Wednesday, April 30, 2014

ಎಲ್ಲಾದರೂ ಇರು. ಎಂತಾದರೂ ಇರು. 'Insider Trading' ಮಾತ್ರ ಮಾಡದಿರು. ಮಾಡಿದರೂ ಸಿಕ್ಕಿಬಿದ್ದು ಜೈಲಿಗೆ ಮಾತ್ರ ಹೋಗದಿರು!

ಭಾರತೀಯ ಮೂಲದ ಅಮೇರಿಕನ್ ರಜತ್ ಗುಪ್ತಾ ಎಂಬ ವೈಟ್ ಕಾಲರ್ ಕ್ರಿಮಿನಲ್ ಸಲ್ಲಿಸಿದ್ದ ಮೇಲ್ಮನವಿಯನ್ನು ಉನ್ನತ ನ್ಯಾಯಾಲಯ ತಿರಸ್ಕರಿಸಿ, ಕಚಪಚಾ ಅಂತ ಮುದ್ದೆ ಮಾಡಿ, ರದ್ದಿ ಪೇಪರಿನಂತೆ ಕಸದ ಬುಟ್ಟಿಗೆ ಒಗೆದು ಬಿಟ್ಟಿದೆ. ಇದರೊಂದಿಗೆ ಭಾರತೀಯ ಮೂಲದ ದೊಡ್ಡ ಕಾರ್ಪೊರೇಟ್ ಕುಳವೊಂದು, ಕೇಸರಿ ಬಣ್ಣದ ಜೈಲು ಕೈದಿಗಳ ಜಂಪ್ ಸೂಟ್ ಹಾಕಿಕೊಂಡು, ಅಲುಮಿನಿಯಂ ತಟ್ಟೆ ಬಟ್ಟಲು ಹಿಡಕೊಂಡು, ಸಾಮಾನ್ಯ ಕೈದಿಯಂತೆ ಅಮೇರಿಕಾದ ಜೈಲಿನಲ್ಲಿ ಎರಡು ವರ್ಷ ಇದ್ದು ಬರಲಿಕ್ಕೆ ತಯಾರಾಗತೊಡಗಿದೆ. 

ರಜತ್ ಗುಪ್ತಾ - ೬೨ ವರ್ಷದ ದೊಡ್ಡ ಕಾರ್ಪೊರೇಟ್ ಕುಳ. ಮಾತೆತ್ತಿದರೆ ಬಿಲ್ ಕ್ಲಿಂಟನ್, ಕೋಫಿ ಅನ್ನನ್ ಅನ್ನುತ್ತಿದ್ದವನ ಇವತ್ತಿನ ಪರಿಸ್ಥಿತಿ ಬರೋಬ್ಬರಿ ಅಕ್ಕನ್, ಅಮ್ಮನ್ ಆಗಿ ಬಿಟ್ಟಿದೆ. IIT Entrance ಪರೀಕ್ಷೆಯಲ್ಲಿ ಇಡೀ ದೇಶಕ್ಕೆ ೧೫ ನೆ ರಾಂಕ್ ಬಂದಿದ್ದ ಮಹಾನುಭಾವ. IIT ಡೆಲ್ಲಿಯಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ. ನಂತರ ಸೀದಾ ವಿಶ್ವವಿಖ್ಯಾತ ಹಾರ್ವರ್ಡ್ ಯೂನಿವರ್ಸಿಟಿಗೆ ಪೂರ್ಣ ಶಿಷ್ಯವೇತನದೊಂದಿಗೆ MBA ಪ್ರವೇಶ. ನಂತರ McKinsey ಎಂಬ strategic consulting ಕಂಪನಿಯಲ್ಲಿ ಅಖಂಡ ಮೂವತ್ತು ವರ್ಷ ನೌಕರಿ. ಮೂರು ಸಾರಿ ಸತತವಾಗಿ ಮ್ಯಾನೇಜಿಂಗ್ ಡೈರೆಕ್ಟರ್ ಅಂತ ಆಯ್ಕೆ. ಓಬಾಮನಿಗೆ ಖಾಸ್. ಮನಮೋಹನ್ ಸಿಂಗ್, ಅಂಬಾನಿ, ಟಾಟಾ, ಬಿರ್ಲಾ ಎಲ್ಲ ಕ್ಲೋಸ್. Indian School of Business ಎಂಬ ಪ್ರಸಿದ್ಧ MBA ಸಂಸ್ಥೆಯ ಸ್ಥಾಪಕ ಕೂಡ. ಜಗತ್ತಿನ ಮೂಲೆ ಮೂಲೆಯಲ್ಲಿ ವ್ಯಾಪಕ ಉನ್ನತ ಸಂಪರ್ಕವುಳ್ಳ ವ್ಯಕ್ತಿ. ತಂದೆ ಸ್ವಾತಂತ್ರ ಹೋರಾಟಗಾರರು. ತನ್ನ ಹದಿಹರೆಯದಲ್ಲಿಯೇ ತಬ್ಬಲಿಯಾಗಿ, ತಂಗಿ, ತಮ್ಮಂದಿರನ್ನು ಸಾಕಿದ ಧೀರ.

ನಾನು ಕ್ರಿಮಿನಲ್ಲೇ? ಅನ್ನುವ ಭಂಗಿಯಲ್ಲಿ ರಜತ್ ಗುಪ್ತಾ

ಇಂತಹ ಮಹಾನುಭಾವ insider trading ಮಾಡಲು ಹೋಗಿ ಪೂರ್ತಿ ಬರ್ಬಾದ ಆಗಿ ಜೇಲಿಗೆ ಹೊರಟಿದ್ದಾನೆ. ಸುಮಾರು ಐದು ವರ್ಷದಿಂದ ಕೋರ್ಟಿನಲ್ಲಿ ಗುದ್ದಾಡಿಯೇ ಗುದ್ದಾಡಿದ. ಮಿಲಿಯನ್ ಗಟ್ಟಲೆ ಡಾಲರ್ ದಾನ ಧರ್ಮ ಮಾಡಿದ್ದೇನೆ ಅಂತ ತೋರಿಸಿದ. ಬಿಲ್ ಗೇಟ್ಸ್ ನಿಂದ ಹಿಡಿದು, ಕೋಫಿ ಅನ್ನನ್ ತನಕ ಎಲ್ಲರಿಂದ ಶಿಫಾರಸು ಪತ್ರ ತಂದ. ಜೈಲು ಬೇಡ. ಆಫ್ರಿಕಾದ ರವಾಂಡಾಗೆ ಕಳಿಸಿಬಿಡಿ. ಅಲ್ಲಿದ್ದು ಸಮಾಜ ಸೇವೆ ಮಾಡುತ್ತೇನೆ, ಅಂತ ಅಂದ. ಏನೂ ಇಲ್ಲ. ಸುಮ್ಮನೆ ನಡಿ ಜೈಲಿಗೆ, ಅನ್ನುವ ರೀತಿಯಲ್ಲಿ ಅವನ ಮೇಲ್ಮನವಿಯನ್ನು ತಿರಸ್ಕರಿಸಿದ ಕೋರ್ಟ್ ಚಡಾ ಬಡಾ ಅನ್ನುವಂತೆ ಬಾರಿಸಿ ಬಿಟ್ಟಿದೆ. ಇದೇ ಜೂನ್ ೧೭ ರಂದು ಮಧ್ಯಾನ್ಹ ೨ ಘಂಟೆಗೆ ಜೈಲಿಗೆ ಬಂದು ರಿಪೋರ್ಟ್ ಮಾಡು ಅಂತ ಹೇಳಿ, ಇವನ ನಸೀಬದ ಮೇಲೆಯೇ ಹೊಡೆದಂತೆ ಮೇಜಿನ ಮೇಲೆ ತಮ್ಮ ಸುತ್ತಿಗೆ ಕುಟ್ಟಿ, ನ್ಯಾಯಾಧೀಶರು ಎದ್ದು ಹೋಗಿದ್ದಾರೆ.

ದೀಪಾವಳಿ ದಿವಸದಂದೇ ಅರೆಸ್ಟ್ ಆಗುವಂತಹ ಲಫಡಾ ಏನು ಮಾಡಿಕೊಂಡಿದ್ದ ಈ ಪುಣ್ಯಾತ್ಮ ಅಂತ ನೋಡುತ್ತ ಹೋದರೆ ಸಿಗುತ್ತದೆ ಒಂದು ಭಯಾನಕ ವೈಟ್ ಕಾಲರ್ ಕ್ರೈಂ - insider trading (trading on the basis of insider information)

ಮೊದಲೇ ಹೇಳಿದಂತೆ ಈ ರಜತ್ ಗುಪ್ತಾ ದೊಡ್ಡ ಕಾರ್ಪೊರೇಟ್ ಕುಳ. ರಿಟೈರ್ ಆದ ನಂತರ ಸುಮಾರು ಕಂಪನಿಗಳ ಡೈರೆಕ್ಟರ್ (in the board of directors) ಆದ. ಅವೆಲ್ಲ ಷೇರುಪೇಟೆಯಲ್ಲಿ publicly traded companies. ಡೈರೆಕ್ಟರ್ ಆಗಿದ್ದಕ್ಕೆ ಕಂಪನಿ ಒಳಗಿನ ರಹಸ್ಯ ವಿಷಯ ತಿಳಿಯುತ್ತಿತ್ತು. ಕಂಪನಿಯ ಶೇರು ಬೆಲೆ ಮೇಲೆ ಹೋಗುತ್ತದೆಯೋ, ಕೆಳಗೆ ಹೋಗುತ್ತದೆಯೋ ಅಂತ ನಿರ್ಧರಿಸಲಿಕ್ಕೆ ಬೇಕಾಗುವಂತಹ ಖಾಸ್ ಮಾಹಿತಿ. ಅಂತಹ ಮಾಹಿತಿಯನ್ನು ರಹಸ್ಯವಾಗಿ ಒಬ್ಬ ಹೆಜ್ ಫಂಡ್ (hedge fund) ಖದೀಮನಿಗೆ ಪೂರೈಸಿ, ಅನೇಕ ವಿಧವಾದ ಶೇರು ಮಾರುಕಟ್ಟೆಗೆ ಸಂಬಂಧಿಸಿದ ಕಾಯಿದೆ ಉಲ್ಲಂಘನೆ ಮಾಡಿದ್ದಾನೆ, ತನಗೆ ಬೇಕಾದವರಿಗೆ ಮಿಲಿಯಗಟ್ಟಲೆ ಹಣ ಕಾಯಿದೆ ಬಾಹಿರ ಮಾಡಿಕೊಳ್ಳಲು ಪೂರ್ತಿ ಸಹಕರಿಸಿದ್ದಾನೆ ಅಂತ ಈ ರಜತ್ ಗುಪ್ತಾ ಮೇಲಿನ ಆಪಾದನೆ.

ರಾಜ್ ರಾಜರತ್ನಂ - ಶ್ರೀಲಂಕಾ ಮೂಲದ ತಮಿಳ. ಪಕ್ಕಾ LTTE. LTTE ಗೆ ಹಲವಾರು ಮಿಲಿಯನ್ ಡಾಲರ್ ದೇಣಿಗೆ ಕೊಡುತ್ತಿದ್ದ. ಒಂದು ಕಾಲದಲ್ಲಿ ತಾನೂ ಸಹಿತ ತಮಿಳು ಬಂಡುಕೋರರ ಜೊತೆ ಇದ್ದೆ, ಕಿವಿ ಪಕ್ಕದಲ್ಲೇ ಗುಂಡು ಹಾರಿ ಹೋಗಿತ್ತು, LTTE ಪ್ರಭಾಕರನ್ ತುಂಬ ಕ್ಲೋಸ್, ಅಂತೆಲ್ಲ ಭೋಂಗು ಬಿಡುತ್ತ, ಇಲ್ಲದ ಸಲ್ಲದ ರೋಚಕ ಕಥೆ ಹೇಳುತ್ತ ಎಲ್ಲರನ್ನೂ ಇಂಪ್ರೆಸ್ ಮಾಡುತ್ತಿದ್ದ. ಅವನ ಕಿವಿ ಪಕ್ಕ ಗುಂಡೇ ಹಾರಿ ಹೋಯಿತೋ ಅಥವಾ ಕಾಗೆಯೇ ಹಾರಿ ಹೋಯಿತೋ ಅಥವಾ ಇವನೇ ಹಾಗಂತ  'ಕಾಗೆ ಹಾರಿಸಿದನೋ' ಗೊತ್ತಿಲ್ಲ. ಈ ರಾಜ ರಾಜರತ್ನಂ ಅನ್ನುವ ಲಂಕಾದ ರಾವಣ ಮಾತ್ರ ಎಲ್ಲರ ಕಿವಿ ಮೇಲೆ ಹೂವಂದೇ ಏನು ಇಡೀ ಲಾಲ್ ಬಾಗ್, ಕಬ್ಬನ್ ಪಾರ್ಕ್ ಎಲ್ಲ ಇಟ್ಟು ಬಿಟ್ಟಿದ್ದ.

ಈ ರಾಜ್ ರಾಜರತ್ನಂ ದೊಡ್ಡ ಹೆಜ್ ಫಂಡ್ ಕುಳ. ದೊಡ್ಡ ದೊಡ್ಡ ಮಂದಿಯಿಂದ ದೊಡ್ಡ ದೊಡ್ಡ ಮೊತ್ತ ಸಂಗ್ರಹಿಸಿ, ಅವನ್ನೆಲ್ಲ ತುಂಬಾ ತಲೆ ಉಪಯೋಗಿಸಿ invest ಮಾಡಿ, ದೊಡ್ಡ ಪ್ರಮಾಣದ returns ಕೊಡಿಸುವದು ಇವನ ಉದ್ಯೋಗ. ಮ್ಯೂಚುಯಲ್ ಫಂಡ್ ಮ್ಯಾನೇಜರ್ ಇದ್ದ ಹಾಗೆ. ಸಾವಿರ ಡಾಲರ್ ಹಾಕುವ ತಾಕತ್ತು ಇದ್ದ ಆರ್ಡಿನರಿ ಮಂದಿಗೆ ಮ್ಯೂಚುಯಲ್ ಫಂಡ್. ಮಿಲಿಯನ್ ಡಾಲರ್ ಹಾಕಿ, ಸಿಕ್ಕಾಪಟ್ಟೆ ರಿಸ್ಕ್ ತೆಗೆದುಕೊಂಡು, ಒಂದಕ್ಕೆ ನಾಕು ಪಟ್ಟು ದುಡ್ಡು ಬೇಗನೆ ಮಾಡಿಕೊಳ್ಳಬೇಕು ಅನ್ನುವವರಿಗೆ ಹೆಜ್ ಫಂಡ್. ಅಂತಹ ಒಂದು ಹೆಜ್ ಫಂಡ್ ಈ ರಾಜ್ ರಾಜರತ್ನಂ ಇಟ್ಟಿದ್ದ. ಮೊದಲಿನ ಕೆಲ ವರ್ಷ ಸಿಕ್ಕಾಪಟ್ಟೆ ರಿಟರ್ನ್ಸ್ ಮಾಡಿಕೊಟ್ಟಿದ್ದ. ವೈಯಕ್ತಿಕ ಮಟ್ಟದಲ್ಲಿ ಸ್ವತಹ ಅವನೇ ಬಿಲಿಯನಿಯರ್ ಆಗಿ ವಿಶ್ವದ ನಾಕುನೂರು ಶ್ರೀಮಂತರ ಪಟ್ಟಿಯಲ್ಲಿ ಬಂದು ಬಿಟ್ಟಿದ್ದ. ಮತ್ತೆ ಎಲ್ಲಿಯೋ ಅಬ್ಬೇಪಾರಿ ತಮಿಳ ಅಂತ ಮಾಡಿಬಿಟ್ಟೀರಿ! ಇವನೂ ಸಹಿತ ಇಂಗ್ಲೆಂಡ್ ನಲ್ಲಿ ಓದಿ, ನಂತರ ಖ್ಯಾತ ವಾರ್ಟನ್ ನಿಂದ MBA ಮಾಡಿಕೊಂಡು, ವಿಶ್ವದ ಶೇರು ಮಾರುಕಟ್ಟೆಯ ಕೇಂದ್ರವಾದ ನ್ಯೂಯಾರ್ಕ್ ನಲ್ಲಿ ದೊಡ್ಡ ದೊಡ್ಡ ಕೆಲಸ ಮಾಡಿ, ಒಂದು ಸಂಸ್ಥೆಯ ಮುಖ್ಯಸ್ಥನೂ ಆಗಿ, ತಿಂಗಳ ಕೇವಲ ಲಕ್ಷ ಡಾಲರ್ ಸಂಬಳ ಯಾರಿಗೆ ಬೇಕ್ರೀ!? ಸ್ವಂತ ಹೆಜ್ ಫಂಡ್ ನಡೆಸಿ, ಬಿಲಿಯನ್ ಗಟ್ಟಲೆ ಕಮಾಯಿಸುತ್ತೇನೆ, ಅಂತ ಹೊರಬಂದು, ಹೇಳಿದಂತೆ ಮಾಡಿ ತೋರಿಸಿದ್ದ ಧೀರ.

ರಾಜ್ ರಾಜರತ್ನಂ. ಹಡಬೆ ರೊಕ್ಕದ ಮಜಾನೇ ಬೇರೆ!

ಈ ಮಹಾನುಭಾವರೆಲ್ಲರ ಚಡ್ಡಿ ಹೇಗೆ ಕಳಚಿ ಬಿದ್ದಿತು ಅಂತ ನೋಡುತ್ತ ಹೋದರೆ ಅದೇ ಒಂದು ರೋಚಕ ವೃತ್ತಾಂತ.

ರೋಮಿ ಖಾನ್ - ಭಾರತೀಯ ಮೂಲದ ಪಂಜಾಬಿ ಮಹಿಳೆ. ಬಾಂಗ್ಲಾದೇಶಿ ಒಬ್ಬನನ್ನು ಮದುವೆ ಆಗಿ ಖಾನ್ ಆಗಿದ್ದಳು. ಇವಳೂ ಭಯಂಕರ ಪ್ರತಿಭಾವಂತೆ. ದೊಡ್ಡ ದೊಡ್ಡ ಡಿಗ್ರಿ ಮಾಡಿಕೊಂಡು ಇಂಟೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಅದೆಂಗೊ ಆಗಿ ರಾಜ್ ರಾಜರತ್ನಂ ಪರಿಚಯವಾಗಿದ್ದ. ಬಹಳ ವರ್ಷದ ಹಿಂದೆಯೇ ಇಂಟೆಲ್ ಕಂಪನಿಯ ರಹಸ್ಯ ಮಾಹಿತಿಯೆಲ್ಲ ಕದ್ದು, ರಾಜನಿಗೆ ಫ್ಯಾಕ್ಸ್ ಮಾಡುತ್ತಿದ್ದಳು. ಅದನ್ನು ಉಪಯೋಗಿಸಿಕೊಂಡು ರಾಜ್ ಶೇರು ಮಾರುಕಟ್ಟೆಯಲ್ಲಿ ಬಿಂದಾಸ್ ದುಡ್ಡು ಮಾಡುತ್ತಿದ್ದ. ಇವಳಿಗೂ ಪ್ರಸಾದ ಕೊಡುತ್ತಿದ್ದ. ಇಂಟೆಲ್ ಕಂಪನಿಗೆ ಸಂಶಯ ಬಂತು. ಫ್ಯಾಕ್ಸ್ ಮಷೀನ್ ಮೇಲೆ ಎರಡು ರಹಸ್ಯ ಕ್ಯಾಮೆರಾ ಹಾಕಿಸಿಟ್ಟರು. ರೋಮಿಯ ಕಾರ್ನಾಮೆಯಲ್ಲ ಬಯಲಾಯಿತು. FBI ಗೆ ಹಿಡಿದು ಕೊಟ್ಟ ಇಂಟೆಲ್ ಆಕೆಯನ್ನು ನೌಕರಿ ಬಿಟ್ಟು ಓಡಿಸಿತ್ತು. ಅದೆಂಗೊ ಮಾಡಿ FBI ಗೆ, ಕೋರ್ಟಿಗೆ ಏನೇನೋ ಹೇಳಿ ದೊಡ್ಡ ಮಟ್ಟದ ಶಿಕ್ಷೆಯಿಂದ ಪಾರಾಗಿ ಬಂದಿದ್ದಳು ರೋಮಿ. ಆದ್ರೆ ಹಡಬೆ ದುಡ್ಡಿನ ಹುಚ್ಚು ಬಿಟ್ಟಿರಲಿಲ್ಲ. ತನ್ನ ಹಳೆಯ ಗೆಳಯ ರಾಜ್ ರಾಜರತ್ನಂ ಜೊತೆ ಸಂಪರ್ಕದಲ್ಲಿ ಇದ್ದಳು. ಇಂಟೆಲ್ ಕಂಪನಿ ಬಗ್ಗೆ ಮಾಹಿತಿ ಕೊಡಲಿಕ್ಕೆ ಸಾಧ್ಯವಿಲ್ಲದಿದ್ದರೆ ಏನಾಯಿತು. ಬೇರೆ ಕಂಪನಿಗಳಲ್ಲಿ ಇದ್ದ ಗೆಳೆಯರು, ಆಪ್ತರಿಂದ ರಹಸ್ಯ ಮಾಹಿತಿ ತೆಗೆದು ರಾಜನಿಗೆ ಮಾಹಿತಿ ಕೊಟ್ಟು, ಅವನಿಂದ ಹಡಬೆ ದುಡ್ಡು ಸಂಪಾದಿಸಿ ಅದ್ದೂರಿಯ ಜೀವನ ನಡೆಸುತ್ತಿದ್ದಳು.

೨೦೦೮, ೨೦೦೯ ರ ಸಮಯ. ಇಡೀ ವಿಶ್ವದ ಆರ್ಥಿಕ ಪರಿಸ್ಥಿತಿ ಎಕ್ಕುಟ್ಟಿ ಹೋಗುತ್ತಿತ್ತು. ಉರಿಯುವ ಮನೆಯಲ್ಲಿಯೇ ಗಳ ಹಿರಿದು, ತಮ್ಮ ತಮ್ಮ ಬೀಡಿ ಹಚ್ಚಿಕೊಂಡವರು ಈ insider trading ಮಾಡಿದ ಮಂದಿ. ಪ್ರತಿ ದಿನ ಶೇರು ಮಾರುಕಟ್ಟೆ ೨೦%, ೩೦% ಮೇಲೆ ಕೆಳಗೆ ಆಗಿದ್ದೂ ಇತ್ತು. ಹಾಗಿದ್ದಾಗ  ಸರಿಯಾದ ರಹಸ್ಯ ಮಾಹಿತಿ ಸಿಕ್ಕರೆ ರಾಜರತ್ನಂ ತರಹದ ಜನ ದಿನಕ್ಕೆ ಮಿಲಿಯನ್ ಡಾಲರ್ ಗಟ್ಟಲೆ ಹಡಬೆ ದುಡ್ಡು ಮಾಡಿಕೊಂಡು ಉದ್ಧಾರವಾಗಿ ಹೋದರು. ಶೇರುಪೇಟೆಯಲ್ಲಿ ದುಡ್ಡು ಹಾಕಿದ್ದ ಬಡಪಾಯಿಗಳು ಪೂರ್ತಿ ಬರಬಾದಾಗಿ, ಹಾಕ್ಕೊಂಡಿದ್ದ ಅಂಗಿ ಪ್ಯಾಂಟ್ ಸಹಿತ ಕಳೆದುಕೊಂಡು ನಿರ್ನಾಮವಾಗಿ ಹೋಗುತ್ತಿದ್ದರೆ, ರಾಜ್ ರಾಜರತ್ನಂ ತನ್ನ ಇಡೀ ಕಂಪನಿಯನ್ನು ಕರೆದುಕೊಂಡು ಆಫ್ರಿಕಾಕ್ಕೆ ಸಫಾರಿ ನೋಡಲು ಹೋದೆ, ವೆಸ್ಟ್ ಇಂಡೀಸ್ ಗೆ ಕ್ರಿಕೆಟ್ ಮ್ಯಾಚ್ ನೋಡಲು ಹೋದೆ ಅಂತ ಉಡೀಸ್ ಅಂತ ಮೋಜು ಉಡಾಯಿಸುತ್ತಿದ್ದ.

FBI ಏಜೆಂಟರು ಹಳೆ ಕಳ್ಳರು ಸುಳ್ಳರ ಮೇಲೆ ಯಾವಾಗಲೂ ಕಣ್ಣಿಟ್ಟಿರುತ್ತಾರೆ. ಜೊತೆಗೆ SEC (Securities Exchange Commission) ಎಂಬ ಸಂಸ್ಥೆ ಸಹ. ಏನೋ ಸಂಶಯದ ಮೇಲೆ ರೋಮಿ ಖಾನ್, ರಾಜ್ ರಾಜರತ್ನಂ ಸಂಬಂಧವನ್ನು ಕೆದಕತೊಡಗಿದರು. ಸಂಶಯ ಮತ್ತೂ ಬಲವಾಯಿತು. ರಾಜರತ್ನಂ ಫೋನ್ ಟ್ಯಾಪ್ ಮಾಡಲು ಪರ್ಮಿಷನ್ ತೆಗೆದುಕೊಂಡು ಬಂದು, ಸಂಭಾಷಣೆ ಕೇಳಲು ಶುರು ಮಾಡಿದರು ನೋಡಿ! ಎಲ್ಲ ಬಣ್ಣ ಬಯಲಾಗತೊಡಗಿತು.

