Sunday, February 26, 2023

Travels...

Traveling since 1-June-2022. 

Following maps show my travel between 1-June-2022 to 17-September-2022. Total around 10,000 miles. Includes long distance travel between the states and local travel.






Travel continues....will update when the current phase completes. Expected - 28-June-2023.

Saturday, February 25, 2023

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ 'ಮುಖ ಗುರುತಿಸುವಿಕೆ' (facial recognition) ತಂತ್ರಜ್ಞಾನ

'ಮುಖ ಗುರುತಿಸುವಿಕೆ' (facial recognition) ತಂತ್ರಜ್ಞಾನ ತಿರುಪತಿಯಲ್ಲಿ ಬಳಕೆಯಾಗಲಿದೆಯಂತೆ. ಭಕ್ತರ ಪಂಜೀಕರಣ (ನೋಂದಣಿ) ಮಾಡಲಿಕ್ಕೆ ಮತ್ತು ದರ್ಶನವನ್ನು ತ್ವರಿತವಾಗಿ  ಮಾಡಿಸಲು ಈ ತಂತ್ರಜ್ಞಾನ ಸಹಾಯಕಾರಿಯಂತೆ. ಹಾಗಂತ ಆಡಳಿತ ಮಂಡಳಿಯ ಅಭಿಪ್ರಾಯ ಮತ್ತು ಆಶಯ. ಒಳ್ಳೇದು. 

ತಿರುಪತಿ ಅಂದ ಕೂಡಲೇ ನೆನಪಾಗುವದು ಎಂದರೆ ಒಂದು ನಾಮ, ಎರಡನೆಯದು ಕೇಶಮುಂಡನ. ನನ್ನ ಜಿಜ್ಞಾಸೆ ಏನೆಂದರೆ ಕೇಶಮುಂಡನ ಮಾಡಿಸಿಕೊಂಡು, ನಾಮ ಹಾಕಿಸಿಕೊಂಡು ಹಾಜರಾದರೆ ಈ 'ಮುಖ ಗುರುತಿಸುವಿಕೆ' ತಂತ್ರಜ್ಜಾನ ಕೆಲಸ ಮಾಡೀತೇ ಎಂದು. ಸಾಮಾನ್ಯ ಹೇರ್ ಕಟಿಂಗ್ ಮಾಡಿಸಿದರೇ ಮಂಗನ ಮುಖವಾಗಿ ಪುನಃ ಮನುಷ್ಯನ ಮುಖವಾಗುವ ಹೊತ್ತಿಗೆ ಮರಳಿ ಕಟಿಂಗ್ ಮಾಡಿಸುವ ಸಮಯವಾಗಿರುತ್ತದೆ. ಸಾಮಾನ್ಯ ರೀತಿಯಲ್ಲಿ ಮಂಡೆ ಹೆರೆದಾಗಲೇ ಚಹರಾಪಟ್ಟಿಯಲ್ಲಿ ಅಂತಹ ಕ್ರಾಂತಿಕಾರಿ ಬದಲಾವಣೆ ಕಂಡುಬರುತ್ತದೆ ಅಂತಾದರೆ ಪೂರ್ತಿ ಗುಂಡು ಹೊಡೆಸಿ ಮೇಲಿಂದ ವರ್ಣರಂಜಿತ ನಾಮ ಹಾಕಿಕೊಂಡರೆ ಚಹರಾಪಟ್ಟಿಸಂಪೂರ್ಣ ಬದಲಾವಣೆಯಾದೀತು. ಹಾಗಂತ ನನ್ನ ಭಾವನೆ. ಅಂತಹ ಬಂಡಾಯಕಾರಿ ಬದಲಾವಣೆಯನ್ನು 'ಮುಖ ಗುರುತಿಸುವಿಕೆ' ತಂತ್ರಜ್ಞಾನ ಬಗೆಹರಿಸೀತೇ? ಆ ಏಳು ಕುಂಡಲವಾಡ ವೆಂಕಪ್ಪನೇ ಬಲ್ಲ. ನಾ ಮಂಕಪ್ಪನಿಗೇನು ಗೊತ್ತು?

facial recognition ತಂತ್ರಜ್ಞಾನದ ಫಲಪ್ರದತೆಯನ್ನು (efficacy) ಕಂಡು ಹಿಡಿಯಲು ಅತ್ಯುತ್ತಮ ವಿಧಾನವೆಂದರೆ facial ಮಾಡಿಸಲು ಬ್ಯೂಟಿ ಪಾರ್ಲರ್ ಒಳಹೊಕ್ಕ ಮಹಿಳೆ ಮತ್ತು facial ಮಾಡಿಸಿಕೊಂಡು ಹೊರಬಿದ್ದ ಮಹಿಳೆ ಇಬ್ಬರೂ ಒಬ್ಬರೇ ಎಂದು ಸ್ಥಿರವಾಗಿ, ನಿಯಮಿತವಾಗಿ, ಕರಾರುವಕ್ಕಾಗಿ ಹೇಳಬಲ್ಲದಾದರೆ ಈ ತಂತ್ರಜ್ಞಾನ prime time ಗೆ ಸಜ್ಜಾಗಿದೆ ಎಂದು ಹೇಳಬಹುದು ಎಂದು ಕಿಡಿಗೇಡಿಗಳ ಕಿತಾಪತಿ ವಿಚಾರ.

