Saturday, January 28, 2017

ಸ್ಮಾರ್ತರ ನೈವೇದ್ಯದಾಗ ಉಳ್ಳಾಗಡ್ಡಿ ನಡಿತದಂತ. ಹೌದೇನ್ರೀ!!??

'ಬರೋಬ್ಬರಿ ಝಾಡಿಸಿ ಬಂದೆ. ಬಿಡಲಿಲ್ಲ. ಏನಂತ ಮಾತಾಡೋಡು? ಹಾಂ?' ಅಂತ ಹೂಂಕರಿಸುತ್ತಲೇ ಅಮ್ಮ ಮನೆ ಒಳಹೊಕ್ಕರು.

ಸಂಜೆ ಒಂದು ಸುತ್ತು ವಾಯುವಿಹಾರ ಮಾಡಿ, ತರಕಾರಿ ಮತ್ತು ಮನೆಗೆ ಬೇಕಾದ ಸಾಮಾನು ತೆಗೆದುಕೊಂಡು, ಟೈಮ್ ಇದ್ದರೆ ಮತ್ತು ಮೂಡ್ ಇದ್ದರೆ ಯಾರಾದರೂ ಆತ್ಮೀಯರ ಮನೆಗೆ ಹೋಗಿ ಸ್ವಲ್ಪ ಹರಟೆ ಹೊಡೆದು, ರಾತ್ರಿ ಊಟದ ತಯಾರಿ ಹೊತ್ತಿಗೆ ಮನೆಗೆ ಬರುವದು ಮಾತಾಶ್ರೀ ಅವರ ರೂಢಿ. ಅವತ್ತೂ ಹಾಗೆಯೇ. ಯಾರಿಗೋ ಬೆಂಡೆತ್ತಿ ಬಂದೆ ಅಂತ ಏರುದನಿಯಲ್ಲಿ ಹೂಂಕರಿಸುತ್ತ ಎಂಟ್ರಿ ಕೊಟ್ಟಿದ್ದು ಅಂದಿನ ವಿಶೇಷ.

'ಯಾರಿಗೆ ಝಾಡಿಸಿ ಬಂದಿಬೇ?' ಎಂದು ಕೇಳಿದೆ. ಕಿತಬಿ ಮಾಡಬೇಕಾದರೆ 'ಬೇ' ಅನ್ನುವ 'ಗೌರವಸೂಚಕ' ಪದ ಬಳಸುತ್ತಿದ್ದೆ. ಯಾಕೋ ಗೊತ್ತಿಲ್ಲ. 'ಏನಾತಬೇ??', 'ಎಲ್ಲಿಗೆ ಹೊಂಟಿಬೇ??' ಇತ್ಯಾದಿ.

'ಮತ್ಯಾರಿಗೆ? ಅವರಿಗೇ. ನಮ್ಮ ಮಾಸ್ತರ್ರಿಗೆ. ಅವರಿಗೆ ಝಾಡಿಸಿಬಂದೆ,' ಅಂದ ಅಮ್ಮ ಮುಂದುವರೆದು, 'ನಮ್ಮ ಮಾಸ್ತರ್ರು, ಕ್ಲಾಸಿನ್ಯಾಗ ವಿದ್ಯಾ ಕಲಿಸ್ಯಾರ ಅಂತ ಅಷ್ಟಕ್ಕೇ ಬಿಟ್ಟುಬಂದೆ. ಬ್ಯಾರೆ ಯಾರರ ಆಗಿದ್ದರ ಹಾಕ್ಕೊಂಡು ಒಂದು ಕೈ ನೋಡಿ, ಬರೋಬ್ಬರಿ ತಿರುವ್ಯಾಡಿ ಬರಾಕಿ ನಾ. ಪಾಪ ಮಾಸ್ತರ್ ಅಂತ ಹೇಳಿ ಸ್ವಲ್ಪೇ ಝೋರ್ ಮಾಡಿ ಬಂದೆ. ಪಕ್ಕಾ ಮಳ್ಳ ಮಾಸ್ತರ್ರು.... ' ಅಂತ ಅಮ್ಮ ವಿವರಣೆ ಕೊಟ್ಟರು.

ಯಾರೋ ಅಮ್ಮನ ಪುರಾತನ ಮಾಸ್ತರರು ಏನೋ ಆಕ್ಷೇಪಾರ್ಹವಾದುದನ್ನು ಹೇಳಿದ್ದಾರೆ. ಅದಕ್ಕೇ ಅವರಿಗೆ ಲೈಟಾಗಿ ಬೆಂಡೆತ್ತಿ ಬಂದಿದ್ದಾಳೆ. ಇಷ್ಟು ತಿಳಿಯಿತು.

'ಯಾವ ಮಾಸ್ತರ್ರು? ಏನಂದ್ರು? ಝಾಡಿಸಿ ಬರುವಂತ್ತಾದ್ದೇನಾಗಿತ್ತಬೇ?' ಎಂದು ಕೇಳಿದೆ. ಫುಲ್ ಮಾಹಿತಿ ತೆಗೆಯಬೇಕಲ್ಲ.

ಯಾವ ಮಾಸ್ತರರು ಅನ್ನುವದನ್ನು ಹೇಳಿದರು. ಗೊತ್ತಾಯಿತು. ಅಮ್ಮ BA ಮಾಡುತ್ತಿರುವಾಗ ಪಾಠ ಮಾಡುತ್ತಿದ್ದರು. ಮಾಳಮಡ್ಡಿಯಲ್ಲಿ ನಮ್ಮ ನೆರೆಹೊರೆಯವರಾಗಿದ್ದರು. ನಾವು ಮುಂದೆ ಕಲ್ಯಾಣನಗರಕ್ಕೆ ಬಂದ ಮೇಲೂ ಮನೆ ಹತ್ತಿರದಲ್ಲೇ ಇದ್ದರು. ಅವರ ಪತ್ನಿ ಅಮ್ಮನ ಆತ್ಮೀಯ ಹಿರಿಯ ಸ್ನೇಹಿತೆ. ಕುಟುಂಬಗಳ ಮಧ್ಯೆ ಬಹಳ ಆತ್ಮೀಯತೆ ಮತ್ತು ಒಳ್ಳೆ ಸಂಬಂಧ ಇತ್ತು. ನಮ್ಮೆಲ್ಲರ ಶ್ರೇಯೋಭಿಲಾಷಿಗಳು. ಎಲ್ಲ ಸರಿ. ಹೀಗೆಲ್ಲ ಇದ್ದಾಗ ಅಮ್ಮನ ಕೈಯಲ್ಲಿ ಬೆಂಡೆತ್ತಿಕೊಳ್ಳುವಂತಹಹ ಲಫಡಾ ಏನು ಮಾಡಿದ್ದರು ಆ ಮಾಸ್ತರರು? ಅದನ್ನೂ ಅಮ್ಮನೇ ಹೇಳಿದಳು.

'ಮತ್ತೇನೋ?? ಹೋಗಿ ಹೋಗಿ ಏನು ಹೇಳಬೇಕು ಅವರು? ಏನಂತ ಕೇಳಬೇಕು??ಹಾಂ??' ಅಂತ ಪೀಠಿಕೆ ಇಟ್ಟರು ಅಮ್ಮ.

'ಏನಂದ್ರು?' ಅಂತ ಸಾಥ್ ಕೊಟ್ಟ ಮಾದರಿಯಲ್ಲಿ ಕೇಳಿದೆ.

'ಅಲ್ಲೋ. ನನ್ನ ಕೇಳ್ತಾರ. 'ಸ್ಮಾರ್ತರ ನೈವೇದ್ಯದಾಗ ಉಳ್ಳಾಗಡ್ಡಿ ಇದ್ದರ ನಡಿತದಂತ. ಹೌದೇನು?' ಅಂತ ಕೇಳ್ಬೇಕಾ? ಇದು ಕೇಳೋ ಮಾತಾ? ನನಗ ಸರ್ರ ಅಂತ ಸಿಟ್ಟು ಬಂತು ನೋಡು. ಝಾಡಿಸಿದೆ!' ಅಂದರು ಅಮ್ಮ.

ಅಲ್ಲಿಗೆ ಒಂದು ಮಟ್ಟಕ್ಕೆ ಪರಿಸ್ಥಿತಿ ಅರ್ಥವಾಯಿತು. ಸ್ಮಾರ್ತ ಬ್ರಾಹ್ಮಣರು ದೇವರಿಗೆ ಇಡುವ ನೈವೇದ್ಯದಲ್ಲಿ ಉಳ್ಳಾಗಡ್ಡೆ ಇದ್ದರೆ ಅಡ್ಡಿಯಿಲ್ಲ ತಾನೇ ಅಂತ ಅಮ್ಮನ ಆ ಪುಣ್ಯಾತ್ಮ ಮಾಸ್ತರರು ಕೇಳಿಬಿಟ್ಟಿದ್ದರು! ಅಲ್ಲಿಗೆ ತಮ್ಮ ಎನ್ಕೌಂಟರಿನ ಸುಪಾರಿಯನ್ನು ತಾವೇ ಕೊಟ್ಟುಕೊಂಡಿದ್ದರು.

'ಯಾರೋ ಸ್ಮಾರ್ತರ ನೈವೇದ್ಯದಾಗ ಉಳ್ಳಾಗಡ್ಡಿ ಇರ್ತದೇನು, ನಡಿತದೇನು ಅಂತ ಅವರು ಕೇಳಿದರ ನಿಂಗ್ಯಾಕ ಇಷ್ಟು ಸಿಟ್ಟು ಬೇ? ಯಾವ ಸ್ಮಾರ್ತರೋ, ಅವರೇನು ಕೇಳಿದರೋ, ನೀ ಏನು ಕೇಳಿಸಿಕೊಂಡಿಯೋ? ಹ್ಯಾಂ??' ಅಂತ ಕೊಕ್ಕೆ ಇಟ್ಟೆ.

'ಈಗಷ್ಟೇ ಆ ಮಳ್ಳ ಮಾಸ್ತರ್ರು ಇದನ್ನೇ ಕೇಳಿ ಮುಗಿಸಿದರು. ಈಗ ನೀ ಮತ್ತ ಅದನ್ನೇ ಕೇಳ್ತಿಯಲ್ಲಾ? ಯಾರೋ ಸ್ಮಾರ್ತರು ಅಂತಿಯಲ್ಲಾ? ನಾವೂ ಸ್ಮಾರ್ತರಲ್ಲಾ!? ಅಲ್ಲಾ?? ನಮ್ಮ ನೈವೇದ್ಯದಾಗ ಉಳ್ಳಾಗಡ್ಡಿ ಇರ್ತದ? ಇರ್ತದೇನು!? ಅವರೊಂದು ಪೈಕಿ ಮಳ್ಳರಾದ್ರ ನೀ ಮತ್ತೊಂದು ಪೈಕಿ ಯಬಡಾ!' ಅಂತ ನನಗೂ ಮೈಲ್ಡಾಗಿ ಬೆಂಡೆತ್ತಿದರು. ನಾನು ಪೆಕಪೆಕಾ ಅಂತ ನಕ್ಕೆ. ಮೊದಲೇ ಉರಿದುಕೊಂಡವರನ್ನು ಮತ್ತೊಂದಿಷ್ಟು ಉರಿಸಿ ಪೆಕಪೆಕಾ ಅಂತ ನಗುವದರಲ್ಲಿರುವ ಮಜಾ ಮತ್ಯಾವದರಲ್ಲಿಯೂ ಇಲ್ಲ.

'ನಾವು ಸ್ಮಾರ್ತರಾ? ನಾವು ಹವ್ಯಕರಲ್ಲಾ??? ಹಾಂ?' ಅಂತ ಮುಗ್ಧನಾಗಿ ಕೇಳಿದೆ. ಅವತ್ತಿಗೆ ಗೊತ್ತಿದ್ದದ್ದು ಅಷ್ಟೇ.

'ಏ ನಿನ್ನ! ಹವ್ಯಕರೂ ಸಹಾ ಸ್ಮಾರ್ತರು. ಅಷ್ಟೂ ಗೊತ್ತಿಲ್ಲಾ?' ಅಂದು, 'ಬ್ರಾಹ್ಮಣಾಗಿ ಹುಟ್ಟಿದ್ದು ಸಾರ್ಥಕಾತು. ಎಂತಾ ಬ್ರಾಹ್ಮಣ ಅಂತೂ ಗೊತ್ತಿಲ್ಲ. ಹುಚ್ಚಾ' ಅಂತ ಎತ್ತಿದರು, ಮಂಗಳಾರತಿ.

'ಒಹೋ. ಹೀಂಗದ ಅಂತಾತು. ಸ್ಮಾರ್ತರ, ಅಂದ್ರ ನಮ್ಮ ಮಂದಿ, ನೈವೇದ್ಯದಾಗ ಉಳ್ಳಾಗಡ್ಡಿ ಇರ್ತದ? ಇರ್ತದ??' ಅಂತ ಕೇಳಿದೆ. ಪೂರ್ತಿ ವಿಷಯ ತಿಳಿಯಬೇಕಲ್ಲ?

'ಅಯ್ಯೋ! ಎಷ್ಟು ಸರೆ ಅದನ್ನೇ ಹೇಳಬೇಕೋ? ಅಲ್ಲಿ ನಮ್ಮ ಕಾಲೇಜ್ ಮಾಸ್ತರರಿಗೆ ಸ್ಮಾರ್ತ ಬ್ರಾಹ್ಮಣರ ನೈವೇದ್ಯದಾಗ ಉಳ್ಳಾಗಡ್ಡಿ ಗಿಳ್ಳಾಗಡ್ಡಿ ಇರಂಗಿಲ್ಲ. ಇರೋದು ದೂರ ಉಳೀತು. ಅವೆಲ್ಲ ವರ್ಜ್ಯ ಸಹ ಅಂತ ದಬಾಯಿಸಿ ಹೇಳಿಬಂದೇನೀ. ಮನಿಗೆ ಬಂದ್ರ ನೀ ಮತ್ತ ಅದನ್ನೇ ಹಚ್ಚಿಯಲ್ಲಾ? ನಮ್ಮ ಮಾಸ್ತರ್ ಕಡೆನೇ ಹೋಗಿ ಕೂಡು. ಅವರ ಕಡೆನೇ ಟ್ರೇನಿಂಗ ತೊಗೋ. ಅವರಂಗss ಯಬಡ ಆಗು,' ಅಂತ ಬೈದರು. ಮತ್ತೂ ನಗು ಬಂತು.

ಅಮ್ಮನ ಮಾಸ್ತರರೋ ಶುದ್ಧ ವೈಷ್ಣವ ಬ್ರಾಹ್ಮಣರು. ಅದರಲ್ಲೂ ಆಚಾರರು. ಅದೂ ಮೈಸೂರ್ ಕಡೆಯವರು. ಅವರು ವೈಷ್ಣವರು ಅಂತ ಕರೆದುಕೊಳ್ಳುವದಿಲ್ಲ. ಮಾಧ್ವರು ಅಂತ ಕರೆದುಕೊಳ್ಳುತ್ತಾರೆ. ನೌಕರಿಗೆ ಅಂತ ಧಾರವಾಡಕ್ಕೆ ಬಂದು ನೆಲೆಸಿದ್ದರು. ಧಾರವಾಡದಲ್ಲಿ ಅವರ ಸಂಪ್ರದಾಯದ ಜನರಿದ್ದರೂ ಇವರಿಗೆ ಪೂರ್ತಿ ಸರಿಯಾಗುತ್ತಿರಲಿಲ್ಲ. ಏಕೆಂದರೆ ಮಠ ಬೇರೆ. ಇವರು ಬೆಂಗಳೂರು ಕಡೆ ಇರುವ ಮಾಧ್ವ ಸಂಪ್ರದಾಯದ ಮಠಕ್ಕೆ ಸೇರಿದವರು. ಧಾರವಾಡ ಕಡೆ ಬೇರೆ ಮಠದ ಸಂಪ್ರದಾಯ. ಹಾಗಾಗಿ ಇವರಿಗೆ ಭಾವ್ (ಮಹತ್ವ) ಕಮ್ಮಿ. ಅಥವಾ ಹಾಗಂತ ಅವರ ಕೊರಗು. ಇಷ್ಟರ ಮೇಲೆ ಆಗಾಗ ವೈಷ್ಣವರು, ಸ್ಮಾರ್ತರು, ದ್ವೈತ, ಅದ್ವೈತ, ಅದು ಇದು, ಅಂತೆಲ್ಲ ಜಿಜ್ಞಾಸೆ ಮಾಡುವದು ಅವರ ಸ್ವಭಾವ. ಅಮ್ಮನಂತಹ ರೈಸ್ ಆಗುವ ಜನ ಸಿಕ್ಕರೆ ಜಿಜ್ಞಾಸೆ ಮಾಡುವ ನೆಪದಲ್ಲಿ ಬೇರೆ ಸಂಪ್ರದಾಯದವರನ್ನು ಸಣ್ಣದಾಗಿ ಕೆಣಕುವದೂ ಸಹ ಅವರ ಹವ್ಯಾಸ. ಉದಾಹರಣೆ: ಸ್ಮಾರ್ತರ ನೈವೇದ್ಯದಲ್ಲಿ ಉಳ್ಳಾಗಡ್ಡೆ ಇರುತ್ತದೆಯೇ? ಇದ್ದರೆ ಅಡ್ಡಿಯಿಲ್ಲವಂತೆ. ಹೌದೇ?......ಹೀಗೆ ಸಣ್ಣ ಹಿಡಿದು ಕಿರಿಕ್ ಮಾಡುವ ಪಾರ್ಟಿ.

ಉನ್ನತ ಮಟ್ಟದ ಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಅಥವಾ ಪಂಡಿತರು ಮಾತ್ರ ಉತ್ತರಿಸಬಹುದಾದಂತಹ ಕಠಿಣ ಪ್ರಶ್ನೆಗಳನ್ನು ಕೇಳಿದ್ದರೆ, 'ಅದೆಲ್ಲಾ ನಮಗ ಗೊತ್ತಿಲ್ಲರೀ ಸರ್. ನೀವು ಯಾರಾದರೂ ಸ್ಮಾರ್ತ ಪಂಡಿತರನ್ನು ಕೇಳ್ರೀ,' ಅಂತ ಹೇಳಿ ಬರುತ್ತಿದ್ದರೇನೋ ಅಮ್ಮ. ಆದರೆ ಕೊಂಚ ಸಂಸ್ಕಾರವಿದ್ದ ಯಾವ ಬ್ರಾಹ್ಮಣರೂ ಆಕ್ಷೇಪಿಸುವಂತಹ ಸಂದೇಹ ಕೇಳಿಬಿಟ್ಟಿದ್ದಾರೆ. ಅದರಲ್ಲೂ 'ಸ್ಮಾರ್ತರ ನೈವೇದ್ಯದಲ್ಲಿ ಉಳ್ಳಾಗಡ್ಡೆ ಇದ್ದರೆ ನಡೆಯುತ್ತದೆ. ಸಬ್ ಚಲ್ತಾ ಹೈ! ಅಲ್ಲಾ??' ಅನ್ನುವ ಕೊಂಕು ರೀತಿಯಲ್ಲಿ ಕೇಳಿದ್ದಾರೆ. ಬರೋಬ್ಬರಿ ಬೆಂಡೆತ್ತಿಸಿಕೊಂಡಿದ್ದಾರೆ.

ನಾವೆಲ್ಲ ಮೂರನೇ ತಲೆಮಾರಿನ ಧಾರವಾಡಿಗರು. ಹಾಗಾಗಿ ನಮಗೆ ಇಂತಹ ಅನುಭವಗಳು ಕಮ್ಮಿ. ಮತ್ತೆ ನಾವೆಲ್ಲಾ ಹುಟ್ಟಿ ದೊಡ್ಡವರಾಗುತ್ತಿರುವಾಗ ಜಾತಿ ಪದ್ಧತಿ ಕಮ್ಮಿಯಾಗಿತ್ತು. ಬ್ರಾಹ್ಮಣರಲ್ಲಿ ಒಳಪಂಗಡಗಳ ಮಧ್ಯೆ ಕೋಳಿಜಗಳ ಇತ್ತಾದರೂ ನಮಗೆ ಅದರ ಅನುಭವವಾಗಲಿಲ್ಲ. ಪಂಡಿತರ ಮಧ್ಯೆ ದ್ವೈತ ಶ್ರೇಷ್ಠವೋ ಅದ್ವೈತ ಶ್ರೇಷ್ಠವೋ ಅಂತ ವಾದ ವಿವಾದ ನಡೆಯುತ್ತಿತ್ತೇ ವಿನಃ ಸಾಮಾನ್ಯರಿಗೆ ಸಂಬಂಧವಿರಲಿಲ್ಲ. ಹಾಗಾಗಿ ನಮಗೆ ಅದೆಲ್ಲ ಗೊತ್ತಿರಲಿಲ್ಲ. 'ಕೆಟ್ಟು ಪಟ್ಟಣ ಸೇರು' ಅಂತ ಮಾತಿದೆ. ಹಳ್ಳಿ ಕಡೆಯಿದ್ದ ನಮ್ಮ ಪೂರ್ವಜರು ನಮ್ಮನ್ನೆಲ್ಲ ಕುರಿತು, 'ನೀವೆಲ್ಲ ಪಟ್ಟಣ ಸೇರಿ ಕೆಟ್ಟವರು,' ಅನ್ನುತ್ತಿದ್ದರು. ಪಾಲಕರನ್ನೂ ಸೇರಿಸಿ. ಅರ್ಥಾತ್ ಪಟ್ಟಣ ಸೇರಿದ್ದ ಪಾಲಕರು ಹಳ್ಳಿಯ ಸಂಪ್ರದಾಯಗಳನ್ನೆಲ್ಲ ಬಿಟ್ಟುಬಿಟ್ಟಿದ್ದಾರೆ. ತಾವೂ ಬಿಟ್ಟಿದ್ದಾರೆ, ಮಕ್ಕಳಿಗೂ ಕಲಿಸಿಲ್ಲ ಅಂತ ಸಣ್ಣ ಆಕ್ಷೇಪ ಇರುತ್ತಿತ್ತು. ಅದರಲ್ಲಿ ತಪ್ಪಿರಲಿಲ್ಲ ಬಿಡಿ. ನಮ್ಮದೇ ವಯಸ್ಸಿನ ಹಳ್ಳಿ ಕಡೆ ಮಕ್ಕಳಿಗೆ ಎಷ್ಟೊಂದು ಸಂಪ್ರದಾಯ ಗೊತ್ತಿರುತ್ತಿತ್ತು. ಧಾರ್ಮಿಕ ಸಾಮಾನ್ಯಜ್ಞಾನ ಎಷ್ಟೊಂದು ಇರುತ್ತಿತ್ತು. ನಮಗೆ ಅದೆಲ್ಲ ಗೊತ್ತೇ ಇರಲಿಲ್ಲ. ಮನೆಯಲ್ಲಿ ಭಕ್ತಿ ಇತ್ತು. ಶ್ರದ್ಧೆ ಇತ್ತು. ಆದರೆ ಆಚರಣೆಗಳು ಕಮ್ಮಿ. ಆಡಂಬರ ಇಲ್ಲವೇ ಇಲ್ಲ. ಅವರವರ ಭಕ್ತಿಗೆ ಅವರವರ ಭಾವಕ್ಕೆ ತಕ್ಕಂತೆ ಪೂಜೆ ಪುನಸ್ಕಾರ. ಹಾಗಾಗಿ ನಮಗೆ ಇದೆಲ್ಲ ಸಂಕೀರ್ಣತೆಗಳು ಗೊತ್ತಿರಲಿಲ್ಲ.