ಅನಿಲ್ ಕುಮಾರ್ - ಇವನೂ ಮಹಾ ಪ್ರತಿಭಾವಂತ. IIT ಮುಂಬೈ ಪದವಿಧರ. ಡಿಗ್ರಿ ಮುಗಿಯುತ್ತಿದ್ದಂತೆ ಲಂಡನ್ನಿನ ಇಂಪೀರಿಯಲ್ ಕಾಲೇಜಿನಿಂದ ಪೂರ್ತಿ ಸ್ಕಾಲರ್ಷಿಪ್ ಸಿಕ್ಕಿತು. ಅತ್ಯಂತ ಫೇಮಸ್ ಡೀ ಬೀರ್ಸ್ ಸ್ಕಾಲರ್ಷಿಪ್. IIT ಮುಂಬೈ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅದು ಸಿಕ್ಕಿದ್ದು. ಜೊತೆಗೆ ಅಮೇರಿಕಾದ ವಾರ್ಟನ್ ನಿಂದಲೂ MBA ಗೆ ಅಡ್ಮಿಶನ್ ಸಿಕ್ಕಿತ್ತು. ಪೂರ್ತಿ ಶಿಷ್ಯವೇತನದೊಂದಿಗೆ. ನಮ್ಮ IIT ಗೆ ಮೊಟ್ಟ ಮೊದಲ ಬಾರಿಗೆ ಇಂಪೀರಿಯಲ್ ಕಾಲೇಜಿನಿಂದ ಡೀ ಬೀರ್ಸ್ ಸ್ಕಾಲರ್ಷಿಪ್ ಬಂದಿದೆ. ಅನಿಲ್, ನೀನು ಅದನ್ನೇ ಸ್ವೀಕರಿಸಿ, ಅಲ್ಲಿಯೂ ನಿನ್ನ ಪ್ರತಿಭೆ ತೋರಿಸಿ, IIT ಮುಂಬೈ ಕೀರ್ತಿಪತಾಕೆಯನ್ನು ಅಲ್ಲಿಯೂ ಹಾರಿಸಿ ಬರಲೇಬೇಕು. ವಾರ್ಟನ್ ನಲ್ಲಿ ನಂತರವೂ MBA ಮಾಡಲು ಸಾಧ್ಯ, ಅಂತ  IIT ಮುಂಬೈ ಮಾಸ್ತರರೆಲ್ಲ ಪರಿಪರಿಯಾಗಿ ಹೇಳಿದರು. ಅನಿಲ ಕುಮಾರ್ ವಿಚಾರ ಮಾಡಿದ. ವಾರ್ಟನ್ ಗೆ ಪತ್ರ ಬರೆದು,  ಕೊಟ್ಟ ಅಡ್ಮಿಶನ್, ಸ್ಕಾಲರ್ಷಿಪ್ ಎರಡು ವರ್ಷ postpone ಮಾಡಲು ವಿನಂತಿಸಿದ. ವಾರ್ಟನ್ ರಿಪ್ಲೈ ಮಾಡಿತು. ಎರಡು ವರ್ಷ ಮುಂದೆ ಹಾಕಲು ಸಾಧ್ಯವಿಲ್ಲ. ಹೆಚ್ಚೆಂದರೆ ಒಂದು ವರ್ಷ ಮಾತ್ರ ಸಾಧ್ಯ, ಅಂತ. ಅನಿಲ್ ಕುಮಾರ್ ಅದನ್ನು ಚಾಲೆಂಜ್ ಎಂಬಂತೆ ತೊಗೊಂಡ. ಇಂಪೀರಿಯಲ್ ಕಾಲೇಜಿನ ಎರಡು ವರ್ಷದ ಅತಿ ಕಷ್ಟದ ಉನ್ನತ ಶಿಕ್ಷಣವನ್ನು ಅಲ್ಲಿಯ ಮಾಸ್ತರುಗಳೇ ಬೆರಗಾಗುವಂತೆ ಒಂದೇ ವರ್ಷದಲ್ಲಿ ಮುಗಿಸಿ, ಮುಂದಿನ ವರ್ಷ ಬಂದು ವಾರ್ಟನ್ ನಲ್ಲಿ MBA ಶುರುಮಾಡಿಕೊಂಡು, ಅದನ್ನೂ ಅತಿ ಉನ್ನತ ದರ್ಜೆಯಲ್ಲಿ ಪಾಸು ಮಾಡಿ, ತನ್ನ ಅದ್ಭುತ ಪ್ರತಿಭೆ ಮೆರದಿದ್ದ. MBA ನಲ್ಲಿ ಅವನ ಕ್ಲಾಸ್ ಮೇಟ್ ಇದೇ LTTE ರಾಜ್ ರಾಜರತ್ನಂ!

ಹೀಗೆ ಸಿಕ್ಕಾಪಟ್ಟೆ ಬುದ್ಧಿವಂತನಾದ ಅನಿಲ್ ಕುಮಾರ್ MBA ನಂತರ ಸೇರಿದ್ದು ಅದೇ ರಜತ್ ಗುಪ್ತಾ ಕಂಪನಿ McKinsey. ಆಗ ರಜತ್ ಗುಪ್ತಾ ಆಗಲೇ ದೊಡ್ಡ ಮಟ್ಟಕ್ಕೆ ಏರಿದ್ದ. ಈ ಅನಿಲ್ ಕುಮಾರನನ್ನು ತನ್ನ ಪಟ್ಟದ ಶಿಷ್ಯನಂತೆ ಸ್ವೀಕರಿಸಿ protege ಎಂಬಂತೆ ತಯಾರು ಮಾಡತೊಡಗಿದ. ರಜತ್ ಗುಪ್ತಾ ನಂತರ ಈ ಅನಿಲ್ ಕುಮಾರನೇ MD ಆದರೂ ಆದ ಅನ್ನುವ ರೀತಿಯಲ್ಲಿ ರಜತ್ ಮತ್ತು ಅನಿಲ್ ಮಧ್ಯೆ ಗುರು ಶಿಷ್ಯರ ಸಂಬಂಧ. ಮುಂದೊಂದು ದಿವಸ ಇದೇ ಶಿಷ್ಯ ಅನಿಲ್ ಕುಮಾರ್ ರಜತ್ ಗುಪ್ತಾನ ಬುಡಕ್ಕೇ ಬಾಂಬಿಟ್ಟಾನು ಅಂತ ರಜತ್ ಗುಪ್ತಾ ಕನಸು ಮನಸ್ಸಿನಲ್ಲಿಯೂ ಎಣಸಿರಲಿಕ್ಕಿಲ್ಲ!

ಅನಿಲ್ ಕುಮಾರ್. ಎಲ್ಲರಿಗೂ ಟೊಪ್ಪಿ ಹಾಕಿದವ ಕೊನೆಗೆ ತಾನೇ ಟೊಪ್ಪಿ ಹಾಕಿಕೊಂಡ!

ಲಂಕಾ ರಾವಣ ರಾಜರತ್ನಂ ತನ್ನ insider trading ಗೆ ರಹಸ್ಯ ಮಾಹಿತಿ ಕೊಡುವ ಹೊಸ ಹೊಸ ಬಕರಾಗಳಿಗಾಗಿ ಹುಡುಕತ್ತಲೇ ಇದ್ದ. ಆಗ ಕಂಡವನು ಹಳೆ MBA ಕಾಲದ ಮಿತ್ರ - ಅನಿಲ್ ಕುಮಾರ್. ಆಗ ಅನಿಲ್ ಕುಮಾರ್ AMD ಅನ್ನುವ ದೊಡ್ಡ ಸೆಮಿಕಂಡಕ್ಟರ್ ಕಂಪನಿಗೆ adviser ಅಂತ ಇದ್ದ. strategic consulting ಮಾಡುತ್ತಿದ್ದ McKinsey ಕಂಪನಿ AMD ಯಿಂದ ವರ್ಷಕ್ಕೆ ಮಿಲಿಯನ್ ಗಟ್ಟಲೆ ಫೀಸ್ ತೆಗೆದುಕೊಳ್ಳುತ್ತಿತ್ತು. ಪ್ರಮುಖ ಕನ್ಸಲ್ಟೆಂಟ್ ಆಗಿದ್ದ ಅನಿಲ್ ಕುಮಾರ್ ಸೀದಾ CEO ಜೊತೆ ಅತಿ ನಿಕಟ ಬಾಂಧವ್ಯ ಹೊಂದಿದ್ದ. ಅದನ್ನು ರಾಜರತ್ನಂ ಗಮನಿಸಿದ್ದ. AMD ಬಗ್ಗೆ insider ಮಾಹಿತಿ ಕೊಡು. ನಿನ್ನನ್ನು ಮಾಲಾಮಾಲ್ ಮಾಡಿಬಿಡುತ್ತೇನೆ, ಅಂತ ಅನಿಲ್ ಕುಮಾರನಿಗೆ ಆಮಿಷ ತೋರಿಸಿದ. ತನಕಿಂತ ಕಮ್ಮಿ ಬುದ್ಧಿವಂತ ರಾಜ್ ತನಗಿಂತ ಸಾವಿರ ಪಟ್ಟು ಹೆಚ್ಚು ಯಶಸ್ವಿಯಾಗಿಬಿಟ್ಟಿದ್ದಾನಲ್ಲ ಅಂತ ಅನಿಲ್ ಕುಮಾರನಿಗೆ ಒಳೊಳಗೆ ಅಸೂಯೆ. AMD ಕಂಪನಿಯ ರಹಸ್ಯ ಮಾಹಿತಿ ಕೊಟ್ಟರೆ, ವರ್ಷಕ್ಕೆ ಬರೋಬ್ಬರಿ ಒಂದು ಮಿಲಿಯನ್ ಡಾಲರ್ ಕೊಡುವೆ ಅಂತ ಅನಿಲ್ ಕುಮಾರನಿಗೆ ರಾಜರತ್ನಂ ಆಮಿಷ ಒಡ್ಡಿದ. ಅದನ್ನು ಬೇನಾಮಿಯಾಗಿ ಜಮಾ ಮಾಡುವ ಹೊಣೆಯನ್ನೂ ಹೊತ್ತುಕೊಂಡು ಅನಿಲ್ ಕುಮಾರನ ಕಾಳಜಿ ಕಮ್ಮಿ ಮಾಡಿಕೊಟ್ಟ. AMD ಕಂಪನಿಯಲ್ಲಾಗ ಮಹತ್ವದ ಬದಲಾವಣೆಗಳಾಗುತ್ತಿದ್ದವು. AMD ಕಂಪನಿ ATI ಅನ್ನುವ ಇನ್ನೊಂದು ಕಂಪನಿಯನ್ನು ಕೊಳ್ಳುವ ಮಾತುಕತೆಯಲ್ಲಿ ತೊಡಗಿತ್ತು. ಬಿಲಿಯನ್ ಗಟ್ಟಲೆ ಡಾಲರುಗಳ ಲೆಕ್ಕಾಚಾರ. ATI ಕಂಪನಿಯ ಶೇರು ಬೆಲೆ ಆಕಾಶ ಮುಟ್ಟುವದರಲ್ಲಿತ್ತು. ಸಾರ್ವಜನಿಕವಾಗಿ ಲಭ್ಯವಿಲ್ಲದ ಈ ಮಾಹಿತಿಯನ್ನು ತನ್ನ ಕಳ್ಳ ಬಾತ್ಮೀದಾರ ಅನಿಲ್ ಕುಮಾರನಿಂದ ಪಡೆದ LTTE ರಾಜರತ್ನಂ ಸಿಕ್ಕಾಪಟ್ಟೆ ATI ಶೇರು ಖರೀದಿ ಮಾಡಿದ. AMD ಕಂಪನಿ ATI ಕಂಪನಿಯನ್ನು ಕೊಳ್ಳುವ ಸುದ್ದಿ ಹೊರಬಿದ್ದಾಕ್ಷಣ ATI ಶೇರು ಸಿಕ್ಕಾಪಟ್ಟೆ ಮೇಲೆ ಹೋಯಿತು. ಒಂದೇ ಹೊಡೆತದಲ್ಲಿ ನೂರಾರು ಮಿಲಿಯ ಡಾಲರ್ ಫಾಯಿದೆ ರಾಜರತ್ನಂಗೆ. ಅದರಲ್ಲಿ ಒಂದಿಷ್ಟು ಬಿಡಿಗಾಸು ಅನಿಲ್ ಕುಮಾರನಿಗೆ ಕೊಟ್ಟ. ಈ ರಾಜರತ್ನಂ ಇಷ್ಟು ಜಾಬಾದ್ ಪಂಟರ್ ಅಂದರೆ ಆ ಕಾಲದ AMD ಕಂಪನಿ CEO ರೂಯಿಜ್ ಜೊತೆ ಮಲಗುತ್ತಿದ್ದ wall street  ವೇಶ್ಯೆಯಂತಹ ಒಬ್ಬಾಕೆಯನ್ನೂ ಸಹ ಪಟಾಯಿಸಿಬಿಟ್ಟಿದ್ದ. ಆಕೆಗೂ ಒಂದಿಷ್ಟು ಕಾಸು ಕೊಟ್ಟಿದ್ದ. AMD ಕಂಪನಿ CEO ಹಾಸಿಗೆ ಮೇಲೆ ಬಿದ್ದುಕೊಂಡು, ಖಬರಿಲ್ಲದೆ ಹೇಳುತ್ತಿದ್ದ ಮಹತ್ವದ ಮಾಹಿತಿಯೆಲ್ಲ ಆಕೆ ಕೂಡ ರಾಜನಿಗೆ ಮಾರಿ ರೊಕ್ಕಾ ಮಾಡಿಕೊಂಡಳು. ಆಕೆ IBM ಕಂಪನಿಯ ಒಬ್ಬ ಉಪಾಧ್ಯಕ್ಷನ ಕೂಡ ಸಹಿತ ಹಾಸಿಗೆ ಹಂಚಿಕೊಂಡು, ಆ ಕಂಪನಿ ಕೆಲವೊಂದು ಸೀಕ್ರೆಟ್ ಸಹಿತ ರಾಜರತ್ನಂನಿಗೆ ತಲುಪಿಸಿ, ಆ ಉಪಾಧ್ಯಕ್ಷ ಮಾಹಿತಿ ಕೊಟ್ಟ ತಪ್ಪಿಗೆ ಜೈಲಿಗೆ ಹೋಗುವಂತಾಗಿದೆ.

ಹೀಗೆ ರಜತ್ ಗುಪ್ತಾ, ಅನಿಲ್ ಕುಮಾರ್, ರೋಮಿ ಖಾನ್, ರಾಜೀವ್ ಗೋಯಲ್ ಮತ್ತಿತರರ ಮೂಲಕ insider information ಕದ್ದು ಪಡೆದುಕೊಳ್ಳುತ್ತಿದ್ದ ರಾಜರತ್ನಂ ಪೊಗದಸ್ತಾಗಿ ದುಡ್ಡು ಮಾಡಿದ. ಯಾರಿಗೂ ಏನೂ ಗೊತ್ತೇ ಇಲ್ಲ ಅಂತ ಅದು ಹೇಗೆ ಅಂದುಕೊಂಡರೋ ಅಥವಾ ಏನೇ ಆಗಲೀ ಎಲ್ಲ ದಕ್ಕಿಸಿಕೊಳ್ಳುತ್ತೀನಿ ಅಂತ ಹುಂಬತನವೋ! ಗೊತ್ತಿಲ್ಲ. FBI ಮತ್ತು SEC ಮಾತ್ರ ಕ್ರಮಬದ್ಧವಾಗಿ ಇವರೆಲ್ಲರ ವಿರುದ್ಧ ಒಂದು solid, water tight ಕೇಸ್ ತಯಾರು ಮಾಡುತ್ತಿದ್ದವು. ಒಮ್ಮೆ ಎಲ್ಲರ ವಿರುದ್ಧ ಬೇಕಾದಷ್ಟು ಸಾಕ್ಷಿ ಜಮಾ ಆದ ತಕ್ಷಣ FBI ನ ಚಾಣಾಕ್ಷ ಏಜೆಂಟ್ ಕಂಗ್ ಈ ಹರಾಮಿಗಳ ದಸ್ತಗಿರಿ ಮಾಡಿ, ಬೆಂಡೆತ್ತುವ ಪ್ಲಾನ್ ಬರೋಬ್ಬರಿ ಹಾಕಿಕೊಂಡ.

ಏಜೆಂಟ್ ಕಂಗ್ ಮೊದಲು ಎತ್ತಾಕಿಕೊಂಡಿದ್ದು ರೋಮಿ ಖಾನಳನ್ನು. ಸಾಕ್ಷಿ ಮುಂದಿಟ್ಟು, ಏನಿದೆಲ್ಲ? ಅಂತ ಜಬರಿಸಿ ಕೇಳಿದ ತಕ್ಷಣ ಆಕೆ ಏನೂ ನಖರಾ ಮಾಡದೆ, ತಪ್ಪಾತ್ರೀ ಸರ್ರಾ! ಅಂತ ಅಂಬೋ ಅಂದಳು. ಸರ್ಕಾರದ ಪರವಾಗಿ ಸಾಕ್ಷಿ ಹೇಳು. ಕಮ್ಮಿ ಜೈಲು ಕೊಡಿಸೋಣ, ಅಂತ ಹೇಳಿ ಆಕೆ ಜೊತೆ ಡೀಲ್ ಮಾಡಿಕೊಂಡಿತು ಸರಕಾರ. ದೊಡ್ಡ ದೊಡ್ಡ ತಿಮಿಂಗಿಲಗಳನ್ನು ಹಿಡಿಯಬೇಕಾದರೆ ಕೆಲವು ಸಣ್ಣ ಮೀನುಗಳಿಗೆ ವಿನಾಯಿತಿ, ರಿಯಾಯತಿ  ನೀಡಬೇಕಾಗುತ್ತದೆ. ಇದೂ ಹಾಗೆಯೇ. ರೋಮಿ ಖಾನ್ ಪೂರ್ತಿಯಾಗಿ ಬಾಯ್ಬಿಟ್ಟು ರಾಜರತ್ನಂನ ವಿರುದ್ಧ ಹಾರ್ಡ್ ಎವಿಡೆನ್ಸ್ ಸಿಕ್ಕಿತು.

ನಂತರ FBI ಹೋಗಿ ತಗಲಾಕಿಕೊಂಡಿದ್ದು ಅನಿಲ್ ಕುಮಾರನಿಗೆ. ಬೆಳಿಗ್ಗೆ ಬೆಳಿಗ್ಗೆ ಮನೆಗೆ ಬಂದು, ನಮಸ್ಕಾರ್ರೀ ಸರ್ರಾ! ಅಂದ FBI ಪೋಲೀಸರನ್ನು ನೋಡಿದ ಅನಿಲ್ ಕುಮಾರನಿಗೆ ತಲೆ ಸುತ್ತು ಬಂದು, ಮೂರ್ಛೆ ತಪ್ಪಿ ಬಿದ್ದು ಬಿಟ್ಟ! ಮುಖಕ್ಕೆ ಸರಿಯಾಗಿ ನೀರು ಗೊಜ್ಜಿ ಎಬ್ಬಿಸಿದ FBI, ಸಕಲ ಸನ್ಮಾನದೊಂದಿಗೆ ಎಳೆದುಕೊಂಡು ಬಂದ ಪೊಲೀಸರು ಅವನಿಗೂ ಅವನದ್ದೇ ಫೋನ್ ಸಂಭಾಷಣೆ ಕೇಳಿಸಿ, ಏನಂತೀರಿ? ಅಂತ ಝಾಡಿಸಿ ಕೇಳಿದ್ದಕ್ಕೆ ಅವನೂ ತಪ್ಪೊಪ್ಪಿಕೊಂಡ. ಅವನಿಗೂ ಡೀಲ್ ಕೊಟ್ಟರು. ಕಮ್ಮಿ ಜೈಲು ತೊಗೊಂಡು ಸರಕಾರೀ ಸಾಕ್ಷಿದಾರನಾಗು ಅಂತ. ಆ ಪುಣ್ಯಾತ್ಮನಿಗೆ ರೊಕ್ಕದ ಚಿಂತೆ. ವಕೀಲರಿಗೆ ಎಲ್ಲಿ ಕಾಸು ಕೊಟ್ಟು ಭಿಕಾರಿಯಾಗೋದು ಅಂತ ಒಪ್ಪಿಕೊಂಡು ರಾಜರತ್ನಂ, ರಜತ್ ಗುಪ್ತಾ ಮತ್ತಿತರರ ಚಡ್ಡಿ ಬಿಚ್ಚೇ ಬಿಟ್ಟ. ಗುರುವಿನಂತಿದ್ದ ರಜತ್ ಗುಪ್ತಾಗೇ ತಿರುಮಂತ್ರ!!!!

ಹೀಗೆ ದೊಡ್ಡ ಮಟ್ಟದ hard evidence ಸಂಗ್ರಹಿಸಿದ FBI ಈಗ ದೊಡ್ಡ ತಿಮಿಂಗಿಲಗಳಾದ ರಾಜ್ ರಾಜರತ್ನಂ ಮತ್ತು ರಜತ್ ಗುಪ್ತಾ ಹಿಂದೆ ಬಿದ್ದರು.

ರಾಜ ರಾಜರತ್ನಂ ಮನೆ ಮೇಲೆ FBI ದಾಳಿಯಾಯಿತು. ಪೈಜಾಮಾ ಹಾಕಿಕೊಂಡು, ಟ್ರೇಡ್ ಮಿಲ್ ಮೇಲೆ ಓಡುತ್ತ, ಬುಸು ಬುಸು ಶ್ವಾಸ ಬಿಡುತ್ತ,  ಚರ್ಬಿ ಕರಗಿಸುತ್ತಿದ್ದ ರಾಜರತ್ನಂನನ್ನು ಕೆಳಗೆ ಇಳಿಸಿ, ಅಂಗಿ, ಪ್ಯಾಂಟು, ಸ್ವೆಟರು, ಮೇಲೊಂದು ಕೋಟು ಬೇರೆ ಹಾಕಿಸಿ, ಕೈಗೆ ಬೇಡಿ ಹಾಕಿ, ಲೆಫ್ಟ್ ರೈಟ್ ಲೆಫ್ಟ್ ಅಂತ ಸರಿಯಾಗಿ ಕವಾಯಿತು ಮಾಡಿಸಿ ರಾಜರತ್ನಂನನ್ನು ಎಳೆದುಕೊಂಡು ಬಂದು ಜೈಲಿಗೆ ಒಗೆದರು. ಅವನಿಗೆ ಡೀಲು ಗೀಲು ಏನೂ ಇಲ್ಲ. ಕೇಸ್ ಫೈಟ್ ಮಾಡಿ ಗೆದ್ದರೆ ಹೊರಗೆ. ಇಲ್ಲಾಂದ್ರೆ ಕೋರ್ಟ್ ವಿಧಿಸಿದಷ್ಟು ವರ್ಷ ಜೈಲಿಗೆ.

ನಂತರದ ಪಾಳಿ ರಜತ್ ಗುಪ್ತಾನದು. FBI ಏಜೆಂಟರಿಗೆ ರಜತ್ ಗುಪ್ತಾನಿಗೂ ಕೈಗೆ ಬೇಡಿ, ಕಾಲಿಗೆ ಸಂಕೋಲೆ ಹಾಕಿಸಿ, ಕಾವಾಯಿತು ಮಾಡಿಸಿಯೇ, ಮಾಧ್ಯಮಗಳ ಮುಂದೆ ಒಂದು ಹೈ ಪ್ರೊಫೈಲ್ ಅರೆಸ್ಟ್ ಮಾಡಿಸಬೇಕು ಅಂತ ದೊಡ್ಡ ಆಸೆ. ಅವರು ಸ್ಕೋಪ್ ತೆಗೆದುಕೊಳ್ಳೋದು ಬೇಡವಾ? ಮೀಡಿಯಾ ಎದುರು ಹೀರೋ ಆಗೋದು ಬೇಡವಾ? ಆದರೂ ಈ ರಜತ್ ಗುಪ್ತಾನ ಹಿಂದಿನ ಸ್ಥಾನ ಮಾನ ನೋಡಿ, ನೀನೆ ಬಂದು ಶರಣಾಗು, ಅಂತ ಒಂದು option ಕೊಟ್ಟರು. ಪಾಪ ಅವರಿಗೆ ಗೊತ್ತಿರಲಿಲ್ಲ, ಆ ದಿನ ದೀಪಾವಳಿಯಾಗಿತ್ತು ಅಂತ. ದೀಪಾವಳಿ ದಿವಸ, ಸಕುಟುಂಬ ಸಮೇತ ಬಂದ ರಜತ್ ಗುಪ್ತಾ ಸರೆಂಡರ್ ಆದ. ಅವನಿಗೂ ಏನೂ ಡೀಲ್ ಕೊಡಲಿಲ್ಲ. ಬೇಕಾದರೆ ಕೇಸ್ ಫೈಟ್ ಮಾಡಿ ಗೆದ್ದುಕೋ ತಾಕತ್ತಿದ್ದರೆ ಅಂದ FBI ಅವನನ್ನೂ ಲಾಕಪ್ಪಿಗೆ ತಳ್ಳಿತು.

ರಾಜರತ್ನಂ ಮತ್ತು ರಜತ್ ಗುಪ್ತಾ ಇಬ್ಬರೂ ದೊಡ್ಡ ದೊಡ್ಡ ವಕೀಲರ ಮೂಲಕ ಜಾಮೀನ ಮೇಲೆ ಹೊರಗೆ ಬಂದು ಕೇಸ್ ನಡೆಸಿದರು. ಆದರೆ ಸಾಕ್ಷಿ ಬಲವಾಗಿತ್ತು. ಅನಿಲ್ ಕುಮಾರಂತೂ ತನ್ನ ಅಪೂರ್ವ ಜ್ಞಾಪಕ ಶಕ್ತಿ ಉಪಯೋಗಿಸಿ ಒಳ್ಳೆ ಗಿಳಿಯಂತೆ ಪಾಠ ಒಪ್ಪಿಸಿಬಿಟ್ಟ. ಅಲ್ಲಿಗೆ ರಾಜರತ್ನಂ ತುಂಬ ವರ್ಷಗಳ ಮಟ್ಟಿಗೆ ಜೈಲಿಗೆ ಹೋಗುವದು ಖಾತ್ರಿಯಾಯಿತು. ಎಷ್ಟೇ ದೊಡ್ಡ ವಕೀಲರಿದ್ದರೂ, ಈ ವೈಟ್ ಕಾಲರ್ ಕ್ರಿಮಿನಲ್ಲುಗಳಿಂದ ಮತ್ತು ಗತಿಗೆಟ್ಟು ಹೋಗಿದ್ದ ಅವತ್ತಿನ ಅರ್ಥ ವ್ಯವಸ್ಥೆಯಿಂದ ರೊಚ್ಚಿಗೆದ್ದಿದ್ದ ಜನ ಸಾಮಾನ್ಯರ ಜ್ಯೂರಿ, ನಡಿ ಮಗನೇ ಜೈಲಿಗೆ! ಅಂತ ತೀರ್ಪು ಕೊಟ್ಟಿತು. ಹನ್ನೊಂದು ವರ್ಷದ ಕಾರಾಗ್ರಹವಾಸ ಶಿಕ್ಷೆ ಕೊಟ್ಟರು ರಾಜರತ್ನಂಗೆ. ಮೇಲ್ಮನವಿ, ಅಪೀಲ್ ಎಲ್ಲ ತಿರಸ್ಕೃತವಾಗಿ ರಾಜರತ್ನಂ ಜೈಲಿಗೆ ಹೋದ. ಬಿಳಿಯರು, ಕರಿಯರು ಯಾರೂ ನನ್ನ ವಿರುದ್ಧ ಸಾಕ್ಷಿ ಹೇಳಲಿಲ್ಲ. ಕೇವಲ ಭಾರತೀಯರು ಮಾತ್ರ ನನ್ನ ವಿರುದ್ಧ ಸಾಕ್ಷಿ ಹೇಳಿ ನಾನು ಜೈಲಿಗೆ ಬರುವಂತಾಗಿದೆ, ಅಂತ ತನ್ನ ಒಂದು ಕಾಲದ ದೋಸ್ತರಾದ ಅನಿಲ್ ಕುಮಾರ್, ರಜತ್ ಗುಪ್ತಾ ಮೇಲಿನ ಕೋಪ ತಾಪವನ್ನು ಸಾರಾಸಗಟಾಗಿ ಭಾರತೀಯರ ಮೇಲೆ ಕಾರಿಕೊಂಡುಬಿಟ್ಟಿದ್ದಾನೆ LTTE ರಾಜರತ್ನಂ!