facial ಮಾಡಿಸಿಕೊಂಡ ಒಬ್ಬ ಮಹಿಳೆ ಮನೆಗೆ ಬಂದಳಂತೆ. ಬಾಗಿಲು ತೆಗೆದ ಗಂಡ, 'ಯಾರು ನೀವು? ಯಾರು ಬೇಕಾಗಿತ್ತು?' ಎಂದು ಕೇಳಿದ. ಅವನಿಗೆ ಗೊತ್ತೇ ಆಗಲಿಲ್ಲ. ಯಬಡೇಶಿ.

'ಅಯ್ಯೋ, ನಾನ್ರೀ. ನಿಮ್ಮ ಹೆಂಡತಿ. ಅಷ್ಟೂ ಗೊತ್ತಾಗಲಿಲ್ಲ?? ಬ್ಯೂಟಿ ಪಾರ್ಲರಿಗೆ ಹೋಗಿಬರ್ತೇನಿ ಅಂತ ಹೇಳಿ ಹೋಗಿದ್ದೆನಲ್ಲ?' ಎಂದು ರಾಗವಾಗಿ ಹೇಳಿದಳು ಪತ್ನಿ.

'ನೋಡ್ರೀ. ನೀವು ಯಾರಂತ ಗೊತ್ತಿಲ್ಲ. ಹೆಂಡತಿ ಗಿಂಡತಿ ಅಂತ ಹೇಳ್ಕೊತ್ತ ಬಂದ್ರ ನಾ ಪೊಲೀಸರಿಗೆ ಫೋನ್ ಹಚ್ಚಬೇಕಾಗ್ತದ ನೋಡ್ರೀ!' ಎಂದು ಆವಾಜ್ ಹಾಕಿಬಿಟ್ಟ ಗಂಡ. ಅವನ ಹೆಂಡತಿಯೋ ಚಾಂಡಾಲಿ ಮಾದರಿ ಇದ್ದಳು. ಇವಳು ನೋಡಿದರೆ ಚಾಂದನಿ ಮಾದರಿಯಲ್ಲಿ ಇದ್ದಾಳೆ. ಎಲ್ಲಿಯ ಚಾಂಡಾಲಿ. ಎಲ್ಲಿಯ ಚಾಂದನಿ.

ಹೆಂಡತಿ ತಾನೇ ಹೆಂಡತಿ ಎಂದು ಹೇಳಿಯೇ ಹೇಳಿದಳು. ಗಂಡ ಒಪ್ಪಲು ತಯಾರಿಲ್ಲ. ಅಷ್ಟರಲ್ಲಿ ಭೋರ್ಗರೆದು ಮಳೆ ಬಂತು. ಮಳೆಯಲ್ಲಿ ನೆನೆದು ತೊಪ್ಪೆಯಾದಳು. ಮೇಕ್ಅಪ್ ಎಲ್ಲಾ ತೊಳೆದು ಹೋಗಿ ಒರಿಜಿನಲ್ ಕಪ್ಪೆ ರೂಪ ವಾಪಸ್ ಬಂತು. ಗಂಡ ಸಿಕ್ಕಾಪಟ್ಟೆ ಆಶ್ಚರ್ಯ ಪಟ್ಟ. ಮೂಗಿನ ಮೇಲೆ ಬೆರಳಿಟ್ಟುಕೊಂಡ. ಇವಳು ಅವನ ತಲೆ ಮೇಲೆ  ಕೈಯಿಟ್ಟು ಜೋರಾಗಿ ಫಟ್ ಅಂತ ಒಂದು ಕೊಟ್ಟಳು. ಸಾವಿರಾರು ರೂಪಾಯಿ ಕೊಟ್ಟು ಮುಖಕ್ಕೆ facial, ಮಂಡೆಗೆ ಮೆಹಂದಿ ಎಲ್ಲಾ ಹಚ್ಚಿಸಿಕೊಂಡು ಚಾಂಡಾಲಿಯಾಗಿದ್ದಾಕೆ ಚಾಂದನಿಯಾಗಿ ಚಂದಾಗಿಚಮಕಾಯಿಸುತ್ತಾ ಕುಣಿಕುಣಿಯುತ್ತಾ ಬಂದರೆ ಯಬಡೇಶಿ ಗಂಡ ಬಾಗಿಲಲ್ಲೇ ನಿಲ್ಲಿಸಿದ್ದ. ದರಿದ್ರ ಮಳೆಯೂ ಆವಾಗಲೇ ಬರಬೇಕೇ?

