟದ ಹತ್ತಿರ ಕರೆದೆ. ಪಕ್ಕದಲ್ಲಿ ಭಾರತ ದೇಶದ ಭೂಪಟ.

'ನೋಡಿಲ್ಲಿ. ಬರೋಬ್ಬರಿ ನೋಡಿಕೋ. ಎಲ್ಲದ ಬನವಾಸಿ? ಶಿವಮೊಗ್ಗ ಜಿಲ್ಲಾದಾಗ ಅದ. ನೋಡು! ತಿಳೀತಾ? ಉತ್ತರ ಕನ್ನಡ ಅಲ್ಲ. ಶಿವಮೊಗ್ಗ. ಸಿರ್ಸಿ ಹತ್ತಿರ ಅಂದಕೂಡಲೇ ಎಲ್ಲಾ ಉತ್ತರ ಕನ್ನಡ ಅಂದುಬಿಟ್ಟರೆ ಹ್ಯಾಂಗ? ಹಾಂ!?' ಅಂದೆ. ಮನೆ ಮಂದಿಯನ್ನು ಕಿಚಾಯಿಸಿದಾಗ ಸಿಗುವ ಸುಖಕ್ಕೆ ಹೋಲಿಕೆ ಇಲ್ಲ. ಅದಕ್ಕೆ ಅದೇ ಸಾಟಿ.

ಅಮ್ಮ ಫುಲ್ ಥಂಡಾ. ಅವರಿಗೆ ನಂಬಲೇ ಸಾಧ್ಯವಾಗಲಿಲ್ಲ. ಹುಟ್ಟಿದಾಗಿಂದ ಬನವಾಸಿ ಅಂದರೆ ಉತ್ತರ ಕನ್ನಡ ಜಿಲ್ಲೆ ಅಂದುಕೊಂಡರೆ ಭೂಪಟದಲ್ಲಿ ಅದನ್ನು ಶಿವಮೊಗ್ಗ ಜಿಲ್ಲೆಯಲ್ಲಿ ನಮೂದಿಸಿಬಿಟ್ಟಿದ್ದಾರೆ.

ಬುದ್ಧಿ ಬಂದಾಗಿನಿಂದ ಆ ಭೂಪಟಗಳನ್ನೇ ನೋಡುತ್ತಾ ಬೆಳೆದಿದ್ದ ನನಗೆ ಆ ಭೂಪಟಗಳು ಫುಲ್ ಕಂಠಪಾಠ. ಕರ್ನಾಟಕದ ಭೂಪಟ ಅದರ ಪಕ್ಕದಲ್ಲಿದ್ದ ಭಾರತದ ಭೂಪಟ ಜೊತೆಗೆ ಮತ್ತೂ ವಿವರವಾಗಿದ್ದ ಬ್ರಿಜಬಾಸಿ ಅಟ್ಲಾಸ್ ಎಲ್ಲ ಫುಲ್ ಕಂಠಪಾಠ. ಅವನ್ನು ಉಪಯೋಗಿಸಿಕೊಂಡೇ ವಾದ, ವಿವಾದ, ವಿತಂಡವಾದ ಎಲ್ಲ ಮಾಡಿದ್ದೆ. ಮೂರನೇ ಕ್ಲಾಸಿನಲ್ಲಿ ಇದ್ದಾಗ ತಾತ್ಕಾಲಿಕ ಹೆಡ್ಮಾಸ್ಟರ್ ಅಂತ ಬಂದಿದ್ದ ಕುಲಕರ್ಣಿ (ಅವರ ಹೆಸರು ಎಂದು ನೆನಪು) ಸರ್ ಅವರ ತಪ್ಪುಗಳನ್ನೇ ತಿದ್ದಿದ್ದೆ. ಆಸ್ಸಾಮಿನ ರಾಜಧಾನಿ ಗೌಹಾತಿ ಅಂದಿದ್ದರು. ತಪ್ಪು, ಅದು ದಿಸ್ಪುರ್ ಎಂದು ತೋರಿಸಿದ್ದೆ. ಪಾಕಿಸ್ತಾನದ ರಾಜಧಾನಿ ರಾವಲಪಿಂಡಿ ಎಂದು ಹಳೆಯ ಮಾಹಿತಿ ಕೊಟ್ಟಿದ್ದರು. ನಿಮ್ಮ ಪಿಂಡ ಎಂದು ಮನಸಿನಲ್ಲೇ ಅಂದುಕೊಂಡು ಪಾಕಿಸ್ತಾನದ ರಾಜಧಾನಿ ಯಾವ ಪಿಂಡ ಅಥವಾ ಪಿಂಡಿ ಅಲ್ಲ ಇಸ್ಲಾಮಾಬಾದ್ ಎಂದು ಹೇಳಿದ್ದೆ. ಕುಲಕರ್ಣಿ ಸರ್ ಅವರದ್ದು ದೊಡ್ಡ ಮನಸ್ಸು. ತಪ್ಪು ಒಪ್ಪಿಕೊಂಡಿದ್ದರು. ಪುಣ್ಯಕ್ಕೆ ಅಟ್ಲಾಸ್ ಕೇಳಿ ತೆಗೆದುಕೊಂಡು ಹೋಗಿ ಗಾಯಬ್ ಮಾಡಿರಲಿಲ್ಲ. ಆದರೆ ಬ್ಯಾಂಕ್ ನೌಕರಿ ಸಿಕ್ಕಿತು ಅಂತ ಮಾಸ್ತರಿಕೆ ಬಿಟ್ಟು ಗಾಯಬ್ ಆಗಿಬಿಟ್ಟರು.