ಈ ಕಡೆ ರಜತ್ ಗುಪ್ತಾಗೆ ತನ್ನ ಮೇಲಿನ ಕೇಸ್ ನಿಲ್ಲಲಿಕ್ಕೆ ಸಾಧ್ಯವೇ ಇಲ್ಲ ಅಂತ ತುಂಬ ವಿಶ್ವಾಸವಿತ್ತು. ಅದಕ್ಕೆ ಕಾರಣವೂ ಇತ್ತು. ರಜತ್ ಗುಪ್ತಾ ತಾನಿದ್ದ ಕಂಪನಿಗಳ ರಹಸ್ಯ ಮಾಹಿತಿ ಕೊಟ್ಟಿದ್ದ. ಅದಕ್ಕೆ ಪುರಾವೆ ಇತ್ತು. ನಿಜ. ಆದರೆ ಆ ಮಾಹಿತಿ ಬಳಸಿಕೊಂಡ ರಾಜರತ್ನಂ ಹಡಬೆ ರೊಕ್ಕಾ ಮಾಡಿದ ಮತ್ತು ಮುಖ್ಯವಾಗಿ ಅದರಲ್ಲಿ ರಜತ್ ಗುಪ್ತಾಗೆ ಪಾಲು ಕೊಟ್ಟ ಅನ್ನುವದಕ್ಕೆ ಏನೂ ಸಾಕ್ಷಿ ಇರಲಿಲ್ಲ. ಆದರೆ ಸರಕಾರ ಕತ್ತಲಲ್ಲಿ ಒಂದು ಬಾಣ ಬಿಟ್ಟಿತು. ಅದೇನೆಂದರೆ, ಮಾಹಿತಿ ಕೊಟ್ಟಿದ್ದಕ್ಕೆ ಪ್ರತಿಫಲವಾಗಿ ರಜತ್ ಗುಪ್ತಾಗೆ ಕಾಸು ಕೊಟ್ಟಿಲ್ಲ. ನಿಜ. ಆದರೆ ರಜತ್ ಗುಪ್ತಾಗೇ ಎಂದೇ ಒಂದು ದೊಡ್ಡ ಮಟ್ಟದ ಹೆಜ್ ಫಂಡ್ ಮಾಡಿಕೊಡುವದಾಗಿ ರಾಜರತ್ನಂ ಮಾತು ಕೊಟ್ಟಿದ್ದ. ಅದರ ಪ್ರಕಾರ 'ನ್ಯೂ ಸಿಲ್ಕ್ ರೌಟ್' ಎಂಬ ಫಂಡಿನ ಮಾಹಿತಿಯೆಲ್ಲ ತೆಗೆದು ನ್ಯಾಯಾಲಯದ ಮುಂದಿಟ್ಟಾಗ ರಜತ್ ಗುಪ್ತಾನ ಖೇಲ್ ಖತಂ ಆಗಿ ಹೋಗಿತ್ತು. ತಾನು ಭಯಂಕರ ಚಾಣಾಕ್ಷ ಅಂತ ತಿಳಿದುಕೊಂಡಿದ್ದ ರಜತ್ ಗುಪ್ತಾ ಕ್ಯಾಶ್ ಬೇಡ ಅದರ ಬದಲಿಗೆ ಬೇರೆ ರೀತಿಯಲ್ಲಿ ಪ್ರಸಾದ ಕೊಟ್ಟುಬಿಡಿ ಅಂತ ಸ್ಕೀಮ್ ಹಾಕಿಕೊಂಡು ಎಲ್ಲರನ್ನೂ ಯಾಮಾರಿಸೋಣ ಅಂತ ನೋಡಿದರೆ ಅದನ್ನೂ ಕಂಡು ಹಿಡಿದ ಸರಕಾರೀ ವಕೀಲರು ಅವನ ಲಾಡಿ ಎಳದು ಚಡ್ಡಿ ಬಿಚ್ಚಿ ಬಿಡಬೇಕೇ? ರಜತ್ ಗುಪ್ತಾ ಚಾಪೆ ಕೆಳಗೆ ನುಸುಳಿದ್ದರೆ ರಂಗೋಲಿ ಕೆಳಗೆ ನುಗ್ಗಿತ್ತು ಸರ್ಕಾರ!

ಏನೇನೋ ಡೀಲಿಂಗ್ ಆಗಿ, ರಜತ್ ಗುಪ್ತಾನ ಹಿಂದಿದ್ದ ಸ್ಥಾನ ಮಾನ, ಮಾಡಿದ್ದ ಅಂತ ಹೇಳಲಾದ ದಾನ ಧರ್ಮದ ಕೆಲಸ, ದೊಡ್ಡ ದೊಡ್ಡ ಜನರಿಂದ ಬಂದ ಶಿಪಾರಸ್ಸು ಎಲ್ಲ ನೋಡಿ, ನೀವು ಎರಡು ವರ್ಷ ಜೇಲಿಗೆ ಹೋಗಿ ಬನ್ನಿ. ಒಂದಿಷ್ಟು ಮಿಲಿಯನ್ ಡಾಲರ್ ದಂಡ ಕಟ್ಟಿ ಬಿಡಿ. ಇದೇ ನಿಮಗೆ ಶಿಕ್ಷೆ, ಅಂತ ಅಮೇರಿಕಾದ ನ್ಯಾಯಾಲಯ ಹೇಳಿದಾಗ ರಜತ್ ಗುಪ್ತಾ ಆಗಲಿ, ಅಲ್ಲೇ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತಿದ್ದ ಪತ್ನಿ, ನಾಕು ಹೆಣ್ಣು ಮಕ್ಕಳಾಗಲಿ ತಮ್ಮ ಕಿವಿ ತಾವು ನಂಬಲಿಲ್ಲ. ಕೇಸ್ ಬಡಿದಾಡಲು ಅಲ್ಲಿಯ ತನಕ ಕಮ್ಮಿ ಕಮ್ಮಿ ಅಂದರೂ ಮೂವತ್ತು ಮಿಲಿಯನ್ ಡಾಲರ್ ವಕೀಲರ ಫೀಸ್ ಅಂತನೇ ಧೂಳೆದ್ದು ಹೋಗಿತ್ತು. ಮೊದಲೇ ಸುಮಾರು ನೂರೈವತ್ತು ಮಿಲಿಯನ್ ಡಾಲರ್ ಆಸ್ತಿವಂತ ಕುಳವಾಗಿದ್ದ ರಜತ್ ಗುಪ್ತಾ ನೀರಿನಂತೆ ಖರ್ಚು ಮಾಡಿದ್ದ ರೊಕ್ಕಾ ಎಲ್ಲ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಆಗಿತ್ತು.

ಪತ್ನಿ ಅನಿತಾ ಗುಪ್ತಾ ನ್ಯಾಯಾಲಯದಲ್ಲೇ ತಗ್ಗಿಸಿದ ತಲೆ ನಂತರ ಮೇಲೆ ಎತ್ತಿಲ್ಲವಂತೆ. ಚಿಕ್ಕ ಮಗಳು, ಬಾಬಾ!!! ಅನ್ನುತ್ತ ಹೋ!!! ಅಂತ ಕೊರ್ಟಿನಲ್ಲೇ ಅಳುತ್ತ ತಂದೆಯನ್ನು ತಬ್ಬಿಕೊಂಡಳು. ಉಳಿದ ಮೂವರು ಹೆಣ್ಣು ಮಕ್ಕಳು, ಮುಂದೇನು ಅಪ್ಪಾ? ಅನ್ನುವಂತೆ ತೀರ್ಪಿನಿಂದ ಪೂರ್ತಿ ಬೆಪ್ಪನಾಗಿದ್ದ ಅಪ್ಪನನ್ನು ನೋಡಿದರು. ಪೊಲೀಸರು ಬಂದು, ನಡ್ರೀ! ಅಂತ ಎಳಕೊಂಡು ಹೋದರು.

ಮೇಲಿನ ಕೋರ್ಟಿಗೆ ಮೇಲ್ಮನವಿ ಸಲ್ಲಿಸುತ್ತೇನೆ ಅಂತ ಎರಡು ವರ್ಷದಿಂದ ಗುದ್ದಾಟ ನೆಡೆಸಿದ್ದ ರಜತ್ ಗುಪ್ತಾ. ಮತ್ತಿಷ್ಟು ಮಿಲಿಯನ್ ಡಾಲರ್ ಉಡಾಯಿಸಿ, ದೊಡ್ಡ ದೊಡ್ಡ ವಕೀಲರನ್ನು ಇಟ್ಟು ಅಪೀಲ್ ಹಾಕಿಸಿದ. ಅದೇ ಅಪೀಲ್ ಈಗ ರಿಜೆಕ್ಟ್ ಆಗಿದೆ. ರಜತ್ ಗುಪ್ತಾ ಜೈಲಿಗೆ ಹೋಗುವದು ಖಚಿತವಾಗಿದೆ. ಇದ್ದುದರಲ್ಲಿಯೇ ಸ್ವಲ್ಪ posh ಇದ್ದು, ಎಲ್ಲ ಸೌಲಭ್ಯಯುಳ್ಳ ಮತ್ತು ಮನೆಗೆ ಹತ್ತಿರದ ಜೈಲಿಗೆ ಹಾಕ್ರೀ! ಪ್ಲೀಸ್! ಅಂತ ಒಂದು ಆಖರೀ ಮನವಿ ಮಾಡಿಕೊಂಡಿದ್ದಾನೆ. ನೋಡ್ರೀ ಖದೀಮನ ಗೈರತ್ತು!!! ಅದಕ್ಕೆ ಕೋರ್ಟ್ ಓಕೆ ಅನ್ನುತ್ತದೆ ಅಂತ ಅವನ ಪರವಾದ ವಕೀಲರು ಹೇಳಿದ್ದಾರಂತೆ. insider trading ಮಾಡಿ ಇಡೀ ಸಮಾಜವನ್ನು ಬಗ್ಗಿಸಿ ಬಗ್ಗಿಸಿ ಬಾರಿಸಿದ ಕೊರಮನಿಗೆ ರೆಗ್ಯುಲರ್ ಜೈಲಿಗೆ ಹೋಗಲು ತುಂಬಾ ಭಯ. ಎಲ್ಲಿ ತನ್ನನ್ನು ಅಲ್ಲಿನ ಕುಖ್ಯಾತ ಪಾತಕಿಗಳು ಬಗ್ಗಿಸಿ ಬಾರಿಸಿಬಿಟ್ಟಾರು ಅಂತ ಹೆದರಿಕೆ. ಅಮೇರಿಕನ್ ಜೈಲುಗಳು ಹಿಂಸೆಗೆ ತುಂಬ ಫೇಮಸ್!

ಸರಕಾರದ ಜೊತೆ ಡೀಲಿಂಗ್ ಮಾಡಿಕೊಂಡಿದ್ದ ಅನಿಲ್ ಕುಮಾರನಿಗೆ ಎರಡು ವರ್ಷದ ಪ್ರೋಬೇಶನ್ ಅನ್ನುವ ಗೃಹಬಂಧನ ಅನ್ನಬಹುದಾದ ಶಿಕ್ಷೆ. ಸರಕಾರದ ಜೈಲಲ್ಲಿ ಕೊಳೆಯುವದಕ್ಕಿಂತ ಮನೆಯಲ್ಲಿಯೇ ಕೊಳೆತು ಹಾಳಾಗಿ ಹೋಗು ಅನ್ನುವ ಹಾಗೆ. ನೌಕರಿಯಿಂದ ಒದ್ದು ಓಡಿಸಲಾಗಿದೆ. ಇಂಟೆಲ್ ಕಂಪನಿಯ ರಾಜೀವ್ ಗೋಯಲ್ಲಿನಿಗೂ ಇದೇ ಶಿಕ್ಷೆ!

ಈ ಅನಿಲ್ ಕುಮಾರ್ ತನ್ನ ಹಡಬೆ ರೊಕ್ಕ ಎಲ್ಲ ತನ್ನ ಮನೆ ಕೆಲಸದಾಕೆಯ ಹೆಸರಲ್ಲಿ ಬೇನಾಮಿ ಇಡಲಿಕ್ಕೆ ನೋಡಿದ್ದ ಖದೀಮ. ಪಾಪ ಬಡಪಾಯಿ ಮಂಜು ದಾಸ್ ಅನ್ನುವ ಉಬ್ಬು ಹಲ್ಲಿರುವ ಕೆಲಸದ ಹೆಂಗಸಿನ ಬೇನಾಮಿ ಖಾತೆಯಲ್ಲಿ ಮಿಲಿಯನ್ ಡಾಲರ್ ನೋಡಿದ FBI ಏಜೆಂಟರು ಅಂಡು ತಟ್ಟಿಕೊಂಡು ನಕ್ಕು, ಯೋ! ಆಕೆಗೆ ನೀನು ನಿಜವಾಗಿ ಮಿಲಿಯನ್ ಡಾಲರ್ ಸಂಬಳ ಕೊಟ್ಟಿದ್ದರೆ ಆಕೆ ಹೋಗಿ ತನ್ನ ಉಬ್ಬು ಹಲ್ಲುಗಳಿಗೆ ಕ್ಲಿಪ್ ಹಾಕಿಸಿಕೊಂಡು ಬರ್ತಿದ್ದಳು. ಛೋಡೋದಕ್ಕೂ ಒಂದು ಲಿಮಿಟ್ ಇರಬೇಕು ಕಣಯ್ಯಾ, ಅಂತ ಅನಿಲ್ ಕುಮಾರನ ಅಪಹಾಸ್ಯ ಮಾಡಿಬಿಟ್ಟರಂತೆ. ಅದೊಂದು ಬೋನಸ್ ಅವಮಾನ!

ರೋಮಿ ಖಾನ್ ಪೂರ್ತಿ ದಿವಾಳಿ ತೆಗೆದು, ಮನೆ ಮಠ ಮಾರಿಕೊಂಡು ಓಡಿದ್ದಾಳೆ. ಆದರೆ ಬೇರೊಂದು ಇದೇ ತರಹದ ಕೇಸಿನಲ್ಲಿ ಜೈಲಿಗೆ ಹೋಗಿದ್ದಾಳೆ.

ಈ ಪ್ರಕರಣದ ಒಂದು ದೊಡ್ಡ ವಿಶೇಷತೆ ಅಂದ್ರೆ ಕಾನೂನು ಮುರಿದವರು ಮತ್ತು ಅವರನ್ನು ಹಿಡಿದು ಜೈಲಿಗೆ ಹಾಕಿದವರು ಎಲ್ಲ ಭಾರತೀಯ ಮೂಲದವರೇ. LTTE ರಾಜರತ್ನಂ ಶ್ರೀಲಂಕಾದವನು. ರಜತ್ ಗುಪ್ತಾ, ಅನಿಲ್ ಕುಮಾರ್, ರಾಜೀವ್ ಗೋಯಲ್, ರೋಮಿ ಖಾನ್ ಎಲ್ಲ ಭಾರತೀಯ ಮೂಲದ ಅಮೇರಿಕನ್. ಸರ್ಕಾರದ ಪರವಾಗಿ ಪ್ರೀತ್ ಭರ್ರಾರಾ ಎನ್ನುವ ಪಬ್ಲಿಕ್ ಪ್ರಾಸಿಕ್ಯೂಟರ್. ಪಕ್ಕಾ ಪಂಜಾಬಿ. ಅದೂ ಸರ್ದಾರ್ಜೀ. SEC ಅನ್ನುವ ಸರ್ಕಾರದ ಸಂಸ್ಥೆ ಪರವಾಗಿ ಸಂಜಯ್ ವಾಧ್ವಾ ಅನ್ನುವ ಮತ್ತೊಬ್ಬ ವಕೀಲ ಸಹಿತ ಪಂಜಾಬಿ. ದೇಸಿಗಳ ಮಧ್ಯೆಯೇ ಘೋರ ಕದನ.

ವೈಟ್ ಕಾಲರ್ ಕ್ರಿಮಿನಲ್ಲುಗಳಿಗೆ ಒಂದು ದೊಡ್ಡ ಸಂದೇಶ ರವಾನೆಯಾಗಿದೆ. ವೈಟ್ ಕಾಲರ್ ಕ್ರಿಮಿನಲ್ಲುಗಳು ಎಷ್ಟೇ ದೊಡ್ಡವರಿದ್ದರೂ, ಎಷ್ಟೇ ಪ್ರಭಾವಶಾಲಿಗಳಾದರೂ ಸರ್ಕಾರ ಬಿಡುವದಿಲ್ಲ, ಅಂತ ಸರ್ಕಾರ ಬ್ಯಾಂಡ್ ಬಾರಿಸಿದೆ. ಮತ್ತೆ ಕೆಲವು ಜನ ಹೇಳುವ ಪ್ರಕಾರ, ಭಾರತೀಯ ಮೂಲದ ಅಮೇರಿಕನ್ನರಲ್ಲಿ ಹಲವರು ತಮ್ಮ ಸ್ಥಾನ ಮಾನದ ದುರುಪಯೋಗ ಮಾಡಿಕೊಂಡು, insider trading ನಂತಹ ವೈಟ್ ಕಾಲರ್ ಅಪರಾಧಗಳನ್ನು ಯಾವ ಮುಲಾಜಿಲ್ಲದೆ ಮಾಡಿಕೊಂಡು ಬರುತ್ತಿದ್ದರು. ಈ ಇಂಡಿಯನ್ ಅಮೇರಿಕನ್ ಜನರಿಗೆ ಅಂತನೇ ಒಂದು ಪಾಠ ಕಲಿಸಬೇಕಾಗಿತ್ತು. ಅದಕ್ಕೇ ನೋಡಿ ನೋಡಿಯೇ ಇಂಡಿಯನ್ ಮೂಲದ ಜನರನ್ನು ಟಾರ್ಗೆಟ್ ಮಾಡಿ ಹಣಿಯಲಾಗಿದೆ, ಅಂತ. ಇರಬಹುದು.

ಈ ಖದೀಮರಿಗೆ ಜೈಲು ಶಿಕ್ಷೆಗಿಂತ ಭರಿಸಲು ದುರ್ಭರವಾಗಿದ್ದು ಕಾರ್ಪೊರೇಟ್ ವಲಯ ಇಂತಹ ಜನರನ್ನು ಸಾರಾಸಗಟಾಗಿ ತಿರಸ್ಕರಿಸಿ ಕೊಳೆತ ತರಕಾರಿಯಂತೆ ಬಿಸಾಡಿದ್ದು. ರಜತ್ ಗುಪ್ತಾನಿಗೆ ಎಲ್ಲ ಕಂಪನಿ ಇತ್ಯಾದಿಗಳಿಂದ ರಾಜೀನಾಮೆ ಕೊಟ್ಟು ಹೋಗುವಂತೆ ತಿಳಿಸಲಾಯಿತು. ಅನಿಲ್ ಕುಮಾರನಿಗೂ ಅಷ್ಟೇ. ಬೆಂಬಲಿಗರು ರಜತ್ ಗುಪ್ತಾನ ಪರವಾಗಿ ಸಹಿ ಸಂಗ್ರಹಿಸುತ್ತಿದ್ದರೆ, ವಿನೋದ್ ಖೋಸ್ಲಾ ಅನ್ನುವ ಮತ್ತೊಬ್ಬ ದೊಡ್ಡ ವೆಂಚರ್ ಕ್ಯಾಪಿಟಲಿಸ್ಟ್ ಕುಳ, ನನ್ನ ಹೆಸರು ತೆಗೆಯಿರೀ!! ರಜತ್ ಜೊತೆ ಸೇರಿ ನನ್ನ ಹೆಸರು ಹಾಳಾಗಿ ಹೋಗುತ್ತದೆ ಅಂದನಂತೆ. ಕೆಲವೇ ದಿವಸಗಳ ಮುಂಚೆ ಇವರೆಲ್ಲ ಗಳಸ್ಯ ಕಂಠಸ್ಯ. ಈಗ ಈ ವಿನೋದ್ ಖೋಸ್ಲಾನ ಮಗಳದ್ದು ನಗ್ನ ಚಿತ್ರ, ರೊಕ್ಕಕ್ಕಾಗಿ ಬೆದರಿಕೆ ಅಂತ ಬೇರೇನೇ ತರಹದ ಲಫಡಾ ಆಗಿದೆ. ಅದು ಬಿಡಿ ಬೇರೆ ಸುದ್ದಿ.

ಅನಿಲ್ ಕುಮಾರನಿಗೆ ಕೆಲಸವಿಲ್ಲ. ಏನಾದರೂ voluntary ಕೆಲಸ, charity ಕೆಲಸ ಮಾಡಿ ಸ್ವಲ್ಪ ಪಾಪ ಪರಿಹಾರ ಮಾಡಿಕೊಳ್ಳೋಣ ಅಂತ ಯಾವದೋ ಶಾಲೆಗೆ ಹೋಗಿ ಪಾಠ ಹೇಳುತ್ತೇನೆ ಅಂದನಂತೆ. ಇವನ ಪೂರ್ವಾಪರ ವಿಚಾರಿಸಿದ ಶಾಲೆಯವರು, ಮೊದಲು ಇಲ್ಲಿಂದ ಜಗಾ ಖಾಲಿ ಮಾಡು! ಅಂತ ಅಬ್ಬರಿಸಿ, ಹೊರಡಲು ತಿರುಗಿ ನಿಂತವನ ಅಂಡಿಗೆ ಬಂದು ತಟ್ಟುವಂತೆ ಬಾಗಿಲು ಮುಚ್ಚಿದರಂತೆ. ಸಾಕಾ ಮರ್ಯಾದಿ? ಹಾಂ?

ರಜತ್ ಗುಪ್ತಾನ ಪಾಡಂತೂ ಕೇಳಲೇಬೇಡಿ. ಕಾರ್ಪೊರೇಟ್ ಜಗತ್ತು ಅಂದ್ರೆ ಅದೊಂದು  ಕರುಣೆಯಿಲ್ಲದ ruthless ದುನಿಯಾ. ಮಾತೆತ್ತಿದರೆ ಕ್ಲಿಂಟನ್, ಓಬಾಮಾ, ಟಾಟಾ, ಬಿರ್ಲಾ, ಅಂಬಾನಿ ಅನ್ನುತ್ತಿದ್ದವನಿಗೆ ಈಗ ಯಾರೂ ಫೋನ್ ಮಾಡುವದಿಲ್ಲವಂತೆ. ಇವನೇ ಮಾಡಿದರೆ ಅವರೆಲ್ಲ ಇವನ ಫೋನ್ ಎತ್ತುವದೂ ಇಲ್ಲವಂತೆ. ಪಾಪ!

ಮನ್ನಿತ್ತಲಾಗೆ ಯಾರೋ ಈ ರಜತ್ ಗುಪ್ತಾ ಎಂಬ ಮಾಜಿ ಕಾರ್ಪೊರೇಟ್ ಬಾದಶಹಾನನ್ನು ಇಲ್ಲಿಯ ಸೂಪರ್ ಮಾರ್ಕೆಟ್ ತರಹದ Costco ಅನ್ನುವ ಅಂಗಡಿಯಲ್ಲಿ ನೋಡಿದರಂತೆ. ಎಲ್ಲರಂತೆ ಶಾಪಿಂಗ್ ಮಾಡುತ್ತಿದ್ದನಂತೆ. ಯಾರದ್ದೋ ಫೋನ್ ಬಂತಂತೆ. ಸುತ್ತ ಮುತ್ತ ಯಾರಿದ್ದಾರೆ ಅನ್ನುವದನ್ನೂ ಗಮನಿಸಿದೇ ರಜತ್ ಗುಪ್ತಾ ಫೋನಿನಲ್ಲಿ ಜೋರಾಗಿ ಚೀರಲು ಶುರು ಮಾಡಿಬಿಟ್ಟನಂತೆ. ನನಗೆ ಈಗಿತ್ತಲಾಗೆ ಯಾರೂ ಫೋನ್ ಮಾಡುತ್ತಿಲ್ಲ. ನನ್ನ ಫೋನ್ ಯಾರೂ ತೆಗೆದುಕೊಳ್ಳುತ್ತಿಲ್ಲ. ಯಾಕೆ ಹೀಗೆ? ಹಾಂ! ಅಂತ. ನೋಡಿದ ಕೆಲವರಿಗೆ ಆಗ ಗೊತ್ತಾಯಿತಂತೆ ಇವನು ಕಾರ್ಪೊರೇಟ್ ಖದೀಮ ರಜತ್ ಗುಪ್ತಾ ಅಂತ!!!

ಈ ರಜತ್ ಗುಪ್ತಾ management ಮೇಲೆ ಲೆಕ್ಚರ್ ಕೊಡುವಾಗ ಭರಪೂರ ಭಗವದ್ಗೀತೆ, ಹಿಂದೂ ಅಧ್ಯಾತ್ಮ ಎಲ್ಲ ಸೇರಿಸಿ ಸಕತ್ತಾಗಿ ಪಿಟೀಲು ಕೊಯ್ಯುತ್ತಿದ್ದನಂತೆ. ಕರ್ಮಣ್ಯೇ ವಾಧಿಕಾರಾಸ್ತೆ ಮಾ ಫಲೇಶು ಕದಾಚನ! ಅನ್ನುವದು ಅವನ ಮೂಲ ಮಂತ್ರವಂತೆ.

ನಾಟಕಕಾರ ಮಾಸ್ಟರ್ ಹೀರಣ್ಣಯ್ಯ ತುಂಬ ಮಜವಾಗಿ ಆ ಶ್ಲೋಕದ ಅರ್ಥ ತಮ್ಮ ನಾಟಕಗಳಲ್ಲಿ ಹೇಳುತ್ತಿದ್ದರು. ಅದು ಈಗ ಇವನಿಗೆ ಅನ್ವಯಿಸುವ ಹಾಗಿದೆ. ಕರ್ಮಣ್ಯೇ ಅಂದ್ರೆ ನಾಣ್ಯವನ್ನು ಗಳಿಸಲು ಮಾಡಿದ ಕರ್ಮಗಳೆಲ್ಲ, ವ್ಯಾಧಿಕಾರಾಸ್ತೆ ಅಂದ್ರೆ ಜೈಲು, ಮಾನಹಾನಿ ಇತ್ಯಾದಿ ವ್ಯಾಧಿಗಳ ರೂಪದಲ್ಲಿ ಬಂದಿವೆ. ಅದಕ್ಕೆ ಜೈಲಿಗೆ ಹೋಗಿ ಮಾಫಲೇಶು ಅಂದ್ರೆ ಮಾವಿನ ಹಣ್ಣನ್ನು ತಿನ್ನುತ್ತೇನೆ ಅಂತ ಜೈಲಿಗೆ ಹೊರಟು ನಿಂತಿದ್ದಾನೆ ರಜತ್ ಗುಪ್ತಾ.  ಬೆಳ್ಳಿ ಅನ್ನುವ ಅರ್ಥದ ರಜತ್ ಅಂತ ಹೆಸರಿಟ್ಟುಕೊಂಡು ಕಿಲಬು ಹತ್ತಿ ಬೆಳ್ಳಿಯ ಶೈನಿಂಗ್ ಮಸುಕಾದ ಹಾಗೆ ಗುಪ್ತಾನ ಸ್ಥಿತಿ. 

