Thursday, June 28, 2018

ಬಂಧ & ಸಂಬಂಧ

ಜಗತ್ತನ್ನು ಸೃಷ್ಟಿಸಿದ ಬ್ರಹ್ಮ ಸಕಲ ಜೀವಿಗಳಿಗೆ ಎಲ್ಲವನ್ನೂ ಕರುಣಿಸಿದ.

ಒಂದು ಜೀವಿಗೆ ಸ್ವಲ್ಪ ತೊಂದರೆಯಾಯಿತು. ಆ ಜೀವಿಯ ಹೆಸರು 'ಬಂಧ' (bond).

ಬಂಧನಿಗೆ ಎಲ್ಲೂ ಆಶ್ರಯ ಸಿಗಲಿಲ್ಲ. ಯಾರೂ ಅವನನ್ನು ಹತ್ತಿರ ಸೇರಿಸುತ್ತಲೇ ಇರಲಿಲ್ಲ. ಅವನ ಹೆಸರೇ ಬಂಧ. ಸಕಲ ಬಂಧನಗಳು (bondage) ಇವನಿಂದಲೇ ಉಂಟಾಗುತ್ತವೆ ಎಂದು ತಿಳಿದು ಅವನಿಗೆ ಯಾರೂ ಆಶ್ರಯ ಕೊಡುತ್ತಿರಲಿಲ್ಲ.

ಬಂಧ ವಾಪಸ್ ಬ್ರಹ್ಮದೇವನ ಬಳಿಗೆ ಬಂದು ತನ್ನ ಕಷ್ಟ ಹೇಳಿಕೊಂಡ.

ಸ್ವಲ್ಪ ವಿಚಾರ ಮಾಡಿದ ಬ್ರಹ್ಮ ಹೇಳಿದ, 'ವೇಷ ಬದಲಾಯಿಸಿಕೊಂಡು, ರೂಪಾಂತರ ಮಾಡಿಕೊಂಡು, ಬೇರೆ ಹೆಸರಿನಲ್ಲಿ ಹೋಗಿ ಆಶ್ರಯ ಕೇಳು.'

'ಏನಂತ ರೂಪಾಂತರ ಮಾಡಿಕೊಳ್ಳಲಿ? ಯಾವ ಹೊಸ ಹೆಸರಲ್ಲಿ ಹೋಗಲಿ?' ಎಂದು ಕೇಳಿದ ಬಂಧ.

'ಬಂಧ ಎಂದು ಪರಿಚಯ ಮಾಡಿಕೊಳ್ಳಬೇಡ. ಸಂಬಂಧ ಅಂತ ಹೇಳಿಕೊಂಡು ಹೋಗು. ಆಗ ನೋಡು ನಿನ್ನ ಅದೃಷ್ಟ ಹೇಗೆ ಖುಲಾಯಿಸುತ್ತದೆ ಎಂದು. ಹೋಗಿ ಬಾ. ಶುಭವಾಗಲಿ,' ಎಂದು ಹೇಳಿ ಕಳಿಸಿಕೊಟ್ಟ ಬ್ರಹ್ಮದೇವ.

ಸಂಪೂರ್ಣವಾಗಿ ಗೆಟಪ್ ಬದಲಾಯಿಸಿಕೊಂಡ ಬಂಧ ಮತ್ತೆ ಭೂಮಿಗೆ ಎಂಟ್ರಿ ಕೊಟ್ಟ. ಮನೆಯೊಂದರ ಬಾಗಿಲು ತಟ್ಟಿದ.

'ಯಾರು ನೀವು?' ಎಂದು ಕೇಳಿದ ಮನೆಯಾತ.

'ನಾನು ಸಂಬಂಧ,' ಎಂದು ನೈಸಾಗಿ ಉಲಿದ ಬಂಧ.

ಸಂಬಂಧ ಅಂತ ಕೇಳಿದ್ದೇ ತಡ ಉಪಚಾರ ಆರಂಭವಾಯಿತು.