ಅಮ್ಮನ ಮೇಲೆ ಹೇಳಿದ ಮಾಸ್ತರರು ಮಜಾ ಇದ್ದರು. ಒಮ್ಮೆ ಏನೋ ಮಾತುಬಂದಾಗ, 'ನಾವು ಬದನೆಕಾಯಿ ತಿನ್ನುವದಿಲ್ಲ,' ಅಂದಿದ್ದರು. ತಿನ್ನುತ್ತಲೂ ಇರಲಿಲ್ಲ ಬಿಡಿ. ಆದರೆ ಒಮ್ಮೆ ಅವರ ಮನೆಯಲ್ಲಿ ಬದನೆಕಾಯಿಯಂತಹ ತರಕಾರಿ ನೋಡಿದ ಅಮ್ಮ, 'ಬದನಿಕಾಯಿ ತಿನ್ನೋದಿಲ್ಲ ಅಂದಿದ್ರಿ. ಇದೇನು ಮತ್ತ?' ಅಂತ ಅವರ ಮಾಸ್ತರರಿಗೆ ಚುಚ್ಚಿದ್ದಾಳೆ. 'ಏ, ಇದು ಸಾದಾ ಬದನಿಕಾಯಿ ಅಲ್ಲ. ವಾದಿರಾಜಗುಳ್ಳ. ಇದು ನಡಿತದ,' ಅಂದುಬಿಟ್ಟಿದ್ದಾರೆ ಅವರ ಮಾಸ್ತರರು. 'ಇದು ವಾದಿರಾಜಗುಳ್ಳ. ನಮ್ಮ ಸ್ವಾಮಿಗಳೇ ಇದನ್ನ ತಿನ್ನಬಹುದು ಅಂತ ಹೇಳ್ಯಾರ!!' ಅಂತ ಆ ಮಾದರಿಯ ಬದನೇಕಾಯಿ ಹೇಗೆ approved and sanctioned ಅನ್ನುವದನ್ನು ವಿವರಿಸಿದ್ದಾರೆ. 'ಹೇಳುವದು ಶಾಸ್ತ್ರ ಆದರೆ ತಿನ್ನುವದು ಬದನೇಕಾಯಿ' ಅನ್ನುವ ಮಾತಿಗೆ ಹೊಸ ಪರಿಭಾಷ್ಯೆ ವಾದಿರಾಜಗುಳ್ಳ. ಮುಂದೆ ಮನೆಯಲ್ಲಿ ಬಂದನೆಕಾಯಿಯ ಏನೇ ಅಡಿಗೆ ಮಾಡಿದರೂ ವಾದಿರಾಜಗುಳ್ಳ ಅದು ಇದು ಅಂತ ಹಾಸ್ಯ ಇದ್ದೇ ಇರುತ್ತಿತ್ತು.

ವಾದಿರಾಜಗುಳ್ಳದ ಬಗ್ಗೆ ಹುಡುಕಿದಾಗ ಕೆಳಗಿನ ಮಾಹಿತಿ ಸಿಕ್ಕಿತು. ಅಮ್ಮನ ಮಾಸ್ತರರು ಹೇಳಿದ್ದರಲ್ಲಿ ಸತ್ಯವಿತ್ತು.

>>
ಆ ಕಾಲದಲ್ಲಿ ಅಭೋಜ್ಯವೆಂದು ನಂಬಲಾಗಿದ್ದ ಗುಳ್ಳದ ಬೀಜವನ್ನು ಅವರಿಗಿತ್ತು ಅದನ್ನು ಬೆಳೆಸುವಂತೆ ಪ್ರೋತ್ಸಾಹಿಸಿದರು. ಅವರು ಬೆಳೆದ ಗುಳ್ಳದ ರುಚಿಯಾದ ಹುಳಿಯನ್ನು ಶ್ರೀಕೃಷ್ಣನಿಗೆ ಸಮರ್ಪಿಸಿದರು. ಅಭೋಜ್ಯವಾಗಿದ್ದ ಗುಳ್ಳ (ಸಂಸ್ಕೃತದ ವೃಂತಾಕ) ವಾದಿರಾಜರಿಂದ ಭೋಜ್ಯವಾಯಿತು. ಪರ್ಯಾಯದ ಅಡುಗೆಯ ಅವಿಭಾಜ್ಯ ಅಂಗವಾಯಿತು. ಪಂಡಿತರು, ಧರ್ಮಶಾಸ್ತ್ರದಲ್ಲಿ ಹೊಸ ಅಮೆಂಡ್‌ಮೆಂಟ್‌ ಸೇರಿಸಿದರು. ‘ಬದನೆ ನಿಷಿದ್ಧವಾದರೂ ವಾದಿರಾಜ ಗುಳ್ಳ ತಿನ್ನಬಹುದು. ಏಕೆಂದರೆ ವಾದಿರಾಜರು ತನ್ನ ತಪೋಬಲದಿಂದ ಅದನ್ನು ಪಾವನಗೊಳಿಸಿದ್ದಾರೆ'.  ಮಟ್ಟಿಯ ಬ್ರಾಹ್ಮಣರು ಗೆದ್ದರು. ಮಟ್ಟಿಯ ಗುಳ್ಳವೂ ಗೆದ್ದಿತು. ವಾದಿರಾಜರ ಮನೋಬಲ-ತಪೋಬಲ ಎರಡೂ ಅನನ್ಯವಾದದ್ದು. ಸಂಪ್ರದಾಯವಾದಿಗಳ ಜತೆ ನವ್ಯ ಕವಿಗಳೂ ಹಾಡಿದರು -

ತಿನ್ನಬೇಡಿ ಗುಳ್ಳ
ತಿಂದರೆ ವಾದಿರಾಜಗುಳ್ಳ

<<

ನಮ್ಮ ಮಂದಿಯ ನೈವೇದ್ಯದಲ್ಲಿ ಉಳ್ಳಾಗಡ್ಡೆ ಇರುವದು ದೂರದ ಮಾತು. ಅಡಿಗೆಯಲ್ಲೂ ಉಳ್ಳಾಗಡ್ಡೆ ಇರುತ್ತಿರಲಿಲ್ಲ. ನಮ್ಮ ಹಳ್ಳಿಕಡೆ ಮಾಡುವ ಅಡಿಗೆಗಳಲ್ಲಿ ಇಂದಿಗೂ ಉಳ್ಳಾಗಡ್ಡೆ ಇಲ್ಲ ಅಥವಾ ಕಮ್ಮಿ. ಮೊದಲೆಲ್ಲ ಮನೆ ಹಿತ್ತಲಿನಲ್ಲಿ ಬೆಳೆದುಕೊಂಡ ತರಕಾರಿಗಳಿಂದಲೇ ಅಡಿಗೆ. ಬೇಕಾದರೆ ಕಾಡುಮೇಡಿನಲ್ಲಿ ಸಿಗುತ್ತಿದ್ದ ಸೊಪ್ಪು, ಹಣ್ಣು ಇತ್ಯಾದಿ. ಉಳ್ಳಾಗಡ್ಡೆ ಬೆಳೆಯುವ ನೆಲವಲ್ಲ ಅದು. ಹಾಗಾಗಿ ಅಡಿಗೆಯಲ್ಲಿ ಉಳ್ಳಾಗಡ್ಡೆ ಉಪಯೋಗವಿರುತ್ತಿರಲಿಲ್ಲ. ಮತ್ತೆ ಉಳ್ಳಾಗಡ್ಡೆ, ಬಳ್ಳೊಳ್ಳಿ, ಮೂಲಂಗಿ ಇತ್ಯಾದಿಗಳು ರಾಜಸಿಕ ಆಹಾರ ಪದಾರ್ಥಗಳು. ಸಾತ್ವಿಕರಿಗೆ, ಸಾಧಕರಿಗೆ ನಿಷಿದ್ಧ. ಹಾಗಾಗಿ ಅವನ್ನು ಬಳಸುತ್ತಿರಲಿಲ್ಲ. ಈಗ ಹಳ್ಳಿ ಕಡೆ ಜನರೂ ತರಕಾರಿಗೆ ಪೇಟೆಗೇ ಬರಬೇಕಾಗಿದೆ. ತೋಟ, ಗದ್ದೆ ಮಾಡುವವರೇ ವಿರಳವಾಗಿದ್ದಾರೆ. ಹಾಗಿರುವಾಗ ಹೆಚ್ಚಿನ ಶ್ರಮ ಬೇಡುವ ಹಿತ್ತಿಲು ಮಾಡಿ ತರಕಾರಿ ಬೆಳೆಯುವವರು ಬಹಳ ಕಮ್ಮಿ. ಹಾಗಾಗಿ ನಮ್ಮ ಕಡೆಯ ಜನರ ಅಡಿಗೆಯಲ್ಲೂ ಉಳ್ಳಾಗಡ್ಡೆ ಬಂದಿರಬಹುದು. ಮತ್ತೆ ಅದರ ರುಚಿ ಹತ್ತಿದರೆ ಅದಿಲ್ಲದ ಅಡಿಗೆ ರುಚಿಸುವದಿಲ್ಲ ನೋಡಿ. ಕೆಲವರಿಗಂತೂ ಉಳ್ಳಾಗಡ್ಡೆ ಒಂದು ತರಹದ addiction.

ಮುಂಬೈನ ದೊಡ್ಡ ದ್ವೈತ ಪಂಡಿತರಾದ ಮಾಹುಲಿ ಆಚಾರ್ಯರ ಯಾವದೋ ಪ್ರವಚನವನ್ನು ಮೊನ್ನೆ YouTube ನಲ್ಲಿ ನೋಡುತ್ತಿದ್ದೆ. ಅವರ ಒಂದು ಮಾತು rhetorical ಅನ್ನಿಸಿದರೂ ವಿಚಾರ ಮಾಡಲು ಹಚ್ಚಿತು. 'ಉಳ್ಳಾಗಡ್ಡೆ ಆರೋಗ್ಯಕ್ಕೆ ಉತ್ತಮ. ಬಳ್ಳೊಳ್ಳಿ ಆರೋಗ್ಯಕ್ಕೆ ಉತ್ತಮ. ಮೂಲಂಗಿ ಆರೋಗ್ಯಕ್ಕೆ ಉತ್ತಮ. ಕೋಳಿತತ್ತಿಯಲ್ಲಿ ಪ್ರೊಟೀನ್ ಜಾಸ್ತಿ ಇರುತ್ತದೆ. ಹೀಗೆ ನಿಷಿದ್ಧ ಪದಾರ್ಥಗಳನ್ನೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಆರೋಗ್ಯಕ್ಕೆ ಉತ್ತಮ ಅಂತ ತಿನ್ನುವ ಅಭ್ಯಾಸ ಮಾಡಿಕೊಂಡವರಿದ್ದಾರೆ. ಆರೋಗ್ಯಕ್ಕೆ ಒಳ್ಳೆಯದು ಅಂತ ಸಮರ್ಥಿಸಿಕೊಳ್ಳುತ್ತಾರೆ ಸಹ. ಇರಬಹದು. ಆರೋಗ್ಯಕ್ಕೆ ಸಹಕಾರಿಯಾಗಿರಬಹುದು. ಅವನ್ನೆಲ್ಲ ತಿನ್ನುವದರಿಂದ ದೇಹದ ಆಯುಷ್ಯ ಒಂದೈದು ವರ್ಷ ಜಾಸ್ತಿಯೂ ಆಗಬಹದು. ಆದರೆ ಧರ್ಮಶಾಸ್ತ್ರಗಳಲ್ಲಿ ನಿಷಿದ್ಧವಾದ ಪದಾರ್ಥಗಳನ್ನು ಸೇವಿಸಿ ಆಯುಷ್ಯವನ್ನು ಹೆಚ್ಚುಮಾಡಿಕೊಳ್ಳಬೇಕೇ? ಅದು ಸಾಧುವೇ? ಅಂತಹ ನಿಷಿದ್ಧ ಮೂಲಗಳಿಂದ ಆಯುರಾರೋಗ್ಯ ಪಡೆದ ದೇಹ ಎಂತಹ 'ಘನ' ಕಾರ್ಯಗಳನ್ನು ಮಾಡೀತು? ಅದೆಂತಹ ಪುಣ್ಯವನ್ನು ಸಂಪಾದಿಸೀತು???' ಅಂದರು ಆಚಾರ್ಯರು. Something to think about.

ಇಷ್ಟೆಲ್ಲ ಹೇಳಿ ಆದ ಮೇಲೂ ಒಂದು ಆಖ್ರೀ ಮಾತು ಉಳಿಯುತ್ತದೆ. ಅದೇ ಹಳೆಯ ಗಾದೆಮಾತು. 'ಊಟ ತನ್ನಿಚ್ಛೆ. ನೋಟ ಪರರಿಚ್ಛೆ.'

Friday, January 20, 2017

ಸಿಟ್ಟಿನ ಕೈಗೆ ಬುದ್ಧಿ ಕೊಟ್ಟಾಗ ಕೈಯಲ್ಲಿ ಡಸ್ಟರ್ ಬಂತು!

'ಸಿಟ್ಟಿನ ಕೈಗೆ ಬುದ್ಧಿ ಕೊಡಬಾರದು,' ಅನ್ನುತ್ತಾರೆ. ಸಿಟ್ಟಿನ ಕೈಗೆ ಬುದ್ಧಿ ಕೊಟ್ಟರೆ ಅಂತಹ ಬುದ್ಧಿ ಕೈಗೆ ಮತ್ತೇನನ್ನೋ ಕೊಟ್ಟು ಆಗಬಾರದ್ದು ಆಗಿಹೋದ ಒಂದು ಘಟನೆ ನೆನಪಾಯಿತು.

೧೯೮೧. ಆಗ ನಾವು ನಾಲ್ಕನೆಯ ಕ್ಲಾಸು. ಆಗ ಪಾಠ ಮಾಡಲು ವರ್ಗಶಿಕ್ಷಕರಾಗಿ ಬಂದವರು ಶ್ರೀ ಕಾತ್ರಾಳೆ ಸರ್. ಪೂರ್ತಿ ಹೆಸರು ಕಲ್ಲಿನಾಥ ನೇಮಿನಾಥ ಕಾತ್ರಾಳೆ. ಬೈಲಹೊಂಗಲದ ಕಡೆಯ ಜೈನರು. ಅದಿರಲಿ. ಅವರೋ ದುರ್ವಾಸ ಮುನಿಯ ಅಪರಾವತಾರ. ಸಿಟ್ಟು ಅಂದರೆ ಅಷ್ಟು ಸಿಟ್ಟು. ಆದರೆ ಅದ್ಭುತ ಶಿಕ್ಷಕರು. ಮೇಲಿಂದ ಸಣ್ಣ ಪ್ರಮಾಣದ ಸಾಹಿತಿ, ಕವಿ, ಸಂಶೋಧಕ ಇತ್ಯಾದಿ. ಪಠ್ಯದಲ್ಲಿ ಇರುವದಕ್ಕಿಂತ ಹೆಚ್ಚಿನ ವಿಷಯಗಳನ್ನು ಪಾಠ ಮಾಡುತ್ತೇನೆ. ವಿದ್ಯಾರ್ಥಿಗಳನ್ನು ಹೆಚ್ಚಿಗೆ ಶಾಣ್ಯಾ ಮಾಡುತ್ತೇನೆ ಅನ್ನುವ ಒಂದು ತರದ ಸಾತ್ವಿಕ ಹಮ್ಮು ಜೊತೆಗೆ. ಎಲ್ಲಾ ಒಪ್ಪುವಂತಹ ಸದ್ಗುಣಗಳೇ. ಆದರೆ ಅವರು ಕೊಡುತ್ತಿದ್ದ ಕಡತ (ಹೊಡೆತ)!? ಅದು ಮಾತ್ರ ದೇವರಿಗೇ ಪ್ರಿಯ.

ಕಾತ್ರಾಳೆ ಸರ್ ಯಾರನ್ನೂ ಎಂದೂ ಸೀದಾ ಮಾತಾಡಿಸಿದ್ದೇ ಇಲ್ಲ. ನಮ್ಮಂತಹ ಒಂದೆರೆಡು ಪ್ರೀತಿಯ ಪಟ್ಟಶಿಷ್ಯರು ಹೇಗೋ ಬಚಾವು. ಉಳಿದವರಿಗೆ ಮೊದಲು 'ಪ್ರಸಾದ' ಕೊಟ್ಟೇ ಮುಂದಿನ ಮಾತು. ಅವರು ಕೇಳಿದ ಮಾತಿಗೆ, ಪ್ರಶ್ನೆಗೆ ಫಟ್ ಅಂತ ಉತ್ತರ ಬಂತೋ ಸರಿ. ಇಲ್ಲ ಅಂದರೆ ಫಟ್ ಅಂತ ಕಪಾಳಕ್ಕೆ ನಾಲ್ಕು ಬಿಗಿದೇ ಮುಂದಿನ ಮಾತು.

ಇಂತಹ ದೂರ್ವಾಸ ಸ್ವರೂಪಿ ಮಾಸ್ತರರಿಗೆ ತಕ್ಕ ಶಿಷ್ಯರನ್ನು ದೇವರು ದಯಪಾಲಿಸದೇ ಬಿಟ್ಟಾನೆಯೇ? ಇವರು ಬಡಿದಷ್ಟೂ ಮೈ ಗಟ್ಟುಮುಟ್ಟಾಗುತ್ತಿದ್ದ ಹಟ್ಟಾಕಟ್ಟಾ ಶಿಷ್ಯೋತ್ತಮರು ಕೂಡ ಒಂದಿಷ್ಟು ಜನ ಇದ್ದರು. ಬಿಟ್ಟೂಬಿಡದಂತೆ ಪ್ರತಿದಿನವೂ ಮಾಸ್ತರ್ ಹತ್ತಿರ ಆಪರಿ ಹೊಡೆತ ತಿನ್ನುವದರಲ್ಲಿ ಅದೇನು ಮಜಾ ಬರುತ್ತಿತ್ತೋ ಅವರಿಗೇ ಗೊತ್ತು. 'ದೇವರಿಗೆ ದಿನಾ ಹೂವೇರಿಸುವದನ್ನು ತಪ್ಪಿಸಿದರೂ ಕೆಲವರಿಗೆ ಹೊಡೆತ ಕೊಡುವದನ್ನು ತಪ್ಪಿಸಲಾಗುವದಿಲ್ಲ!' ಎಂದು ಹೇಳುತ್ತಲೇ ಕೆಲವು ಮಂದಿಗೆ ದಿನದ ಡೋಸ್ ಕೊಡುತ್ತಿದ್ದರು ಸರ್. ಕೆಲವರಂತೂ noted characters. ಅವರಿಗೆ ಎಲ್ಲರೂ 'ನಾಲ್ಕು ಹಾಕಿ' ಅಂದು ಹೋಗುತ್ತಿದ್ದರು. ಮನೆ ಜನ ಕೂಡ. ಅಂತವರು ಕಾತ್ರಾಳೆ ಸರ್ ಅವರ ಫೇವರಿಟ್. ತಮ್ಮ ಲೆಕ್ಕ, ಉಳಿದವರ ಲೆಕ್ಕ, ಬಳಿದವರ ಲೆಕ್ಕ, ಮನೆಯಲ್ಲಿ ಕಮ್ಮಿ ಬಡಿದಿದ್ದರೆ ಅದರ ಲೆಕ್ಕ, ಹಿಂದಿನ ವರ್ಷ ಬಡಿದಿದ್ದು ಕಮ್ಮಿಯಾಯಿತು ಅಂತ ಹಿಂದಿನ ವರ್ಷದ ಶಿಕ್ಷಕರು ಹೇಳಿದರೆ ಆ ಲೆಕ್ಕ, ಹೀಗೆ ಎಲ್ಲ ಲೆಕ್ಕ ಬಡ್ಡಿಯೊಂದಿಗೆ ಚುಕ್ತಾ ಮಾಡಿ ಬಡಿಯುತ್ತಿದ್ದರು. ಹಾಗೆ ಬಡಿಸಿಕೊಳ್ಳುತ್ತಿದ್ದ ಹುಡುಗರಿಗೂ ಬಡಿಯುತ್ತಿದ್ದ ಕಾತ್ರಾಳೆ ಸರ್ ಅವರಿಗೂ ಅದೇನೋ ವಿಚಿತ್ರ ಅವಿನಾಭಾವ ಸಂಬಂಧ.

ಸುರೇಶ ಜಾಲಿಗಿಡದ ಎನ್ನುವ ಪುಣ್ಯಾತ್ಮ ಅಂತಹ ವಿದ್ಯಾರ್ಥಿಗಳಲ್ಲಿ ಅಗ್ರಗಣ್ಯ. ನೋಡಲೂ ಸಹ ಕರ್ರಗೆ ಹೊನಗ್ಯಾ ಮಾದರಿಯಲ್ಲಿ ಕಡಿದಿಟ್ಟ ಕಪ್ಪುಕಲ್ಲಿನ ಶಿಲ್ಪದಂತಿದ್ದ. ಅವನಿಗೆ ದಿನಾ ಪೂಜೆ ಪ್ರಸಾದ ಇದ್ದೇ ಇರುತ್ತಿತ್ತು. ಅವನಿಗೆ ಅವೆಲ್ಲ ತಾಗುತ್ತಲೂ ಇರಲಿಲ್ಲ. ಸುಮಾರು ಹತ್ತಿಪ್ಪತ್ತು ನಿಮಿಷ ಯಕ್ಕಾಮಕ್ಕಾ ಬಡಿಸಿಕೊಂಡ ಮೇಲೆ ಏನೋ ನೋವಿನಂತಹದ್ದು ಆಗುತ್ತಿತ್ತು ಅಂತ ಕಾಣುತ್ತಿದೆ. ಅಥವಾ ಮಾಸ್ತರ್ ತ್ರಾಸು ತೆಗೆದುಕೊಂಡಿದ್ದು ಸಾಕು. ಅವರಿಗೊಂದು ರೆಸ್ಟ್ ಕೊಡೋಣ ಅಂತಲೋ ಕೊಂಯ್ ಅನ್ನುತ್ತಿದ್ದ. ಆವಾಗಲೇ ಅವನಿಗೆ ಹೊಡೆತದಿಂದ ಮುಕ್ತಿ. ಸರ್ ಅವರಿಗೂ ಸಾಕಷ್ಟು ಸುಸ್ತಾಗಿರುತ್ತಿತ್ತು. ಪ್ರತಿದಿನ ಒಂದಿಲ್ಲೊಂದು ಲಫಡಾ ಮಾಡದಿದ್ದರೆ ಆ ಸುರೇಶ ಜಾಲಿಗಿಡದನಿಗೂ ಉಂಡಿದ್ದು ಅರಗುತ್ತಿರಲಿಲ್ಲ ಅನ್ನಿಸುತ್ತದೆ. ಎಲ್ಲಿ ಈ ಗಿರಾಕಿ ಬೇಕಂತಲೇ ಸರ್ ಅವರನ್ನು irritate ಮಾಡಲು ಹೀಗೆ ಮಾಡುತ್ತಾನೇನೋ ಅನ್ನಿಸುತ್ತಿತ್ತು. ಆ ಮಾದರಿಯಲ್ಲಿ ಇರುತ್ತಿತ್ತು ಅವನ ಕಾರ್ನಾಮೆ. for example: ಕಾಪಿ ಬರಹ. ಆಗಿನ ಕಾಲದಲ್ಲಿ ಹಸ್ತಾಕ್ಷರ ಸುಂದರವಾಗಲಿ ಅಂತ ಕಾಪಿ ಬರೆಸುತ್ತಿದ್ದರು. ಎರಡು ಅಥವಾ ನಾಲ್ಕು ಗೆರೆಗಳ ಮಧ್ಯೆ ಅಕ್ಷರಗಳನ್ನು ಬರೋಬ್ಬರಿ, in exact proportion, ಬರೆಯಬೇಕಾಗುತ್ತಿತ್ತು. ಮೇಲಿನ ಮತ್ತು ಕೆಳಗಿನ ಗೆರೆಗಳ ಮಧ್ಯೆ ಸರಿಯಾಗಿ ಬರೆದುಕೊಂಡು ಬನ್ನಿ ಅಂತ ಬೊಂಬಡಾ ಹೊಡೆದು, ಸಾವಿರ ಬಾರಿ ಪ್ರಾಕ್ಟೀಸ್ ಮಾಡಿಸಿ ಕಳಿಸಿದ್ದರೂ ಮರುದಿನ ಜಾಲಿಗಿಡದ ಹೇಗೆ ಬರೆದುಕೊಂಡುಬಂದಿರಬೇಕು? ಊಹಿಸಿ. ಎರಡೂ ಗೆರೆಗಳ ಮಟಾಮಧ್ಯೆ ಸೊಟ್ಟಸೊಟ್ಟಾಗಿ ಬರೆದುಕೊಂಡು ಬಂದು ಮಾಸ್ತರ್ ಮುಂದೆ ಗರ್ವದಿಂದ ಹಿಡಿದು, 'ನೋಡ್ರಿ ಸರ್. ಹ್ಯಾಂಗೈತ್ರೀ????' ಅಂದಿದ್ದ ಈ ಭೂಪ ಜಾಲಿಗಿಡದ. ಅದನ್ನು ನೋಡಿ ಕೆಂಡಾಮಂಡಲವಾದ ದೂರ್ವಾಸ ಸರ್ ಇಡೀ ಪಿರಿಯಡ್ ಬಡಿದಿದ್ದರು. ಕೊಠಡಿಯ ತುಂಬಾ ಅಟ್ಟಾಡಿಸಿಕೊಂಡು ಉಳ್ಳಾಡಿಸಿ ಉಳ್ಳಾಡಿಸಿ ಬಡಿದಿದ್ದರು.