ಈ ಕಡೆ ತಪ್ಪು ಮಾಡಿದ ಭಾರತೀಯ ಮೂಲದ ಜನರಿಗೆ ಸರಿಯಾಗಿ ಬಾರಿಸುತ್ತೇನೆ ಅಂತ ಸರ್ಕಾರಿ ವಕೀಲ ಪ್ರೀತ್ ಭರ್ರಾರಾ ಟೊಂಕ ಕಟ್ಟಿ ನಿಂತು ಬಿಟ್ಟಿದ್ದಾನೆ. ಮನ್ನೆ ದೇವಯಾನಿ ಖೊಬ್ರಾಗಡೆ ಎಂಬ ರಾಯಭಾರಿಯನ್ನೂ ಸಹ ಮಟ್ಟ ಹಾಕಿದವನು ಇವನೇ. ತುಂಬಾ ambitious ಆಗಿರುವ ಅವನು ಮುಂದೊಂದು ದಿವಸ ಅಮೇರಿಕಾದ ಅಟಾರ್ನಿ ಜನರಲ್ ಗ್ಯಾರಂಟೀ ನೋಡಿ! ಅವನಿಗೆ ಅಧ್ಯಕ್ಷನಾಗಬೇಕೆಂಬ ಮಹದಾಸೆ ಇತ್ತು. ಆದರೆ ಇಲ್ಲಿಯೇ ಹುಟ್ಟದ್ದರಿಂದ ಅದು ಅಸಾಧ್ಯ.

ಇಸ್ರೇಲಿನ ಸ್ಥಾಪಕ ಮತ್ತು ಮೊದಲ ಪ್ರಧಾನ ಮಂತ್ರಿ ಡೇವಿಡ್ ಬೆನ್ ಗುರಿಯನ್ ಒಂದು ಮಾತು ಸದಾ ಹೇಳುತ್ತಿದ್ದರು. ಒಂದು ದೇಶ, ಒಂದು ಸಮುದಾಯ ಎಲ್ಲರ ಗಮನಕ್ಕೆ ಬರಬೇಕು, ಮನ್ನಣೆ ಗಳಿಸಬೇಕು ಅಂದ್ರೆ ಅದರಲ್ಲಿ ಎಲ್ಲ ತರಹದವರೂ ಇರಬೇಕು. ಎಲ್ಲಿ ತನಕ ಕಳ್ಳರು, ಸುಳ್ಳರು, ಕಾಕರು, ಪೋಕರು, ಮತ್ತೆ ಸೂಳೆಯರು ಇರುವದಿಲ್ಲವೋ ಅಲ್ಲಿಯವರೆಗೆ ಅಂತಹ ದೇಶವನ್ನು, ಸಮುದಾಯವನ್ನು ಯಾರು ತಾನೇ ಮಾನ್ಯ ಮಾಡುತ್ತಾರೆ? :)

ಅಮೇರಿಕಾದಲ್ಲಿ ಭಾರತ ಮೂಲದ ಜನ ಕೇವಲ ಪಂಡಿತರು, ವೈದ್ಯರು, ತಂತ್ರಜ್ಞರು, ಒಳ್ಳೆಯವರು ಮಾತ್ರ ಇದ್ದರು ಅಥವಾ ಅಂಥವರು ಮಾತ್ರ ಎಲ್ಲರಿಗೆ ಗೊತ್ತಿದ್ದು ಒಂದು ಸರ್ವಸಾಮಾನ್ಯ ಮಾನ್ಯತೆ ಭಾರತೀಯ ಸಮುದಾಯಕ್ಕೆ ಬಂದಿರಲಿಲ್ಲ. ಈಗ ಈ ತರಹದ ವೈಟ್ ಕಾಲರ್ ಕ್ರಿಮಿನಲ್ಲುಗಳು ಎಬ್ಬಿಸಿದ ಹೊಲಗೇರಿಯಿಂದ ಇಲ್ಲೂ India is shining!

ಶಿವನೇ ಶಂಭುಲಿಂಗ!

ಇದೆಲ್ಲ ಮಾಹಿತಿ ಕೆಳಕಂಡ ಅದ್ಭುತ ಪುಸ್ತಕದಿಂದ.

Tuesday, April 29, 2014

ಶ್ರೀಮತಿ ಕೆನಡಿ ಶ್ರೀಮತಿ ಓನಾಸಿಸ್ ಆಗುವ ತನಕ.... (ಭಾಗ - ೪)

(ಹಿಂದಿನ ಭಾಗ -೧, ಭಾಗ -೨, ಭಾಗ - ೩)

ರಾಬರ್ಟ್ ಕೆನಡಿಯವರನ್ನು ಲಾಸ್ ಎಂಜೆಲ್ಸ್ ನಲ್ಲಿ ಕೊಂದವ 'ಸಿರ್ಹಾನ್ ಬಿಶಾರಾ ಸಿರ್ಹಾನ್' ಎನ್ನುವ ಜೋರ್ಡಾನ್ ಮೂಲದ ಪ್ಯಾಲೆಸ್ತೇನಿ ವಲಸಿಗ ಅಂತ ಸಾಧಿಸಲಾಯಿತು. ಅದು ನಿಜವೇ? ನೋಡೋಣ.

ರಾಬರ್ಟ್ ಕೆನಡಿ ಇಸ್ರೇಲನ್ನು ತುಂಬ ಬೆಂಬಲಿಸುತ್ತಾರೆ. ಅವರು ಚುನಾವಣೆಯಲ್ಲಿ ಗೆದ್ದು, ಅಧ್ಯಕ್ಷರಾಗಿಬಿಟ್ಟರೆ ಇಸ್ರೇಲಿಗೆ ಇನ್ನೂ ಹೆಚ್ಚಿನ ಮಟ್ಟದ ಸಹಾಯ ನೀಡಿ ಪ್ಯಾಲೆಸ್ತೇನ್ ಸಂಗ್ರಾಮವನ್ನು ಪೂರ್ತಿ ನಾಮಾನೇಷ ಮಾಡಿ, ಸ್ವತಂತ್ರ ಪ್ಯಾಲೆಸ್ತೇನ್ ದೇಶದ ಕನಸು ಯಾವಾಗಲೂ ಕನಸಾಗಿಯೇ ಉಳಿಯುವಂತೆ ಮಾಡಿಬಿಡುತ್ತಾರೆ. ಅದಕ್ಕೇ ಅವರನ್ನು ಮುಗಿಸಿಬಿಡಬೇಕು ಅಂತ ಅವರನ್ನು ಸಿರ್ಹಾನ್ ಬಿಶಾರಾ ಸಿರ್ಹಾನ್ ಕೊಂದುಬಿಟ್ಟ ಅಂತ ಸರಕಾರ ಹೇಳಿತು.

ಹಂತಕ ಸಿರ್ಹಾನ್ ಸಿರ್ಹಾನ್ ಗೆ ಮಾತ್ರ ಏನೂ ನೆನಪೇ ಇರಲಿಲ್ಲ! ಯಾಕೆ?

ಸಿರ್ಹಾನ್ ಸಿರ್ಹಾನ್ ಮನೆ ಇತ್ಯಾದಿ ಶೋಧಿಸಿದಾಗ, RFK (Robert F Kennedy) must die, ಅಂತ ಸಾಲು ಸಾಲಾಗಿ ಬರೆದಿದ್ದ ಹಲವಾರು ನೋಟ್ ಬುಕ್ಕುಗಳು ಸಿಕ್ಕವು.

ಯಾಕೆ ಹಾಗೆ ಬರೆದು ಬರೆದು ಇಟ್ಟಿದ್ದ ಸಿರ್ಹಾನ್? ಅಥವಾ ಯಾರೋ ಬರೆದು ಇಟ್ಟಿದ್ದರೋ?!!!!

ಇನ್ನು ಕೆಲವು ಹಣದ ಮೂಲ ಹುಡುಕುತ್ತ ಹೋದಾಗ ಸಿಕ್ಕಿದ ಮಾಹಿತಿ ಇನ್ನೂ ಆಶ್ಚರ್ಯಕರವಾಗಿತ್ತು. ಸಿರ್ಹಾನ್ ಸಿರ್ಹಾನ್ ಗೆ ಸುಮಾರು ದುಡ್ಡು ಪ್ಯಾಲೆಸ್ತೇನ್ ಲಿಬರೇಶನ್ ಆರ್ಗನೈಜೇಷನ್ (PLO) ಮೂಲದ ದೊಡ್ಡ ನಾಯಕ ಮಹಮೂದ್ ಹಂಶಾರಿ ಅನ್ನುವನಿಂದ ಬಂದಿತ್ತು ಅನ್ನುವ ಸುದ್ದಿ. ಈ ಹಂಶಾರಿ ಫ್ರಾನ್ಸ್ ದೇಶದಿಂದ ಹೆಚ್ಚಾಗಿ ಆಪರೇಟ್ ಮಾಡುತ್ತಿದ್ದ. ಹಂಶಾರಿಗೆ ದೊಡ್ಡ ಮೊತ್ತ ಯಾರು ಕೊಟ್ಟಿದ್ದರು? ಅದನ್ನ ಹುಡುಕುತ್ತ ಹೋದಂತೆ ತಿಳಿದ ಸಂಗತಿ ಅಂದರೆ, ಶಿಪ್ಪಿಂಗ್ ಟೈಕೂನ ಅರಿಸ್ಟಾಟಲ್ ಓನಾಸಿಸ್ ಕೊಟ್ಟಿದ್ದ!

ಓನಾಸಿಸ್, ಎಲ್ಲ ದೊಡ್ಡ ಬಿಸಿನೆಸ್ಸ್ ಜನ ಪ್ಯಾಲೆಸ್ತೇನ್ ಹೋರಾಟಕ್ಕೆ ಕೊಟ್ಟಂತೆ, ತಾನೂ ಎಲ್ಲೋ ದೇಣಿಗೆ ಕೊಟ್ಟು, ಅದರಲ್ಲಿನ ಸ್ವಲ್ಪ ದೇಣಿಗೆ ಯಾರೋ PLO ನಾಯಕ ರಾಬರ್ಟ್ ಕೆನಡಿ ಹಂತಕರಿಗೆ ಕೊಟ್ಟ ಅಂದ ಮಾತ್ರಕ್ಕೆ ಓನಾಸಿಸ್ಸನೇ ಹತ್ಯೆಗೆ ಸುಪಾರಿ ಕೊಟ್ಟ ಅನ್ನುವದು ಸಾಬೀತಾಗುತ್ತದೆಯೇ? ಇಲ್ಲ. ಆದರೆ ಓನಾಸಿಸ್ ಮೇಲೆ ಸಂಶಯ ಮೂಡುವದಂತೂ ಸಹಜ. ಹತ್ಯೆಯ ನಿಜವಾದ ಸಂಚು ರೂಪಿಸಿದವರೇ ಈ ಸುದ್ದಿ ಹಬ್ಬಿಸಿದರೋ ಹೇಗೆ? ಓನಾಸಿಸ್ ಮತ್ತು ಜಾಕಿ ಕೆನಡಿ ಸಂಬಂಧಕ್ಕೆ ರಾಬರ್ಟ್ ಕೆನಡಿಯ ಸಮ್ಮತಿ ಇರಲಿಲ್ಲ. ಅದಕ್ಕೆ ಓನಾಸಿಸ್ ಗೆ ರಾಬರ್ಟ್ ಕೆನಡಿಯನ್ನು ದ್ವೇಷಿಸುವ ಕಾರಣವಂತೂ ಇತ್ತು. ಹತ್ಯೆಯ ನಂತರ ಹಣದ ಮೂಲವನ್ನೂ ತೋರಿಸಿ, ಸುದ್ದಿ ಹರಿಬಿಟ್ಟರೆ, ಜನರ ಗಮನ ಆಕಡೆ ಹೋಗಿಬಿಡುತ್ತದೆ ಅಂತ ರಾಬರ್ಟ್ ಕೆನಡಿ ಹತ್ಯೆಯ ಷಡ್ಯಂತ್ರ ಮಾಡಿದವರ ಕಾರಸ್ತಾನವಾಗಿತ್ತೆ?

ಇನ್ನು ಈ ಮೆಹಮೂದ ಹಂಶಾರಿಯನ್ನು ಕೇಳೋಣ ಅಂದ್ರೆ ಪುಣ್ಯಾತ್ಮ ನಿಗೂಢವಾಗಿ ಸತ್ತು ಹೋದ. ಆತ ಮ್ಯುನಿಕ್ ಒಲಿಂಪಿಕ್ಸ್ ನಲ್ಲಿ ಇಸ್ರೇಲಿ ಕ್ರೀಡಾಪಟುಗಳ ಹತ್ಯೆ ಮಾಡಿದ ಆರೋಪ ಹೊತ್ತಿದ್ದ. ಇಸ್ರೇಲಿ ಬೇಹುಗಾರಿಕೆ ಸಂಸ್ಥೆ ಮೊಸ್ಸಾದಿನ ಕಮಾಂಡೋ  ತಂಡ ಅವನನ್ನೂ ಬೇಟೆ ಆಡುತ್ತಿತ್ತು. ಪ್ಯಾರಿಸ್ ನಲ್ಲಿ ಅವನ ಮನೆಯ ಬೀಗ ಮುರಿದ ಮೊಸ್ಸಾದ್ ತಂತ್ರಜ್ಞರು ಅವನ ಫೋನ್ ಒಳಗೆ ಚಿಕ್ಕ ಬಾಂಬೊಂದನ್ನು ಇಟ್ಟು ಬಂದಿದ್ದರು. ಮರುದಿನ ಫೋನ್ ಮಾಡಿದರು. ಹಂಶಾರಿಯೇ ಮಾತಾಡುತ್ತಿರುವದು ಅಂತ ಖಚಿತವಾದ ತಕ್ಷಣ, ರಿಮೋಟ್ ಕಂಟ್ರೋಲ್ ಉಪಯೋಗಿಸಿ ಬಾಂಬ್ ಸ್ಫೋಟಿಸಿದರು, ಭೀಕರವಾಗಿ ಗಾಯಗೊಂಡ ಹಂಶಾರಿ ಆಸ್ಪತ್ರೆಯಲ್ಲಿ ತುಂಬ ದಿನಗಳ ನಂತರ ಸತ್ತ. ಅವನು ಆಸ್ಪತ್ರೆಯಲ್ಲಿ ಬಾಂಬ್ ಸ್ಫೋಟದಿಂದಾದ ಗಾಯಗಳಿಂದ ಸತ್ತನೆ ಅಥವಾ ಇವನು ಬದುಕಿ ಬಂದರೆ ತೊಂದರೆ ಅಂತ ಮುಗಿಸಿಬಿಡಲಾಯಿತಾ?

ಇಸ್ರೇಲಿಗಳು ಹೇಳಿದ್ದಿಷ್ಟೇ. ನೋಡ್ರೀ, ನಾವು ಆ ಹಂಶಾರಿಯ ಗೇಮ್ ಬಾರಿಸಲು ನೋಡಿದ್ದು ನಿಜ. ಅವನು ಸಾಯಲಿಲ್ಲ, ಕೇವಲ ಗಾಯಗೊಂಡ. ಆಸ್ಪತ್ರೆಯಲ್ಲಿದ್ದ. ಅಲ್ಲಿ ಸತ್ತ. ಆಸ್ಪತ್ರೆಯಲ್ಲಿ ಅವನನ್ನು ಬದುಕಿಸಿಕೊಳ್ಳಬೇಕಾದವರೇ ಕೊಂದಿರಬಹುದು. ವಿಚಾರಿಸಿ, ಅಂತ ಹೇಳಿ ಮುಗುಮ್ಮಾಗಿ ನಕ್ಕರು.

ಅಂದರೆ, ಗಾಯಗೊಂಡರೂ ಬದುಕಬಹುದಾಗಿದ್ದ ಹಂಶಾರಿಯನ್ನು ಬೇಕಂತಲೇ ಮುಗಿಸಲಾಯಿತಾ? ಅವನ್ನು ಮುಗಿಸುವಂತೆ PLO ಮೇಲೆ ಒತ್ತಡ ರಾಬರ್ಟ್ ಕೆನಡಿಯ ನಿಜ ಹಂತಕರಿಂದ ಬಂದಿತ್ತಾ? ಹೀಗೂ ಸಂಶಯದ ಸರಣಿ ಮುಂದುವರಿಯುತ್ತದೆ. ಪ್ಯಾಲೆಸ್ತೇನ್ ಹೋರಾಟಗಾರರಲ್ಲಿ ಅಂತರಿಕ ಜಗಳಗಳು ಬೇಕಾದಷ್ಟು ಇದ್ದವು. ಅದೇ ಕಾರಣದಿಂದ ಹಂಶಾರಿಯನ್ನು ಅವರದ್ದೇ ಕಾರಣಕ್ಕೆ ಆಸ್ಪತ್ರೆಯಲ್ಲಿಯೇ ಮುಗಿಸಿದ್ದರೂ ಆಶ್ಚರ್ಯವಿಲ್ಲ. ಮೊದಲು ಕೆನಡಿ ಹತ್ಯೆಗೆ ಒಬ್ಬ ಪ್ಯಾಲೆಸ್ತೇನ್ ವಲಸಿಗನನ್ನು ಫಿಟ್ ಮಾಡುವದು, ಅವನಿಗೆ PLO ದುಡ್ಡು ಕೊಟ್ಟಿತು ಅಂತ ಸುದ್ದಿ ಹಬ್ಬಿಸುವದು, ಅದಕ್ಕೆ ಹಂಶಾರಿಯಂತಹ ಉಗ್ರವಾದಿ ನಾಯಕನ ಲಿಂಕ್ ಕೊಡುವದು, ನಂತರ ಅವನನ್ನೇ ತೆಗೆದುಬಿಡುವದು. ಹೀಗೆ ಮಾಡಿ ನೀರನ್ನು ಮತ್ತೂ ಬಗ್ಗಡ ಮಾಡಿ, ಯಾರಾದರೂ ತನಿಖೆ ಮಾಡಲು ಹೋದರೆ ಅವರಿಗೇ ಫುಲ್ ತಲೆ ಕೆಡುವಂತೆ ಮಾಡಿ ನಿಜ ಹಂತಕರು ಬಚಾವ್ ಆಗುವದು. ಮಾಸ್ಟರ್ ಪ್ಲಾನ ಹೀಗಿತ್ತೆ?

ಕೆನಡಿಗಳ ಹತ್ಯೆ, ಹಿನ್ನಲೆ, ಆಗಿನ ಸಂದರ್ಭ  ಗಮನಿಸಿದರೆ ತಾರ್ಕಿಕವಾಗಿ, ಹೀಗೆ ಆಗಿರಬಹುದು (plausible), ಅನ್ನುವ ಥಿಯರಿ ಇದೇ. ಐದು ವರ್ಷಗಳ ಹಿಂದೆ, ಅಂದರೆ ೧೯೬೩ ರಲ್ಲಿ, ಜಾನ್ ಕೆನಡಿಯನ್ನು ಕೊಂಡಿದ್ದ ಪಟ್ಟಭದ್ರ ಹಿತಾಸಕ್ತಿಗಳೇ ರಾಬರ್ಟ್ ಕೆನಡಿಯನ್ನೂ ಮುಗಿಸಿದ್ದವು. ಮೊಟ್ಟ ಮೊದಲ ಕಾರಣ ಅಂದರೆ ಒಂದು ವೇಳೆ ರಾಬರ್ಟ್ ಕೆನಡಿ ಏನಾದರೂ ಅಧ್ಯಕ್ಷನಾದನೋ ಜಾಕ್ ಕೆನಡಿ ಹತ್ಯೆಯ ತನಿಖೆಯನ್ನು ಮೊದಲಿಂದ ಸರಿಯಾದ ರೀತಿಯಲ್ಲಿ ಮಾಡಿ, ಮಾಡಿದವರ ಬುಡಕ್ಕೆ ಬೆಂಕಿ ತರುವದು ಖಾತ್ರಿ ಇತ್ತು. ಇನ್ನು ವಿಯೆಟ್ನಾಂ ಯುದ್ಧ ನಿಲ್ಲಿಸುವದೂ ಖಾತ್ರಿಯಿತ್ತು. ಇವೆಲ್ಲ ದೊಡ್ಡ ರಿಸ್ಕ್ ಅಂತ ಹೇಳಿ ರಾಬರ್ಟ್ ಕೆನಡಿಯನ್ನು ತೆಗೆಸಿಬಿಡಲಾಯಿತು. ಅದರ ಜಾಡು ತಪ್ಪಲು ಬೇರೆ ಬೇರೆ ತರಹದ false trails ಗಳನ್ನು ಸೃಷ್ಟಿಸಲಾಯಿತು.

ಯಾವ ರೀತಿ ಜಾನ್ ಕೆನಡಿ ಹತ್ಯೆಯಲ್ಲಿ ಓಸ್ವಾಲ್ಡ್ ಅನ್ನುವ ಅಬ್ಬೆಪಾರಿಯನ್ನು ಫಿಟ್ ಮಾಡಿ, ಅವನನ್ನೇ ಇನ್ನೊಬ್ಬವ ಕೊಂದು ಬಿಡುವಂತೆ ಮಾಡಿ, ಇಡೀ ಪ್ರಕರಣವನ್ನು ತಿಪ್ಪೆ ಸಾರಿಸಲಾಗಿತ್ತೋ ಅದೇ ತರಹ ರಾಬರ್ಟ್ ಕೆನಡಿ ಹತ್ಯೆ ಕೂಡ ತಿಪ್ಪೆ ಸಾರಿಸಲಾಯಿತು. ಕೆನಡಿಗಳ ಪರಮ ವೈರಿ ಜೆ.ಎಡ್ಗರ್ ಹೂವರ್ ಅವರೇ FBI ಡೈರೆಕ್ಟರ್ ಅಂತ ಕೂತಿದ್ದರು. ಮಸ್ತಾಗಿ ತಿಪ್ಪೆ ಸಾರಿಸಿ ರಂಗೋಲಿ ಸಹ ಹಾಕಿ ಬಿಟ್ಟರು.

ಈ ಸಿರ್ಹಾನ್ ಸಿರ್ಹಾನ್ ಅನ್ನುವವ ಸುಮಾರು ವರ್ಷದಿಂದ ಯಾವದೋ ಸಂಮೋಹಿನಿ ಡಾಕ್ಟರ್ (hypnotist)  ಹತ್ತಿರ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದ. ಆ ಚಿಕಿತ್ಸೆ ನೆಪದಲ್ಲಿ ಅವನನ್ನು ಬ್ರೈನ್ ವಾಶ್ ಮಾಡಿ, ರಾಬರ್ಟ್ ಕೆನಡಿಯ ಹಂತಕನಾಗುವಂತೆ ತಯಾರುಮಾಡಲಾಗಿತ್ತೆ? ಇರಬಹದು. ಯಾಕೆಂದರೆ ಅಮೆರಿಕಾದ ರಹಸ್ಯ ರಕ್ಷಣಾ ಲ್ಯಾಬೊರೇಟರಿಗಳಲ್ಲಿ ಆ ತರಹದ ಸಂಶೋಧನೆಗಳು ನಡೆಯುತ್ತಿದ್ದವು ಅಂತ ಬಹಳ ವರ್ಷಗಳ ನಂತರ ಬಯಲಾಯಿತು. ಮತ್ತೆ ಸಿರ್ಹಾನ್ ಸಿರ್ಹಾನ್ ಗುಂಡು ಹಾರಿಸಿದ ಸ್ಥಳದಿಂದ ಹಾರಿದ ಗುಂಡುಗಳು ಮತ್ತೆ ರಾಬರ್ಟ್ ಕೆನಡಿಗೆ ಬಿದ್ದ ಗುಂಡುಗಳು ಬೇರೆ ಕಥೆಯನ್ನೇ ಹೇಳುತ್ತಿದ್ದವು. ಸಿರ್ಹಾನ್ ಸಿರ್ಹಾನ್ ಎನ್ನುವ ಹಂತಕ hypnotically program ಆಗಿದ್ದ. ಚುಕ್ಕೆ ಲಂಗದ ಹುಡುಗಿ ಸಂಜ್ಞೆ ಮಾಡಿದ ನಂತರ ತಲೆಯಲ್ಲಿನ ಪ್ರೊಗ್ರಾಮ್ ಹೇಳಿದಂತೆ ಗುಂಡು ಹಾರಿಸಿ ಗದ್ದಲ ಮಾಡಿದ. ಅದೇ ಸಂದರ್ಭವನ್ನು ಉಪಯೋಗಿಸಿಕೊಂಡ ಅಲ್ಲೇ ಇದ್ದ ನುರಿತ ಹಂತಕರು ಸರಿಯಾಗಿ ಗುಂಡು ಹಾರಿಸಿ ಕೆನಡಿಯನ್ನು ಕೊಂದು, ಯಾರಿಗೂ ತಿಳಿಯದಂತೆ ಪರಾರಿಯಾದರು. ಅವರು ಸಿಐಎ rogue elements ಆಗಿದ್ದರು. ಸಿಕ್ಕಿಬಿದ್ದ ಸಿರ್ಹಾನ್ ಸಿರ್ಹಾನ್ ಗೆ ಏನೂ ನೆನಪೇ ಇರಲಿಲ್ಲ. 'ಮಂಚೂರಿಯನ್ ಕ್ಯಾಂಡಿಡೇಟ್' ಅನ್ನುವ ಟೈಪಿನ psychologically transformed ಹಂತಕನಾಗಿದ್ದ ಅವನನ್ನು ಆ ರೀತಿ ಪ್ರೊಗ್ರಾಮ್ ಮಾಡಲಾಗಿತ್ತು, ಹತ್ಯೆಯ ನಂತರ ಏನೂ ನೆನಪು ಇರದಂತೆ! ಇನ್ನೂ ಕೆಲ ಮೂಲಗಳ ಪ್ರಕಾರ, ಸಿರ್ಹಾನ್ ಹಾರಿಸಿದ್ದ ಗುಂಡುಗಳು ಕೇವಲ ಖಾಲಿ ಗುಂಡುಗಳು ಆಗಿದ್ದವು. ಕೆನಡಿಗೆ ಬಿದ್ದ ಗುಂಡುಗಳು ಬೇರೇನೆ ಇದ್ದವು.