'ಒಳಗೆ ಬನ್ನಿ. ಕುಳಿತುಕೊಳ್ಳಿ. ನೀವು ಹೇಗೆ ಸಂಬಂಧ ಎಂದು ಕೇಳಬಹುದೇ?' ಎಂದು ವಿನಯ ಗೌರವದಿಂದ ಕೇಳಿದ ಮನೆಯಾತ.

ಸಂಬಂಧಗಳೇನು ಒಂದೇ ಎರಡೇ? ಒಬ್ಬನಿಗೆ ಅಪ್ಪನೆಂದ, ಇನ್ನೊಬ್ಬನಿಗೆ ಚಿಕ್ಕಪ್ಪನೆಂದ. ವೇಷದೊಂದಿಗೆ ಲಿಂಗವೂ ಬದಲಾದಾಗ ಅಮ್ಮ, ಚಿಕ್ಕಮ್ಮ, ಹೆಂಡತಿ, ಉಪಹೆಂಡತಿ....ಹೀಗೆ ಬಂಧನೊಬ್ಬ ನಾಮ ಹಲವು ಮಾದರಿಯಲ್ಲಿ ಎಲ್ಲರನ್ನೂ ಬೇರೆ ಬೇರೆ ಸಂಬಂಧಗಳ ಪಾಶದಲ್ಲಿ ಆವರಿಸಿಕೊಂಡುಬಿಟ್ಟ.

ಮೊದಲು ಬಂದಿದ್ದ ಬಂಧನೆಂಬ ಖತರ್ನಾಕ್ ಜೀವಿಯೇ ಸಂಬಂಧದ ರೂಪದಲ್ಲಿ ಬಂದು ವಕ್ಕರಿಸಿಕೊಂಡಿದೆ ಎಂದು ಮನುಷ್ಯರಿಗೆ ತಿಳಿಯಲೇ ಇಲ್ಲ. ತಮಗೆ ಗೊತ್ತಿಲ್ಲದಂತೆಯೇ ಸಂಬಂಧಗಳ ರೂಪದಲ್ಲಿ ಬಂದ ಬಂಧನಿಂದ ಬೇರೆ ಬೇರೆ ಬಂಧನಗಳಲ್ಲಿ (bondage) ಸಿಲುಕಿಕೊಂಡರು. ವಿವಾಹಬಂಧನ, ವಾತ್ಸಲ್ಯಬಂಧನ, ಪ್ರೇಮಬಂಧನ, ಪುತ್ರಪಾಶ, ಪುತ್ರಿ ಪ್ರೀತಿ, ನಾಯಿ ಪ್ರೀತಿ, ಕೋತಿ ಪ್ರೀತಿ, ಗೋಪ್ರೀತಿ...ಬಂಧನಗಳು ಒಂದೇ ಎರಡೇ?

ಸಂಬಂಧ ಎಂದರೇ Some ಬಂಧ ಅಂತರ್ಥ.

ಸಂಬಂಧಗಳಿಂದ ಬಂಧನಗಳು (bondage) ಮತ್ತು ಆ ಬಂಧನಗಳಿಂದ ತರಹತರಹದ ಸುಖ(!) ಮತ್ತು  ದುಃಖಗಳು ಉಂಟಾಗುತ್ತವೆ ಅಂದ ಮಾತ್ರಕ್ಕೆ ಎಲ್ಲ ಸಂಬಂಧಗಳನ್ನು ಕಡಿದುಕೊಂಡು ಜೀವಿಸಲು ಸಾಧ್ಯವೇ? ಅದರ ಅವಶ್ಯಕತೆ ಇಲ್ಲ. ಸಂಬಂಧಗಳು ಬಂಧಗಳು ಎಂದು ಅರಿವಿಗೆ ಬಂದರೆ ಸಾಕು. ಅವುಗಳ ಮೇಲಿನ selfish attachment ಮತ್ತು ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಂಡರೆ ಬಂಧನಗಳು ಮತ್ತು ಅವುಗಳ ಪರಿಣಾಮಗಳು ಅಷ್ಟರಮಟ್ಟಿಗೆ ಕಮ್ಮಿಯಾದಂತೆಯೇ. ಆ ವಿವೇಕ ನಮಗೆ ಬರಬೇಕು ಅಷ್ಟೇ.