ಒಂದು ದಿನ ಶಾಲೆ ನಡೆದಿತ್ತು. ಸರ್ ಯಾವದೋ ಪಾಠವನ್ನು ಶ್ರದ್ಧೆಯಿಂದ ಮಾಡುತ್ತಿದ್ದರು. ಅವರು ಅಷ್ಟೊಂದು ಶ್ರದ್ಧೆಯಿಂದ ಪಾಠ ಮಾಡುತ್ತಿರುವಾಗ pin drop silence ಇರಬೇಕಿತ್ತು. ಹಾಗಂತ ತಾಕೀತು ಮಾಡಿರುತ್ತಿದ್ದರು. ಆದರೆ ಕಮಂಗಿಗಳು ತುಂಬಿದ ಆ ಕಿಷ್ಕಿಂಧೆಯಂತಹ ಕ್ಲಾಸಿನಲ್ಲಿ ಅದು ಎಲ್ಲಿ ಸಾಧ್ಯ!? ಅದೂ ಜಾಲಿಗಿಡದ ಮತ್ತು ಅಂತಹ ನಾಲ್ಕಾರು ಮಂಗ್ಯಾ ಹುಡುಗರಿರುವಾಗ.

ದೂರ್ವಾಸ ಮುನಿ ಉರ್ಫ್ ಕಾತ್ರಾಳೆ ಸರ್ ಅವರ ಏಕಾಗ್ರತೆಗೆ, ಪಾಠ ಮಾಡುತ್ತಿದ್ದ ತನ್ಮಯತೆಗೆ ಯಾವದೋ ಕಾರಣಕ್ಕೆ ಭಂಗ ಉಂಟಾಯಿತು. ಕೋಪ ಸರ್ರ್ ಅಂತ ನೆತ್ತಿಗೇರಿತು. ಕೆಂಪು ಬಟ್ಟೆ ನೋಡಿದ ಗೂಳಿಯಂತೆ ಮೂಗಿನ ಹೊಳ್ಳೆಗಳಿಂದ  ದೊಡ್ಡ ಶ್ವಾಸ ಬಿಡುತ್ತ ಪುಸ್ತಕದಿಂದ ತಲೆಯೆತ್ತಿ ಕೆಕ್ಕರಸಿ ನೋಡಿದರು ಸರ್! ಅವರ ರೌದ್ರಾವತಾರ ನೋಡಿದ ಕೂಡಲೇ ಗೊತ್ತಾಯಿತು ಯಾರಿಗೋ ಕಾದಿದೆ ದೊಡ್ಡ ಮಟ್ಟದ ಪೂಜೆ, ಅದೂ ಪ್ರಸಾದದೊಂದಿಗೆ ಎಂದು.

ಜಾಲಿಗಿಡದನ ನಸೀಬ್ ಖರಾಬ್ ಇತ್ತು. ಖಂಡಾಪಟ್ಟೆ ಸಿಟ್ಟಿಗೆದ್ದಿದ್ದ ಸರ್ ಕಣ್ಣಿಗೆ ಅವನೇ ಬಿದ್ದ. ಏನೋ ಲೋಚಾ ಮಾಡುತ್ತ ಪಕ್ಕದ ಹುಡುಗನ ಜೊತೆಗೆ ಏನೋ ಕಿಸಿಪಿಸಿ ಅನ್ನುತ್ತ ಕೂತಿದ್ದ ಅಂತ ಕಾಣುತ್ತದೆ. ಕಾತ್ರಾಳೆ ಸರ್ ಅವನ ಹತ್ತಿರ ಹೋಗಿ ಬಡಿಯಲಿಲ್ಲ. ಸುತ್ತ ಮುತ್ತ ನೋಡಿದರು. ಕರಿಹಲಗೆ ಒರೆಸುವ ಡಸ್ಟರ್ (duster) ಕಂಡುಬಂತು. ಬುದ್ಧಿ ಸಿಟ್ಟಿನ ಕೈಗೆ ಹೋಗಿತ್ತು. ಕೈಯಲ್ಲಿ ಡಸ್ಟರ್ ಬಂತು.

ಸ್ವಚ್ಛ ಜವಾರಿ ಭಾಷೆಯಲ್ಲಿ ಏನೋ ಒದರುತ್ತ, ಬೈಯುತ್ತ ಜಾಲಿಗಿಡದನ ಕಡೆ ಡಸ್ಟರ್ ಒಗೆದೇಬಿಟ್ಟರು. ಶಿವಾಯ ನಮಃ! ಹೇಳಿಕೇಳಿ ಹಳ್ಳಿಯಲ್ಲಿ ಬೆಳೆದು ಬಂದವರು ಕಾತ್ರಾಳೆ ಸರ್. ಹಕ್ಕಿ ಓಡಿಸಲು ಕವಣೆಕಲ್ಲು ಬೀಸುವ ವಿದ್ಯೆಯಲ್ಲಿ ಪರಿಣಿತರಾಗಿದ್ದರು ಅಂತ ಕಾಣುತ್ತದೆ. ಬರೋಬ್ಬರಿ ಗುರಿ ಇಟ್ಟಿದ್ದರು. ಬಾಣದಂತೆ ಸುಂಯ್ ಅಂತ ಹೋದ ಡಸ್ಟರ್ ಸೀದಾ ಜಾಲಿಗಿಡದನ ಹಣೆಗೆ ಅಪ್ಪಳಿಸಿತು!

ಒಮ್ಮೊಮ್ಮೆ ಟೈಮಿಂಗ್ ಅಂದರೆ ಹೇಗಿರುತ್ತದೆ ನೋಡಿ. ಅದೇ ವೇಳೆಗೆ ಯಾರು ಕೊಠಡಿಗೆ ಆಗಮಿಸಿರಬಹದು? ಊಹಿಸಿ. ಮೂರೋ ನಾಲ್ಕೋ ತಿಂಗಳಿಗೆ ರೂಟೀನ್ ಆಗಿ ಬರುತ್ತಿದ್ದ ಎಜುಕೇಶನ್ ಇನ್ಸಪೆಕ್ಟರ್! ಕಾತ್ರಾಳೆ ಸರ್ ರೊಚ್ಚಿಗೆದ್ದು ಡಸ್ಟರ್ ಒಗೆಯುವದಕ್ಕೂ, ಅದು ಜಾಲಿಗಿಡದನ ಹಣೆಗೆ ಅಪ್ಪಳಿಸುವದಕ್ಕೂ ಮತ್ತು ಆ ಇನ್ಸಪೆಕ್ಟರ್ ಒಳಗೆ ಬರುವದಕ್ಕೂ ಏಕ್ದಂ ಸರಿಯಾಯಿತು. Exactly timed. Perfectly synchronized!

ಸರ್ ಜಾಲಿಗಿಡದನನ್ನು ಗಮನಿಸುವದನ್ನು ಬಿಟ್ಟು ಬಂದ ಇನ್ಸಪೆಕ್ಟರ್ ಖಾತಿರ್ದಾರಿಯಲ್ಲಿ ತೊಡಗಿದರು. ಅದೇನೋ ಗೊತ್ತಿಲ್ಲ. ಎಲ್ಲ ಶಿಕ್ಷಕರೂ ಆ ಇನ್ಸಪೆಕ್ಟರ್ ಮತ್ತು inspection ಪ್ರಕ್ರಿಯೆಯನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದರು. ಅವರ promotion, increment ಇತ್ಯಾದಿಗಳ ಮೇಲೆ ಬಹಳ ಪ್ರಭಾವ ಬೀರುತ್ತಿತ್ತು ಅಂತ ಕಾಣುತ್ತದೆ.

ಲಫಡಾ ಬೇರೆ ಆಗಿಬಿಟ್ಟಿದೆ. ಒಳಗೆ ಬರುತ್ತಿದ್ದ ಇನ್ಸಪೆಕ್ಟರ್ ಮಾಸ್ತರರು ಡಸ್ಟರನ್ನು ಮಿಸೈಲ್ ಮಾದರಿಯಲ್ಲಿ ಒಗೆಯುವದನ್ನು ನೋಡಿರಬೇಕು. ನೋಡದಿದ್ದರೂ ಒಗೆತದ ಪರಿಣಾಮವನ್ನು ಮಿಸ್ ಮಾಡಿಕೊಳ್ಳುವಂತೆ ಇರಲಿಲ್ಲ. ಮೊದಲೇ ಕಟ್ಟಿಗೆಯ ಬುಡವಿದ್ದ ಘಟ್ಟಿಯಾದ ಡಸ್ಟರ್. ಒಂದು ದೊಡ್ಡ ಕಲ್ಲು ಬಂದು ಬುರುಡೆಗೆ ಬಂದು ಅಪ್ಪಳಿಸಿದ ರೀತಿ. ಹಣೆಗೆ ಬರೋಬ್ಬರಿ ಏಟು ತಿಂದಿದ್ದ ಜಾಲಿಗಿಡದ ಭಯಂಕರವಾಗಿ ಅಳತೊಡಗಿದ್ದ. ಅವನು ದಿನಕ್ಕೊಮ್ಮೆ ಹೊಡೆತ ತಿಂದು ಅಳುವದು ಇದ್ದೇ ಇರುತ್ತಿತ್ತು. ಆದರೆ ಅಂದಿನ ಅಳು ಭೀಕರವಾಗಿತ್ತು. ಎಲ್ಲರೂ ಆಕಡೆ ನೋಡಿದರೆ ಜಾಲಿಗಿಡದನ ಹಣೆಯಿಂದ ರಕ್ತ! ರಾಮಾ ರಕ್ತ! ಬಳಬಳ ಹರಿಯುತ್ತಿದೆ. ಖರಾಬ್ ಸೀನ್! ಅರ್ಧ ಮುಖ ಫುಲ್ ರಕ್ತಮಯ! ಬಿಳಿ ಶರ್ಟ್ ಫುಲ್ ರೆಡ್! ಫುಲ್ ಖೂನ್ ಖರಾಬಾ!

ಒಳಗೆ ಬಂದಿದ್ದ ಇನ್ಸಪೆಕ್ಟರ್ ಸಾಹೇಬರು, 'ಎಂಥಾ ಕೆಲಸ ಮಾಡೀರಿ? ಮೈಮ್ಯಾಲೆ ಖಬರ್ ಅದನೋ ಇಲ್ಲೋ? ಹೀಂಗ ಬಡಿಯೋದ?? ಹಾಂ?' ಅಂತ ಅಬ್ಬರಿಸಿದಾಗಲೇ ಕಾತ್ರಾಳೆ ಸರ್ ತಾವು ಮಾಡುತ್ತಿದ್ದ ದುವಾ ಸಲಾಮಿ ನಿಲ್ಲಿಸಿ ಜಾಲಿಗಿಡದನ ಕಡೆ ನೋಡಿದ್ದಾರೆ. ನೋಡಿ ಫುಲ್ ಥಂಡಾ ಹೊಡೆದಿದ್ದಾರೆ. ಆಪರಿ ಬಡಿಯುತ್ತಿದ್ದರೂ ಈ ನಮೂನಿ ಖೂನ್ ಖರಾಬಾ ಅವರಿಗೂ ದೊಡ್ಡ ಶಾಕ್ ನೀಡಿತ್ತು. ಈ ರಕ್ತಸಿಕ್ತ ಅನುಭವ ಅವರಿಗೂ ಹೊಸದು. ಅದಕ್ಕಿಂತ ದೊಡ್ಡ ಶಾಕ್ ಎಂದರೆ ಇದೆಲ್ಲ ಬರೋಬ್ಬರಿ ಎಜುಕೇಶನ್ ಇನ್ಸಪೆಕ್ಟರ ಅವರ ಎದುರಿಗೇ ನಡೆದುಹೋಗಿದೆ. ಅವರೇ eye witness.

ಸರ್ ಸುಧಾರಿಸಿಕೊಂಡು ಬೆ.. ಬೆ.. ಬ್ಬೆ...  ಅಂತ ಏನೋ ವಿವರಣೆ ಕೊಡಲು ನೋಡಿದರು. ಸಿಕ್ಕಾಪಟ್ಟೆ upset ಆಗಿದ್ದ ಇನ್ಸಪೆಕ್ಟರ್ ಸಾಹೇಬರು ಖಂಡಾಪಟ್ಟೆ irritation ನಿಂದ ಏನೋ ಗೊಣಗುತ್ತ, 'ಹೆಡ್ ಮಾಸ್ತರ್ ಕಡೆ ಹೋಗ್ತೇನಿ. ರಿಪೋರ್ಟ್ ಮಾಡ್ತೇನಿ.....' ಎಂದೆಲ್ಲ ಹೇಳುತ್ತ ಕ್ಲಾಸಿನಿಂದ ಹೊರಗೆ ಹೋದರು. ಅಲ್ಲಿಗೆ ಸರ್ಕಾರಿ ನೌಕರಿಗೆ ಎಳ್ಳುನೀರು ಬಿಟ್ಟ ಲುಕ್ ಸರ್ ಮುಖದ ಮೇಲೆ ಬಂತು. ಇನ್ಸಪೆಕ್ಟರ್ ಹಿಂದೆ ಹೋಗಿ ಪೂಸಿ ಹೊಡೆಯಲೋ ಅಥವಾ ರಕ್ತ ಸುರಿಸುತ್ತ ಹೋ! ಅಂತ ಕೂಗುತ್ತಿರುವ ಶಿಷ್ಯೋತ್ತಮನನ್ನು ವಿಚಾರಿಸಿಕೊಳ್ಳಲೋ ಅಂತ ವಿಚಾರ ಮಾಡುವಷ್ಟರಲ್ಲಿ ಸೀನ್ ಶಿಫ್ಟ್ ಆಗಿತ್ತು.

ಇಷ್ಟಾಗುವಷ್ಟರಲ್ಲಿ ಹೆಡ್ ಮಾಸ್ಟರ್ ಮತ್ತು ಇನ್ಸಪೆಕ್ಟರ್ ಕ್ಲಾಸಿಗೆ ವಾಪಸ್ ಬಂದರು. ಹೆಡ್ ಮಾಸ್ಟರ್ ಮುಂದೆ ಮತ್ತೆ ಸರ್ ಅವರಿಗೆ ಮಂಗಳಾರತಿ ಆಯಿತು. ಆಗ ಹೆಡ್ ಮಾಸ್ಟರ್ ಆಗಿದ್ದವರು ಪೂಜಾರ್ ಸರ್ ಅಂತ ನೆನಪು. ಅಥವಾ ಪತ್ತಾರ್ ಸರ್ ಇದ್ದರೂ ಇರಬಹದು. ಪ್ರಬುದ್ಧತೆ ಇದ್ದ ಕೂಲ್ ಮಾಸ್ತರರು. ಅವರಿಗೆ ಪರಿಸ್ಥಿತಿ ಸಂಬಾಳಿಸುವ tension. ಏನೋ ಹೇಳಿ ಮಾಂಡವಲಿ (ಸಂಧಾನ) ಮಾಡಿಸಿದರು. ಇನ್ಸಪೆಕ್ಟರ್ ಅಂತೂ ಕಳಚಿಕೊಂಡರು. ಸುಮ್ಮನೇ ಕಳಚಿಕೊಳ್ಳಲಿಲ್ಲ. 'ರಿಪೋರ್ಟ್ ಮಾಡ್ತೇನಿ. ನಿಮ್ಮ ನೌಕರಿ ಕಳೀತೀನಿ. ಏನಂತ ತಿಳ್ಕೊಂಡಾರ? ಹೀಂಗ ಬಡಿಯೋದು???' ಅನ್ನುತ್ತ, ಧಮಕಿ ಹಾಕುತ್ತ ಹೋದರು.

ಹೆಡ್ ಮಾಸ್ಟರ್ ಬೇರೆ ಎಲ್ಲ ಶಿಕ್ಷಕ ಶಿಕ್ಷಕಿಯರನ್ನು ಕರೆದರು. ಎಲ್ಲರೂ ವಿಷಯ ಕೇಳಿ, ಕಣ್ಣಾರೆ ನೋಡಿ ಫುಲ್ ಅವಾಕ್ಕಾದರು. ಥಂಡಾ ಹೊಡೆದರು. ಹೆಡ್ ಮಾಸ್ಟರ್ ಒಳ್ಳೆ ನುರಿತ ಪ್ರಾಜೆಕ್ಟ್ ಮ್ಯಾನೇಜರನ ಹಾಗೆ ಬೇರೆ ಬೇರೆ ಮಂದಿಗೆ ಬೇರೆ ಬೇರೆ ಕೆಲಸ ವಹಿಸಿದರು. ಒಬ್ಬರು ಗಾಯಾಳು ಜಾಲಿಗಿಡದನ್ನು ಅಲ್ಲೇ ಮಾಳಮಡ್ಡಿಯಲ್ಲಿದ್ದ ಯಾರೋ ವೈದ್ಯರ ಬಳಿ ಕರೆದೊಯ್ದರು. ದೊಡ್ಡ ಪ್ರಮಾಣದ ಗಾಯಾಳು ಅಂತ ಮಾಸ್ತರ್ ಸೈಕಲ್ ಸವಾರಿಯ ಭಾಗ್ಯ ಅಂದು ಜಾಲಿಗಿಡದನಿಗೆ ಸಿಕ್ಕಿತ್ತು ಅಂತ ನೆನಪು. ಇನ್ನೊಬ್ಬರಾರೋ ಜಾಲಿಗಿಡದನ ತಂದೆಯನ್ನು ಕರೆತರಲು ಅವರು ಕೆಲಸ ಮಾಡುತ್ತಿದ್ದ ಕಡೆ ಓಡಿದರು. ಒಟ್ಟಿನಲ್ಲಿ ದೊಡ್ಡ ಪ್ರಮಾಣದ crisis management ಸಮರೋಪಾದಿಯಲ್ಲಿ ಸಾಗುತ್ತಿತ್ತು. ಮಾಸ್ತರ್ ನೌಕರಿ ಮತ್ತು ಶಾಲೆಯ ಮರ್ಯಾದೆಯ ಪ್ರಶ್ನೆ!

ಈಕಡೆ ಕಾತ್ರಾಳೆ ಸರ್ ಅವರಿಗೆ nervous breakdown ಆಗುತ್ತಿತ್ತು. ಹಾಗಂತ ಈಗ ಗೊತ್ತಾಗುತ್ತದೆ. ಸಿಕ್ಕಾಪಟ್ಟೆ manly ಆಗಿದ್ದ ಪುರಷಸಿಂಹನಂತಹ ಕಾತ್ರಾಳೆ ಸರ್ ಒಳ್ಳೆ ಹೆಣ್ಯಾನಂತೆ ಗೊಳೋ ಅಂತ ಅಳುತ್ತ ಕ್ಲಾಸ್ ಬಿಟ್ಟು ಹೋಗಿಬಿಟ್ಟರು. ಖಾಲಿಯಿದ್ದ ಕೊಠಡಿಯೊಂದರಲ್ಲಿ ಹೊಕ್ಕಿಕೊಂಡರು. ದೊಡ್ಡ ಆಘಾತಕ್ಕೆ ಒಳಗಾಗಿದ್ದ ಅವರು ಏನಾದರೂ ಅನಾಹುತ ಮಾಡಿಕೊಂಡಾರು ಅಂತ ಅವರ ಮೇಲೆ ನಿಗಾ ಇಡಲು ಮತ್ತು ಅವರನ್ನು ಸಮಾಧಾನ ಮಾಡಲು ಒಂದಿಷ್ಟು ಜನ ಶಿಕ್ಷಕ ಶಿಕ್ಷಕಿಯರು ಟೊಂಕಕಟ್ಟಿದರು. ನಿಜವಾಗಿಯೂ ಸೀರೆಯತ್ತಿ ಟೊಂಕಕಟ್ಟಿದರು. ಒಟ್ಟಿನಲ್ಲಿ ಮಧ್ಯಾಹ್ನದ ಅವಧಿಯಲ್ಲಿ ಇಡೀ  ಪ್ರಾಥಮಿಕ ವಿಭಾಗ (3rd and 4th standards) ಜಾಲಿಗಿಡನ ಲಫಡಾವನ್ನು ಸಂಬಾಳಿಸುವಲ್ಲಿ ಫುಲ್ ಬ್ಯುಸಿ. ಯಾವದೇ ಕ್ಲಾಸಿನಲ್ಲಿ ಟೀಚರ್ ಇಲ್ಲ. ಗಲಾಟೆ ಮಾಡದೇ ಸುಮ್ಮನಿರುವಂತೆ ಆಗಾಗ ಮಾಸ್ತರ್, ಮೇಡಂ ಬಂದು ಗದರಿಸಿ ಹೋಗುತ್ತಿದ್ದರು.

ಸುಮಾರು ಹೊತ್ತಿನ ಮೇಲೆ ಜಾಲಿಗಿಡದ ವಾಪಸ್ ಬಂದ. ಹಣೆಗೆ ನಾಲ್ಕಾರು ಹೊಲಿಗೆ ಹಾಕಿ, ಟ್ರೀಟ್ಮೆಂಟ್ ಕೊಟ್ಟು ಕಳಿಸಿದ್ದರು. ಸಾಧಾರಣ ಹೊಡೆತಗಳಿಂದ ಫಟಾಫಟ್ ಚೇತರಿಸಿಕೊಳ್ಳುತ್ತಿದ್ದ ಅವನೂ ಅಂದಿನ ದೊಡ್ಡ ಪ್ರಮಾಣದ ಮಿಸೈಲ್ ದಾಳಿಗೆ ಬಲಿಯಾಗಿ ಮಂಕಾಗಿದ್ದ. ಅವನಿಗೆ ಅಂದು ರಾಜೋಪಚಾರ. ಐದು ನಿಮಿಷಕ್ಕೊಮ್ಮೆ ಯಾರಾದರೂ ಬಂದು ಅವನ ಹಾಲತ್ ವಿಚಾರಿಸಿಕೊಳ್ಳುತ್ತಿದ್ದರು. ತಿಂಡಿ ಗಿಂಡಿ ಕೂಡ ಕೊಡಿಸಿದ್ದರು. ಪ್ರತಿ ದಿನ ಬೇರೆಯೇ ರೀತಿಯಲ್ಲಿ ಉಪಚಾರ ಅನುಭವಿಸುತ್ತಿದ್ದವನ ನಸೀಬ್ ಅಂದು ಖುಲಾಯಿಸಿತ್ತು. ಅಂದು ಜಾಲಿಗಿಡದನಿಗೆ ರಾಜೋಪಚಾರ!