ಮುಂದೊಮ್ಮೆ ಬೇರೆ ಮಾಸ್ತರರೊಬ್ಬರು ರೀಡರ್ಸ್ ಡೈಜೆಸ್ಟ್ ಸಂಚಿಕೆಯೊಂದನ್ನು ಮಾಯ ಮಾಡಿದ್ದರು. ಎಲ್ಲಾ ತಪ್ಪು ನನ್ನದೇ. ದೊಡ್ಡದಾಗಿ ಸ್ಕೋಪ್ ತೆಗೆದುಕೊಳ್ಳಲು ರೀಡರ್ಸ್ ಡೈಜೆಸ್ಟ್ ನಲ್ಲಿ ಬಂದಿದ್ದ ವಿಶೇಷ ಮಾಹಿತಿಯನ್ನು ಅವರಿಗೆ ತೋರಿಸಿದ್ದೆ. 'ಓದಿ ಕೊಡ್ತೇನಾ. ಓಕೆ??' ಅಂದು ತೆಗೆದುಕೊಂಡು ಹೋದವರು ತಾವೂ ಮಾಯವಾಗಿ ಪತ್ರಿಕೆಯನ್ನೂ ಮಾಯ ಮಾಡಿಬಿಟ್ಟರು. ರೀಡರ್ಸ್ ಡೈಜೆಸ್ಟ್ ಪತ್ರಿಕೆಯನ್ನು ಪ್ರಾಣಕ್ಕಿಂತಲೂ ಜತನವಾಗಿ ಕಾದಿಟ್ಟುಕೊಳ್ಳುತ್ತಿದ್ದ ತಂದೆಯವರು ಹುಡುಕಿ ಹುಡುಕಿ ಸುಸ್ತಾದರು. ನಾನು ಮುಗುಮ್ಮಾಗಿದ್ದೆ. ಕಳೆದುಹೋಗಲು ನಾನೇ ಕಾರಣ ಎಂದು ತಿಳಿದಿದ್ದರೆ ಬೈಯುತ್ತಿರಲಿಲ್ಲ ಆದರೆ ನನ್ನ ಬೇಜವಾಬ್ದಾರಿ ಬಗ್ಗೆ ಅವರಿಗೆ ಆಗಬಹುದಾಗಿದ್ದ ನೋವು ನನಗಾಗಬಹುದಾಗಿದ್ದಂತಹ ಯಾವುದೇ ನೋವಿಗಿಂತ ದೊಡ್ಡದಾಗಿತ್ತು. ಅದಕ್ಕೇ ಸುಮಡಿಯೊಳಗೆ ಕೂತು ಬಚಾವಾಗಿದ್ದೆ. ಆ ಒಂದು ಸಂಚಿಕೆ ಮಿಸ್ಸಾದ ಅಗಲಿಕೆಯ ನೋವು ಅವರನ್ನು ತುಂಬಾ ಕಾಡಿತ್ತು. ೧೯೫೫ ರಿಂದ ಹಿಡಿದು ಸತತವಾಗಿ ರೀಡರ್ಸ್ ಡೈಜೆಸ್ಟ್ ಚಂದಾದಾರರು ಅವರು. ಮತ್ತೆ ಎಲ್ಲವನ್ನೂ ಸಂಗ್ರಹಿಸಿ ಜತನದಿಂದ ಕಾಪಿಟ್ಟುಕೊಳ್ಳುವ ದೊಡ್ಡ ಪ್ರಮಾಣದ ಶಿಸ್ತಿನ ಮಂದಿ. Anyway...back to ಬನವಾಸಿ.