ಸ್ಪೂರ್ತಿ: ಯೋಗ ವಾಸಿಷ್ಠದ ಮೇಲೆ ಸ್ವಾಮಿ ತೇಜೋಮಯಾನಂದರು ಬರೆದ ಪುಸ್ತಕದಲ್ಲಿ ಸಿಕ್ಕ ಮಾಹಿತಿ. A Glimpse into Yogavasistha

Sunday, June 24, 2018

ಕರ್ಮ ಕರ್ಮ ಕರ್ಮ

ಕರ್ಮದಲ್ಲಿ ಮೂರು ಬಗೆ. ಸಂಚಿತ, ಆಗಾಮಿ ಮತ್ತು ಪ್ರಾರಬ್ಧ. ಸಂಚಿತ ಮತ್ತು ಆಗಾಮಿ ಕರ್ಮಗಳ ಫಲ ಮುಂದಿನ ಜನ್ಮಗಳಲ್ಲಿ ಬರುತ್ತದೆ. ಪ್ರಾರಬ್ಧ ಕರ್ಮದ ಫಲದಿಂದಲೇ ಈ ಜನ್ಮ ಮತ್ತು ಈ ಜನ್ಮದ ಆಗುಹೋಗುಗಳು. ಇದು ಕರ್ಮ ಸಿದ್ಧಾಂತ.

ಸಂಚಿತ ಮತ್ತು ಆಗಾಮಿ ಕರ್ಮಗಳು ಬತ್ತಳಿಕೆಯಲ್ಲಿರುವ ಬಾಣಗಳಿದ್ದಂತೆ. ಪ್ರಾರಬ್ಧವೆಂಬುವದು ಬಿಲ್ಲಿನಿಂದ ಹೊರಬಿದ್ದ ಬಾಣದಂತೆ. ಬಾಣವನ್ನು ಒಮ್ಮೆ ಬಿಟ್ಟ ಮೇಲೆ ಮುಗಿಯಿತು. ವಾಪಸ್ ಕರೆಯಲಾಗುವದಿಲ್ಲ. ಆದರೆ ಬತ್ತಳಿಕೆಯಲ್ಲಿರುವ ಬಾಣಗಳ ಬಗ್ಗೆ ವಿಚಾರ ಮಾಡಬಹುದು.

ಒಮ್ಮೆ ಜ್ಞಾನೋದಯವಾದ ಮೇಲೆ ಸಂಚಿತ ಮತ್ತು ಆಗಾಮಿ ಕರ್ಮಗಳು ನಶಿಸಿ ಹೋಗುತ್ತವೆ. ಜ್ಞಾನದ ಜ್ವಾಲೆಯಲ್ಲಿ ಹುರಿದುಹೋಗುತ್ತವೆ. ಹುರಿದ ಬೀಜದಿಂದ ಹೇಗೆ ಮೊಳಕೆಯೊಡೆಯುವದಿಲ್ಲವೋ ಹಾಗೆಯೇ ನಶಿಸಿದ ಕರ್ಮದ ಬೀಜಗಳಿಂದ ಕರ್ಮಫಲ ದೊರೆಯುವದಿಲ್ಲ. ಹಾಗಾಗಿ ಜ್ಞಾನಿಗಳಿಗೆ ಮರುಜನ್ಮವಿಲ್ಲ. ಆದರೆ ಜ್ಞಾನಿಗಳೂ ಸಹ ಪ್ರಾರಬ್ಧವನ್ನು ಅನುಭವಿಸಲೇಬೇಕು. ಹಾಗಾಗಿ ಜ್ಞಾನೋದಯದ ನಂತರವೂ ಜ್ಞಾನಿಗಳೂ ಸಹ ಇದ್ದ ದೇಹದಲ್ಲೇ ಮುಂದುವರೆಯುತ್ತಾರೆ. ಏನೇನು ಅನುಭವಿಸಬೇಕೋ ಅದನ್ನೆಲ್ಲ ಅನುಭವಿಸುತ್ತಾರೆ. ಪ್ರಾರಬ್ಧ ಮುಗಿದ ನಂತರ ದೇಹ ತಂತಾನೇ ಬೀಳುತ್ತದೆ. ಕುಂಬಾರ ಮಡಿಕೆ ಮಾಡುವದನ್ನು ನಿಲ್ಲಿಸಿದ ಬಳಿಕವೂ ಕುಂಬಾರನ ಚಕ್ರ ಕೆಲಕಾಲ ತಿರುಗುತ್ತಲೇ ಇರುತ್ತದೆ. ಹಾಗೇ ಜ್ಞಾನಿಗಳ ದೈಹಿಕ ಜೀವನ ಕೂಡ. ಪ್ರಾರಬ್ಧ ಕರ್ಮಕ್ಕೆ ಮತ್ತೊಂದು ಉಪಮೆ ಇದು.