ಇದೆಲ್ಲವನ್ನು ಪುಷ್ಟೀಕರಿಸುವಂತೆ ಮತ್ತೂ ಕೆಲ ಮಾಹಿತಿಗಳು ಬಹಳ ದಿವಸಗಳ ನಂತರ ಅಲ್ಲಿ ಇಲ್ಲಿ ಕೇಳಿ ಬಂದವು. ಡೇವಿಡ್ ಮೊರಾಲೆಸ್ - ಸಿಐಎ ಒಬ್ಬ ಖತರ್ನಾಕ್ ಅಧಿಕಾರಿ. ಕಮ್ಯುನಿಸ್ಟ್ ನಾಯಕ ಚೆ ಗುವೇರಾನನ್ನು ಬೋಲಿವಿಯಾದಲ್ಲಿ ಹಿಡಿದು ಕೊಂದಿದ್ದ. ವಿಯೆಟ್ನಾಂ ಯುದ್ಧದಲ್ಲಿ ದೊಡ್ಡ ಪಾತ್ರ ವಹಿಸಿದ್ದ. ಕ್ಯೂಬಾದ ಫೀಡೆಲ್ ಕ್ಯಾಸ್ಟ್ರೋನನ್ನು ಮುಗಿಸುವ ಸಂಚುಗಳಲ್ಲಿ ತುಂಬ active ಇದ್ದ. ಅವನು ತನ್ನ ಗೆಳೆಯನ ಮುಂದೆ ಒಮ್ಮೆ ಹೇಳಿಕೊಂಡಿದ್ದ. 'ಮೊದಲು ಡಲ್ಲಾಸ್ ನಲ್ಲಿ ದೊಡ್ದವನ್ನು ಮುಗಿಸಿದೆವು. ನಂತರ ಲಾಸ್ ಎಂಜೆಲ್ಸ್ ನಲ್ಲಿ ಚಿಕ್ಕ ಸೂಳೆಮಗನನ್ನು (little bastard) ಮುಗಿಸಿದೆವು! ಹೆಂಗೆ?'!!!!!!!!!! ಸಿಐಎ rogue elements ಗೆ ಕೆನಡಿ ಸಹೋದರ ಮೇಲೆ ಮೊದಲಿಂದ ಸಿಟ್ಟು. ಯಾಕೆಂದರೆ ಅವರ ತಾಳಕ್ಕೆ ತಕ್ಕಂತೆ ಕುಣಿಯಲಿಲ್ಲ ಅಂತ. ಫೀಡೆಲ್ ಕ್ಯಾಸ್ಟ್ರೋವನ್ನು ಕೊಲ್ಲಲು ಹಾಕಿದ್ದ ಸ್ಕೆಚ್ ತಿರುಗಿಸಿ ಜಾನ್ ಕೆನಡಿಯನ್ನು ಮುಗಿಸಿದ್ದರು. ಈಗ ರಾಬರ್ಟ್ ಕೆನಡಿಯನ್ನು ಮುಗಿಸಿಯಾಗಿತ್ತು. ಬಿಲ್ ಕಿಂಗ್ ಹಾರ್ವಿ, ಎಡ್ವರ್ಡ್ ಹಂಟ್ ಮುಂತಾದ ಇತರೆ ಸಿಐಎ rogue elements ಹೆಸರು ಸಹಿತ ಆಗಾಗ ಕೇಳಿಬರುತ್ತದೆ.

ಆದರೆ ಅರಿಸ್ಟಾಟಲ್ ಓನಾಸ್ಸಿಸ್ ಕಾಸು ಕೊಟ್ಟು ಮರ್ಡರ್ ಮಾಡಿಸಿದ ಅಂತ false trail ಸೆಟ್ ಅಪ್ ಮಾಡಿದ್ದ ಸಂಚುಗಾರರು ಅವನನ್ನು ಬ್ಲಾಕ್ ಮೇಲ್ ಮಾಡಿದ್ದರಾ? ಗೊತ್ತಿಲ್ಲ.

ಇಂತದ್ದೆಲ್ಲ ದೊಡ್ಡ ಮಟ್ಟದ ರಾಜಕೀಯ ಹತ್ಯೆಗಳು ಒಂದು ಎರಡು ಕಾರಣಗಳಿಂದ ಮಾತ್ರ ಆಗುವದು ಕಮ್ಮಿ. ಹಲವಾರು ಶಕ್ತಿಗಳು, ಕಾಣದ ಕೈಗಳು ಪ್ರಯತ್ನ ಸದಾ ಮಾಡುತ್ತಿರುತ್ತವೆ. ಎಲ್ಲೋ, ಏನೋ, ಎಲ್ಲ ಗ್ರಹಗಳು ಕೂಡಿ ಬಂದು, ಒಂದು ಹಾಂ! ಅನ್ನುವಂತ ಘಟನೆ ಆಗಿ ಹೋಗಿರುತ್ತದೆ. ಮುಂದಿನ ದಿನಗಳಲ್ಲಿ ಅದನ್ನ dissect ಮಾಡಿ ಎಲ್ಲ reverse engineering ಮಾಡಿದರೆ ಒಂದು ಐಡಿಯಾ ಬಂದೀತು.

ಹೀಗೆ ಜಾಕಿ ಕೆನಡಿ ಮೇಡಮ್ಮು ಮತ್ತು ಕುಬೇರ ಓನಾಸ್ಸಿಸ್ ಮದುವೆಯಾಗಲು ರಾಬರ್ಟ್ ಕೆನಡಿ ದಾರಿಯಿಂದ ಸರಿದು ಹೋಗಬೇಕಾಗಿತ್ತು. ಹೋದ. ಕಾಕತಾಳೀಯ ಇದ್ದರೂ ಇದ್ದೀತು.

೧೯೬೮ ರಲ್ಲಿ ಜಾಕಿ ಕೆನಡಿಗೆ ಬರೋಬ್ಬರಿ ಮೂವತ್ತೊಂಬತ್ತು ವರ್ಷ. ಓನಾಸಿಸ್ಸ್ ಗೆ ಅರವತ್ತೆರಡು! ಕುರುಡು ಪ್ರೇಮ. ಕುರುಡು ಕಾಂಚಾಣ. ಎಲ್ಲ ಓಕೆ!

ಇಷ್ಟೆಲ್ಲ ಆದ ಮೇಲೆ ಕೆನಡಿ ಮತ್ತು ಓನಾಸಿಸ್ ವಿವಾಹವಾಗಿ ಸುಖವಾಗಿದ್ದರಾ? ಅಷ್ಟಕಷ್ಟೇ. ಇಬ್ಬರೂ ಸ್ವಚ್ಚಂದ ಜೀವಿಗಳು. ಎಲ್ಲಿ ಈ ಬಂಧನ? ಅಂತ ಶರಂಪರ ಜಗಳ ಶುರು ಮಾಡಿಬಿಟ್ಟರು. ಏ! ನಿಮ್ಮೌನ್! ಡೈವೋರ್ಸ್ ಕೊಡತೇನಿ. ಮ್ಯಾಲಿಂದ ಜಗ್ಗೆ ರೊಕ್ಕಾ ಕೊಡತೇನಿ. ನನ್ನ ಜೀವಾ ತಿನ್ನೋದು ಬಿಟ್ಟು ಹೋಗಬೇ! ಅಂತ ಓನಾಸಿಸ್ ಅಂಬೋ ಅಂದ. ಡೈವೋರ್ಸ್ ತೊಗೊಂಡ್ರೆ ಸ್ವಲ್ಪ ಮಾತ್ರ ಸಂಪತ್ತು ಬರುತ್ತದೆ. ಅದು ಬೇಡ, ಅಂತ ಅಮ್ಮಾವರು ಡೈವೋರ್ಸ್ ತೆಗೆದುಕೊಳ್ಳಲು ಒಪ್ಪಲಿಲ್ಲ. ತಿಂಗಳಿಗೆ ಇಷ್ಟು ಅಂತ ದೊಡ್ಡ ಮಟ್ಟದ allowance ಮಾತ್ರ ಕುಬೇರ ಓನಾಸ್ಸಿಸ್ ನಿಂದ ಬೋಳಿಸಿ  ಬೋಳಿಸಿ ಆ ಯಪ್ಪನ್ನ ಹೈರಾಣ ಮಾಡಿ ಹಾಕಿಬಿಟ್ಟರು. ಹೇಗೆ ಬೋಳಿಸಿಬೇಕು ಅಂತ  ಬರೋಬ್ಬರಿ ಸಲಹೆ ಕೊಡಲು ಜಾಕಿಗೆ ಬೇಕಾದಷ್ಟು ಜನ ಇದ್ದರು ಬಿಡಿ.

ಏಳು ವರ್ಷಗಳ ಹಾವು ಮುಂಗುಸಿ ಮದುವೆ ನಂತರ ೧೯೭೫ ರಲ್ಲಿ ಅರಿಸ್ಟಾಟಲ್ ಓನಾಸಿಸ್ ಶಿವನ ಪಾದ ಸೇರಿಕೊಂಡ. ಜಾಕಿಗೆ ಮತ್ತೆ ವಿಧವೆ ಪಟ್ಟ ಬಂತು. ದೊಡ್ಡ ಪ್ರಮಾಣದ ಆಸ್ತಿಯೂ ಬಂತು. ಜಾಕಿಗೆ ಕೇವಲ ನಲವತ್ತಾರು ವರ್ಷ. ನಂತರ ಜಾಕಿ ಮತ್ತೊಂದು ಮದುವೆ ಅದು ಇದು ಮಾಡಿಕೊಳ್ಳಲಿಲ್ಲ. ಸಾಹಿತ್ಯ, ಪುಸ್ತಕ ಪ್ರಕಾಶನ, ದೊಡ್ಡ ಮಂದಿ ನಡುವೆ ಸುತ್ತಾಟ, ಅದು ಇದು ಅಂತ ಮತ್ತೊಂದು ಇಪ್ಪತ್ತು ವರ್ಷ ಇದ್ದು ೧೯೯೪ ರಲ್ಲಿ ತೀರಿಹೋದರು.

ಒಂದು ವರ್ಣರಂಜಿತ ಅಧ್ಯಾಯ ಮುಗಿದಿತ್ತು.

ಜಾನ್ ಕೆನಡಿ ಹತ್ಯೆಯಾದಾಗ ಬಂದ ಮೊದಲ ವೈಧವ್ಯ ರಾಬರ್ಟ್ ಕೆನಡಿ ಹತ್ಯೆಯಾದಾಗ ಹೋಗಿತ್ತು.

ಆದ್ರೆ ಕೆನಡಿ ಹತ್ಯೆಗಳ ಹಿಂದಿನ ನಿಗೂಢತೆ, ರಹಸ್ಯಗಳು, ಕಾರ್ಯಾಚರಣೆಗಳು, ಮತ್ತೆ ಕೆನಡಿ ಹತ್ಯೆಗಳಲ್ಲಿ ಭಾಗಿಯಾಗಿರಬಹುದು ಅನ್ನುವ ಜನಗಳ systematic ಹತ್ಯೆಗಳು ಅವನ್ನೆಲ್ಲ ನೋಡುತ್ತ, ತಿಳಿಯುತ್ತ ಹೋದರೆ ಮನಸ್ಸಿಗೆ ಬರುವದು ಒಂದೇ ಒಂದು - reality is DEFINITELY stranger than fiction!

ರಾಬರ್ಟ್ ಕೆನಡಿ ಹತ್ಯೆಯಲ್ಲಿ ಫಿಟ್ಟಾದ ಸಿರ್ಹಾನ್ ಸಿರ್ಹಾನ್ ಮಾತ್ರ ಸರಿಸುಮಾರು ನಲವತ್ತಾರು ವರ್ಷಗಳಿಂದ ಸೆರೆಮನೆಯಲ್ಲಿ ಕೊಳೆಯುತ್ತಲೇ ಇದ್ದಾನೆ. ಅವನ ವಕೀಲರು ಆಗಾಗ  ಬಂದು, ನನ್ನ ಕಕ್ಷಿದಾರನಿಗೆ ಅನ್ಯಾಯವಾಗಿದೆ! ಮತ್ತೊಮ್ಮೆ ತನಿಖೆ ಮಾಡಿ, ಅಂತ ಪುಂಗಿ ಊದುತ್ತಲೇ ಇರುತ್ತಾರೆ.

ಸಿರ್ಹಾನ್ ಬಿಶಾರಾ ಸಿರ್ಹಾನ್ ಹೇಳುವದು ಒಂದೇ ಮಾತು - ನನಗೆ ಏನೂ ನೆನಪಿಲ್ಲ!

Kennedy Curse ಅನ್ನುವದು ಎಂದಿಗೆ ಮುಗಿಯುತ್ತದಯೋ! ಮೊತ್ತ ಮೊದಲು ಜಾನ್ ಕೆನಡಿಯವರ ಹಿರಿಯಣ್ಣ ಒಬ್ಬ ಎರಡನೇ ಮಹಾ ಯುದ್ಧದಲ್ಲಿ ವಾಯುಸೇನೆಯಲ್ಲಿ ಪೈಲಟ್ ಆಗಿದ್ದ. ಜರ್ಮನ್ನರು ವಿಮಾನ ಹೊಡೆದು ಉರುಳಿಸಿದರು. ಹೋದ. ಅಕ್ಕ ಒಬ್ಬಾಕೆ ವಿಮಾನ ಅಪಘಾತದಲ್ಲಿ ಸತ್ತಳು. ಜಾನ್ ಮತ್ತು ರಾಬರ್ಟ್ ಕೆನಡಿ ಅತ್ಯಂತ sensational ಅನ್ನುವ ರೀತಿಯಲ್ಲಿ ಹತ್ಯೆಗೊಳಗಾದರು. ಜಾನ್ ಕೆನಡಿಯ ಮಗನೊಬ್ಬ ತೀರ ಇತ್ತೀಚಿಗೆ ವಿಮಾನ ಅಪಘಾತವೊಂದರಲ್ಲಿ ಮೃತನಾದ. ಅವನನ್ನೂ ತೆಗೆಸಿಬಿಡಲಾಯಿತು ಅಂತ ಸುದ್ದಿ ಇಂಟರ್ನೆಟ್ ಮೇಲೆ ಹರಿದಾಡುತ್ತಲೇ ಇದೆ. ಇನ್ನೊಬ್ಬ ಟೆಡ್ ಕೆನಡಿ ೧೯೮೦ ರಲ್ಲಿ ಅಧ್ಯಕ್ಷರಾಗಲು ಹೊರಟಿದ್ದರು. ವಿಮಾನ ಅಪಘಾತ ಒಂದರಲ್ಲಿ ಸ್ವಲ್ಪದರಲ್ಲಿ ಬಚಾವಾದರು. ಮಗನೇ! ಮತ್ತೆ ಅಧ್ಯಕ್ಷ ಅದು ಇದು ಅಂತ ಬಂದ್ರೆ ಅಷ್ಟೇ! ಅಂತ ಬರೋಬ್ಬರಿ ಧಮಿಕಿ ಅವರಿಗೆ ರವಾನೆ ಆಗಿತ್ತು ಆ ಅಪಘಾತದ ಮೂಲಕ. ರಾಬರ್ಟ್ ಕೆನಡಿ ಮಗ ಸ್ವಲ್ಪ ದಿವಸ ರಾಜಕೀಯದಲ್ಲಿ ಇದ್ದವನು ಈಗ ಎಲ್ಲೋ ಕಳೆದು ಹೋಗಿದ್ದಾನೆ.

(ಮುಗಿಯಿತು)

ಪೂರಕ ಓದಿಗೆ:

Nemesis: The True Story of Aristotle Onassis, Jackie O, and the Love Triangle That Brought Down the Kennedys by Peter Evans 

The Assassination of Robert F. Kennedy by William Turner, Jonn Christian

Wednesday, April 23, 2014

ಶ್ರೀಮತಿ ಕೆನಡಿ ಶ್ರೀಮತಿ ಓನಾಸಿಸ್ ಆಗುವ ತನಕ.... (ಭಾಗ - ೩)

(ಹಿಂದಿನ ಭಾಗ -೧, ಭಾಗ -೨)

ಅಂತೂ ಇಂತೂ ಜಾಕಿ ಕೆನಡಿ ಎಂಬ ಆ ಕಾಲದ ಅಮೇರಿಕಾದ ಪ್ರಥಮ ಮಹಿಳೆ ಅರಿಸ್ಟಾಟಲ್ ಓನಾಸಿಸ್ ಎಂಬ ಕುಬೇರನ ಆತಿಥ್ಯ ಸ್ವೀಕರಸಿ, ದಿಲ್ಲು, ಮತ್ತೊಂದು ಕೊಟ್ಟು ಬಂದಳು ವಾಪಸ್. ಅಮೇರಿಕಾದ ಅಧ್ಯಕ್ಷರ ಧರ್ಮಪತ್ನಿಯಾದ ಕರ್ಮಕ್ಕೆ ಜಾನ್ ಕೆನಡಿಯವರ ಎಲ್ಲ ವೈಪರೀತ್ಯಗಳನ್ನು ಸಹಿಸಿಕೊಂಡೇ ಪ್ರಥಮ ಮಹಿಳೆಯ ಸ್ಥಾನದ ಗೌರವ ಕಾಯುವ ಕರ್ಮವೇ! ಅಂತ ಹಣೆ ಚಚ್ಚಿಕೊಂಡಳು. ಅಲ್ಲಿ ಓನಾಸಿಸ್ಸನ ಜೊತೆ ಎಷ್ಟು ಹಾಯಾಗಿತ್ತು! ಮುದುಕ ಪ್ರಿಯಕರ ಕಾಲಲ್ಲಿ ತೋರಿಸಿದ್ದನ್ನು ತಲೆ ಮೇಲೆ ಹೊತ್ತು ಮಾಡುತ್ತಿದ್ದ. ಇರಲಿ, ಮುಂದೆ ನೋಡಿಕೊಂಡರಾಯಿತು. ಇಲ್ಲಿ ಕೆನಡಿ ಸಾಹೇಬರ ಜೊತೆ ಇನ್ನೆಷ್ಟು ದಿವಸವೋ, ಅಂತ ರೆಗ್ಯುಲರ್ ಅಧ್ಯಕ್ಷರ ಪತ್ನಿ ಜೀವನಕ್ಕೆ ವಾಪಸ್ ಬಂದಳು.

ಅಧ್ಯಕ್ಷರ ಪತ್ನಿ ಮುನಿಸಿಕೊಂಡು ಓಡಿ ಹೋಗಿ ಬಿಟ್ಟಿದ್ದಳು. ಅಲ್ಲಿ ಓನಾಸಿಸ್ ಎಂಬ ಕುಬೇರನ ಜೊತೆ ಕುಣಿದು ಕುಪ್ಪಳಿಸಿ ಬಂದಳು, ಅಂತ ಸ್ವಲ್ಪ ಸುದ್ದಿ ಆಗಿತ್ತು ನೋಡಿ. ಅದನ್ನ ರಿಪೇರಿ ಮಾಡಬೇಕಿತ್ತು. PR ಇಮೇಜ್ ಸರಿಪಡಿಸಬೇಕಿತ್ತು. ಕೆನಡಿ ಸಾಹೇಬರು, ಮೇಡಮ್ಮು,ಅವರ ಮಕ್ಕಳಿಬ್ಬರು ಕೂಡಿ ಒಂದು ಫೋಟೋ ಸೆಶನ್ ಮಾಡಿದರು. ನೋಡಿದವರಿಗೆ ಅನ್ನಿಸಬೇಕು, ಎಷ್ಟು ಹ್ಯಾಪಿ ಫ್ಯಾಮಿಲಿ ನಮ್ಮ ಅಧ್ಯಕ್ಷರದು! ಅಂತ. ಹಾಗೆ ಮಾಡಿ, ಎಲ್ಲ ಫೋಟೋ ಪತ್ರಿಕೆಗಳಿಗೆ ಬಿಟ್ಟು, ಪ್ರಸಾದ ತಿನ್ನುವ ಪತ್ರಕರ್ತರಿಂದ ಲೇಖನ ಬರೆಸಿ, ಶ್ವೇತ ಭವನದಲ್ಲಿ ಎಲ್ಲ ಸರಿ ಇದೆ, ಸಂಸಾರ ಅನ್ಯೋನ್ಯವಾಗಿದೆ, ಅಂತ ಭೋಂಗು ಬಿಟ್ಟಾಯಿತು. ಕೆನಡಿಗಳಿಂದ ಒಂದು ತರಹದ ಸಮೂಹ ಸನ್ನಿಗೊಳಗಾಗಿದ್ದ ಜನ ಜೈ! ಜೈ! ಅಂದರು. ಜನರನ್ನು ಮತ್ತೆ ಮಂಗ್ಯಾ ಮಾಡಿದ ರಾಜಕಾರಣಿಗಳು ಪೆಕಾ ಪೆಕಾ ಅಂತ ನಕ್ಕರು.

ಇದೆಲ್ಲ ಆಗಿದ್ದು ೧೯೬೨ ರ ಆಸು ಪಾಸಿನಲ್ಲಿ. ಕೆನಡಿ ಅಧ್ಯಕ್ಷರಾಗಿದ್ದೇ ಆಗಿದ್ದು ಒಂದಾದ ಮೇಲೊಂದು ಅವಗಢ. ಮೊದಲು ಕ್ಯೂಬಾ ವಿರುದ್ಧ ಮಾಡಿದ್ದ 'ಹಂದಿ ಕೊಲ್ಲಿ ಕಾರ್ಯಾಚರಣೆ' ಗಬ್ಬೆದ್ದು ಹೋಗಿ, ಅಮೇರಿಕಾದ ಮಾನ ಹರಾಜಾಗಿ, ಕೆನಡಿ ವಿಶ್ವದ ಕ್ಷಮೆ ಕೇಳಿದ್ದರು. ಅದಕ್ಕಾಗಿ ಸಿಐಎ ಬೇಹುಗಾರಿಕೆ ಸಂಸ್ಥೆಯ ದೊಡ್ಡ ದೊಡ್ಡ ತಲೆಗಳನ್ನು ಮನೆಗೆ ಕಳಿಸಿದ್ದರು. ಅದು ಮುಗಿಯಿತು ಅನ್ನುವವರೆಗೆ ರಶಿಯಾದ ತಲೆತಿರುಕ ಕ್ರುಸ್ಚೇವ್ ಪರಮಾಣು ಕ್ಷಿಪಣಿ ತಂದು ಕ್ಯೂಬಾದಲ್ಲಿ ಇಟ್ಟು ಬಿಟ್ಟು. ಮೂರನೇ ಮಹಾಯುದ್ಧ ಶುರುವಾಗಿ, ಎರಡೂ ಕಡೆಯವರು ತಮ್ಮ ಕಡೆ ಇದ್ದೆಲ್ಲ ಅಣು ಶಸ್ತ್ರ ಉಪಯೋಗಿಸಿ, ಇಡೀ ಪ್ರಪಂಚವನ್ನೇ ನಾಮಾನೇಷ ಮಾಡಿಬಿಡುತ್ತಾರೇನೋ ಅಂತ ಎಲ್ಲರೂ ಘಾಬರಿಯಾದಾಗ, ಕೆನಡಿ ತಲೆ ಉಪಯೋಗಿಸಿ, ರಶಿಯಾದ ಜೊತೆ ಒಳ ಒಪ್ಪಂದ ಅಂತ ಮಾಡಿಕೊಂಡು, ರಶಿಯಾ ಕ್ಯೂಬಾದಿಂದ ಅಣು ಶಸ್ತ್ರ ತೆಗೆಯುವಂತೆ ಮಾಡಿ ದೊಡ್ಡ ಉಪಕಾರ ಮಾಡಿದ್ದರು. ಆದರೆ ಕ್ಯೂಬಾ, ರಶಿಯಾ ಎಲ್ಲವನ್ನೂ ಚಿಂದಿ ಉಡಾಯಿಸಿ ಬಿಡೋಣ ಅಂತ ತುಂಬ ಜೋರಾಗಿ ಸಲಹೆ ನೀಡುತ್ತಿದ್ದ ಮಿಲಿಟರಿ ತಲೆಗಳಿಗೆ ಕೆನಡಿ ಮೇಲೆ ದೊಡ್ಡ ಅಸಮಾಧಾನ. ಇಂತಹ ಹೆಣ್ಣು ಮನಸ್ಸಿನ ಅಧ್ಯಕ್ಷ ಇದ್ದರೆ ಅಮೇರಿಕಕ್ಕೆ ದೊಡ್ಡ ಅಪಾಯ ಅಂತ ಅವರಾಗಲೇ ಎಲ್ಲರ ತಲೆ ಕೆಡಿಸಲು ಶುರು ಮಾಡಿದ್ದರು. ಒಟ್ಟಿನಲ್ಲಿ ಕೆನಡಿ ಸಾಹೇಬರಿಗೆ ಒಳಗೆ, ಹೊರಗೆ ಎಲ್ಲ ಕಡೆ ತಲೆ ಬಿಸಿ.

ಪಟ್ಟಭದ್ರ ಹಿತಾಸಕ್ತಿಗಳಾದ ಅಮೇರಿಕಾದ ಮಾಫಿಯಾ, military industrial complex, ಸಿಐಎ ಸಂಸ್ಥೆಯ rogue elements, ಕೆನಡಿಯ ರಾಜಕೀಯ ವಿರೋಧಿಗಳು, ಎಲ್ಲ ಕೂಡಿ ಕೆನಡಿ ವಿರುದ್ಧ ಸ್ಕೆಚ್ ಹಾಕ ತೊಡಗಿದರು. ಯಾವಾಗ ಕೆನಡಿ ಕ್ಯಾಸ್ಟ್ರೋನ ಹತ್ಯೆ ಮಾಡಲು ಹಿಂದೆ ಮುಂದೆ ನೋಡಿದರೋ, ಯಾವತ್ತು ವಿಯೆಟ್ನಾಂ ಮೇಲೆ ಯುದ್ಧ ಬೇಡ ಅಂದರೋ, ಅವತ್ತೇ ಅವರಿಗೆ ಒಂದು ಮುಹೂರ್ತ ಇಟ್ಟೇ ಬಿಟ್ಟರು. ದೊಡ್ಡದೊಂದು ಷಡ್ಯಂತ್ರ ಶುರುವಾಗೇ ಬಿಟ್ಟಿತು. ೧೯೬೩ ನೆ ಇಸವಿಯ ಆರಂಭದ ದಿನಗಳು.

ಇದರ ಪ್ರತಿಫಲವಾಗಿ ೨೨ ನವೆಂಬರ್ ೧೯೬೩ ರಂದು ಹಾಡೇ ಹಗಲು, ಡಲ್ಲಾಸ್ ನಗರದಲ್ಲಿ ತೆರೆದ ಕಾರಿನಲ್ಲಿ ಹೋಗುತ್ತಿದ್ದ ಕೆನಡಿ ಅವರನ್ನು ದೂರದಿಂದ ಸರಿಯಾಗಿ ಗುರಿಯಿಟ್ಟು, ತಲೆಗೇ ಗುಂಡು ಹಾರಿಸಿ ಹತ್ಯೆ ಮಾಡಲಾಯಿತು. ಅವತ್ತಿನ ಮಟ್ಟಿಗೆ ಅದೊಂದು ಹತ್ಯೆ ಅಂದರೂ ಇವತ್ತಿನ ಮಟ್ಟಿಗೆ ಅದೊಂದು ಕ್ಷಿಪ್ರ ಕ್ರಾಂತಿ (coup d'etat). ಪಟ್ಟಭದ್ರ ಹಿತಾಸಕ್ತಿಗಳ ತಾಳಕ್ಕೆ ಸರಿಯಾಗಿ ಕುಣಿಯಲು ಸಿದ್ಧರಿದ್ದ ಉಪಾಧ್ಯಕ್ಷ ಲಿಂಡನ್ ಜಾನ್ಸನ್ ಅಧ್ಯಕ್ಷರಾಗಿ ರೊಕ್ಕಾ ಮಾಡವರಿಗೆ ಎಲ್ಲ ಅನುಕೂಲ ಮಾಡಿಕೊಟ್ಟರು. ವಿಯೆಟ್ನಾಂ ಮೇಲೆ ಮುರಕೊಂಡು ಬಿತ್ತು ಅಮೇರಿಕಾ. ಒಂದಕ್ಕೆರಡು ರೇಟ್ ಹಾಕಿ ಬಿಸಿನೆಸ್ಸ್ ಮಂದಿ ರೊಕ್ಕಾ ಮಾಡಿಕೊಂಡರು. ಇದಕ್ಕೆ ಒಪ್ಪದಿದ್ದ ಮೃದು ಸ್ವಭಾವದ ಕೆನಡಿ ಶವವಾಗಿ ಮಣ್ಣು ಕಂಡಿದ್ದರು.