'ಹ್ಮ್! ಬನವಾಸಿ ಶಿವಮೊಗ್ಗಾ ಜಿಲ್ಲಾದಾಗ ಬರ್ತದ ಅಂತಾತು. ಗೊತ್ತೇ ಇರಲಿಲ್ಲ ನೋಡು. ಹೋಗಿ ಆ ಹುಡುಗುರಿಗೆ ಬರೋಬ್ಬರಿ ಹೇಳಬೇಕು. ಇಲ್ಲಂದ್ರ ನಾ ಈಗ ಉತ್ತರ ಕನ್ನಡ ಅಂತ ಹೇಳಿ ಬಂದೇನಿ. ಅದನ್ನೇ ಬರೆದು ಮಾರ್ಕ್ಸ್ ಕಳೆದುಕೊಂಡಾವು ಪಾಪ. ಮೊದಲೇ ಕುರುಡರು. ಮಾರ್ಕ್ಸ್ ಕಮ್ಮಿ ಬೀಳ್ತಾವ. ಉತ್ತರ ಬರೆಯುವವರು ಸರಿ ಬರೆಯೋದಿಲ್ಲರೀ ಅಂತ ಅಳ್ತಾವ. ಮುಂದಿನ ಕ್ಲಾಸಿನಾಗ ಬರೋಬ್ಬರಿ ಹೇಳಿ ಕಳಿಸ್ತೇನಿ,' ಅನ್ನುತ್ತ ಕಳಚಿಕೊಂಡರು ಅಮ್ಮ. ಸಾವಿರ ಕೆಲಸ ಅವರಿಗೆ. ನಾ ರಜೆಗೆ ಬಂದಾಗ ಕೆಲಸ ಜಾಸ್ತಿನೇ. ಯಾಕೆಂದ್ರೆ ನಾವು ಯಾವ ಕೆಲಸವನ್ನೂ ಮಾಡದೇ ಕೇವಲ ಮಸ್ತಿ ಮಾಡಲಿಕ್ಕೆ ರಜೆಗೆ ಬಂದವರು.

ನಮ್ಮ ಕೀರಿಟಕ್ಕೆ ಮತ್ತೊಂದು ಗರಿ. ಉಪಯೋಗಿಲ್ಲದ ಗರಿ. ಆಗಿನ ಕಾಲದಲ್ಲಿ ಜನರಲ್ ನಾಲೆಜ್ ಅನ್ನುವುದು ಒಂದು ತರಹದ ಹೆಮ್ಮೆ. ಉಳಿದವರಿಗೆ ಗೊತ್ತಿಲ್ಲದ ಏನಾದರೂ ಒಂದು ಸಣ್ಣ ವಿಷಯ ಗೊತ್ತಿದ್ದುಬಿಟ್ಟರೆ ಅದು ಜನರಲ್ ನಾಲೆಜ್ ಅನ್ನುವ ಭ್ರಮೆ. ತಪ್ಪು ಅಭಿಪ್ರಾಯ. ಆಗಿನ ಕಾಲದಲ್ಲಿ ಜನರಲ್ ನಾಲೇಜಿಗೆ ಸಿಕ್ಕಾಪಟ್ಟೆ ಒತ್ತು ಕೊಡುತ್ತಿದ್ದರು. ಅದಕ್ಕಾಗಿಯೇ ದಿನ ಪತ್ರಿಕೆ ಓದಲು ಹೇಳುತ್ತಿದ್ದರು. ಉಪಯುಕ್ತ ಮಾಹಿತಿಗಳನ್ನು ಶೇಖರಿಸಿಟ್ಟುಕೊಳ್ಳಲು ಹೇಳುತ್ತಿದ್ದರು. ಬೇಕಾದ ಮಾಹಿತಿ ಪಟ್ಟಂತ ಸಿಗಲು ಆಗ ಗೂಗಲ್, ಇಂಟರ್ನೆಟ್ ಇರಲಿಲ್ಲ ನೋಡಿ. ಅವೆಲ್ಲಾ ಹೋಗಲಿ. ಬೇಕಾದ ಪುಸ್ತಕಗಳೇ ಸಿಗುತ್ತಿರಲಿಲ್ಲ. ವಿದೇಶದಲ್ಲಿದ್ದ ಬಂಧುಗಳಿಂದ ಕಾಡಿ ಬೇಡಿ ಪುಸ್ತಕ ತರಿಸಿಕೊಂಡರೆ ಅವನ್ನು ದೇಸಿ ಪರಿಚಿತರಿಂದ ಕಾದಿಟ್ಟುಕೊಳ್ಳುವುದು ಕಷ್ಟ. ಒಮ್ಮೆ ಓದಲಿಕ್ಕೆಂದು ತೆಗೆದುಕೊಂಡು ಹೋಗಿ, ಅನೇಕ ಪುಸ್ತಕಗಳು ವಾಪಸ್ ಬರದೇ, ಕೊಟ್ಟು ಮಂಗ್ಯಾ ಆದ ತಂದೆಯವರ ಕಹಿ ಅನುಭವಗಳು ಸಾಕಷ್ಟಿದ್ದವು.