ಇಷ್ಟೆಲ್ಲ ಆಗುವ ಹೊತ್ತಿಗೆ ಮಧ್ಯಾನ್ಹದ ವಿರಾಮದ ಸಮಯ. ಕಾತ್ರಾಳೆ ಸರ್ ಇನ್ನೂ nervous breakdown ನಿಂದ ಚೇತರಿಸಿಕೊಂಡಿರಲಿಲ್ಲ. ಅವರು ಎಲ್ಲರನ್ನೂ ಆಪರಿ ಬಾರಿಸುತ್ತಿದ್ದರೂ ಅವರ ಮೇಲೆ ಎಲ್ಲರಿಗೂ ಏನೋ ಒಂದು ರೀತಿಯ ಪ್ರೀತಿ, ಮಮತೆ, ಆತ್ಮೀಯತೆ. ಅವರೂ ಅಷ್ಟೇ ಮಕ್ಕಳನ್ನು ತುಂಬಾ ಹಚ್ಚಿಕೊಳ್ಳುತ್ತಿದ್ದರು. ಆ ವಯಸ್ಸೇ ಹಾಗಿರುತ್ತದೆ ನೋಡಿ. ಪಾಲಕರು, ಶಿಕ್ಷಕರು ಅಂದರೆ ಮಕ್ಕಳಿಗೆ ಹೀರೋಗಳು. ಅದರಲ್ಲೂ ಉಳಿದೆಲ್ಲ ಶಿಕ್ಷಕರಿಗಿಂತ ಅನೇಕ ರೀತಿಯಲ್ಲಿ ಭಿನ್ನರಾಗಿದ್ದ ಮತ್ತು multifaceted ವ್ಯಕ್ತಿತ್ವ ಉಳ್ಳವರಾಗಿದ್ದ ಕಾತ್ರಾಳೆ ಸರ್ ಅಂದರೆ ಎಲ್ಲರಿಗೂ ಪಂಚಪ್ರಾಣ. ಕೆಲವರಂತೂ, ಹೆಚ್ಚಾಗಿ ಹುಡುಗಿಯರು, ಅವರ ಮೇಲೆ ಒಂದು ತರಹದಲ್ಲಿ emotionally dependent. ಅಂದಿನ ಕಾಲದ ದೊಡ್ಡ ಕುಟುಂಬಗಳಲ್ಲಿ, ಅದರಲ್ಲೂ ಮಧ್ಯಮವರ್ಗ, ಕೆಳಮಧ್ಯಮವರ್ಗಗಳ ಕುಟುಂಬಗಳಲ್ಲಿ, ಮಕ್ಕಳನ್ನು ಯಾರೂ ಇವತ್ತಿನ ಪಾಲಕರಂತೆ ಲಲ್ಲೆಗರಿಯುತ್ತ ಮುದ್ದು ಮಾಡುತ್ತ ಕೂಡುತ್ತಿರಲಿಲ್ಲ. ಅದಕ್ಕೆಲ್ಲ ವೇಳೆ, ಸಹನೆ, ಶಕ್ತಿ, ಸಂಪನ್ಮೂಲ ಪಾಲಕರಲ್ಲಿ ಇರಲಿಲ್ಲ. ಹೊಟ್ಟೆಗೆ ಮತ್ತು ಬಟ್ಟೆಗೆ ಒಂದು ಮಟ್ಟಕ್ಕೆ ಪೂರೈಸಿ ಶಾಲೆಗೆ ಅಟ್ಟಿದರೆ ಅವರ ಜವಾಬ್ದಾರಿ ಮುಗಿಯಿತು ಎಂದು ಪಾಲಕರು ಭಾವಿಸುತ್ತಿದ್ದ ಕಾಲ. ಅಂತಹ ಅನೇಕ ಮನೆಗಳಿಂದ ಬರುತ್ತಿದ್ದ ಹುಡುಗ ಹುಡುಗಿಯರು ಮನೆಯಲ್ಲಿ ಸಿಗದ ಒಂದು ಹಿಡಿ ಪ್ರೀತಿ, attention, ಇತ್ಯಾದಿಗಳನ್ನು ಮಾಸ್ತರ್ ಮಾಸ್ತರಣಿಗಳ ಮೂಲಕ ಪಡೆಯುತ್ತಿದ್ದರು. ಹಾಗಾಗಿ ಕೆಲವರಿಗೆ ಮಾಸ್ತರ್ ಎಂದರೆ ಏನೋ ಒಂದು ತರಹದ emotional attachment.

ಹುಡುಗಿಯರೇ  ಹೆಚ್ಚು emotional. ಗಂಡುಗಲಿ ಕಾತ್ರಾಳೆ ಸರ್ ಅವರ ಖರಾಬ್ ಹಾಲತ್ ನೋಡಿ ಅವರಲ್ಲಿ ಕೆಲವರಿಗೆ ತಡೆಯಲಾಗಲಿಲ್ಲ. ಬೇರೆಯವರ ಕಣ್ಣೀರು ಹಾಕಿಸುತ್ತಿದ್ದರೇ ವಿನಃ ಕಾತ್ರಾಳೆ ಸರ್ ಕಣ್ಣೀರು ಹಾಕುವದಿರಲಿ ಅದನ್ನು ಊಹೆ ಮಾಡಿಕೊಳ್ಳಲೂ ಸಾಧ್ಯವಿರಲಿಲ್ಲ. ಹಾಗಿದ್ದಾಗ ಕಾತ್ರಾಳೆ ಸರ್ ಫುಲ್ ಡೌನಾಗಿ, ಜಾಲಿಗಿಡದನಿಗೆ ರಾಕ್ಷಸನಂತೆ ಬಡಿದ ಬಗ್ಗೆ ಪಾಪಪ್ರಜ್ಞೆ, ನೌಕರಿ ಗೋವಿಂದಾ ಗೋವಿಂದಾ ಆದೀತೆಂಬ ಭಯ, ಎಲ್ಲರ ಮುಂದೆ ಆಗಿಹೋದ ದೊಡ್ಡ ಲಫಡಾದಿಂದಾದ ಒಂದು ತರಹದ ಅವಮಾನ, ಇದೆಲ್ಲದರಿಂದ ಪೂರ್ತಿ ಕುಗ್ಗಿ ಹೋಗಿ ಕಂಗಾಲಾಗಿ ಕಣ್ಣೀರು ಹಾಕುತ್ತ ಬೇರೆ ರೂಮ್ ಸೇರಿದ್ದನ್ನು ನಮ್ಮ ಕ್ಲಾಸಿನ collective ಹೆಂಗರುಳು ಅದೇಗೆ ಸಹಿಸಿಕೊಂಡೀತು? ಒಂದಿಷ್ಟು ಚಿಣ್ಣ ಹುಡುಗಿಯರು ಕಾತ್ರಾಳೆ ಸರ್ ಇದ್ದ ರೂಮಿಗೆ ದಾಂಗುಡಿ ಇಟ್ಟೇಬಿಟ್ಟರು. ಹೋಗಿ ಸರ್ ಅವರನ್ನು ಕೆಲವರು ಅಪ್ಪಿಕೊಂಡರೆ ಕೆಲವರು ಕೈ ಹಿಡಿದರು. ಸರ್ ಬಾಡಿ ಸಿಗದವರು ಸರ್ ಯಾರಿಗೆ ಸಿಕ್ಕಿದ್ದರೋ ಅವರನ್ನು ಹಿಡಿದರು. ಗೊಳೋ ಅಂದು ರಾಗ ತೆಗೆದು ಅತ್ತರು. ಸಾಮೂಹಿಕ ರೋಧನ. ಪಾಪ ಸಣ್ಣ ಹುಡುಗಿಯರು. ಹಿರಿಯರು ತೊಂದರೆಯಲ್ಲಿ ಸಿಲುಕಿದಾಗ ಚಿಕ್ಕವರಿಗೆ ವಿಷಯ ತಿಳಿಯುವದಿಲ್ಲ. ಒಂದು ತರಹದ ಅಭದ್ರತೆ ಕಾಡುತ್ತದೆ. ದುಃಖಿತರಾಗಿದ್ದ ಕಾತ್ರಾಳೆ ಸರ್ ಈಗ ಹುಡುಗಿಯರನ್ನು, ಅದರಲ್ಲೂ ತಮ್ಮ ಪಟ್ಟದ ಶಿಷ್ಯೆಯರನ್ನು, ಸಮಾಧಾನ ಮಾಡಬೇಕಾಯಿತು. 'ಏನೂ ಆಗಿಲ್ಲವಾ. ಚಿಂತಿ ಮಾಡಬ್ಯಾಡ್ರೀ.... ' ಎಂದು ಎಣ್ಣೆ ಪಳಚಿ, ಮಲ್ಲಿಗೆ ಮುಡಿದಿದ್ದ ಹುಡುಗಿಯರ ತಲೆ ಸವರಿ ಸಮಾಧಾನ ಮಾಡುವ ಪ್ರಯತ್ನ ಮಾಡಿದರು.

ಇದೊಂದು ತರಹದ ಸಾಮೂಹಿಕ ಸನ್ನಿ (mass hysteria) ಆಗಿಬಿಟ್ಟಿತು. ಅವರು ಹೋಗಿ ಸರ್ ಅಪ್ಪಿಕೊಂಡು ಅತ್ತು ಬಂದರು. ನಾವು ಹೋಗದಿದ್ದರೆ ಹೇಗೆ ಅಂತ peer pressure ಬಂದು ಎಲ್ಲರೂ ಹೋದರು. ಹೆಂಗರುಳಿದ್ದ ಕೆಲವು ಗಂಡುಹುಡುಗರೂ ಹೋಗಿ ಗೊಳೋ ಅಂದರು. ಅವರು ಹೋಗಿ ಬಂದರು ಅಂದ ಮೇಲೆ ನಾವು ಹೋಗಲಿಲ್ಲ ಅಂದರೆ ಹೇಗೆ ಅಂತ ನಮ್ಮನ್ನೂ ಹಿಡಿದು ಎಲ್ಲರೂ ರುಡಾಲಿಯರ (ಸತ್ತಾಗ ಬರುವ ವೃತ್ತಿಪರ ಅಳುವವವರು) ಹಾಗೆ ಅತ್ತು, ಕೆಲವರು ಅಳುವ ಶಾಸ್ತ್ರ ಮುಗಿಸಿ ಬಂದೆವು. ನಮಗೆ ಕಾತ್ರಾಳೆ ಸರ್ ಅಂದರೆ ಸಿಕ್ಕಾಪಟ್ಟೆ ಇಷ್ಟ ಆದರೆ ಅಳುವಷ್ಟಲ್ಲ. ಆದರೂ ಅಂದಿನ ಸಮೂಹ ಸನ್ನಿ ಹಾಗಿತ್ತು. nervous breakdown ಆಗಿದ್ದ ಕಾತ್ರಾಳೆ ಸರ್ ಅವರನ್ನು ಸಂಬಾಳಿಸುವದೇ ಉಳಿದ ಶಿಕ್ಷಕ ಮಂದಿಗೆ ಸಾಕೋಬೇಕಾಗಿತ್ತು. ಮೇಲಿಂದ ಚಿಣ್ಣರ ತಾಪತ್ರಯ ಬೇರೆ. ಹಾಕ್ಕೊಂಡು ನಾಲ್ಕು ಬಾರಿಸೋಣ ಅಂದರೆ ಮೊದಲಾಗಿದ್ದ ಲಫಡಾದ ಆಘಾತದಿಂದ ಯಾರೂ ಚೇತರಿಸಿಕೊಂಡಿರಲಿಲ್ಲ. ಆದಿನದ ಮಟ್ಟಿಗೆ ಕಾತ್ರಾಳೆ ಸರ್ ಡಸ್ಟರ್ ಒಗೆದಿದ್ದೇ ಆಖ್ರೀ ಹೊಡೆತ, ಬಡಿತ ಆಗಿರಬೇಕು. ಅಷ್ಟರಮಟ್ಟಿಗೆ ಎಲ್ಲರೂ ಬಚಾವ್.

ಸುಮಾರು ನಾಲ್ಕು ಘಂಟೆ ಹೊತ್ತಿಗೆ ಜಾಲಿಗಿಡದನ ಅಪ್ಪ ಸ್ಕೂಲಿನ ಅಂಗಳದಲ್ಲಿ ಪ್ರತ್ಯಕ್ಷರಾದರು. ಎತ್ತರಕ್ಕೆ ಕರ್ರಗಿದ್ದ ಆಜಾನುಬಾಹು ವ್ಯಕ್ತಿ. ಪಕ್ಕಾ ಜವಾರಿ ಬ್ರಾಂಡ್. ಬಿಳಿ ಜುಬ್ಬಾ ಹಾಕಿ, ಬಿಳಿ ಧೋತ್ರ ಉಟ್ಟು, HMT (ಹೆಗಲ ಮೇಲೆ ಟವೆಲ್) ಭೂಷಿತರಾಗಿ ಬಂದಿದ್ದರು.

ಜಾಲಿಗಿಡದನ ಅಪ್ಪ ಬರುವದಕ್ಕೂ ಕಾತ್ರಾಳೆ ಸರ್ ಸೀನಿಗೆ ಎಂಟ್ರಿ ಕೊಡುವದಕ್ಕೂ ಸರಿಯಾಯಿತು. 'ಸರ್ರಾ, ತಪ್ಪಾತ್ರೀ. ನಾ ಬೇಕಂತ ಮಾಡಿಲ್ಲರೀ. ಸುರೇಶ ಗದ್ದಲ ಹಾಕಾಕತ್ತಿದ್ನರೀ..... ' ಅನ್ನುವ ಧಾಟಿಯಲ್ಲಿ ಏನೋ ಹೇಳುತ್ತ, ತಪ್ಪೊಪ್ಪಿಗೆ ಕಮ್ ಪ್ರಾಯಶ್ಚಿತ ಕಮ್ ಕ್ಷಮಾಪಣೆ ಕೇಳುವ ಮಾದರಿಯಲ್ಲಿ ದೂರದಿಂದಲೇ ದೊಡ್ಡ ಪ್ರಮಾಣದಲ್ಲಿ ಕೈಯೆತ್ತಿ ಮುಗಿಯುತ್ತ, ಜೋಲಿ ಹೊಡೆಯುತ್ತ ಕಾತ್ರಾಳೆ ಸರ್ ಬಂದರು. ತಗ್ಗಿ ಬಗ್ಗಿ ನಮಸ್ಕಾರ ಮಾಡುತ್ತ ಬಂದವರು ಜಾಲಿಗಿಡದನ ಅಪ್ಪನ ಕಾಲಿಗೆ ಡೈವ್ ಹೊಡೆದೇಬಿಡುತ್ತಿದ್ದರೋ ಏನೋ. ಆದರೆ ಅಷ್ಟರಲ್ಲಿ ಹೆಡ್ ಮಾಸ್ಟರ್ ಬಂದರು. ಎಲ್ಲರನ್ನೂ ಕರೆದುಕೊಂಡು ತಮ್ಮ ಕೋಣೆಗೆ ಹೋದರು. ಚಿಕಿತ್ಸೆ ಪಡೆದು ಬಂದಿದ್ದ ಜಾಲಿಗಿಡದದನ್ನು ಕಳಿಸುವಂತೆ ಆಜ್ಞಾಪಿಸಿದರು. ಯಾರೋ ಅಬ್ಬೇಪಾರಿ ಬಂದು, 'ಲೇ ಜಾಲ್ಯಾ, ನಿಮ್ಮ ಅಪ್ಪಾರು ಬಂದಾರ. ಹೆಡ್ ಮಾಸ್ಟರ್ ಕರಿಯಾಕತ್ತಾರ. ನೀ ಹೋಗಬೇಕಂತ. ಹೋಗಿಬಾರಲೇ,' ಅಂತ ಹೇಳಿದ. ಮಾಸ್ತರ್ ಎಸೆದ ಡಸ್ಟರ್ ಹೇಗೆ ಬ್ರಹ್ಮಾಸ್ತ್ರದ ಹಾಗೆ ಬಂದು ಅಪ್ಪಳಿಸಿತು. ಯಾವ ರೀತಿ ನೋವಾಯಿತು. ಡಾಕ್ಟರ್ ಹೇಗೆ ಹೊಲಿಗೆ ಹಾಕಿದರು. ತಾನು ಹೇಗೆ ಮಹಾ ವೀರನಂತೆ, ಧೀರನಂತೆ ಅವಡುಕಚ್ಚಿ ನೋವು ತಡೆದುಕೊಂಡು, ಒಂಚೂರೂ ಅಳದೆ, ಟಾಕಿ (ಹೊಲಿಗೆ) ಹಾಕಿಸಿಕೊಂಡೆ....ಅಂತೆಲ್ಲ ತನ್ನ ಸಹಪಾಠಿಗಳಿಗೆ ರಂಗುರಂಗಾಗಿ ಪುಂಗುತ್ತಿದ್ದ ಜಾಲ್ಯಾ ಉರ್ಫ್ ಜಾಲಿಗಿಡದ ಎದ್ದು, ಕೆಳಗಿಳಿಯುತ್ತಿದ್ದ ತನ್ನ ಖಾಕಿ ಚೊಣ್ಣವನ್ನು ಮೇಲಕ್ಕೆತ್ತಿಕೊಳ್ಳುತ್ತ ಹೆಡ್ ಮಾಸ್ಟರ್ ಕೋಣೆಯತ್ತ ಹೋದ.

ಮುಂದೆ ಎಲ್ಲಾ ವರ್ಕೌಟ್ ಆಯಿತು. ಆಗಿನ ಕಾಲದಲ್ಲಿ ಪಾಲಕರು ಶಿಕ್ಷಕರನ್ನು ಸಿಕ್ಕಾಪಟ್ಟೆ ಗೌರವಿಸುತ್ತಿದ್ದರು. ಶಿಕ್ಷಕರು ಏನು ಮಾಡಿದರೂ ತಮ್ಮ ಮಕ್ಕಳ ಒಳ್ಳೆಯದಕ್ಕೇ ಮಾಡುತ್ತಾರೆ ಅಂತ ಅಚಲವಾಗಿ ನಂಬಿರುತ್ತಿದ್ದರು. ಎಲ್ಲಿಯವರೆಗೆ ಅಂದರೆ ಮನೆಯಲ್ಲಿ ಮಕ್ಕಳನ್ನು ಬರೋಬ್ಬರಿ ಬಡಿದು, ಶಾಲೆಗೆ ಎಳೆತಂದು ಶಿಕ್ಷಕರ ಕಾಲಲ್ಲಿ ತಳ್ಳಿ, ಅವರೆದುರೇ ಮತ್ತೆ ನಾಲ್ಕು ಬಾರಿಸಿ, 'ಸರ್ರಾ, ನೀವೂ ಬರೋಬ್ಬರಿ ಹಾಕ್ರಿ. ಸೀದಾ ಮಾತಿಗೆ ಬಗ್ಗುವ ಪೈಕಿ ಅಲ್ಲರೀ. ಹಾಕ್ರಿ. ಬಿಂದಾಸ್ ಹಾಕ್ರಿ. ನಮ್ಮದೂ ಕೂಡಿಸಿಯೇ ಹಾಕ್ರಿ,' ಅಂತ ಸುಪಾರಿ ಕೊಡುತ್ತಿದ್ದರು. ಅದರಲ್ಲೂ ಕೆಳಮಧ್ಯಮವರ್ಗದ ಅಥವಾ ಬಡವರ ಪಾಲಕರಿದ್ದರಂತೂ ಮುಗಿದೇ ಹೋಯಿತು. ಜಾಲಿಗಿಡದನ ತಂದೆ ಅದೇ ವರ್ಗಕ್ಕೆ ಸೇರಿದವರು. ಮತ್ತೆ ಮೊದಲೇ ಹೇಳಿದಂತೆ ಜಾಲಿಗಿಡದ ಮಹಾ ಚಿದುಗ. ಪೋಕ್ರಿ. ತುಂಟ. ಕೇಳಬೇಕೇ?

ಒಟ್ಟಿನಲ್ಲಿ ಹೆಡ್ ಮಾಸ್ಟರ್ ಕೂಡಿಸಿಕೊಂಡು ಮಾಡಿದ ಮಾಂಡವಲಿ ವರ್ಕೌಟ್ ಆಯಿತು. ಅರ್ಧಗಂಟೆ ನಂತರ ಎಲ್ಲರಿಗೂ ನಮಸ್ಕಾರ ಮಾಡುತ್ತ, ಧೋತ್ರದ ಚುಂಗನ್ನು ಎತ್ತಿಕೊಂಡು, ಮಗನಿಗೆ ಏನೋ ಹೂಂಕರಿಸುತ್ತ, ವಾರ್ನಿಂಗ್ ಕೊಡುತ್ತ ಹಿರಿಯ ಜಾಲಿಗಿಡದರು ಹೊರಟುಹೋದರು.

ಇಷ್ಟೆಲ್ಲಾ ಆಗುವಷ್ಟರಲ್ಲಿ ಶಾಲೆ ಮುಗಿಯಲು ಬಂದಿತ್ತು. ಆ ಒಂದಿನ ಫುಲ್ excitement. ಪಾಠ, homework ಏನೂ ಇಲ್ಲ. ಮಜಾ ಮಾಡಿ.

ದೂರ್ವಾಸ ಮುನಿಯ ಹಾಗಿದ್ದ ಕಾತ್ರಾಳೆ ಸರ್ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟರೆ ಏನಾಗುತ್ತದೆ ಎನ್ನುವ ಪಾಠವನ್ನು ಬರೋಬ್ಬರಿ ಕಲಿತಿದ್ದರು. ಅವರ ನಸೀಬ್ ಛಲೋ ಇತ್ತು ಅಂತ ಬಚಾವ್. ಇಲ್ಲವಾದರೆ ಎಜುಕೇಶನ್ ಇನಸ್ಪೆಕ್ಟರ್ ಬಂದಾಗ ಇಂತಹ ಘಟನೆಯಾಗಿತ್ತು. ಪರಿಣಾಮವಾಗಿ ನೌಕರಿ ಹೋಗಬಹುದಿತ್ತು. ಜಾಲಿಗಿಡದನ ಅಪ್ಪನದು ದೊಡ್ಡ ಗುಣ. ಮಾಸ್ತರ್ ಬಗ್ಗೆ, ಶಾಲೆ ಬಗ್ಗೆ, ಶಿಕ್ಷಕರ ಬಗ್ಗೆ ಇದ್ದ ಗೌರವದಿಂದ ಏನೂ ಕೇಸ್ ಗೀಸ್ ಮಾಡಲಿಲ್ಲ. ಕೇಸ್ ಮಾಡುವದು ಹೋಗಲಿ ಏನಾದರೂ ತೊಂದರೆಯಾದರೆ ತಾವು ಮಾಸ್ತರರ ಬೆಂಬಲಕ್ಕೆ ನಿಲ್ಲುವದಾಗಿ ಹೇಳಿ ಹೋಗಿದ್ದಿರಬೇಕು. ಬೇರೆ ಯಾರ ಮಕ್ಕಳಿಗಾದರೂ ಹೀಗಾಗಿದ್ದರೆ ಇಷ್ಟು ಸುಲಭದಲ್ಲಿ ಮಾಸ್ತರರಿಗೆ ಮುಕ್ತಿ ಸಿಗುತ್ತಿದ್ದಿಲ್ಲ. ಕೆಳಮಧ್ಯಮವರ್ಗದವರನ್ನು ಬಿಟ್ಟು ಸಮಾಜದ ಬೇರೆ ವರ್ಗದ ಜನ ಒಂದು ಹಂತದವರೆಗೆ ಮಾಸ್ತರ್ ಮಾಡಿದ್ದೆಲ್ಲ ಸರಿ ಅಂದಾರು. ಆದರೆ ಕೋಪ ಬಂದಾಗ ಹೋಶ್ ಕಳೆದುಕೊಂಡು ವಿಪರೀತ ಜೋಷ್ ನಲ್ಲಿ ಕೈಗೆ ಸಿಕ್ಕಿದ್ದನ್ನು ಮುಖ ಮೂತಿ ನೋಡದೆ ಎಸೆಯುತ್ತೇನೆ ಅಂತೆಲ್ಲ ಮಂಗನಾಟ ಮಾಡಿದರೆ ಕೆಲವು ಪಾಲಕರು ಗ್ರಹಚಾರ ಬಿಡಿಸುತ್ತಿದ್ದರು ಅಂತ ನಮ್ಮ ಅನಿಸಿಕೆ.