ಏಳೇಳು ಜನ್ಮದ ಸಾಥ್ ನಿಭಾನಾ ಮಾಡುತ್ತೇನೆಂದು ಹೇಳಿಕೊಂಡು ಒಂದೇ ಜನ್ಮದಲ್ಲಿ ಏಳೇಳು ಜನ್ಮದ ಪರಿಚಯ ಮಾಡಿಕೊಂಡ ಗಂಡನೇ ಬ್ಯೂಟಿ ಪಾರ್ಲರಿನಿಂದ ಬಂದ  ಹೆಂಡತಿಯನ್ನು ಗುರುತಿಸಲು ವಿಫಲನಾದರೆ facial recognition ತಂತ್ರಜ್ಞಾನ ಯಶಸ್ವಿಯಾದೀತೇ? ಗೊತ್ತಿಲ್ಲ. ಅದು ತಿರುಪತಿ ತಿಮ್ಮಪ್ಪನಿಗೆ ಮಾತ್ರ ಗೊತ್ತು.

ಒಟ್ಟಿನಲ್ಲಿ facial ಮತ್ತಿತರ ಬ್ಯೂಟಿ ಟ್ರೀಟ್ಮೆಂಟ್ ಮಾಡಿಸಿಕೊಂಡು ಬಂದ ಮಹಿಳಾಮಣಿಯರ ಟೆಸ್ಟ್ ಮಾಡಿ ಅದರಲ್ಲಿ ಯಶಸ್ವಿಯಾದರೆ ನಂತರ ತಿಮ್ಮಪ್ಪನ ಸನ್ನಿಧಿಯಲ್ಲಿ ಉಪಯೋಗ ಮಾಡಬಹುದು ಎಂದು ಕೆಲವರ ಭಾವನೆ.

ಏನಂತೀರಿ??

facial recognition ಎಂಬುದು artificial intelligence (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಮೇಲೆ ಅವಲಂಬಿತವಾದ ಒಂದು ಉಪ ತಂತ್ರಜ್ಞಾನ.

artificial intelligence ಬಗ್ಗೆ ಇರುವ ತಮಾಷೆಯ ಮಾತೆಂದರೆ Artificial intelligence is created by humans with natural stupidity. 

Artificial Intelligence ವಿರುದ್ಧ ಶಬ್ದ Natural Stupidity.

Friday, February 24, 2023

ಆಂಟಿ...

ಹಳಸಿದ ಜೋಕೊಂದನ್ನು ಮತ್ತೊಮ್ಮೆ ಯಾರೋ ವಾಟ್ಸಪ್ಪ್ ನಲ್ಲಿ ಕಳಿಸಿದ್ದರು.

ಭಕ್ತ: ದೇವರೇ, ಹುಡುಗಿಯರು ಅದೆಷ್ಟು ಸುಂದರವಾಗಿಯೂ, ಕೋಮಲವಾಗಿಯೂ ಇರುತ್ತಾರೆ. ಆದರೆ ಹೆಂಡತಿಯರು ಹೀಗೇಕೆ? ಸದಾ ಸಿಡುಕುತ್ತ ಜಗಳವಾಡುತ್ತಿರುತ್ತಾರೆ??

ದೇವರು: ಹುಡುಗಿ ನನ್ನ ಸೃಷ್ಟಿ. ಹೆಂಡತಿ ನಿನ್ನ ಸೃಷ್ಟಿ.

ಹೀಗೆ ಹೇಳಿ ಭಗವಂತ ಮಾಯವಾದ.

ಆಂಟಿಯರೂ (ಬೇರೆಯವರ ಹೆಂಡತಿಯರು) ಕೂಡ ತುಂಬಾ ಸುಂದರವಾಗಿಯೂ, ಕೋಮಲೆಯರಾಗಿಯೂ ಇರುತ್ತಾರೆ. ಅಥವಾ ಹಾಗಿದ್ದಂತೆ ಕಾಣುತ್ತಾರೆ. ಏಕೆಂದರೆ ಆಂಟಿಯರೂ ಕೂಡ ದೇವರ ಸೃಷ್ಟಿಗಳೇ. ಅದು ಹೇಗೆ!? ಮಹಿಳೆಯೊಬ್ಬಳು ಆಂಟಿಯಾಗುವದು ಯಾವಾಗ? ಮಕ್ಕಳು ಆಂಟಿ ಆಂಟಿ ಎಂದು ಕರೆದಾಗ. ಆಂಟಿ ಅಂತಹ ಮಕ್ಕಳ ಸೃಷ್ಟಿ. ಮಕ್ಕಳು ದೇವರ ಸಮಾನ. ಹಾಗಾಗಿ ಆಂಟಿಯರು ದೇವರ ಸೃಷ್ಟಿ. ಹಾಗಾಗಿ ಅವರು ತುಂಬಾ ಇಷ್ಟವಾಗುತ್ತಾರೆ. ಹಾಗಾಗುವುದು ಮಾಯೆಯ ಪರಾಕಾಷ್ಠೆ ಎಂದು ಆಂಟಿಯರ ಸಖ್ಯ  ಮಾಡಿದವರ ಅಭಿಪ್ರಾಯ. ನಂತರ ಅವರು ಆಂಟಿಯರು ಭಗವಂತನ ಸೃಷ್ಟಿ ಎಂದು ಹರ್ಗೀಸ್ ಹೇಳುವುದಿಲ್ಲ. ಅದೇನಿದ್ದರೂ ದೇವರ ಲೀಲೆ. ಸಂಸಾರದ ಮಾಯೆ ಎಂದು ಹೇಳುತ್ತಾ ತಲೆ ಮೇಲೆ ಟವೆಲ್ ಹಾಕಿಕೊಂಡು ಖಾಲಿ ಕಿಸೆಯಲ್ಲಿ ಕೈಬಿಡುತ್ತಾರೆ. ಆಂಟಿ ಸಹವಾಸ ಅಂತಹ ಶೋಚನೀಯ ಸ್ಥಿತಿಗೆ ತಂದಿರುತ್ತದೆ. ಪಾಪ.