ಮುಂದೆ ಆ ಅಂಧ ವಿದ್ಯಾರ್ಥಿಗಳು ಏನಾದರೋ ಗೊತ್ತಿಲ್ಲ. ಅವರು ಹೋದ ಮೇಲೆ ಮುಂದಿನ ಬ್ಯಾಚ್ ಬಂತು. ಮತ್ತೇ ಅದೇ ರೀತಿಯ ಪಾಠ ಪ್ರವಚನ ಜೊತೆಗೆ ತಿಂಡಿ ತೀರ್ಥದ ಆತಿಥ್ಯ ಎಲ್ಲ ನಡೆದಿತ್ತು. ಸುಮಾರು ವರ್ಷ ಅಮ್ಮನ ಸಮಾಜಸೇವೆ ಹೀಗೆ ನಡೆದಿತ್ತು.

ಈಗ ಕೆಲವು ವರ್ಷಗಳ ಹಿಂದೆ ಏನೋ ನೋಡುತ್ತಿದ್ದಾಗ ಇಂಟರ್ನೆಟ್ ಮೇಲೆ ಬನವಾಸಿ ನೋಡಿದೆ. ಈಗ ಶಾಕ್ ಆಗುವ ಬಾರಿ ನನ್ನದು. ನೋಡಿದರೆ ಬನವಾಸಿ ಉತ್ತರ ಕನ್ನಡ ಜಿಲ್ಲೆಯಲ್ಲೇ ಇದೆ! ಸಿರ್ಸಿ ತಾಲೂಕಿನಲ್ಲೇ ಇದೆ! ಅಕಟಕಟಾ! ಇದೇಗೆ ಹೀಗಾಯಿತು?

ನಂತರ ಹೊಳೆಯಿತು. ಭೂಪಟಗಳಿಗೆ ಇರುವ ಜಾಗದ ಇತಿಮಿತಿಗಳಲ್ಲಿ ಎಲ್ಲ ಮಾಹಿತಿ ತೋರಿಸುವುದು ಕಷ್ಟ. ಬನವಾಸಿ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ ಸರಹದ್ದಿನಲ್ಲಿಇದೆ. ಭೂಪಟದವರು ಅದನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ನಮೂದಿಸಿದ್ದಾರೆ. ಹಾಗಾದರೂ ಸ್ಥಳವನ್ನು ಸೂಚಿಸುವ ಬಿಂದು ಉತ್ತರ ಕನ್ನಡದಲ್ಲಿ ಇರಬೇಕಿತ್ತು. ಹಾಗಾದರೂ ಸಾಕಿತ್ತು. confusion  ಆಗುತ್ತಿರಲಿಲ್ಲ. ಅದೇನಾಗಿತ್ತೋ ಗೊತ್ತಿಲ್ಲ. ಮೊದಲಿಂದಲೂ ಬನವಾಸಿ ಶಿವಮೊಗ್ಗ ಜಿಲ್ಲೆಯಲ್ಲಿದೆ ಅನ್ನುವ ತಪ್ಪು ಕಲ್ಪನೆ ನನ್ನ ತಲೆಯಲ್ಲಿ ಕೂತಿತ್ತು. ಅದು ಅಲ್ಲಿಂದ ಎಲ್ಲೆಲ್ಲೋ ಪಸರಿಸಿಬಿಟ್ಟಿತ್ತು.