ಮುಂದೆ ಎಂದೂ ಕಾತ್ರಾಳೆ ಸರ್ ಕೈಗೆ ಸಿಕ್ಕಿದ್ದನ್ನು ಯಾರ ಕಡೆಯೂ ಮಿಸೈಲ್ ಮಾದರಿಯಲ್ಲಿ ಉಡಾಯಿಸಲಿಲ್ಲ. ತಾವೇ ಮಿಸೈಲ್ ವೇಗದಲ್ಲಿ ದಾಪುಗಾಲಿಡುತ್ತ ಬಂದು ಬಗ್ಗಿಸಿ ಬಗ್ಗಿಸಿ ಬಾರಿಸುವದನ್ನು ಮಾತ್ರ ಮುಂದುವರಿಸಿದರು. ಅವರಿಂದ ಸಮಾ ಬಾರಿಸಿಕೊಂಡವರು ಏಕ್ದಂ ಗಟ್ಟಿಮುಟ್ಟಾಗಿ ಫೈಲ್ವಾನ್ ರೀತಿಯಲ್ಲಿ ತಯಾರಾದರು. ನಾನು ಅವರ ಪಟ್ಟದ ಶಿಷ್ಯನಾದ ಕಾರಣಕ್ಕೆ, ಫ್ಯಾಮಿಲಿ ಕನೆಕ್ಷನ್ ಇದ್ದಿದ್ದರಿಂದ ಮತ್ತು ಹೊಡೆಯುವದು ಹೋಗಲಿ ಘಟ್ಟಿಯಾಗಿ ಬೈದರೂ ತಡೆದುಕೊಳ್ಳಲಾಗದ ಡೆಲಿಕೇಟ್ ಡಾರ್ಲಿಂಗ್ ನಾನು ಅಂತ ಕಾತ್ರಾಳೆ ಸರ್ ಅವರಿಗೆ ಗೊತ್ತಿದ್ದ ಕಾರಣ ನಾನು ಬಚಾವಾದೆ. ಇಲ್ಲವಾದರೆ ಅವರ ಒಂದೇ ಏಟಿಗೆ ನಾನು ಅಂದೇ ಶಿವಾಯ ನಮಃ ಆಗುತ್ತಿದ್ದೆ. ಅವರು ಬಡಿಯುತ್ತಿದ್ದ ರೀತಿಯನ್ನು ನೆನಪಿಸಿಕೊಂಡರೆ ಇಂದಿಗೂ ಮೈ ಜುಮ್ ಅನ್ನುತ್ತದೆ. ದೇವರು ದೊಡ್ಡವನು! ನಮ್ಮನ್ನು ಬಚಾವ್ ಮಾಡಿದ.

ವಿಪರೀತ ಹೊಡೆಯುತ್ತಿದ್ದರು ಅನ್ನುವದನ್ನು ಬಿಟ್ಟರೆ ಉಳಿದೆಲ್ಲ ದೃಷ್ಟಿಯಿಂದ ಕಾತ್ರಾಳೆ ಸರ್ ಮಾದರಿ ಶಿಕ್ಷಕರು. ಸದಾ ಏನಾದರೂ ಓದುತ್ತ ಅಥವಾ ಬರೆಯುತ್ತ ಕೂತಿರುತ್ತಿದ್ದರು. ಸಣ್ಣ ಪ್ರಮಾಣದ ಸಾಹಿತಿ ಬೇರೆ. ಯಾವ್ಯಾವದೋ ಲೈಬ್ರರಿಗಳಿಗೆ ಹೋಗಿ ಏನೇನೋ ಓದಿ ಬರುತ್ತಿದ್ದರು. ಏನೇನೋ ಬರೆದು ಪತ್ರಿಕೆಗಳಿಗೆ ಕಳಿಸುತ್ತಿದ್ದರು. ಅದು ಇದು ಅಂತ ಏನೇನೋ ಮಾಡುತ್ತಿರುತ್ತಿದ್ದರು. ಆಗಿನ ಪ್ರಾಥಮಿಕ ಶಾಲೆಯ ಶಿಕ್ಷಕರು SSLC ಮುಗಿಸಿದ ನಂತರ TCH ಅಂತ ಏನೋ ತರಬೇತಿಯ ನಂತರ ನೌಕರಿಗೆ ಬರುತ್ತಿದ್ದರು. ನೌಕರಿ ಸೇರಿದಾಗ ಕಾತ್ರಾಳೆ ಸರ್ ಕೂಡ ಅಷ್ಟೇ. ಆದರೆ ಕಾತ್ರಾಳೆ ಸರ್ ಮುಂದೆ ಮಾಡಿದ ಸಾಧನೆಗಳು ಮಾತ್ರ really impressive. ೨೦೦೫-೬ ರ ಸುಮಾರಿಗೆ ಯಾಕೋ ಒಮ್ಮೆ ಸರ್ ನೆನಪಾದಾಗ ಇಂಟರ್ನೆಟ್ ನಲ್ಲಿ ಸುಮ್ಮನೆ ಹುಡುಕಿದ್ದೆ. ಅವರು ನಮಗೆ ಪಾಠ ಮಾಡಿದ್ದು ೧೯೮೧-೮೨ ರ ಸಮಯದಲ್ಲಿ. ಇಪ್ಪತ್ತು ವರ್ಷಗಳಲ್ಲಿ ಸರ್ ಬ್ಯಾಚುಲರ್ ಡಿಗ್ರಿ, ಮಾಸ್ಟರ್ ಡಿಗ್ರಿ ಮಾಡಿಕೊಂಡಿದ್ದರು. ಅಷ್ಟೇ ಅಲ್ಲ PhD ಕೂಡ ಮಾಡಿಮುಗಿಸಿದ್ದರು. ಇಷ್ಟೆಲ್ಲಾ ಸಾಧನೆಗಳನ್ನು ನೌಕರಿ ಮಾಡುತ್ತಲೇ ಮಾಡಿಕೊಂಡರು. ಇಷ್ಟೇ ಅಲ್ಲ. ಮಕ್ಕಳ ಸಾಹಿತ್ಯದಲ್ಲಿ ಸಾಕಷ್ಟು ಕೃಷಿ ಮಾಡಿದರು. ಪುಸ್ತಕ ಬರೆದರು. syllabus ತಯಾರುಮಾಡುವ ಸರ್ಕಾರಿ ಕಮಿಟಿಗೆ ಛೇರ್ಮನ್ ಆಗಿದ್ದರು. ಒಟ್ಟಿನಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿದ್ದರು. ಪತ್ರಿಕೆಗಳಲ್ಲಿ ಅಲ್ಲಿಲ್ಲಿ ಹೆಸರು ಬರುತ್ತಿತ್ತು. ಕೇವಲ SSLC ಮುಗಿಸಿಬಂದ ವ್ಯಕ್ತಿ ನೌಕರಿ ಮಾಡುತ್ತ, ಸಂಸಾರದ ರಥ ಎಳೆಯುತ್ತ, ಯಾವದೇ ವಿಶೇಷ ಸವಲತ್ತಿಲ್ಲದೆ ಇಷ್ಟೆಲ್ಲ ಸಾಧನೆ ಮಾಡಿದ್ದು ಸಣ್ಣ ಮಾತಲ್ಲ. Hats off, Sir!

ಇಂಟರ್ನೆಟ್ ನಲ್ಲಿ ಹುಡುಕಿದಾಗ ಕಾತ್ರಾಳೆ ಸರ್ ಅವರ ಸಾಧನೆ ಬಗ್ಗೆ ಓದಿ ತುಂಬಾ ಖುಷಿಯಾಗಿತ್ತು. ಮುಂದೊಮ್ಮೆ ಅವರನ್ನು ಜರೂರ್ ಭೆಟ್ಟಿಯಾಗಿ ಅವರನ್ನು ಅಭಿನಂದಿಸಿ ಆಶೀರ್ವಾದ ಪಡೆಯೇಬೇಕೆಂದಿದ್ದೆ. ಅದು ಹಾಗೇ ಮುಂದೂಡಿಕೊಂಡು ಹೋಗಿ ಆಗಿರಲಿಲ್ಲ. ೨೦೧೨ ನಮ್ಮ SSLC ಬ್ಯಾಚಿನ ೨೫ ವರ್ಷಗಳ ರಜತಮಹೋತ್ಸವ. ಆ ಸಮಾರಂಭಕ್ಕೆ ಎಲ್ಲ ಗುರುವರ್ಗವನ್ನು ಆಹ್ವಾನಿಸಬೇಕು ಅಂತ ಒಂದು ಲಿಸ್ಟ್ ಮಾಡಿ, ಹಳೆಯ ಶಿಕ್ಷಕರನ್ನು ಹುಡುಕಲಾರಂಭಿಸಿದಾಗ ದೊಡ್ಡ ಆಘಾತ ಕಾದಿತ್ತು. ಧಾರವಾಡದ ಸ್ನೇಹಿತರು ಹೇಳಿದರು, 'ಕಾತ್ರಾಳೆ ಸರ್ ದಿವಂಗತರಾಗಿ ಸುಮಾರು ವರ್ಷಗಳಾದವು!' ಅದು ದೊಡ್ಡ ಶಾಕ್. ೨೦೦೫ ಮತ್ತು ೨೦೧೨ ಮಧ್ಯೆ ಯಾವಾಗಲೋ ಸರ್ ನಿಧನರಾಗಿದ್ದರು. ಹೆಚ್ಚೆಂದರೆ ೫೦-೫೫ ವರ್ಷಗಳಾಗಿರಬೇಕು. ಅದಕ್ಕಿಂತ ಜಾಸ್ತಿಯಿಲ್ಲ. ಪಾಪ! ಅಂತವರು ಇನ್ನೊಂದಿಷ್ಟು ವರ್ಷ ಮುದ್ದಾಂ ಇರಬೇಕಿತ್ತು. ಇನ್ನೂ ಏನೇನು ಸಾಧನೆ ಮಾಡಿ ಮಾಡಿ ಇಡುತ್ತಿದ್ದರೋ. ಕಿಡ್ನಿ ತೊಂದರೆಯಿಂದ ತೀರಿಕೊಂಡಿದ್ದರು ಅಂತ ಅವರ ಮನೆ ಹತ್ತಿರಕ್ಕಿದ್ದ ಸ್ನೇಹಿತೆ ಹೇಳಿದ್ದಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ.

ಅದೇ ಸಮಾರಂಭಕ್ಕೆ ಎಂದು ಹಳೆಯ ದೋಸ್ತರನ್ನು ಹುಡುಕುತ್ತ ಹೋದರೆ ಮತ್ತೊಂದು ಶಾಕ್. ಸುರೇಶ ಜಾಲಿಗಿಡದ ಸಹ ಶಿವನ ಪಾದ ಸೇರಿಕೊಂಡಿದ್ದ. ಯಾವಾಗ ಗೊತ್ತಿಲ್ಲ. ಏಳನೇ ಕ್ಲಾಸಿನವರೆಗೆ ನಮ್ಮ ಜೊತೆಗೇ ಇದ್ದ. ನಂತರ ಕನ್ನಡ ಮೀಡಿಯಂ ಸೇರಿದ್ದ. ಜಾಸ್ತಿ ಟಚ್ ಇರಲಿಲ್ಲ. ಆದರೂ ಶಾಲೆಯಲ್ಲಿ ಕಾಣುತ್ತಿದ್ದ. ಶಾಲೆ ಬಿಟ್ಟ ಮೇಲೆ ಗೊತ್ತಿರಲಿಲ್ಲ. ಇಪ್ಪತ್ತೈದು ವರ್ಷಗಳ ನಂತರ ಹುಡುಕಿದರೆ ಜಾಲ್ಯಾ ಈಗ ಬರೇ ನೆನಪು ಅಂತ ಗೊತ್ತಾಯಿತು. ಬೇಸರವಾಯಿತು.

ಜಾಲ್ಯಾನ ಬಗ್ಗೆ ಫೇಸ್ಬುಕ್ ಮೇಲೆ ಇತರೆ ದೋಸ್ತರೊಂದಿಗೆ ಮಾತಾಡುತ್ತಿದ್ದಾಗ ಪರಮಮಿತ್ರ ಅರವಿಂದ ಪಾಟೀಲ ಜಾಲ್ಯಾನ ಮತ್ತೊಂದು ಖತರ್ನಾಕ್ ಕಾರ್ನಾಮೆಯನ್ನು ನೆನಪು ಮಾಡಿದ್ದ. ಐದನೇ ತರಗತಿಯಲ್ಲಿದ್ದಾಗ ಆಗಿದ್ದು. ನನಗೆ ಅಷ್ಟು ಸರಿಯಾಗಿ ನೆನಪಿಲ್ಲ. ಆಗಿದ್ದಿಷ್ಟು. ಒಂದು ದಿನ ಜಾಲ್ಯಾನ ತಂದೆ ಮತ್ತೆ ತರಗತಿಗೆ ಭೇಟಿ ಕೊಟ್ಟಿದ್ದರು. ಯಾರೂ ಅವರನ್ನು ಕರೆದು ಬಂದಿರಲಿಲ್ಲ. ತಾವೇ ಬಂದಿದ್ದರು. ಬಂದವರೇ ಸೀದಾ ಜಾಲ್ಯಾ ಕೂತಿದ್ದ ಜಾಗಕ್ಕೆ ಹೋದವರೇ ಅವನನ್ನು ಎಳೆದುಕೊಂಡು ಬಂದು ಕ್ಲಾಸಿನಲ್ಲಿದ್ದ ಟೀಚರ್ ಮುಂದೆಯೇ ದನ ಬಡಿದಂತೆ ಬಡಿದು ಬಡಿದು ಹಾಕಿದ್ದರು. ಅದ್ಯಾಕೆ ಜಾಲಿಗಿಡದನ ಅಪ್ಪ ಆ ನಮೂನಿ ಉಗ್ರಸ್ವರೂಪಿಯಾಗಿ ಸ್ವಂತ ಮಗನ ಮೇಲೆಯೇ ತಾಂಡವನೃತ್ಯ ಮಾಡಿದರು ಅಂತ ನೋಡಿದರೆ ಜಾಲ್ಯಾ ದೊಡ್ಡ ಲಫಡಾ ಮಾಡಿಕೊಂಡಿದ್ದ. ಹಜಾಮತಿಗೆ (ಕ್ಷೌರ) ಅಂತ ಕೊಟ್ಟ ರೊಕ್ಕವನ್ನು ತಿಂದು ನುಂಗಿ ನೀರು ಕುಡಿದುಬಿಟ್ಟಿದ್ದ! ಆ ದಿನದ ಮಕ್ಕಳ ಕೈಯಲ್ಲಿ ಹಾರ್ಡ್ ಕ್ಯಾಶ್ ಅಂತ ಏನಾದರೂ ಬಂದರೆ ಅದು ಹಜಾಮತಿ ರೊಕ್ಕ ಮಾತ್ರ ಆಗಿರುತ್ತಿತ್ತು. 'ಹೊಟ್ಟಿಗೆ ಹಾಕ್ತೇವಿ. ಬಟ್ಟಿ ಕೊಡಸ್ತೇವಿ. ಇಷ್ಟಾದ ಮೇಲೆ ಮತ್ಯಾಕಲೇ ರೊಕ್ಕಾ??' ಅಂತ pocket money ಕೇಳಿದ ಮಕ್ಕಳನ್ನು ಜಬರಿಸುವ ಪಾಲಕರೇ ಜಾಸ್ತಿ ಇದ್ದರು. ಏನೋ ತಲೆ ಮೇಲಿನ ಕಳೆ ತೆಗೆಸಲಿ ಅಂತ ತಿಂಗಳಿಗೆ ಒಂದು ಬಾರಿ ಹಜಾಮತಿ ಭತ್ಯೆ ಕೊಡುತ್ತಿದ್ದರು. ಆಗ ಎರಡು ರೂಪಾಯಿಗೆ ಬಾಲಕರ ಮುಂಡನ, ಮೂರು ರೂಪಾಯಿಗೆ ದೊಡ್ಡವರ ಮುಂಡನ ಆಗುತ್ತಿತ್ತು. ಮೇಲಿಂದ ಮಾಡುವ ಮಸಾಜ್ ಫ್ರೀ. ನಾಲ್ಕಾಣೆ ಕಾಣದ ಮಕ್ಕಳ ಕೈಯಲ್ಲಿ ಒಮ್ಮೆಲೇ ಎರಡು ರೂಪಾಯಿ ಬಂದರೆ!!?? ಅಷ್ಟೇ ಮತ್ತೆ. ದೊಡ್ಡ ನಿಧಿ ಸಿಕ್ಕಂತೆ. ಜಾಲಿಗಿಡದನಂತೂ ಬಿಡಿ. ಬಾಲವಿಲ್ಲದ ಮಂಗ. ಅದೇನು ಸ್ಕೀಮ್ ಹಾಕಿದ್ದನೋ ಗೊತ್ತಿಲ್ಲ. ಒಟ್ಟಿನಲ್ಲಿ ಹಜಾಮತಿ ಭತ್ಯೆಯನ್ನು ಬೇರೆ ಯಾವದಕ್ಕೋ ಉಡಾಯಿಸಿದ್ದಾನೆ. ಅದು ಅಪ್ಪನಿಗೆ ಗೊತ್ತಾಗಿದೆ. ತಪ್ಪು ಮಾಡಿದ ಕೂಡಲೇ ಪಾಠ ಕಲಿಸಬೇಕು. ತಡ ಮಾಡಿದರೆ ಪಾಠದ ಮಹತ್ವ ಗೊತ್ತಾಗಲಿಕ್ಕಿಲ್ಲ ಅಂದುಕೊಂಡವರೇ ಸೀದಾ ಶಾಲೆಗೇ ಬಂದು ಕ್ಲಾಸಿನಲ್ಲಿ ಶಿಕ್ಷಕರ ಮುಂದೆಯೇ ಬರೋಬ್ಬರಿ ನಾದಿದ್ದಾರೆ. ಈ ಪುಣ್ಯಾತ್ಮ ಹಜಾಮತಿ ಭತ್ಯೆಯನ್ನೇನೋ ಉಡಾಯಿಸಿದ್ದ. ನಂತರ ಹಜಾಮತಿ ಮಾಡಿಸಿದ ಶಾಸ್ತ್ರವೂ ಇರಲಿ ಅಂತ self service ಹಜಾಮತಿ ಮಾಡಿಕೊಂಡು, ಒಳ್ಳೆ 'ಇಲಿ ತಿಂದ ತಲೆ' ಸಹಿತ ಮಾಡಿಕೊಂಡು, ದಕ್ಷಿಣ ಆಫ್ರಿಕಾದಲ್ಲಿ ಬಿಳಿ ನಾಪಿತ ಹಜಾಮತಿ ಮಾಡಲಿಲ್ಲ ಅಂತ ತಾವೇ ಹಜಾಮತಿ ಮಾಡಿಕೊಂಡಿದ್ದ ಗಾಂಧೀಜಿ ಅವತಾರದಲ್ಲಿ ಬಂದಿದ್ದ ಅಂತ ನೆನಪು. ಇವೆಲ್ಲ ಸೇರಿ ಅವರಪ್ಪನನ್ನು ಕೆರಳಿಸಿ ಅವನಿಗೆ ಭರ್ಜರಿ ಮೇಜವಾನಿ ಅವತ್ತು.

ಸಿಟ್ಟಿನ ಕೈಗೆ ಬುದ್ಧಿ ಕೊಡಬಾರದು ಅಂತ ಉಪದೇಶ ಕೇಳಿದ್ದೆವು. ಆದರೆ ಕಾತ್ರಾಳೆ ಸರ್ ಘಟನೆಯಿಂದ ಅದರ ಪ್ರಾತ್ಯಕ್ಷಿಕೆ ಸಹಿತ ಲೈವ್ ನೋಡಿ ಬರೋಬ್ಬರಿ ಪಾಠ ಕಲಿತದ್ದಾಯಿತು. ಕಾತ್ರಾಳೆ ಸರ್ ಕಲಿಸಿದ ಬೇರೆ ಎಲ್ಲ ಪಾಠಗಳಿಗಿಂತ ಅದೇ ಮುಖ್ಯ ಪಾಠ ಅಂತ ನಂಬಿಕೆ. ಹಾಗಾಗಿ ಆ ಅಮೂಲ್ಯ ಪಾಠಕ್ಕೆ ಮತ್ತು ಅದನ್ನು ತಮ್ಮ ಖರ್ಚಿನಲ್ಲಿ ಕಲಿಸಿದ ಸರ್ ಅವರಿಗೊಂದು ದೊಡ್ಡ ನಮಸ್ಕಾರ.

ಕಾತ್ರಾಳೆ ಸರ್ ಅವರ ಶಿಷ್ಯನಾಗುವ ಮೊದಲು ಯಾವದೇ ಸಾಹಿತಿಗಳ, ಬರಹಗಾರರ ಸಾನಿಧ್ಯ ಸಿಕ್ಕಿರಲಿಲ್ಲ. ಇವತ್ತೇನಾದರೂ ನನಗೆ ಓದುವ ಮತ್ತು ಬರೆಯುವ ಹುಚ್ಚುಗಳನ್ನು ಹಚ್ಚಿದ್ದರೆ ಅದಕ್ಕೆ ಕಾತ್ರಾಳೆ ಸರ್ ಅವರ ಪ್ರಭಾವವೇ ಕಾರಣ. ಎರಡು ಭಯಂಕರ ಒಳ್ಳೆ ಹುಚ್ಚುಗಳು. 'ಅಯ್ಯೋ ಬೋರಿಂಗ್. ಟೈಮ್ ಪಾಸ್ ಮಾಡೋದು ಹೇಗೆ ಅಂತ ಗೊತ್ತಾಗಲ್ಲ. feeling lonely,' ಅಂತೆಲ್ಲ ಜನ ಅಲವತ್ತುಕೊಳ್ಳುವಾಗ ನಮಗೆ ಅವೆಲ್ಲ ಏನೂಂತಲೇ ಅರ್ಥವಾಗುವದಿಲ್ಲ. ಯಾಕೆಂದರೆ ನಮಗೆ ಅವುಗಳ ಅನುಭವವೇ ಇಲ್ಲ. ಮಾಡುವಷ್ಟು ಕೆಲಸ ಮಾಡಿದ. ಉಳಿದ ಸಮಯದಲ್ಲಿ ಪುಸ್ತಕ ತೆಗೆದು ಕೂತ. ಮೂಡ್ ಬಂದರೆ ಏನೋ ಬ್ಲಾಗ್ ಗೀಚಿದ. ಎಲ್ಲಿಯ ಬೋರು? ಎಲ್ಲಿಯ ಬೇಜಾರು?

ಓದುವದನ್ನು ಬಿಡಿ. ಮನೆಯಲ್ಲಿ ಎಲ್ಲರೂ ಬಿಡುವಿನ ವೇಳೆಯಲ್ಲಿ ಪುಸ್ತಕ ಹಿಡಿದು ಕೂತಿರುತ್ತಿದ್ದರು. ನಾನೂ ಅದನ್ನೇ ಮಾಡಿದೆ. ಓದುವದರಲ್ಲಿ ಸಿಕ್ಕ ಮಜಾಕ್ಕೆ addict ಆದೆ. ಆದರೆ ಬರೆಯುವ ಹವ್ಯಾಸ ಮನೆಯಲ್ಲಿ ಯಾರಿಗೂ ಇರಲಿಲ್ಲ. ನನಗೆ ಗೀಚುವದರಲ್ಲಿ ಆಸಕ್ತಿ ಇತ್ತು. ಸುಖಾಸುಮ್ಮನೆ ಗೀಚುವದನ್ನು ಬರವಣಿಗೆಯನ್ನಾಗಿ ಮಾರ್ಪಡಿಸಿಕೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಕಾತ್ರಾಳೆ ಸರ್ ಅವರ ಪ್ರಭಾವ.