ಬೆಂಗಳೂರಿನಂತಹ ದೊಡ್ಡ ಶಹರಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಸೆಂಟ್ರಲ್  ಕ್ರೈಂ ಬ್ರಾಂಚ್ ಎನ್ನುವ ಒಂದು elite ವಿಭಾಗವಿರುತ್ತದೆ. ಅದರಲ್ಲಿ anti rowdy squad ಅನ್ನುವ ಉಪವಿಭಾಗ ಇರುತ್ತದೆ. ಅಥವಾ ರೌಡಿಸಂ ಜಾಸ್ತಿಯಾದಾಗ ಸೃಷ್ಟಿಸಲ್ಪಡುತ್ತದೆ. ನಾನಂತೂ ಅದನ್ನು ಆಂಟಿ ರೌಡಿ ಸ್ಕ್ವಾಡ್ ಎಂದೇ ಓದಿ ನಗುತ್ತಿದ್ದೆ. ರೌಡಿಯಂತಹ ಆಂಟಿಯರನ್ನು ಸಂಬಾಳಿಸಲು ಇರುವ ಪೊಲೀಸ್ ತಂಡ. 

ಸಿನೆಮಾ ಒಂದರ ದೃಶ್ಯ. ಅದರಲ್ಲಿ ನಟ ಕೋಮಲ್ ಕುಮಾರ್ (ನಟ ಜಗ್ಗೇಶ್ ತಮ್ಮ) ಒಂದು ವಿಡಿಯೋ, ಸಿಡಿ ಬಾಡಿಗೆಗೆ ಕೊಡುವ ಅಂಗಡಿ ಇಟ್ಟಿರುತ್ತಾನೆ. ರಹಸ್ಯವಾಗಿ ಬ್ಲೂಫಿಲಂ ಕೂಡ ಕೊಡುತ್ತಿರುತ್ತಾನೆ. ಆಗ ಯಾರೋ ಅವನಿಗೆ ಜೋರು ಮಾಡುತ್ತಾರೆ. ಹಾಗೆಲ್ಲಾ ಬ್ಲೂಫಿಲಂ ಸಿಡಿ ಚಲಾವಣೆ ಮಾಡಿದರೆ ಆಂಟಿ ರೌಡಿ ಸ್ಕ್ವಾಡ್ ಗೆ ದೂರು ಕೊಡುವುದಾಗಿ ಹೆದರಿಸುತ್ತಾರೆ. ಹಾಗೆ ರೋಪ್ ಹಾಕಿದಾಗ ಕೋಮಲ್ ಹೊಡೆವ ರಿವರ್ಸ್ ಡೈಲಾಗ್ - ರೀ ಸ್ವಾಮೀ, ಏನು ಆಂಟಿ ರೌಡಿ ಸ್ಕ್ವಾಡಿಗೆ ಹೋಗ್ತೀರಾ? ಹೋಗಿ. ಹೋಗಿ. ಆಂಟಿ ಮತ್ತು ರೌಡಿ ಕೂಡಿಯೇ ಈ ಅಂಗಡಿ ಹಾಕಿಕೊಟ್ಟಿದ್ದು. ಗೊತ್ತಾ!?

ಅವನ ಅಂಗಡಿಯ ಅಸಲಿ ಮಾಲೀಕರು ಆ ಏರಿಯಾದ ಒಬ್ಬ ಖತರ್ನಾಕ್ ಆಂಟಿ ಮತ್ತು ಒಬ್ಬ ಖರಾಬ್ ರೌಡಿ. 

ಹೀಗೆ ಆಂಟಿ ಮಹಿಮೆ ಅಪಾರ!!