ಆ ಅಂಧ ವಿದ್ಯಾರ್ಥಿಗಳ ಪರೀಕ್ಷೆಯಲ್ಲಿ ಬನವಾಸಿ ಎಲ್ಲಿದೆ ಎನ್ನುವ ಪ್ರಶ್ನೆ ಬಂದಿತ್ತೋ ಏನೋ? ಪಾಪದ ಅವು ಏನು ಉತ್ತರ ಬರೆದವೋ ಏನೋ? ಗೊತ್ತಿಲ್ಲ. ಶಿವಮೊಗ್ಗ ಅಂತ ಬರೆದು ಮಂಗ್ಯಾ ಆಗಿ ಮಾರ್ಕ್ಸ್ ಕಳೆದುಕೊಂಡರೆ ಆ ಪಾಪ ನಮಗೂ ಮುಟ್ಟುತ್ತದೆ. ಪ್ರಾಯಶ್ಚಿತ ಮಾಡಿಕೊಳ್ಳಬೇಕು. ಹೇಗೆ? ಮತ್ತೆ ಹೇಗೆ? ಕೊಂಚ ದಾನ ಧರ್ಮ ಮಾಡಿ. ಮನೆ ಕಡೆಯಿಂದ ಅಂಧರ ಸಂಸ್ಥೆಗಳಿಗೆ ದಾನ ಧರ್ಮ ಸಂದಾಯವಾಗುತ್ತಿರುತ್ತದೆ. ಅದರಲ್ಲೇ ಎಲ್ಲ ಬಾರಾ ಖೂನ್ ಮಾಫ್ ಮಾಡಿ ಎಂದು ಬೇಡಿಕೊಳ್ಳಬೇಕು.

'ಅಂಕುಶವಿಟ್ಟರೂ ನನ್ನ ಮನಸ್ಸು ನೆನೆಯುವುದು ಬನವಾಸಿಯನ್ನೇ,' ಎಂದು ಆದಿಕವಿ ಪಂಪ ಹೇಳಿಕೊಂಡನಂತೆ. ನಮಗೂ ಆಗಾಗ ಬನವಾಸಿ ನೆನಪಾಗುತ್ತದೆ. ಅದರಲ್ಲೂ ಇಂಟರ್ನೆಟ್ ಮೇಲೆ ವಿಷಯ ಹುಡುಕುವಾಗ ಮುದ್ದಾಂ ನೆನಪಾಗುತ್ತದೆ. ಹಿಂದೆಂದೋ ಆಗಿಹೋದ ಈ ಜನರಲ್ ನಾಲೆಜ್ ಲಫಡಾ ನೆನಪಾಗುತ್ತದೆ.

ಬನವಾಸಿಯ ಮಹತ್ವ ಬಹಳ. ಕದಂಬರ ರಾಜ ಮಯೂರ ವರ್ಮ ಬನವಾಸಿಯನ್ನು ರಾಜಧಾನಿಯಾಗಿ ಮಾಡಿಕೊಂಡ. ಯಜ್ಞಯಾಗಾದಿಗಳನ್ನು ಮಾಡಲು ಬ್ರಾಹ್ಮಣರು ಬೇಕೆಂದು ಉತ್ತರ ಭಾರತದಲ್ಲಿ ನೆಲೆಸಿದ್ದ ಬ್ರಾಹ್ಮಣರನ್ನು ಕರೆತಂದ. ಅಲ್ಲಿಂದ ಬಂದ ಬ್ರಾಹ್ಮಣರೇ ಇಂದಿನ ಹವ್ಯಕ ಬ್ರಾಹ್ಮಣರ, ಅಂದರೆ ನಮ್ಮ ಸಮುದಾಯದ, ಮೂಲ ವಂಶಜರು ಅಂತ ಐತಿಹ್ಯವಿದೆ. ಮಯೂರ ವರ್ಮ ಬನವಾಸಿಯಲ್ಲಿ ನೆಲೆಸದೇ ಹೋಗಿದ್ದರೆ, ಉತ್ತರದಿಂದ ಬ್ರಾಹ್ಮಣರನ್ನು ಆಮದು ಮಾಡಿಕೊಳ್ಳದೇ ಹೋಗಿದ್ದರೆ ನಾವೆಲ್ಲಾ ಇವತ್ತು ಎಲ್ಲಿರುತ್ತಿದ್ದೆವೋ? ದೇವರಿಗೇ ಗೊತ್ತು. ಹಾಗಾಗಿ ನಮ್ಮ ಕುಲಕ್ಕೂ ಮೂಲವಾದ ಬನವಾಸಿ ಆಗಾಗ ನೆನಪಾಗುತ್ತಲೇ ಇರುತ್ತದೆ.

Sunday, September 08, 2019

ಅಂಧ ಪೈಲಟ್ಟುಗಳು ವಿಮಾನ ಹಾರಿಸಿದ್ದು!