ಜಾಕಿ ಕೆನಡಿ ಮೇಡಮ್ಮಿಗೆ ಅಕಾಲಕ್ಕೆ ಬಂತು ವೈಧವ್ಯ. ಮಾಡುವ ಕ್ರಿಯಾಕರ್ಮ ಮುಗಿಸಿ, ಎರಡು ಮಕ್ಕಳನ್ನು ಕಟ್ಟಿಕೊಂಡು ಹೋಗಿ ಬೇರೆ ಕಡೆ ಸೆಟಲ್ ಆದರು ಮೇಡಂ. ಗಂಡನ ಅವಸಾನದ ನಂತರ ತುರ್ತಾಗಿ ಆಗಿ ಬೇರೆ ಸಂಗಾತಿ ಹುಡುಕಿಕೊಂಡು ಹೋಗಲಿಲ್ಲ ಜಾಕಿ. ಒಂದೆರಡು ವರ್ಷ ಅವರನ್ನು ಇವರನ್ನು ಅಲ್ಲಿ ಇಲ್ಲಿ ಭೆಟ್ಟಿಯಾದರೂ boyfriend ಅಂತ ಯಾರನ್ನೂ ಮಾಡಿಕೊಂಡಿರಲಿಲ್ಲ. ಆದರೆ ಅರಿಸ್ಟಾಟಲ್ ಓನಾಸಿಸ್ ಮಾತ್ರ ಯಾವಾಗಲೂ ಸಂಪರ್ಕದಲ್ಲಿ ಇದ್ದ. ಇಬ್ಬರ ನಡುವಿನ ಸರಸದ ಬೆಂಕಿ ಆರದಂತೆ ನೋಡಿಕೊಂಡಿದ್ದ!

ಬಾಬ್ಬಿ ಕೆನಡಿ (ರಾಬರ್ಟ್ ಕೆನಡಿ) - ಜಾನ್ ಕೆನಡಿಯವರ ತಮ್ಮ. ಅವರ ಸರ್ಕಾರದಲ್ಲಿ ಅಟಾರ್ನಿ ಜನರಲ್ ಅಂತ ಇದ್ದವನು. ಅಣ್ಣನ ಹತ್ಯೆಯಿಂದ ತುಂಬ ನೊಂದುಕೊಂಡ. ತುಂಬ guilty ಫೀಲ್ ಮಾಡಿಕೊಂಡ. ಯಾಕಂದ್ರೆ ಅವನೇ ಎಲ್ಲ ದೋ ನಂಬರ್ ದಂಧೆಯವರ ಮೇಲೆ ಮುರಕೊಂಡು ಬಿದ್ದು ಮಾಫಿಯಾದ ಕೋಪಕ್ಕೆ ಗುರಿಯಾಗಿದ್ದ. ಮಾಫಿಯಾ ದೊರೆಗಳೆಲ್ಲ ಒಂದು ಗೂಡಿ  ಈ ಬಾಬ್ಬಿ ಕೆನಡಿಯನ್ನೇ ಕೊಂದು ಬಿಡುವ ಪ್ಲಾನ್ ಮಾಡಿದ್ದರು.

ಆದರೆ ಮಾಫಿಯಾ ಬಾಸ್ ಕಾರ್ಲೋಸ್ ಮಾರ್ಸೆಲ್ಲೋ ಒಂದು ಮಾತು ತಣ್ಣಗೆ ಹೇಳಿದ್ದ: ನಾಯಿ ಬಾಲ ಕತ್ತರಿಸುವದರಿಂದ ಏನೂ ಉಪಯೋಗವಿಲ್ಲ. ಬಾಲ ಕಳೆದುಕೊಂಡ ನಾಯಿ ಸಿಟ್ಟಿಗೆದ್ದು ಕಚ್ಚಿ ಬಿಟ್ಟೀತು. ನಾಯಿ ಕತ್ತು ಕತ್ತರಿಸಿ ಒಗೆದು ಬಿಡಿ. ಬಾಲ ಆಡೋದು ತಾನಾಗೆ ನಿಲ್ಲುತ್ತದೆ. ಮತ್ತೆ ಎಂದೂ ಕಚ್ಚುವದಿಲ್ಲ. ಮಾತಿನ ಅರ್ಥ ಇಷ್ಟೇ - ಬಾಬ್ಬಿ ಕೆನಡಿ ಕೊಂದರೆ ಅಣ್ಣ ಅಧ್ಯಕ್ಷ ಜಾನ್ ಕೆನಡಿ ಮುರಕೊಂಡು ಬಿದ್ದು ನಮ್ಮನ್ನು ನಿರ್ನಾಮ ಮಾಡುತ್ತಾನೆ. ಅದರ ಬದಲಿ ಅಧ್ಯಕ್ಷರನ್ನೇ ಕೊಂದು ಬಿಟ್ಟರೆ, ಪವರ್ ಕಳೆದುಕೊಂಡ ಅಟಾರ್ನಿ ಜನರಲ್ ಹಲ್ಲಿಲ್ಲದ ಹಾವಂತೆ. ಮಾಸ್ಟರ್ ಪ್ಲಾನ್ ಅಂದ್ರೆ ಅದು. ಇದು ಬಾಬ್ಬಿ ಕೆನಡಿಗೂ ಗೊತ್ತಿತ್ತು. ಹಾಗಾಗಿ ಅಣ್ಣನ ಸಾವಿಗೆ ತನ್ನನ್ನೇ ಜಿಮ್ಮೆದಾರನನ್ನಾಗಿ ಮಾಡಿಕೊಂಡು ಸಂಕಟ ಪಟ್ಟುಕೊಂಡ. ಹಾಗಾಗಿ ಅತ್ತಿಗೆ ಜಾಕಿ, ಅಣ್ಣನ ಮಕ್ಕಳ ಬಗ್ಗೆ ವಿಶೇಷ ಒಲವು, ಕಾಳಜಿ ಬೆಳೆಸಿಕೊಂಡ.

ಅತ್ತ ಕಡೆ ಪತಿ ಜಾನ್ ಕೆನಡಿ ಮೇಲೆ ಹೋಗಿ ಸ್ವಲ್ಪ ವರ್ಷವಾದ ನಂತರ ಜಾಕಿ ಕೆನಡಿ ಸೀರಿಯಸ್ಸಾಗಿ ಶಿಪ್ಪಿಂಗ್ ಟೈಕೂನ್ ಓನಾಸಿಸ್ ಜೊತೆ ಡೇಟಿಂಗ್ ಶುರು ಮಾಡಿಕೊಂಡರು. ಜೊತೆ ಜೊತೆಯಾಗಿ ಹಲವು ಕಡೆ ಕಂಡು ಬಂದರು. ಅವರಿಬ್ಬರ ಸಂಬಂಧ ಕೇವಲ ದೋಸ್ತಿ ಮೀರಿ ಮುಂದು ಹೋಗಿದೆ ಅಂತ ಎಲ್ಲರಿಗೆ ಅನ್ನಿಸತೊಡಗಿತ್ತು. ಆಗ ಸ್ವಲ್ಪ ಇರಿಸು ಮುರಿಸಾಗಿದ್ದು ಮೈದುನ ರಾಬರ್ಟ್ ಕೆನಡಿಗೆ.

ಏಕೆ?

ರಾಬರ್ಟ್ ಕೆನಡಿಗೆ ತನ್ನತ್ತಿಗೆ ಜಾಕಿ ಟೈಕೂನ್ ಓನಾಸಿಸ್ ಜೊತೆ ಸುತ್ತುವದು ಸ್ವಲ್ಪವೂ ಇಷ್ಟವಿರಲಿಲ್ಲ. ಓನಾಸಿಸ್ ಜೊತೆ ಅಮೇರಿಕಾದ  ಅಟಾರ್ನಿ ಜನರಲ್ ಆಗಿ, ಕೇಸ್ ಹಾಕಿ ಶುರುವಾಗಿದ್ದ ದ್ವೇಷ ಪಾರ್ಟಿಯೊಂದರಲ್ಲಿ ಕೈ ಕೈ ಮೀಲಾಯಿಸುವ ಹಂತಕ್ಕೆ ಹೋಗಿ, ಓನಾಸಿಸ್ ಮತ್ತು ಕೆನಡಿ ಬದ್ಧ ದ್ವೇಷಿಗಳಾಗಿದ್ದರು. ಅಣ್ಣ ಜಾನ್ ಕೆನಡಿ ಹೋದ ಮೇಲೂ ಸ್ವಲ್ಪ ದಿವಸ ರಾಬರ್ಟ್ ಕೆನಡಿಯೇ ಅಟಾರ್ನಿ ಜನರಲ್ ಆಗಿ ಮುಂದುವರಿದಿದ್ದರೂ ಹಾವು ಕಿತ್ತ ಹಲ್ಲಿನಂತಾಗಿ ಏನೂ ಮಾಡಲು ಸಾಧ್ಯವಾಗಿರಲಿಲ್ಲ. ಅದೊಂದು ದೊಡ್ಡ ಹತಾಶೆಯಾಗಿತ್ತು. ಹೀಗಿರುವಾಗ ಅತ್ತಿಗೆ ಜಾಕಿ ಕೆನಡಿ ಓನಾಸಿಸ್ ಜೊತೆ ಸೀರಿಯಸ್ಸಾಗಿ ಸಂಬಂಧ ಶುರು ಮಾಡಿದಾಗ ರಾಬರ್ಟ್ ಕೆನಡಿ ಉರಿದು ಹೋದ.

ಜಾಕಿ ಕೆನಡಿ ಅವಳ ಓನಾಸಿಸ್ ಜೊತೆಯಿರುವ ಸಂಬಂಧವನ್ನು ನಗಣ್ಯ ಮಾಡುತ್ತ, ಅಂಥಾದ್ದೇನೂ ಇಲ್ಲ ಮಾರಾಯಾ! ಅನ್ನುತ್ತ ದಿನದೂಡಿದಳು. ರಾಬರ್ಟ್ ಕೆನಡಿ ಕೂಡ ಅಟಾರ್ನಿ ಜನರಲ್ ನೌಕರಿಗೆ ಟಾಟಾ ಹೇಳಿ, ತಾನೆ ಖುದ್ದು ಸೆನೆಟರ್ ಆಗಿ, ತನ್ನ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಗಮನ ಹರಿಸಿದ. ಅಣ್ಣನ ಹತ್ಯೆ ಕಾಡುತ್ತಲೇ ಇತ್ತು. ಸರಿಯಾಗಿ ತನಿಖೆ ಮಾಡೋಣ ಅಂದರೆ ಬಲವಿರಲಿಲ್ಲ, ಬೆಂಬಲವಿರಲಿಲ್ಲ. ಇದೆಲ್ಲದರ ಮಧ್ಯೆ ವಿಧವೆ ಅತ್ತಿಗೆ, ಆಕೆಯ ಇಬ್ಬರು ಮಕ್ಕಳ ಬಗ್ಗೆ ಗಮನ ಕೊಡುತ್ತಲೇ ಇದ್ದ.

ಸ್ವಲ್ಪ ವರ್ಷ ಮುಂದಕ್ಕೆ ಬರೋಣ. ೧೯೬೮. ಅಧ್ಯಕ್ಷೀಯ ಚುನಾವಣೆ ವರ್ಷ. ಆಗಿನ ಅಧ್ಯಕ್ಷ ಲಿಂಡನ್ ಜಾನ್ಸನ್ ಮತ್ತೆ ಸ್ಪರ್ಧಿಸುವದಿಲ್ಲ ಅಂದು ಬಿಟ್ಟಿದ್ದರು. ಡೆಮಾಕ್ರಟ್ ಪಕ್ಷ ಹೊಸ ಅಭ್ಯರ್ಥಿ ಹುಡುಕುತ್ತಿತ್ತು. ರಾಬರ್ಟ್ ಕೆನಡಿ ಅಧ್ಯಕ್ಷರಾಗುವ ಇಂಗಿತ ವ್ಯಕ್ತಪಡಿಸಿರಲಿಲ್ಲ.

ದೊಡ್ಡ ಮಟ್ಟದ ರಾಜಕೀಯ ಚದುರಂಗದಾಟದಲ್ಲಿ ಅವು ಏನೇನು ದಾಳಗಳು ಉರುಳಿದವೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ರಾಬರ್ಟ್ ಕೆನಡಿ ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷ ಟಿಕೆಟ್ಟಿಗೆ ತಾವೂ ಆಕಾಂಕ್ಷಿ ಅಂತ ಘೋಷಿಸಿ ಬಿಟ್ಟರು. ಅಂದಿನ ರಾಜಕೀಯದಲ್ಲಿ ದೊಡ್ಡ ಸಂಚಲನ. ರಿಪಬ್ಲಿಕನ್ ಪಕ್ಷದಿಂದ ನಿಲ್ಲಲು ತಯಾರಾಗಿದ್ದ ರಿಚರ್ಡ್ ನಿಕ್ಸನ್, ಹಾಂ! ಅಂತ ಉದ್ಗರಿಸಿದರು. ಎಂಟು ವರ್ಷದ ಹಿಂದೆ ಜಾನ್ ಕೆನಡಿ ಅದೇ ರಿಚರ್ಡ್ ನಿಕ್ಸನ್ ಅವರನ್ನುಅತಿ ಕಡಿಮೆ ಮತದಿಂದ ಸೋಲಿಸಿದ್ದರು. ಅದು ನ್ಯಾಯವಾದ ಸೋಲು ಅಂತ ನಿಕ್ಸನ್ ನಂಬಿರಲೇ ಇಲ್ಲ. ಮಾಫಿಯಾ ಬಿಟ್ಟು, ಚಿಕ್ಯಾಗೋನಲ್ಲಿ ನಕಲಿ ಮತದಾನ ಮಾಡಿಸಿ, ಕೆನಡಿ ಗೆದ್ದಿದ್ದರು ಅಂತ ಅವರ ಆಪಾದನೆ ಆಗಿತ್ತು. ಚಿಕ್ಯಾಗೋ ಮಾಫಿಯಾ ಕೆನಡಿ ಪರವಾಗಿ ಕೆಲಸ ಮಾಡಿದ್ದು ಸುಳ್ಳಂತೂ ಆಗಿರಲಿಲ್ಲ. ಈಗ ಇನ್ನೊಬ್ಬ ಕೆನಡಿ ಎದುರಾಳಿ ಆಗುತ್ತೇನೆ ಅನ್ನುತ್ತಿದ್ದಾನೆ. ಇನ್ನೊಬ್ಬ ಕೆನಡಿ ಎದುರು ಮತ್ತೊಮ್ಮೆ ಸೋಲು ಕಾದಿದೆಯೋ ಏನೋ ಅಂತ ನಿಕ್ಸನ್ ಚಿಂತಾಕ್ರಾಂತರಾದರು. ಸ್ವಲ್ಪ ದಿನಗಳಲ್ಲೇ ಆ ಚಿಂತೆ ಶಾಶ್ವತವಾಗಿ ಮರೆಯಾಗಲಿದೆ ಅಂತ ಅವರಿಗೆ ಗೊತ್ತಿತ್ತಾ?

ತಮ್ಮ ಉಮೇದುವಾರಿಕೆ ಘೋಷಣೆ ಮಾಡಿದ್ದೇ ಮಾಡಿದ್ದು ರಾಬರ್ಟ್ ಕೆನಡಿ ಸಮರೋಪಾದಿಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡರು. ಡೆಮಾಕ್ರಾಟಿಕ್ ಪಕ್ಷದ ಆಂತರಿಕ ಚುನಾವಣೆಗಳಲ್ಲಿ ಗೆಲ್ಲುತ್ತ ಹೊರಟರು. ಆಗ ವಿಯೆಟ್ನಾಂ ಯುದ್ಧ ತುಂಬ ರಭಸದಿಂದ ನೆಡೆಯುತ್ತಿತ್ತು. ದಿನಕ್ಕೆ ನೂರಾರು ಜನ ಅಮೇರಿಕನ್ ಸೈನಿಕರ ಶವಪೆಟ್ಟಿಗೆ ಹೊತ್ತ ವಿಮಾನಗಳು ಸೈಗಾನ್ ನಿಂದ ಹಾರುತ್ತಿದ್ದವು. ವಿಯೆಟ್ನಾಂ ಯುದ್ಧಕ್ಕೆ ಒಂದು ಅಂತ್ಯ ಬೇಗನೆ ಕಾಣಿಸುತ್ತೇನೆ, ಮಾರ್ಟಿನ್ ಲೂಥರ್ ಕಿಂಗ್ ಅವರ ಸಾವು ವ್ಯರ್ಥವಾಗಲು ಬಿಡುವದಿಲ್ಲ, ಶಾಂತಿ, ಅಂತೆಲ್ಲ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಿದ್ದ ಕೆನಡಿ ವರ್ಗಕ್ಕೆ ಅಭೂತಪೂರ್ವ ಬೆಂಬಲ ಸಿಗುತ್ತಿತ್ತು. ಪಟ್ಟಭದ್ರ ಹಿತಾಸಕ್ತಿಗಳ ಪಕ್ಕೆಯಲ್ಲಿ ಮತ್ತೆ ಮುಳ್ಳಾಡಿದಂತಾಯಿತಾ? ಎಲ್ಲಿ ಈ ಕೆನಡಿ ಬಂದು ತಮ್ಮ ರೊಕ್ಕಾ ಮಾಡುವ ಮಶೀನನನ್ನು ಹದೆಗೆಡಿಸಿಬಿಡುತ್ತಾರೋ ಅಂತ ಚಿಂತೆಯಾಯಿತಾ? ಗೆದ್ದ ನಂತರ ಎಲ್ಲಿ ತಮ್ಮ ಅಣ್ಣ ಜಾನ್ ಕೆನಡಿಯ ನಿಗೂಢ ಹತ್ಯೆಯ ಪುನರ್ತನಿಖೆ ಮಾಡಿಸಿಬಿಡುತ್ತಾರೋ ಅಂತ tension ಆಯಿತಾ?

ಜೂನ್ ೬, ೧೯೬೮, ಅಮೇರಿಕಾ ಮತ್ತೊಮ್ಮೆ ಫುಲ್ ಥಂಡಾ ಹೊಡೆದು, ಹಾಂ! ಅಂತ ಇಡೀ ದೇಶವೇ ಬಾಯಿಬಿಟ್ಟಿತು!

ರಾಬರ್ಟ್ ಕೆನಡಿ ಹತ್ಯೆಯಾಗಿದ್ದರು!

ಲಾಸ್ ಏಂಜೆಲ್ಸ್ ನಗರದ ಹೋಟೆಲ್ ಒಂದರಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತಾಡಿ ತಮ್ಮ ವಾಹನದ ಕಡೆ ತಮ್ಮ ಹಿಂಬಾಲಿಕರ ಜೊತೆ, ಹೋಟೆಲ್ಲಿನ ಅಡುಗೆ ಮನೆ ಮೂಲಕ ಒಳದಾರಿಯಲ್ಲಿ ಕೆನಡಿ ಬರುತ್ತಿದ್ದರು. ಖುಷಿಯಲ್ಲಿದ್ದರು. ಕ್ಯಾಲಿಫೋರ್ನಿಯಾ ಅಂತರಿಕ ಚುನಾವಣೆ ಗೆದ್ದಿದ್ದರು.

ಆಗ ಸಂಭವಿಸಿತು ಅವಗಢ!

ಒಬ್ಬ ಬಂದವನೇ ಢಂ! ಢಂ! ಅಂತ ಗುಂಡು ಹಾಕೇ ಬಿಟ್ಟ. ಪೂರ್ತಿ ಗೊಂದಲ. ಇಕ್ಕಟ್ಟು ಒಳದಾರಿ. ಜನದಟ್ಟಣೆ. ಗದ್ದಲ. ಗೌಜಿ. ಅದರಲ್ಲಿ ಗುಂಡು ಹಾರಾಟ. ಕೆನಡಿ ತೀವ್ರವಾಗಿ ಗಾಯಗೊಂಡರು. ಸುಮಾರು ಹೊತ್ತಿನ ನಂತರ ಅವರು ಆಸ್ಪತ್ರೆಯಲ್ಲಿ ನಿಧನರಾದರು. (ಹತ್ಯೆಯ ವೀಡಿಯೊ ಕೊನೆಗೆ ಇದೆ. ನೋಡಿ)

ಗುಂಡು ಹಾರಿಸಿದ ಎಂದು ನಂಬಲಾದ ವ್ಯಕ್ತಿಯನ್ನು ಎಲ್ಲರೂ ಕೂಡಿ ಅಲ್ಲೇ ಬಂಧಿಸಿದ್ದರು. ಆದರೆ ಅವನೇಕೆ ಅಷ್ಟು ನಿರ್ಭಾವುಕನಾಗಿ ಏನೂ ಗೊತ್ತಿಲ್ಲದವನಂತೆ, ಏನೂ ನೆನಪಿಲ್ಲದವನಂತೆ ನಿಂತಿದ್ದ!?

ಈ ಕಡೆ ಕೆನಡಿಗೆ ಗುಂಡು ಬೀಳುತ್ತಿದ್ದಂತೆ ಚುಕ್ಕೆ (polka  dots) ಲಂಗ ಹಾಕಿದ್ದ ಹುಡುಗಿ ಒಬ್ಬಾಕೆ, we shot him! we got him! ಅನ್ನುತ್ತ ಹೋಟೆಲ್ಲಿನಿಂದ ಓಡಿದಳು. ಅವಳೂ ಹತ್ಯೆಯಲ್ಲಿ ಭಾಗಿಯಾಗಿದ್ದಳೆ?

ಅಲ್ಲಿಯ ತನಕ ಓನಾಸಿಸ್ ಜೊತೆ ಏನೂ ಇಲ್ಲ, ಏನಿಲ್ಲ, ಅನ್ನುತ್ತಿದ್ದ ಜಾಕಿ ಕೆನಡಿ, ರಾಬರ್ಟ್ ಕೆನಡಿ ಜೂನ್ ೧೯೬೮ ರಲ್ಲಿ ಹತ್ಯೆಯಾಗಿದ್ದೆ ಆಗಿದ್ದು ಅಕ್ಟೋಬರ್ ನಲ್ಲಿ ಜಾಕಿ ಕೆನಡಿ ಓನಾಸಿಸ್ ನನ್ನು ಮದುವೆ ಆಗಿ ಬಿಟ್ಟಳು! ಜೂನ್ ನಲ್ಲಿ ಹತ್ಯೆ, ಅಕ್ಟೋಬರ್ ನಲ್ಲಿ ಮದುವೆ!

ಯಾಕೆ!?

ಕೇಳಿದರೆ, ಮೊದಲು ನನ್ನ ಗಂಡ ಜಾನ್ ಕೆನಡಿಯನ್ನು ಕೊಂದರು, ಈಗ ನೋಡಿ ನನ್ನ ಮೈದುನ ರಾಬರ್ಟ್ ಕೆನಡಿಯನ್ನು ಕೊಂದರು, ನನಗೆ ತುಂಬಾ ಭಯ, ಚಿಕ್ಕ ಮಕ್ಕಳು ಬೇರೆ, ಒಂದು ಗಂಡಿನ ಆಶ್ರಯ ಇದ್ದರೆ ಹೇಗೋ ಬದುಕಿಕೊಂಡೇವು, ಪ್ಲೀಸ್ ಮತ್ತೇನೂ ಕೇಳಬೇಡಿ, ಅಂತ ಹೇಳಿದ ಜಾಕಿ ಕೆನಡಿ ಹೊಸ ಗಂಡ, ಹಳೆ ಗೆಳೆಯನ ಮನೆ ಕಡೆ ಹೋಗಿ ಬಿಟ್ಟಳು.

ರಾಬರ್ಟ್ ಕೆನಡಿ ಸತ್ತು ಹೋಗಿ, ಅನಾಥ ಭಾವ ಬಂದಿದ್ದಕ್ಕೆ ಅಷ್ಟು ಬೇಗನೆ ಮದುವೆಯಾದಳೋ? ಅಥವಾ ರಾಬರ್ಟ್ ಕೆನಡಿ ಇರುವ ತನಕ ಅರಿಸ್ಟಾಟಲ್ ಓನಾಸಿಸ್ ನನ್ನು ಮದುವೆಯಾಗಲು ಸಾಧ್ಯವಿಲ್ಲ ಅಂತ ರಾಬರ್ಟ್ ಕೆನಡಿಯನ್ನು ಸಂಚು ಮಾಡಿ ತೆಗೆಸಿಬಿಡಲಾಯಿತಾ? ಯಾರು ಮಾಡಿದ್ದರು? ಆಕೆಯೋ ಅಥವಾ ಓನಾಸಿಸ್ಸನೋ? ಅಥವಾ ಬೇರೆ ಯಾರೋ ರಾಬರ್ಟ್ ಕೆನಡಿಯನ್ನು ತಮ್ಮದೇ ಕಾರಣಗಳಿಗೆ ಉಡಾಯಿಸಿಬಿಟ್ಟರೋ? ಒಂದು false trail ಮಾಡಲು ಓನಾಸಿಸ್ಸನ್ನು ಬಳಸಿಕೊಂಡರೋ? ಅಥವಾ ಎಲ್ಲ ಕೇವಲ ಕಾಕತಾಳಿಯವೋ?

ಎಲ್ಲ ನಿಗೂಢ!!!! ಗೋಜಲು ಗೋಜಲು!!!!!!!!!!!!!!

ಹೀಗೆ ಹಲವಾರು ಪ್ರಶ್ನೆಗಳು ಏಳುತ್ತವೆ. ಜಾನ್ ಕೆನಡಿ ಹತ್ಯೆಯ ನಿಗೂಢತೆಯೇ ಒಂದು ಮಟ್ಟದ್ದಾದರೆ ರಾಬರ್ಟ್ ಕೆನಡಿ ಹತ್ಯೆಯ ಹಿಂದಿರುವ ನಿಗೂಢತೆ, ಕಾರಸ್ತಾನ ಅರಿಯುತ್ತ ಹೋದಂತೆ ತಲೆ ಗಿವ್ವೆನ್ನುತ್ತದೆ.