Saturday, February 11, 2023

ನಮ್ಮ ಬ್ಯಾಚಿನ "ಸೆಂಚುರಿ ಗೌಡ"

"ತಿಥಿ" ಕನ್ನಡ ಸಿನೆಮಾ ನೋಡಿದ್ದೀರಾ? ತುಂಬಾ ಚೆನ್ನಾಗಿದೆ. ಅದರಲ್ಲಿ "ಸೆಂಚುರಿ ಗೌಡ" ಎಂಬ ಪಾತ್ರವಿದೆ. ಆ ಪಾತ್ರದಾರಿ ಸಿಕ್ಕಾಪಟ್ಟೆ ಫೇಮಸ್ ಆಗಿಹೋದ.

"ಸೆಂಚುರಿ ಗೌಡ" ಎಂದು ಕೇಳಿದಾಗ ನನಗೆ ಮೊದಲು ನೆನಪಾಗಿದ್ದು ನಮ್ಮ ಮಿತ್ರ ವಿನೋದ್ ಕಲ್ಲನಗೌಡರ್. ವಿನೋದ್ ಕಲ್ಲನ"ಸೆಂಚುರಿ"ಗೌಡರ್ ಎಂದು ಬದಲಾಯಿಸಿ ಬಹಳ ನಕ್ಕೆ.

ನನಗೆ ಗೊತ್ತಿದ್ದಂತೆ ನಾವು ಶಾಲೆಯಲ್ಲಿ ಇದ್ದ ಆರು ವರ್ಷಗಳಲ್ಲಿ ಯಾರೂ ಕ್ರಿಕೆಟ್ ಪಂದ್ಯದಲ್ಲಿ ಸೆಂಚುರಿ ಹೊಡೆದಿರಲಿಲ್ಲ. ಹೀಗಿರುವಾಗ ಶಾಲೆಯ ಪಂದ್ಯವೊಂದರಲ್ಲಿ ಪಪ್ರಥಮ ಶತಕ ಬಾರಿಸಿದ ಕೀರ್ತಿ ವಿನೋದ್ ಕಲ್ಲನಗೌಡರ್ ಉರ್ಫ್ ಸೆಂಚುರಿಗೌಡರನಿಗೇ ಸಲ್ಲಬೇಕು.

ಎಂಟನೇ ಕ್ಲಾಸ್. ೧೯೮೫ -  ೮೬. C ಕ್ಲಾಸಿನ ಟೀಮಿನವರು ಬೇರೆ ಯಾವುದೋ ಕ್ಲಾಸ್ ವಿರುದ್ಧ ಮ್ಯಾಚ್ ಕೊಟ್ಟಿದ್ದರು. ನಮ್ಮ A ಕ್ಲಾಸಿನ ವಿರುದ್ಧವಂತೂ ಅಲ್ಲ. ಅದು ಖಾತ್ರಿಯಿದೆ. A ಕ್ಲಾಸಿನವರು ಆಗ ಬ್ಯಾಡ್ಮಿಂಟನ್ ಗುಂಗಿನಲ್ಲಿ ಇದ್ದರು. 

ಅಂತಹ ಮ್ಯಾಚಿನಲ್ಲಿ ನಾಲ್ಕಾರು ದಿವಸಗಳ ಅವಧಿಯಲ್ಲಿ ಶತಕ ಬಾರಿಸಿದ್ದು ಈ ವಿನೋದ್ ಕಲ್ಲನಗೌಡರ್  ಉರ್ಫ್ ಸೆಂಚುರಿಗೌಡರ್ .

ಶತಕ ಮುಟ್ಟಿದ ಸಂಭ್ರಮದ ಆಚರಣೆಗಾಗಿ ತಯಾರಿ ಭರ್ಜರಿಯಾಗಿತ್ತು. ನಾವೆಲ್ಲರೂ ನಮ್ಮ ನಮ್ಮ (ಕಪಿ)ಮುಷ್ಠಿಗಳಲ್ಲಿ ಸಿಕ್ಕಿದ ಮಣ್ಣು ಕಲ್ಲು ಹಿಡಿದುಕೊಂಡು ತಯಾರಾಗಿ ನಿಂತಿದ್ದೆವು. (ನಾವೆಲ್ಲರೂ ಆಗ ಕಪಿಮುಂಡೇವೇ ತಾನೇ? ಹಾಗಾಗಿ ಕಪಿಮುಷ್ಠಿ ಎಂದೆ.)