ಅದೊಂದು ದೊಡ್ಡ ವಿಮಾನನಿಲ್ದಾಣ. ಒಂದು ವಿಮಾನ ಹಾರಲು ಸಜ್ಜಾಗಿ ನಿಂತಿತ್ತು. ಪ್ರಯಾಣಿಕರೆಲ್ಲರೂ ಸೀಟ್ ಬೆಲ್ಟ್ ಧರಿಸಿ ಸಿದ್ಧರಾಗಿ ಕುಳಿತಿದ್ದರು. ವಿಮಾನ ಹಾರಿಸುವ ಪೈಲಟ್ಟುಗಳು ಮಾತ್ರ ನಾಪತ್ತೆ!

ಅಷ್ಟರಲ್ಲಿ ಹಿಂದಿಂದ ಇಬ್ಬರು ವ್ಯಕ್ತಿಗಳು ಬರುತ್ತಿರುವುದು ಕಂಡಿತು. ಇಬ್ಬರೂ ಕಪ್ಪು ಕನ್ನಡಕ ಧರಿಸಿದ್ದರು. ಒಬ್ಬ ಕೈಯಲ್ಲಿ ಬಿಳಿ ಕೋಲು ಹಿಡಿದಿದ್ದ. ಮತ್ತೊಬ್ಬ ಬಿಳಿ ಕೋಲಿನೊಂದಿಗೆ ಕುರುಡರಿಗೆ ಸಹಾಯ ಮಾಡುವ ನಾಯಿಯನ್ನೂ ತಂದಿದ್ದ.

ಈ ಕುರುಡರಿಬ್ಬರೂ ತಡಕಾಡುತ್ತ, ಅಕ್ಕಪಕ್ಕದವರಿಗೆ ಡಿಕ್ಕಿ ಹೊಡೆಯುತ್ತ,ಬಿಳಿ ಕೋಲು ಮತ್ತು ನಾಯಿಯ ಸಹಾಯದಿಂದ ವಿಮಾನದ cockpit ತಲುಪಿಕೊಂಡರು. ಹೇಗೋ ಮಾಡಿ ವಿಮಾನ ಹಾರಿಸುವ ಕುರ್ಚಿಗಳ ಮೇಲೆ ಆಸೀನರಾದರು. ತಡಕಾಡುತ್ತಲೇ ವಿಮಾನ ಹಾರಿಸುವ ಮೊದಲು ಮಾಡಬೇಕಾದ ಕೆಲಸಗಳನ್ನು ಏನೋ ಒಂದು ರೀತಿಯಲ್ಲಿ ಮಾಡತೊಡಗಿದರು. ಒಬ್ಬ ಪೆನ್ನು ಕೆಳಗೆ ಬೀಳಿಸಿದರೆ ಮತ್ತೊಬ್ಬ ಹೇಗೋ ಮಾಡಿ ಎತ್ತಿಕೊಡುತ್ತಿದ್ದ. ಒಬ್ಬ ತಪ್ಪಾಗಿ ಯಾವುದೋ ಸ್ವಿಚ್ ಹಾಕಿದರೆ ಮತ್ತೊಬ್ಬ ತಡಕಾಡುತ್ತ ಹೇಗೋ ಸರಿ ಮಾಡುತ್ತಿದ್ದ. ಒಟ್ಟಿನಲ್ಲಿ ರೂಢಿ ಮೇಲೆ ಏನೋ ಮಾಡುತ್ತಿದ್ದರು.

ಇದನ್ನು ನೋಡಿದ ಪ್ರಯಾಣಿಕರಿಗೆ ಆಶ್ಚರ್ಯ. ಇದೇನು ತಮಾಷೆ ಮಾಡುತ್ತಿದ್ದಾರೋ ಎಂದುಕೊಂಡರು. ಎಲ್ಲ ಅಂಗಾಂಗಳು ಸರಿಯಿರುವ ಮನುಷ್ಯರೂ ಸಹ, ತರಬೇತಿಯ ನಂತರವೂ, ಎಲ್ಲ ವಿಮಾನ ಹಾರಿಸಲಾರರು. ಇಲ್ಲಿ ನೋಡಿದರೆ ಇಬ್ಬರು ಅಂಧರು ವಿಮಾನ ಹಾರಿಸಲು ತಯಾರಾಗುತ್ತಿದ್ದಾರೆ. ಏನಾಗುತ್ತಿದೆ ಇಲ್ಲಿ ಎಂದು ಯಾತ್ರಿಕರು ಆತಂಕಗೊಂಡರು.