ರಾಬರ್ಟ್ ಕೆನಡಿ ಮೇಲೆ ಗುಂಡು ಹಾರಿಸಿದ ಅಂತ ಹೇಳಿ ಒಬ್ಬ ಪ್ಯಾಲೆಸ್ತೇನಿ ನಿರಾಶ್ರಿತ ಜೇಲಿಗೆ ಹೋದ. ಅವನನ್ನು ಸಂಮೋಹಿನಿಗೆ ಒಳಪಡಿಸಿ ಅವನ ವ್ಯಕ್ತಿತ್ವನ್ನೇ ಬದಲಾಯಿಸಿಬಿಡಲಾಗಿತ್ತೆ? ಹತ್ಯೆಯ ನಂತರ ಅವನಿಗೆ ಏನೂ ನೆನಪಿರದ ಹಾಗೆ ಬ್ರೈನ್ ವಾಶ್ ಮಾಡಿ ಬಿಟ್ಟಿದ್ದರೆ? ಚುಕ್ಕಿ ಲಂಗದ ಹುಡುಗಿ ಹಂತಕನಿಗೆ ಸಂಜ್ಞೆ ಮಾಡಲು ಬಂದಿದ್ದಳೋ ಹೇಗೆ? ಮತ್ತೆ ಸಿಐಎ rogue elements ಈ ಹತ್ಯೆಯಲ್ಲಿಯೂ ಭಾಗಿಯಾಗಿದ್ದರಾ?

ಇವೆಕ್ಕೆಲ್ಲ ಉತ್ತರ ಮತ್ತು ರಾಬರ್ಟ್ ಕೆನಡಿ ಹತ್ಯೆಯ ಅನೇಕ ರೋಚಕ ವಿವರಗಳು ಮತ್ತು ಜಾಕಿ ಕೆನಡಿ, ಓನಾಸಿಸ್ ಹೊಸ ಸಂಸಾರದ ಸರಸ ವಿರಸ ಎಲ್ಲ ಮುಂದಿನ ಭಾಗದಲ್ಲಿ.

(ಮುಂದುವರಿಯಲಿದೆ) (ಭಾಗ - ೪ ಇಲ್ಲಿದೆ)

ಓನಾಸಿಸ್ & ಜಾಕಿ ಕೆನಡಿ ಮದುವೆ ನಂತರ
ರಾಬರ್ಟ್ ಕೆನಡಿ ಹತ್ಯೆಯ ವೀಡಿಯೊ

Sunday, April 20, 2014

ಶ್ರೀಮತಿ ಕೆನಡಿ ಶ್ರೀಮತಿ ಓನಾಸಿಸ್ ಆಗುವ ತನಕ.... (ಭಾಗ - ೨)

(ಹಿಂದಿನ ಭಾಗ -೧ ಇಲ್ಲಿದೆ)

ಜಾಕಿ ಕೆನಡಿ, ಅಮೇರಿಕಾದ ಪ್ರಥಮ ಮಹಿಳೆ, ಅಧ್ಯಕ್ಷರ ಪತ್ನಿ, ಮನೆ ಬಿಟ್ಟು ಓಡಿ ಹೋಗಿ, ಅಲ್ಲಿ ದೂರದ ಗ್ರೀಸ್ ದೇಶದ ಶ್ರೀಮಂತ ಅರಿಸ್ಟಾಟಲ್  ಓನಾಸಿಸ್ ನ ಹಡಗಿನಲ್ಲಿ ಝೇಂಡಾ ಹೊಡೆದಿದ್ದಾರೆ ಅನ್ನೋ ಸುದ್ದಿ ಅಮೇರಿಕಾದಲ್ಲಿ ಅಂತೂ ಹರಡಿತು. ಈಗಿನ ಹಾಗೆ ಮಿಂಚಿನಂತೆ ಸುದ್ದಿ ಹರಡುವ ಕಾಲ ಅದಲ್ಲ. ರಾಜಧಾನಿ ವಾಷಿಂಗ್ಟನ್ ನಲ್ಲಿ ಸುಮಾರು ಸುದ್ದಿ ಆಯಿತು. ಅಯ್ಯೋ ಬಿಡ್ರೀ! ಕೆನಡಿ ಸಾಹೇಬ್ರೇನು ಶ್ರೀರಾಮಚಂದ್ರನೆ? ಅವರ ಕಚ್ಚೆಹರಕುತನಕ್ಕೆ ಬೇಸರಗೊಂಡು ಅಮ್ಮಾವರು ಹೋಗಿಬಿಟ್ಟಿದ್ದಾರೆ, ಅಂತ ಜನ ಮಾತಾಡಿಕೊಂಡು ಸುಮ್ಮನಾಗುತ್ತಿದ್ದರೋ ಏನೋ. ಆದರೆ.......

ಆದರೆ ಯೂರೋಪಿನ ಪಾಪರಾಜಿ ಫೋಟೋಗ್ರಾಫರ್ ಮುಂಡೆ ಮಕ್ಕಳು ಬಿಡಬೇಕಲ್ಲ? ಓನಾಸಿಸ್ ನ ಹಡಗಿನ ಹತ್ತಿರವೇ ದೋಣಿಗಳಲ್ಲಿ ಹೋಗಿ, ಮೇಲಿಂದ ಹೆಲಿಕಾಪ್ಟರ್ ನಲ್ಲಿ ಹೋಗಿ, ಹಡಗಿನ ಡೆಕ್ ಮೇಲೆ, ಕೇವಲ ಈಜುಡುಗೆ ಧರಿಸಿ, ಎಲ್ಲರಿಗೆ ಸಕಲವನ್ನೂ ಧರ್ಮದರ್ಶನ ಮಾಡಿಸುತ್ತ ಮಲಗಿದ್ದ ಜಾಕಿ ಕೆನಡಿ ಮೇಡಂ ಅವರ ಹಲವಾರು ಚಿತ್ರಗಳನ್ನು ತೆಗೆದುಕೊಂಡು ಬಂದು ಪ್ರಪಂಚದ ಎಲ್ಲ ಪತ್ರಿಕೆಗಳಿಗೆ ಮಾರಿ ಬಿಟ್ಟರು. 'ಶಿಪ್ಪಿಂಗ್ ಟೈಕೂನ್ ಜೊತೆ ಅಮೇರಿಕಾದ ಪ್ರಥಮ ಮಹಿಳೆಯ ಜಮ್ಮ ಚಕ್ಕ' ಅನ್ನುವ ಅರ್ಥದಲ್ಲಿ ಪತ್ರಿಕೆಗಳಲ್ಲಿ ಫೋಟೋ, ವರದಿ ಎಲ್ಲ ಬಂದು ಬಿಟ್ಟಿತು.

ಕೆನಡಿ ಸರ್ಕಾರಕ್ಕೆ ದೊಡ್ಡ ಮುಜುಗರ. ಕೆನಡಿ ಕುಟುಂಬಕ್ಕೆ ಇನ್ನೂ ದೊಡ್ಡ ಮುಜುಗರ. ರಾಜಕೀಯವಾಗಿ ತುಂಬ ಮಹತ್ವಾಕಾಂಕ್ಷಿ ಆ ಕುಟುಂಬದ ಹಿರಿಯ ಜೋಸೆಫ್ ಕೆನಡಿ. ಹಿರಿ ಸೊಸೆ ಹೀಗೆ ಮಾಡಿದ್ದು ಅವರಿಗೆ ದೊಡ್ಡ ಇರುಸು ಮುರುಸು. ಮನೆತನದ ಮರ್ಯಾದೆಕಿಂತ ಕುಟುಂಬದ ರಾಜಕೀಯ ಭವಿಷ್ಯದ ಮೇಲೆ ಇದು ಹೇಗೆ ಪರಿಣಾಮ ಬೀರಬಹದು ಅಂತ ತಲೆ ಕೆಡೆಸಿಕೊಂಡು ಕೂತರು ಜೋ ಕೆನಡಿ.

ಏ! ಮೇಡಂ ಸುಮ್ಮನೆ ವಿಹಾರಕ್ಕೆ ಹೋಗಿದ್ದಾರೆ. ಅಧ್ಯಕ್ಷರು ತುಂಬಾ ಬಿಜಿ ಇದ್ದರಿಂದ ಮೇಡಂ ಅವರಿಗೆ ಒಬ್ಬರೇ ಹೋಗಿ ಬಾ ಅಂತ ಕಳಿಸಿದ್ದಾರೆ, ಅಂತ ಶ್ವೇತ ಭವನದ ವಕ್ತಾರರು ಭೋಂಗು ಬಿಟ್ಟರು. ಕೆಲ ಪತ್ರಿಕೆಗಳು ಕೊಟ್ಟ ಪ್ರಸಾದ ತೆಗೆದುಕೊಂಡು ತಿಪ್ಪೆ ಸಾರಿಸಿದರೆ, ಕೆಲವು ಕೆನಡಿ ವಿವಾಹ ಅವಸಾನಕ್ಕೆ ಬಂದು ನಿಂತಿದೆ ಅಂತ ಬರೆದು ಬಿಟ್ಟು, ಅಧ್ಯಕ್ಷರ ರೇಟಿಂಗ್ ಕಮ್ಮಿ ಮಾಡಿಬಿಟ್ಟವು. ಜೋ ಕೆನಡಿ ಅವರಿಗೆ ಮತ್ತೂ ದೊಡ್ಡ ಚಿಂತೆ.

ಅಧ್ಯಕ್ಷ ಜಾನ್ ಕೆನಡಿ ಅವರ ಹತ್ತಿರ ಮಾತಾಡೋಣ ಅಂದ್ರೆ ಅವರು ಕ್ಯೂಬಾ, ರಶಿಯನ್ ಕ್ಷಿಪಣಿ ಸಂಘರ್ಷ, ಫೀಡೆಲ್ ಕ್ಯಾಸ್ಟ್ರೋ, ಅದು ಇದು ಅಂತ ತುಂಬ ತಲೆಬಿಸಿಯಲ್ಲಿ ಇದ್ದರು. ಮತ್ತೆ ಅಧ್ಯಕ್ಷರು ಹಾಗೆಲ್ಲ ಹೋಗಿ ಹೆಂಡತಿ ಕರಕೊಂಡು ಬರೋದು ಅಂದ್ರೆ ತಮಾಷೆಯಲ್ಲ. ಅವರ ತಮ್ಮ ಬಾಬ್ಬಿ ಕೆನಡಿ ಕಳಿಸೋಣ ಅಂದ್ರೆ ಅವರು ಅದೇ ಸರ್ಕಾರದಲ್ಲಿ ಅಟಾರ್ನಿ ಜನರಲ್. ಮತ್ತೆ ಅರಿಸ್ಟಾಟಲ್ ಓನಾಸಿಸ್ ಎಂಬ ಶಿಪ್ಪಿಂಗ್ ಟೈಕೂನನನ್ನು ತಡವಿಕೊಂಡು ಕೇಸ್ ಹಾಕಿದ್ದರು. ದುಡ್ಡು ಮಾಡುವ ಅಬ್ಬರದಲ್ಲಿ ಓನಾಸಿಸ್ ಅಮೇರಿಕಾದ ಕಾಯಿದೆ ಮುರಿದಿದ್ದ ಅಂತ ನೆಪ. ಪಮೇಲಾ ಚರ್ಚಿಲ್ಲ ಎಂಬ ಮಹಿಳಾಮಣಿ ಓನಾಸಿಸ್ ನ ಕಡುವೈರಿಯ ರಖಾವು ಆಗಿ, ಕೆನಡಿ ಮೇಲೆ ಪ್ರಭಾವ ಬೀರಿ ಕೇಸ್ ಹಾಕಿಸಿದ್ದಳು ಅಂತಲೂ ಸುದ್ದಿ ಇತ್ತು. ಹಾಗಾಗಿ ಬಾಬ್ಬಿ ಕೆನಡಿಯವರನ್ನು ಕಳಿಸಿ ಪ್ರಥಮ ಮಹಿಳೆಯನ್ನು ವಾಪಸ್ ಕರೆದುಕೊಂಡು ಬಾ ಅನ್ನುವ ಹಾಗಿಲ್ಲ. ಹಾಗಿದ್ದರೆ ಯಾರನ್ನು ಕಳಿಸುವವದು? ಅಂತ ಹಿರಿಯ ಜೋಸೆಫ್ ಕೆನಡಿ ತಲೆ ಓಡಿಸಿದರು.

ಉಂಡಾಡಿ ಗುಂಡನ ಹಾಗಿದ್ದ ಚಿಕ್ಕ ಮಗ ಟೆಡ್ ಕೆನಡಿ ಕಂಡ. ಹಾರ್ವರ್ಡ್ ಯೂನಿವರ್ಸಿಟಿಗೆ ಡೊನೇಷನ್ ಕೋಟಾದಲ್ಲಿ ಒಂದು ಸೀಟ್ ಕೊಡಿಸಿ ಅಡ್ಮಿಶನ್ ಮಾಡಿಸಿದ್ದರು. ಈ ಯಬಡೇಶಿ ಟೆಡ್ ಅನ್ನುವ ಚಿಕ್ಕ ಮಗ ಪರೀಕ್ಷೆಯಲ್ಲಿ ಕಾಪಿ ಮಾಡಲು ಹೋಗಿ ಸಿಕ್ಕು ಬಿದ್ದ. ಒಂದು ಸೆಮಿಸ್ಟರ್ ಮನೆಗೆ ಹೋಗಿ ಬಾರಪ್ಪ, ಅಂತ ಹಾರ್ವರ್ಡ್ ವಿವಿ ಮನೆಗೆ ಕಳಿಸಿತ್ತು. ಇವನನ್ನು ಗ್ರೀಸ್ ದೇಶಕ್ಕೆ ಕಳಿಸಿದರೆ ಹೇಗೆ? ಅಂತ ವಿಚಾರ ಬಂತು.

ಏ! ಟೆಡ್! ಗ್ರೀಸ್ ದೇಶಕ್ಕೆ ಹೋಗಿ ನಿಮ್ಮ ಅತ್ತಿಗೆಯನ್ನು ಕರೆದುಕೊಂಡು ಬಾ, ಅಂತ ಅಪ್ಪಣೆ ಮಾಡಿದರು ಜೋ ಕೆನಡಿ.

ಮನೆಯಲ್ಲಿ ಕೂತು ಓತ್ಲಾ ಹೊಡೆಯುವದರಕಿಂತ ಯುರೋಪ್ ಸುತ್ತಿ, ಸಾಧ್ಯವಾದರೆ ಮುನಿಸಿಕೊಂಡು ಹೋಗಿರುವ ಅತ್ತಿಗೆಯನ್ನು ಕರೆದುಕೊಂಡು ಬರೋಣ ಅಂತ ಟೆಡ್ ಕೆನಡಿ ಹೊರಟ.

ಟೆಡ್ ಬರುತ್ತಿರುವ ವಿಚಾರ ತಿಳಿದ ಓನಾಸಿಸ್ ಥ್ರಿಲ್ಲೆದ್ದು ಹೋದ. ಒಂದರ ಮೇಲೊಂದು ಕೆನಡಿ ಮಿಕಗಳು ಬಂದು ಬಲೆಗೆ ಬೀಳುತ್ತಿವೆಯಲ್ಲ ಅಂತ ಒಂದು ತರಹದ ವಿಕೃತ ಖುಷಿ ಅವನಿಗೆ. ತನ್ನ ಮೇಲೆ ಕೇಸ್ ಹಾಕಿದ್ದ ಬಾಬ್ಬಿ ಕೆನಡಿ ಮೇಲೆ ಒಂದು ತರಹದ ಸೇಡು ತೀರಿಸಿಕೊಂಡ ಫೀಲಿಂಗ್.

ಗ್ರೀಸ್ ದೇಶಕ್ಕೆ ಬಂದಿಳಿದ ಟೆಡ್ ಕೆನಡಿಯನ್ನು ಸಹ ಅರಿಸ್ಟಾಟಲ್ ಓನಾಸಿಸ್ ತನ್ನ ಐಶಾರಾಮಿ ಹಡಗಿಗೆ ಕರೆಸಿಕೊಂಡು ಬಿಟ್ಟ. ಅಲ್ಲಿಗೆ ಮುಗೀತು ಕಥೆ! ಅವನ ಇಂದ್ರನ ಅರಮನೆಯಂತೆ ಇದ್ದ ಹಡಗು, ಅಲ್ಲಿದ್ದ ಗುಂಡು, ತುಂಡು, ಮಾಲುಗಳನ್ನು ನೋಡಿ ಟೆಡ್ ತಾನು ಯಾಕೆ ಬಂದಿದ್ದೇನೆ ಅನ್ನುವದನ್ನೇ ಮರೆತ. ಮೇಲಿಂದ ಶಿಪ್ಪಿಂಗ್ ಟೈಕೂನನ ರಾಜೋಪಚಾರ ಬೇರೆ!

ಟೆಡ್ ಕೆನಡಿಯವರೇ, ಹಡಗಿನ ಹಿಂದಿನ ಭಾಗದಲ್ಲಿ ತಮಗೆ ಗುಂಡು, ತುಂಡು ಎಲ್ಲ ವ್ಯವಸ್ಥೆ ಮಾಡಿದ್ದೇವೆ. ತನು, ಮನ ಹಗುರ ಮಾಡಲು ದೇಶ ವಿದೇಶಗಳ ಸುಂದರಿ ಮಾಲುಗಳು ಬಂದು ಹೋಗಿ ಮಾಡುತ್ತಿರುತ್ತವೆ. ಎಲ್ಲ ಎಂಜಾಯ್ ಮಾಡಿ. ಇಷ್ಟು ಬೇಗ ಹೋಗುವ ವಿಚಾರ ಮಾಡಲೇ ಬೇಡಿ, ಅಂದವನೇ ಓನಾಸಿಸ್ ಟೆಡ್ ಕೆನಡಿಗೂ ಅಮೃತಾಂಜನ ಹಚ್ಚಿ ತಲೆ ತಿಕ್ಕೇ ಬಿಟ್ಟ. ಅತ್ತಿಗೆಯನ್ನು ಕರೆದೊಯ್ಯಲು ಬಂದ ಮೈದುನನ್ನು ಕರೆದೊಯ್ಯಲು ಇನ್ನು ಯಾರು ಬರಬೇಕೋ ಅನ್ನುವ ರೀತಿಯಲ್ಲಿ ಟೆಡ್ ಸಿಕ್ಕ ಬಿಟ್ಟಿ ತುಂಡು, ಗುಂಡು, ಸುಂದರಿಯರ ಮೇಲೆ ಹರಕೊಂಡು ಬಿದ್ದು ತಾತ್ಕಾಲಿಕವಾಗಿ ಕಳೆದೇ ಹೋದ. ಕೆನಡಿಗಳಿಗೆ ಟಾಂಗ್ ಕೊಟ್ಟ ಖುಷಿಯಲ್ಲಿ ಓನಾಸಿಸ್ ವಿಕೃತ ನಗೆ ನಕ್ಕ.

ಈ ಕಡೆ ಕೆನಡಿ ಮೇಡಂ ಅಂತೂ ಓನಾಸಿಸ್ ಮಾಡಿದ ಉಪಚಾರಗಳಿಂದ ಫುಲ್ ಖುಷ್. ಅವನ ಆಸ್ತಿ, ಪಾಸ್ತಿ, ಸಂಪತ್ತು, ಅದನ್ನು ನೀರಿನಂತೆ ಖರ್ಚು ಮಾಡುವ ಸ್ಟೈಲ್ ನೋಡಿ ಅಮ್ಮಾವರು ಫುಲ್ ಖುಷ್. ಜೊತೆಗೆ ಗಂಡನ ಮೇಲೆ ಕೋಪ ಬೇರೆ. ಮತ್ತೆ ಚಲ್ಲಾಟದ ಸ್ವಭಾವ. ಬಿಂದಾಸ್ ವಾತಾವರಣ. ಹೇಳುವರು ಕೇಳುವರು ಯಾರೂ ಇಲ್ಲ. ಹಾದಿ ತಪ್ಪಲಿಕ್ಕೆ ಇನ್ನೇನು ಬೇಕು? ಇದಕ್ಕೇ ಕಾಯುತ್ತಿದ್ದ ಪ್ಲೇಬಾಯ್ ಕಾಮಣ್ಣ ಅರಿಸ್ಟಾಟಲ್ ಓನಾಸಿಸ್.

ಒಂದು ರಾತ್ರಿ ಕೆನಡಿ ಮೇಡಂ ಅವರನ್ನು ಓನಾಸಿಸ್ ಪಟಾಯಿಸಿಯೇ ಬಿಟ್ಟ. ಲಂಚ ಕೊಟ್ಟಾಗಿತ್ತು. ಮೇಡಂ ಮಂಚ ಹತ್ತಿದರು. ಇನ್ನೊಬ್ಬ ತ್ರಿಪುರ ಸುಂದರಿಯನ್ನು ತಿಂದು ಮುಗಿಸಿದೆ ಅಂತ ಓನಾಸಿಸ್ ತನ್ನ ಡೈರಿಯಲ್ಲಿ ಜಾಕಿ ಕೆನಡಿಯ ಹೆಸರಿನ ಮೇಲೆ ಟಿಕ್ ಮಾಡಿದ.
ಜಾಕಿ ಕೆನಡಿ & ಅರಿಸ್ಟಾಟಲ್ ಓನಾಸಿಸ್

ಮಂಚ ಇಳಿದ ಕೆನಡಿ ಮೇಡಂ ಹಗುರ ಹಗುರ. ಗಂಡ ಅಧ್ಯಕ್ಷ ಕೆನಡಿ ತೋರಿಸದ ಪ್ರೀತಿ, ಒಲುಮೆ, ಮತ್ತೊಂದು ಮಗದೊಂದು ಪ್ರಿಯಕರ ಅರಿಸ್ಟಾಟಲ್ ಓನಾಸಿಸ್ ತೋರಿಸಿದ್ದ. ಮತ್ತೆ ಅವನ ಆಗಿನ ಕಾಲದ ಬಿಲಿಯನ್ ಗಟ್ಟಲೆ ಸಂಪತ್ತು ಕಣ್ಣು ಕೊರೈಸಿತ್ತು. ಕೆನಡಿಗಳು, ಜಾಕಿಯ ತವರಿನ ಕಡೆಯವರೂ ಎಲ್ಲ ಶ್ರೀಮಂತರೇ. ಆದ್ರೆ ಎಲ್ಲ ಮಿಲಿಯನ್ ಲೆಕ್ಕದಲ್ಲಿ ಮಾತಾಡುವರು. ಓನಾಸಿಸ್ ಆಗಲೇ ಬಿಲಿಯನಿಯರ್.

ಗಡಿಬಿಡಿಯಲ್ಲಿ ಜಾನ್ ಕೆನಡಿಯನ್ನು ಮದುವೆಯಾಗಿ ತಪ್ಪು ಮಾಡಿದೆನಾ ಅಂತ ಜಾಕಿಗೆ ಅನ್ನಿಸಿತ್ತಾ? ಯಾರಿಗೆ ಗೊತ್ತು.

ಹೀಗೆ ಗಂಡನ ಮೇಲೆ ಮುನಿದು ಮನೆ ಬಿಟ್ಟು ಹೋಗಿದ್ದ ಅಮೇರಿಕಾದ ಅಂದಿನ ಪ್ರಥಮ ಮಹಿಳೆ ಜಾಕಿ ಕೆನಡಿಗೆ ಅಚಾನಕ್ ಆಗಿ ಒಬ್ಬ ಹೊಸ ಪ್ರಿಯಕರ ಸಿಕ್ಕು ಬಿಟ್ಟಿದ್ದ. ಮುನಿಸು ಮುಗಿದಿತ್ತು. ಅನುರಾಗ ಚಿಮ್ಮಿತ್ತು....ಗಂಡನ ಮೇಲಲ್ಲ....ಓನಾಸಿಸ್ ಎನ್ನುವ ಪ್ಲೇಬಾಯ್ ಬಿಲಿಯನಿಯರ್ ಮೇಲೆ.

ಎಷ್ಟು ದಿವಸ ಅಂತ ಅದೇ ಹಡಗಿನ ಮೇಲೆ ಅಂತ ಇರೋದು? ಮನಸ್ಸಿಲ್ಲದಿದ್ದರೂ ವಾಪಸ್ ಹೊರಡಲೇ ಬೇಕಾಗಿತ್ತು. ಹೇಳಿ ಕೇಳಿ ಅಮೇರಿಕಾದ ಅಧ್ಯಕ್ಷರ ಧರ್ಮಪತ್ನಿ. ಆ ಧರ್ಮ ನಿಭಾಯಿಸಲಿಕ್ಕಾದರೂ ವಾಪಾಸ್ ಹೋಗಲೇ ಬೇಕಾಗಿತ್ತು. ಇಲ್ಲದ ಮನಸ್ಸಿನಿಂದ, ಬರ್ತೀನಿ ಡಾರ್ಲಿಂಗ್, ಮತ್ತೆ ಸಿಗೋಣ, ಅಂತ ಮುದುಕ ಓನಾಸಿಸ್ ಗೆ ಆಖರೀ ಚುಮ್ಮಾ ಮತ್ತೊಂದು ಕೊಟ್ಟು ಜಾಕಿ ಕೆನಡಿ ಮತ್ತು ಆಕೆಯ ತಂಗಿ ವಾಪಸ್ ಹೊರಟು ನಿಂತರು.

ಆವಾಗ ನೆನಪಾಯಿತು. ಓಹೋ! ನಮ್ಮನ್ನು ವಾಪಸ್ ಕರೆಯಲು ಬಂದಿದ್ದನಲ್ಲ, ಅವನೇ ಚಿಕ್ಕ ಮೈದುನ, ಟೆಡ್ ಕೆನಡಿ. ಅವನೆಲ್ಲಿ? ಆ ಉಂಡಾಡಿ ಗುಂಡ, ಓನಾಸಿಸ್ ತೋರಿಸಿದ, ಸ್ಪೆಷಲ್ ಕೋಣೆ ಹೊಕ್ಕವನು, ಹೊರಗಿನ ಖಬರಿಲ್ಲದೆ ಕುಡಿದು, ತಿಂದು, ಸುಂದರಿಯರ ಮಧ್ಯೆ ಕಳೆದು ಹೋಗಿದ್ದ. ಅತ್ತಿಗೆ ಜಾಕಿ ಕೆನಡಿಯನ್ನು ಕರೆದುಕೊಂಡು ಹೋಗಲು ಬಂದಿದ್ದ ಮೈದುನನನ್ನು ಜಾಕಿಯೇ ಖುದ್ದಾಗಿ ಎಬ್ಬಿಸಿ ಕರೆದುಕೊಂಡು ಹೋಗಬೇಕಾಯಿತು. ಓನಾಸಿಸ್ ಒಳೊಳಗೇ ನಕ್ಕ. ಜಾನ್ ಕೆನಡಿ, ಅಟಾರ್ನೀ ಜನರಲ್ ಬಾಬ್ಬಿ ಕೆನಡಿಗಳಿಗೆ ಸರಿಯಾಗೇ ಟಾಂಗ್ ಕೊಟ್ಟಿದ್ದ. ಅತ್ತ ಕೆನಡಿಗಳು ಅಮೇರಿಕಾದಲ್ಲಿ ಓನಾಸಿಸ್ ಮೇಲೆ ಕೋರ್ಟಿನಲ್ಲಿ ಕೇಸ್ ಜಡಿದು ಹೋರಾಡುತ್ತಿದ್ದರೆ, ಅವರಿಗೆ ಸರಿಯಾಗಿ ಮುಜುಗರ ಉಂಟು ಮಾಡುವಂತೆ ಉಳಿದ ಕೆನಡಿಗಳು ಓನಾಸಿಸ್ ನ ಆತಿಥ್ಯ ಸ್ವೀಕರಿಸಿ ಅವನ ತಿಂಡಿ ತೀರ್ಥದಲ್ಲಿ ಮುಳುಗೆದ್ದು ಹೊರಟಿದ್ದರು. ಇದಕ್ಕಿಂತ ದೊಡ್ಡ ವಿಪರ್ಯಾಸ ಉಂಟೆ?