ಮಿತ್ರ ವಿನೋದ್ ಚೆಂಡನ್ನು ಪುಶ್ ಮಾಡಿ ಓಡಿದ. ಚೆಂಡು ನೋಡುತ್ತಾ ನಿಂತವರ ಮಧ್ಯೆ ನುಸುಳಿ ಹೋಗತೊಡಗಿತು. ಪಿಚ್ಚಿನ ಸುತ್ತ ಕಿಕ್ಕಿರಿದಿದ್ದ ಯಾವದಾದರೂ ಮಂಗ್ಯಾನಮಗನ ಕಾಲಿಗೋ ಬಾಲಕ್ಕೋ ಚೆಂಡು  ಬಡಿದು, ಅದು ಅಲ್ಲೇ ನಿಂತುಹೋಗಿ, ಶತಕಕ್ಕೆ ವಿಘ್ನ ಬಂದೀತು ಎನ್ನುವ ಎಚ್ಚರಿಕೆಯಲ್ಲಿ C ಕ್ಲಾಸಿನ ವಿಘ್ನನಿವಾರಕ ಪೈಲ್ವಾನ್ ಶ್ರೀಕಾಂತ್  ದೇಸಾಯಿ ಎಲ್ಲರನ್ನೂ 'ಪ್ರೀತಿಯಿಂದ' ವಾಚಾಮಗೋಚರವಾಗಿ ಬೈಯ್ಯುತ್ತಾ, 'ಎಲ್ಲಾರೂ ಬಾಜೂ ಸರೀರೋ ನಿಮ್ಮೌರ್. ಸೆಂಚುರಿ ಮಿಸ್ ಆತಂದ್ರ ಅಷ್ಟ ಮತ್ತ. ನೊಡ್ರಿಲ್ಲೇ. ಕೈಯಾಗ ಇರೋ ಕಾರ್ಕ್ ಬಾಲ್ ಸೀದಾ ಒಗೆದು ಒಬ್ಬಬರ ಡುಬ್ಬಾ ಮುರಿತೀನಿ' ಎಂದು ಖಡಕ್  ಆವಾಜ್ ಹಾಕಿದ ಅಬ್ಬರಕ್ಕೆ ಸಮುದ್ರ ಇಬ್ಭಾಗವಾಗಿ ಮೋಸೆಸ್ಸನಿಗೆ ದಾರಿ ಮಾಡಿಕೊಟ್ಟಂತೆ ಪ್ರೇಕ್ಷಕ ಮಂಗ್ಯಾನಮಕ್ಕಳೆಲ್ಲ ಆಕಡೆ ಈಕಡೆ ಸರಿದು, ಚೆಂಡಿಗೆ ದಾರಿ ಮಾಡಿಕೊಟ್ಟು, ಚೆಂಡು ದಾಟಿ  ಹೋಗಿ, ಅಂತೂ ಇಂತೂ ಒಂದೋ ಎರಡೂ ರನ್ ಬಂದು ಶತಕ ಪೂರೈಸಿತು. ಸೆಂಚುರಿ!!

ಎಲ್ಲರೂ ಕೈಯಲ್ಲಿದ್ದ ಮಣ್ಣು ಕಲ್ಲು ಎತ್ತರ ಪತ್ತರ ಮೇಲಕ್ಕೆ ತೂರಿ, ಚಿತ್ರವಿಚಿತ್ರವಾಗಿ ಕೇಕೆ (ಕ್ಯಾಕಿ) ಹೊಡೆದು ಶತಕವನ್ನು ಸಂಭ್ರಮಿಸಿದರು. ಅವೆಲ್ಲಾ ತಿರುಗಿ ನಮ್ಮ ತಲೆಯ ಮೇಲೆಯೇ ಅಕ್ಷತೆ ಮಾದರಿಯಲ್ಲಿ ಬಿದ್ದು ನಾವು ಮಂಗ್ಯಾ ಆದೆವು. ಈ ಐತಿಹಾಸಿಕ ಘಟನೆಗೆ ದೇವತೆಗಳು ಮೇಲಿಂದ ಪುಷ್ಪವೃಷ್ಟಿ ಮಾಡಲಿಲ್ಲ. ಹಾಗಾಗಿ ನಾವು ನಮ್ಮಷ್ಟಕ್ಕೆ ನಾವು ಮಣ್ಣು ಕಲ್ಲಿನ ವೃಷ್ಟಿಯನ್ನು, ನಮ್ಮ ಮೇಲೆಯೇ ಮಾಡಿಕೊಂಡು ಸಂಭ್ರಮಿಸಿದೆವು. ಅದರಲ್ಲಿ ಆ ಕ್ಲಾಸಿನವ ಈ ಕ್ಲಾಸಿನವ ಎನ್ನುವ ಭೇದ ಇರಲಿಲ್ಲ. ನಂತರ ವಿನೋದ್ ಸೆಂಚುರಿಗೌಡನನ್ನು ಮೆರವಣಿಗೆಯಲ್ಲಿ ಭುಜದ ಮೇಲೆ ಹೊತ್ತು ಕರೆದುಕೊಂಡು ಹೋದರೇ? ಅದು ನೆನಪಿಲ್ಲ. ಅಷ್ಟರಲ್ಲಿ ಪ್ಯೂನ್ ಹನುಮಂತ ಪೂಜಾರಿ ಬಾರಿಸಿದ್ದ. ಅಂದರೆ  ಢಣಢಣ ಗಂಟೆ ಬಾರಿಸಿದ್ದ. ಊಟದ ಸೂಟಿ ಮುಗಿದಿತ್ತು. ಕ್ಲಾಸಿಗೆ ವಾಪಸ್. ಊಟದ ಸೂಟಿಯ ನಂತರದ ಪೀರಿಯೆಡ್ಡುಗಳು ಶುದ್ಧ ಬೋರ್. 