ಅಷ್ಟರಲ್ಲಿ ವಿಮಾನದ ಇಂಜೀನುಗಳು ಆರಂಭವಾಗಿ ಗುಡುಗತೊಡಗಿದವು. ಅಂಧ ಪೈಲಟ್ ಪ್ಲೇನ್ ಎತ್ತಿಯೇಬಿಟ್ಟ. ಅಂದಾಜಿನ ಮೇಲೆ ಅತ್ತಿತ್ತ ಓಲಾಡಿಸುತ್ತ ವಿಮಾನವನ್ನು runway ಮೇಲೆ ತಂದವನೇ ಫುಲ್ ವೇಗ ಕೊಟ್ಟ. ಎತ್ತರ ಪತ್ತರ ಓಲಾಡುತ್ತ, ಎಲ್ಲಿ runway ಬಿಟ್ಟು ಹೋಗಿ ಅಪಘಾತವಾಗಿಬಿಡುತ್ತದೋ ಮಾದರಿಯಲ್ಲಿ ವಿಮಾನ ವೇಗವಾಗಿ ಚಲಿಸತೊಡಗಿತು.

ಈಗ ಮಾತ್ರ ಪ್ರಯಾಣಿಕರಿಗೆ ಖಾತ್ರಿಯಾಯಿತು, ಇದು ತಮಾಷೆ ಅಲ್ಲ. ಖಂಡಿತ ತಮಾಷೆಯೆಲ್ಲ. ಜೀವ ಬಾಯಿಗೆ ಬಂತು. ಈ ಕುರುಡ ಪೈಲಟ್ಟುಗಳು ತಮ್ಮನ್ನು ಸ್ವರ್ಗಕ್ಕೋ ನರಕಕ್ಕೋ ಕಳಿಸುವದು ಖಾತ್ರಿಯೆಂದುಕೊಂಡು, ಪ್ರಾಣಭಯದಿಂದ ಜೋರಾಗಿ ಕೂಗಿಕೊಳ್ಳಲು ಆರಂಭಿಸಿದರು.

runway ಮೇಲೆ ಕೇವಲ ಇಪ್ಪತ್ತು ಅಡಿ ಮಾತ್ರ ಉಳಿದಿತ್ತು. ಮುಂದೆ ಕಂದಕ. ಅಷ್ಟರಲ್ಲಿ ವಿಮಾನ ಮೇಲೆ ಹಾರಬೇಕು. ಹಾರಿದರೆ ಬಚಾವು. ಇಲ್ಲವಾದರೆ ಗೋವಿಂದಾ ಗೋವಿಂದಾ!

ಪ್ರಯಾಣಿಕರ ಆರ್ತನಾದ ತಾರಕಕ್ಕೆ ಏರಿತು. ಹತ್ತಡಿ, ಐದಡಿ..... ಆರ್ತನಾದ ಈಗ ಉತ್ತುಂಗದ ಸ್ಥಿತಿಯಲ್ಲಿ. ಇನ್ನೇನು runway ಮುಗಿದೇಹೋಯಿತೇನೋ ಅನ್ನುವಷ್ಟರಲ್ಲಿ ವಿಮಾನ ಪವಾಡಸದೃಶವಾಗಿ ಮೇಲಕ್ಕೇರಿತು.

ನಿರುಮ್ಮಳರಾದ ಪ್ರಯಾಣಿಕರು ಬದುಕಿದೆಯಾ ಬಡಜೀವವೇ ಎಂಬಂತೆ ನಿಟ್ಟುಸಿರು ಬಿಟ್ಟು ಎಲ್ಲ ದೇವರಿಗೂ ದೊಡ್ಡ ನಮಸ್ಕಾರ ಹಾಕಿದರು.

ಆಗ ಪೈಲಟ್ಟುಗಳು ಮಾತಾಡಿಕೊಂಡರು, 'ಗುರೂ, ಒಂದು ದಿನ ಈ ಪ್ರಯಾಣಿಕರು ಕೂಗುವುದನ್ನು ನಿಲ್ಲಿಸುತ್ತಾರೆ. ಅಂದು ದೊಡ್ಡ ಅಪಘಾತವಾಗಲಿದೆ. ಎಲ್ಲರೂ ಸಾಯುತ್ತೇವೆ!!'