ಭಕ್ತನೊಬ್ಬ ರಮಣ ಮಹರ್ಷಿಗಳ ಬಳಿ ಕೇಳಿದನಂತೆ. 'ಜ್ಞಾನೋದಯದ ನಂತರ ಆಗಾಮಿ, ಸಂಚಿತ ಕರ್ಮಗಳನ್ನು ಗೆದ್ದರೂ ಪ್ರಾರಬ್ಧವನ್ನೇಕೆ ಗೆಲ್ಲಲಾಗುವದಿಲ್ಲ?'

ರಮಣರು ಒಂದು ಸಣ್ಣ ಕಥೆ ಹೇಳಿದರು.

'ಒಬ್ಬನಿಗೆ ಮೂವರು ಪತ್ನಿಯರಿದ್ದರು. ಆ ಮನುಷ್ಯ ಸತ್ತುಹೋದ. ಆ ಮನುಷ್ಯ ಸತ್ತುಹೋದ ಮೇಲೆ ಅವನ ಪತ್ನಿಯರೇನಾಗುತ್ತಾರೆ?'

'ವಿಧವೆಯರಾಗುತ್ತಾರೆ,' ಅಂದ ಭಕ್ತ.

'ಮೂವರೂ ಪತ್ನಿಯರು ವಿಧವೆಯರಾಗುತ್ತಾರೋ ಅಥವಾ ಕೇವಲ ಒಬ್ಬಳು ಅಥವಾ ಇಬ್ಬರು ಪತ್ನಿಯರು ಮಾತ್ರ ವಿಧವೆಯರಾಗುತ್ತಾರೋ?' ಎಂದು ಕೇಳಿದರು ರಮಣರು.

'ಮೂವರೂ ಪತ್ನಿಯರು ವಿಧವೆಯರಾಗುತ್ತಾರೆ ಸ್ವಾಮೀ,' ಅಂದ ಭಕ್ತ.

'ಆಗಾಮಿ, ಸಂಚಿತ, ಪ್ರಾರಬ್ಧ ಈ ಮೂರೂ ಬಗೆಯ ಕರ್ಮಗಳು ಮೂವರು ಪತ್ನಿಯರಿದ್ದಂತೆ. ಸತ್ತ ಮೇಲೆ ಮೂವರೂ ವಿಧವೆಯರೇ,' ಎಂದು ಕ್ಲುಪ್ತವಾಗಿ ಹೇಳಿದ ರಮಣರು ಎದ್ದು ನಡೆದರು. ಅವರು ಇಷ್ಟು ಮಾತಾಡಿದ್ದೇ ಜಾಸ್ತಿ. ಅವರ ಬಳಿ ಮಾತೇ ಇಲ್ಲ. ಎಲ್ಲ ಮೌನ. ಉತ್ತರ ಕೇಳಿ ಬಂದವರ ಪ್ರಶ್ನೆಗಳೇ ಅನಾವಶ್ಯಕವಾಗಿಬಿಡುತ್ತಿದ್ದವು ಅವರ ಮುಂದೆ ಕುಳಿತಾಗ. ಅಂತಹ ತೇಜಸ್ಸು ಮತ್ತು ಮಹಿಮೆ ಅವರದ್ದು. ಆದರೆ ಕರ್ಮ ಸಿದ್ಧಾಂತದ ಬಗ್ಗೆ ಕೇಳಿದ ಪ್ರಶ್ನೆ ಗಹನವಾಗಿತ್ತು ಮತ್ತು ಪ್ರಸ್ತುತವಾಗಿತ್ತು ಎಂಬ ಕಾರಣಕ್ಕೆ ಕೊಂಚ ಮಾತಾಡಿದ್ದರು ರಮಣರು.