ನಾಲ್ಕನೇ ಕ್ಲಾಸಿಗೆ ಬಂದಿದ್ದೇ ಬಂದಿದ್ದು ಕಾತ್ರಾಳೆ ಸರ್ ಅವರ ಬಹುಮುಖ ಪ್ರತಿಭೆಯ ಪ್ರಭೆಯಲ್ಲಿ ಮಿಂದೆ. ಅದರಲ್ಲೇ ಕಳೆದೂಹೋದೆ. ಕಾತ್ರಾಳೆ ಸರ್ ಅವರ ಕೈಬರಹ ಬಲು ಸುಂದರ. ಮೊದಲು ಇಂಪ್ರೆಸ್ ಮಾಡಿದ್ದು ಅದೇ. ಅದೇ ರೀತಿಯಲ್ಲಿ ಕಾಪಿ ಮಾಡಿದೆ. ಎಲ್ಲಿಯವರೆಗೆ ಅಂದರೆ... ಒಮ್ಮೆ ಸರ್ ನಾಲ್ಕು ದಿನದ ರಜೆ ಮೇಲೆ ಹೋಗಿದ್ದರು. ತಾತ್ಕಾಲಿಕವಾಗಿ ಉಸ್ತುವಾರಿ ವಹಿಸಿಕೊಂಡಿದ್ದ ಕಲಾದಗಿ ಟೀಚರ್, ಜೇವೂರ ಟೀಚರ್ ಇತ್ಯಾದಿಗಳು ನಮ್ಮ ಕ್ಲಾಸಿನ ಎಲ್ಲರ ಹೆಸರುಗಳನ್ನು ಪಟ್ಟಿ ಮಾಡಿಕೊಡುವಂತೆ ನನಗೆ ಹೇಳಿದ್ದರು. ಕ್ಲಾಸಿನ ಮಾನಿಟರ್ ನಾನೇ ನೋಡಿ. ಹಾಗಾಗಿ ಕಾರಕೂನನ ಕೆಲಸ. ನೀಟಾಗಿ ಸುಮಾರು ಅರವತ್ತು ಜನರ ಹೆಸರು ಬರೆದುಕೊಟ್ಟೆ. 'ನೀನೇ ಬರೆದೆಯೋ ಅಥವಾ ನಿಮ್ಮ ಸರ್ ರಜಾ ಮೇಲೆ ಹೋಗೋ ಮೊದಲು ಬರೆದುಕೊಟ್ಟು ಹೋಗ್ಯಾರೋ!!??' ಅಂತ ಕೇಳಿದರು ಮೇಡಮ್ಮುಗಳು. 'ಇಲ್ರೀ ಟೀಚರ್. ನಾನೇ ಸ್ವಂತ ಬರದೇನ್ರಿ...' ಅಂದೆ. 'ಎಷ್ಟ ಛಂದ, ನಿಮ್ಮ ಸರ್ ಬರದಂಗss, ಬರದಿಯಲ್ಲೋ! ವ್ಯತ್ಯಾಸ ಹೇಳಲಿಕ್ಕೆ ಸಾಧ್ಯ ಇಲ್ಲ ನೋಡು. ಶಭಾಷ್!' ಅಂತ ನನ್ನ ಕೈಬರಹದ ಬಗ್ಗೆ ಶಭಾಷಿ ಕೊಟ್ಟಿದ್ದರು. ಕಾತ್ರಾಳೆ ಸರ್ ರಜೆ ಮುಗಿಸಿ ಬಂದ ನಂತರ ಇದು ಅವರ ಕಿವಿಗೂ ಬಿದ್ದು ಅವರೂ ಡುಬ್ಬ ಚಪ್ಪರಿಸಿದ್ದರು. ನೊಬೆಲ್ ಪ್ರೈಜ್ ಬಂದಷ್ಟು ಖುಷಿ.

ಮನೆಯಲ್ಲಿ ಏನೋ ಚಿತ್ರ ಗಿತ್ರ ಗೀಚಿಕೊಂಡಿದ್ದೆ. ಕಾತ್ರಾಳೆ ಸರ್ ತರಗತಿಯಲ್ಲಿ ತಮ್ಮ ಕವಿತೆಗಳನ್ನು ಓದುತ್ತಿದ್ದರು. ನಮಗೂ ಕವಿತೆ ಬರೆಯುವಂತೆ ಹುರಿದುಂಬಿಸುತ್ತಿದ್ದರು. ಅದರಿಂದ ಪ್ರಭಾವಿತರಾಗಿ ಎಲ್ಲರೂ ಕವಿತೆ ಬರೆದಿದ್ದೇ ಬರೆದಿದ್ದು. ನನ್ನ ಮೊದಲ ಕವಿತೆ ನಮ್ಮ native ಜಿಲ್ಲೆಯಾದ ಉತ್ತರ ಕನ್ನಡ ಜಿಲ್ಲೆ ಬಗ್ಗೆ ಇತ್ತು. ಪ್ರಾಸ ಹೊಂದಿಸಲು ಅಣ್ಣ ಸ್ವಲ್ಪ ಸಹಾಯ ಮಾಡಿದ್ದ. ಕವಿತೆ ಅಂದ ಮೇಲೆ ಪ್ರಾಸಬದ್ಧವಾಗಿರಲೇಬೇಕು ಎಂಬುದು ಅಂದಿನ ನಂಬಿಕೆ. ಉತ್ತರ ಕನ್ನಡದ ಪ್ರಕೃತಿ ಸೌಂದರ್ಯ, ಕಲೆ ಇತ್ಯಾದಿಗಳ ಮೇಲೆ ಬರೆದಿದ್ದ ನಾಲ್ಕು ಚರಣಗಳ ಸಣ್ಣ ಕವಿತೆ. ಎರಡು ವರ್ಷಗಳ ನಂತರ ಆರನೇ ತರಗತಿಯಲ್ಲಿದ್ದಾಗ ಅದನ್ನು ಧಾರವಾಡ ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ 'ಎಳೆಯರ ಬಳಗ' ಅನ್ನುವ ಮಕ್ಕಳ ರೇಡಿಯೋ ಕಾರ್ಯಕ್ರಮದಲ್ಲಿ ಓದಿದ್ದೂ ಆಯಿತು. ಆಗ ಆಕಾಶವಾಣಿಯ ಡೈರೆಕ್ಟರ್ ಆಗಿದ್ದ ಶ್ರೀಮತಿ ನಾಯಕ್ (ಉರ್ಫ್ ಅಕ್ಕಮ್ಮ) ನಮಗೆ ಆಪ್ತರು. ಹಾಗಾಗಿ ಒಂದೆರೆಡು ಬಾರಿ ಅವಕಾಶ ಕೊಟ್ಟಿದ್ದರು.

ಪಠ್ಯದಲ್ಲಿದ್ದ ಎರಡು ಪಾಠಗಳನ್ನು ರೂಪಾಂತರಿಸಿ ನಾಟಕ ಬರೆದು, ನಿರ್ದೇಶಿಸಿ, ಆಡುವಂತೆ ಹೇಳಿದರು ಕಾತ್ರಾಳೆ ಸರ್. ಅದರಂತೆ ಸುಭಾಶ್ಚಂದ್ರ ಬೋಸ್ ಮಾತ್ತು ಮಹಾಭಾರತದ ಉತ್ತರ ಕುಮಾರ - ಎರಡು ನಾಟಕಗಳನ್ನು ಬರೆದೆ. ಸರ್ ತಿದ್ದಿದರು. ನಂತರ ಆ ನಾಟಕಗಳನ್ನು ಕ್ಲಾಸಿನಲ್ಲಿ ಆಡಿದ್ದೂ ಆಯಿತು. ನಾಟಕದ ಹೀರೋ ಯಾರಾಗಿದ್ದರು ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ ತಾನೇ? :)

ಹೀಗೆ ನಿರಂತರ ಓದಿಗೆ, ಬಹಳ ಇಷ್ಟವಾದ ಬರವಣಿಗೆಗೆ ಬರೋಬ್ಬರಿ ಬೇಸ್ ಹಾಕಿದವರು ಕಾತ್ರಾಳೆ ಸರ್. ಮುಂದೆ ಅನೇಕಾನೇಕ ಒಳ್ಳೊಳ್ಳೆ ಗುರುಗಳು ಸಿಕ್ಕರು. ಈ ಆಸಕ್ತಿಗಳು ಅಭಿವೃದ್ಧಿ ಆಗುತ್ತ ಹೋದವು. ಆದರೆ ಆ impressionable ಸಣ್ಣ ವಯಸ್ಸಿನಲ್ಲಿ ಕಾತ್ರಾಳೆ ಸರ್ ಅವರಂತಹ ಬಹುಮುಖ ವ್ಯಕ್ತಿತ್ವದ ಗುರುಗಳು ಸಿಗದೇಹೋಗಿದ್ದರೆ ಇವೆಲ್ಲ ಆಗುವದು doubtful.

ಕೊನೇ ಬಾರಿ ಮುಖತಃ ಕಾತ್ರಾಳೆ ಸರ್ ಅವರನ್ನು ನೋಡಿದ್ದು ೧೯೯೦ ಡಿಸೆಂಬರ್ ನಲ್ಲಿ. ಆಗ ಇಂಜಿನಿಯರಿಂಗ್ ಮೊದಲನೇ ಸೆಮಿಸ್ಟರ್ ಮುಗಿಸಿ ಬಂದಿದ್ದೆ. ಮಾಳಮಡ್ಡಿಯಲ್ಲಿ ಪಡ್ಡೆ ತಿರುಗುತ್ತಿರುವಾಗ ಸಿಕ್ಕಿದ್ದರು. ಸಂಕೋಚದಿಂದಲೇ ನಮಸ್ಕಾರ ಹೇಳಿದ್ದೆ. ಸಂಕೋಚ ಯಾಕೆಂದರೆ ಅಂದಿನ ಕೇಶವಿನ್ಯಾಸ ಖರಾಬಾಗಿತ್ತು. ಅದು ಸಂಜಯ್ ದತ್ತನ 'ಸಾಜನ್' ಫಿಲಂ ಜಮಾನಾ. ಅವನ ಭುಜದ ತನಕ ಬರುವ ಘೋಡಾ hairstyle ಸಿಕ್ಕಾಪಟ್ಟೆ ಪಾಪ್ಯುಲರ್. ನಮ್ಮದೂ ಸುಮಾರು ಅದೇ ಸ್ಟೈಲ್ ಇತ್ತು. ಅಂತಹ ಖರಾಬ್ hairstyle ಇಟ್ಟುಕೊಂಡು ಕಾತ್ರಾಳೆ ಸರ್ ಮುಂದೆ ಬರುವದು ದೊಡ್ಡ ಡೇಂಜರ್. ಮಾಳಮಡ್ಡಿಯಲ್ಲಿ ಪಡ್ಡೆ ಹುಡುಗನಂತೆ ತಿರುಗಾಡುತ್ತಿದ್ದೆ ಅಂದ ಮೇಲೆ ದವಡೆಯಲ್ಲಿ ಜರ್ದಾ ತಾಂಬೂಲ ಸಹ ಇದ್ದಿರಲೇಬೇಕು. ದೂರದ ಕಲ್ಯಾಣನಗರದಿಂದ ಮಾಳಮಡ್ಡಿಗೆ ಬರುತ್ತಿದ್ದುದೇ ಗೆಳೆಯ ಭೀಮ್ಯಾನ ಚುಟ್ಟಾ ಅಂಗಡಿಯಲ್ಲಿ ಪಾಂಗಿತವಾಗಿ ಒಂದು ಜರ್ದಾ ಪಾನ್ ಮಾಡಿಸಿಕೊಂಡು, ಅದನ್ನು ದವಡೆಯಲ್ಲಿಟ್ಟುಕೊಂಡು, ಘಂಟೆಗಟ್ಟಲೆ ರಸ ಹೀರಿ, ಭರ್ಜರಿ ಪಿಚಕಾರಿ ಹಾರಿಸಿ.... ಒಟ್ಟಿನಲ್ಲಿ ಸಂಜೆಯ ಮಜಾ ತೆಗೆದುಕೊಳ್ಳಲು. ಒಟ್ಟಿನಲ್ಲಿ ಟೋಟಲ್ ಪೊರ್ಕಿ ಉಡಾಳನ ಅವತಾರದಲ್ಲಿ ಕಾತ್ರಾಳೆ ಸರ್ ಎದುರಿಗೆ ಅದೆಷ್ಟೋ ವರ್ಷಗಳ ನಂತರ ಸಿಕ್ಕಿಬಿದ್ದಿದ್ದೇನೆ. ಏನು ಗ್ರಹಚಾರ ಕಾದಿದೆಯೋ ಅಂತ ಚಿಂತೆಯಾಯಿತು.

ಕಾತ್ರಾಳೆ ಸರ್ ಒಂದು ಮಾತು ಹೇಳಿಯೇ ನಾಲ್ಕನೆ ತರಗತಿಯಿಂದ ಬೀಳ್ಕೊಟ್ಟಿದ್ದರು. 'ನೀವು ಎಷ್ಟೇ ದೊಡ್ಡವರಾಗ್ರಿ. ಎಷ್ಟೇ ದೊಡ್ಡ ನೌಕರಿ ಒಳಗ ಇರ್ರಿ. ಗವರ್ನರ್ ಬೇಕಾದ್ರೂ ಆಗ್ರಿ. ನೀವು ಯಾವಾಗಲೂ ನನ್ನ ವಿದ್ಯಾರ್ಥಿಗಳೇ. ಯಾವಾಗ ಸಿಕ್ಕರೂ ಅಷ್ಟೇ. ನೀವು ಸಿಕ್ಕ ಪರಿಸ್ಥಿತಿ, ನಿಮ್ಮ ಅವತಾರ ಸರಿ ಇರಲಿಲ್ಲ ಅಂದ್ರ ನಿಮ್ಮನ್ನು ಅಲ್ಲೇ ಹಾಕ್ಕೊಂಡು ಬಡಿತೇನಿ. ಅದರ ಬಗ್ಗೆ ಯಾವದೇ ಸಂಶಯ ಬ್ಯಾಡ. ಜ್ವಾಕಿ. ನನ್ನ ಮಾತು ಮರಿಬ್ಯಾಡ್ರಿ. ಮರೆತು ಮಂಗ್ಯಾ ಆಗಿ, ದೊಡ್ಡವರಾದರೂ ಹಳೆ ಮಾಸ್ತರ್ ಕಡೆ ಹೆಂಡ್ತಿ ಮಕ್ಕಳ ಮುಂದ ಕಡತಾ ತಿನ್ನಬ್ಯಾಡ್ರಿ. ಓಕೆ??' ಅಂತ ವಾರ್ನಿಂಗ್ ಕೊಟ್ಟಿದ್ದರು. ಅದು ಪೊಳ್ಳು ಬೆದರಿಕೆಯಲ್ಲ ಅಂತ ಗೊತ್ತಿತ್ತು. ಯಾಕೆಂದರೆ ಮಾಜಿ ವಿದ್ಯಾರ್ಥಿಗಳಿಗೆ ಸರ್ ಬಾರಿಸಿದ್ದರ ಬಗ್ಗೆ, ಬೆಂಡೆತ್ತಿದ್ದರ ಬಗ್ಗೆ ನಮಗೇ ಗೊತ್ತಿತ್ತು. ಇದೆಲ್ಲ ನೆನಪಾಗಿ ಎಂಟು ವರ್ಷಗಳ ಬಳಿಕ ಈಗ ನನಗ್ಯಾವ 'ಚಿಕಿತ್ಸೆ' ಕಾದಿದೆಯೋ ಅಂತ ಮಂಗ್ಯಾ ಆಗಿದ್ದೆ. ಸ್ಕೂಟರ್ ಮೇಲೂ ಇರಲಿಲ್ಲ. ಒಂದು ಸೆಮಿಸ್ಟರ್ ನಂತರ ವಾಪಸ್ ಬಂದಿದ್ದಕ್ಕೆ ಹಳೆಯ ಅಡ್ಡಾಗಳನ್ನೆಲ್ಲ ಪಾದಯಾತ್ರೆ ಮೂಲಕ ತಿರುಗಾಡಿಬರೋಣ ಅಂತ ನಟರಾಜಾ ಸರ್ವೀಸ್ ಮಾದರಿಯಲ್ಲಿ ಸ್ವಂತ ಕಾಲಿನ ಮೇಲೆ ಓಡಾಡುತ್ತಿದ್ದವನನ್ನು ಅಟಕಾಯಿಸಿಕೊಂಡಿದ್ದ ಕಾತ್ರಾಳೆ ಸರ್ ಸ್ವಂತ ಕಾಲಿನ ಮೇಲೆ, ತುದಿಗಾಲಿನ ಮೇಲೆ, ನಿಲ್ಲಿಸಿದ್ದರು.

ಆದರೆ ಸರ್ ಅವರದ್ದು ದೊಡ್ಡ ಮನಸ್ಸು. ಮಮತೆ ತುಂಬಿದ ಆರ್ದ್ರ ಹೃದಯ. ಭುಜದವರೆಗೆ ಇಳಿಬಿದ್ದಿದ್ದ ಕೂದಲಿನ ಕಡೆ ಅವರ ಗಮನ ಹೋಗಲಿಲ್ಲ. ಬಾಯಲ್ಲಿದ್ದ ಜರ್ದಾ ಪಾನಿನ ಕಡೆಯೂ ಹೋಗಲಿಲ್ಲ. 'our pride! our pride!' ಎಂದು ಮನದುಂಬಿ ಹೇಳುತ್ತ ಪ್ರೀತಿಯಿಂದ ಬೆನ್ನು ತಟ್ಟಿದರು. ಆರು ತಿಂಗಳ ಹಿಂದೆ ಪಿಯೂಸಿಯಲ್ಲಿ ಉತ್ತಮ ಸಾಧನೆ ಮಾಡಿದ್ದಕ್ಕೆ ಅಭಿನಂದಿಸಿದರು. ಖುಷಿಯಾಯಿತು. ಕಾತ್ರಾಳೆ ಸರ್ ಅಚಾನಕ್ಕಾಗಿ ಎದುರಿಗೆ ಬಂದಾಗ ಯಬಡ ಮನಸ್ಸು ಏನೇನೋ ವಿಚಾರ ಮಾಡಿ ಥಂಡಾ ಹೊಡೆದಿತ್ತು. ಮಾಸ್ತರ್ ಹೊಗಳಿಕೆ ಕೇಳಿ ನರ್ಮಿಯಿಂದ ಗರ್ಮಿ ಆಯಿತು. ಕಾತ್ರಾಳೆ ಸರ್ ಜೊತೆಗಿದ್ದ ವಯೋವೃದ್ಧರು ಅದೇ ಶಾಲೆಯ ತುಂಬಾ ಹಳೆಯ ಶಿಕ್ಷಕರಾಗಿದ್ದ ಎಲ್. ಬಿ. ಕುಲಕರ್ಣಿ ಸರ್ ಅಂತ ಪರಿಚಯ ತಿಳಿಯಿತು. ಅವರು ನಮ್ಮ ಅಮ್ಮ, ಮಾಮಾ ಜಮಾನಾದ ಮಂದಿಗೆ ಪಾಠ ಮಾಡಿದವರು. 'ನಮ್ಮ ಶಿಷ್ಯಾ! our pride! our pride!' ಅಂತ ಕಾತ್ರಾಳೆ ಸರ್ ಎಲ್. ಬಿ. ಕುಲಕರ್ಣಿ ಅವರಿಗೆ ನನ್ನ ಬಗ್ಗೆ ಹೇಳಲು ಹೋದರು. ಅನಾದಿ ಕಾಲದಿಂದಲೂ ನಮ್ಮ ಕುಟುಂಬದ ಹಿತಚಿಂತಕರಾಗಿದ್ದ ಎಲ್. ಬಿ. ಕುಲಕರ್ಣಿ ಅವರಿಗೆ ಎಲ್ಲ ಗೊತ್ತಿದ್ದದ್ದೇ. ಅವರು 'ಎಲ್ಲ ಗೊತ್ತಿದೆ' ಮಾದರಿಯಲ್ಲಿ ತಲೆಯಾಡಿಸಿದರು. ಅದರಲ್ಲೇ ಅವರ ಅಭಿನಂದನೆ, ಆಶೀರ್ವಾದ ಎಲ್ಲ ಇರುತ್ತದೆ ಅಂತ ಗೊತ್ತಿತ್ತು ಬಿಡಿ.

ಈ ಕಾತ್ರಾಳೆ ಮಾಸ್ತರ್ 'our pride!' ಅಂತ ಯಾಕೆ ಹೇಳಿದರು ಅನ್ನುವದು ಫ್ಲಾಶ್ ಆಯಿತು. ಅದಕ್ಕೆ ಕಾರಣ ಮತ್ತೊಬ್ಬ ಮಾಸ್ತರರು. ಅವರು ಯಾರು ಅಂದರೆ 'ಗಣಿತಲೋಕ' ಎನ್ನುವ ವಿಶಿಷ್ಟ ಹೆಸರಿದ್ದ ಟ್ಯೂಷನ್ ಕ್ಲಾಸ್ ನಡೆಸುತ್ತಿದ್ದ ಶ್ರೀನಿವಾಸ ದೇಶಪಾಂಡೆ ಸರ್. ಅವರೂ ಇಂದಿಲ್ಲ. ಪಿಯೂಸಿ ಎರಡು ವರ್ಷ ಏನಾದರೂ ಕಲಿತದ್ದು ಇದ್ದರೆ ಅದೆಲ್ಲ ದೇಶಪಾಂಡೆ ಸರ್ ಕೃಪೆ. ಭಯಂಕರ ಪ್ರತಿಭಾನ್ವಿತರು. ಮೇಲಿಂದ ಸಿಕ್ಕಾಪಟ್ಟೆ idealist. ಅದ್ಭುತ ಶಿಕ್ಷಕರು. ಅವರಿಗೂ ಆಗ ಮೂವತ್ತೂ ಚಿಲ್ಲರೆ ವಯಸ್ಸು ಅಷ್ಟೇ. ಸ್ನೇಹಜೀವಿ. ಮನೆಯಲ್ಲಿ ದೊಡ್ಡ ಲೈಬ್ರರಿ ಇತ್ತು. ಅದೇ ನನಗೆ ದೊಡ್ಡ ಆಕರ್ಷಣೆ. ಅವರೂ ನಮ್ಮ ಕುಟುಂಬಕ್ಕೆ ಸಿಕ್ಕಾಪಟ್ಟೆ ಆಪ್ತರು. ಮೇಲಿಂದ ತಂದೆಯವರ ವಿದ್ಯಾರ್ಥಿ ಬೇರೆ. ಹಾಗಾಗಿ ದೇಶಪಾಂಡೆ ಸರ್ ಮತ್ತು ನಮ್ಮ ನಡುವೆ ಅತ್ಯುತ್ತಮ ಗುರು-ಶಿಷ್ಯ ಸಂಬಂಧ.