ಅರ್ಥವಾಯಿತು ತಾನೇ? ಪೈಲಟ್ಟುಗಳು ನಿಜವಾಗಿಯೂ ಕುರುಡರೇ ಆಗಿದ್ದರು. ಪುಣ್ಯಕ್ಕೆ ಕಿವುಡರಾಗಿರಲಿಲ್ಲ. ಪ್ರಯಾಣಿಕರ ಆರ್ತನಾದದ ಅಂದಾಜಿನ ಮೇಲೆ ವಿಮಾನ ಹಾರಿಸುತ್ತಿದ್ದರು. runway ಯಾವಾಗ ಮುಗಿಯುತ್ತದೆ ಅಂತ ಗೊತ್ತೂ ಆಗುತ್ತಿರಲಿಲ್ಲ. ಆದರೆ runway ಮುಗಿಯಲಿದೆ, ವಿಮಾನ ಮೇಲಕ್ಕೆ ಏರದಿದ್ದರೆ ಢಮ್ ಅನ್ನಲಿದೆ ಅನ್ನುವುದು ಪ್ರಯಾಣಿಕರಿಗೆ ಗೊತ್ತಾಗುತ್ತಿತ್ತು. ಅವರ ಆರ್ತನಾದ ತಾರಕಕ್ಕೆ ಏರುತ್ತಿತ್ತು. ಪ್ರಯಾಣಿಕರ ಆರ್ತನಾದ ಒಂದು ಲೆವೆಲ್ಲಿಗೆ ಬಂತು ಅಂದಾಗ ಪೈಲಟ್ಟುಗಳಿಗೆ ಗೊತ್ತಾಗುತ್ತಿತ್ತು, 'runway ಮುಗಿಯಲಿದೆ. ವಿಮಾನವನ್ನು ಎತ್ತಲು ಸರಿಯಾದ ಸಮಯ,' ಎಂದುಕೊಂಡು ಎತ್ತುತ್ತಿದ್ದರು.

ಪ್ರಜಾಪ್ರಭುತ್ವಕ್ಕೂ ಇದು ಅನ್ವಯವಾಗುತ್ತದೆ. ನಮ್ಮ ದೇಶದ ಚುಕ್ಕಾಣಿ ಹಿಡಿದ ನಾಯಕರೂ ಸಹ ಅಂಧರೇ. ನಾವು ಕೂಗುವುದನ್ನು, ಅಂದರೆ ಪ್ರತಿಭಟನೆ ಮಾಡುವುದನ್ನು, ನಿಲ್ಲಿಸಿದ ದಿನ ದೇಶವನ್ನು ಪ್ರಪಾತಕ್ಕೆ ತಳ್ಳುತ್ತಾರೆ. ಹಾಗಾಗಿ ಕೂಗುತ್ತಲೇ ಇರಬೇಕು. ಪ್ರತಿಭಟಿಸುತ್ತಲೇ ಇರಬೇಕು. ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರತಿಭಟನೆ ಅವಶ್ಯ. ನಮ್ಮ ಆರ್ತನಾದದ ಮರ್ಮ ಅರಿತಿರುವ "ನಾಯಕರು" ಹೇಗೋ ಮಾಡಿ ದೇಶವನ್ನು ಏನೋ ಒಂದು ತರಹ ಮುನ್ನೆಡಿಸುತ್ತಾರೆ. ಹಾಗಂತ ಆಶಿಸಬಹುದು.

ನಿನ್ನೆ ನಿಧನರಾದ ಖ್ಯಾತ ವಕೀಲ ರಾಮ್ ಜೇಠಮಲಾನಿ ತಮ್ಮ ಪುಸ್ತಕದಲ್ಲಿ ಹೀಗೆ ತಮಾಷೆಯಾಗಿ ಬರೆದುಕೊಂಡಿದ್ದಾರೆ.

ಅವರ ಆತ್ಮಕ್ಕೆ ದೇವರು ಶಾಂತಿ ಕೊಡಲಿ.

ಮಾಹಿತಿ ಆಧಾರ: Maverick Unchanged, Unrepentant by Ram Jethmalani

 

ರಾಮ್ ಜೇಠಮಲಾನಿ ಬಗ್ಗೆ ಹಿಂದೆ ಬರೆದಿದ್ದ ಲೇಖನಗಳು.

* ಫೋನ್ ಮಾಡಿದ್ದ ದಾವೂದ್ ಇಬ್ರಾಹಿಂ ಏನು ಹೇಳಿದ್ದ?

* ಯಾರದ್ದೋ ಔಷದಿ, ಇನ್ನ್ಯಾರೋ ತೊಗೊಂಡು, ತೊಗೊಂಡವರ ಬೇಗಂ ಅಲ್ಲಾಹುವಿನ ಪಾದ ಸೇರಿಕೊಂಡಿದ್ದು!

* ಕಿಸ್ಸಿಂಗ್ ಕಿಡಿಗೇಡಿ