ಗ್ರೀಸ್ ಬಿಟ್ಟು ಅಮೇರಿಕಾಕ್ಕೆ ವಾಪಸ್ ವಿಮಾನ ಹತ್ತಿದ್ದ ಜಾಕಿ ಕೆನಡಿ ಮನಸ್ಸಿನಲ್ಲಿ ಕೇವಲ ಓನಾಸಿಸ್ ನದೇ ಧ್ಯಾನ. ಎಷ್ಟೋ ಮಂದಿ ಪುರುಷರನ್ನು ದುಂಬಿಗಳಂತೆ ಆಕರ್ಷಿಸಿದ್ದ ಜಾಕಿಯೇ ಫುಲ್ ಫಿದಾ ಆಗಿ ಹೋಗಿದ್ದರು. ಹಾಗಿತ್ತು ರಾಯಲ್ ಉಪಚಾರ.

ಇದೇ ಒಲುಮೆ ಮುಂದೊಂದು ದಿವಸ ಜಾಕಿ ಕೆನಡಿ ಅರಿಸ್ಟಾಟಲ್ ಓನಾಸಿಸ್ ನನ್ನು ವಿವಾಹವಾಗುವಂತೆ ಪ್ರೇರೆಪಿಸಿತಾ? ಅದಕ್ಕಾಗಿ ಏನೇನು ಅವಘಡಗಳಾದವು? ಅದಕ್ಕೋಸ್ಕರ ಕೆನಡಿ ಕುಟುಂಬದಲ್ಲಿ ಒಂದು ಭಯಾನಕ ಕೊಲೆಯೂ ಆಗಿಹೋಯಿತಾ? ಅದರ  ಹಿಂದೆ ಪ್ಲೇಬಾಯ್ ಓನಾಸಿಸ್ ನ ಕೈವಾಡವಿತ್ತಾ?

(ಮುಂದುವರಿಯಲಿದೆ) (ಮುಂದಿನ ಭಾಗ -೩ ಇಲ್ಲಿದೆ)

Wednesday, April 16, 2014

ಶ್ರೀಮತಿ ಕೆನಡಿ ಶ್ರೀಮತಿ ಓನಾಸಿಸ್ ಆಗುವ ತನಕ.... (ಭಾಗ - ೧)

ಅಮೇರಿಕಾದ ಕೆನಡಿ ಕುಟುಂಬದ ಚಿತ್ರ ವಿಚಿತ್ರಗಳು ಮುಗಿಯುವಂತದ್ದಲ್ಲ. ಒಮ್ಮೆ, ಇನ್ನೂ ಅಮೇರಿಕಾದ ಅಧ್ಯಕ್ಷರಾಗುವ ಮೊದಲು, ಜಾನ್ ಎಫ್ ಕೆನಡಿ ಸಾಹೇಬರು ಯಾವದೋ ಒಂದು ದೊಡ್ಡ ಚುನಾವಣೆಯಲ್ಲಿ ಸೋತು ಹೋದರು. ಕೆನಡಿಗಳಿಗೆ ಕೇವಲ ಗೆದ್ದು ಮಾತ್ರ ರೂಢಿ. ಸೋಲು ಅರಗಿಸಿಕೊಳ್ಳುವದು ಕಷ್ಟ ಕಷ್ಟ. ಅವನೌನ್! ಅಂದವರೇ ಕೆನಡಿ ಸಾಹೇಬರು ಹೆಂಡ್ತಿ ಬಿಟ್ಟು, ಒಬ್ಬರೇ ತಮ್ಮ ಪುಂಡು ಪೋಕರಿ ಗೆಳೆಯರ ಸಂಗಡ ದಕ್ಷಿಣದ ಫ್ಲೋರಿಡಾ ಕಡಲ ತೀರಕ್ಕೆ ಹೋಗಿ ಬಿಟ್ಟರು. ಅಲ್ಲಿ ಅವರದ್ದೇ ಜಾತಿಯ, ಎಲ್ಲ ಚಟಗಳಿದ್ದ, ಕೆನಡಿ ಸಾಹೇಬರಿಗೆ ಒಂದು ತರಹದ ರಾಜಕೀಯ ಗುರು ಆಗಿದ್ದ, ಸೆನೆಟರ್ ಜಾರ್ಜ್ ಸ್ಮಿದರ್ಸ್ ಇದ್ದರು. ಚುನಾವಣೆಯಲ್ಲಿ ಸೋತರೇನಂತೆ ಜಾಕ್, ಮಜಾ ಮಾಡೋಣ ಬಾ, ಅಂತ ಒಂದು ಹಡಗಿನ ತುಂಬಾ ಹೈ ಕ್ಲಾಸ್ ವೇಶ್ಯೆಯರನ್ನು ತುಂಬಿಕೊಂಡು ವಾರಗಟ್ಟಲೆ ಕೆರಿಬಿಯನ್ ಸಮುದ್ರದ ವಿಹಾರಕ್ಕೆ ಕರೆದುಕೊಂಡು ಹೋಗಿ ಬಿಟ್ಟರು. ಚುನಾವಣೆಯಲ್ಲಿ ಸೋತ ಸಂಕಟವನ್ನು ಕೆನಡಿ ಸಾಹೇಬರು ಸಮುದ್ರದ ಮಧ್ಯೆ ಮದಿರೆ, ಮಾನಿನಿಯರ ಮಧ್ಯೆ ಕಳೆದು ಹಗುರಾಗಿ ಬಂದರು.

ಈ ಕಡೆ ಅಂದ್ರೆ ಮನೆ ಕಡೆ ಸ್ಥಿತಿಯೇ ಒಂದು ತರಹ ಇತ್ತು. ಕೆನಡಿ ಪತ್ನಿ ಜಾಕಿ ಕೆನಡಿ ಆವಾಗ ತುಂಬು ಗರ್ಭಿಣಿ. ಕೆನಡಿ ಸಾಹೇಬರು ಚುನಾವಣೆಯಲ್ಲಿ ಸೋತ ಸಂಕಟದಲ್ಲಿ ಆ ಕಡೆ ಹೋಗಿದ್ದೆ ಹೋಗಿದ್ದು ಈಕೆಗೆ ಈಕಡೆ ಹೆರಿಗೆ ನೋವು ಬಂತು. ಗಂಡ ಎಲ್ಲಿ? ಇಲ್ಲೆ. ಪೋಯಾಚ್ಚ. ಹಾಳಾಗಿ ಹೋಗಲಿ ಅಂದುಕೊಳ್ಳಲಿಕ್ಕೆ ಒಂದು ಸರಿಯಾದ ಮಗುವಾದರು ಹುಟ್ಟಿತಾ? ಅದೂ ಇಲ್ಲ. ಸತ್ತ ಮಗುವಿಗೆ ಜನ್ಮ ನೀಡಿ ಕೆನಡಿ ಪತ್ನಿ ಹೈರಾಣ ಆಗಿ ಹೋದರು. ಸಾಂತ್ವನ ಹೇಳಬೇಕಾಗಿದ್ದ ಪತಿ ಎತ್ತಲೋ ಬಾಟಲಿ ಎತ್ತುತ್ತ ಯಾರದ್ದೋ ಚಲುವೆಯ ಏನು ಬಿಚ್ಚುತ್ತಿದ್ದರೋ!? ದೇವರೇ ಬಲ್ಲ.

ಅದು ಜಾಕಿ ಕೆನಡಿ ಮನಸ್ಸಿಗೆ ಮಾಯಲಾಗದ ಗಾಯ. ಮುಂದೊಮ್ಮೆ ಮಾಡ್ತೀನಿ ತಡಿ ನಿನಗೆ ಮಗನೇ! ಅಂತ ಮನಸ್ಸಿನಲ್ಲೇ ಅಂದುಕೊಂಡ ಜಾಕಿ ಕೆನಡಿ, ಸತ್ತ ಮಗುವಿಗೆ ಜನ್ಮ ಕೊಟ್ಟ ಶೋಕ, ತಾಪಗಳಿಗೆ ತಾವೇ ಮರಹಮ್ಮು ಪಟ್ಟಿ ಮಾಡಿಕೊಂಡರು. ಬಂಧು ಬಳಗದವರು ಎಷ್ಟೇ ಏನೇ ಸಮಾಧಾನ ಮಾಡಿದರೇನು, ಅಂತಹ ಸಮಯದಲ್ಲಿ ಪತಿ ಇರಲಿಲ್ಲ ಅನ್ನುವ ಕೊರಗು ಮಾತ್ರ ಜಾಕಿಯನ್ನು ಬಿಡಲಿಲ್ಲ. ಆಕೆ ಕೊನೆ ತನಕ ಅದನ್ನ ಮರಿಯಲಿಲ್ಲ.

ಮುಂದೆ ಏನೇನೋ ಆಯಿತು ಬಿಡಿ. ಕೆನಡಿ ಸಾಹೇಬರು ಗೆದ್ದು ಅಧ್ಯಕ್ಷರಾದರು. ಮನೆ ಕಡೆ ಅಷ್ಟಕಷ್ಟೇ. ಜಾಕಿ ಕೆನಡಿ ಶ್ವೇತ ಭವನ ಬಿಟ್ಟು ಮಾರ್ಕೆಟ್ಟಿಗೆ ಹೋದರೂ ಸಾಕು ಕೆನಡಿ ಸಾಹೇಬರ ಖಾಸ್ ದೋಸ್ತ ಕಮ್ ಪಿಂಪ್ ಡೇವಿಡ್ ಪಾವರ್ಸ್ ಅನ್ನುವಾತ ಹೊಸ ಹೊಸ ಹಕ್ಕಿ ತಂದು ಸಾಹೇಬರ ತಲೆಗೆ ಅಮೃತಾಂಜನ ತಿಕ್ಕೇ ಬಿಡುತ್ತಿದ್ದ. ದಿನಕ್ಕೊಂದು ಹೊಸ ಮಾಲು ಇಲ್ಲ ಅಂದ್ರೆ ನನಗೆ ನಿದ್ದೆ ಬರೋದಿಲ್ಲ ಡೇವ್, ಅಂತ ಕೆನಡಿ ಸಾಹೇಬರು ಆಗಾಗ ಕಂಪ್ಲೇಂಟ್ ಮಾಡಿ ಮಾಡಿ, ಇವರ ರಿಪಿ ರಿಪಿಯೇ ಬೇಡ ಅಂತ ಡೇವಿಡ್ ಪಾವರ್ಸ್ ಫುಲ್ ಟೈಮ್ ಪಿಂಪ್ ಆಗಿ ಒಂದು ದೊಡ್ಡ ಹ್ಯಾರೆಮ್ ಮಾಡಿ ಬಿಟ್ಟಿದ್ದ. ಯಾವಾಗ ಬೇಕೆಂದಾಗ, ಮಿ. ಪಾವರ್ಸ್ + ಒಂದು ಎಕ್ಸಟ್ರಾ ಅಂತ ಶ್ವೇತ ಭವನದ ಪುಸ್ತಕದಲ್ಲಿ ಎಂಟ್ರಿ ಹಾಕಿಸಿ, ಕೆನಡಿ ಸಾಹೇಬರ ನೂರಾರು ಬೆಡ್ ರೂಮುಗಳಲ್ಲಿ ಒಂದರಲ್ಲಿ ಹಕ್ಕಿ ನುಗ್ಗಿಸಿ, ಬಾವುಗ ಬೆಕ್ಕಿನಂತಿದ್ದ ಕೆನಡಿ ಸಾಹೇಬರನ್ನು, ಅವರ ಸೋದರರನ್ನು, ಗೆಳೆಯರನ್ನು ಬಿಟ್ಟು ಸಮೃದ್ಧ 'ಮಾಂಸ'ದೂಟ  ಮಾಡಿಸಿಬಿಡುತ್ತಿದ್ದ. ಜಾಕಿ ಕೆನಡಿ ಮೇಡಂ ವಾಪಸ್ ಬರುವ ಮೊದಲು ಎಲ್ಲವನ್ನೂ ಸಾಫ್ ಸಾಫ್ ಮಾಡುವ ಕೆಲಸ ಸಹಾ ಅವನದೇ. ಸುಮಾರು ಸರಿಯಾಗೇ ಮಾಡುತ್ತಿದ್ದ ಅನ್ನಿ.

ಜಾಕಿ ಕೆನಡಿ ಮೇಡಂಗೆ ಕೆನಡಿಗಳ ಹಗ್ಗ ಕಡಿಯುವ ವಿಷಯ ಏನೂ ಅಪರಿಚಿತವಾಗಿರಲಿಲ್ಲ. ಕೆನಡಿ ಕುಟುಂಬ ಅದಕ್ಕೆ ಫೇಮಸ್. ಕೆನಡಿಗಳ ತಂದೆ ಜೋಸೆಫ್ ಕೆನಡಿಗೆ ಊರು ತುಂಬಾ ಸಂಸಾರ. ಗ್ಲೋರಿಯಾ ಸ್ವಾನ್ಸನ್ ಎನ್ನುವ ನಟಿ ಅವರ ಹಲುವಾರು ಉಪಪತ್ನಿಯರಲ್ಲಿ ಒಬ್ಬಳು. ಹಸು ಮಾತ್ರ ಒಂದೇ ಸಾಕಿ, ಹಾಲು ಎಲ್ಲೆ ಬೇಕಾದರೂ ಕುಡಿಯಿರಿ, ಕ್ಯಾಥೊಲಿಕ್ ಪದ್ಧತಿ ಪ್ರಕಾರ ದೇವರು ಕೊಟ್ಟ ಮಕ್ಕಳು ಅಂತ ಒಂದಾದ ಮೇಲೊಂದು ಮಕ್ಕಳನ್ನು ಮಾಡುತ್ತ, ಅಧಿಕೃತ ಧರ್ಮಪತ್ನಿಯನ್ನು ಸದಾ ಗಬ್ಬದ   ಹಸುವಿನಂತೆ ಇಟ್ಟು, ಬಾಕಿ ಕಡೆ ಬೇಕಾದಲ್ಲಿ ಬೇಕಾಗಿದ್ದು ಮೇಯಿದು ಮೇಯರ್ ಮುತ್ತಣ್ಣರಾಗಿ ನೂರ್ಕಾಲ್ ಬಾಳಿ, ಅಂತ ಉಪದೇಶ ತಂದೆ ಕೆನಡಿಯಿಂದ ತಮ್ಮ ಮಕ್ಕಳಿಗೆ. ಇನ್ನು ಕೇಳಬೇಕೆ!?

ಮುಂದೆ ಕೆನಡಿ ಅಧ್ಯಕ್ಷರಾದ ಮೇಲೆ ಏನೋ ಒಂದು ದಿವಸ ಜಾಕಿ ಕೆನಡಿಗೆ ಗಂಡನ ಮೇಲೆ ಮುನಿಸು. ದುಮು ದುಮು ಗುಡುತ್ತ ಸೀದಾ ಮನೆ ಬಿಟ್ಟು ಹೋಗಿಯೇ ಬಿಟ್ಟರು. ಎಲ್ಲ ದೊಡ್ಡ ಮಂದಿ. ಮನೆ ಬಿಟ್ಟು ತವರು ಮನೆಗೆ ಹೋಗುತ್ತಾರೆಯೇ? ಜಾಕಿ ಕೆನಡಿ ಸೀದಾ ದೇಶ ಬಿಟ್ಟು, ಯೂರೋಪಿನ ಗ್ರೀಸ್ ದೇಶದ ಕಡೆ ಎಲ್ಲೋ ಹೋಗಿ ಬಿಟ್ಟರು.

ಅಲ್ಲಿದ್ದ ನೋಡಿ ಅವರ ಆಶಿಕ಼್!

ಜಾಕಿ ಕೆನಡಿ ಅಂತೂ ತ್ರಿಲೋಕ ಸುಂದರಿ. ಅಷ್ಟೇ ಬುದ್ಧಿವಂತೆ ಕೂಡ. ಸೌಂದರ್ಯ, ಬುದ್ಧಿವಂತಿಕೆ, ರೊಕ್ಕ, ಸ್ಟೇಟಸ್ ಎಲ್ಲ ಇದ್ದ ಮೇಲೆ ಸ್ವಲ್ಪ ಚಲ್ಲಾಟ ಇರದೇ ಹೋಗುತ್ತದಯೇ? ಗಂಡ ಬೇರೆ ಪರಮ ಲಂಪಟ. ಹಾಗಾಗಿ ಮಾಡ್ತೀನಿ ತಡಿ ನಿನಗೆ, ಅಂದವರೇ ಅವರಿಗೆ (ಜಾಕಿ ಕೆನಡಿಗೆ) ತುಂಬಾ ವರ್ಷಗಳಿಂದ ಕಾಳು ಹಾಕುತ್ತಿದ್ದ ಗಂಡು ಗೂಳಿಯೊಬ್ಬನಿಗೆ ಹಾಯ್! ಅಂದೇ ಬಿಟ್ಟರು.

ಅವನೇ ಅರಿಸ್ಟಾಟಲ್ ಓನಾಸಿಸ್! ಆ ಕಾಲದ ದೊಡ್ಡ ಶಿಪ್ಪಿಂಗ್ ಮ್ಯಾಗ್ನೆಟ್! ನೂರಾರು ಸರಕು ಸಾಗಾಣಿಕೆ ಹಡಗುಗಳ ಮಾಲೀಕ. ಗ್ರೀಕ್ ದೇಶದ ಸಮೀಪದಲ್ಲಿ ಅವನದೇ ಆದ ಒಂದು ಪ್ರೈವೇಟ್ ಐಲ್ಯಾಂಡ್ ಇತ್ತು. ಅಲ್ಲಿ ದೊಡ್ಡ ಮಹಲು. ಗ್ರೀಸ್ ದೇಶದ ರಾಜಧಾನಿ ಅಥೆನ್ಸ್ ದಿಂದ ಸ್ವಲ್ಪ ದೂರ ಮಾತ್ರ. ಅರ್ಜೆಂಟ್ ಹೋಗಬೇಕು ಅಂದ್ರೆ ಹೆಲಿಕಾಪ್ಟರ್. ಆರಾಮ ಹೋಗಲು ಅವನದೇ ದೊಡ್ಡ ಐಶಾರಾಮಿ ಹಡಗು.

ಅರಿಸ್ಟಾಟಲ್ ಓನಾಸಿಸ್ ದೊಡ್ಡ ಮಟ್ಟದ ಪ್ಲೇಬಾಯ್. ಸುಮಾರು ವಯಸ್ಸಾಗಿತ್ತು. ಹುಣಸೆ ಮುಪ್ಪಾದರೆ ಹುಳಿ ಮುಪ್ಪೆ ಅನ್ನುವಂತೆ ಹೊಸ ಹೊಸ ಮಾಲುಗಳ ಬೇಟೆ ಮಾತ್ರ ಬಿಟ್ಟೇ ಇರಲಿಲ್ಲ. ಆ ಕಾಲದಲ್ಲೇ ವಿಶ್ವದ ದೊಡ್ಡ ಶ್ರೀಮಂತರಲ್ಲಿ ಒಬ್ಬ. ಎಲ್ಲ ದೇಶದ ದೊಡ್ಡ ದೊಡ್ಡ ಜನರಿಗೆ ಎಲ್ಲ ತರಹದ ಸೇವೆ ಮಾಡಿ ಇಡೀ ವಿಶ್ವದ ಶಿಪ್ಪಿಂಗ್ ಮೇಲೆ ಒಂದು ತರಹದ ಮೊನೋಪೋಲಿ ಸಾಧಿಸಿಬಿಟ್ಟಿದ್ದ. ಯಾವ ಪರಿ ಲಂಪಟ ಅಂದರೆ, ಮಾಜಿ ಇಂಗ್ಲಂಡ ಪ್ರಧಾನಿ ವಿನ್ಸ್ಟನ್ ಚರ್ಚಿಲ್ಲ ಅವರ ಸೊಸೆಯನ್ನೇ ಪಟಾಯಿಸಿ, ಚರ್ಚಿಲ್ಲರ ಮಗನ ಕೈಗೆ ಚಿಪ್ಪು ಕೊಟ್ಟ ಪಮೇಲಾ ಚರ್ಚಿಲ್ಲ ಎಂಬಾಕೆ ಈ ಓನಾಸಿಸ್ ಎಂಬ ಶಿಪ್ಪಿಂಗ್ ಟೈಕೂನ್ ಸಂಗಡ ಹೊಡೆಯುವಷ್ಟು ಕೇಕೆ ಹೊಡೆದು, ಜಮ್ಮಚಕ್ಕ ಮಾಡಿ, ಇಂಗ್ಲಂಡ ದೇಶಕ್ಕೆ ದೊಡ್ಡ ನಮಸ್ಕಾರ ಹಾಕಿ, ಅಮೇರಿಕಾ ಸೇರಿಕೊಂಡು, ಕೆನಡಿ ಸಹೋದರರ ಏನೇನೋ ಸೇವೆ ಮಾಡಿ, ಅಲ್ಲಿಯ ಪ್ರಜೆಯಾಗಿ ಮುಂದೊಂದು ದಿವಸ ಕ್ಲಿಂಟನ್ ಸಾಹೇಬರ ಕಾಲದಲ್ಲಿ ದೊಡ್ಡ ಮಟ್ಟದ ರಾಯಭಾರಿಯೂ ಆಗಿ ಹೋದಳು. ಏನೇನೋ ಕಥೆ ಬಿಡಿ. ಅದೆಲ್ಲ ಇಲ್ಲಿ ಬರೆಯುತ್ತ ಹೋದರೆ ವಿಷಯಾಂತರ ಆಗುತ್ತದೆ.

ಜಾಕಿ ಕೆನಡಿ ಮನೆ ಬಿಟ್ಟು ಓಡಿ ಬಂದಿದ್ದೇ ಬಂದಿದ್ದು ಅರಿಸ್ಟಾಟಲ್ ಓನಾಸಿಸ್ ಫುಲ್ ಥ್ರಿಲ್ಲಾಗಿ ಹೋದ. ಅಕ್ಕನಿಗೆ ಕಂಪನಿ ಕೊಡಲು ಜಾಕಿ ಕೆನಡಿ ಮೇಡಂ ತಂಗಿ ಸಹಿತ ಹೋಗಿ ಬಿಟ್ಟಿದ್ದಳು. ಮುದುಕ ಓನಾಸಿಸ್ ಗೆ ಖುಷಿಯೋ ಖುಷಿ. ಎರ್ರಾ ಬಿರ್ರಿ ರೈಸ್ ಆದವನೇ ತನ್ನ ಪ್ರೈವೇಟ್ ದ್ವೀಪದ ಕಡೆ ಹೋಗಲು ತನ್ನ ಐಶಾರಮಿ ಹಡಗನ್ನು ಸಿದ್ದ ಮಾಡಿಯೇ ಬಿಟ್ಟ. ಹಡಗಿನ ತುಂಬ ಬೆಸ್ಟ್ ಕ್ವಾಲಿಟಿಯ ಗುಂಡು, ತುಂಡು ತುಂಬಿಯೇ ತುಂಬಿದರು. ದೂರದಿಂದ ಬಂದ ಹೆಣ್ಣು ಮಕ್ಕಳು ಎಷ್ಟು ಹಸಕೊಂಡು, ಬಾಯಾರಿಕೊಂಡು ಬಂದಿರುತ್ತಾರೋ ಏನೋ ಅನ್ನುವ ರೀತಿಯಲ್ಲಿ. ಎಲ್ಲರನ್ನೂ ತುಂಬಿಕೊಂಡ ಹಡಗು ಓನಾಸಿಸ್ ನ ಖಾಸಗಿ ದ್ವೀಪದತ್ತ ಹೊರಟಿತು.

ಹುಚ್ಚು ಹೆಂಗಸರಿಗೆ ಸೂರ್ಯ ಸ್ನಾನ ಮಾಡುವ ತಲುಬು. ಅಕ್ಕ ಜಾಕಿ ಮತ್ತು ತಂಗಿ ಎಲ್ಲಾ ಬಿಚ್ಚಿ, ಕಾಟಾ(ಚಾ)ಚಾರಕ್ಕೆ ಎನ್ನುವಂತೆ ಕಾಚಾ ಬಾಡಿ ಒಂದಿಷ್ಟು ಮಾತ್ರ ಹಾಕಿಕೊಂಡು, ಮೈಗೆಲ್ಲ ಎಣ್ಣೆ ಒತ್ತಿಕೊಂಡು, ಉಧೋ ಯಲ್ಲಮ್ಮ! ಅನ್ನುವ ರೀತಿಯಲ್ಲಿ ಹಡಗಿನ ಡೆಕ್ಕಿನ ಮೇಲೆ ಅಂಬೋ ಅನ್ನುತ್ತ ಸುತ್ತ ಮುತ್ತಲ ಖಬರಿಲ್ಲದೆ ಡಬ್ಬು ಮಲಗಿ ಬಿಟ್ಟರು. ಹಿತವಾದ ಸೂರ್ಯ ಮೈ ಕಾಯಿಸುತ್ತಿದ್ದರೆ, ಖುದ್ದು ಆಗರ್ಭ ಶ್ರೀಮಂತ ಓನಾಸಿಸ್ ಹುಡುಗಿಯರಿಗೆ ಶಾಂಪೇನ್ ಕುಡಿಸುತ್ತ, ಸ್ಟ್ರಾಬೆರಿ ಹಣ್ಣು ತಿನ್ನಿಸುತ್ತ ಹರಕೆಗೆ ಕುರಿ ಸಿದ್ಧ ಮಾಡುತ್ತಿದ್ದ.

ಅವರಿಗೇನು ಗೊತ್ತಿತ್ತು ಆಗ ಆಗುತ್ತಿದೆ ದೊಡ್ಡ ಲಫಡಾ ಒಂದು ಅಂತ!

(ಮುಂದುವರಿಯಲಿದೆ) (ಮುಂದಿನ ಭಾಗ -೨ ಇಲ್ಲಿದೆ)

ಜಾಕಿ ಮತ್ತು ಆಕೆಯ ತಂಗಿ ಓನಾಸಿಸ್ ಹಡಗಿನಲ್ಲಿ