ಈ ಎರಡು ವಿರೋಧಾತ್ಮಕ (contradictory) ತತ್ವಗಳನ್ನು ಸಮನ್ವಯ (reconcile) ಮಾಡುವದು ಹೇಗೆ?

ಜ್ಞಾನೋದಯದ ನಂತರ ಆಗಾಮಿ ಮತ್ತು ಸಂಚಿತ ಕರ್ಮಗಳು ಮಾತ್ರ ನಾಶವಾಗುತ್ತವೆ. ಪ್ರಾರಬ್ಧ ಕರ್ಮದ ಫಲ, ಜ್ಞಾನಿಯಾದರೂ ಸರಿ, ಅನುಭವಿಸಲೇಬೇಕು ಎನ್ನುತ್ತದೆ ಕರ್ಮ ಸಿದ್ಧಾಂತ. ಗಂಡ ಸತ್ತ ನಂತರ ಎಲ್ಲ ಪತ್ನಿಯರೂ ವಿಧವೆಯರೇ ಅರ್ಥಾತ್ ಜ್ಞಾನೋದಯದ ನಂತರ ಯಾವ ಕರ್ಮವೂ ಉಳಿಯುವದಿಲ್ಲ ಅನ್ನುತ್ತಾರೆ ರಮಣರು.

ಸಮನ್ವಯ ಮಾಡುವ ಜರೂರತ್ತೇ ಇಲ್ಲ. ಭಕ್ತ ಅವನ frame of  reference ನಿಂದ ಕೇಳಿದ್ದ. ಭಕ್ತನ ಲೌಕಿಕ frame of reference ಅಂದರೆ ಈ ಜೀವನ, ಜಗತ್ತು. ಅದೆಲ್ಲ ಮಾಯೆ. ಮಾಯೆಯೊಳಗೆ ಇದ್ದಾಗ ಮಾತ್ರ ಕರ್ಮ ಸಿದ್ಧಾಂತಕ್ಕೆ ಅರ್ಥ. ರಮಣರು ಹೇಳಿದ್ದು ಅವರ ಉನ್ನತವಾದ frame of reference ನಿಂದ. ಅವರದ್ದು ಪಾರಮಾರ್ಥಿಕ ಸತ್ಯದ reference point. ಅವರ ದೃಷ್ಟಿಯಿಂದ ನೋಡಿದಾಗ ಎಲ್ಲವೂ ಪರಬ್ರಹ್ಮ.

ಎಲ್ಲವೂ ನೋಡುವ ದೃಷ್ಟಿ ಮೇಲೆ ಅವಲಂಬಿತ. ನೋಡುವ ದೃಷ್ಟಿ ಬದಲಾದರೆ ಸೃಷ್ಟಿ ಬದಲಾಗುತ್ತದಂತೆ.

ಇದು ಮೊನ್ನಿತ್ತಲಾಗೆ ಏನೋ ಓದುತ್ತಿದ್ದಾಗ ಅಚಾನಕ್ಕಾಗಿ ಸಿಕ್ಕು ಸಣ್ಣ ಮಟ್ಟದ ಜ್ಞಾನೋದಯಕ್ಕೆ (epiphany) ಕಾರಣವಾದ golden nugget! :)