ನಮ್ಮ ೧೯೯೦ ರ ಪಿಯೂಸಿ ಬ್ಯಾಚ್ ಅಂದರೆ ದೇಶಪಾಂಡೆ ಸರ್ ಅವರಿಗೆ ಗೋಲ್ದನ್ ಬ್ಯಾಚ್. ಸುಮಾರು ಇಪ್ಪತ್ತು ಮೂವತ್ತು ಜನ ವಿದ್ಯಾರ್ಥಿಗಳು ಒಳ್ಳೆ ಸಾಧನೆ ಮಾಡಿದ್ದರು. ರಾಜ್ಯಕ್ಕೆ ರಾಂಕ್ ಬಂದವರಿದ್ದರು. IIT ಪರೀಕ್ಷೆ ಪಾಸ್ ಮಾಡಿದವರಿದ್ದರು. ಮೆರಿಟ್ ಮೇಲೆ ಒಳ್ಳೊಳ್ಳೆ ಕಾಲೇಜುಗಳಲ್ಲಿ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಸೀಟುಗಳನ್ನು ಗಿಟ್ಟಿಸಿದವರಿದ್ದರು. ಹೀಗಾಗಿ ದೇಶಪಾಂಡೆ ಸರ್ ಬಹಳ ಸಂತಸದಲ್ಲಿದ್ದರು. ಟಾಪ್ ಮೂರು ವಿದ್ಯಾರ್ಥಿಗಳ ಫೋಟೋ ಹಾಕಿಸಿ ಒಂದು pamphlet ಮಾಡಿದ್ದರು. ಆ ಮೂವರಲ್ಲಿ ನಾನೊಬ್ಬವ. ಉಳಿದ ಸಾಧಕರ ಹೆಸರುಗಳಿದ್ದವು. ಆ pamphlet ನ್ನು ದಿನಪತ್ರಿಕೆಗಳಲ್ಲಿ circulate ಆಗುವ ಹಾಗೆ ಮಾಡಿದ್ದರು. ಅದು ಅವರ advertising strategy. ನಮ್ಮ ಕಾಲದಲ್ಲಿ ದೇಶಪಾಂಡೆ ಸರ್ ಮತ್ತು ಗಣಿತಲೋಕ ಟುಟೋರಿಯಲ್ ಅದೆಷ್ಟು ಪ್ರಸಿದ್ಧವಾಗಿತ್ತು ಅಂದರೆ ನಮ್ಮಂತವರ ಸಣ್ಣಪುಟ್ಟ ಸಾಧನೆಯನ್ನು ಡಂಗುರ ಬಾರಿಸಿ ಏನೂ advertise ಮಾಡಿಕೊಳ್ಳಬೇಕಿರಲಿಲ್ಲ. ಆದರೂ ದೇಶಪಾಂಡೆ ಸರ್ ಅವರ ದೊಡ್ಡ ಮನಸ್ಸು, ಪ್ರೀತಿ, ಅಭಿಮಾನ. ಅದಕ್ಕಾಗಿ ಮಾಡಿದ್ದರು. ಪತ್ರಿಕೆಗಳಲ್ಲಿ ಹಾಕಿದ್ದರು. ಆ pamphlet ಗೆ 'Our Pride' ಅಂತ ಶೀರ್ಷಿಕೆ ಕೊಟ್ಟಿದ್ದರು. ಕಾತ್ರಾಳೆ ಸರ್ ಹೆಚ್ಚಾಗಿ ಅದನ್ನು ನೋಡಿರಬೇಕು. ಹಾಗಾಗಿಯೇ ಪದೇಪದೇ 'Our Pride! Our Pride!' ಎಂದು ಹೇಳಿ ಅಭಿನಂದಿಸಿದ್ದರು.

೧೯೯೦ ರ ಡಿಸೆಂಬರಿನಲ್ಲಿ ಕಾತ್ರಾಳೆ ಸರ್ ಅವರನ್ನು ಭೇಟಿಯಾಗಿದ್ದೇ ಕೊನೆ. ಮತ್ತೆ ಭೇಟಿಯಾಗಲಿಕ್ಕೆ ಈಗ ಅವರೇ ಇಲ್ಲ. ಅದೊಂದು ವಿಷಾದ ಸದಾ ಇರುತ್ತದೆ.

ಕಾತ್ರಾಳೆ ಸರ್ ಫೋಟೋ ಇಲ್ಲ. ಅವರು ನೋಡಲಿಕ್ಕೆ ಹೇಗಿದ್ದರು ಅಂದರೆ ಫಿಲ್ ಎಡ್ಮಂಡ್ಸ್ ಇದ್ದ ಹಾಗೆ ಇದ್ದರು ಅಂದರೆ ಉಳಿದವರಿಗೆ confusion ಆದರೂ ನಮ್ಮ ಜಮಾನಾದ ಮಂದಿಗೆ ಹೊಟ್ಟೆ ಹುಣ್ಣಾಗುವಂತೆ ನಗು ಬರುತ್ತದೆ. ೧೯೮೦-೯೦ ರ ದಶಕದಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದಲ್ಲಿ ಫಿಲ್ ಎಡ್ಮಂಡ್ಸ್ ಎಂಬ ಆಟಗಾರ ಇದ್ದ. ಎಡಗೈ ಸ್ಪಿನ್ನರ್. ಎತ್ತರಕ್ಕೆ ಇದ್ದ. ತಲೆ ಮೇಲೆ ಅರ್ಧಚಂದ್ರಾಕೃತಿಯಲ್ಲಿ ಬಾಲ್ಡಿ ಪ್ಯಾಚ್. ಕಾತ್ರಾಳೆ ಸರ್ ಕೊಂಚ ಹಾಗಿದ್ದರು ಅಂತ ಕಿಡಿಗೇಡಿಗಳ ಅಭಿಪ್ರಾಯ. ತೆಳ್ಳಗೆ, ಎತ್ತರಿಕ್ಕಿದ್ದರು. ಎತ್ತರವಾಗಿದ್ದರಿಂದ ಕೊಂಚ ಗೂನು. ನಾವು ನಾಲ್ಕನೇ ತರಗತಿಯಲ್ಲಿದ್ದಾಗಲೇ ವಿರಳವಾಗುತ್ತಿದ್ದ ತಲೆ ಮೇಲಿನ ಹುಲ್ಲುಗಾವಲು ನಾವು ಪಿಯೂಸಿಗೆ ಬರುವ ಹೊತ್ತಿಗೆ ಅರ್ಧಚಂದ್ರಾಕೃತಿಯ ಬಾಲ್ಡಿ ತಲೆಯಾಗಿತ್ತು. ಕೊಂಚ ಹೋಲಿಕೆಯಿದ್ದರೂ ಸಾಕು ಏನೋ ಒಂದು ಹೆಸರಿಟ್ಟುಬಿಡುವದು ನಮ್ಮ ಶಾಲೆ ಮಂದಿಯ ಸ್ಪೆಷಾಲಿಟಿ. ಹಾಗಾಗಿ ಕಾತ್ರಾಳೆ ಸರ್ ಅವರಿಗೆ ಫಿಲ್ ಎಡ್ಮಂಡ್ಸ್ ಅಂತ nickname.

ಕ್ರಿಕೆಟಿಗ ಫಿಲ್ ಎಡ್ಮಂಡ್ಸ್

ಪಿಯೂಸಿಯಲ್ಲಿದ್ದಾಗ ಆದ ಘಟನೆ. ನಮ್ಮ ಫ್ರೆಂಡ್ಸ್ ಒಂದಿಷ್ಟು ಜನ JSS ಕಾಲೇಜಿಗೆ ಸೇರಿದ್ದರು. ಅವರ ಒಂದು ಗುಂಪು ಒಂದು ದಿನ ಕಾಲೇಜ್ ಮುಗಿಸಿಕೊಂಡು ಮನೆ ಕಡೆ ಬರುತ್ತಿತ್ತು. ಅವರಿಗೆ ಮಾಳಮಡ್ಡಿ ಎಮ್ಮೆಕೆರೆ ಪಕ್ಕದ ಮಹಿಷಿ ರೋಡಿನಲ್ಲಿ ತಮ್ಮ ಪಾಡಿಗೆ ತಾವು ಹೋಗುತ್ತಿದ್ದ ಕಾತ್ರಾಳೆ ಸರ್ ಕಂಡಿದ್ದಾರೆ. ಅವರನ್ನು ನೋಡಿದ ಕಿಡಿಗೇಡಿಯೊಬ್ಬ, 'ಏ, ಅಲ್ಲಿ ನೋಡಲೇ. ಫಿಲ್ ಎಡ್ಮಂಡ್ಸ್ ಹೊಂಟಾನ,' ಅಂತ ನಗೆಚಟಾಕಿ ಸಿಡಿಸಿದ್ದಾನೆ. ಅದೇ ಗುಂಪಿನಲ್ಲಿದ್ದವನು ಮನೋಜ ಕರ್ಜಗಿ ಎಂಬ ಮಹಾ ಖತರ್ನಾಕ್ ಕಿಡಿಗೇಡಿ, ನಮ್ಮ ಆತ್ಮೀಯ ಸ್ನೇಹಿತ, ಪರಮ ಕಿತಾಪತಿ, ಹಾಸ್ಯ ಕೋವಿದ. 'ಲೇ, ಈಗ ನೋಡ್ರಿಲೇ. ಕಾತ್ರಾಳೆ ಮುಂದ ಹೋಗಿ ಫಿಲ್ ಎಡ್ಮಂಡ್ಸ್ ಗತೆ ಬೌಲಿಂಗ್ ಹಾಕಿ ಬರ್ತೇನಿ. ನೋಡ್ರಿಲೇ. ಚಾಲೆಂಜ್!' ಅಂತ ಪಂಟು ಹೊಡೆದಿದ್ದಾನೆ. ಎಲ್ಲೋ ದೂರ ನಿಂತು ಕಾತ್ರಾಳೆ ಸರ್ ಅವರಿಗಾಗಲಿ ಅಥವಾ ಬೇರೆ ಯಾರಿಗೋ ಆಗಲಿ ಫಿಲ್ ಎಡ್ಮಂಡ್ಸ್, ಅದು ಇದು ಅಂತ ಹೆಸರಿಟ್ಟು ಲೇವಡಿ ಮಾಡುವದು ದೊಡ್ಡ ಮಾತಲ್ಲ. ಅವರ ಮುಂದೆಯೇ ಹೋಗಿ ಫಿಲ್ ಎಡ್ಮಂಡ್ಸ್ ಅಂತ ಹೇಳುವದೊಂದೇ ಅಲ್ಲ, ಜೊತೆಗೆ ಫಿಲ್ ಎಡ್ಮಮಂಡ್ಸ್ ಬೌಲಿಂಗ್ ಮಾಡುವ ಮಾದರಿಯಲ್ಲಿ ಅಣಕ ಮಾಡಿಬರುವದು ಅಂದರೆ ಸಣ್ಣ ಮಾತಲ್ಲ. ಆದರೆ ಕಿತಾಪತಿ ಆಚಾರಿಯಂದೇ ಖ್ಯಾತನಾಗಿದ್ದ ನಮ್ಮ ದೋಸ್ತ ಕರ್ಜಗಿ ಅಂತಹ ಕೆಲಸಗಳಿಗೆ ಫೇಮಸ್.

ಇಂತಹ ಕರ್ಜಗಿ ಅಡ್ಡಾದಿಡ್ಡಿ ದೇಹ ಅಲ್ಲಾಡಿಸುತ್ತ ಕಾತ್ರಾಳೆ ಸರ್ ಮುಂದೆ ಹೋಗಿದ್ದಾನೆ. ನಮಸ್ಕಾರ ಮಾಡುವ ನೆಪದಲ್ಲಿ ಫಿಲ್ ಎಡ್ಮಂಡ್ಸ್ ಮಾದರಿಯಲ್ಲಿ ಬೌಲಿಂಗ್ ಮಾಡಿದ್ದಾನೆ. ಇದೆಂತಹ ವಿಚಿತ್ರ ನಮಸ್ಕಾರ ಅಂತ ಕೊಂಚ ಇರುಸುಮುರುಸಾದರೂ ಹಳೆ ವಿದ್ಯಾರ್ಥಿ ಅಂತ ಕಾತ್ರಾಳೆ ಸರ್ ಪ್ರತಿ ನಮಸ್ಕಾರ ಮಾಡಿ, 'ಆರಾಮ್ ಏನಪಾ?' ಅಂತ ಕೇಳಿ ಮುಂದೆ ಹೋಗಿದ್ದಾರೆ. ಈ ಕರ್ಜಗಿ ವಾಪಸ್ ಹೋಗಿ ಹಿಂದೆ ಜೋರಾಗಿ ನಗುತ್ತ ಬರುತ್ತಿದ್ದ ದೋಸ್ತರ ಗುಂಪನ್ನು ಮತ್ತೆ ಸೇರಿಕೊಂಡಿದ್ದಾನೆ. ಸರ್ ಮುಂದೆಯೇ ಫಿಲ್ ಎಡ್ಮಂಡ್ಸ್ ಮಾದರಿಯಲ್ಲಿ ಬೌಲಿಂಗ್ ನಮಸ್ಕಾರ ಮಾಡಿದ ಪ್ರತಾಪ ಹೇಳಿಕೊಳ್ಳುತ್ತ ನಡೆಯುತ್ತ ಮುಂದೆ ಬಂದಿದ್ದಾನೆ. ಆಗ ಕಾತ್ರಾಳೆ ಸರ್ ಮತ್ತೆ ಎದುರಿಗೆ ಬಂದಿದ್ದಾರೆ. ಆಗ ಅವರ ಕಿವಿಗೂ ಬೀಳುವಂತೆ, 'ಇಂವಾ ಕಾತ್ರಾಳೆ. ನಮ್ಮ ಮಾಸ್ತರ್. ಫಿಲ್ ಎಡ್ಮಂಡ್ಸ್ ಇದ್ದಂಗ ಇದ್ದಾನ,' ಅದು ಇದು ಮಾತು ಕೇಳಿದೆ. ಜೊತೆಗೆ ಹುಚ್ಚು ನಗೆ ಬೇರೆ. ಅಷ್ಟೂ ಅರ್ಥಮಾಡಿಕೊಳ್ಳದಷ್ಟು ದಡ್ಡರಲ್ಲ ಸರ್. ಅವರಿಗೆ ಫಿಲ್ ಎಡ್ಮಂಡ್ಸ್ ಇತ್ಯಾದಿಗಳ exact detail ಗೊತ್ತಾಗಿರಲಿಕ್ಕಿಲ್ಲ. ಆದರೆ ತಮ್ಮ ಮಾಜಿ ವಿದ್ಯಾರ್ಥಿಗಳು ತಮ್ಮ ಕುರಿತು ಏನೋ ನಗೆಚಾಟಿಕೆ ಮಾಡಿಕೊಂಡು ಮಜಾ ತೆಗೆದುಕೊಳ್ಳುತ್ತಿದ್ದಾರೆ. ಅದರ ಸೂತ್ರಧಾರ ಮನೋಜ ಕರ್ಜಗಿಯೇ ಅಂತ ಖಾತ್ರಿಯಾಗಿದೆ.

ಗಕ್ಕನೆ ಬ್ರೇಕ್ ಹಾಕಿದ ಸರ್ ನಿಂತಿದ್ದಾರೆ. 'ಏ, ಕರ್ಜಗಿ. ಬಾ ಇಲ್ಲೆ,' ಅಂತ ಸಹಜವಾಗಿಯೇ ಕರೆದಿದ್ದಾರೆ. ಮಾಸ್ತರ್ ಕರೆದ ಮೇಲೆ ಮುಗಿಯಿತು. ಹೋಗಲೇಬೇಕು. ಕರ್ಜಗಿ ಹೋಗಿದ್ದಾನೆ. ಹತ್ತಿರ ಹೋದವನನ್ನು ಕೈಹಿಡಿದು ಕರೆದು, ಪ್ರೀತಿಯಿಂದಲೇ ಕೈತಿರುವಿ, ಬೆನ್ನ ಹಿಂದೆ ತಂದು, ಬಗ್ಗಿಸಿ, 'ಎಷ್ಟು ದೊಡ್ಡವರಾಗೀರಿಪಾ. ಹಾಂ? ನನ್ನ ಮ್ಯಾಲೇ ಜೋಕ್ ಮಾಡುವಷ್ಟು ದೊಡ್ಡವರಾಗಿಬಿಟ್ಟಿರೀ? ಹಾಂ!' ಅಂತ ವಾತ್ಸಲ್ಯದಿಂದಲೇ ಆವಾಜ್ ಹಾಕುತ್ತ ಮನೋಜನ ಬೆನ್ನ ಮೇಲೆ ಸಣ್ಣದಾಗಿ ಎರಡು ಗುದ್ದಿ ಕಳಿಸಿದ್ದಾರೆ. ಜಸ್ಟ್ ಸ್ಯಾಂಪಲ್. ಮಾಸ್ತರ್ ದೃಷ್ಟಿಯಲ್ಲಿ ಅವನು ಮಾಡಿದ್ದೇನಿದ್ದರೂ ಸಣ್ಣ ಪೋಕ್ರಿತನ ಅಷ್ಟೇ. ಶಿಷ್ಯರು ಏನೇ ಮಾಡಿದರೂ ಅದಕ್ಕೊಂದು ಕ್ಷಮೆ ಮಾಸ್ತರ್ ಬಳಿ ಇದ್ದೇ ಇರುತ್ತದೆ.

ಹೀಗೆ ಪಿಯೂಸಿಯಲ್ಲಿದ್ದಾಗ ಬರೋಬ್ಬರಿ ಆರೇಳು ವರ್ಷಗಳ ಬಳಿಕ ಮತ್ತೆ ಕಾತ್ರಾಳೆ ಮಾಸ್ತರ್ ಬಳಿ ಏಟು ತಿಂದ ಭೂಪ ನಮ್ಮ ಕರ್ಜಗಿ ಮನ್ಯಾ! ಈ ಘಟನೆ ಆದ ಮರುದಿನ 'ಗಣಿತಲೋಕ' ಟ್ಯೂಷನ್ ಕ್ಲಾಸಿನಲ್ಲಿ ಸಿಕ್ಕಿದ ಕರ್ಜಗಿ, 'ನಿನ್ನೆ ಫಿಲ್ ಎಡ್ಮಂಡ್ಸ್ ಹಾಕ್ಕೊಂಡು ಕಟಿದುಬಿಟ್ಟ!' ಎಂದು ಹೇಳಿದಾಗ ನಮಗೆಲ್ಲ ಅರ್ಥವೇ ಆಗಿರಲಿಲ್ಲ. ವಿವರಿಸಿ ಹೇಳಿದಾಗ ಅಷ್ಟೇ ಮತ್ತೆ. ಅಂದು ಆರಂಭವಾದ ನಗು ಇನ್ನೂ ನಿಂತಿಲ್ಲ. ನಮ್ಮ ಪ್ರೀತಿಯ ಮನ್ಯಾ ಫಿಲ್ ಎಡ್ಮಮಂಡ್ಸ್ ಮಾಸ್ತರ್ ಬಳಿ ಬೆನ್ನ ಮೇಲೆ ಗಜ್ಜು ತಿಂದು ಬಂದ ಘಟನೆ ನೆನಪಾದರೆ ಎಲ್ಲಿದ್ದರೂ ಸಿಕ್ಕಾಪಟ್ಟೆ ನಗು ಬರುತ್ತದೆ. ೨೦೧೨ ರಲ್ಲಿ ಮನ್ಯಾ ಇಪ್ಪತ್ತೈದು ವರ್ಷಗಳ ನಂತರ ಸಿಕ್ಕಾಗಲೂ ಇದೇ ಘಟನೆಯನ್ನು ನೆನಪಿಸಿಕೊಂಡು ನಕ್ಕಿದ್ದೆವು. ಕೀಟಲೆ ಪ್ರವೀಣನನಾದ ಮನ್ಯಾನ ಲೈಫಿನಲ್ಲಿ ಇಂತಹ ಘಟನೆಗಳು ಅವೆಷ್ಟು ನಡೆದುಹೋಗಿವೆಯೋ. ಅವನಿಗೆ ನೆನಪಿರದಿದ್ದರೂ, 'ನೀ ಹೇಳಿದಿ ಅಂದ ಮ್ಯಾಲೆ ಆತು ಬಿಡು. ಎಂಜಾಯ್!' ಅಂದಿದ್ದ ಭೂಪ ಮನ್ಯಾ.


(ಫಿಲ್ ಎಡ್ಮಂಡ್ಸ್ ಬೌಲಿಂಗ್ ಮಾಡುತ್ತಿದ್ದ ಪರಿ. ಮನೋಜ ಕರ್ಜಗಿ ಕಾತ್ರಾಳೆ ಸರ್ ಅವರ ಶೈಲಿಯನ್ನು ನಕಲು ಮಾಡುತ್ತ ಇದೇ ರೀತಿ ಬೌಲಿಂಗ್ ಮಾಡುವ ಮಂಗ್ಯಾತನ ಮಾಡುತ್ತಿದ್ದ. Hilarious!)

ಸಾಹಿತಿಯಾಗಿದ್ದ ಕಾತ್ರಾಳೆ ಸರ್ 'ಕೆನ್ಕೆ' (KNK =  ಕಲ್ಲಿನಾಥ ನೇಮಿನಾಥ ಕಾತ್ರಾಳೆ) ಎನ್ನುವ ಕಾವ್ಯನಾಮ ಉಪಯೋಗಿಸುತ್ತಿದ್ದರು. 'ಧಾರವಾಡದಾಗ ಎನ್ಕೆ ಅಂತ ದೊಡ್ಡ ಸಾಹಿತಿ ಎನ್. ಕೆ. ಕುಲಕರ್ಣಿ ಇದ್ದಾರ. ನಾ ಸಣ್ಣ ಸಾಹಿತಿ. ಹಾಂಗಾಗಿ ನಾ ಕೆನ್ಕೆ,' ಅನ್ನುತ್ತಿದ್ದರು ಸರ್. ಅದು ಇಂದು ನೆನಪಾಯಿತು. ಅವರು ಇವತ್ತಿಲ್ಲದಿದ್ದರೂ ಸರಿ. ಆದರೆ ಕೆನ್ಕೆ ಉರ್ಫ್ ಕಾತ್ರಾಳೆ ಸರ್ ಮತ್ತು ಅವರ ಸಾಧನೆಗಳು ಮಾತ್ರ ತುಂಬಾ ದೊಡ್ಡವು. ಅವು ಅಮರ. He was truly an inspiration and still continues to be.

Sunday, January 15, 2017

'May I come in, Sir?' ಅಂತ ಕೇಳಿದರೆ ಬೈದುಬಿಡೋದೆ!?

ಹೊಸವರ್ಷ ೨೦೧೭ ಬಂದಿದೆ. ಅದು ವರ್ಷ. ಬಂದೇ ಬರುತ್ತದೆ. 'May I come in, Sir?' ಅಂತ ಅನುಮತಿ ಕೇಳುತ್ತ ಬಾಗಿಲಿನಲ್ಲಿ ನಿಲ್ಲುತ್ತದೆಯೇ? ಇಲ್ಲ. ಅದರ ಪಾಡಿಗೆ ಅದು ಬಂದು ಹೋಗುತ್ತಿರುತ್ತದೆ. ಅದಕ್ಕೆ ಅಲ್ಲವೇ ಬೇಂದ್ರೆ ಅಜ್ಜಾವರು 'ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ' ಎಂದು ಹಾಡು ಬರೆಯಲಿಲ್ಲವೇ?

ಬರುವದು, ಬರುವ ಮುನ್ನ ಅನುಮತಿ ಕೇಳುವದು ಅಂದ ಕೂಡಲೇ ನೆನಪಾಯಿತು. ನಾವು ೧೯೯೦ ರಲ್ಲಿ ಪಿಯೂಸಿ ಸೆಕೆಂಡ್ ಇಯರ್. ಸಂಸ್ಕೃತ non-detail ಪಾಠ ಮಾಡುತ್ತಿದ್ದವರು ನಾಯ್ಕರ್ ಸರ್. ನಾವು ಕ್ಲಾಸಿಗೆ ಹೋಗಿದ್ದೇ ಕಮ್ಮಿ. ಅದರಲ್ಲೂ ಭಾಷೆಗಳ ಕ್ಲಾಸಿಗೆ ಹೋಗಿದ್ದೇ ಇಲ್ಲ. ನಾಯ್ಕರ್ ಸರ್ ಹೇಗೆ 'ರಸವತ್ತಾಗಿ' ಪಾಠ ಮಾಡುತ್ತಾರೆ ಎನ್ನುವದರ ಬಗ್ಗೆ ಯಾರೋ ಮಿತ್ರರು colorful ಆಗಿ ವರ್ಣಿಸಿದ್ದರು. ರಸ ಸವಿಯೋಣ ಎಂದು ಹೋಗಿದ್ದೆನೋ ನೆನಪಿಲ್ಲ. ನಾನು ಹೋಗುವಷ್ಟರಲ್ಲಿ ನಾಯ್ಕರ್ ಸರ್ ಲೆಕ್ಚರ್ ಶುರುವಾಗಿತ್ತು. ಎಲ್ಲೋ ಬೆರಳಣಿಕೆಯಷ್ಟು ಜನ ಇದ್ದರು. ಧಾರವಾಡದ ಕರ್ನಾಟಕ ಕಾಲೇಜಿನ ಕ್ಯಾಂಪಸ್ಸಿನಲ್ಲಿ ಜನ ಹೆಚ್ಚು. ಕ್ಲಾಸಿನಲ್ಲಿ ಕಮ್ಮಿ. ಮಜಾ ಮಾಡಲು ಹೇಳಿ ಮಾಡಿಸಿದಂತಹ ಅದ್ಭುತ ಕ್ಯಾಂಪಸ್ ಇರುವಾಗ ಕ್ಲಾಸಿನಲ್ಲಿ ಯಾವನು ಹೋಗಿ ಕೂಡ್ತಾನ್ರೀ!?