ಮರುದಿವಸ ಪ್ರಾರ್ಥನೆಯ ನಂತರ ಪಟೇಲ್ ಸರ್  ಎಂದಿನಂತೆ ಮಾಡುತ್ತಿದ್ದ ಘೋಷಣೆಗಳ (Announcements) ಮಧ್ಯೆ ವಿನೋದನ ಶತಕದ ಬಗ್ಗೆಯೂ ಹೇಳಿ ಹಾರ್ದಿಕವಾಗಿ ಅಭಿನಂದಿಸಿದರು. ಹೇಳುವ ಭರದಲ್ಲಿ 'ಶತಕ ಬಾರಿಸಿದ ಬಾಲ!' ಎಂದುಬಿಟ್ಟರು. ಬಾಲಕ ಅಂದಿದ್ದರೆ ಛಲೋ ಇತ್ತು. ನಮಗೆ ಬಾಲ ಅಂದ್ರೆ ಬಾಲ. ಮಂಗ್ಯಾನ ಬಾಲ, ಕತ್ತೆ ಬಾಲ ಇತ್ಯಾದಿ.

ವಿನೋದ್ ಸೆಂಚುರಿಗೌಡರನಿಗೆ ಸೆಂಚುರಿ ಹೊಡೆದ ನಂತರ ಬಾಲ ಬಂದಿರಬಹುದೇ ಎನ್ನುವ ಜೋಕ್ ಚಾಲ್ತಿಯಲ್ಲಿತ್ತು. ಮಂಗನಿಂದ ಮಾನವನಾದ ಮೇಲೆ ಬಾಲ ಮಾಯವಾಗಿದ್ದರೂ ಸೆಂಚುರಿ ಹೊಡೆದ ಮೇಲೆ ಮತ್ತೆ ಬಂದುಬಿಟ್ಟಿದೆಯೇನೋ ಎನ್ನುವ ಜೋಕ್. ಎಲ್ಲದಕ್ಕೆ ಕಾರಣ ಪಟೇಲ್ ಸರ್ "ಬಾಲ" ಎಂದಿದ್ದು. ಮಾಸ್ತರ್ ಮಂದಿ ಏನೇ ಹೇಳಿದರೂ ಅದಕ್ಕೊಂದು ಅನರ್ಥ ಕಲ್ಪಿಸಿ ಇಡೀ ದಿನ ಅದನ್ನೇ ಮತ್ತೆ ಮತ್ತೆ ಹೇಳಿ ನಗುವುದಿದೆಯೆಲ್ಲಾ ಅದರಲ್ಲಿರುವ ಮಜಾ ಅನುಭವಿಸಿದವರಿಗೇ ಗೊತ್ತು. 

ಒಟ್ಟಿನಲ್ಲಿ ವಿನೋದ್ ಕಲ್ಲನಗೌಡರ್ ಎಂಬ 'ಬಾಲ' ಸೆಂಚುರಿ ಹೊಡೆದಿದ್ದು ದೊಡ್ಡ ಸುದ್ದಿಯಾಗಿತ್ತು. ಆ ದಾಖಲೆ ಇನ್ನೂ ಹಾಗೇ ಇರಬಹುದು. ಮಧ್ಯಾಹ್ನದ ಸೂಟಿಯಲ್ಲಿ ತಿಂಗಳುಗಟ್ಟಲೆ ನಡೆಯುತ್ತಿದ್ದ ಪಂದ್ಯಗಳಲ್ಲಿ ಮೊದಲ ಸೆಂಚುರಿ ದಾಖಲಿಸಿದ ಹೆಮ್ಮೆ ನಮ್ಮ ಬ್ಯಾಚಿಗಿದೆ.ಅದು ಸಾಧ್ಯವಾಗಿದ್ದು ನಮ್ಮ ಬಾಲ ದಾಂಡಿಗ  ವಿನೋದ್ ಸೆಂಚುರಿಗೌಡರ್ ಮೂಲಕ!

Thursday, February 02, 2023

ವಿಶೂ ಭೆಸ್ಟಾಫ್ ಲಕ್...

ಶಾಲಾ ದಿನಗಳಲ್ಲಿ ಪರೀಕ್ಷೆ ದಿನಗಳಂದು ಪರೀಕ್ಷೆ ಶುರುವಾಗುವ ಮೊದಲು ಪರಸ್ಪರರಿಗೆ Wish you best of luck ಎಂದು ಹಾರೈಸುವ ಪದ್ಧತಿ ಇತ್ತು.

ಅದರ ಅರ್ಥ, ಬರೋಬ್ಬರಿ ಉಚ್ಚಾರಣೆ ಯಾರಿಗೂ ಗೊತ್ತಿದ್ದಂತೆ ಇರಲಿಲ್ಲ. ಹೆಚ್ಚಿನವರ ಬಾಯಲ್ಲಿ ಅದು "ವಿಶೂ ಭೆಸ್ಟಾಫ್ ಲಕ್" ಎಂದು ಬರುತ್ತಿತ್ತೋ ಅಥವಾ ಹಾಗೆ ಕೇಳುತ್ತಿತ್ತೋ ಗೊತ್ತಿಲ್ಲ.