ಮಾಸ್ತರ್ ಕ್ಲಾಸಿನಲ್ಲಿದ್ದಾಗ ಅನುಮತಿ ಕೇಳಿ ಒಳಗೆ ಹೋಗುವದು ಪದ್ಧತಿ. ಒಳಗೆ ಹೋಗಿರಿ ಅಥವಾ ಹೊರಗೆ ಬನ್ನಿರಿ. ಮಾಸ್ತರ್ ಅಥವಾ ಮಾಸ್ತರಿಣಿ ಕಂಡರು ಅಂದರೆ ಅನುಮತಿ ಪಡೆದುಕೊಂಡೇ ಹೆಜ್ಜೆ ಎತ್ತಿಡಬೇಕು. ಇಲ್ಲವಾದರೆ ಅಪಚಾರ! ಅವರಿಗೆ ಮಾಡಿದ ಅವಮಾನ!

ಅನುಮತಿ ಇಲ್ಲದೇ ಕ್ಲಾಸಿನಲ್ಲಿ ಹೋಗಿ ಬಂದು ಮಾಡಕೂಡದು ಅಂತ ಬರೋಬ್ಬರಿ ಪಾಠ ಕಲಿಸಿದ್ದವರು ರೇವಣಕರ್ ಮೇಡಂ. ಹೈಸ್ಕೂಲಿನಲ್ಲಿ ಗಣಿತ, ವಿಜ್ಞಾನ ಪಾಠ ಮಾಡಿದ್ದರು. ಅದ್ಭುತ ಶಿಕ್ಷಕಿ. ಸದಾ ಜಾಲಿಯಾಗಿ ತಮಾಷೆ ಮಾಡಿಕೊಂಡು ಪಾಠ ಮಾಡುತ್ತಿದ್ದರು. ಒಂದಿನ ನನಗೆ ಮಧ್ಯಾನ್ಹ ಸ್ವಲ್ಪ ಬೇಗನೆ ಮನೆಗೆ ಓಡುವ ಅವಶ್ಯಕತೆ ಇತ್ತು. ಕ್ಲಾಸ್ ಟೀಚರಿಗೋ ಅಥವಾ ಬೇರೆ ಯಾರೋ ಮಾಸ್ತರಿಗೋ ಹೇಳಿ ಅನುಮತಿಯನ್ನು ಪಟಾಯಿಸಿಟ್ಟುಕೊಂಡಿದ್ದೆ. ಮಧ್ಯಾನ್ಹ ರೇವಣಕರ್ ಟೀಚರ್ ಪಿರಿಯಡ್ ಮುಗಿದಿದ್ದೆ ತಡ, ಟೀಚರ್ ಇನ್ನೂ ಕ್ಲಾಸಿನಲ್ಲಿದ್ದಾರೆ ಎನ್ನುವದನ್ನೂ ನಿರ್ಲಕ್ಷಿಸಿ ಹೊರಗೆ ಓಡಿದ್ದೆ. ಮರುದಿನ ಟೀಚರ್ ಕರೆದು ಸಣ್ಣಗೆ ಬೈದಿದ್ದರು. ಬೇರೆ ಯಾರೋ ಟೀಚರ್, ಮಾಸ್ತರ್ ಬೈದಿದ್ದರೆ 'ಕುದುರೆ ಜುಟ್ಟು. ಕತ್ತೆ ಬಾಲ,' ಅಂತ ಕಾಲರ್ ಮೇಲಿನ ಧೂಳು ಕೊಡವಿಕೊಂಡು ಬರುತ್ತಿದ್ದೆನೇನೋ. ಆದರೆ ರೇವಣಕರ್ ಟೀಚರ್ ಅಂದರೆ ಸಿಕ್ಕಾಪಟ್ಟೆ ಗೌರವ ಮತ್ತು ಲೈಕಿಂಗ್. ಅಂತವರು ಬೈದುಬಿಟ್ಟರು. ಅದೂ ತಮಗೊಂದು ಮಾತೂ ಹೇಳದೆ ಕ್ಲಾಸ್ ಬಿಟ್ಟು ಹೋದೆ ಅಂತ ಅವಮಾನಿತರಾಗಿ ನೊಂದುಕೊಂಡು ಬೈದರು ಎಂದು ಬೇಜಾರಾಗಿತ್ತು. ಮಂಗ್ಯಾ ಆದರೂ ಪಾಠ ಬರೋಬ್ಬರಿ ಕಲಿತಿದ್ದೆ. ಕ್ಲಾಸಿನಲ್ಲಿ ಮಾಸ್ತರ್ ಅಥವಾ ಮಾಸ್ತರಿಣಿ ಇದ್ದರೆ ಅವರ ಅನುಮತಿ ತೆಗೆದುಕೊಂಡೆ ಒಳಗೆ ಹೊರಗೆ ಹೋಗಿ ಬಂದು ಮಾಡುವದು ಎಂಬುದೇ ಮರೆಯಲಾರದ ಪಾಠ. 

ಈಗ ಇಲ್ಲಿ ನಾಯ್ಕರ್ ಮಾಸ್ತರರ ಕ್ಲಾಸ್ ನಡೆದಿತ್ತು. ಹಾಗಾಗಿ, ಬಾಗಿಲಲ್ಲೇ ನಿಂತು, 'May I come in, Sir?' ಅಂದೆ. ಇದ್ದ ಒಂದೂವರೆ ಡಜನ್ ವಿದ್ಯಾರ್ಥಿಗಳಿಗೆ ಭರ್ಜರಿ ಪಾಠ ಮಾಡುವಲ್ಲಿ ನಾಯ್ಕರ್ ಮಾಸ್ತರ್ ಮಗ್ನರಾಗಿದ್ದರು. ನಾನು ಹೇಳಿದ್ದು ಅವರಿಗೆ ಕೇಳಲಿಲ್ಲ ಅಂತ ಕಾಣುತ್ತದೆ. 'Come in,' ಅನ್ನಲಿಲ್ಲ. ಮತ್ತೆ ಕೇಳಿದೆ. ಆಗಲೂ ಉತ್ತರವಿಲ್ಲ. ಮತ್ತೊಂದು ನಾಲ್ಕು ಬಾರಿ ಕೇಳಿ, ಕೇಳಿ ಸುಸ್ತಾಗಿಬಿಟ್ಟೆ. ಒಳಗೆ ಬರಲೇನು ಅಂತ ಅನುಮತಿ ಕೇಳುವಾಗ ಆವಾಜ್ ಜಾಸ್ತಿ ಎತ್ತರಿಸುವಂತಿಲ್ಲ. ಏರು ದನಿಯಲ್ಲಿ ಯಾಕೆ ಪರ್ಮಿಷನ್ ಕೇಳಿದೆ ಅಂತ ನಂತರ ಬೈದರೆ ಕಷ್ಟ. ನಾನು ಬಾಗಿಲಲ್ಲಿ ನಿಂತು ಪರ್ಮಿಷನ್ ಕೇಳಿದ್ದು ನಾಯ್ಕರ್ ಮಾಸ್ತರಿಗೆ ಕೇಳಲಿಲ್ಲ. ಅತ್ಲಾಗೆ ಕಾಣಲೂ ಇಲ್ಲ. ಯಾಕೆಂದರೆ ಬಾಗಿಲಿಗೆ ಬೆನ್ನು ಹಾಕಿ ಕೊರೆಯುತ್ತ ನಿಂತಿದ್ದರಲ್ಲ. ಆದರೆ ನಾನು ಬಾಗಿಲಲ್ಲಿ, 'ದೀನ ನಾ ಬಂದಿರುವೆ. ಬಾಗಿಲಲ್ಲಿ ನಿಂತಿರುವೆ.......' ಅಂತ ಬೆಗ್ಗರ್ ಲುಕ್ಕಿನಲ್ಲಿ ನಿಂತಿದ್ದು ಬೇರೆ ವಿದ್ಯಾರ್ಥಿಗಳಿಗೆ ಕಂಡು ಅವರು ಕಿಸಿಕಿಸಿ ನಕ್ಕರು. ಪ್ರಾಕ್ಟಿಕಲ್ಸ್ ಒಂದು ಬಿಟ್ಟು ಎಂದೂ ಕಾಲೇಜಿಗೆ ಬರದವ ನಾನು ಅಂದು ಎಲ್ಲಾ ಬಿಟ್ಟು ಸಂಸ್ಕೃತ ನಾನ್-ಡೀಟೇಲ್ ಕ್ಲಾಸಿಗೆ ಬಂದಿದ್ದೇನೆ. ಬಂದು ಬಾಗಿಲಲ್ಲಿ ಬೆಗ್ಗರ್ ತರಹ ನಿಂತು 'ಅಮ್ಮಾ! ತಾಯಿ!' ಅಂತ ಭಜನೆ ಮಾಡುತ್ತಿದ್ದೇನೆ ಅಂತ ಒಂದಿಷ್ಟು ಜನರಿಗೆ ನಗೆ ಬಂದಿದ್ದರೆ ತಪ್ಪು ಅವರದಲ್ಲ ಬಿಡಿ.

ಆ ಯಬಡ ಸಹಪಾಠಿಗಳು ನಕ್ಕಿದ್ದು ನಾಯ್ಕರ್ ಮಾಸ್ತರರನ್ನು ಕೆರಳಿಸಿರಬೇಕು. ಕಾಳಿದಾಸನ ಅಭಿಜ್ಞಾನ ಶಾಕುಂತಲದ ಶೃಂಗಾರ ರಸವನ್ನು ಅವರದ್ದೇ ರಸವತ್ತಾದ ಶೈಲಿಯಲ್ಲಿ ಪಾಠ ಮಾಡುತ್ತಿದ್ದರು ಸರ್. ಹುಡುಗಿಯರು ತಲೆ ತಗ್ಗಿಸಿ ಮುಸಿಮುಸಿ ನಗುತ್ತಿದ್ದರೆ, ಹುಡುಗುರು ಖುಲ್ಲಂ ಖುಲ್ಲಾ ತೊಡೆತಟ್ಟಿ ನಕ್ಕು ಮಾಸ್ತರರಿಗೆ ಮತ್ತೂ ಹುರುಪು ತಂದುಕೊಡುತ್ತಿದ್ದರು. ಒಳ್ಳೆ ಮಲೆಯಾಳಿ ವಯಸ್ಕ ಸಿನೆಮಾದ screenplay ಮಾದರಿಯಲ್ಲಿ ನಾಯ್ಕರ್ ಮಾಸ್ತರರ ಶೃಂಗಾರ ರಸದ ವರ್ಣನೆ.

ಹೀಗೆ ಕ್ಲಾಸ್ ನಡೆಯುತ್ತಿದ್ದಾಗ ನಾನು ಶಿವಪೂಜೆಯಲ್ಲಿ ಕರಡಿ ಬಂದಂತೆ ಬಂದು 'ಅಮ್ಮಾ! ತಾಯಿ!' ಅನ್ನುತ್ತಿದ್ದೇನೆ. ಸರಕ್ ಅಂತ ಬಾಗಿಲ ಕಡೆಗೆ ತಿರುಗಿದವರೇ, 'Don't make your entry or exit a big scene. Come in.....' ಎಂದು ಅಸಹನೆಯಿಂದ ಗುಡುಗಬೇಕೇ ಸರ್!? ಶಿವಾಯ ನಮಃ! ವಿಧೇಯತೆಯಿಂದ ಅನುಮತಿ ಕೇಳಿದರೆ, 'ಸುಮ್ಮನೆ ಒಳಗೆ ಬಂದು ಕೂಡು. ನಿನ್ನ ಬರೋದು ಮತ್ತು ಹೋಗೋದನ್ನು ದೊಡ್ಡ ಸೀನ್ ಮಾಡಬೇಡ,' ಅಂದರು. ಅನುಮತಿ ಕೇಳದೇ ಕ್ಲಾಸಿನ ಒಳಗೆ ಹೋಗುವದನ್ನು ಆ  ಕಾಲದಲ್ಲಿ ಊಹಿಸಲೂ ಸಾಧ್ಯವಿರಲಿಲ್ಲ. ಹಾಗಿದ್ದಾಗ ಇವರೊಬ್ಬರು radical ಮಾಸ್ತರರು!

ಮಂಗ್ಯಾ ಆಗಿ, ಮಳ್ಳ ಮುಖ ಹೊತ್ತು ಒಳಗೆ ಹೋಗಿ ಕೂತೆ. ನಾಯ್ಕರ್ ಸರ್ ಅಮೋಘ ಪಾಠ ಮುಂದುವರೆಸಿದರು. ಸಂಸ್ಕೃತ ಕಾವ್ಯಗಳಲ್ಲಿನ ಶೃಂಗಾರ ವರ್ಣಿಸುವಾಗ ದೇಹದ ಹಾರ್ಮೋನುಗಳ ಬಗ್ಗೆ ಹೇಳಿ, ಹಾರ್ಮೋನುಗಳು ಹೇಗೆ ಹುಡುಗ ಹುಡುಗಿಯರನ್ನು ಶೃಂಗಾರದತ್ತ ತಳ್ಳುತ್ತವೆ ಅಂತ ತಮ್ಮದೇ ರೀತಿಯಲ್ಲಿ ವಿಚಿತ್ರವಾಗಿ ಪಾಠ ಮಾಡಿದ ಸಂಸ್ಕೃತ ಪಂಡಿತರು ಯಾರಾದರೂ ಇದ್ದರೆ ಅವರು ನಮ್ಮ ನಾಯ್ಕರ್ ಸರ್ ಅವರೇ ಇರಬೇಕು!

ನಾಯ್ಕರ್ ಸರ್ ನೋಡಲಿಕ್ಕೆ ಟಿಪಿಕಲ್ ಕಮ್ಯುನಿಸ್ಟ್ ಕ್ರಾಂತಿಕಾರಿಯಂತೆ ಇದ್ದರು. ತೆಳ್ಳಗೆ ನೀಳವಾಗಿದ್ದರು. ಕುರುಚಲು ಗಡ್ಡ. ಪ್ಯಾಂಟ್ ಮೇಲೆ ಜುಬ್ಬಾ ಹಾಕುತ್ತಿರಲಿಲ್ಲ. ರೆಗ್ಯುಲರ್ ಶರ್ಟ್ ಪ್ಯಾಂಟ್ ಹಾಕುತ್ತಿದ್ದರು. ಜುಬ್ಬಾ ಹಾಕಿ ಪ್ಯಾಂಟ್ ಹಾಕಿದ್ದರೆ ಥೇಟ್ ಕಮ್ಯುನಿಸ್ಟ್ ಕ್ರಾಂತಿಕಾರಿಯೇ. ಪಿಯೂಸಿ ಹುಡುಗರಿಗೆ, ಅದೂ ಸೈನ್ಸ್ ಹುಡುಗರಿಗೆ, ಸಂಸ್ಕೃತ ಪಾಠ ಮಾಡುವದು, ಅದೂ ಊಟವಾದ ಮೇಲೆ ಮಸ್ತ ನಿದ್ದೆ ಬರುವ ಹೊತ್ತಿಗೆ ನಿದ್ದೆ ಬರದಂತೆ ಪಾಠ ಮಾಡುವದು ಒಂದು ತರಹದ ಮಹಾನ್ ಕ್ರಾಂತಿಯೇ. ಹಾಗಾಗಿ ನಾಯ್ಕರ್ ಸರ್ ಕೂಡ ಕ್ರಾಂತಿಕಾರಿಯೇ.

ಇದಾದ ನಂತರ ಮತ್ತೆ ನಾಯ್ಕರ್ ಸರ್ ಕ್ಲಾಸಿಗೆ ಹೋಗಲೇಯಿಲ್ಲ. ಅವರ ಪೋಲಿ ರಸ ತುಂಬಿರುತ್ತಿದ್ದ ಪಾಠ ಕೇಳಲು ಹೋಗುತ್ತಿದ್ದ ದೋಸ್ತರು ನಾಯ್ಕರ್ ಸರ್ ಹೇಗೆ ಪಾಠ ಮಾಡಿದರು, ಹೇಗೆ ಹುಡುಗಿಯರು ತಲೆ ಎತ್ತದೇ ಕೂತರೂ ಒಳಗಿಂದೊಳಗೇ ಹೇಗೆಲ್ಲ ಎಂಜಾಯ್ ಮಾಡುತಿದ್ದರು ಅಂತೆಲ್ಲ ಕಥೆ ಹೊಡೆಯುತ್ತಿದ್ದರು. ಅದೆಲ್ಲ ಸೆಕೆಂಡ್ ಹ್ಯಾಂಡ್ ಮಾಹಿತಿಯಾದರೂ ಸಂಜೆಯ ಹರಟೆಗೆ ಸಖತ್ತಾಗಿರುತ್ತಿತ್ತು.

ಮುಂದೆ ಹಲವಾರು ವರ್ಷಗಳ ನಂತರ ಅಮೇರಿಕಾದ ಯೂನಿವರ್ಸಿಟಿಗಳಲ್ಲಿ ಓದಲು ಶುರುಮಾಡಿದಾಗ ಮತ್ತೆ ನಾಯ್ಕರ್ ಸರ್ ನೆನಪಾಗಿದ್ದರು. ಯಾಕೆಂದರೆ ಇಲ್ಲಿ ಯಾವ ವಿದ್ಯಾರ್ಥಿಯೂ ಕ್ಲಾಸಿನ ಒಳಗೆ ಬರಲು ಅಥವಾ ಹೊರಗೆ ಹೋಗಲು ಅನುಮತಿ ಕೇಳುವದಿಲ್ಲ. ಅದನ್ನೆಲ್ಲ ಶಿಕ್ಷಕರು ನಿರೀಕ್ಷೆ ಮಾಡುವದೂ ಇಲ್ಲ. ಶಿಕ್ಷಕರಿಗೆ ಯಾರೂ ಸರ್ ಗೀರ್ ಅನ್ನುವದೂ ಇಲ್ಲ. ಕೇವಲ ಹೆಸರು ಹೇಳಲು ಸಂಕೋಚ ಎನ್ನಿಸಿದರೆ ಅವರ ಹೆಸರಿನ ಹಿಂಬದಿಗೆ ಪ್ರೊಫೆಸರ್ ಅಂತ ಹೇಳಿದರೆ ದೊಡ್ಡ ಮಾತು. ಮತ್ತೆ ಮಾಸ್ತರ್ ಮಂದಿ ಕೂಡ ತುಂಬಾ informal ಆಗಿರುತ್ತಾರೆ. ಹಾಗಾಗಿ ಮಾಸ್ತರ್ ಜೊತೆ ತುಂಬಾ casual ಅನ್ನಿಸುವಂತಹ ಸಂಬಂಧ ಇರುತ್ತದೆ. ಆದರೂ  'ಗುರುಭ್ಯೋ ನಮಃ' ಎಂಬ ಸಂಸ್ಕೃತಿಯಿಂದ ಬಂದ ನಮ್ಮಂತವರಿಗೆ ಅದೆಲ್ಲ ವಿಚಿತ್ರ ಅನ್ನಿಸುತ್ತದೆ. ಅಮೇರಿಕಾದಲ್ಲಿ ಅದನ್ನೆಲ್ಲ ನೋಡಿದಾಗ ಅಂತಹ ಒಂದು ತರಹದ ಸಂಸ್ಕೃತಿಯನ್ನು ಇಪ್ಪತ್ತು ವರ್ಷ ಮೊದಲೇ ಧಾರವಾಡದಲ್ಲಿ ನಾಯ್ಕರ್ ಸರ್ ಹುಟ್ಟುಹಾಕಲು ಹೊರಟಿದ್ದರೇನೋ ಅನ್ನಿಸಿತ್ತು. Maybe our Naikar sir was ahead of our times!

೧೯೯೦ ರಲ್ಲಿ ಪಿಯೂಸಿ ಮುಗಿದ ನಂತರ ಮಾಜಿ ಕಾಲೇಜಿನ ಕಡೆ ಮುಂದೊಂದೆರೆಡು ವರ್ಷ 'ಪಕ್ಷಿವೀಕ್ಷಣೆಗೆ' ಹೋದಾಗಲೂ ಎಲ್ಲೂ ನಾಯ್ಕರ್ ಸರ್ ಕಂಡ ನೆನಪಿಲ್ಲ. ಮುಂದೆ ನಮ್ಮ ಕಲ್ಯಾಣನಗರ ಬಡಾವಣೆಯಲ್ಲಿಯೇ ಮನೆ ಕಟ್ಟಿ ಅಲ್ಲಿಗೆ ಶಿಫ್ಟಾಗಿದ್ದರು ಅಂತ ಕೇಳಿದ್ದೆ.

ಇರಲಿ. ಹೊಸವರ್ಷ 'May I come in?' ಅಂತ ಕೇಳಿ ಬರುವದಿಲ್ಲ ಅಂತ ಹೇಳಲು ಹೊರಟರೆ ನಾಯ್ಕರ್ ಸರ್ ನೆನಪಾದರು. ರೇವಣಕರ್ ಟೀಚರ್ ನೆನಪಾದರು. ಕಲಿಸಿದ ಗುರುಗಳು ಬೇರೆಬೇರೆ ಕಾರಣಗಳಿಗೆ ನೆನಪಾಗುತ್ತಲೇ ಇರುತ್ತಾರೆ. ಇವರು ಈ ಕಾರಣಕ್ಕೆ ನೆನಪಾದರು. ನಾಯ್ಕರ್ ಸರ್ ಆರಾಮ್ ಇರಲಿ. ಅವರೂ ನಿವೃತ್ತರಾಗಿ ದಶಕವೇ ಆಗಿರಬೇಕು. ಅವರ ನಿವೃತ್ತ ಜೀವನ ಸುಖಕರವಾಗಿರಲಿ. ಅದೇ ಕಾಲೇಜಿನಲ್ಲಿ ಪಾಠ ಮಾಡಿಕೊಂಡಿದ್ದ ದಂಡಾವತಿಮಠ ಮೇಡಂ ನಾಯ್ಕರ್ ಸರ್ ಪತ್ನಿ ಅಂತ ನೆನಪು. ಅವರೇನೂ ನಮಗೆ ಪಾಠ ಮಾಡಲಿಲ್ಲ. ಅವರು ಸಿನೆಮಾತಾರೆ ನಂದಿತಾ ದಾಸ್ ಮಾದರಿಯ ಲಕ್ಷಣವಂತ ಕೃಷ್ಣಸುಂದರಿ. ಅವರೂ ಆರಾಮಿರಲಿ. ಇನ್ನು ರೇವಣಕರ್ ಟೀಚರ್ ಬಗ್ಗೆ ಬರೆಯಲಿಕ್ಕೆ ಕೂತರೆ ಒಂದು ಪುಸ್ತಕ ಬರೆಯಬಹುದು. ಮುಂದೆ ಬರೆಯೋಣ. ಅವರೂ ಆರಾಮಿರಲಿ.

ನಿಮಗೆಲ್ಲ ೨೦೧೭ ರ ಶುಭಾಶಯಗಳು. Keep in touch!