ಒಟ್ಟಿನಲ್ಲಿ ಪರೀಕ್ಷೆ ಮೊದಲು ಎಲ್ಲರೂ "ವಿಶೂ ಭೆಸ್ಟಾಫ್ ಲಕ್" ಅಂದು ಗದ್ದಲ ಎಬ್ಬಿಸುತ್ತಿದ್ದರು. ಎಲ್ಲಕಡೆ ವಿಶೂ ವಿಶೂ ಎನ್ನುವ ಕಲರವ.

ವಿಶ್ವನಾಥ ಅಂತ ಒಬ್ಬ ಮಿತ್ರ ಕೂಡ ಇದ್ದ. ಹೆಚ್ಚಿನವರಿಗೆ ಅವನು ವಿಶ್ಯಾ.  ಅವನ  ಚಡ್ಡಿ ದೋಸ್ತ್ ಒಬ್ಬನಿದ್ದ. ವಿನಯ ಅಂತ ಅವನ ಹೆಸರು. ಅವನಿಗೆ  ಮಾತ್ರ ಅವನು ವಿಶೂ.ಅದೂ ಜಾಸ್ತಿ ಪ್ರೀತಿ ಬಂದಾಗ ಮಾತ್ರ ವಿಶೂ. 

ವಿಶ್ಯಾನ ಆ ಚಡ್ಡಿ ಮಿತ್ರನಿಗೆ ಪರೀಕ್ಷೆ ದಿನದಂದು ಎಲ್ಲರೂ  ವಿಶೂ ಭೆಸ್ಟಾಫ್ ಲಕ್, ವಿಶೂ ಭೆಸ್ಟಾಫ್ ಲಕ್ ಅಂದು ಅಂದು ಮಿತ್ರ ವಿಶ್ವನಾಥನ ನಾಮಸ್ಮರಣೆಯಲ್ಲಿ ತೊಡಗಿಬಿಟ್ಟಿದ್ದಾರಲ್ಲ ಎಂದು ಅನ್ನಿಸಿರಬೇಕು. ಮೊದಲೇ ಹೇಳಿದಂತೆ ಹೆಚ್ಚಿನ  ಹುಡುಗರಿಗೆ ಅರ್ಥವಂತೂ ಗೊತ್ತಿರಲಿಲ್ಲ. 

"ಎಲ್ಲರೂ  ವಿಶೂ ಭೆಸ್ಟಾಫ್ ಲಕ್ , ವಿಶೂ ಭೆಸ್ಟಾಫ್ ಲಕ್  ಅಂತ ಯಾಕ್ ಹೇಳ್ ಬೇಕಲೇ? ಎಲ್ಲಾ ಕಡೆ ಬರೇ ವಿಷ್ಯಾನೇ ಬರಬೇಕೇನು?? ನಾ  ಎಲ್ಲರಿಗೂ ವಿನಯ್ ಭೆಸ್ಟಾಫ್ ಲಕ್ ಅಂತ ಹೇಳವಾ. ನೀವೂ ಎಲ್ಲರೂ ವಿನಯ್ ಭೆಸ್ಟಾಫ್ ಲಕ್ ಅಂತೇ ಹೇಳ್ರಿಲೇ, " ಎಂದವನೇ ಎಲ್ಲರಿಗೂ ಅಂದು "ವಿನಯ್  ಭೆಸ್ಟಾಫ್ ಲಕ್" ಎಂದೇ ಹಾರೈಸಿದ. 

ಅಂತಹ ವಿಶ್ವನಾಥ ಉರ್ಫ್ ವಿಶ್ಯಾ ಯಾನೇ ವಿಶೂನ ಜನ್ಮದಿವಸ ಇವತ್ತು. ವಿಶೂ ಹ್ಯಾಪಿ ಬರ್ತಡೇ (Wish you happy birthday) ಅನ್ನಬೇಕೋ ಅಥವಾ ವಿನಯ್ ಹ್ಯಾಪಿ ಬರ್ತಡೇ ಅನ್ನಬೇಕೋ ಅನ್ನುವ ಗೊಂದಲ. ಇರಲಿ ಇಬ್ಬರಿಗೂ ಒಪ್ಪುವಂತೆ ವಿಶೂ, ವಿನಯ್ ಹ್ಯಾಪಿ ಬರ್ತಡೇ ಅಂದು ಬಿಟ್ಟರೆ ಇಬ್ಬರಿಗೂ ಖುಷಿಯಾಗಬಹುದೇ??

ಮತ್ತೊಮ್ಮೆ... ವಿಶೂ, ವಿನಯ್ ಹ್ಯಾಪಿ ಬರ್ತಡೇ!!